ಕೋಮಾದಲ್ಲಿರುವಾಗಲೇ ಬದುಕಿಸಿದ `ಮಂಜು’ನಾಥ ಸ್ವಾಮಿ! ಬಿಗ್‌ಬಾಸ್‌ ಮನೇಲಿರುವಾಗ ಕೈ ಬಿಡೋದುಂಟೆ ?

ಉಸಿರಾಟದ ತೊಂದರೆಯಿಂದ ಬಾಲ್ಯದಲ್ಲೇ ಮಂಜಣ್ಣ ಕೋಮಾಗೆ ಹೋಗಿದ್ದರು. ಆಸ್ಪತ್ರೆಗೆ ಹೋದರೂ ಮಂಜಣ್ಣ ಉಸಿರಾಡಿದ್ದು ಶ್ರೀಮಂಜುನಾಥಸ್ವಾಮಿ ತೀರ್ಥ- ಪ್ರಸಾದ ಸೇವಿಸಿದ ಮೇಲೆ! ಮಗನ ಆರೋಗ್ಯ ಹದಗೆಟ್ಟಿದ್ದೇ ತಡ, ಮಂಜಣ್ಣ ತಂದೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿ, ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ಹಾಕಿ ಬೇಡಿದ್ದರು. ಸ್ವಾಮಿಯ ತೀರ್ಥ -ಪ್ರಸಾದ ತಂದು ಪುತ್ರ ಮಂಜಣ್ಣನಿಗೆ ಕೊಟ್ಟರು. ಅದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟರು…

  • ವಿಶಾಲಾಕ್ಷಿ

ನಂಬಿದ ಭಕ್ತರನ್ನು ಭಗವಂತ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎನ್ನುವ ಮಾತಿದೆ. ತನ್ನನ್ನು ಆರಾಧಿಸುವ, ಪೂಜಿಸುವ, ಸ್ಮರಿಸುವ ಭಕ್ತ ಬಳಗವನ್ನು ಭಗವಂತ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾನೆ ಅಂತ ಪೂರ್ವಜರು ಹೇಳ್ತಾರೆ, ಪುರಾಣಗಳು ಹೇಳುತ್ತವೆ. ಅಷ್ಟಕ್ಕೂ, ನಾವು ಇವತ್ತು ಭಗವಂತ-ದೇವರು ಅಂತ ಬರೆಯುತ್ತಿರುವುದಕ್ಕೆ ಕಾರಣ ಮಂಜು ಪಾವಗಡ. ಬಿಗ್‌ಬಾಸ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಮಂಜಣ್ಣ, ತಮ್ಮ ಬದುಕಿನಲ್ಲಿ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಯ ಪವಾಡ ಎಂತಹದ್ದು ಅನ್ನೋದನ್ನು ವಿವರಿಸಿದ್ದಾರೆ. ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ, ಮಂಜುನಾಥ ಸ್ವಾಮಿ ಬದುಕಿಸಿದ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ. ಆ ಅಚ್ಚರಿಯ ಕಥೆಯನ್ನ ಈ ಕ್ಷಣ ನಿಮ್ಮ ಮುಂದೆ ಇಡಲಿದ್ದೇವೆ.

ಮಂಜು ಪಾವಗಡ ಕಡು ಬಡತನದ ಕುಟುಂಬಕ್ಕೆ ಸೇರಿದ ಕುಡಿ. ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ. ಕೂಲಿನಾಲಿ ಮಾಡಿಕೊಂಡು ಜೀವನ ಮಾಡುವಂತಹ ಕುಟುಂಬ. ಹೀಗೆ ಬದುಕು ಸಾಗುತ್ತಿರುವಾಗ ಮಂಜಣ್ಣ ತೀರಾ ಚಿಕ್ಕವನು. ಆಗಿನ್ನೂ ಹೆಸರಿಟ್ಟಿರಲಿಲ್ಲ. ಮಗನ ನಾಮಕರಣಕ್ಕೆ ಸಕಲ ತಯ್ಯಾರಿ ನಡೆದಿತ್ತು. ಮಂಜು ಅವರ ತಂದೆ ರೇಷ್ಮೆಗೂಡನ್ನು ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಅಲ್ಲಿಂದ ಅವರು ಬರುವಷ್ಟರಲ್ಲಿ ಮಂಜಣ್ಣನಿಗೆ ತೀರಾ ಸೀರಿಯಸ್ಸ್ ಆಗಿಬಿಟ್ಟಿತ್ತು. ಉಸಿರಾಟಕ್ಕೆ ತೊಂದರೆಯಾಗಿ ಬಾಲ್ಯದಲ್ಲೇ ಮಂಜಣ್ಣ ಕೋಮಾಗೆ ಹೋಗಿ ಬಿಟ್ಟಿದ್ದ. ಆಸ್ಪತ್ರೆಗೆ ತೋರಿಸಿದರಾದರೂ ಕೂಡ ಮಂಜಣ್ಣ ಉಸಿರಾಡಿದ್ದು ಶ್ರೀಮಂಜುನಾಥಸ್ವಾಮಿಯ ತೀರ್ಥ ಹಾಗೂ ಪ್ರಸಾದ ಹೊಟ್ಟೆಗೆ ಹೋದ್ಮೇಲೆ.

ಹೌದು, ಮಗನ ಆರೋಗ್ಯ ಹದಗೆಟ್ಟಿದ್ದೇ ತಡ, ಮಂಜಣ್ಣ ಅವರ ತಂದೆ ಧರ್ಮಸ್ಥಳ ಬಸ್ ಏರಿ ಶ್ರೀಮಂಜುನಾಥನ ಸನ್ನಿಧಿಗೆ ತೆರಳಿದರು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡರು. ವಿಶೇಷ ಪೂಜೆ ಮಾಡಿಸಿಕೊಂಡು ತೀರ್ಥ-ಪ್ರಸಾದ ತೆಗೆದುಕೊಂಡು ಬಂದರು. ಉಸಿರಾಡೋದಕ್ಕೆ ಕಷ್ಟಪಡುತ್ತಿದ್ದ ಪುತ್ರ ಮಂಜಣ್ಣನಿಗೆ ಮಂಜುನಾಥ ಸ್ವಾಮಿ ತೀರ್ಥ ಸೇವನೆ ಮಾಡಿಸಿದರು. ಇದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟ. ಅಂದಿನಿಂದ ಇಂದಿನಿವರೆಗೂ ಮಂಜಣ್ಣ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಗೆ ನಡೆದುಕೊಳ್ತಾರೆ. ಕಷ್ಟ-ಸುಖ-ಸಂತೋಷ ಯಾವುದೇ ಇರಲಿ ಅಲ್ಲಿಗೆ ಹೋಗಿ ಆಶೀರ್ವಾದ ಬೇಡಿಕೊಂಡು ಬರುತ್ತಾರಂತೆ.

ಹಸನಾದ ಬದುಕು…

ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಂಜಣ್ಣನನ್ನು ಬದುಕಿಸಿಕೊಟ್ಟ ಮಂಜುನಾಥಸ್ವಾಮಿ, ಮಂಜಣ್ಣನಿಗೆ ಹಸನಾದ ಬದುಕು ಕಟ್ಟಿಕೊಟ್ಟಿದ್ದಾನೆ. ನಾನು ಕಲಾವಿದ ಆಗ್ಬೇಕು ಎನ್ನುವುದು ಬಾಲ್ಯದ ಕನುಸು ಮಂಜುನಾಥ ದಯವಿಟ್ಟು ಅದೊಂದು ಮಹದಾಸೆಯನ್ನು ಈಡೇರಿಸಿಕೊಡೆಂದು ಒಮ್ಮೆ ಧರ್ಮಸ್ಥಳಕ್ಕೆ ಹೋಗಿ ಅಡ್ಡಬಿದ್ದು ಮಂಜಣ್ಣ ಬೇಡಿಕೊಂಡಿದ್ದತೆ. ಆ ಕನಸು ಮಜಾ ಭಾರತದ ಮೂಲಕ ಕೊನೆಗೂ ಈಡೇರಿಬಿಡ್ತು. ಕಲರ್ಸ್ ಕನ್ನಡದ ಮಜಾ ಅಂಗಳಕ್ಕೆ ಬರುವುದಕ್ಕೂ ಮೊದಲು ಲ್ಯಾಂಗ್ ಮಂಜಣ್ಣ ಬೇಜಾನ್ ಸೈಕಲ್ ಹೊಡೆದಿದ್ದಾರೆ. ತಾನೊಬ್ಬ ಕಲಾವಿದ ಎಂದು ಸಾಬೀತುಪಡಿಸುವುದಕ್ಕೆ ಸಾಕಷ್ಟು ಕಷ್ಟ-ನೋವು-ಅವಮಾನ-ಅಪಮಾನ-ನಿಂದನೆ ಎದುರಿಸಿದ್ದಾರೆ. ಅದಕ್ಕೆ ಇವತ್ತು ದೊಡ್ಮನೆ ಅಂಗಳದಲ್ಲಿ ನಿಂತಿದ್ದಾರೆ. ನಾಲ್ಕು ಜನ ನನ್ನ ಗುರ್ತಿಸಿದರೇ ಸಾಕು ಎನ್ನುತ್ತಿದ್ದ ಲ್ಯಾಂಗ್ ಮಂಜಣ್ಣರನ್ನ ಇವತ್ತು ಇಡೀ ಕರುನಾಡಿನ ಏಳುಕೋಟಿ ಜನರು ಗುರ್ತಿಸುತ್ತಿದ್ದಾರೆ ಜೊತೆಗೆ ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ.

ಕೆಲವೇ ಗಂಟೆಯಲ್ಲಿ ಬಿಗ್‌ಬಾಸ್‌ ಯಾರೆಂಬ ಉತ್ತರ!

ದೊಡ್ಮನೆ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿಪಡೆಯವುದು ಅಷ್ಟು ಸುಲಭವಲ್ಲ. ಅಲ್ಲಿಗೆ ಜಿಗಿದ್ಮೇಲೆ ಎದುರಾಳಿ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಾ, ಗೇಮ್ಸ್ ಗಳಲ್ಲಿ ಜೆನ್ಯೂನ್ ಆಗಿ ಆಡುತ್ತಾ, ಕರುನಾಡ ಮಂದಿಯನ್ನು ರಂಜಿಸುತ್ತಾ ಗ್ರ್ಯಾಂಡ್ ಫಿನಾಲೆವರೆಗೂ ಬರೋದು ತಮಾಷೆ ಮಾತಲ್ಲ. ಅಂತದ್ರಲ್ಲಿ ಲ್ಯಾಗ್ ಮಂಜಣ್ಣ ಬಿಗ್‌ಬಾಸ್ ಫೈನಲ್ಸ್ ತಲುಪಿದ್ದಾರೆ. ಬಿಗ್‌ಬಾಸ್ ಗೆಲ್ತಾರೆ, ಕಿರೀಟ ಮುಡಿಗೇರಿಸಿಕೊಂಡು ಕರುನಾಡ ಅಂಗಳದಲ್ಲಿ ಮೆರವಣಿಗೆ ಹೊರಡ್ತಾರೆ ಎನ್ನುವ ಸುದ್ದಿ ಕೂಡ ಟಪ್ಪಾಂಗುಚ್ಚಿ ಸ್ಟೆಪ್ ಹಾಕ್ತಿದೆ. ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಬಿಗ್‌ಬಾಸ್ ಸೀಸನ್ 8ರ ವಿನ್ನರ್-ರನ್ನರ್ ಯಾರಾಗ್ತಾರೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.

ಆ ಅಂತಿಮ ಉತ್ತರಕ್ಕೂ ಮೊದಲೇ ಕರ್ನಾಟಕದ ಬಹುತೇಕ ಮಂದಿ ಮಂಜು ಪಾವಗಡ ಅವರೇ ಗೆಲ್ಲಬೇಕು ಅಂತ ಆಶಿಸುತ್ತಿದ್ದಾರೆ. ಕೋಮಾದಲ್ಲಿದ್ದಾಗ ಶ್ರೀಮಂಜುನಾಥ ಸ್ವಾಮಿಯೇ ಬದುಕಿಸಿದ್ದು ಅಂತ ಮಂಜಣ್ಣ ಹೇಳಿದ್ಮೇಲಂತೂ ಹಲವು ಮಂದಿ ಬಾಯಲ್ಲಿ ಅದೇ ಮಂಜುನಾಥ ಸ್ವಾಮಿ ಬಿಗ್‌ಬಾಸ್‌ನಲ್ಲಿ ಮಂಜಣ್ಣನ್ನು ಗೆಲ್ಲಿಸೋದು ಖಚಿತವೆಂದು ಮಾತನಾಡಿಕೊಳ್ತಿದ್ದಾರೆ. ನೋಡೋಣ ಮಂಜುನಾಥಸ್ವಾಮಿಯ ಅಭಯಹಸ್ತ ಟಾಪ್ ಫೈವ್ ಕಂಟೆಸ್ಟೆಂಟ್‌ಗಳಲ್ಲಿ ಯಾರ ಮೇಲಿದೆ ಅಂತ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!