Categories
ಸಿನಿ ಸುದ್ದಿ

‘ಬಾಂಬೆ ಬೇಗಮ್ಸ್‌’ ವೆಬ್‌ ಸರಣಿಯಲ್ಲಿ ಕನ್ನಡತಿ ಆದ್ಯಾ ಆನಂದ್!

ಅಲಂಕೃತ ಶ್ರೀವಾತ್ಸವ್ ನಿರ್ಮಾಣ, ನಿರ್ದೇಶನದ ‘ಬಾಂಬೆ ಬೇಗಮ್ಸ್‌’ ನೆಟ್‌ಫ್ಲಿಕ್ಸ್‌ ಸರಣಿಯಲ್ಲಿ ಕಾರವಾರ ಮೂಲದ ಕನ್ನಡತಿ ಆದ್ಯಾ ಆನಂದ್ ನಟಿಸಿದ್ದಾರೆ. ಮೊನ್ನೆ ಸರಣಿಯ ಟ್ರೈಲರ್ ಬಿಡುಗಡೆಯಾಗಿದ್ದು, ಮಾರ್ಚ್‌ 8ರ ಮಹಿಳಾ ದಿನದಂದು ಸರಣಿ ಪ್ರೀಮಿಯರ್ ಆಗಲಿದೆ. ಆಧುನಿಕ ಮುಂಬಯಿಯ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಐವರು ಮಹಿಳೆಯರ ಸುತ್ತ ಹೆಣೆದ ಕತೆ ‘ಬಾಂಬೆ ಬೇಗಮ್ಸ್‌’. ಪೂಜಾ ಭಟ್‌, ಶಹಾನಾ ಗೋಸ್ವಾಮಿ, ಅಮೃತಾ ಸುಭಾ‍ಷ್‌, ಪ್ಲಬಿತಾ ಠಾಕೂರ್‌ ಮತ್ತು ಆದ್ಯಾ ಆನಂದ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿಂಗಾಪೂರದಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಆನಂದ್ ನಾಯಕ್‌ ಮತ್ತು ಪ್ರಿಯಾ ದಂಪತಿ ಪುತ್ರಿ ಆದ್ಯಾ ಆನಂದ್‌. ಮಡಿಕೇರಿಯಲ್ಲಿ ಜನಿಸಿದ ಆದ್ಯಾ ಬೆಳೆದದ್ದು ಸಿಂಗಾಪೂರದಲ್ಲಿ. ಏಳನೇ ವಯಸ್ಸಿಗೆ ಆಕ್ಟಿಂಗ್, ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಆದ್ಯಾ ಸಿಂಗಾಪೂರದಲ್ಲಿ ರಂಗಭೂಮಿ ತರಬೇತಿ ಪಡೆದರು. ಬಾಲಿವುಡ್‌ನ ಅನುಪಮ್ ಖೇರ್‌ ಮತ್ತು ಅತುಲ್ ಮೊಂಗಿಯಾ ಇನ್‌ಸ್ಟಿಟ್ಯೂಟ್‌ಗಳಲ್ಲಿಯೂ ತರಬೇತಿ ಪಡೆದಿದ್ದಾರೆ. ‘ಎ ಯಲ್ಲೋ ಬರ್ಡ್’ ಸಿನಿಮಾ, ‘ಒನ್ ಹವರ್ ಟು ಡೇಲೈಟ್‌’ ಮತ್ತು ‘ಸ್ಕೈ ಸಿಟಿ’ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ್ದ ‘ಎ ಯಲ್ಲೋ ಬರ್ಡ್‌’ ಸಿನಿಮಾ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಸೋನಿ ಟೀವಿಯ ಸೂಪರ್ ಡ್ಯಾನ್ಸ್‌ ಸಿಂಗಾಪೂರ್‌ನ ವಿಜೇತೆ ಆದ್ಯಾ. ಸಿಂಗಾಪೂರ್‌ನ ಜನಪ್ರಿಯ ‘ವ್ಹೂಪೀಸ್‌ ವರ್ಲ್ಡ್‌’ ಸರಣಿಯ ನಾಲ್ಕು ಸೀಸನ್‌ಗಳು, ‘ಲಯನ್ ಮಮ್ಸ್‌’ನ 2 ಮತ್ತು 3ನೇ ಸರಣಿ, ‘ವರ್ಲ್ಡ್‌ ವಿಜ್‌ ಸ್ಲೈಮ್‌ ಪಿಟ್‌’, ‘ಮೆನಂತು ಇಂಟರ್‌ನ್ಯಾಷನಲ್‌’ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಝೀ ಟೀವಿಯಲ್ಲಿ ಆದ್ಯಾ ನಿರೂಪಿಸಿದ್ದ ‘ಬ್ರೈನ್ ಬೂಸ್ಟರ್ಸ್‌’ ಕಾರ್ಯಕ್ರಮ ಹದಿನೆಂಟು ದೇಶಗಳಲ್ಲಿ ಎರಡು ಸೀಸನ್‌ಗಳಲ್ಲಿ ಪ್ರಸಾರ ಕಂಡಿದೆ.‘ಬಾಂಬೆ ಬೇಗಮ್ಸ್‌’ ವೆಬ್‌ ಸರಣಿ ಆಡಿಷನ್‌ನಲ್ಲಿ 500ಕ್ಕೂ ಹೆಚ್ಚು ಯುವತಿಯರು ಭಾಗವಹಿಸಿದ್ದರು. ಕೊನೆಗೆ ‘ಶಾಯ್ ಇರಾನಿ’ ಪಾತ್ರಕ್ಕೆ ಆದ್ಯಾ ಆಯ್ಕೆಯಾಗಿದ್ದಾರೆ. ಮಾತೃಭಾಷೆ ಕನ್ನಡದ ಜೊತೆ ಹಿಂದಿ ಮತ್ತು ಇಂಗ್ಲಿಷನ್ನು ಸೊಗಸಾಗಿ ಮಾತನಾಡುವ ಆದ್ಯಾ ಮುಂದಿನ ದಿನಗಳಲ್ಲಿ ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸುವ ಇರಾದೆ ಹೊಂದಿದ್ದಾರೆ.

Categories
ಸಿನಿ ಸುದ್ದಿ

ಅನಿರುದ್ದ್ ಜೊತೆಜೊತೆಗೆ ” ನಿನ್ನಿಂದಲೇʼ ಖ್ಯಾತಿಯ ನಟಿ !

ಸಿನಿಮಾ ಮತ್ತು ಕಿರುತೆರೆ ನಟಿ ಎರಿಕಾ ಫರ್ನಾಂಡಿಸ್‌ ಕನ್ನಡ ಕಿರುತೆರೆಗೆ ಬರುತ್ತಿದ್ದಾರೆ. ಕನ್ನಡದ ಜನಪ್ರಿಯ ‘ಜೊತೆಜೊತೆಯಲಿ’ ಸರಣಿಯ ‘ರಾಜನಂದಿನಿ’ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಎರಿಕಾ ಇದೀಗ ಅನಿರುದ್ಧ ಜೋಡಿಯಾಗಿ ಕನ್ನಡ ಧಾರಾವಾಹಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಪಾತ್ರ ಧಾರಾವಾಹಿಗೆ ಒಂದು ವಿಶಿಷ್ಟ ತಿರುವು ನೀಡಲಿದ್ದು, ಇದು ನಟಿಗೆ ಮಹತ್ವದ ಪಾತ್ರವಾಗಲಿದೆ. ‘ಕಸೌತಿ ಜಿಂದಗೀ ಕೆ’ ಹಿಂದಿ ಸರಣಿಯಲ್ಲಿ ಜನಪ್ರಿಯತೆ ಗಳಿಸಿರುವ ಎರಿಕಾ ಕನ್ನಡ ಕಿರುತೆರೆಯಲ್ಲೂ ಸದ್ದು ಮಾಡಲು ಸಜ್ಜಾಗಿದ್ದಾರೆ.

ಮುಂಬಯಿ ಮೂಲದ ಎರಿಕಾ 2013ರಲ್ಲಿ ಪುನೀತ್‌ ರಾಜಕುಮಾರ್ ಅಭಿನಯದ ‘ನಿನ್ನಿಂದಲೇ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಬಂದಿದ್ದರು. ಅದಾಗಿ ಎರಡು ವರ್ಷಗಳ ನಂತರ ಅವರು ನಟಿಸಿದ್ದ ಕನ್ನಡ ಸಿನಿಮಾ ‘ಬುಗುರಿ’. ಅಲ್ಲಿ ಅವರಿಗೆ ಗಣೇಶ್ ಹೀರೋ. ಒಂದೊಂದು ತಮಿಳು, ತೆಲುಗು, ಹಿಂದಿ ಚಿತ್ರದಲ್ಲಿ ನಟಿಸಿದ ಅವರು ಹಿಂದಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ನಾಯಕನಟ ಆರ್ಯವರ್ಧನ್‌ ಅವರ ಮೊದಲ ಪತ್ನಿ ‘ರಾಜನಂದಿನಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಅನಿರುದ್ಧ ಮತ್ತು ಎರಿಕಾ ಅವರ ಫೋಟೋಶೂಟ್ ನಡೆದ ಬಗ್ಗೆ ಸುಳಿವು ಸಿಕ್ಕಿದೆ. ಮುಂದಿನ ಕೆಲವು ದಿನಗಳಲ್ಲಿ ನಟಿಯ ಸೀರಿಯಲ್ ಪ್ರವೇಶದ ಬಗ್ಗೆ ಅಧಿಕೃತಿ ಮಾಹಿತಿ ಹೊರಬೀಳಬಹುದು.

Categories
ಸಿನಿ ಸುದ್ದಿ

‘ಕೆಜಿಎಫ್-2’ಗೆ ಕಾಯುತ್ತಿರುವ ವಿಲ್ಲಿ ಮ್ಯಾಕ್‌!

ಪ್ರಶಾಂತ್ ನೀಲ್‌ ಮತ್ತು ಯಶ್ ಜೋಡಿಯ ‘ಕೆಜಿಎಫ್‌’ ಸಿನಿಮಾ ಜಗತ್ತಿನ ಗಮನ ಸೆಳೆದದ್ದು ಸರಿಯಷ್ಟೆ. ಸ್ಟೈಲಿಶ್ ಮೇಕಿಂಗ್‌ನಿಂದಾಗಿ ಸಿನಿಮಾ ಸಾಗರದಾಚೆಗೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿತು. ಇದೀಗ ‘ಕೆಜಿಎಫ್‌-2’ ನಿರೀಕ್ಷೆ ಹೆಚ್ಚಿಸಿದೆ. ಅಮೇರಿಕಾದ ವ್ರೆಸ್ಲರ್‌ ವಿಲ್ಲಿ ಮ್ಯಾಕ್‌ ಮೊನ್ನೆ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಕೆಜಿಎಫ್‌ – 2 ಟ್ರೈಲರ್ ಹಂಚಿಕೊಂಡು, “ಇದೊಂದು ಅದ್ಭುತ ಟ್ರೈಲರ್‌. ನಾನು ಚಿತ್ರಕ್ಕಾಗಿ ದೊಡ್ಡ ನಿರೀಕ್ಷೆಯೊಂದಿಗೆ ಕಾಯುತ್ತಿದ್ದೇನೆ” ಎಂದು ಬರೆದಿದ್ದಾರೆ. ಕೆಜಿಎಫ್ ಸರಣಿಯ ಮೊದಲ ಸಿನಿಮಾವನ್ನು ಅವರು ತುಂಬಾ ಇಷ್ಟಪಟ್ಟಿದ್ದರಂತೆ. ಇದೀಗ ಸರಣಿ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಅವರ ಈ ಟ್ವೀಟ್‌ ಕನ್ನಡ ಸಿನಿಮಾ ತಂತ್ರಜ್ಞರು ಸೃಷ್ಟಿಸಿದ ಸಂಚಲನಕ್ಕೆ ಸಾಕ್ಷ್ಯ ನುಡಿಯುತ್ತಿದೆ.

ಕನ್ನಡದ ನಟನೊಬ್ಬ ದೂರದ ಅಮೇರಿಕಾದ ಸೆಲೆಬ್ರಿಟಿ ಅಭಿಮಾನಿಯಿಂದ ಪ್ರಶಂಸೆಗೆ ಒಳಗಾಗಿರುವುದು ಯಶ್ ಅಭಿಮಾನಿಗಳಿಗೆ ಖುಷಿ ತಂದಿದೆ. ಅಭಿಮಾನಿಗಳು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ವಿಲ್ಲಿ ಮ್ಯಾಕ್ ಟ್ವೀಟನ್ನು ಹಂಚಿಕೊಂಡಿದ್ದಾರೆ. ಇದೀಗ ಕೆಜಿಎಫ್‌  2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಿರುಸಿನಿಂದ ಸಾಗಿದ್ದು, ಜುಲೈ 16ರಂದು ಹಲವು ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ. ಸರಣಿ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್‌ ಅವರು ‘ಅಧೀರ’ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ರವೀನಾ ಟಂಡನ್‌ ಅವರಿಗೆ ಪ್ರಧಾನಿ ‘ರಮಿಕಾ ಸೇನ್‌’ ಪಾತ್ರವಿದೆ.

Categories
ಸಿನಿ ಸುದ್ದಿ

ಡಾ, ರಾಜ್‌ ಪ್ರತಿಮೆ ವಿವಾದ : ಕೊನೆಗೂ ಕ್ಷಮೆ ಕೇಳಿದ ಶಾಸಕ ಮಹಾಶಯ !

ವರನಟ ಡಾ. ರಾಜ್‌ ಕುಮಾರ್‌ ಪ್ರತಿಮೆ ಸ್ಥಾಪನೆ ವಿವಾದದಲ್ಲಿ ಬೆಂಗಳೂರಿನ ಶಾಂತಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.‌ ಎ. ಹ್ಯಾರಿಸ್‌ ಕೊನೆಗೂ ಕ್ಷಮೆ ಕೋರಿದ್ದಾರೆ.

” ನಾನು ಅಣ್ಣಾವ್ರ ಪಕ್ಕಾ ಅಭಿಮಾನಿ. ಅವರ ಬಗ್ಗೆ ಅಪಾರ ಗೌರವವಿದೆ. ಅನೇಕ ಸಲ ಅವರನ್ನು ನೇರವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ಅವರ ಬಗ್ಗೆ ನಾನೆಂದಿಗೂ ಅಗೌರವ ತೋರಿಲ್ಲ. ಯಾರು ಹೇಗೆ ಅರ್ಥೈಸಿದ್ದಾರೋ ನಂಗೆ ಗೊತ್ತಿಲ್ಲ. ವಾಸ್ತವದಲ್ಲಿ ಶಾಂತಿನಗರದಲ್ಲಿ ರಾಜ್‌ ಕುಮಾರ್‌ ಪ್ರತಿಮೆ ಬರೋದಿಕ್ಕೆ ನಾನು ಕೂಡ ಕಾರಣ. ಆದರೆ ಯಾರು ಈ ರೀತಿ ಅಪ ಪ್ರಚಾರ ಮಾಡಿದ್ದರೋ ಅರ್ಥ ಆಗುತ್ತಿಲ್ಲ. ಈ ರೀತಿ ಯಾವುದೇ ಮಾತು ನಾನು ಆಡಿಲ್ಲʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಶಾಸಕ ಹ್ಯಾರಿಸ್‌ ವಿರುದ್ಧ ಸೋಷಲ್‌ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಯಾವುದೋ ಭಾಷಿಗನನ್ನು ಇಲ್ಲಿ ಬಿಟ್ಟುಕೊಂಡಿದ್ದರಿಂದಲೇ ಇವತ್ತು ಕನ್ನಡ ಮತ್ತು ಕನ್ನಡದ ಸಾಧಕರಿಗೆ ಅವಮಾನ ಆಗುತ್ತಿದೆ ಎಂದು ಕನ್ನಡ ಸಂಘಟನೆಗಳ ಕಾರ್ಯಕರ್ತರು ಹ್ಯಾರಿಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾಗುತ್ತಿದ್ದರೆ ಎಚ್ಚೆತ್ತುಕೊಂಡ ಶಾಸಕ ಎನ್.ಎ. ಹ್ಯಾರಿಸ್‌  ತಾವು ಹಾಗೆ ಹೇಳಿಲ್ಲ ಎಂದು ವಿಡಿಯೋ ಮಾಡಿ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ವಾಸ್ತವ ಏನು? ಹ್ಯಾರಿಸ್‌ ಹಾಗೆ ಹೇಳಿಲ್ಲವೇ?

ವಿವಾದ ಅಗಿದ್ದು ಹೀಗೆ..

ಶಾಂತಿನಗರ ವಿಧಾನ ಸಭಾ ಕ್ಷೇತ್ರದಲ್ಲಿನ ಶಾಂತಿ ಸಾಗರ್‌ ಹೊಟೇಲ್‌ ಬಳಿ   ಡಾ. ರಾಜ್‌ ಕುಮಾರ್‌ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಕನ್ನಡ ಸಂಘಟನೆಗಳು ಕೋರಿದ್ದವು ಎನ್ನಲಾಗಿದೆ.  ಜತೆಗೆ ಡಾ. ರಾಜ್‌ ಕುಮಾರ್‌ ಹೆಸರಲ್ಲಿ ಒಂದು ಬೋರ್ಡ್‌ ಹಾಕಿಸಲು ಕೂಡ ಅನುಮತಿ ಕೇಳಿದ್ದರು.  ಇತ್ತೀಚೆಗೆ ಅದರ ಪರಿಶೀಲನೆಗೆ ಹೋಗಿದ್ದ ಶಾಸಕ ಹ್ಯಾರಿಸ್‌, ಪ್ರತಿಮೆಗಳೆಲ್ಲ ರಸ್ತೆಗಳಿಗೆ ಬೇಕಾ? ಬೇಕಾದ್ರೆ ಮನೆಯಲ್ಲೇ ಹಾಕಿಸಿಕೊಳ್ಳಿ. ಇವರಿಗೆ ಬುದ್ದಿ ಇಲ್ಲ. ಹೇಳಿದ್ರೆ ಇನ್ನೇನೋ ಮಾಡ್ತಾರೆ ಎಂದಿದ್ದಾರೆ. ಅವರು ಮಾತನಾಡಿರುವ  ಆಡಿಯೋ , ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕನ್ನಡ ಸಂಘಟನೆಗಳ ಕಾರ್ಯಕರ್ತರೇ ಅದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಈ ವಿಚಾರ ಸೋಷಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಭಾರೀ ವಿವಾದವೇ ಸೃಷ್ಟಿಯಾಯಿತು. ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಹ್ಯಾರಿಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.ಇದು ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಎನ್.‌ ಎ. ಹ್ಯಾರಿಸ್‌ ತಾವು ಹಾಗೆ ಮಾತನಾಡಿಲ್ಲ. ರಾಜ್‌ ಕುಮಾರ್‌ ಅವರ ಬಗ್ಗೆ ಗೌರವವಿದೆ ಅಂತ ವಿವಾದದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ.

Categories
ಸೌತ್‌ ಸೆನ್ಸೇಷನ್

ಓಟಿಟಿಯಲ್ಲಿ ದೃಶ್ಯಂ-2 – ಫೆ.19ರಿಂದ ಮೋಹನ್‌ ಲಾಲ್‌ ಚಿತ್ರ ನೋಡಬಹುದು

ಮೋಹನ್ ಲಾಲ್ ಮತ್ತು ಮೀನಾ ನಟನೆಯ ‘ದ್ಯಶ್ಯಂ’ (2013) ಮಲಯಾಳಂ ಸಿನಿಮಾ ಥ್ರಿಲ್ಲರ್ ಮಾದರಿಗೆ ಹೊಸ ಭಾಷ್ಯ ಬರೆದ ಪ್ರಯೋಗ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ, ಸಿನ್ಹಳ ಭಾಷೆಗಳಲ್ಲಷ್ಟೇ ಅಲ್ಲದೆ ಚೀನಾ ಭಾಷೆಗೂ ರೀಮೇಕ್ ಆಗಿತ್ತು. ಇದೀಗ ‘ದೃಶ್ಯಂ’ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ಸರಣಿ ಸಿನಿಮಾ ‘ದೃಶ್ಯಂ-2’ ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಈ ಸಿನಿಮಾ ನಾಡಿದ್ದು 19ರಂದು ನೇರವಾಗಿ ಓಟಿಟಿಯಲ್ಲಿ (ಅಮೇಜಾನ್ ಪ್ರೈಂ ವೀಡಿಯೋ) ಪ್ರೀಮಿಯರ್ ಆಗಲಿದೆ.

ಸ್ಟಾರ್ ಹೀರೋ ಮೋಹನ್‌ಲಾಲ್‌ ನಟನೆಯ ಚಿತ್ರವೊಂದು ಓಟಿಟಿಯಲ್ಲಿ ತೆರೆಕಾಣುತ್ತಿದ್ದು, ಇದು ಹೊಸ ಬೆಳವಣಿಗೆಗಳಿಗೆ ನಾಂದಿಯಾಗಲಿದೆ ಎನ್ನುವುದು ಉದ್ಯಮದವರ ಅಂಬೋಣ.
ಇನ್ನು ‘ದೃಶ್ಯಂ-2’ ಚಿತ್ರದ ಬಗ್ಗೆ ಅವರು ಮಾತನಾಡುತ್ತಾ, “ಥ್ರಿಲ್ಲರ್ ಸಿನಿಮಾದೆಡೆ ಪ್ರೇಕ್ಷಕರ ಕಲ್ಪನೆಯನ್ನೇ ಬದಲಿಸಿದ ಸಿನಿಮಾ ದೃಶ್ಯಂ. ಇಲ್ಲಿ ಪ್ರೀತಿ ಮತ್ತು ಬಲವಾದ ಕೌಟುಂಬಿಕ ಬೆಸುಗಿ ಇದೆ. ಇದೇ ಕಾರಣಕ್ಕೇ ಜನರು ಈ ಚಿತ್ರವನ್ನು ಪ್ರೀತಿಯಿಂದ ಒಪ್ಪಿಕೊಂಡರು” ಎನ್ನುತ್ತಾರೆ ಚಿತ್ರದಲ್ಲಿ ಜಾರ್ಜ್‌ ಕುಟ್ಟಿ ಪಾತ್ರದಲ್ಲಿ ನಟಿಸಿರುವ ಮೋಹನ್‌ ಲಾಲ್‌.
ನಾಲ್ಕು ದಶಕಗಳ ಸಿನಿಮಾ ಬದುಕಿನಲ್ಲಿ ಮೋಹನ್‌ಲಾಲ್‌ 340ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

‘ದೃಶ್ಯಂ-2’ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಅವರು ಸಿನಿಮಾಗಳಲ್ಲಿ ತಮಗೆ ದೊರೆತ ವೈವಿಧ್ಯಮಯ ಪಾತ್ರಗಳನ್ನು ನೆನಪು ಮಾಡಿಕೊಂಡು ಅಚ್ಚರಿ ಪಡುತ್ತಾರೆ. “ನಾನು ನನ್ನ ಚಿತ್ರದ ನಿರ್ದೇಶಕರು, ಚಿತ್ರಕಥೆಗಾರರು, ಸಹಕಲಾವಿದರು ಹಾಗೂ ಅಭಿಮಾನಿಗಳ ಬಗ್ಗೆ ನಂಬಿಕೆ ಇಡುತ್ತೇನೆ. ನಾನು ಆಯ್ಕೆ ಮಾಡಿಕೊಳ್ಳುವ ಚಿತ್ರಕಥೆಗಳು ಹಾಗೂ ನಿರ್ದೇಶಕರೇ ಬಹುಶಃ ನನ್ನ ಇಲ್ಲಿಯವರೆಗಿನ ಯಶಸ್ಸಿಗೆ ಕಾರಣವಿರಬಹುದು” ಎನ್ನುತ್ತಾರೆ ಮೋಹನ್‌ಲಾಲ್‌.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಗೃಹ ಪ್ರವೇಶ- ಫೆಬ್ರವರಿ 28ಕ್ಕೆ ಮುಹೂರ್ತ ಇಟ್ಟ ಕಿಚ್ಚ ಸ್ವಾಮಿ!

ಈಗ ಎಲ್ಲರಿಗೂ ಆ ಮನೆಯದ್ದೇ ಚಿಂತೆ!
ಅರೇ ಹೀಗೆಂದಾಕ್ಷಣ, ಒಂದಷ್ಟು ಪ್ರಶ್ನೆಗಳು ಮೂಡಿಬರೋದು ಸಹಜ. ಇಲ್ಲೀಗ ಹೇಳಹೊರಟಿರುವುದು ಬಿಗ್‌ಬಾಸ್‌ ಮನೆ ಕುರಿತು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ “ಬಿಗ್ ಬಾಸ್ ಸೀಸನ್ 8” ಕ್ಕೆ ಕ್ಷಣಗಣನೆ ಶುರುವಾಗಿದೆ. ನಟ ಸುದೀಪ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಹಿಂದೆ ನಡೆಸಿಕೊಟ್ಟಿರುವ ಅಷ್ಟೂ ಸೀಸನ್‌ಗಳೂ ಸಾಕಷ್ಟು ಮೆಚ್ಚುಗೆ ಪಡೆದಿವೆ. ಈಗ ಎಂಟನೇ ಆವೃತ್ತಿಗೆ ಸಜ್ಜಾಗಿದೆ ಬಿಗ್‌ಬಾಸ್‌ ಟೀಮ್.‌ ಫೆಬ್ರವರಿ 28ರ ಸಂಜೆ 6ಕ್ಕೆ “ಬಿಗ್‌ಬಾಸ್‌” ಗ್ರ್ಯಾಂಡ್‌ ಓಪನಿಂಗ್‌ ಪಡೆಯಲಿದೆ. ಸದ್ಯಕ್ಕೆ ಬಿಗ್‌ಬಾಸ್‌ ಮನೆಗೆ ಈ ಬಾರಿ ಯಾರೆಲ್ಲಾ ಹೋಗಲಿದ್ದಾರೆ ಎಂಬುದು ಇನ್ನೂ ಗೌಪ್ಯವಾಗಿದೆ.

ಆ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಬಿಗ್‌ಬಾಸ್‌ ನಡೆಸಿಕೊಡಲಿರುವ ಸುದೀಪ ಅವರನ್ನೊಳಗೊಂಡಂತೆ ಬಿಗ್‌ಬಾಸ್‌ ತಂಡಕ್ಕೆ ಮಾತ್ರ ಗೊತ್ತಿದೆ. ಸದ್ಯಕ್ಕೆ ಎಲ್ಲರಿಗೂ ಬಿಗ್‌ಬಾಸ್‌ ಮೇಲೆ ಕಣ್ಣು. ಆದರೆ, ಬಿಗ್‌ಬಾಸ್‌ ಮಾತ್ರ ಆ ಮನೆಯೊಳಗಿರುವ ಸ್ಪರ್ಧಿಗಳ ಮೇಲೆ ಕಣ್ಣು. ಇಲ್ಲಿ ಯಾರ ಕಣ್ಣು ಯಾರ ಮೇಲಿದೆಯೋ ಗೊತ್ತಿಲ್ಲ. ಆದರೆ, ಈ ಬಾರಿ ಒಂದಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ. ಅದಕ್ಕೆ ಕಾರಣ, ಇನ್ನೂ ಸ್ಪರ್ಧಿಗಳು ಯಾರು ಅನ್ನೂವುದು. ಅಂದಹಾಗೆ, ಇತ್ತೀಚೆಗಷ್ಟೇ, ಸುದೀಪ್‌ ಸ್ವಾಮೀಜಿ ಗೆಟಪ್‌ನಲ್ಲಿ ಕಾಣಿಸಿಕೊಂಡು, ಬಿಗ್‌ಬಾಸ್‌ ಮನೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದ್ದರು. ವಿಭಿನ್ನ ಯೋಚನೆಯ ಜಾಹಿರಾತು ಮೂಲಕ ಬಿಗ್‌ಬಾಸ್‌ ಸೀಸನ್‌ ೮ಕ್ಕೆ ಡೇಟ್‌ ಫಿಕ್ಸ್‌ ಮಾಡಲಾಗಿದೆ. ಸದ್ಯಕ್ಕೆ ನೂರು ದಿನಗಳ ಕಾಲ ಆ ಮನೆಯಲ್ಲಿ ಯಾರೆಲ್ಲಾ ಇರುತ್ತಾರೆ, ಈ ಬಾರಿ ಎಂಥೆಂಥಾ ಪ್ರಸಂಗಗಳು ನಡೆಯುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಇಳಯರಾಜಾ ಸ್ಟುಡಿಯೋ ಕಂಡು ಸೂಪರ್‌ ಸ್ಟಾರ್‌ ದಿಲ್‌ ಖುಷ್‌ !

ಭಾರತದ ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಅವರು ದಶಕಗಳ ಕಾಲ ಪ್ರಸಾದ್ ಸ್ಟುಡಿಯೋ ಜೊತೆ ಒಡನಾಟ ಹೊಂದಿದ್ದರು. ಅದು ತಮಗೆ ಅದೃಷ್ಟದ ಸ್ಟುಡಿಯೋ ಎಂದೇ ಅವರು ಭಾವಿಸಿದ್ದರು. ಇತ್ತೀಚೆಗೆ ಪ್ರಸಾದ್ ಸ್ಟುಡಿಯೋದ ಮಾಲೀಕತ್ವ ಬದಲಾಗಿ, ಅಲ್ಲಿ ಇಳಯರಾಜಾ ಅವರಿಗೆ ಕಾನೂನಿನ ತೊಡಕು ಎದುರಾಗಿತ್ತು. ಇದರಿಂದ ಚೆನ್ನೈನ ಕೋಡಂಬಾಕಂನಲ್ಲಿ ಇಳಯರಾಜಾ ತಮ್ಮದೇ ಸ್ವಂತ ಸುಸಜ್ಜಿತ ಸ್ಟುಡಿಯೋ ರೂಪಿಸಿದ್ದಾರೆ.

ಸೂಪರ್‌ಸ್ಟಾರ್ ರಜನೀಕಾಂತ್‌ ಅವರು ಮೊನ್ನೆ ಇಳಯರಾಜಾ ಸ್ಟುಡಿಯೋಗೆ ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ‘ದಳಪತಿ’, ‘ವೀರಾ’ ಸೇರಿದಂತೆ ರಜನೀಕಾಂತ್‌ರ ಕೆಲವು ಚಿತ್ರಗಳಿಗೆ ಇಳಯರಾಜಾ ಸಂಗೀತ ಸಂಯೋಜನೆಯಿದೆ.

ಹೊಸ ಸ್ಟುಡಿಯೋದಲ್ಲಿ ಕೆಲಸಮಯ ಕಾಲ ಕಳೆದ ರಜನೀಕಾಂತ್‌ ತಮ್ಮ ಹೊಸ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ. 70ರ ದಶಕದಿಂದಲೂ ಇಳಯರಾಜ ಅವರು ಪ್ರಸಾದ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜಿಸುತ್ತಿದ್ದರು. ಆಸ್ತಿ ವಾಜ್ಯದಿಂದಾಗಿ ಅವರು ಹೊರಬರಬೇಕಾಯ್ತು. ಅಲ್ಲಿನ ತಮ್ಮ ಸಂಗೀತ ಪರಿಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಇಳಯರಾಜಾ ದೂರು ದಾಖಲಿಸಿದ್ದಾರೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

‘ಬ್ರಹ್ಮಾಸ್ತ್ರ’ ಪೂರ್ಣಗೊಳಿಸಿದ ನಾಗಾರ್ಜುನ !

ಬಹುವರ್ಷಗಳ ನಂತರ ಬಾಲಿವುಡ್‌ಗೆ ಹೋಗಿದ್ದ ನಾಗಾರ್ಜುನ ತಮ್ಮ ‘ಬ್ರಹ್ಮಾಸ್ತ್ರ’ ಹಿಂದಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರದ ಪ್ರಮುಖ ತಾರೆಯರಾದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್‌ ಜೊತೆಗಿನ ಫೋಟೋ ಹಂಚಿಕೊಂಡಿರುವ ಅವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ಚಿತ್ರದ ನನ್ನ ಪೋರ್ಷನ್‌ ಮುಗಿಸಿದೆ. ಉತ್ತಮ ನಟ-ನಟಿಯಾದ ರಣಬೀರ್ ಮತ್ತು ಅಲಿಯಾ ಜೊತೆಗೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಥಿಯೇಟರ್‌ನಲ್ಲಿ ನಿಮ್ಮ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರವರು.

‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ ಪುರಾತತ್ವಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ (ರಣಬೀರ್‌) ಮತ್ತು ಇಶಾ (ಅಲಿಯಾ) ಪುರಾತನ ದೇವಾಲಯವೊಂದನ್ನು ಅಭ್ಯಸಿಸಲು ವಾರಣಾಸಿಗೆ ಬರುತ್ತಾರೆ. ಅಲ್ಲಿ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ಅವರಿಗೆ ಹಲವು ಅಚ್ಚರಿಗಳು ಕಾಣುತ್ತವೆ. ಮುಂದೆ ಸಿನಿಮಾ ಕತೆ ಹಿಮಾಲಯದೆಡೆ ಸಾಗುತ್ತದೆ. ಆಕ್ಷನ್‌-ಥ್ರಿಲ್ಲರ್ ಮಾದರಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌನಿ ರಾಯ್‌ ಕೂಡ ನಟಿಸಿದ್ದಾರೆ.

ನಾಗಾರ್ಜುನ ನಟಿಸಿದ್ದ ಕೊನೆಯ ಹಿಂದಿ ಸಿನಿಮಾ ‘ಎಲ್‌ಓಸಿ ಕಾರ್ಗಿಲ್‌’ (2003). ಅದಕ್ಕೂ ಮುನ್ನ ಅವರು ಖುದಾ ಗವಾ, ಅಂಗಾರೆ, ಕ್ರಿಮಿನಲ್, ಝಕ್ಮ್‌ ಚಿತ್ರಗಳಲ್ಲಿ ನಟಿಸಿದ್ದರು. ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಇದೀಗ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಮುಗಿಯಲಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಗಲಿದೆ. ಈ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಈ ನಟಿಗೆ ದೇಗುಲವನ್ನೇ ನಿರ್ಮಿಸಿದ ಅಭಿಮಾನಿಗಳು !

ತೆಲುಗು ಮತ್ತು ತಮಿಳು ಸಿನಿಮಾಗಳ ಯುವನಟಿ ನಿಧಿ ಅಗರ್‌ವಾಲ್‌ ಅವರಿಗೆ ಅಭಿಮಾನಿಗಳು ಚೆನ್ನೈನಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ನಟಿಯ ಪ್ರತಿಮೆ ರೂಪಿಸಿದ್ದು, ಅದಕ್ಕೆ ಅಭಿಷೇಕ – ಆರತಿ ನಡೆಯುತ್ತಿದೆ. “ಪ್ರೇಮಿಗಳ ದಿನಕ್ಕಾಗಿ ಇದು ನಮ್ಮ ಕಡೆಯಿಂದ ನಟಿಗೆ ಉಡುಗೊರೆ” ಎಂದಿದ್ದಾರೆ ಅಭಿಮಾನಿಗಳು. “ಅಭಿಮಾನಿಗಳು ಈ ನಡೆ ನನಗೆ ಶಾಕ್ ತಂದಿದೆ. ಇದೆಲ್ಲವನ್ನೂ ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಅವರ ಪ್ರೀತಿಗೆ ನಾನು ಋಣಿ” ಎನ್ನುತ್ತಾರೆ ನಿಧಿ.

ನಟ-ನಟಿಯರಿಗೆ ದೇವಾಲಯ ನಿರ್ಮಿಸುವುದು ತಮಿಳುನಾಡಿನಲ್ಲಿ ಹೊಸದೇನಲ್ಲ. ಈ ಹಿಂದೆ ಎಂಜಿಆರ್‌, ಖುಷ್ಬೂ, ನಮಿತಾ, ಹನ್ಸಿಕಾ ಅವರಿಗೆ ಅಭಿಮಾನಿಗಳು ದೇವಾಲಯಗಳನ್ನು ನಿರ್ಮಿಸಿದ್ದರು. ಬಹುಭಾಷಾ ತಾರೆ ನಯನತಾರಾ ಅವರಿಗೂ ದೇಗುಲ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಇದೀಗ ನಿಧಿಯನ್ನು ಆರಾಧಿಸುತ್ತಿರುವುದು ಸ್ವತಃ ಆ ನಟಿಗೇ ಅಚ್ಚರಿ ತಂದಿದೆ.

“ನಾನಿನ್ನೂ ಹೊಸಬಳು. ಮೂರ್ನಾಲ್ಕು ತೆಲುಗು ಮತ್ತು ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದೇನಷ್ಟೆ. ಅಭಿಮಾನಿಗಳು ನನ್ನ ಬಗ್ಗೆ ಅಪಾರ ಅಭಿಮಾನ ತಳೆದಿದ್ದಾರೆ. ಸಂದರ್ಶನವೊಂದರಲ್ಲಿ ನಾನು ಅನಾಥ ಮಕ್ಕಳಿಗಾಗಿ ಕೆಲಸ ಮಾಡಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದೆ. ನನ್ನ ಮನದಿಂಗಿತ ಅರಿತು ಅಭಿಮಾನಿಗಳು ಅನಾಥರಿಗೆ ಊಟ ನೀಡಿದ್ದಾರೆ” ಎನ್ನುವ ನಿಧಿ ಸದ್ಯ ಪವನ್ ಕಲ್ಯಾಣ್ ಜೋಡಿಯಾಗಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಉದಯನಿಧಿ ಸ್ಟಾಲಿನ್ ಜೊತೆ ತಮಿಳು ಸಿನಿಮಾ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜಕುಮಾರ್ ಅವರನ್ನು ಮಂಗಳವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಯಶವಂತಪುರದ‌ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಘವೇಂದ್ರ ರಾಜಕುಮಾರ್ ಅವರ ಜೊತೆ ಪುನೀತ್ ರಾಜ್‍ಕುಮಾರ್ ಕೂಡ ಇದ್ದು, ನೋಡಿಕೊಳ್ಳುತ್ತಿದ್ದಾರೆ.
“ನಮ್ಮ ತಂದೆ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್ ಹೇಳಿದ್ದಾರೆ.
ಸದ್ಯ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಾಳೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ ಬಗ್ಗೆ ಕುಟುಂಬದವರು ಹೇಳಿದ್ದಾರೆ.

error: Content is protected !!