ಕೆಲ ಸಿನಿಮಾಗಳು ಹಾಗೆನೇ. ಎಷ್ಟೇ ವರ್ಷ ಉರುಳಿದರೂ ಪದೇ ಪದೇ ನೆನಪಾಗುತ್ತಲೇ ಇರುತ್ತವೆ. ಅಷ್ಟರಮಟ್ಟಿಗೆ ಪ್ರಭಾವ ಬೀರಿರುವ ಸಿನಿಮಾಗಳ ಪೈಕಿ, ಈ ಹಿಂದೆ ಕನ್ನಡದಲ್ಲಿ ಜೋರು ಸದ್ದು ಮಾಡಿದ “ಪೋಲೀಸ್ ಸ್ಟೋರಿ”ಯೂ ಒಂದು. ಹೌದು, “ಪೋಲೀಸ್ ಸ್ಟೋರಿ” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದಂತೂ ನಿಜ. ಅದಕ್ಕೆ ಕಾರಣ, ಚಿತ್ರದ ಕಥೆ ಹಾಗೂ ಸಾಯಿಕುಮಾರ್ ಅವರ ನಟನೆ. ಅಲ್ಲಿ ನಟನೆ ಅನ್ನುವುದಕ್ಕಿಂತ ಅವರ ಡೈಲಾಗ್ ಡಿಲವರಿಯೇ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ದ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರದ ಡೈಲಾಗ್ಗಳು ಎಲ್ಲರ ಬಾಯಲ್ಲೂ ಗುನುಗುವಂತಾಗಿದ್ದು ಸುಳ್ಳಲ್ಲ. ಇಂದಿಗೂ ಪಡ್ಡೆ ಹುಡುಗ್ರು ಸಾಯಿಕುಮಾರ್ ಬಾಯಿಂದ ಬಂದಂತಹ ಪೋಲೀಸ್ ಸ್ಟೋರಿ ಸಿನಿಮಾದ ಡೈಲಾಗ್ ಹೇಳ್ತಾರೆ ಅಂದರೆ, ಆ ಸಿನಿಮಾದ ಖಡಕ್ ಮಾತುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಅನ್ನೋದನ್ನು ಊಹಿಸಿಕೊಳ್ಳಿ.
ಅಷ್ಟಕ್ಕೂ ಈಗ ಯಾಕೆ “ಪೋಲೀಸ್ ಸ್ಟೋರಿ” ಸಿನಿಮಾ ವಿಷಯ ಅಂದುಕೊಂಡ್ರಾ? ವಿಷಯವಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯಿಸಿ, ಭರ್ಜರಿ ಯಶಸ್ಸು ಕಂಡಿದ್ದ “ಪೊಲೀಸ್ ಸ್ಟೋರಿ” ಚಿತ್ರ ಇಂದಿಗೆ ಯಶಸ್ವಿ ೨೫ ವರ್ಷಗಳನ್ನು ಪೂರೈಸಿದೆ. ಹೌದು, ಆಗಸ್ಟ್ 16 ಕ್ಕೆ “ಪೋಲಿಸ್ ಸ್ಟೋರಿ” ರಿಲೀಸ್ ಆಗಿ 25 ವರ್ಷಗಳಾಗಿವೆ. 1996 ರಲ್ಲಿ ತೆರೆ ಕಂಡ ಈ ಸಿನಿಮಾ, ಭರ್ಜರಿ ಯಶಸ್ಸು ಪಡೆದಿತ್ತು. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಗೆಲುವು ಕಂಡಿತ್ತು.
ಇಪ್ಪತ್ತೈದು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಟ ಸಾಯಿಕುಮಾರ್ ಅವರು, “ಪೋಲೀಸ್ ಸ್ಟೋರಿ” ಚಿತ್ರದ ಯಶಸ್ಸಿಗೆ ಕಾರಣರಾದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಚಿತ್ರ ಯಶಸ್ಸು ಕಾಣಲು ಮಾಧ್ಯಮದವರ ಹಾಗೂ ಕನ್ನಡ ಕಲಾಭಿಮಾನಿಗಳ ಪಾಲು ಬಹು ದೊಡ್ಡದು. ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ ಸಾಯಿಕುಮಾರ್. ಇದೇ ಖುಷಿಯಲ್ಲಿರುವ ಸಾಯಿಕುಮಾರ್, ಅದೇ ತಂಡದ ಜೊತೆ ಇಷ್ಟರಲ್ಲೇ ಹೊಸ ಚಿತ್ರ ಶುರುಮಾಡುವ ಯೋಚನೆಯೂ ಇದೆ ಎಂದಿದ್ದಾರೆ.
ಕೊರೋನಾ ಮಹಾಮಾರಿಯ ನಡುವೆಯೂ ಈ ವರ್ಷ ʼರಾಬರ್ಟ್ʼ ಭರ್ಜರಿ ಆಗಿಯೇ ಆಬ್ಬರಿಸಿದ ನಂತರ ಚಂದನವನದಲ್ಲಿ ನಟ ದರ್ಶನ್ ನಟನೆಯ ಮುಂಬರುವ ಸಿನಿಮಾಗಳ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಇದೆ. ಸದ್ಯಕ್ಕೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ʼರಾಜಾವೀರ ಮದಕರಿ ನಾಯಕʼ ದಲ್ಲಿ ದರ್ಶನ್ ಬ್ಯುಸಿ ಆಗಿದ್ದಾರೆ. ಹಾಗೆಯೇ ʼಯಜಮಾನʼ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರಿಗೆ ದರ್ಶನ್ ಮತ್ತೊಂದು ಕಾಲ್ಶೀಟ್ ನೀಡಿದ್ದಾರೆ. ಇಷ್ಟರಲ್ಲಿಯೇ ಆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ ಅನ್ನೋ ಸುದ್ದಿಗಳಿವೆ. ಸದ್ಯಕ್ಕೆ ಇವೆರೆಡು ಸಿನಿಮಾಗಳ ಅಧಿಕೃತ ಮಾಹಿತಿ ಹೊರಬಿದ್ದಿದೆ. ಅದಾದ ನಂತರ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು, ಯಾರ ಜತೆಗೆ ಎನ್ನುವ ಕುತೂಹಲದ ನಡುವೆಯೇ ನಟ ದರ್ಶನ್ ಅವರನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ಭೇಟಿ ಮಾಡಿ, ಕೇಕ್ ತಿನ್ನಿಸಿದ್ದಾರೆ. ಸಹಜವಾಗಿಯೇ ಇವರ ಭೇಟಿ ಭಾರೀ ಕುತೂಹಲ ಮೂಡಿಸಿದೆ.
ಕನ್ನಡದ ಮಟ್ಟಿಗೆ ಸಕ್ಸಸ್ ನಿರ್ದೇಶಕರೇ ಅಗಿರುವ ದಯಾಳ್ ಪದ್ಮನಾಭನ್ ಇತ್ತೀಚೆಗೆ ದೊಡ್ಡ ಸ್ಟಾರ್ ಜತೆಗೆ ಸಿನಿಮಾ ಮಾಡಿಲ್ಲ ಅಂತಂದರೂ ಕೂಡ ಕಂಟೆಂಟ್ ಆಧರಿತ ಸಿನಿಮಾಗಳ ಮೂಲಕ ಸಖತ್ ಸೌಂಡ್ ಮಾಡುತ್ತಲೇ ಬರುತ್ತಿದ್ದಾರೆ. ತಮ್ಮದೇ ಬ್ಯಾನರ್ನಲ್ಲಿ ತಾವೇ ನಿರ್ಮಾಪಕರಾಗುವುದರ ಜತೆಗೆ ನಿರ್ದೇಶಕರೂ ಆಗಿ, ಒಂದು ಸಿನಿಮಾಕ್ಕೆ ಹಾಕಿದ ಬಂಡವಾಳ ಲಾಸ್ ಮಾಡಿಕೊಂಡಿದ್ದೇ ಇಲ್ಲ.
ಕಡಿಮೆ ಬಜೆಟ್ ಸಿನಿಮಾ ಮಾಡಿ, ಹೆಚ್ಚು ಲಾಭ ಮಾಡುವ ನಿರ್ದೇಶಕ ಕಮ್ ನಿರ್ಮಾಪಕ ಯಾರು ಅಂತ ಹುಡುಕಿದರೆ ಮೊದಲು ಸಿಗುವ ಹೆಸರು ದಯಾಳ್ ಪದ್ಮನಾಭನ್. ಅದ್ಯಾಕೋ ಅವರಿಗೆ ಈಗ ದರ್ಶನ್ ಅವರೊಂದಿಗೆ ಸಿನಿಮಾ ಮಾಡುವ ಆಸೆ ಚಿಗುರಿದೆ. ಅವರಿಬ್ಬರ ಭೇಟಿ ಈ ಫೋಟೋ ನೋಡಿದಾಗ ಹಾಗನಿಸಿದರೂ ಅಚ್ಚರಿ ಇಲ್ಲ. ಆದರೆ ಅವರ ಭೇಟಿಯ ಉದ್ದೇಶ ಬೇರೆಯದೇ ಇದೆ. ಅದು ಸಿನಿಮಾ ಮಾಡುವ ಕಾರಣಕ್ಕಾಗಿ ಅಲ್ಲ. ಹಾಗಾದ್ರೆ, ಯಾಕೆ ಈ ಭೇಟಿಯ ಉದ್ದೇಶ ? ಆ ಬಗ್ಗೆ ದಯಾಳ್ ಹೇಳ್ತಾರೆ ಕೇಳಿ.
ʼ ನಟ ದರ್ಶನ್ ಅವರು ಚಿತ್ರರಂಗಕ್ಕೆ ಬಂದು ಇಲ್ಲಿಗೆ ೨೪ ವರ್ಷ ಆಯಿತು. ಒಬ್ಬ ನಟನ ಪಾಲಿಗೆ ಇದು ಬಹುದೊಡ್ಡ ಸಾಧನೆ. ಅದೇ ಕಾರಣಕ್ಕೆ ಅವರಿಗೆ ವಿಶ್ ಮಾಡೋಣ ಅಂತ ಕಳೆದ ನಾಲ್ಕೈದು ದಿನಗಳಿಂದ ಅಂದುಕೊಂಡಿದ್ದೆ. ಅದ್ಯಾಕೋ ಸಮಯ ಕೂಡಿ ಬಂದಿರಲಿಲ್ಲ. ಜತೆಗೆ ಅವರು ಸಿಗ್ತಾರೋ ಇಲ್ಲವೋ ಎನ್ನುವ ಕಾರಣಕ್ಕೆ ಹಿಂದು ಮುಂದು ನೋಡುತ್ತಿದ್ದೆ. ಇದೇ ವೇಳೆ ಚೆನ್ನೈನಿಂದ ಪರಿಚಿತರೊಬ್ಬರು ನಟ ದರ್ಶನ್ ಅವರನ್ನು ಭೇಟಿ ಮಾಡುವುದಿದೇ ಅಂತ ಹೇಳಿದ್ದರು.ಒಂದು ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅವರು, ಚೆನ್ನೈನಿಂದ ದರ್ಶನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಅವರ ಕರೆದುಕೊಂಡು ಹೋಗುವ ನೆಪದಲ್ಲಿ ನಾನು ಬರುವುದಾಗಿ ಹೇಳಿದ್ದೆ. ಹಾಗೆಯೇ ಅವರ ಸಿನಿ ಜರ್ನಿಗೆ ಸ್ಪೆಷಲ್ ವಿಶ್ ಮಾಡೋಣ ಅಂತ ಒಂದು ಸಿನಿಮಾ ರೋಲ್ ನ ಸೆಲ್ಯುಲಾಯ್ಡ್ ಶೈಲಿಯ ಕೇಕ್ ತಯಾರಿಸಿ, ಅವರ ಮನೆಗೆ ತೆಗೆದುಕೊಂಡು ಹೋಗಿದ್ದೆ. ಅದನ್ನು ನೋಡಿ ದರ್ಶನ್ ತುಂಬಾ ಖುಷಿ ಪಟ್ಟರು. ಇದೇನೋ ತುಂಬಾ ಡಿಫೆರೆಂಟ್ ಆಗಿದೆ, ನಿಮ್ಗೆ ಮಾತ್ರ ಈ ಥರ ಪ್ಲಾನ್ ಹೊಳೆಯುತ್ತೆ ಅಂತೆಲ್ಲ ತಮಾಷೆ ಮಾಡಿ, ಖುಷಿ ಪಟ್ಟರುʼ ಅಂತ ದರ್ಶನ್ ಭೇಟಿಯ ಹಿಂದಿನ ಕಥೆಯನ್ನು ಬಿಚ್ಚಿಟ್ಟರು ನಿರ್ದೇಶಕ ದಯಾಳ್.
ಒಂದೇ ದಿನದಲ್ಲಿ ಎರೆಡೆರೆಡು ಸಿನಿಮಾ ನಮ್ದೇ ಲಾಂಚ್ ಆಗಿ ಕಣ್ರೀ, ಬಟ್ ಈ ಚಕ್ರವರ್ತಿ ಲಕ್ ಹೇಗಿದೆ ನೋಡ್ರಿ…! ಪತ್ರಕರ್ತ, ಬರಹಗಾರ, ನಿರ್ದೇಶಕ ಹಾಗೂ ನಟ ಚಂದ್ರಚೂಡ್ ಚಕ್ರವರ್ತಿ ಅವರ ಬಗ್ಗೆ ಒಂದ್ರೀತಿ ಅಚ್ಚರಿ, ಮತ್ತೊಂದು ಬಗೆಯಲ್ಲಿ ಮೆಚ್ಚುಗೆಯ ಈ ಮಾತು ಹೇಳಿದ್ದು ಮತ್ತೊಬ್ಬ ಚಕ್ರವರ್ತಿ, ಅಲಿಯಾಸ್ ಅಭಿನಯ ಚಕ್ರವರ್ತಿ ಒನ್ ಅಂಡ್ ಒನ್ಲೀ ಕಿಚ್ಚ ಸುದೀಪ್. ಬಿಗ್ ಬಾಸ್ ಖ್ಯಾತಿಯ ನಟ, ನಿರ್ದೇಶಕ ಚಂದ್ರಚೂಡ್ ಚಕ್ರವರ್ತಿ ಭಾನುವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಬಾರಿಯ ಅವರ ಹುಟ್ಟು ಹಬ್ಬ ಹಿಂದೆಂದಿಗಿಂತ ತುಂಬಾನೆ ಸ್ಪೆಷಲ್ ಆಗಿತ್ತು. ಯಾಕಂದ್ರೆ, ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರೀಗ ನಟನೆಯ ಜತೆಗೆ ನಿರ್ದೇಶಕರಾಗಿಯೂ ಬ್ಯುಸಿ ಆಗುತ್ತಿದ್ದಾರೆ.
ಸದ್ದಿಲ್ಲದೆ ಸುದ್ದಿ ಮಾಡದೆ ಅವರೀಗ ಎರಡು ಸಿನಿಮಾದೊಂದಿಗೆ ಸುದ್ದಿಯಲ್ಲಿದ್ದಾರೆ. ಕಮಲ್ ಜೋಷಿ ನಿರ್ಮಾಣ ಹಾಗೂ ವಶಿಷ್ಠ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಧ್ಯಂತರ ಹೆಸರಿನ ಚಿತ್ರದಲ್ಲಿ ಚಂದ್ರಚೂಡ್ ಚಕ್ರವರ್ತಿ ಹೀರೋ ಆಗಿ ಎಂಟ್ರಿ ಆಗುತ್ತಿದ್ದರೆ, ಶ್ರೀಧರ್ ರಾಮ್, ಬಾಬು ರೆಡ್ಡಿ, ಹಾಗೂ ಕಮಲ್ ಗೌಡ ನಿರ್ಮಾಣದ ʼಭೀಮಿʼ ಚಿತ್ರಕ್ಕೆ ಚಂದ್ರಚೂಡ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜತೆಗೆ ಅದರಲ್ಲೂ ನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಭಾನುವಾರ ಅವರ ಹುಟ್ಟು ಹಬ್ಬದ ಅಂಗವಾಗಿ ಅವೆರೆಡು ಸಿನಿಮಾಗಳ ಫಸ್ಟ್ ಪೋಸ್ಟರ್ ಲಾಂಚ್ ಆದವು. ವಿಶೇಷ ಅಂದ್ರೆ ಅವರೆಡನ್ನು ಲಾಂಚ್ ಮಾಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಸಪ್ರೇಟ್ ಆಗಿ ಎರಡನ್ನು ಲಾಂಚ್ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್, ಒಂದೇ ದಿನದಲ್ಲಿ ಎರಡೆರೆಡು ಸಿನಿಮಾ ನಮ್ದೇ ಲಾಂಚ್ ಆಗಿ ಕಣ್ರೀ.. ಬಟ್ ಈ ಚಕ್ರವರ್ತಿ ಅವರದ್ದು ಭರ್ಜರಿ ಲಕ್ ಬಿಡಿ.. ಅಂತ ಅಚ್ಚರಿ ಮತ್ತು ಮೆಚ್ಚುಗೆಯ ಮಾತು ಹೇಳಿದರು.
ಬಿಗ್ ಬಾಸ್ ಮನೆಯೊಳಗೆ ಚಂದ್ರಚೂಡ್ ಅವರ ಮಾತುಗಾರಿಕೆಯ ಬುದ್ಧಿವಂತಿಕೆಯ ಬಗ್ಗೆ ಸಾಕಷ್ಟು ಪ್ರಶಂಸೆ ಹೇಳಿದ್ದ ಕಿಚ್ಚ ಸುದೀಪ್, ಕೆಲವ ಆಕ್ಷೇಪಾರ್ಹ ಮಾತು ಕೇಳಿ ಬಂದಾಗ ಫುಲ್ ಕ್ಲಾಸ್ ತೆಗೆದುಕೊಂ ಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇಷ್ಟಾಗಿಯೂ ಚಂದ್ರಚೂಡ್ ಅವರ ಸಾಹಿತ್ಯ , ಬರವಣಿಗೆ ಹಾಗೂ ಸಾಹಸದ ಬದುಕಿನ ಬಗ್ಗೆ ಸುದೀಪ್ ಅವರಲ್ಲಿ ಅಪಾರ ಪ್ರೀತಿ ಮತ್ತು ಮೆಚ್ಚುಗೆ ಇದೆ. ಅವರೆಡು ಸಿನಿಮಾಗಳ ಫಸ್ಟ್ ಲುಕ್ ಲಾಂಚ್ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯೊಳಗೆ ಕಂಡ ಚಂದ್ರಚೂಡ್ ಅವರನ್ನೇ ನೆನಪಿಸಿಕೊಂಡು ಮಾತನಾಡಿದ ನಟ ಕಿಚ್ಚ ಸುದೀಪ್, ʼ ಹುಟ್ಟಿದ್ದಕ್ಕಾಗಿಯೇ ಇವ್ರು ಬದುಕುತಿರಬೇಕು ಅಂತೆನಿಸುತ್ತೇ. ಅವರು ಸಿಕ್ಕಾಪಟ್ಟೆ ಸ್ಟ್ರೈಟ್ ಫಾರ್ವರ್ಡ್.ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಅದಿರಲಿ, ಅವರ ಬಗ್ಗೆ ಖುಷಿ ಆಗ್ತೀರೋದು ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಸಿನಿಮಾ ಸಿನಿಮಾ ಅಂತ ಬ್ಯುಸಿ ಆಗುತ್ತಿದ್ದಾರೆ. ತುಂಬಾ ಖುಷಿ ಆಗುತ್ತಿದೆ. ಅವರಿಗೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಆಗುತ್ತಿರುವ ಬಗ್ಗೆ ನಿರ್ದೇಶಕ, ನಟ ಚಂದ್ರಚೂಡ್ ಕೂಡ ಖುಷಿ ಆಗಿದ್ದಾರೆ.ʼ ಗೊತ್ತಿಲ್ಲ, ಇದೆಲ್ಲ ನಾನು ನಿರೀಕ್ಷೆ ಮಾಡಿರಲಿಲ್ಲ. ಹೇಂಗಾಗುತ್ತೋ ಹಾಗೆ ಆಗ್ಲಿ ಅಂತ ಬಿಗ್ ಬಾಸ್ ಮನೆಗೆ ಹೋಗಿ ಬಂದೆ. ಅಲ್ಲಿಂದ ಬರುತ್ತಿದ್ದಂತೆಯೇ ಒಂದಷ್ಟು ಚಟು ವಟಿಕೆಗಳು ಶುರುವಾದವು. ಸದ್ಯಕ್ಕೆ ಈಗ ಎರಡು ಪ್ರಾಜೆಕ್ಟ್ ಶುರು ವಾಗಿವೆ. ಇನ್ನು ಈಗಾಗಲೇ ನಾನು ಒಪ್ಪಿಕೊಂಡ ಸಿನಿಮಾಗಳ ಪೈಕಿ ʼಗಾನ್ ಕೇಸ್ʼ ಶೂಟಿಂಗ್ ಬಾಕಿ ಇದೆ. ಜರ್ನಿ ಚೆನ್ನಾಗಿದೆ. ಎಲ್ಲವೂ ಒಳ್ಳೆಯದಾಗುತ್ತೆ ಎನ್ನುವ ನಿರೀಕ್ಷೆ ಇದೆ ಎನ್ನುತ್ತಾರೆ ಚಂದ್ರಚೂಡ್. ಇನ್ನು ಚಂದ್ರಚೂಡ್ ನಟಿಸಿರುವ ʼಮೇಲೊಬ್ಬ ಮಾಯಾವಿʼ ಹಾಗೂ ʼಮಾರೀಚ ʼ ಸಿನಿಮಾಗಳು ತೆರೆಕಾಣಬೇಕಿದೆ.
ಇದು ನಿಜಕ್ಕೂ ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಆ ದಾಖಲೆ ಬರೆಯುವ ಮಟ್ಟಕ್ಕೆ ಕೆಲಸವಾಗಬೇಕಷ್ಟೇ. ಇಲ್ಲೀಗ ಹೇಳ ಹೊರಟಿರುವ ವಿಷಯ. ಒಂದು ಹೊಸ ಚಿತ್ರದ್ದು. ಗಾಂಧಿನಗರದಲ್ಲಿ ಹೊಸ ಸಿನಿಮಾಗಳ ಸಂಖ್ಯೆ ದಿನ ಕಳೆದಂತೆ ಏರುತ್ತಲೇ ಇದೆ. ಅಂತಹ ಸಿನಿಮಾಗಳ ಬಗ್ಗೆ ವಿವರವೂ ಸಿಗುತ್ತಿರುತ್ತೆ. ಆದರೆ, ಇಲ್ಲೊಂದು ಸೆಟ್ಟೇರಲಿರುವ ಹೊಸ ಸಿನಿಮಾ ಬಗ್ಗೆ ಒಂದಷ್ಟು ಕುತೂಹಲವಂತೂ ಇದೆ. ಆ ಕುತೂಹಲಕ್ಕೆ ಕಾರಣವಿಷ್ಟೇ. ಅದೊಂದು ಬಿಗ್ ಬಜೆಟ್ ಚಿತ್ರ. ಅರೇ, ಈಗಾಗಲೇ ಕನ್ನಡದಲ್ಲಿ ದಾಖಲೆ ಮೊತ್ತದ ಬಜೆಟ್ ಸಿನಿಮಾಗಳು ಸೆಟ್ಟೇರಿ, ಬಿಡುಗಡೆಯಾಗಿವೆಯಲ್ಲ ಎಂಬ ಪ್ರಶ್ನೆ ಎದುರಾಗಬಹುದು. ಆದರೂ ಈಗ ಒಂದು ಬಿಗ್ಬಜೆಟ್ ಸಿನಿಮಾ ಬಗ್ಗೆ ಹೇಳಲೇಬೇಕು. ಹೌದು, “ಕೆಜಿಎಫ್”, “ವಿಕ್ರಾಂತ್ ರೋಣ”, “ಕಬ್ಜ” ಹೀಗೆ ಕನ್ನಡದಲ್ಲಿ ಇನ್ನೂ ಅನೇಕ ಬಿಗ್ ಬಜೆಟ್ ಚಿತ್ರಗಳು ತಯಾರಾಗುತ್ತಿವೆ. ಈಗಾಗಲೇ ಕನ್ನಡ ಚಿತ್ರರಂಗದತ್ತ ಇತರೆ ಚಿತ್ರರಂಗಗಳೂ ತಿರುಗಿ ನೋಡಿವೆ. ಈಗ ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಆ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಅನ್ನೋದೇ ಈ ಹೊತ್ತಿನ ಸುದ್ದಿ.
ಅಂದಹಾಗೆ, ಅಂಥದ್ದೊಂದು ದಾಖಲೆ ಮೊತ್ತದ ಬಜೆಟ್ನಲ್ಲಿ ಸಿನಿಮಾ ತಯಾರಿಸಲು ಹೊರಟಿರೋದು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀ ಭಗವತಿ ದೇವಿಯ ಆರಾಧಕ ಗಾನ ಶರವಣ ಸ್ವಾಮೀಜಿ. ಹೌದು, 1995 ರಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕನಾಗಿ ಗುರುತಿಸಿಕೊಂಡಿರುವ ಇವರು, ಸಿನಿಮಾರಂಗದೊಂದಿಗೆ ಅಷ್ಟೇ ನಂಟು ಹೊಂದಿದವರು. ಟ್ರ್ಯಾಕ್ ಸಿಂಗರ್ ಆಗಿ ದೊಡ್ಡ ಮ್ಯೂಸಿಕ್ ಡೈರೆಕ್ಟರ್ಗಳ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಆನಂತರ ಗೋಲ್ಡ್ ಬ್ಯುಸಿನೆಸ್ನಲ್ಲಿ ತೊಡಗಿಕೊಂಡು ಬ್ಯುಸಿಯಾದ ಮೇಲೆ ಚಿತ್ರರಂಗದತ್ತ ಗಮನ ಹರಿಸಲು ಇವರಿಗೆ ಸಾಧ್ಯವಾಗಲಿಲ್ಲವಂತೆ. ಲಂಡನ್, ಹಾಂಕಾಂಗ್, ಮಲೇಶಿಯಾ ದಲ್ಲೂ ಇವರು ಗೋಲ್ಡ್ ಕಂಪನಿ ಹೊಂದಿದ್ದು, ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಆರೇಳು ತಿಂಗಳ ಹಿಂದೆ ಗಾನಶರವಣ ಸ್ವಾಮೀಜಿ ಅವರು ಕೇರಳದ ಭಗವತಿದೇವಿ ದೇವಸ್ಥಾನದ ನವೀಕರಣಕ್ಕೆ ಬರೋಬರಿ 526 ಕೋಟಿ ರೂ. ಕೊಟ್ಟಿದ್ದರು. ಅದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಇವರೀಗ ಬರೋಬರಿ ಐನೂರು ಕೋಟಿಯ ಬಿಗ್ ಬಜೆಟ್ ಚಿತ್ರವನ್ನು ಏಳು ಭಾಷೆಗಳಲ್ಲಿ ನಿರ್ಮಿಸಲು ಹೊರಟಿದ್ದಾರೆ.
ಇತ್ತೀಚೆಗೆ ಅವರು ತಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಜಿ.ಎಸ್.ಆರ್.ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಆ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ “ಕೃಷ್ಣರಾಜ-೪” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಕಥೆಯಷ್ಟೇ ರೆಡಿಯಾಗಿದೆ. ಆದರೆ, ಯಾರು ನಿರ್ದೇಶಕ, ನಾಯಕ, ನಾಯಕಿ ಯಾರಾಗುತ್ತಾರೆ. ಯಾರೆಲ್ಲ ತಾಂತ್ರಿಕ ವರ್ಗ ಕೆಲಸ ಮಾಡಲಿದೆ. ಕಲಾವಿದರು ಯಾರ್ ಯಾರ್ ನಟಿಸುತ್ತಾರೆ ಎಂಬಿತ್ಯಾದಿ ಮಾಹಿತಿ ಇಲ್ಲ. ಅದನ್ನು ಇಷ್ಟರಲ್ಲೇ ಅನೌನ್ಸ್ ಮಾಡಲು ಶರವಣ ಸ್ವಾಮೀಜಿ ತಯಾರು ಮಾಡಿಕೊಳ್ಳುತ್ತಿದ್ದಾರೆ. ಟೈಟಲ್ ಲಾಂಚ್ ಮಾಡಿ ಮಾತನಾಡಿದ ನಿರ್ಮಾಪಕ, ಕಥೆಗಾರ ಹಾಗೂ ಸಂಗೀತ ನಿರ್ದೇಶಕ ಗಾನಶರವಣ ಸ್ವಾಮೀಜಿ, “ಸಂಗೀತ ಕಲೆ ನನಗೆ ರಕ್ತಗತವಾಗಿ ಬಂದಿದೆ. ಕಳೆದ ಐದಾರು ವರ್ಷದಿಂದಲೂ ಸಿನಿಮಾ ಮಾಡುವ ಯೋಜನೆ ಇತ್ತು.
ಮೂರು ವರ್ಷಗಳ ಹಿಂದೆ ಒಂದು ಕಥೆಯ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕಥೆ ಮಾಡಿದೆ. ಅದಕ್ಕೆ “ಕೃಷ್ಣರಾಜ-೪” ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದೇನೆ. ಸುಮಾರು 400ರಿಂದ 500 ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗಲಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. ಸ್ವಾಮೀಜಿ ಫಿಲಂಸಿಟಿಯನ್ನು ನಿರ್ಮಿಸಲು ಮೈಸೂರಿನಲ್ಲಿ ಈಗಾಗಲೇ 640 ಎಕರೆ ಜಾಗವನ್ನೂ ಸಹ ಖರೀದಿಸಲಾಗಿದೆ. ಅಲ್ಲೊಂದು ಅದ್ದೂರಿ ವೆಚ್ಚದ ಸೆಟ್ ಹಾಕಲಿದ್ದೇವೆ. ಅದು ಅಲ್ಲೇ ಶಾಶ್ವತವಾಗಿ ಉಳಿಯಲಿದೆ, ಇನ್ನು ಲಂಡನ್ನಲ್ಲಿ ನಮ್ಮ ಮ್ಯೂಸಿಕ್ ಸ್ಟುಡಿಯೋ ಇದ್ದು, ಅಲ್ಲೇ ಈ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯಲಿದೆ. ಅಲ್ಲದೆ ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ಈ ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ, ಅದು ಯಾರು ಅನ್ನೋದು ಇಷ್ಟರಲ್ಲೇ ಗೊತ್ತಾಗಲಿದೆ. ನಾಯಕನ ಪಾತ್ರಕ್ಕೂ ಕೂಡ ಹುಡುಕಾಟ ನಡೆಯುತ್ತಿದೆ. ಎಲ್ಲಾ ಭಾಷೆಯಲ್ಲೂ ಸ್ಥಳೀಯ ಕಲಾವಿದರನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಯೋಚನೆಯೂ ಇದೆ ಎಂಬುದು ಅವರ ಮಾತು. ಶರವಣ ಸ್ವಾಮೀಜಿ ಅವರ ಲೀಗಲ್ ಅಡ್ವೈಜರ್ ಎಂ.ವಿ. ಅದಿತಿ ಅವರು ಸಹ ನಿರ್ಮಾಪಕಿಯಾಗಿ ಕೆಲಸ ಮಾಡಲಿದ್ದಾರೆ.
ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ನಾಗ್, ಅಂಬರೀಷ್ ಸೇರಿದಂತೆ ಹಲವಾರು ದಿಗ್ಗಜರು ಗಂಧದಗುಡಿಯನ್ನು ಕಟ್ಟಿಬೆಳೆಸುವುದಕ್ಕೆ ಶ್ರಮಪಟ್ಟಿದ್ದಾರೆ. ನಾಯಕನಟರುಗಳೊಟ್ಟಿಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಬೆವರುಸುರಿಸಿದ್ದಾರೆ. ಇವತ್ತು ಚಂದನವನದತ್ತ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ಅಣ್ಣಾವ್ರಿಂದ ಹಿಡಿದು ಅಣ್ತಮ್ಮನವರೆಗಿನ ಪ್ಯಾಷನೇಟ್ ನಟರುಗಳು-ನಿರ್ದೇಶಕರು-ನಿರ್ಮಾಪಕರು ಸೇರಿದಂತೆ ಶ್ರದ್ದಾ-ಭಕ್ತಿಯಿಂದ ಕನ್ನಡ ಸಿನಿಮಾಗಾಗಿ ದುಡಿಯುವ ಪ್ರತಿಯೊಬ್ಬರು. ಕಾರಣಿಭೂತರಾಗುತ್ತಾರೆ. ಹೀಗೆ ಎಲ್ಲರ ಪರಿಶ್ರಮ ಹಾಗೂ ಸಮಕ್ಷಮದಿಂದ ಕನ್ನಡ ಚಿತ್ರರಂಗಕ್ಕೆ ಚಿನ್ನದ ಬೆಲೆ ಬರುತ್ತಿದೆ. ಪರಭಾಷಾ ಮಂದಿ ಮಾತ್ರವಲ್ಲ ಹೊರದೇಶದವರು ಕಣ್ಣರಳಿಸಿ ನೋಡುವಂತಾಗಿದೆ. ಇಂತಹ ಹೊತ್ತಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ಗೌಡ್ರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈಹಾಕಿ ಅಚ್ಚರಿ ಮೂಡಿಸಿದ್ದಾರೆ. ಸ್ಯಾಂಡಲ್ವುಡ್ ಕೀರ್ತಿಪತಾಕೆಯನ್ನು ಎತ್ತಿಹಿಡಿಯುವಂತಹ ನಯಾ ಸಾಹಸಕ್ಕೆ ಮುಂದಾಗಿದ್ದಾರೆ.
ಕನ್ನಡ ಫಿಲ್ಮ್ ಇಂಡಸ್ಟ್ರಿ ಚಿಕ್ಕದು.. ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ.. ಹೊರದೇಶದಲ್ಲಿ ಅಲ್ಲಾ ಹೊರರಾಜ್ಯದಲ್ಲೇ ಬೇಡಿಕೆ ಇಲ್ಲಾ.. ಕೋಟಿ ಕೋಟಿ ಕಮಾಯಿ ಮಾಡುವ ತಾಕತ್ತಿಲ್ಲ.. ಹೀಗೆ ಮಾತನಾಡುತ್ತಿದ್ದವರೆಲ್ಲರ ಬಾಯಿಗೆ ಕೆಜಿಎಫ್ ಟೀಮ್ ಬೀಗ ಹಾಕಿದ್ದು ಎಲ್ಲರಿಗೂ ಗೊತ್ತೆಯಿದೆ. ಕನ್ನಡ ಸಿನಿಮಾದ ತಾಕತ್ತೇನು? ಗಂಧದಗುಡಿಯ ಪ್ರತಿಭೆಗಳಿಗಿರುವ ಶಕ್ತಿ ಎಂತಹದ್ದು ಎನ್ನುವುದು ಕೆಜಿಎಫ್ ಪ್ರೂ ಮಾಡಿ ತೋರಿಸಿತು. ಅನಂತರ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆಗೊಂಡ ಚಿತ್ರಗಳು ಕೂಡ ಹೊರರಾಜ್ಯದವರನ್ನು ಹಾಗೂ ಪರಭಾಷೆಯವರನ್ನ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದವು. ಇದೀಗ, `ಉಮಾಪತಿ ಫಿಲ್ಮ್ ಸಿಟಿ’ ನಿರ್ಮಾಣದ ಸುದ್ದಿ ಆಚೆ-ಈಚೆ-ನೀಚೆ-ಪೀಚೆ ಇರುವ ಸಿನಿಮಾ ಮಂದಿಯನ್ನು ಬೆಕ್ಕಸ ಬೆರಗಾಗಿಸಿದೆ. ಈ ಗಂಧದಗುಡಿಯ ಮಂದಿ ಸಾಮಾನ್ಯದವರಲ್ಲ ಬುಡು ಗುರು ಎನ್ನುವ ಡೈಲಾಗ್ ಎಲ್ಲರ ಬಾಯಲ್ಲೂ ಬರುವಂತಾಗಿದೆ.
ಅನ್ನದಾತರಾಗಿ ಗಂಧದಗುಡಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಉಮಾಪತಿ ಶ್ರೀನಿವಾಸ್ ಗೌಡ್ರು ಸಾಮಾನ್ಯದವರಲ್ಲ ಬಿಡಿ. ತಾವು ಎಷ್ಟು ಕೋಟಿಗೆ ಬದುಕ್ತೀವಿ ಅಂತ ಅವರು ಬಾಯ್ಬಿಟ್ಟು ಹೇಳಲ್ಲ ಅಷ್ಟೇ. ಅವರ ಮಹಾಕನಸುಗಳೇ ಕೋಟಿ ಕಥೆಯನ್ನ ಹೇಳುತ್ತವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಬ್ಬುಲಿ' ಚಿತ್ರದ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು. ಅನಂತರ ಚಾಲೆಂಜಿಂಗ್ ಚಕ್ರವರ್ತಿಯರಾಬರ್ಟ್’ ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳ ಸುರಿದು ಕೋಟ್ಯಾನುಕೋಟಿ ಗಳಿಸಿದರು. ಈ ಮಧ್ಯೆ ರಾಷ್ಟ್ರಪ್ರಶಸ್ತಿ ಪಡೆಯುವಂತಹ ಒಂದಲ್ಲಾ.. ಎರಡಲ್ಲಾ..' ಸಿನಿಮಾ ಮಾಡಿ ಗೆದ್ದರು. ಈಗಮದಗಜ’ನಿಗೆ ಹಣ ಹೂಡಿಕೆ ಮಾಡಿದ್ದಾರೆ. `ಉಪಾಧ್ಯಕ್ಷ’ ಸಿನಿಮಾಗೆ ದುಡ್ಡು ಹಾಕಿ ಚಿಕ್ಕಣ್ಣನ್ನ ಹೀರೋ ಮಾಡೋದಕ್ಕೆ ಹೊರಟಿದ್ದಾರೆ. ಇಷ್ಟೆಲ್ಲದರ ನಡುವೆ ತಮ್ಮ ದಿವ್ಯಕನಸಿನ ಸಾಕಾರಕ್ಕಾಗಿ 175 ಕೋಟಿ ಇನ್ವೆಸ್ಟ್ ಮಾಡ್ತಿದ್ದಾರೆ.
ಫಿಲ್ಮ್ ಸಿಟಿ ನಿರ್ಮಾಣ ಮಾಡ್ಬೇಕು ಎನ್ನುವುದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ್ರ ಬಹುದೊಡ್ಡ ಕನಸು. ಆ ಕನಸಿನ ಸಾಕಾರಕ್ಕಾಗಿ ಬಹಳಷ್ಟು ದಿನದಿಂದ ಎದುರುನೋಡ್ತಿದ್ದರು. ಕೊನೆಗೂ ಆ ಮಹಾಕನಸಿಗೆ ಭದ್ರಬುನಾದಿ ಹಾಕಿದ್ದಾರೆ. ನಾಗರ ಪಂಚಮಿ ದಿನದಂದು `ಉಮಾಪತಿ ಫಿಲ್ಮ್ ಸಿಟಿ’ಯ ಅಂಗಳದಲ್ಲಿ ಭೂಮಿ ಪೂಜೆ ನೆರವೇರಿದೆ. ಕನಕಪುರ ರಸ್ತೆಯ ರವಿಶಂಕರ್ ಆಶ್ರಮದ ಬಳಿ ೨೫ ಎಕರೆ ಜಮೀನಿನಲ್ಲಿ ಭರ್ತಿ ೧೭೫ ಕೋಟಿ ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣಗೊಳ್ಳಲಿದೆ. ಈ ವರ್ಷದ ಕೊನೆಯಲ್ಲಿ ಸ್ಟುಡಿಯೋ ಕೆಲಸಕಾರ್ಯ ಆರಂಭ ಮಾಡುವುದಕ್ಕೆ ಪ್ಲ್ಯಾನ್ ರೂಪಿಸಿದ್ದಾರೆ. ರಸ್ತೆಬದಿಗಳು, ಹಳ್ಳಿಗಳು, ರೈಲ್ವೆ ಸ್ಟೇಷನ್, ಆಸ್ಪಿಟಲ್, ಬಂಗ್ಲೋ ನಿರ್ಮಾಣ ಮಾಡಲಾಗುತ್ತೆ. ಒಂದು ಸಿನಿಮಾದ ಮೇಜರ್ ಪೋರ್ಷನ್ಸ್ ಚಿತ್ರೀಕರಣಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಉಮಾಪತಿ ಮಿನಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗುತ್ತದೆ.
ರಾಮೋಜಿ ಫಿಲ್ಮ್ ಸಿಟಿ ನೋಡಿ ಪ್ರೇರಣೆಗೊಂಡಿದ್ದ ಉಮಾಪತಿಯವರು ರಾಮೋಜಿ ಫಿಲ್ಮ್ ಸಿಟಿಯಷ್ಟು ದೊಡ್ಡದಾಗಿ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗದಿದ್ದರೂ ಕೂಡ ಚಿಕ್ಕದಾಗಿಯಾದರೂ ಫಿಲ್ಮ್ ಸಿಟಿ ಮಾಡ್ಬೇಕು ಎಂದುಕೊಂಡಿದ್ದರು. ಕೊನೆಗೂ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ನಮ್ಮ ಸ್ಯಾಂಡಲ್ವುಡ್ ಮಂದಿ ಚಿತ್ರೀಕರಣಕ್ಕಾಗಿ ಹೈದ್ರಬಾದ್ಗೆ ಹೋಗುವುದನ್ನ `ಉಮಾಪತಿ ಫಿಲ್ಮ್ ಸಿಟಿ’ ತಪ್ಪಿಸಲಿದೆ. ಎಲ್ಲಾ ಅಂದುಕೊಂಡಂಗೆ ಆದರೆ ೨೦೨೩ರ ಹೊತ್ತಿಗೆ ಕನಕಪುರದ ಹತ್ತಿರ ಉಮಾಪತಿ ಫಿಲ್ಮ್ ಸಿಟಿ ತಲೆಎತ್ತಲಿದೆ. ಗಂಧದಗುಡಿ ಮಂದಿಯ ಸಿನಿಮಾ ಕನಸಿಗೆ ಉಮಾಪತಿ ಸ್ಟುಡಿಯೋ ಜೀವತುಂಬಲಿದೆ. ವಿಶೇಷ ಅಂದರೆ ಗಂಧದಗುಡಿಗೆ ಸರ್ಕಾರ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವ ಮೊದಲೇ ಅನ್ನದಾತರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈಹಾಕಿರುವುದು ಹೆಮ್ಮೆಯ ವಿಷ್ಯ. ಹೀಗಾಗಿ, ಉಮಾಪತಿಯವರನ್ನು ಗಾಂಧಿನಗರದ ಮಂದಿ ಮರೆಯೋ ಹಂಗಿಲ್ಲ. ತಲೆ ಮೇಲೆ ಹೊತ್ತು ಮೆರೆಸುವುದನ್ನು ನಿಲ್ಲಿಸೋ ಹಾಗಿಲ್ಲ.
ಇಡೀ ಜಗತ್ತು ಕಣ್ಣರಳಿಸಿ ನೋಡುತ್ತಿರುವ ಸಿನಿಮಾಗಳಿಗೆ ಕೋಟಿ ಕೋಟಿ ಸುರಿದು ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಕೊಂಡುಕೊಂಡಿದೆ. ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ 7.6 ಕೋಟಿ ಕೊಟ್ಟು ಆಡಿಯೋ ರೈಟ್ಸ್ ಪಡೆದ ಲಹರಿ ಸಂಸ್ಥೆ, ಬರೋಬ್ಬರಿ 25 ಕೋಟಿ ಕೊಟ್ಟು ರಾಜಮೌಳಿಯ ಆರ್ ಆರ್ ಆರ್ ಚಿತ್ರದ ಹಾಡುಗಳ ಹಕ್ಕನ್ನು ತಮ್ಮ ಪಾಲಾಗಿಸಿಕೊಂಡಿತ್ತು. ಈ ಮೂಲಕ ಮ್ಯೂಸಿಕ್ ಲೋಕದಲ್ಲಿ ನಯಾ ಮೇನಿಯಾ ಸೃಷ್ಟಿಸಿಕೊಂಡಿತ್ತು. ಇದೀಗ ಅದ್ಧೂರಿ ಜೋಡಿಯ ಅಪ್ ಕಮ್ಮಿಂಗ್ ಸಿನಿಮಾದ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಸಂಗೀತ ಲೋಕದಲ್ಲಿ ಹಾಗೂ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದೆ.
ಅದ್ಧೂರಿ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎ.ಪಿ. ಅರ್ಜುನ್ ಎರಡನೇ ಬಾರಿಗೆ ಜೊತೆಯಾಗಿದ್ದಾರೆ. ಒಂಭತ್ತು ವರ್ಷಗಳ ನಂತರ ಮತ್ತೆ ಸೇರಿರುವ ಈ ಡೆಡ್ಲಿ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಕನ್ನಡ ಹಿಡಿದಂತೆ ಲಹರಿ ಮ್ಯೂಸಿಕ್ ಸಂಸ್ಥೆ ಅದ್ಧೂರಿ ಜುಗಲ್ ಬಂಧಿಯ ಸಿನಿಮಾದ ಆಡಿಯೋ ಹಕ್ಕುಗಳನ್ನು ದುಬಾರಿ ಮೊತ್ತಕ್ಕೆ ಖರೀದಿಸಿದೆಯಂತೆ. ಮ್ಯೂಸಿಕ್ ಮಾಂತ್ರಿಕ ಆಕ್ಷನ್ ಪ್ರಿನ್ಸ್ ಚಿತ್ರಕ್ಕೆ ಹಾಡುಗಳನ್ನು ಹೊಸೆಯುವ ಮುನ್ನವೇ ಲಹರಿ ಸಂಸ್ಥೆ ಆಡಿಯೋ ರೈಟ್ಸ್ ನ ಮುಡಿಗೇರಿಸಿಕೊಂಡಿದೆ ಅಂದರೆ ಲೆಕ್ಕಹಾಕಿ ಅದ್ಧೂರಿ ಜೋಡಿಯ ಹವಾ ಹೆಂಗೈತೆ ಅಂತ ನೀವೆ ಲೆಕ್ಕ ಹಾಕಬೇಕು.
ಆಕ್ಷನ್ ಪ್ರಿನ್ಸ್ ಹಾಗೂ ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಮಾರ್ಟಿನ್ ಹೆಸರಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆಯಾದರೂ ಇನ್ನೂ ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿಲ್ಲ. ಚಿತ್ರದ ನಟಿ ಸೇರಿದಂತೆ ತಾರಾಬಳಗದ ಆಯ್ಕೆಯಾಗಬೇಕಿದೆ. ಟಾಲಿವುಡ್ ಜನಪ್ರಿಯ ಮ್ಯೂಸಿಕ್ ಡೈರೆಕ್ಟರ್ ಅದ್ದೂರಿ ಜೋಡಿಯ ಎರಡನೇ ಚಿತ್ರಕ್ಕೆ ಮ್ಯೂಸಿಕ್ ಬಾರಿಸಲಿದ್ದಾರಂತೆ. ಅಷ್ಟಕ್ಕೂ, ಆ ಸಂಗೀತ ಮಾಂತ್ರಿಕ ಯಾರು ಎನ್ನುವ ಸುಳಿವು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಈಗಾಗಲೇ,ಬಹದ್ದೂರ್ ಗಂಡು ಮೈಕೊಡವಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಇಂಡಿಯಾದ ಜನಪ್ರಿಯ ಫೈಟ್ ಮಾಸ್ಟರ್ ಗಳಾದ ರಾಮ್- ಲಕ್ಷ್ಮಣ್ ಪೊಗರು ಹೈದನಿಗೆ ಆಕ್ಷನ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ಆರಂಭಿಕ ಹಂತದಲ್ಲೇ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಧ್ರುವ ಅಭಿನಯದ ಐದನೇ ಚಿತ್ರ ಅದ್ದೂರಿಯಾಗಿ ತಯ್ಯಾರಾಗಲಿದೆ. ಬೆಳ್ಳಿಪರದೆ ಬೆಚ್ಚುವಂತೆ ದುಬಾರಿ ಹುಡುಗನ ಐದನೇ ಚಿತ್ರ ಮೂಡಿಬರಲಿದೆ. ಅಂದಹಾಗೆ, ಆಗಸ್ಟ್ ೧೫ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಫ್ರಾಕ್ ಹಾಕಿಕೊಂಡು ಮಾಸ್ಟರ್ ಪೀಸ್' ಜೊತೆ ವಾಕಿಂಗ್ ಬಂದ ನಾಗವಲ್ಲಿಯನ್ನು ನೀವೆಲ್ಲಾ ನೋಡಿದ್ದೀರಿ. ಆ ನಾಗವಲ್ಲಿ ಮೇಲೆ ರೀಲ್ನಲ್ಲಿ ಅಣ್ತಮ್ಮನಿಗೆ ಲವ್ವಾಗಿದ್ದನ್ನು ಕಂಡಿದ್ದೀರಿ, ಈಗ ಅದೇ ನಾಗವಲ್ಲಿ ನಾಗರಪಂಚಮಿ ದಿನದಂದು ಅಖಾಡಕ್ಕೆ ಇಳಿದಿದ್ದಾಳೆ. ಸೀರೆಯುಟ್ಕೊಂಡು ಫೀಲ್ಡಿಗಿಳಿದಿರುವ ಆಕೆನಿನ್ನ ಕೆಲಸ ಮುಗಿತು ಕಿಟ್ಟಪ್ಪ, ಇನ್ಮೇಲೆ ನನ್ನ ಆಟ ಶುರು ಎನ್ನುತ್ತಿದ್ದಾಳೆ. ಇಷ್ಟೊತ್ತಿಗೆ ನಾವು ಯಾರ ಬಗ್ಗೆ ಹೇಳ್ತಿದ್ದೇವೆ ಅನ್ನೋದು ನಿಮಗೆ ಗೊತ್ತಾಗಿರುತ್ತೆ. ಆಕೆ ಬೇರ್ಯಾರು ಅಲ್ಲ ರಾಕಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಗೋಲ್ಡನ್ ಸ್ಟಾರ್, ರೋರಿಂಗ್ ಸ್ಟಾರ್ ರಂತಹ ಸೂಪರ್ಸ್ಟಾರ್ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಸೈ ಎನಿಸಿಕೊಂಡಿರುವ ಶೈನಿಂಗ್ ಸುಂದರಿ ಶಾನ್ವಿ ಶ್ರೀವಾಸ್ತವ್.
ಶಾನ್ವಿ ಶ್ರೀವಾಸ್ತವ್ ವಾರಣಾಸಿಯ ಚೆಲುವೆ. ತೆಲುಗು ಇಂಡಸ್ಟ್ರಿ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಶಾನ್ವಿ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಚಂದ್ರಲೇಖ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು. ಎರಡನೇ ಚಿತ್ರದಲ್ಲಿ ರಾಕಿಂಗ್ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಅದ್ಯಾವಾಗ,ಮಾಸ್ಟರ್ಪೀಸ್’ ನಲ್ಲಿ ಅಣ್ತಮ್ಮನ ಜೊತೆ ಕುಣಿದರೋ ಫಿನಿಶ್ ಶಾನ್ವಿ ಸಿಕ್ಕಾಪಟ್ಟೆ ಶೈನ್ ಆದರು. ಸ್ಟಾರ್ ನಟರುಗಳು ಸೇರಿದಂತೆ ಹೊಸಬರ ಚಿತ್ರಗಳಲ್ಲೂ ಅಭಿನಯಿಸಿ ಮೋಡಿ ಮಾಡಿದರು. ಇದೀಗ ಲೇಡಿರೆಬಲ್ಸ್ಟಾರ್ ನಯನಾತಾರ ಥರ ಲೀಡಿಂಗ್ ಲೇಡಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಫ್ರಾಕ್ ಬಿಚ್ಚಿಟ್ಟು ಸೀರೆಯು ಟ್ಟುಕೊಂಡು ಕಣಕ್ಕಿಳಿದಿರುವ ಶಾನ್ವಿ ಅಚ್ಚರಿಯ ನೋಟ ಬೀರುತ್ತಾ ಚಿತ್ರಪ್ರೇಮಿಗಳನ್ನು ಬೆಚ್ಚಿಬೀಳಿಸ್ತುತಾರೆ.
ನಾಗರಪಂಚಮಿಯ ದಿನದಂದು ಶಾನ್ವಿ ಶ್ರೀವಾಸ್ತವ್ ಮುಖ್ಯಭೂಮಿ ಕೆಯಲ್ಲಿರುವ ಕಸ್ತೂರಿ ಮಹಲ್' ಚಿತ್ರದ ಟ್ರೇಲರ್ ಹೊರಬಿದ್ದಿದೆ. ದಟ್ಟವಾದ ಕಾಡು, ಅಭಯಾರಣ್ಯದಲ್ಲಿರುವ ಭೂತಬಂಗಲೆಯಂತಹ ಮನೆ, ಆ ಮನೆಗೊಂದು ಮಣ್ಣಿನ ದಾರಿ, ಕಪ್ಪು ಸೀರೆಯುಟ್ಟು ಪ್ರತ್ಯಕ್ಷವಾಗುವ ಹೆಂಗಸು, ೮೦೦ ವರ್ಷ ಹಳೇ ಬುಕ್ ಹೀಗೆ ಹಲವು ಕೂತೂಹಲಕಾರಿ ಅಂಶಗಳನ್ನೊಳಗೊಂಡಿರುವಕಸ್ತೂರಿ ಮಹಲ್’ ಟ್ರೇಲರ್ ಕೂತೂಹಲ ಕೆರಳಿಸುತ್ತೆ. `ಅವನೇ ಶ್ರೀಮನ್ನಾರಾಯಣನ’ ರಾಣಿ ಶಾನ್ವಿಯ ನೋಟ ಬೆರಗುಗೊಳಿಸುತ್ತೆ. ಚಂದ್ರಲೇಖ ನಂತರ ಮತ್ತೆ ಬೆಚ್ಚಿಬೀಳಿಸೋಕೆ ಬರುತ್ತಿರುವ ಶಾನ್ವಿಯ ಹಾರರ್ ಅವತಾರ ನೋಡಿದ್ಮೇಲೆ ನಿರೀಕ್ಷೆಗಳು ಗರಿಗೆದರುತ್ತಿವೆ.
ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿರುವ ಕಸ್ತೂರಿಮಹಲ್'ಗೆ ದಿನೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ʼಅಮೃತ ವರ್ಷಿಣಿʼ, ʼನಿಶ್ಯಬ್ದʼ, ʼಲಾಲಿʼ ಸೇರಿದಂತೆ ಹಲವು ಸೂಪರ್ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗಕಸ್ತೂರಿ ಮಹಲ್’ ಡೈರೆಕ್ಟ್ ಮಾಡಿದ್ದಾರೆ. ಇದು ಅವರ ೫೦ನೇ ಚಿತ್ರವಾಗಿದ್ದು ಟ್ರೇಲರ್ ನಿಂದಲೇ ಸೌಂಡ್ ಮಾಡುತ್ತಿದೆ. ರವೀಶ್ ಆರ್ ಸಿ, ರುಬೀನ್ ರಾಜ್ ಕಸ್ತೂರಿ ಮಹಲ್'ಗೆ ಬಂಡವಾಳ ಹೂಡಿದ್ದಾರೆ. ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ರಂಗಾಯಣ ರಘು ಸೇರಿದಂತೆ ಹಲವರು ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ʼಆಪ್ತರಕ್ಷಕʼ ಸಿನಿಮಾಗೆ ಕ್ಯಾಮೆರಾ ಕೈಚಳ ತೋರಿದ್ದ ಪಿ.ಕೆ.ಎಚ್ ದಾಸ್, ಸಸ್ಪೆನ್ಸ್ ಥ್ರಿಲ್ಲರ್ಕಸ್ತೂರಿ ಮಹಲ್’ಗೆ ಕ್ಯಾಮೆರಾ ಹಿಡಿದಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ಚಿತ್ರಕ್ಕಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಬುಲ್ಬುಲ್ ಬೆಡಗಿ ರಚಿತರಾಮ್ ಕಸ್ತೂರಿ ಮಹಲ್'ನಲ್ಲಿ ಕಂಗೊಳಿಸಬೇಕಿತ್ತು. ಅದೇನಾಯ್ತೋ ಏನೋ ಗೊತ್ತಿಲ್ಲಕಸ್ತೂರಿ ನಿವಾಸ’ ಟೈಟಲ್ ಚೇಂಜ್ ಆದ್ಹಂಗೆ ನಾಯಕಿ ರಚಿತಾ ರಾಮ್ ಕೂಡ ಬದಲಾದರು. ಡಿಂಪಲ್ ಬೆಡಗಿ ಜಾಗಕ್ಕೆ ಡಿಂಪಲ್ ಸುಂದರಿ ಶಾನ್ವಿಯೇ ಬಂದರು. `ಕಸ್ತೂರಿ ಮಹಲ್’ ಶಾನ್ವಿಗೆ ಚಾಲೆಂಜಿಂ ಗ್ ಆಗಿದೆ. ಕೇವಲ ೨೦ ದಿನದಲ್ಲಿ ತನ್ನ ಪಾತ್ರದ ಶೂಟಿಂಗ್ ಕಂಪ್ಲೀಟ್ ಮಾಡಿಕೊಟ್ಟು ಹೊಸ ಹಿಸ್ಟರಿ ಬರೆದಿರುವ ತಾರಕ್ ಬೆಡಗಿ ʼಕಸ್ತೂರಿ ಮಹಲ್’ ಮೂಲಕ ನಯಾ ಮೇನಿಯಾ ಸೃಷ್ಟಿಸಿಕೊಳ್ಳಲಿ. ಈ ಚಿತ್ರವೂ ಹೊಸ ರೆಕಾರ್ಡ್ ಬರೆಯಲಿ ಎನ್ನುವುದೇ ಸಿನಿಲಹರಿಯ ಹಾರೈಕೆ
“ಬರ್ತಾನವ್ವ ಭೂಪ.. ಬರ್ತಾನವ್ವ ಭೂಪ.. ಈ ಬಂಗಾರಿ ಮಡಿಲಿನಲಿ.. ಮುತ್ತು ರತ್ನದಂತೆ.. ಬೆಳ್ಳಿ ಬೊಂಬೆಯಂತೆ… ಮಿಸ್ಟರ್ & ಮಿಸಸ್ ರಂಗೇಗೌಡ ವಂಶದಲ್ಲಿ… ಯಸ್, ಮಿಸ್ಟರ್ & ಮಿಸಸ್ ರಂಗೇಗೌಡರ ಕುಟುಂಬದಲ್ಲಿ ಸಂತೋಷ-ಸಂಭ್ರಮ ಮನೆ ಮಾಡಿದೆ. ಆನಂದ ಸಾಗರದಲ್ಲಿ ಮಿಂದೇಳುತ್ತಿರುವ ಎರಡು ಮನೆಯ ಕುಟುಂಬಸ್ತರು ಕರುಳ ಕುಡಿಯನ್ನು ಸ್ವಾಗತಿಸುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕುಲವಧು ವಚನಾ ಖ್ಯಾತಿಯ ಅಮೃತಾಳ ಆಸೆಯಂತೆ ಸೀಮಂತ ಕಾರ್ಯವನ್ನು ನಮ್ಮನೆ ಯುವರಾಣಿ ಖ್ಯಾತಿಯ ಸಾಕೇತ್ ಅದ್ದೂರಿಯಾಗಿ ನೆರವೇರಿಸಿದ್ದಾರೆ.
ಖುಷಿ ಖುಷಿಯಾಗಿ-ಶಾಸ್ತ್ರೋಕ್ತವಾಗಿ ನಡೆದ ಅಮೃತಾಳ ಸೀಮಂತ ಕಾರ್ಯದ ಪೋಟೋವನ್ನು ನೀವು ಒಮ್ಮೆ ನೋಡ್ಲೆಬೇಕು. ಯಾಕಂದ್ರೆ, ಕುಲವಧು ವಚನಾ ದೃಷ್ಟಿ ಬೊಂಬೆಯಂತೆ ಕಂಗೊಳಿಸುತ್ತಿದ್ದಾರೆ. ರೆಡ್ ಅಂಡ್ ಗೋಲ್ಡನ್ ಕಲರ್ ಕಾಂಬಿನೇಷನ್ ಸೀರೆಯುಟ್ಟು ಸೀಮಂತಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪತ್ನಿ ಅಮೃತಾ ಅಚ್ಚರಿಪಡುವಂತೆ ಸೀಮಂತದ ವೇದಿಕೆಯನ್ನ ರಾಘು ಡೆಕೋರೇಟ್ ಮಾಡಿಸಿದ್ದರು. ಮನೆ ಬೆಳಗಲು ಬಂದಿರುವ ಪತ್ನಿ ಅಮೃತಾಳ ಸೀಮಂತ ಕಾರ್ಯವನ್ನು ಗ್ರ್ಯಾಂಡ್ ಆಗಿ ಆಚರಿಸಿದರು. ಪತಿ ರಾಘವೇಂದ್ರ ಕೊಟ್ಟ ಸಪ್ರೈಸ್ಗೆ ಥ್ರಿಲ್ ಆದ ಅಮೃತಾ ಸೀಮಂತದ ಶುಭ ಕ್ಷಣವನ್ನು ಪದಗಳಲ್ಲಿ ಕಟ್ಟಿಕೊಟ್ಟರು. “ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ. ಹಾಗೆ ನನ್ನ ಬಹುದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಮೊದಲ ಕಾರಣ ನನ್ನ ಜೀವ ಅಂದರೆ ಪತಿ ರಾಘವೇಂದ್ರ ಅವರು. ನಂತರ ಅತ್ತೆ, ಮಾವ, ಅತ್ತಿಗೆ, ಅಣ್ಣಾ, ಅಮ್ಮ, ಅಪ್ಪ, ಅಕ್ಕ, ಭಾವ, ಸ್ನೇಹಿತರು ಹಾಗೂ ನನ್ನ ಆತ್ಮೀಯರು” ಅಂತ ಅಮೃತಾ ತಮ್ಮ ಸೋಷಿಯಲ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಕಿರುತೆರೆ ಪ್ರೇಕ್ಷಕರಿಗೆ ಮಿಸ್ಟರ್ & ಮಿಸಸ್ ರಂಗೇಗೌಡ ಖ್ಯಾತಿಯ ಜೋಡಿಯ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಗೊತ್ತಿರುತ್ತೆ. ಸೀರಿಯಲ್ ನೋಡದೇ ಇರುವ ಪ್ರೇಕ್ಷಕರಿಗೆ ಈ ಜೋಡಿಯ ಬಗ್ಗೆ ಹೆಚ್ಚಿನ ಕಥೆ ಗೊತ್ತಿರುವುದಿಲ್ಲ. ಹೀಗಾಗಿ, ಮೊದಲು ಈ ಕ್ಯೂಟ್ ಕಪಲ್ಸ್ ಬಗ್ಗೆ ಶಾರ್ಟ್ ಅಂಡ್ ಸ್ವೀಟಾಗಿ ತಿಳಿದುಕೊಂಡು ಬಿಡೋಣ. ಬಿಗ್ಸ್ಕ್ರೀನ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಹೇಗೋ ಹಾಗೆಯೇ ಸ್ಮಾಲ್ಸ್ಕ್ರೀನ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ್ರು ಭಾರೀ ಫೇಮಸ್.. ಇದೇ ಹೆಸರಿನ ಸೀರಿಯಲ್ ಮೂಲಕ ಗಂಡ-ಹೆಂಡತಿಯಾಗಿ ಸ್ಮಾಲ್ಸ್ಕ್ರೀನ್ನಲ್ಲಿ ಮಿಂಚಿದ ಅಮೃತ ಹಾಗೂ ರಾಘವೇಂದ್ರ ಗೌಡ ರಿಯಲ್ ಲೈಫ್ನಲ್ಲೂ ಜೋಡಿಯಾದರು. ೨೦೧೯ರ ಮೇ ೧೩ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ತಮ್ಮ ಎರಡನೇ ವರ್ಷದ ಆನಿವರ್ಸರಿಯಂದು ನಟಿ ಅಮೃತಾ ರಾಮಮೂರ್ತಿ ಹಾಗೂ ರಾಘವೇಂದ್ರ ಗೌಡ ಅವರು ಸಿಹಿಸುದ್ದಿ ಕೊಟ್ಟಿದ್ದರು. ಇಲ್ಲಿವರೆಗೂ ನಾವಿಬ್ಬರಿದ್ದೆವು ಈಗ ಮೂವರಾಗಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. ಅಂದೇ ಈ ಜೋಡಿಗೆ ಭರಪೂರ ಶುಭಾಷಯಗಳು ಹರಿದು ಬಂದಿತ್ತು. ಪತ್ನಿ ಅಮೃತಾಳನ್ನು ಜೋಪಾನವಾಗಿ ನೋಡಿಕೊಳ್ಳಿ ರಂಗೇಗೌಡ್ರೇ ಅಂತ ಫ್ಯಾನ್ಸ್ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದರು. ಅದರಂತೇ, ತನ್ನ ಪಾಲಿನ ಹಾಗೂ ತನ್ನ ಮನೆಯ ಐಶ್ವರ್ಯ ಅಮೃತಾ ರಾಮಮೂರ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಿದ್ದಾರೆ.
ಅದ್ದೂರಿಯಾಗಿ ಸೀಮಂತ ಮಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗಂಡಾಗಲೀ ಹೆಣ್ಣಾಗಲಿ ನನ್ನ ಮಗು ನನ್ನ ಹೆಂಡ್ತಿ ಆರೋಗ್ಯವಾಗಿರ್ಬೇಕು ಅಂತ ರಾಘು ಆಸೆ ಪಡ್ತಿದ್ದಾರೆ. ಅವರ ಆಸೆಯಂತೆ ಎಲ್ಲವೂ ನೆರವೇರಲಿ. ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ
ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ಚೇತರಿಸಿಕೊಂಡಿದ್ದಾರೆ. ಹೈದ್ರಾಬಾದ್ ಆಸ್ಪತ್ರೆಯಲ್ಲಿ ಅವರಿಗೆ ಸರ್ಜರಿ ಯಶಸ್ವಿ ಆಗಿ ನಡೆದಿದೆ. ಈ ಕುರಿತು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಾಶ್ ರೈ ಕುತೂಹಲದ ಸ್ಟೇಟಸ್ ಹಾಕಿಕೊಂಡಿದ್ದಾರೆ.ʼ ಡೇವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದೆ. ನನ್ನ ಆತ್ಮೀಯ ಗೆಳೆಯ ಡಾ.ಗುರು ರೆಡ್ಡಿ ಮತ್ತು ನಿಮ್ಮೆಲ್ಲರ ಪ್ರೀತಿ. ಪ್ರಾರ್ಥನೆಗೆ ಧನ್ಯವಾದಗಳು. ಶೀಘ್ರವೇ ಕೆಲಸಕ್ಕೆ ಹಾಜರಾಗುತ್ತೇನೆ ಅಂತ ಪ್ರಕಾಶ್ ರೈ ಟ್ವಿಟ್ ಮಾಡಿ ದ್ದಾರೆ. ಅವರ ಟ್ವಿಟ್ನಲ್ಲಿ ಕುತೂಹಲ ಮೂಡಿಸಿದ್ದು ಡೇವಿಲ್ ಈಸ್ ಬ್ಯಾಕ್ ಎನ್ನುವ ಪದ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಬೆಡ್ ಮೇಲೆ ಮಲಗಿ ಕಿರುನಗೆ ಬೀರುತ್ತಾ ಸ್ಪೆಲ್ಫಿಗೆ ಪೋಸು ನೀಡಿದ ಫೋಟೋ ದೊಂದಿಗೆ ಪ್ರಕಾಶ್ ರೈ ʼ ಡೇವಿಲ್ ಈಸ್ ಬ್ಯಾಕ್ʼ ಅಂತ ಯಾಕೆ ಹೇಳಿದ್ರು ಗೊತ್ತಾ ? ಅದಕ್ಕೆ ದೊಡ್ಡದಾದ ಕಾರಣವೊಂದಿದೆ. ಅದೇನು ಅಂತ ಹೇಳೋದಿಕ್ಕೂ ಮುನ್ನ ಪ್ರಕಾಶ್ ರೈ ಅಂದ್ರೆ ಉರಿದು ಬಿಳುವವರ ಬಗ್ಗೆ ಹೇಳ್ತೀವಿ ಕೇಳಿ.
ಪ್ರಕಾಶ್ ರೈ ಬರೀ ನಟ ಮಾತ್ರವೇ ಅಲ್ಲವೇ ಅಲ್ಲ, ಒಬ್ಬ ಆಕ್ಟಿವಿಸ್ಟ್ ಕೂಡ ಹೌದು. ನಟನಾಗಿ ಚಿತ್ರರಂಗದಲ್ಲಿ ಸಂಪಾದಿಸುವ ಸಂಭಾವನೆಯಲ್ಲಿ ಒಂದಷ್ಟು ಹಣವನ್ನು ಅರಂಭದಿಂದಲೂ ಸಾಮಾಜಿಕ ಸೇವೆಗಾಗಿ ಮೀಸ ಲಿಟ್ಟ ಹೃದಯವಂತ. ಅತಿವೃಷ್ಟಿ, ಅನಾವೃಷ್ಟಿ ಅಥವಾ ಇನ್ನಾವು ದೋ ಸಂಕಷ್ಟ ಅಂತ ರೈತರು, ಸಾಮಾನ್ಯ ಜನರು ಸಂಕಷ್ಟಗಳಲ್ಲಿ ಸಿಲುಕಿ ದಾಗ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಅವರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ಬಂದ ನಟ. ಅದರಲ್ಲೂ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ನೂರಾರು ಜನರಿಗೆ ಆಹಾರ ಧಾನ್ಯ ನೀಡಿದರು. ಊಟ ಹಾಕಿದರು. ಅದೆಷ್ಟೋ ಜನರಿಗೆ ಆರ್ಥಿಕ ನೆರವು ನೀಡಿ, ಅವರವರ ಊರುಗಳಿಗೆ ತೆರಳುವಂತೆ ಮಾಡಿದರು. ಅದರ ಜತೆಗೆ ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಸದಾ ಕ್ರೀಯಾಶೀಲ ವಾಗಿರುವ ಮನಸು ಅವರದು. ಸರ್ಕಾರದ ಯಾವುದೇ ಜನವಿರೋಧಿ ನಿಲುವುಗಳನ್ನು ಖಂಡಾತುಂಡಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಕೋಮುವಾದದ ವಿರುದ್ಧ ಪ್ರಬಲವಾದ ಧ್ವನಿ ಪ್ರಕಾಶ್ ರೈ ಅವರದ್ದು.
ಭಾರತೀಯ ಚಿತ್ರರಂಗದ ಮಟ್ಟಿಗೆ ಮೋದಿ ಅವರನ್ನು ಕಟುವಾಗಿ ಟೀಕಿಸಿದ ನಟರಾರು ಅಂತ ನೋಡಿದಾಗ ಮೊದಲ ಸಾಲಿಗೆ ನಿಲ್ಲುವ ಹೆಸರು ಪ್ರಕಾಶ್ ರೈ ಅವರದ್ದು. ಅದೇ ಕಾರಣಕ್ಕೆ ಬಿಜೆಪಿ ಬೆಂಬಲಿಗರು ಬಹುದೊಡ್ಡ ಪ್ರತಿರೋಧ ಹಾಗೂ ಟೀಕೆಗಳಿಗೆ ಗುರಿಯಾದರು ಪ್ರಕಾಶ್ ರೈ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಪ್ರಕಾಶ್ ರೈ ಒಬ್ಬ ಹಿಂದೂ ವಿರೋಧಿ, ಅವರು ಪಾಕಿಸ್ತಾನಕ್ಕೆ ಹೋಗುವುದೇ ಸೂಕ್ತ ಅಂತಲೂ ಒಂದು ಸಿದ್ದಾಂತದ ಜನ ಅವರನ್ನು ಜರಿದರು. ಒಂದು ಹಂತದಲ್ಲಿ ಅವರು ಅಭಿನಯಿಸುವ ಸಿನಿಮಾ ನಿಷೇಧಿಸಿ ಅಂದವರು ಇದ್ದಾರೆ. ಹಾಗೆಯೇ ಅವರಿಗೆ ಕನ್ನಡದಲ್ಲಿ ಸಿನಿಮಾ ಅವಕಾಶ ಕೊಡ್ಬೇಡಿ ಅಂತ ನಿರ್ಮಾಪಕರಿಗೆ ಒತ್ತಡ ತಂದವರು ಇದ್ದಾರೆ. ಇದೆಲ್ಲ ಯಾಕಂದ್ರೆ ಪ್ರಕಾಶ್ ರೈ ಒಬ್ಬ ವಾಸ್ತವವಾದಿ ಅನ್ನೋದು. ಸರ್ಕಾರಗಳ ಸುಳ್ಳು ಭರವಸೆಗಳು, ಜನ ವಿರೋಧಿ ಧೋರಣೆಗಳನ್ನು ಅವರು ವಿರೋಧಿ ಸುತ್ತಾರೆ ಎನ್ನುವುದಕ್ಕೆ. ಅದಿರಲಿ ಅದೆಲ್ಲ ಹಳೇ ಕಥೆ. ಈಗ್ಯಾಕೆ ಪ್ರಕಾಶ್ ರೈ ಡೇವಿಲ್ ಈಸ್ ಬ್ಯಾಕ್ ಅಂತ ಶಾಕ್ ಕೊಟ್ಟರು ಗೊತ್ತಾ ?
ಕಳೆದ ನಾಲ್ಕೈದು ದಿನಗಳ ಹಿಂದೆ ಪ್ರಕಾಶ್ ರೈ ಹೈದ್ರಾಬಾದ್ ಹೊರವಲಯದಲ್ಲಿ ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆನ್ನುವ ಸುದ್ದಿ ಬಂದಾಗ, ಅದೇ ಅವರ ವಿರೋಧಿ ಪಡೆ ಸಂಭ್ರಮ ಆಚರಿಸಿತು. ಜತೆಗೆ ಸೋಷಲ್ ಮೀಡಿಯಾ ದಲ್ಲಿ ಮಾನವೀಯತೆ ಇಲ್ಲದ ಮೃಗಗಳ ಹಾಗೆ ಕಾಮೆಂಟ್ ಆಗಿ ತಮ್ಮ ವಿಕೃತ ಮನಸ್ಥಿತಿಗಳನ್ನು ತೋರಿದ್ದರು. ಸಹಜವಾಗಿಯೇ ಇವೆಲ್ಲ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ಸುದ್ದಿಯೂ ಆಗಿದ್ದವು. ತುಂಬಾ ಜನರು ಈ ಕೆಟ್ಟ ಕಾಮೆಂಟ್ ಗಳಿಗೆ ತಿರುಗೇಟು ನೀಡಿ, ಇದು ವಿಕೃತ ಮನಸಿನ ಅತಿರೇಕ ಅಂದಿದ್ದರು. ಇನ್ನು ಕೆಲವರು ಸಮರ್ಥಿಸಿಕೊಂಡು, ಪ್ರಕಾಶ್ ರೈ ಒಬ್ಬ ಹಿಂದೂ ವಿರೋಧಿ ಎಂಬುದಾಗಿ ವಿಜೃಂಭಿಸಿದ್ದರು. ಅದಕ್ಕೆಲ್ಲ ಉತ್ತರವೇ ಎನ್ನುವ ಹಾಗೆ ಗುರುವಾರ ವಷ್ಟೇ ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಡೇವಿಲ್ ಬ್ಯಾಕ್ ಅಂತ ಗುಡುಗು ಮೂಲಕ ಶಾಕ್ ನೀಡಿದ್ದು ವಿಶೇಷ. ಕೊನೆಯದಾಗಿ ಒಂದು ಮಾತು, ಭಾರತೀಯ ಚಿತ್ರರಂಗದಲ್ಲಿಯೇ ಇವತ್ತು ದೊಡ್ಡ ಹೆಸರು ಮಾಡಿರುವ ಪ್ರಕಾಶ್ ರೈ ಅವರಂತಹ ಬಹುಭಾಷಾ ನಟ ಕನ್ನಡದವರು ಅನ್ನೋದೇ ನಮಗೆಲ್ಲ ಹೆಮ್ಮೆ. ಅಷ್ಟು ಮಾತ್ರವೇ ಅಲ್ಲ, ಸದಾ ಕನ್ನಡ ಕನ್ನಡ ಎನ್ನುತ್ತಲೇ ಯಾರಿಗೂ ಉಪಯೋ ಗವೇ ಇಲ್ಲದಂತೆ ತಾವಾಯಿತು, ತಮ್ಮ ಪಾಡಾಯಿತು ಅಂತ ಇರುವ ಕನ್ನಡದ ಅದೆಷ್ಟೋ ನಟರ ನಡುವೆ ಪ್ರಕಾಶ್ ರೈ ಸದಾ ಕ್ರಿಯಾಶೀಲವಾಗಿದ್ದು ನಟನೆ, ಕೃಷಿ, ಸಮಾಜ ಸೇವೆ ಹಾಗೂ ರಾಜಕೀಯ ಅಂತ ಪಾದಾರಸದಂತೆ ಹರಿದಾಡುತ್ತಲೇ ಇದ್ದಾರೆನ್ನುವುದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.
ಲವ್ ಮಾಕ್ಟೇಲ್ ಮೂಲಕ ಜೋರು ಸುದ್ದಿ ಮಾಡಿದ್ದ ಬ್ಯೂಟಿಫುಲ್ ಸ್ಟಾರ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಅವರು ಮದ್ವೆಯಾಗಿದ್ದು ದೊಡ್ಡ ಸುದ್ದಿಯೂ ಗೊತ್ತು. ಹಾಗಾದರೆ, ಹೊಸ ಲೈಫಲ್ಲಿ ಸಿಹಿ ಸುದ್ದಿ ಏನಾದ್ರೂ ಕೊಡ್ತಾ ಇದಾರಾ? ಈ ಪ್ರಶ್ನೆ ಸಹಜ. ಯಾಕಂದರೆ, ಇತ್ತೀಚೆಗಷ್ಟೇ ಮದ್ವೆ ಆಗಿದ್ದ ಜೋಡಿ ಆಗಿದ್ದರಿಂದ ಸಿಹಿ ಸುದ್ದಿ ನಿರೀಕ್ಷೆ ಸಹಜವೇ. ಆದರೆ, ಅವರೀಗ ಹೊಸ ಸುದ್ದಿ ಹಂಚಿಕೊಂಡಿದ್ದಾರೆ.
ಅದು ‘ಲವ್ ಮಾಕ್ಟೇಲ್ 2’ ಸಿನಿಮಾ ಸುದ್ದಿ. ಈ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ವಿಷಯವನ್ನ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ.
‘ಲವ್ ಮಾಕ್ಟೇಲ್ 2′ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ, ನಿದ್ದೆಯಿಲ್ಲದ ರಾತ್ರಿಗಳಲ್ಲಿ ಹೋರಾಡಿಯೇ ನಾವು ಒಂದೊಳ್ಳೆಯ ಚಿತ್ರವನ್ನು ನೀಡಲು ಪ್ರಯತ್ನಿಸಿದ್ದೇವೆ. ಈ ವೇಳೆ ಮಿಲನ ನಾಗರಾಜ್ ಅವರೊಂದಿಗೆ ಅಂಥದ್ದೊಂದು ಅದ್ಭುತ ಜರ್ನಿ ಕೂಡ ಮಾಡಿದ್ದೇನೆ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.
ಕಳೆದ ಲಾಕ್ಡೌನ್ ವೇಳೆ ಲವ್ ಮಾಕ್ಟೇಲ್ ಸಿನಿಮಾ ತೆರೆಕಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಅದೇ ಯಶಸ್ಸಿನಲ್ಲಿದ್ದ ಜೋಡಿ ‘ ಲವ್ ಮಾಕ್ಟೇಲ್ 2’ ಶುರು ಮಾಡಿತ್ತು. ಈಗ ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿದ್ದಾರೆ. ಅದೇನೆ ಇರಲಿ, ಸಕ್ಸಸ್ ಸಿನಿಮಾ ಕೊಟ್ಟಿರುವ ಈ ಜೋಡಿ ಮತ್ತೆ ನಿರೀಕ್ಷೆ ಹುಟ್ಟಿಸಿದೆ. ಫ್ಯಾನ್ಸ್ ಕೂಡ ಸಿನಿಮಾ ಎದುರು ನೋಡುತ್ತಿದ್ದು, ಚಿತ್ರಕ್ಕೆ ಹಾಗೂ ಶ್ರಮದಿಂದ ಸಿನಿಮಾ ಮಾಡಿರೋ ಈ ಜೋಡಿಗೆ ಯಶಸ್ಸು ಸಿಗಲೆಂದು ಸಿನಿಲಹರಿ ಆಶಿಸುತ್ತದೆ.