Categories
ಸಿನಿ ಸುದ್ದಿ

ಕರುನಾಡ ಕುಳ್ಳ ಕಣ್ಮರೆ: ಹಿರಿಯ ನಟ ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಇನ್ನು ನೆನಪು ಮಾತ್ರ…

ಹಿರಿಯ ನಟ, ನಿರ್ಮಾಪಕ ಹಾಗು ನಿರ್ದೇಶಕ ದ್ವಾರಕೀಶ್ (82) ಹೃದಯಾಘಾತದಿಂದ ನಿಧನರಾಗಿದ್ದಾರೆ, ಏಪ್ರಿಲ್ 16ರ ಬೆಳಿಗ್ಗೆ ಎದ್ದು ಕಾಫಿ ಕುಡಿದು, ಸುಸ್ತಾಗುತ್ತೆ ಎಂದು ಹೇಳಿದ ಅವರು ನಿದ್ದೆಗೆ ಜಾರಿದ್ದರು. ಆದರೆ ದ್ವಾರಕೀಶ್ ಅವರು ಮಲಗಿದ್ದಾಗಲೇ, ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಂಗಲೆ ಶಾಮರಾವ್ ದ್ವಾರಕನಾಥ್ ಅವರ ಮೂಲ ಹೆಸರು. ಅವರು ಐವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1942 ಆಗಸ್ಟ್ 19ರಂದು ಬಂಗಲೆ ಶಾಮರಾವ್ ಮತ್ತು ಜಯಮ್ಮ ದಂಪತಿಗೆ ಹುಣಸೂರಿನಲ್ಲಿ ದ್ವಾರಕೀಶ್ ಜನಿಸಿದ್ದರು. ಅವರು ಮೈಸೂರಿನ ಇಟ್ಟಿಗೆಗೂಡಲ್ಲಿ ಬೆಳೆದು, ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ನಿರ್ದೇಶಕರಾಗಿ ಜನಪ್ರಿಯಗೊಂಡವರು. ಕನ್ನಡ ಚಿತ್ರರಂಗದಲ್ಲಿ ಅವರು ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದರು.

ವಿಷ್ಣು ವರ್ಧನ್‌ಗೆ ಅವರ ಆಪ್ತಮಿತ್ರನಾಗಿದ್ದ ಅವರು ಬಹುತೇಕ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು.
ದ್ವಾರಕೀಶ್ ಅವರ ಕಳ್ಳ ಕುಳ್ಳ ಸಿನಿಮಾ ಬೆಸ್ಟ್ ಕಾಂಬಿನೇಷನ್ ಆಗಿತ್ತು. ವಿಷ್ಣು ನಿಧನಕ್ಕೂ ಮುನ್ನ ಆಪ್ತಮಿತ್ರ ಸಿನಿಮಾದಲ್ಲಿ ದ್ವಾರಕೀಶ್ ಜೋಡಿಯಾಗಿ ನಟಿಸಿ, ದಾಖಲೆ ಬರೆದಿದ್ದರು.

ಈ ಮೊದಲು ಹಲವು ಬಾರಿ ದ್ವಾರಕೀಶ್ ಸಾವಿನ ಸುದ್ದಿ ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಫೇಕ್ ಎಂದು ಸ್ನತಃ ದ್ವಾರಕೀಶ್ ಅವರೇ ವೀಡಿಯೋ ಮೂಲಕ ಸ್ಪಷ್ಟಪಡಿಸಿದ್ದರು. ಆದರೆ , ಏಪ್ರಿಲ್ 16ರ ಬೆಳಗ್ಗೆ ದ್ವಾರಕೀಶ್ ಕುಟುಂಬಸ್ಥರೇ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದ್ವಾರಕೀಶ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಗುಂಮ್ಟಿ ಎಂಬ ಕುಡುಬಿ ಜನ ಜೀವನ ಚಿತ್ರ: ಕಡಲ ಕಥೆಯ ಸಿನಿಮಾ ಶೀರ್ಷಿಕೆ ಅನಾವರಣ

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನಿಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ಈ ಬಾರಿ ಮತ್ತೊಂದು ಅಂಥದ್ದೇ ಕಂಟೆಂಟ್ ಆಧಾರಿತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದ್ದಾರೆ.

ಹೌದು, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ತಮ್ಮ ಮೂರನೇ ಸಿನಿಮಾಕ್ಕೆ ‘ಗುಂಮ್ಟಿ’ ಎಂದು ಹೆಸರಿಟ್ಟಿದ್ದು, ಈ ಸಿನಿಮಾದಲ್ಲಿ ಸಂದೇಶ್ ಶೆಟ್ಟಿ ತೆರೆಮೇಲೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ‘ಡಬಲ್ ರೋಲ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ!

ಇನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯೊಂದು ತೆರೆಮೇಲೆ ಅನಾವರಣವಾಗಲಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಮನಮುಟ್ಟುವಂತೆ ಹೇಳಲು ಹೊರಟಿದೆ ಚಿತ್ರತಂಡ.

ಈಗಾಗಲೇ ಸದ್ದಿಲ್ಲದೆ ಉಡುಪಿ, ಕುಂದಾಪುರ, ಶಿರಸಿ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರತಂಡ ‘ಗುಂಮ್ಟಿ’ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ.

ಇದೀಗ ‘ಗುಂಮ್ಟಿ’ ಸಿನಿಮಾದ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು ಎರಡು-ಮೂರು ತಿಂಗಳಿನಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

ಇನ್ನು ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ಸಂದೇಶ್ ಶೆಟ್ಟಿ ಆಜ್ರಿ ಅವರಿಗೆ ವೈಷ್ಣವಿ ನಾಡಿಗ್ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗುಂಮ್ಟಿ’ ಸಿನಿಮಾ ಅನೀಶ್ ಡಿಸೋಜಾ ಕ್ಯಾಮರದ ಕೈಚಳಕದಲ್ಲಿ ಮೂಡಿ ಬಂದಿದ್ದು, ಸಿನಿಮಾಕ್ಕೆ ಮೋಹನ್ ಸಂಗೀತ ಸಂಯೋಜಿಸಿದ್ದಾರೆ.

‘ಗುಂಮ್ಟಿ’ ಸಿನಿಮಾಕ್ಕೆ ಶಿವರಾಜ್ ಮೇಹು ಸಂಕಲನವಿದೆ. ‘ಯುಗಾದಿ’ ಹಬ್ಬದ ಸಂದರ್ಭದಲ್ಲಿ ‘ಗುಂಮ್ಟಿ’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ‘ಗುಂಮ್ಟಿ’ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

Categories
ಸಿನಿ ಸುದ್ದಿ

ಜೀ5 ಒಟಿಟಿಯಲ್ಲಿ ‘ಗಾಮಿ’ ಸ್ಟ್ರೀಮಿಂಗ್ :ವಿಶ್ವಕ್ ಸೇನ್ ಚಿತ್ರ ಮೆಚ್ಚಿದ ಪ್ರೇಕ್ಷಕ

ಮಾರ್ಚ್‌ 8ರಂದು ತೆರೆಕಂಡಿರುವ ವಿಶ್ವಕ್‌ ಸೇನ್‌ ನಟನೆಯ ತೆಲುಗು ಚಿತ್ರ “ಗಾಮಿ’ ಓಟಿಟಿಯತ್ತ ಹೆಜ್ಜೆ ಹಾಕಿದ್ದು, ಏ.12ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಿದೆ. ಗಾಮಿ ಸಿನಿಮಾಗೆ ವಿದ್ಯಾರ್ಧ ಕಾಗಿತಾ ನಿರ್ದೇಶನವಿದೆ.

ವಿದ್ಯಾರ್ಧ ಕಾಗಿತಾ ಇವರ ಚೊಚ್ಚಲ ಪ್ರಯತ್ನ. ವಿಶ್ವಕ್‌ ಸೇನ್‌ಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಎಂಜಿ ಅಭಿನಯ, ಮೊಹಮ್ಮದ್‌ ಸಮದ್‌, ಹರಿಕಾ ಪೇಡಾಡ, ಶಾಂತಿ ರಾವ್‌, ಮಯಾಂಕ್‌ ಪರಾಕ್‌ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್‌ ಸಂಕಲನ, ನರೇಶ್‌ ಕುಮಾರನ್‌ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್‌ ಶಬರೀಶ್‌ ಚಿತ್ರಕ್ಕೆ ಹಣ ಹಾಕಿದ್ದಾರೆ.

Categories
ಸಿನಿ ಸುದ್ದಿ

ಕೋಟಿ ಟೀಸರ್ ಬಂತು: ಇದು ಡಾಲಿ ಧನಂಜಯ ಚಿತ್ರ; ಜಿಯೋ ಸ್ಟುಡಿಯೋ ಸಿನಿಮಾ ಜೂನ್ 14ಕ್ಕೆ ರಿಲೀಸ್

ಜಿಯೋ ಸ್ಟುಡಿಯೋಸ್ ನಿರ್ಮಾಣದ ಕೋಟಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಟ ಧನಂಜಯ ಈ ಸಿನಿಮಾ ನಾಯಕರಾಗಿದ್ದು ಪರಮ್ ಇದನ್ನು ನಿರ್ದೇಶಿಸಿದ್ದಾರೆ.

ಬೈಪನ್ ಭಾರಿ ದೇವಾ (ಮರಾಠಿ), ಆರ್ಟಿಕಲ್ ೩೭೦, ತೇರಿ ಬಾತೋಂಮೆ ಐಸಾ ಉಲ್ಜಾಜಿಯಾ, ಶೈತಾನ್ ಮತ್ತು ಲಾಪಾತಾ ಲೇಡೀಸ್ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ಜಿಯೋ ಸ್ಟುಡಿಯೋಸ್ ಕೊಟ್ಟಿದೆ. ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ಸ್ಥಾನವನ್ನು ಈ ನಿರ್ಮಾಣ ಸಂಸ್ಥೆ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

‘ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದ್ಕೋತಾ ಇರ್ತಾರೆ ʼ ಎಂದು ಪಾತ್ರದ ಬಗ್ಗೆ ಮಾತಾಡುತ್ತಾರೆ ಧನಂಜಯ.

“ಮಜಾ ಅಂದ್ರೆ ಎಲ್ರೊಳಗೂ ಕೋಟಿಯಂಥ ಒಬ್ಬ ವ್ಯಕ್ತಿ ಇರ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎಂದು ಸೇರಿಸಲು ಅವರು ಮರೆಯುವುದಿಲ್ಲ.

ಈ ಸಿನಿಮಾ ನಿರ್ದೇಶಿಸುತ್ತಿರುವುದು ಪರಮ್. ಇದು ಅವರ ಚೊಚ್ಚಲ ಸಿನಿಮಾ. ಸಿನಿಮಾ ನಿರ್ದೇಶಕನಾಗಿ ಮೊದಲ ಅನುಭವವಾದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.

‘ನನ್ನ ಕನಸು ಈ ಸಿನಿಮಾ ಮೂಲಕ ನಿಜವೇ ಆಗಿಬಿಟ್ಟಿರುವುದನ್ನು ವಿವರಿಸಲು ಶಬ್ದಗಳಿಲ್ಲ. ಇದು ಸಾಧ್ಯ ಆಗಿದ್ದು ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲೆ ಇಟ್ಟ ನಂಬಿಕೆಯಿಂದ. ಒಳ್ಳೆ ಕತೆಗಳನ್ನು ಹೇಳಬೇಕು, ಬೇರೆ ಕತೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಅನ್ನೋದು ಜಿಯೋ ಸ್ಟುಡಿಯೋಸ್ ನ ಮೂಲ ಉದ್ದೇಶ. ಕನ್ನಡದಲ್ಲೂ ಈ ಇದು ಮುಂದುವರೆಯಬೇಕು ಅನ್ನೋದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತೆʼ ಎನ್ನುತ್ತಾರೆ ಜಿಯೋ ಸ್ಟುಡಿಯೋಸ್ ನ ಕನ್ನಡದ ಮುಖ್ಯಸ್ಥರೂ ಆಗಿರುವ ಪರಮ್.

ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕೊಡಗಿನ ಮೂಲದ ಕನ್ನಡದ ನಟಿ ಮೋಕ್ಷಾಗೆ ಇದು ಮಹತ್ವದ ಸಿನಿಮಾ. ‘ಸಪ್ತ ಸಾಗರದಾಚೆʼ ಸಿನಿಮಾದ ನಂತರ ಜನರಿಗೆ ಹೆಚ್ಚು ಪರಿಚಯವಾದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದಾರೆ. ಕೋಟಿ ಸಿನಿಮಾ ಡ್ರಾಮಾ ಥ್ರಿಲ್ಲರ್ ಎಳೆಯನ್ನು ಹೊಂದಿದೆ.

ವಾಸುಕಿ ವೈಭವ್ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಐದು ಹಾಡುಗಳಿವೆ. ಮೂರು ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಇದೆ. ಒಂದು ಹಾಡನ್ನು ಸ್ವತಃ ವಾಸುಕಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ ‘ಕೋಟಿ’ ಸಿನಿಮಾದ ಮುಖ್ಯ ಭಾಗವಾಗಿದ್ದು, ಆ ಹೊಣೆಯನ್ನು ‘777ಚಾರ್ಲಿ’ ಮತ್ತು ʼ೨೦೧೮ʼ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ನೊಬಿನ್ ಪೌಲ್ ಹೊತ್ತಿದ್ದಾರೆ. ಅವರು ಸಂಗೀತ ಸಂಯೋಜನೆಯ ಮಲಯಾಳಮ್ ಚಿತ್ರ ʼ೨೦೧೮ʼ ಆಸ್ಕರ್ ಪ್ರಶಸ್ತಿಗೆ ಈ ವರ್ಷ ಭಾರತದ ಅಧಿಕೃತ ಆಯ್ಕೆ ಆಗಿತ್ತು.

ಇದರ ಸಂಕಲನದ ಜವಾಬ್ದಾರಿಯನ್ನು ಹೊತ್ತಿರುವುದು ಕನ್ನಡದ ಪ್ರತಿಭಾವಂತ ಯುವ ಸಂಕಲನಕಾರ, ಛಾಯಾಗ್ರಾಹಕ ಪ್ರತೀಕ್ ಶೆಟ್ಟಿ. ಈಗಾಗಲೇ ʼಕಾಂತಾರʼ ʼ೭೭೭ಚಾರ್ಲಿʼ ಸಂಕಲನದ ಮೂಲಕ ಹೆಸರು ಗಳಿಸಿರುವ ಇವರು “ಗಂಧದ ಗುಡಿʼ ಸಾಕ್ಷ್ಯ ಚಿತ್ರಕ್ಕೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಟೆಲಿವಿಷನ್ ಪ್ರಯಾಣದಲ್ಲಿ ಪರಮ್ ಅವರಿಗೆ ಜೋಡಿಯಾಗಿದ್ದ ಅರುಣ್ ಬ್ರಹ್ಮನ್ ‘ಕೋಟಿ’ ಸಿನಿಮಾದ ಸಿನಿಮಾಟೋಗ್ರಾಫರ್ ಆಗಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ. ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೇಂಕಟೇಶ್ ಬೇರೆ ಬೇರೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೋಟಿ ಸಿನಿಮಾದ ಟೀಸರ್ ಬಿಡುಗಡೆಯಾಗಿ ಈಗ ಕುತೂಹಲ ಹೆಚ್ಚಾಗಿದೆ. ಸಹಜವಾಗಿ ಇದ್ದುಬಿಡುವುದರ ಮೂಲಕ ಹೇಗೆ ಪಾತ್ರವೇ ಆಗಿಬಿಡಬಹುದು ಎನ್ನುವುದರ ಝಲಕ್ಕನ್ನು ಧನಂಜಯ ತೋರಿಸಿದ್ದರೆ ರಮೇಶ್ ಇಂದಿರಾ ಒಬ್ಬ ಪ್ರಭಾವಶಾಲಿ ಖಳನಟ ಆಗುವ ಭರವಸೆ ಹುಟ್ಟಿಸಿದ್ದಾರೆ. ಜೂನ್ 14 ರಂದು ಕೋಟಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕಾಂಗರೂ ಇದು ಆದಿತ್ಯ ಚಿತ್ರ: ಮೇ 3ಕ್ಕೆ ರಿಲೀಸ್

ಆದಿತ್ಯ ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ “ಕಾಂಗರೂ” ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ಕುಣಿಗಲ್, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ಆರ್ ಗೌಡ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ.

ನಾವು ಆರು ಜನ ಸ್ನೇಹಿತರು. ನಾವೆಲ್ಲಾ ಸಣ್ಣ ಕೈಗಾರಿಕೋದ್ಯಮಿಗಳು. ಪೀಣ್ಯದಲ್ಲಿ ನಮ್ಮ ಫ್ಯಾಕ್ಟರಿ ಇದೆ. ಸಿನಿಮಾ ರಂಗ ನಮಗೆ ಹೊಸತು. ಸ್ನೇಹಿತರ ಮೂಲಕ ಪರಿಚಿತರಾದ ನಿರ್ದೇಶಕ ಕಿಶೋರ್ ಅವರು ಈ ಚಿತ್ರದ ಕಥೆ ಹೇಳಿದ ರೀತಿ ನಮಗೆ ಇಷ್ಟವಾಯಿತು. ಚಿತ್ರ ನಿರ್ಮಾಣಕ್ಕೆ ಮುಂದಾದೆವು. ನಟ ಆದಿತ್ಯ ಹಾಗೂ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ. ಮೇ 3 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ಆರು ಜನ ನಿರ್ಮಾಪಕರ ಪರವಾಗಿ ಚೆನ್ನಕೇಶವ ಬಿ ಸಿ ಮಾತನಾಡಿದರು.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ.‌ ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ಫ್ಯಾಮಿಲಿ ಆಡಿಯನ್ಸ್ ಗಾಗಿಯೇ ಮಾಡಿರುವ ಕಥೆ ಇದು. ಇನ್ನು ಕಾಂಗರೂ ಮೃದುಸ್ವಭಾವದ ಪ್ರಾಣಿ. ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಬಂದರೆ ಅದು ಯಾರನ್ನು ಬಿಡುವುದಿಲ್ಲ. ಇದೇ ಚಿತ್ರದ ಕಥಾಸಾರಾಂಶ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ‌. ನಾಯಕ ಆದಿತ್ಯ, ನಾಯಕಿ ರಂಜನಿ ರಾಘವನ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ. ಸಾಧುಕೋಕಿಲರ ಸಂಗೀತ ನಿರ್ದೇಶನ ಹಾಗೂ ಉದಯಲೀಲಾ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರು ನಿರ್ದೇಶಕ ಕಿಶೋರ್ ಮೇಗಳಮನೆ.

ನಿರ್ದೇಶಕ ಕಿಶೋರ್ ಅವರು ಕಥೆ ಕೇಳಿ ಎಂದರು. ನಾನು ಸರಿ ಎಂದೆ. ಆನಂತರ ಕೇಳುವುದು ಬೇಡ ಸರ್ ಸಿನಿಮಾನೇ ತೋರಿಸುತ್ತೇನೆ ಎಂದರು. ನನಗೆ ಆಶ್ಚರ್ಯವಾಯಿತು. ಚಿತ್ರದ ಕಥೆಯನ್ನು ಅನಿಮೇಶನ್ ಮೂಲಕ ತೋರಿಸಿದ ಪ್ರಥಮ ನಿರ್ದೇಶಕ ಇವರೆ ಇರಬಹುದು. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರ ಸೇರಿದಂತೆ ಎಲ್ಲಾ ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಎನ್ನುತ್ತಾರೆ ಆದಿತ್ಯ.

ನಾನು ಈ ಚಿತ್ರದಲ್ಲಿ ಮನೋವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದು ನಾನು ನಾಯಕಿಯಾಗಿ ನಟಿಸಿರುವ ಐದನೇ ಚಿತ್ರ ಎಂದರು ನಾಯಕಿ ರಂಜನಿ ರಾಘವನ್.

ಚಿತ್ರದಲ್ಲಿ ನಟಿಸಿರುವ ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಶುಭಲಕ್ಷ್ಮೀ, ಗೌತಮ್ ಮುಂತಾದವರು “ಕಾಂಗರೂ” ಚಿತ್ರದ ಕುರಿತು ಮಾತನಾಡಿದರು. .

Categories
ಸಿನಿ ಸುದ್ದಿ

ಏಪ್ರಿಲ್ 19ಕ್ಕೆ ಪುಕ್ಸಟ್ಟೆ ಪೈಸ ಬಿಡುಗಡೆ: ಇದು ಕಾಸಿನ ಹಿಂದೆ ಬಿದ್ದವರ ಕಥೆ

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾ ಇದೇ ಏ. 19 ರಂದು ತೆರೆಗೆ ಬರುತ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ ಈಗಾಗಲೇ ‘ಪುಕ್ಸಟ್ಟೆ ಪೈಸ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ.

‘ಇಂಚರ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಧುಸೂಧನ ಎ. ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದಲ್ಲಿ ಭರತ್ ಶೆಟ್ಟಿ, ಅಕ್ಷತಾ ಕುಕಿ, ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಉಮೇಶ್, ಗಜಾ, ಮಂಜೇಗೌಡ, ಥಾಮಸ್, ಸೂರ್ಯ, ಸಂತು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಾತಿಗಿಳಿದ ನಿರ್ಮಾಪಕ ಕಂ ನಿರ್ದೇಶಕ ಮಧುಸೂಧನ ಎ. ಎಸ್., ‘ಇದೊಂದು ಕಾಮಿಡಿ, ಥ್ರಿಲ್ಲರ್ ಶೈಲಿಯ ಸಿನಿಮಾ. ಕೆಲ ವರ್ಷಗಳ ಹಿಂದೆ ನಡೆದ ಹಣದ ಹಗರಣ ಮತ್ತು ನಮ್ಮ ನಡುವೆಯೇ ಅಲ್ಲಲ್ಲಿ ನಡೆದಿರುವ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ.

‘ಪುಕ್ಸಟ್ಟೆ ಪೈಸ’ ಸಿನಿಮಾದ ಟೈಟಲ್ಲೇ ಹೇಳುವಂತೆ ಪುಕ್ಸಟ್ಟೆ ಹಣದ ಮೇಲಿನ ಆಸೆಯಿಂದ ಅದರ ಹಿಂದೆ ಬಿದ್ದವರ ಒದ್ದಾಟ, ಪರದಾಟ ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎಂದು ವಿವರಣೆ ನೀಡಿದರು.

‘ಸಿನಿಮಾದಲ್ಲಿ ಎಲ್ಲ ಥರದ ಆಡಿಯನ್ಸ್ ಗೂ ಬೇಕಾದ ಅಂಶಗಳಿವೆ. ಕಾಮಿಡಿ, ಥ್ರಿಲ್ಲರ್ ಜೊತೆಗೆ ಒಂದು ಒಳ್ಳೆಯ ಸಂದೇಶವಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.

ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಕಲಾವಿದರಾದ ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಗಜಾ, ಉಮೇಶ್, ಸಂಗೀತ ನಿರ್ದೇಶಕ ವಿಶ್ವಾಸ್ ಕೌಶಿಕ್ ಮತ್ತಿತರರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಪುಕ್ಸಟ್ಟೆ ಪೈಸ’ ಸಿನಿಮಾದ ಮೂರು ಹಾಡುಗಳಿಗೆ ವಿಶ್ವಾಸ್ ಕೌಶಿಕ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ಮಯೂರ್ ಆರ್. ಶೆಟ್ಟಿ, ವೇಲ್ ಮುರುಗನ್ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಹಾಸನ, ಹೊಳೆನರಸೀಪುರ ಸುತ್ತಮುತ್ತ ‘ಪುಕ್ಸಟ್ಟೆ ಪೈಸ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದೆ. ‘ಪುಕ್ಸಟ್ಟೆ ಪೈಸ’ ಸಿನಿಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಇದೇ ಏ. 19ಕ್ಕೆ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ಮೆಡಿಕಲ್ ಸೀಟು ವಂಚನೆಯ ರೋಚ’ಕಥೆ’

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ನಿರ್ದೇಶಕ: ವಿಕಾಸ್ ಪುಷ್ಪಗಿರಿ

ನಿರ್ಮಾಪಕ: ದೇವರಾಜ್

ತಾರಾಗಣ: ರಂಜನ್, ನಿಶ್ಚಿತ, ಬಿ.ಸುರೇಶ, ರಘುಶಿವಮೊಗ್ಗ, ಹರಿಣಿ, ಪ್ರಶಾಂತ್, ಸಂದೀಪ್ ಇತರರು.

ಈ ಪ್ರಪಂಚದಲ್ಲಿ ಹೊಗಳೋರು ಇರ್ತಾರೆ. ತೆಗಳೋರು ಇರ್ತಾರೆ.
ನಮಗೆ ಸೀದಾ ಕಾಣಿಸೋದು, ಅವರಿಗೆ ಉಲ್ಟಾ ಕಾಣಿಸುತ್ತೆ…’

ಈ ಸಿನಿಮಾದ ಹೈಲೆಟ್ ಆಗಿರುವ ಟಿ ಅಲಿಯಾಸ್ ತಿಮ್ಮೇಗೌಡ (ಹೀರೋ ರಂಜನ್) ಈ ಡೈಲಾಗ್ ಹೇಳುವ ಹೊತ್ತಿಗೆ , ಅವನು ಎನ್ಇಇಟಿ ಎಕ್ಸಾಮ್ ಬರೆದು ಇಷ್ಟಪಟ್ಟ ಕಾಲೇಜಿನಲ್ಲಿ ಮೆಡಿಕಲ್ ಸೀಟು ಪಡೆದು ತಾನೊಬ್ಬ ಡಾಕ್ಟರ್ ಆಗಿ ಇದ್ದೂರಲ್ಲೇ ಸೇವೆ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುತ್ತಾನೆ. ಆದರೆ ಅವನ ಕನಸುಗಳೆಲ್ಲಾ ನನಸಾಗುತ್ತ, ಇಲ್ಲವೋ ಅನ್ನೋದೇ ಈ ಸ್ಕ್ಯಾಮ್ 1770 ಸಿನಿಮಾದ ಸಾರಾಂಶ.

ವಂಚನೆ ಪ್ರಕರಣಗಳು ದಿನ‌ ನಿತ್ಯ ನಮ್ಮ ಬದುಕಲ್ಲಿ ನಡೆಯುತ್ತಲೇ ಇವೆ. ವಂಚನೆಗೊಳಗಾಗುತ್ತಿದ್ದರೂ ಎಷ್ಟೋ ಸಲ ಗೊತ್ತಾಗೋದೇ ಇಲ್ಲ. ಅಂಥದ್ದೊಂದು ಗಂಭೀರ ವಿಷಯ ಇಟ್ಟುಕೊಂಡು ನಿರ್ದೇಶಕ ವಿಕಾಸ್ ಪುಷ್ಪಗಿರಿ ಅವರು ಚಂದದ ಕಥೆ ಇಟ್ಟುಕೊಂಡು ಅಂದವಾಗಿ ನಿರೂಪಿಸಿದ್ದಾರೆ. ಇದು ಸ್ಟಾರ್ ಸಿನಿಮಾ ಅಲ್ಲದಿದ್ದರೂ ಸ್ಟಾರ್ ವ್ಯಾಲ್ಯು ಇರುವ ಸ್ಟೋರಿ ಸಿನಿಮಾ. ಹಾಗಾಗಿ ಇದು ಎಲ್ಲಾ ವರ್ಗದವರಿಗೂ ರುಚಿಸುವ, ಎಚ್ಚೆತ್ತುಕೊಳ್ಳುವ ಚಿತ್ರ ಅನ್ನೋದನ್ನು ಮುಲಾಜಿಲ್ಲದೆ ಹೇಳಬಹುದು.

ಶಿಕ್ಷಣ ಅನ್ನೋದು ಈಗ ಗಗನ ಕುಸುಮ. ಅದರಲ್ಲೂ ಬಡವರಿಗೆ ಮಧ್ಯಮ ವರ್ಗದವರಿಗೆ ಬಲು ಕಷ್ಟ. ಎಷ್ಟೇ ಬುದ್ಧಿವಂತರಿದ್ದರೂ, ನೀಟ್ ಎಕ್ಸಾಮ್ ಪಾಸ್ ಆದರೂ ಪ್ರತಿಷ್ಟಿತ ಕಾಲೇಜುಗಳಲ್ಲಿ ಮೆಡಿಕಲ್ ಸೀಟು ಪಡೆಯೋದು ಕಷ್ಟ. ಸಿಕ್ಕರೂ ಒಂದಷ್ಟು ಸಮಸ್ಯೆ ಮೂಲಕ ಕೈ ತಪ್ಪುವ ಉದಾಹರಣೆ ಹೆಚ್ಚು. ಅಂತಹ ವಂಚನೆ ಹೇಗೆಲ್ಲಾ ನಡೆಯುತ್ತೆ ಅನ್ನೋದು ಸಿನಿಮಾದ ಥಾಟ್. ಅದನ್ನೇ ಇಲ್ಲಿ ನಿರ್ದೇಶಕರು ಮನ ಮುಟ್ಟುವಂತೆ ನಿರೂಪಿಸಿದ್ದಾರೆ. ಮುಖ್ಯವಾಗಿ ಇದು ಸ್ಟುಡೆಂಟ್ಸ್ ಜೊತೆಗೆ ಪೋಷಕರು ನೋಡಲೇಬೇಕಾದ ಸಿನಿಮಾ. ವಾಸ್ತವ ಅಂಶ ಇಲ್ಲಿ ಸತ್ಯವನ್ನು ಬಿಚ್ಚಿಟ್ಟಿದೆ.

ಸಮಾಜದಲ್ಲಿ ಈಗ ನಡೆಯುವ ವಸ್ತುಸ್ಥಿತಿಯನ್ನು ನಿರ್ದೇಶಕರು ಬಿಂಬಿಸಿದ್ದಾರೆ. ಪ್ರತಿಷ್ಠಿತ ಖಾಸಗಿ ಮೆಡಿಕಲ್ ಕಾಲೇಜುಗಳ ವಂಚನೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಚಿತ್ರ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತದೆ. ಇದೆಲ್ಲವೂ ಹೀಗಿದೆಯಾ ಅನ್ನುವಷ್ಟರ ಮಟ್ಟಿಗೆ ಕಾಡುತ್ತೆ. ಅಷ್ಟೇ ಅಲ್ಲ, ಎಚ್ಚೆತ್ತುಕೊಳ್ಳುವಂತೆಯೂ ಮಾಡುತ್ತೆ.

ಸಿನಿಮಾದ ಕಥೆಯ ಎಳೆ ಚೆನ್ನಾಗಿದೆ. ಎಲ್ಲೂ ನೀರಸವಾಗದ ನಿರೂಪಣೆ ಇಷ್ಟವಾಗುತ್ತೆ. ಕಮರ್ಷಿಯಲ್ ರೂಪ ಕೊಟ್ಟು, ನೋಡಿಸಿಕೊಂಡು ಹೋಗುವಂತೆ ಮಾಡಿರುವ ನಿರ್ದೇಶಕರ ಜಾಣತನ ಒಪ್ಪಬೇಕು.

ಕಥೆ ಇಷ್ಟು…

ಟಿ (ರಂಜನ್) ನೀಟ್ ಬರೆದು ಮೆಡಿಕಲ್ ಸೀಟು ಪಡೆಯಬೇಕೆಂಬ ಹಂಬಲದವನು. ಆದರೆ, ತಾನು ಇಷ್ಟ ಪಡುವ ಕಾಲೇಜಿನಲ್ಲೇ ಸೀಟು ಪಡೆಯಬೇಕೆಂಬ ಆಸೆ ನಿರಾಸೆಯಾಗುತ್ತೆ. ಮೆಡಿಕಲ್ ಸೀಟು ಕೋಟಾದಡಿ ಸಿಗುತ್ತೆ ಎಂಬ ಆಸೆ ಕೈ ತಪ್ಪುತ್ತೆ. ಅದು ತಪ್ಪಿದ್ದಲ್ಲ. ತಪ್ಪಿಸಿದ್ದು. ಅನ್ನೋ ಸತ್ಯ ಗೊತ್ತಾಗುತ್ತೆ. ಅವನಂತೆಯೇ ಒಂದಷ್ಟು ಪ್ರತಿಭಾವಂತರಿಗೂ ಇದೇ ಸಮಸ್ಯೆ ಎದುರಾಗುತ್ತೆ. ಸೀಟು ಅವರಿಂದ ಹೇಗೆ ತಪ್ಪುತ್ತೆ ಆ ನೋವು ಹೇಗೆ ಬಲಿ ಪಡೆಯುತ್ತೆ ಅನ್ನೋದೇ ಇಂಟ್ರೆಸ್ಟಿಂಗ್ ಕಥೆ.

ಖಾಸಗಿ ಶಾಲೆಗಳ ವಂಚನೆ ಬಯಲಿಗೆಳೆಯೋ ಕಥೆ ನೋಡುಗರಲ್ಲಿ ಹೀಗೂ ಉಂಟಾ ಎನಿಸದೇ ಇರದು. ಎಷ್ಟೋ ಪೋಷಕರು ಮಕ್ಕಳ ಭವಿಷ್ಯ ರೂಪಿಸಲು ಸಾಲ ಮಾಡಿ ಮೆಡಿಕಲ್ ಓದಿಸಿ ಡಾಕ್ಟರ್ ಮಾಡುವ ಆಸೆ ಇಟ್ಟುಕೊಂಡೇ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದನ್ನು ಇಲ್ಲಿ ನೀಟ್ ಆಗಿ ಪ್ರೆಸೆಂಟ್ ಮಾಡಲಾಗಿದೆ. ಒಟ್ಟಾರೆ, ಶಿಕ್ಷಣ ದಂಧೆ ಅಂಶ ಇಲ್ಲಿ ಹೈಲೆಟ್.

ಯಾರು ಹೇಗೆ?

ಇಲ್ಲಿ ಟಿ ಪಾತ್ರದ ಮೂಲಕ ರಂಜನ್‌ ಗಮನ ಸೆಳೆಯುವುದರ ಜೊತೆ ಇಷ್ಟವಾಗುತ್ತಾರೆ. ಅಷ್ಟೇ ಅಲ್ಲ, ಡ್ಯಾನ್ಸ್ ಫೈಟಲ್ಲೂ ಓಕೆ ಎನಿಸುತ್ತಾರೆ. ಬಾಡಿ ಲಾಂಗ್ವೇಜ್ ಇನ್ನಷ್ಟು ತಿದ್ದಿಕೊಳ್ಳಬೇಕು. ಉಳಿದಂತೆ ಓಕೆ.
ನಿಶ್ಚಿತ ಸಿಕ್ಕ ಪಾತ್ರಕ್ಕೆ‌ ಮೋಸ‌ ಮಾಡಿಲ್ಲ.
ರಿಪೋರ್ಟರ್ ಆಗಿ ರಂಜನ್ ಅಣ್ಣನಾಗಿ ರಘು ಶಿವಮೊಗ್ಗ ಫೋಕಸ್ ಆಗಿದ್ದಾರೆ. ಅತ್ತಿಗೆಯಾಗಿ‌ ಹರಿಣಿ ಪಾತ್ರ ಚೆನ್ನಾಗಿ‌ ನಿರ್ವಹಿಸಿದ್ದಾರೆ. ಬಿ.ಸುರೇಶ ಖಾಸಗಿ ಕಾಲೇಜಿನ ವಂಚಕರಾಗಿ ಗಮನ ಸೆಳೆಯುತ್ತಾರೆ. ಉಳಿದಂತೆ ಬರುವ ಪ್ರಶಾಂತ್, ಸಂದೀಪ್, ನಾರಾಯಣ ಸ್ವಾಮಿ ನ್ಯಾಯ ಸಲ್ಲಿಸಿದ್ದಾರೆ.

ಒಟ್ಟಾರೆ ಈ ಸ್ಕ್ಯಾಮ್ ನಮ್ಮ ನಡುವೆಯೇ ಹೇಗೆಲ್ಲಾ ನಡೆಯುತ್ತೆ ಎಂಬುದು ಅಚ್ಚುಕಟ್ಟಾಗಿ ಮೂಡಿಬಂದಿದೆ.

Categories
ಸಿನಿ ಸುದ್ದಿ

ಕರ್ಫ್ಯೂ ರಾತ್ರೀಲಿ, ಕೊಲೆಯ ಕಥೆಯಲ್ಲಿ: ಟ್ವಿಸ್ಟು ಟೆಸ್ಟು ಇತ್ಯಾದಿ

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ಚಿತ್ರ: ‘ನೈಟ್‍ ಕರ್ಫ್ಯೂ’

ನಿರ್ದೇಶನ: ರವೀಂದ್ರ ವೆಂಶಿ

ನಿರ್ಮಾಣ: ಬಿ.ಎಸ್‍. ಚಂದ್ರಶೇಖರ್

ತಾರಾಗಣ: ಮಾಲಾಶ್ರೀ, ರಜನಿ ರಾಘವನ್‍, ಪ್ರಮೋದ್‍ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ, ಅಶ್ವಿನ್‍ ಹಾಸನ್, ಬಲ ರಾಜವಾಡಿ, ವರ್ಧನ್‍ ತೀರ್ಥಹಳ್ಳಿ ಇತರರು.

ಅದು ಕೊರೊನಾ ಸಮಯ. ಊರಾಚೆ ಇರುವ ಆಸ್ಪತ್ರೆಗೊಂದು ಕೇಸ್ ಬರುತ್ತೆ. ಅದು ಕೊರೊನಾ ಪಾಸಿಟಿವ್ ಹುಡುಗಿ. ಆದರೆ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಆ ಹುಡುಗಿ ಕಡೆಯವರು ವೈದ್ಯರ ಜೊತೆ ಚರ್ಚೆ ನಡೆಸುವಾಗಲೇ ಆ ಹುಡುಗಿಯ ಸಾವಾಗುತ್ತೆ. ಆದರೆ ಆ ಸಾವು ಕೊರೊನಾದಿಂದಲ್ಲ. ಹಾಗಾದರೆ ಏನದು? ಅಲ್ಲಿಂದ ಕುತೂಹಲ ಶುರು. ಅಲ್ಲಿ ಏನೆಲ್ಲಾ ಅವಘಡ ನಡೆಯುತ್ತೆ ಅನ್ನೋದೇ ಕಥೆ.

ಈ ಕಥೆ ನಡೆಯೋದು ಕೊರೊನಾ ಸಂದರ್ಭದಲ್ಲಿ. ಲಾಕ್ ಡೌನ್ ವೇಳೆ ನಡೆದ ಘಟನೆ ಎಷ್ಟೊಂದು ಭೀಕರವಾಗಿತ್ತು. ಯಾವ ಮಟ್ಟ ತಲುಪಿತ್ತು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅದನ್ನು ದುರ್ಬಳಕೆ ಮಾಡಿಕೊಡವರೆಷ್ಟು ಮಂದಿ ಅನ್ನೋದು ಕೂಡ ಆ ದೇವರಿಗೇ ಗೊತ್ತು.

ಇರಲಿ ಇದು ಸೂಕ್ಷ್ಮ ವಿಷಯ. ಅದನ್ನೇ ಇಟ್ಟುಕೊಂಡು ನೋಡಿಸಿಕೊಂಡು ಹೋಗುವಂತೆ ನಿರ್ದೇಶಕ ರವೀಂದ್ರ ವೆಂಶಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಇಡೀ ಚಿತ್ರ ಆಸ್ಪತ್ರೆಯಲ್ಲಿ ನಡೆಯುತ್ತೆ. ಲಾಕ್ ಡೌನ್ ವೇಳೆ ಅಂಥದ್ದೊಂದು ಘಟನೆ ನಡೆದು ಹೋಯ್ತು ಅನ್ನೋದು ಕೂಡ ಅಚ್ಚರಿ. ಆ ಅಚ್ಚರಿ ಏನೆಂಬುದನ್ನೊಮ್ಮೆ ಸಿನಿಮಾದಲ್ಲೇ ತಿಳಿಯಬೇಕು.

ನೋಡುಗರಿಗೆ ಇಲ್ಲಿ ಟ್ವಿಸ್ಟು ಇದೆ ಹಾಗೆಯೇ ಟೆಸ್ಟೂ ಇದೆ. ಅದೊಂದು ರೀತಿ ಟಾಸ್ಕ್ ಇದ್ದಂತೆ. ತಾಳ್ಮೆಯಿಂದ ನೋಡಿದರೆ ಮಾತ್ರ ಕೊರೊನಾ ವೇಳೆ ನಡೆದ ಕರಾಳ ಸತ್ಯದ ಅರಿವಾಗುತ್ತೆ. ಅಷ್ಟಕ್ಕೂ ಆ ಸತ್ಯವೇನು? ಈ ಪ್ರಶ್ನೆಗೆ ಉತ್ತರ ಒಂದು ಕೊಲೆ!

ಮೊದಲರ್ಧ ಸಿನಿಮಾ ಕೊಂಚ ನಿಧಾನ ಎನಿಸಿದರೂ, ದ್ವಿತಿಯಾರ್ಧ ತಕ್ಕಮಟ್ಟಿಗೆ ಇಂಟ್ರೆಸ್ಟ್ ಎನಿಸುತ್ತೆ ಅದಕ್ಕೆ ಕಾರಣ ಬರುವ ಕೆಲ ತಿರುವು. ಆ ತಿರುವು ಏನೆಂಬ ಕುತೂಹಲ ಇದ್ದರೆ ಸಿನಿಮಾ ನೋಡಿ.

ಕಥೆ ಏನು?

ಕೋವಿಡ್‍ ವೇಳೆ ನೈಟ್‍ ಕರ್ಫ್ಯೂ ಇರುತ್ತೆ. ಆ ಒಂದು ರಾತ್ರಿ ನಡೆಯುವ ಕಥೆ ಇದು. ಪ್ರಾಮಾಣಿಕವಾಗಿ ರೋಗಿಗಳ ಉಪಚರಿಸೋ ವೈದ್ಯೆ ದುರ್ಗಾ (ಮಾಲಾಶ್ರೀ) ಅವರ ಜೊತೆ ಕಿರಿಯ ವೈದ್ಯೆ ವೇದ (ರಂಜನಿ ರಾಘವನ್‍) ಕೆಲಸ ಮಾಡುವ ಆಸ್ಪತ್ರೆಗೆ ಒಂದು ಕೋವಿಡ್ ಕೇಸ್ ಬರುತ್ತೆ. ಅಲ್ಲೊಂದು ಘಟನೆ ನಡೆಯುತ್ತೆ. ಆ ಘಟನೆ ಇಡೀ ಕಥೆಯ ವೇಗ ಹೆಚ್ಚಿಸುತ್ತೆ. ಒಂದು ರೀತಿ ರಣರಂಗವೇ ನಡೆಯುತ್ತೆ. ಅದಕ್ಕೆ ಕಾರಣ ಕೊಲೆ!! ಅರೇ ಕೋವಿಡ್ ಆಸ್ಪತ್ರೆಯಲ್ಲಿ ಕೊಲೆಯೇ? ಈ ಪ್ರಶ್ನೆ ಸಹಜ. ಆದರೆ, ನಿರ್ದೇಶಕರು ಆ ಕೊಲೆ ಯಾಕಾಯಿತು, ಹೇಗಾಯಿತು ಎಂಬುದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅಷ್ಟಕ್ಕೂ ಕೊಲೆ ಮಾಡಿದ್ಯಾರು ಯಾಕೆ ಎಂಬುದೇ ಸಿನಿಮಾದ ಹೈಲೆಟ್.

ಮಾಲಾಶ್ರೀ ಇದ್ದ ಮೇಲೆ ಹೊಡೆದಾಟ ಇರದಿದ್ದರೆ ಹೇಗೆ? ಅವರಿಲ್ಲಿ ಡಾಕ್ಟರ್. ಆದರೂ ಎದುರಾಳಿಗಳನ್ನು ಹಿಗ್ಗಾಮುಗ್ಗ ಜಾಡಿಸುತ್ತಾರೆ. ಇಲ್ಲಿ ಮಾಲಾಶ್ರೀ ಫ್ಯಾನ್ಸ್ ಗೆ ಖಂಡಿತ ಫೈಟ್ ಇಷ್ಟವಾಗುತ್ತೆ. ಭರ್ಜರಿ ಫೈಟ್ಸ್ ಇಲ್ಲಿ ಕಾಣಬಹುದು.

ಸಿನಿಮಾ ಗಂಭೀರವಾಗಿ ಸಾಗುತ್ತಿರುವ ಮಧ್ಯೆ ಸಾಧುಕೋಕಿಲ ಅವರ ಹಾಸ್ಯ ಕಾಣಿಸಿಕೊಂಡು ಸ್ವಲ್ಪ ತಾಳ್ಮೆ ಕೆಡಿಸುತ್ತೆ. ಅದು ಬಿಟ್ಟರೆ ಉಳಿದಂತೆ ಯಾವ ಸಮಸ್ಯೆ ಇಲ್ಲ. ಒಂದೇ ಕಾಸ್ಟ್ಯೂಮ್ ಬಹುತೇಕ ಒಂದೇ ಲೊಕೇಷನ್ ಇಷ್ಟರಲ್ಲೇ ಕಥೆ ಕಟ್ಟಿಕೊಡುವ ಜಾಣತನದಲ್ಲಿ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ. ಸಣ್ಣಪುಟ್ಟ ಮಿಸ್ಟೇಕ್ ಇಲ್ಲೂ ಇದೆ. ಅದನ್ನು ಹೊರತು ಪಡಿಸಿದರೆ ಕೊರೊನಾ ‘ ‘ಭಯ’ ಕಾಡುವುದಿಲ್ಲ.

ಯಾರು ಹೇಗೆ ನಟಿಸಿದ್ದಾರೆ?

ಮಾಲಾಶ್ರೀ ಅವರಿಲ್ಲಿ ವೈದ್ಯರಾಗಿ ಇಷ್ಟವಾಗುವುದರ ಜೊತೆಗೆ ಮಾನವೀಯತೆಗಾಗಿ ಹೊಡೆದಾಡುವ ದುರ್ಗೆಯಾಗಿಯೂ ಗಮನ ಸೆಳೆಯುತ್ತಾರೆ. ಮೊದಲಾರ್ಧ ಅಸಹಾಯಕಿ ಎನಿಸುವ ಅವರು ದ್ವಿತಿಯಾರ್ಧ ಅಬ್ಬರಿಸಿ ಬೊಬ್ಬರಿಸುತ್ತಾರೆ.

ಪ್ರಮೋದ್ ಕೂಡ ಸಿಕ್ಕ ಪಾತ್ರಕ್ಕೆ ಮೋಸ ಮಾಡದೆ ಹೈಲೆಟ್ ಆಗಿದ್ದಾರೆ. ಮಾಲಾಶ್ರೀ ಎದುರು ಹೊಡೆದು ಹೊಡೆಸಿಕೊಳ್ಳುವ ನಟನಾಗಿ ಸೈ ಎನಿಸಿಕೊಂಡಿದ್ದಾರೆ. ಅಶ್ವಿನ್ ಹಾಸನ್, ವರ್ದನ್ ತೀರ್ಥಹಳ್ಳಿ ಬಲರಾಜವಾಡಿ ಇಲ್ಲಿ ವಿಲನ್ ಗಳಾಗಿ ಗಮನ ಸೆಳೆದಿದ್ದಾರೆ. ರಂಜನಿ ಅವರಿಲ್ಲಿ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ರಂಗಾಯಣ ರಘು ಇನ್ಸ್ ಪೆಕ್ಟರ್ ಆಗಿ ಖದರ್ ತೋರಿಲ್ಲ. ಸಾಧು ಕೋಕಿಲ, ಮಂಜು ಅವರು ಹೊರತಾಗಿಲ್ಲ.

ಪ್ರಮೋದ್‍ ಭಾರತೀಯ ಅವರು ತಮ್ಮ ಕ್ಯಾಮೆರಾ ಕೈ ಚಳಕದಲ್ಲಿ ಕತ್ತಲಾಟವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ ಅಷ್ಟಾಗಿ ರುಚಿಸಲ್ಲ.

Categories
ಸಿನಿ ಸುದ್ದಿ

ರಾಮಾಯಣಕ್ಕೆ ಸಾಥ್ ಕೊಟ್ಟ ರಾಕಿಭಾಯ್-ನಮಿತ್ ಮಲ್ಹೋತ್ರಾ: ರಾಮಾಯಣ ಚಿತ್ರ ನಿರ್ಮಿಸಲು ಸೈ ಎಂದ ಯಶ್

ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ರಾಮಾಯಣ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ.

ರಾಮಾಯಣ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡೋದಿಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೋ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕ್ರತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದು, ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆ ಎಂದರು.

ಯಶ್ ಮಾತನಾಡಿ, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಗಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ನ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆ ಎಂದರು.

ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.

ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.

Categories
ಸಿನಿ ಸುದ್ದಿ

ಇದು ಶಿಕ್ಷಣ ವಂಚನೆ ಕಥೆ: ಸ್ಕ್ಯಾಮ್ 1770 ಏಪ್ರಿಲ್ 12ಕ್ಕೆ ರಿಲೀಸ್

ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಿಸಿರುವ, ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ “SCAM 1770” ಚಿತ್ರ ಏಪ್ರಿಲ್ 12 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ SCAM 1770. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇ ಬೇಕಾದ ಚಿತ್ರವಿದು.

ಡಾ. ಇಂದು ನಟೇಶ್ ಹಾಗೂ ಅಡ್ವೊಕೇಟ್ ನೇತ್ರಾವತಿ ಅವರು ಕಥೆ ಬರೆದಿದ್ದು, ವಿಕಾಸ್ ಪುಷ್ಪಗಿರಿ ಹಾಗೂ ಶಂಕರ್ ರಾಮನ್ ಚಿತ್ರಕಥೆ ಬರೆದಿದ್ದಾರೆ‌. ಸಂಭಾಷಣೆ ಶಂಕರ್ ರಾಮನ್ ಅವರದು.

ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನ “SCAM 1770” ಚಿತ್ರಕ್ಕಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್(ದಡ್ಡ ಪ್ರವೀಣ), ನಿಶ್ವಿತ(ನಾಯಕಿ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!