Categories
ಸಿನಿ ಸುದ್ದಿ

ಜೆರಾಕ್ಸ್ ಟ್ರೇಲರ್ ಬಂತು

ಜೀ5ನ ಬಹುನಿರೀಕ್ಷಿತ ವೆಬ್‌ ಸರಣಿ ʼಜೆರಾಕ್ಸ್‌ʼ ನ ಟ್ರೈಲರ್‌ ಇಂದು ಬಿಡುಗಡೆಯಾಗಿದೆ. 6 ಸಂಚಿಕೆಗಳುಳ್ಳ ಈ ಹಾಸ್ಯ ವೆಬ್‌ ಸರಣಿ ಇಂದು ತನ್ನ ಟ್ರೈಲರ್‌ ತುಣುಕಿನ ಮೂಲಕ ಎಲ್ಲರ ಮನೆ ಮಾತಾಗಿದೆ.

ನಟ, ನಿರ್ಮಾಪಕ ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಲಾಂಛನದಲ್ಲಿ ಹಾಗೂ ಬ್ಲಿಂಕ್‌ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಜೆರಾಕ್ಸ್‌ʼ ನಲ್ಲಿ ನಾಗಭೂಷಣ್‌, ಪಾಯಲ್‌ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಶ್ರೀವತ್ಸ, ಯಶ್ವಂತ್‌ ಶೆಟ್ಟಿ, ವಿಜಯ್‌ ಪ್ರಸಾದ್‌, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಮುಂತಾದವರು ನಟಿಸಿರುತ್ತಾರೆ.

ಮಳವಳ್ಳಿಯ ರಾಯದುರ್ಗದ ಪ್ರಕಾಶ (ನಾಗಭೂಷಣ) ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರನಾಗಿರುತ್ತಾನೆ. ಅವನ ಜೆರಾಕ್ಸ್‌ ಯಂತ್ರಕ್ಕೆ ಒಂದು ತಾಯಿತ ಸೇರಿದಾಗ ಅವನ ಜೀವನ ಬದಲಾಗುತ್ತದೆ. ಅವನು ತೆಗೆಯುವ ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದು ಅವನ ಜೀವನ ಉಲ್ಟಾಪಲ್ಟಾವಾಗುತ್ತದೆ. ಇದರಿಂದ ಆಗುವ ಅಚಾನಕ್‌ ಬದಲಾವಣೆಗಳು, ಊರಿನಲ್ಲಾಗುವ ಆಶ್ಚರ್ಯಕರ ಘಟನೆಗಳು, ಕುತೂಹಲಕಾರಿ ಸನ್ನಿವೇಶಗಳನ್ನು ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಜೀ5ನಲ್ಲಿ ಇದೇ ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯು ಪ್ರೇಕ್ಷಕರಿಗೆ ನಗೆ ಊಟ ಉಣಬಡಿಸಲಿದೆ.

ನಟ, ನಿರ್ಮಾಪಕ ಡಾಲಿ ಧನಂಜಯ ಮಾತನಾಡಿ, “ನನಗೆ ಈ ಕಥೆ ಇಷ್ಟವಾಗಲು ಕಾರಣ ಅದು ಹೇಳುವ ತತ್ವ, ಪ್ರತಿಯೊಂದು ಹಾಸ್ಯ ಸನ್ನಿವೇಶದ ಹಿಂದೆ ಅಡಗಿರುವ ತತ್ವ, ನನ್ನನ್ನು ತನ್ನತ್ತ ಸೆಳೆಯಿತು. ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದಾಗ, ಜನರು ತಮ್ಮ ಪ್ರತಿಬಿಂಬವನ್ನೇ ಸ್ವೀಕರಿಸಲು ಹೇಗೆ ನಿರಾಕರಿಸುತ್ತಾರೆ ಇವೆಲ್ಲವು ನನ್ನನ್ನು ಆಕರ್ಷಿಸಿತು. ಈ ಕಥೆಯು ಒಂಟಿತನ, ಹಾಸ್ಯ, ಪಶ್ಚಾತಾಪ, ಗೊಂದಲ ಎಲ್ಲವನ್ನೂ ಒಳಗೊಂಡಿದೆ. ಇದು ಕೇವಲ ಹಾಸ್ಯವನ್ನಷ್ಟೇ ಹೇಳದೇ, ಜೀವನದ ಮೌಲ್ಯಗಳನ್ನೂ ಕೂಡ ಹೇಳುತ್ತದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನು ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, “ನಮ್ಮ ಕಾಪಿ ನಾವು ನೋಡಲು ಬಯಸದ ನಮ್ಮ ಒಂದು ವ್ಯಕ್ತಿವವನ್ನು ಬಿಂಬಿಸಿದರೆ ಹೇಗೆ ಇರುತ್ತದೆ? ಜೆರಾಕ್ಸ್‌ ಈ ಒಂದು ಭಯದಿಂದ ಹುಟ್ಟಿದ ಕಥೆ ಎಂದರೆ ತಪ್ಪಾಗಲಾರದು. ಮಳವಳ್ಳಿಯಲ್ಲಿ ನಡೆಯುವ ಈ ಒಂದು ಆಶ್ಚರ್ಯಕರ ಘಟನೆ ಹೇಗೆ ಹಲವಾರು ಹೊಸ ತಿರುವುಗಳಿಗೆ ಕಾರಣವಾಗುತ್ತದೆ, ಹೇಗೆ ಜನರ ಜೀವನವನ್ನು ಬದಲಾಯಿಸುತ್ತದೆ, ಇವೆಲ್ಲವನ್ನೂ ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ʼಜೆರಾಕ್ಸ್‌ʼ ಆಗಿದೆ.” ಎಂದು ತಿಳಿಸಿದರು.

ನಟ ನಾಗಭೂಷಣ ಮಾತನಾಡಿ, “ನಾನು ಪ್ರಕಾಶ ಎಂಬ ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರನ ಪಾತ್ರವನ್ನು ಇದರಲ್ಲಿ ವಹಿಸಿದ್ದೇನೆ. ತನ್ನ ಜೀವನದಲ್ಲಿ ಆಗುವ ಒಂದು ಘಟನೆಯಿಂದ ಹೇಗೆ ಅವನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ಎಂಬುದನ್ನು ಕಥೆಯು ಹೇಳುತ್ತದೆ. ಪ್ರಕಾಶ ಸಾಮಾನ್ಯ ವ್ಯಕ್ತಿ, ಪ್ರಭಾವಿಯಲ್ಲ. ಆದರೆ ಈ ಘಟನೆಯ ನಂತರ ಎಲ್ಲರ ಜೀವನದಲ್ಲಿ ನಡೆಯುವ ಘಟನೆಗಳಿಗೆ ಇವನು ಕಾರಣಕರ್ತನಾಗಿರುತ್ತಾನೆ. ಅವನು ಶಕ್ತಿಶಾಲಿಯೇನಲ್ಲ, ಕೆಟ್ಟವನೂ ಅಲ್ಲ. ಆದರೆ ಎಲ್ಲದರ ಹಿಂದೆ ಇವನ ಕೈವಾಡವಿರುತ್ತದೆ. ಇದೊಂದು ವಿಭಿನ್ನವಾದ ಪಾತ್ರ. ವಿವಿಧ ಬಣ್ಣಗಳುಳ್ಳ ಪಾತ್ರ ಎಂದರೆ ತಪ್ಪಾಗಲಾರದು” ಎಂದು ಹೇಳಿದರು.
ಜೀ5 ಕಿರುಪರಿಚಯ:
ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

Categories
ಸಿನಿ ಸುದ್ದಿ

Review: ಹೆಣ್ಮಕ್ಕಳ ಸಮಸ್ಯೆಗೆ ಕ್ಯಾಲೆಂಡರ್ ಔಷಧ!

ವಿಭ

ಚಿತ್ರ: ಕ್ಯಾಲೆಂಡರ್
ನಿರ್ಮಾಣ: ಆದರ್ಶ್ ಗುಂಡುರಾಜ್‍
ನಿರ್ದೇಶನ: ನವೀನ್‍ ಶಕ್ತಿ
ತಾರಾಗಣ: ಆದರ್ಶ್ ಗುಂಡುರಾಜ್‍, ನಿವಿಷ್ಕ ಪಾಟೀಲ್, ಸುಶ್ಮಿತಾ, ಮಾಲಾಶ್ರೀ, ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಇತರರು.

ಅವನೊಬ್ಬ ಡಾಕ್ಟರ್. ಬೇರೆಯವರ ಕಣ್ಣಿಗೆ ತುಂಬಾ ಒಳ್ಳೆಯ ವ್ಯಕ್ತಿ. ಆದರೆ, ಆತ ಕೊಲೆ ಕೇಸಿನ ಆಸಾಮಿ. ಪೊಲೀಸರ ಕಣ್ ತಪ್ಪಿಸಿ ಓಡಾಡುತ್ತಿರೋ ಆತ ನಿಜವಾಗಿಯೂ ಕೊಲೆ ಮಾಡಿದ್ದಾನಾ? ಬೇರೆ ಯಾತಾದರೂ ಮಾಡಿದ್ದಾರಾ? ಇದೆ ಬೆನ್ನತ್ತುವ ಪೊಲೀಸ್ ಅಧಿಕಾರಿಗೆ ಕೊಲೆಗಾರ ಸಿಗ್ತಾನ? ಈ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.

‘ಕ್ಯಾಲೆಂಡರ್’ ಅನ್ನೋದು ಪ್ರತಿಯೊಬ್ಬರಿಗೂ ನಿತ್ಯವೂ ನೆನಪಾಗುತ್ತೆ. ಈ ಕ್ಯಾಲೆಂಡರ್ ಗೂ ಆ ಡಾಕ್ಟರ್ ಗು ಇರುವ ವಿಷಯ ಏನು ಅನ್ನೋದು ಸಸ್ಪೆನ್ಸ್.

ಇದೊಂದು ಹೊಸತರಹದ ವಿಷಯ ಇಟ್ಟುಕೊಂಡು ಮಾಡಿದ ಸಿನಿಮಾ. ಇಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ ಜೊತೆಗೆ ನೋಡುಗರಿಗೆ ಒಂದಷ್ಟು ಟೆಸ್ಟೂ ಇದೆ.

ಇಲ್ಲಿ ಹೀರೋ ತೆರೆ ಮೇಲಷ್ಟೇ ಅಲ್ಲ, ಕಥೆಯಲ್ಲೂ ಕೈ ಆಡಿಸಿದ್ದಾರೆ. ಆ ಕಾರಣಕ್ಕೆ ಕೊಂಚ ವಿಭಿನ್ನ ಪ್ರಯತ್ನದ ಉದ್ದೇಶ ಇಲ್ಲಾ್ಇದೆ ಎನ್ನಬಹುದು.

ಕಥೆ ಸರಳ. ಮಹಿಳೆಯರ ದೃಷ್ಟಿಕೋನದಲ್ಲಿ ಹೆಣೆಯಲಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಕನೆಕ್ಟ್ ಅನಿಸುವ ಎಳೆ ಇದೆ. ಅದೇ ಹೈಲೆಟ್. ಅದೇನು ಅನ್ನುವುದಕ್ಕೆ ಸಿನಿಮಾ ನೋಡಬೇಕು.

ಕಥೆಗಾರರ ಕಥೆಯ ಎಳೆ‌ ಚೆನ್ನಾಗಿದೆ. ನಿರ್ದೇಶಕ ನವೀನ್ ಶಕ್ತಿ ಅವರ ನಿರೂಪಣೆ ವಿಚಾರದಲ್ಲಿ ಸ್ವಲ್ಪ ಬಿಗಿ ಹಿಡಿತ ಬೇಕಿತ್ತು. ಚಿತ್ರಕಥೆ ಕಡೆ ಹೆಚ್ಚು ಗಮನ ವಹಿಸಬೇಕಿತ್ತು.

ಮೊದಲರ್ಧ ಚಿತ್ರದಲ್ಲಿ ಹೇಳಿಕೊಳ್ಳುವಂತಹ ವಿಶೇಷವಿಲ್ಲ. ದ್ವಿತಿಯಾರ್ಧ ಇದಕ್ಕೆ ಹೊರತಲ್ಲ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ವಿಶೇಷತೆ ಇದೆ. ಅದೇ ಸಿನಿಮಾದ ಜೀವಾಳ‌.


ನಾಯಕ ಒಬ್ಬ ಡಾಕ್ಟರ್. ಆದರೆ ಕುಡಿಯೋದೇ ಅವನ‌ ವೀಕ್ ನೆಸ್. ಈ ನಡುವೆ ಒಂದು ರೀಸರ್ಚ್ ಮಾಡ್ತಾನೆ. ಅದು‌ ಮಹಿಳೆಯರ
ಋತುಚಕ್ರದ ಸಮಯದಲ್ಲಿ ಅವರ ಮಾನಸಿಕ ಸ್ಥಿತಿಯ ಬದಲಾವಣೆ ಮತ್ತು ಅದರಿಂದ ಆಗುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ತಾನೆ. ಇಲ್ಲಿ ಒಂದಷ್ಟು ಕಮರ್ಷಿಯಲ್ ವಿಚಾರವನ್ನು ಸೇರಿಸಿ ಎಲ್ಲೂ ಬೋರ್ ಆಗದಂತೆ ಜಾಗೃತ ವಹಿಸಿದ್ದಾರೆ. ಆದರೂ ಕೆಲ ಅನಗತ್ಯ ದೃಶ್ಯಗಳನ್ನು ಕೈ ಬಿಡಬಹುದಿತ್ತು. ನಿರ್ದೇಶಕರು ಆ ಗೋಜಿಗೆ ಹೋಗಿಲ್ಲ.

ನಾಯಕ ಆದರ್ಶ್ ನಗು‌ಮೊಗದಲ್ಲೇ ಕಾಣಿಸಿಕೊಂಡಿದ್ದಾರೆ. ನೋಡುಗರನ್ನು ಖುಷಿಪಡಿಸಲು ಶ್ರಮಿಸಿದ್ದಾರೆ.

ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಅವರು ನಿರ್ದೇಶಕರು‌ ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಉಳಿದಂತೆ ಮಾಲಾಶ್ರೀ ಅವರನ್ನು ಹೆಚ್ಚು ಬಳಸಿಕೊಂಡಿಲ್ಲ. ರಮೇಶ್‍ ಇಂದಿರಾ, ಪ್ರಮೋದ್‍ ಶೆಟ್ಟಿ ಎಂದಿನಂತೆ ಪಾತ್ರಗಳಿಗೆ ಮೋಸ‌ ಮಾಡಿಲ್ಲ‌.
ಸುಚೇಂದ್ರ ಪ್ರಸಾದ್‍ ಮತ್ತು ಚಂದ್ರಪ್ರಭಾ ಪರವಾಗಿಲ್ಲ. ರಮೇಶ್ ‍ಕೊಯಿರಾ ಛಾಯಾ‍ಗ್ರಹಣದಲ್ಲಿ ಕ್ಯಾಲೆಂಡರ್ ಸೊಬಗಿದೆ. ಸುನಾದ್ ಗೌತಮ್‍ ಸಂಗೀತಕ್ಕೆ‌ ಧಮ್ ಬೇಕಿತ್ತು.

Categories
ಸಿನಿ ಸುದ್ದಿ

ಜೆರಾಕ್ಸ್ ಸೆಂಟರ್ ಗೆ ಸೇರಿದ ಪಾಯಲ್!

zee5 ಕನ್ನಡದಲ್ಲಿ ಡಾಲಿ ಧನಂಜಯ್ ವೆಬ್ ಸಿರೀಸ್..’ಜೆರಾಕ್ಸ್’ಗೆ ಪಾಯಲ್ ಚೆಂಗಪ್ಪ ಎಂಟ್ರಿ

ಕನ್ನಡ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಕಥೆಗಳಿಗೆ zee5 ವೇದಿಕೆ ಸೃಷ್ಟಿಸಿದೆ. ಈಗಾಗಲೇ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರಿಗೆ ನೀಡಿರುವ zee5 ಈಗ ‘ಜೆರಾಕ್ಸ್’ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ನಟನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ‘ಜೆರಾಕ್ಸ್’ ವೆಬ್ ಸರಣಿಯನ್ನು ನಿರ್ಮಿಸುತ್ತಿದ್ದಾರೆ. ಈ ಸಿರೀಸ್ ನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ. ಜೆರಾಕ್ಸ್ ವೆಬ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಾಗಭೂಷಣ್ ನಟಿಸಲಿದ್ದು, ಇದೀಗ ಪಾಯಲ್ ಚೆಂಗಪ್ಪ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಅಮೃತಾಂಜನ್,‌ ಬ್ಯಾಡ್‌ ಗರ್ಲ್ಸ್ ಮುಂತಾದವುಗಳ
ಮೂಲಕ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿರುವ ಪಾಯಲ್ ಚೆಂಗಪ್ಪ ಈಗ ಜೆರಾಕ್ಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಸೆನ್ಸೇಷನ್ ಎಂದು ಹಾಗೂ ತಮ್ಮ ಹಾಸ್ಯ ಪ್ರಜ್ಞೆಗೆ ಪ್ರಸಿದ್ಧಿ ಪಡೆದಿರುವ ಪಾಯಲ್,‌ಇದೀಗ ಜೆರಾಕ್ಸ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ನಕ್ಕು ನಗಿಸಲು ಸಿದ್ಧವಾಗಿದ್ದಾರೆ.

ಜೆರಾಕ್ಸ್ ಈಗಾಗಲೇ ತನ್ನ ಶೀರ್ಷಿಕೆಯೊಂದಿಗೆ ಕುತೂಹಲವನ್ನು ಹುಟ್ಟುಹಾಕಿದೆ. ಈ ಸರಣಿಯು ಮಂಡ್ಯ-ಮೈಸೂರು ಸುತ್ತಮುತ್ತ ನಡೆಯುತ್ತಿದ್ದು, ಜೆರಾಕ್ಸ್ ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು ಕಟ್ಟಿಕೊಡಲಾಗಿದೆ.

ಈ ಘೋಷಣೆಯೊಂದಿಗೆ, ಕನ್ನಡ ZEE5 ಸ್ಥಳೀಯ ಸಂವೇದನೆಗಳಲ್ಲಿ ಬೇರೂರಿರುವ ಕಥೆಗಳು ಮತ್ತು ಸಾಂಸ್ಕೃತಿಕ ಸತ್ಯ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಪರದೆಗೆ ತರುವ ಸೃಷ್ಟಿಕರ್ತರ ಮೇಲೆ ತನ್ನ ಗಮನವನ್ನು ಬಲಪಡಿಸುವುದನ್ನು ಮುಂದುವರೆಸಿದೆ.

Categories
ಸಿನಿ ಸುದ್ದಿ

“ಎರೆಯ”ಚಿತ್ರ ನಿರ್ದೇಶನಕ್ಕೆ ರೆಡಿಯಾದ ಚೈತನ್ಯ

6 ನೇ ಶತಮಾನದ ಭಾರತದಲ್ಲಿ ಆಡಳಿತ ನಡೆಸಿದ ದಕ್ಷಿಣ ಭಾರತದ ದಂತಕಥೆಯೆನಿಸಿರುವ ಚಕ್ರವರ್ತಿ ಇಮ್ಮಡಿ ಪುಲಕೇಶಿ ಅವರ ಜೀವನ ಮತ್ತು ಪರಂಪರೆಯನ್ನು ಆಧರಿಸಿದ ಮಹಾಕಾವ್ಯ ಚಲನಚಿತ್ರವಾದ “ಎರೆಯ”ದ ನಿರ್ಮಾಣವನ್ನು ಮಾಡುವುದರ ಮೂಲಕ ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ LLP ಒಂದು ಅಭೂತಪೂರ್ವ ಸಿನಿಮಾ ಸಾಹಸಗಾಥೆಗೆ ಮುನ್ನುಡಿ ಬರೆಯಲಿದೆ.


ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ನಿರ್ಮಿಸಲಿರುವ “ಎರೆಯ” ಚಿತ್ರದಲ್ಲಿ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಸಾಹಸ, ಚಾತುರ್ಯ ಮತ್ತು ಅದ್ವಿತೀಯ ಆಡಳಿತಸೂತ್ರಗಳ ಮೂಲಕ ವಿಶಾಲ ಸಾಮ್ರಾಜ್ಯವನ್ನು ಆಳಿದ ಅವರ ಆಳ್ವಿಕೆಯನ್ನು ಚಿತ್ರಿಸುತ್ತದೆ. ಇಮ್ಮಡಿ ಪುಲಕೇಶಿಯ ಕಾಲವನ್ನು ಇತಿಹಾಸದಲ್ಲಿ ಒಂದು ಸುವರ್ಣಯುಗ ಎಂದೇ ಹೇಳಲಾಗುತ್ತದೆ.

ಡಾ. ಭೂಷನ್ ಶಾನಭಾಗ್ ಅವರ ಆಳವಾದ ಸಂಶೋಧನೆಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ.
ಕನ್ನಡಕ್ಕೆ ಒಂದು ಮೈಲಿಗಲ್ಲಾಗಲಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಿರ್ದೇಶಿಸುತ್ತಿರುವುದು ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕರಾದ ಕೆ.ಎಂ. ಚೈತನ್ಯ ಅವರು. ಸೂಕ್ಷ್ಮತೆಯ ಕಥೆಗಾರಿಕೆ ಮತ್ತು ವಿಭಿನ್ನ ದೃಶ್ಯ ಶೈಲಿಗೆ ಹೆಸರುವಾಸಿಯಾಗಿರುವ. ಚೈತನ್ಯ ಕನ್ನಡದಲ್ಲಿ 8 ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅವರ ಮೊದಲ ಚಲನಚಿತ್ರ “ಆ ದಿನಗಳು” ಒಂದು ಮಹತ್ವದ ಮೈಲಿಗಲ್ಲಾಗಿದ್ದು 2007 ರ ದಕ್ಷಿಣದ ಚಿತ್ರಗಳ ವರ್ಗದಲ್ಲಿ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಲನಚಿತ್ರ ಸೇರಿದಂತೆ ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿ ಪ್ರಶಸ್ತಿಗಳನ್ನು ಗೆದ್ದಿದೆ. ಅವರು ತಮ್ಮ “ಆಕೆ” ಚಿತ್ರಕ್ಕಾಗಿ “ಅತ್ಯುತ್ತಮ ರೂಪಾಂತರ ಚಿತ್ರಕಥೆ”ಗಾಗಿ ಟೈಮ್ಸ್ ಕೆಎಎಫ್‌ಟಿಎ ಪ್ರಶಸ್ತಿ – 2017 ಅನ್ನು ಗೆದ್ದಿದ್ದಾರೆ. ಅವರ ಮುಂಬರುವ ಚಲನಚಿತ್ರ “ಬಲರಾಮನ ದಿನಗಳು” ಈ ವರ್ಷ ಬಿಡುಗಡೆಯಾಗಲಿದೆ. “ಎರೆಯ” ದೊಂದಿಗೆ, ಇತಿಹಾಸದ ಪುಟಗಳಲ್ಲಿ ಕಂಡ ಭಾರತದ ಭವ್ಯತೆಯನ್ನು ಬಿಂಬಿಸಲು ಅವರು ತಯಾರಿ ಮಾಡಿಕೊಳ್ಳುತ್ತಿದಾರೆ.

“ಎರೆಯ” ಚಿತ್ರವು ನಿರ್ಮಾಪಕರು ನಿರ್ಮಿಸುತ್ತಿರುವ ಮೂರನೇ ಚಲನಚಿತ್ರವಾಗಿದ್ದು, ಕೇ ಕೇ ಮೆನನ್, ಜಿಮ್ಮಿ ಶೇರ್ಗಿಲ್, ಜಾಕಿ ಶ್ರಾಫ್, ಪಂಕಜ್ ತ್ರಿಪಾಠಿ ಮುಂತಾದ ಅದ್ಭುತ ನಟರ ಅಭಿನಯವಿದ್ದ “ಫಾಮಸ್” ಹಾಗೂ ದಿವಂಗತ ರಾಜೇನ್ ಕೊಥಾರಿ ಅವರ ನಿರ್ದೇಶನದಲ್ಲಿ ಓಂ ಪುರಿ, ಸತೀಶ್ ಶಾ, ಸುಪ್ರಿಯಾ ಪಾಠಕ್ ಮುಂತಾದವರು ನಟಿಸಿದ್ದ “ಪಂಗಾ ನಾ ಲೋ” ಅವರ ಇನ್ನಿತರೆ ಚಿತ್ರಗಳಾಗಿವೆ. “ಫಾಮಸ್” ಅನ್ನು ಆಸಕ್ತರು ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು. ಈ ಎರಡೂ ಚಲನಚಿತ್ರಗಳನ್ನು ಅವರ ವಿದಿಶಾ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ (ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ ಎಲ್‌ಎಲ್‌ಪಿಯ ಸಹೋದರಿ ಸಂಸ್ಥೆ) ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಪ್ಯಾನ್-ಇಂಡಿಯಾ ಪ್ರೇಕ್ಷಕರ ಮನಸೂರೆಗೊಳ್ಳಲು ಬೃಹತ್ ಪ್ರಮಾಣದಲ್ಲಿ ತೆರೆಯ ಮೇಲೆ ಬರಲಿರುವ “ಎರೆಯ” ಚಿತ್ರವನ್ನು ಹಿಂದಿ ಜೊತೆಗೆ ಎಲ್ಲಾ ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಲ್ಲೂ ನಿರ್ಮಿಸಲಾಗುವುದು. ಇದು ಜಗತ್ತಿನಾದ್ಯಂತ ಇರುವ ಸಿನಿಮಾಸಕ್ತರನ್ನು ತಲುಪುವ ಗುರಿ ಹೊಂದಿದೆ. ಈ ಚಿತ್ರವು ರಾಷ್ಟ್ರದ ಎಲ್ಲಾ ಭಾಗಗಳಿಂದ ಬಂದ ಉತ್ಕೃಷ್ಟ ತಾರಾಬಳಗವನ್ನು ಒಳಗೊಂಡಿದ್ದು, ಅತ್ಯಂತ ನುರಿತ ತಂತ್ರಜ್ಞರ ತಂಡ ಇದನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಚಿತ್ರದ ಪ್ರಮುಖ ನಟರ ಆಯ್ಕೆ ಮತ್ತು ತಾಂತ್ರಿಕ ತಂಡದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಬಹು ಹೆಸರಾಂತ ನಟವರ್ಗವನ್ನೊಳಗೊಂಡ ಈ ಸಿನಿಮಾ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. “ಎರೆಯ” ಸಿನಿಮಾ ಇತಿಹಾಸದ ಪುಟಗಳಲ್ಲಿ ಕಳೆದುಹೋದ ಭಾರತದ ಶ್ರೇಷ್ಠ ಚಕ್ರವರ್ತಿಯೊಬ್ಬರ ಪರಂಪರೆಯನ್ನು ಆಚರಿಸುವ ಒಂದು ಮುಖ್ಯ ಚಿತ್ರವಾಗಲಿದೆ.

ವಿಂಗ್‌ಸ್ಪ್ಯಾನ್ ಕುರಿತು…


ವಿಂಗ್ಸ್‌ಪ್ಯಾನ್ ಮೋಷನ್ ಪಿಕ್ಚರ್ಸ್ ಮುಂಬೈ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದು, ವಿವಿಧ ಮಾಧ್ಯಮಗಳಲ್ಲಿ ಗುಣಮಟ್ಟದ ಮತ್ತು ಆಕರ್ಷಕ ದೃಶ್ಯಕಥನಗಳನ್ನು ನಿರ್ಮಿಸುವತ್ತ ಕೇಂದ್ರೀಕರಿಸಿದೆ. 2014ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಚಿತ್ರಗಳು, ಬ್ರ್ಯಾಂಡೆಡ್ ಕಂಟೆಂಟ್ ಮತ್ತು ಮಲ್ಟಿಮೀಡಿಯಾ ಯೋಜನೆಗಳ ಮೂಲಕ ಸೃಜನಾತ್ಮಕ ದೃಷ್ಟಿಕೋನ ಹಾಗೂ ಸುದೃಢ ನಿರೂಪಣೆಯ ಕಥನ ಶೈಲಿಯನ್ನು ವೈವಿಧ್ಯಮಯ ಪ್ರೇಕ್ಷಕಗಣಕ್ಕೆ ಒದಗಿಸುತ್ತಿದೆ.

Categories
ಸಿನಿ ಸುದ್ದಿ

ಸುದೀಪ್ ಪುತ್ರಿ ಹಾಡು 50 ಮಿಲಿಯನ್ ವೀಕ್ಷಣೆ: ಸಾನ್ವಿ ಹಾಡಿದ ಮಸ್ತ್ ಮಲೈಕಾಗೆ ಸಖತ್ ರೆಸ್ಪಾನ್ಸ್

ಯೂಟ್ಯೂಬ್ ನಲ್ಲಿ ದಾಖಲೆ ಬರೆದ ಸಾನ್ವಿ ಸುದೀಪ್ ಹಾಡಿದ ಮಸ್ತ್ ಮಲೈಕಾ ಸಾಂಗ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ‘ಮಸ್ತ್ ಮಲೈಕಾ’ ಹಾಡು ಈಗ ದಾಖಲೆ ಬರೆದಿದೆ. ಬಿಡುಗಡೆಯಾದ ಬಳಿಕ ಈ ಪಾರ್ಟಿ ಸಾಂಗ್ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲಿ ನೋಡಿದ್ರೂ ಮಲೈಕಾಳದ್ದೇ ಮಸ್ತ್ ಮಸ್ತ್ ಗುನುಗು. ಅಷ್ಟರಮಟ್ಟಿಗೆ ‘ಮಸ್ತ್ ಮಲೈಕಾ’ ಹಾಡು ಭರ್ಜರಿ ಹಿಟ್ ಆಗಿದೆ. ಇದೀಗ
ಯೂಟ್ಯೂಬ್‌ನಲ್ಲಿ ‘ಮಸ್ತ್ ಮಲೈಕಾ’ ಹಾಡು ದಾಖಲೆ ಬರೆದಿದೆ.

ಸರೆಗಮ‌ ಕನ್ನಡ ಯೂಟ್ಯೂಬ್ ನಲ್ಲಿ ಮಸ್ತ್ ಮಲೈಕಾ ಗೀತೆ ಐದು ಮಿಲಿಯನ್ ಗಟ್ಟಲೇ ವ್ಯೂಸ್ ಕಂಡಿದೆ. ಈ ಮೂಲಕ ಕಿಚ್ಚನ ಮಾರ್ಕ್ ಚಿತ್ರದ ಹಾಡು ರೆಕಾರ್ಡ್ ಕ್ರಿಯೇಟ್ ಮಾಡಿದೆ.

ಅಂದಹಾಗೇ ಮಸ್ತ್ ಮಲೈಕಾ ಹಾಡಿಗೆ ಕಂಠ ಕುಣಿಸಿದವರು ಸಾನ್ವಿ ಸುದೀಪ್.‌ ಅವರ ಜೊತೆ ನಕಾಶ್ ಅಜೀಜ್ ಹಾಡಿದ್ದಾರೆ. ಮಗಳ ಧ್ವನಿಗೆ ಕಿಚ್ಚ ಮಸ್ತ್ ಹೆಜ್ಜೆ ಹಾಕಿದ್ದರು.
ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಅನೂಪ್ ಭಂಡಾರಿ ಅವರು ಈ ಹಾಡನ್ನು ಬರೆದಿದ್ದಾರೆ.

ಸಾನ್ವಿ ಚೊಚ್ಚಲ ಸಾಂಗ್ ಕ್ರಿಯೇಟ್ ರೆಕಾರ್ಡ್

ಮಸ್ತ್ ಮಲೈಕಾ ಹಾಡಿಗೆ ಧ್ವನಿಯಾಗುವ ಮೂಲಕ ಸಾನ್ವಿ ಸುದೀಪ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಾನ್ವಿ ಹಾಡಿರುವ ಚೊಚ್ಚಲ ಹಾಡು 50 ಮಿಲಿಯನ್ ವೀವ್ಸ್ ಕಂಡಿರುವುದು ದಾಖಲೆಯೇ ಸರಿ. ಇನ್ನೊಂದು ವಿಶೇಷ ಏನಂದರೆ ಸರೆಗಮ ಯೂಟ್ಯೂಬ್ ನಲ್ಲಿ 50 ಮಿಲಿಯನ್ ವೀಕ್ಷಣೆ ಕಂಡ ಮೊದಲ ಕನ್ನಡ ಹಾಡು ಕೂಡ ಮಸ್ತ್ ಮಲೈಕಾ.

ಯೂಟ್ಯೂಬ್ ಮಾತ್ರವಲ್ಲದೆ ರೀಲ್ಸ್ ನಲ್ಲಿಯೂ ಕಮಾಲ್ ಮಾಡಿದ ಮಸ್ತ್ ಮಲೈಕಾ ಸಾಂಗ್ 50 ಮಿಲಿಯನ್ ವೀಕ್ಷಣೆ ಕಂಡು ಮುಂದೆ ಸಾಗ್ತಿದೆ. ಈ ಹಾಡಿನಲ್ಲಿ ಮಲೈಕಾ ಆಗಿ ನಿಶ್ವಿಕಾ ನಾಯ್ಡು ಅವರು ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಈ ಹಾಡು ಬಿಡುಗಡೆಯಾಗಿತ್ತು. ಅದರಲ್ಲಿಯೂ ಕನ್ನಡ ಗೀತೆ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

Categories
ಸಿನಿ ಸುದ್ದಿ

ಜೆರಾಕ್ಸ್ ವೆಬ್ ಸರಣಿಗೆ ನಾಗಭೂಷಣ್ ಹೀರೋ : ಇದು ಡಾಲಿ ಧನಂಜಯ ನಿರ್ಮಾಣದ ವೆಬ್ ಸರಣಿ

ಕನ್ನಡ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಕಥೆಗಳಿಗೆ zee5 ವೇದಿಕೆ ಸೃಷ್ಟಿಸಿದೆ. ಈಗಾಗಲೇ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರಿಗೆ ನೀಡಿರುವ zee5 ಈಗ ‘ಜೆರಾಕ್ಸ್’ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ನಟನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ‘ಜೆರಾಕ್ಸ್’ ವೆಬ್ ಸರಣಿಯನ್ನು ನಿರ್ಮಿಸುತ್ತಿದ್ದಾರೆ. ಈ ಸಿರೀಸ್ ನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ. ಜೆರಾಕ್ಸ್ ವೆಬ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಾಗಭೂಷಣ್ ನಟಿಸಲಿದ್ದಾರೆ.

ಟಗರು ಪಲ್ಯ, ವಿದ್ಯಾಪತಿ ಸಿನಿಮಾಗಳ ಜೊತೆಗೆ ಇಕ್ಕಟ್ ಹಾಗೂ ಹನಿಮೂನ್ ವೆಬ್ ಸರಣಿಗಳ ಮೂಲಕ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿರುವ ನಾಗಭೂಷಣ್ ಈಗ ಜೆರಾಕ್ಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಬಹು ಬೇಡಿಕೆ ಕಾಮಿಡಿ ನಟರುಗಳಲ್ಲಿ ಒಬ್ಬರಾಗಿರುವ ಅವರು ಈಗ
ಡಾರ್ಕ್ ಹಾಸ್ಯ ಥ್ರಿಲ್ಲರ್ ಕಥೆಯ ಜೆರಾಕ್ಸ್ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಜೆರಾಕ್ಸ್ ಈಗಾಗಲೇ ತನ್ನ ಶೀರ್ಷಿಕೆಯೊಂದಿಗೆ ಕುತೂಹಲವನ್ನು ಹುಟ್ಟುಹಾಕಿದೆ. ಈ ಸರಣಿಯು ಮಂಡ್ಯ-ಮೈಸೂರು ಸುತ್ತಮುತ್ತ ನಡೆಯುತ್ತಿದ್ದು, ಜೆರಾಕ್ಸ್ ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು ಕಟ್ಟಿಕೊಡಲಾಗಿದೆ.

ಈ ಘೋಷಣೆಯೊಂದಿಗೆ, ಕನ್ನಡ ZEE5 ಸ್ಥಳೀಯ ಸಂವೇದನೆಗಳಲ್ಲಿ ಬೇರೂರಿರುವ ಕಥೆಗಳು ಮತ್ತು ಸಾಂಸ್ಕೃತಿಕ ಸತ್ಯ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಪರದೆಗೆ ತರುವ ಸೃಷ್ಟಿಕರ್ತರ ಮೇಲೆ ತನ್ನ ಗಮನವನ್ನು ಬಲಪಡಿಸುವುದನ್ನು ಮುಂದುವರೆಸಿದೆ.

ನಾಯಕ ನಟ ನಾಗಭೂಷಣ ಮಾತನಾಡಿ, “ಜೆರಾಕ್ಸ್ ನಾನು ಭಾಗವಾಗಿದ್ದ ಯಾವುದೇ ವಿಷಯಕ್ಕಿಂತ ಭಿನ್ನವಾಗಿದೆ, ಅದು ಅನಿರೀಕ್ಷಿತ, ವಿಲಕ್ಷಣ ಮತ್ತು ನಿರಂತರವಾಗಿ ಬದಲಾಗುತ್ತಿದೆ. ಶ್ರೀನಿಧಿ ಸೃಷ್ಟಿಸಿರುವ ಪ್ರಪಂಚವು ಅದೇ ಸಮಯದಲ್ಲಿ ಪರಿಚಿತ ಮತ್ತು ವಿಲಕ್ಷಣವೆನಿಸುತ್ತದೆ. ಒಬ್ಬ ಕಲಾವಿದನಾಗಿ ಆ ಸ್ಥಳವು ಅನ್ವೇಷಿಸಲು ರೋಮಾಂಚನಕಾರಿಯಾಗಿತ್ತು. ಕನ್ನಡ ZEE5 ವಿಭಿನ್ನವಾಗಿರಲು ಧೈರ್ಯವಿರುವ ಕಥೆಗಳಿಗೆ ಅವಕಾಶ ನೀಡುತ್ತಿದೆ ಎಂದು ನನಗೆ ರೋಮಾಂಚನವಾಗಿದೆ” ಎಂದರು.

Categories
ಸಿನಿ ಸುದ್ದಿ

Review: ಪೀಟರ್ ಪ್ರಯತ್ನ ಸಾರ್ಥಕ! ಮನಸ್ಸಿಗೆ ಇಷ್ಟವಾಗುವ ಹುಡುಗ!!

ವಿಜಯ್ ಭರಮಸಾಗರ

ರೇಟಿಂಗ್: 3.5/5

ಚಿತ್ರ: ಪೀಟರ್
ನಿರ್ದೇಶಕ: ಸುಕೇಶ್ ಶೆಟ್ಟಿ
ನಿರ್ಮಾಣ: ರವಿ ಹಿರೇಮಠ್, ರಾಕೇಶ್ ಹೆಗಡೆ
ತಾರಾಗಣ: ರಾಜೇಶ್ ಧ್ರುವ , ಜಾನವಿ ರಾಯಲ, ರವೀಕ್ಷ ಶೆಟ್ಟಿ ಇತರರು.

ಒಂದು ಸಿನಿಮಾ ಮೊದಲು ನೋಡುಗನ ಮನಸ್ಸನ್ನು ಗೆಲ್ಲಬೇಕು. ಹೊರ ಬಂದರೂ ಆ ಕಥೆ ಕಾಡಬೇಕು. ತೆರೆ ಮೇಲಿನ ಪಾತ್ರಗಳು ನೆನಪಲ್ಲುಳಿಯಬೇಕು. ಇಡೀ ಸಿನಿಮಾಗೆ ಸರಾಗವಾಗಿ ನೋಡಿಸಿಕೊಂಡು ಹೋಗುವ ತಾಕತ್ತು ಮತ್ತು ಗುಣ ಇರಬೇಕು. ಈ ಎಲ್ಲಾ ಗುಣ ವಿಶೇಷ ಇರುವ ಸಿನಿಮಾ ‘ಪೀಟರ್’ ಅಂತ ಮುಲಾಜಿಲ್ಲದೆ ಹೇಳಬಹುದು. ಕನ್ನಡದಲ್ಲಿ ಈಗಾಗಲೇ ಅನೇಕ ಕಂಟೆಂಟ್ ಸಿನಿಮಾಗಳು ಬಂದಿವೆ. ಆ ಸಾಲಿಗೆ ಪೀಟರ್ ಕೂಡ ಸೇರಿದೆ. ಒಂದೇ ಮಾತಲ್ಲಿ ಹೇಳುವುದಾದರೆ ಪೀಟರ್ ಕಾಡುವ ಮತ್ತು ನೋಡುವ ಚಿತ್ರ.

ಇಲ್ಲಿ ಗಟ್ಟಿ ಕಥೆ ಇದೆ. ಚಿತ್ರಕಥೆಯಲ್ಲಿ ಧಮ್ ಇದೆ. ಬಿಗಿಯಾದ ನಿರೂಪಣೆ ಇದೆ. ಆರಂಭದಿಂದ ಅಂತ್ಯದವರೆಗೆ ಎಲ್ಲೂ ಗೊಂದಲವಿಲ್ಲದೆ, ನೋಡುಗನಿಗೆ ಆ ಕಥೆ, ಪಾತ್ರಗಳು, ಸನ್ನಿವೇಶಗಳು ಕನೆಕ್ಟ್ ಆಗುವ ಮೂಲಕ ನವಿರಾದ ಪ್ರೀತಿ ಕಥೆಯೊಳು ಸಣ್ಣದ್ದೊಂದು ರಕ್ತಸಿಕ್ತ ಅಧ್ಯಾಯ ಮತ್ತಷ್ಟು ರೋಚಕ ಎನಿಸಿದೆ.

ನಿರ್ದೇಶಕರಿಗೆ ಸ್ಪಷ್ಟತೆ ಇದೆ. ಅ ಕಾರಣಕ್ಕೆ ಸಿನಿಮಾ ಎಲ್ಲೂ ಬೋರ್ ಎನಿಸಲ್ಲ. ಮೊದಲರ್ಧ ಕಟ್ಟಿಕೊಟ್ಟಿರುವ ಕಥೆಯಲ್ಲಿ ಕೊಂಚ ಮಂದಗತಿ ಎಂಬ ಮಾತು ಬಿಟ್ಟರೆ, ದ್ವಿತಿಯಾರ್ಧ ಸಿನಿಮಾ ಅತ್ತಿತ್ತ ನೋಡದೆ ತದೇಕಚಿತ್ತದಿಂದ ನೋಡುವಂತೆ ಮಾಡಿಸುತ್ತೆ.

ಕಥೆಯಲ್ಲಿ ಶ್ರೀಮಂತಿಕೆ ಇಲ್ಲ. ಸರಳ ಕಥೆಯಾದರೂ ಚಿತ್ರಕಥೆ ಮತ್ತು ನಿರೂಪಣೆ ಹೈಲೆಟ್ ಆಗಿದೆ. ಯಾವ ಪಾತ್ರಗಳು ಇಲ್ಲಿ ವಿನಾಕಾರಣ ತೂರಿ ಬರಲ್ಲ. ಅಂತೆಯೇ, ಬರುವ ಪ್ರತಿ ಪಾತ್ರಕ್ಕೂ ಅರ್ಥವಿದೆ. ಆಳವಿದೆ.

ನೋಡುಗರಿಗೆ ಅದು ಹಾರರ್ ಸ್ಪರ್ಶ ಕೊಡಲಾಗಿದೆಯಾ ಎಂಬ ಪ್ರಶ್ನೆ ಸಹಜ. ಅಂಥದ್ದೊಂದಯಬಪ್ರಶ್ನೆ ಮೂಡಲು ಮೇರಿ ಪಾತ್ರ ಕಾರಣವಾಗುತ್ತೆ.
ಅಂದಹಾಗೆ, ಇಲ್ಲಿ ಗಟ್ಟಿ ಗೆಳೆತನವಿದೆ. ಚೆಂಡೆ ಮೇಲಿನ ಪ್ರೀತಿ ಇದೆ. ಒಂದಷ್ಟು ಮೋಸವಿದೆ, ದ್ವೇಷವಿದೆ. ತಾಯಿ ಮಗನ ವಾತ್ಸಲ್ಯವಿದೆ. ನಿಷ್ಕಲ್ಮಷ ಪ್ರೀತಿ ಇದೆ. ಮುದ್ದಾದ ಪ್ರೀತಿಗೆ, ಗಟ್ಟಿ ಗೆಳೆತನಕ್ಕೆ ಹುಳಿ ಹಿಂಡುವ ಕೆಲಸವೂ ಇದೆ. ಇಷ್ಟು ಹೇಳಿದ ಮೇಲೆ ಕುತೂಹಲ ಸಹಜ. ಆ ಕುತೂಹಲ ಇದ್ದರೆ ಒಮ್ಮೆ ಪೀಟರ್ ನೋಡಲು ಅಡ್ಡಿ ಇಲ್ಲ.

ಇದುವರೆಗೆ ಅನೇಕ ಕಥೆ ಬಂದರೂ ಪೀಟರ್ ಬೇರೆ ಆಯಾಮದಲ್ಲಿ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆ ಪ್ರಯತ್ನದಲ್ಲಿ ಪೀಟರ್ ಹೋರಾಟ ಇಲ್ಲಿ ಸಾರ್ಥಕ ಎನಿಸುತ್ತೆ.

ಕೆಲವು ಕಡೆ ಅನಗತ್ಯ ದೃಶ್ಯ ಎನಿಸಿದರೂ ಅವೆಲ್ಲವನ್ನೂ ಹಿನ್ನೆಲೆ ಸಂಗೀತ ಪಕ್ಕಕ್ಕಿಟ್ಟು ದೃಶ್ಯವನ್ನು ವೈಭವೀಕರಿಸಿದೆ.

ಕಥೆ ಏನು?

ಮಲೆನಾಡು ವಾತಾವರಣದಲ್ಲಿರುವ ಗ್ರಾಮವೊಂದರ ಕಥೆ ಇದು. ಆ ಊರಲ್ಲಿ ಪೀಟರ್ ಅಂದರೆ ಎಲ್ಲರಿಗೂ ಇಷ್ಟ. ಅವನದ್ದೊಂದು ಗೆಳೆಯರ ಬಳಗ. ಚೆಂಡೆ ಕಲೆ ಆ ಹುಡುಗರ ನಿತ್ಯದ ಹವ್ಯಾಸ. ಊರ ದೇವರ ಮುಂದೆ ಪೀಟರ್ ಮತ್ತು ಗೆಳೆಯರೇ ಚೆಂಡೆ ಬಾರಿಸಬೇಕು. ಈ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗುತ್ತೆ. ಅಲ್ಲೊಂದು ಘಟನೆ ನಡೆಯುತ್ತೆ. ಅದು ಸಿನಿಮಾದ ವೇಗಕ್ಕೊಂದು ಟ್ವಿಸ್ಟು. ತಾನು ಮಾಡದ ತಪ್ಪಿಗೆ ಪೀಟರ್ ಊರನ್ನೇ ಬಿಡಬೇಕಾದ ಸಂದರ್ಭ ಬರುತ್ತೆ. ಎರಡು ವರ್ಷ ಕಾಸರಗೋಡಿನಲ್ಲಿದ್ದು, ಕೊನೆಗೆ ಊರಿನತ್ತ ಬರುವ ಪೀಟರ್ ನ ಹಿನ್ನೆಲೆಯ ಕಥೆ ಒಂದೊಂದೇ ಬಿಚ್ಚಿಕೊಳ್ಳುತ್ತೆ. ಪ್ರತಿ ಹಂತದಲ್ಲೊಂದು ತಿರುವು. ಕೊನೆಗೆ ಒಂದಷ್ಟು ವಿಚಿತ್ರ ಘಟನಾವಳಿಗಳು ನಡೆಯುತ್ತವೆ ಅದೇ ಇಲ್ಲಿ ಹೈಲೆಟ್.

ಯಾರು ಹೇಗೆ?

ಇಲ್ಲಿ ಎಲ್ಲಾ ಪಾತ್ರಗಳಿಗೂ ಫುಲ್ ಮಾರ್ಕ್ಸ್ ಕೊಡಲೇಬೇಕು ಮುಖ್ಯವಾಗಿ ರಾಜೇಶ್ ಧ್ರುವ ಅವರಿಲ್ಲಿ ಕಾಡುತ್ತಾರೆ. ಎಂದಿಗಿಂತಲೂ ಅವರು ಇಷ್ಟವಾಗುತ್ತಾರೆ. ನಟನೆ, ಡೈಲಾಗ್ ಡಿಲವರಿ, ಎಲ್ಲದ್ದರಲ್ಲೂ ಸೈ. ಇಂತಹ ನಟನನ್ನು ಚೆನ್ನಾಗಿ‌ ಬಳಸಿಕೊಳ್ಳಬೇಕಷ್ಟೇ. ಇನ್ನು ಜಾನವಿ ರಾಯಲ, ರವೀಕ್ಷ ಶೆಟ್ಟಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಇಬ್ಬರೂ ಒಳ್ಳೆಯ ಆಯ್ಕೆಯತ್ತ ಗಮನ ಹರಿಸಿದರೆ ಗಟ್ಟಿ ನೆಲೆ ಕಾಣಬಹುದು.
ಉಳಿದಂತೆ ಮೇರಿ, ಶಂಭು, ಡೇವಿಡ್, ಜೋಸೆಫ್, ಜೆಸ್ಸಿ, ಬಟಾಣಿ ಹೀಗೆ ಒಂದಷ್ಟು ಪಾತ್ರಗಳು ನೋಡುಗರನ್ನು ಆವರಿಸಿಕೊಳ್ಳುತ್ತವೆ.
ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಿನಿಮಾದ ಪ್ಲಸ್.
ಗುರುಪ್ರಸಾದ್ ಕ್ಯಾಮೆರಾ ಕೈಚಳಕದಲ್ಲಿ ಪೀಟರ್ ವಿಜೃಂಭಿಸಿದ್ದಾನೆ.

Categories
ಸಿನಿ ಸುದ್ದಿ

ಒಂದು ‘ಮಧು’ರ ‘ಪ್ರೇಮಿ’ಯ ಕಥೆ!

ಚಿತ್ರ ವಿಮರ್ಶೆ: ಪ್ರೇಮಿ
ನಿರ್ದೇಶನ: ಎಸ್.ಪ್ರದೀಪ್‌ ವರ್ಮ
ನಿರ್ಮಾಣ: ಸಿದ್ದಲಿಂಗಯ್ಯ
ತಾರಾಗಣ: ಅದ್ವಿಕ್, ಸಾತ್ವಿಕ, ಪ್ರದೀಪ್ ವರ್ಮ, ಶೋಭಿತ ಇತರರು.

ಕನ್ನಡದಲ್ಲಿ ಇಬ್ಬರು ನಾಯಕಿಯರಿರುವ ಹಲವಾರು ಸಿನಿಮಾಗಳು ಬಂದು ಹೋಗಿವೆ.‌ ಆ‌ ಸಾಲಿಗೆ ಈ ‘ಪ್ರೇಮಿ’ ಯೂ ಸೇರಿದೆ.

ಇಲ್ಲೂ ಒಬ್ಬ ನಾಯಕ. ಇಬ್ಬರು ನಾಯಕಿಯರು.‌ ತರಹೇವಾರಿ ಪಾತ್ರಗಳಿವೆ. ಹಾಗಂತ ಕಥೆ ಫ್ರೆಶ್ ಅಂದುಕೊಳ್ಳುವಂತಿಲ್ಲ. ಚಿತ್ರಕಥೆಯಲ್ಲಿ ಬಿಗಿ ಹಿಡಿತ ಬೇಕಿತ್ತು. ನಿರೂಪಣೆಯಲ್ಲಿ ವಿಶೇಷತೆಯೂ ಇಲ್ಲ. ಸುಮ್ಮನೆ ನೋಡಿಸಿಕೊಂಡು ಹೋಗುತ್ತಾ ? ಈ ಪ್ರಶ್ನೆಗೆ ಉತ್ತರ ಕಷ್ಟ. ಇಷ್ಟು ಹೇಳಿದ ಮೇಲೂ ಸಿನಿಮಾ ನೋಡುವ ಧೈರ್ಯ ಮಾಡಬಹುದು.

ಕಥೆ ಸರಳವಾಗಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು. ಆದರೆ, ನಿರ್ದೇಶಕರು ಅಷ್ಟಕ್ಕೆ‌ ಸುಮ್ಮನಾಗಿದ್ದಾರೆ. ಇನ್ನು ಲಿಪ್ ಸಿಂಕ್ ಬಗ್ಗೆ ಹೇಳದಿರುವುದೇ ವಾಸಿ.

ಕಥೆ ಏನು?

ಅವನು ಪ್ರೇಮ್. ಅವಳು ಮಧುಮತಿ. ಮತ್ತೊಬ್ಬಾಕೆ ಟೀನಾ. ಅವನ ಮೇಲೆ ಟೀನಾಗೆ ಪ್ರೀತಿ. ಆದರೆ ಅವನಿಗೆ ಮತ್ತೊಬ್ಬಾಕೆಯ ಮೇಲೆ ಪ್ರೀತಿ. ಕಥೆಯಲ್ಲಿ ಒಂದು ತಿರುವು ಇದೆ.‌ಅದೇ ನಾಯಕನ‌ ಮದ್ವೆ? ಇಲ್ಲಿ ಯಾರನ್ನು ಹೇಗೆ ಮದ್ವೆ ಆಗ್ತಾನೆ‌ ಅನ್ನೋದು ಸಸ್ಪೆನ್ಸ್.
ಕುಜ ದೋಷ ಅನ್ನೋ ಕಾರಣಕ್ಕೆ ನಾಯಕನ‌ ಲೈಫಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಅದೇ ಸಿನಿಮಾದ ಅಚ್ಚರಿ.

ಮೊದಲರ್ಧ ಬೆಂಗಳೂರಲ್ಲಿ‌ ನಡೆಯೋ ಕಥೆ, ದ್ವಿತಿಯಾರ್ಧ ಹಳ್ಳಿಗೆ ಶಿಫ್ಟ್ ಆಗುತ್ತೆ. ಅಲ್ಲೊಂದಷ್ಟು ಟ್ವಿಸ್ಟು, ಟೆಸ್ಟು ಎದುರಾಗುತ್ತೆ.‌ ನಾಯಕನ ಬಾಲ್ಯದಲ್ಲೊಂದು ಘಟನೆ ನಡೆದು ಹೋಗಿರುತ್ತೆ. ಆ ಘಟನೆ‌ ಸಿನಿಮಾದ ಪ್ಲಸ್ಸು. ಆದರೆ ಸಿನಿಮಾದಲ್ಲಿ ಮೈನಸ್ ಜಾಸ್ತಿ. ಮದ್ವೆ ಅನ್ನೋದು ಇಲ್ಲಿ ಹೈಲೆಟ್. ಅಲ್ಲಿ ಡ್ರಾಮಾವೂ ಇದೆ. ಕೊನೆಗೆ ಇಬ್ಬರಲ್ಲಿ ಯಾರನ್ನು ಮದ್ವೆ ಆಗ್ತಾನೆ ಅನ್ನೋದು ಸಸ್ಪೆನ್ಸ್.

ಯಾರು ಹೇಗೆ?

ಅದ್ವಿಕ್ ಹೀರೋ ಆಗಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಡೈಲಾಗ್ ನಲ್ಲಿ ವಾಯ್ಸ್ ಜಾಸ್ತಿ ಇರಬೇಕಿತ್ತು. ಬಾಡಿ ಲಾಂಗ್ವೇಜ್ ಬಗ್ಗೆ ಇನ್ನಷ್ಟು ಗಮನಹರಿಸಬೇಕು. ಉಳಿದಂತೆ ಫೈಟು, ಡ್ಯಾನ್ಸು ಎಲ್ಲದರಲ್ಲೂ ಓಕೆ.
ಸಾತ್ವಿಕ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶೋಭಿತ ಹಾಗು ಇತರೆ ಪಾತ್ರಗಳು ಮೋಸ‌ ಮಾಡಿಲ್ಲ.

ಪರದೆ‌ ಮೇಲೆ ಎಲ್ಲವೂ ಚೆನ್ನಾಗಿ ಕಾಣುತ್ತೆ. ಸಂಗೀತ ಹಾಗು ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಬೇಕಿತ್ತು. ಛಾಯಾಗ್ರಹಣ ಪ್ರೇಮಿಯನ್ನು ಅಂದವಾಗಿಸಿದೆ.

Categories
ಸಿನಿ ಸುದ್ದಿ

3D ತಂತ್ರಜ್ಞಾನದಲ್ಲಿ ಕೊರಗಜ್ಜ ಚಿತ್ರ: ಯುಗಾದಿಗೆ ಚಿತ್ರತಂಡದಿಂದ ಮಾಹಿತಿ

ಇನ್ನೇನು ಬಿಡುಗಡೆಗೆ ತಾಯಾರಾಗಿದೆ ಅಂದಾಗ ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಚಿತ್ರ ಮತ್ತೆ ಮುಂದಕ್ಕೆ ಹೋಗಿದೆ.ಆದರೆ ಈ ಬಾರಿ ಯುಗಾದಿಗೆ ಭರ್ಜರಿ ಸುದ್ದಿಯೊಂದನ್ನು ಚಿತ್ರ ತಂಡ ನೀಡುತ್ತಿದೆ.ಕೊರಗಜ್ಹ ಚಿತ್ರವು ಈಗ 3ಡಿ ತಂತ್ರಜ್ಙಾನದೊಂದಿಗೆ ತಯಾರಾಗುತ್ತಿದೆ ಎನ್ನುವ ಸಂಭ್ರಮ.


ಸಾಮಾನ್ಯವಾಗಿ ಚಿತ್ರೀಕರಣದ ವೇಳೆಯಲ್ಲೇ 3ಡಿ ಶೂಟಿಂಗ್ ವಾಡಿಕೆ. 2ಡಿ ಯಲ್ಲಿ ಶೂಟಿಂಗ್ ಮಾಡಿ ಮತ್ತೆ 3ಡಿ ಗೆ ಕನ್ವರ್ಟ್ ಮಾಡುವುದು ಹೆಚ್ಚು ದುಬಾರಿ. ಆದರೆ ಚಿತ್ರದ ಗುಣಮಟ್ಟ ನೋಡಿ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯೊಂದು ಇದು ವರ್ಲ್ಡ್ ಕ್ಲಾಸ್ ರೀತಿಯ ಸಿನಿಮಾ.ಇದರ ಲೊಕೇಷನ್ ಮತ್ತು ಮೇಕಿಂಗ್ ನೋಡಿ ಇದು ಪ್ರಪಂಚದ ಯಾವುದೇ ಅದ್ಭುತ ಸಿನಿಮಾ ಕ್ಕಿಂತ ಕಡಿಮೆಯಿಲ್ಲ.ಈ ರೀತಿಯ ಸಿನಿಮಾ ಅಪರೂಪ.‌

ಇದನ್ನು‌ ಮತ್ತೊಂದು ಲೆವೆಲ್ ಗೆ ಕೊಂಡೊಯ್ಯಲು ಆಧುನಿಕ 3D ವರ್ಧಿತ ದೃಶ್ಯ ಕಾವ್ಯವಾಗಿ ಮಾರ್ಪಡಿಸುವುದರಿಂದ, ಭಾಷಾ ಚೌಕಟ್ಟನ್ನು ಮೀರಿ ಇದು ಪ್ರಪಂಚದಾದ್ಯಂತ ಜನರಿಗೆ ಅತ್ಯುತ್ಕ್ರಷ್ಟ ಮನೋರಂಜನೆ ನೀಡಲು ಸಹಾಯವಾಗುತ್ತದೆ ಎಂಬ ಸಲಹೆ ನೀಡಿದ್ದರು.

ಹೆಚ್ಚು ವ್ಯವಹಾರ ಮಾಡುವುದರ ಜೊತೆಗೆ 3ಡಿ ಯಲ್ಲಿ ಚಿತ್ರ ವು ವೀಕ್ಷಕರನ್ನು ದೃಶ್ಯಕ್ಕೆ ಇನ್ನೂ ಆಳವಾಗಿ ಸೆಳೆಯುತ್ತದೆ ಅಲ್ಲದೆ ಹೆಚ್ಚು ಆಪ್ತ ಅನುಭವವನ್ನು ಸೃಷ್ಟಿಸುತ್ತದೆ ಮತ್ತು ಬಲವಾದ ಭಾವನಾತ್ಮಕ ಸಂಪರ್ಕವನ್ನು ಬೆಳೆಸುತ್ತದೆ ಎಂಬ ಕಾರಣಕ್ಕೆ
3ಡಿ ತಂತ್ರಜ್ಙಾನದಲ್ಲಿ
ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ” “ಕೊರಗಜ್ಜ” ಚಿತ್ರವನ್ನು 2ಡಿ ಜೊತೆ 3ಡಿ ಚಿತ್ರವಾಗಿ ರೂಪಿಸಲು ನಿರ್ಮಾಪಕ‌ ತ್ರಿವಿಕ್ರಮ ಸಪಲ್ಯ ರವರು ಮನಸ್ಸು ಮಾಡಿರುತ್ತಾರೆ ಎಂಬ ವಿಷಯವನ್ನು ನಿರ್ದೇಶಕ ಸುಧೀರ್ ಅತ್ತಾವರ್ ಅತ್ಯಂತ ಸಂತಸದಿಂದ ತಿಳಿಸಿರುತ್ತಾರೆ.
ಸುಮಾರು 40 ಜನರ ತಂಡ ಈಗಾಗಲೇ ಇದಕ್ಕಾಗಿ ಕಾರ್ಯಪ್ರವ್ರತ್ತರಾಗಿರುತ್ತಾರೆ.

“ಕೊರಗಜ್ಜ” ಚಿತ್ರಕ್ಕೆ ಅಂಡರ್ ವಾಟರ್ ಕ್ಲೈಮ್ಯಾಕ್ಸ್ ಟಚ್

ಡಾ ರಾಜ್ ನಂತರ ಕನ್ನಡದಲ್ಲಿ ಮೊತ್ತ ಮೊದಲದಾಗಿ ನಟಿ ಶ್ರತಿ ಅಂಡರ್ ವಾಟರ್ ನಲ್ಲಿ ಶೂಟಿಂಗ್.

ಕಳೆದ ಜನವರಿಯಲ್ಲಿ ಬಿಡುಗಡೆಗಾಗಿ ಸರ್ವ ಸನ್ನದ್ದವಾಗಿದ್ದ “ಕೊರಗಜ್ಜ” ಚಿತ್ರಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ರವರು ಮತ್ತೆ ಕ್ಲೈಮ್ಯಾಕ್ಸ ನ್ನು ವೈಭವೀಕರಿಸುವ ಸಲುವಾಗಿ ಅಂಡರ್ ವಾಟರ್ ಶೂಟಿಂಗ್ ನಲ್ಲಿ ಕೆಲ ಭಾಗಗಳನ್ನು ಪುನರ್ ಚಿತ್ರೀಕರಿಸಿದ್ದಾರೆ..

ಕೇರಳದ ತಿರುವನಂತಪುರಂ ನಲ್ಲಿ ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ರವರ ಒಡೆತನ ದಲ್ಲಿದ್ದ “ವಿಸ್ಮಯ” ಸ್ಟುಡಿಯೋದಲ್ಲಿ ಅಂಡರ್ ವಾಟರ್ ನ ವಿಶೇಷ ಸೆಟ್ ನಿರ್ಮಿಸಿ ನಟಿ ಶ್ರತಿ ಅಭಿನಯಿಸಿದ ಭಾಗಗಳನ್ನು ನೀರಿನ ಅಡಿಯಲ್ಲಿ ಖ್ಯಾತ ಮಲಯಾಳಂ ಸಿನೆಮಾಟೋಗ್ರಾಫರ್ ಮನೋಜ್ ಪಿಳ್ಳೈ
ನಾಲ್ಕು ಕ್ಯಾಮರಗಳಲ್ಲಿ ಚಿತ್ರೀಕರಿಸಿಕೊಂಡರು.

ಕನ್ನಡದ ನಟಿಯೊಬ್ಬಳು ಅಪಾಯಕಾರಿ ಅಂಡರ್ ವಾಟರ್ ನಲ್ಲಿ ಅಭಿನಯಿಸುತ್ತಿರುವುದು ಬಹುಷಃ ಇದೇ ಮೊದಲು. ಇದಕ್ಕಾಗಿ ಶ್ರತಿ ಸುಮಾರು 15ದಿನಗಳ ತಯಾರಿಯಲ್ಲಿದ್ದರು. ಸೆಟ್ ನಲ್ಲಿ ಸ್ಕ್ಯೂಬಾ ಡೈವರ್ಸ್ ಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಆಂಬ್ಯಲೆನ್ಸ್ ಮತ್ತು ವೈದ್ಯರ ತಂಡ ಕೂಡಾ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು.
ಹಾರ್ನೆಸ್ ನಲ್ಲಿ ಸುಮಾರು 30ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುವ ಮೈ ನವಿರೇಳಿಸುವ ಅಪಾಯಕಾರಿ ಸ್ಟಂಟ್ ನಲ್ಲಿ ನಟಿ ಶ್ರತಿ ಸ್ವತಃ ಅಭಿನಯಿಸಿ ಎಲ್ಲರನ್ನು ದಂಗು ಬಡಿಸಿದರು.ಇದಲ್ಲದೆ ನೀರಿನೊಳಗೆ 22 ಸೆಕೆಂಡ್ ಗಳ ಕಾಲ ಯಾವುದೇ ಆಮ್ಲಜನಕದ ಸಹಾಯವಿಲ್ಲದೆ ಶ್ರತಿ ಅಭಿನಯಿಸಿ ಎಲ್ಲರನ್ನು ದಂಗುಬಡಿಸಿದರು.

ಇದೆಲ್ಲವು ಚಿತ್ರದ ಬಜೆಟನ್ನು ಇನ್ನೂ ಎತ್ತರಕ್ಕೆ … ಸುಮಾರು 12 ಕೋಟಿ ರುಪಾಯಿಯಷ್ಟು ಏರಿಸಿದೆ ಎಂದು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಮಾಹಿತಿ ನೀಡಿರುತ್ತರೆ.

Categories
ಸಿನಿ ಸುದ್ದಿ

ಬರಲಿದೆ ಗೆಲುವಿನ ಚಿತ್ರ: ಮಾರ್ಚ್ 19ಕ್ಕೆ ಪ್ರೀತಿಯ ಪರಂಪರೆ ಸಾರುವ ಲವ್ ಮಾಕ್ಟೇಲ್ 3

ಲವ್‌ಮಾಕ್ಟೇಲ್ 3 ಮಾರ್ಚ್ 19ಕ್ಕೆ ರಿಲೀಸ್ ಆಗುತ್ತಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಟಿಸಿರುವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಲವ್ ಮಾಕ್ಟೇಲ್ ಮೊದಲ ಆವೃತ್ತಿಯ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದರು. ಎರಡನೇ ಆವೃತ್ತಿಯ ಟ್ರೇಲರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಡೆಯಿಂದ ಬಿಡುಗಡೆಗೊಂಡಿತ್ತು. ಆದರೆ, ಮೂರನೇ ಆವೃತ್ತಿಯ ಈ ಟ್ರೇಲರ್ ಅನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪುತ್ರಿ ಪರಿ ಬಿಡುಗಡೆಗೊಳಿಸಿರುವುದು ವಿಶೇಷ.


ಈ ಟ್ರೇಲರ್ ಬಿಡುಗಡೆಯಲ್ಲಿ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಿಲನ ನಾಗರಾಜ್, ಡಾರ್ಲಿಂಗ್ ಕೃಷ್ಣ, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಅಮೃತಾ ಅಯ್ಯಂಗಾರ್, ಗೀತರಚನೆಕಾರ ರಾಘವೇಂದ್ರ ಕಾಮತ್, ನಟ ಜಗದೀಶ್, ರೆಚೆಲ್ ಡೇವಿಡ್, ಶ್ರೀ ಕ್ರೇಜಿ ಮೈಂಡ್ಸ್, ಸಂವೃತ, ಅಭಿಲಾಶ್, ರಜನಿ, ನಯಾರಾ ಮುಂತಾದವರು ಉಪಸ್ಥಿತರಿದ್ದರು.

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ, ಲವ್ ಮಾಕ್ಟೇಲ್3 ರೂಪುಗೊಂಡಿದ್ದರ ವಿಚಾರಗಳನ್ನು ತೆರೆದಿಡುತ್ತಲೇ, ಇದರಲ್ಲಿ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರ ನಟನಾ ಚಾತುರ್ಯವನ್ನು ತೆರೆದಿಟ್ಟರು. ಡಾರ್ಲಿಂಗ್ ಕೃಷ್ಣ ಮಾತನಾಡಿ, ಯಾವುದೋ ಕ್ಷಣದಲ್ಲಿ ಈ ಸಿನಿಮಾದ ಒಂದೆಳೆ ಕಥೆ ಹೊಳೆಯಿತು. ಅದರ ಗುಂಗುಹತ್ತಿಸಿಕೊಂಡ ನಂತರ ಮನೆಯಲ್ಲಿ ಕಥೆ ಬರೆಯಲು ಸಾಧ್ಯವಿಲ್ಲವೆನ್ನಿಸಿ ಮೂರು ದಿನಗಳ ಕಾಲ ಗೋವಾಕ್ಕೆ ಹೋಗಿದ್ದೆ. ಅಲ್ಲಿಯೇ ಕಥೆ ಚಿತ್ರಕಥೆಗೊಂದು ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ' ಎನ್ನುತ್ತಲೇ ಕಥೆ ಹುಟ್ಟಿದ ಬಗೆಯನ್ನು ವಿವರಿಸಿದರು.

ಇದಲ್ಲದೇ ಈ ಸಿನಿಮಾ ಪಾತ್ರಗಳ ಬಗ್ಗೆ, ಅದನ್ನು ನಿರ್ವಹಿಸಿರುವ ಕಲಾವಿದರ ಬಗ್ಗೆ ಎಳೆ ಎಳೆಯಾಗಿ ಮಾಹಿತಿಗಳನ್ನು ಹಂಚಿಕೊಂಡರು. ಮಿಲನಾ ನಾಗರಾಜ್ ಟ್ರೈಲರ್ ಸಿದ್ಧಗೊಂಡ ಬಗೆಗಿನ ವಿವರಗಳ ಮೂಲಕ ಮಾತುಗಳನ್ನಾರಂಭಿಸಿಎಲ್ಲರೂ ಇಷ್ಟೊಂದು ಆತ್ಮವಿಶ್ವಾಸದಿಂದ ದೊಡ್ಡ ಸಿನಿಮಾದ ಮುಂದೆ ತೆರೆಗಾಣಲು ಸಿದ್ಧವಾದ ಬಗ್ಗೆ ಅಚ್ಚರಿಯಿಂದ ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಕಾರಣವಾಗಿರೋದು ಸಿನಿಮಾ ಮೂಡಿ ಬಂದಿರುವ ರೀತಿ. ಈ ಚಿತ್ರ ಅಷ್ಟೊಂದು ಚೆನ್ನಾಗಿ ಮೂಡಿ ಬಂದಿದೆ ಅನ್ನೋ ವಿಶ್ವಾಸವಿದೆ. ಅದನ್ನು ಎಲ್ಲರೂ ನೋಡಿ, ಈ ಹಿಂದಿನ ಎರಡು ಸರಣಿಗಳಿಗೆ ಕೊಟ್ಟಷ್ಟೇ ಪ್ರೀತಿ, ಪ್ರೋತ್ಸಾಹ ಕೊಡುತ್ತಾರೆಂಬ ನಂಬಿಕೆ ಇದೆ' ಎಂದರು.


ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೆಚೆಲ್ ಡೇವೀಡ್, ಶ್ವೇತಾ ಪ್ರಸಾದ್ ಮುಂತಾದವರು ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಲೇ, ಇಂಥಾ ಅವಕಾಶ ದಕ್ಕಿದ ಬಗ್ಗೆ ಡಾಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

error: Content is protected !!