Categories
ಸಿನಿ ಸುದ್ದಿ

ಹಾಲಿವುಡ್ ನಿರ್ದೇಶಕರ ಕನ್ನಡ ಚಿತ್ರ ; ರೋಡ್ ಕಿಂಗ್ ಜೂನ್ 23ಕ್ಕೆ ರಿಲೀಸ್

ಮತೀನ್ ಹುಸೇನ್ ಅಭಿನಯದ ‘ರೋಡ್ ಕಿಂಗ್’ ಚಿತ್ರ ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, Randy Kent ಎಂಬ ಹಾಲಿವುಡ್ ನಿರ್ದೇಕರು ಈ ಚಿತ್ರವನ್ನು ನಿರ್ದೇಶಸಿದ್ದಾರೆ.


‘ರೋಡ್ ಕಿಂಗ್’ ಚಿತ್ರದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಮತೀನ್ ಹುಸೇನ್, ಮೂಲತಃ ಬೆಂಗಳೂರಿನವರಾದರೂ ಬೆಳೆದಿದ್ದೆಲ್ಲಾ ಅಮೇರಿಕಾದಲ್ಲಿ. ಕೋಲಾರದಲ್ಲಿ ನಡೆದ ನೈಜ ಘಟನೆ ಆಧರಿಸಿ ಒಂದು ಸಣ್ಣ ಬಜೆಟ್ನ ಚಿತ್ರ ಮಾಡುವುದಕ್ಕೆ ಹೊರಟಾಗ, ಸೂಕ್ತ ನಿರ್ದೇಶಕರು ಸಿಗಲಿಲ್ಲವಂತೆ. ಆಗ ಅವರಿಗೆ ನೆನಪಾಗಿದ್ದೇ ರಾಂಡಿ ಕೆಂಟ್.

ಮತೀನ್ ಮತ್ತು ರಾಂಡಿ ಹಳೆಯ ಸ್ನೇಹಿತರು. ಸ್ನೇಹದಲ್ಲಿ ಚಿತ್ರ ಮಾಡಿಕೊಡುವುದಕ್ಕೆ ಕೇಳಿಕೊಂಡಾಗ, ಮೊದಲು ರಾಂಡಿ ಹಿಂದೇಟು ಹಾಕಿದರಂತೆ. ಕಾರಣ, ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು. ಕೊನೆಗೆ ಒಪ್ಪಿ ಅವರು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.


ಅಂದಹಾಗೆ, ಈ ಚಿತ್ರದ ನಿರ್ದೇಶನವನ್ನು ದೂರದ ಅಮೇರಿಕಾದಲ್ಲಿದ್ದುಕೊಂಡು ಸ್ಕೈಪ್ ಮೂಲಕವೇ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಬಗ್ಗೆ ಮಾತನಾಡುವ ಮತೀನ್, ‘ಚಿತ್ರೀಕರಣಕ್ಕೆ ಎಲ್ಲ ತಯಾರಿಯೂ ಆಗಿತ್ತು. ಆದರೆ, ರಾಂಡಿಗೆ ವೀಸಾ ಸಿಗಲಿಲ್ಲ. ಎರಡನೆಯ ಬಾರಿಗೂ ಅದೇ ರೀತಿ ಆಯಿತು. ಕೊನೆಗೆ ಅವರು ಸ್ಕೈಪ್ ಮೂಲಕವೇ ಚಿತ್ರ ನಿರ್ದೇಶನ ಮಾಡಿದ್ದಾರೆ’ ಎನ್ನುತ್ತಾರೆ ಮತೀನ್.


ಮತೀನ್ ಇದಕ್ಕೂ ಮುನ್ನ ‘ಬಿಂದಾಸ್ ದಾದಾಗಿರಿ’ ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದು, ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ‘ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದು, ಲೀಲಾ ಮೋಹನ್, ಹರೀಶ್ ಸೆಜೆಕೆನ್, ನಯನಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಆರಿಫ್ ಲಲಾನಿ ಛಾಯಾಗ್ರಹಣ ಮಾಡಿದ್ದು, ಹಾಲಿವುಡ್ನ ಜನಪ್ರಿಯ ಸೌಂಡ್ ಡಿಸೈನರ್ ಸ್ಕಾಟ್ ವುಲ್ಫ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಈಗಾಗಲೇ ಜಗತ್ತಿನಾದ್ಯಂತ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ರೋಡ್ ಕಿಂಗ್’ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ರಿಷಿಯ ಹೊಸ ಪುರಾಣ! ರುದ್ರ ಗರುಡ ಪುರಾಣಕ್ಕೆ ನೀನಾಸಂ ಸತೀಶ್ ಸಾಕ್ಷಿ

“ಆಪರೇಶನ್ ಅಲಮೇಲಮ್ಮ”, “ಕವಲುದಾರಿ” ನಟ ರಿಷಿ ನಾಯಕರಾಗಿ ನಟಿಸುತ್ತಿರುವ, ಕೆ.ಎಸ್ ನಂದೀಶ್ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ. ನಟ ನೀನಾಸಂ ಸತೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು ಹಾಗೂ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. “ರುದ್ರ ಗರುಡ ಪುರಾಣ” ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.

“ಚಂಬಲ್”, ” ಡಿಯರ್ ವಿಕ್ರಮ್” ಚಿತ್ರಗಳು ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಉದ್ಯಮಿ ಲೋಹಿತ್ ನಿರ್ಮಾಣ ಮಾಡುತ್ತಿದ್ದಾರೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ಅಭಿನಯಿಸುತ್ತಿದ್ದಾರೆ.

“ರುದ್ರ ಗರುಡ ಪುರಾಣ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಜನರ ಮೇಲೆ ಉತ್ತಮ ಪ್ರಭಾವ ಬೀರಬೇಕು. ಅಂತಹ ಸಿನಿಮಾವನ್ನು ಜನರಿಗೆ ಕೊಡುವ ಆಸೆ ನನಗೆ.
2022 UPSC ಪರೀಕ್ಷೆಯಲ್ಲಿ 265ನೇ ರ‍್ಯಾಂಕ್‌ ಪಡೆದಿರುವ ಮೈಸೂರು ಮೂಲದ ಕೆ‌.ಸೌರಭ್ ಅವರು ಸಂದರ್ಶನವೊಂದರಲ್ಲಿ ನನಗೆ ಪುನೀತ್ ರಾಜಕುಮಾರ್ ಅಭಿನಯದ “ಪೃಥ್ವಿ” ಚಿತ್ರ ಪ್ರೇರಣೆ ಎಂದಿದ್ದಾರೆ.


“ಪೃಥ್ವಿ” ಚಿತ್ರ ಸೌರಭ್ ಅವರಿಗಷ್ಟೆ ಅಲ್ಲ. ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ‌. ನಾನು ಆ ಚಿತ್ರದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ.‌ ನಾವು ಮಾಡುವ ಚಿತ್ರ, ಈ ರೀತಿ ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವ ಹುಮ್ಮಸ್ಸು ನಿರ್ದೇಶಕನಿಗೆ ಹೆಚ್ಚಾಗುತ್ತದೆ ಎಂದು ನಿರ್ದೇಶಕ ಕೆ.ಎಸ್ ನಂದೀಶ್ ತಿಳಿಸಿದರು.



ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ “ಕವಲುದಾರಿ” ಚಿತ್ರದಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಹಾಗಾಗಿ, ಅದೇ ಜಾನರ್ ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಂದೀಶ್ ಅವರು ಈ ಚಿತ್ರದ ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿದೆ.

ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ “ಗರುಡ ಪುರಾಣ” ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ “ರುದ್ರ ಗರುಡ ಪುರಾಣ” ಅಂತ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಚಾಲನೆ ನೀಡಿದ ನೀನಾಸಂ ಸತೀಶ್ ಅವರಿಗೆ ಧನ್ಯವಾದ ಎಂದರು ನಾಯಕ ರಿಷಿ.

ನಾಯಕಿ ಪ್ರಿಯಾಂಕ ಕುಮಾರ್, ನಟರಾದ ಶಿವರಾಜ್ ಕೆ ಆರ್ ಪೇಟೆ, ಪವನ್ ಮಾತಾಡಿದರು.

Categories
ಸಿನಿ ಸುದ್ದಿ

ಜೆ ಕೆ ಅಭಿನಯದ ಐರಾವನ್ ರಿಲೀಸ್ ಗೆ ರೆಡಿ: ಜೂನ್ 16ಕ್ಕೆ ಆಟ ಶುರು

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಜೆ‌.ಕೆ ನಾಯಕರಾಗಿ ನಟಿಸಿರುವ “ಐರಾವನ್” ಚಿತ್ರ ಇದೇ ಜೂನ್ ಹದಿನಾರರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಾನು ಮೂಲತಃ ವೈದ್ಯ. ಕೋವಿಡ್ ಸಮಯದಲ್ಲಿ ನಿರ್ದೇಶಕ ರಾಮ್ಸ್ ರಂಗ ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಆ ಸಮಯದಲ್ಲಿ ಚಿತ್ರರಂಗದ ಬಹುತೇಕರು ಸಂಕಷ್ಟದಲ್ಲಿದ್ದರು.
ಈ ಸಂದರ್ಭದಲ್ಲಿ ನಾನು ಸಿನಿಮಾ ನಿರ್ಮಾಣ ಮಾಡಿದರೆ ಅನೇಕ ಜನರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶ ನನ್ನದಾಗಿತ್ತು. ಈಗ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ ಜೂನ್ 16 ರಂದು ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಡಾ.ನಿರಂತರ ಗಣೇಶ್.

“ಐರಾವನ್” ಎಂದರೆ ಮಹಾಭಾರತದಲ್ಲಿ ಬರುವ ಪಾತ್ರವೊಂದರ ಹೆಸರು. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ‌. ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಸಮುದ್ರದಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಿರುವುದು ಚಿತ್ರದ ವಿಶೇಷ ಎಂದು ನಿರ್ದೇಶಕ ರಾಮ್ಸ್ ರಂಗ ತಿಳಿಸಿದರು.

“ಐರಾವನ್” ಚಿತ್ರದ ಟೀಸರ್ ಗೆ ತಮ್ಮಿಂದ ಸಿಕ್ಕಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ಕೆಲವರಿಗೆ ಈ ಚಿತ್ರದ ಬಗ್ಗೆ ಗೊಂದಲವಿತ್ತು. ಇದು ಹಿಂದಿ ಚಿತ್ರದ ಡಬ್ ಇರಬಹುದು ಎಂದು. ಆದರೆ ಇದು ಪಕ್ಕಾ ಕನ್ನಡ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಹಾಡುಗಳು ಚೆನ್ನಾಗಿದೆ. ನಿರ್ಮಾಪಕ ಡಾ. ನಿರಂತರ ಗಣೇಶ್ ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಜೂನ್ 16 ಚಿತ್ರ ತೆರೆಗೆ ಬರುತ್ತಿದೆ ಎಂದು ನಾಯಕ ಜೆ.ಕೆ ತಿಳಿಸಿದರು.

ತಮ್ಮ ಪಾತ್ರದ ಬಗ್ಗೆ ನಾಯಕಿ ಅದ್ವಿತಿ ಶೆಟ್ಟಿ, ಹಾಗೂ ನವ ನಟ ವಿವೇಕ್, ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ, ಛಾಯಾಗ್ರಹಣದ ಕುರಿತು ದೇವೇಂದ್ರ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಸಂತೋಷ್ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಘೋಸ್ಟ್ ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

ಶಿವರಾಜಕುಮಾರ್ ಅಭಿನಯದ ಘೋಸ್ಟ್ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಚಿತ್ರೀಕರಣ ಸೆಟ್ ಗೆ ನೂತನ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಚಿತ್ರ ಯಶಸ್ವಿಯಾಗಲಿ ಎಂದು‌ಶುಭ ಹಾರೈಸಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಘೋಸ್ಟ್ ಸಿನಿಮಾ ನಿರ್ಮಾಣವಾಗುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಸಂದೇಶ್ ಎನ್ ಚಿತ್ರದ ನಿರ್ದೇಶಕರು ನಿರ್ಮಾಪಕರು.

ಇನ್ನು ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಿತ್ನಾರದ ಹೈಲೆಟ್. “ಘೋಸ್ಟ್‌” ಚಿತ್ರದ ಚಿತ್ರೀಕರಣ ಚಾಮರಾಜಪೇಟೆ ಪೊಲೀಸ್ ಮೈದಾನದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ.


ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನೂತನ ಸಚಿವರಾದ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.

ಚಿತ್ರತಂಡದವರ ಜೊತೆ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದ ಸಚಿವರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ವಿಷ್ಣುವರ್ಧನ್‌ ಹೆಸರಲ್ಲಿ‌ ಏಷ್ಯಾ ಬುಕ್‌ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್!‌

ಡಾ.ವಿಷ್ಣುವರ್ಧನ್‌ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನಲೆಯಲ್ಲಿ ಅವರ 50 ಸೇನಾನಿಗಳು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022 ರ ಸೆಪ್ಟೆಂಬರ್‌ 18ರಂದು ಬೆಂಗಳೂರಿನ ಡಾ.ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ “ಕಟೌಟ್‌ ಜಾತ್ರೆ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಆ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಸಹ ಹಾಕಿಸಿದ್ದರು. ಇಡೀ ಕಾರ್ಯಕ್ರಮಕ್ಕೆ ಅಂದಾಜು ೪೦ ಲಕ್ಷದಷ್ಟು ಹಣ ಖರ್ಚಾಗಿತ್ತು. ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು.

ಅಂದೇ ಈ ಕಟೌಟ್‌ ಜಾತ್ರೆಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲಿಸಲು ಮನವಿ ಸಲ್ಲಿಸಲಾಗಿತ್ತು.

ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆ ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿದ್ದರು.

ಇದೀಗ ಆ ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಈ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಟರ್‌ ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲೆಯಾಗಿ ದಾಖಲೆಯಾಗಿದೆ. ಆ ಎರಡೂ ದಾಖಲೆಗಳ ಸರ್ಟಿಫಿಕೇಟ್‌ ಮತ್ತು ಪದಕಗಳು ಈಗ ತಲುಪಿವೆ.

ತೆರೆಮುಂದೆ ತೆರೆಹಿಂದೆ ನುಡಿದಂತೆ ನಡೆದ ಮೇರುನಟನ ಹೆಸರಲ್ಲಿ ಇಂತಹದ್ದೊಂದು ದಾಖಲೆಯನ್ನು ಅವರಿಲ್ಲದ ಹೊತ್ತಿನಲ್ಲಿ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇವೆ.

ಈ ದಾಖಲೆಯು ಡಾ.ವಿಷ್ಣುವರ್ಧನ್‌ ಅವರ ಅಗಲಿಕೆಯ 13 ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕವಾಗಿದೆ.

ಈ ಕಟೌಟ್‌ ಜಾತ್ರೆಗೆ ಬೆನ್ನೆಲುಬಾಗಿ ನಿಂತ 50 ಸೇನಾನಿಗಳಿಗೆ, ಯೋಜನೆ ಕಾರ್ಯಸಾಧುಗೊಳಿಸಿದ ಆನಂದ್‌ ರಾಚ್‌, ಕಟೌಟ್‌ ವಿನ್ಯಾಸ ಮಾಡಿದ ರಾಜುವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ, ಸಾಧ್ಯವಾಗಿಸಿದ ಸಾಹಿತಿ ಜನಾರ್ಧನ್‌ ರಾವ್‌ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ ಎಂದು ವೀರಕಪುತ್ರ ಶ್ರೀನಿವಾಸ ಹೇಳಿದ್ದಾರೆ.

Categories
ಸಿನಿ ಸುದ್ದಿ

ಪಿಂಕಿ ಹಿಂದೆ ದುರಾಸೆಯ ಮನಸು : ಸಾಕಾರವಾಗದ ಸಂಬಂಧಗಳ ಕನಸು

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ : ಪಿಂಕಿ ಎಲ್ಲಿ ?
ನಿರ್ಮಾಪಕ : ಕೃಷ್ಣೇಗೌಡ
ನಿರ್ದೇಶಕ : ಪೃಥ್ವಿ ಕೋಣನೂರು
ತಾರಾಗಣ : ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ ಕೋಣನೂರು ಇತರರು.

ಸಣ್ಣಮ್ಮ ಮನೇಲಿ ಇಲ್ಲ… ಆದರೆ, ಇಲ್ಲಿ ಬುರ್ಕಾ ಬಿದ್ದಿದೆ! ಪಿಂಕಿ ಎಲ್ಲಿ?

ಹೀಗೆ ಆತಂಕದಲ್ಲೇ ತನ್ನ ಹೆತ್ತ ಮಗು ಕಾಣದ್ದನ್ನುಬಕಂಡು ಗದ್ಗದಿತರಾಗುವ ತಾಯಿ ಹೃದಯ ಚಡಪಡಿಸೋ ಹೊತ್ತಿಗೆ, ಅಲ್ಲೊಂದು ಘಟನೆ ನಡೆದು ಹೋಗಿರುತ್ತೆ.

ಹೌದು, ವಾಸ್ತವಕ್ಕೆ ಹತ್ತಿರವಾದ, ಸಮಾಜದಲ್ಲಿ ಈಗಲೂ ಹಾಡಹಗಲೇ ನಡೆಯುವ ಘಟನೆಗಳಿಗೆ ಪಿಂಕಿ ಸಾಕ್ಷಿಯಾಗುತ್ತಾಳೆ. ಒಂದೊಳ್ಳೆಯ ಎಳೆ ಇಟ್ಟುಕೊಂಡು ನಿರ್ದೇಶಕ ಪೃಥ್ವಿ ಕೋಣನೂರು ಮನಸ್ಸಿಗೆ ಹಿಡಿಸುವ, ಕೊಂಚ ಎದೆ ಭಾರವಾಗಿಸುವ, ವಸ್ತುಸ್ಥಿತಿಯ ಚಿತ್ರ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಡಿ-ಬಡಿ- ಕಡಿ ಸಿನಿಮಾಗಳ ನಡುವೆ ಪಿಂಕಿ ವಿಭಿನ್ನ ಎನಿಸಿಕೊಳ್ಳುತ್ತಾಳೆ.

ಒಂದೇ ಮಾತಲ್ಲಿ ಹೇಳುವುದಾದರೆ, ಪಿಂಕಿ ಕಾಡುವ ಮತ್ತು ನೋಡುವ ಚಿತ್ರ. ಆಧುನಿಕ ಜಗತ್ತಲ್ಲಿ ಎಲ್ಲವೂ ಗೌಣ. ಇಲ್ಲಿ ಸಂಬಂಧಗಳ ಮೌಲ್ಯ ಲೆಕ್ಕಕ್ಕಿಲ್ಲ. ಹಣಕ್ಕಷ್ಟೇ ಬೆಲೆ ಎಂಬ ಸೂಕ್ಷ್ಮ ಅಂಶವನ್ನು ಅಷ್ಟೇ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ಈಗಂತೂ ಇಲ್ಲಿ ಪ್ರೀ, ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಜಂಜಾಟದ ಬದುಕಿನ ಮಧ್ಯೆ ಮನಸ್ಸುಗಳು ಕುಸಿಯುತ್ತಿವೆ. ಅರ್ಥ ಕಳೆದುಕೊಂಡ ಮನಸ್ಸುಗಳು ಅನಾಹುತಕ್ಕೆ ಕಾರಣವಾಗುತ್ತಿವೆ. ಅಂಥದ್ದೊಂದು ಅಂಶ ಮತ್ತು ಸಂದೇಶ ಪಿಂಕಿಯೊಳಗಿದೆ.

ಇಲ್ಲಿ ತಪ್ಪಿನ ಅರಿವಿದೆ, ಆತಂಕವಿದೆ, ಆಕ್ರಂದನವಿದೆ, ನೋವು, ತಳಮಳ, ಭಾವುಕತೆ, ಪಾಪಪ್ರಜ್ಞೆಯೂ ಇದೆ. ಇದರೊಂದಿಗೆ ಆಸೆ, ದುರಾಸೆಗಳ ಗುಚ್ಛವೂ ಇದೆ.
ಕಥೆಯಲ್ಲಿ ಒಂದಷ್ಟು ಆಶಯವಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬಹುದಿತ್ತು. ಎಲ್ಲವೂ ಇಲ್ಲಿ ನೈಜ ಎನಿಸುವುದರಿಂದ ಅಲ್ಲಲ್ಲಿ ಕಾಣುವ ತಪ್ಪುಗಳನ್ನು ಬದಿಗೊತ್ತಲು ಅಡ್ಡಿ ಇಲ್ಲ.

ನಿರ್ದೇಶಕರ ಕಲ್ಪನೆ, ನಿರೂಪಣೆ, ಆಯ್ಕೆ ಮಾಡಿಕೊಂಡ ಪಾತ್ರಗಳು ಸಿನಿಮಾದ ವೇಗ ಹೆಚ್ಚಿಸಿವೆ. ಅದಕ್ಕೆ ತಕ್ಕಂತಹ ಸಂಭಾಷಣೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಕೂಡ ಪಿಂಕಿಗೆ ಬಲ ಕೊಟ್ಟಿದೆ. ಸಮಾಜದಲ್ಲಿ ನಡೆಯೋ ಘಟನೆಯೊಂದು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತೆ ಅನ್ನೋದು ಹೈಲೆಟ್. ಆ ಕುತೂಹಲ ಇದ್ದರೆ, ಒಮ್ಮೆ ಪಿಂಕಿ ನೋಡಲ್ಲಡ್ಡಿಯಿಲ್ಲ.

ಕಥೆ ಏನು?

ಪಿಂಕಿ ಎಂಬ ಎಂಟು ತಿಂಗಳ ಹೆಣ್ಣು ಮಗು ಕಥೆಯ ಕೇಂದ್ರ ಬಿಂದು. ಬೆಂಗಳೂರು ಎಂಬ ದಟ್ಟ ಕಾಂಕ್ರೀಟ್ ನಗರದಲ್ಲಿ ಒಂದು ಕುಟುಂಬ. ಆ ಮನೆಯಲ್ಲಿ ಪಿಂಕಿ ಮತ್ತು ಆಕೆಯ ಅಪ್ಪ ಅಮ್ಮ ವಾಸ. ದುಡಿಯಲು ಹೊರ ಹೋಗುವ ಅಪ್ಪ ಅಮ್ಮ ಪಿಂಕಿ ನೋಡಿಕೊಳ್ಳಲೆಂದೆ ಕೆಲಸದಾಕೆಯನ್ನು ನೇಮಿಸುತ್ತಾರೆ. ಅತ್ತ ಪಿಂಕಿಯ ಪೋಷಕರು ಕೆಲಸಕ್ಕೆ ಹೊರಡುತ್ತಿದ್ದಂತೆ ಇತ್ತ ಕೆಲಸವಳ ಚಾಲಾಕಿ ಬುದ್ಧಿ ಅನಾವರಣಗೊಳ್ಳುತ್ತೆ. ಅದೇನು ಅನ್ನೋದು ಸಸ್ಪೆನ್ಸ್.

ಪಿಂಕಿ ಕೇವಲ 8 ತಿಂಗಳಲ್ಲೇ ದುಡಿಯೋ ಮಗುವಾಗುತ್ತಾಳೆ! ಅಲ್ಲೊಂದು ಜಾಲ ಪಿಂಕಿಯನ್ನು ದುರುಪಯೋಗ ಮಾಡಿಕೊಳ್ಳುತ್ತೆ. ಹೀಗಿರುವಾಗಲೇ ಪಿಂಕಿ ಕಳೆದುಹೋಗುತ್ತಾಳೆ. ಪಿಂಕಿ ಕಳೆದದ್ದು ಹೇಗೆ? ಅವಳನ್ನು ಹೊತ್ತು ಹೊಯ್ದವರಾರು? ಇಷ್ಕಕ್ಕೂ ಪಿಂಕಿ ಭಿಕ್ಷೆ ಬೇಡಿ ಬದುಕುವ ಮಹಿಳೆಯೊಬ್ಬಳ ಕೈ ಸೇರುತ್ತಾಳೆ ಹಾಲಲ್ಲಿ ಅಮಲು ಬರುವ ಆಲ್ಕೋಹಾಲ್ ಸೇರಿಸಿ ಅವಳನ್ನು ಮಲಗುವಂತೆ ಮಾಡುವ ಭಿಕ್ಷುಕಿಯೊಬ್ಬಳು, ತನ್ನ ಕುಡಿತದ ಚಟಕ್ಕೆ ಪಿಂಕಿಯನ್ನೇ ಬೀದಿ ಬದಿ ಬಿಟ್ಟುಬಿಡುತ್ತಾಳೆ!!

ಅಲ್ಲಿಂದ ಪಿಂಕಿಯ ಹುಡುಕಾಟ ಶುರುವಾಗುತ್ತೆ. ಅಲ್ಲಿಂದಲೇ ಸಂಬಂಧಗಳ ಒಂದೊಂದೇ ಕರಾಳ ಮುಖ ಬೆತ್ತಲಾಗುತ್ತವೆ. ಒಂದು ಕಡೆ ಮಕ್ಕಳಿಲ್ಲದ ಪರಿತಪಿಸುವ ಸ್ಲಂ ಬಳಿ ವಾಸಿಸುವ ದಂಪತಿ ಕೈಗೆ ಪಿಂಕಿ ಸಿಕ್ಕಾಗ ನಡೆಯೋ ಘಟನಾವಳಿ ಇಮ್ನೂ ವಿಶೇಷ ಎನಿಸುತ್ತವೆ. ಒಂದಮದೇ ಜಾಲಗಳ ದರ್ಶನವೂ ಆಗುತ್ತದೆ. ಇದೆಲ್ಲದರ ನಡುವೆ ಕಳಚಿ ಬಿದ್ದ ಸಂಬಂಧಗಳ ಪರಿಚಯವಾಗುತ್ತದೆ. ಭಾವನೆಗಳಿಲ್ಲದೆ ಬದುಕುವ ಮಂದಿಯ ವ್ಯಕ್ತಿತ್ವ ಬಯಲಾಗುತ್ತೆ. ಇದೆಲ್ಲದರ ನಡುವೆ ಪಿಂಕಿ ಎಲ್ಲಿ? ಆಕೆ ಸಿಕ್ತಾಳ ಇಲ್ಲವೋ ಅನ್ನೋದೇ ಇಲ್ಲಿರುವ ಚಿತ್ರಣ.

ಹಾಗೆ ನೋಡಿದರೆ, ಇಲ್ಲಿ ಪಿಂಕಿ ನೆಪಮಾತ್ರ. ಅವಳ ಹುಡುಕುವ ಜರ್ನಿಯಲ್ಲಿ ಬರುವ ದೃಶ್ಯಗಳು ಹುಬ್ಬೇರಿಸುತ್ತವೆ. ಗಂಡ ಹೆಂಡತಿ ಮತ್ತು ಸ್ನೇಹಿತರ ನಡುವಿನ ಭಾವನೆಗಳ ಬಣ್ಣ ಕಳಚುತ್ತದೆ. ಪಿಂಕಿಯ ಹುಡುಕಾಟದ ಜೊತೆಯಲ್ಲಿ ಸಮಾಜದ ಅವ್ಯವಸ್ಥೆ ರಾಚುತ್ತದೆ.

ಯಾರು ಹೇಗೆ?


ಇಂತಹ ಕಥೆಗೆ ನುರಿತ ಕಲಾವಿದರ ಅಗತ್ಯವಿಲ್ಲ. ಯಾಕೆಂದರೆಬಿಲ್ಲಿ ಗಟ್ಟಿ ಕಥೆ ಇದೆ. ಅಲ್ಲಿ ಯಾರೇ ಇದ್ದರೂ ಕಥೆಯೇ ಎದ್ದುಬಕಾಣುತ್ತೆ. ಅಕ್ಷತಾ ಅಮ್ಮನಾಗಿ ಇಷ್ಟವಾಗುತ್ತಾರೆ. ಮಗು ಕಳಕೊಂಡು ಚಡಪಡಿಸುವ ನೈಜ ಅಭಿನಯ ಮೂಲಕ ಮೆಚ್ಚುಗೆ ಆಗುತ್ತಾರೆ. ದೀಪಕ್ ಸುಬ್ರಹ್ಮಣ್ಯ, ಪೃಥ್ವಿ ಸೇರಿದಂತೆ ಕೊಳಗೇರಿ ವಾಸಿಗಳಾಗಿ ಕಾಣಿಕೊಂಡ ಸಣ್ಣಮ್ಮ, ಅನುಷ ಕಲಾವಿದರಿಗೆ ಇದು‌ ಹೊಸತಾದರೂ ನೈಜವಾಗಿಯೇ ಕಾಣಿಸಿಕೊಂಡಿದ್ದಾರೆ. ಕಥೆಗೆ ಪೂರಕವಾಗಿ ಸಂಗೀತವೂ ಇದೆ.

ಅದೇನೆ ಇರಲಿ, ನಮ್ಮ ನಡುವೆ ನಡೆಯೋ ಇಂತಹ ಘಟನೆಗಳನ್ನು ದೃಶ್ಯರೂಪಕ್ಕೆ ಅಳವಡಿಸಿ ಮನಕಲಕುವಂತೆ ಮಾಡಿರುವ ತಂಡದ ಪ್ರಯತ್ನ ಸಾರ್ಥಕ.

Categories
ಸಿನಿ ಸುದ್ದಿ

ಸಿರಿಗನ್ನಡಂ ರಂಜನೆ! ಜೂನ್ 5 ರಿಂದ ಮೆಗಾ ಧಾರಾವಾಹಿ, ರಿಯಾಲಿಟಿ ಶೋ

ಅತ್ಯುತ್ತಮ ಧಾರಾವಾಹಿಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ “ಸಿರಿಕನ್ನಡ” ವಾಹಿನಿಯಲ್ಲಿ ಜೂನ್ 5 ರಿಂದ “ಊರ್ಮಿಳಾ”,‌ “ಬ್ರಾಹ್ಮಿನ್ಸ್ ಕೆಫೆ” ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ “ಸಖತ್ ಜೋಡಿ” ಎಂ ರಿಯಾಲಿಟಿ ಶೋ ಆರಂಭವಾಗಲಿದೆ.

ನಮ್ಮ “ಸಿರಿಕನ್ನಡ” ವಾಹಿನಿಗೆ ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ. ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ಮೂಲಕ “ಸಿರಿಕನ್ನಡ” ಕನ್ನಡಿಗರ ಮನ ಗೆದ್ದಿದೆ. ಜೂನ್ 5 ರಿಂದ “ಊರ್ಮಿಳಾ” ಹಾಗೂ “ಬ್ರಾಹ್ಮಿನ್ಸ್ ಕೆಫೆ” ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ “ಸಖತ್ ಜೋಡಿ” ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ನಮ್ಮ ವಾಹಿನಿಯಿಂದ ಅಪಾರ ವೆಚ್ಚದಲ್ಲಿ ಈ ರಿಯಾಲಿಟಿ ಶೋ ನಿರ್ಮಾಣವಾಗುತ್ತಿದೆ.

ಈ ಶೋನಲ್ಲಿ ಭಾರಿ ಮೊತ್ತದ ಉಡುಗೊರೆಗಳು ಇದೆ. ಮುಂದೆ ನಮ್ಮ ವಾಹಿನಿಯ ವೀಕ್ಷಕರಿಗೆ ಅರ್ಧಗಂಟೆಗೊಮ್ಮೆ ಪ್ರಶ್ನೆ ಕೇಳುವುದು. ಗೆದ್ದವರಿಗೆ ವಿಶೇಷ ಬಹುಮಾನ ನೀಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ ಎಂದರು ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ.‌ ಇದೇ ಸಂದರ್ಭದಲ್ಲಿ ಸಂಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಅವರು ಉಪಸ್ಥಿತರಿದ್ದರು.

ನನ್ನನ್ನು ಹಾಸ್ಯ ನಟನಾಗಿ ಗುರುತಿಸಿದ್ದೀರಿ. “ಸಖತ್ ಜೋಡಿ” ಎಂಬ ಸಖತ್ ಕಾರ್ಯಕ್ರಮವನ್ನು ನಾನು ಹಾಗೂ ಹೇಮಲತಾ ನಿರೂಪಣೆ ಮಾಡುತ್ತಿದ್ದೇವೆ. ಈಗಾಗಲೇ ಮೂರು ಎಪಿಸೋಡ್ ಚಿತ್ರೀಕರಣವಾಗಿದೆ. “ಊರ್ಮಿಳಾ” ಧಾರಾವಾಹಿ ತಂಡದವರು, ಈ ಬಾರಿಯ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಟಾಪರ್ಸ್ ಹಾಗೂ ಜಾನಪದ ಕಲಾವಿದರು ಪಾಲ್ಗೊಂಡಿದ್ದರು. ಜೂನ್ 5 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 6ಗಂಟೆಗೆ “ಸಖತ್ ಜೋಡಿ” ಪ್ರಸಾರವಾಗಲಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ ಎಂದರು ಹಿತೇಶ್.

ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಹಾಗೂ ರಶ್ಮಿತಾ ಪ್ರಧಾನಪಾತ್ರದಲ್ಲಿ ನಟಿಸುತ್ತಿರುವ “ಊರ್ಮಿಳಾ” ಧಾರಾವಾಹಿ ಇದೇ ಜೂನ್ 5 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.

ನಾನು ಚಿಕ್ಕ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದೆ. ಈಗ ಈ ಧಾರಾವಾಹಿ ಮೂಲಕ ಕಿರುತೆರೆಗೆ ಮತ್ತೆ ಬಂದಿದ್ದೇನೆ ಎಂದರು ಪಂಕಜ್. ರಶ್ಮಿತಾ, ಆಶಾರಾಣಿ, ಶಿವು ಮುಂತಾದವರು ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.

ರವಿ.ಆರ್.ಗರಣಿ ಕಥೆ ಬರೆದಿರುವ “ಬ್ರಾಹ್ಮಿನ್ಸ್ ಕೆಫೆ” ವಿಭಿನ್ನ ಕಥಾಹಂದರ ಹೊಂದಿದೆ. ಜೂನ್ 5ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಶಿವು ಎಂಬ ಹೊಸಹುಡುಗ ಈ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸುತ್ತಿದ್ದಾನೆ.

ಗಾಯತ್ರಿ ಸೆಲ್ವಂ ಹಾಗೂ ಸೆಲ್ವಂ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಸಂಜೀವ್ ತಗಡೂರು ತಿಳಿಸಿದರು. ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಶ್ರೀನಾಥ್ ವಸಿಷ್ಠ, ಪ್ರಥಮ ಪ್ರಸಾದ್, ಶಿವು, ರಾಮಸ್ವಾಮಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಅಮರಾವತಿಯಲ್ಲಿ ಭಯಾನಕ ದೆವ್ವ! ಹೀಗೊಂದು ವಿಚಿತ್ರ ಹಾರರ್ ಕಥೆ

ಭಯಪಡಿಸೋ ಸಿನಿಮಾಗಳು ಕನ್ನಡಕ್ಕೆ ಹೊಸದಲ್ಲ. ಅದರಲ್ಲೂ ಹಾರರ್ ಸಿನಿಮಾಗಳಿಗೆ ಇಲ್ಲಿ ಬರವಿಲ್ಲ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಯಶಸ್ಸು ಕಂಡಿವೆ. ಅಂತಹ ಸಿನಿಮಾಗಳ ಸಾಲಿಗೆ ಸೇರಲು ಈಗ ಅಮರಾವತಿ ಚಿತ್ರ ರೆಡಿಯಾಗುತ್ತಿದೆ.

ಸದ್ಉ ಹಾರರ್ ಸಿನಿಮಾಗಳು ಸಕ್ಸಸ್‌ ಸೂತ್ರದಂತೆ ಬಳಕೆಯಾಗುತ್ತಿವೆ. ಇದರಲ್ಲಿ ಒಂದಷ್ಟು ನವೀನ ಪ್ರಯೋಗಗಳು ಆಗುತ್ತಿದ್ದಾವಾದರೂ ಮತ್ತೆ ಕೆಲ ಚಿತ್ರಗಳು ನಿಜಕ್ಕೂ ಭೂತದರ್ಶನ ಮಾಡಿಸುವಂತಿರುತ್ತವೆ. ಸಧ್ಯ ಕನ್ನಡದಲ್ಲಿ ಈ ವರೆಗೂ ಬಂದ ಎಲ್ಲಾ ಹಾರರ್‌ ಸಿನಿಮಾಗಳನ್ನೂ ಮೀರಿಸುವ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಅದು ಅಮರಾವತಿ.


ಬ್ರಾಡ್‌ ವೇ ಪಿಚ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಾಸು ರವರ ಸಾರಥ್ಯವಿದೆ. ಪ್ರಿಯಾ, ರಮ್ಯ ಮತ್ತು ಕೃಷ್ಣ ಪ್ರಮುಖ ಪಾತ್ರದಲ್ಲಿರಿತ್ತಾರೆ. ಮೊದಲಹಂತದ ಚಿತ್ರೀಕರಣ ನಡೆಯುತ್ತಿದೆ.. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

ಇಡೀ ಚಿತ್ರತಂಡ ಚಿತ್ರ ರಸಿಕರನ್ನು ಸೆಳೆಯುವ ಭರವಸೆ ಹೊಂದಿರುತ್ತದೆ. ಈಗ ತಯಾರಾಗುತ್ತಿರುವ ಅಮರಾವತಿ ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿ ಸಂಚಲನ ಸೃಷ್ಠಿಸುವಂತಹ ಕಥಾವಸ್ತು ಮತ್ತು ಮೇಕಿಂಗ್‌ ನಿಂದ ಕೂಡಿದೆಯಂತೆ.

Categories
ಸಿನಿ ಸುದ್ದಿ

ಟಗರು ಪಲ್ಯ ಸಿನಿಮಾಗೆ ಕುಂಬಳಕಾಯಿ: ಇದು ಡಾಲಿ ನಿರ್ಮಾಣದ‌ ಚಿತ್ರ

ನಟ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಸಿನಿಮಾ ಟಗರು ಪಲ್ಯ..ಯೋಗರಾಜ್ ಭಟ್ಟರ ಗರಡಿಯಲ್ಲಿ ಮತ್ತು ಹಲವು ಖ್ಯಾತ ನಿರ್ದೇಶಕರ ಜೊತೆ ನಿರ್ದೇಶನದ ವಿಭಾಗದಲ್ಲಿ ದುಡಿರುವ ಉಮೇಶ್ ಕೆ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ‌ ನವೆಂಬರ್ ನಲ್ಲಿ ಸೆಟ್ಟೇರಿದ ಟಗರು ಪಲ್ಯ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ.

ಮಂಡ್ಯ, ಮಳವಳ್ಳಿ,‌ ಮುತತ್ತಿ ಹಾಗೂ ಶಿಂಶ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ‌ ಮೂರನೇ ಕೊಡುಗೆ ಟಗರು ಪಲ್ಯ.

ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಹಾಕಿದ್ದು, ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ‌ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Categories
ಸಿನಿ ಸುದ್ದಿ

ಬರೆದ ಕವಿತೆಯೊಂದು ಜನಮೆಚ್ಚುಗೆ ಪಡೆದಿದೆ! ಮೆಲೋಡಿ ಡ್ರಾಮಾ ಹಾಡು ಎಲ್ರೂಗು ಇಷ್ಟವಾಯ್ತು

ಪ್ರೈಮ್ ಸ್ಟಾರ್ ಸ್ಟುಡಿಯೋ ಬ್ಯಾನರ್ ಬಲ್ಲಿ ಎಂ.ನಂಜುಂಡ ರೆಡ್ಡಿ ಅವರು ನಿರ್ಮಿಸಿರುವ, ಮಂಜು ಕಾರ್ತಿಕ್ ನಿರ್ದೇಶನದ “ಮೆಲೋಡಿ ಡ್ರಾಮ” ಚಿತ್ರಕ್ಕಾಗಿ ಹೃದಯ ಶಿವ ಬರೆದಿರುವ “ಯಾರು ಬರೆಯದ ಕವಿತೆ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

ಅಷ್ಟೇ ಅಲ್ಲ ಅದು, ಜನಮನಸೂರೆಗೊಳ್ಳುತ್ತಿದೆ. ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿ ಮುನ್ನುಗುತ್ತಿದೆ. ಕಿರಣ್ ರವೀಂದ್ರನಾಥ್ ಸಂಗೀತ ನೀಡಿರುವ ಈ ಹಾಡನ್ನು ಪಲಾಕ್ ಮುಚ್ಚಲ್ ಹಾಗೂ ವರುಣ್ ಪ್ರದೀಪ್ ಹಾಡಿದ್ದಾರೆ.

ಚಿತ್ರದ ಮೊದಲ ಹಾಡು ಇದಾಗಿದ್ದು, ಒಟ್ಟು ಏಳು ಹಾಡುಗಳು ಈ ಚಿತ್ರದಲ್ಲಿದೆ. ಸೋನು ನಿಗಮ್ , ಕೈಲಾಶ್ ಖೇರ್, ಪಲಾಕ್ ಮುಚ್ವಲ್, ಮುಂತಾದ ಖ್ಯಾತ ಗಾಯಕರು ಈ ಹಾಡುಗಳನ್ನು ಹಾಡಿದ್ದಾರೆ. ಪ್ರಥಮಪ್ರತಿ ಸಿದ್ದವಾಗಿದ್ದು, ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಸತ್ಯ ಈ ಚಿತ್ರದ ನಾಯಕನಾಗಿ, ಸುಪ್ರೀತ ಸತ್ಯನಾರಾಯಣ ಅವರು ನಾಯಕಿಯಾಗಿ ನಟಿಸಿದ್ದಾರೆ.

ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲು ರಾಜವಾಡಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!