Categories
ಸಿನಿ ಸುದ್ದಿ

ಇದು ಅನೈತಿಕ! ರಾಜ್‌ಮೌಳಿ ವಿರುದ್ಧ ಗುಡುಗಿದ ಬೋನಿ ಕಪೂರ್‌

ತಮ್ಮ “ಮೈದಾನ್‌” ಚಿತ್ರದ ದಿನದಂದೇ ‘ಆರ್‌ಆರ್‌ಆರ್‌’ ಬಿಡುಗಡೆಗೆ ನಿರ್ಮಾಪಕ ಕಿಡಿ

ಮೊನ್ನೆಯಷ್ಟೇ ನಿರ್ದೇಶಕ ರಾಜ್‌ಮೌಳಿ ತಮ್ಮ ಮಹತ್ವಾಕಾಂಕ್ಷೆಯ “ಆರ್‌ಆರ್‌ಆರ್‌” ತೆಲುಗು ಸಿನಿಮಾ ದಸರಾಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಈ ಸಿನಿಮಾ ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ. ಇದೀಗ ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಇದಕ್ಕೆ ತಕರಾರು ತೆಗೆದಿದ್ದಾರೆ.

“ಅದೇ ದಿನ ನನ್ನ ನಿರ್ಮಾಣದ “ಮೈದಾನ್‌” ಹಿಂದಿ ಸಿನಿಮಾ ತೆರೆಕಾಣುತ್ತಿದೆ. ಆರು ತಿಂಗಳ ಹಿಂದೆಯೇ ನಾನು ಬಿಡುಗಡೆ ದಿನಾಂಕ ಘೋಷಿಸಿದ್ದೆ. ಇದು ಗೊತ್ತಿದ್ದೂ ರಾಜಮೌಳಿ ಅದೇ ದಿನ ತಮ್ಮ ಸಿನಿಮಾ ಬಿಡುಗಡೆ ಮಾಡಲು ಸನ್ನದ್ಧರಾಗಿದ್ದಾರೆ. ಇದು ಅನೈತಿಕ!” ಎಂದು ಹೇಳುವ ಮೂಲಕ ಗುಡುಗಿದ್ದಾರೆ ಬೋನಿಕಪೂರ್‌.
ಜೀ ಸ್ಟುಡಿಯೋಸ್‌ ಹಾಗೂ ಮತ್ತಿಬ್ಬರು ನಿರ್ಮಾಪಕರೊಡಗೂಡಿ ಬೋನಿಕಪೂರ್ “ಮೈದಾನ್‌” ಹಿಂದಿ ಚಿತ್ರ ನಿರ್ಮಿಸುತ್ತಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನದ ಈ ಸಿನಿಮಾ, ಖ್ಯಾತ ಫುಟ್‌ಬಾಲ್ ಕೋಚ್‌ ಸೈಯದ್ ಅಬ್ದುಲ್‌ ರಹೀಂ ಅವರ ಜೀವನಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಒಂದು ರೀತಿಯ ಹೊಸ ಪ್ರಯೋಗವಿದು. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಬಯೋಪಿಕ್‌ನಲ್ಲಿ ಪ್ರಿಯಾಮಣಿ ಹಿರೋಯಿನ್‌. ಹಾಗೆ ನೋಡಿದರೆ ರಾಜ್‌ಮೌಳಿ ನಿರ್ದೇಶನದ “ಆರ್‌ಆರ್‌ಆರ್‌” ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಒಂದೇ ದಿನ ಅಜಯ್‌ರ ಎರಡು ಚಿತ್ರಗಳು ತೆರೆಕಾಣಲಿವೆ.


“ಕೊರೋನಾ ಕಾಲದಲ್ಲಿ ಮೊದಲೇ ಸಿನಿಮಾರಂಗ ಬಸವಳಿದಿದೆ. ಹೀಗಿರುವಾಗ ಒಮ್ಮೆಗೇ ಎರಡು ದೊಡ್ಡ ಸಿನಿಮಾಗಳು ತೆರೆಕಂಡರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಒಟ್ಟಾರೆ ಸಿನಿಮೋದ್ಯಮಕ್ಕೆ ತೊಂದರೆ. ರಾಜ್‌ಮೌಳಿ ತಮ್ಮ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡುವುದು ಒಳಿತು” ಎಂದಿದ್ದಾರೆ ಬೋನಿಕಪೂರ್‌. ಇದಕ್ಕೆ “ಆರ್‌ಆರ್‌ಆರ್‌” ತಂಡದ ಪ್ರತಿಕ್ರಿಯೆ ಏನು ಎನ್ನುವ ಕುತೂಹಲದೊಂದಿಗೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ನಿರ್ದೇಶಕ ಗುರು ಪ್ರಸಾದ್‌ ಮಠ ಸೇರ್ತಾರಾ ? ಹರಿದಾಡುತ್ತಿದೆ ಹಾಗೊಂದು ಸುದ್ದಿ !

ಕುತೂಹಲ ಇರೋದು, ಮಠ ಸೇರುವಂತಹ ಪರಿಸ್ಥಿತಿ ಅವರೀಗ್ಯಾಕೆ ಬಂತು ಅಂತ . ನಾವ್‌ ಹೇಳ್ತೀವಿ ಕೇಳಿ ಆ ಕತೆ…

ನಿರ್ದೇಶಕ ಗುರುಪ್ರಸಾದ್‌ ” ಮಠʼ ಸೇರ್ತಾರಾ ? ಸದ್ಯಕ್ಕೆ ಅದಿನ್ನು ಕನ್ಪರ್ಮ್‌ ಆಗಿಲ್ಲ. ಆದರೆ ರವೀಂದ್ರ ವಂಶಿ ನಿರ್ದೇಶನದ ಹೊಸ” ಮಠʼ ಚಿತ್ರದಲ್ಲಿ ಗುರುಪ್ರಸಾದ್‌, ಪ್ರಮುಖ ಪಾತ್ರದಲ್ಲೇ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದರಲ್ಲೂ ಅವರದೇ ನಿರ್ದೇಶನದ “ಮಠʼ ಚಿತ್ರದಲ್ಲಿ ನಟ ಜಗ್ಗೇಶ್‌ ನಿರ್ವಹಿಸಿದ್ದ ಪಾತ್ರಕ್ಕೆ ಈಗ ಗುರುಪ್ರಸಾದ್‌ ಅವರೇ ಬಣ್ಣ ಹಚ್ಚುತ್ತಿದ್ದಾರೆನ್ನುವ ಮಾತುಗಳಿವೆ. ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ನಿಖರವಾಗಿಲ್ಲ. ಆದರೆ ಹಾಗೊಂದು ಸುದ್ದಿ ಮಾತ್ರ ಹರಿದಾಡುತ್ತಿದೆ.

ಇನ್ನು “ಮಠʼ ಕ್ಕೂ ಗುರು ಪ್ರಸಾದ್‌ ಅವರಿಗೂ ಅದೇನು ಕನೆಕ್ಟ್‌ ಅಂತ ವಿವರಿಸಿ ಹೇಳಬೇಕಿಲ್ಲ. ನಟ ಜಗ್ಗೇಶ್‌ ಹಾಗೂ ನಿರ್ದೇಶಕ ಗುರುಪ್ರಸಾದ್‌ ಜೋಡಿಯ ಸೂಪರ್‌ ಹಿಟ್‌ ಸಿನಿಮಾ “ಮಠʼ . ಇದು ಬಂದು ಹೋಗಿದ್ದು ೨೦೦೬ ರಲ್ಲಿ. ಆ ಹೊತ್ತಿಗೆ ಇದು ಸೂಪರ್‌ ಹಿಟ್‌ ಸಿನಿಮಾ. ಆದಾಗಲೇ ಜಗ್ಗೇಶ್‌ ಸ್ಟಾರ್‌ ನಟರೇ. ಅಷ್ಟಾಗಿಯೂ ಅವರನ್ನು ಇನ್ನೊಂದು ಬಗೆಯಲ್ಲಿ ಈ ಚಿತ್ರ ಪ್ರೇಕ್ಷಕರಿಗೆ ಪರಿಚಯಿಸಿತು.

ಅದರಾಚೆ ನಿರ್ದೇಶಕರಾಗಿ ಗುರುಪ್ರಸಾದ್‌ ದೊಡ್ಡ ಸಕ್ಸಸ್‌ ಕಂಡಿದ್ದು ಈ ಚಿತ್ರದ ಮೂಲಕವೇ. ಉಳಿದಂತೆ ಹೊಸ ವಿಷಯಕ್ಕೆ ಬಂದರೆ, ಅದೇ ಮಠ ಈಗ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶನದೊಂದಿಗೆ ಹೊಸ “ಮಠʼ ವಾಗಿ ರೆಡಿ ಅಗುತ್ತಿದೆ.ಈ ಚಿತ್ರ ಆರಂಭದಲ್ಲಿ ದೊಡ್ಡದಾಗಿ ಸುದ್ದಿ ಅಗಿದ್ದು ಸಾಧು ಕೋಕಿಲ ಎಂಟ್ರಿಯ ಕಾರಣಕ್ಕೆ. ಸಾಧು ಕೋಕಿಲ ಅವರದ್ದು ಇಲ್ಲಿ ಪ್ರಮುಖ ಪಾತ್ರ. ಅಂದ್ರೆ, ಅವರಿಲ್ಲಿ ಬಿಡದಿಯ ಸತ್ಯಾನಂದ. ಅಲ್ಲಿ ಅವರದು “ನಿತ್ಯ ಆನಂದʼ.

ಅದೇ ಕಾರಣಕ್ಕೆ 2020 ಆರಂಭದಲ್ಲಿ ಭರ್ಜರಿ ಸುದ್ದಿ ಆಗಿ ಕುತೂಹಲ ಮೂಡಿಸಿದ್ದ ಈ ಚಿತ್ರ ಇನ್ನೇನು ಶುರುವಾಗುವ ಕೊರೋನಾ ಬಂತು. ಹಾಗಾಗಿ ಈ ಸಿನಿಮಾದ ಚಟುವಟಿಕೆಗಳು ಅರ್ಧದಲ್ಲೇ ನಿಂತು ಹೋಗಿದ್ದವು. ಈಗ ಕೊರೋನಾ ನಂತರ ಮತ್ತೆ ಈ ಸಿನಿಮಾಕ್ಕೆ ಚಾಲನೆ ಸಿಗುವುದು ಗ್ಯಾರಂಟಿ ಆಗಿದೆ. ಅದರ ಒಂದು ವಿಷಯ ಈಗ ಹೆಚ್ಚು ಸುದ್ದಿ ಆಗುತ್ತಿದೆ. ಹಳೇ ಮಠದಲ್ಲಿ ಜಗ್ಗೇಶ್‌ ನಿರ್ವಹಿಸಿದ್ದ ಪಾತ್ರವನ್ನು ಹೊಸ ಮಠದಲ್ಲಿ ನಿರ್ದೇಶಕ ಗುರು ಪ್ರಸಾದ್‌ ಅವರೇ ನಿರ್ವಹಿಸುತ್ತಿದ್ದಾರೆ ಅಂತ. ಉಳಿದ ವಿವರ ಇಷ್ಟರಲ್ಲಿಯೇ ಗೊತ್ತಾಗಲಿದೆ ಎಂಬುದಾಗಿಯೂ ಮೂಲಗಳು ಹೇಳುತ್ತಿವೆ.

Categories
ಸಿನಿ ಸುದ್ದಿ

ಟಿಪಿಕಲ್‌ ಮಲೆನಾಡು ಹುಡುಗ, ಅಡಿಕೆ ಬೆಳೆಗಾರ, ಜತೆಗೆ  ಗೊಬ್ಬರದ ಅಂಗಡಿ ಮಾಲೀಕ….. ಮಜವಾಗಿದೆ ದೂದ್ ಪೇಡಾ ದಿಗಂತ್ ಹೊಸ ಅವತಾರ!

ಚಿತ್ರೀಕರಣ ದ ಕ್ಲೈಮ್ಯಾಕ್ಸ್ ನಲ್ಲಿ ‘ ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತಂಡ

ನಾನೂ ಕೂಡ ಮಲೆ‌ನಾಡಿನ ಹುಡುಗ.‌ಪಾತ್ರವೂ ಕೂಡ ಟಿಪಿಕಲ್ ಮಲೆ ‌ನಾಡಿನ ಹುಡುಗನದ್ದು. ಹಳೇ ಮೋಟಾರ್ ಬೈಕು, 800 ಕಾರು, ಸೋನೆ‌ಮಳೆ, ಅಡಿಕೆ ಕೋಯ್ಲು….ಎಲ್ಲವೂ ನಿಜ ಜೀವನದ್ದೇ. ಮೇಲಾಗಿ  ಐಂದ್ರಿತಾ ರೇ ಜತೆಗೆ ಏಳು ವರ್ಷದ ನಂತರ ಅಭಿನಯ. ಇದೊಂದು ತುಂಬಾ ಸೊಗಸಾದ ಜರ್ನಿ…..

‌ನಟ ದೂದ್ ಪೇಡಾ  ಹೀಗೆ ಚಿತ್ರ ದಲ್ಲಿನ ತಮ್ಮ ಪಾತ್ರ, ಪತ್ನಿ ಐಂದ್ರಿತಾ ರೇ ಜತೆಗೆ ಮತ್ತೆ ಅಭಿನಯಿಸುತ್ತಿರುವ ಅನುಭವ ಬಿಚ್ಚಿಡುತ್ತಾ ಹೋದರು. ಅಂದ ಹಾಗೆ ಅವರು ಅಲ್ಲಿ ಹೇಳುತ್ತಾ ಹೋಗಿದ್ದು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’  ಚಿತ್ರದ ಕುರಿತು. ಈ ಚಿತ್ರವೀಗ  ಶೇಕಡಾ  90ರಷ್ಟು ಭಾಗದ ಚಿತ್ರೀಕರಣ ಮುಗಿಸಿದೆ.  ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜತೆಗೆ ಒಂದಷ್ಟು ಪ್ರಚಾರ ಕಾರ್ಯಕ್ಕೂ ಮುಂದಾಗಿದೆ. ಅದೇ ಸಲುವಾಗಿ ಇತ್ತೀಚೆಗೆ ಚಿತ್ರ ತಂಡ ಮಾಧ್ಯಮ ಮುಂದೆ ಬಂದಾಗ ಒಂದಷ್ಟು ಸಂಗತಿ ಹಂಚಿಕೊಂಡಿತು.
‘ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಸಿನಿಮಾ. ಯಾಕಂದ್ರೆ ನಾನು ಕೂಡ ಮಲೆನಾಡಿನವನು.‌ಈ‌ಕತೆ ನಡೆಯುವುದು ಕೂಡ ಅಲೆಯೇ.‌ಹಾಗೆಯೇ ನನ್ನ ಪಾತ್ರವೂ ಕೂಡ .ಇದೆಲ್ಲ ನಂಗೆ ನಿಜ ಜೀವನದಲ್ಲೇ ಆದ ಅನುಭವ. ಹಾಗಾಗಿ ಈ ಸಿನಿಮಾವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಅಷ್ಟೇ ಖುಷಿಯಲ್ಲೇ ಚಿತ್ರೀಕರದಲ್ಲಿ ಪಾಲ್ಗೊಂಡಿದ್ದೇನೆ ‘ಅಂತ ಹೇಳುತ್ತಾರೆ ದಿಗಂತ್‌.

‘ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ. ‌ಚಿತ್ರದಲ್ಲಿ ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ.  ದಿಗಂತ್‌ರವರು ಶಂಕರನಾಗಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಏನೇನು ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ’ ಎಂದು ಹೇಳುವ ಮೂಲಕ ಚಿತ್ರದ ಕತೆಯ ಬಗ್ಗೆ ಕುತೂಹಲ ಮೂಡಿಸಿದರು ನಿರ್ದೇಶಕ. ವಿನಾಯಕ‌ ಕೊಡ್ಸರ.

ಇದೊಂದು ದೊಡ್ಡ ತಾರಾಗಣವಿರುವ ಚಿತ್ರ. ಐಂದ್ರಿತಾರೈ, ರಂಜನಿರಾಘವನ್  ಚಿತ್ರದ ನಾಯಕಿ ಯ‌ರು.‌ಅವರಂತೆಯೇ  ಉಮಾಶ್ರೀ, ವಿದ್ಯಾಮೂರ್ತಿ, ರವಿಕಿರಣ್, ಯಶ್‌ವಂತ್‌ ಸರ್‌ದೇಶಪಾಂಡೆ, ಕಾಸರಗೂಡುಚಿನ್ನ  ಕೂಡ ಇದ್ದಾರೆ.‌ಚಿತ್ರಕ್ಕೀಗ ಸಾಗರ, ಸಿಗಂದೂರು ಮತ್ತು ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆದಿದೆ. ಹಾಗೆಯೇ ಶೇಕಡ ಐವತ್ತರಷ್ಟು ಡಬ್ಬಿಂಗ್ ಮುಗಿದಿದೆ . ಚಿತ್ರಕ್ಕೆ ಬಂಡವಾಳ ಹಾಕಿದವರು ಸಿಲ್ಕ್ ಮಂಜು.

‘ ಒನ್ ಲೈನ್ ಕತೆ ಹೇಳಿದ್ದು ಕುತೂಹಲ ಮೂಡಿಸಿತು. ಅದರಿಂದಲೇ ದೀರ್ಘ ಕಾಲದ ನಂತರ ಬಂಡವಾಳ ಹೂಡಿರುವುದು ನೆಮ್ಮದಿ ಸಿಕ್ಕಿದೆ. ಸದ್ಯದಲ್ಲೆ ಮತ್ತೋಂದು ಚಿತ್ರವನ್ನು ಮಾಡುವುದಾಗಿ  ಅವರು ಮಾಹಿತಿ ಕೊಟ್ಟರು.ನಟಿಯರಾದ ಐಂದ್ರಿತಾ ಹಾಗೂ ರಂಜನಿ ರಾಘವನ್ ಇಬ್ಬರು ಮಾತನಾಡಿ, ಚಿತ್ರ ಕತೆ ತುಂಬಾ ಚೆನ್ನಾಗಿದೆ ಎಂದರು‌.ಪ್ರಜ್ವಲ್ ಪೈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.‌ರವೀಂದ್ರ ಜೋಷಿ ಕಾರ್ಯಕಾರಿ ನಿರ್ಮಾಪಕರು. ಹಾಗೆಯೇ ನಂದ ಕಿಶೋರ್‌ ಛಾಯಾಗ್ರಹಣ,   ವೇಣುಹಸ್ರಾಳಿ ಸಂಭಾಷಣೆ, ಸಂಕಲನಕಾರ ರಾಹುಲ್ ಸಂಕಲನ  ಚಿತ್ರಕ್ಕಿದೆ. ಸದ್ಯಕ್ಕೆ ಇನ್ನಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರ ಅದೆಲ್ಲ ಮುಗಿಸಿಕೊಂಡು ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಸಿನಿಮಾ ಜಗತ್ತಿಗೂ ಬಂತು ಬೈ ಒನ್‌- ಗೆಟ್‌ ಒನ್‌! ಡಿಫೆರೆಂಟ್‌ ಟೈಟಲ್‌ನ ಚಿತ್ರ

ಹೊಸ ಸಾಹಸಕ್ಕೆ ಇಳಿದ ಅವಳಿ  ಸಹೋದರರು,  ಸಾಥ್‌ ಕೊಟ್ಟ ಅನುಭವಿ ನಿರ್ದೇಶಕರು 

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದ ಚಿತ್ರಗಳ ಪೈಕಿ ಈಗ ಇದು ಒಂದು. ಆ ಚಿತ್ರದ ಹೆಸರು ಬೈ ಒನ್‌, ಗೆಟ್‌ ಒನ್.‌ ಕನ್ನಡದಲ್ಲಿ ʼ ಒಂದು ಕೊಂಡರೆ ಮತ್ತೊಂದು ಫ್ರೀʼ ಅಂತ. ಹರೀಶ್ ಅನಿಲ್‌ಗಾಡ್ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಧುಮಿಥುನ್ ಹಾಗೂ ಮನುಮಿಲನ್ ಎಂಬ ಅವಳಿ ಸಹೋದರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇವರೇ ಚಿತ್ರದ ನಿರ್ಮಾಪಕರು ಕೂಡ. ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ವಿಶೇಷ ಅಂದ್ರೆ, ನಿರ್ದೇಶಕರು ಹಾಗೂ ಚಿತ್ರದ ನಾಯಕ ನಟರಿಬ್ಬರೂ, ಉಷಾ ಭಂಡಾರಿ ಅವರ ಸಿನಿಮಾ ಶಾಲೆಯಲ್ಲಿ ಕಲಿತವರು. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇರೋ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆ ದಿನ ಅವರೇ ಚಿತ್ರದ ಟೀಸರ್‌ ಲಾಂಚ್‌ ಮಾಡಿದರು.” ಮಧು, ಮನು, ಹರೀಶ ನನ್ನ ಹಳೇ ವಿದ್ಯಾರ್ಥಿಗಳು. ಈ ಸಿನಿಮಾದಲ್ಲಿ ಬಹಳಷ್ಟು ರಹಸ್ಯಗಳಿವೆ, ಮಿಸ್ಟ್ರಿಗಳಿವೆ, ನನ್ನ ಪಾತ್ರವೂ ಸಹ ಸಸ್ಪೆನ್ಸ್ ಆಗಿದೆ. ಈ ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್. ಹರೀಶ ನನ್ನ ಶಾಲೆಗೆ ಕುಕ್ ಆಗಿ ಬಂದಿದ್ದ, ಈಗ
ನಿರ್ದೇಶಕನಾಗಿದ್ದಾನೆ, ತುಂಬಾ ಖುಷಿಯಾಗ್ತಿದೆʼ ಎಂದು ಸಂತಸ ವ್ಯಕ್ತಪಡಿಸಿದರು.


ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, “ರಾಮಾ ರಾಮಾ ರೇʼ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ʼಅಯೋಗ್ಯʼ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್‌ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಚಿತ್ರಕ್ಕೆ ರೋಷಿನಿ ತೇಲ್ಕರ್‌ ನಾಯಕಿ. ನೆಗೆಟಿವ್‌ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನನಗೆ ಈ ಆಫರ್‌ ಬಂತು. ಪಾತ್ರವೂ ಚೆನ್ನಾಗಿದೆ ಎಂದರು ರೋಷಿನಿ. ಹಾಗೆಯೇ ರಿಶಿತಾ ಮಲ್ನಾಡ್‌ ಈ ಚಿತ್ರದ ಮತ್ತೋರ್ವ ನಾಯಕಿ. ಹಾಗೆಯೇ ಚಿತ್ರದಲ್ಲಿ ನಟ ಕಿಶೋರ್‌ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರಂತೆ. ನಿರ್ದೇಶಕ ಹರೀಶ್‌ ಮಾತನಾಡಿ ಚಿತ್ರದ ವಿಶೇಷತೆ ಹೇಳಿಕೊಂಡರು.

” ಮೈಸೂರಿನಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ. ಹುಡುಗಾಟದಲ್ಲಿಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತೀಯಾರ್ಧದಲ್ಲಿ ಗಂಭೀರಸ್ವರೂಪ ಪಡೆಯುತ್ತಾ, ಒಂದು ಹುಡುಕಾಟದಲ್ಲಿ ಕೊನೆಯಾಗುತ್ತದೆʼಎಂದರು.ದಿನೇಶ್‌ ಕುಮಾರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅನಿಲ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್ ರಾವ್ ಛಾಯಾಗ್ರಹಣ ಮಾಡಿದ್ದು, ರಾಜಶೇಖರ್‌ರಾವ್, ವಿಜಯೇಂದರ್, ಮುತ್ತು ಹಾಗೂ ಶಿವು ಸಾಹಿತ್ಯ ರಚಿಸಿದ್ದಾರೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ದೃಶ್ಯ ಸೆರೆಹಿಡಿದಿದ್ದಾರೆ. ಬಲ ರಾಜವಾಡಿ, ಪ್ರಶಾಂತ್ ರಾಯ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಂಗ್ ನಲ್ಲಿ ಗ್ಯಾಂಗ್‌ಸ್ಟರ್‌ ಆದ ನಟಿ

ಕಸ್ತೂರಿ ಮಹಲ್‌ ಬೆನ್ನಲೇ ಮತ್ತೊಂದು ಚಿತ್ರಕ್ಕೆ ನಾಯಕಿ ಆದ ಶಾನ್ವಿ

ನಟಿ ಶಾನ್ವಿ ಶ್ರೀವಾತ್ಸವ್‌ ಬ್ಯುಸಿ ಆಗುತ್ತಿದ್ದಾರೆ. ʼಕಸ್ತೂರಿ ಮಹಲ್‌ʼ ಚಿತ್ರದ ಬೆನ್ನಲೇ ಬ್ಯಾಂಗ್‌ ಹೆಸರಿನ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಅವರು ಗ್ಯಾಂಗ್‌ ಸ್ಟರ್‌ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.‌ ಈಗಾಗಲೇ ʼಆನೆ ಹಾಗೂ ನಾನುʼ, ʼಅದುʼ ಮತ್ತು ʼಸರೋಜʼ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ ‘ಬ್ಯಾಂಗ್’.

ಹಾಗೆಯೇ ಕಿರುಚಿತ್ರಗಳ ನಿರ್ದೇಶನದ ಮೂಲಕ ಗಮನ ಸೆಳೆದ ಪರುಶುರಾಮ್‌, ಈ ಚಿತ್ರದ ನಿರ್ದೇಶಕ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡುತ್ತಿದ್ದಾರೆ. ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ವಿಶೇಷ ಮತ್ತು ವಿಶಿಷ್ಟ ಅಂದ್ರೆ ಈ ಚಿತ್ರದ ಕತೆ. ಏಳು ಪಾತ್ರ, ಎರಡು ದಿನಗಳಲ್ಲಿ ನಡೆಯುವ ಕಥೆ . ಸದ್ಯಕ್ಕೆ ಈ ಚಿತ್ರಕ್ಕೆ ಶಾನ್ವಿ ಮಾತ್ರ ಫೈನಲ್‌ ಆಗಿದ್ದಾರಂತೆ. ಫೆಬ್ರವರಿ ಮೊದಲವಾರದಿಂದ ಚಿತ್ರೀಕರಣ ಶುರುವಾಗಲಿದೆಯಂತೆ.

Categories
ಸಿನಿ ಸುದ್ದಿ

ಚಕ್ರವರ್ತಿ ಚಂದ್ರಚೂಡ್‌ ಸುಫಾರಿ ಕೊಟ್ಟ ರಾಧಿಕಾ ಯಾರು ? ಸಖತ್‌ ವೈರಲ್‌ ಆಯ್ತು ʼಕೇಳು ಜನಮೇಜಯʼ ನ ಫಸ್ಟ್‌ ಲುಕ್‌!

ನಾವಿದ್ದೇವೆ ಮುನ್ನುಗಿ ಅಂದ್ರು ಸ್ಟಾರ್‌ ಬಳಗ

ನಟ, ನಿರ್ದೇಶಕ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್‌ ಬೆಳ್ಳಿ ತೆರೆಗೆ ಹೀರೋ ಆಗಿ ಎಂಟ್ರಿಯಾಗುತ್ತಿರುವ ʼಕೇಳು ಜನಮೇಜಯʼ ಫಸ್ಟ್‌ ಲುಕ್‌ ಪೋಸ್ಟರ್‌ ಧೂಳೆಬ್ಬಿಸುತ್ತಿದೆ. ಚಂದ್ರ ಚೂಡ್‌ ಅವರ ಸಿಕ್ಸ್‌ ಪ್ಯಾಕ್‌ ದೇಹದ ಪ್ರದರ್ಶನಕ್ಕಿಂತ ಪೋಸ್ಟರ್‌ ಮೇಲಿನ ಇತರೆ ವಿಷಯಗಳು ಕುತೂಹಲ ಹುಟ್ಟಿಸಿವೆ. ರಾಧಿಕಾ ಸುಫಾರಿ … ಅಂತ ಪೋಸ್ಟರ್‌ ನಲ್ಲಿ ಹಾಕಿದ್ದೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಅಷ್ಟೇ ಅಲ್ಲ, ಐಪಿಸಿ ಸೆಕ್ಸನ್‌ 375/ 300 ನ ಹಿನ್ನೆಲೆ ಏನು? ಜತೆಗೆ ಆರ್‌ ಹೌಸ್‌ ನ ಆ ಕೋಣೆಯಲ್ಲಿ ನಡೆದಿದ್ದೇನು ? ಹಾಗೆಯೇ ವಾಟ್ಸಾಪ್‌ ಲೀಕ್ಡ್‌ ಡಾಕ್ಯೂಮೆಂಟ್‌ ಯಾರದ್ದು? ಕೇಳು ಜನಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಇದೆಲ್ಲ ಪ್ರಶ್ನೆಗಳನ್ನು ಸಿನಿಮಾ ಪ್ರೇಕ್ಷಕರ ಮುಂದಿಡುವ ಮೂಲಕ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ, ಫಸ್ಟ್‌ ಲುಕ್‌ ಪೋಸ್ಟರ್ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ‌

ವಿಶೇಷವಾಗಿ ಚಿತ್ರೋದ್ಯಮ ಮಾತ್ರವಲ್ಲದೆ, ಕನ್ನಡ ಸಂಘಟನೆಗಳು ಹಾಗೂ ರಾಜಕೀಯ ವಲಯದಿಂದಲೂ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್‌ ಬಳಗ ಚಂದ್ರಚೂಡ್‌ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಮೆಚ್ಚಿಕೊಂಡು ಮಾತನಾಡಿದೆ. ಸೋಷಲ್‌ ಮೀಡಿಯಾದಲ್ಲಿ ಪೋಸ್ಟರ್‌ ವೈರಲ್‌ ಆಗಿದೆ. ಸದ್ಯಕ್ಕೆ ಟ್ವಿಟರ್‌ನಲ್ಲಿ ಕೇಳು ಜಲಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಟ್ರೆಂಡಿಂಗ್‌ ಎರಡನೇ ಸ್ಥಾನದಲ್ಲಿದೆ. ಚಿತ್ರೋದ್ಯಮದಿಂದ ಹಿರಿಯ ನಟಿ ತಾರಾ, ನಟಿ ಅನಿತಾ ಭಟ್‌ , ನಟರಾದ ಡಾಲಿ ಧನಂಜಯ್‌, ಸಂಚಾರಿ ವಿಜಯ್‌, ರಾಜವರ್ಧನ್‌, ವಿಕ್ಕಿ ವರುಣ್‌, ಅರಣ್‌ ಗೌಡ, ನವ ನಾಯಕ ದುಶ್ಯಂತ್‌, ಚೇತನ್‌ ಗೌಡ, ನಿರ್ದೇಶಕರಾದ ದಯಾಳ್‌ ಪದ್ಮನಾಭನ್‌, ರವಿ ಶ್ರೀವತ್ಸ, ಸಿಂಪಲ್‌ ಸುನಿ, ಶ್ರೀನಿ, ಅರವಿಂದ್‌ ಕೌಶಿಕ್‌, ನಿರ್ಮಾಪಕರಾದ ಅಶ್ವಿನಿ ರಾಮ್‌ ಪ್ರಸಾದ್‌, ಗುರುದೇವ್‌ ನಾಗರಾಜ್‌ ,ಕರ್ನಾಟಕ ಚಲವ ಚಿತ್ರ ಅಕಾಡೆಮಿ ಆಧ್ಯಕ್ಷರಾದ ಸುನೀಲ್‌ ಪುರಾಣಿಕ್‌ ಮತ್ತಿತರರು ಕೇಳು ಜನಮೇಜಯ ಚಿತ್ರದ ಫಸ್ಟ್‌ ಲುಕ್‌ ಗೆ ಸೋಷಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


ಹಾಗೆಯೇ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಸೇರಿದಂತೆ ಚಿತ್ರೋದ್ಯಮ ಆಚೆಗೂ ಹಲವು ಸೆಲಿಬ್ರಿಟಿಗಳು ಕೂಡ ಕೇಳು ಜನಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಮೆಚ್ಚಿಕೊಂಡಿದ್ದಾರೆ. ಇನ್ನು ವಿಶೇಷ ಅಂದ್ರೆ ಈ ಪೋಸ್ಟರ್‌ ಲಾಂಚ್‌ ಆದ ಬಗೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು ೫೦ ಕ್ಕೂ ಹೆಚ್ಚು ಸಿನಿಮಾ ಸೆಲಿಬ್ರಿಟಿಗಳು ಸೋಷಲ್‌ ಮೀಡಿಯಾದಲ್ಲಿ ಏಕ ಕಾಲದಲ್ಲಿಯೇ ಲಾಂಚ್‌ ಮಾಡಿದ್ದರು. ಹಾಗಾಗಿಯೇ “ಕೇಳು ಜನಮೇಜಯʼ ದ ಪೋಸ್ಟರ್‌ ಬಾರೀ ಸದ್ದು ಮಾಡುತ್ತಿದೆ. ಪತ್ರಕರ್ತ, ಬರಹಗಾರ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್‌ ಇದೇ ಮೊದಲು ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ʼ ಕೇಳು ಜನಮೇಜಯʼ ಚಿತ್ರಕ್ಕೆ ಸಂತೋಷ್ ಕೊಡಂಕೇರಿ ನಿರ್ದೇಶಕ. ಜೀವನ್ ಪ್ರಕಾಶ್ ಕ್ಯಾಮರಾ ವಿನಯ್ ಸಂಗೀತವಿರುವ ಈ ಚಿತ್ರಕ್ಕೆ ದೃಷ್ಠಿ ಮೀಡಿಯಾ ಮತ್ತುರಘುನಾಥ್ ನಿರ್ಮಾಪಕರು .

ಸದ್ಯಕ್ಕೆ ನಿರ್ದೇಶನದ ಜತೆಗೆಯೇ ನಟನೆಗೆ ಮುಖ ಮಾಡಿರುವ ಚಂದ್ರಚೂಡ್‌ ಅದರಲ್ಲೇ ಈಗ ಸಾಕಷ್ಟು ಬ್ಯುಸಿ ಆಗಿದ್ದಾರೆ. ನವೀನ್‌ ಕೃಷ್ಣ ನಿರ್ದೇಶನದ ” ಮೇಲೊಬ್ಬ ಮಾಯಾವಿʼ, ಅರವಿಂದ್‌ ಕೌಶಿಕ್‌ ನಿರ್ದೇಶನದ ಗಾನ್‌ ಕೇಸ್‌, ರವಿ ಶ್ರೀವತ್ಸ ನಿರ್ದೇಶನದ ಡಿಆರ್‌ ಹಾಗೂ ಸುದೀರ್‌ ಶಾನ್‌ ಬೋಗ್‌ ನಿರ್ದೇಶನದ ಮಾರೀಚ ಚಿತ್ರಗಳಲ್ಲಿ ನಟಿಸಿದ್ದು, ಅವೆಲ್ಲ ಬಿಡುಗಡೆಗೆ ರೆಡಿ ಆಗಿವೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಅಪ್ಪ ಮಗನ ಬಾಂಧವ್ಯದ ಹಾಡಿಗೆ ಅಪ್ಪು ಧ್ವನಿ

ಮಂಗಳವಾರ ರಜಾ ದಿನ ಚಿತ್ರದ ಸಾಂಗ್‌ ಮಂಗಳವಾರವೇ ರಿಲೀಸ್‌

ಸಾಂಗ್‌ ರಿಲೀಸ್‌ ಮಾಡಿದ ಅಭಿಷೇಕ್‌ ಅಂಬರೀಶ್‌ 

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ, “ಮಂಗಳವಾರ ರಜಾದಿನ” ಸಿನಿಮಾ ಕೂಡ ಚಿತ್ರೀಕರಣಗೊಂಡು ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.‌

ಹೌದು, ಚಂದನ್‌ ಆಚಾರ್‌ ಅಭಿನಯದ “ಮಂಗಳವಾರ ರಜಾ ದಿನ” ಚಿತ್ರದ ಹಾಡು ಇದೀಗ ಹೊರಬಂದಿದೆ. ಈ ಚಿತ್ರದ ಹಾಡನ್ನು ನಟ ಅಭಿಷೇಕ್‌ ಅಂಬರೀಶ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಈ ಚಿತ್ರದ ಹಾಡನ್ನು ಗೌಸ್‌ಪೀರ್‌ ಬರೆದಿದ್ದು, ನಟ ಪುನೀತ್‌ರಾಜಕುಮಾರ್‌ ಹಾಡಿದ್ದಾರೆ. ಲಹರಿ ಮ್ಯೂಸಿಕ್‌ ಸಂಸ್ಥೆ ಮೂಲಕ ಈ ಹಾಡನ್ನು ಹೊರ ತರಲಾಗಿದೆ.


“ನೀನೇ ಗುರು, ನೀನೇ ಗುರಿ, ನೀನೆ ಗುರುತು…’ ಎಂದು ಸಾಗುವ ಹಾಡನ್ನು ಅಭಿಷೇಕ್ ಅಂಬರೀಶ್ ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಿ, ಹಾಡಿನ ಬಗ್ಗೆ ಗುಣಗಾನ ಮಾಡಿದ್ದಾರೆ. ಈ ಹಾಡಿನ ಕುರಿತು ಮಾತನಾಡಿರುವ ಅಭಿಷೇಕ್‌ ಅಂಬರೀಷ್‌, “ತಂದೆ, ಮಗನ‌ ಭಾಂದವ್ಯದ ಹಾಡನ್ನು ಗೌಸ್‌ ಪೀರ್‌ ಚೆನ್ನಾಗಿ ಬರೆದಿದ್ದಾರೆ. ಹಾಗೆಯೇ ಪುನೀತ್‌ ರಾಜಕುಮಾರ್‌ ಕೂಡ ತುಂಬಾನೇ ಸೊಗಸಾಗಿ ಹಾಡಿದ್ದಾರೆ. ಇನ್ನು, ಈ ಹಾಡು ಕೇಳುವ ಪ್ರತಿಯೊಬ್ಬರಿಗೂ ತಮ್ಮ ತಂದೆ ನೆನಪಾಗುತ್ತಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಶುಭಹಾರೈಸಿದ್ದಾರೆ ಅಭಿಷೇಕ್‌ ಅಂಬರೀಶ್‌.

ತ್ರಿವರ್ಗ ಫಿಲಂಸ್ ‌ನಿರ್ಮಾಣದ ಈ ಚಿತ್ರವನ್ನು ಯುವಿನ್ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಋತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ.

 

Categories
ಸಿನಿ ಸುದ್ದಿ

ಚಕ್ರವರ್ತಿ ದಿ ಹೀರೋ – ಚಂದ್ರಚೂಡ್ ವಿಶೇಷ ಪಾತ್ರ

ಕೇಳು ಜನಮೇಜಯ

ಮತ್ತೊಂದು ಸಾಹಸದ ಚಿತ್ರ

ಸದಾ ಏನಾದರೊಂದು ಸುದ್ದಿಯಲ್ಲಿರುವ ಚಕ್ರವರ್ತಿ ಚಂದ್ರಚೂಡ ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಪತ್ರಕರ್ತರಾಗಿ, ಒಳ್ಳೆಯ ಮಾತುಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಸೈ ಎನಿಸಿಕೊಂಡಿರುವ ಅವರೀಗ, ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಚಂದ್ರಚೂಡ್, ಹೀಗೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ.
ಹೌದು, ಚಕ್ರವರ್ತಿ ಚಂದ್ರಚೂಡ್ ಈಗ “ಕೇಳು ಜನಮೇಜಯ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜನವರಿ26ಕ್ಕೆ ಚಿತ್ರದ. ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಬೇರ್ ಬಾಡಿ ತೋರಿಸಿರುವ ಚಕ್ರವರ್ತಿ ಚಂದ್ರಚೂಡ್, ಇಲ್ಲಿ‌ ಖೈದಿಯೋ, ಅಮಾಯಕರೋ ಎಂಬ ಪ್ರಶ್ನೆಗೆ ಕಾರಣರಾಗಿದ್ದಾರೆ.
ಇನ್ನು ಈ ಚಿತ್ರವನ್ನು ಸಂತೋಷ್‌ ಕೊಡಂಕೇರಿ ನಿರ್ದೇಶನ ಮಾಡುತ್ತಿದ್ದಾರೆ. ರಘುನಾಥ್ ಎಚ್.ಎ. ಮತ್ತು ದೃಷ್ಟಿ ಮೀಡಿಯಾ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರದ ಹಿಂದೆ ಶ್ರೀನಿ, ಧನ್ವಿಕ್ ಗೌಡ, ವಿನಾಯಕ್ ಗೌಡ, ರಘು, ಚಂದ್ರು, ಸಂತೋಷ್ ಆನಂದ್ ಮಧು ಸಾಸಿರ್ ಇದ್ದಾರೆ.


ಪೋಸ್ಟರ್ ನೋಡಿದರೆ ಇದೊಂದು ಅಪರಾಧದ ಹಿನ್ನೆಲೆಯಲ್ಲಿ ಸಾಗುವ ಚಿತ್ರ ಇರಬಹುದೇನೊ ಎಂದೆನಿಸಿದರೂ ಇಲ್ಲಿ ಹಲವು ಕುತೂಹಲಕಾರಿ ಅಂಶಗಳಿವೆ ಅನ್ನೋದು ಸತ್ಯ.
ಸದ್ಯಕ್ಕೆ ಪೋಸ್ಟರ್ ಬಿಡುಗಡೆಯಾಗಿದೆ. ಉಳಿದಂತೆ ಮತ್ತಷ್ಟು ಮಾಹಿತಿ ಜೊತೆ ಚಿತ್ರತಂಡ ಬರಲಿದೆ.

Categories
ಸಿನಿ ಸುದ್ದಿ

ರಾಜ್‌ಮೌಳಿ ‘ಆರ್‌ಆರ್‌ಆರ್‌’ ದಸರಾಗೆ!

ರಾಮ್‌ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ಅಭಿನಯದ ದಕ್ಷಿಣ ಭಾರತದ ಬಹುನಿರೀಕ್ಷಿತ ಮೆಗಾ ಸಿನಿಮಾ ಬಿಡುಗಡೆ ದಿನ ಘೋಷಣೆಯಾಗಿದೆ.


‘ಬಾಹುಬಲಿ’ ಸರಣಿ ಸಿನಿಮಾಗಳೊಂದಿಗೆ ನಿರ್ದೇಶಕ ರಾಜ್‌ಮೌಳಿ ಭಾರತದಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದಿದ್ದರು. ಆನಂತರ ಅವರು ಕೈಗೆತ್ತಿಕೊಂಡಿದ್ದ ಸಿನಿಮಾ ‘ಆರ್‌ಆರ್‌ಆರ್‌’. ಸಹಜವಾಗಿಯೇ ಇದು ಸಿನಿಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದೆ. ರಾಮ್‌ಚರಣ್‌ ತೇಜಾ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ನಟನೆಯ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರವಿದು. ಇಂದು ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಿದ್ದು, ಇದೇ ವರ್ಷ ದಸರಾಗೆ ಅಕ್ಟೋಬರ್‌ 13ರಂದು ಸಿನಿಮಾ ತೆರೆಕಾಣಲಿದೆ. ಹೀರೋಗಳಿಬ್ಬರೂ ಟ್ವಿಟರ್‌ನಲ್ಲಿ ಚಿತ್ರದ ಪೋಸ್ಟರ್ ಹಾಕಿಕೊಂಡು ಸಂತಸ ಹಂಚಿಕೊಂಡಿದ್ದಾರೆ.

“ಬೆಂಕಿ ಮತ್ತು ನೀರು ಒಟ್ಟಿಗೇ ನುಗ್ಗಿ ಬರಲಿದ್ದು, ಹಿಂದೆಂದೂ ಕಂಡಿರದ ಸನ್ನಿವೇಶಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ. ಭಾರತೀಯ ಸಿನಿಮಾರಂಗದಲ್ಲೇ ಇದೊಂದು ವಿಶಿಷ್ಟ ಅನುಭವ ನೀಡುವ ಪ್ರಯೋಗವಾಗಲಿದೆ” ಎಂದು ನಟರಾದ ರಾಮ್‌ಚರಣ್ ತೇಜಾ, ಜ್ಯೂನಿಯರ್ ಎನ್‌ಟಿಆರ್‌ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನ ಅದ್ಧೂರಿ ಸೆಟ್‌ನಲ್ಲಿ ಚಿತ್ರದ ಕ್ಲ್ಯೈಮ್ಯಾಕ್ಸ್‌ ಚಿತ್ರಿಸಲಾಗಿತ್ತು. ಕ್ಲೈಮ್ಯಾಕ್ಸ್‌ ಸನ್ನಿವೇಶಗಳಲ್ಲಿ ಪಾಲ್ಗೊಂಡ ನಂತರ ಚಿತ್ರದ ನಟರಿಬ್ಬರೂ ತಮ್ಮ ರಕ್ತಸಿಕ್ಕ ಹಸ್ತಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿ ಚರ್ಚೆಗೆ ಆಸ್ಪದ ನೀಡಿದ್ದವು.

‘ಆರ್‌ಆರ್‌ಆರ್‌’ ನಿರ್ಮಾಪಕ ಡಿ.ವಿ.ವಿ. ದಾನಯ್ಯ ತಮ್ಮ ಹೇಳಿಕೆಯಲ್ಲಿ, “ಚಿತ್ರೀಕರಣ ಪೂರ್ಣಗೊಳಿಸಿದ್ದು, ಪ್ರೇಕ್ಷಕರ ಮುಂದೆ ಬರಲು ಕಾತುರರಾಗಿದ್ದೇವೆ. ಥಿಯೇಟರ್‌ಗಳಲ್ಲಿ ಜನರೊಂದಿಗೆ ದಸರಾ ಆಚರಣೆ ಜೋರಾಗಿರುತ್ತದೆ” ಎಂದಿದ್ದಾರೆ. ಈ ಮೊದಲು 2020ರ ಜುಲೈ 30ರಂದು ಚಿತ್ರದ ಬಿಡುಗಡೆ ದಿನಾಂಕ ನಿಗಧಿಯಾಗಿತ್ತು. ಚಿತ್ರೀಕರಣದ ವೇಳೆ ಹೀರೋಗಳು ಗಾಯಗೊಂಡಿದ್ದು ಹಾಗೂ ಕೊರೋನಾ ಹಾವಳಿಯಿಂದಾಗಿ ಶೂಟಿಂಗ್ ಮುಂದಕ್ಕೆ ಹೋಯ್ತು. ಇದೀಗ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಚಿತ್ರತಂಡ ಅಂತಿಮ ಹಂತದ ಕೆಲಸಗಳನ್ನು ಕೈಗೆತ್ತಿಕೊಂಡಿದೆ.

1920ರ ಅವಧಿಯ ಬ್ರಿಟಿಷ್‌ ಆಡಳಿತದ ಅವಧಿಯ ಕಥಾನಕವಿದು. ರಾಜ್‌ಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ ಚಿತ್ರಕ್ಕಾಗಿ ಅಲ್ಲೂರಿ ಸೀತಾರಾಮರಾಜು (ರಾಮ್‌ಚರಣ್‌ ತೇಜಾ) ಮತ್ತು ಕೋಮಾರಮ್ ಭೀಮ್‌ (ಜ್ಯೂನಿಯರ್ ಎನ್‌ಟಿಆರ್‌) ತೆಲುಗು ಬುಡಕಟ್ಟು ನಾಯಕರ ಪಾತ್ರಗಳನ್ನು ಸೃಷ್ಟಿಸಿ ಕತೆ ಹೆಣೆದಿದ್ದಾರೆ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದು, ಬಾಲಿವುಡ್‌ ನಟಿ ಅಲಿಯಾ ಭಟ್‌ ನಾಯಕಿ. ಇದು ದಕ್ಷಿಣದಲ್ಲಿ ಅವರ ಮೊದಲ ಸಿನಿಮಾ. ಅಜಯ್ ದೇವಗನ್‌, ಸಮುದ್ರಕನಿ, ಒಲಿವಿಯಾ ಮೋರಿಸ್‌, ರೇ ಸ್ಟೀವನ್‌ಸನ್‌, ಶ್ರಿಯಾ ಶರಣ್‌ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.

Categories
ಸಿನಿ ಸುದ್ದಿ

ನಮ್‌ ಸ್ಟಾರ್‌ ಗ್ರೇಟ್‌ ಅನ್ನೋರಿಗೆ ಒಂದೇ ಅಖಾಡ! ಶುರುವಾಯ್ತು ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌

ಸ್ಟಾರ್ಸ್‌ ಅಭಿಮಾನಿಗಳಿಗೆ ಹೀಗೊಂದು ಪಂದ್ಯ

ಇದೊಂದು ಸೌಹಾರ್ದಯುತ ಕ್ರಿಕೆಟ್‌ ಪಂದ್ಯಾವಳಿ

ಕ್ರಿಕೆಟ್‌ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಹುಡುಗರಿಂದ ಹಿಡಿದು ವೃದ್ಧರವರೆಗೂ ಕ್ರಿಕೆಟ್‌ ಅಂದರೆ ಪಂಚಪ್ರಾಣ. ಹೌದು, ಈಗ ಇಲ್ಲೇಕೆ ಕ್ರಿಕೆಟ್‌ ವಿಷಯ ಅಂದುಕೊಂಡ್ರಾ? ವಿಷಯ ಇದೆ. ಈ ಕ್ರಿಕೆಟ್‌ ಎಲ್ಲೆಡೆ ವಿಸ್ತಾರಗೊಂಡಿರುವುದು ಗೊತ್ತೇ ಇದೆ. ಸಿನಿಮಾ ನಟರು ಕೂಡ ಕ್ರಿಕೆಟ್‌ ಕ್ರೀಡೆಗೆ ಮಾರುಹೋಗಿರುವುದುಂಟು. ದೇಶ ದೇಶಗಳ ನಡುವೆ ಕ್ರಿಕೆಟ್‌ ಆಯ್ತು, ರಾಜ್ಯ ರಾಜ್ಯಗಳ ನಡುವೆಯೂ ಕ್ರಿಕೆಟ್‌ ಆಟ ಶುರುವಾಯ್ತು. ಕೆಸಿಎಲ್‌ (ಕರ್ನಾಟಕ ಕ್ರಿಕೆಟ್‌ ಲೀಗ್), ಸಿಸಿಎಲ್‌ (ಸೆಲಬ್ರಿಟಿ ಕ್ರಿಕೆಟ್‌ ಲೀಗ್‌) ಕೂಡ ಪ್ರತಿ ವರ್ಷ ನಡೆಯುತ್ತಲೇ ಇದೆ. ಈಗ ಎಫ್‌ಸಿಎಲ್‌ ಕೂಡ ಅಖಾಡಕ್ಕಿಳಿಯಲಿದೆ.


ಎಫ್‌ಸಿಎಲ್‌ ಅಂದರೆ, ಫ್ಯಾನ್ಸ್‌ ಕ್ರಿಕೆಟ್‌ ಲೀಗ್.‌ ಇದುವರೆಗೆ ಸ್ಟಾರ್‌ ನಡುವೆ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿತ್ತು. ಅಭಿಮಾನಿಗಳು ನೋಡಿ ಚಪ್ಪಾಳೆ, ಶಿಳ್ಳೆ ತಟ್ಟುತ್ತಿದ್ದರು. ಈಗ ಅಂತಹ ಸ್ಟಾರ್‌ಗಳ ಅಭಿಮಾನಿಗಳಿಗಾಗಿಯೇ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಶುರುವಾಗಿದೆ. ಈಗಾಗಲೇ ಐದು ಸೀಸನ್‌ ಮುಗಿಸಿರುವ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಈಗ ಆರನೇ ಆವೃತ್ತಿಯತ್ತ ಸಾಗಿದೆ.
ಜನವರಿ ‌26 ರ ಗಣರಾಜ್ಯೋತ್ಸವ ದಿನದಂದೇ ಎಫ್‌ಸಿಎಲ್‌ಗೆ ಚಾಲನೆ ಸಿಗಲಿದ್ದು, ಗೊರಗುಂಟೆ ಪಾಳ್ಯದಲ್ಲಿರುವ ರಾಜಣ್ಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಮುನಿರತ್ನ,‌ ನಾಗೇಂದ್ರ ಪ್ರಸಾದ್, ಕೆ.ಪಿ.ಶ್ರೀಕಾಂತ್‌,ರಘುಮುಖರ್ಜಿ, ಚೇತನ್‌ ಕುಮಾರ್‌, ಪವನ್‌ ಒಡೆಯರ್‌, ಸುನಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

 

ಇಷ್ಟಕ್ಕೂ ಈ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ನಲ್ಲಿ ಯಾರೆಲ್ಲಾ ಸ್ಟಾರ್‌ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರವಿದು. ಶಿವರಾಜಕುಮಾರ್‌ ಫ್ಯಾನ್ಸ್‌, ರಮ್ಯಾ ಫ್ಯಾನ್ಸ್‌, ಸುದೀಪ್‌ ಫ್ಯಾನ್ಸ್‌, ದರ್ಶನ್‌ ಫ್ಯಾನ್ಸ್‌, ಗಣೇಶ್‌ ಫ್ಯಾನ್ಸ್‌ ಮತ್ತು ಪ್ರಜ್ವಲ್‌ ದೇವರಾಜ್‌ ಈ ಆರು ಸ್ಟಾರ್ಸ್‌ ಅಭಿಮಾನಿಗಳು ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಇನ್ನು, ನಮ್‌ ಟಾಕೀಸ್‌ ಈ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು, ಪ್ರತಿ ವರ್ಷ ಒಬ್ಬೊಬ ಸಿನಿಮಾ ಲೆಜೆಂಡರಿ ನೆನಪಿಗೆ ಫ್ಯಾನ್ಸ್‌ ಕ್ರಿಕೆಟ್‌ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈಗ ನಟ ಜಗ್ಗೇಶ್‌ ಅವರ ಪ್ರೋತ್ಸಾಹದೊಂದಿಗೆ ನಡೆಸಲಾಗುತ್ತಿದೆ.

ಎಲ್ಲಾ ಸ್ಟಾರ್‌ ಫ್ಯಾನ್ಸ್‌ಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಜಗಳ ಶುರುಮಾಡುತ್ತಲೇ ಇರುತ್ತಾರೆ. ಸ್ಟಾರ್‌ಗಳು ಮಾತ್ರ ಚೆನ್ನಾಗಿಯೇ ಇರುತ್ತಾರೆ. ಆದರೆ, ಅಂತಹ ಸ್ಟಾರ್ಸ್ ಫ್ಯಾನ್ಸ್‌ಗಳನ್ನು‌ ಒಂದೆಡೆ ಕಲೆಹಾಕಿ, ಅವರಿಗೆ ಸೌಹಾರ್ದತೆಗಾಗಿ ಈ ಪಂದ್ಯಾವಳಿ ನಡೆಸುವ ಮೂಲಕ ಅವರಲ್ಲೂ ಗೆಳೆತನ ಮೂಡಿಸುವ ಒಂದು ಪ್ರಯತ್ನ ಇಲ್ಲಾಗುತ್ತಿದೆ ಎಂಬುದು ಆಯೋಜಕರ ಮಾತು.


ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಎಲ್ಲಾ ಸ್ಟಾರ್ಸ್‌ ಅಭಿಮಾನಿಗಳು ಪ್ರೀತಿಯಿಂದಲೇ ಪಾಲ್ಗೊಳ್ಳುತ್ತಿರುವುದು ವಿಶೇಷ. ಇಲ್ಲಿ ಒಟ್ಟು ಆರು ತಂಡಗಳಿದ್ದು, ನಾಲ್ಕು ತಂಡಗಳು ಸೆಮಿಫೈನಲ್‌ ತಲುಪಲಿವೆ. ಅವುಗಳ ಪೈಕಿ ಎರಡು ತಂಡಗಳು ಅಂತಿಮ ಸೆಣೆಸಾಟ ನಡೆಸಲಿವೆ. ಅಂತಿಮವಾಗಿ ಆ ಎರಡಲ್ಲಿ ಒಂದು ತಂಡ ಜಯಶಾಲಿಯಾಗಿ ಹೊರಹೊಮ್ಮಲಿದೆ. ಗೆದ್ದ ತಂಡಕ್ಕೆ ಟ್ರೋಫಿ ವಿತರಣೆ ಮಾಡಲಾಗುತ್ತಿದೆ.

error: Content is protected !!