Categories
ಸಿನಿ ಸುದ್ದಿ

ಸ್ಟಾರ್‌ಗಳೆಲ್ಲ ತಮ್ಮದಷ್ಟೇ ತಮಗೆ ಸಾಕು ಅಂತಂದುಕೊಂಡರೆ ಕನ್ನಡ ಚಿತ್ರೋದ್ಯಮ ಉಳಿಯುತ್ತಾ ?

ಚಿತ್ರರಂಗ ಅನ್ನೋದು ಒಂದು ಮನೆ ಇದ್ದಂತೆ… ಕನ್ನಡ ಚಿತ್ರೋದ್ಯಮದ ಮಂದಿ ಬಹಿರಂಗ ವೇದಿಕೆಗಳಲ್ಲಿ ಹೀಗೆಲ್ಲ ಹೇಳುವುದನ್ನು ನೀವು ಕೇಳಿದ್ದೀರಿ. ಹಾಗಂತ ಸ್ಟಾರ್‌ಗಳು ಕೂಡ ಮಾತನಾಡುವುದು ಮಾಮೂಲು. ಆದರೆ ಇತ್ತೀಚೆಗೆ ಚಿತ್ರರಂಗ ಒಂದೇ ಮನೆಯ ಕುಟುಂಬದಂತೆ ಕಂಡಿದ್ದು ನಿಮಗೇನಾದರೂ ಗೊತ್ತಾ ? ಇಲ್ಲ, ಅವರವರ ಸಿನಿಮಾಗಳಿಗೆ ಸಂಕಷ್ಟಗಳು, ಸವಾಲುಗಳು ಎದುರಾದಾಗೆಲ್ಲ ಅವರವರೇ ಮಾತನಾಡುವುದು ಈಗ ವಾಡಿಕೆ ಅಗಿದೆ. ಅದರ ಪರಿಣಾಮವೇ, ಸ್ಟಾರ್‌ ಗಳೆಲ್ಲ ಅವರವರ ಸಿನಿಮಾಕ್ಕೆ ಸಂಕಷ್ಟ ಬಂದಾಗ ಮಾತನಾಡುತ್ತಿದ್ದಾರೆ. ಅದೇ ಸಾಲಿನಲ್ಲೀಗ ಯುವರತ್ನನ ಸರದಿ.

ಬೇಕಾದರೆ ಇತ್ತೀಚಿನ ದಿನಗಳಲ್ಲೇ ಆದ ಬೆಳವಣಿಗೆ ನೋಡಿ, “ಪೊಗರುʼ ಚಿತ್ರಕ್ಕೆ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಾಗ ನಟ ಧ್ರುವ ಸರ್ಜಾ ಅಬ್ಬರಿಸಿ, ಬೊಬ್ಬಿರಿದರು. ಸೋಷಲ್‌ ಮೀಡಿಯಾದಲ್ಲಿ ಅದಕ್ಕೆ ಕೆಲವರು ಸಾಥ್‌ ಕೊಟ್ಟರು. ಅದು ದೊಡ್ಡ ಸುದ್ದಿಯೂ ಆಯಿತು. ಸರ್ಕಾರ ಚಿತ್ರಮಂದಿರಕ್ಕೆ ಹೇರಲು ಹೊರಟಿದ್ದ ನಿರ್ಬಂಧದ ಪ್ರಸ್ತಾಪ ಅಷ್ಟಕ್ಕೆ ನಿಂತುಹೊಯಿತು. ಮುಂದೆ ರಾಬರ್ಟ್‌ ರಿಲೀಸ್‌ಗೆ ಅಡ್ಡಿಯಾದ ವಿಚಾರದಲ್ಲಿ ನಟ ದರ್ಶನ್‌ ಟಾಲಿವುಡ್‌ ವಿರುದ್ಧ ಕೆಂಡ ಕಾರಿದರು. ಅದಕ್ಕೂ ಕೆಲವರು ಸೋಷಲ್‌ ಮೀಡಿಯಾದಲ್ಲಿ ಬೆಂಬಲ ಕೊಟ್ಟರು. ಅದು ಕೂಡ ದೊಡ್ಡ ಸುದ್ದಿಯಾಯಿತು. ರಿಲೀಸ್‌ ಸಮಸ್ಯೆ ತಕ್ಷಣವೇ ಬಗೆಹರಿಯಿತು. ಈಗ ʼಯುವರತ್ನʼ ಚಿತ್ರದ ಸರದಿ.

ಯುವ ರತ್ನ ಚಿತ್ರ ರಿಲೀಸ್‌ ಆಗಿ ಇನ್ನು ಎರಡು ದಿನ ಆಗಿಲ್ಲ. ಆಗಲೇ ಸರ್ಕಾರ ಕೊರೋನಾ ಕಾರಣಕ್ಕೆ ರಾಜ್ಯದಲ್ಲಿ ಟಫ್‌ ರೂಲ್ಸ್‌ ತಂದಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿನ ಚಿತ್ರ ಮಂದಿರಗಳಲ್ಲಿ ಶೇ.50 ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ಕೊಟ್ಟಿದೆ. ಇದು ಯುವರತ್ನ ಚಿತ್ರದ ಸಕ್ಸಸ್‌ ಓಟಕ್ಕೆ ಭರ್ಜರಿ ಬ್ರೇಕ್‌ ಹಾಕಿದೆ. ಒಂಥರ ಇದು ಆಘಾತವೇ ಹೌದು.

ನಟ ಪುನೀತ್‌ ರಾಜ್‌ ಕುಮಾರ್‌ ಈಗ ಸರ್ಕಾರದ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕಿದ್ದಂತೆ ಸರ್ಕಾರ ಈ ಆದೇಶ ಜಾರಿಗೊಳಿಸಿ, ತಮಗೆ ಅನ್ಯಾಯ ಮಾಡಿದೆ ಅಂತ ಗುಡುಗಿದ್ದಾರೆ. ಮೊದಲೇ ಸರ್ಕಾರ ಈ ರೀತಿ ಮಾಡುತ್ತೇವೆ ಅಂತ ಹೇಳದ್ರೆ, ನಾವು ಚಿತ್ರವನ್ನೇ ಬಿಡುಗಡೆ ಮಾಡುತ್ತಿರಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರೋದ್ಯಮದ ಹಲವರು ಅವರ ಮಾತಿಗೆ ಸಾಥ್‌ ಕೊಟ್ಟಿದ್ದಾರೆ.

ಹಾಗೆಯೇ ಕೆಲವರು ಪುನೀತ್‌ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಟ ಪುನೀತ್‌ ತಮ್ಮ ಅನುಕೂಲಕ್ಕೆ ತಕ್ಕಂತೆ ಬೇಡಿಕೆ ಇಡುವುದು ಸೂಕ್ತವಲ್ಲ ಅಂತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಟಾಂಗ್‌ ಕೊಟ್ಟಿದ್ದಾರೆ. ಕೆಲವರು ಇದೆಲ್ಲ ತಮಗ್ಯಾಕೆ ಅಂತಲೂ ಮೌನ ತಾಳಿದ್ದಾರೆ. ಮತ್ತೆ ಹಲವರು ಸಂಬಂಧವೇ ಇಲ್ಲದ್ದಂತೆ ಮುಗುಮ್‌ ಅಗಿದ್ದಾರೆ. ಹೀಗೆಲ್ಲ ಆಗುವುದ್ಯಾಕೆ ಅಂದ್ರೆ, ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕೆ.

ಒಂದು ಕಾಲದಲ್ಲಿ ಕೂಡ ಚಿತ್ರರಂಗ ಅಂದ್ರೆ ಕೂಡು ಕುಟುಂಬದಂತೆ ಇತ್ತು. ಯಾವುದೇ ಸಮಸ್ಯೆ ಎದುರಾದಾಗ ಹಿರಿಯ ನೇತೃತ್ವದಲ್ಲಿ ಒಂದಾಗಿ ಬೀದಿಗಿಳಿಯುತ್ತಿತ್ತು. ಈಗ ಅದು ಒಡೆದ ಮನೆ. ಅಲ್ಲಿ ಯಜಮಾನ ಯಾರು ಎಂಬುದೇ ಗೊತ್ತಿಲ್ಲ. ಪ್ರತಿಯೊಬ್ಬರು ಇಲ್ಲಿ ದೊಡ್ಡವರೇ. ವಿಶೇಷವಾಗಿ ಸ್ಟಾರ್‌ ಗಳಂತೂ ತಾವೇ ಮೇಲೆ, ತಾವು ಹೇಳಿದ್ದೆ ಆಗ್ಬೇಕು ಅನ್ನೋ ರೇಂಜ್‌ ನಲ್ಲಿ ಪೋಸು ನೀಡುತ್ತಿದ್ದಾರೆ. ಉದ್ಯಮ ಎನ್ನುವುದಕ್ಕಿಂತ ತಮ್ಮ ತಮ್ಮ ಸಿನಿಮಾಗಳನ್ನ ಹಿತವನ್ನು ತಾವು ಕಾಯ್ದುಕೊಳ್ಳುವುದಕಷ್ಟೇ ಸೀಮಿತವಾಗುಳಿಯುತ್ತಿದ್ದಾರೆ. ಅದೆಲ್ಲದರ ಪರಿಣಾಮ ಚಿತ್ರೋದ್ಯಮ ಇವತ್ತು ಕೊರೋನಾ ನೆಪದಲ್ಲಿ ಆರ್ಥಿಕ ದಿವಾಳಿ ಹಂತಕ್ಕೆ ಬಂದು ನಿಂತಿದೆ ಎನ್ನುವುದು ದುರಂತ.

Categories
ಸಿನಿ ಸುದ್ದಿ

ಕಬ್ಜ ಶೂಟಿಂಗ್ ವೇಳೆ ಅವಘಡ : ಉಪ್ಪಿ ತಲೆಗೆ ಬಿತ್ತು ಪೆಟ್ಟು ಅಪಾಯದಿಂದ ಪಾರಾದ ರಿಯಲ್‌ಸ್ಟಾರ್ ಉಪೇಂದ್ರ

ಚಿತ್ರೀಕರಣ ಸಮಯದಲ್ಲಿ ಆಗಾಗ ಒಂದಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದು ಹೊಸದೇನಲ್ಲ. ಎಷ್ಟೋ ಸಲ, ಸಾಹಸ ಸನ್ನಿವೇಶಗಳಲ್ಲಿ ಇಂತಹ ಅವಘಡಗಳು ಸಂಭವಿಸುವುದುಂಟು. ಈಗ ಇಲ್ಲಿ ಹೇಳಹೊರಟಿರುವ ವಿಷಯ, “ಕಬ್ಜ’ ಚಿತ್ರದ್ದು. ಹೌದು, ಉಪೇಂದ್ರ ಅಭಿನಯದ “ಕಬ್ಜ” ಆರಂಭದಿಂದಲೂ ಜೋರು ಸದ್ದು ಮಾಡುತ್ತಲೇ ಇದೆ. ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಹಾಗಂತ, ಅದು ಖುಷಿ ಪಡುವ ಸುದ್ದಿಯಲ್ಲ. ಬದಲಾಗಿ, ಬೇಸರ ಪಡುವ ಸುದ್ದಿ. ವಿಷಯ ಏನಪ್ಪಾ ಅಂದರೆ, ಉಪೇಂದ್ರ ಅವರು ಚಿತ್ರದ ಸಾಹಸ ದೃಶ್ಯದಲ್ಲಿ ನಟಿಸುತ್ತಿದ್ದರು. ಈ ವೇಳೆ, ವಿಲನ್ ಬೀಸಿದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಅವರ ತಲೆಗೆ ಬಿದ್ದ ಪರಿಣಾಮ, ಅವರಿಗೆ ಪೆಟ್ಟಾದ ಘಟನೆ ನಡೆದಿದೆ.

ಹೌದು, ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ “ಕಬ್ಜ” ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸ್ಟಂಟ್ ಶೂಟಿಂಗ್ ಸಮಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ರಾಡ್ ತಗುಲಿ ಈ ಅವಘಡ ಸಂಭವಿಸಿದೆ. ಖಳನಾಯಕ ರಾಡ್ ನಿಂದ ಹೊಡೆಯುವ ಸನ್ನಿವೇಶದಲ್ಲಿ ಉಪೇಂದ್ರ ಅವರು ತಪ್ಪಿಸಿಕೊಳ್ಳಬೇಕಾಗಿತ್ತು.

ಈ ವೇಳೆ ಆಕಸ್ಮಿಕವಾಗಿಯೇ ಉಪ್ಪಿಗೆ ರಾಡ್ ತಾಗಿದೆ. ಅಲ್ಲಿದ್ದ ಚಿತ್ರತಂಡದವರು ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಹೆಚ್ಚು ಅಪಾಯ ಸಂಭವಿಸದ ಕಾರಣ, ಪುನಃ ಉಪೇಂದ್ರ ಅವರು ಸ್ಪಲ್ಪ ಹೊತ್ತು ಚೇತರಿಸಿಕೊಂಡ ಬಳಿಕ ಶೂಟಿಂಗ್ ನಿಲ್ಲಿಸದೆಯೇ ಅದೇ ಉತ್ಸಾಹದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ದೇಶಕ ಆರ್.ಚಂದ್ರು ಅವರು, ಸ್ಥಳದಲ್ಲಿದ್ದು, ಉಪೇಂದ್ರ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆ ನಂತರ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಬಳಿಕ ಎಲ್ಲರೂ ಅದೇ ಉತ್ಸಾಹದಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡ‌ ಚಿತ್ರರಂಗಕ್ಕೆ ಅರ್ಧ ಶಾಕ್! ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ಆಕ್ಷೇಪ!! ಕೂಡಲೇ ಶೇ.100ರಷ್ಟು ಭರ್ತಿಗೆ ಅವಕಾಶ ಕೊಡಿ ಎಂದ ಅಪ್ಪು

ಕನ್ನಡ‌ ಚಿತ್ರರಂಗಕ್ಕೆ ಈಗ ಮತ್ತೆ ಕೊರೊನಾ ಬಿಸಿ ತಟ್ಟುತ್ತಿದೆ. ಕೊರೊನೊ ಎರಡನೇ ಅಲೆ ಜೋರಾಗುತ್ತಿರುವಂತೆಯೇ ಕೊರೊನೊ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತಂತೆ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಹೀಗಾಗಿ ಟಫ್ ರೂಲ್ಸ್ ಜಾರಿ ಮಾಡಿದೆ. ಇದರಿಂದಾಗಿ ಕನ್ನಡ‌ಚಿತ್ರರಂಗಕ್ಕೂ ಸಮಸ್ಯೆ ಎದುರಾಗಿದೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಕೊಡಲಾಗಿದೆ. ಈ ನಿರ್ಬಂಧ ದಿಂದ ಇಡೀ ಚಿತ್ರೋದ್ಯಮವೇ ದಂಗಾಗಿದೆ. ಹಲವು ನಟರು, ನಿರ್ಮಾಪಕ, ನಿರ್ದೇಶಕರು ಕೂಡ ಸರ್ಕಾರದ ಈ‌ ನಿರ್ಧಾರಕ್ಕೆ ಆಕ್ಷೇಪಿಸಿದ್ದಾರೆ.

ಈಗಷ್ಟೇ ಕೊರೊನೊ ಸಮಸ್ಯೆ ತಿಳಿಯಾಗಿ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವಂತೆಯೇ, ಈಗ ಟಫ್ ರೂಲ್ಸ್ ಜಾರಿಯಾಗಿದೆ. ಇದರಿಂದ ಪುನಃ ಸಿನಿರಂಗಕ್ಕೆ ದೊಡ್ಡ ಹೊಡೆತವೇ ಆಗಿದೆ ಎಂದು ಚಿತ್ರರಂಗದ ಹಲವರು ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿದ್ದಾರೆ. ಅತ್ತ ನಟ ಪುನೀತ್ ರಾಜಕಾರ್ ಅವರು ಸಹ ಫೇಸ್ ಬುಕ್ ಲೈವ್ ಮಾಡುವ ಮೂಲಕ

ಮನವಿ‌ ಮಾಡಿದ್ದು, ಶೇ.50ರಷ್ಟು ಭರ್ತಿಗೆ ಆದೇಶ ಬೇಡ ಎಂದು‌ ಮನವಿ‌ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತಾಡುವುದಾಗಿಯೂ ಹೇಳಿದ್ದಾರೆ. ಇದು ನಮಗೆ ದೊಡ್ಡ ಸಮಸ್ಯೆ ಆಗುತ್ತೆ. ಈ ನಿಯಮ ಕೈ ಬಿಡಿ. ಜನರು ಮುಂಜಾಗ್ರತೆ ವಹಿಸಿ ಸಿನಿಮಾ ನೋಡುತ್ತಿದ್ದಾರೆ. ದಯವಿಟ್ಟು ಈ ನಿಯಮ ಹಿಂಪಡೆಯಿರಿ ಎಂದು‌ ಮನವಿ ಮಾಡಿದ್ದಾರೆ.

ಏಪ್ರಿಲ್ 1ರಂದು “ಯುವರತ್ನ” ಬಿಡುಗಡೆಯಾಗಿದೆ. ಮೊದಲ ದಿನ ಭರ್ಜರಿ ಗಳಿಕೆ‌ ದಾಖಲೆ ಮಾಡಿದ ಚಿತ್ರಕ್ಕೆ ಈಗ ಶೇ.50 ರಷ್ಟು ನಿಯಮ ಎಷ್ಟು‌ ಸರಿ ಎಂಬುದು ಎಲ್ಲರ ಪ್ರಶ್ನೆ.
ಇದೇ ನಿಯಮ ಮುಂದುವರೆದ್ದಲ್ಲಿ ಖಂಡಿತವಾಗಿಯೂ ಸಿನಿಮಾರಂಗ ಮತಗತೆ ಮೇಲೇಳಲು ಪರದಾಡಬೇಕಾಗುತ್ತೆ.
ಅದೇನೆ ಇರಲಿ, ಕೊರೊನೊ ಅಲೆ ಮತ್ತೆ ಶುರುವಾಗದಿರಲಿ, ಎಲ್ಲವೂ ಈಗ ನಡೆದಂತೆ ನಡೆಯಲಿ ಎಂಬುದೇ ಆಶಯ.

Categories
ಸಿನಿ ಸುದ್ದಿ

ಸ್ನೇಹರ್ಷಿ ಅಂದ್ರೆ ಇವ್ನೇನು ಮಹರ್ಷಿ ತಮ್ಮನಾ ?-ನವೀನ್ ಸಜ್ಜು‌ ಹಾಡಿಗೆ, ಕಿರಣ್‌ ನಾರಾಯಣ್‌ ಭರ್ಜರಿ ಸ್ಟೆಪ್‌ !

ತೆಲುಗಿನಲ್ಲಿ ʼಮಹರ್ಷಿ ʼ ಅಂತ ಸಿನಿಮಾ ಬಂದಿತ್ತು. ಅದು ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ ಸಿನಿಮಾ. ದೊಡ್ಡ ಸದ್ದು ಮಾಡಿದ ಸಿನಿಮಾ ಅದು. ಕನ್ನಡದಲ್ಲೂ ಡಬ್‌ ಆಗಿ ಬಂತು ಅನ್ನೋದು ಬಹುತೇಕರಿಗೆ ಗೊತ್ತೇ ಇರುತ್ತೆ. ಅಂದ ಹಾಗೆ, ಈಗ ಕನ್ನಡದಲ್ಲೊಂದು “ಸ್ನೇಹರ್ಷಿ ʼಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಟೈಟಲ್‌ ಕೇಳಿದಾಕ್ಷಣ ಇವ್ನೇನು ಮಹರ್ಷಿ ತಮ್ಮನಾ ಅಂತ ನಿಮಗೆ ಅನಿಸುತ್ತೆ. ಆದ್ರೆ ಹಾಗೆನಿಲ್ಲ. ಅದು ಬೇರೆ, ಇದೇ ಬೇರೆ. ಶ್ರೀ ಲಕ್ಷ್ಮೀ ಬೇಟೆರಾಯ ಲಾಂಛನದಲ್ಲಿ ಹೊಸ ಪ್ರತಿಭೆ ಕಿರಣ್‌ ನಾರಾಯಣ್‌ ನಿರ್ದೇಶಿಸಿ, ನಿರ್ಮಾಣ ಮಾಡಿರೋ ಚಿತ್ರ ಇದು. ವಿಶೇಷ ಅಂದ್ರೆ ಈ ಚಿತ್ರಕ್ಕೆ ಹೀರೋ ಕೂಡ ಅವರೆ.

ಸದ್ಯಕ್ಕೆ ಈ ಚಿತ್ರ ಸಾಂಗ್‌ ಲಾಂಚ್‌ ಮೂಲಕ ಸೌಂಡ್‌ ಮಾಡಿದೆ. ಚಿತ್ರೀಕರಣ ಮುಗಿಸಿ, ಚಿತ್ರ ತಂಡ ರಿಲೀಸ್‌ ಗೆ ಸಿದ್ಧತೆ ನಡೆಸಿದೆ. ಅದರ ಪ್ರಚಾರದ ಮೊದಲ ಹಂತವಾಗಿ ಈಗ ಚಿತ್ರದ ಮೊದಲ ಸಾಂಗ್‌ ಲಾಂಚ್‌ ಮಾಡಿದೆ. ಡಿ ಬಿಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಈ ಹಾಡು ಹೊರಬಂದಿದೆ. ಗಾಯಕ ನವೀನ್ ಸಜ್ಜು ಹಾಡಿರುವ ಈ ಹಾಡು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಅಧಿಕ‌ ವೀಕ್ಷಣೆ ಪಡೆದಿದೆ. ನಾಯಕ ಕಿರಣ್‌ ನಾರಾಯಣ್‌ ಈಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಅವರ ನೃತ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.ಫಸ್ಟ್‌ ಸಾಂಗ್‌ ಲಾಂಚ್‌ ಮೂಲಕ ಮಾಧ್ಯಮ ಮುಂದೆ ಬಂದಿದ್ದ ಚಿತ್ರ ತಂಡ ಚಿತ್ರದ ವಿಶೇಷತೆ ಹೇಳಿಕೊಂಡಿತು.

“ಚಿತ್ರಕ್ಕೆ‌ ನನ್ನ ನಾಗತಿಹಳ್ಳಿ ಪ್ರತಿಭಾಕಥೆ ಬರೆದಿದ್ದಾರೆ. ಅಮ್ಮ ಹೇಳುವ ಕಥೆ ಬೇರೆಯವರಿಗಿಂತ ನನಗೆ ಬೇಗ ಅರ್ಥವಾಗುತ್ತದೆ. ಹಾಗಾಗಿ ಈ ಚಿತ್ರವನ್ನು ನಿರ್ದೇಶಿಸಲು ಮುಂದಾದೆ.‌ ಸಾಮಾಜಿಕ ಕಾಳಜಿಯ ಕಥಾಹಂದರವಿದ್ದು, ನಾನೇ ಚಿತ್ರಕಥೆ ಬರೆದಿದ್ದೇನೆ. ಬರವಣಿಗೆಯಲ್ಲಿ ಅಂದುಕೊಂಡಿದ್ದೆಲ್ಲವೂ ತೆರೆ ಮೇಲೆ ಬಂದಿದೆʼ ಎಂದರು.
ನಾಗತಿಹಳ್ಳಿ ಪ್ರತಿಭಾ ಹಾಗೂ ಕಿರಣ್ ನಾರಾಯಣ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಸುಧಾ ಬೆಳವಾಡಿ, ನಾಗತಿ ಹಳ್ಳಿ ಜಯಪ್ರಕಾಶ್‌, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಮುಂತಾದವರಿದ್ದಾರೆ. ಅಂದು ಫಸ್ಟ್‌ ಸಾಂಗ್‌ ಲಾಂಚ್‌ ಸಂದರ್ಭದಲ್ಲಿ ನಟಿ ಸುಧಾ ಬೆಳವಾಡಿ ಹಾಜರಿದ್ದು ಮಾತನಾಡಿದರು.”ಸಾಧಾರಣ ಕಥೆಯೊಂದು ಅಸಾಧಾರಣ ರೀತಿಯಲ್ಲಿ ತೆರೆಗೆ ಬಂದಿದೆ.ಕಥೆ ತುಂಬಾ ಚೆನ್ನಾಗಿದೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಸಿನಿರಂಗ ಪ್ರವೇಶಿಸುತ್ತಿರುವ ಈ ಹುಡುಗನಿಗೆ ಒಳ್ಳೆಯದಾಗಲಿʼಎಂದು ಶುಭ ಕೋರಿದರು.ಚಿತ್ರದಲ್ಲಿ ಮಾಧ್ಯಮ ಪ್ರತಿನಿಧಿ ಪಾತ್ರ ನಿರ್ವಹಿಸಿರುವ ಕಿರಣ್ ನಾರಾಯಣ್ ಅವರ ಸೋದರ ಮಾವ ನಾಗತಿಹಳ್ಳಿ ಜಯಪ್ರಕಾಶ್ ತಮ್ಮ ಪಾತ್ರದ ಬಗ್ಗೆ ವಿವರಿಸಿದರು.ಆಕಾಶ್ ಅಯ್ಯಪ್ಪ “ಸ್ನೇಹರ್ಷಿ” ಗೆ ಸಂಗೀತ ನೀಡಿದ್ದು, ರವಿಕಿಶೋರ್ ಛಾಯಾಗ್ರಹಣ ಹಾಗೂ ಶ್ರೀಕಾಂತ ಅವರ ಸಂಕಲನವಿದೆ.ರಾಜು ಎನ್.ಕೆ ಗೌಡ ಗೀತರಚನೆ ಮಾಡಿದ್ದಾರೆ. ಇಷ್ಟರಲ್ಲಿಯೇ ಚಿತ್ರ ತೆರೆಗೆ ಬರಲಿದೆಯಂತೆ.

Categories
ಸಿನಿ ಸುದ್ದಿ

ಹಾಡುಗಳ ಸಂಭ್ರಮದಲ್ಲಿ ರಿಯಾ- ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಗೆ ಆಕ್ಷನ್‌ ಕಟ್‌ ಹೇಳಿದ್ದಾರೆ ನಿರ್ದೇಶಕಿ ವಿಜಯಾ !

ಕನ್ನಡಕ್ಕೆ ಮತ್ತೊಬ್ಬರು ಮಹಿಳಾ ನಿರ್ದೇಶಕಿ ಎಂಟ್ರಿ ಆಗಿದ್ದಾರೆ. ಅವರ ಹೆಸರು ವಿಜಯಾ ನರೇಶ್.‌ ʼರಿಯಾʼ ಹೆಸರಿನ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ನಲ್ಲಿ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಿತ್ರದ ಮೂಲಕವೇ ಗಮನ ಸೆಳೆಯುವ ರಿಯಾ ಒಂದು ಹಾರಾರ್‌ ಸಸ್ಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ಜಾನರ್‌ ಸಿನಿಮಾ. ಅದರ ಜತೆಗೆ ಇಲ್ಲಿ ಸೆಂಟಿಮೆಂಟ್‌ ಅಂಶಗಳು ಇವೆಯಂತೆ. ಸದ್ಯಕ್ಕೀಗ ಚಿತ್ರತಂಡ ಚಿತ್ರದ ಹಾಡುಗಳ ಬಿಡುಗಡೆ ಮೂಲಕ ಮಾಧ್ಯಮ ಮುಂದೆ ಹಾಜರಾಗಿತ್ತು. ನಿರ್ದೇಶಕಿ ವಿಜಯಾ ನರೇಶ್‌ ಅವರ ಪರಿ ಕನಿಗೊಂಡ ನರೇಶ್‌ ಈ ಚಿತ್ರದ ನಿರ್ಮಾಪಕರು. ಕಾರ್ತಿಕ್‌ ವರ್ಣೇಕರ್‌ ಇದರ ಕಾರ್ಯಕಾರಿ ನಿರ್ಮಪಕರು. ಕನ್ನಡದಲ್ಲಿ ಈ ತಂಡಕ್ಕಿದು ಚೊಚ್ಚಲ ಚಿತ್ರ.

ನಿರ್ದೇಶಕಿ ವಿಜಯಾ, ನಿರ್ಮಾಪಕ ಕನಿಗೊಂಡ ನರೇಶ್‌ ದಂಹತಿಗಳದ್ದು ಆಂಧ್ರ ಮೂಲ. ನಿರ್ದೇಶಕಿ ವಿಜಯಾ ಅವರು ವೃತ್ತಿಯಲ್ಲಿ ಶಿಕ್ಷಕಿಯಂತೆ. ಆದರೂ ಉತ್ತಮ ಕಥೆ ಸಿಕ್ಕರೆ ಸಿನಿಮಾ ನಿರ್ದೇಶನ ಮಾಡಬೇಕೆನ್ನುವ ಮಹಾದಾಸೆಯ ಮೂಲಕ ʼರಿಯಾʼ ಚಿತ್ರಕ್ಕೆ ಅಕ್ಷನ್‌ ಕಟ್‌ ಹೇಳಿದ್ದಾರಂತೆ. ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿರುವ ಕಾರ್ತಿಕ್‌ ವರ್ಣೇಕರ್‌ ಅವರೇ ಈ ಚಿತ್ರದ ನಾಯಕರು. ಅವರಿಗೆ ಇಲ್ಲಿ ಜೋಡಿಯಾಗಿ ಸಾವಿತ್ರಿ ಅಭಿನಯಿಸಿದ್ದಾರೆ. ಅವರೊಂದಿಗೆ ವಿಕಾಸ್ ಕುಲಕರ್ಣಿ, ರಣ್ವೀರ್, ಶ್ವೇತಾ ಮತ್ತಿತರರು ಚಿತ್ರದಲ್ಲಿದ್ದಾರೆ, ವಿಶೇಷವಾಗಿ ಮೈಸೂರಿನ ಬಾಲಕಿ ಅನನ್ಯ ಈ ಚಿತ್ರದ ಪ್ರಮುಖ ಪಾತ್ರ ರಿಯಾಗೆ ಬಣ್ಣ ಹಚ್ಚಿದ್ದಾರೆ. ಆಡಿಯೋ ಲಾಂಚ್‌ ಸಂದರ್ಭದಲ್ಲಿ ಅವರೆಲ್ಲ ಹಾಜರಿದ್ದು ಚಿತ್ರದಲ್ಲಿನ ಪಾತ್ರ ಹಾಗೂ ಚಿತ್ರೀಕರಣ ಅನುಭವ ಹಂಚಿಕೊಂಡರು.
ಚಿತ್ರ ತಂಡಕ್ಕೆ ಇದೊಂದು ಹೊಸ ಅನುಭವ. ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಇದು ಮೊದಲ ಸಿನಿಮಾ ಎನ್ನುವ ಹಾಗೆಯೇ, ಇಲ್ಲಿರುವ ಬಹುತೇಕ ಕಲಾವಿದರಿಗೂ ಇದು ಮೊದಲ ಸಿನಿಮಾ. ಅಷ್ಟು ಕಲಾವಿದರನ್ನು ನಿರ್ದೇಶಕರು ಆಡಿಷನ್ಸ್‌ ಮೂಲಕವೇ ಆಯ್ಕೆ ಮಾಡಿಕೊಂಡಿದೆಯಂತೆ. ಚಿತ್ರದ ವಿಶೇಷತೆ ಕುರಿತು ನಿರ್ದೇಶಕಿ ವಿಜಯಾ ನರೇಶ್‌ ಮಾತನಾಡಿದರು. ” ಇದೊಂದು ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳ ಕಥೆಯುಳ್ಳ ಚಿತ್ರ. ಕನ್ನಡ ಹೆಚ್ಚಾಗಿ ಮಾತನಾಡಲು ಬಾರದ ನನಗೆ, ಚಿತ್ರ ಯಾವುದೇ ತೊಂದರೆ ಇಲ್ಲದೇ ಸಿದ್ಧವಾಗಲು ಹಲವರು ಸಹಕರಿಸಿದ್ದಾರೆʼ ಎಂದರು. ಚಿತ್ರದ ಎರಡು ಹಾಡುಗಳಿಗೆ ಸಂಗೀತ ನೀಡಿರುವ ಹೇಮಂತ್ ಕುಮಾರ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ಹಿರಿಯ ನಟ ಬ್ಯಾಂಕ್ ಜನಾರ್ದನ್ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಆಡಿಯೋ ಲಾಂಚ್‌ ಗೆ ಅತಿಥಿಯಾಗಿ ಬಂದಿದ್ದರು. ಸದ್ಯ ಸಿನಿಮಾ ಚಿತ್ರೀಕರಣ ಮುಗಿಸಿ, ರಿಲೀಸ್‌ ಗೆ ರೆಡಿಯಾಗಿದೆ. ಚಿತ್ರದ ಬಹುತೇಕ ಭಾಗ ದುಬಾರೆ ಫಾರೆಸ್ಟ್‌ ಬಳಿಯೇ ಚಿತ್ರೀಕರಣಗೊಂಡಿದೆ. ಈಗಾಗಲೇ ಈ ಚಿತ್ರದ ಟ್ರೇಲರ್‌ ಗೆ ಸಿಕ್ಕಾಪಟ್ಟೆ ಸದ್ದು ಮಾಡಿದೆಯಂತೆ. ಇದೀಗ ಆಡಿಯೋ ಸಾಂಗ್‌ ಮೂಲಕ ಸದ್ದು ಮಾಡುತ್ತಿದೆ. ಆಕಾಶ್‌ ಆಡಿಯೋ ಸಂಸ್ಥೆ ಹಾಡುಗಳನ್ನು ಹೊರತಂದಿದೆ.

Categories
ಸಿನಿ ಸುದ್ದಿ

ಶಿಕ್ಷಣ ಮಾಫಿಯಾ ವಿರುದ್ಧ ಯುವರತ್ನನ ಹೋರಾಟ, ನೋಡುವ ಪ್ರೇಕ್ಷಕನಿಗೂ ಕೊಡ್ತಾನೆ ಒಂದಷ್ಟು ಪೇಚಾಟ!

ಯುವರತ್ನ ಚಿತ್ರ ವಿಮರ್ಶೆ

ಯುವರತ್ನ ಸ್ಟಾರ್‌ ಕಥೆಯಾ ಅಥವಾ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಾ? ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರು ಹೀಗೊಂದು ಜಡ್ಜ್‌ ಮೆಂಟ್‌ಗೆ ಬರೋದು ಅಷ್ಟು ಸುಲಭ ಇಲ್ಲ. ಯಾಕಂದರೆ, ಯುವರತ್ನ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ಅನ್ನೋದು ಎಷ್ಟು ಸತ್ಯವೋ, ಹಾಗೆಯೇ ಪುನೀತ್‌ ರಾಜ್‌ಕುಮಾರ್‌ ಯುವರತ್ನದ ಸ್ಟಾರ್‌ ಅನ್ನೋದು ಅಷ್ಟು ಸತ್ಯ. ಹೌದು, ಯುವರತ್ನ ಇರೋದೇ ಹಾಗೆ. ಮಾಸ್‌, ಕ್ಲಾಸ್‌ ಅಂತ ಎರಡು ಮಿಕ್ಸ್‌ ಆದ ಒಂದು ಸಿನಿಮಾ ಹೇಗಿರಬೇಕೋ ಹಾಗೆಯೇ ಈ ಚಿತ್ರವೂ ಇದೆ. ಈಗಾಗಲೇ ಇದು ಜನಪ್ರಿಯತೆ ಪಡೆದುಕೊಂಡಂತೆ ಪಕ್ಕಾ ಪವರ್‌ ಪ್ಯಾಕ್ಡ್‌ ಸಿನಿಮಾ. ಮುಖ್ಯವಾಗಿ ಯುವ ಜನರೇ ಇದರ ಟಾರ್ಗೆಟ್.

‌ಹಾಗಂತ ಬರೀ ಯೂತ್‌ಗಷ್ಟೇ ಸಿಮೀತವಾದ ಕಥೆ ಇದಲ್ಲ, ಮಕ್ಕಳ ಭವಿಷ್ಯ ಹಾಗಿರಬೇಕು, ಹೀಗಿರಬೇಕು ಅಂತೆಲ್ಲ ಕನಸು ಕಾಣುವ ಪ್ರತಿಯೊಬ್ಬ ತಂದೆ-ತಾಯಿ ಕೂಡ ನೋಡಲೇಬೇಕಾದ ಸಿನಿಮಾ. ಯಾಕಂದ್ರೆ ಈ ಸಿನಿಮಾ ಕಥೆ ಇರೋದೆ ಎಜುಕೇಷನ್‌ ಮಾಫಿಯಾ ಕುರಿತು. ಶಿಕ್ಷಣ ಅನ್ನೋದು ಇವತ್ತು ಪ್ರತಿಯೊಬ್ಬರಿಗೂ ಅತ್ಯಗತ್ಯ. ಹಾಗಂತ ಅದೀಗ ಪುಕ್ಕಟ್ಟೆ ಸಿಗುತ್ತಿಲ್ಲ. ಅದು ಕೂಡ ಬಿಸಿನೆಸ್.‌ ಅದನ್ನೇ ಬಂಡವಾಳವಾಗಿಸಿಕೊಂಡವರು ಸರ್ಕಾರಿ ಕಾಲೇಜುಗಳನ್ನು ಹೇಗೆ ಮುಗಿಸುವ ಸಂಚು ರೂಪಿಸುತ್ತಾರೆ ಎನ್ನುವುದರ ಸುತ್ತವೇ ಯುವರತ್ನದ ಕಥೆ ಹೆಣೆದಿದ್ದಾರೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.

ಕಥೆ ತುಂಬಾ ಪ್ರಸ್ತುತವಾದದ್ದು. ಅಂದರೆ ಸಮಕಾಲೀನ ವಿಷಯ. ಅದನ್ನು ಒಂದು ಕಥೆಯಾಗಿಸಿ, ಅಚ್ಚುಕಟ್ಟಾಗಿ ನಿರೂಪಿಸಿರುವುದೇ ವಿಶೇಷ. ಅದರೆ, ತಾವಂದುಕೊಂಡಿದ್ದೆನ್ನೆಲ್ಲಾ ಸಿನಿಮಾದಲ್ಲಿ ತೋರಿಸಬೇಕೆನ್ನುವ ನಿರ್ದೇಶಕರ ಹಂಬಲವನ್ನು ಪ್ರೇಕ್ಷಕ ತಡೆದುಕೊಳ್ಳುವುದು ಕೊಂಚ ಕಷ್ಟವಂತೂ ಹೌದು. ಒಂದಷ್ಟು ಲ್ಯಾಗ್‌ ಎನಿಸಿದ ಹಾಗನಿಸುತ್ತೆ. ಮೊದಲರ್ಧ ಸರಾಗವಾಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧ ಕೊಂಚ ಭಾರವೇನೋ ಎಂಬ ಭಾಸವಾಗುತ್ತದೆ. ಯವರತ್ನ ಪವರ್ ಪ್ಯಾಕ್ಡ್ ಚಿತ್ರ ಎಂಬುದನ್ನು ಮುಲಾಜಿಲ್ಲದೆಯೇ ಹೇಳಿಬಿಡಬಹುದು. ಪವರ್ ಇದ್ಮೇಲೆ ಕಂಪ್ಲೀಟ್ ಫ್ಯಾಮಿಲಿ ಪ್ಯಾಕ್ ಇದ್ದೇ ಇರುತ್ತೆ‌ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಅಂದಹಾಗೆ, ಯುವರತ್ನ ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಜೊತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಹೊತ್ತು ಬಂದಿದೆ. ಈ ಹಿಂದೆ ಅದನ್ನು ಟೀಸರ್ ಮತ್ತು ಟ್ರೇಲರ್ ಸಾಬೀತುಪಡಿಸಿತ್ತು. ಇದೀಗ ಸಿನಿಮಾ ತೆರೆಕಂಡಿದ್ದು ಯುವರತ್ನ ಸಮಾಜಕ್ಕೆ‌ ಮಾದರಿ ಚಿತ್ರ ಎಂಬುದಂತೂ ಪಕ್ಕಾ. ಅಭಿ ಸಿನಿಮಾ ನಂತರ ಕಾಲೇಜ್ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಪ್ಪು, ಪವರ್ ಆಫ್ ಯೂತ್ ಅನ್ನೋದನ್ನ ಮತ್ತೆ ಇಲ್ಲಿ ಸಾಬೀತುಪಡಿಸಿದ್ದಾರೆ. ಲಾಸ್ಟ್ ಬೆಂಚ್ ಸ್ಟುಡೆಂಟ್ ಪವರ್ ಏನು‌ ಎಂಬುದನ್ನು ಇಲ್ಲಿ ಅಪ್ಪು ಪ್ರೂ ಮಾಡಿ ತೋರಿಸಿದ್ದಾರೆ. ಅಪ್ಪು ಯುವರತ್ನನ ರೂವಾರಿ. ಅವರಿಗೆ ನಾಯಕಿ ಸಯೇಶಾ. ಅವರ ಸುತ್ತ ಪ್ರಕಾಶ್‌ ರೈ, ಸಾಯಿ ಕುಮಾರ್‌, ಅವಿನಾಶ್‌, “ಡಾಲಿ” ಧನಂಜಯ್‌, ದಿಗಂತ್‌, ಸೋನುಗೌಡ, ರಂಗಾಯಣ ರಘು, ಸಾಧು ಕೋಕಿಲ, ಕುರಿ ಪ್ರತಾಪ್‌, ರಾಜೇಶ್‌ ನಟರಂಗ, ಸುಧಾರಾಣಿ, ಅರುಣ ಬಾಲರಾಜ್‌, ಕಾಕ್ರೋಚ್‌ ಸುಧಿ, ಅರುಗೌಡ ಹೀಗೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಒಂದು ರೀತಿ ಅಗತ್ಯಕ್ಕಿಂತಲೂ ಹೆಚ್ಚೇ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಇಷ್ಟಾದರೂ ಪ್ರತಿಯೊಂದು ಪಾತ್ರವೂ ಇಲ್ಲಿ ಹೈಲೈಟ್‌ ಎನಿಸುತ್ತದೆ. ಅವರೆಲ್ಲ ಏನೆಲ್ಲ ಪಾತ್ರಗಳಲ್ಲಿ ಹೇಗೆಲ್ಲ್‌ ರಂಜಿಸುತ್ತಾರೆ ಅನ್ನೋದನ್ನು ನೀವು ಚಿತ್ರದಲ್ಲೇ ನೋಡ್ಬೇಕು.
ಯುವರತ್ನನಿಗೆ ಪವರ್ ತುಂಬಿರುವುದು ದೊಡ್ಮನೆ ರಾಜಕುಮಾರ.

ಇಂಟರ್ವೆಲ್‌ವರೆಗೆ ಫುಲ್ ಪವರ್ ಫುಲ್. ಇಂಟರ್ವೆಲ್‌ ನಂತರ ಸಿನಿಮಾ ವೇಗ ಕೊಂಚ ಮಂದಗತಿಯಲ್ಲಿ ಸಾಗುತ್ತದೆ. ಯುವರತ್ನ ಲ್ಯಾಗ್ ಎನಿಸೋಕೂ ಶುರುವಾಗುತ್ತೆ. ಆದರೂ ಅಲ್ಲಲ್ಲಿ ಕಾಣುವ ಹಾಡುಗಳು, ಸ್ಟಂಟ್‌ಗಳು ಅವೆಲ್ಲವನ್ನೂ ಪಕ್ಕಕ್ಕೆ ಸರಿಸುತ್ತದೆ. ಯೂಥ್‌ಗೆ ಇಲ್ಲಿ ಮನರಂಜನೆಗಂತೂ ಮೋಸ ಆಗೋದಿಲ್ಲ. ಸಯೇಶಾ ಮತ್ತು ಪುನೀತ್‌ ಅವರ ಕೆಮಿಸ್ಟ್ರಿ ಅಷ್ಟೇನು ಕಿಕ್ ಕೊಡಲ್ಲ ಅನ್ನೋದು ಬಿಟ್ಟರೆ, ಸಂಭಾಷಣೆಯಲ್ಲಿ ಧಮ್‌ ಇದೆ. ಚಿತ್ರಕಥೆ ಕೂಡ ವೇಗದಲ್ಲಿದೆ. ಚಂದದ ನಿರೂಪಣೆಯೂ ಇದೆ. ಭರ್ಜರಿ ಮೇಕಿಂಗ್‌ ಕೂಡ ಇಷ್ಟವಾಗುತ್ತದೆ. ಇವೆಲ್ಲವನ್ನೂ ಅಂದಗಾಣಿಸಿರೋದು ಕ್ಯಾಮರಾ ಕೈಚಳಕ‌. ಕೆಲವು ಹಾಸ್ಯ ದೃಶ್ಯಗಳಲ್ಲಿ ಕತ್ತರಿ ಪ್ರಯೋಗ ಮಾಡಬಹುದಿತ್ತು. ಅನಗತ್ಯ ದೃಶ್ಯಕ್ಕೆ ಕತ್ತರಿ ಬಿದ್ದಿದ್ದರೆ, “ಯುವರತ್ನ” ಇನ್ನಷ್ಟು ಶೈನ್‌ ಆಗಿರುತ್ತಿದ್ದ. ಆದರೂ, ಇಲ್ಲಿ ಕೊಟ್ಟ ಕಾಸಿಗೆ ಮೋಸವಂತೂ ಇಲ್ಲ.

ಪುನೀತ್‌ ನಟನೆ ಇಲ್ಲಿ ಗಮನಸೆಳೆಯುತ್ತೆ. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಸ್ಟುಡೆಂಟ್‌ ಆಗಿ ಇಷ್ಟವಾಗುತ್ತಾರೆ. ಡ್ಯಾನ್ಸ್‌ನಲ್ಲೂ ಮೋಡಿ ಮಾಡಿದ್ದಾರೆ. ಇಲ್ಲೂ ಕೂಡ ಸಿಗ್ನೇಚರ್‌ ಸ್ಟೆಪ್‌ ಇದೆ. ಅದನ್ನು ಹೇಳುವುದಕ್ಕಿಂತ ನೋಡಿ ಅನ್ನುವುದೇ ಒಳಿತು. ಸಯೇಶಾ ಅಂದವಾಗಿದ್ದಾರೆ ಅನ್ನೋದು ಬಿಟ್ಟರೆ, ನಟನೆಗೆ ಹೆಚ್ಚು ಜಾಗ ಗಿಟ್ಟಿಸಿಕೊಂಡಿಲ್ಲ. ಹಾಗಾಗಿ ಅವರ ನಟನೆ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಇಡೀ ಸಿನಿಮಾದಲ್ಲಿ ಮತ್ತೊಂದು ವಿಶೇಷತೆ ಅಂದರೆ ಅದು ಪ್ರಕಾಶ್‌ ರೈ. ಅವರು ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಕೇಂದ್ರಬಿಂದು ಅಂದರೂ ತಪ್ಪಿಲ್ಲ. ಅವರ ಸುತ್ತ ಸಾಗುವ ಯುವರತ್ನ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿ ಪಾತ್ರಗಳು ತಮ್ಮದೇ ಛಾಪು ಮೂಡಿಸಿವೆ. ತಮನ್‌ ಸಂಗೀತದ ಹಾಡುಗಳಲ್ಲಿ ಎರಡು ಪರವಾಗಿಲ್ಲ. ಹಿನ್ನೆಲೆ ಸಂಗೀತ ಕೂಡ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಸಂಕಲನ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ. ಇನ್ನು ಒಂದೊಂದು ಫೈಟ್‌ ಕೂಡ ಅಷ್ಟೇ ಅದ್ಧೂರಿಯಾಗಿ ಮೂಡಿಬಂದಿವೆ. ಅದೇನೆ ಇದ್ದರೂ, ಯುವರತ್ನ ಒಂದೇ ವರ್ಗಕ್ಕಂತೂ ಸೀಮಿತವಲ್ಲ ಅನ್ನುವುದನ್ನು ಸಿನಿಮಾ ನೋಡಿದವರಿಗೆ ಗೊತ್ತಾಗುತ್ತೆ. ಯುವರತ್ನ ಯಾವುದರ ವಿರುದ್ಧ ಹೋರಾಡುತ್ತಾನೆ, ಯಾರ ವಿರುದ್ಧ ಗುಡುಗುತ್ತಾನೆ ಎಂಬ ಕುತೂಹಲವಿದ್ದರೆ ಒಮ್ಮೆ ಯುವರತ್ನನನ್ನು ಕಣ್ತುಂಬಿಕೊಳ್ಳಿ.

ಚಿತ್ರ : ಯುವರತ್ನ * ನಿರ್ದೇಶಕ : ಸಂತೋಷ್‌ ಆನಂದ ರಾಮ್‌ * *ನಿರ್ಮಾಪಕ : ವಿಜಯ್‌ ಕಿರಗಂದೂರು * ತಾರಾಗಣ : ಪುನೀತ್‌, ಸಯ್ಯೇಶಾ, ಪ್ರಕಾಶ್‌ ರೈ, ಅವಿನಾಶ್‌, ಡಾಲಿ ಧನಂಜಯ್‌, ಸಾಯಿಕುಮಾರ್‌, ದಿಗಂತ್‌, ಸೋನುಗೌಡ ಇತರರು.

Categories
ಸಿನಿ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕಾರ-ತಲೈವಾ ನಮ್ಮವರು ಎಂಬುದೇ ನಮಗೆ ಹೆಮ್ಮೆ….

ಕನ್ನಡದವರೇ ಆದ ದಕ್ಷಿಣ ಚಿತ್ರರಂಗದ ಸೂಪರ್‌ ಸ್ಟಾರ ರಜನಿಕಾಂತ್‌, ಪ್ರತಿಷ್ಟಿತ ದಾದಾ ಸಾಹೇಬ್‌ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಕೇಂದ್ರ ಸರ್ಕಾರ ನೀಡುವ ಪುರಸ್ಕಾರಕ್ಕೆ ರಜನಿ ಪಾತ್ರರಾಗಿರುವುದು ತಮಿಳು ಚಿತ್ರರಂಗಕ್ಕೆ ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೂ ದೊಡ್ಡ ಹೆಮ್ಮೆಯೇ. ಕೇಂದ್ರ ಸಚಿವ ಪ್ರಕಾಶ್‌ ಜಾವ್ಡೆಕರ್‌ ಗುರುವಾರ ಈ ಕುರಿತು ಅಧಿಕೃತ ಮಾಹಿತಿ ರಿವೀಲ್‌ ಮಾಡಿದ್ದಾರೆ. 2020ನೇ ಸಾಲಿನ 51ನೇ ಫಾಲ್ಕೆ ಪ್ರಶಸ್ತಿ ಇದಾಗಿದೆ.

ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ರಂಜಿಸಿ, ಸ್ಫೂರ್ತಿ ತುಂಬಿರುವ ತಲೈವಾ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ರಜನಿಕಾಂತ್ ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಿರುವ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. ಮಾಹಿತಿ ಹಂಚಿಕೊಳ್ಳುವ ಜೊತೆಗೆ ರಜನಿಕಾಂತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.2020 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್ ಹೆಸರನ್ನು ಫೋಷಿಸುತ್ತಿರುವುದು ಸಂತಸ ತಂದಿದೆ ಅಂತಲೂ ಹೇಳಿದ್ದಾರೆ. ಸದ್ಯ ತಮಿಳು ನಾಡಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಈ ನಡುವೆಯೂ ರಜನಿ ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ. ಕನ್ನಡ ಚಿತ್ರೋದ್ಯಮ ಕೂಡ ರಜನಿ ಅವರಿಗೆ ಅಭಿನಂದನೆ ಸಲ್ಲಿಸಿದೆ. ಈ ಮಧ್ಯೆ ಪ್ರಧಾನಿ ಮೋದಿ ಕೂಡ ರಜನಿ ಕಾಂತ್‌ ಅವರಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಯಾರದ್ದೋ ದುಡ್ಡು ಇನ್ನಾರದೋ ಹೆಸರು- ತಾನೇ ಚಕ್ರಾಧಿಪತಿ ಅಂದ ನಿರ್ದೇಶಕನಿಗೆ ಕ್ಲಾಸೋ ಕ್ಲಾಸ್‌ !

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ, ಹಾಗಾಯ್ತು ಈ ನಿರ್ದೇಶಕನ ಕಥೆ. ದುಡ್ಡು ಹಾಕಿದ ನಿರ್ಮಾಪಕರನ್ನೇ ಮರೆತು ತಾನೇ ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ ಅಂತೆಲ್ಲ ಪೋಸು ಕೊಟ್ಟಿದ್ದ. ಆ ತಪ್ಪಿಗೆ ಆತ ಕ್ಷಮೆ ಕೇಳಲೇಬೇಕಾಯಿತು. ಅದೂ ಬಹಿರಂಗ ಸಭೆಯಲ್ಲಿಯೇ ನಡೆದು ಹೋಯಿತು. ಚಿತ್ರ ತಂಡ ಆಯೋಜಿಸಿದ್ದ ಆಡಿಯೋ ಲಾಂಚ್‌ ಸಮಾರಂಭ ಅನ್ನೋದು ಜಗಳದ ವೇದಿಕೆ ಆಯಿತು. ಸಿಡಿದೆದ್ದ ನಿರ್ಮಾಪಕರು, ತಮ್ಮ ಅಳಲು ತೋಡಿಕೊಂಡರು. ಸಭಿಕರೂ ಸಿಟ್ಟಾದರು. ಅಷ್ಟಾದ್ಮೇಲೆ ಕೇಳ್ಬೇಕೆ, ನಿರ್ದೇಶಕ ವಿಧಿ ಇಲ್ಲದೆ ತಪ್ಪೊಪ್ಪಿಕೊಳ್ಳಬೇಕಾಯಿತು. ಮಾಡಿದ್ದಕ್ಕೆ ಕ್ಷಮೆ ಕೇಳಬೇಕಾಯಿತು. ಇದು ಆಗಿದ್ದು ಚಕ್ರಾಧಿಪತಿ ಹೆಸರಿನ ಚಿತ್ರದ ಆಡಿಯೋ ಲಾಂಚ್‌ ಸಂದರ್ಭ.

ಸಿನಿಮಾ ಅನ್ನೋದು ಈಗ ಅಷ್ಟಾಗಿ ಕೌತುಕ ಜಗತ್ತು ಅಂತೇನೂ ಉಳಿದಿಲ್ಲ. ಹೊರಾಂಗಣ ಚಿತ್ರೀಕರಣಕ್ಕೆ ಅದು ಇಳಿದ ದಿನದಿಂದಲೇ ಒಂದಷ್ಟು ಕೌತುಕ ಮಾಯವಾಗಿದೆ. ಅದೂ ಈ ಹೊತ್ತಿನ ಡಿಜಿಟಲ್‌ ಯುಗದಲ್ಲಂತೂ ಇನ್ನಷ್ಟು ಕೌತುಕ ಕಳೆದುಕೊಂಡಿದೇ ಅನ್ನೋದು ಇನ್ನಷ್ಟು ಸತ್ಯ. ಇಷ್ಟಾಗಿಯೂ ಕೆಲವರಿಗೆ ಸಿನಿಮಾ ಜಗತ್ತು ಇನ್ನು ಭ್ರಮ ಲೋಕವೇ. ಪರದೆ ಮೇಲೆ ಕಾಣಿಸಿಕೊಳ್ಳಬೇಕು, ತಾನೂ ನಿರ್ಮಾಪಕ ಅಂತೆನಿಸಿಕೊಳ್ಳಬೇಕೋ ಅನ್ನೋ ಶೋಕಿ ಜತೆಗೆ ಇಲ್ಲಿನ ತಳಕು ಬಳುಕಿಗೆ ಮಾರು ಹೋಗುವವರು ಇದ್ದಾರೆ. ಹಾಗಂತ ” ಚಕ್ರಾಧಿಪತಿʼ ಹೆಸರಿನ ಚಿತ್ರಕ್ಕೆ ಬಂಡಾವಾಳ ಹಾಕಿ, ಅದರಲ್ಲಿ ತಾವು ನಟರಾಗಿಯೂ ಕಾಣಿಸಿಕೊಂಡ ನಿರ್ಮಾಪಕರಿಗೂ ಅಂತಹದೊಂದು ಶೋಕಿ ಇದೆ ಅಂತ ಹೇಳುತ್ತಿಲ್ಲ. ಬದಲಿಗೆ ಅವರೊಂದಿಷ್ಟು ಅಮಾಯಕರಂತೂ ಹೌದು ಅಂತ ಗೊತ್ತಾಗಿದ್ದು ನಿರ್ದೇಶಕನ ಜಾಣ್ಮೆ ಕಂಡಾಗಲೇ.

ʼಚಕ್ರಾಧಿಪತಿʼ ಅನ್ನೋದು ಒಂದು ಪಕ್ಕಾ ಹೊಸಬರ ಚಿತ್ರ. ಬಹುತೇಕ ಇಲ್ಲಿವವರೆಲ್ಲ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕಡೆಯವರೇ. ಮಲಿಯಣ್ಣ ಅಂತ ಇದರ ನಿರ್ದೇಶಕರು. ಯುವ ಪ್ರತಿಭೆ. ಮೊದಲ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದಕ್ಕೆ ಏಳು ಮಂದಿ ನಿರ್ಮಾಪಕರು. ಎಲ್ಲರೂ ಸೇರಿಕೊಂಡು ತಮ್ಮದೇ ಬಜೆಟ್‌ ನಲ್ಲಿ ಸಿನಿಮಾ ಮಾಡೋಣ ಅಂತ ಬಂದವರು. ಕೆಲವರಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಆಸೆ. ಇನ್ನು ಕೆಲವರಿಗೆ ಸಿನಿಮಾ ನಿರ್ಮಾಪಕ ಎಂದೆನೆಸಿಕೊಳ್ಳುವ ಹಂಬಲ. ನಿರ್ದೇಶಕನ ಜಾಣ್ಮೆಯಲ್ಲೇ ಇವರೇ ಮೋಸ ಹೋದರು. ಅಂದ್ರೆ, ಚಿತ್ರದ ಪೋಸ್ಟರ್‌ ನಲ್ಲಿ ಇವರ ಹೆಸರೇ ಮಾಯ. ಅದೇ ಕಾರಣಕ್ಕೆ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಜಗಳದ ವೇದಿಕೆ ಆಯಿತು.

ಅಷ್ಟು ಜನರ ಹೆಸರು ಹಾಕೋದಿಕ್ಕೆ ಕಷ್ಟ ಅಂತ ನನ್ನ ಹೆಸರೇ ಹಾಕಿಕೊಂಡೆ ಅಂತ ನಿರ್ದೇಶಕ ಸ್ಪಷ್ಟನೆ ಕೊಟ್ಟರು ಪ್ರಯೋಜನ ಆಗಲಿಲ್ಲ. ನೀನು ನಿರ್ದೇಶಕನೆ, ನಿರ್ಮಾಪಕನೆ ಅಂತ ಸಭಿಕರೇ ಕ್ಲಾಸ್‌ ತೆಗೆದುಕೊಂಡರು. ಕೊನೆಗೆ ಆತ ಕ್ಷಮೆ ಕೇಳಲೇಬೇಕಾಯಿತು. ಆ ಗದ್ದಲದ ನಡುವೆ ಆಡಿಯೋ ಲಾಂಚ್ ಗೆ ವೇದಿಕೆ ಸಿದ್ದಪಡಿಸಿದ ಸಿರಿ ಮ್ಯೂಜಿಕ್‌ ಸಂಸ್ಥೆಯ ಮಾಲೀಕರೇ ಮೂಲೆಗುಂಪಾದರು. ಚಿತ್ರ ತಂಡ ಅಂದುಕೊಂಡಿದ್ದೇ ಒಂದು, ಅಲ್ಲಿ ಆಗಿದ್ದೇ ಇನ್ನೊಂದು ಎನ್ನುವ ಹಾಗಾಯಿತು ಪರಿಸ್ಥಿತಿ.

Categories
ಸಿನಿ ಸುದ್ದಿ

ಕೆಮಿಸ್ಟ್ರಿ ಆಫ್‌ ಕರಿಯಪ್ಪ ನಂತರ ನಟ ತಬಲ ನಾಣಿ ಸಿಕ್ಕಾಪಟ್ಟೆ ಬ್ಯುಸಿಯಂತೆ, ಅದು ಹೆಂಗೆ ? ಅವರೇ ಹೇಳ್ತಾರೆ ಕೇಳಿ….

ನಟ ತಬಲನಾಣಿ ಅಂದ್ರೆ ಕನ್ನಡದ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದೇ ಹಾಸ್ಯ ನಟರಾಗಿ. ಒಂದು ಸಿನಿಮಾದಲ್ಲಿ ಅವರಿದ್ದಾರೆಂದ್ರೆ ಅಲ್ಲಿ ಭರಪೂರ ಮನರಂಜನೆ ನೂರರಷ್ಟು ಖಚಿತ. ಅದಕ್ಕೆ ಸಾಕ್ಷಿ ಈಗಾಗಲೇ ಬಂದು ಹೋದ ಹಲವು ಸಿನಿಮಾ. ಅದರಲ್ಲೂ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದ ” ಕೆಮಿಸ್ಟ್ರಿ ಆಫ್‌ ಕರಿಯಪ್ಪ ʼ ಚಿತ್ರ. ಅದು ಅವರನ್ನು ಮತ್ತಷ್ಟು ಜನಪ್ರಿಯತೆ ಗೊಳಿಸಿದೆಯಂತೆ. ಈ ಚಿತ್ರ ಬಂದು ಹೋದ ನಂತರ ಬಹಳಷ್ಟು ಜನರು ಅವರನ್ನುಕೆಮಿಸ್ಟ್ರಿ ಕರಿಯಪ್ಪ ಅಂತಲೇ ಕರಿಯುತ್ತಾರಂತೆ. ಅದು ಅವರಿಗೂ ಒಂಥರ ಖುಷಿ ನೀಡಿದೆಯಂತೆ. ಅಷ್ಟೊಂದು ಜನಪ್ರಿಯತೆ ಅವರಿಗೆ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಚಿತ್ರದ ಮೂಲಕ ಸಿಕ್ಕಿದೆಯಂತೆ. ಅದರಾಚೆ ಅಲ್ಲಿಂದ ಅವರ ಸಿನಿ ಜರ್ನಿಯ ಕಥೆ ಏನಾಯ್ತು ಅನ್ನೋದೆ ಒಂದು ಇಂಟರೆಸ್ಟಿಂಗ್‌ ಕಥೆ ಇದೆಯಂತೆ. ಅದನ್ನ ಅವ್ರೇ ಹೇಳ್ತಾರೆ ಕೇಳಿ.

” ಒಂದು ಸಿನಿಮಾ ಗೆದ್ದರೆ, ಅದರಲ್ಲಿ ದುಡಿದವರೆಲ್ಲ ಬ್ಯುಸಿ ಆಗ್ತಾರೆ ಅಂತ ನಾನು ಚಿತ್ರೋದ್ಯಮಕ್ಕೆ ಬಂದಾಗಿನಿಂದ ಕೇಳುತ್ತಿದ್ದೆ. ಅದ್ಯಾಕೋ ನಂಗೆ ಅವತ್ತನಿಂದ ಅದು ನಿಜ ಅಂತ ಎನಿಸಿರಲಿಲ್ಲ. ಆದ್ರೆ ಅದು ನನ್‌ ಲೈಫ್‌ ನಲ್ಲೇ ನಿಜವಾಗಿದ್ದು “ಕೆಮಿಸ್ಟ್ರಿ ಆಫ್‌ ಕರಿಯಪ್ಪ ʼ ಚಿತ್ರ ಬಂದು ಹೋದ ನಂತರ. ಈ ಚಿತ್ರಕ್ಕೆ ಕನ್ನಡದ ಸಿನಿಮಾ ಪ್ರೇಕ್ಷಕರು ದೊಡ್ಡ ಸಕ್ಸಸ್‌ ಕೊಟ್ಟರು. ಹಾಗೆಯೇ ನಮಗೂ ಕೂಡ ಒಂದಷ್ಟು ಜನಪ್ರಿಯತೆ ಸಿಕ್ಕಿತು. ನಿಜ ಹೇಳ್ಬೇಕು ಅಂದ್ರೆ ಅದು ನನ್ನ ಟೈಟಲ್‌ ಕಾರ್ಡ್‌ ಬದಲಿಸಿತು. ಆ ಸಿನಿಮಾ ಬಂದು ಹೋದ ನಂತರ ಅಂತಹದೇ ಜಾನರ್‌ ನ ಸಿನಿಮಾಗಳು ಒಂದರ ಹಿಂದೆ ಒಂದು ಸರಣಿಯಲ್ಲಿ ನನ್ನನ್ನೇ ಹುಡುಕಿಕೊಂಡು ಬಂದವು. ಆದರೆ ಒಳ್ಳೆಯ ಕಥೆಗಳು ನನ್ನ ಆದ್ಯತೆ ಗಿತ್ತು. ಅದನ್ನೇ ಇಟ್ಕೊಂಡ್‌ ಇಂದುವರೆಗೂ ಎಂಟು ಸಿನಿಮಾಗಳಿಗೆ ನಾನು ಕಾಲ್‌ಸೀಟ್‌ ಕೊಟ್ಟಿದ್ದೇನೆ. ಇದು ಅಲ್ವೇ ಒಂದು ಸಕ್ಸಸ್‌ ನ ಫಲ ಅಂದ್ರೆ. ನಿಜಕ್ಕೂ ಖುಷಿ ಆಗ್ತಿದೆ ʼ ಅಂತ ನಟ ತಬಲ ನಾಣಿ ʼಕ್ರಿಟಿಕಲ್ ಕೀರ್ತನೆಗಳು ʼ ಚಿತ್ರದ ಟ್ರೇಲರ್‌ ನ ಸಕ್ಸಸ್‌ ಮೀಟ್‌ ಸುದ್ದಿಗೋಷ್ಟಿಯಲ್ಲಿ ಹಂಚಿಕೊಂಡರು.

ಅಂದ ಹಾಗೆ, ಕೆಮಿಸ್ಟ್ರಿ ಆಫ್‌ ಕರಿಯಪ್ಪ ಚಿತ್ರ ತಂಡದ ಮತ್ತೊಂದು ಚಿತ್ರವೇ ʼಕ್ರಿಟಿಕಲ್‌ ಕೀರ್ತನೆಗಳುʼ. ಕುಮಾರ್‌ ಈ ಸಿನಿಮಾದ ನಿರ್ದೇಶಕ. ಕೆಮಿಸ್ಟ್ರಿ ಸಿಕ್ಕ ದೊಡ್ಡ ಸಕ್ಸಸ್‌ ನಂತರ ತಾವೇ ಈ ಚಿತ್ರಕ್ಕೆ ಬಂಡವಾಳ ಹಾಕಿ, ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಚಿತ್ರದಲ್ಲಿದ್ದ ಬಹುತೇಕ ತಂಡವನ್ನೇ ಇಲ್ಲೂ ಮುಂದುವರೆಯುತ್ತೆ ಮಾಡಿದ್ದಾರೆ. ಅವರ ಪಯತ್ನದ ಬಗ್ಗೆ ಮಾತನಾಡಿದ ತಬಲ ನಾಣಿ, ಒಂದೊಳ್ಳೆಯ ತಂಡ ಇದ್ದಾಗ ಅದನ್ನು ಜೋಪಾನ ಮಾಡಿಕೊಂಡರೆ ಮತ್ತೊಂದು ಗೆಲವು ಕಾಣಬಹುದು. ಅದಕ್ಕೆ ಹಲವು ಸಿನಿಮಾ ಸಾಕ್ಷಿ ಆಗಿವೆ. ಕುಮಾರ್‌ ಅವರಲ್ಲಿ ಆ ಜಾಣತನ ಇದೆ. ಅದೇ ಕಾರಣಕ್ಕೆ ಈಗ ಕ್ರಿಟಿಕಲ್‌ ಕೀರ್ತನೆಗಳು ಚಿತ್ರದ ಟ್ರೇಲರ್‌ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ. ಇದನ್ನು ಇತರರು ಪಾಲಿಸಲಿ ಅಂತ ಚಿತ್ರೋದ್ಯಮಕ್ಕೆ ಕಿವಿ ಮಾತು ಹೇಳಿದರು..

Categories
ಸಿನಿ ಸುದ್ದಿ

20 ದಿನ 100 ಕೋಟಿ ಇದು ರಾಬರ್ಟ್‌ ದಾಖಲೆ! ನೂರು ಕೋಟಿ ಕ್ಲಬ್‌ ಸೇರಿತು ದರ್ಶನ್‌ ಸಿನಿಮಾ

ಕನ್ನಡ ಚಿತ್ರರಂಗದ ಮಟ್ಟಿಗೆ ಈ ಸಮಯದಲ್ಲಿ ಇದು ದೊಡ್ಡ ಸುದ್ದಿಯೇ. ಹೌದು, “ರಾಬರ್ಟ್‌” ನಿರೀಕ್ಷೆಯಂತೆಯೇ, ದೊಡ್ಡ ಸಕ್ಸಸ್‌ ಕಂಡಿದೆ. ಎಲ್ಲರಲ್ಲೂ ಇದ್ದದ್ದು ಒಂದೇ ಒಂದು ಪ್ರಶ್ನೆ, ಈ ಸಿನಿಮಾ 100 ಕೋಟಿ ಕ್ಲಬ್‌ ಸೇರುತ್ತಾ ಅನ್ನೋದು. ಅದಕ್ಕೀಗ ಉತ್ತರವೂ ಸಿಕ್ಕಿದೆ. ಹೌದು, “ರಾಬರ್ಟ್‌” ಚಿತ್ರ ಈಗ ನೂರು ಕೋಟಿ ಕ್ಲಬ್‌ ಸೇರಿದ್ದಾಗಿದೆ. ಕೇವಲ 20 ದಿನದಲ್ಲಿ ಈ ನೂರು ಕೋಟಿ ಗಳಿಕೆ ಕಂಡಿರೋದು ಸಹಜವಾಗಿಯೇ ಸಿನಿಮಾತಂಡಕ್ಕೆ ಖುಷಿ ಹೆಚ್ಚಿಸಿದೆ.

ಕೊರೊನಾ ನಂತರದ ದಿನಗಳಲ್ಲಿ ಚಿತ್ರರಂಗದ ಕಥೆ ಏನಪ್ಪಾ ಅಂದುಕೊಂಡೋರಿಗೆ ಈಗ “ರಾಬರ್ಟ್‌” ಧೈರ್ಯ ಕೊಟ್ಟಿರೋದು ಸುಳ್ಳಲ್ಲ. ಒಂದೊಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಟ್ಟಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದರ್ಶನ್‌ ಸಿನಿಮಾ ಅಂದರೆ, ಒಂದಷ್ಟು ಜನರಿಗೆ ಕ್ರೇಜ್‌ ಇದ್ದೇ ಇರುತ್ತೆ. “ರಾಬರ್ಟ್‌” ಟೈಟಲ್‌ ಅನೌನ್ಸ್‌ ಮಾಡಿದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ ಮಾರ್ಚ್‌ 11 ರಂದು ಬಿಡುಗಡೆಯಾಗಿದ್ದೇ ತಡ, ಎಲ್ಲರಲ್ಲೂ ಮತ್ತಷ್ಟು ಉತ್ಸಾಹ ಹೆಚ್ಚಿಸಿತ್ತು.

ಅವರ ಫ್ಯಾನ್ಸ್‌ಗಂತೂ “ರಾಬರ್ಟ್‌” ಭರ್ಜರಿ ಹಬ್ಬದೂಟದಂತಾಗಿತ್ತು. “ರಾಬರ್ಟ್‌”ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಮೆರೆದರು. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್‌ ಪ್ರರ್ದಶನ್‌ ಕಂಡಿತು. ಇನ್ನು, ತೆಲುಗಿನಲ್ಲೂ ಕೂಡ “ರಾಬರ್ಟ್‌” ದೊಡ್ಡ ಹವಾ ಎಬ್ಬಿಸಿದ್ದು ನಿಜ. ಅಲ್ಲೂ ಕೂಡ ದರ್ಶನ್‌ ಫ್ಯಾನ್ಸ್‌ ಸಿನಿಮಾವನ್ನು ಗೆಲ್ಲಿಸಿದರು.

ಕನ್ನಡದ ಮಟ್ಟಿಗೆ “ರಾಬರ್ಟ್‌” ಕೊರೊನಾ ಬಳಿಕ ದೊಡ್ಡ ಓಪನಿಂಗ್‌ ಕೊಟ್ಟಿದೆ. ಒಂದಷ್ಟು ಸಿನಿಮಾ ನಿರ್ಮಾಪಕರಿಗೂ ಅದು ಧೈರ್ಯ ಕೊಟ್ಟಿದೆ. ದರ್ಶನ್‌ ಗಲ್ಲಾ ಪೆಟ್ಟಿಗೆ ಸುಲ್ತಾನ್‌ ಅನ್ನುವುದನ್ನು ಪುನಃ ಸಾಬೀತುಪಡಿಸಿದ್ದಾರೆ. ಇದೇ ಖುಷಿಯಲ್ಲೇ “ರಾಬರ್ಟ್‌” ಚಿತ್ರತಂಡ ಇತ್ತೀಚೆಗೆ ಸಂಭ್ರಮ ಆಚರಿಸಿಕೊಂಡಿದೆ. ‌ನಿರ್ದೇಶಕ ತರುಣ್‌ ಸುಧೀರ್,ನಿರ್ಮಾಪಕ ಉಮಾಪತಿ, ವಿನೋದ್‌ ಪ್ರಭಾಕರ್‌ ಸೇರಿದಂತೆ ಚಿತ್ರತಂಡದ ಹಲವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!