ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರ ಇದೇ ತಿಂಗಳ 24ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು,ಪ್ರಚಾರ ಬಿರುಸಿನಿಂದ ಸಾಗಿದೆ. ಅದರ ಭಾಗವಾಗಿ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಧ್ರುವ ಸರ್ಜಾ ಫೈರ್ ಫ್ಲೈ ಸಿನಿಮಾದ ಹುಷಾರು ಲೇ ಹುಷಾರು ಎಂಬ ಹಾಡನ್ನು ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ನಾಯಕ ವಿಕ್ಕಿಯನ್ನು ಗುಣಗಾನ ಮಾಡುವ ಹಾಡು ಇದಾಗಿದೆ. ಈ ಗೀತೆಯಲ್ಲಿಅಣ್ಣಾವ್ರ ಸಿನಿಮಾಗಳ ಡೈಲಾಗ್ ಗಳನ್ನು ಬಳಸಿರುವುದು ಮತ್ತೊಂದು ವಿಶೇಷ. ಧನಂಜಯ್ ರಂಜನ್ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ದೀಪಕ್ ಬ್ಲೂ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಹಾಡಿಗೆ ಧ್ವನಿಯಾಗಿದ್ದು, ಚರಣ್ ರಾಜ್ ಮಸ್ತ್ ಟ್ಯೂನ್ ಹಾಕಿದ್ದಾರೆ.
ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್ ಫ್ಲೈ ಸಿನಿಮಾವನ್ನು ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್ ಫ್ಲೈ ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರ್ತಿದೆ.
ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ- ನಿರ್ದೇಶನ ಈ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಫೈರ್ ಫ್ಲೈ ಚಿತ್ರಕ್ಕಿದೆ.
ನಟ ರಿಷಿ ಸದಾ ವಿಭಿನ್ನ ಕಥೆಗಳನ್ನ ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬರೋ ಕಲಾವಿದ. ಸದ್ಯ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ರಿಷಿ ಮಂಗಳೂರು ಮೂಲದ ತಂಡದ ಜೊತೆಗೆ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ . ಈ ಹಿಂದೆ ತುಳು ಚಿತ್ರರಂಗದಲ್ಲಿ ಉಮಿಲ್ ಹಾಗೂ ದೊಂಬರಾಟ ಸಿನಿಮಾ ಮಾಡಿ ಸಕ್ಸಸ್ ಕಂಡಿರೋ ರಂಜಿತ್ ರಾಜ್ ಸುವರ್ಣ ರಿಷಿ ನಟನೆಯ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ರಿಷಿ ಅಭಿನಯಿಸುತ್ತಿರೋ ಹೊಸ ಚಿತ್ರಕ್ಕೆ ಮಂಗಳಾಪುರಂ ಎಂದು ಹೆಸರಿಟ್ಟಿದ್ದು ಸದ್ಯ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಸಿನಿಮಾತಂಡ ..ರಿಷಿ ಜೊತೆಯಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಅಭಿನಯಮಾಡುತ್ತಿದ್ದು ಇದೇ ಮೊದಲ ಬಾರಿಗೆ ಅಭಿಮನ್ಯು ಹಾಗೂ ರಿಷಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ..
ಮಂಗಳಾಪುರಂ ಸಿನಿಮಾ ಒಂದು ಊರಿನಲ್ಲಿ ನಡೆಯೋ ಮರ್ಡರ್ ಮಿಸ್ಟ್ರಿ ಕಥೆ .ನಂಬಿಕೆ – ಮೂಡನಂಬಿಕೆ, ಕೈವಾಡ ಹಾಗೂ ಪವಾಡ ವಿಚಾರದ ಮೇಲೆ ಕಥೆ ಸಾಗಲಿದೆ ..ಇನ್ನು ಈ ಸಿನಿಮಾಗೆ ವಿದ್ವಾನ್||ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ,ರಾಮ್ ಪ್ರಸಾದ್ ಬಂಡವಾಳ ಹಾಕಿದ್ದಾರೆ. ಈ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಸದ್ಯ ಫಸ್ಟ್ ಲುಕ್ ರಿವಿಲ್ ಮಾಡಿರೋ ತಂಡ ಜೂನ್ ನಲ್ಲಿ ಚಿತ್ರೀಕರಣ ಶುರುಮಾಡಲಿದೆ . ಕಾರ್ಕಳ, ತೀರ್ಥಹಳ್ಳಿ, ಮಡಿಕೆರಿ ,ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ನಡೆಯಲಿದೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಸಿನಿಮಾಗೆ ಇರಲಿದ್ದು ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್ ಮಾಡಲಿದ್ದಾರೆ ..ಸದ್ಯ ಇಂಟ್ರೆಸ್ಟಿಂಗ್ ಆಗಿರೋ ಫಸ್ಟ್ ಲುಕ್ ರಿವಿಲ್ ಮಾಡಿರೋ ತಂಡ ಆದಷ್ಟು ಬೇಗಶೂಟಿಂಗ್ ಮುಗ್ಸಿ ಪ್ರೇಕ್ಷಕೆ ಮುಂದೆ ಬರೋ ಕಾತುರದಲ್ಲಿದೆ .
ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಕನ್ನಡ ಸೇರಿದಂತೆ ಅನೇಕ ಭಾಷೆಗಳ 1800ಕ್ಕೂ ಅಧಿಕ ಚಿತ್ರಗಳ ಇವೆಂಟ್ ಗಳನ್ನು ಆಯೋಜಿಸಿರುವ, ಅಷ್ಟೇ ಅಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ನವರಸನ್ ನಿರ್ಮಾಣದ ಹಾಗೂ ತಮ್ಮದೇ ಆದ ವಿಶಿಷ್ಟ ಶೈಲಿಯ ಗಾಯನದ ಮೂಲಕ ಜನಮನ ಗೆದ್ದಿರುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ.
.ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಅವರು ಈ ಸಮಾರಂಭವನ್ನು ಆಯೋಜಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಿರ್ಮಾಪಕರಾದ ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್ ಹಾಗೂ ಗಜೇಂದ್ರ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಮ್ಮ ಪ್ರೋತ್ಸಾಹ ಭರಿತ ಮಾತುಗಳ ಮೂಲಕ “ಸೂತ್ರಧಾರಿ” ಚಿತ್ರಕ್ಕೆ ಯಶಸ್ಸನ್ನು ಕೋರಿದರು.
ವಿಜಯ್ ಈಶ್ವರ್ ಅವರು ಬರೆದಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೆ ಹಾಡಿದ್ದಾರೆ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಅರ್ಥಗರ್ಭಿತ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ “ಸೂತ್ರಧಾರಿ” ಸಿನಿಮಾ ಆರಂಭವಾದಗಿನಿಂದಲೂ ತಾವೆಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇನ್ನೂ ಸದಾ ನನ್ನ ಎಲ್ಲಾ ಕೆಲಸಗಳಿಗೂ ಜೊತೆಗಿದ್ದು, ಪ್ರೋತ್ಸಾಹ ನೀಡುವ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ, ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್, ಗಜೇಂದ್ರ ಮುಂತಾದವರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ವಿಜಯ್ ಈಶ್ವರ್ ಅವರು ಬರೆದಿರುವ ಈ ಚಿತ್ರದ ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ. ಅರ್ಥಗರ್ಭಿತ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ನವರಸನ್.
ನಾನು ನಾಯಕನಾಗಬೇಕೆಂಬ ಆಸೆ ನಮ್ಮ ಅಪ್ಪನದು. ಇದೇ ಮೇ 9 ನೇ ತಾರೀಖು ಅವರ ಆಸೆ ಈಡೇರುತ್ತಿದೆ. ನಾನು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಅಂದು ಬಿಡುಗಡೆಯಾಗುತ್ತಿದೆ. ಗಾಯಕನಾಗಿ ನನ್ನನ್ನು ಎಲ್ಲರೂ ಮೆಚ್ಚಿಕೊಂಡು ಆಶೀರ್ವದಿಸಿದ್ದೀರಿ. ಈಗ ನಾಯಕನಾಗೂ ಮೆಚ್ಚಿಕೊಳ್ಳುತ್ತೀರಾ ಎಂಬ ಭರವಸೆ ಇದೆ. ಈ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಜನಾ ಆನಂದ್, ತಬಲ ನಾಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ವಿಜಯ್ ಈಶ್ವರ್ ಅವರು ಬರೆದು ನಾನೇ ಹಾಡಿ ಸಂಗೀತವನ್ನೂ ನೀಡಿರುವ ಚಿತ್ರದ ಶೀರ್ಷಿಕೆ ಗೀತೆ ಇಂದು ಬಿಡುಗಡೆಯಾಗಿದೆ. “ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ ಅಂತೂ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಈ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ. ಈ ಚಿತ್ರದಲ್ಲಿ ನಾನು ನಾಯಕನಾಗಿ ನಟಿಸಲು ನವರಸನ್ ಅವರೆ ಮುಖ್ಯ ಕಾರಣ ಅವರಿಗೆ ವಿಶೇಷ ಧನ್ಯವಾದ ಎಂದರು ಚಂದನ್ ಶೆಟ್ಟಿ.
ಚಿತ್ರದ ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟ ತಬಲ ನಾಣಿ ಹಾಗೂ ಹಾಡು ಬರೆದಿರುವ ವಿಜಯ್ ಈಶ್ವರ್ ಮುಂತಾದವರು “ಸೂತ್ರಧಾರಿ” ಕುರಿತು ಮಾತನಾಡಿದರು.
ಸ್ಪಾರ್ಕ್ ಸಿನಿಮಾ ಪೋಸ್ಟರ್ ವಿವಾದಕ್ಕೆ ತೆರೆಬಿದ್ದಿದೆ. ನೆನಪಿರಲಿ ಪ್ರೇಮ್ ಹುಟ್ಟುಹಬ್ಬಕ್ಕೆ ಸ್ಪಾರ್ಕ್ ಚಿತ್ರ ತಂಡದಿಂದ ನಿನ್ನೆ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿದ್ದು, ಪ್ರೇಮ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪೋಸ್ಟರ್ ವಿರುದ್ಧ ನಟಿ, ನಿರ್ಮಾಪಕಿ ಶೃತಿ ನಾಯ್ಡು ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಆ ವಿವಾದವೀಗ ತಣ್ಣಗಾಗಿದ್ದು, ಚಿತ್ರದ ನಿರ್ದೇಶಕರು ರಮೇಶ್ ಇಂದಿರಾ ಬಳಿ ಕ್ಷಮೆಯಾಚಿಸಿದ್ದಾರೆ.
ಸ್ಪಾರ್ಕ್ ಸಿನಿಮಾಗೆ ಯುವ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರಾಗಿ ಇದು ಇವರಿಗೆ ಮೊದಲ ಅನುಭವ. ಹೀಗಾಗಿ ಸಣ್ಣದೊಂದು ತಪ್ಪು ನಡೆದು ಹೋಗಿದೆ. ಆ ತಪ್ಪನ್ನು ಈಗ ತಿದ್ದಿಕೊಂಡಿದ್ದಾರೆ. “ರಮೇಶ್ ಇಂದಿರಾ ಅವರ ಬಳಿ ಕ್ಷಮೆ ಕೇಳಿದ್ದು, ನಿಮ್ಮಿಂದ ಪರ್ಮಿಷನ್ ತೆಗೆದುಕೊಂಡು ಮಾಡಬೇಕಿತ್ತು. ಮ್ಯಾನೇಜರ್ ಹೇಳಿದ್ದಾರೆಂದು ಫೋಟೋ ಬಳಸಲಾಗಿದೆ. ಆದರೆ ಅದು ಮಿಸ್ ಕಮ್ಯೂನಿಕೇಷನ್ ಆಗಿದೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ. ಹೊಸ ನಿರ್ದೇಶಕರಿಗೆ ಒಳ್ಳೆದಾಗಲಿ. ತೊಂದರೆ ಇಲ್ಲ ಮಾಡಿ. ಮೊದಲು ನೀವು ಒಮ್ಮೆ ತಿಳಿಸಬೇಕಿತ್ತು. ಆದರೆ ಅದು ನಡೆದು ಹೋಗಿದೆ. ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ ಎಂದು ರಮೇಶ್ ಇಂದಿರಾ ಹೇಳಿದ್ದಾರೆ.
ಏನಿದು ವಿವಾದ? ಪ್ರೇಮ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಪೋಸ್ಟರ್ ನಲ್ಲಿ, ಒಬ್ಬ ರಾಜಕಾರಣಿಯ ಚಿತ್ರವನ್ನು ಹಿಡಿದುಕೊಂಡು ಅದಕ್ಕೆ ಸಿಗಾರಿನಿಂದ ಬೆಂಕಿ ನೀಡುವ ಚಿತ್ರವಿತ್ತು. ಆ ರಾಜಕಾರಣಿಯ ಖ್ಯಾತ ಕಲಾವಿದ ಕಂ ನಿರ್ದೇಶಕ ರಮೇಶ್ ಇಂದಿರಾ ಅವರದ್ದು. ಪೋಸ್ಟರ್ ರಮೇಶ್ ಇಂದಿರಾ ಅವರ ಚಿತ್ರ ‘ಭೀಮಾ’ ಸಿನಿಮಾದ್ದಾಗಿತ್ತು. ಹೀಗಾಗಿ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಚಿತ್ರತಂಡ ಹಾಗೂ ಪ್ರೇಮ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಚಿತ್ರತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಅನುಮಪತಿ ಪಡೆಯದೇ ರಮೇಶ್ ಇಂದಿರಾ ಪರವಾಗಿ ಕಾನೂನು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಇದೀಗ ಈ ವಿವಾದವು ತಿಳಿಕೊಂಡಿದೆ.
ಸ್ಪಾರ್ಕ್ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪತ್ರಕರ್ತನ ರೋಲ್ ಪ್ಲೇ ಮಾಡುತ್ತಿದ್ದು, ರಚನಾ ಇಂದರ್ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಡಾ.ಗರಿಮಾ ಅವಿನಾಶ್ ವಸಿಷ್ಠ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಸದ್ಯ ಸ್ಪಾರ್ಕ್ ಶೂಟಿಂಗ್ ಭರದಿಂದ ಸಾಗುತ್ತಿದೆ.
ಮೂರು ದಶಕದ ನಂತರ ಕಮಲ್ ಹಾಸನ್ – ಮಣಿರತ್ನಂ ಕಾಂಬಿನೇಷನ್ನಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಥಗ್ ಲೈಫ್. ಈ ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಸಿಂಬು, ಮಣಿರತ್ನಂ, ಅಭಿರಾಮಿ, ಅಶೋಕ್ ಸೆಲ್ವನ್, ತ್ರಿಷಾ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.
ಥಗ್ ಲೈಫ್ ಚಿತ್ರದ ಜಿಂಗುಚ್ಚಾ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಕಮಲ್, ಸಿಂಬು ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಮದುವೆ ಸಮಾರಂಭದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷ ಅಂದರೆ ಈ ಹಾಡಿಗೆ ಸ್ವತಃ ಕಮಲ್ ಹಾಸನ್ ಸಾಹಿತ್ಯ ಒದಗಿಸಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ. ಚೆನ್ನೈನಲ್ಲಿ ನಡೆದ ಪ್ಯಾನ್ ಇಂಡಿಯಾದ ಪ್ರೆಸ್ ಮೀಟ್ ವೇದಿಕೆಯಲ್ಲಿ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಆರ್. ಮಹೇಂದ್ರನ್, ಮದ್ರಾಸ್ ಟಾಕೀಸ್ ಮತ್ತು ಶಿವ ಅನಂತ್ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಚಿತ್ರದ ತಾರಾಗಣ ಕಮಲ್ ಹಾಸನ್, ಸಿಲಂಬರಸನ್ ಟಿಆರ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ನಾಸರ್ ಮತ್ತಿತರ ನಟರನ್ನು ಒಳಗೊಂಡಿದೆ. ಈ ಬಹು ನಿರೀಕ್ಷಿತ ಚಿತ್ರಕ್ಕೆ ದಿಗ್ಗಜ ಎ.ಆರ್. ರೆಹಮಾನ್ ಅವರ ಸಂಗೀತವಿದೆ.
ಈ ಚಿತ್ರದ ಕತೆ, ಚಿತ್ರಕತೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ಮಣಿರತ್ನಂ ನಿರ್ದೇಶನದಲ್ಲಿ ರವಿ ಆರ್ ಚಂದ್ರನ್ ಅವರ ಸಿನಿಮಾಟೋಗ್ರಫಿ, ಅನ್ಬರಿವ್ ಅವರ ಆ್ಯಕ್ಷನ್ ಕೋರಿಯಾಗ್ರಫಿ ಈ ಚಿತ್ರಕ್ಕಿದೆ. ಥಗ್ ಲೈಫ್ ಚಿತ್ರದ ಒಟಿಟಿ ಹಕ್ಕು ನೆಟ್ ಫ್ಲಿಕ್ಸ್ ಪಾಲಾಗಿದ್ದು, ಆಡಿಯೋ ಹಕ್ಕನ್ನು ಸರೆಗಮ ತನ್ನದಾಗಿಸಿಕೊಂಡಿದೆ.
ವಿತರಣಾ ಪಾಲುದಾರರು ಥಗ್ಸ್ ಲೈಫ್ ಸಿನಿಮಾವನ್ನು ತಮಿಳುನಾಡಿನಲ್ಲಿ ರೆಡ್ ಜೈಂಟ್ ಮೂವೀಸ್ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದೆ. ಓವರ್ ಸೀಸ್ ನಲ್ಲಿ ಹೋಮ್ ಸ್ಕ್ರೀನ್ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಎಪಿ ಇಂಟರ್ನ್ಯಾಷನಲ್ ವಿತರಣೆ ಮಾಡುತ್ತಿದ್ದು, ಉತ್ತರ ಭಾರತದಲ್ಲಿ ಪೆನ್ ಮರುಧರ್ ಸಿನಿ ಎಂಟರ್ಟೈನ್ಮೆಂಟ್, ಆಂಧ್ರಪ್ರದೇಶ ಮತ್ತು ತೆಲಂಗಾಣನಲ್ಲಿ ಶ್ರೇಷ್ಠ್ ಮೂವೀಸ್ ಹಾಗೂ ಫೈವ್ ಸ್ಟಾರ್ ಸೆಂಥಿಲ್ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರ ವಿತರಣೆ ಮಾಡಲಿದೆ.
ಅಜೇಯ್ ರಾವ್ ಈ ಸಿನಿಮಾ ಬಗ್ಗೆ ತುಂಬಾನೇ ವಿಶ್ವಾಸದಿಂದ ಹೇಳಿಕೊಂಡಿದ್ದರು. ಅಷ್ಟೇ ಯಾಕೆ, ಇಡೀ ದೇಶ, ಜಗತ್ತು ನೋಡುವಂತಹ ಸಿನಿಮಾ ಇದಾಗಬೇಕು. ರಾಷ್ಟ್ರಪತಿಗಳೂ ಕೂಡ ನೋಡುವಂತಹ ಚಿತ್ರವಿದು ಅಂತ ಹೇಳಿದ್ದರು. ಅವರು ಹಾಗೆ ಹೇಳಿಕೊಂಡಿದ್ದು ಕೇಳಿದ ಅನೇಕರಿಗೆ ಕುತೂಹಲ, ನಿರೀಕ್ಷೆ ಇತ್ತು. ಸಿನಿಮಾ ನೋಡಿದ ಮೇಲೆ ನಿಜವಾಗಿಯೂ ಅಜೇಯ್ ರಾವ್ ಹೇಳಿದ ಮಾತು ನಿಜ ಅನಿಸಿದ್ದು ಹೌದು. ಅಜೇಯ್ ರಾವ್ ತಮ್ಮ ಹೀರೋಯಿಸಂ ಬಿಟ್ಟು ಅದರಾಚೆ ಬಂದು ಮಾಡಿರುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು. ಅದಕ್ಕೆ ಕಾರಣ, ಸಿನಿಮಾದ ಕಥೆ. ಇದು ಸುಮ್ಮನೆ ನೋಡಿಸಿಕೊಂಡು ಹೋಗುವ ಸಿನಿಮಾ ಅಲ್ಲ, ಹೊರಬಂದ ಮೇಲೂ ಮತ್ತೆ ಮತ್ತೆ ನೋಡಬೇಕೆನಿಸುವ, ಪದೇ ಪದೇ ಕಾಡುವ ಸಿನಿಮಾ. ಅದಕ್ಕೆ ಕಾರಣ ಮತ್ತದೇ ಕಥೆ ಮತ್ತು ನಿರೂಪಣೆಯ ಶೈಲಿ.
ಕಥೆ ತುಂಬಾನೆ ಸಿಂಪಲ್. ಆದರೆ, ಅದನ್ನು ನಿರೂಪಿಸಿರುವ ರೀತಿ ಮಾತ್ರ ಎಲ್ಲರ ಮನಸ್ಸನ್ನು ಗೆಲ್ಲುವಂತಿದೆ. ನಿರ್ದೇಶಕರ ಕಥೆಯ ಎಳೆ ಚೆನ್ನಾಗಿದೆ. ಹಾಗಂತ, ಈ ರೀತಿಯ ಕಥೆ ಎಲ್ಲೂ ಬಂದಿಲ್ಲ ಅಂತವಲ್ಲ. ಈ ಹಿಂದೆ ಹೆಣ್ಣು ಮಕ್ಕಳ ಮೇಲೆ, ಚಿಕ್ಕ ಹುಡುಗಿಯರ ಮೇಲೆ ಆದಂತಹ ದೌರ್ಜನ್ಯ ಮತ್ತು ಅತ್ಯಾಚಾರ ಕುರಿತ ವಿಷಯಗಳನ್ನಿಟ್ಟುಕೊಂಡು ಸಿನಿಮಾಗಳು ಬಂದಿವೆ. ಇದೂ ಕೂಡ ಆ ಸಾಲಿನ ಸಿನಿಮಾ ಆಗಿದ್ದರೂ, ಇಲ್ಲೊಂದಷ್ಟು ವಿಶೇಷತೆ ಇದೆ. ಅದೇ ಸಿನಿಮಾದ ಹೈಲೆಟ್. ಆ ವಿಶೇಷತೆ ಏನು ಅಂತ ತಿಳಿಯುವ ಕುತೂಹಲವಿದ್ದರೆ, ಒಂದೊಮ್ಮೆ ಮಿಸ್ ಮಾಡದೆ ಸಿನಿಮಾ ನೋಡಬೇಕು.
ಸಿನಿಮಾದ ಮೊದಲರ್ಧ ಜಾಲಿಯಾಗಿ ಸಾಗುವ ಕಥೆಯಲ್ಲಿ ಎಲ್ಲೂ ಬೋರ್ ಎನಿಸುವ ವಿಷಯಗಳಿಲ್ಲ. ತಮಾಷೆಯಾಗಿ, ನಗಿಸುತ್ತಲೇ ಸಾಗುವ ಕಥೆ, ದ್ವಿತಿಯಾರ್ಧ ತಿರುವೊಂದನ್ನು ಪಡೆಯುತ್ತೆ. ಅದೇ ಸಿನಿಮಾದ ಮುಖ್ಯ ಘಟ್ಟ ಎನ್ನಬಹುದು. ಇಡೀ ಸಿನಿಮಾದಲ್ಲಿ ನೋವಿದೆ, ಸಂಕಟವಿದೆ, ಭಾವನೆಗಳಿವೆ, ಸ್ವಾಭಿಮಾನವಿದೆ, ರೋಷವಿದೆ, ಹಠವಿದೆ, ಭಾವುಕತೆಯೂ ತುಂಬಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಅನ್ನೋದು ಎದ್ದು ಕಾಣುತ್ತೆ. ಇದೊಂದೇ ಕಾರಣಕ್ಕೆ ಯುದ್ಧಕಾಂಡ ಕಾಡುವ ಮತ್ತು ನೋಡುವ ಸಿನಿಮಾ ಆಗಿ ಹೊರಬಂದಿದೆ.
ಸಿನಿಮಾ ಮನರಂಜನೆ ನಿಜ. ಆದರೆ, ಅಲ್ಲೊಂದಷ್ಟು ಸಂದೇಶವಿರದಿದ್ದರೆ ಹೇಗೆ. ಅಂಥದ್ದೊಂದು ಸಂದೇಶ ಇಲ್ಲಿದೆ. ಬರೀ ನೋಡಿ ತಿಳಿಯೋ ಸಂದೇಶವಲ್ಲವದು. ಅದನ್ನು ಪಾಲಿಸಬೇಕಾದ ಧರ್ಮವೂ ಹೌದು ಎಂಬುದನ್ನಿಲ್ಲಿ ಸಾರಿ ಸಾರಿ ಹೇಳಲಾಗಿದೆ. ಇಷ್ಟಕ್ಕೂ ಅಜೇಯ್ ರಾವ್ ಅವರು ಇಂಥದ್ದೊಂದು ಕಂಟೆಂಟ್ ಆಯ್ಕೆ ಮಾಡಿಕೊಂಡು ಎಲ್ಲಿ ಎಡವಟ್ಟು ಮಾಡಿಕೊಳ್ತಾರೋ ಅನ್ನೋ ಮಾತುಗಳು ಕೇಳಿಬಂದಿದ್ದವು. ತಮ್ಮ ಯುದ್ಧಕಾಂಡ ಮೇಲೆ ವಿಶ್ವಾಸ,ಒಲವು ತುಂಬಿದ್ದರಿಂದಲೇ ಅವರು ಸಿನಿಮಾ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ ಅಂತಾನೇ ಹೇಳಬಹುದು.
ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ, ಒಂದನೇ ಕ್ಲಾಸ್ ಓದುವ ಮುಗ್ಧ ಹುಡುಗಿಯೊಬ್ಬಳು ಶಾಲೆಯಿಂದ ನೇರ ಮನೆಗೆ ಬಾರದೆ ಮಿಸ್ ಆಗ್ತಾಳೆ. ಮನೆಗೆ ಬಾರದ ಮಗಳನ್ನು ಹುಡುಕಿ ಹೊರಡುವ ತಾಯಿಗೆ ಆತಂಕ. ಅತ್ತ ಮಗಳು ಎಲ್ಲಿ ಹೋದಳು, ಏನಾಯಿತು ಎಂಬ ಅನುಮಾನ. ಇವೆಲ್ಲದರ ನಡುವೆ ಅಲ್ಲೊಂದು ಪೈಶಾಚಿಕ ಕೃತ್ಯ ನಡೆದು ಹೋಗಿರುತ್ತೆ. ಕೊನೆಗೆ ಆ ವಿಷಯ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿಂದ ಕೋರ್ಟ್ ಮೆಟ್ಟಿಲೂ ಏರುತ್ತೆ. ಆ ಕೋರ್ಟ್ ಒಳಗೆ ನಡೆಯುವ ಡ್ರಾಮಾ ಸಿನಿಮಾದ ಹೈಲೆಟ್. ಆ ಹುಡುಗಿಗೆ ಏನಾಯ್ತು, ಹುಡುಗಿಯ ತಾಯಿ ಏನು ಮಾಡ್ತಾಳೆ. ಅವರಿಬ್ಬರ ಪರ ಕೋರ್ಟ್ ಒಳಗೆ ವಾದಿಸುವ ಲಾಯರ್ ಆ ಕೇಸನ್ನು ಗೆಲ್ಲುತ್ತಾನಾ? ಇಲ್ಲವಾ ಅನ್ನೋದೇ ಕಥೆ.
ಇಲ್ಲಿ ಕೋರ್ಟ್ ಡ್ರಾಮಾ ಆಗಿರುವುದರಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಎಲ್ಲೋ ಒಂದು ಕಡೆ ನೋಡುಗರನ್ನು ಭಾವುಕತೆಗೆ ದೂಡುತ್ತೆ. ಸಿನಿಮಾ ನೋಡಿ ಹೊರಬರುವ ಜನರ ಎದೆ ಭಾರ ಎನಿಸುತ್ತೆ. ಹೆಣ್ಣು ಹೆತ್ತ ಪೋಷಕರು ಈ ಸಿನಿಮಾ ನೋಡಲೇಬೇಕೆನಿಸೋದು ಸುಳ್ಳಲ್ಲ. ಅಷ್ಟೊಂದು ಕ್ಲಾರಿಟಿಯಿಂದ, ಅಷ್ಟೊಂದು ಪ್ರಾಮಾಣಿಕತೆಯಿಂದ ಮಾಡಿರುವ ಸಿನಿಮಾ ಅಂತ ಗೊತ್ತಾಗುತ್ತೆ. ಸಿನಿಮಾದಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಚಿತ್ರಕಥೆಯಲ್ಲೂ ಕಾಣಬಹುದು. ಸ್ಕ್ರೀನ್ ಪ್ಲೇನಲ್ಲಿ ಬಿಗಿ ಹಿಡಿತವಿದೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತೆ. ಇಡೀ ತಂಡದ ಪ್ರಯತ್ನ ಸಾರ್ಥಕ ಎನಿಸುತ್ತೆ.
ಇನ್ನು, ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚು ಆದ್ಯತೆ ಇದೆ. ಹಾಡು ಸದ್ದು ಮಾಡದಿದ್ದರೂ, ಇಲ್ಲಿ ಪ್ರತಿಯೊಂದು ದೃಶ್ಯದಲ್ಲಿ ಕೇಳಿಬರುವ ಹಿನ್ನೆಲೆ ಸಂಗೀತ ಹೆಚ್ಚು ಸೌಂಡು ಮಾಡುತ್ತೆ. ಅದಕ್ಕೆ ಅದರದೇ ಆದ ತೂಕವಿದೆ. ಆ ಕಾರಣಕ್ಕೂ ಸಿನಿಮಾ ಮನಸ್ಸಿಗೆ ತಟ್ಟುತ್ತೆ. ಇನ್ನು, ಸಿನಿಮಾ ವೇಗಕ್ಕೆ ಸಂಕಲನ ಕೂಡ ಹೆಗಲು ಕೊಟ್ಟಿದೆ. ಕೋರ್ಟ್ ಡ್ರಾಮಾ ಹೈಲೆಟ್ ಆಗಿರುವುದರಿಂದ ಪ್ರತಿಯೊಂದು ಪರಿಕರ ಕೂಡ ಗಮನಸೆಳೆಯುತ್ತೆ. ಕಲಾನಿರ್ದೇಶನದ ಅಂಶವೂ ಇಲ್ಲಿ ಮಾತಾಡುತ್ತೆ. ಉಳಿದಂತೆ ಸಿನಿಮಾದ ದ್ವಿತಿಯಾರ್ಧ ಸೀಟಿನಂಚಿಗೆ ಕುಳಿತು ನೋಡುವಂತಹ ಕೌತುಕ ಹೆಚ್ಚಿಸುತ್ತೆ. ಅದೇ ಸಿನಿಮಾಗಿರುವ ತಾಕತ್ತು.
ಅಜೇಯ್ ರಾವ್ ಇಲ್ಲಿ ಎಂದಿಗಿಂತಲೂ ಚೆನ್ನಾಗಿ ಕಾಣುತ್ತಾರೆ. ಲವ್ವರ್ ಬಾಯ್ ಮೂಲಕ ಇಷ್ಟವಾಗಿದ್ದ ಅವರಿಲ್ಲಿ, ಒಬ್ಬ ಸ್ವಾಭಿಮಾನಿ ವಕೀಲನಾಗಿ, ಮಾನವೀಯ ಗುಣವಿಳ್ಳ ವ್ಯಕ್ತಿಯಾಗಿ ಭಾವುಕತೆ ಹೆಚ್ಚಿಸುವಲ್ಲಿ ಕಾರಣರಾಗುತ್ತಾರೆ. ಯಾವುದೇ ಫೈಟ್ ಇಲ್ಲ. ಆದರೆ, ಕೋರ್ಟ್ ಒಳಗೆ ವಾದಿಸುವ ಮಾತಿನ ಫೈಟ್ ಇಡೀ ಸಿನಿಮಾವನ್ನು ಹಿಡಿದಿಟ್ಟುಕೊಳ್ಳುವಂತಿದೆ. ಇನ್ನು ತಾಯಿ ಪಾತ್ರದಲ್ಲಿ ಅರ್ಚನಾ ಜೋಯಿಸ್ ಮಿಂಚಿದ್ದಾರೆ. ನಟನೆ ಮೂಲಕ ಅಳಿಸುವಲ್ಲೂ ಸೈ ಎನಿಸಿಕೊಂಡಿದ್ದಾರೆ. ಪಾತ್ರವೇ ತಾವಾಗಿ ಜೀವಿಸಿದ್ದಾರೆ. ಪ್ರಕಾಶ್ ಬೆಳವಾಡಿ ಅವರ ಅಭಿನಯವಂತೂ ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತೆ. ಅವರ ನಟನೆ, ಹಾವಭಾವ ಎಲ್ಲವೂ ಚಪ್ಪಾಳೆ ಗಿಟ್ಟಿಸುವಂತಿದೆ. ಉಳಿದಂತೆ ನಾಗಾಭರಣ ಅವರೂ ಇಲ್ಲಿ ಹೈಲೆಟ್. ರಾಧ್ಯಾ, ಸುಪ್ರಿತಾ ಕೂಡ ತಮ್ಮ ಮಾತ್ರಕ್ಕೆ ಮೋಸ ಮಾಡಿಲ್ಲ. ಕ್ಯಾಮೆರಾ ಕೈಚಳಕ ಯುದ್ಧಕಾಂಡದ ರೋಚಕತೆಗೆ ಸಾಕ್ಷಿಯಾಗಿದೆ.
ಚಿತ್ರ: ವೀರ ಚಂದ್ರಹಾಸ ಪರಿಶ್ರಮ: ರವಿ ಬಸ್ರೂರು ಮತ್ತು ತಂಡ ತಾರಾಗಣ: ಶಿಥಿಲ್ ಶೆಟ್ಟಿ ಐರ್ ಬೈಲ್, ಪ್ರಸನ್ನ ಶೆಟ್ಟಿಗಾರ್, ಮಂದಾರ್ತಿ, ನಾಗಶ್ರೀ, ಉದಯ್ ಕಡಬಾಳ್, ಶಿವರಾಜಕುಮಾರ್, ನವೀನ್ ಶೆಟ್ಟಿ ಇತರರು.
ಯಕ್ಷಗಾನದ ವೇಷಭೂಷಣವೇ ಚಂದ. ಅದರಲ್ಲೂ ಕರಾವಳಿ ಭಾಗದಲ್ಲಿ ಮಾತ್ರ ಕಂಡುಬರುವ ಯಕ್ಷಗಾನದ ಕಲೆ ಎಲ್ಲೆಡೆಯೂ ವಿಸ್ತಾರವಾಗಬೇಕು ಎಂಬ ಉದ್ದೇಶದಿಂದ ರವಿ ಬಸ್ರೂರು ಮತ್ತು ತಂಡ ಒಳ್ಳೆಯ ಕಥೆಯನ್ನು ತೆರೆಮೇಲೆ ಅನಾವರಣಗೊಳಿಸಿದೆ.
ಇಂತಹ ಅಪರೂಪದ ಪ್ರಯತ್ನ ಮೆಚ್ಚಲೇಬೇಕು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಬರುವ ಹಾಡಲ್ಲಿ ಯಕ್ಷಗಾನದ ಕುಣಿತ ಬಳಸಲಾಗುತ್ತಿತ್ತು. ಕರಾವಳಿ ಭಾಗದಲ್ಲಿ ನಿರಂತರವಾಗಿ ಯಕ್ಷಗಾನದ ಪ್ರಸಂಗಗಳು ನಡೆಯುತ್ತವೆ. ಆದರೆ ಮೊದಲ ಸಲ ತೆರೆಗೆ ಯಕ್ಷಗಾನ ಮೂಲಕ ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸ ಕಥೆಯನ್ನು ತರಲಾಗಿದೆ. ಯಕ್ಷಗಾನಕ್ಕೆ ಸಿನಿಮಾ ಸ್ಪರ್ಶ ನೀಡಿರುವುದು ಖುಷಿಯ ಸಂಗತಿ.
ಇಂತಹ ಪ್ರಯೋಗ ಅಪರೂಪ. ಇತಿಹಾಸದ ಕಥೆಯನ್ನು ತೆರೆಗೆ ತರುವುದು ಸುಲಭವಲ್ಲ. ರವಿ ಬಸ್ರೂರು ಮತ್ತು ತಂಡ ಆ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನ ಮಾಡಿದೆ. ಇದು ನಿಜಕ್ಕೂ ದಾಖಲೆಯಾಗಿ ಉಳಿಯಬಲ್ಲ ಚಿತ್ರ.
ಇದು ಪೌರಾಣಿಕ ಕಥೆ ಇರುವಂತಹ ರೂಪಕ. ಅದನ್ನು ಸಿನಿಮಾಗೆ ಅಳವಡಿಸಿರುವ ರವಿ ಬಸ್ರೂರು ಅವರ ಜಾಣತನ ಮತ್ತು ಪರಿಶ್ರಮ ಮೆಚ್ಚಬೇಕು.
ಅಂದಹಾಗೆ ಕಥೆ ಬಗ್ಗೆ ಹೇಳುವುದಾದರೆ, ಅನಾಥ ಬಾಲಕನೊಬ್ಬ ಹೇಗೆ ವೀರ ಚಂದ್ರಹಾಸನಾಗಿ ಬೆಳೆಯುತ್ತಾನೆ. ನಂತರ ಅವನ ಶೌರ್ಯದ ಕಥೆ ಹೇಗೆಲ್ಲಾ ಇರುತ್ತೆ ಅನ್ನೋದೇ ಕಥೆ. ಅದನ್ನು ಅಷ್ಟೇ ರೋಚಕವಾಗಿ ಚಿತ್ರಿಸಲಾಗಿದೆ.
ಒಂದು ಕಥೆಗೆ ಹೊಸ ರೂಪ ಕೊಟ್ಟು, ತದೇಕಚಿತ್ತದಿಂದ ನೋಡುವಂತೆ ಮಾಡಿರುವ ರವಿ ಬಸ್ರೂರು ತಂಡದ ಕೆಲಸ ಒಪ್ಪಬೇಕು.
ಇಲ್ಲಿ ಹೆಚ್ಚಾಗಿ ವಿಎಫ್ ಎಕ್ಸ್ , ಗ್ರಾಫಿಕ್ಸ್ ಬಳಸಲಾಗಿದೆ. ಅದೇ ಸಿನಿಮಾದ ಅಂದವನ್ನು ಹೆಚ್ಚಿಸಿದೆ. ಕಥೆಯಲ್ಲಿ ಬರುವ ರಾಜರ ಸಂಸ್ಥಾನಗಳನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇದೊಂದು ರೀತಿ ಹೊಸ ಪ್ರಪಂಚಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ. ಬಹುತೇಕ ಗ್ರಾಫಿಕ್ಸ್ ಜೊತೆ ಅಲ್ಲಲ್ಲಿ ಸೆಟ್ ಹಾಕಿ ಹಿಸ ಕಲ್ಪನೆಯ ಲೋಕವನ್ನೇ ಸೃಷ್ಟಿಸಲಾಗಿದೆ.
ಇನ್ನು ಸಿನಿಮಾದ ಮೊದಲರ್ಧ ನಿಧಾನವಾಗಿ ಸಾಗುತ್ತೆ.ದ್ವಿತಿಯಾರ್ಧ ಬೇರೆ ಆಯಾಮ ಪಡೆದುಕೊಳ್ಳುತ್ತೆ. ಸಿನಿಮಾದ ವೇಗಕ್ಕೆ ಚಿತ್ರಕಥೆ ಮುಖ್ಯವೆನಿಸಿದೆ. ಇನ್ನು ಸಂಗೀತ ಸಿನಿಮಾದ ಜೀವಾಳ. ಅದೇ ಈ ಸಿನಿಮಾದ ಶಕ್ತಿ ಎನ್ನಬಹುದು. ಇನ್ನು ನಿರೂಪಣೆ ಕೂಡ ನೋಡಿಸಿಕೊಂಡು ಹೋಗುವಂತೆ ಮಾಡುವ ಮೂಲಕ ಸುಂದರ ಇತಿಹಾಸವನ್ನು ಕಟ್ಟಿಕೊಡಲಾಗಿದೆ.
ಇಡೀ ಸಿನಿಮಾ ಯಕ್ಷಗಾನದ ವೇಷಭೂಷಣದಲ್ಲಿ ಸೊಗಸಾಗಿ ಮೂಡಿಬಂದಿದೆ. ಅದ್ಭುತ ಕಲಾವಿದರ ದನಿಯಲ್ಲಿ ಬರುವ ಪದ್ಯಗಳು ಸಿನಿಮಾದ ರೋಚಕತೆಗೆ ಸಾಕ್ಷಿ. ಚಿತ್ರಕಥೆಗೂ ಆ ದನಿಯ ಹಾಡುಗಳು ವೇಗ ಹೆಚ್ಚಿಸಿವೆ. ಮುಖ್ಯವಾಗಿ ಕಾಳಿಂಗ ನಾವಡ ಅವರ ದನಿ ಕೂಡ ಪದ್ಯವೊಂದರಲ್ಲಿದೆ. ಅದನ್ನೂ ಇಲ್ಲಿ ಬಳಸುವ ಮೂಲಕ ಗೌರವಿಸಲಾಗಿದೆ. ಯಕ್ಷಗಾನ ಅಂದರೆ ಹೆಚ್ಚು ಕುಣಿತ. ಅದಕ್ಕೆ ಇಲ್ಲಿ ಅಷ್ಟಾಗಿ ಜಾಗವಿಲ್ಲ. ಕಥೆ ಹೆಚ್ಚು ಕುತೂಹಲ ಕೆರಳಿಸುತ್ತಾ ಹೋಗುತ್ತೆ. ಯಕ್ಷಗಾನದ ಕುಣಿತ ಇಲ್ಲವೆಂಬ ಸಣ್ಣ ಬೇಸರ ಬಿಟ್ಟರೆ ಬೇರೆ ಯಾವ ದೋಷವೂ ಇಲ್ಲಿಲ್ಲ.
ಚಂದ್ರಹಾಸ ಮತ್ತು ವಿಷಯೆ ಅವರ ಮದುವೆ ಪ್ರಸಂಗ ಕೊಂಚ ಬೋರು ಎನಿಸುತ್ತೆ. ಉಳಿದಂತೆ ಸಿನಿಮಾ ಕಥೆ ಹೊಸತನ್ನೇ ಸೃಷ್ಟಿಸಿದೆ.
ಮುಖ್ಯವಾಗಿ ಇಲ್ಲಿ ಸಂಭಾಷಣೆ ಹೈಲೆಟ್. ರವೀಂದ್ರ ದೇವಾಡಿಗ ಹಾಗು ಶ್ರೀಧರ ಅವರ ಹಾಸ್ಯ ಮಾತುಗಳ ಬರಹ ನಗೆ ಬುಗ್ಗೆ ಎಬ್ಬಿಸುತ್ತವೆ.
ಕಿರಣ್ ಕುಮಾರ ಅವರ ಕ್ಯಾಮರಾ ಕೈಚಳಕ ಕೆಲಸ ಮಾಡಿದೆ. ಕಲಾ ನಿರ್ದೇಶಕ ಪ್ರಭು ಬಡಿಗೇರ್ ಕೆಲಸ ಗಮನ ಸೆಳೆಯುತ್ತೆ.
ಇನ್ನು ಇಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು ಏನೆಂದರೆ ಎ ಐ ತಂತ್ರಜ್ಞಾನ. ಆ ಮೂಲಕ ಯಕ್ಷಗಾನ ವೇಷದಲ್ಲಿ ಪುನೀತ್ ರಾಜಕುಮಾರ್ ದೃಶ್ಯ ಸೊಗಸಾಗಿದೆ. ಸಿಂಗನಲ್ಲೂರು ಸಂಸ್ಥಾನದ ರಾಜನಾಗಿ ರಾಜಕುಮಾರ್ ಅವರನ್ನು ಸೃಷ್ಟಿಸಿರುವುದು ವಿಶೇಷ ಎನಿಸುತ್ತೆ.
ಸಿಂಗನಲ್ಲೂರು ಸಂಸ್ಥಾನದ ನಾಡ ಚಕ್ರವರ್ತಿ ಶಿವಪುಟ್ಟಸ್ವಾಮಿ ಪಾತ್ರದಲ್ಲಿ ಶಿವರಾಜಕುಮಾರ್ ಕೂಡ ಇಷ್ಟವಾಗುತ್ತಾರೆ. ದುಷ್ಟಬುದ್ಧಿ ಪಾತ್ರದ ಮೂಲಕ ಪ್ರಸನ್ನ ಶೆಟ್ಟಿಗಾರ್ ಗಮನ ಸೆಳೆಯುತ್ತಾರೆ. ಚಂದ್ರಹಾಸನಾಗಿ ಶಿಥಿಲ್ ಶೆಟ್ಟಿ ಚಪ್ಪಾಳೆ ಗಿಟ್ಟಿಸುತ್ತಾರೆ. ಉಳಿದಂತೆ ಇಲ್ಲಿನ ಕ್ಲೈಮ್ಯಾಕ್ಸ್ ನಲ್ಲಿ ಸಮುದ್ರ ಸೇನನಾಗಿ ಚಂದನ್ ಶೆಟ್ಟಿ, ಗರುಡಾಕ್ಷನಾಗಿ ಗರುಡರಾಮ್ ಪಾತ್ರಗಳೂ ಬರುತ್ತವೆ. ಈ ಕಥೆ ಮುಂದಿನ ಭಾಗಕ್ಕೂ ವಿಸ್ತರಿಸಲಾಗಿದೆ.
ಕೊನೆ ಮಾತು: ಇಂತಹ ಪ್ರಯೋಗದ ಸಿನಿಮಾಗೆ ಮೆಚ್ಚುಗೆ ಕೊಡಬೇಕು. ದಾಖಲೆಯಾಗಿ ಉಳಿಯುವಂತಹ ಪ್ರಯತ್ನ ಹೆಚ್ಚಾಗಬೇಕೆಂಬುದು ಸಿನಿಮಾ ನೋಡಿ ಹೊರಬಂದವರ ಮಾತು.
ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಫೈರ್ ಫ್ಲೈ ಸಿನಿಮಾ ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಇಂಡಸ್ಟ್ರೀಯಲ್ಲಿ ಬಜ್ ಕ್ರಿಯೇಟ್ ಮಾಡಿದೆ. ಅಣ್ಣಾವ್ರ ಜನ್ಮದಿನ ಅಂದ್ರೆ ಇದೇ ತಿಂಗಳ 24ಕ್ಕೆ ತೆರೆಗೆ ಬರ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಅದರ ಭಾಗವಾಗಿ ನಿನ್ನೆ ಶಿವಣ್ಣನ ನಿವಾಸದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯ್ರಕಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫೈರ್ ಫ್ಲೈ ಇಡೀ ತಂಡ ಹಾಗೂ ಶಿವಣ್ಣ ದಂಪತಿ ಭಾಗಿಯಾಗಿ ಹೊಸಪ್ರತಿಭೆಗಳ ಕನಸಿಗೆ ಬೆನ್ನುತಟ್ಟಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಶಿವಣ್ಣ ಮಾತನಾಡಿ, ಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ಕಥೆ ಕೇಳಿದೆ ವಿಭಿನ್ನವಾಗಿತ್ತು. ಕೇಳಿದ ತಕ್ಷಣ ಹೃದಯಕ್ಕೆ ಸೇರಿತು. ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಬರೀ ಫೈಟ್, ಡ್ಯುಯೇಟ್ ಸಾಂಗ್ ಮಾಡಬಹುದು. ಆದರೆ ಫೈರ್ ಫ್ಲೈ ವ್ಯಾಲ್ಯೂ ಸಬ್ಜೆಕ್ಟ್ ಇರುವ ಚಿತ್ರ. ವಂಶಿ ಒಳ್ಳೆ ಕಥೆ ಮಾಡಿದ್ದಾರೆ.
ಒಳ್ಳೆ ತಂಡ ಚಿತ್ರಕ್ಕೆ ಕೆಲಸ ಮಾಡಿದೆ. ಚರಣ್ ರಾಜ್ ಸಂಗೀತ ಬಗ್ಗೆ ಮಾತನಾಡುವ ಆಗಿಲ್ಲ. ನಮ್ಮ ಕನ್ನಡದಲ್ಲಿಯೂ ಹೊಸ ತಂಡ ಬರಬೇಕು. ಹೊಸ ಅಲೆ ಬರಬೇಕು ಎಂಬ ಉದ್ದೇಶದಿಂದ ನನ್ನ ಆಸೆ. ಅವರೇ ನಮ್ಮ ಭಾಷೆ, ಸಂಸ್ಕೃತಿಯನ್ನು ಕರೆದುಕೊಂಡು ಹೋಗಬೇಕು. ಸಿನಿಮಾ ಹೇಗೆ ಹೋಗುತ್ತದೆ. ಬಿಡುತ್ತದೆ ಅದು ಎರಡನೇಯದ್ದು. ಆದರೆ ನಮ್ಮ ಪ್ರಯತ್ನ ಇರಬೇಕು. ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಹೊಸ ಹುಡುಗರು ನಮ್ಮನ್ನು ಇನ್ನಷ್ಟು ಯಂಗ್ ಆಗಿ ತೋರಿಸಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಹೊಸ ತಂಡ ಹೊಸ ಪ್ರಯತ್ನ ಮಾಡಿದೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ಕೊಡಬೇಕು. ಈ ಚಿತ್ರವನ್ನು ಕುಮಾರ್ ಅವರು ಡಿಸ್ಟ್ರೀಬ್ಯೂಟ್ ಮಾಡುತ್ತಿದ್ದಾರೆ. ಅದಕ್ಕೆ ತುಂಬಾ ಧನ್ಯವಾದ. ವಂಶಿ ಹೇಳಿದ ಕಥೆ ಕೇಳಿ ಅವಳಿಗೆ ಅವರ ತಂದೆಗೂ ಇಷ್ಟವಾಯ್ತು. ಅದು ಈಗ ಇಲ್ಲಿವರೆಗೂ ಬಂದು ನಿಂತಿದೆ.
ನಿರ್ಮಾಪಕಿ ನಿವೇದಿತಾ ಶಿವರಾ ಕುಮಾರ್, ಇದು ನನ್ನ ಮೊದಲ ಸಿನಿಮಾ. ತಾತನ ಹುಟ್ಟುಹಬ್ಬದ ದಿನ ಬರುತ್ತಿರುವುದು ಬಹಳ ಖುಷಿ ಇದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿಲ್ಲ ಎಂದು ಎಲ್ಲರೂ ಕೇಳುತ್ತಾರೆ. ನಾವು ಅದಕ್ಕೆ ಒಳ್ಳೆ ಸಿನಿಮಾ ಕೊಟ್ಟರೆ ಖಂಡಿತ ಬರುತ್ತಾರೆ. ಏಪ್ರಿಲ್ 24 ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲರೂ ಥಿಯೇಟರ್ ನಲ್ಲಿಯೇ ಫೈರ್ ಫ್ಲೈ ಸಿನಿಮಾ ನೋಡಿ ಎಂದರು.
ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್ ಫ್ಲೈ ಸಿನಿಮಾದಲ್ಲಿ ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. . ಜಯ್ ರಾಮ್ ಚಿತ್ರದ ಸಹ-ನಿರ್ದೇಶಕ. ಅಭಿಲಾಷ್ ಕಳತ್ತಿ ಅವರ ಕ್ಯಾಮರಾ ವರ್ಕ್, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಚಿತ್ರಕ್ಕಿದೆ.
ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್ ಫ್ಲೈ ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರ್ತಿದೆ. ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಆದರೆ, ಕಿಂಗ್ಸ್ ಅನ್ನೋದು ಇಲ್ಲಿ ಶಿವಣ್ಣನಿಗೆ ಸೂಟೇಬಲ್ ಆಗಿದೆ. ಶಿವಣ್ಣ ಕಿಂಗ್ ಅಲ್ವೇ? ಅದಕ್ಕೇನೆ ಈ ಹೆಸರು ಇಟ್ಟಂತೇನೆ ಇದೆ. ಆದರೆ, ಶಿವಣ್ಣ ಇಂತಹ ರೋಲ್ ಯಾಕೆ ಮಾಡಿದ್ರು ಅನ್ನೋದನ್ನು ನೀವು ಥಿಯೇಟರ್ ನಲ್ಲಿಯೇ ನೋಡಬೇಕು.
ಕನ್ನಡ ಖ್ಯಾತ ಹಾಸ್ಯನಟ ಬ್ಯಾಂಕ್ ಜನಾರ್ಧನ್ (76) ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ.
ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.
800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧನ್ ನಟಿಸಿದ್ದರು. . ರಂಗಭೂಮಿ, ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದರು.
ಕಲಾವಿದರಾಗಿದ್ದ ಅವರು ಆರ್ಥಿಕವಾಗಿ ಅಷ್ಟೇನೂ ಸದೃಢರಾಗಿರಲಿಲ್ಲ.
ಅವರ ಹೆಸರ ಮುಂದೆ ಬ್ಯಾಂಕ್ ಹೆಸರಿತ್ತು. ಆದರೆ ಅವರ ಬ್ಯಾಂಕ್ ಖಾತೆಯಲ್ಲಿ ಏನೂ ಇರುತಗತಿರಲಿಲ್ಲ ಅಂತ ಹಿಂದೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಆರಂಭದಲ್ಲಿ ಬ್ಯಾಂಕ್ ಕೆಲಸದಲ್ಲಿದ್ದರು. ಅದರ ಹೊಯೆಯಲ್ಲೇ ಜನಾರ್ಧನ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಅವಕಾಶಗಳು ಹೆಚ್ಚಾದಾಗ ಅನಿವಾರ್ಯವಾಗಿ ಬ್ಯಾಂಕ್ ಕೆಲಸ ಬಿಡುವಂತಾಯಿತು. 90ರ ದಶಕದ ಆರಂಭದಲ್ಲೇ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಜನಾರ್ಧನ್ 11 ವರ್ಷಗಳ ಬಳಿಕ ಕೆಲಸ ಬಿಟ್ಟು ಸಂಪೂರ್ಣವಾಗಿ ಸಿನಿಮಾಗಳಲ್ಲಿ ನಿರತರಾಗಿದ್ದರು.
ಆಗ ಜನಾರ್ಧನ್ ಎಂಬ ಹೆಸರಿನ ಸಾಕಷ್ಟು ಜನ ಆಗ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ವಿಭಿನ್ನವಾಗಿರಲಿ, ಗುರುತಿಸಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಬ್ಯಾಂಕ್ ಜನಾರ್ಧನ್ ಎಂದು ಬದಲಿಸಿಕೊಂಡಿದ್ದರು.
60 ನಿಮಿಷ 16 ಸಾವಿರ ಟಿಕೆಟ್ ಸೋಲ್ಡ್ ಔಟ್…ಮೇ.31ಕ್ಕೆ ಕೆವಿಎನ್ ಪ್ರಸ್ತುತ ಬೆಂಗಳೂರಿನಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ಸಂಜೆ!
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ. ದುಬೈ, ಆಸ್ಟ್ರೇಲಿಯಾ. ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ. ಅದೂ ಕೂಡ ನಮ್ಮ ಬೆಂಗಳೂರಿಗೆ. ಅನಿರುದ್ಧ್ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮ್ಯೂಸಿಕ್ ಜಾತ್ರೆ ಮಾಡಲು ರೆಡಿಯಾಗಿದ್ದಾರೆ.
ಮೇ 31ರಂದು ಟೆರಾಫಾರ್ಮ್ ಅರೇನಾದಲ್ಲಿ ನಡೆಯುವ ಮ್ಯೂಸಿಕ್ ಕನ್ಸರ್ಟ್ ಈಗಾಗಲೇ ಬೃಹತ್ ದಾಖಲೆ ಕ್ರಿಯೇಟ್ ಮಾಡಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕನ್ಸರ್ಟ್ ನ್ನು ಕೆವಿಎನ್ ಸಂಸ್ಥೆ ಪ್ರಸ್ತುಪಡಿಸಿದೆ. ವಿಶೇಷ ಅಂದರೆ ʼಅನಿರುದ್ಧ್ ಅವರ ಹುಕುಂ ಟೂರ್ ಬೆಂಗಳೂರು ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್ಗಳು ಕೇವಲ 60 ನಿಮಿಷದಲ್ಲೇ ಮಾರಾಟವಾಗಿದೆ ʼ ಅಂತ ಕೆವಿಎನ್ ಸಂಸ್ಥೆ ನಿರ್ಮಾತೃ ವೆಂಕಟ ಕೆ ನಾರಾಯಣ ಖಚಿತಪಡಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಜೆಗೆ ಕಾದಿದ್ದ ಸಿಲಿಕಾನ್ ಸಿಟಿಯ ಮಂದಿ, ವೇಗವಾಗಿ ಟಿಕೆಟ್ಸ್ಗಳನ್ನು ಖರೀದಿಸಿದ್ದಾರೆ. ಬೀಸ್ಟ್ ಮ್ಯೂಸಿಕ್ ಮೂಡ್ ಗೆ ಸಿಲಿಕಾನ್ ಸಿಟಿ ಮಂದಿ ಯಾವ ರೀತಿ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿದೆ.
ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಸರ್ಪ್ರೈಸ್ಗಳು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆಗಳಿವೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ.