Categories
ಸಿನಿ ಸುದ್ದಿ

ನಾರಾಯಣ್‌ ಕಂಡಂತೆ ವಿಷ್ಣು.. ಇಂಡಿಯಾ ಟೀಂ ಬೌಲರ್‌ ಜಹೀರ್‌ ಖಾನ್‌ ವೀರಪ್ಪನಾಯ್ಕನನ್ನು ಮೆಚ್ಚಿದ್ದರು

ಇದು ಲಹರಿ ವಿಶೇಷ…

ನಿರ್ದೇಶಕ ಎಸ್.ನಾರಾಯಣ್‌, ಡಾ.ವಿಷ್ಣುವರ್ಧನ್‌ ಮೇಲೆ ಸಿಕ್ಕಾಪಟ್ಟೆ ಗೌರವ ಇಟ್ಟುಕೊಂಡವರು. ವಿಷ್ಣುವರ್ಧನ್‌ ಅವರಿಗೂ ನಾರಾಯಣ್‌ ಮೇಲೆ ಅಷ್ಟೇ ಪ್ರೀತಿ ಇತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕನ್ನಡದ ಆರು ವಿಭಿನ್ನ ಚಿತ್ರಗಳು ಮೂಡಿಬಂದಿವೆ. ವಿಷ್ಣುವರ್ಧನ್‌ ಅವರನ್ನು ಹೊಸತರಹದ ಗೆಟಪಲ್ಲಿ ತೋರಿಸಿಕೊಟ್ಟ ನಿರ್ದೇಶಕ ಎಂಬ ಮಾತಿಗೆ ನಾರಾಯಣ್‌ ಸೇರ್ಪಡೆಯಾದವರು. ನಾರಾಯಣ್‌ ವಿಷ್ಣು ಬಗ್ಗೆ ಹೇಳಿದ ಮಾತುಗಳೇನು ಗೊತ್ತಾ?

 

ಮೂರು ಮುಖದ ಮುದ್ದಿನ ಸಿಂಹ

* ನಾನು ವಿಷ್ಣುವರ್ಧನ್‌ ಅವರ ಮೂರು ಮುಖಗಳನ್ನು ನೋಡಿದ್ದೇನೆ. ಮೊದಲನೆಯದು, ಅವರಲ್ಲಿ ತುಂಬಾ ಹುಡುಗಾಟದ ಸ್ವಭಾವವಿತ್ತು. ಸದಾ ತಮಾಷೆ ಮಾಡುತ್ತಿದ್ದರು. ಪ್ರೀತಿಯಿಂದಲೇ ಕೆಲವರನ್ನು ರೇಗಿಸುತ್ತಿದ್ದರು, ಕೆಲವೊಮ್ಮೆ ಅವರಿಗೆ ತುಂಬಾ ಇಷ್ಟವಾಗಿಬಿಟ್ಟರೆ, ಅಂತಹವರ ಹೆಗಲ ಮೇಲೆ ಕೈ ಹಾಕಿಕೊಂಡು ಮಾತಾಡೋರು. ಹಿಂದೆ ಮುಂದೆ ನೋಡದೆ, ಅವರೊಳಗಿನ ಮನಸ್ಸಿನ ಭಾವನೆ ಹೊರ ಹಾಕೋರು. ಎರಡನೆಯದು, ಆಗಾಗ ಗಂಭೀರವಾಗುತ್ತಿದ್ದರು. ಒಂಥರಾ ಮೂಡಿಯಾಗಿಬಿಡುತ್ತಿದ್ದರು. ಬಹುಶಃ ನಾನು ಅವರಷ್ಟು ಮೂಡಿ ಅಗಿರೋದನ್ನು ಬೇರೆ ನಟರಲ್ಲಿ ನೋಡಿಲ್ಲ. ಅವರಿಗೆ ಇಷ್ಟ ಅಗದೇ ಇರುವಂತಹ ಯಾವುದೇ ಚಟುವಟಿಕೆ ನಡೆದರೂ ಅವರು ಸೈಲೆಂಟ್‌ ಆಗಿಬಿಡುತ್ತಿದ್ದರು. ವಾತಾವರಣವಿರಲಿ, ಲೋಕೇಷನ್‌ ಇರಲಿ, ಅಥವಾ ಅವರ ಕಾಸ್ಟ್ಯೂಮ್ಸ್‌ ಆಗಲಿ, ಇಷ್ಟ ಆಗದಿದ್ದರೆ, ಹೇಳುತ್ತಿರಲಿಲ್ಲ. ನಾವೇ ಅವರ ಮುಖ ಭಾವ ನೋಡಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ಇನ್ನು ಮೂರನೆಯದು, ಅವರಿಗೆ ಅಧ್ಯಾತ್ಮದ ಮೇಲೆ ಹೆಚ್ಚು ಒಲವಿತ್ತು. ಇದನ್ನು ನಿಜವಾಗಲೂ ನಂಬೋಕೆ ಸಾಧ್ಯವಿರಲಿಲ್ಲ. ಅವರಿಗೆ ಆಧ್ಯಾತ್ಮ ವಿಷಯದ ಬಗ್ಗೆ ಅಪಾರ ತಿಳಿವಳಿಕೆ ಇತ್ತು. ಒಬ್ಬ ನಟನಿಗೂ ಆಧ್ಯಾತ್ಮಕ್ಕೂ ಎಂಥಾ ಸಂಬಂಧ? ಆದರೂ ಅವರಿಗೆ ಆಧ್ಯಾತ್ಮವೆಂದರೆ ಬಲು ಇಷ್ಟ. ಅವರ ಜೊತೆ ಮಾತಿಗೆ ನಿಂತರೆ, ಸಾಧು, ಸಂತರ ಜತೆ ಮಾತಾಡಿದ ಭಾವನೆ ಬರುತ್ತಿತ್ತು. ಮನಸ್ಸಿಗೆ ಒಂಥರಾ ನೆಮ್ಮದಿ ತರುತ್ತಿತ್ತು. ಅವರ ಮೂರು ಮುಖಗಳನ್ನು ನಾನು ನೋಡಿದ್ದೇನೆ. ಅವರ ಈ ಮೂರು ಮುಖಗಳ ಜತೆಯಲ್ಲಿ ಮೂರು ಮುಖಗಳ ಸುಖಗಳನ್ನೂ ಅನುಭವಿಸಿದ್ದೇನೆ.

 

ಅಹಂ ಇರದ ನಟ

*ಅವರೊಬ್ಬ ಸೂಪರ್‌ ಸ್ಟಾರ್‌, ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಅನ್ನುವ ಯಾವುದೇ ಅಹಂ ಇರಲಿಲ್ಲ ಯಾವಾಗಲೂ ಸಿಂಪಲ್‌ ಆಗಿಯೇ ಇರುತ್ತಿದ್ದರು. ಒಂದು ರೀತಿ ಮುಗ್ಧ ಮಕ್ಕಳ ಹಾಗೆ. ಅವರಿಗೆ ಹೆಣ್ಣುಮಕ್ಕಳ ಮೇಲೆ ಬಹಳ ಗೌರವ ಇತ್ತು. ಸೆಟ್‌ನಲ್ಲಾದರೂ ಸಹ ನಾಯಕಿಯಿರಲಿ, ಸಹಾಯಕರಿರಲಿ ತುಂಬಾ ಗೌರವದಿಂದಲೇ ಮಾತಾಡುತ್ತಿದ್ದರು. ಆಧ್ಯಾತ್ಮದಲ್ಲಿ ಪರಕಾಯ ಪ್ರವೇಶ ಮಾಡಿದ್ದರಿಂದಲೇ ಅವರಿಗೆ ಅಂತಹ ಸಹನೆ, ತಾಳ್ಮೆ ಇತ್ತು ಅನಿಸುತ್ತೆ. ಇನ್ನು, ಅವರ ಪಾತ್ರಗಳ ಬಗ್ಗೆ ಹೇಳೋದಾದರೆ, ಯಾವುದೇ ಪಾತ್ರವಿರಲಿ, ತುಂಬಾ ಸೂಕ್ಷ್ಮವಾಗಿ ಗಮನಿಸೋರು, ಬೇರೆ ಭಾಷೆಯಲ್ಲಿ ಯಾರಾದರೂ ಇಂತಹ ಪಾತ್ರ ಮಾಡಿದ್ದಾರಾ ಅಂತ ಒಮ್ಮೆ ಚರ್ಚಿಸೋರು, ಅವರೇ ಮಾಡಿದ ಅಷ್ಟೂ ಚಿತ್ರಗಳ ಪಾತ್ರಗಳನ್ನೊಮ್ಮೆ ಮೆಲುಕು ಹಾಕೋರು, ಈ ಚಿತ್ರದ ಪಾತ್ರದಲ್ಲಿ ನಾನೇನು ಹೊಸದಾಗಿ ಮಾಡಬಹುದು ಅಂತ ಕೇಳೋರು. ಅಷ್ಟೆಲ್ಲಾ ಆದರೂ, ಸೆಟ್‌ಗೆ ಬಂದಾಗ, ನಾರಾಯಣ್‌, ನೀವೊಮ್ಮೆ ನಟಿಸಿ ತೋರಿಸಿ, ಆಮೇಲೆ ನಾನು ಮಾಡ್ತೀನಿ ಅನ್ನೋರು. ಅದೇನೆ ಇದ್ದರೂ, ಆ ಪಾತ್ರಕ್ಕೆ ಒಳ್ಳೆಯ ರೂಪ ಕೊಡುತ್ತಿದ್ದರು. ತುಂಬಾ ಟೈಮ್‌ ತೆಗೆದುಕೊಂಡೇ ಅವರು ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರು ಕ್ಯಾಮೆರಾಮೆನ್‌ ಬಳಿ ಬಂದು ನೀನು ಮೊದಲ ಪ್ರೇಕ್ಷಕ. ಮೊದಲು ನಿನ್ನ ಅಭಿಪ್ರಾಯ ಹೇಳು ಅನ್ನೋರು.

 

ಮೊದಲ ಭೇಟಿ ಅಶೋಕ ಹೋಟೇಲ್‌ನಲ್ಲಿ…

* ನನ್ನ ಅವರ ಆವರ ಮೊಮೊದಲ ಭೇಟಿಯಾಗಿದ್ದು 1986 ರಲ್ಲಿ. ನಾನು ಆಗಷ್ಟೇ ಚಿತ್ರರಂಗದ ಪ್ರವೇಶ ಮಾಡಿದ್ದೆ. “ಕೃಷ್ಣ ನೀ ಬೇಗನೆ ಬಾರೋ” ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಶೋಕ ಹೋಟೆಲ್‌ ನಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಆ ಚಿತ್ರಕ್ಕೆ ಅವರು ಹೀರೋ. ಆಗಲೇ ಅವರನ್ನು ನೋಡಿದ್ದು ಮತ್ತು ಭೇಟಿ ಮಾಡಿ ಮಾತಾಡಿದ್ದು. ಅದಾದ ಬಳಿಕ ಅವರೊಂದಿಗೆ ಆರು ಸಿನಿಮಾಗಳನ್ನು ಮಾಡಿದೆ. “ವೀರಪ್ಪ ನಾಯ್ಕ” ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಒಳ್ಳೆಯ ಹೆಸರೂ ಸಿಕ್ತು. ಹಣವೂ ಬಂತು ಇವತ್ತಿಗೂ “ವೀರಪ್ಪ ನಾಯ್ಕ” ಚಿತ್ರದ ಬಗ್ಗೆ ಎಲ್ಲರೂ ಮಾತಾಡುತ್ತಾರೆ. ಗೊತ್ತಿರದ ಒಂದು ಮುಖ್ಯವಾದ ವಿಷಯ ಹೇಳಲೇಬೇಕು. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರ ಕೆಲ ಆಪ್ತರಿಗೆ ಹೊರತುಪಡಿಸಿ, ಯಾರಿಗೂ ಈ ವಿಷಯ ಗೊತ್ತಿಲ್ಲ. ಭಾರತ ತಂಡದ ಬೌಲರ್‌ ಜಹೀರ್‌ ಖಾನ್‌ ಅವರು ವಿಷ್ಣುವರ್ಧನ್‌ ಅವರಿಗೆ ಒಳ್ಳೆಯ ಸ್ನೇಹಿತರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್‌ ಪಂದ್ಯ ಏರ್ಪಡುತ್ತೆ. ಆ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರಿಗೆ ಒಂದು ಕ್ಯಾಂಪ್‌ ಹಾಕಲಾಗುತ್ತೆ. ಆ ಕ್ಯಾಂಪ್‌ನಲ್ಲಿ “ವೀರಪ್ಪನಾಯ್ಕ” ಚಿತ್ರ ಸ್ಕ್ರೀನಿಂಗ್‌ ನಡೆಯುತ್ತೆ. ಆ ಚಿತ್ರ ನೋಡಿದ ಕೂಡಲೇ ಜಹೀರ್‌ ಖಾನ್‌ ಅವರು ವಿಷ್ಣವರ್ಧನ್‌ ಸರ್‌ ಗೆ ಕಾಲ್‌ ಮಾಡಿ ಪ್ರೀತಿಯಿಂದ ಮಾತಾಡುತ್ತಾರೆ. ದೇಶಾಭಿಮಾನ ಬಗ್ಗೆ ಹುರಿದುಂಬಿಸಿರುವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಆ ಸರಣಿಯನ್ನು ಭಾರತ ಗೆಲ್ಲುತ್ತದೆ. ನಮ್ಮ ಸಂಸ್ಥೆಯಡಿ, ನಾನು ನಿರ್ದೇಶಿಸಿದ, ವಿಷ್ಣು ಸರ್‌ ಅಭಿನಯಿಸಿದ ಚಿತ್ರದ ಬಗ್ಗೆ ಇಂಡಿಯಾ ಟೀಮ್‌ ಹೊಗಳಿದ್ದು, ಹೆಗ್ಗಳಿಕೆ. “ವೀರಪ್ಪನಾಯ್ಕ” 25 ವಾರಗಳು ಪ್ರದರ್ಶನ ಕಾಣುತ್ತೆ. “ಸೂರ್ಯವಂಶ” ಕೂಡ 25 ವಾರಗಳು ಪ್ರದರ್ಶನವಾಗುತ್ತೆ. “ಜಮೀನ್ದಾರ”, “ಸಿಂಹಾದ್ರಿ ಸಿಂಹ”, “ಸಿರಿವಂತ” ಚಿತ್ರಗಳು ಶತದಿನ ಪೂರೈಸುತ್ತವೆ. “ವರ್ಷ” ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತೆ. ಅವರ ಜತೆ ಮಾಡಿದ ಆರು ಚಿತ್ರಗಳೂ ಯಶಸ್ಸು ಕೊಟ್ಟಿವೆ.

 

ರಾಮ್‌ ದಾಸ್‌ ಆಸೆ ಈಡೇರಲಿಲ್ಲ…

* ಅವರಿಗೆ ಎರಡು ಆಸೆಗಳಿದ್ದವು. ಒಂದು “ಶ್ರೀ ಕೃಷ್ಣ ಮಕರಂದ” ಕಥೆ ಅವರಿಗೆ ತುಂಬಾ ಇಷ್ಟವಾಗಿತ್ತು. ಮತ್ತೊಂದು “ಸಾಯಿಬಾಬಾ” ಸಿನಿಮಾದಲ್ಲಿ ಸಾಯಿಬಾಬಾ ಪಾತ್ರ ಮಾಡುವ ಆಸೆ ಇತ್ತು. ಆ ಎರಡೂ ಚಿತ್ರಗಳನ್ನೂ ನೀವೇ ನಿರ್ದೇಶಿಸಬೇಕು ಎಂದು ಹೇಳಿದ್ದರು. ಆದರೆ, ಅದು ಮಿಸ್‌ ಆಯ್ತು. ಅವರಿಗೆ ಆ ಎರಡು ಆಸೆಗಳಿದ್ದರೆ, ನನಗೆ ಅವರಿಗಾಗಿ “ರಾಮ್‌ ದಾಸ್‌ʼ” ಚಿತ್ರ ಮಾಡುವ ಆಸೆ ಇತ್ತು. ಸಂಪೂರ್ಣ ಆಧ್ಯಾತ್ಮ ಕುರಿತಾದ ಚಿತ್ರ ಮಾಡುವ ಆಸೆ ನನ್ನದ್ದಾಗಿತ್ತು. ಅದಾಗಲಿಲ್ಲ. ಇನ್ನೊಂದು ವಿಷಯವೆಂದರೆ, ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವಂತಹ ಚಿತ್ರ ಮಾಡಲು ರೆಡಿಯಾಗಿದ್ದೆ. ಅದು ವಿಷ್ಣುವರ್ಧನ್‌ ಮತ್ತು ಶಿವರಾಜ್ ಕುಮಾರ್‌ ಕಾಂಬಿನೇಷನ್‌ ಚಿತ್ರ. ಇಬ್ಬರೂ ನಟರೂ ಒಪ್ಪಿಗೆ ಕೊಟ್ಟಿದ್ದರು. “ಆಪ್ತರಕ್ಷಕ” ನಂತರ ಮಾಡೋಣ ಅಂದಿದ್ದರು. ಆದರೆ, ಅದು ಹಾಗೇ ಉಳಿದು ಹೋಯ್ತು.

 

ಅಣ್ಣಾವ್ರು ಮತ್ತು ವಿಷ್ಣು ಗಿರಿಜಾ ಮೀಸೆ…

* ಇನ್ನೊಂದು ವಿಶೇಷ ವಿಷಯ ಹೇಳಲೇಬೇಕು. ಬಹುಶಃ ಇದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ನನ್ನಲ್ಲಿಯೇ ಗುಟ್ಟಾಗಿದ್ದ ವಿಷಯ. ಒಮ್ಮೆ ನಾನು ಅಣ್ಣಾವ್ರ ಕಡೆಯಿಂದ ಫೋನ್‌ ಮಾಡಿಸಿ, ವಿಷ್ಣುವರ್ಧನ್‌ ಅವರನ್ನು ಮಾತಾಡಿಸಿದ್ದೆ. “ಸೂರ್ಯವಂಶ” ಚಿತ್ರದ ಗೆಟಪ್‌ ನೋಡಿ ಅಣ್ಣಾವ್ರಿಗೆ ಇಷ್ಟ ಆಗಿತ್ತು. ಎಷ್ಟು ಚೆನ್ನಾಗಿದೆ ಆ ಗಿರಿಜಾ ಮೀಸೆ ಅನ್ನೋರು. “ಶಬ್ದವೇದಿ” ಚಿತ್ರೀಕರಣ ಸಮಯದಲ್ಲಿ ಅಣ್ಣಾವ್ರು ಆಗಾಗ ವಿಷ್ಣುವರ್ಧನ್‌ ಗೆಟಪ್‌ ಬಗ್ಗೆ ಹೇಳುತ್ತಿದ್ದರು. ಆ ಸಂದರ್ಭದಲ್ಲೇ ನಾನೂ ಒಂದು ಸಲ ಅವರ ಜೊತೆ ಮಾತಾಡಿ ಅಂತ ಫೋನ್‌ ಮಾಡಿ ಕೊಟ್ಟಿದ್ದೆ. ಇಬ್ಬರು ನಟರು ಹರಟಿದ್ದರು. ಅದು ನಿಜಕ್ಕೂ ರಸಘಳಿಗೆ. ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌ ಮತ್ತು ಡಾ. ಅಂಬರೀಷ್‌ ಈ ಮೂವರು ಕನ್ನಡ ಚಿತ್ರರಂಗದ ಮುತ್ತುಗಳು. ಇವರ್ಯಾರೂ ನನ್ನನ್ನು ನಿರ್ದೇಶಕನನ್ನಾಗಿ ನೋಡಲಿಲ್ಲ. ಒಬ್ಬ ಗೆಳೆಯನಾಗಿ, ಕುಟುಂಬದ ಸದಸ್ಯನಾಗಿ ನೋಡಿದರು. ಹಾಗಾಗಿಯೇ ನಾನು ಅವರ ಅಂತರಂಗದೊಳಗೆ ಪ್ರವೇಶಿಸಲು ಸಾಧ್ಯವಾಯ್ತು.

Categories
ಸಿನಿ ಸುದ್ದಿ

ಸಲಗನ ಮಳೆ ಪ್ರೀತಿ -ಲಿರಿಕಲ್ ವಿಡಿಯೊ‌ ಹಾಡಿಗೆ‌ ಭರಪೂರ‌ ಮೆಚ್ಚುಗೆ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ‘ಸಲಗ’ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊಂದು ಮಳೆಯ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ‘ಮಳೆಯೇ ಮಳೆಯೇ’ ಲಿರಿಕಲ್ ವಿಡಿಯೊ ಸಾಂಗ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಿದೆ. ದುನಿಯಾ ವಿಜಯ್ ಜೊತೆಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಧನಂಜಯ್ ಕೂಡ ಚಿತ್ರದ ಹೈಲೈಟ್.
ಸಂಚಿತ್ ಹೆಗ್ಡೆ , ಐಶ್ವರ್ಯ ಹಾಡಿರುವ ಈ ಗೀತೆಗೆ ನಾಗಾರ್ಜುನ್ ಶರ್ಮ ಸಾಹಿತ್ಯವಿದೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಣವಿದೆ. A2 ಆಡಿಯೊ ಸಂಸ್ಥೆ ಮೂಲಕ ಹಾಡು ಬಿಡುಗಡೆಯಾಗಿದೆ.ಚಿತ್ರಕ್ಕೆ ವಿನೋದ್ ಸ್ಟಂಟ್ ಮಾಡಿಸಿದರೆ, ಮೋಹನ್ ನೃತ್ಯ ವಿದೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ಆಗಂತುಕನಿಗಾಗಿ ಮಾರ್ಷಲ್‌ ಆರ್ಟ್ಸ್‌ ಕಲಿತ ನಟಿ – ಮೈತ್ರಿಯಾ ರಿಯಲ್‌ ಸ್ಟಂಟ್‌ ಕಸರತ್ತು!

 

ಸಿನಿಮಾ ಅಂದರೆ ಹಾಗೆಯೇ. ಕ್ಯಾಮೆರಾ ಮುಂದೆ ನಿಲ್ಲಬೇಕಾದರೆ, ಮೊದಲು ನಟನೆ ಸೇರಿದಂತೆ ಡೈಲಾಗ್‌ ಡಿಲವರಿ, ಬಾಡಿಲಾಂಗ್ವೇಜ್‌ ಸೇರಿದಂತೆ ಇತರೆ ವಿಷಯಗಳಲ್ಲಿ ಪಕ್ವವಾಗಿರಬೇಕು ಸಿನಿಮಾದಲ್ಲಿ ಫೈಟ್ಸ್‌ ಸಹಜ. ಕೆಲವರು ಸಾಹಸ ನಿರ್ದೇಶಕರು ಚಿತ್ರೀಕರಣ ಸಮಯದಲ್ಲಿ ನಟ, ನಟಿಯರಿಗೆ ಫೈಟ್ಸ್‌ ಟಿಪ್ಸ್‌ ಹೇಳಿಕೊಡುತ್ತಾರೆ. ಇನ್ನೂ ಕೆಲವರು ಮಾಸ್ಟರ್ಸ್‌ ಬಳಿ ಸ್ಟಂಟ್ಸ್‌ ಕೂಡ ಕಲಿತು ನಂತರದ ದಿನಗಳಲ್ಲಿ ಕ್ಯಾಮೆರಾ ಮುಂದೆ ನಿಲ್ಲುತ್ತಾರೆ. ಈಗ ನಟಿ ಮೈತ್ರಿಯಾಗೌಡ ಕೂಡ ಸಿನಿಮಾಗಾಗಿಯೇ ಮಾರ್ಷಲ್‌ ಆರ್ಟ್ಸ್‌ ಕಲಿತಿದ್ದಾರೆ.

ಹೌದು, ನಟಿ ಮೈತ್ರಿಯಾಗೌಡ “ಆಗಂತುಕ” ಚಿತ್ರಕ್ಕಾಗಿ ಕಳೆದ ನಾಲ್ಕು ತಿಂಗಳ ಕಾಲ ಮಾರ್ಷಲ್‌ ಆರ್ಟ್ಸ್‌ ಕಲಿಯುತ್ತಿದ್ದಾರೆ. ಸಿನಿಮಾದಲ್ಲಿ ಅವರು ಖಡಕ್‌ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಭರ್ಜರಿ ಫೈಟ್ಸ್‌ಗಾಗಿ ಅವರು ಚಾಮರಾಜ ಮಾಸ್ಟರ್‌ ಬಳಿ ಸ್ಟಂಟ್ಸ್‌ ಕಲಿಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದಲೂ ಅವರು ಕುಂಫು, ಮೂವ್‌ ಥಾಯ್‌ ಇತರೆ ಸ್ಟಂಟ್ಸ್‌ ಗಳಲ್ಲಿ ಪರಿಣಿತಿ ಹೊಂದುತ್ತಿದ್ದಾರೆ.

ಸದ್ಯಕ್ಕೆ “ಆಗಂತುಕʼ ಚಿತ್ರ ಶೇ. 60 ರಷ್ಟು ಚಿತ್ರೀಕರಣವಾಗಿದೆ. ಎರಡು ಫೈಟ್ಸ್‌ ಹಾಗೂ ಸಾಂಗ್ಸ್‌ ಬಾಕಿ ಉಳಿದಿದೆ. ಕೊರೊನಾ ಲಾಕ್‌ಡೌನ್‌ ಬಳಿಕ ಚಿತ್ರೀಕರಣಕ್ಕೆ ಹೊರಡಲಿದೆ. ಚಿತ್ರಕ್ಕೆ ರಜತ್‌ ರಘುನಾಥ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ನಿರ್ಮಾಣವನ್ನೂ ಮಾಡಿದ್ದಾರೆ. ಇದೇ ಮೊದಲ ಸಲ ಖಾಕಿ ಖದರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೈತ್ರಿಯಾಗೌಡ, ಸಿನಿಮಾ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಚಿತ್ರದ ಫೈಟ್ಸ್‌ ಅನ್ನು ರಿಯಲ್‌ ಆಗಿ ಮಾಡುವ ಆಸೆ ಮೈತ್ರಿಯಾ ಅವರದ್ದು. ಆದರೆ, ನಿರ್ದೇಶಕರು ರಿಸ್ಕ್‌ ಸ್ಟಂಟ್‌ ಬೇಡ ಎನ್ನುತ್ತಿದ್ದರೂ, ಒಂದೊಮ್ಮೆ ರಿಸ್ಕ್‌ ತೆಗೆದುಕೊಳ್ಳಬೇಕು ಎಂದು ನಾಲ್ಕು ತಿಂಗಳ ಕಾಲ ಅವರು ಸ್ಟಂಟ್‌ ತರಬೇತಿ ಪಡೆದಿದ್ದಾರೆ.

“ಆಗಂತುಕʼ ಬಗ್ಗೆ ಹೇಳುವುದಾದರೆ, ಇದೊಂದು ಮರ್ಡರ್‌ ಮಿಸ್ಟ್ರಿಯಾಗಿದ್ದು, ಬಹುತೇಕ ದಟ್ಟ ಅರಣ್ಯದಲ್ಲೇ ನಡೆಯೋ ಕಥೆ ಇದಾಗಿದೆ. ಸಕಲೇಶಪುರದಲ್ಲಿ ಚಿತ್ರೀಕರಣ ನಡೆದಿದ್ದು, ಇಷ್ಟರಲ್ಲೇ ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ಸಜ್ಜಾಗಿದೆ. ಚಿತ್ರಕ್ಕೆ ಜಾರ್ಜ್‌ ಥಾಮಸ್‌ ಸಂಗೀತವಿದೆ. ಪಿವಿಆರ್‌ ಸ್ವಾಮಿ ಅವರ ಛಾಯಾಗ್ರಹಣವಿದೆ. ಡಿಂಗ್ರಿನಾಗರಾಜ್‌ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇವರೊಂದಿಗೆ ಹೊಸ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಲಾಗಿದೆ.

 

Categories
ಬ್ರೇಕಿಂಗ್‌ ನ್ಯೂಸ್ ಸಿನಿ ಸುದ್ದಿ

ಕಿಚ್ಚನ ಜೊತೆ ಜೋಗಿ ಪ್ರೇಮ್‌ ಚಿತ್ರ ಈ ಬಾರಿ ಸ್ಪೆಷಲ್‌ ಸ್ಟೋರಿ ಜೊತೆ ಬರ್ತಾರಂತೆ ಪ್ರೇಮ್

ಶ್ರೀಲೀಲಾ
ಸುದೀಪ್‌ ಈಗ ಬಿಝಿ. ಅದು ಎಲ್ಲರಿಗೂ ಗೊತ್ತಿದೆ. ಅವರ ಅಭಿನಯದ “ಕೋಟಿಗೊಬ್ಬ 3′ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಅನೂಪ್‌ ಭಂಡಾರಿ ನಿರ್ದೇಶನದ, ಜಾಕ್‌ ಮಂಜು ನಿರ್ಮಾಣದ “ಫ್ಯಾಂಟಮ್‌” ಕೂಡ ಚಿತ್ರೀಕರಣದಲ್ಲಿದೆ. ಇದರ ನಡುವೆ ಒಂದಷ್ಟು ಹೊಸ ಸಿನಿಮಾಗಳೂ ಕೂಡ ಸೆಟ್ಟೇರಲು ಸಜ್ಜಾಗಿವೆ. ವಿಶೇಷವೆಂದರೆ, ಸುದೀಪ್‌ ಮತ್ತೊಮ್ಮೆ ಜೋಗಿ ಪ್ರೇಮ್‌ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ.
ಹೌದು, ಈ ವಿಷಯವನ್ನು ಸ್ವತಃ ಜೋಗಿ ಪ್ರೇಮ್‌ ಸ್ಪಷ್ಟಪಡಿಸಿದ್ದಾರೆ. ಸುದೀಪ್‌ ಹುಟ್ಟುಹಬ್ಬಕ್ಕೆ ಟ್ವಿಟ್ಟರ್‌ನಲ್ಲಿ ಶುಭಕೋರಿದ್ದ ಪ್ರೇಮ್‌ ಅವರಿಗೆ ಸುದೀಪ್‌ ಅಭಿಮಾನಿಗಳು ತಮ್ಮ ಮುಂದಿನ ಸಿನಿಮಾ ಯಾವಾಗ, ಯಾರ ಜೊತೆ ಎಂದು ಪ್ರಶ್ನಿಸಿದ್ದರು. ಅವರ ಪ್ರಶ್ನೆಗಳಿಗೆ ಪ್ರೇಮ್‌, ನಾನು ಸುದೀಪ್‌ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದೇನೆ ಎಂದಿದ್ದಾರೆ. “ದಿ ವಿಲನ್‌” ಬಳಿಕ ಮಾಡುತ್ತಿರುವ ಸಿನಿಮಾ ಇದಾಗಿರುವುದರಿಂದ ಕಥೆ, ಪಾತ್ರ ಎಲ್ಲವೂ ವಿಶೇಷವಾಗಿರಲಿದೆ ಎಂಬುದು ಪ್ರೇಮ್‌ ಸ್ಪಷ್ಟನೆ. ಹೊಸ ಚಿತ್ರದಲ್ಲಿ ಸುದೀಪ್‌ ಅವರ ಗೆಟಪ್‌ ವಿಭಿನ್ನವಾಗಿರಲಿದೆ ಎಂದಿದ್ದಾರೆ ಪ್ರೇಮ್.‌
ಸದ್ಯಕ್ಕೆ ಪ್ರೇಮ್‌ ಅವರು ರಕ್ಷಿತಾ ಸಹೋದರ ರಾಣಾ ಅವರ “ಏಕ್‌ ಲವ್‌ ಯಾ” ಸಿನಿಮಾದತ್ತ ಗಮನ ಹರಿಸಿದ್ದಾರೆ. ಆ ಚಿತ್ರದಲ್ಲಿ ರಿಷಾ ಮತ್ತು ರಚಿತಾ ನಾಯಕಿಯರು. ರಕ್ಷಿತಾ ತಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದೇನೆ ಇರಲಿ, ಜೋಗಿ ಪ್ರೇಮ್‌ ಪುನಃ ಸುದೀಪ್‌ ಜೊತೆ ಸಿನಿಮಾ ಮಾಡುವ ವಿಷಯ ಹೊರಹಾಕಿದ್ದಾರೆ. ಆದರೆ, ಆ ಚಿತ್ರ ಯಾವಾಗ ಸೆಟ್ಟೇರಲಿದೆ, ಯಾರು ನಿರ್ಮಾಣ ಮಾಡಲಿದ್ದಾರೆ. ಕಥೆ ಹೇಗಿರಲಿದೆ. ಸುದೀಪ್‌ ಅವರ ಗೆಟಪ್‌ ಹೇಗೆಲ್ಲಾ ಇರಲಿದೆ. ಇಲ್ಲೂ ಸುದೀಪ್‌ ಜೊತೆ ಬೇರೆ ಸ್ಟಾರ್‌ ಯಾರಾದರೂ ಇರುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯ ಉತ್ತರವಿಲ್ಲ. ಹೊಸ ಸಿನಿಮಾ ಮಾಡ್ತೀನಿ ಅಂತ ಪ್ರೇಮ್‌ ಹೇಳಿದ್ದಾರೆ. ಆದರೆ, ಅದು ಸೆಟ್ಟೇರಿ, ಶೀರ್ಷಿಕೆ ಅನೌನ್ಸ್‌ ಮಾಡಿ, ಟೀಮ್‌ ಸೆಟ್‌ ಮಾಡುವವರೆಗೂ ಪ್ರೇಮ್‌ ಇನ್ನೂ ಸಾಕಷ್ಟು ಸರ್‌ ಪ್ರೈಸ್‌ ನ್ಯೂಸ್‌ಗಳನ್ನು ಕೊಡುತ್ತಲೇ ಇರುತ್ತಾರೆ ಎಂಬುದಂತೂ ಸತ್ಯ.

Categories
ಸಿನಿ ಸುದ್ದಿ

ನಂಗೆ ಪಾರ್ಟಿ ಆಫರ್ ಬಂದಿದೆ, ಆದ್ರೆ ಅದು ಇದಲ್ಲ!

ನಟ ಸುದೀಪ್ ಹೇಳಿದ್ದು ಯಾವುದರ ಕುರಿತು ಗೊತ್ತಾ?

…………………………………….

ಶಿವಣ್ಣ ಆಯ್ತು, ಉಪೇಂದ್ರ ಆಯ್ತು, ದರ್ಶನ್ ಆಯ್ತ, ಕೊನೆಗೆ ಸುದೀಪ್ ಪ್ರತಿಕ್ರಿಯೆ ಏನು ಅಂತ ಕಾತರದಲ್ಲಿದ್ದ ಚಿತ್ರೋದ್ಯಮಕ್ಕೆ‌ಕೊನೆಗೂ ಉತ್ತರ ಸಿಕ್ಕಿತು.‌‌ ಕಳೆದ ನಾಲ್ಕೈದು ದಿನಗಳಿಂದ ಬಾರೀ ಸದ್ದು‌ಮಾಡುತ್ತಿದ್ದ ಡ್ರಗ್ಸ್ ಮಾಫಿಯಾ ಕುರಿತು ನಟ ಕಿಚ್ಚ ಸುದೀಪ್ ಕೊನೆಗೂ‌ ಪ್ರತಿಕ್ರಿಯೆ ಕೊಟ್ಟರು. ಅಚ್ಚರಿ ಅಂದ್ರೆ ‌ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಕೇಂದ್ರ ಬಿಂದು ಆಗಿರುವ ಇಂದ್ರಜಿತ್ ಲಂಕೇಶ್ ಅವರ ಜತೆಗೆಯೇ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ್ದು.

ಡ್ರಗ್ಸ್ ಮಾಫಿಯಾ: ಸುದೀಪ್ ಹೇಳಿದ್ದಿಷ್ಟು!

ಡ್ರಗ್ಸ್ ದಂಧೆ ಬಗ್ಗೆ ನಾನೇನು ಹೇಳಲ್ಲ. ನಾನು ಕೂಡಾ ಚಿತ್ರರಂಗದವನೇ, ಆದರೆ ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಲು ಹೋಗಬಾರದು. ನಮಗೆ ರೈಸ್, ದಾಲ್ ಗೊತ್ತು….ಇದರ ಬಗ್ಗೆ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.

ಚಿರು ಹೆಸರು ಪ್ರಸ್ತಾಪಕ್ಕೆ ಗರಂ

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬುದರ ಬಗ್ಗೆ ನನಗೇನೂ ಗೊತ್ತಿಲ್ಲ. ಚಿತ್ರರಂಗವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರದಿಂದಾಗಿ ಚಿತ್ರರಂಗದ ದೂಷಣೆ ಬೇಡ ಎಂದು ಸುದೀಪ್ ಹೇಳಿದರು.ಹಾಗೆಯೇ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಚಿರು ಹೆಸರು ಕೇಳಿಬಂದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಟ ಚಿರಂಜೀವಿ ಸರ್ಜಾಗೆ ಕುಟುಂಬ ಇದೆ, ಪತ್ನಿಯೂ ಇದ್ದಾರೆ. ಹೀಗಾಗಿ ನಿಧನರಾದವರ ಬಗ್ಗೆ ಮಾತನಾಡೋದು ಬೇಡ ಎಂದು‌ವಿನಂತಿಸಿಕೊಂಡರು.

ನಂಗೆ ಡ್ರಗ್ಸ್ ಪಾರ್ಟಿ ಗೊತ್ತಿಲ್ಲ:
ನನಗೆ ಪಾರ್ಟಿ ಆಫರ್ ಬಂದಿರೋದು ರಾಜಕೀಯ ಪಕ್ಷಗಳಿಂದ, ಹೀಗಾಗಿ ಬೇರೆ ಪಾರ್ಟಿಗಳ ಬಗ್ಗೆ ನನಗೆ ಗೊತ್ತಿಲ್ಲ ಎನ್ನುತ್ತಾ ತಮ್ಮದೇ ಶೈಲಿಯಲ್ಲಿ ಡ್ರಗ್ಸ್ವಮಾಫಿಯಾ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟರು.

Categories
ಸಿನಿ ಸುದ್ದಿ

ಭಾವುಕತೆ ಸಾರುವ ಡಿಎನ್‌ಎ-ಸಂಬಂಧಗಳ ಮೌಲ್ಯದ ಹಿಂದೆ ಪ್ರಕಾಶ್‌ ರಾಜ್‌ ಮೇಹು

 

ಸಂಬಂಜ ಅನ್ನೋದು ದೊಡ್ಡದು ಕನಾ…
ಈ ಪದಗಳೊಮ್ಮೆ ಕಿವಿಗಪ್ಪಳಿಸಿದರೆ, ನೆನಪಾಗೋದೇ ದೇವನೂರು ಮಹಾದೇವ ಅವರು. ಹೌದು ಅವರ ಜನಪ್ರಿಯಗೊಂಡ “ಕುಸುಮ ಬಾಲೆ” ಪುಸ್ತಕದೊಳಗಿರುವ ಮರೆಯದ ಸಾಲುಗಳಿದು. ಇಷ್ಟಕ್ಕೂ ಈ ದೇವನೂರು ಮಹಾದೇವ ಅವರ ಪುಸ್ತಕದೊಳಗಿರುವ “ಸಂಬಂಜ ಅನ್ನೋದು ದೊಡ್ಡದು ಕನಾ…ʼ ಚಿತ್ರವೊಂದರ ಟ್ಯಾಗ್‌ ಲೈನ್.‌ ಅ ಚಿತ್ರ ಬೇರಾವೂದೂ ಅಲ್ಲ, ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಸದ್ದಿಲ್ಲದೆಯೇ ಶೂಟಿಂಗ್‌ ಮುಗಿಸಿ, ಸೆನ್ಸಾರ್‌ ಮಂಡಳಿಯಿಂದ ಯು ಪ್ರಮಾಣ ಪತ್ರ ಪಡೆದಿರುವ “ಡಿ ಎನ್‌ ಎ” ಸಿನಿಮಾ.


ಹೌದು, ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರು ಹೊಸ ರೀತಿಯ ನಿರೂಪಣೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆ ಇದೊಂದು, ಭಾವನಾತ್ಮಕ ಸಂಬಂಧಗಳ ನಡುವಿನ ಕಥಾಹಂದರ ಹೊಂದಿದೆ. ಪ್ರಸ್ತುತ ದಿನಮಾನದಲ್ಲಿ ನಡೆಯುವ ವಿಷಯಗಳೇ ಚಿತ್ರದ ಹೈಲೈಟ್.‌ ಜಾತಿ,ಧರ್ಮಗಳ ಹೆಸರಿನಲ್ಲಿ ಮನಷ್ಯ-ಮನಷ್ಯರ ನಡುವಿನ ಗೋಡೆಗಳು ಭದ್ರಗೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ, ನಿಜವಾದ ಸಂಬಂಧ ಯಾವುದು? ರಕ್ತ ಸಂಬಂಧವೆ? ಭಾವನಾತ್ಮಕ ಸಂಬಂಧವೆ? ಅನ್ನುವ ವಿಷಯವನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಪ್ರಕಾಶ್‌ ರಾಜು ಮೇಹು. ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಸಿನಿಮಾರಂಗದ ಕೆಲ ಗೆಳೆಯರು, ಅಪ್ತರು, ತಂತ್ರಜ್ಞರು, ಚಿತ್ರದೊಳಗಿರುವ ಅಂಶಗಳ ಬಗ್ಗೆ, ನಿರ್ದೇಶಕರ ಆಲೋಚನೆಗಳ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರ. ಸೆನ್ಸಾರ್ ಮಂಡಳಿ ಕೂಡ ಸಿನಿಮಾ ವೀಕ್ಷಿಸಿ, ಯಾವುದೇ ಕಟ್‌, ಮ್ಯೂಟ್‌ ಇಲ್ಲದೆ ಯು ಪ್ರಮಾಣ ಪತ್ರ ನೀಡುವುದರ ಜೊತೆಗೆ ಚಿತ್ರದೊಳಗಿರುವ ತಾಕತ್ತಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಬಂಧಗಳ ಮೌಲ್ಯಗಳಿರುವ ಕಥೆಯಲ್ಲಿ ಭಾವುಕತೆಯೇ ತುಂಬಿದೆ. ಹಾಗಾಗಿ, ಇದು ಎಲ್ಲಾ ವರ್ಗದವರಿಗೂ ಇಷ್ಟವಾಗುವ ಸಿನಿಮಾ ಇದಾಗಲಿದೆ ಎಂಬುದು ಅವರ ಮಾತು.

ಅದೇನೆ ಇರಲಿ, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊರೊನಾ ಸಮಸ್ಯೆಯಿಂದ ಇಡೀ ಚಿತ್ರರಂಗವೇ ಸ್ಥಬ್ಧಗೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರರಂಗ ಚೇತರಿಸಿಕೊಂಡು, ಪುನಃ ಮೊದಲಿನಂತೆಯೇ ರಂಗೇರಲಿದೆ. “ಡಿಎನ್‌ಎ” ಕೂಡ ಬಿಡುಗಡೆಗೆ ಎದುರು ನೋಡುತ್ತಿದೆ. ಸದ್ಯ ಚಿತ್ರಮಂದಿರಕ್ಕೆ ದೊಡ್ಡ ಸಿನಿಮಾಗಳು ಅಪ್ಪಳಿಸಿದ ಬಳಿಕ ಈ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ನ ಕ್ಯೂಟ್ ಸಿಸ್ಟರ್ಸ್ ಗೆ ಬರ್ತ್ ಡೇ ಸಂಭ್ರಮ

ಸ್ಯಾಂಡಲ್ ವುಡ್ ನ ಅವಳಿ ಸುಂದರಿಯರು ಹಾಗೂ ಕರಾವಳಿಯ ಕ್ಯೂಟ್ ಸಿಸ್ಟರ್ಸ್ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಸಹೋದರಿಯರಿಬ್ಬರೂ ಈಗ ಬಣ್ಣದ ಲೋಕದಲ್ಲಿ ನಟಿಯರಾಗಿ ಮಿಂಚುತ್ತಿರುವ ಉದಯೋನ್ಮುಖ ತಾರೆಯರು. ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ‘ ಚಿತ್ರ ನೋಡಿದವರಿಗೆ ಈ ಅವಳಿ ಸಹೋದರಿಯರು ಚಿರ ಪರಿಚಿತ.‌ಅದೇ ಅವರಿಬ್ಬರ ಮೊದಲ‌ ಸಿನಿಮಾ. ಯಶ್ ಹಾಗೂ ರಾಧಿಕಾ ದಂಪತಿ ಅಭಿನಯಿಸಿದ್ದ ಈ ಸಿನಿಮಾದಲ್ಲಿ ಅವಳಿ ಸಹೋದರಿರು ವಿಶೇಷವಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದಲೇ ಶುರುವಾಗಿದ್ದು ಈ ಕ್ಯೂಟ್ ಟ್ವಿನ್ಸ್ ಸಿನಿ ಜರ್ನಿ.

‘ಸುಳಿ’ಚಿತ್ರದೊಂದಿಗೆ ಸಿನಿ ಪಯಣ ಆರಂಭಿಸಿದ ಅದ್ವಿತಿ ಶೆಟ್ಟಿ, ಚಂದನವನದಲ್ಲೀಗ ಬೇಡಿಕೆಯ ನಟಿ . ‘ಫ್ಯಾನ್‌’ ಚಿತ್ರದ ನಂತರವೀಗ ಅವರು ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು ‘ಎಸ್‌’. ಇನ್ನು ಅಶ್ವಿತಿ‌ಶೆಟ್ಟಿ ಕೂಡ’ ಸುಳಿ ‘ನಂತರ ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‌ಈಗ ನಟನೆಯನ್ನೆ ವೃತ್ತಿಯಾಗಿಸಿಕೊಂಡಿರುವ ಅಶ್ವಿತಿ ಕಿರುತೆರೆ ಯಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈ ಅವಳಿ ಸಹೋದರಿಯರಿಗೆ ಹುಟ್ಟು ಹಬ್ಬದ ಶುಭಾಶಯ.

Categories
ಸಿನಿ ಸುದ್ದಿ

ಬೇಬಿ ಡಾಲ್ ಗೆ ಇಂದು ಬರ್ತ್ ಡೇ ಸಂಭ್ರಮ

ಬೇಬಿ ಡಾಲ್ ಆದ್ಯಾಗೆ ಇಂದು ಹುಟ್ಟು‌ಹಬ್ಬದ ಸಂಭ್ರಮ. ಸಾಮಾಜಿಕ ಜಾಲ ತಾಣದಲ್ಲಿ‌ ಅಪಾರ ಅಭಿಮಾನಿಗಳನ್ನು‌ ಹೊಂದಿರುವ ಆದ್ಯಾಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜೀ‌ ಕನ್ನಡ ವಾಹಿನಿಯ ಬಹು ಜನಪ್ರಿಯ ಕಾರ್ಯಕ್ರಮ ‘ಸರಿಗಮಪ ಲಿಟ್ಲ್ ಚಾಂಪ್ ೧೨’ ನೇ ಸರಣಿಯ ಕಂಟೆಸ್ಟೆಂಡ್ ಆಗಿದ್ದ ಅದ್ಯಾ,ತನ್ನ ಮುದ್ದು ಮುಖ, ಆಕರ್ಷಣೆಯ ನಗು ಮತ್ತು ಮಧುರವಾದ ಕಂಠ ಸಿರಿಯೊಂದಿಗೆ ಸರಿಗಮಪ ಲಿಟಲ್ ಚಾಂಪ್ ರಿಯಾಲಿಟಿ ಶೋನ ಪ್ರಮುಖ ಆಕರ್ಷಣೆ ಆಗಿದ್ದಳು. ಅಪಾರ ಪ್ರತಿಭೆಯ ಮೂಲಕ ಬೇಬಿ ಡಾಲ್ ಅಂತಲೇ ಮನೆ ಮಾತಾಗಿದ್ದು ನಿಮಗೂ ಗೊತ್ತು.‌ಅದೇ ಜನಪ್ರಿಯತೆಯೊಂದಿಗೆ ಬೇಬಿಡಾಲ್ ಆದ್ಯಾ‌, ಬಾಲ‌ನಟಿಯಾಗಿ ಚಂದನವನ ಪ್ರವೇಶಿಸಿದಳು.‌‌‌

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್” ಚಿತ್ರದಲ್ಲಿ ಕಾಣಿಸಿಕೊಂಡಳು. ಹಾಗೆಯೇ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮಸೇನ ನಳ ಮಹಾರಾಜ’ ಚಿತ್ರದಲ್ಲೂ ಮುದ್ದಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾಳೆ. ಆ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

 

ಸದ್ಯ ನಟನೆ, ವಿದ್ಯಾಭ್ಯಾಸದ ಜತೆಗೆ ಆಲ್ಬಂ ಸಾಂಗ್ ನಿರ್ಮಾಣದಲ್ಲೂ ಬ್ಯುಸಿ‌ ಆಗಿದ್ದಾಳೆ.ಸಂಗೀತದ ಮೇಲೆ ಇನ್ನಷ್ಟುಹಿಡಿತ ಸಾಧಿಸಲು ಕಲಿಕೆಗೆ ಒತ್ತು ನೀಡಿದ್ದಾಳೆ. ಆದ್ಯಾಳ ಆಸಕ್ತಿಗೆ ತಕ್ಕಂತೆ ತರಬೇತಿ ನೀಡುತ್ತಿದ್ದೇವೆ ಎನ್ನುತ್ತಾರೆ ತಾಯಿ ಅಶ್ವಿನಿ ಉಡುಪಿ.ಸಿನಿಲಹರಿ‌ ಕಡೆಯಿಂದ ಬೇಬಿಡಾಲ್ ಆದ್ಯಾಗೆ ಹುಟ್ಟು ಹಬ್ಬದ ಶುಭಾಶಯ.

Categories
ಸಿನಿ ಸುದ್ದಿ

ಸರೋಜಮ್ಮನ ಮೊಮ್ಮಗಳು ಜಯಶ್ರೀಗೆ ಒಲಿದ ಅದೃಷ್ಟ!

ಹಾಟ್ ಫೋಟೋಶೂಟ್  ಮೂಲಕವೇ ಉದಯೋನ್ಮುಖ ನಟಿಗೆ ಸಿಕ್ಕಿತಾ ಅಂತಹದೊಂದು ಅವಕಾಶ ? 

ಮಾರಿ‌ಮುತ್ತು ಪಾತ್ರದ ಖ್ಯಾತಿಯ ಹಿರಿಯ ನಟಿ‌ ಸರೋಜಮ್ಮ ಅವರ ಮೊಮ್ಮಗಳು‌ ಹಾಗೂ‌ ಕನ್ನಡದ‌ ಉದಯೋನ್ಮುಖ ನಟಿ ಜಯಶ್ರೀ ಆರಾಧ್ಯ ಗೆ ಅದೃಷ್ಟ ಖುಲಾಯಿಸಿದೆ. ಕೊರೋನಾ ಸಂಕಷ್ಟದ ನಡುವೆಯೂ ಅವರಿಗೆ ‌ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗೆ ಹಾಟ್ ಫೋಟೋ ಶೂಟ್ ನಲ್ಲಿ ಪಡ್ಡೆ ಹುಡುಗರ ಎದೆಯೊಳಗೆ ಕಿಚ್ಚು ಹೊತ್ತುವ ಹಾಗೆ ಮಿರ ಮಿರ ಮಿಂಚಿದ ಕಾರಣವೋ, ಪ್ರತಿಭೆಗೆ ಒಲಿದು ಪ್ರತಿಫಲವೋ ಗೊತ್ತಿಲ್ಲ, ಬಹುಬೇಗ ಜಯಶ್ರೀ ಆರಾಧ್ಯ ಕನ್ನಡದಾಚೆ ಈಗ ಕಾಲಿವುಡ್ ಗೂ ಕಾಲಿಡುತ್ತಿರುವುದು ವಿಶೇಷ.

‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಹಾಗೂ ಅಧಿಕ ಪ್ರಸಂಗಿ ಚಿತ್ರಗಳ‌ ನಂತರವೀಗ ಜಯಶ್ರೀ, ಮೂರನೇ ಚಿತ್ರವೊಂದಕ್ಕೆ ನಾಯಕಿ ಆಗಿದ್ದಾರೆ.‌’ ಎ ವಿಲನ್ ಇನ್ ವಿಲ್ಲಾ ‘ ಎನ್ನುವುದು ಆ ಚಿತ್ರದ ಹೆಸರು.‌ಶುಕ್ರವಾರವಷ್ಟೆ ಆ ಚಿತ್ರದ ಮೊದಲ ಪೋಸ್ಟರ್ ರಿವೀಲ್ ಆಗಿದೆ. ನವ ಪ್ರತಿಭೆ ಅಭಿನವ್ ವಿಖ್ಯಾತ್ ಇದರ‌ ನಾಯಕ‌‌ ನಟ. ಕನ್ನಡದ ಜತೆಗೆ ಈ ಚಿತ್ರ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ. ವೃಂದ ಮಾಸ್ಟರ್ ನಿರ್ದೇಶನದ ಈ ಚಿತ್ರಕ್ಕೆ ದೀಪಾ ಪ್ರಶಾಂತ್ ಬಂಡವಾಳ ಹಾಕುತ್ತಿದ್ದಾರೆ. ‌ಉಳಿದಂತೆ‌ ನಟಿ ಜಯಶ್ರೀ ಪಾಲಿಗೆ ಇದು ಅದೃಷ್ಟದ ಅವಕಾಶ.

.  ಕಳೆದ ‌ವರ್ಷವಷ್ಟೇ ಪುಟ್ಟರಾಜು ಲವರ್ ಆಫ್ ಶಶಿಕಲಾ‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು.ಅ‌ ಚಿತ್ರ ತೆರೆ ಕಾಣುವ ಹೊತ್ತಿಗೆ ‘ ಅಧಿಕ ಪ್ರಸಂಗಿ’. ಹೆಸರಿನ ಹೊಸಬರ ಚಿತ್ರಕ್ಕೆನಾಯಕಿ‌ಆಗಿದ್ದರು.‌ ಕೊರೋನಾ ಕಾರಣ ಅದಿನ್ನೂ ಬಿಡುಗಡೆ ಆಗುವುದಕ್ಕೆ‌ ಸಿದ್ದತೆ ನಡೆಸಿರುವಾಗಲೇ, ದ್ವಿಭಾಷಾ ಚಿತ್ರವೊಂದಕ್ಕೆ ನಾಯಕಿ‌ಆಗಿದ್ದಾರೆ. ಅವರೇ ಹೇಳುವ ಹಾಗೆ ಇದೊಂದು‌ಅದೃಷ್ಟದ ಅವಕಾಶ‌.

‘ ನಿಜವಾಗಿಯೂ‌ ನನಗಿದು ‌ಅದೃಷ್ಟದ ಅವಕಾಶ. ಯಾಕಂದ್ರೆ ನಾನು ಇಷ್ಟು ಬೇಗ ಕಾಲಿವುಡ್ ಗೂ ಪರಿಚಯವಾಗಬಹುದು ಅಂತ ಯೋಚಿಸಿರಲಿಲ್ಲ.‌ಆದರೆ‌ ನಿರ್ದೇಶಕ ವೃಂದಾ ಮಾಸ್ಟರ್‌ ಕಡೆಯಿಂದಲೇ ಈ ಅವಕಾಶ ಬಂತು.‌ ಸಿನಿಮಾದ ಬಗ್ಗೆ ಹೇಳಿದರು.‌ ನಿರ್ಮಾಪಕರ‌ ಜತೆಗೂ ಮಾತುಕತೆ ನಡೆಯಿತು.‌ ಕತೆ‌ ಜತೆಗೆ ಪಾತ್ರದ ಬಗ್ಗೆ ಚರ್ಚೆ ಆಯಿತು. ಕತೆ‌ಜತೆಗೆ ಪಾತ್ರವೂ ಇಷ್ಟವಾಯಿತು. ಹಾಗಾಗಿ‌ಒಪ್ಪಿಕೊಂಡೆ’ ಎನ್ನುವ ‌ಜಯಶ್ರೀ ಅವರಿಗೆ ಪಾತ್ರ ಅಥವಾ ಕತೆ ಚೆನ್ನಾಗಿದೆ ಎನ್ನುವುದಕ್ಕಿಂದ  ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಎನ್ನುವುದೇ ಫುಲ್ ಎಕ್ಸೈಟ್ ಮೆಂಟ್ ತಂದಿದೆ.

Categories
ಸಿನಿ ಸುದ್ದಿ

ಎವಿಡೆನ್ಸ್‌ ಹಿಂದೆ ಬಂದ ಮಾನಸ ಜೋಶಿ

ವಿಭಿನ್ನ ಕ್ರೈಂ ಥ್ರಿಲ್ಲರ್ ನಲ್ಲಿ ರೋಬೋ ಗಣೇಶ್

ಮಾನಸ ಜೋಶಿ ಈ ಹೆಸರು ಕೇಳಿದಾಕ್ಷಣ , ಹಾಗೊಮ್ಮೆ ‘ಕಿರಗೂರಿನ ಗಯ್ಯಾಳಿಗಳು’ ಸಿನ್ಮಾ ನೆನಪಾಗುತ್ತೆ. ಪಕ್ಕಾ ಜಗಳಗಂಟಿ ಹೆಣ್ಣಾಗಿ ಗಮನ ಸೆಳೆದಿದ್ದ ಮಾನಸ ಜೋಶಿ ಆ ಬಳಿಕ ಹೊಸ ಬಗೆಯ ಕಥೆ, ಪಾತ್ರಗಳತ್ತ ಗಮನಹರಿಸಿದರು. ಈಗ ತಮಗೆ ಸರಿಹೊಂದುವ ಕಥೆ ,ಪಾತ್ರ ಹಾಗೂ ಒಳ್ಳೆಯ ತಂಡ ಸಿಕ್ಕ ಖುಷಿಯಲ್ಲಿ ಹೊಸದೊಂದು ಚಿತ್ರಕ್ಕೆ ಜೈ ಎಂದಿದ್ದಾರೆ.
ಹೌದು, ಮಾನಸ ಜೋಶಿ ಈ ಬಾರಿ ವಿಭಿನ್ನ ಕಥೆ, ಪಾತ್ರವಿರುವ ಚಿತ್ರ ಒಪ್ಪಿಕೊಂಡಿದ್ದು, ಹೊಸ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ ‘ಎವಿಡೆನ್ಸ್’ ಎಂದು ನಾಮಕರಣ ಮಾಡಲಾಗಿದೆ.

ಈ ಚಿತ್ರವನ್ನು ಪ್ರವೀಣ್ (ಪಿ ಆರ್) ನಿರ್ದೇಶನ ಮಾಡುತ್ತಿದ್ದಾರೆ. ಅವರದೇ ಶ್ರೀ ಧೃತಿ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ‘ಎವಿಡೆನ್ಸ್’ ಚಿತ್ರಕ್ಕೆ ಅರವಿಂದ್ ಕುಮಾರ್, ಸುರೇಂದ್ರ ಶೆಟ್ಟಿ, ನರಸಿಂಹಮೂರ್ತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಎರಡು ಮುಖ್ಯ ಪಾತ್ರಗಳಿವೆ. ಮಾನಸ ಜೋಶಿ ಜೊತೆ ರೋಬೊ ಗಣೇಶ್ ನಟಿಸುತ್ತಿದ್ದಾರೆ. ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದರೆ, ಮಾನಸ ಜೋಶಿ‌ ಮೊದಲ ಸಲ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಒಂದೇ ರೂಮ್ ನಲ್ಲಿ ಕಥೆ ನಡಯಲಿದೆ. ಎರಡು ತಾಸು ಇಡೀ ಚಿತ್ರ ಒಂದೇ ರೂಮ್ ನಲ್ಲಿ ಸಾಗಲಿದೆ ಎಂಬುದು ವಿಶೇಷ.


ಚಿತ್ರಕ್ಕೆ ರವಿಸುವರ್ಣ ಛಾಯಾಗ್ರಹಣವಿದೆ. ಇದು ಅವರ 25ನೇ ಚಿತ್ರ ಎಂಬುದು ಮತ್ತೊಂದು ವಿಶೇಷ.
ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ, ಸಾಹಿತ್ಯವಿದೆ.
ಸೆಪ್ಟೆಂಬರ್ 9ರಂದು ‘ಎವಿಡೆನ್ಸ್’ ಗೆ ಪೂಜೆ ನಡೆಯಲಿದೆ. ಇಡೀ ಸಿನಿಮಾ ಕೇವಲ 7 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ

error: Content is protected !!