Categories
ಸಿನಿ ಸುದ್ದಿ

ಕರಾವಳಿ ಪ್ರತಿಭೆಗಳ ಹೊಸ ಪೆನ್ಸಿಲ್ ಬಾಕ್ಸ್, ಏಪ್ರಿಲ್‌ 9 ಕ್ಕೆ ರಾಜ್ಯಾದ್ಯಂತ ಗ್ರಾಂಡ್‌ ‌ ರಿಲೀಸ್‌

“ಪೆನ್ಸಿಲ್‌ ಬಾಕ್ಸ್‌ʼ ಹೆಸರಿನಲ್ಲೊಂದು ಮಕ್ಕಳ ಸಿನಿಮಾ ರೆಡಿಯಾಗಿದೆ. ದೃಶ್ಯ ಮೂವೀಸ್ ಬ್ಯಾನರಿನಲ್ಲಿ ಇದು ನಿರ್ಮಾಣಗೊಂಡಿದೆ. ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆಯ ವಸ್ತು ಸ್ಥಿತಿ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಬೇಕು ಎಂಬ ಬಯಕೆ. ಇದಾವುದರ ಪರಿವೇ ಇಲ್ಲದೆ ಮುಗ್ಧ ಮಕ್ಕಳ ಮುಗ್ಧ ಪ್ರಪಂಚ, ನಗು ತರಿಸುವ ಹಾಸ್ಯ ಸನ್ನಿವೇಶಗಳೊಂದಿಗೆ ಸಾಗುವ ಕಥೆ ಇದಾಗಿದೆಯಂತೆ. ಸಿನಿಮಾ ಈಗ ರಿಲೀಸ್‌ ಗೆ ರೆಡಿ ಆಗಿದೆ. ಅ ನಿಟ್ಟಿನಲ್ಲಿಯೇ ಚಿತ್ರ ತಂಡ ಸಿದ್ಧತೆ ನಡೆಸಿದೆ. ಅದೇ ನೆಪದಲ್ಲಿ ಚಿತ್ರದ ತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿತ್ತು.

ಈ ಚಿತ್ರಕ್ಕೆ ದಯಾನಂದ ಎಸ್‌ ರೈ ಬೆಟ್ಟಂಪಾಡಿ ನಿರ್ಮಾಪಕರು. ರಝಾಕ್‌ ಪತ್ತೂರು ಇದರ ನಿರ್ದೇಶಕರು. ಬಹುತೇಕ ಹೊಸಬರು. ಒಂದೊಳ್ಳೆಯ ಕಥೆಯ ಮೂಲಕ ಮಕ್ಕಳ ಸಿನಿಮಾ ಮಾಡ್ಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟಿದೆ. ತುಳುನಾಡಿನ ಹಾಸ್ಯ ಕಲಾವಿದರ ಕನ್ನಡದ ಝಲಕ್ ಇಲ್ಲಿದೆ. ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಮತ್ತು ನವರಸ ರಾಜ ಭೋಜರಾಜ ವಾಮಂಜೂರು ಅವರ ಪಂಚಿಂಗ್ ಡೈಲಾಗ್ ಈ ಚಿತ್ರದಲ್ಲಿದೆ. ಕಾಮಿಡಿ ಅನ್ನೋದಕ್ಕಿಂತ ಕಥಾ ವಸ್ತು ಇಲ್ಲಿ ಗಮನಾರ್ಹವಾಗಿದೆ. ” ಕಥೆ ಇಲ್ಲಿ ಪ್ರಮುಖ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸದಲ್ಲೇ ಮಕ್ಕಳು ನೊಂದು ಹೋಗುತ್ತಿದ್ದಾರೆ. ಅದೆಲ್ಲ ಹೇಗೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ʼ ಅಂತ ನಿರ್ದೇಶಕ ರೈಝಾಕ್‌ ಪುತ್ತೂರು ಹೇಳಿದರು.

ಚಿತ್ರದಲ್ಲಿ ಡಾ. ಅಭಿಷೇಕ್ ರಾವ್ , ವೈಷ್ಣವಿ ರವಿ, ಕ್ಷಿತಿ ಕೆ.ಜನ್ಯ ಪ್ರಸಾದ್, ಅಪೇಕ್ಷಾ ಪೈ, ಶಿವಾನಿ ಕೊಪ್ಪ ಮುಂತಾದವರು ಹಾಡಿದ್ದಾರೆ. ದೀಕ್ಷಾ ಡಿ‌ ರೈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮಂಗಳೂರು, ಕುಂದಾಪುರ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಎಪ್ರಿಲ್‌ ೯ ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

Categories
ಸಿನಿ ಸುದ್ದಿ

ನಟಿ ಎಸ್ಟರ್‌ ನರೋನ್ಹಾ ಈಗ ಸಂಗೀತ ನಿರ್ದೇಶಕಿ! ದಿ ವೇಕೆಂಟ್‌ ಹೌಸ್‌ ಮೂಲಕ ಡೈರೆಕ್ಟರ್‌ ಎನಿಸಿಕೊಂಡ ಶ್ರೇಯಸ್‌ ಚಿಂಗ

ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಒಂದು ವಿಭಾಗದಲ್ಲಿ ಕಲಿತವರು ಮೆಲ್ಲನೆ ಒಂದೊಂದೇ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೇಲೇಳಬೇಕು, ಗುರುತಿಸಿಕೊಂಡು ಏನಾದರೊಂದು ಸಾಧನೆ ಮಾಡಬೇಕು ಅನ್ನುವ ಛಲ ಬಂದೇ ಬರುತ್ತೆ. ಈ ನಿಟ್ಟಿನಲ್ಲಿ ಯುವ ನಟ ಶ್ರೇಯಸ್‌ ಚಿಂಗ ಕೂಡ ಸೇರಿದ್ದಾರೆ.

ಇವರೊಬ್ಬರೇ ಅಲ್ಲ, ಇವರೊಂದಿಗೆ ನಟಿ ಎಸ್ಟರ್‌ ನರೋನ್ಹಾ ಕೂಡ ಸೇರಿದ್ದಾರೆ ಅನ್ನೋದು ಈ ಹೊತ್ತಿನ ವಿಶೇಷ. ಹೌದು, ನಟನಾಗಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್‌ ಚಿಂಗ ಈಗ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ನಟಿಯಾಗಿದ್ದ ಎಸ್ಟರ್‌ ನರೋನ್ಹಾ ಅವರು ಕೂಡ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂದಹಾಗೆ, ಶ್ರೇಯಸ್‌ ಚಿಂಗ ನಿರ್ದೇಶನದ ಚಿತ್ರಕ್ಕೆ “ದಿ ವೇಕೆಂಟ್‌ ಹೌಸ್‌” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರ ಕನ್ನಡದ ಜೊತೆಯಲ್ಲಿ ಕೊಂಕಣಿ ಭಾಷೆಯಲ್ಲೂ ತಯಾರಾಗುತ್ತಿದೆ ಎಂಬುದು ವಿಶೇಷ.

ಚಿತ್ರವನ್ನು ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್‌ ಮೂಲಕ ಜಾನೆಟ್‌ ನೊರೊನ್ಹಾ ನಿರ್ಮಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಏಪ್ರಿಲ್‌ ೫ರಂದು ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ.
ನಿರ್ದೇಶಕ ಶ್ರೇಯಸ್‌ ಚಿಂಗ ಅವರು ನಟನೆ ಜೊತೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಅವರು ಸುಮಾರು 150೦ಕ್ಕೂ ಹೆಚ್ಚು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅವರಿಗೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇದೆ. ಇನ್ನು ನಟಿ ಎಸ್ಟರ್‌ ನರೋನ್ಹಾ ಅವರಿಗೂ ಇದು ಮೊದಲ ಸಂಗೀತ ನಿರ್ದೇಶನದ ಅನುಭವ. ಅವರಿಗೂ ಒಳ್ಳೆಯ ಕಥೆ ಇರುವ ಚಿತ್ರಕ್ಕೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.

ನಿರ್ಮಾಪಕ ಜಾನೆಟ್‌ ನೊರೊನ್ಹಾ ಅವರಿಗೆ ಇದು ಮೂರನೇ ನಿರ್ಮಾಣದ ಸಿನಿಮಾ. ಈ ಹಿಂದೆ ಅವರು “ಸೋಫಿಯಾ ಎ ಡ್ರೀಮ್‌ ಗರ್ಲ್”‌ ಎಂಬ ಸಿನಿಮಾ ಮಾಡಿದ್ದರು. ಇದಕ್ಕೆ 2018ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ನಂತರ ಜಾಕಿಶ್ರಾಫ್ ಮತ್ತು ಎಸ್ಟರ್ ನೊರೊನ್ಹಾ ನಟಿಸಿದ “ಕಾಂತಾರ್” ೆಂಬ ಕೊಂಕಣಿ ಸಿನಿಮಾ ಕೂಡ ನಿರ್ಮಿಸಿದ್ದರು. ವಿದೇಶದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಈಗ “ದಿ ವೇಕೆಂಟ್‌ ಹೌಸ್‌” ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಎಸ್ಟರ್‌ ನರೋನ್ಹಾ ಅವರು ಸಂಗೀತದ ಜೊತೆ ಸಾಹಿತ್ಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ನಿರ್ದೇಶಕರೂ ಇಲ್ಲಿ ನಿರ್ದೇಶನದ ಜೊತೆ ಮಾತುಗಳನ್ನು ಪೋಣಿಸಿದ್ದಾರೆ. ವಿಜಯ್‌ ರಾಜ್‌ ಸಂಕಲನವಿದೆ. ಸದ್ಯ ಮೊದಲ ಪೋಸ್ಟರ್‌ ರಿಲೀಸ್‌ ಆಗಿದ್ದು, ಇಷ್ಟರಲ್ಲೇ ಸಿನಿಮಾದ ಪೂರ್ಣ ಮಾಹಿತಿ ಕೊಡುವುದಾಗಿ ನಿರ್ದೇಶಕ ಶ್ರೇಯಸ್‌ ಚಿಂಗ ಹೇಳಿದ್ದಾರೆ.

Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಬಳ್ಳಾರಿ ಸೀಮೆಯ ಅರುಣ್ ನ ಅಮರ ಪ್ರೇಮ – ಕುತೂಹಲದ ರೋಮ್ – ಕಾಮ್ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಪ್ರವೀಣ್ !

ಯುವ ಲೇಖಕ ಹಾಗೂ ಕಥೆಗಾರ ಜಿ.ಪ್ರವೀಣ್‌ ಕುಮಾರ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಪ್ರವೀಣ್‌ ಸಿನಿಮಾಕ್ಕೆ ಬರಹಗಾರರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭವದಲ್ಲೀಗ “ಅಮರ ಪ್ರೇಮಿ ಅರುಣ್‌ʼ ಹೆಸರಿನ ಚಿತ್ರಕ್ಕೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಜತೆಗೆ ಸಂಭಾಷಣೆ ಕೂಡ ಅವರದ್ದೆ. ಬೆಂಗಳೂರಿನ ಬನಶಂಕರಿ ಧರ್ಮಗಿರಿ ಮಂಜುನಾಥ್‌ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೆ ಚಿತ್ರದ ಟೈಟಲ್‌ ಲಾಂಚ್‌ ಹಾಗೂ ಮುಹೂರ್ತ ಕಾರ್ಯಕ್ರಮ ನಡೆಯಿತು.

ದೇವರ ಮೇಲೆ ಸೆರೆಹಿಡಿಯಲಾದ ಚಿತ್ರದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ತೋರಿದರು. ನಿರ್ದೇಶಕ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್  ಸೇರಿದಂತೆ  ಆರು ಜನ ನಿರ್ದೇಶಕರು ಶೀರ್ಷಿಕೆ ಅನಾವರಣ ಮಾಡಿದರು. ಟೈಟಲ್‌ ಲಾಂಚ್‌ ಹಾಗೂ ಚಿತ್ರದ ಮುಹೂರ್ತದ ನಂತರ ಚಿತ್ರ ತಂಡವು ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ನಿರ್ದೇಶಕ ಜಿ. ಪ್ರವೀಣ್‌ ಕುಮಾರ್ ಪ್ರಕಾರ ಶುದ್ಧ ರೊಮ್ಯಾಂ ಟಿಕ್‌ ಹಾಗೂ ಕಾಮಿಡಿ ಕಥಾ ಹಂದರದ ಚಿತ್ರ. ಇಡೀ ಕಥೆ ಬಳ್ಳಾರಿ ಸುತ್ತಮುತ್ತ ನಡೆಯಲಿದೆಯಂತೆ. ಕಥೆ ಅಲ್ಲಿಗೆ ಸಂಬಂಧಿಸಿ ದ್ದರಿಂದ ಅಲ್ಲಿನ ಭಾಷೆಯ ಸೊಗಡು ಚಿತ್ರದ ಸಂಭಾಷಣೆ ಯಲ್ಲಿದೆಯಂತೆ.

ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು ಎಂದ ಪ್ರವೀಣ್ ಕುಮಾರ್, ಯುಗಾದಿ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದರು. ಪ್ರವೀಣ್‌ ಅವರಿಗೆ ಇದು ಚೊಚ್ಚಲ ಚಿತ್ರ. ಕಥೆಗಾರರಾಗಿ ಸಿನಿಮಾ ರಂಗಕ್ಕೆ ಪರಿಚಯವಾದ ಪ್ರವೀಣ್‌ ಕುಮಾರ್‌ ಇದುವರೆಗೂ ಗಿರೀಶ್‌ ಕಾಸರವಳ್ಳಿ, ಯೋಗಾರಾಜ್‌ ಭಟ್‌, ಅಭಯ್‌ ಸಿಂಹ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಗಾಗಿ ಶಿಷ್ಯನನ್ನು ಶುಭ ಹಾರೈಸಲು ಅವರೆಲ್ಲರೂ ಬಂದಿದ್ದರು. ಪ್ರವೀಣ್‌ ಗೆ ಒಳ್ಳೆಯದಾಗಲಿ ಅಂದರು.

ಚಿತ್ರಕ್ಕೆ  ಕಿರಣ್ ರವೀಂದ್ರನಾಥ್‌ ಅವರ ಸಂಗೀತ ನಿರ್ದೇಶನವಿದೆ. ಪ್ರವೀಣ್‌ ಎಸ್‌ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಸಾಗಿತ್ಯವಿದೆ. ಮಂಡ್ಯ ಮಂಜು ಇದರ ಕಾರ್ಯಕಾರಿ ನಿರ್ಮಾಪಕರು. ನಿರಂಜನ್ ದೇವರಮನೆ ಸಂಕಲನ ಹಾಗೂ ಷಣ್ಮುಖ ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಉಳಿದಂತೆ  ಹರಿಶರ್ವಾ ಇದರ ಹೀರೋ. ದೀಪಿಕಾ ಆರಾಧ್ಯ ನಾಯಕಿ . ಭೂಮಿಕಾ  ರಘು, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು  ಚಿತ್ರದಲ್ಲಿದ್ದು, ಯುಗಾದಿ ನಂತರ ಚಿತ್ರದ ಚಿತ್ರೀಕರಣ ಶುರುವಾಗುತ್ತಿದೆ. ಒಂದೇ ಹಂತದಲ್ಲಿ ಚಿತ್ರ ತಂಡ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳ ಚಿತ್ರೀಕರಣ ಮುಗಿಸಿಕೊಂಡು ಬರಲಿದೆಯಂತೆ. ಒಲವು ಸಿನಿಮಾ ಬ್ಯಾನರ್‌ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ದೇಶಕ ಪ್ರವೀಣ್‌ ಕುಮಾರ್‌ ಸೇರಿದಂತೆ ಅವರ ಗೆಳೆಯರು ಇದರ ರೂವಾರಿಗಳು. ತಂಡಕ್ಕೆ ಒಳ್ಳೆಯದಾಗಲಿ.

Categories
ಸಿನಿ ಸುದ್ದಿ

ಪ್ಲೀಸ್‌ ಸಿಎಂ ಸರ್‌ ಯುವರತ್ನ ನೋಡೋದಿಕ್ಕೆ ಅವಕಾಶ ಮಾಡಿ ಕೊಡಿ-ಆ ಮೂವರು ಮುದ್ದು ಮಕ್ಕಳು ಮಾಡಿಕೊಂಡರು ಮನವಿ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಯುವರತ್ನ ಚಿತ್ರದ ರಿಲೀಸ್‌ ಬೆನ್ನಲೇ ಸರ್ಕಾರ ಚಿತ್ರಮಂದಿರದಲ್ಲಿನ ಶೇ. ೫೦ ರಷ್ಟು ಸೀಟು ಭರ್ತಿಗೆ ಆದೇಶಿಸಿದೆ. ಸಹಜವಾಗಿಯೇ ಇದು ಪವರ್‌ ಸ್ಟಾರ್‌ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಫ್ಯಾನ್ಸ್‌ ಯುವರತ್ನಕ್ಕೆ ಹಂಡ್ರಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಸಿಗಲಿ ಅಂತ ಒತ್ತಾಯಿಸುತ್ತಿದ್ದಾರೆ. ವಿಶೇಷವಾಗಿ ಮೂವರು ಮುದ್ದು ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

” ಪ್ಲೀಸ್‌ ಸರ್‌ ಯುವರತ್ನ ಚಿತ್ರಕ್ಕೆ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಿ, ನಾವು ಮಾಸ್ಕ್‌ ಹಾಕ್ಕೊಂಡು ಸ್ಯಾನಿಟೈಸ್‌ ಮಾಡಿಕೊಂಡು ಸಿನಿಮಾ ನೋಡುತ್ತೇವೆʼ ಅಂತ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾಳೆ( ಭಾನುವಾರ) ನಮ್ಮ ಪೋಷಕರು ಯುವರತ್ನ ಸಿನಿಮಾಗೆ ಟಿಕೆಟ್‌ ಬುಕ್‌ ಮಾಡಿದ್ದಾರೆ. ಅಪ್ಪು ಅಂದ್ರೆ ನಮಗೆ ತುಂಬಾ ಇಷ್ಟ , ನಾವು ಸಿನಿಮಾ ನೋಡಬೇಕು, ಟಿಕೆಟ್‌ ಕ್ಯಾನ್ಸಲ್‌ ಆಗಬಾರದು ಅಂತ ಆ ಮೂವರು ಮಕ್ಕಳೂ ವಿಡಿಯೋದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.

ಮತ್ತೊಂದೆಡೆ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡ ವಿನೂತನವಾಗಿ ಹಂಡ್ರೆಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದೆ. ಅದಕ್ಕಂತಲೇ ವಿನೂತನವಾದ ಪೋಸ್ಟರ್‌ ಲಾಂಚ್‌ ಮಾಡಿದೆ.

Categories
ಸಿನಿ ಸುದ್ದಿ

ಏಪ್ರಿಲ್‌ 5ರಿಂದ ಮದಗಜ ಚಿತ್ರೀಕರಣ ಶುರು ನಾಲ್ಕನೇ ಹಂತದ ಶೂಟಿಂಗ್‌ಗೆ ಟೀಮ್‌ ರೆಡಿ

ಶ್ರೀಮುರಳಿ ಅಭಿನಯದ “ಮದಗಜ” ಏಪ್ರಿಲ್‌ 5ರಿಂದ ಶುರುವಾಗಲಿದೆ. ಉಮಾಪತಿ ನಿರ್ಮಾಣದ ಈ ಚಿತ್ರದ ಚಿತ್ರೀಕರಣದ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ದೊಡ್ಡ ಮಟ್ಟದ ಬಜೆಟ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಬೃಹತ್ ನಾಲ್ಕು ಸೆಟ್‌ಗಳಲ್ಲಿ “ಫೈಟ್ಸ್” ಮತ್ತು “ಇಂಟ್ರೊಡಕ್ಷನ್ ಸಾಂಗ್” ಶೂಟಿಂಗ್‌ ನಿರಂತರವಾಗಿ ನಡೆಯಲಿದೆ.

ಚಿತ್ರೀಕರಣ ಸತತವಾಗಿ ನಡೆಯಲಿದೆ. ಈಗಾಗಲೇ ಎಲ್ಲೆಡೆ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಈಗಾಗಲೇ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದ್ದು, ಚಿತ್ರಕ್ಕೆ ಮಹೇಶ್‌ ಕುಮಾರ್‌ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.

Categories
ಸಿನಿ ಸುದ್ದಿ

ಸಿನಿಮಂದಿ ಬದುಕಲ್ಲಿ ಕೊರೋನಾ ಎಂಬ ಹೆಮ್ಮಾರಿ ನರ್ತನ – ಆತಂಕದಲ್ಲಿ ಇಡೀ ಕನ್ನಡ ಚಿತ್ರೋದ್ಯಮ

ಚಿತ್ರರಂಗದ ಪಾಡು ಮುಂದೇನು? ಅರೇ, ಇದೆಂಥಾ ಮಾತು ಎಂಬ ಪ್ರಶ್ನೆ ಎದುರಾದರೆ ಅಚ್ಚರಿ ಏನಿಲ್ಲ. ಆದರೆ, ಈಗಿನ ವಾಸ್ತವತೆಯನ್ನು ನೋಡಿದಾಗ, ಚಿತ್ರರಂಗದ ಪಾಡು ಏನಾಗಬಹುದು ಎಂಬ ಆತಂಕ ಖಂಡಿತ ಕಾಡದೇ ಇರದು. ಕನ್ನಡ ಚಿತ್ರರಂಗ ಈಗ ಅಕ್ಷರಶಃ ಕುಗ್ಗಿ ಹೋಗಿದೆ. ಮೊದಲೇ ಕೊರೊನಾ ಹೊಡೆತದಿಂದ ತತ್ತರಿಸಿದ್ದ ಸಿನಿಮಾ ಉದ್ಯಮ, ಇತ್ತೀಚೆಗಷ್ಟೇ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಅದರ ಬೆನ್ನಲ್ಲೇ ಈಗ ಪುನಃ ಅರ್ಧ ಭರ್ತಿ ಆದೇಶವೂ ಹೊರಬಿದ್ದಿದೆ. ಮೊದಲೇ ನಲುಗಿದ್ದ ಕನ್ನಡ ಚಿತ್ರರಂಗ, ಈಗ ಮತ್ತಷ್ಟು ನಲುಗಿ ಹೋಗುವುದಂತೂ ನಿಜ. ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡು ಟಫ್‌ರೂಲ್ಸ್‌ಮಾಡಿದ್ದೇನೋ ನಿಜ. ಎಂಟು ಪ್ರಮುಖ ಜಿಲ್ಲೆಗಳಲ್ಲಿ ಈ ಆದೇಶ ಹೊರಬಿದ್ದಿದೆ. ಚಿತ್ರರಂಗಕ್ಕೂ ಇದರ ಬಿಸಿ ತಟ್ಟಿದೆ. ಈ ನಿರ್ಧಾರದಿಂದ ಚಿತ್ರೋದ್ಯಮ ಏನೆಲ್ಲಾ ಸಂಕಷ್ಟ ಎದುರಿಸುತ್ತೆ ಅನ್ನೋದೇ ಸದ್ಯ ಎದುರಿಗಿರುವ ಪ್ರಶ್ನೆ.

ಚಿತ್ರರಂಗವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದವರ ಸ್ಥಿತಿಯಂತೂ ಹೇಳತೀರದು. ಇಲ್ಲಿ ಕೋಟಿ ನಿರ್ಮಾಪಕರು, ಸ್ಟಾರ್‌ನಿರ್ದೇಶಕರು, ಸ್ಟಾರ್‌ನಟರಿಂದ ಹಿಡಿದು ಕಟ್ಟ ಕಡೆಯ ಕಾರ್ಮಿಕರೂ ಇದ್ದಾರೆ. ಈಗ ಅವರೆಲ್ಲರೂ ಒಂದೇ ದೋಣಿಯಲ್ಲಿರುವಂತಹ ಪರಿಸ್ಥಿತಿ ಬಂದೊದಗಿದೆ. ಲಾಕ್‌ಡೌನ್‌ಸಂದರ್ಭದಲ್ಲಂತೂ ಚಿತ್ರರಂಗದಲ್ಲಿ ದುಡಿಮೆ ಮಾಡುವವರ ಪರಿಸ್ಥಿತಿ ಡೋಲಾಯಮಾನವಾಗಿತ್ತು. ಮೆಲ್ಲೆನೆ ಉಸಿರಾಡಲು ಅವಕಾಶ ಸಿಕ್ತು ಅಂತ ನಿಟ್ಟುಸಿರು ಬಿಡುವ ಹೊತ್ತಲೇ ಪುನಃ ಅದಕ್ಕೆ ಬ್ರೇಕ್‌ಬಿತ್ತು. ಇದರಿಂದ ಈಗ ಅಕ್ಷರಶಃ ಚಿತ್ರರಂಗದ ಅನೇಕರು ಬೀದಿಗೆ ಬರುವಂತಹ ಸ್ಥಿತಿ ಎದುರಾಗುತ್ತಿದೆ. ಇದು ಹೀಗೆ ಮುಂದುವರೆದರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗ ದೊಡ್ಡ ಆತಂಕದ ಅಲೆಯನ್ನು ಎದುರಿಸಬೇಕಾಗುತ್ತೆ. ಚಿತ್ರರಂಗವನ್ನು ನಂಬಿದ ಸಾವಿರಾರು ಕುಟುಂಬಗಳಿವೆ. ಲಕ್ಷಾಂತರ ಜನರಿದ್ದಾರೆ. ಎಲ್ಲಾ ನಿರ್ಮಾಣ, ನಟನೆ, ನಿರ್ದೇಶನ, ಕಾಸ್ಟ್ಯೂಮ್‌, ಪ್ರೊಡಕ್ಷನ್ಸ್‌, ಮೇಕಪ್‌, ಟ್ರಾನ್ಸ್‌ಪೋರ್ಟ್‌ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಸಿನಿಮಂದಿ ಬದುಕು ಮೂರಾಬಟ್ಟೆಯಾಗುವಂತಹ ಭೀತಿಯಲ್ಲಿದೆ. ಕೊರೊನಾ ತಂದಿಟ್ಟ ಆತಂಕದಿಂದಾಗಿ ಇಲ್ಲಿ ಅನ್ನದಾತ ಎನಿಸಿಕೊಂಡವರೂ ಕೂಡ ಒದ್ದಾಡಿದ ಉದಾಹರಣೆಗೇನೂ ಕಮ್ಮಿ ಇಲ್ಲ.

ಈ ಕಲರ್‌ಫುಲ್‌ದುನಿಯಾದಲ್ಲಿ ಬಣ್ಣ ಬಣ್ಣದ ಕನಸು ಕಟ್ಟಿಕೊಂಡಿದ್ದ ಅದೆಷ್ಟೋ ಮಂದಿ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ. ಕಳೆದ ಒಂದು ವರ್ಷದಿಂದಲೂ ಇದೇ ಅತಂತ್ರ ಪರಿಸ್ಥಿತಿಯಲ್ಲಿರುವ ಚಿತ್ರರಂಗಕ್ಕೆ ಮತ್ತೆ ದೊಡ್ಡ ಹೊಡೆತ ಬಿದ್ದಿರುವುದನ್ನು ನೋಡಿದರೆ, ಅಂತಿಮ ಹಂತ ತಲುಪುವ ಸೂಚನೆಯೇನೋ ಎಂಬಂತೆ ಭಾಸವಾಗುತ್ತಿದೆ.
ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿತ್ತು. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಅರ್ಧ ಭರ್ತಿ ಆದೇಶದಿಂದ ಚಿತ್ರರಂಗ ಮತ್ತೆ ಮೊದಲಿನಂತಾಗಲು ವರ್ಷಗಳೇ ಬೇಕಾಗಬಹುದೇನೋ? ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಚಿತ್ರರಂಗವನ್ನೇ ನಂಬಿದವರ ಪಾಡು ಅತಂತ್ರದಲ್ಲಿರುವುದಂತೂ ಸತ್ಯ.

“ರಾಬರ್ಟ್‌” ಚಿತ್ರ ಬಿಡುಗಡೆ ನಂತರ ಚಿತ್ರರಂಗದ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತ್ತೆ ಆ ದಿನಗಳಿಗೆ ಚಿತ್ರರಂಗ ಮರಳುತ್ತೆ ಎಂಬ ಲೆಕ್ಕಾಚಾರವೂ ಜೋರಾಗಿತ್ತು. ಆ ಚಿತ್ರದ ಬಳಿಕ ಪುನೀತ್‌ರಾಜಕುಮಾರ್‌ಅಭಿನಯದ “ಯುವರತ್ನ” ರಿಲೀಸ್‌ಆಯ್ತು. ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದ್ದಂತೆಯೇ ಪುನಃ, ಅರ್ಧ ಭರ್ತಿ ಆದೇಶ ಹೊರಬಿತ್ತು. “ಯುವರತ್ನ” ಬಳಿಕ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಉತ್ಸಾಹ ತೋರಿದ್ದವು. ವರ್ಷಗಟ್ಟಲೆ ಕಾದಿದ್ದ ಸಿನಿಮಾಗಳಿಗೆ ಸರ್ಕಾರದ ಈ ಆದೇಶದಿಂದ ಆಘಾತವಾಗಿದ್ದು ಸುಳ್ಳಲ್ಲ. ಸಾಲ ಸೂಲ ಮಾಡಿ ಸಿನಿಮಾ ಮಾಡಿದ್ದ ಅನೇಕ ಹೊಸ ನಿರ್ಮಾಪಕರು, ಹೇಗೋ ರಿಲೀಸ್‌ಮಾಡಿ, ಬದುಕಿ ಬಿಡೋಣ ಅಂದುಕೊಂಡಿದ್ದರು. ಈಗ ನೋಡಿದರೆ, ಅದಕ್ಕೂ ಕಲ್ಲು ಬಿದ್ದಂತಾಗಿದೆ. ಮೂಲಗಳ ಪ್ರಕಾರ ೩೫೦ ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಈ ಇಷ್ಟೂ ಚಿತ್ರಗಳ ಬಜೆಟ್‌ಲೆಕ್ಕ ಹಾಕಿದರೆ, ಸಾವಿರ ಕೋಟಿ ಮೀರುತ್ತೆ.

ಇಲ್ಲಿ ಹಣ ಹಾಕಿ ಹಣ ತೆಗೆಯುತ್ತೇನೆ ಅನ್ನೋದು ಕಷ್ಟದ ಮಾತು. ಹೋಗಲಿ ಹಾಕಿದ ಹಣ ತೆಗೆಯೋಣ ಅಂತಂದುಕೊಂಡರೂ, ಕೊರೊನಾ ಹೊಡೆತ ಕೊಟ್ಟಿದೆ. ಹೇಗೋ ಬಂದಷ್ಟು ಬರಲಿ ಅಂದುಕೊಂಡು ರಿಲೀಸ್‌ಗೆ ಸಜ್ಜಾಗಿದ್ದರೂ, ಅರ್ಧ ಭರ್ತಿ ಆದೇಶ ಮತ್ತಷ್ಟು ನರಳುವಂತೆ ಮಾಡಿಬಿಟ್ಟಿದೆ. ಹೇಗೋ ಒಂದಷ್ಟು ಸಿನಿಮಾಗಳು ಚಿತ್ರೀಕರಣ ಶುರುಮಾಡಿದ್ದವು. ಈಗ ಶೂಟಿಂಗ್‌ಮಾಡೋಕೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದೊದಗಿದೆ. ಹೇಗೋ ಚಿತ್ರೀಕರಣ ಶುರುವಾಯ್ತು ಅಂತ ಕಾರ್ಮಿಕ ವಲಯ ಸಂಭ್ರಮದಲ್ಲೇ ಇತ್ತು. ಆದರೀಗ, ಅವರ ಅನ್ನಕ್ಕೂ ಕುತ್ತು ಬರುವಂತಾಗಿದೆ. ಅವರ ಗೋಳಿನ ದನಿ ಮಾತ್ರ ಅಲ್ಲೇ ಗಿರಕಿಹೊಡೆಯುವಂತಾಗಿದೆ.

ಅದೇನೆ ಇರಲಿ, ಸರ್ಕಾರದ ಈ ಕ್ರಮದಿಂದ ಸಿನಿಮಾಗಳಿಗೆ ಪೆಟ್ಟು ಕೊಟ್ಟಿದ್ದಷ್ಟೇ ಅಲ್ಲ, ನಿರ್ಮಾಪಕರನ್ನೂ ಹೈರಾಣಾಗಿಸಿದೆ. ಚಿತ್ರಮಂದಿರಗಳಲ್ಲಿ ದುಡಿಯುವ ಕೈಗಳು ಹಿಜುಕಿಕೊಳ್ಳುವಂತಾಗಿದೆ. ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದರು. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳಿಗೆ ಅರ್ಧ ಭರ್ತಿ ಎಂಬ ನಿರ್ಧಾರದಿಂದ ಇಡೀ ಚಿತ್ರೋದ್ಯಮವೇ ದಿಕ್ಕು ತೋಚದಂತಾಗಿ ಕುಳಿತಿದೆ. ಈಗಾಗಲೇ ಒಂದು ವರ್ಷದಿಂದ ಕಾದು ಸೋತು, ಸಣ್ಣಗಾಗಿರುವ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಈಗ ಆ ಚಿತ್ರಗಳ ಬಿಡುಗಡೆ ದಿನಾಂಕ ಕೂಡ ಮುಂದೆ ಹೋಗುತ್ತಿವೆ. ಕೋಟಿ ಹಣ ಹಾಕಿ ನಿರ್ಮಿಸಿದ್ದ ನಿರ್ಮಾಪಕ ಕೂಡ ಮತ್ತಷ್ಟು ದಿನ ಒದ್ದಾಡುವಂತಹ ಸ್ಥಿತಿ ಬಂದೊದಗಿದೆ. “ಯುವರತ್ನ” ಮೇಲೇಳುವ ಹೊತ್ತಲ್ಲೇ ಈ ನಿರ್ಧಾರ ಹೊರಬಂದಿದೆ.

“ಕೋಟಿಗೊಬ್ಬ 3”, “ಸಲಗ”, ”ಕೆಜಿಎಫ್‌″, “ಕೃಷ್ಣ ಟಾಕೀಸ್‌”, “ಭಜರಂಗಿ” ಸೇರಿದಂತೆ ಹಲವು ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿದ್ದವು. ಈಗ ಅನಿವಾರ್ಯ ಎಂಬಂತೆ ಮಂದಕ್ಕೆ ಹೋದರೂ ಅಚ್ಚರಿ ಇಲ್ಲ. ಒಂದು ವೇಳೆ ಈ ನಿರ್ಧಾರ ಮತ್ತಷ್ಟು ಕಠಿಣಗೊಂಡರೆ, ಸಿನಿಮಾರಂಗದ ಪಾಡೇನು, ಸ್ಟಾರ್‌ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೂ ಇದೆ. ಆ ಎಲ್ಲಾ ಸಿನಿಮಾ ನಿರ್ಮಾಪಕರ ಸ್ಥಿತಿ ಏನಾಗಬೇಡ? ಚಿತ್ರರಂಗವನ್ನೇ ನಂಬಿದವರ ಬದುಕು ಹೇಗಾಗಬೇಡ? ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲಿರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಹೊಡೆತ ತಿನ್ನುತ್ತವೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮತ್ತದೇ ಭಯ ಹುಟ್ಟಿಸುತ್ತಿರುವ ಕೊರೊನಾ, ಚಿತ್ರರಂಗದವರ ಬಣ್ಣವನ್ನು ಅಳಿಸದಂತಿರಲಿ ಎಂಬುದೇ ಸಿನಿಲಹರಿಯ ಆಶಯ.

Categories
ಸಿನಿ ಸುದ್ದಿ

ಬಣ್ಣ ನಂಬಿ ಬದುಕುವರ ಬಣ್ಣ ಅಳಿಸೋದು ಬೇಡ ಅಂದ್ರು ಶ್ರೀಮುರಳಿ! ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಅನ್ನೋದು ರೋರಿಂಗ್‌ ಸ್ಟಾರ್‌ ಕಳಕಳಿ

ಕೊರೊನಾ ಎರಡನೇ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ನಿನ್ನೆಯಷ್ಟೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಟಫ್‌ ರೂಲ್ಸ್‌ ಜಾರಿ ಮಾಡಿದೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗ ದೊಡ್ಡ ಧ್ವನಿ ಎತ್ತಿದೆ.
ಈ ಆದೇಶ ಹೊರಬರುತ್ತಿದ್ದಂತೆಯೇ ಚಿತ್ರರಂಗದ ಸ್ಟಾರ್‌ ನಟರಿಂದ ಹಿಡಿದು, ಚಿತ್ರೋದ್ಯಮದ ಎಲ್ಲರೂ ಒಕ್ಕೊರಲ ಧ್ವನಿ ಎತ್ತಿದ್ದಾರೆ. ಅಂತೆಯೇ ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರೂ ಕೂಡ ತಮ್ಮ ಟ್ವೀಟ್‌ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಅವರು ಮಾಡಿರುವ ಟ್ವೀಟ್‌ನಲ್ಲಿ “ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿರೋಧ ಇಲ್ಲ. ಇದು ಅಗತ್ಯ ಕೂಡ. ಸರ್ಕಾರ ಕೈಗೊಳ್ಳುವ ನಿರ್ಧಾರಗಳಲ್ಲಿ ಬಣ್ಣವನ್ನೇ ನಂಬಿ ಬದುಕುವರ “ಬಣ್ಣ” ಅಳಿಸೋದು ಬೇಡ ಎಂಬ ಮನವಿ ನಮ್ಮದು. ಕೊರೋನಾ ಎಚ್ಚರಿಕೆ ಕ್ರಮಗಳೊಂದಿಗೆಯೇ ಮನರಂಜಿಸುವ ಕೆಲಸ ಚಿತ್ರೋದ್ಯಮದಿಂದ ಆಗುತ್ತೆ ಎಂಬ ನಂಬಿಕೆ ಸರ್ಕಾರಕ್ಕೂ ಬರಲಿ” ಎಂದು ಹೇಳಿದ್ದಾರೆ.
ಅವರ ಈ ಟ್ವೀಟ್‌ಗೆ ಫ್ಯಾನ್ಸ್‌ ಸೇರಿದಂತೆ ಸಾಮಾಜಿಕ ವಲಯದಿಂದಲೂ ಮೆಚ್ಚುಗೆ ಸಿಕ್ಕಿದ್ದು, ಎಲ್ಲರೂ ಶ್ರೀಮುರಳಿ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ.


ಇನ್ನು, ಸಾಮಾಜಿಕ ತಾಣದಲ್ಲಿ ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಶ್ರೀಮುರಳಿ, “ಮನಸು ಬಹಳ ಬೇಜಾರಾಗುತ್ತಿದೆ. ಈಗಷ್ಟೇ ಒಂದು ನ್ಯೂಸ್‌ ಕೇಳಿದೆ. ಮತ್ತೊಮ್ಮೆ ಶೇ.50ರಷ್ಟು ಆಕ್ಯುಪೆನ್ಸಿಗೆ ಅವಕಾಶ ಕೊಟ್ಟಿದ್ದಾರೆ ಅಂತ. ನಿನ್ನೆ ತಾನೇ “ಯುವರತ್ನ” ರಿಲೀಸ್‌ ಆಗಿದೆ. ಅದಕ್ಕೂ ಮುಂಚೆ “ರಾಬರ್ಟ್‌” ರಿಲೀಸ್‌ ಆಗಿದೆ. ಈ ವಾರ ಒಂದಷ್ಟು ಸಿನಿಮಾಗಳು ರಿಲೀಸ್‌ ಆಗಬೇಕಿದೆ. ಏನ್‌ ಮಾಡಬೇಕು ಸರ್.‌ ರಿಲೀಸ್‌ ಆಗಿರುವ ಸಿನಿಮಾಗಳ ಗತಿ ಏನಾಗಬೇಕು ಸರ್.‌ ಹಲವು ಸಂಸಾರಗಳು ಈ ವೃತ್ತಿಯನ್ನು ನಂಬಿ ಬದುಕುತ್ತಿದ್ದೇವೆ ಸರ್.‌ ನಮಗೆ ಬೇರೇನೂ ಗೊತ್ತಿಲ್ಲ ಸರ್.‌ ಜನರಿಗೆ ಅಳಿಸ್ತೀವಿ, ಇಲ್ಲ ನಗಸ್ತೀವಿ ಇಷ್ಟೇ ಸರ್‌ ಗೊತ್ತಿರೋದು. ಎಲ್ಲೋ ಒಂದು ಕಡೆ ನಿಜವಾಗಿಯೂ ನೋವಾಗುತ್ತಿದೆ ಸರ್.‌ ಏನ್‌ ಮಾಡಬೇಕು ನಿರ್ಮಾಪಕರು.

ಅಷ್ಟೊಂದು ಖರ್ಚು ಮಾಡಿ ಎಂಟರ್‌ಟೈನ್‌ಮೆಂಟ್‌ಗೋಸ್ಕರ ಸಿನಿಮಾ ಮಾಡಿದಾಗ ನಾವೆಲ್ಲಾ ಏನ್‌ ಆಗಬೇಕು ಸರ್.‌ ದಯವಿಟ್ಟು ಇದನ್ನು ವಾಪಸ್‌ ತಗೊಳ್ಳಿ. ದಯವಿಟ್ಟು ಶೇ.100 ಆಕ್ಯುಪೆನ್ಸಿಗೆ ಅವಕಾಶ ಕೊಡಿ ಸರ್.‌ ಇದು ನಮ್ಮ ಮನವಿ. ನೀವು ಇವತ್ತು ಇದನ್ನು ಮಾಡಲಿಲ್ಲವೆಂದರೆ, ಹಲವಾರು ಜನರು‌ ನಾಳೆ ಬೀದಿಗೆ ಬರುತ್ತಾರೆ. ಇನ್ನಷ್ಟು ಸಿನಿಮಾಗಳು ರಿಲೀಸ್‌ ಆಗುತ್ತವೆ. ವ್ಯಾಕ್ಸಿನೇಷನ್‌ ಬಂದಿದೆ ಸರ್.

ಎಲ್ಲರೂ ತಗೊಂಡು ಸೇಫ್‌ ಆಗ್ತಾರೆ. ನೀವೇ ಸಲಹೆ ಕೊಟ್ಟಿದ್ದೀರಿ. ಆದರೂ ಈ ನಿರ್ಧಾರದಿಂದ ಭಯ ಆಗುತ್ತಿದೆ. ಮತ್ತೊಮ್ಮೆ ಶೇ.100ರಷ್ಟು ಆಕ್ಯುಪೆನ್ಸಿ ಕೊಡಿ” ಎಂದು ಮನವಿ ಮಾಡಿದ್ದಾರೆ.
ಅದೇನೆ ಇರಲಿ, ಈಗ ಚಿತ್ರರಂಗದ ಸ್ಟಾರ್‌ ನಟರೆಲ್ಲರೂ ಒಗ್ಗಟ್ಟಾಗಿ ಮನವಿ ಮಾಡುತ್ತಿದ್ದಾರೆ. ಸರ್ಕಾರ ಕೂಡ ಈ ಬಗ್ಗೆ ಯೋಚಿಸಿ, ಚಿತ್ರರಂಗದ ಮನವಿಗೆ ಸ್ಪಂದಿಸುವುದೇ ಎಂದು ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಸ್ಟಾರ್‌ಗಳೆಲ್ಲ ತಮ್ಮದಷ್ಟೇ ತಮಗೆ ಸಾಕು ಅಂತಂದುಕೊಂಡರೆ ಕನ್ನಡ ಚಿತ್ರೋದ್ಯಮ ಉಳಿಯುತ್ತಾ ?

ಚಿತ್ರರಂಗ ಅನ್ನೋದು ಒಂದು ಮನೆ ಇದ್ದಂತೆ… ಕನ್ನಡ ಚಿತ್ರೋದ್ಯಮದ ಮಂದಿ ಬಹಿರಂಗ ವೇದಿಕೆಗಳಲ್ಲಿ ಹೀಗೆಲ್ಲ ಹೇಳುವುದನ್ನು ನೀವು ಕೇಳಿದ್ದೀರಿ. ಹಾಗಂತ ಸ್ಟಾರ್‌ಗಳು ಕೂಡ ಮಾತನಾಡುವುದು ಮಾಮೂಲು. ಆದರೆ ಇತ್ತೀಚೆಗೆ ಚಿತ್ರರಂಗ ಒಂದೇ ಮನೆಯ ಕುಟುಂಬದಂತೆ ಕಂಡಿದ್ದು ನಿಮಗೇನಾದರೂ ಗೊತ್ತಾ ? ಇಲ್ಲ, ಅವರವರ ಸಿನಿಮಾಗಳಿಗೆ ಸಂಕಷ್ಟಗಳು, ಸವಾಲುಗಳು ಎದುರಾದಾಗೆಲ್ಲ ಅವರವರೇ ಮಾತನಾಡುವುದು ಈಗ ವಾಡಿಕೆ ಅಗಿದೆ. ಅದರ ಪರಿಣಾಮವೇ, ಸ್ಟಾರ್‌ ಗಳೆಲ್ಲ ಅವರವರ ಸಿನಿಮಾಕ್ಕೆ ಸಂಕಷ್ಟ ಬಂದಾಗ ಮಾತನಾಡುತ್ತಿದ್ದಾರೆ. ಅದೇ ಸಾಲಿನಲ್ಲೀಗ ಯುವರತ್ನನ ಸರದಿ.

ಬೇಕಾದರೆ ಇತ್ತೀಚಿನ ದಿನಗಳಲ್ಲೇ ಆದ ಬೆಳವಣಿಗೆ ನೋಡಿ, “ಪೊಗರುʼ ಚಿತ್ರಕ್ಕೆ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಾಗ ನಟ ಧ್ರುವ ಸರ್ಜಾ ಅಬ್ಬರಿಸಿ, ಬೊಬ್ಬಿರಿದರು. ಸೋಷಲ್‌ ಮೀಡಿಯಾದಲ್ಲಿ ಅದಕ್ಕೆ ಕೆಲವರು ಸಾಥ್‌ ಕೊಟ್ಟರು. ಅದು ದೊಡ್ಡ ಸುದ್ದಿಯೂ ಆಯಿತು. ಸರ್ಕಾರ ಚಿತ್ರಮಂದಿರಕ್ಕೆ ಹೇರಲು ಹೊರಟಿದ್ದ ನಿರ್ಬಂಧದ ಪ್ರಸ್ತಾಪ ಅಷ್ಟಕ್ಕೆ ನಿಂತುಹೊಯಿತು. ಮುಂದೆ ರಾಬರ್ಟ್‌ ರಿಲೀಸ್‌ಗೆ ಅಡ್ಡಿಯಾದ ವಿಚಾರದಲ್ಲಿ ನಟ ದರ್ಶನ್‌ ಟಾಲಿವುಡ್‌ ವಿರುದ್ಧ ಕೆಂಡ ಕಾರಿದರು. ಅದಕ್ಕೂ ಕೆಲವರು ಸೋಷಲ್‌ ಮೀಡಿಯಾದಲ್ಲಿ ಬೆಂಬಲ ಕೊಟ್ಟರು. ಅದು ಕೂಡ ದೊಡ್ಡ ಸುದ್ದಿಯಾಯಿತು. ರಿಲೀಸ್‌ ಸಮಸ್ಯೆ ತಕ್ಷಣವೇ ಬಗೆಹರಿಯಿತು. ಈಗ ʼಯುವರತ್ನʼ ಚಿತ್ರದ ಸರದಿ.

ಯುವ ರತ್ನ ಚಿತ್ರ ರಿಲೀಸ್‌ ಆಗಿ ಇನ್ನು ಎರಡು ದಿನ ಆಗಿಲ್ಲ. ಆಗಲೇ ಸರ್ಕಾರ ಕೊರೋನಾ ಕಾರಣಕ್ಕೆ ರಾಜ್ಯದಲ್ಲಿ ಟಫ್‌ ರೂಲ್ಸ್‌ ತಂದಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿನ ಚಿತ್ರ ಮಂದಿರಗಳಲ್ಲಿ ಶೇ.50 ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ಕೊಟ್ಟಿದೆ. ಇದು ಯುವರತ್ನ ಚಿತ್ರದ ಸಕ್ಸಸ್‌ ಓಟಕ್ಕೆ ಭರ್ಜರಿ ಬ್ರೇಕ್‌ ಹಾಕಿದೆ. ಒಂಥರ ಇದು ಆಘಾತವೇ ಹೌದು.

ನಟ ಪುನೀತ್‌ ರಾಜ್‌ ಕುಮಾರ್‌ ಈಗ ಸರ್ಕಾರದ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕಿದ್ದಂತೆ ಸರ್ಕಾರ ಈ ಆದೇಶ ಜಾರಿಗೊಳಿಸಿ, ತಮಗೆ ಅನ್ಯಾಯ ಮಾಡಿದೆ ಅಂತ ಗುಡುಗಿದ್ದಾರೆ. ಮೊದಲೇ ಸರ್ಕಾರ ಈ ರೀತಿ ಮಾಡುತ್ತೇವೆ ಅಂತ ಹೇಳದ್ರೆ, ನಾವು ಚಿತ್ರವನ್ನೇ ಬಿಡುಗಡೆ ಮಾಡುತ್ತಿರಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರೋದ್ಯಮದ ಹಲವರು ಅವರ ಮಾತಿಗೆ ಸಾಥ್‌ ಕೊಟ್ಟಿದ್ದಾರೆ.

ಹಾಗೆಯೇ ಕೆಲವರು ಪುನೀತ್‌ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಟ ಪುನೀತ್‌ ತಮ್ಮ ಅನುಕೂಲಕ್ಕೆ ತಕ್ಕಂತೆ ಬೇಡಿಕೆ ಇಡುವುದು ಸೂಕ್ತವಲ್ಲ ಅಂತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಟಾಂಗ್‌ ಕೊಟ್ಟಿದ್ದಾರೆ. ಕೆಲವರು ಇದೆಲ್ಲ ತಮಗ್ಯಾಕೆ ಅಂತಲೂ ಮೌನ ತಾಳಿದ್ದಾರೆ. ಮತ್ತೆ ಹಲವರು ಸಂಬಂಧವೇ ಇಲ್ಲದ್ದಂತೆ ಮುಗುಮ್‌ ಅಗಿದ್ದಾರೆ. ಹೀಗೆಲ್ಲ ಆಗುವುದ್ಯಾಕೆ ಅಂದ್ರೆ, ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕೆ.

ಒಂದು ಕಾಲದಲ್ಲಿ ಕೂಡ ಚಿತ್ರರಂಗ ಅಂದ್ರೆ ಕೂಡು ಕುಟುಂಬದಂತೆ ಇತ್ತು. ಯಾವುದೇ ಸಮಸ್ಯೆ ಎದುರಾದಾಗ ಹಿರಿಯ ನೇತೃತ್ವದಲ್ಲಿ ಒಂದಾಗಿ ಬೀದಿಗಿಳಿಯುತ್ತಿತ್ತು. ಈಗ ಅದು ಒಡೆದ ಮನೆ. ಅಲ್ಲಿ ಯಜಮಾನ ಯಾರು ಎಂಬುದೇ ಗೊತ್ತಿಲ್ಲ. ಪ್ರತಿಯೊಬ್ಬರು ಇಲ್ಲಿ ದೊಡ್ಡವರೇ. ವಿಶೇಷವಾಗಿ ಸ್ಟಾರ್‌ ಗಳಂತೂ ತಾವೇ ಮೇಲೆ, ತಾವು ಹೇಳಿದ್ದೆ ಆಗ್ಬೇಕು ಅನ್ನೋ ರೇಂಜ್‌ ನಲ್ಲಿ ಪೋಸು ನೀಡುತ್ತಿದ್ದಾರೆ. ಉದ್ಯಮ ಎನ್ನುವುದಕ್ಕಿಂತ ತಮ್ಮ ತಮ್ಮ ಸಿನಿಮಾಗಳನ್ನ ಹಿತವನ್ನು ತಾವು ಕಾಯ್ದುಕೊಳ್ಳುವುದಕಷ್ಟೇ ಸೀಮಿತವಾಗುಳಿಯುತ್ತಿದ್ದಾರೆ. ಅದೆಲ್ಲದರ ಪರಿಣಾಮ ಚಿತ್ರೋದ್ಯಮ ಇವತ್ತು ಕೊರೋನಾ ನೆಪದಲ್ಲಿ ಆರ್ಥಿಕ ದಿವಾಳಿ ಹಂತಕ್ಕೆ ಬಂದು ನಿಂತಿದೆ ಎನ್ನುವುದು ದುರಂತ.

Categories
ಸಿನಿ ಸುದ್ದಿ

ಕಬ್ಜ ಶೂಟಿಂಗ್ ವೇಳೆ ಅವಘಡ : ಉಪ್ಪಿ ತಲೆಗೆ ಬಿತ್ತು ಪೆಟ್ಟು ಅಪಾಯದಿಂದ ಪಾರಾದ ರಿಯಲ್‌ಸ್ಟಾರ್ ಉಪೇಂದ್ರ

ಚಿತ್ರೀಕರಣ ಸಮಯದಲ್ಲಿ ಆಗಾಗ ಒಂದಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದು ಹೊಸದೇನಲ್ಲ. ಎಷ್ಟೋ ಸಲ, ಸಾಹಸ ಸನ್ನಿವೇಶಗಳಲ್ಲಿ ಇಂತಹ ಅವಘಡಗಳು ಸಂಭವಿಸುವುದುಂಟು. ಈಗ ಇಲ್ಲಿ ಹೇಳಹೊರಟಿರುವ ವಿಷಯ, “ಕಬ್ಜ’ ಚಿತ್ರದ್ದು. ಹೌದು, ಉಪೇಂದ್ರ ಅಭಿನಯದ “ಕಬ್ಜ” ಆರಂಭದಿಂದಲೂ ಜೋರು ಸದ್ದು ಮಾಡುತ್ತಲೇ ಇದೆ. ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಹಾಗಂತ, ಅದು ಖುಷಿ ಪಡುವ ಸುದ್ದಿಯಲ್ಲ. ಬದಲಾಗಿ, ಬೇಸರ ಪಡುವ ಸುದ್ದಿ. ವಿಷಯ ಏನಪ್ಪಾ ಅಂದರೆ, ಉಪೇಂದ್ರ ಅವರು ಚಿತ್ರದ ಸಾಹಸ ದೃಶ್ಯದಲ್ಲಿ ನಟಿಸುತ್ತಿದ್ದರು. ಈ ವೇಳೆ, ವಿಲನ್ ಬೀಸಿದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಅವರ ತಲೆಗೆ ಬಿದ್ದ ಪರಿಣಾಮ, ಅವರಿಗೆ ಪೆಟ್ಟಾದ ಘಟನೆ ನಡೆದಿದೆ.

ಹೌದು, ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ “ಕಬ್ಜ” ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸ್ಟಂಟ್ ಶೂಟಿಂಗ್ ಸಮಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ರಾಡ್ ತಗುಲಿ ಈ ಅವಘಡ ಸಂಭವಿಸಿದೆ. ಖಳನಾಯಕ ರಾಡ್ ನಿಂದ ಹೊಡೆಯುವ ಸನ್ನಿವೇಶದಲ್ಲಿ ಉಪೇಂದ್ರ ಅವರು ತಪ್ಪಿಸಿಕೊಳ್ಳಬೇಕಾಗಿತ್ತು.

ಈ ವೇಳೆ ಆಕಸ್ಮಿಕವಾಗಿಯೇ ಉಪ್ಪಿಗೆ ರಾಡ್ ತಾಗಿದೆ. ಅಲ್ಲಿದ್ದ ಚಿತ್ರತಂಡದವರು ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಹೆಚ್ಚು ಅಪಾಯ ಸಂಭವಿಸದ ಕಾರಣ, ಪುನಃ ಉಪೇಂದ್ರ ಅವರು ಸ್ಪಲ್ಪ ಹೊತ್ತು ಚೇತರಿಸಿಕೊಂಡ ಬಳಿಕ ಶೂಟಿಂಗ್ ನಿಲ್ಲಿಸದೆಯೇ ಅದೇ ಉತ್ಸಾಹದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ದೇಶಕ ಆರ್.ಚಂದ್ರು ಅವರು, ಸ್ಥಳದಲ್ಲಿದ್ದು, ಉಪೇಂದ್ರ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆ ನಂತರ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಬಳಿಕ ಎಲ್ಲರೂ ಅದೇ ಉತ್ಸಾಹದಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡ‌ ಚಿತ್ರರಂಗಕ್ಕೆ ಅರ್ಧ ಶಾಕ್! ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ಆಕ್ಷೇಪ!! ಕೂಡಲೇ ಶೇ.100ರಷ್ಟು ಭರ್ತಿಗೆ ಅವಕಾಶ ಕೊಡಿ ಎಂದ ಅಪ್ಪು

ಕನ್ನಡ‌ ಚಿತ್ರರಂಗಕ್ಕೆ ಈಗ ಮತ್ತೆ ಕೊರೊನಾ ಬಿಸಿ ತಟ್ಟುತ್ತಿದೆ. ಕೊರೊನೊ ಎರಡನೇ ಅಲೆ ಜೋರಾಗುತ್ತಿರುವಂತೆಯೇ ಕೊರೊನೊ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತಂತೆ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಹೀಗಾಗಿ ಟಫ್ ರೂಲ್ಸ್ ಜಾರಿ ಮಾಡಿದೆ. ಇದರಿಂದಾಗಿ ಕನ್ನಡ‌ಚಿತ್ರರಂಗಕ್ಕೂ ಸಮಸ್ಯೆ ಎದುರಾಗಿದೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಕೊಡಲಾಗಿದೆ. ಈ ನಿರ್ಬಂಧ ದಿಂದ ಇಡೀ ಚಿತ್ರೋದ್ಯಮವೇ ದಂಗಾಗಿದೆ. ಹಲವು ನಟರು, ನಿರ್ಮಾಪಕ, ನಿರ್ದೇಶಕರು ಕೂಡ ಸರ್ಕಾರದ ಈ‌ ನಿರ್ಧಾರಕ್ಕೆ ಆಕ್ಷೇಪಿಸಿದ್ದಾರೆ.

ಈಗಷ್ಟೇ ಕೊರೊನೊ ಸಮಸ್ಯೆ ತಿಳಿಯಾಗಿ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವಂತೆಯೇ, ಈಗ ಟಫ್ ರೂಲ್ಸ್ ಜಾರಿಯಾಗಿದೆ. ಇದರಿಂದ ಪುನಃ ಸಿನಿರಂಗಕ್ಕೆ ದೊಡ್ಡ ಹೊಡೆತವೇ ಆಗಿದೆ ಎಂದು ಚಿತ್ರರಂಗದ ಹಲವರು ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿದ್ದಾರೆ. ಅತ್ತ ನಟ ಪುನೀತ್ ರಾಜಕಾರ್ ಅವರು ಸಹ ಫೇಸ್ ಬುಕ್ ಲೈವ್ ಮಾಡುವ ಮೂಲಕ

ಮನವಿ‌ ಮಾಡಿದ್ದು, ಶೇ.50ರಷ್ಟು ಭರ್ತಿಗೆ ಆದೇಶ ಬೇಡ ಎಂದು‌ ಮನವಿ‌ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತಾಡುವುದಾಗಿಯೂ ಹೇಳಿದ್ದಾರೆ. ಇದು ನಮಗೆ ದೊಡ್ಡ ಸಮಸ್ಯೆ ಆಗುತ್ತೆ. ಈ ನಿಯಮ ಕೈ ಬಿಡಿ. ಜನರು ಮುಂಜಾಗ್ರತೆ ವಹಿಸಿ ಸಿನಿಮಾ ನೋಡುತ್ತಿದ್ದಾರೆ. ದಯವಿಟ್ಟು ಈ ನಿಯಮ ಹಿಂಪಡೆಯಿರಿ ಎಂದು‌ ಮನವಿ ಮಾಡಿದ್ದಾರೆ.

ಏಪ್ರಿಲ್ 1ರಂದು “ಯುವರತ್ನ” ಬಿಡುಗಡೆಯಾಗಿದೆ. ಮೊದಲ ದಿನ ಭರ್ಜರಿ ಗಳಿಕೆ‌ ದಾಖಲೆ ಮಾಡಿದ ಚಿತ್ರಕ್ಕೆ ಈಗ ಶೇ.50 ರಷ್ಟು ನಿಯಮ ಎಷ್ಟು‌ ಸರಿ ಎಂಬುದು ಎಲ್ಲರ ಪ್ರಶ್ನೆ.
ಇದೇ ನಿಯಮ ಮುಂದುವರೆದ್ದಲ್ಲಿ ಖಂಡಿತವಾಗಿಯೂ ಸಿನಿಮಾರಂಗ ಮತಗತೆ ಮೇಲೇಳಲು ಪರದಾಡಬೇಕಾಗುತ್ತೆ.
ಅದೇನೆ ಇರಲಿ, ಕೊರೊನೊ ಅಲೆ ಮತ್ತೆ ಶುರುವಾಗದಿರಲಿ, ಎಲ್ಲವೂ ಈಗ ನಡೆದಂತೆ ನಡೆಯಲಿ ಎಂಬುದೇ ಆಶಯ.

error: Content is protected !!