Categories
ಸಿನಿ ಸುದ್ದಿ

ಫೆ.28ರಿಂದ ಬಿಗ್‌ಬಾಸ್‌ ಮನೆಯೊಳಗಿನ ಆಟ ಶುರು! ಈ ಬಾರಿ ರಾಜಕಾರಣಿ ಜೊತೆ ಯಾರೆಲ್ಲಾ ಇರ್ತಾರೆ?

ಬಹಳ ಕುತೂಹಲದ ಬಿಗ್‌ಬಾಸ್‌ ಸೀಸನ್‌ -8ಕ್ಕೆ ಫೆಬ್ರವರಿ 28ರ ಸಂಜೆ ಅದ್ಧೂರಿ ಚಾಲನೆ ದೊರೆಯಲಿದೆ. ಈ ಕುರಿತು ಈಗಾಗಲೇ ಬಿಗ್‌ಬಾಸ್‌ ನಿರೂಪಕ ಕಿಚ್ಚ ಸುದೀಪ್‌ ಅವರು ಘೋಷಣೆ ಮಾಡಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್‌ ಬಾಸ್‌ ಸೀಸನ್‌-೮ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಹೋಗಲಿದ್ದಾರೆ ಅನ್ನೋದೇ ಗೌಪ್ಯ. ಆದರೂ, ಅವರು ಹೋಗ್ತಾರೆ, ಇವರು ಇರ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆವೆ.

ಈ ಬಾರಿ ಒಟ್ಟು 17 ಜನ ಸ್ಪರ್ಧಿಗಳು ಭಾಗವಹಿಸುತ್ತಿರುವುದು ವಿಶೇಷ. ಎಲ್ಲರನ್ನೂ ಕ್ವಾರಂಟೈನ್‌ ಮಾಡಿಯೇ ಬಿಗ್‌ಬಾಸ್‌ ಮನೆಗೆ ಕಳುಹಿಸಲಾಗುತ್ತಿದೆ. ಸದ್ಯ, ಆ ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸುದೀಪ್‌ ಕೂಡ ತಯಾರಾಗಿದ್ದಾರೆ. ಕಲರ್ಸ್‌ ವಾಹಿನಿಯರ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌, ಒಂದಷ್ಟು ಮಾಹಿತಿ ಕೊಟ್ಟು, ಸ್ಪರ್ಧಿಗಳಿಗೆ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಹಾಗೆಯೇ ತಾಂತ್ರಿಕ ವರ್ಗದವರನ್ನೂ ಕ್ವಾರಂಟೈನ್‌ ಮಾಡಲಾಗುತ್ತಿದೆ. ಈ ಸಲ ಒಬ್ಬ ರಾಜಕಾರಣಿಯೂ ಇರುತ್ತಾರೆ. ಉಳಿದಂತೆ ನಟ,ನಟಿಯರು, ಒಂದಷ್ಟು ಗುರುತಿಸಿಕೊಂಡ ವ್ಯಕ್ತಿಗಳೂ ಇಲ್ಲಿರಲಿದ್ದಾರೆ ಎಂದಷ್ಟೇ ವಿವರಿಸಿದ್ದಾರೆ. ಅದೇನೆ ಇರಲಿ, ಬಿಗ್‌ಬಾಸ್‌ -೮ರಲ್ಲಿ ಯಾರು ಇರುತ್ತಾರೆ ಅನ್ನುವ ಕುತೂಹಲಕ್ಕೆ ಭಾನುವಾರ ಸಂಜೆ ತೆರೆ ಬೀಳಲಿದೆ. ಫೆ.೨೮ರ ಭಾನುವಾರ ಕಲರ್ಸ್‌ ವಾಹಿನಿಯಲ್ಲಿ ಸಂಜೆ 6ಕ್ಕೆ ಅದ್ದೂರಿಯಾಗಿ ಕಾರ್ಯಕ್ರಮ ಶುರುವಾಗಲಿದೆ. ಪ್ರತಿ ರಾತ್ರಿ 8 ಗಂಟೆಯಿಂದ ೯ ರವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

Categories
ಸಿನಿ ಸುದ್ದಿ

ಬಿಗ್ ಬಾಸ್‌‌ ಸೀಸನ್‌ 8 ಗೆ ಸುರಪುರ ಶಾಸಕ ರಾಜುಗೌಡ ?

ಕಿರುತೆರೆ ಬಹು ನಿರೀಕ್ಷಿತ ರಿಯಾಲಿಟಿ ಶೋ “ಬಿಗ್‌ ಬಾಸ್‌ ಸೀಸನ್‌ ೮ʼ ರ ಶುರುವಿಗೆ ದಿನಗಣನೆ ಶುರುವಾಗಿದೆ. ಇನ್ನೇನು ಎರಡು ದಿನ ಮಾತ್ರ ಬಾಕಿ ಇವೆ. ಕಲರ್ಸ್‌ ಕನ್ನಡದ ಈ ಶೋ ನೋಡಲು ಕಿರುತೆರೆಯ ವೀಕ್ಷಕ ವಲಯ ತುದಿಗಾಲ ಮೇಲೆ ನಿಂತಿದೆ. ಸೀಸನ್‌ ೮ ರಲ್ಲಿ ಯಾರೆಲ್ಲ ಇರುತ್ತಾರೆನ್ನುವ ವೀಕ್ಷಕರ ಕುತೂಹಲಕ್ಕೆ ಈಗಾಗಲೇ ಒಂದಷ್ಟು ಕ್ಲೂ ಸಿಕ್ಕಿವೆಯಾದರೂ, ಅವೇ ಸತ್ಯ ಅಂತ ನಂಬೋ ಹಾಗಿಲ್ಲ. ಶೋ ಗೆ ಎಂಟ್ರಿಯಾದಾಗಲೇ ಯಾರೆಲ್ಲ ಇರುತ್ತಾರೆನ್ನುವುದು ಗ್ಯಾರಂಟಿ. ಉಳಿದಂತೆ ಈ ಬಾರಿಯ ಸೀಸನ್‌ ನಲ್ಲಿ ರಾಜಕಾರಣಿಯೊಬ್ಬರು ಎಂಟ್ರಿ ಆಗುತ್ತಿದ್ದಾರೆ.ಅವರು ನಟ ಕಿಚ್ಚ ಸುದೀಪ್‌ ಅವರಿಗೆ ಪರಿಚಯ ಇದ್ದವರು ಅಂತ ಸುದ್ದಿ ಗೋಷ್ಟಿಯಲ್ಲೆ ಕಲರ್ಸ್‌ ಕನ್ನಡದ ಬಿಸಿನೆಸ್‌ ಹೆಡ್‌ ಪರಮೇಶ್‌ ಗುಂಡ್ಕಲ್‌ ಬಹಿರಂಗಪಡಿಸಿದ್ದಾರೆ.

ಹಾಗಂತ ಅವರು ಯಾರು ಎನ್ನುವುದನ್ನು ಅವರು ಹೇಳಿಲ್ಲ. ಅದು ನಿಗೂಡ ಅಂತಲೂ ಹೇಳಿದ್ದಾರೆ. ಕುತೂಹಲ ಇರೋದಉ ಆ ರಾಜಕಾರಣಿ ಯಾರು ಅಂತ. ರಾಜಕಾರಣಿ ಇರ್ತಾರೆ ಅಂತ ಹೊರಟರೆ ಅವರು ಯಾರು ಅಂತ ಊಹೆ ಮಾಡುವುದು ತುಂಬಾ ಕಷ್ಟ. ಆದರೆ ಅವರು ನಟ ಕಿಚ್ಚ ಸುದೀಪ್‌ ಅವರಿಗೂ ತುಂಬಾ ಪರಿಚಯ ಇದ್ದವರೂ ಎನ್ನುವ ಸುಳಿವಿನ ಮೇರೆಗೆ ನೋಡುತ್ತಾ ಹೋದರೆ ಮೊದಲು ನೆನಪಾಗುವುದು ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ.

ನಟ ಸುದೀಪ್‌ ಹಾಗೂ ಶಾಸಕ ರಾಜು ಗೌಡ ತುಂಬಾ ಆಪ್ತರು. ಅನೇಕ ವೇದಿಕೆಗಳಲ್ಲಿ ಅವರು ಒಂದಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಟ ಸುದೀಪ್‌, ಸುರಪುರ ಅಭ್ಯರ್ಥಿಯಾಗಿದ್ದ ರಾಜು ಗೌಡ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಹಾಗೆಯೇ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲೂ ಅವರಿಬ್ಬರು ಭಾಗವಹಿಸಿದ್ದರು.

ಸುದೀಪ್‌ ಅವರ ಫ್ಯಾಮಿಲಿ ಕಾರ್ಯಕ್ರಮಗಳಲ್ಲೂ ರಾಜು ಗೌಡ ಪಾಲ್ಗೊಂಡಿದ್ದರು ಕೂಡ ಎಲ್ಲರಿಗೂ ಗೊತ್ತು. ಒಂದೇ ಸಮುದಾಯದವರು ಅನ್ನೋದು ಇದಕ್ಕಿದ್ದ ಕಾರಣ. ಈಗ ಅದೇ ಸ್ನೇಹ, ಒಡನಾಟದಲ್ಲಿ ಬಿಗ್‌ ಬಾಸ್‌ ಸೀಸನ್‌ 8 ರಲ್ಲಿ ಶಾಸಕ ರಾಜುಗೌಡ ಪಾಲ್ಗೊಳ್ಳುತ್ತಿದ್ದಾರೆನ್ನುವುದನ್ನು ಅಲ್ಲಗಳೆಯುವಂತಿಲ್ಲ.

Categories
ಸಿನಿ ಸುದ್ದಿ

ಚುಟು ಚುಟು ಹುಡುಗಿ ಆಶಿಕಾ ರಂಗನಾಥ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗೋದು ನಿಜವಾ?

ಇದು ನಿಜವಾ? ಗೊತ್ತಿಲ್ಲ. ಆದರೂ ಚುಟು ಚುಟು ಖ್ಯಾತಿಯ ಮೋಹಕ ನಟಿ ಆಶಿಕಾ ರಂಗನಾಥ್‌ ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ಗೊತ್ತಿಲ್ಲ. ಈ ಬಗ್ಗೆ ನಟಿ ಆಶಿಕಾ ರಂಗನಾಥ್‌ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಬಿಗ್‌ ಬಾಸ್‌ ಸೀಸನ್‌ ೮ ಶುರುವಾಗುವುದಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಯಾವುದಕ್ಕೂ( ಫೆ.28)ಭಾನುವಾರ ಸಂಜೆ ಗೊತ್ತಾಗಿದೆ. ಆದರೆ ಆಶಿಕಾ ರಂಗನಾಥ್‌ ಅವರ ಬಗ್ಗೆ ಕುತೂಹಲ ಇರೋದು, ಸಿನಿಮಾದಲ್ಲೇ ಸಿಕ್ಕಾಪಟ್ಟೆ ಸ್ಟಾರ್‌ ವ್ಯಾಲೂ ಹೊಂದಿರುವ ಆಶಿಕಾ ರಂಗನಾಥ್‌, ಬಿಗ್‌ ಬಾಸ್‌ ಮನೆಗೆ ಯಾಕೆ ಹೋಗ್ತಾರೆ ?

ಹೌದು, ಚುಟು ಚುಟು ಹುಡುಗಿ ಆಶಿಕಾ ರಂಗನಾಥ್‌ ಸದ್ಯಕ್ಕೀಗ ಕನ್ನಡದ ಬಹು ಬೇಡಿಕೆ ನಟಿ. ಸ್ಟಾರ್‌ ನಟರ ಸಿನಿಮಾಗಳಲ್ಲೇ ನಾಯಕಿ ಆಗಿ ಅಭಿನಯಿಸುತ್ತಾ ಬೆಳ್ಳಿತೆರೆಯಲ್ಲಿ ಕಮಾಲ್‌ ಮಾಡುತ್ತಿರುವುದು ನಿಮಗೂ ಗೊತ್ತು.ʼರಾಂಬೋ -2ʼ , ʼತಾಯಿಗೆ ತಕ್ಕ ಮಗʼ, ʼರಾಜು ಕನ್ನಡ ಮೀಡಿಯಂʼ, ʼಮುಗುಳು ನಗೆʼ ಸ್ಟಾರ್‌ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಈಗಲೂ ಸ್ಟಾರ್‌ ಸಿನಿಮಾಗಳಲ್ಲಿ ಆಶಿಕಾ ನಾಯಕಿ ಆಗಿ ಅಭಿನಯಿಸಿದ್ದು ಮಾತ್ರವಲ್ಲ, ಈಗಲೂ ಸಾಲು ಸಾಲು ಸಿನಿಮಾಗಳ ರಿಲೀಸ್‌ ನಿರೀಕ್ಷೆಯಲ್ಲಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ʼಕೋಟಿಗೊಬ್ಬ 3  ʼ, ಶರಣ್‌ ಅಭಿನಯದ “ಅವತಾರ ಪುರುಷʼ, ಶ್ರೀ ಮುರಳಿ ಅಭಿನಯದ ʼಮದಗಜʼ ಚಿತ್ರಗಳ ಜತೆಗೆ ʼಗರುಡʼ ಹಾಗೂ ಮತ್ತೊಂದು ಹೆಸರಿಡದ ಚಿತ್ರಗಳು ಈಗ ಬಿಡುಗಡೆಗೆ ರೆಡಿ ಇವೆ.

ಈಗಾಗಲೇ ತಮ್ಮ ಗ್ಲಾಮರಸ್‌ ನೋಟದೊಂದಿಗೆ ಪಡ್ಡೆ ಹುಡುಗರ ಮನಗೆದ್ದಿರುವ ಆಶಿಕಾ ರಂಗನಾಥ್‌, ಈಗ ಮತ್ತೆ ಸ್ಟಾರ್‌ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ತವಕದಲ್ಲಿದ್ದಾರೆ. ಸಿನಿಮಾ ಚಟುವಟಿಕೆಗಳಲ್ಲಿ ಸದಾ ಬ್ಯುಸಿ ಆಗಿದ್ದರೂ, ಸೋಷಲ್‌ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಆಗಾಗ ಅಂದ-ಚಂದದ ಪೋಟೋಗಳನ್ನು ಹಾಕುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡಿಸುವುದು ಮಾಮೂಲು. ಅಂತಹದೇ ಪೋಟೋಗಳು ಸೋಷಲ್‌ ಮೀಡಿಯಾದಲ್ಲಿ ಹರಿದಾಡುವುದು ನಿಮಗೂ ಗೊತ್ತು. ಅಂತಹದೇ ಪೋಟೋಗಳು ಈಗ ಆಕರ್ಷಣೆ ಹುಟ್ಟಿಸಿದ್ದು ಈ ಪೋಟೋ ಝಲಕ್‌ ಇಲ್ಲಿದೆ.

Categories
ಸಿನಿ ಸುದ್ದಿ

ಐದು ಫಿಲ್ಮ್ ಫೆಸ್ಟಿವಲ್‌ಗೆ ಸಿಕ್ತು ದಾರಿ! ಕನ್ನಡ ಸಿನಿಮಾಗೆ ‌ಚಿತ್ರೋತ್ಸವದ ವೇದಿಕೆ; ವೈಕುಂಠಕೆ ದಾರಿ ಹಿಡಿದು ಸಂಭ್ರಮಿಸಿದರು…

ಕನ್ನಡ ಚಿತ್ರರಂಗ ಇದೀಗ ಬೇರೆ ಭಾಷಾ ಚಿತ್ರರಂಗಗಳಿಗೆ ಹೋಲಿಸಿದರೆ, ತುಸು ಗುಣಮಟ್ಟದ ಚಿತ್ರಗಳನ್ನೇ ಕೊಡುತ್ತ ಬಂದಿದೆ. ಅಷ್ಟೇ ಅಲ್ಲ, ಸಾಕಷ್ಟು ವಿಭಿನ್ನ ಸಿನಿಮಾಗಳ ಮೂಲಕ ಗಮನಸೆಳೆಯುತ್ತಿರುವುದು ಕೂಡ ಖುಷಿಯ ವಿಚಾರ. ಈಗಾಗಲೇ ಕನ್ನಡದ ಬಹುತೇಕ ಸಿನಿಮಾಗಳು ಈಗ ಗಡಿ ದಾಟಿವೆ, ಸಾಗರದಾಚೆಯೂ ಹೋಗಿವೆ. ಹಲವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಚಿತ್ರೋತ್ಸವಗಳಲ್ಲೂ ಆಯ್ಕೆಯಾಗಿ, ಮೆಚ್ಚುಗೆ ಪಡೆದಿವೆ.

ಈಗ ಅಂಥದ್ದೊಂದು ಖುಷಿ ವಿಚಾರಕ್ಕೆ ಕನ್ನಡ ಸಿನಿಮಾವೊಂದು ಕಾರಣವಾಗಿದೆ. ಹೌದು, ಆ ಕನ್ನಡ ಸಿನಿಮಾ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಅದು “ದಾರಿ ಯಾವುದಯ್ಯ ವೈಕುಂಠಕೆ”. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಚಿತ್ರ ಸದ್ಯ ಸುದ್ದಿ ಮಾಡುತ್ತಿದ್ದು, ರಾಜಸ್ತಾನ ಅಂತಾರಾಷ್ಟ್ರೀಯ ಚಿತ್ರೋತ್ಸವ, ನಾವ್ಡ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕಲರ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌, ಬೆಟ್ಟಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ಇಂಡಿಯನ್‌ ವರ್ಲ್ಡ್‌ ಫಿಲ್ಮ್‌ ಫೆಸ್ಟಿವಲ್‌ಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಇಷ್ಟರಲ್ಲೇ ಆಯಾ ಚಿತ್ರೋತ್ಸವದ ಜ್ಯೂರಿಗಳು ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಈ ಚಿತ್ರದಲ್ಲಿ ವರ್ಧನ್‌ ತೀರ್ಥಹಳ್ಳಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡ, ಸ್ಪಂದನಾ ನೀನಾಸಂ, ಪ್ರಯಣಮೂರ್ತಿ ಸೇರಿದಂತೆ ಹಲವರು ಇದ್ದಾರೆ. ಚಿತ್ರದ ಒನ್‌ಲೈನ್‌ ಸ್ಟೋರಿ ಬಗ್ಗೆ ಹೇಳುವುದಾದರೆ, ಒಬ್ಬ ಕೊಲೆಗಾರ, ಕಳ್ಳ, ದೊಡ್ಡ ಕ್ರಿಮಿನಲ್‌ ವ್ಯಕ್ತಿಗೆ ಭಾವನೆಗಳ ಸ್ಪರ್ಶ ಕೊಟ್ಟರೆ, ಅವನು ಹೇಗೆ ಬದಲಾಗುತ್ತಾನೆ ಅನ್ನುವುದರ ಮೇಲೆ ಕಥೆ ಸಾಗುತ್ತದೆ.

ಇಡೀ ಚಿತ್ರದ ಚಿತ್ರೀಕರಣ ಸ್ಮಶಾನ ಮತ್ತು ಒಂದು ಹಳ್ಳಿ, ಒಂದು ಮನೆಯಲ್ಲಿ ನಡೆಯುತ್ತದೆ. ಸುಮಾರು ೩೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೊಂದು ವಿಭಿನ್ನ ಕಥಾಹಂದರವಾಗಿದ್ದು, ಇಲ್ಲಿರುವ ಪ್ರತಿ ಪಾತ್ರಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ವರ್ಧನ್‌ ತೀರ್ಥಹಳ್ಳಿ ಅವರಿಗೆ ಇದೊಂದು ವಿಶೇಷ ಚಿತ್ರವಂತೆ. “ಸಿನಿಲಹರಿ” ಜೊತೆ ಮಾತನಾಡಿದ ವರ್ಧನ್‌ ತೀರ್ಥಹಳ್ಳಿ, “ನಾನು ಇದುವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ.

ಅದರಲ್ಲಿ ಹೆಚ್ಚು ನೆಗೆಟಿವ್‌ ಶೇಡ್‌ ಪಾತ್ರಗಳೇ. ಆಕ್ಷನ್‌ ಜೊತೆ ಬಂದ ಪಾತ್ರಗಳನ್ನು ಕೂಡ ನಿರ್ವಹಿಸಿದ್ದೇನೆ. ಆದರೆ, ನನಗೆ ಬೇರೆ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಅಂತಹ ಪಾತ್ರಗಳಿಗೆ ಎದುರು ನೋಡುತ್ತಿದ್ದೆ. ಅದೀಗ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾ ಮೂಲಕ ಸಿಕ್ಕಿದೆ. ಅದು ನನ್ನ ಅದೃಷ್ಟ.‌ ನನ್ನದು ರಫ್‌ ಲುಕ್. ಅದಕ್ಕೆ ಬೇರೆ ರೀತಿಯದ್ದೇ ಆಯ್ಕೆ ಇರುತ್ತೆ.

ಈ ಚಿತ್ರದ ಪಾತ್ರ ಕೂಡ ನನಗೆ ಸರಿಹೊಂದಿದ್ದರಿಂದ, ಅದು ನನ್ನ ಪಾಲಾಯಿತು. ಒಬ್ಬ ಕ್ರಿಮಿನಲ್‌ ಆಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಕ್ರಿಮಿನಲ್‌ಗೂ ಹೃದಯ ಇರುತ್ತೆ, ಅವನಲ್ಲೂ ಭಾವನೆಗಳಿರುತ್ತವೆ, ಅವು ಗರಿಗೆದರಿದಾಗ ಅವನು ಹೇಗೆ ರಿಯಾಕ್ಟ್‌ ಮಾಡ್ತಾನೆ ಅನ್ನುವುದರ ಮೇಲೆ ಸಿನಿಮಾ ಸಾಗುತ್ತದೆ. ಆ ಪಾತ್ರ ಮಾಡಿದ್ದಕ್ಕೆ ನನಗೆ ಖುಷಿ ಇದೆ. ಅದರಲ್ಲೂ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಚಿತ್ರ ಆಯ್ಕೆಯಾಗಿದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ ಎನ್ನುತ್ತಾರೆ ವರ್ಧನ್‌ ತೀರ್ಥಹಳ್ಳಿ.


ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಈ ಹಿಂದೆ, ಇವರು, “ಕೃಷ್ಣ ಗಾರ್ಮೆಂಟ್ಸ್‌” ಚಿತ್ರ ನಿರ್ದೇಶಿಸಿದ್ದರು. ಶರಣಪ್ಪ ಎಂ.ಕೊಟಗಿ ಅವರಿಗೆ ಇದು ಮೊದಲ ಚಿತ್ರ. ಸಿನಿಮಾಗೆ ನಿತಿನ್‌ ಕ್ಯಾಮೆರಾ ಹಿಡಿದರೆ, ಲೋಕಿ ಸಂಗೀತವಿದೆ. ಮುತ್ತುರಾಜ್‌ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

‘ಮುಂಬಯಿ ಸಾಗಾ’ ಟ್ರೇಲರ್ ಔಟ್; ಭೂಗತ ಪಾತಕಿ ಜಾನ್, ಪೊಲೀಸ್ ಅಧಿಕಾರಿ ಹಶ್ಮಿ

ಸಂಜಯ್ ಗುಪ್ತಾ ನಿರ್ದೇಶನದ ‘ಮುಂಬಯಿ ಸಾಗಾ’ ಕ್ರೈಂ-ಥ್ರಿಲ್ಲರ್ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 80, 90ರ ದಶಕದ ಸಂದರ್ಭವನ್ನು ಸೃಷ್ಟಿಸಿ ಕತೆ ಹೇಳಿದ್ದಾರೆ. ಜಾನ್ ಅಬ್ರಹಾಂ ಭೂಗತ ಪಾತಕಿ ‘ಅಮರ್ತ್ಯ ರಾವ್‌’ ಪಾತ್ರದಲ್ಲಿದ್ದು, ಮುಂಬಯಿ ಆಳುವುದು ಆತನ ಉದ್ದೇಶ. ಇದಕ್ಕೆ ತಡೆಗೋಡೆಯಾಗಿ ನಿಂತ ಖಡಕ್ ಪೊಲೀಸ್ ಅಧಿಕಾರಿಯಾಗಿ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಜಾಕಿ ಶ್ರಾಫ್‌, ಸುನೀಲ್ ಶೆಟ್ಟಿ, ಅಮೋಲ್ ಗುಪ್ತೆ, ಪ್ರತೀಕ್ ಬಬ್ಬರ್, ಗುಲ್ಶನ್ ಗ್ರೋವರ್‌, ರೋಹಿತ್ ರಾಯ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಭರಪೂರ ಆಕ್ಷನ್ ಇದ್ದು ಇದೊಂದು ಸಾಹಸಪ್ರಧಾನ ಕ್ರೈಂ-ಥ್ರಿಲ್ಲರ್ ಎನ್ನುವುದನ್ನು ಟ್ರೈಲರ್ ಹೇಳುತ್ತದೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಜಾನ್ ಅಬ್ರಹಾಂ ಪಾತ್ರವನ್ನು, ‘ಬಾಂಬೆ ರಸ್ತೆಗಳಲ್ಲಿ ಬೆಳೆದವನು ಮುಂಬಯಿ ಆಳಲು ಹೊರಟಿದ್ದಾನೆ’ ಎನ್ನುವ ಒಕ್ಕಣಿ ಇತ್ತು. ಈ ಚಿತ್ರದ ನಿರ್ದೇಶಕ ಸಂಜಯ್ ಗುಪ್ತಾ ‘ಶೂಟ್‌ಔಟ್ ಅಟ್‌ ಲೋಖಂಡ್‌ವಾಲಾ’, ಜಝ್ಬಾ, ಕಾಬಿಲ್‌, ಮುಸಾಫಿರ್‌, ಜಿಂದಾ… ಹಿಂದಿ ಚಿತ್ರಗಳ ಮೂಲಕ ಜನರಿಗೆ ಪರಿಚಿತರು. ಹಾಗೆ ನೋಡಿದರೆ ಕಳೆದ ವರ್ಷ ಜೂನ್‌ನಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಯ್ತು. ಕೊನೆನೆ ಓಟಿಟಿಯಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದ ನಿರ್ಮಾಪಕರು ಈಗ ಥಿಯೇಟರ್‌ನಲ್ಲೇ ಮಾರ್ಚ್‌ 19ರಂದು ರಿಲೀಸ್ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಸಾಹಿತ್ಯದತ್ತ ಶಿವಕುಮಾರ ಮಾವಲಿ, ವೈರಲ್‌ ಆಗುತ್ತಿದೆ ಮುತ್ತುರಾಜನ ಹಾಡು !

ಯುವ ಬರಹಗಾರ ಶಿವಕುಮಾರ ಮಾವಲಿ ಸಿನಿಮಾ ಸಾಹಿತ್ಯದತ್ತ ಹೆಚ್ಚು ಒಲವು ತೋರಿದ್ದಾರೆ. “ಅವ್ಯಕ್ತʼ ಚಿತ್ರಕ್ಕೆ ಕಥೆ, ಸಂಭಾಷಣೆ ಜತೆಗೆ ಸಾಹಿತ್ಯ ಬರೆದ ನಂತರವೀಗ ʼಮುತ್ತುರಾಜʼ ಹೆಸರಿನ ಕಿರುಚಿತ್ರವೊಂದಕ್ಕೆ ಸೊಗಸಾದ ಸಾಹಿತ್ಯ ಬರೆದಿದ್ದು, ಅದೀಗ ಯುಟ್ಯೂಬ್‌ ನಲ್ಲಿ ರಿಲೀಸ್‌ ಆಗಿ ಸಕತ್‌ ಸುದ್ದಿ ಮಾಡುತ್ತಿದೆ. ಸುಮಾರು ೨೦ ನಿಮಿಷಗಳ ಅವದಿಯ ಈ ಕಿರುಚಿತ್ರ ʼಮುತ್ತುರಾಜʼ ಹೆಸರಿನ ಒಬ್ಬ ವ್ಯಕ್ತಿಯ ಸುತ್ತ ನಡೆಯುವ ಕಥೆ ಹೊಂದಿದೆ. ” ಯಾವ ದೂರವೂ ದೂರವಲ್ಲ, ಸನಿಹ ಇರದ ಸಲುಗೆ ಬಲು ದೂರ ʼ ಎನ್ನುವ ತಿರುಳ ಮೇಲೆ ಸಾಗುವ ಕಥಾ ಹಂದರ ಹೊಂದಿದ್ದು, ಮನುಷ್ಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ.

ಕತೆಯ ಇದೇ ಸಾರಕ್ಕೆ ತಕ್ಕಂತೆ ಬರಹಗಾರ ಶಿವಕುಮಾರ ಮಾವಲಿ ಬರೆದ ” ಕಳೆದ ಹೋದ ನಿನ್ನೆಯನು..ʼ. ಎನ್ನುವ ಗೀತೆ ರೆಟ್ರೋ ಶೈಲಿಯಲ್ಲಿ ಮೂಡಿ ಬಂದರೂ, ಎಲ್ಲರೊಳಗೂ ಮನುಷ್ಯ ಸಂಬಂಧಗಳ ಭಾವಗಳನ್ನು ಮೀಟುತ್ತಾ ಹೋಗುವುದೇ ವಿಶೇಷ. ಸದ್ಯ ಬೆಂಗೂರಿನ ಕಾಲೇಜ್‌ವೊಂದರಲ್ಲಿ ಸಿನಿಮಾ ಮೇಕಿಂಗ್‌ ಕೋರ್ಸ್‌ ಅಭ್ಯಾಸ ಮಾಡುತ್ತಿರುವ ಶಕ್ತಿ ಪ್ರಸಾದ್‌ ಎಂಬ ಯುವ ಪ್ರತಿಭೆ ” ಮುತ್ತುರಾಜʼ ಕಿರುಚಿತ್ರದ ನಿರ್ದೇಶಕ. ಹಾಗೆಯೇ ಅವರಂತೆಯೇ ಸಿನಿಮಾ ಮೇಕಿಂಗ್‌ ಮೇಲೆ ಅಸಕ್ತಿ ಹೊಂದಿದ ಒಂದಷ್ಟು ಯುವಕರೂ ಕೂಡ ಈ ಕಿರುಚಿತ್ರ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಪಾಪರ್‌ ಫಿಲಂಸ್‌ ಮೂಲಕ ಈ ಕಿರುಚಿತ್ರ ನಿರ್ಮಾಣಗೊಂಡಿದೆ. ಈ ಕಿರುಚಿತ್ರದ ತಾರಾಗಣದಲ್ಲೂ ಹೊಸ ಪ್ರತಿಭೆಗಳೆ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಾಮರಾಜ ನಗರ ಸುತ್ತ ಮುತ್ತ ಕಿರುಚಿತ್ರ ಚಿತ್ರೀಕರಣಗೊಂಡಿದೆ.

ಸಾಹಿತ್ಯ ರಚನೆಯ ಮೂಲಕ ಈ ಹೊಸ ಪ್ರತಿಭೆಗಳಿಗೆ ಬೆಂಬಲವಾಗಿ ನಿಂತಿರುವ ಯುವ ಬರಹಗಾರ ಶಿವಕುಮಾರ ಮಾವಲಿ, ಆ ಮೂಲಕ ಸಿನಿಮಾ ಸಾಹಿತ್ಯಕ್ಕೆ ಒಲವು ತೋರಿರುವುದು ಇನ್ನೊಂದು ವಿಶೇಷ. ಕನ್ನಡದ ಹೊಸ ತಲೆಮಾರಿನ ಯುವ ಬರಹಗಾರರಲ್ಲಿ ಶಿವಕುಮಾರ್‌ ಮಾವಲಿ ಅವರದ್ದು ಮುಂಚೂಣಿಯ ಹೆಸರು. ವೃತ್ತಿಯಲ್ಲಿ ಇಂಗ್ಲಿಷ್‌ ಉಪನ್ಯಾಸಕರಾದರೂ, ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇಟ್ಟುಕೊಂಡವರು ಶಿವಕುಮಾರ ಮಾವಲಿ. ಹಾಗೆಯೇ ರಂಗಭೂಮಿಯಲ್ಲೂ ಅಪಾರ ಆಸಕ್ತಿ ಹೊಂದಿದ್ದು, ಈಗಾಗಲೇ “ದೇವರು ಅರೆಸ್ಟ್ ಆದʼ, “ಟೈಪಿಸ್ಟ್ ತಿರಸ್ಕರಿಸಿದ ಕಥೆʼ, “ಸುಪಾರಿ ಕಿಲ್ಲರ್” ಎಂಬ ಪುಸ್ತಕಗಳಿಂದ ಕಥೆಗಾರರಾಗಿಯೂ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

ಯಟ್ಯೂಬ್ ನಲ್ಲಿ ಭಾನುವಾರವಷ್ಟೇ ರಿಲೀಸ್ ಆಗಿರುವ ” ಕಳೆದು ಹೋದ ನಿನ್ನೆಯನು ..ಈ ವೀಡಿಯೋ ಸಾಂಗ್ ಅರ್ಥಗರ್ಭೀತ ಸಾಹಿತ್ಯದ ಜತೆಗೆ ಅದರ ಚಿತ್ರೀಕರಣವೂ ವಿಶೇಷವಾಗಿದ್ದು ,ಮೂರು ನಿಮಿಷದ ಈ ಹಾಡಿನಲ್ಲಿ‌ ಪ್ರತಿಯೊಂದು ಸಾಲುಗಳೂ ಮಾರ್ಮಿಕವಾಗಿವೆ. ‘ನೀರ ಮೇಲಿನ ಮರಳ ಮನೆಯಂತೆ ಒಲವು ಕಟ್ಟಿದ ನೆನಪು … ಕಟ್ಟುತ್ತಲೇ ಕೆಡಗುವುದು ಎಲ್ಲಾ ಒಲವ ರೂಪು… ವಿರಹವನು ಗೆದ್ದವನ ಸಾವು ಉಂಟೇನು?  ಸಲುಗೆ ಇರದ ಸನಿಹ ಬಲು ದೂರ ‘ ಎಂಬ ಸಾಲುಗಳಲ್ಲಿ ಏನೋ ಹೊಸತನ್ನು ಹೇಳುವ ಹಾಗೆ ಕಾಣುತ್ತಿದ್ದಾರೆ. ನಾರಾಯಣ ಶರ್ಮ ಕಂಪೋಸ್ ಮಾಡಿ ಹಾಡಿದ್ದಾರೆ. ಮೂರು ನಿಮಿಷಗಳ ಹಾಡಾದರೂ ಫ್ರೆಷ್ ಅನ್ನಿಸುವ ಭಾವ ಮೂಡಿಸುತ್ತದೆ. ಈ ಹಿಂದೆ ಸಂಚಾರಿ ವಿಜಯ್ ಅವರ ನಟನೆಯಲ್ಲಿ ಮೂಡಿಬಂದ ʼಅವ್ಯಕ್ತʼ ಕಿರುಚಿತ್ರದಲ್ಲಿಯೂ ಶಿವಕುಮಾರ್‌ ಮಾವಲಿ ಬರೆದಿದ್ದ, ‘ ಹೆಣ್ಣಿನೊಲವ ಹಾದಿ ಹಿಡಿದು ‘ ಎಂಬ ಹಾಡು ವಿಶೇಷವಾಗಿದ್ದು ಮಾತ್ರವಲ್ಲ, ಸಂಗೀತಾಸಕ್ತರ ಆಕರ್ಷಣೆಗೂ ಕಾರಣವಾಗಿತ್ತು.

Categories
ಸಿನಿ ಸುದ್ದಿ

ಸೆಟ್ಟೇರಿದ ‘ಶ್ಯಾಮ್ ಸಿಂಘ ರಾಯ್’ ತೆಲುಗು ಸಿನಿಮಾ; ನಟ ನಾನಿ ಇಲ್ಲಿ ಬೆಂಗಾಲಿ ಬಾಬು

ತೆಲುಗು ನಟ ನಾನಿ ಅಭಿನಯದ ಹೊಸ ಸಿನಿಮಾ ‘ಶ್ಯಾಮ್‌ ಸಿಂಘ ರಾಯ್‌’ ಸೆಟ್ಟೇರಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ವಿಜಯ್ ದೇವರಕೊಂಡ ಅವರಿಗೆ ‘ಟ್ಯಾಕ್ಸಿವಾಲಾ’ ನಿರ್ದೇಶಿಸಿದ್ದ ರಾಹುಲ್ ಸಂಕೃತ್ಯಾನ್‌ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾನಿ ಅವರು ಬೆಂಗಾಲಿ ಮೂಲದ ಯುವಕನ ಪಾತ್ರದಲ್ಲಿರುತ್ತಾರೆ ಎನ್ನವುದು ವಿಶೇ‍ಷ. ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ಕನ್ನಡ ಮೂಲದ ‘ಉಪ್ಪೆನ’ ತೆಲುಗು ಸಿನಿಮಾ ಖ್ಯಾತಿಯ ನವನಟಿ ಕೃತಿ ಶೆಟ್ಟಿ ಚಿತ್ರದ ಇಬ್ಬರು ನಾಯಕಿಯರು. ಚಿತ್ರದ ಫಸ್ಟ್‌ ಲುಕ್‌ ಗಮನಿಸಿದರೆ, ಇದು ಸ್ವಾತಂತ್ರ್ಯ ಪೂರ್ವದ ಕಥಾನಕ ಎನ್ನುವುದು ತಿಳಿದುಬರುತ್ತದೆ.

ಚಿತ್ರದಲ್ಲಿ ನಾನಿ ಬೆಂಗಾಲಿ ಮೂಲದ ಯುವಕನಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ದೂರದ ಕೊಲ್ಕೊತ್ತಾದ ಕತೆಯನ್ನು ತೆಲುಗು ನಾಡಿಗೆ ಹೇಗೆ ಕನೆಕ್ಟ್ ಮಾಡುತ್ತಿದ್ದಾರೆ ಎನ್ನುವುದು ಅವರ ಗೊಂದಲ! ಫಸ್ಟ್‌ ಲುಕ್‌ನಲ್ಲಿ ಯುವತಿಯೊಬ್ಬಳು ನಾನಿಯನ್ನು ತಬ್ಬಿ ನಿಂತಿದ್ದು, ಆಕೆಯ ಮುಖ ಮರೆಮಾಚಲಾಗಿದೆ. ಒಟ್ಟಾರೆ ಫಸ್ಟ್‌ಲುಕ್‌ ಪೋಸ್ಟರ್ ಗಮನ ಸೆಳೆಯುವುದರ ಜೊತೆಗೆ ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ. ಈ ಮಧ್ಯೆ ನಾನಿ ಅವರ ‘ಟಕ್ ಜಗದೀಶ್‌’ ಸಿನಿಮಾ ಸಿದ್ಧವಾಗಿದ್ದು, ಏಪ್ರಿಲ್‌ 23ಕ್ಕೆ ತೆರೆಕಾಣುತ್ತಿದೆ.

Categories
ಸಿನಿ ಸುದ್ದಿ

ವೈರಲ್ ಆಯ್ತು ‘ಊರಿಗೊಬ್ಬ ರಾಜ’ ಸಾಂಗ್; ಪುನೀತ್ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ

ಪುನೀತ್ ರಾಜಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ‘ಊರಿಗೊಬ್ಬ ರಾಜ’ ಹಾಡು ಕ್ಲಿಕ್ಕಾಗಿದೆ. ನಿನ್ನೆ ಬಿಡುಗಡೆಯಾದ ಹಾಡಿನಲ್ಲಿನ ಪುನೀತ್‌ – ಸಾಯೇಶಾ ಡ್ಯಾನ್ಸ್ ಸ್ಟೆಪ್‌ಗಳು ಮಕ್ಕಳಿಗೂ ಇಷ್ಟವಾಗಿವೆ. ಈ ಹಿಂದಿನ ‘ನಟಸಾರ್ವಭೌಮ’ ಚಿತ್ರದಲ್ಲಿನ ಅಪ್ಪು ಡ್ಯಾನ್ಸ್‌ ಸ್ಟೆಪ್‌ಗಳನ್ನು ಮಕ್ಕಳು ಅನುಕರಿಸಿದ್ದರು. ಈಗ ‘ಯುವರತ್ನ’ ಹಾಡಿನ ಪುನೀತ್ ಡ್ಯಾನ್ಸ್ ಕೂಡ ಅದೇ ರೀತಿ ವೈರಲ್ ಆಗುವ ಸೂಚನೆಗಳಿವೆ. ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಗೀತೆ ರಚಿಸಿದ್ದು, ಜಾನಿ ಮಾಸ್ಟರ್‌ ನೃತ್ಯ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜನೆ ತಮನ್ ಅವರದು.

ಉತ್ತಮ ಗಾಯಕರೂ ಆದ ಪುನೀತ್‌ ‘ಊರಿಗೊಬ್ಬ ರಾಜ’ ಹಾಡಿದ್ದು, ಗಾಯಕಿ ರಮ್ಯಾ ಬೆಹರಾ ಅವರಿಗೆ ಜೊತೆಯಾಗಿದ್ದಾರೆ. ವಿಶೇ‍ವೆಂದರೆ ‘ಯುವರತ್ನ’ನ ಈ ಹೊಸ ಹಾಡು ತೆಲುಗಿನಲ್ಲೂ ತೆರೆಕಂಡಿದೆ. ತೆಲುಗಿನಲ್ಲಿ ದಿನಕರ್ ಮತ್ತು ರಮ್ಯಾ ಬೆಹರಾ ಹಾಡಿದ್ದಾರೆ. ನೃತ್ಯವನ್ನು ಬಹುವಾಗಿ ಇಷ್ಟಪಡುವ ತೆಲುಗು ಸಿನಿಪ್ರೇಮಿಗಳಿಗೂ ಪುನೀತ್‌ ರಾಜಕುಮಾರ್ ಅವರ ವಿಶಿಷ್ಟ ಡ್ಯಾನ್ಸ್ ಸ್ಟೆಪ್‌ಗಳು ಇಷ್ಟವಾಗಲಿವೆ. ಈ ಮೂಲಕ ತೆಲುಗು ಚಿತ್ರರಂಗದಲ್ಲೂ ‘ಯುವರತ್ನ’ನ ಹವಾ ಸೃಷ್ಟಿಸುವುದು ಚಿತ್ರತಂಡದ ಯೋಜನೆ. ‘ರಾಜಕುಮಾರ’ ಸೂಪರ್‌ಹಿಟ್ ಚಿತ್ರದ ನಂತರ ಪುನೀತ್‌ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ‘ಯುವರತ್ನ’ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ.

Categories
ಸಿನಿ ಸುದ್ದಿ

ಕ್ರಿಕೆಟ್‌ ಫೀಲ್ಡ್‌ ನಲ್ಲಿ ಮತ್ತೆ ತುಪ್ಪದ ಬೆಡಗಿ ಹೆಸರು – ಟಿ 10 ಗೆ ಬ್ರಾಂಡ್‌ ಅಂಬಾಸಡರ್‌ ಆದ ರಾಗಿಣಿ ದ್ವಿವೇದಿ

ನಟಿ ರಾಗಿಣಿ ಅವರ ಸೆಕೆಂಡ್‌ ಇನ್ನಿಂಗ್ಸ್‌ ಜೋರಾಗಿದೆ. ಡ್ರಗ್ಸ್‌ ಕೇಸ್‌ ಪ್ರಕರಣದಲ್ಲಿ ಅವರು ಜೈಲು ಪಾಲಾದ ನಂತರ ಅವರ ಕತೆ ಮುಗಿಯಿತು ಅಂತೆಲ್ಲ ಗುನುಗಿಕೊಂಡವರು ಶಾಕ್‌ ಆಗುವ ಹಾಗೆ ಕಲರ್‌ ಫುಲ್‌ ಜಗತ್ತಿನಲ್ಲಿ ಮತ್ತಷ್ಟು ಕಲರ್‌ ಫುಲ್‌ ಆಗಿಯೇ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡಿದ್ದಾರೆ. ಒಂದೆಡೆ ಸಿನಿಮಾ ಜರ್ನಿ ಶುರುವಾಗಿದೆ. ಸ್ವರ್ಣಲತಾ ಪ್ರೊಡಕ್ಷನ್‌ ನಲ್ಲಿ ವಿಶಾಲ್‌ ಶೇಖರ್‌ ನಿರ್ದೇಶನದ “ಕರ್ವ 3ʼ ನಲ್ಲಿ ರಾಗಿಣಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅದೀಗ ಅಧಿಕೃತವಾಗಿ ಅನೌನ್ಸ್‌ ಆಗಿದೆ.

ಹಾಗೆಯೇ ರಾಗಿಣಿ ಪೂರ್ಣ ಪ್ರಮಾಣದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಮತ್ತೆರೆಡು ಚಿತ್ರಗಳು ಇಷ್ಟರಲ್ಲಿಯೇ ಅನೌನ್ಸ್‌ ಆಗುವುದು ಕೂಡ ಗ್ಯಾರಂಟಿ ಆಗಿದೆ, ಈ ನಡುವೆಯೇ “ಕರ್ನಾಟಕ ಸ್ಟೇಟ್‌ ಫಿಜಿಕಲಿ ಚಾಲೆಂಜ್ಡ್‌ ಕ್ರಿಕೆಟ್‌ ಅಸೋಷಿಯೇಷನ್‌ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್‌ ಅಂಬಾಸಡರ್‌ ಆಗಿದ್ದಾರೆ.ಸಿನಿಮಾ ಅಚೆ ಸ್ಪೋರ್ಟ್‌ ನಲ್ಲೂ ರಾಗಿಣಿ ಅವರದ್ದು ಮುಂಚೂಣಿಯ ಹೆಸರು. ಈ ಹಿಂದೆ ಸಿಸಿಎಲ್‌ ಗೆ ಬ್ರಾಂಡ್‌ ಅಂಬಾಸಡರ್‌ ಆಗಿದ್ದರು.ಆನಂತರ ಬಳ್ಳಾಗಿ ಟಸ್ಕರ್‌ ಕುಸ್ತಿ ಟೀಮ್‌ ಗೆ ತಾವೇ ಮಾಲೀಕರು ಆಗಿದ್ದರು. 10 ಈಗ ಮತ್ತೆ ಕ್ರಿಡಾಂಗಣಕ್ಕೆ ರಾಗಿಣಿ ಎಂಟ್ರಿ ಆಗಿದ್ದಾರೆ.

“ಕರ್ನಾಟಕ ಸ್ಟೇಟ್‌ ಫಿಜಿಕಲಿ ಚಾಲೆಂಜ್ಡ್‌ ಕ್ರಿಕೆಟ್‌ ಅಸೋಷಿಯೇಷನ್‌ʼ ಆಯೋಜಿಸಿರುವ ʼಟಿ 10ʼ ಪಂದ್ಯಾವಳಿಗೆ ನಟಿ ರಾಗಿಣಿ ದ್ವಿವೇದಿ ಬ್ರಾಂಡ್‌ ಅಂಬಾಸಡರ್‌ ಆಗಿರುವುದು ಕುತೂಹಲಕಾರಿ ಆಗಿದೆ. ಟಿ  ಕ್ರಿಕೆಟ್‌ ಪಂದ್ಯಾವಳಿ ಮಾರ್ಚ್ 11 ರಿಂದ ಮಾರ್ಚ್‌ 18 ರವರೆಗೆ ನೋಯ್ಡಾದ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿದೆ. 28 ತಂಡಗಳು ಇದರಲ್ಲಿವೆ. ನಾಳೆ( ಫೆ.26) ಕ್ಕೆ ಟೀಮ್‌ ನ ಎಲ್ಲಾ ವಿವರ ಹೊರ ಬೀಳುತ್ತಿದೆ. ಹಾಗೆಯೇ ಪಂದ್ಯಾವಳಿ ಇನ್ನಷ್ಟು ವಿವರಗಳು ಗೊತ್ತಾಗಲಿವೆ. ಅದಕ್ಕಾಗಿಯೇ ಕೆಎಸ್‌ಪಿಸಿಸಿ ಪತ್ರಿಕಾಗೋಷ್ಟಿ ಕರೆದಿದೆ.

Categories
ಸಿನಿ ಸುದ್ದಿ

ʼಭೂಮಿಗೀತʼ ಖ್ಯಾತಿಯ ಕೇಸರಿ ಹರವೂ ಮತ್ತೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ… !

ಕನ್ನಡಕ್ಕೆ ʼಭೂಮಿ ಗೀತʼ ದಂತಹ ಸದಭಿರುಚಿಯ ಚಿತ್ರ ಕೊಟ್ಟ ಸೃಜನಾಶೀಲ ನಿರ್ದೇಶಕ ಕೇಸರಿ ಹರವೂ ಮತ್ತೆ ನಿರ್ದೇಶನದತ್ತ ಮನಸು ಮಾಡಿದ್ದಾರೆ. ಒಂದು ಸುದೀರ್ಘ ಗ್ಯಾಪ್‌ ಬಳಿಕ ಈಗವರು ದೇಶದ ರೈತರು ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳು ಹಾಗೂ ಕೃಷಿ ಕಾಯ್ದೆಗಳ ಪರಿಣಾಮಗಳನ್ನು ತೆರೆ ಮೇಲೆ ತರಲು ಹೊರಟಿದ್ದಾರೆ. ಅದಕ್ಕಂತಲೇ ಈಗವರು ಸುಮಾರು ಹತ್ತಿಪ್ಪತ್ತು ದಿನಗಳ ಕಾಲ ದೆಹಲಿಗೆ ತೆರಳಿ ಅಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಪಾಲ್ಗೊಂಡು ಬಂದಿದ್ದಾರೆ.

ಸದ್ಯಕ್ಕೀಗ ರೈತರ ಪ್ರತಿಭಟನೆಯ ಕೇಂದ್ರಗಳಾಗಿರುವ ತಿಕ್ರಿ, ಸಿಂಘು, ಗಾಜಿಪುರ ಗಳಲ್ಲಿನ ರೈತ ಪ್ರತಿಭಟನೆಗಳಲ್ಲಿ ನೇರವಾಗಿ ಪಾಲ್ಗೊಂಡು, ಅಲ್ಲಿನ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡು ಬಂದಿದ್ದಾರೆ. ದಿನ ದಿನಗಳಲ್ಲಿ ಪಂಜಾಬ್‌, ಹರಿಯಾಣ ಹಾಗೂ ಬಿಹಾರ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಹಾಗಂತ ಅವರೇನು ರೈತರ ಸಮಸ್ಯೆಗಳ ಕುರಿತು “ಭೂಮಿ ಗೀತʼ ದಂತಹ ಮತ್ತೊಂದು ಸಿನಿಮಾ ಮಾಡಲು ಹೊರಟ್ರಾ ? ಇಲ್ಲಿ ಹೀಗೊಂದು ಕುತೂಹಲ ಶುರುವಾಗುವುದು ಅಷ್ಟೇ ಸಹಜ.

ಆದರೆ, ಅದು ಖಂಡಿತಾ ಹಾಗಲ್ಲ. ಅವರು ಸಿನಿಮಾ ಮಾಡುತ್ತಿಲ್ಲ. ಸದ್ಯಕ್ಕೆ ಅವರು ಅಂತಹ ಆಲೋಚನೆಯಲ್ಲೂ ಇಲ್ಲ. ಹಾಗಾದ್ರೆ ಏನು ಇದು ? ” ಇದೊಂದು ಡಾಕ್ಯುಮೆಂಟರಿ. ಎರಡು ಗಂಟೆಯಲ್ಲಿ ತರಲು ಹೊರಟಿರುವ ಈ ಡಾಕ್ಯುಮೆಂಟರಿಯನ್ನು ಈ ಮೊದಲು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ತರೋಣ ಅಂದುಕೊಂಡಿದ್ದೆ. ಈಗ ಕನ್ನಡದಲ್ಲೂ ತರುವ ಆಲೋಚನೆ ಇದೆ. ಉಳಿದ ಯಾವುದೇ ಭಾಷೆಯಲ್ಲೂ ತಂದರೂ ಇದು ಅನುಕೂಲವೇ. ಯಾಕಂದ್ರೆ ನಾನಿಲ್ಲಿ ಹೇಳಹೊರಟಿದ್ದು ದೇಶದ ರೈತರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಕುರಿತು.

ದೇಶದ ರೈತರ ಮುಂದೆ ಈಗ ಅನೇಕ ಸಮಸ್ಯೆಗಳಿವೆ. ಬೆಳೆ ಬೆಳೆಯುವುದಕ್ಕೆ ಇವತ್ತು ದೊಡ್ಡ ಸವಾಲು ಇದೆ. ಇನ್ನು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೂಡ ಬೇಕು. ಅದು ಕೂಡ ಈಗ ಗೊಂದಲದಲ್ಲಿದೆ. ಭಾರತದ ಕೃಷಿ ವ್ಯವಸ್ಥೆ ಈಗ ಇಂತಹ ಅನೇಕ ಬಿಕ್ಕಟ್ಟುಗಳಲ್ಲಿದೆ. ಅವೆಲ್ಲವನ್ನು ತೆರೆ ಮೇಲೆ ತರುವ ಆಲೋಚನೆ ಇದೆʼ ಎನ್ನುತ್ತಾರೆ ನಿರ್ದೇಶಕ ಕೇಸರಿ ಹರವೂ.ಕನ್ನಡ ಚಿತ್ರರಂಗದ ಮಟ್ಟಿಗೆ ಕೇಸರಿ ಹರವೂ ಅಂದ್ರೆ ತಕ್ಷಣ ನೆನಪಾಗೋದು ʼಭೂಮಿ ಗೀತʼ ಚಿತ್ರ. ಅದು ಅವರ ಚೊಚ್ಚಲ ಚಿತ್ರ.

ʼಭೂಮಿಗೀತʼ ಎನ್ನುವ ಹೆಸರಿಗೆ ತಕ್ಕಂತೆ ಈ ಚಿತ್ರ ಈ ನಾಡಿನ ರೈತರ ಬದುಕನ್ನ ತೆರೆ ಮೇಲೆ ಅನಾವರಣಗೊಳಿಸಿತ್ತು. 1998  ರಲ್ಲಿ ಈ ಚಿತ್ರವು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಫಿಲ್ಮ್‌ ಫೇರ್‌ ಪ್ರಶಸ್ತಿಗೂ ಪಾತ್ರವಾಗಿ, ದೊಡ್ಡ ಸುದ್ದಿ ಆಗಿದ್ದು ಇತಿಹಾಸ. ಕೇಸರಿ ಹರವೂ ತಮ್ಮ ಚೊಚ್ಚಲ ಚಿತ್ರದಲ್ಲೇ ಒಬ್ಬ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದ್ದು ಹಳೇ ಸುದ್ದಿ. ಮುಂದೆ ಅದೇನಾಯಿತೋ ಗೊತ್ತಿಲ್ಲ. ನಿರ್ದೇಶಕ ಕೇಸರಿ ಹರವೂ ನಿರ್ದೇಶನದಿಂದಲೇ ದೂರ ಉಳಿದಿದ್ದರು. ಸಿನಿಮಾ ಬದಲಿಗೆ ರೈತ ಹೋರಾಟ, ಪರಿಸರ ಹೋರಾಟ ಅಂತ ತಮ್ಮನ್ನು ತಾವು ತೊಡಗಿಸಿಕೊಂಡರು.ಇಷ್ಟಾಗಿಯೂ ಸಿನಿಮಾ ನಿರ್ದೇಶನಕ್ಕೆ ಮನಸು ಮಾಡಿದರು. 2016ರಲ್ಲಿ ಪರಿಸರ ಜಾಗೃತಿ ಮೇಲೆಯೇ ʼಒಳ್ಳೆಯವನುʼ ಎನ್ನುವ ಸಿನಿಮಾವೊಂದನ್ನು ನಿರ್ದೇಶಿಸಿದ್ದರು. ಅಲ್ಲಿಂದೀಗ ರೈತರ ಸಮಸ್ಯೆ ಕುರಿತು ಡಾಕ್ಯುಮೆಂಟರಿ ಮಾಡುತ್ತಿರುವುದು ವಿಶೇಷ.

ಕನ್ನಡದ ಬಹುತೇಕ ನಿರ್ದೇಶಕರೀಗ ವ್ಯಾಪಾರ ವಹಿವಾಟಿನ ಕಡೆಗೆ ಗಮನ ಕೊಟ್ಟಿದ್ದಾರೆ. ರಿಮೇಕೋ, ಸ್ವಮೇಕೋ ಹಣ ಮಾಡುವುದಕ್ಕೆ ಸರಕು ಬೇಕು ಎನ್ನುವುದೇ ಅವರ ಸೂತ್ರ. ಆದರೆ, ಕೇಸರಿ ಹರವೂ ಅವರ ಚಿಂತನೆಯೇ ಬೇರೆ. ರೈತ ಹೋರಾಟ, ಪರಿಸರ ಹೋರಾಟದ ಪ್ರಭಾವದಲ್ಲಿರುವ ಅವರಿಗೆ ಸಿನಿಮಾ ಅನ್ನೋದು ಹಣಕ್ಕಿಂತ ಜನರ ಜಾಗೃತಿಯ ಪ್ರಬಲ ಮಾಧ್ಯಮ ಅನ್ನೋದು ಅವರ ನಂಬಿಕೆ. ಈಗವರು ಕೃಷಿ ಸಮಸ್ಯೆ, ರೈತ ಹೋರಾಟ ಕುರಿತು ಡಾಕ್ಯುಮೆಂಟರಿ ಮಾಡುತ್ತಿರುವುದು ಕೂಡ ಅದೇ ಹಿನ್ನೆಲೆಯಲ್ಲಿ ಅನ್ನೋದು ಅಷ್ಟೇ ಸತ್ಯ. ಅಂದ ಹಾಗೆ, ಈ ಡಾಕ್ಯುಮೆಂಟರಿಯನ್ನು ನಿರ್ದೇಶಕ ಕೇಸರಿ ಹರವೂ ಕ್ರೌಂಡ್‌ ಫಂಡಿಂಗ್‌ ಮೂಲಕ ನಿರ್ಮಾಣ ಮಾಡುತ್ತಿದ್ದು,  ಇದರಲ್ಲಿ ಪಾಲ್ಗೊಳ್ಳಲು ಇಚ್ಚಿಸುವರು [email protected] ಮೂಲಕ ಸಂಪರ್ಕಿಸಬಹುದು. ಇಲ್ಲವೇ UPI id, kesari.haravoo@oksbi ಗೆ ನೇರವಾಗಿ ಕಾಂಟ್ರಿಬ್ಯೂಟ್‌ ಮಾಡಬಹುದು.

error: Content is protected !!