Categories
ಸಿನಿ ಸುದ್ದಿ

ಬ್ಯಾಡ್ ಮ್ಯಾನರ್ಸ್ ತಂಡ ಸೇರಿದ ತಾರಾ – ಅಂಬರೀಷ್ ಜೊತೆ ನಟಿಸಿದ್ದ ಅವರೀಗ ರೆಬೆಲ್ ಮಗನ ಜೊತೆಯೂ ನಟನೆ

 

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹಿರಿಯ ನಟರಿಂದ ಹಿಡಿದು ಅನೇಕ ಸ್ಟಾರ್ ನಟರ ಜೊತೆ ನಟಿಸಿರುವ ನಟಿ‌ ತಾರಾ, ಸಾಕಷ್ಟು ಹೊಸ ಪ್ರತಿಭೆಗಳ ಜೊತೆಯಲ್ಲೂ ಕಾಣಿಸಿಕೊಡಿದ್ದಾರೆ. ಇದೀಗ, ಅಭಿಷೇಕ್ ಅಂಬರೀಶ್ ಜೊತೆ ನಟಿಸುತ್ತಿದ್ದಾರೆ.

ಹೌದು, “ಬ್ಯಾಡ್ ಮ್ಯಾನರ್ಸ್” ಚಿತ್ರಕ್ಕೆ ಈಗ ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ ತಾರಾ ಅನುರಾಧ ಅವರ ಎಂಟ್ರಿಯಾಗಿದೆ.ತಾರಾ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರೊಂದಿಗೂ ನಟಿಸಿದ್ದರು. ಈಗ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ನಿರ್ದೇಶಕ “ದುನಿಯಾ” ಸೂರಿಯವರ ಚಿತ್ರದಲ್ಲಿ ತಾರಾ ಮೊದಲ ಸಲ ನಟಿಸುತ್ತಿದ್ದಾರೆ. ಹೀಗಾಗಿ‌ತಾರಾ ಅವರು ಸಹಜವಾಗಿಯೇ ಖುಷಿಯಾಗಿದ್ದಾರೆ. ಸದ್ಯಕ್ಕೆ ತಾರಾ ಅವರೀಗ, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Categories
ಸಿನಿ ಸುದ್ದಿ

ಅಮೀರ್‌ ಸಿನಿಮಾದಿಂದ ಸೇತುಪತಿ ಹೊರ ಬಂದಿದ್ದೇಕೆ!?

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಅಮೀರ್ ಖಾನ್‌ರ ‘ಲಾಲ್ ಸಿಂಗ್ ಛಡ್ಡಾ’ ಹಿಂದಿ ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಬೇಕಿತ್ತು. ಟಾಮ್ ಹ್ಯಾಂಕ್‌ ನಟಿಸಿದ್ದ ಜನಪ್ರಿಯ ಹಾಲಿವುಡ್ ಸಿನಿಮಾ ‘ಫಾರೆಸ್ಟ್ ಗಂಪ್‌’ ರೀಮೇಕಿದು. ಅಮೀರ್ ನಾಯಕನಾಗಿ ನಟಿಸುತ್ತಿದ್ದರೆ ಚಿತ್ರದಲ್ಲಿ ಇನ್ನೆರೆಡು ಪ್ರಮುಖ ಪಾತ್ರಗಳಿದ್ದವು. ಕರೀನಾ ಕಪೂರ್‌ ಅವರದ್ದು ಒಂದು ಪಾತ್ರ. ಮತ್ತೊಂದು ಪ್ರಮುಖ ಪಾತ್ರಕ್ಕೆ ವಿಜಯ್ ಸೇತುಪತಿ ಆಯ್ಕೆಯಾಗಿದ್ದರು.


ಕೋವಿಡ್ ಕಾರಣದಿಂದಾಗಿ ‘ಲಾಲ್ ಸಿಂಗ್ ಛಡ್ಡಾ’ ಶೂಟಿಂಗ್ ನಿಂತುಹೋಗಿತ್ತು. ಮತ್ತೆ ಚಿತ್ರೀಕರಣ ಆರಂಭವಾದಾಗ ಚಿತ್ರತಂಡದಲ್ಲಿ ಸೇತುಪತಿ ಹೆಸರು ಬಿಟ್ಟುಹೋಗಿತ್ತು. “ಸೇತುಪತಿ ಹಿಂದಿ ಚಿತ್ರಕ್ಕಾಗಿ ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕಿತ್ತು. ಅದು ಸಾಧ್ಯವಾಗದ ಕಾರಣ ಅವರು ಚಿತ್ರದಿಂದ ಹೊರಗುಳಿಯಬೇಕಾಯ್ತು” ಎನ್ನುವ ವದಂತಿಯಿತ್ತು. ಈ ವದಂತಿಗಳನ್ನು ಅಲ್ಲಗಳೆದಿರುವ ಅವರು, “ಕೋವಿಡ್ ಕಾರಣದಿಂದಾಗಿ ನನ್ನ ಸಿನಿಮಾ ಯೋಜನೆಗಳೆಲ್ಲಾ ತಲೆಕೆಳಗಾದವು. ಐದು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಹಾಗಾಗಿ ಹಿಂದಿ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಹಿಂದಿ ಚಿತ್ರದಲ್ಲಿ ನಟಿಸುವಂತೆ ಸ್ವತಃ ಅಮೀರ್ ಖಾನ್ ಅವರೇ ಒತ್ತಡ ತಂದಿದ್ದರು ಎನ್ನುತ್ತಾರೆ ಸೇತುಪತಿ. “ತಮಿಳುನಾಡಿನಲ್ಲಿ ನನ್ನ ಚಿತ್ರದ ಶೂಟಿಂಗ್ ನಡೆಯುವಲ್ಲಿಯೇ ಅಮೀರ್ ಬಂದಿದ್ದರು. ಕಾರಣಾಂತರಗಳಿಂದ ಚಿತ್ರದ ನಿರ್ದೇಶಕ ಅದ್ವೈತ್‌ ಚಂದನ್ ಬಂದಿರಲಿಲ್ಲ. ಅಮೀರ್ ಸ್ಕ್ರಿಪ್ಟ್ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದ್ದರು. ಅವರು ಕತೆ ಹೇಳುವ ರೀತಿಯೇ ಸೊಗಸು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಹಿಂದಿ ಚಿತ್ರ ಕೈತಪ್ಪಿತು. ಮುಂದೊಮ್ಮೆ ಅವರೊಂದಿಗೆ ನಟಿಸುವ ಅವಕಾಶ ಕಳೆದುಕೊಳ್ಳುವುದಿಲ್ಲ” ಎನ್ನುವ ಅವರು ವದಂತಿಗಳನ್ನು ಸಂಪೂರ್ಣ ಅಲ್ಲಗಳೆಯುತ್ತಾರೆ.

Categories
ಸಿನಿ ಸುದ್ದಿ

ಹಾರರ್‌ ಸಿನಿಮಾ ರೂಹಿ ಟ್ರೇಲರ್ ಔಟ್‌!

ಹಾರ್ದಿಕ್ ಮೆಹ್ತಾ ನಿರ್ದೇಶನದ ‘ರೂಹಿ’ ಕಾಮಿಡಿ-ಹಾರರ್ ಹಿಂದಿ ಸಿನಿಮಾದ ‌ಟ್ರೇಲರ್‌  ಇಂದು ಬಿಡುಗಡೆಯಾಗಿದೆ. ಹಾರರ್‌ಗೆ ಅಗತ್ಯವಿರುವ ಹಿನ್ನೆಲೆ ಸಂಗೀತ, ಗ್ರಾಫಿಕ್ ವಿ‍ಶ್ಯುಯಲ್ಸ್‌ಗಳೊಂದಿಗೆ ನೋಡುಗರಿಗೆ ಅಂಜಿಕೆ ಬರುವಂತಿದೆ ಟ್ರೇಲರ್.‌  ರಾಜ್‌ಕುಮಾರ್ ರಾವ್, ಜಾಹ್ನವಿ ಕಪೂರ್ ಮತ್ತು ವರುಣ್ ಶರ್ಮಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಹಾರರ್‌ ಜೊತೆ ಸಂದೇಶವೊಂದನ್ನು ಸಾರುವ ಸೂಚನೆ ನೀಡುತ್ತದೆ.

ಹಾರ್ದಿಕ್ ಮೆಹ್ತಾ ಈ ಹಿಂದೆ ‘ಕಾಮ್‌ಯಾಬ್‌’ (2018) ಹಿಂದಿ ಸಿನಿಮಾ ನಿರ್ದೇಶಿಸಿದ್ದರು. ಅದಕ್ಕೂ ಎರಡು ವರ್ಷಗಳ ಹಿಂದೆ  ‘ಟ್ರಾಪ್ಡ್‌’ ಚಿತ್ರಕಥೆಯಲ್ಲಿ ಭಾಗಿಯಾಗಿದ್ದವರು. ‘ರೂಹಿ’ಯಾಗಿ ಜಾಹ್ನವಿ ಕಪೂರ್ ವಸ್ತ್ರವಿನ್ಯಾಸ, ಮೇಕಪ್‌ ಸೂಕ್ತವಾಗಿದ್ದು, ಜಾಹ್ನವಿ ಪಾತ್ರವನ್ನು ಅರಿತು ನಟಿಸಿರುವಂತಿದೆ. ಮದುವೆ ನಂತರ ಹನಿಮೂನ್‌ಗೆ ತೆರೆಳುವ ದಂಪತಿ ಕಂಡರೆ ಪ್ರೇತಾತ್ಮ ‘ರೂಹಿ’ಗೆ ಅಸಮಾಧಾನ.

ರೂಹಿಯಿಂದ ಯುವತಿಯರನ್ನು ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಹೇಗೆ ಕಾಪಾಡುತ್ತಾರೆ ಎನ್ನುವುದು ಕಥಾವಸ್ತು. ಇಬ್ಬರು ನಾಯಕರು ಪ್ರೇತಾತ್ಮದ ಬಗ್ಗೆ ಕನಿಕರದಿಂದ ಸಮಸ್ಯೆಯನ್ನು ನಿಭಾಯಿಸುವಾಗ ಸಂಭವಿಸುವ ತಮಾಷೆಗಳು ಅಲ್ಲಲ್ಲಿ ಕಾಣಿಸುತ್ತವೆ. ಕತ್ತನ್ನು 360 ಡಿಗ್ರಿ ತಿರುಗಿಸುವುದು, ಕಾಲುಗಳನ್ನು ತಿರುವು, ಮುರುವು ಮಾಡುವ ‘ರೂಹಿ’ ಪಾತ್ರದಲ್ಲಿ ಜಾಹ್ನವಿ ಭರವಸೆ ಮೂಡಿಸುತ್ತಾರೆ.

Categories
ಸಿನಿ ಸುದ್ದಿ

ಮಿತ್ರ ಫಿಲ್ಮ್‌ ಅಕಾಡೆಮಿ – ನಟಿಸೋರಿಗೊಂದು ಹೊಸ ವೇದಿಕೆ ಕಲ್ಪಿಸಿಕೊಟ್ಟ ಹಾಸ್ಯ ಕಲಾವಿದ

ಹಾಸ್ಯ ನಟ ಕಮ್‌ ನಿರ್ಮಾಪಕ ಮಿತ್ರ ಅಂದಾಕ್ಷಣ ನೆನಪಾಗೋದೇ “ರಾಗ” ಎಂಬ ಅದ್ಭುತ ಸಿನಿಮಾ. ಹೌದು, ಈ ಚಿತ್ರದ ಮೂಲಕ ನಿರ್ಮಾಪಕ ಎನಿಸಿಕೊಂಡ ಮಿತ್ರ, ಒಂದೊಳ್ಳೆಯ ಸಿನಿಮಾ ನಿರ್ಮಿಸಿದ ಕಲಾವಿದ ಎಂಬ ಮಾತಿಗೂ ಕಾರಣರಾದರು. ನೂರಾರು ಸಿನಿಮಾಗಳ ಮೂಲಕ ಕನ್ನಡ ಚಿತ್ರರಸಿಕರ ಪಾಲಿಗೆ ಪ್ರೀತಿಯ ನಟ ಎನಿಸಿಕೊಂಡಿರುವ ಮಿತ್ರ ಅವರೀಗ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಹಾಗಂತ, ಹೊಸ ಸಿನಿಮಾ ನಿರ್ಮಾಣಕ್ಕಿಳಿದು ಬಿಟ್ಟರಾ? ಈ ಪ್ರಶ್ನೆ ಎದುರಾಗೋದು ಸಹಜ.

ಆದರೆ, ಮಿತ್ರ, ಹೊಸ ಸಿನಿಮಾ ಮಾಡೋಕೆ ಸಜ್ಜಾಗಿರೋದು ಸತ್ಯ. ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಿವೆಯಾದರೂ, ಈಗ ಅವರೊಂದು ಹೊಸ ಯೋಚನೆಯಲ್ಲಿದ್ದಾರೆ. ಆ ಯೋಚನೆ ಮತ್ತು ಯೋಜನೆ ಬೇರೇನೂ ಅಲ್ಲ, ಅವರೀಗ “ಆರ್‌ಕೆ ಮಿತ್ರ ಫಿಲ್ಮ್‌ ಅಕಾಡೆಮಿ” ಶುರು ಮಾಡಿದ್ದಾರೆ. ಇದು ಅವರ ಹೊಸ ಕನಸು. ಅವರ ಈ ಹೊಸ ಯೋಜನೆ ಅವರದೇ ಕೂರ್ಗ್‌ನಲ್ಲಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲಿ ಶುರುವಾಗುತ್ತಿದೆ. ಫೆಬ್ರವರಿ ೨೮ರಿಂದ ಶುರುವಾಗಲಿರುವ ಆವರ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಮೂಲಕ ಕೇವಲ ನಟನಾ ತರಬೇತಿ ನಡೆಯಲಿದೆ. ಇದೊಂದು ವಿನೂತನ ಮತ್ತು ಅಪರೂಪ ಎನಿಸುವ ನಟನಾ ತರಬೇತಿ ಎನ್ನುವ ಮಿತ್ರ, “ಸಿನಿಲಹರಿ” ಜೊತೆ ತಮ್ಮ ಅಕಾಡೆಮಿಯೊಳಗಿನ ಮಾಹಿತಿ ಹಂಚಿಕೊಂಡರು.


“ನಾನೊಬ್ಬ ಹಾಸ್ಯ ಕಲಾವಿದನಾಗಿ. ಸದಾ ಹೊಸತನ್ನೇ ಬಯಸುತ್ತಿರುತ್ತೇನೆ. ಏನಾದರೊಂದು ಮಾಡಬೇಕೆಂಬ ತುಡಿತ ನನ್ನದು. ಆ ನಿಟ್ಟಿನಲ್ಲಿ ನಾನು ಸಿನಿಮಾರಂಗದಲ್ಲಿದ್ದುಕೊಂಡೇ “ರಾಗ” ಎಂಬ ಒಂದೊಳ್ಳೆಯ ಚಿತ್ರವನ್ನು ನಿರ್ಮಿಸಿದೆ. ಅದರಿಂದ ನನಗೆ ಹಣ ಬರದಿದ್ದರೂ, ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ಇದೆ. ಇನ್ನು, ಇದರ ನಡುವೆ ನಾನು ನಟನೆಯಲ್ಲೂ ಬಿಝಿ ಇದ್ದೇನೆ. ಒಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಕೆಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇನ್ನಷ್ಟು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ. ಇದರ ನಡುವೆಯೇ ನಾನು ಕೂರ್ಗ್‌ನಲ್ಲಿ ಸ್ವರ್ಣಭೂಮಿ ರೆಸಾರ್ಟ್‌ವೊಂದನ್ನು ನಡೆಸುತ್ತಿದ್ದೇನೆ. ಮೂಲತಃ ರೆಸಾರ್ಟ್‌ ಉದ್ಯಮದಿಂದಲೇ ನಾನು ಸಿನಿಮಾ ಲೋಕಕ್ಕೆ ಬಂದವನು. ಹಾಗಾಗಿ, ರೆಸಾರ್ಟ್‌ ಜೊತೆ ನನಗೆ ಅವಿನಾಭಾವ ಸಂಬಂಧವೂ ಇದೆ. ಈಗ ಕೂರ್ಗ್‌ನಲ್ಲಿ ವಿಶಾಲವಾಗಿ, ಸುಸಜ್ಜಿತವಾಗಿ ತಲೆಎತ್ತಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲೀ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಶುರು ಮಾಡಿ, ಆ ಮೂಲಕವೇ ರಂಗತರಬೇತಿ ಶಿಬಿರ ಆಯೋಜಿಸುತ್ತಿದ್ದೇನೆ. ಅದು ಹದಿನೈದು ದಿನಗಳ ಶಿಬಿರವಾಗಿದ್ದು, ಅಲ್ಲಿ ನಟನೆ ತರಗತಿ ಮಾತ್ರ ನಡೆಯಲಿದೆ.

ಈ ಹದಿನೈದು ದಿನಗಳಲ್ಲಿ ನುರಿತ ಕಲಾವಿದರು, ತಾಂತ್ರಿಕ ವರ್ಗದವರು, ಸಿನಿಮಾ ಪತ್ರಕರ್ತರು ಬಂದು ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ನಟನೆ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಕೊಡಲಿದ್ದಾರೆ. ಉಳಿದಂತೆ ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿತಿಗಳಿಗೆ ನಾವೇ ಕಿರುಚಿತ್ರ ತಯಾರು ಮಾಡಿ, ಅವರ ಪ್ರತಿಭೆಗೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ದಿನಗಳ ಕಾಲ ಅಲ್ಲೇ ವಾಸ್ತವ್ಯ, ಊಟ, ತಿಂಡಿಯ ವ್ಯವಸ್ಥೆಯೂ ಇರಲಿದೆ. ಹದಿನೈದು ದಿನಗಳ ಕಾಲ ರೆಸಾರ್ಟ್‌ನಲ್ಲಿ ತಂಗುವುದರ ಜೊತೆಗೆ ಸುಪ್ತ ಪ್ರತಿಭೆ ಆಚೆ ತರುವ ಕೆಲಸ ನಡೆಯುತ್ತದೆ. ಹೆಚ್ಚಿನ ವಿವರಗಳಿಗೆ “www.rkmithrafilmacademy.com” ವೆಬ್‌ಸೈಟ್‌ ವೀಕ್ಷಿಸಬಹುದಾಗಿದೆ.


ವಿಶೇಷವಾಗಿ ಹೇಳುವುದಾದರೆ, ಈ ಹದಿನೈದು ದಿನದ ತರಬೇತಿಯ ಬ್ಯಾಚ್‌ನಲ್ಲಿ ಕೇವಲ ೨೦ ಜನರಿಗೆ ಮಾತ್ರ ಅವಕಾಶವಿದೆ. ತಿಂಗಳಿಗೊಂದು ಬ್ಯಾಚ್‌ ನಡೆಯುತ್ತಿದ್ದು, 20 ಜನರ ಮೇಲೆ ಎಷ್ಟೇ ಹಣ ಕೊಟ್ಟರೂ, ಅವಕಾಶ ಇರುವುದಿಲ್ಲ. ಇಲ್ಲಿ ಹಣಕ್ಕಿಂತ ಮೊದಲು, ಒಂದೊಳ್ಳೆಯ ವೇದಿಕೆ ಕಲ್ಪಿಸಬೇಕೆಂಬುದು ನಮ್ಮ ಉದ್ದೇಶ. ನಿರ್ದೇಶನದ ಕನಸು ಕಟ್ಟಿಕೊಂಡಿರುವವರಿಗೆ ಇಲ್ಲಿ ಕಿರುಚಿತ್ರ ನಿರ್ದೇಶನಕ್ಕೂ ಅವಕಾಶ ಮಾಡಿಕೊಡುತ್ತಿದ್ದು, ಆ ಕಿರುಚಿತ್ರದ ನಿರ್ಮಾಣವನ್ನೂ ಆರ್‌ಕೆ ಮಿತ್ರ ಫಿಲ್ಮ್ಮ್ಸ್‌ ಅಕಾಡೆಮಿ ನೋಡಿಕೊಳ್ಳಲಿದೆ. ಅವರ ಶಾರ್ಟ್‌ ಸಿನಿಮಾ ನಮ್ಮದೇ ಚಾನೆಲ್‌ನಲ್ಲೂ ಪ್ರಸಾರ ಮಾಡಲಿದ್ದೇವೆ. ರಾಜ್ಯದ ಯಾವುದೇ ಮೂಲೆಯಿಂದಲೂ ಸಿನಿಮಾ ಮೇಲೆ ಪ್ರೀತಿ ಇದ್ದವರು ಬಂದವರಿಗೆ ಇಲ್ಲಿ ಅವಕಾಶವಿದೆ. ಮೊದಲು ರಿಜಿಸ್ಟರ್‌ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇಲ್ಲಿ ಸಂಪೂರ್ಣ ಹೊಸ ರೀತಿಯ ಅನುಭವದ ಜೊತೆ, ನಟನೆ ಕಲಿಕೆಯ ವೇದಿಕೆ ವ್ಯವಸ್ಥೆ ಮಾಡಲಾಗುವುದು” ಎನ್ನುತ್ತಾರೆ ಮಿತ್ರ.

Categories
ಸಿನಿ ಸುದ್ದಿ

ಬಂಧಿತ ದಿಶಾ ಬೆಂಬಲಿಸಿ ನಟಿ ರಮ್ಯಾ ಪೋಸ್ಟ್‌!

ರೈತರ ಹೋರಾಟ ಬೆಂಬಲಿಸಿ ಟೂಲ್‌ಕಿಟ್‌ ಸೃಷ್ಟಿ ಮಾಡಿದ ಆರೋಪದಡಿ ಬಂಧಿತರಾಗಿರುವ ದಿಶಾ ರವಿ ಬೆಂಬಲಿಸಿ ನಟಿ ರಮ್ಯಾ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ. ಈ ಸುದೀರ್ಘ ಪತ್ರದಲ್ಲಿ ರಮ್ಯಾ ಅವರು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಲೇ ನಾಗರಿಕರ ಜವಾಬ್ದಾರಿಯನ್ನೂ ನೆನಪು ಮಾಡಿದ್ದಾರೆ.

21ರ ಹರೆಯದ ಬೆಂಗಳೂರಿನ ಯುವತಿ ದಿಶಾ ರವಿ ಅವರನ್ನು ಮೊನ್ನೆ ದಿಲ್ಲಿ ಪೊಲೀಸರು ಬಂಧಿಸಿದ ಕರೆದೊಯ್ದಿದ್ದಾರೆ. ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಜಾಗತಿಕ ಹೋರಾಟಗಾರರಿಗೆ ಟೂಲ್‌ಕಿಟ್‌ನೊಂದಿಗೆ ನೆರವಾಗಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ದಿಶಾರನ್ನು ಬೆಂಬಲಿಸಿರುವ ರಮ್ಯಾ, “ಈಗ ದಿಶಾ ಜೈಲಿನಲ್ಲಿದ್ದರೆ ಅದಕ್ಕೆ ನಾವೆಲ್ಲರೂ ಹೊಣೆಗಾರರು. ಮೂಕಪ್ರೇಕ್ಷಕರಂತೆ ನೋಡುತ್ತಾ ಕುಳಿತಿರುವ ನಾವು ದಿಟ್ಟತನದಿಂದ ಮಾತನಾಡಿ ಎಷ್ಟು ಸಮಯವಾಗಿದೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜನರು ತಮ್ಮ ಅಧಿಕಾರ, ದನಿಯನ್ನೇ ಮರೆತಿದ್ದಾರೆ ಎನ್ನುವುದು ಅವರ ಅಸಮಾಧಾನ. “ಜನರಿಂದ, ಜನರಿಗಾಗಿ ಸರ್ಕಾರ ಎನ್ನುವುದನ್ನು ಮರೆತಿದ್ದೇವೆ. ಆ ಯುವತಿ ತನ್ನದೇ ಒಂದು ಸ್ವಂತ ವ್ಯಕ್ತಿತ್ವ, ನಿಲುವು ಹೊಂದಿರುವುದಕ್ಕಾಗಿ ಇಂದು ಜೈಲಿನಲ್ಲಿದ್ದಾರೆ. ಪರಿಸರ ಹೋರಾಟಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿರುವ ಆಕೆಯನ್ನು ನಾವು ಬೆಂಬಲಿಸದಿದ್ದರೆ ಹೇಗೆ? ನಾವೆಲ್ಲರೂ ದಿಶಾ ಪರ ನಿಲ್ಲೋಣ” ಎನ್ನುವ ರಮ್ಯಾ ಪೋಸ್ಟ್‌ಗೆ ಪರ-ವಿರೋಧದ ನೂರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Categories
ಸಿನಿ ಸುದ್ದಿ

ಶೋಕಿಗಷ್ಟೇ ಸಿನಿಮಾ ನಟರಾಗೋದಲ್ಲ – ನಟ ಚೇತನ್ ಕೆಂಡಕಾರಿದ್ದು ಯಾರ ಮೇಲೆ ?

ಸ್ಟಾರ್ ಸಂಸ್ಕೃತಿ ನನಗೆ ಮೇಲೆ ನಂಬಿಕೆ ಇಲ್ಲ. ಇದೆಲ್ಲ ಅಸಮಾನತೆಯ ಸೂಚಕ. ಇಷ್ಟಕ್ಕೂ ಸ್ಟಾರ್ ಆಗೋದು ಅಂದ್ರೇನು? ಒಂದಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡು ಕಟೌಟ್ ಗಳ ಮೇಲೆ ಹಾಲಿನ ಅಭಿಷೇಕ ಮಾಡಿಸಿಕೊಳ್ಳುವುದಾ ? ನನ್ನ ಪ್ರಕಾರ ಸ್ಟಾರ್ ಗಿರಿ ಅನ್ನೋದು ಜನರು ನೀಡುವ ಆಶೀರ್ವಾದ. ಅದಕ್ಕೆ ವಾಪಸ್ ನಾವು ಅವರಿಗೇನು ಕೊಡುತ್ತೇವೆ ಅನ್ನೋದೇ ನಂಗೆ ಮುಖ್ಯ. ಅದು ಬಿಟ್ಟು ಶೋಕಿಗೋಸ್ಕರ ಸಿನಿಮಾ ನಟರಾಗೋದಲ್ಲ….

‘ಆ ದಿನಗಳು’ ಚಿತ್ರದ ಖ್ಯಾತಿಯ ನಟ ಚೇತನ್, ಸಿನಿಮಾ ಜಗತ್ತಿನ ಸ್ಟಾರ್ ಸಂಸ್ಕೃತಿಯ ವಿರುದ್ಧ ಹೀಗೆ ಒಂದೇ ಸಮನೆ ಗುಡುಗಿದರು. ಸಿನಿಮಾ ಜಗತ್ತು, ಜತೆಗೆ ಅದರಾಚೆಗೂ ನಮ್ಮ ಸುತ್ತ ಇರುವ ಅಸಮಾನತೆ, ತಾರತಮ್ಯ, ಲಿಂಗಭೇದ, ಶೋಷಣೆ ವಿರುದ್ಧ ಅವರ ಮಾತುಗಳು ಬೆಂಕಿ ಉಂಡೆಗಳಂತೆ ಹಾರಿದವು. ಒಬ್ಬ ನಟ ಹೀಗೆಲ್ಲ ಮಾತನಾಡುವುದಕ್ಕೆ ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ ಸರ್ಕಾರ ಮತ್ತು ಶೋಷಕ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದರು ಚೇತನ್.

ಅವರು ಹೀಗೆಲ್ಲ ಮಾತನಾಡಿದ್ದು ‘ಸಿನಿ ಲಹರಿ’ ಕಚೇರಿಗೆ ಔಪಚಾರಿಕವಾಗಿ ಭೇಟಿ ನೀಡಿದ್ದ ಸಂದರ್ಭ. ಸೋಮವಾರ ನಟ ಚೇತನ್ ಅವರು ಪತ್ನಿ ಮೇಘಾ ಅವರೊಂದಿಗೆ ‘ಸಿನಿ ಲಹರಿ’ ಕಚೇರಿಗೆ ಬಂದಿದ್ದರು. ಇದೊಂದು ಔಪಚಾರಿಕ ಭೇಟಿ. ಕಚೇರಿ ವ್ಯವಸ್ಥೆ ಕಂಡು ಖುಷಿ ಪಟ್ಟರು. ಆ ನಂತರ ಮಾತಿಗೆ ಕುಳಿತ ಅವರು, ತಮ್ಮ ಸಿನಿ ಜರ್ನಿ ಜತೆಗೆ ಸಾಮಾಜಿಕ ಹೋರಾಟಕ್ಕೆ ಇಳಿದ ಕಾರಣ, ಅದೇ ಕಾರಣಕ್ಕೆ ಎದುರಿಸಿದ  ಜೀವ ಬೆದರಿಕೆ, ನಟ ಎನ್ನುವುದಕ್ಕಿಂತ ಹೋರಾಟಗಾರನಾಗಿ ಕಂಡ ಬದುಕಿನ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಚೇತನ್ ನಟರಾ ಅಥವಾ ಹೋರಾಟಗಾರನಾ? ಮೊದಲು ಎದುರಾದ ಪ್ರಶ್ನೆಗೆ ಸಮಗ್ರವಾಗಿ ಉತ್ತರಿಸಿದರು.  “ ಎರಡನ್ನು ಯಾಕೆ ವಿಂಗಡಿಸಬೇಕು? ಒಬ್ಬ ನಟನೊಳಗೂ ಹೋರಾಟಗಾರ ಇರಬಾರದೇ? ನಾನು ನಟನಾಗುವುದಕ್ಕೂ ಮೊದಲೇ ಒಬ್ಬ ಸಾಮಾಜಿಕ ಹೋರಾಟಗಾರನಾಗಿದ್ದೆ. ಕೆಲವು ಸಾಮಾಜಿಕ ವಿಷಯಗಳ ಪರವಾಗಿ ಕರ್ನಾಟಕದ ಕೆಲವೆಡೆಗಳಿಗೆ ಭೇಟಿ ಕೊಟ್ಟು ಬಂದಿದ್ದೆ. ಜತೆಗೆ ಮನೆಯಲ್ಲಿ ನನ್ನ ಪೋಷಕರು ಬೆಳೆಸಿದ್ದೇ ಹಾಗೆ. ಹೋರಾಟಗಾರನಾಗಿ ನನ್ನ ಮಾತಿಗೆ ಒಂದಷ್ಟು ಬೆಲೆ ಬರಬೇಕಾದರೆ ನಟನಾಗುವುದು ಸೂಕ್ತಎನಿಸಿತು. ಹಾಗಾಗಿ ನಟನಾದೆ. ಸಿನಿಮಾ ನನ್ನ ವೃತ್ತಿ. ಹೋರಾಟ ನನ್ನ ಬದುಕು’ ಎನ್ನುತ್ತಾರೆ ಚೇತನ್.

ಚೇತನ್ ಅಂದ್ರೆ ವಿವಾದ, ವಿವಾದ ಅಂದ್ರೆ ಚೇತನ್ ಅಂತಾಗಿದ್ದೇಕೆ? ನೇರವಾದ ಈ ಪ್ರಶ್ನೆಗೆ ಚೇತನ್ ನಗುತ್ತಲೇ ಉತ್ತರಿಸಿದ ರೀತಿಯೇ ಅದ್ಭುತವಾಗಿತ್ತು. “ ನಂದು ಬಿಡಿ, ಬುದ್ಧ ಬಸವಣ್ಣ, ಅಂಬೇಡ್ಕರ್ ಅವರ ಕಾಲದಲ್ಲೂ ಇಂತಹದೇ ವ್ಯವಸ್ಥೆ ಇತ್ತು. ನಾನೇನು ಹೇಳಿದ್ದೇನೆ ಎನ್ನುವುದಕ್ಕಿಂತ ಅವನೇಕೆ ಹೇಳಿದ ಅಂತಲೇ ನೋಡುವ ಜನರಿದ್ದಾರೆ. ಹಾಗಾಗಿ ನಾನೇನೆ ಹೇಳಿದರೂ ವಿವಾದ ಹುಟ್ಟುತ್ತೆ. ಅವರನ್ನಾದರೂ ನಾನು ತಲುಪಿದ್ದೇನೆ ಎನ್ನುವುದು ಮುಖ್ಯವೇ. ಇರಲಿ, ಅವರು ಇರಲೇಬೇಕು. ಹಾಗಂತ ವಿವಾದ ಅಂದ್ರೆ ಚೇತನ್ ಅಲ್ಲ, ಚೇತನ್ ಹೇಳಿದ್ದನ್ನು ವಿವಾದ ಮಾಡುವ ಹುನ್ನಾರ ನಡೆಯುತ್ತಿದೆಯಷ್ಟೇ’ ಎನ್ನುವ ಸ್ಪಷ್ಟನೆ ಚೇತನ್ ಅವರದ್ದು.

ಸಿನಿಮಾ ನಟನಾಗಿಯೇ ಜನರಲ್ಲಿ ಜಾಗೃತಿ ಮೂಡಿಸಬಹುದಲ್ಲವೇ? ಎನ್ನುವ ಮತ್ತೊಂದು ಪ್ರಶ್ನೆಗೆ ಚೇತನ್ ಸ್ವಾರಸ್ಯಕರವಾದ ಉತ್ತರ ನೀಡಿದರು.” ನಾನು ಅಮೇರಿಕಾದಿಂದ ಸ್ಟಾರ್‌ ಆಗೋಕ್ಕೆ ಬಂದಿಲ್ಲ, ಹಾಗಂತ ನಟನೆಯನ್ನು ದ್ವೇಷಿಸೋದಿಲ್ಲ. ಸಿನಿಮಾ ರಂಗ ಒಂದು ಸಿದ್ದಾಂತಕ್ಕೆ ಸೀಮಿತವಾಗಿಲ್ಲ. ಸಿನಿಮಾರಂಗದಲ್ಲಿ ಎಲ್ಲರನ್ನು ಕಾರ್ಮಿಕರ ದೃಷ್ಟಿಕೋನದಿಂದ ನೋಡೋಣ. ನಮ್ಮ ದೃಷ್ಟಿಕೋನ ಬಹಳ ಮುಖ್ಯ. ನಟ, ನಟಿಯರಿಗಷ್ಟೇ ಸಿನಿಮಾಕ್ಷೇತ್ರ ಅಲ್ಲ. ನನ್ನ ಫ್ಯಾಮಿಲಿ ನನ್ನನ್ನು ವೈಚಾರಿಕ ಯೋಚನೆಯಿಂದ ಬೆಳೆಸಿದ್ದಾರೆ. ಸಮಾಜದ ಡೊಂಕನ್ನು ತಿದ್ದುವ ಹಾಗೆ ಬೆಳೆಸಿದ್ದಾರೆ. ಆ ಕೆಲಸವೇ ನನ್ನ ಪ್ರಧಾನ ಆದ್ಯತೆ’ ಎನ್ನುತ್ತಾರೆ ನಟ ಚೇತನ್‌. ( ಚೇತನ್ ಅವರೊಂದಿಗಿನ ರೋಚಕ ಮಾತುಕತೆ ಫುಲ್ ಡಿಟೈಲ್ಸ್ ಸಿನಿ ಲಹರಿ ಯುಟ್ಯೂಬ್ ಚಾನೆಲ್ ವೀಕ್ಷಿಸಿ. ಇಷ್ಟರಲ್ಲಿಯೇ ನಿಮ್ಮ ಮುಂದೆ)

Categories
ಸಿನಿ ಸುದ್ದಿ

ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ… ಹೀಗಂತ ದರ್ಶನ್‌ ಟಾಂಗ್‌ ಕೊಟ್ಟಿದ್ದು ಯಾರಿಗೆ? ವೈರಲ್‌ ಆಯ್ತು ರಾಬರ್ಟ್‌‌ ಅಫಿಶಿಯಲ್ ಟ್ರೇಲರ್

 

“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ…
– ಇದು ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಅವರ ಖದರ್‌ ಡೈಲಾಗ್.‌ ಇಂಥದ್ದೊಂದು ಸಖತ್‌ ಡೈಲಾಗ್‌ ಇರೋದು. “ರಾಬರ್ಟ್‌” ಟ್ರೇಲರ್‌ನಲ್ಲಿ. ಹೌದು, ಫೆಬ್ರವರಿ 16ರಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹುಟ್ಟುಹಬ್ಬ. ಅವರ ಬರ್ತ್‌ಡೇಗೆ “ರಾಬರ್ಟ್‌” ಚಿತ್ರತಂಡ ಅದ್ಧೂರಿಯಾಗಿರುವ ಒಂದು ಟ್ರೇಲರ್‌ ಬಿಡುಗಡೆ ಮಾಡಿದೆ. ನಿಜಕ್ಕೂ ಅದೊಂದು ಅದ್ಭುತವಾಗಿ ರೂಪುಗೊಂಡಿರುವ ಟ್ರೇಲರ್.‌ ಆ ಟ್ರೇಲರ್‌ ನೋಡಿದ ಪ್ರತಿಯೊಬ್ಬ ದರ್ಶನ್‌ ಅಭಿಮಾನಿಗಳು ಖುಷ್.‌

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಟ್ರೇಲರ್‌ನಲ್ಲಿ ಭರ್ಜರಿ ಮಾಸ್‌ ಡೈಲಾಗ್‌ಗಳಿವೆ. ಅದರಲ್ಲೂ, ಮೇಕಿಂಗ್‌ ಬಗ್ಗೆ ಹೇಳುವಂತೆಯೇ ಇಲ್ಲ. ಟ್ರೇಲರ್‌ ನೋಡಿದವರಿಗೆ “ರಾಬರ್ಟ್‌” ದರ್ಶನ ಮಾಡಲೇಬೇಕು ಎಂಬಷ್ಟರ ಮಟ್ಟಿಗೆ ನಿರ್ದೇಶಕ ತರುಣ್‌ ಸುಧೀರ್‌ ಅವರು ಟ್ರೇಲರ್‌ ಕಟ್‌ ಮಾಡಿಸಿದ್ದಾರೆ. ಆ ಟ್ರೇಲರ್‌ ನೋಡಿದವರಿಗೆ ಸಿನಿಮಾದ ಕ್ವಾಲಿಟಿ ಮತ್ತು ಅದ್ಧೂರಿತನ ಗೊತ್ತಾಗುತ್ತೆ. ದರ್ಶನ್ ಅವರ ಹೊಸ ಲುಕ್ ಇಲ್ಲಿ ಸ್ಪೆಷಲ್ ಎನಿಸುತ್ತೆ. ಸಾಕಷ್ಟು ಪವರ್‌ ಕೂಡ ಇದೆ. ಇನ್ನು, ಇಡೀ ಟ್ರೇಲರ್‌ನಲ್ಲಿ ಅಬ್ಬರದ ಡೈಲಾಗ್‌ಗಳೇ ತುಂಬಿವೆ.


“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ..” ಎಂಬ ಡೈಲಾಗ್‌ ಕೇಳಿದವರಿಗೆ ದರ್ಶನ್‌ ಅವರು ಯಾರಿಗೆ ಈ ಡೈಲಾಗ್‌ ಮೂಲಕ ಟಾಂಗ್‌ ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳೂ ಗಿರಕಿ ಹೊಡೆಯುತ್ತವೆ. ಅಷ್ಟೇ ಅಲ್ಲ, ಅವರ ಇನ್ನೊಂದು ಡೈಲಾಗ್‌ ಕೂಡ ಅಂಥದ್ದೊಂದು ಪ್ರಶ್ನೆಗೂ ಕಾರಣವಾಗುತ್ತೆ. “ಒಬ್ಬರ ಲೈಫಲ್ಲಿ ನಾವ್‌ ಹೀರೋ ಆಗಬೇಕೆಂದರೆ, ಇನ್ನೊಬ್ಬರ ಲೈಫಲ್ಲಿ ನಾವ್‌ ವಿಲನ್‌ ಆಗಲೇಬೇಕು…” ಎಂಬ ಡೈಲಾಗ್‌ ಕೇಳಿದವರಿಗೆ ಇಲ್ಲಿ ದರ್ಶನ್‌ ಯಾರ ಲೈಫ್‌ಗೆ ವಿಲನ್‌ ಆಗಿದ್ದಾರೆ? ಅವರು ಯಾರ ಕುರಿತಾಗಿ ಈ ಡೈಲಾಗ್‌ ಹೇಳಿದ್ದಾರೆ ಅನ್ನೋ ಪ್ರಶ್ನೆ ಕೂಡ ಸಹಜವಾಗಿಯೇ ಮೂಡುತ್ತೆ. ಮತ್ತೊಂದು ಡೈಲಾಗ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೂ ಒಂದು ಟಾಂಗ್‌ ಇದೆ. “ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣ ಮುಂದೆ ಗೆಲ್ಲೋದು ಗೊತ್ತು…” ಈ ಕೌಂಟ್‌ ಡೌನ್‌ ಸ್ಟಾರ್ಟ್ಸ್ಸ್‌ʼ ಎಂದು ಬರುವ ಡೈಲಾಗ್‌ ಕೂಡ ಸಖತ್‌ ಮಾಸ್‌ ಆಗಿದೆ.


ಅದೆಲ್ಲಾ ಏನೇ ಇದ್ದರೂ, “ರಾಬರ್ಟ್‌” ಚಿತ್ರ ನೋಡಿದಾಗಲೇ, ದರ್ಶನ್‌ ಅವರ ಈ ಡೈಲಾಗ್‌ ಅಲ್ಲಿರುವ ವಿಲನ್‌ಗಾಗಿಯೇ ಹೇಳಿದ್ದು ಅಂತ ಗೊತ್ತಾಗುತ್ತೆ. ಒಂದಂತೂ ನಿಜ, “ರಾಬರ್ಟ್‌” ಚಿತ್ರ ನೋಡೋಕೆ ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ “ರಾಬರ್ಟ್‌” ಚಿತ್ರ ತೆರೆಗೆ ಬರುತ್ತಿದೆ.
ಟ್ರೇಲರ್‌ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ದೊಡ್ಡ ತಾರಾಬಳಗವೇ ಇದೆ. ಜಗಪತಿ ಬಾಬು, ದೇವರಾಜ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ತುಂಬಿದೆ. ಇನ್ನು, ಬಾಲ ಶ್ರೀರಾಮನನ್ನು ತನ್ನ ಹೆಗಲ ಮೇಲೆ ಹೊತ್ತ ಆಂಜನೇಯ ಪಾತ್ರದಲ್ಲಿ ದರ್ಶನ್‌ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಪಾತ್ರ ಯಾಕೆ ಅನ್ನೋದನ್ನೂ ಸಿನಿಮಾದಲ್ಲೇ ನೋಡಬೇಕು. ಒಟ್ನಲ್ಲಿ, ನಿರ್ದೇಶಕ ತರುಣ್‌ ಸುಧೀರ್‌ ಅವರು, ಕುತೂಹಲ ಕೆರಳಿಸುವಂತಹ ಸಿನಿಮಾ ಮಾಡಿದ್ದಾರೆ ಎಂಬುದಂತೂ ಸತ್ಯ. ಟ್ರೇಲರ್‌ನಲ್ಲೇ ಅಂಥದ್ದೊಂದು ಥ್ರಿಲ್‌ ಕಟ್ಟಿಕೊಟ್ಟಿರುವ ನಿರ್ದೇಶಕರು ಭರವಸೆ ಮೂಡಿಸಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರು ಅದ್ಧೂರಿಯಾಗಿಯೇ ತಯಾರಿಸಿದ್ದಾರೆ. ಆಶಾಭಟ್‌ ದರ್ಶನ್‌ಗೆ ಜೋಡಿಯಾಗಿದ್ದಾರೆ. ಅಂದಹಾಗೆ, ಟ್ರೇಲರ್‌ ಬಂದು ಕೇವಲ 42 ನಿಮಿಷಕ್ಕೆ ಹತ್ತು ಲಕ್ಷ ಜನ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದು ವಿಶೇಷ.

 

Categories
ಸಿನಿ ಸುದ್ದಿ

ನಟ ಚೇತನ್‌ , ಆ 100 ಕೋಟಿ ರೂ. ಹಿಂದೆ ಬಿದ್ದಿದಾದರೂ ಯಾಕೆ? ಕುತೂಹಲಕಾರಿ ಆಗಿದೆ ಹಂಡ್ರೆಡ್‌ ಕ್ರೋರ್ಸ್ ಕತೆ !

ನಟ ಚೇತನ್‌ ಅಹಿಂಸಾ ಬದಲಾಗಿದ್ದಾರೆ. ಸಾಮಾಜಿಕ ಹೋರಾಟಗಳ ಜತೆಗೆಯೇ ಈಗವರು ನಟನಾಗಿಯೂ ಬ್ಯುಸಿ ಆಗುತ್ತಿದ್ದಾರೆ. ಹಾಗೆಯೇ ವಿಶೇಷ ಕಥಾಹಂದರದ ಚಿತ್ರಗಳಿಗೂ ಬಣ್ಣ ಹಚ್ಚುತ್ತಿದ್ದಾರೆ. ಅಂತಹದೇ ಒಂದು ವಿಭಿನ್ನ ಕಥಾ ಹಂದರದ ” 100 ಕ್ರೋರ್ಸ್‌ ʼ ಹೆಸರಿನ ಚಿತ್ರವೀಗ ಫಸ್ಟ್‌ ಲುಕ್‌ ಲಾಂಚ್‌ ಮೂಲಕ ಸೌಂಡ್‌ ಮಾಡಿದೆ. ಡಿಫೆರೆಂಟ್‌ ಟೈಟಲ್‌ ಹೊಂದಿರುವ ʼ100 ಕ್ರೋರ್ಸ್‌ʼ ಚಿತ್ರ ಜನವರಿಯಲ್ಲೇ ಸುದ್ದಿ ಆಗಿತ್ತು. ಈಗ ಹೈದ್ರಾಬಾದ್‌, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರ ತಂಡವು ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮಾಡಿದೆ.


ಹರೀಶ್‌ ಶಂಕರ್‌ ನಿರ್ದೇಶನದ ಈ ಚಿತ್ರದಲ್ಲಿ ಚೇತನ್‌ ಅವರದ್ದು ಪೊಲೀಸ್‌ ಅಧಿಕಾರಿ ಪಾತ್ರ. ಹಾಗೆಯೇ ರಗಡ್‌ ಲುಕ್.‌ ಅದೇ ಈಗ ಫಸ್ಟ್‌ ಲುಕ್‌ ಪೋಸ್ಟರ್‌ ನಲ್ಲಿ ಅನಾವರಣಗೊಂಡಿದೆ. ʼಆ ದಿನಗಳುʼ, ʼಮೈನಾʼ ಸೇರಿದಂತೆ ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಸಿಕೊಂಡಿರುವ ನಟ ಚೇತನ್‌, ಇದುವರೆಗೂ ಪೊಲೀಸ್‌ ಗೆಟಪ್‌ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಫಸ್ಟ್‌ ಟೈಮ್‌ ಈಗ ಪೊಲೀಸ್‌ ಅಧಿಕಾರಿಯಾಗಿಯೂ ತೆರೆ ಮೇಲೆ ಬರುತ್ತಿದ್ದಾರೆ. ಕನ್ನಡದ ಜತೆಗೆ ಈ ಚಿತ್ರ ತೆಲುಗಿನಲ್ಲೂ ನಿರ್ಮಾಣವಾಗಿದೆ. ಎರಡು ಕಡೆ ಚೇತನ್‌ ಅವರೇ ಹೀರೋ ಎನ್ನುವುದು ಈ ಚಿತ್ರದ ಮತ್ತೊಂದು ವಿಶೇಷ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಣದ ಹಿಂದಿನ ಕತೆ. ನೂರು ಕೋಟಿಯ ಹಿಂದೆ ಹೋಗುವ ಪೊಲೀಸ್‌ ಆಧಿಕಾರಿಯ ಕಲರ್‌ ಫುಲ್‌ ಕತೆ ಎನ್ನುವುದು ಚಿತ್ರ ತಂಡ ಮಾತು.

ಎಸ್​ಎಸ್​ ಸ್ಟುಡಿಯೋಸ್ ಮತ್ತು ವಿಷನ್​ ಸಿನಿಮಾಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ನಿರ್ದೇಶನಕ ಸಿಂಪಲ್‌ ಸುನಿ ಬಿಡುಗಡೆ ಮಾಡಿದರು. ಟಾಲಿವುಡ್‌ ನಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದಾರೆ. ವಿರಾಟ್‌ ಚಕ್ರವರ್ತಿ ಈ ಚಿತ್ರದ ನಿರ್ದೇಶಕ. ಅವರ ಪ್ರಕಾರ ಇದೊಂದು ಪಕ್ಕಾ ಆಕ್ಷನ್‌ ಕಮ್‌ ಲವ್‌ ಆಧರಿಸಿದ ಸಿನಿಮಾ. ಚೇತನ್‌ ಅವರ ಪಾತ್ರವೇ ತುಂಬಾ ಡಿಫೆರೆಂಟ್‌ ಅಂತೆ.

ಈ ಪಾತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ನಟ ಚೇತನ್‌, ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್​ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಹೊಸ ಅನುಭವ. ಅಷ್ಟೇ ಸಾಹಸ ದೃಶ್ಯಗಳೂ ಸಿನಿಮಾದ ಹೈಲೈಟ್ ಎಂದರು.

ಚಿತ್ರದಲ್ಲಿ ಎರಡೇ ಹಾಡುಗಳಿವೆಯಂತೆ. ಕರ್ನಾಟಕ ಸೇರಿ ಹೈದರಾಬಾದ್​ನಲ್ಲಿ ಚಿತ್ರದ ಶೂಟಿಂಗ್​ ನಡೆದಿದೆ. ಚೇತನ್ ಮತ್ತು ʼಹ್ಯಾಪಿಡೇಸ್ʼ ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದರೆ, ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್​ ಈ ಚಿತ್ರದ ನಾಯಕಿಯರು. ಉಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಪೋಷಕ ಪಾತ್ರದಲ್ಲಿದ್ದಾರೆ. ನಾಗಂ ತಿರುಪತಿ ರೆಡ್ಡಿ ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಶ್ರೀಕಾಂತ್ ದೀಪಾಲ್ ಸಹ ನಿರ್ಮಾಪಕರಾಗಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಶೂಟಿಂಗ್‌ ವೇಳೆ ನಟ ಜಾನ್ ಅಬ್ರಾಹಂಗೆ ಗಾಯ- ಅಟ್ಯಾಕ್‌ ಸಿನಿಮಾದಲ್ಲಿ ಅವಘಡ

ಸಿನಿಮಾ ಅಂದಮೇಲೆ ರಿಸ್ಕ್‌ ಇದ್ದೇ ಇರುತ್ತೆ. ಅದರಲ್ಲೂ ಈ ಸ್ಟಂಟ್‌ ವಿಚಾರಕ್ಕೆ ಬಂದರೆ, ಸಾಕಷ್ಟು ಎಚ್ಚರದಿಂದ ಇರಲೇಬೇಕು. ಎಷ್ಟೇ ಎಚ್ಚರವಹಿಸಿದರೂ, ಒಂದಷ್ಟು ಸಮಸ್ಯೆಗಳು ಸಹಜ. ಸಣ್ಣಪುಟ್ಟ ಗಾಯಗಳ ಜೊತೆಗೆ ಅದೆಷ್ಟೋ ಫೈಟರ್ಸ್‌, ಮಾಸ್ಟರ್ಸ್‌ ಕೂಡ ನೋವು ಅನುಭವಿಸಿರುವುದುಂಟು. ಇಲ್ಲೀಗ ಹೇಳಹೊರಟಿರುವ ವಿಷಯ, ಬಾಲಿವುಡ್‌ ನಟ ಜಾನ್‌ ಅಬ್ರಾಹಂ ಕುರಿತು. ಹೌದು, ಜಾನ್‌ ಅಬ್ರಾಹಂ ಅವರು ಶೂಟಿಂಗ್‌ ಟೈಮ್‌ನಲ್ಲಿ ಫೈಟ್‌ ಸೀನ್‌ ಮಾಡುವಾಗ ಗಾಯಗೊಂಡಿದ್ದಾರೆ.

“ಅಟ್ಯಾಕ್‌” ಎನ್ನುವ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಫೈಟ್‌ ಸೀನ್‌ ವೇಳೆ ಟ್ಯೂಬ್‌ಲೈಟ್‌ನಿಂದ ಡಾನ್‌ಗಳು ನಟ ಜಾನ್‌ ಅಬ್ರಾಹಂ ಅವರ ಮೇಲೆ ಹಲ್ಲೆ ಮಾಡುವ ದೃಶ್ಯವದು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಬ್ರಾಹಂ ಅವರಿಗೆ ಪೆಟ್ಟಾಗಿದೆ. ತಕ್ಷಣವೇ ಶೂಟಿಂಗ್‌ ನಿಲ್ಲಿಸಿದ ಚಿತ್ರತಂಡ ಅವರ ಆರೋಗ್ಯ ವಿಚಾರಿಸಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಾನ್ ಅಬ್ರಾಹಂ, “ನನಗೆ ಗಂಭೀರ ಗಾಯವಾಗಿಲ್ಲ. ಯಾರೂ ಕೂಡ ಭಯಪಡಬೇಕಿಲ್ಲ” ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಬಾಲಿವುಡ್ ನಟ ಸಂದೀಪ್ ನಹರ್‌ ಆತ್ಮಹತ್ಯೆ

ಅಕ್ಷಯ್ ಕುಮಾರ್ ನಟನೆಯ ‘ಕೇಸರಿ’, ‘ಧೋನಿ’ ಬಯೋಪಿಕ್‌ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟ ಸಂದೀಪ್ ನಹರ್ ನಿನ್ನೆ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ಕೆಹ್ನೆ ಕೋ ಹಮ್‌ಸಫರ್ ಹೈ’ ಸೇರಿದಂತೆ ಕೆಲವು ಹಿಂದಿ ಸರಣಿಗಳ ನಟನಾಗಿಯೂ ಅವರು ಚಿರಪರಿಚಿತರು. ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು ಸೂಸೈಡ್ ನೋಟ್ ಬರೆದಿದ್ದು, ತಮ್ಮ ನಿರ್ಧಾರಕ್ಕೆ ಪತ್ನಿ ಮತ್ತು ಅತ್ತೆಯ ಕಿರುಕುಳ ಕಾರಣ ಎಂದಿದ್ದಾರೆ.

ಸಂಗೀಪ್ ನಹರ್ ಎರಡು ವರ್ಷಗಳ ಹಿಂದೆ ಕಂಚನ್ ಅವರನ್ನು ವರಿಸಿದ್ದರು. ಇವರ ದಾಂಪತ್ಯದಲ್ಲಿ ವಿರಸ ತಲೆದೋರಿದ್ದು, ದಂಪತಿ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ. “ಆತ್ಮಹತ್ಯೆ ನಿರ್ಧಾರದ ಬಗ್ಗೆ ನನಗೆ ಖೇದವಿದೆ. ಇಂಥದ್ದೊಂದು ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾನು ದಾಂಪತ್ಯ ಬದುಕು ಸರಿಪಡಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಕೊನೆಗೂ ನನಗೆ ಒಳಿತಾಗಲಿಲ್ಲ. ಜೀವನದಲ್ಲಿ ನಾನು ನರಕವನ್ನೇ ನೋಡಿದ್ದೇನೆ. ಹಾಗಾಗಿ ಸಂತೋಷದಿಂದ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಸೂಯಿಸೈಡ್‌ ನೋಟ್‌ ಅಲ್ಲಿ ಬರೆದುಕೊಂಡಿದ್ದಾರೆ ಸಂದೀಪ್‌.

ವೈಯಕ್ತಿ ಕಾರಣಗಳಲ್ಲದೆ ಬಾಲಿವುಡ್‌ನಲ್ಲಿ ರಾಜಕೀಯದ ಬಗ್ಗೆಯೂ ಅವರು ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಟನಾಗಿ ಅಲ್ಲಿ ತಾವು ಹೇಗೆ ಕಿರುಕುಳ ಅನುಭವಿಸಬೇಕಾಯ್ತು ಎನ್ನುವ ವಿವರಣೆ ಅಲ್ಲಿದೆ. “ಚಿಕ್ಕ ನಟರಿಗೆ ಬಾಲಿವುಡ್‌ನಲ್ಲಿ ತುಂಬಾ ಕಷ್ಟವಿದೆ. ಕೊನೆಯ ಹಂತದಲ್ಲಿ ನಮ್ಮ ಅವಕಾಶಗಳನ್ನು ಬೇರೆಯವರು ಕಸಿದುಬಿಡುತ್ತಾರೆ. ಇದು ಕಲಾವಿದರನ್ನು ಹತಾಶೆಗೆ ದೂಡುತ್ತದೆ” ಎಂದು ಬರೆದಿದ್ದಾರೆ ಸಂದೀಪ್‌.

error: Content is protected !!