Categories
ಸಿನಿ ಸುದ್ದಿ

ಮಂಗಳ ಹಿಂದೆ ನಿಂತ ಕುಣಿಗಲ್‌ ಹುಡುಗ- ಕನ್ನಡ ವೆಬ್‌ ಸೀರೀಸ್‌ನಲ್ಲಿ ಥ್ರಿಲ್ಲರ್‌ ಸ್ಟೋರಿ

ಈಗಂತೂ ಡಿಜಿಟಲ್‌ನದ್ದೇ ಸುದ್ದಿ. ಅದರಲ್ಲೂ ಈಗಿನ ಯೂಥ್‌ ಡಿಜಿಟಲ್‌ ವೇದಿಕೆಯನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಂತೂ ಈಗಾಗಲೇ ವೆಬ್‌ಸೀರೀಸ್‌ ಹವಾ ಜೋರಾಗಿಯೇ ಇದೆ. ಅಷ್ಟಕ್ಕೂ ಈ ವೆಬ್‌ ಸೀರೀಸ್‌ ನಲ್ಲಿ ಹೊಸಬರೇ ಇದ್ದಾರೆ ಅನ್ನೋದು ವಿಶೇಷ. ಆ ಮೂಲಕ ಕೆಲವರು ಸುದ್ದಿಯಾಗಿದ್ದಾರೆ ಕೂಡ. ಆ ಸಾಲಿಗೆ “ಮಂಗಳʼ ಹೆಸರಿನ ವೆಬ್‌ಸೀರೀಸ್‌ ಕೂಡ ಸೇರಿದೆ. ಹೌದು, ಈಗಾಗಲೇ “ಮಂಗಳʼ ಎಂಬ ವೆಬ್‌ ಸೀರೀಸ್‌ ಹಿಂದೆ ಹೊಸಬರ ತಂಡ ಅಣಿಯಾಗಿದೆ. ಈಗಾಗಲೇ “ಮಂಗಳ” ವೆಬ್‌ ಸೀರೀಸ್‌ ನ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದೆದು, ಆ ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ.
ಅಂದಹಾಗೆ, ಈ “ಮಂಗಳʼ ವೆಬ್‌ಸೀರೀಸ್‌ಗೆ ಪೃಥ್ವಿ ಕುಣಿಗಲ್ ನಿರ್ದೇಶಕರು. ಕಥೆ, ಚಿತ್ರಕಥೆ ಇವರೇ ಬರೆದಿದ್ದಾರೆ. ಜೆ.ಜಿ.ಪ್ರೊಡಕ್ಷನ್ಸ್‌ ನಡಿ ಈ ವೆಬ್‌ ಸೀರೀಸ್‌ ನಿರ್ಮಾಣ ಮಾಡಲಾಗಿದೆ. “ಮಂಗಳ” ಕುರಿತು ನಿರ್ದೇಶಕ ಪೃಥ್ವಿ ಕುಣಿಗಲ್‌ ಹೇಳುವುದೇನು ಗೊತ್ತಾ? ಈ ವೆಬ್‌ ಸೀರೀಸ್ ನಲ್ಲಿ ಏಳು ಎಪಿಸೋಡ್‌ಗಳು ಇರಲಿವೆ. ಇದೊಂದು ಮಂಗಳಮುಖಿಯರ ಕುರಿತು ಸಾಗುವ ಕಥೆ. ಮಂಗಳ ಮುಖಿ ಅವರ ಬಗ್ಗೆ ಮಾಡುತ್ತಿರುವುದರಿಂದ ಸಾಕಷ್ಟು ಸಂಶೋಧನೆ ನಡೆಸಿ, ಚಿತ್ರಕ್ಕೆ ಕೈ ಹಾಕಿದ್ದು, ಮಂಗಳ ಮುಖಿಯರು ವಾಸ ಮಾಡುವಂತಹ ಸ್ಥಳಗಳಿಗೆ ಹೋಗಿ, ಅವರ ಹಾವ-ಭಾವ, ನೋವು-ನಲಿವು ಸೇರಿದಂತೆ ಅವರ ಕಷ್ಟ-ಸುಖ ಎಲ್ಲವನ್ನೂ ಆಲಿಸಿ, ಒಂದು ವರ್ಷಗಳ ಕಾಲ ಗಮನಿಸಿ, ಸಂಶೋಧನೆಯನ್ನೂ ನಡೆಸಿ, ಈಗ ವೆಬ್‌ ಸೀರೀಸ್‌ ಮಾಡಲಾಗುತ್ತಿದೆ. ಈ “ಮಂಗಳʼ ವೆಬ್‌ ಸೀರೀಸ್‌ ಒಂದು ಥ್ರಿಲ್ಲರ್‌ ಸ್ಟೋರಿ. ಒಂದು ಕೊಲೆಯ ಸುತ್ತ ನಡೆಯೋ ಕಥೆ ಇದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ, ಮಂಗಳ ಮುಖಿಯೊಬ್ಬರು ಸಿಲುಕುತ್ತಾರೆ. ಅದರಿಂದ ಅವರು ಹೇಗೆಲ್ಲಾ ಪರಿತಪಿಸುತ್ತಾರೆ. ಆಮೇಲೆ ಅದರಿಂದ ಅವರು ಹೊರ ಬರುತ್ತಾರೋ ಇಲ್ಲವೋ ಎಂಬುದು ಸಸ್ಪೆನ್ಸ್.
ವಿಶೇಷವೆಂದರೆ, “ಮಂಗಳ” ಈಗಾಗಲೇ ಮಾರತಹಳ್ಳಿ ಸುತ್ತಮುತ್ತ ಹಂತದ ಚಿತ್ರೀಕರಣ ಮುಗಿಸಿದೆ. ಇಷ್ಟರಲ್ಲೇ ದೂರದ ಕೊಲ್ಕೊತ್ತಾದಲ್ಲೂ ಹೋಗಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕ ಪೃಥ್ವಿ ಕುಣಿಗಲ್‌ ಅವರದು. ಅಂದಹಾಗೆ, ಈ ವೆಬ್‌ ಸೀರೀಸ್‌ ನಲ್ಲಿ ಅಜಯ್‌ ರಾಜ್‌, ವಿನಯ್‌ ಕೃಷ್ಣಸ್ವಾಮಿ, ಕಾವ್ಯಾಶಾಸ್ತ್ರಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ, ಬೇಬಿ ಅಂಕಿತ, ಮಂಜು ಪಾವಗಡ, ಅಮರ್ ನಾಥ್‌, ಕಿರಣ್ ಬಗಾಡೆ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಆನಂದ್‌ ಸುಂದರೇಶ ಕ್ಯಾಮೆರಾ ಹಿಡಿದರೆ, ಮಯೂರೇಶ್‌ ಸಂಗೀತವಿದೆ. ಇನ್ನು ಪ್ರಮೋದ್‌ ಮರವಂತೆ ಸಂಭಾಷಣೆ ಬರೆದಿದ್ದಾರೆ.  ಮಹೇಶ್ ತೊಗಟ ಸಂಕಲನವಿದೆ. ಒಟ್ಟಾರೆ, ಥ್ರಿಲ್‌ ಎನಿಸುವ ವೆಬ್‌ ಸೀರೀಸ್‌ ಕಟ್ಟಿಕೊಡುವ ಉತ್ಸಾಹದಲ್ಲಿರುವ ಪೃಥ್ವಿ ಮತ್ತು ತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.

Categories
ಸಿನಿ ಸುದ್ದಿ

ವಿಷ್ಣುವರ್ಧನ್ ಅಲ್ಲ, ಇದು ಟಿಪ್ಪುವರ್ಧನ್!

 ಟ್ರೈಲರ್ ಬಿಡುಗಡೆ ಮೂಲಕ‌ ಸದ್ದು ಮಾಡಿದ ಏಕವ್ಯಕ್ತಿ ಸಿನಿಮಾ

ಕೋರೋನಾ ಸಂಕಷ್ಟದ ಪರಿಣಾಮ‌ ಚಿತ್ರಮಂದಿರಗಳು ಬಾಗಿಲು ಮುಚ್ಚಿರುವುದು ನಿಮಗೆ ಗೊತ್ತಿರುವ ವಿಚಾರ. ಹಾಗಾಗಿ ಈಗ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆಗೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ಒಟಿಟಿ‌ ಮೂಲಕ ಬಿಡುಗಡೆ ಆಗುತ್ತಿರುವ ಸಿನಿಮಾಗಳ‌ಸಾಲಿಗೆ ಈಗ ಹೊಸ ಸೆರ್ಪಡೆ ಟಿಪ್ಪುವರ್ಧನ. ಇದು ನೈಜ ಘಟನೆಗಳ ಸುತ್ತಲ‌ಕಥಾ ಹಂದರದ ಚಿತ್ರ.  ‘V4 streem’ OTT ಮೂಲಕ ಡಾ.ವಿಷ್ಣುವರ್ಧನ್ ಹುಟ್ಟಹಬ್ಬದಂದು (18.9.20) ವಿಶ್ವದಾದ್ಯಂತ  ಬಿಡುಗಡೆ ಆಗುತ್ತಿದೆ‌.

ಸಿನಿಮಾಕ್ಕೆ ರಚನೆ,ಚಿತ್ರಕತೆ, ಸಂಭಾಷಣೆ ಜತೆಗೆ ಎರಡು ಹಾಡುಗಳಿಗೆ ಸಾಹಿತ್ಯ ಬರೆದು ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಚಿತ್ರದ ಪ್ರಮುಖ‌ಪಾತ್ರಕ್ಕೆ ಬಣ್ಣ ಹಚ್ಚಿದವರು ಎಂ.‌ಟಿಪ್ಪುವರ್ಧನ್.

ಮೂರು ಹಂತದಲ್ಲಿ ಬರುವ ಕತೆಯು ರಾಜಕೀಯ ವ್ಯಕ್ತಿಗಳು ಜನತೆಗೆ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕೆಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಹಿಂದು-ಮುಸ್ಲಿಂ ವಿಭಿನ್ನ ಜಾತಿಯ ಗೆಳೆಯರ ಗೆಳೆತನದ ನಂಟು, ಪ್ರೀತಿಯನ್ನು ಹೇಳಲಾಗಿದೆ. ಭ್ರಷ್ಟ, ಪ್ರಾಮಾಣಿಕ ರಾಜಕಾರಣಿಗಳ ಮಧ್ಯೆ ಘರ್ಷಣೆ ಆದಾಗ, ಅದಕ್ಕೆ ಒಳ್ಳೆಯ ಉತ್ತರವನ್ನು ಶಿಸ್ತಿನ ರಾಜಕಾರಣಿ ಹೇಳುತ್ತಾ ಹೋಗುತ್ತಾನೆ. ಮತ್ತು ಐಎಎಸ್ ಹುಡುಗನ ಕನ್ನಡ ಪ್ರೇಮ ದಿಟ್ಟತನದ ಅಧಿಕಾರ ಸೇವೆ ಎತ್ತಿ ತೋರಿಸಿರುವುದು ಹಿರಿಮೆಯಾಗಿದೆ.

ತಾರಗಣದಲ್ಲಿ ಅರಸಿಕೆರೆಕೇಶವಮೂರ್ತಿ, ಇನ್ಸಾಫ್‌ಖಾನ್, ಸೂರಜ್‌ಟಿಪ್ಪು, ವಟಗಲ್‌ನಾಗರಾಜ್. ತೇಜಸ್ವಿನಿ, ಗೀತಪ್ರಿಯ, ರಮ್ಯ, ಮೈಕಲ್‌ಮಧು. ಡಾ.ಚಿಕ್ಕಹೆಜ್ಜಾಜಿಮಹಾದೇವ್, ನಂದಕುಮಾರ್ ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ಆರ್.ದಾಮೋದರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಬಾಬು, ಸಂಕಲನ ಕವಿತಾಭಂಡಾರಿ ಅವರದಾಗಿದೆ. ಬೆಂಗಳೂರು, ಗಜೇಂದ್ರಗಡ, ಕೋಲಾರ ಮತ್ತು ಬಂಗಾರಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆರ್.ಬಿ.ನಡಾಫ್ ಗಜೇಂದ್ರಗಡ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಟಿಪ್ಪುವರ್ಧನ್ ಅವರು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಅವರ ಹುಟ್ಟಹಬ್ಬದ ಪ್ರಯುಕ್ತ ಸಿನಿಮಾವನ್ನು ಸಾಹಸ ಸಿಂಹನಿಗೆ ಅರ್ಪಿಸುವ ಸಲುವಾಗಿ ಅದೇ ದಿನದಂದು ಓಟಿಟಿ ಮೂಲಕ ಜನರಿಗೆ ತೋರಿಸುತ್ತಿದ್ದಾರೆ.
ಪ್ರಚಾರದ ಸಲುವಾಗಿ ಮಂಗಳವಾರದಂದು ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಚಿತ್ರತಂಡದ ಹಾಜರಿ ಇತ್ತು. ತಂಡಕ್ಕೆ ಶುಭಹಾರೈಸಲು ನಾಗೇಂದ್ರಅರಸು, ನಟ ಅಮಿತ್, ವಿಸ್ಟ್ರೀಮ್ ಪದಾದಿಕಾರಿಗಳು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನನ್ನೇನು‌ ಹೆದ್ರಸ್ತೀರಾ – ಗುಡುಗಿದ ವಿಲನ್ !

ಕೆಜಿಎಫ್ – 2 ನಲ್ಲಿ ಪ್ರಕಾಶ್ ರೈ – ವಿರೋಧಿಸಿದವರಿಗೆ ಬಹುಭಾಷಾ ನಟ ರೈ ಕೇಳಿದ ಪ್ರಶ್ನೆಯೇನು ಗೊತ್ತಾ?

ಪ್ರಕಾಶ್ ರೈ ಅವರನ್ನು‌ ನಿಮ್ಗೆ ನೋಡ್ಲಿಕ್ಕೆ ಇಷ್ಟ ಇಲ್ವಾ ನೋಡ್ಬೇಡಿ, ಅದು ನಿಮ್ಮ ಹಕ್ಕು….

– ‘ಕೆಜಿಎಫ್ 2 ‘ಚಿತ್ರದಲ್ಲಿ ತಾವು‌ ನಟಿಸುತ್ತಿರುವುದರ ವಿರುದ್ಧ ಸೋಷಲ್ ಮೀಡಿಯಾದಲ್ಲಿ ವ್ಯಕ್ತವಾದ ವಿರೋಧಕ್ಕೆ ನಟ ಪ್ರಕಾಶ್ ರೈ ನೀಡಿದ ಮೊದಲ ಪ್ರತಿಕ್ರಿಯೆ ಇದು.
ಖಾಸಗಿ ವಾಹಿನಿಯೊಂದಕ್ಕೆ‌ ನೀಡಿದ ಸಂದರ್ಶ‌ನದಲ್ಲಿ ಕೋರೋನಾ ನಂತರದ ವಿದ್ಯಮಾನಗಳು, ಆನಂತರ ಮತ್ತೆ ಕೆಜಿಎಫ್ 2 ಚಿತ್ರದೊಂದಿಗೆ ಕ್ಯಾಮೆರಾ ಎದುರಿಸಿದ ಕ್ಷಣಗಳನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದಾರೆ ನಟ ಪ್ರಕಾಶ್.

ನೋಡಿ, ನಾನು ಸಾಹಿತ್ಯ ಓದಿಕೊಂಡು ಕೆಳಗಡೆಯಿಂದ ಮೇಲೆ ಬಂದವನು‌ನಾನು. ತುಂಬಾ ಈಜಿ ಇತ್ತು. ಅದು ಹೇಗೆ? ಒಬ್ಬ ಪ್ರತಿಭಾವಂತ ನಟ, ಒಳ್ಳೆಯವನು, ಚೆನ್ನಾಗಿದ್ದಾನೆ ಅಂತ ಜನರ ಮೆಚ್ಚುಗೆಗಷ್ಟೇ ಸಿಮೀತವಾಗಿದ್ದರೆ ನನಗೇನು‌ ಬದುಕು‌ ಕಷ್ಟವೇ ಇರಲಿಲ್ಲ. ಅದ್ರೆ ನಾನು ಅದನ್ನು ದಾಟಿ, ನನ್ನನ್ನು ನಾನು‌ ಕಂಡುಕೊಂಡಿದ್ದೇನೆ. ಹಾಗಾಗಿ ಇದೆಲ್ಲ ವಿವಾದ ಇರಬಹುದು. ಕೆಲವರಿಗೆ ಇಷ್ಟವಾಗದೆ ಇರಬಹುದು ಎನ್ನುವ ಮೂಲಕ ತಾವೇನು‌ ತಮ್ಮ ವ್ಯಕ್ತಿತ್ವವೇನು ಎಂಬುದನ್ನು ತೆರೆದಿಡುತ್ತಾರೆ ಪ್ರಕಾಶ್ ರೈ.

ಇನ್ನು’ ಕೆಜಿಎಫ್ 2′ ನಲ್ಲಿ ಅವರಿದ್ದಾರೆನ್ನುವುದಕ್ಕೆ ವ್ಯಕ್ತವಾದ ವಿರೋಧಕ್ಕೆ ತಮ್ಮದೇಯಾದ ರೀತಿಯಲ್ಲಿ ಉತ್ತರ ನೀಡುತ್ತಾರೆ ಪ್ರಕಾಶ್ ರೈ.
ಯಾಕೆ, ನಾನೇಕೆ ನಟಿಸಬಾರದು? ನಿಮ್ಗೆ ಅಂಥದ್ದೇನು‌ ಮಾಡಿದ್ದೇನೆ? ನಮಗೂ ನಿಮಗೂ ಏನಾದ್ರೂ ಪರಿಚಯ ಇದೆಯಾ? ಇಲ್ಲ, ನಿಮ್ಮನೇ ದರೋಡೆ ಮಾಡಿದ್ದೇನಾ? ಇಲ್ಲ. ಹಾಗಾದ್ರೆ ಏನು? ನಾನು ವ್ಯವಸ್ಥೆ ಕುರಿತುಒಂದಷ್ಟು ಪ್ರಶ್ನೆ ಮಾಡಿದ್ದೇನೆ. ಆ ಪ್ರಶ್ನೆಗಳು ಸರಿ‌ಯಿದ್ದರೆ ಸರಿ ಅನ್ನಿ, ಇಲ್ಲ ಅಂದ್ರೆ ತಪ್ಪ ಅನ್ನಿ. ಅದು ಬಿಟ್ಟು ನೀನು ಕೆಲಸ ಮಾಡೋಂಗಿಲ್ಲ.‌ಇಲ್ಲಿ‌ಬದುಕುವುದಕ್ಕೆ ಯೋಗ್ಯತೆ ಇಲ್ಲ.ಪಾಕಿಸ್ತಾನಕ್ಕೆ ಹೋಗು ಅಂತ ಹೇಳೋದು ಎಷ್ಟು ಸರಿ. ಇಷ್ಟಕ್ಕೂ‌ನಾನೇಕೆ ಪಾಕಿಸ್ತಾನಕ್ಕೆ ಹೋಗಬೇಕು? ದೇಶ ಬಿಟ್ಟು ಹೋಗು‌ಅಂದ್ರೆ ನಾನೇಕೆ ಹೋಗಬೇಕು ಅಂತೀನಿ. ನಾನು, ನನ್ನ ಹೆಂಡ್ತಿ, ಮಕ್ಕಳು, ಮನೆಯವರು ..ಸೇರಿ‌ನಾನು ಕೂಡ ಎಲ್ಲತರನೇ ಅಲ್ವಾ? ಎನ್ನುವುದು ಪ್ರಕಾಶ್ ರೈ ನೋವಿನ‌ಮಾತು.


ಆ‌ಸಿನಿಮಾನೇನು‌ನಿಮ್ಮ ವಿರುದ್ಧ ಮಾಡ್ತಿದ್ದೇನಾ, ಅದೊಂದುಬಲವನ್ನು ಪ್ರಯೋಗಿಸ್ತಿದ್ದೇನಾ,ಅಲ್ಲ. ಆ ನಿರ್ದೇಶಕ ಏನ್ ಮಾಡ್ದಾ, ಆ ಕತೆ ಏನ್ ಮಾಡ್ತು, ಆ ನಿರ್ಮಾಪಕ ಏನ್ ಮಾಡ್ದಾ, ಅಲ್ಲಿ ಕೆಲಸ ಮಾಡೋ‌ಜನ್ರು ಏನ್ ಮಾಡಿದ್ರು? ಅಂದ್ರೆ ಒಂದ್ ಸಿನಿಮಾದಲ್ಲಿ ಯಾರ್ ಇರ್ಬೇಕು, ಯಾರ್ ಇರ್ಬಾರ್ದು ಅಂತ ನೀವ್ ಡಿಸೈಡ್ ಮಾಡ್ತೀರಾ? ನಿಮ್ಗೆ ಪ್ರಕಾಶ್ ರೈ ನ ನೋಡ್ಲಿಕ್ಕೆ ಇಷ್ಡ ಇಲ್ವಾ, ನೋಡ್ಬೀಡಿ, ಅದು ನಿಮ್ಮ ಹಕ್ಕು. ನೋಡಿ, ನಮ್ಮಿಂದ ಸಿನಿಮಾ‌ಅಲ್ಲ,ಪ್ರೇಕ್ಷಕರಿಂದ ಸಿನಿಮಾ.‌ ಇವತ್ತು ಆರು ತಿಂಗಳು ಏನಾಯ್ತು? ನಾನು ಒಬ್ಬ ಹೀರೋ ಹತ್ರ ಮಾನಾಡ್ತಾ ಹೇಳಿದೆ. ನಾನೊಬ್ಬ ದೊಡ್ಡ ನಟ, ನೀನು ದೊಡ್ಡ ಹೀರೋ. ಸಿನಿಮಾ‌ಇಲ್ಲ, ಕ್ಯಾಮೆರಾ ಇಲ್ಲ. ನಾವ್ಯಾರು, ಸಾಮಾನ್ಯ ಮನುಷ್ಯರೇ ಅಲ್ವಾ.ಮತ್ತೆ. ಅದರಾಚೆ, ಇವ್ನು ಧರ್ಮದ ವಿರುದ್ಧ ಇದವನು,ನನ್ನ ಧರ್ಮದವನಲ್ಲ, ನಮ್ಮ ನಾಯಕನ‌ಪರವಾಗಿದ್ದವನಲ್ಲ.ಒಂದು ವ್ಯವಸ್ಥೆ ಯನ್ನು ಒಪ್ಕೊಳ್ಳಲ್ಲ, ಅಂತ ಎಲ್ಲರೂ ಸೇರಿಕೊಂಡು ನಿರಾಕರಿಸ್ತೀವಿ ಅಂತೀರಾ.‌ಅಂದ್ರೆ ಹೆದಸ್ತೀರಾ, ಉಚ್ಚಾಟನೆ ಮಾಡ್ತೀರಾ,ಹಾಗಾದ್ರೂ ಬಾಯಿ‌ಮುಚ್ಚಲಿ ಅಂತೀರಾ, ಅಂದ್ರೆ ನೀವ್ ಬಳಸ್ತೀರೋ ದಾರಿ ಏನು? ಅದು ಹಿಂಸೆ ಅಲ್ವಾ.‌ಅದು ಅಸೂಕ್ಷ್ಮತೆ ಅಲ್ವಾ. ಒಬ್ರ ಜತೆ ವಾದ ಮಂಡಿಸುವಾಗ ಚರ್ಚೆ ಕನ್ವಿಷನ್ಲ್ ಆಗಿರಬೇಕಲ್ವಾ. ಬದಲಿಗೆ ಹೆಸರಿಸಿ, ಹೊಡೆದು,ಅನ್ನ ಹಾಕದೆ, ಮೂಲೆಗೆ ತಳ್ಳಿ, ಕೆಲಸ ಕೊಡದೆ‌ಮನೆಗೆ ಓಡಿಸಿ ಇನ್ನೇನೋ‌ಮಾಡ್ತೀವಿ ಅಂದ್ರೆ ಅದಲ್ಲ‌ ಸಂವಾದ. ನಾನು‌ಕೊರೋನಾ ಟೈಮ್ ನಲ್ಲಿ ನೂರಾರು ಮಂದಿ ಅಸಹಾಕರನ್ನು ಬಸ್ ಹತ್ತಿಸಿ ಕಳುಹಿಸುವಾಗ ಅವರನ್ನು ಯಾವ್ ಜಾತಿ ಅಂತ ನಾನು ಕೇಳಲ್ಲಿಲ್ಲ.‌ಅದನ್ನ‌ಮೆಚ್ಚಿ ಕೊಳ್ತೀರಿ, ಅದೇ ಕೆಟ್ಟದ್ದನ್ನು‌ನಾನು ಪ್ರಶ್ನಿಸಿದಾಗ ಬಹಿಷ್ಕಾರ‌ಮಾತು ಹೇಳ್ತೀರಿ. ಇದಲ್ಲ‌ವಾದ- ಸಂವಾದ’ ಎನ್ನುವ ಮೂಲಕ ವಿರೋಧಿಗಳನ್ನು ಪ್ರಶ್ನಿಸುತ್ತಾರೆ ಪ್ರಕಾಶ್ ರೈ.

Categories
ಸಿನಿ ಸುದ್ದಿ

ಕಬಿನಿಯಲ್ಲಿ ಪ್ರದೀಪ್ ವರ್ಮಾ ಸಂಗೀತ ನಿರ್ದೇಶಕನ ಹೊಸ ಚಿತ್ರ

 

ಪ್ರದೀಪ್ ವರ್ಮ ಅವರೀಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. (ಸೆ. 8) ಕನ್ನಡ,ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಪ್ರದೀಪ್ ವರ್ಮ, ನಾಯಕ ಕಮ್ ನಿರ್ದೇಶಕರೂ ಹೌದು. ಕನ್ನಡದ ಅನೇಕ ಆಲ್ಬ ಸಾಂಗ್ ಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಪ್ರದೀಪ್ ವರ್ಮ ಸದ್ಯಕ್ಕೆ ವಿನೋದ್ ಪ್ರಭಾಕರ್ ಸಿನಿಮಾವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ.ಅವರ ಹುಟ್ಟುಹಬ್ಬದ ದಿನದಂದು ಹೊಸದೊಂದು ಚಿತ್ರ ಅನೌನ್ಸ್ ಮಾಡಿದ್ದಾರೆ.ಹೌದು, ಪ್ರದೀಪ್ ವರ್ಮ ಸದಾ ಉತ್ಸಾಹದಲ್ಲೇ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುತ್ತಾರೆ. ಈಗ ‘ಕಬಿನಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿರುವುದು ವಿಶೇಷ.ಈ ಚಿತ್ರವನ್ನು ಕಿರಣ್ ನಿರ್ದೇಶನ ಮಾಡುತ್ತಿದ್ದಾರೆ.ಡೇಸಿಸ್ ಇಂಟರ್ನ್ಯಾಷನಲ್ ಪಿಕ್ಚರ್ಸ್ ಮೂಲಕ ಅಕ್ಬರ್ ಖಾನ್ ಮತ್ತು ಸಂಜಯ್ ವಿಜಯ್ ಕುಮಾರ್ ಅವರ ನಿರ್ಮಾಣವಿದೆ. ಭೂಮಿಕಾ ಪ್ರೊಡಕ್ಷನ್ಸ್ ಅರ್ಪಿಸುತ್ತಿದೆ.ಪ್ರದೀಪ್ ವರ್ಮ ಸಂಗೀತವಿದೆ. ಸಾಯಿ ಕಿರಣ್ ಛಾಯಾಗ್ರಹಣವಿದೆ. ಗೌಸ್ ಪೀರ್, ಸಂತೋಷ್ ವೆಂಕಿ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಮೆಡಿಷನ್ ಮಾಫಿಯಾದ ‘ವೀರಪುತ್ರ’

ನೈಜ ಘಟನೆಯ ಸಿನಿಮಾ, ವಿಜಯ್ ಪಾತ್ರಕ್ಕೆ ತ್ರಿಬಲ್ ಶೇಡ್

Categories
ಸಿನಿ ಸುದ್ದಿ

ಬರಲು ರೆಡಿಯಾದ ಮಹಿಷಾಸುರ

ಇದು ತ್ರಿಕೋನ ಪ್ರೇಮ‌ಕತೆಯ ಸಮರ

ಹೊಸಬರ ಮಹಿಷಾಸುರ ತೆರೆಗೆ ಬರಲು ರೆಡಿಯಾಗಿದ್ದಾನೆ. ಅಂದ ಹಾಗೆ ,ಇದು ಮೆಳೆಕೋಟೆ ಮತ್ತು ಮೈತ್ರಿ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣವಾದ ಮಹಿಷಾಸುರ ಚಿತ್ರದ ಸದ್ಯದ ವಿಚಾರ. ಸದ್ಯಕ್ಕೆ ಈ ಚಿತ್ರದ ಬಿಡುಗಡೆ ದಿನಾಂಕ‌ ಫಿಕ್ಸ್ ಆಗಿಲ್ಲ. ಆದರೆ ಸದ್ಯದಲ್ಲಿಯೇ ಚಿತ್ರವನ್ನು ಚಿತ್ರಮಂದಿರಕ್ಕೆ ತರಲು ಚಿತ್ರ ತಂಡ ಸಜ್ಜಾಗಿದೆ.
ಈಗಾಗಲೇ ಚಿತ್ರದ ಟ್ರೇಲರ್ ಕೂಡ ಹೊರಬಂದಿದೆ. ಜತೆಗೆ ಸೆನ್ಸಾರ್ ಮುಗಿದು , ಅಲ್ಲಿಂದ ಯು /ಎ ಪ್ರಮಾಣ ಪತ್ರ ಸಿಕ್ಕಿದೆ.‌ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಮೆಚ್ಚುಗೆಯ ಮಾತು ಹೇಳಿದ್ದು, ಚಿತ್ರತಂಡಕ್ಕೂ ಖುಷಿ ಕೊಟ್ಟಿದೆ. ಇನ್ನು ಚಿತ್ರದ ಕತೆ ಮತ್ತು ತಾರಾಗಣ ಎಲ್ಲವೂ ಹೊಸತು. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಸೇಡಿನ ಕತೆ. ಅದು ಪ್ರೇಮದ ಸುತ್ತಲ ಸಮರ. ಅದಕ್ಕೆತ್ರಿಕೋನ ಪ್ರೇಮಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ‌.ನಿರ್ದೇಶಕರು.

ಅವರ ಪ್ರಕಾರ ಇದು ನಿಜ ಜೀವನದಲ್ಲಿ ನಡೆದ ಘಟನೆ. ಅದರ ಸುತ್ತ ಸಿನಿಮಾ ಅಂಶಗಳನ್ನು ಸೇರಿಸಿದ್ದಾರಂತೆ. ನಿರ್ದೇಶಕ ಉದಯ ಪ್ರಸನ್ನ ಅವರೇ ಚಿತ್ರಕ್ಕೆ ಕಥೆ ಚಿತ್ರಕಥೆ‌ಬರೆದು, ನಿರ್ದೇಶನ ಮಾಡಿದ್ದಾರಂತೆ. ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ ನಾಗಸಂದ್ರ, ಮೈತ್ರಿ ಮಂಜುನಾಥ್ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ಅರ್ಜುನ್, ಬಿಂದುಶ್ರೀ, ಮಂಜು‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಅವರೊಂದಿಗೆ ರಘು ಪಾಂಡೇಶ್ವರ, ರಾಕ್ ಲೈನ್ ಸುಧಾಕರ್, ಮಾಸ್ಟರ್ ತುಷಾರ್, ಮಾಸ್ಟರ್ ಸುಜಿತ್, ರವಿಚಂದ್ರ ಮುಂತಾದವರ ತಾರಾಬಳಗವಿದೆ.

ಚಿತ್ರಕ್ಕೆ ಸುನಿಲ್ ಕೌಶಿಕ್, ಸಾಯಿಕಿರಣ್ ಸಂಗೀತ, ಕೃಷ್ಣ ಛಾಯಾಗ್ರಹಣ, ರಾಘವೇಂದ್ರ ವಿ. ಹಿನ್ನೆಲೆ ಸಂಗೀತ, ವೆಂಕಿ ಡಿವಿಡಿ ಸಂಕಲನ, ರಾಕಿ ರಮೇಶ್ ಸಾಹಸ, ಸುಜಿತ್ ಕಿಶೋರ್ ನೃತ್ಯ ನಿರ್ದೇಶನ, ವಿರಾಟ್ ರಾಜು ಸಂಭಾಷಣೆ ಚಿತ್ರಕ್ಕಿದೆ.‌ಎಲ್ಲವೂ ಅಂದುಕೊಂಡಂತಾದರೆ ಈ ಚಿತ್ರವು ನವೆಂಬರ್ ಕೊನೆ ವಾರ, ಇಲ್ಲವೇ ಡಿಸೆಂಬರ್‌ ಮೊದಲ‌ವಾರದಲ್ಲೇ ತೆರೆಗೆ ಬರಲಿದೆಯಂತೆ.

Categories
ಸಿನಿ ಸುದ್ದಿ

ರಾಜೇಂದ್ರ ಸಿಂಗ್‌ ಬಾಬು ಕಂಡಂತೆ ವಿಷ್ಣು… ಕಾದಂಬರಿ ಚಿತ್ರಕ್ಕೆ ವಿಷ್ಣು ಸರಿ ಆಯ್ಕೆ

ಇದು ಸಿನಿಲಹರಿ ವಿಶೇಷ..

 

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮತ್ತು ಡಾ.ವಿಷ್ಣುವರ್ಧನ್‌ ಅವರ ನಡುವಿನ ಗೆಳೆತನಕ್ಕೆ ನಾಲ್ಕು ದಶಕಗಳು ಕಳೆದಿವೆ. ಇವರಿಬ್ಬರ ಗೆಳೆತನಕ್ಕೆ ಒಂದು ಕಲರ್ ಫುಲ್‌ ಇತಿಹಾಸವೇ ಇದೆ. ಇಬ್ಬರೂ ಬಾಲನಟರಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಅತಿಯಾದ ಸ್ನೇಹವಿತ್ತು. ಆಗಾಗ ಮುನಿಸು ಬರುತ್ತಿತ್ತು. ಆದರೆ, ಅದು ಕೇವಲ ಆ ಕ್ಷಣಕ್ಕೆ ಮಾತ್ರ. ಅಷ್ಟೇ ಸಲುಗೆಯಿಂದಿದ್ದ ಈ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಜೋಡಿ ಎನಿಸಿಕೊಂಡವರು. ಅಷ್ಟೇ ಅಲ್ಲ, ಹಲವಾರು ಸಕ್ಸಸ್‌ ಸಿನಿಮಾಗಳನ್ನು ಕೊಟ್ಟವರು. ವಿಷ್ಣುವರ್ಧನ್‌ ವ್ಯಕ್ತಿತ್ವ. ಅವರೊಂದಿಗಿನ ಒಡನಾಟ ಮತ್ತು ಅವರೊಳಗಿನ ಕಲಾವಿದನ ಕುರಿತು ರಾಜೇಂದ್ರ ಸಿಂಗ್‌ ಬಾಬು ಆಪ್ತ ಮಾತು.

 

ನಾನೂ ವಿಷ್ಣು ಬಾಲನಟರಾಗಿ ನಟಿಸಿದ್ದೆವು…

*ನಮ್ಮ ಫ್ಯಾಮಿಲಿಗೂ ಡಾ.ವಿಷ್ಣುವರ್ಧನ್‌ ಫ್ಯಾಮಿಲಿಗೂ ಅವಿನಾಭಾವ ಸಂಬಂಧವಿದೆ. ಕಾರಣ, ವಿಷ್ಣುವರ್ಧನ್‌ ಅವರ ತಂದೆ ಮತ್ತು ನಮ್ಮ ತಂದೆ ಇಬ್ಬರ ನಡುವೆ ಸ್ನೇಹವಿತ್ತು. ಸ್ನೇಹ ಅಷ್ಟೇ ಅಲ್ಲ, ನಮ್ಮ ಕಂಪೆನಿಗಳಲ್ಲಿ ವಿಷ್ಣುವರ್ಧನ್‌ ಅವರ ತಂದೆ ಕೆಲಸ ಮಾಡಿದ್ದರು. ಅವರ ತಂದೆ ಒಬ್ಬ ಒಳ್ಳೆಯ ಬರಹಗಾರರು ಮತ್ತು ಕಲಾವಿದರಾಗಿದ್ದರು. ಅವರಷ್ಟೇ ಅಲ್ಲ, ವಿಷ್ಣು ಸಹೋದರಿ ರಮಾ ಕೂಡ ನಮ್ಮ ಬ್ಯಾನರ್‌ನಲ್ಲಿ ತಯಾರಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. “ಶಿವಶರಣೆ ನಂಬೆಕಾʼ ಚಿತ್ರದಲ್ಲಿ ಅವರು ಅನಂತಸ್ವಾಮಿ ಹಾಡಿದ ಹಾಡೊಂದಕ್ಕೆ ಡ್ಯಾನ್ಸ್‌ ಮಾಡಿದ್ದರು. ವಿಷ್ಣುವರ್ಧನ್‌ ಮತ್ತು ನಾನು ಚಿತ್ರವೊಂದರಲ್ಲಿ ಬಾಲನಟರಾಗಿಯೂ ನಟಿಸಿದ್ದೆವು. ಅಲ್ಲಿಂದ ನಮ್ಮ ಗೆಳೆತನ ಶುರುವಾಯ್ತು. ನಮ್ಮಿಬ್ಬರ ಫ್ಯಾಮಿಲಿಯ ಸಂಬಂಧ ಕೂಡ ಗಟ್ಟಿಯಾಗುತ್ತಾ ಹೋಯ್ತು. ವಿಷ್ಣುವರ್ಧನ್‌ ಬೆಂಗಳೂರಲ್ಲಿ ಇರುತ್ತಿದ್ದರು. ನಾನು ಮೈಸೂರಲ್ಲಿ ಇರುತ್ತಿದ್ದೆ. ಅವರ ತಂದೆ ಆಗಾಗ ವಿಷ್ಣುನಾ ಕರೆದುಕೊಂಡು ಬರೋರು. ಇಬ್ಬರು ಜತೆಗೂಡಿ ಒಂದಷ್ಟು ಹರಟುತ್ತಿದ್ದೆವು. “ನಾಗರಹಾವು” ಚಿತ್ರ ಶುರುವಾಗುವ ಹೊತ್ತಿಗೆ ವಿಷ್ಣು ನನ್ನ ಆತ್ಮೀಯ ಗೆಳೆಯನಲ್ಲೊಬ್ಬನಾಗಿದ್ದ. ಕಾರಣ, ಆ ಚಿತ್ರಕ್ಕೆ ವೀರಸ್ವಾಮಿ ನಿರ್ಮಾಪಕರಾಗಿದ್ದರು. ನನಗೇ ಅವರು ಪ್ರೊಡಕ್ಷನ್‌ ನೋಡಿಕೊಳ್ಳುವಂತೆ ಹೇಳಿದ್ದರು. ಹಾಗಾಗಿ ನಾನು “ನಾಗರಹಾವುʼ ಚಿತ್ರದ ಪ್ರೊಡಕ್ಷನ್‌ ನೋಡಿಕೊಳ್ಳುತ್ತಿದ್ದೆ. ಆ ಸಿನಿಮಾದಿಂದಲೂ ನಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾಯ್ತು. ನಾನು ನಿರ್ದೇಶಿಸಿದ ಮೊದಲ ಚಿತ್ರ “ನಾಗಕನ್ಯೆʼ. ಆ ಚಿತ್ರದಲ್ಲಿ ವಿಷ್ಣುವರ್ಧನ್‌ ಅಭಿನಯಿಸಿದ್ದ. ನನ್ನ ಮೊದಲ ನಿರ್ದೇಶನದಲ್ಲಿ ವಿಷ್ಣು ಇರಬೇಕು ಎಂದು ಬಯಸಿದ್ದೆ. ಅವನು ಕೂಡ ನಟಿಸಲು ಬಯಸಿದ್ದ. ಆ ಬಳಿಕ ಒಂದಷ್ಟು ಚಿತ್ರಗಳನ್ನು ಜತೆಯಾಗಿ ಮಾಡಿದೆವು. ಇಬ್ಬರ ನಡುವೆ ಕೇವಲ ಸ್ನೇಹ ಮಾತ್ರ ಇರಲಿಲ್ಲ. ಕಷ್ಟ–ಸುಖ ಬಗ್ಗೆಯೂ ಮಾತಾಡುತ್ತಿದ್ದೆವು. ಅವರ ಫ್ಯಾಮಿಲಿ ನಮ್ಮ ಮನೆಗೆ ಬರೋದು, ನಾವು ಅವರ ಮನೆಗೆ ಹೋಗೋದು, ಹೀಗೆ ಒಳ್ಳೆಯ ವಾತಾವರಣ ನಮ್ಮ ನಡುವೆ ಬೆಳೆದಿತ್ತು.

 

ವಿಷ್ಣು ಸದಾ ಪಾಸಿಟಿವ್‌ ಥಿಂಕ್‌ ಮ್ಯಾನ್

*ವಿಷ್ಣುವಿನ ವ್ಯಕ್ತಿತ್ವ ಬಗ್ಗೆ ಹೇಳುವುದಾದರೆ, ಅವನೊಬ್ಬ ತುಂಬಾ ಒಳ್ಳೆಯ ಮನುಷ್ಯ. ಅಷ್ಟೇ ಅದ್ಭುತ ನಟ. ಎಲ್ಲರ ಕಷ್ಟವನ್ನು ಆಲಿಸುತ್ತಿದ್ದ. ಕೈಲಾದ ಸಹಾಯವನ್ನೂ ಮಾಡುತ್ತಿದ್ದ. ಆದರೆ, ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಅವನೊಂದಿಗೆ ನಾನು ದಶಕಗಳ ಕಾಲ ಸ್ನೇಹ ಇಟ್ಟುಕೊಂಡಿದ್ದೆ ಅನ್ನೋದೇ ದೊಡ್ಡ ಖುಷಿಯ ಅನುಭವ. ತುಂಬಾ ಬುದ್ಧಿವಂತ ಮನುಷ್ಯನಾಗಿದ್ದ. ವಿಷ್ಣು ಎಲ್ಲರ ಜೊತೆಯಲ್ಲೂ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದ. ಅದರಲ್ಲೂ ನನ್ನ ಜತೆಯಲ್ಲಂತೂ ಸದಾ ಮಾತಾಡುತ್ತಿರಬೇಕು, ಮಿಸ್‌ ಮಾಡದೆ ದಿನಾಲೂ ಮೀಟ್‌ ಮಾಡುತ್ತಿರಬೇಕು.  ಹರಟುತ್ತಿರಬೇಕು. ಅಷ್ಟರಮಟ್ಟಿಗೆ ನಾವಿದ್ದೆವು. ಅವನಲ್ಲಿ ನಾನು ಮೈನಸ್‌ ಅಂಶಗಳನ್ನು ನೋಡಿಯೇ ಇಲ್ಲ. ಯಾವಾಗಲೂ ಪಾಸಿಟಿವ್‌ ಆಗಿಯೇ ಥಿಂಕ್‌ ಮಾಡೋನು. ನಮಗೂ ಅದನ್ನೇ ಹೇಳೋನು. ಎಲ್ಲರ ಹೃದಯಕ್ಕೆ ಹತ್ತಿರವಾಗಿರುತ್ತಿದ್ದ ಹೃದಯವಂತ ನಟ ಅವನು.

 

ಟರ್ನಿಂಗ್‌ ಪಾಯಿಂಟ್‌ ಕೊಟ್ಟ ಬಂಧನ

* ವಿಷ್ಣುವರ್ಧನ್‌ಗೆ ನನ್ನ ನಿರ್ದೇಶನದ “ಬಂಧನ” ಚಿತ್ರ ಟರ್ನಿಂಗ್‌ ಪಾಯಿಂಟ್‌ ಆಯ್ತು. ಆ ಸಿನಿಮಾದಿಂದ ವಿಷ್ಣುವರ್ಧನ್‌ಗೆ ಬೇರೆಯದ್ದೇ ಇಮೇಜ್ ಸಿಕ್ತು. ಆ ಸಿನಿಮಾ ನೋಡಿದವರೆಲ್ಲರೂ ವಿಷ್ಣು ಅವರನ್ನು ಕಂಡಾಗ “ಬಂಧನʼದ ನಟನೆ ಬಗ್ಗೆಯೇ ಮಾತಾಡುತ್ತಿದ್ದರು. ಆ ಚಿತ್ರ ನನಗೂ ಮತ್ತು ವಿಷ್ಣು ಇಬ್ಬರಿಗೂ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತು. ಇನ್ನೊಂದು ವಿಷಯ ಹೇಳಲೇಬೇಕು. “ಬಂಧನʼ ಬಳಿಕ ವಿಷ್ಣುವರ್ಧನ್‌ಗೆ ಲೇಡಿಸ್‌ ಆಡಿಯನ್ಸ್‌ ಹೆಚ್ಚಾದರು. ಆ ಸಿನಿಮಾ ಬಳಿಕ “ಕರ್ಣʼ, “ಹಿಮಪಾತʼ, ʼಮುತ್ತಿನಹಾರʼ, ʼಮಹಾಕ್ಷತ್ರಿಯʼ ಚಿತ್ರಗಳಿಗೆ ಹೆಚ್ಚಾಗಿ ಲೇಡಿಸ್‌ ಆಡಿಯನ್ಸ್‌ ನಿಂದಲೇ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು.

 

ಇಂದಿಗೂ ಆ ಕಥೆ ಹಾಗೇ ಇದೆ…

*ವಿಷ್ಣು ಕಾದಂಬರಿ ಬೇಸ್ಡ್‌ ಸಿನಿಮಾಗಳಿಗೆ ಸರಿ ಹೊಂದುತ್ತಿದ್ದ. ಡಾ.ರಾಜಕುಮಾರ್‌ ಅವರನ್ನು ಬಿಟ್ಟರೆ, ಕಾದಂಬರಿ ಕುರಿತ ಚಿತ್ರಗಳಿಗೆ ವಿಷ್ಣು ಸೂಕ್ತ ನಟ ಎಂಬ ಮಾತು ಆಗ ಕೇಳಿಬರುತ್ತಿತ್ತು. “ಭಾಗ್ಯ ಜ್ಯೋತಿʼ, “ಹೊಂಬಿಸಲುʼ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಷ್ಣು ಅಭಿನಯ ಜನ ಮೆಚ್ಚುಗೆ ಪಡೆದಿತ್ತು. “ಬಂಗಾರದ ಜಿಂಕೆʼ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ವಿಷ್ಣು ಅವರನ್ನು ಇಂದಿಗೂ ಮರೆಯುವಂತಿಲ್ಲ. ಅಷ್ಟರಮಟ್ಟಿಗೆ ಅಭಿನಯಿಸಿದ್ದಾನೆ. ನಾನು ವಿಷ್ಣುಗೆ ನಿರ್ದೇಶಿಸಿದ ಕೊನೆಯ ಚಿತ್ರ “ಮಹಾಕ್ಷತ್ರಿಯʼ ವಿಷ್ಣುಗೆ ಇನ್ನು, ಒಂದಷ್ಟು ಚಿತ್ರಗಳನ್ನು ಮಾಡುವ ಬಗ್ಗೆ ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಮಾಡಿಕೊಂಡಿದ್ದೆ. ಆ ಸಮಯದಲ್ಲಿ ವಿಷ್ಣುವರ್ಧನ್‌, ಒಂದು ದಿನವೂ ಬಿಡುವಿರದಂತೆ ಚಿತ್ರಗಳಲ್ಲಿ ನಟಿಸುತ್ತಿದ್ದರು. ಅತ್ತ, ನಾನು ಬೇರೆ ಚಿತ್ರಗಳನ್ನು ನಿರ್ದೇಶಿಸುತ್ತಿದ್ದೆ. ವಿಷ್ಣುಗಾಗಿಯೇ ನಾನು ಒಂದೊಳ್ಳೆಯ ಕಥೆ ರೆಡಿಮಾಡಿಕೊಂಡಿದ್ದೆ. ಅದನ್ನು ನೀನೇ ಮಾಡಬೇಕು ಕಥೆ ಹೇಳ್ತೀನಿ, ಕೇಳು ಅಂದಿದ್ದೆ. ಆಗ ವಿಷ್ಣು ಮೈಸೂರಲ್ಲಿದ್ದರು. ಹೊಸ ವರ್ಷ ಶುರುವಾಗುತ್ತೆ. ಒಂದನೇ ತಾರೀಖಿಗೆ ಬಂದು ಬಿಡು. ಕಥೆ ಹೇಳು ಕೇಳ್ತೀನಿ ಅಂದಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಇವತ್ತಿಗೂ ಆ ಕಥೆ ಹಾಗೆಯೇ ಇದೆ. ಆ ಕಥೆಗೆ ವಿಷ್ಣುವರ್ಧನ್‌ ಹೊರತಾಗಿ ಬೇರೆ ಯಾರೂ ಸೂಟ್‌ ಆಗೋದಿಲ್ಲ.

Categories
ಸಿನಿ ಸುದ್ದಿ

ಭದ್ರಾವತಿ ಚೆಲುವೆ ಆಶಾಭಟ್ ಗೆ ಬರ್ತ್ ಡೇ ಸಂಭ್ರಮ

ರಾಬರ್ಟ್ ಚಿತ್ರ ತಂಡದಿಂದ ಸಿಗ್ತು ಫಸ್ಟ್ ಲುಕ್ ಗಿಫ್ಟ್

‘ ರಾಬರ್ಟ್‌ ‘ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಭದ್ರಾವತಿಯ ಚೆಲುವೆ ಆಶಾಭಟ್. ಮೊದಲ ಚಿತ್ರದಲ್ಲೆ ಸ್ಟಾರ್ ನಟನ ಜತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊ‌ಂಡ ಮಾಡೆಲ್. ಸಿನಿ‌ರಂಗಕ್ಕೆ ಕಾಲಿಡುವ ಮುನ್ನ ಮಾಡೆಲಿಂಗ್ ಜಗತ್ರಿನಲ್ಲಿ ದೊಡ್ಡ ಹೆಸರು ಮಾಡಿದ ಹೆಗ್ಗಳಿಕೆ ಇವರದು. ಸೂಪರ್ ನ್ಯಾಷನಲ್ ಹಾಗೂ‌ಮಿಸ್ ದಿವಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡದ ಕುವರಿ.‌ ಇಂದು‌( ಸೆ. 5) ಅವರ ಹುಟ್ಟು‌ಹಬ್ಬ. ಈ ಹಿನ್ನೆಲೆಯಲ್ಲಿ ರಾಬರ್ಟ್ ಚಿತ್ರ ತಂಡ ಅವರ ಹುಟ್ಟು ಹಬ್ಬಕ್ಕೆ‌ಚಿತ್ರದಲ್ಲಿನ‌ಅವರ ಪಾತ್ರದ ಫಸ್ಟ್ ಲಾಂಚ್ ಮಾಡಿದೆ.

ಇದು ಅವರಿಗೆ ಚಿತ್ರ ತಂಡದಿಂದ ಸಿಕ್ಕ ಬರ್ತ್ ಡೇ ಗಿಫ್ಟ್.ಇದುವರೆಗೂ‌ ನೋಡಿದ ಆಶಾಭಟ್ ಇಲ್ಲಿ ಕಂಪ್ಲೀಟ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇವರೇನಾ ಆಶಾಭಟ್ ಎನ್ನುವಷ್ಟು ಲುಕ್ ಚೇಂಜ್ ಇದೆ.ವಿದೇಶದಿಂದ ಬಂದ ಹುಡುಗಿ ಅಮೃತ ಪಾತ್ರದಲ್ಲಿ ಆಶಾ ಭಟ್ ರಾಬರ್ಟ್ ನಲ್ಲಿ ನಟಿಸುತ್ತಿದ್ದಾರಂತೆ. ಸಹಜವಾಗಿಯೇ ರಾಬರ್ಟ್ ಚಿತ್ರದಲ್ಲಿ ಆಶಾಭಟ್ ಕೂಡ ನಿರೀಕ್ಷೆ ಹುಟ್ಟಿಸಿದ್ದಾರೆ. ಇನ್ನು ಆಶಾಭಟ್ ಮಾಡೆಲ್ ಆಗಿ ನಂತರ ಚಿತ್ರದ ನಾಯಕಿಯಾಗಿ ಹಿಂದಿಯ ‘ಜಂಗ್ಲಿ ‘ಮೂಲಕ‌ನಟನೆಗೆ ಪಾದಾರ್ಪಣೆ ಮಾಡಿದ್ದರು.‌ಅಲ್ಲಿಂದೀಗ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಮೂಲತಃ ಶಿವಮೊಗ್ಗದವರಾದ ಆಶಾ ಭಟ್ ಪ್ರಸ್ತುತ ಕಾರ್ಯನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ.‌

ಈ ಬಾರಿಯ ಹುಟ್ಟು ಹಬ್ಬ ಮತ್ತು ಚಿತ್ರದಲ್ಲಿನ ತಮ್ನ ಪಾತ್ರದ ಫಸ್ಟ್ ಲುಕ್ ಗೆ ಆಶಾ ಭಟ್ ಪ್ರತಿಕ್ರಿಯೆ‌ನೀಡಿದ್ದು ಹೀಗೆ; ‘ ಇದೊಂದು ಸ್ಪೆಷಲ್ ಆಕೇಷನ್.ಯಾಕಂದ್ರೆ ಕಳೆದ ವರ್ಷ ನನ್ನ ಹುಟ್ಟುಹಬ್ಬದ ಸಮಯದಲ್ಲಿ ಚಿತ್ರದ ಶೂಟಿಂಗ್ ಶುರುವಾಯಿತು. ಈಗ ಶೂಟಿಂಗ್ ಮುಗಿದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಅದರ ಭಾಗವಾಗಿಯೇ ಈಗ ಫಸ್ಟ್ ಲುಕ್ ಗಿಫ್ಟ್ ಸಿಕ್ಕಿದೆ. ಚಿತ್ರಕ್ಕೆ ಸಾಕಷ್ಟು ಜನರು ಕಾಯುತ್ತಿದ್ದಾರೆ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವುದು ಖುಷಿ ತರುತ್ತಿದೆ’ ಎನ್ನುತ್ತಾರೆ.

ಉಮಾಪತಿ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟಾಲಿವುಡ್ ನಟ ಜಗಪತಿ ಬಾಬು, ದೇವರಾಜ್, ವಿನೋದ್ ಪ್ರಭಾಕರ್, ಸೋನಲ್ ಮೊಂಟೆರೊ, ರವಿ ಕಿಶನ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಮೊದಲಾದವರಿದ್ದಾರೆ. ಅಭಿನಯಿಸಿದ್ದಾರೆ

Categories
ಸಿನಿ ಸುದ್ದಿ

ನಾರಾಯಣ್‌ ಕಂಡಂತೆ ವಿಷ್ಣು.. ಇಂಡಿಯಾ ಟೀಂ ಬೌಲರ್‌ ಜಹೀರ್‌ ಖಾನ್‌ ವೀರಪ್ಪನಾಯ್ಕನನ್ನು ಮೆಚ್ಚಿದ್ದರು

ಇದು ಲಹರಿ ವಿಶೇಷ…

ನಿರ್ದೇಶಕ ಎಸ್.ನಾರಾಯಣ್‌, ಡಾ.ವಿಷ್ಣುವರ್ಧನ್‌ ಮೇಲೆ ಸಿಕ್ಕಾಪಟ್ಟೆ ಗೌರವ ಇಟ್ಟುಕೊಂಡವರು. ವಿಷ್ಣುವರ್ಧನ್‌ ಅವರಿಗೂ ನಾರಾಯಣ್‌ ಮೇಲೆ ಅಷ್ಟೇ ಪ್ರೀತಿ ಇತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕನ್ನಡದ ಆರು ವಿಭಿನ್ನ ಚಿತ್ರಗಳು ಮೂಡಿಬಂದಿವೆ. ವಿಷ್ಣುವರ್ಧನ್‌ ಅವರನ್ನು ಹೊಸತರಹದ ಗೆಟಪಲ್ಲಿ ತೋರಿಸಿಕೊಟ್ಟ ನಿರ್ದೇಶಕ ಎಂಬ ಮಾತಿಗೆ ನಾರಾಯಣ್‌ ಸೇರ್ಪಡೆಯಾದವರು. ನಾರಾಯಣ್‌ ವಿಷ್ಣು ಬಗ್ಗೆ ಹೇಳಿದ ಮಾತುಗಳೇನು ಗೊತ್ತಾ?

 

ಮೂರು ಮುಖದ ಮುದ್ದಿನ ಸಿಂಹ

* ನಾನು ವಿಷ್ಣುವರ್ಧನ್‌ ಅವರ ಮೂರು ಮುಖಗಳನ್ನು ನೋಡಿದ್ದೇನೆ. ಮೊದಲನೆಯದು, ಅವರಲ್ಲಿ ತುಂಬಾ ಹುಡುಗಾಟದ ಸ್ವಭಾವವಿತ್ತು. ಸದಾ ತಮಾಷೆ ಮಾಡುತ್ತಿದ್ದರು. ಪ್ರೀತಿಯಿಂದಲೇ ಕೆಲವರನ್ನು ರೇಗಿಸುತ್ತಿದ್ದರು, ಕೆಲವೊಮ್ಮೆ ಅವರಿಗೆ ತುಂಬಾ ಇಷ್ಟವಾಗಿಬಿಟ್ಟರೆ, ಅಂತಹವರ ಹೆಗಲ ಮೇಲೆ ಕೈ ಹಾಕಿಕೊಂಡು ಮಾತಾಡೋರು. ಹಿಂದೆ ಮುಂದೆ ನೋಡದೆ, ಅವರೊಳಗಿನ ಮನಸ್ಸಿನ ಭಾವನೆ ಹೊರ ಹಾಕೋರು. ಎರಡನೆಯದು, ಆಗಾಗ ಗಂಭೀರವಾಗುತ್ತಿದ್ದರು. ಒಂಥರಾ ಮೂಡಿಯಾಗಿಬಿಡುತ್ತಿದ್ದರು. ಬಹುಶಃ ನಾನು ಅವರಷ್ಟು ಮೂಡಿ ಅಗಿರೋದನ್ನು ಬೇರೆ ನಟರಲ್ಲಿ ನೋಡಿಲ್ಲ. ಅವರಿಗೆ ಇಷ್ಟ ಅಗದೇ ಇರುವಂತಹ ಯಾವುದೇ ಚಟುವಟಿಕೆ ನಡೆದರೂ ಅವರು ಸೈಲೆಂಟ್‌ ಆಗಿಬಿಡುತ್ತಿದ್ದರು. ವಾತಾವರಣವಿರಲಿ, ಲೋಕೇಷನ್‌ ಇರಲಿ, ಅಥವಾ ಅವರ ಕಾಸ್ಟ್ಯೂಮ್ಸ್‌ ಆಗಲಿ, ಇಷ್ಟ ಆಗದಿದ್ದರೆ, ಹೇಳುತ್ತಿರಲಿಲ್ಲ. ನಾವೇ ಅವರ ಮುಖ ಭಾವ ನೋಡಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ಇನ್ನು ಮೂರನೆಯದು, ಅವರಿಗೆ ಅಧ್ಯಾತ್ಮದ ಮೇಲೆ ಹೆಚ್ಚು ಒಲವಿತ್ತು. ಇದನ್ನು ನಿಜವಾಗಲೂ ನಂಬೋಕೆ ಸಾಧ್ಯವಿರಲಿಲ್ಲ. ಅವರಿಗೆ ಆಧ್ಯಾತ್ಮ ವಿಷಯದ ಬಗ್ಗೆ ಅಪಾರ ತಿಳಿವಳಿಕೆ ಇತ್ತು. ಒಬ್ಬ ನಟನಿಗೂ ಆಧ್ಯಾತ್ಮಕ್ಕೂ ಎಂಥಾ ಸಂಬಂಧ? ಆದರೂ ಅವರಿಗೆ ಆಧ್ಯಾತ್ಮವೆಂದರೆ ಬಲು ಇಷ್ಟ. ಅವರ ಜೊತೆ ಮಾತಿಗೆ ನಿಂತರೆ, ಸಾಧು, ಸಂತರ ಜತೆ ಮಾತಾಡಿದ ಭಾವನೆ ಬರುತ್ತಿತ್ತು. ಮನಸ್ಸಿಗೆ ಒಂಥರಾ ನೆಮ್ಮದಿ ತರುತ್ತಿತ್ತು. ಅವರ ಮೂರು ಮುಖಗಳನ್ನು ನಾನು ನೋಡಿದ್ದೇನೆ. ಅವರ ಈ ಮೂರು ಮುಖಗಳ ಜತೆಯಲ್ಲಿ ಮೂರು ಮುಖಗಳ ಸುಖಗಳನ್ನೂ ಅನುಭವಿಸಿದ್ದೇನೆ.

 

ಅಹಂ ಇರದ ನಟ

*ಅವರೊಬ್ಬ ಸೂಪರ್‌ ಸ್ಟಾರ್‌, ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಅನ್ನುವ ಯಾವುದೇ ಅಹಂ ಇರಲಿಲ್ಲ ಯಾವಾಗಲೂ ಸಿಂಪಲ್‌ ಆಗಿಯೇ ಇರುತ್ತಿದ್ದರು. ಒಂದು ರೀತಿ ಮುಗ್ಧ ಮಕ್ಕಳ ಹಾಗೆ. ಅವರಿಗೆ ಹೆಣ್ಣುಮಕ್ಕಳ ಮೇಲೆ ಬಹಳ ಗೌರವ ಇತ್ತು. ಸೆಟ್‌ನಲ್ಲಾದರೂ ಸಹ ನಾಯಕಿಯಿರಲಿ, ಸಹಾಯಕರಿರಲಿ ತುಂಬಾ ಗೌರವದಿಂದಲೇ ಮಾತಾಡುತ್ತಿದ್ದರು. ಆಧ್ಯಾತ್ಮದಲ್ಲಿ ಪರಕಾಯ ಪ್ರವೇಶ ಮಾಡಿದ್ದರಿಂದಲೇ ಅವರಿಗೆ ಅಂತಹ ಸಹನೆ, ತಾಳ್ಮೆ ಇತ್ತು ಅನಿಸುತ್ತೆ. ಇನ್ನು, ಅವರ ಪಾತ್ರಗಳ ಬಗ್ಗೆ ಹೇಳೋದಾದರೆ, ಯಾವುದೇ ಪಾತ್ರವಿರಲಿ, ತುಂಬಾ ಸೂಕ್ಷ್ಮವಾಗಿ ಗಮನಿಸೋರು, ಬೇರೆ ಭಾಷೆಯಲ್ಲಿ ಯಾರಾದರೂ ಇಂತಹ ಪಾತ್ರ ಮಾಡಿದ್ದಾರಾ ಅಂತ ಒಮ್ಮೆ ಚರ್ಚಿಸೋರು, ಅವರೇ ಮಾಡಿದ ಅಷ್ಟೂ ಚಿತ್ರಗಳ ಪಾತ್ರಗಳನ್ನೊಮ್ಮೆ ಮೆಲುಕು ಹಾಕೋರು, ಈ ಚಿತ್ರದ ಪಾತ್ರದಲ್ಲಿ ನಾನೇನು ಹೊಸದಾಗಿ ಮಾಡಬಹುದು ಅಂತ ಕೇಳೋರು. ಅಷ್ಟೆಲ್ಲಾ ಆದರೂ, ಸೆಟ್‌ಗೆ ಬಂದಾಗ, ನಾರಾಯಣ್‌, ನೀವೊಮ್ಮೆ ನಟಿಸಿ ತೋರಿಸಿ, ಆಮೇಲೆ ನಾನು ಮಾಡ್ತೀನಿ ಅನ್ನೋರು. ಅದೇನೆ ಇದ್ದರೂ, ಆ ಪಾತ್ರಕ್ಕೆ ಒಳ್ಳೆಯ ರೂಪ ಕೊಡುತ್ತಿದ್ದರು. ತುಂಬಾ ಟೈಮ್‌ ತೆಗೆದುಕೊಂಡೇ ಅವರು ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರು ಕ್ಯಾಮೆರಾಮೆನ್‌ ಬಳಿ ಬಂದು ನೀನು ಮೊದಲ ಪ್ರೇಕ್ಷಕ. ಮೊದಲು ನಿನ್ನ ಅಭಿಪ್ರಾಯ ಹೇಳು ಅನ್ನೋರು.

 

ಮೊದಲ ಭೇಟಿ ಅಶೋಕ ಹೋಟೇಲ್‌ನಲ್ಲಿ…

* ನನ್ನ ಅವರ ಆವರ ಮೊಮೊದಲ ಭೇಟಿಯಾಗಿದ್ದು 1986 ರಲ್ಲಿ. ನಾನು ಆಗಷ್ಟೇ ಚಿತ್ರರಂಗದ ಪ್ರವೇಶ ಮಾಡಿದ್ದೆ. “ಕೃಷ್ಣ ನೀ ಬೇಗನೆ ಬಾರೋ” ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಶೋಕ ಹೋಟೆಲ್‌ ನಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಆ ಚಿತ್ರಕ್ಕೆ ಅವರು ಹೀರೋ. ಆಗಲೇ ಅವರನ್ನು ನೋಡಿದ್ದು ಮತ್ತು ಭೇಟಿ ಮಾಡಿ ಮಾತಾಡಿದ್ದು. ಅದಾದ ಬಳಿಕ ಅವರೊಂದಿಗೆ ಆರು ಸಿನಿಮಾಗಳನ್ನು ಮಾಡಿದೆ. “ವೀರಪ್ಪ ನಾಯ್ಕ” ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಒಳ್ಳೆಯ ಹೆಸರೂ ಸಿಕ್ತು. ಹಣವೂ ಬಂತು ಇವತ್ತಿಗೂ “ವೀರಪ್ಪ ನಾಯ್ಕ” ಚಿತ್ರದ ಬಗ್ಗೆ ಎಲ್ಲರೂ ಮಾತಾಡುತ್ತಾರೆ. ಗೊತ್ತಿರದ ಒಂದು ಮುಖ್ಯವಾದ ವಿಷಯ ಹೇಳಲೇಬೇಕು. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರ ಕೆಲ ಆಪ್ತರಿಗೆ ಹೊರತುಪಡಿಸಿ, ಯಾರಿಗೂ ಈ ವಿಷಯ ಗೊತ್ತಿಲ್ಲ. ಭಾರತ ತಂಡದ ಬೌಲರ್‌ ಜಹೀರ್‌ ಖಾನ್‌ ಅವರು ವಿಷ್ಣುವರ್ಧನ್‌ ಅವರಿಗೆ ಒಳ್ಳೆಯ ಸ್ನೇಹಿತರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್‌ ಪಂದ್ಯ ಏರ್ಪಡುತ್ತೆ. ಆ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರಿಗೆ ಒಂದು ಕ್ಯಾಂಪ್‌ ಹಾಕಲಾಗುತ್ತೆ. ಆ ಕ್ಯಾಂಪ್‌ನಲ್ಲಿ “ವೀರಪ್ಪನಾಯ್ಕ” ಚಿತ್ರ ಸ್ಕ್ರೀನಿಂಗ್‌ ನಡೆಯುತ್ತೆ. ಆ ಚಿತ್ರ ನೋಡಿದ ಕೂಡಲೇ ಜಹೀರ್‌ ಖಾನ್‌ ಅವರು ವಿಷ್ಣವರ್ಧನ್‌ ಸರ್‌ ಗೆ ಕಾಲ್‌ ಮಾಡಿ ಪ್ರೀತಿಯಿಂದ ಮಾತಾಡುತ್ತಾರೆ. ದೇಶಾಭಿಮಾನ ಬಗ್ಗೆ ಹುರಿದುಂಬಿಸಿರುವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಆ ಸರಣಿಯನ್ನು ಭಾರತ ಗೆಲ್ಲುತ್ತದೆ. ನಮ್ಮ ಸಂಸ್ಥೆಯಡಿ, ನಾನು ನಿರ್ದೇಶಿಸಿದ, ವಿಷ್ಣು ಸರ್‌ ಅಭಿನಯಿಸಿದ ಚಿತ್ರದ ಬಗ್ಗೆ ಇಂಡಿಯಾ ಟೀಮ್‌ ಹೊಗಳಿದ್ದು, ಹೆಗ್ಗಳಿಕೆ. “ವೀರಪ್ಪನಾಯ್ಕ” 25 ವಾರಗಳು ಪ್ರದರ್ಶನ ಕಾಣುತ್ತೆ. “ಸೂರ್ಯವಂಶ” ಕೂಡ 25 ವಾರಗಳು ಪ್ರದರ್ಶನವಾಗುತ್ತೆ. “ಜಮೀನ್ದಾರ”, “ಸಿಂಹಾದ್ರಿ ಸಿಂಹ”, “ಸಿರಿವಂತ” ಚಿತ್ರಗಳು ಶತದಿನ ಪೂರೈಸುತ್ತವೆ. “ವರ್ಷ” ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತೆ. ಅವರ ಜತೆ ಮಾಡಿದ ಆರು ಚಿತ್ರಗಳೂ ಯಶಸ್ಸು ಕೊಟ್ಟಿವೆ.

 

ರಾಮ್‌ ದಾಸ್‌ ಆಸೆ ಈಡೇರಲಿಲ್ಲ…

* ಅವರಿಗೆ ಎರಡು ಆಸೆಗಳಿದ್ದವು. ಒಂದು “ಶ್ರೀ ಕೃಷ್ಣ ಮಕರಂದ” ಕಥೆ ಅವರಿಗೆ ತುಂಬಾ ಇಷ್ಟವಾಗಿತ್ತು. ಮತ್ತೊಂದು “ಸಾಯಿಬಾಬಾ” ಸಿನಿಮಾದಲ್ಲಿ ಸಾಯಿಬಾಬಾ ಪಾತ್ರ ಮಾಡುವ ಆಸೆ ಇತ್ತು. ಆ ಎರಡೂ ಚಿತ್ರಗಳನ್ನೂ ನೀವೇ ನಿರ್ದೇಶಿಸಬೇಕು ಎಂದು ಹೇಳಿದ್ದರು. ಆದರೆ, ಅದು ಮಿಸ್‌ ಆಯ್ತು. ಅವರಿಗೆ ಆ ಎರಡು ಆಸೆಗಳಿದ್ದರೆ, ನನಗೆ ಅವರಿಗಾಗಿ “ರಾಮ್‌ ದಾಸ್‌ʼ” ಚಿತ್ರ ಮಾಡುವ ಆಸೆ ಇತ್ತು. ಸಂಪೂರ್ಣ ಆಧ್ಯಾತ್ಮ ಕುರಿತಾದ ಚಿತ್ರ ಮಾಡುವ ಆಸೆ ನನ್ನದ್ದಾಗಿತ್ತು. ಅದಾಗಲಿಲ್ಲ. ಇನ್ನೊಂದು ವಿಷಯವೆಂದರೆ, ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವಂತಹ ಚಿತ್ರ ಮಾಡಲು ರೆಡಿಯಾಗಿದ್ದೆ. ಅದು ವಿಷ್ಣುವರ್ಧನ್‌ ಮತ್ತು ಶಿವರಾಜ್ ಕುಮಾರ್‌ ಕಾಂಬಿನೇಷನ್‌ ಚಿತ್ರ. ಇಬ್ಬರೂ ನಟರೂ ಒಪ್ಪಿಗೆ ಕೊಟ್ಟಿದ್ದರು. “ಆಪ್ತರಕ್ಷಕ” ನಂತರ ಮಾಡೋಣ ಅಂದಿದ್ದರು. ಆದರೆ, ಅದು ಹಾಗೇ ಉಳಿದು ಹೋಯ್ತು.

 

ಅಣ್ಣಾವ್ರು ಮತ್ತು ವಿಷ್ಣು ಗಿರಿಜಾ ಮೀಸೆ…

* ಇನ್ನೊಂದು ವಿಶೇಷ ವಿಷಯ ಹೇಳಲೇಬೇಕು. ಬಹುಶಃ ಇದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ನನ್ನಲ್ಲಿಯೇ ಗುಟ್ಟಾಗಿದ್ದ ವಿಷಯ. ಒಮ್ಮೆ ನಾನು ಅಣ್ಣಾವ್ರ ಕಡೆಯಿಂದ ಫೋನ್‌ ಮಾಡಿಸಿ, ವಿಷ್ಣುವರ್ಧನ್‌ ಅವರನ್ನು ಮಾತಾಡಿಸಿದ್ದೆ. “ಸೂರ್ಯವಂಶ” ಚಿತ್ರದ ಗೆಟಪ್‌ ನೋಡಿ ಅಣ್ಣಾವ್ರಿಗೆ ಇಷ್ಟ ಆಗಿತ್ತು. ಎಷ್ಟು ಚೆನ್ನಾಗಿದೆ ಆ ಗಿರಿಜಾ ಮೀಸೆ ಅನ್ನೋರು. “ಶಬ್ದವೇದಿ” ಚಿತ್ರೀಕರಣ ಸಮಯದಲ್ಲಿ ಅಣ್ಣಾವ್ರು ಆಗಾಗ ವಿಷ್ಣುವರ್ಧನ್‌ ಗೆಟಪ್‌ ಬಗ್ಗೆ ಹೇಳುತ್ತಿದ್ದರು. ಆ ಸಂದರ್ಭದಲ್ಲೇ ನಾನೂ ಒಂದು ಸಲ ಅವರ ಜೊತೆ ಮಾತಾಡಿ ಅಂತ ಫೋನ್‌ ಮಾಡಿ ಕೊಟ್ಟಿದ್ದೆ. ಇಬ್ಬರು ನಟರು ಹರಟಿದ್ದರು. ಅದು ನಿಜಕ್ಕೂ ರಸಘಳಿಗೆ. ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌ ಮತ್ತು ಡಾ. ಅಂಬರೀಷ್‌ ಈ ಮೂವರು ಕನ್ನಡ ಚಿತ್ರರಂಗದ ಮುತ್ತುಗಳು. ಇವರ್ಯಾರೂ ನನ್ನನ್ನು ನಿರ್ದೇಶಕನನ್ನಾಗಿ ನೋಡಲಿಲ್ಲ. ಒಬ್ಬ ಗೆಳೆಯನಾಗಿ, ಕುಟುಂಬದ ಸದಸ್ಯನಾಗಿ ನೋಡಿದರು. ಹಾಗಾಗಿಯೇ ನಾನು ಅವರ ಅಂತರಂಗದೊಳಗೆ ಪ್ರವೇಶಿಸಲು ಸಾಧ್ಯವಾಯ್ತು.

Categories
ಸಿನಿ ಸುದ್ದಿ

ಸಲಗನ ಮಳೆ ಪ್ರೀತಿ -ಲಿರಿಕಲ್ ವಿಡಿಯೊ‌ ಹಾಡಿಗೆ‌ ಭರಪೂರ‌ ಮೆಚ್ಚುಗೆ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ‘ಸಲಗ’ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊಂದು ಮಳೆಯ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ‘ಮಳೆಯೇ ಮಳೆಯೇ’ ಲಿರಿಕಲ್ ವಿಡಿಯೊ ಸಾಂಗ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಿದೆ. ದುನಿಯಾ ವಿಜಯ್ ಜೊತೆಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಧನಂಜಯ್ ಕೂಡ ಚಿತ್ರದ ಹೈಲೈಟ್.
ಸಂಚಿತ್ ಹೆಗ್ಡೆ , ಐಶ್ವರ್ಯ ಹಾಡಿರುವ ಈ ಗೀತೆಗೆ ನಾಗಾರ್ಜುನ್ ಶರ್ಮ ಸಾಹಿತ್ಯವಿದೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಣವಿದೆ. A2 ಆಡಿಯೊ ಸಂಸ್ಥೆ ಮೂಲಕ ಹಾಡು ಬಿಡುಗಡೆಯಾಗಿದೆ.ಚಿತ್ರಕ್ಕೆ ವಿನೋದ್ ಸ್ಟಂಟ್ ಮಾಡಿಸಿದರೆ, ಮೋಹನ್ ನೃತ್ಯ ವಿದೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

error: Content is protected !!