Categories
ಸಿನಿ ಸುದ್ದಿ

ಚಿನಕುರುಳಿ ಶಾನ್ವಿಗೆ ಕೋತಿ ಕಚ್ಚಿದ ಪ್ರಸಂಗ !

ವಾರಣಾಸಿಯ ಈ ನಟಿ ಶಾನ್ವಿ‌ಶ್ರಿ ವಾಸ್ತವ್ ‘ಕಸ್ತೂರಿ ಮಹಲ್ ‘ ಗೆ ಕಾಲಿಡುವ ಮುನ್ನ ನಿಜಕ್ಕೂ‌ ಆಗಿದ್ದೇನು?
……,………………………………..

ನಟಿ ಶಾನ್ವಿ ಶ್ರೀವಾಸ್ತವ್ ಗೊತ್ತಲ್ವಾ, ಅದೇ’ ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಟಿ. ಅವರೀಗ’ ಕಸ್ತೂರಿ ಮಹಲ್ ‘ ನಲ್ಲಿ ಬ್ಯುಸಿಯಾಗಿದ್ದಾರೆ. ಅದೃಷ್ಟ ಅಂತಾರಲ್ಲ ಹಾಗೆ ಬದಾವಣೆಯ ಗಾಳಿಯಲ್ಲಿ’ ಕಸ್ತೂರಿ ಮಹಲ್’ ಪ್ರವೇಶಿಸಿದ್ದಾರೆ. ಅದ್ದೆಂಗೆ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ರಚಿತಾ ರಾಮ್ ಅಭಿನಯಿಸಬೇಕಿದ್ದ ಜಾಗಕ್ಕೆ ಶಾನ್ವಿ ಬಂದರು. ಹಾಗಂತ ಈ ಅವಕಾಶಕ್ಕಾಗಿ ವಾರಾಣಾಸಿ ಆ ಚೆಲುವೆ ಶಾನ್ವಿ ಕಾದು ಕುಳಿತಿದ್ರಾ? ಅವಕಾಶಗಳೇ ಇಲ್ಲ ಅಂತ ಇದನ್ನ ಒಂದೇ ಗುಕ್ಕಿನಲ್ಲಿ ಒಪ್ಪಿಕೊಂಡ್ರಾ?

ವಿಷಯ ಅದಲ್ಲ, ಬೇರೆನೆ ಇದೆ‌‌‌…

ಅವರ ಪ್ರಕಾರ ಹಾಗೇನು ಅಲ್ಲ. ವಾಸ್ತವ ಬೇರೆನೆ ಇದೆ. ಅದೇನು ಎನ್ನುವುದಕ್ಕಿಂತ ಮುಂಚೆ‌. ಕಸ್ತೂರಿ ಮಹಲ್ ಗೆ ರಚಿತಾ ಯಾಕೆ ಕೈ ಎತ್ತಿದ್ರು ಗೊತ್ತಾ? ವಿಷಯ ಸ್ವಲ್ಪ ಸೀರಿಯಸ್. ಆ ಕತೆ ಹೀಗಿದೆ ಕೇಳಿ; ಈ ಚಿತ್ರಕ್ಕೆ ಮುಂಚೆ ‘ಕಸ್ತೂರಿ ನಿವಾಸ ‘ ಅಂತ ಟೈಟಲ್ ಇತ್ತು‌ . ಆಗ ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿದ್ದರು. ಇದು ದಿನೇಶ್ ಬಾಬು ನಿರ್ದೇಶನದ ಚಿತ್ರ ಎನ್ನುವುದರ ಜತೆಗೆ ಚಿತ್ರದ ಟೈಟಲ್ ನೋಡಿಯೇ ಅವರು ಥ್ರಿಲ್ ಆಗಿದ್ರಂತೆ‌‌ . ಜತೆಗೆ ಅದು ನಾಯಕಿ ಪ್ರಧಾನ ಚಿತ್ರ ಬೇರೆ, ಅದೇ ಗುಂಗ್ ನಲ್ಲಿ ಕತೆ ಕೇಳಿದವರೇ ಓಕೆ ನಾನೇ ನಾಯಕಿ ಅಂತಲೂ ಕಾಲ್ ಶೀಟ್ ಕೊಟ್ಟಿದ್ದರು‌‌. ಮುಂದೆ ಮುಹೂರ್ತ ಕೂಡ ಮುಗೀತು.ಆದ್ರೆ ಆಗ ಶುರುವಾಗಿದ್ದು ಟೈಟಲ್ ವಿವಾದ. ಅದೇನೋ ಯಡವಟ್ಟಾಯ್ತು ಅಂತ ಗೊತ್ತಾಗಿದ್ದೇ ತಡ, ನಂಗೆ ಡೇಟ್ಸ್ ಹೊಂದಾಣಿಕೆ ಆಗ್ತಿಲ್ಲ. ಮುಂಚೇನೆ ಕಾಲ್ ಶೀಟ್ ಕೊಟ್ಟ ಸಿನ್ಮಾದವರೂ ಬಿಡ್ತಿಲ್ಲ, ಸಾರಿ ಸರ್ ನೀವು ಯಾರನ್ನಾದ್ರೂ ಬೇರೆ ಅವ್ರನ್ನ ಹಾಕ್ಕೊಳ್ಳಿ ಅಂತ ದಿನೇಶ್ ಬಾಬು ಅವರಿಗೆ ರಾತ್ರೋರಾತ್ರಿ ಮೆಸೇಜ್ ಹಾಕಿ‌ಬಿಟ್ರು ಬುಲ್ ಬುಲ್ ಬೆಡಗಿ ರಚಿತಾ ರಾಮ್.

ರಾತ್ರೋರಾತ್ರಿ‌ ಮೆಸೇಜ್ ಹಾಕಿದ್ರು ರಚಿತಾ…

ಚೇಂಜ್ ಒವರ್ ಕತೆ ನಡೆದಿದ್ದು ಹೀಗೆ. ಮುಂದೆ ಶಾನ್ವಿ ಹೇಗೆ ಬಂದ್ರು?’ ಅವನೇ ಶ್ರೀ ಮನ್ನಾರಾಯಣ’ ಚಿತ್ರದ ನಂತರ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದ ಅವರಿಗೆ ‘ತ್ರಿಶೂಲಂ’ ಮೂಲಕ‌ ಉಪೇಂದ್ರ ಅವರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು. ಅಲ್ಲಿಂದೀಗ ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾದರು. ಅವರ ಪ್ರಕಾರ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕಿದ್ದ ಮೊದಕ ಕಾರಣ ಕತೆ ಮತ್ತು ಪಾತ್ರ.‌ಒಬ್ಬ ನಟಿಗೂ ಬೇಕಾಗಿದ್ದೂ ಕೂಡ ಅದೇನೆ. ಹಾಗಾಗಿ ತಾನು ಈ ಸಿನಿಮಾ‌ಒಪ್ಪಿಕೊಂಡೇ ಎನ್ನುವ ಶಾನ್ವಿ, ಈಗ ಅದೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಅವರು ತಮಗೆ ಕೋತಿ ಕಚ್ಚಿದ ಪ್ರಸಂಗವೊಂದನ್ನು’ ಕಲರ್ಸ್ ಕನ್ನಡ’ದ ಮಜಾ ಟಾಕೀಸ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.

ಕೋತಿ ಕಂಡ್ರೆ ನಂಗೆ ಈಗಲೂ ಭಯ..

‘ ನಾನಗಾಗ 15 ವರ್ಷ.‌ಮನೆಯ ಟೇರಾಸ್ ಮೇಲೆ ಆಟ ಆಡ್ತಾ ಇದ್ವಿ.‌ ಎಲ್ಲಿಂದಲೋ‌ ಬಂದ ಕೋತಿ ನನ್ನ ಕೈ ಕಚ್ಚಿತು. ಅದೃಷ್ಟವಶಾತ್ ನಂಗೇನು‌ಗಾಯ ಆಗ್ಲಿಲ್ಲ.‌ ಆದ್ರೆ ಕೋತಿ ಕಂಡ ಭಯ ಪಟ್ಟು ಓಡಿದೆ. ಅವತ್ತಿನಿಂದ ನಂಗೆ ಮನೆಯವ್ರು ಕೋತಿ ಅಂತಲೇ ಕರೀತಿದ್ರು ಅಂತ 15 ವರ್ಷದಲ್ಲಿ ನಡೆದ ಘಟನೆಯೊಂದನ್ನು ಹೇಳಿಕೊಂಡು‌ ನಕ್ಕರು ಚಿನಕುರುಳಿ ಶಾನ್ವಿ ಶ್ರೀವಾಸ್ತವ್.

ಇದು ಬಿಡಿ, ಮುಗ್ದ ಮುಖದ ಶಾನ್ವಿ ಬಗ್ಗೆ ಹೇಳಲೇಬೇಕಾದ ಒಂದು‌ಮಾತು ಅವರಿಗಿರುವ ಕನ್ನಡದ‌ ಮೇಲಿನ‌ ಪ್ರೀತಿಯ ಬಗ್ಗೆ. ನಿಮಿಗೆಲ್ಲ ಗೊತ್ತೇ ಇದೆ. ಶಾನ್ವಿ ಕನ್ನಡಕ್ಕೆ ಬಂದ ಆಮದು ನಟಿ. ಅಂದ್ರೆ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದವರು. ಹಾಗೆ ಬಂದವರನೇಕ ನಟಿಯರು ಅವಕಾಶ ಇದ್ದಷ್ಟು ದಿನ ಇಲ್ಲಿದ್ದು , ಹಣ ಮಾಡಿಕೊಂಡು‌ಮರಳಿ ತಮ್ಮೂರು ಸೇರಿಕೊಂಡಿ ದ್ದಾರೆಸ್ವಲ್ಪ ಕಮಲ ಈ ನಟಿ ಬೆಂಗಳೂರಿನಲ್ಲೆ ಉಳಿದು ಕೊಂಡಿದ್ದಾರೆ. ಕನ್ನಡ ಭಾಷೆ ಕಲಿತಿದ್ದಾರೆ. ಓದು,ಬರಹ‌ ಎರಡೂ ಕನ್ನಡದಲ್ಲೇ ಮಾಡುತ್ತಾರೆ. ಬೆಂಗಳೂರು ನನ್ನೂರು ಅಂತ ಹೆಮ್ಮೆಯಿಂದ ಹೇಳುತ್ತಾರೆ. ಅಷ್ಟು ಮಾತ್ರವಲ್ಲ, ಇಲ್ಲಿಯೇ ಸೆಟ್ಲ್ ಆಗುವುದಾಗಿಯೂ ಹೇಳುತ್ತಾರೆ. ಹಾಗೆಯೇ ಕನ್ನಡದ ಸ್ಟಾರ್ ಒಬ್ಬರನ್ನು ಲವ್ ಮಾಡುತ್ತಿರುವ ಬಗ್ಗೆ‌ಗಾಸಿಪ್ ಕೂಡ ಇದೆ. ಸದ್ಯಕ್ಕೆ ಅದು ಕನ್ ಫರ್ಮ್‌ಅಲ್ಲ.‌ಗಾಸಿಪ್ ಮಾತ್ರ.‌ ಏನೇ ಆಗಲಿ ಶಾನ್ವಿ ಅವರಿಗೆ ಸಿನಿ‌ಲಹರಿ ಕಡೆಯಿಂದ ಆಲ್ ದಿ‌ಬೆಸ್ಟ್.

Categories
ಸಿನಿ ಸುದ್ದಿ

ಹೊಸ ಸಿನ್ಮಾ ಖಾತರಿಪಡಿಸಿದ ದುನಿಯಾ ವಿಜಯ್

ಲಕ್ಕಿ ಎಂಬ ಹೊಸ ಪ್ರತಿಭಾವಂತ ಹುಡುಗನಿಗೆ ನಿರ್ದೇಶನ

ಇತ್ತೀಚೆಗಷ್ಟೇ “ಹೊಸ ಲವ್ ನಲ್ಲಿ ದುನಿಯಾ ವಿಜಯ್” ಶೀರ್ಷಿಕೆಯಡಿ ವಿಜಯ್ ಹೊಸದೊಂದು ಕ್ಯೂಟ್ ಲವ್ ಸ್ಟೋರಿ ಸಿನಿಮಾ‌ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಮಾಡಲಾಗಿತ್ತು. ಆ ಕುರಿತು ಸ್ವತಃ “ದುನಿಯಾ”ವಿಜಯ್ ಅವರೇ ” ಸಿನಿ ಲಹರಿ” ಗೆ ಸ್ಪಷ್ಟಪಡಿಸಿದ್ದರು. ಈಗ ಅದಕ್ಕೆ ಪೂರಕವಾಗಿ ವಿಜಯ್ ತಮ್ಮಫೇಸ್ ಬುಕ್ ಖಾತೆಯಲ್ಲಿ ಆ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಪೂರ್ಣ ಬರಹ ಇಲ್ಲಿದೆ ಓದಿ.

‘ನಟನಾಗಬೇಕು ಎಂಬ ಹಂಬಲದಿಂದ ಅಭಿನಯ ಕಲಿತಿದ್ದ ನನಗೆ ಚಿತ್ರರಂಗ ಪ್ರವೇಶಿಸುವುದು ಕೊಂಚ ಕಷ್ಟದ ಕೆಲಸವಾಗಿತ್ತು. ಆ ಕಷ್ಟವನ್ನು ಮತ್ತೊಂದು ಕಷ್ಟದ ಮೂಲಕವೇ ಜಯಿಸಬೇಕು ಎಂದು ತೀರ್ಮಾನಿಸಿ ಸ್ಟಂಟ್ ಕಲಿತು ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಬಂದೆ ನಂತರದ ದಿನಗಳಲ್ಲಿ ಸಾಹಸದ ಜತೆಯಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದೆ. ಒಂದಷ್ಟು ದಿನಗಳ ನಂತರ ‘ದುನಿಯಾ’ ಸಿನಿಮಾದ ಮೂಲಕ ನಾಯಕನಾದೆ. ಕನ್ನಡಿಗರು ಅಭಿಮಾನದಿಂದ ತಮ್ಮೆರೆಡು ಕೈಗಳಿಂದ ನನ್ನನ್ನು ಬಾಚಿ ತಬ್ಬಿಕೊಂಡು ಸಿನಿಮಾ ಗೆಲ್ಲಿಸಿದರು. ಜತೆಗೆ ಈ ಹುಡುಗನಲ್ಲಿ ಪ್ರತಿಭೆ ಇದೆ ಎಂದು ಅವರ ಮನಸ್ಸಿನಲ್ಲಿ ನನಗೊಂದು ಸ್ಥಾನವನ್ನು ನೀಡಿದರು.

ಇದೆಲ್ಲವೂ ಒಂದು ಹಂತವಾದರೆ ಕೆಲ ದಿನಗಳ ಹಿಂದೆ ಅಭಿಮಾನಿಗಳ ಆಶೀರ್ವಾದಿಂದಾಗಿ ಸಲಗ ಸಿನಿಮಾವನ್ನು ನಿರ್ದೇಶನ ಮಾಡಲು ನಿರ್ಧಾರ ಮಾಡಿದೆ. ಕೆ ಪಿ ಶ್ರೀಕಾಂತ್, ನಾಗಿ ಮತ್ತು ನನ್ನ ತಂಡ ನೀಡಿದ ಸಾಥ್ ನಿಂದಾಗಿ ಸಲಗ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಹೊಸ ಆಲೋಚನೆಗಳೊಂದಿಗೆ ಹೊಸ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇನೆ. ನಾಯಕನಾಗಿದ್ದವನು ನಿರ್ದೇಶಕನಾದೆ, ಈಗ ಹೊಸಬರೊಂದಿಗೆ ಹೊಸ ಪ್ರಯೋಗಕ್ಕೆ ಇಳಿಯುತ್ತಿದ್ದೇನೆ. ನನ್ನ ‌ಹೊಸ ಕಥೆಗೆ ಲಕ್ಕಿ ಎಂಬ ಹೊಸ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯದಲ್ಲೇ ನಾಯಕಿ ಮತ್ತು ನಿರ್ಮಾಪಕರ್ಯಾರು ಎಂಬುದನ್ನು ಹೇಳುತ್ತೇವೆ.

ನನ್ನ ಈ ಪ್ರಯತ್ನಕ್ಕೆ ಹಿರಿಯರು ನನ್ನ ಸೋದರ ಸಮಾನರಾದ ಶಿವಣ್ಣ, ಗೀತಾಕ್ಕ ಮನಃ ಪೂರ್ವಕವಾಗಿ ಹಾರೈಸಿದ್ದಾರೆ. ನನಗೆ ಬೆನ್ನೆಲುಬಾಗಿ ಸಲಗ ಸಿನಿಮಾದ ನಿರ್ಮಾಪಕರಾದ ಶ್ರೀಕಾಂತ್ ಮತ್ತು ನಾಗಿ ಇದ್ದಾರೆ. ಇವರೆಲ್ಲರ ಜತೆ ನಿಮ್ಮ ಹಾರೈಕೆ , ಆಶೀರ್ವಾದ ನನ್ನ ಪ್ರಯತ್ನಕ್ಕೆ ಬೇಕೇ ಬೇಕು.

ವಿಜಯ ದಶಮಿಯಂದು ನಾಯಕನಾರು ಎಂಬುದನ್ನು ಅನೌನ್ಸ್ ಮಾಡುತ್ತಿದ್ದೇನೆ. ನಮ್ಮ ಇಡೀ ತಂಡಕ್ಕೆ ವಿಜಯ ಸಿಗಲಿ ಎಂದು ನೀವು ಹಾರೈಸಬೇಕು’

-ನಿಮ್ಮವ
ದುನಿಯಾ ವಿಜಯ್.

Categories
ಸಿನಿ ಸುದ್ದಿ

ಓ…ಶೋ…!

ಓಶೋ ಎಂಬ ಹೊಸಬರ ಅಚ್ಚರಿಯ ಸುತ್ತ ಹೊಸ ಚಿತ್ರ

ಓಶೋ…
ಬಹುಶಃ ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಹಾಗಾಗಿ ಆ ಕುರಿತು ಹೆಚ್ಚೇನೂ ಹೇಳುವ ಅಗತ್ಯವಿಲ್ಲ.
ಆದರೂ ಈ ಹೊಸ “ಓಶೋ” ಬಗ್ಗೆ ಹೇಳಲೇಬೇಕು. ಅಷ್ಟಕ್ಕೂ ಯಾರಪ್ಪ ಹೊಸ ಓಶೋ ಎಂಬ ಸಣ್ಣ ಕುತೂಹಲ ಸಹಜ. ಆ ಕುತೂಹಲ ಇದ್ದವರು ಈ ಸುದ್ದಿ ಓದಿ.

“ಓಶೋ” ಇದು ಕನ್ನಡ ಸಿನಿಮಾ‌ ಹೆಸರು. ಹಾಗಂತ ಓಶೋ ಅವರ ಬಯೋಗ್ರಫಿ ಏನಾದರೂ ಸಿನಿಮಾ‌ ಆಗುತ್ತಿದೆಯಾ? ಅದಕ್ಕೆ ಸದ್ಯ ಉತ್ತರವಿಲ್ಲ. ಇಂಥದ್ದೊಂದು ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಹೊರಟಿರೋದು ಕೂಡ ಹೊಸಬರೆ.
ಕನ್ನಡದಲ್ಲೀಗ ಹೊಸ ಪ್ರತಿಭೆಗಳದ್ದೇ ಕಲರವ. ಹೊಸ ನಿರ್ದೇಶಕರು ತಮ್ಮೊಳಗಿನ ಹೊಸ ಆಲೋಚನೆಗಳ ಮೂಲಕ ಕಥೆ ಹೆಣೆದು, ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಈಗಾಗಲೇ ಅಂತಹ ಪ್ರಯತ್ನದಲ್ಲಿ ಗೆದ್ದಿದ್ದಾರೆ ಕೂಡ. ಈಗ ಆ ಸಾಲಿಗೆ ಈ “ಓಶೋ” ಕೂಡ ಇದೆ.

ಬಹುತೇಕ ಹೊಸಬರೇ ಈಗ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರೋದು. ಅಂತವರನ್ನು ಪ್ರೇಕ್ಷಕ‌ ಕೂಡ ಪ್ರೀತಿಯಿಂದಲೇ ಒಪ್ಪಿ ಅಪ್ಪಿದ್ದಾನೆ. ಹೊಸಬರಲ್ಲಿ ಹೊಸತನ ತುಂಬಿದೆ. ಅದನ್ನು ಸಾಕಾರಗೊಳಿಸಲು ಒಳ್ಳೆಯ ವೇದಿಕೆ ಕೊರತೆ ಇದ್ದೇ ಇದೆ. ಸಿನಿಮಾರಂಗ ಮೂಲಕ ತಮ್ಮ ಆಶಯವನ್ನು ಈಡೇರಿಸಿಕೊಳ್ಳಲು ಹೊರಟ ಈ ಚಿತ್ರತಂಡಕ್ಕೂ “ಸಿನಿ ಲಹರಿ” ಕಡೆಯಿಂದ ಆಲ್ ದಿ ಬೆಸ್ಟ್.

ಅಂದಹಾಗೆ, ಇಂಥದ್ದೊಂದು ಕುತೂಹಲ ಎನಿಸುವ ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಹೊರಟಿರೋದು ಕ್ರಿಯಾಶೀಲ ಬರಹಗಾರ ಜಿಯಾ (ಜಿಯಾಉಲ್ಲಾ ಖಾನ್ ). ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಇನ್ನು ಇವರ ಹೊಸ ಪ್ರಯತ್ನ ಬೆಂಬಲಿಸಿ ಗ್ಯಾನಗೌಡ್ರು ಹಾಗೂ ಅನಂತ್ ಇಟಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅನಂದ್ ಇಟಗಿ, ದೀಪಶ್ರೀ ಗೌಡ, ಕರಿಸುಬ್ಬು, ಗಿರಿರಾಜ್ ಇತರರು ಇದ್ದಾರೆ.

ದೀಪಾ, ಆನಂದ್‌, ಜಿಯಾ

ಕೀರ್ತನ್ ಸಂಗೀತ ನೀಡಿದರೆ, ಪ್ರದೀಪ್ ಛಾಯಾಗ್ರಹಣವಿದೆ. ಗುರುಸ್ವಾಮಿ ಸಂಕಲನವಿದೆ. ಸದ್ಯ ಶೀರ್ಷಿಕೆ ಜೊತೆ ಚಂದದ ಪೋಸ್ಟರ್ ಲಾಂಚ್ ಆಗಿದ್ದು, ಈಗಾಗಾಲೇ ಚಿತ್ರೀಕರಣ ಮುಗಿಸಿ ಫಸ್ಟ್ ಕಾಪಿ ಕೂಡ ಬಂದಿದೆ. ಇಷ್ಟರಲ್ಲೇ ಸೆನ್ಸಾರ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.

Categories
ಸಿನಿ ಸುದ್ದಿ

ಲೋಕೇಂದ್ರನ ಸಿನ್ಮಾ ಲೋಕ !

ಬಿಲ್ಡಿಂಗ್‌ ಕಟ್ಟೋ ಪ್ರೇಮಿಯ ಸಿನ್ಮಾ ಕಟ್ಟೋ ಕಾಯಕ

“ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು”

– ಬಹುಶಃ ಬಹುತೇಕ ಕನ್ನಡಿಗರಿಗೆ ಈ ಚಿತ್ರದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ, ಕನ್ನಡ ಚಿತ್ರರಂಗದ ಒಂದಷ್ಟು ಮಂದಿಗಂತೂ ಈ ಸಿನಿಮಾ ಬಗ್ಗೆ ಗೊತ್ತು. ಅದರಲ್ಲೂ ಸಿನಿಪ್ರೇಮಿಗಳಿಗೆ ಈ ಚಿತ್ರ ಅಚ್ಚುಮೆಚ್ಚು ಅನ್ನೋದು ವಿಶೇಷ. ಅಂದಹಾಗೆ, ಈ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ಪ್ರದರ್ಶನದಲ್ಲಿ ಬೆರಳೆಣಿಕೆ ಜನ ಮಾತ್ರ ಚಿತ್ರಮಂದಿರದಲ್ಲಿದ್ದರು. ಸಿನಿಮಾ ವೀಕ್ಷಿಸಿದ ಪತ್ರಕರ್ತರು ಚಂದದ ವಿಮರ್ಶೆ ಬರೆದ ನಂತರ ಈ ಚಿತ್ರದ ಚಿತ್ರಣವೇ ಬದಲಾಯಿತು. ಜನರು ಹುಡುಕಿ ಬಂದು ಸಿನಿಮಾ ನೋಡಿದರು. ಭರಪೂರ ಮೆಚ್ಚುಗೆಯೂ ಸಿಕ್ಕಿತು. ನಂತರದ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡು ಅಲ್ಲಿನ ಜ್ಯೂರಿಗಳಿಂದ ಮೆಚ್ಚುಗೆ ಪಡೆದದ್ದು ವಿಶೇಷತೆಗಳಲ್ಲೊಂದು.
ಇಷ್ಟಕ್ಕೂ ಈ ಸಿನಿಮಾ ಕುರಿತು ಹೇಳ ಹೊರಟ ವಿಷಯವಿಷ್ಟೇ. ಇಂಥದ್ದೊಂದು ಸೂಕ್ಷ್ಮತೆಯ ಚಿತ್ರ ಕಟ್ಟಿಕೊಟ್ಟ ನಿರ್ದೇಶಕ ಕಮ್‌ ನಟ ಲೋಕೇಂದ್ರ ಸೂರ್ಯ ಈಗ ಮತ್ತೊಂದು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಎರಡನೇ ನಿರ್ದೇಶನದ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರು “ಹಾಫ್”.‌ ಹೌದು, ಲೋಕೇಂದ್ರ ಅವರು “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳುʼ ಸಿನಿಮಾ ಬಳಿಕ ನಿರ್ದೇಶಕ “ಆಸ್ಕರ್”‌ ಕೃಷ್ಣ ಅವರ ಜೊತೆಗೂಡಿ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದಲ್ಲಿ ನಟಿಸಿದ್ದಾರೆ. ಆ ಬಳಿಕ ಅವರೀಗ “ಹಾಫ್”‌ ಕೈಗೆತ್ತಿಕೊಳ್ಳಲು ಹೊರಟಿದ್ದಾರೆ.
ತಮ್ಮ ಸಿನಿಜರ್ನಿ ಹಾಗೂ ಈಗ ಮಾಡಹೊರಟಿರುವ ಹೊಸ ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತಿಗಿಳಿದ ಲೋಕೇಂದ್ರ ಹೇಳಿದ್ದಿಷ್ಟು. “

ಸಿನ್ಮಾ ಆಸಕ್ತಿ ಹೆಚ್ಚಿಸಿದ ದಾದಾ ..

“ಬೇಸಿಕಲಿ ನಾನೊಬ್ಬ ಸಿಂಗರ್.‌ ಸಿನಿಮಾಗೆ ಬರಬೇಕು ಅನ್ನೋದು ನನ್ನ ಎರಡು ದಶಕದ ಕನಸು. ಅದು ಈಡೇರಿದ್ದು ಕಳೆದ ವರ್ಷ ಬಂದ “ಅಟ್ಟಯ್ಯ ವರ್ಸ್‌ಸ್‌ ಹಂದಿ ಕಾಯೋಳು” ಚಿತ್ರದ ಮೂಲಕ. ಚಿಕ್ಕಂದಿನಿಂದಲೂ ಸಿನಿಮಾ ಮೇಲಿ ಪ್ರೀತಿ ಇತ್ತು. ರಾಜಕುಮಾರ್‌, ವಿಷ್ಣುವರ್ಧನ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ವಿಷ್ಣುವರ್ಧನ್‌ ಅವರ “ದಾದಾ” ಚಿತ್ರ ನೋಡಿದ ಮೇಲೆ ಇನ್ನಷ್ಟು ಸಿನಿಮಾ ಮೇಲೆ ಪ್ರೀತಿ ಬಂತು. ಆಸಕ್ತಿಯೂ ಹೆಚ್ಚಾಯ್ತು. ಆ ನಂತರ “ಓಂ” ಸಿನಿಮಾ ಬಂದಮೇಲೆ ಸಿನಿಮಾದಲ್ಲೂ ನಾನು ಕೆಲಸ ಮಾಡಲೇಬೇಕು ಎಂಬ ಆಸೆ ದುಪ್ಪಟ್ಟಾಯ್ತು. ಆದರೆ, ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಹಾಗಂತ ಪ್ರಯತ್ನ ಬಿಡಲಿಲ್ಲ. ಒಂದುವರೆ ದಶಕ ಕಾಲ ನಾನು ಆರ್ಕೇಸ್ಟ್ರಾ ನಡೆಸಿದೆ. ಅದು ತಿಂಡಿಗಷ್ಟೇ ಸಾಲುತ್ತಿತ್ತು. ಊಟಕ್ಕಾಗುತ್ತಿರಲಿಲ್ಲ. ಆ ಬಳಿಕ ಕನ್ಸ್‌ಸ್ಟ್ರಕ್ಷನ್‌ ಫೀಲ್ಡ್‌ಗೆ ಎಂಟ್ರಿಯಾದೆ. ಅಲ್ಲಿ ಹಗಲಿರುಳು ಒಂದಷ್ಟು ದುಡಿದೆ. ಯಾರನ್ನೂ ಕಾಸು ಹಾಕಿ ಸಿನಿಮಾ ಮಾಡ್ತೀನಿ ಅಂತ ಹೋಗದೆ, ನಾನೇ ಹೊಸ ಪ್ರಯತ್ನಕ್ಕೆ ಮುಂದಾದೆ, ಸಿನಿಮಾರಂಗದಿಂದ ಹೊರಗೆ ಇರುವವರನ್ನು ಕಲೆಹಾಕಿ ನಾನು ಸಿನಿಮಾ ಮಾಡಿದೆ. ಆಗ ಆಗದ್ದೇ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು”. ಆ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿತು. ಸಿನಿಮಾರಂಗದಲ್ಲೇ ಇದ್ದು ಕೆಲಸ ಮಾಡಲು ಸ್ಫೂರ್ತಿಯೂ ತುಂಬಿತು. ಈಗ ನಾನು “ಹಾಫ್‌” ಸಿನಿಮಾ ಕೈಗೆತ್ತಿಕೊಂಡಿದ್ದೇನೆʼ ಎಂದು ವಿವರಿಸುತ್ತಾರೆ ಲೋಕೇಂದ್ರ ಸೂರ್ಯ.

 

” ಒಂದುವರೆ ದಶಕ ಕಾಲ ನಾನು ಆರ್ಕೇಸ್ಟ್ರಾ ನಡೆಸಿದೆ. ಅದು ತಿಂಡಿಗಷ್ಟೇ ಸಾಲುತ್ತಿತ್ತು. ಊಟಕ್ಕಾಗುತ್ತಿರಲಿಲ್ಲ. ಆ ಬಳಿಕ ಕನ್ಸ್‌ಸ್ಟ್ರಕ್ಷನ್‌ ಫೀಲ್ಡ್‌ಗೆ ಎಂಟ್ರಿಯಾದೆ. ಅಲ್ಲಿ ಹಗಲಿರುಳು ಒಂದಷ್ಟು ದುಡಿದೆ. ಯಾರನ್ನೂ ಕಾಸು ಹಾಕಿ ಸಿನಿಮಾ ಮಾಡ್ತೀನಿ ಅಂತ ಹೋಗದೆ, ನಾನೇ ಹೊಸ ಪ್ರಯತ್ನಕ್ಕೆ ಮುಂದಾದೆ, ಸಿನಿಮಾರಂಗದಿಂದ ಹೊರಗೆ ಇರುವವರನ್ನು ಕಲೆಹಾಕಿ ನಾನು ಸಿನಿಮಾ ಮಾಡಿದೆ” 

 

ಕಲಾತ್ಮಕದಿಂದ ಕಮರ್ಷಿಯಲ್‌ ಕಡೆಗೆ…

ಈ ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ರೌಡಿಸಂ ಹಿನ್ನೆಲೆಯಲ್ಲಿ ಸಾಗುವ ಕಥೆ. ಒಂದು ಕಲಾತ್ಮಕ ಎಳೆಯನ್ನು ಇಟ್ಟುಕೊಂಡು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿ ಮಾಡುವ ಯೋಚನೆ ನನಗಿದೆ.
ರೌಡಿಸಂ ಹಿನ್ನೆಲೆ ಇದ್ದರೂ ಎರಡು ಗ್ಯಾಂಗ್‌ ನಡುವೆ ಒಳಗೊಳಗೇ ಹೇಗೆ ಫೈಟ್‌ ಮಾಡ್ತಾರೆ ಎನ್ನುವುದೇ ಕಥೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ನಾನು ಕಂಡಂತೆ ಇಲ್ಲಿಯವರೆಗೆ ಆಯ್ಕೆ ಮಾಡದಂತಹ ಕಲಾತ್ಮಕ ಎಳೆ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದೇನೆ. “ಹಾಫ್‌ʼ ಎಂಬ ಶೀರ್ಷಿಕೆ ಬೇರೆ ಭಾಷೆಗೂ ಹೋಗಬೇಕು ಎಂಬ ಉದ್ದೇಶದಿಂದ ಇಡಲಾಗಿದ್ದು, ಕಥೆ ಕೂಡ ಯುನಿರ್ವಸಲ್‌ ಆಗಿದೆ. ಚಿತ್ರಕ್ಕೆ ರಾಕಿಸೋನು ಸಂಗೀತವಿದೆ. ಚಿತ್ರದಲ್ಲಿ ಒಂದೇ ಒಂದು ಹಾಡು ಬರಲಿದ್ದು, ಆ ಹಾಡಿಗೆ ನಾಗೇಂದ್ರ ಪ್ರಸಾದ್‌ ಬಳಿ ಸಾಹಿತ್ಯ ಬರೆಸುವ ಯೋಚನೆಯೂ ಇದೆ. ಇನ್ನು, ಸಿನಿ ಮಲ್ಲಿಕ್‌ ಛಾಯಾಗ್ರಹಣವಿದೆ. ಇದು ಆರ್.ಡಿ.ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗುತ್ತಿದೆ. ನಾಲ್ಕೈದು ಮಂದಿ ಗೆಳೆಯರು ನಿರ್ಮಾಣಕ್ಕೆ ಸಾಥ್‌ ಕೊಡುತ್ತಿದ್ದಾರೆ. ಚಿತ್ರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಪಾತ್ರಗಳಿವೆ ಎಂದು ವಿವರ ಕೊಡುವ ಲೋಕೇಂದ್ರ, ತಮ್ಮ ಅಭಿನಯದ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ಮುಗಿಸಿದ್ದಾರೆ. “ಹಾಫ್”‌ ಅವರ ಎರಡನೇ ನಿರ್ದೇಶನದ ಚಿತ್ರವಾಗಿದ್ದು, ನವೆಂಬರ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ ಎನ್ನುತ್ತಾರೆ ಲೋಕೇಂದ್ರ.

Categories
ಗ್ಲಾಮರ್‌ ಕಾರ್ನರ್

ನನ್ನಿಷ್ಟದ ಪಾತ್ರ ಸಿಕ್ಕರೆ ಅಭಿನಯಿಸಲು ನಾನ್‌ ರೆಡಿ

ಕಿಸ್‌ ಸುಂದರಿ ಶ್ರೀಲೀಲಾ ಎಲ್ಲಿ ಎನ್ನುವ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

ಸಿನಿಮಾ ಅಂತ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಸೋಷಲ್ ಮೀಡಿಯಾದಲ್ಲಿ ಅಂದ ಚೆಂದದ ಫೋಟೋಗಳ ಮೂಲಕ ಶ್ರೀಲೀಲಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ. ಈಗ ದಸರಾ ಹಬ್ಬಕ್ಕೂ ಅವರು ಒಂದು ಚೆಂದದ ಫೋಟೋಶೂಟ್ ಮಾಡಿಸಿ, ರಾಣಿಯಂತೆ ಪೋಸು ನೀಡಿರುವುದು ವಿಶೇಷ.

ಸಿನಿ ದುನಿಯಾವೇ ಹಾಗೆ. ಚಾಲ್ತಿಗೆ ಬಂದ ನಟ-ನಟಿಯರು ಇಲ್ಲಿ ಸದಾ ಸುದ್ದಿಯಲ್ಲಿರಬೇಕು. ಅದೆಲ್ಲ ಬೇಡ, ತಾವಾಯ್ತು ತಮ್ಮ ಪಾಡಾಯ್ತು ಅಂತ ಅವರೇನಾದ್ರು  ತೆರೆಮರೆಯಲ್ಲಿ ಕುಳಿತರೆ  ಇಲ್ಲಿ ದಿನಕ್ಕೊಂದು ಗಾಸಿಪ್. ಅದರಲ್ಲೂ ಒಂದು ಸಕ್ಸಸ್ ಫುಲ್ ಸಿನಿಮಾ‌ ಬಂದು‌ ಹೋದ ನಂತರ ಅದರ ನಟ ಅಥವಾ ನಟಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವುದು ತಡವಾದರೆ ಅವರ ಸುತ್ತ ಹತ್ತಾರು ಪ್ರಶ್ನೆ. ನೂರೆಂಟು ಗಾಳಿ‌ಮಾತು. ಸದ್ಯಕ್ಕೆ ಅಂತಹದೇ ಗಾಸಿಪ್ ‘ಕಿಸ್ ‘ ಚೆಲುವೆ ಶ್ರೀಲೀಲಾ‌ ಸುತ್ತಲೂ‌ ಇದೆ.

‘ಕಿಸ್ ‘ ಕೊಟ್ಟ ಕ್ಯೂಟ್ ಹುಡುಗಿ ಶ್ರೀ ಲೀಲಾ ಯಾಕೆ ಹೊಸ ಸಿನಿಮಾ ಒಪ್ಪಿಕೊ‌ಂಡಿಲ್ಲ  ?  ‘ಭರಾಟೆ ‘  ನಂತರ ಅವರ ಸಿನಿ‌ ಜರ್ನಿ ಏನಾಯ್ತು ? ಹೊಸ ಸಿನಿಮಾ‌ ಒಪ್ಪಿಕೊಂಡಿದ್ದರೆ ಅದು ಶುರುವಾಗುವುದು ಯಾವಾಗ? ಮೂರನೇ ಸಿನಿಮಾ ಯಾವ ಸ್ಟಾರ್ ಜತೆ ? ಸಿನಿಮಾ‌ ಪ್ರೇಮಿಗಳಲ್ಲಿ ಹೀಗೆಲ್ಲ ಕುತೂಹಲದ ಪ್ರಶ್ನೆಗಳಿವೆ.  ಹಾಗಂತ ಶ್ರೀಲೀಲಾ  ಸಿನಿಮಾ‌ ಬೇಡ ಅಂತ ‌ಸುಮ್ಮನಿದ್ದಾರಾ? ಖಂಡಿತಾ ಇಲ್ಲ‌.‌ ನೋ‌, ಚಾನ್ಸ್ . ‘ಭರಾಟೆ ‘ ನಂತರ ಶ್ರೀಲೀಲಾ ತಕ್ಷಣವೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನುವುದು ನಿಜವೇ ಆಗಿದ್ದರೂ, ಅವರೇ ಹೇಳುವ ಪ್ರಕಾರ ಅದಕ್ಕೆ ಮೂರು ಕಾರಣ. ಮೊದಲನೇಯದು ಎಜುಕೇಷನ್. ಎರಡನೇಯದು ಒಳ್ಳೆಯ ಕತೆ ಮತ್ತು ಪಾತ್ರ. ಮೂರನೆಯದು ಕೊರೋನಾ.

‘ ನಂಗೆ  ಸಿನಿಮಾ‌ ಆಫರ್  ಇಲ್ಲ ಅಂತಲ್ಲ.  ‘ಭರಾಟೆ ‌”ರಿಲೀಸ್ ಆದ ನಂತರ ಎಕ್ಸಾಂ ಶುರುವಾದವು. ತಕ್ಷಣವೇ ಅತ್ತ  ಗಮನ‌ಹರಿಸಬೇಕಾಗಿ ಬಂತು‌. ಎಕ್ಸಾಂ ಸಿದ್ಧತೆಗಾಗಿಯೇ  ಒಂದಷ್ಟು ದಿನ ಕಳೆದವು. ಅಲ್ಲಿಂದ ಎಕ್ಸಾಂ ಮುಗಿಸುವುದಕ್ಕೂ ಒಂದಷ್ಟು‌‌ ಸಮಯ ಹಿಡಿಯಿತು. ಅದೆಲ್ಲ ಮುಗಿಸಿ ಇನ್ನೇನು ಹೊಸ ಪ್ರಾಜೆಕ್ಟ್  ಫೈನಲ್ ಮಾಡಿಕೊಳ್ಳೊಣ ಅನ್ನೋ ಹೊತ್ತಿಗೆ ಕೊರೋನಾ ಬಂತು. ಎಲ್ಲವೂ ಬಂದ್ ಆದವು. ಆಗ ನಮ್ದೇನು ಕೆಲಸ? ಹಾಯಾಗಿ ಮನೆಯಲ್ಲಿದ್ದೆ. ಒಂದಷ್ಟು ಓದು, ಅದರ ಜತೆಗೆ ಸಿನಿಮಾ ವೀಕ್ಷಣೆ ಅಂತ ಬ್ಯುಸಿಯಿದ್ದೆ. ‘ ಎನ್ನುತ್ತಾರೆ ಕಿಸ್ ಚೆಲುವೆ ಶ್ರೀಲೀಲಾ.

ಶ್ರೀಲೀಲಾ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ. ಮೋಹಕ‌ ನೋಟ ಹಾಗೂ ಮುದ್ದು ಮುಖದ ಮೂಲಕ ಎಂಟ್ರಿಯಲ್ಲೇ ಸಿನಿ ರಸಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ ನಟಿ.  ಹಾಗೆಯೇ ಅಭಿನಯ ಹಾಗೂ  ಮಾತಿನಲ್ಲೂ ಬುದ್ದಿವಂತೆ. ಹಾಗಾಗಅವರಿಗೆ ಸಿನಿಮಾ ಆಫರ್ ಇಲ್ಲ ಅಂತಲ್ಲ. ಸಾಕಷ್ಟಿವೆ‌. ಅದನ್ನು ಅವರೇ  ಒಪ್ಪಿಕೊಳ್ಳುತ್ತಾರೆ.

‘ ಭರಾಟೆ ‘ ನಂತರ‌  ಸರಿ ಸುಮಾರು 20 ಕ್ಕೂ ಹೆಚ್ಚು ಕತೆ ಕೇಳಿದ್ದೇನೆ ಅಂದ್ರೆ ನಿಮಗೆ ಅಚ್ಚರಿ ಎನಿಸಬಹುದು. ಕತೆ ಕೇಳುವುದು, ಚರ್ಚೆ ಮಾಡುವುದು ನಡೆದೇ ಇದೆ.ಆದ್ರೆ ನಂಗಿಷ್ಟವಾದ ಕತೆ ಮತ್ತು ಪಾತ್ರ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಇದುವರೆಗೂ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ‌ . ಇವತ್ತೇ, ಈಗಲೇ ನಂಗಿಷ್ಟವಾಗುವ ಕತೆ ಮತ್ತು ಪಾತ್ರ ಸಿಕ್ಕರೆ ನಾನು‌ಅಭಿನಯಿಸಲು ರೆಡಿ ಎನ್ನುವ ಮೂಲಕ ತಮ್ಮ ನಿರೀಕ್ಷೆಯ ಬೇಡಿಕೆಗಳನ್ನು ಮುಂದಿಡುತ್ತಾರೆ ನಟಿ ಶ್ರೀಲೀಲಾ.

Categories
ಸಿನಿ ಸುದ್ದಿ

ಗಾಯಕ ನವೀನ್ ಸಜ್ಜು ಈಗ ಹೀರೋ !

ಆದಿಚುಂಚನಗಿರಿಯಲ್ಲಿ ಸ್ಕ್ರಿಪ್ಟ್ ಪೂಜೆ

ಗಾಯಕ, ಸಂಗೀತ ನಿರ್ದೇಶಕ ಹಾಗೂ ಬಿಗ್ ಬಾಸ್ ಖ್ಯಾತಿಯ ನವಿನ್ ಸಜ್ಜು ಈಗ ಹೀರೋ. ಹೌದು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಅವರು ತೆರೆ ಮೇಲೆ ಹೀರೋ ಆಗಿ ರಾರಾಜಿಸುತ್ತಿದ್ದರು. ಆದರೆ, ಕೋವಿಡ್ ಹಾವಳಿ ಅದಕ್ಕೆ ತಡೆಯಾಗಿತ್ತು. ಈಗ ಕೊನೆಗೂ ನವೀನ್ ಸಜ್ಜು ಹೀರೋ ಆಗಿದ್ದಾರೆ.
ಸ್ಕ್ರಿಫ್ಟ್‌ ಪೂಜೆಯ ವೇಳೆ
ಅಂದಹಾಗೆ, ಇವರನ್ನು ಹೀರೋ ಮಾಡುತ್ತಿರೋದು “ಕೆಮಿಸ್ಟ್ರಿ ಆಫ್ ಕರಿಯಪ್ಪ” ಖ್ಯಾತಿಯ ನಿರ್ದೇಶಕ ಕುಮಾರ್.
“ಬಿಗ್ ಬಾಸ್​”ನಿಂದ ಹೊರ ಬಂದ ಬೆನ್ನಲ್ಲೇ, ಅವರು ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ಆಗ ನಿಜವಾಗಲಿಲ್ಲ. ಹಾಗಂತ ನವೀನ್ ಆ ಸಮಯದಲ್ಲಿ ಸುಮ್ಮನೆ ಕೂರಲಿಲ್ಲ. ಕಥೆ ಕೇಳುತ್ತಲೇ ಇದ್ದರು. ಆ ಸಾಲಿಗೆ ಕುಮಾರ್ ಕಥೆಯನ್ನೂ ಕೇಳಿ, ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಎಲ್ಲಾ ತಯಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸಮಸ್ಯೆ ಎದುರಾಯಿತು.
ಲಾಕ್ ಡೌನ್ ನಡುವೆಯೇ ಚಿತ್ರತಂಡ ಚಿತ್ರದ ಸ್ಕ್ರಿಪ್ಟ್  ಕೆಲಸ ಮಾಡಿಕೊಂಡಿತ್ತು. ಕೊರೊನಾ‌ ಲಾಕ್ ಡೌನ್ ಸಡಿಲಗೊಂಡ ನಂತರ ಚಿತ್ರದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಇತ್ತೀಚೆಗೆ ಆದಿಚುಂಚನಗಿರಿ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ‌ ನೆರವೇರಿದೆ.
ಈ ಚಿತ್ರಕ್ಕಿನ್ನೂ ಶೀರ್ಷಿಕೆ ‌ಅಂತಮವಾಗಿಲ್ಲ. ಕಥೆ ಇತ್ಯಾದಿ ಬಗ್ಗೆಯೂ ಇನ್ನೂ ಗುಟ್ಟು ತಿಳಿದಿಲ್ಲ. ನಾಯಕಿ ಯಾರು, ಉಳಿದಂತೆ ಯಾರೆಲ್ಲ ಕಲಾವಿದರು ಇರುತ್ತಾರೆ ಎಂಬಿತ್ಯಾದಿ ವಿಷಯ ಇಷ್ಟರಲ್ಲೇ ತಿಳಿಯಲಿದೆ.
ತಂಡದ ಜತೆಗೆ ನಿರ್ದೇಶಕ ಕುಮಾರ್
Categories
ಸಿನಿ ಸುದ್ದಿ

ರಿಯಲ್ ನಲ್ಲಿ ಕಾಣದ್ದು ರೀಲ್ ನಲ್ಲಿ ಕಂಡೆ !

ಎಲ್ಲೂ ಹೇಳದ ಕಾಕ್ರೋಚ್ ಸುಧಿಯ ಭಾವುಕ ಮಾತು

ಸಿನಿಮಾಕ್ಕೂ ಬರುವ ಮುನ್ನ ಸುಧಿ

“ಒಂದು ಕಾಲದಲ್ಲಿ ಬಸ್ ಚಾರ್ಜ್ ಗೂ  ನನ್ನ ಬಳಿ ಕಾಸಿರುತ್ತಿರಲಿಲ್ಲ. ಬೀದಿ ಬದಿಯ ಕಾಂಪೌಂಡ್, ಗೋಡೆ, ಬೋರ್ಡ್‌ ಮೇಲೆ  ಅಕ್ಷರ ಬರೆಯುವ ಕಲಾವಿದನಾಗಿಯೇ ಒಂದಷ್ಟು ಬದುಕು ಕಟ್ಟಿಕೊಂಡಿದ್ದೆ. ಆದರೆ, ನನ್ ಲೈಫು ಇಷ್ಟೊಂದು ಕಲರ್ ಫುಲ್‌  ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಈಗ ನನ್ನ ಬದುಕೇ ಬದಲಾಗಿದೆ. ಅದಕ್ಕೆ ಕಾರಣ ಈ ಕನ್ನಡ ಚಿತ್ರರಂಗ. ಸಿನಿಮಾ ಸುಂದರ ಬದುಕು ರೂಪಿಸಿದೆ”…

– ಹೀಗೆ ಹೇಳಿದ್ದು ಸುಧಿ. ಸುಧಿ ಅಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗೋದು ಕಷ್ಟ. “ಟಗರು” ಖ್ಯಾತಿಯ ಕಾಕ್ರೋಚ್ ಅಂದರೆ, ಎಲ್ಲರಿಗೂ ನೆನಪಾಗುವ ಕಲಾವಿದ.

ಕನ್ನಡ ಚಿತ್ರರಂಗಕ್ಕೆ ಸುಧಿ ಕಾಲಿಟ್ಟು ಬರೋಬ್ಬರಿ ಆರೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಸುಧಿ ಸರಿಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. “ಅಲೆಮಾರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಧಿ ತರಹೇವಾರಿ ಪಾತ್ರಗಳ ಮೂಲಕ ತಾನೊಬ್ಬ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. “ದುನಿಯಾ’ ಸೂರಿ ನಿರ್ದೇಶನದ “ಟಗರು” ಸುಧಿಗೊಂದು ಟರ್ನಿಂಗ್ ಪಾಯಿಂಟ್ ಅಂದರೆ ತಪ್ಪಿಲ್ಲ. ಆ ಚಿತ್ರದ “ಕಾಕ್ರೋಚ್” ಪಾತ್ರವೇ ಇಂದು ಸುಧಿಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಈ ಮಾತನ್ನು ಸ್ವತಃ ಸುಧಿ ಕೂಡ ಒಪ್ಪುತ್ತಾರೆ.

ತಮ್ಮ ಸಿನಿಜರ್ನಿ  ಬಗ್ಗೆ ಸಾಕಷ್ಟು ಹೇಳಿರುವ ಸುಧಿ, ಸಿನಿಜರ್ನಿ ಶುರುವಿಗೂ ಮುನ್ನ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದೇ ಈ ಹೊತ್ತಿನ ವಿಷಯ. ಹೌದು, ಸುಧಿ, ಸಿನಿಮಾ ರಂಗಕ್ಕೂ ಬರುವ ಮುನ್ನ, ಅವರೊಬ್ಬ ಸಾಧಾರಾಣ ಸೈನ್ ಬೋರ್ಡ್‌ ಕಲಾವಿದರಾಗಿದ್ದರು. ಬರವಣಿಗೆ ಕೆಲಸ ಸಿಕ್ಕ ಸಿಕ್ಕ ಕಡೆ ಊರೂರು, ರಸ್ತೆ ಬದಿ ಅಲೆದಾಡಿ ಒಂದು ರೀತಿ ಅಲೆಮಾರಿಯಂತೆಯೇ ಬದುಕು ಸಾಗಿಸಿದ ಸುಧಿ, ಕೊನೆಗೆ “ಅಲೆಮಾರಿ” ಸಿನಿಮಾ ಮೂಲಕವೇ ಚಿತ್ರರಂಗ ಪ್ರವೇಶಿಸಿದರು. ಅದು ಆಕಸ್ಮಿಕವಾಗಿ ಸಿಕ್ಕ ಅವಕಾಶವಾದರೂ ತುಂಬಾನೆ ಚೆನ್ನಾಗಿ ಕಲರ್ ಫುಲ್‌ ಲೋಕದೊಳಗಿನ ಬದುಕು ಕಟ್ಟಿಕೊಂಡರು. ಅಲ್ಲಿಂದ ಸುಧಿ ಇಂದಿಗೂ ತಿರುಗಿ ನೋಡಿಲ್ಲ ಅನ್ನೋದೇ ವಿಶೇಷ.

ಗೋಡೆ ಬರೆಯುತ್ತಿದ್ದ ದಿನಗಳಲ್ಲಿ ಸುಧಿ

”  ಸಿನಿಮಾ ನನ್ನ ಲೈಫು. ಇಡೀ ನನ್ನ ಬದುಕನ್ನೇ ಈ ಚಿತ್ರರಂಗ ರೂಪಿಸಿದೆ. ಕೊನೆಯ ಉಸಿರು ಇರೋವರೆಗೂ ನಾನು ಈ ಚಿತ್ರರಂಗಕ್ಕೆ ಚಿರಋಣಿಯಾಗಿರುತ್ತೇನೆ. ನಾನು ಸಿನಿಮಾಗೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದೇನೆ. ನಿಜ ಹೇಳುವುದಾದರೆ ಸಿನಿಮಾ ರಂಗ ನನಗೆ ಎಲ್ಲವನ್ನೂ ಕಲಿಸಿದೆ. ಹಾಗಾಗಿ ನನಗೆ ಸಿನಿಮಾನೇ ಎಲ್ಲವೂ ಆಗಿದೆ. ಸಿನಿಮಾ ಹೊರತು ನಾನಿಲ್ಲ ಎನ್ನುವಷ್ಟರ ಮಟ್ಟಿಗೆ ಸಿನಿಮಾ ಅಪ್ಪಿದ್ದೇನೆ ” 

ಗೋಡೆ ಬರೆಯುತ್ತಿದ್ದ ದಿನಗಳಲ್ಲಿ ಸುಧಿ

ಸಿನಿಮಾ ಬದುಕಿಗೂ ಮುನ್ನ ಇದ್ದಂತಹ ಬದುಕಿನ ಬಗ್ಗೆ “ಸಿನಿ ಲಹರಿ” ಜೊತೆ ಮಾತನಾಡಿದ ಸುಧಿ, “ನಿಜ ಹೇಳುವುದಾದರೆ, ಸಿನಿಮಾ ನನ್ನ ಲೈಫು. ಇಡೀ ನನ್ನ ಬದುಕನ್ನೇ ಈ ಚಿತ್ರರಂಗ ರೂಪಿಸಿದೆ. ಕೊನೆಯ ಉಸಿರು ಇರೋವರೆಗೂ ನಾನು ಈ ಚಿತ್ರರಂಗಕ್ಕೆ ಚಿರಋಣಿಯಾಗಿರುತ್ತೇನೆ. ನಾನು ಸಿನಿಮಾಗೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದೇನೆ. ನಿಜ ಹೇಳುವುದಾದರೆ ಸಿನಿಮಾ ರಂಗ ನನಗೆ ಎಲ್ಲವನ್ನೂ ಕಲಿಸಿದೆ. ಹಾಗಾಗಿ ನನಗೆ ಸಿನಿಮಾನೇ ಎಲ್ಲವೂ ಆಗಿದೆ. ಸಿನಿಮಾ ಹೊರತು ನಾನಿಲ್ಲ ಎನ್ನುವಷ್ಟರ ಮಟ್ಟಿಗೆ ಸಿನಿಮಾ ಅಪ್ಪಿದ್ದೇನೆ. ನಾನೊಬ್ಬ ಬರಹ ಕಲಾವಿದ. ಅಲ್ಲಿ ಕಾಣದೇ ಇರುವಂತಹ ಅಚ್ಚರಿಗಳನ್ನು ನಾನು ಸಿನಿಮಾರಂಗದಲ್ಲಿ ಕಂಡಿದ್ದೇನೆ. ಅನುಭವಿಸಿದ್ದೇನೆ. ನಾನು ನೋಡದೇ ಇರುವ, ಹಾಕದೇ ಇರುವ ಶೂಸ್ ನೋಡಿದ್ದೇನೆ, ನಾನು ಹಾಕದೇ ಇರುವಂತಹ ಬಟ್ಟೆ ಹಾಕಿದ್ದೇನೆ, ನೋಡದೇ ಇರುವಂತಹ ಸ್ಟಾರ್ಸ್ ಹೋಟೇಲ್‌ ನಲ್ಲಿ ಮಲಗಿದ್ದೇನೆ. ಹೆಸರು ಕೇಳದೇ ಇರುವಂತಹ ಊಟದ ಐಟಂ ಕೇಳಿದ್ದೇನೆ, ಒಂದು ಕಾಲದಲ್ಲಿ ಬಸ್ ಚಾರ್ಜ್‌ ಗೂ ಕಾಸಿರದ ನಾನು ಈ ಸಿನಿಮಾರಂಗದಿಂದ ಇದ್ದಬದ್ದ ಫ್ಲೈಟ್ ಗಳಲ್ಲಿ  ಪ್ರಯಾಣ ಮಾಡಿದ್ದೇನೆ. ದೊಡ್ಡವರ ಮುಂದೆ ನಿಲ್ಲುವುದೇ ಕಷ್ಟ ಆಗಿದ್ದ ದಿನಗಳಲ್ಲಿ ಈಗ ದೊಡ್ಡ ವ್ಯಕ್ತಿಗಳ ಜೊತೆ ಕೂತು ಮಾತನಾಡುತ್ತಿದ್ದೇನೆ ಅಂದರೆ ಅದಕ್ಕೆಲ್ಲ ಈ ಸಿನಿಮಾ ಕಾರಣ’ ಎನ್ನುವುದು ಸುಧಿ ಮಾತು.

ಆಗೆಲ್ಲ ಬದುಕು ನಡೆಯುತ್ತಿದ್ದರೂ ಇಷ್ಟೊಂದು ಸುಂದರ ಬದುಕು ಇರಲಿಲ್ಲ. ಇದಕ್ಕೂ ಈ ಸಿನಿಮಾನೇ ಕಾರಣ. ಈಗ ನಾನೇನಾದರೂ ಒಂದು ಅಭಿಮಾನಿ ವರ್ಗವನ್ನು ಸಂಪಾದಿಸಿದ್ದೇನೆಂದರೆ ಅದಕ್ಕೂ ಈ ಚಿತ್ರರಂಗ ಕಾರಣ. ಇಲ್ಲಿವರೆಗಿನ ನನ್ನ ಸಿನಿಪಯಣದ ಜರ್ನಿಯೇ  ಅದ್ಭುತ. ಸದ್ಯಕ್ಕಂತೂ ನಾನು ತೃಪ್ತಿ ಹೊಂದಿದ್ದೇನೆ. ಸಿನಿಮಾ ಬಿಟ್ಟರೆ ಬೇರೇನೂ ಬೇಡ ಅಂದುಕೊಂಡಿದ್ದೇನೆ. ಆದರೆ, ನನ್ನ ಮೂಲ ಕಸುಬು ಮಾತ್ರ ಬಿಡಲಾರೆ. ಇಲ್ಲಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತೇನೆ. ಶೂಟಿಂಗ್ ಇದ್ದಾಗ ಚಿತ್ರೀಕರಣ ಸೆಟ್ಗೆ ಹೋಗಿ ಬರುತ್ತೇನೆ. ಸಂಜೆ ಒಂದು ರೌಂಡ್ ನನ್ನ ಅಂಗಡಿಗೆ ಹೋಗಿ ಕೆಲಸ ಕಾರ್ಯ ನೋಡಿಕೊಂಡು ಮನೆಗೆ ಹೋಗುತ್ತೇನೆ. ನನ್ನದೇ ಆದ ಒಂದು ಹುಡುಗರ ಟೀಮ್ ಇದೆ. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ಇದರ ಜೊತೆ ಜೊತೆಯಲ್ಲಿ ಸಿನಿಮಾ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ.ಸದ್ಯಕ್ಕೆ ನನ್ನ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಬಿಡುಗಡೆಗೆ ಒಂದಷ್ಟು ರೆಡಿಯಾಗಿವೆ. ಇನ್ನಷ್ಟು ಹೊಸ ಸಿನಿಮಾಗಳೂ ಬಂದಿವೆ. ಇದೆಲ್ಲದರ ಜೊತೆಗೆ ಜನವರಿಯಲ್ಲೊಂದು ಹೊಸ ಸುದ್ದಿ ಕೊಡುತ್ತೇನೆ ಎನ್ನುತ್ತಾರೆ ಸುಧಿ.

” ನಾನೊಬ್ಬ ಬರಹ ಕಲಾವಿದ. ಅಲ್ಲಿ ಕಾಣದೇ ಇರುವಂತಹ ಅಚ್ಚರಿಗಳನ್ನು ನಾನು ಸಿನಿಮಾರಂಗದಲ್ಲಿ ಕಂಡಿದ್ದೇನೆ. ಅನುಭವಿಸಿದ್ದೇನೆ. ನಾನು ನೋಡದೇ ಇರುವ, ಹಾಕದೇ ಇರುವ ಶೂಸ್ ನೋಡಿದ್ದೇನೆ, ನಾನು ಹಾಕದೇ ಇರುವಂತಹ ಬಟ್ಟೆ ಹಾಕಿದ್ದೇನೆ, ನೋಡದೇ ಇರುವಂತಹ ಸ್ಟಾರ್ಸ್ ಹೋಟೇಲ್ನಲ್ಲಿ ಮಲಗಿದ್ದೇನೆ. ಹೆಸರು ಕೇಳದೇ ಇರುವಂತಹ ಊಟದ ಐಟಂ ಕೇಳಿದ್ದೇನೆ, ಒಂದು ಕಾಲದಲ್ಲಿ ಬಸ್‌ ಚಾರ್ಜ್‌ ಗೂ  ಕಾಸಿರದ ನಾನು ಈ ಸಿನಿಮಾರಂಗದಿಂದ ಇದ್ದಬದ್ದ ಫ್ಲೈಟ್‌  ಗಳಲ್ಲಿ ಪ್ರಯಾಣ ಮಾಡಿದ್ದೇನೆ. ದೊಡ್ಡವರ ಮುಂದೆ ನಿಲ್ಲುವುದೇ ಕಷ್ಟ ಆಗಿದ್ದ ದಿನಗಳಲ್ಲಿ ಈಗ ದೊಡ್ಡ ವ್ಯಕ್ತಿಗಳ ಜೊತೆ ಕೂತು ಮಾತನಾಡುತ್ತಿದ್ದೇನೆ ” 

ನಟನಾಗಿ ಸುಧಿ

ಆರೇಳು ವರ್ಷ. ಇಷ್ಟು ವರ್ಷಗಳಲ್ಲಿನನಗೆ ಸಿಕ್ಕ ಅವಕಾಶಗಳೆಲ್ಲವೂ ವಿಲನ್ ಪಾತ್ರಗಳೇ. ಆ ಪಾತ್ರದಲ್ಲಿ ನಟಿಸಿದ್ದಕ್ಕೆ ನನಗೆ ಹೆಮ್ಮೆಯೂ ಇದೆ. ಯಾವುದೇ ಕಲಾವಿದ ಇರಲಿ, ಒಂದು ಆಸೆ ಇದ್ದೇ ಇರುತ್ತೆ. ಅಂತಹ ಆಸೆ ನನಗೂ ಇದೆ. “ಪೊಲ್ಲಾದವನ್” ಚಿತ್ರದಲ್ಲಿ ಡ್ಯಾನಿಯಲ್ ಬಾಲಾಜಿ ಅವರು ಮಾಡಿದಂತಹ ಪಾತ್ರ ನಾನು ಮಾಡಬೇಕು. ಅಂತಹ ಪಾತ್ರ ಎದುರು ನೋಡುತ್ತಿದ್ದೇನೆ. ಇಲ್ಲಿ ಸ್ಟಾರ್ ಸಿನಿಮಾ, ಹೊಸಬರ ಸಿನಿಮಾದಲ್ಲೂ ಸಾಕಷ್ಟು ಬಿಝಿಯಾಗಿದ್ದೇನೆ ಎಂದು ಹೇಳಲು ಖುಷಿಯಾಗುತ್ತಿದೆ. “ಸಲಗ’ ನನಗೆ ಇನ್ನೊಂದು ಹೊಸ ಮೈಲೇಜ್ ತಂದುಕೊಡಲಿದೆ. ಆ ಚಿತ್ರದ ಸಾವಿತ್ರಿ ಎಂಬ ಪಾತ್ರ ಹಿಂದಿನ ಎಲ್ಲಾ ಪಾತ್ರಗಳನ್ನೂ ಮರೆಸುವಂತಿದೆ. ದುನಿಯಾ ವಿಜಿಯಣ್ಣ ಅವರ ಮತ್ತೊಂದು ಹೊಸ ನಿರ್ದೇಶನದ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಸಿಕ್ಕ ಆವಕಾಶವನ್ನು ಬಳಸಿಕೊಂಡು ಇಲ್ಲೇ ಇನ್ನಷ್ಟು ಗಟ್ಟಿಜಾಗ ಮಾಡಿಕೊಳ್ಳುವ ಆಸೆಯಂತೂ ಇದೆ ಎನ್ನುತ್ತಾರೆ ಸುಧಿ. ಸುಧಿ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಆ ಲಿಸ್ಟ್‌ ಹೀಗಿದೆ.

ಸುಧಿ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಆ ಲಿಸ್ಟ್‌ ಹೀಗಿದೆ.

1  ರಾಬರ್ಟ್‌

2  ಯುವರತ್ನ

3 ಸಲಗ

4 ಏಕ್ ಲವ್ ಯಾ

5  ತ್ರಿಶೂಲಂ

6  ನಟ್ವರ್ ಲಾಲ್

7  ಚೆಕ್ ಮೇಟ್

8  ರಂಗ  ಮಂದಿರ

9  ಚಾಂಪಿಯನ್‌

10ಸಕಲ ಕಲಾವಲ್ಲಭ

11 ಯಲ್ಲೋ ಬೋರ್ಡ್‌

12 ತಾಜ್‌ ಮಹಲ್‌ -2

13  ಯಾರ್‌ ಮಗ

14 ರಾಜ್ಬೀರ್‌

15  ಮಾರಿಗೋಲ್ಡ್,

16  ಉಗ್ರಾವತಾರ

17 ಗಲ್ಲಿ

Categories
ಸಿನಿ ಸುದ್ದಿ

ಹೊಸ ಲವ್ ನಲ್ಲಿ ದುನಿಯಾ ವಿಜಯ್!

ಸಲಗ ಬಳಿಕ ಕ್ಯೂಟ್ ಲವ್ ಸ್ಟೋರಿ ನಿರ್ದೇಶನಕ್ಕೆ  ನಟ ವಿಜಯ್ ಸಜ್ಜು

“ದುನಿಯಾ” ವಿಜಯ್ ಅವರು ಮೊದಲ ಬಾರಿಗೆನ ನಿರ್ದೇಶಿಸಿರುವ “ಸಲಗ” ಚಿತ್ರ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಕೊರೊನಾ ಸಮಸ್ಯೆ ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ, “ಸಲಗ’ ಅಬ್ಬರಿಸಿಬಿಡುತ್ತಿತ್ತು. ಇಡೀ ಚಿತ್ರರಂಗವೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಬಿಡುಗಡೆಗೆ ಸಜ್ಜಾಗಿದ್ದ ಚಿತ್ರಗಳೂ ಬಿಡುಗಡೆಯಾಗದೆ ಉಳಿದಿದ್ದವು. ಈಗ ಚಿತ್ರರಂಗ ತನ್ನ ಕಾರ್ಯಚಟುವಟಿಕೆ ಶುರುಮಾಡಿದೆ.

“ಸಲಗ’ ಕೂಡ ಬಿಡುಗಡೆಯ ಹಾದಿಯಲ್ಲಿದೆ. “ಸಲಗ’ ನಿರ್ದೇಶಕ ಕಮ್ ನಟ “ದುನಿಯಾ” ವಿಜಯ್, ಇದೀಗ ಹೊಸದೊಂದು ಸಿನಿಮಾಗೆ ಕೈ ಹಾಕಿದ್ದಾರೆ. “ಸಲಗ” ಬಿಡುಗಡೆ ಬಳಿಕ ಹೊಸ ಚಿತ್ರ ಮಾಡಲು ಅಣಿಯಾಗುತ್ತಿದ್ದಾರೆ.

ಈ ಬಾರಿ ಅವರು ಸಾಹಸ ಚಿತ್ರಕ್ಕೆ ಮೊರೆ ಹೋಗದೆ, ಪಕ್ಕಾ ಲವ್‌ ಸ್ಟೋರಿ ಹೇಳಲು ಹೊರಟಿದ್ದಾರೆ. ಆ ಕುರಿತು “ಸಿನಿ ಲಹರಿ’ ಜೊತೆ ಮಾತನಾಡಿದ “ದುನಿಯಾ” ವಿಜಯ್, ” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ.

” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ” 

” ಕಪ್ಪಗಿರೋ ‌ಹುಡುಗ ಬೇಕು- ವಯಸ್ಸು ಹದಿನೆಂಟಾಗಿರಬೇಕು ” 

ಹೊಸ ಹುಡುಗ ಹುಡುಗಿ ಇರಲಿದ್ದಾರೆ. ಅದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದೆ. ನಾಯಕ ಆಯ್ಕೆ ನಡೆಯುತ್ತಿದೆ. ಸ್ಕ್ರಿಪ್ಟ್ ಎಂಡ್ ಆಗಿದೆ. ಹೊಸ ಹುಡುಗ ಕಥೆಗೆ ಸೂಕ್ತವಾಗಿರಬೇಕು. ಕಪ್ಪುಗಿರೋರು ಬೇಕು. ಕಥೆ ಆ ರೀತಿಯ ಹುಡುಗನನ್ನು ಡಿಮ್ಯಾಂಡ್ ಮಾಡುತ್ತಿದೆ. ನನ್ನ ಪ್ರಕಾರ ಒಳ್ಳೆಯ ಲವ್ ಸ್ಟೋರಿ  ಇದು. ನಾನು ಮಾಡೋಕೆ ಆಗದಿರುವ ಕಥೆ ಇದು. ಹಾಗಾಗಿ ಇನ್ನೊಬ್ಬರಿಗೆ ಮಾಡಬೇಕು ಅಂತಾನೇ ಈ ನಿರ್ಧಾರ. 18 ರಿಂದ 25ರ ಹುಡುಗ ಹುಡುಗಿ ನಡುವಿನ ಪ್ರೇಮಕಥೆ ಇದು. ನಟನೆ ಗೊತ್ತಿದ್ದರೂ ಓಕೆ, ಅಂತಹ ಹುಡುಗ ಬೇಕು. ಹುಡುಗಿ ಫ್ರೆಶ್ ಫೇಸ್ ಹುಡುಕುತ್ತಿದ್ದೇನೆ.

“ಸಲಗ” ನಂತರ ಈ ಸಿನಿಮಾ ಮಾಡಿ ಮುಗಿಸೋದು. ಸದ್ಯಕ್ಕಿಷ್ಟು. ದೊಡ್ಡ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇಷ್ಟರಲ್ಲೇ ಎಲ್ಲವೂ ಸರ್ಪ್ರೈಸ್ ಆಗಿರಲಿದೆ. ಅಲ್ಲಿಯವರೆಗೆ ಈ ಪ್ರೇಮಕಥೆಯ ಕೆತ್ತನೆ ಕೆಲಸ ನಡೆಯುತ್ತಿದೆ. ಸದ್ಯಕ್ಕೆ ನಾನೀಗ ಸ್ಕ್ರಿಪ್ಟ್ನಲ್ಲಿದ್ದೇನೆ. “ಸಲಗ” ಬಿಡುಗಡೆಯ ತಯಾರಿಯಲ್ಲೂ ಇದ್ದೇನೆ. ಸದ್ಯಕ್ಕಿಷ್ಟು ವಿಷಯವಿದೆ. ಉಳಿದದ್ದನ್ನು ಹಂತವಾಗಿ ವಿವರಿಸುತ್ತೇನೆ’ ಎಂದು ಮಾತು ಮುಗಿಸುತ್ತಾರೆ ದುನಿಯಾ ವಿಜಯ್

Categories
ಗ್ಲಾಮರ್‌ ಕಾರ್ನರ್

ಕಲರ್‌ಫುಲ್‌ ಲೋಕಕ್ಕೆ ಬಂದ ಕಣ್‌ ಕುಕ್ಕುವ ಸುಂದರಿ !

ಮಾಡೆಲಿಂಗ್ ಜಗತ್ತಿನಿಂದ  ಸ್ಯಾಂಡಲ್‌ ವುಡ್‌ ಗೆ ಬಂದ ‘ ಬಾಬಿ’ ಡಾಲ್

ಮಾಡೆಲಿಂಗ್ ಜಗತ್ತಿಗೂ, ಸಿನಿಮಾಕ್ಕೂ ಒಂದ್ರೀತಿ ಅವಿನಾಭಾವ ಸಂಬಂಧ. ಊರಿಗೆ ಬಂದವರು, ನೀರಿಗೆ ಬಾರದಿರುತ್ತಾರಾ ಎನ್ನುವ ಗಾದೆ ಮಾತಿನ ಹಾಗೆ ಮಾಡೆಲಿಂಗ್ ಜಗತ್ತಿನಲ್ಲಿ ಹೆಜ್ಜೆ ಹಾಕಿದವರೆಲ್ಲ ಬಣ್ಣದ ಜಗತ್ತಿಗೆ ಬಂದ ಉದಾಹರಣೆಗಳು ಸಾಕಷ್ಟಿವೆ‌. ಆ ಸಾಲಿಗೀಗ ಹೊಸ ಸೇರ್ಪಡೆ ಮೋಹಕ‌ ತಾರೆ ಜೊಸಿಟ ಅನೂಲ.

ಮಾಡೆಲಿಂಗ್ ಬೆಡಗಿ

ಈಕೆ‌ ಕುಡ್ಲ ಕುವರಿ.‌ ಅಂದ್ರೆ ಕರಾವಳಿ ಸುಂದರಿ.  ಮಂಗಳೂರಿನಲ್ಲಿ ಹುಟ್ಟಿ, ಬೆಳೆದ ಈ ಚೆಲುವೆ ,ಇಷ್ಟು ದಿನ ಮಾಡೆಲಿಂಗ್ ಜಗತ್ತಿನಲ್ಲಿ ಮೈ ಮಾಟ ಪ್ರದರ್ಶಿಸಿದ ಮದನಾರಿ‌. 2017 ರಲ್ಲಿ ಮಿಸ್ ವರ್ಲ್ಡ್‌ ಸೂಪರ್ ಮಾಡೆಲ್ ಸೌತ್ ಏಷಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2018 ರಲ್ಲಿ ಮಿಸ್ ಗ್ಲೋರಿ ಗ್ಯಾಲಾಕ್ಸಿ ಗೆದಿದ್ದಾರಂತೆ. ಹಾಗೆಯೇ 2019ರಲ್ಲಿ ಮಿಸ್ ಟ್ಯೂರಿಸಂ ವರ್ಲ್ಡ್ ಬ್ರಾಂಡ್ ಅಂಬಾಸಿಡರ್ ಆಗಿಯೂ ಮಾಡೆಲಿಂಗ್ ನಲ್ಲಿ ಹೆಸರು ಮಾಡಿದ್ದಾರಂತೆ. ಅದರ ಪ್ರಭಾವದಿಂದಲೇ ಈಗ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗಿದ್ದಾರೆ. ಅಲ್ವಿನ್ ಫ್ರಾನ್ಸಿಸ್ ನಿರ್ದೇಶನದ ‘ಬಾಬಿ’ ಹೆಸರಿನ ಚಿತ್ರವೊಂದಕ್ಕೆ ನಾಯಕಿ ಆಗುವ ಮೂಲಕ ಅವರ ಸಿನಿ ಜರ್ನಿಗೆ ಚಾಲನೆ ಸಿಕ್ಕಿದೆ‌.

ಹಾಟ್‌ ಹಾಟ್ ಹುಡುಗಿ !

ಮಾಡೆಲಿಂಗ್ ನಿಂದಲೇ ಬರಲಿ, ಸೀದಾ ಕಾಲೇಜಿನಿಂದಲೇ ಬರಲಿ, ನಟಿಯರಿಗೆ ಫೋಟೋಶೂಟ್ ಎನ್ನುವುದು ಬಣ್ಣದ ಲೋಕದ ಮೊದಲ ಆಹ್ವಾನ. ಯಾಕಂದ್ರೆ ಆಡಿಷನ್ ಗಳಿಗೆ ಹೋಗಬೇಕಾದ್ರೆ ಹಾಗೊಂದು ಪ್ರೊಪೈಲ್ ಇರಲೇಬೇಕು. ಅದಕ್ಕಾಗಿಯೇ ಜೊಸಿಟ ಅನೂಲ್ ಮಾಡಿಸಿದ ಪೋಟೋಶೂಟ್ ಭರ್ಜರಿಯಾಗಿದೆ.

ಬಾಲಿವುಡ್ ನಟಿಯರಿಗೇನು ತಾನೇನು ಕಮ್ಮಿ ಎನ್ನುವಂತೆ ಕ್ಯಾಮರಾ ಕಣ್ಣಿಗೆ ತಮ್ಮ‌ಮಾದಕ ಮೈ ಮಾಟ ಪ್ರದರ್ಶಿಸಿದ್ದಾರೆ ಅನೂಲ. ಕರಾವಳಿಯ ಈ ಚೆಲುವೆ ಎಂಟ್ರಿಯಲ್ಲೆ ಅಷ್ಟೇಲ್ಲ ಬೋಲ್ಡ್ ಆ್ಯಂಡ್ ಹಾಟ್ ಲುಕ್ ನೀಡಿರುವುದಕ್ಕೆ ಮಾಡೆಲಿಂಗ್ ಜಗತ್ತೇ ದೊಡ್ಡ ವೇದಿಕೆ . ಅದೇ ಅವರನ್ನು ಸಿನಿಮಾ‌ಎಂಬ ಗ್ಲಾಮರ್ ಜಗತ್ತಿಗೂ ಕರೆ ತಂದಿದೆ ಎನ್ನುವುದು ಅಷ್ಟೇ ಸತ್ಯ.

ಸಿನಿಮಾ‌ ನನ್ನ ಬಾಲ್ಯದ ಕನಸು

ಸಿನಿಮಾ ನನ್ನ ಬಾಲ್ಯದ ಕನಸು. ಅದೀಗ ನನಸಾಗಿದೆ. ಅದಕ್ಕೆ ಸೇತುವೆಯಾಗಿದ್ದು ಮಾಡೆಲಿಂಗ್. ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಶುರು‌ಮಾಡಿದ್ದೆ. ಆ ಮೂಲಕ ಹಲವು ಕಡೆಗಳಲ್ಲಿನ ರ್ಯಾಂಪ್ ಶೋಗಳಲ್ಲಿ ಭಾಗವಹಿಸಿದೆ‌. ಸ್ಪರ್ಧೆಗಳಲ್ಲೂ ಗೆದ್ದೆ. ಅದು ನನ್ನೊಳಗಿನ ಸಿನಿಮಾ‌ದ ಮೇಲಿನ ಆಸಕ್ತಿಯನ್ನು ದುಪ್ಪಟ್ಟು ಮಾಡಿತು. ಅವಕಾಶ ಸಿಕ್ಕರೆ ನಟಿಸೋಣ ಅಂತೆಲ್ಲ ಯೋಚಿಸುತ್ತಿದ್ದಾಗ ಕೊಂಕಣಿ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂತು’ ಎನ್ನುವ ಮಾತುಗಳೊಂದಿಗೆ ಮಾಡೆಲ್ ಜೊಸಿಟ, ನಟಿಯಾಗಿದ್ದರ ಹಿಂದಿನ ಕತೆ ಬಿಚ್ಚಿಡುತ್ತಾರೆ.

ಜನ್ವಾಯ್ ಮೂಲಕ ಶುರುವಾದ ಜರ್ನಿ!

ಕರಾವಳಿಯ ಈ ಚೆಲುವೆಗೆ ಸ್ಯಾಂಡಲ್ ವುಡ್ ಹೊಸದಾದರೂ ಬಣ್ಣದ ಲೋಕ ಹೊಸದಲ್ಲ. ಯಾಕಂದ್ರೆ ಈಗಾಗಲೇ ಜೊಸಿಟ, ಕೊಂಕಣಿಯ ‘ಜನ್ವಾಯ್’ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದರು. ಆದಾದ ಬಳಿಕ ‘ಸೈಕೊ’ ಹೆಸರಿನ ಕನ್ನಡದ ವೆಬ್ ಸೀರಿಸ್ ವೊಂದರಲ್ಲೂ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಚಂದನವನದಲ್ಲಿ ಇದು ಭಾರೀ ಸದ್ದು ಮಾಡಿತ್ತು. ಇದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ಸಿಕ್ಕಿತ್ತು.

   ” ಫೋಟೋಸ್ ನೋಡಿ, ನಾನೇನು ಬರೀ ಗ್ಲಾಮರಸ್ ಹುಡುಗಿ ಅಂತನ್ಕೊಬೇಡಿ. ಸಿನಿಮಾ‌ ನನ್ನ ಪ್ಯಾಷನ್. ಅದ್ಯಾಕೋ ಬಾಲ್ಯದಲ್ಲೇ ಸಿನಿಮಾ ಹುಚ್ಚಿತ್ತು. ನಟಿಯಾಗ್ಬೇಕು ಎನ್ನುವುದಕ್ಕಿಂತ ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ. ಹಾಗಾಗಿಯೇ ಮಾಡೆಲಿಂಗ್ ಫೀಲ್ಡ್ ನಿಂದ ಇಲ್ಲಿಗೆ ಬಂದಿದ್ದೇನೆ.”

ಕಾಲಿವುಡ್ ಗೂ ಕಾಲಿಟ್ಟ ಕನ್ನಡತಿ !

ಗ್ಲಾಮರಸ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ಜೊಸಿಟ ಅನೂಲ, ಬಣ್ಣ ಹಚ್ಚಿದ ಅತೀ ಕಡಿಮೆ ಅವದಿಯಲ್ಲಿ ಕಾಲಿವುಡ್ ಗೂ ಕಾಲಿಟ್ಟಿದ್ದಾರೆ‌ . ಸೈಕೋ ವೆಬ್ ಸಿರೀಸ್ ಮೂಲಕ ಸಿಕ್ಕ ಒಂದಷ್ಟು ಸಂಪರ್ಕಗಳೇ, ಕನ್ನಡದ ಗಡಿ ದಾಟಲು ಸೇತುವೆ ಆಗಿವೆ. ಅಲ್ಲಿ ‘ ಕಾದಲ್ ನಿವುಲೆ ‘ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದು, ಅದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಅಲ್ವಿನ್ ಪ್ರಾನ್ಸಿಸ್ ನಿರ್ದೇಶನದ ‘ಬಾಬಿ’ ಹೆಸರಿನ ಚಿತ್ರದ ಮೂಲಕ ಕನ್ನಡಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ‌. ಇಷ್ಟಕ್ಕೂ ಕುತೂಹಲ ಇರುವುದು ಇವರ ಪಾತ್ರಗಳ ಆಯ್ಕೆಯ ಬಗ್ಗೆ.

ನಟನೆಗೆ ಹೆಚ್ಚು ಅವಕಾಶ ಇರಬೇಕು !

ಫೋಟೋಸ್ ನೋಡಿ, ನಾನೇನು ಬರೀ ಗ್ಲಾಮರಸ್ ಹುಡುಗಿ ಅಂತನ್ಕೊಬೇಡಿ. ಸಿನಿಮಾ‌ ನನ್ನ ಪ್ಯಾಷನ್. ಅದ್ಯಾಕೋ ಬಾಲ್ಯದಲ್ಲೇ ಸಿನಿಮಾ ಹುಚ್ಚಿತ್ತು. ನಟಿಯಾಗ್ಬೇಕು ಎನ್ನುವುದಕ್ಕಿಂತ ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ. ಹಾಗಾಗಿಯೇ ಮಾಡೆಲಿಂಗ್ ಫೀಲ್ಡ್ ನಿಂದ ಇಲ್ಲಿಗೆ ಬಂದಿದ್ದೇನೆ. ಮೊದಲ ಸಿನಿಮಾದಲ್ಲೇ ಅಂತ ಅವಕಾಶ ಸಿಕ್ಕಿತ್ತು.‌ ತಮಿಳಿನಲ್ಲೂ ಆ ಪಾತ್ರ ಸಿಕ್ಕಿದೆ‌. ಮುಂದೆಯೂ ಒಳ್ಳೆಯ ಪಾತ್ರಗಳು, ಅಷ್ಟೇ ಒಳ್ಳೆಯ ಕತೆಗಳ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಜೊಸಿಟ ಎಂಬ ಗ್ಲಾಮರಸ್ ನಟಿ. ಆಲ್ ದಿ ಬೆಸ್ಟ್ ಜೊಸಿಟ ಅನೂಲ.

Categories
ಸಿನಿ ಸುದ್ದಿ

ಅಭಿಮಾನಿಯನ್ನು ‘ಪದವಿಪೂರ್ವ’ ಕ್ಕೆ ಸೇರಿಸಿದ ಜಗ್ಗೇಶ್

ಯೋಗರಾಜ್ ಭಟ್ಟರ’ ಪದವಿ ಪೂರ್ವ’ ಕ್ಕೆ ಭರ್ಜರಿ ಹೊಸ ಮುಖಗಳು ಸೇರ್ಪಡೆ ಆಗುತ್ತಿವೆ. ಮೊನ್ನೆಯಷ್ಟೆ ಆಳ್ವಾಸ ಕಾಲೇಜು ವಿದ್ಯಾರ್ಥಿನಿ‌, ಮಾಡೆಲಿಂಗ್ ಬೆಡಗಿ ಬೆಂಗಳೂರು ಮೂಲದ ಯಶಾ ಶಿವಕುಮಾರ್ ಸೇರ್ಪಡೆಯಾದ ಬೆನ್ನಲೇ ಮತ್ತೊರ್ವ ಯುವ ಪ್ರತಿಭೆ ಬುಧವಾರ ಪದವಿ ಪೂರ್ವ ಕ್ಕೆ ಜಾಯಿನ್ ಆಗಿದ್ದಾರೆ‌. ಆತನ ಹೆಸರು ವಿಜೇಶ್ ಅಲಿಯಾಸ್ ವೆಂಕಟೇಶ್ ಗಂಗಾಧರಪ್ಪ.

ವಿಜೇಶ್

ಹಾಸನದ ಅರಕಲುಗೂಡಿನ ಯುವ ಪ್ರತಿಭೆ. ನವರಸನಾಯಕ ಜಗ್ಗೇಶ್ ಅಭಿನಯದ ಚಿತ್ರಗಳ ತುಣುಕುಗಳಿಗೆ ತನ್ನ ವಿಚಿತ್ರ ಮ್ಯಾನರಿಸಂ ಮೂಲಕ ಹೊಸ ಟಚ್ ನೀಡಿ ಜನರನ್ನು ನಕ್ಕು ನಗಿಸುತ್ತಿದ್ದ ಹುಡುಗನಿಗೆ ‘ಪದವಿಪೂರ್ವ’ ಚಿತ್ರ ಅದೃಷ್ಟ ಹೊತ್ತು ತಂದಿದೆ. ಸ್ವತಃ ಜಗ್ಗೇಶ್ ಅವರೇ ಈತನ ಅಭಿನಯ ಶೈಲಿಯನ್ನು ಮೆಚ್ಚಿ ‘ಪದವಿಪೂರ್ವ’ ಚಿತ್ರತಂಡಕ್ಕೆ ಪರಿಚಯಿಸುವ ಮೂಲಕ ಹೊಸ ಕಲಾವಿದನಿಗೆ ಆಸರೆಯಾಗಿದ್ದಾರಂತೆ.

ಚಿತ್ರದ ನಾಯಕನಾಗಿ “ಪೃಥ್ವಿ ಶಾಮನೂರ್” ಅಭಿನಯಿಸುತ್ತಿದ್ದು, ನಾಯಕಿಯರಾಗಿ “ಅಂಜಲಿ ಅನೀಶ್” ಹಾಗು “ಯಶ ಶಿವಕುಮಾರ್” ಈಗಾಗಾಲೇ ಆಯ್ಕೆಯಾಗಿದ್ದಾರೆ. ಅರ್ಜುನ್ ಜನ್ಯ, ಸಂತೋಷ್ ರೈ ಪಾತಾಜೆರಂತ ಅತ್ಯುತ್ತಮ ತಂತ್ರಜ್ಞರನ್ನೂಳಗೊಂಡ ‘ಪದವಿಪೂರ್ವ’ ತಂಡಕ್ಕೆ, ‘ಪಂಚತಂತ್ರ ‘ ಚಿತ್ರದ ರೇಸ್ ದೃಶ್ಯಗಳನ್ನು ಅಚ್ಚು’ಕಟ್’ ಆಗಿ ತೆರೆಯ ಮೇಲೆ ಮೂಡುವಂತೆ ಮಾಡಿದ್ದ ಸಂಕಲನಕಾರ “ಮಧು ತುಂಬಕೆರೆ” ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರದ ಪೂರ್ವತಯಾರಿ ಕಾರ್ಯಭರದಿಂದ ಸಾಗಿದ್ದು, ಪ್ರಮುಖ ಪಾತ್ರಧಾರಿಗಳಿಗೆ “ಆಕ್ಟಿಂಗ್ ವರ್ಕ್‌ಶಾಪ್” ನಡೆಸಲಾಗುತ್ತಿದೆ. ಶಿವಮೊಗ್ಗ, ಮಂಗಳೂರು ಹಾಗು ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಆಲೋಚಿಸುತ್ತಿದ್ದು, ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರು ಮಾಡಲು ಚಿತ್ರ ಸಿದ್ಧತೆ ನಡೆಸಿದೆ.

error: Content is protected !!