Categories
ಸಿನಿ ಸುದ್ದಿ

ಶುಗರ್ ಲೆಸ್ ಶೂಟಿಂಗ್ ಮುಗೀತು

ಚೊಚ್ಚಲ ನಿರ್ದೇಶನದ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದ ಶಶಿಧರ್

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ಅದಕ್ಕೆ ‘ಶುಗರ್ ಲೆಸ್’ ಎಂಬ ಹೆಸರಿಟ್ಟು ನಿರ್ದೇಶನ ಮಾಡಲು ಹೊರಟಿದ್ದು ಎಲ್ಲರಿಗೂ ಗೊತ್ತು. ಈಗ. ಆ ಚಿತ್ರದ ಹೊಸ ಸುದ್ದಿ ಅಂದರೆ, ಆ ಚಿತ್ರವನ್ನು ಶಶಿಧರ್ ತಮ್ಮ ಚಿತ್ರತಂಡದೊಂದಿಗೆ ಯಶಸ್ವಿಯಾಗಿ ಮುಗಿಸಿದ್ದಾರೆ.


ಹೌದು, ‘ಶುಗರ್ ಲೆಸ್’ ಇತ್ತೀಚೆಗಷ್ಟೆ ಸೆಟ್ಟೇರಿತ್ತು. ಈಗ ನೋಡಿದರೆ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.
ಅವರ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನದ ಜರ್ನಿ ಶುರು ಮಾಡಿದ ಶಶಿಧರ್, ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆಯ ಸಂದೇಶ ಇರುವ ಸಿನಿಮಾ‌ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ‘ಶುಗರ್ ಲೆಸ್’ ಶುರು ಮಾಡಿದ್ದರು.

ಪುಷ್ಕರ್ ಮಲ್ಲಿಕಾರ್ಜುನ, ಶಶಿಧರ್

ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಶಿಧರ್, ಈ ಮೂಲಕ ಡಯಾಬಿಟಿಸ್‌ ಕುರಿತ ಕಥೆ ಹೇಳಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಮುಂದಾಗಿರುವ ಅವರು,
ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ.

ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನಕ್ಕೆ ಮುಂದಾಗಿದ್ದಾರಂತೆ ನಿರ್ದೇಶಕರು.
ಇನ್ನು ಇದೇ ಮೊದಲ‌ ಸಲ ಯಾವ ಭಾಷೆಯಲ್ಲೂ ಈ ರೀತಿಯ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾಗಿ ಹೇಳುತ್ತಾರೆ.


ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದು, ಈಗ ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಶಶಿಧರ್, ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಸಿನಿಮಾ ತರುವ ತಯಾರಿಯಲ್ಲಿದ್ದಾರೆ.

 

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ವಸಿಷ್ಠ ಈಗ ವಿಶಿಷ್ಟ..! ಚೊಚ್ಚಲ ತೆಲುಗು ಚಿತ್ರದ ಫಸ್ಟ್‌ ಲುಕ್‌ ರಿಲೀಸ್

ನೋಡಿರದ, ಮಾಡಿರದ ಒಂದು ಅದ್ಭುತ ಪಾತ್ರ ಎಂದ ಸಿಂಹ

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೊಸ ಛಾಪು ಮೂಡಿಸಿರುವುದು ಗೊತ್ತೇ ಇದೆ. ತಮ್ಮ ಕಂಠದಿಂದ, ಅದ್ಭುತ ನಟನೆಯಿಂದ ಅವರು ಈಗಾಗಲೇ ಒಂದಷ್ಟು ಅಭಿಮಾನಿ ಬಳಗವನ್ನು ಹೊಂದಿರುವುದೂ ಗೊತ್ತಿದೆ. ಅವರು ಕನ್ನಡಕ್ಕಷ್ಟೇ ಸೀಮಿತ ಅಂದುಕೊಂಡರೆ ಆ ಊಹೆ ಶುದ್ಧ ತಪ್ಪು. ಅವರು ಈಗಾಗಲೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಗೊತ್ತಿದೆ. ಅವರು ತೆಲುಗಿನ “ಓದೆಲ ರೈಲ್ವೇ ಸ್ಟೇಷನ್” ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಳೆಯ ಸುದ್ದಿಯೇನೋ ನಿಜ. ಆದರೆ, ತಮ್ಮ ಮೊದಲ ತೆಲುಗು ಸಿನಿಮಾದಿಂದ ಹೀಗೊಂದು ಫಸ್ಟ್‌ ಲುಕ್‌ ಹೊರಬಂದಿದೆ. ಅದೇ ಈ ಹೊತ್ತಿನ ವಿಶೇಷ.


ಹೌದು, ವಸಿಷ್ಠ ಸಿಂಹ ಅವರು “ಓದೆಲ ರೈಲ್ವೇ ಸ್ಟೇಷನ್” ಚಿತ್ರದಲ್ಲಿ ಹೀರೋ. ಅದೊಂದು ವಿಶಿಷ್ಠ , ವಿಭಿನ್ನ ಕಥೆ, ಪಾತ್ರ ಹೊಂದಿರುವ ಸಿನಿಮಾ. ಈ ಚಿತ್ರದ ಫಸ್ಟ್ ಲುಕ್ ಬಿಡುಗೆಡಯಾಗಿದೆ. ಇನ್ನು, ಆ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರು ತಿರುಪತಿ ಎನ್ನುವ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದವರಿಗೆ ವಸಿಷ್ಠ ಸಿಂಹ ಒಬ್ಬ ಧೋಬಿ ಪಾತ್ರದಾರಿ ಎಂಬುದು ಗೊತ್ತಾಗುತ್ತದೆ. ಇನ್ನು, ವಸಿಷ್ಠ ಅವರು ತಮ್ಮ ಚೊಚ್ಚಲ ತೆಲುಗು ಚಿತ್ರವಾಗಿರುವ “ಓದೆಲ ರೈಲ್ವೇ ಸ್ಟೇಷನ್” ಚಿತ್ರದ ಫಸ್ಟ್‌ ಶೇರ್ ಮಾಡುವ ಮೂಲಕ, “ಇದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ..” ಎಂದು ಹೇಳಿಕೊಂಡಿದ್ದಾರೆ.


‘ತಿರುಪತಿ ಎಂಬ ಮೃದು ಮನಸ್ಸಿನ ಸಾಧಾರಣ ಯುವಕ, ಹಳ್ಳಿ ಹೈದ, ಓರ್ವ ಧೋಬಿ. ಇದು ನನ್ನ ಚೊಚ್ಚಲ ತೆಲುಗು ಸಿನೆಮಾ “ಓದೆಲ ರೈಲ್ವೇ ಸ್ಟೇಷನ್”ನ ಪಾತ್ರದ ಪರಿಚಯ ಎಂದಿರುವ ಅವರು, ನಾನು ಈವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ’ ಎಂದಿದ್ದಾರೆ. ಸದ್ಯಕ್ಕೆ ವಸಿಷ್ಠ ಸಿಂಹ ಅವರು ಶೇರ್‌ ಮಾಡಿರುವ ಆ ಫಸ್ಟ್‌ ಲುಕ್‌ ಪೋಸ್ಟರ್‌ಗೆ ಎಲ್ಲಡೆಯಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. “ಓದೆಲ ರೈಲ್ವೆ ಸ್ಟೇಷನ್” ಒಂದು ನೈಜ ಘಟನೆ ಆಧಾರಿತ ಚಿತ್ರವಂತೆ. ಖರೀಮ್ ನಗರದಲ್ಲಿ ನಡೆದ ಒಂದು ಘಟನೆ ಇಟ್ಟುಕೊಂಡು ಚಿತ್ರ ಮಾಡಲಾಗುತ್ತಿದ್ದು, ಕಥೆ, ಪಾತ್ರ ಕೇಳಿಯೇ ವಸಿಷ್ಠ ಸಿನಿಮಾ ಬಿಡಬಾರದು ಅಂತ ಒಪ್ಪಿ, ಅಪ್ಪಿಕೊಂಡು ಚಿತ್ರ ಮಾಡುತ್ತಿದ್ದಾರೆ.


ಇನ್ನು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ ವಸಿಷ್ಠಗೆ ಜೋಡಿ. ಈಗಾಗಲೇ ಹೆಬಾ ಪಟೇಲ್ ಅವರ ಫಸ್ಟ್‌ ಲುಕ್‌ ಕೂಡ ರಿಲೀಸ್ ಮಾಡಲಾಗಿದೆ. ಹೆಬಾ ಪಟೇಲ್ ಈಗಾಗಲೇ ಕನ್ನಡದ “ಅಧ್ಯಕ್ಷ” ಚಿತ್ರದಲ್ಲಿ ಟಿಸಿದ್ದಾರೆ. ಅಶೋಕ್ ತೇಜ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ
ವಸಿಷ್ಠ ಅವರು ಫುಲ್‌ ಬಿಝಿಯಾಗಿದ್ದಾರೆ. ಅವರ ಕೈಯಲ್ಲಿ ಒಂದಷ್ಟು ಸಾಲು ಸಾಲು ಚಿತ್ರಗಳಿವೆ. “ಕಾಲಚಕ್ರ”, “ಪಂತ”, “ಯುವರತ್ನ” ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗೆ “ತಲ್ವಾರ್”‌ ಚಿತ್ರವೂ ಸೆಟ್ಟೇರಿದೆ. ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ವಸಿಷ್ಠ ಸಿಂಹ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದು ವಿಶೇಷ.

 

 

Categories
ಸಿನಿ ಸುದ್ದಿ

ಧ್ರುವ ಸರ್ಜಾ ಕೂದಲಿಗೆ ಕತ್ತರಿ! ಕ್ಯಾನ್ಸರ್‌ ಪೀಡಿತರಿಗೆ ಕೂದಲು ದಾನ

ಪೊಗರು ಶೂಟಿಂಗ್‌ ಮುಗಿಸಿದ ಆಕ್ಷನ್ ಪ್ರಿನ್ಸ್‌‌

 

ನಟ ಧ್ರುವ ಸರ್ಜಾ ಹೊಸ ಗೆಟಪ್‌ನಲ್ಲಿದ್ದಾರೆ!
ಹಾಗಂತ ಅವರೇನು ಹೊಸ ಸಿನಿಮಾಗೆ ಈ ಗೆಟಪ್‌ನಲ್ಲಿದ್ದಾರಾ ಅನ್ನುವ ಪ್ರಶ್ನೆ ಸಹಜ. ವಿಷಯವಿಷ್ಟೇ, ಅವರು, “ಪೊಗರು” ಚಿತ್ರಕ್ಕಾಗಿ ವರ್ಷಗಟ್ಟಲೇ ಬೆಳೆಸಿದ್ದ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅದೇ ಈ ಹೊಸ ಗೆಟಪ್‌ನ ಸುದ್ದಿ. ಹೌದು, “ಪೊಗರು” ಚಿತ್ರದ ಚಿತ್ರೀಕರಣ ಈಗ ಪೂರ್ಣಗೊಂಡಿದೆ. ಹೀಗಾಗಿ, ಅವರು ತಮ್ಮ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಧ್ರುವ ಸರ್ಜಾ ಅವರು ತಮ್ಮ ಕೂದಲನ್ನು ಬೆಳೆಸಿದ್ದರು. ಈಗ ಕತ್ತರಿ ಹಾಕಿಸಿದ್ದರೂ, ಆ ಕೂದಲನ್ನು ವಿಶೇಷವಾಗಿ ದಾನ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಧ್ರುವ ಅವರು ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಅವರು ತಮ್ಮ ಕೂದಲಿಗೆ ಕತ್ತರಿ ಹಾಕುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಪೊಗರು ಶೂಟಿಂಗ್ ಮುಗಿದಿದೆ. ನನ್ನ ಸ್ನೇಹಿತರೆಲ್ಲ ಕೂದಲು ದಾನ ಮಾಡುವಂತೆ ಹೇಳಿದರು. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂಬುದು ಅವರ ಹೇಳಿಕೆ. ಸಮಾರು 10 ಇಂಚು ಉದ್ದ ಇರುವ ಕೂದಲನ್ನು ದಾನ ಮಾಡಬಹುದು. ಸಾಕಷ್ಟು ಜನ ಕೂಡ ಈಗಾಗಲೇ ದಾನ ಮಾಡಿದ್ದಾರೆ. ಕ್ಯಾನ್ಸರ್ ಬಂದು ಕೂದಲು ಉದುರುವ 15 ವರ್ಷದ ಒಳಗಿನ ಮಕ್ಕಳಿಗೆ ಕೂದಲು ಉಪಯೋಗವಾಗುತ್ತೆ. ಅವರಿಗೆ ಸಹಾಯವಾಗಲಿ ಎಂದು ಹೀಗೆ ಮಾಡುತ್ತಿದ್ದೇನೆ. ಕೂದಲು ಕತ್ತರಿಸುವ ಎಲ್ಲರೂ ಹೀಗೆ ಮಾಡಿದರೆ ಸಾಕಷ್ಟು ಜನರಿಗೆ ಒಳ್ಳೆಯದಾಗುತ್ತೆ.’ ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ.

 

 

Categories
ಸಿನಿ ಸುದ್ದಿ

2020…! ಈ ಸಲ ಗೆಲುವು ನಮ್ದೇ ಅಂತಾರೆ ಕೋಮಲ್

 ಕಾಮಿಡಿ ಸಿನ್ಮಾ ಮೂಲಕ ಕೋಮಲ್‌ ಹೊಸ ಇನ್ನಿಂಗ್ಸ್‌ ಶುರು

ನವೆಂಬರ್‌ ಅಂತ್ಯದಿಂದ ಶೂಟಿಂಗ್‌ 

ನಟ ಕೋಮಲ್‌ ಮತ್ತೆ ಸುದ್ದಿಯಲ್ಲಿದ್ದಾರೆ…

ಹೌದು, ಈ “2020” ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಅದೇ “2020” ಮೂಲಕ ಸಮಸ್ಯೆ ಬದಿಗಿಟ್ಟು, ಒಂದೊಳ್ಳೆಯ ಯಶಸ್ಸನ್ನು ಕೊಡುವ ಹುಮ್ಮಸ್ಸಿನಲ್ಲಿದ್ದಾರೆ ಕೋಮಲ್.‌ ಹೀಗಂದಾಕ್ಷಣ, ನಟ ಕೋಮಲ್‌ ಹೊಸ ಚಿತ್ರ ಒಪ್ಪಿಕೊಂಡಿರುವುದು ನೆನಪಾಗುತ್ತದೆ. ಈಗಾಗಲೇ ಕೋಮಲ್‌ “2020” ಸಿನಿಮಾ ಒಪ್ಪಿಕೊಂಡಿರೋದು ಗೊತ್ತೇ ಇದೆ. ಆರಂಭದಲ್ಲೇ ಟೈಟಲ್‌ ಮೂಲಕ ಗಮನಸೆಳೆದಿರುವ “2020” ಈಗ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಅದಕ್ಕೆ ಕಾರಣ, ಕೋಮಲ್‌ ಚಿತ್ರದ ಹೈಲೈಟ್‌ ಆಗಿರುವುದು. ಅಷ್ಟೇ ಅಲ್ಲ, ಈ ಸಿನಿಮಾ ಮೂಲಕ ನಿರ್ದೇಶನ ಪಟ್ಟವನ್ನು ಅಲಂಕರಿಸುತ್ತಿರುವ ಕೆ.ಎಲ್.ರಾಜಶೇಖರ್.‌

ಹೌದು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮಾತುಗಳನ್ನು ಪೋಣಿಸುವ ಮಾತುಗಾರ ಎಂದೇ ಹೆಸರಾಗಿರುವ ಕೆ.ಎಲ್.ರಾಜಶೇಖರ, ದರ್ಶನ್‌ ಅಭಿನಯದ “ರಾಬರ್ಟ್‌”, ಶರಣ್‌ ನಟನೆಯ “ವಿಕ್ಟರಿ -2”, ಚಿರಂಜೀವಿ ಅಭಿನಯಿಸಿದ “ಅಮ್ಮ ಐ ಲವ್ ಯು”, ಗಣೇಶ್‌ ಅಭಿನಯಿಸುತ್ತಿರುವ “ತ್ರಿಬಲ್ ರೈಡಿಂಗ್”, ಚಿಕ್ಕಣ್ಣ ಅವರ “ಉಪಾಧ್ಯಕ್ಷ” ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಿಗೆ  ಸಂಭಾಷಣೆ ಬರೆದಿದ್ದದಾರೆ ಈ  ಕೆ.ಎಲ್.ರಾಜಶೇಖರ್.

ಕೆ.ಎಲ್.‌ ರಾಜಶೇಖರ್‌,‌ ನಿರ್ದೇಶಕ

ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ರಾಜಶೇಖರ್‌, ಇದೇ ಮೊದಲ ಬಾರಿಗೆ “2020” ಮ್ಯಾಚ್‌ ಆಡುವ ಧೈರ್ಯ ಮಾಡಿದ್ದಾರೆ. ಅವರ ಈ “2020” ಸಿನಿಮಾಗೆ, ಕೋಮಲ್‌ ಕೂಡ ಸಾಥ್‌ ನೀಡಿದ್ದು, ಈ ಬಾರಿ ಕಪ್‌ ನಮ್ಮದೇ ಎನ್ನುವಂತೆ ಈ ಸಲ ಸಿನಿಮಾದ ಗೆಲುವು ನಮ್ಮದೇ ಎನ್ನುವ ರೀತಿ ಕೋಮಲ್‌ ಕೂಡ ಪಕ್ಕಾ ತಯಾರಿಯಾಗಿದ್ದಾರೆ. ಇನ್ನು,  ಕಳೆದ ವಿಜಯದಶಮಿ ಹಬ್ಬದ ದಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು.

ಈ ಚಿತ್ರವನ್ನು ಟಿ. ಆರ್. ಚಂದ್ರಶೇಖರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಸಿನಿಮಾರಂಗಕ್ಕೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಟಿ.ಆರ್.‌ ಚಂದ್ರಶೇಖರ್‌ ಅವರು ತಮ್ಮ ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಈಗ “2020” ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಚಂದ್ರಶೇಖರ್‌, ನಿರ್ಮಾಪಕ

ಇದೊಂದು ಒಳ್ಳೆಯ ಸಂದೇಶ ಇರುವ ಸಿನಿಮಾ ಆಗಿದ್ದು, ಹಲವು ತಿರುವುಗಳ ಜೊತೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ,ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ ಹಾಗೂ ಇತರರೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ  ಟಿ.ಆರ್.ಚಂದ್ರ ಶೇಖರ್ ಪುತ್ರ ನಂದ ಕಿಶೋರ್ ಚಿತ್ರಕ್ಕೆ  ಕ್ಲಾಪ್ ಮಾಡಿದರೆ, ಟಿ.ಆರ್.ಚಂದ್ರ ಶೇಖರ್  ಕ್ಯಾಮರಾಗೆ ಚಾಲನೆ ನೀಡಿದ್ದಾರೆ. ಇನ್ನು, ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.

ಧನ್ಯಾ, ನಾಯಕಿ

ಅಂದಹಾಗೆ, ನವಂಬರ್ ಕೊನೆ ವಾರದಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ . ಪಕ್ಕಾ ಹಾಸ್ಯ ಕುರಿತ ಕಥೆ ಹೊಂದಿರುವ  ಈ ಚಿತ್ರಕ್ಕೆ ನವೀನ್ ಕುಮಾರ್ .ಎಸ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನವಿದೆ.

Categories
ಸಿನಿ ಸುದ್ದಿ

ಆಕ್ಟ್‌ನ ಜೋರು ಸುದ್ದಿಯ ಹಿಂದೆ ಬಕ್ಕೇಶ್‌ ಸಂಗೀತದ ಸದ್ದು!

ಹಿನ್ನೆಲೆ ಸಂಗೀತಕ್ಕೆ ದಾವಣಗೆರೆ ಹುಡುಗನ ಕೈಚಳಕ

ಯಶಸ್ವಿ ಸಿನಿಮಾಗೆ ಬ್ಯಾಕ್‌ ಗ್ರೌಂಡ್‌ ಸ್ಕೋರ್‌ ಮಾಡಿದ ತೃಪ್ತಿ

ಈ ಸಿನಿಮಾರಂಗವೇ ಹಾಗೆ. ಇಲ್ಲಿ ತೆರೆಮೇಲೆ ಕಾಣಿಸಿಕೊಂಡವರು ಮಾತ್ರ ಹೈಲೈಟ್‌ ಆಗೋದು ಸಹಜ. ಅದೇ ತೆರೆಯ ಹಿಂದೆ ರಾತ್ರಿ-ಹಗಲು ದುಡಿದವರು ಬೆಳಕಿಗೆ ಬರೋದು ಕೊಂಚ ಕಷ್ಟ. ಬೆಳಕಿಗೆ ಬಂದರೂ, ನಂತರದ ದಿನಗಳಲ್ಲಿ ಫೋಕಸ್‌ ಆಗೋದು ಇನ್ನೂ ಕಷ್ಟ. ಅದೆಷ್ಟೋ, ಸಕ್ಸಸ್‌ಫುಲ್‌ ಸಿನಿಮಾಗಳ ಹಿಂದೆ ಸದ್ದಿಲ್ಲದೆಯೇ ಕೆಲಸ ಮಾಡಿದ ತಾಂತ್ರಿಕವರ್ಗದವರಿದ್ದಾರೆ. ಸಿನಿಮಾ ಜೋರು ಸದ್ದು ಮಾಡಿದಾಗಲಷ್ಟೇ ಅವರ ಕೈಚಳಕದ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ. ಅಂದಹಾಗೆ, ಇಲ್ಲೀಗ ಹೇಳಹೊರಟಿರುವ ವಿಷಯ ಕೂಡ ಒಂದು ಸಕ್ಸಸ್‌ಫುಲ್‌ ಸಿನಿಮಾದ ಹಿಂದೆ ತನ್ನ ಪಾಡಿಗೆ ತಾನು ಮಾಡಿಕೊಂಡಿರುವ ಸಂಗೀತ ನಿರ್ದೇಶಕನ ಬಗ್ಗೆ. ಹೌದು, “ಆಕ್ಟ್ ೧೯೭೮” ಎಲ್ಲೆಡೆ ಜೋರು ಸೌಂಡು ಮಾಡುತ್ತಿರೋದು ಗೊತ್ತೇ ಇದೆ. ಆ ಸೌಂಡು ಮಾಡಿದ ಚಿತ್ರಕ್ಕೆ ಹಿನ್ನೆಲೆಯ ಸೌಂಡು ಮಾಡಿದ್ದು ಬೇರಾರೂ ಅಲ್ಲ, ಅದು ರೋಣದ ಬಕ್ಕೇಶ್.‌

ರೋಣದ ಬಕ್ಕೇಶ್‌, ಸಂಗೀತ ನಿರ್ದೇಶಕ

ಮಂಸೋರೆ ನಿರ್ದೇಶನದ ” ಆಕ್ಟ್‌ ೧೯೭೮” ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು ಇದೇ ರೋಣದ ಬಕ್ಕೇಶ್.‌ ಸಿನಿಮಾ ನೋಡಿದ ಬಹುತೇಕರ ಸಿನಿಪ್ರಿಯರು, ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಹಾಗೂ ಸಂಗೀತ ಕುರಿತು ಮಾತನಾಡುತ್ತಿದ್ದಾರೆ. ಒಂದೊಳ್ಳೆಯ ಚಿತ್ರಕ್ಕೆ ಅಷ್ಟೇ ಪೂರಕ ಎಂಬಂತಹ ಹಿನ್ನೆಲೆ ಸಂಗೀತ ಕೊಡುವ ಮೂಲಕ ಆ ಯಶಸ್ವಿ ಸಿನಿಮಾದ ಒಂದು ಭಾಗವಾಗಿರೋದು ಈ ಯುವ ಸಂಗೀತ ನಿರ್ದೇಶಕ ರೋಣದ ಬಕ್ಕೇಶ್. ಇಷ್ಟಕ್ಕೂ ಈ ರೋಣದ ಬಕ್ಕೇಶ್‌ ಯಾರು? ಎಲ್ಲಿಯವರು, ಅವರ ಹಿನ್ನೆಲೆ ಏನು ಎಂತ ಕುರಿತು ಸ್ವತಃ ರೋಣದ ಬಕ್ಕೇಶ್‌ ಅವರೇ “ಸಿನಿ ಲಹರಿ” ಜೊತೆ ಮಾತನಾಡಿದ್ದಾರೆ.

“ಬೆಣ್ಣೆದೋಸೆ ನಗರಿ ದಾವಣಗೆರೆ ನನ್ನೂರು. ಬಿಸಿಎ ಮತ್ತು ಎಂಸಿಎ ಓದು ಮುಗಿಸಿ ಬೆಂಗಳೂರಿಗೆ ಬಂದೆ. ಕಾಲೇಜು ದಿನಗಳಿಂದಲೂ ಸಂಗೀತದ ಕಡೆ ಒಲವು ಹೆಚ್ಚಾಗಿತ್ತು. ಸಿನಿಮಾರಂಗಕ್ಕೆ ಕಾಲಿಟ್ಟು ಆರು ವರ್ಷಗಳಾಗಿವೆ. ಆರಂಭದಲ್ಲಿ ನಿರ್ದೇಶಕ ಗೌಸ್‌ಪೀರ್‌ ನಿರ್ದೇಶನದ “ಶಾರ್ಪ್‌ ಶೂಟರ್‌” ಚಿತ್ರಕ್ಕೆ ಹಿನ್ನೆಲೆ ಗಾಯಕನಾಗಿ ತನ್ನ ಕೆಲಸ ಶುರುಮಾಡಿದೆ. ಮೂಲತಃ ನಾನೊಬ್ಬ ಗಾಯಕ. ” ದಿ ಲೈಫ್‌ ಆಫ್‌ ಮ್ಯೂಸಿಕ್‌ ಅಂಡ್‌ ಆರ್ಟ್‌” ಹೆಸರಿ ಸ್ವಂತ ಸಂಗೀತ ಬ್ಯಾಂಡ್‌ ಇತ್ತು.

ಆ ಬ್ಯಾಂಡ್‌ ಮೂಲಕ ನಾನು ಫೈವ್‌ ಸ್ಟಾರ್ಸ್‌ ಹೋಟೇಲ್‌, ಪಬ್ಸ್‌ ಸೇರಿದಂತೆ ಇತರೆಡೆ ತಂಡದ ಗೆಳೆಯ ಜೊತೆಗೂಡಿ ಹಲವು ಕಾರ್ಯಕ್ರಮ ಕೊಟ್ಟಿದ್ದೇನೆ. ಶ್ರೀಶೈಲಂನಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೊಡ್ಡ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದೇನೆ. ಸಂಗೀತ ಕೆಲಸದ ಜೊತೆಗೆ ನಾನು, ಟೆಕ್‌ ಸಪೋರ್ಟರ್‌ ಆಗಿ ಕೆಲಸ ಮಾಡಿದ್ದೇನೆ. ರಘುದೀಕ್ಷಿತ್‌, ಪಿಆರ್‌ಕೆ ಸ್ಟುಡಿಯೋ, ರಾಜನ್‌ ಸ್ಟುಡಿಯೋ ಸೇರಿದಂತೆ ಬೆಂಗಳೂರಿನ ಸುಮಾರು ೨೦೦ ಸ್ಟುಡಿಯೋಗಳಿಗೆ ನಾನು ಟೆಕ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದುಂಟು” ಎಂದು ತಮ್ಮ ಜರ್ನಿ ನೆನಪಿಸಿಕೊಳ್ಳುತ್ತಾರೆ ರೋಣದ ಬಕ್ಕೇಶ್.‌

ಮೊದಲ ಹೆಜ್ಜೆ…
ಗಾಯಕನಾಗಿ ಹಲವು ಕಾರ್ಯಕ್ರಮ ಕೊಡುತ್ತಲೇ, ಸಿನಿಮಾದತ್ತ ವಾಲಿದೆ. “ಒಂದ್‌ ಕಥೆ ಹೇಳ್ಲಾ” ನನ್ನ ಮೊದಲ ಚಿತ್ರ. ನನ್ನ ಗೆಳೆಯ ಕೋ ಕಂಪೋಸರ್ ಕಾರ್ತಿಕ್‌ ಅವರೊಂದಿಗೆ ಸೇರಿದ ಕೆಲಸ ಮಾಡುತ್ತಾ ಬಂದೆ. ನನ್ನ ಎಲ್ಲಾ ಪ್ರಾಜೆಕ್ಟ್‌ಗಳಲ್ಲೂ ಅವರ ಸಾಥ್‌ ಇದೆ. ಅಲ್ಲಿಂದ ಇಲ್ಲಿಯವರೆಗೆ ನಾನು “ಧರಣಿ ಮಂಡಲ ಮಧ್ಯೆದೊಳಗೆ”, ಚಾರ್ಲಿ ಅಲ್ಪ ತಂಗೊ”, “ದ್ವಿಮುಖ”, “ಅವನಲ್ಲಿ ಇವಳಿಲ್ಲಿ”, “ಸಲಾಂ ಬೆಂಗಳೂರು”, “ಜಾಕ್‌ ಪಾಟ್‌” ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಮುಂದೆ “ರೂಮ್‌ ಬಾಯ್”‌ ಎಂಬ ಹೊಸ ಚಿತ್ರ ಹಾಗೂ ಗೌಸ್‌ಪೀರ್‌ ನಿರ್ದೇಶನದ ಇನ್ನೂ ಹೆಸರಿಡದ ದಿಗಂತ್‌ ಅಭಿನಯದ ಚಿತ್ರಕ್ಕೂ ಸಂಗೀತ ನೀಡುತ್ತಿದ್ದೇನೆ. ಎನ್ನುವ ರೋಣದ ಬಕ್ಕೇಶ್‌, ನಾನು ಸುದೀಪ್‌ ಸರ್‌ ಅವರ ಎಲ್ಲಾ ಭಾಷೆಯ ಕನ್ನಡ ಸೆಕ್ಷನ್‌ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಅವರ “ಸೈರಾ”, “ದಬಾಂಗ್‌ ೩” ಚಿತ್ರಗಳ ಕನ್ನಡ ಡಬ್ಬಿಂಗ್‌ ವರ್ಷನ್‌ಗೆ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದು ನಾನೇ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಮ್ಮ ಸ್ಟುಡಿಯೋದಲ್ಲೇ ಸುದೀಪ್‌ ಸರ್‌ ಬಂದು ಡಬ್‌ ಮಾಡಿದ್ದು ವಿಶೇಷತೆಗಳಲ್ಲೊಂದುʼ ಎಂಬುದು ಬಕ್ಕೇಶ್‌ ಮಾತು.

ಸಕ್ಸಸ್‌ ಕ್ರೆಡಿಟ್‌ ಮಂಸೋರೆಗೆ ಹೋಗಬೇಕು
“ಆಕ್ಟ್‌ ೧೯೭೮” ಚಿತ್ರಕ್ಕೆ ನಾನು ಹಿನ್ನೆಲೆ ಸಂಗೀತದ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಒಂದೊಳ್ಳೆಯ ಸಿನಿಮಾದಲ್ಲಿ ನಾನೂ ಒಂದು ಭಾಗವಾಗಿದ್ದೇನೆ ಅನ್ನೋದೇ ದೊಡ್ಡ ಹೆಮ್ಮೆ. ಗೆಳೆಯ ರಾಹುಲ್‌ ಶಿವಕುಮಾರ್‌ ಅವರ ಮೂಲಕ ನಿರ್ದೇಶಕ ಮಂಸೋರೆ ಅವರ ಪರಿಚಯ ಆಯ್ತು. ನಾನು ಅವರ “ಅಕ್ಟ್‌ ೧೯೭೮” ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತೇನೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಅವರ ಈ ಚಿತ್ರಕ್ಕೆ ಕೆಲಸ ಮಾಡಬೇಕು ಅಂತ ಗೊತ್ತಾದಾಗ ಜವಾಬ್ದಾರಿ ಹೆಚ್ಚಾಯ್ತು. ಯಾಕೆಂದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರ ಜೊತೆಗಿನ ಕೆಲಸ ಆಗಿದ್ದರಿಂದ ಸ್ವಲ್ಪ ಭಯವೂ ಇತ್ತು. ಆದರೆ, ಚಿತ್ರಕ್ಕೆ ಮಾಡಿದ ಸಂಗೀತದ ಕೆಲಸ ಅತ್ಯಂತ ತೃಪ್ತಿ ನೀಡಿದೆ. ನಿರ್ದೇಶಕ ಮಂಸೋರೆ ಅವರಿಗೆ ವಿಷನ್‌ ಇತ್ತು. ನಾನು ಅವರನ್ನು ಹಾಗೂ ಅವರ ಚಿತ್ರವನ್ನು ಅರ್ಥ ಮಾಡಿಕೊಳ್ಳೋಕೆ ತಿಂಗಳಾಯ್ತು. ಮೊದಲು ಎರಡು ರೀಲ್‌ ಕೊಟ್ಟು ಕೆಲಸ ಶುರುಮಾಡಿ ಅಂದರು.

ಅವರು ಜೋರಾಗಿ ಕೇಳಿಸುವಂತೆ ಸಂಗೀತ ಇರಬಾರದು. ಸಿನಿಮಾದಲ್ಲಿ ಸಂಗೀತ ಇದೆಯೋ, ಇಲ್ಲವೋ ಅನ್ನುವ ರೀತಿ ಇರಬೇಕು. ಒಂದು ರೀತಿ ಜೆಲ್‌ ಆಗಿರಬೇಕಷ್ಟೇ ಅಂದರು. ಸಾಮಾನ್ಯವಾಗಿ ಕೆಲ ಪಕ್ಕಾ ಕಮರ್ಷಿಯಲ್‌ ಸಿನಿಮಾಗಳಿಗೆ ಅಬ್ಬರದ ಸಂಗೀತ ಕೊಡೋದು ತುಂಬಾನೇ ಸುಲಭ. ನನಗೆ ಈ ಚಿತ್ರ ಸಿಕ್ಕಿದ್ದು, ಲಾಕ್‌ಡೌನ್‌ ಇನ್ನು ಹದಿನೈದು ದಿನ ಇದ್ದಾಗ. ಇಡೀ ಲಾಕ್‌ಡೌನ್ ಸಮಯದಲ್ಲೇ ನಾನು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಸ್ಪರ್ಶ ನೀಡಿದೆ. ಈ ಸಿನಿಮಾ ನೋಡಿದವರು ನನ್ನ ಸಂಗೀತದ ಬಗ್ಗೆಯೂ ಮಾತಾಡುತ್ತಿದ್ದಾರೆ. ಏನೇ ಆದರೂ, ಅದು ನಿರ್ದೇಶಕ ಮಂಸೋರೆ ಅವರಿಗೆ ಆ ಸಕ್ಸಸ್‌ ಕ್ರೆಡಿಟ್‌ ಸಲ್ಲಬೇಕು. ಅವರ ಕಲ್ಪನೆಗೆ ನಾನು ತಕ್ಕಂತೆ ಕೆಲಸ ಮಾಡಿದ್ದೇನಷ್ಟೇ. ಆರಂಭದಲ್ಲಿ ನಾನು ಎರಡು ಸಲ ಕಂಪ್ಲೀಟ್‌ ಕೆಲಸ ಮಾಡಿದ್ದರೂ, ಅದನ್ನು ತೆಗೆಸಿ, ಪುನಃ ಬೇರೆ ಫಾರ್ಮೆಟ್‌ ಮೂಲಕ ನನ್ನಿಂದ ಕೆಲಸ ತೆಗೆಸಿದ್ದಾರೆ.

ಎಲ್ಲವೂ ಬೆಂಗಳೂರಲ್ಲೇ ಆಗಿದ್ದು…
ಇನ್ನೊಂದು ಖುಷಿಯ ವಿಚಾರ ಅಂದರೆ, “ಆಕ್ಟ್‌ ೧೯೭೮” ಚಿತ್ರಕ್ಕೆ ಲೈವ ಸಂಗೀತ ಚೆನ್ನೈನಲ್ಲಿ ನಡೆದಿಲ್ಲ. ಬೆಂಗಳೂರಲ್ಲೇ ಲೈವ್‌ ಕೆಲಸ ನಡೆದಿದೆ. ನಾರಾಯಣ್‌ ಶರ್ಮ ಅವರು ವಯಲಿನ್‌ ನುಡಿಸಿದ್ದಾರೆ. ಇವರು ಸಂಗೀತ ನಿರ್ದೇಶಕರಾದ ಅಜನೀಶ್‌ ಲೋಕಾನಾಥ್‌, ಚರಣ್‌ ರಾಜ್‌ ಅವರ ಜೊತೆ ಕೆಲಸ ಮಾಡುತ್ತಿರುತ್ತಾರೆ. ಇನ್ನು, ಋತ್ವಿಕ್‌ ಭಟ್ಟಾಚಾರ್ಯ ಗಿಟಾರ್‌ ನುಡಿಸಿದ್ದಾರೆ. ಒಳ್ಳೊಳ್ಳೆಯ ತಾಂತ್ರಿಕ ಕಲಾವಿದರು ಈ ಸಿನಿಮಾ ಹಿಂದೆ ಕೆಲಸ ಮಾಡಿದ್ದಾರೆ. ನನಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳಿಗೆ ಕೆಲಸ ಮಾಡುವ ಆಸೆ ಇದೆ. ನನಗಿದ್ದ ಗೀಳು ಸಂಗೀತ. ಅದೀಗ ನೆರವೇರಿದೆಯಷ್ಟೇ ಅಲ್ಲ, ಜವಾಬ್ದಾರಿಯನೂ ಹೆಚ್ಚಿಸಿದೆ. ಹೊಸಬರು, ಹಳಬರು ಎನ್ನದೆ, ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುವುದಷ್ಟೇ ನನ್ನ ಗುರಿ. ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಸಿನಿಮಾ ಸಂಗೀತ ಕ್ಷೇತ್ರವೂ ಹೊರತಲ್ಲ. ಹೊಸ ಸೌಂಡಿಂಗ್‌ ಕೊಟ್ಟರೆ, ಖಂಡಿತವಾಗಿಯೂ ಜನರಿಗೆ ಇಷ್ಟವಾಗುತ್ತೆ. ನಮ್ಮ ಕೆಲಸಕ್ಕೂ ಮನ್ನಣೆ ಸಿಗುತ್ತೆ ಎಂಬುದು ಬಕ್ಕೇಶ್‌ ಮಾತು.

Categories
ಸಿನಿ ಸುದ್ದಿ

ಗೆಲ್ಲಬೇಕಿತ್ತು ಗೀತಾ…ಗೆಲ್ಲಲಾರಳು ಗೀತಾ ! ————————————————————–

( ಆಕ್ಟ್ 1978 ಆಡಿಯನ್ಸ್ ರಿವಿವ್ಯೂ) 

ಶಿವಕುಮಾರ ಮಾವಲಿ,  ಲೇಖಕರು ಹಾಗೂ ಪ್ರಾಧ್ಯಾಪಕರು

ಸಿನಿಮಾ ನೋಡುವಾಗ ನಮ್ಮನ್ನು ನಾವು ಯಾವುದೋ ಒಂದು ಪಾತ್ರದೊಂದಿಗೆ ಹೋಲಿಸಿಕೊಂಡೇ ನೋಡುತ್ತೇವೆ. ಒತ್ತೆಯಾಳಾಗಿ‌ ಇಟ್ಟುಕೊಂಡು‌ ಸರ್ಕಾರವನ್ನು ಬೆದರಿಸುವಂಥ ಸಿನಿಮಾಗಳಲ್ಲಿ ನಾವು ಸರ್ಕಾರದ ಜೊತೆ ಗುರುತಿಸಿಕೊಂಡು ಒತ್ತೆಯಾಳಾದವರಿಗೆ ಮರುಗುತ್ತೇವೆ. ಹಾಗೆ ಒತ್ತೆಯಾಳಾಗಿ ಇಟ್ಟುಕೊಂಡುವನು ವಿಲನ್ ಆಗಿರುತ್ತಾನೆ. ಆದರೆ Act 1978 ಸಿನಿಮಾ ನೋಡುವಾಗ ಹಾಗೆ ಒತ್ತೆಯಾಳಾಗಿ ಇಟ್ಟುಕೊಂಡ ಪಾತ್ರದೊಂದಿಗೇ ನಾವು ಗುರುತಿಸಿಕೊಂಡು ಆ ಪಾತ್ರದ ಎದುರು ಸರ್ಕಾರ ಸೋಲುವುದನ್ನೂ ಸ್ವಾಗತಿಸಲು ಕಾಯುತ್ತೇವೆ. ಏಕೆಂದರೆ ಅದು ವ್ಯವಸ್ಥೆಯಿಂದ ರೋಸಿಹೋದ ಪಾತ್ರ. ಎಷ್ಟೇ ಖಾಸಗೀಕರಣ, ಜಾಗತೀಕರಣಗಳು ಬಂದರೂ ಸರ್ಕಾರ ಜನರ ಮೇಲಿನ ತನ್ನ ನಿಯಂತ್ರಣವನ್ನು ಇಟ್ಟುಕೊಂಡೇ ಇರುತ್ತದೆ. ತಮ್ಮ ಕೆಲಸಗಳಿಗಾಗಿ , ದಾಖಲಿಗಳಿಗಾಗಿ , ಪರವಾನಿಗಿಗಳಿಗಾಗಿ , ಆದಾಯ ಪ್ರಮಾಣ ಪತ್ರ ಇನ್ನೂ ಮುಂತಾದ ಸೇವೆಗಳಿಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆಯುವ ಪ್ರತಿಯೊಬ್ಬರೂ ಈ ಚಿತ್ರದ ಗೀತಾಳೊಂದಿಗೆ ಗುರುತಿಸಿಕೊಳ್ಳುತ್ತಾರೆ.

ತನ್ನ ತಂದೆಯ ಸಾವಿಗೆ ಬರಬೇಕಾದ ಪರಿಹಾರಕ್ಕಾಗಿ ತಿಂಗಳುಗಟ್ಟಲೆ ಕಛೇರಿಗೆ ಅಲೆದ ಗೀತಾ,ವ್ಯವಸ್ಥೆಯ ಮೇಲೆ ಸೇಡು ತೀರಿಸಿಕೊಳ್ಳಲು ಇನ್ನೊಬ್ಬ ಶೋಷಿತನೊಂದಿಗೆ ಸೇರಿ ಬಾಂಬ್ ಕಟ್ಟಿಕೊಂಡು ಕಛೇರಿಗೆ ಬರಿತ್ತಾಳೆ. ಅಲ್ಲಿ ಆಕೆ ಹೇಳುವ I need respect ಎನ್ನುವ ಮಾತು. ಸಾಮಾನ್ಯನೊಬ್ಬನನ್ನು ಸರ್ಕಾರಿ ಅಧಿಕಾರಿಗಳು ಹೇಗೆ ನಡೆಸಿಕೊಳ್ಳುತ್ತಾರೆಂಬುದಕ್ಕೆ‌ ಉದಾಹರಣೆಯಾಗಿದೆ.‌ ಟೇಬಲ್ಲಿಂದ ಟೇಬಲ್ಲಿಗೆ ಫೈಲು ಹಾರಿಕೊಂಡು ಹೋಗಲಾರದು ಅದಕ್ಕೆ ‘ಸೂಕ್ತ’ ಪೋಷಕಾಂಶ ಬೇಕು ಎನ್ನುವ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಜೀವನದ ಕಮಿಟ್ ಮೆಂಟ್ ಗಳನ್ನು ಗೀತಾ ಮುಂದೆ ಹೇಳಿಕೊಂಡು ತಾವೂ ಅಸಾಹಯಕರೆಂಬಂತೆ ಬಿಂಬಿಸಲು ಮುಂದಾಗುತ್ತಾರೆ. ಆದರೆ ಅದಕ್ಕೆ ಗೀತಾ ಹೇಳುವ ಮಾತು; ನಿಮ್ಮ ಸಂಬಳಕ್ಕಿಂತ ಹೆಚ್ಚು ಕಮಿಟ್ ಮೆಂಟ್ ಮಾಡಿಕೊಳ್ಳಲು ಮತ್ತು ನಾವು ಪ್ರತೀ ಕೆಲಸಕ್ಕೂ ಲಂಚ ಕೊಡ್ತೀವಿ ಅಂತ ಏನಾದರೂ ಸ್ಟಾಂಪ್ ಪೇಪರ್ ಮೇಲೆ ಬರೆದು ಕೊಟ್ಟಿದ್ವಾ ?

ಅವಳ ಬೇಡಿಕೆಯೆಂದರೆ ಆ ಎಲ್ಲಾ ನೌಕರರನ್ನು ಆ ದಿನವೇ ಸರ್ಕಾರ ಕೆಲಸದಿಂದ ವಜಾ ಮಾಡಬೇಕೆಂಬುದು. ಇದಕ್ಕೆ ಒಪ್ಪಬೇಕೇ ಬೇಡವೇ ಎಂಬುದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಅವಳ ಮಾತಿಗೆ ಒಪ್ಪುವ ರೀತಿಯಲ್ಲಿಯೇ ಪ್ರತಿಕ್ರಿಯಿಸುವ ಸರ್ಕಾರ ಪ್ರತಿತಂತ್ರವನ್ನೂ ಉಪಯೋಗಿಸಿ ಕೊನೆಗೂ ಅವಳನ್ನು Zero Causality ಯೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗುತ್ತದೆ. ಗರ್ಭಿಣಿಯಾಗಿದ್ದ ಗೀತಾ ಹೆಣ್ಣು ಮಗುವಿಗೆ ಜನ್ಮವಿತ್ತು ಕೊನೆಯುಸಿರೆಳೆಯುತ್ತಾಳೆ. ತನ್ನ ಮಗುವಿನ ಭವಿಷ್ಯಕ್ಕಾದರೂ ಈ ವ್ಯವಸ್ಥೆ ಸರಿಯಾಗಬೇಕು ಎಂಬುದು ಗೀತಾಳ ಕನಸಾಗಿಯೇ ಉಳಿಯುತ್ತದೆ. ಮೌನದಲ್ಲಿಯೇ ಮಾತಾಡುವ ಮುದುಕ‌ ಮತ್ತು ಗೀತಾ ತಮ್ಮ ಅಭಿನಯದಿಂದ ನಮ್ಮನ್ನು ಆವರಿಸುತ್ತಾರೆ.

ಇಂಥ ಕಥೆಯನ್ನು ಸಿನಿಮಾ ಮಾಡುವಾಗ ಸಾಕಷ್ಟು ರೂಪಕಗಳನ್ನು ಬಳಸಬೇಕಾಗುತ್ತದೆ‌. ಅದನ್ನೂ ನಿರ್ದೇಶಕರು ಸಮರ್ಥವಾಗಿ ಮಾಡಿದ್ದಾರೆ. ಅದೇ ಕಛೇರಿಯ ಮುಂದೆ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆಗೆ ಕೂತಿರುವ ವ್ಯಕ್ತಿ ಈ ಪ್ರಖರಣದ ನಂತರ ಎದ್ದು ಹೋಗುವುದು ವಿಶೇಷವಾಗಿದೆ. ಭಾವನಾತ್ಮಕವಾಗಿ ಇಡೀ ಚಿತ್ರ ಕಟ್ಟಿರುವುದರಿಂದ ಎಲ್ಲೂ ಪ್ರೇಕ್ಷಕನಿಗೆ ಒತ್ತೆಯಾಳುಗಳ ಜೀವದ ಬಗ್ಗೆ ಆತಂಕ ಮೂಡುವುದೇ ಇಲ್ಲ.‌ ಹೆದರಿಸಲು ಬಂದ ಗೀತಾ ಕಟ್ಟಿಕೊಂಡಿರುವುದು ಕೂಡ ಹುಸಿ ಬಾಂಬ್ ! ತನ್ಮೂಲಕ ವ್ಯವಸ್ಥೆಯ ನೀಚರ ಮನ ಪರಿವರ್ತನೆ ಮಾಡುವುದಷ್ಟೆ ಅವಳ ಉದ್ದೇಶವಾಗಿತ್ತೆಂಬುದು ಸ್ಪಷ್ಟ. ಇಂಥ ಘಟನೆಯೊಂದು ನಡೆದಾಗ ನ್ಯೂಸ್ ಚಾನೆಲ್ ನವರು ಹೇಗೆ ವರ್ತಿಸುತ್ತಾರೆ. ಅನ್ಯಾಯದ ವಿರುದ್ಧ ಸಿಡಿದವರನ್ನು ಎಷ್ಟು ಸಲೀಸಾಗಿ ಟೆರರಿಸ್ಟ್ , ನಕ್ಸಲೈಟ್ , ದೇಶದ್ರೋಹಿ ಎಂದೆಲ್ಲ ಲೇಬಲ್ ಮಾಡಿ ಬಿಡುತ್ತಾರೆ ಎಂಬುದನ್ನು ಚಿತ್ರದಲ್ಲಿ ಮಾರ್ಮಿಕವಾಗಿ ತೋರಿಸಲಾಗಿದೆ.

1978 ರ ಆ್ಯಕ್ಟ್ ಪ್ರಕಾರ ಸರ್ಕಾರಿ ನೌಕರರನ್ನು ವಜಾ ಗೊಳಿಸುವುದು ಎಷ್ಟು ಕಷ್ಟವಿದೆ ಎಂಬುದರೊಂದಿಗೆ ಇದೇ ಅವರ ಆಟಾಟೋಪಕ್ಕೆ ಕಾರಣವೂ ಇರಬಹುದೆಂಬುದು ಮನವರಿಕೆಯಾಗುತ್ತದೆ. ಸರ್ಕಾರ ಒಪ್ಪಿದ ಮೇಲೂ ಅದನ್ನು ಹೈಕೋರ್ಟ್ ನಲ್ಲಿ ಮತ್ತೆ ತಡೆ ಹಿಡಿಯಬಹುದೆಂದಾಗ ನಾವು ರೂಪಿಸಿಕೊಂಡ ಕಾನೂನುಗಳು ಭ್ರಷ್ಟರನ್ನು ಹೇಗೆ ರಕ್ಷಿಸಬಲ್ಲವು ಎಂದು ಅರ್ಥ ಮಾಡಿಕೊಳ್ಳಬಹುದು.

ಅದೊಂದನ್ನು ಬಿಟ್ಟರೆ ಇಡೀ ಸಿನಿಮಾ ನಮ್ಮನ್ನು ಹೊರಬಂದಮೇಲೂ ಕಾಡುತ್ತದೆ. ಮಂಸೋರೆ ಅವರ ನಿರ್ದೇಶನ ಮತ್ರು ದಯಾನಂದ್ ಹಾಗೂ ವೀರು ಮಲ್ಲಣ್ಣ ಅವರ ಬರವಣಿಗೆ ಚಿತ್ರವನ್ನು ಸಶಕ್ತಗೊಳಿಸಿದೆ. ಚಿತ್ರದ ಭಾಗವಾಗಿರುವ ಬಿ ಸುರೇಶ್ , ಸಂಚಾರಿ ವಿಜಯ್ , ಸತೀಶ್ ಚಂದ್ರ ಮುಂತಾದ ಗೆಳೆಯರೆಲ್ಲರಿಗೂ ಅಭಿನಂದನೆಗಳು … ಕೊರೋನಾ ನಂತರ ಥಿಯೇಟರ್ ನಲ್ಲಿ ನೋಡಿದ ಈ ಸಿನಿಮಾ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ …ಆದರೆ ಆ ಗೀತಾ ಗೆಲ್ಲಬೇಕು … ಅವಳನ್ನು ನಾವೆಲ್ಲ ಗೆಲ್ಲಿಸೋಣ …

Categories
ಸಿನಿ ಸುದ್ದಿ

ಪ್ರೀಮಿಯರ್‌ ಶೋಗೆ ಸೆಲಿಬ್ರಿಟಿಗಳ ಕಲರವ

ಸ್ಯಾಂಡಲ್‌ವುಡ್‌ ಮೆಚ್ಚಿಕೊಂಡ ಆಕ್ಟ್-‌1978

ನಿರ್ದೇಶಕ ಮಂಸೋರೆ ಅವರ  “ಆಕ್ಟ್‌ -1978”  ಚಿತ್ರದ ಪೂರ್ವಭಾವಿ ಪ್ರದರ್ಶನಕ್ಕೆ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ದೇಶಕ, ನಿರ್ಮಾಪಕರು ಆಗಮಿಸಿ, ಚಿತ್ರ ನೋಡಿದ ಖುಷಿಯಲ್ಲಿ ತೇಲಿದರು. ಅಷ್ಟೇ ಅಲ್ಲ,  “ಆಕ್ಟ್‌ – 1978” ಚಿತ್ರದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಚಿತ್ರವನ್ನು ನೋಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ. ಪ್ರೀಮಿಯರ್‌ ಶೋಗೆ ಬಂದ ಕೆಲ ನಟ,ನಟಿಯರ ಫೋಟೋ ಗ್ಯಾಲರಿ ಇಲ್ಲಿದೆ…

Categories
ಸಿನಿ ಸುದ್ದಿ

ಅಭಿಮಾನಿ ದೇವರಿಗೆ ಭರಪೂರ ಸ್ವಾಗತ

ಆಕ್ಟ್-‌1978 ನೋಡಲು ಬಂದ ಸಿನಿ ಪ್ರೇಮಿಗೆ ಗುಲಾಬಿ ಹೂವಿನ ಗೌರವ

 

ಅಂತೂ ಇಂತೂ “ಆಕ್ಟ್‌ -1978”  ಚಿತ್ರ ನೋಡುಗರಲ್ಲಿ ಖುಷಿ ಹೆಚ್ಚಿಸಿದೆ. ಅಷ್ಟೇ ಅಲ್ಲ, ಶುಭ ಶುಕ್ರವಾರ ರಾಜ್ಯಾದ್ಯಂತ ಒಳ್ಳೆಯ ಓಪನಿಂಗ್‌ ಕೂಡ ಪಡೆದುಕೊಂಡಿದೆ. ಎಲ್ಲೆಡೆ “ಆಕ್ಟ್‌ – 1978” ಚಿತ್ರದ್ದೇ ಮಾತು. ನಿರ್ದೇಶಕ ಮಂಸೋರೆ ಅವರ ಹೊಸ ಆಲೋಚನೆಯ ಕಥೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ಚಿತ್ರಮಂದಿರಕ್ಕೆ ಜನರು ಬರುತ್ತಾರೋ, ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿತ್ತು. ಒಂದು ಸಿನಿಮಾದ ಕಥೆ ಚೆನ್ನಾಗಿದ್ದರೆ, ಅದರ ನಿರೂಪಣೆ ಸೊಗಸಾಗಿದ್ದರೆ, ಹೇಳುವ ಶೈಲಿ ಅದ್ಭುತವಾಗಿದ್ದರೆ, ತೋರಿಸುವ ರೀತಿ ಸರಿಯಾಗಿದ್ದರೆ, ಜನರು ಖಂಡಿತವಾಗಿಯೂ ಯಾವತ್ತೂ ಕನ್ನಡ ಸಿನಿಮಾವನ್ನು ಕೈ ಬಿಟ್ಟಿಲ್ಲ. ಈಗ “ಆಕ್ಟ್‌ 1978” ಚಿತ್ರವನ್ನೂ ಪ್ರೇಕ್ಷಕ ಮನಸಾರೆ ಒಪ್ಪಿಕೊಂಡಿದ್ದಾನೆ.

 

ಚಿತ್ರಮಂದಿರಗಳಿಂದ ಹೊರಬರುವ ಪ್ರೇಕ್ಷಕನಲ್ಲಿ ಅದೇನೋ ಪುಳಕ. ಏನೋ ಸಾಧಿಸಿದ ಖುಷಿ. ತಾನು ಅನುಭವಿಸಿದ ನೋವನ್ನುತೆರೆಯ ಮೇಲೆ ಕಂಡಷ್ಟೇ ಆನಂದಭಾಷ್ಪ. ಅದೆಲ್ಲವನ್ನೂ ಅಷ್ಟೇ ಸೊಗಸಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಮಂಸೋರೆ ಅವರ ಕೆಲಸವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಮೆಚ್ಚುತ್ತಿದ್ದಾನೆ. ಚಿತ್ರತಂಡ ಕೂಡ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳುವ ಮೂಲಕ, ಅಭಿಮಾನಿಗಳೇ ನಮ್ಮ ದೇವರು ಅಂತ ಬಂದ ಪ್ರತಿಯೊಬ್ಬ ಸಿನಿಪ್ರೇಮಿಗೂ ಗುಲಾಬಿ ಹೂವು ಕೊಡುವ ಮೂಲಕ ಕೈಮುಗಿದು ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುತ್ತಿದೆ.

 

ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲೂ ಕೂಡ “ಆಕ್ಟ್‌ 1978”  ಸಿನಿಮಾ ನೋಡಲು ಬಂದ ಪ್ರತಿ ಪ್ರೇಕ್ಷಕನಿಗೂ ಚಿತ್ರತಂಡದ ಸದಸ್ಯರು ಬಾಗಿಲು ಬಳಿ ನಿಂತು, ಅಭಿಮಾನಿಗಳೇ ನಮ್ಮ ದೇವರು ಎಂದು ಕೈಮುಗಿದು ಬರಮಾಡಿಕೊಳ್ಳುವ ರೀತಿಗೆ ಪ್ರೇಕ್ಷಕ ಕೂಡ ಫಿದಾ ಆಗಿದ್ದಾನೆ.

ಇನ್ನು, ಚಿತ್ರಮಂದಿರ ಒಳಹೊಕ್ಕ ಪ್ರೇಕ್ಷಕ ಸಿನಿಮಾ ನೋಡಿದ ಮೇಲೆ, ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡು ಬಂದು ಭಾರದ ನಿಟ್ಟುಸಿರು ಬಿಟ್ಟು, ಸಿನಿಮಾಗೆ ಜಯವಾಗಲಿ ಎನ್ನುತ್ತಿದ್ದಾನೆ. ಅಂತೂ ಒಂದೊಳ್ಳೆಯ ಕಥೆ ಹೆಣೆದು, ವಾಸ್ತವ ಅಂಶಗಳನ್ನು ಜನರ ಮುಂದಿಟ್ಟ ಮಂಸೋರೆ ಅಂಡ್‌ ತಂಡಕ್ಕೆ ಭರಪೂರ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.

 

 

Categories
ಸಿನಿ ಸುದ್ದಿ

ಶಿವಪ್ಪನಿಗೆ ಅಂಜಲಿ ಸಿಕ್ಕಾಯ್ತು!

ಶಿವರಾಜಕುಮಾರ್‌ಗೆ ತಮಿಳು ಬೆಡಗಿ ಜೋಡಿ

ಶಿವರಾಜಕುಮಾರ್‌ ಅಭಿನಯದ “ಶಿವಪ್ಪ” ಸಿನಿಮಾಗೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದ್ದು ಗೊತ್ತೇ ಇದೆ. ಆ ಚಿತ್ರದಲ್ಲಿ “ಡಾಲಿ” ಧನಂಜಯ್‌ ಕೂಡ ಅಭಿನಯಿಸುತ್ತಿದ್ದಾರೆ. ಜೊತೆಯಲ್ಲಿ ಪೃಥ್ವಿ ಅಂಬರ್‌ ಕೂಡ ಇದ್ದಾರೆ ಎಂಬ ಸುದ್ದಿ ಕೂಡ ಗೊತ್ತಿದೆ. ಈಗ “ಶಿವಪ್ಪ” ಚಿತ್ರದ ಹೊಸ ಸುದ್ದಿಯೆಂದರೆ, “ಶಿವಪ್ಪ”ನಿಗೆ ನಾಯಕಿ ಸಿಕ್ಕಾಗಿದೆ. ಹೌದು, “ಶಿವಪ್ಪ” ಅದೊಂದು ಪವರ್‌ಫುಲ್‌ ಶೀರ್ಷಿಕೆ. ಅಂತಹ ಚಿತ್ರಕ್ಕೆ ನಾಯಕಿ ಕೂಡ ಹಾಗಯೇ ಇರಬೇಕಲ್ಲವೇ? ಶಿವರಾಜಕುಮಾರ್‌ ಅವರಿಗೆ ಜೋಡಿಯ ಹುಡುಕಾಟ ನಡೆದಿತ್ತಾದರೂ, ಯಾರೂ ಅನ್ನೋದು ಪಕ್ಕಾ ಆಗಿರಲಿಲ್ಲ. ಈಗ “ಶಿವಪ್ಪ”ನಿಗೆ ನಾಯಕಿಯ ಆಯ್ಕೆಯಾಗಿದೆ. ಹೌದು, ತಮಿಳು ಚಿತ್ರರಂಗದ ವಿಜಯ್ ಮಿಲ್ಟನ್ ನಿರ್ದೇಶನದ “ಶಿವಪ್ಪ” ಚಿತ್ರಕ್ಕೆ ಅಂಜಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂಜಲಿ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಪುನೀತ್‌ ರಾಜಕುಮಾರ್‌ ಅಭಿನಯದ “ರಣ ವಿಕ್ರಮ” ಚಿತ್ರದಲ್ಲಿ ಅಂಜಲಿ ನಟಿಸಿದ್ದರು. ಏಳು ವರ್ಷಗಳ ಬಳಿಕ ಈಗ ಅಂಜಲಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅಂಜಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ನೋಡಿದರೆ, ಅಂಜಲಿ ಅವರು, “ಹೊಂಗನಸುʼ ಎಂಬ ಸಿನಿಮಾದಲ್ಲೂ ನಟಿಸಿದ್ದು, ಈಗ “ಶಿವಪಪ್”‌ ಅಂಜಲಿ ಅಭಿನಯದ ಮೂರನೇ ಸಿನಿಮಾ ಆಗಿದೆ.
ಅದೇನೆ ಇರಲಿ, ತಮಿಳು ನಿರ್ದೇಶಕ ವಿಜಯ್‌ ಮಿಲ್ಟನ್‌ ಅವರೀಗ “ಶಿವಪ್ಪ”ನ ಜಪ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ತಮಿಳಿನಲ್ಲಿ ವಿಜಯ್‌ ಮಿಲ್ಟನ್‌ ಅವರೇ ನಿರ್ದೇಶಿಸಿದ್ದ “ಕಗುಡುʼ ಚಿತ್ರದ ಅವರಣಿಕೆ ಇದಾಗಿರಬಹುದಾ ಎಂಬ ಪ್ರಶ್ನೆ ಇದೆಯಾದರೂ, ಎಲ್ಲೂ ಈ ಕುರಿತು ಮಾಹಿತಿ ಇಲ್ಲ. ಸದ್ಯಕ್ಕೆ ಚಿತ್ರೀಕರಣ ಜೋರಾಗಿದೆ.

Categories
ಸಿನಿ ಸುದ್ದಿ

ಮಹಿರ ನಿರ್ದೇಶಕನ ಹೊಸ ಹೆಜ್ಜೆ-ವೈಟ್‌ ಪ್ಯಾಚಸ್‌ ಜನರ ಪರ ನಿಂತ ಮಹೇಶ್‌ಗೌಡ

ಭಾರತದಲ್ಲೇ ಫಸ್ಟ್‌ ಟೈಮ್‌ ಕನ್ನಡ ನಿರ್ದೇಶಕನ ಧೈರ್ಯವಿದು!

ಸಿನಿಮಾ ಸೆಲಿಬ್ರಿಟಿಗಳೆಂದರೆ ಸಾಕು, ಅವರು ಏನೇ ಹೇಳಿದರೂ ಜನರಿಗೆ ಅದೊಂದು ವೇದವಾಕ್ಯ. ಹಾಗಂತ, ಇಲ್ಲಿ ಸೆಲಿಬ್ರಿಟಿಗಳ ಕುರಿತು ಬೇರೇ ಏನನ್ನೋ ಹೇಳಲಾಗುತ್ತಿದೆ ಎಂಬರ್ಥವಲ್ಲ. ಹಲವು ಬ್ರಾಂಡ್‌ಗಳ ಹಿಂದೆ ಹೋಗಿ ಜಾಹಿರಾತು ನೀಡುವ ಸೆಲಿಬ್ರಿಟಿಗಳೂ ಇದ್ದಾರೆ. ಹಾಗೆಯೇ, ಒಂದಷ್ಟು ಸಾರ್ವಜನಿಕವಾಗಿಯೂ ಒಳ್ಳೆಯ ವಿಷಯಗಳ ಮೂಲಕ ಜಾಗೃತಿ ಮೂಡಿಸುವ ಸೆಲಿಬ್ರಿಟಿಗಳೂ ಇದ್ದಾರೆ. ಆದರೆ, ಅದೆಷ್ಟೋ ಸೆಲಿಬ್ರಿಟಿಗಳಲ್ಲಿ ವಿಟಿಲಿಗೋ (ವೈಟ್‌ ಪ್ಯಾಚಸ್‌, ತೊನ್ನು, ಬಿಳಿ ಮಚ್ಚೆ) ಸಮಸ್ಯೆ ಇದ್ದರೂ ಮುಜುಗರ ಆಗುತ್ತೆ ಎಂಬ ಕಾರಣಕ್ಕೆ ಅವರೆಲ್ಲೂ ಅದನ್ನು ತೋರ್ಪಡಿಸಿಕೊಳ್ಳಲ್ಲ. ಅಂತಹ ಧೈರ್ಯಕ್ಕೂ ಮುಂದಾಗಲ್ಲ. ಸೆಲಿಬ್ರಿಟಿಗಳು ಮಾತ್ರವಲ್ಲ, ಅದೆಷ್ಟೋ ಜನರು ಈ ವಿಟಿಲಿಗೋ ಅಂದರೆ, ಬಿಳಿ ಮಚ್ಚೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವರು ರೋಸಿ ಹೋಗಿದ್ದೂ ಇದೆ. ಅಂತಹವರಿಗೆ ಒಂದಷ್ಟು ಧೈರ್ಯ ಹೇಳಲು, ಯಾವುದೇ ಕಾರಣಕ್ಕೂ ಡಿಪ್ರೆಷನ್‌ಗೆ ಹೋಗದಿರಲು ಒಂದಷ್ಟು ಜಾಗೃತಿ ಮೂಡಿಸುವುದಕ್ಕಾಗಿಯೇ ಕನ್ನಡ ಚಿತ್ರ ನಿರ್ದೇಶಕರೊಬ್ಬರು ಮಂದಾಗಿದ್ದಾರೆ.

ಮಹೇಶ್‌ ಗೌಡ, ನಿರ್ದೇಶಕ

ಹೌದು, “ಮಹಿರ” ಸಿನಿಮಾ ಮೂಲಕ ಸುದ್ದಿಯಾದ ನಿರ್ದೇಶಕ ಮಹೇಶ್‌ಗೌಡ ಅವರೀಗ ವಿಟಿಲಿಗೋ ಸಮಸ್ಯೆಯಲ್ಲಿ ಸಿಲುಕಿದವರ ಪರ ನಿಲ್ಲುವ ಮನಸ್ಸು ಮಾಡಿದ್ದಾರೆ. ಇಷ್ಟಕ್ಕೂ ಮಹೇಶ್‌ಗೌಡ ಯಾಕೆ, ವೈಟ್‌ ಪ್ಯಾಚಸ್‌ ಇರೋ ಜನರ ಜೊತೆ ಇರಬೇಕು ಅಂದುಕೊಂಡಿದ್ದಾರೆಂದರೆ, ಅವರೂ ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, ಸ್ವತಃ ನಿರ್ದೇಶಕ ಮಹೇಶ್‌ಗೌಡ ಅವರೇ ತಮಗೂ ವಿಟಿಲಿಗೋ ಸಮಸ್ಯೆ ಇದೆ ಎಂದು ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅವರೀಗ ಈ ಕುರಿತಂತೆ ಜಾಗೃತಿ ಮೂಡಿಸುವ ಯೋಚನೆ ಬಂದಿದ್ದು ಕೊರೊನಾದ ಲಾಕ್‌ಡೌನ್‌ ಸಮಯದಲ್ಲಿ. ಆ ಕುರಿತಂತೆ ನಿರ್ದೇಶಕ ಮಹೇಶ್‌ಗೌಡ ಅವರು “ಸಿನಿ ಲಹರಿ” ಜೊತೆ ಒಂದಷ್ಟು ಮಾತಾಡಿದ್ದಾರೆ.

ಇದೊಂದು ಗಂಭೀರ ಹೆಜ್ಜೆ
“ನಾನು ಕನ್ನಡ ಚಿತ್ರರಂಗದಲ್ಲಿದ್ದೇನೆ. “ಮಹಿರ” ಸಿನಿಮಾ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ನಾನೀಗ ವಿಟಿಲಿಗೋ ಕುರಿತು ತುಂಬಾ ಗಂಭೀರವಾಗಿಯೇ ಹೆಜ್ಜೆ ಇಡುತ್ತಿದ್ದೇನೆ. ಎಲ್ಲೋ ಒಂದು ಕಡೆ ಚಿಕ್ಕದ್ದಾಗಿ ವೈಟ್‌ ಪ್ಯಾಚಸ್ ಕಾಣಿಸಿಕೊಂಡಾಗ, ಅದೊಂದು ರೀತಿ ಕಾಡುತ್ತದಲ್ಲದೆ, ಅದನ್ನು ನಾವು ಹೆಚ್ಚು ತಲೆಕೆಡಿಸಿಕೊಳ್ಳದೆ ಬಿಟ್ಟು ಬಿಡ್ತೀವಿ. ಕೆಲವೊಮ್ಮೆ ಬೇಜಾರ್‌ ಆಗುತ್ತೆ. ಕೆಲವರಿಗೆ ಕಣ್ಣು, ಕಿವಿ ಮೂಗು, ಮುಖ ಹೀಗೆ ಹಲವು ಕಡೆ ಕಾಣಿಸಿಕೊಳ್ಳತ್ತೆ. ಹಾಗಂತ ಇದು ಖಂಡಿತವಾಗಿಯೂ ಖಾಯಿಲೆ ಅಲ್ಲ. ಅದೂ ಒಂದು ರೀತಿಯ ಟೈಪ್‌ ಆಫ್‌ ಸ್ಕಿನ್ ಅಷ್ಟೇ. ಅದು‌ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ವೈಟ್‌ ಪ್ಯಾಚಸ್‌ ಇದ್ದರೆ, ಸ್ಕಿನ್‌ ಕ್ಯಾನ್ಸರ್‌ ಕೂಡ ಬರಲ್ಲ. ಇಷ್ಟಕ್ಕೂ ನಾನು ವೈಟ್‌ ಪ್ಯಾಚಸ್‌ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣವೂ ಇದೆ.

ಸರ್ಕಾರದಿಂದಾಗಲಿ, ಎನ್‌ಜಿಓಗಳಿಂದಾಗಲಿ, ಬ್ರಾಂಡ್‌ ಕಂಪೆನಿಗಳ ಜಾಹಿರಾತಾಗಲಿ ಈ ಕುರಿತಂತೆ ಪ್ರಚಾರವಿಲ್ಲ. ಜಾಗೃತಿಯೂ ಮೂಡಿಸಿಲ್ಲ. ಇದಕ್ಕೆ ಚಿಕಿತ್ಸೆ ಹೆಚ್ಚು ಕೊಡಿಸಬೇಕು. ಮೆಡಿಸನ್‌ ಇದ್ದರೂ ವಾಸಿ ಆಗೋದು ಕಷ್ಟ. ಮಕ್ಕಳಿಗೆ ಮಾತ್ರ ಕೆಲವೊಮ್ಮೆ ಕ್ಯೂರ್‌ ಆಗುವ ಅವಕಾಶ ಇರುತ್ತೆ. ಮನುಷ್ಯ ಹೆಚ್ಚು ಒತ್ತಡದಲ್ಲಿದ್ದಾಗ, ಡಿಪ್ರೆಷನ್‌ಗೆ ಹೋದಾಗ, ಲವ್‌ ಫೇಲ್ಯೂರ್‌ ಆಗಿ ಯೋಚನೆಯಲ್ಲಿದ್ದಾಗ, ಮದುವೆ, ಮನೆ ಮಕ್ಕಳು ಹೀಗೆ ನಾನಾ ರೀತಿಯಲ್ಲಿ ತನ್ನದೇ ಆದ ಗಂಭೀರ ಯೋಚನೆಗೆ ಸಿಲುಕಿಕೊಂಡಾಗ ವೈಟ್‌ ಪ್ಯಾಚಸ್‌ ಹೆಚ್ಚಾಗುತ್ತೆ. ಇದು ಬಹಳಷ್ಟು ಜನರಿಗೆ ಗೊತ್ತಿರೋದಿಲ್ಲ. ಆದೇ ಡಿಪ್ರೆಶನ್‌ಗೆ ಹೋದವರನ್ನು ಹುಡುಕಿ ಕೆಲವರು ಬನ್ನಿ ಕೌನ್ಸಿಲ್‌ ಮಾಡೋಣ ಅಂತಾರೆ. ಆದರೆ, ವೈಟ್‌ ಪ್ಯಾಚಸ್‌ ಕುರಿತಂತೆ ಕೌನ್ಸಿಲ್‌ ಮಾಡೋರ್ಯಾರು?

ನನಗೂ ಈ ಸಮಸ್ಯೆ ಇದೆ
ಎಲ್ಲದರ ಬಗ್ಗೆಯೂ ಜಾಗೃತಿ ಇದೆ. ಆದರೆ, ಇದರ ಬಗ್ಗೆ ಇಲ್ಲ ಎನ್ನುವ ಮಹೇಶ್‌ಗೌಡ, ನಾನೊಬ್ಬ ನಿರ್ದೇಶಕ. ನನಗೂ ಈ ಸಮಸ್ಯೆ ಇದೆ. ಆ ಕಷ್ಟ, ನೋವು, ಮುಜುಗರ ನಾನೂ ಅನುಭವಿಸಿದ್ದೇನೆ. ಮನರಂಜನೆ ಕ್ಷೇತ್ರದಲ್ಲಿರೋ ಯಾರೂ ತನಗೆ ವೈಟ್‌ ಪ್ಯಾಚಸ್‌ ಇದೆ ಅಂತ ಹೇಳಿಕೊಂಡಿಲ್ಲ. ಅಥವಾ ವೈಟ್‌ ಪ್ಯಾಚಸ್‌ ಇರುವವರ ಪರ ನಿಂತಿಲ್ಲ. ನಾನೀಗ ಆ ಕೆಲಸಕ್ಕೆ ಮುಂದಾಗಿದ್ದೇನೆ. ಇಡೀ ದೇಶದಲ್ಲೇ ಮನರಂಜನೆ ಫೀಲ್ಡ್‌ನಲ್ಲಿರೋ ಯಾರೊಬ್ಬರು ಮುಂದಾಗಿಲ್ಲ. ನಾನು ಮುಂದಾಗುತ್ತಿದ್ದೇನೆ ಎಂಬ ಖುಷಿ ಇದೆ. ಇದರಲ್ಲಿ ಯಾವುದೇ ಮುಜುಗರ ಇಲ್ಲ. ಕೊರೊನಾ ಸಮಯದಲ್ಲಿ ನಾನು ಈ ನಿರ್ಧಾರ ಮಾಡಿದೆ.

 

ಡಿಪ್ರೆಷನ್‌ ಬದಿಗೊತ್ತಿ, ವಾವ್‌ ಅಂತ ಮಾಡಬೇಕು ಅಂದುಕೊಂಡೆ. ಮೊದಲು ಬಾಡಿ ಪಾಸಿಟಿವ್‌ ಮಾಡಿಕೊಂಡೆ. ಫಿಟ್ನೆಸ್‌ ಮೂಲಕ ನಾನು ಈ ವೈಟ್‌ ಪ್ಯಾಚಸ್‌ ಕುರಿತು ಜಾಗೃತಿ ಮೂಡಿಸಬೇಕು ಅಂದುಕೊಂಡೆ, ನನಗೆ ೧೧ ವರ್ಷ ಇದ್ದಾಗಲೇ ವೈಟ್‌ ಪ್ಯಾಚಸ್‌ ಕಾಣಿಸಿಕೊಂಡಿತ್ತು. ನಾನು ಎಲ್ಲೇ ಹೋದರೂ, ಹಾಫ್ಯ ಹ್ಯಾಂಡ್‌ ಷರ್ಟ್‌, ಟೀ ಷರ್ಟ್‌ ಹಾಕಿಲ್ಲ. ನಾನೊಬ್ಬ‌ ಲಂಡನ್‌ ರಿಟರ್ನ್‌. ಇಲ್ಲಿಗೆ ಬಂದಾಗಲೂ ಸಮಾಜ ಏನಂದುಕೊಳ್ಳುತ್ತೋ, ಜನರು ಏನು ತಿಳಿದುಕೊಳ್ಳುತ್ತಾರೋ ಎಂಬ ಬೇಸರ, ಸಣ್ಣ ಅಳಕು ಇತ್ತು. ಆದರೆ, ಈಗ ಅದೆಲ್ಲ ಬಿಟ್ಟು ಬಂದಿದ್ದೇನೆ. ಕೆಲಸ ಕ್ಷೇತ್ರದಲ್ಲಿರೋರು ಇದ್ದಾರೆ. ಯಾರೂ ಈ ಬಗ್ಗೆ ಯೋಚಿಸಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲೂ ನನ್ನಂತೆಯೇ ಇತರರು ಇರಬಹುದು. ಅವರಿಗೆ ಮುಜುಗರ ಆಗಬಹುದೇನೋ, ಆದರೆ, ನನಗೆ ಯಾವ ಬೇಸರವಿಲ್ಲ. ಈ ಬಗ್ಗೆ ನಾನು ಒಂದಷ್ಟು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಹೊರಟಿದ್ದೇನೆ.

 

ಭಾರತದಲ್ಲೇ ಮೊದಲಿಗ
ಇಂಡಿಯಾದಲ್ಲೇ ಮೊದಲ ಸಲ ಸಿನಿಮಾ ಇಂಡಸ್ಟ್ರಿಯಿಂದ ವಿಟಿಲಿಗೋ ಇರುವ ವ್ಯಕ್ತಿಯಾಗಿ ನಾನು ಮುಂದೆ ಬಂದಿದ್ದೇನೆ. ಇಲ್ಲಿ ಫಿಲಾಸಫಿ ಹೇಳೋಕೆ ಹೊರಟಿಲ್ಲ. ಈ ಮೂಲಕ ನಾನು ಎಜುಕೇಷನ್‌ ಕೊಡಲ್ಲ. ಸರ್ಕಾರದಿಂದಲೋ ಅಥವಾ ಎನ್‌ಜಿಓದಿಂದಲೋ ಫಂಡ್‌ ರೈಸ್‌ ಮಾಡಿಸಿಕೊಳ್ಳುವ ಯೋಚನೆಯೂ ಇಲ್ಲ. ನನ್ನ ಶ್ರಮದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಹಳ್ಳಿಗಳಲ್ಲಿ, ಶಾಲೆ, ಕಾಲೇಜ್‌, ಕಾರ್ಪೋರೆಟ್‌ ಕಂಪೆನಿ ಹೀಗೆ ಇತರೆಡೆ ಮಾತಾಡುವ ಮೂಲಕ ಜಾಗೃತಿ ಆಗಬೇಕು ಎಂದು ಬಯಸಿದ್ದೇನೆ. ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಿದೆ. ನನಗೆ ಕೈ, ಕಾಲಲ್ಲೂ ವೈಟ್‌ ಪ್ಯಾಚಸ್‌ ಇದೆ. ಕಳೆದ ಒಂದಷ್ಟು ತಿಂಗಳ ಕಾಲ ನಾನು ಸ್ವೀಟ್‌ ತಿಂದಿಲ್ಲ, ಸಾಲ್ಟ್‌, ಎಣ್ಣೆ ಪದಾರ್ಥ ಮುಟ್ಟಿಲ್ಲ. ಇದರಿಂದ ಪರದಾಡಿದ್ದೂ ಇದೆ.

ಜಾಗೃತಿ ಮೂಡಿಸುವ ಕೆಲಸಕ್ಕೆ ಯಾರಾದರೂ ಕೈ ಚಾಚಿದರೆ, ಸ್ಟಾರ್‌ ನಟರೂ ಜೊತೆಗೂಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಕಂಪೆನಿಗಳು ಜಾಹಿರಾತಿಗೆ ಆಹ್ವಾನಿಸಿದರೆ, ಅದರಿಂದ ಬಂದ ಹಣದಲ್ಲಿ ಒಂದಷ್ಟು ಬಡ ಮಕ್ಕಳನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ಕೊಡಿಸುವ ಉದ್ದೇಶವಿದೆ” ಎನ್ನುತ್ತಾರೆ ಮಹೇಶ್‌ ಗೌಡ. ಅದೇನೆ ಇರಲಿ, ಇಂಥದ್ದೊಂದು ಕೆಲಸಕ್ಕೆ ಮುಂದಾಗಿರುವ ನಿರ್ದೇಶಕ ಮಹೇಶ್‌ಗೌಡ ಅವರಿಗೆ “ಸಿನಿ ಲಹರಿ” ಹಾರೈಸಲಿದೆ.

error: Content is protected !!