ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆದರೆ, ಪ್ರತಿ ವರ್ಷದಂತೆ ಈ ಬಾರಿ ಅವರು ತಮ್ಮ ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಗ್ರಾಂಡ್ ಬರ್ತ್ ಡೇ ಆಚರಣೆಗೆ ಬ್ರೇಕ್ ಹಾಕಿ, ಕುಟುಂಬದವರ ಜತೆಗೆ ಮಾತ್ರ ಸರಳವಾಗಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬರ್ತ್ ಡೇ ಮುನ್ನ ದಿನವೇ ಅವರು ಫೇಸ್ ಬುಕ್ ಮೂಲಕ ಲೈವ್ ಬಂದು, ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ, ಅಭಿಮಾನಿಗಳು ಯಾರು ಕೂಡ ಮನೆ ಹತ್ತಿರ ಬರಬಾರದು ಅಂತ ಮನವಿ ಮಾಡಿಕೊಂಡಿದ್ದರು. ಅಂತೆಯೇ ಈ ಬಾರಿ ಅವರು ಯಾವುದೇ ಆಡಂಬರ ಇಲ್ಲದೆ ಸರಳವಾಗಿಯೇ ಹುಟ್ಟು ಆಚರಿಸಿಕೊಂಡರೂ, ಸೋಷಲ್ ಮೀಡಿಯಾ ಮೂಲಕ ಅವರ ಹುಟ್ಟು ಹಬ್ಬಕ್ಕೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ವಿಶೇಷವಾಗಿ ನಟರಾದ ದರ್ಶನ್, ಸುದೀಪ್ ಸೇರಿದಂತೆ ಕನ್ನಡದ ಹಲವು ನಟರು ಟ್ವಿಟರ್ ಸೇರಿದಂತೆ ಸೋಷಲ್ ಮೀಡಿಯಾದಲ್ಲಿ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹಾಗೆಯೇ ಅಭಿಮಾನಿಗಳು ಕೂಡ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯದ ಮಹಾಪೂರವೇ ಹರಿದು ಬಂದಿದ್ದು ವಿಶೇಷ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಬೇಜಾರಾಗಬೇಕಿಲ್ಲ. ಪ್ರತಿ ವರ್ಷದಂತೆ ಈ ವರ್ಷ ತಮ್ಮ ನೆಚ್ಚಿನ ನಟನ ಗ್ರಾಂಡ್ ಬರ್ತಡೇ ಸಲೆಬ್ರೆಷನ್ ಇಲ್ಲ ಅಂತಲೋ ಅಥವಾ ಮಾರ್ಚ್ 20 ಕ್ಕೆ ಫಿಕ್ಸ್ ಆಗಿದ್ದ ಯುವರತ್ನ ಟೀಮ್ ನ ಯುವ ಸಂಭ್ರಮ ಕ್ಯಾನ್ಸಲ್ ಆಗಿದೆ ಅಂತಲೋ, ಬೇಸರಿಸಿಕೊಳ್ಳಬೇಕಿಲ್ಲ. ಅದಕ್ಕೂ ಒಂದು ಹೊಸ ಪ್ಲಾನ್ ಹಾಕಿಕೊಂಡಿದೆ ಚಿತ್ರ ತಂಡ. ಹಾಗಾದ್ರೆ ಅದೇನು ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಕನ್ನಡದ ಮಟ್ಟಿಗೆ ” ಯುವರತ್ನʼ ಬಹು ನಿರೀಕ್ಷಿತ ಸಿನಿಮಾ. ʼರಾಜಕುಮಾರʼ ದಂತಹ ಬ್ಲಾಕ್ ಬಸ್ಟರ್ ಸಿನಿಮಾ ನಂತರ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ಇಲ್ಲಿ ಮತ್ತೆ ಒಂದಾಗಿದೆ.ಹಾಗಂತ ಈ ಸಿನಿಮಾದ ಕ್ಯೂರಿಯಾಸಿಟಿಗೆ ಅದಷ್ಟೇ ಕಾರಣವಲ್ಲ, ಇದು ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಅದ್ದೂರಿ ವೆಚ್ಚದ ಸಿನಿಮಾ. ಬಿಗ್ ಬಜೆಟ್ ಸಿನಿಮಾ ಎನ್ನುವುದರ ಜತೆಗೆ ಬಿಗ್ ಸ್ಟಾರ ಸಿನಿಮಾವೂ ಹೌದು. ಹೊಂಬಾಳೆ ಫಿಲಂಸ್ ಅಂದ್ರೆ ಇವತ್ತು ಭಾರತೀಯ ಚಿತ್ರರಂಗಕ್ಕೇ ಪರಿಚಿತ ಇರುವ ಪ್ರೊಡಕ್ಷನ್ ಹೌಸ್. ಕನ್ನಡದ ಮಟ್ಟಿಗೀಗ ದೊಡ್ಡ ಬ್ಯಾನರ್. ಬಂಡವಾಳ ಹಾಕಿದ್ದಷ್ಟೇ, ಅಧಿಕ ಲಾಭ ಪಡೆಯುವ ಚಾಣಾಕ್ಷತೆ ಇರುವಂತಹ ಸಂಸ್ಥೆ. ಅದೇ ಕಾರಣಕ್ಕೀಗ ಇಡೀ ಭಾರತೀಯ ಚಿತ್ರರಂಗವೇ “ಕೆಜಿಎಫ್ ೨ʼ ಗಾಗಿ ಕಾಯುತ್ತಿದೆ. ಈ ನಡುವೆ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಸಿನಿಮಾ” ಯುವರತ್ನʼ
ಸದ್ಯಕ್ಕೀಗ ʼಯುವರತ್ನʼದ ರಿಲೀಸ್ ಡೇಟ್ ಏಪ್ರಿಲ್ ಕ್ಕೆ1 ಫಿಕ್ಸ್ ಆಗಿದೆ. ಈಗಾಗಲೇ ಪೋಸ್ಟರ್ನಿಂದಲೇ ದೊಡ್ಡ ಕುತೂಹಲ ಕೆರಳಿಸಿದೆ ಈ ಸಿನಿಮಾ. ಹಾಗೆಯೇ ಹಾಡುಗಳ ಲಿರಿಕಲ್ ವಿಡಿಯೋ ಮೂಲಕವೂ ಸೆನ್ಸೆಷನ್ ಸೃಷ್ಟಿಸಿದೆ. ಈಗ ರಿಲೀಸ್ ಪೂರ್ವ ಪ್ರಚಾರಕ್ಕೂ ಚಿತ್ರ ತಂಡ ತನ್ನದೇ ತಂತ್ರ ಹೆಣೆದಿದೆ. ಮಾರ್ಚ್ 20ಕ್ಕೆ ಮೈಸೂರಿನಲ್ಲಿ ಯುವರತ್ನದ ” ಯುವ ಸಂಭ್ರಮʼ ಫಿಕ್ಸ್ ಆಗಿತ್ತು. ಕಾರಣಾಂತರಗಳಿಂದ ಅದೀಗ ರದ್ದಾಗಿದೆ. ಚಿತ್ರ ತಂಡ ಪರವಾಗಿಯೇ ಚಿತ್ರದ ನಾಯಕ ನಟ ಪುನೀತ್ ರಾಜ್ ಕುಮಾರ್ ಆ ವಿಷಯ ರಿವೀಲ್ ಮಾಡಿದ್ದಾರೆ. ಸದ್ಯಕ್ಕೆ ಅದರಕಾರಣ ನಿಗೂಢ. ಆದರೆ ಕೊರೋನಾ ಅನ್ನೋದು ಸ್ಪಷ್ಟ.
ಇನ್ನು ಅಪ್ಪು ಅಂದ್ರೆ ಹುಡುಗಾಟಿಕೆ ಅಲ್ಲ. ಕರ್ನಾಟಕದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಹೊಂದಿರುವ ನಟ ಅವರು. ಅವರದೇ ಒಂದು ಪ್ರೋಗ್ರಾಮ್ ಫಿಕ್ಸ್ ಆಗಿದೆ ಅಂದ್ರೆ ಮೈಸೂರಿನಲ್ಲಿ ಮತ್ತೊಂದು ದಸರಾ ಫಿಕ್ಸ್. ಅಭಿಮಾನಿಗಳ ಜಾತ್ರೆಯೇ ಸೇರುವುದೂ ಗ್ಯಾರಂಟಿ . ಆದರೆ ಈಗ ಕೊರೋನಾ ಹೆಚ್ಚಳದ ಕಾರಣಕ್ಕೆ ಸರ್ಕಾರ ಒಂದಷ್ಟು ಕಠಿಣ ನಿರ್ಧಾರ ಪ್ರಕಟಿಸಿದೆ. ಆ ಪ್ರಕಾರ 500 ಕ್ಕೂ ಹೆಚ್ಚು ಜನ ಸೇರಿಸಿ ಬಹಿರಂಹ ಸಭೆ ನಡೆಸುವಂತಿಲ್ಲ. ಅದೇ ಕಾರಣಕ್ಕೇ ʼಯುವರತ್ನʼ ಚಿತ್ರದ ಯುವ ಸಂಭ್ರಮ ಕ್ಯಾನ್ಸಲ್ ಅನ್ನೋದು ಗ್ಯಾರಂಟಿ. ಹಾಗಂತ ಚಿತ್ರ ತಂಡ ಸುಮ್ಮನೆ ಕುಳಿತಿಲ್ಲ. ಅದಕ್ಕೂ ತನ್ನದೇ ತಂತ್ರ ಹೆಣೆದಿದೆ. ಪುನೀತ್ ರಾಜ್ ಕುಮಾರ್ ಪ್ರಕಾರ ಅದು ಪ್ರತಿ ಜಿಲ್ಲೆಯ ಭೇಟಿ.
” ಇಷ್ಟು ದಿನ ನನ್ನ ಮನೆಬಾಗಿಲಿಗೆ ಬಂದು ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ನಿಮಗೆ, ನಾನೀಗ ಒಂದು ಸ್ಪೆಷಲ್ ಗಿಫ್ಟ್ ನೀಡುತ್ತಿದ್ದೇನೆ. ನಾನೇ ನಿಮ್ಮೂರಿಗೆ ಬರುತ್ತಿದ್ದೇನೆ. ಅಲ್ಲಿಗೆ ಬಂದು ನಿಮ್ಮೊಂದಿಗೆ ಒಂದಷ್ಟು ಸಮಯ ಕಳೆಯಬೇಕು ಅನ್ನೋದು ನನ್ನ ಆಸೆ. ಅದೇ ಕಾರಣಕ್ಕೆ ಹುಟ್ಟು ಹಬ್ಬದ ಗ್ರಾಂಡ್ ಸೆಲೆಬ್ರೇಷನ್ ಕ್ಯಾನ್ಸಲ್ ಆಗಿದೆ. ಜತೆಗೆ ಮೈಸೂರಿನ ಯುವ ಸಂಭ್ರಮ ಕೂಡ ರದ್ದಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಒಂದಷ್ಟು ಕರೆಗಳು ಬಂದವು. ನೀವು ಮೈಸೂರಿಗಷ್ಟೇ ಯಾಕೆ ಕಾರ್ಯಕ್ರಮ ಸೀಮಿತ ಗೊಳಿಸಿದ್ದೀರಿ, ನಮ್ಮೂರಿನಲ್ಲೂ ಮಾಡಿ ಅಂತ ಸಲಹೆ ಕೊಟ್ಟರು. ಅದೇ ಕಾರಣಕ್ಕೀಗ ನಿಮ್ಮೂರಿಗೆ ನಿಮ್ಮ ಅಪ್ಪು ಬರುತ್ತಿದ್ದಾರೆ.ಇಷ್ಟರಲ್ಲಿಯೇ ಕಾರ್ಯಕ್ರಮ ಫಿಕ್ಸ್ ಆಗಲಿದೆ. ಅದಕ್ಕಾಗಿ ಸಹಕರಿಸಿ ಅಂತ ಫ್ಯಾನ್ಸಿಗೆ ಮನವಿ ಮಾಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
ಬಾಲಿವುಡ್ ನಲ್ಲಿ ಒಂದು ಟ್ರೆಂಡ್ ಇದೆ. ಯಾವುದೇ ಸಿನಿಮಾ ಸಂಬಂಧಿತ ಸಭೆ-ಸಮಾರಂಭಗಳಲ್ಲಿ ಸ್ಟಾರ್ ಗಳೆಲ್ಲ ಬಹುತೇಕ ಬ್ಲಾಕ್ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಯಾಕೆ, ಅವರ ಕಾರುಗಳು ಕೂಡ ಬುತೇಕ ಬ್ಲಾಕ್ ಬಣ್ಣದವೇ ಆಗಿವೆ. ಕನ್ನಡದ ಮಟ್ಟಿಗೆ ಅಂತಹದೇ ಟ್ರೆಂಡ್ ಫಾಲೋ ಮಾಡುತ್ತಿರುವವರ ಪೈಕಿ ನಟ ಕಿಚ್ಚ ಸುದೀಪ್ ಅವರು ಕೂಡ ಒಬ್ಬರು. ಹಾಗಂತ ಅವರೇನು ಬಾಲಿವುಡ್ ಸ್ಟಾರ್ ಗಳನ್ನು ಫಾಲೋ ಮಾಡುತ್ತಿದ್ದಾರೆ ಅಂತ ಭಾವಿಸಬೇಡಿ. ನಿಜಕ್ಕು ಅವರು ಫಾಲೋ ಮಾಡುತ್ತಿರುವುದು ಕನ್ನಡದ ಮತ್ತೊಬ್ಬ ಸ್ಟಾರ್ ಅನ್ನು. ಅವರೇ ಕ್ರೇಜಿ ಸ್ಟಾರ್ ರವಿಚಂದ್ರನ್.
ಕಿಚ್ಚ ಸುದೀಪ್ ಅವರು ಬ್ಲಾಕ್ ಡ್ರೆಸ್ ಹಾಕೋದಿಕ್ಕೆ ರವಿಚಂದ್ರನ್ ಅವರೇ ಕಾರಣವಂತೆ. ಹಾಗಂತ ನಾವ್ ಹೇಳ್ತೀಲ್ಲ, ಸ್ವತಹ: ಕಿಚ್ಚ ಸುದೀಪ್ ಅವರೇ ಇಂತಹದೊಂದು ಇಂಟೆರೆಸ್ಟಿಂಗ್ ಸಂಗತಿಯನ್ನು ಬಹಿರಂಗವಾಗಿ ರಿವೀಲ್ ಮಾಡಿದ್ದಾರೆ. ಸೋಮವಾರ ಸಂಜೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕೋಟಿಗೊಬ್ಬ ೩ ಚಿತ್ರ ತಂಡ ಸುದೀಪ್ ಅವರ ಸಿನಿ ಜರ್ನಿಯ ೨೫ನೇ ವರ್ಷದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬೆಳ್ಳಿ ಹಬ್ಬ ಆಯೋಜಿಸಿತ್ತು. ಅಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಹಾಜರಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿದ್ದ ಅವರು, ಬ್ಲಾಕ್ ಡ್ರೆಸ್ ಹಾಕ್ಕೊಂಡ್ ಬಂದಿದ್ರು. ಕಾಕತಾಳೀಯ ಎನ್ನುವ ಹಾಗೆ ನಟ ಕಿಚ್ಚ ಸುದೀಪ್ ಕೂಡ ಬ್ಲಾಕ್ ಡ್ರೆಸ್ ಧರಿಸಿಕೊಂಡಿದ್ರು. ದೊಡ್ಡ ವೇದಿಕೆ, ಸಾವಿರಾರು ಜನರ ಮುಂದೆ ಸನ್ಮಾನ ಸ್ವೀಕರಿಸಿ ಮಾತಿಗಿಳಿದಾಗ, ನಟ ಕಿಚ್ಚ ಸುದೀಪ್ ತಮಗೆ ಬ್ಲಾಕ್ ಡ್ರೆಸ್ ಮೇಲಿದ್ದ ಪ್ರೀತಿ , ಅಭಿಮಾನದ ರಹಸ್ಯ ಬಿಚ್ಚಿಟ್ಟರು. ” ನನಗೆ ಕಪ್ಪು ಬಣ್ಣದ ಬಟ್ಟೆಗಳೆಂದರೆ ಇಷ್ಟ. ರವಿ ಸರ್ ತರಹ ಅವಾಗವಾಗ ಕಪ್ಪು ಬಟ್ಟೆ ಧರಿಸುತ್ತಿರುತ್ತೇನೆ. ಸೋ ಬ್ಲ್ಯಾಕ್ ಡ್ರೆಸ್ ಧರಿಸೋಕೆ ಕಾರಣ ರವಿ ಸರ್. ನಾನು ಹಲವು ಬಾರಿ ಕೇಳಿದ್ದೆ ಯಾಕೆ ಕಪ್ಪು ಬಟ್ಟೆ ಧರಿಸ್ತೀರಿ ಅಂತ, ಅದಕ್ಕೆ ಅವರಂದ್ರು, ಒಂದು ನಾವು ಬೆಳ್ಳಗೆ ಕಾಣಿಸುತ್ತೀವಿ. ಇನ್ನೊಂದು, ತೆಳ್ಳಗೆ ಕಾಣಿಸುತ್ತೀವಿ ಅಂತ. ಅದನ್ನೇ ನಾನು ಕೂಡ ಫಾಲೋ ಮಾಡುತ್ತಿದ್ದೇನೆʼ ಅಂತ ಕಪ್ಪು ಬಟ್ಟೆಯ ಮೇಲಿನ ವ್ಯಾಮೋಹದ ಹಿಂದಿನ ಕಥೆ ಬಿಚ್ಚಿಟ್ಟು ಸಭಿಕರಲ್ಲಿ ನಗು ತರಿಸಿದರು ಕಿಚ್ಚ ಸುದೀಪ್.
ಎಷ್ಟೋ ವೇದಿಕೆ ಹತ್ತಿದ್ದೇನೆ. ಅಲ್ಲಿ ಮಾತೂ ಆಡಿದ್ದೇನೆ, ಆದ್ರೆ ಫಸ್ಟ್ ಟೈಮ್ ಯಾಕೋ ನಾನಿಲ್ಲಿ ನರ್ವಸ್ ಆಗಿದ್ದೇನೆ…ಅಭಿನಯ ಚಕ್ರವರ್ತಿ ನಟ ಸುದೀಪ್ ಅಲ್ಲಿ ಹೀಗೆ ಹೇಳಿ ಒಂದು ಕ್ಷಣ ಸುಮ್ಮನಾದರು. ನಿಜಕ್ಕೂ ಅವರು ನರ್ವಸ್ ಆಗಿದ್ದರ ಸಂಕೇತವದು. ಸಭಿಕರಿಗೂ ಅಚ್ಚರಿ. ಹಾಗೆಯೇ ವೇದಿಕೆಯ ಮೇಲೆದ್ದವರಿಗೂ ಸೋಜಿಗ. ಯಾಕಂದ್ರೆ, ನಟ ಕಿಚ್ಚ ಸುದೀಪ್ ಇಂತಹ ಅದೆಷ್ಟು ವೇದಿಕೆ ನೋಡಿಲ್ಲ? ಅಷ್ಟು ಸುಲಭಕ್ಕೆ ಅವರು ನರ್ವಸ್ ಆಗುವುದುಂಟೆ ?
ಆದ್ರೂ, ಅಲ್ಲಿ ಅದ್ಯಾಕೆ ನರ್ವಸ್ ಆದ್ರೂ ಗೊತ್ತಿಲ್ಲ. ಹಾಗಂತ ಅವರೇ ಹೇಳಿಕೊಂಡಾಗ ಅದೇ ವೇದಿಕೆಯಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯುಡಿಯೂರಪ್ಪ, ನಟರಾದ ರವಿಚಂದ್ರನ್, ಶಿವರಾಜ್ ಕುಮಾರ್, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ, ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಹಾಜರಿದ್ದರು. ಇಷ್ಟಕ್ಕೂ ಅದು ಸುದೀಪ್ ಅವರದ್ದೇ ಕಾರ್ಯಕ್ರಮ. ಅಂದ್ರೆ, ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯ ಬೆಳ್ಳಿಹಬ್ಬ ಮಹೋತ್ಸವ.
” ಕೋಟಿಗೊಬ್ಬ 3ʼ ಚಿತ್ರ ತಂಡ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮ ಆಯೋಜಿಸಿತ್ತು. ವರ್ಣರಂಜಿತ ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸನ್ಮಾನ ಸ್ವೀಕರಿಸಿ ಮಾತಿಳಿಗಿಳಿದ ನಟ ಕಿಚ್ಚ ಸುದೀಪ್, ಈ ಜರ್ನಿಯಲ್ಲಿ ಅದೆಷ್ಟು ವೇದಿಕೆ ಏರಿದ್ದೇನೋ ಗೊತ್ತಿಲ್ಲ. ಆದ್ರೆ ಫಸ್ಟ್ ಟೈಮ್ ಈ ವೇದಿಕೆಯಲ್ಲಿ ಮಾತನಾಡೋದಿಕ್ಕೆ ನರ್ವಸ್ ಆಗಿದ್ದೇನೆ. ಎಲ್ಲರ ಕಣ್ಣು ನನ್ನ ಮೇಲಿದೆ ಅಂತ ಟೆನ್ಸೆನ್ ಆಗುತ್ತೆ. ಜತೆಗೆ ದೊಡ್ಡ ಸಾಧನೆ ಮಾಡಿದವರೆಲ್ಲ ಈ ವೇದಿಕೆ ಮೇಲಿರುವುದು ಕೂಡ ಕಾರಣವಿರಬಹುದು. ನನ್ನ25 ವರ್ಷದ ಸಾಧನೆ ಅಂದ್ರೆ ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅವರ ಸಿನಿಮಾಗಳನ್ನು ನೋಡಿ ಬೆಳೆದಿದ್ದು. ಇದು ನನ್ನ ದೊಡ್ಡ ಸೌಭಾಗ್ಯ ಎಂದರು ನಟ ಕಿಚ್ಚ ಸುದೀಪ್. ದೊಡ್ಡವರೆಲ್ಲ ನಮ್ಮ ತಪ್ಪುಗಳನ್ನು ತಿದ್ದುತ್ತಾರೆ ಅನ್ನೋ ಧೈರ್ಯದಿಂದಲೇ ಇಷ್ಟು ದೂರ ಬಂದಿದ್ದೇನೆ. ತಪ್ಪು ಮಾಡುವುದಕ್ಕೇನು ಭಯ ಪಡಬೇಕಿಲ್ಲ. ಇದು 25 ವರ್ಷ ಅಂತ ನನಗನ್ನಿಸಿಲ್ಲ. ಯಾಕಂದ್ರೆ, ಇಲ್ಲಿ ಯಾರು ಕೂಡ ನನ್ನ ಕೈ ಬಿಟ್ಟಿಲ್ಲ. ಅವಕಾಶಗಳ ಮೇಲೆ ಅವಕಾಶ ನೀಡುತ್ತಲೇ ಬಂದರು. ಅದು ನನ್ನನ್ನು ಇಷ್ಟು ದೂರ ಕರೆ ತಂದಿದೆ. ಆದ್ರೂ, ಒಬ್ಬ ನಟನಿಗೆ 25 ವರ್ಷದ ಸಕ್ರಿಯವಾಗಿರೋದು ಅಂದ್ರೆ ಸುಲಭದ ಮಾತಲ್ಲ. ಅದೇ ಕಾರಣಕ್ಕೆ ಹಿರಿಯರೆಲ್ಲ ಸೇರಿ ನನ್ನನ್ನು ಕರೆದು ಇಷ್ಟೊಂದು ಸಂಭ್ರಮದಿಂದ ಸಮಾರಂಭ ಆಯೋಜಿಸಿರುವುದು ಖುಷಿ ತಂದಿದೆ ಎಂದರು ನಟ ಕಿಚ್ಚ ಸುದೀಪ್.
ಸಾಮಾನ್ಯವಾಗಿ ಹೊಸಬರ ಸಿನಿಮಾಗಳಿಗೆ ಸ್ಟಾರ್ ನಟರು ಸಾಥ್ ಕೊಡುವುದು ಹೊಸದೇನಲ್ಲ. ಸದಾ ಹೊಸಬರ ಚಿತ್ರಗಳ ಟ್ರೇಲರ್, ಆಡಿಯೋ, ಟೀಸರ್, ಪೋಸ್ಟರ್ಗಳ ರಿಲೀಸ್ ಮಾಡುವ ಮೂಲಕ ಶುಭಹಾರೈಸುತ್ತಲೇ ಇದ್ದಾರೆ. ಈಗ “ಅನಘ” ಸಿನಿಮಾ ತಂಡಕ್ಕೂ ಉಪೇಂದ್ರ ಸಾಥ್ ನೀಡಿದ್ದಾರೆ. ಹೌದು, ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್ನಡಿ ತಯಾರಾಗಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಉಪೇಂದ್ರ ಅವರು ಟ್ರೇಲರ್ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ.
ಡಿ.ಪಿ.ಮಂಜುಳಾ ನಾಯಕ ನಿರ್ಮಾಪಕರು. ರಾಜು ಎನ್.ಆರ್. ಚಿತ್ರದ ನಿರ್ದೇಶಕರು. ಇವರಿಗಿದು ಮೊದಲ ನಿರ್ದೇಶನದ ಸಿನಿಮಾ. ಕಥೆ ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಬಹುತೇಕ ಹೊಸ ಪ್ರತಿಭೆಗಳೇ ಈ ಚಿತ್ರದಲ್ಲಿವೆ. ಇದೊಂದು ಸಸ್ಪೆನ್ಸ್, ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರ. ಈ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ, ಪ್ರಚಾರ ಕಾರ್ಯಕ್ಕೆ ರೆಡಿಯಾಗಿದೆ. ರಂಗಭೂಮಿ ಪ್ರತಿಭೆ ನಳೀನ್ ಕುಮಾರ್ ಮತ್ತು ಪವನ್ಪುತ್ರ ಚಿತ್ರದ ಆಕರ್ಷಣೆ. ಇನ್ನುಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್ಗೌಡ್ರು, ಕಿರಣತೇಜ, ಕಿರಣ್ರಾಜ್, ಕರಣ್ ಆರ್ಯನ್, ದೀಪ, ರೋಹಿತ್, ಖುಷಿ, ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ, ಮೋಟು ರವಿ, ಅಭಿ ಮತ್ತು ವಿರೇಶ ಇತರರು ನಟಿಸಿದ್ದಾರೆ. ಇನ್ನು ಬೆಂಗಳೂರು, ದೇವರಾಯನದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶಂಕರ್ ಅವರ ಛಾಯಾಗ್ರಹಣವಿದೆ. ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸವಿದೆ.
ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಹೇಳಿಕೆಯ ಬೆನ್ನಲೇ ಇಂದು ನಟ ಶಿವರಾಜ್ ಕುಮಾರ್ ಧಿಡೀರನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಲಿದ್ದಾರೆಂಬ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಸೋಮವಾರಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಬಂದ ಶಿವರಾಜ್ ಕುಮಾರ್, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಭೇಟಿ ವೇಳೆ ಏನೆಲ್ಲ ಚರ್ಚೆ ನಡೆಯಿತು, ಯಾಕಾಗಿ ಅವರನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದರು ಎನ್ನುವುದು ಇನ್ನು ನಿಖರವಾಗಿ ತಿಳಿದಿಲ್ಲವಾದರೂ, ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವೇ ಅದಕ್ಕೆ ಮೂಲಕ ಕಾರಣ ಎನ್ನುವುದು ಅಷ್ಟೇ ಸತ್ಯ. ಕಳೆದ ಮೂರು ದಿನಗಳ ಹಿಂದಷ್ಟೇ ಮಾಜಿ ಶಾಸಕ ಮಧು ಬಂಗಾರಪ್ಪ ಕೂಡ ಡಿ.ಕೆ.ಶಿ ಅವರನ್ನು ಭೇಟಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಡಿ.ಕೆ. ಶಿವಕುಮಾರ್ ಅವರೊಂದಿಗಿನ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಾವು ಕಾಂಗ್ರೆಸ್ ಸೇರುವ ಸಂಬಂಧ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರು. ಹಾಗೆಯೇ ತಮ್ಮೊಂದಿಗೆ ಅಕ್ಕ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಸೇರುತ್ತಿದ್ದಾರೆಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲೇ ಇಂದು ನಟ ಶಿವರಾಜ್ ಕುಮಾರ್ , ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
“ನನ್ನನ್ನು ಎಲ್ಲರೂ ಮಂಗಳೂರು ಆಟೋ ಅಂತಾರೆ…” ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟಿ ಶುಭಾಪೂಂಜಾ. ಸಂದರ್ಭ: ಬಿಗ್ಬಾಸ್ ರಿಯಾಲಿಟಿ ಶೋ. ಭಾನುವಾರ ಬಿಗ್ಬಾಸ್ ಸೀಸನ್ ೮ ರ ಎಲ್ಯುಮಿನೇಷನ್ ಪ್ರಕ್ರಿಯೆ ಮುಗಿದು ಹೋಯಿತು. ಆ ಮನೆಯಲ್ಲಿ ಯಾರು ಇಷ್ಟ ಆಗ್ತಾರೆ? ಯಾರು ಇಷ್ಟ ಆಗಲ್ಲ? ಅಂತ ಸುದೀಪ್ ಪ್ರಶ್ನಿಸಿದಾಗ, ಮನೆಯಲ್ಲಿರೋ ಎಲ್ಲರೂ ಒಂದೊಂದು ಹೆಸರನ್ನು ಬೋರ್ಡ್ಗೆ ಅಂಟಿಸಿದರು. ಹೆಚ್ಚಿನವರಿಗೆ ಬೈಕ್ ರೈಡರ್ ಅರವಿಂದ್ ಇಷ್ಟವಾದರೆ, ನಿರ್ಮಲಾ ಚೆನ್ನಪ್ಪ ಅವರು ಇಷ್ಟವಾಗಲ್ಲ ಅಂತ ನೇರವಾಗಿ ಹೇಳಿಕೊಂಡರು. ಈ ಪ್ರಕ್ರಿಯೆ ಮುಗಿದ ಬಳಿಕ, ನಟಿ ಶುಭಾಪೂಂಜಾ ಅವರಿಗೆ ಸುದೀಪ್ ಅವರಿಂದ ಚಪ್ಪಾಳೆ ಸಿಕ್ಕಿತು. ಅದೇ ಖುಷಿಯಲ್ಲಿ ಶುಭಾ ಮನೆಯ ಸದಸ್ಯರನ್ನು ನಗಿಸಿದರು.
ಈ ವೇಳೆ ಶುಭಾಪೂಂಜಾ, ಹೇಳಿದ್ದಿಷ್ಟು. “ಎಲ್ಲರೂ ನನ್ನನ್ನು ಲಗೇಜ್ಗೆ ಹೋಲಿಸುತ್ತಾರೆ. ಮಂಗ್ಳೂರ್ ಆಟೋ ಅಂತಾರೆ. ನಾನು ನಡೆಯೋದು ಹಾಗೇನೆ ಅಂತೆ. ಲಗೇಜ್ ತುಂಬಿಕೊಂಡ ಆಟೋ ತರಹ ನಾನು ನಡೆಯೋದು ಅಂದ್ರು. ಮಂಗಳೂರು ಆಟೋಗೆ ಯಾಕೆ ಹೋಲಿಸುತ್ತಾರೆ ಅಂತ ಸುದೀಪ್ ಪ್ರಶ್ನಿಸಿದಾಗ, ಶುಭಾ ಹೇಳಿದ್ದು ಹೀಗೆ, “ಬಾಡಿ ಮೊದಲು ಮುಂದಿರುತ್ತದೆ, ಆದ ಮೇಲೆ ನಾನು ನಡೆಯುತ್ತೇನೆ. ಯಾವತ್ತೂ ಮಂಗಳೂರಿನ ಆಟೋಗಳು ಫುಲ್ ಲಗೇಜ್ ತುಂಬಿಕೊಂಡಿರುತ್ತವೆ” ಜೋರು ನಗೆಬುಗ್ಗೆ ಎಬ್ಬಿಸಿದರು ಶುಭಾ.
ಇನ್ನು, ನನಗೆ ಅಳೋಕೆ ಬರೋದಿಲ್ಲ. ಬಿಗ್ಬಾಸ್ ಮನೆಯಲ್ಲಿ ಒಳ್ಳೊಳ್ಳೆ ಡ್ರೆಸ್, ಐ ಶಾಡೋ ಹಾಕುತ್ತ ಮಿಂಚಬೇಕು ಅಂತ ಅನ್ಕೊಂಡಿದ್ದೆ. ಕಲರ್ ಕಲರ್ ಬೂಟ್ಸ್ ಹಾಕಬೇಕು ಅಂದುಕೊಂಡಿದ್ದೆ. ಆದರೆ, ಅದು ಯಾವುದು ಇಲ್ಲಿ ಪ್ರಯೋಜನವಿಲ್ಲ. ಕೆಲವೊಮ್ಮೆ ಅಳು ಬರಬೇಕಾದ ವಿಚಾರದಲ್ಲಿ ಅಳು ಬರೋದೆ ಇಲ್ಲ. ಡೈರೆಕ್ಟರ್ ಎಷ್ಟೋ ಬಾರಿ ಬೇಜಾರಾಗುತ್ತಿದ್ದರು. ನನಗೆ ಕಾಮಿಡಿ ಸೀನ್ಗಳು ಮ್ಯಾಚ್ ಆಗುತ್ತವೆ ಅಂತ ಶುಭಾ ಎಲ್ಲರೆದುರು ತಮ್ಮ ಬಗ್ಗೆ ಹೇಳಿಕೊಂಡರು.
ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಅಬ್ಬರ ದಿನೇ ದಿನೆ ಹೆಚ್ಚಾಗುತ್ತಿದೆ. ಕರ್ನಾಟಕದ ಆಚೆ ಕೂಡ ರಾರಾಜಿಸುತ್ತಿದೆ. ಈ ನಡುವೆ ʼರಾಬರ್ಟ್ʼ ಚಿತ್ರದ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರಿಗೆ ನಟ ದರ್ಶನ್ ಧನ್ಯವಾದ ಹೇಳಿದ್ದಾರೆ.
” ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಅಂತ ದರ್ಶನ್ ಹೇಳಿದ್ದಾರೆ. ಹಾಗಾದ್ರೆ ಬಹು ನಿರೀಕ್ಷಿತ ರಾಬರ್ಟ್ ಚಿತ್ರ ನೋಡಿ ನಟ ಸಂಚಾರಿ ವಿಜಯ್ ಹೇಳಿದ್ದೇನು? ” ಸಿಂಗಲ್ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ !! ಅದರ ಜೊತೆಗೆ ಮಲ್ಟಿಪ್ಲೆಕ್ಸ್ ನಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ ಗೆ ಬಾಸ್ !! ಅದು ನಿಜವಾದ ಡಿ ಬಾಸ್ ಶಕ್ತಿ. ನಾನು ನಿಜಕ್ಕೂ ಎಂಜಾಯ್ ಮಾಡಿದೆ. ನೀವು ಕೂಡ ನಿಮ್ಮ ಕುಟುಂಬದ ಜತೆಗೆ ಹೋಗಿ ಸಿನಿಮಾ ನೋಡಿ, ಎಂಜಾಯ್ ಮಾಡಿ ʼ ಅಂತ ನಟ ಸಂಚಾರಿ ವಿಜಯ್ ʼರಾಬರ್ಟ್ʼ ಚಿತ್ರ ನೋಡಿದ ನಂತರ ಸೋಷಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಕನ್ನಡದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ. ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿವೆ. ಆ ಸಾಲಲ್ಲಿ ಈಗ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ” ಕೂಡ ಇದೆ. ಏಪ್ರಿಲ್ 1ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಈ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ಬಿಡುಗಡೆ ಮುನ್ನ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿರುವ ಚಿತ್ರತಂಡ, ಆ ನಿಟ್ಟಿನಲ್ಲಿ ಜೋರು ತಯಾರಿ ನಡೆಸಿದೆ. ಮಾರ್ಚ್ 20ರಂದು ಮೈಸೂರಿನಲ್ಲಿ “ಯುವರತ್ನ” ಈವೆಂಟ್ ನಡೆಸಲಿದೆ “ಯುವ ಸಂಭ್ರಮ” ಹೆಸರಲ್ಲಿ ನಡೆಯುವ ಈವೆಂಟ್ಗೆ ಈಗಾಗಲೇ ಸಾಕಷ್ಟು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಇತ್ತೀಚೆಗೆ “ಯುವ ಸಂಭ್ರಮ” ಕಾರ್ಯಕ್ರಮದ ಲೋಗೋ ಕೂಡ ಲಾಂಚ್ ಮಾಡಲಾಗಿದೆ.
ಮೈಸೂರಲ್ಲಿ ಈವೆಂಟ್ ನಡೆಸುವುದಕ್ಕೂ ಮುನ್ನ, ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಬರ್ತ್ಡೇ ಹಿನ್ನೆಲೆಯಲ್ಲಿ ಫೀಲ್ ದಿ ಪವರ್ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಹಲವು ಯೋಜನೆ ಹಾಕಿಕೊಂಡ ಬಗ್ಗೆ ಹೇಳುವುದಿಷ್ಟು. “ಮೈಸೂರಲ್ಲಿ ಪ್ರೀ ರಿಲೀಸ್ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಅಂದು ಸಂಗೀತ ನಿರ್ದೇಶಕ ತಮನ್, ಗಾಯಕರಾದ ವಿಜಯಪ್ರಕಾಶ್, ಅರ್ಮಾನ್ ಮಲ್ಲಿಕ್ ಸೇರಿದಂತೆ ಸಿನಿಮಾ ತಾರೆಯರು ಭಾಗವಹಿಸುತ್ತಿದ್ದಾರೆ.
ಮೈಸೂರಲ್ಲಿ ಕಳೆದ ವರ್ಷ ದಸರಾ ಆಚರಣೆಯಾಗಲಿಲ್ಲ. ಅದನ್ನು ಮರುಕಳಿಸಲು “ಯುವ ಸಂಭ್ರಮ” ಹೆಸರಲ್ಲಿ ಈವೆಂಟ್ ಮಾಡಲು ಮುಂದಾಗಿದ್ದೇವೆ. ಮೈಸೂರಿನ ಮಹಾರಾಜಾ ಮೈದಾನದಲ್ಲಿ ಈ ಈವೆಂಟ್ ನಡೆಯಲಿದೆ. ಇನನು, ಮಾ.17ರಂದು ಪುನೀತ್ ಅವರ ಹುಟ್ಟುಹಬ್ಬ. ಅದಕ್ಕಾಗಿ ಅಂದು “ಫೀಲ್ ದ ಪವರ್” ಹಾಡು ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ ಪುನೀತ್ ಅವರ ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಮಾರ್ಚ್ 27ರಂದು ಹೈದರಾಬಾದ್ನಲ್ಲಿ ದೊಡ್ಡ ಈವೆಂಟ್ ನಡೆಯಲಿದೆ. ಏಪ್ರಿಲ್ ೧ರಂದು ಚಿತ್ರ ಬಿಡುಗಡೆಯಾಗಲಿದೆ” ಎಂಬುದು ನಿರ್ದೇಶಕರ ಮಾತು.
ತೆಲುಗಿನಲ್ಲಿ “ಯುವರತ್ನ” ಚಿತ್ರವನ್ನು ದಿಲ್ ರಾಜು ಹಾಗೂ ಸಾಯಿಕೋರ ರಿಲೀಸ್ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರ ದುಬೈ ಅಮೆರಿಕಾ, ಆಸ್ಟೃೇಲಿಯಾದಲ್ಲೂ ರಿಲೀಸ್ ಆಗುತ್ತಿದೆ. ಯುಕೆಯಲ್ಲಿ ಥಿಯೇಟರ್ ಓಪನ್ ಆಗದ ಕಾರಣ, ಅಲ್ಲಿ ರಿಲೀಸ್ ಮಾಡುತ್ತಿಲ್ಲ. ವಿಶ್ವದಲ್ಲಿ ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲಾ ಈ ಚಿತ್ರ ರಿಲೀಸ್ ಆಗಲಿದೆ ಎಂಬುದು ಚಿತ್ರತಂಡದ ಮಾತು.
ಸೋನು ಗೌಡ
ನಟ ಪುನೀತ್ ರಾಜಕುಮಾರ್ ಅವರಿಗೆ “ಯುವರತ್ನ” ಚಿತ್ರದ ಮೇಲೆ ಸಾಕಷ್ಟು ಭರವಸೆ ಇದೆಯಂತೆ. ಅದಕ್ಕೆ ಕಾರಣ, ಚಿತ್ರದ ಕಥೆಯಂತೆ. ಆ ಕುರಿತು ಪುನೀತ್ ಹೇಳುವುದು ಹೀಗೆ. “ಮೈಸೂರಲ್ಲಿ ಒಳ್ಳೆಯ ಈವೆಂಟ್ ಆಗುತ್ತಿದೆ. ಎರಡು ತಿಂಗಳಿನಿಂದ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಜನರು ಕೂಡ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಿದ್ದಾರೆ. ಮುಂದೆಯೂ ಒಳ್ಳೆಯ ಚಿತ್ರಗಳು ಬರುತ್ತವೆ. ನನಗೆ ಹೊಂಬಾಳೆ ಫಿಲಂಸ್ ಜೊತೆ ಮೂರನೇ ಸಿನಿಮಾ. ನಿರ್ದೇಶಕ ಜೊತೆ ಎರಡನೇ ಚಿತ್ರ. ಇದು ಅಭಿಮಾನಿಗಳಿಗೆ ಮಾಡಿದ ಸಿನಿಮಾವಲ್ಲ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರ. ಒಳ್ಳೆಯ ಸಂದೇಶವನ್ನು ಇಲ್ಲಿ ಕಾಣಬಹುದು” ಎನ್ನುತ್ತಾರೆ ಪುನೀತ್.
ಧನಂಜಯ್
ಈ ಚಿತ್ರದಲಿ “ಡಾಲಿ” ಧನಂಜಯ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆ ಬಗ್ಗೆ ಹೇಳುವ ಅವರು, “ನನಗೆ ಇಲ್ಲಿ ಒಳ್ಳೆಯ ರೋಲ್ ಸಿಕ್ಕಿದೆ. ಒಂದೊಳ್ಳೆಯ ಸಿನಿಮಾದ ಭಾಗವಾಗಿದ್ದೇನೆ ಅಂತ ಹೇಳಲು ಖುಷಿಯಾಗುತ್ತಿದೆ. ಸಾಕಷ್ಟು ವ್ಯಾಲ್ಯು ಇರುವಂತಹ ಚಿತ್ರವಿದು. ಈ ಚಿತ್ರ ನೋಡುಗರಿಗೆ ಸಖತ್ ಮನರಂಜನೆಯಂತೂ ಸಿಗಲಿದೆ. ಹಾಗೆಯೇ ಒಂದಷ್ಟು ಹೊಸ ವಿಷಯಗಳನ್ನೂ ತಿಳಿದುಕೊಳ್ಳಬಹುದು” ಎನ್ನುತ್ತಾರೆ ಧನಂಜಯ್. ಸೋನುಗೌಡ ಕೂಡ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಆ ಕುರಿತು ಹೇಳುವ ಸೋನುಗೌಡ, “ನಾನು ಅಪ್ಪು ಸರ್ ಜೊತೆ “ರಾಮ್” ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಈಗ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಹೇಳಿದಂತೆಯೇ ಸಿನಿಮಾ ಶೂಟ್ ಮಾಡಿದ್ದಾರೆ. ನಾನು ಕೂಡ ಅಪ್ಪು ಅಭಿಮಾನಿ. ಬಿಗ್ ಬ್ಯಾನರ್ನಲ್ಲಿ, ಬಿಗ್ ಸ್ಟಾರ್ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಇಲ್ಲಿ ಪ್ರತಿ ಪಾತ್ರಕ್ಕೂ ಆದ್ಯತೆ ಇದೆ ಎಂಬುದು ಸೋನು ಮಾತು.
ನವರಸನ್
ಚಿತ್ರದಲ್ಲಿ ದಿಗಂತ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು, ಈ ಚಿತ್ರದ ಈವೆಂಟ್ ಜವಾಬ್ದಾರಿಯನ್ನು ಶ್ರೇಯಸ್ ಮೀಡಿಯಾ ವಹಿಸಿಕೊಂಡಿದೆ. ನವರಸನ್ ಈ ಈವೆಂಟ್ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಶ್ರೇಯಸ್ ಮೀಡಿಯಾ “ಪೊಗರು”,”ರಾಬರ್ಟ್” ಚಿತ್ರಗಳ ಈವೆಂಟ್ ನಡೆಸಿದೆ. ಇದು ಮೂರನೇ ಈವೆಂಟ್ ಎಂಬುದು ವಿಶೇಷ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರ ಹಾಗೂ ನಟ ಆದಿತ್ಯ ಅಂದ್ರೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ತಕ್ಷಣ ನೆನಪಾಗೋದುʼ ಡೆಡ್ಲಿ ಸೋಮʼ ಚಿತ್ರ. ಆದಿತ್ಯ ಸಿನಿ ಜರ್ನಿಯಲ್ಲಿ ಆ ಸಿನಿಮಾ ಒಂದು ಮೈಲುಗಲ್ಲು. ಅಷ್ಟೇ ಅಲ್ಲ, ಆ ಸಿನಿಮಾದ ಮೂಲಕವೇ ಆದಿತ್ಯ ಒಬ್ಬ ನಟರಾಗಿ ಹೊರ ಹೊಮ್ಮಿದ್ದು. ಆ ನಂತರದ ಅವರ ತಾರಾ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿದ್ದು ಅಗ್ನಿ ಶ್ರೀಧರ್ ರಚನೆಯ ʼಎದೆಗಾರಿಕೆʼ ಚಿತ್ರ. ಅವರಿಗೆ ನಟನಾಗಿ ಒಂದಷ್ಟು ತಾರಾ ವರ್ಚಸ್ಸು ಕೊಟ್ಟ ಅವೆರೆಡು ಚಿತ್ರಗಳೂ ಭೂಗತ ಜಗತ್ತಿನ ಕಥೆಯ ಚಿತ್ರಗಳೇ. ಅಲ್ಲಿಂದ ಅವರು ಬಹುತೇಕ ಅಂತಹದೇ ಸಿನಿಮಾಗಳಿಗೆ ಬ್ರಾಂಡ್ ಆದ್ರು. ನಟನೊಬ್ಬನ ಪಾಲಿಗೆ ಅದು ವರವೂ ಹೌದು, ಶಾಪವೂ ಹೌದು. ಆದಿತ್ಯ ಪಾಲಿಗಂತೂ ಇದು ನೋವು ತಂದಿದ್ದೇ ಹೆಚ್ಚಂತೆ. ಹಾಗಂತ ಅವರು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ತಮ್ಮ ನೋವು ತೊಡಿಕೊಂಡರು.
ಆದಿತ್ಯ ಅಭಿನಯದ ” ಮುಂದುವರೆದ ಅಧ್ಯಾಯʼ ಚಿತ್ರ ಇದೇ ತಿಂಗಳು 17 ರಂದು ತೆರೆ ಕಾಣುತ್ತಿದೆ. ರಿಲೀಸ್ ಪೂರ್ವ ಪ್ರಚಾರದ ಹಿನ್ನೆಲೆಯಲ್ಲಿ ಚಿತ್ರ ತಂಡ ಇತ್ತೀಚೆಗಷ್ಟೆ ಸಿನಿಮಾ ಟೀಸರ್ ಹಾಗೂ ಸಾಂಗ್ಸ್ ಲಾಂಚ್ ಮೂಲಕ ಮಾಧ್ಯಮದ ಮುಂದೆ ಬಂದಿತ್ತು. ಅಲ್ಲಿ ಚಿತ್ರದ ನಾಯಕ ಆದಿತ್ಯ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುತ್ತಾ, ʼ ನನಗೆ ಬಹುತೇಕ ಸಿನಿಮಾಗಳು ಅಂಡರ್ ವಲ್ಡ್ ಅಂತ ಸಬ್ಜೆಕ್ಟ್ ನಿಂದಲೇ ಪಾತ್ರಗಳ ಅವಕಾಶ ಸಿಗುತ್ತಿತ್ತು. ಇದು ನನಗೆ ತೀರಾ ನೋವಾಗಿದೆ. ಇದರಿಂದ ನಾನು ಗೊಂದಲಕ್ಕೆ ಸಿಲುಕಿಕೊಂಡೆ. ಅಂತಹ ಸಿನಿಮಾಗಳನ್ನು ರಿಜೆಕ್ಟ್ ಮಾಡಿಕೊಂಡು ಬಂದೆ. ಯಾಕೆ ನನಗೆ ಅಂತಹ ಪಾತ್ರಗಳನ್ನೇ ಹುಡುಕಿಕೊಂಡು ಬಂದು ಅಪ್ರೋಚ್ ಮಾಡುತ್ತಿದ್ದರು ಅಂತ ಬೇಜಾರಾಗಿತ್ತುʼ ಎಂದರು. ರಿಲೀಸ್ ಗೆ ರೆಡಿಯಾಗಿರುವ ಮುಂದುವರೆದ ಅಧ್ಯಾಯ ಚಿತ್ರದ ಕುರಿತು ಮಾತನಾಡಿ, ಈ ಸಿನಿಮಾದಲ್ಲಿ ಕ್ಯೂರಿಯಾಸಿಟಿಯಿದೆ. ನನ್ನ ಪ್ರತಿ ಸಿನಿಮಾಕ್ಕೂ ನನ್ನ ಟೆಕ್ನೀಶಿಯನ್ಸ್ , ಆರ್ಟಿಸ್ಟ್, ಪ್ರೊಡ್ಯೂಸರ್ಸ್, ಡೈರೆಕ್ಟರ್ ಗಳೇ ನನಗೆ ಹೀರೋಗಳು. ಇದು ವಿಭಿನ್ನವಾದ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಎಲ್ಲರ ಒಗ್ಗಟ್ಟಿನಿಂದ ಈ ಸಿನಿಮಾ ಮೂಡಿ ಬಂದಿದೆ ಎಂದರು. ನಿರ್ದೇಶಕ ಬಾಲು ಚಂದ್ರಶೇಖರ್ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಶಿವರಾತ್ರಿ ಹಬ್ಬದ ದಿನ ಒಬ್ಬರು ಕಾಣೆಯಾಗುತ್ತಾರೆ, ಅದು ಯಾಕೆ? ಕಾಣೆಯಾಗಲು ಕಾರಣವೇನು? ಎನ್ನುವುದು ಕಥೆಯ ತಿರುಳಾಗಿದೆ. ಪೊಲೀಸ್ ಪಾತ್ರದಲ್ಲಿ ನಟ ಆದಿತ್ಯ ರಗಡ್ ಲುಕ್ ನಲ್ಲಿ ಪ್ರೇಕ್ಷಕರನ್ನು ಮನರಂಜಿಸಲು ಬರುತ್ತಿದ್ದಾರೆಂದು ಹೇಳಿದರು.