ಭೂಮಿ ಶೆಟ್ಟಿಯ ‘ಮಹಾಕಾಳಿ’ ಸಿನಿಮಾದಲ್ಲಿ ಬಾಲಿವುಡ್ನ ನ್ಯಾಷನಲ್ ಕ್ರಶ್ ಖ್ಯಾತಿಯ ರೋಹಿತ್ ಸರಾಫ್
ಹನುಮಾನ್ ಚಿತ್ರ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ವರ್ಮಾ ಬರೆದ ಮಹಾಕಾಳಿ ಸಿನಿಮಾಗೆ ಬಾಲಿವುಡ್ ನ್ಯಾಷನಲ್ ಕ್ರಶ್ ಖ್ಯಾತಿಯ ರೋಹಿತ್ ಸರಾಫ್ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಹೈದ್ರಾಬಾದ್ ನಲ್ಲಿ ಪೂರ್ಣಗೊಳಿಸಿದ್ದಾರೆ.
ಉತ್ತರ ಭಾರತದಲ್ಲಿ ರೋಹಿತ್ ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಅದರಲ್ಲಿಯೂ ಯುವ ಸಮೂಹ ಅವರ ಅಭಿನಯವನ್ನು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ಮಹಾಕಾಳಿ ಸ್ಟ್ರೆಂಥ್ ಮತ್ತಷ್ಟು ಹೆಚ್ಚಾದಂತೆ ಆಗಿದೆ.
ಈ ಚಿತ್ರದಲ್ಲಿ ಮಹಾಕಾಳಿ ಪಾತ್ರವನ್ನ ಭೂಮಿ ಶೆಟ್ಟಿ ಮಾಡುತ್ತಿದ್ದಾರೆ. ಅಕ್ಷಯ್ ಖನ್ನಾ ಸೇರಿದಂತೆ ಹಲವರು ನಟಿಸಿದ್ದಾರೆ. ಇವರಿಬ್ಬರ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟು ಒಳ್ಳೆ ಮೆಚ್ಚುಗೆ ಸಿಕ್ಕಿದೆ.
ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾದ ಮಹಾಕಾಳಿ ಸಿನಿಮಾವನ್ನು ಆರ್ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಆರ್ಕೆ ದುಗ್ಗಲ್ ಮತ್ತು ರಿವಾಜ್ ರಮೇಶ್ ದುಗ್ಗಲ್ ಅವರು ಅದ್ಧೂರಿ ನಿರ್ಮಾಣ ಮಾಡುತ್ತಿದೆ.
ಡಿಯರ್ ಜಿಂದಗಿ ಚಿತ್ರದಲ್ಲಿ ಆಲಿಯಾ ಭಟ್ ಅವರ ಕಿರಿಯ ಸಹೋದರನಾಗಿ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ ರೋಹಿತ್ ಸರಾಫ್
ಡಿಯರ್ ಜಿಂದಗಿ ಚಿತ್ರದಲ್ಲಿ ಆಲಿಯಾ ಭಟ್ ಅವರ ಕಿರಿಯ ಸಹೋದರನಾಗಿ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ ರೋಹಿತ್ ಸರಾಫ್
ಪೂಜಾ ಅಪರ್ಣಾ ಕೊಲ್ಲೂರು ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ.
ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು “ರಕ್ಕಿ” ಚಿತ್ರದ ಮೊದಲ ಗೀತೆಯಾಗಿದೆ.
ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ರಕ್ಕಿ ಸುರೇಶ್, ಈ ಹಾಡಿನಲ್ಲಿ ತಮ್ಮ ಎನರ್ಜಿಟಿಕ್ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲಿಶ್ ಲುಕ್ ಹಾಗೂ ಅದ್ಭುತ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಭರ್ಜರಿ ನೃತ್ಯ ಸಂಯೋಜನೆ ಹಾಗೂ ಕಲರ್ಫುಲ್ ದೃಶ್ಯಗಳೊಂದಿಗೆ ಈ ಹಾಡು ರಕ್ಕಿ ಸುರೇಶ್ ಅವರನ್ನು ಹೊಸ ತಲೆಮಾರಿನ ಮಾಸ್ ಹೀರೋ ಆಗಿ ಪರಿಚಯಿಸುತ್ತದೆ. ಇಂದಿನ Gen Z ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಹಾಡು ಟ್ರೆಂಡಿ ಬೀಟ್ಸ್, ಯೂತ್ಫುಲ್ ಎನರ್ಜಿ ಮತ್ತು ಸ್ಟೈಲಿಶ್ ಮೇಕಿಂಗ್ನಿಂದ ವಿಶೇಷ ಆಕರ್ಷಣೆಯಾಗಿದೆ.
“ಹಚ್ಚಿಟ್ಟಿರೋ ಪಟಾಕಿ” ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್ನಿಂದ ಈ ಹಾಡು ಥಿಯೇಟರ್ ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.
ಈ ಹಾಡಿಗೆ ಸಂಗೀತ ಮತ್ತು ಸಾಹಿತ್ಯವನ್ನು ಲೋಕಿ ತವಸ್ಯ ನೀಡಿದ್ದಾರೆ. ಯುವಜನತೆಯನ್ನು ಸೆಳೆಯುವ ರೀತಿಯ ಸಂಗೀತ ಮತ್ತು ಸಾಹಿತ್ಯ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಕಂಬಿರಾಜು ಅವರ ನೃತ್ಯ ಸಂಯೋಜನೆ ಹಾಡಿಗೆ ಮತ್ತಷ್ಟು ಭರ್ಜರಿತನ ನೀಡಿದ್ದು, ಪ್ರತಿಯೊಂದು ಸ್ಟೆಪ್ ಕೂಡ ಪ್ರೇಕ್ಷಕರನ್ನು ಕುಣಿಯಿಸುವಂತಿದೆ. ಛಾಯಾಗ್ರಾಹಕ ಐ ಸಾಕ್ ಪ್ರಭಾಕರ್ ಅವರು ಕಲರ್ಫುಲ್ ಫ್ರೇಮ್ಸ್, ಸ್ಟೈಲಿಶ್ ಲೈಟಿಂಗ್ ಮತ್ತು ಅದ್ದೂರಿ ದೃಶ್ಯ ವಿನ್ಯಾಸದ ಮೂಲಕ ಹಾಡಿನ ವೈಭವವನ್ನು ಹೆಚ್ಚಿಸಿದ್ದಾರೆ.
ವೆಂಕಟ್ ಭಾರದ್ವಾಜ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ “ರಕ್ಕಿ” ಚಿತ್ರ, ಸದ್ಯ ಸೆನ್ಸಾರ್ ಹಂತದಲ್ಲಿದ್ದು ಶೀಘ್ರದಲ್ಲೇ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಆಶೀರ್ವಾದ ಮತ್ತು ಬೆಂಬಲ ದೊರೆತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ.
SNR Productions ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಿಸಿರುವ “ರಕ್ಕಿ” ಚಿತ್ರವು ಸಾಹಸ , ಭಾವನೆ, ಸಂಗೀತ, ಪ್ರೇಮ ಮತ್ತು ಮಾಸ್ ಅಂಶಗಳಿಂದ ಕೂಡಿದ ಯುವಜನರ ಮನಗೆಲ್ಲುವ ಕಮರ್ಷಿಯಲ್ ಎಂಟರ್ಟೈನರ್ ಚಿತ್ರ ಆಗಲಿದೆ. ಈಗಾಗಲೇ ಬಿಡುಗಡೆಯಾದ “ರಗಡೋ ರಕ್ಕಿ” ಹಾಡು ಕನ್ನಡ ಸಿನಿ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟಿಸಿದ್ದು, ಚಿತ್ರದ ಭರ್ಜರಿ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದೆ. . ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸರೇಶ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಜಿ ಜಿ, ಹರಿಣಿ ಶ್ರೀಕಾಂತ್ ಮುಂತಾದವರ ಭರ್ಜರಿ ತಾರಾಬಳಗ ಈ ಚಿತ್ರದಲ್ಲಿದೆ.
ಸಿರಿ ಮ್ಯೂಸಿಕ್ ಮೂಲಕ “ಮುದ್ದಾದ ಮೂಗುತಿ” ಹಾಡು ಬಿಡುಗಡೆ ಮಾಡಿ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ ಚಿತ್ರತಂಡ
ಕನ್ನಡದಲ್ಲಿ ಪ್ರೀತಿಯ ಕುರಿತಾದ ಅನೇಕ ಚಿತ್ರಗಳು ಬಂದಿದೆ. ಆದರೆ ಒಂದರ ಹಾಗೆ ಒಂದು ಇಲ್ಲ. ಅದೇ ರೀತಿ ಹೊಸತಂಡವೊಂದು “ಕೀರ್ತಿ ಐ ಲವ್ ಯು” ಎಂಬ ಲವ್ ಜಾನರ್ ನ ಚಿತ್ರವನ್ನು ತೆರೆಯ ಮೇಲೆ ತರುತ್ತಿದೆ. ಪೂಜಿತ ಎಸ್ ರಾವ್ ನಿರ್ಮಾಣದಲ್ಲಿ, ನಿರಂಜನ್ ಆರಾಧ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಾಯಕನಾಗಿ ಪ್ರಜ್ಯೋತ್ ಎಸ್ ರಾವ್ ನಟಿಸಿದ್ದಾರೆ. ನಿಧಿ ಗೌಡ ಈ ಚಿತ್ರದ ನಾಯಕಿ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡು “ಮುದ್ದಾದ ಮೂಗುತಿ” ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ.
ನೃತ್ಯ ಕಲಾವಿದನಾಗಿರುವ ನನಗೆ ಮೊದಲಿನಿಂದಲೂ ನಿರ್ದೇಶನದ ಬಗ್ಗೆ ಆಸಕ್ತಿ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಪ್ರೀತಿಯ ಕುರಿತು ಹಲವು ಚಿತ್ರಗಳು ಬಂದಿದೆಯಾದರೂ ನಾವು ಈ ಚಿತ್ರದಲ್ಲಿ ಪ್ರೀತಿಯ ಬಗ್ಗೆ ಹೇಳಿರುವ ವ್ಯಾಖ್ಯಾನವೇ ಬೇರೆ. ಅದರಲ್ಲೂ ಈಗಂತೂ ಚಿಕ್ಕವಯಸ್ಸಿನಲ್ಲೇ ಲವ್, ಡೇಟಿಂಗ್ ಎನ್ನುತ್ತಾರೆ. ಅದೆಲ್ಲಾ ತಪ್ಪು ಎಂದು ಯುವಜನತೆಗೆ ಜಾಗೃತಿ ಮೂಡಿಸುವ ಚಿತ್ರವೂ ಹೌದು.
ಪ್ರಜ್ಯೋತ್ ಎಸ್ ರಾವ್ ನಾಯಕನಾಗಿ, ನಿಧಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಭಿರಾಮ್ ಸಂಗೀತ ನೀಡಿರುವ ಮೂರು ಹಾಡುಗಳು ಚಿತ್ರದಲ್ಲಿದೆ. ಆ ಪೈಕಿ ಅರುಣ್ ಕುಮಾರ್ ಬರೆದು, ಆರ್ಫಾಜ್ ಉಲ್ಲಾಳ್ ಹಾಡಿರುವ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಚಿತ್ರ ಜುಲೈ 31 ರಂದು ತೆರೆಗೆ ಬರುತ್ತಿದೆ ಎಂದು ನಿರ್ದೇಶಕ ನಿರಂಜನ್ ಆರಾಧ್ಯ ತಿಳಿಸಿದರು.
ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ಕಲಿತಿದ್ದೇನೆ. ನಾಯಕನಟನಾಗಲು ಕಿಚ್ಚ ಸುದೀಪ್ ಅವರು ಸ್ಪೂರ್ತಿ. ಅವರು ನನ್ನ ಆರಾಧ್ಯ ದೈವ. ನನ್ನ ಅಕ್ಕ ಪೂಜಿತಾ ಎಸ್ ರಾವ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಾಯಕ ಪ್ರಜ್ಯೋತ್ ಎಸ್ ರಾವ್.
ನನ್ನ ತಮ್ಮ ಪ್ರಜ್ಯೋತ್ ಎಸ್ ರಾವ್ ಗೆ ಮೊದಲಿನಿಂದಲೂ ನಾಯಕನಾಗಬೇಕೆಂಬ ಆಸೆ. ಅವನ ಆಸೆಯನ್ನು ಈ ಚಿತ್ರ ನಿರ್ಮಾಣ ಮಾಡುವ ಮೂಲಕ ಪೂರ್ಣ ಮಾಡಿದ್ದೇನೆ. ಈಗಿನ ಯುವಜನತೆ ನೋಡಲೇ ಬೇಕಾದ ಚಿತ್ರವಿದು ಎಂದು ನಿರ್ಮಾಪಕಿ ಪೂಜಿತಾ ಎಸ್ ರಾವ್ ಹೇಳಿದರು.
ತಮ್ಮ ಪಾತ್ರದ ಬಗ್ಗೆ ನಾಯಕಿ ನಿಧಿ ಗೌಡ ತಿಳಿಸಿದರು. ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ, ಸಂಗೀತ ನಿರ್ದೇಶಕ ಅಭಿರಾಮ್, ಛಾಯಾಗ್ರಾಹಕರಾದ ಅಭಿಷೇಕ್, ರೋಹಿತ್ ದನಿ, ಸಹ ನಿರ್ಮಾಪಕ ಯತೀಶ್ ಕುಮಾರ್, ಐ ಟು ಐ ಇನ್ಫೊಟೆಕ್ ನ ಶಮಂತ್ ಶೆಟ್ಟಿ, ನಟ ಹರೀಶ್ ಕುಮಾರ್ ಹಾಗೂ ಕಾರ್ಯಕಾರಿ ನಿರ್ಮಾಪಕ ಲಿಯಾನ್ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನೈಜಘಟನೆ ಆಧರಿಸಿರುವ ಈ ಮಕ್ಕಳ ಚಿತ್ರದ ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟನೆ
ಬೃಂದಾ ಎನ್ ಜಯರಾಮ್ ರವರು ನಿರ್ಮಾಣ ಮಾಡಿರುವ “ಅಡಿಕ್ಷನ್” ಎಂಬ ಕನ್ನಡ ಚಲನಚಿತ್ರವು ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಲನಚಿತ್ರ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಇದು ಮಕ್ಕಳಲ್ಲಿನ ಮೊಬೈಲ್ ಚಟದ ಕುರಿತ ಕಥೆಯಾಗಿದ್ದು, ನೈಜ ಘಟನೆಗಳನ್ನು ಆಧರಿಸಿ ಈ ಕಥೆಯನ್ನು ರಚಿಸಲಾಗಿದೆ. ಅಜಯ್ ಕುಮಾರ್ ಎ ಜೆ ರವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ನಿರ್ದೇಶಕರಿಗೆ ಎರಡನೇ ಚಿತ್ರ.
ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸುಂದರ ಕೃಷ್ಣ ಅರಸ್ ರವರ ಮೊಮ್ಮಗ, ನಾಗೇಂದ್ರ ಅರಸ್ ರವರ ಮಗ ವಿಧು ಸುಂದರಕೃಷ್ಣ ಅರಸ್ ನಟಿಸಿದ್ದಾರೆ. ಈ ಮೂಲಕ ಸುಂದರಕೃಷ್ಣ ಅರಸ್ ಅವರ ಮೂರನೇ ತಲೆಮಾರಿನ ಕುಡಿ ಸಹ ಚಿತ್ರರಂಗ ಪ್ರವೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ .. ಹಾಗೆಯೇ ಅತಿಥಿ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ “ಲವ್ ಯು ಮುದ್ದು” ಖ್ಯಾತಿಯ ಸಿದ್ದು ಮೂಲಿಮನಿಯವರು ನಟಿಸಿದ್ದಾರೆ.. ಉಳಿದಂತೆ ನಾ ನಿನ್ನ ಬಿಡಲಾರೆ ಧಾರಾವಾಹಿ ಖ್ಯಾತಿಯ ರಿಷಿಕ, ಕಾಟೇರ ಚಿತ್ರ ಹಾಗೂ ಅಣ್ಣಯ್ಯ ಧಾರಾವಾಹಿಯ ಬೇಬಿ ಅಂಕಿತ ಗೌಡ. ಮಾಸ್ಟರ್ ಆರುಷ್ ಗುಣಕಿಮಠ, ಶಾಮಸುಂದರ್, ಸುಂದರ್ ವೀಣಾ, ಹರೀಶ್ ರೈ, ಸಿತಾರಾ, ತನುಶ್ರೀ, ಅನುಪಮಾ ಪಂಚಾಕ್ಷರಿ, ಶೈಲೇಶ್, ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ನಿಮಾನ್ಸ್ ಮುಖ್ಯಸ್ಥರಾಗಿದ್ದ ಪದ್ಮಶ್ರೀ ಸಿ ಆರ್ ಚಂದ್ರಶೇಖರ್ ಅಭಿನಯಿಸಿದ್ದಾರೆ. ಒಂದು ಒಳ್ಳೆಯ ಸಂದೇಶ ನೀಡುವ ಪಾತ್ರ ಅವರದು.
ಗುಂಡ್ಲುಪೇಟೆ ಸುರೇಶ್ ರವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ರಾಯರ ಹರೀಶ್ ಮತ್ತು ನೆಲಮನೆ ರಾಘವೇಂದ್ರ ಗೀತರಚನೆ ಮಾಡಿದ್ದಾರೆ. ವ್ಯಾಸರಾಜ ಸೋಸಲೆ, ಮೊಹಮ್ಮದ್ ಸಾಬ್, ಸ್ನೇಹ ಹಾಗೂ ಅನಿತಾ ಸಾರಾ ಮಹೇಶ್, ಆದರ್ಶ್, ಮುಂತಾದವರು ಹಾಡುಗಳನ್ನು ಹಾಡಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಚಿತ್ರತಂಡ.
ನಿರ್ಮಾಪಕಿ ಬೃಂದಾ ಎನ್ ಜಯರಾಮ್ ರವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ಟೈಟಲ್ ಟೀಸರ್ ಬಿಡುಗಡೆ ಮಾಡಿದೆ. ಟೈಟಲ್ ಟೀಸರ್ ನಿರೀಕ್ಷೆಗೂ ಮೀರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಚಿತ್ರ: ಶೇರ್ ನಿರ್ದೇಶನ: ಪ್ರಸಿದ್ಧ್ ನಿರ್ಮಾಣ: ಡಾ. ಸುದರ್ಶನ್ ಸುಂದರ್ ರಾಜ್ ತಾರಾಗಣ: ಕಿರಣ್ ರಾಜ್ ಸುರೇಖಾ, ನಮ್ರತಾ, ಕ್ರಿಸ್ ತನಿಷಾ ಕುಪ್ಪಂಡ, ಬಲರಾಜ್ ವಾಡಿ, ಶೋಭರಾಜ್, ಯಶ್ ಶೆಟ್ಟಿ, ವೀಣಾ ಸುಂದರ್ ಇತರರು.
‘ಅಣ್ಣ ಇವನು ವರವ ಕೊಡೋ ಗಾಡು, ಶಾಪ ಕೊಟ್ರೆ ಸೀದಾ ಸುಡುಗಾಡು!
‘ತಮಟೆನಾ ಕಾಯಿಅನ್ನೋದು ಸೌಂಡ್ ಜಾಸ್ತಿ ನನ್ನನ್ನ ಕೆಣಕಿದಷ್ಟು ಏಟು ಜಾಸ್ತಿ…
ಮೇಲಿನ ಈ ಡೈಲಾಗ್ ಕೇಳಿದಾಕ್ಷಣ ಇದು ಪಕ್ಕಾ ಮಾಸ್ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು. ಕನ್ನಡದಲ್ಲಿ ಈಗಾಗಲೇ ಹಲವು ಮಾಫಿಯಾ ಕುರಿತು ಸಿನಿಮಾಗಳು ಬಂದು ಹೋಗಿವೆ. ಆ ಸಾಲಿಗೆ ಇದೂ ಕೂಡ ಒಂದು ಯಾವ ಮಾಫಿಯಾ ಅನ್ನುವ ಕುತೂಹಲಕ್ಕೆ ಒಮ್ಮೆ ಸಿನಿಮಾ ನೋಡಬಹುದು.
ಇಲ್ಲಿ ಗೆಳೆತನವಿದೆ, ಪ್ರೀತಿ ಇದೆ, ಒಗ್ಗಟ್ಟಿನ ಮಂತ್ರವಿದೆ, ಆಸೆ,ದುರಾಸೆ, ಅಸೂಯೆ, ದ್ವೇಷ ಎಲ್ಲವೂ ಒಳಗೊಂಡ ಮನರಂಜನೆಯ ಸಿನಿಮಾ.
ಆರಂಭದಲ್ಲಿ ಸರಾಗವಾಗಿ ಸಾಗುತ್ತೆ ಅಂದುಕೊಂಡರೆ ಆ ಊಹೆ ತಪ್ಪು. ಅಲ್ಲಲ್ಲಿ ಮಂದಗತಿ ಅನಿಸುತ್ತೆ. ಕೆಲವು ಕಡೆ ಕಂಟಿನ್ಯುಟಿ ಮಿಸ್ ಅನಿಸುತ್ತೆ. ಕೆಲ ಅನಗತ್ಯ ದೃಶ್ಯಗಳು ಬೇಕಿತ್ತಾ ಎಂಬ ಪ್ರಶ್ನೆ ಎದುರಾಗುತ್ತೆ. ಆದರೂ ಸಿನಿಮಾದ ಹಾಡು ಎದುರಾಗಿ ಸಣ್ಣಪುಟ್ಟ ಮಿಸ್ಟೇಕ್ ಗಳನ್ನು ಮರೆಮಾಚಿಸುತ್ತೆ.
ದ್ವಿತಿಯಾರ್ಧದಲ್ಲಿ ಒಂದು ಟ್ವಿಸ್ಟ್ ಇದೆ. ಹಾಗಂತ ಅದು ದೊಡ್ಡದ್ದೇನಲ್ಲ. ಒಂದು ಮಾಫಿಯಾ ಕತೆ ಹೇಳೋಕೆ ಅಷ್ಟೊಂದು ಹರಸಾಹಸ ಪಟ್ಟಿದ್ದಾರೆ ನಿರ್ದೇಶಕರು.
ಕಥೆ ಸರಳವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ಮಾಫಿಯಾ ಕಥೆಯಲ್ಲಿ ಎಲ್ಲವೂ ಮಿಕ್ಸ್ ಆಗಿದೆ. ಹಾಗಾಗಿ ಒಂದೇ ನೋಟಕ್ಕೆ ನೋಡಿಸಿಕೊಂಡು ಹೋಗುವ ತಾಕತಗತು ಕಮ್ಮಿ.
ಕಥೆ ಏನು? ನಾಯಕ ಶಿವು (ಕಿರಣ್ ರಾಜ್) ಅನಾಥ. ಅವರ ಜೊತೆ ಅನಾಥರಾಗಿರುವ ನಾಲ್ಕೈದು ಗೆಳೆಯರು. ಅವರೆಲ್ಲರಿಗೂ ಒಂದು ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಕೊಟ್ಟು ಸಲಹುವ ಬಲರಾಜವಾಡಿ. ಮಾರ್ಕೆಟ್ ಸುತ್ತವೇ ನಡೆಯೋ ಕಥೆಯಲ್ಲಿ ಒಂದಷ್ಟು ಸಾಲು ಸಾಲು ಮರ್ಡರ್ ಆಗುತ್ತವೆ. ಆ ಮರ್ಡರ್ ಮಾಡಿದ್ದು ಯಾರು? ಯಾಕಾಗಿ ಆಗುತ್ತವೆ ಅನ್ನೋದು ಸಸ್ಪೆನ್ಸ್. ಮುಂದೇನಾಗುತ್ತೆ ಎಂಬ ಕುತೂಹಲ ಇದ್ದರೆ ಸಿನಿಮಾ ನೋಡಬಹುದು.
ಯಾರು ಹೇಗೆ?
ಕಿರಣ್ ರಾಜ್ ಸಿಕ್ಕ ಪಾತ್ರಕ್ಕೆ ಜೈ ಎಂದಿದ್ದಾರೆ. ಆದರೆ, ಅವರಿಗೆ ಆ ಕೂಲಿ ಪಾತ್ರ ಒಗ್ಗಿಲ್ಲ. ತೆರೆ ಮೇಲೆ ಕೂಲಿ ಅಂತ ಕಾಣಿಸಿಕೊಳ್ಳೋದು ಇಲ್ಲ. ಫೈಟು, ಡ್ಯಾನ್ಸು ಓಕೆ, ಡೈಲಾಗ್ ಬಿಡುವಾಗ ಸ್ವಲ್ಪ ಧ್ವನಿ ಜೋರಾಗಿರಬೇಕಿತ್ತು ಅನಿಸುತ್ತೆ. ಇನ್ನು ಸಿನಿಮಾದಲ್ಲಿ ಕಾಡುವ ಹಾಗು ಹೈಲೆಟ್ ಪಾತ್ರ ಅಂದರೆ ಅದು ಸೈಕೋ ಆಗಿ ಕಾಣಿಸಿಕೊಂಡಿರುವ ಗಿಲ್ಲಿ (ಕ್ರಿಸ್) ಪಾತ್ರ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಕ್ರಿಸ್ ಕಾಡುತ್ತಾರೆ. ಹೀಗೆ ಮುಂದೆ ಒಳ್ಳೆಯ ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಇದೆ. ಉಳಿದಂತೆ ಬಲರಾಜವಾಡಿ, ಶೋಭರಾಜ್ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ. ತನಿಷಾ ಕುಪ್ಪಂಡ ಖಡಕ್ ಪೊಲೀಸ್ ಅಧಿಕಾರಿಯಾಗಿ ಪರವಾಗಿಲ್ಲ. ಯಶ್ ಶೆಟ್ಟಿ ಕೊನೆಯಲ್ಲಿ ಆರ್ಭಟಿಸಿದ್ದಾರೆ. ಸುರೇಖಾ, ನಮ್ರತಾ ಹಾಗು ಇತರರು ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ.
ಗುಮ್ಮಿನೇನಿ ವಿಜಯ್ ಸಂಗೀತ ದಲ್ಲಿ ಅರೇ ಇದೇ ಮೊದಲು ಮನದಲ್ಲಿ ಬೆಳದಿಂಗಳು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕೆ ಇಮ್ನಷ್ಟು ಧಮ್ ಬೇಕಿತ್ತು. ವಿನೋದ್ ಸಾಹಸ ಕ್ಕೆ ಒಳ್ಳೆಯ ಮಾರ್ಕ್ಸ್ ಕೊಡಬಹುದು. ಕಿಟ್ಟಿ ಕೌಶಿಕ್ ಅವರ ಕ್ಯಾಮರದಲ್ಲಿ ಶೇರ್ ಆರ್ಭಟದ ಸೊಗಸಿದೆ.
‘ಕಂಪ್ಲೇಂಟ್ ಕೊಡೋಕೆ ಬಂದಿದೀನಿ. ಬರ್ಕೋ, ತಲೆ ಸಿಕ್ಕಿದೆ ಬಾಡಿ ಸಿಕ್ಕಿಲ್ಲ…’
ಕತ್ತರಿಸಿದ ತಲೆ ಹಿಡಿದು ಪೊಲೀಸ್ ಸ್ಟೇಷನ್ ಗೆ ಬರುವ ಅ ರೌಡಿ ಈ ಡೈಲಾಗ್ ಹೇಳ್ತಾನೆ. ಅಲ್ಲಿಗೆ ಇದೊಂದು ರೌಡಿಸಂ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ನಿರ್ದೇಶಕ ಪ್ರೇಮ್ ಈ ಬಾರಿ ರೌಡಿಸಂ ಕತೆಯಲ್ಲಿ ಒಂದಷ್ಟು ಹೊಸ ವಿಷಯ ಹೇಳಿದ್ದಾರೆ. ತುಸು ಹೊಸತನ ಕಟ್ಟಿಕೊಟ್ಟಿದ್ದಾರೆ. ಹಾಗಂತ ಇಲ್ಲೂ ಮತ್ತದೇ ತಾಯಿ ಸೆಂಟಿಮೆಂಟ್ ಇಟ್ಟಿದ್ದಾರೆಯೇ? ಈ ಪ್ರಶ್ನೆಗೆ ಉತ್ತರ ಒಮ್ಮೆ ಸಿನಿಮಾ ನೋಡಬೇಕು.
ತಾಯಿಗಾಗಿ ಮಚ್ಚು ಹಿಡಿಯೋ ಹೀರೋ ಕಥೆಯನ್ನ ಸೃಷ್ಟಿ ಮಾಡಿದ್ದ ಪ್ರೇಮ್, ಇಲ್ಲಿ ತನ್ನ ಹುಡುಗಿಗಾಗಿ, ತನ್ನ ಕುಟುಂಬದವರಿಗಾಗಿ ಮಚ್ಚು ಹಿಡಿದು ರುಂಡ-ಮುಂಡ ಚೆಂಡಾಡುವ ಹೀರೋ ಕಥೆ ಹೆಣೆದು ಬಂದಿದ್ದಾರೆ. ಹಾಗಂತ ಇಡೀ ಸಿನಿಮಾ ನಿಮಗೆ ರುಚಿಸಲ್ಲ. ಅಲ್ಲಲ್ಲಿ ಹೂರಣ ಸಿಗುತ್ತಷ್ಟೇ. ಇನ್ನಷ್ಟು ಬಿಗಿಯಾದ ನಿರೂಪಣೆ ಬೇಕಿತ್ತು. ಆದರೂ ಮನರಂಜನೆಗೆ ಏನೆಲ್ಲಾ ಬೇಕೋ ಅದನ್ನಿಟ್ಟಿದ್ದಾರೆ. ಹಾಗಾಗಿ ಅವರು ನೋಡೋರ ದೃಷ್ಟಿಯಲ್ಲಿ ಕೆಡಿಯಾಗಿ ಕಾಣಲ್ಲ!
ಇಲ್ಲಿ ಎಲ್ಲರೂ ಮಚ್ಚು ಹಿಡಿಯುತ್ತಾರೆ. ಹಾಗಾಗಿ ಎಲ್ಲರೂ ರೌಡಿಗಳಾಗುತ್ತಾರೆ. ಇಡೀ ಸಿನಿಮಾದುದ್ದಕ್ಕೂ ರಕ್ತದ ಕೋಡಿ. ಗಲ್ಲಿ ಗಲ್ಲಿಯಲ್ಲೂ ಹೆಣಗಳ ರಾಶಿ. ಹೊಡಿ ಬಡಿ ಕಡಿ ನಡುವೆ ಅಲ್ಲಲ್ಲಿ ‘ಕಾಮಿಡಿ’. ಆದರೆ, ಕರೆಕ್ಟ್ ಆಗಿ ಸಿನಿಮಾ ಗಮನಿಸಿದರೆ ನೋಡುಗರಿಗೆ ‘ಕಾಮಿಡಿ’ ಶೋ ಅನಿಸುತ್ತದೆ. ಇಲ್ಲಿ ಲಾಜಿಕ್ ಹುಡುಕುವಂತಿಲ್ಲ. ಎಲ್ಲವೂ ಪ್ರೇಮ್ ಮ್ಯಾಜಿಕ್ ಅಷ್ಟೇ. ಹಿಂದೆ ಅವರು ಮಾಡಿದ್ದ ಮ್ಯಾಜಿಕ್ ನೋಡಿದ್ದರಿಂದ ಎಕ್ಸೈಟ್ಮೆಂಟ್ ಆಗುವಂಥದ್ದೇನಿಲ್ಲ.
ಇಡೀ ಸಿನಿಮಾ ರೆಟ್ರೋ ಫೀಲ್ ನಲ್ಲಿ ಸಾಗುತ್ತೆ. ಹಾಗಂತ ಆ ಫೀಲ್ ಸಿಗುತ್ತಾ? ನೋಡಿದಾಗ ಫೀಲ್ ಬಗ್ಗೆ ಮಾತಾಡಬಹುದು.
ಸಿನಿಮಾದ ಕಥೆ ಸರಳವಾಗಿದೆ. ಕಟ್ಟಿಕೊಟ್ಟಿರುವ ರೀತಿ ಸಿನಿಮಾವನ್ನು ಶ್ರೀಮಂತವಾಗಿಸಿದೆ. ಚಿತ್ರದ ಹೈಲೆಟ್ ಅಂದರೆ ಕಲಾ ನಿರ್ದೇಶನ. 1980 ರ ಕಾಲಘಟ್ಟದ ಫೀಲ್ ಕಟ್ಟಿಕೊಟ್ಟಿರುವುದು ಚಿತ್ರ ಕೊಂಚ ವಿಶೇಷ ಅನಿಸುತ್ತೆ. ದೊಡ್ಡದ್ದಾಗಿ ಬಜೆಟ್ ಇರುವುದರಿಂದ ಮೇಕಿಂಗ್ ಹಬ್ಬದಂತಿದೆ. ಇನ್ನಷ್ಟು ಅಂದಗಾಣಿಸುವ ಅವಕಾಶ ಇತ್ತು. ಆದರೂ ಕನ್ನಡಕ್ಕಿಷ್ಟು ಸಾಕು. ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾನ ಅಂತ ನೋಡುಗರೇ ಉತ್ತರಿಸಬೇಕು.
ಚಿತ್ರಕಥೆಯಲ್ಲಿ ಇನ್ನಷ್ಟು ಚುರುಕುತನ ಇರಬೇಕಿತ್ತು. ಮೊದ ಲರ್ಧ ಏನಾಗುತ್ತೆ ಅಂತ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ದ್ವಿತಿಯಾರ್ಧ ಬರುತ್ತೆ. ಮೊದಲರ್ಧದ ಕಥೆಗೆ ದ್ವಿತಿಯಾರ್ಧ ಪೂರಕ. ಕ್ಲೈಮ್ಯಾಕ್ಸ್ ಚಿತ್ರದ ಸ್ಪೆಷಲ್ ಅನ್ನಬಹುದು. ಹಾಗಂತ ಅದ್ಭುತ ಕ್ಲೈಮ್ಯಾಕ್ಸ್ ಅಲ್ಲದಿದ್ದರೂ ಕೊನೆಯಲ್ಲಿ ಇಟ್ಟಿರುವ ಟ್ವಿಸ್ಟ್ ಸ್ವಲ್ಪ ಹುಬ್ಬೇರಿಸುವಂತೆ ಮಾಡುತ್ತೆ. ಕತ್ತರಿ ಪ್ರಯೋಗ ಸಿನಿಮಾದ ವೇಗಕ್ಕೆ ಸಾಕ್ಷಿಯಾಗಿದೆ. ಎಲ್ಲೋ ಒಂದು ಕಡೆ ಟ್ರ್ಯಾಕ್ ನಿಧಾನ ಅನಿಸುತ್ತಿದ್ದಂತೆ ಹಾಡುಗಳು ಕಾಣಿಸಿಕೊಂಡು ಮನರಂಜಿಸುತ್ತವೆ. ಆಗಾಗ ಬರುವ ದೃಶ್ಯಗಳು, ಡೈಲಾಗ್ ಗಳು ನೋಡುಗರನ್ನು ಖುಷಿಗೊಳಿಸುತ್ತವೆ. ಒಂದು ರೌಡಿಸಂ ಕಥೆಯಲ್ಲಿ ಪ್ರೀತಿ, ಒಂದು ಸುಂದರ ಫ್ಯಾಮಿಲಿ, ಪಟ ಪಟ ಮಾತು, ಡ್ಯಾನ್ಸು, ಫೈಟು, ಲಾಂಗು, ಮಚ್ಚು ಇತ್ಯಾದಿ ತುಂಬಿವೆ. ಅಲ್ಲಲ್ಲಿ ಭಾವನಾತ್ಮಕ ಅಂಶಗಳಿವೆ ಅನ್ನೋದು ಬಿಟ್ಟರೆ ಬೇರೆ ನಿರೀಕ್ಷಿಸುವಂತಿಲ್ಲ.
ಕಥೆ ಏನು?
ಅವನು ದೇವ (ಸಂಜಯ್ ದತ್) ದೊಡ್ಡ ರೌಡಿ. ಗರಡಿ ಮನೆಯ ಹಳೇ ಕುಸ್ತಿ ಪಟು. ಚಿಕ್ಕಂದಿನಿಂದ ದೇವನನ್ನು ನೋಡಿಕೊಂಡು ಬೆಳೆದ ಕಾಳಿದಾಸ (ಧ್ರುವ ಸರ್ಜಾ) ಹಾಲು ಹಾಗು ಸೀಮೆಎಣ್ಣೆ ವ್ಯಾಪಾರಿ. ಕಾಳಿದಾಸನಿಗೆ ಒಂದು ಸುಂದರ ಕುಟುಂಬ ಅಣ್ಣ ರಮೇಶ್ ಅರವಿಂದ್ ಆತ ಮೇಷ್ಟ್ರು. ಓದದ ಕಾಳಿದಾಸನಿಗೆ ಅಣ್ಣ ಅಂದ್ರೆ ಭಯ. ಭಯಂಕರ ರೌಡಿ ದೇವ ಅಂದ್ರೆ ಅಷ್ಟೇ ಪ್ರೀತಿ ಗೌರವ. ಅತ್ತ ಅಣ್ಣಯ್ಯಪ್ಪ (ರವಿಚಂದ್ರನ್) ಮೇಷ್ಟ್ರು ಗೆಳೆಯ. ಎಂಎಲ್ಎ ಆಗೋ ಕನಸು. ಅವನ ವಿರುದ್ಧ ದೇವ ಚುನಾವಣೆಗೆ ನಿಲ್ತಾನೆ. ಈ ಮಧ್ಯೆ ಗಂಡುಬೀರಿಯಂತಿರುವ ಮಚ್ ಲಕ್ಷ್ಮೀ (ರೀಷ್ಮಾ ) ಅಂದ್ರೆ ಕಾಳಿದಾಸನಿಗೆ ಪ್ರೀತಿ. ಆ ಪ್ರೀತಿ ಹುಡುಗಿ ಮೇಲೆ ದೇವನ ಬಂಟಕವಿ ( ಯಶ್ ಶೆಟ್ಟಿ) ಕಣ್ಣು. ಅಲ್ಲಿಗೆ ಮಾರಾಮಾರಿ. ಯಾರು ಯಾರನ್ನ ಹೇಗೆ ಹೊಡಿತಾರೆ. ಯಾರು ಯಾರ ತಲೆ ತೆಗಿತಾರೆ ಅನ್ನೋದು ಕಥೆ. ಮುಂದೇನಾಗುತ್ತೆ ಅನ್ನೋಕು ಕುತೂಹಲ ಇದ್ದರೆ ಸಿನಿಮಾ ನೋಡಿ.
ಇಲ್ಲೊಂದು ಟ್ವಿಸ್ಟ್ ಇದೆ. ಕಾಳಿದಾಸ ಕೆಡಿ ಆಗ್ತಾನೆ. ರೌಡಿಗಳ ರುಂಡ ಚೆಂಡಾಡುತ್ತಾನೆ. ಕಾಳಿದಾಸನ ತಲೆ ಕಡಿದು ತಂದವರಿಗೆ ದೇವನ ಸಾಮ್ರಾಜ್ಯ ಕೊಡುವ ಭರವಸೆ. ಅಲ್ಲೊಂದು ಟ್ವಿಸ್ಟ್ ಇದೆ.ಅದೇ ಸಿನಿಮಾದ ಹೈಲೆಟ್. ಕಾಳಿದಾಸನ ತಲೆ ಕಡಿಯಲು ಹೊರಡುವ ರೌಡಿಗಳಿಗೆ ಕಾಲಭೈರವನ (ಸುದೀಪ್) ದರ್ಶನ ಆಗುತ್ತೆ. ಅಲ್ಲೇನಾಗುತ್ತೆ ಅನ್ನೋದು ಸಸ್ಪೆನ್ಸ್.
ಯಾರು ಹೇಗೆ?
ಧ್ರುವ ಸರ್ಜಾ ಎಂದಿಗಿಂತ ಎನರ್ಜಿ ತುಂಬಿಕೊಂಡು ನಟಿಸಿದ್ದಾರೆ. ಪಾತ್ರದ ಮೂಲಕ ಇಷ್ಟ ಆಗ್ತಾರೆ. ಕಾಮಿಡಿ, ಡೈಲಾಗು, ಫೈಟು, ಡ್ಯಾನ್ಸು ಎಲ್ಲದರಲ್ಲೂ ಸೈ. ಸಂಜಯ್ ದತ್ ದೇವ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ನಾಯಕ್ ನಹೀ ಖಳ್ ನಾಯಕ್ ಹು ಮೈ ಅಂತ ಮತ್ತೆ ಸಾಬೀತುಪಡಿಸಿದ್ದಾರೆ. ರವಿಚಂದ್ರನ್ ಇರುವಷ್ಟು ಕಾಲ ರೆಟ್ರೋ ಸ್ಟೈಲ್ ನಲ್ಲಿ ಚೆನ್ನಾಗ್ ಕಾಣ್ತಾರೆ. ರಮೇಶ್ ಅರವಿಂದ್ ಖಡಕ್ ಮೇಷ್ಟ್ರು ಆಗಿ ಇಷ್ಟ ಆಗ್ತಾರೆ. ಹೀಗೂ ಮಾಡಬಲ್ಲೆ ಅನ್ನೋದನ್ನು ತೋರಿಸಿದ್ದಾರೆ. ಶಿಲ್ಪಾಶೆಟ್ಟಿ ಗ್ಲಾಮರ್ ಇನ್ನೂ ಮಾಸಿಲ್ಲ. ಸತ್ಯ ಪಾತ್ರದಲ್ಲಿ ಖಡಕ್ ಹೆಣ್ಣಾಗಿ ಗಮನಸೆಳೆಯುತ್ತಾರೆ. ಇನ್ನು ರೀಷ್ಮಾ ಗಂಡುಬೀರಿಯಾಗಿ ಇಷ್ಟ ಆಗುತ್ತಾರೆ. ಉಳಿದಂತೆ ರವಿಶಂಕರ್, ಮುನಿ, ಯಶ್ ಶೆಟ್ಟಿ , ದೊಡ್ಡಣ್ಣ ಎಲ್ಲರೂ ಗಮನ ಸೆಳೆಯುತ್ತಾರೆ. ಕೊನೆಯಲ್ಲಿ ಸುದೀಪ್ ಬಂದು ಶಿಳ್ಳೆ, ಚಪ್ಪಾಳೆಗೆ ಕಾರಣ ಆಗ್ತಾರಷ್ಟೇ. ಅರ್ಜುನ್ ಜನ್ಯ ಸಂಗೀತದಲ್ಲಿ ಇವನ್ಯಾರೋ ಹಾಗು ಸೆಟ್ ಆಗಲ್ಲ ನಂಗು ನಿಂಗು ಹಾಡುಗಳು ಗುನುಗುವಂತಿವೆ. ವಿಲಿಯಮ್ ಡೇವಿಡ್ ಕ್ಯಾಮರಾ ಕೈಚಳಕದಲ್ಲಿ ಕಾಳಿದಾಸನ ಸೊಬಗಿದೆ.
ಕೆವಿಎನ್-ಪವನ್ ಒಡೆಯರ್-ಶಿವಣ್ಣ ಕಾಂಬಿನೇಷನ್ ಸಿನಿಮಾ ಹೆಸರು ಬೇಲ್
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ನಿರ್ದೇಶಕ ಪವನ್ ಒಡೆಯರ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಬಹು ನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ನ್ನು ಇಂದು ಅಣ್ಣಾವ್ರ ಜನ್ಮೋತ್ಸವದ ಅಂಗವಾಗಿ ಅನಾವರಣ ಮಾಡಲಾಗಿದೆ.
ವೆಂಕಟ್ ಕೆ ನಾರಾಯಣ್, ಶಿವಣ್ಣ ಹಾಗೂ ಪವನ್ ಒಡೆಯರ್ ಕಾಂಬೋದ ಈ ಸಿನಿಮಾಗೆ ಬೇಲ್ ಎಂಬ ಟೈಟಲ್ ಇಡಲಾಗಿದೆ. ಮಳೆಯಲ್ಲಿ ಛತ್ರಿ ಹಿಡಿದು ಶಿವಣ್ಣ ನಿಂತಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.
ಈ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ನ್ನು ವೆಂಕಟ್ ಕೆ ನಾರಾಯಣ್ ಅವರು ತಮ್ಮದೇ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ರೇಮೋ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಪವನ್ ಶಿವಣ್ಣಗೆ ಆಕ್ಷನ್ ಕಟ್ ಹೇಳಬೇಕೆಂಬ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಪವನ್ ಒಡೆಯರ್, “ಇದು ನನಗೂ ಮತ್ತು ನಿರ್ಮಾಣ ಸಂಸ್ಥೆಗೂ ಅತ್ಯಂತ ವಿಶೇಷವಾದ ಸಿನಿಮಾವಾಗಲಿದೆ. ನಿಮಗಾಗಿ ನಾವು ಬಹಳಷ್ಟು ಕಾಯ್ದಿರಿಸಿದ್ದೇವೆ ಮತ್ತು ಶೀಘ್ರದಲ್ಲೇ ಟೀಸರ್ ಅನ್ನು ಘೋಷಿಸುತ್ತೇವೆ. ಶಿವಣ್ಣ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸು ನನಸಾಗಿದೆ. ಅವರು ದಶಕಗಳಿಂದ ಐಕಾನ್ ಆಗಿದ್ದಾರೆ ಮತ್ತು ಹಿಂದೆಂದೂ ಮಾಡದ ರೀತಿಯಲ್ಲಿ ಅವರನ್ನು ಪ್ರಸ್ತುತಪಡಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ” ಎಂದರು.
‘ಬೇಲ್’ ನಮಗೆ ಬಹಳ ವಿಶೇಷವಾದ ಯೋಜನೆಯಾಗಿದ್ದು, ಇದು ಬಲವಾದ ಕಥೆ ಹೇಳುವಿಕೆಯನ್ನು ವಿಶಿಷ್ಟ ಸಿನಿಮೀಯ ದೃಷ್ಟಿಕೋನದೊಂದಿಗೆ ಸಮತೋಲನಗೊಳಿಸುತ್ತದೆ. ಪವನ್ ಒಡೆಯರ್ ಅವರಂತಹ ಸಾಬೀತಾದ ಕಥೆಗಾರರೊಂದಿಗೆ ಕೈ ಜೋಡಿಸುವುದು ಮತ್ತು ಶಿವಣ್ಣ ಅವರಂತಹ ಐಕಾನ್ ಜೊತೆಗೆ ಕೆಲಸ ಮಾಡುವುದು ಸಂಪೂರ್ಣ ಗೌರವವಾಗಿದೆ ಮತ್ತು ಅರ್ಥಪೂರ್ಣ ಸಿನಿಮಾವನ್ನು ನೀಡುವ ನಮ್ಮ ಉದ್ದೇಶದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಪ್ರೇಕ್ಷಕರು ಇಲ್ಲಿಯವರೆಗೆ ನೋಡಿರದ ಹೊಸ ದೃಷ್ಟಿಕೋನದಲ್ಲಿ ಶಿವಣ್ಣ ಅವರನ್ನು ಪ್ರಸ್ತುತಪಡಿಸಲು ನಾವು ವಿಶೇಷವಾಗಿ ಎದುರು ನೋಡುತ್ತಿದ್ದೇವೆ’ ವೆಂಕಟ್ ಕೆ ಕೊನಂಕಿ ಹೇಳಿದ್ದಾರೆ.
ನಟ ರಾಕ್ಷಸ ಡಾಲಿ ಧನಂಜಯ್ ನಟಿಸುತ್ತಿರುವ ‘ಅಣ್ಣ from Mexico’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಟೀಸರ್ ಬಿಡುಗಡೆಗೊಳಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಟೀಸರ್ ಥ್ರಿಲ್ಲಿಂಗ್ ಆಗಿದೆ. ಹೊಸತನದಿಂದ ಕೂಡಿದೆ. ಶ್ರೀಮಂತಿಕೆಯಿಂದ ಕಾಣಿಸುತ್ತಿದೆ. ಧನಂಜಯ್ ಆಕ್ಟಿಂಗ್ ಸೂಪರ್. ಅದ್ರಲ್ಲೂ ಕರ್ನಾಟಕ ಲಾಕೆಟ್ ಬಹಳಷ್ಟು ಇಷ್ಟವಾಯ್ತು. ಮನಸ್ಸಿಗೆ ಸಮಾಧಾನವಾಯ್ತು. ಟೀಸರ್ ನೋಡಿದರೆ ಸಿನಿಮಾ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಹೆಚ್ಚಿಸುತ್ತದೆ.
ನಾವು ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕಿಳಿದಿದ್ದೇವೆ. ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಈ ಚಿತ್ರದ ಕಥೆ ಕೇಳಿದೆವು ಇಷ್ಟವಾಯ್ತು. ಚಿತ್ರದಲ್ಲಿ ಒಂದೊಳ್ಳೆ ಪ್ರಯೋಗ ಮಾಡುವ ಉದ್ದೇಶದಿಂದ ಚಾಮುಂಡಿ ಆಶೀರ್ವಾದ ಪಡೆದು ಈ ಜರ್ನಿ ಶುರು ಮಾಡಿದೆವು ಎಂದರು.
ಡಾಲಿ ಧನಂಜಯ್ ಮಾತನಾಡಿ, ಈ ಸಿನಿಮಾ ಶುರುವಾದ ಪ್ರೊಸೆಸ್ ನನಗೆ ಬಹಳ ಖುಷಿ. ಹೊಯ್ಸಳ ಸಿನಿಮಾ ಬೆಳಗಾವಿಯಲ್ಲಿ ನಡೆಯುವಾಗ ಲಕ್ಷ್ಮೀ ಮೇಡಂ ಮನೆಗೆ ಹೋಗಿ ಊಟ ಮಾಡ್ಕೊಂಡು ಬರುವಾಗ ನಮ್ಮ ಬ್ರದರ್ ಗೆ ಸಿನಿಮಾ ಮಾಡುವ ಇಂಟ್ರೆಸ್ಟ್ ಇದೆ. ಏನು ಮಾಡಬಹುದು ನೋಡಿ ಎಂದಿದ್ದರು. ಆ ಬಳಿಕ ಈ ಜರ್ನಿ ಶುರುವಾಯ್ತು. ಚೆನ್ನಾರಾಜು ಅವರು ಪ್ರೊಡಕ್ಷನ್ ಮಾಡಿದ್ದಾರೆ ಎಂಬುವುದು ಗೊತ್ತಾಯ್ತು. ಅವರಿಗೆ ಸಖತ್ ಸ್ಟೈಲೀಶ್ ಆಗಿ, ಆಕ್ಷನ್ ಈ ರೀತಿ ನನ್ನನ್ನು ತೋರಿಸಬೇಕು ಎಂದುಕೊಂಡಿದ್ದರು. ಆದರೆ ಮೇಡಂ ಬರ್ತಾರೆ ಎಂದಾಗ ಆಕ್ಷನ್. ಮಾತ್ರವಲ್ಲ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಇರಬೇಕು ಎಂದುಕೊಂಡೆವು. ಯಾಕೆಂದರೆ ಅವರು ಜವಾಬ್ದಾರಿಯುವ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ನಾವು ಬಡವ ರಾಸ್ಕಲ್ ಡೈರೆಕ್ಟರ್ ಅವರನ್ನು ಆಯ್ಕೆ ಮಾಡಿದೆವು. ಹೀಗೆ ಒಳ್ಳೆ ಟೀಂ ಆಯ್ತು ಎಂದರು.
ಚಿತ್ರಕ್ಕೆ ನಿರ್ದೇಶಕ ಶಂಕರ್ ಗುರು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದು, ಸಿನಿಮಾದಲ್ಲಿದ್ದ ರಂಗಾಯಣ ರಘು, ನಾಗಭೂಷಣ, ಪೂರ್ಣ ಮೈಸೂರು ಈ ಚಿತ್ರದ ಮುಖ್ಯ ತಾರಾಗಣದಲ್ಲಿದ್ದು, ವಾಸುಕಿ ವೈಭವ್ ಸಂಗೀತ, ಅಜಯ್ ಸಂಕಲನ , ಗುಣ ಕಲಾ ನಿರ್ದೇಶನ ಚಿತ್ರಕ್ಕಿದೆ. ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದೆ.
ಈ ಹಿಂದೆ ಬಡವ ರಾಸ್ಕಲ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಅದೇ ತಂಡ ‘ಅಣ್ಣ from Mexico’ಗಾಗಿ ಒಂದಾಗಿದೆ. ಬಹಳ ಅದ್ದೂರಿಯಾಗಿ ಚಿತ್ರವನ್ನು ಕಟ್ಟಿಕೊಡುತ್ತಿದೆ.
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ, ಚಿತ್ರದ ನಾಯಕ ಡಾಲಿ ಧನಂಜಯ್, ನಟಿ ರೀಷ್ಮಾ ನಾಣಯ್ಯ, ಚಿತ್ರದ ನಿರ್ದೇಶಕರಾದ ಶಂಕರ್ ಗುರು, ಸಹ ನಿರ್ಮಾಪಕರಾದ ಸತ್ಯ ರಾಯಲ, Z studiosನ ದಿವ್ಯಾ, ಆನಂದ್ ಆಡಿಯೋದ ಶ್ಯಾಮ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ದಿಗಂತ್ ಅಭಿನಯದ “ರುದ್ರ ಕಾಲ” ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಬೆಳಗ್ಗಿನ ಸುಮುಹೂರ್ತದಲ್ಲಿ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ದೇಶಕ ರಾಜ್ ಗುರು ಕ್ಯಾಮೆರಾ ಚಾಲನೆ ಮಾಡಿದರು.
ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಗೋಪಿ, ನಾನು ತೆಲುಗಿನಲ್ಲಿ ಎರಡು, ಕನ್ನಡದಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿದ್ದೇನೆ. “ರುದ್ರ ಕಾಲ” ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಈ ಚಿತ್ರ ಕೂಡ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇದು ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಎಮೋಷನ್ ಕಥಾಹಂದರ ಹೊಂದಿರುವ ಚಿತ್ರ.
ಇತ್ತೀಚೆಗೆ ಖ್ಯಾತ ನಟಿ ಸಮಂತ ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟಿದ್ದರು. ನನ್ನ ಸಹೋದರ ರಮೇಶ್ ಅವರೆ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದಿಗಂತ್ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಅಧ್ಯಕ್ಷ” ಚಿತ್ರದ ನಾಯಕಿ ಹೆಬಾ ಪಟೇಲ್ ಬಹಳ ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ವಂಶಿ, ನಟ ಗೋವಿಂದೇ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ, ರುದ್ರ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಚನ್ನಯ್ಯ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರವನ್ನು ರಮೇಶ್ ನಾಯ್ಕ ಅವರು ನಿರ್ಮಿಸುತ್ತಿದ್ದಾರೆ. ರಂಜಿತ ನವೀನ್ ಸಹ ನಿರ್ಮಾಪಕರು. ಮೇ ತಿಂಗಳಲ್ಲಿ ಬೆಂಗಳೂರಿನಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಚಾಲನೆ ನೀಡಿದ ಯೋಗರಾಜ್ ಭಟ್ ಹಾಗೂ ರಾಜ್ ಗುರು ಅವರಿಗೆ ಧನ್ಯವಾದ ಎಂದರು.
ನಾನು ಕಳೆದವರ್ಷ ಎರಡು ಹೊಸಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಆದರೆ ಚಿತ್ರರಂಗದ ಈಗಿನ ಪರಿಸ್ಥಿತಿ ನೋಡಿ ಅವರು ಇನ್ನೂ ಚಿತ್ರ ಆರಂಭ ಮಾಡಿಲ್ಲ. ಆದರೆ ಈ ಚಿತ್ರದ ನಿರ್ಮಾಪಕ ರಮೇಶ್ ನಾಯ್ಕ ಅವರು “ರುದ್ರ ಕಾಲ” ಚಿತ್ರವನ್ನು ಆರಂಭ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ರಮೇಶ್ ಅವರು ಒಳ್ಳೆಯ ಕಥೆ ಬರೆದಿದ್ದಾರೆ.
ನಿರ್ದೇಶಕ ಗೋಪಿ ಅವರು ಕಥೆ ಹೇಳುವಾಗಲೇ ನನಗೆ ಕಥೆ ಬಹಳ ಇಷ್ಟವಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಯೋಗರಾಜ್ ಭಟ್ ಅವರು ಬಂದು ಚಿತ್ರಕ್ಕೆ ಚಾಲನೆ ನೀಡಿದ್ದು ಬಹಳ ಖುಷಿಯಾಗಿದೆ ಎಂದು ನಾಯಕ ದಿಗಂತ್ ತಿಳಿಸಿದರು.
“ಅಧ್ಯಕ್ಷ” ನಂತರ ಹತ್ತು ವರ್ಷಗಳ ಬಳಿಕ ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಆ ಚಿತ್ರಕ್ಕೆ ಕನ್ನಡಿಗರು ತೋರಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಾಯಕಿ ಹೆಬಾ ಪಟೇಲ್. ನಿರ್ದೇಶಕ ಗೋಪಿ ಅವರು ಹೇಳಿದ ಕಥೆ ಇಷ್ಟವಾಯಿತು. ದಿಗಂತ್ ಅವರೆ ಈ ಚಿತ್ರಕ್ಕೆ ಸೂಕ್ತ ನಾಯಕ ಎನಿಸಿತು. ಇಂದು ನಮ್ಮ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಆಗಮಿಸಿದ ಗಣ್ಯರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ನಾಯ್ಕ. ಸಹ ನಿರ್ಮಾಪಕಿ ರಂಜಿತ ನವೀನ್ ಮಾತನಾಡಿ, ನಮ್ಮ ಹೊಸಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಕಥೆಯ ಬಗ್ಗೆ ರಮೇಶ್ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಶಿವರಾಜ್, ನಟಿ ವಂಶಿ, ನಟ ಗೋವಿಂದೇಗೌಡ, ಛಾಯಾಗ್ರಾಹಕ ಕ್ರಿಸ್ಟೋಫರ್ ಜೋಸೆಫ್, ಸಾಹಸ ನಿರ್ದೇಶಕ ಚನ್ನಯ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವೆಬ್ ಸೀರಿಸ್: ಜೆರಾಕ್ಸ್ ನಿರ್ದೇಶನ: ಶ್ರೀನಿಧಿ ಬೆಂಗಳೂರು ನಿರ್ಮಾಣ: ಡಾಲಿ ಪಿಕ್ಚರ್ಸ್ ತಾರಾಗಣ: ನಾಗಭೂಷಣ್, ಪಾಯಲ್, ಓಂ ಪ್ರಕಾಶ್ ರಾವ್, ಮಂಜು ಪಾವಗಡ, ವಿಜಯ ಪ್ರಸಾದ್, ಉಷಾ ಭಂಡಾರಿ, ಸುಧಾಕರ್, ಜಗ್ಗಪ್ಪ ಇತರರು.
ಇದು ಭ್ರಮೇನಾ…? ಆ ಜೆರಾಕ್ಸ್ ಅಂಗಡಿ ಪ್ರಕಾಶನಿಗೆ ಇಂಥದ್ದೊಂದು ಪ್ರಶ್ನೆ ಎದುರಾಗೋಕೆ ಕಾರಣ ಆ ಜೆರಾಕ್ಸ್ ಮೆಷಿನ್ ಮಾಡುವ ಪವಾಡ!
ಹೌದು, ಜೀ5 ಒರಿಜಿನಲ್ಸ್ ನಲ್ಲಿ ಏಪ್ರಿಲ್ 24ಕ್ಕೆ ಜೆರಾಕ್ಸ್ ವೆಬ್ ಸೀರಿಸ್ ಪ್ರಸಾರವಾಗಲಿದೆ. ಅದಕ್ಕೂ ಮುನ್ನ ಪ್ರದರ್ಶನಗೊಂಡ ಜೆರಾಕ್ಸ್ ವೆಬ್ ಸೀರಿಸ್ ನ ಮೂರು ಎಪಿಸೋಡ್ ಕಂಪ್ಲೀಟ್ಲಿ ಹೊಸತಾಗಿದೆ. ಅಷ್ಟೇ ಅಲ್ಲ, ಇಲ್ಲಿ ಹೊಸ ಐಡಿಯಾ ಇದೆ, ಅಷ್ಟೇ ಜಾಣತನ ಎದ್ದು ಕಾಣುತ್ತೆ ಆ ಕಾರಣಕ್ಕೆ ಜೆರಾಕ್ಸ್ ಪಕ್ಕಾ ಒರಿಜಿನಲ್ ಕಥೆಯಾಗಿ ನೋಡುಗರನ್ನ ಕುತೂಹಲಕ್ಕೆ ಕರೆದೊಯ್ಯುತ್ತೆ.
ವೆಬ್ ಸೀರಿಸ್ ಅಂದರೆ ಅಲ್ಲೊಂದ್ ಥ್ರಿಲ್ ಇರಬೇಕು. ಮಜ ಅನಿಸಬೇಕು. ಏನೋ ಇದೆ ಅನ್ನೋ ಕಾಯುವಿಕೆ ಇರಬೇಕು. ಹೀಗೆ ಇನ್ನು ಹತ್ತು ಹಲವು ಅಂಶಗಳು ಇಲ್ಲಿ ನೋಡುಗರನ್ನ ಸೆಳೆಯುತ್ತಾ ಹೋಗುತ್ತವೆ.
ಜೆರಾಕ್ಸ್ ಸಿಂಪಲ್ ಸ್ಟೋರಿ ಅನ್ನುವಂತಿಲ್ಲ. ಇದೊಂದು ಹೊಸ ಕ್ರೇಜಿತನದಿಂದ ಹುಟ್ಟಿಕೊಂಡ ಕಥೆ. ಹಾಗಾಗಿ ಇದು ರುಚಿಸುತ್ತಾ ಹೋಗುತ್ತೆ. ಕಥೆ, ನಿರೂಪಣೆ, ಪಾತ್ರಗಳು, ಮಾತುಗಳು, ದೃಶ್ಯ ವೈಭವ ಎಲ್ಲವೂ ಜೆರಾಕ್ಸ್ ವೇಗಕ್ಕೆ ಹೆಗಲು ಕೊಟ್ಟಿವೆ. ಇಪ್ಪತ್ತು ನಿಮಿಷದ ಎಪಿಸೋಡ್ ಮುಗಿಯೋದೆ ಗೊತ್ತಾಗದಂತೆ ಥ್ರಿಲ್ಲಿಂಗ್ ರೈಡ್ ಮಾಡಿಸುವ ತಾಕತ್ತು ಜೆರಾಕ್ಸ್ ಗಿದೆ.
ಕಥೆ ಏನು?
ಪ್ರಕಾಶ (ನಾಗಭೂಷಣ) ಎಂಬ ಹುಡುಗನಿಗೆ ಆತನ ದೊಡ್ಡಪ್ಪ ( ಓಂಪ್ರಕಾಶ್ ರಾವ್) ಒಂದು ಹಳೆಯ ಜೆರಾಕ್ಸ್ ಮೆಷಿನ್ ಅಂಗಡಿಯೊಂದನ್ನು ಹಾಕಿ ಕೊಟ್ಟಿರುತ್ತಾರೆ. ಹಳೇ ಜೆರಾಕ್ಸ್ ಮೆಷಿನ್ ಜೊತೆ ಒದ್ದಾಡಿ ರೋಸಿ ಹೋಗುವ ಪ್ರಕಾಶನಿಗೆ ಸೂಜಿ ( ಪಾಯಲ್) ಎಂಬ ಹುಡುಗಿ ಮೇಲೆ ಲವ್. ಆಕೆಗೆ ಇನ್ನೊಬ್ಬನ ಮೇಲೆ ಲವ್.
ಈ ನಡುವೆ ಪ್ರಕಾಶನ ಬಾಲ್ಯದ ಫ್ಲ್ಯಾಶ್ ಬ್ಯಾಕ್. ಅಲ್ಲಿ ಅವನ ಅಪ್ಪ ಅಮ್ಮ ಬಾಲಕ ಪ್ರಕಾಶನಿಗೆ ದೇವರೊಂದರ ಬಳಿ ಹೋಗಿ ಆಶೀರ್ವಾದ ಪಡೆದಿರುತ್ತಾರೆ. ಆ ಪೂಜಾರಿ ದೈವದ ಮುಂದೆ ನಿಲ್ಲಿಸಿ ತಾಯತವೊಂದನ್ನು ಕಟ್ಟುತ್ತಾರೆ. ಆ ತಾಯತಕ್ಕೆ ಅಗಾಧ ಶಕ್ತಿ. ಇಪ್ಪತ್ತು ವರ್ಷದವರೆಗೆ ಆ ತಾಯತದ ಶಕ್ತಿ ಅರಿಯದ ಪ್ರಕಾಶನಿಗೆ ಒಂದು ಹಂತದಲ್ಲಿ ಪವಾಡ ನಡೆಯುತ್ತೆ. ಅದೇ ಜೆರಾಕ್ಸ್ ನ ಸಸ್ಪೆನ್ಸ್.
ಇಲ್ಲಿ ಜೆರಾಕ್ಸ್ ಮೆಷಿನ್ ಕೂಡ ಒಂದು ಪಾತ್ರ. ಆ ಮೆಷಿನ್ ವಿಶೇಷತೆ ಏನಪ್ಪಾ ಅಂದರೆ, ಯಾವುದೇ ಫೋಟೋ ಜೆರಾಕ್ಸ್ ಇಟ್ಟರೆ ಆ ಫೋಟೋದಲ್ಲಿ ಇರುವ ವ್ಯಕ್ಯಿ ಪ್ರತ್ಯಕ್ಷನಾಗ್ತಾನೆ. ಅದು ಆ ತಾಯತದ ಶಕ್ತಿ. ಆಮೇಲೆ ಏನೆಲ್ಲಾ ಗೊಂದಲ, ಅವಘಡ ನಡೆಯುತ್ತೆ ಅಂತ ಗೊತ್ತಾಗಬೇಕಾದರೆ ಒಮ್ಮೆ ಜೆರಾಕ್ಸ್ ನೋಡಿ.
ಜೆರಾಕ್ಸ್ ವಾಸ್ತವದ ಕಥೆ ಅಲ್ಲದಿದ್ದರೂ, ವಾಸ್ತವ ಸನ್ನಿವೇಶಗಳನ್ಬು ಸೂಕ್ಷ್ಮವಾಗಿ ಬಿಂಬಿಸಲಾಗಿದೆ. ಇಲ್ಲಿ ಅಸಹಾಯಕತೆ ಇದೆ, ಗೆಳೆತನವಿದೆ, ಪ್ರೀತಿ ಇದೆ, ಆಸೆ, ದುರಾಸೆ, ಇತ್ಯಾದಿ ವಿಷಯಗಳಿವೆ. ಎಲ್ಲವನ್ನೂ ಪೋಣಿಸಿ ಜೆರಾಕ್ಸ್ ಮಾಡಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ.
ಯಾರು ಹೇಗೆ?
ನಾಗಭೂಷಣ ಜೆರಾಕ್ಸ್ ಮಾಡುವ ಹುಡುಗನಾಗಿ ಇಷ್ಟ ಆಗ್ತಾರೆ. ಪಾಯಲ್ ಕೂಡ ತನ್ನ ಫ್ಯಾನ್ಸ್ ಗೆ ಮೋಸ ಮಾಡಿಲ್ಲ. ಉಳಿದಂತೆ ಓಂ ಪ್ರಕಾಶ್ ರಾವ್ , ಸುಧಾಕರ್, ವಿಜಯ ಪ್ರಸಾದ್, ಜಗ್ಗಪ್ಪ ಇತರೆ ಪಾತ್ರಗಳು ಸಾಥ್ ನೀಡಿವೆ. ಸಂಗೀತ ಪೂರಕವಾಗಿದೆ. ಕ್ಯಾಮರಾ ಕೈಚಳಕ ಕೂಡ ಜೆರಾಕ್ಸ್ ಅಂದವನ್ನು ಹೆಚ್ಚಿಸಿದೆ.