Categories
ಸಿನಿ ಸುದ್ದಿ

ಮಾನವರು ಒಂದಾದರೆ ಈ ಮಹಾಮಾರಿಯದು ಯಾವ ಲೆಕ್ಕ ? ಅಸಹಾಯಕ ಜೀವ ಸಲಹಲು ಪೀಪಲ್ ಫಾರ್ ಪೀಪಲ್ ಸಜ್ಜು!

ಪೀಪಲ್ ಫಾರ್ ಪೀಪಲ್ ತಂಡ ಮತ್ತೆ ತನ್ನ ಕೆಲಸ ಶುರುವಿಟ್ಟುಕೊಂಡಿದೆ. ಕಳೆದ ವರ್ಷ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಕೊಡಗು ಭಾಗದ ಜನ ಮಳೆಗೆ ತತ್ತರಿಸಿದ್ದಾಗ, ಉತ್ತರ ಕರ್ನಾಟಕ ಭಾಗದ ಮಂದಿ ನೆರೆಗೆ ರೋಸಿ ಹೋಗಿದ್ದಾಗ, ಕೋವಿಡ್ ಸಮಸ್ಯೆಗೆ ನಲುಗಿ ಕಂಗಾಲಾದಂತಹ ಜನರ ಪರವಾಗಿ ನಿಂತು, ಒಂದಷ್ಟು ನೊಂದ‌ ಜೀವಗಳಿಗೆ ಸಹಾಯ ಹಸ್ತ ಚಾಚಿತ್ತು. ಈಗ ಕೊರೊನಾ ಎರಡನೇ ಅಲೆಗೆ ಬೆಚ್ಚಿ ಬಿದ್ದಿರುವ ಶ್ರಮಿಕರ ಹಸಿವು ಅರಿತು ತನ್ನ ಕೈಲಾದ ಸೇವೆ ಮಾಡಲು ನಿಂತಿದೆ.


ಪೀಪಲ್‌ ಫಾರ್ ಪೀಪಲ್ ತಂಡದ ಚಕ್ರವರ್ತಿ ಚಂದ್ರಚೂಡ್ , ತಮ್ಮ ತಂಡ ಕಟ್ಟಿಕೊಂಡು ಈಗಾಗಲೇ ರಸ್ತೆಗಿಳಿದಿದ್ದಾರೆ. ಆ ಕುರಿತು ಒಂದು ಬರಹವನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತಲ್ಲಿ ಕೇಳಿ.

ಓವರ್ ಟು ಚಕ್ರವರ್ತಿ….

‘ಸಿದ್ಧಗಂಗಾ ಶ್ರೀಗಳು ಮತ್ತು ದಾದಾ ವಿಷ್ಣು ಅವರ ಆಶೀರ್ವಾದ ಬೇಡುವ ಮೂಲಕ ‘ಪೀಪಲ್ ಫಾರ್ ಪೀಪಲ್’ ತಂಡ ಮತ್ತಷ್ಟು ಚುರುಕುಗೊಂಡಿದೆ.
ಆಸ್ಪತ್ರೆಯಲ್ಲಿ ಬೆಡ್, ಆಮ್ಲಜನಕ, ರೇಷನ್, ಆಹಾರ ಎಂಥಹದೇ ಕ್ಲಿಷ್ಟಕರ ಸಮಸ್ಯೆ ಇರಲಿ, ಕರೆಮಾಡಿ ಪೀ’ಪಲ್ ಫಾರ್ ಪೀಪಲ್’ ತಂಡದ ಭೀಮರು ಬರುತ್ತಾರೆ.

ಸರಕಾರವೇ ಲಾಬಿ ಮಾಡುತ್ತಿದೆಯಾ? ಕೊನೆಗೂ ಕೈ ಚೆಲ್ಲಿ ಜೀವ ಹೋಗುವ ಸ್ಥಿತಿಯಾ? ಆಸ್ಪತ್ರೆಗಳ ಹಣದಾಹವಾ? ಕರೆ ಮಾಡಿ ಸ್ವತಹ ನಾನೇ ಬರುತ್ತೇನೆ.
ಮಾನವರು ಒಂದಾದರೆ ಈ ಮಹಾಮಾರಿಯದು ಯಾವ ಲೆಕ್ಕ ?
ಇಲ್ಲಿಯ ತನಕ ಆಸ್ಪತ್ರೆ ಸೇವೆಯಲ್ಲಿದ್ದವರು ನಾವು ಈಗ ಬಡವರಿದ್ದಲ್ಲಿಗೇ ನಡೆಯುತ್ತಿದ್ದೇವೆ.
ಜಗತ್ತಿನ ಕಟ್ಟ ಕಡೆಯ ಮನುಷ್ಯ ಇರುವ ತನಕ ಯಾವ ಮತ್ತೊಬ್ಬ ಮನುಷ್ಯನೂ ಅಸಹಾಯಕನಲ್ಲ…
ನಮ್ಮ ಜೊತೆ ಕಲಾವಿದೆ ಪ್ರಿಯಾಂಕ ತಿಮ್ಮೇಶ್ ಕೋಣನಕುಂಟೆ, ಚುಂಚನ್ ಘಟ್ಟ, ಗಣಪತಿ ಪುರದ ಬಡ ಜೀವಗಳ ಹಸಿವಿಗೆ 100 ಕೆಜಿ ಅಕ್ಕಿ ಕೊಡುವ ಮೂಲಕ ಸಾಂಕೇತಿಕವಾಗಿ ನಮ್ಮ ಕೈ ಜೋಡಿಸಿದ್ದಾರೆ.


ಈ ಚಿತ್ರಗಳು, ವಿಡಿಯೋ, ಹೆಸರುಗಳನ್ನು ಪ್ರಸ್ತಾಪಿಸುವುದು ಪ್ರಚಾರಕ್ಕಲ್ಲ, ಕೊಡಗು, ಸುನಾಮಿ, ಉತ್ತರ ಕರ್ನಾಟಕದ ನೆರೆ ಕೊವಿಡ್ ಮುಂತಾದ ಪ್ರಕೃತಿ ವಿಕೋಪಗಳಲ್ಲಿ ಅಸಹಾಯಕರ ಜೊತೆ ನಿಂತು ಬಡಿದಾಡಿದವರು ನಾವು. ಜೀವ ಪರ ಸರಪಳಿ ಹಿರಿದಾಗಲಿ. ಅಸಹಾಯಕ ಜೀವಗಳನ್ನು ಪ್ರೇಮದಿಂದ ಸಲಹೋಣ ಎಂಬ ಆಶಯದೊಂದಿಗೆ ಕಳುಹಿಸುತ್ತಿದ್ದೇವೆ.

ಎಲ್ಲರ ಪರವಾಗಿ
ಡಿ. ಜೆ. ಚಕ್ರವರ್ತಿ ಚಂದ್ರಚೂಡ್

Categories
ಸಿನಿ ಸುದ್ದಿ

ಮಿಡಿದ ಹೃದಯ; ತನ್ನ ಚಿತ್ರದಲ್ಲಿ ದುಡಿದ ಕಾರ್ಮಿಕರ ಖಾತೆಗೆ 5 ಸಾವಿರ ಹಾಕಿದ ಕ್ರೇಜಿ ಪುತ್ರ

ಕೊರೊನಾ ಸಂಕಷ್ಟದಿಂದ ಚಿತ್ರೋದ್ಯಮ ಕೂಡ ರಂಗು ಕಳೆದುಕೊಂಡಿದೆ. ಇಲ್ಲಿ ದುಡಿಯುವ ಅದೆಷ್ಟೋ ಮನಸ್ಸುಗಳು ಕಂಗಾಲಾಗಿವೆ.
ಕಳೆದ ಒಂದು ವರ್ಷದಿಂದಲೂ ಕಾಡುತ್ತಿರುವ ಈ ಸೋಂಕಿನಿಂದ ಕನ್ನಡ ಚಿತ್ರರಂಗದ ಅನೇಕ ಕಾರ್ಮಿಕರು ತತ್ತರಿಸಿದ್ದಾರೆ.
ಈ‌ ನಿಟ್ಟಿನಲ್ಲಿ ಕ್ರೇಜಿಸ್ಟಾರ್ ಪುತ್ರ ಮನುರಂಜನ್ ಕೂಡ ಸಿನಿಮಾ ಕಾರ್ಮಿಕರ ನೋವಿಗೆ ಸ್ಪಂದಿಸಿದ್ದಾರೆ.

ಸದ್ಯದ ಪರಿಸ್ಥಿ ಅರಿತ ಮನುರಂಜನ್, ತಾವು ಅಭಿನಯಿಸಿರುವ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಕೆಲಸ ಮಾಡಿ ಕಳೆದಒಂದು ವರ್ಷದ ಈ ಪ್ರಾಜೆಕ್ಟ್ ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.

ಈ ಸಿನಿಮಾಗೆ ತನುಮನ ಅರ್ಪಿಸಿದ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿರುವ ಅವರು, ‘ಮುಗಿಲ್ ಪೇಟೆ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಮನುರಂಜನ್ ಕಡೆಯಿಂದ 5000 ಹಣವನ್ನು ಅವರ ಖಾತೆಗೆ ಹಾಕಿದ್ದಾರೆ. ಈ ಮೂಲಕ ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದಿದ್ದಾರೆ ಮನುರಂಜನ್.

Categories
ಸಿನಿ ಸುದ್ದಿ

ಸಂಕಷ್ಟಕ್ಕೆ ಸಿಲುಕಿದವರ ಬದುಕಿಗೆ ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ಆಸರೆ ; ಟ್ರಸ್ಟ್ ಸಂಸ್ಥಾಪಕ, ನಿರ್ಮಾಪಕ, ಉದ್ಯಮಿ ಕೃಷ್ಣ ನೇತೃತ್ವದಲ್ಲಿ ಶ್ರಮಿಕರಿಗೆ ದಿನಸಿ ಕಿಟ್ ವಿತರಣೆ

ಕೊರೊನಾ ಸಂಕಷ್ಟ ಸಮಯದಲ್ಲಿ ನೊಂದವರ ಮತ್ತು ಶ್ರಮಿಕರಿಗೆ ತಮ್ಮ ಟ್ರಸ್ಟ್ ಮೂಲಕ ಕಿಟ್ ವಿತರಿಸಿದ ಬಗ್ಗೆ ನಮಗೆ ತೃಪ್ತಿ ಇದೆ – ಟ್ರಸ್ಟ್ ಸಂಸ್ಥಾಪಕ, ನಿರ್ದೇಶಕ ಕೃಷ್ಣ ಪಿ.

ಕೊರೊನಾ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅದೆಷ್ಟೋ ಜೀವಗಳು ಹೋಗಿವೆ. ಲೆಕ್ಕವಿಲ್ಲದಷ್ಟು ಕುಟುಂಬಗಳು ತತ್ತರಿಸಿವೆ. ಕಾರ್ಮಿಕರು, ಶ್ರಮಿಕರು, ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಕಾಲದಲ್ಲಿ ಸರ್ಕಾರ ಒಂದಷ್ಟು ನೆರವು ನೀಡಲು ಮುಂದಾಗಿದೆ. ಅದಕ್ಕೂ ‌ಮೊದಲೇ ಸಾಕಷ್ಟು ಸಂಘ ಸಂಸ್ಥೆಗಳು ನೊಂದವರ ಸಹಾಯಕ್ಕೆ ನಿಂತಿವೆ. ಆ ಸಾಲಿಗೆ ಹಲವಾರು ಟ್ರಸ್ಟ್ ಗಳು ಕೂಡ ನೆರವಿನ ಹಸ್ತ ಚಾಚಿವೆ. ಹಾಗೆಯೇ, ಬೆಂಗಳೂರು ವಿದ್ಯಾರಣ್ಯಪುರದಲ್ಲಿರುವ ‘ಅರ್ಬನ್ ಗುರುಕುಲ್ ಚಾರಿಟೇಬಲ್ ಟ್ರಸ್ಟ್’ ಮೂಲಕ ಒಂದಷ್ಟು ವರ್ಗದವರಿಗೆ, ಕಾರ್ಮಿಕರಿಗೆ ಅಗತ್ಯ ದಿನಸಿ ದಿನಸಿ ಕಿಟ್ ವಿತರಿಸಿದೆ.

ಹೌದು, ಅರ್ಬನ್ ಗುರುಕಲ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಕೃಷ್ಣ ಅವರ ನೇತೃತ್ವದಲ್ಲಿ ಭಾನುವಾರ ವಿದ್ಯಾರಣ್ಯಪುರ, ತಿಂಡ್ಲು, ಯಲಹಂಕ ಸುತ್ತಮುತ್ತಲಿನ ನೂರಾರು ಕಾರ್ಮಿಕರು, ಶ್ರಮಿಕರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಲಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ‘ಅರ್ಬನ್ ಗುರುಕಲ್ ಚಾರಿಟೇಬಲ್ ಟ್ರಸ್ಟ್’ ನ ಸಂಸ್ಥಾಪಕ ಕೃಷ್ಣ ಅವರು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಆ ಭಾಗದ ಬಡ ಜನರಿಗೆ ಉಚಿತ ಆರೋಗ್ಯ ಶಿಬಿರ, ದಂತ ಚಿಕಿತ್ಸೆ ಶಿಬಿರ ಏರ್ಪಡಿಸಿದ್ದಾರೆ.


ಅಷ್ಟೇ ಅಲ್ಲ ಗುರುಕುಲ ಮೂಲಕ‌ ವಿದ್ಯಾರ್ಥಿಗಳಿಗೆ ಪೇಂಟಿಂಗ್ ಸ್ಪರ್ಧೆ ಸೇರಿದಂತೆ ಇತ್ಯಾದಿ ಕ್ರೀಡಾ ಚಟುವಟಿಕೆಯನ್ನೂ ನಡೆಸಿದೆ. ಈಗ ಕೊರೊನಾ ಸಂಕಷ್ಟದಲ್ಲಿ ನೊಂದವರ ಹಾಗೂ ಕಷ್ಟದಲ್ಲಿ ಸಿಲುಕಿರುವ ಜನರಿಗೆ ಧೈರ್ಯ ತುಂಬುವುದರ ಜೊತೆಗೆ ಆಹಾರದ ಕಿಟ್ , ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಆತ್ಮಸ್ಥೈರ್ಯ ತುಂಬಿದೆ. ಇದರ ಜೊತೆಗೆ ಕೊರೊನೊ ಹಾವಳಿ ತಪ್ಪಿಸಬೇಕೆಂಬ ಜಾಗೃತಿ ಮೂಡಿಸುವ ಕೆಲಸವನ್ನೂ ‘ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ‘ ತಂಡದ ನಿರ್ದೇಶಕರು, ಸದಸ್ಯರು ಮಾಡಿದ್ದಾರೆ.

ಕೊರೊನಾ ಸಂಕಷ್ಟ ಸಮಯದಲ್ಲಿ ನೊಂದವರ ಮತ್ತು ಶ್ರಮಿಕರಿಗೆ ತಮ್ಮ ಟ್ರಸ್ಟ್ ನ ನಿರ್ದೇಶಕರು ಹಾಗು ಸದಸ್ಯರ ಜೊತೆ ದಿನಸಿ ಕಿಟ್ ವಿತರಿಸಿದ ಟ್ರಸ್ಟ್ ಸಂಸ್ಥಾಪಕ, ನಿರ್ದೇಶಕ ಕೃಷ್ಣ ಪಿ, ‘ಈ ಕೆಲಸದ ಬಗ್ಗೆ ನಮಗೆ ತೃಪ್ತಿ ಇದೆ.

ನಾವು ಟ್ರಸ್ಟ್ ಸ್ಥಾಪಿಸಿದ ಉದ್ದೇಶವೇ ಸಮಾಜಮುಖಿ ಕೆಲಸ ಮಾಡಲು. ಅದರಲ್ಲೂ ನೊಂದವರು, ಶ್ರಮಿಕರು, ಕಾರ್ಮಿಕರ ನೋವಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ. ಈಗಾಗಲೇ ನಮ್ಮ ಟ್ರಸ್ಟ್ ಮೂಲಕ ಸಾಕಷ್ಟು ಕೆಲಸ‌ ಮಾಡಿದ್ದೇವೆ.

ಈಗ ಕೊರೊನಾ ಹೆಮ್ಮಾರಿ ವಿರುದ್ಧ ‌ನಾವೆಲ್ಲ ಹೋರಾಡಬೇಕಿದೆ. ಇಂತಹ ಕಷ್ಟದ ಸಮಯದಲ್ಲಿ ನಾವು ಶ್ರಮಿಕರ ಜೊತೆ ನಿಲ್ಲಬೇಕು. ಮಾನವೀಯ ಮೌಲ್ಯ ಅಳವಡಿಸಿಕೊಡು ನಮ್ಮ ಕೈಲಾದಷ್ಟು ಸೇವೆ ಮಾಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ.

ಮುಂದಿನ‌ ದಿನಗಳಲ್ಲಿ ಇನ್ನೂ ಹಂತ ಹಂತವಾಗಿ ಟ್ರಸ್ಟ್ ಮೂಲಕ ಹಲವು ವಿಶೇಷ ಕಾರ್ಯಕ್ರಮ ಮೂಲಕ ಶ್ರಮಿಕರ ಕಷ್ಟಕ್ಕೆ ಸ್ಪಂದಿಸುವ ಕೆಲಸ‌ನಡೆಯಲಿದೆ ಎಂಬುದು ಕೃಷ್ಣ ಅವರ ಮಾತು.

ಅಂದಹಾಗೆ , ಕೃಷ್ಣ ಅವರು ಉದ್ಯಮಿಯೂ ಹೌದು. ಜೊತೆಗೆ ಸಿನಿಮಾ ನಿರ್ಮಾಪಕರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರವನ್ನು ಕಟ್ಟಿಕೊಡಬೇಕು, ಅದರಲ್ಲೂ ಹೊಸ‌ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಉದ್ದೇಶ ಹೊಂದಿದ್ದು,

ಆ ನಿಟ್ಟಿನಲ್ಲಿ ಅವರು ಈಗಾಗಲೆ ‘ರಮೇಶ ಸುರೇಶ’ ಚಿತ್ರವನ್ನೂ ನಿರ್ಮಿಸಿದ್ದಾರೆ. ಸದ್ಯ ಆ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಲಾಕ್ ಡೌನ್ ಬಳಿಕ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.

ಅದೇನೆ ಇರಲಿ, ತಮ್ಮ ‘ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್’ ಮೂಲಕ ಇರುವಷ್ಟು ಕಾಲ ಒಂದಷ್ಟು ಸಮಾಧಾನ ಎನಿಸುವ, ಮನಸ್ಸಿಗೆ ನೆಮ್ಮದಿ ತರುವ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ನಿರ್ಧಾರ ಮಾಡಿದ್ದಾರೆ ಟ್ರಸ್ಟ್ ನ ಸಂಸ್ಥಾಪಕ ಕೃಷ್ಣ.

ಇನ್ನು, ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ಮೂಲಕ ಆಯೋಜಿಸಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ನಿರ್ದೇಶಕರಾದ, ರೂಪ ಕೆ, ಮಾಲಿನಿ ಕೆ.ಕೆ, ಶ್ರೀನಾಥ್, ಮಂಜು , ವಿಜಯ್ ಭರಮಸಾಗರ ಮತ್ತು ತಂಡದ ಸದಸ್ಯರಾದ ರಕ್ಷಿತ್, ನಟಾಶ, ದೀಪು, ವಿಷ್ಣು, ವಿವೇಕ್ ಸಿಂಗ್, ಶ್ರೀರಾಮ್, ದೀಪಕ್ ಗೌಡ, ಹರೀಶ್, ನಿಖಿಲ್ ಇತರರು ಕೂಡ ದಿನಸಿ ಕಿಟ್ ವಿತರಣೆಯಲ್ಲಿ ತೊಡಗಿದ್ದರು.

Categories
ಸಿನಿ ಸುದ್ದಿ

ಉಸಿರು ತಂಡಕ್ಕೆ ಗಜ ಬಲ ; ಒಳ್ಳೇ ಕೆಲಸಕ್ಕೆ ನಟ ದರ್ಶನ್ ಸಾಥ್

ಗೀತ ಸಾಹಿತಿ ಕವಿರಾಜ್ ಮತ್ತು ಸಮಾನ ಮನಸ್ಕ ಗೆಳೆಯರು ಸೇರಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರಿಗಾಗಿ ‘ ‘ಉಸಿರು’ ತಂಡ ಕಟ್ಟಿಕೊಂಡು ಆ ಮೂಲಕ ಆಕ್ಸಿಜನ್ ಕೊಡುವ ಕೆಲಸ ಮಾಡುತ್ತಿದ್ದು, ಯಶಸ್ವಿಯಾಗಿ ಸಾಗುತ್ತಿದೆ.
ಈಗಾಗಲೇ ಬೆಂಗಳೂರಿನ ಹಲವು ಮಂದಿ ಉಸಿರು ಪಡೆದಿದ್ದಾರೆ.
ಶನಿವಾರವಷ್ಟೆ ಮೈಸೂರು ನಗರದಲ್ಲೂ ಉಸಿರು ತಂಡ ತನ್ನ ಕೆಲಸಕ್ಕೆ ಚಾಲನೆ‌ ನೀಡಿದೆ. ಇದರ ಬೆನ್ನಲ್ಲೇ ಚಾಲೆಂಜಿಂಗ್ ದರ್ಶನ್ ಕೂಡ ಉಸಿರು ತಂಡಕ್ಕೆ ಸಾಥ್ ನೀಡುತ್ತಿದ್ದಾರೆ.


ಇದು‌ ಸಹಜವಾಗಿಯೇ ಉಸಿರು ತಂಡದ ಖುಷಿ ಹೆಚ್ಚಿಸಿದೆ.
ದರ್ಶನ್ ಅವರು ಉಸಿರು ಹಿಂದೆ ನಿಂತಿರುವುದರಿಂದ ಗಜಬಲ ಬಂದಂತಾಗಿದೆ. ಬೆಂಗಳೂರು, ಮೈಸೂರು ಭಾಗದಲ್ಲಿ ಶುರುವಾದ ಉಸಿರು ಕೆಲಸಕ್ಕೆ ಡಿ ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನಷ್ಟು ಜಿಲ್ಲೆಗಳಲ್ಲಿ ಉಸಿರು ಹರಡಲು ಸಾಧ್ಯವಾಗಿದೆ ಎಂಬುದು ಉಸಿರು ತಂಡದ ಖುಷಿಯ ಮಾತು.
ಈ ಉಸಿರು ತಂಡದ ಕೆಲಸ ಇನ್ನಷ್ಟು ಹೆಚ್ಚಲಿ, ಯಶಸ್ವಿಯಾಗಲಿ ಎಂಬುದಹ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಆಡಿಯೋಬುಕ್‌ ನಲ್ಲಿ ಗಿರೀಶ್‌ ಕಾರ್ನಾಡ್‌ ಪುಸ್ತಕ : ಆಡಾಡುತ್ತಾ ಆಯುಷ್ಯʼ ಕ್ಕೆ ನಟ ಸಂಚಾರಿ ವಿಜಯ್‌ ಧ್ವನಿ

ಜ್ಞಾನಪೀಠ ಪುರಸ್ಕೃತ ಸಾಹಿತಿ, ನಾಟಕಕಾರ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ಜೀವನ ಚರಿತ್ರೆ ʼ ಆಡಾಡುತಾ ಆಯುಷ್ಯ ʼ ಈಗ ಆಡಿಯೋ ರೂಪದಲ್ಲಿ ಹೊರ ಬಂದಿದೆ. ವಿಶೇಷ ಅಂದರೆ, ಈ ಪುಸ್ತಕಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧ್ವನಿ ನೀಡಿದ್ದಾರೆ. ಸ್ಟೋರಿ ಟೆಲ್‌ ಸಂಸ್ಥೆ ಈ ಪುಸ್ತಕವನ್ನು ಆಡಿಯೋ ರೂಪದಲ್ಲಿ ಹೊರ ತಂದಿದೆ. 350 ಪುಟಗಳ ಈ ಪುಸ್ತಕಕ್ಕೆ ಪ್ರೀತಿಯಿಂದ, ಕಾರ್ನಾಡ್‌ ಅವರ ಮೇಲಿನ ಅಭಿಮಾನದಿಂದ ಧ್ವನಿ ನೀಡಿರುವ ನಟ ಸಂಚಾರಿ ವಿಜಯ್‌, ಪುಸ್ತಕ ಓದುವಾಗ ಆದ ಅನುಭವ, ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಗಳ ಜತೆಗೆ ತಮಗೆ ಪರಿಚಯವಾದ ಹಲವು ಹೊಸ ಪದಗಳ ಜತೆಗೆ ಇತ್ಯಾದಿ ಮಜಲಗಳ ಕುರಿತು ಇಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಓವರ್‌ ಟು ಸಂಚಾರಿ ವಿಜಯ್….

ʼ 350 ಪುಟಗಳಿರುವ ಈ ಪುಸ್ತಕವನ್ನು ಓದುವಾಗ ಹಲವಾರು ಸವಾಲುಗಳು ಎದುರಾದವು. ಲೇಖಕರಾದ ಗಿರೀಶ್‌ ಕಾರ್ನಾಡ್‌ ಅವರು ಕೆಲವೆಡೆ ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಿಸಿದರೆ ಇನ್ನಷ್ಟು ಕಡೆ ಉತ್ತರ ಕರ್ನಾಟಕ, ನಂತರ ಬೆಂಗಳೂರು, ಮತ್ತೊಂದೆಡೆ ಮರಾಠಿ ಮಿಶ್ರಿತ ಕನ್ನಡ ಹೀಗೆ ನನಗೂ ಹಲವಾರು ಹೊಸ ಪದಗಳ ಪರಿಚಯ ಮಾಡಿಕೊಡುತ್ತಾ ಅವರು ಅನುಭವಿಸಿದ ಹಲವಾರು ಮಜಲುಗಳನ್ನು ಹಂಚುತ್ತಾ ಇಡೀ ಪುಸ್ತಕ ಒಂದು ಹೊಸ ಲೋಕವನ್ನೇ ತೆರೆದಷ್ಟು ಅನುಭವವನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಇನ್ನು ಅವರ ಬಾಲ್ಯದಲ್ಲಿ ಮಹಾರಾಷ್ಟ್ರದಿಂದ ಧಾರವಾಡಕ್ಕೆ ವಲಸೆ ಬಂದಿದ್ದು, ಅಲ್ಲಿ ಸಾರಸ್ವತಪುರದಲ್ಲಿ ನಿಂತು ಅಲ್ಲಿಂದ ಮುಂದೆ ಶಿರಸಿಗೆ ಹೋಗಿ ಅವರ ತಾಯಿ ‘ಕುಟ್ಟಾಬಾಯಿಯ’ ಜೀವನದ ಏಳು ಬೀಳುಗಳ ಅನಾವರಣ.

ಗಂಡನನ್ನು ಕಳೆದುಕೊಂಡು 11 ವರ್ಷದ ಬಾಲಚಂದ್ರ ಎನ್ನುವ ಮಗನನ್ನು ಕಟ್ಟಿಕೊಂಡು ಆಕೆ ಧೈರ್ಯದಿಂದ ಸಮಾಜವನ್ನು ಎದುರಿಸಿದ ಪ್ರಯಾಣ. ನಂತರ ಅತೀ ಚಿಕ್ಕ ವಯಸ್ಸಿಗೆ ಇಂಗ್ಲೆಂಡ್ ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿ ಅಲ್ಲಿಯ ನಡೆಯನ್ನು ಹರವಿದ್ದು. ನಂತರ ಎನ್‌ಎಫ್‌ಎಗೆ ನಿದೇಶಕನಾಗಿದ್ದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳಾದಂತಹ ಹಲವಾರು ಪ್ರತಿಭಾವಂತ ನಟರು ಬಾಲಿವುಡ್ ನಲ್ಲಿ ಸ್ಟಾರ್ ಗಳಾಗಿ ಮಿಂಚಿದ್ದು. ತಮ್ಮ ಕೆಲವು ನಿಲುವುಗಳಿಂದ ಅನೇಕಾನೇಕ ಬಲವುಳ್ಳವರನ್ನು ಎದುರು ಹಾಕಿಕೊಂಡಿದ್ದು. ನಂತರ ಮದ್ರಾಸಿಗೆ ಕೆಲಸವನ್ನರಸಿ ಹೋಗಿದ್ದು ಅಲ್ಲಿಂದ ಕನ್ನಡ ಸಾಹಿತ್ಯ, ನಾಟಕ, ಸಿನಿಮಾ ಹೇಗೆ ಹತ್ತು ಹಲವಾರು ಕ್ಷೇತ್ರಗಳಿಗೆ ತೆರೆದುಕೊಂಡಿದ್ದು, ಒಂದು ರೋಮಾಂಚನ ಪ್ರಯಾಣ ಅನ್ನಿಸಿದ್ದು ಸುಳ್ಳಲ್ಲ. ಇದಿಷ್ಟನ್ನು ಹಿಡಿದಿಡುವ ಪ್ರಯತ್ನ ಇಲ್ಲಿದೆ ನೀವು ಬಿಡುವಾದಾಗ ಕೇಳಿ ನಿಮ್ಮ ಅನಿಸಿಕೆಗಳನ್ನು ತಪ್ಪುಗಳನ್ನು ತಿದ್ದಿ ನನಗೆ ತಿಳಿಸಿ. ಒಂದೇ ಸಮನೆ 350 ಪುಟಗಳನ್ನು ಓದಿದ್ದರಿಂದ ಒಂದಷ್ಟು ತಪ್ಪು ಒಪ್ಪಗಳು ನಿಮ್ಮ ಗ್ರಹಿಕೆಗೆ ಬಂದೆ ಬರುತ್ತದೆ. ಅದನ್ನು ಬದಿಗಿರಿಸಿ ಕೇಳಿ ಎಂದು ನನ್ನ ಸವಿನಯ ಪ್ರಾರ್ಥನೆ.

ಇದಿಷ್ಟು ನಟ ಸಂಚಾರಿ ವಿಜಯ್‌ ಮಾತು. ಇನ್ನು ಪುಸ್ತಕದ ಆಡಿಯೋ ರೂಪಕ್ಕೆ ಧ್ವನಿ ನೀಡಲು ಅವರಿಗೆ ಅವಕಾಶ ಸಿಕ್ಕಿದ್ದೇ ಆಕಸ್ಮಿಕವಂತೆ. ಗೆಳೆಯನ ಮೂಲಕ ಈ ಅವಕಾಶ ಬಂತು. ಮೇಲಾಗಿ ಕಾರ್ನಾಡ್‌ ಅವರ ಬಗ್ಗೆಯೂ ನಂಗೆ ದೊಡ್ಡ ಕುತೂಹಲ ಇತ್ತು. ಆಯ್ತು ಓದ್ತೀನಿ ಅಂತ ಒಪ್ಪಿಕೊಂಡ ನಂತರ ಓದುವುದು ಎಂತಹ ಸವಾಲಿನ ಕೆಲಸ ಅಂತ ಗೊತ್ತಾಯಿತು ಎನ್ನುವ ನಟ ಸಂಚಾರಿ ವಿಜಯ್‌, 350 ಪುಟಗಳ ಈ ಪುಸ್ತಕವನ್ನು ಓದಿ ಮುಗಿಸಲು ಒಂದು ತಿಂಗಳು ತೆಗೆದುಕೊಂಡ್ರಂತೆ.ʼ ಇದಿಷ್ಟು ಸಮಯವನ್ನು ನಾನು ತೆಗೆದುಕೊಡಿದ್ದಕ್ಕೆ ಕಾರಣ ಎಲ್ಲೂ ಪದ ದೋಷ ಆಗಿದಿರಲಿ ಅಂತ. ಹಾಗೆ ಓದುತ್ತಾ ನನಗೆ ದೊಡ್ಡ ಅನುಭವವೇ ಆಯಿತು.

ನಾನು ಅಭಿನಯಿಸಿದ ಮೊದಲ ನಾಟಕದಲ್ಲಿ ಆದ ಅನುಭವವೇ ಇಲ್ಲಿಯೂ ಆಯಿತು. ಕಾರ್ನಾಡ್‌ ಅವರನ್ನು ಒಂದಷ್ಟು ತಿಳಿದುಕೊಳ್ಳುವುದಕ್ಕೂ ಇದು ಕಾರಣವಾಯಿತು. ಇಂತಹ ಅವಕಾಶಗಳು ಸಿಕ್ಕರೆ ನಾನೆಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ನಟ ಸಂಚಾರಿ ವಿಜಯ್.‌

Categories
ಸಿನಿ ಸುದ್ದಿ

ಕೆವಿಎನ್ ಫೌಂಡೇಷನ್ ಮೂಲಕ ಕನ್ನಡ ಚಿತ್ರರಂಗದವರಿಗೆ ಉಚಿತ ಕಾನ್ಸನ್​ಟ್ರೇಟರ್ ವಿತರಣೆ

ಕೋವಿಡ್​ನಿಂದಾಗಿ ಚಿತ್ರರಂಗದ ಸಾಕಷ್ಟು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅದೇ ರೀತಿ ಕೋವಿಡ್​ ಸೋಂಕಿನಿಂದಲೂ ಬಸವಳಿದಿದ್ದಾರೆ. ಇದೀಗ ಹಾಗೇ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಕೆವಿಎನ್​ ಫೌಂಡೇಷನ್​ ಸ್ಪಂದಿಸುತ್ತಿದೆ. ಅಂದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ನೀಡುತ್ತಿದೆ. ಗುಣಮುಖರಾಗುತ್ತಿದ್ದಂತೆ ಅದನ್ನು ಮರಳಿ ಅವರ ತಂಡಕ್ಕೆ ನೀಡಿದರೆ ಕೆಲಸ ಮುಗಿದಂತೆ.

ಕಳೆದ ಒಂದು ತಿಂಗಳಿಂದ ಸಾರ್ವಜನಿಕರಿಗೆ ಕೆವಿಎನ್​ ಫೌಂಡೇಷನ್​ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಒದಗಿಸುತ್ತಿದೆ. ಸದ್ಯ 200 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳು ಇವರ ಬಳಿ ಇದ್ದು, ನ್ಯೂಯಾರ್ಕ್​ನಿಂದ ಹೆಚ್ಚುವರಿ 400 ಕಾನ್ಸನ್​ಟ್ರೇಟರ್​ಗಳು ಆಗಮಿಸಿವೆ. ಅವೆಲ್ಲವುಗಳ ಸದ್ಬಳಕೆ ಆಗಲಿ ಎಂಬುದು ಕೆವಿಎನ್​ ಫೌಂಡೇಷನ್ ಉದ್ದೇಶ. ಇದೀಗ ಕೇವಲ ಸಿನಿಮಾ, ಕಿರುತೆರೆ ಕೆಲಸಗಾರರು, ಕಲಾವಿದರು, ತಂತ್ರಜ್ಞರು, ಕ್ಯಾಬ್ ಚಾಲಕರು ಹೀಗೆ ಒಟ್ಟಾರೆ ಸಿನಿಮಾರಂಗಕ್ಕೆ ಉಚಿತವಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ನೀಡಲು ಮುಂದೆ ಬಂದಿದ್ದಾರೆ.

ಈಗಾಗಲೇ ನಟಿ ಶ್ವೇತಾ ಚೆಂಗಪ್ಪ ಕೆವಿಎನ್​ ಫೌಂಡೇಷನ್​ ವತಿಯಿಂದ ಆಕ್ಸಿಜನ್ ಕಾನ್ಸನ್​ಟ್ರೇಟರ್ ಬಳಸಿಕೊಂಡಿದ್ದಾರೆ.
ಹಾಗಾದರೆ ಕಾನ್ಸನ್​ಟ್ರೇಟರ್​ ಪಡೆಯುವುದು ಹೇಗೆ? www.kvnfoundation.com ವೆಬ್​ಸೈಟ್​ಗೆ ಹೋಗಿ ಸೂಕ್ತ ಮಾಹಿತಿಯನ್ನು ಅದರಲ್ಲಿ ಸಲ್ಲಿಕೆ ಮಾಡಿದರೆ, ಯಾವುದೇ ವ್ಯಕ್ತಿಯ ಮಧ್ಯಸ್ಥಿಕೆ ಮತ್ತು ಸಂಪರ್ಕ ಇರದೇ ಆಕ್ಸಿಜನ್ ಕಾನ್ಸನ್​ಟ್ರೇಟರ್ ಪಡೆಯಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಕಾನ್ಸನ್​ಟ್ರೇಟರ್​ ಪಡೆಯುವಾಗ ಓರಿಜಿನಲ್ ಆಧಾರ್ ಕಾರ್ಡ್​ ಅನ್ನು ನೀಡಬೇಕು. ಸ್ಯಾಚುರೇಷನ್ ಲೆವಲ್​ 90-92 ಇದ್ದವರಿಗೆ ನೀಡಲಾಗುತ್ತದೆ. ವೈದ್ಯರ ನೀಡಿರುವ ಚೀಟಿಯೂ ತುಂಬ ಮಹತ್ವದ್ದು. ಇವರಿಗೆ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಅವಶ್ಯಕತೆ ಇದೆ ಎಂದು ಬರೆದ ನಂತರವಷ್ಟೇ ಅದನ್ನು ವಿತರಣೆ ಮಾಡಲಾಗುತ್ತದೆ.


5 ಲೀಟರ್​ನ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಗಳು ಕೆವಿಎನ್​ ಫೌಂಡೇಷನ್ ಬಳಿ ಇದ್ದು, ವಾರ, 15ದಿನಗಳ ಅಥವಾ ಸೋಂಕಿತರು ಗುಣಮುಖವಾಗುವ ತನಕ ಯಾವುದೇ ಹಣ ಪಾವತಿಸದೇ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಬಳಕೆ ಮಾಡಬಹುದು. ಗುಣಮುಖರಾದ ಬಳಿಕ ಅದನ್ನು ಕೆವಿಎನ್​ ಫೌಂಡೇಷನ್​ಗೆ ಮರಳಿಸಬೇಕಾಗುತ್ತದೆ. ಅಲ್ಲಿ ಅದರ ರೀ ಸೈಕಲ್ ಮಾಡಿ ಮತ್ತೆ ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತಿದೆ.

Categories
ಸಿನಿ ಸುದ್ದಿ

ಸಿನಿಮಾ ಮಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಿ; ಸಿಎಂ ಭೇಟಿ ಮಾಡಿದ ತಾರಾ ಮನವಿ

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಕಲಾವಿದೆ ತಾರಾ ಅನುರಾಧಾ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕನ್ನಡ ಚಿತ್ರರಂಗದವರು ಹಾಗೂ ಸಿನಿಮಾ ಪತ್ರಕರ್ತರು ಪ್ರಚಾರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮನವಿ ಸಲ್ಲಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಎನ್.ಎಂ.ಸುರೇಶ್ ಹಾಗೂ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಇದ್ದರು.

Categories
ಸಿನಿ ಸುದ್ದಿ

ನಾವಷ್ಟೇ ಚೆನ್ನಾಗಿದ್ದರೆ ಸಾಕಾ! ಎಲ್ಲರಿಗೂ ಸಿಗದ ಲಸಿಕೆ ನಮಗೆ ಬೇಕಿತ್ತಾ? ಬೇಸರದ ಪ್ರಶ್ನೆ ಹೊರ ಹಾಕಿದ್ರು ನಟ ಶ್ರೀಮುರಳಿ

“ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ನಾವು ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿದ್ದೇವೆ. ಆದರೆ, ಬಹುತೇಕ ಜನರಿಗೆ ವ್ಯಾಕ್ಸಿನೇಷನ್‌ ಸಿಕ್ತಾನೇ ಇಲ್ಲ. ನಾವು ತಗೊಂಡಿದ್ದೇವೆ ಅಂತ ನೆಮ್ಮದಿಯಿಂದಿರಬೇಕಾ, ಖುಷಿಪಡಬೇಕಾ ಅಥವಾ ಬೇರೆಯವರಿಗೆ ಸಿಕ್ಕಿಲ್ಲ ಅಂತ ದುಃಖ ಪಡಬೇಕಾ…?

  • ಇದು ನಟ ಶ್ರೀಮುರಳಿ ಅವರ ಬೇಸರದ ಪ್ರಶ್ನೆ. ಇಷ್ಟಕ್ಕೂ ಶ್ರೀಮುರಳಿ ಅವರು ಹೀಗೆ ಒಮ್ಮೆಲೆ ಬೇಸರ ಹೊರ ಹಾಕಲು ಕಾರಣ, ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಜನರಿಗೆ ಸಿಗದ ಲಸಿಕೆ. ಹೌದು, ಶ್ರೀಮುರಳಿ ಅವರ ಜೊತೆ ಆರೋಗ್ಯ ಕುರಿತು ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ, ವ್ಯಾಕ್ಸಿನೇಷನ್‌ ವಿಚಾರ ತೂರಿಬಂದಾಗ, ಶ್ರೀಮುರಳಿ ಅವರು ಬೇಸರದಲ್ಲೇ ಒಂದಷ್ಟು ಮಾತುಗಳನ್ನು ಹೊರಹಾಕಿದ ಪರಿ ಇದು. ಇಡೀ ಜಗತ್ತೇ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದೆ. ಕಣ್ಣ ಮುಂದೆಯೇ ಜೀವಗಳ ಹಾನಿಯಾಗುತ್ತಿದೆ. ಸರ್ಕಾರ ಅಗತ್ಯ ಕ್ರಮ ಕೈಗೊಂಡರೂ, ಹೆಮ್ಮಾರಿ ಕೊರೊನಾ ತನ್ನ ಅರ್ಭಟ ಮುಂದುವರೆಸಿದೆ. ಈ ನಿಟ್ಟಿನಲ್ಲಿ ನಟ ಶ್ರೀಮುರಳಿ ಅವರು, ಎಲ್ಲರಿಗೂ ಆದಷ್ಟು ಬೇಗ ವ್ಯಾಕ್ಸಿನ್‌ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತುಂಬಾ ವಿನಮ್ರದಿಂದ ಮನವಿ ಮಾಡಿಕೊಂಡಿದ್ದಾರೆ. ವ್ಯಾಕ್ಸಿನೇಷನ್‌ ಬಗ್ಗೆ ನಟ ಶ್ರೀಮುರಳಿ “ಸಿನಿ ಲಹರಿ” ಜೊತೆ ಹೇಳಿದ್ದಿಷ್ಟು…

ಜನರ ಪ್ರಶ್ನೆಗಳೇ ಕಾಡುತ್ತಿವೆ…
” ನನ್ನ ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ನಾವು ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿದ್ದೇವೆ. ನಾವು ರಿಜಿಸ್ಟ್ರೇಷನ್‌ ಮಾಡಿಸಿಕೊಂಡ್ವಿ. ಸಿಕ್ತು ಹಾಕಿಸಿಕೊಂಡ್ವಿ. ಆದರೆ, ಬಹುತೇಕ ಜನರಿಗೆ ವ್ಯಾಕ್ಸಿನೇಷನ್‌ ಸಿಕ್ತಾನೇ ಇಲ್ಲ. ಈಗ ನಾವು ವ್ಯಾಕ್ಸಿನ್ ತಗೊಂಡಿದ್ದೇವೆ ಅಂತ. ನೆಮ್ಮದಿಯಿಂದಿರಬೇಕಾ, ಖುಷಿಪಡಬೇಕಾ ಅಥವಾ ಬೇರೆಯವರಿಗೆ ಸಿಕ್ಕಿಲ್ಲ ಅಂತ ದುಃಖ ಪಡಬೇಕಾ ಗೊತ್ತಾಗುತ್ತಿಲ್ಲ. ಜಾಗೃತಿ ಮೂಡಿಸಲು ಲಸಿಕೆಯನ್ನು ನೀವೂ ಹಾಕಿಸಿಕೊಳ್ಳಿ ಎಂಬ ಪೋಸ್ಟ್‌ ಮಾಡಿದರೆ, ಹಲವು ಪ್ರಶ್ನೆಗಳು ಎದುರಾಗುತ್ತಿವೆ. ನಿಮಗೇನೋ ಸಿಕ್ಕಿದೆ, ನಮಗಿನ್ನೂ ಸಿಕ್ಕಿಲ್ಲ. ಸರ್ಕಾರ ಲಸಿಕೆ ವ್ಯವಸ್ಥೆ ಮಾಡಿಲ್ಲ. ನಾವೂ ಕಾಯುತ್ತಲೇ ಇದ್ದೇವೆ ಎಂಬ ಸಂದೇಶಗಳು ಬರುತ್ತಿವೆ. ಇದರಿಂದ ನಿಜಕ್ಕೂ ಬೇಸರವಾಗಿದೆ. ನಾವಷ್ಟೇ ಚೆನ್ನಾಗಿದ್ದರೆ ಸಾಕಾ? ಎಲ್ಲರಿಗೂ ಸಿಗದ ಲಸಿಕೆ ನಮಗೆ ಬೇಕಿತ್ತಾ ಎಂಬ ಪ್ರಶ್ನೆ ನನ್ನನ್ನೇ ಕಾಡುತ್ತಿದೆ. ಎಲ್ಲರಿಗೂ ಸಿಗುತ್ತೆ ಎಂಬ ಖುಷಿಯಲ್ಲೇ ನಾವೂ ಹಾಕಿಸಿಕೊಂಡ್ವಿ. ಹೀಗೆಲ್ಲಾ ಆಗುತ್ತೆ ಎಂಬುದು ಗೊತ್ತಿದ್ದರೆ, ಎಲ್ಲರಿಗೂ ಸಿಗುವ ಸಮಯದಲ್ಲೇ ನಮಗೂ ಸಿಗಲಿ ಅಂತ ಸುಮ್ಮನಾಗುತ್ತಿದ್ದೆವು. ಜನರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ.

ಇಲ್ಲಿ ಯಾರನ್ನೂ ದೂರುತ್ತಿಲ್ಲ…
ಜನರು ನೋವಲ್ಲಿದ್ದಾರೆ. ಲಸಿಕೆಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಸಿಕ್ಕರೆ, ಬಹಳಷ್ಟು ಮಂದಿಗೆ ಸಿಕ್ಕಿಲ್ಲ. ಹೀಗಾದರೆ, ಅವರ ಮನಸ್ಥಿತಿ ಹೇಗಿರಬೇಡ, ಸಹಜವಾಗಿಯೇ ಅವರು ಬೇಸರಗೊಳ್ಳುತ್ತಿದ್ದಾರೆ. ಇಲ್ಲಿ ಯಾರ ಬಗ್ಗೆಯೂ ದೂರುತ್ತಿಲ್ಲ. ವ್ಯವಸ್ಥೆಯಲ್ಲಿ ಲೋಪ ಎಲ್ಲಾಗಿದೆ ಅನ್ನೋದನ್ನು ಕಂಡುಕೊಂಡು ಸರಿಪಡಿಸುವಂತಾಗಬೇಕಿದೆ. ಇಲ್ಲಿ ಯಾರನ್ನು ಪ್ರಶ್ನೆ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೇವೆ. ಸರ್ಕಾರ ಕೊರೊನಾ ವಿಷಯದಲ್ಲಿ ಸಾಕಷ್ಟು ಶ್ರಮಿಸಿದೆ. ಅಗತ್ಯ ಕ್ರಮ ಕೈಗೊಂಡಿದೆ.

ಆ ವಿಷಯದಲ್ಲಿ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಆದರೂ, ಲಸಿಕೆ ಅನ್ನೋದು ಮುಖ್ಯವಾದ ಅಂಶ. ಆದರೆ, ಲಸಿಕೆ ಸರಿಯಾಗಿ ಸಿಗುತ್ತಿಲ್ಲ ಎಂಬ ಕೂಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲೆಲ್ಲಿ ಲಸಿಕೆ ಸಮಸ್ಯೆ ಎದುರಾಗಿದೆ, ಯಾಕಾಗಿದೆ ಎಂಬುದರ ಬಗ್ಗೆ ಅರಿತು, ಕ್ರಮ ಕೈಗೊಳ್ಳಬೇಕು. ಕೂಡಲೇ ಎಲ್ಲರಿಗೂ ವ್ಯಾಕ್ಸಿನೇಷನ್‌ ಸಿಗುವಂತಾಗಬೇಕು ಅನ್ನೋದು ನನ್ನ ಕಳಕಳಿಯ ಮನವಿ.

ಎಲ್ಲರಿಗೂ ಲಸಿಕೆ ಸಿಗುವಂತಾಗಲಿ
ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ನಮಗೇಕೆ? ನಮ್ಮಲ್ಲಿ ಜನಸಂಖ್ಯೆ ಹೆಚ್ಚಿದೆ. ಮೊದಲು ಇತ್ತ ಗಮನಿಸಬೇಕು. ಕೆಲವರಿಗಷ್ಟೇ ಲಸಿಕೆ ಸಿಕ್ಕರೆ ಹೇಗೆ? ಬೇರೆಯವರದ್ದೂ ಜೀವವಲ್ಲವೇ? ನಮ್ಮ ಸುತ್ತಮುತ್ತ ಇರೋರಿಗೆ ಸಿಗುತ್ತಿಲ್ಲ. ಎಲ್ಲರಿಗೂ ಬದುಕುವ ಹಕ್ಕಿದೆ ಅಂದಮೇಲೆ, ಎಲ್ಲರನ್ನೂ ಸಮನಾಗಿ ಕಾಣಬೇಕು. ಎಲ್ಲರಿಗೂ ಲಸಿಕೆ ಹಾಕುವ ವ್ಯವಸ್ಥೆ ಆಗಬೇಕು. ಕೆಲವರಷ್ಟೇ ಲಸಿಕೆ ಪಡೆದಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಬಾರದು. ಸರ್ಕಾರದ ಬಗ್ಗೆಯೂ ತಪ್ಪು ಕಲ್ಪನೆ ಬರಬಾರದು. ನಾವು ಜಾಗೃತಿಗಾಗಿ ಲಸಿಕೆ ಹಾಕಿಸಿಕೊಳ್ಳಿ ಅಂದಾಗ, ನಮಗಿನ್ನೂ ಸಿಕ್ಕೇ ಇಲ್ಲ ಎಂಬ ಮಾತುಗಳನ್ನುಕೇಳಿದಾಗ ನಿಜಕ್ಕೂ ಬೇಸರವಾಗುತ್ತದೆ.

ಇದು ಖುಷಿ ಪಡೋ ಸಮಯವಲ್ಲ…
ಸರ್ಕಾರ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ. ಲಸಿಕೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಶ್ರಮ ಹಾಕಿದರೆ, ಎಲ್ಲರಿಗೂ ಲಸಿಕೆ ಕೊಡಿಸಲು ಸಾಧ್ಯವಿದೆ. ಈ ಕೂಡಲೇ ಸರ್ಕಾರ, ಒಂದು ಪ್ಲಾನಿಂಗ್‌ ಮಾಡಿಕೊಂಡು, ಒಂದೊಂದು ಕಡೆ ಇಷ್ಟಿಷ್ಟು ಮಂದಿ ಇಂತಹ ಕೆಲಸ ಮಾಡಬೇಕು, ಹೀಗೇ ಮಾಡಬೇಕು ಅಂತ ಯೋಜನೆ ರೂಪಿಸಿ, ಲಸಿಕೆ ಅಗತ್ಯತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಹೆಚ್ಚಿನ ಲಸಿಕೆ ತರಿಸಿ, ರಾಜ್ಯದ ಜನತೆಗೆ ಕೊಡುವಲ್ಲಿ ಮುಂದಾಗಬೇಕು. ನಾವಷ್ಟೇ ಹಾಕಿಸಿಕೊಂಡು ಖುಷಿಪಡುವ ಸಮಯ ಇದಲ್ಲ. ತುಂಬಾ ನೋವಿನಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. ದಯವಿಟ್ಟು, ಸರ್ಕಾರ ವ್ಯಾಕ್ಸಿನೇಷನ್‌ ಕಡೆ ಗಮನಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದಿದ್ದಾರೆ ಶ್ರೀಮುರಳಿ.

  • ಅದೇನೆ ಇರಲಿ, ಕೋವಿಡ್‌ಗೆ ಈಗ ಲಸಿಕೆಯೇ ಸಂಜೀವಿನಿ. ಕೊರೊನಾ ಮುಕ್ತವಾಗಬೇಕಾದರೆ ಲಸಿಕೆ ಅನಿವಾರ್ಯ ಅಂತ ಸರ್ಕಾರವೇ ಹೇಳುತ್ತಿದೆ. ಅದೇ ಕಾರಣಕ್ಕೆ ಈಗ ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ಈಗಾಗಲೇ ಸಾಕಷ್ಟು ಸೆಲಿಬ್ರಿಟಿಗಳು ಲಸಿಕೆ ಹಾಕಿಸಿಕೊಂಡು, ಜನ ಸಾಮಾನ್ಯರು ಲಸಿಕೆ ಹಾಕಿಸಿಕೊಂಡು ಕೊರೊನಾದಿಂದ ಮುಕ್ತರಾಗಿ ಅಂತ ಹೇಳುತ್ತಿದೆ. ಸರ್ಕಾರದ ಆಶಯದಂತೆ ಜನರಿಗೆ ತುರ್ತಾಗಿ ಲಸಿಕೆ ಸಿಕಿದ್ದರೆ ಒಳ್ಳೆಯದ್ದಿತ್ತು. ಆದರೆ ಈಗ ಎಲ್ಲರಿಗೂ ಲಸಿಕೆ ಸಿಗುವುದು ಕಷ್ಟ. ಸರ್ಕಾರ ಹಂತ ಹಂತವಾಗಿ ಜನರಿಗೆ ಲಸಿಕೆ ನೀಡುತ್ತಿದೆ. ಲಭ್ಯತೆಯ ಆಧಾರದ ಮೇಲೆ ಸರ್ಕಾರ ಲಸಿಕೆ ನೀಡುವ ಕಾರ್ಯ ಮಾಡುತ್ತಿದೆ.
    ಇವತ್ತಿನ ಪರಿಸ್ಥಿತಿ ಸರಿ ಹೋಗಬೇಕಾದರೆ ಸರ್ಕಾರ ತಕ್ಷಣ ಎಲ್ಲರಿಗೂ ಏಕಕಾಲದಲ್ಲೇ ಲಸಿಕೆ ಸಿಗುವಂತೆ ಮಾಡಬೇಕು. ಆಗ ಮಾತ್ರ ಈ ಕೊರೊನಾ ಹೊಡೆದೋಡಿಸಲು ಸಾಧ್ಯ.
Categories
ಸಿನಿ ಸುದ್ದಿ

ಅಣ್ಣಾವ್ರಿಗೆ ಯೋಗ ಹೇಳಿಕೊಡುತ್ತಿದ್ದ ಯೋಗ ಗುರು ಹೊನ್ನಪ್ಪ ನಾಯ್ಕರ್ ನಿಧನ

 
ವರನಟ ಡಾ.ರಾಜಕುಮಾರ್ ಸೇರಿದಂತೆ ಅವರ ಕುಟುಂಬಕ್ಕೆ ಯೋಗ ಹೇಳಿಕೊಡುತ್ತಿದ್ದ ಹೊನ್ನಪ್ಪ ನಾಯ್ಕರ್ (90) ಕೊರೊನಾದಿಂದ ನಿಧನರಾಗಿದ್ದಾರೆ.
ಹೊನ್ನಪ್ಪ ನಾಯ್ಕರ್  ಅವರು ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ   ಕಾರ್ಯನಿರ್ವಹಿಸುತ್ತಿದ್ದರು.  ವರ ನಟ ಡಾಕ್ಟರ್ ರಾಜಕುಮಾರ್ ಅವರು ಸೇರಿದಂತೆ  ಡಾಕ್ಟರ್ ರಾಜಕುಮಾರ್ ಅವರ  ಕುಟುಂಬದವರಿಗೆ ಯೋಗಾಸನವನ್ನು  ಹೇಳಿಕೊಡುವ ಮೂಲಕ ಯೋಗ ಗುರುವಾಗಿದ್ದರು. ಅಲ್ಲದೆ ನಾಡಿನ  ಅತ್ಯಂತ ಗಣ್ಯವ್ಯಕ್ತಿಗಳಿಗೆ  ಯೋಗಾಸನವನ್ನು ಪ್ರತಿ ನಿತ್ಯ  ಹೇಳಿಕೊಡುತ್ತಿದ್ದ ವ್ಯಕ್ತಿಯಾಗಿದ್ದರು.

ಇವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಜೆಪಿ ನಗರದಲ್ಲಿ ವಾಸವಿದ್ದರು. ಕನಕಪುರದ ಬಳಿ ಇವರ ಯೋಗಾಶ್ರಮವಿತ್ತು. ಇವರ ಅಂತ್ಯಕ್ರಿಯೆಯನ್ನು  ಕನಕಪುರದ  ನಾಗದೇವನಹಳ್ಳಿ  ಬಳಿ  ನೆರವೇರಿಸಲು  ಅವರ ಕುಟುಂಬಸ್ಥರು  ತೀರ್ಮಾನಿಸಿದ್ದಾರೆ.   ಹೊನ್ನಪ್ಪ ನಾಯ್ಕರ್ ಅವರ ಆತ್ಮೀಯರಾದ ಎಸ್. ಎ. ಚಿನ್ನೇಗೌಡ ಅವರು  ಮೃತರ  ಆತ್ಮಕ್ಕೆ  ಶಾಂತಿ ಸಿಗಲೆಂದು ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ನಿರ್ದೇಶಕ ಪ್ರಶಾಂತ್‌ ರಾಜ್‌ ಆರೋಗ್ಯದಲ್ಲಿ ಚೇತರಿಕೆ

ಕೋವಿಡ್‌ ಸೋಂಕು ದೃಢ ಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ʼಲವ್‌ ಗುರುʼ ಹಾಗೂ ʼಜೂಮ್‌ʼ ಚಿತ್ರಗಳ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ರಾಜ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕೊಂಚ ಗಂಭೀರವೇ ಎನಿಸಿದ್ದ ಆರೋಗ್ಯದ ಪರಿಸ್ಥಿತಿ ಚೇತರಿಕೆ ಕಂಡಿದ್ದು, ಇದು ಖುಷಿ ತಂದಿದೆ ಎಂಬುದಾಗಿ ನಿರ್ದೇಶಕ ಪ್ರಶಾಂತ್‌ ರಾಜ್‌ ಅವರೇ ಮೆಸೇಜ್‌ ಮಾಡಿದ್ದಾರೆ. ಹಾಗೆಯೇ ತಾವೀಗ ಕೊಂಚ ಚೇತರಿಸಿಕೊಂಡಿದ್ದನ್ನು ವಿಡಿಯೋ ಮಾಡಿ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್‌ ಸೋಂಕು ದೃಢಪಟ್ಟ ನಂತರ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಹಾಗೆಯೇ ಆರೋಗ್ಯದಲ್ಲಿ ಕೊಂಚ ಏರುಪೇರು ಆದಾಗ ಅನಿವಾರ್ಯವಾಗಿ ನಾನು ಆಸ್ಪತ್ರೆಗೆ ದಾಖಲಾದೆ.

ಆರಂಭದಲ್ಲಿ ಆರೋಗ್ಯದ ಸಮಸ್ಯೆ ಕೊಂಚ ಗಂಭೀರವೇ ಎನಿಸಿತ್ತು. ಕೊನೆಗೂ ದೇಹ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇಷ್ಟರಲ್ಲಿಯೇ ಕಂಪ್ಲೀಟ್‌ ಗುಣಮುಖವಾಗುವ ವಿಶ್ವಾಸವಿದೆ. ಎಂದಿನಂತೆ ಸಿನಿಮಾ ಕೆಲಸಗಳನ್ನು ಶುರು ಮಾಡಬೇಕಿದೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ ಎಂಬುದಾಗಿ ನಿರ್ದೇಶಕ ಪ್ರಶಾಂತ್‌ ರಾಜ್‌ ಹೇಳಿದ್ದಾರೆ

error: Content is protected !!