Categories
ಸಿನಿ ಸುದ್ದಿ

ಮೇಕಿಂಗ್ ಆಫ್ ಬಂಗಾರದ ಮನುಷ್ಯ ಕೃತಿ ಬಿಡುಗಡೆ- ರಾಜ್ ಹುಟ್ಟು ಹಬ್ಬದಂದು ರಂಗನಾಥ್ ಲೋಕಾರ್ಪಣೆ; ಶಿವರಾಜ್‍ ಕುಮಾರ್ ಶುಭ ಹಾರೈಕೆ

ಇದು ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಕೃತಿ

ಈಗಾಗಲೇ ವರನಟ ಡಾ.ರಾಜಕುಮಾರ್ ಅವರ ಕುರಿತಂತೆ ಹಲವು ಲೇಖಕರು ಪುಸ್ತಕ ಬರೆದಿದ್ದಾರೆ. ಅ ಸಾಲಿಗೆ ಈಗ ಹಿರಿಯ ಸಿನಿಮಾ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರೂ ಸೇರಿದ್ದಾರೆ. ಹೌದು,
“ಮೇಕಿಂಗ್ ಆಫ್ ಬಂಗಾರದ ಮನುಷ್ಯ” ಪುಸ್ತಕ ಬರೆದಿರುವ ಅವರು, ಏಪ್ರಿಲ್ 24ರ ರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಅಂದಹಾಗೆ, ಎಚ್.ಆರ್. ರಂಗನಾಥ್ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಶಿವರಾಜ ಕುಮಾರ್ ಶುಭ ಹಾರೈಸಿದ್ದಾರೆ.


ತಮ್ಮ ಬಹುದಿನಗಳ ಕನಸು ಅಂದೇ ಹೇಳಿಕೊಂಡಿದ್ದ ಮಹೇಶ್ ದೇವಶೆಟ್ಟಿ, ಪುಸ್ತಕ ಕುರಿತಂತೆ ಹಾಗೂ ಆ ಪುಸ್ತಕ ಬರೆಯಲು ಏನೆಲ್ಲಾ ಪ್ರೇರಣೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತುಗಳಲ್ಲಿ ಕೇಳಿ.

ಓವರ್ ಟು ದೇವಶೆಟ್ಟಿ ಮಹೇಶ್…

ಕೈ ನಡುಗುತ್ತಿದ್ದವು…ದೇಹ ಹೈರಾಣಾಗಿತ್ತು…ಮನಸು ಕಸುವು ಕಳಕೊಂಡಿತ್ತು…ಒಂದೇ ಒಂದು ಸಾಲು ಬರೆಯಲು ಒಂದಿಡಿ ದಿನ ತೂಕಡಿಸುತ್ತಿತ್ತು. ಏನಾಗಿ ಹೋಗಿತ್ತು ? ಯಾಕೆಲ್ಲ ಹೀಗಾಯಿತು ? ಪುಟಗಟ್ಟಲೆ ಸಾಲುಗಳನ್ನು ಹಿಂಗನ್ನುವಷ್ಟರಲ್ಲಿ ಬರೆದು ಮುಗಿಸಿ, “ರಾಕ್ಷಸರು ನೀವು” ಎಂದು ಹೇಳಿಸಿಕೊಳ್ಳುತ್ತಿದ್ದ ಈ ಬೆರಳುಗಳಿಗೆ ಗ್ರಹಣ ಹಿಡಿದಿತ್ತು. ಮುಗಿದೇ ಹೋಯಿತು ಇವನ ಗತಿ…ಹೀಗಂತ ಕಾಳಜಿ ತೋರಿಸಿದವರೂ ಇದ್ದರು. ಮಟ ಮಟ ಮಧ್ಯಾಹ್ನ ಶೆರೆ ಕುಡಿದು ಹೊಟ್ಟೆ ತಂಪು ಮಾಡಿಕೊಂಡವರೂ ಸಿಕ್ಕರು. ಉಳಿದವರನ್ನು ಬಿಡಿ, ನನಗೇ ಅನ್ನಿಸಿಬಿಟ್ಟಿತ್ತು. ‘ಮುಗಿತು ಬಿಡಪಾ ನನ್ ಕತಿ…’
ಇಲ್ಲ…ಬದುಕು ಇನ್ನೂ ನನ್ನಲ್ಲಿ ಜೀವ ಉಳಿಸಿತ್ತು. ಇದ್ದಷ್ಟು ದಿನ ಇದ್ದಷ್ಟು ಹೊತ್ತು ಬರೆಯುತ್ತಿರು ಎಂದು ಹೇಳಿತ್ತು. ಎಂಟು ವರ್ಷಗಳ ಹಿಂದೆ ಹೀಗಿತ್ತು ಈ ಹೃದಯ. ಆ ಸಮಯದಲ್ಲಿಯೇ ಸಿಕ್ಕಿತು “ಬಂಗಾರದ ಮನುಷ್ಯ”. ಇದ್ದರೂ ಇಲ್ಲದಂತಿದ್ದ ದೇಹ ಹೊತ್ತು ಅಲೆದಾಡಿದೆ. ಆ ಸಿನಿಮಾಕ್ಕೆ ಸಂಬಂಧ ಪಟ್ಟವರನ್ನು ಮಾತಾಡಿಸಿದೆ. ಭರ್ತಿ ಮೂರು ತಿಂಗಳು ‘ಬಂಗಾರದ ಮನುಷ್ಯ’ನ ಬೆನ್ನು ಬಿದ್ದೆ. ಎಲ್ಲರೂ ಮಾಹಿತಿ ಕೊಟ್ಟು ಉಪಕರಿಸಿದರು. ಈಗ ಅದೆಲ್ಲವನ್ನೂ ಒಂದುಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ.


1972 .ಇದು “ಬಂಗಾರದ ಮನುಷ್ಯ” ತೆರೆ ಕಂಡ ವರ್ಷ. ಮಜಾ ಅಂದರೆ ಅದೇ ವರ್ಷ ನಾನು ಹುಟ್ಟಿದ್ದೆ. ನಾನು ಈ ಲೋಕಕ್ಕೆ ಕಾಲಿಟ್ಟ ವರ್ಷ ರಾಜ್ಯಾದ್ಯಂತ ಬಿಡುಗಡೆಯಾಗಿ ಎರಡು ವರ್ಷ ಓಡಿದ ಸಿನಿಮಾ ಕುರಿತು ಇಷ್ಟು ವರ್ಷಗಳ ನಂತರ ನಾನೇ ಬರೆಯುತ್ತೇನೆಂದು ನನಗೇ ಗೊತ್ತಿರಲಿಲ್ಲ. ಅದೆಲ್ಲಾ ಮಾಯಾಲೋಕದ ಮಹಿಮೆ. ನನ್ನ ಅಕ್ಷರಗಳ ಹಡೆದವ್ವ ಜಗನ್ಮಾತೆಯ ಆಶೀರ್ವಾದ.
ನನಗೆ ಇಬ್ಬರು ಅವ್ವಂದಿರು. ಒಬ್ಬಾಕೆ ಈ ಭೂಮಿಗೆ ತಂದ ತಾಯಿ. ಇನ್ನೊಬ್ಬಾಕೆ ಅಕ್ಷರಗಳಿಂದ ಅನ್ನ ತಿನ್ನಿಸುತ್ತಿರುವ ಜಗನ್ಮಾತೆ. ಇವರಿಬ್ಬರೂ ನನ್ನನ್ನು ಕಾಪಾಡುತ್ತಿದ್ದಾರೆ. ಎಲ್ಲ ವ್ಯಸನ, ನೋವು, ಆತಂಕದಿಂದ ಬಚಾವು ಮಾಡುತ್ತಿದ್ದಾರೆ. ಹೆತ್ತವ್ವ ಈಗಿಲ್ಲ. ಜಗನ್ಮಾತೆ ನನ್ನನ್ನು ಕಾಯುತ್ತಿದ್ದಾಳೆ ಹಗಲಿರುಳೆಲ್ಲ. ಇವರು ಇರುವತನಕ ನಾನು. ಮುಂದಿನದ್ದು ದೇವರ ಕಣ್ಣು.
ನಾನು ಸಣ್ಣಾವಿದ್ದಾಗ ಸಿಡಸಿಡಸಿಡುಕಿ ಸೆಟಗೊಂಡು ಕುಂತಾಗಲೆಲ್ಲಾ ಅವ್ವ ‘ರಾಜ್ ಕುಮಾರ್ ಪಿಚ್ಚರ್ ತೋರಿಸ್ತೀನಿ ಬಾ’ ಅಂದ್ರ ಸಾಕು…ಗಲ್ಲ ಉಬ್ಬುತ್ತಿದ್ದವು. ಕಣ್ಣು ಊರಗಲ. ಆಗಿದ್ದ ನನ್ನೆಲ್ಲಾ ಹಳವಂಡ, ದಿಕ್ಕೇಡಿತನ, ತಲ್ಲಣ, ಒಂಟಿತನ, ಪ್ರಕ್ಷುಬ್ಧತೆಯನ್ನು ಹೊಸಕಿ ಹಾಕಿ, ತಿಕ್ಕಿ ತಿಕ್ಕಿ ಸಾಂತ್ವನ ಭಿಕ್ಷಿಸಿದ್ದು ರಾಜ್ಕುಮಾರ್ ಸಿನಿಮಾ. ಆ ಜೀವದ ಒಂದೊಂದು ಚಿತ್ರ ಕರುಳನ್ನು ಕಂಪು-ತಂಪಾಗಿಸುವ ಸುಖಕ್ಕೆ ಈ ಗಳಿಗೆಗೂ ನನ್ನ ಹೃದಯ ಬಡಿದುಕೊಳ್ಳುತ್ತಿದೆ….ಜಗನ್ಮಾತೆಯಾಣೆ ಸುಳ್ಳಲ್ಲ. ಆದರೀಗ ಆ ನನ್ನ ರಾಜ ಕುಮಾರ್ ಇಲ್ಲ. ಅಂಥ ಬಂಗಾರದ ಮನುಷ್ಯನ ಪಾದಕ್ಕೆ ಅಕ್ಷರದ ಕೇದಿಗೆ ಮಾಲೆ ಅರ್ಪಿಸದಿರಲು ಸಾಧ್ಯವೆ ?
2021.ಏಪ್ರಿಲ್ 24…ಅಣ್ಣಾವ್ರ 92ನೇ ಹುಟ್ಟುಹಬ್ಬ. ಆ ದಿನವೇ ಮುತ್ತುರಾಜನ ಮೊದಲ ಮುತ್ತು ಡಾ.ಶಿವರಾಜ್‌ಕುಮಾರ್ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಬಿಡುಗಡೆಯಾಗಿದೆ.

‘ಬರಿದಾದ ಮನೆ ಬೆಳಗೆ…ನೀ ಬರುವೆ ಎಂದು…?’ ಕನ್ನಡಿಗರ ಮನಸು ಮಣಮಣಿಸುತ್ತಿರುವ ಈ ದಿನದಂದೇ ಅಣ್ಣಾವ್ರ ಪಾದಕ್ಕೆ ನನ್ನಿಂದ ಅಕ್ಷರಗಳ ಬಿಲ್ಪತ್ರೆಯ ಅಭಿಷೇಕ…ನಿಮ್ಮ ಹಾರೈಕೆ…ಪ್ರೀತಿ ಈ ಪುಸ್ತಕದ ಮೇಲಿರಲಿ…
ನನ್ನ ಹತ್ತು ಬೆರಳು…ನಿಮ್ಮ ಕರುಳನ್ನು ಅಕ್ಷರಗಳಿಂದ ತಂಪಾಗಿಸುತ್ತಾ ಸಾಗಲಿ… ಎಂದು ಮಹೇಶ್ ದೇವಶೆಟ್ಟಿ ಹೇಳಿಕೊಡಿದ್ದಾರೆ.
49 ವರ್ಷಗಳ ಹಿಂದೆ…ಕೆಲಸಕ್ಕಾಗಿ ಪಟ್ಟಣ ಸೇರುವ ಎಷ್ಟೋ ಯುವಕರು ಒಂದೇ ಒಂದು ಸಿನಿಮಾದಿಂದ ಬದಲಾಗಿ ಕೃಷಿಗೆ ಆದ್ಯತೆ ಕೊಡಲಾರಂಭಿಸಿದ್ರು. ಅದಕ್ಕೆ ಕಾರಣವಾಗಿದ್ದು ಡಾ.ರಾಜ್‍ಕುಮಾರ್ ನಟಿಸಿದ “ಬಂಗಾರದ ಮನುಷ್ಯ” ಚಿತ್ರ. ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಕನ್ನಡಿಗರಲ್ಲಿ ಹೊಸ ಕ್ರಾಂತಿ ಮೂಡಿಸಿದ ಈ ಸಿನಿಮಾ ಕುರಿತ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಕೃತಿ ಬರೆದಿರುವ ಮಹೇಶ್ ದೇವಶೆಟ್ಟಿ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದೆ.

ಕೆಲವೊಂದು ಸಿನಿಮಾಗಳೇ ಹಾಗೆ ಬಂಗಾರದ ಅಕ್ಷರದಲ್ಲಿ ಬರೆಯುವ ಕಥೆಗಳನ್ನು ಹೊಂದಿರುತ್ತವೆ. ಅದರಲ್ಲೂ ಡಾ ರಾಜ್‍ಕುಮಾರ್ ಚಿತ್ರಗಳ ಪಾಲು ಮೇಲ್ಪಂಕ್ತಿಯಲ್ಲಿರುತ್ತದೆ. ಆ ಸಾಲಿನಲ್ಲಿ ಹೊಳೆಯುವ ಧ್ರುವತಾರೆಯೇಬಂಗಾರದ ಮನುಷ್ಯ.’ ಆಗಿನ ಕಾಲದ ಯುವ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದ ಬಂಗಾರದ ಮನುಷ್ಯ ಚಿತ್ರದ ಪ್ರತಿಯೊಂದು ಘಟನೆಯೂ ವಿಸ್ಮಯ ಮೂಡಿಸುವಂಥದ್ದು.
ಹಿಂದೆಂದೂ ಕಂಡು ಕೇಳಿರದ ಮಾಹಿತಿ ಮೇಕಿಂಗ್ ಆಫ್ ಬಂಗಾರದ ಮನುಷ್ಯ' ಪುಸ್ತಕದಲ್ಲಿದೆ. ಪಬ್ಲಿಕ್ ಟಿವಿ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿ, ಕನ್ನಡ ಸಿನಿಮಾ ರಂಗದ ಪತ್ರಕರ್ತ ಮಹೇಶ್ ದೇವಶೆಟ್ಟಿ ಬರೆದಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಸಾಕಷ್ಟು ರೋಚಕ ಹಾಗೂ ವಿಶಿಷ್ಟ ಮಾಹಿತಿ ಒಳಗೊಂಡಿದೆ ಎಂದಿದ್ದಾರೆ.


ಪ್ರಸ್ತುತ ಮಹೇಶ್ ದೇವಶೆಟ್ಟಿ ಪಬ್ಲಿಕ್ ಟಿವಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 49 ವರ್ಷಗಳ ಹಿಂದೆ ತೆರೆ ಕಂಡು ಸತತ ಎರಡು ವರ್ಷ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರದ ಕುರಿತ ಅಪರೂಪದ ಮಾಹಿತಿ ಹೆಕ್ಕಿ ತೆಗೆದು ಪುಸ್ತಕ ರೂಪದಲ್ಲಿ ಇಂದಿನ ಜನತೆಗೆ ನೀಡಿದ್ದಾರೆ.
ಅಂದ ಹಾಗೆ `ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬೆನ್ನುಡಿ ಬರೆದು ಶುಭ ಕೋರಿದ್ದಾರೆ.
ಸಂಪಾದಕರಾದ ದಿವಾಕರ್ ಹಾಗೂ ಔಟ್‍ಪುಟ್ ಚೀಫ್ ಆನಂದ್ ಮತ್ತು ಲೇಖಕ ಮಹೇಶ್ ದೇವಶೆಟ್ಟಿ ಈ ವೇಳೆ ಇದ್ದರು.

Categories
ಸಿನಿ ಸುದ್ದಿ

ಅಂದೇ ಮೋಡಿ ಮಾಡಿದ್ದರು ಅಣ್ಣಾ‌ಬಾಂಡ್! ಬಾಂಡ್‌ ಸಿನಿಮಾಗಳಲ್ಲಿ ಅಣ್ಣಾವ್ರ ಖದರ್‌

ಇದು ಅಣ್ಣಾವ್ರ ಹುಟ್ಟು ಹಬ್ಬದ ವಿಶೇಷ...

ಡಾ.ರಾಜಕುಮಾರ್…‌ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟರು. ಏಪ್ರಿಲ್‌ 24 ಅವರ ಹುಟ್ಟು ಹಬ್ಬ. ಅವರು ನಮ್ಮೊಂದಿಗಿಲ್ಲ. ಆದರೆ, ಮೌಲ್ಯ ಸಾರುವ ಅವರ ಅನೇಕ ಸಿನಿಮಾಳಿವೆ. ಆ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಜೀವಿಸುತ್ತಿದ್ದಾರೆ. ಏಪ್ರಿಲ್‌ 24 ಬಂತೆಂದರೆ ಸಾಕು. ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಡಗರ-ಸಂಭ್ರಮ. ಆ ದಿನ ಅವರಿಗೆ ಅದೊಂದು ರೀತಿ ಹಬ್ಬ. ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕ ಬಳಿ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ಅವರ ಹುಟ್ಟುಹಬ್ಬದ ಅಂಗವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಆಯೋಜಿಸಿ ಸಂಭ್ರಮಿಸುತ್ತಾರೆ.

ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಎಲ್ಲೆಡೆ ಕನ್ನಡ ಹಬ್ಬದಂತೇ ಆಚರಿಸುತ್ತಾರೆ. ಕನ್ನಡ ಪ್ರಾಧಿಕಾರ ಕೂಡ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವನ್ನು ಕನ್ನಡ ಅಭಿಮಾನದ ದಿನ ಎಂದು ಆಚರಿಸುತ್ತಿರುವುದು ವಿಶೇಷತೆಗಳಲ್ಲೊಂದು. ರಾಜ್‌ಕುಮಾರ್‌ ಅಂದರೆ, ಸಿನಿಮಾ ಮಂದಿಗಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಒಂದು ರೀತಿ ಆರಾಧ್ಯ ದೈವ. ರಾಜ್‌ಕುಮಾರ್‌ ಅವರ ಸಿನಿಮಾಗಳಲ್ಲಿ ಮೌಲ್ಯಗಳಿದ್ದವು. ಮನರಂಜನೆಗೂ ಹೆಚ್ಚು ಒತ್ತು ಕೊಡಲಾಗುತ್ತಿತ್ತು. ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳೂ ಬಂದಿವೆ. ಈ ನಿಟ್ಟಿನಲ್ಲಿ ಅವರ‌ “ಬಾಂಡ್” ಸಿನಿಮಾಗಳ ಬಗ್ಗೆ ಹೇಳಲೇಬೇಕು.

ಬಾಂಡ್‌ ಸಿನ್ಮಾ ಮೂಲಕ ಮೋಡಿ

ವರನಟ ಡಾ.ರಾಜಕುಮಾರ್‌ ಅವರ ಬಾಂಡ್‌ ಸಿನಿಮಾಗಳು ಮತ್ತು ಅದರ ಹಾಡುಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕನ್ನಡ ಚಿತ್ರರಂಗದಲ್ಲಿ “ಜೇಡರ ಬಲೆ ದೊಡ್ಡ ಸಕ್ಸಸ್‌ ಕಂಡ ಸಿನಿಮಾ. ಆ ಬಳಿಕ ನಿರ್ದೇಶಕದ್ವಯರಾದ ದೊರೆ-ಭಗವಾನ್‌ ಜೋಡಿ ಜೋರು ಸುದ್ದಿ ಮಾಡಿತು. ಪತ್ತೆದಾರಿ ಕಥೆಗಳನ್ನು ಇಂಗ್ಲೀಷ್ ಸಿನಿಮಾ ಶೈಲಿಯಲ್ಲೇ ಚಿತ್ರೀಕರಿಸುತ್ತಾರೆ ಎನ್ನುವ ಮಾತು ಜನಜನಿತವಾಯ್ತು. ಈ ಮಾತಿಂದ ಮತ್ತಷ್ಟು ಖುಷಿಗೊಂಡ ದೊರೆ-ಭಗವಾನ್‌ ಜೋಡಿ, ಪುನಃ ಬಾಂಡ್‌ ಸಿನಿಮಾಗಳತ್ತ ಮುಖ ಮಾಡಿದರು. ಆಗ ಹುಟ್ಟಿದ್ದೇ “ಗೋವಾದಲ್ಲಿ ಸಿಐಡಿ 999”.
ಇದು 1968ರಲ್ಲಿ ಬಂದ ಸಿನಿಮಾ. ವಿಭಿನ್ನ ಕಥಾ ವಸ್ತುವಿನ ಜೊತೆಗೊಂದು ಪ್ರಯೋಗವೂ ಈ ಚಿತ್ರದಲ್ಲಿತ್ತು. ತಾಂತ್ರಿಕವಾಗಿ ಅಷ್ಟೇನೂ ಮುಂದುವರೆಯದ ಆ ಕಾಲದಲ್ಲೇ ಕ್ಷಿಪಣಿಯನ್ನು ಹೈಲೈಟ್‌ ಮಾಡಿ ಚಿತ್ರ ಮಾಡಲಾಗಿತ್ತು. ಭಯೋತ್ಪಾದಕರೇ ಇರದ ದಿನಮಾನದಲ್ಲಿ ಭಯೋತ್ಪಾದಕರನ್ನು (ಖಳನಟರು) ಈ ಚಿತ್ರದಲ್ಲಿ ಬಿಂಬಿಸಲಾಗಿತ್ತು. ನಿಜಕ್ಕೂ ಅದು ಅಡ್ವಾನ್ಸ್‌ ಥಿಂಕಿಂಗ್‌. ರಾಜ್‌ಕುಮಾರ್‌ ಅವರನ್ನು ಮತ್ತೆ ಜೇಮ್ಸ್‌ ಬಾಂಡ್‌ ಆಗಿ ನೋಡುವ ಅವಕಾಶ ಈ ಸಿನಿಮಾ ಮೂಲಕ ಸಿನಿರಸಿಕರಿಗೆ ಸಿಕ್ಕಿದ್ದು ವಿಶೇಷ.

ಬಾಂಡ್‌ ಸ್ಟೈಲ್‌ ಯುವಕರಿಗೆ ಅಚ್ಚುಮೆಚ್ಚು

ನಟಿ ಲಕ್ಷ್ಮಿ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದು ವಿಶೇಷತೆಗಳಲ್ಲೊಂದು. ಲಕ್ಷ್ಮಿ ಬೇರಾರೂ ಅಲ್ಲ, ಕನ್ನಡದ ಮೊದಲ ಚಿತ್ರ “ಸತಿಸುಲೋಚನ” ಸಿನಿಮಾ ನಿರ್ದೇಶಕ ವೈ.ವಿ.ರಾವ್‌ಅವರ ಮಗಳು. ಸಿನಿಮಾ ಮನೆತನದಿಂದ ಬಂದ ಮೊದಲ ನಾಯಕಿ ಅನ್ನೋದು ಇನ್ನೊಂದು ವಿಶೇಷ. ಲಕ್ಷ್ಮಿ ಆಗಿನ ಬಾಂಡ್‌ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿದ್ದರು ಅನ್ನೋದು ಸತ್ಯ. ಈ ಚಿತ್ರದ ಸಂಗೀತ, ಛಾಯಾಗ್ರಹಣ, ಚಿತ್ರಕಥೆ ಇವೆಲ್ಲದರ ಜೊತೆಗೆ ರಾಜಕುಮಾರ್‌ಅವರ ಬಾಂಡ್‌ ಸ್ಟೈಲ್‌ ಯುವಕರನ್ನು ಆಕರ್ಷಿಸಿದ್ದು ಸುಳ್ಳಲ್ಲ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್‌ ಸಂಗೀತವಿದೆ. ಆಗೆಲ್ಲಾ ಕ್ಲಬ್‌ ಡ್ಯಾನ್ಸ್‌ ಜಮಾನ. ಡ್ಯಾನ್ಸ್‌ ಆಗಲಿ, ಡ್ಯಾನ್ಸರ್ಸ್‌ ಆಗಲಿ, ಕಾಸ್ಟ್ಯೂಮ್ಸ್‌ ಇರಲಿ ಒಂದು ರೀತಿ ತುಂಬಾನೇ ಸ್ಪೆಷಲ್‌. ಆರ್.ಎನ್.‌ ಜಯಗೋಪಾಲ್‌ ಬರೆದ “ಬಳಿಗೆ ಬಾ…” ಹಾಡಲ್ಲಿ ಇಡೀ ಚಿತ್ರದ ಸಂಚಿನ ಕಥೆ ಸಾಗುವುದನ್ನು ಕಾಣಬಹುದು. ಇನ್ನು, ಸಂಗೀತ ವಿಷಯಕ್ಕೆ ಬಂದರೆ, ಸೌಂಡಿಂಗ್‌ ತುಂಬಾನೇ ಅದ್ಭುತ ಅನಿಸುವುದು ಸುಳ್ಳಲ್ಲ.

ಸ್ವಿಮ್ಮಿಂಗ್‌ ಪೂಲ್‌ ಮತ್ತು ಸ್ಕೂಟರ್‌ನಲ್ಲೇ ಸಾಂಗ್ ಶೂಟಿಂಗ್

ಈ ಚಿತ್ರದ “ಲವ್‌ ಇನ್‌ ಗೋವಾ.. ಬನ್ನಿ ಬನ್ನಿ ಎನ್ನುತ್ತಿದೆ ಗೋವಾ…” ಹಾಡು ಕೂಡ ಆ ಕಾಲಕ್ಕೇ ಜನಪ್ರಿಯವಾಗಿತ್ತು. ರಾಜ್‌ಕುಮಾರ್‌, ಲಕ್ಷ್ಮೀ ಹಾಗು ಸಂಗಡಿರು ಇರುವ ಈ ಹಾಡಿನ ಬಗ್ಗೆ ಹೇಳುವುದಾದರೆ, ಆಗ ಇದ್ದ ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲೇ ಇಡೀ ಹಾಡನ್ನು ಚಿತ್ರೀಕರಿಸಿದ್ದು ವಿಶೇಷ. ಒಂದೊಳ್ಳೆಯ ಜರ್ನಿ ಸಾಂಗ್‌ ಇದಾಗಿತ್ತು. ಹಾಗೆಯೇ “ಕಂಗಳೇ ಹೇಳಿರಿ, ಮನಸಿನ ಕೋರಿಕೆ..” ಹಾಡು ಕೂಡ ಹೈಲೈಟ್.‌ ಎಲ್.ಆರ್.‌ ಈಶ್ವರಿ ಹಾಡಿದ ಈ ಇಡೀ ಹಾಡಿನ ಚಿತ್ರೀಕರಣ ಸ್ವಿಮ್ಮಿಂಗ್‌ ಪೂಲ್‌ನಲ್ಲೇ ನಡೆದಿರೋದು ಇನ್ನೊಂದು ವಿಶೇಷ. ಈ ಚಿತ್ರದ ಇನ್ನೊಂದು ಹಾಡಿನ ಬಗ್ಗೆ ಹೇಳಲೇಬೇಕು. ಅದೂ ಕೂಡ ಕ್ಲಬ್‌ ಸಾಂಗ್.‌” ಮಿಂಚಿದು ಈ ಹೆಣ್ಣು..” ಹಾಡಲ್ಲೂ ವಿಶೇಷತೆ ಇದೆ. ಡ್ಯಾನ್ಸರ್‌, ಮ್ಯೂಸಿಕ್‌ ಎಲ್ಲವೂ ಇಲ್ಲಿ ಹೈಲೈಟ್.‌ ಒಟ್ಟಾರೆ ಅಣ್ಣಾವ್ರ ಬಾಂಡ್‌ ಸಿನಿಮಾಗಳಲ್ಲಿ ಆಗಿನ ಕಾಲಕ್ಕಷ್ಟೇ ಅಲ್ಲ, ಈಗಿನ ಪೀಳಿಗೆಗೂ ಇಷ್ಟವಾಗುವ ಎಲಿಮೆಂಟ್ಸ್‌ಗಳಿವೆ.

ಬಾಂಡ್‌ ಸೀರೀಸ್‌ನಲ್ಲಿ ಅಣ್ಣಾವ್ರು

ನಂತರದ ದಿನಗಳಲ್ಲಿ ರಾಜ್‌ಕುಮಾರ್‌ “ಆಪರೇಷನ್‌ ಜಾಕ್‌ಪಾಟ್‌”, “ಆಪರೇಷನ್‌ ಡೈಮಂಡ್‌ ರಾಕೆಟ್‌”, “ಸಿಐಡಿ ರಾಜಣ್ಣ” ಹೀಗೆ ಒಂದಷ್ಟು ಪತ್ತೆದಾರಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಾಂಡ್‌ ಪಾತ್ರವಾಗಲಿ, ಭಿಕ್ಷುಕನ ಪಾತ್ರವಿರಲಿ, ಅದು ರಾಮನಾಗಲಿ, ಕೃಷ್ಣನಾಗಲಿ, ಪುರಂದರ ದಾಸರಾಗಲಿ, ಕಬೀರರಾಗಲಿ ಈ ಎಲ್ಲಾ ಪಾತ್ರಗಳೂ ರಾಜ್‌ಅವರಿಗೆ ಹೇಳಿ ಮಾಡಿಸಿದಂತಿದ್ದವು. ಇನ್ನೊಂದು ವಿಷಯ ಹೇಳಲೇಬೇಕು. ಪ್ರತಿಯೊಬ್ಬರೂ ಅಣ್ಣಾವ್ರನ್ನು ಹೊಗಳಿದರೆ, ಅವರಿಗೆ ಅದರಿಂದ ಖುಷಿಯಾಗುತ್ತಿರಲಿಲ್ಲ. ಬದಲಿಗೆ ಅಂಜಿಕೆಯಾಗುತ್ತಿತ್ತು. “ಅತೀ ನಿರೀಕ್ಷೆ ಇಟ್ಟುಕೊಂಡಾಗ, ಅತಿ ಹೊಗಳಿಕೆ ಪಡೆದಾಗ ನಾವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು” ಅನ್ನೋದು ಅಣ್ಣಾವ್ರ ಮಾತಾಗಿತ್ತು. ರಾಜ್‌ಕುಮಾರ್‌ ಬಾಂಡ್‌ ಸಿನಿಮಾಗಳಿಗಿಂತ ಭಿನ್ನ ಸಿನಿಮಾಗಳಲ್ಲೂ ಕಾಣಿಸಿಕೊಂಡು ಮೋಡಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದೇನೆ ಇರಲಿ, ಡಾ.ರಾಜಕುಮಾರ್‌ ಅವರ ಕಪ್ಪು ಬಿಳುಪಿನ ಸಿನಿಮಾಗಳಲ್ಲಿದ್ದ ಸ್ಪೆಷಲ್‌ ಎಲಿಮೆಂಟ್ಸ್‌ ಇಂದಿಗೂ ಎಲ್ಲರನ್ನೂ ಕಾಡುತ್ತವೆ ಅನ್ನೋದನ್ನು ನಂಬಲೇಬೇಕು.

Categories
ಸಿನಿ ಸುದ್ದಿ

ಕೊರೊನಾಗೆ ಬಲಿಯಾದ ಬಾಲಿವುಡ್‌ ಸಂಗೀತ ನಿರ್ದೇಶಕ ಶ್ರವಣ್‌ ರಾಥೋಡ್

‌ಕೊರೊನಾ ಆರ್ಭಟಕ್ಕೆ ಈಗಾಗಲೇ ಅದೆಷ್ಟೋ ಜೀವಗಳು ಪ್ರಾಣಬಿಟ್ಟಿವೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದವರ ಬದುಕು ಕೂಡ ಬೀದಿಗೆ ಬಂದು ನಿಂತಿದೆ. ಅದರಲ್ಲೂ ಚಿತ್ರರಂಗದವರ ಪಾಲಿಗೆ ಕೊರೊನಾ ಹೆಮ್ಮಾರಿ ದೊಡ್ಡ ಆಘಾತ ತಂದೊಡ್ಡಿದೆ. ಈಗಾಗಲೇ ಚಿತ್ರರಂಗದ ಅನೇಕರು ಜೀವ ಬಿಟ್ಟಿದ್ದಾರೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ನದೀಮ್‌ ಶ್ರವಣ್‌ ರಾಥೋಡ್‌ (೬೬) ಅವರು ಕೊರೊನಾದಿಂದಾಗಿ ನಿಧನರಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಅವರಿಗೆ ಕೊರೊನಾ ಪಾಸಿಟಿವ್‌ ಬಂದಿತ್ತು. ಹೀಗಾಗಿ ಅವರನ್ನು ಮುಂಬೈನ ಎಸ್‌.ಎಲ್‌. ರಹೇಜಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ಸ್ಥಿತಿ ತೀರ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶ್ರವಣ್ ನಿಧನದ ವಿಷಯವನ್ನು ನಿರ್ದೇಶಕ ಅನಿಲ್ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರವಣ್ ಸಾವಿಗೆ ಸಂತಾಪ ಸೂಚಿಸಿರುವ ಅನಿಲ್ ಶರ್ಮಾ, “ತುಂಬಾ ದುಃಖಕರ ವಿಚಾರವಿದು” ಎಂದಿದ್ದಾರೆ.


ಶ್ರವಣ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಟ್ವೀಟ್ ಮೂಲಕ, “ಶ್ರವಣ್ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅಪ್ಪಟ ವಿನಮ್ರ ಮನುಷ್ಯ. ಸಂಗೀತ ಲೋಕದಲ್ಲಿ ಅತೀ ದೊಡ್ಡ ಸಂಯೋಜಕರಲ್ಲಿ ಒಬ್ಬರಾಗಿದ್ದರು” ಎಂದಿದ್ದಾರೆ. ಶ್ರವಣ್ ರಾಥೋಡ್ 90ರ ದಶಕದಲ್ಲಿ ಬಿಜಿ ಸಂಗೀತ ನಿರ್ದೇಶಕರಾಗಿದ್ದರು. “ಆಶಿಕಿ”, “ಸಾಜನ್”, “ಹಮ್ ಹೈ ರಹಿ ಪ್ಯಾರ್ ಕಿ”, “ಪರ್ದೇಸ್”, “ರಾಜಾ ಹಿಂದುಸ್ತಾನಿ” ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಹೊಸ ರೂಪದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಯೋಗ್ರಫಿ!! ಎರಡನೇ ಮುದ್ರಣ ಪಡೆದ ಲೇಖಕ ಡಾ. ಶರಣು ಹುಲ್ಲೂರು ಪುಸ್ತಕ

ವಿಶ್ವ ಪುಸ್ತಕ ದಿನದಂದು ಕನ್ನಡದ ಹೆಸರಾಂತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಹೊಂದಿದ “ಅಂಬರೀಶ್-‌ ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು” ಪುಸ್ತಕ ಈಗ ಹೊಸ ರೂಪ ಪಡೆದುಕೊಂಡಿದೆ. ಹೌದು, ಇದು ವಿಶೇಷವೇ ಸರಿ. ಕಳೆದ 2018ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿತ್ತು. ಬಿಡುಗಡೆಯಾಗಿದ್ದೇ ತಡ, ಈ ಪುಸ್ತಕಕ್ಕೆ ಭಾರೀ ಬೇಡಿಕೆ ಬಂದಿತ್ತು.

ಮುದ್ರಣಗೊಂಡಿದ್ದ ಎಲ್ಲಾ ಪುಸ್ತಕಗಳೂ ಖಾಲಿಯಾಗಿದ್ದವು. ಹಾಗಾಗಿ ಸಾವಣ್ಣ ಪ್ರಕಾಶನ ಈಗ ಎರಡನೇ ಮುದ್ರಣ ಮಾಡಿದೆ. ಪ್ರಕಾಶನ ಸಂಸ್ಥೆಯಿಂದ ಹೊರ ಬಂದಿರುವ ಈ ಎರಡನೇ ಮುದ್ರಣದ ಪುಸ್ತಕ, ಹೊಸ ವಿನ್ಯಾಸ ಮತ್ತು ಹೊಸ ಮುಖಪುಟ ಹೊತ್ತು ಬಂದಿದೆ. ಇತ್ತೀಚೆಗೆ ಲೇಖಕ ಡಾ.ಶರಣು ಹುಲ್ಲೂರು ಮತ್ತು ಪ್ರಕಾಶಕ ಜಮೀಲ್‌ ಸಾವಣ್ಣ ಅವರು ಸರಳವಾಗಿಯೇ ಬಿಡುಗಡೆ ಮಾಡಿದ್ದಾರೆ. ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಪುಸ್ತಕವನ್ನು ಸಂಸದೆ ಸುಮಲತಾ ಅಂಬರೀಶ್ ಅವರು ಬಿಡುಗಡೆ ಮಾಡಿದ್ದರು.

ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಜೊತೆಗಿದ್ದು, ಪುಸ್ತಕ ಬಿಡುಗಡೆಗೆ ಕೈ ಜೋಡಿಸಿದ್ದರು. ಈ ಪುಸ್ತಕಕ್ಕೆ ಅಪಾರ ಜನಮನ್ನಣೆ ಕೂಡ ಸಿಕ್ಕಿತು. ಅಲ್ಲದೇ ಕರ್ನಾಟಕ ಸರಕಾರ ನೀಡುವ ಚಲನಚಿತ್ರ ಸಾಹಿತ್ಯ ರಾಜ್ಯ ಪ್ರಶಸ್ತಿ ಕೂಡ 2018ರಲ್ಲಿ ಪುಸ್ತಕಕ್ಕೆ ಲಭಿಸಿದೆ. ಸದ್ಯ “ಅಂಬರೀಶ್-‌ ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು “ಪುಸ್ತಕ ಎಲ್ಲ ಮಳಿಗೆಗಳಲ್ಲೂ ಸಿಗಲಿದೆ. ಹಾಗೆಯೇ ಸಾವಣ್ಣ ಪ್ರಕಾಶನದಲ್ಲೂ ಲಭ್ಯವಿದೆ.

Categories
ಸಿನಿ ಸುದ್ದಿ

ಕೊರೊನಾ ಸಂಖ್ಯೆ ಹೆಚ್ಚಾಗೋಕೆ ಸಿನಿಮಾ ಮಂದಿ ಕಾರಣ! ಸಿ.ಟಿ.ರವಿ ಹೇಳಿಕೆಗೆ ಸ್ಯಾಂಡಲ್‌ವುಡ್‌ ಆಕ್ರೋಶ!!

ಅದೇನೋ ಗೊತ್ತಿಲ್ಲ. ಎಲ್ಲರೂ ಸಿನಿಮಾರಂಗವನ್ನೇ ಟಾರ್ಗೆಟ್‌ ಮಾಡಿದಂತಿದೆ. ಸಿನಿಮಾ ಮಂದಿಯಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬರ್ಥದಲ್ಲೇ ಎಲ್ಲರೂ ಮಾತಾಡುತ್ತಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಕೊರೊನಾ ಪ್ರಕರಣ ಹೆಚ್ಚಾಗಲೂ ಸಿನಿಮಾ ರಂಗದವರೇ ಪರೋಕ್ಷ ಕಾರಣ ಎಂದು ಹೇಳಿದ್ದಾರೆ. ಏಪ್ರಿಲ್‌ 22 ರಂದು ಸುಮನಹಳ್ಳಿಗೆ ಭೇಟಿ ನೀಡಿದ್ದ ರವಿ ಅವರಿಗೆ ಮೃತರ ಕುಟುಂಬದವರು ಹಾಗು ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು. ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕೊರೊನಾ ಹೆಚ್ಚಾಗಲು ಸರ್ಕಾರ ಕಾರಣವಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ, ಸರ್ಕಾರದ ಮೇಲೆ ಚಿತ್ರರಂಗದವರು ಹಾಗು ಇತರರು ಒತ್ತಡ ಹೇರಿದ್ದರಿಂದ ಇಂದು ಕೊರೊನಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದಿದ್ದಾರೆ.

ಸರ್ಕಾರ ಈ ಹಿಂದೆ ಕೊರೊನಾ ಹಾವಳಿ ತಡೆಗೆ ಥಿಯೇಟರ್ ಬಂದ್ ಮಾಡಬೇಕು, ಜಿಮ್ ಬಂದ್ ಮಾಡಬೇಕು ಎಂದು ನಿರ್ಧರಿಸಿದ ಸಂದರ್ಭದಲ್ಲಿ ಚಿತ್ರರಂಗದವರು ಬಂದು ಒಕ್ಕೊರಲ ಧ್ವನಿ ಎತ್ತಿದರು. ಹಾಗಾಗಿ ಸರ್ಕಾರ ತುಸು ಸಡಿಲ ನಿರ್ಧಾರ ಕೈಗೊಂಡಿತು. ಜಿಮ್‌ ಬಂದ್ ಮಾಡೋಣ ಅಂತ ನಿರ್ಧರಿಸಿದಾಗಲೂ ಜಿಮ್‌ನವರು ಒತ್ತಡ ತಂದರು. ಆಗಲೂ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆ ಪಡೆಯಬೇಕಾಯಿತು. ಇದರಿಂದ ಇಂದು ಸಮಸ್ಯೆ ತಲೆದೋರಿದೆ. ವಿಪಕ್ಷವೂ ಕೂಡ ಯಾಕೆ ಚಿತ್ರಮಂದಿರ ಬಂದ್ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಮಾಧ್ಯಮಗಳು ಕೂಡ ಅದನ್ನೇ ಬಿತ್ತರಿಸಿದವು. ಯಾರೋ ಸೆಲೆಬ್ರಿಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ಕೂಡಲೇ ಮಾಧ್ಯಮಗಳೆಲ್ಲಾ ಆ ಕಡೆ ಫೋಕಸ್ ಮಾಡಿದವು. ಅದಕ್ಕೆ ಇಂದು ದೊಡ್ಡ ಬೆಲೆ ತೆರಬೇಕಾಗಿದೆ ಎಂದಿದ್ದಾರೆ ರವಿ.

ಈ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆಯಾಗಿ ಎರಡನೇ ದಿನಕ್ಕೆ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಆದೇಶಿಸಿತು. ಸರ್ಕಾರದ ಈ ಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ನಂತರ ಪುನೀತ್‌ ಅವರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆ ಬಳಿಕ ಆದೇಶವನ್ನು ಎರಡು ದಿನಗಳ ಮಟ್ಟಿಗೆ ಸಡಿಲಗೊಳಿಸಲಾಯಿತು. ಈಗ ನೋಡಿದರೆ, ಏಪ್ರಿಲ್ 21 ರಿಂದ ಮೇ 4 ರವರೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿವೆ. ಅದೇನೆ ಇರಲಿ, ಸಿನಿಮಾರಂಗದವರಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಸಿ.ಟಿ.ರವಿ ಅವರ ಮಾತಿಗೆ ಸ್ಯಾಂಡಲ್‌ವುಡ್‌ ಜೋರಾದ ಧ್ವನಿ ಎತ್ತಿದೆ.

Categories
ಸಿನಿ ಸುದ್ದಿ

ಚಿತ್ರರಂಗಕ್ಕೆ ಕೊರೊನಾಘಾತ! ಸದ್ಯ ಐಸಿಯುನಲ್ಲಿ ಸ್ಯಾಂಡಲ್‌ವುಡ್‌; ಕಲಾವಿದರನ್ನೂ ಕಾಡುತ್ತಿದೆ ಹೆಮ್ಮಾರಿ

ಕನ್ನಡ ಚಿತ್ರರಂಗಕ್ಕೆ ಈ ಬಾರಿಯೂ ದೊಡ್ಡ ಹೊಡೆತವನ್ನೇ ಕೊಟ್ಟಿದೆ ಕೊರೊನಾ. ಹೌದು, ಕಳೆದ ವರ್ಷ ಕೊಟ್ಟ ದೊಡ್ಡ ಹೊಡೆತಕ್ಕೆ ಮಕಾಡೆ ಮಲಗಿದ್ದ ಚಿತ್ರರಂಗ, ಹೇಗೋ ಕಳೆದ ಅಕ್ಟೋಬರ್‌ ವೇಳೆಗೆ ಚೇತರಿಸಿಕೊಳ್ಳೋಕೆ ಶುರುಮಾಡಿತು. ಆ ನಂತರ ವೇಗ ಜೋರು ಮಾಡಿಕೊಂಡ ಚಿತ್ರರಂಗ, ಇನ್ನೇನು ತನ್ನ ಮೈಲೇಜ್‌ ಹೆಚ್ಚಾಯ್ತು ಅನ್ನುವ ಹೊತ್ತಿಗೆ ಕೊರೊನಾ ತನ್ನ ಎರಡನೇ ಅಲೆಯ ಹೊಡೆತ ಕೊಟ್ಟಿತು. ಸ್ಟಾರ್ಸ್‌ ಸಿನಿಮಾಗಳು ಕೂಡ ಇದರಿಂದ ತತ್ತರಿಸಿದ್ದು ಸುಳ್ಳಲ್ಲ. ಈಗ ಇಡೀ ಚಿತ್ರರಂಗಕ್ಕೆ ಕೊರೊನಾಘಾತವಾಗಿದೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ ಐಸಿಯುನಲ್ಲಿದೆ. ಕೊರೊನಾ ಇಂತಹವರಿಗಷ್ಟೇ ಆವರಿಸಿಕೊಳ್ಳುತ್ತೆ ಎಂಬುದೆಲ್ಲಾ ಸುಳ್ಳು. ಈಗಾಗಲೇ ಸಾಕಷ್ಟು ನಟ, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ತಾಂತ್ರಿಕ ವರ್ಗದವರನ್ನೂ ಆವರಿಸಿಕೊಂಡಿದೆ. ಕೊರೊನಾ ನೃತ್ಯಕ್ಕೆ ನಲುಗಿರುವ ಸ್ಟಾರ್ಸ್‌, ಅದರಿಂದಾಚೆ ಬರೋಕೆ ಕಾಯುತ್ತಿದ್ದಾರೆ. ಕೊರೊನಾ ಅದೆಷ್ಟೋ ಸಿನಿಮಂದಿಯ ಬದುಕಲ್ಲಿ ಕರಾಳತೆಯನ್ನು ತುಂಬಿದೆ. ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದ ಅನೇಕರ ಜೀವ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಪ್ರತಿ ದಿನವೂ ಕೂಡ ನರಳುವಂತೆ ಮಾಡುತ್ತಿದೆ.


ಹಾಗೆ ನೋಡಿದರೆ, ಕೊರೊನಾ ಹೀರೋಗಳಿಗೆ, ನಟಿಮಣಿಗಳಿಗೆ ಬರಲ್ಲ ಅಂತಂದುಕೊಳ್ಳುವಂತಿಲ್ಲ. ಕೊರೊನಾಗೆ ಹೀರೋ, ಯಾರು, ನಾಯಕಿ ಯಾರು ಅನ್ನೋದು ಗೊತ್ತಿಲ್ಲ. ಅದಕ್ಕೆ ಎಲ್ಲರೂ ಒಂದೇ. ಈಗಾಗಲೇ ಬಾಲಿವುಡ್‌ ಸೇರಿದಂತೆ ಸೌತ್‌ ಇಂಡಿಯಾ ಫಿಲ್ಮ್‌ ಫೀಲ್ಡ್‌ನಲ್ಲಿರುವ ಅನೇಕರಿಗೆ ಕೊರೊನಾ ವಕ್ಕರಿಸಿದೆ. ಕೆಲವರು ಕೊರೊನಾ ಹೊಡೆತಕ್ಕೆ ರೋಸಿಹೋಗಿದ್ದಲ್ಲದೆ, ಪ್ರಾಣವನ್ನೂ ಬಿಟ್ಟಿದ್ದಾರೆ. ಕೊರೊನಾ ನಟಿ ಸಂಜನಾ, ನಟ ಪ್ರಜ್ವಲ್‌, ನಿರ್ದೇಶಕ ಗುರುಪ್ರಸಾದ್‌, “ಲವ್‌ ಮಾಕ್ಟೇಲ್”‌ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ, ಮಿಲನಾ ದಂಪತಿ ಕೊರೊನಾ ಪಾಸಿಟಿವ್‌ ಆಗಿದೆ. ಇನ್ನು, ನಟಿ ಅನು ಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಬಗ್ಗೆ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತುಂಬಾ ಸುರಕ್ಷಿತವಾಗಿ, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೊರೊನಾ ಸೋಂಕು ತಗುಲಿದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಸದ್ಯ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು, ಕೊರೊನಾ ಸಮಸ್ಯೆಯಿಂದಾಗಿ ಚಿತ್ರರಂಗದ ಹಲವು ಮಂದಿ ಅಸುನೀಗಿದ್ದಾರೆ. ಕಳೆದ ವರ್ಷ ಮೃತಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ಈ ವರ್ಷದ ಎರಡನೇ ಅಲೆಗೆ ಚಿತ್ರರಂಗದ ಖ್ಯಾತ ಡಿಸೈನರ್ ಮತ್ತು ನಿರ್ದೇಶಕ ಮಸ್ತಾನ್ ಬಲಿಯಾಗಿದ್ದಾರೆ. ನಿರ್ದೇಶಕ ಮಸ್ತಾನ್ ಇತ್ತೀಚಿಗೆ ಕೊರೊನಾ ಪಾಸಿಟಿವ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಸರು ಘಟ್ಟ ಬಳಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅಂತೆಯೇ ಸಿನಿಮಾ ಪತ್ರಕರ್ತ ಕರುಣೇಶ ಕೂಡ ಕೊರೊನಾ ಪಾಸಿಟಿವ್‌ನಿಂದಾಗಿ ಮೃತಪಟ್ಟಿದ್ದಾರೆ. ಹಲವು ನಟ,ನಟಿಯರು ಕೊರೊನಾದಿಂದ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಮನೆಯಲ್ಲೇ ಇದ್ದು, ಎಲ್ಲೂ ಹೋಗದ ಹಾಗೆ ಎಚ್ಚರವಹಿಸಿ ಎಂದು ಹೇಳಿದ್ದಾರೆ. ಅದೇನೆ ಇದ್ದರೂ, ಚಿತ್ರರಂಗ ಮಾತ್ರ ಕೊರೊನಾ ಹೊಡೆತಕ್ಕೆ ನಲುಗಿರುವುದಂತೂ ನಿಜ. ಬೆಂಬಿಡದೆ ಕಾಡುತ್ತಿರುವ ಕೊರೊನಾ ಅಲೆ ಕಡಿಮೆ ಆಗೋವರೆಗೆ ಚಿತ್ರರಂಗ ಕೂಡ ಮೇಲೇಳುವುದಿಲ್ಲ ಎಂಬುದು ಸಿನಿಪಂಡಿತರ ಲೆಕ್ಕಾಚಾರ.

Categories
ಸಿನಿ ಸುದ್ದಿ

ಕಷ್ಟದಲ್ಲಿರೋ ನಿಮ್ಮ ಅಭಿಮಾನಿಗಳಿಗೆ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್‌ ಸ್ಟಾರ್ಸ್ಸ್‌? ಫ್ಯಾನ್ಸ್‌ ಪರವಾಗಿ ಸ್ಟಾರ್ಸ್‌ಗೆ ಮನಮಿಡಿಯುವ ಬಹಿರಂಗ ಪತ್ರ ಬರೆದ ವೀರಕಪುತ್ರ ಶ್ರೀನಿವಾಸ್

ದಿನ ಕಳೆದಂತೆ ಕೊರೊನಾ ಹಾವಳಿ ಹೆಚ್ಚುತ್ತಲೇ ಇದೆ. ಸೋಂಕಿತರು ಕೂಡ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದೆಷ್ಟೋ ಮಂದಿ ಸರಿಯಾದ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿದ್ದಾರೆ. ಇದು ತುಂಬಾನೇ ಆಘಾತಕಾರಿ ವಿಷಯ. ಇಂತಹ ಸಮಯದಲ್ಲಿ ಸ್ಟಾರ್‌ ನಟ,ನಟಿಯರು ಯಾಕೆ ಸಹಾಯಕ್ಕೆ ನಿಲ್ಲಬಾರದು? ಈ ಪ್ರಶ್ನೆ ಈಗ ಎಲ್ಲೆಡೆ ಜೋರು ಸದ್ದು ಮಾಡುತ್ತಿದೆ. ಹೀಗೆ ಕೇಳಿರೋದು ಬೇರಾರೂ ಅಲ್ಲ, ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್. ಹೌದು, ಈ ಕುರಿತಂತೆ ಅವರೀಗ ಸ್ಟಾರ್‌ ನಟರಿಗೆ ಒಂದು ಪತ್ರ ಬರೆದಿದ್ದಾರೆ. ಆ ಮೂಲಕ ಅವರು ಪ್ರೀತಿಯಿಂದಲೇ ಮನವಿ ಮಾಡಿದ್ದಾರೆ. ನೀವು ಕೋಟ್ಯಾಂತರ ಫ್ಯಾನ್ಸ್‌ಗೆ ಹೀರೋ ಆಗಿದ್ದೀರಿ. ಈಗ ನಿಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳು ಕಷ್ಟದಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಸಹಾಯಕ್ಕೆ ಮುಂದಾಗಿ ಎಂದು ಮನಮಿಡಿಯುವಂತೆ ಪತ್ರವೊಂದನ್ನು ಬರೆದಿದ್ದಾರೆ. ಅಂದಹಾಗೆ, ವೀರಕಪುತ್ರ ಶ್ರೀನಿವಾಸ್‌ ಅವರು ಬರೆದ ಸುದೀರ್ಘ ಪತ್ರದ ಸಾರಾಂಶವಿದು.

  • ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ..
  • ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ.
  • ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ.

ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದ ಸಾಧಕರು ನೀವು. ತಾಯಿ ಪ್ರೀತಿ ನಂತರ ಅಭಿಮಾನಿಗಳ ಪ್ರೀತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನನ್ನ ನಂಬಿಕೆ. ನೀವು ಎಂದೂ ಅವರನ್ನು ನೋಡಲ್ಲ, ನೋಡಿದ್ರೂ ಮಾತನಾಡಿಸಲ್ಲ. ಮಾತನಾಡಿಸಿದ್ರೂ ನಿಮಗೆ ಆ ವ್ಯಕ್ತಿ ಅದರಾಚೆ ನೆನಪಿರಲ್ಲ. ಆದರೂ ಆ ಅಭಿಮಾನಿ ನಿಮ್ಮನ್ನು ಅವನ ಜೀವನದ ಆರಾಧ್ಯದೈವವನ್ನಾಗಿಸಿಕೊಳ್ತಾನೆ. ಜೀವನವಿಡೀ ನಿಮ್ಮನ್ನೇ ಧ್ಯಾನಿಸುತ್ತಾನೆ! ನಿಮ್ಮ ಬಗ್ಗೆ ಎಳ್ಳಷ್ಟು ಅಪಪ್ರಚಾರವಾದ್ರೂ ಹಿಂದೆ ಮುಂದೆ ಯೋಚಿಸದೆ ನಿಮ್ಮ ಪರ ನಿಂತು ಬಿಡ್ತಾನೆ. ನಿಮಗೆ ಕಿಂಚಿತ್ತು ತೊಂದ್ರೆಯಾದ್ರೂ ನೊಂದು ಹೋಗ್ತಾನೆ. ಅಂತಹ ಅಭಿಮಾನಿ ಇವತ್ತು ಕಷ್ಟದಲ್ಲಿದ್ದಾನೆ. ಸೋಂಕಿಗೆ ಒಳಗಾಗುತ್ತಿರುವ ಲಕ್ಷಾಂತರ ಜನರಲ್ಲಿ ನಿಮ್ಮ ಅಭಿಮಾನಿಗಳೂ ಇದ್ದಾರೆ. ಆದ್ರೆ ಅವರು ತಮ್ಮ ಕಷ್ಟವನ್ನು ನಿಮ್ಮ ತನಕ ತಲುಪಿಸಲಾರರು. ಏಕೆಂದರೆ ನೀವು ಅವರಿಗೆ ಗೊತ್ತೇ ವಿನಃ, ಅವರು ನಿಮಗೆ ಗೊತ್ತಿಲ್ಲ. ನಿಮ್ಮ ಹುಟ್ದಬ್ಬಕ್ಕೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ನಿಮಗೆ ವಿಶ್ ಮಾಡಿ ಗೊತ್ತಿದೆಯೇ ಹೊರತು, ನಿಮ್ಮ ಸಂಪರ್ಕದಲ್ಲಿರೋದು ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಪರವಾಗಿ ವರ್ಷಗಟ್ಟಲೆ ಪ್ರಚಾರ ಮಾಡೋದು, ಜಗಳ ಮಾಡೋದು ಗೊತ್ತೇ ವಿನಃ, ನಿಮ್ಮಿಂದ ಏನನ್ನೂ ನಿರೀಕ್ಷಿಸಿ ಗೊತ್ತಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾದಾಗ ಜಾತ್ರೆಯಂತೆ ಖರ್ಚುಮಾಡಿ ಸಂಭ್ರಮಿಸುವುದು ಗೊತ್ತಿದೆಯೇ ವಿನಃ, ಅಷ್ಟೇ ಸಲೀಸಾಗಿ ಕೊರೊನಾಗೆ ಚಿಕಿತ್ಸೆ ಪಡೆಯುವುದು ಹೇಗೆಂದು ಗೊತ್ತಿಲ್ಲ.


ಅಂತಹವರಿಗಾಗಿ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್ ಸ್ಟಾರ್ಸ್?
ಕಷ್ಟದಲ್ಲಿರುವ ಅಭಿಮಾನಿಗಳನ್ನು ಹುಡುಕುವುದು ಕಷ್ಟ ಅನ್ನೋದು ಗೊತ್ತು. ನೀವೇನಾದ್ರೂ ಸಹಾಯ ಮಾಡ್ತೀನಿ ಅಂತ ಮುಂದೆ ಬಂದ್ರೆ ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ ಅನ್ನೋದು ಗೊತ್ತು. ಆದ್ರೂ ಏನಾದ್ರೂ ಮಾಡಬಹುದಾ ಈ ಸಂದರ್ಭದಲ್ಲಿ ನೋಡಿ ಪ್ಲೀಸ್. ಏಕೆಂದರೆ ಈ ಸಮಾಜ ನೀವು ಚೆನ್ನಾಗಿರಲು ಏನೆಲ್ಲಾ ಕೊಟ್ಟಿದೆ. ಅಂತಹ ಸಮಾಜ ಇಂದು ಕಷ್ಟದಲ್ಲಿರುವಾಗ “ಸ್ಟೇ ಹೋಮ್‌, ಸ್ಟೇ ಸೇಫ್‌” ಅಂತ ಉಚಿತ ಸಲಹೆಯೊಂದನ್ನು ಕೊಟ್ಟು ನಮ್ಮಂತಹ ಸಾಮಾನ್ಯರಂತೆ ನೀವೂ ಗೂಡು ಸೇರಿ ಕೂತು ಬಿಡೋದು ಯಾವ ನ್ಯಾಯ? ನಿಮಗೆ ಈ ಅಭಿಮಾನಿಗಳು ಮತ್ತು ಸಮಾಜ ನೀಡಿರುವ ಸ್ಥಾನಮಾನ ಸಾಮಾನ್ಯದಲ್ಲವಲ್ಲ?

ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ..
ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ. ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ. ಎಷ್ಟೋ ಜನ ಸಣ್ಣ ಸಣ್ಣ ರೂಮುಗಳಲ್ಲಿ, ಸಿಂಗಲ್ ಬೆಡ್ ರೂಮ್ ಇರುವ ಮನೆಗಳಲ್ಲಿ ವಾಸಿಸ್ತಿದ್ದಾರೆ. ದುಡಿಯಲು ಹೊರಗಡೆ ಹೋಗುವ ಒಬ್ಬರಿಗೆ ಕೊರೊನಾ ಬಂದರೆ ಮನೆಯವರೆಲ್ಲರೂ ಕೊರೊನಾ ಸೋಂಕಿಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ.

ಅಂತಹವರಿಗೆ ನಿಮ್ಮ ಕೋವಿಡ್ ಕೇರ್ ಸೆಂಟರ್ ಆದ್ಯತೆ ನೀಡಲಿ. ಜೊತೆಗೆ ಸರ್ಕಾರದ ಜೊತೆ ನಿರಂತರ ಸಂಪರ್ಕ ಸಾಧಿಸಿ ನಿಜಕ್ಕೂ ಅಗತ್ಯವಿರುವಂತಹವರಿಗೆ ಹಾಸಿಗೆ, ಆಕ್ಸಿಜನ್ ಗಳನ್ನು ದೊರಕಿಸಿಕೊಡಿ! ಕೊರೊನಾ ಬಂದಿದ್ದಕ್ಕೆ ಜನ ಸಾಯ್ತಿಲ್ಲ, ಸರ್ಕಾರ ಚಿಕಿತ್ಸೆ ನೀಡಲು ವಿಫಲವಾಗಿರುವ ಕಾರಣಕ್ಕೆ ಜನ ಸಾಯ್ತಿರೋದು. ಅಂತಹ ಅಸಹಾಯಕರಿಗೆ ತಮ್ಮ ಸಹಾಯಹಸ್ತ ಸಿಗಬಾರದೇಕೆ? ನಿಮ್ಮ ಮಾತನ್ನು ಅಷ್ಟು ಸಲೀಸಾಗಿ ಅಲ್ಲಗೆಳೆಯುವಂತಹ ಯಾವ ಮಂತ್ರಿಗಳೂ, ಆಸ್ಪತ್ರೆಗಳೂ ನಮ್ಮ ಕರ್ನಾಟಕದಲ್ಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬಾರದೇಕೆ?
ಕೊನೇ ಮಾತು..
ಭಾರತದಲ್ಲಿ ಸುಮಾರು ಸ್ಟಾರ್ ನಟರಿದ್ದಾರೆ. ಆದರೆ ಕೋವಿಡ್ ಬಂದ್ಮೇಲೆ ಜನ ರಿಯಲ್ ಸ್ಟಾರ್ ಎಂದು ಗುರುತಿಸಿದ್ದು ಮತ್ತು ಗೌರವಿಸಿದ್ದು ಬಾಲಿವುಡ್‌ ನಟ ಸೋನುಸೂದ್ ಎಂಬೊಬ್ಬ ಪೋಷಕನಟನನ್ನು ಮಾತ್ರ! ನಿಮ್ಮ ಅಭಿಮಾನಿಗಳಿಗೆ ನೀವು ಮಾದರಿಯಾಗಿರುವ ಹಾಗೆ, ನಿಮಗೆ ಸೋನುಸೂದ್ ಮಾದರಿಯಾಗಲೆಂದು ಆಶಿಸುವೆ..
-ವೀರಕಪುತ್ರ ಶ್ರೀನಿವಾಸ.

Categories
ಸಿನಿ ಸುದ್ದಿ

ಗುಳಿ ಕೆನ್ನೆ ಚೆಲುವೆಯ ಉಗ್ರ ಅವತಾರ : ಶಬರಿ ಆಗಿ ತೆರೆ ಮೇಲೆ ಬರುತ್ತಿದ್ದಾರೆ ಡಿಂಪಲ್‌ ಕ್ವೀನ್‌ !

ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗವರು ಶಬರಿ ಆಗಿ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಹೌದು, ಶಬರಿ ಹೆಸರಿನ ಚಿತ್ರವೊಂದಕ್ಕೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ಫಿಕ್ಸ್‌ ಆಗಿದ್ದಾರೆ. ಶ್ರೀರಾಮ ನವಮಿ ದಿನವಾದ ಬುಧವಾರ ರಚಿತಾ ರಾಮ್‌ ಶಬರಿ ಆಗಿ ಅಭಿಮಾನಿಗಳ ಮುಂದೆ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು, ಡಿಂಪಲ್‌ ಕ್ವೀನ್ ರಚಿತಾ ರಾಮ್‌ ಅಭಿನಯದ ಹೊಸ ಚಿತ್ರಕ್ಕೆ ಶಬರಿ ಸರ್ಚಿಂಗ್‌ ಫಾರ್‌ ರಾವಣ ಅಂತ ಶೀರ್ಷಿಕೆ ಇಡಲಾಗಿದೆ. ಇದು ರಚಿತಾ ಅವರ ೩೬ ನೇ ಸಿನಿಮಾ. ರಾಮ ನವಮಿಯ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ಉಗ್ರ ಅವತಾರ ತಾಳಿರುವ ರಚಿತಾ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಅಂದಹಾಗೆ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಇಂಡಸ್ಟ್ರಿನಲ್ಲಿ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್ ಶಬರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಚಿತ್ರ. ಇದರಲ್ಲಿ ರಚಿತಾ ರಾಮ್‌ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಶೇರ್ ಮಾಡಿರುವ ರಚಿತಾ, ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಹೊಸ ಸಿನಿಮಾಗೆ ಎಲ್ಲರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಚಿತಾ ರಾಮ್ ಬಳಿ ಸದ್ಯ ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಂ, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ

Categories
ಸಿನಿ ಸುದ್ದಿ

ರಾಜಕೀಯ ಬಿಜಿನೆಸ್‌ ಆಗಿದ್ದೇ ಇದಕ್ಕೆಲ್ಲ ಕಾರಣ ಅಲ್ವಾ ? ರಿಯಲ್‌ ಸ್ಟಾರ್‌ ಉಪೇಂದ್ರ ಪ್ರಶ್ನೆ

ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ತೋರಿರುವ ನಿರ್ಲಕ್ಷ್ಯಕ್ಕೆ ನಟ ಉಪೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯಾದ್ಯಂತ ಜನ ಸಾಮಾನ್ಯರ ಪರಿಸ್ಥಿತಿ ನೋಡಿದ್ರೆ, ಕರಳು ಹಿಂಡುತ್ತದೆ. ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ ಸಿಗದ ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಭೀಕರ ಪರಿಸ್ಥಿತಿ ಬರಬಹುದು ಅಂತ ಗೊತ್ತಿದ್ದರೂ ಸರ್ಕಾರಗಳು ಬಹುದೊಡ್ಡ ನಿರ್ಲಕ್ಷ್ಯ ತೋರಿದವು. ಅದೇ ಇವತ್ತಿನ ಪರಿಸ್ಥಿತಿಗೆಲ್ಲ ಕಾರಣ ಅಂತ ಉಪೇಂದ್ರ, ಕಿಡಿಕಾರಿದರು. ʼಲಗಾಮ್‌ʼ ಚಿತ್ರದ ಮುಹೂರ್ತದ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಚುನಾವಣೆ ಬಂದಾಗ ಯಾಕೆ ಯೋಚಿಸುವುದಿಲ್ಲ..?

ಮಿತಿ ಮೀರಿದ ಕೊರೋನಾ ಪರಿಸ್ಥಿತಿ, ಜನರ ಸಾವು_ನೋವಿನ ಘಟನಗೆಳಿಗೆ ಪ್ರಜಾಕೀಯದ ಪ್ರತಿಕ್ರಿಯೆ ಏನು ಎನ್ನುವ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಖಾಸಗೀಕರಣ ಆದಂತೆಯೇ ಇವತ್ತು ರಾಜಕೀಯ ಅನ್ನೋದು ಬಿಸಿನೆಸ್‌ ಆಗಿರೋದ್ರಿಂದಲೇ ಜನರು ಇವತ್ತು ಅಸ್ಪತ್ರೆಗಳಲ್ಲಿ ಸಕಾಲಕ್ಕೆ ಸೌಲಭ್ಯ ಸಿಗದೆ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಯಾರದು ಸರಿ, ಯಾರದು ತಪ್ಪು ಅಂತ ಹೇಳೋದೆ ಕಷ್ಟ. ಯಾಕಂದ್ರೆ ಜನ ಕೂಡ ಚುನಾವಣೆಗಳು ಬಂದಾಗ ತಮ್ಮ ಜವಾಬ್ದಾರಿಗಳನ್ನು ಮರೆತು ಬಿಡುತ್ತಾರೆ. ಆಗ ಜಾತಿ, ಹಣ, ಪಕ್ಷ ಅಂತೆಲ್ಲ ತಮ್ಮ ಮತಗಳನ್ನು ಇನ್ನಾವುದಕ್ಕೋ ಮೀಡಲಿಡುತ್ತಾರೆ. ಆಮೇಲೆ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಪ್ರತಿಭಟನೆ, ಧರಣಿ ಅಂತೆಲ್ಲ ಮಾತನಾಡುತ್ತಾರೆ ಅಂತ ಉಪೇಂದ್ರ ಬೇಸರ ಹೊರ ಹಾಕಿದರು.

ಕೊರೋನಾ ಅಂತ ಭಯ ಬೇಡ, ಧೈರ್ಯದಿಂದಿರಿ

ಖಾಸಗಿ ಆಸ್ಪತ್ರೆಗಳ ವೈದ್ಯರ ಪರಿಸ್ಥಿತಿ ಬಗ್ಗೆಯೂ ಮಾತನಾಡುವಂತಿಲ್ಲ. ಅವರು ಕೂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್‌ ಕೊರ್ಸ್‌ ಮುಗಿಸಿ ಬಂದಿರುತ್ತಾರೆ. ಹಾಗೆಯೇ ಕೊಟ್ಯಾಂತರ ರೂ. ಖರ್ಚು ಮಾಡಿ ಆಸ್ಪತ್ರೆ ಕಟ್ಟುಕೊಂಡಿರುತ್ತಾರೆ. ಅವರು ತಮ್ಮ ಖರ್ಚು ವೆಚ್ಚಗಳ ನ್ನು ನೋಡಿಕೊಳ್ಳುವುದಕ್ಕೆ ಜನರಿಂದ ದುಬಾರಿ ಹಣ ಪಡೆಯುತ್ತಾರೆ. ಇದೆಲ್ಲದಕ್ಕೆ ಯಾರನ್ನು ದೂರೋಣ? ಇದಕ್ಕೆ ಇರೋದು ಒಂದೇ ದಾರಿ, ಜನರು ಚುನಾವಣೆ ಬಂದಾಗ ವಿಚಾರವಂತರಾಗಬೇಕು. ಸರಿಯಾದ ವ್ಯಕ್ತಿಗಳನ್ನು ಗೆಲ್ಲಿಸಿಕೊಳ್ಳಬೇಕು ಅಂತ ಉಪೇಂದ್ರ ಕಿವಿ ಮಾತು ಹೇಳಿದರು. ಹಾಗೆಯೇ ಕೊರೋನಾ ಅಂತ ಭಯ ಪಡುವುದು ಬೇಡ. ಧೈರ್ಯದಿಂದ ಇರಿ. ಕೆಲವೊಮ್ಮೆ ನಮ್ಮ ಧೈರ್ಯವೇ ರೋಗಕ್ಕೆ ಮದ್ದು. ಇದನ್ನು ಪಾಲಿಸಿ. ಹಾಗಂತ ಮಾಸ್ಕ್‌ ಹಾಗೂ ಸಾನಿಟೈಸರ್‌ ಬಳಸುವುದನ್ನು ಮರೆಯಬೇಡಿ ಅಂತ ಉಪೇಂದ್ರ ಹೇಳಿದರು.

Categories
ಸಿನಿ ಸುದ್ದಿ

ಉಪ್ಪಿ ಲಗಾಮ್‌ ಗೆ ಅದ್ಧೂರಿ ಮುಹೂರ್ತ – ರಿಯಲ್‌ ಸ್ಟಾರ್‌ ಗೆ ಪವರ್‌ ಸ್ಟಾರ್‌ ಸಾಥ್‌ !

ʼಗಜʼ ಚಿತ್ರದ ಖ್ಯಾತಿಯ ನಿರ್ದೇಶಕ ಕೆ. ಮಾದೇಶ್ ಇದೇ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ಹೊಚ್ಚ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದರ ಹೆಸರೇ “ಲಗಾಮ್’. ಇದೇ ಶುಭ ಸೋಮವಾರ “ಲಗಾಮ್ʼ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಚಿತ್ರಕ್ಕೆ ಮೊದಲ ಕ್ಲಾಪ್ ಮಾಡುವ ಮೂಲಕ ತಂಡಕ್ಕೆ ಶುಭ ಹಾರೈಸಿದರು. “ಲಗಾಮ್ʼ ಒಂದೊಳ್ಳೆ ಸಂದೇಶ ಇರುವ ಅದ್ಧೂರಿ ಕಮರ್ಷಿಯಲ್ ಸಿನಿಮಾ ಅಂತಾರೆ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ಈ ರೀತಿಯ ಅದ್ದೂರಿ ಮುಹೂರ್ತ ಮಾಡಿ ಎರಡು ವರ್ಷಗಳೇ ಆಗಿತ್ತು. ಆದರೆ ಕೊರೋನಾ ಸಮಯದಲ್ಲೂ ಇಷ್ಟೊಂದು ಗ್ರ್ಯಾಂಡ್ ಆಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್ ಎನರ್ಜಿ. ಸಿನಿಮಾನೂ ಇಷ್ಟೇ ಗ್ರ್ಯಾಂಡಾಗಿ ಮೂಡಿಬರಲಿದೆ ಎಂಬ ಭರವಸೆ ನನಗಂತೂ ಇದೆ. ಒಳ್ಳೆ ತಂತ್ರಜ್ಞರು, ಒಳ್ಳೆ ಕಲಾವಿದರಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಮೆಸೇಜ್ ಇರುವ ಎಂಟರ್‌ಟೈನರ್ ಚಿತ್ರ. ಲಗಾಮ್ ಕನ್ನಡದ ಲಗಾನ್ ಆಗುತ್ತೆ ಎಂಬ ವಿಶ್ವಾಸವಿದೆ. ಕಬ್ಜಾ ದೊಡ್ಡ ಮಟ್ಟದ ಸಿನಿಮಾ, ಸೆಟ್‌ನಲ್ಲಿಯೇ ಬಹುತೇಕ ಶೂಟಿಂಗ್ ಮಾಡಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಸಮಯ ಬೇಕು. ಅದೇ ಸಮಯದಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ' ಎಂದು ಲಗಾಮ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ನಿರ್ದೇಶಕ ಕೆ. ಮಾದೇಶ್ ಮಾತನಾಡಿ,ಲಗಾಮ್ ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಅದ್ದೂರಿ ಮೇಕಿಂಗ್‌ನಲ್ಲಿ ಮೂಡಿಬರಲಿರುವ ಕಮರ್ಷಿಯಲ್ ಸಿನಿಮಾ. ಮುಂದಿನ ಸೋಮವಾರದಿಂದ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ, ಅತ್ಯಾಚಾರಕ್ಕೆ, ದ್ರೋಹಕ್ಕೆ, ಕೊರನಾಗೆ ಲಗಾಮ್ ಹಾಕೋದೇ ಈ ಚಿತ್ರದ ಥೀಮ್’ ಎಂದು ನಗುತ್ತಲೇ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.

ಇನ್ನು ಈಗ್ಗೆ ಐದಾರು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಟಿ ಹರಿಪ್ರಿಯಾ ಅವರಿಗೆ ಮೊದಲ ಬಾರಿಗೆ ಸಿನಿಮಾದಲ್ಲಿ ರಿಯಲ್ ಸ್ಟಾರ್ ಗಿ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿರುವ ಸಂಭ್ರಮ. `ಮೊದಲ ಬಾರಿ ಉಪ್ಪಿ ಸರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿಯಿದೆ. ಹಾಗೇ ಸಾಧು ಕೋಕಿಲಾ ಸರ್ ಅವರ ಮ್ಯೂಸಿಕ್ ಅಂದರೆ ನನಗೆ ತುಂಬಾ ಇಷ್ಟ. ಇದೇ ಮೊದಲ ಬಾರಿಗೆ ನನ್ನ ಸಿನಿಮಾಗೆ ಅವರು ಮ್ಯೂಸಿಕ್ ನೀಡುತ್ತಿರುವುದು ನನಗೆ ಮತ್ತಷ್ಟು ಖುಷಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದೆ. ಆದರೆ ಈ ಸಿನಿಮಾದಲ್ಲಿ ಈಗಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಳ್ಳೆಯ ಕಥೆ ಇದೆ’ ಎಂದು ಖುಷಿಯಿಂದ ಮತ್ತೆ ಗ್ಲಾಮರ್ ಗೊಂಬೆಯಾಗಿ ಮಿಂಚಲು ಅವಕಾಶ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಹರಿಪ್ರಿಯಾ. ಸಾಧು ಕೋಕಿಲಾ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದರ ಜತೆಗೆ ಪ್ರಮುಖ ಪಾತ್ರದಲ್ಲೂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

error: Content is protected !!