Categories
ಸಿನಿ ಸುದ್ದಿ

ಉಡಾಫೆ ಬೇಡ, ಮನೆಯಲ್ಲಿದ್ದರೆ ಜಗತ್ತು ಬೀಳಲ್ಲ; ಜೀವ ಇದ್ದರೆ ಜೀವನ ಇದ್ದೇ ಇರುತ್ತೆ -ಕೋವಿಡ್‌ ನಿರ್ಲಕ್ಷ್ಯ ಮಾಡೋರ ಬಗ್ಗೆ ಶ್ರೀಮುರಳಿ ಎಚ್ಚರಿಕೆ ಮಾತು

ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇದಕ್ಕೆ ಸಿನಿಮಾರಂಗವೂ ಹೊರತಲ್ಲ. ಕಳೆದ ವರ್ಷ ವಕ್ಕರಿಸಿ ಬಂದ ಕೊರೊನಾ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ವರ್ಷ ಎಲ್ಲವೂ ಸರಿಹೋಗುತ್ತೆ ಅಂದುಕೊಂಡರೆ ಮತ್ತೆ ಕೊರೊನಾ ಹಾವಳಿ ಹೆಚ್ಚಾಗಿ ಎಲ್ಲರ ಬದುಕನ್ನು ಹಾಳುಗೆಡವಿದೆ. ಸರ್ಕಾರ ಬಿಗಿ ಕ್ರಮ ಕೈಗೊಂಡರೂ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಕಡಿವಾಣ ಬೀಳಬೇಕಾದರೆ, ಎಲ್ಲರೂ ಮನೆಯಲ್ಲಿದ್ದು, ಅಂತರ ಕಾಪಾಡಿಕೊಂಡು ಕೊರೊನೊ ವಿರುದ್ಧ ಹೋರಾಡುವ ಅಗತ್ಯತೆ ಇದೆ. ಹಾಗಾಗಿ ನಟ ಶ್ರೀಮುರಳಿ ಕೂಡ ಜನರು ಬೀದಿಗಿಳಿಯದಂತೆ, ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಬೇಕು ಎಂದು ಹೇಳಿರುವ ಶ್ರೀಮುರಳಿ, ಒಂದಷ್ಟು ಸಲಹೆ ಕೊಟ್ಟಿದ್ದಾರೆ.


“ಈಗ ಟೈಮ್‌ ಸರಿಯಿಲ್ಲ. ಒಳ್ಳೇಯ ಟೈಮ್‌ ಬಂದೇ ಬರುತ್ತೆ. ದೃಢವಾಗಿ ನಿಲ್ಲಿ. ಎಲ್ಲದ್ದಕ್ಕೂ ಒಳ್ಳೆಯ ಕಾಲ ಬಂದೇ ಬರುತ್ತೆ. ನಾವು ಸ್ಟ್ರಾಂಗ್‌ ಇದ್ದರೆ ಮಾತ್ರ, ಆಚೆ ಬರೋಕೆ ಆಗೋದು. ಮೆಂಟಲಿ ಒಳ್ಳೆಯ ವಾತಾವರಣ ಸೃಷ್ಟಿಸಿಕೊಳ್ಳಿ. ಮುಖ್ಯವಾಗಿ ಸರ್ಕಾರದ ನಿಯಮ ಪಾಲಿಸಿ. ಇಲ್ಲಿ ಯಾರದು ತಪ್ಪು, ಸರಿ ಎಂಬ ಪ್ರಶ್ನೆ ಬಿಡಿ. ಮೊದಲು ಪ್ರಶ್ನಿಸುವುದನ್ನು ಬಿಡಬೇಕು. ಕೊರೊನಾ ಬಗ್ಗೆ ಉಡಾಫೆ ಮಾತುಗಳು ಬೇಡ. ಆ ಹುಡುಗಾಟಿಕೆಯೂ ಸರಿಯಲ್ಲ. ನಾವು ಮೊದಲು ಕೊರೊನಾ ವಿರುದ್ಧ ಹೋರಾಡಬೇಕಾದರೆ, ಮನೆಯಲ್ಲೇ ಇದ್ದು, ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು, ನಮ್ಮನ್ನು ನಂಬಿದವರಿಗೋಸ್ಕರ ಸರಿಯಾದ ಕ್ರಮಗಳನ್ನು ಅನುಸರಿಸಬೇಕು. ಮೇಜರ್‌ ಆಗಿ, ಪಾಸಿಟಿವ್‌ ಥಿಂಕ್‌ ಮಾಡಬೇಕು. ಮನೆಯಲ್ಲೇ ಇದ್ದು, ಬಿಸಿ ನೀರು ತುಳಸಿ, ಕಷಾಯ ಕುಡಿಯಬೇಕು, ಸ್ಯಾನಿಟೈಸ್‌, ಮಾಸ್ಕ್‌ ಬಳಸಬೇಕು. ಕೇರಫುಲ್‌ ಆಗಿರಬೇಕು. ಒಬ್ಬೊಬ್ಬರನ್ನೂ ಕೇರ್‌ ಮಾಡ್ಬೇಕು. ಕೋವಿಡ್‌ ಇದ್ದರೆ, ಭಯಪಡಬೇಡಿ. ಕ್ವಾರಂಟೈನ್‌ ಆಗಿ ಧೈರ್ಯವಾಗಿರಿ.

ಇಲ್ಲಿ ಎಲ್ಲರೂ ಈ ವಿರುದ್ಧ ಹೋರಾಡಬೇಕೆ ಹೊರತು, ಒಬ್ಬೊಬ್ಬರೇ ಏನೂ ಮಾಡೋಕ್ಕಾಗಲ್ಲ.‌ ಸದ್ಯಕ್ಕೆ ಇರುವ ಈ ಕೆಟ್ಟ ದಿನಗಳಿಂದ ತಪ್ಪಿಸಿಕೊಳ್ಳಿ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂಬಂತೆ ಕೊರೊನಾ ಹಾವಳಿಯಿಂದ ತಪ್ಪಿಸಿಕೊಳ್ಳಬೇಕಿದೆ. ನಾವು ಈ ವರ್ಷವೇ ರೆಡಿಯಾಗಬೇಕಿತ್ತು. ಆದರೆ, ಅದರ ಹಾವಳಿ ಇನ್ನೂ ಇದೆ. ಇದು ಎಲ್ಲರಿಗೂ ಹೊಸದು. ಇದು ಹೀಗೆ ಮುಂದುವರೆದರೆ, ಎಲ್ಲಿ ಹೋಗೋದು? ಇದನ್ನು ಕಟ್‌ ಮಾಡಬೇಕಾದರೆ, ಗುಂಪು ಕಟ್ಟಿಕೊಳ್ಳಬಾರದು. ಚೈನ್‌ ಬ್ರೇಕ್‌ ಮಾಡಲೇಬೇಕಿದೆ. ಎಚ್ಚೆತ್ತುಕೊಳ್ಳದೇ ಹೋದರೆ, ಸಮಸ್ಯೆ ಹೆಚ್ಚಾಗುತ್ತೆ. ನಿಮ್ಮ ಪಾಡಿಗೆ ನೀವು ಸ್ವಲ್ಪ ದಿನ ಮನೆಯಲ್ಲಿದ್ದು ಬಿಡಿ, ಜಗತ್ತು ಬೀಳುತ್ತಾ? ನಿತ್ಯ ಯೋಗ ಮಾಡಿ, ವಾಕ್‌ ಮಾಡಿ. ಆರೋಗ್ಯ ಇದ್ದರೆ,‌ ಮುಂದೆ ದುಡಿಮೆ ಮಾಡೋದು ಇದ್ದೇ ಇರುತ್ತೆ. ಆರೋಗ್ಯವೇ ಇಲ್ಲವೆಂದರೆ, ಬದುಕೋದು ಹೇಗೆ? ಕೊನೇ ಪಕ್ಷ ನಮಗೆ, ನಮ್ಮವರಿಗೋಸ್ಕರನಾದರೂ ಸ್ಟ್ರಾಂಗ್‌ ಆಗಿರೋಣ” ಎನ್ನುತ್ತಾರೆ ಶ್ರೀಮುರಳಿ.

Categories
ಸಿನಿ ಸುದ್ದಿ

ರಾಮು ಸರ್‌ ನಿಜಕ್ಕೂ ಧೈರ್ಯವಂತ ನಿರ್ಮಾಪಕ ; ಅಲ್ಲೇ ದುಡಿದು ಅಲ್ಲೇ ಹಣ ಹಾಕುತ್ತಿದ್ದ ಅಪರೂಪದ ಅನ್ನದಾತ

“ಅವರಿಗೆ ಸೋಲಿರಲಿ, ಗೆಲುವಿರಲಿ. ಅಲ್ಲೇ ದುಡಿದು ಅಲ್ಲಿಗೇ ಹಣ ಹಾಕುತ್ತಿದ್ದರು. ಛೇ ಹೀಗಾಗಬಾರದಿತ್ತು. ಅವರಿಲ್ಲ ಅನ್ನುವುದನ್ನು ನೆನಪಿಸಿಕೊಳ್ಳೋಕೂ ಆಗುತ್ತಿಲ್ಲ…

– ಹೀಗೆ ತುಂಬಾನೇ ಬೇಸರಿಸಿಕೊಂಡು ಹೇಳಿದ್ದು, ನಟ ಶ್ರೀಮುರಳಿ. ಹೌದು, ಅವರು ಹೀಗೆ ಹೇಳಿದ್ದು ನಿರ್ಮಾಪಕ ರಾಮು ಅವರ ಕುರಿತು. ಕೊರೊನಾದಿಂದ ಮೃತಪಟ್ಟ ರಾಮು ಅವರ ಬಗ್ಗೆ ಶ್ರೀಮುರಳಿ ಒಂದಷ್ಟು ಮಾತಾಡಿದ್ದಾರೆ. “ರಾಮು ಅವರಿಲ್ಲ ಅಂತ ನೆನಪಿಸಿಕೊಳ್ಳೋಕೂ ಆಗುತ್ತಿಲ್ಲ.

ಅವರು ಕಳೆದ ಮೂರು ವಾರದಿಂದ ವಾಟ್ಸಾಪ್‌ ಮೆಸೇಜ್‌ ಮಾಡಿದ್ದರು. ಅವರ ಸಿನಿಮಾ ಟ್ರೇಲರ್‌ ಕಳಿಸಿದ್ದರು. ಅಷ್ಟೇ ಅಲ್ಲ, ಅವರು ನಮ್ಮ ಮನೆಯ ಸಮೀಪವೇ ಇದ್ದರು. ಇತ್ತೀಚೆಗೆ ಆರೇಳು ತಿಂಗಳ ಹಿಂದಷ್ಟೇ ಅವರು ಬೇರೆಡೆ ಶಿಫ್ಟ್‌ ಆಗಿದ್ದರು. ಅವರಿಲ್ಲ ಅನ್ನೋದನ್ನು ಕೇಳಿ ನಿಜಕ್ಕೂ ಶಾಕ್‌ ಆಯ್ತು. ಸಿಕ್ಕಾಗೆಲ್ಲ ಅವರು ಇಂಡಸ್ಟ್ರಿ ಬಗ್ಗೆಯೇ ಮಾತಾಡೋರು. ನಾವೆಲ್ಲ ಸೇರಿ ಕನ್ನಡ ಇಂಡಸ್ಟ್ರಿಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಬೇಕು. ನೀವೆಲ್ಲ ಬಂದಿದ್ದೀರಿ ನಿಮ್ಮ ಸಹಕಾರ ಇರಲಿ. ತುಂಬಾನೇ ಸ್ಟ್ರಗಲ್‌ ಮಾಡಿ ಇಲ್ಲಿಗೆ ಬಂದಿದ್ದೀರಿ. ನಿಮಗೂ ಒಳ್ಳೆಯದಾಗಬೇಕು, ಇಂಡಸ್ಟ್ರಿಗೂ ಒಳ್ಳೆಯದಾಗಬೇಕು ಅಂತ ಹೇಳುತ್ತಿದ್ದರು. ರಾತ್ರಿ ಅರ್ಧ ಗಂಟೆವರೆಗೆ ವಾಕ್‌ ಮಾಡ್ತಾ ಇದ್ವಿ. ಆಗೆಲ್ಲಾ, ನಾವೆಲ್ಲರೂ ಒಗ್ಗಟ್ಟಾಗಿ ನಿಂತರೆ ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ ಅನ್ನೋರು. ನಿಜಕ್ಕೂ ನನಗೆ ನಂಬೋಕೆ ಆಗ್ತಾ ಇಲ್ಲ. ಅವರಿಲ್ಲ ಅನ್ನೋ ವಿಷಯ ಕೇಳಿದರೆ ಮನಸ್ಸು ಭಾರ ಆಗುತ್ತೆ. ನಮಗೆ ಗೊತ್ತಿರುವವರನ್ನೇ ಈಗ ಕಳೆದುಕೊಳ್ಳುತ್ತಿದ್ದೇವಲ್ಲ ಅಂತ ಬೇಸರವಾಗುತ್ತೆ. ರಾಮು ಸರ್‌ಗೆ ಹೀಗೆಲ್ಲಾ ಆಗುತ್ತೆ ಅಂತಾನೂ ಭಾವಿಸಿರಲಿಲ್ಲ.

ಅವರು ತುಂಬಾ ಮೃದು ಸ್ವಭಾವದ ವ್ಯಕ್ತಿ. ಸಿನಿಮಾ ವಿಚಾರಕ್ಕೆ ಬಂದರೆ, ಯಾವುದಕ್ಕೂ ಕಮ್ಮಿ ಇಲ್ಲದಂತೆ ಸಿನಿಮಾ ಮಾಡುತ್ತಿದ್ದರು. ಸಿನಿಮಾ ಮೇಲೆ ಸಿನಿಮಾ ಮಾಡುತ್ತಲೇ ಇದ್ದರು. ನಾನು ಅವರ “ರಾಜ್‌ ವಿಷ್ಣು” ಚಿತ್ರದಲ್ಲಿ ಗೆಸ್ಟ್‌ ಎಪಿಯರೆನ್ಸ್‌ ಆಗಿ ಮಾಡಿದ್ದೆ. ಆಗ ಅವರು “ನಿಮಗೆ ಬರೀ ಕಡಗ ಮಾತ್ರ ಕೊಟ್ಟೆ. ಏನೂ ಕೊಡೋಕೆ ಆಗಲಿಲ್ಲ. ಅಂತ ಸಿಕ್ಕಾಗೆಲ್ಲಾ ಹೇಳ್ತಾನೇ ಇದ್ದರು. ಆಗ ನಾನು ಸರ್‌, ಆ ಮಾತೆಲ್ಲ ಯಾಕೆ, ಬನ್ನಿ ಕೆಲಸ ಮಾಡೋಣ ಅನ್ನುತ್ತಿದ್ದೆ. “ಉಗ್ರಂ” ಬಳಿಕ ಅವರು ಜೊತೆಗೆ ಒಂದ ಸಿನಿಮಾ ಮಾಡೋಣ ಅಂದಿದ್ದರು. ಸರಿ ಸರ್‌ ಅಂದಿದ್ದೆ. ಒಂದಷ್ಟು ಸಿನಿಮಾಗಳಿವೆ ಮುಗಿಸಿಕೊಂಡು ಬರ್ತೀನಿ ಅಂದಿದ್ದರು. ಅವರ ಮಗನ ಬಗ್ಗೆ ಮಾತಾಡಿ, ರೆಡಿಯಾಗುತ್ತಿದ್ದಾನೆ. ಆಸಕ್ತಿ ಬರಬೇಕು ಬಂದ ಮೇಲೆ ಸಿನಿಮಾಗೆ ಕರೆತರುವ ಬಗ್ಗೆ ನೋಡೋಣ ಅಂತಾನು ಹೇಳಿದ್ದರು. ಒಳ್ಳೆಯ ವ್ಯಕ್ತಿಗಳನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಸಮಯದಲ್ಲಿ ನಾನು ಹೋಗಲೇಬೇಕಿತ್ತು. ಆದರೆ, ಕಾಲು ಸರಿ ಇರದ ಕಾರಣ ಸಾಧ್ಯವಾಗಲಿಲ್ಲ. ಅದೊಂದು ಬೇಸರವಾಗುತ್ತಿದೆ. ಸಿನಿಮಾ ಗೆಲ್ಲಲಿ, ಸೋಲಲಿ, ದುಡಿದ ಹಣವನ್ನು ಪುನಃ ಸಿನಿಮಾಗೇ ಹಾಕುತ್ತಿದ್ದರು. ನಿಜಕ್ಕೂ ಅವರ ನಿಧನ ಚಿತ್ರರಂಗಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ” ಎಂದಿದ್ದಾರೆ ಶ್ರೀಮುರಳಿ.

Categories
ಸಿನಿ ಸುದ್ದಿ

ಕೋಟಿ ನಮನ… ನಿರ್ಮಾಪಕ ರಾಮು ಇನ್ನಿಲ್ಲ: ಅನ್ನದಾತನ ಕಳಕೊಂಡ ಕನ್ನಡ ಚಿತ್ರರಂಗ

ಕನ್ನಡ‌ ಚಿತ್ರರಂಗದಲ್ಲಿ ರಾಮು ಅಂದ್ರೆ ವಿಭಿನ್ನವಾದ ಹೆಸರು. ನಿರ್ಮಾಪಕ‌ ಎನ್ನುವವನು ಸಿನಿಮಾ‌‌ ನಿರ್ಮಾಣಕ್ಕೆ ಬಂಡವಾಳ ಹೂಡಿ ಸೈಲೆಂಟ್ ಅಗಿರುವವರು ಎನ್ನುವಂತಿದ್ದ ಕಾಲದಲ್ಲಿ ನಿರ್ಮಾಪಕನಿಗೂ‌ ಸ್ಟಾರ್ ಪಟ್ಟ ತಂದುಕೊಟ್ಟಿದ್ದ ಖ್ಯಾತಿ ನಿರ್ಮಾಪಕ‌ ರಾಮು‌ ಅವರದ್ದು.‌ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ‌ ಮೊಟ್ಟ ಮೊದಲು ಕೋಟಿಯಷ್ಟು ಬಂಡವಾಳ ಸುರಿದು ಸಿನಿಮಾ‌ ನಿರ್ಮಾಣ ಮಾಡುವ ಮೂಲಕ ಕೋಟಿ‌ ರಾಮು ಅಂತಲೇ ಫೇಮಸ್ ಆಗಿದ್ದವರು.‌ಅದರ ಜತೆಗೆ ಹೆಸರಾಂತ ನಟಿ‌ ಮಾಲಾಶ್ರೀ ಪತಿ‌ ಎನ್ನುವ ಜನಪ್ರಿಯತೆ ಕೂಡ ಅವರಿಗಿತ್ತು. ರಾಮು ಅವರ ಕುರಿತು ಇಷ್ಟೆಲ್ಲ ಹೇಳುವುದಕ್ಕೆ ಕಾರಣ, ಇದೆಲ್ಲವೂ ಈಗ ಇತಿಹಾಸ ಸೇರಿಬಿಟ್ಟಿತಲ್ಲ ಎನ್ನುವ ವಿಷಾದದಕ್ಕಾಗಿ.

ಹೌದು ಕೋಟಿ ರಾಮು‌ ಇನ್ನಿಲ್ಲ. ಲಾಕಪ್ ಡೆತ್, ಕಲಾಸಿಪಾಳ್ಯ ,ಚಾಮುಂಡಿ, ದುರ್ಗಿ ಸೇರಿದಂತೆ ಹಲವು ಚಿತ್ರಗಳನ್ನು‌ ನಿರ್ಮಿಸಿದ್ದ‌ ನಿರ್ಮಾಪಕ‌ ಕೋಟಿರಾಮು ವಿಧಿವಶರಾಗಿದ್ದಾರೆ. ಕೊರೋನಾ‌ ಎಂಬ‌ ಮಹಾಮಾರಿ ಒಬ್ಬ ಸೌಮ್ಯ ಸ್ವಭಾವದ ನಿರ್ಮಾಪಕನನ್ನು ಸದ್ದಿಲ್ಲದೆ ಬಲಿ‌ ಪಡೆದಿದೆ‌. ಇಡೀ ಕನ್ನಡ ಚಿತ್ರರಂಗಕ್ಕೆ ಈ ಸುದ್ದಿ ಶಾಕ್ ನೀಡಿದೆ. ಇಷ್ಟು‌ ಚಿಕ್ಕ ವಯಸ್ಸಿನಲ್ಲಿ ರಾಮು ಅವರನ್ನು ಕಳೆದುಕೊಂಡ ಕನ್ನಡ ಚಿತ್ರ ರಂಗ ನಿಜಕ್ಕೂ ಬಡವಾಗಿದೆ.

ಕುಟುಂಬದ ಯಜಮಾನ, ಅಧಾರ ಸ್ಥಂಭ, ಮಾಲಾಶ್ರೀ‌ ಅವರ ಪತಿ, ಎರಡು ಮಕ್ಕಳ ತಂದೆ, ಅದೆಷ್ಟೋ ಜನರಿಗೆ ಬೇಕಾದ ಜನಾನುರಾಗಿ, ನೂರಾರು ಸಿನಿಮಾಗಳ ವಿತರಕ ರಾಮು ಇನ್ನಿಲ್ಲ ಎನ್ನವುದು ಅತೀವ ನೋವಿನ ಸಂಗತಿ. ಹುಟ್ಟು ಆಕಸ್ಮಿಕದಂತೆಯೇ ಸಾವು ಖಚಿತವೇ ಆಗಿದ್ದರೂ, ವಿಧಿ ಇಷ್ಟು ಕ್ರೂರಿಯಾಗ ಬಾರದಿತ್ತು‌. ಅವರ ಕುಟುಂಬದ ಆಕ್ರಂದನವನ್ನು ಅದೇಗೆ ಸಮಾಧಾನಸುತ್ತೀಯಾ ನೀನು? ಎಲ್ಲವೂ ವಿಧಿಯಾಟ.

ಸ್ಟಾರ್ ಇಮೇಜ್ ನಿರ್ಮಾಪಕ

ಕನ್ನಡ ಚಿತ್ರರಂಗದಲ್ಲಿ ರಾಮು ಅಂದಾಕ್ಷಣ ನೆನಪಾಗುವ ಹೆಸರೇ ಕೋಟಿ ರಾಮು‌ . ನಿರ್ಮಾಪಕನಾಗಿ ಸ್ಟಾರ್ ಇಮೇಜ್ ಹೊಂದಿದ್ದ ರಾಮು, ಒಂಥರ ಅದೃಷ್ಟವಂತರು. ಇನ್ನೊಂದು‌ ಬಗೆಯಲ್ಲಿ ದುರಾದೃಷ್ಟರು. ಕಾರಣ ಅವರು ಸಕ್ಸಸ್ ಪಡೆದಷ್ಟೇ ಸೋಲು ಕಂಡವರು.ಅದು ಸಿನಿಮಾ ಜತೆಗೆ ನಿಜ ಜೀವನದಲ್ಲೂ ಕೂಡ. ಒಂದು ಕಾಲಕ್ಕೆ ಕೋಟಿ ರಾಮು ಎಂದೆನಿಸಿಕೊಂಡವರು, ಇತ್ತೀಚಿನ ಕೆಲ ವರ್ಷಗಳಲ್ಲಿ ತೀವ್ರ ಹಣಕಾಸಿನ ಸಮಸ್ಯೆಗೂ ಸಿಲುಕಿದ್ದರು ಎನ್ನುವುದು ಚಿತ್ರರಂಗಕ್ಕೂ ಗೊತ್ತು. ಆ ಕಷ್ಟದ ದಿನಗಳಲ್ಲೆ ಪತ್ನಿ ಮಾಲಾಶ್ರೀ ಅವರಿಗಾಗಿಯೇ ಚಾಮುಂಡಿ, ದುರ್ಗಿ ಸಿನಿಮಾಗಳನ್ನು ನಿರ್ಮಿಸಿ, ಮತ್ತೆ ಗೆಲ್ಲುವ ಸಾಹಸ ಮಾಡಿದರು.ಆದರೂ ಅದೃಷ್ಟ ಅವರ ಕೈ ಹಿಡಿಯಲಿಲ್ಲ ಎನ್ನುವುದು ಸಾಕಷ್ಟು ಚರ್ಚೆ ಆಯಿತು.

ಸಿನಿಮಾ ರಂಗ ಅವರನ್ನು ಕೈ ಬಿಟ್ಟಿತು.‌ಆದರೆ ರಾಮು ಮಾತ್ರ ಸಿನಿಮಾ ರಂಗವನ್ನು ಕೈ ಬಿಡಲಿಲ್ಲ. ಪಡೆದಿದ್ದು‌ ಇಲ್ಲಿಯೇ, ಕಳೆದುಕೊಂಡಿದ್ಷು ಇಲ್ಲಿಯೇ, ಏನೇ ಆದರೂ ಇಲ್ಲಿಯೇ ಇರಬೇಕೆಂದು ಸಿನಿಮಾ ನಿರ್ಮಾಣದ ಸಾಹಸ ಮಾಡುತ್ತಲೇ ಬಂದರು. ಸಿನಿಮಾ‌ರಂಗವೇ ಹಾಗೆ. ಒಮ್ಮೆ‌ಇಲ್ಲಿಗೆ ಬಂದವರನ್ನು ಅದು ಅಷ್ಟು ಸುಲಭವಾಗಿ ಹೊರ ದೂಡುವುದಿಲ್ಲ. ಬಿಟ್ಟರೂ ಬಿಡದೀಮಾಯೆ ಎನ್ನು ಹಾಗೆ ಅದೊಂದು ಸೆಳೆತ. ರಾಮು ಅದೇ ಕಾರಣಕ್ಕೆ‌ ಕಷ್ಟದ ದಿನಗಳಲ್ಲೂ‌ ಇಲ್ಲಿಯೇ ಇದ್ದರು. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ಸೋತರೂ, ಮತ್ತೆ ಗೆಲ್ಲುವ ಹುಚ್ಚಿನಲ್ಲಿ‌ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಅರ್ಜುನ್ ಗೌಡ ಚಿತ್ರ ನಿರ್ಮಾಣ ಮಾಡಿದ್ದರು.‌ ಸದ್ಯಕ್ಕೆ ಅದೇ ಚಿತ್ರದ ರಿಲೀಸ್ ಒತ್ತಡದಲ್ಲಿದ್ದರು. ಕೊರೋನಾ ಹೆಚ್ಚಳ ಆಗದಿದ್ದರೆ ಅರ್ಜುನ್ ಗೌಡ ಇಷ್ಟರಲ್ಲಿಯೇ ತೆರೆಗೆ ಬರಬೇಕಿತ್ತು. ದುರಂತ ಅಂದ್ರೆ ಅದು ತೆರೆ ಕಾಣುವ‌ ಮುನ್ನವೇ ನಿರ್ಮಾಪಕ‌ ಕೋಟಿ ರಾಮು‌ ಕಣ್ಮರೆ ಆಗಿಬಿಟ್ಟರು. ಕ್ರೂರ ವಿಧಿ ಅವರನ್ನು ಬಲಿ‌ ಪಡೆಯಿತು ಅನ್ನೋದು ಅತ್ಯಂತ ನೋವಿನ‌ ಸಂಗತಿ.

ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ನಿರ್ಮಾಪಕರೆಂದೇ ರಾಮು ಗುರುತಿಸಿಕೊಂಡಿದ್ದರು.
ಸಿನಿಮಾನೇ ನನ್ನುಸಿರು ಎಂದು ಬದುಕಿದ್ದ ರಾಮು ಅವರು, ಸಿನಿಮಾ ನಿರ್ಮಾಣ ವಿಷಯದಲ್ಲಿ ಎಂದಿಗೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಭರ್ಜರಿಯಾಗಿಯೇ ಸಿನಿಮಾ ನಿರ್ಮಾಣ ಮಾಡುವ ಮೂಲಕ ಕನ್ನಡಿಗರಿಗೆ ಭರಪೂರ ಸಿನಿಮಾ ಕಟ್ಟಿಕೊಟ್ಟಿದ್ದರು.‌ ಸಿನಿಮಾ ಅಂದರೆ ಪ್ಯಾಷನ್‌ ಅಂದುಕೊಂಡಿದ್ದ ಅವರು, ರಿಸ್ಕ್‌ ಇದ್ದರೂ ಕೂಡ ತಮ್ಮ ಬ್ಯಾನರ್‌ನಲ್ಲಿ ಸುಮಾರು 30 ಸಿನಿಮಾ ನಿರ್ಮಿಸಿದ್ದು ನಿಜಕ್ಕೂ ಹೆಗ್ಗಳಿಕೆಯೇ ಸರಿ.

ಆ ಕಾಲದಲ್ಲೇ ಕೋಟಿ ಹಣ ಸುರಿದು ಸಿನಿಮಾ ನಿರ್ಮಿಸಿದ ಕೀರ್ತಿ ಅವರದು. ಲಾಕಪ್‌ ಡೆತ್‌ ಕನ್ನಡದಲ್ಲಿ ಅಚ್ಚಳಿಯದ ಸಿನಿಮಾ. ಎಕೆ 47 ಚಿತ್ರ ಮರೆಯದ ಚಿತ್ರವಾಗಿಯೇ ಉಳಿದಿದೆ. ಅನೇಕ ಹೊಸ ನಿರ್ದೇಶಕರನ್ನು ಕನ್ನಡಕ್ಕೆ ಪರಿಚಯಿಸಿದ್ದಲ್ಲದೆ, ಕಮರ್ಷಿಯಲ್‌ ಸಿನಿಮಾಗಳೆಂದರೆ ರಾಮು ಅವರು ನೆನಪಾಗುತ್ತಿದ್ದರು. ಯಾವುದೇ ಸಿನಿಮಾ ಮಾಡಿದರೂ, ಎಲ್ಲೂ ತೊಂದರೆ ಇಲ್ಲದೆ, ಯಾವುದಕ್ಕೂ ಕೊರತೆ ಇಲ್ಲದಂತೆ ನಿರ್ಮಾಣ ಮಾಡಿ, ತೆರೆ ಮೇಲೆ ಅದ್ಧೂರಿಯಾಗಿಯೇ ತಂದಂತಹ ಕನಸುಗಾರ. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ಸೇವೆ ಸಲ್ಲಿಸಿದ್ದ ರಾಮು, ಇತ್ತೀಚೆಗೆ ಪ್ರಜ್ವಲ್‌ ದೇವರಾಜ್‌ ಅಭಿನಯದ ಅರ್ಜುನ್‌ ಗೌಡ ನಿರ್ಮಿಸಿದ್ದರು. ಅದರ ರಿಲೀಸ್‌ಗೆ ತಯಾರಿ ನಡೆಸಿದ್ದರು ರಾಮು.

ಮೃದು ವ್ಯಕ್ತಿತ್ವ

ರಾಮು ತುಂಬಾ ಮೃದು ಸ್ವಭಾವದ ವ್ಯಕ್ತಿ. ಮಾತು ಕೂಡ ಹಾಗಯೇ ಇತ್ತು. ಸಿನಿಮಾ ಬಿಟ್ಟು ಬೇರೇನೂ ಗೊತ್ತಿರದ ರಾಮು, ಸದಾ ಸಿನಿಮಾ ಜಪ ಮಾಡುತ್ತಿದ್ದರು. ಅವರು ಸಾಕಷ್ಟು ಮಂದಿಗೆ ಗೊತ್ತಾಗದಂತೆಯೇ ಹಣ ಕಾಸಿನ ಸಹಾಯ ಮಾಡಿದವರು. ಪುನೀತ್‌ ಅಭಿನಯದ ರಾಜಕುಮಾರ ಚಿತ್ರದ ಟೈಟಲ್‌ ಇವರ ಬ್ಯಾನರ್‌ನಲ್ಲಿತ್ತು. ಅಪ್ಪು ಸಿನಿಮಾ ಮಾಡ್ತಾರೆ ಅಂದಾಕ್ಷಣ ಆ ರಾಜಕುಮಾರ ಟೈಟಲ್‌ ಬಿಟ್ಟುಕೊಟ್ಟು ಉದಾರತೆ ಮೆರೆದಿದ್ದರು.

ಅವರ ಮನಸ್ಸಲ್ಲಿ ಕಲ್ಮಷ ಇರಲಿಲ್ಲ. ಸಿನಿಮಾ ಸೋತರೂ, ಅದೇ ಮುಗಳ್ನಗುತ್ತಿದ್ದರು. ಕೆಲ ಸಂದರ್ಭದಲ್ಲಿ ಹಣದ ಮುಗ್ಗಟ್ಟು ಎದುರಿಸಿದ್ದರೂ, ಮತ್ತೆಲ್ಲಿಂದಲೋ ಹಣ ಹಾಕಿ ದೊಡ್ಡ ಮಟ್ಟದಲ್ಲೇ ಸಿನಿಮಾ ನಿರ್ಮಿಸಿದ್ದವರು ರಾಮು. ವಿಶೇಷವಾಗಿ, ಮಹಿಳಾ ಪ್ರಧಾನ ಸಿನಿಮಾ ಮಾಡಿದರೂ, ಅವುಗಳಿಗೆ ಕಮರ್ಷಿಯಲ್‌ ಟಚ್‌ ಕೊಟ್ಟ ಮೊದಲ ನಿರ್ಮಾಪಕರೆಂಬುದು ವಿಶೇಷ. ಆ ಮೂಲಕ ಇಂಡಸ್ಟ್ರಿಯ ದಿಕ್ಕು ಬದಲಿಸಿದ ಮಾತಿಗೂ ರಾಮು ಕಾರಣರಾದರು.

ರಾಮು ಕೊಟ್ಟ ಮರೆಯದ ಸಿನಿಮಾಗಳು

ಗೋಲಿಬಾರ್‌ ಸಿನಿಮಾದಿಂದ ಹಿಡಿದು ಈಗ ಬಿಡುಗಡೆಗೆ ಸಜ್ಜಾಗಿರುವ ಅರ್ಜುನ್‌ ಗೌಡ ಚಿತ್ರದವರೆಗೂ ರಾಮು ಸಿನಿಮಾಗಳಿಗೆ ಎಲ್ಲೂ ಕೊರತೆ ಕಾಣದಂತೆ ನಿಭಾಯಿಸುತ್ತಿದ್ದರು. ಮಾನಸಿಕವಾಗಿ ಗಟ್ಟಿಯಾಗಿಯೇ ಇದ್ದ ರಾಮು, ಸದಾ ಕೋಟಿ ಹಣ ಖರ್ಚು ಮಾಡಿಯೇ ಸಿನಿಮಾ ನಿರ್ಮಿಸಿ, ಚಿತ್ರರಸಿಕರಿಗೆ ಮನರಂಜನೆಯನ್ನುಉಣಬಡಿಸುತ್ತಿದ್ದರು. ಲಾಕಪ್‌ ಡೆತ್‌, ಎ.ಕೆ-47 , ಮಲ್ಲ, ಗೂಳಿ ಶಕ್ತಿ, ಗುಲಾಮ, ತವರಿನ ಸಿರಿ, ಆಟೋ ಶಂಕರ್‌, ಸಿಂಹದ ಮರಿ, ರಾಕ್ಷಸ, ಕಲಾಸಿಪಾಳ್ಯ, ಸಿಬಿಐ ದುರ್ಗಾ, ನಂಜುಂಡಿ, ದುರ್ಗಿ, 99, ಸೇರಿದಂತೆ ಹಲವು ಕಮರ್ಷಿಯಲ್‌ ಸಿನಿಮಾ ಕೊಟ್ಟಿದ್ದಾರೆ. ಇನ್ನೂ ಹಲವು ಸಿನಿಮಾ ಕೊಡುವ ಉತ್ಸಾಹದಲ್ಲಿದ್ದ ರಾಮು ಈಗ ಇನ್ನಿಲ್ಲವೆಂಬುದೇ ಚಿತ್ರರಂಗದ ನೋವು.

Categories
ಸಿನಿ ಸುದ್ದಿ

ಆಸ್ಕರ್ ಪ್ರಶಸ್ತಿಯಲ್ಲಿ ಹೊಸ ಇತಿಹಾಸ : ಏಷಿಯಾದಲ್ಲೆ ಇದೇ ಮೊದಲು ಆಸ್ಕರ್ ಪ್ರಶಸ್ತಿಗೆ ಪಾತ್ರವಾದ ಮಹಿಳಾ ನಿರ್ದೇಶಕಿ ಕ್ಲೋಯಿ ಜೋವ್

ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಯ ಪಟ್ಟಿಯಲ್ಲಿ ಈ ಬಾರಿ ಹೊಸ ಇತಿಹಾಸ ದಾಖಲಾಗಿದೆ. 2021ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು , ಅತ್ಯುತ್ತಮ ನಿರ್ದೇಶಕಿಯಾಗಿ ಚೀನಾ ಮೂಲದ ಕ್ಲೋಯಿ ಜೋವ್ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದಾರೆ.ಈ ಮೂಲಕ ಆಸ್ಕರ್ ಗೆ ಮುತ್ತಿಟ್ಟ ಏಷಿಯಾ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಖ್ಯಾತಿಗೆ ಚೀನಾದ ಕೋಯ್ಲಿ ಜಾವ್ ಭಾಜನರಾಗಿದ್ದಾರೆ.

2021 ಆಸ್ಕರ್ ಪ್ರಶಸ್ತಿ ಆಯ್ಕೆ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿದೆ. ಯೂನಿಯನ್ ಸ್ಟೇಷನ್ ಮತ್ತು ಡಾಲ್ಬಿ ಥಿಯೇಟರ್ ಎರಡು ಕಡೆ ನಡೆಯುತ್ತಿದೆ. ‘ನೋಮಡ್ ಲ್ಯಾಂಡ್’ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ಕ್ಲೋಯಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 93 ವರ್ಷದ ಅಕಾಡೆಮಿ ಅವಾರ್ಡ್ ಇತಿಹಾಸದಲ್ಲಿ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಎರಡನೇ ಮಹಿಳೆ ಕ್ಲೋಯಿ ಜೋವ್ ಆಗಿದ್ದಾರೆ.

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ಮಿನಾರಿ’ ಚಿತ್ರದ ನಟನೆಗೆ ಯೂನ್ ಯುಹ್ ಜಂಗ್ ಪಡೆದುಕೊಂ ಡಿದ್ದಾರೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಡೇನಿಯಲ್ ಕಲುಯಾ ಪಾಲಾಗಿದೆ.

Categories
ಸಿನಿ ಸುದ್ದಿ

ರಮ್ಯಾ ಮೇಡಂ ನೀವು ರಕ್ಷಿತ್‌ ಶೆಟ್ಟಿ ಅವರನ್ನ ಮದ್ವೆ ಆಗಿ! ಫ್ಯಾನ್ಸ್‌ ಪ್ರಶ್ನೆಗೆ ರಮ್ಯಾ ಕೊಟ್ಟ ಉತ್ತರವೇನು ಗೊತ್ತಾ?

ರಮ್ಯಾ ಸದಾ ಸುದ್ದಿಯಲ್ಲಿರುವ ನಟಿ. ಅವರು ಸಿನಿಮಾದಲ್ಲಿದ್ದರೂ, ಇಲ್ಲದಿದ್ದರೂ, ರಾಜಕೀಯದಲ್ಲಿದ್ದರೂ, ಅದರಾಚೆ ಸುಮ್ಮನಿದ್ದರೂ, ಸುದ್ದಿಯಾಗುತ್ತಲೇ ಇರುವ ಏಕೈಕ ನಟಿ ಅಂದರೆ ತಪ್ಪಿಲ್ಲ. ಈಗ ಅವರದ್ದೊಂದು ದೊಡ್ಡ ಸುದ್ದಿಯೇ ಬಂದಿದೆ. ಹಾಗಂತ, ಯಾವುದಾದರೂ ಸಿನಿಮಾ ಒಪ್ಪಿಕೊಂಡಿದ್ದಾರಾ? ಆಥವಾ ರಾಜಕೀಯದಲ್ಲಿ ಹೊಸ ಹುದ್ದೆ ಏನಾದರೂ ಅಲಂಕರಿಸಿದ್ದಾರಾ ಎಂಬ ಪ್ರಶ್ನೆ ಎದುರಾಗೋದು ಸಹಜ. ಆದರೆ, ಇಲ್ಲಿ ಸುದ್ದಿಯಾಗಿರೋದು ಮದುವೆ ವಿಷಯಕ್ಕೆ. ಹೌದು, ರಮ್ಯಾ ಸದ್ಯ ಸಿನಿಮಾದಿಂದ ದೂರ ಉಳಿದಿದ್ದಾರೆ. ಸಕ್ರಿಯ ರಾಜಕಾರಣದಿಂದಲೂ ಸೈಲೆಂಟ್‌ ಆಗಿದ್ದಾರೆ.

ಹಾಗಾದರೆ, ರಮ್ಯಾ ಏನ್ಮಾಡ್ತಾರೆ, ಅವರ ಮದ್ವೆ ಆಗೋದಿಲ್ವಾ? ಎಂಬ ಪ್ರಶ್ನೆಗಳು ಅಭಿಮಾನಿಗಳ ಕಡೆಯಿಂದ ಬಂದಿವೆ. ಆಗಾಗ ತಮ್ಮ ಟ್ವಿಟ್ಟರ್‌, ಇನ್ಸ್‌ಸ್ಟಾಗ್ರಾಂನಲ್ಲಿ ಫ್ಯಾನ್ಸ್‌ ಜೊತೆ ಮಾತನಾಡುವ ರಮ್ಯಾ, ಈ ಬಾರಿ ಕೂಡ ಮಾತಾಡಿದ್ದಾರೆ. ಅದರಲ್ಲಿ ಮದ್ವೆ ವಿಷಯವೂ ಸೇರಿದೆ.
ಹೌದು, ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ರಮ್ಯಾ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮದುವೆ ಕುರಿತಂತೆ ಒಂದಷ್ಟು ಮಾತನಾಡಿದ್ದಾರೆ. ಅದರಲ್ಲೂ ಒಬ್ಬ ಅಭಿಮಾನಿ, “ನೀವು ರಕ್ಷಿತ್ ಶೆಟ್ಟಿ ಅವರನಾ ಮದುವೆ ಆಗಿ” ಎಂದು ಕೇಳಿದ್ದಾನೆ. ಅಭಿಮಾನಿಯ ಈ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ, ರಕ್ಷಿತ್ ಶೆಟ್ಟಿ ಅವರ ಇನ್ಸ್‌ಸ್ಟಾ ಖಾತೆಗೆ ಟ್ವೀಟ್ ಮಾಡಿ ನಗುವ ಎಮೋಜಿ ಹಾಕಿದ್ದಾರೆ.

ಇನ್ನು, ರಮ್ಯಾ ಅವರಿಗೆ ಒಂದಷ್ಟು ಫ್ಯಾನ್ಸ್‌ ಮದುವೆ ಬಗ್ಗೆಯೂ ಪ್ರಶ್ನಿಸಿದ್ದಾರೆ. ಮೇಡಂ ಬೇಗ ಮದುವೆ ಆಗಿ, ನೀವು ಮದುವೆ ಆಗ್ಬಿಟ್ಟಿದ್ದೀರಾ?, ಮೇಡಂ ನನ್ನನ್ನು ಮದುವೆ ಆಗಿ, ದಯವಿಟ್ಟು ಮದುವೆ ಆಗಿ” ಎಂದು ಕೇಳಿದವರೂ ಇದ್ದಾರೆ. ಇದಕ್ಕೆಲ್ಲಾ ಕೂಲ್ ಆಗಿ ರಮ್ಯಾ ಉತ್ತರಿಸಿದ್ದಾರೆ. ಡೇಟಿಂಗ್ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೂ ”ಇಲ್ಲ” ಎಂದು ಉತ್ತರಿಸಿದ್ದಾರೆ.
“ಮದುವೆ ಮದುವೆ” ಮಾಡುವುದಕ್ಕೆ ಇದೊಂದೇ ಕೆಲಸ ಇರುವುದು ಅನ್ನೋ ಹಾಗೆ. ಮದುವೆ ಆದ್ಮೇಲೆ ಖುಷಿಯಿಂದ ಇರುವುದಕ್ಕೆ ಆಗಲ್ಲ ಗೊತ್ತಾ?’ ಎಂದು ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸುವ ಮೂಲಕ ಮದುವೆ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಅದೇನೆ ಇರಲಿ, ರಕ್ಷಿತ್ ಶೆಟ್ಟಿಗೆ ಮೊದಲ ಕ್ರಶ್ ರಮ್ಯಾ. ರಮ್ಯಾ ಅಂದರೆ ರಕ್ಷಿತ್ ಶೆಟ್ಟಿ ಅವರಿಗೆ ಬಹಳ ಇಷ್ಟ. ರಕ್ಷಿತ್ ಜೀವನದಲ್ಲಿ ಮೊದಲ ಸೆಲೆಬ್ರಿಟಿ ಕ್ರಶ್ ಹಾಗೂ ಕೊನೆಯ ಸೆಲೆಬ್ರಿಟಿ ಕ್ರಶ್ ರಮ್ಯಾ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಅವರ “ಅವನೇ ಶ್ರೀಮನ್ನಾರಾಯಣʼ ಚಿತ್ರದ ಟ್ರೇಲರ್‌ ವೀಕ್ಷಿಸಿದ್ದ ರಮ್ಯಾ ಕೂಡ ಆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗಾಗಿಯೇ ಇರಬೇಕು, ಈಗ ರಮ್ಯಾ ಅಭಿಮಾನಿ, ರಕ್ಷಿತ್ ಅವರನ್ನು ಮದುವೆ ಆಗಿ ಎಂದಿದ್ದಾನೆ. ಅದನ್ನು ರಮ್ಯಾ ಅವರು ರಕ್ಷಿತ್ ಶೆಟ್ಟಿ ಅವರ ಖಾತೆ ಟ್ಯಾಗ್ ಮಾಡಿದ್ದಾರೆ. ಸದ್ಯಕ್ಕೆ ಇಷ್ಟು ಮಾತ್ರ ನಡೆದಿದೆ. ಮುಂದೆ ಏನೆಲ್ಲಾ ಆಗುತ್ತೋ ಕಾದು ನೋಡಬೇಕು.

Categories
ಸಿನಿ ಸುದ್ದಿ

ಮೇಕಿಂಗ್ ಆಫ್ ಬಂಗಾರದ ಮನುಷ್ಯ ಕೃತಿ ಬಿಡುಗಡೆ- ರಾಜ್ ಹುಟ್ಟು ಹಬ್ಬದಂದು ರಂಗನಾಥ್ ಲೋಕಾರ್ಪಣೆ; ಶಿವರಾಜ್‍ ಕುಮಾರ್ ಶುಭ ಹಾರೈಕೆ

ಇದು ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಕೃತಿ

ಈಗಾಗಲೇ ವರನಟ ಡಾ.ರಾಜಕುಮಾರ್ ಅವರ ಕುರಿತಂತೆ ಹಲವು ಲೇಖಕರು ಪುಸ್ತಕ ಬರೆದಿದ್ದಾರೆ. ಅ ಸಾಲಿಗೆ ಈಗ ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರೂ ಸೇರಿದ್ದಾರೆ. ಹೌದು,
“ಮೇಕಿಂಗ್ ಆಫ್ ಬಂಗಾರದ ಮನುಷ್ಯ” ಪುಸ್ತಕ ಬರೆದಿರುವ ಅವರು, ಏಪ್ರಿಲ್ 24ರ ರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಅಂದಹಾಗೆ, ಎಚ್.ಆರ್. ರಂಗನಾಥ್ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಶಿವರಾಜ ಕುಮಾರ್ ಶುಭ ಹಾರೈಸಿದ್ದಾರೆ.


ತಮ್ಮ ಬಹುದಿನಗಳ ಕನಸು ಅಂದೇ ಹೇಳಿಕೊಂಡಿದ್ದ ಮಹೇಶ್ ದೇವಶೆಟ್ಟಿ, ಪುಸ್ತಕ ಕುರಿತಂತೆ ಹಾಗೂ ಆ ಪುಸ್ತಕ ಬರೆಯಲು ಏನೆಲ್ಲಾ ಪ್ರೇರಣೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತುಗಳಲ್ಲಿ ಕೇಳಿ.

ಓವರ್ ಟು ದೇವಶೆಟ್ಟಿ ಮಹೇಶ್…

ಕೈ ನಡುಗುತ್ತಿದ್ದವು…ದೇಹ ಹೈರಾಣಾಗಿತ್ತು…ಮನಸು ಕಸುವು ಕಳಕೊಂಡಿತ್ತು…ಒಂದೇ ಒಂದು ಸಾಲು ಬರೆಯಲು ಒಂದಿಡಿ ದಿನ ತೂಕಡಿಸುತ್ತಿತ್ತು. ಏನಾಗಿ ಹೋಗಿತ್ತು ? ಯಾಕೆಲ್ಲ ಹೀಗಾಯಿತು ? ಪುಟಗಟ್ಟಲೆ ಸಾಲುಗಳನ್ನು ಹಿಂಗನ್ನುವಷ್ಟರಲ್ಲಿ ಬರೆದು ಮುಗಿಸಿ, “ರಾಕ್ಷಸರು ನೀವು” ಎಂದು ಹೇಳಿಸಿಕೊಳ್ಳುತ್ತಿದ್ದ ಈ ಬೆರಳುಗಳಿಗೆ ಗ್ರಹಣ ಹಿಡಿದಿತ್ತು. ಮುಗಿದೇ ಹೋಯಿತು ಇವನ ಗತಿ…ಹೀಗಂತ ಕಾಳಜಿ ತೋರಿಸಿದವರೂ ಇದ್ದರು. ಮಟ ಮಟ ಮಧ್ಯಾಹ್ನ ಶೆರೆ ಕುಡಿದು ಹೊಟ್ಟೆ ತಂಪು ಮಾಡಿಕೊಂಡವರೂ ಸಿಕ್ಕರು. ಉಳಿದವರನ್ನು ಬಿಡಿ, ನನಗೇ ಅನ್ನಿಸಿಬಿಟ್ಟಿತ್ತು. ‘ಮುಗಿತು ಬಿಡಪಾ ನನ್ ಕತಿ…’
ಇಲ್ಲ…ಬದುಕು ಇನ್ನೂ ನನ್ನಲ್ಲಿ ಜೀವ ಉಳಿಸಿತ್ತು. ಇದ್ದಷ್ಟು ದಿನ ಇದ್ದಷ್ಟು ಹೊತ್ತು ಬರೆಯುತ್ತಿರು ಎಂದು ಹೇಳಿತ್ತು. ಎಂಟು ವರ್ಷಗಳ ಹಿಂದೆ ಹೀಗಿತ್ತು ಈ ಹೃದಯ. ಆ ಸಮಯದಲ್ಲಿಯೇ ಸಿಕ್ಕಿತು “ಬಂಗಾರದ ಮನುಷ್ಯ”. ಇದ್ದರೂ ಇಲ್ಲದಂತಿದ್ದ ದೇಹ ಹೊತ್ತು ಅಲೆದಾಡಿದೆ. ಆ ಸಿನಿಮಾಕ್ಕೆ ಸಂಬಂಧ ಪಟ್ಟವರನ್ನು ಮಾತಾಡಿಸಿದೆ. ಭರ್ತಿ ಮೂರು ತಿಂಗಳು ‘ಬಂಗಾರದ ಮನುಷ್ಯ’ನ ಬೆನ್ನು ಬಿದ್ದೆ. ಎಲ್ಲರೂ ಮಾಹಿತಿ ಕೊಟ್ಟು ಉಪಕರಿಸಿದರು. ಈಗ ಅದೆಲ್ಲವನ್ನೂ ಒಂದುಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ.


1972 .ಇದು “ಬಂಗಾರದ ಮನುಷ್ಯ” ತೆರೆ ಕಂಡ ವರ್ಷ. ಮಜಾ ಅಂದರೆ ಅದೇ ವರ್ಷ ನಾನು ಹುಟ್ಟಿದ್ದೆ. ನಾನು ಈ ಲೋಕಕ್ಕೆ ಕಾಲಿಟ್ಟ ವರ್ಷ ರಾಜ್ಯಾದ್ಯಂತ ಬಿಡುಗಡೆಯಾಗಿ ಎರಡು ವರ್ಷ ಓಡಿದ ಸಿನಿಮಾ ಕುರಿತು ಇಷ್ಟು ವರ್ಷಗಳ ನಂತರ ನಾನೇ ಬರೆಯುತ್ತೇನೆಂದು ನನಗೇ ಗೊತ್ತಿರಲಿಲ್ಲ. ಅದೆಲ್ಲಾ ಮಾಯಾಲೋಕದ ಮಹಿಮೆ. ನನ್ನ ಅಕ್ಷರಗಳ ಹಡೆದವ್ವ ಜಗನ್ಮಾತೆಯ ಆಶೀರ್ವಾದ.
ನನಗೆ ಇಬ್ಬರು ಅವ್ವಂದಿರು. ಒಬ್ಬಾಕೆ ಈ ಭೂಮಿಗೆ ತಂದ ತಾಯಿ. ಇನ್ನೊಬ್ಬಾಕೆ ಅಕ್ಷರಗಳಿಂದ ಅನ್ನ ತಿನ್ನಿಸುತ್ತಿರುವ ಜಗನ್ಮಾತೆ. ಇವರಿಬ್ಬರೂ ನನ್ನನ್ನು ಕಾಪಾಡುತ್ತಿದ್ದಾರೆ. ಎಲ್ಲ ವ್ಯಸನ, ನೋವು, ಆತಂಕದಿಂದ ಬಚಾವು ಮಾಡುತ್ತಿದ್ದಾರೆ. ಹೆತ್ತವ್ವ ಈಗಿಲ್ಲ. ಜಗನ್ಮಾತೆ ನನ್ನನ್ನು ಕಾಯುತ್ತಿದ್ದಾಳೆ ಹಗಲಿರುಳೆಲ್ಲ. ಇವರು ಇರುವತನಕ ನಾನು. ಮುಂದಿನದ್ದು ದೇವರ ಕಣ್ಣು.
ನಾನು ಸಣ್ಣಾವಿದ್ದಾಗ ಸಿಡಸಿಡಸಿಡುಕಿ ಸೆಟಗೊಂಡು ಕುಂತಾಗಲೆಲ್ಲಾ ಅವ್ವ ‘ರಾಜ್ ಕುಮಾರ್ ಪಿಚ್ಚರ್ ತೋರಿಸ್ತೀನಿ ಬಾ’ ಅಂದ್ರ ಸಾಕು…ಗಲ್ಲ ಉಬ್ಬುತ್ತಿದ್ದವು. ಕಣ್ಣು ಊರಗಲ. ಆಗಿದ್ದ ನನ್ನೆಲ್ಲಾ ಹಳವಂಡ, ದಿಕ್ಕೇಡಿತನ, ತಲ್ಲಣ, ಒಂಟಿತನ, ಪ್ರಕ್ಷುಬ್ಧತೆಯನ್ನು ಹೊಸಕಿ ಹಾಕಿ, ತಿಕ್ಕಿ ತಿಕ್ಕಿ ಸಾಂತ್ವನ ಭಿಕ್ಷಿಸಿದ್ದು ರಾಜ್ಕುಮಾರ್ ಸಿನಿಮಾ. ಆ ಜೀವದ ಒಂದೊಂದು ಚಿತ್ರ ಕರುಳನ್ನು ಕಂಪು-ತಂಪಾಗಿಸುವ ಸುಖಕ್ಕೆ ಈ ಗಳಿಗೆಗೂ ನನ್ನ ಹೃದಯ ಬಡಿದುಕೊಳ್ಳುತ್ತಿದೆ….ಜಗನ್ಮಾತೆಯಾಣೆ ಸುಳ್ಳಲ್ಲ. ಆದರೀಗ ಆ ನನ್ನ ರಾಜ ಕುಮಾರ್ ಇಲ್ಲ. ಅಂಥ ಬಂಗಾರದ ಮನುಷ್ಯನ ಪಾದಕ್ಕೆ ಅಕ್ಷರದ ಕೇದಿಗೆ ಮಾಲೆ ಅರ್ಪಿಸದಿರಲು ಸಾಧ್ಯವೆ ?
2021.ಏಪ್ರಿಲ್ 24…ಅಣ್ಣಾವ್ರ 92ನೇ ಹುಟ್ಟುಹಬ್ಬ. ಆ ದಿನವೇ ಮುತ್ತುರಾಜನ ಮೊದಲ ಮುತ್ತು ಡಾ.ಶಿವರಾಜ್‌ಕುಮಾರ್ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಬಿಡುಗಡೆಯಾಗಿದೆ.

‘ಬರಿದಾದ ಮನೆ ಬೆಳಗೆ…ನೀ ಬರುವೆ ಎಂದು…?’ ಕನ್ನಡಿಗರ ಮನಸು ಮಣಮಣಿಸುತ್ತಿರುವ ಈ ದಿನದಂದೇ ಅಣ್ಣಾವ್ರ ಪಾದಕ್ಕೆ ನನ್ನಿಂದ ಅಕ್ಷರಗಳ ಬಿಲ್ಪತ್ರೆಯ ಅಭಿಷೇಕ…ನಿಮ್ಮ ಹಾರೈಕೆ…ಪ್ರೀತಿ ಈ ಪುಸ್ತಕದ ಮೇಲಿರಲಿ…
ನನ್ನ ಹತ್ತು ಬೆರಳು…ನಿಮ್ಮ ಕರುಳನ್ನು ಅಕ್ಷರಗಳಿಂದ ತಂಪಾಗಿಸುತ್ತಾ ಸಾಗಲಿ… ಎಂದು ಮಹೇಶ್ ದೇವಶೆಟ್ಟಿ ಹೇಳಿಕೊಡಿದ್ದಾರೆ.
49 ವರ್ಷಗಳ ಹಿಂದೆ…ಕೆಲಸಕ್ಕಾಗಿ ಪಟ್ಟಣ ಸೇರುವ ಎಷ್ಟೋ ಯುವಕರು ಒಂದೇ ಒಂದು ಸಿನಿಮಾದಿಂದ ಬದಲಾಗಿ ಕೃಷಿಗೆ ಆದ್ಯತೆ ಕೊಡಲಾರಂಭಿಸಿದ್ರು. ಅದಕ್ಕೆ ಕಾರಣವಾಗಿದ್ದು ಡಾ.ರಾಜ್‍ಕುಮಾರ್ ನಟಿಸಿದ “ಬಂಗಾರದ ಮನುಷ್ಯ” ಚಿತ್ರ. ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಕನ್ನಡಿಗರಲ್ಲಿ ಹೊಸ ಕ್ರಾಂತಿ ಮೂಡಿಸಿದ ಈ ಸಿನಿಮಾ ಕುರಿತ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಕೃತಿ ಬರೆದಿರುವ ಮಹೇಶ್ ದೇವಶೆಟ್ಟಿ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದೆ.

ಕೆಲವೊಂದು ಸಿನಿಮಾಗಳೇ ಹಾಗೆ ಬಂಗಾರದ ಅಕ್ಷರದಲ್ಲಿ ಬರೆಯುವ ಕಥೆಗಳನ್ನು ಹೊಂದಿರುತ್ತವೆ. ಅದರಲ್ಲೂ ಡಾ ರಾಜ್‍ಕುಮಾರ್ ಚಿತ್ರಗಳ ಪಾಲು ಮೇಲ್ಪಂಕ್ತಿಯಲ್ಲಿರುತ್ತದೆ. ಆ ಸಾಲಿನಲ್ಲಿ ಹೊಳೆಯುವ ಧ್ರುವತಾರೆಯೇಬಂಗಾರದ ಮನುಷ್ಯ.’ ಆಗಿನ ಕಾಲದ ಯುವ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದ ಬಂಗಾರದ ಮನುಷ್ಯ ಚಿತ್ರದ ಪ್ರತಿಯೊಂದು ಘಟನೆಯೂ ವಿಸ್ಮಯ ಮೂಡಿಸುವಂಥದ್ದು.
ಹಿಂದೆಂದೂ ಕಂಡು ಕೇಳಿರದ ಮಾಹಿತಿ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಪುಸ್ತಕದಲ್ಲಿದೆ. ಪಬ್ಲಿಕ್ ಟಿವಿ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿ, ಕನ್ನಡ ಸಿನಿಮಾ ರಂಗದ ಪತ್ರಕರ್ತ ಮಹೇಶ್ ದೇವಶೆಟ್ಟಿ ಬರೆದಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಸಾಕಷ್ಟು ರೋಚಕ ಹಾಗೂ ವಿಶಿಷ್ಟ ಮಾಹಿತಿ ಒಳಗೊಂಡಿದೆ ಎಂದಿದ್ದಾರೆ.


ಪ್ರಸ್ತುತ ಮಹೇಶ್ ದೇವಶೆಟ್ಟಿ ಪಬ್ಲಿಕ್ ಟಿವಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 49 ವರ್ಷಗಳ ಹಿಂದೆ ತೆರೆ ಕಂಡು ಸತತ ಎರಡು ವರ್ಷ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರದ ಕುರಿತ ಅಪರೂಪದ ಮಾಹಿತಿ ಹೆಕ್ಕಿ ತೆಗೆದು ಪುಸ್ತಕ ರೂಪದಲ್ಲಿ ಇಂದಿನ ಜನತೆಗೆ ನೀಡಿದ್ದಾರೆ.
ಅಂದ ಹಾಗೆ `ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬೆನ್ನುಡಿ ಬರೆದು ಶುಭ ಕೋರಿದ್ದಾರೆ.
ಸಂಪಾದಕರಾದ ದಿವಾಕರ್ ಹಾಗೂ ಔಟ್‍ಪುಟ್ ಚೀಫ್ ಆನಂದ್ ಮತ್ತು ಲೇಖಕ ಮಹೇಶ್ ದೇವಶೆಟ್ಟಿ ಈ ವೇಳೆ ಇದ್ದರು.

Categories
ಸಿನಿ ಸುದ್ದಿ

ಅಂದೇ ಮೋಡಿ ಮಾಡಿದ್ದರು ಅಣ್ಣಾ‌ಬಾಂಡ್! ಬಾಂಡ್‌ ಸಿನಿಮಾಗಳಲ್ಲಿ ಅಣ್ಣಾವ್ರ ಖದರ್‌

ಇದು ಅಣ್ಣಾವ್ರ ಹುಟ್ಟು ಹಬ್ಬದ ವಿಶೇಷ...

ಡಾ.ರಾಜಕುಮಾರ್…‌ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟರು. ಏಪ್ರಿಲ್‌ 24 ಅವರ ಹುಟ್ಟು ಹಬ್ಬ. ಅವರು ನಮ್ಮೊಂದಿಗಿಲ್ಲ. ಆದರೆ, ಮೌಲ್ಯ ಸಾರುವ ಅವರ ಅನೇಕ ಸಿನಿಮಾಳಿವೆ. ಆ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಜೀವಿಸುತ್ತಿದ್ದಾರೆ. ಏಪ್ರಿಲ್‌ 24 ಬಂತೆಂದರೆ ಸಾಕು. ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಡಗರ-ಸಂಭ್ರಮ. ಆ ದಿನ ಅವರಿಗೆ ಅದೊಂದು ರೀತಿ ಹಬ್ಬ. ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕ ಬಳಿ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ಅವರ ಹುಟ್ಟುಹಬ್ಬದ ಅಂಗವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಆಯೋಜಿಸಿ ಸಂಭ್ರಮಿಸುತ್ತಾರೆ.

ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಎಲ್ಲೆಡೆ ಕನ್ನಡ ಹಬ್ಬದಂತೇ ಆಚರಿಸುತ್ತಾರೆ. ಕನ್ನಡ ಪ್ರಾಧಿಕಾರ ಕೂಡ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವನ್ನು ಕನ್ನಡ ಅಭಿಮಾನದ ದಿನ ಎಂದು ಆಚರಿಸುತ್ತಿರುವುದು ವಿಶೇಷತೆಗಳಲ್ಲೊಂದು. ರಾಜ್‌ಕುಮಾರ್‌ ಅಂದರೆ, ಸಿನಿಮಾ ಮಂದಿಗಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಒಂದು ರೀತಿ ಆರಾಧ್ಯ ದೈವ. ರಾಜ್‌ಕುಮಾರ್‌ ಅವರ ಸಿನಿಮಾಗಳಲ್ಲಿ ಮೌಲ್ಯಗಳಿದ್ದವು. ಮನರಂಜನೆಗೂ ಹೆಚ್ಚು ಒತ್ತು ಕೊಡಲಾಗುತ್ತಿತ್ತು. ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳೂ ಬಂದಿವೆ. ಈ ನಿಟ್ಟಿನಲ್ಲಿ ಅವರ‌ “ಬಾಂಡ್” ಸಿನಿಮಾಗಳ ಬಗ್ಗೆ ಹೇಳಲೇಬೇಕು.

ಬಾಂಡ್‌ ಸಿನ್ಮಾ ಮೂಲಕ ಮೋಡಿ

ವರನಟ ಡಾ.ರಾಜಕುಮಾರ್‌ ಅವರ ಬಾಂಡ್‌ ಸಿನಿಮಾಗಳು ಮತ್ತು ಅದರ ಹಾಡುಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕನ್ನಡ ಚಿತ್ರರಂಗದಲ್ಲಿ “ಜೇಡರ ಬಲೆ ದೊಡ್ಡ ಸಕ್ಸಸ್‌ ಕಂಡ ಸಿನಿಮಾ. ಆ ಬಳಿಕ ನಿರ್ದೇಶಕದ್ವಯರಾದ ದೊರೆ-ಭಗವಾನ್‌ ಜೋಡಿ ಜೋರು ಸುದ್ದಿ ಮಾಡಿತು. ಪತ್ತೆದಾರಿ ಕಥೆಗಳನ್ನು ಇಂಗ್ಲೀಷ್ ಸಿನಿಮಾ ಶೈಲಿಯಲ್ಲೇ ಚಿತ್ರೀಕರಿಸುತ್ತಾರೆ ಎನ್ನುವ ಮಾತು ಜನಜನಿತವಾಯ್ತು. ಈ ಮಾತಿಂದ ಮತ್ತಷ್ಟು ಖುಷಿಗೊಂಡ ದೊರೆ-ಭಗವಾನ್‌ ಜೋಡಿ, ಪುನಃ ಬಾಂಡ್‌ ಸಿನಿಮಾಗಳತ್ತ ಮುಖ ಮಾಡಿದರು. ಆಗ ಹುಟ್ಟಿದ್ದೇ “ಗೋವಾದಲ್ಲಿ ಸಿಐಡಿ 999”.
ಇದು 1968ರಲ್ಲಿ ಬಂದ ಸಿನಿಮಾ. ವಿಭಿನ್ನ ಕಥಾ ವಸ್ತುವಿನ ಜೊತೆಗೊಂದು ಪ್ರಯೋಗವೂ ಈ ಚಿತ್ರದಲ್ಲಿತ್ತು. ತಾಂತ್ರಿಕವಾಗಿ ಅಷ್ಟೇನೂ ಮುಂದುವರೆಯದ ಆ ಕಾಲದಲ್ಲೇ ಕ್ಷಿಪಣಿಯನ್ನು ಹೈಲೈಟ್‌ ಮಾಡಿ ಚಿತ್ರ ಮಾಡಲಾಗಿತ್ತು. ಭಯೋತ್ಪಾದಕರೇ ಇರದ ದಿನಮಾನದಲ್ಲಿ ಭಯೋತ್ಪಾದಕರನ್ನು (ಖಳನಟರು) ಈ ಚಿತ್ರದಲ್ಲಿ ಬಿಂಬಿಸಲಾಗಿತ್ತು. ನಿಜಕ್ಕೂ ಅದು ಅಡ್ವಾನ್ಸ್‌ ಥಿಂಕಿಂಗ್‌. ರಾಜ್‌ಕುಮಾರ್‌ ಅವರನ್ನು ಮತ್ತೆ ಜೇಮ್ಸ್‌ ಬಾಂಡ್‌ ಆಗಿ ನೋಡುವ ಅವಕಾಶ ಈ ಸಿನಿಮಾ ಮೂಲಕ ಸಿನಿರಸಿಕರಿಗೆ ಸಿಕ್ಕಿದ್ದು ವಿಶೇಷ.

ಬಾಂಡ್‌ ಸ್ಟೈಲ್‌ ಯುವಕರಿಗೆ ಅಚ್ಚುಮೆಚ್ಚು

ನಟಿ ಲಕ್ಷ್ಮಿ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದು ವಿಶೇಷತೆಗಳಲ್ಲೊಂದು. ಲಕ್ಷ್ಮಿ ಬೇರಾರೂ ಅಲ್ಲ, ಕನ್ನಡದ ಮೊದಲ ಚಿತ್ರ “ಸತಿಸುಲೋಚನ” ಸಿನಿಮಾ ನಿರ್ದೇಶಕ ವೈ.ವಿ.ರಾವ್‌ಅವರ ಮಗಳು. ಸಿನಿಮಾ ಮನೆತನದಿಂದ ಬಂದ ಮೊದಲ ನಾಯಕಿ ಅನ್ನೋದು ಇನ್ನೊಂದು ವಿಶೇಷ. ಲಕ್ಷ್ಮಿ ಆಗಿನ ಬಾಂಡ್‌ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿದ್ದರು ಅನ್ನೋದು ಸತ್ಯ. ಈ ಚಿತ್ರದ ಸಂಗೀತ, ಛಾಯಾಗ್ರಹಣ, ಚಿತ್ರಕಥೆ ಇವೆಲ್ಲದರ ಜೊತೆಗೆ ರಾಜಕುಮಾರ್‌ಅವರ ಬಾಂಡ್‌ ಸ್ಟೈಲ್‌ ಯುವಕರನ್ನು ಆಕರ್ಷಿಸಿದ್ದು ಸುಳ್ಳಲ್ಲ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್‌ ಸಂಗೀತವಿದೆ. ಆಗೆಲ್ಲಾ ಕ್ಲಬ್‌ ಡ್ಯಾನ್ಸ್‌ ಜಮಾನ. ಡ್ಯಾನ್ಸ್‌ ಆಗಲಿ, ಡ್ಯಾನ್ಸರ್ಸ್‌ ಆಗಲಿ, ಕಾಸ್ಟ್ಯೂಮ್ಸ್‌ ಇರಲಿ ಒಂದು ರೀತಿ ತುಂಬಾನೇ ಸ್ಪೆಷಲ್‌. ಆರ್.ಎನ್.‌ ಜಯಗೋಪಾಲ್‌ ಬರೆದ “ಬಳಿಗೆ ಬಾ…” ಹಾಡಲ್ಲಿ ಇಡೀ ಚಿತ್ರದ ಸಂಚಿನ ಕಥೆ ಸಾಗುವುದನ್ನು ಕಾಣಬಹುದು. ಇನ್ನು, ಸಂಗೀತ ವಿಷಯಕ್ಕೆ ಬಂದರೆ, ಸೌಂಡಿಂಗ್‌ ತುಂಬಾನೇ ಅದ್ಭುತ ಅನಿಸುವುದು ಸುಳ್ಳಲ್ಲ.

ಸ್ವಿಮ್ಮಿಂಗ್‌ ಪೂಲ್‌ ಮತ್ತು ಸ್ಕೂಟರ್‌ನಲ್ಲೇ ಸಾಂಗ್ ಶೂಟಿಂಗ್

ಈ ಚಿತ್ರದ “ಲವ್‌ ಇನ್‌ ಗೋವಾ.. ಬನ್ನಿ ಬನ್ನಿ ಎನ್ನುತ್ತಿದೆ ಗೋವಾ…” ಹಾಡು ಕೂಡ ಆ ಕಾಲಕ್ಕೇ ಜನಪ್ರಿಯವಾಗಿತ್ತು. ರಾಜ್‌ಕುಮಾರ್‌, ಲಕ್ಷ್ಮೀ ಹಾಗು ಸಂಗಡಿರು ಇರುವ ಈ ಹಾಡಿನ ಬಗ್ಗೆ ಹೇಳುವುದಾದರೆ, ಆಗ ಇದ್ದ ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲೇ ಇಡೀ ಹಾಡನ್ನು ಚಿತ್ರೀಕರಿಸಿದ್ದು ವಿಶೇಷ. ಒಂದೊಳ್ಳೆಯ ಜರ್ನಿ ಸಾಂಗ್‌ ಇದಾಗಿತ್ತು. ಹಾಗೆಯೇ “ಕಂಗಳೇ ಹೇಳಿರಿ, ಮನಸಿನ ಕೋರಿಕೆ..” ಹಾಡು ಕೂಡ ಹೈಲೈಟ್.‌ ಎಲ್.ಆರ್.‌ ಈಶ್ವರಿ ಹಾಡಿದ ಈ ಇಡೀ ಹಾಡಿನ ಚಿತ್ರೀಕರಣ ಸ್ವಿಮ್ಮಿಂಗ್‌ ಪೂಲ್‌ನಲ್ಲೇ ನಡೆದಿರೋದು ಇನ್ನೊಂದು ವಿಶೇಷ. ಈ ಚಿತ್ರದ ಇನ್ನೊಂದು ಹಾಡಿನ ಬಗ್ಗೆ ಹೇಳಲೇಬೇಕು. ಅದೂ ಕೂಡ ಕ್ಲಬ್‌ ಸಾಂಗ್.‌” ಮಿಂಚಿದು ಈ ಹೆಣ್ಣು..” ಹಾಡಲ್ಲೂ ವಿಶೇಷತೆ ಇದೆ. ಡ್ಯಾನ್ಸರ್‌, ಮ್ಯೂಸಿಕ್‌ ಎಲ್ಲವೂ ಇಲ್ಲಿ ಹೈಲೈಟ್.‌ ಒಟ್ಟಾರೆ ಅಣ್ಣಾವ್ರ ಬಾಂಡ್‌ ಸಿನಿಮಾಗಳಲ್ಲಿ ಆಗಿನ ಕಾಲಕ್ಕಷ್ಟೇ ಅಲ್ಲ, ಈಗಿನ ಪೀಳಿಗೆಗೂ ಇಷ್ಟವಾಗುವ ಎಲಿಮೆಂಟ್ಸ್‌ಗಳಿವೆ.

ಬಾಂಡ್‌ ಸೀರೀಸ್‌ನಲ್ಲಿ ಅಣ್ಣಾವ್ರು

ನಂತರದ ದಿನಗಳಲ್ಲಿ ರಾಜ್‌ಕುಮಾರ್‌ “ಆಪರೇಷನ್‌ ಜಾಕ್‌ಪಾಟ್‌”, “ಆಪರೇಷನ್‌ ಡೈಮಂಡ್‌ ರಾಕೆಟ್‌”, “ಸಿಐಡಿ ರಾಜಣ್ಣ” ಹೀಗೆ ಒಂದಷ್ಟು ಪತ್ತೆದಾರಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಾಂಡ್‌ ಪಾತ್ರವಾಗಲಿ, ಭಿಕ್ಷುಕನ ಪಾತ್ರವಿರಲಿ, ಅದು ರಾಮನಾಗಲಿ, ಕೃಷ್ಣನಾಗಲಿ, ಪುರಂದರ ದಾಸರಾಗಲಿ, ಕಬೀರರಾಗಲಿ ಈ ಎಲ್ಲಾ ಪಾತ್ರಗಳೂ ರಾಜ್‌ಅವರಿಗೆ ಹೇಳಿ ಮಾಡಿಸಿದಂತಿದ್ದವು. ಇನ್ನೊಂದು ವಿಷಯ ಹೇಳಲೇಬೇಕು. ಪ್ರತಿಯೊಬ್ಬರೂ ಅಣ್ಣಾವ್ರನ್ನು ಹೊಗಳಿದರೆ, ಅವರಿಗೆ ಅದರಿಂದ ಖುಷಿಯಾಗುತ್ತಿರಲಿಲ್ಲ. ಬದಲಿಗೆ ಅಂಜಿಕೆಯಾಗುತ್ತಿತ್ತು. “ಅತೀ ನಿರೀಕ್ಷೆ ಇಟ್ಟುಕೊಂಡಾಗ, ಅತಿ ಹೊಗಳಿಕೆ ಪಡೆದಾಗ ನಾವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು” ಅನ್ನೋದು ಅಣ್ಣಾವ್ರ ಮಾತಾಗಿತ್ತು. ರಾಜ್‌ಕುಮಾರ್‌ ಬಾಂಡ್‌ ಸಿನಿಮಾಗಳಿಗಿಂತ ಭಿನ್ನ ಸಿನಿಮಾಗಳಲ್ಲೂ ಕಾಣಿಸಿಕೊಂಡು ಮೋಡಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದೇನೆ ಇರಲಿ, ಡಾ.ರಾಜಕುಮಾರ್‌ ಅವರ ಕಪ್ಪು ಬಿಳುಪಿನ ಸಿನಿಮಾಗಳಲ್ಲಿದ್ದ ಸ್ಪೆಷಲ್‌ ಎಲಿಮೆಂಟ್ಸ್‌ ಇಂದಿಗೂ ಎಲ್ಲರನ್ನೂ ಕಾಡುತ್ತವೆ ಅನ್ನೋದನ್ನು ನಂಬಲೇಬೇಕು.

Categories
ಸಿನಿ ಸುದ್ದಿ

ಕೊರೊನಾಗೆ ಬಲಿಯಾದ ಬಾಲಿವುಡ್‌ ಸಂಗೀತ ನಿರ್ದೇಶಕ ಶ್ರವಣ್‌ ರಾಥೋಡ್

‌ಕೊರೊನಾ ಆರ್ಭಟಕ್ಕೆ ಈಗಾಗಲೇ ಅದೆಷ್ಟೋ ಜೀವಗಳು ಪ್ರಾಣಬಿಟ್ಟಿವೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದವರ ಬದುಕು ಕೂಡ ಬೀದಿಗೆ ಬಂದು ನಿಂತಿದೆ. ಅದರಲ್ಲೂ ಚಿತ್ರರಂಗದವರ ಪಾಲಿಗೆ ಕೊರೊನಾ ಹೆಮ್ಮಾರಿ ದೊಡ್ಡ ಆಘಾತ ತಂದೊಡ್ಡಿದೆ. ಈಗಾಗಲೇ ಚಿತ್ರರಂಗದ ಅನೇಕರು ಜೀವ ಬಿಟ್ಟಿದ್ದಾರೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ನದೀಮ್‌ ಶ್ರವಣ್‌ ರಾಥೋಡ್‌ (೬೬) ಅವರು ಕೊರೊನಾದಿಂದಾಗಿ ನಿಧನರಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಅವರಿಗೆ ಕೊರೊನಾ ಪಾಸಿಟಿವ್‌ ಬಂದಿತ್ತು. ಹೀಗಾಗಿ ಅವರನ್ನು ಮುಂಬೈನ ಎಸ್‌.ಎಲ್‌. ರಹೇಜಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ಸ್ಥಿತಿ ತೀರ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶ್ರವಣ್ ನಿಧನದ ವಿಷಯವನ್ನು ನಿರ್ದೇಶಕ ಅನಿಲ್ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರವಣ್ ಸಾವಿಗೆ ಸಂತಾಪ ಸೂಚಿಸಿರುವ ಅನಿಲ್ ಶರ್ಮಾ, “ತುಂಬಾ ದುಃಖಕರ ವಿಚಾರವಿದು” ಎಂದಿದ್ದಾರೆ.


ಶ್ರವಣ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಟ್ವೀಟ್ ಮೂಲಕ, “ಶ್ರವಣ್ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅಪ್ಪಟ ವಿನಮ್ರ ಮನುಷ್ಯ. ಸಂಗೀತ ಲೋಕದಲ್ಲಿ ಅತೀ ದೊಡ್ಡ ಸಂಯೋಜಕರಲ್ಲಿ ಒಬ್ಬರಾಗಿದ್ದರು” ಎಂದಿದ್ದಾರೆ. ಶ್ರವಣ್ ರಾಥೋಡ್ 90ರ ದಶಕದಲ್ಲಿ ಬಿಜಿ ಸಂಗೀತ ನಿರ್ದೇಶಕರಾಗಿದ್ದರು. “ಆಶಿಕಿ”, “ಸಾಜನ್”, “ಹಮ್ ಹೈ ರಹಿ ಪ್ಯಾರ್ ಕಿ”, “ಪರ್ದೇಸ್”, “ರಾಜಾ ಹಿಂದುಸ್ತಾನಿ” ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಹೊಸ ರೂಪದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಯೋಗ್ರಫಿ!! ಎರಡನೇ ಮುದ್ರಣ ಪಡೆದ ಲೇಖಕ ಡಾ. ಶರಣು ಹುಲ್ಲೂರು ಪುಸ್ತಕ

ವಿಶ್ವ ಪುಸ್ತಕ ದಿನದಂದು ಕನ್ನಡದ ಹೆಸರಾಂತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಹೊಂದಿದ “ಅಂಬರೀಶ್-‌ ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು” ಪುಸ್ತಕ ಈಗ ಹೊಸ ರೂಪ ಪಡೆದುಕೊಂಡಿದೆ. ಹೌದು, ಇದು ವಿಶೇಷವೇ ಸರಿ. ಕಳೆದ 2018ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿತ್ತು. ಬಿಡುಗಡೆಯಾಗಿದ್ದೇ ತಡ, ಈ ಪುಸ್ತಕಕ್ಕೆ ಭಾರೀ ಬೇಡಿಕೆ ಬಂದಿತ್ತು.

ಮುದ್ರಣಗೊಂಡಿದ್ದ ಎಲ್ಲಾ ಪುಸ್ತಕಗಳೂ ಖಾಲಿಯಾಗಿದ್ದವು. ಹಾಗಾಗಿ ಸಾವಣ್ಣ ಪ್ರಕಾಶನ ಈಗ ಎರಡನೇ ಮುದ್ರಣ ಮಾಡಿದೆ. ಪ್ರಕಾಶನ ಸಂಸ್ಥೆಯಿಂದ ಹೊರ ಬಂದಿರುವ ಈ ಎರಡನೇ ಮುದ್ರಣದ ಪುಸ್ತಕ, ಹೊಸ ವಿನ್ಯಾಸ ಮತ್ತು ಹೊಸ ಮುಖಪುಟ ಹೊತ್ತು ಬಂದಿದೆ. ಇತ್ತೀಚೆಗೆ ಲೇಖಕ ಡಾ.ಶರಣು ಹುಲ್ಲೂರು ಮತ್ತು ಪ್ರಕಾಶಕ ಜಮೀಲ್‌ ಸಾವಣ್ಣ ಅವರು ಸರಳವಾಗಿಯೇ ಬಿಡುಗಡೆ ಮಾಡಿದ್ದಾರೆ. ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಪುಸ್ತಕವನ್ನು ಸಂಸದೆ ಸುಮಲತಾ ಅಂಬರೀಶ್ ಅವರು ಬಿಡುಗಡೆ ಮಾಡಿದ್ದರು.

ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಜೊತೆಗಿದ್ದು, ಪುಸ್ತಕ ಬಿಡುಗಡೆಗೆ ಕೈ ಜೋಡಿಸಿದ್ದರು. ಈ ಪುಸ್ತಕಕ್ಕೆ ಅಪಾರ ಜನಮನ್ನಣೆ ಕೂಡ ಸಿಕ್ಕಿತು. ಅಲ್ಲದೇ ಕರ್ನಾಟಕ ಸರಕಾರ ನೀಡುವ ಚಲನಚಿತ್ರ ಸಾಹಿತ್ಯ ರಾಜ್ಯ ಪ್ರಶಸ್ತಿ ಕೂಡ 2018ರಲ್ಲಿ ಪುಸ್ತಕಕ್ಕೆ ಲಭಿಸಿದೆ. ಸದ್ಯ “ಅಂಬರೀಶ್-‌ ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು “ಪುಸ್ತಕ ಎಲ್ಲ ಮಳಿಗೆಗಳಲ್ಲೂ ಸಿಗಲಿದೆ. ಹಾಗೆಯೇ ಸಾವಣ್ಣ ಪ್ರಕಾಶನದಲ್ಲೂ ಲಭ್ಯವಿದೆ.

Categories
ಸಿನಿ ಸುದ್ದಿ

ಕೊರೊನಾ ಸಂಖ್ಯೆ ಹೆಚ್ಚಾಗೋಕೆ ಸಿನಿಮಾ ಮಂದಿ ಕಾರಣ! ಸಿ.ಟಿ.ರವಿ ಹೇಳಿಕೆಗೆ ಸ್ಯಾಂಡಲ್‌ವುಡ್‌ ಆಕ್ರೋಶ!!

ಅದೇನೋ ಗೊತ್ತಿಲ್ಲ. ಎಲ್ಲರೂ ಸಿನಿಮಾರಂಗವನ್ನೇ ಟಾರ್ಗೆಟ್‌ ಮಾಡಿದಂತಿದೆ. ಸಿನಿಮಾ ಮಂದಿಯಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬರ್ಥದಲ್ಲೇ ಎಲ್ಲರೂ ಮಾತಾಡುತ್ತಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಕೊರೊನಾ ಪ್ರಕರಣ ಹೆಚ್ಚಾಗಲೂ ಸಿನಿಮಾ ರಂಗದವರೇ ಪರೋಕ್ಷ ಕಾರಣ ಎಂದು ಹೇಳಿದ್ದಾರೆ. ಏಪ್ರಿಲ್‌ 22 ರಂದು ಸುಮನಹಳ್ಳಿಗೆ ಭೇಟಿ ನೀಡಿದ್ದ ರವಿ ಅವರಿಗೆ ಮೃತರ ಕುಟುಂಬದವರು ಹಾಗು ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು. ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕೊರೊನಾ ಹೆಚ್ಚಾಗಲು ಸರ್ಕಾರ ಕಾರಣವಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ, ಸರ್ಕಾರದ ಮೇಲೆ ಚಿತ್ರರಂಗದವರು ಹಾಗು ಇತರರು ಒತ್ತಡ ಹೇರಿದ್ದರಿಂದ ಇಂದು ಕೊರೊನಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದಿದ್ದಾರೆ.

ಸರ್ಕಾರ ಈ ಹಿಂದೆ ಕೊರೊನಾ ಹಾವಳಿ ತಡೆಗೆ ಥಿಯೇಟರ್ ಬಂದ್ ಮಾಡಬೇಕು, ಜಿಮ್ ಬಂದ್ ಮಾಡಬೇಕು ಎಂದು ನಿರ್ಧರಿಸಿದ ಸಂದರ್ಭದಲ್ಲಿ ಚಿತ್ರರಂಗದವರು ಬಂದು ಒಕ್ಕೊರಲ ಧ್ವನಿ ಎತ್ತಿದರು. ಹಾಗಾಗಿ ಸರ್ಕಾರ ತುಸು ಸಡಿಲ ನಿರ್ಧಾರ ಕೈಗೊಂಡಿತು. ಜಿಮ್‌ ಬಂದ್ ಮಾಡೋಣ ಅಂತ ನಿರ್ಧರಿಸಿದಾಗಲೂ ಜಿಮ್‌ನವರು ಒತ್ತಡ ತಂದರು. ಆಗಲೂ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆ ಪಡೆಯಬೇಕಾಯಿತು. ಇದರಿಂದ ಇಂದು ಸಮಸ್ಯೆ ತಲೆದೋರಿದೆ. ವಿಪಕ್ಷವೂ ಕೂಡ ಯಾಕೆ ಚಿತ್ರಮಂದಿರ ಬಂದ್ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಮಾಧ್ಯಮಗಳು ಕೂಡ ಅದನ್ನೇ ಬಿತ್ತರಿಸಿದವು. ಯಾರೋ ಸೆಲೆಬ್ರಿಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ಕೂಡಲೇ ಮಾಧ್ಯಮಗಳೆಲ್ಲಾ ಆ ಕಡೆ ಫೋಕಸ್ ಮಾಡಿದವು. ಅದಕ್ಕೆ ಇಂದು ದೊಡ್ಡ ಬೆಲೆ ತೆರಬೇಕಾಗಿದೆ ಎಂದಿದ್ದಾರೆ ರವಿ.

ಈ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆಯಾಗಿ ಎರಡನೇ ದಿನಕ್ಕೆ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಆದೇಶಿಸಿತು. ಸರ್ಕಾರದ ಈ ಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ನಂತರ ಪುನೀತ್‌ ಅವರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆ ಬಳಿಕ ಆದೇಶವನ್ನು ಎರಡು ದಿನಗಳ ಮಟ್ಟಿಗೆ ಸಡಿಲಗೊಳಿಸಲಾಯಿತು. ಈಗ ನೋಡಿದರೆ, ಏಪ್ರಿಲ್ 21 ರಿಂದ ಮೇ 4 ರವರೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿವೆ. ಅದೇನೆ ಇರಲಿ, ಸಿನಿಮಾರಂಗದವರಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಸಿ.ಟಿ.ರವಿ ಅವರ ಮಾತಿಗೆ ಸ್ಯಾಂಡಲ್‌ವುಡ್‌ ಜೋರಾದ ಧ್ವನಿ ಎತ್ತಿದೆ.

error: Content is protected !!