Categories
ಸಿನಿ ಸುದ್ದಿ

ಡಾರ್ಲಿಂಗ್‌ ಕೃಷ್ಣ -ಪಿ.ಸಿ.ಶೇಖರ್‌ ಕಾಂಬೋ ಹೊಸ ಸಿನಿಮಾ : ರೋಮ್‌-ಕಾಮ್‌ ಸ್ಟೋರಿ ಸಿನಿಮಾಕ್ಕೆ ಅಕ್ಟೋಬರ್‌ ನಲ್ಲಿ ಚಿತ್ರೀಕರಣ

ನಟ ಡಾರ್ಲಿಂಗ್‌ ಕೃಷ್ಣ ಮತ್ತಷ್ಟು, ಮೊಗೆದಷ್ಟು ಬ್ಯುಸಿ ಆಗುತ್ತಿದ್ದಾರೆ. ʼಲವ್‌ ಮಾಕ್ಟೆಲ್‌‌ʼ ನಂತರ ಅವರ ಸ್ಟಾರ್‌ ಇಮೇಜೇ ಬದಲಾಯಿತು. ಕೆರಿಯರ್‌ ಗ್ರಾಪ್‌ ಒಂದೇ ಸಮನೆ ಮುಗಿಲೆತ್ತರಕ್ಕೆ ಚಿಮ್ಮಿತು. ವೃತ್ತಿ ಬದುಕು, ಮತ್ತೊಂದೆಡೆ ಖಾಸಗಿ ಬದುಕು ಎರಡಲ್ಲೂ ಅವರಿಗೆ ಅದೃಷ್ಟವೇ ಖುಲಾಯಿಸಿತು. ಅವರ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ನಡುವೆಯೇ ಈಗ ರೋಮಿಯೋ ಖ್ಯಾತಿಯ ನಿರ್ದೇಶಕ ಪಿ.ಸಿ. ಶೇಖರ್‌ ನಿರ್ದೇಶನದ ಹೊಸ ಸಿನಿಮಾಕ್ಕೆ ನಟ ಡಾರ್ಲಿಂಗ್‌ ಕೃಷ್ಣ ನಾಯಕರಾಗಿ ಕಮಿಟ್‌ ಆಗಿದ್ದಾರೆ. ನಿರ್ದೇಶಕ ಪಿ.ಸಿ. ಶೇಖರ್‌ ಇದನ್ನು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ನಟ, ನಿರ್ಮಾಪಕ ಕಡ್ಡಿಪುಡಿ ಚಂದ್ರು ಈ ಚಿತ್ರದ ನಿರ್ಮಾಪಕರು.ಚಿತ್ರಕ್ಕೆ ಈಗಷ್ಟೇ ಮಾತುಕತೆ ಫೈನಲ್‌ ಆಗಿದೆ. ಡಾರ್ಲಿಂಗ್‌ ಕೃಷ್ಣ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗಕ್ಕೆ ಬೇಕಾದ ಪಾತ್ರಧಾರಿಗಳ ಆಯ್ಕೆಗೆ ನಿರ್ದೇಶಕರು ಈಗಷ್ಟೇ ತಲೆಕೆಡಿಸಿಕೊಳ್ಳಬೇಕಂತೆ.

ʼಇದು ಇನ್ನು ತುಂಬಾಪ್ರೈಮರಿ ಹಂತ. ಚಿತ್ರಕ್ಕೆ ಡಾರ್ಲಿಂಗ್‌ ಕೃಷ್ಣ ಅವರು ಫಿಕ್ಸ್‌ ಆಗಿ ಈಗಷ್ಟೇ ಎರಡು ದಿನ ಕಳೆದಿವೆ. ಇನ್ನು ಮೇಲೆ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯಬೇಕಿದೆ. ದೊಡ್ಡ ತಾರಾಗಣವೇ ಇರಲಿದೆ. ಕತೆಯ ಪಾತ್ರವರ್ಗಗಳ ಅನುಸಾರ ಯಾರೆಲ್ಲ ಆಗಬಹುದು ಅಂತ ಅಂದಾಜು ಮಾಡಿಕೊಂಡಿದ್ದೇನೆ. ದೊಡ್ಡ ತಾರಾಬಳಗವನ್ನೇ ತರಬೇಕೆನ್ನುವ ಆಸೆಯಂತೂ ಇದೆ. ನಿರ್ಮಾಪಕರ ಬೆಂಬಲವೂ ಇದಕ್ಕಿದೆ. ಅಕ್ಟೋಬರ್‌ ನಲ್ಲಿ ಶುರು ಮಾಡೋಣ ಅಂತಂದುಕೊಂ ಡಿದ್ದೇವೆ. ಅಷ್ಟೊರಳಗೆ ಕಲಾವಿದರು, ತಂತ್ರಜ್ಜರ ಆಯ್ಕೆ ಫೈನಲ್‌ ಮಾಡಿಕೊಂಡು, ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹೋಗುವ ಆಲೋಚನೆ ಇದೆʼಎನ್ನುತ್ತಾರೆ ನಿರ್ದೇಶಕ ಪಿ.ಸಿ. ಶೇಖರ್.‌
ನಿರ್ದೇಶಕ ಪಿ.ಸಿ. ಶೇಖರ್‌ ಈಗಾಗಲೇ ಇಂಡಸ್ಟ್ರಿಯಲ್ಲಿ ಹಲವು ಸ್ಟಾರ್‌ ಜತೆಗೆ ಕೆಲಸ ಮಾಡಿದ್ದಾರೆ. ಗಣೇಶ್‌ ಅಭಿನಯದ ʼರೋಮಿಯೋʼ ಚಿತ್ರ ಬಜಾರ್‌ ನಲ್ಲಿ ಸಾಕಷ್ಟು ಸದ್ದು ಮಾಡಿತು. ಮುಂದೆ ಕಾಮಿಡಿ ಸ್ಟಾರ್‌ ಮಿತ್ರ ಹೀರೋ ಆಗಿ ಕಾಣಿಸಿಕೊಂಡ ರಾಗಾ ಸಿನಿಮಾ ಅಪಾರ ಮೆಚ್ಚುಗೆ ಪಡೆದಿದ್ದು ಮಾತ್ರವಲ್ಲ, ಬೆಸ್ಟ್‌ ಡೆಬ್ಯುಟ್‌ ಆಕ್ಟರ್‌ ಆವಾರ್ಡ್‌ಗೂ ಪಾತ್ರವಾಯಿತು. ಅಲ್ಲಿಂದ ಗ್ಲಾಮರಸ್‌ ನಟಿ ರಾಗಿಣಿ ಕಾಂಬಿನೇಷನ್‌ ಮೂಲಕ ದಿ ಟೆರರಿಸ್ಟ್‌ ಎನ್ನುವ ಯೂನಿವರ್ಷಲ್‌ ಸಬ್ಜೆಕ್ಟ್‌ ಮೇಲೊಂದು ಸಿನಿಮಾ ಮಾಡಿದರು. ಅದು ನಿರೀಕ್ಷಿತ ಸಕ್ಸಸ್‌ ಪಡೆದುಕೊಳ್ಳಲಿಲ್ಲ ಎನ್ನುವುದನ್ನು ಬಿಟ್ಟರೆ, ಒಂದೊಳ್ಳೆಯ ಪ್ರಯತ್ನವಾಗಿ ಕಾಣಿಸಿಕೊಂಡಿತು. ಅಲ್ಲಿಂದ ಒಂದಷ್ಟು ಗ್ಯಾಪ್‌ ಬಳಿಕ ಟಗರು ಪುಟ್ಟಿ ಮಾನ್ವಿತಾ ಕಾಮತ್‌ ಕಾಂಬಿನೇಷನ್‌ ಮೂಲಕ ಹಕ್ಕಾ ಹಳ್ಳಿ ಸೊಗಡಿನ ಶೈಲಿಯ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದು, ಆ ಸಿನಿಮಾಕ್ಕೆ ಸೆಪ್ಟೆಂಬರ್‌ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆಯಂತೆ.

ಈ ಚಿತ್ರಕ್ಕೆ ಟೈಟಲ್‌ ಇನ್ನು ಫೈನಲ್‌ ಆಗಿಲ್ಲ.ಲೀಡ್‌ ರೋಲ್‌ ನಲ್ಲಿ ಮಾನ್ವಿತಾ ಇದ್ದಾರೆ ಎನ್ನುವುದನ್ನು ಬಿಟ್ಟರೆ ಬಹುತೇಕ ಹೊಸಬರೇ ಇಲ್ಲಿದ್ದಾರಂತೆ. ಈ ನಡುವೆ ಈಗ ʼಲವ್‌ ಮಾಕ್ಟೆಲ್‌ʼ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಕಾಂಬಿನೇಷನ್‌ ಮೂಲಕ ಮತ್ತೊಂದು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದಾರೆ. ಡಾರ್ಲಿಂಗ್‌ ಕೃಷ್ಣ ಅಂದಾಕ್ಷಣ, ಈ ಸಿನಿಮಾದ ಕಥೆಯ ಬಗ್ಗೆ ದೊಡ್ಡ ಕುತೂಹಲ ಹುಟ್ಟುವುದು ಅಷ್ಟೇ ಸಹಜ. ಆ ಬಗ್ಗೆ ನಿರ್ದೇಶಕ ಪಿ.ಸಿ. ಶೇಖರ್‌ ಹೇಳುವುದೇನು ಗೊತ್ತಾ? ʼ ಇದೊಂದು ರೋಮ್‌ ಕಾಮ್‌ ಕಥೆ ಅನ್ನೋದರಲ್ಲಿ ನೋ ಡೌಟ್.‌ ಒಂದೊಳ್ಳೆಯ ಪ್ರೇಮ ಕಥೆ ಹೆಣೆದಿದ್ದೇನೆ. ಕಾರ್ಪೋರೇಟ್‌ ಜಗತ್ತಿನಲ್ಲಿ ನಡೆಯುವ ಕಥೆ. ಅಟ್‌ ದಿ ಸೇಮ್‌ ಟೈಮ್‌ ಅದಕ್ಕೆ ಹಳ್ಳಿ ಸೊಗಡು ಕೂಡ ಇದೆ. ಅವೆರಡರ ನಡುವೆ ಅಂತಹ ವಿಶೇಷ ಇದೆ ಅನ್ನೋದೆ ಇಲ್ಲಿನ ಕುತೂಹಲ ಅಂತಾರೆ ನಿರ್ದೇಶಕ ಪಿ.ಸಿ. ಶೇಖರ್.‌

  • ಎಂಟರ್‌ ಟೈನ್‌ ಮೆಂಟ್‌ ಬ್ಯರೋ ಸಿನಿಲಹರಿ

Categories
ಸಿನಿ ಸುದ್ದಿ

ಬರ್ತ್‌ ಡೇ ಸಂಭ್ರಮದಲ್ಲಿ ಬೇಬಿ ಡಾಲ್‌ ಆದ್ಯಾ : ಆಕ್ಟಿಂಗ್‌ ಜತೆಗೀಗ ಜಾಹೀರಾತಿನಲ್ಲೂ ಬಾಲ ನಟಿಯ ಮಿಂಚು !

ಸರಿಗಮಪ ಲಿಟ್ಲ್‌ ಚಾಂಪ್ಸ್‌ ಖ್ಯಾತಿಯ ಬೇಬಿ ಡಾಲ್‌ ಆದ್ಯಾ ಬರ್ತ್‌ ಡೇ ಸಂಭ್ರಮದಲ್ಲಿದ್ದಾರೆ. ʼಕೋಟಿಗೋಬ್ಬ -3ʼ ಚಿತ್ರ ತಂಡ ಆದ್ಯಾಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಹಾಗೆಯೇ ಸಿಂಗಿಂಗ್‌, ಆಕ್ಟಿಂಗ್‌ ಜತೆಗೀಗ ಬ್ರಾಂಡ್‌ ಅಂಬಾಸಿಡರ್‌ ಆಗಿಯೂ ಮಿಂಚುತ್ತಿದ್ದಾರೆ. ಅವರ ಜರ್ನಿಯ ಒಂದು ಝಲಕ್‌ ಇಲ್ಲಿದೆ…

ಸರಿಗಮಪ ಲಿಟ್ಲ್‌ ಚಾಂಪ್ಸ್‌ ಖ್ಯಾತಿಯ ಬೇಬಿ ಡಾಲ್‌ ಆದ್ಯಾ, ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಭಾನುವಾರ ಫ್ಯಾಮಿಲಿ ಜತೆಗೆ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ನಡುವೆ ಬೇಬಿ ಡಾಲ್‌ ಆದ್ಯಾಗೆ ʼಕೋಟಿಗೊಬ್ಬ-3ʼ ಚಿತ್ರ ತಂಡ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಬಾಲ ನಟಿ, ಗಾಯಕಿ ಆದ್ಯಾಗೆ ಬರ್ತ್‌ ಡೇ ವಿಶ್‌ ಮಾಡಿ ಸ್ಪೆಷಲ್‌ ಪೋಸ್ಟರ್‌ ಲಾಂಚ್‌ ಮಾಡಿದೆ. ಸೋಷಲ್‌ ಮೀಡಿಯಾದಲ್ಲಿ ಈ ಪೋಸ್ಟರ್‌ ವೈರಲ್‌ ಆಗಿದೆ. ಅಭಿನಯ ಚಕ್ರವರ್ತಿ ಕಿಚ್‌ ಸುದೀಪ್‌ ಜತೆಗೆ ಬೇಬಿ ಡಾಲ್‌ ಆದ್ಯಾ ನಿಂತಿರೋ ಫೋಸ್ಟರ್‌ ಅದು. ಕಿಚ್ಚನ ಅಭಿಮಾನಿಗಳ ಜತೆಗೆ ಬೇಬಿ ಡಾಲ್‌ ಆದ್ಯಾ ಫ್ಯಾನ್ಸ್ ಕೂಡ ಅದನ್ನು ಕರುನಾಡಿನ ತುಂಬಾ ಹಂಚಿದ್ದಾರೆ. ಸಹಜವಾಗಿಯೇ ಇದು ಬಾಲ ನಟಿ ಆದ್ಯಾಗೂ ಖುಷಿ ತಂದಿದೆ.

ಸರಿಗಮಪ ಲಿಡ್ಲ್‌ ಚಾಂಪ್ಸ್‌ ರಿಯಾಲಿಟಿ ಶೋ ಮನೆ ಮಾತಾದ ಪುಟಾಣಿ ಆದ್ಯಾ, ಈಗ ಬಾಲ ನಟಿಯಾಗಿಯೂ ಮಿಂಚುತ್ತಿದ್ದಾರೆ. ಬಹುತೇಕ ಸ್ಟಾರ್‌ ಸಿನಿಮಾಗಳ ಮೂಲಕವೇ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಅದೃಷ್ಟ ಆದ್ಯಾಗೆ ಸಿಕ್ಕಿದೆ. ಉಪೇಂದ್ರ ಅಭಿನಯದ ʼಹೋಮ್‌ ಮಿನಿಸ್ಟರ್‌ʼ ಹಾಗೂ ಕಿಚ್ಚ ಸುದೀಪ್‌ ಅಭಿನಯದ ʼಕೋಟಿಗೊಬ್ಬ-೩ʼ ಚಿತ್ರದಲ್ಲಿ ಆದ್ಯಾ ಬಾಲ ನಟಿಯಾಗಿ ಅಭಿನಯಸಿದ್ದಾರೆ. ಇದಲ್ಲದೆ ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ ʼಭೀಮ ಸೇನ ನಳಮಹಾರಾಜʼ ಚಿತ್ರದಲ್ಲೂ ಆದ್ಯಾ ಅಭಿನಯಸಿದ್ದರು. ಆ ಚಿತ್ರ ಅಮೆಜಾನ್‌ ಪ್ರೈಂ ಮೂಲಕ ಈಗಾಗಲೇ ಪ್ರೇಕ್ಷಕರ ಮುಂದೆ ಬಂದಿದೆ. ಉಳಿದಂತೆ ಹೋಮ್‌ ಮಿನಿಸ್ಟರ್‌ ಹಾಗೂ ʼಕೋಟಿಗೊಬ್ಬ -3ʼ ಚಿತ್ರಗಳು ತೆರೆ ಕಾಣುವುದು ಬಾಕಿಯಿದೆ.

ಒಂದೆಡೆ ಸಿಂಗರ್‌ ಆಗಿ ದೊಡ್ಡ ಮಟ್ಟಕ್ಕೆ ಬೆಳೆಯುವ ಹಂಬಲ ಹೊತ್ತಿರುವ ಬಾಲಕಿ ಆದ್ಯಾ, ಈಗಾಗಲೇ ಎರಡು ಆಲ್ಬಂ ಸಾಂಗ್ಸ್‌ ಹೊರ ತಂದಿದ್ದಾರೆ. ಒಂದು ಆಲ್ಬಂ ಸಾಂಗ್‌ ನಲ್ಲಿ ಧ್ಬನಿ ನೀಡಿದ್ದರೆ, ಇನ್ನೊಂದನ್ನು ತಾವೇ ನಿರ್ಮಾಣ ಮಾಡಿ ಹೊರ ತಂದಿದ್ದಾರೆ. ಇದೇ ಮೊದಲ ಆದ್ಯತೆ ಆಗಿದ್ದರೂ, ಬಾಲ ನಟಿಯಾಗಿಯೂ ಆದ್ಯಾಗೆ ಬೇಡಿಕೆ ಹೆಚ್ಚಿದೆ. ಹೊಸಬರ ಅನೇಕ ಸಿನಿಮಾಗಳಲ್ಲಿ ಆದ್ಯಾ ಅಭಿನಯಿಸುವ ಆಫರ್‌ ಬಂದಿದ್ದರೂ, ಸದ್ಯಕ್ಕೆ ಚ್ಯೂಸಿ ಆಗಿದ್ದ ಸ್ಟಾರ್‌ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆಗೀಗ ಬೇಬಿ ಡಾಲ್‌ ಆದ್ಯಾ ಜಾಹೀರಾತು ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ.

ಬ್ರೈಟ್‌ ಎಕ್ಸ್‌ಫರ್ಟ್‌ ಹೆಸರಿನ ಒಂದು ಹೊಸ ಕಂಪನಿಯ ಡಿಟರ್ಜೆಂಟ್‌ ಪ್ರಾಡಕ್ಟ್ ಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ ಬೇಬಿ ಡಾಲ್‌ ಆದ್ಯಾ. ಅಷ್ಟು ಮಾತ್ರವೇ ಅಲ್ಲ, ʼಅಶ್ವಿನಿ ನಕ್ಷತ್ರʼ ಸೀರಿಯಲ್‌ ಖ್ಯಾತಿಯ ನಟ ಜೆಕೆ ಅಲಿಯಾಸ್‌ ಜಯರಾಂ ಕಾರ್ತಿಕ್‌ ಕೂಡ ಇದರ ಬ್ರಾಂಡ್‌ ಅಂಬಾಸಿಡರ್‌. ಅವರೊಂದಿಗೆ ಆದ್ಯಾ ಕೂಡ ಇಲ್ಲಿ ಬ್ರಾಂಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಪೋಷಕರಿಗೂ ಖುಷಿ ಕೊಟ್ಟಿದೆ.ʼ ನಾವು ಯಾವುದಕ್ಕೂ ಒತ್ತಾಯ ಮಾಡಿಲ್ಲ. ಸಿಂಗಿಂಗ್‌ ಆಕೆಯ ಆಸಕ್ತಿ. ಹಾಗೆಯೇ ನಟನೆಯೂ ಕೂಡ ಅವಳ ಪ್ರತಿಭೆಯಿಂದಲೇ ಸಿಕ್ಕ ಅವಕಾಶ. ಅದರ ಜತೆಗೆ ಈಗ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ. ಎಲ್ಲವೂ ಒಂದ್ರೀತಿ ಅವಾಗಿಯೇ ಬರುತ್ತಿವೆ. ಅದರ ಜತೆಗೆ ಎಜುಕೇಷನ್‌ ಕೂಡ ಇಂಪಾರ್ಟೆಂಟ್‌ ಅಲ್ವಾ? ಹಾಗಾಗಿ ಅವಕಾಶ ಇದೆ ಅಂತ ಯಾವುದಕ್ಕೂ ಒತ್ತಾಯ ಮಾಡೋದಿಲ್ಲʼ ಅಂತಾರೆ ಆದ್ಯಾ ಅವರ ತಾಯಿ ಅಶ್ವಿನಿ. ಸಿನಿಲಹರಿ ಕಡೆಯಿಂದ ಆದ್ಯಾ ಗೆ ಹುಟ್ಟು ಹಬ್ಬದ ಶುಭಾಶಯ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಡಿಯರ್‌ ಆರ್ಯನ್‌ ಕಮಿಂಗ್‌ ಸೂನ್!‌ ಸೆಪ್ಟೆಂಬರ್‌ಗೆ ಡಿಯರ್ ಸತ್ಯ ಬರ್ತಾನೆ ಗುರು!!

ಆರ್ಯನ್‌ ಸಂತೋಷ್‌ ಕನ್ನಡ ಸಿನಿರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಸಿನಿಮಾ ಮೂಲಕ ರಂಗಿನ ದುನಿಯಾಗೆ ಎಂಟ್ರಿಯಾದ ಆರ್ಯನ್‌ ಸಂತೋಷ್‌, ಅ ನಂತರದ ದಿನಗಳಲ್ಲಿ “ನೂರು ಜನ್ಮಕು” ಸಿನಿಮಾ ಮೂಲಕ ಹೀರೋ ಆಗಿ ಕಾಣಿಸಿಕೊಂಡರು. ಅದಾದ ಬಳಿಕ ಒಂದಷ್ಟು ಕಥೆ ಹುಡುಕಾಟದಲ್ಲಿದ್ದ ಅವರು, ಕೊನೆಗೂ ಒಂದೊಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾದರು. ಅದೇ “ಡಿಯರ್‌ ಸತ್ಯ”. ಈ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲು ಹೀರೋ ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ…

ಹೀರೋ ಆರ್ಯನ್‌ ಸಂತೋಷ್‌ ಮೊಗದಲ್ಲಿ ಮಂದಹಾಸ ಬೀರಿದೆ. ಅದಕ್ಕೆ ಕಾರಣ, ಅವರ ಬಹುನಿರೀಕ್ಷೆಯ “ಡಿಯರ್‌ ಸತ್ಯ” ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಆರ್ಯನ್‌ ಸಂತೋಷ್‌ ಅವರ ಹುಟ್ಟುಹಬ್ಬದಂದು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಈ ಟ್ರೇಲರ್‌ ಬಿಡುಗಡೆಯ ವಿಶೇಷವೆಂದರೆ, ಡೆಲಿವರಿ ಬಾಯ್ಸ್ ಟ್ರೇಲರ್‌ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಹೌದು, ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ “ಡಿಯರ್ ಸತ್ಯ” ಚಿತ್ರ ಸೆಪ್ಟೆಂಬರ್‌ಗೆ ಬಿಡುಗಡೆಯಾಗಲಿದೆ. ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಚಿತ್ರದ ಟ್ರೇಲರ್‌ ರಿಲೀಸ್‌ ಬಳಿಕ ಮಾತಿಗಿಳಿದ ಹೀರೋ ಆರ್ಯನ್‌ ಸಂತೋಷ್‌, “ನಾನು ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದಿದೆ. “ಕಲ್ಲರಳಿ ಹೂವಾಗಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾನು, “ನೂರು ಜನ್ಮಕು” ಚಿತ್ರದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರು ಮುಂದೆ ಬರಲಿಲ್ಲ. ದೇವರ ಹಾಗೆ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಬಂದು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ ಎಂದರು ಆರ್ಯನ್ ಸಂತೋಷ್.

ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ “ಭಿನ್ನ” ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಓಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ “ಡಿಯರ್ ಸತ್ಯ” ನಿರ್ಮಾಣ ಮಾಡಿದ್ದೇವೆ. ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋ ಮೂಲಕ ಚಿತ್ರ ತಯಾರಾಗಿದೆ.‌

ಆರ್ಯನ್ ಸಂತೋಷ್ ನನ್ನ ಸ್ನೇಹಿತ. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ಪ್ಲಾನ್‌ ಇದೆ ಎಂಬುದು ನಿರ್ಮಾಪಕ ಗಣೇಶ್ ಪಾಪಣ್ಣ ಅವರ ಮಾತು. ಮತ್ತೊಬ್ಬ ನಿರ್ಮಾಪಕ ಶ್ರೀನಿವಾಸ ಶ್ರೀಭಕ್ತ ಕೂಡ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದರು.

“ಜಿಗರ್ ಥಂಡ”, “ತ್ರಾಟಕ”, “ಆ ದೃಶ್ಯ” ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದಿದ್ದೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು.‌ ನಂತರ ಈ ಚಿತ್ರ ಆರಂಭವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯ ಇಲ್ಲಿ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ. ಎಲ್ಲಾ‌ ತಂತ್ರಜ್ಞರು ಹಾಗೂ ಕಲಾವಿದರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಶಿವಗಣೇಶ್. ಆಡಿಷನ್ ಮೂಲಕ ಆಯ್ಕೆಯಾದ ನಾಯಕಿ ಅರ್ಚನಾ ಕೊಟ್ಟಿಗೆ, ಕಲಾವಿದರಾದ ಬಾಲು, ಕಾರ್ತಿಕ್ ಸುಬ್ರಹ್ಮಣ್ಯ, ಫ್ಯಾಷನ್ ಡೈರೆಕ್ಟರ್ ಭಾರ್ಗವಿ ವಿಖ್ಯಾತಿ ಹಾಗೂ ಸಾಹಸ ನಿರ್ದೇಶಕ ಕುಂಫು ಚಂದ್ರು ಮಾತನಾಡಿದರು.


ಇನ್ನು, “ಡಿಯರ್‌ ಸತ್ಯ” ಚಿತ್ರದಲ್ಲಿ ನಾಯಕ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನ ಡೆಲಿವರಿ ಬಾಯ್ಸ್ ಕೈಯಿಂದಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಆರ್ಯನ್ ಸಂತೋಷ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಿರ್ಮಾಪಕರಾದ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್ ಹಾಗೂ ಕರಿಸುಬ್ಬು ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Categories
ಸಿನಿ ಸುದ್ದಿ

ಚಿರು- ಪನ್ನಗ ಪುತ್ರರ ಬಾಲಕೃಷ್ಣ ಫೋಟೋಶೂಟ್; ಬ್ರದರ್ ಫ್ರಮ್ ಅನದರ್ ಮದರ್-ಹೀಗಂತಾರೆ !

ನಾಡಿನಾದ್ಯಾಂತ ಶ್ರೀಕೃಷ್ಣಜನ್ಮಾಷ್ಟಮಿಯ ಆಚರಣೆ ಜೋರಾಗಿದೆ. ದೇವಾಲಯಗಳಲ್ಲಿ ಅದ್ಧೂರಿ ಆಚರಣೆಗೆ ಅವಕಾಶ ಸಿಕ್ಕಿಲ್ಲವಾದರೂ ಕೂಡ ಮನೆಮನೆಯಲ್ಲಿ ಗೋಪಾಲನ ಜಪ-ತಪ ಮುಗಿಲು ಮುಟ್ಟಿದೆ. ತಮ್ಮ ತಮ್ಮ ಮನೆಯ ಮುದ್ದುಕಂದಮ್ಮಗಳಿಗೆ ಶ್ರೀಕೃಷ್ಣನ ವೇಷ ಹಾಕಿಸಿ ಸಂತೋಷಪಡುತ್ತಿದ್ದಾರೆ. ಅದರಂತೇ, ಸರ್ಜಾ ಫ್ಯಾಮಿಲಿ ಹಾಗೂ ಪನ್ನಾಗಭರಣ ಫ್ಯಾಮಿಲಿಯಲ್ಲಿ ಬಾಲಕೃಷ್ಣರ ಸಂಭ್ರಮ-ಸಡಗರ ಭರ್ಜರಿಯಾಗಿಯೇ ನಡೆದಿದೆ. ಜೂನಿಯರ್ ಚಿರು ಹಾಗೂ ವೇದ್ ಭರಣ ಇಬ್ಬರು ಕೃಷ್ಣನ ವೇಷ ಧರಿಸಿಕೊಂಡು ಬಾಲಕೃಷ್ಣರಾಗಿ ಮಿಂಚಿರುವ ಫೋಟೋಗಳನ್ನ ನಟಿ ಮೇಘನಾ ರಾಜ್ ತಮ್ಮ ಸೋಷಿಯಲ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. `ನನ್ನ ಬೆಣ್ಣೆ ಮುದ್ದು ಬಂಗಾರ’ ಅಂತ ಟ್ವೀಟ್ ಮಾಡಿ ಖುಷಿಪಟ್ಟಿದ್ದಾರೆ.

ಚಿರು ಹಾಗೂ ಪನ್ನಗ ಇಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದವರು ಈಗ ಜೂನಿಯರ್ ಚಿರು ಹಾಗೂ ಜೂನಿಯರ್ ವೇದ್ ಸ್ನೇಹಿತರಾಗಿದ್ದಾರೆ. ಮರಿ ಚಿರಂಜೀವಿಗೆ ಈಗಿನ್ನೂ ೧೦ ತಿಂಗಳು, ಇತ್ತ ವೇದ್‌ಗೆ ೩ ವರ್ಷ. ಇಬ್ಬರು ಕೂಡ ತಮ್ಮದೇ ಆದ ಪುಟ್ಟಪ್ರಪಂಚದಲ್ಲಿದ್ದಾರೆ. ಸ್ನೇಹ-ಗೆಳೆತನ- ದೋಸ್ತಿ ಇದ್ಯಾವುದರ ಅರಿವಿಲ್ಲ ಆದರೆ ಈ ಇಬ್ಬರ ಪುಟ್ಟಕಂದಮ್ಮಗಳ ಪೇರೆಂಟ್ಸ್ ಗೆ ಜೂನಿಯರ್ ಚಿರು ಹಾಗೂ ಜೂನಿಯರ್ ವೇದ್‌ನ ಬಾಲ್ಯದಿಂದಲೇ ಸ್ನೇಹಿತರನ್ನಾಗಿ ಮಾಡುವ ಕನಸಿದೆ. ಹೀಗಾಗಿ, ಹಬ್ಬ ಹರಿದಿನಗಳಲ್ಲಿ ಮೊದಲಿನಂತೆ ಒಟ್ಟಿಗೆ ಸೇರುತ್ತಾರೆ ಚಿರು ನೆನಪುಗಳನ್ನ ಮೆಲುಕು ಹಾಕುತ್ತಾ ಸಂಭ್ರಮಿಸುತ್ತಾರೆ. ಅದರಂತೇ, ಶ್ರೀಕೃಷ್ಣಜನ್ಮಾಷ್ಠಮಿಯಂದು ಒಂದೆಡೆ ಸೇರಿ ಜೂನಿಯರ್ ಚಿರು ಹಾಗೂ ವೇದ್‌ಗೆ ಬಾಲಕೃಷ್ಣನ ವೇಷಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಮುದ್ದುಕೃಷ್ಣರಂತೆ ಇಬ್ಬರು ರಾರಾಜಿಸಿದ್ದನ್ನ ಕಂಡು ಎರಡು ಫ್ಯಾಮಿಲಿಯವರು ಖುಷಿಪಟ್ಟಿದ್ದಾರೆ.

`ಬ್ರದರ್ ಫ್ರಮ್ ಅನದರ್ ಮದರ್’ ಅಂತಾರೇ. ಅದರಂತೇ, ಮರಿ ಯುವಸಾಮ್ರಾಟನ ಪಾಲಿಗೆ ಮುಂದಿನ ದಿನಗಳಲ್ಲಿ ವೇದ್ ಭರಣ ಅಣ್ಣನ ಸ್ಥಾನ ತುಂಬುವುದರಲ್ಲಿ ಡೌಟೇ ಇಲ್ಲ .ಈಗಾಗಲೇ ತಮ್ಮನನ್ನ ಪ್ರ‍್ರೊಟೆಕ್ಟ್ ಮಾಡುವ ಕೆಲಸವನ್ನ ವೇದ್ ಶುರು ಹಚ್ಚಿಕೊಂಡಿದ್ದಾನಂತೆ. ಫೋಟೋಶೂಟ್ ವೇಳೆ ಜೂನಿಯರ್ ಚಿರುನಾ ವೇದ್ ಸಿಕ್ಕಾಪಟ್ಟೆ ಕೇರ್ ಮಾಡಿದ್ನಂತೆ. ಇಬ್ಬರು ಒಟ್ಟಿಗೆ ಬೆಲೆಕಟ್ಟಲಾಗದ ಸಮಯವನ್ನ ಕಳೆದಿದ್ದಾರಂತೆ, ಆ ಎಲ್ಲಾ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಶೀಘ್ರದಲ್ಲೇ ಆ ಖುಷಿಯ ಕ್ಷಣಗಳನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ. ಸೀನಿಯರ್ಸ್ ನಂತರ ಜೂನಿಯರ್ಸ್ ನಡುವೆ ಇರುವ ಪ್ರೀತಿ ಹಾಗೂ ಬಾಂಡೇಜ್‌ನ ನೀವೆಲ್ಲಾ ನೋಡಬಹುದು. ಅಪ್ಪಂದಿರಂತೆ ಇವರಿಬ್ಬರು ಚಡ್ಡಿದೋಸ್ತ್‌ ಗಳಾಗಿ, ಕುಚುಕು ಗೆಳೆಯರಾಗಿ ಮುಂದುವರೆಯುತ್ತಾರೆ ಬಿಡಿ.

ಓ ಗೆಳೆಯ ಜೀವದ್ ಗೆಳೆಯ ನಿಂದು ತಾಯಿ ಪ್ರೀತಿ ಕಣೋ…ಪ್ರೀತಿಗೂ ಒಂದು ಕೈ ದೋಸ್ತಿ ಜಾಸ್ತಿ ಕಣೋ… ಹೀಗಂತ ಚಿರು ಹಾಗೂ ಪನ್ನಗ ಇಬ್ಬರು ಜೊತೆಯಾಗಿ ಹಾಡ್ತಿದ್ದರು. ಬರೀ ಹಾಡಿಗಷ್ಟೇ ಸೀಮಿತವಾಗದೇ ಹಾಗೆಯೇ ಬಾಳಿಬದುಕಿದರು. ಜೀವದ ಗೆಳೆಯರಾಗಿದ್ದ ಇವರಿಬ್ಬರ ನಡುವೆ ಒಡಹುಟ್ಟಿದ ಅಣ್ತಮ್ಮರಂತಹ ಬಾಂಧವ್ಯ- ಪ್ರೀತಿ ಹಾಗೂ ಒಡನಾಟವಿತ್ತು. ಗೆಳೆತನವನ್ನು ಹಾಗೂ ಸಹೋದರತ್ವವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಚಿರು ಹಾಗೂ ಪನ್ನಗರನ್ನ ನೋಡಿದವರು ಇದ್ದರೇ ಇವರಂತಹ ಸ್ನೇಹಿತರಿರಬೇಕು ಅಂತ ಕೊಂಡಾಡುತ್ತಿದ್ದರು. ಹೀಗಿರುವಾಗಲೇ ವಾಯುಪುತ್ರ ಚಿರು ಏಕಾಏಕಿ ಉಸಿರು ಚೆಲ್ಲಿದರು. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೇಹೋದರು. ಈ ಕ್ಷಣಕ್ಕೂ, ಯುವಸಾಮ್ರಾಟ ಚಿರು ಇಲ್ಲದ ಕ್ಷಣವನ್ನ ಅವರ ಕುಟುಂಬಕ್ಕೆ ಊಹಿಸಿಕೊಳ್ಳೋದಕ್ಕೆ ಸಾಧ್ಯವಾಗಲ್ಲ. ಆದರೆ, ಜೂನಿಯರ್ ಚಿರು ಬಂದ ಘಳಿಗೆಯಿಂದ ಮರಿ ಯುವಸಾಮ್ರಾಟನ ಕಣ್ಣಲ್ಲಿ, ನಗುವಲ್ಲಿ ಚಿರುನಾ ಕಾಣುವುದಕ್ಕೆ ಅವಕಾಶ ಸಿಕ್ಕಿದೆ. ಸರ್ಜಾ ಕುಟುಂಬ ಮಾತ್ರವಲ್ಲ ಇಡೀ ಕರುನಾಡು ಜೂನಿಯರ್ ರಾಜಮಾರ್ತಾಂಡನ ಮೊಗದಲ್ಲಿ ಚಿರಂಜೀವಿ ಸರ್ಜಾರನ್ನ ನೋಡ್ತಿದ್ದಾರೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕೆಜಿಎಫ್- ಆರ್ ಆರ್ ಆರ್- ಮಾರ್ಟಿನ್ ಈಗ ವಿಕ್ರಾಂತ್ ರೋಣ; ಸ್ಟಾರ್ ನಟರ ಚಿತ್ರಕ್ಕೆ ‘ಲಹರಿ’ ಚಿನ್ನದ ಕಿರೀಟ!

ಇಂಡಿಯಾ ಪ್ರೈಡ್ ವಿಕ್ರಾಂತ್ ರೋಣ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಆರ್ ಆರ್ ಆರ್, ಮಾರ್ಟಿನ್ ನಂತರ ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ ಪೆಕ್ಡೆಡ್ ಮಹಾಮೂವೀ ವಿಕ್ರಾಂತ್ ರೋಣದ ಚಿತ್ರದ ಆಡಿಯೋ ಹಕ್ಕುಗಳನ್ನ ಪ್ರತಿಷ್ಠಿತ ಲಹರಿ‌ ಸಂಸ್ಥೆ ಮುಡಿಗೇರಿಸಿಕೊಂಡಿದೆ.

‘ಲಹರಿ’ ಕನ್ನಡದ ಹೆಮ್ಮೆಯ ಸಂಸ್ಥೆ. ಮ್ಯೂಸಿಕ್ ಲೋಕದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿರುವ ಲಹರಿ ಮ್ಯೂಸಿಕ್, ಯೂಟ್ಯೂಬ್ ಕಡೆಯಿಂದ ಡೈಮಂಡ್ ಕಿರೀಟ ಮುಡಿಗೇರಿಸಿಕೊಂಡ ಮೇಲೆ ಬಜಾರ್ ನಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಮತ್ತಷ್ಟು ಹವಾ ಎಬ್ಬಿಸಿದೆ. ಹಿಂದ್ಯಾರು ಬರೆಯದ ಇತಿಹಾಸ ಸೃಷ್ಟಿಸುತ್ತಾ ಮುನ್ನುಗುತ್ತಿರುವ ಪ್ರತಿಷ್ಠಿತ ಲಹರಿ ಮ್ಯೂಸಿಕ್
ಸೌತ್ ದುನಿಯಾದ ಬಹುತೇಕ ಸೂಪರ್ ಸ್ಟಾರ್ ಗಳಿಗೆ ಚಿನ್ನದ ಕಿರೀಟ ತೊಡಿಸುತ್ತಾ ಇಂಡಿಯನ್ ಸಿನಿಮಾ ಇಂಡಸ್ಟ್ರಿ ತಿರುತಿರುಗಿ ನೋಡುವಂತೆ ಮಾಡ್ತಿದೆ.

ಇಡೀ ಸಿನಿಮಾ ಜಗತ್ತು ಎದುರುನೋಡ್ತಿರುವ, ಚಿತ್ರ ಪ್ರೇಮಿಗಳು‌ ಜಾತಕಪಕ್ಷಿಯಂತೆ ಕಾಯ್ತಿರುವ, ಬಹುನಿರೀಕ್ಷಿತ ಸಿನಿಮಾಗಳು ಎನಿಸಿಕೊಂಡಿರುವ, ಸೌತ್ ದುನಿಯಾದ ಬಹುತೇಕ ಎಲ್ಲಾ ಮೂವೀಗಳಿಗೂ ಲಹರಿ ಸಂಸ್ಥೆ ಕೋಟಿ ಕೋಟಿ ಚಿನ್ನದ ಹಾರ ಹಾಕಿದೆ. ಈ ಮೂಲಕ ಮಾಯಲೋಕದಲ್ಲಿ ಆಯಾ ಸಿನಿಮಾಗಳು ಸುನಾಮಿ ಎಬ್ಬಿಸುವಂತೆ ಮಾಡಿದೆ.

ಇವತ್ತು ಅಖಾಡದಲ್ಲಿ ಕೆಜಿಎಫ್ ಚಾಪ್ಟರ್2, ಆರ್ ಆರ್ ಆರ್, ಮಾರ್ಟಿನ್ ಅಬ್ಬರ ಆರ್ಭಟ ಜಾಸ್ತಿ ಐತೆ ಅಂದರೆ ಅದಕ್ಕೆ ಒಂದು ರೀತಿಯಲ್ಲಿ ಲಹರಿ ಮ್ಯೂಸಿಕ್ ಕೂಡ ಕಾರಣ. ತಮ್ಮ ತಮ್ಮ ಸಿನಿಮಾಗೆ ಆಯಾ ಸಿನಿಮಾ ತಂಡ ನಿದ್ದೆಗೆ ಚಟ್ಟಕಟ್ಟಿ ದುಡಿದಿರಬಹುದು, ಬೆವರೊಟ್ಟಿಗೆ ರಕ್ತಬಸಿದಿರಬಹುದು ಆದರೆ
ಅವರವರ ಪರಿಶ್ರಮಕ್ಕೆ ಬೆಂಬಲ ಅಲ್ಲದೇ ಬೇಡಿಕೆಯ ಬೆಲೆಯನ್ನ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿರುವ ಲಹರಿ ಸಂಸ್ಥೆಗೆ ಫಿಲ್ಮ್ ಟೀಮ್ ಮಾತ್ರವಲ್ಲ ಸಿನಿಮಾ ಪ್ರೇಮಿಗಳು ಕೂಡ ಚಪ್ಪಾಳೆ ತಟ್ಟಬೇಕು. ಕನ್ನಡದ ಹೆಮ್ಮೆಯ ಮ್ಯೂಸಿಕ್ ಸಂಸ್ಥೆಯನ್ನ ಆಕಾಶದೆತ್ತರಕ್ಕೆ‌ ಬೆಳೆಸಬೇಕು.

ಜಕ್ಕಣ್ಣ ಅಲಿಯಾಸ್ ರಾಜಮೌಳಿಯ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ಹಕ್ಕಿಗೆ ಲಹರಿ ಸಂಸ್ಥೆ 25 ಕೋಟಿ
ಸುರಿದಿದ್ದು ನಿಮ್ಗೆಲ್ಲಾ ಗೊತ್ತೆಯಿದೆ. ಈ ಮೂಲಕ ಆರ್ ಆರ್ ಆರ್ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ದುಬಾರಿ ಮೊತ್ತಕ್ಕೆ ಆಡಿಯೋ ಸೇಲ್ ಮಾಡಿದ ಮೊದಲ ಚಿತ್ರ ಎನಿಸಿಕೊಳ್ತು. ಈ ದಾಖಲೆಗೆ ಲಹರಿಯೇ ಕಾರಣ. ಅನಂತರ ಒನ್ ಟು ಡಬ್ಬಲ್ ಕೊಟ್ಟು‌ ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್ ನ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪಾರ್ಟ್ 1 ಗೆ 3.6 ಕೋಟಿ ಕೊಟ್ಟಿದ್ದ ಲಹರಿ ಕೆಜಿಎಫ್ ಎರಡನೇ ಭಾಗಕ್ಕೆ‌ 7.2 ಕೋಟಿ ಡೆಪಾಸಿಟ್ ಮಾಡಿ ಚಾಪ್ಟರ್ 2 ಗೆ ಡಿಮ್ಯಾಂಡ್ ಹೆಚ್ಚು ಮಾಡಿಕೊಡ್ತು.‌

ಅಚ್ಚರಿ ಅಂದರೆ ಹಾಡುಗಳನ್ನ ಕೇಳದೆಯೇ ಮಾರ್ಟಿನ್ ಸಿನಿಮಾದ ಆಡಿಯೋ ಹಕ್ಕುಗಳನ್ನು ಬ್ಲಾಕ್ ಮಾಡಿಕೊಂಡಿದ್ದು. ಇದು ಅದ್ಧೂರಿ ಜೋಡಿಯ
ಮೇಲಿರುವಂತಹ ಅಪಾರವಾದ ನಂಬಿಕೆ. ಬ್ಲಾಕ್ ಬಸ್ಟರ್ ಹಿಟ್ ಹಾಡುಗಳನ್ನೇ ಕೊಡ್ತಾರೆನ್ನುವ ಭರವಸೆಯಿಂದ ಸಿನಿಮಾ ಮುಹೂರ್ತಕ್ಕೆ‌ ಮೊದಲೇ ಮಾರ್ಟಿನ್ ಆಡಿಯೋ ರೈಟ್ಸ್ ನ ಲಹರಿ ತನ್ನ ಮುಡಿಗೇರಿಸಿಕೊಂಡಿದೆ. ಸೌತ್ ಸಿನಿಮಾದ ಜನಪ್ರಿಯ ಸಂಗೀತ ನಿರ್ದೇಶಕ ಮಾರ್ಟಿನ್ ಗೆ ಹಾಡುಗಳನ್ನ ಹೊಸೆಯುತ್ತಾರಂತೆ. ಯಾರು ಆ ಮ್ಯೂಸಿಕ್ ಮಾಂತ್ರಿಕ ಎನ್ನುವುದು ರಿವೀಲ್‌ ಆಗಬೇಕಿದೆ.

ಆರ್ ಆರ್ ಆರ್, ಕೆಜಿಎಫ್ ಚಾಪ್ಟರ್೨, ಮಾರ್ಟಿನ್ ಬೆನ್ನಲ್ಲೇ ವಿಕ್ರಾಂತ್ ರೋಣ ಚಿತ್ರದ ಆಡಿಯೋ ಹಕ್ಕುಗಳನ್ನ ದುಬಾರಿ ಮೊತ್ರಕ್ಕೆ ಖರೀದಿ ಮಾಡಿದೆ. ಎಷ್ಟು ‌ಕೋಟಿ‌ ಎನ್ನುವುದು ಬಟಾಬಯಲಾಗಿಲ್ಲವಾದರೂ ವಿಕ್ರಾಂತ್ ರೋಣನಿಗಾಗಿ ಕೋಟಿ ಕೋಟಿ ಸುರಿದಿದ್ದಾರೆ ‌ಎನ್ನುವ ಮಾತುಗಳು ಕೇಳಿಬರ್ತಿದೆ. ಆಡಿಯೋ ತೆಕ್ಕೆಗೆ ತೆಗೆದುಕೊಂಡಿರುವ ವಿಷ್ಯವನ್ನ ಲಹರಿ ತಮ್ಮ ಸೋಷಿಯಲ್ ಪೇಜ್ ನಲ್ಲಿ ಪ್ರಕಟಿಸಿದೆ. ವಿಕ್ರಾಂತ್ ರೋಣ ಮಾಯಲೋಕದ ಮಹಾಮೂವೀ. ಪ್ಯಾನ್ ಇಂಡಿಯಾ‌ ಲೆವೆಲ್ ನಲ್ಲಿ ತಯ್ಯಾರಾಗ್ತಿರುವ ಈ‌ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ. ಅನುಪ್ ಭಂಡಾರಿ ನಿರ್ದೇಶನ ಚಿತ್ರಕ್ಕಿದ್ದು, ನೀರಿನಂತೆ ಹಣವನ್ನು ನಿರ್ಮಾಪಕ ಜಾಕ್ ಮಂಜು ಖರ್ಚು ಮಾಡಿದ್ದಾರೆ. ಕಿಚ್ಚನ ಹುಟ್ಟುಹಬ್ಬಕ್ಕೆ ಫಸ್ಟ್ ಗ್ಲಿಂಪ್ಸ್ ಕೊಡುವುದಕ್ಕೆ ತಯ್ಯಾರಿ ನಡೆದಿದೆ. ಹೀಗಾಗಿ, ಫ್ಯಾನ್ಸ್ ಕೂಡ ಥ್ರಿಲ್ಲಾಗಿದ್ದಾರೆ.

ಒಟ್ನಲ್ಲಿ ಒಂದರ ಹಿಂದೆ ಒಂದರಂತೆ
ಸ್ಟಾರ್ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಖರೀದಿ ಮಾಡುತ್ತಿದೆ. ನೆಕ್ಸ್ಟ್ ಟಾರ್ಗೆಟ್ ಯಾವ ಸಿನಿಮಾ ? ಯಾವ ಚಿತ್ರಕ್ಕೆ ಲಹರಿ ಚಿನ್ನದ ಸರ ಕೊರಳಿಗೆ ಹಾಕಲಿದೆ ಕೂತೂಹಲದಿಂದ ಕಾಯಬೇಕು ಅಷ್ಟೇ.

ಎಂಟರ್ ಟೈನ್ಮೆಂಟ್ ಬ್ಯೂರೋ‌‌ ಸಿನಿಲಹರಿ

Categories
ಸಿನಿ ಸುದ್ದಿ

ಡ್ರೋಣ್ ಪ್ರಥಮ್ ಮೀಟ್ಸ್ ಡ್ರೋಣ್ ಪ್ರತಾಪ್ ; ಅಪೂರ್ವ ಸಂಗಮ ವಂತೆ ಮಾರಾಯ್ರೆ !

ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಪ್ರಥಮ್ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣವಂತೆ. ನಟನೆ ಜೊತೆಗೆ ನಿರ್ದೇಶನವೂ ಇವರದೇ

ಮೇಲ್ ಐಡಿ ಕೊಟ್ಟರೂ ಡ್ರೋಣ್ ಪ್ರಥಮ್ ಬಗ್ಗೆ ಹಿಂಟ್ ಬಿಟ್ಟುಕೊಡಲ್ಲ… ಬಿಟ್ಟು ಕೊಡಲ್ಲ… ಬಿಟ್ಟುಕೊಡಲ್ಲ…ಹೀಗಂತ ಪಟ್ಟಿಗೆ ಬಿದ್ದರೆ ಹಠಕ್ಕೆ ಬಿದ್ದು ಮತ್ತೇನು ಕೇಳೋದಕ್ಕೆ ಆಗುತ್ತೆ ಹೇಳಿ. ಆಯ್ತು ಬುಡು ಗುರು ನಿನಗೆ ಯಾವಾಗ ಹೇಳಬೇಕು ಅಂತ ಎನಿಸುತ್ತೋ ಆಗಲೇ ಹೇಳು ಅಂತ ಸುಮ್ಮನಾಗಿದ್ವಿ. ಇವತ್ತು, ದಿಢೀರ್ ಅಂತ ಡ್ರೋಣ್ ಪ್ರತಾಪ್ ನ ಮೀಟ್ ಮಾಡಿರುವ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡ್ರೋಣ್ ಪ್ರಥಮ್ ಸಿನಿಮಾ ಕುರಿತಾಗಿ ಹೇಳಿಕೊಂಡಿದ್ದಾರೆ.

Pick of the year…!
Drone pratham meats @droneprathap !
ಇನ್ಮೇಲೆ ಇವ್ನು ನನ್ನ ತಮ್ಮ!!
#ಅಪೂರ್ವಸಂಗಮ!!
ನನ್ನ ತಮ್ಮ ಸಿಕ್ಬಿಟ್ಟ!!🤗

Dronepratham shoot starts from next week…!!!

ಡ್ರೋಣ್ ಹೆಸರಲ್ಲಿ ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದಾಗಲೇ ಡ್ರೋಣ್ ಪ್ರತಾಪ್ ಕುರಿತಾದ ಕಥನ ಎನ್ನುವುದು ಬಹಿರಂಗವಾಗಿತ್ತು. ತೀರಾ ಇತ್ತೀಚಿಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಾ ಡ್ರೋಣ್ ಪ್ರಥಮ್ ಟೈಟಲ್ ನಲ್ಲಿ ಮೂವೀ ಬರಲಿದೆ ಎನ್ನುವ ವಿಷ್ಯ ಹಂಚಿಕೊಂಡಿದ್ದರು. ಇದೀಗ ಕಲರ್ ಫುಲ್ ಡ್ರೋಣ್ ಹಾರಿಸಿದ ಮಂಡ್ಯದ ಹೈದ ಪ್ರತಾಪ್ ರನ್ನ ಭೇಟಿಮಾಡುವುದರ ಮೂಲಕ ‘ ಡ್ರೋಣ್ ಪ್ರಥಮ್ ‘ ಹೆಸರಿನ ಸಿನಿಮಾ ಡ್ರೋಣ್ ಪ್ರತಾಪ್ ಜೀವನ ಕುರಿತಾಗಿದ್ದೇ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಕಮ್ ಸೆನ್ಸೇಷನ್ ಸ್ಟಾರ್ ಪ್ರಥಮ್ ಅವರೇ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣಕ್ಕೆ ಧುಮುಕುವುದಾಗಿ ತಿಳಿಸಿದ್ದಾರೆ. ಪಾತ್ರಕ್ಕೋಸ್ಕರ 15 ಕೆಜಿ ತೂಕ ಇಳಿಸಿಕೊಳ್ತೀನಿ ಎಂದಿದ್ದರು. ಗೌರಿಗಣೇಶ, ಉಂಡುಹೋದ ಕೊಂಡುಹೋದ, ಯಾರಿಗೂ ಹೇಳಬೇಡ ಸಿನಿಮಾ ಶೈಲಿಯಲ್ಲಿ ಡ್ರೋಣ್ ಪ್ರಥಮ್ ಸಿನಿಮಾ ಮೂಡಿಬರುವುದಾಗಿ ಹೇಳಿಕೊಂಡಿದ್ದಾರೆ.ನಟನೆಯ ಜೊತೆಗೆ ನಿರ್ದೇಶನದ
ಹೊಣೆ ಕೂಡ ಹೊತ್ತಿದ್ದಾರೆ.

ದೇವ್ರಂತ ಮನುಷ್ಯ ಪ್ರಥಮ್ ಜೊತೆಗೆ ಡ್ರೋಣ್ ಹಾರ್ಸೋಕೆ ನೀಲಿ ಸುಂದರಿ ಬರುತ್ತಾರಂತೆ. ಮುಂಬೈ ಮತ್ತೊಬ್ಬ ನಟಿ ಪ್ರಥಮ್ ಗೆ ಜೋಡಿಯಾಗಲಿದ್ದಾರೆ. ಆ ಇಬ್ಬರು ತಾರೆಯರು ಯಾರು ಎನ್ನುವ ಸೀಕ್ರೇಟ್ ಇನ್ನೂ‌ ರಿವೀಲ್ ಆಗಿಲ್ಲ.‌ ಡ್ರೋಣ್ ಪ್ರತಾಪ್ ಕಥೆಯನ್ನ ಹಾಸ್ಯರೂಪದಲ್ಲಿ ಕಟ್ಟಿಕೊಡಬೇಕು ಎನ್ನುವ ಕನಸು ಕಂಡಿರುವ ಪ್ರಥಮ್, ಪ್ರಖ್ಯಾತ ರಾಜಕಾರಣಿಯೊಬ್ಬರಿಂದ ಲಾಂಚ್ ಮಾಡಿಸಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ.

ಇಲ್ಲಿವರೆಗೂ ರಾಜಕೀಯ ಘಟಾನುಘಟಿ ನಾಯಕರಿಂದ ತಮ್ಮ ಸಿನಿಮಾ ಲಾಂಚ್ ಮಾಡಿಸಿರುವ ನಟ ಭಯಂಕರ ಪ್ರಥಮ್ ಅವರು, ಈ ಭಾರಿ ಡ್ರೋಣ್ ಹಾರ್ಸೋಕೆ ಯಾವ ರಾಜಕೀಯ ದಿಗ್ಗಜರನ್ನ ಕರೆತರುತ್ತಾರೆನ್ನುವ ಕೂತೂಹಲ ಇದ್ದೇ ಇದೆ. ಜೊತೆಗೆ ಯುವ ವಿಜ್ಞಾನಿ ಅಂತೆಲ್ಲಾ ಪುಕ್ಸಟ್ಟೆ ಖ್ಯಾತಿ ಪಡೆದ ಪ್ರತಾಪ್ ಈ ಚಿತ್ರದಲ್ಲೇನಾದರೂ ಪಾತ್ರ ಮಾಡುತ್ತಾರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಅದೆಲ್ಲದಕ್ಕೂ ಉತ್ತರ ಅತೀ ಶೀಘ್ರದಲ್ಲೇ ಸಿಗಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆರು ತಿಂಗಳ ವಿಶೇಷ; ಹಾರ್ಟ್ ಹಂಚಿಕೊಂಡು ಖುಷಿಪಟ್ಟರಲ್ಲ ಅರವಿಂದ್- ದಿವ್ಯಾ !

ಹೊಡಿರೀ‌ ಹಲಗಿ ಎನ್ನಬೇಕೋ? ಹಚ್ಚಿ ಪಟಾಕಿ ಅಂತ ಹೇಳಬೇಕೋ ಗೊತ್ತಿಲ್ಲ, ಆದರೆ ‘ಅರ್ವಿಯಾ’ ಹಂಚಿಕೊಂಡಿರುವ ಈ ವಿಶೇಷ ಸುದ್ದಿಯನ್ನ ನಿಮ್ಮೊಟ್ಟಿಗೆ ಹಂಚಿಕೊಳ್ಳಲೆಬೇಕು.‌ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳು, ಕ್ಯೂಟ್ ಜೋಡಿಯಾಗಿ ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೊರಟವರು, ಅಭಿಮಾನಿ ದೇವರುಗಳಿಂದ ‘ಅರ್ವಿಯಾ ‘ ಅಂತ‌ ನಾಮಕರಣ ಮಾಡಿಸಿಕೊಂಡವರು ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ.

ಬಿಗ್ ಬಾಸ್ ಅಂಗಳಕ್ಕೆ ಕಾಲಿಡುವಾಗ ಅಪರಿಚಿತರಾಗಿದ್ದರು. ಅದೇ ದೊಡ್ಮನೆಯಿಂದ ಹೊರಬರುವಷ್ಟರಲ್ಲಿ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾದರು.ಕೆಲವರ ಕಣ್ಣಲ್ಲಿ ಬೆಸ್ಟ್ ಫ್ರೆಂಡ್ಸ್ ನಂತೆ ಸುಳಿದಾಡಿದರು.ಇನ್ನೂ ಕೆಲವರ ಕಣ್ಣಲ್ಲಿ ಪ್ರಣಯ ಪಕ್ಷಿಗಳಂತೆ ನಲಿದಾಡಿದರು. ಹೀಗಾಗಿ, ಇವರಿಬ್ಬರ ನಡುವಿರುವುದು ಸ್ನೇಹಾನೋ ಪ್ರೀತಿನೋ ಎನ್ನುವುದಕ್ಕೆ ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲ. ಅಷ್ಟರಲ್ಲಿ ಈ ಜೋಡಿ ಬಿಗ್ ಬಾಸ್ ಪಯಣ ಶುರು ಮಾಡಿ ಆರು ತಿಂಗಳು ಉರುಳಿವೆ. ಆ ಖುಷಿ ಹಾಗೂ ಸಂತೋಷವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ರನ್ನರ್ ಅಪ್ಅರವಿಂದ್ ಕೆಪಿ ಸ್ಪೆಷಲ್ ಸಿಕ್ಸ್ ಅಂತ ಬರೆದುಕೊಂಡು ಮೂರು ಯೆಲ್ಲೋ, ಮೂರು ಬ್ಲಾಕ್ ಹಾರ್ಟ್‌ ಸಿಂಬಲ್ ಹಾಕಿಕೊಂಡಿದ್ದಾರೆ. ಇನ್ನೂ ದಿವ್ಯಾ ಉರುಡುಗ ಕೂಡ ಟ್ವೀಟ್ ಮಾಡಿದ್ದು ಆರು ತಿಂಗಳು ಹಂಗೇ ಕಳೆದೋಗಿದೆ ಇನ್ನೂ ಬಹುದೂರ ಹೋಗಬೇಕಿದೆ.ಪ್ರೀತಿಯಿರಲಿ ಎಂದಿದ್ದಾರೆ. ಕ್ಯೂಟಿ ಪೈ ದಿವ್ಯಾ ಒಂದು ಯೆಲ್ಲೋ ಹಾಗೂ ಒಂದು ಬ್ಲಾಕ್ ಹಾರ್ಟ್ ಕೊಟ್ಟಿದ್ದಾರೆ. ಅರವಿಂದ್ ಗಿಂತ ಕಮ್ಮಿ ಹಾರ್ಟ್ ಹಾಕಿ ಕಂಜೂಸ್ ಮಾಡಿದ್ದಾರೆ ದಿವ್ಯಾ ಮೇಡಂ.

ಅರ್ವಿಯಾ ಜೋಡಿಯ ಈ ಆರು ತಿಂಗಳ ಪಯಣವನ್ನ ಬರೀ ಅರವಿಂದ್ ಹಾಗೂ ದಿವ್ಯಾ ಮಾತ್ರ ಸಂಭ್ರಮಿಸಿಲ್ಲ, ಬದಲಾಗಿ ಇವರಿಬ್ಬರ ಫ್ಯಾನ್ಸ್ ಕೂಡ ಹಬ್ಬದಂತೆ ಸಂಭ್ರಮಿಸಿದ್ದಾರೆ. ಕಾಮನ್ ಡಿಪಿ‌ ರಿಲೀಸ್ ಮಾಡಿ ತಮ್ಮ ಫೀಲಿಂಗ್ಸ್ ನ ಶೇರ್ ಮಾಡಿಕೊಂಡು ಅರ್ವಿಯಾ ಜೋಡಿನಾ ಸೋಷಿಯಲ್ ಲೋಕದಲ್ಲಿ ಹೊತ್ತು ಮೆರೆಸುತ್ತಿದ್ದಾರೆ. ಅರ್ವಿಯಾ ಕೇವಲ ಹೆಸರಲ್ಲ , ಅದೊಂದು ಎಮೋಷನ್ಸ್ ಅಂತೆಲ್ಲಾ ಭಾವುಕರಾಗಿ ಗೀಚುತ್ತಿದ್ದಾರೆ.

ಫ್ಯಾನ್ಸ್ ಸಮೂಹದಲ್ಲಿ ಕೆಲವರು ಅರ್ವಿಯಾ ಜೋಡಿ ಫ್ರೆಂಡ್ಸಾಗಿರಲಿ ಅಂತ ಹೇಳಿಕೊಂಡ್ರೆ, ಇನ್ನೂ ಕೆಲವರು ರಿಯಲ್ ಲೈಫ್ ನಲ್ಲಿ ಇವರಿಬ್ಬರು ಒಂದಾಗಬೇಕು ಅಂತ ಆಸೆಪಡ್ತಿದ್ದಾರೆ. ಅರ್ಧವರ್ಷ ಬಿಗ್ ಬಾಸ್ ಜರ್ನಿ ಕಂಪ್ಲೀಟ್ ಮಾಡಿರುವ ಅರವಿಂದ್ ಹಾಗೂ ದಿವ್ಯಾ ಜೀವನಪೂರ್ತಿ ಜೊತೆಯಾಗಿ ಬದುಕಬೇಕು ಅಂತ ಇಂಗಿತ ವ್ಯಕ್ತಪಡಿಸ್ತಿದ್ದಾರೆ. ಅಷ್ಟಕ್ಕೂ ಅರ್ವಿಯಾ ಜೋಡಿ ನಡುವೆ ಇರುವುದು ಸ್ನೇಹಾನೋ- ಪ್ರೀತಿನೋ ಗೊತ್ತಿಲ್ಲದೇ ಇರೋದ್ರಿಂದ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವಾಗ ಫ್ಯಾನ್ಸ್ ಆಸೆ ಈಡೇರಿಸ್ತೀರಾ ಅಂತ ಕೇಳೋದು‌ ಕಷ್ಟ. ಹೀಗಾಗಿ, ಅವರಿಬ್ಬರೇ ಅನೌನ್ಸ್ ಮಾಡುವರೆಗೆ ಕಾಯಬೇಕು.ಅಲ್ಲಿವರೆಗೂ ಬೊಂಬಾಟ್ ಜೋಡಿಯ ಬಿಗ್ ಬಾಸ್ ಕ್ಲಿಪಿಂಗ್ಸ್ ನೋಡಿಕೊಂಡು ಎಂಜಾಯ್ ಮಾಡಿ

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಹಂಗಾದ್ರೆ ಇಲ್ಲಿ ಹೆಣ್ಮಕ್ಕಳು ಹುಟ್ಲೇಬಾರ್ದಾ ; ನಟಿ ಮೇಘಶ್ರೀ ಹೀಗೆ ಸಿಟ್ಟಿನಲ್ಲಿ ಪ್ರಶ್ನಿಸಿದ್ದೇಕೆ ಗೊತ್ತಾ

ನಂಗೆ ಬಾಯಲ್ಲಿ ಒಂದಷ್ಟು ಪದ ಬರ್ತವೆ ಆದ್ರೆ, ಅದೆಲ್ಲ ಹೇಳೋದಿಕ್ಕೆ ಆಗೋದಿಲ್ಲ. ವ್ಯವಸ್ಥೆ ಬಗ್ಗೆ ಅಷ್ಟು ಸಿಟ್ಟು ಬರುತ್ತೆ….!


ಬಿಗ್ ಬಾಸ್ ಖ್ಯಾತಿಯ ನಟಿ ಮೇಘಶ್ರೀ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದು ಮೈಸೂರು ಘಟನೆಯ ವಿರುದ್ಧ. ಹೌದು, ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸ್ಯಾಂಡಲ್ ವುಡ್ ಕೂಡ ಬೆಚ್ಚಿ ಬಿದ್ದಿದೆ. ಒಂದೆಡೆ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲೇ ಮೈಸೂರು ವಿಶ್ವ ವಿದ್ಯಾಲಯವೂ ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರು ಸಂಜೆ 6.30 ರ ನಂತರ ಹೊರಗಡೆ ತಿರುಗಾಡುವಂತಿಲ್ಲ ಎಂದು ಆದೇಶಹೊರಡಿಸಿದ್ದು, ಇದು ಭಾರೀ ವಿರೋಧಕ್ಕೆ ಮಾಡಿಕೊಟ್ಟಿದೆ. ಅತ್ಯಾಚಾರ ನಡೆಯುತ್ತೆ, ಹೊರಗೆ ಹೋಗ್ಬೇಡಿ ಅಂತ ರೂಲ್ಸ್ ಮಾಡುವ ಮಹಿಳೆಯನ್ನು ಕಟ್ಟಿ ಹಾಕುವ ಹುನ್ನಾರ ನಡೆದಿದೆ. ಇದು ಖಂಡನೀಯ ಎಂದು ಹಲವು ನಟಿಯರು ರಿಯಾಕ್ಟ್ ಮಾಡಿದ್ದಾರೆ. ಅದೇ ರೀತಿ ನಟಿ ಮೇಘಶ್ರೀ ‘ಸಿನಿಲಹರಿ’ಯೊಂ ದಿಗೆ ಮಾತನಾಡುತ್ತಾ, ಮೈಸೂರು ಘಟನೆಯ ವಿರುದ್ಧ ಕೆಂಡಕಾರಿದರು. ಇಂತಹ ಕ್ರೂರಿಗಳಿಗೆ ಕಠಿಣ ಶೀಕ್ಷೆ ಆಗಬೇಕೆಂದು ಆಗ್ರಹಿಸಿದರು. ಹಾಗೆಯೇ ಮೈಸೂರು ವಿಶ್ವ ವಿದ್ಯಾಲಯದ ಆದೇಶದ ವಿರುದ್ಧವೂ ಹರಿಹಾಯ್ದರು.

‘ಹೆಣ್ಣು ಮಕ್ಕಳಿಗೆ ಒಂದು ಮಾತು ಹೇಳೋದಿಕ್ಕೆ ಇಷ್ಟ ಪಡುತ್ತೇನೆ, ದಯವಿಟ್ಟು ನೀವು ಸೇಪ್ ಆಗಿರಿ. ಯಾಕಂದ್ರೆ ಇಂಡಿಯಾದಲ್ಲಿ ಹೆಣ್ಮುಕ್ಕಳು ಸೇಪ್ ಇಲ್ಲ. ಅಟ್ ದ ಸೇಮ್ ಟೈಮ್, ರೇಪಿಸ್ಟ್ ಗಳಿಗೂ ಇಲ್ಲಿ ಸರಿಯಾದ ಶಿಕ್ಷೆ ಇಲ್ಲ. ಕಠಿಣ ಶಿಕ್ಷೆ ಇದಿದ್ದರೆ, ಇದೆಲ್ಲ ಆಗ್ತಿರಲಿಲ್ಲ. ನೀವೇ ನೋಡಿ, ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಒಂದು ಘಟನೆ ನಡೆಯಿತು. ಸಿಟಿ ಬಸ್ ನಲ್ಲಿಯೇ ಒಂದು ಹುಡುಗಿ ಮೇಲೆ ರೇಪ್ ನಡೆಯಿತು. ಆದಾದ ಮೇಲೆ ಏನಾಯ್ತು, ಈ ಪ್ರಕರಣ ದೊಡ್ಡಾಗಿ ಸುದ್ದಿ ಆಯ್ತು, ದೇಶದಲ್ಲಿ ಪ್ರತಿಭಟನೆ ನಡೆದವು. ಅದಕ್ಕೋಸ್ಕರ ಕೆಲವರನ್ನು ಹಿಡಿದ್ರು. ಅಲ್ಲಿಂದ ಅವರನ್ನು ಒಂದಷ್ಟು ವರ್ಷಗಳ ಕಾಲ ಅತ್ಯಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸಿ, ಒಂದಷ್ಟು ಅವರಿಗೆ ಸೌಲಭ್ಯ ಕೊಟ್ಟು, ಒಂದಷ್ಟು ಸಾರ್ವಜನಿಕರ ಹಣ ಖರ್ಚು ಮಾಡಿ ಕೊನೆಗೆ ಗಲ್ಲಿಗೆ ಹಾಕಿದ್ರು. ಇಷ್ಟು ನಿಧಾನಗತಿಯ ಪ್ರಕ್ರಿಯೆಯವೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ಕ್ರೂರಿಗಳಿಗೆ ಕಠಿಣ ಶಿಕ್ಷೆ ಅಂತ ಇದಿದ್ದರೆ, ಮಹಿಳೆಯರ ಮೇಲೆ ಇಂತಹ ಅಮಾನುಷ ಘಟನೆಗಳು ನಡೆಯುತ್ತಿರಲಿಲ್ಲ ಎಂದರು ನಟಿ ಮೇಘಶ್ರೀ.

ಆರು ಗಂಟೆಯ ಮೇಲೆ ವಿದ್ಯಾರ್ಥಿನಿಯರು 6.30 ಮೇಲೆ ಹೊರಗಡೆ ಹೋಗಬಾರದು ಅಂದ್ರೆ ಅದರರ್ಥ ಏನು? ಇವ್ರೆಲ್ಲ ಯಾವ್ ಥರ ಯೋಚ್ನೆ ಮಾಡುತ್ತಾರೋ ನಂಗೆ ಅರ್ಥವೇ ಆಗುತ್ತಿಲ್ಲ. ನಿಮ್ಮ ಪ್ರಕಾರ ಬೆಳಗ್ಗೆ ಹೊತ್ತು ಹುಡುಗಿಯರಮೇಲೆ ರೇಪ್ ಕೇಸ್ ನಡೆದಿಲ್ಲವೇ? ಚಿಕ್ಕ ಚಿಕ್ಕ ಮಕ್ಕಳ ಮೇಲೆಯೇ ರೇಪ್ ಆಗಿದೆ. ಹಂಗಂದ್ರೆ ಹೆಣ್ಣು ಮಕ್ಕಳು ಎಲ್ಲಿಗೂ ಹೋಗಬಾರದು ಅಂತನಾ? ನೀವೆಲ್ಲ ಯಾವ ಥರ ಯೋಚ್ನೆ ಮಾಡ್ತಿರೋ ಅರ್ಥ ಆಗ್ತಿಲ್ಲ. ನಂಗೆ ಬಾಯಲ್ಲಿ ಒಂದಷ್ಟು ಪದ ಬರ್ತವೆ ಆದ್ರೆ ಅದೆಲ್ಲ ಹೇಳಿದ್ರೆ ನಾವೇ ಸಣ್ಣವರಾಗ್ತೀವಿ, ಅದಿಲ್ಲ ಬೇಡ, ಮಹಿಳೆಯನ್ನು ರಕ್ಷಣೆ ಮಾಡಬೇಕಾದವರು ನೀವು, ನೀವು ಜವಾಬ್ದಾರಿಗಳನ್ನು ಮರೆತು ಹೆಣ್ಣು ಮಕ್ಕಳದ್ದೇ ತಪ್ಪು, ಅವರು ಎಲ್ಲಿಗೂ ಹೋಗಬಾರದು ಅಂತೆಲ್ಲ ಮಾತನಾಡುತ್ತಾ ಹೊರಟರೆ ಮಹಿಳೆಯರನ್ನು ಇದು ಕಟ್ಟಿ ಹಾಕುವ ಹುನ್ನಾರವೇ ಅಲ್ಲವೇ? ಹೆಣ್ಣು ಮಕ್ಕಳು ಎಲ್ಲಿಗೆ ಹೋಗಬಾರದು ಅಂತ ಹೇಳ್ತಾರೆ ಅಂದ್ರೆ, ಅವರು ಹೋದ್ರೆ ರೇಪ್ ಆಗುತ್ತೆ ಅಂತನಾ? ಹಾಗೆ ಅಲ್ವಾ ಇವ್ರ ಮಾತು? ಎನ್ನುತ್ತಾ ಖಾರವಾಗಿ ಪ್ರಶ್ನಿಸಿದರು ನಟಿ ಮೇಘಶ್ರೀ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕಿಚ್ಚನ ಗೋಲ್ಡನ್ ಜ್ಯೂಬ್ಲಿಗೆ ಡೈಮೆಂಡ್ ಸಪ್ರೈಸ್‌ : ಫ್ಯಾನ್ಸ್‌ ತಯಾರಿ ಹೇಗಿದೆ ಗೊತ್ತಾ?

ಗುಂಪು ಸೇರೋ ಹಾಗಿಲ್ಲ, ಕೇಕ್‌ ಕಟ್‌ ಮಾಡೋ ಹಾಗಿಲ್ಲ, ಹಾರ- ತುರಾಯಿ ಹಾಕೋ ಹಾಗಿಲ್ಲ, ಇಷ್ಟಾಗಿಯೂ ಕಿಚ್ಚನ ಫ್ಯಾನ್ಸ್‌ ಅದ್ದೂರಿ ಬರ್ತ್‌ ಡೇ ಆಚರಣೆಗೆ ಮುಂದಾಗಿದ್ದಾರೆ. ಹಾಗಾದ್ರೆ ಹೇಗೆ, ಈ ಸ್ಟೋರಿ ನೋಡಿ…

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಜ್ಯೂಬ್ಲಿ ಸೆಲಬ್ರೇಷನ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಬಾದ್ ಷಾ ಬರ್ತ್‌ ಡೇನಾ ಅದ್ದೂರಿಯಾಗಿ ಆಚರಣೆ ಮಾಡೋದಕ್ಕೆ ಫ್ಯಾನ್ಸ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಪ್ರತಿವರ್ಷದಂತೆ ಶಾಂತಿನಿವಾಸದ ಮುಂದೆ ಸಾಗರೋಪಾದಿಯಲ್ಲಿ ಫ್ಯಾನ್ಸ್ ಸೇರುವುದಿಲ್ಲ. ಕೇಕ್ ಕಟ್ ಮಾಡಿ ಕೇಕೆ ಹಾಕುವುದಕ್ಕೆ- ಹಾರ-ತುರಾಯಿ ಹಾಕಿ ಕುಣಿದು ಕುಪ್ಪಳಿಸುವುದಕ್ಕೆ ಕೊರೊನಾ ಅಡ್ಡಿಯಾಗಿದೆ. ಹೀಗಾಗಿ, ಕಿಚ್ಚ ತಾವುಗಳು ಇದ್ದಲಿಂದಲೇ ಶುಭಾಶಯ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಾಣಿಕ್ಯನ ಮಹದಾಸೆಯಂತೆ ಸುದೀಪಿಯನ್ಸ್ ತಾವಿರುವ ಜಾಗದಿಂದಲೇ ವಿಷಸ್‌ನ ಕಳುಹಿಸಿಕೊಡ್ತಿದ್ದಾರೆ. ಅಟ್ ದಿ ಸೇಮ್ ಟೈಮ್ ಆಲ್ ಇಂಡಿಯಾ ಕಟೌಟ್‌ನ ಡೈಹಾರ್ಡ್ ಅಭಿಮಾನಿಗಳು ತಾವಿರುವ ಜಾಗದಲ್ಲೇ ಭರ್ಜರಿಯಾಗಿ ಕಿಚ್ಚನ ಬರ್ತ್ಡೇನಾ ಸೆಲೆಬ್ರೇಟ್ ಮಾಡೋದಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ಕಳೆದ ವರ್ಷವಂತೂ ಕೊರೊನಾದಿಂದ ಕಿಚ್ಚನ ಹುಟ್ಟುಹಬ್ಬ ಆಚರಣೆ ಮಾಡೋದಕ್ಕೆ ಆಗಲಿಲ್ಲ. ಈ ವರ್ಷವಾದರೂ ಶಾಂತಿನಿವಾಸದ ಮುಂದೆ ಹಬ್ಬ ಮಾಡಬೇಕು ಎಂದು ಕಿಚ್ಚನ ಎಲ್ಲಾ ಫ್ಯಾನ್ಸ್ ಫಿಕ್ಸಾಗಿದ್ದರು. ಆದರೆ. ಕೊರಾನಾತಂಕ ಮುಂದುವರೆದಿರುವುದರಿಂದ ಈ ವರ್ಷವೂ ಕೋಟಿಗೊಬ್ಬ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದಾರೆ. ಇದರಿಂದ ಸಹಜವಾಗಿ ಫ್ಯಾನ್ಸ್ ಗೆ ಕೊಂಚ ಬೇಜಾರಾಗಿದೆ. ಹೀಗೆ ಅಪ್‌ಸೆಟ್ ಆಗಿರುವ ಫ್ಯಾನ್ಸ್‌ ಗೆ ಸುದೀಪ್ ಬಿಗ್ ಸಪ್ರೈಸ್‌ ಕೊಡ್ತಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ `ವಿಕ್ರಾಂತ್ ರೋಣ’ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗ್ತಿದೆ. ಹೊಸ ಪೋಸ್ಟರ್ ಬಿಡುವ ಮೂಲಕ ನಿರ್ದೇಶಕ ಅನುಪ್ ಭಂಡಾರಿ ವಿಷಯ ತಿಳಿಸಿದ್ದಾರೆ. ವಿಕ್ರಾಂತ್ ರೋಣನ ನಯಾ ಸಮಾಚಾರ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ನಟ ಕಿಚ್ಚ ಸುದೀಪ್ ಅವರಿಗೆ ಈ ವರ್ಷದ ಬರ್ತ್‌ ಡೇ ತುಂಬಾ ಸ್ಪೆಷಲ್. ಭರ್ತಿ ೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಕಿಚ್ಚನ ಗೋಲ್ಡನ್ ಜ್ಯೂಬಿಲಿ ಸೆಲಬ್ರೇಟ್ ಮಾಡೋದಕ್ಕೆ ಫ್ಯಾನ್ಸ್ ಜೊತೆಗೆ ಅವರ ಕುಟುಂಬಸ್ಥರು ಹಾಗೂ ಆಪ್ತರು ಜೋರಾಗಿಯೇ ತಯಾರಿ ಮಾಡಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ರನ್ನನಿಗೆ ಡೈಮೆಂಡ್ ರೀತಿಯ ಸಪ್ರೈಸ್‌ ಗಳನ್ನು ಕೊಡೋದಕ್ಕೆ ಚಿತ್ರತಂಡಗಳು ಕೂಡ ಪ್ಲ್ಯಾನ್ ಮಾಡಿಕೊಂಡಿವೆ. ವಿಕ್ರಾಂತ್ ರೋಣ ಜೊತೆಗೆ ಕೋಟಿಗೊಬ್ಬ-೩ ಟೀಮ್, ಕಬ್ಜಾ ಫಿಲ್ಮ್ ಟೀಮ್ ಕಡೆಯಿಂದ ಫಸ್ಟ್ ಲುಕ್ ಹಾಗೂ ಪೋಸ್ಟರ್- ಟೀಸರ್‌ಗಳನ್ನ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಆಲ್ ಇಂಡಿಯಾ ಕಟೌಟ್‌ಗೆ ಯಾವ್ ರೀತಿಯ ಗಿಫ್ಟ್‌ ಗಳು ಹರಿದುಬರಲಿವೆ ವೇಯ್ಟ್ ಅಂಡ್ ಸೀ..

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹೊಟ್ಟೆಗೆ ಬೆಂಕಿಹಾಕಿಕೊಂಡು ಕಣ್ಣಕ್ಕಿಳಿದ ಗೌರಮ್ಮ; ಮೋಹಕತಾರೆನಾ ಮೆಚ್ಚಲೆಬೇಕು ಕಣ್ರೀ !?

ಮೋಹಕ ತಾರೆ ರಮ್ಯಾ ಸಿಟ್ಟಾಗಿದ್ದಾರೆ. ಮೈಸೂರು ಘಟನೆಯ ಸುದ್ದಿ ಕೇಳಿ ಹೊಟ್ಟೆಗೆ ಬೆಂಕಿಹಾಕಿಕೊಂಡು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಮಹಿಳೆ ಮೇಲೆ ಎಷ್ಟು ದಿನ ಈ ದಬ್ಬಾಳಿಕೆ, ದೌರ್ಜನ್ಯ ಅಂತ ಒಂದೇ ಸಮನೆ ಕಿಡಿಕಾರಿದ್ದಾರೆ. ಹಾಗಾದ್ರೆ ರಮ್ಯಾ ಅವರು ಹೇಳಿದ್ದೇನು ಅಂತ ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್‌ನ ಮೋಹಕತಾರೆ, ರಾಜ್ಯ ರಾಜಕೀಯದ ದಿಲ್ಲಿ ಮೇಡಂಗೆ ಒಂದು ಸೆಲ್ಯೂಟ್ ಹೊಡಿಯಲೇಬೇಕು. ಅದೆಲ್ಲೋ ಫಾರಿನ್‌ನಲ್ಲಿ ಸೆಟಲ್ ಆಗಿ ಐಷರಾಮಿ ಲೈಫ್‌ ಲೀಡ್ ಮಾಡ್ತಿರುವ ಚಂದನವನದ ಗೌರಮ್ಮ ಕಣ್ಮುಚ್ಚಿಕೊಂಡು ಕೂರದೇ ಕರುನಾಡಿನಲ್ಲಿ ಆದಂತಹ ಕ್ರೂರಕೃತ್ಯವನ್ನು ಖಂಡಿಸಿದ್ದಾರೆ. ಸುದ್ದಿ ಕೇಳಿ ಹೊಟ್ಟೆಗೆ ಬೆಂಕಿಹಾಕಿಕೊಂಡ ದಿಲ್ಲಿ ಮೇಡಂ ಕಣ್ಣುಕೆಂಪಗೆ ಮಾಡಿಕೊಂಡು ಫೀಲ್ಡಿಗಿಳಿದಿದ್ದಾರೆ. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ-ದಬ್ಬಾಳಿಕೆ-ನಿಂದನೆಯನ್ನು ಕುರಿತು ಪ್ರಶ್ನೆ ಮಾಡಿದ್ದಾರೆ.

ಸಿನಿಮಾರಂಗ ಹಾಗೂ ರಾಜಕೀಯ ರಂಗದಿಂದ ದೂರ ಉಳಿದಿರುವ ಮೋಹಕತಾರೆ ರಮ್ಯಾ ಮೇಡಂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಖಾಡಕ್ಕೆ ಧುಮ್ಕುತ್ತಾರೆ. ಒಳ್ಳೆಯದ್ದನ್ನು ಪ್ರೋತ್ಸಾಹಿಸುತ್ತಾರೆ ಕೆಟ್ಟದನ್ನು ಪ್ರಶ್ನೆಮಾಡ್ತಾರೆ. ಸಮಾಜಕ್ಕೊಂದು ಸಂದೇಶ ಹಾಗೂ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಂತಹ ಸಾಮೂಹಿಕ ಅತ್ಯಾಚಾರದ ಸುದ್ದಿ ಕೇಳಿ ಬೇಸರಗೊಂಡ ಮೋಹಕತಾರೆ ಹೀನಕೃತ್ಯದ ವಿರುದ್ದ ಧ್ವನಿಎತ್ತಿದ್ದಾರೆ. ಗಂಡಸರು ಏನೇ ತಪ್ಪು ಮಾಡಿದರೂ ಕೊನೆಗೆ ಅದನ್ನು ತಂದು ಹೆಣ್ಣುಮಕ್ಕಳ ತಲೆಗೆ ಕಟ್ಟುವ ಕೆಟ್ಟಪದ್ದತಿ ಹಾಗೂ ಸೊಸೈಟಿ ವಿರುದ್ದ ಪದ್ಮಾವತಿ ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಪೋಸ್ಟ್ ಹಾಕುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರುಷರು ಏನೇ ತಪ್ಪು ಮಾಡಲಿ ಕೊನೆಗೆ ಅದು ಮಹಿಳೆಯರ ಮೇಲೆ ಬರುತ್ತೆ. ಅತ್ಯಾಚಾರ-ದೈಹಿಕ ಹಲ್ಲೆ-ಮಾನಸಿಕ ಹಿಂಸೆ ಹೀಗೆ ಯಾವುದೇ ಇರಲಿ ಪುರುಷರು ಮಾಡುವ ಈ ಘನಕಾರ್ಯಕ್ಕೆ ಮಹಿಳೆಯರು ನಿಂದನೆಗೊಳಗಾಗಬೇಕಾದ ಪರಿಸ್ಥಿತಿ. ಈಗ ಅತ್ಯಾಚಾರಕ್ಕೊಳಗಾಗಿರುವ ಮೈಸೂರಿನ ವಿಧ್ಯಾರ್ಥಿನಿಯ ಪರಿಸ್ಥಿತಿಯೂ ಇದೇ ಆಗಿದೆ. ರಾತ್ರಿ ವೇಳೆ ಚಾಮುಂಡಿ ಬೆಟ್ಟದ ತಪ್ಪಲಿಗ್ಯಾಕೆ ಹೋಗಬೇಕಾಗಿತ್ತು ಅಂತ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿ ಪ್ರಶ್ನೆ ಮಾಡುವವರ ವಿರುದ್ದ ಕಿಡಿಕಾರಿರುವ ರಮ್ಯ ಮೇಡಂ, ನಿಂದೇ ತಪ್ಪು, ಹೊರಗಡೆ ಹೋಗಬಾರದಿತ್ತು, ನೀನು ಹಂಗೆ ಮಾಡಬಾರದಿತ್ತು, ಹಂಗೆ ಹೇಳಬಾರದಿತ್ತು, ಆ ರೀತಿ ಬಟ್ಟೆ ಧರಿಸಬಾರದಿತ್ತು, ಅದು ತುಂಬಾ ಟೈಟಾಗಿತ್ತು, ಅದು ತುಂಬಾ ಶಾರ್ಟ್ ಆಗಿತ್ತು, ತೀರಾ ಎಕ್ಸ್ಪೋಸಿಂಗ್ ಆಗಿತ್ತು, ಮೇಕಪ್ ಹೆವಿಯಾಗಿತ್ತು, ರೆಡ್‌ ಲಿಪ್‌ಸ್ಟಿಕ್ ಹಚ್ಚಬಾರದಿತ್ತು, ಕಣ್ಣು ಹೊಡೆಯಬಾರದಿತ್ತು, ಹೀಗೆ ಎಲ್ಲದಕ್ಕೂ ಹೆಣ್ಣುಮಕ್ಕಳನ್ನೇ ದೂಷಿಸುತ್ತಾರೆ, ಟಾರ್ಗೆಟ್ ಮಾಡಿ ಮಾತನಾಡುತ್ತಾರೆ.

ಯಾಕಂದ್ರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ… ಇನ್ನಾಗಲ್ಲ ಈ ನಾನ್‌ಸೆನ್ಸ್ಗೆ ಫುಲ್‌ಸ್ಟಾಪ್ ಬೀಳಲೆಬೇಕು. ಹೀಗಂತ ಟ್ವೀಟ್ ಮಾಡಿ ಮಹಿಳೆಯರ ಪರವಾಗಿ ಧ್ವನಿಎತ್ತಿರುವ ರಮ್ಯಾ ಮೇಡಂ `ಮಹಿಳೆಯರ ಮೇಲಿ ಅಪರಾಧಗಳ ಬಗ್ಗೆ ಕಣ್ಣಿದ್ದು ಕುರುಡರಾಗಬೇಡಿ, ಇನ್ನಾದ್ರೂ ಧ್ವನಿಯೆತ್ತಿ ಎಂದು ಕೋರಿಕೊಂಡಿದ್ದಾರೆ. ಹೀಗೆ ದಿಲ್ಲಿ ಮೇಡಂ ತಮ್ಮ ಆಕ್ರೋಶವನ್ನ ಹೊರಹಾಕ್ತಿದ್ದಂತೆ ಸಕಲ ಹೆಣೈಕ್ಳ ಬಳಗ ಪದ್ಮಾವತಿಗೆ ಉಘೇ ಉಘೇ ಎನ್ನುತ್ತಿದ್ದಾರೆ. ದುರಂತ ಅಂದ್ರೆ ಮೈಸೂರು ಘಟನೆಯ ಬೆನ್ನಲೇ ತುಮಕೂರು ಹಾಗೂ ಬೆಳಗಾವಿಯಲ್ಲೂ ಗ್ಯಾಂಗ್‌ ರೇಪ್‌ ಪ್ರಕರಣ ಬೆಳಕಿಗೆ ಬಂದಿದೆ. ಇದು ಕರುನಾಡೇ ಬೆಚ್ಚಿ ಬೀಳುವಂತೆ ಮಾಡಿದೆ. ಆದರೆ ಗೃಹ ಸಚಿವರು ಮಾತ್ರ, ವಿದ್ಯಾರ್ಥಿನಿಯರು ಅಲ್ಲಿಗೇಕೆ ಹೋಗಬೇಕಿತ್ತು ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡಿ, ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೀಚಕರನ್ನು ಬಲಿ ಹಾಕಲಿ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
error: Content is protected !!