Categories
ಸಿನಿ ಸುದ್ದಿ

ದಿಗಂತ್‌ ಮಾರಿಗೋಲ್ಡ್‌ ಪೂರ್ಣ – ಮಾಸ್‌ ಕ್ರೇಜ್‌ ಸೃಷ್ಟಿಸಿರುವ ಚಿತ್ರ

ಹಾಡಿನ ಮೂಲಕ ಸಿನಿಮಾಗೆ ಕುಂಬಳಕಾಯಿ

ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರ ಪೂರ್ಣಗೊಂಡಿದೆ. ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆಯುವ ಮೂಲಕ ಶೂಟಿಂಗ್‌ ಮುಗಿಸಿದೆ. ಈಗಾಗಲೇ ಫಸ್ಟ್‌ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿ, ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನು, ಚಿತ್ರತಂಡ “ಮಾರಿಗೋಲ್ಡ್‌” ಚಿತ್ರದ ಡಬ್ಬಿಂಗ್‌ ಕಾರ್ಯವನ್ನೂ ಬಹುತೇಕ ಮುಗಿಸಿದ್ದು, ನಾಯಕ ದಿಗಂತ್‌ ಭಾಗವಷ್ಟೇ ಬಾಕಿ ಉಳಿದಿದೆ. “ಮಾರಿಗೋಲ್ಡ್‌” ಕುತೂಹಲ ಹುಟ್ಟಿಸಿರುವುದಕ್ಕೆ ಕಾರಣ, ಶೀರ್ಷಿಕೆ ಮತ್ತು ಚಿತ್ರತಂಡ ಬಿಡುಗಡೆ ಮಾಡಿರುವ ಶೀರ್ಷಿಕೆ ಫಸ್ಟ್‌ಲುಕ್‌. ಶೀರ್ಷಿಕೆ ಕೇಳಿದವರಿಗೆ ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಸಿನಿಮಾ ಬರುವ ತನಕ ಕಾಯಬೇಕು.


ಇನ್ನು, ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಗಂತ, ಅವರಿಗೆ ಅನುಭವ ಇಲ್ಲವೆಂದಲ್ಲ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವದ ಮೇಲೆ ಈಗ “ಮಾರಿಗೋಲ್ಡ್‌” ಹಿಂದೆ ನಿಂತಿದ್ದಾರೆ. ಇನ್ನು, ಚಿತ್ರವನ್ನು ರಘುವರ್ಧನ್‌ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿ, ಈಗ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.


ಸದ್ಯಕ್ಕೆ “ಮಾರಿಗೋಲ್ಡ್‌” ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಎಲ್ಲೆಡೆ “ಮಾರಿಗೋಲ್ಡ್‌” ಕುರಿತು ಸಿಗುತ್ತಿರುವ ಮೆಚ್ಚುಗೆ. ಈ ಚಿತ್ರದ ಹೀರೋ ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ .ಇನ್ನು, ಬೆಂಗಳೂರು, ಸಕಲೇಶಪುರ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆ.ಎಸ್.‌ಚಂದ್ರಶೇಖರ್‌ ಕ್ಯಾಮೆರಾ ಹಿಡಿದರೆ, ವೀರ್‌ ಸಮರ್ಥ್‌ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದಾರೆ. ಯೋಗರಾಜ್‌ಭಟ್‌, ವಿಜಯ್‌ ಭರಮಸಾಗರ ಸಾಹಿತ್ಯವಿದೆ.‌ ಸದ್ಯಕ್ಕೆ ಬಿಡುಗಡೆ ತಯಾರಿಯಲ್ಲಿ ಚಿತ್ರವಿದೆ. “ಮಾರಿಗೋಲ್ಡ್”‌ ಒಂದು ರೀತಿಯ ಮಾಸ್‌ ಕ್ರೇಜ್‌ ಹುಟ್ಟುಹಾಕಲು ಕಾರಣ, ಈ ಚಿತ್ರದ ಶೀರ್ಷಿಕೆ ಪೋಸ್ಟರ್.‌ ಇನ್ನು, ಈ ಶೀರ್ಷಿಕೆಯಡಿ ದಿಗಂತ್‌ ನಡೆಸುತ್ತಿರುವುದರಿಂದ ಅವರನ್ನಿಲ್ಲಿ ಬೇರೆ ರೀತಿಯಲ್ಲೇ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕರ ಮಾತು. ಒಟ್ಟಾರೆ, “ಮಾರಿಗೋಲ್ಡ್‌” ಪಕ್ಕಾ ಸಿನಿಪ್ರೇಮಿಗಳಿಗಂತೂ ಒಂದೊಳ್ಳೆಯ ಮನರಂಜನಾತ್ಮಕ ಸಿನಿಮಾ ಆಗಿ ಹೊರಬರಲಿದೆ ಎಂಬ ಗ್ಯಾರಂಟಿ ಕೊಡುತ್ತಾರೆ ನಿರ್ಮಾಪಕ ರಘುವರ್ಧನ್.

Categories
ಸಿನಿ ಸುದ್ದಿ

ಹುಡುಗಿಯ ಅಪಹರಣದ ಹಿಂದೆ ರೋಚಕತೆ! ಹಾಫ್‌ ಮೊದಲ ಹಂತದ ಚಿತ್ರೀಕರಣ ಪೂರ್ಣ

ಹೊಸ ಕಥಾಹಂದರದ ಮೇಲೆ ಭವ್ಯ ಭರವಸೆ

 

ಕೆಲವು ಸಿನಿಮಾಗಳೇ ಹಾಗೆ. ಒಮ್ಮೆ ಶುರುವಾದರೆ, ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಚಿತ್ರೀಕರಣಗೊಳ್ಳುತ್ತವೆ. ಆ ಸಾಲಿಗೆ “ಹಾಫ್”‌ ಚಿತ್ರವೂ ಸೇರಿದೆ. ಹೌದು, ಈ ಹಿಂದೆ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಸಿನಿಮಾ ಮೂಲಕ ಸುದ್ದಿಯಾಗಿದ್ದ ನಿರ್ದೇಶಕ ಕಮ್‌ ಹೀರೋ ಲೋಕೇಂದ್ರ ಸೂರ್ಯ ಈಗ “ಹಾಫ್‌” ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಹೌದು, ಈಗಾಗಲೇ ಅದ್ಧೂರಿ ಫೋಟೋ ಶೂಟ್ ನಂತರ ಶೂಟಿಂಗ್ ನಡೆಸಿದ್ದ “ಹಾಫ್” ತಂಡ, ಈಗ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಹಂತದ ಚಿತ್ರೀಕರಣದಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆಯಲ್ಲಿ ಒಂದು ಫೈಟ್ ಕೂಡಾ ಚಿತ್ರೀಕರಣಗೊಂಡಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹದಿನೈದು ದಿನಗಳ ಚಿತ್ರೀಕರಣದಲ್ಲಿ ಹಲವಾರು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಶೂಟಿಂಗ್‌ ವೇಳೆ ಹೀರೋ ಜೊತೆಗಿದ್ದ ಬೇಗಂ ಎಂಬ ಹುಡುಗಿಯನ್ನು ಅಪಹರಿಸಿದಾಗ, ನಂತರ ನಡೆಯುವ ಚೇಸಿಂಗ್‌ ದೃಶ್ಯವನ್ನು ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರು, ಚಿತ್ರೀಕರಿಸಿದ್ದಾರೆ. ಅಂದಹಾಗೆ, ಈ ದೃಶ್ಯದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.


ಆ ಸಾಹಸ ದೃಶ್ಯ ಕುರಿತು ಮಾತನಾಡುವ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು, “ಇದುವರೆಗೆ ಹೊಸಬರ ನೂರಾರು ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದೇನೆ. ಆದರೆ ಲೋಕೇಂದ್ರ ಅವರ ತಂಡವನ್ನು ನೋಡಿದರೆ ನಿಜಕ್ಕೂ ಇವರೆಲ್ಲಾ ಹೊಸಬರಾ ಎನ್ನುವ ಅನುಮಾನ ಮೂಡುತ್ತದೆ. ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವುದು ಕಷ್ಟದ ಕೆಲಸ. ಅನುಭವಿಗಳಿದ್ದರೆ ಮಾತ್ರ ಸರಾಗವಾಗಿ ಮತ್ತು ಅಂದುಕೊಂಡಂತೆ ಶಾಟ್ಸ್ ಕಂಪೋಸ್ ಮಾಡಲು ಸಾಧ್ಯ. ಹೊಸಬರು ಅಂದ ಕೂಡಲೇ ಅವರಿಗೆ ಎಲ್ಲವನ್ನೂ ಹೇಳಿಕೊಟ್ಟು, ಸಮಯ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಲೋಕೇಂದ್ರ ಮತ್ತವರ ತಂಡದ ಕಾರ್ಯ ವೈಖರಿ ಕಂಡು ಇವರೆಲ್ಲ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿ ಬಂದಿದ್ದಾರೇನೋ ಅನ್ನಿಸಿಬಿಟ್ಟಿತು. ಒಂದು ದಿನಕ್ಕೆ ಐವತ್ತೆರಡು ಓಕೆ ಟೇಕ್‌ ಶೂಟ್ ಮಾಡಿದ್ದೇನೆ. ಹೊಸದಾಗಿ ಚಿತ್ರರಂಗಕ್ಕೆ ಬಂದಿರುವವರಿಂದ ಈ ಮಟ್ಟಿಗಿನ ಕೆಲಸ ತೆಗೆಸಿಕೊಳ್ಳುವುದು ನಿಜಕ್ಕೂ ದಾಖಲೆʼ ಎಂಬುದು ಥ್ರಿಲ್ಲರ್ ಮಂಜು ಮಾತು.


ವರ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ದಾಖಲೆ ನಿರ್ಮಿಸಿರುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಮೂಲಕ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿ ನಟಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಕ್ಯಾಮೆರಾ ಹಿಡಿದರೆ, ಯುಡಿವಿ ವೆಂಕಿ ಸಂಕಲನವಿದೆ. ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಇತರರು ನಟಿಸಿದ್ದಾರೆ. ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶನವಿದೆ. ಶಿವಕಾಂತ್ ಕಲಾ ನಿರ್ದೇಶನವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ಮದಗಜನ ಸದ್ದು ಜೋರು – ಫಸ್ಟ್ ಲುಕ್ ರಿಲೀಸ್ ಮಾಡ್ತಾರೆ ಪ್ರಶಾಂತ್ ನೀಲ್

ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್!

 

ಶ್ರೀಮರಳಿ ಅಭಿನಯದ ‘ಮದಗಜ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಡಿಸೆಂಬರ್17ರಂದು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಹುಟ್ಟುಹಬ್ಬ. ಅಂದು ‘ಮದಗಜ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಆದರೆ ಫಸ್ಟ್ ಲುಕ್ ಟೀಸರ್ ರಿಲೀಸ್ ಯಾರು ಮಾಡಲಿದ್ದಾರೆ ಎಂಬುದು ಗೌಪ್ಯವಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ.

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎಂದೇ ಹೆಸರಾಗಿರುವ ‘ಉಗ್ರಂ’, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಮದಗಜ’ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಲಿದ್ದಾರೆ.
ಈ ವಿಷಯವನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ. ಈ ವಿಷಯವನ್ನು ಸ್ವತಃ ನಟ ಶ್ರೀ ಮುರಳಿ ಅವರೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


‘ನನ್ನ ಗಾಡ್ ಫಾದರ್ ಪ್ರಶಾಂತ್ ನೀಲ್ ಅವರು ‘ಮದಗಜ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಟೀಸರ್ ಬಿಡುಗಡೆಗೆ ಬೆರೆಳೆಣಿಕೆ ದಿನಗಳು ಬಾಕಿ’ ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಟೀಸರ್ ನ ವಿಡಿಯೊ ತುಣುಕು ರಿಲೀಸ್ ಆಗಿದ್ದು, ಎಲ್ಲೆಡೆ, ನಿರೀಕ್ಷೆ ಹುಟ್ಟಿಸಿದೆ.
ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಸುದೀಪ್ ಫ್ಯಾನ್ಸ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ-

ಡಿಸೆಂಬರ್ 25 ರಿಂದ ಮೂರು ದಿನಗಳ ಹಬ್ಬ

ಸಿನಿಮಾ ಮಂದಿಗೂ ಮತ್ತು ಈ ಕ್ರಿಕೆಟ್ ಗೂ ಅವಿನಾಭಾವ ಸಂಬಂಧ. ಈಗಾಗಾಲೇ ಸೆಲಿಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಕೂಡ ನಡೆದಿದೆ. ಈಗಲೂ ನಡೆಯುತ್ತಿದೆ. ಈಗ ಮತ್ತೆ ಸಿನಿಮಾ ಮಂದಿ ಸೇರಿ ಕ್ರಿಕೆಟ್‌ ಹಬ್ಬ ಮಾಡಲು ತಯಾರಿ ನಡೆಸಿದ್ದಾರೆ.


ಹೌದು 2020ರ ಡಿಸೆಂಬರ್ 25,26 ಮತ್ತು 27ರಂದು ಕೆ.ಎಸ್.ಪಿ.ಎಲ್. ಸೀಸನ್ 2 ಶುರುವಾಗಲಿದೆ.
ಈ ಕ್ರಿಕೆಟ್ ಪಂದ್ಯಾವಳಿ ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ನಡೆಯಲಿದೆ ಅನ್ನೋದು ವಿಶೇಷ.
ಮೂರು ದಿನಗಳ ಕಾಲ ನಡೆಯಲಿರುವ ಈ ಟೆನ್ನಿಸ್ ಬಾಲ್ ಟೂರ್ನಮೆಂಟ್ ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜನೆ ಮಾಡಲಾಗಿದೆ ಎಂಬುದು ಗಮನಕ್ಕಿರಲಿ. ಐಪಿಎಲ್ ರೀತಿಯೇ ಅದ್ದೂರಿಯಾಗಿ ಈ ಪಂದ್ಯಾವಳಿ ನಡೆಯಲಿದೆ.


ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಒಂದೊಂದು ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಈ ಪಂದ್ಯಾವಳಿಯ ಇನ್ನೊಂದು ವಿಶೇಷ ಅಂದರೆ, ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮಾತ್ರ ಭಾಗವಹಿಸಲಿದ್ದಾರೆ.


ಇದರಲ್ಲಿ ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಪ್ರೊತ್ಸಾಹದ ಬಹುಮಾನಗಳಿವೆ.
ಇದೆಲ್ಲಕ್ಕಿಂತಲೂ ಮತ್ತೊಂದು
ವಿಶೇಷ ಅಂದರೆ ಈ ಸಲದ ಪಂದ್ಯಾವಳಿಗೆ ಮಹಿಳಾ ಅಭಿಮಾನಿಗಳ ಎರಡು ತಂಡದ‌ ಮೂಲಕ ಚಾಲನೆ ಸಿಗಲಿದೆ.ಅಂತ್ಯದ ಪಂದ್ಯಾವಳಿ
ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ನಡೆಯಲಿದೆ.


ಕನ್ನಡ ಚಿತ್ರರಂಗದ ಕಲಾವಿದರು ಕರ್ನಾಟಕದ ಪ್ರಮುಖ ಕ್ರಿಕೆಟ್ ಆಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಪಂದ್ಯಾವಳಿ ಕಿಚ್ಚ ಸುದೀಪ ಅವರ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ನಂದೀಶ್ ಅವರ ಎರಡನೇ ವರ್ಷದ ಸ್ಮರಣಾರ್ಥ ನಡೆಯಲಿದೆ ಎಂಬುದು ವಿಶೇಷ. ಇನ್ನು ಈ ಪಂದ್ಯಾವಳಿಯು( ಕೆ.ಎಸ್.ಸಿ.ಎ) ಬಾದ್ ಷಾ ಕಿಚ್ಚ ಸುದೀಪ ರವರ ಸಂಸ್ಥೆ “ಕಿಚ್ಚ ಸುದೀಪ ಕ್ರಿಕೆಟ್ ಅಸೋಸಿಯೇಷನ್” ಮೂಲಕ ನಡೆಯಲಿದ್ದು,
ನೆಲಮಂಗಲದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಮೈದಾನದಲ್ಲಿ ತಯಾರಿ ನಡೆಯಲಿದೆ.

Categories
ಸಿನಿ ಸುದ್ದಿ

ವಿಷ್ಣು ಸರ್ ಬಗ್ಗೆ ಅವಹೇಳನ ಮಾತು; ವಿಜಯ್ ರಂಗರಾಜು ಕ್ಷಮೆಗೆ ಶ್ರೀಮುರಳಿ ಒತ್ತಾಯ

ವಿಷ್ಣು ಸರ್ ಬಗ್ಗೆ ಮಾತಾಡಿದ್ದು ಬೇಸರ ತಂದಿದೆ

 

ಕನ್ನಡ ಚಿತ್ರರಂಗದ ಮೇರು ನಟ
ಡಾ.ವಿಷ್ಣುವರ್ಧನ್ ಅವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡ ಚಿತ್ರರಂಗವೇ ಕಿಡಿಕಾರಿದೆ. ಜಗ್ಗೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್ ಸೇರಿದಂತೆ ಹಲವರು ಟ್ವೀಟ್ ಮೂಲಕ ವಿಜಯ್ ರಂಗರಾಜು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಅಭಿಮಾನಿಗಳು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟ ಶ್ರೀಮರಳಿ ಕೂಡ ಟ್ವೀಟ್ ಮೂಲಕ ‘ಆ ನಟ ಕ್ಷಮೆ ಕೇಳಬೇಕು’ ಎಂದಿದ್ದಾರೆ.


ತಮ್ಮ ಟ್ವೀಟ್ ಖಾತೆಯಲ್ಲಿ ಶ್ರೀಮುರಳಿ ‘ಯಾವುದೇ ಭಾಷೆಯ ಕಲಾವಿದ ಇರಲಿ. ಅವರು ಕಲಾವಿದರೇ. ಕಲೆಗೆ ಭಾಷೆಯ ಬೇಧ ಭಾವ ಇಲ್ಲ. ಎಲ್ಲರೂ ಕಲೆಯನ್ನು ಪ್ರೀತಿಸುವ ಮನಸ್ಸುಳ್ಳವೆರೆ. ನಮ್ಮ ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣು ಸರ್ ಬಗ್ಗೆ ಆ ಭಾಷೆಯ ಕಲಾವಿದ ಹಾಗೆಲ್ಲ ಮಾತನಾಡಿದ್ದು ಬೇಸರ ತಂದಿದೆ. ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು ‘ಎಂದು ಹೇಳಿದ್ದಾರೆ.
ಹಲವು ವರ್ಷಗಳ ಹಿಂದೆ ಪ್ರಭಾಕರ್ ಅಭಿನಯದ ‘ ‘ಮುತ್ತೈದೆ ಭಾಗ್ಯ’ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರು ಅತಿಥಿಯಾಗಿ ನಟಿಸಿದ್ದರು. ಆ ಚಿತ್ರದಲ್ಲಿ ತೆಲುಗು ನಟ ವಿಜಯ್ ರಂಗರಾಜು ಕೂಡ ನಟಿಸಿದ್ದರು. ಚಿತ್ರೀಕರಣ ವೇಳೆ, ನಡೆದ ಒಂದು ಘಟನೆ ಬಗ್ಗೆ, ಇತ್ತೀಚೆಗೆ ಮಾತಾಡಿದ್ದರು. ವಿಷ್ಣುವರ್ಧನ್ ಅವರ ಕುರಿತು ಅವಹೇಳನವಾಗಿ ಮಾತಾಡಿದ್ದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕ್ರಮಕ್ಕೂ ಒತ್ತಾಯಿಸಲಾಗಿದೆ.

 

Categories
ಸಿನಿ ಸುದ್ದಿ

ತೆಲುಗು ನಟ ವಿಜಯ್‌ ರಂಗರಾಜು ವಿರುದ್ದ ಕಿಡಿ ಕಾರಿದ ಕಿಚ್ಚ

ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಇರಲಿ- ಸುದೀಪ್‌ ಖಡಕ್ ವಾರ್ನಿಂಗ್

-‌ವಿಷ್ಣುವರ್ಧನ್‌ ಬಗ್ಗೆ ಮಾತಾಡಿದ್ದಕ್ಕೆ ಕನ್ನಡಿಗರ ಆಕ್ರೋಶ

ವಾಣಿಜ್ಯ ಮಂಡಳಿಗೆ ಅಭಿಮಾನಿಗಳ ದೂರು

ತೆಲುಗು ನಟ ವಿಜಯರಂಗರಾಜು ಡಾ.ವಿಷ್ಣುವರ್ಧನ್‌ ಅವರ ಕುರಿತಂತೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಒಳಗಾಗಿದ್ದು, ಕನ್ನಡ ಚಿತ್ರರಂಗವನ್ನು ಕೆರಳಿಸಿದೆ. ಅಷ್ಟೇ ಅಲ್ಲ, ಕನ್ನಡ ಚಿತ್ರಂಗದ ಕಲಾವಿದರು, ತಾಂತ್ರಿಕವರ್ಗದವರು, ಅಪಾರ ಅಭಿಮಾನಿಗಳು ನಟ ವಿಜಯರಂಗರಾಜು ವಿರುದ್ಧ ಗುಡುಗಿದ್ದಾರೆ. ನಟರಾದ ಜಗ್ಗೇಶ್‌, ಪುನೀತ್‌ ರಾಜಕುಮಾರ್‌, ಸುದೀಪ್‌ ಸೇರಿದಂತೆ ಹಲವರು ಟ್ವೀಟ್‌ ಮಾಡಿ, ವಿಜಯ ರಂಗರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಹಲವರು ವಿಜಯರಂಗರಾಜು ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಡೆದದ್ದೇನು?
ಹಲವು ವರ್ಷಗಳ ಹಿಂದೆ “ಮುತ್ತೈದೆ ಭಾಗ್ಯ” ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆ ಚಿತ್ರದಲ್ಲಿ ಪ್ರಭಾಕರ್‌ ಪ್ರಮುಖ ಅಕರ್ಷಣೆಯಾಗಿದ್ದರು. ವಿಷ್ಣುವರ್ಧನ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ಒಂದು ಘಟನೆ ನಡೆದಿತ್ತು. ವಿಷ್ಣುವರ್ಧನ್‌ ಅವರು ನಟ ವಿಜಯರಂಗರಾಜು ಅವರನ್ನು ಹೊರಗೆ ಕಳುಹಿಸಿ ಎಂದಿದ್ದರು. ಯಾಕೆ ಹಾಗೆ ಹೇಳಿದ್ದರು ಎಂಬುದಕ್ಕೂ ಕಾರಣವಿತ್ತು. ಆಗಿನ ಘಟನೆ ಬಗ್ಗೆ ನಟ ವಿಜಯರಂಗರಾಜು ಅವರು, ಇತ್ತೀಚೆಗೆ ವಿಷ್ಣುವರ್ಧನ್‌ ಬಗ್ಗೆ ತುಂಬಾ ಕೆಟ್ಟದ್ದಾಗಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ಆ ವಿರುದ್ಧ ಕನ್ನಡಿಗರು ಧ್ವನಿ ಎತ್ತಿದ್ದು, ಎಲ್ಲೆಡೆ, ಆಕ್ರೋಶ ವ್ಯಕ್ತವಾಗುತ್ತಿದೆ. ಡಾ.ವಿಷ್ಣುವರ್ಧನ್‌ ಅವರು ಆದರ್ಶ ವ್ಯಕ್ತಿ. ಅವರ ಬಗ್ಗೆ ಈವರೆಗೆ ಯಾರೂ ಮಾತಾಡಿಲ್ಲ. ಆದರೆ, ತೆಲುಗು ನಟ ಹಾಗೆಲ್ಲಾ ಮಾತಾಡಿದ್ದಾರೆ. ಇದು ಸಹಜವಾಗಿಯೇ ಕನ್ನಡ ಸ್ಟಾರ್‌ ನಟರಿಗೂ ನೋವಾಗಿದೆ. ಹಾಗಾಗಿ ಒಂದಷ್ಟು ಮಂದಿ ಟ್ವೀಟ್‌ ಮಾಡಿದರೆ, ಒಂದಷ್ಟು ಜನರು ವಿಡಿಯೋ ಮಾಡಿದ್ದಾರೆ. ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಜಯರಂಗರಾಜು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದಾರೆ.


ಅತ್ತ, ಸುದೀಪ್‌ ವಿಡಿಯೋ ಮೂಲಕ ವಿಜಯ್‌ ರಂಗರಾಜುಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಪುನೀತ್‌ ಕೂಡ ಟ್ವೀಟ್‌ ಮಾಡಿದ್ದು, “ಒಬ್ಬ ಕಲಾವಿದನಾಗಬೇಕಾದರೆ, ಅವನಿಗರಬೇಕಾದ ಮೊದಲ ಅರ್ಹತೆ ತನ್ನ ಸಹೋದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿ ತೋರುವುದು. ಯಾವುದೇ ಭಾಷೆ ನಟರಾದರೂ, ಗೌರವ ಮೊದಲು. ನಮ್ಮ ನಾಡಿನ ಮೇರು ನಟರಾದ ವಿಷ್ಣು ಸರ್‌ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಕಲಾವಿದ ಕ್ಷಮೆ ಕೇಳಿ ತಮ್ಮ ಮಾತನ್ನು ಹಿಂಪಡೆಯಬೇಕು. ಭಾರತೀಯ ಚಿತ್ರಂರಂಗ ನಮ್ಮ ಮನೆ. ಎಲ್ಲಾ ಕಲಾವಿದರು ಒಂದು ಕುಟುಂಬ ಕಲೆಗೆ, ಕಲಾವಿದರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಮೊದಲು ಮಾನವನಾಗು” ಎಂದು ಟ್ವೀಟ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಅಭಿಮಾನಿಗಳ ಬಯಕೆ ಇದು- ದಚ್ಚು-ಕಿಚ್ಚನ ಜೋಡಿ ಅಚ್ಚು-ಮೆಚ್ಚು

ಈ ಸ್ಟಾರ್ಸ್‌ ಒಂದಾಗಬೇಕೆಂಬ ಹಂಬಲ

ಅಭಿಮಾನಿಗಳ ಅಭಿಮಾನವೇ ಅಂಥದ್ದು. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಹಾಗೂ ಸುದೀಪ್‌ ಅಭಿಮಾನಿಗಳಿಗೆ ತಮ್ಮ ಹೀರೋಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಆ ಬಳಿಕ ಇಬ್ಬರ ನಡುವೆ ಮುನಿಸು ಶುರುವಾಯಿತು. ಅದಾದ ಮೇಲೆ ಅವರವರ ಅಭಿಮಾನಿಗಳ ಮಧ್ಯೆಯೂ ಬಿರುಕು ಉಂಟಾಯಿತು. ಇದನ್ನು ಬಳಸಿಕೊಂಡ ಅನೇಕರು ವಿವಾದ ಹುಟ್ಟುಹಾಕುವ ಪ್ರಯತ್ನವನ್ನೂ ಮಾಡಿದರು. ಆ ನಂತರ ಅಭಿಮಾನಿಗಳ ಮಧ್ಯೆ ಆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ಇಬ್ಬರು ನಟರು ಮುನಿಸು ಬಿಟ್ಟು, ಒಂದಾಗಬೇಕು ಅನ್ನೋದು ಹಲವರ ಬಯಕೆ. ಅದು ಚಿತ್ರರಂಗದ್ದೂ ಹೌದು, ಅಭಿಮಾನಿಗಳದ್ದೂ ಹೌದು. ಆದರೆ, ಅದೇನೋ ಗೊತ್ತಿಲ್ಲ. ಈ ಇಬ್ಬರು ನಟರು ಮೊದಲಿನಂತೆ ಇರಬೇಕೆಂಬ ಆಸೆ ಒಂದಷ್ಟು ಜನರಿಗಂತೂ ಇದೆ.

ಈ ನಿಟ್ಟಿನಲ್ಲಿ ಕಲಾವಿದ ಕರಣ್‌ ಆಚಾರ್ಯ ಅವರು ರಾಮ ಲಕ್ಷ್ಮಣರಂತೆ ಹೋಲುವ ಕಲಾಕೃತಿ ರಚಿಸಿದ್ದಾರೆ. ಅದೀಗ “ಚಾಲೆಂಜಿಂಗ್‌ ಸ್ಟಾರ್‌ ದರ್ಶನ್-ಅಭಿನಯ ಚಕ್ರವರ್ತಿ ಕಿಚ್ಚ” ಫ್ಯಾನ್ಸ್‌ ಗ್ರೂಪ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕರಣ್‌ ಆಚಾರ್ಯ ಅವರ ಕಲಾಕೃತಿಯನ್ನು ಶೇರ್‌ ಮಾಡಿದ್ದಾರೆ. “ಈ ಅದ್ಭುತ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಕರಣ್‌ ಆಚಾರ್ಯ ಬ್ರದರ್‌, ನಮ್ಮ ದಚ್ಚು ಬಾಸ್, ಕಿಚ್ಚ ಬಾಸ್ ಇಬ್ಬರೂ ರಾಮ ಲಕ್ಷ್ಮಣ, ಸೂರ್ಯ, ಚಂದ್ರ ಇದ್ದ ಹಾಗೆ. ನಮ್ಮಂತಹ ಅಭಿಮಾನಿಗಳಿಗೆ ದೇವರುಗಳು” ಎಂದು ಬರೆದುಕೊಳ್ಳುವ ಮೂಲಕ ಅಭಿಮಾನದ ಪ್ರೀತಿ ತೋರಿದ್ದಾರೆ.


ಅದೇನೆ ಇರಲಿ, ಅಭಿಮಾನಿಗಳಿಗೆ ತಮ್ಮ ಸ್ಟಾರ್‌ಗಳು ಜೊತೆಯಾಗಬೇಕೆಂಬ ಬಯಕೆ ಇದೆ. ಇನ್ನೇನಿದ್ದರೂ ಈ ಸ್ಟಾರ್‌ಗಳು ಒಂದಾಗುವ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಉತ್ಸಾಹ ಮೂಡಿಸಬೇಕಿದೆ. ಕೊರೊನೊ ಸಮಸ್ಯೆ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್‌ಗಳು ಕೂಡ ಒಂದಾಗುವ ಮೂಲಕ ತಮ್ಮ ಸಿನಿಮಾಗಳನ್ನು ಬೇಗನೇ ಬಿಡುಗಡೆ ಮಾಡಿಸುವ ಮೂಲಕವಾದರೂ, ಚೈತನ್ಯ ತುಂಬುವ ಕೆಲಸ ಮಾಡಬೇಕಿದೆ.

Categories
ಸಿನಿ ಸುದ್ದಿ

ಸಲಗ ಶಾಸನ ಬರೆದ ದುನಿಯಾ ಅಭಿಮಾನಿ! ರಿಲೀಸ್ ಮೊದಲೇ ಇತಿಹಾಸದ ಬರಹ

ಸಲಗ ತಂಡಕ್ಕೆ‌ಹೆಚ್ಚಿದ ಸಂಭ್ರಮ…

ಅಭಿಮಾನ ಅನ್ನೋದೇ ಹಾಗೆ. ಒಂದೊಂದ್ ಸಲ ತುಂಬಾನೇ ಮೆಚ್ಚಿಸುತ್ತೆ, ಅತಿಯಾಗಿ ಪ್ರೀತಿಸುವಂತೆ ಮಾಡುತ್ತೆ.
ಇಲ್ಲೀಗ ಹೇಳ ಹೊರಟಿರುವ ವಿಷಯ, ‘ದುನಿಯಾ’ ವಿಜಯ್ ಅವರ ಅಪ್ಪಟ ಅಭಿಮಾನಿಯೊಬ್ಬರ ಕುರಿತು. ಈಗಾಗಲೇ ಅನೇಕ ಸ್ಟಾರ್ ನಟರ ಬೆರಳೆಣಿಕೆಯಷ್ಟು ಅಭಿಮಾನಿಗಳು ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಆ ಸಾಲಿಗೆ ಈಗ ‘ದುನಿಯಾ’ ವಿಜಯ್ ಅಭಿಮಾನಿಯೂ ಸೇರಿದ್ದಾರೆ.

ಇಷ್ಟಕ್ಕೂ ಆ ಅಭಿಮಾನಿ ಬೇರಾರೂ ಅಲ್ಲ, ವೀರೇಶ್ ಆಚಾರ್. ಇವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದರೆ, ಯಾರು ಮಾಡದೇ ಇರುವ ಒಂದು ಕೆಲಸವನ್ನ ಈ ವೀರೇಶ್ ಆಚಾರ್ ಮಾಡಿದ್ದಾರೆ. ಇವರು ‘ದುನಿಯಾ’ ವಿಜಯ್ ಅವರ ಅಪ್ಪಟ ಅಭಿಮಾನಿ. ಅಷ್ಟಕ್ಕೂ ವೀರೇಶ್ ಆಚಾರ್ ಮಾಡಿದ್ದೇನ್ ಗೊತ್ತಾ?

ಎಲ್ಲರಿಗೂ ಗಿತ್ತಿರುವಂತೆ ‘ದುನಿಯಾ’ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿದ್ದಾರೆ. ಅವರ ಮೊದಲ ಚಿತ್ರ ‘ಸಲಗ’ ರಿಲೀಸ್ ಗೂ ಮೊದಲೇ ಸೆನ್ಸೇಷನ್ ಸೃಷ್ಟಿಸಿದೆ. ಈ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್, ಸಾಂಗ್ ಗೆ ಈಗಾಗಲೇ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಶಾಸನ ರಚನೆ ಮಾಡಲಾಗಿದೆ ಅನ್ನೋದೇ ಈ ಹೊತ್ತಿನ ವಿಶೇಷ.
ಹೌದು, ಪುರಾತನ ಶಿಲಾ ಶಾಸನದ ಮಾದರಿಯಲ್ಲಿ ‘ಸಲಗ’ ಶಾಸನ ರಚನೆ ಮಾಡುವ ಮೂಲಕ ಅಭಿಮಾನಿ ವೀರೇಶ್ ಆಚಾರ್ ಈಗ ಎಲ್ಲರ ಮನ ಗೆದ್ದಿದ್ದಾನೆ.

‘ಸಲಗ’ ಚಿತ್ರದ ಶಾಸನ ಬರೆದು ಸ್ಥಬ್ಧ ಚಿತ್ರವನ್ನ ವಿನ್ಯಾಸ ಗೊಳಿಸುವ ಮೂಲಕ ಇಡೀ ಚಿತ್ರತಂಡಕ್ಕೆ ಖುಷಿ ತಂದಿದ್ದಾನೆ.
ಸಿನಿಮಾ ರಿಲೀಸ್ ಮುನ್ನವೇ ಮೊದಲೇ ಶತದಿನದ ಸಂಭ್ರಮದ ಶಾಸನ ಬರೆದು ಚಿತ್ರತಂಡಕ್ಕೆ ಸರ್ಪೈಸ್ ಗಿಫ್ಟ್ ಕೊಡುವ ಮೂಲಕ ಅಭಿಮಾನ ತೋರಿದ್ದಾನೆ.
ಅಂದಹಾಗೆ, ಜನವರಿಗೆ ‘ಸಲಗ’ ಪ್ರೆಕ್ಷಕರ ಮುಂದೆ ಬರುವ ತಯಾರಿ ನಡೆಸಿದೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರೋ ಸಲಗ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ. ಕೆ.ಪಿ.ಶ್ರೀಕಾಂತ್ ಚಿತ್ರದ ನಿರ್ಮಾಪಕರು.

Categories
ಸಿನಿ ಸುದ್ದಿ

ರೋರಿಂಗ್‌ ಸ್ಟಾರ್‌ ಬರ್ತ್‌ಡೇಗೆ ಸ್ಪೆಷಲ್‌ ಗಿಫ್ಟ್‌ – ಡಿಸೆಂಬರ್‌ 17ಕ್ಕೆ ಮದಗಜ ಫಸ್ಟ್‌ ಲುಕ್‌ ಟೀಸರ್‌

ಅನೌನ್ಸ್‌ಮೆಂಟ್‌ ವಿಡಿಯೋದಲ್ಲಿ ಕೆರಳಿದ ಕುತೂಹಲ!

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹೌದು, “ಮದಗಜ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಚಿತ್ರದ ಶೀರ್ಷಿಕೆಯಲ್ಲೇ ಒಂದು ಫೋರ್ಸ್‌ ಇದೆ. ಮೊದಲ ಪೋಸ್ಟರ್‌ ಕೂಡ ಅಷ್ಟೇ ಮಜವಾಗಿತ್ತು. ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿರುವ ಈ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಡಿಸೆಂಬರ್‌ 17 ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಲಿದೆ.

ಈಗಾಗಲೇ ಫಸ್ಟ್‌ ಲುಕ್‌ ಟೀಸರ್‌ ಅನೌನ್ಸ್‌ಮೆಂಟ್‌ ವಿಡಿಯೋ ಆನಂದ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಒಂದು ಲಕ್ಷ ವೀಕ್ಷಣೆ ಪಡೆದಿದೆ. ಹೌದು, ಕೇವಲ ೨೧ ಸೆಕೆಂಡ್‌ನಷ್ಟಿರುವ ಆ ವಿಡಿಯೋ ನೋಡಿದರೆ, ಸಾಕಷ್ಟು ಕುತೂಹಲ ಮೂಡಿಸುವಂತಿದೆ. ಯಾವುದೇ ದೃಶ್ಯಗಳಿಲ್ಲದೆ, ಕೇವಲ ಹಿನ್ನೆಲೆ ಸಂಗೀತ ಇಟ್ಟುಕೊಂಡು ಹರಿದಾಡುವ ಸ್ಮೋಕ್‌ನಲ್ಲೇ ಹೊಸದ್ದೊಂದು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು.

ಉಮಾಪತಿ, ನಿರ್ಮಾಪಕ

ಅದನ್ನು ನೋಡಿದವರಿಗೆ ಇನ್ನಷ್ಟು ಹೊತ್ತು ಇರಬೇಕಿತ್ತು ಎನಿಸದೇ ಇರದು. ಆದರೆ, ಅದು ಕೇವಲ ಅನೌನ್ಸ್‌ಮೆಂಟ್‌ ವಿಡಿಯೋ ಆಗಿರುವುದರಿಂದ ಡಿಸೆಂಬರ್‌ ೧೭ಕ್ಕೆ ಪೂರ್ಣಪ್ರಮಾಣದ ಟೀಸರ್‌ ಹೊರಬರಲಿದೆ. ಅಂದು ರೋರಿಂಗ್‌ ಸ್ಟಾರ್‌ ಬರ್ತ್‌ಡೇ. ಹಾಗಾಗಿ ಶ್ರೀಮುರಳಿ ಅವರ ಅಭಿಮಾನಿಗಳಿಗೊಂದು ಸ್ಪೆಷಲ್‌ ಗಿಫ್ಟ್‌ ಕೊಡಲು ವಿಶೇಷ ತಯಾರಿ ಮಾಡಿಕೊಂಡಿದೆ ಚಿತ್ರತಂಡ.


ಅಂದಹಾಗೆ, ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಪಕರು. ಎಸ್.‌ ಮಹೇಶ್‌ ಕುಮಾರ್‌ ನಿರ್ದೇಶನವಿದ್ದು, ಭರ್ಜರಿಯಾಗಿಯೇ ಸಿನಿಮಾವನ್ನು ನಿರ್ದೇಶಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಬಿನ್ನಿಮಿಲ್‌ನಲ್ಲಿ ಸಖತ್‌ ಸೆಟ್‌ನಲ್ಲಿ ನಡೆಯುತ್ತಿದೆ. ಡಿಸೆಂಬರ್‌ ೧೭ರಂದು ಬೆಳಗ್ಗೆ ೯. ೯ ಕ್ಕೆ ಬಿಡುಗಡೆಯಾಗಲಿದೆ.

ಮಹೇಶ್‌ ಕುಮಾರ್‌, ನಿರ್ದೇಶಕ
Categories
ಸಿನಿ ಸುದ್ದಿ

ಸಿರಿ ಕನ್ನಡಕ್ಕೆ ಎರಡರ ಸಂಭ್ರಮ!

ಅಪ್ಪಟ ಕನ್ನಡಿಗರ ಪ್ರೀತಿಯ ವಾಹಿನಿ ಈಗ ಮೂರನೇ ಹೆಜ್ಜೆ

ಕನ್ನಡಿಗರ ಹೆಮ್ಮೆಯ ವಾಹಿನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ “ಸಿರಿ ಕನ್ನಡ”  ವಾಹಿನಿಯು ಇದೀಗ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ.  ಸಿನಿಮಾ ಮತ್ತು ಮನರಂಜನೆ ವಾಹಿನಿಯಾಗಿ ಇಲ್ಲಿನ ನೆಲದಲ್ಲಿ ಚಿಗುರೊಡೆದು ಹಂತ ಹಂತವಾಗಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೊಸದಾಗಿ ಆರಂಭವಾದರೂ ಎವರ್‌ಗ್ರೀನ್ ಕ್ಲಾಸಿಕ್ ಸಿನಿಮಾಗಳು ಮತ್ತು ಸಿನಿಮಾ ಆಧಾರಿತ ಸ್ಪೆಷಲ್ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಾಗಿ ಪ್ರಸ್ತುತ  ಸಂಪೂರ್ಣ ಮನರಂಜನಾ ವಾಹಿನಿಯಾಗಿ ತಲೆ ಎತ್ತಿ ನಿಂತಿದೆ.

ಕೋವಿಡ್ ಸಂದರ್ಭದಲ್ಲೂ ನೂತನ ಧಾರವಾಹಿಗಳು, ವಿಭಿನ್ನ ರಿಯಾಲಿಟಿ ಶೋಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಹೊಸ ರೂಪದ ಭಕ್ತಿ ಪ್ರಧಾನ ಶೋಗಳನ್ನು ಕೊಡುತ್ತಾ ಮನ ಮನೆಗಳಿಗೆ ತಲುಪಿದೆ. ಈ ಹಂತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುತ್ತಾ ಇದೆ. ವೀಕ್ಷಕರು ಇಷ್ಟಪಟ್ಟಿರುವ ಮೆಗಾ ಧಾರವಾಹಿಗಳೊಂದಿಗೆ ಜನಪ್ರಿಯ ಶೋಗಳು ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲಿವೆ. ಅಪಾರ ಜನಪ್ರಿಯತೆ ಪಡೆದ “ಕ್ಯಾಶ್ ಬಾಕ್ಸ್” ’ಸ್ಟಾರ್ ಆಫ್ ದಿ ವೀಕ್’ ದಲ್ಲಿ ವಿಜೇತರಿಗೆ ಇಪ್ಪತ್ತೈದು ಸಾವಿರ ಬಹುಮಾನ, ’ನಾರಿಗೊಂದು ಸೀರೆ’ ಕಾರ್ಯಕ್ರಮವು 120  ಕ್ಕೂ ಹೆಚ್ಚು ಸಂಚಿಕೆಗನ್ನು ಪೂರೈಸಿ, 500 ಕ್ಕೂ ಹೆಚ್ಚು ಸೀರೆಗಳನ್ನು ಮಹಿಳಾಮಣಿಗಳ ಬಳಿ ತರುತ್ತಿದೆ. ನಟಿ ಸುಜಾತ ನಿರೂಪಣೆಯ “ಸಿನಿ ಪಾಕ”ದಲ್ಲಿ ವೀಕ್ಷಕರಿಗೂ ಭಾಗವಹಿಸುವ ಅವಕಾಶ ಸಿಗಲಿದೆ. ರೀಲ್ ಹಿಂದಿನ ರಿಯಲ್ ಕಥೆ “ಟೂರಿಂಗ್ ಟಾಕೀಸ್” ಮತ್ತಷ್ಟು ವಿಭಿನ್ನವಾಗಿ ಮೂಡಿಬರುತ್ತದೆ ಎಂbuದು ವಾಹಿನಿಯ ಮುಖ್ಯಸ್ಥ ಸಂಜಯ್‌ ಶಿಂಧೆಯವರು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡಿಗರಿಗಾಗಿಯೇ ರೂಪುಗೊಂಡ “ಸಿರಿ ಕನ್ನಡ” ನಾಡು ನುಡಿ ಸಂಸ್ಕೃತಿ ಬಿಂಬಿಸೋ, ಸ್ವಂತಿಕೆಯ ಸಂಭ್ರಮದ ಹೆಜ್ಜೆ ಇಡುತ್ತಿದೆ. ಮುಂದೆಯೂ ಕರುನಾಡಲ್ಲಿ “ನುಡಿ ಕನ್ನಡ, ನಡೆ ಕನ್ನಡ, ನೋಡ್ತಾ ಇರಿ ಸಿರಿ ಕನ್ನಡ” ಎನ್ನುವಂತಾಗಬೇಕು ಎಂಬುದೇ ವಾಹಿನಿಯ ಆಶಯವಾಗಿದೆ.

error: Content is protected !!