Categories
ಸಿನಿ ಸುದ್ದಿ

ಬಂಗಾರದ ಹೆಜ್ಜೆಗೆ ಇಪ್ಪತ್ತು! ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಚೆಲ್ಲಾಟಕ್ಕೆ ಎರಡು ದಶಕದ ನಂಟು

ನಟನಾಗಿ ಕನ್ನಡಿಗರ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ನಾಯಕರಾಗಿ ನಟಿಸಿದ್ದ ಮೊದಲ ಚಿತ್ರ “ಚೆಲ್ಲಾಟ” ಬಿಡುಗಡೆಯಾಗಿ ಏಪ್ರಿಲ್ 21ಕ್ಕೆ ಇಪ್ಪತ್ತು ವರ್ಷಗಳಾಗಿದೆ.

ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಮೂಲಕ ಗಣೇಶ್ ಅವರು ನಾಯಕರಾಗಿ ಚಿತ್ರರಂಗ ಪ್ರವೇಶಿಸಿ ಇಪ್ಪತ್ತು ವರ್ಷಗಳಾಗಿದೆ. ಅದೇ ವರ್ಷ ಗಣೇಶ್ ಅಭಿನಯದ ಕನ್ನಡದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ “ಮುಂಗಾರು ಮಳೆ” ಸಹ ಬಿಡುಗಡೆಯಾಗಿ, ಭರ್ಜರಿ ಯಶಸ್ಸು ಕಂಡಿತ್ತು.

ಆನಂತರ “ಗಾಳಿಪಟ”, ” ಚೆಲುವಿನ ಚಿತ್ತಾರ”, “ಕೃಷ್ಣ” ದಿಂದ ಹಿಡಿದು ಇತ್ತೀಚೆಗೆ ತೆರೆಕಂಡ “ಕೃಷ್ಣಂ ಪ್ರಣಯ ಸಖಿ”ವರೆಗೂ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಗಣೇಶ್ ತಮ್ಮ ಅಮೋಘ ಅಭಿನಯದಿಂದ ರಂಜಿಸಿದ್ದಾರೆ.

ಗಣೇಶ್ ನಾಯಕರಾಗಿ ಇಪ್ಪತ್ತು ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮೆಚ್ಚಿನ ನಾಯಕನಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಬೆಂಗಳೂರಲ್ಲಿ ಡಕಾಯತ್! ಫ್ಯಾನ್ಸ್ ಗೆ ಧನ್ಯವಾದ ಹೇಳಿದ ಟೀಮ್

ತೆಲುಗು ಸ್ಟಾರ್ ಅಡವಿ ಶೇಷ್‍ ಮತ್ತು ಮೃಣಾಲ್‍ ಠಾಕೂರ್ ಅಭಿನಯದ ತೆಲುಗು ಚಿತ್ರ ‘ಡಕಾಯತ್’, ಏಪ್ರಿಲ್‍ 10ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿರೋ ಡಕಾಯತ್‌ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.. ಚಿತ್ರದ ಪ್ರಚಾರಕ್ಕಾಗಿ ಅಡವಿ ಶೇಷ್‍ ಮತ್ತು ಅನುರಾಗ್‍ ಕಶ್ಯಪ್‍, ಶನಿವಾರ ಬೆಂಗಳೂರಿಗೆ ಬಂದಿದ್ದರು. ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸುತ್ತಲೇ, ಚಿತ್ರವನ್ನು ಪ್ರಚಾರ ಮಾಡಿದರು.

ತಮ್ಮ ಪ್ರತಿ ಸಿನಿಮಾಗೂ ಕನ್ನಡಿಗರು ಸಪೋರ್ಟ್‌ ಮಾಡಿದ್ದು ತಾವು ಅಭಿನಯದ ಬಹುತೇಕ ಸಿನಿಮಾದ ಪ್ರಚಾರವನ್ನ ಬೆಂಗಳೂರಿನಲ್ಲಿ ಮಾಡಿರುವುದಾಗಿ ಅಡವಿ ಶೇಷ್‌ ಖುಷಿಯಿಂದ ಹೇಳಿಕೊಂಡರು , ಇನ್ನು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದು ಅಭಿಮಾನಿಗಳ ಜೊತೆ ಒಂದಿಷ್ಟು ಸಮಯ ಕಾಲ ಕಳೆದರು..ಅದಾದ ನಂತರ ಸುದ್ದಿಗೋಷ್ಟಿ ಮಾಡಿ ಮಾಧ್ಯಮದ ಮೂಲಕ ಸಿನಿಮಾ ನೋಡಿ ಸಪೋರ್ಟ್‌ ಮಾಡಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

ನಟ, ನಿರ್ದೇಶಕ, ನಿರ್ಮಾಪಕ ಅನುರಾಗ್‌ ಕಶ್ಯಪ್‌ ಮಾತನಾಡಿ ‘ಈಗ ನಾನು ಬೆಂಗಳೂರಿನವನೇ..ನನ್ನನ್ನು ಸ್ವಾಗತ ಮಾಡುವ ಅವಶ್ಯಕತೆ ಇಲ್ಲ’ ಎಂದರು..ಡಕಾಯತ್‌ ಸಿನಿಮಾ ೫೦ ಕೋಟಿ ಕಲೆಕ್ಷನ್‌ ಮಾಡಿದೆ ಟ್ರೇಲರ್‌ ನೋಡಿದ್ರೆ ಮಾಸ್‌ ಸಿನಿಮಾ ಅನ್ಸುತ್ತೆ ಆದ್ರೆ ಇದೊಂದು ಒಳ್ಳೆ ಲವ್‌ ಸ್ಟೋರಿ ಸಿನಿಮಾ , ಬೆಂಗಳೂರಿನ ಜನತೆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದೀರ ನಮಗೆ ಖುಷಿ ಇದೆ ಎಂದರು.

ನಂತರ ಜಿಟಿ ಮಾಲ್‌ ನಲ್ಲಿ ಸಿನಿಮಾ ನೋಡಲು ಬಂದ ಜನರನ್ನ ಅಡವಿ ಶೇಷ್‌ ಹಾಗೂ ಅನುರಾಗ್‌ ಕಶ್ಯಪ್‌ ಬೇಟಿ ಮಾಡಿ ಖುಷಿ ಪಟ್ಟರು…ಡಕಾಯತ್‌ ಚಿತ್ರದಲ್ಲಿ ಅಡವಿ ಶೇಷ್‍, ಮೃಣಾಲ್‍ ಠಾಕೂರ್, ಅನುರಾಗ್‍ ಕಶ್ಯಪ್‍, ಪ್ರಕಾಶ್‍ ರಾಜ್‍, ಸುನೀಲ್‍, ಅತುಲ್‍ ಕುಲಕರ್ಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶನೀಲ್‍ ಡಿಯೋ ನಿರ್ದೇಶನ ಮಾಡಿದ್ದಾರೆ

Categories
ಸಿನಿ ಸುದ್ದಿ

ಸೆರಗು ಎಳೆದಷ್ಟೂ ಕೆಂಡ! ಮೌನ ನಾರಿಯ ಯಶೋಗಾಥೆ

ಚಿತ್ರ ವಿಮರ್ಶೆ: ವಿಭ


ರೇಟಿಂಗ್: 5/3


ಚಿತ್ರ: ಕೆಂಡದ ಸೆರಗು
ನಿರ್ದೇಶನ: ರಾಕಿ ಸೋಮ್ಲಿ
ನಿರ್ಮಾಣ: ಕೆ.ಕೊಟ್ರೇಶ್ ಗೌಡ
ತಾರಾಗಣ: ಮಾಲಾಶ್ರೀ, ಭೂಮಿ ಶೆಟ್ಟಿ, ಸಿಂಧು ಲೋಕನಾಥ್, ಯಶ್ ಶೆಟ್ಟಿ, ವರ್ಧನ್, ಪ್ರತಿಮಾ, ಶೋಭಿತಾ, ಹರೀಶ್ ಅರಸು ಇತರರು.

“ನಾನ್ ಹೂವು ಅನ್ಕೊಂಡ್ ಮುಟ್ಟೋಕ್ ಬಂದೋರಿಗೆ ಗೊತ್ತಾಗ್ ಬೇಕು, ನಾನು ಹೂವು ಅಲ್ಲ ಮುಳ್ಳು ಅಂತ..”

ಆ ಛಲಗಾತಿಯ ಮನದಲ್ಲಿ ಈ ಡೈಲಾಗ್ ಬರುವ ಹೊತ್ತಿಗೆ ಆ ಊರ ಜನ ಅವಳನ್ನ ವೈಶ್ಯೆ ಮಗಳು ಅನ್ನೋ ಪಟ್ಟ ಕಟ್ಟಿರುತ್ತಾರೆ. ಅಪ್ಪನನ್ನು ಕಳಕೊಂಡ ಅವಳ ಅಮ್ಮನನ್ನು ಕೆಲ ಕಿಡಿಗೇಡಿಗಳು ಹಿಂಡಿ ಹಿಪ್ಪೆ ಮಾಡಿರುತ್ತಾರೆ. ಇದು ಮಹಿಳೆಯೊಬ್ಬಳ ಬದುಕಿನ ಕಥೆ- ವ್ಯಥೆ. ಅಲ್ಲಿಗೆ ಇದೊಂದು ಮಹಿಳಾ ಪ್ರಧಾನ ಚಿತ್ರ ಅಂತ ಪ್ರತ್ಯೇವಾಗಿ ಹೇಳಬೇಕಿಲ್ಲ.

ಕನ್ನಡದಲ್ಲಿ ಈಗಾಗಲೇ ಅನೇಕ ಕಾದಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಇದು ಕೂಡ ಕೆಂಡದ‌ ಸೆರಗು ಕಾದಂಬರಿ ಚಿತ್ರ. ಹಾಗಾಗಿ ಹೆಣ್ಣಿಗೆ ಹೆಚ್ಚು‌ ಮಹತ್ವ ಕೊಟ್ಟಿರುವ, ಆಕೆಯ ಬದುಕು-ಬವಣೆ, ಶಕ್ತಿ, ಯುಕ್ತಿ, ಅವಳು ಅಬಲೆಯಲ್ಲ ಅಬಲೆ ಅನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.

ಸಿನಿಮಾ ಕಾದಂಬರಿಯ ಕಥೆಯಂತೆಯೇ ನೋಡಿಸಿಕೊಂಡು ಹೋಗುತ್ತಾದರೂ, ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ನಿರೂಪಣೆಯಲ್ಲಿ ಚುರುಕುತನ ಇರಬೇಕಿತ್ತು. ಮೊದಲರ್ಧ ನಿಧಾನವೆನಿಸುವ ಚಿತ್ರ ದ್ವಿತಿಯಾರ್ಧ ವೇಗ ಪಡೆದುಕೊಳ್ಳುತ್ತೆ. ಅಲ್ಲಲ್ಲಿ ಟ್ವಿಸ್ಟ್ ಅನಿಸಿದರೂ ನೋಡಗರನ್ನು ಟೆಸ್ಟೂ ಮಾಡುತ್ತೆ.
ಕಥೆ ಚೆನ್ನಾಗಿದೆ. ಅದಕ್ಕೆ ಚಿತ್ರಕಥೆಯ ವೇಗ ಕಡಿಮೆ. ಪಾತ್ರಗಳ ಆಯ್ಕೆ ಚೆನ್ನಾಗಿದೆ. ಆದರೆ, ಕಂಟಿನ್ಯುಟಿ ಕಡೆ ಗಮನಿಸಬೇಕಿತ್ತು. ಕೆಲವು ಕಡೆ ಅನಗತ್ಯ ದೃಶ್ಯಗಳಿವೆ. ಉಳಿದಂತೆ ಸೆರಗೊಳಗೆ ಕೆಂಡ ನಿಗಿ ನಿಗಿ.

ಕಥೆ ಏನು?

ಎರಡು ಟ್ರ್ಯಾಕ್ ನಲ್ಲಿ ಕಥೆ ಸಾಗುತ್ತೆ. ಎರಡು ಕಥೆಯಲ್ಲೂ ಸ್ಪಷ್ಟತೆ ಇದೆ. ಮದ್ವೆಯಾಗಿ ಚೆಂದದ ಬದುಕು ಸವೆಸುವ ನೇತ್ರ ಬಾಳಲ್ಲಿ ಗಂಡ ದೂರವಾಗುತ್ತಾನೆ. ಗಂಡನಿಲ್ಲದ ಹೆಣ್ಣನ್ನು ಈ ಸಮಾಜ ನೋಡುವ ದೃಷ್ಟಿಕೋನ ಬೇರೆ. ನೇತ್ರಳಿಗೆ ಒಂದು ಹೆಣ್ಣು ಮಗು ಇರುತ್ತೆ. ನೇತ್ರಾಳ ಬದುಕು ಕಷ್ಟ. ಮಗಳಿಗಾಗಿ ಬದುಕಲೇಬೇಕು ಅನ್ನೋ ಅನಿವಾರ್ಯ ಬಂದಾಗ, ಆ ಊರ ಗೌಡನ ಜೊತೆ ನೇತ್ರಾ ಸೆರಗು ಹಾಸುತ್ತಾಳೆ. ಅಲ್ಲಿಂದ ಊರಲೆಲ್ಲಾ ನೇತ್ರಾಗೆ ವೈಶೈ ಪಟ್ಟ ಕಟ್ತಾರೆ. ಊರಲ್ಲಿರೋ ಒಂದಷ್ಟು ಜನ ಬಲವಂತವಾಗಿ ನೇತ್ರಾಳ ಮನೆ ಬಾಗಿಲು ಬಡಿತಾರೆ. ರಾತ್ರಿ ಸೆರಗು ಹಾಸುವ ಕೆಲಸ ಮಾಮೂಲಾಗುತ್ತೆ. ಒಂದು ಹಂತದಲ್ಲಿ ರಕ್ಷಣೆ‌ಮಾಡೋ ಪೊಲೀಸ್ ಅಧಿಕಾರಿ ಕೂಡ ನೇತ್ರಾಳ ಸೆರಗು ಎಳಿತಾನೆ. ಅವಳಿಗಿರೋ ಮಗಳ ಮೇಲೂ ಕಣ್ಣಾಕುತ್ತಾನೆ. ಅತ್ತ, ಮಗಳು ಊರು ಬಿಟ್ಟು ಪಟ್ಟಣ ಸೇರುತ್ತಾಳೆ. ಅವಳಿಗೂ ಕೆಟ್ಟ ಘಟನೆ ಎದುರಾಗುತ್ತೆ. ಅಲ್ಲಿಂದ ಆಕೆ ಮೆಟ್ಟಿ ನಿಲ್ಲುವ ಕಥೆಯೇ ರೋಚಕ! ಆ ಕುತೂಹಲ ಇದ್ದರೆ ಸಿನಿಮಾ ನೋಡಿ.

ಇಲ್ಲಿ ನಿರ್ದೇಶಕರು ಸೂಕ್ಷ್ಮ ಸಂವೇದನೆಯ ವಿಷಯ ಹೇಳಿದ್ದಾರೆ. ಜೊತೆಗೆ ಹದಿಹರೆಯದ ಪ್ರೀತಿ ಹೇಗೆಲ್ಲಾ ಬದುಕನ್ನು‌ ಹಾಳು ಮಾಡುತ್ತೆ ಅನ್ನುವುದನ್ನು ತೋರಿಸಿದ್ದಾರೆ. ಲವ್ ಜಿಹಾದ್ ಕುರಿತ ವಿಷಯವೂ ಇಣುಕಿ ಹಾಕುತ್ತೆ. ಒಟ್ಟಾರೆ ವಾಸ್ತವ ಬದುಕಿನ ಚಿತ್ರಣ ಇಲ್ಲಿದೆ.

ಯಾರು ಹೇಗೆ?

ಇಲ್ಲಿ ಮಾಲಾಶ್ರೀ ಅವರು ಹೆಸರಿಗಷ್ಟೇ. ಪೊಲೀಸ್ ಅಧಿಕಾರಿ ಪಾತ್ರ ಅವರದು. ಬಿಲ್ಡಪ್ ಗೆ ಒಂದು ಫೈಟ್ ಇದೆ. ಜನರ್ ದಸ್ತ್ ಫೈಟ್ ಅಂತೂ ಅಲ್ಲ. ಮಾಲಾಶ್ರೀ ಅವರನ್ನು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಉಳಿದಂತೆ ಭೂಮಿಶೆಟ್ಟಿ ಅವರಿಗೆ ದ್ವಿತಿಯಾರ್ಧ ಕೆಲಸ. ಶೋಭಿತ ಸಿನಿಮಾದ ಹೈಲೆಟ್ ಅನ್ನಬಹುದು. ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಯಶ್ ಶೆಟ್ಟಿ, ವರ್ಧನ್, ಬಲರಾಜ್ ವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪ್ರತಿಮಾ ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿಂಧು ಲೋಕನಾಥ್ ಒಂದು ಸೀನ್ ಗೆ ಸೀಮಿತ. ಹರೀಶ್ ಅರಸು ತೆರೆ ಮೇಲೆ ಇರುವಷ್ಟು ಕಾಲ ಇಷ್ಟ ಆಗ್ತಾರೆ. ಪಾತ್ರಕ್ಕೆ‌ ಮೋಸ ಮಾಡಿಲ್ಲ.
ವಿಪಿನ್ ಕ್ಯಾಮರಾದಲ್ಲಿ ಸೊಗಸಿದೆ.
ವೀರೇಶ್ ಕಂಬಳಿ ಸಂಗೀತದಲ್ಲಿ ಒಂದು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು.

ಕೊನೆ‌ ಮಾತು: ಬರೀ ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ಹೆಣ್ಣಿನ ಅಸಾಹಯಕತೆ ಬಳಸಿಕೊಂಡು ಸಮಾಜ ಹೇಗೆ ಮೃಗವರ್ತನೆ ತೋರಿಸುತ್ತೆ ಎಂಬುದು ಹೈಲೆಟ್.

Categories
ಸಿನಿ ಸುದ್ದಿ

ಲವ್ ಸೀಸನ್ಸ್ ಟೀಸರ್‌ ಬಂತು

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸಬರ ತಂಡದ ಆಗಮನವಾಗಿದೆ. ತಿಂಗಳ ಹಿಂದಷ್ಟೇ ಚಿತ್ರೀಕರಣ ಮುಗಿಸಿಕೊಂಡು ಒಂದಷ್ಟು ಸುದ್ದಿ ಮಾಡಿದ್ದ ಲವ್ ಸೀಸನ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

ರಾಜೇಶ್ ನಟರಂಗ ಈ ಚಿತ್ರದ ಬಹುಮುಖ್ಯ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಬಗ್ಗೆ ಮಾತಾಡಿದ ರಾಜೇಶ್, ನಿರ್ದೇಶಕರ ಕಸುಬುದಾರಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ತಾನಿಲ್ಲಿ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ನಟಿಸಿರುವ ಸುಳಿವನ್ನು ಬಿಟ್ಟು ಕೊಟ್ಟರು. ಪ್ರೀತಿಯೆಂಬುದು ಯಾವ ಕಾಲಕ್ಕೂ ಹಳತಾಗದ ವಿಚಾರ. ಈ ಭೂಮಿಕೆಯಲ್ಲಿಯೇ ರೂಪುಗೊಂಡಿರುವ ಈ ಚಿತ್ರವನ್ನು ಬೆಂಬಲಿಸಿ, ಪ್ರೋತ್ಸಾಹಿಸುವಂತೆ ರಾಜೇಶ್ ನಟರಂಗ ಕೇಳಿಕೊಂಡರು.

ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಂಗಭೂಮಿಯಲ್ಲಿ ಪಳಗಿಕೊಂಡು, ಕ್ಷತ್ರಿಯ, ಬುದ್ಧಿವಂತ೨, ಗುರುದೇವ ಹೊಯ್ಸಳ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಕೃತ್ವಿಕ್ ಲವ್ ಸೀಸನ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರದ ನಾಯಕ, ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ಹಾಗೂ ನಾಯಕಿಯರಾದ ದಿಯಾ ಕೀರ್ತಿ ಮತ್ತು ಚಂದನಾ ಗೌಡ ಸಹ ತಂತಮ್ಮ ಪಾತ್ರಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಸಿನಿಮಾ ಹಾಡುಗಳು ಭಿನ್ನವಾಗಿವೆ ಎಂಬ ಸುಳಿವನ್ನು ತಮ್ಮ ಮಾತುಗಳ ಮೂಲಕ ಹೊಮ್ಮಿಸಿದರು.

ಟೀಸರ್ ಬಿಡುಗಡೆ ವೇದಿಕೆಯಲ್ಲಿಯೇ ಲವ್ ಸೀಸನ್ಸ್ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿರುವ ಸುಳಿವು ಸಿಕ್ಕಿದೆ. ಇದೀಗ ಮೊದಲನೆಯದ್ದಾಗಿ ಟೀಸರ್ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇದು ಯಾರು ಯಾರನ್ನೂ ನಂಬಲು ಕಷ್ಟವಾಗುವಂಥಾ ಕಾಲಮಾನ. ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ `ಲವ್ ಸೀಸನ್ಸ್’ನಲ್ಲಿದೆ. ಬೆಂಗಳೂರಿನ ನಾನಾ ಏರಿಯಾಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್‌ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್‌ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ.

ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

Categories
ಸಿನಿ ಸುದ್ದಿ

ರುದ್ರ ಕಾಲ ಚಿತ್ರಕ್ಕೆ ದಿಗಂತ್ ‌ ಹೀರೋ ‌‌‌: ಶೀರ್ಷಿಕೆ ಅನಾವರಣ ಮಾಡಿದ ಸಮಂತ

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ದಿಗಂತ್ ಅಭಿನಯದ ನೂತನ ಚಿತ್ರ “ರುದ್ರ ಕಾಲ”. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಸ್ಟಾರ್ ಹಿರೋಯಿನ್ ಸಮಂತ ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ರಮೇಶ್ ನಾಯ್ಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಗೋಪಿ ಅವರು ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇದೇ ತಿಂಗಳ 22 ರಂದು ನೆರವೇರಲಿದೆ.

ನಮ್ಮ ಡೈರೆಕ್ಟರ್ ಗೋಪಿ ಅವರು ಕಥೆ ಹೇಳುತ್ತಿದ್ದಾಗಲೇ ಈ ಚಿತ್ರದಲ್ಲಿ ನಟಿಸಬೇಕೆಂದು ನಿರ್ಧಾರ ಮಾಡಿದೆ. ಹಾಗೆಯೇ ನಮ್ಮ “ರುದ್ರ ಕಾಲ” ಚಿತ್ರದ ಟೈಟಲ್ ಸಮಂತ ಅವರ ಕೈಯಿಂದ ರಿಲೀಸ್ ಆಗಿರುವುದು ತುಂಬಾ ಸಂತೋಷವಾಗಿದೆ. ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ ಎಂದು ತಿಳಿಸಿರುವ‌ ನಾಯಕ ದಿಗಂತ್, ನಿರ್ದೇಶಕ ಗೋಪಿ, ನಿರ್ಮಾಪಕ ರಮೇಶ್ ನಾಯ್ಕ್ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಸಮಂತ ಅವರಿಗೆ ಧನ್ಯವಾದ. ಇದು ನಮ್ಮ ಚಿತ್ರದ ಶುಭಾರಂಭ ಎಂದು ಭಾವಿಸುತ್ತೇನೆ. “ರುದ್ರ ಕಾಲ” ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಒಂದೇ ಹಂತದ ಚಿತ್ರೀಕರಣ ನಡೆಸಿ‌ ಅದಷ್ಟು ಬೇಗ ತೆರೆಗೆ ತರುವ ಯೋಚನೆ ಇದೆ. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಕಥೆ ಕೇಳಿ ಮೆಚ್ಚಿಕೊಂಡು ನಾಯಕನಾಗಿ ನಟಿಸುತ್ತಿರುವ ದಿಗಂತ್ ಹಾಗೂ ನಿರ್ಮಾಣ ಮಾಡುತ್ತಿರುವ ರಮೇಶ್ ನಾಯ್ಕ್ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ಗೋಪಿ.

ನಿರ್ಮಾಪಕ ರಮೇಶ್ ನಾಯ್ಕ್ ಚಿತ್ರದ ಬಗ್ಗೆ ಮಾತನಾಡುತ್ತಾ, ಡೈರೆಕ್ಟರ್ ಗೋಪಿ ಹೇಳಿದ ಸ್ಕ್ರಿಪ್ಟ್ ನನಗೆ ಫ್ರೆಶ್ ಆಗಿ ಅನಿಸಿತು. ನಮ್ಮ ಪ್ರೊಡಕ್ಷನ್‌ನಲ್ಲಿ ಇಂಥ ಚಿತ್ರ ಬರುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಟೈಟಲ್ ರಿಲೀಸ್ ಮಾಡಿದ ನಟಿ ಸಮಂತ ಹಾಗೂ ನಾಯಕ ದಿಗಂತ್ ಅವರಿಗೆ ಧನ್ಯವಾದ ಎಂದರು.

ರಮೇಶ್ ಅವರು ಕಥೆ ಬರೆದಿರುವ ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಲೈನ್ ಪ್ರೊಡ್ಯೂಸರ್ ಆಗಿ ನವೀನ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಿವರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಮೇಶ್ ಕೆ ಪೂಜಾರಿ ಈ ಚಿತ್ರದ ಸಹ ನಿರ್ದೇಶಕರು.

Categories
ಸಿನಿ ಸುದ್ದಿ

ರಾಕಾ’ ಲುಕ್ ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸರಣಿ ಸಿನಿಮಾಗಳ ಬಳಿಕ ಮತ್ತೊಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಬನ್ನಿ, ತಮಿಳು ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. ಒಂದಷ್ಟು ಸ್ಯಾಂಪಲ್ ಮೂಲಕ ಕುತೂಹಲ ಹೆಚ್ಚಿಸಿದ್ದ ರಾಕಾ ಸಿನಿಮಾದ ಫಸ್ಟ್ ಲುಕ್ ಅಲ್ಲು ಅರ್ಜುನ್ ಬರ್ತಡೇಗೆ ರಿವೀಲ್ ಮಾಡಲಾಗಿತ್ತು. ಅರ್ಧ ಮೃಗ, ಅರ್ಧ ಮನುಷ್ಯನ ಅವತಾರದಲ್ಲಿ ಸ್ಟೈಲಿಶ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್ ರಾಕಾ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಲುಕ್ ಗಾಗಿ ಬನ್ನಿ ದಿನಕ್ಕೆ 3 ರಿಂದ 4 ಗಂಟೆ ಶ್ರಮ ಹಾಕಿದ್ದಾರೆ. ಇದು ಐಕಾನ್ ಸ್ಟಾರ್ ಗೆ ಸಿನಿಮಾ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಪ್ರತಿ ಪಾತ್ರಕ್ಕೂ ಅಲ್ಲು ಅರ್ಜುನ್ ಹಾಕುವ ಪರಿಶ್ರಮ ಹೇಗೆ ಇರಲಿದೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ.

ರಾಕಾ ಪೋಸ್ಟರ್ ನಲ್ಲಿ ಕೈ ಎತ್ತಿ ಅಲ್ಲು ಗೆಸ್ಚರ್ ಒಂದನ್ನು ಮಾಡಿದ್ದು, ಅದನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ರೀ ಕ್ರಿಯೇಟ್ ಮಾಡಿದ್ದಾರೆ. ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಕಾ ಚಿತ್ರದ ಸಿಗ್ನೇಚರ್ ಹ್ಯಾಂಡ್ ಗೆಸ್ಚರ್ ಮಾಡಿದ್ದಾರೆ.

ರಾಕಾ ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಹಾಲಿವುಡ್ ಗ್ರಾಫಿಕ್ಸ್ ಸ್ಟುಡಿಯೋ ಕೈ ಜೋಡಿಸಿದೆ. ಈ ಚಿತ್ರ ಫ್ಯಾಂಟಸಿ ಕತೆಯನ್ನು ಒಳಗೊಂಡಿದೆ. ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಜೆರಾಕ್ಸ್ ಟ್ರೇಲರ್ ಬಂತು

ಜೀ5ನ ಬಹುನಿರೀಕ್ಷಿತ ವೆಬ್‌ ಸರಣಿ ʼಜೆರಾಕ್ಸ್‌ʼ ನ ಟ್ರೈಲರ್‌ ಇಂದು ಬಿಡುಗಡೆಯಾಗಿದೆ. 6 ಸಂಚಿಕೆಗಳುಳ್ಳ ಈ ಹಾಸ್ಯ ವೆಬ್‌ ಸರಣಿ ಇಂದು ತನ್ನ ಟ್ರೈಲರ್‌ ತುಣುಕಿನ ಮೂಲಕ ಎಲ್ಲರ ಮನೆ ಮಾತಾಗಿದೆ.

ನಟ, ನಿರ್ಮಾಪಕ ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಲಾಂಛನದಲ್ಲಿ ಹಾಗೂ ಬ್ಲಿಂಕ್‌ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಜೆರಾಕ್ಸ್‌ʼ ನಲ್ಲಿ ನಾಗಭೂಷಣ್‌, ಪಾಯಲ್‌ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಶ್ರೀವತ್ಸ, ಯಶ್ವಂತ್‌ ಶೆಟ್ಟಿ, ವಿಜಯ್‌ ಪ್ರಸಾದ್‌, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಮುಂತಾದವರು ನಟಿಸಿರುತ್ತಾರೆ.

ಮಳವಳ್ಳಿಯ ರಾಯದುರ್ಗದ ಪ್ರಕಾಶ (ನಾಗಭೂಷಣ) ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರನಾಗಿರುತ್ತಾನೆ. ಅವನ ಜೆರಾಕ್ಸ್‌ ಯಂತ್ರಕ್ಕೆ ಒಂದು ತಾಯಿತ ಸೇರಿದಾಗ ಅವನ ಜೀವನ ಬದಲಾಗುತ್ತದೆ. ಅವನು ತೆಗೆಯುವ ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದು ಅವನ ಜೀವನ ಉಲ್ಟಾಪಲ್ಟಾವಾಗುತ್ತದೆ. ಇದರಿಂದ ಆಗುವ ಅಚಾನಕ್‌ ಬದಲಾವಣೆಗಳು, ಊರಿನಲ್ಲಾಗುವ ಆಶ್ಚರ್ಯಕರ ಘಟನೆಗಳು, ಕುತೂಹಲಕಾರಿ ಸನ್ನಿವೇಶಗಳನ್ನು ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಜೀ5ನಲ್ಲಿ ಇದೇ ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯು ಪ್ರೇಕ್ಷಕರಿಗೆ ನಗೆ ಊಟ ಉಣಬಡಿಸಲಿದೆ.

ನಟ, ನಿರ್ಮಾಪಕ ಡಾಲಿ ಧನಂಜಯ ಮಾತನಾಡಿ, “ನನಗೆ ಈ ಕಥೆ ಇಷ್ಟವಾಗಲು ಕಾರಣ ಅದು ಹೇಳುವ ತತ್ವ, ಪ್ರತಿಯೊಂದು ಹಾಸ್ಯ ಸನ್ನಿವೇಶದ ಹಿಂದೆ ಅಡಗಿರುವ ತತ್ವ, ನನ್ನನ್ನು ತನ್ನತ್ತ ಸೆಳೆಯಿತು. ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದಾಗ, ಜನರು ತಮ್ಮ ಪ್ರತಿಬಿಂಬವನ್ನೇ ಸ್ವೀಕರಿಸಲು ಹೇಗೆ ನಿರಾಕರಿಸುತ್ತಾರೆ ಇವೆಲ್ಲವು ನನ್ನನ್ನು ಆಕರ್ಷಿಸಿತು. ಈ ಕಥೆಯು ಒಂಟಿತನ, ಹಾಸ್ಯ, ಪಶ್ಚಾತಾಪ, ಗೊಂದಲ ಎಲ್ಲವನ್ನೂ ಒಳಗೊಂಡಿದೆ. ಇದು ಕೇವಲ ಹಾಸ್ಯವನ್ನಷ್ಟೇ ಹೇಳದೇ, ಜೀವನದ ಮೌಲ್ಯಗಳನ್ನೂ ಕೂಡ ಹೇಳುತ್ತದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನು ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, “ನಮ್ಮ ಕಾಪಿ ನಾವು ನೋಡಲು ಬಯಸದ ನಮ್ಮ ಒಂದು ವ್ಯಕ್ತಿವವನ್ನು ಬಿಂಬಿಸಿದರೆ ಹೇಗೆ ಇರುತ್ತದೆ? ಜೆರಾಕ್ಸ್‌ ಈ ಒಂದು ಭಯದಿಂದ ಹುಟ್ಟಿದ ಕಥೆ ಎಂದರೆ ತಪ್ಪಾಗಲಾರದು. ಮಳವಳ್ಳಿಯಲ್ಲಿ ನಡೆಯುವ ಈ ಒಂದು ಆಶ್ಚರ್ಯಕರ ಘಟನೆ ಹೇಗೆ ಹಲವಾರು ಹೊಸ ತಿರುವುಗಳಿಗೆ ಕಾರಣವಾಗುತ್ತದೆ, ಹೇಗೆ ಜನರ ಜೀವನವನ್ನು ಬದಲಾಯಿಸುತ್ತದೆ, ಇವೆಲ್ಲವನ್ನೂ ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ʼಜೆರಾಕ್ಸ್‌ʼ ಆಗಿದೆ.” ಎಂದು ತಿಳಿಸಿದರು.

ನಟ ನಾಗಭೂಷಣ ಮಾತನಾಡಿ, “ನಾನು ಪ್ರಕಾಶ ಎಂಬ ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರನ ಪಾತ್ರವನ್ನು ಇದರಲ್ಲಿ ವಹಿಸಿದ್ದೇನೆ. ತನ್ನ ಜೀವನದಲ್ಲಿ ಆಗುವ ಒಂದು ಘಟನೆಯಿಂದ ಹೇಗೆ ಅವನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ಎಂಬುದನ್ನು ಕಥೆಯು ಹೇಳುತ್ತದೆ. ಪ್ರಕಾಶ ಸಾಮಾನ್ಯ ವ್ಯಕ್ತಿ, ಪ್ರಭಾವಿಯಲ್ಲ. ಆದರೆ ಈ ಘಟನೆಯ ನಂತರ ಎಲ್ಲರ ಜೀವನದಲ್ಲಿ ನಡೆಯುವ ಘಟನೆಗಳಿಗೆ ಇವನು ಕಾರಣಕರ್ತನಾಗಿರುತ್ತಾನೆ. ಅವನು ಶಕ್ತಿಶಾಲಿಯೇನಲ್ಲ, ಕೆಟ್ಟವನೂ ಅಲ್ಲ. ಆದರೆ ಎಲ್ಲದರ ಹಿಂದೆ ಇವನ ಕೈವಾಡವಿರುತ್ತದೆ. ಇದೊಂದು ವಿಭಿನ್ನವಾದ ಪಾತ್ರ. ವಿವಿಧ ಬಣ್ಣಗಳುಳ್ಳ ಪಾತ್ರ ಎಂದರೆ ತಪ್ಪಾಗಲಾರದು” ಎಂದು ಹೇಳಿದರು.
ಜೀ5 ಕಿರುಪರಿಚಯ:
ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

Categories
ಸಿನಿ ಸುದ್ದಿ

Review: ಹೆಣ್ಮಕ್ಕಳ ಸಮಸ್ಯೆಗೆ ಕ್ಯಾಲೆಂಡರ್ ಔಷಧ!

ವಿಭ

ಚಿತ್ರ: ಕ್ಯಾಲೆಂಡರ್
ನಿರ್ಮಾಣ: ಆದರ್ಶ್ ಗುಂಡುರಾಜ್‍
ನಿರ್ದೇಶನ: ನವೀನ್‍ ಶಕ್ತಿ
ತಾರಾಗಣ: ಆದರ್ಶ್ ಗುಂಡುರಾಜ್‍, ನಿವಿಷ್ಕ ಪಾಟೀಲ್, ಸುಶ್ಮಿತಾ, ಮಾಲಾಶ್ರೀ, ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಇತರರು.

ಅವನೊಬ್ಬ ಡಾಕ್ಟರ್. ಬೇರೆಯವರ ಕಣ್ಣಿಗೆ ತುಂಬಾ ಒಳ್ಳೆಯ ವ್ಯಕ್ತಿ. ಆದರೆ, ಆತ ಕೊಲೆ ಕೇಸಿನ ಆಸಾಮಿ. ಪೊಲೀಸರ ಕಣ್ ತಪ್ಪಿಸಿ ಓಡಾಡುತ್ತಿರೋ ಆತ ನಿಜವಾಗಿಯೂ ಕೊಲೆ ಮಾಡಿದ್ದಾನಾ? ಬೇರೆ ಯಾತಾದರೂ ಮಾಡಿದ್ದಾರಾ? ಇದೆ ಬೆನ್ನತ್ತುವ ಪೊಲೀಸ್ ಅಧಿಕಾರಿಗೆ ಕೊಲೆಗಾರ ಸಿಗ್ತಾನ? ಈ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.

‘ಕ್ಯಾಲೆಂಡರ್’ ಅನ್ನೋದು ಪ್ರತಿಯೊಬ್ಬರಿಗೂ ನಿತ್ಯವೂ ನೆನಪಾಗುತ್ತೆ. ಈ ಕ್ಯಾಲೆಂಡರ್ ಗೂ ಆ ಡಾಕ್ಟರ್ ಗು ಇರುವ ವಿಷಯ ಏನು ಅನ್ನೋದು ಸಸ್ಪೆನ್ಸ್.

ಇದೊಂದು ಹೊಸತರಹದ ವಿಷಯ ಇಟ್ಟುಕೊಂಡು ಮಾಡಿದ ಸಿನಿಮಾ. ಇಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ ಜೊತೆಗೆ ನೋಡುಗರಿಗೆ ಒಂದಷ್ಟು ಟೆಸ್ಟೂ ಇದೆ.

ಇಲ್ಲಿ ಹೀರೋ ತೆರೆ ಮೇಲಷ್ಟೇ ಅಲ್ಲ, ಕಥೆಯಲ್ಲೂ ಕೈ ಆಡಿಸಿದ್ದಾರೆ. ಆ ಕಾರಣಕ್ಕೆ ಕೊಂಚ ವಿಭಿನ್ನ ಪ್ರಯತ್ನದ ಉದ್ದೇಶ ಇಲ್ಲಾ್ಇದೆ ಎನ್ನಬಹುದು.

ಕಥೆ ಸರಳ. ಮಹಿಳೆಯರ ದೃಷ್ಟಿಕೋನದಲ್ಲಿ ಹೆಣೆಯಲಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಕನೆಕ್ಟ್ ಅನಿಸುವ ಎಳೆ ಇದೆ. ಅದೇ ಹೈಲೆಟ್. ಅದೇನು ಅನ್ನುವುದಕ್ಕೆ ಸಿನಿಮಾ ನೋಡಬೇಕು.

ಕಥೆಗಾರರ ಕಥೆಯ ಎಳೆ‌ ಚೆನ್ನಾಗಿದೆ. ನಿರ್ದೇಶಕ ನವೀನ್ ಶಕ್ತಿ ಅವರ ನಿರೂಪಣೆ ವಿಚಾರದಲ್ಲಿ ಸ್ವಲ್ಪ ಬಿಗಿ ಹಿಡಿತ ಬೇಕಿತ್ತು. ಚಿತ್ರಕಥೆ ಕಡೆ ಹೆಚ್ಚು ಗಮನ ವಹಿಸಬೇಕಿತ್ತು.

ಮೊದಲರ್ಧ ಚಿತ್ರದಲ್ಲಿ ಹೇಳಿಕೊಳ್ಳುವಂತಹ ವಿಶೇಷವಿಲ್ಲ. ದ್ವಿತಿಯಾರ್ಧ ಇದಕ್ಕೆ ಹೊರತಲ್ಲ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ವಿಶೇಷತೆ ಇದೆ. ಅದೇ ಸಿನಿಮಾದ ಜೀವಾಳ‌.


ನಾಯಕ ಒಬ್ಬ ಡಾಕ್ಟರ್. ಆದರೆ ಕುಡಿಯೋದೇ ಅವನ‌ ವೀಕ್ ನೆಸ್. ಈ ನಡುವೆ ಒಂದು ರೀಸರ್ಚ್ ಮಾಡ್ತಾನೆ. ಅದು‌ ಮಹಿಳೆಯರ
ಋತುಚಕ್ರದ ಸಮಯದಲ್ಲಿ ಅವರ ಮಾನಸಿಕ ಸ್ಥಿತಿಯ ಬದಲಾವಣೆ ಮತ್ತು ಅದರಿಂದ ಆಗುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ತಾನೆ. ಇಲ್ಲಿ ಒಂದಷ್ಟು ಕಮರ್ಷಿಯಲ್ ವಿಚಾರವನ್ನು ಸೇರಿಸಿ ಎಲ್ಲೂ ಬೋರ್ ಆಗದಂತೆ ಜಾಗೃತ ವಹಿಸಿದ್ದಾರೆ. ಆದರೂ ಕೆಲ ಅನಗತ್ಯ ದೃಶ್ಯಗಳನ್ನು ಕೈ ಬಿಡಬಹುದಿತ್ತು. ನಿರ್ದೇಶಕರು ಆ ಗೋಜಿಗೆ ಹೋಗಿಲ್ಲ.

ನಾಯಕ ಆದರ್ಶ್ ನಗು‌ಮೊಗದಲ್ಲೇ ಕಾಣಿಸಿಕೊಂಡಿದ್ದಾರೆ. ನೋಡುಗರನ್ನು ಖುಷಿಪಡಿಸಲು ಶ್ರಮಿಸಿದ್ದಾರೆ.

ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಅವರು ನಿರ್ದೇಶಕರು‌ ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಉಳಿದಂತೆ ಮಾಲಾಶ್ರೀ ಅವರನ್ನು ಹೆಚ್ಚು ಬಳಸಿಕೊಂಡಿಲ್ಲ. ರಮೇಶ್‍ ಇಂದಿರಾ, ಪ್ರಮೋದ್‍ ಶೆಟ್ಟಿ ಎಂದಿನಂತೆ ಪಾತ್ರಗಳಿಗೆ ಮೋಸ‌ ಮಾಡಿಲ್ಲ‌.
ಸುಚೇಂದ್ರ ಪ್ರಸಾದ್‍ ಮತ್ತು ಚಂದ್ರಪ್ರಭಾ ಪರವಾಗಿಲ್ಲ. ರಮೇಶ್ ‍ಕೊಯಿರಾ ಛಾಯಾ‍ಗ್ರಹಣದಲ್ಲಿ ಕ್ಯಾಲೆಂಡರ್ ಸೊಬಗಿದೆ. ಸುನಾದ್ ಗೌತಮ್‍ ಸಂಗೀತಕ್ಕೆ‌ ಧಮ್ ಬೇಕಿತ್ತು.

Categories
ಸಿನಿ ಸುದ್ದಿ

ಜೆರಾಕ್ಸ್ ಸೆಂಟರ್ ಗೆ ಸೇರಿದ ಪಾಯಲ್!

zee5 ಕನ್ನಡದಲ್ಲಿ ಡಾಲಿ ಧನಂಜಯ್ ವೆಬ್ ಸಿರೀಸ್..’ಜೆರಾಕ್ಸ್’ಗೆ ಪಾಯಲ್ ಚೆಂಗಪ್ಪ ಎಂಟ್ರಿ

ಕನ್ನಡ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಕಥೆಗಳಿಗೆ zee5 ವೇದಿಕೆ ಸೃಷ್ಟಿಸಿದೆ. ಈಗಾಗಲೇ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರಿಗೆ ನೀಡಿರುವ zee5 ಈಗ ‘ಜೆರಾಕ್ಸ್’ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ನಟನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ‘ಜೆರಾಕ್ಸ್’ ವೆಬ್ ಸರಣಿಯನ್ನು ನಿರ್ಮಿಸುತ್ತಿದ್ದಾರೆ. ಈ ಸಿರೀಸ್ ನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ. ಜೆರಾಕ್ಸ್ ವೆಬ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಾಗಭೂಷಣ್ ನಟಿಸಲಿದ್ದು, ಇದೀಗ ಪಾಯಲ್ ಚೆಂಗಪ್ಪ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಅಮೃತಾಂಜನ್,‌ ಬ್ಯಾಡ್‌ ಗರ್ಲ್ಸ್ ಮುಂತಾದವುಗಳ
ಮೂಲಕ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿರುವ ಪಾಯಲ್ ಚೆಂಗಪ್ಪ ಈಗ ಜೆರಾಕ್ಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಸೆನ್ಸೇಷನ್ ಎಂದು ಹಾಗೂ ತಮ್ಮ ಹಾಸ್ಯ ಪ್ರಜ್ಞೆಗೆ ಪ್ರಸಿದ್ಧಿ ಪಡೆದಿರುವ ಪಾಯಲ್,‌ಇದೀಗ ಜೆರಾಕ್ಸ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ನಕ್ಕು ನಗಿಸಲು ಸಿದ್ಧವಾಗಿದ್ದಾರೆ.

ಜೆರಾಕ್ಸ್ ಈಗಾಗಲೇ ತನ್ನ ಶೀರ್ಷಿಕೆಯೊಂದಿಗೆ ಕುತೂಹಲವನ್ನು ಹುಟ್ಟುಹಾಕಿದೆ. ಈ ಸರಣಿಯು ಮಂಡ್ಯ-ಮೈಸೂರು ಸುತ್ತಮುತ್ತ ನಡೆಯುತ್ತಿದ್ದು, ಜೆರಾಕ್ಸ್ ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು ಕಟ್ಟಿಕೊಡಲಾಗಿದೆ.

ಈ ಘೋಷಣೆಯೊಂದಿಗೆ, ಕನ್ನಡ ZEE5 ಸ್ಥಳೀಯ ಸಂವೇದನೆಗಳಲ್ಲಿ ಬೇರೂರಿರುವ ಕಥೆಗಳು ಮತ್ತು ಸಾಂಸ್ಕೃತಿಕ ಸತ್ಯ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಪರದೆಗೆ ತರುವ ಸೃಷ್ಟಿಕರ್ತರ ಮೇಲೆ ತನ್ನ ಗಮನವನ್ನು ಬಲಪಡಿಸುವುದನ್ನು ಮುಂದುವರೆಸಿದೆ.

Categories
ಸಿನಿ ಸುದ್ದಿ

“ಎರೆಯ”ಚಿತ್ರ ನಿರ್ದೇಶನಕ್ಕೆ ರೆಡಿಯಾದ ಚೈತನ್ಯ

6 ನೇ ಶತಮಾನದ ಭಾರತದಲ್ಲಿ ಆಡಳಿತ ನಡೆಸಿದ ದಕ್ಷಿಣ ಭಾರತದ ದಂತಕಥೆಯೆನಿಸಿರುವ ಚಕ್ರವರ್ತಿ ಇಮ್ಮಡಿ ಪುಲಕೇಶಿ ಅವರ ಜೀವನ ಮತ್ತು ಪರಂಪರೆಯನ್ನು ಆಧರಿಸಿದ ಮಹಾಕಾವ್ಯ ಚಲನಚಿತ್ರವಾದ “ಎರೆಯ”ದ ನಿರ್ಮಾಣವನ್ನು ಮಾಡುವುದರ ಮೂಲಕ ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ LLP ಒಂದು ಅಭೂತಪೂರ್ವ ಸಿನಿಮಾ ಸಾಹಸಗಾಥೆಗೆ ಮುನ್ನುಡಿ ಬರೆಯಲಿದೆ.


ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ನಿರ್ಮಿಸಲಿರುವ “ಎರೆಯ” ಚಿತ್ರದಲ್ಲಿ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಸಾಹಸ, ಚಾತುರ್ಯ ಮತ್ತು ಅದ್ವಿತೀಯ ಆಡಳಿತಸೂತ್ರಗಳ ಮೂಲಕ ವಿಶಾಲ ಸಾಮ್ರಾಜ್ಯವನ್ನು ಆಳಿದ ಅವರ ಆಳ್ವಿಕೆಯನ್ನು ಚಿತ್ರಿಸುತ್ತದೆ. ಇಮ್ಮಡಿ ಪುಲಕೇಶಿಯ ಕಾಲವನ್ನು ಇತಿಹಾಸದಲ್ಲಿ ಒಂದು ಸುವರ್ಣಯುಗ ಎಂದೇ ಹೇಳಲಾಗುತ್ತದೆ.

ಡಾ. ಭೂಷನ್ ಶಾನಭಾಗ್ ಅವರ ಆಳವಾದ ಸಂಶೋಧನೆಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ.
ಕನ್ನಡಕ್ಕೆ ಒಂದು ಮೈಲಿಗಲ್ಲಾಗಲಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಿರ್ದೇಶಿಸುತ್ತಿರುವುದು ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕರಾದ ಕೆ.ಎಂ. ಚೈತನ್ಯ ಅವರು. ಸೂಕ್ಷ್ಮತೆಯ ಕಥೆಗಾರಿಕೆ ಮತ್ತು ವಿಭಿನ್ನ ದೃಶ್ಯ ಶೈಲಿಗೆ ಹೆಸರುವಾಸಿಯಾಗಿರುವ. ಚೈತನ್ಯ ಕನ್ನಡದಲ್ಲಿ 8 ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅವರ ಮೊದಲ ಚಲನಚಿತ್ರ “ಆ ದಿನಗಳು” ಒಂದು ಮಹತ್ವದ ಮೈಲಿಗಲ್ಲಾಗಿದ್ದು 2007 ರ ದಕ್ಷಿಣದ ಚಿತ್ರಗಳ ವರ್ಗದಲ್ಲಿ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಲನಚಿತ್ರ ಸೇರಿದಂತೆ ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿ ಪ್ರಶಸ್ತಿಗಳನ್ನು ಗೆದ್ದಿದೆ. ಅವರು ತಮ್ಮ “ಆಕೆ” ಚಿತ್ರಕ್ಕಾಗಿ “ಅತ್ಯುತ್ತಮ ರೂಪಾಂತರ ಚಿತ್ರಕಥೆ”ಗಾಗಿ ಟೈಮ್ಸ್ ಕೆಎಎಫ್‌ಟಿಎ ಪ್ರಶಸ್ತಿ – 2017 ಅನ್ನು ಗೆದ್ದಿದ್ದಾರೆ. ಅವರ ಮುಂಬರುವ ಚಲನಚಿತ್ರ “ಬಲರಾಮನ ದಿನಗಳು” ಈ ವರ್ಷ ಬಿಡುಗಡೆಯಾಗಲಿದೆ. “ಎರೆಯ” ದೊಂದಿಗೆ, ಇತಿಹಾಸದ ಪುಟಗಳಲ್ಲಿ ಕಂಡ ಭಾರತದ ಭವ್ಯತೆಯನ್ನು ಬಿಂಬಿಸಲು ಅವರು ತಯಾರಿ ಮಾಡಿಕೊಳ್ಳುತ್ತಿದಾರೆ.

“ಎರೆಯ” ಚಿತ್ರವು ನಿರ್ಮಾಪಕರು ನಿರ್ಮಿಸುತ್ತಿರುವ ಮೂರನೇ ಚಲನಚಿತ್ರವಾಗಿದ್ದು, ಕೇ ಕೇ ಮೆನನ್, ಜಿಮ್ಮಿ ಶೇರ್ಗಿಲ್, ಜಾಕಿ ಶ್ರಾಫ್, ಪಂಕಜ್ ತ್ರಿಪಾಠಿ ಮುಂತಾದ ಅದ್ಭುತ ನಟರ ಅಭಿನಯವಿದ್ದ “ಫಾಮಸ್” ಹಾಗೂ ದಿವಂಗತ ರಾಜೇನ್ ಕೊಥಾರಿ ಅವರ ನಿರ್ದೇಶನದಲ್ಲಿ ಓಂ ಪುರಿ, ಸತೀಶ್ ಶಾ, ಸುಪ್ರಿಯಾ ಪಾಠಕ್ ಮುಂತಾದವರು ನಟಿಸಿದ್ದ “ಪಂಗಾ ನಾ ಲೋ” ಅವರ ಇನ್ನಿತರೆ ಚಿತ್ರಗಳಾಗಿವೆ. “ಫಾಮಸ್” ಅನ್ನು ಆಸಕ್ತರು ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು. ಈ ಎರಡೂ ಚಲನಚಿತ್ರಗಳನ್ನು ಅವರ ವಿದಿಶಾ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ (ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ ಎಲ್‌ಎಲ್‌ಪಿಯ ಸಹೋದರಿ ಸಂಸ್ಥೆ) ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಪ್ಯಾನ್-ಇಂಡಿಯಾ ಪ್ರೇಕ್ಷಕರ ಮನಸೂರೆಗೊಳ್ಳಲು ಬೃಹತ್ ಪ್ರಮಾಣದಲ್ಲಿ ತೆರೆಯ ಮೇಲೆ ಬರಲಿರುವ “ಎರೆಯ” ಚಿತ್ರವನ್ನು ಹಿಂದಿ ಜೊತೆಗೆ ಎಲ್ಲಾ ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಲ್ಲೂ ನಿರ್ಮಿಸಲಾಗುವುದು. ಇದು ಜಗತ್ತಿನಾದ್ಯಂತ ಇರುವ ಸಿನಿಮಾಸಕ್ತರನ್ನು ತಲುಪುವ ಗುರಿ ಹೊಂದಿದೆ. ಈ ಚಿತ್ರವು ರಾಷ್ಟ್ರದ ಎಲ್ಲಾ ಭಾಗಗಳಿಂದ ಬಂದ ಉತ್ಕೃಷ್ಟ ತಾರಾಬಳಗವನ್ನು ಒಳಗೊಂಡಿದ್ದು, ಅತ್ಯಂತ ನುರಿತ ತಂತ್ರಜ್ಞರ ತಂಡ ಇದನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಚಿತ್ರದ ಪ್ರಮುಖ ನಟರ ಆಯ್ಕೆ ಮತ್ತು ತಾಂತ್ರಿಕ ತಂಡದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಬಹು ಹೆಸರಾಂತ ನಟವರ್ಗವನ್ನೊಳಗೊಂಡ ಈ ಸಿನಿಮಾ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. “ಎರೆಯ” ಸಿನಿಮಾ ಇತಿಹಾಸದ ಪುಟಗಳಲ್ಲಿ ಕಳೆದುಹೋದ ಭಾರತದ ಶ್ರೇಷ್ಠ ಚಕ್ರವರ್ತಿಯೊಬ್ಬರ ಪರಂಪರೆಯನ್ನು ಆಚರಿಸುವ ಒಂದು ಮುಖ್ಯ ಚಿತ್ರವಾಗಲಿದೆ.

ವಿಂಗ್‌ಸ್ಪ್ಯಾನ್ ಕುರಿತು…


ವಿಂಗ್ಸ್‌ಪ್ಯಾನ್ ಮೋಷನ್ ಪಿಕ್ಚರ್ಸ್ ಮುಂಬೈ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದು, ವಿವಿಧ ಮಾಧ್ಯಮಗಳಲ್ಲಿ ಗುಣಮಟ್ಟದ ಮತ್ತು ಆಕರ್ಷಕ ದೃಶ್ಯಕಥನಗಳನ್ನು ನಿರ್ಮಿಸುವತ್ತ ಕೇಂದ್ರೀಕರಿಸಿದೆ. 2014ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಚಿತ್ರಗಳು, ಬ್ರ್ಯಾಂಡೆಡ್ ಕಂಟೆಂಟ್ ಮತ್ತು ಮಲ್ಟಿಮೀಡಿಯಾ ಯೋಜನೆಗಳ ಮೂಲಕ ಸೃಜನಾತ್ಮಕ ದೃಷ್ಟಿಕೋನ ಹಾಗೂ ಸುದೃಢ ನಿರೂಪಣೆಯ ಕಥನ ಶೈಲಿಯನ್ನು ವೈವಿಧ್ಯಮಯ ಪ್ರೇಕ್ಷಕಗಣಕ್ಕೆ ಒದಗಿಸುತ್ತಿದೆ.

error: Content is protected !!