Categories
ಸಿನಿ ಸುದ್ದಿ

ದಿ ಜಡ್ಜ್ ಮೆಂಟ್ ಶೂಟಿಂಗ್ ಮುಕ್ತಾಯ: ಇದು ಕ್ರೇಜಿ ಸ್ಟಾರ್ ಚಿತ್ರ

ಜಿ9 ಕಮ್ಯುನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದಿ ಜಡ್ಜ್ ಮೆಂಟ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ ನಮ್ಮ ಚಿತ್ರದ ಚಿತ್ರೀಕರಣ ಕಳೆದವರ್ಷ ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನ ಮುಕ್ತಾಯವಾಗಿದೆ. ಚಿತ್ರ ಇಷ್ಟು ಸರಾಗವಾಗಿ ಮುಕ್ತಾಯವಾಗಲು ರವಿಚಂದ್ರನ್ ಅವರು ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರವೇ ಕಾರಣ.

ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರವನ್ನು ನಾನು ಸೇರಿದಂತೆ ಐವರು ನಿರ್ಮಾಪಕರು ನಿರ್ಮಿಸಿದ್ದೇವೆ. ಕೋರ್ಟ್ ರೂಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ದ ಜಡ್ಜ್ ಮೆಂಟ್” ಚಿತ್ರವನ್ನು ಮೇ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ನಮ್ಮ ಚಿತ್ರ ಕಳೆದವರ್ಷ ಯಾವ ದಿನ‌ ಆರಂಭವಾಗಿತ್ತೊ, ಈ ವರ್ಷ ಅದೇ ದಿನ ಮುಕ್ತಾಯವಾಗಿದೆ. ಇಂತಹ ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಈ ಚಿತ್ರ ಯಾವುದೇ ತೊಂದರೆಯಿಲ್ಲದೆ ಪೂರ್ಣವಾಗಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದ ಎಂದರು ನಿರ್ಮಾಪಕರಾದ ಶರದ್ ನಾಡಗೌಡ ಹಾಗೂ ರಾಮು ರಾಯಚೂರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಹಾಗು ರಾಜಶೇಖರ ಪಾಟೀಲ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ದ ಜಡ್ಜ್ ಮೆಂಟ್” ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ‌. ಈ ತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಧನ್ಯಾ ರಾಮಕುಮಾರ್ ತಿಳಿಸಿದರು.

ಈ ತಂಡಕ್ಕೆ ತಡವಾಗಿ ಬಂದು ಸೇರಿಕೊಂಡವಳು ನಾನೇ ಎಂದು ಮಾತು ಆರಂಭಿಸಿದ ನಟಿ ಮೇಘನಾ ಗಾಂವ್ಕರ್, ರವಿಚಂದ್ರನ್ ಅವರ ಜೊತೆ ನಟಿಸಿದ್ದು ನನಗೆ ಸಂತೋಷವಾಗಿದೆ. ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಆರಂಭವಾಗಿ, ಈ ವರ್ಷದ ಅವರ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಮುಕ್ತಾಯವಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಣ್ಣಾವ್ರ ಆಶೀರ್ವಾದ ನಮ್ಮ ತಂಡಕ್ಕೆ ಇದೆ ಎಂದರು.

ಡಾ|| ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಹಾಗು ಚಿತ್ರದಲ್ಲಿ ನಟಿಸಿರುವ ರೇಖಾ ಕೂಡ್ಲಗಿ, ನವಿಲ ಚಿತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.

ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ “ದ ಜಡ್ಜ್ ಮೆಂಟ್” ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ದಕ್ಷಿಣ ಭಾರತ ನಟಿ‌ ಐಶ್ವರ್ಯ ರಾಜೇಶ್: ಉತ್ತರಕಾಂಡದಲ್ಲಿ ದುರ್ಗಿಯಾಗಿ ನಟನೆ

ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯ ರಾಜೇಶ್ ಉತ್ತರಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಉತ್ತರಕಾಂಡ ಒಂದು ಬಹು ನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ “ದುರ್ಗಿ” ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


“ದಿ ಗ್ರೇಟ್ ಇಂಡಿಯನ್ ಕಿಚನ್”, “ದಿ ವರ್ಲ್ಡ್ ಫೇಮಸ್ ಲವರ್”, “ವಡಾ‌ ಚೆನ್ನೈ”, “ಕಾಕ ಮುತ್ತೈ” (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ಜೋಮೋಂಟೇ ಸುವಿಶೇಷಂಗಳ್” ,”ಟಕ್ ಜಗದೀಶ್” , “ವಾನಂ ಕೊಟ್ಟಾಟುಂ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಐಶ್ವರ್ಯ ತಮ್ಮ ಅಭಿನಯದ ಮೂಲಕ ಛಾಪನ್ನು ಮೂಡಿಸಿ,‌ಇದೀಗ ಉತ್ತರಕಾಂಡಕ್ಕೆ ಎಂಟ್ರಿ ನೀಡಿದ್ದಾರೆ.


ಪ್ರಸ್ತುತ ಚಿತ್ರದ ಪ್ರಥಮ ಶೆಡ್ಯೂಲ್ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದ್ದು, ಈ ಆಕ್ಷನ್ ಡ್ರಾಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ.ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಚೈತ್ರ ಜೆ ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹು ದೊಡ್ಡ ತಾರಾಬಳಗವನ್ನು ಚಿತ್ರ ಹೊಂದಿದೆ. ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್‌ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ.

Categories
ಸಿನಿ ಸುದ್ದಿ

’ಪ್ರತಿಷ್ಟಿತ BIFFF’ಗೆ ಆಯ್ಕೆಯಾದ ಮಲಯಾಳಂ ಸಿನಿಮಾ ‘ವಡಕ್ಕನ್’

ಬಹುಭಾಷಾ ನಟ ಕಿಶೋರ್ ಹಾಗೂ ಕಿಸ್ಮಾತ್ ಖ್ಯಾತಿಯ ಶೃತಿ ಮೆನನ್ ನಟಿಸಿರುವ ವಡಕ್ಕನ್ ಸಿನಿಮಾ ಬ್ರಸೆಲ್ಸ್ ಇಂಟರ್ ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ ಫೆಸ್ಟಿವಲ್-BIFFFಗೆ ಆಯ್ಕೆಯಾಗಿದೆ. ಪ್ರಾಚೀನ ಉತ್ತರ ಮಲಬಾರ್ ಜಾನಪದದ ಹಿನ್ನೆಲೆಯಲ್ಲಿಯುಳ್ಳ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಸಜೀದ್ ಎ ಆಕ್ಷನ್ ಕಟ್ ಹೇಳಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಮೊದಲ ಬಾರಿಗೆ BIFFFಗೆ ಆಯ್ಕೆಯಾದ ಸಿನಿಮಾ ಎಂಬ ಖ್ಯಾತಿಯೂ ವಡಕ್ಕನ್ ಗೆ ತೆಕ್ಕೆ ಸೇರ್ಪಡೆಯಾಗಿದೆ. ಮುನ್ನರಿಯಿಪ್ಪು ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿರುವ ರಾಜ್ಯ ಪ್ರಶಸ್ತಿ ವಿಜೇತ ಕಥೆಗಾರ ಉನ್ನಿ ಆರ್ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ.

ಆಫ್‌ಬೀಟ್ ಮೀಡಿಯಾ ಗ್ರೂಪ್‌ನ ಅಂಗಸಂಸ್ಥೆಯಾದ ಆಫ್‌ಬೀಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಚಿತ್ರಕ್ಕೆ ಬಿಜಿಬಾಲ್ ಅವರ ಸಂಗೀತ, ಕೀಕೊ ನಕಹರಾ ಅವರ ಛಾಯಾಗ್ರಹಣ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ರೆಸುಲ್ ಪೂಕುಟ್ಟಿ ಅವರ ಧ್ವನಿ ವಿನ್ಯಾಸವಿದೆ.

ವೈವಿಧ್ಯಮಯ ಪ್ರೇಕ್ಷಕರನ್ನು ತಲುಪುವ ಸಂಘಟಿತ ಪ್ರಯತ್ನದಲ್ಲಿ, ವಡಕ್ಕನ್ ಅನ್ನು ಈ ವರ್ಷದ ಕ್ಯಾನ್ಸ್‌ನಲ್ಲಿ ಮೇ ತಿಂಗಳಲ್ಲಿ ಮಾರ್ಚ್ ಡು ಫಿಲ್ಮ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ, ಇದು ವಾರ್ಷಿಕವಾಗಿ ನಡೆಯುವ ಫೆಸ್ಟಿವಲ್ ಡಿ ಕ್ಯಾನ್ಸ್‌ನ ಆಶ್ರಯದಲ್ಲಿ ನಡೆಯುವ ಚಲನಚಿತ್ರ ಮಾರುಕಟ್ಟೆಯಾಗಿದೆ. ವಡಕ್ಕನ್ ಸಿನಿಮಾವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಮಿರಾಯ್ ಇದು ತೇಜ್ ಸಜ್ಜಾ ಚಿತ್ರ: ಫಸ್ಟ್ ಲುಕ್ ಸಖತ್ ಮೆಚ್ಚುಗೆ

ಹನುಮಾನ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕಾರ್ತಿಕೇಯ, ಕಾರ್ತಿಕೇಯ-2 , ಧಮಾಕ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಕಾರ್ತಿಕ್ ಗಟ್ಟಮ್ನೇನಿ ತೇಜ್ ಸಜ್ಜಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಇಂದು ಅನಾವರಣಗೊಂಡಿದೆ.

ಹನುಮಾನ್ ನಲ್ಲಿ ಸೂಪರ್ ಹೀರೋ ಆಗಿದ್ದ ತೇಜ್ ಸಜ್ಜಾ ಈಗ ಸೂಪರ್ ಯೋಧನಾಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಸ್ಟಾಫ್ಟ್ ಸ್ಟಿಕ್ ಹಿಡಿದು ದುಷ್ಟರನ್ನು ಸಂಹರಿಸಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ತೇಜ್ ಸಜ್ಜಾ ಹೊಸ ಅವತಾರವನ್ನೇ ತಾಳಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಹಾಗೂ ತೇಜ್ ಸಜ್ಜಾ ಹೊಸ ಸಿನಿಮಾ ಮಿರಾಯ್ ಎಂಬ ಟೈಟಲ್ ಇಡಲಾಗಿದೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಮಿರಾಯ್ ವಿಷ್ಯುವಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ.

ಮಿರಾಯ್ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಮಿರಾಯ್ ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರ್ತಿರುವ ಮರೈ ಸಿನಿಮಾವನ್ನು ಏಪ್ರಿಲ್ 18 2025ರಂದು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Categories
ಸಿನಿ ಸುದ್ದಿ

ಇದು ಗುರು ಕೊಟ್ಟ ರಾಮರಸ! ರಾಮನವಮಿ ಮರುದಿನ ಗುರು ದೇಶಪಾಂಡೆ ಹೊಸ ಚಿತ್ರ ಅನೌನ್ಸ್

ರಾಮರಸ.... ಇದು ಹೊಸ ಸಿನಿಮಾದ ಶೀರ್ಷಿಕೆ. ಬಿ.ಎಂ ಗಿರಿರಾಜ್ ನಿರ್ದೇಶನದ ಈ ಚಿತ್ರದ ಶೀರ್ಷಿಕೆಯನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅನಾವರಣಗೊಳಿಸಿದ್ದಾರೆ. ಇದು ಗುರುದೇಶಪಾಂಡೆ ನಿರ್ಮಾಣದ ಸಿನಿಮಾ...

ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ “ಪ್ರೊಡಕ್ಷನ್ ನಂ 4” ಚಿತ್ರದ ಹಾಡುಗಳ ಧ್ವನಿಮುದ್ರಣ (ಸಾಂಗ್ ರೆಕಾರ್ಡಿಂಗ್) ಕೆಲವು ದಿನಗಳ ಹಿಂದೆ ನೆರವೇರಿತ್ತು. ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ “ರಾಮರಸ” ಎಂದು ನಾಮಕರಣ ಮಾಡಲಾಗಿದೆ. “ಜಟ್ಟ”, ” ಮೈತ್ರಿ ಚಿತ್ರಗಳ ಖ್ಯಾತಿಯ ಬಿ.ಎಂ ಗಿರಿರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದರು.

ಶ್ರೀರಾಮನವಮಿಯ ದಿವಸದಂದೆ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ನಡೆಯಬೇಕಿತ್ತು. ಆದರೆ ಕಾರಣಾಂತರದಿಂದ ಮಾರನೇ ದಿನ ಬಿಡುಗಡೆಯಾಗುತ್ತಿದೆ. “ರಾಮರಸ” ಟೈಟಲ್ ಚೆನ್ನಾಗಿದೆ. ಮೋಷನ್ ಪೋಸ್ಟರ್ ಕೂಡ ಅದ್ಭುತವಾಗಿದೆ. ಗುರು ದೇಶಪಾಂಡೆ ಅವರು ನಮ್ಮ ಅಣ್ಣನ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ನೂತನ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ‌ .ನನ್ನ ಸ್ನೇಹಿತ ಕೂಡ ಈ ಚಿತ್ರದಲ್ಲಿ ನಟಸುತ್ತಿದ್ದಾನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಧ್ರುವ ಸರ್ಜಾ ಹಾರೈಸಿದರು.

“ರಾಮರಸ” , ಹಾರಾರ್ ಕಾಮಿಡಿ ಜಾನರ್ ನ ಚಿತ್ರ. ಜಿ ಅಕಾಡೆಮಿಯ ಹದಿನಾರು ಜನ ಹೊಸ ಪ್ರತಿಭೆಗಳಿಗೆ ತರಭೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು. ಇಂದು ಧ್ರುವ ಸರ್ಜಾ ಅವರಿಂದ ಶೀರ್ಷಿಕೆ ಅನಾವರಣವನ್ನು ಮಾಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಂಗ್ ರೆಕಾರ್ಡಿಂಗ್ ಪೂಜೆ ಮಾಡುವುದು ವಿರಳ. ಹಳೆಯ ಸಂಪ್ರದಾಯಗಳನ್ನು ಪುನಃ ಗುರು ದೇಶಪಾಂಡೆ ಅವರು ಚಿತ್ರರಂಗಕ್ಕೆ ತರುತ್ತಿದ್ದಾರೆ ಎಂದು ನಿರ್ದೇಶಕ ಬಿ.ಎಂ.ಗಿರಿರಾಜ್ ತಿಳಿಸಿದರು.

2008 ರಲ್ಲಿ ಮೊದಲ ನಿರ್ದೇಶನದೊಂದಿಗೆ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದೆ. ಅಂದಿನಿಂದ ನನ್ನ ಹೆಚ್ಚು ಚಿತ್ರಗಳಲ್ಲಿ‌ ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾ ಬಂದಿದ್ದೇನೆ. ಇದು ನಮ್ಮ‌ ಜಿ ಸಿನಿಮಾಸ್ ಲಾಂಛನದಲ್ಲಿ ನಾನು ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ.‌ ಈ ಚಿತ್ರದಲ್ಲೂ ಜಿ ಅಕಾಡೆಮಿಯ ಹದಿನಾರು ಜನ ನೂತನ ಪ್ರತಿಭೆಗಳು ಅಭಿನಯಿಸುತ್ತಿದ್ದಾರೆ. ಅವರಿಗೆ ಅಭಿನಯಕ್ಕೆ ಬೇಕಾದ ವರ್ಕ್ ಶಾಪ್ ನಡೆಸಲಾಗಿದೆ. ಇವರೊಂದಿಗೆ ಕನ್ನಡದ ಖ್ಯಾತ ನಟರೊಬ್ಬರು ನಟಿಸುತ್ತಿದ್ದು, .ಮಾತುಕತೆ ಅಂತಿಮ ಹಂತದಲ್ಲಿದೆ. ಮೇ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಂ.ಗಿರಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅವರ ಹಿಂದಿನ ಚಿತ್ರಗಳು ನನಗೆ ಬಹಳ ಇಷ್ಟವಾಗಿದ್ದವು. ಕನ್ನಡದಲ್ಲಷ್ಟೇ ಕಮರ್ಷಿಯಲ್, ಆರ್ಟ್ ಅಂತ ವಿಭಾಗಗಳಿದೆ. ಆದರೆ ಬೇರೆ ಭಾಷೆಗಳಲ್ಲಿ ಆ ಚಿತ್ರ ಪ್ರಶಸ್ತಿ ಪಡೆದುಕೊಂಡಿರುತ್ತದೆ ಹಾಗೂ ಗಳಿಕೆಯಲ್ಲೂ ಮುಂದಿರುತ್ತದೆ. ಈ ಚಿತ್ರ ಕೂಡ ಅಂತಹ ಚಿತ್ರವಾಗಬೇಕೆಂದು ನನ್ನ ಆಸೆ. ಬಿ.ಜೆ.ಭರತ್ ಈಗಾಗಲೇ “ರಾಮರಸ” ದ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪುನೀತ್ ಆರ್ಯ ಹಾಡುಗಳನ್ನು ಬರೆದಿದ್ದಾರೆ. ಸುನೀಲ್ ಹೆಚ್ ಸಿ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ‌ ನಿರ್ವಹಿಸುತ್ತಿದ್ದಾರೆ‌. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ಮಾಪಕ ಗುರು ದೇಶಪಾಂಡೆ.

ಜಿ ಅಕಾಡೆಮಿಯಲ್ಲಿ ಅಭಿನಯ ಕಲಿತಿರುವ ಹದಿನಾರು ನೂತನ ಪ್ರತಿಭೆಗಳು ಹಾಗೂ ಸಹ ನಿರ್ದೇಶಕರಾಗಿ ಕಾರ್ಯ ನಿರವಹಿಸಲಿರುವ ಮೂವರು ನವ ಸಹ ನಿರ್ದೇಶಕರು ಹಾಗೂ ನೂತನ ಸಹ ನಿರ್ಮಾಪಕರೊಬ್ಬರು ತಮ್ಮ ಪರಿಚಯ ಮಾಡಿಕೊಂಡರು. ಸಂಗೀತ ನಿರ್ದೇಶಕ ಬಿ.ಜೆ.ಭರತ್. ಗೀತರಚನೆಕಾರ ಪುನೀತ್ ಆರ್ಯ, ಕಾರ್ಯಕಾರಿ ನಿರ್ಮಾಪಕ ಸುನೀಲ್ ಹೆಚ್ ಸಿ ಗೌಡ ಹಾಗೂ ವಿತರಕ ವೆಂಕಟ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನಟಿ ಹರ್ಷಿಕಾ ದಂಪತಿ ಮೇಲೆ ಅಟ್ಯಾಕ್: ಅನ್ಯ ಕೋಮಿನ ಗುಂಪು ಗಲಾಟೆ, ಹಲ್ಲೆ

ನಟಿ ಹರ್ಷಿಕಾ ಪೊಣಚ್ಚ ಹಾಗು ಭುವನ್ ದಂಪತಿ ಮೇಲೆ ಅನ್ಯ ಕೋಮಿನ ಗುಂಪೊಂದು ಗದ್ದಲ ನಡೆಸಿ, ಹಲ್ಲೆ ಮಾಡಿರುವ ಘನೆ ನಡೆದಿದೆ. ಫ್ರೇಜರ್ ಟೌನ್ ನಲ್ಲಿ ಈ ಗಲಾಟೆ ನಡೆದಿದ್ದು ಹರ್ಷಿಕಾ ಹಾಗು ಅವರ ಪತಿ ಭುವನ್ ಮೇಲೆ ಹಲ್ಲೆ ನಡೆಸಲಾಗಿದೆ. ಈ ಕುರಿತು ಸ್ವತಃ ಹರ್ಷಿಕಾ ಅವರು ಅಂದು ನಡೆದ ಘಟನೆ ಕುರಿತು ವಿವರಣೆ ನೀಡಿದ್ದಾರೆ.

ಗೆಳೆಯರೇ,

ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ?
ನಮಸ್ಕಾರ..ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದ್ದೆ. ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯ ವಾಗ ಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ.


ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ಸ್ವೀಕರಿಸಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು , ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ವಾದಿಸಲು ಪ್ರಾರಂಭಿಸಿದರು.

ನನ್ನ ಪತಿ “ಇನ್ನು ವಾಹನ ಮೂವ್ ಮಾಡಿಲ್ವಲ್ಲ ಸೈಡು ಬಿಡಿ” ಎಂದು ಹೇಳಿದರು ಏಕೆಂದರೆ ಅವರು ಆ ಘಟನೆ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅದರಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು, ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು, ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು. ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು ಏಕೆಂದರೆ ಅವರು ಸಾಮಾನ್ಯವಾಗಿ ತುಂಬಾ ಸಿಟ್ಟು ಸ್ವಭಾವದವರು. 2 – 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20 – 30 ಸದಸ್ಯರ ಗುಂಪು ಜಮಾಯಿಸಿತು ಮತ್ತು ಅವರಲ್ಲಿ 2 ಜನರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತುಕೊಂಡು, ನಂತರ ಅವರು ಅದನ್ನು ಬಹಳ ಕೌಶಲ್ಯದಿಂದ ತಮ್ಮ ಕಡೆಗೆ ಎಳೆಯಲು ಪ್ರಯತ್ನಿಸಿದರು.

ನನ್ನ ಪತಿ ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರು ಮತ್ತು ಅದನ್ನು ಹಿಡಿದಿಟ್ಟುಕೊಂಡು ನನಗೆ ಕೊಟ್ಟರು. ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೈಗೆ ಸಿಗದಂತೆ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು. ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಅಲ್ಲದೆ ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಸಮಸ್ಯೆ ಆಗಿತ್ತು.

ಅವರು ನೀವು ನಮ್ಮ ಪ್ರದೇಶಕ್ಕೆ ಬಂದಂತೆ ಮತ್ತು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ. “ಯೇ ಲೋಕಲ್ ಕನ್ನಡ್ ವಾಲಾ ಹೇ” (ಈ ವ್ಯಕ್ತಿಗಳು ಸ್ಥಳೀಯ ಕನ್ನಡ ಜನರು) ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತ್ರ ಮಾತನಾಡಿದಾಗ ಅದು ಅವರನ್ನು ಹೆಚ್ಚು ಕೆರಳಿಸಿತು. ನಿಮ್ಮ “ಕನ್ನಡ ಸ್ಟೈಲ್”ಯನ್ನು ನೀವೇ ಇಟ್ಟುಕೊಳ್ಳಿ ಎಂದರು.

ಅವರಲ್ಲಿ ಹೆಚ್ಚಿನವರು ಹಿಂದಿ, ಉರ್ದು ಅಥವಾ ಇಂಗ್ಲಿಷ್ ಮತ್ತು ಕೆಲವರು ಮುರಿದ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾನು ಇನ್ಸ್‌ಪೆಕ್ಟರ್‌ಗೆ ತುರ್ತು ಕರೆ ಮಾಡಿದಾಗ ಅವರೆಲ್ಲರೂ ಏನೂ ಆಗಿಲ್ಲ ಎಂಬಂತೆ ಕೆಲವೇ ಸೆಕೆಂಡುಗಳಲ್ಲಿ ಚದುರಿಹೋದರು. ನಾವು ಅವರನ್ನು ಹುಡುಕಲು ಪ್ರಯತ್ನಿಸಿದೆವು ಆದರೆ ಅವರು ಕೆಲವೇ ಸೆಕೆಂಡುಗಳಲ್ಲಿ ಗಾಳಿಯಲ್ಲಿ ಕಣ್ಮರೆಯಾದರು. ನಾವು ಸಮೀಪದಲ್ಲಿ ಗಸ್ತು ಪೊಲೀಸ್ ವಾಹನವನ್ನು ಕಂಡು ಘಟನೆಯನ್ನು ಹತ್ತಿರದ ಪೊಲೀಸ್ ಠಾಣೆಯ ASI ಶ್ರೀ ಉಮೇಶ್ ಅವರಿಗೆ ವಿವರಿಸಿದೆವು, ಅವರು ನಮಗೆ ಸಹಾಯ ಮಾಡಲು ಆಸಕ್ತಿ ತೋರಲಿಲ್ಲ.

ಇಲಾಖೆಯ ಮೇಲಧಿಕಾರಿಗಳ ಜತೆ ಮಾತನಾಡಬೇಕು ಎಂದ ಅವರು, ಬಂದು ಏನಾಯಿತು ಎಂದು ತಿಳಿದುಕೊಳ್ಳುವ ಸೌಜನ್ಯವೂ ಇಲ್ಲ. ಕೇವಲ 2 ಕಟ್ಟಡಗಳ ಮುಂದಿರುವ ರೆಸ್ಟೊರೆಂಟ್‌ನ ಮುಂದೆ ಮೂಸಂಬಿ ಜ್ಯೂಸ್ ಕುಡಿಯುತ್ತ ಕಾರ್ ನಲ್ಲಿ ಕುಳಿತಿದ್ದರು.
ಈ ಘಟನೆಯ ನಂತರ ನಾನು ಮಾನಸಿಕವಾಗಿ ಸಂಪೂರ್ಣ ಆಘಾತಕ್ಕೊಳಗಾಗಿದ್ದೇನೆ. ನಾನು ಹುಟ್ಟಿ ಬೆಳೆದ ನಗರದಲ್ಲಿ ಹೊರಗೆ ಹೋಗಲು ನನಗೆ ಇನ್ನೂ ಭಯವಾಗುತ್ತಿದೆ. ನನಗೆ ಜೀವನದಲ್ಲಿ ಎಲ್ಲವನ್ನು ಕೊಟ್ಟ ನಗರದಲ್ಲಿ ಇಂತಹ ಅನುಭವ ಆಗಿದ್ದು ಇದೇ ಮೊದಲು. ಇದನ್ನು ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಗಮನಕ್ಕೆ ತರಲು ಮತ್ತು ಭವಿಷ್ಯದಲ್ಲಿ ಯಾವುದೇ ಮಹಿಳೆ ಅಥವಾ ಕುಟುಂಬವು ಬೆಂಗಳೂರಿನಲ್ಲಿ ಇಂತಹ ಅಗ್ನಿಪರೀಕ್ಷೆಗಳಿಗೆ ಒಳಗಾಗಬಾರದು ಎಂದು ನಾನು ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಜನರೊಂದಿಗೆ ಇಂತಹ ಗಲಾಟೆ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ! ಇದನ್ನು ಕಣ್ಣೆದುರು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಮೂಡಿದವು.

  1. ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ??
  2. ನಮ್ಮ ಊರು ಬೆಂಗಳೂರಿನಲ್ಲಿ ನನ್ನ ಭಾಷೆ ಕನ್ನಡವನ್ನು ಬಳಸುವುದು ತಪ್ಪಾ???
  3. ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತವಾಗಿರುತ್ತೇವೆ?
  4. ಇಲ್ಲಿಯೇ ನಮ್ಮ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಇಂತಹ ದೀರ್ಘಾವಧಿಯ ಮಾನಸಿಕ ಆಘಾತಕ್ಕೆ ಕಾರಣವಾಗುವ ಇಂತಹ ಘಟನೆಗಳನ್ನು ಮುಚ್ಚಿ ಹಾಕಬೇಕೆ ?
    ಈ ಇಡೀ ಘಟನೆಯ ನಡುವೆ ನನ್ನ ಕುಟುಂಬದ ಸದಸ್ಯರು ಚಿತ್ರೀಕರಿಸಿದ ವೀಡಿಯೊವನ್ನು ಪೋಸ್ಟ್ ಮಾಡುತ್ತಿದ್ದೇನೆ. ಅಷ್ಟು ಸ್ಪಷ್ಟವಾಗಿಲ್ಲ ಹಾಗು ಘಟನೆಯ ಮದ್ಯದಿಂದ ಅವರಿಗೆ ತಿಳಿದಷ್ಟು ಚಿತ್ರೀಕರಿಸಿದ್ದಾರೆ.
    ಈ ಇಡೀ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
    ಧನ್ಯವಾದಗಳು
    ಹರ್ಷಿಕಾ ಪೂಣಚ್ಚ , ನಟಿ
Categories
ಸಿನಿ ಸುದ್ದಿ

ಕೊರಗಜ್ಜ ರೀ ಶೂಟ್ ವೇಳೆ ಅವಘಡದಿಂದ ಪಾರಾದ ನಿರ್ದೇಶಕ ಸುಧೀರ್ ಅತ್ತಾವರ: ಕೊರಗಜ್ಜನ ಮುಂದೆ ನಡೆಯದ ಅಗೋಚರ ಶಕ್ತಿ ಅಂದ್ರು ಶೃತಿ

ಕೊರಗಜ್ಗ ಸಿನಿಮಾದ ರೀ ಶೂಟಿಂಗ್ ವೇಳೆ ಅವಘಡವೊಂದು ನಡೆದಿದೆ. ನಿರ್ದೇಶಕ ಸುಧೀರ್ ಅತ್ತಾವರ್ ಅವರು ಚಿತ್ರೀಕರಿಸುವ ವೇಳೆ ಅಗೋಚರ ಶಕ್ತಿಯೊಂದು ಬಲವಾಗಿ ಹಿಂದಿನಿಂದ ತಳ್ಳಿದ ಘಟನೆ ನಡೆದಿದೆ. ಏಕಾಏಕಿ ತಳ್ಳಿದ ಅನುಭವದಿಂದಾಗಿ ಸುಧೀರ್ ಅತ್ತಾವರ್ ಅವರು ದೂರದಲ್ಲಿ ಮುಗ್ಗರಿಸಿದ್ದಾರೆ.‌ಆದರೆ, ಯಾವುದೇ ಅಪಾಯ ಆಗದೆ ಪಾರಾಗಿದ್ದಾರೆ. ಇದು ಕೊರಗಜ್ಜ ದೈವವೇ ಅಪಾಯದಿಂದ ಪಾರು ಮಾಡಿದೆ ಎಂದು ಚಿತ್ರತಂಡ ನಂಬಿದೆ.

ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹುಕೋಟಿ ಬಜೆಟ್ ನ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂ ಸ್ ಬ್ಯಾನರ್ ನಡಿಯ “ಕೊರಗಜ್ಜ” ಸಿನಿಮಾ ಆರಂಭದಿಂದಲೂ ಹಲವಾರು ಪವಾಡ ಮತ್ತು ಸವಾಲುಗಳ ಜೊತೆ ತೊಂದರೆ ಗಳನ್ನು ಎದುರಿಸುತ್ತಾ ಬಂದಿರುವ ವಿಚಾರ ಗೊತ್ತೇ ಇದೆ.

ಕೊಚ್ಚಿ ಮತ್ತು ಮುಂಬೈ ನಲ್ಲಿ ಕೊನೆಹಂತದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ದೈವ ನರ್ತನದ ಪ್ರಮುಖ ದ್ರಶ್ಯವೊಂದನ್ನು ನಿನ್ನೆ ಮಧ್ಯರಾತ್ರಿಯ ವೇಳೆ ನೂರಾರು ಉರಿವ ಪಂಜುಗಳನ್ನು ಧರಿಸಿಕೊಂಡ ಕೇರಳದ ತೆಯ್ಯಂ ಕಲಾವಿದರ ಮತ್ತು ಮಾಸ್ ಮಾದ ರವರ ಮೈ ನವಿರೇಳಿಸುವ ಸಾಹಸ ಸನ್ನಿವೇಶವೊಂದನ್ನು ನಿರ್ದೇಶಕ ಸುಧೀರ್ ಅತ್ತಾವರ್ ಮೂರನೇ ಬಾರಿ ಮರು ಚಿತ್ರೀಕರಿಸುತ್ತಿದ್ದರು.

ಕಲಾವಿದೆ ಶ್ರುತಿ ಯೊಂದಿಗೆ ನೂರಾರು ಸಹ ಕಲಾವಿದರು ಭಾಗವಹಿಸಿದ್ದ ಸನ್ನಿವೇಶವನ್ನು ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯ ಕಗ್ಗಲಿ ಹಳ್ಳಿಯಲ್ಲಿ ಹಾಕಿದ್ದ ಆದ್ದೂರಿ ಸೆಟ್ ನಲ್ಲಿ ಮಲಯಾಳಂ ಚಿತ್ರರಂಗದ ಡಿ ಒ ಪಿ ಮನೋಜ್ ಪಿಳ್ಳೈ ಚಿತ್ರೀಕರಿಸುತ್ತಿದ್ದಾಗ, ನಿರ್ದೇಶಕ ಸುಧೀರ್ ಅತ್ತಾವರ್ ರನ್ನು ಅಗೋಚರ ಶಕ್ತಿಯೊಂದು ಬಲವಾಗಿ ತಳ್ಳಿದ ಘಟನೆ ಚಿತ್ರ ತಂಡವನ್ನು ಬೆಚ್ಚಿ ಬೀಳಿಸಿದೆ.

ಎಲ್ಲೂ ಎಡವಿ ಬೀಳದೆ, ಜಾರದೆ ಇದ್ದರೂ, ಏಕಾಏಕಿ ಬಲವಾಗಿ ತಳ್ಳಿದಂತೆ ವೇಗ ಪಡೆದುಕೊಂಡು ನಿರ್ದೇಶಕರು ಎಸೆಯಲ್ಪಟ್ಟ ವಿಲಕ್ಷಣ ಘಟನೆ, ಸುಮಾರು ಮುನ್ನೂರ ಕ್ಕಿಂತಲೂ ಹೆಚ್ಚಿದ್ದ ಚಿತ್ರತಂಡದ ಎದುರಲ್ಲೇ ಘಟನೆ ನಡೆದಿದೆ.


ಸನ್ನಿವೇಷವನ್ನು ವಿವರಿಸುತ್ತಿದ್ದ ಸಮಯದಲ್ಲಿ ನಿರ್ದೇಶಕರನ್ನು ಒಂದೇ ಸಮನೆ ಅಗೋಚರ ಶಕ್ತಿ ಬಲವಾಗಿ ದೂಡಿದಂತಾಗಿ, ತನ್ನನ್ನು ನಿಭಾಯಿಸಿಕೊಳ್ಳದೆ ನಿರ್ದೇಶಕರು ಸುಮಾರು ದೂರಕ್ಕೆ ಎಸೆಯಲ್ಪಟ್ಟದೆ.

ಇದನ್ನು ಕಂಡು ನಟಿ ಶ್ರತಿ, ನಿರ್ದೇಶಕರು ದೊಡ್ಡ ಮಟ್ಟದ ಗಾಯಗಳಿಂದ ಪಾರಾಗಿರುವುದನ್ನು ಕೊರಗಜ್ಹ ದೈವವೇ ನಿರ್ದೇಶಕರನ್ನು ಕಾಪಾಡಿದೆ ಎಂದಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದಲ್ಲಿ ಶುರುವಾಗಲಿದೆ ಅಯೋಧ್ಯೆಯ ಶ್ರೀರಾಮಮಂದಿರ ಬಯೋಪಿಕ್

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯಾದ ಮಹಾಪರ್ವ ಕಾಲವಿದು. ಆದರೆ ಶ್ರೀರಾಮ ತನ್ನ ಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಯಾಗಲು 500 ವರ್ಷಗಳು ಕಾಯಬೇಕಾಯಿತು. 1528 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣವಾಯಿತು. ಆನಂತರ ಆ ಜಾಗದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಬೇಕೆಂದು ಸಾಕಷ್ಟು ಹೋರಾಟಗಳು‌ ನಡೆದವು. ಈ ವಿವಾದ ಕೋರ್ಟ್ ಮೆಟ್ಟಿಲು ಏರಿತ್ತು. ನೂರಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದಾದರೂ ಒಂದು ಕೇಸ್ ಕೋರ್ಟ್ ನಲ್ಲಿ ನಡೆದಿದ್ದರೆ ಅದು ಶ್ರೀರಾಮ ಜನ್ಮಭೂಮಿಯದೆ ಇರಬಹುದು. ಕೊನೆಗೂ 2019 ರಲ್ಲಿ ನ್ಯಾಯಾಲಯ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿತ್ತು. 2024 ರ ಜನವರಿಯಲ್ಲಿ ಅದ್ದೂರಿಯಾಗಿ ಶ್ರೀರಾಮನ ಪ್ರತಿಷ್ಠಾಪನೆಯಾಯಿತು. ಕೋಟ್ಯಾಂತರ ಜನರ ಕನಸು ನನಸ್ಸಾಯಿತು.

ಈ ಅಯೋಧ್ಯೆಯ ಶ್ರೀರಾಮನ ಮಂದಿರದ ಬಯೋಪಿಕ್ ಅನ್ನು ಸಿನಿಮಾ ರೂಪದಲ್ಲಿ ತರಲು ನಿರ್ದೇಶಕ ಶ್ರೀನಿವಾಸರಾಜು ಮುಂದಾಗಿದ್ದಾರೆ. ಈ ಚಿತ್ರದ ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಆದರೆ “ಸತ್ಯಂ ಶಿವಂ ಸುಂದರಂ” ಎಂಬ ಟ್ಯಾಗ್ ಲೈನ್ ಇದೆ. “ಕೃಷ್ಣಂ ಪ್ರಣಯ ಸಖಿ” ಚಿತ್ರವನ್ನು ನಿರ್ಮಿಸಿರುವ ಪ್ರಶಾಂತ್ ಜಿ ರುದ್ರಪ್ಪ ತ್ರಿಶೂಲ್ ಎಂಟರ್ಟೈನ್ಮೆಂಟ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ..

ಸಾಮಾನ್ಯವಾಗಿ ಮನುಷ್ಯರ ಬಯೋಪಿಕ್ ಇರುತ್ತದೆ. ಆದರೆ, ದೇವಸ್ಥಾನವೊಂದರ ಬಯೋಪಿಕ್ ಇರುವುದು ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಮಾತ್ರ ಎನ್ನುವುದು ನನ್ನ ಅಭಿಪ್ರಾಯ.‌ ಸುಮಾರು 500 ವರ್ಷಗಳ ಇತಿಹಾಸವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಬಾಬರಿ ಮಸೀದಿ ಗೂ ಮೊದಲು ರಾಜಾ ವಿಕ್ರಮಾದಿತ್ಯ ಪ್ರತಿಷ್ಠಾಪಿಸಿದ ಶ್ರೀರಾಮ ಮಂದಿರದಿಂದ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಇದರ ಜೊತೆಗೆ ರಾಮಾಯಣದ ಕೆಲವು ಅಂಶಗಳನ್ನು ತೆಗೆದುಕೊಳ್ಳುತ್ತಿದ್ದೇನೆ‌. ಹಾಗಂತ ಇದು ಸಂಪೂರ್ಣ ರಾಮಾಯಣದ ಕಥೆಯಲ್ಲ. ದಶರಥ, ರಾಮ, ಸೀತಾ, ಹನುಮಂತ, ವಾಲಿ ಹಾಗೂ ವಾಲ್ಮೀಕಿ ಈ ಆರು ಪಾತ್ರಗಳು ಮಾತ್ರ ಇರುತ್ತದೆ. ತುಳಿಸಿದಾಸರ ಪಾತ್ರ ಕೂಡ ಈ ಚಿತ್ರದಲ್ಲಿರಲಿದೆ.

ಶ್ರೀರಾಮನ ಆದರ್ಶದ ಗುಣಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ. “ಸತ್ಯಂ ಶಿವಂ ಸುಂದರಂ” ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದ್ದು, ಮೂರು ಭಾಗಗಳಲ್ಲಿ ಚಿತ್ರ ಬರಲಿದೆ. ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಚಿತ್ರ ಬಹಳ ಅದ್ದೂರಿಯಾಗಿ ನಿರ್ಮಾಣವಾಗಲಿದ್ದು, ಭಾರತದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಶ್ರೀರಾಮನವಮಿಯ ಪರ್ವಕಾಲದಲ್ಲಿ ಈ ನೂತನ ಚಿತ್ರದ ಕುರಿತು ಇಷ್ಟು ಹೇಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಫಾರೆಸ್ಟ್ ಒಳಹೊಕ್ಕ ಬ್ರಹ್ಮಚಾರಿ ನಿರ್ದೇಶಕ: ಇದು ರಂಗಾಯಣ ರಘು- ಚಿಕ್ಕಣ್ಣ ಚಿತ್ರ

ಕನ್ನಡದಲ್ಲಿ ‌ಸದ್ದಿಲ್ಲದೇ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ರೂಪಗೊಳ್ಳುತ್ತಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಕಾಂಬೋದಲ್ಲಿ ಹೊಸ ಚಿತ್ರವೊಂದು ತಯಾರಾಗುತ್ತಿದೆ. ಈ ನಾಲ್ಕು ಜನ ತಾರೆಯರನ್ನು ಒಂದೇ ಫ್ರೇಮ್ ಗೆ ತಂದು ಆಕ್ಷನ್ ಕಟ್ ಹೇಳುತ್ತಿರುವುದು ಡಬ್ಬಲ್ ಇಂಜಿನ್, ಬ್ರಹ್ಮಚಾರಿ ಸಿನಿಮಾಗಳ‌ ಸಾರಥಿ ಚಂದ್ರ ಮೋಹನ್.

ಚಂದ್ರ ಮೋಹನ್ ಹೊಸ ಪ್ರಯತ್ನಕ್ಕೆ ಫಾರೆಸ್ಟ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಟೈಟಲ್ ಹೇಳುವಂತೆ ಫಾರೆಸ್ಟ್ ಅಡ್ವೆಂಚರ್‌ ಕಾಮಿಡಿ ಸಿನಿಮಾ. ಚಿತ್ರ 80%ರಷ್ಟು ಭಾಗ ಕಾಡಿನಲ್ಲಿಯೇ ಸಾಗುತ್ತದೆ.

ಚಿಕ್ಕಣ್ಣ, ಅನೀಶ್ , ಗುರುನಂದನ್ ಹಾಗೂ ರಂಗಾಯಣ ರಘು ನಾಲ್ಕು ತಾರೆಯರು ಫಾರೆಸ್ಟ್ ಸಿನಿಮಾದ ಆಧಾರ ಸ್ತಂಭಗಳು. ಫನ್ ಜೊತೆಗೆ ಥ್ರಿಲ್ಲಿಂಗ್ ರೈಡ್ ಅನುಭವ ನೀಡುವ ಫಾರೆಸ್ಟ್ ಚಿತ್ರಕ್ಕೆ ಎನ್ ಎಂಕೆ ಸಿನಿಮಾಸ್ ಬ್ಯಾನರ್ ನಡಿ ಕಾಂತರಾಜು ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೇ ಕಾಂತರಾಜು ಅವರಿಗಿದು ಚೊಚ್ಚಲ ಚಿತ್ರ. ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಫಾರೆಸ್ಟ್ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಫಾರೆಸ್ಟ್ ಸಿನಿಮಾಗೆ ವಿ. ರವಿಶಂಕರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಧರ್ಮವೀರ್-ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸದ್ಯ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡವೀಗ ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗದ ಮಾಹಿತಿ ನೀಡಲಿದೆ.

Categories
ಸಿನಿ ಸುದ್ದಿ

ಏಪ್ರಿಲ್ 19ಕ್ಕೆ ರಾಜು ದಿ ಲೆಜೆಂಡ್ ಸುಗಮ‌ ಸಂಗೀತ ಸಂಜೆ

ತಮ್ಮ ಅಮೋಘ ಗಾಯನದಿಂದ ವಿಶ್ವದೆಲ್ಲೆಡೆ ಮನೆಮಾತಾಗಿದ್ದ ಖ್ಯಾತ ಗಾಯಕ ರಾಜು ಅನಂತಸ್ವಾಮಿ ಅವರ ನೆನಪಿನಲ್ಲೊಂದು ಸುಗಮ ಸಂಗೀತ ಸಂಜೆ “ರಾಜು ದಿ ಲೆಜೆಂಡ್” ಎಂಬ ಹೆಸರಿನಲ್ಲಿ ಏಪ್ರಿಲ್ 19 ರಂದು ಕೋಣನ ಕುಂಟೆ ಬಳಿಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಹೆಸರಾಂತ ಡ್ರಮರ್ ಮಂಜನಾಥ್ ಸತ್ಯಶೀಲ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, ಸಂಗೀತ ನಿರ್ದೇಶಕರಾದ ಪ್ರವೀಣ್ ಡಿ ರಾವ್, ಪ್ರವೀಣ್ & ಪ್ರದೀಪ್ ಹಾಗೂ ಗಾಯಕಿ ದಿವ್ಯ ರಾಘವನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರಾಜು ಅನಂತಸ್ವಾಮಿ ಅವರ ಹಾಡುಗಳನ್ನು ಕೇಳಿ ಬೆಳೆದ ನನಗೆ ಅವರ ಹೆಸರಿನಲ್ಲೊಂದು ಕಾರ್ಯಕ್ರಮ ಮಾಡಬೇಕೆನಿಸಿತು. ಈ ಕುರಿತು ಸ್ನೇಹಿತರಾದ ಖ್ಯಾತ ಡ್ರಮ್ಮರ್ ಮಂಜುನಾಥ್ ಸತ್ಯಶೀಲ್ ಅವರ ಬಳಿ ಹೇಳಿದೆ. ಅವರ ಯೋಚನೆ ಕೂಡ ಇದೇ ಆಗಿತ್ತು. ನಾವಿಬ್ಬರು ಈ ಸಮಾರಂಭವನ್ನು ಆಯೋಜಿಸಲು ಮುಂದಾದೆವು. ಈ ಕುರಿತು ಎಲ್ಲರೊಡನೆ ಚರ್ಚಿಸಿದಾಗ ರಾಜು ಅನಂತಸ್ವಾಮಿ ಅವರ ಹತ್ತಿರದ ಒಡನಾಡಿಗಳು ಹಾಗೂ ಅವರ ಶಿಷ್ಯರು ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ‌ಶ್ರೀನಿವಾಸ ಜಿ ಕಪ್ಪಣ್ಣ ಹಾಗೂ ಪ್ರವೀಣ್ ಡಿ ರಾವ್ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಈ ಸಮಾರಂಭ ನಡೆಯಲಿದೆ.

ಏಪ್ರಿಲ್ 19 ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಹಾಗಾಗಿ ಅದೇ ದಿನ “ರಾಜು ದಿ ಲೆಜೆಂಡ್” ಹೆಸರಿನಲ್ಲಿ ರಾಜು ಅನಂತಸ್ವಾಮಿ ಅವರ ಹಾಡುಗಳ ಸುಗಮ ಸಂಗೀತ ಸಂಜೆ ಕೋಣನಕುಂಟೆಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ ನಡೆಯಲಿದೆ. ನಾಡಿನ ಅನೇಕ ಹೆಸರಾಂತ ಕಲಾವಿದರು ಹಾಗೂ ಗಾಯಕರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜು ಅನಂತಸ್ವಾಮಿ ಅವರ ಹದಿನೆಂಟು ಹಾಡುಗಳ ಗಾಯನ ಸುಪ್ರಸಿದ್ದ ಗಾಯಕ, ಗಾಯಕಿಯರ ಕಂಠಸಿರಿಯಲ್ಲಿ ಮೊಳಗಲಿದೆ. ಆಧುನಿಕ ತಂತ್ರಜ್ಞಾನ AI ಮೂಲಕ ರಾಜು ಅನಂತಸ್ವಾಮಿ ಅವರ ಕುರಿತಾದ ವಿಷುಯಲ್ಸ್ ಪ್ರದರ್ಶನವಾಗುತ್ತದೆ.

ಮೊದಲು ಈ ಸಮಾರಂಭವನ್ನು ಸಣ್ಣ ಮಟ್ಟದಲ್ಲಿ ಮಾಡಬೇಕೆಂದುಕೊಂಡೆವು. ಈಗ ದೊಡ್ಡಮಟ್ಟದಲ್ಲಿ ರಾಜ್ಯದಲ್ಲೇ ದೊಡ್ಡ ಆಡಿಟೋರಿಯಂನಲ್ಲಿ ಈ ಸಮಾರಂಭ ನಡೆಯಲಿದೆ. ಈ ಸಂಗೀತ ಸಂಜೆ ಯಶಸ್ವಿಯಾಗಲು ಜನರ ಸಹಕಾರ ಅಗತ್ಯ. ರಾಜು ಅನಂತಸ್ವಾಮಿ ಅವರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಈ ಮೂಲಕ ವಿನಂತಿ ಮಾಡುತ್ತೇವೆ‌. ಟಿಕೇಟ್ ಬೆಲೆ ಕೇವಲ 299 ರೂಪಾಯಿಗೆ ನಿಗದಿ ಮಾಡಲಾಗಿದ್ದು, ಬುಕ್ ಮೈ ಶೋ‌ನಲ್ಲಿ ಟಿಕೇಟ್ ಗಳು ದೊರೆಯಲಿದೆ ಎಂದು ಗಾಯಕಿ ಅನನ್ಯ ಭಟ್ ತಿಳಿಸಿದರು.

ರಾಜು ಅನಂತಸ್ವಾಮಿ ಅವರ ಅಭಿಮಾನಿಯಾಗಿ ಹಾಗೂ ಅವರ ವಿದ್ಯಾರ್ಥಿಯಾಗಿ ಅವರ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕೆನಿಸಿತು. ಏಪ್ರಿಲ್ 19, ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಅದೇ ದಿನ “ರಾಜು ದಿ ಲೆಜೆಂಡ್” ಎಂಬ ಕಾರ್ಯಕ್ರಮ ಮಾಡಲು ನಾನು ಹಾಗೂ ಅನನ್ಯ ಭಟ್ ನಿರ್ಧರಿಸಿದ್ದೆವು. ನಂತರ ನಮ್ಮೊಂದಿಗೆ ರಾಜು ಅನಂತಸ್ವಾಮಿ ಅವರ ಒಡನಾಡಿಗಳು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಜೊತೆಯಾದರು. ಸುಗಮ ಸಂಗೀತ ಕಾರ್ಯಕ್ರಮ ಎಂದರೆ ಸೀಮಿತ ವಾದ್ಯಗಾರರಷ್ಟೇ ಇರುತ್ತಾರೆ. ಆದರೆ “ರಾಜು ದಿ ಲೆಜೆಂಡ್” ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ಧ ಗಾಯಕ, ಗಾಯಕಿಯರು, ಸಹ ಹಾಡುಗಾರರು(ಕೋರಸ್) ಹಾಗೂ ವಾದ್ಯಗಾರರು ಉಪಸ್ಥಿತರಿರುತ್ತಾರೆ. ಅಷ್ಟೇ ಅಲ್ಲದೇ ಬೇರೆ ದೇಶದ ವಿವಿಧ ವಾದ್ಯಗಳನ್ನು ಇದೇ ಮೊದಲ ಬಾರಿಗೆ ಸುಗಮ ಸಂಗೀತದ ಹಾಡುಗಳಿಗೆ ಬಳಸುವ ವಿಶಿಷ್ಟ ಪ್ರಯತ್ನ ಕೂಡ ಮಾಡಲಾಗುತ್ತಿದೆ‌. ಈ ಸಮಾರಂಭವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಬೇಕೆಂಬುದು ನಮ್ಮೆಲ್ಲರ ಕನಸು. ಆ ಕನಸಿಗೆ ಕನ್ನಡ ಕಲಾರಸಿಕರು ಆಸರೆಯಾಗುವ ಭರವಸೆಯಿದೆ. ಇಡೀ ಸಮಾರಂಭ ರಾಜು ಅನಂತಸ್ವಾಮಿ ಅವರಿಗೆ ಅರ್ಪಣೆಯಾಗಲಿದೆ ಎಂದು ಕಾರ್ಯಕ್ರಮದ ಬಗ್ಗೆ ಮಂಜುನಾಥ್ ಸತ್ಯಶೀಲ್ (ಡ್ರಮ್ಮರ್) ಮಾಹಿತಿ ನೀಡಿದರು.

ರಾಜು ಅನಂತಸ್ವಾಮಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, “ರಾಜು ದಿ ಲೆಜೆಂಡ್” ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು. ಪ್ರವೀಣ್ ಡಿ ರಾವ್, ದಿವ್ಯ ರಾಘವನ್, ಪ್ರವೀಣ್ ಹಾಗೂ ಪ್ರದೀಪ್ ಸಹ ಸಮಾರಂಭದ ಕುರಿತು ಮಾತನಾಡಿದರು.

error: Content is protected !!