Categories
ಸಿನಿ ಸುದ್ದಿ

ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ಸಿನಿಮಾ ಸಾಹಿತಿ ಕವಿರಾಜ್ ಬೆಂಬಲ !

ಕನ್ನಡ ಚಿತ್ರರಂಗದ ಹೆಸರಾಂತ ಗೀತೆ ರಚನೆಕಾರ ಕವಿರಾಜ್ ಅಪ್ಪಟ‌ ಮಲೆನಾಡಿನ‌ ಪ್ರತಿಭೆ.‌ ಅವರು ಓದಿದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು. ಅಲ್ಲಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಇವತ್ತು ನಾಡಿನ ಹೆಸರಾಂತ ಸಿನಿಮಾ ಗೀತೆ ರಚನೆಕಾರ ಅನ್ನೋದು‌ ಬಹುತೇಕರಿಗೆ ಗೊತ್ತಿರುವ ವಿಚಾರ. ಇಷ್ಟು ಹೇಳಿದ ಮೇಲೆ ಅವರು ಮಲೆನಾಡು, ಸಹ್ಯಾದ್ರಿಕಾಲೇಜಿಗೆ ಅಪತ್ತು ಬಂದ್ರೆ ಸುಮ್ನೆ ಇರ್ತಾರಾ? ಹೌದು, ಶಿವಮೊಗ್ಗದ ಪ್ರತಿಷ್ಟಿತ ಸಹ್ಯಾದ್ರಿ ಕಾಲೇಜು ಈಗ ಆಪತ್ತಿನಲ್ಲಿದೆ‌ . ಕಾಲೇಜಿನ ವಿಶಾಲ ಕ್ಯಾಂಪಸ್ ಅನ್ನು ಸರ್ಕಾರ ಸಾಯಿ ಇಂಡಿಯಾ ಖೇಲೋ ಇಂಡಿಯಾಕ್ಕೆ ಕೊಡಲು ಹೊರಟಿದೆ. ಅದರ ವಿರುದ್ಧ ಈಗ ಅಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಉಳಿಸಿ ಅಂತ ಅಲ್ಲಿನ ಸಾಹಿತಿಗಳು, ಸಂಘಟನೆಗಳು, ಪ್ರಗತಿಪರ ಚಿಂತಕರು, ಕಾಲೇಜಿನ ಹಳೆಯ ಹಾಗೂ ಹಾಲಿ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ. ಅದಕ್ಕೀಗ ಕವಿರಾಜ್ ಕೂಡ ಬೆಂಬಲಿಸಿದ್ದಾರೆ.

ಕಾಲೇಜು ಅಂದರೆ, ಕೇವಲ ಕಟ್ಟಡವಲ್ಲ, ಅಲ್ಲಿರುವ ವಸ್ತುಗಳಲ್ಲ. ಆ ಇಡೀ ಕ್ಯಾಂಪಸ್​ನಲ್ಲಿ ಕಲಿಕೆಯಿದೆ. ಅಲ್ಲಿರುವ ಮರ ಗಿಡಗಳು, ಬಯಲು, ಉದ್ಯಾನವನ, ಹೂವುಗಳೆಲ್ಲಾ ಸೇರಿಯೇ ಕಾಲೇಜು ಎನಿಸಿವೆ. ಅಲ್ಲಿ ನಡೆವ ಘಟನೆಗಳು ವಿದ್ಯಾರ್ಥಿಗಳನ್ನು ಬೆಳೆಸುತ್ತವೆ. ನಾವು ಓದುತ್ತಿದ್ದಾಗ ಇದ್ದ ಕಾಲೇಜಿನ ಆವರಣ ಈಗಾಗಲೇ ಸಾಕಷ್ಟು ಚಿಕ್ಕದಾಗಿದೆ.

ಶಿಕ್ಷಣಕ್ಕೆ ಸಂಬಂಧವಿರದ ಕಾರಣಕ್ಕೆ ಅಲ್ಲಿಯ ಜಾಗವನ್ನು ಬೇರೆಯಾರಿಗೋ ಕೊಡುವುದಕ್ಕೆ ನನ್ನ ವಿರೋಧವಿದೆ. ಅಲ್ಲದೆ ಧ್ಯಾನ ಕೇಂದ್ರದ ಅಸ್ಮಿತೆಯನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸಾಧ್ಯವಾದರೆ ಅಲ್ಲಿನ ವಾತಾವರಣವನ್ನು ಇನ್ನಷ್ಟು ಸುಂದರಗೊಳಿಸಬೇಕು. ಅದನ್ನ ವಿರೂಪಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ನಟ ಪ್ರಕಾಶ್ ಬೆಳವಾಡಿಗೆ ಇರಬಾರದ ಜಾಗಕ್ಕೆ ಇರುವೆ ಬಿಟ್ಟುಕೊಳ್ಳುವ ಕೆಲಸ ಬೇಕಿತ್ತಾ…?


ಹಿರಿಯ ನಟ ಪ್ರಕಾಶ್ ಬೆಳವಾಡಿ ವಿರುದ್ಧ ಸೋಷಲ್ ಮೀಡಿಯಾದಲ್ಲಿ ಭಾರೀ‌ ಆಕ್ರೋಶ ವ್ಯಕ್ತವಾಗಿದೆ. ಅವನ್ಯಾವನೋ ಸುಮ್ಮಿರಲಾರದೆ ಅದೇನೋ ಕೆರ್ಕೊಂಡು ಹುಣ್ಣು ಮಾಡ್ಕೊಂಡ ಅಂತೆನ್ನುವ ಹಾಗಾಗಿದೆ ಪ್ರಕಾಶ್ ಬೆಳವಾಡಿ ಕಥೆ. ಕಾಲ, ಸಂದರ್ಭ, ಸನ್ನಿವೇಶದ ಅರಿವಿರದೆ ಅವರು ಸೋಷಲ್ ಮೀಡಿಯಾದಲ್ಲಿ ಹಾಕಿಕೊಂಡ ಒಂದು ಸ್ಟೇಟಸ್ ಗೆ ನೆಟ್ಟಿಗರು ಉಗಿದು ಉಪ್ಪು ಹಾಕಿದ್ದಾರೆ.

ಅವರ ಬಗ್ಗೆ ನಮಗೂ ಗೌರವ ಇದೆ. ಅವರು ಹಿರಿಯ ನಟರು. ಚಿತ್ರರಂಗಕ್ಕೆ ಮೆರಗು ತಂದವರು. ಆದರೆ ಈ ಸಂದರ್ಭಕ್ಕೆ ಅವರಿಗೆ ಇಂತಹ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ ಅಂತ ನಿಮಗೂ ಅನಿಸುತ್ತೆ. ಸೋಷಲ್ ಮೀಡಿಯಾದಲ್ಲಿ ಬಹಳಷ್ಟು ಜನ ಅದನ್ನೇ ಪ್ರಶ್ನಿಸಿದ್ದಾರೆ . ಈಗ್ಯಾಕಪ್ಪಾ ಈ ಸೇಡು ಅಂತ ಕಿವಿ ಮಾತು ಹೇಳಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಪ್ರಕಾಶ್ ಬೆಳವಾಡಿ ಹೇಳಿಕೊಂಡ ಪ್ರಕಾರ;

ಅಹಮದಾಬಾದ್ ನಲ್ಲಿರುವ ನನ್ನ ಗೆಳೆಯ ನೊಬ್ಬ ಫೋನ್ ಮಾಡಿದ್ದ. ಗುಜರಾತ್ ನರಮೇದಕ್ಕೆ ಸಂಘಿಗಳಿಗೆ ಈಗ ತಕ್ಕ ಪಾಠ ಆಗ್ತಿದೆ ಅಂತಂದ.‌ ಅದಕ್ಕೆ‌ ನಾನು, ಅದು ಹಾಗಲ್ಲ, ಪಶ್ವಿಮ‌ ಬಂಗಾಳದಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ. ತಿರುಗಿ‌ ಬಿದ್ರೆ ಆ ಕಥೆ ಬೇರೆನೆ ಇದೆ ಅಂತಂದೆ. ಅನ್ನೋದು ಪ್ರಕಾಶ್ ಬೆಳವಾಡಿ ಹೇಳಿಕೆ. ಇಲ್ಲೊಂದಷ್ಟು ಹೇಳಿಕೆಗಳನ್ನು ಬೇಡ ಅಂತಲೇ ಹಾಕಿಲ್ಲ.

ಒಂದ್ರೀತಿ ಅವೆಲ್ಲ ಪಕ್ಕಾ ಪ್ರಚೋದನಾಕಾರಿ ಹೇಳಿಕೆ.‌ ಅದನ್ನೇ ಪ್ರಶ್ನಿಸಿ‌ ನೆಟ್ಟಿಗರು ಉಗಿದು ಉಪ್ಪು ಹಾಕಿದ್ದಾರೆ. ಕಾನೂನು ಪ್ರಕಾರ ಅವರ ಮೇಲೆ ಪ್ರಚೋದನಾಕಾರಿ ಹೇಳಿಕೆ ಮೇರೆಗೆ ಕೇಸು ದಾಖಲಿಸಿ ಆರೆಸ್ಟ್ ಮಾಡಬೇಕಿದೆ ಅಂತಲೂ ನೆಟ್ಟಿಗರು ಆಗ್ರಹಿಸಿದ್ದಾರೆ.

ಅಂದಹಾಗೆ ಪ್ರಕಾಶ್ ಬೆಳವಾಡಿ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇಂತಹದೇ ವಿವಾದಾತ್ಮಕ ಹೇಳಿಕೆ ನೀಡಿ, ಉಗಿಸಿಕೊಂಡಿದ್ದರು.ಆ ಕಥೆ ಈಗಲೂ ಮುಂದುವರೆದಿದೆ…

Categories
ಸಿನಿ ಸುದ್ದಿ

ನಿರ್ದೇಶಕ ಎಂಬ ತಪಸ್ವಿಗೆ ಶುಭಾಶಯ : ಡೈರೆಕ್ಟರ್ ಟೋಪಿ ಹಾಕುವ ಹಿಂದಿದೆ ಮನಕಲಕುವ ಕಥೆ-ವ್ಯಥೆ!!

ಮೇ.4 ನಿರ್ದೇಶಕರ ದಿನ. ಅದೆಷ್ಟೋ ಕಥೆಗಳ ಮೂಲಕ ಒಂದಷ್ಟು ಮನಸ್ಸುಗಳನ್ನು ರಂಜಿಸಿದ, ಕಾಡಿದ,‌ ಕನವರಿಸುವಂತೆ ಮಾಡಿದ, ದು:ಖ, ದುಮ್ಮಾನಗಳ ಜೊತೆಯಲ್ಲೇ ಬದುಕಿದ, ಬದುಕುತ್ತಿರುವ ನಿರ್ದೇಶಕನಿಗೆ ನಿರ್ದೇಶಕ ದಿನದ ಶುಭಾಶಯಗಳು.

ಸಿನಿಮಾ ಅಂದರೆ ಮೊದಲು‌ ನೆನಪಾಗೋದೆ ನಿರ್ದೇಶಕ. ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ಬೆಳ್ಳಿ ಪರದೆ ಮೇಲೆ ಮೋಡಿ ಮಾಡುವ ಕನಸುಗಾರ.
(ಇಂದು) ಮೇ.4 ನಿರ್ದೇಶಕರ ದಿನ. ಅದೆಷ್ಟೋ ಕಥೆಗಳ ಮೂಲಕ ಒಂದಷ್ಟು ಮನಸ್ಸುಗಳನ್ನು ರಂಜಿಸಿದ, ಕಾಡಿದ,‌ ಕನವರಿಸುವಂತೆ ಮಾಡಿದ, ದು:ಖ, ದುಮ್ಮಾನಗಳ ಜೊತೆಯಲ್ಲೇ ಬದುಕಿದ, ಬದುಕುತ್ತಿರುವ ನಿರ್ದೇಶಕನಿಗೆ ನಿರ್ದೇಶಕ ದಿನದ ಶುಭಾಶಯಗಳು.

ಸಿನಿಮಾ ವಿಭಾಗದಲ್ಲಿ ನಿರ್ದೇಶಕನಿಗೆ ಇದ್ದಷ್ಟು ಸವಾಲು ಮತ್ತು ಭಯ ಬೇರೆ ಯಾವ ವಿಭಾಗದವರಿಗೂ ಇಲ್ಲ.
ಕಲ್ಪನೆಯ ಕಥೆ ಕಟ್ಟಿಕೊಂಡು ಅದಕ್ಕೆ ದೃಶ್ಯರೂಪ ಕೊಡುವ ಸಾಹಸವಿದೆಯಲ್ಲ ಅದರ ಹಿಂದಿನ‌ ಕಷ್ಟ ಆ ನಿರ್ದೇಶಕನಿಗೇ ಮಾತ್ರ ಗೊತ್ತು. ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ, ಮನೆಯವರ ಜೊತೆ ಸಮಯ ಕಳೆಯದೇ ಮೂರು ಹೊತ್ತು ಸಿನಿಮಾ ಜಪ ಮಾಡುತ್ತಲೇ ಬದುಕು ಸವೆಸಿ, ಸೋತು, ಸುಣ್ಣವಾದ ಅದೆಷ್ಟೋ ಪರಿತಪಿಸೋ ಮನಸುಗಳು ಇಂದಿಗೂ ಇವೆ. ಅದೆಷ್ಟೋ ನಿರ್ದೇಶಕರ ದಿನವನ್ನು ಆಚರಿಸಿರುವ ಖುಷಿ ಇದೆಯಾದರೂ, ತಾವಿನ್ನೂ ನಿರ್ದೇಶಕರಾಗಿ ಗಟ್ಟಿ ಬೇರೂರಿಲ್ಲ ಎಂಬ ನೋವಲ್ಲೇ ಬದುಕು ಕಳೆಯುತ್ತಿರುವ ನಿರ್ದೇಶಕರಿದ್ದಾರೆ. ಇನ್ನು, ಅದೆಷ್ಟೋ ಸಹಾಯಕ, ಸಹ ನಿರ್ದೇಶಕರ ಬದುಕು ಇದಕ್ಕೆ ಹೊರತಲ್ಲ. ನಿರ್ದೇಶನ ಅನ್ನೋದು ಒಂದು ತಪಸ್ಸು. ಇಲ್ಲಿ ಕಥೆ ಕಟ್ಟುವುದಕ್ಕಿಂತ, ಮಾತಿನಲ್ಲಿ‌ ಜಾಣ್ಮೆ ತೋರಿದವನಿಗೇ ಕಾಲ. ಅಂತಹ‌ ಕೆಲ ನಿರ್ದೇಶಕರು ಸಿನಿಮಾ ಮಾಡಿರುವ ಉದಾಹರಣೆಯೂ ಇದೆ. ಹಾಗಂತ, ಅವರ್ಯಾರೂ ಭದ್ರ ನೆಲೆ ಕಂಡಿಲ್ಲ ಅನ್ನೋದು ಸತ್ಯ.

ಅವಮಾನಗೊಂಡವರೇ ಹೆಚ್ಚು

ನಿರ್ದೇಶಕನ ಪಟ್ಟ ಅಲಂಕರಿಸೋದು ‌ಅಂದರೆ ಸುಮ್ಮನೆ ಅಲ್ಲ. ವರ್ಷಗಟ್ಟಲೆ ಕಥೆ ಬರೆದು, ಅದಕ್ಕೊಂದು ರೂಪ ಕೊಡುವ ನಿರ್ದೇಶಕ, ಆ ಕಥೆಯನ್ನು ಸಿನಿಮಾ ಆಗಿಸಬೇಕೆಂದು ನಿರ್ಮಾಪಕನಿಗೆ ನಡೆಸುವ ಹುಡುಕಾಟ ಅವನಿಗೇ ಗೊತ್ತು. ಅವಮಾನ, ನೋವು, ಹತಾಶೆ, ನಿರಾಸೆ, ಅಸಹಾಯಕತೆ ಇವೆಲ್ಲದರ ನಡುವೆ ತನ್ನ ಕಥೆ ಸಿನಿಮಾ ಆಗಬೇಕು ಅಂತ ಹಗಲಿರುಳು ಅಲೆದಾಡುವ ನಿರ್ದೇಶಕರಿಗೆ ಇಲ್ಲಿ ಲೆಕ್ಕವಿಲ್ಲ. ಸಿನಿಮಾನೇ ಪ್ರಾಣ ಅಂದುಕೊಂಡ ಅದೆಷ್ಟೋ ಮನಸುಗಳು ತನ್ನ ಹೆತ್ತವರು, ಜೊತೆಗಾದವರು, ಒಡಹುಟ್ಟಿದವರಿಂದ ಬೈಸಿಕೊಂಡ ಉದಾಹರಣೆಗಳು ಸಾಕಷ್ಟಿವೆ.

ವರ್ಷಗಟ್ಟಲೆ ನಾಲ್ಕು ಗೋಡೆ ನಡುವೆ ಕೂತು ತನಗನ್ನಿಸಿದ ಕಥೆ ಹೆಣೆದು, ಹೇಗೋ ಅನ್ನದಾತನನ್ನು ಹಿಡಿದು, ಕಥೆ ಹೇಳಿ, ಒಂದೇ ಒಂದು ಅವಕಾಶಕ್ಕಾಗಿ ಆತ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿ, ಹೇಳಿದ ಸಮಯಕ್ಕೆ ಮನೆ ಮುಂದೆ ನಿಂತು ಖಾಲಿ ಹೊಟ್ಟೆಯಲ್ಲಿದ್ದರೂ ಸರಿ, ತನಗೊಂದು ಸಿನಿಮಾ ಆಗಿಬಿಟ್ಟರೆ ಸಾಕು, ನಿರ್ದೇಶಕನಾಗಿ ಸಾಧಿಸಿ ತೋರಿಸ್ತೀನಿ ಅಂತಂದುಕೊಂಡ ನಿರ್ದೇಶಕ ಎಂಬ ತಪಸ್ವಿಯ ಕಥೆಗಳೇ ಇಲ್ಲಿ ರೋಚಕ.

ಈಗಾಗಲೇ ಇಲ್ಲಿ ನಿರ್ದೇಶಕನ ಕುರಿತು ಹಲವು ಸಿನಿಮಾಗಳು ಬಂದಿವೆ. ವರ್ಷಗಳ ತಪಸ್ಸು ಫಲಿಸಿದ ಖುಷಿಯಲ್ಲಿ ಹಲವು ನಿರ್ದೇಶಕರು ಇಲ್ಲಿದ್ದರೆ, ಇಂದಿಗೂ ದಶಕಗಳ ಕಾಲದಿಂದ ಕಥೆಗಳನ್ನು ಗೀಚುತ್ತಲೇ ತಾನೂ ನಿರ್ದೇಶಕ ಆಗಬೇಕು ಅಂತ ಅದೆಷ್ಟೋ ಸಹಾಯಕ ನಿರ್ದೇಶಕರು ಹಂಬಲಿಸುತ್ತಿದ್ದಾರೆ.

ಷರತ್ತಿನ ಮಧ್ಯೆ ಬದುಕು

ವರ್ಷಗಟ್ಟಲೆ ಕಥೆ ಹೆಣೆದು, ಕಂಡ‌ ಕಂಡ ನಿರ್ಮಾಪಕರ ಹಿಂದಿಂದೆ ಅಲೆದಾಡಿ, ಅವಮಾನ, ಅಪಮಾನ ಸಹಿಸಿಕೊಂಡು ನಿರ್ದೇಶಕನ ಟೋಪಿ ಹಾಕಿಕೊಂಡರೂ ಆ ನಿರ್ದೇಶಕನ ಮುಂದೆ ರಾಶಿ ರಾಶಿ ಸವಾಲು. ವರ್ಷಗಳ ತಪ್ಪಸ್ಸಿನ ಮೂಲಕ ಕಷ್ಟಪಟ್ಟು ನಿರ್ದೇಶಕನಾದರೂ ಕಷ್ಟ ತಪ್ಪಿದ್ದಲ್ಲ. ಆಗ ಇನ್ನೊಂದು ಸರ್ಕಸ್ ಶುರುವಾಗುತ್ತೆ. ಹೀರೋಗೆ ಕಥೆ ಹೇಳಿ ಒಪ್ಪಿಸಬೇಕು, ನಿರ್ಮಾಪಕ ಕೊಡುವ ಬಜೆಟ್ ನಲ್ಲೇ ತನ್ನ ಕನಸಿಗೆ ಬಣ್ಣ ತುಂಬಬೇಕು, ಹಾಕಿದ ಹಣ ಹಿಂದಿರುಗಿಸಬೇಕೆಂಬ ಷರತ್ತಿನ ಭಯದ ನಡುವೆ, ಹೀರೋ ಬದಲಿಸುವ ಕಥೆ, ದೃಶ್ಯಗಳಿಗೂ ತಲೆದೂಗಬೇಕು, ಇವಿಷ್ಟೇ ಅಲ್ಲ, ಇಂತಹ ನೂರಾರು ಸವಾಲುಗಳ ಮಧ್ಯೆ, ತಾನು ಯಶಸ್ವೀ ನಿರ್ದೇಶಕ ಅಂತ ನಿರೂಪಿಸಬೇಕೆಂಬ ಸವಾಲೂ ಇರುತ್ತೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಗಟ್ಟಿ ನೆಲೆ ಕಾಣಬೇಕೆಂಬುದರ ಜೊತೆ, ತನ್ನ ನಂಬಿದವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿರ್ದೇಶಕನಿಗಿರುತ್ತೆ.

ಸೋತರೆ ಬದುಕು ಅತಂತ್ರ

ಇಷ್ಟೆಲ್ಲಾ ಅಡೆತಡೆಗಳ ನಡುವೆ, ಏರು-ಪೇರುಗಳ ಜೊತೆ ಬದುಕು ದೂಡುತ್ತಿರುವ ನಿರ್ದೇಶಕ ಹೀರೋಗಳಿಗೆ ಕಥೆ ಬರೀತಾನೆ, ಅವರ ಅಭಿಮಾನಿಗಳನ್ನು ಖುಷಿಪಡಿಸ್ತಾನೆ. ಸಿನಿ ಪ್ರೇಮಿಗಳನ್ನು ರಂಜಿಸುತ್ತಾನೆ. ಆದರೆ, ಇಷ್ಟೆಲ್ಲಾ ಮಾಡುವ ನಿರ್ದೇಶಕನ ಬದುಕು ಮಾತ್ರ ಖುಷಿಯಲ್ಲಿಲ್ಲ. ಕಥೆಗೆ ಕಲ್ಪನೆಯ ರೆಕ್ಕೆ ಕಟ್ಟುವ, ಪಾತ್ರಗಳಿಗೆ ಬಣ್ಣ ತುಂಬುವ ನಿರ್ದೇಶಕನ ಬೆವರಿನ ವಾಸನೆ ಮಾತ್ರ ಅವನಿಗಲ್ಲದೆ ಬೇರಾರಿಗೂ ಸೂಸಲ್ಲ. ಇಷ್ಟೆಲ್ಲಾ ಬಡಿದಾಡುವ ನಿರ್ದೇಶಕನಿಗೆ ಸಿನಿಮಾನೇ ಎಲ್ಲಾ. ಇಲ್ಲಿ ಗೆದ್ದರಷ್ಟೇ ಬೆಲೆ! ಸೋತರಂತೂ ಮತ್ತೆ ಬದುಕು ಮೂರಾಬಟ್ಟೆ !!

ಅದರಲ್ಲೂ ಈಗ ಪರಿಸ್ಥಿಯೇ ಬೇರೆ. ಮೊದಲಂತೆ ಈಗ ಚಿತ್ರರಂಗ ಇಲ್ಲ, ಇನ್ನಷ್ಟು ಕಠಿಣ ಬದುಕು ಸವೆಸುವಂತಾಗಿದೆ. ಇಂತಹ ಹೊತ್ತಲ್ಲಿ ಅವರಿಗೊಂದು ಗುಡ್ ಲಕ್. ಮುಂದೆಯೂ ಹಾದಿ ಇರುತ್ತೆ. ಹಾದಿಯಲ್ಲಿರುವ ಕಲ್ಲು-ಮುಳ್ಳು ಸರಿಸಿ, ತಮ್ಮ ಕನಸು ನನಸು ಮಾಡಿಕೊಳ್ಳಬೇಕಿದೆ.
ನಿರ್ದೇಶಕರಾಗಿ ಅನುಭವ ಪಟ್ಟವರಿಗೆ, ನಿರ್ದೇಶಕಾರಗಲು ಹೆಣಗಾಡುತ್ತಿರುವವರಿಗೆ ಮತ್ತೊಮ್ಮೆ ನಿರ್ದೇಶಕರ ದಿನದ ಶುಭಾಶಯಗಳು.

Categories
ಸಿನಿ ಸುದ್ದಿ

ಮತ್ತೊಬ್ಬ ಯುವ ನಿರ್ದೇಶಕನ ಜೀವ ತೆಗೆದ ಕೊರೊನೊ

ಕೊರೊನಾ ಎಂಬ ಹೆಮ್ಮಾರಿ ಈಗಾಗಲೇ ಹಲವರ ಜೀವ ತೆಗೆದಿದೆ. ಅದರಲ್ಲೂ ದಿನ ಕಳೆದಂತೆ ಸಿನಿಮಾ ರಂಗದ ಅನೇಕರು ಕೊರೊನಾಗೆ ಬಲಿಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ನಿರ್ಮಾಪಕರಾದ ‌ರಾಮು, ಚಂದ್ರಶೇಖರ್ ನಿಧನರಾಗಿದ್ದರು. ಈಗ ಯುವ ನಿರ್ದೇಶಕರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.


ನವೀನ್ (36) ಮೃತಪಟ್ಟವರು.
ಭಾನುವಾರ ಕೊರೊನಾ ಸೋಂಕಿನಿಂದಾಗಿ ನಿಧನರಾಗಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ನವೀನ್ ಅವರ ಮೃತದೇಹವನ್ನು ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ.

ನವೀನ್ ಅವರು ಈ ಹಿಂದೆ ‘ಒನ್‌ ಡೇ’ ಸಿನಿಮಾ ನಿರ್ದೇಶನ ಮಾಡಿದ್ದರು. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ನವೀನ್ ಕೆಲಸ ಮಾಡಿದ್ದರು.

Categories
ಸಿನಿ ಸುದ್ದಿ

ಜೂ. ಚಿರುಗೆ ಅಪ್ಪನ ಫೋಟೋ ಕಂಡರೆ ಪ್ರೀತಿ ಚಿರು ಇಲ್ಲದ ಮೇಘನಾರ ಮೊದಲ ಹುಟ್ಟು ಹಬ್ಬಕ್ಕೆ ಶುಭಕೋರಿದ ಫ್ಯಾನ್ಸ್

ನಟಿ ಮೇಘನಾ ರಾಜ್ ಅವರ ಹುಟ್ಟುಹಬ್ಬ (ಮೇ3) ಇಂದು. ಪ್ರತಿವರ್ಷ ಕೂಡ ಅವರು ತಮ್ಮ ಫ್ರೆಂಡ್ಸ್, ಕುಟುಂಬ ವರ್ಗ ಮತ್ತು ಪತಿ ಚಿರಂಜೀವಿ ಸರ್ಜಾ ಜೊತೆ ಸಂಭ್ರಮ ಹಂಚಿಕೊಳ್ಳುತ್ತಿದ್ದರು. ಆದರೆ, ಚಿರು ಇಲ್ಲದ ಮೊದಲ ಹುಟ್ಟುಹಬ್ಬವಿದು.


ಪತಿಯ ನೆನಪಿನ ಜೊತೆಗೆ ಮುದ್ದು ಮಗನ ಜೊತೆ ಮೊದಲ ಹುಟ್ಟುಹಬ್ಬ ಕೂಡ ಇದಾಗಿದೆ. ಮೇಘನಾ ಅವರು ತಮ್ಮ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಚಿರಂಜೀವಿ ಜೊತೆ ವಿವಾಹವಾಗಿದ್ದಾರೆ. ಮೇ 3 ಮೇಘನಾ ಅವರ ಹುಟ್ಟುಹಬ್ಬ. ಮೇ 2 ಮೇಘನಾ ಮತ್ತು ಚಿರಂಜೀವಿ ಮದುವೆಯಾದ ದಿನ.
ಮೇಘನಾ ಅವರ ಹುಟ್ಟುಹಬ್ಬಕ್ಕೆ ಸ್ನೇಹಿತರು, ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.


ಮೇಘನಾ ಅವರು ಮದುವೆ ವಾರ್ಷಿಕೋತ್ಸವದ ದಿನ ಜೂ.ಚಿರು ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಚಿರು ಫೋಟೋ ಮುಂದೆ ಜೂ.ಚಿರು ಆಟವಾಡುತ್ತಿರುವ ವಿಡಿಯೋ ಹಾಕಿದ್ದು, ಸಾಕಷ್ಟು ಜನ ಆ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ನಟ ಚಿರಂಜೀವಿ ಸರ್ಜಾ ಇಲ್ಲದೆ ಮೇಘನಾರಾಜ್ ತನ್ನ ಮಗ ಜೂ. ಚಿರು ಜೊತೆ ಸಮಯ ಕಳೆಯುವ ಫೋಟೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.

ಮೇಘನಾ ಅವರಿಗೆ ಚಿರಂಜೀವಿ ಅಗಲಿಕೆಯ ನೋವಿದ್ದರೂ ಅವರ ನೋವನ್ನು ಕೊಂಚ ಕಡಿಮೆಯಾಗಿಸಿದ್ದು ಜೂನಿಯರ್‌ ಚಿರು. ಹೌದು, ಮಗನೊಂದಿಗೆ ಸಮಯ ಕಳೆಯುವ ಸಂತಸದ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತ, ತನ್ನ ಖುಷಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ ನಟಿ ಮೇಘನಾರಾಜ್.

ಸದ್ಯ ಜೂ. ಚಿರು ಅಪ್ಪನ ಫೋಟೋ ಎದುರು ನೋಡುತ್ತಾ, ಫೋಟೋ ನೋಡಿ ಮುಗುಳ್ನಗುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಪ್ಪನ ಫೋಟೋ ಜೊತೆ ಆಟವಾಡುವ ಮುದ್ದಾದ ಕ್ಷಣಗಳಿಗೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಕಾಮೆಂಟ್ಸ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಪ್ರತಿಷ್ಠಿತ ಕಾನ್​​ ಚಿತ್ರೋತ್ಸವಕ್ಕೆ ದೇವರ ಕನಸು! ಸೈಕಲ್ ಹುಡುಗನೊಬ್ಬನ ಗೆಲುವಿನ ಸವಾರಿ ಕಥೆ…

ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ತಯಾರಾದ “ದೇವರ ಕನಸು” ಸಿನಿಮಾ ಇದೀಗ ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.
ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್​ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ “ದೇವರ ಕನಸು” ಚಿತ್ರದ ಕಥೆ.


2019ರಲ್ಲಿಯೇ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು, ಇದೀಗ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಕಾಲಿಡುತ್ತಿದೆ. ಮೊದಲ ಹೆಜ್ಜೆಯಾಗಿ ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ಅವಕಾಶ ಸಿಕ್ಕಿದ್ದು, ಇನ್ನೇನು ಮೇ ಅಂತ್ಯದಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಇದರ ಜತೆಗೆ ಬೇರೆ ಬೇರೆ ಸಿನಿಮೋತ್ಸವಗಳಿಂದಲೂ ಆಹ್ವಾನ ಬರುತ್ತಿದೆ.
ಇನ್ನು ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, “ದೇವರ ಕನಸು” ಚಿತ್ರಕ್ಕೆ ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿದ್ದಾರೆ.

ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್, ಜಿಸ್ನು ಸೇನ್ ಸಮಕಲನ ಮಾಡಿದ್ದಾರೆ. ಇವರೆಲ್ಲ ಮೂಲತಃ ಪಶ್ಚಿಮ ಬಂಗಾಳದವರು. ಅದೇ ರೀತಿ ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಆರ್ ಅವರು ಸಂಗೀತ ನೀಡಿದ್ದಾರೆ. ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮನೋಜ್ ಅಂಗಮಾಲಿ ಮೇಕಪ್ ಕೆಲಸ ನಿರ್ವಹಿಸಿದ್ದಾರೆ.

ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದರೆ, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ.
ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್​ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, “ದೇವರ ಕನಸು” ಅವರ ಮೊದಲ ಚಿತ್ರ.
ಇದು ಚಿಂತಾಮಣಿ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರೀಕರಣವಾಗಿದೆ.

ಚಿತ್ರದಲ್ಲಿ ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ನಟಿಸಿದ್ದಾರೆ. ಸಿ. ಜಯಕುಮಾರ್, ಸಿ ಶೇಖರ್ ನಿರ್ಮಾಪಕರು. ಗಂಗಾಧರ್, ಶಂಕರ್, ಸಿ ಸುಬ್ಬಯ್ಯ ಸಹ ನಿರ್ಮಾಣವಿದೆ.

Categories
ಸಿನಿ ಸುದ್ದಿ

ವೈದ್ಯರಿಗೊಂದು ಪೂಜ್ಯ ಗೀತೆ ; ಪ್ರೇಮಂ ಪೂಜ್ಯಂ ತಂಡ ಅರ್ಪಿಸಿದ ಹಾಡಿಗೆ ಭರಪೂರ ಮೆಚ್ಚುಗೆ – ವಾಸ್ತವತೆಗೆ ಹತ್ತಿರವಾದ ಹಾಡು

ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿತ್ತು. ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದಿತ್ತು. ಈಗ ಚಿತ್ರತಂಡ ಮತ್ತೊಂದು ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆ ಮಾಡಿದೆ. ಈ ಬಾರಿ ರಿಲೀಸ್ ಮಾಡಿರುವ ಹಾಡು ತುಂಬಾನೇ ಸ್ಪೆಷಲ್ ಆಗಿದೆ. ಅದರಲ್ಲೂ ಈಗಿನ ವಾಸ್ತವಕ್ಕೆ ಹತ್ತಿರವಾಗಿದೆ.
ಹೌದು, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ.

ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಈ ಹಿಂದೆ
ಯುಗಾದಿಗೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ಸಾಂಗ್ ವಿಡಿಯೊ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿತ್ತು. ಈಗ ವಿಶೇಷವಾಗಿ ವೈದ್ಯರಿಗಾಗಿಯೇ ಹಾಡನ್ನು ಅರ್ಪಿಸಲಾಗಿದೆ. ಅಷ್ಟೇ ಅಲ್ಲ, ಆ ಹಾಡು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

“ವೈದ್ಯೋ ನಾರಾಯಣ ಹರಿಹಿ.. ಎಂದು ಸಾಗುವ… ಸಾಗುವ ಲಿರಿಕಲ್‌ ಸಾಂಗ್ ವಿಡಿಯೋ ನಿಜಕ್ಕೂ ಒಳ್ಳೆಯ ಪ್ರಯತ್ನವಾಗಿ ಕಾಣುತ್ತದೆ. ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಅರ್ಥಪೂರ್ಣವಾಗಿದೆ.

ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.
ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ.

ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ವೈದ್ಯರಿಗೆ ಅರ್ಪಣೆ ಮಾಡಿರುವ ಈ ಸಾಂಗ್‌ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ವೈದ್ಯರ ಶ್ರಮದ ಸಾರವಿದೆ.
ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಈಗಿನ‌ ವಾಸ್ತವತೆಗೆ ಹತ್ತಿರವಾಗಿರುವ ಗೀತೆ. ಇನ್ನು, ಈ ಚಿತ್ರದ ಪೋಸ್ಟರ್‌ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ.

ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.

ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಐದು ರೂಪಾಯಿಯ ಸಿಟಿ ಸ್ಕ್ಯಾನ್ ಸೃಷ್ಟಿಸಿದ ಅವಾಂತರ! ಆ ಆಸ್ಪತ್ರೆಯಲ್ಲಿ ಕಣ್ಣಾರೆ ಕಂಡ ನಟ ಸಂಚಾರಿ ವಿಜಯ್ ಬಿಚ್ಚಿಟ್ಟ ಅನುಭವ!!

ನಟ‌ ಸಂಚಾರಿ ವಿಜಯ್, ತಮಗನ್ನಿಸಿದನ್ನು ನೇರವಾಗಿ ಹೇಳುವ ವ್ಯಕ್ತಿ. ಅದರಲ್ಲೂ ಸದಾ ಬೇರೆ ಜೀವಗಳ ಹಿತ ಬಯಸುವ ನಟ. ತಾವು‌ ಕಂಡ ಅನುಭವಗಳನ್ನು ಹಾಗೆಯೇ ಬಿಚ್ಚಿಡುವ ಮೂಲಕ ಒಂದಷ್ಟು ಸಂದೇಶ ಕೊಡುವ ಪ್ರಯತ್ನ ಮಾಡುತ್ತಾರೆ. ಸದ್ಯ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿರುವ ಜನರ ಬಗ್ಗೆ, ವ್ಯವಸ್ಥೆ ಕುರಿತು ಮಾತಾಡಿದ್ದಾರೆ. ಅಂತೆಯೇ 5ರುಪಾಯಿಯ ಸಿಟಿ ಸ್ಕ್ಯಾನ್ ವಿಷಯ ತಂದ ಅವಾಂತರದ ಬಗ್ಗೆ ಇಡೀ ಆಸ್ಪತ್ರೆಯ ವ್ಯವಸ್ಥೆ ಮತ್ತು ಅಲ್ಲಾದ ಲೈವ್ ಅನುಭವ ಬಿಚ್ಚಿಟ್ಟಿದ್ದಾರೆ. ಅದು ಅವರದೇ ಮಾತಲ್ಲಿ ಕೇಳಿ.

ಓವರ್ ಟು ಸಂಚಾರಿ ವಿಜಯ್

” ಬೆಳಗ್ಗೆ ಒಂಬತ್ತು ಗಂಟೆಗೆ ನನ್ನ ಕುಟುಂಬದ ಹಿರಿಯರೊಬ್ಬರನ್ನು ಎರೆಡನೇ ಲಸಿಕೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ದಿದ್ದೆ. ‘ನೀವು ಕಾರಲ್ಲೇ ಕುಳಿತಿರಿ ನಾನು ಆಸ್ಪತ್ರೆಯೊಳಗಿನ ವ್ಯವಸ್ಥೆ ನೋಡಿಕೊಂಡು ಬರುತ್ತೇನೆ ಆಮೇಲೆ ನೀವು ಬನ್ನಿ’ ಎಂದು ಹೇಳಿ ಆಸ್ಪತ್ರೆಯ ಅಂಗಳಕ್ಕೆ ಕಾಲಿಟ್ಟರೆ, ದಂಗು ಬಡಿಸುವಷ್ಟು ಜನ. ಎರೆಡು ಕ್ಷಣ ಗಾಬರಿಯಾಗಿ ಹೊರಗೇ ನಿಂತುಬಿಟ್ಟೆ. ಒಂದು ಹೆಜ್ಜೆ ಒಳಗಿಟ್ಟರೂ ಒಬ್ಬರಲ್ಲಾ ಒಬ್ಬರನ್ನು ಸೋಕುವ ಸಾಧ್ಯತೆಯಿತ್ತು. ಯಾರಾದರೂ ನನ್ನನ್ನು ಮುಟ್ಟಿ ಸೋಂಕು ತಗುಲಿ ಅದರಿಂದ ಮತ್ತೆಲ್ಲಿ ನಾಲ್ಕು ಜನಕ್ಕೆ ಹರಡುವುದೋ ಎಂದು ಭಯಪಟ್ಟು ಒಳ ಹೊಗಲೋ ಅಥವಾ ಇಲ್ಲೇ ನಿಲ್ಲಲೋ ಎಂಬ ದ್ವಂದ್ವ ಶುರುವಾಗಿ ಅಲ್ಲೇ ನಿಂತುಬಿಟ್ಟೆ.

ನಾನು ನಿಂತ ಜಾಗದಿಂದಲೇ ಅಲ್ಲಿ ನಡೆಯುತ್ತಿರುವುದನ್ನು ಗಮನಿಸಿದೆ ನೆರೆದಿದ್ದ ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮಧ್ಯೆ ಸಣ್ಣ ಜಗಳ ನಡೆಯುತ್ತಿತ್ತು. ಆದರೆ, ಯಾಕೆಂದು ತಿಳಿಯಲಿಲ್ಲ. ಅಲ್ಲಿನ ಸೆಕ್ಯುರಿಟಿಯೊಬ್ಬ ಬಿಟ್ಟೂ ಬಿಡದೆ ಅಲ್ಲಿದ್ದವರನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದ ಕೆಲವೊಮ್ಮೆ ಗದರುತ್ತಿದ್ದ, ಆದರೆ ಯಾರೊಬ್ಬರೂ ಅವನ ಮಾತನ್ನು ಕೇಳಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ.

ಕೊನೆಗೊಂದಷ್ಟು ಜನ ಅರ್ಥ ಮಾಡಿಕೊಂಡು ಅಂತರ ಕಾಪಾಡಿಕೊಂಡ ನಂತರ ಕೊನೆಗೂ ಒಳ ಹೋಗಲು ಸ್ವಲ್ಪ ದಾರಿಯಾಯ್ತು. ಧೈರ್ಯ ಮಾಡಿ ಒಳಗೆ ಹೋಗಿ ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆ ‘ ನೆನ್ನೆಯೂ ಆಸ್ಪತ್ರೆಗೆ ಬಂದಿದ್ವಿ. ಆದರೆ, ತಡವಾಗಿ ಬಂದಿದ್ದರಿಂದ ಲಸಿಕೆ ಸಿಗಲಿಲ್ಲ ಹಾಗಾಗಿ ಇವತ್ತು ಬೇಗ ಬಂದಿದ್ದೇವೆ ಎಷ್ಟು ಗಂಟೆಗೆ ಲಸಿಕೆ ಕೊಡಬಹುದು?’ ತಕ್ಷಣಕ್ಕೆ ಸ್ಪಂದಿಸಿದ ಸಿಬ್ಬಂದಿಯೊಬ್ಬರು ಒಳ ಹೋಗಿ ಟೋಕನ್ ತಂದು ಕೊಟ್ಟವರೇ ‘ಐದು ನಿಮಿಷ ಇಲ್ಲೇ ಕುಳಿತುಕೊಳ್ಳಿ ಕಂಪ್ಯೂಟರ್ ಆನ್ ಆದ ಕೂಡಲೇ ಕರೆಯುತ್ತೇವೆ’ ಎಂದು ಹೇಳಿ ಒಳ ನಡೆದರು.

ನಿಧಾನವಾಗಿ ಒಬ್ಬೊಬ್ಬರೇ ಎರೆಡನೆ ಲಸಿಕೆ ಪಡೆಯಲು ಬಂದು ಸೇರಿಕೊಳ್ಳತೊಡಗಿದರು ಮತ್ತೆ ಅದೇ ಧಾವಂತ ಶುರುವಾಯ್ತು ಎಲ್ಲಿ ಯಾರು ಮುಟ್ಟಿಬಿಡುತ್ತಾರೋ ಎಂದು. ಅವರ ನಡುವೆಯೇ ದಾರಿ ಮಾಡಿಕೊಂಡು ಯಾರನ್ನೂ ಸೋಕದಂತೆ ಜಾಗರೂಕತೆಯಿಂದ ಹೊರನಡೆದವನೇ ಜೊತೆಗೆ ಬಂದಿದ್ದವರನ್ನು ಕರೆದುಕೊಂಡು ಒಳಗೆ ಬಂದವನೇ ‘ಯಾರನ್ನೂ ಸಂಪರ್ಕಿಸಬೇಡಿ’ ಎಂದು ಜಾಗ್ರತೆ ವಹಿಸಿ ಅಲ್ಲಿದ್ದ ಕಲ್ಲಿನ ಬೆಂಚಿನ ಮೇಲೆ ಕೂರಿಸಿ ನಾನೂ ಅವರ ಪಕ್ಕದಲ್ಲಿ ಕುಳಿತೆ. ಹಿಂದೆ ಏನೋ ಗಿಜಿ ಗಿಜಿ ಶಬ್ದ ಕೇಳಿಸಿದಂತಾಯ್ತು ಹಾಗೆ ಕತ್ತು ಹೊರಳಿಸಿ ಹಿಂದೆ ನೋಡಿದರೆ ಹೃದಯ ಸ್ತಬ್ಧವಾಗುವಂತಹ ದೃಶ್ಯಗಳು ಕಿಟಕಿಯಿಂದಲೇ ಕಾಣುತ್ತಿದ್ದವು. ಮೊದಲನೇ ಬಾರಿಗೆ ನನ್ನ ಕಣ್ಣಾರೆ ಆಸ್ಪತ್ರೆಯೊಂದರಲ್ಲಿ ಕೊರೊನಕ್ಕೆ ತುತ್ತಾಗಿದ್ದವರ ಪರಿಸ್ಥಿತಿಯನ್ನು ನೋಡಿದ್ದು.

ಮುಖಕ್ಕೆ ವೆಂಟಿಲೇಟರ್ ಹಾಕಿಸಿಕೊಂಡ ಮಹಿಳೆಯೋರ್ವರು ದೀರ್ಘವಾಗಿ ಏದುಸಿರು ಬಿಡುತ್ತಾ ಕುಳಿತಿದ್ದರೆ, ಮತ್ತೊಬ್ಬರು ಬೆಡ್ ಮೇಲೆ ಅಂಗಾತ ಮಲಗಿ ಡಾಕ್ಟರ್ ಹೇಳುವ ಮಾತುಗಳನ್ನು ಮುಂದೇನಾಗುವುದೋ ಎಂಬ ಆತಂಕದಲ್ಲಿ ಕೇಳಿಸಿಕೊಳ್ಳುತ್ತಿದ್ದರು, ಮಗದೊಬ್ಬರು ಮಕಾಡೆ ಮಲಗಿ ಜೋರಾಗಿ ಉಸಿರಾಡುತ್ತಿದ್ದರೆ ಅವರ ಮನೆಯವರು ಬೆನ್ನು ಸವರುತ್ತಾ ಅವರಿಗೆ ಧೈರ್ಯದ ಮಾತುಗಳನ್ನಾಡುತ್ತಿರುವ ದೃಶ್ಯಗಳು ನನ್ನ ಮನಸ್ಸನ್ನು ಕಲಕಿಬಿಟ್ಟವು. ಅಲ್ಲಿಯ ಪರಿಸ್ಥಿತಿ ನೋಡಲಾಗದೆ ಒಮ್ಮೆಲೇ ಉಸಿರುಗಟ್ಟಿದಂತಾಗಿ ಎದ್ದುಬಿಟ್ಟೆ. ಯಾವ್ಯಾವ ಕುಟುಂಬ ಏನೇನು ಸಂಕಟದಲ್ಲಿದೆಯೋ ಇಲ್ಲಿ ಉಳಿಯುವವರಾರು ಅಳಿಯುವವರಾರು ಎಂದು ಚಿಂತಿಸಿ ಮನಸ್ಸೇ ಅಸ್ಥವ್ಯಸ್ಥವಾಗಿಬಿಟ್ಟಿತು. ಹೀಗೆ ಯೋಚಿಸುತ್ತಾ ನಿಂತಿರುವಾಗಲೇ ನನ್ನ ಮುಂದೆ ಅಂಗಾತ ಮಲಗಿದ್ದ ದೇಹವೊಂದು ನಾಲ್ಕು ಚಕ್ತ್ರದ ಸ್ಟ್ರೆಚ್ಚರ್ ಮೇಲೆ ಸಾಗಿತು. ದಿನನಿತ್ಯ ಸಾವಿನ ಸುದ್ದಿಗಳನ್ನು ಕೇಳಿ ಬೆದರಿದ್ದ ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ ಆ ವ್ಯಕ್ತಿಯ ಹೊಟ್ಟೆಯನ್ನೇ ನೋಡುತ್ತಿದ್ದೆ ಉಸಿರಾಟ ನಿಂತಿದೆಯೋ ಅಥವಾ ಇನ್ನೂ ಬದುಕಿರುವರೋ ಎಂದು. ಸ್ಟ್ರೆಚ್ಚರ್ ಅಷ್ಟು ದೂರ ಸಾಗಿದರು ನನ್ನ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ.

ಒಂದು ಕಡೆ ಈಗಲೋ ಆಗಲೋ ಎಂದು ಉಸಿರಾಡುತ್ತಿರುವ ದೇಹಗಳು, ಅವರನ್ನು ಉಳಿಸಿಕೊಡುವಂತೆ ಅಂಗಲಾಚುತ್ತಿರುವ ಅವರ ಕುಟುಂಬದವರು, ಮತ್ತೊಂದು ಕಡೆ ಲಸಿಕೆಗಾಗಿ ಗಂಟೆಗಟ್ಟಲೆ ಕಾಯ್ದು ಕೂತ ಹಿರಿಯ ಜೀವಗಳು, ಇನ್ನೊಂದು ಕಡೆ ಸಾವಿರಾರು ರೂಪಾಯಿ ಹೊಂದಿಸುವ ಶಕ್ತಿಯಿಲ್ಲದೆ 5 ರುಪಾಯಿಗೆ ಸಿಟಿ ಸ್ಕ್ಯಾನ್ ಮಾಡಿಸಲು ಸಾಲುಗಟ್ಟಿ ನಿಂತ ಬಡ ಜೀವಗಳು. ಹೀಗೆ ಜೀವಕ್ಕಾಗಿ ಬಡಿದಾಡುತ್ತಿದ್ದವರ ಮಧ್ಯೆ ನಿಂತ ನನಗೆ ಅನ್ನಿಸಿದ್ದು ಈ ಜೀವ ನೀರಿನ ಮೇಲಿನ ಗುಳ್ಳೆ ಯಾವಾಗ ಬೇಕಾದರೂ ಒಡೆದು ಹೋಗಬಹುದೆಂದು.

ಹೀಗೆ ಯೋಚಿಸುತ್ತಾ ಅರೆ ಕ್ಷಣ ಕಣ್ಮುಚ್ಚಿ ಬಿಡುವಷ್ಟರಲ್ಲೇ ಎರೆಡನೇ ಲಸಿಕೆ ಪಡೆಯಲು ವಯಸ್ಸಾದವರ ದಂಡೇ ಅಲ್ಲಿ ಸೇರಿತ್ತು. ಅವರೆಲ್ಲರ ಮುಖದಲ್ಲಿ ತಾನು ಬದುಕಬೇಕು ಬದುಕಿ ಇನ್ನೂ ಹತ್ತಾರು ವರ್ಷ ತನ್ನ ಕುಟುಂಬದವರ ಜೊತೆ ಕಾಲ ಕಳೆಯಬೇಕು ಎನ್ನುವ ಆಸೆಯಾಶಾಭಾವನೆ ಕಾಣಿಸುತ್ತಿತ್ತು. ಆ ಇಳಿ ವಯಸ್ಸಿನಲ್ಲೂ ಮಕ್ಕಳಂತೆ ಕ್ಯೂನಲ್ಲಿ ನಿಲ್ಲಲು ಪರದಾಡುತ್ತಿದ್ದದ್ದು ನೋಡಿ ಮಮ್ಮಲ ಮರುಗಿದೆ.

ಖಂಡಿತ ವೈದ್ಯರು, ನರ್ಸ್ ಗಳು ಬದುಕುಳಿಯಲ್ಲ!

ಒಬ್ಬೊಬ್ಬರದ್ದು ಒಂದೊಂದು ರೀತಿಯ ದುಗುಡ, ಆತಂಕ, ನೂರಾರು ಪ್ರಶ್ನೆಗಳು. ಲಸಿಕೆ ಖಂಡಿತ ನಮಗೆ ಸಿಗುತ್ತೆ ಅಲ್ಲವಾ? ನಾನು ಇದು ಮೊದಲನೇ ಬಾರಿ ತೆಗೆದುಕೊಳ್ಳುತ್ತಿದ್ದೇನೆ ಇದಕ್ಕೆ ಪ್ರೊಸೀಜರ್ ಏನು? ನಾವು ಬೆಳಗ್ಗೆ 8 ಗಂಟೆಯಿಂದಲೇ ಕಾಯುತ್ತಿದ್ದೇವೆ ಎಷ್ಟು ಗಂಟೆಗೆ ಟೋಕನ್ ಕೊಡುತ್ತಾರೆ? ನಮ್ಮ ಯಜಮಾನರಿಗೆ ಜಾಸ್ತಿ ಹೊತ್ತು ನಿಲ್ಲಲು ಆಗಲ್ಲ ನಮಗೆ ಲಸಿಕೆ ಬೇಗ ಕೊಡಬಹುದೇ? ಎಂದು ದೈನ್ಯತೆಯಿಂದ ಕೇಳಿಕೊಂಡರೆ ಇನ್ನೊಬ್ಬರು ‘ಕ್ಯೂನಲ್ಲಿ ಬೆಳಗ್ಗೆಯಿಂದಲೇ ನಿಂತಿದ್ದೇವೆ ನೀವು ಹೀಗೆ ಯಾರೋ ಈಗ ಬಂದವರನ್ನು ಮುಂದೆ ಕಳಿಸಿದರೆ ಹೇಗೆ? ಎಂದು ಗಟ್ಟಿದನಿಯಲ್ಲಿ ಗದರುವ ಹೊತ್ತಿಗೆ ಗೇಟಿನ ಹೊರಗಿನಿಂದ ಓಡೋಡಿ ಬಂದ ನೋಡಲ್ ಆಫೀಸರ್ ಒಬ್ಬರು ದುಃಖದ ಕಟ್ಟೆಯೊಡೆದು ಅಲ್ಲಿದ್ದ ಹಿರಿಯ ವೈದ್ಯರೊಬ್ಬರಿಗೆ ‘ನೋಡಿ ಸರ್ ನಾವು ಮನೆ ಮಠ ಎಲ್ಲ ಬಿಟ್ಟು, ನಮ್ಮ ಸಂಸಾರವನ್ನು ದೂರಮಾಡಿಕೊಂಡು, ನೂರಾರು ಜನರ ಒಳಿತಿಗಾಗಿ ನಮ್ಮ ಜೇವವನ್ನೂ ಲೆಕ್ಕಿಸದೆ ಎಲ್ಲರ ಜೊತೆ ಬಡಿದಾಡಿ ನಿಂತು ಲಸಿಕೆ ಕೊಡಿಸುತ್ತಿದ್ದೇವೆ. ಆದರೆ ಅಲ್ಲಿ ನೋಡಿ ಜನ ಜಂಗುಳಿ ಯಾರೋ ಒಬ್ಬ ನಮ್ಮ ಆಸ್ಪತ್ರೆಯಲ್ಲಿ 5 ರುಪಾಯಿಗೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಇಂತಹ ಸರ್ಕಾರೀ ಆಸ್ಪತ್ರೆಯಲ್ಲಿ ಕೇವಲ 5 ರುಪಾಯಿಗೆ ಸಿಟಿ ಸ್ಕ್ಯಾನ್ ಮಾಡಿ ಕೊಡುತ್ತಾರೆ ಎಂದು ವಿಡಿಯೋ ಮಾಡಿ ಹಾಕಿದ್ದಾನೆ. ಅವನು ಕೊಟ್ಟಿರುವ ಸಂದೇಶವೇನೋ ಸರಿಯಾಗಿದೆ ಆದರೆ ಅದರಿಂದ ಇಲ್ಲಿ ಆಗುತ್ತಿರುವ ಅವಾಂತರ ನೋಡಿ, ಸ್ಕ್ಯಾನ್ ಗಾಗಿ ಜನ ಹೇಗೆ ದಂಡಿಯಾಗಿ ಸೇರುತ್ತಿದ್ದಾರೆ, ಹೀಗೆ ಜನ ಸೇರಿದರೆ ಖಂಡಿತ ನಾವು ವೈದ್ಯರು ನರ್ಸುಗಳು ಯಾರು ಬದುಕಿ ಉಳಿಯುವುದಿಲ್ಲ ಸರ್, ದಯವಿಟ್ಟು ಇದಕ್ಕೆ ಏನಾದರು ಪರಿಹಾರ ಹುಡುಕಿ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದರು’. ಅಸಹಯಕರಾಗಿ ನಿಂತು ಕೇಳಿಸಿಕೊಳ್ಳುತ್ತಿದ್ದ ವೈದ್ಯರು ಅವರಿಗೆ ಏನೋ ಸಮಾಧಾನ ಹೇಳಿ ಒಳಗೆ ಕರೆದುಕೊಂಡು ಹೋದರು.

ನನ್ನೆದುರು ನಡೆದ ಈ ಘಟನೆಯಿಂದ ಕೇಳಿಸಿಕೊಂಡ ಮಾತುಗಳಿಂದ ನನ್ನ ಜಂಘಾಬಲವೇ ಉದುಗಿ ಹೋಯಿತು. ನಮಗಾಗಿ ಹಗಲು ರಾತ್ರಿ ಕಷ್ಟ ಪಡುತ್ತಿರುವ ಆಸ್ಪತ್ರೆ ಸಿಬ್ಬಂದಿಗೆ ಏನಾದರೂ ಹೆಚ್ಚುಕಡಿಮೆಯಾದರೆ ನಮ್ಮ ಗತಿಯೇನು ಒಂದು ಕ್ಷಣ ಉಸಿರೇ ನಿಂತು ಹೋದಂತಾಯ್ತು. ಆ ಕ್ಷಣಕ್ಕೆ ನನ್ನ ನೆನಪಿಗೆ ಬಂದಿದ್ದು ಮೊನ್ನೆಯಷ್ಟೇ ಮುಂದೆ ಬರಲಿರುವ ಮೂರನೆಯ ಅಲೆಯ ಎಚ್ಚರಿಕೆ ಕೊಟ್ಟ ಮತ್ತು ಅದು ಬಂದಾಗ ಆಸ್ಪತ್ರೆ ಸಿಬ್ಬಂದಿಯ ಕೊರತೆಯಿಂದ ಮುಂದೆ ಆಗಬಹುದಾದ ಅನಾಹುತದ ಕುರಿತು ಮಾತನಾಡಿದ ಡಾ. ದೇವಿ ಶೆಟ್ಟಿಯವರ ಮಾತು.

ಎಷ್ಟು ಬೇಗ ಲಸಿಕೆ ಕೊಟ್ಟಾರೋ ಎಷ್ಟು ಬೇಗ ಗೂಡು ಸೇರುವೆವೋ ಎಂದು ಹಲುಬುವಂತಾಯ್ತು. ಅಷ್ಟು ಹೊತ್ತಿಗೆ ಆ ಕಡೆಯಿಂದ ಟೋಕನ್ ನಂಬರ್ ಒನ್ ಅಂದರು ಒಳಗೆ ನಡೆದು ಲಸಿಕೆ ಪಡೆದದ್ದೇ ಓಡೋಡಿ ಬಂದು ಕಾರು ಹತ್ತಿ ಕೈಯ್ಯನ್ನು ಸ್ಯಾನಿಟೈಸರ್ನಿಂದ ತೊಳೆದು, ಮುಖಕ್ಕೆ ಮಾಸ್ಕ್ ಏರಿಸಿ ಮನೆ ಕಡೆ ಗಾಡಿ ತಿರುಗಿಸಿದವನೇ, ಏನೇನೋ ಧಾವಂತದ ಪ್ರಶ್ನೆಗಳು ಮನಸ್ಸಲ್ಲಿ ಬುಗ್ಗೆಗಳಂತೆ ಏಳತೊಡಗಿದವು. ಪಕ್ಕ ಕುಳಿತವರಿಗೆ ಕೇಳಿದರೆ ಎಲ್ಲಿ ಧೈರ್ಯ ಕಳೆದುಕೊಂಡು ಬಿಡುತ್ತಾರೋ ಎಂದು ತುಟಿಕ್ ಪಿಟಿಕ್ ಅನ್ನದೆ ವಿಗ್ರಹದಂತೆ ಕುಳಿತು ಮನೆ ಸೇರುವ ತನಕ ದಾರಿಯನ್ನು ಬಿಟ್ಟರೆ ಆಚೀಚೆ ತಿರುಗದೆ ಗಾಡಿ ಓಡಿಸಿದೆ.

ಇದು ವ್ಯವಸ್ಥೆಯನ್ನೂ ಮತ್ತೊಬರನ್ನೂ ದೂರುತ್ತಾ ಕೂರುವ ಸಮಯವಲ್ಲ . ಎಲ್ಲರೂ ಜಾಗೃತರಾಗೋಣ.
ನಿಜಕ್ಕೂ ಆಸ್ಪತ್ರೆಯ ಸಿಬ್ಬಂದಿಗೊಂದು ನನ್ನ ಸಲಾಂ” ಎಂದು ಹೇಳಿಕೊಂಡಿದ್ದಾರೆ ಸಂಚಾರಿ ವಿಜಯ್.

Categories
ಸಿನಿ ಸುದ್ದಿ

ಸಿನಿಮಾ ಕಾರ್ಮಿಕರ ಮೊಗದಲ್ಲಿ ಆತಂಕದ ಛಾಯೆ ; ಕಾರ್ಮಿಕರ ದಿನದಲ್ಲೂ ಮೂಡದ ಮಂದಹಾಸ !!

ಅದೊಂದು ಕಾಲವಿತ್ತು. ಮೇ 1 ಬಂತೆಂದರೆ, ಚಿತ್ರರಂಗದ ಕಾರ್ಮಿಕ ವಲಯದಲ್ಲಿ ಹರ್ಷವೋ ಹರ್ಷ. ಅಲ್ಲೊಂದು ಸಂಪೂರ್ಣ ಹಬ್ಬದ ವಾತಾವರಣವೇ ತುಂಬಿರುತ್ತಿತ್ತು. ಆದರೆ, ಕೊರೊನಾ ತಂದಿಟ್ಟ ಆಘಾತದಿಂದಾಗಿ ಸಿನಿಮಾ ಕಾರ್ಮಿಕರ ಮೊಗದಲ್ಲಿರಬೇಕಾದ ಹರ್ಷ ಈಗಿಲ್ಲ. ಬದಲಾಗಿ ಅವರಲ್ಲಿ ಆತಂಕದ ಛಾಯೆ ಮೂಡಿದೆ. ಬದುಕು ಮುಗಿದೇ ಹೋಯ್ತಾ ಎಂಬ ಭಯ ಕ್ಷಣ ಕ್ಷಣಕ್ಕೂ ಕಾಡುತ್ತಲೇ ಇದೆ. ಅದಕ್ಕೆ ಕಾರಣ, ಮಹಾಮಾರಿ ಕೊರೊನಾ… ಪ್ರತಿ ಕಾರ್ಮಿಕರ ದಿನದಂದು ನಿಜಕ್ಕೂ ಸಿನಿಮಾ ಕಾರ್ಮಿಕರ ಮೊಗದಲ್ಲಿ ಹರ್ಷವೇ ತುಂಬಿರುತ್ತಿತ್ತು. ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಒಕ್ಕೂಟದಲ್ಲಿರುವ ಬಹುತೇಕರು ದಿನಗೂಲಿಗರೇ. ಅವರ ಮೊಗದಲ್ಲೀಗ ಸಂಭ್ರಮವಿಲ್ಲ, ಬರೀ ಆತಂಕದ ಕರಿನೆರಳು ಅಂದರೆ ನಂಬಲೇಬೇಕು!

ಕಪ್ಪು-ಬಿಳುಪು ಕಾಲದಿಂದಲೂ ಈ ಚಿತ್ರರಂಗದ ಕಾರ್ಮಿಕ ವಲಯವೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಆ ಶ್ರಮಿಕ ವರ್ಗ ಇರದಿದ್ದರೆ, ಯಾವ ಸಿನಿಮಾನೂ ಅಂದುಕೊಂಡಂತೆ ತೆರೆಮೇಲೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಅಂದಿನಿಂದ ಇಂದಿನವರೆಗೂ ಸಿನಿಮಾ ಕಾರ್ಮಿಕರು ಈ ಬಣ್ಣದ ಲೋಕದಲ್ಲಿ ಬದುಕು ಸವೆಸುತ್ತಲೇ ಇದ್ದಾರೆ. ದಿನಗೂಲಿಗಳಾಗಿ, ಅದೆಷ್ಟೋ ಸ್ಟಾರ್‌ ನಟ,ನಟಿಯರ ಬದುಕಿನ ಯಶಸ್ಸಿಗೆ ಕಾರಣರಾಗಿದ್ದಾರೆ. ಬಣ್ಣದ ಜಗತ್ತಿನಲ್ಲಿದ್ದರೂ, ತೆರೆ ಹಿಂದೆ ಹಗಲಿರುಳು ಶ್ರಮಿಸುತ್ತಿದ್ದ ಸಿನಿಮಾ ಕಾರ್ಮಿಕರ ಬದುಕಲ್ಲಿ ಮಾತ್ರ ಬಣ್ಣ ಮಾಸಿ ಹೋಗಿದೆ. ಇದು ಹಿಂದಿನ ಪರಿಸ್ಥಿತಿ ಮಾತ್ರವಲ್ಲ, ಇಂದಿನ ಸ್ಥಿತಿಯೂ ಕೂಡ. ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ಸಿನಿಮಾಗಳೂ ಬದಲಾಗುತ್ತಿವೆ. ಆದರೆ, ಕಾರ್ಮಿಕರ ಬದುಕು ಮಾತ್ರ ಇಂದಿಗೂ ಬದಲಾಗಿಲ್ಲ. ಅದೇ ಕಷ್ಟ, ಮತ್ತದೇ ಸಂಕಷ್ಟ!

ಬೆಳಗ್ಗೆ 6 ಗಂಟೆಗೆ ಚಿತ್ರೀಕರಣದ ಸ್ಪಾಟ್‌ಗೆ ಹಾಜರಾಗುವ ಕಾರ್ಮಿಕರು, ಮಳೆ-ಬಿಸಿಲು-ಛಳಿ ಏನೇ ಇರಲಿ, ಶೂಟಿಂಗ್‌ ಪ್ಯಾಕಪ್‌ ಆಗುವವರೆಗೂ ಶ್ರಮಿಸಲೇಬೇಕು. ಅಲ್ಲಿ, ತಿಂಡಿ-ಊಟೋಪಚಾರ ವಿಷಯದಲ್ಲಿ ರಗಳೆ ಇಲ್ಲ ಎನ್ನುವುದು ಬಿಟ್ಟರೆ, ಸಿನಿಮಾದವರು ಕೊಡುವ ಕಾಸು, ಈಗಿನ ದುಬಾರಿ ಕಾಲದಲ್ಲಿ ಬದುಕು ನಿರ್ವಹಣೆಗೂ ಸಾಲದು. ಒಂದು ಸಿನಿಮಾದಲ್ಲಿ ಮೈ ಮುರಿಯುವಂತೆ ದುಡಿದರೂ, ರಾತ್ರಿ-ಹಗಲೆನ್ನದೆ, ಭಾರವಾದ ಪರಿಕರಗಳನ್ನು ಎತ್ತಿಕೊಂಡು ಶೂಟಿಂಗ್‌ ಸ್ಪಾಟ್‌ಗೆ ಬಂದರೂ, ಜೇಬು ತುಂಬುವಷ್ಟು ಕೂಲಿ ಸಿಗಲ್ಲ. ಸಿಕ್ಕ ಹಣದಲ್ಲೇ ನಿಟ್ಟುಸಿರು ಬಿಟ್ಟು, ತಮ್ಮ ಬದುಕಿನ ಬಂಡಿ ಎಳೆಯಬೇಕಾದ ಅನಿವಾರ್ಯತೆ ಇಂದಿಗೂ ಇದೆ. ಅದೇ ಅನಿವಾರ್ಯತೆಯಲ್ಲಿ ಸಿನಿ ಕಾರ್ಮಿಕರು ಕೆಲಸ ಮಾಡಲೇಬೇಕಿದೆ.

ಸಾಕಷ್ಟು ಕಾರ್ಮಿಕರಿಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಎಷ್ಟೋ ಜನರಿಗೆ ಕಲರ್‌ಫುಲ್‌ ದುನಿಯಾ ಅಂದಾಕ್ಷಣ, ಎಲ್ಲವೂ ಇಲ್ಲಿ ರಂಗಾಗಿಯೇ ಕಾಣುತ್ತೆ. ಆದರೆ, ಒಂದು ಸಿನಿಮಾ ತಯಾರಿಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿರುವ ಕಾರ್ಮಿಕರ ಬದುಕು ಮಾತ್ರ ನಿಜಕ್ಕೂ ಮೂರಾಬಟ್ಟೆ. ಅದೆಷ್ಟೋ ಹಾಸ್ಯ ದೃಶ್ಯಗಳಿಗೆ ಹೆಗಲು ಕೊಟ್ಟು ನಿಲ್ಲುವ ಕಾರ್ಮಿಕರ ಬದುಕಲ್ಲಿ ಊಹಿಸಲಾರದಷ್ಟು ನೋವಿದೆ. ಆದರೆ, ಸಿನಿಮಾದಲ್ಲಿ ಹೇಳಿಕೊಂಡು ಸಂಭ್ರಮಿಸುವಂತಹ ವೇತನವಿಲ್ಲ. ಕೆಲವು ಚಿತ್ರಗಳಲ್ಲಿ ಅಂದಿನಂದಿನ ದಿನಗೂಲಿ ಸಿಕ್ಕರೆ ಅದೇ ದೊಡ್ಡ ವಿಷಯ. ಇನ್ನು ಕೆಲವು ಸಿನಿಮಾಗಳಿಂದ ಬರುವ ಬಿಡಿಗಾಸೂ ಕೂಡ ಸಿಗದೇ ಕಾರ್ಮಿಕರು ದಿನ‌ನಿತ್ಯ ಅಲೆದಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇಲ್ಲೇನಿದ್ದರೂ, ತೆರೆ ಮೇಲೆ ಕಾಣುವ ಸ್ಟಾರ್‌ಗಳಿಗೆ ಮಾತ್ರ ಕೋಟಿ ಕೋಟಿ ಹಣ. ಮಿಕ್ಕವರು ಪಾಲಿಗೆ ಬಂದದ್ದು ಅಮೃತ ಅಂದುಕೊಂಡು ದಿನ ದೂಡಲೇಬೇಕು. ಯಾಕೆಂದರೆ, ಸಿನಿಮಾ ಕಾರ್ಮಿಕರಿಗೆ ಈ ಬಣ್ಣದ ಲೋಕ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇಲ್ಲೇ ಇದ್ದು, ಇಲ್ಲೇ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಕಾರ್ಮಿಕ ಕುಟುಂಬಗಳು ಇಂದಿಗೂ, ಒದ್ದಾಟದಲ್ಲೇ ಜೀವನ ಸಾಗಿಸುತ್ತಿವೆ. ಇಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮಿಕನಿಗೂ ತನ್ನದೇ ಆದ ನೋವಿದೆ. ನೋಡುವ ಪ್ರೇಕ್ಷಕರಿಗೆ ಸಿನಿಮಾ ಮನರಂಜನೆಯೇನೋ ಕೊಡುತ್ತೆ. ಆದರೆ, ಸಿನಿಮಾ ಹಿಂದೆ ಕೆಲಸ ಮಾಡುವ ಕಾರ್ಮಿಕರ ಬದುಕಲ್ಲಿ ಮಾತ್ರ ಆ ರಂಜನೆಯೇ ಇಲ್ಲ!

ಆರಂಭದ ದಿನಗಳಲ್ಲಿ ಕಾರ್ಮಿಕರ ದಿನ ಅಂದಾಕ್ಷಣ, ಸಿನಿಮಾ ಕಾರ್ಮಿಕರ ಒಕ್ಕೂಟ ಅದ್ಧೂರಿಯಾಗಿಯೇ ಸಂಭ್ರಮ ಆಚರಿಸುತ್ತಿತ್ತು. ಎಲ್ಲಾ ಕಾರ್ಮಿಕರು ಒಟ್ಟಾಗಿ, ಸಿಹಿ ತಿನಿಸು ತಿಂದು ಕುಣಿದು ಕುಪ್ಫಳಿಸುತ್ತಿದ್ದರು. ಎಲ್ಲರೂ ಒಂದೇ ಎಂಬ ಭಾವನೆಯಿಂದ, ಒಕ್ಕೂಟ ಮೂಲಕ ಸ್ಟಾರ್‌ಗಳನ್ನು ಕರೆದು ಸನ್ಮಾನಿಸಿ, ಗೌರವಿಸುತ್ತಿತ್ತು. ತನ್ನೊಳಗೆ ನೂರೆಂಟು ನೋವಿದ್ದರು, ಹೇಳಲಾಗದಷ್ಟು ಕಷ್ಟವಿದ್ದರೂ, ಮೊಗದಲ್ಲಿ ಒಂದಷ್ಟು ಮಂದಹಾಸ ಬೀರುತ್ತಲೇ ಕಾರ್ಮಿಕರ ದಿನವನ್ನು ಸಂತಸದಿಂದಲೇ ಆಚರಿಸುತ್ತಿತ್ತು. ಆದರೆ, ಕಳೆದ ವರ್ಷದಿಂದ ಅದಕ್ಕೂ ಕಲ್ಲು ಬಿದ್ದಿದೆ. ಕೊರೊನಾ ಅಂಥದ್ದೊಂದು ಕರಾಳತೆಗೆ ಸಾಕ್ಷಿಯಾಗಿದೆ. ಅದು ಈ ವರ್ಷವೂ ಮುಂದುವರೆದಿದೆ.

ಕೊರೊನಾ ಆವರಿಸಿ, ಅದೆಷ್ಟೋ ಸಿನಿಮಾ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿದ್ದು ಸುಳ್ಳಲ್ಲ. ಚಿತ್ರರಂಗದಲ್ಲಿ ದಿನಗೂಲಿಗರಾಗಿ ದುಡಿಯುವ ವರ್ಗದ ಗೋಳು ತಲತಲಾಂತರದಿಂದಲೂ ಇದೆ. ಅಲ್ಲಿ ಬರೀ ಆಶ್ವಾಸನೆಗಳು ಸಿಗುತ್ತಿವೆ ಹೊರತು, ಬದುಕು ಹಸನಾಗುವಂತಹ ಕೆಲಸವಾಗುತ್ತಿಲ್ಲ ಎಂಬುದೇ ಸಿನಿಮಾ ಕಾರ್ಮಿಗರ ನೋವಿನ ಮಾತು. ಮುಂದಿನ ದಿನಗಳಲ್ಲಾದರೂ, ಹಿಂದಿನ ವೈಭವ ಮರುಕಳಿಸಲಿ ಕಾರ್ಮಿಕರ ಬದುಕು ಹಸನಲಾಗಲಿ ಅನ್ನೋದೇ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಸೂಪರ್‌ ಕಪಲ್‌… ! ಇಲ್ಲಿದೆ ರೋಚಕತೆಯ ಫ್ಯಾಮಿಲಿ ಮ್ಯಾಟರ್!! ಇದು ಕನ್ನಡದ ಹೊಸ ವೆಬ್ ಸರಣಿ…

ಸದ್ಯ ಈಗ ಡಿಜಿಟಲ್ ಮಾಧ್ಯಮದ್ದೇ ಹವಾ! ಹೌದು, ಅದರಲ್ಲೂ ಮನರಂಜನೆ ವಿಷಯದಲ್ಲಂತೂ ಒಂದು ಹೆಜ್ಜೆ ಮುಂದೆ. ಸಾಕಷ್ಟು ಡಿಜಿಟಲ್ ಮಾಧ್ಯಮಗಳಲ್ಲಿ ಮನರಂಜನೆ ಅಂಶಗಳದ್ದೇ ಕಾರುಬಾರು. ಅಂತಹ ಮನರಂಜನೆಗೆ ಮತ್ತೊಂದು ವೇದಿಕೆಯ ಹೆಸರು “ಮಾಧ್ಯಮ ಅನೇಕ”. ಇಲ್ಲೀಗ ವೆಬ್ ಸರಣಿಯೊಂದು ಶುರುವಾಗುತ್ತಿದೆ. ಅದರ ಹೆಸರು ” ಸೂಪರ್ ಕಪಲ್” ಈಗಾಗಲೇ ಅದರ ಸ್ಯಾಂಪಲ್ ಎಂಬಂತೆ ಆ ವೆಬ್ ಸರಣಿಯ ಟೀಸರ್ ಕೂಡ ರಿಲೀಸ್ ಆಗಿದೆ. ಟೀಸರ್ ನೋಡಿದವರಿಗೆ ಸಖತ್ ಮಜವಂತೂ ಕಾಣಿಸುತ್ತೆ. ಇನ್ನು ಸರಣಿಯಲ್ಲಿ ಏನೆಲ್ಲಾ ಇರಬಹುದು ಅನ್ನೋ ಕುತೂಹಲ ಸಹಜವೇ.


ಈ ಸೂಪರ್ ಕಪಲ್ ಬಗ್ಗೆ ಹೇಳೋದಾದರೆ,
“ಬೆಂಗಳೂರಿನಂಥ ಮಹಾನಗರದಲ್ಲಿ ವಾಸ ಮಾಡುತ್ತಾ ಆಧುನಿಕ ಜೀವನ ಶೈಲಿ ಅನುಸರಿಸುತ್ತಿರುವ ಯುವ ದಂಪತಿ ಈಶ್ವರ್ ಮತ್ತು ಶಾರ್ವರಿ. ಇಬ್ಬರ ಸ್ವಭಾವ ತದ್ವಿರುದ್ಧ. ಆದರೆ, ಪರಸ್ಪರರಲ್ಲಿ ಪ್ರೀತಿ, ಗೌರವವಿದೆ. ಇಬ್ಬರದ್ದೂ ಒಂದೇ ಗುರಿ, ಆದರೆ ದಾರಿ ಮಾತ್ರ ಭಿನ್ನ. ಈ ಜೋಡಿಯ ಬದುಕಿನ ನೈಜ ಹಾಸ್ಯ ಘಟನಾವಳಿಗಳನ್ನು ಕಚ್ಚಾಟ, ಕಿರುಚಾಟಗಳಿಲ್ಲದೆ ಕಟ್ಟಿಕೊಡುವ ಈ ‘ಸೂಪರ್‌ ಕಪಲ್‌’ ವೆಬ್‌ ಸರಣಿಯ ಮೊದಲ ಸೀಸನ್‌ ನೋಡುಗರನ್ನು ತಲುಪಿ ಈಗಾಗಲೇ ಮೆಚ್ಚುಗೆ ಪಡೆದಿತ್ತು. ಆ ಜನಪ್ರಿಯತೆಯ ಹಿನ್ನೆಲೆಯಲ್ಲಿ ಇದೀಗ ‘ಸೂಪರ್‌ ಕಪಲ್‌’ ಎರಡನೆಯ ಕಂತು ರೂಪುಗೊಂಡು ಪ್ರಸಾರಕ್ಕೆ ಸಿದ್ಧವಾಗಿದೆ.


ರಘು ಅವರು ಇಲ್ಲಿ ‘ಈಶ್ವರ್’ ಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಬೆಡಗಿ ತೇಜಸ್ವಿನಿ ಅವರು ‘ಶಾರ್ವರಿ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸರಣಿಯ ಮತ್ತಿಬ್ಬರು ಯುವ ಪ್ರತಿಭೆಗಳು ‘ಚೂರಿಕಟ್ಟೆ’ ಸಿನಿಮಾ ಖ್ಯಾತಿಯ ಪ್ರೇರಣಾ ಕಂಬಂ ಮತ್ತು ಉದಯ ಮ್ಯೂಸಿಕ್‌ನ ವಿಜೆ ಇಮ್ರಾನ್ ಪಾಷಾ. ‘ಸೂಪರ್ ಕಪಲ್‌’ನ ದಿನ ನಿತ್ಯದ ಬದುಕಿನಲ್ಲಿ ಇನ್ನಷ್ಟು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಹುಟ್ಟು ಹಾಕುವ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ದಂಪತಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಉದ್ಭವ ಆಗುವ ಹಲವಾರು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಬಿಂಬಿಸುವ, ಯುವ ಜನರ ಜೊತೆಗೆ, ಕುಟುಂಬದ ಎಲ್ಲರೂ ನೋಡಿ ಖುಷಿ ಪಡಬಹುದಾದ ವೆಬ್‌ ಸರಣಿ ಇದಾಗಿದೆ. ರಘುನಂದನ್ ಖಾನಡ್ಕ ಮತ್ತು ಪುನೀತ್ ಕಬ್ಬೂರು ಸರಣಿಯ ನಿರ್ದೇಶಕರು. ಏಪ್ರಿಲ್‌ 30ರಂದು ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಮೇ 3 ರಂದು ಸರಣಿಯ ಸಂಚಿಕೆ ‘ಮಾಧ್ಯಮ ಅನೇಕ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಸ್ಟ್ರೀಮ್‌ ಆಗಲಿದೆ.
ಅಂದಹಾಗೆ,
2018ರಲ್ಲಿ ಆರಂಭಗೊಂಡ ‘ಮಾಧ್ಯಮ ಅನೇಕ’ ಮೌಲ್ಯಯುತವಾದ, ಹೊಸತನ ಹಾಗೂ ಉತ್ತಮ ಗುಣಮಟ್ಟದ ಮಾಹಿತಿ ಮತ್ತು ಮನರಂಜನಾ ಕಾರ್ಯಕ್ರಮ, ಸಾಕ್ಷ್ಯಚಿತ್ರಗಳು, ಸಂದರ್ಶನಗಳು, ವೆಬ್ ಆಧಾರಿತ ಮನರಂಜನೆ‌ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

error: Content is protected !!