Categories
ಸಿನಿ ಸುದ್ದಿ

ದರ್ಶನ್‌ ಅವರ “ರಾಬರ್ಟ್‌ʼ ಚಿತ್ರಕ್ಕೂ, ಪ್ರಧಾನಿಗೂ ಎಲ್ಲಿಂದೆಲ್ಲಿಯ ನಂಟು ? ಜಗದೀಶ್‌ ಶೆಟ್ಟರ್‌ ಆ ಕತೆ ಹೇಳ್ತಾರೆ ಕೇಳಿ….

ಸಿನಿಮಾಗಳ ಪ್ರೀ ರಿಲೀಸ್‌ ಈವೆಂಟ್‌ಗಳಿಗೂ ಈಗ ರಾಜಕೀಯ ಮೆರಗು ಸಿಗುತ್ತಿದೆ. ದಾವಣಗೆರೆಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ” ಪೊಗರುʼ ಚಿತ್ರದ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಭಾರೀ ಜನಸಾಗರವೇ ಸೇರಿದ್ದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚಿತ್ರದ ನಾಯಕ ಧ್ರುವ ಸರ್ಜಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಆ ಸರದಿ ʼರಾಬರ್ಟ್‌ʼ ಚಿತ್ರದ್ದು.

ಭಾನುವಾರ ( ಫೆ. 28) ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ “ರಾಬರ್ಟ್‌ʼ ಚಿತ್ರದ ಪ್ರೀ ರಿಲೀಸ್ಈ‌ವೆಂಟ್‌ ಕಾರ್ಯಕ್ರಮ ನಡೆಯಿತು.ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ್‌ ಶೆಟ್ಟರ್‌ ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದರು.ಭಾರೀ ಜನಸಾಗರವೇ ನೆರೆದಿದ್ದ ವರ್ಣರಂಜಿತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಗದೀಶ್‌ ಶೆಟ್ಟರ್‌, ತಾವು ದರ್ಶನ್‌ ಅಭಿಮಾನಿ ಅಂತ ದರ್ಶನ್‌ ಅವರನ್ನು ಗುಣಗಾನ ಮಾಡಿದರು. ” ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಸಿಗುವುದಾದರೆ ಅದು ಉತ್ತರ ಕರ್ನಾಟಕದಿಂದಲೇ ಸಾಧ್ಯ. ಹುಬ್ಬಳ್ಳಿ ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನೆಲ. ಇಲ್ಲಿಗೆ ನಿಮ್ಮೆಲ್ಲರ ನೆಚ್ಚಿನ ನಟ ದರ್ಶನ್‌ ಬಂದಿದ್ದಾರೆ. ಅವರಿಗೆ ನಿಮ್ಮಲ್ಲೆರ ಬೆಂಬಲ ಬೇಕುʼ ಎಂದರು.

ಕಳೆದ ಒಂದು ವರ್ಷದಿಂದ ಕೊರೋನಾದಿಂದ ಇಡೀ ದೇಶ ಸಾಕಷ್ಟು ಅನಾನುಕೂಲ ಅನುಭವಿಸಿತು. ಹಾಗೆಯೇ ಚಿತ್ರೋದ್ಯಮ ಕೂಡ ಸಾಕಷ್ಟು ತೊಂದರೆ ಅನುಭವಿಸಿತು. ಈಗ ಚೇತರಿಕೆ ಕಾಣುತ್ತಿರುವುದು ಸಂತೋಷದ ಸಂಗತಿ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಭಾರತಕ್ಕೆ ಮಾತ್ರವಲ್ಲ ಬೇರೆ ಬೇರೆ ದೇಶಗಳಿಗೂ ಕೊರೋನಾ ಲಸಿಕೆ ಕೊಡುವ ನಿಟ್ಟಿನಲ್ಲಿ ಪ್ರಧಾನಿ ದಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಹಾಗಾಗಿಯೇ ನಾವೆಲ್ಲ ಇಂದು ಇಲ್ಲಿ ಸೇರುವುದಕ್ಕೆ ಸಾಧ್ಯವಾಗಿದೆ. ಪ್ರಧಾನಿ ಅವರ ಪ್ರಯತ್ನ ಫಲವೇ ʼರಾಬರ್ಟ್‌ʼ ಚಿತ್ರಕ್ಕೂ ವರವಾಗಿದೆ. ಚಿತ್ರಕ್ಕೆ ಯಶಸ್ಸು ಸಿಗಲಿ ಅಂತ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು.

Categories
ಸಿನಿ ಸುದ್ದಿ

ಹೀರೋ ಚಿತ್ರದ ಚಿತ್ರೀಕರಣದ ವೇಳೆ ಪೆಟ್ರೋಲ್‌ ಬಾಂಬ್‌ ಸ್ಪೋಟಗೊಂಡಿದ್ದು ನಿಜವಾ ? ಇದು ನಡೆದಿದ್ದಾರೂ ಯಾವಾಗ ?

ಹೌದು, ಇಂತಹದೊಂದು ಪ್ರಶ್ನೆ ಇಲ್ಲಿ ಮೂಡುವುದಕ್ಕೂ ಕಾರಣವಿದೆ. ಈಗಾಗಲೇ ಮಾಹಿತಿ ಇರುವ ಹಾಗೆ ರಿಷಬ್‌ ಶೆಟ್ಟಿ ಅಭಿನಯದ ʼಹೀರೋʼ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಮಾರ್ಚ್‌ 5 ರಂದೇ “ಹೀರೋʼ ಚಿತ್ರ ತೆರೆಗೆ ಬರುತ್ತಿದೆ ಅಂತ ಚಿತ್ರ ತಂಡವೇ ಅನೌನ್ಸ್‌ ಮಾಡಿದೆ. ಅದಕ್ಕೆ ಪೂರಕವಾಗಿಯೇ ಚಿತ್ರತಂಡ ಕೂಡ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ. ಸದ್ಯಕ್ಕೆ ಅದರದ್ದೇ ಕೆಲಸದಲ್ಲಿ ಚಿತ್ರ ತಂಡ ಬ್ಯುಸಿ ಆಗಿದೆ. ಈ ನಡುವೆಯೇ “ಹೀರೋʼ ಚಿತ್ರದ ಆಕ್ಷನ್‌ ಸನ್ನಿವೇಶಗಳ ಚಿತ್ರೀಕರಣಕ್ಕೆ ಹಾಸನದ ಬೇಲೂರಿಗೆ ಹೋಗಿದ್ದಾಗ ಪೆಟ್ರೋಲ್‌ ಬಾಂಬ್‌ ಸ್ಪೋಟಗೊಂಡಿದ್ದು, ನಾಯಕ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನುವ ಸುದ್ದಿ ಸೋಮವಾರ ರಿವೀಲ್‌ ಆಗಿದೆ.

ರಾಜ್ಯದ ಪ್ರತಿಷ್ಟಿತ ಟಿವಿ ವಾಹಿನಿಗಳು ಹಾಗೂ ವೆಬ್‌ ಪೋರ್ಟಲ್‌ನಲ್ಲೂ ಪ್ರಕಟವಾಗಿದೆ. ಹಾಸನ ಸಮೀಪದ ಬೇಲೂರು ಸಮೀಪದ ಕಾಫಿ ಎಸ್ಟೇಟ್‌ ವೊಂದರಲ್ಲಿ ” ಹೀರೋʼ ಚಿತ್ರದ ಆಕ್ಷನ್‌ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಈ ಅವಘಡ ನಡೆದಿದ್ದು, ಅದೃಷ್ಟವಶಾತ್‌ ಚಿತ್ರದ ನಾಯಕ ನಟ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಚಿತ್ರ ತಂಡದ ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಪ್ರಶ್ನೆ ಇರೋದು” ಹೀರೋʼ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಯಾವಾಗ? ನಿಜಕ್ಕೂ ಇದು ನಿನ್ನೆ ಮೊನ್ನೆ ನಡೆದ ಘಟನೆಯಾ ? ಸೆನ್ಸಾರ್‌ ಮುಗಿಸಿ ರಿಲೀಸ್‌ ಗೆ ರೆಡಿಯಾಗಿರುವ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ?

ಒಂದು ಚಿತ್ರ ಸೆನ್ಸಾರ್‌ ಮುಗಿಸಿ, ರಿಲೀಸ್‌ ಗೆ ರೆಡಿಯಾಗಿರುವ ಹೊತ್ತಿನಲ್ಲಿ ಆ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಮತ್ತೆ ಚಿತ್ರೀಕರಣ ಮಾಡಬೇಕಾದರೆ, ಮತ್ತೆ ಸೆನ್ಸಾರ್‌ಗೆ ಹೋಗಬೇಕು. ಅದರಲ್ಲೂ ಹೀರೋ ಚಿತ್ರ ಇನ್ನೇನು ರಿಲೀಸ್‌ ಆಗಲು ಮೂರೇ ದಿನ ಬಾಕಿಯಿದೆ. ಈ ಸಮಯದಲ್ಲಿ ಹೀರೋ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿ, ಚಿತ್ರದ ನಾಯಕ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನು ಸುದ್ದಿ ಹೊಸತಂತೂ ಅಲ್ಲ. ಅದು ಹಳೇಯದೇ ಆಗಿರುತ್ತದೆ. ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಚಿತ್ರತಂಡ ಈಗ ಪ್ರಚಾರ ಗಿಮಿಕ್‌ ಗೆ ಈಗ ಬಳಸಿಕೊಂಡಿರುವುದಕ್ಕೂ ಸಾಧ್ಯತೆಯಿದೆ.

Categories
ಸಿನಿ ಸುದ್ದಿ

ಅನಘ ಎಂಬ ಭಯಪಡಿಸೋ ಸಿನಿಮಾ ಸಸ್ಪೆನ್ಸ್‌-ಕಾಮಿಡಿ ಕಥಾಹಂದರ ಮೂಲಕ ಹೊಸಬರ ಆಗಮನ

ಕನ್ನಡದಲ್ಲಿ ಸಾಕಷ್ಟು ಹಾರರ್‌ ಸಿನಿಮಾಗಳು ಬಂದಿವೆ. ಆ ಸಾಲಿಗೆ ಹೊಸಬರ “ಅನಘ” ಚಿತ್ರವೂ ಸೇರಿದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ. ಈ ಚಿತ್ರವನ್ನು ರಾಜು ನಿರ್ದೇಶನ ಮಾಡಿದ್ದಾರೆ. ಡಿ.ಪಿ.ಮಂಜುಳ ನಿರ್ಮಾಣ ಮಾಡಿದ್ದಾರೆ. ಇಲ್ಲಿ ನಾಯಕ, ನಾಯಕಿ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಇದೊಂದು ಸಸ್ಪೆನ್ಸ್, ಹಾರರ್, ಕಾಮಿಡಿ ಅಂಶಗಳನ್ನು ಹೊಂದಿದೆ.

ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗುತ್ತಿರುವ ಸಿನಿಮಾ, ಈಗಾಗಲೇ ಬಿಡುಗಡೆ ಕೆಲಸದತ್ತ ಚಿತ್ರತಂಡ ಚಿತ್ತ ಹರಿಸಿದೆ. ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ನಳೀನ್ ಕುಮಾರ್ ಮತ್ತು ಪವನ್ ಪುತ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್ ಗೌಡ್ರು, ಕಿರಣ ತೇಜ, ಕಿರಣ್ ರಾಜ್, ಕರಣ್ ಆರ್ಯನ್, ದೀಪ, ಖುಷಿ, ರಶ್ಮಿ ನಟಿಸಿದ್ದಾರೆ.

ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯ ಪಾತ್ರದಲ್ಲಿ ಮೋಟು ರವಿ, ಅಭಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜು ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಬೆಂಗಳೂರು ಮತ್ತು ದೇವರಾಯನ ದುಗ೯ ಸುತ್ತ ಮುತ್ತ ಚಿತ್ರಿಕರಿಸಲಾಗಿದೆ. ಈ ಚಿತ್ರಕ್ಕೆ ಶಂಕರ್ ಅವರು ಕ್ಯಾಮೆರಾ ಹಿಡಿದರೆ, ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಸಂಕಲನ ಮಾಡಿದ್ದಾರೆ. ಕೌರವ ವೆಂಕಟೇಶ್ ಸಾಹಸವಿದೆ. ಬಿಡುಗಡೆಗೆ ಜೋರು ಕೆಲಸ ನಡೆಯುತಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ನಾನು ಸದಾ ಚಿರಋಣಿ- ಹುಬ್ಬಳ್ಳಿ ಜನತೆಗೆ ಧನ್ಯವಾದ ಹೇಳಿದ ದಾಸ

ನಟ ದರ್ಶನ್‌ ಹುಬ್ಬಳ್ಳಿ ಜತೆಗೆ ಧನ್ಯವಾದ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಬಂದು ದೊಡ್ಡ ಮಟ್ಟದ ಬೆಂಬಲ ನೀಡಿದ್ದಕ್ಕೆ ನಾನು ಸದಾ ಚಿರಋಣಿ ಅಂದಿದ್ದಾರೆ.

ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ನಗರಿ ಭಾನುವಾರ (ಫೆ. 28) ದೊಡ್ಡ ಸಿನಿಮಾ ಸಂಭ್ರಮಕ್ಕೆ ಸಾಕ್ಷಿ ಆಯಿತು. ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ರಾಬರ್ಟ್‌ʼ ಫ್ರೀ ರಿಲೀಸ್‌ ಪ್ರಚಾರ ಕಾರ್ಯಕ್ರಮದ ಭಾಗವಾಗಿಯೇ ನಡೆದ ಟ್ರೇಲರ್‌ ಹಾಗೂ ಆಡಿಯೋ ಲಾಂಚ್‌ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿಯೇ ಸಕ್ಸಸ್‌ ಕಂಡಿತು. ಚಿತ್ರ ತಂಡದ ನಿರೀಕ್ಷೆಗೂ ಮೀರಿ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ, ರಾಬರ್ಟ್‌ ಬಿಡುಗಡೆಯ ಕ್ಷಣವನ್ನೇ ಎದುರು ನೋಡುತ್ತಿರುವುದಕ್ಕೆ ಸಾಕ್ಷಿ ಆಯಿತು. ಕನ್ನಡ ಚಿತ್ರರಂಗದ ಮಟ್ಟಿಗೆ ಈಗ ಅತೀ ಹೆಚ್ಚು ಅಭಿಮಾನಿ ಗಳನ್ನು ಹೊಂದಿರುವ ಖ್ಯಾತಿ ದರ್ಶನ್‌ ಅವರಿಗಿದ್ದು, ಅದು ಕೂಡ ನಿನ್ನೆ ಮತ್ತೊಮ್ಮೆ ಸಾಬೀತು ಆಯಿತು.

ವರ್ಣರಂಜಿತ ಕಾರ್ಯಕ್ರಮದ ವೇದಿಕೆ ದರ್ಶನ್‌ ಬಂದಾಗ, ಅವರು ಚಿತ್ರದ ಕುರಿತು ಮಾತನಾಡಲು ಶುರು ಮಾಡಿದಾಗ ಅಭಿಮಾನಿಗಳ ಸಿಳ್ಳೆ, ಕೇಕೆ ಮುಗಿಲು ಮುಟ್ಟಿದ್ದು ವಿಶೇಷ. ಹೈದ್ರಾಬಾದ್‌ ಈವೆಂಟ್‌ ನಲ್ಲಿ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಅಂತ ಬಣ್ಣಿಸಿದ್ದ ನಟ ದರ್ಶನ್‌, ಹುಬ್ಬಳ್ಳಿಯ ವೇದಿಕೆ ಮೇಲೂ ಅದನ್ನೇ ಪುನರಾವರ್ತನೆ ಮಾಡಿದರಲ್ಲದೆ, ಮಾತಿನ ಮಧ್ಯೆ ಸಿಳ್ಳೆ-ಕೇಕೆ ಹಾಕುತ್ತಿದ್ದ ಫ್ಯಾನ್ಸ್‌ ಗೆ ” ಇರು ಚಿನ್ನ, ಇರು ಮಾನೆ… ಸ್ವಲ್ಪ ಸುಮ್ನಿರಿ ಮಾನೆ ಅಂತೆಲ್ಲ ತಾಳ್ಮೆ ಯಿಂದಲೇ ಹೇಳುತ್ತಿದ್ದರಾದರೂ, ಕೂಗಾಟ ಜಾಸ್ತಿ ಆದಾಗ, ಎಯ್‌ … ಇರಪ್ಪಾ ಸುಮ್ನೆ… ಅಂತ ಗಟ್ಟಿಯಾಗಿಯೇ ಸಿಟ್ಟಾದರು. ತಕ್ಷಣವೇ ಫ್ಯಾನ್ಸ್‌ ಸುಮ್ಮನಾದಾಗ ನೀವೆಲ್ಲ ಇರುವರೆಗೂ ನನ್ನ ೫೩ ಸಿನಿಮಾಗಳಲ್ಲಿನ ಖರಾಬು ಡ್ಯಾನ್ಸ್‌ ನೋಡಿಯೂ ನನ್ನನ್ನು ಸಹಿಸಿಕೊಂಡವರು… ನಿಮ್ಮದೇ ಋಣ ನನ್ನ ಮೇಲಿದೆ. ತೀರಿಸುವೆ ಅಂತ ಭಾವುಕರಾಗಿ ಅಭಿಮಾನಗಳ ಮನ ಗೆದ್ದರು.

ಉತ್ತರ ಕರ್ನಾಟಕದ ಜತೆಗಿನ ನಂಟನ್ನು ಎರಡು ಕಾರಣಗಳ ಮೂಲಕ ನೆನಪಿಸಿಕೊಂಡ ದರ್ಶನ್‌, ” ಕ್ರಾಂತಿವೀರ ಸಂಗೊಳ್ಳಿ ರಾಯಣ್ಣʼ ಚಿತ್ರದ ಪ್ರಚಾರಕ್ಕೆ ಅಂತ ನಾವ್‌ ಹೊರಟಾಗ ಇಲ್ಲಿ ಸಿಕ್ಕ ಪ್ರತಿಕ್ರಿಯೆ ಅದ್ಬುತವಾಗಿತ್ತು. ನಾವು ರಸ್ತೆಗಳಲ್ಲಿ ಹೊರಟಾಗ ಇಲ್ಲಿನ ಮಹಿಳೆಯರು, ಮಕ್ಕಳು ಚಪ್ಪಲಿ ತೆಗೆದು ನಿಂತು ನಮಗೆ ಸ್ವಾಗತ ಕೋರಿದ್ದರು. ಅದೇ ಕಾರಣಕ್ಕೆ ನಾನಿವತ್ತು ಚಪ್ಪಲಿ ತೆಗೆದು ಈ ವೇದಿಕೆ ಏರಿದ್ದೇನೆ. ಹಾಗೆಯೇ ನನ್ನಪ್ಪ ಒಂದು ಕಾಲದಲ್ಲಿ ಸಿನಿಮಾದಲ್ಲಿ ಅವಕಾಶ ಇಲ್ಲದೆ ಇದ್ದಾಗ ದಿವ್ಯ ದರ್ಶನ ಕಲಾವೃಂದ ಅಂತ ಒಂದು ನಾಟಕ ಕಂಪನಿ ಮೂಲಕ ಉತ್ತರ ಕರ್ನಾಟಕ ಪ್ರವಾಸ ಹೊರಟರು. ಆಗ ಇಲ್ಲಿನ ಜನ ಅವರಿಗೆ ಅದ್ಭುತ ಬೆಂಬಲ ಕೊಟ್ಟರು. ಆಗ ದುಡಿದ ಹಣದಿಂದಲೇ ನನ್ನಪ್ಪ ಮನೆ ಕಟ್ಟಿಸಿದ್ದರು. ಆ ಮನೆ ಇವತ್ತಿಗೂ ನಾವಿರುವ ಮನೆ. ಇದು ಉತ್ತರ ಕರ್ನಾಟಕದ ಜನತೆಗೂ ನನಗೂ ಇರುವ ನಂಟು ಎನ್ನುವ ಹುಬ್ಬಳ್ಳಿ ಜನ ಜೋರಾಗಿ ಕೂಗಿ ಸ್ವಾಗತಿಸಿದರು. ʼರಾಬರ್ಟ್‌ʼ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಸಿಕ್ಕ ಇಂತಹದೊಂದು ದೊಡ್ಡ ಬೆಂಬಲಕ್ಕೆ ಸೋಮವಾರ ಧನ್ಯವಾದ ಹೇಳಿರುವ ನಟ ದರ್ಶನ್‌, ನಿಮ್ಮಗಳ ಪ್ರೀತಿ-ಅಭಿಮಾನಕ್ಕೆ ನಾನು ಸದಾ ಚಿರಋಣಿ ಅಂತ ಟ್ವೀಟ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಕಣ್ಣಿಗೆ ಸಂದ ಅತ್ಯುತ್ತಮ ಪ್ರಶಸ್ತಿ ವರ್ಣಪಟಲ ಚಿತ್ರದ ಛಾಯಾಗ್ರಹಣಕ್ಕೆ ಗಣೇಶ್‌ ಹೆಗ್ಡೆಗೆ ಸಿಕ್ತು ವರ್ಲ್ಡ್‌ ಪ್ರೀಮಿಯರ್‌ ಫಿಲ್ಮ್‌ ಅವಾರ್ಡ್ಸ್

‌ಸಾಮಾನ್ಯವಾಗಿ ತೆರೆಮೇಲೆ ಇರುವ ಸ್ಟಾರ್‌ಗಳಷ್ಟೇ ಜನರಿಗೆ ಹತ್ತಿರವಾಗುತ್ತಾರೆ. ಅವರೆಲ್ಲರೂ ಜೋರು ಸುದ್ದಿ ಕೂಡ ಆಗುತ್ತಾರೆ. ಆದರೆ, ಅವರ ಸ್ಟಾರ್‌ಗಿರಿಗೆ ತೆರೆ ಹಿಂದೆ ಕೆಲಸ ಮಾಡಿದವರ ಶ್ರಮವೂ ಇರುತ್ತೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇರಲಿ, ಇಲ್ಲೀಗ ಒಂದು ಖುಷಿಯ ವಿಷಯ ಹೇಳಲೇಬೇಕು. ಸಿನಿಮಾದ ಕಣ್ಣು ಅಂದರೆ ಅದು ಛಾಯಾಗ್ರಾಹಕ. ಸುಂದರವಾಗಿ ಸೆರೆ ಹಿಡಿದು, ಕಣ್‌ ತಂಪು ಮಾಡುವ ಕಲೆ ಛಾಯಾಗ್ರಾಹಕರಿಗೆ ಇದ್ದೇ ಇರುತ್ತೆ. ಈಗ ಅಂತಹ ಛಾಯಾಗ್ರಾಹಕರೊಬ್ಬರಿಗೆ ೨೦೨೦ನೇ ಸಾಲಿನ ವರ್ಲ್ಡ್‌ ಪ್ರೀಮಿಯರ್‌ ಫಿಲ್ಮ್‌ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಹೌದು, ಛಾಯಾಗ್ರಾಹಕ ಗಣೇಶ್ ಹೆಗ್ಡೆ‌ ಅವರಿಗೆ ಈ ಪ್ರಶಸ್ತಿ ಸಂದಿದೆ. ಅಂದಹಾಗೆ, ಅವರಿಗೆ ಈ ಪ್ರಶಸ್ತಿ ಬಂದಿರೋದು, “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ. ಈ ಸಿನಿಮಾಗೆ ಚೇತನ್‌ ಮುಂಡಾಡಿ ನಿರ್ದೇಶಕರು. ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳೂ ಸಂದಿವೆ.


ಛಾಯಾಗ್ರಾಹಕ ಗಣೇಶ್‌ ಹೆಗ್ಡೆ ಅವರ ಕುರಿತು ಹೇಳುವುದಾದರೆ, ತಮ್ಮ ಕೆಲಸವನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿ. ಅವರು ಛಾಯಾಗ್ರಾಹಕರಾಗಿ ಮೊದಲ ಸಲ ಕೆಲಸ ಮಾಡಿದ “ಮದಿಪು” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಚೇತನ್ ಮುಂಡಾಡಿ ನಿರ್ದೇಶನ ಮಾಡಿದ್ದರು.“ಮದಿಪು” ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಗಣೇಶ್ ಹೆಗ್ಡೆ ಅವರ ಪಾತ್ರ ಕೂಡ ಪ್ರಮುಖವಾಗಿತ್ತು. ಪುನಃ ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.

ಚೇತನ್ ಮುಂಡಾಡಿ ನಿರ್ದೇಶನದಲ್ಲೇ ಸಜ್ಜಾದ ‘ಆಟಿಸಂ’ ಕಥಾ ಹಂದರವುಳ್ಳ “ವರ್ಣಪಟಲ” ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಅವರ ಕೆಲಸ ದೇಶ-ವಿದೇಶಗಳ ಚಿತ್ರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಬುಡಕಟ್ಟು ಜನರ ನೈಜ ಕಥೆಯುಳ್ಳ “ಕನ್ನೇರಿ” ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ

ಕರ್ನಾಟಕದ ಬುಡಕಟ್ಟು ಜನರ ಜೀವನ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಅವರು, ಚಿತ್ರ ವಿಮರ್ಶಕರ ಅತ್ಯುತ್ತಮ ಪ್ರಶಂಸೆಗೂ ಪಾತ್ರರಾಗಿದ್ದರು. ಇತ್ತೀಚೆಗೆ ಚಿತ್ರೀಕರಣಗೊಂಡಿರುವ “ಎಸ್ಐಟಿ”, “ಪ್ರೀತಿ ಕಿತಾಬು”, “ಮಾರೀಚ” ಚಿತ್ರಗಳಿಗೂ ಇವರ ಕ್ಯಾಮೆರಾ ಕೈ ಚಳಕವಿದೆ. ಇದರೊಂದಿಗೆ ಕನ್ನಡದ ಹಲವು ಜನಪ್ರಿಯ ಧಾರಾವಾಹಿಗಳಾದ “ಕುಂಕುಮ ಭಾಗ್ಯ”, “ಕಾದಂಬರಿ”, “ರಾಧಾ ಕಲ್ಯಾಣ”, “ಅರಮನೆ”, “ಹೆಳವನಕಟ್ಟೆ ಗಿರಿಯಮ್ಮ”, “ಕೆಳದಿ ಚನ್ನಮ್ಮ” ಧಾರಾವಾಹಿಗಳಿಗೂ ಇವರ ಛಾಯಾಗ್ರಹಣವಿದೆ.


ಇನ್ನು, ಕುಂಚ ಹಿಡಿದು ಪ್ರಕೃತಿ ಮಡಿಲಲ್ಲಿ ಚಿತ್ರಿಸುತ್ತಿದ್ದ, ಬಣ್ಣದ ಜೊತೆ ಸದಾ ಆಟವಾಡುತ್ತಿದ್ದ ಗಣೇಶ್‌ ಹೆಗ್ಡೆ ಮೂಲತಃ ಶಿರಸಿಯವರು. “ನಮ್ಮೂರ ಮಂದಾರ ಹೂವೆ” ಚಿತ್ರದ ಚಿತ್ರೀಕರಣ ನಡೆದದ್ದು ಶಿರಸಿ ಸುತ್ತಮುತ್ತ. ಅಷ್ಟೇ ಅಲ್ಲ, ಆ ಚಿತ್ರದಲ್ಲಿರುವ ಮನೆ ಗಣೇಶ್ ಹೆಗ್ಡೆ ಅವರದು. ಆ ಮನೆಯಲ್ಲೇ ಗಣೇಶ್‌ ಹೆಗ್ಡೆ ಹುಟ್ಟಿ ಬೆಳೆದದ್ದು. ಚಿತ್ರೀಕರಣದ ವೇಳೆ ಕ್ಯಾಮರಾ ಬಗ್ಗೆ ಕುತುಹಲ ಬೆಳೆಸಿಕೊಂಡು ಚಿತ್ರರಂಗದ ಕಡೆ ಹೊರಟ ಗಣೇಶ್ ಹೆಗ್ಡೆ, ಅನೇಕ ಸಾಕ್ಷ್ಯಚಿತ್ರಗಳು, ಜಾಹಿರಾತುಗಳು, ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.

ಚಿತ್ರಕಲೆಯಲ್ಲಿ ಪದವಿ ಪಡೆದ ಗಣೇಶ್‌ ಹೆಗ್ಡೆ, ನಂತರದ ದಿನಗಳಲ್ಲಿ ಛಾಯಾಗ್ರಹಣವನ್ನು ಆಯ್ಕೆ ಮಾಡಿಕೊಂಡು, ಮೊದಲ ಸಲ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರಕ್ಕೆ ಪೋಸ್ಟರ್ ವಿನ್ಯಾಸ ಮಾಡುವ ಮೂಲಕ, ನಂತರ ಮೆಲ್ಲನೆ, ಛಾಯಾಗ್ರಾಹಕರಾದ ವೇಣು, ಎಂ.ಕುಮಾರ್, ಕೃಷ್ಣಕುಮಾರ್ ಸೇರಿದಂತೆ ಹಲವರ ಗರಡಿಯಲ್ಲಿ ಗಣೇಶ್ ಹೆಗ್ಡೆ ಪಳಗಿದ್ದಾರೆ. ಸದ್ಯ ಚೇತನ್‌ ಮುಂಡಾಡಿ ಅವರ ನಿರ್ದೇಶನದ “ವರ್ಣಪಟಲ” ಚಿತ್ರದ ಛಾಯಾಗ್ರಹಣಕ್ಕೆ ಗಣೇಶ್‌ ಹೆಗ್ಡೆ ಅವರಿಗೆ 2020ನೇ ಸಾಲಿನ ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದ್ಯ ಅವರು ಕೆಲಸ ಮಾಡಿರುವ ಸುಧೀರ್ ಶಾನುಭೋಗ ನಿರ್ದೇಶನದ “ಮಾರೀಚ” ಹಾಗೂ “ಎಸ್ಐಟಿ” ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.

Categories
ಸಿನಿ ಸುದ್ದಿ

ಕಡ್ಡಿ ಅಲ್ಲಾಡಿಸುವ ” ಚಡ್ಡಿ‌ದೋಸ್ತ್ ʼಗಳ ಜತೆಗೆ ಸೊಂಟ ಅಲ್ಲಾಡಿಸಿದ ಹಾಟ್‌ ಬೆಡಗಿ ಹರ್ಷಿತಾ !

ನಿರ್ದೇಶಕ ಆಸ್ಕರ್‌ ಕೃಷ್ಣ ಇದೇ ಮೊದಲು ನಾಯಕರಾಗಿ ಅಭಿನಯಿಸಿರುವ ” ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟʼ ಚಿತ್ರ ರಿಲೀಸ್‌ ಗೆ ರೆಡಿ ಆಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲು ಸಿದ್ಧತೆ ನಡೆಸಿರುವ ಚಿತ್ರ ತಂಡ ಈಗ ಚಿತ್ರದ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್‌ ಮಾಡ್ಬೇಕು… ಎನ್ನುವ ಸ್ಪೆಷಲ್‌ ಸಾಂಗ್‌ ನಲ್ಲಿ ಕನ್ನಡದ ಪ್ರತಿಭಾನ್ವಿತ ನಟಿ ಹರ್ಷಿತಾ ಕಲ್ಲಿಂಗಲ್‌ ಸಖತ್‌ ಆಗಿಯೇ ಕುಣಿದಿದ್ದು, ಪಡ್ಡೆ ಗಳಿಗಾಗಿಯೇ ಚಿತ್ರ ತಂಡ ಈ ಹಾಡು ಚಿತ್ರೀಕರಿಸಿದಷ್ಟು ಮಾದಕವಾಗಿದೆ.


ಐಟಂ ಮಾದರಿಯ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ಹರ್ಷಿತಾ ಕಲ್ಲಿಂಗಲ್ ಮೂಲತಃ ಬೆಂಗಳೂರಿನ ಹುಡುಗಿ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಅಪ್ಪಟ ಕನ್ನಡತಿ ಎನ್ನುವುದು ವಿಶೇಷ. ಈಗಾಗಲೇ ಮಲಯಾಳಂ, ತೆಲುಗು, ತಮಿಳು ಹಾಗೂ ಇತರೇ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹರ್ಷಿತಾ ಕಲ್ಲಿಂಗಲ್ ಈಗ ಕನ್ನಡದತ್ತ ಮುಖ ಮಾಡಿದ್ದಾರೆ. ಇದೇ ಮೊದಲು ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡುಸ್ಬುಟ ಚಿತ್ರದಲ್ಲಿನ ವಿಶೇಷ ಹಾಡಿನ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿದ್ದಾರೆ. ಇಲ್ಲಿ ಅವರನ್ನು ತಮ್ಮ ಚಿತ್ರಕ್ಕೆ ತಂದು ಕುಣಿಸಿದ್ದು ನಿರ್ದೇಶಕ ಆಸ್ಕರ್‌ ಕೃಷ್ಣ.


ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್‌ ಮಾಡ್ಬೇಕು ಹಾಡನ್ನು ಚಿತ್ರದಲ್ಲಿ ತರಬೇಕು ಅಂದಾಗ ಅದಕ್ಕೆ ಸೂಕ್ತ ನಟಿಯನ್ನೇ ತರಬೇಕೆಂದು ಹುಡುಕಾಟದಲ್ಲಿದ್ದೇವು. ಆಗ ನಮಗೆ ಪರಿಚಯದವರ ಮೂಲಕ ಸಿಕ್ಕವರು ನಟಿ ಹರ್ಷಿಕಾ ಕಲ್ಲಿಂಗಲ್.‌ ಈ ವೇಳೆಗಾಗಲೇ ಅವರು ಕನ್ನಡದಾಚೆ ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದರು. ಕನ್ನಡದವರೇ ಆಗಿದ್ದರು, ಅವರು ಮೊದಲು ಅಲ್ಲಿ ಗುರುತಿಸಿಕೊಂಡಿದ್ದರು. ಅವರನ್ನೇ ಯಾಕೆ ನಮ್ಮ ಸಿನಿಮಾದ ಮೂಲಕ ಪರಿಚಯಿಸಬಾರದು ಅಂತ ನಾವು ಹರ್ಷಿತಾ ಅವರನ್ನೇ ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ನಟ ಆಸ್ಕರ್‌ ಕೃಷ್ಣ. ಇತ್ತೀಚೆಗಷ್ಟೇ ಯುಟ್ಯೂಬ್‌ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಭಾರೀ ಮೆಚ್ಚುಗೆ ಸಿಕ್ಕಿದೆಯಂತೆ.

ರೆಡ್ ಅಂಡ್ ವೈಟ್ ಬ್ಯಾನರ್ ಅಡಿಯಲ್ಲಿ, ‘ಆಸ್ಕರ್’ ಕೃಷ್ಣರವರೇ ನಿರ್ಮಿಸಿ, ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಚಿತ್ರವಿದು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಮಾರ್ಚ್ ಕೊನೆಯ ವಾರ ಈ ಚಿತ್ರವು ತೆರೆಗೆ ಬರಲಿದೆಯಂತೆ.

Categories
ಸಿನಿ ಸುದ್ದಿ

ಜೈರಾಜ್ ಪುತ್ರ ಅಜಿತ್ ಜೈರಾಜ್ ಈಗ ಪೊಲೀಸ್ ಅಧಿಕಾರಿ !


ಬದುಕೇ ಹಾಗೆ ಎಲ್ಲವೂ ನಾವಂದುಕೊಂಡಂತೆ ಅಲ್ಲ. ಯಾವುದನ್ನು ವಿರೋಧಿಸುತ್ತೇವೋ, ಒಂದೊಮ್ಮೆ ಅದನ್ನು ಅಪ್ಪಿಕೊಳ್ಳುವ ಸಂದರ್ಭವೂ ಬರುತ್ತೆ‌. ಅದಕ್ಕೆ ಡಾನ್ ಜೈರಾಜ್ ಅವರ ವಂಶ ಕೂಡ ಹೊರತಲ್ಲ. ಒಂದು ಕಾಲದ ಡಾನ್ ಜೈರಾಜ್ ಗೆ ಪೊಲೀಸರೇ ಮೊದಲ ಶತ್ರು ಆಗಿದ್ರಂತೆ. ಖಾಕಿ ಕಂಡ್ರೆ ಕೆಂಡ ಕಾರುತ್ತಿದ್ರಂತೆ. ಪೊಲೀಸರನ್ನು ನಾಯಿಗಳು ಅಂತ ಹಿಯಾಳಿಸಿದ್ರಂತೆ. ಅಂದ್ರೆ ಇವತ್ತು‌ ಅವರ ಪುತ್ರ ಅಜಿತ್ ಜೈರಾಜ್ ಪೊಲೀಸ್ ಅಧಿಕಾರಿ !

ಹೌದು, ಹೊಸಬರೇ ನಿರ್ಮಿಸಿ, ನಿರ್ದೇಶಿಸಿರುವ “ರೈಮ್ಸ್’ ಹೆಸರಿನ ಚಿತ್ರದಲ್ಲಿ ಜೈರಾಜ್ ಪುತ್ರ ಅಜಿತ್ ಜೈರಾಜ್ ಈಗ ಖಾಕಿ ತೊಟ್ಟಿದ್ದಾರೆ. ಕ್ರೈಮ್‌ ಪ್ರಕರಣ ಭೇದಿಸಲು ಪೊಲೀಸ್ ಅಧಿಕಾರಿಯಾಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಈಗಾಗಲೇ ಮೂರ್ನಾಲ್ಕು ಚಿತ್ರಗಳಲ್ಲಿ ಸಹ‌ನಟರಾಗಿ ಅಭಿನಯಿಸಿದ್ದ್ ಅಜಿತ್ ಜೈರಾಜ್, ಇದೇ ಮೊದಲು ” ರೈಮ್ಸ್’ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ಅವರದು ಪೊಲೀಸ್ ಅಧಿಕಾರಿ ಪಾತ್ರ ಎನ್ನುವುದೇ ವಿಶೇಷ.

ಯುವ ಪ್ರತಿಭೆ ಅಜಿತ್ ಕುಮಾರ್ ನಿರ್ದೇಶನ ದ ” ರೈಮ್ಸ್ʼ ಕಳೆದ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು‌. ಇದೀಗ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ರಿಲೀಸ್‌ ಗೆ ರೆಡಿ ಆಗಿದೆ. ಏಪ್ರಿಲ್ ನಲ್ಲಿ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ಚಿತ್ರ ತಂಡವು, ಈಗ ಚಿತ್ರದ ಪೋಸ್ಟರ್ ಲಾಂಚ್ ‌ಮೂಲಕ‌ ಸದ್ದು ಮಾಡಿದೆ. ಆ ದಿನ’ ರೈಮ್ಸ್’ ಪೋಸ್ಟರ್ ಲಾಂಚ್‌ ಗೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಖ್ಯಾತಿಯ ಅಶೋಕ್ ಕುಮಾರ್ ಬಂದಿದ್ದರು.

ನಾಯಕ ನಟ ಅಜಿತ್ ಜೈರಾಜ್, ನಿರ್ದೇಶಕ ಅಜಿತ್ ಕುಮಾರ್, ಮಿಮಿಕ್ರಿ ಗೋಪಿ, ಬಾಲ ನಟಿ ಬಾಸ್ಮತಿ, ನಿರ್ಮಾಪಕರಾದ ಜ್ನಾನಶೇಖರ್‌ ಸಿದ್ದಯ್ಯ, ರವಿಕುಮಾರ್‌, ಗಿರೀಶ್‌ ಗೌಡ, ರಮೇಶ್‌ ಆರ್ಯ ಹಾಜರಿದ್ದರು. ಪೋಸ್ಟರ್ ಲಾಂಚ್ ನಂತರ ಮಾತಾನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್, ನಾನು ವೃತ್ತಿಯಲ್ಲಿದ್ದಾಗ ಜೈರಾಜ್ ಮತ್ತು ನನ್ನ ನಡುವೆ ದೊಡ್ಡ ಕಾದಾಟ ನಡೆದಿತ್ತು. ಆಗಾಗ ಅವರಿಗಾಗಿ ನಾವು ಹುಡುಕುತ್ತಾ ಹೊರಟರೆ, ಜೈರಾಜ್‌ ತಪ್ಪಿಸಿಕೊಂಡು ಹೊಗುತ್ತಿದ್ದರು. ಹೀಗೆಯೇ ಇತ್ತು ಕಳ್ಳ-ಪೊಲೀಸ್‌ ಆಟ ಎನ್ನುತ್ತಾ ಜೈರಾಜ್‌ ಜತೆಗಿನ ತಮ್ಮ ಸಂಬಂಧವನ್ನು ವಿಭಿನ್ನವಾಗಿ ವಿವರಿಸಿದರು ಟೈಗರ್‌ ಅಶೋಕ್‌ ಕುಮಾರ್

ಅಜಿತ್‌ ಜೈರಾಜ್‌ ತಮ್ಮ ಪಾತ್ರ ಬಗ್ಗೆ ಮಾತನಾಡುತ್ತಾ, ʼ ಇದೊಂದು ಕಂಪ್ಲೀಟ್ ಸೈಕಲಾಜಿಕಲ್‌ ಕ್ರೈಂ ಥ್ರಿಲ್ಲರ್‌ ಚಿತ್ರ. ಇಲ್ಲಿ ನಾನೊಂದು ಕೊಲೆ ಪ್ರಕರಣ ಭೇದಿಸಲು ಹೊರಡುವ ಪೊಲೀಸ್‌ ಅಧಿಕಾರಿ. ಪಾತ್ರ ತುಂಬಾ ಚೆನ್ನಾಗಿದೆ. ಅಭಿನಯದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳಲು ಬಹಳಷ್ಟು ಅವಕಾಶ ಸಿಕ್ಕಿದೆʼ ಎಂದರು. ಅಜಿತ್‌ ಪಾತ್ರ ಬಗ್ಗೆ ಚಿತ್ರ ತಂಡವೂ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿತು.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಸೀಸನ್ 8; ಇವರೇ ನೋಡಿ 17 ಸ್ಪರ್ಧಿಗಳು

ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋಗೆ ದೊಡ್ಡ ವೀಕ್ಷಕ ಬಳಗವಿದೆ. ವಿವಿಧ ಕ್ಷೇತ್ರಗಳ, ವಿಭಿನ್ನ ವ್ಯಕ್ತಿತ್ವ – ಅಭಿರುಚಿಯ ಸ್ಪರ್ಧಿಗಳು ಮನೆಯಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಳ್ಳುತ್ತಾರೆ. ನಿನ್ನೆ ಬಿಗ್‌ಬಾಸ್‌ 8ನೇ ಸೀಸನ್‌ಗೆ ಚಾಲನೆ ಸಿಕ್ಕಿದೆ. ಈ ಬಾರಿಯ ಹದಿನೇಳು ಸ್ಪರ್ಧಿಗಳನ್ನು ಸ್ಟಾರ್ ನಿರೂಪಕ ಸುದೀಪ್‌ ಅವರು ವೇದಿಕೆಗೆ ಆಹ್ವಾನಿಸಿ, ವೀಕ್ಷಕರಿಗೆ ಪರಿಚಯಿಸಿ ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ಈ ಅಭ್ಯರ್ಥಿಗಳು ಯಾರು, ಅವರ ಹಿನ್ನೆಲೆ ಏನು ಎನ್ನುವುದನ್ನು ಪರಿಚಯಿಸಿಕೊಳ್ಳೋಣ.

ಧನುಶ್ರೀ: ಇಪ್ಪತ್ತು ವರ್ಷದ ಧನುಶ್ರೀ ಹಾಸನದ ಹುಡುಗಿ. ಟಿಕ್‌ಟಾಕ್ ವೀಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಅವರ ಟಿಕ್‌ಟಾಕ್ ವೀಡಿಯೋಗಳು ಮಿಲಿಯನ್‌ಗಟ್ಟಲೆ ವೀವ್ಸ್ ಕಂಡಿವೆ. ಉತ್ತಮ ಡ್ಯಾನ್ಸರ್ ಕೂಡ ಹೌದು.

ಶುಭಾ ಪೂಂಜಾ: ಮಾಡಲಿಂಗ್‌, ಟೀವಿ ಜಾಹೀರಾತುಗಳ ಮೂಲಕ ಕ್ಯಾಮೆರಾ ಎದುರಿಸಿದ ಶುಭಾ ಪೂಂಜಾ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಮೊಗ್ಗಿನ ಮನಸು’ ಚಿತ್ರದ ನಟನೆಗೆ ಅವರಿಗೆ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿದೆ. ಸಾಲು, ಸಾಲು ಚಿತ್ರಗಳಲ್ಲಿ ನಟಿಸಿದರೂ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ‘ಬಿಗ್‌ಬಾಸ್‌’ ಅವರ ಅದೃಷ್ಟ ಬದಲಿಸಲಿದೆಯೇ ಎಂದು ನೋಡಬೇಕು.

ಶಂಕರ್ ಅಶ್ವಥ್‌: ಕನ್ನಡ ಚಿತ್ರರಂಗದ ಮೇರು ನಟ ಕೆ.ಎಸ್‌.ಅಶ್ವಥ್ ಅವರ ಪುತ್ರ ಶಂಕರ್‌ ಅಶ್ವಥ್‌ ಕಿರುತೆರೆ, ಸಿನಿಮಾ ನಟ. ಸೂಕ್ತ ಅವಕಾಶಗಳಿಲ್ಲದೆ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡವರು. ಜೀವನೋಪಾಯಕ್ಕಾಗಿ ನಟನೆ ಜೊತೆ ಕ್ಯಾಬ್ ಡ್ರೈವರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ ಶಂಕರ್‌ ಅಶ್ವಥ್‌.

ವಿಶ್ವನಾಥ್‌: ಧಾರವಾಡದ ವಿಶ್ವನಾಥ್‌ ‘ಹಾಡು ಕರ್ನಾಟಕ’ ಸಂಗೀತ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾದವರು. ಹತ್ತನ್ನೆರೆಡರ ಹರೆಯದಲ್ಲೇ ಶಾಸ್ತ್ರೀಯ ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡ ಅವರಿಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಇರಾದೆ.

ವೈಷ್ಣವಿ ಗೌಡ: ‘ಅಗ್ನಿಸಾಕ್ಷಿ’ ಕನ್ನಡ ಧಾರಾವಾಹಿಯೊಂದಿಗೆ ಜನಪ್ರಿಯತೆ ಗಳಿಸಿದವರು ವೈಷ್ಣವಿ. ಮೂಲತಃ ಭರತನಾಟ್ಯ ಕಲಾವಿದೆ. ಧಾರಾವಾಹಿ ಯಶಸ್ಸು ಅವರನ್ನು ಬೆಳ್ಳಿತೆರೆಗೆ ಕರೆದೊಯ್ದಿತು. ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಚಿತ್ರರಂಗದಲ್ಲಿ ಗಮನಾರ್ಹ ಬ್ರೇಕ್‌ನ ನಿರೀಕ್ಷೆಯಲ್ಲಿದ್ದಾರೆ.

ಕೆ.ವಿ.ಅರವಿಂದ್: ವೃತ್ತಿಪರ ಬೈಕ್‌ ರೇಸರ್‌. ಸಾಹಸ ಪ್ರವೃತ್ತಿಯ ಅರವಿಂದ್ ಹಲವಾರು ಸಿನಿಮಾ ಮತ್ತು ಟೀವಿ ಜಾಹೀರಾತುಗಳಲ್ಲಿ ಸಾಹಸ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ‘ಬೆಂಗಳೂರು ಡೇಸ್‌’ ಮಲಯಾಳಂ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಬಿಗ್‌ಬಾಸ್ ಮನೆಯಲ್ಲಿ ವಿಶೇಷ ಸ್ಪರ್ಧಿ.

ನಿಧಿ ಸುಬ್ಬಯ್ಯ: ‘ಅಭಿಮಾನಿ’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ನಿಧಿ ಸುಬ್ಬಯ್ಯ ಮೂಲತಃ ರೂಪದರ್ಶಿ. ‘ಪಂಚರಂಗಿ’ ಸಿನಿಮಾ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಬಾಲಿವುಡ್‌ಗೆ ಹಾರಿದ ಅವರು ನಾಲ್ಕು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಸದ್ಯ ಗ್ಲಾಮರ್‌ ತಾರೆ.

ಶಮಂತ್‌: ಜನ್ಮನಾಮ ಶಮಂತ್ ಎಂದಿದ್ದರೂ ‘ಬ್ರೋ ಗೌಡ’ ಎನ್ನುವ ವಿಚಿತ್ರ ಹೆಸರಿನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ಅದು ವೆಬ್‌ ಸರಣಿಯೊಂದರಲ್ಲಿನ ಅವರ ಪಾತ್ರದ ಹೆಸರು. ಸಂಗೀತದಲ್ಲಿ ಆಸಕ್ತಿ ಇರುವ ಅವರು ಗಾಯಕರೂ ಹೌದು. ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವುದು ಅವರ ಗುರಿ.

ಗೀತಾ ಭಾರತಿ ಭಟ್‌: ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾಗಿದ್ದಾರೆ ಗೀತಾ ಭಟ್‌. ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲವೆಂದು ಅಲವತ್ತುಕೊಂಡಿದ್ದ ಅವರು ‘ಬಿಗ್‌ಬಾಸ್‌’ ಮನೆಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಮಂಜು ಪಾವಗಡ: ‘ಮಜಾಭಾರತ’ ಕನ್ನಡ ಕಿರುತೆರೆ ರಿಯಾಲಿಟಿ ಶೋನಲ್ಲಿ ಪರಿಚಯವಾದವರು ಮಂಜು. ಕಳೆದ ಏಳೆಂಟು ವರ್ಷಗಳಿಂದ ನಾಟಕಗಳಲ್ಲಿ ನಟಿಸುತ್ತಾ ಬಂದಿರುವ ಮಂಜುಗೆ ‘ಮಜಾಭಾರತ’ ಒಂದೊಳ್ಳೆಯ ತಿರುವು ನೀಡಿತು. ಅವರೀಗ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ದಿವ್ಯಾ ಸುರೇಶ್‌: ‘ಮಿಸ್‌ ಸೌತ್ ಇಂಡಿಯಾ’ ಕಿರೀಟದೊಂದಿಗೆ ಲೈಮ್‌ಲೈಟ್‌ಗೆ ಬಂದ ದಿವ್ಯಾ ಕನ್ನಡ, ತೆಲುಗು ಸಿನಿಮಾಗಳು ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಿಲ್ಟನ್ ಹೌಸ್‌’ ಕನ್ನಡ ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಶುರುವಾಯ್ತು. ‘ನನ್‌ ಹೆಂಡ್ತಿ ಎಂಬಿಬಿಎಸ್‌’, ‘ಜೋಡಿಹಕ್ಕಿ’ ಕಿರುತೆರೆ ಸರಣಿಗಳೊಂದಿಗೆ ಕನ್ನಡಿಗರಿಗೆ ಪರಿಚಿತರು.

ಚಂದ್ರಕಲಾ ಮೋಹನ್‌: ಚಿಕ್ಕ ವಯಸ್ಸಿನಲ್ಲೇ ವೃತ್ತಿ ರಂಗಭೂಮಿ ಪ್ರವೇಶಿಸಿದ ಚಂದ್ರಕಲಾ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡವರು. ‘ಪುಟ್ಟಗೌರಿ ಮದುವೆ’ ಸರಣಿ ಕಿರುತೆರೆಯಲ್ಲಿ ಅವರಿಗೆ ಬಹುದೊಡ್ಡ ತಿರುವು. ಪ್ರಸ್ತುತ ಸಿನಿಮಾ, ಕಿರುತೆರೆ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬಿಗ್‌ಬಾಸ್‌’ ಮನೆಯಲ್ಲಿರುವವರ ಪೈಕಿ ಹಿರಿಯ ಮಹಿಳೆ.

ರಘು ಗೌಡ: ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ರಘು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಕೆಲಸ ತೊರೆದು ಬಂದರು. ‘ವೈನ್ ಸ್ಟೋರ್‌’ ಯೂಟ್ಯೂಬ್ ಚಾನೆಲ್‌ ರೂಪಿಸಿ ವೈವಿಧ್ಯಮಯ ವೀಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದಾರೆ.

ಪ್ರಶಾಂತ್ ಸಂಬರ್ಗಿ: ವರ್ಣರಂಜಿತ ವ್ಯಕ್ತಿತ್ವದ ಪ್ರಶಾಂತ್ ಸಂಬರ್ಗಿ ಅವರು ಬಿಗ್‌ಬಾಸ್ ಮನೆಯಲ್ಲಿ ಗಮನಸೆಳೆಯುವಂತಹ ಸ್ಪರ್ಧಿ. ತಮ್ಮನ್ನು ‘ಸಾಮಾಜಿಕ ಕಾರ್ಯಕರ್ತ’ ಎಂದು ಗುರುತಿಸಿಕೊಳ್ಳುವ ಪ್ರಶಾಂತ್‌ ಸಿನಿಮಾ ಮಂದಿಗೆ ಆಪ್ತರು. ರಾಜಕಾರಣಿಯೂ ಹೌದು. ಇತ್ತೀಚಿನ ಡ್ರಗ್ಸ್ ಪ್ರಕರಣದಲ್ಲಿ ಸಿನಿ ತಾರೆಯರ ಮೇಲಿನ ಆರೋಪಗಳಿಂದ ಸುದ್ದಿಯಾಗಿದ್ದರು.

ದಿವ್ಯಾ ಉರುಡುಗ: ತೀರ್ಥಹಳ್ಳಿ ಮೂಲದ ದಿವ್ಯಾ ಉರುಡುಗ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಮಲ್ಟಿಮೀಡಿಯಾದಲ್ಲಿ ಪದವಿ ಪಡೆದಿರುವ ಅವರು ಧಾರಾವಾಹಿ ನಟಿಯಾದದ್ದು ಆಕಸ್ಮಿಕ. ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಸರಣಿಗಳಲ್ಲಿ ನಟಿಸಿರುವ ಅವರು ‘ಸೂಪರ್ ಕಬಡ್ಡಿ’ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿದ್ದರು. ‘ಹುಲಿರಾಯ’ ಚಿತ್ರದೊಂದಿಗೆ ಸಿನಿಮಾಗೆ ಪರಿಚಯವಾದ ದಿವ್ಯಾ ‘ಧ್ವಜ’ ಮತ್ತು ‘ಫೇಸ್‌ 2 ಫೇಸ್‌’ ಚಿತ್ರಗಳಲ್ಲೂ ನಟಿಸಿದ್ದಾರೆ.

ರಾಜೀವ್‌: ನಟನಾಗುವ ಇರಾದೆ ಹೊಂದಿರುವ ರಾಜೀವ್ ಅತ್ಯುತ್ತಮ ಕ್ರಿಕೆಟ್ ಆಟಗಾರ. ನಟ ಸುದೀಪ್ ನೇತೃತ್ವದಲ್ಲಿ ಆರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಆಕರ್ಷಕ ಬ್ಯಾಟ್ಸ್‌ಮನ್‌ ಆಗಿ ಹೆಸರು ಮಾಡಿದ್ದರು. ವೃತ್ತಿಪರ ಕ್ರಿಕೆಟರ್ ಆಗಿ ರೂಪುಗೊಳ್ಳುವುದರ ಜೊತೆಗೆ ನಟನಾಗಿಯೂ ಗುರುತಿಸಿಕೊಳ್ಳಬೇಕು ಎನ್ನುವುದು ಅವರ ಆಸೆ.

ನಿರ್ಮಲಾ ಚೆನ್ನಪ್ಪ: ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಿರ್ಮಲಾ ಚೆನ್ನಪ್ಪ ನಟಿ, ಡಬ್ಬಿಂಗ್ ಕಲಾವಿದೆ, ನಿರ್ಮಾಪಕಿ. ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗುವುದು ಅವರ ಗುರಿ. ಓದುವ ಅಭಿರುಚಿ ಇರುವ ನಿರ್ಮಲಾ ಫಿಲಾಸಫಿ ಬಗ್ಗೆ ಸೊಗಸಾಗಿ ಮಾತನಾಡುತ್ತಿದ್ದಾರೆ. ಕನ್ನಡ ಸಿನಿಮಾ ನಟ ಸರ್ದಾರ್ ಸತ್ಯ ಅವರು ನಿರ್ಮಲಾರ ಪತಿ.

Categories
ಸಿನಿ ಸುದ್ದಿ

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ… ಹಾಡಿಗೆ ಬಾಲಿವುಡ್‌ ಲೆಜೆಂಡ್ರಿ ರವೀಂದ್ರ ಜೈನ್‌ ಧ್ವನಿ ಹುಟ್ಟುಹಬ್ಬಕ್ಕೆ ಆನಂದ್‌ ಆಡಿಯೋ ಹೊರತಂದ ಜನಪ್ರಿಯ ಗೀತೆ!

“ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…ಇನ್ನೇನು ಬಿಡುವುದು ಬಾಕಿ ಇದೆ… ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ, ಎದ್ದೋಗು ಕೊನೆ ಬಸ್ಸು ಟೈಮಾಗಿದೆ…”
– ಬಹುಶಃ ಈ ಹಾಡನ್ನು ಕೇಳದವರಿಲ್ಲ. ಕರ್ನಾಟಕದ ಕನ್ನಡಿಗರು ಮಾತ್ರವಲ್ಲ, ಸಾಗರದಾಚೆ ಇರುವ ಕನ್ನಡಿಗರೂ ಈ ಹಾಡನ್ನು ಕೇಳಿ, ಕಣ್ತುಂಬಿಕೊಂಡವರಿಗೆ ಲೆಕ್ಕವಿಲ್ಲ. ಎಷ್ಟೋ ಮಂದಿ ಈ ಹಾಡು ಕೇಳಿ ತಮ್ಮೂರಿಗೆ ಹೋಗಿದ್ದುಂಟು. ಇಷ್ಟಕ್ಕೂ ಈ ಹಾಡಿನ ಬಗ್ಗೆ ಈಗ ಯಾಕೆ ಪ್ರಸ್ತಾಪ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಹಾಡು ದಿಗಂತ್‌ ಅಭಿನಯದ “ಪರಪಂಚ” ಸಿನಿಮಾದ್ದು. ಕ್ರಿಶ್‌ ಜೋಶಿ ನಿರ್ದೇಶನವಿದೆ. ಇನ್ನು ಈ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯವಿದೆ. ಅವರ ಸಾಹಿತ್ಯಕ್ಕೆ ಅದ್ಭುತ ರಾಗ ಸಂಯೋಜನೆ ಮಾಡಿದ್ದು, ಸಂಗೀತ ನಿರ್ದೇಶಕ ವೀರ್‌ ಸಮರ್ಥ್.‌ ಈ ಹಾಡನ್ನು ಹುಚ್ಚವೆಂಕಟ್‌ ಅವರ ಧ್ವನಿಯಲ್ಲಿ ಬಹುತೇಕ ಮಂದಿ ಕೇಳಿದ್ದುಂಟು. ಆದರೆ, ಅದರ ಹಿಂದೊಂದು ಸತ್ಯವಿದೆ. ಹುಚ್ಚ ವೆಂಕಟ್‌ ಅವರಿಗೂ ಮೊದಲು ವೀರ್‌ ಸಮರ್ಥ್‌ ಅವರು ಬಾಲಿವುಡ್‌ನ ದಂತಕತೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಹಾನ್‌ ವ್ಯಕ್ತಿ ಪದ್ಮಶ್ರೀ ರವೀಂದ್ರ ಜೈನ್‌ ಅವರಿಂದ ಹಾಡಿಸಿದ್ದರು ಅನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಹೌದು, ವೀರ್‌ ಸಮರ್ಥ್‌ ಅವರು “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ” ಹಾಡನ್ನು ಬಾಲಿವುಡ್‌ನ ಖ್ಯಾತ ಗೀತಸಾಹಿತಿ, ಹಿಂದೂಸ್ತಾನಿ ಸಂಗೀತ ನಿರ್ದೇಶಕ ರವೀಂದ್ರ ಜೈನ್‌ ಅವರಿಂದ ಹಾಡಿಸಿದ್ದರು. ಆದರೆ, ಕಾರಣಾಂತರಗಳಿಂದ “ಪರಪಂಚ” ಚಿತ್ರಕ್ಕೆ ರವೀಂದ್ರ ಜೈನ್‌ ಅವರ ಹಾಡನ್ನು ಬಳಸಿಕೊಳ್ಳಲಾಗಿಲ್ಲ. ಆದರೆ, ರವೀಂದ್ರ ಜೈನ್‌ ಅವರು ಹಾಡಿರುವ ಈ ಹಾಡನ್ನು ಆನಂದ್‌ ಆಡಿಯೋ ಫೆ.೨೮ರಂದು ಬಿಡುಗಡೆ ಮಾಡಿದೆ. ಅದಕ್ಕೆ ಕಾರಣ, ಫೆಬ್ರವರಿ 28ರಂದು ರವೀಂದ್ರ ಜೈನ್‌ ಅವರ ಹುಟ್ಟುಹಬ್ಬ. ಅವರ 77 ನೇ ಹುಟ್ಟುಹಬ್ಬದ ಸವಿನೆನಪಿಗೆ ಆನಂದ್‌ ಆಡಿಯೋ ಅವರನ್ನು ಸ್ಮರಿಸಿ, ರವೀಂದ್ರ ಜೈನ್‌ ಅವರ ಧ್ವನಿಯಲ್ಲಿ ಮೂಡಿಬಂದಿರುವ “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ…” ಹಾಡನ್ನು ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ.


ಈ ಕುರಿತಂತೆ, ಸಂಗೀತ ನಿರ್ದೇಶಕ ವೀರ್‌ಸಮರ್ಥ್‌ ಅವರು “ಸಿನಿಲಹರಿ” ಜೊತೆ ಮಾತನಾಡಿ, ತಮ್ಮ ಗುರು ರವೀಂದ್ರ ಜೈನ್‌ ಅವರನ್ನು ಗುಣಗಾನ ಮಾಡಿದ್ದಾರೆ. “ನಾನು ಸಂಗೀತ ನಿರ್ದೇಶಕ ಆಗಿದ್ದೇನೆ ಅಂದರೆ ಅದಕ್ಕೆ ನನ್ನ ಗುರು ರವೀಂದ್ರ ಜೈನ್‌ ಅವರೇ ಕಾರಣ. ಅವರು ನನಗೆ ಸಂಗೀತ ಕಲಿಸಿ, ಅವರೊಟ್ಟಿಗೆ ಐದು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ಕಲ್ಪಿಸಿದವರು. ಮೂಲತಃ ಹಿಂದೂಸ್ತಾನಿ ಸಂಗೀತಗಾರರಾಗಿರುವ ಅವರು ಸುಮಾರು 200 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಗೀತ ಸಾಹಿತಿಯಾಗಿ ದೊಡ್ಡ ಹೆಸರು ಪಡೆದವರು. ನಾನು ಸಂಗೀತ ನಿರ್ದೇಶಕನಾದ ಬಳಿಕ, ಒಂದೊಮ್ಮೆ ಅವರು ನಿನ್ನ ರಾಗ ಸಂಯೋಜನೆಯಲ್ಲೊಂದು ಹಾಡು ಹಾಡ್ತೀನಿ. ಕನ್ನಡದ ಮೊದಲ ಹಾಡು ಅದಾಗಿರಬೇಕು ಅಂದಿದ್ದರು. ಹಾಗಾಗಿ, ನಾನು ಒಳ್ಳೆಯ ಸಾಹಿತ್ಯ, ರಾಗ ಇದ್ದ ಕಾರಣ, “ಹುಟ್ಟಿದ ಊರನು” ಹಾಡನ್ನು ಅವರಿಂದಲೇ ಮುಂಬೈನ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದೆ. ತುಂಬಾನೇ ಅದ್ಭುತವಾಗಿ ಹಾಡಿದ್ದರು. ಆದರೆ, ಕಾರಣಾಂತರಗಳಿಂದ ಆ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಆಗಿರಲಿಲ್ಲ. ಅವರು ನನ್ನ ಹಾಡು ಹಾಡಿದ ಐದಾರು ತಿಂಗಳ ಬಳಿಕ ನಿಧನರಾದರು. ಅವರ ಹಾಡನ್ನು ಎಲ್ಲೂ ಹೊರತರಲು ಆಗಲಿಲ್ಲವಲ್ಲ ಎಂಬ ಬೇಸರ ನನಗೂ ಇತ್ತು. ಆದರೆ, ಫೆಬ್ರವರಿ ೨೮ರಂದು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆನಂದ್‌ ಆಡಿಯೋ ಅವರ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಬಿಡುಗಡೆ ಮಾಡಿದೆ. ಆ ಮೂಲಕ ನಾವೆಲ್ಲ ಅವರನ್ನು ಸ್ಮರಿಸುತ್ತಿದ್ದೇವೆ” ಎಂದಿದ್ದಾರೆ ವೀರ್.

ವೀರ್‌ ಸಮರ್ಥ್‌ ಅವರು ಮುಂಬೈನಲ್ಲಿದ್ದಾಗ, ರವೀಂದ್ರ ಜೈನ್‌ ಬಳಿ ಕೆಲಸ ಮಾಡಿದ್ದರು. ಆರಂಭದ ದಿನಗಳಲ್ಲಿ ಅವರ ಜೊತೆ ಐದು ವರ್ಷ ಸಂಗೀತ ಕೆಲಸ ಕಲಿತು ದುಡಿದವರು. ಒಂದು ರೀತಿ ಅವರ ಮನೆಯಲ್ಲೇ ಇದ್ದು, ಮಗನಂತೆ ಇದ್ದವರು ವೀರ್. ಹಾಗೆ ನೋಡಿದರೆ ವೀರ್‌ ಅವರು‌ ಸಿನಿಮಾ ಸಂಗೀತ ಕಲಿತಿದ್ದು ರವೀಂದ್ರ ಜೈನ್‌ ಅವರಿಂದಲೇ. ಅವರ ಮೂಲಕವೇ ರೆಕಾರ್ಡ್‌ ಮಾಡೋದು ಕಲಿತರು, ಮೈಕ್‌ ಮುಂದೆ ನಿಂತು ಹಾಡೋದನ್ನೂ ಕಲಿತರು. ಬಾಲಿವುಡ್‌ನ ಲೆಜೆಂಡ್ರಿ ಸಂಗೀತ ನಿರ್ದೇಶಕ ಆಗಿದ್ದ ಅವರು, “ರಾಮ್‌ ತೇರಿ ಗಂಗಾ ಮೈಲಿ” ಸೇರಿದಂತೆ ಹಿಟ್‌ ಸಿನಿಮಾಗಳಿಗೆ ಹಾಡು ಕೊಟ್ಟ ಕೀರ್ತಿ ರವೀಂದ್ರ ಜೈನ್‌ ಅವರದು. ವೀರ್‌ ಸಮರ್ಥ್‌ ಅವರು ಯಾವಾಗ ಭೇಟಿ ಮಾಡಿದರೂ, ರವೀಂದ್ರ ಜೈನ್‌ ಅವರು, ನನಗೊಂದು ಹಾಡು ಮಾಡಪ್ಪ, ನಾನು ಕನ್ನಡದಲ್ಲಿ ಹಾಡ್ತೀನಿ ಅಂತ ಹೇಳುತ್ತಿದ್ದರಂತೆ. ಅವರ ಸಲುವಾಗಿ ಹಾಡು ಮಾಡಲು ಒಳ್ಳೆಯ ಸಾಹಿತ್ಯ, ರಾಗ ಎದುರು ನೋಡುತ್ತಿದ್ದ ವೀರ್‌, ದೊಡ್ಡ ಸ್ಕೇಲ್‌ನಲ್ಲೇ ರಾಗ ಸಂಯೋಜನೆ ಮಾಡುವ ಆಸೆ ಇಟ್ಟುಕೊಂಡಿದ್ದರು. ಹೈ ರೇಂಜ್‌ನಲ್ಲೇ ಅವರಿಂದ ಹಾಡಿಸಬೇಕು ಅಂದುಕೊಂಡಿದ್ದ ವೀರ್‌, “ಪರಪಂಚ” ಚಿತ್ರಕ್ಕೆ ಸಂಗೀತ ಮಾಡುವಾಗ, “ಹುಟ್ಟಿದ ಊರನು” ಹಾಡನ್ನು ಅವರಿಂದ ಹಾಡಿಸುವ ಯೋಚನೆ ಮಾಡಿದ್ದಾರೆ. ಬಳಿಕ ನಿರ್ದೇಶಕ ಕ್ರಿಶ್‌ ಜೋಶಿ ಬಳಿ ಮಾತಾಡಿದ ಬಳಿಕ ಯೋಗರಾಜ್‌ಭಟ್‌ ಜೊತೆಯಲ್ಲೂ ಚರ್ಚಿಸಿದ್ದಾರೆ. ಎಲ್ಲವೂ ಓಕೆ ಆದಾಗ, ಮುಂಬೈಗೆ ಹೋಗಿ ರವೀಂದ್ರ ಜೈನ್‌ ಅವರ ಸ್ಟುಡಿಯೋದಲ್ಲೇ ಹಾಡಿಸಿದ್ದಾರೆ. ಆದರೆ, ಕಾರಣಾಂತರ ಆ ಹಾಡು ರಿಲೀಸ್‌ ಆಗಲಿಲ್ಲ.  ಆ ನೋವು ವೀರ್‌ ಅವರಲ್ಲಿತ್ತು. ಇತ್ತೀಚೆಗೆ ಆ ಹಾಡನ್ನು ಬಿಡುಗಡೆ ಮಾಡುವ ಬಗ್ಗೆಯೂ ನಿರ್ದೇಶಕರ ಜೊತೆ ಮಾತಾಡಿದ್ದರು. ಆನಂದ್‌ ಆಡಿಯೋ ಜೊತೆ ಮಾತಾಡಿದಾಗ, ಫೆ.೨೮ರಂದು ಅವರ ಹುಟ್ಟುಹಬ್ಬ ಇದ್ದುರಿಂದ, ಬಿಡುಗಡೆ ಮಾಡಲಾಗಿದೆ. ಸದ್ಯ ಆ ಹಾಡಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.

Categories
ಸಿನಿ ಸುದ್ದಿ

ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀತಿಯಲಿ ಜಾನಕಿ ರಾಮ- ನಟ ದರ್ಶನ್ ಅವರನ್ನು ವಿಶೇಷವಾಗಿ ಗುಣಗಾನ ಮಾಡಿದ ಆಶಾ ಭಟ್

ಇವ್ರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀಯಿಯಲಿ ಜಾನಕಿರಾಮ, ತಿರುಗಿ ಬಿದ್ರೆ….

– ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸಾವಿರಾರು ಅಭಿಮಾನಿಗಳ ಮುಂದೆ ಈ ರೀತಿ ತಮ್ಮದೇ ಮಾತುಗಳ ಮೂಲಕ ಗುಣಗಾನಮಾಡಿದ್ದು ಬೇರಾರರು ಅಲ್ಲ, ಒನ್ ಡ್ ಒನ್ಲಿ ರಾಬರ್ಟ್ ನಾಯಕಿ, ಭದ್ರಾವತಿಯ ಚೆಲುವೆ , ಮಾಡೆಲ್ ಆಶಾಭಟ್.

ಫೆ‌ ೨೬ ರಂದು ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಆಶಾಭಟ್, ದರ್ಶನ್ ಅವರಂತಹ ಸ್ಟಾರ್ ನಟನ ಕಾಂಬಿನೇಷನ್ ಮೂಲಕ ಮೊಟ್ಟ ಮೊದಲು ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿರುವುದಕ್ಕೆ ಅಗಾದ ಆನಂದ ವ್ಯಕ್ತಪಡಿಸಿದರು.

‘ ಫಸ್ಟ್ ಟೈಮ್ ಸಿನಿಮಾ ಸಂಬಂಧಿತ ಇಷ್ಟು ದೊಡ್ಡ ವೇದಿಕೆ ನಿಂತು ಮಾತನಾಡುತ್ತಿದ್ದೇನೆ. ಐ ಡೋಂಟ್ ಪರ್ಗೆಟ್ ಇಟ್, ನನ್ನ ಜೀವನದಲ್ಲೇ ಮರೆಯಲಾರದ ಕ್ಷಣ ಇದು. ದೇವರ ದಯೆ, ಹಾಗೆಯೇ ಚಿತ್ರ ತಂಡದ ಆಶೀರ್ವಾದ ದ ಫಲವಾಗಿ ಇದು ಒದಗಿ ಬಂತು. ಕನ್ನಡ ನನ್ನ ಉಸಿರು. ಕನ್ನಡದ ಮೂಲಕವೇ ಇವತ್ತು ಟಾಲಿವುಡ್ ಗೂ ಎಂಟ್ರಿಯಾಗುವ ಅವಕಾ ಬಂದಿದೆ. ನಿಮ್ಮೆಲ್ಲರ ಆಶೀರ್ವಾದ ‌ನನಗೆ ಬೇಕಿದೆ. ಯಾವುದೇ ಕಲಾವಿದರಿಗೆ ಪ್ರೇಕ್ಷಕರೇ ದೇವರು ‘ ಎನ್ನುತ್ತಾ ತೆಲುಗು ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಿದರು ಸೂಪರ್ ಮಾಡೆಲ್ ಆಶಾ ಭಟ್.

ಚಿತ್ರದ ನಾಯಕ ದರ್ಶನ್ ಅವರ ಬಗ್ಗೆ ವಿಶೇಷವಾಗಿ ಮಾತನಾಡಿದ ಆಶಾ ಭಟ್, ಇವ್ರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀಯಿಯಲಿ ಜಾನಕಿರಾಮ, ತಿರುಗಿ ಬಿದ್ರೆ……ಎನ್ನುವ ಮಾತನ್ನು ಅರ್ಧದಲ್ಲೇ ನಿಲ್ಲಿಸಿ ಅದನ್ನು ಪ್ರೇಕ್ಷಕರ ಊಹೆಗೆ ಬಿಟ್ಟ ಆಶಾ ಭಟ್, ಅವರ ಜತೆಗೆ ಸ್ಕೀನ್ ಹಂಚಿಕೊಂಡಿರುವುದು ನನ್ನ ಅದೃಷ್ಟ ಎಂದರು.

ಹೈದ್ರಾಬಾದ್ ಪ್ರೀ ರಿಲೀಸ್ ಈವೆಂಟ್ ನಂತರ ದೂರವಾಣಿ ಮೂಲಕ ‘ಸಿನಿ‌ಲಹರಿ’ ಜತೆಗೆ ಮಾತನಾಡಿದ ಅವರು, ಫಸ್ಟ್ ಟೈಮ್ ಸಿನಿಮಾ ಪ್ರಚಾರದ ಅಷ್ಟು ದೊಡ್ಡ ವೇದಿಕೆ ಹಂಚಿಕೊಂಡಿದ್ದನ್ನು ಮರೆಯಲಾರೆ. ಇದು ನನ್ನ ಪಾಲಿಗೆ ಸಿಕ್ಕ ಅತೀ ದೊಡ್ಡ ಅವಕಾಶ‌. ದೇವರ ದಯೆ, ಹಾಗೆಯೇ ಚಿತ್ರ ತಂಡದ ಆಶೀರ್ವಾದ ದ ಫಲವಾಗಿ ಇದು ಒದಗಿ ಬಂತು. ಅತ್ಯಂತ ಖುಷಿ ಯಾಗುತ್ತಿದೆ ಎಂದರು.

error: Content is protected !!