Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ಕೈಗೆ ಗಾಯ- ಕ್ರಿಕೆಟ್‌ ಆಡುವಾಗ ಆಕಸ್ಮಿಕ ಪೆಟ್ಟು

ಮನೆ ಮುಂದೆ ಆಡುವಾಗ ನಡೆದ ಘಟನೆ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಗಳು, ಕೈಗೆ, ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡಾಗ, ಅದೊಂದು ಸೀನ್‌ಗೆ ಅಗತ್ಯ ಅನಿಸುವುದು ಸಹಜ. ಆದರೆ, ಚಿತ್ರೀಕರಣ ಹೊರತಾಗಿಯೂ ಬ್ಯಾಂಡೇಜ್‌ ಇದ್ದರೆ? ಅದು ಎಲ್ಲರಿಗೂ ಒಂದೊಂದು ಪ್ರಶ್ನೆ ಮತ್ತು ಗಾಬರಿ. ಅಂಥದ್ದೊಂದು ಪ್ರಶ್ನೆ, ಗಾಬರಿ ಶಿವರಾಜಕುಮಾರ್‌ ಅವರ ತೋರು ಬೆರಳಿಗೆ ಆಗಿರುವ ಗಾಯ ಕಾರಣವಾಗಿದೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕೈ ಗಾಯವಾಗಿದೆ. ಅದಕ್ಕೆ ಕಾರಣ, ಕಳೆದ ಎರಡು ದಿನಗಳ ಹಿಂದೆ ಅವರು ತಮ್ಮ ಮನೆಯಲ್ಲಿ ಕ್ರಿಕೆಟ್ ಆಡುತ್ತಿರಬೇಕಾದರೆ, ಆಕಸ್ಮಿಕವಾಗಿ ತಮ್ಮ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಅವರು ಬ್ಯಾಂಡೇಜ್‌ ಮಾಡಿಸಿದ್ದಾರೆ.

ಶಿವರಾಜ್‌ಕುಮಾರ್‌ ಅವರಿಗೆ ಕ್ರಿಕೆಟ್‌ ಅಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕರೆ,  ಹುಡುಗರಂತೆ ಅವರು ಬ್ಯಾಟ್‌ ಹಿಡಿದು ಫೀಲ್ಡ್‌ಗೆ ನಿಂತು ಬಿಡುತ್ತಾರೆ. ಒಂದಷ್ಟು ಹುಡುಗರನ್ನು ಕಟ್ಟಿಕೊಂಡು ಬ್ಯಾಟಿಂಗ್‌ ಮಾಡಲು ಹೊರಡುವ ಶಿವಣ್ಣ, ಮೊನ್ನೆ ಹಾಗೆ ಮಾಡಲು ಹೋಗಿ ಸದ್ಯ ತೋರು ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ಅರೆಬೆತ್ತಲೆ ಫೋಟೋ- ನಟಿಯ ಅಕೌಂಟ್‌ ಡಿಲೀಟ್!

ಟ್ವಿಟರ್ ನಿಲುವಿಗೆ ನಟಿ ನಿಖಿತಾ ಗೋಖಲೆ ಕಿಡಿಕಿಡಿ

  • ಶಶಿಧರ ಚಿತ್ರದುರ್ಗ

ಖ್ಯಾತ ಮರಾಠಿ ನಟಿ ನಿಖಿತಾ ಗೋಖಲೆ ಟ್ವಿಟರ್‌ ಮೇಲೆ ಮುನಿಸಿಕೊಂಡು ಕಿಡಿಕಾರುತ್ತಿದ್ದಾರೆ. ಮೊನ್ನೆ ಅವರು ತಮ್ಮ ಫೋಟೋಗಳನ್ನು ಅವರು ಟ್ವಿಟರ್‌ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇವು ‘ಕಲಾತ್ಮಕ ಫೋಟೋಗಳು’ ಎನ್ನುವುದು ಅವರ ವಿವರಣೆ. ಆದರೆ ಇವು ಆಕ್ಷೇಪಾರ್ಹ ಫೊಟೋಗಳು ಎಂದು ನಟಿಯ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಮಾಡಿದೆ ಟ್ವಿಟರ್‌.


ಟ್ವಿಟರ್ ನಿಲುವಿನಿಂದ ನಟಿ ನಿಖಿತಾ ಮುನಿಸಿಕೊಂಡಿದ್ದಾರೆ. ಇದರಿಂದ ತಮ್ಮ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎನ್ನುವುದು ಇದಕ್ಕೆ ಕಾರಣ. “ಶಾಕಿಂಗ್ ನ್ಯೂಸ್‌! ನಾನು ಎಂಟು ವರ್ಷದಿಂದ ನಿಭಾಯಿಸುತ್ತಿದ್ದ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಆಗಿದೆ. ನಾನು ಬೆತ್ತಲೆ ಫೋಟೋ ಹಾಕಿದ್ದೇನೆ ಎನ್ನುವ ವಿವರಣೆಯನ್ನು ಅವರು ಕೊಡುತ್ತಿದ್ದಾರೆ.  ಊಟ-ತಿಂಡಿಯ ಫೋಟೋ, ಕೆಲಸಕ್ಕೆ ಬಾರದ ಫೋಟೋಗಳೆಲ್ಲವನ್ನೂ ಹಾಕಬಹುದು. ಆದರೆ ಕಲಾತ್ಮಕತೆಯ ನನ್ನ ಫೋಟೋಗಳನ್ನು ಮಾತ್ರ ಹಾಕಬಾರದಂತೆ! ಇದೆಂಥ ನಿಯಮ” ಎಂದು ತಮ್ಮ ಕೋಪ ಹೊರ ಹಾಕಿದ್ದಾರೆ ಅವರು.

ಟ್ವಿಟರ್‌ ಖಾತೆ ಡಿಲೀಟ್‌ ಮಾಡಿದ್ದರಿಂದ ನಿರಾಸೆ ಹೊಂದಬೇಕಿಲ್ಲ ಎಂದು ನಿಖಿತಾ ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ. “ನಾನು ಕೂಡ ಇನ್ನು ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಊಟ-ತಿಂಡಿಯ ಫೊಟೋಗಳನ್ನು ಹಾಕುತ್ತೇನೆ. ನನ್ನ ಕಲಾತ್ಮಕ ಫೋಟೋಗಳನ್ನು ನನ್ನ ವೆಬ್‌ಸೈಟ್‌ನಲ್ಲಿ ಹಾಕಿಕೊಳ್ಳುತ್ತೇನೆ” ಎಂದಿದ್ದಾರೆ.

Categories
ಸಿನಿ ಸುದ್ದಿ

ರೈತರ ಪರವಾಗಿ ಮಾತನಾಡದ ನಟ-ನಟಿಯರ ಸಿನಿಮಾ ವೀಕ್ಷಿಸುವುದಿಲ್ಲ ಅಂತ ನೀವೇಕೆ ಹೇಳಬಾರದು ?

ಚಿಂತಕ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪ್ರಶ್ನೆ

ದೆಹಲಿ ಹೋರಾಟದ ಬಿಸಿ ಈಗ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಬಾಲಿವುಡ್‌ ನಲ್ಲಿ ಹೊತ್ತಿಕೊಂಡ ಬೆಂಕಿ, ಸಣ್ಣಗೆ ಈಗ ಸ್ಯಾಂಡಲ್‌ ವುಡ್‌ನಲ್ಲೂ ಕಾಣಿಸಿಕೊಂಡಿದೆ. ರೈತರ ಪರವಾಗಿ ಕಲಾವಿದರು ಯಾಕೆ ಮಾತನಾಡುತ್ತಿಲ್ಲ ಎನ್ನುವ
ಜನ ಸಾಮಾನ್ಯರಲ್ಲಿ ಕಾಡುತ್ತಿರುವ ಬೆನ್ನಲೇ ಪತ್ರಕರ್ತ ಹಾಗೂ ಚಿಂತಕ ದಿನೇಶ್‌ ಅಮೀನ್‌ ಮಟ್ಟು ನೇರವಾಗಿಯೇ ಸ್ಟಾರ್‌ ಗಳ ಮೌನವನ್ನು ಕೆಣಕಿದ್ದಾರೆ. ಹಾಗಂತ ಅವರ ದೂರು ಸ್ಟಾರ್‌ ಗಳ ಮೇಲೆ ಅಲ್ಲ. ಸ್ಟಾರ್‌ ಗಳನ್ನು ಮೆರೆಸುವ ಜನರ ಪರವಾಗಿ ಕನ್ನಡ ಸಂಘಟನೆಗಳು ಏನು ಮಾಡಬಹುದು ಎನ್ನುವುದಕ್ಕೆ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಆ ಮೂಲಕ ಮೌನಿಗಳಾದ ಸ್ಟಾರ್‌ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

“ ನಿಮ್ಮ ಚಿತ್ರಗಳನ್ನು ನೋಡಬೇಕಾದರೆ ಮೊದಲು ನೀವು ರೈತರ ಹೋರಾಟದ ಪರವಾಗಿ ಮಾತನಾಡಿ” ಎಂದು ಕನ್ನಡ ಚಿತ್ರನಟ-ನಟಿಯರ ಮೇಲೆ ಜನ ಒತ್ತಡ ಹಾಕಬಾರದೇಕೆ? ರೈತರ ಪರವಾಗಿ ಮಾತನಾಡದ ನಟ-ನಟಿಯರ ಚಿತ್ರಗಳನ್ನು ವೀಕ್ಷಿಸುವುದಿಲ್ಲ ಎಂದು ರೈತರು ಮತ್ತು ಅವರ ಪರವಾಗಿರುವವರು ಗಟ್ಟಿದನಿಯಲ್ಲಿ ಹೇಳುವ ಅಭಿಯಾನ ಯಾಕೆ ನಡೆಸಬಾರದು? ಕೇವಲ ಕಂಗನಾ, ಅಕ್ಷಯಕುಮಾರ್ ಗಳನ್ನು ಗೇಲಿಮಾಡುತ್ತಾ ಕೂತರೆ ಸಾಕೇ? ನಮ್ಮ ಕನ್ನಡ ಸಂಘಟನೆಗಳು ಇದರ ಬಗ್ಗೆಯೂ ಒಂದು ಟ್ವಿಟರ್ ಅಭಿಯಾನ ನಡೆಸಲಿ ಎಂದು ತಮ್ಮ ಪೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ತಮ್ಮ ಪೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಿಷ್ಟು…

ಕೊರೊನಾ ಪರಿಣಾಮದ ಪ್ರೇಕ್ಷಕರ ಬರಗಾಲದ ನಂತರ ಇದ್ದಕ್ಕಿದ್ದಂತೆ ಸಾಲುಸಾಲು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ, ಚಿತ್ರಮಂದಿರಗಳನ್ನು ತುಂಬುವ ಅಭಿಯಾನ ಬಿರುಸು ಪಡೆದಿದೆ. ಟಿವಿ ಚಾನೆಲ್ ಗಳಂತೂ ಚಿತ್ರಮಂದಿರಗಳು ತುಂಬಿ ತುಳುಕಾಡುತ್ತಿವೆ ಎಂಬಂತೆ ಪೇಯ್ಡ್ ಕ್ಯಾಂಪೇನ್ ನಡೆಸುತ್ತಿವೆ. ಚಿತ್ರನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಚಾನೆಲ್ ಗಳ ತೆರೆಯ ಮೇಲೆ ಕಾಣಿಸಿಕೊಂಡು ಪ್ರೇಕ್ಷಕಪ್ರಭುವಿಗೆ ಕೈಮುಗಿದು,ಕಾಲಿಗೆರಗಿ ಕರೆಯುತ್ತಿದ್ದಾರೆ.

ನಿಜ, ಕೊರೊನಾದಿಂದಾಗಿ ಚಿತ್ರರಂಗ ಕಷ್ಟದಲ್ಲಿದೆ ಪ್ರೇಕ್ಷಕರೂ ಚಿತ್ರನೋಡಿ ಸಹಕರಿಸಬೇಕು. ಆದರೆ ನಮ್ಮ ಅನ್ನದಾತರೂ ಕಷ್ಟದಲ್ಲಿದ್ದಾರಲ್ಲಾ, ಅನ್ನತಿನ್ನುವ ಈ ನಟ-ನಟಿಯರೂ ಅವರಿಗೂ ನೆರವಾಗಬೇಕಲ್ಲ? ಇಲ್ಲಿಯ ವರೆಗೆ ಎಷ್ಟು ಮಂದಿ ನಟ-ನಟಿಯರು,ನಿರ್ದೇಶಕ ನಿರ್ಮಾಪಕರು ರೈತರ ಪರವಾಗಿ ದನಿ ಎತ್ತಿದ್ದಾರೆ? ಹ್ಯಾಟ್ರಿಕ್, ಕಿಚ್ಚು, ಡಿಚ್ಚು,ಪವರ್, ಗೋಲ್ಡ್,ಸಿಲ್ವರ್ ಗಳಲ್ಲಿ ಯಾರಾದರೂ ಬಾಯಿ ಬಿಟ್ಟಿದ್ದಾರಾ? ಕನ್ನಡ ಸಿನೆಮಾಗಳ ಬಹುಪಾಲು ಪ್ರೇಕ್ಷಕರು ಹಳ್ಳಿಗಳಲ್ಲಿದ್ದಾರೆ, ನಗರ-ಪಟ್ಟಣಗಳಲ್ಲಿಯೂ ಕನ್ನಡ ಚಿತ್ರಗಳನ್ನು ಹೆಚ್ಚು ನೋಡುವವರು ಗ್ರಾಮೀಣ ಪ್ರದೇಶದಿಂದ ಬಂದವರು. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೇಕ್ಷಕರಾಗಿ ಪರಿವರ್ತನೆಗೊಂಡಿರುವ ನಗರ-ಪಟ್ಟಣಗಳಲ್ಲಿ ಹುಟ್ಟಿಬೆಳೆದವರು, ಯುವಜನರು ಚಿತ್ರಮಂದಿರದ ಕಡೆ ತಲೆಹಾಕುವುದಿಲ್ಲ.

ಇತ್ತೀಚೆಗೆ ‘ಆ್ಯಕ್ಟ್ 1978’ ಚಿತ್ರದ ನಿರ್ದೇಶಕ ಮನಸೋರೆ ಮತ್ತು ಕತೆಗಾರ ಟಿ.ಕೆ.ದಯಾನಂದ್ ಹಾಗೂ ಬೆಲ್ ಬಾಟಮ್ ಚಿತ್ರದ ನಿರ್ದೇಶಕ ಜಯತೀರ್ಥ ಅವರು ರೈತರ ಹೋರಾಟವನ್ನು ಬೆಂಬಲಿಸಿದರು ಎನ್ನುವ ಕಾರಣಕ್ಕೆ ‘ಅರ್ಬನ್ ನಕ್ಸಲ್ ಸಿನೆಮಾ ಬಹಿಷ್ಕರಿಸಿ’ ಎಂದು ಭಕ್ತರು ಕ್ಯಾಂಪೇನ್ ಶುರುಮಾಡಿದ್ದರು. ಈ ಎರಡುರೂಪಾಯಿ ಗಿರಾಕಿಗಳ ಪೋಸ್ಟ್ ಗಳಿಗೆ ಯಾರೂ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ಬೇರೆ ಮಾತು. ಅದನ್ನೇ ತಿರುಗಿಸಿ ಕೊಡಲು ಅವಕಾಶ ಕೂಡಿ ಬಂದಿದೆ. “ ನಿಮ್ಮ ಚಿತ್ರಗಳನ್ನು ನೋಡಬೇಕಾದರೆ ಮೊದಲು ನೀವು ರೈತರ ಹೋರಾಟದ ಪರವಾಗಿ ಮಾತನಾಡಿ” ಎಂದು ಕನ್ನಡ ಚಿತ್ರನಟ-ನಟಿಯರ ಮೇಲೆ ಒತ್ತಡ ಹಾಕಬಾರದೇಕೆ? ರೈತರ ಪರವಾಗಿ ಮಾತನಾಡದ ನಟ-ನಟಿಯರ ಚಿತ್ರಗಳನ್ನು ವೀಕ್ಷಿಸುವುದಿಲ್ಲ ಎಂದು ರೈತರು ಮತ್ತು ಅವರ ಪರವಾಗಿರುವವರು ಗಟ್ಟಿದನಿಯಲ್ಲಿ ಹೇಳುವ ಅಭಿಯಾನ ಯಾಕೆ ನಡೆಸಬಾರದು? ಕೇವಲ ಕಂಗನಾ, ಅಕ್ಷಯಕುಮಾರ್ ಗಳನ್ನು ಗೇಲಿಮಾಡುತ್ತಾ ಕೂತರೆ ಸಾಕೇ? ಇದರ ಬಗ್ಗೆಯೂ ಒಂದು ಟ್ವಿಟರ್ ಅಭಿಯಾನ ನಡೆಸಲಿ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಆಸ್ಕರ್ ರೇಸ್‌ನಿಂದ ಹೊರಬಿದ್ದ ‘ಜಲ್ಲಿಕಟ್ಟು’

ಭಾರತೀಯ ಸಿನಿಮಾಗಳಿಗೇಕೆ ಇಲ್ಲ ಮನ್ನಣೆ?  ಗಿರೀಶ್‌ ಕಾಸರವಳ್ಳಿ ವಿಶ್ಲೇಷಣೆ ಇಲ್ಲಿದೆ

  • ಲೇಖನ- ಶಶಿಧರ ಚಿತ್ರದುರ್ಗ

ಲಿಜೋ ಜೋಸ್ ಪೆಲ್ಲಿಸ್ಸರಿ ನಿರ್ದೇಶನದ ‘ಜಲ್ಲಿಕಟ್ಟು’ ಮಲಯಾಳಂ ಸಿನಿಮಾ 93ನೇ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ನಾಮ ನಿರ್ದೇಶನಗೊಂಡಿತ್ತು. ಅತ್ಯುತ್ತಮ ಅಂತಾರಾಷ್ಟ್ರೀಯ ಫ್ಯೂಚರ್ ಸಿನಿಮಾ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದ್ದ ಸಿನಿಮಾ ಅಂತಿಮ ಐದು ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುವಲ್ಲಿ ವಿಫಲವಾಗಿದೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆಯುವ ಭಾರತೀಯರ ಕನಸು ಮತ್ತೊಮ್ಮೆ ಕಮರಿ ಹೋಗಿದೆ. ಹಾಗೆ ನೋಡಿದರೆ ‘ಜೆಲ್ಲಿಕಟ್ಟು’ ಚಿತ್ರದ ಬಗ್ಗೆ ಹಿರಿಯ ಸಿನಿಮಾ ತಂತ್ರಜ್ಞರು ಭಾರಿ ಭರವಸೆಯಿಟ್ಟಿದ್ದರು. ಈ ಚಿತ್ರದೊಂದಿಗೆ ಭಾರತಕ್ಕೆ ಆಸ್ಕರ್‌ ಗೌರವ ಸಿಗಲಿದೆ ಎಂದೇ ಹೇಳಲಾಗಿತ್ತು.

ಆದರೆ ನಿರೀಕ್ಷೆ ಹುಸಿಯಾಗಿದೆ. ಇಲ್ಲಿಯವರೆಗೆ ಆಸ್ಕರ್‌ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಅಂತಿಮ ಐದರ ಪಟ್ಟಿಗೆ ಹೋಗಿರುವುದು ಮೂರು ಸಿನಿಮಾಗಳಷ್ಟೆ. “ಮದರ್ ಇಂಡಿಯಾ” (1958), “ಸಲಾಂ ಬಾಂಬೆ” (1989) ಮತ್ತು “ಲಗಾನ್‌” (2001) ಅಂತಿಮ ಐದು ಚಿತ್ರಗಳ ಪಟ್ಟಿಗೆ ಹೋದರೂ ಆಸ್ಕರ್ ಪ್ರಶಸ್ತಿ ಗಳಿಸುವಲ್ಲಿ ವಿಫಲವಾಗಿದ್ದವು. ಭಾರತೀಯ ಸಿನಿಮಾಗಳು ವಿವಿಧ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸುವುದಿದೆ. ಆದರೆ ಆಸ್ಕರ್ ಸಂದರ್ಭದಲ್ಲಿ ಇದಾಗದು. ಕನ್ನಡದ ಹೆಮ್ಮೆಯ ಹಿರಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ವಿಶ್ಲೇಷಿಸುವುದು ಹೀಗೆ –

ಗಿರೀಶ್‌ ಕಾಸರವಳ್ಳಿ

“ಈ ವಿಚಾರವನ್ನು ನಾವು ವಿವಿಧ ಆಯಾಮಗಳಲ್ಲಿ ಗಮನಿಸಬೇಕಾಗುತ್ತದೆ. ಅಲ್ಲಿನ ಮಾನ ದಂಡಗಳೇ ಬೇರೆ ಇರುತ್ತವೆ. ಅಲ್ಲಿ ಕತೆ ಹೇಳುವ ಕ್ರಮವೇ ಬೇರೆ ಇರುತ್ತದೆ. ನಾವು ನಮ್ಮನೆಯಲ್ಲಿ ಮಾಡಿದ ಅಡುಗೆಯೇ ಶ್ರೇಷ್ಠ ಎಂದುಕೊಳ್ಳಲಾಗದು. ಜೊತೆಗೆ ನಾವು ಅಲ್ಲಿಗೆ ರೆಕಮೆಂಡ್ ಮಾಡುವ ಸಿನಿಮಾಗಳು ಕೂಡ ಸರಿ ಇಲ್ಲದಿರಬಹುದು. ಆದರೆ ಈ ಬಾರಿಯ “ಜೆಲ್ಲಿಕಟ್ಟು” ಸಿನಿಮಾ ಉತ್ತಮ ಆಯ್ಕೆಯೇ ಆಗಿತ್ತು. ಆದಾಗ್ಯೂ ಅಲ್ಲಿನ ಜ್ಯೂರಿಗಳು ಚಿತ್ರದಲ್ಲಿ ಹುಡುಕುವ ವಸ್ತು ಬೇರೆಯದ್ದೇ ಆಗಿರುತ್ತದೆ. ಚಿತ್ರದಲ್ಲಿ ಪೊಲಿಟಿಕಲ್ ಟೋನ್‌, ಏಸ್ತಟಿಕ್ ಸೆನ್ಸ್ ನೋಡುತ್ತಾರೆ. ಹೀಗೆ ಹಲವು ಕಾರಣಗಳಿರುತ್ತವೆ. ಮುಖ್ಯವಾಗಿ ಅಲ್ಲಿ ವೋಟಿಂಗ್ ಇರುತ್ತದೆ. ಸಾಕಷ್ಟು ಹಣ ಖರ್ಚು ಮಾಡಿ ಜ್ಯೂರಿಗಳಿಗೆ ಸಿನಿಮಾ ತೋರಿಸಿ, ಅವರನ್ನು ಮೆಚ್ಚಿಸಬೇಕಾಗುತ್ತದೆ.

ಮಿತ ವೆಚ್ಚದಲ್ಲಿ ಸಿನಿಮಾ ಮಾಡುವ ನಮಗೆ ಅದೆಲ್ಲವೂ ಕೈಗೆಟುಕದು. ಬಹುಶಃ ಆ ಪ್ರಕ್ರಿಯೆಯಲ್ಲೂ ಭಾರತೀಯ ಸಿನಿಮಾಗಳು ಹಿಂದೆ ಉಳಿಯುವಂತಾಗುತ್ತದೆ. ಮೊದಲೆಲ್ಲಾ ಆಸ್ಕರ್‌ಗೆ ಹಾಡು, ಕುಣಿತದ ಸಾಕಷ್ಟು ಭಾರತೀಯ ಸಿನಿಮಾಗಳನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಇಂತಹ ಚಿತ್ರಗಳನ್ನು ನೋಡಿರುವ ಜ್ಯೂರಿಗಳು ಭಾರತೀಯ ಸಿನಿಮಾಗಳ ಬಗ್ಗೆಯೇ ಒಂದು ಪೂರ್ವಾಗ್ರಹ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿರುತ್ತವೆ.
ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ಸಿನಿಮಾಗಳು ಆಸ್ಕರ್ ಗೌರವ ಪಡೆಯುವ ಯೂನಿವರ್ಸಲ್ ವಸ್ತು ಇದ್ದಂಥವು. ರೇ ಅವರ ‘ಚಾರುಲತ’ ಸೇರಿದಂತೆ ಮತ್ತೊಂದೆರೆಡು ಚಿತ್ರಗಳು ಅಂತಹ ಗುಣ ಹೊಂದಿದ್ದವು. ಆದರೆ ಅವರ ಚಿತ್ರಗಳನ್ನು ನಾಮನಿರ್ದೇಶನ ಮಾಡುವಲ್ಲಿ ಹಿಂದೆ ಉಳಿದರು. ಕೊನೆಗೆ ಆಸ್ಕರ್ ಕಮಿಟಿಯವರೇ ಬಂದು ಸತ್ಯಜಿತ್ ರೇ ಅವರ ಕೊನೆಗಾಲದಲ್ಲಿ ಅವರಿಗೆ ಗೌರವ ಸಲ್ಲಸಿದರು. ಬರ್ಲಿನ್‌, ಫ್ರಾನ್ಸ್ ಸೇರಿದಂತೆ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಆಯ್ಕೆಯ ಮಾನದಂಡಗಳೇ ಬೇರೆಯಾಗಿರುತ್ತವೆ. ಆಸ್ಕರ್ ಕೂಡ ಇದಕ್ಕೆ ಹೊರತಲ್ಲ” ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ಜಿಮ್‌ ರವಿ ಈಗ ಹೀರೋ

ಬಾಡಿಬಿಲ್ಡರ್‌  ಪುರುಷೋತ್ತಮ

ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗಮನಸೆಳೆದಿದ್ದ ಜಿಮ್‌ ರವಿ ಈಗ ಹೀರೋ. ಹೌದು, ಜಿಮ್‌ ರವಿ ಅವರಿಗೆ ಸಿನಿಮಾ ಹೊಸದಲ್ಲ. ಕನ್ನಡ ಚಿತ್ರರಂಗದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜಿಮ್ ರವಿ, ಪೋಷಕ ಪಾತ್ರಗಳಲ್ಲೇ ಜನಮನ ಗೆದ್ದವರು.


ಇವರಿಗೆ ಜಿಮ್‌ ರವಿ ಅನ್ನೋ ಹೆಸರಿನ ಬಗ್ಗೆ ಹೇಳುವುದಾದರೆ, ಇವರು ಅಂತರಾಷ್ಟ್ರೀಯ ಬಾಡಿ ಬಿಲ್ಡರ್. ಹಲವು ದೇಶಗಳಲ್ಲಿ ಸ್ಪರ್ಧಿಸಿ, ಗೆಲುವು ಕಂಡವರು. ಸಾಕಷ್ಟು ಪ್ರಶಸ್ತಿಗಳಿಗೂ ಕಾರಣರಾದವರು. ಸಣ್ಣಪುಟ್ಟ ಪಾತ್ರಗಳ ಮೂಲಕವೇ ಗಮನ ಸೆಳೆದಿದ್ದ ಜಿಮ್‌ ರವಿ ಅವರಿಗೆ ಸಿನಿಮಾ ಮೇಲೆ ಅಪಾರ ಪ್ರೀತಿ ಇದೆ. ಈಗ ನಾಯಕನಾಗಿ ವೀಕ್ಷಕರ ಮುಂದೆ ಬರುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ.

ಹೌದು ಸ್ಯಾಂಡಲ್ವುಡ್ ನಲ್ಲಿ ಜಿಮ್ ರವಿ ಅವರೀಗ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಪುರುಷೋತ್ತಮ” ಎಂದು ನಾಮಕರಣ ಮಾಡಲಾಗಿದೆ. ರವೀಸ್ ಜಿಮ್ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರಕ್ಕೆ ಜಿಮ್ ರವಿ ಅವರೇ ನಾಯಕ ಅನ್ನೋದು ಸುದ್ದಿ. ಅಂದಹಾಗೆ, ಫೆ.೧೪ ರಂದು ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ಅಮರ್ನಾಥ್ ಎಸ್.ವಿ ನಿರ್ದೇಶಿಸುತ್ತಿದ್ದಾರೆ.

Categories
ಸಿನಿ ಸುದ್ದಿ

‘ಗಣಪತ್‌’ ಟೈಗರ್‌ಗೆ ನಾಯಕಿ ಕೃತಿ, ವಿಕಾಸ್ ಬೆಹ್ಲ್ ನಿರ್ದೇಶನದ ದುಬಾರಿ ಹಿಂದಿ ಸಿನಿಮಾ

ಕನಸು ನನಸಾದ ಖುಷಿಯಲ್ಲಿ ಕೃತಿ 

ಬಹುಕೋಟಿ ವೆಚ್ಚದ ಬಾಲಿವುಡ್‌ ಸಿನಿಮಾ ‘ಗಣಪತ್‌’ ಇಂದು ತಮ್ಮ ಸಿನಿಮಾದ ನಾಯಕಿ ಕೃತಿ ಸನೂನ್‌ ಎಂದು ಘೋಷಿಸಿದೆ. ನಟ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್‌ ಚೊಚ್ಚಲ ನಿರ್ದೇಶನದ ‘ಹೀರೋಪಂಥ್‌’ನಲ್ಲಿ ಕೃತಿ ನಾಯಕಿಯಾಗಿದ್ದರು. ಇದೀಗ ಮತೊಮ್ಮೆ ‘ಗಣಪತ್‌’ನಲ್ಲಿ ಜೋಡಿಯಾಗಿ ನಟಿಸಲಿದ್ದು, ಭರ್ಜರಿ ಫೋಟೋಶೂಟ್ ಫೋಟೋದೊಂದಿಗೆ ಚಿತ್ರತಂಡ ಅವರನ್ನು ಪರಿಚಯಿಸಿದೆ.

ದೊಡ್ಡ ಸಿನಿಮಾದ ಅವಕಾಶಕ್ಕೆ ಸಂಭ್ರಮಿಸುತ್ತಿರುವ ಕೃತಿ, “ಏಳು ವರ್ಷಗಳ ನಂತರ ಮತ್ತೆ ಟೈಗರ್ ಶ್ರಾಫ್‌ಗೆ ಜೋಡಿಯಾಗುತ್ತಿದ್ದೇನೆ. ಔಟ್‌ ಅಂಡ್ ಔಟ್‌ ಆಕ್ಷನ್ ಚಿತ್ರದಲ್ಲಿ ನಟಿಸಬೇಕೆನ್ನುವ ನನ್ನ ಕನಸು ‘ಗಣಪತ್‌’ ಪ್ರಾಜೆಕ್ಟ್‌ನೊಂದಿಗೆ ಕೈಗೂಡುತ್ತಿದೆ. ನಿಸ್ಸಂಶಯವಾಗಿ ಈ ಯೋಜನೆ ನನ್ನ ವೃತ್ತಿಬದುಕಿನ ದೊಡ್ಡ ಸಿನಿಮಾ ಆಗಲಿದೆ” ಎಂದಿದ್ದಾರೆ.

ನಟ ಟೈಗರ್ ಶ್ರಾಫ್‌ ಕೂಡ ನಾಯಕಿಯ ಇಂಟ್ರಡಕ್ಷನ್ ವೀಡಿಯೋ ಹಾಕಿ ಕೃತಿಯನ್ನು ಆಹ್ವಾನಿಸಿದ್ದಾರೆ. ನಿರ್ದೇಶಕ ವಿಕಾಸ್ ಬೆಹ್ಲ್‌, “ಕೃತಿ ಒಳ್ಳೆಯ ಸ್ಕ್ರೀನ್ ಪ್ರಸೆನ್ಸ್‌ ಹೊಂದಿದ್ದು, ಅವರು ಅತ್ಯುತ್ತಮ ಆಕ್ಷನ್ ಹೀರೋಯಿನ್ ಆಗುವ ಎಲ್ಲಾ ಲಕ್ಷಣ ಹೊಂದಿದ್ದಾರೆ. ಈ ಜೋಡಿ ತೆರೆ ಮೇಲೆ ಮೋಡಿ ಮಾಡಲಿದೆ” ಎಂದಿದ್ದಾರೆ. ವಸು ಬಗ್ನಾನಿ, ಜಾಕಿ ಬಗ್ನಾನಿ, ದೀಪ್ಶಿಕಾ ದೇಶ್‌ಮುಖ್‌, ವಿಕಾಸ್ ಬೆಹ್ಲ್ ನಿರ್ಮಾಣದ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು, 2022ಕ್ಕೆ ಸಿನಿಮಾ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ನಟಿಯರಿಗೆ ಸವಾಲೊಡ್ಡಿದ ಬಾಲಿವುಡ್‌ ನಟಿ ಕಂಗನಾ!

ಹಾಲಿವುಡ್‌ ತಾರೆಯರಿಗೆ ತಮ್ಮನ್ನು ಹೋಲಿಸಿ ಟ್ವೀಟ್ ಮಾಡಿದ  ಕ್ವೀನ್‌!

 

ವಿವಾದಿತ ಹೇಳಿಕೆ, ಟ್ವೀಟ್‌ಗಳ ಮೂಲಕ ಸುದ್ದಿಯಾಗುವ ಕಂಗನಾ ಮತ್ತೊಂದು ಇಂಥದ್ದೇ ಟ್ವೀಟ್‌ನೊಂದಿಗೆ ಹಾಜರಾಗಿದ್ದಾರೆ. “ಸದ್ಯ ನನ್ನಂತೆ ವಿಭಿನ್ನ ಪಾತ್ರಗಳಿಗೆ ನ್ಯಾಯ ಸಲ್ಲಿಸುವಂಥ ಮತ್ತೊಬ್ಬ ನಟಿ ಈ ಭೂಮಿ ಮೇಲಿಲ್ಲ. ಹಾಲಿವುಡ್‌ ನಟಿ ಮೆರಿಲ್ ಸ್ಟ್ರೀಪ್‌ ಅವರಂತೆ ನಾನು ‘ಕಚ್ಛಾ ಪ್ರತಿಭೆ’. ಅಲ್ಲದೆ ನಟಿ ಗಾಲ್‌ ಗ್ಯಾಡೋಟ್‌ ಅವರಂತೆ ಆಕ್ಷನ್‌ ಮತ್ತು ಗ್ಲಾಮರ್ ಪಾತ್ರಗಳಿಗೂ ನಾನು ಸೈ” ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಕಂಗನಾ ಪ್ರಸ್ತುತ ವಿಭಿನ್ನ ಪಾತ್ರಗಳ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕ್ಷನ್‌-ಥ್ರಿಲ್ಲರ್‌ ‘ಧಾಕಡ್‌’, ಬಯೋಪಿಕ್‌ ‘ತಲೈವಿ’ ಸಿನಿಮಾಗಳ ಆಶ್‌ಟ್ಯಾಗ್‌ಗಳೊಂದಿಗೆ ಅವರು ಈ ಟ್ವೀಟ್ ಮಾಡಿದ್ದಾರೆ. ಕಂಗನಾ ಟ್ವೀಟ್‌ಗೆ ನೆಟ್ಟಿಗರು ಹತ್ತಾರು ರೀತಿ ತಮಾಷೆಯ ಟ್ವೀಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ‘ಸುದ್ದಿಯಲ್ಲಿರಲು, ತಮ್ಮ ಸಿನಿಮಾ ಪ್ರಚಾರಕ್ಕಾಗಿ ಕಂಗನಾ ಏನು ಬೇಕಾದರೂ ಮಾಡುತ್ತಾರೆ, ಈ ಟ್ವೀಟ್‌ಗಳಲ್ಲಿ ನಾನು, ನಾನು ಎನ್ನುವುದನ್ನು ಸಾಕಷ್ಟು ಬಾರಿ ಬಳಕೆ ಮಾಡಿರುವ ನಿಮಗೆ ಮಾನಸಿಕ ವೈದ್ಯರ ಅವಶ್ಯಕತೆ ಇದೆ!” ಎನ್ನುವ ಪ್ರತಿಕ್ರಿಯೆಯ ಒಕ್ಕಣಿಯ ಟ್ವೀಟ್‌ಗಳು ಕಾಣಿಸುತ್ತಿವೆ.

ಇದೊಂದು ಟ್ವೀಟ್‌ಗೆ ಸುಮ್ಮನಾಗದ ಕಂಗನಾ ಮತ್ತೊಂದು ಟ್ವೀಟ್ ಮಾಡಿ, “ಈ ವಿಚಾರವಾಗಿ ನಾನು ಚರ್ಚೆಗೆ ಸಿದ್ಧಳಿದ್ದೇನೆ. ಜಗತ್ತಿನ ಯಾವುದೇ ಭಾಗದಲ್ಲಿ ಯಾರಾದರೂ ನನ್ನಂತೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಯಶಸ್ವಿಯಾಗಿರುವುದನ್ನು ತೋರಿಸಲಿ. ಆಗ ನಾನು ಅವರಿಗೆ ಶರಣಾಗುತ್ತೇನೆ” ಎಂದು ಸವಾಲು ಹಾಕಿದ್ದಾರೆ.

‘ಧಾಕಡ್‌’ ಚಿತ್ರೀಕರಣದಲ್ಲಿರುವ ಕಂಗನಾ ಅವರು ನಟಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ ‘ತಲೈವಿ’ಯಲ್ಲೂ ನಟಿಸುತ್ತಿದ್ದಾರೆ. ‘ತೇಜಸ್‌’ ಮತ್ತು ‘ಮಣಿಕರ್ಣಿಕಾ2’ ಅವರ ಮುಂದಿನ ಸಿನಿಮಾಗಳು. ಸೆಟ್ಟೇರಲಿರುವ ಮತ್ತೊಂದು ಪೊಲಿಟಿಕಲ್ ಡ್ರಾಮಾ ಹಿಂದಿ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ಅವರು ಆ ಪಾತ್ರದಲ್ಲಿನ ತಮ್ಮ ಚಿತ್ರವನ್ನು ಟ್ವೀಟ್ ಮಾಡಿದ್ದರು.

Categories
ಸಿನಿ ಸುದ್ದಿ

ಹಿಂದಿ ನಟ, ನಿರ್ಮಾಪಕ ರಾಜೀವ್ ಕಪೂರ್ ಇನ್ನಿಲ್ಲ

ಹಿಂದಿ ಚಿತ್ರರಂಗದ ಪ್ರತಿಷ್ಠಿತ ಕಪೂರ್ ಕುಟುಂಬದ ಹಿರಿಯ ನಟ, ನಿರ್ಮಾಪಕ ರಾಜೀವ್ ಕಪೂರ್ ಇಂದು ಅಗಲಿದ್ದಾರೆ.

ನಟ, ನಿರ್ಮಾಪಕ, ನಿರ್ದೇಶಕ ರಾಜೀವ್ ಕಪೂರ್‌ (58 ವರ್ಷ) ಇಂದು ಹೃದಯಾಘಾತದಿಂದ ಅಗಲಿದ್ದಾರೆ. ಬಾಲಿವುಡ್‌ನ ಶೋಮ್ಯಾನ್ ಎಂದೇ ಹೆಸರಾಗಿದ್ದ ರಾಜ್‌ಕಪೂರ್ ಅವರ ಕೊನೆಯ ಪುತ್ರ ರಾಜೀವ್‌. ನಟ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ತಮ್ಮ ನಿರ್ದೇಶನದ ದುಬಾರಿ ಬಜೆಟನ್‌ನ ಮಹತ್ವಾಕಾಂಕ್ಷೆಯ ಸಿನಿಮಾ ‘ಪ್ರೇಮ್‌ಗ್ರಂಥ್‌’ ಚಿತ್ರದ ಸೋಲಿನ ನಂತರ ಅವರು ಚಿತ್ರರಂಗದಿಂದ ದೂರ ಸರಿದಿದ್ದರು.

ತಂದೆ ರಾಜ್‌ಕಪೂರ್ ಮಾರ್ಗದರ್ಶನದಲ್ಲಿ ಸಿನಿಮಾರಂಗದಲ್ಲಿ ಅನುಭವ ಪಡೆದ ರಾಜೀವ್‌ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಏಕ್ ಜಾನ್ ಹೈ ಹಮ್‌’ (1983) ಚಿತ್ರದೊಂದಿಗೆ. ಚೊಚ್ಚಲ ಚಿತ್ರ ತೆರೆಕಂಡು ಎರಡು ವರ್ಷದ ನಂತರ ತಂದೆ ರಾಜ್‌ಕಪೂರ್‌ ನಿರ್ದೇಶನದಲ್ಲಿ ರಾಜೀವ್‌ ನಟಿಸಿದ ‘ರಾಮ್ ತೇರಿ ಗಂಗಾ ಮೈಲಿ’ (1985) ದೊಡ್ಡ ಯಶಸ್ಸು ಕಂಡಿತು. ಆದರೆ ಈ ಗೆಲುವು ಅವರ ಮುಂದಿನ ಚಿತ್ರಗಳಲ್ಲಿ ದಾಖಲಾಗಲಿಲ್ಲ. ಆಸ್ಮಾನ್‌, ಲವರ್‌ಬಾಯ್‌, ಜಬರ್‌ದಸ್ತ್‌, ಹಮ್ ತೋ ಚಲೇ ಪರ್ದೇಸ್‌, ಜಿಮ್ಮೇದಾರ್‌ ರಾಜೀವ್‌ ನಟನೆಯ ಇತರೆ ಪ್ರಮುಖ ಚಿತ್ರಗಳು.

ತಮ್ಮ ಹಿರಿಯ ಸಹೋದರರಾದ ರಣಧೀರ್ ಕಪೂರ್ ನಿರ್ದೇಶನದ ‘ಹೆನ್ನಾ’ ಮತ್ತು ರಿಷಿ ಕಪೂರ್ ನಿರ್ದೇಶನದ ‘ಆ ಅಬ್ ಲೌಟ್‌ ಚಲೇ’ ಎರಡೂ ರಾಜೀವ್ ನಿರ್ಮಾಣದ ಚಿತ್ರಗಳು. ಹಿರಿಯ ಸಹೋರದ ರಿಷಿ ಕಪೂರ್ ಮತ್ತು ಮಾಧುರಿ ದೀಕ್ಷಿತ್‌ ಜೋಡಿಗೆ ರಾಜೀವ್ ನಿರ್ದೇಶಿಸಿದ ‘ಪ್ರೇಮ್‌ಗ್ರಂಥ್‌’ ವಿಫಲವಾಯ್ತು. ಈ ಚಿತ್ರದ ಸೋಲಿನ ನಂತರ ರಾಜೀವ್ ಕಪೂರ್ ಚಿತ್ರರಂಗದಿಂದ ಬಹುತೇಕ ದೂರ ಉಳಿದಿದ್ದರು.

Categories
ಸಿನಿ ಸುದ್ದಿ

ಸ್ಕೇರಿ ಫಾರೆಸ್ಟ್‌ನಲ್ಲಿ ಭಾವನೆಗಳ ಪಯಣ

ಫೆ.28ಕ್ಕೆ ಸಿನಿಮಾ ಬಿಡುಗಡೆ

ಕನ್ನಡಕ್ಕೆ ಥ್ರಿಲ್ಲರ್‌ ಸಿನಿಮಾಗಳು ಹೊಸದೇನಲ್ಲ. ದಿನ ಕಳೆದಂತೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಥ್ರಿಲ್ಲರ್‌ ಸಿನಿಮಾ ನೋಡುವ ವರ್ಗವೇ ದೊಡ್ಡದಿದೆ. ಹಾಗಾಗಿ, ಹೊಸಬಗೆಯ ಥ್ರಿಲ್ಲರ್‌ ಚಿತ್ರಗಳು ಇಲ್ಲಿ ಬರುತ್ತಲೇ ಇವೆ. ಆ ಸಾಲಿಗೆ ಈಗ “ಸ್ಕೇರಿ ಫಾರೆಸ್ಟ್‌” ಎಂಬ ಹೊಸಬರ ಚಿತ್ರ ಕೂಡ ಸೇರಿದೆ. ಸಂಜಯ್ ಅಬೀರ್ ನಿರ್ದೇಶನದ ಈ ಚಿತ್ರ ಫೆ.೨೮ ರಂದು ಬಿಡುಗಡೆಯಾಗುತ್ತಿದೆ.

 

 

 

 

ಚಿತ್ರದ ಬಗ್ಗೆ ಹೇಳುವುದಾದರೆ, ಕಾಲೇಜು ಸ್ಟೂಡೆಂಟ್ಸ್‌ ಸೇರಿ ಸಂಶೋಧನೆಗೆ ಕಾಡಿಗೆ ತೆರಳಿ ಅಲ್ಲಿ ಯಾವುದೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ ಅನ್ನೋದು ಈ ಸಿನಿಮಾದ ಕಥೆ. ಮನುಷ್ಯನೋ, ಆತ್ಮನೋ ಎನ್ನುವ ಕುತೂಹಲ ಈ ಸಿನಿಮಾದಲ್ಲಿ ‌ಕ್ಯೂರಿಯಾಸಿಟಿ ಈ ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ಮಾತು.

 

 

 

 

 

 

 

ಸಿನಿಮಾದಲ್ಲಿ ಆರು ಹಾಡುಗಳಿವೆ. ಎಲ್ಲಾ ಜಾನರ್‌ ಹಾಡುಗಳು ಇಲ್ಲಿ ಕಾಣಬಹುದು. ನಿರ್ದೇಶಕ ಸಂಜಯ್ ಅಬೀರ್ ಸಿನಿಮಾ ಬಗ್ಗೆ ಹೇಳುವುದಿಷ್ಟು. ಇದೊಂದು ಭಾವನೆಗಳ ಗುಚ್ಛವಿರುವ ಚಿತ್ರ. ಒಳ್ಳೆಯ ತಂಡದೊಂದಿಗೆ ಉತ್ಸಾಹದಿಂದ ಈ ಸಿನಿಮಾ ಮಾಡಲಾಗಿದೆ, ಎಲ್ಲಾ ವರ್ಗಕ್ಕೂ ಇದು ಇಷ್ಟವಾಗಲಿದೆ ಎನ್ನುತ್ತಾರೆ ಅವರು. ಜಯಪ್ರಭ ಚಿತ್ರದ ಹೀರೋ.

 

 

 

 

 

 

ಸಿನ್ಮಾ ಕುರಿತು ಹೇಳುವ ಅವರು, “ನಾನು ಹುಟ್ಟಿನಿಂದಲೇ ರಾಜ್ ಕುಮಾರ್ ಅಭಿಮಾನಿ‌. ಬಾಲಿವುಡ್ ನನಗೆ ಬೇಸ್ ಆಯಿತು. ಒಂದೊಳ್ಳೆಯ ಕಥೆಯಲ್ಲಿ ನಾನಿದ್ದೇನೆ ಅನ್ನೋದು ಹೆಮ್ಮೆ ಎಂಬುದು ಅವರ ಮಾತು. ನಾಯಕಿ ಟೀನಾ ಪೊನ್ನಪ್ಪ. ಕೂಡ ಪಾತ್ರದ ಬಗ್ಗೆ ಹೇಳಿಕೊಂಡು, ಶೇ. 90 ರಷ್ಟುಚಿತ್ರೀಕರಣ ಸಿದ್ಧಗಂಗಾ ಮಠದಲ್ಲಿ ನಡೆದಿದೆ.

 

 

 

 

 

 

 

ಅಮ್ರಿನಾ ಕಲ್ಪನಾ ಅವರಿಲ್ಲಿ 22 ವರ್ಷದ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ. “ಪ್ರೀತಿಯ ಬಲೆಯಲ್ಲಿ ಹೇಗೆ ಬೀಳ್ತೀನಿ, ಹೀರೋನ ಇಷ್ಟ ಪಟ್ಟರೆ, ಹೀರೋ ಮತ್ತೊಬ್ಬಳ ಪ್ರೀತಿಯ ಬಲೆಯಲ್ಲಿ ಬೀಳ್ತಾಳೆ. ನನಗೆ ಆಮೇಲೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಕಥೆ. ಈ ಸಿನಿಮಾಗೆ ದೇವರಾಜ್, ಪ್ರಕಾಶ ಹಾಡನ್ನು ಬರೆದು ಹಾಡಿದ್ದಾರೆ. “ಪ್ರೀತಿ, ಭಯ, ಆತ್ಮ” ಎಂಬ ಅಡಿಬರಹವಿದೆ. ಪಂಚಾಕ್ಷರಿ, ಬೇಬಿ ಪೂಜಾ, ಪರಶಿವಯ್ಯ, ಸಾಹಿತಿ ದೇವರಾಜ್ ಪ್ರಕಾಶ್ ಇತರರು ಸಿನಿಮಾ ಬಗ್ಗೆ ಹೇಳಿಕೊಂಡರು.

 

Categories
ಸಿನಿ ಸುದ್ದಿ

ರಿಲೀಸ್‌ ಆಯ್ತು ಆಕ್ಷನ್‌-ಥ್ರಿಲ್ಲಿಂಗ್‌ ‘ಎಫ್‌9’ ಟೀಸರ್‌ !

ಜನಪ್ರಿಯ ‘ಫಾಸ್ಟ್‌ ಅಂಡ್‌ ಫ್ಯೂರಿಯಸ್‌’ ಹಾಲಿವುಡ್‌ ಸರಣಿ ಸಿನಿಮಾ ತೆರೆಗೆ ರೆಡಿ

ಹಾಲಿವುಡ್‌ನ ಅತ್ಯಂತ ಜನಪ್ರಿಯ ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ನೂತನ ಸಿನಿಮಾ ‘ಎಫ್‌9’ ಟೀಸರ್ ಬಿಡುಗಡೆಯಾಗಿದೆ. ಮೂವತ್ತು ಸೆಕೆಂಡ್‌ಗಳ ಚಿಕ್ಕ ಅವಧಿಯ ಟೀಸರ್ ಎನ್ನುವುದು ವಿಶೇ‍ಷ! ಭರಪೂರ ಆಕ್ಷನ್ ಜೊತೆ ಇಲ್ಲಿ ಫ್ಯಾಮಿಲಿ ಸೆಂಟಿಮೆಂಟ್‌ ಕೂಡ ಯತೇಚ್ಛವಾಗಿ ಇರುವಂತಿದೆ. ಕಳೆದ ಸರಣಿ ಸಿನಿಮಾಗಳಿಗಿಂತ ಕೊಂಚ ಭಿನ್ನವಾಗಿರಲಿದೆ ಎಂದು ನಿರ್ದೇಶಕ ಜಸ್ಟಿನ್ ಲಿನ್ ಮೊದಲೇ ಹೇಳಿಕೊಂಡಿದ್ದರು. ಅದರ ಸೂಚನೆ ಟೀಸರ್‌ನಲ್ಲಿ ಕಾಣಿಸುತ್ತದೆ. ಕುಟುಂಬದ ಸೀನ್‌, ಔತಣಕೂಟದೊಂದಿಗೆ ಆರಂಭವಾಗುವ ಟೀಸರ್‌ ಆಕ್ಷನ್‌ಗೆ ತೆರೆದುಕೊಳ್ಳುತ್ತದೆ. ಜಾನ್‌ ಸೆನಾ, ಹೆಲನ್ ಮಿರನ್‌ರ ನಗು, ಚಾರ್ಲ್ಸ್‌ ಥೆರೋನ್‌ ಕಣ್ಣು ಹೊಡೆವುದೇಕೆ ಎನ್ನುವುದು ಸಸ್ಪೆನ್ಸ್‌!

“ಬದಲಾವಣೆ ಜಗದ ನಿಯಮ. ಆದರೆ ಒಂದು ವಿಚಾರದಲ್ಲಿ ಬದಲಾವಣೆ ಕಾಣಿಸಲು ಸಾಧ್ಯವೇ ಇಲ್ಲ” ಎನ್ನುತ್ತಾರೆ ವಿನ್‌ ಡೀಸೆಲ್‌. ಈ ಸಂಭಾಷಣೆ, ಪಾತ್ರದೊಂದಿಗೆ ನಿರ್ದೇಶಕರು ಏನು ಹೇಳಲು ಹೊರಟಿರಬಹುದು ಎನ್ನುವ ಕುತೂಹಲ ಉಳಿಯುತ್ತದೆ. ಡೇನಿಯಲ್ ಕೇಸಿ ಅವರೊಡಗೂಡಿ ಜಸ್ಟಿನ್ ಲಿನ್ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.

ಇದು ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ಒಂಬತ್ತನೇ ಸಿನಿಮಾ. ಈ ಸರಣಿಯ ಮುಂದಿನ ಎರಡು ಚಿತ್ರಗಳನ್ನೂ ಜಸ್ಟಿನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನುವ ಘೋಷಣೆ ಈಗಾಗಲೇ ಹೊರಬಿದ್ದಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಚಿತ್ರ 2020ರ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಚಿತ್ರದ ಬಿಡುಗಡೆ ದಿನಾಂಕ 2021ರ ಮೇ 28ಕ್ಕೆ ನಿಗಧಿಯಾಗಿದೆ. ಟೈರಿಸ್ ಗಿಬ್ಸನ್‌, ಕ್ರಿಸ್‌ ಲ್ಯುಡಾಕ್ರಿಸ್‌, ಸಂಗ್ ಕಾಂಗ್‌, ಚಾರ್ಲ್ಸ್‌ ಥೆರೋನ್‌, ಹೆಲನ್ ಮಿರನ್‌, ಜೋರ್ಡಾನ್ ಬ್ರ್ಯೂಸ್ಟರ್‌, ಜಾನ್ ಸೆನಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

error: Content is protected !!