#PMF49 ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ
ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡು, ಒಟಿಟಿಯಲ್ಲಿಯೂ ಕಮಾಲ್ ಮಾಡುತ್ತಿದೆ. ಹೀಗಿರುವಾಗಲೇ ಇದೇ ಗಣೇಶ್ ಅಭಿಮಾನಿಗಳಿಗೆ ಈಗ ಹೊಸದೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ.
ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ #PMF49 ಸಿನಿಮಾದಲ್ಲಿ ನಾಯಕನಾಗಿ ಗಣೇಶ್ ನಟಿಸಲಿದ್ದಾರೆ. ಈ ಮೂಲಕ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಿಂದ ಕನ್ನಡದಲ್ಲಿಯೂ ದೊಡ್ಡ ದೊಡ್ಡ ಸಿನಿಮಾಗಳು ಮೂಡಿಬರಲಿವೆ.
ಕಾರ್ತಿಕೇಯ 2, ವೆಂಕಿ ಮಾಮಾ, ಓ ಬೇಬಿ, ಧಮಾಕಾ ಮತ್ತು ನ್ಯೂ-ಸೆನ್ಸ್ನಂತಹ ಬ್ಲಾಕ್ಬಸ್ಟರ್ ಹಿಟ್ಗಳನ್ನು ಕೊಟ್ಟ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ತೆಲುಗು ಚಿತ್ರೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದೆ. ಇದೀಗ #PMF49 ಮೂಲಕ ಸ್ಯಾಂಡಲ್ವುಡ್ನ ಸ್ಟಾರ್ ನಟ ಗಣೇಶ್ ಅವರ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಅದ್ಧೂರಿ ಸಿನಿಮಾ ನಿರ್ಮಾಣದ ಪ್ಲಾನ್ ನಡೆಯುತ್ತಿದೆ.
ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ, ಒಳ್ಳೆಯ ಕಥೆ ಮತ್ತು ಅತ್ಯಾಧುನಿಕ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಈ ಮೂಲಕ ಕನ್ನಡದ ಚಿತ್ರರಂಗದ ಸಾಮರ್ಥ್ಯವನ್ನು ಮಗದಷ್ಟು ಹಿರಿದಾಗಿಸುವ ಧ್ಯೇಯ ಈ ಸಿನಿಮಾ ತಂಡದ್ದು.
ಖ್ಯಾತ ನೃತ್ಯ ನಿರ್ದೇಶಕ ಧನಂಜಯ್ ಈ ಸಿನಿಮಾ ಮೂಲಕ ದೊಡ್ಡ ಪ್ರಾಜೆಕ್ಟ್ವೊಂದರ ಜವಾಬ್ದಾರಿ ಹೊತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಟಿಜಿ ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಅದ್ಧೂರಿಯಾಗಿಯೇ ಸಿನಿಮಾ ಸೆಟ್ಟೇರಲಿದೆ. ಇನ್ನುಳಿದಂತೆ ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿಯನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ನೀಡಲಿದೆ.
ಮಿಲಿಂದ್ – ರೆಚೆಲ್ ಡೇವಿಡ್ ಅಭಿನಯದ ಈ ಚಿತ್ರ ಫೆಬ್ರವರಿ 7 ರಂದು ರಾಜ್ಯಾದ್ಯಾಂತ ರಿಲೀಸ್.
ಆರಂಭದಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ “ಅನ್ ಲಾಕ್ ರಾಘವ” ಚಿತ್ರ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.
ಬಿಡುಗಡೆಗೂ ಪೂರ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಾಯಕ ಮಿಲಿಂದ್, ನಿರ್ಮಾಪಕ ಮಂಜುನಾಥ್ ದಾಸೇಗೌಡ ಹಾಗೂ ಚಿತ್ರತಂಡದ ಸದಸ್ಯರು ಶ್ರೀಮಂಜುನಾಥಸ್ವಾಮಿಯ ದರ್ಶನ ಮಾಡಿ, ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇನ್ನೇನು 2025ರ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿಯಿದೆ, ವರ್ಷದ ಕೊನೆಯಲ್ಲಿ ಬಂದ ಯುಐ, ಮ್ಯಾಕ್ಸ್ ಚಿತ್ರಗಳು ಭರ್ಜರಿ ಯಶಸ್ಸು ಕಾಣುತ್ತಿವೆ, ಈಗ ಹೊಸ ವರ್ಷದ ಆರಂಭದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರ ಎಂದರೆ ಕೆಡಿ. ಏಕ್ ಲವ್ ಯಾ ನಂತರ ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಚಿತ್ರವನ್ನು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ,
ಕೆಡಿ ಮಾತಿನ ಭಾಗದ ಚಿತ್ರೀಕರಣ ಮುಗಿದು, 2 ಹಾಡುಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ. ಮಂಗಳವಾರ ಈ ಚಿತ್ರದ ಮೊದಲ ಹಾಡು, ಜನಪದ ಶೈಲಿಯ ಶಿವ ಶಿವ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಒರಾಯನ್ ಮಾಲ್ನಲ್ಲಿ ನೆರವೇರಿತು, ಈ ಹಾಡಿಗೆ ಪ್ರೇಮ್ ಹಾಗೂ ಕೈಲಾಶ್ಖೇರ್ ದನಿಯಾಗಿದ್ದು, ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ. ಪ್ರೇಮ್ ನಿರ್ದೇಶನದ ಯಾವುದೇ ಚಿತ್ರಗಳಲ್ಲಿ ಹಾಡುಗಳೆ ಹೈಲೈಟಾಗಿರುತ್ತೆ. ಅದೇರೀತಿ ಈ ಚಿತ್ರದಲ್ಲೂ ಅವರು ಸಂಗೀತಕ್ಕೆ ಕಥೆ, ಮೇಕಿಂಗ್ ನಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಶಿವ ಶಿವ ಹಾಡಲ್ಲಿ ಶಿವನ ವೈಭವೀಕರಣವನ್ನು ಗ್ರಾಫಿಕ್ ಮೂಲಕ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಸಂಗೀತ ಆ ಚಿತ್ರದ ಇನ್ ವಿಟೇಶನ್ ಇದ್ದಹಾಗೆ, ಶಿವ ಶಿವ ಹಾಡಿನಲ್ಲಿರುವ ಕಣ್ ಕೋರೈಸುವ ವಿಶ್ಯುಯೆಲ್ಸ್, ಅದ್ದೂರಿ ಮೇಕಿಂಗ್, ಕಿವಿಗಪ್ಪಳಿಸುವ ಹಾಡಿನ ಟ್ಯೂನ್ ಎಂಥವರನ್ನೂ ಬಡಿದೆಬ್ಬಿಸುವಂತಿದೆ.
ವೇದಿಕೆಯಲ್ಲಿ ನಿರ್ದೇಶಕ ಪ್ರೇಮ್, ನಾಯಕ ದ್ರುವ ಸರ್ಜಾ, ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಪ್ರೀತ್, ಆನಂದ್ ಆಡಿಯೋದ ಶಾಮ್, ಕೊರಿಯೋಗ್ರಾಫರ್ ಮೋಹನ್, ಕಲಾನಿರ್ದೇಶಕ ಮೋಹನ್ ಬಿ.ಕೆರೆ ಸೇರಿದಂತೆ ಇಡೀ ಚಿತ್ರತಂಡ ಹಾಜರಿದ್ದು ಮಾತನಾಡಿದರು, ಹೊಸ ವರ್ಷಕ್ಕೆ ನಮ್ಮ ಚಿತ್ರದ ಮೊದಲ ಹಾಡಾಗಿ ಶಿವ ಶಿವ ಬರ್ತಾ ಇದೆ, ಕೆಡಿ ಅಂದ್ರೆ ಕಾಳಿದಾಸ, 70ರ ದಶಕದಲ್ಲಿದ್ದ ಜನಪ್ರಿಯ ಜನಪದ ಹಾಡಿನ ಸಾಲನ್ನಿಟ್ಟುಕೊಂಡು ಮಾಡಿದ ಸಾಂಗ್ ಇದು. ಈ ಹಾಡನ್ನು 5 ಭಾಷೆಯಲ್ಲೂ ಬಿಡುಗಡೆ ಮಾಡಿದ್ದೇವೆ, ಹಿಂದಿ ಸಾಂಗನ್ನು ಅಜಯ್ ದೇವಗನ್, ತೆಲುಗು ಸಾಂಗನ್ನು ಹರೀಶ್ ಶಂಕರ್ ಹಾಗೂ ತಮಿಳು ಸಾಂಗನ್ನು ಲೋಕೇಶ್ ಕನಕರಾಜು ರಿಲೀಸ್ ಮಾಡಿದ್ದಾರೆ. ಪೂರ್ತಿ ಹಾಡನ್ನು ಇನ್ನೂ ಬಿಟ್ಟಿಲ್ಲ, ಫುಲ್ ಸಾಂಗ್ ಬೇರೆಯದೇ ಲೆವೆಲ್ನಲ್ಲಿದೆ. 1970ರ ಕಾಲಮಾನವನ್ನು ತೋರಿಸೋದು ಅಷ್ಟು ಸುಲಭವಲ್ಲ, ಆಗ ಬೆಂಗಳೂರು ಹೇಗಿತ್ತು ಅಂತ ಮೋಹನ್ ಬಿ.ಕೆರೆ ಅವರು ಅದ್ಭುತ ಸೆಟ್ ಹಾಕಿದ್ದರು. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಮುಂದೆ ಬರೋ ಸಾಂಗ್ ಎಲ್ಲಾ ಯೂನಿಕ್ ಆಗಿರುತ್ತವೆ. ಇವತ್ತಿನವರೆಗೂ ನೋಡಿರದ ರೀಶ್ಮಾ ಅವರನ್ನು ಈ ಚಿತ್ರದಲ್ಲಿ ಕಾಣಬಹುದು.
ಆಕೆ ಉತ್ತಮ ಪರ್ ಫಾರ್ಮರ್, ಇನ್ನು ಧ್ರುವ ನನ್ನ ಬ್ರದರ್ ಇದ್ದಹಾಗೆ, ಕಾಳಿದಾಸ ಎಷ್ಟು ಇನ್ನೋಸೆಂಟೋ, ಅಷ್ಟೇ ರಾ ಆಗಿರುತ್ತಾನೆ, ಆ ಪಾತ್ರವನ್ನು ದ್ರುವ ರಿಯಲಿಸ್ಟಿಕ್ ಆಗಿ ಮಾಡಿದ್ದಾರೆ. ಈತನನ್ನು ಶಿವಣ್ಣ , ಅಪ್ಪು ಸರ್ಗೆ ಹೋಲಿಸುತ್ತೇನೆ, ಏಕೆಂದರೆ ಅಷ್ಟು ಎನರ್ಜಿ ಈತನಲ್ಲಿದೆ, ಚಲಿಸುವ ಕಾರ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾನೆ. ನನ್ನ ಸಿನಿಮಾದ ಫಸ್ಟ್ ಹೀರೋನೇ ಮ್ಯೂಸಿಕ್, ನನ್ನ ಕಾಟವನ್ನು ತಡೆದುಕೊಂಡು ಅರ್ಜುನ್ ಜನ್ಯ ಅದ್ಭುತವಾದ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಕೆವಿಎನ್ ಸಂಸ್ಥೆ ನನಗೆ ಈವೆಗೂ ಯಾವುದಕ್ಕೂ ಕೊರತೆ ಮಾಡಿಲ್ಲ, ಸುಪ್ರೀತ್ ನಮ್ಮ ಫ್ಯಾಮಿಲಿ ಇದ್ದಹಾಗೆ, ಬರೋ ದಿನಗಳಲ್ಲಿ ಮುಂಬೈನಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡುವ ಪ್ಲಾನ್ ಕೂಡ ಇದೆ ಎಂದು ಚಿತ್ರದ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದರು. ಉಳಿದಂತೆ 2 ಹಾಡುಗಳ ಶೂಟಿಂಗ್ ಮಾತ್ರ ಬಾಕಿಯಿದ್ದು, ಅದರಲ್ಲಿ ಒಂದು ಹಾಡಿಗೆ ಸೆಟ್ ಹಾಕಿ ಚಿತ್ರೀಕರಿಸಲಾಗುತ್ತದೆ. ಇನ್ನೊಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸುವ ಪ್ಲಾನಿದೆ. ಚಿತ್ರಕ್ಕೆ ಒಟ್ಟು 150 ದಿನಗಳ ಶೂಟಿಂಗ್ ಮಾಡಿದ್ದೇವೆ ಎಂದೂ ಸಹ ಹೇಳಿದರು. ನಾಯಕ ಧ್ರುವ ಮಾತನಾಡಿ ಈ ಹಾಡು ಬರಲು ಮುಖ್ಯ ಕಾರಣ ಪ್ರೇಮ್, ಅರ್ಜುನ್ ಜನ್ಯ ಅವರು ಕಂಪೋಜ್ ಮಾಡಿರುವ ಸ್ಟೈಲ್ ತುಂಬಾ ಚೆನ್ನಾಗಿತ್ತು. ಜನ್ಯ ಅವರ ಜತೆ ಫಸ್ಟ್ ಟೈಮ್ ನಾನು ವರ್ಕ್ ಮಾಡಿರೋದು. ನಿರ್ಮಾಪಕ ವೆಂಕಟ್ ಅವರು ಫೋಕ್ ಸಾಂಗ್ ಬೇಕು ಎಂದು ಹೇಳಿದ್ದರು, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ, ಅದ್ದೂರಿ, ಬಹದ್ದೂರ್ ಚಿತ್ರಗಳ ನಂತರ ಮತ್ತೊಂದು ಮುದ್ಧತೆ ಕ್ಯಾರಿ ಆಗಿರೋ ಪಾತ್ರ ನನ್ನದು ಎಂದು ಹೇಳಿದರು.
ನಿರ್ಮಾಪಕ ಸುಪ್ರೀತ್ ಮಾತನಾಡುತ್ತ ಕೆಡಿ ಚಿತ್ರದಲ್ಲಿ ಆಡಿಯೋ ಮುಖ್ಯಪಾತ್ರ ವಹಿಸುತ್ತದೆ. ಚಿತ್ರಕ್ಕಾಗಿ ಪ್ರತಿಯೊಬ್ಬರೂ ತುಂಬಾ ಶ್ರಮ ಹಾಕಿದ್ದಾರೆ ಎಂದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಕೆ.ಡಿ. ಚಿತ್ರದ ಮ್ಯೂಸಿಕ್ ಗೆ ಹಾಕಿದ ಹಣದಲ್ಲಿ ಒಂದು ದೊಡ್ಡ ಸಿನಿಮಾನೇ ಮಾಡಬಹುದಿತ್ತು. ಪ್ರೇಮ್ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿನೂ ಅಲ್ಲಾಡೋದಿಲ್ಲ. ಆಕ್ಟಿಂಗ್, ಮ್ಯೂಸಿಕ್ ಅಲ್ಲದೆ ಟ್ರ್ಯಾಕ್ ಸಿಂಗರ್ ಕೂಡ ಅವರೇ ಆಗಿರುತ್ತಾರೆ. ಕೀ ಬೋರ್ಡ್ ಒಂದನ್ನು ನಮಗೆ ಬಿಡುತ್ತಾರೆ. ಅವರೆಂದೂ ಮೊಬೈಲ್ ನಲ್ಲಿ ಸಾಂಗ್ ಕಳಿಸಲ್ಲ ಅವರೇ ಬರ್ತಾರೆ, ಪೆನ್ನಲ್ಲಿ ಲಿರಿಕ್ ಬರೀತಾರೆ. ಕೊರೋನಾ ಸಮಯದಲ್ಲಿ ನಮ್ಮಣ್ಣನ್ನ ಕಳೆದುಕೊಂಡೆ, ಆದರೆ ಪ್ರೇಮ್ ಆ ಜಾಗವನ್ನು ತುಂಬಿದ್ದಾರೆ. ಯೂರೋಪ್ ನಲ್ಲಿ 264 ಪೀಸ್ ಆರ್ಕೆಸ್ಟ್ರಾ ಮಾಡಿಸಿದ್ದಾರೆ ಎಂದು ಮ್ಯೂಸಿಕ್ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದರು. ನಾಯಕಿ ರೀಶ್ಮಾ ನಾಣಯ್ಯ ಮಾತನಾಡುತ್ತ ಈ ಚಿತ್ರದಲ್ಲಿ ನನಗೆ ಸಾಕಷ್ಟು ಕಲಿಯುವುದಿತ್ತು. ಪ್ರೇಮ್ ಸರ್, ನನಗೆ ಎರಡನೇಬಾರಿಗೆ ಅವಕಾಶ ಕೊಟ್ಟಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಗೆ ತುಂಬಾ ಇಷ್ಟವಾಗುವಂಥ ಸಿನಿಮಾ ಎಂದು ಹೇಳಿದರು. ಕಲಾನಿರ್ದೇಶನ ಮೋಹನ್ ಬಿ.ಕೆರೆ ಮಾತನಾಡಿ ಸುಮಾರು 20 ಎಕರೆ ಪ್ರದೇಶದಲ್ಲಿ ಸೆಟ್ಹಾಕಿ ಬಹುತೇಕ ಶೂಟಿಂಗ್ ನಡೆಸಿದ್ದೇವೆ. ಅಲ್ಲಿ ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಮೈಸೂರು ಬ್ಯಾಂಕ್, ಧರ್ಮರಾಯ ಟೆಂಪಲ್, ಶಿವಾಜಿ ಟಾಕೀಸ್ ಹೀಗೆ ಎಲ್ಲವನ್ನೂ ರಿಕ್ರಿಯೇಟ್ ಮಾಡಿದ್ದೇವೆ ಎಂದು ಹೇಳಿದರು. ಉಳಿದಂತೆ ಆನಂದ್ ಆಡಿಯೋದ ಶ್ಯಾಮ್, ನೃತ್ಯ ನಿರ್ದೇಶಕ ಮೋಹನ್, ಛಾಯಾಗ್ರಾಹಕ ಡೇವಿಡ್, ಸಾಹಿತಿ ಮಂಜುನಾಥ್ ಬಿ.ಎಸ್. ತಂತಮ್ಮ ಕೆಲಸಗಳ ಬಗ್ಗೆ ವಿವರಿಸಿದರು.
ಪ್ಯಾನ್ ಇಂಡಿಯಾ ಕೆಡಿ ಚಿತ್ರದಲ್ಲಿ ಬಾಲಿವುಡ್ ನ ಸಂಜಯ್ದತ್, ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಅಂದಹಾಗೆ, 1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್ಸ್ಟರ್ ಕಥೆ ಈ ಚಿತ್ರಲ್ಲಿದೆ, ಚಿತ್ರಕ್ಕಾಗಿಯೇ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್ಹಾಕಲಾಗಿತ್ತು. ಆರು ಕಲರ್ ಫುಲ್ ಹಾಡುಗಳಿಗೆ ಆರು ಜನ ಕೊರಿಯಾಗ್ರಾಫರ್ಗಳು ಕೆಲಸ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಕನ್ನಡ, ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಕೆಡಿ ಚಿತ್ರ ಮುಂದಿನ ವರ್ಷದ ಯುಗಾದಿ ವೇಳೆಗೆ ತೆರೆಕಾಣಲಿದೆ.
ಭಾರತೀಯ ಚಿತ್ರರಂಗ ಕಂಡ ಅಪರೂಪದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆನಗಲ್ ಅವರಿಗೆ ಭಾರತ ಸರ್ಕಾರ 1976 ರಲ್ಲಿ ಪದ್ಮಶ್ರೀ ಮತ್ತು 1991 ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿತ್ತು. ಅವರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಮಂಥನ್, ಜುಬೇದಾ ಮತ್ತು ಸರ್ದಾರಿ ಬೇಗಂ ಸೇರಿವೆ.
“ನಾನು ಬಂದೇ ಬರುತ್ತೀನಿ ಅಂತ ಚಿತ್ರದುರ್ಗದ ಜನತೆಗೆ ಮಾತು ಕೊಟ್ಟಿದ್ದೆ. ಹಾಗಾಗಿ ಒಬ್ಬನೇ ಬಂದಿಲ್ಲ, ಜತೆಗೆ ನನ್ನ ಕುಟುಂಬವನ್ನೂ ಕರೆದುಕೊಂಡು ಬಂದಿದ್ದೇನೆ. ಈ ಕುಟುಂಬಕ್ಕೆ ಪರಿಚಯಿಸೋಣ ಅಂತ” ಎಂದು ಕಿಚ್ಚ ಸುದೀಪ್ ಚಿತ್ರದುರ್ಗದಲ್ಲಿ ನಡೆದ ಮ್ಯಾಕ್ಸ್ ಚಿತ್ರದ ಪ್ರಿರಿಲೀಸ್ ಇವೆಂಟ್ ವೇದಿಕೆಯಲ್ಲಿ ಮಾತನಾಡುತ್ತಾ ಹೇಳಿದರು.
ಟ್ರೇಲರ್ ಲಾಂಚ್ ಆದ ನಂತರ ವೇದಿಕೆಗೆ ಆಗಮಿಸಿದ ಸುದೀಪ್ ಅವರು ಮಾತನಾಡುತ್ತಾ, ನನಗೆ ಪ್ರತಿಸಲ ಇಲ್ಲಿ ಬರೋದಿಕ್ಕೆ ತುಂಬಾ ಖುಷಿಯಾಗುತ್ತೆ. “ಹುಚ್ಚ” ಅಂತಹ ಅದ್ಭುತ ಸಿನಿಮಾ ಕೊಟ್ಟ ಕೋಟೆನಾಡಿದು. ನಿಮ್ಮನ್ನು ಎರಡೂವರೆ ವರ್ಷ ಕಾಯಿಸಿದ್ದಕ್ಕೆ ದಯವಿಟ್ಟು ಕ್ಷಮಿಸಿಬಿಡಿ. ಇನ್ಮುಂದೆ ಹೀಗಾಗಲ್ಲ. ಇದೇ 25ಕ್ಕೆ “ಮ್ಯಾಕ್ಸ್” ಸಿನಿಮಾ ನಿಮ್ಮ ಮುಂದೆ ತರೋದಿಕ್ಕೆ ಖುಷಿಯಾಗುತ್ತಿದೆ. ನಿರ್ಮಾಪಕರಿಗೆ, ಕಾರ್ತಿಕ್ ಗೌಡ ಅವರಿಗೆ, ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಮುಖ್ಯವಾಗಿ ರಾಕ್ ಲೈನ್ ವೆಂಕಟೇಶ್ ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು.
ಅವರಿಲ್ಲದೆ ಇದ್ದರೆ ಸಿನಿಮಾ ಈ ಹಂತಕ್ಕೆ ಬರುತ್ತಿರಲಿಲ್ಲ. ಉಪೇಂದ್ರ ಅವರ ಯುಐ ಫಾಲೋಅಪ್ ನಲ್ಲಿ ಮ್ಯಾಕ್ಸ್ ಬರುತ್ತದೆ. ಇದರಲ್ಲಿ ಬಹಳಷ್ಟು ಹೊಸಬರಿದ್ದಾರೆ. ಅವರಿಗೆಲ್ಲ ಒಳ್ಳೇದಾಗಲಿ. ಸಿನಿಮಾ ತುಂಬಾ ಚೆನ್ನಾಗಿದೆ. ಮೂರು ತಿಂಗಳು ಪ್ರತಿ ರಾತ್ರಿ ಮಾಡುತ್ತಿದ್ದ ಶೂಟಿಂಗ್ ಮುಗಿದ ಖುಷಿಗೆ ಕಾಳಿಮಾತೆ ಮುಂದೆ ಹಾಕಿದ್ದ ಸ್ಟೆಪ್ಪೇ ಈಗ ವೈರಲ್ ಆಗಿದೆ. ಕನ್ನಡ ಚಿತ್ರರಂಗವನ್ನು ಇದೇ ರೀತಿ ಒಗ್ಗಟ್ಟಾಗಿ ನೋಡಬೇಕು ಅಂತ ಇಷ್ಟಪಡೋನು ನಾನು. ಬೇರೆ ರಾಜ್ಯದ ಸಿನಿಮಾಗಳಿಗೆ ಸಪೋರ್ಟ್ ಮಾಡಿದ ಹಾಗೆ ನಮ್ಮ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ಹೇಳಿದರು.
ವಿತರಕ ಕಾರ್ತಿಕ್ ಗೌಡ ಮಾತನಾಡುತ್ತ ಈಗಾಗಲೇ ಮ್ಯಾಕ್ಸ್ ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಬರುತ್ತಿದೆ. ಪೈಲ್ವಾನ್ ಮೂಲಕ ಆರಂಭವಾದ ನಮ್ಮ ಸುದೀಪ್ ಅವರ ಬಾಂಧವ್ಯ ಈ ಚಿತ್ರದವರೆಗೂ ಬಂದಿದೆ. 2025ರಲ್ಲಿ ಕೆ.ಆರ್.ಜಿ.ಸ್ಟೂಡಿಯೋಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಸಹಯೋಗದಲ್ಲಿ ಸುದೀಪ್ ಅವರ ನಿರ್ದೇಶನದ ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣವಾಗಲಿದೆ ಎಂದರು.
ಚಿತ್ರದುರ್ಗದ ಎಸ್.ಜೆ.ಎಂ.ಸ್ಟೇಡಿಯಂನಲ್ಲಿ ನಡೆದ “ಮ್ಯಾಕ್ಸ್” ಚಿತ್ರದ ಟ್ರೇಲರ್ ಲಾಂಚ್ ಹಾಗೂ ಪ್ರಿರಿಲೀಸ್ ಸಮಾರಂಭದ ವೇದಿಕೆ ಮೇಲೆ ಡಾಲಿ ಧನಂಜಯ್, ಡಾರ್ಲಿಂಗ್ ಕೃಷ್ಣ, ಯುವ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಶ್ರೇಯಸ್ ಮಂಜು, ಸುಕೃತಾ ವಾಗ್ಲೆ, ನಿರ್ದೇಶಕರಾದ ಎ.ಪಿ. ಅರ್ಜುನ್ ಹಾಗೂ ರೋಹಿತ್ ಪದಕಿ, ವಿತರಕರಾದ ಕೆ.ಆರ್.ಜಿ.ಸ್ಟುಡಿಯೋಸ್ ನ ಕಾರ್ತಿಕ್ ಗೌಡ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ನವೀನ್ ಶಂಕರ್ ಮುಂತಾದವರು ಕಿಚ್ಚ ಸುದೀಪ್ ಹಾಗೂ “ಮ್ಯಾಕ್ಸ್” ಚಿತ್ರದ ಕುರಿತಂತೆ ಮಾತನಾಡಿದರು.
ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಹಾಗೂ ಪುತ್ರಿ ಸಾನ್ವಿ ಸುದೀಪ್ ಕುತೂಹಲದಿಂದ ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದರು. ವರ್ಣರಂಜಿತ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಹಾಡುಗಳಿಗೆ ನಟಿ ಶರಣ್ಯ ಶೆಟ್ಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕಾರ್ತೀಕ್ ಮಹೇಶ್ ಅವರ ಅದ್ಭುತ ನೃತ್ಯಪ್ರದರ್ಶನ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು.
ಕಲೈಪುಲಿ ಎಸ್. ತನು ಅವರ ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಶನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ಅವರ ನಿರ್ದೇಶನದ ಬಹು ನಿರೀಕ್ಷಿತ “ಮ್ಯಾಕ್ಸ್” ಚಿತ್ರದ ಕನ್ನಡದಲ್ಲಿ ಡಿಸೆಂಬರ್ 25 ರಂದು ಹಾಗೂ ಉಳಿದ ಭಾಷೆಗಳಲ್ಲಿ ಡಿ.27ರಂದು ಬಿಡುಗಡೆಯಾಗುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಈವೆಂಟ್ ಅಮೆರಿಕಾದ ಡಲ್ಲಾಸ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯುಎಸ್ನಲ್ಲಿ ತೆಲುಗು ಚಿತ್ರವೊಂದರ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಈ ಸಿನಿಮಾ ಆ ದಾಖಲೆ ಮಾಡಿದೆ. ಡಿಸೆಂಬರ್ 21ರಂದು ಅಮೆರಿಕದಲ್ಲಿ ‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ರಾಮ್ ಚರಣ್, ನಿರ್ದೇಶಕ ಶಂಕರ್, ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರೀಶ್, ಸಂಗೀತ ನಿರ್ದೇಶಕ ಥಮನ್ ಮತ್ತು ನಟಿ ಅಂಜಲಿ ಸೇರಿದಂತೆ ಚಿತ್ರದ ಇಡೀ ಚಿತ್ರತಂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಮ್ ಚರಣ್ ಅವರೊಂದಿಗೆ ಮುಂದಿನ ಚಿತ್ರಗಳನ್ನು ನಿರ್ದೇಶಿಸಲಿರುವ ಸುಕುಮಾರ್ ಮತ್ತು ಬುಚ್ಚಿ ಬಾಬು ಸನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗ್ಲೋಬಲ್ ಸ್ಟಾರ್ ರಾಮ್ ಚರಣ್, ನಾನು ಶಂಕರ್ ಸರ್ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ನಂಬಲು ಆಗುತ್ತಿಲ್ಲ. ನಾನು ಅವರಿಗೆ ತೆಲುಗು ಚಿತ್ರ ನಿರ್ದೇಶಿಸಲು ಕೇಳುತ್ತಿದ್ದೆ. ಆದರೀಗ ಅವರ ಜೊತೆಯಲ್ಲಿಯೇ ಕೆಲಸ ಮಾಡಿದ್ದೇನೆ. 3 ವರ್ಷದ ಈ ಸುಂದರ ಪಯಣದಲ್ಲಿ ಅವರೊಂದಿಗೆ ಸಾಕಷ್ಟು ಕಲಿತ್ತಿದ್ದೇನೆ. ಕ್ರಿಕೆಟ್ ರಂಗಕ್ಕೆ ಸಚಿನ್ ಅವರು ಹೇಗೋ, ಅದೇ ರೀತಿ ಭಾರತೀಯ ಚಿತ್ರರಂಗಕ್ಕೆ ಶಂಕರ್. ಅವರು ನಂಬರ್ 1 ಕಮರ್ಷಿಯಲ್ ಸಿನಿಮಾ ಮೇಕರ್. ನಿರ್ಮಾಪಕ ದಿಲ್ ರಾಜು ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.
ನಿರ್ದೇಶಕ ಸುಕುಮಾರ್ ಮಾತನಾಡಿ, ‘ಹೊಸ ನಿರ್ದೇಶಕರಿಗೆ ಅವಕಾಶ ನೀಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ದಿಲ್ ರಾಜು ಅವರು ನನಗೆ ಆರ್ಯ ಚಿತ್ರ ನಿರ್ದೇಶಿಸಲು ಅವಕಾಶ ಕೊಟ್ಟಿದ್ದರು. ನಾನು ನನ್ನ ಮೊದಲ ಫಿಲಂಫೇರ್ ಪ್ರಶಸ್ತಿಯನ್ನು ಶಂಕರ್ ಸರ್ ಅವರಿಂದ ಸ್ವೀಕರಿಸಿದ್ದೇನೆ. ನಾನು ಚಿರಂಜೀವಿ ಅಭಿಮಾನಿ. ಹೀಗಾಗಿ ಶಂಕರ್ ಸರ್ ಚಿರು ಸರ್ ಜೊತೆ ಏಕೆ ಕೆಲಸ ಮಾಡಿಲ್ಲ ಎಂದು ಯಾವಾಗಲೂ ಆಶ್ಚರ್ಯಪಡುತಿದ್ದೆ. ಆದರೆ ಅವರು ಚರಣ್ ಜೊತೆ ಕೈ ಜೋಡಿಸಿದಾಗ ನನಗೆ ಅಪಾರ ಸಂತೋಷವಾಯಿತು. ಚರಣ್ ನನ್ನ ಸಹೋದರನಂತೆ, ಮತ್ತು ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಸಂತೋಷವಾಗುತ್ತದೆ ಎಂದರು. ‘ಆರ್ಆರ್ಆರ್’ ಬಳಿಕ ರಾಮ್ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ ‘ಗೇಮ್ ಚೇಂಜರ್’ ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ನಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ, ಅಂಜಲಿ, ಎಸ್ ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ಎಸ್.ಯು.ವೆಂಕಟೇಶನ್ ಮತ್ತು ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಚಿತ್ರದ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಸ್ ತಿರುನಾವುಕ್ಕರಸು ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಅವಿನಾಶ್ ಕೊಲ್ಲಾ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದು, ಅನ್ಬೀರವ್ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದು, ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ಬಾಸ್ಕೊ ಮಾರ್ಟಿನ್, ಜಾನಿ ಮತ್ತು ಸ್ಯಾಂಡಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಜನವರಿ 10, 2025 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚೌಕಿದಾರ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ನಿನ್ನೆ ಚಿತ್ರಕ್ಕೆ ಕುಂಬಳಕಾಯಿ ಬಿದ್ದಿದೆ.
ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ಈ ಚಿತ್ರದಿಂದ ಬಹಳಷ್ಟು ಕಲಿಯಲು ಸಿಕ್ಕಿದೆ. ನುರಿತ ನಿರ್ದೇಶಕರು ಇದ್ದಾಗ ಹೇಗೆ ಬೇಕು ಯಾವ ರೀತಿ ಬೇಕು ಅನ್ನೋದನ್ನು ಅವರು ಹೇಳಿಕೊಟ್ಟಿದ್ದಾರೆ. ಮನುಷ್ಯನ ಭಾವನೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಎಮೋಷನ್ ತುಂಬಾ ಚೆನ್ನಾಗಿ ಅಳವಡಿಸಿದ್ದಾರೆ. ಸಾಯಿ ಸರ್ ಸೆಟ್ ನಲ್ಲಿ ಇದ್ದ ರೀತಿ. ನಮ್ಮಂತಹ ಕಲಾವಿದರಿಗೆ ಪುಸ್ತಕ ಇದ್ದಂತೆ. ನಿರ್ಮಾಪಕ ಜರ್ನಿ ನನಗೆ ಸ್ಫೂರ್ತಿ ಎಂದು ತಿಳಿಸಿದರು.
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ನಾವು ನಿರ್ದೇಶಕರಾಗಿ ನಿರ್ಮಾಪಕರ ನಂಬಿಕೆ ಉಳಿಸಿಕೊಳ್ಳಬೇಕು. ನಿರ್ಮಾಪಕರಿಗೆ ಪ್ರೊಫೆಷನಲಿಸಂ ಇದೆ. ಇಡೀ ಕಲಾವಿದರು ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ಮೇ ತಿಂಗಳ ಹಿಂದೆ ಮುಂದೆ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಸಂಕ್ರಾಂತಿಗೆ ಟೀಸರ್ ರಿಲೀಸ್ ಮಾಡುತ್ತೇವೆ. ನಾಲ್ಕು ಹಾಡುಗಳಿವೆ. ಪ್ರತಿಯೊಬ್ಬ ಮನೆಯಲ್ಲಿಯೂ ಚೌಕಿದಾರ್ ಇರುತ್ತಾರೆ ಅವರ ಕಥೆಯನ್ನು ನಾವು ಹೇಳಿದ್ದೇವೆ. ಗ್ರಾಮಾಂತರ ಪ್ರದೇಶದಿಂದಲೇ ಚಿತ್ರ ಶುರುವಾಗುತ್ತದೆ. ಸಾಯಿ ಕುಮಾರ್ ಸರ್ ಹಾಗೂ ಪೃಥ್ವಿ ತಂದೆ ಮಗನಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ನಾಯಕಿ ಧನ್ಯ ರಾಮ್ ಕುಮಾರ್ ಮಾತನಾಡಿ, ಚೌಕಿದಾರ್ ಶೂಟಿಂಗ್ ಮುಗಿದಿದೆ. ಈ ಚಿತ್ರದಲ್ಲಿ ಪಾತ್ರ ಸಿಕ್ಕಿರುವುದು ಖುಷಿ ಜೊತೆಗೆ ಹೆಮ್ಮೆ ಇದೆ. ಈ ಸಿನಿಮಾದಿಂದ ನನಗೆ ಕಲಿಯುವುದು ತುಂಬಾನೇ ಸಿಕ್ತು. ಜರ್ನಿ ಚಾಲೆಂಜಿಂಗ್ ಆಗಿತ್ತು. ಈ ಚಿತ್ರದ ಮೂಲಕ ಒಳ್ಳೆ ನಟಿಯಾಗಿ ಬಂದಿದ್ದೇನೆ ಎನಿಸಿತು. ಸಾಯಿಕುಮಾರ್ ಸರ್, ಧರ್ಮ ಸರ್, ಸುಧಾ ರಾಣಿ ಮೇಡಂ, ಶ್ವೇತಾ ಮೇಡಂ, ಪೃಥ್ವಿ ಇವರ ಜೊತೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಿರ್ಮಾಪಕರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರು.
ಹಿರಿಯ ನಟ ಸಾಯಿಕುಮಾರ್ ಮಾತನಾಡಿ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇದೇ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು , ಕುಂಬಳಕಾಯಿ ಕೂಡ ಇಲ್ಲೇ ಹೊಡೆಯಲಾಗಿದೆ. ಯಾವ ಸಿನಿಮಾಗೂ ಇದು ಆಗಿಲ್ಲ. ಮಹಾನ್ ಕಾಳಿ ಆಶೀರ್ವಾದ ನಮ್ಮ ಚಿತ್ರಕ್ಕಿದೆ ಅನ್ನುವುದು ಗೊತ್ತಾಗುತ್ತಿದೆ. ಚೌಕಿದಾರ್ ಸಿನಿಮಾದಲ್ಲಿ ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞಾನರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ, ಎಮೋಷನಲ್ ಡ್ರಾಮಾ. ತೆಲುಗಿನಲ್ಲಿ ಹ್ಯಾಟ್ರಿಕ್ ಕೊಟ್ಟೆ. ಸರಿಪೋದ ಶನಿವಾರ, ಲಕ್ಕಿ ಭಾಸ್ಕರ್ ನೂರು ಕೋಟಿ ಕೊಟ್ಟಿವೆ. ಮುಂದಿನ ವರ್ಷ ಕನ್ನಡದಲ್ಲಿ ಹ್ಯಾಟ್ರಿಕ್ ಆಗಲಿ ಎಂದು ತಿಳಿಸಿದರು.
ರಥಾವರ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ‘ಚೌಕಿದಾರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಅಂಬಾರ್, ಧನ್ಯಾ ರಾಮ್ಕುಮಾರ್ ಹಾಗೂ ಸಾಯಿಕುಮಾರ್ ಕಾಂಬಿನೇಷನ್ ಸಿನಿಪ್ರಿಯರಿಗೆ ಗಮನವನ್ನಂತೂ ಸೆಳೆದಿದೆ. ಶ್ವೇತಾ, ಸುಧಾರಾಣಿ, ಧರ್ಮ ಸೇರಿದಂತೆ ಮತ್ತಿತರ ತಾರಾಬಳಗ ಚಿತ್ರದಲ್ಲಿದೆ.
‘ಚೌಕಿದಾರ್’ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್ ಬಾಯ್ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ. ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚೌಕಿದಾರ್ ಚಿತ್ರ ಮೂಡಿ ಬಂದಿದೆ.
ಕರ್ಮ ಬ್ರೋಸ್ ಪ್ರೊಡಕ್ಷನ್ ನ ನಿರೀಕ್ಷಿತ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಹಾಡು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.
ರಾಜು ಜೇಮ್ಸ್ ಬಾಂಡ್ ಡಿಸೆಂಬರ್ 27 ರಂದು ತೆರೆಗೆ ಬರಬೇಕಿತ್ತು. ಆದರೆ “UI” ಮತ್ತು “ಮ್ಯಾಕ್ಸ್” ಚಿತ್ರಗಳು ಅಂತ್ಯದಲ್ಲಿ ಬಿಡುಗಡೆಯಾದ ಕಾರಣ ಚಿತ್ರದ ಬಿಡುಗಡೆ ಮುಂದೆ ಹಾಕಲು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು(ಕೆನಡಾ) ಪ್ರಕಟಿಸಿದ್ದಾರೆ.
ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ತಿಳಿಸಿರುವ ನಿರ್ದೇಶಕ ದೀಪಕ್ ಮದುವನಹಳ್ಳಿ, ಈ ಚಿತ್ರ ತನ್ನ ಮನಮೋಹಕ ಕಥೆ, ಹಾಸ್ಯ, ಲಂಡನ್ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತದೊಂದಿಗೆ ಚಿತ್ರವನ್ನು ಆಕರ್ಷಿಸುವ ಭರವಸೆಯನ್ನು ನೀಡುತ್ತಿದೆ. “ರಾಜು ಜೇಮ್ಸ್ ಬಾಂಡ್ ” ಹಾಸ್ಯ ಮತ್ತು ಹೈಸ್ಟ್ ಡ್ರಾಮಾದ ಸಂಯೋಜನೆಯನ್ನು ತೋರಿಸಲಾಗಿದೆ. ಟೀಸರ್ ಮತ್ತು ಹಾಡುಗಳು ಬಿಡುಗಡೆಯಾದ ನಂತರ ಈ ಚಿತ್ರವು ಗಮನಾರ್ಹ ಚರ್ಚೆಯನ್ನು ಚಿತ್ರದ ಹುಟ್ಟುಹಾಕಿದೆ ಮತ್ತು ಅತ್ಯಂತ ಗಮನಾರ್ಹವಾದ ಚಿತ್ರವಾಗಿ ತೋರಿಸುವ ನಿರೀಕ್ಷೆಯಿದೆ ಎನ್ನುತ್ತಾರೆ.
“ಫಸ್ಟ್ ರ್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಉಪೇಂದ್ರ ಅವರ ನಿರ್ದೇಶನದ ಸಿನಿಮಾಗಳಲ್ಲಿ ಸೂಕ್ಷ್ಮತೆ ಇರುತ್ತೆ. ಅತೀ ಸೂಕ್ಷ್ಮ ವಿಚಾರಗಳ ಮೂಲಕವೇ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಅವರ ಹಿಂದಿನ ಯಾವುದೇ ಸಿನಿಮಾಗಳನ್ನು ಗಮನಿಸಿದರೆ, ಅಲ್ಲಿ ವಾಸ್ತವ ಅಂಶಗಳನ್ನಿಟ್ಟಿರುತ್ತಾರೆ. ಅಂದರೆ, ವ್ಯವಸ್ಥೆಯೊಳಗಿನ ಕೊಳಕು, ಬದಲಾವಣೆ ಇತ್ಯಾದಿ ವಿಚಾರಗಳೇ ಅಲ್ಲಿ ಸುಳಿದಾಡಿರುತ್ತವೆ. ಹೊಸತನದ ಕಥೆಯ ಜೊತೆ ಸಮಾಜ ಸುಧಾರಣೆ ಮತ್ತು ಬದಲಾವಣೆ ಎಂಬ ಧ್ಯೇಯ ಅವರದ್ದು. ಅವರ ಯುಐ ಸಿನಿಮಾದಲ್ಲೂ ಅಂಥದ್ದೇ ವಿಷಯವಿದ್ದರೂ, ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅರ್ಥ ಮಾಡಿಕೊಂಡವರಿಗೆ ಮಾತ್ರ ಯುಐ ಕಥೆಯೊಳಗಿನ ಸಾರ ಗೊತ್ತಾಗುತ್ತೆ.
ಉಪೇಂದ್ರ ಅವರಿಲ್ಲಿ ಸಮಾಜದಲ್ಲಿರುವ ವಾಸ್ತವತೆಯನ್ನು ವಿವರಿಸಿದ್ದಾರೆ. ಅಂಕು-ಡೊಂಕು ಎಲ್ಲವನ್ನೂ ಹೊರಗೆಡವಿದ್ದಾರೆ. ಅವರ ಕಥೆಯೊಳಗಿನ ಗಟ್ಟಿತನ, ನಿರೂಪಣೆಯ ಶೈಲಿ ಇಲ್ಲಿ ವಿಶೇಷ ಎನ್ನಬಹುದು. ಅವರ ವಿಚಾರ ಒಂದೇ, ಸಮಾಜ ಬದಲಾವಣೆ ಅಸಾಧ್ಯ ಅನ್ನೊದು. ಆದರೆ, ಬದಲಾವಣೆಗೆ ಬೇಕಾಗಿರೋದು ಏನೆಂಬುದನ್ನೂ ಇಲ್ಲಿ ಹೇಳಹೊರಟಿದ್ದಾರೆ. ಅವರನ್ನು ಅರ್ಥ ಮಾಡಿಕೊಂಡವರಿಗೆ ಈ ಚಿತ್ರದ ಕಥೆ ಅರ್ಥವಾದೀತು. ಆದರೆ, ಇಲ್ಲಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನೋದು ಸಮಾಧಾನ.
ಅವರ ನಿರ್ದೇಶನದ ಸಿನಿಮಾದಲ್ಲಿ ಹೆಚ್ಚು ಮನರಂಜನೆಗೆ ಜಾಗ ಇರುತ್ತಿತ್ತು. ಡೈಲಾಗ್ ಗಳಿಗೆ ಅವಕಾಶವಿರುತ್ತಿತ್ತು. ಆದರೆ, ಯುಐ ಸಿನಿಮಾದಲ್ಲಿ ಅದನ್ನು ನಿರೀಕ್ಷೆ ಮಾಡದಿದ್ದರೂ, ಒಂದೊಳ್ಳೆಯ ಸಂದೇಶವಂತೂ ಇದೆ. ಇಲ್ಲೂ ಮನರಂಜನೆ ಎಷ್ಟು ಕೊಡಬೇಕೋ ಅಷ್ಟನ್ನು ಕೊಟ್ಟಿದ್ದಾರೆ. ಮಾತುಗಳನ್ನೂ ಎಷ್ಟು ಹರಿಬಿಡಬೇಕೋ ಅಷ್ಟನ್ನು ಹರಿಬಿಟ್ಟಿದ್ದಾರೆ. ಅವರ ಮನಸ್ಸಿನೊಳಗಿನ ಕಥೆ ಇಲ್ಲಿ ಅನಾವರಣಗೊಂಡಿರುವುದು ವಿಶೇಷ. ಮನಸ್ಸಿನೊಳಗಿನ ಕಥೆಯೇ ಇಲ್ಲಿ ಹೈಲೆಟ್. ತಾಳ್ಮೆಯಿಂದ ತದೇಕಚಿತ್ತದಿಂದ ಸಿನಿಮಾ ಅರ್ಥಮಾಡಿಕೊಂಡರೆ ಮಾತ್ರ ಅವರೊಳಗಿನ ಆಶಯ ಅರ್ಥ ಆಗುತ್ತೆ. ಹಾಗಂತ, ಇದು ಒಂದೇ ಗುಕ್ಕಿಗೆ ಅರ್ಥವಾಗುವ ಕಥೆಯೇ? ಈ ಪ್ರಶ್ನೆಗೆ ಉತ್ತರ ಕಷ್ಟ. ಯಾಕೆಂದರೆ, ಅವರು ಈ ಬಾರಿ ಹೊಸತನದ ಕಥೆ ಹೆಣೆದಿದ್ದಾರೆ. ಅವರಿಲ್ಲಿ ಆ ತಾಯಿಯನ್ನು ಪ್ರಕೃತಿಗೆ ಹೋಲಿಸಿದ್ದಾರೆ. ಪ್ರಕೃತಿ ಮೇಲೆ ಏನೆಲ್ಲಾ ದೌರ್ಜನ್ಯ ಆಗುತ್ತೆ ಅನ್ನುವುದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ನಿತ್ಯವೂ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕೆಟ್ಟ ವ್ಯವಸ್ಥೆ, ಆಳುವ ವ್ಯಕ್ತಿ, ತುಳಿತಕ್ಕೊಳಗಾಗುವ ಪ್ರಜೆಗಳು, ಜಾತಿ, ಧರ್ಮ, ಸುಳ್ಳು, ಕಪಟ, ಮೋಸ ಎಲ್ಲವನ್ನೂ ಒಂದೇ ಫ್ರೇಮ್ ನಲ್ಲಿ ತೋರಿಸುವ ಮೂಲಕ ಸಮಾಜದ ವ್ಯವಸ್ಥೆಯೊಳಗಿನ ಹುಳುಕನ್ನು ಎತ್ತಿತೋರಿಸುವ ಪ್ರಯತ್ನ ಮಾಡಿದ್ದಾರೆ.
ವ್ಯವಸ್ಥೆ ಸರಿಪಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಕೆಟ್ಟ ವ್ಯವಸ್ಥೆಗೆ ಕೆಡುಕಿನಿಂದಲೇ ಉತ್ತರ ಕೊಡಬೇಕು ಎಂಬ ವೇದಾಂತ ಉಪೇಂದ್ರ ಅವರದು. ಹಾಗಾಗಿ ಕಥೆ ಬಗ್ಗೆ ಇಲ್ಲಿ ಹೇಳುವುದಕ್ಕಿಂತ ಒಂದೊಮ್ಮೆ ತಾಳ್ಮೆ ಮತ್ತು ಫೋಕಸ್ ಮಾಡಿ ನೋಡಿದರೆ ಮಾತ್ರ ಯುಐ ಒಳಗಿನ ಹೂರಣದ ರುಚಿ ಗೊತ್ತಾಗುತ್ತೆ. ದೇಶದೊಳಗೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಅನ್ನುವ ಸತ್ಯವನ್ನು ಹೇಳುತ್ತಲೇ ಪ್ರಜಾಭುತ್ವದಲ್ಲಾಗುತ್ತಿರುವ ಅನ್ಯಾಯ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಮೊಬೈಲ್ ಗೆ ದಾಸರಾಗುವ ಪ್ರಜಾಪ್ರಭುತ್ವ, ಮನುಷ್ಯತ್ವಕ್ಕಿಂತ ಇಲ್ಲಿ ಜಾತಿಗೆ ಹೆಚ್ಚು ಬೆಲೆ ಎಂಬ ಅಂಶ, ಸೋಶಿಯಲ್ ಮೀಡಿಯಾ ಹಾವಳಿಯ ರಾದ್ಧಾಂತ… ಹೀಗೆ ಪ್ರಸ್ತುತ ವಿಷಯಗಳನ್ನು ಹೇಳುವ ಮೂಲಕ ದೇಶದ ಅವ್ಯವಸ್ಥೆ ಹೇಗೆಲ್ಲಾ ಇದೆ, ಹೇಗೆಲ್ಲ ಆಗುತ್ತೆ ಅನ್ನೋದನ್ನು ಹೇಳಿದ್ದಾರೆ.
ಅದೇ ಉಪೇಂದ್ರ ಇಲ್ಲಿ ಕಂಡರೂ ಹೊಸ ವಿಷಯಗಳನ್ನು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಹಾಗಾಗಿ ಸಿನಿಮಾ ನೋಡುಗರಿಗೆ ಹೊಸತನ್ನೇ ಕೊಡುವ ಮೂಲಕ ಸುಮ್ಮನೆ ನೋಡುವಂತೆ ಕೂರಿಸಿಕೊಳ್ಳುತ್ತೆ. ಅಂಥದ್ದೊಂದು ಮ್ಯಾಜಿಕ್ ಅನ್ನು ಉಪೇಂದ್ರ ಮಾಡಿದ್ದಾರೆ. ಹಾಗಾಗಿ ಯುಐ ಒಂದೊಮ್ಮೆ ನೋಡಲು ಅಡ್ಡಿಯಿಲ್ಲ. ಇಲ್ಲೂ ಮನರಂಜನೆಗೊಂದು ಒಳ್ಳೆಯ ಹಾಡು ಇದೆ. ತರಹೇವಾರಿ ಡೈಲಾಗ್ ಗಳೂ ಇವೆ. ಎಲ್ಲಕ್ಕಿಂತ ಹೆಚ್ಚಾಗಿ, ಕ್ಲೈಮ್ಯಾಕ್ಸ್ ಬರುವವರೆಗೂ ಉಪೇಂದ್ರ ಅವರ ಯೋಚನಾ ಲಹರಿ ಹೀಗಾ ಅನ್ನೊದು ಗೊತ್ತಾಗಲ್ಲ. ಆರಂಭದಲ್ಲಿ ಸಿನಿಮಾದ ವೇಗ ಜೋರಾಗಿಯೇ ಇದೆ. ದ್ವಿತಿಯಾರ್ಧ ಮತ್ತಷ್ಟು ಚಾಲೆಂಜ್ ಎನಿಸುವಷ್ಟು ದೃಶ್ಯಗಳು ಆವರಿಸಿಕೊಳ್ಳುತ್ತವೆ. ಕೆಲವೆಡೆ ಶಿಳ್ಳೆ, ಚಪ್ಪಾಳೆಗಳೂ ಬೀಳುತ್ತವೆ. ಅದಕ್ಕೆ ಕಾರಣ, ವಾಸ್ತವತೆಯನ್ನು ಬಿಂಬಿಸುವ ದೃಶ್ಯಗಳು.
ಉಪೇಂದ್ರ ಅವರಿಲ್ಲಿ ಕಿವಿಮಾತು ಹೇಳಿದ್ದಾರೆ. ಅದನ್ನು ಅರ್ಥಮಾಡಿಕೊಂಡರೆ, ಪ್ರಜಾಪ್ರಭುತ್ವದಲ್ಲಿರುವ ವ್ಯವಸ್ಥೆ ಬದಲಿಸಲು ಸಾಧ್ಯವಾಗಬಹುದೇನೋ? ಇಂತಹ ವಿಷಯವನ್ನೂ ಇಲ್ಲಿ ಹೇಳಿದ್ದಾರೆ. ಬಹಳಷ್ಟು ಮಂದಿ ಸಿನಿಮಾ ಅರ್ಥ ಆಗಲ್ಲ. ಉಪೇಂದ್ರ ಅವರು ಸುಮ್ಮನೆ ಒಂದಷ್ಟು ಸೌಂಡು ಮಾಡಿದ್ದಾರೆ ಅಂತೆಲ್ಲಾ ಮಾತುಗಳು ಬಂದವು. ಆದರೆ, ಇಲ್ಲಿ ನಿಜವಾಗಿಯೂ ಉಪೇಂದ್ರ ಅವರು ತಮ್ಮೊಳಗಿನ ಮಾತಿನ ಮೂಲಕ ಯಾರಿಗೆ ಹೇಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಅವರ ಮಾತನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದು ಅದು ಅವರವರಿಗೆ ಬಿಟ್ಟಿದ್ದು.
ಸಿನಿಮಾದ ಬಜೆಟ್ ಫ್ರೇಮ್ ನಲ್ಲಿ ಕಾಣಿಸುತ್ತೆ. ಇಲ್ಲಿ ವಿಎಫ್ ಎಕ್ಸ್ ಹೈಲೆಟ್ ಆಗಿದೆ. ಮುಖ್ಯವಾಗಿ ಸಂಗೀತ ಮತ್ತು ಹಿನ್ನೆಲೆ ಸಂಗೀತ ಜೋರು ಸದ್ದು ಮಾಡಿದೆ. ಉಪೇಂದ್ರ ಅವರ ಅಭಿನಯ, ನಿರ್ದೇಶನ ಮಾತ್ರವಲ್ಲ, ಅವರ ಬರವಣಿಗೆ ಕೂಡ ಇಲ್ಲಿ ಇಷ್ಟವಾಗುತ್ತೆ. ಚಿತ್ರದ ವೇಗಕ್ಕೆ ವಿಜಯ್ ಸಂಕಲನವೂ ಹೆಗಲಾಗಿದೆ. ವೇಣು ಕ್ಯಾಮೆರಾ ಕೈಚಳಕ ಯುಐ ಸಿನಿಮಾದ ಮುಖ್ಯ ಭಾಗ. ಇನ್ನುಳಿದಂತೆ ನಾಯಕಿ ರೀಷ್ಮಾ ಸಿಕ್ಕಷ್ಟು ಜಾಗವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ತೆರೆ ಮೇಲೆ ರವಿಶಂಕರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸಾಧುಕೋಕಿಲ ಅಚ್ಯುತ ಕುಮಅರ್ ಇತರರು ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ.
ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿದ ಅದೆಷ್ಟೋ ಅಪರೂಪದ ಕೆಲಸಗಳು ನಮ್ಮ ಕಣ್ಮುಂದೆ ಇವೆ. ಅಷ್ಟೇ ಅಲ್ಲ, ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಸಾಲು ಸಅಲು ಸಿನಿಮಾಗಳೂ ಇವೆ. ಅಪ್ಪುಗೆ ಒಂದು ಆಸೆ ಇತ್ತು. ಅದು ಇಂಟರ್ ನ್ಯಾಷನಲ್ ಪ್ರಿಸ್ಕೂಲ್ ಒಂದನ್ನು ಶುರು ಮಾಡಬೇಕು ಅನ್ನೋದು. ಆದರೆ, ಅಪ್ಪು ವಿಧಿಯ ಕರೆಗೆ ಹೋದರು. ಹಾಗಂತ ಅಪ್ಪು ಪತ್ನಿ ಸುಮ್ಮನೆ ಕೂರಲಿಲ್ಲ. ಪತಿಯ ಎರಡು ದಶಕದ ಆ ಆಸೆಯನ್ನು ಈಡೇರಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.
ಹೌದು, ಅಪ್ಪು ಅಗಲಿಕೆಯ ನಂತರ ಅವರ ಪಿಆರ್ಕೆ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದೆಷ್ಟೋ ಪ್ರತಿಭೆಗಳಿಗೆ ಸಹಕಾರಿಯಾಗಿದ್ದಾರೆ. ಈಗ ಅದರ ಬೆನ್ನಲ್ಲೇ ಶಿಕ್ಷಣ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅನ್ನೋದೇ ಈ ಹೊತ್ತಿನ ವಿಶೇಷ. ಅದೇನೆ ಇದ್ದರೂ, ಪುನೀತ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಇವರಿಬ್ಬರೂ ಕಂಡಿದ್ದ ಬರೋಬ್ಬರಿ 20 ವರ್ಷಗಳ ಕನಸು ಈಗ ನನಸಾಗಿದೆ.
ಸಿನಿಮಾರಂಗದ ನಿರ್ಮಾಣ ವಿಭಾಗದಲ್ಲಿ ಇದೀಗ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅಶ್ವಿನಿ ಪುನೀತ್ ರಾಜ್ಕುಮಾರ್, ಈಗ ಮತ್ತೊಂದು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅದರಲ್ಲೂ ಅವರೀಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡೋಕೆ ಮುಂದಾಗಿದ್ದಾರೆ. ಅಂದಹಾಗೆ, ಅವರು ಶಿಕ್ಷಣ ಕ್ಷೇತ್ರಕ್ಕೆ ಎಂಟ್ರಿಕೊಡುವ ಎರಡು ದಶಕಗಳ ಕನಸು ಅವರ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಮೂಲಕ ಈಡೇರಿದೆ. ಇತ್ತೀಚೆಗೆ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಶುರುಮಾಡಿದ್ದಾರೆ. ಈ ಮೂಲಕ ಪುನೀತ್ ರಾಜ್ಕುಮಾರ್ 20 ವರ್ಷಗಳ ಹಿಂದೆಯೇ ಕಂಡಿದ್ದ ಆ ಕನಸನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನನಸು ಮಾಡಿದ್ದಾರೆ. ಇತ್ತೀಚೆಗೆ ಆ ಜೂನಿಯರ್ ಟೋಸ್ ಪ್ರೀಸ್ಕೂಲ್ ನ ಅನಾವರಣವಾಗಿದೆ.
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ನಿರ್ಮಾಣಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೊಂದಿಗೆ ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ. ಬಿಂದು ರಾಣಾ ಅವರು ಕೈ ಜೋಡಿಸಿದ್ದಾರೆ. ಮಕ್ಕಳ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ಏರಿಸುವ ಈ ಪ್ರಯತ್ನಕ್ಕೆ ಇವರೆಲ್ಲರೂ ಒಮ್ಮತದಿಂದ ಕೈ ಹಾಕಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ವಿಶಿಷ್ಟವಾದ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಇಟ್ಟುಕೊಂಡಿದೆ ಅನ್ನೋದು ವಿಶೇಷ.
ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮ ಈ ಜೂನಿಯರ್ ಟೋಸ್ ಪ್ರಿಸ್ಕೂಲ್ನಲ್ಲಿ ಇರಲಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ನಾಯಕತ್ವ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ಚಿಂತನೆಯನ್ನು ಬೆಳೆಸುವುದು ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಅವರ ಜೊತೆಗಾರರ ಕನಸು. ಈ ಸ್ಕೂಲ್ ಅನ್ನು ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣ ತಜ್ಞೆ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ಉದ್ಘಾಟನೆ ಆಗಿದ್ದು ಮತ್ತೊಂದು ವಿಶೇಷ.
ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ತಮ್ಮ ಹಾಗು ಅಪ್ಪು ಅವರ ಕನಸು ಹಾಗೂ ಸ್ಕೂಲ್ ಬಗ್ಗೆ ರಿವೀಲ್ ಮಾಡಿದ್ದಾರೆ. “ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಬರಬೇಕು ಎಂಬ ಕನಸು ಇಟ್ಟುಕೊಂಡಿದ್ದೆವು. ಆ ಕನಸು ಈಗ ಈಡೇರುತ್ತಿದೆ. ಪ್ರತಿ ಮಗುವಿನ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಶಾಲೆಗಳನ್ನು ಸ್ಥಾಪಿಸೋದೇ ಈ ಶಾಲೆಯ ಮುಖ್ಯ ಧ್ಯೇಯ” ಎಂದಿದ್ದಾರೆ. ಈ ಪ್ರೀಸ್ಕೂಲ್ ಬೆಂಗಳೂರಿನಲ್ಲಿ ಮೊದಲು ಆರಂಭಗೊಳ್ಳಲಿದ್ದು, ಶುರುವಿಗೆ ಐದು ಕೇಂದ್ರಗಳನ್ನು ಆರಂಭಿಸುವ ಆಲೋಚನೆಯಿದೆ. ಇದರಲ್ಲಿ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನ ಪಠ್ಯಕ್ರಮ ಅಳವಡಿಸಲಾಗಿದೆ.
ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಮಾತ್ರ ಇಲ್ಲಿ ಶಿಕ್ಷಣ ನೀಡಲಾಗುತ್ತೆ. ಸದ್ಯ ಬೆಂಗಳೂರಿನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಆಲೋಚನೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗಿದೆ. ಈ ಮೂಲಕ ಇಂತಹ ವಿನೂತನ ಶಿಕ್ಷಣ ಭಾರತದಾದ್ಯಂತ ಇರುವ ಎಲ್ಲಾ ಮಕ್ಕಳಿಗೂ ಸಿಗುವಂತೆ ಆಗಬೇಕು ಎಂಬುದೇ ಅವರ ಆಶಯ. ಸಿನಿಮಾ ನಿರ್ಮಾಣದ ಜೊತೆ ಜೊತೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಅಪ್ಪು ಅಭಿಮಾನಿಗಳಿಗೆ ಖುಷಿಯಂತೂ ಆಗಿದೆ.
ಅದೇನೆ ಇರಲಿ, ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪಿಆರ್ ಕೆ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಈಗ ಅಶ್ವಿನಿ ಪುನೀತ್ ರಾಜಕುಮಾರ್, ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟು ಹೊಸ ಕ್ರಾಂತಿಗೆ ಅಣಿಯಾಗಿದ್ದಾರೆ.