Categories
ಸಿನಿ ಸುದ್ದಿ

ಬಿಗ್‌ಬಾಸ್‌ನಲ್ಲಿ ಗೆಲುವಿನ “ನಿಧಿ” ಹುಡುಕಲು ಹೊರಟ ಚಂದ್ರಚೂಡ್‌; ಆ ಮನೇಲಿ ಇವರಿಗೆ ಸ್ವಾಗತಕ್ಕಿಂತ ವಿರೋಧವೇ ಹೆಚ್ಚಿತ್ತು… !

ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರ ಬಂಡವಾಳ ಬಯಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಕಿರುತೆರೆ ವೀಕ್ಷಕರ ಪಾಲಿಗೆ ಚಂದ್ರಚೂಡ್ ಪ್ರಮುಖ ಆಕರ್ಷಣೆ ಆಗಿದ್ದಾರೆ. ಅವರ ಆಟದಿಂದಲೇ ಬಿಗ್ ಬಾಸ್ ಈಗ ಇಂಟರೆಸ್ಟಿಂಗ್ ಆಗಿದೆ. ಕಳೆದ ಎರಡು ದಿನಗಳಿಂದ ಬದಲಾದ ಅವರ ಹೊಸ ವರಸೆ ಕಂಡು ವೀಕ್ಷಕರೇ ಗಾಬರಿ ಆಗಿದ್ದಾರೆ. ಚಂದ್ರ ಚೂಡ್‌ ಅಂದ್ರೆ ಹೀಗೂ ಇದ್ದಾರೆಯೇ? ಹಾಗೊಂದು ಪ್ರಶ್ನೆ ಕಿರಿತೆರೆ ವೀಕ್ಷಕರ ತಲೆಯಲ್ಲಿ ಗಿರಕಿ ಹಾಕುತ್ತಿದೆ. ಅಷ್ಟೇ ಯಾಕೆ, ಬಿಗ್‌ ಬಾಸ್‌ ಕ್ಯಾಮೆರಾಗಳ ಫೋಕಸ್‌ ಕೂಡ ಈಗ ಚಂದ್ರಚೂಡ್‌ ಮೇಲೆಯೇ ಇದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಅದೊಂಥರ ಥ್ರಿಲ್‌, ಇನ್ನೊಂದೆಡೆ ಅನುಮಾನ !

ಹೌದು ಮತ್ತೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಕೇಳಿಬಂದ ಮಾತುಗಳೇ ಬೇರೆ. ಓಹೋ, ಪ್ರಶಾಂತ್‌ ಸಂಬರಗಿ ಅವರಿಗೆ ಇದೇನು ಕೌಂಟರ್‌ ಇರಬಹುದಾ ಅಂತ ಒಂದಷ್ಟು ಮಂದಿ ಸೋಷಲ್‌ ಮೀಡಿಯಾದಲ್ಲಿ ಕೊಂಕು ಕಾಮೆಂಟ್‌ ಹಾಕಿದ್ದರು. ಇನ್ನು ಕೆಲವರು ಕಲರ್ಸ್‌ ಕನ್ನಡದವರಿಗೆ ಬೇರಾರು ಸಿಗಲಿಲ್ಲವೇ ಅಂತ ಹೊಟ್ಟೆ ಉರಿ ತೋಡಿಕೊಂಡಿದ್ದರು. ಹಾಗೆಯೇ ಒಂದಷ್ಟು ಮಂದಿ, ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ಅಂತ ಭವಿಷ್ಯ ನುಡಿದಿದ್ದರು. ಅದೇನೋ ಗೊತ್ತಿಲ್ಲ. ಚಂದ್ರ ಚೂಡ್‌ ಈಗ ತಮ್ಮ ವಿರೋಧಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ನೋಡಿ ಅಂದವರಿಗೆ ಖುಷಿ ಕೊಟ್ಟಿದ್ದಾರೆನ್ನುವುದು ಸದ್ಯದ ಸುದ್ದಿ.

ರಿಯಲ್‌ ಲೈಫ್‌ ನಲ್ಲಿ ಚಂದ್ರಚೂಡ್‌ ಅಂದ್ರೆ ಒಂದು ವಿಶಿಷ್ಟ ವ್ಯಕ್ತಿತ್ವದ ಮನುಷ್ಯಾಕೃತಿಅನ್ನೋದು ಎಲ್ಲರಿಗೂ ಗೊತ್ತು . ವೃತ್ತಿಯಲ್ಲಿ ಪತ್ರಕರ್ತ ಅಂತ ಗುರುತಿಸಿಕೊಂಡರೂ, ಅವರು ಮಾಡದ ಕೆಲಸ ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಅವರೀಗ ಸಿನಿಮಾ ನಿರ್ದೇಶಕ, ಲೇಖಕ, ಬರಹಗಾರರೂ ಹೌದು. ಆದರಾಚೆ ಅವರೊಬ್ಬ ಹೋರಾಟಗಾರ. ನೊಂದ ಜೀವಗಳ ಪರ ಮಿಡಿಯುವ ಮನುಷ್ಯ. ಇದೇ ಕಾರಣಕ್ಕೆ ಅವರು ವಿರೋಧಿಗಳನ್ನು ಸಂಪಾದಿಸಿಕೊಂಡಷ್ಟೇ ಸ್ನೇಹಿತರ ಬಳಗವನ್ನು ಹೊಂದಿದ್ದಾರೆನ್ನುವುದು ವಿಶೇಷ. ಇಷ್ಟಾಗಿಯೂ ಮೇಲ್ನೋಟಕ್ಕೆ ಚಂದ್ರಚೂಡ್‌ ಕೆಲವು ವಿವಾದಗಳಿಂದ ದೊಡ್ಡ ಸುದ್ದಿ ಆಗಿದ್ದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಚಂದ್ರಚೂಡ್‌ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಅವರನ್ನು ಸ್ವಾಗತಿಸಿದವರಿಗಿಂತ ವಿರೋಧಿಸಿದವರ ಸಂಖ್ಯೆಯೇ ಹೆಚ್ಚಿತ್ತು.

ಪ್ರಶಾಂತ್‌ ಸಂಬರಗಿ ಅವರಿಗೆ ಕೌಂಟರ್‌ ಆಗಿ ಚಂದ್ರಚೂಡ್‌ ಅವರನ್ನು ಕಳುಹಿಸಲಾಗುತ್ತಿದೆ. ಆದರೆ ಸಂಬರಗಿ ಅವರ ವಿರುದ್ಧ ಚಂದ್ರಚೂಡ್‌ ಆಟ ನಡೆಯೋದಿಲ್ಲ. ಅವರು ಎಂಟ್ರಿ ಅದಷ್ಟೇ ವೇಗದಲ್ಲಿ ವಾಪಾಸ್‌ ಬರುವುದು ಗ್ಯಾರಂಟಿ ಅಂತ ಕೆಲವರು ಸೋಷಲ್‌ ಮೀಡಿಯಾದಲ್ಲಿ ಕಾಮೆಂಟ್‌ ಹಾಕಿದ್ದರು. ಮತ್ತೆ ಕೆಲವರು ಮೊದಲ ವಾರವೇ ಚಂದ್ರಚೂಡ್‌ ಔಟ್‌ ಅಂತಲೂ ಭವಿಷ್ಯ ನುಡಿದ್ದರು. ಇವೆಲ್ಲವನ್ನು ಅವರು ಯಾವ ಲೆಕ್ಕಚಾರದಲ್ಲಿ ಹೇಳಿದ್ದರು ಅಂತ ವಿವರಿಸಬೇಕಿಲ್ಲ. ಇದೆಲ್ಲ ಚಂದ್ರಚೂಡ್‌ ವಿರೋಧಿಸುವವರ ಮನಸ್ಥಿತಿ ಆಗಿತ್ತು. ಅದರಾಚೆ ಬಿಗ್‌ ಬಾಸ್‌ ಲೆಕ್ಕಚಾರಗಳೇ ಬೇರೆ ಇರುತ್ತೆ, ಅದು ನಮ್ಮೆಲ್ಲರ ನಿಯಂತ್ರಣದಲ್ಲಿ ಇರೋದಿಲ್ಲ ಅನ್ನುವ ಸತ್ಯ ಅವರಿಗೆ ಬೇಕಾಗಿರಲಿಲ್ಲ. ಬದಲಿಗೆ ಒಂದಷ್ಟು ವಿರೋಧಿಸಬೇಕಿತ್ತು, ವಿರೋಧಿಸಿದರು ಅಷ್ಟೆ. ಅದರಾಚೆ ಇವತ್ತು ಬಿಗ್‌ ಬಾಸ್‌ ಮನೆಯಲ್ಲಿ ಆಗಿದ್ದೇನು ಗೊತ್ತಾ?

ಪ್ರಶಾಂತ್‌ ಹಾಗೂ ಚಂದ್ರಚೂಡ್‌ ಕಾರಣಕ್ಕೆ ಬಿಗ್‌ ಬಾಸ್‌ ಇಂಟರೆಸ್ಟಿಂಗ್‌ ಆಗಿದೆ. ನೋಡೋದಿಕ್ಕೂ ಒಂದಷ್ಟು ಥ್ರಿಲ್‌ ಇದೆ. ಹಾಗಂತ ಈ ಮಾತುಗಳನ್ನು ನಾವು ಹೇಳ್ತಿಲ್ಲ. ಕಲರ್ಸ್‌ ಕನ್ನಡ ಫೇಜ್‌ ನಲ್ಲಿ ವೀಕ್ಷಕರು ಕಾಮೆಂಟ್‌ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಇಂತಹ ಸಾವಿರಾರು ಕಾಮೆಂಟ್‌ ಇವೆ. ಹಾಗಾದ್ರೆ ಚಂದ್ರಚೂಡ್‌ ವಿರೋಧಿಸಿದವರೆಲ್ಲ ಯಾರು? ಆ ಕತೆ ಬಿಡಿ, ಚಂದ್ರಚೂಡ್‌ ನಿಜಕ್ಕೂ ಗ್ಲಾಮ್‌ ಪ್ಲಾನ್‌ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ ಒಂದೆರೆಡು ದಿನಗಳಲ್ಲಿ ಅವರು ಎಲ್ಲರನ್ನು ಅನುಮಾನಿಸಿಯೇ ನೋಡಿದ್ದರು. ಅಲ್ಲಿದ್ದವರಿಗೂ ಹಾಗೆಯೇ ಇತ್ತೇನೋ, ಅವರು ತಂಟೆಗೆ ಬಹಳಷ್ಟು ಬರಲೇ ಇಲ್ಲ. ಆದರೆ ಈಗ ಫುಲ್‌ ಚೇಂಜ್.‌ ಚಂದ್ರಚೂಡ್‌ ಅವರ ಕಂದ, ಚಿನ್ನ, ರನ್ನ ಎನ್ನುವ ಮಾತುಗಳು ಅಲ್ಲಿ ಸಖತ್‌ ವರ್ಕೌಟ್‌ ಆಗಿವೆ. ಬಹುತೇಕರು ಅವರು ಹೇಳಿದಂತೆ ಕೇಳುತ್ತಿದ್ದಾರೆ. ತಾನೇ ಕಿಂಗ್‌ ಎನ್ನುತ್ತಿದ್ದ ಪಾವಗಡ ಮಂಜು ಕೂಡ ಡರ್‌ ಆಗಿದ್ದಾರೆ. ಪ್ರಶಾಂತ್‌ ಸಂಬರಗಿ ಬಾಲ ಮುದುಡಿಕೊಂಡಿದ್ದಾರೆ. ಅಷ್ಟೊಂದು ಹವಾ ಎಬ್ಬಿಸಿರುವ ಚಂದ್ರಚೂಡ್‌ ಸಾಮಾನ್ಯರೇನಲ್ಲ, ಬಿಗ್‌ ಬಾಸ್‌ ಮನೆಯ ಆಳಕ್ಕೆ ಇಳಿದು ʼನಿಧಿʼ ಹುಡುಕುವ ಕಿರಾತಕ ಅವರು. ಅಂತಹದೊಂದು ಆಟ ಈಗ ಬಿಗ್‌ ಬಾಸ್‌ ನಲ್ಲಿ ಶುರುವಾಗಿದೆ. ನೋಡ್ಬೇಕು ಇದು ಎಷ್ಟು ದಿನ ಅಂತ. ಒಟ್ಟಿನಲ್ಲೀಗ ಚಂದ್ರಚೂಡ್‌ ಬಿಗ್‌ ಬಾಸ್‌ ಮನೆಯ ಪ್ರಮುಖ ಆಕರ್ಷಣೆಯ ಆಟಗಾರ ಅನ್ನೋದೇ ವಿಶೇಷ.

Categories
ಸಿನಿ ಸುದ್ದಿ

ವೀಲ್‌ ಚೇರ್‌ ರೋಮಿಯೋ ಮೋಷನ್‌ ಪೋಸ್ಟರ್‌ ಔಟ್-ನಾಡಿದ್ದು ಟ್ರೇಲರ್‌ ಲಾಂಚ್‌

ಜಿ.ನಟರಾಜ ನಿರ್ದೇಶನದ “ವೀಲ್‌ಚೇರ್‌ʼ ರೋಮಿಯೋ ಚಿತ್ರದ ಮೋಷನ್‌ ಪೋಸ್ಟರ್‌ ಲಾಂಚ್‌ ಆಗಿದೆ. ಚಿತ್ರದಲ್ಲಿರುವ ರಾಮ್‌ ಚೇತನ್‌, ರಂಗಾಯಣ ರಘು, ಸುಚೇಂದ್ರ ಪ್ರಸಾದ್‌, ದಪ್ಪ ಗಿರಿ, ಮಯೂರಿ ಪಾತ್ರಗಳ ಲುಕ್‌ ಅನ್ನು ಚಿತ್ರ ತಂಡ ಮೋಷನ್‌ ಪೋಸ್ಟರ್‌ ನಲ್ಲಿ ರಿವೀಲ್‌ ಮಾಡಿದೆ. ಹೆಸರೇ ಹೇಳುವ ಹಾಗೆ ಇದೊಂದು ಹಾಸ್ಯ ಪ್ರಧಾನ ಚಿತ್ರ. ಹಾಸ್ಯ ಜತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ನೀಡುವ ಕಥಾ ಹಂದರ ಮೂಲಕ ಈ ಚಿತ್ರ ರೆಡಿಯಾಗಿ, ರಿಲೀಸ್‌ ಗೆ ಸಿದ್ಧತೆ ನಡೆಸಿದೆ. ನಿರ್ದೇಶಕ ನಟರಾಜ್‌ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಟಿ. ವೆಂಕಟಾಚಲಯ್ಯ ಹಾಗೂ ಭಾರತಿ ವೆಂಕಟೇಶ್‌ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದು, ಚಿತ್ರ ಅದ್ದೂರಿಯಾಗಿಯೇ ತೆರೆಗೆ ಬಂದಿದೆ.

ಈ ಚಿತ್ರದ ಬಗ್ಗೆ ಕುತೂಹಲ ಇರೋದು ಚಿತ್ರದ ನಿರ್ದೇಶಕ ಜಿ.ನಟರಾಜ್‌ ಅವರ ನಿರ್ದೇಶನದ ಮೇಲೆ. ಈಗಾಗಲೇ ನಟರಾಜ್‌ ಹಲವು ಸ್ಟಾರ್‌ ಚಿತ್ರಗಳಿಗೆವ ಸಂಭಾಷಣೆ ಬರೆದಿದ್ದಾರೆ. ಅವರ ಸಂಭಾಷಣೆಗೆ ಅಪಾರ ಮೆಚ್ಚಗೆಯೂ ಸಿಕ್ಕಿದೆ. ಅದೇ ಅನುಭವದಲ್ಲೀಗ ತಾವೇ ಒಂದು ಕಥೆ, ಚಿತ್ರಕಥೆ ಬರೆದು ಚಿತ್ರ ನಿರ್ದೇಶನ ಮಾಡಿರೋದು ವಿಶೇಷ. ಹಾಗೆಯೇ ಚಿತ್ರಕ್ಕೆ ಬಿ.ಜೆ. ಭರತ್‌ ಸಂಗೀತ ನೀಡಿದ್ದಾರೆ. ಸಂತೋಷ್‌ ಛಾಯಾಗ್ರಹಣವಿದೆ.ಕಿರಣ್‌ ಸಂಕಲನ ಮಾಡಿದ್ದಾರೆ. ಗುರುಪ್ರಸಾದ್‌ ಸಂಭಾಷಣೆ ಬರೆದಿದ್ದಾರೆ. ಮೋಷನ್‌ ಪೋಸ್ಟರ್‌ ಬೆನ್ನಲೇ ಚಿತ್ರ ತಂಡ ಚಿತ್ರದ ಟ್ರೇಲರ್‌ ಲಾಂಚ್‌ ಮಾಡಲು ತಯಾರಾಗಿದೆ.ಬಹುತೇಕ ಇದೇ ಗುರುವಾರ ಈ ಚಿತ್ರದ ಟ್ರೇಲರ್‌ ಲಾಂಚ್‌ ಆಗುವುದು ಗ್ಯಾರಂಟಿ ಆಗಿದೆ. ಟ್ರೇಲರ್‌ ಹೇಗಿರುತ್ತೆ ಅನ್ನೋದು ಈಗ ಕುತೂಹಲ.

Categories
ಸಿನಿ ಸುದ್ದಿ

ಸಂತೋಷ್‌ ಚಿತ್ರಮಂದಿರದಲ್ಲಿ ರಾಬರ್ಟ್‌ !


ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸಂತೋಷ್‌ ಚಿತ್ರಮಂದಿರದಿಂದ “ರಾಬರ್ಟ್‌ʼ ಚಿತ್ರ ಎತ್ತಂಗಡಿ ಆಗುತ್ತೆ ಎನ್ನುವ ರೂಮರ್ಸ್‌ ಗೆ ನಿರ್ಮಾಪಕ ಉಮಾಪತಿ ಎಸ್‌ ಗೌಡ ಸ್ಪಷ್ಟನೆ ನೀಡಿದ್ದಾರೆ. ಇನ್ನಷ್ಟು ದಿನಗಳ ಕಾಲ ʼರಾಬರ್ಟ್ʼ‌ ಚಿತ್ರ ಸಂತೋಷ್‌ ಚಿತ್ರಮಂದಿರದಲ್ಲಿ ಇರಲಿದೆ ಅಂತ ಟ್ವೀಟ್‌ ಮಾಡಿದ್ದಾರೆ. ಇಷ್ಟಕ್ಕೂ ಅವರು ಈ ಹೇಳಿಕೆ ನೀಡುವುದಕ್ಕೆ ಕಾರಣ ಏನು ಗೊತ್ತಾ? ಈ ವಾರ ಪರಭಾಷೆಯ ಕೆಲವು ಸಿನಿಮಾಗಳು ತೆರೆ ಕಾಣುತ್ತಿವೆ. ಅದಕ್ಕಾಗಿ ಸಂತೋಷ್‌ ಚಿತ್ರಮಂದಿರದಿಂದ ರಾಬರ್ಟ್‌ ಚಿತ್ರವನ್ನು ಎತ್ತಲಾಗುತ್ತಿದೆ ಎನ್ನುವ ಸುದ್ದಿಗಳಿದ್ದವು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಊಮಾಪತಿ ಗೌಡ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Categories
ಸಿನಿ ಸುದ್ದಿ

ಎರಡನೇ ಹಂತ ಯಶಸ್ವಿಯಾಗಿ ಮುಗಿಸಿದ ರೂಮ್‌ಬಾಯ್‌; ಬಿಡುಗಡೆ ಮುನ್ನವೇ ಬೇಡಿಕೆ ಹೆಚ್ಚಿಸಿಕೊಂಡ ಹೊಸಬರು!

ಕನ್ನಡದಲ್ಲಿ “ರೂಮ್‌ ಬಾಯ್”‌ ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದು ಈಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಇನ್ನೂ ಮೂರನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ಚಿತ್ರತಂಡ, ಸಾಕಷ್ಟು ಉತ್ಸಾಹದಲ್ಲೇ ಕೆಲಸ ಮಾಡುತ್ತಿದೆ. ಅದಕ್ಕೆ ಕಾರಣ, ಸಿನಿಮಾ ಕಂಪ್ಲೀಟ್‌ ಆಗುವ ಮೊದಲೇ ಒಂದಷ್ಟು ಮಂದಿ ಪರಭಾಷೆ ಡಬ್ಬಿಂಗ್‌ ರೈಟ್ಸ್‌ ಕೇಳುತ್ತಿರುವುದು.

ಆ ಕುರಿತು ಮಾತುಕತೆ ನಡೆಸುತ್ತಿರುವ ಚಿತ್ರತಂಡ, ಕಂಪ್ಲೀಟ್‌ ಮಾಡಿದ ಬಳಿಕ ಆ ಬಗ್ಗೆ ಯೋಚಿಸುವ ಮಾತನಾಡುತ್ತಿದೆ. ಇನ್ನು, ಈಗಾಗಲೇ ಶೇ.೮೦ ರಷ್ಟು ಚಿತ್ರೀಕರಣ ಮುಗಿಸಿದೆ. ಲಿಖಿತ್‌ ಸೂರ್ಯ ಇಲ್ಲಿ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತಮ್ಮ “ಐ ಕ್ಯಾನ್”‌ ಪ್ರೊಡಕ್ಷನ್‌ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ರವಿ ನಾಗಡದಿನ್ನಿ ನಿರ್ದೇಶನ ಮಾಡುತ್ತಿದ್ದಾರೆ.

ಲಿಖಿತ್‌ ಸೂರ್ಯ ಅವರಿಗೆ “ರೂಮ್‌ ಬಾಯ್‌” ನಾಲ್ಕನೇ ಚಿತ್ರ. ಈ ಹಿಂದೆ “ಲೈಫ್‌ ಸೂಪರ್‌ʼ, ʼಆಪರೇಷನ್‌ ನಕ್ಷತ್ರʼ ಹಾಗೂ ತೆಲುಗಿನ “ರಾಮಾಪುರಂ” ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಅವರೀಗ “ರೂಮ್‌ ಬಾಯ್‌” ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ ಎಂಬುದು ವಿಶೇಷ.

ತಾರಾಗಣದಲ್ಲಿ ಲಿಖಿತ್‌ ಅವರ ಜೊತೆಗೆ ಯಶ್‌ ಶೆಟ್ಟಿ, ವರ್ಧನ್‌ ತೀರ್ಥಹಳ್ಳಿ, ವಜ್ರಾಂಗ್ ಶೆಟ್ಟಿ ಹಾಗೂ ರೋಶನ್‌ ಕೊಡಗು ಸೇರಿದಂತೆ ನಾಯಕಿ ರಕ್ಷಾ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ, ರಜನಿ, ಭಾನುಪ್ರಕಾಶ್ ಅಭಿನಯಿಸಿದ್ದಾರೆ. ವಿಶೇಷವಾಗಿ ಇಲ್ಲಿ ರಘುಶಿವಮೊಗ್ಗ ಅವರು ಕೂಡ ಸ್ಪೆಷಲ್‌ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ.

ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಒಂದೊಳ್ಳೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇಲ್ಲಿದೆ. ಇನ್ನು, ಯುವ ಪ್ರತಿಭೆ ರವಿ ನಾಗಡದಿನ್ನಿ ನಿರ್ದೇಶಿಸುತ್ತಿದ್ದು, ಇವರಿಗೆ ಇದು ಮೊದಲ ಚಿತ್ರ. ಸಿನಿಮಾ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದಾಗಿ ಎಂಜಿನಿಯರ್‌ ವೃತ್ತಿ ಬಿಟ್ಟು ಬಂದು ನಿರ್ದೇಶಕರಾಗಿದ್ದಾರೆ.

ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ನಾಯಕ ನಟ ಲಿಖಿತ್‌ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈ ತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್‌ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ “ರೂಮ್‌ ಬಾಯ್‌” ಚಿತ್ರ ಶುರು ಮಾಡಿ ಯಶಸ್ವಿಯಾಗಿ ಎರಡನೇ ಹಂತವನ್ನು ಮುಗಿಸಿದೆ.

ಇನ್ನು, “ರೂಮ್‌ ಬಾಯ್‌” ಚಿತ್ರಕ್ಕೆ ಕಿರಣ ಕುಮಾರ್‌ ಸಂಕಲನವಿದೆ. ಧನ್‌ ಪಾಲ್‌ ಅವರು ಕ್ಯಾಮೆರಾ ಹಿಡಿದಿದ್ದಾರೆ. ರೋಣದ ಬಕ್ಕೇಶ್‌ ಸಂಗೀತವಿದೆ. ಈಗಾಗಲೇ ನಂದಿಬೆಟ್ಟ ಬಳಿಯ ರೆಸಾರ್ಟ್‌ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಹಾಗೂ ವಿಶೇಷ ಮನೆಯಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. “ರೂಮ್‌ ಬಾಯ್‌” ಅಂದಾಕ್ಷಣ ಹಲವರಿಗೆ ಒಂದೊಂದು ನೆನಪಾಗುತ್ತೆ.

ಇಲ್ಲಿ ಟೈಟಲ್‌ ಎಷ್ಟು ವಿಭಿನ್ನ ಎನಿಸುತ್ತೋ, ಅಷ್ಟೇ ವಿಭಿನ್ನವಾಗಿಯೇ ಕಥೆ ಹೆಣೆದು ಸಿನಿಮಾ ಮಾಡಲು ಹೊರಟಿದೆ ಚಿತ್ರತಂಡ. ” ಇದೊಂದು ಸೈಕಾಲಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಸಾಮಾನ್ಯವಾಗಿ ರೂಮ್‌ ಬಾಯ್‌ ಅಂದ್ರೆ ಒಂದು ಹೊಟೇಲ್‌ ಅಥವಾ ರೆಸಾರ್ಟ್‌ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಇಷ್ಟಾದರೂ ರೆಸಾರ್ಟ್‌ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು ಅನ್ನೋದು ಸಸ್ಪೆನ್ಸ್.‌

Categories
ಸಿನಿ ಸುದ್ದಿ

ಹೊಸಬರ ಬ್ರೇಕ್‌ ಫೇಲ್ಯೂರ್‌;‌ ಮತ್ತೊಂದು ಹಾರರ್‌ ಸಿನಿಮಾ ರೆಡಿ

ಕನ್ನಡದಲ್ಲಿ ಹಾರರ್‌ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಇಲ್ಲಿ ಹೊಸಬರೇ ಹಾರರ್‌ ಅಂಶಗಳೊಂದಿಗೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಈಗ “ಬ್ರೇಕ್‌ ಫೇಲ್ಯೂರ್‌” ಸಿನಿಮಾ ಕೂಡ ಸೇರಿದೆ. ಹೌದು, ಇದು ಬಹುತೇಕ ಹೊಸಬರ ಚಿತ್ರ. ರಾಣಿಗಜ್ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ “ಬ್ರೇಕ್ ಫೇಲ್ಯೂರ್”‌ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ.

ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಒಂದು ಅಂಶ ಮಾಮೂಲಾಗಿರುತ್ತೆ. ಹುಡುಗರ ತಂಡವೊಂದು ಭಯಾನಕ ಕಾಡಿಗೆ ಹೋಗೋದು, ಅಲ್ಲಿ ಒಬ್ಬೊಬ್ಬರೇ ನಾಪತ್ತೆಯಾಗೋದು ಸಹಜ. ಅಲ್ಲಿ ಕಾಣದ ಕೈಯೊಂದು ಕೆಲಸ ಮಾಡುತ್ತೆ ಅನ್ನುವ ಸೂಚನೆ ಕೂಡ ಸಿಗುತ್ತಾ ಹೋಗುತ್ತೆ. ಇಂತಹ ಅಂಶವಿರುವ ಚಿತ್ರ “ಬ್ರೇಕ್‌ ಫೇಲ್ಯೂರ್‌”. ಬದುಕಿನ ದಾರಿಯಲ್ಲಿ ಭವಿಷ್ಯ ಎಂಬ ಬ್ರೇಕ್‌ ಫೇಲ್ಯೂರ್‌ ಆದಾಗ ಏನೆಲ್ಲಾ ಆಗಿಬಿಡುತ್ತೆ ಎಂಬ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ.

ಚಿತ್ರದುದ್ದಕ್ಕೂ ಕುತೂಹಲ ಸಾರವಿದೆ. ಪ್ರತಿ ದೃಶ್ಯದಲ್ಲೂ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳಿವೆ. ಬೆಚ್ಚಿ ಬೀಳಿಸುವ ಮುಖಗಳೂ ಇಲ್ಲುಂಟು. ಮುಖ್ಯವಾಗಿ, ಕಾಡು ಮೇಡು ಅಲೆಯುವ ತಂಡದ ಶ್ರಮ ವೀಡಿಯೋ ಸಾಂಗ್‌ನಲ್ಲಿ ನೋಡಬಹುದು. ಅದಿತ್ ನವೀನ್ ನಿರ್ದೇಶಕರು. ಅವರು ನಿರ್ದೇಶನದ ಜೊತೆಯಲ್ಲಿ ತೆರೆ ಮೇಲೂ ನಟಿಸಿದ್ದಾರೆ. ಅಬ್ದುಲ್ ಗಣಿ ತಾಳಿಕೋಟೆ ಅವರು ನಿರ್ಮಾಪಕರು. ಅವರ ಪ್ರಕಾರ ಹಣ ಇದ್ದಾಕ್ಷಣ ಸಿನಿಮಾ ಆಗೋದಿಲ್ಲ. ಒಗ್ಗಟ್ಟು, ಪ್ರೀತಿ, ಶ್ರಮ ಇದ್ದರೆ ಮಾತ್ರ ಒಂದೊಳ್ಳೆಯ ಚಿತ್ರ ಆಗುತ್ತೆ. ಅದು ಇಲ್ಲಾಗಿದೆ. ಸಣ್ಣ ಬಜೆಟ್‌ನಲ್ಲೇ ಅಚ್ಚುಕಟ್ಟಾದ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ಅವರು.

ಇಡೀ ಚಿತ್ರತಂಡ ಕಾಡು ಮನುಷ್ಯರಂತೆ ಕಾಡು ಅಲೆದು ಶ್ರಮಿಸಿದ್ದಾರೆ. ಬಹುತೇಕ ದಾಂಡೇಲಿ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ‌. ಮುಖ್ಯವಾಗಿ ನೀರಿಲ್ಲದೆ ಅಂತಹ ಕಾಡಿನಲ್ಲಿ ಬದುಕೋದೆ ಕಷ್ಟ ಅನ್ನೋದನ್ನು ತಿಳಿದು ಕೊಂಡೆವು‌. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ಹೀರೋ ಅದಿತ್ ನವೀನ್. ಉಗ್ರಂ ರವಿ ಕೂಡ ಈ ವೇಳೆ ಮಾತನಾಡಿ, “ಕಾಡಲ್ಲಿ ಚಿತ್ರೀಕರಣ ಮಾಡುವ ಸಂದರ್ಭ ತುಂಬಾನೇ ಭಯವಾಗುತ್ತಿತ್ತು. ಕಾರಣ, ಕಾಡು ಪ್ರಾಣಿಗಳು ರಾತ್ರಿ ವೇಳೆ ನೀರು ಕುಡಿಯಲು ಬರುತ್ತಿದ್ದವು. ಅದನ್ನು ಕಂಡು ಭಯವಾಗಿದ್ದು ನಿಜ. ಒಟ್ಟಾರೆ ಒಳ್ಳೆಯ ಸಿನಿಮಾ ಮಾಡಿದ್ದೇವೆʼ ಎಂಬುದು ಉಗ್ರಂ ರವಿ ಮಾತು.

Categories
ಸಿನಿ ಸುದ್ದಿ

ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಲಹರಿ ವೇಲು !

ರಾಜಕೀಯಕ್ಕೂ ಸಿನಿಮಾಕ್ಕೂ ಅತೀವ ನಂಟು. ಕನ್ನಡಕ್ಕಿಂತ ತಮಿಳುನಾಡಿನಲ್ಲಿ ಇದು ಇನ್ನಷ್ಟು ಜಾಸ್ತಿ ಅನ್ನೋದನ್ನು ವಿವರಿಸಿ ಹೇಳಬೇಕಿಲ್ಲ. ಅಲ್ಲೀಗ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಕೂಡ ಚುನಾವಣಾ ಪ್ರಚಾರದ ಅಬ್ಬರ ಆರಂಭಿಸಿದ್ದಾರೆ. ಹೌದು, ಲಹರಿ ವೇಲು ಅವರೀಗ ತಮಿಳುನಾಡು ಚುನಾವಣಾ ಪ್ರಚಾರದಲ್ಲಿದ್ದಾರೆ. ಮಧುರೈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ವೇಲು ಅವರಿಗೆ ಉಸ್ತುವಾರಿಯ ಜವಾಬ್ದಾರಿ ನೀಡಿದೆ. ಅಲ್ಲಿನ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವರು ಪಣ ತೊಟ್ಟಿದ್ದಾರಂತೆ. ” ಚುನಾವಣೆ ಘೋಷಣೆಯಾದ ನಂತರದ ದಿನಗಳಲ್ಲಿ ಪಕ್ಷವು ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದ ಉಸ್ತುವಾರಿ ಸಿ.ಟಿ. ರವಿ ಅವರು ನನ್ನನ್ನು ಗುರುತಿಸಿ ಈ ಕೆಲಸ ನೀಡಿದ್ದಾರೆ. ನಾನಂತೂ ಇದನ್ನು ತುಂಬಾ ಖುಷಿಯಿಂದಲೇ ವಹಿಸಿಕೊಂಡಿದ್ದೇನೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬಂದಾಗ ಅವರ ಬದ್ಧತೆಕಂಡು ಖುಷಿ ಆಯಿತುʼ ಅಂತ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಸಿನಿ ಲಹರಿಗೆ ಪ್ರತಿಕ್ರಿಯಿಸಿದರು.

ದೊಡ್ಡ ಜನಪ್ರಿಯತೆಯ ನಡುವೆಯೂ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಅವರು ರಾಜಕೀಯದಿಂದ ತುಂಬಾನೆ ದೂರ ಇದ್ದವರು. ಆದರೆ ಈಗ ಅವರಿಗೂ ರಾಜಕಾರಣ ಬೇಕಾಗಿದೆ. ಅದಕ್ಕಂತಲೇ ಕಳೆದ ವಿಧಾನ ಸಭಾ ಚುನಾವಣೆ ಹೊತ್ತಿಗೆ ತಮ್ಮ ಮೂಲ ನೆಲೆ ಬೆಂಗಳೂರಿನ ಚಾಲರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆನ್ನುವ ಸುದ್ದಿ ಜೋರಾಗಿತ್ತು. ಕೊನೆಗದು ಏನಾಯ್ತೋ ಗೊತ್ತಿಲ್ಲ, ವೇಲು ಅವರಿಗೆ ಟಿಕೆಟ್‌ ಕೈ ತಪ್ಪಿತು. ಆದರೂ ಅವರ ರಾಜಕೀಯದಿಂದ ಹೊರ ಬರಲಿಲ್ಲ. ಟಿಕೆಟ್‌ ಸಿಗಲಿಲ್ಲ ಅಂತ ಬೇಸರ ಪಡದೆ, ಬಿಜೆಪಿಯ ಕಾರ್ತಕರ್ತರಾಗಿಯೇ ಉಳಿದುಕೊಂಡಿದ್ದರು. ಈಗ ಅದಕ್ಕೆ ಫಲ ಸಿಕ್ಕಿದೆ. ತಮಿಳುನಾಡು ಚುನಾವಣೆಯಲ್ಲಿ ಲಹರಿ ವೇಲು ಸಕ್ರಿಯವಾಗಿ ಪಾಲ್ಗೊಂಡಿದ್ದು, ಚುನಾವಣೆ ಮುಗಿದ ನಂತರವೇ ಬೆಂಗಳೂರಿಗೆ ವಾಪಾಸ್‌ ಆಗುವುದು ಅಂತಿದ್ದಾರೆ ಲಹರಿ ವೇಲು.

Categories
ಸಿನಿ ಸುದ್ದಿ

ಅದ್ಯಾಕೋ ಮನಸು ಭಾರವಾಯಿತು ಅಂತ ಅಪ್ಪು ಅಂದಿದ್ದೇಕೆ ? ಅಪ್ಪು ಭಾವುಕರಾಗುವಂತಹ ಘಟನೆ ಆಗಿದ್ದಾರೂ ಏನು?

ನಟ ಪುನೀತ್‌ ರಾಜ್‌ ಕುಮಾರ್‌ ಇವತ್ತು ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದರು. ಅವರೊಂದಿಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಸೇರಿದಂತೆ ಇಡೀ “ಯುವರತ್ನʼ ಚಿತ್ರ ತಂಡವೇ ಇತ್ತು. ಎಲ್ಲದಕ್ಕಿಂತ ವಿಶೇಷ ಅಂದ್ರೆ, ಅಪ್ಪು ಅವರ ಮಂತ್ರಾಲಯ ಭೇಟಿಯಲ್ಲಿ ಪ್ರಮುಖವಾಗಿ ಕಾಣಸಿಕೊಂಡಿದ್ದು ಹಿರಿಯ ನಟ ನವರಸ ನಾಯಕ ಜಗ್ಗೇಶ್.‌ ಮಂತ್ರಾಲಯಕ್ಕೂ ರಾಜ್‌ ಕುಟುಂಬಕ್ಕೂ ಅಗಾದ ನಂಟು. ಅದೊಂಥರ ಅವಿನಾಭಾವ ಬೆಸುಗೆ. ವರನಟ ರಾಜ್‌ ಕುಮಾರ್‌ ಅವರಿಗೆ ಮಂತ್ರಾಲಯದ ರಾಯರು ಅಂದ್ರೆ ಪಂಚ ಪ್ರಾಣ. ಹಾಗೆಯೇ ಅವರ ಇಡೀ ಕುಟುಂಬಕ್ಕೂ ಮಂತ್ರಾಲಯದ ರಾಯರು ಅಂದ್ರೆ ಅತೀವ ಶ್ರದ್ಧಾ ಭಕ್ತಿ. ಜಗ್ಗೇಶ್‌ ಅವರಿಗೂ ಕೂಡ ಮಂತ್ರಾಲಯದ ರಾಯರ ಮೇಲೆ ಅತೀವ ನಂಬಿಕೆ. ಹಾಗೆಯೇ ರಾಯರ ಪರಮ ಶಿಷ್ಯ ಅವರು. ಅಂತೆಯೇ ಇವತ್ತು ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಅಪ್ಪು, ಜಗ್ಗೇಶ್‌ ಅವರೊಂದಿಗೆ ಹೋಗಿದ್ದರು.

ಇದೊಂಥರ ಕಾಕತಾಳೀಯ. “ರಾಬರ್ಟ್‌ʼ ಚಿತ್ರದ ಸಕ್ಸಸ್‌ ಆದ ಬೆನ್ನಲೇ ನಟ ದರ್ಶನ್‌ ಕೂಡ ಮಂತ್ರಾಲಯಕ್ಕೆ ಹೋಗಿದ್ದರು. ಅಲ್ಲಿ ರಾಯರ ದರ್ಶನದೊಂದಿಗೆ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಹಾಗೆಯೇ ದರ್ಶನ್‌, ಮಂತ್ರಾಲಯದಲ್ಲಿನ ಗೋಶಾಲೆಗೂ ಹೋಗಿ ಅಲ್ಲಿನ ಗೋವುಗಳನ್ನು ಮೈದಡವಿ ಬಂದಿದ್ದು ನಿಮಗೂ ಗೊತ್ತು. ಆ ನಂತರವೀಗ” ಯುವರತ್ನʼ ಚಿತ್ರದ ಸಕ್ಸಸ್‌ ಬೆನ್ನಲೇ ಅಪ್ಪು ಕೂಡ ಮಂತ್ರಾಲಯಕ್ಕೆ ಭೇಟಿ ಕೊಟ್ಟರು.ಈಗಾಗಲೇ ಅಲ್ಲಿ ಚಿತ್ರತಂಡಕ್ಕೆ ರಾಯರ ದರ್ಶನವೂ ಅಗಿದೆ. “ಯುವರತ್ನʼ ತಂಡವನ್ನು ರಾಯರು ಆಶೀರ್ವದಿಸಿ, ಹಾರೈಸಿದ್ದಾರೆ. ಅಲ್ಲಿಗೆ ಯವರತ್ನ ತಂಡ ಪುನೀತಗೊಂಡಿದೆ.

ಅಪ್ಪು ತಮ್ಮ ತಂಡದೊಂದಿಗೆ ಅತ್ತ ರಾಯರ ದರ್ಶನ ಪಡೆಯಲು ಮಂತ್ರಾಲಯಕ್ಕೆ ಹೊರಟ ಸಂದರ್ಭದಲ್ಲೇ ಒಂದು ಭಾವುಕ ಘಟನೆಗೆ ಪ್ರತಿಕ್ರಿಯಿಸಿದ್ದರು. ಅ ಸುದ್ದಿ ಕೇಳಿ ಅದ್ಯಾಕೋ ಮನಸು ಭಾರವಾಯಿತು ಅಂತ ಟ್ವಿಟ್‌ ಮಾಡಿದ್ದರು. ಅಷ್ಟಕ್ಕೂ ಕಾರಣವೇನು ?ಅವರ ಮನಸಿಗೆ ನೋವಾಗುವಂತಹ ಘಟನೆ ಇಲ್ಲಿ ನಡೆದಿದ್ದಾರೂ ಏನು? ಇದೇ ಅದಕ್ಕೆ ಕಾರಣವೂ ಇದೆ. ಅವರಿಗೆ ಮನಸ್ಸು ಭಾರವಾಗುವಂತಹ ಘಟನೆ ಭಾನುವಾರ ಮೈಸೂರಿನಲ್ಲಿ ನಡೆದಿತ್ತು. ಅದಕ್ಕವರು ಇಂದು ಅದ್ಯಕೋ ಮನಸು ಭಾರವಾಯಿತು ಅಂತ ಟ್ವಿಟ್‌ ಮಾಡಿದ್ದು.ಅರಮನೆ ನಗರಿ ಮೈಸೂರಿನಲ್ಲೊಂದು ಭಾನುವಾರ ಭಾವುಕ ಘಟನೆ ನಡೆಯಿತು. ಮೃತಪಟ್ಟ ಮಗನ ಫೊಟೋ ಇಟ್ಟುಕೊಂಡು ಪೋಷಕರು ‘ಯುವರತ್ನ’ ಸಿನಿಮಾ ನೋಡಿದ್ದರು. ಮೈಸೂರಿನ ಡಿ ಆರ್ ಸಿ‌ ಮಲ್ಟಿಫ್ಲೆಕ್ಸ್‌ ಅಂತಹದೊಂದು ಭಾವುಕ ಘಟನೆಗೆ ಸಾಕ್ಷಿ ಆಗಿತ್ತು. ಆ ಸುದ್ದಿ ಕೇಳಿ ಅಪ್ಪು ದಿಗ್ಬ್ರಾಂತರಾಗಿದ್ದರು. ರಾಯರ ದರ್ಶನಕ್ಕೆ ಅಂತ ಮಂತ್ರಾಲಯಕ್ಕೆ ಹೊರಟಿದ್ದ ಅಪ್ಪು, ತಕ್ಷಣಕ್ಕೆ ಆ ಘಟನೆಗೆ ಪ್ರತಿಕ್ರಿಯೆ ನೀಡಲು ಆಗಿರಲಿಲ್ಲ. ರಾಯರ ದರ್ಶನ ಪಡೆದು ವಾಪಾಸ್‌ ಹಿಂದಿರುಗುವಾಗ ಆ ಘಟನೆಗೆ ಪ್ರತಿ ಕ್ರಿಯಿಸಿ ಒಂದು ಟ್ವಿಟ್‌ ಮಾಡಿದರು. ಹಾಗಾದ್ರೆ ಅವರ ಟ್ವಿಟ್‌ ವಿವರ ಏನು? ಇಲ್ಲಿದೆ ನೋಡಿ.

ಮೈಸೂರಿನ ಮುರುಳಿಧರ್‌ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್‌ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ, ನನ್ನ ಮನಸು ಭಾರವಾಯಿತು. ಬಾಲಕ ಹರಿಕೃಷ್ಣನ್‌ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಅಪ್ಪು ತಮ್‌ ಟ್ವಿಟ್‌ ನಲ್ಲಿ ಹೇಳಿಕೊಂಡಿದ್ದಾರೆ. ಹಾಗಾದ್ರೆ ಈ ಹರಿಕೃಷ್ಣನ್‌ ಯಾರು ಗೊತ್ತಾ? ಮೈಸೂರಿನ ನಿವಾಸಿ‌ ಮುರಳಿಧರ್ ಎಂಬುವವರ ಪುತ್ರನೇ ಈ ಹರಿಕೃಷ್ಣನ್. ಪುಟ್ಟ ಹುಡುಗ. ಅಪ್ಪು ಅವರ ಅಪ್ಪಟ ಅಭಿಮಾನಿ. ಪುನೀತ್‌ ಅವರ ಸಿನಿಮಾ, ಡಾನ್ಸ್‌ ಅಂದ್ರೆ ವಿಪರೀತ ಕ್ರೇಜ್‌ ಅಂತೆ. ಸಿನಿಮಾವೋ ಅಥವಾ ಮನೆಯಲ್ಲಿ ಟಿವಿ ಮೇಲೋ ಪುನೀತ್‌ ರಾಜ್‌ ಕುಮಾರ್‌ ಕಾಣಿಸಿಕೊಂಡ್ರೆ, ಆತನಿಗೆ ಎಲ್ಲಿಲ್ಲದ ಖುಷಿ ಅಂತೆ. ಅಷ್ಟೇ ಅಲ್ಲ, ಅಪ್ಪು ಅಭಿನಯದ ಯುವರತ್ನ ನೋಡಲೇ ಬೇಕು ಅಂತ ಪಣ ತೊಟ್ಟಿದ್ನಂತೆ. ಇಂತಿಪ್ಪ ಬಾಲಕ ಕಳೆದ ಮೂರು ತಿಂಗಳ ಹಿಂದಷ್ಟೇ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಯುವರತ್ನ ಸಿನಿಮಾ ನೋಡುವ ಆತನ ಆಸೆ ಕೊನೆಗೂ ಕೈ ಗೂಡಿರಲಿಲ್ಲ.

ಮಗ ಹೋದ ಅಂತ ಅತೀವ ದುಖದಲ್ಲಿದ್ದ ಮುರುಳಿಧರ್‌ ಕುಟುಂಬ ಈ ಕ್ಷಣಕ್ಕೆ ಕಾಯುತ್ತಿತಂತೆ. ಮಗನ ಆಸೆ ಈಡೇರಿಸಬೇಕಾದರೆ ಯುವರತ್ನ ರಿಲೀಸ್‌ ಆಗಬೇಕು. ಮಗನ ಜತೆಗೆ ಸಿನಿಮಾ ನೋಡಬೇಕು ಅಂತ ಕಾಯಿತ್ತದ್ದರಂತೆ. ಅಂತೆಯೇ ಭಾನುವಾರ ಮುರುಳಿಧರ್‌ ಕುಟುಂಬ ಸಮೇತ ಯುವರತ್ನ ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ತಮ್ಮಿಂದ ದೂರವಾಗಿರೋ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಅಪ್ಪ-ಅಮ್ಮ, ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮಗನ ಆಸೆಯಂತೆ ಪೋಷಕರು ಆತನ ಫೋಟೋದೊಂದಿಗೆ ‘ಯುವರತ್ನ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದು ನಿನ್ನೆ ದೊಡ್ಡ ಸುದ್ದಿಯೂ ಅಗಿತ್ತು. ಅದಕ್ಕೀಗ ಅಪ್ಪು ಪ್ರತಿಕ್ರಿಯಿಸಿ, ಮನಸು ಭಾರವಾಯಿತು ಅಂದಿದ್ದಾರೆ. ಸಿನಿಮಾ, ಭಾವುಕತೆ, ಅಭಿಮಾನ ಅಂದ್ರೆ ಇದೆ ಅಲ್ವಾ?

Categories
ಸಿನಿ ಸುದ್ದಿ

ನಂದಕಿಶೋರ್ ಹೊಸ ಚಿತ್ರಕ್ಕೆ ಶ್ರೇಯಸ್‌ ಹೀರೋ; ಹೆಸರಿಡದ ಚಿತ್ರದಲ್ಲಿ ಕೆ.ಮಂಜು ಪುತ್ರ

ನಿರ್ದೇಶಕ ನಂದಕಿಶೋರ್ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ನಂದಕಿಶೋರ್‌ ಅವರಿಗೆ ಸ್ಟಾರ್‌ ಸಿನಿಮಾಗಳನ್ನು ಮಾಡೋದು ಗೊತ್ತು. ಗೆಲ್ಲೋದು ಗೊತ್ತು. ಹಾಗೆಯೇ ಹೊಸಬರ ಸಿನಿಮಾಗಳ ಮೂಲಕ ಸದ್ದು ಮಾಡೋದು ಕೂಡ ಗೊತ್ತು. ಈಗಾಗಲೇ ಸಾಬೀತು ಮಾಡಿದ್ದಾರೆ ಕೂಡ. ಅವರೀಗ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ.

ಶ್ರೇಯಸ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಚಿತ್ರ ಅನೌನ್ಸ್‌ ಮಾಡಲಾಗಿದೆ. ಆದರೆ, ಈ ಸಿನಿಮಾ ಯಾವಾಗ ಅನ್ನೋದು ಗೊತ್ತಿಲ್ಲ. ಈಗ ಸದ್ಯ ಶ್ರೇಯಸ್‌ “ವಿಷ್ಣುಪ್ರಿಯ” ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ನಂದಕಿಶೋರ್‌ ಕೂಡ “ಪೊಗರು” ಸಿನಿಮಾ ನಂತರ ಧ್ರುವ ಸರ್ಜಾ ಅವರಿಗೆ ಮತ್ತೊಂದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಆದರೆ, ಈ ಸಿನಿಮಾ ಯಾವಾಗ ಸೆಟ್ಟೇರುತ್ತೇ ಅನ್ನೋದು ಮಾತ್ರ ಗೌಪ್ಯ.

ಯುಗಾದಿ ಹಬ್ಬದ ಬಳಿಕ ಈ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಗುಜ್ಜಲ್ ಟಾಕೀಸ್ ಬ್ಯಾನರ್‌ನಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿದ್ದಾರೆ. ಇವರು ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ “ಟಗರು” ಚಿತ್ರದಲ್ಲಿ ‌ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು. ಸದ್ಯಕ್ಕೆ “ಪ್ರೊಡಕ್ಷನ್ ನಂ ೧” ಹೆಸರಲ್ಲಿ ಚಿತ್ರದ ಚಟುವಟಿಕೆಗಳು ಆರಂಭವಾಗಿದ್ದು, ಸದ್ಯದಲ್ಲೇ ಶೀರ್ಷಿಕೆ ಅನಾವರಣಗೊಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಧರ್ಮವಿಶ್ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

Categories
ಸಿನಿ ಸುದ್ದಿ

ಕಣ್ಣೇ ಅಧಿರಿಂದಿ ಅಂತ ಹಾಡಿದ ಗಾಯಕಿ ಮಂಗ್ಲಿ ಕನ್ನಡಕ್ಕೆ ಬಂದ್ರು ; ಕರಿಯ ಐ ಲವ್‌ ಯು ಸಿನಿಮಾಗೆ ಧ್ವನಿ ಕೊಟ್ರು…

“ಕಣ್ಣೇ ಅಧಿರಿಂದಿ…
ಬಹುಶಃ ಈ ಹಾಡು ಕೇಳದವರಿಲ್ಲ. ಇಂಥದ್ದೊಂದು ಸೂಪರ್‌ ಹಿಟ್‌ ಹಾಡಿಗೆ ಧ್ವನಿಯಾಗಿದ್ದು ಗಾಯಕಿ ಮಂಗ್ಲಿ. ದರ್ಶನ್‌ ಅಭಿನಯದ “ರಾಬರ್ಟ್”‌ ಚಿತ್ರದ ತೆಲುವು ಅವರತಣಿಕೆಗೆ “ಕಣ್ಣೇ ಅಧಿರಿಂದಿ..” ಹಾಡು ಹಾಡಿ ಕನ್ನಡಿಗರ ಮನವನ್ನೂ ಗೆದ್ದಿದ್ದ ಮಂಗ್ಲಿ, ಕನ್ನಡದಲ್ಲಿ ಹಾಡೋದು ಯಾವಾಗ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಂಗ್ಲಿ ಒಳ್ಳೆಯ ಗಾಯಕಿ. ಇವರ ಈ ಗಾಯನದ ಹಿಂದೆ ದೊಡ್ಡ ಕಥೆಯೇ ಇದೆ. ತಮ್ಮ ಕಂಠದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಗ್ಲಿ, “ರಾಬರ್ಟ್” ಚಿತ್ರಕ್ಕೆ ಹಾಡಿದ ಆ ಹಾಡು, ನಿಜಕ್ಕೂ ದೊಡ್ಡ ಹೆಸರು ತಂದುಕೊಟ್ಟಿದೆ. ಇನ್ನು, “‘ರಾಬರ್ಟ್” ಸಿನಿಮಾದ ತೆಲುಗು ವರ್ಷನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲೂ ಮಂಗ್ಲಿ ವೇದಿಕೆಯಲ್ಲಿ “ಕಣ್ಣೇ ಅಧಿರಿಂದಿ” ಹಾಡು ಹಾಡುವ ಮೂಲಕ ಮೆಚ್ಚುಗೆ ಪಡೆದಿದ್ದರು.

ಈಗಲೂ ಈ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇಂಥದ್ದೊಂದು ಹಾಡು ಹಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮಂಗ್ಲಿ, ಕನ್ನಡದಲ್ಲೊಂದು ಹಾಡು ಹಾಡಿದ್ದಾರೆ. “ಕರಿಯಾ ಐ ಲವ್ ಯು” ಎಂಬ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ ಕೂಡ.

ಅಂದಹಾಗೆ, ಚಿತ್ರದ “ಬಿಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ…” ಎನ್ನುವ ಹಾಡನ್ನು ಹಾಡಿದ್ದಾರೆ. ಲೋಕೇಶ್‌ ಸಂಗೀತ ನೀಡಿರುವ ಈ ಹಾಡಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್‌ ನೀಡಿದ್ದಾರೆ. ಚಿತ್ರದ ನಾಯಕ ಮಂಜುನಾಥ್‌, ಈ ಗಾಯಕಿಯನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಈಗಾಗಲೇ ಸಾಂಗ್‌ ರೆಕಾರ್ಡಿಂಗ್ ಮುಗಿದಿದೆ. ಹಾಡು ಕೂಡ ಚೆನ್ನಾಗಿ ಮೂಡಿಬಂದಿರುವ ಖುಷಿ ಚಿತ್ರತಂಡಕ್ಕಿದೆ.

Categories
ಸಿನಿ ಸುದ್ದಿ

ಟೀಸರ್‌ ನಂತರ ಮೇಕಿಂಗ್ ವಿಡಿಯೋ ಹಾಗೂ ಟೈಟಲ್‌ ಸಾಂಗ್ ಲಾಂಚ್‌ ಮೂಲಕ ಸೌಂಡ್‌ ಮಾಡಲು ಹೊರಟ ಕಟಿಂಗ್‌ ಶಾಪ್‌ ಚಿತ್ರ ತಂಡ

ಟೀಸರ್‌ ಮೂಲಕ ಸ್ಯಾಂಡಲ್‌ ವುಡ್‌ ನಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಹೊಸಬರʼ ಕಟಿಂಗ್‌ ಶಾಪ್‌ʼ ಸಿನಿಮಾ ಈಗ ಇನ್ನೊಂದು ಹಂತದಲ್ಲಿ ಸುದ್ದಿ ಮಾಡಲು ಹೊರಟಿದೆ. ರಿಲೀಸ್‌ ಪೂರ್ವ ಪ್ರಚಾರದ ಅಂಗವಾಗಿ ಈಗ ಚಿತ್ರ ತಂಡ ಎಪ್ರಿಲ್‌ 7 ರಂದು ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್ ಲಾಂಚ್‌ ಗೆ ಮುಂದಾಗಿದೆ. ಅಂದು ಸಂಜೆ 6 ಗಂಟೆಗೆ ಪ್ರತಿಷ್ಟಿತ ಪಿಆರ್‌ ಕೆ ಆಡಿಯೋ ಸಂಸ್ಥೆಯ ಮೂಲಕ ಚಿತ್ರದ ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್‌ ಹೊರ ಬರುತ್ತಿದೆ. ಯುವ ಪ್ರತಿಭೆ ಪವನ್‌ ಭಟ್‌ ನಿರ್ದೇಶನ ಈ ಚಿತ್ರದಲ್ಲಿ ಪ್ರವೀಣ್‌, ದೀಪಕ್‌ ಭಟ್‌, ಹಾಗೂ ನಟಿ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಹಾಗೆಯೇ ಅಭಿಷೇಕ್‌ ಸಾವಳಗಿ, ನವೀನ್‌ ಕೃಷ್ಣ, ಹಿರಿಯ ನಿರ್ದೇಶಕರಾದ ದೊರೆ ಭಗವಾನ್‌, ಓಂ ಪ್ರಕಾಶ್‌ ರಾವ್‌, ವತ್ಸಲಾ ಮೋಹನ್ ಕೂಡ ಚಿತ್ರದಲ್ಲಿದ್ದಾರೆ. ಹಳೇ ಬೇರು ಹೊಸ ಚಿಗುರು ಎನ್ನುವ ಹಾಗೆ ಚಿತ್ರ ತಂಡ ಹಳಬರೊಂದಿಗೆ ಹೊಸಬರನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ. ‌

ಗುರಪುರ ಕೆ. ಉಮೇಶ್‌ ಹಾಗೂ ಕೆ. ಗಣೇಶ ಐತಾಳ್‌ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕಟಿಂಗ್‌ ಶಾಪ್‌ ಎನ್ನುವ ಚಿತ್ರದ ಶೀರ್ಷಿಕೆಯೇ ಇಲ್ಲಿ ಕೂತೂಹಲಕಾರಿ ಆಗಿದೆ. ಟೈಟಲ್‌ ನೋಡಿದಾಕ್ಷಣ ಇದು ಯಾವುದರ ಕುರಿತ ಸಿನಿಮಾ ಅಂತಂದುಕೊಳ್ಳುವುದು ಕೂಡ ಅಷ್ಟೇ ಸಹಜ. ಆದರೆ ಇದು ಒಬ್ಬ ಸಿನಿಮಾ ಸಂಕಲನಕಾರನ ಕುರಿತ ಸಿನಿಮಾ. ಈಗಾಗಲೇ ಕನ್ನಡದಲ್ಲಿ ಡೈರೆಕ್ಟರ್‌ ಕುರಿತು ಸಿನಿಮಾ ಬಂದಿದೆ. ಹಾಗೆಯೇ ಸ್ಟಾರ್‌ ಕುರಿತು ಸಿನಿಮಾ ಬಂದಿದೆ. ಆದರೆ ಫಸ್ಟ್‌‌ ಟೈಮ್‌ ಒಬ್ಬ ಸಂಕಲನಕಾರನ ಕುರಿತು ಸಿನಿಮಾ ಮಾಡಿದ್ದಾರೆ ಯುವ ನಿರ್ದೇಶಕ ಪವನ್‌ ಭಟ್.‌ ಟೀಸರ್‌ ನಂತರವೀಗ ಚಿತ್ರ ತಂಡ ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್‌ ಮೂಲಕ ಸೌಂಡ್‌ ಮಾಡಲು ಹೊರಟಿದೆ.

error: Content is protected !!