Categories
ಸಿನಿ ಸುದ್ದಿ

ಸಿದ್ಲಿಂಗು ಕಾರುಬಾರು ಸಖತ್ ಗುರೂ!

ಚಿತ್ರ: ಸಿದ್ಲಿಂಗು 2
ನಿರ್ದೇಶನ: ವಿಜಯಪ್ರಸಾದ್
ನಿರ್ಮಾಣ: ಶ್ರೀ ಹರಿ, ರಾಜು ಶೇರಿಗಾರ್
ತಾರಾಗಣ: ಲೂಸ್ ಮಾದ ಯೋಗಿ, ಸೋನು ಗೌಡ, ಬಿ ಸುರೇಶ, ಸುಮನ್ ರಂಗನಾಥ್‌, ಪದ್ಮಜಾ ರಾವ್, ಸೀತಾ ಕೋಟೆ, ಮಂಜುನಾಥ್ ಹೆಗಡೆ ಇತರರು.

ಮಂಗಳ ಅಂದರೆ ಜೀವ. ಜೀವನೇ ಇರದ ಮುಖ ಹೇಗೆ ನೋಡಲಿ…
ಸಿದ್ಲಿಂಗು ಈ ರೀತಿ ಹೇಳುವ ಮೂಲಕ ಕಥೆ ಶುರುವಾಗುತ್ತೆ. ನೋಡುಗರು ಈ ಸಿದ್ಲಿಂಗು ಮೇಲೆ ನಿರೀಕ್ಷೆ ಇಟ್ಟುಕೊಂಡು ಬಂದರೆ ಮೋಸ ಆಗಲ್ಲ. ಈ ಬಾರಿ ನಿರ್ದೇಶಕರ ಮೂಲ ಆಶಯ ತಲುಪಿದೆ. ಸಿದ್ಲಿಂಗು ಚಿತ್ರದಲ್ಲಿ ನಿರ್ದೇಶಕರು ಇಷ್ಟವಾಗಿದ್ದರು. ಆದರೆ, ಒಂದಷ್ಟು ಡಬ್ಬಲ್ ಮೀನಿಂಗ್ ಮಾತುಗಳಿಂದ ಅದು ಬೇಕಿತ್ತಾ ಎಂಬ ಪ್ರಶ್ನೆಗೂ ಕಾರಣರಾಗಿದ್ದರು. ಆದರೆ, ಸಿದ್ಲಿಂಗು 2 ಸಿನಿಮಾದಲ್ಲಿ ವಿಜಯ ಪ್ರಸಾದ್ ಅವರು ಸಂಪೂರ್ಣ ಬದಲಾಗಿದ್ದಾರೆ ಅಂತಾನೇ ಹೇಳಬಹುದು. ಅದಕ್ಕೆ ಕಾರಣ, ಅವರು ಮುಂದುವರೆಸಿರುವ ಗಟ್ಟಿ ಕಥೆ. ಕಟ್ಟಿಕೊಟ್ಟಿರುವ ಚಿತ್ರಣ. ಮಾತುಗಳಲ್ಲಿರುವ ಹಿಡಿತ. ಹಾಗಾಗಿ ಒಂದೊಳ್ಳೆಯ ಸಿನಿಮಾ ಕೊಡಬೇಕೆಂಬ ಅವರ ಆಶಯ ಇಲ್ಲಿ ಈಡೇರಿದಂತಿದೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ್ದು ಅವರ ಚಿತ್ರಕಥೆ. ಅದು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲೂ ತಮಾಷೆ ಇದೆ, ಹೇರಳ ಮಾತುಗಳೂ ಇವೆ. ಆದರೆ, ಅವ್ಯಾವು ಅಪಾರ್ಥ ತರುವುದಿಲ್ಲ. ಅಶ್ಲೀಲ ಎನಿಸುವುದಿಲ್ಲ. ಡಬ್ಬಲ್ ಮೀನಿಂಗ್ ಅಲ್ಲೇ ಅಲ್ಲ. ಆದರೂ, ಪಾತ್ರಗಳ ಮೂಲಕ ಹೊರಬರುವ ಮಾತುಗಳಲ್ಲಿ ನಗುವಿದೆ. ಅಲ್ಲಲ್ಲಿ ಅಪಹಾಸ್ಯವೂ ಇದೆ. ಹಾಗಾಗಿ ಈ ಚಿತ್ರ ನೋಡುಗರಿಗೆ ಸಂಪೂರ್ಣ ರುಚಿಸುತ್ತೆ. ಇಲ್ಲೂ ವಿಶಾಲು, ಮಿಣಿ ಮಿಣಿ, ಮುಕುಂದರಾಯ, ಅಮವಾಸ್ಯೆ ಆನಂದ ಹೀಗೆ ಒಂದಷ್ಟು ವಿಶೇಷ ಎನಿಸುವ ಪಾತ್ರಗಳು ಗಮನಸೆಳೆಯುತ್ತವೆ. ಅಲ್ಲಿ ಮಂಗಳಾ ಟೀಚರ್ ಇದ್ದರು. ಇಲ್ಲಿ ನಿವೇದಿತಾ ಎಂಬ ಹೊಸ ಟೀಚರ್ ಬಂದಿದ್ದಾರೆ. ಇಲ್ಲೂ ಅವರ ಕನಸಿನ ಕಾರು ಇದೆ. ಆದರೆ, ಈ ಸಲ ಆ ಕಾರು ತಮ್ಮದಾಗಿಸಿಕೊಳ್ತಾರ ಸಿದ್ಲಿಂಗು ಅನ್ನುವ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ಸಿನಿಮಾದಲ್ಲಿ ಮಜವೆನಿಸುವ ದೃಶ್ಯಗಳಿವೆ. ಡೈಲಾಗ್ ಇವೆ. ತರಹೇವಾರಿ ಪಾತ್ರಗಳೂ ಇವೆ. ಇಲ್ಲಿ ಮೈಸೂರನ್ನು ಸೊಗಸಾಗಿ ತೋರಿಸಿರುವ ಪ್ರಯತ್ನ ಸಫಲವಾಗಿದೆ. ಎಲ್ಲೂ ಬೋರ್ ಎನಿಸದೆ, ಡೈಲಾಗ್ ಮೂಲಕವೇ ಹೂರಣ ತಿಂದಷ್ಟೇ ಖುಷಿಪಡಿಸಿದ್ದಾರೆ ನಿರ್ದೇಶಕರು. ಆದರೆ, ಸಿನಿಮಾದಲ್ಲಿ ಹಾಡುಗಳು ಗುನುಗುವಂತಿಲ್ಲ. ಇಲ್ಲಿ ಅನೂಪ್ ಸೀಳಿನ್ ಅವರು ಹೆಚ್ಚು ಗಮನಸೆಳೆದಿಲ್ಲ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಹೆಚ್ಚು ಒತ್ತು ಕೊಡಬಹುದಿತ್ತು. ನಿರ್ದೇಶಕರು ಇಲ್ಲಿ ಒಂದು ಜಾಣತನ ಮೆರೆದಿದ್ದಾರೆ. ಅದೇನೆಂದರೆ, ಪ್ರತಿ ಪಾತ್ರಗಳಲ್ಲೂ ಆಗಾಗ ಒಂದಷ್ಟು ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟಿಗರು ಬಂದು ಹೋಗುತ್ತಾರೆ. ಇಲ್ಲಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಶಿವಣ್ಣ, ಪೂಜಾಗಾಂಧಿ, ರಮ್ಯಾ, ಟೈಗರ್ ಪ್ರಭಾಕರ್, ಮುನಿರತ್ನ, ಪಬ್ಲಿಕ್ ಟಿವಿ ರಂಗಣ್ಣ ಹೀಗೆ ಒಂದಷ್ಟು ಖ್ಯಾತನಾಮರ ಹೆಸರುಗಳು ಬಂದು ಹೋಗುತ್ತವೆ. ಸಂದರ್ಭಕ್ಕೆ ನಗುವನ್ನೂ ತರಿಸುತ್ತವೆ. ಯಾಕೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು ಕೆಲವು ಕಡೆ ಎಮೋಷನಲ್ ಕೂಡ ಇದೆ. ಪ್ರೀತಿಯ ಜೊತೆ, ಭಾವುಕತೆ ಎನಿಸುವ ದೃಶ್ಯಗಳಿವೆ. ಅದು ಸಿನಿಮಾದ ಮತ್ತೊಂದು ಪ್ಲಸ್ ಎನ್ನಬಹುದು.

ಸಿನಿಮಾ ಕಥೆ ಸರಳವಾಗಿದೆ. ಎಲ್ಲೂ ಅದ್ಧೂರಿತನ ಎಂಬುದಿಲ್ಲ. ನೀಟ್ ಆಗಿ ನೋಡಿಸಿಕೊಂಡು ಹೋಗುವ ಸಿನಿಮಾ ಇದು. ವಿನಾಕಾರಣ ದೃಶ್ಯಗಳಿಲ್ಲ. ಅನಗತ್ಯ ಕಿರಿ ಕಿರಿ ಎನಿಸುವ ಮಾತುಗಳಿಲ್ಲ. ಆದರೆ, ಭಾವುಕತೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಡಬಹುದಿತ್ತು. ಅದಿ್ಲ್ಲಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಸಿನಿಮಾದಲ್ಲಿ ಹುಡುಕಿದರೆ ಸಣ್ಣಪುಟ್ಟ ಮೈನಸ್ ಅಂಶಗಳಿವೆಯಾದರೂ, ಪ್ರತೀ ದೃಶ್ಯಗಳಲ್ಲಿ ಹಾಸ್ಯ ಹಿಡಿದಿಟ್ಟುಕೊಂಡಿರುವುದರಿಂದ ಅವೆಲ್ಲವೂ ಮಾಯವಾಗುತ್ತವೆ. ಒಟ್ಟಾರೆ, ಒಂದು ನೀಟ್ ಸಿನಿಮಾ ಇದಾಗಿದ್ದು, ಕೊಟ್ಟ ಕಾಸಿಗೆ ಮೋಸ ಆಗಲ್ಲ.

ಯೋಗಿ ಇಲ್ಲಿ ನಿಜಕ್ಕೂ ಹೈಲೆಟ್ ಆಗಿದ್ದಾರೆ. ಮೊದಲ ಸಿದ್ಲಿಂಗು ಸಿನಿಮಾದಲ್ಲಿ ಅವರ ತುಂಟತನ ಜಾಸ್ತಿ ಇತ್ತು. ಪೋಲಿ ಎನಿಸುವ ಮಾತುಗಳಿದ್ದವು. ಆದರೆ, ಇಲ್ಲಿ ಅದು ಕಮ್ಮಿ. ಒಂದಷ್ಟು ಪ್ರಬುದ್ಧರಾಗಿದ್ದಾರೆ. ಆ ಮೂಲಕ ಎಲ್ಲರಿಗೂ ಇಷ್ಟವಾಗುತ್ತಾರೆ. ಸೋನು ಗೌಡ ಅವರಿಲ್ಲಿ ನಿವೇದಿತಾ ಟೀಚರ್ ಆಗಿ ಇಷ್ಟವಾಗುತ್ತಾರೆ. ಸಿದ್ಲಿಂಗು ಕನಸಿಗೆ ಬಣ್ಣ ತುಂಬುವ ಹುಡುಗಿಯಾಗಿ ಸೈ ಎನಿಸಿಕೊಂಡಿದ್ದಾರೆ. ಬಿ.ಸುರೇಶ ಅವರ ಎಂದಿನ ಗತ್ತಿನ ನಟನೆ ಇಲ್ಲೂ ಮುಂದುವರೆದಿದೆ. ಮುಖ್ಯವಾಗಿ ಇಲ್ಲಿ ಪದ್ಮಜಾರಾವ್ ಗಮನಸೆಳೆದಿದ್ದಾರೆ. ಸುಮನ್ ರಂಗನಾಥ್ ಇಲ್ಲೂ ಇದ್ದಾರೆ. ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಮಂಜುನಾಥ್ ಹೆಗಡೆ ನಟನೆ ಇಲ್ಲಿ ಆಕರ್ಷಣೆ ಎನಿಸುತ್ತೆ. ಮಹಾಂತೇಶ್ ಹಿರೇಮಠ ಇತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲಿ ನಿರ್ದೇಶಕರೂ ಇದ್ದಾರೆ. ಅದನ್ನು ಸಿನಿಮಾದಲ್ಲೇ ನೋಡಿ ಜೈ ಎನ್ನಬೇಕು.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಕಾಡುವ ನೋಡುವ ಪ್ರೇಮಕಥೆ

ಚಿತ್ರ: ಭುವನಂ ಗಗನಂ
ನಿರ್ಮಾಣ:ಎಂ.ಮುನೇಗೌಡ
ನಿರ್ದೇಶನ:ಗಿರೀಶ್ ಮೂಲಿಮನಿ
ತಾರಾಗಣ:ಪ್ರಮೋದ್, ಪೃಥ್ವಿ ಅಂಬರ್, ರೇಚಲ್ ಡೇವಿಡ್, ಶರತ್ ಲೋಹಿತಾಶ್ವ, ಅಚ್ಯುತ್​ ಕುಮಾರ್, ಪೊನ್ನು ಅಶ್ವತಿ ಇತರರು.

ನೀವು ಎಲ್ಲಿಗೆ ಹೋಗೋದು?
ನಾನು ಕನ್ಯಾಕುಮಾರಿಗೆ ಹೋಗ್ತಾ ಇದೀನಿ…
ನಾನು ಅಲ್ಲಿಗೇ ಬರ್ತೀನಿ…

ಸಿನಿಮಾ ಶುರುವಾದ ಸ್ವಲ್ಪ ಹೊತ್ತಿಗೆ ಬರುವ ಆ ಇಬ್ಬರ ನಡುವಿನ ಸಂಭಾಷಣೆ ಇದು. ಅವರಿಬ್ಬರೂ ಕನ್ಯಾಕುಮಾರಿಯತ್ತ ಪಯಣ ಬೆಳೆಸುತ್ತಾರೆ. ಆ ಜರ್ನಿ ನಡುವೆ ಅವರಿಬ್ಬರ ಮಾತು, ತುಂಟತನ, ಎಮೋಷನ್, ನಗು, ಅಳು ಎಲ್ಲವೂ ಮೇಳೈಸುತ್ತಲೇ ನೋಡುಗರನ್ನು ಭಾವುಕತೆಗೆ ದೂಡುತ್ತಾ ಹೋಗುತ್ತೆ. ಸಿನಿಮಾದ ಕಥೆ ತುಂಬಾ ಸಿಂಪಲ್. ಆದರ, ಅದರ ಆಶಯ ಹೊಸದಾಗಿದೆ. ಪ್ರೀತಿ ಮಾಡುವುದು ದೊಡ್ಡದ್ದಲ್ಲ. ಅದನ್ನು ಕೊನೆಯವರೆಗೆ ಉಳಿಸಿಕೊಳ್ಳೋದು ದೊಡ್ಡದು ಅನ್ನುವ ಸಾರಾಂಶ ಇಲ್ಲಿದೆ. ಇದೊಂದು ಮನಸ್ಸಿಗೆ ನಾಟುವ ಲವ್ ಸ್ಟೋರಿ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಅವರಿಬ್ಬರಿಗೂ ಒಬ್ಬೊಬ್ಬ ನಾಯಕಿಯರಿದ್ದಾರೆ. ಇಬ್ಬರದೂ ಲವ್ ಸ್ಟೋರಿ ಇದೆ. ಆ ಎರಡು ಲವ್ ಸ್ಟೋರಿ ಟ್ರಾಕ್ ಮಾತ್ರ ಬೇರೆ ಬೇರೆ. ಕೊನೆಯವರೆಗೂ ಅವರಿಬ್ಬರ ಪ್ರೇಮಕಥೆ ಕಾಡುತ್ತೆ, ಅಲ್ಲಲ್ಲಿ ಅಳಿಸುತ್ತೆ, ಕೊಂಚ ಭಾವನಾಲೋಕಕ್ಕೆ ದೂಡುತ್ತೆ. ಅಷ್ಟಕ್ಕೂ ಅವರಿಬ್ಬರ ಲವ್ ಎಂಥದ್ದು ಅನ್ನುವುದಕ್ಕೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಇಲ್ಲಿ ಆಳವಾದ ಪ್ರೀತಿ ಇದೆ. ಒರಟುತನದೊಳಗಿನ ಮೃದುಧೋರಣೆಯ ಮನಸ್ಸಿದೆ. ಮುಗ್ಧತೆ ಇದೆ. ದಡ್ಡತನವಿದೆ. ಜಾಣತನವೂ ಇದೆ. ಒಟ್ಟಾರೆ. ಇಡೀ ಸಿನಿಮಾ ಮುದ ಕೊಡುವಂತಹ ವಾತಾವರಣ ಸೃಷ್ಟಿಸುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಪ್ರೀತಿಯ ಕಥೆಗಳಿಗೆ ಅದರದ್ದೇ ಆದ ಶಕ್ತಿ ಇರುತ್ತೆ. ಅಂಥದ್ದೊಂದು ಶಕ್ತಿ, ಸೆಳೆತ ಈ ಕಥೆಯಲ್ಲಿದೆ. ನಿರ್ದೇಶಕರ ನಿರೂಪಣೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ಅದನ್ನು ಹೊರತು ಪಡಿಸಿದರೆ ಚಿತ್ರಕಥೆಯ ವೇಗ ಸಿನಿಮಾವನ್ನು ನೋಡುವಂತೆ ಮಾಡಿದೆ. ಉಳಿದಂತೆ ಚಿತ್ರದುದ್ದಕ್ಕೂ ಬರುವ ಕೆಲ ಟ್ವಿಸ್ಟುಗಳು ಸಿನಿಮಾದ ಹೈಲೆಟ್ ಅನ್ನಬಹುದು. ಇಲ್ಲೂ ಕೆಲವು ಅನಗತ್ಯ ದೃಶ್ಯಗಳಿವೆ. ಅದನ್ನು ಬದಿಗೊತ್ತಿ ನೋಡಿದರೆ, ಸಿನಿಮಾ ಆಪ್ತವಾಗುತ್ತ ಹೋಗುತ್ತದೆ.

ಕಥೆ ಏನು?

ನಾಯಕ ಅಭಿ (ಪ್ರಮೋದ್) ಓದುವ ಕಾಲೇಜಿನಲ್ಲೇ ನಾಯಕಿ ರಚೇಲ್ ಡೇವಿಡ್ ಇರ್ತಾಳೆ. ಆಕೆಯನ್ನು ನೋಡಿದ ಕೂಡಲೇ ಅವನು ನೇರವಾಗಿ ಮದ್ವೆ ಆಗ್ತೀಯಾ ಅಂತ ಕೇಳ್ತಾನೆ. ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ. ಅದು ಮದ್ವೆಗೂ ತಿರುಗುತ್ತೆ. ಎಲ್ಲಾ ಪ್ರೇಮಿಗಳ ಕಥೆಯಲ್ಲಿ ಅಪ್ಪಂದಿರೇ ವಿಲನ್. ಇಲ್ಲೂ ನಾಯಕಿಯ ಅಪ್ಪನೇ ವಿಲನ್. ಅವರ ವಿರೋಧದ ನಡುವೆಯೂ ಮದ್ವೆ ಆಗುತ್ತೆ. ಆ ಮದ್ವೆ ಕೊನೆಯವರೆಗೆ ಉಳಿಯುತ್ತಾ ಇಲ್ಲವಾ ಅನ್ನೋದೇ ಒಂದು ಕಥೆ. ಇದು ಒಂದು ಜೋಡಿಯ ಕಥೆಯಾದರೆ, ಇನ್ನೊಂದು ಜೋಡಿಯ ಕಥೆ ಇದಕ್ಕಿಂತಲೂ ಭಿನ್ನ. ಅವನ ಹೆಸರು ರಾಮ್. ತುಂಬ ಮುಗ್ಧ, ಒಂದು ರೀತಿ ಜಾಣದಡ್ಡ! ಬಾಲ್ಯದಲ್ಲಿ ಸಿಗುವ ಗೆಳತಿ ಜೊತೆ ಹೆಚ್ಚು ಒಡನಾಟ. ಯೌವ್ವನಕ್ಕೆ ಬರುವ ಹೊತ್ತಿಗೆ ಇಬ್ಬರ ನಡುವೆ ಚಿಗುರಿದ ಪ್ರೀತಿ. ಆ ಪ್ರೀತಿ ಮೇಲೆ ಒಬ್ಬನ ಕಣ್ಣು. ಈ ಮಧ್ಯೆ ಅವರಿಬ್ಬರ ಪ್ರೀತಿ ಉಳಿಯುತ್ತಾ ಇಲ್ಲವಾ ಅನ್ನೋದು ಕಥೆ. ಇಲ್ಲಿ ಎಮೋಷನಲ್ ಅಂಶಗಳು ತುಂಬಿರುವುದರಿಂದ ನೋಡುಗರ ಕಣ್ಣು ಒದ್ದೆ ಮಾಡುತ್ತದೆ. ಎಲ್ಲೋ ಒಂದು ಕಡೆ ಸಿನಿಮಾದ ವೇಗ ಕಮ್ಮಿ ಆಯ್ತು ಅನ್ನುವ ಹೊತ್ತಿಗೆ ಹಾಡು, ಫೈಟು ಎದುರಾಗಿ ವೇಗಮಿತಿ ಹೆಚ್ಚುತ್ತದೆ. ಒಂದು ನವಿರಾದ ಲವ್ ಸ್ಟೋರಿಯನ್ನು ತುಂಬಾ ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಎರಡು ಲವ್ ಸ್ಟೋರಿ ಇಲ್ಲಿದ್ದರೂ, ಎರಡಕ್ಕೂ ತನ್ನದೇ ಆದ ಗಟ್ಟಿತನವಿದೆ. ನೋಡುಗರನ್ನು ಅತ್ತಿತ್ತ ಅಲ್ಲಾಡಿಸದಂತೆ ನೋಡಿಸಿಕೊಂಡು ಹೋಗುವ ತಾಕತ್ತು ಈ ಸ್ಟೋರಿಗಿದೆ.

ಸಿನಿಮಾದಲ್ಲಿ ಪ್ರಮೋದ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಒರಟು ಪಾತ್ರವಾದರೂ, ಅಲ್ಲಲ್ಲಿ ಪಾಪ ಎನಿಸುವಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ. ಅವರ ಡೈಲಾಗ್ ಡಿಲವರಿ, ಬಾಡಿಲಾಂಗ್ವೇಜ್ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಫೈಟ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಪೃಥ್ವಿ ಅಂಬರ್ ಅವರ ಪಾತ್ರ ವಿಶೇಷ ಎನಿಸುತ್ತೆ. ಪೃಥ್ವಿ ಆ ಪಾತ್ರವನ್ನು ಜೀವಿಸಿದ್ದಾರೆ. ನೋಡುಗರಿಗೂ ಇಷ್ಟವಾಗುತ್ತಾರೆ. ಉಳಿದಂತೆ ರಚೇಲ್ ಡೇವಿಡ್ ಅಂದವಾಗಿರುವಷ್ಟೇ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅಶ್ವತಿ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಉಳಿದಂತೆ ಇಲ್ಲಿ ಶರತ್ ಲೋಹಿತಾಶ್ವ ಮತ್ತು ಅಚ್ಯುತ್ ಕುಮಾರ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಸಿನಿಮಾದಲ್ಲಿ ಎರಡು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಇರಬೇಕಿತ್ತು. ಛಾಯಾಗ್ರಹಣದಲ್ಲಿ ಸೊಬಗಿದೆ.

Categories
ಸಿನಿ ಸುದ್ದಿ

ಪ್ರೀತಿಸಿದರೆ ರಾಮ! ಕೆಣಕಿದರೆ ರಾವಣ!!

ವಿಜಯ್ ಭರಮಸಾಗರ

ಚಿತ್ರ:ಗಜರಾಮ
ನಿರ್ದೇಶನ: ಸುನೀಲ್ ಕುಮಾರ್
ನಿರ್ಮಾಣ: ನರಸಿಂಹಮೂರ್ತಿ
ತಾರಾಗಣ: ರಾಜ್ ವರ್ಧನ್, ತಪಸ್ವಿನಿ ಪೊಣಚ್ಚ, ಸ್ವಾತಿ, ಶರತ್ ಲೋಹಿತಾಶ್ವ, ದೀಪಕ್, ಕಬೀರ್, ಬಲರಾಜವಾಡಿ ಇತರರು.

ನಾನು ಸವಾಲು ಹಾಕಲ್ಲ. ಸವಾಲು ಹಾಕಿದವರನ್ನ ಸೋಲಿಸೋವರೆಗೂ ಬಿಡೋದಿಲ್ಲ… ಈ ಸಿನಿಮಾ ನಾಯಕ ರಾಮ ಈ ಡೈಲಾಗ್ ಹೇಳುವ ಹೊತ್ತಿಗೆ ಅಲ್ಲೊಂದು ಅಖಾಡ ಸಿದ್ಧವಾಗಿರುತ್ತೆ. ಈ ಡೈಲಾಗ್ ಅರ್ಥ ಮಾಡಿಕೊಂಡವರಿಗೆ ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದು ಅರ್ಥವಾಗುತ್ತೆ. ಇದು ತೀರ ಸರಳ ಕಥೆ. ಹಾಗಂತ ಹಿಂದೆಂದೂ ಈ ರೀತಿಯ ಕಥೆಗಳು ಬಂದಿಲ್ಲ ಅಂದುಕೊಳ್ಳುವಂತಿಲ್ಲ. ಎಲ್ಲೋ ಒಂದಷ್ಟು ಬೇರೆ ಬೇರೆಯ ಛಾಯೆ ಅಲ್ಲಲ್ಲಿ ಕಾಣಸಿಗುತ್ತಾದರೂ, ಸಿನಿಮಾದ ನಿರೂಪಣೆ ಇಷ್ಟವಾಗುತ್ತೆ. ಕಥೆಯನ್ನು ಕಟ್ಟಿಕೊಟ್ಟಿರುವ ನಿರ್ದೇಶಕರ ಜಾಣತನ ಗಮನಸೆಳೆಯುತ್ತೆ. ಎರಡು ತಾಸು ಎಲ್ಲೂ ಬೋರ್ ಎನಿಸದೆ, ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿ ಅನ್ನಬಹುದು. ಕೆಲವು ದೃಶ್ಯಗಳು ಅನಗತ್ಯ ಎನಿಸುತ್ತವೆ. ಅದಕ್ಕೆ ಕತ್ತರಿ ಬಿದ್ದರೆ ಸಿನಿಮಾ ಇನ್ನಷ್ಟು ಸಲೀಸಾಗಿ ನೋಡಿಸಿಕೊಂಡು ಹೋಗುತ್ತೆ.

ನಿರ್ದೇಶಕರ ಮೊದಲ ಪ್ರಯತ್ನ ಇದಾಗಿರುವುದರಿಂದ ಸಣ್ಣ ಪುಟ್ಟ ದೋಷಗಳು ಸಹಜ. ಅವೆಲ್ಲವನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಒಂದೊಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ. ಇಲ್ಲಿ ಪ್ರೀತಿ ಇದೆ. ತಾಯಿ ಸಂಬಂಧವಿದೆ. ಸಣ್ಣ ಅಪಾರ್ಥವಿದೆ. ಚೂರು ಗೆಳೆತನವಿದೆ. ಆಸೆ, ಕನಸು, ಗುರಿ ಇವೆಲ್ಲವೂ ಮೇಳೈಸಿ ಗಜರಾಮನಿಗೆ ಇನ್ನಷ್ಟು ಬಲ ಕೊ್ಟ್ಟಿವೆ ಎನ್ನಬಹುದು. ಮೊದಲರ್ಧ ಸಾಧನೆಯ ಬೆನ್ನೇರಿ ಹೊರಡುವ ನಾಯಕ, ದ್ವಿತಿಯಾರ್ಧ ಆ ಸಾಧನೆಯ ಹಿಂದೆ ಹೋಗೋದು ಬಿಟ್ಟು ಬೇರೆಡೆ ಮುಖ ಮಾಡುತ್ತಾನೆ. ಹಾಗಂತ ಅವನ ಬದುಕಿನ ಸಾಧನೆಗಿಂತಲೂ ಬೇರೆ ವಿಷಯ ದೊಡ್ಡದಾ ಅನ್ನುವ ಪ್ರಶ್ನೆ ಎದುರಾಗುತ್ತೆ. ಹಾಗಾದರೆ, ತನ್ನ ಗುರಿ ಬಿಟ್ಟು ಬೇರೆಲ್ಲೋ ಹೋಗುವ ಹೀರೋ, ತನ್ನ ಗುರಿ ತಲುಪುತ್ತಾನೋ ಇಲ್ಲವೋ ಅನ್ನೋದೇ ಕಥೆ. ಆ ಕುತೂಹಲವಿದ್ದರೆ ಸಿನಿಮಾ ನೋಡಬಹುದು.

ಆರಂಭದಲ್ಲಿ ಸಿನಿಮಾ ಟೇಕಾಫ್ ಆಗೋಕೆ ಕೊಂಚ ಸಮಯ ಪಡೆದುಕೊಳ್ಳುತ್ತೆ. ಎಲ್ಲೋ ಒಂದು ಕಡೆ ಸಿನಿಮಾ ವೇಗಮಿತಿ ಕಡಿಮೆ ಆಯ್ತು ಅಂದುಕೊಳ್ಳುತ್ತಿದ್ದಂತೆಯೇ ಒಂದಷ್ಟು ಫೈಟ್ ಮತ್ತು ಹಾಡು ಎದುರಾಗಿ ಸಿನಿಮ ಕಥೆಯ ಓಟ ತಹಬದಿಗೆ ಬಂದು ನಿಲ್ಲುತ್ತೆ. ಇಲ್ಲಿ ಪ್ರೀತಿಯ ಜೊತೆ ಫೈಟ್ ಸನ್ನಿವೇಶಗಳೇ ಹೆಚ್ಚಾಗಿ ಗಮನಸೆಳೆಯುತ್ತವೆ. ಎಷ್ಟು ಬೇಕೋ ಅಷ್ಟು ಹಾಸ್ಯವಿದೆ. ರುಚಿಗೆ ತಕ್ಕಷ್ಟು ಉಪ್ಪು ಹೇಗಿರಬೇಕೋ ಅಷ್ಟೇ ತಾಯಿ ಸೆಂಟಿಮೆಂಟ್ ಕೂಡ ಇದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಿತ್ತು. ಉಳಿದಂತೆ ಇದೊಂದು ಕುಸ್ತಿಪಟುವಿನ ಕಥೆ. ಹಾಗಾಗಿ ಕುಸ್ತಿಯ ಅಖಾಡ, ಪೈಲ್ವಾನ್ ಗಳ ಅಬ್ಬರ, ಕುಸ್ತಿಯ ಚಾಂಪಿಯನ್ ಶಿಪ್ ಎಲ್ಲವೂ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಕಾಸು ಕೊಟ್ಟು ಒಳಬರುವ ಪ್ರೇಕ್ಷಕನಿಗೆ ಮೋಸವಂತೂ ಇಲ್ಲ. ಒಂದು ಮನರಂಜನೆಗೆ ಏನೆಲ್ಲಾ ಇರಬೇಕೋ ಅವೆಲ್ಲವೂ ಇಲ್ಲಿವೆ.

ಕಥೆ ಏನು?
ಅದೊಂದು ಗ್ರಾಮ. ಆ ಊರಲ್ಲೊಬ್ಬ ಗಟ್ಟಿಮುಟ್ಟಾದ ಯುವಕ. ಹೆಸರು ರಾಮ. ಅಮ್ಮ ಮಗನ ಬಾಂಧವ್ಯ ಜೊತೆ ಜೊತೆಗೆ ಅಲ್ಲಿ ಕುಸ್ತಿಯ ಛಾಯೆಯೂ ಇದೆ. ಆ ಊರಲ್ಲೊಬ್ಬ ಉಸ್ತಾದ್. ಗಟ್ಟಿಮುಟ್ಟಾದ ಯುವಕರ ತಂಡ ಕಟ್ಟಿಕೊಂಡು ಗರಡಿ ಮನೆಯಲ್ಲಿ ಕುಸ್ತಿ ಕಲಿಸಿಕೊಡುವಾತ. ಅಂತಹ ಗರಡಿ ನಡೆಸುವ ಉಸ್ತಾದ್ ಕಣ್ಣಿಗೆ ರಾಮ ಬೀಳುತ್ತಾನೆ. ರಾಮನ ಕುಸ್ತಿ ಹೇಗೆಂದರೆ, ಅವನು ಸುಮ್ನೆ ಅಖಾಡಕ್ಕೆ ಇಳಿಯೋದಿಲ್ಲ. ಅಖಾಡಕ್ಕಿಳಿದರೆ ಅವನೇ ಗೆಲುವಿನ ಪೈಲ್ವಾನ. ರಾಮ ಹೇಗೆಂದರೆ, ಬಾಲ್ಯದ ಗೆಳತಿಯನ್ನು ಯಾರು ನೋಡಬಾರದು, ಕೆಣಕಬಾರದು. ಹಾಗೇನಾದರೂ ಮಾಡಿದರೆ ಅಂತಹವರ ಪಾಲಿಗೆ ಅವನು ರಾಮನ ಬದಲು ರಾವಣ ಆಗುತ್ತಾನೆ. ಅತ್ತ ತನ್ನನ್ನು ಗೆಳತಿ ಪ್ರೀತಿಸುತ್ತಾಳೆ ಅಂದುಕೊಳ್ಳುವ ರಾಮನಿಗೆ ಬಿಗ್ ಶಾಕ್ ಆಗುತ್ತೆ. ಅದೇನೆಂಬುದನ್ನು ಸಿನಿಮಾದಲ್ಲಿ ನೋಡಬೇಕು. ಇನ್ನು, ಆ ಉಸ್ತಾದ್ ಗೆ ಒಂದು ಆಸೆ. ಒಮ್ಮೆ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ತನ್ನ ಶಿಷ್ಯ ಗೆಲ್ಲಬೇಕು ಅನ್ನೋದು. ಅವನ ಆಸೆಯನ್ನು ಆ ಗಜರಾಮ ಈಡೇರಿಸುತ್ತಾನಾ ಇಲ್ಲವಾ ಅನ್ನೋದೇ ಸಸ್ಪೆನ್ಸ್.

ರಾಜವರ್ಧನ್ ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದ ಪಾತ್ರದಲ್ಲಿ ಫೋರ್ಸ್ ಇದೆ. ಪಾತ್ರವನ್ನು ನಿರ್ವಹಿಸಿದ್ದರ ಹಿಂದಿನ ಶ್ರಮ ಎದ್ದು ಕಾಣುತ್ತೆ. ಗಜರಾಮನಾಗಿ ಅವರು ಇಷ್ಟವಾಗುತ್ತಾರೆ. ಥೇಟ್ ಕುಸ್ತಿಪಟುವಾಗಿಯೇ ಕಾಣುವ ರಾಜವರ್ಧನ್, ಡ್ಯಾನ್ಸ್ ಮತ್ತು ಫೈಟ್ ನಲ್ಲೂ ಗಮನಸೆಳೆದಿದ್ದಾರೆ. ತಪಸ್ವಿನಿ ಸಿಕ್ಕ ಪಾತ್ರಕ್ಕೆ ತೃಪ್ತಿ ಪಟ್ಟಿದ್ದಾರೆ. ಪಾತ್ರವನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡಬಹುದಿತ್ತು. ಶರತ್ ಅಶ್ವತ್ಥ್ ಉಸ್ತಾದ್ ಆಗಿ ಇಷ್ಟವಾಗುತ್ತಾರೆ. ಕಬೀರ್ ವಿಲನ್ ಆಗಿ ಅಬ್ಬರಿಸಿದರೆ, ದೀಪಕ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ಬರುವ ಪಾತ್ರಗಳು ನ್ಯಾಯ ಒದಗಿಸಿವೆ.
ಮನೋಮೂರ್ತಿ ಅವರ ಸಂಗೀತದಲ್ಲಿ ಎಲ್ಲಾ ಹೇಳಬೇಕಿದೆ ಹಾಡು ಮತ್ತೆ ಸಾರಾಯಿ ಶಾಂತಮ್ಮ ಈ ಎರಡು ಹಾಡುಗಳು ಗುನುಗುವಂತಿವೆ. ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕದಲ್ಲಿ ಗಜರಾಮನ ಅಂದವಿದೆ.

Categories
ಸಿನಿ ಸುದ್ದಿ

ದಮನಿತರ ಹೋರಾಟದ ನೈಜ ಚಿತ್ರಣ

ಚಿತ್ರ: ಬೇಗೂರು ಕಾಲೋನಿ
ನಿರ್ದೇಶಕ: ಫ್ಲೈಯಿಂಗ್ ಕಿಂಗ್ ಮಂಜು.
ನಿರ್ಮಾಣ: ಶ್ರೀನಿವಾಸ ಬಾಬು
ತಾರಾಗಣ: ರಾಜೀವ್ ಹನು, ಫ್ಲೈಯಿಂಗ್ ಕಿಂಗ್ ಮಂಜು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಇತರರು.

ಆ ಕಾಲೋನಿಗೆ ಯಾರೇ ಸಹಾಯಕ್ಕೆ ಬಂದ್ರೂ ಅಲ್ಲಿನ ಜನರಿಗೆ ಆ ರಾಘವ ದೇವರಿದ್ದಂತೆ. ಆತ ಯಾರಿಗೂ ಮೋಸ ಆಗೋಕೆ ಬಿಡಲ್ಲ. ಆದರೆ, ಅವನೇ ರಾಜಕೀಯ ಬಣ್ಣದ ಮಾತುಗಳಿಗೆ ಮೋಸ ಹೋಗ್ತಾನೆ. ವಾಸ್ತವ ಬದುಕಲ್ಲಿ ನಿಯತ್ತಿಗೆ ಬೆಲೆ ಸಿಗದೆ ಅಸಹಾಯಕನಾಗುವ ರಾಘವ ಲೈಫಲ್ಲಿ ನೂರೆಂಟು ವಿಘ್ನ ಎದುರಾಗುತ್ತವೆ. ಅವೆಲ್ಲವನ್ನೂ ಮೆಟ್ಟಿ ನಿಲ್ತಾನ? ಈ ಪ್ರಶ್ನೆಗೆ ಉತ್ತರ ಬೇಕಾದರೆ ಒಮ್ಮೆ ಸಿನಿಮಾ ನೋಡಬಹುದು.

ಇದೊಂದು ಕಾಲೋನಿ ಕಥೆ. ಅದರಲ್ಲೂ ಒಂದು ಹೋರಾಟದ ಕಥೆ. ಕಾಲೋನಿಯಲ್ಲಿರುವ ಮಧ್ಯಮ ವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯೋದು ಆಟದ ಮೈದಾನಕ್ಕಾಗಿ. ಅವರೆಲ್ಲರ ಹೋರಾಟಕ್ಕೆ ಜಯ ಸಿಗುತ್ತಾ ಅಥವಾ ಆ ಹೋರಾಟ ವ್ಯರ್ಥ ಆಗುತ್ತಾ ಅನ್ನೋದೇ ಕಥೆ.

ಉಳ್ಳವರ ಮಧ್ಯೆ ಕೊರಗುವವರ ವ್ಯಥೆ ಇಲ್ಲಿ ಹೈಲೆಟ್. ಬಡವರ ಮೇಲಿನ ದಬ್ಬಾಳಿಕೆ ದೌರ್ಜನ್ಯ ಸಿನಿಮಾದ ಪ್ರಮುಖ ಅಂಶ. ಜಾತಿ ಧರ್ಮ ದಾಟಿದ ರಾಘವ ಒಂದು ಕಡೆಯಾದರೆ, ಕಾಲೋನಿ ಜನರೇ ನನ್ನ ಆಸ್ತಿ ಅಂಬೇಡ್ಕರ್ ವಾದವೇ ನನ್ನ ಶಕ್ತಿ ಅಂತ ನಂಬಿರುವ ಶಿವ ಅಲಿಯಾಸ್ ಗಲ್ಲಿ ಶಿವ ಇನ್ನೊಂದು ಕಡೆ. ಇಬ್ಬರದೂ ಒಂದೇ ಯೋಚನೆ. ಇಬ್ಬರೂ ಆಪ್ತ ಗೆಳೆಯರು. ಆದರೆ ಗೆಳೆಯರ ಮಧ್ಯೆ ಸಣ್ಣ ವಿಷಯಕ್ಕೆ ಬಿರುಕು, ಇಬ್ಬರೂ ದೂರ ದೂರ. ಆಮೇಲೆ ಅವರ ಕನಸು ಈಡೇರುತ್ತಾ ಎಂಬ ಕುತೂಹಲ, ಪ್ರಶ್ನೆ ಇದ್ದರೆ ಕಾಲೋನಿಗೆ ಭೇಟಿ ಕೊಡಬಹುದು.

ಕಾಲೋನಿ ಮಂದಿಯ ಅಸಹಾಯಕತೆಗೆ ಪಾರವೇ ಇಲ್ಲ. ಅಲ್ಲಿರುವ ಶಿವನದು ಒಂದೇ ವಾಕ್ಯ, ಆಟದ ಮೈದಾನಕ್ಕೆ ರಕ್ತ ಸುರಿಸಬೇಕು ಇಲ್ಲ, ರಕ್ತ ಹರಿಸಬೇಕು. ಇದು ಅವನ ವಾದ.

ಮೊದಲರ್ಧ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಸ್ವಲ್ಪ ತಿರುವುಗಳೊಂದಿಗೆ ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತೆ. ಸಿನಿಮಾದ ಸಂಕಲನ ವೇಗಕ್ಕೆ ಕಾರಣವಾಗಿದೆ. ಇನ್ನಷ್ಟು ಬಿಗಿ ನಿರೂಪಣೆ ಬೇಕಿತ್ತು. ಎಲ್ಲೋ ಒಂದು ಕಡೆ ತಮಿಳು ಸಿನಿಮಾಗಳ ಮೇಕಿಂಗ್ ನೆನಪಿಸುತ್ತೆ. ಕನ್ನಡದಲ್ಲಿ ಇಂತಹ ಪ್ರಯತ್ನಕ್ಕೆ ಬೆಂಬಲ ಸಿಗಬೇಕಷ್ಟೇ.

ದನಿ ಕಳೆದುಕೊಂಡವರ ಬದುಕು ಬವಣೆಯನ್ನು ಅಷ್ಟೇ ಸೂಕ್ಷ್ಮವಾಗಿ ನಿರೂಪಿಸಿರುವ ನಿರ್ದೇಶಕರ ಜಾಣತನ ಮೆಚ್ಚಬೇಕು. ಅಮಾಯಕ ಜನರನ್ನು ಅದರಲ್ಲೂ ಕಾಲೋನಿಯ ಮುಗ್ಧರನ್ನು ಹೋರಾಡೋಕೆ ಧರಣಿ ಮಾಡೋಕೆ ಬೆಂಕಿ ಹಚ್ಚೋಕೆ ಮಾತ್ರ ಇಂತಹವರ ಬಳಕೆ ಆಗುತ್ತೆ ಅನ್ನೋ ನಿರ್ದೇಶಕರ ಥಾಟ್ ಚೆನ್ನಾಗಿದೆ. ಅದು ವಾಸ್ತವ ಕೂಡ.

ಇಬ್ಬರು ಗೆಳೆಯರು ಒಂದೊಂದು ದಿಕ್ಕಿನತ್ತ ಹೋರಾಟಕ್ಕಿಳಿಯುತ್ತಾರೆ. ಒಬ್ಬನದು ಶಾಂತಿಯ ಹೋರಾಟ ಮತ್ತೊಬ್ಬರದು ಕ್ರಾಂತಿ ಹೋರಾಟ. ಈ‌ ನಡುವೆ ಯಾರು ಗೆಲ್ಲುತ್ತಾರೆ ಅನ್ನೋದು ಸಸ್ಪೆನ್ಸ್.

ಇಲ್ಲಿ ರಾಜೀವ್ ಹನು ಪಾತ್ರ ಗಮನ ಸೆಳೆದರೆ, ಫ್ಲೈಯಿಂಗ್ ಕಿಂಗ್ ಮಂಜು ದ್ವಿಪಾತ್ರ ಮೂಲಕ ಇಷ್ಟ ಆಗುತ್ತಾರೆ. ಉಳಿದಂತೆ ಬರುವ ಪ್ರತಿ ಪಾತ್ರಕ್ಕೂ ಧಮ್ ಇದೆ.

ಚಿತ್ರದಲ್ಲಿ ಕೇಳೋಂಗಿಲ್ಲ ಯಾರು ಕೇಳೋಂಗಿಲ್ಲ ಹಾಡು ಚೆನ್ನಾಗಿದೆ. ಜೈ ಭೀಮ್ ಸಾಂಗ್ ಜೋಶ್ ಕೊಡುತ್ತೆ.
ಅಭಿನಂದನ್ ಕಶ್ಯಪ್ ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ಧಮ್ ಇದೆ. ಕಾರ್ತಿಕ್ ಕ್ಯಾಮೆರಾ ಕೈ ಚಳಕದಲ್ಲಿ ಕಾಲೋನಿಯ ಸೊಗಸಿದೆ.

Categories
ಸಿನಿ ಸುದ್ದಿ

ಅದಮ್ಯ ಉತ್ಸಾಹಿಗಳ ಭಾವುಕ ಪಯಣ!

ಚಿತ್ರ ವಿಮರ್ಶೆ: ರೇಟಿಂಗ್ 3.5/5

ಚಿತ್ರ: #ಪಾರು ಪಾರ್ವತಿ
ನಿರ್ಮಾಣ : ಪಿ.ಬಿ.ಪ್ರೇಮ್ ನಾಥ್
ನಿರ್ದೇಶನ : ರೋಹಿತ್ ಕೀರ್ತಿ
ತಾರಾಗಣ: ದೀಪಿಕಾ ದಾಸ್, ಪೂನಂ, ಫವಾಜ್ ಅಶ್ರಫ್ ಇತರರು.

ಎಲ್ಲಿ ಬೇಕೋ ಅಲ್ಲಿ ನುಗ್ಗೋ ಕಾರು. ಅದರ ಮೇಲೊಂದು ಸ್ಟೈಲಿಶ್ ಬುಲೆಟ್. ಆ ಕಾರಲ್ಲಿ ಉತ್ಸಾಹ ತುಂಬಿದ 60ರ ಯುವತಿ! ಜೊತೆಗೊಬ್ಬ ಜೊತೆಗಾತಿ. ಅವರಿಬ್ಬರ ಸುಂದರ ಪಯಣ. ಖುಷಿ, ದುಃಖ, ನೋವು, ನಲಿವು, ಅದಮ್ಯ ಉತ್ಸಾಹದ ಬದುಕು ಇದಿಷ್ಟೂ ಈ ಸಿನಿಮಾದ ಹೈಲೆಟ್.

ಒಂದೇ ಮಾತಲ್ಲಿ ಹೇಳುವುದಾದರೆ ಬದುಕು ಮುಗಿದೇ ಹೋಯ್ತು. ನಾಲ್ಕು ಗೋಡೆ ನಡುವಿನ ಜೀವನ ಅಷ್ಟೇ ಅಂದುಕೊಂಡ ಮನಸುಗಳೊಮ್ಮೆ ಈ ಚಿತ್ರದೊಳಗಿನ ಆಶಯ ನೋಡಬೇಕು. ಇಲ್ಲಿ ಬದುಕಿನ ಪ್ರೀತಿ ಇದೆ, ನಂಬಿಕೆ ಇದೆ, ಕನಸಿನ ಸಾಕಾರವಿದೆ, ಆತ್ಮ ವಿಶ್ವಾಸವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇರುವುದೊಂದು ಬದುಕು ಪರಿಪೂರ್ಣವಾಗಿಸಿಕೊಳ್ಳಬೇಕು ಅನ್ನೋ ಅರ್ಥವಿದೆ.

ನಿತ್ಯ ಜಂಜಾಟದ ಬದುಕಿಗೆ ರೋಸಿ ಹೋದ ಜೀವಕ್ಕೆ ತನ್ನದೇ ಆದ ಕನಸಿದೆ. ಮನಸ್ಸಿಗೆ ಬಂದಂತೆ ಪುಟಿದೇಳಬೇಕೆಂಬ ಆಸೆ ಇದೆ. ಮನೆಯೊಳಗಿನ ಯಾತನಮಯ ಬದುಕಿಂದಾಚೆಗೆ ಬರಬೇಕೆಂಬ ತುಡಿತವಿದೆ. ಈ ಕಥಾ ನಾಯಕಿ ಪಾರ್ವತಿ ಕೂಡ ತನ್ನಿಚ್ಛೆಯಂತೆ ಹೊರ ಜಗತ್ತಿಗೆ ಮೈವೊಡ್ಡಿ ನಿಲ್ಲುತ್ತಾಳೆ. ಆಕೆಯ ಕನಸುಗಳು ಗರಿಗೆದರುತ್ತವೆ. ಮನೆಯ ನರಕದಿಂದ ಹೊರ ಬರುವ ಪಾರ್ವತಿಗೆ ಇಷ್ಟದಂತೆ ಬದುಕಿ ಬಿಡುವ ಆಸೆ. ಅವಳಿಗೆ ಜೊತೆ ಆಗುವ ಪಾಯಲ್ ಅಲಿಯಾಸ್ ಪಾರು ಅನ್ನೋ ಸಾಹಸಿ ಹುಡುಗಿಯದ್ದೂ ಅದೇ ಹಾದಿ. ಇಬ್ಬರ ಪಯಣ ಕೂಡ ಹೊಸ ದಿಕ್ಕಿನತ್ತ ಸಾಗುತ್ತೆ.

ವಯಸ್ಸು ಅರ್ಧ ದಾಟಿದರೂ ಪಾರ್ವತಿಗೆ ಅದೇನೋ ಕೊರತೆ. ಆಕೆಗೆ ಬೇಕಿದ್ದು ಹಿಡಿಯಷ್ಟು ಪ್ರೀತಿ. ಆ ಪ್ರೀತಿಯ ವಂಚಿತೆಯಾದ ಆಕೆಗೆ ಬದುಕೇ ಬೇಡ ಅನ್ನುವಷ್ಟು ಜಿಗುಪ್ಸೆ.

ಅಂತಹ ಸಂದರ್ಭದಲ್ಲೇ ಹೊಸ ಪಯಣದ ಹಾದಿ ಸಿಗುತ್ತೆ. ಪಾರು ಮತ್ತು ಪಾರ್ವತಿ ಇವರಿಬ್ಬರ ಗುಡ್ ಬ್ಯಾಡ್ ಜರ್ನಿಯಲ್ಲಿ ಹೊಸ ಜಗತ್ತು ತೆರೆಯುತ್ತಾ ಹೋಗುತ್ತೆ. ಇಲ್ಲಿ ಅವರಿಬ್ಬರ ಮಾತಿನ ಜುಗಲ್ ಬಂದಿ ಜೊತೆ ಬದುಕಿನ ಅರ್ಥ ಹುಡುಕುವ ಪ್ರಯತ್ನ ಸಣ್ಣ ಕೋಪ, ಮುನಿಸು, ತಮಾಷೆ, ಎಲ್ಲವೂ ನೋಡುಗರಲ್ಲಿ ಖುಷಿ ಕೊಡುತ್ತೆ.

ಅದೊಂದು ಭಾವುಕ ಪಯಣ ಅನ್ನಬಹುದು. ನೋಡುಗರಲ್ಲೂ ಕಣ್ಣು ಒದ್ದೆ ಆಗುವ ಅಂಶಗಳಿವೆ. ವಯಸ್ಸಾದರೂ ಚಿಮ್ಮುವ ಪಾರ್ವತಿಯ ಅದಮ್ಯ ಉತ್ಸಾಹ. ನೋವಿದ್ದರೂ ಹೇಳಲಾಗದೆ ನಗು ಹೊರಹಾಕುವ ಪಾಯಲ್ ಮನಸ್ಸು.

ನಾಲ್ಕು ಗೋಡೆಯ ಮಧ್ಯ ಸಿಗುವ ಕೃತಕ ಪ್ರೀತಿಗೆ ಬೆನ್ನು ಹಾಕಿ ಹೊರ ಜಗತ್ತಿಗೆ ಅಡಿ ಇಡುವ ಪಾರ್ವತಿಯ ಸಂಪ್ರೀತಿ,ಸಂಕಷ್ಟಗಳನ್ನು ಸೂಕ್ಷ್ಮವಾಗಿ ತೆರೆ ಮೇಲೆ ಇರಿಸುವಲ್ಲಿ ನಿರ್ದೇಶಕರು ಯಶಸ್ವಿ.

ಸಿನಿಮಾದಲ್ಲಿ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಗಮನ ಸೆಳೆದರೆ, ಫವಾಜ್ ಅಶ್ರಫ್ ಇರುವಷ್ಟು ಸಮಯ ಇಷ್ಟ ಆಗುತ್ತಾರೆ. ಇನ್ನು ಕಾರು ಕೂಡ ಇಲ್ಲಿ ವಿಶೇಷ ಎನಿಸುತ್ತೆ.

ಅಬಿನ್ ರಾಜೇಶ್ ಅವರ ಕ್ಯಾಮರಾ ಕೈಚಳಕದಲ್ಲಿ ಇಂಡಿಯಾದ ಅದ್ಭುತ ತಾಣಗಳನ್ನು ಅಂದಗಾಣಿಸಿದೆ. ಹರಿ ಸಂಗೀತವೂ ಕಥೆಗೆ ಪೂರಕ. ಸಿ.ಕೆ.ಕುಮಾರ ಅವರ ಕತ್ತರಿ ಪ್ರಯೋಗ ಚಿತ್ರದ ವೇಗಕ್ಕೆ ಹೆಗಲು ನೀಡಿದೆ.

Categories
ಸಿನಿ ಸುದ್ದಿ

ಅರ್ಥೈಸಿಕೊಂಡರೆ ಗಣನ ಗುಣಗಾನ!

ಚಿತ್ರ : ಗಣ
ನಿರ್ಮಾಣ: ಪಾರ್ಥು
ನಿರ್ದೇಶನ: ಹರಿಪ್ರಸಾದ್ ಜಕ್ಕ
ತಾರಾಗಣ: ಪ್ರಜ್ವಲ್ ದೇವರಾಜ್, ಯಶ ಶಿವಕುಮಾರ, ವೇದಿಕಾ, ಸಂಪತ್, ರವಿಕಾಳೆ, ರಮೇಶ್ ಭಟ್, ಶಿವು ಕೆ.ಆರ್.ಪೇಟೆ ಇತರರು.

ಆ ಮನೆಯಲ್ಲಿ ಲ್ಯಾಂಡ್ ಫೋನ್ ಇದೆ. ಆದರೆ ಫೋನ್ ಕನೆಕ್ಷನ್ ಇಲ್ಲ. ಆದರೂ ಫೋನ್ ರಿಂಗ್ ಆಗುತ್ತೆ. ಆಕೆ 1993ರ ಕಾಲಘಟ್ಟದಲ್ಲಿರುವ ಟೀಚರ್. ಅವನು 2022ರ ಫ್ಯೂಚರ್ ನಲ್ಲಿರೋನು. ಇಬ್ಬರೂ ಒಬ್ಬರಿಗೊಬ್ಬರು ಭೇಟಿ ಇಲ್ಲ. ಆದರೂ ಕನೆಕ್ಷನ್ ಇರದ ಆ ಫೋನ್ ನಲ್ಲಿ ಸಂಭಾಷಣೆ. ಆಕೆಯ ಕಾಲಘಟ್ಟದಲ್ಲಿ ನಡೆಯೋ ಘಟನೆಗಳೆಲ್ಲವೂ ಇವನಿಗೆ ಗೊತ್ತು. ಆದರೂ ಕೆಲ ಕೆಟ್ಟ ಘಟನೆ ತಡೆಯಬೇಕು ಅನ್ನೋ ಚಾಲೆಂಜ್ ಅವನದು. ಅದು ಹೇಗೆ? ಅದೇ ಈ ಸಿನಿಮಾದ ವಿಶೇಷತೆ. ಸಿನಿಮಾ ಆರಂಭದಲ್ಲಿ ಎತ್ತ ಸಾಗುತ್ತೆ, ಏನು ನಡೆಯುತ್ತೆ ಅನ್ನುವುದಕ್ಕೆ ಸ್ವಲ್ಪ ತಾಳ್ಮೆಯಿಂದಲೇ ಕೂತು ನೋಡಬೇಕು. ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆ ಇದೆ. ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಈ ಸಿನಿಮಾದ ವಿಶೇಷ ಗುಣ ಏನೆಂಬುದನ್ನು ಗಣ ಹೇಳುತ್ತಾ ಹೋಗುತ್ತಾನೆ. ಇತ್ತಿಚಿನ ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ, ತಲೆಗೆ ಕೆಲಸ ಕೊಡುವ, ತುಂಬಾನೇ ತದೇಕಚಿತ್ತದಿಂದ ಆಲಿಸುವ ಸಿನಿಮಾ ಇದು. ಒಂದಿಷ್ಟು ಅತ್ತಿತ್ತ ಕಣ್ಣಾಯಿಸಿದರೆ, ಗಮನ ಬೇರೆಡೆ ಹರಿಬಿಟ್ಟರೆ, ಖಂಡಿತವಾಗಿಯೂ ಈ ಚಿತ್ರ ಅರ್ಥ ಆಗೋದು ಕಷ್ಟ. ಇದೊಂದು ರೀತಿ ನೋಡುಗರಿಗೆ ಬಿಗ್ ಟಾಸ್ಕ್. ಸರಿಯಾಗಿ ಗಮನಿಸಿದವರಿಗೆ ಮಾತ್ರ ಗಣ ಅರ್ಥವಾಗುತ್ತಾನೆ ಇಲ್ಲವಾದರೆ ಕಷ್ಟ ಕಷ್ಟ.

ಇದೊಂದು ಟೈಮ್ ಟ್ರಾವೆಲಿಂಗ್ ಎಳೆ ಹೊಂದಿರುವ ಕಥೆ. ಹಾಗಾಗಿ ಇಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸಬೇಕು. ಒಂದಂತೂ ನಿಜ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ನಿರ್ದೇಶಕರ ಕೆಲಸ. ಇಲ್ಲೊಂದಷ್ಟು ಹುಳಬಿಡುವ ಕೆಲಸ ಮಾಡಿದ್ದಾರೆ. ಸ್ಕ್ರೀನ್ ಮೇಲೆ ಏನಾಗುತ್ತಿದೆ ಅನ್ನುವುದನ್ನು ಸ್ವಲ್ಪ ಅರ್ಥಮಾಡಿಕೊಂಡು ನೋಡಿದರೆ ಮಾತ್ರ ಗಣನ ಗುಣಗಾನ ಮಾಡಬಹುದು. ಆದರೂ, ಈ ಸಿನಿಮಾ ನೋಡಿದವರಿಗೆ ತಮಿಳಿನ ಮಾರ್ಕ್ ಆಂಟೋನಿ ಸಿನಿಮಾ ನೆನಪಾಗುತ್ತೆ. ಕಥೆ ಅದೇ ಅಲ್ಲ, ಆದರೆ, ಒಂದಷ್ಟು ಸಾಮ್ಯತೆ ಎನಿಸುತ್ತೆ. ಕನ್ನಡಕ್ಕೆ ಇದು ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು ಎನಿಸುತ್ತೆ.

ಇಲ್ಲಿ ಎರಡು ಕಾಲಘಟ್ಟದ ಕಥೆಯನ್ನು ಹೇಳುತ್ತಲೇ ನೋಡುಗರನ್ನು ಒಂದಷ್ಟು ಗೊಂದಲ ಉಂಟು ಮಾಡುತ್ತಾರೆ ನಿರ್ದೇಶಕರು. ಅವರ ಪ್ರಕಾರ ಎರಡು ಕಾಲಘಟ್ಟದ ಕಥೆಯನ್ನು ಹೇಳುತ್ತಲೇ, ಕ್ಲ್ಯೆಮ್ಯಾಕ್ಸ್ ನಲ್ಲಿ ಅದಕ್ಕೊಂದು ಹ್ಯಾಪಿ ಎಂಡಿಂಗ್ ಕೊಡುತ್ತಾರೆ. ಆರಂಭದಲ್ಲಿ ಸಿನಿಮಾ ಮಂದಗತಿ ಎನಿಸುತ್ತಾದರೂ, ದ್ವಿತಿಯಾರ್ಧ ಸಿನಿಮಾ ವೇಗ ಹೆಚ್ಚಿಸುತ್ತೆ. ಒಂದು ಕಾಲದಿಂದ ಇನ್ನೊಂದು ಕಾಲದ ಪಯಣದ ಕಥೆ ಇಲ್ಲಿದೆ. ಟೈಮ್ ಟ್ರಾವೆಲಿಂಗ್ ಸ್ಟೋರಿ ಇದಾಗಿರುವುದರಿಂದ ಇಲ್ಲಿ 1993ರಲ್ಲಿ ನಡೆದ ಘಟನೆ 2022 ರಲ್ಲೂ ಕನೆಕ್ಟ್ ಆಗುತ್ತಾ ಹೋಗುತ್ತೆ. ಒಂದು ಫೋನ್ ಕಾಲ್ ನಲ್ಲಿ ವಿಚಿತ್ರ ಸನ್ನಿವೇಶಗಳು ನಡೆಯುತ್ತಾ ಹೋಗುತ್ತವೆ.

ಅದನ್ನು ಅರ್ಥ ಮಾಡಿಕೊಳ್ಳೋದೇ ದೊಡ್ಡ ಟಾಸ್ಕ್. ನೋಡುಗರಿಗೆ ಅಷ್ಟೊಂದು ದೊಡ್ಡ ಟಾಸ್ಕ್ ಕೊಟ್ಟ ನಿರ್ದೇಶಕರು ಸ್ವಲ್ಪ ಗೊಂದಲ ಎಬ್ಬಿಸೋದು ನಿಜ. ಆದರೂ, ಇದೊಂದು ಗುಡ್ ಥಾಟ್ ಸಿನಿಮಾ. ಅರ್ಥ ಮಾಡಿಕೊಂಡರೆ ಇದೊಂದು ಒಳ್ಳೆಯ ಪ್ರಯೋಗದ ಸಿನಿಮಾ ಅನಿಸುತ್ತೆ. ಹಾಗಂತ ಇದನ್ನು ಕಮರ್ಷಿಯಲ್ ಸಿನಿಮಾ ಅಲ್ಲ ಅಂದುಕೊಳ್ಳುವಂತಿಲ್ಲ. ಇಲ್ಲೂ ಲವ್ ಇದೆ, ಫೈಟ್ ಇದೆ. ಎಮೋಷನ್ಸ್ ಇದೆ. ಅಲ್ಲಲ್ಲಿ ಸ್ವಲ್ಪ ನಗು ತರದ ಹಾಸ್ಯವೂ ಇದೆ. ಹೆಚ್ಚಾಗಿ ಸಿನಿಮಾ ನೋಡಿಸಿಕೊಂಡು ಹೋಗುವ ತಾಕತ್ತು ಹೊಂದಿದೆ. ಆದರೆ, ಅರ್ಥೈಸಿಕೊಳ್ಳಬೇಕಷ್ಟೆ.

ಕಥೆ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಫಸ್ಟ್ ಹಾಫ್ ಬಂದಿರುತ್ತೆ. ಸೆಕೆಂಡ್ ಹಾಫ್ ನಲ್ಲಿ ಟ್ವಿಸ್ಟ್ ಗಳೊಂದಿಗೆ ಸಾಗುವ ಸಿನಿಮಾದಲ್ಲಿ ಒಂದಷ್ಟು ಏರಿಳಿತಗಳು ಎದುರಾಗುತ್ತವೆ. ಅದನ್ನು ದಾಟಿಕೊಂಡು ಹೋಗುವಷ್ಟರಲ್ಲಿ ಅಂತ್ಯವಾಗುತ್ತೆ. ಸಿನಿಮಾದಲ್ಲಿ ವಿನಾಕಾರಣ ಹಾಡು ಬಂದು ಗೊಂದಲ ಎಬ್ಬಿಸಲ್ಲ. ಬೇಕಂತನೇ ಫೈಟ್ ಎದುರಾಗಲ್ಲ. ಎಲ್ಲವೂ ಕಥೆಗೆ ಪೂರಕವೆನಿಸುತ್ತೆ. ಆದರೂ, ಕೆಲವೊಂದು ಹೊಡೆದಾಟ ಅನಗತ್ಯ ಎನಿಸದಿರದು. ಕಥೆಯಲ್ಲೇನೂ ಗೊಂದಲ ಇಲ್ಲ. ಆದರೆ, ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಯಾದ ಹಿಡಿತ ಇರಬೇಕಿತ್ತು. ಇನ್ನಷ್ಟು ರೋಚಕವಾಗಿ ತೋರಿಸಲು ಅವಕಾಶವಿತ್ತು. ಅದಿಲ್ಲಿ ಸಾಧ್ಯವಾಗಿಲ್ಲ.

ಕಥೆ ಇಷ್ಟು…

ಆರಂಭದಲ್ಲಿ ಎರಡು ಮರ್ಡರ್ ಆಗುತ್ತೆ. ಅದು 1993ರಲ್ಲಿ ಆಗುವ ಕೊಲೆ. 2022ರಲ್ಲಿ ಎರಡು ಅಸ್ತಿಪಂಜರ ಸಿಕ್ಕು ದೊಡ್ಡ ನ್ಯೂಸ್ ಆಗುತ್ತೆ. ಗಣ ಇಲ್ಲಿ ಟಿವಿಯೊಂದರ ಜರ್ನಲಿಸ್ಟ್. ಬ್ರೇಕಿಂಗ್ ನ್ಯೂಸ್ ಕೊಡುವ ಗಣ, ಎರಡು ಅಸ್ತಿಪಂಜರದ ಮುಂದೆ ನಿಂತು ಅದು ಕೊಲೆ ಅನ್ನುತ್ತಾನೆ, ಅಷ್ಟೇ ಅಲ್ಲ, ಅದು ಗಂಡು, ಹೆಣ್ಣು ಅಂತಾನೂ ಹೇಳ್ತಾನೆ. ಮೂರು ದಶಕಗಳ ಹಿಂದೆ ಆಗಿರುವ ಘಟನೆಯನ್ನು ಕೊಲೆ ಅಂತ ಹೇಳುವ ಅವನಿಗೆ ದೊಡ್ಡ ಟಾಸ್ಕ್ ಅದಾಗುತ್ತೆ. ಕೊಲೆಯಾದ ಟೀಚರ್ ಒಬ್ಬರ ಜೊತೆಗೆ ಲ್ಯಾಂಡ್ ಫೋನ್ ನಲ್ಲಿ ಮಾತಾಡೋಕೆ ಶುರುವಾಗ್ತಾನೆ! ಅದೊಂದು ಎನರ್ಜಿ ಪಾಸ್ ಆಗುವ ವ್ಯಕ್ತಿ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಪಯಣಿಸುತ್ತಾನೆ. 1993 ರಲ್ಲಿ ಕೊಲೆಯಾದವರ ಜೊತೆ ಸಂಪರ್ಕ ಬೆಳೆಸುವ ಆತ, ಮುಂದೆ ಅವರನ್ನು ಕಾಪಾಡುವ ಹಂತಕ್ಕೂ ಹೋಗ್ತಾನೆ. ಆ ಕಾಲದದಲ್ಲಿ ನಡೆದ ಘಟನೆ ಫ್ಯೂಚರ್ ಗೂ ಹೇಗೆ ಟಚ್ ಆಗುತ್ತೆ. ಅದೆಲ್ಲಾ ಸಾಧ್ಯನಾ? ಅದೇ ಟೈಮ್ ಟ್ರಾವೆಲಿಂಗ್ ಸ್ಟೋರಿಯ ವಿಶೇಷ. ಕುತೂಹಲವಿದ್ದರೆ ಒಂದೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಪ್ರಜ್ವಲ್ ದೇವರಾಜ್ ಇಲ್ಲಿ ಗಮನಸೆಳೆಯುತ್ತಾರೆ. ಹೊಡೆದಾಟದಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಆ ಪಾತ್ರಕ್ಕೆ ಇನ್ನಷ್ಟು ಧಮ್ ಕಟ್ಟಬೇಕಿತ್ತು. ಯಶ ಅವರು ಚೆನ್ನಾಗಿ ಕಾಣುತ್ತಾರೆ ಅನ್ನೋದು ಬಿಟ್ಟರೆ, ಅಷ್ಟೇನು ಗಮನ ಸೆಳೆಯಲ್ಲ. ವೇದಿಕಾ ಸಿನಿಮಾದ ಹೈಲೆಟ್. ಉಳಿದಂತೆ ರವಿಕಾಳೆ ವಿಶೇಷ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ರಮೇಶ್ ಭಟ್ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಸಂಪತ್ ಇಲ್ಲಿ ನೆಗೆಟಿವ್ ಶೇಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಶಿವು ಕೆ.ಆರ್.ಪೇಟೆ ಪಾತ್ರ ಹಾಸ್ಯವಾಗಿದ್ದರೂ, ಅವರು ನಗಿಸೋಕೆ ಕಷ್ಟಪಟ್ಟಿದ್ದಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ಸಿಕ್ಕ ಪಾತ್ರಕ್ಕೆ ತಕ್ಕಮಟ್ಟಿಗೆ ನ್ಯಾಯ ಸಲ್ಲಿಸಿವೆ.

ಇನ್ನು, ಜೈ ಆನಂದ್ ಛಾಯಾಗ್ರಾಹಣದಲ್ಲಿ ಗಣ ಅಂದವಾಗಿದ್ದಾನೆ. ಅನೂಪ್ ಸೀಳಿನ್ ಸಂಗೀತದ ಹಾಡು ಗುನುಗುವಂತೇನಿಲ್ಲ. ಹಿನ್ನೆಲೆ ಸಂಗೀತದ ಬಗ್ಗೆ ಹೇಳದಿರುವುದೇ ಒಳಿತು. ಇಂತಹ ಕಥೆಗೆ ಬೇಕಾದ ಬಿಜಿಎಂ ಕೊಡುವಲ್ಲಿ ಅವರು ಹಿಂದುಳಿದಿದ್ದಾರೆ. ಸಂಕಲನ ಚಿತ್ರದ ವೇಗವನ್ನು ಎತ್ತಿಹಿಡಿದಿದೆ ಎನ್ನಬಹುದು.

Categories
ಸಿನಿ ಸುದ್ದಿ

ರುದ್ರ ಗರುಡ ಪುರಾಣ ಸಕ್ಸಸ್ ನ ಖುಷಿ ಹಂಚಿಕೊಂಡ ರಿಷಿ

2025 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ, ರಿಷಿ ನಾಯಕನಾಗಿ ನಟಿಸಿರುವ `ರುದ್ರ ಗರುಡ ಪುರಾಣ’ ಚಿತ್ರ ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಟೀಮ್ ಖುಷಿ ಹಂಚಿಕೊಂಡಿದೆ.

ನಮ್ಮ ಚಿತ್ರಕ್ಕೆ ಜನರು ತೋರುತ್ತಿರುವ ಒಲವು. ಈ ಚಿತ್ರದ ಗೆಲುವು ಎಂದು ಮಾತನಾಡಿದ ನಟ ರಿಷಿ, ಈ ಸಂದರ್ಭದಲ್ಲಿ ನಾನು ಮೊದಲು ಮಾಧ್ಯಮದವರನ್ನು ಅಭಿನಂದಿಸುತ್ತೇನೆ. ಅವರು ನಮ್ಮ ಚಿತ್ರದ ಬಗ್ಗೆ ಬರೆದ ಅದ್ಭುತ ವಿಮರ್ಶೆಗಳನ್ನು ನೋಡಿ ನಮ್ಮ ಚಿತ್ರಕ್ಕೆ ಹೆಚ್ಚು ಜನರು ಬರುತ್ತಿದ್ದಾರೆ.

ಚಿತ್ರವನ್ನು ನೋಡುತ್ತಿರುವ ಪ್ರತಿಯೊಬ್ಬರು ಚಿತ್ರದ ಬಗ್ಗೆ ಪಾಸಿಟಿವ್ ಮಾತುಗಳನ್ನಾಡುತ್ತಿರುವುದು ಮನಸ್ಸಿಗೆ ತುಂಬಾ ಖುಷಿಯಾಗಿದೆ. ಐದು ದಿನಗಳಲ್ಲಿ ಥಿಯೇಟರ್ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿಗೆ ಆಗಿದೆ. ತೆಲುಗು ಡಬ್ಬಿಂಗ್ ರೈಟ್ಸ್ ಸಹ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಇನ್ನೂ ಹೆಚ್ಚಿನ ಜನರು ಕುಟುಂಬ ಸಮೇತ ಬಂದು ನಮ್ಮ ಚಿತ್ರ ನೋಡಿ ಎಂದು ಮನವಿ ಮಾಡಿದರು.

ನಿರ್ಮಾಪಕ ಲೋಹಿತ್ ಹಾಗೂ ನಿರ್ದೇಶಕ ನಂದೀಶ್ ಸಹ ಚಿತ್ರತಂಡದ ಸದಸ್ಯರಿಗೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

ನಟರಾದ ಶಿವರಾಜ ಕೆ ಆರ್ ಪೇಟೆ, ಗಿರೀಶ್ ಶಿವಣ್ಣ, ಪ್ರಭಾಕರ್, ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಕಲನಕಾರ ಮನು ಶೇಡ್ಗಾರ್, ಸಂಭಾಷಣೆಕಾರ ರಘು ನಿಡುವಳ್ಳಿ ಮುಂತಾದವರು “ರುದ್ರ ಗರುಡ ಪುರಾಣ” ದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಚಿತ್ರದ ತಂದೆ ಮಗನ ಬಾಂಧವ್ಯದ ಹಾಡೊಂದನ್ನು ಬಿಡುಗಡೆ ಮಾಡಲಾಯಿತು.

Categories
ಸಿನಿ ಸುದ್ದಿ

ಅಮೆರಿಕಾದಲ್ಲಿ ತಿಮ್ಮನ ಮೊಟ್ಟೆಗಳು! ಡಲ್ಲಾಸ್ ಕನ್ನಡಿಗರಿಗೆ ಸ್ಪೆಷಲ್ ಶೋ

ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣದಲ್ಲಿ ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ “ತಿಮ್ಮನ ಮೊಟ್ಟೆಗಳು” ಚಿತ್ರ ಅಮೇರಿಕಾದ ಡಲ್ಸ್ಲಾಸ್ ನಲ್ಲಿ ಅದ್ದೂರಿ ಪ್ರೀಮಿಯರ್ ಶೋನೊಂದಿಗೆ ಬಿಡುಗಡೆಯಾಗಿದೆ.


ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಸುಂದರ ಕೌಟುಂಬಿಕ ಕಥಾನಕವನ್ನ ಹೊಂದಿರುವ ಚಿತ್ರ ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಹಾಗೂ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಜೂರಿ ಮೆನ್ಸನ್ ಅವಾರ್ಡ್ ಕೂಡ ಪಡೆದುಕೊಂಡಿತ್ತು.


ರಕ್ಷಿತ್ ತೀರ್ಥಹಳ್ಳಿ ಬರೆದ “ಕಾಡಿನ ನೆಂಟರು” ಕಥಾ ಸಂಕಲನದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾವಾಗಿದೆ. ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಅವರ ಸಂಕಲನ ಹಾಗೂ ಹೇಮಂತ್ ಜೋಯಿಸ್ ಅವರ ಸುಮಧುರ ಸಂಗೀತ ಚಿತ್ರಕ್ಕಿದೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ಹಾಡಿರುವ ಹಾಡುಗಳು ಇಂಪಾಗಿದ್ದು ಕಥೆಗೆ ಪೂರಕವಾಗಿವೆ.

ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಆಶಿಕಾ ಸೋಮಶೇಕರ್, ಪ್ರಗತಿ ಪ್ರಭು, ಶೃಂಗೇರಿ ರಾಮಣ್ಣ, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರ ಅಭಿನಯ ಚಿತ್ರಕ್ಕಿದೆ.
ಡಲ್ಲಾಸ್ ನಲ್ಲಿರುವ ಕನ್ನಡಿಗರು ಲುಂಗಿ ತೊಟ್ಟು, ಹೆಗಲ ಮೇಲೊಂದು ಟವಲ್ ಇಟ್ಟು, ತಲೆಯ ಮೇಲೊಂದು ಮಂಡಾಳೆಯನ್ನ ಹಾಕಿಕೊಂಡು ಮಲೆನಾಡಿನ ಸಾಮಾನ್ಯ ವ್ಯಕ್ತಿಯಂತೆ ಚಿತ್ರ ವೀಕ್ಷಿಸಲು ಬಂದದ್ದು ಎಲ್ಲರ ಗಮನ ಸೆಳೆಯಿತು.

ಚಿತ್ರ ನೋಡಿದವರೆಲ್ಲಾ ಮಾನವೀಯ ಮೌಲ್ಯಗಳು, ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಬಂಧಗಳು, ದೈವಾರಾಧನೆ ಮತ್ತು ಮನುಷ್ಯನ ನಂಬಿಕೆಗಳ ಬಗ್ಗೆ ಚಿತ್ರದಲ್ಲಿ ಮೂಡಿಬಂದಿರುವ ಬಗೆಯ ಬಗ್ಗೆ ಭಾವನಾತ್ಮಕವಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.


ಚಿತ್ರದ ಕಥೆಯಲ್ಲಿ ಕಾಳಿಂಗ ಹಾವಿನ ಪಾತ್ರ ಬಹುಮುಖ್ಯವಾಗಿದ್ದು ಚಿತ್ರದ ಓಟಕ್ಕೆ ಸಹಕಾರಿಯಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾಗುವುದೆಂದು ಚಿತ್ರತಂಡ ಹೇಳಿಕೊಂಡಿದೆ.

Categories
ಸಿನಿ ಸುದ್ದಿ

ಗಣನ ಅಬ್ಬರಕ್ಕೆ ರೆಡಿ: ಥ್ರಿಲ್ಲರ್ ಕಥೆ ಹಿಂದೆ ಪ್ರಜ್ವಲ್

ಗಣ ಸಿನಿಮಾ ಎಂಬುದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆ ಎರಡು ಕಾಲಘಟ್ಟಕ್ಕೆ ಸೇತುವೆ ಆಗಿರುವುದು ಲ್ಯಾಂಡ್‌ಲೈನ್‌ ಫೋನ್.‌ ಒಮ್ಮೆ 1993ರ ಕಾಲಘಟ್ಟಕ್ಕೆ ಕಥೆ ಸಾಗಿದರೆ, ಇನ್ನೊಮ್ಮೆ ಪ್ರಸ್ತುತತೆಗೆ ಹೊರಳುತ್ತದೆ. ಹೀಗೆ ಟೈಮ್‌ ಟ್ರಾವೆಲಿಂಗ್‌ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ಈ ಗಣ. ಲೇಟ್‌ ಆದರೂ ಲೇಟೆಸ್ಟ್‌ ಆಗಿಯೇ ಈ ಚಿತ್ರ ತೆರೆಗೆ ಬರುತ್ತಿದೆ. ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರೆ, ಯಶಾ ಶಿವಕುಮಾರ್‌, ವೇದಿಕಾ ನಾಯಕಿಯರಾಗಿ ನಟಿಸಿದ್ದಾರೆ. ಇದೀಗ ಇದೇ ಚಿತ್ರ ಜನವರಿ 31ರಂದು ಚಿತ್ರಮಂದಿರಗಳಿಗೆ ಗ್ರ್ಯಾಂಡ್‌ ಆಗಿ ಲಗ್ಗೆ ಇಡುತ್ತಿದೆ.

ಹೈದರಾಬಾದ್ ಮೂಲದ ಪಾರ್ಥು ಎಂಬುವವರು ತಮ್ಮ ಚೆರಿ ಕ್ರಿಯೇಷನ್ಸ್ ಬ್ಯಾನರ್‌ ಮೂಲಕ ಗಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಇವರಷ್ಟೇ ಅಲ್ಲ, ಗಣ ಸಿನಿಮಾದ ನಿರ್ದೇಶಕರೂ ಕೂಡ ತೆಲುಗು ಮೂಲದವರೇ. ಇತ್ತೀಚೆಗಷ್ಟೇ ಟಾಲಿವುಡ್‌ನಲ್ಲಿ ಹಿಟ್‌ ಆದ ಪುಷ್ಪ 2 ಸಿನಿಮಾ ನಿರ್ದೇಶಕ ಸುಕುಮಾರ್‌ ಅವರ ಜತೆಗೆ ಕೆಲಸ ಮಾಡಿದ ಅನುಭವ ಇರುವ ಹರಿಪ್ರಸಾದ್‌ ಜಕ್ಕ, ಗಣ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದಾರೆ.

ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಪಾರ್ಥು, “ನಾನು ತೆಲುಗು ಮೂಲದವನು, ಗಣ ನನ್ನ ಮೊದಲ ಸಿನಿಮಾ. ಈ ಸಿನಿಮಾ ಕೈ ಹಿಡಿದರೆ, ಇನ್ನೂ ಒಂದಷ್ಟು ಕನ್ನಡ ಸಿನಿಮಾಗಳನ್ನು ಮಾಡುವ ಬಯಕೆ ಇದೆ. ಇದೇ ಜನವರಿ 31ರ ಶುಕ್ರವಾರ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ರಿಲೀಸ್‌ ಆಗುತ್ತಿದೆ. ಕನ್ನಡ ನಾಡಿನ ಪ್ರೇಕ್ಷಕರು ನಮ್ಮ ಸಿನಿಮಾವನ್ನು ಮೆಚ್ಚಿಕೊಂಡು ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ” ಎನ್ನುತ್ತಾರೆ ನಿರ್ಮಾಪಕ ಪಾರ್ಥು.

ಟೈಮ್‌ ಟ್ರಾವೆಲಿಂಗ್‌ ಜಾನರ್‌ನ ಸಿನಿಮಾ
ಚಿತ್ರದ ಬಗ್ಗೆ ಮಾತನಾಡುವ ಅವರು, “ಇದೊಂದು ಪಕ್ಕ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಒಳ್ಳೆಯ ಮನರಂಜನೆಯ ಜತೆಗೆ ಪ್ರೇಕ್ಷಕ ಬಯಸುವ ಎಲ್ಲ ಅಂಶಗಳೂ ಗಣ ಸಿನಿಮಾದಲ್ಲಿದೆ. ಕರ್ಮಷಿಯಲ್‌ ಕೋನದಲ್ಲಿ ನಿರ್ಮಾಣ ಮಾಡಿದರೂ, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ತಾಕತ್ತು ನಮ್ಮ ಈ ಚಿತ್ರಕ್ಕಿದೆ. ಈಗಾಗಲೇ ಟ್ರೇಲರ್‌ನಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ. ಟೈಮ್‌ ಟ್ರಾವೆಲಿಂಗ್‌ ಜಾನರ್‌ನ ಈ ಸಿನಿಮಾ, ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಗಟ್ಟಿ ಕಂಟೆಂಟ್‌ ಜತೆಗೆ ಅಮ್ಮ ಮಗನ ಬಾಂಧವ್ಯವೂ ಈ ಸಿನಿಮಾದ ಹೈಲೈಟ್” ಎಂಬುದು ಪಾರ್ಥು ಅವರ ಮಾತು.

200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗಣ
ಮುಂದುವರಿದು ಮಾಹಿತಿ ನೀಡುವ ಅವರು, “ಸರಿ ಸುಮಾರು 75 ದಿನಗಳ ಕಾಲ ಈ ಸಿನಿಮಾ ಶೂಟಿಂಗ್ ಮಾಡಿದ್ದೇವೆ.‌ ಎಲ್ಲಿಯೂ ಕೊರತೆ ಬಾರದೆ, ರಿಚ್ ಆಗಿಯೇ ಸಿನಿಮಾ ಮಾಡಿದ್ದೇವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಬಹುತೇಕ ಶೂಟಿಂಗ್‌ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳು ಸರಿಗಮ ಕನ್ನಡ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿವೆ. ಟ್ರೇಲರ್‌ ಸಹ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಜನವರಿ 31ರ ಶುಕ್ರವಾರ ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಕಮರ್ಷಿಯಲ್‌ ಆಗಿ ಟೈಮ್‌ ಟ್ರಾವೆಲಿಂಗ್‌ ಎಳೆಯ ಥ್ರಿಲ್ಲಿಂಗ್‌ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಬಹುದು” ಎನ್ನುತ್ತಾರೆ ಪಾರ್ಥು.

ಪಾತ್ರವರ್ಗ ಮತ್ತು ತಾಂತ್ರಿಕ ಬಳಗ ಹೀಗಿದೆ..
ಅಂದಹಾಗೆ ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪಾತ್ರವರ್ಗದಲ್ಲಿ ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಅನ್ ಲಾಕ್ ರಾಘವ ಟ್ರೇಲರ್ ಮೋಡಿ

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ “ಅನ್ ಲಾಕ್ ರಾಘವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್,‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿ ಕುಶಾಲ್, ಭಾ.ಮ.ಗಿರೀಶ್, ನಟ ಪ್ರಥಮ್, ಜಿಮ್ ರವಿ ಸೇರಿದಂತೆ ಅನೇಕ ಗಣ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಮ್ಮ ಚಿತ್ರದ ಶೀರ್ಷಿಕೆಯನ್ನು ಕಳೆದ ಕೆಲವು ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೆ ಬಿಡುಗಡೆ ಮಾಡಿದ್ದರು. ಇಂದು ನಮ್ಮ ಚಿತ್ರದ ಟ್ರೇಲರ್ ಅವರಿಂದಲೇ ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ. ಇಂದು ಬೆಳಗಿನ ಜಾವ ಈ ಟ್ರೇಲರ್ ಸಿದ್ದವಾಯಿತು. ಅಂದುಕೊಂಡ ಸಮಯಕ್ಕೆ ಟ್ರೇಲರ್ ಬಿಡುಗಡೆಯಾಗಲು ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ಕಥೆ, ಚಿತ್ರಕಥೆಯನ್ನು “ರಾಮ ರಾಮ ರೆ” ಖ್ಯಾತಿಯ ಸತ್ಯಪ್ರಕಾಶ್ ಬರೆದಿದ್ದಾರೆ. ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ “ಅನ್ ಲಾಕ್ ರಾಘವ” ಚಿತ್ರ ಫೆಬ್ರವರಿ 7 ರಂದು ತೆರೆಗೆ ಬರಲಿದೆ ಎಂದು ನಿರ್ದೇಶಕ ದೀಪಕ್ ಮಧುವನಹಳ್ಳಿ ತಿಳಿಸಿದರು.

ಚಿತ್ರದ ಆರಂಭದಿಂದಲೂ ನಮಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಅಶ್ವಿನಿ ಮೇಡಂ ಅವರಿಗೆ ಅನಂತ ಧನ್ಯವಾದ ಎಂದು ಮತನಾಡಿದ ನಾಯಕ ಮಿಲಿಂದ್, “ಅನ್ ಲಾಕ್ ರಾಘವ” ಚಿತ್ರ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿರುವ ಚಿತ್ರ. ಸಾಧುಕೋಕಿಲ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾಡಿರುವ ಪಾತ್ರ ಈವರೆಗೂ ಯಾವ ಚಿತ್ರದಲ್ಲೂ ಮಾಡಿಲ್ಲ. ನಮ್ಮ ಚಿತ್ರ ಇದೇ ಫೆಬ್ರವರಿ 7ರಂದು ತೆರೆಗೆ ಬರಲಿದೆ. ಕುಟುಂಬ ಸಮೇತ ಬಂದು ಚಿತ್ರ ನೋಡಿ ಎಂದರು.

“ಅನ್ ಲಾಕ್ ರಾಘವ” ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಾಯಕಿ ರೆಚೆಲ್ ಡೇವಿಡ್.

“ಉದ್ಘರ್ಷ” ಚಿತ್ರ ಸೇರಿದಂತೆ ಈ ಚಿತ್ರದ ತನಕ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇತ್ತೀಚೆಗೆ ಟೆಕ್ನಿಕಲ್ ಶೋ ನಲ್ಲಿ ಚಿತ್ರವನ್ನು ನೋಡಿದಾಗ ತುಂಬಾ ಖುಷಿಯಾಯಿತು ಎಂದರು ನಿರ್ಮಾಪಕ ಮಂಜುನಾಥ್‌ ದಾಸೇಗೌಡ.

ನನಗೆ ಹದಿನೇಳು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ಆದರೆ ನಿರ್ಮಾಪಕನಾಗಿ ಇದು ಮೊದಲ ಚಿತ್ರ. ನಿರ್ದೇಶಕ ದೀಪಕ್ ಅವರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಆದರೆ ಇತ್ತೀಚೆಗೆ ಚಿತ್ರವನ್ನು ತೆರೆಯ ಮೇಲೆ ನೋಡಿದಾಗ ಇನ್ನೂ ಇಷ್ಟವಾಯಿತು ಎಂದು ಚಿತ್ರದ ಮತ್ತೊಬ್ಬ ನಿರ್ಮಾಪಕರಾದ ಗಿರೀಶ್ ಕುಮಾರ್ ತಿಳಿಸಿದರು. ಗೀತರಚನೆಕಾರ ಹೃದಯಶಿವ ಹಾಡಿನ ಬಗ್ಗೆ ಮಾತನಾಡಿದರು.

error: Content is protected !!