ಯಜಮಾನನಿಗೆ ಮತ್ತೊಂದು ಚಿತ್ರ ಫಿಕ್ಸ್ -ರಾಜವೀರ ಮದಕರಿನಾಯಕ ಬಳಿಕ  ದರ್ಶನ್‌ ಹರಿಕೃಷ್ಣ ಜೋಡಿಯ ಮೋಡಿ

ಯಜಮಾನ ನಿರ್ಮಾಪಕರಿಂದ ಇನ್ನೊಂದು ಕಾಣಿಕೆ

ಕನ್ನಡದ ಮಟ್ಟಿಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದವರು. ಸದ್ಯಕ್ಕೆ ಅವರ ಕೈಯಲ್ಲಿ ಒಂದಷ್ಟು ಸಿನಿಮಾಗಳಿವೆ. “ರಾಬರ್ಟ್‌” ಈಗ ರಿಲೀಸ್‌ಗೆ ರೆಡಿಯಾಗಿದೆ. ಅದರ ಬೆನ್ನಲ್ಲೇ “ರಾಜವೀರ ಮದಕರಿನಾಯಕ” ಚಿತ್ರ ಕೂಡ ಸೆಟ್ಟೇರಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದೆ. ಇನ್ನು, “ರಾಬರ್ಟ್‌” ತಂಡದ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಈಗಾಗಲೇ ದರ್ಶನ್‌ ಅನೌನ್ಸ್‌ ಮಾಡಿದ್ದಾಗಿದೆ. ಇವುಗಳ ಜೊತೆಯಲ್ಲಿ ದರ್ಶನ್‌ಗೆ ಮತ್ತೊಂದು ಸಿನಿಮಾ ಕೂಡ ಆಗುತ್ತಿದೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ದರ್ಶನ್‌ ಅವರಿಗೆ ಹೊಸ ಸಿನಿಮಾ ಕಥೆ ರೆಡಿಯಾಗುತ್ತಿದೆ. ಮತ್ತೊಂದು ಅದ್ಧೂರಿ ಬಜೆಟ್‌ನ ಚಿತ್ರ ಆಗಲಿದೆ ಎಂಬುದು ವಿಶೇಷತೆಗಳಲ್ಲೊಂದು.


ಹೌದು, ಈ ಹಿಂದೆ ದರ್ಶನ್‌ ಅವರಿಗೆ “ಯಜಮಾನ” ಚಿತ್ರ ನಿರ್ಮಿಸಿದ್ದ ಶೈಲಜಾ ನಾಗರಾಜ್‌ ಅವರೇ ದರ್ಶನ್‌ ಅವರಿಗೆ ಮತ್ತೊಂದು ದೊಡ್ಡ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಹಾಗೆ ನೋಡಿದರೆ, “ಯಜಮಾನ” ಸಿನಿಮಾ ಆಗುವ ಸಂದರ್ಭದಲ್ಲೇ ನಿರ್ಮಾಪಕರು ದರ್ಶನ್‌ ಅವರಿಗೆ ಅಡ್ವಾನ್ಸ್‌ ಕೊಟ್ಟಿದ್ದರು ಎನ್ನಲಾಗಿದ್ದು, ಆ ಚಿತ್ರದ ಕಥೆಯ ಕೆತ್ತನೆಯ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇನ್ನು, ದರ್ಶನ್‌ ಅವರ ಮುಂದಿನ ಸಿನಿಮಾಗೆ ನಿರ್ದೇಶಕರು ಯಾರು? ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. “ಯಜಮಾನ” ಚಿತ್ರವನ್ನು ನಿರ್ದೇಶನ ಮಾಡಿದ್ದ ಹರಿಕೃಷ್ಣ ಅವರೇ ದರ್ಶನ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಈಗಾಗಲೇ ಹರಿಕೃಷ್ಣ ಅವರು ತಮ್ಮದ್ದೊಂದು ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಯುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯಕ್ಕೆ ದರ್ಶನ್‌ ಅವರು “ರಾಬರ್ಟ್‌” ರಿಲೀಸ್‌ ಎದುರು ನೋಡುತ್ತಿದ್ದಾರೆ.

ಇದರ ಜೊತೆ ಜೊತೆಯಲ್ಲೇ ಅವರು “ರಾಜವೀರ ಮದಕರಿನಾಯಕ” ಸಿನಿಮಾ ಚಿತ್ರೀಕರಣದಲ್ಲೂ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ಅವರು, ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಮುಂದಾಗುತ್ತಾರೋ ಅಥವಾ ಹರಿಕೃಷ್ಣ ಅವರ ಹೊಸ ಚಿತ್ರದಲ್ಲಿ ಎಂಟ್ರಿಯಾಗುತ್ತಾರೋ ಎಂಬುದು ಗೌಪ್ಯ. ಆದರೆ, ಹರಿಕೃಷ್ಣ ಅವರೊಂದಿಗೆ ಮತ್ತೊಂದು ಸಿನಿಮಾ ಆಗುತ್ತಿರುವುದಂತೂ ನಿಜ. “ಯಜಮಾನ” ಬಳಿಕ ಹೊಸ ಸಿನಿಮಾ ಇನ್ನೂ ಹೊಸತನದಲ್ಲಿರಲ್ಲಿದ್ದು, ಪಕ್ಕಾ ಮಾಸ್‌ ಅಂಶಗಳೊಂದಿಗೆ ಪಡ್ಡೆಗಳೂ ಸೇರಿದಂತೆ ದರ್ಶನ್ ಅಭಿಮಾನಿಗಳಿಗೊಂದು ರಗಡ್‌ ಸಿನಿಮಾ ಮಾಡಬೇಕೆಂಬ ಹಠದಲ್ಲೇ ಹರಿಕೃಷ್ಣ ಸದ್ಯಕ್ಕೆ ಸ್ಕ್ರಿಪ್ಟ್‌ನಲ್ಲಿ ಮಗ್ನರಾಗಿದ್ದಾರೆ.

ಹರಿಕೃಷ್ಣ ಅಂದಾಕ್ಷಣ, ನೆನಪಾಗೋದೇ ಅದ್ಭುತ ಹಾಡುಗಳ ಮೋಡಿಗಾರ ಅನ್ನೋದು. ಅವರು ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲೇ ನಿರ್ದೇಶನಕ್ಕೂ ಬಂದಿದ್ದು ಮತ್ತೊಂದು ಪ್ಲಸ್‌ ಪಾಯಿಂಟ್.‌ ಬಹಳಷ್ಟು ಮಂದಿ ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಪಳಗಿದವರು, ನಿರ್ದೇಶನವನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೋ ಏನೋ ಎಂಬ ಪ್ರಶ್ನೆಗಳನ್ನು ಹಾಕುತ್ತಿದ್ದರು. ಯಾವಾಗ,”ಯಜಮಾನ” ಹೊರಬಂತೋ, ಅದರೊಳಗಿರುವ ಗತ್ತುಗೈರತ್ತು ನೋಡಿದ ಮಂದಿ, ಒಂದು ಮಾತನ್ನೂ ಆಡೋಕೆ ಮುಂದಾಗಲಿಲ್ಲ.

ಅಷ್ಟರಮಟ್ಟಿಗೆ “ಯಜಮಾನ” ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದುಂಟು. ಈಗ ಅದೇ ಹುಮ್ಮಸ್ಸಿನಲ್ಲೇ ದರ್ಶನ್‌ ಅವರಿಗೆ ಮತ್ತೊಂದು ಸಿನಿಮಾ ಮಾಡೋಕೆ ಅಣಿಯಾಗುತ್ತಿದ್ದಾರೆ ಹರಿಕೃಷ್ಣ. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನೂ ಹರಿಕೃಷ್ಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇನ್ನು ಶೈಲಜಾ ನಾಗ್‌ ಅವರು ಕೂಡ ದರ್ಶನ್‌ ಜೊತೆ ಭರ್ಜರಿಯಾಗಿಯೇ ಹೊಸ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಇಷ್ಟರಲ್ಲೇ ಆ ಚಿತ್ರದ ಒಂದಷ್ಟು ಹೊಸ ಸುದ್ದಿಗಳು ಹೊರಬಿದ್ದರೆ ಅಚ್ಚರಿ ಇಲ್ಲ.

Related Posts

error: Content is protected !!