Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಮಹಾತ್ಮ ಗಾಂಧಿಯ ಬಾಲ್ಯದ ಕಥನ !

ಸರ್ಕಾರ 100 ಪರ್ಸೆಂಟ್ ಅಕ್ಯೂಪೆನ್ಸಿ ನೀಡಿದ ಬೆನ್ನಲ್ಲೇ ಸ್ಟಾರ್ ವಾರ್ ಶುರುವಾಗಿದೆ. ನಾ ಮುಂದು ತಾ ಮುಂದು ಎನ್ನುತ್ತಲೇ ನಿರ್ಮಾಪಕರು ಸಿನಿಮಾ ಬಿಡುಗಡೆ ಸಜ್ಜಾಗ್ತಿದ್ದಾರೆ. ಸ್ಟಾರ್ ನಟರುಗಳ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಅಪ್ಪಳಿಸುತ್ತಿರುವುದರಿಂದ ಪೈಪೋಟಿ ಜೋರಾಗಿದೆ. ಈ ಮಧ್ಯೆ ಮಹಾತ್ಮ ಗಾಂಧೀಜಿಯವರ ಲೈಫ್ ಸ್ಟೋರಿ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡ್ತಿದೆ.

ಅಕ್ಟೋಬರ್ 1 ರಿಂದ ಸರ್ಕಾರ ‌100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ನೀಡಿದೆ. ಹೀಗಾಗಿ, ಕಳೆದ ಒಂದೂವರೆ ವರ್ಷದಿಂದ ಡಬ್ಬದಲ್ಲೇ ಕುಳಿತಿದ್ದ ಸಿನಿಮಾಗಳು ಬಿಡುಗಡೆಗೆ ತುದಿಗಾಲಿನಲ್ಲಿ‌ ನಿಂತಿವೆ. ಆ ಪೈಕಿ ಪಿ.‌ ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಸಿನಿಮಾ ಕೂಡ ಒಂದು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬಾಲ್ಯವನ್ನು ಬೆಳ್ಳಿತೆರೆ ಮೇಲೆ ತೋರಿಸಿದ್ದಾರೆ.ಮೋಹನದಾಸ ಹೆಸರಲ್ಲಿ ಸಿನಿಮಾ ಮಾಡಿ ಮುಗಿಸಿದ್ದು, ಗಾಂಧಿಜಯಂತಿ ಪ್ರಯುಕ್ತ ರಾಜ್ಯಾದ್ಯಂತ ತೆರೆಗೆ ತರಲಾಗುತ್ತಿದೆ.

‘ಮೋಹನದಾಸ’ ಕರಮಚಂದ್ರ ಗಾಂಧೀಜೀಯವರು ಮಹಾತ್ಮರಾದ ಕಥೆಯನ್ನು ಕೆಲವರು ಹಲವು‌ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ, ಮಹಾತ್ಮರೆನಿಸಿಕೊಳ್ಳುವುದಕ್ಕೂ ಮೊದಲಿನ ಕಥೆ ಅಂದರೆ ಬಾಲ್ಯದ ಕಥೆಯನ್ನು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ ಹೊರೆತು ಬಿಗ್ ಸ್ಕ್ರೀನ್ ನಲ್ಲಿ ತೆರೆಗೆ ತಂದಿಲ್ಲ. ಇದೇ, ಮೊದಲ ಬಾರಿಗೆ ಕನ್ನಡ- ಇಂಗ್ಲೀಷ್- ಹಿಂದಿ ಮೂರು ಭಾಷೆಯಲ್ಲಿ ಒಂಭತ್ತು ಭಾರಿ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿರುವ ನಿರ್ದೇಶಕ ಪಿ. ಶೇಷಾದ್ರಿಯವರು ಸಿನೆಮಾ ಮಾಡಿದ್ದಾರೆ. ಏಳು ವರ್ಷದಿಂದ ಹದಿನಾಲ್ಕು ವರ್ಷದ ಗಾಂಧೀಜೀಯವರ ಬಾಲ್ಯದ ಕಥೆಯನ್ನು ಒಂದು ಗಂಟೆ ಅವಧಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಚಾರಿ ಥಿಯೇಟರ್ ನಲ್ಲಿ ಪಳಗುತ್ತಿರುವ ಸಮರ್ಥ್ 14 ವರ್ಷದ ಮೋಹನದಾಸ್ ಪಾತ್ರಕ್ಕೆ ಬಣ್ಣ ಹಚ್ಚಿದರೆ, 7 ವರ್ಷದ ಮೋಹನ್ ದಾಸ್ ಪಾತ್ರದಲ್ಲಿ ಪರಮ್ ಸ್ವಾಮಿ ಮಿಂಚಿದ್ದಾರೆ. ಮೋಹನ್ ದಾಸ್ ತಾಯಿ ಪುತಲಿಬಾಯಿಯಾಗಿ ಹಿರಿಯ ನಟಿ ಶ್ರುತಿ, ತಂದೆ ಕರಮ್ ಚಂದ್ರ ಗಾಂಧಿಯಾಗಿ ಅನಂತ್ ಮಹಾದೇವನ್ ಅಭಿನಯಿಸಿದ್ದಾರೆ. ದತ್ತಣ್ಣ ಬಯೋಸ್ಕೋಪ್ ವಾಲಾ ಆಗಿ ನಟಿಸಿದ್ದಾರೆ.

ಗಾಂಧೀಜಿ ಹುಟ್ಟಿಬೆಳೆದ ಗುಜರಾತ್ ನ ಪೋರಬಂದರಿನ ಮನೆ ಹಾಗೂ ರಾಜ್ ಕೋಟ್ ನ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಅವರು ಶಿಕ್ಷಣ ಕಲಿತ ಆಲ್ ಫ್ರೆಡ್ ಹೈಸ್ಕೂಲ್ ನಲ್ಲೂ ಶೂಟಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲೂ ಚಿತ್ರೀಕರಣ ನಡೆದಿದ್ದು, ಸ್ವಾತಂತ್ರ್ಯ ಪೂರ್ವದ ಚಿತ್ರಣ ಕಟ್ಟಿಕೊಡಲು ಗ್ರಾಫಿಕ್ಸ್ ಮೊರೆ ಹೋಗಿದ್ದಾರೆ. ಮಹಾತ್ಮ ಗಾಂಧೀಜಿಯವರ ಬಾಲ್ಯದ ಕಥೆಯನ್ನು ಬೆಳ್ಳಿತೆರೆ ಮೇಲೆ ಕಟ್ಟಿಕೊಡಬೇಕು ಎನ್ನುವುದು ನಿರ್ದೇಶಕ ಪಿ. ಶೇಷಾದ್ರಿಯವರ ಕನಸಾಗಿತ್ತು ಕೊನೆಗೂ ಈಡೇರಿದೆ. 100 ಚಿತ್ರಮಂದಿರಗಳಲ್ಲಿ ಮೋಹನದಾಸ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವುದು ನಿರ್ದೇಶಕರ ಅಭಿಲಾಷೆ. ಅವರಂತೇ ಆಗಲಿದೆಯೋ, ಇಲ್ಲವೋ‌ ಗೊತ್ತಿಲ್ಲ. ಆದರೆ,ಮಾರ್ಕ್ಸ್ ಸುರೇಶ್ ಅವರು ರಾಜ್ಯದ್ಯಂತ ಸಿನಿಮಾ ವಿತರಣೆ ಮಾಡ್ತಿದ್ದಾರೆ.

ಮಿತ್ರ ಚಿತ್ರ ಲಾಂಛನದಡಿ ಮೋಹನದಾಸ ನಿರ್ಮಾಣವಾಗಿದೆ.12 ಮಂದಿ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ. ಜಿ.ಎಸ್. ಭಾಸ್ಕರ್ ಛಾಯಾಗ್ರಹಣ, ಕೆಂಪರಾಜು ಅವರ ಸಂಕಲನ, ಪ್ರವೀಣ್ ಗೋಡ್ಕಿಂಡಿಯವರ ಸಂಗೀತ ಚಿತ್ರಕ್ಕಿದೆ. ಇದೇ ಅಕ್ಟೋಬರ್ ೨ರಂದು ಚಿತ್ರ ಬಿಡುಗಡೆಯಾಗ್ತಿದೆ. ಈ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ಬರೀ ಸ್ಟಾರ್ ಸಿನಿಮಾ ಪ್ರಮೋಟ್ ಮಾಡಬೇಡಿ, ನಮ್ಮ ಸಿನಿಮಾ ಕಡೆ ನೋಡಿ ಎಂದು ನಿರ್ದೇಶಕ ನಿರ್ದೇಶಕರು ಮನವಿ‌ ಮಾಡಿಕೊಂಡರು. ಈ ಮಧ್ಯೆ ಮಾತನಾಡಿದ ಹಿರಿಯ ನಟಿ ಶ್ರುತಿ ನಾಡಿನಾದ್ಯಂತ ಶಾಲಾ ಮಕ್ಕಳಿಗೆ ಸಿನಿಮಾ ತೋರಿಸುವ ನಿಮ್ಮ ಪ್ರಯತ್ನಕ್ಕೆ ಸರ್ಕಾರದ ಜೊತೆ ಮಾತನಾಡುವ ಭರವಸೆ ಕೊಟ್ಟರು. ಹಿರಿಯ ನಟ ದತ್ತಣ್ಣ ಸೇರಿದಂತೆ ಮೋಹನದಾಸ ಸಿನಿಮಾ ಟೀಂ ಹಾಜರಿತ್ತು.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ನಟಿ ಆರತಿ ಬಯೋಪಿಕ್ !? ವೈರಲ್ ಆದ ಆ ನಟಿಯ ಪೋಟೋ ಹಿಂದಿನ ಕತೆಯೇನು ?

ಕನ್ನಡದ ಹಿರಿಯ ನಟಿ‌ ‌ರಂಗ ನಾಯಕಿ ಖ್ಯಾತಿಯ ಆರತಿ ಈಗ ಎಲ್ಲಿದ್ದಾರೆ ? ಏನ್ ಮಾಡ್ತಿದ್ದಾರೆ ? ಚಿತ್ರರಂಗದಿಂದ ಅವರು ಅಷ್ಟು ದೂರ ಯಾಕೆ ಹೋದರು? ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಇಲ್ಲ. ಯಾಕಂದ್ರೆ ಅವರು ನಟನೆಯಿಂದ ದೂರ ಉಳಿದು ಹಲವು ವರ್ಷಗಳೇ ಆಗಿ ಹೋದವು. ಹಾಗಾಗಿ ಈಗವರು ಎಲ್ಲಿದ್ದಾರೆನ್ನುವ ಸಿನಿಮಾ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆಯೇ ಈಗ ಒಂದು ಸುದ್ದಿ ಹರಿದಾಡತೊಡಗಿದೆ. ಆರತಿ ಬಯೋಪಿಕ್ ತೆರೆ ಮೇಲೆ ಬರುತ್ತಿದೆಯಾ ಎನ್ನುವುದು ಆ‌ಸುದ್ದಿ.‌

ಸಿನಿಮಾ ಭಾಷೆಯಲ್ಲಿ ಹಾಗೊಂದು ಗಾಸಿಪ್ ಹರಿದಾಡುತ್ತಿದೆ. ಅದಕ್ಕೆ ಕಾರಣ ನಟಿ‌ ಅನುಪಮಾ ಗೌಡ ಅವರ ಒಂದು ಫೋಟೋ. ವಿಷಯಕ್ಕೆ ಬರುವ ಒಮ್ಮೆ ನೀವು ಈ ಫೋಟೋ ಗಮನಿಸಿನೋಡಿ. ಅನುಪಮಾ ಅವರ ಫೋಟೋಗೂ ಮತ್ತು ಹಿರಿಯ ನಟಿ ಆರತಿ ಅವರ ಫೋಟೋಗೋ ಹಲವು ಹೋಲಿಕೆಗಳಿವೆ. ಸಾಮಾನ್ಯವಾಗಿ‌ ಬಯೋಫಿಕ್ ಅಂತ ಸದ್ದು ಆದಾಗ ಕಂಡಿದ್ದು ಹೀಗೆ ಅಲ್ಲವೇ? ಇತ್ತೀಚೆಗೆ ಸೌತ್ ಸಿನಾ ಜಗತ್ತಿನಲ್ಲಿ ಜಯಲಲಿತಾ ಅವರ ಬಯೋಪಿಕ್ ದೊಡ್ಡ ಸದ್ದು ಮಾಡಿದಾಗ ಕಂಗನಾ ಕಾಣಿಸಿಕೊಂಡಿದ್ದು ಹೀಗೆ ಅಲ್ಲವೇ?

ಗೊತ್ತಿಲ್ಲ,ನಟಿ , ನಿರೂಪಕಿ ಅನುಪಮಾ ಗೌಡ ಯಾವ ಕಾರಣಕ್ಕಾಗಿ ಕ್ಯಾಮೆರಾ ಮುಂದೆ ಇಂತಹದೊಂದು ಫೋಸು ಕೊಟ್ಟಿದ್ದಾರೋ ಗೊತ್ತಿಲ್ಲ, ಆದರೆ ಅದು ಥೇಟ್ ಆರತಿ‌ ಅವರ ಒಂದು ಗೆಟಪ್ ನಂತೆಯೇ ಇದೆ‌ . ಆರತಿ ಅವರು ಇರೋದೆ ಹಾಗೆ.

ಹಾಗಾದ್ರೆ ಅನುಪಮಾ ಗೌಡ ಅವರು ಕ್ಯಾಮೆರಾ ಮುಂದೆ ಕೊಟ್ಟ ಪೋಸು ಆರತಿ ಅವರ ಗೆಟಪ್ ಅಲ್ಲದಿರಬಹುದು, ಆದರೆ ಆರತಿ ಅವರ ಕುರಿತು ಸಿನಿಮಾ ಮಾಡ ಹೊರಟರೆ ಒಂದಲ್ಲ ಮೂರ್ನಾ ಲ್ಕು ಸಿಕ್ವೆಲ್ ಮಾಡುವಷ್ಟು ಸಾಧನೆಯ ಜತೆಗಿನ ವಿಶಿಷ್ಟ ಬದುಕು ಅವರದು. ಅದು ಅವರ ಅದೃಷ್ಟವೋ, ದುರಾದೃ ಷ್ಟವೋ ನಟಿಯಾಗಿ ಗೆದ್ದ ಆರತಿ ಖಾಸಗಿ ಬದುಕಿನಲ್ಲಿ‌ ನೆಮ್ಮದಿ ಕಾಣಲಿಲ್ಲ ಎನ್ನುವುದು ಉದ್ಯಮವೇ ಹೇಳುವ ಮಾತು. ಅದೊಂದು‌ ಸಿನಿಮಾ ಕಥಾನಕ !

ಅದೇ ಕಾರಣಕ್ಕೆ ಸದ್ದಿಲ್ಲದೆ ಸುದ್ದಿಯೂ ಆಗದೆ ಹಿರಿಯ ನಟಿ ಆರತಿ ಅವರ ಬಯೋಪಿಕ್ ತೆರೆಗೆ ಬರುತ್ತಿದೆಯಾ ಎನ್ನುವ ಗುಮಾನಿ ಈಗ ನಟಿ‌ ಅನುಪಮಾ ಗೌಡ ಅವರ ಪೋಸು ನೋಡಿದಾಗ ಅನಿಸಿದ್ದು ಹೌದು. ಮೂಲಗಳ ಪ್ರಕಾರ ಅದು ರಾಜ ರಾಣಿ ಹೆಸರಿನ ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಕೊಟ್ಟ ಪೋಸ್ ಅಂತೆ. ಹೀಗಂತ ಈಗ ಸುದ್ದಿ ಹರಿದಾಡುತ್ತಿದೆ. ಇರಲಿ, ಅದು ಅಲ್ಲಿದೆ ಆಂತಿಟ್ಟುಕೊಳ್ಳೊಣ, ಆರತಿ ಅವರ ಬಯೋಪಿಕ್ ಸಿನಿಮಾ ಮಾಡಲು ಯಾರಾದರೂ ಮನಸು ಮಾಡಿದರೆ ಯಾಕೆ ನಟಿ‌ಅನುಪಮಾ‌ಗೌಡ ಅದರಲ್ಲಿ‌ನಟಿಸಬಾರದು? ಸಿನಿಮಾ‌ಮಂದಿ ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬಾರದು?

  • ಎಂಟರ್‌ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ಕನ್ನಡದಲ್ಲೀಗ ಸಿನಿಮಾಗಳ ಕಲರವ … ಭಜರಂಗಿ ಜೊತೆ ಪ್ರೇಮಂ ಪೂಜ್ಯಂ ರಿಲೀಸ್!‌

ಹೌದು, ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದ್ದ ಸಿನಿಮಾರಂಗ ಈಗ ಚೇತರಿಸಿಕೊಳ್ಳುತ್ತಿದೆ. ಈವರೆಗೆ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಅಕ್ಟೋಬರ್‌ 1ರಿಂದ ಶೇ.100ಷ್ಟು ಭರ್ತಿಗೆ ಅವಕಾಶ ಕೊಟ್ಟಿದೆ. ಇದೇ ಖುಷಿಯಲ್ಲಿರುವ ಸಿನಿಮಾ ಮಂದಿ ಹಬ್ಬದ ಸಂಭ್ರಮದಲ್ಲಿರುವುದಂತೂ ನಿಜ. ಸರ್ಕಾರ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದ್ದೇ ತಡ, ಸ್ಟಾರ್‌ ಸಿನಿಮಾಗಳು ರಿಲೀಸ್‌ ದಿನಾಂಕವನ್ನು ಘೋಷಿಸಿಕೊಂಡಿವೆ. ಸುದೀಪ್‌ ಅಭಿನಯದ “ಕೋಟಿಗೊಬ್ಬ 3” ಮತ್ತು “ದುನಿಯಾ” ವಿಜಯ್‌ ಅಭಿನಯದ “ಸಲಗʼ ಸಿನಿಮಾಗಳು ದಸರಾಗೆ ಅಂದರೆ ಅಕ್ಟೋಬರ್‌ 14ರಂದು ದರ್ಶನ ನೀಡಲಿವೆ.

ಶಿವರಾಜ್‌ ಕುಮಾರ್‌ ಅಭಿನಯದ “ಭಜರಂಗಿ 2” ಚಿತ್ರದೊಂದಿಗೆ ಲವ್ಲಿ ಸ್ಟಾರ್‌ ಪ್ರೇಮ್‌ ಅಭಿನಯದ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ಚಿತ್ರವೂ ಥಿಯೇಟರ್‌ಗೆ ಎಂಟ್ರಿಕೊಡುತ್ತಿದೆ. ಹೌದು, ಪ್ರೇಮ್‌ ಅವರ “ಪ್ರೇಮಂ ಪೂಜ್ಯ” ಸಿನಿಮಾ ಕೂಡ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಅಕ್ಟೋಬರ್ 29ಕ್ಕೆ ಪ್ರೇಕ್ಷಕರ ಮುಂದೆ ಬರುವುದನ್ನು ಹೇಳಿಕೊಂಡಿದೆ. ಇನ್ನು ಈ ಚಿತ್ರವನ್ನು ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ನಿರ್ಮಾಣ ಮಾಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಪ್ರೇಮ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ.

ಅದೇನೆ ಇರಲಿ, ಕಳೆದ ಎರಡು ವರ್ಷಗಳಿಂದಲೂ ದಂಗುಬಡಿದಿದ್ದ ಚಿತ್ರರಂಗಕ್ಕೆ ಈಗ ಮಂದಹಾಸ ಮೂಡಿದೆ. ಸದ್ಯ ಸ್ಟಾರ್‌ಗಳ ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿವೆ. ಆ ಮೂಲಕ ಪ್ರೇಕ್ಷಕರನ್ನು, ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಕೂಡ ನಡೆಯುತ್ತಿದೆ ಎಂಬುದೇ ವಿಶೇಷ. ಅಭಿಮಾನಿಗಳು ಈಗ ಥಿಯೇಟರ್‌ ಮುಂದೆ ಹಬ್ಬ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಆ ವೈಭವ ಮರುಕಳಿಸಲು ಬಹಳ ದಿನಗಳೇನು ಬೇಕಿಲ್ಲ. ಆದರೂ, ಮುಂಜಾಗ್ರತೆ ಕ್ರಮ ಕೈಗೊಂಡು ಫ್ಯಾನ್ಸ್‌ ಸಿನಿಮಾ ನೋಡಿ, ಚಿತ್ರರಂಗವನ್ನು ಬೆಳೆಸಬೇಕಿದೆ. ಹಾಗೆಯೇ, ಥಿಯೇಟರ್‌ಗಳಿಗೆ ಮತ್ತೆ ಆ ಸಂಭ್ರಮ ತಂದುಕೊಡಬೇಕಿದೆ.

Categories
ಸಿನಿ ಸುದ್ದಿ

ಆಡಿಯನ್ಸ್ ಕ್ಲಬ್‌ನಲ್ಲಿ ದಾರಿ ಯಾವುದಯ್ಯಾ ವೈಕುಂಠಕ್ಕೆʼ ಪ್ರದರ್ಶನ :ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ

ಫಿಲ್ಮ್‌ ಆಡಿಯನ್ಸ್ ಕ್ಲಬ್‌ನಲ್ಲಿ ಕಳೆದ ಶನಿವಾರ 50ನೇ ಚಿತ್ರವಾಗಿ ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಪ್ರದರ್ಶನ ಕಂಡಿತು. ಈಗಾಗಲೇ ಈ ಚಿತ್ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫಿಲ್ಮ್‌ ಫೆಸ್ಟಿವೆಲ್‌ ಗಳಲ್ಲಿ 134 ಪ್ರದರ್ಶನ ಕಂಡಿದ್ದು,135 ನೇ ಶೋ ಆಗಿ ಫಿಲ್ಮ್ ಆಡಿಯನ್ಸ್ ಕ್ಲಬ್‌ನಲ್ಲಿ ಪ್ರದರ್ಶನ ಕಂಡಿತು. ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಸಿನಿಮಾ ಪ್ರೇಮಿಗಳು ಆಗಮಿಸಿದ್ದರು. ಚಿತ್ರ ಪ್ರದರ್ಶನದ ನಂತರ ಅವರು ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದರು.

‘ಕನ್ನಡದ ಸಿನಿಮಾವೊಂದು 120ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ ಎಂದಾಗ ತುಂಬಾ ಖುಷಿ ಆಯ್ತು. ಈ ಚಿತ್ರ ನೋಡಲೇ ಬೇಕು ಎಂದುಕೊಂಡು ಆಡಿಯನ್ಸ್ ಕ್ಲಬ್‌ನಲ್ಲಿ ಸಿನಿಮಾ ನೋಡಿದೆ. ಚಿತ್ರ ನೋಡಿ ಖುಷಿ ಆಗಿದ್ದು, ಇನ್ನು ಹೆಚ್ಚೆಚ್ಚು ಪ್ರಶಸ್ತಿಗಳನ್ನು ಈ ಸಿನಿಮಾ ಪಡೆಯಲಿದೆ ಎಂದನಿಸಿದೆ. ಎಲ್ಲಾ ವಿಭಾಗ ಚನ್ನಾಗಿ ಕೆಲಸ ಮಾಡಿದ್ದು, ಕೊರೋನಾ ನಂತರ ಒಂದು ಒಳ್ಳೆ ಸಿನಿಮಾ ನೋಡಿದ ಅನುಭವ ಆಯ್ತು’ ಎನ್ನುವದು ಚಿತ್ರ ವೀಕ್ಷಣೆ ಮಾಡಿದ ವೀಕ್ಷರೊಬ್ಬರ ಮಾತು.

ಗಾಂಧಿಕ್ಲಾಸ್ ಪ್ರೇಕ್ಷಕನಿಂದ ಹಿಡಿದು ಸಿನಿಮಾ ತಂತ್ರಜ್ಞರು, ಸಿಎ ಆಫೀಸರ್‌ಗಳು ರಾಜಕೀಯ ವ್ಯಕ್ತಿಗಳು ಸೇರಿದಂತೆ ವಿಭಿನ್ನ ಅಭಿರುಚಿ ಹೊಂದಿರುವ ಪ್ರೇಕ್ಷಕರು ಆಡಿಯನ್ಸ್ ಕ್ಲಬ್‌ಗೆ ಬಂದು ಸಿನಿಮಾ ನೋಡಿದರು. ಎಲ್ಲರ ಬಾಯಲ್ಲೂ ಒಂದೇ ಮಾತು ‘ಸಿನಿಮಾ ಚನ್ನಾಗಿದ್ದು, ಆದಷ್ಟು ಬೇಗ ರಿಲೀಸ್ ಮಾಡಿ. ನಾವು ಫ್ಯಾಮಿಲಿ ಸಮೇತ ಸಿನಿಮಾ ನೋಡಬೇಕು’ ಎಂಬುದು. ಸಿನಿಮಾ ಪ್ರದರ್ಶನದ ನಂತರ ಪ್ರೇಕ್ಷಕ ಮತ್ತು ತಂಡದ ಜೊತೆ ಸಂವಾದ ನಡೆಯಿತು. ಇದೇ ಸಂದರ್ಭದಲ್ಲಿ ತಂಡದ ಜೊತೆ ಆಡಿಯನ್ಸ್ ಕ್ಲಬ್‌ನ ಸದಸ್ಯರು ಸರ್ಕಾರ ಥಿಯೇಟರ್‌ಗೆ 100% ಅವಕಾಶ ಕೊಟ್ಟಿದ್ದರಿಂದ ಸಿಹಿ ಹಂಚಿ ಸಂಭ್ರಮಿಸಿದರು.

ಉತ್ತರ ಕರ್ನಾಟಕದವರಾದ ಶರಣಪ್ಪ ಎಂ. ಕೊಟಗಿ ಮೊದಲ ಬಾರಿ ನಿರ್ಮಾಣ ಮಾಡಿದ್ದು, ಮೊದಲ ಚಿತ್ರಕ್ಕೇ ಚಿತ ಇಷ್ಟೊಂದು ಒಳ್ಳೆಯ ರೆಸ್ಪಾನ್ಸ್ ಬರುತ್ತಿರುವುದರಿಂದ ಖುಷಿಯಾಗಿದ್ದು, ಆ ಸಂತೋಷವನ್ನು ಆಡಿಯನ್ಸ್ ಜೊತೆಗೆ ಹಂಚಿಕೊಂಡರು. ಅಲ್ಲದೆ ನಿರ್ದೇಶಕ ಸಿದ್ದು ಪೂರ್ಣಚಂದ್ರ ಸಿನಿಮಾ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಚಿತ್ರದ ನಾಯಕ ವರ್ಧನ, ನಾಯಕಿ ಪೂಜಾ ಹಾಗೂ ಕಲಾವಿದರಾದ ಸಿದ್ದಾರ್ಥ, ಸುಚಿತ್ ಮತ್ತು ಶೀಭಾ ತಮ್ಮ ಅನುಭವ ಹಂಚಿಕೊಂಡರು.ಸದ್ಯ ಥಿಯೇಟರ್‌ನಲ್ಲಿ ತುಂಬಿದ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದು, ಸದ್ಯದಲ್ಲೇ ಚಿತ್ರಮಂದಿರಕ್ಕೆ ʼದಾರಿ ಯಾವುದಯ್ಯಾ ವೈಕುಂಠಕ್ಕೆʼ ಬರಲಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಧಗ ಧಗಿಸಲು ರೆಡಿಯಾಯ್ತು ಚಿತ್ರರಂಗ-ಅಕ್ಟೋಬರ್‌ 29 ಕ್ಕೆ ‘ಭಜರಂಗಿ 2’ ಅಬ್ಬರ !

ಚಿತ್ರ ರಂಗ ಎದ್ದು ಕುಳಿತಿದೆ. ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಅಕ್ಟೋಬರ್‌ ತಿಂಗಳಿನಿಂದಲೇ ಸಿನಿಮಾ ಪ್ರೇಕ್ಷಕರಿಗೆ ಹಬ್ಬದ ದೂಟ ಕಾಯಂ ಆಗಿದೆ. ಬಾಕಿ ಇರೋದು ಯಾರೆಲ್ಲ ಸ್ಟಾರ್‌ ಸಿನಿಮಾಗಳು, ಯಾವಾಗ ಬರುತ್ತವೆ ಅನ್ನೋದು. ಸದ್ಯಕ್ಕೆ ಭಜರಂಗಿ2 ತೆರೆಗೆ ಅಪ್ಪಳಿಸೋದಿಕ್ಕೆ ಡೇಟ್‌ ಫಿಕ್ಸ್‌ ಆಗಿದೆ.

ಚಿತ್ರಮಂದಿರಗಳಲ್ಲಿ 100 ರಷ್ಟು ಸೀಟು ಭರ್ತಿಗೆ ಅವಕಾಶ ಸಿಗುತ್ತಿದ್ದಂತೆ ಚಿತ್ರರಂಗ ಧಗ ಧಗಿಸಲು ಸಜ್ಜಾಗಿದೆ. ಸ್ಟಾರ್ ಸಿನಿಮಾಗಳ ಪೈಕಿ ಮುಂಚೆಯೇ ಬರುವ ಸಿನಿಮಾ ಯಾವುದು ಎನ್ನುವ ಸಿನಿಮಾ ಪ್ರೇಕ್ಷಕರ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 29ಕ್ಕೆ ಶಿವರಾಜ್ ಕುಮಾರ್ ಭಜರಂಗಿ ಆಗಿ ಅಭಿಮಾನಿಗಳಿಗೆ ದರ್ಶನ ನೀಡುವುದು ಕನ್ ಫರ್ಮ್ ಆಗಿದೆ.

ಸ್ಯಾಂಡಲ್ ವುಡ್ ಮಟ್ಟಿಗೆ ಇದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಸಿನಿಮಾ. ಭಜರಂಗಿ ಸಕ್ಸಸ್ ಬೆನ್ನಲೇ ನಿರ್ದೇಶಕ ಹರ್ಷ ಹಾಗೂ ಸೆಂಚುರಿ ಸ್ಟಾರ್ ಶಿವಣ್ಣ ಇಲ್ಲಿ ಮತ್ತೆ ಒಂದಾದರು ಎನ್ನುವುದಷ್ಟೇ ಅಲ್ಲ ಜಯಣ್ಣ ಕಂಬೈನ್ಸ್ ನಂತಹಬಿಗ್ ಬ್ಯಾನರ್ ಸಿನಿಮಾ ಎನ್ನುವುದು ಕೂಡ ಆ ಕುತೂಹಲದ ಒಂದು ಭಾಗವೇ. ಅದರ ಜತೆಗೆ ಸದ್ಯದ ಟ್ರೆಂಡ್ ಗೆ ತಕ್ಕಂತೆ ನಿರ್ದೇಶಕ ಎ. ಹರ್ಷ ಗಟ್ಟಿ ಕಥೆಯ ಮೂಲಕ ಹೊಸತನ್ನು ಹೇಳಿ ಹೇಳುತ್ತಾರೆನ್ನುವ ಕೌತುಕ. ಅದರ ಜತೆಗೆ ಭಜರಂಗಿ ಮೊದಲ‌ಭಾಗಕ್ಕೆ ದೊಡ್ಡ ಗೆಲುವು ಸಿಕ್ಕಿದ್ದು.

ಭಜರಂಗಿ ೩ ನಿರೀಕ್ಷೆಯ ಬಗ್ಗೆ ಹೀಗೆ ಹೇಳುತ್ತಾ ಹೊದರೆ ಇಲ್ಲಿಸಾಕಷ್ಟುಕಾರಣಗಳನ್ನು ಕೊಡಬಹುದು. ದೊಡ್ಡ ತಾರಾಗಣವೂ ಕೂಡ ಈಸಿನಿಮಾ ಮತ್ತೊಂದು ವಿಶೇಷವೇ. ಇವೆಲ್ಲ ಕುತೂಹಲ , ನಿರೀಕ್ಷೆಗಳಿಗೆ ಫೈನಲಿ ತೆರೆ ಬೀಳುವ ಕಾಲ ಸನಿಹಿತವಾಗಿದೆ. ಅಕ್ಟೋಬರ್ 29ಕ್ಕೆ ಬೆಳ್ಳಿ ತೆರೆಯ ಮೇಲೆ ಭಜರಂಗಿಯ ಮಯಲೋಕ ತೆರೆದುಕೊಳ್ಳಲಿದೆ. ಅಲ್ಲಿ ನಿರ್ದೇಶಕ ಹರ್ಷ ಅವರ ಮ್ಯಾಜಿಕ್ ಏನು ಅಂತ ರಿವೀಲ್ ಆಗಲಿದೆ. ಸದ್ಯಕ್ಕೆ ಅಲ್ಲಿ ತನಕ ಕಾಯೋಣ ಅಂತಂದರೂ, ಈ ಸಮಯಕ್ಕಾಗಿ ಕಾದಿದ್ದೊ ಒಂದ, ಎರಡ ದಿನಗಳಾ?

ಹೆಚ್ಚು ಕಡಿಮೆ ಒಂದು ಒಂದೂವರೆ ವರ್ಷ. 2020 ಮಾರ್ಚ್ ತಿಂಗಳಲ್ಲಿ ಕೊರೋನ ಕಾರಣಕ್ಕೆ ಬಂದ್ ಆದ ಚಿತ್ರರಂಗ ಇಲ್ಲಿ ತನಕ ಅನುಭವಿಸಿದ್ದ ಯಮಾ ಯಾತನೆ. ಅದೆಷ್ಟೋ ಜನರುಉದ್ಯೋಗ ಇಲ್ಲದೆ ಪರದಾಡಿ ಹೋದರು.ಸಿನಿಮಾ ನಿರ್ಮಾಣಗಳಿಗೆ ದುಡ್ಡು ಹಾಕಿದನಿರ್ಮಾಪಕರು ಮುಂದೇನು ಗತಿ ಅಂತ ಮುಗಿಲು ಕಡೆ ಮುಖ ಹಾಕಿ ಕುಳಿತರು. ಕೆಲಸ ಇಲ್ಲದ ನಿರ್ದೇಶಕರು ಬದುಕಿಗೆ ದೇವರೇ ಗತಿ ಎಂದರು.ಚಿತ್ರಮಂದಿರಗಳನ್ನೇ ನಂಬಿಕೊಂಡ ಜನರು ಬಾಗಿಲುಮುಚ್ಚಿ ಬಿಡೋಣ ಅಂದರು. ಆ ಸಂಕಷ್ಟದ ಕಾಲದ ಪರದೆ ಕೊನೆಗೆ ಸರಿಯುತ್ತಿದೆ. ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ100 ರಷ್ಟು ಅನುಮತಿ ದೊರೆಯುವ ಮೂಲಕ ಚಿತ್ರರಂಗದಲ್ಲಿ ಮತ್ತೆ ಆಶಾಭಾವನೆ ಮೂಡಿದೆ.
– ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಒಡೆಯನ ಶಪಥದ ಕಥನವಿದು;ಕೊಟ್ಟ ಮಾತಿಗೆ ಬದ್ದರಾಗಿದ್ದರು ದಾಸ ! ಅನ್ನದಾತನಿಗೋಸ್ಕರ ಸಾರಥಿ ಮಾಡಿದ್ದೇನು ಗೊತ್ತಾ ?

ಮಾತ್- ಯಾರ್ ಬೇಕಾದರೆ ಕೊಡಬಹುದು, ಹೇಳಿಕೆ ಯಾರ್ ಬೇಕಾದರೂ ಕೊಡಬಹುದು. ಆದರೆ, ಕೊಟ್ಟ ಮಾತಿಗೆ ಬದ್ದರಾಗಿರೋರು, ನೀಡಿದ ಹೇಳಿಕೆಯಂತೆ ನಡೆದುಕೊಳ್ಳುವವರು ಕೆಲವೇ ಕೆಲವು ಮಂದಿ ಮಾತ್ರ. ಆ ಕೆಲವೇ ಕೆಲವರಲ್ಲಿ ಮೊದಲ ಸಾಲಿನಲ್ಲಿ ಚಾಲೆಂಜಿಂಗ್‌ಸ್ಟಾರ್ ದರ್ಶನ್ ನಿಲ್ತಾರೆ ಅಂದ್ರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಈಗ ಯಾಕ್ ಈ ಮಾತು ಅಂತೀರಾ ಅದಕ್ಕೆ ಕಾರಣವಿದೆ. ಸ್ಯಾಂಡಲ್‌ವುಡ್ ಯಜಮಾನ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಒಂದು ತೀರ್ಮಾನಕ್ಕೆ ಬಂದರು. ಆದರೆ, ತಮ್ಮ ನಿರ್ಧಾರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅದ್ಹೇಗೋ ಗೊತ್ತಿಲ್ಲ ಗಾಂಧಿನಗರಕ್ಕೆ ವಿಷ್ಯ ಗೊತ್ತಾಯ್ತು, ರ‍್ತುಂಬಾ ಸುದ್ದಿಯೂ ಆಯ್ತು. ಆ ಸುದ್ದಿಗೆ ಹೀಗೊಂದು ಬೆಲೆಬಂದಿದೆ. ಕಟೌಟ್‌ಗೆ ಬೆಲೆತಂದುಕೊಟ್ಟ ದಚ್ಚು ನಡೆ-ನುಡಿಯ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಹಾಗಾದ್ರೆ, ದಾಸನ ಆ ನಿರ್ಧಾರ ಯಾವುದು? ಅದ್ಯಾವ ಹೇಳಿಕೆಗೆ ಅವರು ಬದ್ದರಾಗಿದ್ದರು? ಒಡೆಯನ ಶಪಥದ ಕಥನದ ಜೊತೆಗೆ ಕಣಕ್ಕಿಳಿಯೋ ಕಹಾನಿಯ ಕಿಕ್‌ಸ್ಟಾರ್ಟ್ ಸ್ಟೋರಿ ಇಲ್ಲಿದೆ.

ಇದು ಕಲಿಯುಗ ಕಣ್ರೀ, ಕೊಟ್ಟ ಮಾತಿಗೆ ತಲೆಬಾಗುವವರಿಗಿಂತ ತಲೆ ಅಲ್ಲಾಡಿಸುವವರೇ ಹೆಚ್ಚು. ತಾವುಗಳು ಕೊಟ್ಟ ಸ್ಟೇಟ್‌ಮೆಂಟ್ನೇ ನಂದಲ್ಲ, ಅದು ಹಂಗಲ್ಲ, ಹಿಂಗೆ ಅಂತ ಕ್ಲ್ಯಾರಿಟಿ ಕೊಡೋರೇ ಶ್ಯಾಣೆಮಂದಿಯಿದ್ದಾರೆ ಆ ಕಥೆ ಇಲ್ಲಿ ಬೇಡ. ಸದ್ಯಕ್ಕೆ, ಕೊಟ್ಟ ಮಾತಿಗೆ ಬದ್ದರಾಗಿರುವ ಚಕ್ರವರ್ತಿಯ ಹೆಮ್ಮೆಯ ಕಥೆ ನೋಡೋಣ. ಗಂಧದಗುಡಿಯ ಯಜಮಾನ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ದಾಸ ದರ್ಶನ್ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಇದನ್ನ ಬರೀ ತೀರ್ಮಾನ ಅನ್ನೋಕಾಗಲ್ಲ. ಇದು ದಾಸನ ಶಪಥ ಅಂದ್ರೆ ಅತಿಶಯೋಕ್ತಿ ಆಗಲ್ಲ.

ಚೀನಿ ಕ್ರಿಮಿ ಕೊರೊನಾದಿಂದ ಭೂಮಂಡಲ ನಡುಗಿದ್ದು, ಒಂದು ರೀತಿ ನರಕ ಅನುಭವಿಸಿದ್ದು ನಿಮ್ಮೆಲ್ಲರಿಗೂ ತಿಳಿದೇಯಿದೆ. ಇದಕ್ಕೆ ಚಿತ್ರೋದ್ಯಮವೂ ಹೊರತಾಗಿಲ್ಲ. ಕೊರೊನಾ ರಣಕೇಕೆಗೆ ಭೂಮಂಡಲ ಹೇಗೇ ನಡುಗಿತೋ, ಹಾಗೆಯೇ ಬಣ್ಣದ ಲೋಕವೂ ಶೇಕ್ ಆಯ್ತು. ಚಿತ್ರಮಂದಿರಗಳು ಮುಚ್ಚಿದವು, ಬೆಳ್ಳಿಪರದೆಗಳು ಬಣ್ಣ ಕಳೆದುಕೊಂಡವು, ಕಾರ್ಮಿಕರು ಕಣ್ಣೀರಾಕಿದರು, ಥಿಯೇಟರ್ ಮಾಲೀಕರು-ಪ್ರದರ್ಶಕರು-ವಿತರಕರು ಕಂಗಾಲಾದರು, ನಿರ್ಮಾಪಕರು ಆಕಾಶ ನೋಡಿದರು, ಕಲಾವಿದರು ಆತಂಕಕ್ಕೆ ಜಾರಿದರು. ಹೀಗೆ, ಸಿನಿಮಾವನ್ನೇ ನಂಬಿ ಬದುಕುತ್ತಿದ್ದವರು ಅಕ್ಷರಶಃ ಚಿಂತಾಕ್ರಾಂತರಾದರು. ಎರೆಡೆರಡು ಭಾರಿ ಕರುನಾಡು ಲಾಕ್ ಆಗಿ, ಅನ್‌ಲಾಕ್ ಆಯ್ತು. ಸರ್ಕಾರ ಒಂದಿಷ್ಟು ಸಡಿಲಿಕೆ ನೀಡ್ತು. ಮುನ್ನೆಚರಿಕೆ ಕ್ರಮಗಳೊಂದಿಗೆ ಚಿತ್ರೀಕರಣ ಮಾಡ್ಬೋದು, ಥಿಯೇಟರ್ ಓಪನ್ ಮಾಡ್ಕೊಳ್ಳಿ ಅಂತ ಅವಕಾಶ ಕೊಡ್ತು. ಈ ಹೊತ್ತಲ್ಲಿ ಕೆಲವು ಸ್ಟಾರ್ಸ್ ಗಳು ಶೂಟಿಂಗ್ ಅಖಾಡಕ್ಕೆ ಧುಮ್ಕಿದರು. ಇನ್ನೂ ಕೆಲವರು ತಮ್ಮ ತಮ್ಮ ಸಿನಿಮಾನ ರಿಲೀಸ್ ಕೂಡ ಮಾಡಿಕೊಂಡರು. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಸೈಲೆಂಟಾಗಿ ಉಳಿದುಬಿಟ್ಟರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಕೊಡವಿಕೊಂಡು ಅಖಾಡಕ್ಕೆ ಇಳಿಯದೇ ಇದ್ದಿದಕ್ಕೆ ಕಾರಣ ಚೀನಿ ಕ್ರಿಮಿ ಕೊರೊನಾ ಬಗೆಗಿನ ಆತಂಕವಲ್ಲ. ಬದಲಾಗಿ ಅನ್ನದಾತರ ಮೇಲಿರುವ ಕಾಳಜಿ. ಯಸ್, ಒಂದರ-ನಂತರ ಒಂದು ಸಿನಿಮಾ ಒಪ್ಪಿಕೊಳ್ಳಬಹುದಾಗಿತ್ತು, ಡೇ ಅಂಡ್ ನೈಟ್ ಶೂಟಿಂಗ್ ಮಾಡ್ಬೋದಾಗಿತ್ತು, ಎರಡ್ಮೂರು ತಿಂಗಳಲ್ಲಿ ಡಬ್ಬಿಂಗ್ ಮುಗಿಸಿ ಥಿಯೇಟರ್‌ಗೆ ರ‍್ಬೋದಾಗಿತ್ತು. ಆದರೆ, ಬರೋಬ್ಬರಿ ಎರಡು ವರ್ಷ ಕೊರೊನಾ ಕೊಟ್ಟ ಹೊಡೆತದಿಂದ ಅನ್ನದಾತರು ಚೇತರಿಸಿಕೊಂಡಿಲ್ಲದ ಕಾರಣಕ್ಕೆ, ಕೇವಲ ೫೦ ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಪರಿಸ್ಥಿತಿ ಇದ್ದ ಕಾರಣಕ್ಕೆ ಸ್ಯಾಂಡಲ್‌ವುಡ್ ಯಜಮಾನರು ಶಪಥಗೈದಿದ್ದರು. ಸರ್ಕಾರ ೧೦೦ ಪರ್ಸೆಂಟ್ ಅಕ್ಯೂಪೆನ್ಸಿ ಕೊಡುವ ತನಕ ಬಣ್ಣ ಹಚ್ಚೋದು ಬೇಡ, ಶೂಟಿಂಗ್ ಹೋಗೋದು ಬೇಡವೆಂದು ನಿರ್ಧರಿಸಿದ್ದರು. ಅದರಂತೇ ಇಲ್ಲಿವರೆಗೂ ನಡೆದುಕೊಂಡಿದ್ದಾರೆ. ಹೊಸ ಸಿನಿಮಾ `ಕ್ರಾಂತಿ’ ಅನೌನ್ಸ್ ಆದರೂ ಕೂಡ ಶೂಟಿಂಗ್ ಹೋಗದೇ ಸರ್ಕಾರದ ಆದೇಶಕ್ಕಾಗಿ ಕಾದಿದ್ದರು. ಫೈನಲೀ, ಸೆ.೨೪ ರಂದು ಸರ್ಕಾರ ಚಿತ್ರಮಂದಿರದಲ್ಲಿ ಶೇಕಡ ನೂರರಷ್ಟು ಆಸನಭರ್ತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಕ್ರಾಂತಿ'ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಯಜಮಾನ ಟೀಮ್ ಮತ್ತೆ ಒಂದಾಗಿರುವ ಮಹಾಮೂವೀ.ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ `ಕ್ರಾಂತಿ’ ಮಾಡೋದಕ್ಕೆ ನಿರ್ದೇಶಕ ವಿ. ಹರಿಕೃಷ್ಣ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಮೇಡಂ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಅಕ್ಟೋಬರ್‌ನಿಂದ ಅಖಾಡಕ್ಕೆ ಇಳಿಯೋದಕ್ಕೆ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಇತ್ತ ದಚ್ಚು ಕೂಡ `೧೦೦’ ಅನುಮತಿಯಿಂದ ಖುಷಿಯಾಗಿದ್ದಾರೆ. ಸದಾ ಅನ್ನದಾತರ ನಟರಾಗಿರುವ ಸಾರಥಿ, ಆದಷ್ಟು ಬೇಗ ಮೈಕೊಡವಿಕೊಂಡು ಫೀಲ್ಡಿಗಿಳಿಯುತ್ತಾರೆ. ಒಡೆಯ ಅಖಾಡಕ್ಕೆ ಇಳಿಯೋದ್ರಿಂದ ಸಹಸ್ರಾರು ಮಂದಿಗೆ ಸಹಾಯವಾಗುತ್ತೆ. ದಿನಗೂಲಿ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗುತ್ತೆ, ಸಣ್ಣ-ಪುಟ್ಟ ಕಲಾವಿದರು, ಪೋಷಕ ನಟರು, ತಂತ್ರಜ್ಞರು ಸೇರಿದಂತೆ ಬಣ್ಣ ನಂಬಿಕೊಂಡವರಿಗೆ ಯಜಮಾನರಿಂದ ಸಿಕ್ಕಾಪಟ್ಟೆ ಹೆಲ್ಪ್ ಆಗುತ್ತೆ.

ಸರ್ಕಾರದ ಹಂಡ್ರೆಂಡ್ ಪರ್ಸೆಂಟ್ ಅಕ್ಯೂಪೆನ್ಸಿ ಆದೇಶದಿಂದ ಚಿತ್ರೋದ್ಯಮದಲ್ಲಿ ಸಂತೋಷ-ಸಂಭ್ರಮ ಮನೆಮಾಡಿದೆ. ಕೊರೊನಾ ಕೊಟ್ಟ ಹೊಡೆತದಿಂದ ಚೇತರಿಸಿಕೊಳ್ಳೋದಕ್ಕೆ ೧೦೦ರಷ್ಟು ಅನುಮತಿಯಿಂದ ಆನೆಬಲ ಸಿಕ್ಕಂತಾಗಿದೆ. ಇನ್ನೇನಿದ್ರೂ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ತೆರೆಗೆ ಅಪ್ಪಳಿಸುವ ಸಮಯ. ಬರೋಬ್ಬರಿ ೪೦೦ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಶಿವಣ್ಣ-ಸುದೀಪ್-ವಿಜಯ್ ನಟನೆಯ ಬಹುನಿರೀಕ್ಷೆಯ ಸಲಗ-ಕೋಟಿಗೊಬ್ಬ೩-ಭಜರಂಗಿ-೨ ಚಿತ್ರ ಅಖಾಡಕ್ಕೆ ಇಳಿಯುವ ಸಮಯ ಬಂದಾಗಿದೆ. ಕೊರೊನಾದಿಂದ ಉದ್ಯಮಕ್ಕಾದ ನಷ್ಟವನ್ನ ತುಂಬಿಕೊಡುವ ಜವಾಬ್ದಾರಿ ಸ್ಟಾರ್‌ನಟರುಗಳು ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರತಿಯೊಬ್ಬ ಕಲಾವಿದರ ಮೇಲಿದೆ. ಆ ಜವಬ್ದಾರಿಯನ್ನು ಎಲ್ಲರು ನಿಭಾಯಿಸ್ತಾರೆ, ಕನ್ನಡ ಚಿತ್ರರಂಗವನ್ನು ಉಳಿಸಿಬೆಳೆಸಿಕೊಂಡು ಹೋಗ್ತಾರೆ ಅದರಲ್ಲಿ ನೋ ಡೌಟ್ ಅಬೌಟ್ ಇಟ್.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಎಸ್‌ಪಿಬಿ ಪುಸ್ತಕ ಲೋಕಾರ್ಪಣೆ- ಕನ್ನಡದೊಂದಿಗೆ ಅನುಪಮ ಅನುಬಂಧ ಈ ನಮ್ಮ ಗಾಯಕ; ಇದು ಹಿರಿಯ ಪತ್ರಕರ್ತರ ಕೃತಿ

ಭಾರತೀಯ ಸಿನಿಮಾ ಕಂಡ ಮೇರು ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ದಾವಣಗೆರೆಯ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಎಸ್‌ಪಿಬಿ ಕುರಿತು ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ರಚಿಸಿದ್ದಾರೆ. ಈ ಕೃತಿ ಸೆಪ್ಟೆಂಬರ್‌ 25ರಂದು ದಾವಣಗೆರೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಪುಸ್ತಕದಲ್ಲಿನ ಒಂದು ಆಯ್ದ ಟಿಪ್ಪಣಿ ಇಲ್ಲಿದೆ.

ನನ್ನನ್ನು ಭಾರತದ ಎಲ್ಲಾ ಸ್ಥಳದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಅದೇಕೋ ನನಗೂ ಗೊತ್ತಿಲ್ಲ. ಅವರೆಲ್ಲರಿಗಿಂತಲೂ ಕನ್ನಡಿಗರಿಗೆ ನನ್ನ ಮೇಲೆ ಪ್ರೀತಿ ಅಭಿಮಾನ ತುಸು ಹೆಚ್ಚೇ ಎನ್ನಬಹುದು. ಹೀಗಾಗಿ ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ ಖಂಡಿತವಾಗಿಯೂ ಕರ್ನಾಟಕದಲ್ಲಿ ಹುಟ್ಟಬೇಕೆಂಬ ಆಸೆ. ಇದು ಉತ್ಪ್ರೇಕ್ಷೆ ಅಲ್ಲ ಮತ್ತು ಪ್ರಚಾರಕ್ಕಾಗಿಯೂ ಅಲ್ಲ. ನನ್ನ ಹೃದಯಾಂತರಾಳದ ಮಾತು ಎಂದು ಎಸ್.ಪಿ.ಬಿ. ಅನೇಕ ಸಂದರ್ಭದಲ್ಲಿ ಹೇಳಿದ್ದರು. ಕನ್ನಡವರಿಗೆ ಹೆಚ್ಚು ಪ್ರಿಯರಾದ ಎಸ್‌ಪಿಬಿ ಸಾವಿರಾರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ "ನಕ್ಕರೆ ಅದೇ ಸ್ವರ್ಗ" ಚಿತ್ರವು 1966ರಲ್ಲಿ ತೆರೆಕಂಡಿತು. ಬಾಲು ಕೂಡ ಪ್ರಥಮವಾಗಿ ಅದೇ ಸಿನಿಮಾದ ಮೂಲಕ ಕನ್ನಡಿಗರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿದರೆನ್ನಬಹುದು. ಮೊದಲ ಹಾಡಿಗೆ ದೊರೆತ ಸಂಭಾವನೆ 150ರೂ.ಗಳು. ಆ ಕಾಲಕ್ಕೆ ಕನ್ನಡದಲ್ಲಿ ಪ್ರಸಿದ್ಧರಾಗಿದ್ದ ಪಿ.ಬಿ. ಶ್ರೀನಿವಾಸ್ ಒಂದು ಹಾಡಿಗೆ 250ರೂ. ಸಂಭಾವನೆ ಪಡೆಯುತ್ತಿದ್ದರು. "ದೇವರಗುಡಿ" ಸಿನಿಮಾದಮಾಮರವೆಲ್ಲೋ ಕೋಗಿಲೆ ಎಲ್ಲೋ” ಹಾಡು ಅವರಿಗೆ ಅತ್ಯಂತ ಹೆಚ್ಚಿನ ಜನಪ್ರಿಯತೆಗೆ ನಾಂದಿ ಹಾಡಿತೆನ್ನಬಹುದು.

ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡದ 15ಕ್ಕೂ ಹೆಚ್ಚು ನಾಯಕನಟರಿಗೆ ಅವರ ಧ್ವನಿಯೇ ಪರ್ಫೆಕ್ಟ್ ಎಂಬಂತೆ ಹೊಂದಿಕೊಂಡಿತು. ‘ಈ ಭೂಮಿ ಬಣ್ಣದ ಬುಗುರಿ’ ಎನ್ನುವಾಗ ವಿಷ್ಣುವರ್ಧನ್ ಹಾಡಿದಂತೆ, ಚಂದನದ ಗೊಂಬೆ ಚೆಲುವಾದ ಗೊಂಬೆ" ಪಲ್ಲವಿ ಕೇಳಿದಾಗ ಅನಂತ್‌ನಾಗ್ ದನಿ ಎನ್ನುವಂತಾಗುವುದು, ‘ಜೊತೆ ಜೊತೆಯಲಿ’ ಎಂದು ಗುನುಗುವಾಗ ಶಂಕರ್‌ನಾಗ್ ಹಾಡಿದಂತೆ, ‘ಸ್ನೇಹದ ಕಡಲಲ್ಲಿ’ ಹಾಡಿನ ನೆನಪು ಶ್ರೀನಾಥ್‌ರ ದನಿಯಾಗಿ, ‘ಶಿವ ಶಿವ ಎಂದರೆ ಭಯವಿಲ್ಲ...’ ಎನ್ನುವಾಗ ಲೋಕೇಶ್,ನಮ್ಮೂರು ಮೈಸೂರು, ನಿಮ್ಮೂರು ಯಾವೂರು” ಪಲ್ಲವಿಯು ದ್ವಾರಕೀಶ್‌ರೇ ಹಾಡಿದಂತೆ, ‘ಮಂಡ್ಯದ ಗಂಡು’ ಹಾಡಿನ ನೆನಪಿಗೆ ಅಂಬರೀಶ್ ದನಿಯಾದಂತೆ, ‘ಟುವ್ವಿ ಟುವ್ವಿ’ ಎಂದಾಗ ಶಿವರಾಜ್‌ಕುಮಾರ್, `ಈ ಬೆಳದಿಂಗಳು” ಎಂದಾಗ ರಮೇಶ್ ಅರವಿಂದ್‌ರ ದನಿಯೇ ನಮಗೆ ಕೇಳಿಸಿದಂತಹ ಪ್ರಭಾವಕ್ಕೆ ಸಿಲುಕಿಸಿರುವುದರ ಹಿಂದೆ ಎಸ್.ಪಿ.ಬಿ.ಯವರೇ ಹಾಡಿದ್ದರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಎಸ್‌ಪಿಬಿ ನಿರಂತರವಾಗಿ ಹಾಡಲು ಸಾಧ್ಯವಾದದ್ದು ಹೇಗೆ?
ಬಾಲು ಹಾಡುತ್ತಿದ್ದ ಕಾಲಘಟ್ಟದಲ್ಲಿ ಗಾಯಕರಾಗಿ ಬಂದವರು. ಹೆಚ್ಚು ವರ್ಷ ಚಾಲ್ತಿಯಲ್ಲಿ ಉಳಿಯಲಿಲ್ಲ. ಇವರು ಮಾತ್ರ ನಿರಂತರವಾಗಿ ಹಾಡುತ್ತಾ, ವಿಶ್ರಾಂತಿಯ ಸಂಗತಿಯನ್ನು ಮರೆತವರಂತಿದ್ದರು. ನಟರ ಧ್ವನಿಯನ್ನು ಅನುಸರಿಸುತ್ತಿದ್ದ ಎಸ್.ಪಿ.ಬಿ.ಗೆ ಅದೇ ಸಂಗೀತಕ್ಕೂ ವರದಾನ ಆಯಿತೆನ್ನಬಹುದು. ಹಾಡಬೇಕಾದ ನಟರ ಹೆಸರು ಹೇಳಿದರೆ ಸಾಕು. ಅವರ ಧ್ವನಿಗೆ ತಕ್ಕಂತೆ ಹಾಡುವುದು ಅವರಿಗೆ ಕರತಲಾಮಲಕ ಎನ್ನುವಂತಾಯಿತು. ಅವರ ಕಂಠ ಮಾಧುರ್ಯದ ಸಾಮರ್ಥ್ಯ ಹೇಗಿತ್ತೆಂದರೆ ಇಪ್ಪತ್ತು ವರ್ಷದ ಹಿಂದಿನ ಹಾಡನ್ನು ನಂತರ ಹಾಡಿಸಿದಾಗಲೂ ಅದೇ ಫೋರ್ಸ್‌ನಲ್ಲಿ ಅದೇ ವಾಯ್ಸ್ ಕಲ್ಚರ್‌ನಲ್ಲಿ, ಯಾವ ಲ್ಯಾಂಡಿಂಗ್ ನೋಟ್ಸ್‌ಗಳಿಗೂ ವ್ಯತ್ಯಾಸವಾಗದ ಹಾಗೆ ಪ್ರಸೆಂಟ್ ಮಾಡುವಲ್ಲಿ ಎಸ್ಪಿಬಿಯವರಿಗೆ ಅವರೇ ಸಾಟಿ ಎನಿಸಿದ್ದರು.

ಇನ್ನೊಬ್ಬರ ಅವಕಾಶವನ್ನು ಕಿತ್ತುಕೊಳ್ಳಲಾರೆ
ಚಿತ್ರವೊಂದಕ್ಕೆ ವೈದ್ಯನಾಥನ್ ಸಂಗೀತ ಸಾರಥ್ಯದಲ್ಲಿ ಬಾಲು ಹಾಡನ್ನು ಹಾಡಿ ತಮ್ಮ ಪಾಲಿನದನ್ನು ಮುಗಿಸಿದರು. ಆದರೆ ನಿರ್ಮಾಪಕರೊಬ್ಬರು ಇನ್ನೊಂದು ಹಾಡನ್ನೂ ಪ್ಲೀಸ್ ಹಾಡಿರಿ ಎಂದು ವಿನಂತಿಸಿಕೊಂಡರು. ಆ ಹಾಡನ್ನು ಪಿ.ಬಿ. ಶ್ರೀನಿವಾಸ್ ಹಾಡಬೇಕಿತ್ತು, ಸ್ವತಃ ಪಿ.ಬಿ.ಎಸ್. ಕಾಯುತ್ತಿದ್ದರೂ ಅವಕಾಶವನ್ನು ಬದಲಾಯಿಸುವ ಪ್ರಯತ್ನ ನಡೆಯಿತು. ಬಾಲು ಅಸಲಿ ವಿಷಯವನ್ನು ತಿಳಿದುಕೊಂಡರು, ಅವರಿಂದ ಹಾಡಿಸಬೇಕಾದ ಹಾಡನ್ನು ನಾನು ಕಸಿಯುವುದು ಸಮಂಜಸವಲ್ಲ, ನೀವು ಅವರಿಂದಲೇ ಹಾಡಿಸುವುದು ನ್ಯಾಯಸಮ್ಮತ, ಅವರಿಂದಲೇ ಹಾಡಿಸಿ ಎಂದರು. ನಂತರ ಪಿ.ಬಿ.ಶ್ರೀನಿವಾಸ್ ಹಾಡುವ ತನಕ ಇದ್ದು ನಂತರ ಸ್ಟುಡಿಯೋದಿಂದ ಹೊರ ಬಂದರು. ಹಿರಿಯ ಗಾಯಕನ ಬಗೆಗಿನ ಗೌರವ ಯಾವ ರೀತಿಯಲ್ಲಿ ಇತ್ತು ಎಂದು ಇದನ್ನು ಕರೆಯಬಹುದಲ್ಲವೆ?


2007 ಡಿಸೆಂಬರ್ 16 ರಂದು ಮೈಸೂರಿನಲ್ಲಿ ಎದೆತುಂಬಿ ಹಾಡುವೆನು" ಸ್ಪರ್ಧೆಯ ಸಂಬಂಧದ ಕಾರ್ಯಕ್ರಮದಲ್ಲಿ ಬಾಲು ಪಾಲ್ಗೊಂಡಿದ್ದರು. ಆ ಹೊತ್ತಿಗೆ ಅವರು ಹಾಡಲು ಶುರು ಮಾಡಿ ನಾಲ್ಕು ದಶಕಗಳು ಕಳೆದಿದ್ದವು.

ಅಷ್ಟು ವರ್ಷಗಳ ದೀರ್ಘ ಕಾಲ ಹಾಡುವುದನ್ನು ಮುಂದುವರಿಸಿದ್ದರೂ ಅದೇ ಕಂಠಸಿರಿಯನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಸಂದರ್ಶಕರೊಬ್ಬರ ಪ್ರಶ್ನೆಗೆ ಬಾಲು ಉತ್ತರ ಹೀಗಿತ್ತು,ಕಾಣದ ಊರಲಿ ನೀ ಕುಳಿತಿರುವೆ’, ‘ಎಲ್ಲರ ಕಥೆಯ ನೀ ಬರೆದಿರುವೆ” ಆ ಹಾಡನ್ನು ನೆನಪಿಸಿಕೊಂಡಿದ್ದರು, ಕನ್ನಡಿಗರು ಮತ್ತು ಕನ್ನಡದ ಪ್ರಸ್ತಾಪ ಬಂದಾಗಲೆಲ್ಲಾ ಎಸ್ಪಿಬಿಯವರಿಗೆ ಭಾವುಕತೆ ಗರ್ಭ ತುಂಬಿಕೊಳ್ಳುತ್ತಿತ್ತು.

Categories
ಸಿನಿ ಸುದ್ದಿ

ಸಮಂತಾ ಡಿವೋರ್ಸ್ ಕೊಟ್ರೆ ಕತ್ತರಿಸಿ ಹಾಕ್ತೀನಿ ; ರೊಚ್ಚಿಗೆದ್ದ ಅಕ್ಕಿನೇನಿ ಕುಟುಂಬದ ಹಾರ್ಡ್ ಕೋರ್‌ ಫ್ಯಾನ್ !?

ಸೌತ್ ಸಿನಿಮಾ ಇಂಡಸ್ಟ್ರಿಯ ತಾರಾಜೋಡಿಗಳಾದ ನಟಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ದಾಂಪತ್ಯ ವಿಚ್ಛೇದನದ ಅಂತ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ‌ಆದರೆ, ಗಾಸಿಪ್ ಟೋಪಿ‌ ಹಾಕಿಕೊಂಡಿರುವ ಸುದ್ದಿ ಊಸರವಳ್ಳಿಯಂತೆ ದಿನಕ್ಕೊಂದು‌ ಬಣ್ಣ ಬದಲಿಸುತ್ತಾ ಇಡೀ ಸೌತ್ ಸಿನಿಮಾ ಅಂಗಳದಲ್ಲೆಲ್ಲಾ ಗುಲ್ಲೆಬ್ಬಿಸುತ್ತಿದೆ. ಆದರೆ, ಬದುಕಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆಯಾಗಲೀ, ಸಂಬಂಧದಲ್ಲಿ ಬಿರುಕು ಮೂಡಿರುವ ಕುರಿತಾಗಲೀ ಎಲ್ಲಿಯೂ ಚೈ ಅಂಡ್ ಸ್ಯಾಮ್ ಮುಕ್ತವಾಗಿ ಮಾತನಾಡ್ತಿಲ್ಲ. ಆದರೆ, ಗಲ್ಲಿಗಾಸಿಪ್ ಮಾತ್ರ ಇಬ್ಬರ ಡೈವರ್ಸ್ ಕಥೆ ಹೇಳ್ತಿದೆ. ಅಕ್ಟೋಬರ್ 06 ರಂದು ಅಧಿಕೃತವಾಗಿ ಇಬ್ಬರು ಡೈವರ್ಸ್ ಬಗ್ಗೆ ಸ್ಪಷ್ಟನೆ ಕೊಡಲಿದ್ದಾರಂತೆ, ಕೌನ್ಸಿಲಿಂಗ್ ಮಾಡಿಸಿದರೂ ಪ್ರಯೋಜನವಾಗಿಲ್ಲವಂತೆ, ಸಮಂತಾ 50 ಕೋಟಿ ಪರಿಹಾರ ಕೇಳಿದ್ದು, ಕಾನೂನು ಪ್ರಕ್ರಿಯೆ ಕೂಡ ಅಕ್ಟೋಬರ್ 06 ರಂದೇ ನಡೆಯಲಿದೆ‌ ಎನ್ನುವ ಗಾಸಿಪ್ ಸುದ್ದಿ ಅಚ್ಚರಿ ಮೂಡಿಸಿದೆ.‌


ಹೀಗೆ ಚೈ-ಸ್ಯಾಮ್ ಡಿವೋರ್ಸ್ ಗಾಸಿಪ್ ಮ್ಯಾಟರ್ ಗಲ್ಲಿಯಲ್ಲಿ ಥಕ್ಕಥೈ ಅಂತ ಕುಣಿಯುತ್ತಿರೋದ್ರಿಂದ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ ಫುಲ್ ಅಪ್ ಸೆಟ್ ಆಗಿದ್ದಾರೆ. ಏನಾಗ್ತಿದೆ ನಟಿ ಸಮಂತಾ ಹಾಗೂ ನಾಗಚೈತನ್ಯ ಬದುಕಿನ ಬಾಂಡಲದಲ್ಲಿ ಎನ್ನುತ್ತಾ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಪ್ರೀತ್ಸಿ ಮದುವೆಯಾದ, ರೀಲ್ ಅಂಡ್ ರಿಯಲ್ ಲೈಫ್ ನಲ್ಲಿ ಸೈ ಎನಿಸಿಕೊಂಡ ಈ‌ಜೋಡಿ ಯಾವುದೇ ಕಾರಣಕ್ಕೂ ದೂರವಾಗಬಾರದು ದೇವಾ ಎನ್ನುತ್ತಾ ತಮ್ಮ ತಮ್ಮ ಮನೆದೇವರಿಗೆ ಹರಕೆ ಕಟ್ಟಿಕೊಳ್ತಿದ್ದಾರೆ. ಕಣ್ಣುಕುಕ್ಕುವಂತಿರುವ ಜೋಡಿ ಮೇಲೆ ಯಾವ ಕೆಟ್ಟಕಣ್ಣು ತಾಗದಿರಲಿ ಭಗವಂತ ಎನ್ನುತ್ತಿದ್ದಾರೆ. ಇಂತಹ ಫ್ಯಾನ್ ಫಾಲೋಯರ್ಸ್ ಮಧ್ಯೆ ಅಕ್ಕಿನೇನಿ ಫ್ಯಾಮಿಲಿ ಡೈಹಾರ್ಡ್ ಫ್ಯಾನ್ ವೊಬ್ಬ ಸಮಂತಾಗೆ ವಾರ್ನಿಂಗ್ ಮಾಡಿದ್ದಾರೆ.

ಹೌದು, ತೆಲುಗು ವೆಬ್ ಸೈಟ್ ಗಳು ವರದಿ ಮಾಡಿರುವಂತೆ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ ಸಮಂತಾಗೆ ವಾರ್ನ್ ಮಾಡಿದ್ದಾರಂತೆ. ಒಂದ್ವೇಳೆ ಸಮ್ಮು ಬೇಬಿ ಡಿವೋರ್ಸ್ ಕೊಟ್ಟಿದ್ದೇ ಆದಲ್ಲಿ ಕತ್ತರಿಸಿ ಹಾಕುವುದಾಗಿ ಧಮ್ಕಿ ಹಾಕಿದ್ದಾರಂತೆ. ಹೀಗಂತ, ಟಾಲಿವುಡ್ ವೆಬ್ ಸೈಟ್ ಗಳು ಸುದ್ದಿ ಬಿತ್ತರಿಸಿವೆ. ಅಷ್ಟಕ್ಕೂ, ಈ ಸುದ್ದಿಯಲ್ಲಿ ಎಷ್ಟು ಹುರುಳಿದೆಯೋ ಅಥವಾ ಎಷ್ಟು ಸುಳ್ಳಿದೆಯೋ ಗೊತ್ತಿಲ್ಲ. ಆದರೆ, ಒಂದಂತೂ ಸತ್ಯ ತಾವು ಇಷ್ಟಪಡುವ, ಆರಾಧಿಸುವ, ಅಭಿಮಾನಿಸುವ ತಾರೆಯರು ಹಾಗೂ ತಾರಾ ಜೋಡಿಗಳ ವೃತ್ತಿ ಬದುಕಿರಲಿ ಅಥವಾ ವೈಯಕ್ತಿಕ ಬದುಕಿರಲಿ ಅಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ, ಬಿರುಗಾಳಿ ಎದ್ದರೆ, ಅದನ್ನ ಸಹಿಸುವ ಶಕ್ತಿ ಅಭಿಮಾನಿ ದೇವರುಗಳಿಗಿಲ್ಲ. ಹಲ್ಲಲ್ಲು ಕಡಿಯುತ್ತಲೇ, ಕಣ್ಣಲ್ಲೇ ಕೆಂಡ ಉಗುಳುತ್ತಲೇ ಅಖಾಡಕ್ಕೆ ಇಳಿದುಬಿಡ್ತಾರೆ.

ಎಲ್ಲವೂ ಸಮಾನವಾಗಿರಬೇಕು ಮತ್ತು ಸಂತೋಷದಿಂದ ಕೂಡಿರಬೇಕು ಅಂತ ಫ್ಯಾನ್ಸ್ ಬಯಸ್ತಾರೆ. ಈಗ ಸ್ಯಾಮ್ ‌ಚೈ ಫ್ಯಾನ್ಸ್ ಕೂಡ ಇದನ್ನೇ ಆಶಿಸುತ್ತಿದ್ದಾರೆ. ಬಜಾರ್ ನಲ್ಲಿ ಹಬ್ಬಿರುವ ವಿಚ್ಚೇದನದ ಸುದ್ದಿ ಸುಳ್ಳಾಗಲಿ, ಮನಂ ಜೋಡಿಯ ಮಧ್ಯೆ ವಿರಸ ಮೂಡಿರದಿರಲಿ, ಮಜಿಲಿ ಜೋಡಿ ಒಂದಾಗಿ, ಖುಷಿಯಾಗಿ, ಸುಖವಾಗಿ ಬಾಳಲಿ ಎನ್ನುವುದೇ ಅವರ ಕೋಟ್ಯಾಂತರ ಭಕ್ತರ ಕೋರಿಕೆ.

  • ಎಂಟರ್‌ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ದೊಡ್ಡಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನ; ಜೂ. ನಿಖಿಲ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರ !ತಂದೆ-ತಾಯಿಯಾದ ಖುಷಿಯಲ್ಲಿ ನಿಖಿಲ್- ರೇವತಿ !

ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ. ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ.

ಬಂದಾನವ್ವ ಭೂಪ.. ಬಂದಾನವ್ವ ಭೂಪ.. ದೊಡ್ಮನೆ ಯುವರಾಣಿ ಮಡಿಲಿನಲಿ.. ಮುತ್ತು ರತ್ನದಂತೆ.. ಬೆಳ್ಳಿ ಬೊಂಬೆಯಂತೆ..ದೊಡ್ಡಗೌಡರ ವಂಶದಲ್ಲಿ.. ಯಸ್, ಮಾಜಿ ಪ್ರಧಾನಿಗಳು ಎಚ್. ಡಿ. ದೇವಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನವಾಗಿದೆ. ದೊಡ್ಮನೆ ಯುವರಾಣಿ ರೇವತಿ ಗಂಡುಮಗುವಿಗೆ ಜನ್ಮಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ನ ಯುವರಾಜ ನಿಖಿಲ್ ಕುಮಾರಸ್ವಾಮಿ ತಂದೆಯಾದ ಖುಷಿಯಲ್ಲಿದ್ದಾರೆ. ದೊಡ್ಡಗೌಡರಂತೂ ಮರಿಮೊಮ್ಮಗನ ಎಂಟ್ರಿಗೆ ಹೃದಯತುಂಬಿ ನಕ್ಕಿದ್ದಾರೆ. ಕರುಳಕುಡಿಯನ್ನ ಸ್ವಾಗತಿಸೋದಕ್ಕೆ ತುದಿಗಾಲಿನಲ್ಲಿ‌ ನಿಂತಿದ್ದಾರೆ.

ದೊಡ್ಡಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನವಾಗುತ್ತೆ ಅಂತ
ಅವಧೂತರಾದ ವಿನಯ್ ಗುರೂಜಿಯವರು ಭವಿಷ್ಯ ನುಡಿದಿದ್ದರು.‌ಕೊನೆಗೂ ಗುರೂಜಿಯ ಭವಿಷ್ಯ ನಿಜವಾಗಿದೆ. ನಿಖಿಲ್- ರೇವತಿ ದಂಪತಿಗೆ ಗಂಡುಮಗು‌ ಜನಿಸಿದೆ. ಮರಿ ಯುವರಾಜನೋ ಅಥವಾ ಜೂನಿಯರ್ ಯುವರಾಣಿಯೋ ಎನ್ನುವ ಕಾತುರಕ್ಕೆ ಬ್ರೇಕ್ ಬಿದ್ದಿದೆ. ಜೂ. ನಿಖಿಲ್ ಕಣ್ತುಂಬಿಕೊಳ್ಳುವ ಕಾತುರ ಹೆಚ್ಚಾಗಿದೆ.‌



ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ.

ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ. ಆ ಅದೃಷ್ಟದ ಕ್ಷಣ ಆದಷ್ಟು ಬೇಗ ಬರಲಿ ಅಲ್ಲವೇ.

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ಕುಮಾರಸ್ವಾಮಿಯವರು ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್, ಗಂಧದಗುಡಿಯ ಅಂಗಳದಲ್ಲಿ ಗೆಲುವಿನ ಗದ್ದುಗೆ ಏರುವುದರ ಜೊತೆಗೆ ರಾಜಕೀಯ ನಾಯಕರಾಗಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎನ್ನುವ ಮಹದಾಸೆವೊತ್ತಿದ್ದಾರೆ. ಪಕ್ಷಸಂಘಟನೆ ಹಾಗೂ ಪ್ರಚಾರದ ಜೊತೆಗೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ, ರೈಡರ್ ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ.

ಅಂದ್ಹಾಗೇ, ಇತ್ತೀಚೆಗಷ್ಟೇ ದೊಡ್ಮನೆಯ ಯುವರಾಣಿ ರೇವತಿಯವರ ಸೀಮಂತಕಾರ್ಯ ಅದ್ದೂರಿಯಾಗಿ ನೆರವೇರಿತ್ತು. ಮನೆಮಗಳ ರೂಪದಲ್ಲಿರುವ ಸೊಸೆ ರೇವತಿಯವರ ಕನಸಿನಂತೆಯೇ ಸೀಮಂತ ಶಾಸ್ತ್ರವನ್ನ ಗ್ರ್ಯಾಂಡ್ ಆಗಿ, ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದರು. ಎಚ್ ಎಸ್ ಆರ್ ಲೇ ಔಟ್ ನ ಖಾಸಗಿ ಕನ್ವೆಷನ್ ಹಾಲ್ ನಲ್ಲಿ ರೇವತಿ ಬೇಬಿಶವರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭಕೋರಿದ್ದರು

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪುರ್‌ಸೊತ್‌ ಮಾಡ್ಕೊಂಡ್‌ ಲೈಫ್‌ ಎಂಜಾಯ್‌ ಮಾಡಿ! ಇದು ಸಂಚಾರಿಯ ಭಾವುಕ ಪಯಣ…

ಚಿತ್ರ ವಿಮರ್ಶೆ: ವಿಜಯ್‌ ಭರಮಸಾಗರ

ಚಿತ್ರ: ಪುಕ್ಸಟ್ಟೆ ಲೈಫು-ಪುರುಸೊತ್ತೇ ಇಲ್ಲ
ನಿರ್ಮಾಪಕ: ನಾಗರಾಜ ಸೋಮಯಾಜಿ
ನಿರ್ದೇಶನ: ಅರವಿಂದ್‌ ಕುಪ್ಳೀಕರ್‌
ತಾರಾಗಣ : ಸಂಚಾರಿ ವಿಜಯ್‌, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಮಾತಂಗಿ ಪ್ರಸನ್ನ ಇತರರು.

ಪೊಲೀಸು ಸಾಯಿಸ್ಬೋದು. ಆದರೆ, ಕೊಲೆ ಮಾಡಬಾರದು…
ಆ ತನಿಖಾಧಿಕಾರಿ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆ ನಡೆದಿರುತ್ತೆ. ಅಲ್ಲಿ ಕೊಲೆಯಾದವ ಯಾರು, ಆ ಕೊಲೆ ಮಾಡಿದ್ದು ಯಾರು, ಯಾಕೆ ಅನ್ನೋ ಕುತೂಹಲವಿದ್ದರೆ, ಯಾವುದೇ ಅನುಮಾನವಿಲ್ಲದೆ “ಪುಕ್ಸಟ್ಟೆ ಲೈಫು” ಸಿನಿಮಾ ನೋಡಬಹುದು. ಅಲ್ಲಲ್ಲಿ ಕಚಗುಳಿ ಇಡುತ್ತಲೇ, ಆಗಾಗ ಕಾಡುವ, ದಿಟ್ಟಿಸಿ ನೋಡುವ, ವಾಸ್ತವತೆ ಸಾರುವ, ಒಮ್ಮೊಮ್ಮೆ ಭಾವುಕತೆಗೆ ನೂಕಿ, ಭಾರವೆನಿಸಿ ನೈಜತೆಗೆ ಹತ್ತಿರವಾಗುವ ಸಿನಿಮಾ ಇದು. ಇಲ್ಲಿ ಓದುವುದಕ್ಕಿಂತ ಹಾಗೊಮ್ಮೆ ಪುರುಸೊತ್ತು ಮಾಡಿಕೊಂಡು ಸಿನಿಮಾ ನೋಡಿದರೆ ಅದಕ್ಕೊಂದು ಅರ್ಥ.

ಇಡೀ ಸಿನಿಮಾದ ಆಕರ್ಷಣೆ ಮನಮಿಡಿಯೋ ಕಥೆ. ಅದನ್ನು ಅಷ್ಟೇ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕ ಅರವಿಂದ್ ಕುಪ್ಳೀಕರ್‌ ಅವರಿಂದ ಆಗಿದೆ. ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕಥೆಗಿದೆ. ಒಂದಷ್ಟು ಕುತೂಹಲ ಕೆರಳಿಸುತ್ತಲೇ ದ್ವಿತಿಯಾರ್ಧ ಸಾಗುತ್ತದೆಯಾದರೂ, ನೋಡುವ ಪ್ರೇಕ್ಷಕನಿಗೆ ಮುಂದೇನಾಗುತ್ತೆ ಅನ್ನುವುದರ ಅರಿವು ಕೂಡ ಗೊತ್ತಾಗುತ್ತೆ. ಅಲ್ಲಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆ ಇರಬೇಕಿತ್ತು. ಕೆಲವು ಕಡೆ ನಿರ್ದೇಶಕರ ಹಿಡಿತ ಕೈ ತಪ್ಪಿದೆಯಾದರೂ, ಕೊನೆ ಕೊನೆಯಲ್ಲಿ ಸೀಟಿನ ಅಂಚಿಗೆ ಕೂರಿಸುವ ತಾಕತ್ತು ಆ ಕಥೆಯಲ್ಲಿದೆ. ಎಲ್ಲೋ ಒಂದು ಕಡೆ ಕಥೆ ಆಶಯ ಬೇರೆಲ್ಲೋ ಸಾಗುತ್ತಿದೆ ಅನ್ನುವ ಹೊತ್ತಿಗೆ ಚಿತ್ರದ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಪಾತ್ರಗಳಲ್ಲಿನ ಲವಲವಿಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಂದು ಸಿನಿಮಾ ನೈಜತೆಗೆ ಹತ್ತಿರವಾಗಿರಬೇಕು ಜೊತೆಗೆ ಸಮಾಜದೊಳಗಿನ ವಾಸ್ತವದ ಅರಿವನ್ನು ತೆರೆದಿಡುವಂತಿರಬೇಕು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ. ಪ್ರಸ್ತುತ ವಿದ್ಯಮಾನಗಳನ್ನೇ ಇಟ್ಟುಕೊಂಡು ನಿರೂಪಿಸಿರುವ ಜಾಣತನ ನಿರ್ದೇಶಕರದ್ದು.

ಇದು ಸಾರಾಂಶ…
ಅಲ್ಲೊಬ್ಬ ಷಹಜಾನ್. ಅವನಿಗೊಬ್ಬ ಮಮ್ತಾಜ್ ಕೂಡ ಇದ್ದಾಳೆ. ಹಾಗಂತ, ಇಲ್ಲಿ ‘ತಾಜ್ ಮಹಲ್’ನಂತಹ ಪ್ರೇಮ್ ಕಹಾನಿ ಇಲ್ಲ. ಷಹಜಾನ್ ಒಬ್ಬ ಕೀ ಮೇಕರ್. ಅಷ್ಟೇನು ಸ್ಥಿತಿವಂತನಲ್ಲದ ಷಹಜಾನ್, ಪೋಲೀಸರ ಆಟದಗೊಂಬೆ ಆಗ್ತಾನೆ. ಅದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಅಂತಿಟ್ಟುಕೊಳ್ಳಿ. ಏನನ್ನೂ ಅರಿಯದ ಷಹಜಾನ್ ತನ್ನದಲ್ಲದ ತಪ್ಪಿಗೆ ಬಂಧಿಯಾಗ್ತಾನೆ. ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ನಲುಗಿ ಹೋಗ್ತಾನೆ. ಘಟನೆಯೊಂದರಲ್ಲಿ ಮನಸ್ಸೊಪ್ಪದಿದ್ದರೂ ಪರಿಸ್ಥಿತಿ ಅವನನ್ನು ಕಳ್ಳನನ್ನಾಗಿಸುತ್ತೆ. ಅವನ ಆ ಪರಿಸ್ಥಿತಿಗೆ ಕಾರಣವೇನು? ಅದೇ ಸಿನಿಮಾದ ಟ್ವಿಸ್ಟು! ಈ ಕಥೆಯಲ್ಲಿ ಷಹಜಾನ್‌ನ ವ್ಯಥೆಯೂ ಇದೆ. ಅದೇನು ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಒಂದು ಬಾರಿ ಷಹಜಾನ್‌ನ ನೊಂದ-ಬೆಂದ ಕಥೆಯ ಚಿತ್ರಣ ನೋಡಬಹುದು.

ಇನ್ನು ಚಿತ್ರದ ಮತ್ತೊಂದು ಹೈಲೈಟ್‌ ಅಂದರೆ, ಸಂಗೀತ. ಚಿತ್ರದ ವೇಗಕ್ಕೆ ಹಿನ್ನೆಲೆ ಸಂಗೀತ ಹೆಗಲು ಕೊಟ್ಟಿದೆ. ಪ್ರತಿ ದೃಶ್ಯದಲ್ಲೂ ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೈಚಳಕ ಖುಷಿ ಕೊಡುತ್ತದೆ. ಅದಕ್ಕೆ ಪೂರಕವಾಗಿ ಸಂಕಲನವೂ ಇದೆ. ಅಲ್ಲಲ್ಲಿ ಬರುವ ಹಾಡುಗಳಿಗೂ ಇಲ್ಲಿ ಮಹತ್ವವಿದೆ. ಇನ್ನು, ನಟನೆ ವಿಚಾರಕ್ಕೆ ಬಂದರೆ, ಸಂಚಾರಿ ವಿಜಯ್ ಅವರ ಬಗ್ಗೆ ಮಾತಾಡುವಂತಿಲ್ಲ. ಇಡೀ ಪಾತ್ರವನ್ನು ಅವರು ಜೀವಿಸಿದ್ದಾರೆ. ಮುಸ್ಲಿಂ ಯುವಕನ ಪಾತ್ರದ ನೋಡಿದವರಿಗೆ ಖಂಡಿತ ಖುಷಿಯಾಗದೇ ಇರದು. ಆ ಪಾತ್ರ ಮೂಲಕವೂ ಅವರು ಭಾವುಕತೆ ಹೆಚ್ಚಿಸಿದ್ದಾರೆ.

ಸಿನಿಮಾ ನೋಡಿ ಹೊರಬಂದವರಿಗೆ ಸಂಚಾರಿಯ ಭಾವುಕ ಪಯಣ ನೆನಪಾಗದೇ ಇರದು. ಅಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ ಎಂದಿನಂತೆಯೇ ಗಮನ ಸೆಳೆಯುತ್ತಾರೆ. ಪೊಲೀಸ್‌ ಅಧಿಕಾರಿಯೊಬ್ಬನ ಹಣದಾಸೆ ಹೇಗೆಲ್ಲಾ ಇರುತ್ತೆ, ಅದರೊಂದಿಗೂ ಸಣ್ಣದ್ದೊಂದು ಮಾನವೀಯ ಗುಣವುಳ್ಳ ಪಾತ್ರವದು. ಇನ್ನು, ರಂಗಾಯಣ ರಘು ತನಿಖಾಧಿಕಾರಿಯಾಗಿ ಇಷ್ಟವಾಗುತ್ತಾರೆ. ಈವರೆಗೆ ಮಾಡಿದ ಪಾತ್ರಗಳಿಗಿಂತ ಇಲ್ಲಿನ ಪಾತ್ರ ವಿಭಿನ್ನ ಮತ್ತು ವಿಶಿಷ್ಟ ಎನ್ನಬಹುದು. ಉಳಿದಂತೆ ಅಲ್ಲಲ್ಲಿ ಬರುವ ಪ್ರತಿ ಪಾತ್ರಗಳು ಸಹ ಸಿನಿಮಾದಲ್ಲಿ ಜೀವಿಸಿವೆ.

ಕೊನೇ ಮಾತು: ಈ ಭಾವುಕ ಪಯಣದಲ್ಲಿ ಪುರುಸೊತ್ತು ಮಾಡ್ಕೊಂಡು ‘ಲೈಫ್’ ಎಂಜಾಯ್ ಮಾಡಿ..

error: Content is protected !!