Categories
ಸಿನಿ ಸುದ್ದಿ

ನಮಗೂ ನೂರರಷ್ಟು ಭರ್ತಿಗೆ ಅವಕಾಶ ಸಿಗಲಿ

ಸರ್ಕಾರಕ್ಕೆ ಚಿತ್ರರಂಗದ ಟ್ವೀಟ್‌ ಅಭಿಯಾನ

ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ… ಬಸ್‌ನಲ್ಲೂ ಫುಲ್‌ ರಶ್…‌. ಚಿತ್ರಮಂದಿರಕ್ಕೆ ಮಾತ್ರ ಏಕೆ ೫೦% ನಿರ್ಬಂಧ…?
– ಇದು ಕನ್ನಡ ಚಿತ್ರರಂಗ ಶುರು ಮಾಡಿರುವ ಅಭಿಯಾನ. ಹೌದು, ಕೇಂದ್ರ ಸರ್ಕಾರ ಈಗಾಗಲೇ ಫೆಬ್ರವರಿಯಿಂದ ಚಿತ್ರಮಂದಿರಗಳ ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಮಾತ್ರ ಅನುಮತಿ ನೀಡದೆ, ಶೇ.೫೦ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ಕೊಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬೇಸತ್ತಿರುವ ಕನ್ನಡ ಚಿತ್ರೋದ್ಯಮ ಈಗ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅದಕ್ಕೆಂದೇ ಕನ್ನಡ ಚಿತ್ರರಂಗದ ಸ್ಟಾರ್‌ ನಟರು, ನಿರ್ಮಾಪಕರು, ನಿರ್ದೇಶಕರು ಈಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ನಮಗೂ ಶೇ.೧೦೦ರಷ್ಟು ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಸ್ಟಾರ್‌ ನಟರೆಲ್ಲರೂ ತಮ್ಮ ಟ್ವೀಟ್‌ ಮೂಲಕ ಹೀಗೊಂದು ಅಭಿಯಾನವನ್ನೂ ಶುರುಮಾಡಿದ್ದಾರೆ.


ಶಿವರಾಜಕುಮಾರ್‌ ತಮ್ಮ ಟ್ವೀಟ್‌ ಮೂಲಕ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆ ವಿಡಿಯೋದಲ್ಲಿ ” ಎಲ್ಲರಿಗೂ ೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟಿರಬೇಕಾದರೆ, ನಮಗೆ ಮಾತ್ರ ಶೇ.೫೦ ಯಾಕೆ? ನಮಗೂ ೧೦೦% ಭರ್ತಿ ಬೇಕೇ ಬೇಕು. ಇಂಡಸ್ಟ್ರಿಗೋಸ್ಕರ ನಾವೆಲ್ಲಾ ಜೊತೆಗಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು. ಜೈ ಹಿಂದ್‌ ಜೈ ಕರ್ನಾಟಕ ಮಾತೆ” ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇನ್ನು, ನಟ ಧನಂಜಯ್‌ ಕೂಡ ಟ್ವೀಟ್‌ ಮಾಡಿದ್ದು, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು, ಥಿಯೇಟರ್‌ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ? ಎಂದು ಬರೆದುಕೊಳ್ಳುವ ಮೂಲಕ ಸರ್ಕಾರ ಕೂಡಲೇ ಶೇ>೧೦೦ಭರ್ತಿಗೆ ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ. ನಿರ್ದೇಶಕ ಸುನಿ ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ” ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು.. ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು.. ಮಾರ್ಕೆಟ್ ನಲ್ಲಿ ಮಾಮುಲಿ ವ್ಯಾಪಾರ, ರಾಜಕೀಯ ರ಼್ಯಾಲಿಗೆ ಜನಸಾಗರ.
ಪಬ್ ಹೋಟೆಲ್ ನಲ್ಲಿ ಎಲ್ಲರ ವಿಹಾರ, ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?” ಎಂದು ಬರೆದಿದ್ದಾರೆ. ಉಳಿದಂತೆ ಪುನೀತ್‌ರಾಜಕುಮಾರ್‌, ಪ್ರಶಾಂತ್‌ ನೀಲ್, ಧ್ರುವಸರ್ಜಾ, ದುನಿಯಾ ವಿಜಯ್‌, ಶಶಾಂಕ್‌, ಪವನ್‌ ಒಡೆಯರ್ ಸೇರಿದಂತೆ ಹಲವರು ಟ್ವೀಟ್‌ ಅಭಿಯಾನ ಶುರುಮಾಡಿದ್ದಾರೆ.

Categories
ಸಿನಿ ಸುದ್ದಿ

ಆರ್.ಚಂದ್ರುಗೆ ಉಪೇಂದ್ರ ಫೇಮ್‌ ಕಮ್ಮಿ ಎನಿಸಿತಾ?

ಸುದೀಪ್‌ ಎಂಟ್ರಿಯ ರಹಸ್ಯವೇನು?

ಕನ್ನಡ ಚಿತ್ರರಂಗ ಈಗ ಮತ್ತಷ್ಟು ರಂಗೇರಿದೆ. ಈಗಂತೂ ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳದ್ದೇ ಅಬ್ಬರ! ಹೌದು, ಕನ್ನಡದಲ್ಲಿ ಬರುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾಗಳ ಪೈಕಿ “ಕಬ್ಜ” ಚಿತ್ರವೂ ಸೇರಿದೆ. ನಿರ್ದೇಶಕ ಆರ್.ಚಂದ್ರು ಅದ್ಧೂರಿ ವೆಚ್ಚದಲ್ಲೇ ತಮ್ಮ ಕನಸಿನ “ಕಬ್ಜ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉದ್ಯಮಿ ಹಾಗೂ ಹಾಲಿ ಮಿನಿಸ್ಟರ್‌ ಎಂಟಿಬಿ ನಾಗರಾಜ್‌ ಅವರು ಈ ಚಿತ್ರಕ್ಕೆ ಸಾಥ್‌ ನೀಡಿರುವುದು, ಇನ್ನೂ ಒಂದು ಹಂತಕ್ಕೆ ಹೋಗಲು ಕಾರಣ. ಹೀಗಾಗಿ “ಕಬ್ಜ” ದೊಡ್ಡ ಮಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಹಜವಾಗಿಯೇ ಕನ್ನಡದ “ಕಬ್ಜ” ಮೇಲೆ ಹೆಮ್ಮೆಯೂ ಇದೆ. ಉಪೇಂದ್ರ ಅಭಿಮಾನಿಗಳಿಗೂ ಇದು ಖುಷಿಯ ವಿಷಯವೇ. ಅದೆಲ್ಲಾ ಸರಿ, ಆದರೆ, ನಿರ್ದೇಶಕ ಆರ್.ಚಂದ್ರು ಮಾತ್ರ ತಮ್ಮ “ಕಬ್ಜ” ಚಿತ್ರದ ಕೆಲವು ವಿಚಾರಗಳಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ಅವರ ಫ್ಯಾನ್ಸ್‌ಗೆ, ಉಪೇಂದ್ರ ಫ್ಯಾನ್ಸ್‌ಗೂ ಗೊಂದಲ ಮತ್ತು ಅನುಮಾನಕ್ಕೆ ಕಾರಣವಾಗಿವೆ.

ಆರ್.ಚಂದ್ರು, ನಿರ್ದೇಶಕ

ಇಷ್ಟಕ್ಕೂ ಆ ಅನುಮಾನ, ಗೊಂದಲಕ್ಕೆ ಕಾರಣದ ಬಗ್ಗೆ ಹೇಳುವುದಾದರೆ, ಉಪೇಂದ್ರ ಅವರು ಸ್ಟಾರ್‌ ನಟ. ಇದರಲ್ಲಿ ಎರಡು ಮಾತಿಲ್ಲ. ಅವರಿಗೇ ಆದ ಒಂದು ಛಾಪು ಇದೆ. ತೆಲುಗಿನಲ್ಲು ದೊಡ್ಡ ಹೆಸರು ಇರುವ ನಟ. ಇಂದಿಗೂ ತೆಲುಗಿನಲ್ಲಿ ಉಪೇಂದ್ರ ಅಂದಾಕ್ಷಣ, ಒಂದು ಹೊಸ ಕ್ರೇಜ್‌ ಶುರುವಾಗುತ್ತೆ. ಈ ನಿಟ್ಟಿನಲ್ಲಿ ಅವರೀಗ “ಕಬ್ಜ” ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ತೆಲುಗಿಗೆ ಮೊದಲು ಎಂಟ್ರಿಕೊಟ್ಟವವರು ಉಪೇಂದ್ರ . ಈ ಹಿಂದೆಯೇ ಅವರನ್ನು ಸೌತ್‌ ಸ್ಟಾರ್‌ ಅಂತ ಕರೆಯಲಾಗಿದೆ. ತೆಲುಗು ಫ್ಯಾನ್ಸ್‌ಗೆ ಉಪೇಂದ್ರ ಅವರ “ಎ” ಸಿನಿಮಾ ಅಂದರೆ, ಇವತ್ತಿಗೂ ಕ್ರೇಜ್‌ ಇದೆ. ಅಂತಹ ನೇಮು, ಫೇಮು ಇರುವ ನಟರನ್ನು ಇಟ್ಟುಕೊಂಡು ಪ್ಯಾನ್‌ ಇಂಡಿಯಾ ಚಿತ್ರ ಮಾಡಲು ಹೊರಟಿರುವ ಆರ್.ಚಂದ್ರು, ತಮ್ಮ ಚಿತ್ರಕ್ಕೆ ಸುದೀಪ್‌ ಅವರನ್ನೂ ಕರೆತಂದಿದ್ದಾರೆ.

“ಕಬ್ಜ”ದ ಮಾರ್ಕೆಟ್‌ ಇದರಿಂದ ಇನ್ನೂ ಹೆಚ್ಚಾಗಿದ್ದು ಸುಳ್ಳಲ್ಲ. ಆದರೆ, ಉಪೇಂದ್ರ ಅವರ ಫೇಮ್‌ ಕಮ್ಮಿ ಇದೆಯಾ? ಎಂಬ ಪ್ರಶ್ನೆ ಕೂಡ ಎದುರಾಗುತ್ತೆ. ಉಪೇಂದ್ರ ಒಬ್ಬರನ್ನಿಟ್ಟುಕೊಂಡು ಚಿತ್ರ ಮಾಡಿದರೆ, “ಕಬ್ಜ” ಮಾರ್ಕೆಟ್‌ಗೆ ಪೆಟ್ಟು ಬೀಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡರಾ ಎಂಬ ಪ್ರಶ್ನೆಯೂ ಈಗ ಗಾಂಧಿನಗರದಲ್ಲಿ ಓಡಾಡುತ್ತಿದೆ. ಆರಂಭದಲ್ಲೆಲ್ಲೂ ಇನ್ನೊಬ್ಬ ಸ್ಟಾರ್‌ ನಟರು ಇಲ್ಲಿರುತ್ತಾರೆ ಎಂದು ಸುಳಿವು ಕೊಡದ ಆರ್.ಚಂದ್ರು, ಸುದೀಪ್‌ಗಾಗಿಯೇ ಹೊಸ ಪಾತ್ರ ಸೃಷ್ಠಿ ಮಾಡಿಬಿಟ್ಟರಾ ಎಂಬ ಮತ್ತೊಂದು ಪ್ರಶ್ನೆಯೂ ಗಿರಕಿಹೊಡೆಯುತ್ತಿದೆ. ಯಾಕೆಂದರೆ, ಇದ್ದಕ್ಕಿದ್ದಂತೆಯೇ ಸುದೀಪ್‌ ಎಂಟ್ರಿಯಾಗಿದ್ದೇ ಈ ಪ್ರಶ್ನೆಗಳಿಗೆ ಕಾರಣ.


ಇನ್ನು, ಸುದೀಪ್‌ ಬಂದರೆ, “ಕಬ್ಜ” ಇನ್ನಷ್ಟು ಚೆನ್ನಾಗಿರುತ್ತೆ ಅಂತ ಅನಿಸಿದ್ದರಿಂದಲೇ ಆರ್.ಚಂದ್ರು ಈ ನಿರ್ಧಾರ ಮಾಡಿದ್ದಾರೆ. ಅದು ತಪ್ಪಲ್ಲ. ಆದರೆ, ಉಪೇಂದ್ರ ಅವರ ಬಹುಭಾಗದ ಚಿತ್ರೀಕರಣ ಮುಗಿಸಿದ ನಂತರ, ಈಗ ಸುದೀಪ್‌ ಅವರನ್ನು ಈ ಹಂತದಲ್ಲಿ ಕರೆತಂದಿದ್ದರ ಹಿಂದೆ ಒಂದಷ್ಟು ಮಾತುಗಳು ಕೇಳಿಬರುತ್ತಿವೆ. ಉಪೇಂದ್ರ ಅವರೊಬ್ಬರೇ ಇದ್ದರೆ, “ಕಬ್ಜ” ಮಾರ್ಕೆಟ್‌ ಕಡಿಮೆಯಾಗಬಹುದು ಅಥವಾ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಇನ್ನೊಬ್ಬ ಸ್ಟಾರ್‌ ಬೇಕು ಎಂಬ ಕಾರಣಕ್ಕೆ ಸ್ವತಃ ಚಂದ್ರು ಹೀಗೊಂದು ನಿರ್ಧಾರ ಮಾಡಿ, ಸುದೀಪ್‌ ಅವರಿಗೊಂದು ಪಾತ್ರವನ್ನು ಕ್ರಿಯೇಟ್‌ ಮಾಡಿ ಕರೆತಂದಿದ್ದಾರಾ ಅನ್ನೋದು ಕೂಡ ಪ್ರಶ್ನೆಯಾಗಿಯೇ ಉಳಿದಿದೆ. ಮೂಲಗಳ ಪ್ರಕಾರ ಸುದೀಪ್‌ ಅವರ ಪಾತ್ರದ ಮೂಲಕವೇ “ಕಬ್ಜ” ಚಿತ್ರದ ಕಥೆ ಓಪನ್‌ ಆಗಲಿದೆಯಂತೆ. ಹೆಚ್ಚು ಕಡಿಮೆ ಅದು ಒಂದೆರೆಡು ದಿನಗಳ ಚಿತ್ರೀಕರಣದ ಅವಧಿ ಎನ್ನಲಾಗುತ್ತಿದೆ. ಆರಂಭದಲ್ಲಿ ಕತೆ ನಿರೂಪಣೆ ಮಾಡುವ ಪಾತ್ರವದು ಎಂಬುದು ಸುದ್ದಿ.


ಅದೇನೆ ಇದ್ದರೂ, ಆರ್.ಚಂದ್ರು ಅವರನ್ನು ಮೊದಲಿನಿಂದಲೂ ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ, ಮೊದಲ ನಿರ್ದೇಶನದಿಂದ ಹಿಡಿದು, ಇಲ್ಲಿಯವರೆಗೆ ಮಾಡಿಕೊಂಡು ಬಂದ ಎಲ್ಲಾ ಚಿತ್ರಗಳ ಹಿಂದೆಯೂ ಒಂದೊಂದು ಕಥೆ ಇದೆ, ಅಲ್ಲಿ ಶ್ರಮವಿದೆ, ಜಯವಿದೆ. ಈಗಲು ಸಹ “ಕಬ್ಜ”ದಲ್ಲಿ ಅಂಥದ್ದೊಂದು ಕಥೆ ಇದೆ ಎಂಬ ಕಾರಣಕ್ಕೆ ಉಪೇಂದ್ರ ಅವರ ಜೊತೆ ಸುದೀಪ್‌ ಅವರನ್ನೂ ಕರೆತಂದು, ತಮ್ಮ ಎಂದಿನ ಫೇಮ್‌ ಕಾಪಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಚಂದ್ರು.

ಪ್ಯಾನ್‌ ಇಂಡಿಯಾ ಎಂಬ ಪ್ಯಾಷನ್‌ ಟಾಕ್
ಕನ್ನಡದಲ್ಲಿ “ಕೆಜಿಎಫ್‌” ಬಳಿಕ ಪ್ಯಾನ್‌ ಇಂಡಿಯಾ ಚಿತ್ರಗಳ ಹವಾ ಕೊಂಚ ಜಾಸ್ತಿಯೇ ಆಯ್ತು. ಈಗಂತೂ ಯಾವುದೇ ಸ್ಟಾರ್‌ ಸಿನಿಮಾ ಮಾಡಿದರೂ, ಅದು ಪ್ಯಾನ್‌ ಇಂಡಿಯಾ ಚಿತ್ರವಾಗುತ್ತಿದೆ. ಎಲ್ಲರೂ ನಮ್ಮದೂ ಪ್ಯಾನ್‌ ಇಂಡಿಯಾ ಚಿತ್ರ ಅಂತಾನೇ ಹೇಳಿಕೊಳ್ಳುತ್ತಿದ್ದಾರೆ. “ಕಬ್ಜʼ ಕೂಡ ಪ್ಯಾನ್‌ ಇಂಡಿಯಾ ಚಿತ್ರವೇ. ಯಾವುದೇ ಒಂದು ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ತಯಾರಾದರೆ, ಅದು ಪ್ಯಾನ್‌ ಇಂಡಿಯಾ ಸಿನಿಮಾನೇ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಒಂದು ರೀತಿ ಹೇಳಿಕೊಳ್ಳೋರಿಗೆ “ಪ್ಯಾನ್‌ ಇಂಡಿಯಾ ಸಿನಿಮಾ” ಅನ್ನುವುದು ಪ್ಯಾಷನ್‌ ಆಗಿಬಿಟ್ಟಿದೆ.‌

“ಕಬ್ಜ” ಕೂಡ ಪ್ಯಾನ್‌ ಇಂಡಿಯಾ ಸಿನಿಮಾನೇ. ಇದಕ್ಕೂ ಮೊದಲೇ ಉಪೇಂದ್ರ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಪ್ಯಾನ್‌ ಇಂಡಿಯಾ ಸಿನಿಮಾ ಹೀರೋ ಆಗಿದ್ದವರು. ಅದೇನೆ ಇರಲಿ, ನಿರ್ದೇಶಕ ಆರ್.ಚಂದ್ರು ಈಗ “ಕಬ್ಜʼ ಜಪ ಮಾಡುತ್ತಿದ್ದಾರೆ. ಅದರಲ್ಲೂ “ಕೆಜಿಎಫ್‌” ಲೆವೆಲ್‌ನಲ್ಲೇ ಈ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ, ತಮ್ಮ ಚಿತ್ರ ಸುದ್ದಿಯಾಗಬೇಕು ಎಂಬ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕನ್ನಡದಲ್ಲಿ “ಕೆಜಿಎಫ್‌” ಆಗದೇ ಹೋಗಿದ್ದರೆ, ಬೇರೆ ಚಿತ್ರಗಳ ಹೆಸರು ಹೇಳುವ ಮೂಲಕ ತಮ್ಮ ಸಿನಿಮಾ ಆ ಸಿನಿಮಾ ರೇಂಜ್‌ನಲ್ಲಿ ಮಾಡುವ ಬಗ್ಗೆಯೇ ಒಂದಷ್ಟು ಹೇಳಿಕೊಳ್ಳುತ್ತಿದ್ದರೇನೋ? ಒಂದು ಖುಷಿಯ ವಿಷಯವೆಂದರೆ, ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಹೀಗಾಗಿ, ಎಲ್ಲರೂ ತಮ್ಮ ಸಿನಿಮಾಗಳನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯಬೇಕು ಎಂಬ ಹಠದಲ್ಲೇ ಕೆಲಸ ಮಾಡುತ್ತಿದ್ದಾರೆ. ಚಂದ್ರು ಕೂಡ “ಕಬ್ಜ” ಚಿತ್ರವನ್ನು ದೊಡ್ಡ ಮಟ್ಟದಲ್ಲೇ ತಯಾರಿಸಿ, ಜೋರು ಸದ್ದಿನೊಂದಿಗೆ ಬರುವ ಯೋಚನೆಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದು, “ಕಬ್ಜ” ಹೊರಬಂದಾಗಷ್ಟೇ, ಅದರೊಳಗಿನ ವಿಶೇಷತೆಗಳು ನೋಡುಗರಿಗೆ ಗೊತ್ತಾಗುತ್ತವೆ. ಅಲ್ಲಿಯವರೆಗೆ ಕಾಯಲೇಬೇಕು.

Categories
ಸಿನಿ ಸುದ್ದಿ

ಐದು ಭಾಷೆಗಳಲ್ಲಿ ಮಾನಾಡು, ಕನ್ನಡ ಟೀಸರ್ ಲಾಂಚ್ ಮಾಡಲಿದ್ದಾರೆ ಕಿಚ್ಚ ಸುದೀಪ್


ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ನಟನೆಯ ’ಮಾನಾಡು’ ಚಿತ್ರವು ಐದು ಭಾಷೆಗಳಲ್ಲಿ ‌ನಿರ್ಮಾಣವಾಗುತ್ತಿದ್ದು, ಈಗ ಅಷ್ಟು ಭಾಷೆಗಳಲ್ಲೂ ಟೀಸರ್ ಲಾಂಚ್ ಆಗುತ್ತಿದ್ದು, ಅದರ ಕನ್ನಡ ವರ್ಷನ್ ಟೀಸರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ.‌ಹಾಗೆಯೇ ಉಳಿದ ನಾಲ್ಕು ಭಾಷೆಗಳಲ್ಲು ಅಲ್ಲಿನ ಜನಪ್ರಿಯ ಸ್ಟಾರ್ ಗಳೇ ಲಾಂಚ್ ಮಾಡುವವರು.

ಕಾಲಿವುಡ್ ಮಟ್ಟಿಗೆ ಮಾನಾಡು ಬಹು ನಿರೀಕ್ಷಿತ ಚಿತ್ರ. ಆಕ್ಷನ್, ಸೆಂಟಿ ಮೆಂಟ್ ಹಾಗೂ ಲವ್ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಚಿತ್ರ.ನಿರ್ದೇಶನದ ಜವಬ್ದಾರಿಯನ್ನು ವೆಂಕಟ್‌ಪ್ರಭು ವಹಿಸಿಕೊಂಡರೆ, ಸುರೇಶ್‌ಕಮತ್‌ಚಿ ಬಂಡವಾಳ ಹೂಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಸದ್ಯದಲ್ಲೆ ಲಭ್ಯವಾಗಲಿದೆ.ಕನ್ನಡ ಭಾಷೆಯ ಟೀಸರನ್ನು ‌ಫೆ.‌3 ರಂದು ಕಿಚ್ಚ ಸುದೀಪ್ (ಬುದುವಾರ) ಸರಿಯಾಗಿ ಮಧ್ಯಾಹ್ನ 2.34ಕ್ಕೆ ರಿವೀಲ್ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಸೆಟ್ಟೇರಿತು ‘ಟಕಿಲಾ’, ಕಿಕ್ಕೋ ಕಿಕ್ಕು ಕನ್ನಡ ಸಿನಿಮಾ

ನಶೆ ಸಿನಿಮಾ ನೋಡಿದವರಿಗೋ, ಸಿನಿಮಾ ಮಾಡಿದವರಿಗೋ…?

ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಹಾಗೂ ಪ್ರವೀಣ್‌ ನಾಯಕ್‌ ಜೋಡಿಯ “ಟಕಿಲಾ ʼಸೆಟ್ಟೇರಿದೆ. ಅವತ್ತು ಬೆಂಗಳೂರಿನ ಸ್ಟಾರ್ ಹೊಟೇಲ್ ಶೆರಾಟನ್ ಗ್ರಾಂಡ್ ನಾಲ್ಕನೇ ಮಹಡಿಯಲ್ಲಿ ಕನ್ನಡ ಟಕೀಲಾಗೆ ಮುಹೂರ್ತ. ನಿರ್ದೇಶಕರಾದ ನಾಗಚಂದ್ರ ಹಾಗೂ ಪ್ರವೀಣ್‌ ನಾಯಕ್‌ ಇಬ್ಬರೂ ಸಿಕ್ಕಾಪಟ್ಟೆ ಜನ ಬಳಕೆ ಮನುಷ್ಯರು. ಅದು ಅವತ್ತು ಅಲ್ಲಿ ಕಾಣುತ್ತಿತ್ತು. ಈ ಜೋಡಿಯ ಹೊಸ ಸಾಹಸಕ್ಕೆ ಶುಭ ಕೋರಲು ಗೆಳೆಯರು, ಹಿತೈಷಿಗಳು ಭರ್ಜರಿ ಸಂಖ್ಯೆಯಲ್ಲೇ ಸೇರಿದ್ದರು. ಅ ಮಧ್ಯೆಯೇ “ಟಕಿಲಾʼ ಸಿನಿಮಾಕ್ಕೆ ಚಾಲನೆ ಸಿಕ್ಕಿತು.


ಅಂದ ಹಾಗೆ, ನಿರ್ದೇಶಕ ನಾಗಚಂದ್ರ ನಿರ್ಮಾಣದ ಚೊಚ್ಚಲ ಚಿತ್ರ ಇದು. ನಿರ್ದೇಶನದಾಚೆ ಈಗ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಾಗೆಯೇ ಅವರ ಸ್ನೇಹಿತರೇ ಅದ ಪ್ರವೀಣ್‌ ನಾಯಕ್‌ ಎಂದಿನಂತೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಮೂಲತಃ ಛಾಯಾಚಿತ್ರ ಪತ್ರಕರ್ತರಾದ ಪ್ರವೀಣ್‌ ನಾಯಕ್‌, ‘ಜೆಡ್’ ‘ಮೀಸೆ ಚಿಗುರಿದಾಗ’, ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳ ನಿರ್ದೇಶನದ ಒಂದಷ್ಟು ಗ್ಯಾಪ್‌ ನಂತರ ಟಕಿಲಾ ಮೂಲಕ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಧರ್ಮ ಕೀರ್ತೀರಾಜ್‌ ಹಾಗೂ ನಿಖಿಲಾ ಸ್ವಾಮಿ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅವರೊಂದಿಗೆ ನಾಗೇಂದ್ರ ಅರಸ್‌, ಸುಮನ್, ಅಂಕಿತ ಬಾಲ, ಕೋಟೆ ಪ್ರಭಾಕರ್ ಮತ್ತಿತರರು ತಾರಾಗಣದಲ್ಲಿದ್ದಾರೆ.


ಆ ದಿನ ಮುಹೂರ್ತ ನಂತರ ಮಾತಿಗೆ ಕುಳಿತ ಚಿತ್ರತಂಡ ಚಿತ್ರದ ವಿಶೇಷತೆ ಹೇಳಿಕೊಂಡಿತು. ಇದು ನಶೆ ಕುರಿತ ಚಿತ್ರ. ನಶೆ ಅಂದ್ರೆ ಬರೀ ಡ್ರಗ್ಸ್‌ ಮಾತ್ರವಲ್ಲ, ಪ್ರೀತಿ ಕೂಡ ಒಂದು ನಶೆ. ಅತಿಯಾದ ‘ಅಡಿಕ್ಷನ್‌ ’ ಸಹ ದೊಡ್ಡ ನಶೆ. ಅ ರೀತಿಯ ಎಳೆಗಳು ಚಿತ್ರದಲ್ಲಿ ಎಂದರು. ಚಿತ್ರದಲ್ಲಿ ಕೆಲವು ಕಡೆ ಮಾನಶಾಸ್ತ್ರದ ಛಾಯೆ ಸಹ ಚಿತ್ರದಲ್ಲಿ ಕಂಡು ಬರುವುದು ನಿರ್ದೇಶಕ ಪ್ರವೀಣ್ ನಾಯಕ್ ಅವರು ಜೀವನದಲ್ಲಿ ಕಂಡಿರುವುದನ್ನೇ ಹೇಳಲು ಹೊರಟಿದ್ದಾರಂತೆ.

ಚಿತ್ರಕ್ಕೆ . 30 ದಿವಸಗಳ ಕಾಲ ಬೆಂಗಳೂರು, ಸಕಲೆಶಪುರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ನಾಯಕ ಧರ್ಮ ಕೀರ್ತಿರಾಜ್. ಅನುಭವಿಗಳ ಜೊತೆ ಕೆಲಸ ಮಾಡುವುದು ಖುಷಿಯ ವಿಚಾರ. ಇದೊಂದು ಕ್ರೈಂ ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಸಹ ಒಳಗೊಂಡಿದೆ. 12 ವರ್ಷಗಳ ಬಳಿಕ ಸ್ನೇಹಿತ ನಾಗೇಂದ್ರ ಅರಸ್ ಜೊತೆ (ನವಗ್ರಹ ನಂತರ) ಜೊತೆ ಸಿನಿಮಾದಲ್ಲಿ ಮಾಡುತ್ತಿರುವುದು ಮತ್ತೊಂದು ಖುಷಿ ತಂದಿದೆ ಎನ್ನುವ ಮಾತು ಧರ್ಮ ಕೀರ್ತಿರಾಜ್‌ ಅವರದ್ದು.

ಶೀರ್ಷಿಕೆಯಲ್ಲಿ ಒಂದು ಕಿಕ್ ಎಂದು ಹೇಳುವ ನಾಯಕಿ ನಿಖಿತಾ ಸ್ವಾಮಿ, ಇಲ್ಲಿ ಅಭಿನಯಕ್ಕೆ ಬಹಳ ಅವಕಾಶವಿದೆ. ಒಳ್ಳೆಯ ಸಸ್ಪೆನ್ಸ್ ಸಹ ಒಳಗೊಂಡಿದೆ ಎಂದು ಹೇಳಿಕೊಂಡರು. ಶ್ರೀ ಸಿದ್ದಿವಿನಾಯಕ ಫಿಲ್ಮ್ಸ್ ಅಡಿಯಲ್ಲಿ ತಾಯರಾಗುತ್ತಿರುವ ಈ ಸಿನಿಮಾಕ್ಕೆ ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣವಿದೆ, ಟಾಪ್ ಸ್ಟಾರ್ ರೇಣು ಅವರು ನಾಲ್ಕನೇ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಸುಂದರಣ್ಣನಿಗೆ ಎಪ್ಪತ್ತು ತುಂಬಿತು!

ನಟ ಸುಂದರ್ ರಾಜ್ ಅವರಿಗೆ ಇಂದು ಎಪ್ಪತ್ತು ತುಂಬಿತು. ಹವ್ಯಾಸಿ ರಂಗಭೂಮಿಯಿಂದ ನಟನೆ ಆರಂಭಿಸಿದ ಸುಂದರಣ್ಣ ಬೆಳ್ಳಿತೆರೆಗೆಪರಿಚಯವಾಗಿದ್ದು ‘ಕಾಡು’ ಚಿತ್ರದೊಂದಿಗೆ. ಅವರು ಸಿನಿಮಾಗೆ ಪರಿಚಯವಾಗಿ ಬರೋಬ್ಬರಿ ನಲವತ್ನಾಲ್ಕು ವರ್ಷ!

– ಶಶಿಧರ
ಭಾರತೀಯ ರಂಗಭೂಮಿ ಕಂಡ ಶ್ರೇ‍ಷ್ಠ ರಂಗಕರ್ಮಿ ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿದ ನಟ ಸುಂದರ್‌ರಾಜ್‌. ಹವ್ಯಾಸಿ ರಂಗಭೂಮಿಯಲ್ಲಿನಟಿಸುತ್ತಿದ್ದ ಅವರು ‘ಕಾಡು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಮುಂದೆ ಸಾಲು, ಸಾಲು ಚಿತ್ರಗಳ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದ ಸುಂದರ್‌ ಹತ್ತಾರು ವಿಶಿಷ್ಠ ಪಾತ್ರಗಳೊಂದಿಗೆ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ.ಚೋಮನದುಡಿ, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಅನ್ವೇಷಣೆ, ತಪ್ಪಿದ ತಾಳ, ಸಂಕ್ರಾಂತಿ, ಚಂದನದ ಗೊಂಬೆ, ಪ್ರಾಯ ಪ್ರಾಯ ಪ್ರಾಯ.. ಹೀಗೆ ಹಲವು ಸಿನಿಮಾಗಳಲ್ಲಿ ಸುಂದರ್ ರಾಜ್ ಪಾತ್ರಗಳು ನೆನಪಾಗುತ್ತವೆ.

‘ಲಿಫ್ಟ್‌ಮ್ಯಾನ್‌’ ಅವರ ಇನ್ನೂರನೇ ಸಿನಿಮಾ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಬಹುದಿನಗಳ ನಂತರ ಮೊನ್ನೆ ‘ಸಿರಿ’ ಚಿತ್ರದ ಪಾತ್ರವೊಂದರಲ್ಲಿ ನಟಿಸಿರುವ ಸುಂದರ್‌ರಾಜ್‌ ಮುಂದಿನ ವಾರ ‘ಜೋಕುಮಾರಸ್ವಾಮಿ’ ನಾಟಕದಲ್ಲಿ ಪಾತ್ರ ಮಾಡಲಿದ್ದಾರೆ.
“ಹೀಗೆ ನಟಿಸುತ್ತಲೇ ಇರಬೇಕು. ಮೊದಲು ಎರಡು-ಮೂರು ದಿನಗಳ ಕಾಲ್‌ಶೀಟ್‌ ಪಾತ್ರಗಳಿಗೆ ಕೇಳುತ್ತಿದ್ದರು. ಈಗ ನನ್ನ ವಯಸ್ಸಿಗೆ ಹೊಂದುವಂತಹ ಚಿತ್ರವಿಡೀ ದುಡಿಸಿಕೊಳ್ಳುವ ಪಾತ್ರಗಳು ಬರುತ್ತಿವೆ. ಇದು ಖುಷಿಯ ಸಂಗತಿ” ಎನ್ನುವ ಅವರಿಗೆ ಕಳೆದ ವರ್ಷ ದುಃಖ ತಂದಿತು. ಅಳಿಯ ಚಿರಂಜೀವಿ ಸರ್ಜಾ ಅವರನ್ನುಕಳೆದುಕೊಂಡರು. “ಇದೇ ಬದುಕು. ಕಷ್ಟಗಳು ನಮ್ಮನ್ನು ದೃಢಗೊಳಿಸುತ್ತವೆ” ಎಂದು ಅನುಭಾವಿಯಾಗುತ್ತಾರವರು.

ಸಿನಿಮಾ – ಬದುಕಿನಲ್ಲಿ ಸುಂದರ್ ರಾಜ್‌ ವಿಶಿಷ್ಟ ಅನುಭವಗಳಿಗೆ ಸಾಕ್ಷಿಯಾಗಿದ್ದಾರೆ. ತಮ್ಮ ವೃತ್ತಿ ಬದುಕಿನ ಪ್ರಮುಖ ಪಾತ್ರಗಳಲ್ಲೊಂದಾದ‘ಅನ್ವೇಷಣೆ’ ಪಾತ್ರವನ್ನು ಅವರು ನೆನಪು ಮಾಡಿಕೊಳ್ಳುತ್ತಾರೆ. ಪಾತ್ರ ನಿರ್ವಹಣೆಯಲ್ಲಿನ ನಟನ ಸಂಕಷ್ಟಗಳನ್ನು ಹೇಳುತ್ತಲೇ, ಪಾತ್ರದ ಯಶಸ್ಸು ಹೇಗೆ ನಟನಿಗೆ ಗೌರವ ತಂದುಕೊಡುತ್ತದೆ ಎನ್ನುವುದನ್ನು ಈ ಘಟನೆ ಹೇಳುತ್ತದೆ. ಇದನ್ನು ಅವರ ಮಾತುಗಳಲ್ಲೇ ಕೇಳಿದರೆ ಚೆನ್ನ. ಸುಂದರ್ ರಾಜ್ ಹೇಳುತ್ತಾರೆ –

“ಟಿ.ಎಸ್.ನಾಗಾಭರಣ ನಿರ್ದೇಶನದ `ಅನ್ವೇಷಣೆ’ (1983) ಚಿತ್ರದ ಶೂಟಿಂಗ್‍ನ ಅಚಾತುರ್ಯ ಕಣ್ಣಿಗೆ ಕಟ್ಟಿದಂತಿದೆ.
ಬೆಂಗಳೂರು ಗಾಂಧಿ ಬಜಾರ್‍ನ ರಸ್ತೆಯ ವಠಾರವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅನಂತನಾಗ್, ಹಿಂದಿ ತಾರೆ ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾರ್ಡ್‍ರಂಥ ಮೇರು ಕಲಾವಿದರು ಅಭಿನಯಿಸುತ್ತಿದ್ದ ಚಿತ್ರವಿದು. ಚಿತ್ರದಲ್ಲಿ ನನಗೆ ನಿರುದ್ಯೋಗಿ ಉಡಾಫೆ ಯುವಕನ ಪಾತ್ರ. ಯಾರೂ ಇಲ್ಲದ ಹೊತ್ತಿನಲ್ಲಿ ಮನೆಗಳಿಗೆ ನುಗ್ಗಿ ಐಷಾರಾಮಿ ಬದುಕು ಅನುಭವಿಸುವಂತೆ ಈ ಪಾತ್ರವನ್ನು ಚಿತ್ರಿಸಲಾಗಿತ್ತು.

ಹಾಗೆ ಒಂದು ದಿನ ನಾನು ಅನಂತ್ -ಸ್ಮಿತಾ ಅವರ ವಠಾರದ ಮನೆಗೆ ನುಗ್ಗಿರುತ್ತೇನೆ. ಮತ್ತೊಂದೆಡೆ ಗಿರೀಶ್ ಕಾರ್ನಾಡ್
ಅವರದ್ದು ಚಿತ್ರದಲ್ಲಿ ಪೋಷಕ ಪಾತ್ರ. ನಾನು ಅವರ ಪುತ್ರಿಯನ್ನು ಚುಡಾಯಿಸುತ್ತಿರುತ್ತೇನೆ. ನಾನು ವಠಾರದಲ್ಲಿರುವ ವಿಚಾರ ತಿಳಿಸುತ್ತಿದ್ದಂತೆ, ಕಾರ್ನಾಡ್ ಅಲ್ಲಿಗೆ ಬರುತ್ತಾರೆ. ಮಗಳ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯುತ್ತದೆ. ಕಾರ್ನಾಡ್ ಲೋಹದ ವಿಗ್ರಹವೊಂದರಿಂದ ನನ್ನ ತಲೆಗೆ ಒಡೆದಾಗ ನಾನು ಅಸುನೀಗುತ್ತೇನೆ! ಅಲ್ಲಿಂದ ಮುಂದೆ ನಾನು ಹೆಣ. ಈ ಶವವನ್ನು ವಠಾರದಿಂದ ಹೇಗೆ ಹೊರತೆಗೆಯುತ್ತಾರೆ ಎನ್ನುವುದೇ ಕಥಾಹಂದರ.

ಹೆಣವಾದ ನನ್ನನ್ನು ಹೊರಗಡೆ ಸಾಗಿಸುವ ಜವಾಬ್ದಾರಿ ಅನಂತ್, ಸ್ಮಿತಾ ಮತ್ತು ಕಾರ್ನಾರ್ಡ್‍ರ ಹೆಗಲೇರುತ್ತದೆ. ಮೂವರೂ ಗೋಣಿಚೀಲದಲ್ಲಿ ನನ್ನನ್ನು (ಹೆಣ) ಹಾಕಿ ಕಟ್ಟುತ್ತಾರೆ. ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ಚೀಲದೊಳಗಿನ ನಾನು ಉಸಿರು ಬಿಗಿಹಿಡಿಯಬೇಕು. ನಿರ್ದೇಶಕರು ಆ್ಯಕ್ಷನ್ ಹೇಳಿದ ಏಳೆಂಟು ಸೆಕೆಂಡ್‍ಗಳಲ್ಲೇ ನನಗೆ ಮೈಯೆಲ್ಲಾ ಚುಚ್ಚಿದ ಅನುಭವ! ಕೂಗಿದರೆ ದೊಡ್ಡ ಕಲಾವಿದರ ಎದುರು ಅವಮಾನವಾಗುತ್ತದೆ ಎನ್ನುವ ಅಳುಕು. ಅಂತೂ ಉಸಿರು ಬಿಗಿಹಿಡಿದು ಎರಡು ನಿಮಿಷಗಳ ಶಾಟ್ ಮುಗಿಸಿದೆ.

ನಿರ್ದೇಶಕ ನಾಗಾಭರಣರು ಕಟ್ ಹೇಳುತ್ತಿದ್ದಂತೆ ಯಾರೋ ಚೀಲ ಬಿಚ್ಚಿದರು. ಎದ್ದೆನೋ, ಬಿದ್ದೆನೋ ಎಂದು ಹೊರಗೆ ಕಾಲಿಟ್ಟರೆ
ನನ್ನ ಮೈತುಂಬಾ ಕೆಂಪು ಇರುವೆಗಳು! ಯಾರೋ ಪುಣ್ಯಾತ್ಮರು ಸಕ್ಕರೆ ಹಾಕಿದ್ದ ಗೋಣಿಚೀಲ ತಂದುಬಿಟ್ಟಿದ್ದರು!
ಕೊನೆಗೆ ರೂಂಗೆ ಓಡಿ ಹೋಗಿ ಬಟ್ಟೆ ಬಿಚ್ಚಿ ಸುಧಾರಿಸಿಕೊಳ್ಳುವ ಹೊತ್ತಿಗೆ ಸಾಕುಬೇಕಾಯಿತು. ನನಗೀಗಲೂ ನೆನಪಿದೆ,
ಈ ಪಾತ್ರಾಭಿಯನಕ್ಕೆ ನನಗೊಂದು ಅದ್ಭುತ ಮೆಚ್ಚುಗೆ ವ್ಯಕ್ತವಾಗಿತ್ತು – ಹೆಣದ ಪಾತ್ರದಲ್ಲಿ ಜೀವಂತ ಅಭಿನಯ!”

Categories
ಸಿನಿ ಸುದ್ದಿ

ಶೂಟಿಂಗ್‌ ಕ್ಲೈಮ್ಯಾಕ್ಸ್‌ ನಲ್ಲಿ ರಾಕ್‌ ಸ್ಟಾರ್‌ ರೆಮೋ, ಅದ್ದೂರಿ ವೆಚ್ಚದ ಸೆಟ್‌ನಲ್ಲಿ ಹೀರೋ ಇಂಟ್ರೊಡುಕ್ಷನ್‌ ಸಾಂಗ್‌ ಶೂಟ್‌

ಇಮ್ರಾನ್‌ ಸರ್ದಾರಿಯಾ ನಿರ್ದೇಶನದಲ್ಲಿ ಹಾಡಿ ಕುಣಿಯಲಿದೆ ಇಶಾನ್‌- ಆಶಿಕಾ ಜೋಡಿ

ಪವನ್‌ ಒಡೆಯರ್‌ ನಿರ್ದೇಶನ ಹಾಗೂ ನಿರ್ಮಾಪಕ ಸಿ.ಆರ್.‌ ಮನೋಹರ್‌ ನಿರ್ಮಾಣದ ಅದ್ದೂರಿ ವೆಚ್ಚದ ಚಿತ್ರ ” ರೆಮೋʼ ಚಿತ್ರೀಕರಣ ಬಹುತೇಕ ಕ್ಲೈಮಾಕ್ಸ್‌ ತಲುಪಿದೆ. ಸದ್ಯಕ್ಕೆ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಅದರಲ್ಲೂ ಚಿತ್ರದಲ್ಲಿ ಹೀರೋ ಇಂಟ್ರೋಡಕ್ಷನ್‌ ಸಾಂಗ್‌ ಅನ್ನು ಅದ್ದೂರಿ ಸೆಟ್‌ ನಲ್ಲಿಯೇ ಶೂಟ್‌ ಮಾಡಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ.

ಚಿತ್ರ ತಂಡ ರಿವೀಲ್‌ ಮಾಡಿರುವ ತಾಜಾ ನ್ಯೂಸ್‌ ಪ್ರಕಾರ, ಚಿತ್ರದಲ್ಲಿನ ಹೀರೋ ಇಂಟ್ರೂಡುಕ್ಷನ್‌ ಸಾಂಗ್‌ ನ ಚಿತ್ರೀಕರಣಕ್ಕೆ ಬೆಂಗಳೂರಿನ ಕಂಗೇರಿ ಉಲ್ಲಾಳ ಬಳಿಯಿರುವ ಸನ್‌ ಸೆಟ್‌ ಪಾಯಿಂಟ್‌ನ ಬೃಹತ್ ಗ್ರೌಂಡ್‌ ನಲ್ಲಿ ಅಂದಾಜು ೧.೫ ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಸೆಟ್‌ ಹಾಕಲು ಚಿತ್ರ ತಂಡ ಮುಂದಾಗಿದೆ. ಸೆಟ್‌ ನಿರ್ಮಾಣಕ್ಕೂ ಈಗ ಚಾಲನೆ ಸಿಕ್ಕಿದೆ.‌ ಆರ್ಟ್‌ ಡೈರೆಕ್ಟರ್‌ ಗುಣಶೇಖರನ್‌ ಸೆಟ್‌ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ತುಂಬಾ ಹೊಸತೆನಿಸುವ ಹಾಗೆ ಹೊಸ ತಾಂತ್ರಿಕತೆ ಮೂಲಕ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಅದ್ದೂರಿಯ ಈ ಸೆಟ್‌ ನಲ್ಲಿ ೨೦ಕ್ಕೂ ಹೆಚ್ಚು ಕ್ಯಾಮೆರಾ ಹಾಗೂ ಅಷ್ಟೇ ಸಂಖ್ಯೆಯ ಛಾಯಾಗ್ರಾಹಕರ ಮೂಲಕ ಇಂಟ್ರೋಡಕ್ಷನ್‌ ಸಾಂಗ್‌ ಶೂಟಿಂಗ್‌ ನಡೆಯುತ್ತಿದೆ ಎನ್ನುತ್ತಿದೆ ಚಿತ್ರತಂಡ.

ಈಗಾಗಲೇ ರೆಮೋ ಚಿತ್ರಕ್ಕೆ ವಿಶೇಷವಾದ ಸಂಗೀತ ನೀಡಿರುವ ಮೆಲೋಡಿ ಮಾಂತ್ರಿಕ ಅರ್ಜುನ್‌ ಜನ್ಯಾ, ಚಿತ್ರದ ಇಂಟ್ರೋಡಕ್ಷನ್‌ ಸಾಂಗ್‌ ಮೂಲಕವೂ ದೊಡ್ಡ ಸಂಚಲನ ಮೂಡಿಸುವುದು ಖಾತರಿ. ಕರ್ನಾಟಕ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕಿವಿ ಆಲಿಸಿ ಕೇಳುವಂತಹ ಸಂಗೀತ ಈ ಚಿತ್ರದಲ್ಲಿದೆ. ವೇದಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಾತಿನ ಭಾಗದ ಚಿತ್ರೀಕರಣದ ಹಾಗೆಯೇ ಹಾಡುಗಳ ಚಿತ್ರೀಕರಣಕ್ಕೂ ಹೆಚ್ಚಿನ ಅದ್ಯತೆ ತೆಗೆದುಕೊಂಡೇ ಕ್ಯಾಮೆರಾ ವರ್ಕ್‌ ಮಾಡಿದ್ದಾರೆ ವೈದಿ.

ಹಾಡುಗಳು ಕೇಳುವುದಕ್ಕೆ ಇಂಪೆನಿಸುವ ಹಾಗೆ ಮೂಡಿ ಬಂದಿರುವುದು ಒಂದೆಡೆಯಾದರೆ, ಅವುಗಳಿಗೆ ಅಷ್ಟೇ ಸೊಗಸಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಕೊರಿಯೋಗ್ರಾಫರ್‌ ಇಮ್ರಾನ್‌ ಸರ್ದಾರಿಯಾ. ಹಾಗೆಯೇ ಇಂಟ್ರೋಡಕ್ಷನ್‌ ಸಾಂಗ್‌ ಕೂಡ ಅಷ್ಟೇ ವಿಶೇಷವಾಗಿ ಮೂಡಿ ಬರುತ್ತಿದೆ. ನಾಯಕ ನಟ ಇಶಾನ್‌ ಹಾಗೂ ನಾಯಕಿ ಆಶಿಕಾ ಚಿತ್ರದ ಹಾಡುಗಳಲ್ಲಿ ಭರ್ಜರಿಯಾಗಿಯೇ ಕುಣಿದಿದ್ದಾರೆರ. ಅದರ ಅಷ್ಟು ಕ್ರೆಡಿಟ್‌ ಇಮ್ರಾನ್‌ ಅವರಿಗೆ ಸಲ್ಲುತ್ತದೆ .

ಅಷ್ಟೇ ಆಲ್ಲ, ಕಲೆ, ಸಂಕಲನ, ಸಂಗೀತದ ಜತೆಗೆ ಅದ್ದೂರಿ ವೆಚ್ಚದಲ್ಲಿಯೇ ನಿರ್ಮಾಣವಾಗಿರುವ ರೆಮೋ ಚಿತ್ರ ಕಾಲಕ್ಕೆ ತಕ್ಕಂತೆ ಟ್ರೆಂಡ್‌ಶೆಟ್‌ ಮಾಡುವಂತೆ ಸಿನಿ ಪ್ರಿಯರಿಗೆ ರಸದೌತಣ ನೀಡುವುದು ಗ್ಯಾರಂಟಿ ಎನ್ನುವ ವಿಶ್ವಾಸ ಚಿತ್ರದ ತಂಡದ್ದು. ನಿರ್ದೇಶನ ಪವನ್‌ ಒಡೆಯರ್‌ ಅವರ ಮಾತಿನಲ್ಲಿ ಹೇಳೋದಾದ್ರೆ, ಹಲವು ವಿಭಿನ್ನತೆ, ವಿಶಿಷ್ಟತೆ ಹೊಂದಿದ ಚಿತ್ರ ಇದಾಗಿದ್ದು, ಗೂಗ್ಲಿ ತರಹದ ಮತ್ತೊಂದು ಲವ್‌ ಸ್ಟೋರಿ ಗಿಫ್ಟ್‌ ಸಿನಿಮಾ ಪ್ರೇಕ್ಷಕರಿಗೆ ಖಚಿತ.

Categories
ಸಿನಿ ಸುದ್ದಿ

” ನಿರ್ಮಾಪಕನಾಗುವಾಗ ನನ್ನ ಬಳಿ ಒಂದು ರೂಪಾಯಿ ಕೂಡ ಇರಲಿಲ್ಲ”

ಕಾರ್ಟೂನಿಸ್ಟ್‌ ಮೇಲೆಯೇ ಒಂದು ಸಿನಿಮಾ, ಫೆ. 12 ಕ್ಕೆ ತೆರೆ ಮೇಲೆ ಕಲಾವಿದ

ಸಿನಿಮಾ ಮಟ್ಟಿಗೆ ಕಲಾವಿದ ಅಂದ್ರೆ ನೆನಪಾಗುವುದೇ ಕ್ರೇಜಿಸ್ಟಾರ್ ರವಿಚಂದ್ರನ್.‌ ಯಾಕಂದ್ರೆ, ಅವರು ಅದೇ ಹೆಸರಲ್ಲೊಂದು ಸಿನಿಮಾ ಮಾಡಿದ್ದರು. ಆ ಹೊತ್ತಿಗೆ ಆ ಸಿನಿಮಾ ಸಾಕಷ್ಟು ಸದ್ದು ಮಾಡಿದ್ದು ನಿಮಗೆ ಗೊತ್ತು. ಈಗ ಅದೇ ಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಇದು ಹೊಸಬರ ಸಿನಿಮಾ.

ರವಿಚಂದ್ರನ್‌ ಅವರ ಸಿನಿಮಾಕ್ಕೂ ಇದಕ್ಕೂ ಯಾವುದೇ ಕನೆಕ್ಷನ್‌ ಇಲ್ಲ. ಇದು ಒಬ್ಬ ವ್ಯಂಗ್ಯ ಚಿತ್ರಕಾರನ ಕುರಿತ ಸಿನಿಮಾ. ಪದ್ಮರಾಜ್‌ ಫಿಲಂಸ್‌ ಮೂಲಕ ಪ್ರದೀಪ್‌ ಕುಮಾರ್‌ ನಿರ್ಮಾಣಮಾಡಿದ ಚಿತ್ರ. ಶಿವಾನಂದ್‌ ಇದರ ನಿರ್ದೇಶಕ. ಫೆ. 12  ಕ್ಕೆ ತೆರೆಗೆ ಬರುತ್ತಿರುವ ಈ ಚಿತ್ರ ಇದೀಗ ಟ್ರೇಲರ್‌ ಲಾಂಚ್‌ ಮೂಲಕ ಸದ್ದು ಮಾಡಿದೆ. ಟ್ರೇಲರ್‌ ಲಾಂಚ್‌ ಮೂಲಕ ಸೋಮವಾರ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿತ್ತು.

” ನಾನು ಈ ಮೈಕ್ ಹಿಡಿಯಬೇಕೆಂದು ತುಂಬಾ ದಿನಗಳ ಹಿಂದೆ‌ ಕನಸು ಕಂಡವನು. ಆ ಕನಸು ಈಗ ನನಸಾಗಿದೆ.‌ ನನ್ನ ಕನಸಿಗೆ ಜೀವ ತುಂಬಿದ್ದು ನಿರ್ಮಾಪಕ ಕಮ್ ನಾಯಕ‌ ‌ನಟ ಪ್ರದೀಪ್ ಕುಮಾರ್. ಅವರಿಗೆ ನಾನು ಚಿರಕಾಲ ಅಭಾರಿʼ ಎನ್ನುವ ಮೂಲಕ ಸಿನಿಮಾದ ಹಿಂದಿನ ಕನಸು ತೆರೆದಿಟ್ಟರು ನಿರ್ದೇಶಕ ಶಿವಾನಂದ್.‌ನಿರ್ದೇಶಕ ಶಿವಾನಂದ್‌ ಅವರ ಕತೆ ಇದಾದರೆ, ಇನ್ನು ನಿರ್ಮಾಪಕ ಹಾಗೂ ನಾಯಕ ನಟ ಪ್ರದೀಪ್‌ ಕುಮಾರ್‌ ಅವರದ್ದು ಮತ್ತೊಂದು ಕಥೆ. ಯಾಕಂದ್ರೆ ಇವರು ವೃತ್ತಿಯಲ್ಲಿ ಇಂಜಿನಿಯರ್.‌ ಅಲ್ಲಿಂದ ” ರಂಗ್ ದೇ ಬಸಂತಿʼ ಎನ್ನುವ ಹೆಸರಲ್ಲಿ ಹೋಟೆಲ್ ತೆಗೆದು ಹೋಟೆಲ್ ಉದ್ಯಮಕ್ಕೂ ಬಂದವರು. ಅಲ್ಲಿಂದೀಗ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.


” ನಾನಿನ್ನು ಇಂಜಿಯರಿಂಗ್‌ ವೃತ್ತಿ ಬಿಟ್ಟಿಲ್ಲ. ಸಿನಿಮಾ ನನಗೆ ಹವ್ಯಾಸ. ಬಾಲ್ಯದಿಂದಲೂ ಅಂತಹದೊಂದು ಆಸೆ ಇತ್ತು. ಅದಕ್ಕಾಗಿ ಇಲ್ಲಿಗೆ ಬಂದೆ. ವಿಚಿತ್ರ ಅಂದ್ರೆ ನಿರ್ಮಾಪಕನಾಗುವ ನನ್ನ ಬಳಿ ನೂರು ರೂಪಾಯಿ ಕೂಡ ಇರಲಿಲ್ಲ. ಮೊದಲು ಹೊಟೇಲ್‌ ಶುರು ಮಾಡಿದೆ. ಅಲ್ಲಿಂದ ಬಂದ ನಂತರ ಈ ಚಿತ್ರ ನಿರ್ಮಾಣ ಮಾಡಿದೆ ʼ ಎನ್ನುವ ಮೂಲಕ ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ವಿವರಿಸುತ್ತಾರೆ ಪ್ರದೀಪ್‌ ಕುಮಾರ್.‌

ಈ ಚಿತ್ರಕ್ಕೆ ನಾಯಕಿ ಸಂಭ್ರಮ. ಈ ಹಿಂದೆ ರಣಕಣಕ ಚಿತ್ರಕ್ಕೆ ನಾಯಕಿ ಆಗಿದ್ದರು. ಉಳಿದಂತೆ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂ ಗು ಸುರೇಶ್, ವರ್ಷ ಮಲ್ಲೇಶ್ ಮತ್ತಿತರರು ಚಿತ್ರದಲ್ಲಿದ್ದಾರೆ.ವಿವೇಕ್ ಚಕ್ರವರ್ತಿ ಹಾಗೂ ಪೂರ್ಣ ಚಂದ್ರ ತೇಜಸ್ವಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಮೂರು ಹಾಡುಗಳಿಗೆ ಸಂಗೀತ ನೀಡಿರುವ ವಿವೇಕ್ ಚಕ್ರವರ್ತಿ ಅವರು ಸಹ ಸಂಗೀತದ ಬಗ್ಗೆ ತಮ್ಮ‌ ಮಾತುಗಳನಾಡಿದರು.‌ ಯುವ ಗಾಯಕ ರುಮಿತ್ ಅವರು ಹಾಡಿರುವ ಹಾಡಿನ ಲಿರಿಕಲ್ ವಿಡಿಯೋ ಪ್ರದರ್ಶಿಸಲಾಯಿತು.

Categories
ಸಿನಿ ಸುದ್ದಿ

ನಾಗೇಂದ್ರ ಶಾ, ಬಿಂಬಶ್ರೀ ಗೆ ಪ್ರಗುಣಿ ಅತ್ಯುತ್ತಮ ನಟ-ನಟಿ ಪ್ರಶಸ್ತಿ

ಸಾಹಿತ್ಯದಲ್ಲಿ ಕಾವ್ಯ ಇದ್ದಂತೆ ಕಿರುಚಿತ್ರ, ಪ್ರಗುಣಿ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ

ಪ್ರಗುಣಿ ವೆಂಚರ್ ಕಿರುಚಿತ್ರ ‌ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ವರ್ಣರಂಜಿತವಾಗಿ ನಡೆಯಿತು.‌ ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಶಸ್ತಿ ವಿತರಣೆ ಮೂಲಕ ವಿಭಿನ್ನವಾಗಿ ಕಂಡಿತು.‌ಪ್ರಗುಣಿ ಒಟಿಟಿ ವೆಂಚರ್ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಗೆ ಸಾಕಷ್ಟು ಕಿರುಚಿತ್ರ ಗಳು ಬಂದಿದ್ದವು.‌ಅದರಲ್ಲಿ ಪ್ರೇಕ್ಷಕರ ಆಯ್ಕೆಯಾಗಿ ಆಕಾಂಕ್ಷ. ಕಿರುಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು‌.

ಅತ್ಯುತ್ತಮ ನಟಿಯಾಗಿ ಬಿಂಬಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದರೆ, ನಟ ನಾಗೇಂದ್ರ ಶಾ ಪ್ರಗುಣಿ ಅತ್ಯುತ್ತಮ ನಟ ಪ್ರಶಸ್ತಿ ಗೆ ಪಾತ್ರರಾದರು. ‌ನಿರ್ದೇಶಕ ಟಿ. ಎನ್. ಸೀತಾರಾಂ ಸಮಾರಂಭ ಉದ್ಘಾಟಿಸಿದರೆ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತು ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರು ಪ್ರಶಸ್ತಿ ವಿಜೇತ ರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಪ್ರಶಸ್ತಿ ವಿತರಣೆಗೂ ಮುನ್ನ ಸಮಾರಂಭವನ್ಜು ಉದ್ದೇಶಿಸಿ ಮಾತನಾಡಿದ ಕನ್ನಡದ ಹೆಸರಾಂತ ನಿರ್ದೇಶಕ ಪಿ. ಶೇಷಾದ್ರಿ, ಸಿನಿಮಾ ಕೂಡ ಸಾಹಿತ್ಯವೇ. ಸಾಹಿತ್ಯದಲ್ಲಿ ಹೇಗೆ ಕಾದಂಬರಿ, ಕಾವ್ಯ, ಗದ್ಯ ಅಂತೆಲ್ಲ ವಿಭಾಗಗಳಿವೆಯೋ ಹಾಗೆಯೇ ಸಿನಿಮಾ ಕೂಡ. ನನ್ನ ಪ್ರಕಾರ ಕಿರುಚಿತ್ರ ಅಂದರೆ ಕಾವ್ಯ ಇದ್ದ ಹಾಗೆ. ಕಡಿಮೆ ಅವದಿಯ ಕಾವ್ಯದಲ್ಲಿ ಹೇಗೆ ವಿಶಾಲ ಅರ್ಥವನ್ನು ಕಟ್ಟಿಕೊಡಲು ಸಾಧ್ಯವೋ ಹಾಗೆಯೇ ಕಿರುಚಿತ್ರ ವೊಂದು ಕಡಿಮೆ ಅವದಿಯಲ್ಲಿ ತನ್ನ ಕತೆಯನ್ನು ಜನರಿಗೆ ಮನಸಿಗೆ ನಾಟುವಂತೆ ಕಟ್ಟಿಕೊಡಬಲ್ಲದು ಎಂದು ಅಭಿಪ್ರಾಯ ಪಟ್ಟರು.

ಸಮಾರಂಭ ಉದ್ಘಾಟಿಸಿದ ಹಿರಿಯ ನಿರ್ದೇಶಕ ಟಿ. ಎನ್. ಸೀತಾರಾಂ ಕೂಡ ಇದೇ ಅಭಿಪ್ರಾಯ ಪಟ್ಟರು. ಸಾಹಿತ್ಯದೊಳಗಿನ ಕಾವ್ಯದ ರೂಪವೇ ಕಿರುಚಿತ್ರ ಎಂದರು. ಕಿರುಚಿತ್ರ ಸ್ಪರ್ಧೆಯ ತೀರ್ಪು ಗಾರರೂ ಆಗಿದ್ದ ಸಾಹಿತಿ ಹಾಗೂ ಪತ್ರಕರ್ತ ಜೋಗಿ ಮಾತನಾಡಿ, ಕಿರುಚಿತ್ರ ಅಂದ್ರೆ, ಕಡಿಮೆ ಸಮಯದಲ್ಲಿ ಹೆಚ್ಚು ವಿಷಯ ಹೇಳುವ ಪರಿ.‌ ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಅದರ ವೇಗ ಕೂಡ ಅಷ್ಟೇ ವೇಗವಾಗಿರಬೇಕು. ಆದರೆ ಇಲ್ಲಿ ನಾನಿಗೆ ಗೊತ್ತಾಗಿದ್ದು ಬಹಳಷ್ಟು ಚಿತ್ರಗಳಲ್ಲಿ ಕತೆಯೇ ಇರಲಿಲ್ಲ.ಕತೆ ಕೂಡಮುಖ್ಯ ಎನ್ನುವುದು ಕಿರುಚಿತ್ರ ನಿರ್ದೇಶಿಸಿರುವವರು ಅರ್ಥಮಾಡಿಕೊಳ್ಳಬೇಕಿದೆ. ಯಾಕಂದ್ರೆ, ಕಿರುಚಿತ್ರ ನಿರ್ದೇಶನ ದೊಡ್ಡ ಚಿತ್ರಗಳ ನಿರ್ದೆಶನದ ಮೊದಲ ಮೆಟ್ಟಿಲು ಎಂದು ಅಲ್ಲಿ ನೆರೆದಿದ್ದ‌ ಕಿರುಚಿತ್ರ ನಿರ್ದೇಶಕರು, ನಿರ್ಮಾಪಕರಿಗೆ ಕಿವಿ‌ಮಾತು ಹೇಳಿದರು.
ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಮಾತನಾಡಿ, ಕಲೆ‌ಮತ್ತು ವಾಣಿಜ್ಯದ‌ ನಡುವೆ ಅಂತರ ಮುಖ್ಯ. ಆದರೆ ಇತ್ತೀಚೆಗೆ ಅವರೆಡು ಬೆಸೆದುಕೊಂಡ ಪರಿಣಾಮ ಕಲಾಕ್ಷೇತ್ರದಲ್ಲಿನ ಸಣ್ಣಪುಟ್ಟವರನ್ನು ಪ್ರಶಸ್ತಿಗೆ ಗುರುತಿಸಲಾಗದಂತೆ ಆಗಿದೆ ಎಂದರು. ಸಂಗೀತ ನಿರ್ದೆಶಕ ವಿ.ಮನೋಹರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಹಾಡು, ನೃತ್ಯಗಳ ಮೂಲಕ ಪ್ರಗುಣಿ ಪ್ರಶಸ್ತಿ ಪ್ರದಾನಸಮಾರಂಭ ವರ್ಣರಂಜಿತವಾಗಿ ನಡೆಯಿತು.

Categories
ಸಿನಿ ಸುದ್ದಿ

ಅಥಿರಾ ಈಕೆ ಮಲಯಾಳಿ ಹುಡುಗಿ

ಆದ್ರೂ ಅಪ್ಪಟ ಕನ್ನಡತಿ ಕಣ್ರೀ ಈ ಬೆಡಗಿ

 

ದಿನ ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಥಿರಾ ಎಂಬ ನವನಟಿ ಕೂಡ ಸೇರಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡ ಚಿತ್ರರಂಗದ ಬಾಗಿಲ ಬಳಿ ಬಂದು ನಿಂತಿದ್ದಾರೆ. ಇದಕ್ಕೂ ಮುನ್ನ, ಮಲಯಾಳಂ ಚಿತ್ರರಂಗದಲ್ಲಿ ಕಾಲಿಟ್ಟು, ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ, ಅಥಿರಾ “ಹಾಫ್‌” ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾರಂಗಕ್ಕೆ ಬಂದಿರುವ ಅಥಿರಾ ತಮ್ಮ ಸಿನಿಜರ್ನಿ ಕುರಿತು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.

ಓವರ್‌ ಟು ಅಥಿರಾ
ನಾನು ಈಗಷ್ಟೇ ಕಾಲೇಜು ಓದುತ್ತಿದ್ದೇನೆ. ಸಿನಿಮಾ ನನ್ನ ಪ್ಯಾಷನ್.‌ ಇಲ್ಲಿ ಒಳ್ಳೆಯ ಕಥೆ, ಪಾತ್ರಗಳ ಮೂಲಕ ಕಾಣಿಸಿಕೊಂಡು ಭದ್ರ ನೆಲೆಕಂಡುಕೊಳ್ಳು ಆಸೆ ನನ್ನದು. ಹಾಗಾಗಿಯೇ, ನಾನು ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ನಾನು ನಟನೆ ಕೋರ್ಸ್‌ ಅನ್ನುವುದೇನೂ ಮಾಡಿಲ್ಲ. ಆಡಿಷನ್‌ ಮೂಲಕ ಆಯ್ಕೆಯಾಗಿದ್ದು, ಈಗಾಗಲೇ ಮಲಯಾಳಂ ಭಾಷೆಯ “ಲಾಲ್‌ ಜೋಸ್‌” ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ಕನ್ನಡ ಸಿನಿಮಾಗೂ ಆಯ್ಕೆಯಾಗಿ ನಟಿಸಿದ್ದೇನೆ.

“ಹಾಫ್‌” ನನ್ನ ಮೊದಲ ಕನ್ನಡ ಚಿತ್ರ. ಒಳ್ಳೆಯ ಕಥೆ, ಪಾತ್ರ ಇದ್ದುದರಿಂದ ನಾನು ಆ ಚಿತ್ರ ಮಾಡಲು ಒಪ್ಪಿದ್ದೇನೆ. ಸದ್ಯಕ್ಕೆ ಇನ್ನೂ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ನನ್ನ ಬಗ್ಗೆ ಹೇಳುವುದಾದರೆ, ಕಳೆದ ಒಂಭತ್ತು ವರ್ಷಗಳಿಂದ ಕಥಕ್‌ ಮತ್ತು ಭರತನಾಟ್ಯ ಅಭ್ಯಾಸ ಮಾಡಿದ್ದೇನೆ. ನಟನೆ ಬಗ್ಗೆ ಪ್ಯಾಷನ್‌ ಇತ್ತು. ಹಾಗಾಗಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದೆ. “ಹಾಫ್”‌ ಒಳ್ಳೆಯ ಅವಕಾಶ ಒದಗಿಸಿಕೊಟ್ಟಿದೆ. ಇನ್ನು, ಇಲ್ಲಿ ನನಗೆ ಎಲ್ಲಾ ರೀತಿಯ ಪಾತ್ರ ಮಾಡಲು ಇಷ್ಟ. ಇನ್ನು, ನನಗೆ ಯಶ್‌ ಹಾಗೂ ರಾಧಿಕಾ ಪಂಡಿತ್‌ ರೋಲ್‌ ಮಾಡೆಲ್.‌ ನನಗೆ ಕಮರ್ಷಿಯಲ್‌ ಮತ್ತು ಕಲಾತ್ಮಕ ಸಿನಿಮಾಗಳು ಎಂಬುದಿಲ್ಲ. ಯಾವುದೇ ಸಿನಿಮಾ ಇದ್ದರೂ, ಒಳ್ಳೆಯ ಕಥೆ ಮತ್ತು ಪಾತ್ರ ಇದ್ದರೆ, ಖಂಡಿತ ಒಪ್ಪಿಕೊಂಡು ಕೆಲಸ ಮಾಡುತ್ತೇನೆ. ಒಟ್ಟಲ್ಲಿ ಆ ಪಾತ್ರ ಜನರಿಗೆ ತಲುವಂತಿರಬೇಕಷ್ಟೇ ಎಂಬುದು ಅಥಿರಾ ಮಾತು.‌

ಗ್ಲಾಮರಸ್‌ಗೆ ತಕರಾರಿಲ್ಲ…
ಇನ್ನು, “ಹಾಫ್‌” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಒಂದೊಳ್ಳೆಯ ಪಾತ್ರವೇ ಸಿಕ್ಕಿದೆ. ಅದೊಂದು ರೀತಿ ನನಗೆ ಹೊಸ ರೀತಿಯ ಪಾತ್ರ. ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿಯುವ ಹಂತ ತಲುಪಿದೆ. ಸಾಂಗ್‌ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿಕೊಳ್ಳುವ ಅಥಿರಾ, ನನಗೆ ಎಲ್ಲಾ ಭಾಷೆಯ ಸಮಸ್ಯೆ ಇಲ್ಲ. ಮಲಯಾಳಂ, ಕನ್ನಡ, ತೆಲುಗು ಭಾಷೆ ಬರುತ್ತೆ. ಯಾಕೆಂದರೆ, ನಾನು ಇಲ್ಲಿಯವಳಾಗಿದ್ದರೂ, ಮೂಲತಃ ಕೇರಳದವಳು.

ಅಪ್ಪ ಅರುಣ್‌ ಕನ್ನಡದವರು. ಅಮ್ಮ ಶ್ರೀಜಾ ಕೇರಳದವರು. ಹಾಗಾಗಿ ಎರಡೂ ಭಾಷೆ ನನಗೆ ಸುಲಲಿತ. “ಹಾಫ್” ಬಗ್ಗೆ ಹೇಳುವುದಾದರೆ, ಈ ಚಿತ್ರ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರತಿ ಸೀನ್‌ ಮುನ್ನ ತಾವೇ ನಟಿಸಿ ತೋರಿಸುತ್ತಿದ್ದರು. ಒಂದೊಳ್ಳೆಯ ಚಿತ್ರ ಮಾಡಿದ ಹೆಮ್ಮೆ ನನಗಿದೆ. ಮುಂದೆ ಯಾವುದೇ ಸಿನಿಮಾಗಳಿರಲಿ, ಕಥೆ ಹಾಗೂ ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಯಾವ ತಕರಾರೂ ಇಲ್ಲ ಎಂಬುದು ಅಥಿರಾ ಮಾತು.

ಮೊದಲ ಪೋಸ್ಟರ್‌ ರಿಲೀಸ್
ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸಿರುವ “ಹಾಫ್” ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. “ಹಾಫ್” ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದ ಅಥಿರಾ ನಟನೆ ಬಗ್ಗೆ ನಿರ್ದೇಶಕ ಲೋಕೇಂದ್ರ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻನಮ್ಮ ಸಿನಿಮಾಗೆ ಸ್ಕೂಲ್ ಸ್ಟೂಡೆಂಟ್ ಕ್ಯಾರೆಕ್ಟರಿನ ನಾಯಕನಟಿ ಬೇಕಿತ್ತು. ಆಡಷನ್‌ನಲ್ಲಿ ಅಥಿರಾ ಭಾವಾಭಿವ್ಯಕ್ತಿ ನೋಡಿ ಸೆಲೆಕ್ಟ್ ಮಾಡಿಕೊಂಡೆ.

ಸದ್ಯ ಅಥಿರಾ ಅವರ ಭಾವಚಿತ್ರ ಇರುವ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. “ವರ್ಲ್ಡ್‌ ಬುಕ್ ಆಫ್ ರೆಕಾರ್ಡ್”ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ಕರೆಸಿಕೊಳ್ಳುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಾಣವಿದೆ. ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದರೆ, ರಾಕಿ ಸೋನು ಸಂಗೀತವಿದೆ. ಥ್ರಿಲ್ಲರ್ ಮಂಜು ಸಾಹಸವಿದೆ.

Categories
ಸಿನಿ ಸುದ್ದಿ

ರಾಬರ್ಟ್‌ ತೆಲುಗು ಟೀಸರ್‌ ಲಾಂಚ್‌ ಡೇಟ್‌ ಫಿಕ್ಸ್‌, ಫೆ. 3 ಕ್ಕೆ ಹೊರ ಬರಲಿದೆ ʼರಾಬರ್ಟ್‌ʼ ತೆಲುಗು ಫಸ್ಟ್‌ ಲುಕ್‌

ಆನಂದ್‌ ಆಡಿಯೋ ಮೂಲಕ ಗ್ರಾಂಡ್‌ ಆಗಿ ಲಾಂಚ್‌ ಆಗುತ್ತಿದೆ ‌ ಟೀಸರ್‌

ನಟ ದರ್ಶನ್‌ ಅಭಿನಯದ ಬಹು ನಿರಿಕ್ಷೀತ ʼರಾಬರ್ಟ್‌ʼ ಎಂಟ್ರಿಗೆ ಟಾಲಿವುಡ್‌ ಓಕೆ ಅಂದಿದೆ. ಅದರ ಬೆನ್ನಲೇ ಚಿತ್ರ ತಂಡ ಫೆ. ೩ ಕ್ಕೆ ಫಸ್ಟ್‌ ಲುಕ್‌ ತೆಲುಗು ಟೀಸರ್‌ ಲಾಂಚ್‌ ಮಾಡಲು ರೆಡಿ ಆಗಿದೆ. ಅಂದು ಸಂಜೆ ೪.೧೫ಕ್ಕೆ ಆನಂದ್‌ ಅಡಿಯೋ ಮೂಲಕ ಟೀಸರ್‌ ಲಾಂಚ್‌ ಆಗಲಿದೆ ಅಂತ ಚಿತ್ರ ತಂಡ ಅನೌನ್ಸ್‌ ಮಾಡಿದೆ. ತೆಲುಗು ಟೀಸರ್‌ ಹೇಗಿರುತ್ತೆ ಅನ್ನೋದು ಕೇವಲ ಕನ್ನಡದವರಿಗೆ ಮಾತ್ರವಲ್ಲ, ತೆಲುಗು ಇಂಡಸ್ಟ್ರಿ ನಲ್ಲೂ ಕುತೂಹಲ ಮೂಡಿಸಿದೆ.

ತೆಲುಗು ನಿರ್ಮಾಪಕರು ” ರಾಬರ್ಟ್‌ʼ ರಿಲೀಸ್‌ ಗೆ ಅಡ್ಡಿಯಾಗಿದ್ದರ ವಿರುದ್ಧ ದರ್ಶನ್‌ ಗುಡುಗಿದ್ದು ಟಾಲಿವುಡ್‌ ನಲ್ಲೂ ದೊಡ್ಡ ಸುದ್ದಿ ಆಗಿತ್ತು. ಅದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಇತ್ಯರ್ಥವಾಗಿ, ಕೊನೆಗೂ ಟಾಲಿವುಡ್‌ ಎಂಟ್ರಿಗೆ ಅನುಮತಿ ಸಿಕ್ಕಿದ್ದು, ದರ್ಶನ್‌ ಗುಡುಗಿದ್ದಕ್ಕೆ ಸಿಕ್ಕ ಜಯವೇ ಆಗಿದೆ. ಅದೇ ರೀತಿ ರಾಬರ್ಟ್‌ ಸಿನಿಮಾ ಹೇಗಿದೆ ಎನ್ನುವುದನ್ನ ಈಗ ಟಾಲಿವುಡ್‌ ಕೂಡ ಎದುರು ನೋಡುತ್ತಿದೆ.

ಬಹು ನಿರೀಕ್ಷಿತ ʼರಾಬರ್ಟ್‌ʼ ಮಾರ್ಚ್‌ ೧೧ ಕ್ಕೆ ಗ್ರಾಂಡ್‌ ಆಗಿ ತೆರೆಗೆ ಬರುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಅಬ್ಬರಿಸಲು ರೆಡಿ ಆಗಿದೆ. ಅಂದು ಜಗತ್ತಿನಾದ್ಯಂತ ರಿಲೀಸ್‌ ಆಗುವುದು ಗ್ಯಾರಂಟಿ ಆಗಿದೆ. ದರ್ಶನ್‌ ಅಭಿಮಾನಿಗಳಂತೂ ತುದಿಗಾಲ ಮೇಲೆ ನಿಂತಿದ್ದಾರೆ. ತಮ್ಮ ನೆಚ್ಚಿನ ನಟ ಸಿನಿಮಾ ನೋಡದೆ ವರ್ಷ ಕಳೆದಿದೆ. ʼಒಡೆಯʼ ನಂತರದ ದೊಡ್ಡ ಗ್ಯಾಪ್‌ ನಂತರ ʼರಾಬರ್ಟ್‌ʼ ರಿಲೀಸ್‌ ಆಗುತ್ತಿದೆ. ಈ ಚಿತ್ರರ ದರ್ಶನ್‌ ಸಿನಿ ಕರಿಯರ್‌ ನಲ್ಲಿ ಮಹತ್ವದ ಚಿತ್ರ ಎನ್ನುವುದಕ್ಕೆ ಚಿತ್ರದಲ್ಲಿನ ಅವರ ಪಾತ್ರ ಗೆಟಪ್‌ ಕಾರಣ. ಮೂರು ವಿಭಿನ್ನ ಪಾತ್ರ ಮತ್ತು ಗೆಟಪ್‌ ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರಿಗೆ ಮಾಡೆಲ್‌ ಆಶಾಭಟ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಾಗೆಯೇ ದೊಡ್ಡ ತಾರಗಣವೇ ಚಿತ್ರದಲ್ಲಿದೆ.

error: Content is protected !!