Categories
ಸಿನಿ ಸುದ್ದಿ

A for ಆನಂದ್ : ಶಿವಣ್ಣನ ಹೊಸ ಸಿನಿಮಾಗೆ ಚಾಲನೆ

ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘A for ಆನಂದ್’ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿದೆ. ಶುಭ ಶುಕ್ರವಾರವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ನಿರ್ಮಾಪಕಿ ಗೀತಾ ಶಿವರಾಜ್‌ ಕುಮಾರ್‌ ಕ್ಲ್ಯಾಪ್‌ ಮಾಡಿದರು. ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಿದರು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು.

ಮುಹೂರ್ತದ ಬಳಿಕ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆ ಮಕ್ಕಳು. ‘A for ಆನಂದ್’ ಮಕ್ಕಳ ಸಿನಿಮಾವಾಗಿರುವುದರಿಂದ ವಿಶೇಷವಾಗಿ ಸುದ್ದಿಗೋಷ್ಠಿ ನಡೆಸಲಾಯಿತು. ವೇದಿಕೆ ಅತಿಥಿಗಳನ್ನು ಮಕ್ಕಳು ಸ್ವಾಗತಿಸಿದರು. ಇದೇ ವೇಳೆ ಹಾಡು ಹೇಳಿ ನೆರೆದಿದ್ದವರನ್ನು ಮಕ್ಕಳು ರಂಜಿಸಿದರು.

ಬಳಿಕ ಮಾತನಾಡಿದ ಶಿವಣ್ಣ, ಶ್ರೀನಿ ಜೊತೆ ಎರಡನೇ ಸಿನಿಮಾ. ಅವರು ನನಗೆ ಹದಿನೈದು ವರ್ಷದಿಂದ ಸ್ನೇಹಿತರು. ಶಿವ ಸಿನಿಮಾಗಾಗಿ ಫೋಟೋಶೂಟ್‌ ಮಾಡಿದ್ದರು. ಅಂದಿನಿಂದ ಪರಿಚಯ. ಅಂದಿನಿಂದ ಒಂದು ಕಥೆ ಇದೆ ಎಂದು ಹೇಳುತ್ತಿದ್ದರು. ತುಂಬಾ ಬಾರಿ ಮೀಟ್‌ ಮಾಡಿದಾಗ ಏನೋ ಮಿಸ್‌ ಆಗುತಿತ್ತು. ಈ ಸಿನಿಮಾಗೆ ಅಟಾಚ್‌ ಮೆಂಟ್‌ ಮುಖ್ಯ. ಮಕ್ಕಳನ್ನು ಯಾವ ರೀತಿ ಓದಿಸಬೇಕು.

ಅವರನ್ನು ದಾರಿಗೆ ತರಬೇಕು ಅನ್ನೋದೇ ‘A for ಆನಂದ್’ ಕಥೆ ತಿರುಳು. ಸ್ಕ್ರೀನ್‌ ಪ್ಲೇಯನ್ನು ಶ್ರೀನಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಅಕ್ಟೋಬರ್‌ ತಿಂಗಳಾತ್ಯಂಕ್ಕೆ ಶೂಟಿಂಗ್‌ ಹೊರಡುತ್ತೇವೆ. ಈ ಚಿತ್ರದಲ್ಲಿ ಆರು ಹಾಡುಗಳು ಬರುತ್ತವೆ. ನನ್ನ ಚಿತ್ರದಲ್ಲಿ ತುಂಬಾ ದಿನಗಳ ಬಳಿಕ ಇಷ್ಟು ಹಾಡು ಇರುತ್ತಿವೆ. ಆನಂದ್‌ ನಮ್ಮ ತಾಯಿ ಹೆಸರಿಟ್ಟಿದ್ದು, ಈ ಆನಂದ್‌ ಮಕ್ಕಳ ಮುಖದಲ್ಲಿ ಆನಂದ ತರುತ್ತಾನೆ ಎಂದರು.

ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌, ತುಂಬಾ ದಿನದಿಂದ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಮಕ್ಕಳಿಗೆ ಶಿಕ್ಷಣ ಮುಖ್ಯ. ಆದರೆ ಇಂದು ಅವರಿಗೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಒತ್ತಡ ಇಲ್ಲದೇ ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳುತ್ತೇವೆ. ಈ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನಿರ್ದೇಶನ ಮಾಡುತ್ತಾರೆ. ಎ ಫಾರ್ ಆನಂದ್‌ ಚಿತ್ರದ ಟೈಟಲ್‌ ತುಂಬಾ ಇಷ್ಟವಾಯ್ತು. ಈ ಚಿತ್ರದಿಂದ ತಂದೆ ತಾಯಿ ಮಕ್ಕಳ ಹೇಗೆ ಓದಿಸಬೇಕು ಅಂತಾ ತಿಳಿದುಕೊಳ್ಳುತ್ತಾರೆ. ಜೊತೆಗೆ ಈ ಸಿನಿಮಾದಿಂದ ಜನ ಥಿಯೇಟರ್‌ಗೆ ಬರುವ ರೀತಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದರು.

ನಿರ್ದೇಶಕ ಶ್ರೀನಿ ಮಾತನಾಡಿ, ಘೋಸ್ಟ್‌ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ, ಇದು ಕಂಪ್ಲೀಟ್‌ ಡಿಫರೆಂಟ್‌ ಜಾನರ್‌ ಚಿತ್ರ. ‘A for ಆನಂದ್’ ಫ್ಯಾಮಿಲಿ ಎಂಟರ್‌ ಟೈನರ್‌ ಜೊತೆಗೆ ಮಕ್ಕಳಿಗೂ ಕನೆಕ್ಟ್‌ ಆಗುವ ಸಿನಿಮಾ. ಇದು ಚಾಲೆಂಜ್‌ ಕೆಲಸವೇ. ಅಕ್ಟೋಬರ್‌ ಸಮಯದಲ್ಲಿ ಶಿವಮೊಗ್ಗದ ಸಾಗರ ಆ ಕಡೆ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಶಿವರಾಜ್ ಕುಮಾರ್ ಅವರಿಗಾಗಿ ‘ಘೋಸ್ಟ್’ ಹೆಸರಿನ ಭರ್ಜರಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿ, ಈಗ ಶಿವಣ್ಣನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಎ ಫಾರ್ ಆನಂದ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಒಬ್ಬ ಶಿಕ್ಷಕನ ಪಾತ್ರ ನಿರ್ವಹಿಸಲಿದ್ದಾರೆ.

́ಎ ಫಾರ್ ಆನಂದ್’ ಸಿನಿಮಾವನ್ನು ಶಿವಣ್ಣನವರ ಹೋಮ್ ಬ್ಯಾನರ್ ಆಗಿರುವ ಗೀತಾ ಪಿಕ್ಚರ್ಸ್ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ವೇದ, ಭೈರತಿ ರಣಗಲ್ ಅನ್ನು ಇದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿತ್ತು, ಗೀತಾ ಪಿಕ್ಚರ್ಸ್ಗೆ ಇದು ಮೂರನೇ ಸಿನಿಮಾ. ಶಿವರಾಜ್ ಕುಮಾರ್ ಹಾಗೂ ಶ್ರೀನಿ ಕಾಂಬಿನೇಷನ್ನ ‘ಘೋಸ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ್ದ ಚಿತ್ರ ಹಾಗೂ ತಾಂತ್ರಿಕ ತಂಡವೇ ‘ಎ ಫಾರ್ ಆನಂದ್’ ಸಿನಿಮಾಕ್ಕೂ ಕೆಲಸ ಮಾಡಲಿದೆ.

ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್‌ ಸಂಗೀತ ಒದಗಿಸಲಿದ್ದಾರೆ. ಎ ಫಾರ್ ಆನಂದ್‌ ಪಕ್ಕ ಫ್ಯಾಮಿಲಿ ಎಂಟರ್ ಟೈನರ್‌ ಜೊತೆಗೆ ಎಮೋಷನಲ್‌ ಸಿನಿಮಾ. ಪ್ರೇಕ್ಷಕರನ್ನಿ ಥಿಯೇಟರ್‌ಗೆ ಕರೆತರುವ ಒಂದೊಳ್ಳೆ ಚಿತ್ರವಾಗಲಿದೆ ಅನ್ನೋದು ತಂಡದ ಅಭಿಪ್ರಾಯ.

Categories
ಸಿನಿ ಸುದ್ದಿ

ಕಿಕ್ಕು ಕೊಡಲು ಟಕೀಲಾ ರೆಡಿ! ಹಾಡು ಗುಂಗೋ ಗುಂಗು…

ಜಡ್, ಹೂ ಅಂತೀಯಾ ಉಹೂ ಅಂತೀಯಾ, ಮೀಸೆ ಚಿಗುರಿದಾಗದಂಥ ಚಿತ್ರಗಳ ನಿರ್ದೇಶಕ ಹಾಗೂ ಫೋಟೋ ಜರ್ನಲಿಸ್ಟ್ ಕೂಡ ಆಗಿರುವ ಕೆ.ಪ್ರವೀಣ್ ನಾಯಕ್ ಅವರು ಬಹಳ ದಿನಗಳ ನಂತರ ಆಕ್ಷನ್‌ಕಟ್ ಹೇಳಿರುವ ಚಿತ್ರ ಟಕೀಲಾ. ಶ್ರೀಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ಅವರ ನಿರ್ಮಾಣದ ಈ ಚಿತ್ರ ಮೇನಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಚಿತ್ರದ ಎರಡು ಹಾಡುಗಳ ಪ್ರದರ್ಶಿಸಿದ ಚಿತ್ರತಂಡ ಟಕಿಲಾ ಸಿನಿಮಾದ ಮಾಹಿತಿ ಹಂಚಿಕೊಂಡಿತು.
ಧರ್ಮ ಕೀರ್ತಿರಾಜ್, ನಿಖಿತಾಸ್ವಾಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಶ್ಮಿತಾ, ನಿರ್ದೇಶಕ ಪ್ರವೀಣ್‌ನಾಯಕ್ ಕೂಡ ಅಭಿನಯಿಸಿದ್ದಾರೆ.


ಈ ಸಂದರ್ಭದಲ್ಲಿ ಪ್ರವೀಣ್ ನಾಯಕ್ಮಾಮಾತನಾಡಿ, ಸಾಕಷ್ಟು ಅಧ್ಯಯನ ಮಾಡಿದ್ದೇನೆ, ಮನಸಿನ ಸಮಸ್ಯೆಗಳನ್ನು ನೋಡ್ತಾ ನೋಡ್ತಾ ಜನರ ಮನಸ್ಥಿತಿ ಅವಲೋಕಿಸಿದಾಗ ಎಲ್ಲರಿಗೂ ಒಂದಲ್ಲ ಒಂದು ಚಿಂತೆಯಿರುತ್ತೆ ಅನ್ನೋದು ಗೊತ್ತಾಯ್ತು, ಇದೆಲ್ಲವನ್ನೂ ಸೇರಿಸಿ ನಾನು, ನನ್ನ ಪತ್ನಿ ಸೇರಿ ನೈಜತೆಗೆ ಹತ್ತಿರವಾಗುವಂಥ ಒಂದು ಕಥೆ ಬರೆದೆವು. ಜೀವನದಲ್ಲಿ ಮನುಷ್ಯನಿಗೆ ಒಂದು ಅವಕಾಶ ಸಿಗುತ್ತೆ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಇದ್ದರೆ,‌ ಮತ್ತೆ ಎರಡನೇ ಅವಕಾಶ ಸಿಗದೇ ಇರಬಹುದು, ಹಾಗಾಗಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ನಮ್ಮ ಚಿತ್ರದ ಮೂಲಕ ಹೇಳಿದ್ದೇನೆ.

ತುಂಬಾ ತಡವಾಗಿ ನಿರ್ಧಾರ ತಗೊಂಡರೆ ಅದು ಕೂಡ ಉಪಯೋಗಕ್ಕೆ ಬರಲ್ಲ, ಚಟಗಳು ಅತಿಯಾದಾಗ ಏನು ಬೇಕಾದರೂ ಆಗಬಹುದು, ಡ್ರಗ್ಸ್ ಅನ್ನೋದು ಒಂದು ಸುಳಿ ಇದ್ದಹಾಗೆ, ಅದನ್ನು ಕುತೂಹಲದಿಂದ ಮುಟ್ಟಿ ನೋಡೋ ಪ್ರಯತ್ನ ಮಾಡಬಾರದು ಅನ್ನೋದು ಚಿತ್ರದ ಕಾನ್ಸೆಪ್ಟ್. ಈ ಚಿತ್ರದಲ್ಲಿ ೨ ಹಾಡುಗಳಿದ್ದು ನಾನು ಹಾಗೂ ನಾಗೇಂದ್ರ ಪ್ರಸಾದ್ ಲಿರಿಕ್ಸ್ ಬರೆದಿದ್ದೇವೆ. ಚಿತ್ರದಲ್ಲಿ ಸ್ವಲ್ಪ ಅಡಲ್ಟ್ ಕಂಟೆಂಟ್ ಕೂಡ ಬರುತ್ತೆ, ಹಾಗಂತ ಯಾವುದನ್ನೂ ವಲ್ಗರ್ ಆಗಿ ತೋರಿಸಿಲ್ಲ, ಕ್ಲಾಸ್ ಆಗಿ ಹೇಳೋ ಪ್ರಯತ್ನ ಮಾಡಿದ್ದೇನೆ.

ಜೀವನದಲ್ಲಿ ನಾನು ನೋಡಿದ, ಕೇಳಿದ ಅನುಭವಗಳೇ ಈ ಸಿನಿಮಾವಾಗಿದೆ. ಸೈಕಾಲಜಿ ಜತೆಗೆ ಸ್ಪಿರಿಚುಯಾಲಿಟಿ ಬೆರೆಸಿ ಮಾಡಿದ ಚಿತ್ರವಿದಾಗಿದ್ದು, ಈ ಮೂಲಕ ಒಂದು ಅರಿವು ಮೂಡಿಸುವ ಪ್ರಯತ್ನ ಎನ್ನಬಹುದು, ಟೈಟಲ್ ಸಾಂಗ್ ಒಂದೇ ದಿನದಲ್ಲಿ ಒಂದೂವರೆ ಲಕ್ಷ ವೀಕ್ಷಣೆಯಾಗಿದೆ ಎಂದು ಹೇಳಿದರು.


ನಂತರ ನಿರ್ಮಾಪಕ ನಾಗಚಂದ್ರ ಮಾತನಾಡಿ ಮೊದಲು ಚಿಕ್ಕದಾಗಿ ಮಾಡೋಣ ಅಂದುಕೊಂಡದ್ದು ನಂತರ ದೊಡ್ಡದಾಯ್ತು. ಅಲ್ಲದೆ ಹಲವಾರು ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗಿದೆ. ಚಿತ್ರವನ್ನು ವಿತರಕ‌ ಜಯಣ್ಣ ಅವರು ರಿಲೀಸ್ ಮಾಡುತ್ತಿದ್ದಾರೆ, ಕರ್ನಾಟಕದಾದ್ಯಂತ ೧೫೦ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಟಕೀಲ ತೆರೆಗೆ ಬರಲಿದೆ ಎಂದರು,
ನಾಯಕ ಧರ್ಮ ಕೀರ್ತಿರಾಜ್ ಮಾತನಾಡುತ್ತ ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಕಾರಣ ನಿರ್ಮಾಪಕ ನಾಗಚಂದ್ರ, ಅವರಿಗೆ ಈ ಚಿತ್ರದಿಂದ ಒಳ್ಳೇ ಹೆಸರು ಬರಲಿ, ನಮ್ಮ ತಂದೆಯವರಿಗೆ ಪ್ರವೀಣ್ ನಾಯಕ್ ಅವರಜತೆ ಸಿನಿಮಾ ಮಾಡ್ತಿದೀನಿ ಎಂದಾಗ ಮಾಡು ಅಂಥವರ ಬಳಿ ಕಲಿಯುವುದು ಬಹಳಷ್ಟಿರುತ್ತೆ ಎಂದು ಪ್ರೋತ್ಸಾಹಿಸಿದರು.

ಈ ಸಿನಿಮಾ ಮೂಲಕ ನನಗೆ ಖಂಡಿತ ಒಳ್ಳೇ ಹೆಸರು ಬರುತ್ತೆ ಎಂಬ ನಂಬಿಕೆಯಿದೆ, ಒಬ್ಬ ಬ್ಯುಸಿನೆಸ್ ಮ್ಯಾನ್ ಪಾತ್ರ ಮಾಡಿದ್ದು, ಆತ ಯಾವುದೋ ಒಂದು ಚಟಕ್ಕೆ ಬಿದ್ದಾಗ ಏನೆಲ್ಲ ಆಗಬಹುದೆಂದು ತೋರಿಸಲಾಗಿದೆ ಎಂದರು.
ನಾಯಕಿ ನಿಖಿತಾಸ್ವಾಮಿ ಮಾತನಾಡಿ ನನಗೆ ಈ ಕಥೆ ಹೇಳಿದಾಗ ತುಂಬಾ ಚಾಲೆಂಜಿಂಗ್ ಪಾತ್ರ ಎನಿಸಿತು, ಇದರಲ್ಲಿ ಹಲವಾರು ಶೇಡ್ಸ್ ಬರುತ್ತೆ, ನನ್ನಿಂದಾದ ಎಫರ್ಟ್ ಹಾಕಿದ್ದೇನೆ ಎಂದರು.


ಸಂಗೀತ ನಿರ್ದೇಶಕ ರೇಣುಕುಮಾರ್, ನಟ ಸಂಕಲನಕಾರ ನಾಗೇಂದ್ರ ಅರಸ್, ಸಹ ನಿರ್ಮಾಪಕರಾದ ಶಂಕರ ರಾಮರೆಡ್ಡಿ, ಚನ್ನತಿಮ್ಮಯ್ಯ ಮುಂತಾದವರು ಟಕೀಲಾ ಚಿತ್ರದ ಕುರಿತಂತೆ ಮಾತನಾಡಿದರು. ಪಿ.ಕೆ.ಹೆಚ್. ದಾಸ್ ಅವರ ಛಾಯಾಗ್ರಹಣ, ಗಿರೀಶ್ ಅವರ ಸಂಕಲನ, ಪ್ರಶಾಂತ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಜೂನ್ ಗೆ ಶುರು; ಅಶ್ವಿನಿ ಪುನೀತ್ ಟೀಸರ್ ಲಾಂಚ್‌



ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಶಿಕ್ಷಣ ಕ್ಷೇತ್ರ ಪ್ರವೇಶಿಸಿರುವುದು ಗೊತ್ತೇ ಇದೆ. ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್’ ಅನ್ನು ಪ್ರಾರಂಭಿಸಿದ್ದು, ಅವರು ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಮತ್ತು ಶೃತಿ ಕಿರಣ್‌ ಅವರೊಂದಿಗೆ ಕೈಜೋಡಿಸಿದ್ದಾರೆ. ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್’ ಟೀಸರ್‌ ಲಾಂಚ್‌ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಒರಿಯನ್‌ ಮಾಲ್‌ ನಲ್ಲಿ ನಡೆಯಿತು. ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್’ ಟೀಸರ್‌ ಲಾಂಚ್‌ ಟೀಸರ್‌ ಲಾಂಚ್ ಮಾಡಿದರು. ವಿಶೇಷ ಅತಿಥಿಯಾಗಿ ನಟಿ ಮಿಲನಾ ನಾಗರಾಜ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುನೀತಾ ಗೌಡ, ಸ್ಫೂರ್ತಿ ವಿಶ್ವಾಸ್ ಉಪಸ್ಥಿತರಿದ್ದರು.

ಬಳಿಕ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮಾತನಾಡಿ, ನಾವು ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ ಒಂದು ಕೇಂದ್ರವಿದೆ.‌ ಈ ಕಲಿಕೆಯ ಗುರಿ ಜೊತೆಗೆ ಪ್ರತೀ ಮಗುವಿನ ಸಾಮರ್ಥ್ಯವನ್ನು ಪೋಷಿಸುವುದು ಮತ್ತು ನಾಯಕತ್ವವನ್ನೂ ನಿರ್ಮಿಸುವುದು ನಮ್ಮ ಉದ್ದೇಶ ಎಂದರು .

ನಟಿ ಮಿಲನಾ ನಾಗರಾಜ್‌ ಮಾತನಾಡಿ, ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಹೆಸರು ಬಹಳ ಮುದ್ದಾಗಿದೆ. ಇಂದಿನ ಮಕ್ಕಳಿಗೆ ಇದು ಒಳ್ಳೆಯ ಅವಕಾಶ. ನಾವು ಮಕ್ಕಳಾದ ಏನಾಗಬೇಕು ಅಂದಾಗ ಹೇಳಲು ಗೊತ್ತಿರಲಿಲ್ಲ. ಆದರೆ ಇಂದಿನ ಮಕ್ಕಳು ಆಗಲ್ಲ. ಮಕ್ಕಳಿಗೆ ಕೌಶಲ್ಯಗಳನ್ನು ಕಲಿಸುವುದು ಅತ್ಯುತ್ತಮ. ಇದು ಆರಂಭವಾಷ್ಟೇ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಸ್ಫೂರ್ತಿ ವಿಶ್ವಾಸ್ ಮಾತನಾಡಿ, ಇದೊಂದು ದೊಡ್ಡ ಜವಾಬ್ದಾರಿ. ಅದಕ್ಕೆ ಕಾರಣ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮೇಡಂ. ದಿನ, ರಾತ್ರಿ ಇದಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಹೆಸರಿಗಾಗಿ ಅಲ್ಲ. ಅಪ್ಪು ಸರ್‌ ಹೆಸರನ್ನು ಉಳಿಸಲು. ಆ ಜವಾಬ್ದಾರಿ ಇಟ್ಟುಕೊಂಡು ಇದನ್ನು ನಡೆಸಿಕೊಂಡು ಹೋಗುತ್ತವೆ. ಈ ಶಾಲೆ ಮಕ್ಕಳು ಅತ್ಯುತ್ತಮ ನಾಗರೀಕರಾಗುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಸುನೀತಾ ಗೌಡ ಮಾತನಾಡಿ, ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಕೇಂದ್ರಗಳು ಮಕ್ಕಳನ್ನು ಧೈರ್ಯದಿಂದ ಕನಸು ಕಾಣಲು, ಸೃಜನಾತ್ಮಕವಾಗಿ ಯೋಚಿಸಲು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಲು ಸಬಲೀಕರಣಗೊಳಿಸುತ್ತವೆ. ನಾವು ಪ್ರತಿ ಮಗುವನ್ನು ಸಾಧಕನನ್ನಾಗಿ ಬೆಳೆಸುವುದು, ನಾಯಕತ್ವದ ಗುಣಗಳು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಜವಾಬ್ದಾರಿಯುತ ಪೌರತ್ವವನ್ನು ಉತ್ತೇಜಿಸುವತ್ತ ಗಮನ ಹರಿಸುತ್ತೇವೆ ಎಂದು ತಿಳಿಸಿದರು.

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್‌ ಕ್ರಾಂತಿಕಾರಿ, ಪ್ರಾಥಮಿಕ ಶಿಕ್ಷಣ ಯೋಜನೆ, ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಹೊಸ ದಾರಿ ನಿರ್ಮಿಸಲು ಸಜ್ಜಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಖ್ಯಾತ ಶಿಕ್ಷಣತಜ್ಞೆ ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್ ಹಾಗೂ ಶೃತಿ ಕಿರಣ್‌ ಸಂಸ್ಥಾಪಿಸಿರುವ ಈ ಶಾಲೆಯೂ ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಜೂನ್‌ನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸುತ್ತಿದೆ.

ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮ ಈ ಜೂನಿಯರ್ ಟೋಸ್ ಪ್ರಿಸ್ಕೂಲ್‌ನಲ್ಲಿ ಇರಲಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ನಾಯಕತ್ವ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ಚಿಂತನೆಯನ್ನು ಬೆಳೆಸುವುದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೊತೆಗಾರರ ಕನಸು. ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್ ಅವರು ತಮ್ಮ ಅನುಭವದೊಂದಿಗೆ ಮುಂದಿನ ತಲೆಮಾರಿನ ಆತ್ಮವಿಶ್ವಾಸಿ ಯುವ ನಾಯಕರಿಗೆ ಸ್ಫೂರ್ತಿ ನೀಡಲು ಕೈಜೋಡಿಸಿದ್ದಾರೆ.

ಈ ಪ್ರೀಸ್ಕೂಲ್ ಬೆಂಗಳೂರು ಹಾಗೂ ಮೈಸೂರಿನಲ್ಲಿ ಆರಂಭವಾಗಿದೆ. ಇದರಲ್ಲಿ ಆಧುನಿಕ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನವಾದ ಪಠ್ಯಕ್ರಮಗಳನ್ನು ಅಳವಡಿಸಲಾಗಿದೆ. ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತೆ.

ಸದ್ಯ ಬೆಂಗಳೂರಿನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಆಲೋಚನೆಯನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ಇಂತಹ ವಿನೂತನ ಶಿಕ್ಷಣ ಭಾರತದಾದ್ಯಂತ ಇರುವ ಎಲ್ಲಾ ಮಕ್ಕಳಿಗೂ ಸಿಗುವಂತೆ ಆಗಬೇಕು ಎಂಬುದು ಇವರ ಆಶಯ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಅರುಣನ ಪ್ರೇಮ ಅಮರ!

ರೇಟಿಂಗ್: 3/5

ನಿರ್ದೇಶನ: ಪ್ರವೀಣ್ ಕುಮಾರ್ ಜಿ.
ನಿರ್ಮಾಣ: ಒಲವು ಸಿನಿಮಾ
ತಾರಾಗಣ: ಹರಿ‌ಶರ್ವಾ, ದೀಪಿಕಾ ಆರಾಧ್ಯ, ಧರ್ಮಣ್ಣ ಕಡೂರು ,ರಾಜ್ ಬಲವಾಡಿ ಇತರರು.

ಮಾಮ ಇನ್ನೊಂದ್ ಜೋಡಿ ಓಡಿಸಿದ್ರೆ, ಇಪ್ಪತೈದು ಆಗ್ತಾವೆ. ಆಮೇಲೆ ಪಾರ್ಟಿ ಮಾಡುಮ..’ ಈ ಡೈಲಾಗ್ ಬರುವ ಹೊತ್ತಿಗೆ , ಆ ಊರಿನ‌ ಪ್ರೇಮಿಗಳನ್ನು ರಾತ್ರೋ ರಾತ್ರಿ ಹೀರೋ‌ ಮತ್ತು ಆತನ ಗೆಳೆಯರೆಲ್ಲ ಊರಿಂದ ಕಳಿಸ್ತಾರೆ. ಅಲ್ಲಿಂದ ಶುರುವಾಗುವ ಕಥೆ ಕ್ಲೈಮ್ಯಾಕ್ಸ್ ವರೆಗು ಸುಮ್ಮನೆ ನೋಡಿಸಿಕೊಂಡು‌ ಹೋಗುತ್ತೆ.

ಇದು ಬಹುತೇಕ ಹೊಸಬರ ಚಿತ್ರ. ಹಾಗಾಗಿ ಒಂದಷ್ಟು‌ ಹೊಸತನವೂ ಇದೆ. ವಿಶೇಷ ಅಂದರೆ ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ, ಕಥೆಯೇ ಹೀರೋ. ವಿನಾಕಾರಣ ಬಿಲ್ಡಪ್ಸ್ ಇಲ್ಲ. ಅನಗತ್ಯ ದೃಶ್ಯಗಳಿಲ್ಲ. ಉತ್ತರ ಕರ್ನಾಟಕ ಭಾಷೆಯ ಸೊಗಡು ಸಿನಿಮಾದ ವೇಗ ಹಚ್ಚಿಸಿದೆ.
ಒಂದೇ ಮಾತಲ್ಲಿ ಹೇಳುವುದಾದರೆ ಇದು ನಮ್ಮ ನಡುವಿನ ಕಥೆಯ ಚಿತ್ರಣ. ಗ್ರಾಮೀಣ್ಯ ಭಾಷೆಯ ಸಿನಿಮಾ ನೋಡುಗರಿಗೆ ಆಪ್ತತೆ ಎನಿಸುತ್ತೆ.

ಸಿನಿಮಾ ನೋಡುಗರಿಗೆ ಅವರ ಶಾಲಾ ದಿನಗಳು ನೆನಪಾಗುತ್ತವೆ. ಅವರ ಹಳೆಯ ಲವ್ವರ್ ಹಾಗೊಮ್ಮೆ ಕಣ್ಮುಂದೆ ಹಾದು ಹೋಗುತ್ತಾಳೆ.
ಬಹುತೇಕ ಹೊಸ ಪ್ರತಿಭೆಗಳ ಅನಾವರಣ ಈ ಸಿನಿಮಾ ಮೂಲಕ ಆಗಿದೆ.

ಮೊದಲರ್ಧ ಜಾಲಿಯಾಗಿ ಸಾಗುವ ಸಿನಿಮಾ , ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತೆ. ಭಾವುಕತೆ ಹೆಚ್ಚಿಸುತ್ತೆ. ಎದೆ ಭಾರವಾಗಿಸುತ್ತೆ. ಒಟ್ಟಾರೆ ಭಾವನೆಗಳು ಗರಿಗೆದರಿ ಮಜವೆನಿಸೋ ನೆನಪುಗಳನ್ನು ಮರುಕಳಿಸುವ ಸಿನಿಮಾ ಎನಿಸುತ್ತೆ.

ಕಥೆ ತೀರ ಹೊಸದಲ್ಲ. ಹಲವು ಸಿನಿಮಾಗಳಲ್ಲಿ ಈ ರೀತಿಯ ಎಳೆ ಬಂದಿದೆಯಾದರೂ, ಇಲ್ಲಿ ಚಿತ್ರಕಥೆಯಲ್ಲಿ ಚುರುಕುತನವಿದೆ. ಬಿಗಿ ಹಿಡಿತವಿದೆ. ಕೆಲವು ಕಡೆ ಮಾತುಗಳು, ದೃಶ್ಯಗಳು ಬೇಕಿರಲಿಲ್ಲ ಅನಿಸಿದರೂ ಮುಂದೇನಾಗುತ್ತೆ ಅನ್ನೋ ಕುತೂಹಲ ನೋಡುವಂತೆ ಮಾಡುತ್ತೆ.

ಸಿನಿಮಾದಲ್ಲಿ ಎಲ್ಲಾ ಪಾತ್ರಕ್ಕೂ ಆದ್ಯತೆ ನೀಡಲಾಗಿದೆ. ತಮಾಷೆಯ ಸಿನಿಮಾ ಅನಿಸಿದರೂ ನೋಡ ನೋಡುತ್ತಲೇ ಗಂಭೀರತೆ ಪಡೆದುಕೊಳ್ಳುತ್ತೆ.

ಸಿನಿಮಾದ ವೇಗಕ್ಕೆ ಡೈಲಾಗ್ ಗಳು ಸಾಥ್ ಕೊಟ್ಟರೆ, ಹಿನ್ನೆಲೆ‌ ಸಂಗೀತ ಕೂಡ ಮುದ ಕೊಡುತ್ತೆ. ಹೊಸಬರಲ್ಲಿ ಹೊಸತು ಇದೆ ಅನ್ನೋದಕ್ಕೆ ಈ ಸಿನಿಮಾದ ಕಂಟೆಂಟ್ ಮತ್ತು ಸಿಂಪಲ್ ಮೇಕಿಂಗ್ ಕಾರಣವಾಗುತ್ತೆ. ಒಂದು‌ ಸಿಂಪಲ್ ಕಥೆ ಹೀಗೂ ಅನಾವರಣಗೊಳ್ಳುತ್ತೆ ಅನ್ನೋದಕ್ಕೆ ಇದು ಸಾಕ್ಷಿ. ಹೊಸಬರ ಪ್ರಯತ್ನ ಇಲ್ಲಿ ಸಾರ್ಥಕ ಎನಿಸುತ್ತೆ.

ಇಲ್ಲೂ ಕೆಲವು ದೋಷಗಳಿವೆ. ಅವನ್ನು ಬದಿಗೊತ್ತಿ ಸಿನಿಮಾ ನೋಡಿದರೆ ರುಚಿಸುತ್ತೆ. ಹೊಡಿ, ಬಡಿ ಗನ್ನು‌ ,ಮಚ್ಚು ಲಾಂಗ್ ಗಳ ಮಧ್ಯೆ ಒಂದು ನೀಟ್ ಸಿನಿಮಾ ಕಟ್ಟಿಕೊಡಲಾಗಿದೆ. ಅದೇ ಸಿನಿಮಾದ ಪ್ಲಸ್.

ಇಲ್ಲಿ ಹೀರೋಗೆ ಯಾವುದೇ ಬಿಲ್ಡಪ್ ಇಲ್ಲ. ನಮ್ಮ ನಡುವಿನ ಹುಡುಗನ ಕಥೆ ಅನಿಸುತ್ತೆ. ಪ್ರತಿ ಪಾತ್ರಗಳೂ ನಮ್ಮ ಪರಿಸರದ ಪಾತ್ರಗಳು ಅನಿಸುತ್ತವೆ ಅಷ್ಟರ ಮಟ್ಟಿಗೆ ನಿರ್ದೇಶಕರ ಜಾಣತನ ಪ್ರದರ್ಶನವಾಗಿದೆ.

ಕಥೆ ಏನು?

ಅರುಣ ತನ್ನ ಶಾಲಾ ದಿನಗಳಲ್ಲಿ ಕಾವ್ಯ ಎನ್ನುವ ಒಬ್ಬ ಹುಡುಗಿಯನ್ನು ಇಷ್ಟಪಟ್ಟಿರುತ್ತಾನೆ. ಕೊನೆಗೆ ಅವನ ತಂದೆ ವರ್ಗಾವಣೆಯಾದ ಬಳಿಕ ಆ ಊರು ತೊರೆದು ಹೋಗುತ್ತಾನೆ. ಮದ್ವೆ‌ ವಯಸ್ಸಿಗೆ ಬಂದಾಗ ಮನೆಯವರು ತೋರಿಸಿದ ಯಾವ ಹುಡುಗಿಯನ್ನು ಒಪ್ಪಲ್ಲ. ಕಾರಣ ಶಾಲಾ ದಿನದಲ್ಲಿ ಇಷ್ಟ ಪಟ್ಟ ಹುಡುಗಿಯೇ ಬೇಕು ಅನ್ನೋದು. ಹಾಗಾದರೆ ಆ ಹುಡುಗಿ ಸಿಕ್ತಾಳ, ಮದ್ವೆ ಅಗ್ತಾನಾ ? ಈ ಮಧ್ಯೆ ಒಂದಷ್ಟು ಟ್ವಿಸ್ಟು. ಈ ಕುತೂಹಲ ಇದ್ದರೆ ಮಿಸ್ ಮಾಡದೆ ಒಮ್ಮೆ ಸಿನಿಮಾ ನೋಡಬಹುದು.
ಇಲ್ಲಿ ಸಾಕಷ್ಟು ತಿರುವುಗಳಿವೆ ಅವೇ ಸಿನಿಮಾದ ಮತ್ತೊಂದು ಪ್ಲಸ್ ಎನ್ನಬಹುದು.

ಯಾರು ಹೇಗೆ?

ಸಿನಿಮಾದಲ್ಲಿ ಹರಿಶರ್ವ ಗಮನ ಸೆಳೆದಿದ್ದಾರೆ. ಅಮಾಯಕ ಪಾತ್ರ ಎನಿಸಿದರೂ ತಮ್ಮೊಳಗಿನ ಭಾವುಕತೆ ಹೊರಹಾಕುವ ಮೂಲಕ ಎಲ್ಲರಿಗೂ ಇಷ್ಟ ಆಗುತ್ತಾರೆ. ಹೊಡೆದಾಟವಿರದ ಹಾರಾಟವಿರದ ಕಥೆಗೆ ಸೈ ಅಂದಿದ್ದಾರೆ. ನೀಟ್ ಅಭಿನಯದ ಮೂಲಕ ಹರಿಶರ್ವ ಇಷ್ಟ ಆಗ್ತಾರೆ. ಹರಿಶರ್ವ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸರಳವೆನಿಸಿದರೂ ಆಪ್ತ ಪಾತ್ರವಾಗಿ ಹೊರಹೊಮ್ಮಿದ್ದಾರೆ. ಕನ್ನಡದಲ್ಲಿ ಒಳ್ಳೆ ಕಥೆ ಮೂಲಕ ಬಂದರೆ ಅವರು ನೆಲೆ ಊರಬಹುದು.

ದೀಪಿಕಾ ಆರಾಧ್ಯ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಧರ್ಮಣ್ಣ ಕಡೂರು ಸಿನಿಮಾದ ಹೈಲೆಟ್. ಗೆಳೆಯನ ಪಾತ್ರದಲ್ಲಿ ಜೀವಿಸಿದ್ದಾರೆ. ಅವರಿಗೂ ಇಲ್ಲೊಂದು ಹಾಡಿದೆ, ಹುಡುಗಿಯೂ ಇದ್ದಾಳೆ. ನೈಜ ಅಭಿನಯ ಖುಷಿಕೊಡುತ್ತೆ. ರಾಜ್ ಬಲವಾಡಿ ತಂದೆಯಾಗಿ ಇಷ್ಟವಾಗುತ್ತಾರೆ. ಉಳಿದ ಹೊಸ ಪಾತ್ರಗಳು ಸಹಜವಾಗಿವೆ. ಇಲ್ಲಿ ವಿಶೇಷವಾಗಿ ಮಂಜಮ್ಮ ಜೋಗತಿ ಕಾಣಿಸಿಕೊಂಡಿದ್ದಾರೆ.

ನನ್ನ ನೆರಳಿಂದು ನನ್ನೇ ಕೇಳುತ್ತಿದೆ ನೀನು ಯಾರೆಂದು ಮತ್ತು ಬಾ ಮಗ ಬಾ ಮಗ ಹಾಡು ಗುನುಗುವಂತಿವೆ. ಕ್ಯಾಮರ ಕೈಚಳಕದಲ್ಲಿ ಇನ್ನಷ್ಟು ಹೊಳಪು ಬೇಕಿತ್ತು.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಹೊಸತನದ ವಿಹಂಗಮ ನೋಟ!

ರೇಟಿಂಗ್: 3/5

ಚಿತ್ರ: ಫೈರ್ ಫ್ಲೈ
ನಿರ್ದೇಶನ: ವಂಶಿ ಕೃಷ್ಣ
ನಿರ್ಮಾಣ: ನಿವೇದಿತಾ ಶಿವರಾಜಕುಮಾರ್
ತಾರಾಗಣ: ವಂಶಿಕೃಷ್ಣ, ರಚನಾ ಇಂದರ್, ಅಚ್ಯುತ್ ಕುಮಾರ್, ಸುಧಾರಾಣಿ, ಮೂಗು ಸುರೇಶ್, ನೀನಾನಸಂ ಆನಂದ್ ಇತರರು.

ವಿದೇಶದಲ್ಲಿ ಓದಿಕೊಂಡ ನಾಯಕ , ಓದು ಮುಗಿದ ನಂತೆ ಇಂಡಿಯಾಗೆ ಮರಳುತ್ತಾನೆ. ಅವನಿಗೆ ಇಂಡಿಯಾದಲ್ಲೊಂದು ಸಮಸ್ಯೆ ಎದುರಾಗುತ್ತೆ. ಆ ಸಮಸ್ಯೆಯಿಂದ ಹೊರ ಬರೋಕೆ ಅವನು ಪಡುವ ಪಾಡೇ ಈ ಚಿತ್ರದ ಒನ್ ಲೈನ್.

ಇಲ್ಲಿ ಕಥೆ ತೀರಾ ಸಿಂಪಲ್. ಆದರೆ ಅದರ ಚಿತ್ರಕಥೆಗೊಂದು ವೇಗ ಕಲ್ಪಿಸಿಕೊಟ್ಟು ಸಿನಿಮಾವನ್ನು ನೋಡಿಸಿಕೊಂಡು‌ ಹೋಗುವಂತಹ ಜಾಣತನವನ್ನು ನಿರ್ದೇಶಕರು ಮೆರೆದಿದ್ದಾರೆ.

‘ಫೈರ್ ಫ್ಲೈ’ ಅಂದಾಕ್ಷಣ ಏನದು ಅನ್ನೋ ಪ್ರಶ್ನೆ ಸಹಜ. ಶೀರ್ಷಿಕೆಯ ಆರ್ಥ ಮಿಂಚುಹುಳು ಅಂತ ಅರ್ಥೈಸಿಕೊಳ್ಳಬಹುದು. ಬೆಳಕಿಗೂ ಮೀರಿದ ಬೆಳಕೊಂದನ್ನು ತೋರಿಸುವ ಪ್ರಯತ್ನಕ್ಕೆ ಆ ಹೆಸರು. ಹಾಗಾದರೆ ಆ ಬೆಳಕು ಇಲ್ಲಿ ಕಾಣುತ್ತಾ ಎಂಬ ಪ್ರಶ್ನೆಗೆ ಸಿನಿಮಾ ನೋಡುವುದೇ ಉತ್ತರ.

ಅಂದಹಾಗೆ ಇದು ನಟ ಕಮ್ ನಿರ್ದೇಶಕ ವಂಶಿ ಕೃಷ್ಣ ಅವರಿಗೆ ಮೊದಲ ಪ್ರಯತ್ನ.
ಮೊದಲೇ ಹೇಳಿದಂತೆ ಕಥೆ ಸರಳ. ಈಗಿನ ಯೂಥ್ ಎದುರಿಸುವ ಒಂದಷ್ಟು ಅಂಶಗಳು ಇಲ್ಲಿವೆ. ಅವೇ ಸಿನಿಮಾದ ಹೈಲೆಟ್.

ಕಥೆಯಲ್ಲಿ ಒಂದಷ್ಟು ಏರಿಳಿತಗಳಿವೆ. ಅವೇ ಸಿನಿಮಾದ ಮಜವೆನಿಸುವ ಅಂಶ. ಇಲ್ಲಿ ಹಾಸ್ಯವಿದೆ, ಭಾವುಕತೆ ಇದೆ, ಸಣ್ಣದ್ದೊಂದು ಸಂದೇಶವಿದೆ. ತೊಳಲಾಟವಿದೆ, ಅಲ್ಲಲ್ಲಿ ಬೇಸರದ ವಿಷಯವೂ ಇದೆ. ಆಗಾಗ ಸ್ವಲ್ಪ ತಮಾಷೆಯೂ ಇದೆ. ಆ ಬಗ್ಗೆ ಕುತೂಹಲವಿದ್ದರೆ ಒಂದೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಈಗಿನ ಕಾಲದ ಯೂಥ್ ಅನೇಕ ಸಮಸ್ಯೆ ಎದುರಿಸುತ್ತಾರೆ. ಉದಾಹರಣೆಗೆ ಒಂಟಿತನ ಕಾಡಬಹುದು, ನಿದ್ದೆ ಬರದ ರಾತ್ರಿಗಳನ್ನು ಎದುರಿಸಬಹುದು. ಕೆಲವು ವಿಷಯಗಳಿಗೆ ಬೇಸತ್ತು ಖಿನ್ನತೆಗೂ ಜಾರಬಹುದು. ಈ ವಿಷಯ ಸಿನಿಮಾದ ಗಮನಾರ್ಹ ಅಂಶ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿರುವ ಪ್ರತಿ ಪಾತ್ರಗಳು ನೋಡುಗರನ್ನು ಖುಷಿಪಡಿಸುತ್ತವೆ. ಆಗಾಗ ಗಂಭೀರತೆಗೂ ದೂಡುತ್ತವೆ.

ಸಿನಿಮಾದ ನಿರೂಪಣೆ ಖುಷಿಕೊಡುತ್ತೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಹಿಡಿತ ಇದ್ದಿದ್ದರೆ ಮತ್ತಷ್ಟು ರುಚಿಸುತ್ತಿತ್ತು. ಮೊದಲರ್ಧ ಜಾಲಿಯಾಗುವ ಸಿನಿಮಾ, ದ್ವಿತಿಯಾರ್ಧ ಗಂಭೀರತೆ ಪಡೆಯುತ್ತೆ. ವಾಸ್ತವ ಅಂಶಗಳನ್ನೂ ತೆರೆದಿಡುತ್ತೆ.

ಸಿನಿಮಾಲ್ಲಿ ಅನೇಕ ಬದಲಾವಣೆ ಕಾಣಬಹುದು. ಮೇಕಿಂಗ್, ನಿರೂಪಣಾ ಶೈಲಿ, ತೋರಿಸಿರುವ ವಿಧಾನ ಇವೆಲ್ಲದ್ದರಲ್ಲೂ ಕೊಂಚ ಹೊಸತನ್ನ ಕಾಣಬಹುದು. ಹಾಗಾಗಿ ಹೊಸ ನಿರ್ದೇಶಕರ ಪ್ರಯತ್ನ ತಂಡದ ಶ್ರಮ ಸಾರ್ಥಕ ಎನ್ನಬಹುದು.

ಮೇಕಿಂಗ್ ಕಡೆ ಗಮನ ಕೊಟ್ಟಷ್ಟು ಇನ್ನಷ್ಟು ಇಡೀ ಸ್ಕ್ರಿಪ್ಟ್ ಬಗ್ಗೆ ಗಮನಿಸಿದ್ದರೆ, ಇನ್ನೂ ಅಂದವಾಗುತ್ತಿತ್ತು. ಆದರೆ, ಕೆಲವು ಸನ್ನಿವೇಶಗಳು ಸಣ್ಣಪುಟ್ಟ ಮಿಸ್ಟೇಕ್ ಗಳನ್ನು ಬದಿಗೊತ್ತಿ ಸುಮ್ಮನೆ ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿವೆ.

ನಿರ್ದೇಶಕರು ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಆ ಪ್ರಯತ್ನ ಕೈ ಬಿಡಲಾಗಿದೆ. ಹಾಗಾಗಿ ಅವಧಿ ಜಾಸ್ತಿ ಏನೋ ಅಂತನಿಸುತ್ತದೆ.

ಇನ್ನು ತಾಂತ್ರಿಕವಾಗಿ ಚಿತ್ರ ಸೊಗಸಾಗಿದೆ. ಮುಖ್ಯವಾಗಿ ಇಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಕೆಲಸ. ಒಂದು ಹಾಡು ಗುನುಗುವಂತಿದೆ. ಬಿಟ್ಟರೆ ಹಿನ್ನೆಲೆ ಸಂಗೀತ ಸಿನಿಮಾದ ವೇಗಕ್ಕೆ ಹೆಗಲು ನೀಡಿದೆ. ಅಭಿಷೇಕ್ ಕಳತ್ತಿ ಅವರ ಕ್ಯಾಮೆರಾ ಕೈಚಳಕವೂ ಸಿನಿಮಾವನ್ನ ಅಂದಗಾಣಿಸಿದೆ.

ಯಾರು ಹೇಗೆ?

ಇಡೀ ಸಿನಿಮಾದಲ್ಲಿ ವಂಶಿ ಹೈಲೆಟ್. ವಿಕ್ಕಿ ಪಾತ್ರದ ಮೂಲಕ ಲವಲವಿಕೆಯಿಂದ ಗಮನಸೆಳೆಯುತ್ತಾರೆ. ತಮ್ಮ ಬಾಡಿ ಲಾಂಗ್ವೇಜ್ ನಲ್ಲಿ ಇನ್ನಷ್ಟು ತಿದ್ದಿಕೊಳ್ಳುವ ಅಗತ್ಯವಿದೆ. ಮೊದಲ ಪ್ರಯತ್ನವಾದ್ದರಿಂದ ಅವರ ಕೆಲ ಮಿಸ್ಟೇಕ್ ಕೈ ಬಿಡಬಹುದು. ಕನ್ನಡಕ್ಕೆ ಒಬ್ಬ ನಿರ್ದೇಶಕ ಮತ್ತು ನಟನನ್ನು ನಿರೀಕ್ಷಿಸಬಹುದು.

ರಚನಾ ಇಂದರ್ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ಅವರದಿಲ್ಲಿ ವಿಶೇಷ ಗುಣವುಳ್ಳ ಪಾತ್ರ. ಅಚ್ಯುತ್ ಹಾಗು ಸುಧಾರಾಣಿ ಪಾತ್ರಗಳು ಗಮನ ಸೆಳೆಯುತ್ತವೆ.
ಆನಂದ್ ಮತ್ತು ಮೂಗು ಸುರೇಶ್‌ ಅವರ ಪಾತ್ರಗಳು ನೆನಪಲ್ಲುಳಿಯುವಂತಿವೆ.

ಹೊಸಬಗೆಯ ಕಥೆ, ಹೊಸತನದ ಮೇಕಿಂಗ್, ಹೊಸ ಪ್ರತಿಭೆಗಳ ಮ್ಯಾಜಿಕ್ ಬಗ್ಗೆ ಕುತೂಹಲ ಇದ್ದರೆ ಸಿನಿಮಾ ನೋಡಬಹುದು. ಕೊಟ್ಟ ಕಾಸಿಗೆ ಮೋಸವಂತೂ ಇಲ್ಲ.

Categories
ಸಿನಿ ಸುದ್ದಿ

ಪೊರಕೆ ಹಿಡಿದ ಯುವರಾಜ್ ಕುಮಾರ್: ಎಕ್ಕ ಟೀಸರ್ ಸಖತ್ ಗುರು

ಕನ್ನಡ ಚಿತ್ರರಂಗದ ಭರವಸೆ ನಾಯಕ ಯುವರಾಜ್‌ ಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಯುವ ಟೀಸರ್‌ ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರತಂಡ ಟೀಸರ್‌ ಬಿಡುಗಡೆ ಮುಂದೂಡಿತ್ತು. ಇಂದು ಅಣ್ಣಾವ್ರ ಜನ್ಮದಿನದ ಜೊತೆಗೆ ಯುವ ಬರ್ತಡೇ ಸ್ಪೆಷಲ್‌ ಆಗಿಯೇ ಟೀಸರ್‌ ರಿಲೀಸ್‌ ಆಗಿದೆ.

1 ನಿಮಿಷ 9 ಸೆಕೆಂಡ್‌ ಇರುವ ಯುವ ಟೀಸರ್‌ ಸೈಕ್‌ ಆಗಿದೆ. ಹೊಸ ಅವತಾರದಲ್ಲಿ ಯುವರಾಜ್‌ ಕುಮಾರ್‌ ಎಂಟ್ರಿ ಕೊಟ್ಟಿದ್ದಾರೆ. ಮಗು-ಮೃಗ ಅಂತಾ ಮಸ್ತ್‌ ಡೈಲಾಗ್‌ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದ್ ವಿಷ್ಯ ಇದು ಇಲ್ಲಿಗೆ ನಿಲ್ಲೋದಿಲ್ಲ ಅಂತಾ ದೊಡ್ಡದಾಗಿ ಏನೋ ಸೂಚನೆ ಕೊಟ್ಟಿದ್ದಾರೆ.

ಯುವ ಆಕ್ಟಿಂಗ್‌, ರೋಹಿತ್‌ ಪದಕಿ ಟೇಕಿಂಗ್‌, ಚರಣ್‌ ರಾಜ್‌ ಮ್ಯೂಸಿಕ್‌ ಕಿಕ್‌ ಟೀಸರ್‌ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಯುವ ಟೈಟಲ್‌ ಟ್ರ್ಯಾಕ್‌ ಚಿಂದಿ ಉಡಾಯಿಸಿದ್ದು, ಈಗ ಟೀಸರ್‌ ಸರದಿ ಅಂತಾ ಫ್ಯಾನ್ಸ್‌ ಖುಷಿಪಡುತ್ತಿದ್ದಾರೆ.

ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವರಾಜ್‌ಕುಮಾರ್ ನಾಯಕನಾಗಿ, ಸಂಪದ ಹಾಗೂ ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್‍ ಕುಮಾರ್ ಸಂಕಲನ ಒದಗಿಸಿದ್ದಾರೆ.

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾವ್ ಅವರ ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಹಾಗೂ ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಜೂನ್-6 ರಂದು ಎಕ್ಕ ಸಿನಿಮಾ ತೆರೆಗೆ ಎಂಟ್ರಿ ಕೊಡುತ್ತಿದೆ.

Categories
ಸಿನಿ ಸುದ್ದಿ

ರಾಜಕುಮಾರ್ ಹುಟ್ಟುಹಬ್ಬಕ್ಕೆ ಶಿವರಾಜಕುಮಾರ್ ಹೊಸ ಚಿತ್ರ ಅನೌನ್ಸ್

ಏಪ್ರಿಲ್ 24 ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ನೂತನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಾಜಿ ಮಾಧವನ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಬಾಲಾಜಿ ಮಾಧವನ್, ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರಿಯ ಪುತ್ರ.

ಇತ್ತೀಚೆಗೆ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದ ನಿರ್ದೇಶಕ ಬಾಲಾಜಿ ಮಾಧವನ್ ಹಾಗೂ ನಿರ್ಮಾಪಕರಾದ ಸಾಗರ್ , ಕೃಷ್ಣಕುಮಾರ್ ಮತ್ತು ಸೂರಜ್ ಶರ್ಮ ನೂತನ ಚಿತ್ರದ ಕುರಿತು ಮಾತನಾಡಿದ್ದಾರೆ. ಚಿತ್ರದ ಕಥೆ ಕೇಳಿ ಶಿವಣ್ಣ ಸಂತಸಗೊಂಡಿದ್ದಾರೆ.

ಸದ್ಯದಲ್ಲೇ ಶೀರ್ಷಿಕೆಯನ್ನು ಅದ್ದೂರಿಯಾಗಿ ಅನಾವರಣಗೊಳಿಸುವ ಸಿದ್ದತೆ ನಡೆಸಿರುವ ನಿರ್ಮಾಪಕರು ಆ ಸಮಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೀರ್ಷಿಕೆ ಏನೆಂದು ಜನರೆ ಊಹಿಸಲಿ ಎಂದು ಶಿವರಾಜಕುಮಾರ್ ಚಿತ್ರತಂಡಕ್ಕೆ ಸಲಹೆ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

Categories
ಸಿನಿ ಸುದ್ದಿ

ಅಮರ ಪ್ರೇಮಿ ಅರುಣ್ ಬರ್ತಾ ಇದಾನೆ ಜಾಗ ಕೊಡಿ!

ಈ ವಾರ ತೆರೆಗೆ ಬಳ್ಳಾರಿ ಭಾಗದ ಪ್ರೇಮ ಕಥಾಹಂದರ ಇರುವ “ಅಮರ ಪ್ರೇಮಿ ಅರುಣ್” ಸಿನಿಮಾ ಬಿಡುಗಡೆ ಆಗುತ್ತಿದೆ. ಬಹುತೇಕ ಹೊಸಬರ ತಂಡದ ಶ್ರಮ ಈ ಸಿನಿಮಾದಲ್ಲಿದೆ. ಹಲವು ವಿಶೇಷ ಗುಣ ಹೊಂದಿರುವ ಈ ಚಿತ್ರ ನೋಡುಗರಿಗೆ ಹೂರಣದ ರುಚಿಯನ್ನೇ ಉಣಬಡಿಸುತ್ತೆ

ಒಲವು ಸಿನಿಮಾ ಲಾಂಛನದಲ್ಲಿ ಒಲವಿನ ಗೆಳೆಯರು ಒಂದಿಷ್ಟು ಜನ ಸೇರಿ ಒಲವಿನಿಂದ ನಿರ್ಮಾಣ ಮಾಡಿರುವ ಹಾಗೂ ಪ್ರವೀಣ್ ಕುಮಾರ್ ಜಿ ಬರವಣಿಗೆ ಹಾಗೂ ನಿರ್ದೇಶನದ ” ಅಮರ ಪ್ರೇಮಿ ಅರುಣ್” ಚಿತ್ರ ಈ ವಾರ(ಏಪ್ರಿಲ್ 25) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬಳ್ಳಾರಿ ಭಾಗದ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಹರಿಶರ್ವ ಅಭಿನಯಿಸಿದ್ದಾರೆ. ನಾಯಕಿಯಾಗಿ ದೀಪಿಕಾ ಆರಾಧ್ಯ ಇದ್ದಾರೆ. ಧರ್ಮಣ್ಣ ಕಡೂರು, ಕ್ರಿತಿ ಭಟ್, ಮಹೇಶ್ ಬಂಗ್, ಅರ್ಚನಾ ಕೊಟ್ಟಿಗೆ, ರಂಜಿತಾ ಪುಟ್ಟಸ್ವಾಮಿ, ಮಂಜಮ್ಮ ಜೋಗತಿ, ರಾಧ ರಾಮಚಂದ್ರ, ಬಲ‌ ರಾಜವಾಡಿ ಹೀಗೆ ಅನುಭವಿ ಕಲಾವಿದರ ದೊಡ್ಡ ದಂಡೆ ಈ ಚಿತ್ರದಲ್ಲಿದೆ. ಬಳ್ಳಾರಿ ಆಸುಪಾಸಿನಲ್ಲೇ ಚಿತ್ರೀಕರಣ ನಡೆದಿರುವ ಈ ಚಿತ್ರದ ಸಂಭಾಷಣೆ ಕೂಡ ಅಲ್ಲಿನ ಸೊಗಡಿನಲ್ಲೇ ಇರುತ್ತದೆ.

ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಗೂ ಪ್ರವೀಣ್ ಕುಮಾರ್ ಅವರು ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಈಗಾಗಲೇ ಜನಪ್ರಿಯವಾಗಿದೆ.

ಪ್ರವೀಣ್ ಎಸ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮಂಡ್ಯ ಮಂಜು ಕಾರ್ಯ ನಿರ್ವಹಿಸಿದ್ದಾರೆ.

Categories
ಸಿನಿ ಸುದ್ದಿ

ಸುರುಳಿ ಇದು ಹೇಮಂತ್ ರಾವ್ ನಿರ್ಮಾಣದ ಕಿರುಚಿತ್ರ; ಎಲ್ಲರ ಮನಮುಟ್ಟೋ ಕಥೆ

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ‌ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ಮಾಣದ ಚೊಚ್ಚಲ ಸಿನಿಮಾ ಅಜ್ಞಾತವಾಸಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ಇದೀಗ ಸುರುಳಿ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮದೇ ದಾಕ್ಷಾಯಿಣಿ ಟಾಕೀಸ್ ನಡಿ ನಿರ್ಮಾಣಗೊಂಡಿರುವ ಈ ಕಿರುಚಿತ್ರ ಮನಮುಟ್ಟುವ ಕಥೆಯನ್ನೊಳಗೊಂಡಿದೆ. ದಾಕ್ಷಾಯಿಣಿ ಟಾಕೀಸ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ 33 ನಿಮಿಷದ ಕಿರುಚಿತ್ರ ಮಾನವೀಯತೆಯನ್ನು ತೆರೆದಿಟ್ಟಿದೆ.

ಯುವ ಸಿನಿಮೋತ್ಸಾಹಿಗಳ ಕನಸಿಗೆ ಹೇಮಂತ್ ರಾವ್ ಬೆಂಬಲವಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿ ಹೆಸರಿನಡಿ ನಿರ್ಮಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ನಡಿ ವಿಭಿನ್ನ ಬಗೆಯ ಸಿನಿಮಾ ಹಾಗೂ ಕಿರುಚಿತ್ರಗಳನ್ನು ನಿರ್ಮಿಸುವ ಹಾದಿಯಲ್ಲಿದ್ದು, ಅದರ ಭಾಗವಾಗಿ ರೂಪಗೊಂಡಿರುವ ಪ್ರಯತ್ನವೇ ಸುರುಳಿ ಕಿರುಚಿತ್ರ.

ಇತ್ತೀಚೆಗೆ ಈ ಪ್ರೊಡಕ್ಷನ್ ನಡಿ ನಿರ್ಮಾಣಗೊಂಡ ಮೊದಲ ಚಿತ್ರ ಅಜ್ಞಾತವಾಸಿ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಿಂದ ಒಂದೊಳ್ಳೆ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರ ಬೆನ್ನಲ್ಲೀಗ ಸುರುಳಿ ಕಿರುಚಿತ್ರವನ್ನು ನಿರ್ಮಿಸಿ, ಬಿಡುಗಡೆ‌ ಮಾಡಿದ್ದಾರೆ. ಸುರುಳಿ ಶಾರ್ಟ್ ಮೂವೀ ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಸುರುಳಿ ಕಿರುಚಿತ್ರಕ್ಕೆ ಮನು ಅನುರಾಮ್ ಸಾರಥಿ. ಅವರೇ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ಪೊರೇಟ್ ಕೆಲಸ ಮಾಡಿಕೊಂಡೇ ಸಿನಿಮಾ ಗೀಳು ಬೆಳೆಸಿಕೊಂಡಿರುವ ಮನು ಅನುರಾಮ್ ಅವರು ಈಗಾಗಲೇ ಸಾಕಷ್ಟು ಕಿರುಚಿತ್ರ ಹಾಗೂ ವೆಬ್ ಸೀರೀಸ್ ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರಗಳು ಸಾಕಷ್ಟು ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು, ತೀರ್ಪುಗಾರರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿವೆ. ಕಿರುಚಿತ್ರ ಸಿನಿಮೋತ್ಸವದಲ್ಲಿ ಹೇಮಂತ್ ರಾವ್ ಹಾಗೂ ಮನು ಅನುರಾಮ್ ಅವರ ಪರಿಚವಾಗುತ್ತದೆ. ಅವರ ಕಿರುಚಿತ್ರ ಇಷ್ಟಪಟ್ಟಿದ್ದ ಹೇಮಂತ್ ಇಂದು ಮನು ಅನುರಾಮ್ ನಿರ್ದೇಶನದ ಸುರುಳಿಗೆ ಜೊತೆಯಾಗಿ ನಿಂತಿದ್ದಾರೆ.

ವಿಶೇಷ ಎಂದರೆ ಸುರುಳಿಗೆ ಸಂಗೀತ ಒದಗಿಸಿರುವುದು ಚರಣ್ ರಾಜ್. ಒಂದೊಳ್ಳೆ ಅದ್ಭುತ ಮ್ಯೂಸಿಕ್ ನ್ನು ಈ ಕಿರು ಚಿತ್ರಕ್ಕೆ ಅವರು ಕೊಟ್ಟಿದ್ದಾರೆ . ಹರ್ಷಿಲ್ ಕೌಶಿಕ್, ನಿಧಿ ಹೆಗ್ಡೆ ಹಾಗೂ ವಂಶಿಧಾರ್ ಭೋಗರಾಜು ಶಾರ್ಟ್ ಮೂವೀಯಲ್ಲಿ ಅಭಿನಯಿಸಿದ್ದಾರೆ. ಅಮಲ್ ಅಂಬಿಕಾ ರಾಜೇಂದ್ರನ್ ಛಾಯಾಗ್ರಹಣ, ಸ್ಯಾಮ್ ವೆಂಕಟ್ ಹಾಗೂ ವರುಣ್ ಗೋಲಿ ಸಂಕಲನ ಕಿರುಚಿತ್ರಕ್ಕಿದೆ.

ನಮ್ಮ ಜೀವನದಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆಗಳು ನಮಗೆ ಗೊತ್ತಿಲ್ಲದೇ ಬೇರೆಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆ ಸುಳಿವು ನಮಗೆ ಇರುವುದಿಲ್ಲ. ಅಂತಹ ಕಥೆಯನ್ನು ಮನು ಅನುರಾಮ್ ಅಚ್ಚುಕಟ್ಟಾಗಿ ದೃಶ್ಯರೂಪಕ್ಕಿಳಿಸಿದ್ದು, ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಫೈರ್‌ ಫ್ಲೈ ಸಿನಿಮಾಗೆ ಧ್ರುವ ಸರ್ಜಾ ಸಾಥ್; ಹುಷಾರು ಲೇ ಹುಷಾರು ಎಂದ ಆಕ್ಷನ್ ಪ್ರಿನ್ಸ್

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರ ಇದೇ ತಿಂಗಳ 24ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು,ಪ್ರಚಾರ ಬಿರುಸಿನಿಂದ ಸಾಗಿದೆ. ಅದರ ಭಾಗವಾಗಿ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಧ್ರುವ ಸರ್ಜಾ ಫೈರ್‌ ಫ್ಲೈ ಸಿನಿಮಾದ ಹುಷಾರು ಲೇ ಹುಷಾರು ಎಂಬ ಹಾಡನ್ನು ರಿಲೀಸ್‌ ಮಾಡಿ ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ನಾಯಕ ವಿಕ್ಕಿಯನ್ನು ಗುಣಗಾನ ಮಾಡುವ ಹಾಡು ಇದಾಗಿದೆ. ಈ ಗೀತೆಯಲ್ಲಿಅಣ್ಣಾವ್ರ ಸಿನಿಮಾಗಳ ಡೈಲಾಗ್‌ ಗಳನ್ನು ಬಳಸಿರುವುದು ಮತ್ತೊಂದು ವಿಶೇಷ. ಧನಂಜಯ್‌ ರಂಜನ್‌ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ದೀಪಕ್ ಬ್ಲೂ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಹಾಡಿಗೆ ಧ್ವನಿಯಾಗಿದ್ದು, ಚರಣ್‌ ರಾಜ್‌ ಮಸ್ತ್‌ ಟ್ಯೂನ್‌ ಹಾಕಿದ್ದಾರೆ.

ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್‌ ಫ್ಲೈ ಸಿನಿಮಾವನ್ನು ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್‌ ಫ್ಲೈ ಸಿನಿಮಾ ಏಪ್ರಿಲ್‌ 24ಕ್ಕೆ ತೆರೆಗೆ ಬರ್ತಿದೆ.

ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ- ನಿರ್ದೇಶನ ಈ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಫೈರ್ ಫ್ಲೈ ಚಿತ್ರಕ್ಕಿದೆ.

error: Content is protected !!