Categories
ಸಿನಿ ಸುದ್ದಿ

ಶುಗರ್ ಲೆಸ್ ಶುರು… ಆ್ಯಕ್ಷನ್ ಕಟ್ ಹೇಳಿದ ಶಶಿಧರ್

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ನಿರ್ದೇಶನ ಮಾಡಲು ಹೊರಟ ಸುದ್ದಿ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಅವರು ‘ಶುಗರ್‌ಲೆಸ್‌ ‘ ಚಿತ್ರದ ಮುಹೂರ್ತ ನೆರವೇರಿಸಿದ್ದರು. ಸೋಮವಾರ ಅವರ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನದ ಜರ್ನಿ ಶುರು ಮಾಡಿದ್ದಾರೆ.ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಶಿಧರ್,ಚಿತ್ರದ ಕಥೆಗೆ ತಕ್ಕಂತೆ ಶೀರ್ಷಿಕೆ ಇಟ್ಟಿದ್ದು, ಡಯಾಬಿಟಿಸ್‌ ಕುರಿತ ಕಥೆ ಹೇಳಲು ಹೊರಟಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಹೊರಟಿದ್ದಾರೆ ಅವರು.ಶಶಿಧರ್ ಹೇಳುವಂತೆ, ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ. ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅವರು. ಯಾವ ಭಾಷೆಯಲ್ಲೂ ಈ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ.ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದಾರೆ.

Categories
ಸಿನಿ ಸುದ್ದಿ

ರೋರಿಂಗ್ ಸ್ಟಾರ್ ನ್ಯೂ ಲುಕ್…. ಸಿಕ್ಸ್ ಪ್ಯಾಕ್ ಮದಗಜ!

ನಟ ಶ್ರೀಮುರಳಿ ಅಭಿನಯದ “ಮದಗಜ” ಇದೀಗ ಶೂಟಿಂಗ್ ಹೊರಡಲು ತಯಾರಿ‌ ನಡೆಸಿದೆ. ಸೆಪ್ಟೆಂಬರ್ 19 ರಿಂದ ಮದಗಜನ ಆರ್ಭಟ ಶುರುವಾಗಲಿದೆ.

ಈ ಹಂತದ ಚಿತ್ರೀಕರಣ ಸುಮಾರು 35 ದಿನಗಳ ಕಾಲ ನಡೆಯಲಿದ್ದು, ದೊಡ್ಡ ಹಂತದ‌ ಚಿತ್ರೀಕರವಿದು ಎಂಬುದು ತಂಡದ ಹೇಳಿಕೆ.
ಇನ್ನು, “ಮದಗಜ” ಚಿತ್ರಕ್ಕಾಗಿಯೇ ಶ್ರೀಮುರಳಿ ಅವರು, ತಮ್ಮ‌ ದೇಹವನ್ನು ದಂಡಿಸಿದ್ದಾರೆ. ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಮಿಂಚಲಿದ್ದಾರೆ ಎಂಬುದು ವಿಶೇಷ.‌ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿರುವ ಶ್ರೀ ಮುರಳಿ, ಈ‌ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಇದ್ದಾರೆ. ಇನ್ನು “ಅಯೋಗ್ಯ” ಬಳಿಕ ಮಹೇಶ್ ಕುಮಾರ್ ಅವರ ನಿರ್ದೇಶನಕ್ಕೆ ಇಳಿದಿದ್ದಾರೆ. ಈಗಿನ ಟ್ರೆಂಡ್ ಗೆ ತಕ್ಕ ಕಥೆ ಹೆಣೆದು ಪ್ಯಾನ್ ಇಂಡಿಯಾ ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ.
ಉಮಾಪತಿ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಊರ ಬಿಟ್ಟು ಊರೀಗೆ ಬಂದೀವಿ ಹಾಡಿಗೆ ಮೆಚ್ಚುಗೆ… ಯು ಟರ್ನ್‌ಗೆ ನವೀನ್‌ಸಜ್ಜು ಗಾನ


ಕನ್ನಡದಲ್ಲಿ “ಯು ಟರ್ನ್‌ ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಜೋರು ಸುದ್ದಿ ಮಾಡಿದ ಚಿತ್ರವದು. ಈಗ ಮತ್ತೆ “ಯು ಟರ್ನ್‌ ” ಸುದ್ದಿ ಮಾಡುತ್ತಿದೆ. ಆದರೆ, ಇದು ಆ “ಯು ಟರ್ನ್‌ ” ಅಲ್ಲ ಅನ್ನೋದು ವಿಶೇಷ. ಹೌದು, ಇದು “ಯು ಟರ್ನ್‌ 2” ಹಾಗಂತ, ಆ “ಯು ಟರ್ನ್‌ ” ಚಿತ್ರಕ್ಕೂ ಈ “ಯು ಟರ್ನ್‌ 2” ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ಬೇರೆ, ಇದೇ ಬೇರೆ. ಹೊಸ ಬಗೆಯ ಕಥೆ, ಚಿತ್ರಕಥೆ, ನಿರೂಪಣೆಯೊಂದಿಗೆ ತಯಾರಾಗಿರುವ ಸಿನಿಮಾ ಇದು. ಈ ಚಿತ್ರದ ಮೂಲಕ ಚಂದ್ರು ಓಬಯ್ಯ ನಿರ್ದೇಶಕರಾಗುತ್ತಿದ್ದಾರೆ. ಹಾಗಂತ ಚಂದ್ರು ಓಬಯ್ಯ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಚಂದ್ರು ಓಬಯ್ಯ ಅವರು ನಿರ್ದೇಶಕರಾಗುವುದಕ್ಕೂ ಮುನ್ನ ಸಂಗೀತ ನಿರ್ದೇಶಕರಾದವರು. “ಟ್ರಿಗರ್‌”, “ಮನೋರಥ”, ” ರಾಜಪಥ” ಚಿತ್ರಗಳಿಗೆ ಸಂಗೀತ ಸಂಯೋಜಿಸಿದವರು. ಈಗ “ಯು ಟರ್ನ್‌ 2” ನಿರ್ದೇಶನದ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ರಂಗಿನ ಲೋಕಕ್ಕೆ ಕಲರ್‌ ಫುಲ್‌ ಕನಸಿನೊಂದಿಗೆ ಎಂಟ್ರಿಯಾದ ಚಂದ್ರ ಓಬಯ್ಯ ಇದೀಗ ತಮ್ಮ ಕನಸಿನ ನಿರ್ದೇಶನದ ಚಿತ್ರದ ಮೂಲಕ ಹೊಸ ಯಶಸ್ಸು ಕಾಣುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದ ಮೊದಲ ಮೆಟ್ಟಿಲೆಂಬಂತೆ ಚಿತ್ರದ ಲಿರಿಕಲ್‌ ಸಾಂಗ್ ಕೂಡ ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
“ಯು ಟರ್ನ್‌ 2” ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನು ಐದು ದಿನಗಳ ಪ್ಯಾಚ್‌ ವರ್ಕ್‌ ಮುಗಿದರೆ ಸಿನಿಮಾ ಕಂಪ್ಲೀಟ್‌ ಆಗಲಿದೆ. ಸೆ. 11 ರಂದು ಚಿತ್ರದ ಲಿರಿಕಲ್‌ ವಿಡಿಯೊ ರಿಲೀಸ್‌ ಆಗಿದ್ದು, “ಊರ ಬಿಟ್ಟು ಊರೀಗೆ ಬಂದೀವಿ…” ಎಂಬ ಅರ್ಥಪೂರ್ಣ ಸಾಹಿತ್ಯವಿರುವ ಈ ಹಾಡಿಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನವೀನ್‌ ಸಜ್ಜು ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಆನಂದ್‌ ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ರಿಲೀಸ್‌ ಆದ ಕೆಲ ಗಂಟೆಗಳಲ್ಲೇ ಸಾವಿರಾರು ಲೈಕ್ಸ್‌ ಪಡೆದುಕೊಂಡಿದೆ. ಹಾಡಲ್ಲಿ ಸಾಹಿತ್ಯದ ಜೊತೆಗೆ ಸಂಗೀತದ ಮಾಧುರ್ಯ ಕೂಡ ಸೊಗಸಾಗಿದೆ. ಲೈವ್‌ ಜರ್ಮನ್‌ ಫ್ಲ್ಯೂಟ್‌ ಬಳಸಲಾಗಿದೆ. ಗುಣಮಟ್ಟದಿಂದ ಕೂಡಿರುವ ಹಾಡು ಕೊಡುವ ಉದ್ದೇಶದಿಂದ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಹಾಡನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕ ಚಂದ್ರು ಓಬಯ್ಯ ಅವರ ಮಾತು.
ಮೂವೀಸ್‌ ಫೋರ್ಟ್‌ ಬ್ಯಾನರ್‌ ನಲ್ಲಿ ಸಿನಿಮಾ ತಯಾರಾಗಿದ್ದು, ಆನಂದ್‌ ಸಂಪಂಗಿ ನಿರ್ಮಾಣವಿದೆ. ಇನ್ನು, ಈ ಸಿನಿಮಾದಲ್ಲಿ “ತಿಥಿʼ ಖ್ಯಾತಿಯ ಪೂಜಾ ನಾಯಕಿಯಾದರೆ, ಪ್ರಮುಖವಾಗಿ ನಿರ್ದೇಶಕ ಚಂದ್ರು ಓಬಯ್ಯ, ಕರಿಸುಬ್ಬು, “ಕಿರಿಕ್‌ ಪಾರ್ಟಿ” ರಾಘು, ಉಗ್ರಂ ರವಿ ಇತರರು ನಟಿಸಿದ್ದಾರೆ. ಇದೊಂದು ಹಾರರ್‌ ಜಾನರ್‌ ಸಿನಿಮಾ ಆಗಿದ್ದು, ಮೊದಲು ಬಂದ ಯು ಟರ್ನ್‌ ಸಿನಿಮಾಗೂ ಈ ಚಿತ್ರಕ್ಕೂ ಯಾವ ಸಂಬಂಧವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಸುಮಾರು 50 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಸಾಂಗ್‌ ಶೂಟ್‌ ಮಾಡಿದರೆ ಚಿತ್ರೀಕರಣ ಮುಗಿಯಲಿದೆ. ಚಿತ್ರಕ್ಕೆ ನವೀನ್‌ ತುರುವೇಕೆರೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಚೆಲುವ ಮೂರ್ತಿ, ಪ್ರಮೋದ್‌ ಗೌಡ, ಸ್ವರಾಜ್‌, ಅಶೋಕ್‌ ಇತರರು ” ಯು ಟರ್ನ್‌ 2 ” ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾ ರೆಡಿಯಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

 

 

Categories
ಸಿನಿ ಸುದ್ದಿ

ಗಾಂಧಿ ಆದರ್ಶಗಳಿಗೆ ಮನಸೋತ ನಾಗೇಂದ್ರ ಪ್ರಸಾದ್ ಪುತ್ರಿ!

ಗಾಂಧಿ‌ ಮತ್ತು‌ನೋಟು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ದ್ವಿವಿಜಾ

 

ಗಾಂಧಿ‌ ಕುರಿತು ಕನ್ನಡದಲ್ಲೇ ಸಾಕಷ್ಟು ಸಿನಿಮಾ‌ ಮಂದಿವೆ.‌ಇತ್ತೀಚೆಗಷ್ಟೇ ನಿರ್ದೇಶಕ ಶೇಷಾದ್ರಿ ನಿರ್ದೇಶಿಸಿ, ನಿರ್ಮಾಣ ಮಾಡಿದ ‘ಮೋಹನದಾಸ’ ದೊಡ್ಡ ಸುದ್ದಿ ಮಾಡಿದ್ದು ನಿಮಗೂ ಗೊತ್ತು.‌ಈಗ ಮತ್ತೊಂದು‌ ಗಾಂಧಿ ಕುರಿತ  ಚಿತ್ರ ಕನ್ನಡದಲ್ಲೇ ಸದ್ದು‌ಮಾಡುತ್ತಿದೆ. ಹಾಗಂತ ಇದು ಕೂಡ ಗಾಂಧಿ‌‌ ಕುರಿತ ಬಯೋಫಿಕ್ ಅಲ್ಲ. ಬದಲಿಗೆ ಗಾಂಧಿ ಆದರ್ಶ ಗಳಿಗೆ ಮನಸೋತ ಒಬ್ಬ ಬಾಲಕಿಯ ಕತೆ. ಆ ಚಿತ್ರದ ಹೆಸರು ಗಾಂಧಿ ಮತ್ತು‌ ನೋಟು.

……………

ಆ‌ ಹುಡುಗಿಯ ಹೆಸರು ಸುಕ್ರಿ. ಕುಗ್ರಾಮವೊಂದರಲ್ಲಿ ಓದುತ್ತಿರುವ ಬಾಲಕಿ. ಆಕೆಗೆ ಗಾಂಧಿ ಮತ್ತು ಗಾಂಧಿ‌ಯ  ಆದರ್ಶಗಳ ಮೇಲೆ‌ ತೀವ್ರ ಆಸಕ್ತಿ.  ಪರಿಣಾಮ ಗಾಂಧಿ‌ ಆದರ್ಶಗಳನ್ನು ಓದುತ್ತಾ ಹೋದಂತೆ, ಜೀವನದಲ್ಲೂ ಅಳವಡಿಸಿಕೊಳ್ಳಲು‌ ಮುಂದಾಗುತ್ತಾಳೆ. ಸತ್ಯ ಹೇಳುತ್ತಾಳೆ.‌‌  ದುಶ್ವಟಗಳಿಂದ ದೂರ ಉಳಿಯುತ್ತಾಳೆ. ಮನೆಯಲ್ಲಿ‌ ಅವರಪ್ಪ ವಿಪರೀತ ಕುಡುಕ.‌ ದುಶ್ಚಟದಿಂದ‌ ತನ್ನ‌ ತಂದೆ ದೂರವಿರುವಂತೆ ಒತ್ತಾಯಿಸು ತ್ತಾಳೆ.‌ಹಾಗೆಯೇ ಸಮಾಜದಲ್ಲಿ ಕೆಟ್ಟದ್ದು‌ನಡೆದರೆ ಖಂಡಿಸುತ್ತಾಳೆ. ದುಶ್ಚಟದಿಂದ ಜನರು ದೂರವಿರುವಂತೆ ಹೋರಾಡುತ್ತಾಳೆ.‌ ಆದರೆ ಈ‌ ಸಮಾಜ‌ ಅಥವಾ ವ್ಯವಸ್ಥೆ ಒಬ್ಬ ಬಾಲಕಿಯ ಮಾತನ್ನು ಅಷ್ಟು ಸುಲಭವಾಗಿ‌ ಒಪ್ಪಿಕೊಳ್ಳುತ್ತಾ? ಮುಂದೇನಾಗುತ್ತೆ ಎನ್ನುವುದು ಈ ಚಿತ್ರದ ಕತೆ.‌ ಅಂದ ಹಾಗೆ ಈ ಚಿತ್ರದ ಹೆಸರು’ ಗಾಂಧಿ‌ ಮತ್ತು ನೋಟು’ .ಇದು ಯೋಗಿ ದೇವಗಂಗೆ ನಿರ್ದೇಶನದ ಚಿತ್ರ.‌ ಈ‌ಹಿಂದೆ‌ಇವರು ಸೆಕೆಂಡ್ ಹಾಫ್ ಹೆಸರಿನ ಚಿತ್ರವೊಂದನ್ನು ‌ನಿರ್ದೇಶಿಸಿದ್ದರು. ಆದಾದ‌ ನಂತರ‌ಇದು ಅವರ ಮತ್ತೊಂದು ಪ್ರಾಜೆಕ್ಟ್.ವಿಶೇಷ ಅಂದ್ರೆ,  ಇದರ ಪ್ರಮುಖ‌ ಪಾತ್ರಧಾರಿ‌‌ ಬಾಲಕಿ‌ ಸುಕ್ರಿಯಾಗಿ ಕಾಣಿಸಿಕೊಳ್ಳುತ್ತಿರುವವರು ಪುಟಾಣಿ ದ್ವಿವಿಜಾ. ಈಕೆ ಸಾಹಿತಿ ನಾಗೇಂದ್ರ ಪ್ರಸಾದ್ ಪುತ್ರಿ. ಈ ಚಿತ್ರದೊಂದಿಗೆ ಬಾಲ‌ನಟಿಯಾಗಿ ಚಿತ್ರರಂಗಕ್ಕೆ‌ ಎಂಟ್ರಿಯಾಗುತ್ತಿದ್ದಾಳೆ. ಅಪ್ಪ ಸಿನಿಮಾ‌ ನಿರ್ದೇಶನ ,ಸಾಹಿತ್ಯ ‌ಮತ್ತು ನಟನೆಯಲ್ಲಿ ಮಿಂಚುತ್ತಿದ್ದರೆ, ತಂದೆಯಂತೆಯೇ ಮಗಳು ಕೂಡ  ಬಾಲ‌ನಟಿಯಾಗಿ ಬೆಳ್ಳಿ ಪರದೆಯಲ್ಲಿ‌ ಮಿಂಚಲು ರೆಡಿಯಾಗಿದ್ದಾಳೆ. ಮಗಳನ್ನು ಸಿನಿಮಾ‌ರಂಗಕ್ಕೆ‌ಪರಿಚಯಿಸುತ್ತಿರುವುದಕ್ಕೆ ಪ್ರಮುಖ‌ಕಾರಣ ಕತೆ. ಅದರಲ್ಲೂ ಅದು ಗಾಂಧಿ‌ ಆದರ್ಶಗಳ‌ ಮೇಲಿನ ಕತೆ.‌ ಮೊದಲ‌ ಬಾರಿಗೆ ಅಂತಹ ಸಿಕ್ಕಿತು.‌ಹಾಗಾಗಿ‌ ನಿರ್ದೇಶಕರ ಮಾತಿಗೆ ಗೌರವ ಕೊಟ್ಟು ಮಗಳನ್ನು‌ಈ‌ ಚಿತ್ರದಲ್ಲಿ ಅಭಿನಯಿಸಲು ಕಳುಹಿಸಿದೆ’ ಎನ್ನುತ್ತಾರೆ ಸಾಹಿತಿ ನಾಗೇಂದ್ರ ಪ್ರಸಾದ್.ದ್ವಿವಿಜಾ ಜತೆಗೆ ಸಾಕಷ್ಟು ಮಂದಿ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.


ಇನ್ನು ಭವಾನಿ ಕ್ರಿಯೇಷನ್ಸ್ ಮೂಲಕ ಸುಧಾರಾಣಿ, ವೀಷಾ ಪದ್ನನಾಭ್ ಹಾಗೂ ಮಂಜುನಾಥ್ ಎಂಬುವರು ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಸಾಹಿತ್ಯ ನಾಗೇಂದ್ರ ಪ್ರಸಾದ್ ಬರೆದಿದ್ದು, ಗುರುಪ್ರಸಾದ್ ಸಂಭಾಷಣೆ ಚಿತ್ರಕ್ಕಿದೆ‌.‌ ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿರ್ದೇಶಕ ಯೋಗಿ ಪ್ರಕಾರ ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ಶಿವಮೊಗ್ಗ, ಹೊಸನಗರ, ಕೊಡಚಾದ್ರಿ‌ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಅದರ ಜತೆಗೆ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಕೂಡ ಕಂಪ್ಲೀಟ್ ಆಗಿದೆ‌ . ಚಿತ್ರ ರಿಲೀಸ್ ಗೆ ರೆಡಿಯಿದ್ದು, ಸೂಕ್ತ ಸಮಯಕ್ಕೆ ಕಾಯುತ್ತಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಮಂಗಳ ಹಿಂದೆ ನಿಂತ ಕುಣಿಗಲ್‌ ಹುಡುಗ- ಕನ್ನಡ ವೆಬ್‌ ಸೀರೀಸ್‌ನಲ್ಲಿ ಥ್ರಿಲ್ಲರ್‌ ಸ್ಟೋರಿ

ಈಗಂತೂ ಡಿಜಿಟಲ್‌ನದ್ದೇ ಸುದ್ದಿ. ಅದರಲ್ಲೂ ಈಗಿನ ಯೂಥ್‌ ಡಿಜಿಟಲ್‌ ವೇದಿಕೆಯನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಂತೂ ಈಗಾಗಲೇ ವೆಬ್‌ಸೀರೀಸ್‌ ಹವಾ ಜೋರಾಗಿಯೇ ಇದೆ. ಅಷ್ಟಕ್ಕೂ ಈ ವೆಬ್‌ ಸೀರೀಸ್‌ ನಲ್ಲಿ ಹೊಸಬರೇ ಇದ್ದಾರೆ ಅನ್ನೋದು ವಿಶೇಷ. ಆ ಮೂಲಕ ಕೆಲವರು ಸುದ್ದಿಯಾಗಿದ್ದಾರೆ ಕೂಡ. ಆ ಸಾಲಿಗೆ “ಮಂಗಳʼ ಹೆಸರಿನ ವೆಬ್‌ಸೀರೀಸ್‌ ಕೂಡ ಸೇರಿದೆ. ಹೌದು, ಈಗಾಗಲೇ “ಮಂಗಳʼ ಎಂಬ ವೆಬ್‌ ಸೀರೀಸ್‌ ಹಿಂದೆ ಹೊಸಬರ ತಂಡ ಅಣಿಯಾಗಿದೆ. ಈಗಾಗಲೇ “ಮಂಗಳ” ವೆಬ್‌ ಸೀರೀಸ್‌ ನ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದೆದು, ಆ ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ.
ಅಂದಹಾಗೆ, ಈ “ಮಂಗಳʼ ವೆಬ್‌ಸೀರೀಸ್‌ಗೆ ಪೃಥ್ವಿ ಕುಣಿಗಲ್ ನಿರ್ದೇಶಕರು. ಕಥೆ, ಚಿತ್ರಕಥೆ ಇವರೇ ಬರೆದಿದ್ದಾರೆ. ಜೆ.ಜಿ.ಪ್ರೊಡಕ್ಷನ್ಸ್‌ ನಡಿ ಈ ವೆಬ್‌ ಸೀರೀಸ್‌ ನಿರ್ಮಾಣ ಮಾಡಲಾಗಿದೆ. “ಮಂಗಳ” ಕುರಿತು ನಿರ್ದೇಶಕ ಪೃಥ್ವಿ ಕುಣಿಗಲ್‌ ಹೇಳುವುದೇನು ಗೊತ್ತಾ? ಈ ವೆಬ್‌ ಸೀರೀಸ್ ನಲ್ಲಿ ಏಳು ಎಪಿಸೋಡ್‌ಗಳು ಇರಲಿವೆ. ಇದೊಂದು ಮಂಗಳಮುಖಿಯರ ಕುರಿತು ಸಾಗುವ ಕಥೆ. ಮಂಗಳ ಮುಖಿ ಅವರ ಬಗ್ಗೆ ಮಾಡುತ್ತಿರುವುದರಿಂದ ಸಾಕಷ್ಟು ಸಂಶೋಧನೆ ನಡೆಸಿ, ಚಿತ್ರಕ್ಕೆ ಕೈ ಹಾಕಿದ್ದು, ಮಂಗಳ ಮುಖಿಯರು ವಾಸ ಮಾಡುವಂತಹ ಸ್ಥಳಗಳಿಗೆ ಹೋಗಿ, ಅವರ ಹಾವ-ಭಾವ, ನೋವು-ನಲಿವು ಸೇರಿದಂತೆ ಅವರ ಕಷ್ಟ-ಸುಖ ಎಲ್ಲವನ್ನೂ ಆಲಿಸಿ, ಒಂದು ವರ್ಷಗಳ ಕಾಲ ಗಮನಿಸಿ, ಸಂಶೋಧನೆಯನ್ನೂ ನಡೆಸಿ, ಈಗ ವೆಬ್‌ ಸೀರೀಸ್‌ ಮಾಡಲಾಗುತ್ತಿದೆ. ಈ “ಮಂಗಳʼ ವೆಬ್‌ ಸೀರೀಸ್‌ ಒಂದು ಥ್ರಿಲ್ಲರ್‌ ಸ್ಟೋರಿ. ಒಂದು ಕೊಲೆಯ ಸುತ್ತ ನಡೆಯೋ ಕಥೆ ಇದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ, ಮಂಗಳ ಮುಖಿಯೊಬ್ಬರು ಸಿಲುಕುತ್ತಾರೆ. ಅದರಿಂದ ಅವರು ಹೇಗೆಲ್ಲಾ ಪರಿತಪಿಸುತ್ತಾರೆ. ಆಮೇಲೆ ಅದರಿಂದ ಅವರು ಹೊರ ಬರುತ್ತಾರೋ ಇಲ್ಲವೋ ಎಂಬುದು ಸಸ್ಪೆನ್ಸ್.
ವಿಶೇಷವೆಂದರೆ, “ಮಂಗಳ” ಈಗಾಗಲೇ ಮಾರತಹಳ್ಳಿ ಸುತ್ತಮುತ್ತ ಹಂತದ ಚಿತ್ರೀಕರಣ ಮುಗಿಸಿದೆ. ಇಷ್ಟರಲ್ಲೇ ದೂರದ ಕೊಲ್ಕೊತ್ತಾದಲ್ಲೂ ಹೋಗಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕ ಪೃಥ್ವಿ ಕುಣಿಗಲ್‌ ಅವರದು. ಅಂದಹಾಗೆ, ಈ ವೆಬ್‌ ಸೀರೀಸ್‌ ನಲ್ಲಿ ಅಜಯ್‌ ರಾಜ್‌, ವಿನಯ್‌ ಕೃಷ್ಣಸ್ವಾಮಿ, ಕಾವ್ಯಾಶಾಸ್ತ್ರಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ, ಬೇಬಿ ಅಂಕಿತ, ಮಂಜು ಪಾವಗಡ, ಅಮರ್ ನಾಥ್‌, ಕಿರಣ್ ಬಗಾಡೆ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಆನಂದ್‌ ಸುಂದರೇಶ ಕ್ಯಾಮೆರಾ ಹಿಡಿದರೆ, ಮಯೂರೇಶ್‌ ಸಂಗೀತವಿದೆ. ಇನ್ನು ಪ್ರಮೋದ್‌ ಮರವಂತೆ ಸಂಭಾಷಣೆ ಬರೆದಿದ್ದಾರೆ.  ಮಹೇಶ್ ತೊಗಟ ಸಂಕಲನವಿದೆ. ಒಟ್ಟಾರೆ, ಥ್ರಿಲ್‌ ಎನಿಸುವ ವೆಬ್‌ ಸೀರೀಸ್‌ ಕಟ್ಟಿಕೊಡುವ ಉತ್ಸಾಹದಲ್ಲಿರುವ ಪೃಥ್ವಿ ಮತ್ತು ತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.

Categories
ಸಿನಿ ಸುದ್ದಿ

ವಿಷ್ಣುವರ್ಧನ್ ಅಲ್ಲ, ಇದು ಟಿಪ್ಪುವರ್ಧನ್!

 ಟ್ರೈಲರ್ ಬಿಡುಗಡೆ ಮೂಲಕ‌ ಸದ್ದು ಮಾಡಿದ ಏಕವ್ಯಕ್ತಿ ಸಿನಿಮಾ

ಕೋರೋನಾ ಸಂಕಷ್ಟದ ಪರಿಣಾಮ‌ ಚಿತ್ರಮಂದಿರಗಳು ಬಾಗಿಲು ಮುಚ್ಚಿರುವುದು ನಿಮಗೆ ಗೊತ್ತಿರುವ ವಿಚಾರ. ಹಾಗಾಗಿ ಈಗ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆಗೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ಒಟಿಟಿ‌ ಮೂಲಕ ಬಿಡುಗಡೆ ಆಗುತ್ತಿರುವ ಸಿನಿಮಾಗಳ‌ಸಾಲಿಗೆ ಈಗ ಹೊಸ ಸೆರ್ಪಡೆ ಟಿಪ್ಪುವರ್ಧನ. ಇದು ನೈಜ ಘಟನೆಗಳ ಸುತ್ತಲ‌ಕಥಾ ಹಂದರದ ಚಿತ್ರ.  ‘V4 streem’ OTT ಮೂಲಕ ಡಾ.ವಿಷ್ಣುವರ್ಧನ್ ಹುಟ್ಟಹಬ್ಬದಂದು (18.9.20) ವಿಶ್ವದಾದ್ಯಂತ  ಬಿಡುಗಡೆ ಆಗುತ್ತಿದೆ‌.

ಸಿನಿಮಾಕ್ಕೆ ರಚನೆ,ಚಿತ್ರಕತೆ, ಸಂಭಾಷಣೆ ಜತೆಗೆ ಎರಡು ಹಾಡುಗಳಿಗೆ ಸಾಹಿತ್ಯ ಬರೆದು ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಚಿತ್ರದ ಪ್ರಮುಖ‌ಪಾತ್ರಕ್ಕೆ ಬಣ್ಣ ಹಚ್ಚಿದವರು ಎಂ.‌ಟಿಪ್ಪುವರ್ಧನ್.

ಮೂರು ಹಂತದಲ್ಲಿ ಬರುವ ಕತೆಯು ರಾಜಕೀಯ ವ್ಯಕ್ತಿಗಳು ಜನತೆಗೆ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕೆಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಹಿಂದು-ಮುಸ್ಲಿಂ ವಿಭಿನ್ನ ಜಾತಿಯ ಗೆಳೆಯರ ಗೆಳೆತನದ ನಂಟು, ಪ್ರೀತಿಯನ್ನು ಹೇಳಲಾಗಿದೆ. ಭ್ರಷ್ಟ, ಪ್ರಾಮಾಣಿಕ ರಾಜಕಾರಣಿಗಳ ಮಧ್ಯೆ ಘರ್ಷಣೆ ಆದಾಗ, ಅದಕ್ಕೆ ಒಳ್ಳೆಯ ಉತ್ತರವನ್ನು ಶಿಸ್ತಿನ ರಾಜಕಾರಣಿ ಹೇಳುತ್ತಾ ಹೋಗುತ್ತಾನೆ. ಮತ್ತು ಐಎಎಸ್ ಹುಡುಗನ ಕನ್ನಡ ಪ್ರೇಮ ದಿಟ್ಟತನದ ಅಧಿಕಾರ ಸೇವೆ ಎತ್ತಿ ತೋರಿಸಿರುವುದು ಹಿರಿಮೆಯಾಗಿದೆ.

ತಾರಗಣದಲ್ಲಿ ಅರಸಿಕೆರೆಕೇಶವಮೂರ್ತಿ, ಇನ್ಸಾಫ್‌ಖಾನ್, ಸೂರಜ್‌ಟಿಪ್ಪು, ವಟಗಲ್‌ನಾಗರಾಜ್. ತೇಜಸ್ವಿನಿ, ಗೀತಪ್ರಿಯ, ರಮ್ಯ, ಮೈಕಲ್‌ಮಧು. ಡಾ.ಚಿಕ್ಕಹೆಜ್ಜಾಜಿಮಹಾದೇವ್, ನಂದಕುಮಾರ್ ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ಆರ್.ದಾಮೋದರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಬಾಬು, ಸಂಕಲನ ಕವಿತಾಭಂಡಾರಿ ಅವರದಾಗಿದೆ. ಬೆಂಗಳೂರು, ಗಜೇಂದ್ರಗಡ, ಕೋಲಾರ ಮತ್ತು ಬಂಗಾರಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆರ್.ಬಿ.ನಡಾಫ್ ಗಜೇಂದ್ರಗಡ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಟಿಪ್ಪುವರ್ಧನ್ ಅವರು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಅವರ ಹುಟ್ಟಹಬ್ಬದ ಪ್ರಯುಕ್ತ ಸಿನಿಮಾವನ್ನು ಸಾಹಸ ಸಿಂಹನಿಗೆ ಅರ್ಪಿಸುವ ಸಲುವಾಗಿ ಅದೇ ದಿನದಂದು ಓಟಿಟಿ ಮೂಲಕ ಜನರಿಗೆ ತೋರಿಸುತ್ತಿದ್ದಾರೆ.
ಪ್ರಚಾರದ ಸಲುವಾಗಿ ಮಂಗಳವಾರದಂದು ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಚಿತ್ರತಂಡದ ಹಾಜರಿ ಇತ್ತು. ತಂಡಕ್ಕೆ ಶುಭಹಾರೈಸಲು ನಾಗೇಂದ್ರಅರಸು, ನಟ ಅಮಿತ್, ವಿಸ್ಟ್ರೀಮ್ ಪದಾದಿಕಾರಿಗಳು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನನ್ನೇನು‌ ಹೆದ್ರಸ್ತೀರಾ – ಗುಡುಗಿದ ವಿಲನ್ !

ಕೆಜಿಎಫ್ – 2 ನಲ್ಲಿ ಪ್ರಕಾಶ್ ರೈ – ವಿರೋಧಿಸಿದವರಿಗೆ ಬಹುಭಾಷಾ ನಟ ರೈ ಕೇಳಿದ ಪ್ರಶ್ನೆಯೇನು ಗೊತ್ತಾ?

ಪ್ರಕಾಶ್ ರೈ ಅವರನ್ನು‌ ನಿಮ್ಗೆ ನೋಡ್ಲಿಕ್ಕೆ ಇಷ್ಟ ಇಲ್ವಾ ನೋಡ್ಬೇಡಿ, ಅದು ನಿಮ್ಮ ಹಕ್ಕು….

– ‘ಕೆಜಿಎಫ್ 2 ‘ಚಿತ್ರದಲ್ಲಿ ತಾವು‌ ನಟಿಸುತ್ತಿರುವುದರ ವಿರುದ್ಧ ಸೋಷಲ್ ಮೀಡಿಯಾದಲ್ಲಿ ವ್ಯಕ್ತವಾದ ವಿರೋಧಕ್ಕೆ ನಟ ಪ್ರಕಾಶ್ ರೈ ನೀಡಿದ ಮೊದಲ ಪ್ರತಿಕ್ರಿಯೆ ಇದು.
ಖಾಸಗಿ ವಾಹಿನಿಯೊಂದಕ್ಕೆ‌ ನೀಡಿದ ಸಂದರ್ಶ‌ನದಲ್ಲಿ ಕೋರೋನಾ ನಂತರದ ವಿದ್ಯಮಾನಗಳು, ಆನಂತರ ಮತ್ತೆ ಕೆಜಿಎಫ್ 2 ಚಿತ್ರದೊಂದಿಗೆ ಕ್ಯಾಮೆರಾ ಎದುರಿಸಿದ ಕ್ಷಣಗಳನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದಾರೆ ನಟ ಪ್ರಕಾಶ್.

ನೋಡಿ, ನಾನು ಸಾಹಿತ್ಯ ಓದಿಕೊಂಡು ಕೆಳಗಡೆಯಿಂದ ಮೇಲೆ ಬಂದವನು‌ನಾನು. ತುಂಬಾ ಈಜಿ ಇತ್ತು. ಅದು ಹೇಗೆ? ಒಬ್ಬ ಪ್ರತಿಭಾವಂತ ನಟ, ಒಳ್ಳೆಯವನು, ಚೆನ್ನಾಗಿದ್ದಾನೆ ಅಂತ ಜನರ ಮೆಚ್ಚುಗೆಗಷ್ಟೇ ಸಿಮೀತವಾಗಿದ್ದರೆ ನನಗೇನು‌ ಬದುಕು‌ ಕಷ್ಟವೇ ಇರಲಿಲ್ಲ. ಅದ್ರೆ ನಾನು ಅದನ್ನು ದಾಟಿ, ನನ್ನನ್ನು ನಾನು‌ ಕಂಡುಕೊಂಡಿದ್ದೇನೆ. ಹಾಗಾಗಿ ಇದೆಲ್ಲ ವಿವಾದ ಇರಬಹುದು. ಕೆಲವರಿಗೆ ಇಷ್ಟವಾಗದೆ ಇರಬಹುದು ಎನ್ನುವ ಮೂಲಕ ತಾವೇನು‌ ತಮ್ಮ ವ್ಯಕ್ತಿತ್ವವೇನು ಎಂಬುದನ್ನು ತೆರೆದಿಡುತ್ತಾರೆ ಪ್ರಕಾಶ್ ರೈ.

ಇನ್ನು’ ಕೆಜಿಎಫ್ 2′ ನಲ್ಲಿ ಅವರಿದ್ದಾರೆನ್ನುವುದಕ್ಕೆ ವ್ಯಕ್ತವಾದ ವಿರೋಧಕ್ಕೆ ತಮ್ಮದೇಯಾದ ರೀತಿಯಲ್ಲಿ ಉತ್ತರ ನೀಡುತ್ತಾರೆ ಪ್ರಕಾಶ್ ರೈ.
ಯಾಕೆ, ನಾನೇಕೆ ನಟಿಸಬಾರದು? ನಿಮ್ಗೆ ಅಂಥದ್ದೇನು‌ ಮಾಡಿದ್ದೇನೆ? ನಮಗೂ ನಿಮಗೂ ಏನಾದ್ರೂ ಪರಿಚಯ ಇದೆಯಾ? ಇಲ್ಲ, ನಿಮ್ಮನೇ ದರೋಡೆ ಮಾಡಿದ್ದೇನಾ? ಇಲ್ಲ. ಹಾಗಾದ್ರೆ ಏನು? ನಾನು ವ್ಯವಸ್ಥೆ ಕುರಿತುಒಂದಷ್ಟು ಪ್ರಶ್ನೆ ಮಾಡಿದ್ದೇನೆ. ಆ ಪ್ರಶ್ನೆಗಳು ಸರಿ‌ಯಿದ್ದರೆ ಸರಿ ಅನ್ನಿ, ಇಲ್ಲ ಅಂದ್ರೆ ತಪ್ಪ ಅನ್ನಿ. ಅದು ಬಿಟ್ಟು ನೀನು ಕೆಲಸ ಮಾಡೋಂಗಿಲ್ಲ.‌ಇಲ್ಲಿ‌ಬದುಕುವುದಕ್ಕೆ ಯೋಗ್ಯತೆ ಇಲ್ಲ.ಪಾಕಿಸ್ತಾನಕ್ಕೆ ಹೋಗು ಅಂತ ಹೇಳೋದು ಎಷ್ಟು ಸರಿ. ಇಷ್ಟಕ್ಕೂ‌ನಾನೇಕೆ ಪಾಕಿಸ್ತಾನಕ್ಕೆ ಹೋಗಬೇಕು? ದೇಶ ಬಿಟ್ಟು ಹೋಗು‌ಅಂದ್ರೆ ನಾನೇಕೆ ಹೋಗಬೇಕು ಅಂತೀನಿ. ನಾನು, ನನ್ನ ಹೆಂಡ್ತಿ, ಮಕ್ಕಳು, ಮನೆಯವರು ..ಸೇರಿ‌ನಾನು ಕೂಡ ಎಲ್ಲತರನೇ ಅಲ್ವಾ? ಎನ್ನುವುದು ಪ್ರಕಾಶ್ ರೈ ನೋವಿನ‌ಮಾತು.


ಆ‌ಸಿನಿಮಾನೇನು‌ನಿಮ್ಮ ವಿರುದ್ಧ ಮಾಡ್ತಿದ್ದೇನಾ, ಅದೊಂದುಬಲವನ್ನು ಪ್ರಯೋಗಿಸ್ತಿದ್ದೇನಾ,ಅಲ್ಲ. ಆ ನಿರ್ದೇಶಕ ಏನ್ ಮಾಡ್ದಾ, ಆ ಕತೆ ಏನ್ ಮಾಡ್ತು, ಆ ನಿರ್ಮಾಪಕ ಏನ್ ಮಾಡ್ದಾ, ಅಲ್ಲಿ ಕೆಲಸ ಮಾಡೋ‌ಜನ್ರು ಏನ್ ಮಾಡಿದ್ರು? ಅಂದ್ರೆ ಒಂದ್ ಸಿನಿಮಾದಲ್ಲಿ ಯಾರ್ ಇರ್ಬೇಕು, ಯಾರ್ ಇರ್ಬಾರ್ದು ಅಂತ ನೀವ್ ಡಿಸೈಡ್ ಮಾಡ್ತೀರಾ? ನಿಮ್ಗೆ ಪ್ರಕಾಶ್ ರೈ ನ ನೋಡ್ಲಿಕ್ಕೆ ಇಷ್ಡ ಇಲ್ವಾ, ನೋಡ್ಬೀಡಿ, ಅದು ನಿಮ್ಮ ಹಕ್ಕು. ನೋಡಿ, ನಮ್ಮಿಂದ ಸಿನಿಮಾ‌ಅಲ್ಲ,ಪ್ರೇಕ್ಷಕರಿಂದ ಸಿನಿಮಾ.‌ ಇವತ್ತು ಆರು ತಿಂಗಳು ಏನಾಯ್ತು? ನಾನು ಒಬ್ಬ ಹೀರೋ ಹತ್ರ ಮಾನಾಡ್ತಾ ಹೇಳಿದೆ. ನಾನೊಬ್ಬ ದೊಡ್ಡ ನಟ, ನೀನು ದೊಡ್ಡ ಹೀರೋ. ಸಿನಿಮಾ‌ಇಲ್ಲ, ಕ್ಯಾಮೆರಾ ಇಲ್ಲ. ನಾವ್ಯಾರು, ಸಾಮಾನ್ಯ ಮನುಷ್ಯರೇ ಅಲ್ವಾ.ಮತ್ತೆ. ಅದರಾಚೆ, ಇವ್ನು ಧರ್ಮದ ವಿರುದ್ಧ ಇದವನು,ನನ್ನ ಧರ್ಮದವನಲ್ಲ, ನಮ್ಮ ನಾಯಕನ‌ಪರವಾಗಿದ್ದವನಲ್ಲ.ಒಂದು ವ್ಯವಸ್ಥೆ ಯನ್ನು ಒಪ್ಕೊಳ್ಳಲ್ಲ, ಅಂತ ಎಲ್ಲರೂ ಸೇರಿಕೊಂಡು ನಿರಾಕರಿಸ್ತೀವಿ ಅಂತೀರಾ.‌ಅಂದ್ರೆ ಹೆದಸ್ತೀರಾ, ಉಚ್ಚಾಟನೆ ಮಾಡ್ತೀರಾ,ಹಾಗಾದ್ರೂ ಬಾಯಿ‌ಮುಚ್ಚಲಿ ಅಂತೀರಾ, ಅಂದ್ರೆ ನೀವ್ ಬಳಸ್ತೀರೋ ದಾರಿ ಏನು? ಅದು ಹಿಂಸೆ ಅಲ್ವಾ.‌ಅದು ಅಸೂಕ್ಷ್ಮತೆ ಅಲ್ವಾ. ಒಬ್ರ ಜತೆ ವಾದ ಮಂಡಿಸುವಾಗ ಚರ್ಚೆ ಕನ್ವಿಷನ್ಲ್ ಆಗಿರಬೇಕಲ್ವಾ. ಬದಲಿಗೆ ಹೆಸರಿಸಿ, ಹೊಡೆದು,ಅನ್ನ ಹಾಕದೆ, ಮೂಲೆಗೆ ತಳ್ಳಿ, ಕೆಲಸ ಕೊಡದೆ‌ಮನೆಗೆ ಓಡಿಸಿ ಇನ್ನೇನೋ‌ಮಾಡ್ತೀವಿ ಅಂದ್ರೆ ಅದಲ್ಲ‌ ಸಂವಾದ. ನಾನು‌ಕೊರೋನಾ ಟೈಮ್ ನಲ್ಲಿ ನೂರಾರು ಮಂದಿ ಅಸಹಾಕರನ್ನು ಬಸ್ ಹತ್ತಿಸಿ ಕಳುಹಿಸುವಾಗ ಅವರನ್ನು ಯಾವ್ ಜಾತಿ ಅಂತ ನಾನು ಕೇಳಲ್ಲಿಲ್ಲ.‌ಅದನ್ನ‌ಮೆಚ್ಚಿ ಕೊಳ್ತೀರಿ, ಅದೇ ಕೆಟ್ಟದ್ದನ್ನು‌ನಾನು ಪ್ರಶ್ನಿಸಿದಾಗ ಬಹಿಷ್ಕಾರ‌ಮಾತು ಹೇಳ್ತೀರಿ. ಇದಲ್ಲ‌ವಾದ- ಸಂವಾದ’ ಎನ್ನುವ ಮೂಲಕ ವಿರೋಧಿಗಳನ್ನು ಪ್ರಶ್ನಿಸುತ್ತಾರೆ ಪ್ರಕಾಶ್ ರೈ.

Categories
ಸಿನಿ ಸುದ್ದಿ

ಕಬಿನಿಯಲ್ಲಿ ಪ್ರದೀಪ್ ವರ್ಮಾ ಸಂಗೀತ ನಿರ್ದೇಶಕನ ಹೊಸ ಚಿತ್ರ

 

ಪ್ರದೀಪ್ ವರ್ಮ ಅವರೀಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. (ಸೆ. 8) ಕನ್ನಡ,ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಪ್ರದೀಪ್ ವರ್ಮ, ನಾಯಕ ಕಮ್ ನಿರ್ದೇಶಕರೂ ಹೌದು. ಕನ್ನಡದ ಅನೇಕ ಆಲ್ಬ ಸಾಂಗ್ ಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಪ್ರದೀಪ್ ವರ್ಮ ಸದ್ಯಕ್ಕೆ ವಿನೋದ್ ಪ್ರಭಾಕರ್ ಸಿನಿಮಾವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ.ಅವರ ಹುಟ್ಟುಹಬ್ಬದ ದಿನದಂದು ಹೊಸದೊಂದು ಚಿತ್ರ ಅನೌನ್ಸ್ ಮಾಡಿದ್ದಾರೆ.ಹೌದು, ಪ್ರದೀಪ್ ವರ್ಮ ಸದಾ ಉತ್ಸಾಹದಲ್ಲೇ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುತ್ತಾರೆ. ಈಗ ‘ಕಬಿನಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿರುವುದು ವಿಶೇಷ.ಈ ಚಿತ್ರವನ್ನು ಕಿರಣ್ ನಿರ್ದೇಶನ ಮಾಡುತ್ತಿದ್ದಾರೆ.ಡೇಸಿಸ್ ಇಂಟರ್ನ್ಯಾಷನಲ್ ಪಿಕ್ಚರ್ಸ್ ಮೂಲಕ ಅಕ್ಬರ್ ಖಾನ್ ಮತ್ತು ಸಂಜಯ್ ವಿಜಯ್ ಕುಮಾರ್ ಅವರ ನಿರ್ಮಾಣವಿದೆ. ಭೂಮಿಕಾ ಪ್ರೊಡಕ್ಷನ್ಸ್ ಅರ್ಪಿಸುತ್ತಿದೆ.ಪ್ರದೀಪ್ ವರ್ಮ ಸಂಗೀತವಿದೆ. ಸಾಯಿ ಕಿರಣ್ ಛಾಯಾಗ್ರಹಣವಿದೆ. ಗೌಸ್ ಪೀರ್, ಸಂತೋಷ್ ವೆಂಕಿ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಮೆಡಿಷನ್ ಮಾಫಿಯಾದ ‘ವೀರಪುತ್ರ’

ನೈಜ ಘಟನೆಯ ಸಿನಿಮಾ, ವಿಜಯ್ ಪಾತ್ರಕ್ಕೆ ತ್ರಿಬಲ್ ಶೇಡ್

Categories
ಸಿನಿ ಸುದ್ದಿ

ಬರಲು ರೆಡಿಯಾದ ಮಹಿಷಾಸುರ

ಇದು ತ್ರಿಕೋನ ಪ್ರೇಮ‌ಕತೆಯ ಸಮರ

ಹೊಸಬರ ಮಹಿಷಾಸುರ ತೆರೆಗೆ ಬರಲು ರೆಡಿಯಾಗಿದ್ದಾನೆ. ಅಂದ ಹಾಗೆ ,ಇದು ಮೆಳೆಕೋಟೆ ಮತ್ತು ಮೈತ್ರಿ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣವಾದ ಮಹಿಷಾಸುರ ಚಿತ್ರದ ಸದ್ಯದ ವಿಚಾರ. ಸದ್ಯಕ್ಕೆ ಈ ಚಿತ್ರದ ಬಿಡುಗಡೆ ದಿನಾಂಕ‌ ಫಿಕ್ಸ್ ಆಗಿಲ್ಲ. ಆದರೆ ಸದ್ಯದಲ್ಲಿಯೇ ಚಿತ್ರವನ್ನು ಚಿತ್ರಮಂದಿರಕ್ಕೆ ತರಲು ಚಿತ್ರ ತಂಡ ಸಜ್ಜಾಗಿದೆ.
ಈಗಾಗಲೇ ಚಿತ್ರದ ಟ್ರೇಲರ್ ಕೂಡ ಹೊರಬಂದಿದೆ. ಜತೆಗೆ ಸೆನ್ಸಾರ್ ಮುಗಿದು , ಅಲ್ಲಿಂದ ಯು /ಎ ಪ್ರಮಾಣ ಪತ್ರ ಸಿಕ್ಕಿದೆ.‌ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಮೆಚ್ಚುಗೆಯ ಮಾತು ಹೇಳಿದ್ದು, ಚಿತ್ರತಂಡಕ್ಕೂ ಖುಷಿ ಕೊಟ್ಟಿದೆ. ಇನ್ನು ಚಿತ್ರದ ಕತೆ ಮತ್ತು ತಾರಾಗಣ ಎಲ್ಲವೂ ಹೊಸತು. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಸೇಡಿನ ಕತೆ. ಅದು ಪ್ರೇಮದ ಸುತ್ತಲ ಸಮರ. ಅದಕ್ಕೆತ್ರಿಕೋನ ಪ್ರೇಮಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ‌.ನಿರ್ದೇಶಕರು.

ಅವರ ಪ್ರಕಾರ ಇದು ನಿಜ ಜೀವನದಲ್ಲಿ ನಡೆದ ಘಟನೆ. ಅದರ ಸುತ್ತ ಸಿನಿಮಾ ಅಂಶಗಳನ್ನು ಸೇರಿಸಿದ್ದಾರಂತೆ. ನಿರ್ದೇಶಕ ಉದಯ ಪ್ರಸನ್ನ ಅವರೇ ಚಿತ್ರಕ್ಕೆ ಕಥೆ ಚಿತ್ರಕಥೆ‌ಬರೆದು, ನಿರ್ದೇಶನ ಮಾಡಿದ್ದಾರಂತೆ. ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ ನಾಗಸಂದ್ರ, ಮೈತ್ರಿ ಮಂಜುನಾಥ್ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ಅರ್ಜುನ್, ಬಿಂದುಶ್ರೀ, ಮಂಜು‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಅವರೊಂದಿಗೆ ರಘು ಪಾಂಡೇಶ್ವರ, ರಾಕ್ ಲೈನ್ ಸುಧಾಕರ್, ಮಾಸ್ಟರ್ ತುಷಾರ್, ಮಾಸ್ಟರ್ ಸುಜಿತ್, ರವಿಚಂದ್ರ ಮುಂತಾದವರ ತಾರಾಬಳಗವಿದೆ.

ಚಿತ್ರಕ್ಕೆ ಸುನಿಲ್ ಕೌಶಿಕ್, ಸಾಯಿಕಿರಣ್ ಸಂಗೀತ, ಕೃಷ್ಣ ಛಾಯಾಗ್ರಹಣ, ರಾಘವೇಂದ್ರ ವಿ. ಹಿನ್ನೆಲೆ ಸಂಗೀತ, ವೆಂಕಿ ಡಿವಿಡಿ ಸಂಕಲನ, ರಾಕಿ ರಮೇಶ್ ಸಾಹಸ, ಸುಜಿತ್ ಕಿಶೋರ್ ನೃತ್ಯ ನಿರ್ದೇಶನ, ವಿರಾಟ್ ರಾಜು ಸಂಭಾಷಣೆ ಚಿತ್ರಕ್ಕಿದೆ.‌ಎಲ್ಲವೂ ಅಂದುಕೊಂಡಂತಾದರೆ ಈ ಚಿತ್ರವು ನವೆಂಬರ್ ಕೊನೆ ವಾರ, ಇಲ್ಲವೇ ಡಿಸೆಂಬರ್‌ ಮೊದಲ‌ವಾರದಲ್ಲೇ ತೆರೆಗೆ ಬರಲಿದೆಯಂತೆ.

error: Content is protected !!