Categories
ಸಿನಿ ಸುದ್ದಿ

ತಾಯವ್ವನಿಗೆ ಸುದೀಪ್ ಸಾಥ್: ಹಾಡು ರಿಲೀಸ್ ಮಾಡಿ ಹಾರೈಸಿದ ಕಿಚ್ಚ

ʼತಾಯವ್ವʼ ಹೀಗೊಂದು ಹೆಸರಿನ ಚಿತ್ರ ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದು, ಹಲವರಿಗೆ ಗೊತ್ತಿರಬಹುದು. ಕನ್ನಡ ಚಿತ್ರರಂಗದ ನಟ ʼಕಿಚ್ಚʼ ಸುದೀಪ್‌ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರವದು. ಆಗ ತೆರೆಗೆ ಬಂದಿದ್ದ ʼತಾಯವ್ವʼ ಚಿತ್ರದಲ್ಲಿ ಸುದೀಪ್‌ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ ʼತಾಯವ್ವʼನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ʼತಾಯವ್ವʼ ಎಂಬ ಹೆಸರಿನಲ್ಲಿ, ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಇನ್ನು ಈ ಬಾರಿ ʼತಾಯವ್ವʼನಾಗಿ ಈ ಚಿತ್ರದಲ್ಲಿ ನವ ಪ್ರತಿಭೆ ಗೀತಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಸದ್ದಿಲ್ಲದೆ ʼತಾಯವ್ವʼ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ʼತಾಯವ್ವʼ ಚಿತ್ರದ ಹಾಡುಗಳು ಬಿಡುಗಡೆಯಾಯಿತು. ಅನಂತ ಆರ್ಯನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ʼತಾಯವ್ವʼ ಚಿತ್ರದ ಗೀತೆಗಳಿಗೆ ಸ್ವತಃ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ʼತಾಯವ್ವʼನಾಗಿ ಅಭಿನಯಿಸಿರುವ, ಗೀತಪ್ರಿಯ ಅವರೇ ಧ್ವನಿಯಾಗಿದ್ದಾರೆ. ಅಪ್ಪಟ ಕನ್ನಡದ ಗ್ರಾಮೀಣ ಸೊಗಡಿನ ಜನಪದ ಗೀತೆಗಳ ಗುಚ್ಚವನ್ನು ʼತಾಯವ್ವʼ ಚಿತ್ರದಲ್ಲಿ ಹೊಸರೂಪದಲ್ಲಿ ತೆರೆಮೇಲೆ ತರಲಾಗುತ್ತಿರುವುದು ಮತ್ತೊಂದು ವಿಶೇಷ. ಬೆಂಗಳೂರಿನ ʼಜಿ. ಟಿ ವರ್ಲ್ಡ್‌ ಮಾಲ್‌ʼ ನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ʼಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್‌ ಮುಖ್ಯ ಅತಿಥಿಯಾಗಿ ಆಗಮಿಸಿ, ʼತಾಯವ್ವʼ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ನಟ ಕಿಚ್ಚ ಸುದೀಪ್‌, ʼನಾನು ಆಗಷ್ಟೇ ಕಾಲೇಜು ಮುಗಿಸುತ್ತಿರುವ ಸಂದರ್ಭದಲ್ಲಿ ʼತಾಯವ್ವʼ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನೆಮಾ ನನಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಟ್ಟಿತ್ತು. ನನ್ನ ವೃತ್ತಿ ಜೀವನದಲ್ಲಿ ಈ ಸಿನೆಮಾ ಇಂದಿಗೂ ಒಂದು ಸುಮಧುರ ನೆನಪಾಗಿ ಉಳಿದಿದೆ. ಈಗ ಅದೇ ʼತಾಯವ್ವʼ ಹೆಸರಿನಲ್ಲಿ ಅಂಥದ್ದೇ ಮತ್ತೊಂದು ಸಿನೆಮಾ ತೆರೆಗೆ ಬರುತ್ತಿರುವುದು ಒಳ್ಳೆಯ ವಿಷಯ. ʼತಾಯವ್ವʼ ಎಂಬ ಹೆಸರಿನಲ್ಲೇ ಒಂದು ಭಾವನಾತ್ಮಕ ಸೆಳೆತವಿದೆ. ಈ ಸಿನೆಮಾದಲ್ಲೂ ಅದೇ ಅಂಶಗಳಿರಬಹುದು ಎಂಬ ನಿರೀಕ್ಷೆಯಿದೆ. ಚಿತ್ರಕ್ಕೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದರು.

ʼತಾಯವ್ವʼ ಚಿತ್ರದ ಮೂಲಕ ಮೊದಲ ಬಾರಿಗೆ ನವ ಪ್ರತಿಭೆ ಗೀತಪ್ರಿಯ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ʼಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನೆಮಾ. ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಇಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ. ಇದರಲ್ಲಿ ನಾನು ʼತಾಯವ್ವʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನೆಮಾದಲ್ಲಿ ಒಂದು ಸಂದೇಶವಿದೆ. ಎಲ್ಲರಿಗೂ ತಲುಪುವಂಥ ವಿಷಯ ಈ ಸಿನೆಮಾದಲ್ಲಿದೆ. ಕಿಚ್ಚ ಸುದೀಪ್‌ ಅವರ ಮೊದಲ ಸಿನೆಮಾದ ಹೆಸರನ್ನೇ ನಮ್ಮ ಸಿನೆಮಾಕ್ಕೆ ಇಟ್ಟುಕೊಂಡು ತೆರೆಗೆ ತರುತ್ತಿದ್ದೇವೆ. ನಮ್ಮ ಸಿನೆಮಾಕ್ಕೆ ಬೆಂಬಲವಾಗಿ ಸುದೀಪ್‌ ನಿಂತಿರುವುದು ನಮಗೆ ದೊಡ್ಡ ಬಲ ತಂದಂತಾಗಿದೆ. ಈಗಾಗಲೇ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆʼ ಎಂದರು.

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್‌, ಮೊದಲ ಬಾರಿಗೆ ʼಭಾ. ಮ. ಹರೀಶ್‌ ಆಡಿಯೋʼ ಹೆಸರಿನಲ್ಲಿ ಹೊಸ ಆಡಿಯೋ ಕಂಪೆನಿಯನ್ನು ಪ್ರಾರಂಭಿಸಿದ್ದು, ಈ ಕಂಪೆನಿಯ ಅಡಿಯಲ್ಲಿ ʼತಾಯವ್ವʼ ಸಿನೆಮಾದ ಆಡಿಯೋ ಬಿಡುಗಡೆಯಾಗಿದೆ.
ಕಾರ್ಯಕ್ರಮದಲ್ಲಿ ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್‌, ನಿರ್ಮಾಪಕರಾದ ಭಾ. ಮ. ಹರೀಶ್‌, ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಐಪ್ಲೆಕ್ಸ್‌ ಮುಖ್ಯಸ್ಥ ಗಿರೀಶ್‌, ಶಿಕ್ಷಣ ತಜ್ಞ ನಾಗಪಾಲ್‌ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Categories
ಸಿನಿ ಸುದ್ದಿ

ನಿಧಿಯ ಬೆನ್ನೇರಿ ಹೊರಟವರು

ಚಿತ್ರ ವಿಮರ್ಶೆ: ರೇಟಿಂಗ್ 3.5/5

ನಿರ್ಮಾಣ : ಎನ್ ಎಂ ಕಾಂತರಾಜ್
ನಿರ್ದೇಶನ : ಚಂದ್ರಮೋಹನ್
ತಾರಾಗಣ: ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಅರ್ಚನ ಕೊಟ್ಟಿಗೆ, ಶರಣ್ಯ ಶೆಟ್ಟಿ ಇತರರು
.

ಕಾಡು, ನಿಧಿ, ಶೋಧ ಮತ್ತು ಐವರು. ಇದು ಸಿನಿಮಾದ ಹೈಲೆಟ್. ಇದೊಂದು ಶೋಧಕ್ಕೆ ಹೊರಡುವವರ ಕಥೆ. ಅಲ್ಲಿ ಆತಂಕವಿದೆ. ನಗೆ ಇದೆ. ಅಚ್ಚರಿ ಇದೆ. ಆಗಾಗ ಚಕಿತಗೊಳಿಸುವ ಅಂಶಗಳೂ ಇವೆ. ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ನೋಡಿಸಿಕೊಂಡು ಹೋಗುವ ಸಿನಿಮಾ ಇದು ಎಂದೆನಿಸದಿರದು.

ಇಲ್ಲಿ ರಂಗಾಯಣ ರಘು, ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಮತ್ತು ಅರ್ಚನಾ ಕೊಟ್ಟಿಗೆ ಕಾಂಬಿನೇಷನ್ ಸಖತ್ ವರ್ಕೌಟ್ ಆಗಿದೆ. ಈ ಐವರು ನಿಧಿಯ ಶೋಧನೆಗೆ ಕಾಡೊಳಗೆ ಎಂಟ್ರಿ ಕೊಡ್ತಾರೆ. ಯಾವ ನಿಧಿ, ಇಧಿ ಸಿಗುತ್ತಾ, ಅಲ್ಲಿ ಏನಾಗುತ್ತೆ ಎಂಬ ಕುತೂಹಲಕ್ಕೆ ಒಂದೊಮ್ಮೆ ಸಿನಿಮಾ ನೋಡಬಹುದು.

ಈ ಐವರಲ್ಲೊಬ್ಬ ಕಿವಿ ಕೇಳದ ಹುಡುಗ. ಅವನಿಗೆ ಕಾಡೊಳಗೆ ಯಾಕೆ ಹೋಗುತ್ತಿದ್ದೇವೆ ಅನ್ನುವ ಪರಿವಿಲ್ಲ. ಹಾಗಾಗಿಯೇ ಕೆಲ ಸಂದರ್ಭ ಅಪಾರ್ಥ ವಾಗಿ ಬರುವ ಮಾತುಗಳು ನಗೆ ಎಬ್ಬಿಸುತ್ತವೆ.

ಕಾಡು ಅಂದಾಕ್ಷಣ ಪ್ರಾಣಿ ಭಯ ಭೀತಿ ಕಾಮನ್. ಆದರೆ ಇಲ್ಲಿ ಯಾವ ಘಟನೆ ಕೂಡ ನಡೆಯಲ್ಲ. ಆದರೂ ಸನ್ನಿವೇಶ ಮಾತುಗಳು ನೋಡುಗರಲ್ಲಿ ನಗೆ ಹುಟ್ಟಿಸುತ್ತವೆ. ಮಾತುಕತೆಯಲ್ಲೇ ಫಸ್ಟ್ ಹಾಫ್ ಮುಗಿಯುತ್ತೆ. ಅದು ಹೋಗೋದೇ ಗೊತ್ತಾಗಲ್ಲ ಅಷ್ಟೊಂದು ನೀಟ್ ಆಗಿ ನೋಡುಗರನ್ನು ರಂಜಿಸುತ್ತಾ ಕರೆದುಕೊಂಡು ಹೋಗುವಲ್ಲಿ ನಿರ್ದೇಶಕರು ಇಷ್ಟವಾಗುತ್ತಾರೆ.

ಹೇಗೋ ಅವರು ಹೋಗುವ ಸ್ಥಳ ಬರುತ್ತೆ. ಅಲ್ಲೊಂದು ಟ್ವಿಸ್ಟ್ ಕೂಡ ಇದೆ. ಅಂತಹ ಕಾಡೊಳಗೆ ಒಬ್ಬಾತನ ದರ್ಶನ. ಇವರೆಲ್ಲರಿಗೂ ಅಲ್ಲೊಂದು ಭೀತಿ ಶುರುವಾಗುತ್ತೆ. ಮುಂದೇನಾಗಿತ್ತೆ ಅನ್ನೋದೇ ಮಜ.

ಅಲ್ಲೊಂದು ವಿಪರೀತ ಭಯಾನಕ ಎನಿಸೋ ದುಷ್ಟಶಕ್ತಿ. ಆದರೆ ಅವರಿಗೆ ಅದು ಅಪಾಯ ತಂದೊಡ್ಡುತ್ತೋ ಇಲ್ಲವೋ ಅನ್ನೋದು ಸಸ್ಪೆನ್ಸ್.

ನೋಡಿದವರಿಗೆ ಅವರು ಪಾಪ ಅನಿಸುತ್ತೆ. ಇಡೀ ಕಥೆ ಥ್ರಿಲ್ ಜೊತೆ ಮನರಂಜನೆಗೆ ಕರೆದೊಯ್ಯುತ್ತೆ. ಅಷ್ಟಾದರೂ ಅವರಿಗೆ ನಿಧಿ ಸಿಗುತ್ತಾ ಎಂಬ ಪ್ರಶ್ನೆ ಕೊನೆಯವರೆಗೂ ಕಾಡುತ್ತೆ. ನಿಧಿಗಾಗಿ ಅಲ್ಲೊಂದು ಘಟನೆ ನಡೆಯುತ್ತೆ ಅದನ್ನು ನೋಡುವುದಕ್ಕಾದರೂ ಒಮ್ಮೆ ಫಾರೆಸ್ಟ್ ಒಳ ಹೊಕ್ಕಿ ಬರಬಹುದು.

ರಂಗಾಯಣ ರಘು ಹಾಗೂ ಚಿಕ್ಕಣ್ಣ ಇಬ್ಬರ ಹಾಸ್ಯ ಮೋಡಿ ಮಾಡಿದೆ. ಅನೀಶ್, ಗುರುನಂದನ್, ಅರ್ಚನಾ ನಟನೆಯಲ್ಲಿ ಹಿಂದೆ ಉಳಿದಿಲ್ಲ. ಎಲ್ಲರೂ ಸಿಕ್ಕ ಪಾತ್ರಕ್ಕೆ ನ್ಯಾಯ ತುಂಬಿದ್ದಾರೆ.

ಧರ್ಮವಿಶ್ ಅವರ ಹಿನ್ನೆಲೆ ಸಂಗೀತ ಇಲ್ಲಿ ಮಾತಾಡುವಂತಿದೆ. ಇಡೀ ಸಿನಿಮಾದ ಫಾರೆಸ್ಟ್ ಒಳಗಿನ ಆತಂಕವನ್ನು ಭೀತಿಯನ್ನು ಹೆಚ್ಚಿಸಲು ಸಂಗೀತ ಕಾರಣ.

ಇಲ್ಲಿ ಪ್ಲಸ್ ಮೈನಸ್ ಅಂಶಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಒಂದೊಳ್ಳೆಯ ಮನರಂಜನೆಯ ಸಿನಿಮಾ ಎನಿಸಿಕೊಳ್ಳುತ್ತೆ.

Categories
ಸಿನಿ ಸುದ್ದಿ

2019ರ ರಾಜ್ಯ ಪ್ರಶಸ್ತಿ ಪ್ರಕಟ: ಸುದೀಪ್ ಅತ್ಯುತ್ತಮ ನಟ, ಅನುಪಮಾ ಗೌಡ ಅತ್ಯುತ್ತಮ ನಟಿ

2019ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಘೋಷಣೆಯಾಗಿದ್ದು, ‘ಪೈಲ್ವಾನ್‍’ ಚಿತ್ರದ ಅಭಿನಯಕ್ಕಾಗಿ ಸುದೀಪ್‍ ಅವರಿಗೆ ಅತ್ಯುತ್ತಮ ನಟ ಮತ್ತು ‘ತ್ರಯಂಬಕಂ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಪಿ. ಶೇಷಾದ್ರಿ ನಿರ್ದೇಶನದ ಮೋಹನ ದಾಸ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಕಳೆದ ವರ್ಷ 2019ನೇ ಸಾಲಿನ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಸರ್ಕಾರ ರಚಿಸಿತ್ತು. ನಂಜುಂಡೇಗೌಡ ನೇತೃತ್ವದ ಈ ಸಮಿತಿಯಲ್ಲಿ ರಾಮನಾಥ ಋಗ್ವೇದಿ, ಮಳವಳ್ಳಿ ಸಾಯಿಕೃಷ್ಣ, ಪೂಜಾ ಗಾಂಧಿ, ಶ್ರೀಧರ್‍ ಸಂಭ್ರಮ್‍ ಮುಂತಾದವರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಶಸ್ತಿ ಪಟ್ಟಿ ಈ ಕೆಳಕಂಡಂತೆ ಇದೆ:

ಅತ್ಯುತ್ತಮ ಅತ್ಯುತ್ತಮ ಚಿತ್ರ: ಮೋಹನ ದಾಸ

ದ್ವಿತೀಯ ಅತ್ಯುತ್ತಮ ಚಿತ್ರ: ಲವ್‍ ಮಾಕ್ಟೈಲ್‍

ಮೂರನೇ ಅತ್ಯುತ್ತಮ ಚಿತ್ರ: ಅರ್ಘ್ಯಂ

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ ವರ್ಸಸ್‍ ಇಂಗ್ಲೆಂಡ್‍

ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು

ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್‍ ಕರಿಯಪ್ಪ)

ಅತ್ಯುತ್ತಮ ಪೋಷಕ ನಟಿ: ಕುಮಾರಿ ಅನೂಷಾ ಕೃಷ್ಣ (ಬ್ರಾಹ್ಮಿ)

ಅತ್ಯುತ್ತಮ ಕಥೆ: ಜಯಂತ್ ಕಾಯ್ಕಿಣಿ (ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ)

ಅತ್ಯುತ್ತಮ ಚಿತ್ರಕಥೆ: ಡಾರ್ಲಿಂಗ್‍ ಕೃಷ್ಣ (ಲವ್‍ ಮಾಕ್ಟೇಲ್‍)

ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ)

ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್‍. ಭಾಸ್ಕರ್

ಅತ್ಯುತ್ತಮ ಸಂಗೀತ ನಿರ್ದೇಶನ: ವಿ ಹರಿಕೃಷ್ಣ (ಯಜಮಾನ)

ಅತ್ಯುತ್ತಮ ಸಂಕಲನ: ಜಿ. ಬಸವರಾಜ್‍ ಅರಸ್‍ (ಝಾನ್ಸಿ IPS)

ಅತ್ಯುತ್ತಮ ಬಾಲನಟ: ಮಾಸ್ಟರ್‍ ಪ್ರೀತಂ (ಮಿಂಚುಹುಳು)

ಅತ್ಯುತ್ತಮ ಬಾಲನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)

ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನ ದಾಸ)

ಅತ್ಯುತ್ತಮ ಗೀತ ರಚನೆ: ರಝಾಕ್‍ ಪುತ್ತೂರು (ಪೆನ್ಸಿಲ್‍ ಬಾಕ್ಸ್)

ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್ (ಲವ್ ಮಾಕ್ಟೇಲ್)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ. ಜಯದೇವಿ ಜಂಗಮ ಶೆಟ್ಟಿ (ಗಾಗಭೈರವಿ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಮತ್ತು ತಮಟೆ ನಟಸಿಂಹಯ್ಯ

Categories
ಸಿನಿ ಸುದ್ದಿ

ಚಿಕ್ಕಣ್ಣ ಈಗ ಲಕ್ಷ್ಮೀಪುತ್ರ: ಎ.ಪಿ.ಅರ್ಜುನ್ ಹೊಸ ಸಿನಿಮಾಗೆ ರೆಡಿ

ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’. ಇದು ಎ.ಪಿ.ಅರ್ಜುನ್ ನಿರ್ಮಾಣದ ಮೂರನೇ ಸಿನಿಮಾ. ಅಂಬಾರಿ ಬಳಿಕ ಮತ್ತೊಂದು ಫ್ರೆಶ್ ಕಥೆ..’ಲಕ್ಷ್ಮೀಪುತ್ರ’ನಾದ ಚಿಕ್ಕಣ್ಣನಿಗೆ ಅರ್ಜುನ್ ಪತ್ನಿ ನಿರ್ಮಾಣ

ಅಂಬಾರಿ, ಅದ್ಧೂರಿ, ಐರಾವತ, ರಾಟೆಯಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮಂಸ್ ನಡಿ ಕಿಸ್, ಅದ್ಧೂರಿ ಲವರ್ಸ್ ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದೇ ಎಪಿ ಅರ್ಜುನ್ ಫಿಲ್ಮಂಸ್ ನ ಮೂರನೇ ಸಿನಿಮಾ ಅನೌನ್ಸ್ ಆಗಿದೆ.

ಎಪಿ ಅರ್ಜುನ್ ಒಡೆತನದ ಎಪಿ ಅರ್ಜುನ್ ಫಿಲ್ಮಂಸ್ ನಡಿ ಬರ್ತಿರುವ ಮೂರನೇ ಪ್ರಯತ್ನಕ್ಕೆ ಲಕ್ಷ್ಮೀಪುತ್ರ ಎಂಬ ಟೈಟಲ್ ಇಡಲಾಗಿದ್ದು, ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆಯುತ್ತಿದ್ದಾರೆ. ಲಕ್ಷ್ಮೀಪುತ್ರನಾಗಿ ಸ್ಯಾಂಡಲ್ ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ. ಎಪಿ ಅರ್ಜುನ್ ಗರಡಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ವಿಜಯ್ ಎಸ್ ಸ್ವಾಮಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿದ್ದಾರೆ. ಅರ್ಜುನ್ ಅವರಿಂದ ನಿರ್ದೇಶನದ ಪಟುಗಳನ್ನು ಕಲಿತಿರುವ ವಿಜಯ್ ಅವರೀಗ ಪೂರ್ಣಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಹಾಗೂ ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಕಾಂಬೋದ ಮೊದಲ ಸಿನಿಮಾವನ್ನು ಅರ್ಜುನ್ ಮಡದಿ ಅನ್ನಪೂರ್ಣ ಎಪಿ ಅರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ಲಕ್ಷ್ಮೀಪುತ್ರ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ರವಿಕಿರಣ್ ಗೌಡ ಸಹ ನಿರ್ಮಾಪಕರಾಗಿ ಸಾಥ್ ಕೊಡುತ್ತಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ಡಾ.ಕೆ.ರವಿ ವರ್ಮಾ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಲಕ್ಷ್ಮೀಪುತ್ರ ಚಿತ್ರಕ್ಕಿದೆ. ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ, ರಾಜೇಶ್ ರಾವ್ ಸಹ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.

ಇದೇ 24ಕ್ಕೆ ಲಕ್ಷ್ಮೀಪುತ್ರನಿಗೆ ಮುಹೂರ್ತ
ಲಕ್ಷ್ಮೀಪುತ್ರ ಎಂಬ ಕ್ಯಾಚಿ ಟೈಟಲ್ ನೊಂದಿಗೆ ಚಿಕ್ಕಣ್ಣ ಹಾಗೂ ಎಪಿ ಅರ್ಜುನ್ ಅಖಾಡಕ್ಕೆ ಇಳಿಯುತ್ತಿದ್ದು, ಇದೇ ತಿಂಗಳ 24ಕ್ಕೆ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ಸಜ್ಜಾಗಿದೆ.

Categories
ಸಿನಿ ಸುದ್ದಿ

ರಾಕ್ಷಸನ ದಾಖಲೆ! ತೆಲುಗು ಥಿಯೇಟರ್ ಹಕ್ಕು ಮಾರಾಟ

ಪ್ರತಿ ಸಿನಿಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರಾಕ್ಷಸ ಅವತಾರವೆತ್ತಿರುವುದು ಗೊತ್ತೇ ಇದೆ. ಅಂದರೆ ಈ ಚಿತ್ರದಲ್ಲಿ ಅವರು ಡಿಫರೆಂಟ್ ಗೆಟಪ್​ ಧರಿಸಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ತೆರೆಗೆ ಬರುತ್ತಿರುವ ರಾಕ್ಷಸ ಸಿನಿಮಾದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ತೆಲುಗಿನಲ್ಲಿಯೂ ಬಿಡುಗಡೆಯಾಗುತ್ತಿರುವ ಈ ಚಿತ್ರದ ಥಿಯೇಟರ್ ಹಕ್ಕನ್ನು ‌ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ತನ್ನದಾಗಿಸಿಕೊಂಡಿದೆ. ಅಖಂಡ ತೆಲುಗು ಪ್ರೇಕ್ಷಕರಿಗೆ ರಾಕ್ಷಸ ಸಿನಿಮಾವನ್ನು ಈ ಸಂಸ್ಥೆ ತಲುಪಿಸಲಿದೆ.

ಸಂತಸದಲ್ಲಿ ನಿರ್ಮಾಪಕರು

“ಇತ್ತೀಚೆಗೆ ಕನ್ನಡ ಸಿನಿಮಾಗಳು ವ್ಯಾಪಾರವಾಗ್ತಿರುವುದೇ ಕಡಿಮೆ. ಹೀಗಿದ್ದರೂ ಈಗಾಗಲೇ ಕನ್ನಡ ಥಿಯೇಟರ್ ರೈಟ್ಸ್ ಬಿಕರಿಯಾಗಿದೆ. ಈಗ ಬರೀ ಟೀಸರ್, ಟ್ರೇಲರ್, ಕಂಟೆಂಟ್ ನೋಡಿಯೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ಒಳ್ಳೆ ಮೊತ್ತಕ್ಕೆ ಹಕ್ಕನ್ನು ತಮ್ಮದಾಗಿಸಿಕೊಂಡಿದೆ. ಹಲವಾರು ಹೊಸತನಗಳನ್ನು ಹೊಂದಿರುವ ಈ ಸಿನಿಮಾ ಮೇಲೆ ಭರವಸೆಯಿಟ್ಟೇ ವಿತರಣೆ ಹಕ್ಕನ್ನು ಪಡೆದುಕೊಂಡಿದೆ. ಇದು ಸಂತಸ ತಂದಿದೆ” ಎಂದು ನಿರ್ಮಾಪಕರಾಗಿರುವ ದೀಪು ಬಿ.ಎಸ್ ಖುಷಿ ಹಂಚಿಕೊಂಡಿದ್ದಾರೆ.

ಕಂಟೆಂಟ್ ಮೆಚ್ಚಿಕೊಂಡೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ತೆಲುಗು ಥಿಯೇಟರ್ ಹಕ್ಕು ಖರೀದಿ ಮಾಡಿರುವುದು ಇದು ಚಿತ್ರತಂಡಕ್ಕೆ ಸಿಕ್ಕಿರುವ ಆರಂಭಿಕ ಗೆಲುವು ಎಂದರು ತಪ್ಪಾಗಲಿಕ್ಕಿಲ್ಲ. ಕನ್ನಡ ಭಾಷೆಯ ಥಿಯೇಟರ್ ಹಕ್ಕು ಹಾಗೂ ಆಡಿಯೋ ಹಕ್ಕು ಕೂಡ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದ್ದು, ಇಡೀ ರಾಕ್ಷಸ ಟೀಂ ಖುಷಿಗೊಂಡಿದೆ.

ರಾಕ್ಷಸ ವಿಶೇಷವಾದ ಸಿನಿಮಾವಾಗಿದೆ. ಇದು ಟೈಮ್ ಲೂಪ್ ಕಾನ್ಸೆಪ್ಟ್ ಇರುವ ಚಿತ್ರವೇ ಆಗಿದೆ. ಕನ್ನಡದಲ್ಲಿ ಈ ರೀತಿಯ ಚಿತ್ರ ಬಂದೇ ಇಲ್ಲ. ಮೊದಲ ಬಾರಿಗೆ ಈ ರೀತಿಯ ಚಿತ್ರ ಬರ್ತಿದೆ. ಮಮ್ಮಿ, ದೇವಕಿ ಚಿತ್ರಗಳನ್ನ ಡೈರೆಕ್ಟರ್ ಮಾಡಿರೋ ಲೋಹಿತ್ ಈ ರಾಕ್ಷಸ ಚಿತ್ರ ನಿರ್ದೇಶನ ಮಾಡಿದ್ದಾರೆ.

ಪ್ರಜ್ವಲ್ ಅವರು ಭಿನ್ನ ಗೆಟಪ್​ ತಾಳಿರುವ ಈ ಸಿನಿಮಾದ ಪಾತ್ರವರ್ಗದಲ್ಲಿ ಶೋಭಾರಾಜ್, ವತ್ಸಲಾ ಮೋಹನ್, ಆರ್ನ ರಾಥೋಡ್, ಸಿದ್ಲಿಂಗು ಶ್ರೀಧರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಚಿತ್ರದ ಶೇಕಡ 80ರಷ್ಟು ಚಿತ್ರೀಕರಣ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಮಾಡಲಾಗಿದೆ. ಇನ್ನುಳಿದ ದೃಶ್ಯಗಳ ಚಿತ್ರೀಕರಣವನ್ನು ರಾಮೇಶ್ವರಂ, ಗೋವಾ ಹಾಗೂ ಬೆಂಗಳೂರಿನಲ್ಲಿ ನಡೆಸಲಾಗಿದೆ.

‘ಶಾನ್ವಿ ಎಂಟರ್‌ಟೇನ್ಮೆಂಟ್​’ ಮೂಲಕ ದೀಪು ಬಿ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜೇಬಿನ್ ಪಿ. ಜೋಕಬ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿನೋದ್ ಅವರ ಸಾಹಸ ನಿರ್ದೇಶನ, ವರುಣ್ ಉನ್ನಿ ಅವರ ಸಂಗೀತ ನಿರ್ದೇಶನ, ಅವಿನಾಶ್ ಬಸುತ್ಕರ್ ಅವರ ಹಿನ್ನಲೆ ಸಂಗೀತ ಹಾಗೂ ರವಿಚಂದ್ರನ್ ಸಿ. ಅವರ ಸಂಕಲನ ಈ ಚಿತ್ರಕ್ಕಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ‘ರಾಕ್ಷಸ’ ಸಿನಿಮಾ ರಿಲೀಸ್ ಆಗಲಿದೆ. ಶಿವರಾತ್ರಿ ದಿನದಂದು ಪ್ರಜ್ವಲ್​ ದೇವರಾಜ್​ ಅವರ ಅಭಿಮಾನಿಗಳಿಗೆ ಥಿಯೇಟರ್​ಗಳಲ್ಲಿ ಭರ್ಜರಿ ಮನರಂಜನೆ ಸಿಗಲಿದೆ.

Categories
ಸಿನಿ ಸುದ್ದಿ

ತುರ್ರಾ… ಇದು ಭಟ್ಟರ ಹೊಸ ಗೀತೆ: ಮನದ ಕಡಲು ಸಿನಿಮಾ ಈ ಹಾಡಿಗೆ ಆ ಹುಚ್ಚ ಹೇಳುತ್ತಿದ್ದ ಪದವೇ ಸ್ಪೂರ್ತಿ

ಇಕೆ ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ “ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ “ಮನದ ಕಡಲು”. ಇತ್ತೀಚೆಗಷ್ಟೇ ಈ ಚಿತ್ರದ “ಹೂ ದುಂಬಿಯ ಕಥೆಯ” ಹಾಡು ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಹೊತ್ತಿನಲ್ಲಿ ಚಿತ್ರದ ಮತ್ತೊಂದು ಗೀತೆ “ತುರ್ರಾ” ಬಿಡುಗಡೆಯಾಗಿದೆ. ನೆಲಮಂಗಲದ ಬಳಿಯಿರುವ ನಿರ್ಮಾಪಕ ಈ ಕೃಷ್ಣಪ್ಪ ರವರ ತೋಟದಲ್ಲಿ ಈ ಹಾಡು ಬಿಡುಗಡೆಯಾಯಿತು. ಯೋಗರಾಜ್ ಭಟ್ ಅವರೆ ಬರೆದಿರುವ ಈ ಹಾಡನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಹಾಡಿದ್ದಾರೆ. “ತುರ್ರಾ” ಹಾಡಿನ ಬಗ್ಗೆ ಚಿತ್ರತಂಡ ಹೇಳಿದ್ದು ಹೀಗೆ.

ನನ್ನ ಹಾಗೂ ವಿ.ಹರಿಕೃಷ್ಣ ಅವರ ಕಾಂಬೋದಲ್ಲಿ ಅರ್ಥವಿರುವ ಹಾಡುಗಳು ಸಾಕಷ್ಟು ಹಿಟ್ ಆಗಿದೆ. ಆದರೆ ಅರ್ಥವಿಲ್ಲದ ಅನರ್ಥದ ಹಾಡುಗಳು ಸೂಪರ್ ಹಿಟ್ ಆಗಿದೆ. ಆ ಅನರ್ಥದ ಹಾಡಗಳಿಗೆ ಈ “ತುರ್ರಾ” ಹಾಡು ಸೇರ್ಪಡೆಯಾಗಿದೆ. ನನ್ನ‌ ಬಾಲ್ಯದಲ್ಲಿ‌ ನಮ್ಮೂರಿನಲ್ಲಿ ಅಲಿಮಾ‌ ಎಂಬ ಹುಚ್ಚ ಇದ್ದ. ಆತ‌ನಿಗೆ ಮಕ್ಕಳೆಂದರೆ ಪ್ರೀತಿ. ನಾವೆಲ್ಲಾ‌ ಆತನ ಹಿಂದೆ ಸುತ್ತುತ್ತಿದ್ದೆವು. ಆತ “ಬೊಂಬುವೈ ಟುರ್ರವೈ” ಎಂಬ ಪದ ಬಳಸುತ್ತಿದ್ದ.‌ ಆ ಪದವೇ ಈ “ತುರ್ರಾ” ಹಾಡು ಬರೆಯಲು ಸ್ಪೂರ್ತಿ.

ವಿ.ಹರಿಕೃಷ್ಣ ಅವರ ಧ್ವನಿ ಈ ಹಾಡಿಗೆ ಸೂಕ್ತವಾಗಿದೆ. ಅವರ ಜೊತೆಗೆ ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ಕನ್ನಡ ಕಲಾಭಿಮಾನಿಗಳು ಈ ಹಾಡನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಕೃಷ್ಣಪ್ಪ ಅವರ ಈ ತೋಟದಲ್ಲೇ ಚಿತ್ರ ಅರಂಭವಾಗಿದ್ದು, ಇವತ್ತು ಇದೇ ಸ್ಥಳದಲ್ಲೇ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ ಹಾಗೂ ಎರಡನೇ‌ ಹಾಡನ್ನು ಇಲ್ಲೇ ಬಿಡುಗಡೆ ಮಾಡಲಾಗಿದೆ ಎಂದರು ನಿರ್ದೇಶಕ ಯೋಗರಾಜ್ ಭಟ್.

ನಾನು ಸ್ಟುಡಿಯೋದಲ್ಲಿ ತುಂಬಾ ಹೊತ್ತು ಹಾಡಿರುವ ಹಾಡು ಇದೆ.‌ ಲಿರಿಕಲ್ ಪೇಜ್ ಹಿಡಿದು ಹಾಡುವಾಗ ಪದಗಳನ್ನು ಹೇಳಲು ಬಹಳ ಹೊತ್ತಾಗುತ್ತಿತ್ತು. ಇಂತಹ ಕಷ್ಟದ ಹಾಗೂ ವಿರಳವಾದ ಪದಗಳನ್ನು ಬಳಸಿ ಯೋಗರಾಜ್ ಭಟ್ ಅವರು ಒಂದೊಳ್ಳೆ ಹಾಡು ಬರೆದಿದ್ದಾರೆ ಎಂದು ವಿ.ಹರಿಕೃಷ್ಣ ತಿಳಿಸಿದರು.

ನಮ್ಮ ಚಿತ್ರದ ಹಾಡು ಬಿಡುಗಡೆಗೆ ಇಲ್ಲಿಯವರೆಗೂ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಿರ್ಮಾಪಕ ಈ ಕೃಷ್ಣಪ್ಪ, ಈ ಹಾಡು ಕೇಳಿದ ತಕ್ಷಣ ಇಷ್ಟವಾಯಿತು. ನಿರ್ದೇಶಕರಿಗೆ ಈ ಹಾಡು ಇರಲಿ ಎಂದು ಹೇಳಿದೆ.‌ ಹರಿಕೃಷ್ಣ, ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಅವರ ಗಾಯನ ಮತ್ತು ಸುಮುಖ, ಅಂಜಲಿ, ರಂಗಾಯಣ ರಘು ಅವರ ಅಭಿನಯ ಹಾಗೂ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಬಹಳ ಚೆನ್ನಾಗಿದೆ ಎಂದರು.

ಯೋಗರಾಜ್ ಭಟ್ ಅವರು ಚಿತ್ರೀಕರಣದ ಸಮಯದಲ್ಲೂ ಇಂತಹ ಪದಗಳನ್ನು‌ ಬಳಸುತ್ತಿರುತ್ತಾರೆ. ಈಗ ಆ ಪದಗಳನ್ನೇ ಬಳಸಿ ಹಾಡು ಬರೆದಿದ್ದಾರೆ. ಈ ಹಾಡು ತುಂಬಾ ಚೆನ್ನಾಗಿದೆ. ಈ ಜಾಗದಲ್ಲೇ ನಮ್ಮ‌ ಚಿತ್ರ ಆರಂಭವಾಗಿದ್ದು, ಈಗ ಇದೇ ಜಾಗದಲ್ಲಿ ಹಾಡು ಬಿಡುಗಡೆಯಾಗಿರುವುದು ಖುಷಿಯಾಗಿದೆ ಎನ್ನುತ್ತಾರೆ ನಾಯಕ ಸುಮುಖ.

ಅನರ್ಥದ ಹಾಡನ್ನು ಪ್ರೇಕ್ಷಕರಿಗೆ ಅರ್ಥ ಮಾಡಿಸಲು‌ ಯೋಗರಾಜ್ ಭಟ್ ಒಬ್ಬರಿಗೆ ಸಾಧ್ಯವೆಂದರು ಹಿರಿಯ ನಟ ದತ್ತಣ್ಣ. ನನಗೂ ಈ ಹಾಡು ಬಹಳ ಇಷ್ಟ ಎಂದರು ನಟಿ ರಾಶಿಕಾ ಶೆಟ್ಟಿ. ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ‌ ನಿರ್ಮಾಪಕ ಪ್ರತಾಪ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ‌ ಪಾತಾಜೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಫಾರೆಸ್ಟ್ ನ ಪೈಸಾ ಪೈಸಾ” ಹಾಡಿಗೆ ಮೆಚ್ಚುಗೆ

ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಹೊಂದಿರುವ ಈ ಮಲ್ಟಿಸ್ಟಾರರ್ ಚಿತ್ರದ ಟ್ರೇಲರ್ ಜನವರಿ10ರಂದು ಬಿಡುಗಡೆ*

ಆರಂಭದಿಂದಲೂ ಕುತೂಹಲ ಮೂಡಿಸಿರುವ, ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚಿಗೆ ಬಿಡುಗಡೆಯಾಗಿ, ಐದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. “ಬಹದ್ದೂರ್” ಚೇತನ್ ಕುಮಾರ್ ಅವರು ಬರೆದು, ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಧರ್ಮವಿಶ್ ಸಂಗೀತ ನೀಡಿರುವ ಈ ಹಾಡಿಗೆ ಅಜಯ್ ಶಿವಶಂಕರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಶರಣ್ಯ ಶೆಟ್ಟಿ ಹಾಗೂ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ. RAP ಶೈಲಿಯಲ್ಲಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶೀರ್ಷಿಕೆಯಿಂದಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಜನವರಿ 10ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಬಿಡುಗಡೆಗೂ ಪೂರ್ವವಾಗಿ ಚಿತ್ರದ ಪ್ರಚಾರ ಬಿರುಸಿನಿಂದ ಸಾಗಿದೆ. ನಮ್ಮ ಚಿತ್ರದ ಪ್ರಚಾರಕ್ಕೆ ಪಿ.ವಿ.ಆರ್ ಸಂಸ್ಥೆ ಕೈಜೋಡಿಸಿದೆ. ಜನವರಿ ಹತ್ತರಿಂದ ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಟ್ರೇಲರ್ ಪ್ರದರ್ಶನವಾಗಲಿದೆ. ಜನವರಿ 24ರಂದು ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಎನ್ ಎಂ ಕಾಂತರಾಜ್ ತಿಳಿಸಿದ್ದಾರೆ.

ಕಾಡಿನಲ್ಲೇ ಹೆಚ್ಚು ಭಾಗದ ಚಿತ್ರೀಕರಣ ನಡೆದಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಸಾಗರ್ ಅವರೆ ಸಂಭಾಷಣೆಯನ್ನೂ ಬರೆದಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ಆನಂದ್‌ ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರದ ತಾರಾಬಳಗದಲ್ಲಿ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ಬಲರಾಮನಿಗೆ ಪ್ರಿಯಾ ಆನಂದ್ ಜೋಡಿ: ವಿನೋದ್ ಪ್ರಭಾಕರ್ ಸಿನಿಮಾಗೆ ಬಂದ ರಾಜಕುಮಾರ ಚೆಲುವೆ

ಬಿಗ್ ಬಜೆಟ್ ನಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ನಿರ್ಮಿಸುತ್ತಿರುವ ಹಾಗೂ “ಆ ದಿನಗಳು” ಖ್ಯಾತಿಯ ಕೆ‌.ಎಂ.ಚೈತನ್ಯ ನಿರ್ದೇಶನ ಹಾಗು ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ “ಬಲರಾಮನ ದಿನಗಳು ಸಿನಿಮಾಗೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ.

“ರಾಜಕುಮಾರ”, “ಜೇಮ್ಸ್”, “ಆರೆಂಜ್”, “ಕರಟಕ ದಮನಕ” ದಂತಹ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಪ್ರಿಯಾ ಆನಂದ್ ಜನಪ್ರಿಯರಾಗಿದ್ದಾರೆ. ಹೊಸವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡಿದೆ.

“ಬಲರಾಮನ ದಿನಗಳು” 1980ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಇತ್ತೀಚೆಗಷ್ಟೇ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

“ಅಟ್ಟಕತ್ತಿ”, ” ಕಾಲ”, “ಕಬಾಲಿ”, “ಭೈರವ”, “ದಸರಾ”, “ಕಲ್ಕಿ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಭಾರತದ ಖ್ಯಾತ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಅವರು ಸಂಗೀತ ಸಂಯೋಜಿಸುತ್ತಿರುವ 51ನೇ ಚಿತ್ರ ಹಾಗೂ ಕನ್ನಡದ ಮೊದಲ ಚಿತ್ರ.

ಈಗಾಗಲೇ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ‌.‌

ಹೀಗೆ ಸಾಕಷ್ಟು ವಿಶೇಷಗಳನ್ನೊಳಗೊಂಡಿರುವ ಹಾಗೂ ಆರಂಭದಿಂದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ “ಬಲರಾಮನ ದಿನಗಳು” ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ನಿರ್ಮಾಪಕ ಶ್ರೇಯಸ್ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಮನದ ಕಡಲು ಹಾಡು ಹೊರ ಬಂತು: ಭಟ್ಟರ ಮತ್ತೊಂದು ನಿರೀಕ್ಷೆ ಚಿತ್ರ

ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ “ಮುಂಗಾರು ಮಳೆ”. ಈ ಯಶಸ್ವಿ ಚಿತ್ರ ಬಿಡುಗಡೆಯಾಗಿ ಇದೇ ಡಿಸೆಂಬರ್ ಗೆ ಹದಿನೆಂಟು ವರ್ಷ ತುಂಬಿದೆ. ಹದಿನೆಂಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ.ಕೃಷ್ಣಪ್ಪ ನಿರ್ಮಾಣದಲ್ಲಿ,‌ ಯೋಗರಾಜ್ ಭಟ್ ನಿರ್ದೇಶನದಲ್ಲಿ “ಮನದ ಕಡಲು” ಮೂಡಿ ಬರುತ್ತಿದೆ.

“ಮುಂಗಾರು ಮಳೆ” ಬಿಡುಗಡೆಯಾದ ದಿನವೇ “ಮನದ ಕಡಲು” ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ, ವಿ.ಹರಿಕೃಷ್ಣ ಸಂಗೀತ ನೀಡಿರುವ “ಹೂ ದುಂಬಿಯ ಕಥೆಯ” ಎಂಬ ಮನಮೋಹಕ ಹಾಡು ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿದೆ. ಕನ್ನಡದ ಪ್ರತಿಭೆ ಸಂಜಿತ್ ಹೆಗ್ಡೆ ಈ ಸುಮಧುರ ಹಾಡಿಗೆ ಧ್ವನಿಯಾಗಿದ್ದಾರೆ. “ಮನದ ಕಡಲು” ಚಿತ್ರದ ಮೊದಲ ಹಾಡು ಇದ್ದಾಗಿದ್ದು,‌ ವಿ.ಹರಿಕೃಷ್ಣ ಅವರೆ ಹಾಡನ್ನು ಬಿಡುಗಡೆ ಮಾಡಿದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

‘ಮುಂಗಾರು ಮಳೆ’ ಬಂದು ಹದಿನೆಂಟು ವರ್ಷ ಆಯಿತು ಅಂದರೆ ನಂಬಲಿಕ್ಕೆ ಆಗುತ್ತಿಲ್ಲ. ನಿನ್ನೆ ಮೊನ್ನೆ ಆದ ಹಾಗೆ ಇದೆ. ಇಂದಿಗೆ “ಮುಂಗಾರು ಮಳೆ” ಬಿಡುಗಡೆಯಾಗಿ ಹದಿನೆಂಟು ವರ್ಷಗಳಾಗಿದೆ. ಇದೇ ಸಂದರ್ಭದಲ್ಲಿ ಇ. ಕೃಷ್ಣಪ್ಪ ರವರ ನಿರ್ಮಾಣದಲ್ಲಿ ಹಾಗೂ ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಮನದ ಕಡಲು” ಚಿತ್ರದ ಮೊದಲ ಗೀತೆಯನ್ನು ಬಿಡುಗಡೆ ಮಾಡುತ್ತಿದ್ದೇವೆ.

ಈ ಹಾಡು ಹುಟ್ಟಿದ್ದು ನಿರ್ಮಾಪಕರ ತೋಟದ ಮನೆಯಲ್ಲಿ. ಕಂಪೋಸ್ ಆಗಿದ್ದು‌ ನನ್ನ‌ ಆಫೀಸ್ ನ ಮೇಲಿರುವ ಸ್ಟುಡಿಯೋದಲ್ಲಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಸಂಚಿತ್ ಹೆಗ್ಡೆ ಗಾಯನದಲ್ಲಿ ಮುರಳಿ ನೃತ್ಯ ಸಂಯೋಜನೆಯಲ್ಲಿ “ಹೂ ದುಂಬಿಯ ಕಥೆಯ” ಹಾಡು ಮೂಡಿಬಂದಿದೆ.‌ ಸುಮುಖ ಹಾಗು ರಾಶಿಕಾ ಶೆಟ್ಟಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ ಎಂದು ಹಾಡಿನ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ನೀಡಿದರು.

ಹದಿನೆಂಟು ವರ್ಷಗಳ ನಂತರ ಯೋಗರಾಜ್ ಭಟ್ ಅವರ ಜೊತೆ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಆದರೆ ನಿಮ್ಮ ಜೊತೆ ಸಿನಿಮಾ ಮಾಡುವುದಾದರೆ ಹೊಸ ನಾಯಕನೇ ಇರಬೇಕು ಅಂದಿದೆ. ಹೊಸ ಪ್ರತಿಭೆ ಸುಮುಖ ನಾಯಕನಾಗಿ, ರಾಶಿಕಾ ಹಾಗೂ ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ. ಯಾವುದೇ ಕೊರತೆ ಬಾರದ ಹಾಗೆ ಒಂದೊಳ್ಳೆ ಸಿನಿಮಾ‌ ಮಾಡಿದ್ದೀನಿ. ಮುಂದಿನದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು. ಇಂದು ಬಿಡುಗಡೆ ಆಗಿರುವ ಹಾಡು ಚೆನ್ನಾಗಿದೆ ಎಂದು ನಿರ್ಮಾಪಕ ಇ.ಕೃಷ್ಣಪ್ಪ ತಿಳಿಸಿದರು.

ಸಿನಿಮಾವನ್ನು ತುಂಬಾ ಪ್ರೀತಿಸುವ ತಂಡದ ಜೊತೆಗೆ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದು ಮಾತನಾಡಿದ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಯೋಗರಾಜ್ ಭಟ್ ಅವರು ಬರೆದಿರುವ ಹಾಡನ್ನು ಸಂಜಿತ್ ಸುಶ್ರಾವ್ಯವಾಗಿ ಹಾಡಿದ್ದಾರೆ. ತೆರೆಯ ಮೇಲೂ ಹಾಡು ಬಹಳ ಚೆನ್ನಾಗಿ ಬಂದಿದೆ ಎಂದರು.

ಯೋಗರಾಜ್ ಭಟ್ ಬರೆದಿರುವ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಹಾಡಲು ಬಹಳ ಖುಷಿಯಾಗಿದೆ ಎಂದು ತಿಳಿಸಿದ ಗಾಯಕ ಸಂಜಿತ್ ಹೆಗ್ಡೆ, ತಾವೇ ಹಾಡಿರುವ ಹಾಡಿನ‌ ನಾಲ್ಕು ಸಾಲುಗಳನ್ನು ವೇದಿಕೆಯ ಮೇಲೂ ಹಾಡಿದರು.

ನನ್ನ ಹಾಗೂ ಸಂಜಿತ್ ಅವರನ್ನು ನೋಡಿದವರು ಟ್ವಿನ್ಸಾ? ಅಂತ ಕೇಳಿದರು. ನಾನು‌ ಯೋಗರಾಜ್ ಭಟ್ ಅವರ ಸಾಹಿತ್ಯಕ್ಕೆ, ಹರಿಕೃಷ್ಣ ಅವರ ಸಂಗೀತಕ್ಕೆ ಹಾಗೂ ಸಂಜಿತ್ ಅವರ ಗಾಯನಕ್ಕೆ ಅಭಿಮಾನಿ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ಸುಮುಖ.

ಸಹ ನಿರ್ಮಾಪಕ ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ನಾಯಕಿಯರಾದ ಅಂಜಲಿ ಅನೀಶ್, ರಾಶಿಕಾ ಶೆಟ್ಟಿ, ಹಿರಿಯ ನಟ ದತ್ತಣ್ಣ, ಶಿವಧ್ವಜ್, ಸೂರಜ್, ನೃತ್ಯ ನಿರ್ದೇಶಕ ಮುರಳಿ, ಗಡ್ಡ ವಿಜಿ, ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್ ಮುಂತಾದವರು “ಮನದ ಕಡಲು” ಚಿತ್ರದ ಮೊದಲ ಹಾಡಿನ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಶೇರ್…ಟೀಸರ್ ಬಂತು: ಇದು ಕಿರಣ್ ರಾಜ್ ಚಿತ್ರ

ಕಿರಣ್ ರಾಜ್ ಅಭಿನಯದ ಈ ಚಿತ್ರದಲ್ಲಿ ಕ್ರಿಸ್ ಎಂಬ ನವನಟ ಖಡಕ್ ವಿಲನ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ

ಸುದರ್ಶನ್ ಸುಂದರರಾಜ್ ನಿರ್ಮಾಣದ, ಪ್ರಸಿದ್ಧ್ ನಿರ್ದೇಶನದ ಹಾಗೂ “ಕನ್ನಡತಿ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ಶೇರ್” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು.

ಹಿರಿಯ ರಾಜಕೀಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಚಿತ್ರದ ಮೂಲಕ ನಿರ್ಮಾಪಕ ಸುದರ್ಶನ್ ಸುಂದರರಾಜ್ ಅವರ ಪುತ್ರ ಕ್ರಿಸ್ ಖಳನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ‌.

ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಪ್ರಸಿದ್ದ್, “ಶೇರ್” ನನ್ನ ನಿರ್ದೇಶನದ ಮೂರನೇ ಚಿತ್ರ. ನಾನು ನನ್ನ ಚಿತ್ರಗಳಲ್ಲಿ ಸಂದೇಶ ಕೊಡಲು ಇಷ್ಟ ಪಡುವುದಿಲ್ಲ. ಜನರಿಗೆ ಬೇಕಾಗಿರುವುದು ಮನೋರಂಜನೆ. ಅದನ್ನು ಕೊಡಲು ಪ್ರಯತ್ನ ಮಾಡುತ್ತೇನೆ. “ಶೇರ್” ಕೂಡ ಪಕ್ಕಾ ಎಂಟರ್ಟೈನ್ಮೆಂಟ್ ಚಿತ್ರ. ಅನಾಥಾಶ್ರಮದಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ. ಅಲ್ಲೊಬ್ಬ ರಾಜಕಾರಣಿ ಇರುತ್ತಾನೆ.

ಅಲ್ಲಿ ಎರಡು ಗುಂಪುಗಳಿರುತ್ತದೆ. ಒಂದು ಗುಂಪಿನವರು ಅನಾಥಾಶ್ರಮವನ್ನೇ ಅಡ್ಡ ಮಾಡಿಕೊಂಡಿರುತ್ತಾರೆ. ಅಲ್ಲೊಂದು ಒಳ್ಳೆಯ ಗುಂಪು ಸಹ ಇರುತ್ತದೆ. ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ,‌ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವ ತಯಾರಿ‌ ನಡೆಯುತ್ತಿದೆ ಎಂದರು.

ನಾನು‌ ಮೂಲತಃ ಬೀದರ್ ನವನು. ಅಲ್ಲೇ ವಕೀಲನಾಗಿ ಕಾರ್ಯ ನಿರ್ವಿಸುತ್ತಿದ್ದೇನೆ. ರಾಜಕೀಯದಲ್ಲೂ ಇದ್ದೀನಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ನನ್ನ ಮಗ ಕ್ರಿಸ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದರು ನಿರ್ಮಾಪಕ ಸುದರ್ಶನ್ ಸುಂದರರಾಜ್.

ಮೊದಲ ಬಾರಿಗೆ ಖಳನಟನಾಗಿ ಅಭಿನಯಿಸಿದ್ದೇನೆ. ಎಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಕ್ರಿಸ್.

ಚಿತ್ರದ ನಾಯಕಿ ಸುರೇಖ ಹಾಗೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ತನೀಶಾ ಕುಪ್ಪಂಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಿಟ್ಟಿ ಕೌಶಿಕ್ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು.

error: Content is protected !!