ರಶ್ಮಿಕಾ ಮಂದಣ್ಣ ಅದೃಷ್ಟವಂತೆ…! ಹೌದು, ಈ ಮಾತು ಅಕ್ಷರಶಃ ನಿಜ. ಮೊದಲ ಸಿನಿಮಾದಲ್ಲೇ ಗೆಲುವು ಕಂಡ ಬೆಡಗಿ. ಅಷ್ಟೇ ಅಲ್ಲ, ತನ್ನ ಅಂದದ ಮೊಗದಿಂದಲೇ ಎಲ್ಲರನ್ನೂ ಮೋಡಿ ಮಾಡಿದವೃು. ನೋಡ ನೋಡುತ್ತಿದ್ದಂತೆಯೇ ಕನ್ನಡ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್, ಬಾಲಿವುಡ್ಗೂ ಕಾಲಿಟ್ಟ ಚೆಲುವೆ ಈಕೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ, ಒಂದು ಸುತ್ತು ಎಲ್ಲಾ ಸ್ಟಾರ್ಗಳ ಜೊತೆ ಡಿಂಗುಡಾಂಗು ಅಂತ ಕುಣಿದು ಕುಪ್ಪಳಿಸಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ಗೆ ಹಾರಿದ್ದ ರಶ್ಮಿಕಾಗೆ ಈಗ ಮತ್ತೊಂದು ಭರ್ಜರಿ ಅವಕಾಶವೊಂದು ಸಿಕ್ಕಿದೆ. ಹಾಗಂತ, ಅದು ಹೊಸ ಬಾಲಿವುಡ್ ಸಿನಿಮಾನಾ ಅಂತಂದುಕೊಳ್ಳುವಂತಿಲ್ಲ. ಅವರೀಗ ಜನಪ್ರಿಯ ಕಂಪೆನಿಯೊಂದಕ್ಕೆ ರಾಯಭಾರಿಯಾಗಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ.
ಈಗಾಗಲೇ ಅನೇಕ ಸ್ಟಾರ್ ನಟಿಯರು ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವುದು ಗೊತ್ತೇ ಇದೆ. ರಶ್ಮಿಕಾ ಕೂಡ ಈಗ ದೊಡ್ಡ ಕಂಪೆನಿಗೆ ರಾಯಭಾರಿಯಾಗಿದ್ದಾರೆ. ಫಾಸ್ಟ್ ಫುಡ್ ತಯಾರಿಕಾ ಕಂಪೆನಿಯೊಂದು ರಶ್ಮಿಕಾ ಮಂದಣ್ಣ ಅವರನ್ನು ಸೌತ್ ಇಂಡಿಯಾ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಅಂದಹಾಗೆ, ಅದು ಮೆಕ್ಡೊನಾಲ್ಡ್ ಬ್ರ್ಯಾಂಡ್. ಸದ್ಯಕ್ಕೆ ರಶ್ಮಿಕಾ ಮೆಕ್ಡೊನಾಲ್ಡ್ ಬ್ರ್ಯಾಂಡ್ನ ಸೌತ್ ಇಂಡಿಯಾ ರಾಯಭಾರಿ. ಅದೇನೆ ಇರಲಿ, ಒಂದರ ಮೇಲೊಂದು ಅದೃಷ್ಟ ರಶ್ಮಿಕಾ ಅವರನ್ನು ಹುಡುಕಿ ಬರುತ್ತಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾಗೆ ಇನ್ನಷ್ಟು ಬ್ರ್ಯಾಂಡ್ ಸಿಕ್ಕರೆ ಅಚ್ಚರಿಯೇನಿಲ್ಲ.
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಸಾಧನೆ ನೋಡುವುದಕ್ಕೆ ಅವರ ತಂದೆ ಇರಬೇಕಿತ್ತು. ನಟರಾಗಿ ನೆಲೆ ಕಂಡುಕೊಳ್ಳುವುದಕ್ಕೆ ಕಡುಕಷ್ಟ ಪಟ್ಟಿದ್ದ ತೂಗುದೀಪ ಶ್ರೀನಿವಾಸ್, ಇವತ್ತು ಮಕ್ಕಳ ಈ ದರ್ಬಾರ್ ಅನ್ನು ಕಣ್ಣಾರೆ ನೋಡಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ ಏನೋ….! ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಕನ್ನಡದ ಅದೆಷ್ಟೋ ಮಂದಿ ಸಿನಿಮಾ ಪ್ರೇಕ್ಷಕರು ಅನೇಕ ಸಲ ಹೀಗೆ ಅಂದುಕೊಂಡಿದ್ದು ಸುಳ್ಳಲ್ಲ. ಸಿನಿಮಾದಿಂದ ಸಿನಿಮಾಕ್ಕೆ ದರ್ಶನ್ ತಮ್ಮ ಸ್ಟಾರ್ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುತ್ತಾ ಎತ್ತರೆತ್ತರಕ್ಕೆ ಜಿಗಿದಾಗೆಲ್ಲ ಜನರೇ ಹಾಗೆಂದುಕೊಂಡಿದ್ದು ಹೌದು.
ಅವರೆಲ್ಲ ಹಾಗಂದುಕೊಳ್ಳುವುದಕ್ಕೂ ಕಾರಣ ಇದೆ. ದರ್ಶನ್ ಸ್ಟಾರ್ ಆಗಿ ಸಂಭ್ರಮಿಸಿದಾಗೆಲ್ಲ ಪ್ರೇಕ್ಷಕರ ಮುಂದೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರ ಬಣ್ಣದ ಬದುಕಿನ ದಾರಿಗಳು ಕಾಣಿಸಿಕೊಳ್ಳುತ್ತವೆ. ದರ್ಶನ್ ಜನಪ್ರಿಯತೆ ಕಂಡಾಗ ಅವರ ಅಭಿಮಾನಿಗಳಿಗೆ ತೂಗುದೀಪ ಶ್ರೀನಿವಾಸ್ ವಿಲನ್ ಆಗಿ ಅಬ್ಬರಿಸಿದ ದೃಶ್ಯಗಳು ಕಣ್ಮುಂದೆ ಬಂದು ನಿಲುತ್ತವೆ. ಸಿನಿಮಾದಲ್ಲಿ ಅವಕಾಶ ಇಲ್ಲ ಅಂತ ಅವರು ಮತ್ತೆ ನಾಟಕಗಳಲ್ಲಿ ಬ್ಯುಸಿಯಾದ ದಿನಗಳು ನೆನಪಾಗುತ್ತವೆ. ಅಂತಹ ನಟನೊಬ್ಬನ ಮಗ ಕನ್ನಡದ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿರುವಾಗ ಅದರ ವೈಭೋಗ ನೋಡುವುದಕ್ಕೆ ಅವರು ಇರಬೇಕಿತ್ತು ಅನ್ನೋದು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಹಜವಾಗಿಯೇ ಕಾಡುವ ಸಂಗತಿ.
ಅಂದ ಹಾಗೆ, ಈಗ ಇಲ್ಲಿ ತೂಗುದೀಪ ಶ್ರೀನಿವಾಸ್ ಅವರ ಕುರಿತು ಯಾಕೆ ಮಾತು ಅಂತ ನಿಮಗೂ ಅನಿಸಿರಬಹುದು. ಅದಕ್ಕೆ ಕಾರಣವೂ ಇದೆ. ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರಿಗೆ ಇಂದು ಹುಟ್ಟು ಹಬ್ಬ. ಅವರು ಬದುಕಿದ್ದರೆ ದರ್ಶನ್ ಅವರ ಕುಟುಂಬ ಹಾಗೂ ಅವರ ಫ್ಯಾನ್ಸ್ ಅದೆಷ್ಟು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸುತ್ತಿತ್ತೋ ಏನೋ. ಹಾಗಂತ ದರ್ಶನ್ ಫ್ಯಾನ್ಸ್ ಅವರೇನು ಸುಮ್ಮನೆ ಕುಳಿತಿಲ್ಲ.” ತೂಗುದೀಪ ಡೈನೆಸ್ಟಿʼ ಹೆಸರಿನ ಒಂದು ತಂಡ ತೂಗುದೀಪ ಶ್ರೀನಿವಾಸ್ ಅವರನ್ನು ವಿಭಿನ್ನವಾಗಿಯೇ ಸ್ಮರಿಸಿಕೊಂಡಿದೆ. ತೂಗುದೀಪ ಶ್ರೀನಿವಾಸ್ ಅವರ ಹುಟ್ಟು ಹಬ್ಬಕ್ಕೆ ಒಂದು ಸ್ಪೆಷಲ್ ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಮಾಡಿದೆ. ಪ್ರಮೋದ್ ಜೋಯಿಸ್ ಸಾಹಿತ್ಯಕ್ಕೆ ಚೇತನ್ ಕೃಷ್ಣ ಸಂಗೀತ ನೀಡಿದ್ದಾರೆ. ದರ್ಶನ್ ನಾರಾಯಣ್ ಹಾಡಿದ್ದಾರೆ.ʼ ” ಜಯ ಜಯ ತೂಗುದೀಪ ….” ಹೆಸರಿನ ಈ ಸಾಂಗ್ನಲ್ಲಿ ನಟ ತೂಗುದೀಪ ಶ್ರೀನಿವಾಸ್ ಅವರ ಕಲಾ ಸಾಧನೆಯನ್ನು ಬಗೆ ಬಗೆಯಲ್ಲಿ ಬಣ್ಣಿಸಲಾಗಿದೆ.
ಹೌದು, ಕನ್ನಡ ಚಿತ್ರರಂಗ ಕಂಡ ಮಹಾನ್ ಖಳನಟರ ಪೈಕಿ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ಹಾಗಂತ ಅವರು ಬರೀ ಖಳನಟರಲ್ಲ. ಸಹ ನಟ ಹಾಗೆಯೇ ಪೋಷಕ ನಟರೂ ಹೌದು. ಆ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಮಹಾನ್ ಪ್ರತಿಭೆ. ನಟ ತೂಗುದೀಪ ಶ್ರೀನಿವಾಸ್ ಅಂದಾಕ್ಷಣ ಕಟ್ಟು ಮಸ್ತು ದೇಹ, ಅಗಲ ಮುಖ, ಕತ್ತಿನ ಅಂಚಿನ ನೋಟ, ಹುರಿಗೊಳಿಸಿದ ಮೀಸೆ, ಖಡಕ್ ಲುಕ್ ಆಕೃತಿ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಸಹಜ. ಆ ಆಕೃತಿ ನೋಡಿಯೇ ಸಿನಿಮಾ ಮಂದಿ, ವಿಲನ್ಗೆ ನೀವು ಫಿಕ್ಸ್ ಅಂತಲೇ ಅವರಿಗೆ ಹೇಳುತ್ತಿದ್ರಂತೆ. ಆರಂಭದಿಂದಲೂ ವಿಲನ್ ಆಗಿ ಬ್ರಾಂಡ್ ಆದ ಅಪರೂಪದ ನಟ ತೂಗುದೀಪ ಶ್ರೀನಿವಾಸ್. ಅವರ ಬಣ್ಣದ ಬದುಕಿನ ಇಂಟೆರೆಸ್ಟಿಂಗ್ ಸಂಗತಿಗಳಲ್ಲಿ ಮೊದಲು ತುಂಬಾನೆ ಕ್ಯೂರಿಯಾಸಿಟಿ ಮೂಡಿಸಿದ್ದು ಶ್ರೀನಿವಾಸ್ ಎನ್ನುವ ಹೆಸರಿಗೆ ತೂಗುದೀಪ ಎನ್ನುವ ಸಿನಿಮಾ ಶೀರ್ಷಿಕೆಯೂ ಸೇರಿಕೊಂಡಿದ್ದು.
ಆ ಕಥೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ನಟ ತೂಗುದೀಪ ಶ್ರೀನಿವಾಸ್ ಮೊಟ್ಟ ಮೊದಲು ಸಿನಿಮಾಕ್ಕೆ ಬಣ್ಣ ಹಚ್ಚಿದ್ದು ಕೆ.ಎಸ್.ಎಲ್ ಸ್ವಾಮಿ ನಿರ್ದೇಶನದ ” ತೂಗುದೀಪʼ ಚಿತ್ರದಲ್ಲಿ. ಈ ಚಿತ್ರಕ್ಕೆ ಬರುವಾಗ ಅವರ ಹೆಸರು ಶ್ರೀನಿವಾಸ್ ಅಂತಲೇ ಇತ್ತಂತೆ. ಆದ್ರೆ ಆ ಹೊತ್ತಿಗೆ ಆ ಚಿತ್ರದಲ್ಲಿ ಇನ್ನೊಬ್ಬರು ಶ್ರೀನಿವಾಸ್ ಅಂತ ಇದ್ದರು. ಅವ್ರು ಬೇರಾರು ಅಲ್ಲ, ಗಾಯಕ ಪಿ.ಬಿ. ಶ್ರೀನಿವಾಸ್. ಕರೆಯೋದಿಕ್ಕೆ ಇದು ಸ್ವಲ್ಪ ಕನ್ಪ್ಯೂಸ್ ಮೂಡಿಸುತ್ತೆ ಅಂತ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಅವರು, ನಟ ಶ್ರೀನಿವಾಸ್ ಅವರಿಗೆ ಸಿನಿಮಾದ ಶೀರ್ಷಿಕೆಯನ್ನೇ ಮುಂದಿಟ್ಟು “ತೂಗುದೀಪ ಶ್ರೀನಿವಾಸ್ʼ ಅಂತ ಹೆಸರಿಟ್ಟರಂತೆ. ಅಲ್ಲಿಂದ ತೂಗುದೀಪ ಶ್ರೀನಿವಾಸ್ ಎನ್ನುವ ಹೆಸರು ಮನೆ ಮತಾಯಿತು ಅನ್ನೋದು ಹಳೇ ಮಾತು.
“ತೂಗುದೀಪʼ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ನಟ ತೂಗುದೀಪ ಶ್ರೀನಿವಾಸ್ ಅಭಿನಯಿಸಿದ ಚಿತ್ರಗಳ ಸಂಖ್ಯೆ ಬಹಳಷ್ಟು. ಮೇಯರ್ ಮುತ್ತಣ್ಣ , ಬಂಗಾರದ ಮನುಷ್ಯ, ಗಂಧದ ಗುಡಿ, ಕಳ್ಳ-ಕುಳ್ಳ, ಸಾಹಸ ಸಿಂಹ ಸೇರಿದಂತೆ ಲೆಕ್ಕ ಹಾಕುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯೇ ಆದೀತು. ಆ ಕಾಲಕ್ಕೆ ತೂಗುದೀಪ ಶ್ರೀನಿವಾಸ್ ಬಹುಬೇಡಿಕೆಯ ಖಳ ನಟ. ಆ ಕಾಲದಲ್ಲಿ ಕನ್ನಡ ಬೆಳ್ಳಿತೆರೆಗೆ ಖಡಕ್ ವಿಲನ್ ಗಳ ಕೊರತೆಯೇ ಇರಲಿಲ್ಲ. ಅಲ್ಲೊಂದು ದೊಡ್ಡ ಖಳ ನಟರ ದಂಡೇ ಇತ್ತು. ಈ ವಿಲನ್ಗಳ ಗ್ಯಾಂಗ್ಗೆ ತೂಗುದೀಪ ಶ್ರೀನಿವಾಸ್ ಅವರೇ ಡಾನ್ . ಆಗ ಇವರೆಲ್ಲ ಬಹುಬೇಡಿಕೆಯ ಖಳ ನಟರಾಗಿದ್ದರೂ, ಹೀರೋ ಆಗಿಯೋ, ಪೋಷಕ ಪಾತ್ರಗಳಲ್ಲೋ ಮಿಂಚಬೇಕೆನ್ನುವ ಆಸೆ ಇತ್ತೇನೋ. ಯಾಕಂದ್ರೆ ಆ ಹೊತ್ತಿಗೆ ಹೀರೋ ಜತೆಗೆ ಪೋಷಕ ಪಾತ್ರಗಳಿದ್ದ ಬೆಲೆ ವಿಲನ್ ಗಳಿಗೆ ಇರಲಿಲ್ಲ. ಆ ಹೊತ್ತಲ್ಲಿ ಟೈಗರ್ ಪ್ರಭಾಕರ್ ಹೊರತು ಪಡಿಸಿ, ಬಹಳಷ್ಟು ಖಳನಟರು ವಿಲನ್ ಎನ್ನುವುದಕ್ಕೆ ಬ್ರಾಂಡ್ ಆಗಿ, ಸ್ಟಾರ್ ಆಗುವ ಅವಕಾಶಗಳಿಂದ ವಂಚಿತರಾಗಿದ್ದು ಹೌದು.
ಹಾಗಂತ ಅವರ ಕನಸಗಳೇನು ಕಮರಿ ಹೋಗಿಲ್ಲ. ಇವತ್ತು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಖಳನಟರ ಮಕ್ಕಳದ್ದೇ ದರ್ಬಾರ್. ಅದಕ್ಕೆ ಸಾಕ್ಷಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ದಿನಕರ್ ತೂಗುದೀಪ ಸಾಕ್ಷಿ. ಪ್ರತಿಯೊಬ್ಬ ತಂದೆಗೂ ಒಂದು ಕನಸಿರುತ್ತೆ. ತಮ್ಮ ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು, ಸುಖವಾಗಿ ಬಾಳಬೇಕು, ಒಳ್ಳೆಯ ಹೆಸರು ಮತ್ತು ಕೀರ್ತಿ ಸಂಪಾದಿಸಿಕೊಳ್ಬೇಕು ಅಂತ. ವಿಲನ್ ಆಗಿ ಯಶಸ್ಸು ಕಂಡರೂ ಕಲಾವಿದರಾಗಿ ಕಡು ಕಷ್ಟ ಕಂಡಿದ್ದ ತೂಗುದೀಪ ಶ್ರೀನಿವಾಸ್ ಅವರಿಗೂ ಇಂತಹದೊಂದು ಆಷೆ ಇತ್ತಂತೆ. ತಮ್ಮ ಮಕ್ಕಳು ದೊಡ್ಡ ಸ್ಟಾರ್ ಆಗ್ಬೇಕು ಅನ್ನೋದು. ಅಂತೆಯೇ ಇವತ್ತು ದರ್ಶನ್ ಕನ್ನಡದ ಬಹುದೊಡ್ಡ ಸ್ಟಾರ್. ದಿನಕರ್ ಕೂಡ ಕಮ್ಮಿ ಇಲ್ಲ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಕ್ಕಳ ಈ ಸಾಧನೆ ಕಣ್ತುಂಬಿಕೊಳ್ಳುವುದಿಕ್ಕೆ ನಟ ತೂಗುದೀಪ ಶ್ರೀನಿವಾಸ್ ಇಲ್ಲ ಅಂತಂದ್ರು, ಅವರ ಹೆಸರನ್ನು ದರ್ಶನ್ ಹಾಗೂ ದಿನಕರ್ ಇಬ್ಬರು ಅಜರಾಮಾರವಾಗಿಸುತ್ತಿದ್ದಾರೆನ್ನುವುದಕ್ಕೆ ಸಾಕ್ಷಿ “ತೂಗುದೀಪ” ವೇ ಸಾಕು. ಈ ದೀಪ ಇನ್ನಷ್ಟು ಬೆಳಗಲಿ. ಪ್ರಜ್ವಲಿಸಲಿ.
ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ದ್ವಾರಕೀಶ್ ಅವರು ಶುಕ್ರವಾರ ನಿಧನರಾಗಿದ್ದಾರೆ. 80 ವರ್ಷ ವಯಸ್ಸಿನವರಾಗಿದ್ದ ಅಂಬುಜಾ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಎಚ್ಎಸ್ಆರ್ ಲೇಔಟ್ನಲ್ಲಿರುವ ಮನೆಯಲ್ಲೇ ಮೃತಪಟ್ಟಿದ್ದಾರೆ.
ಅಂಬುಜಾ ದ್ವಾರಕೀಶ್
ಮೃತರು ಪತಿ ದ್ವಾರಕೀಶ್ ಸೇರಿದಂತೆ ಐವರು ಗಂಡು ಮಕ್ಕಳನ್ನು ಅಗಲಿದ್ದಾರೆ. ದ್ವಾರಕೀಶ್ ಅವರ ಸಾಧನೆಯ ಹಿಂದೆ ಅಂಬುಜಾ ಅವರ ಕೊಡುಗೆ ಅಪಾರವಾಗಿತ್ತು. ಕಪ್ಪು-ಬಿಳುಪು ಕಾಲದಿಂದಲೂ ದ್ವಾರಕೀಶ್ ಸಿನಿಮಾ ಮಾಡಿದವರು. ಆಗಿನಿಂದಲೂ ದ್ವಾರಕೀಶ್ ಅವರ ಬೆನ್ನಿಗೆ ನಿಂತು, ಸೋಲು-ಗೆಲುವು ಎರಡರಲ್ಲೂ ಅಂಬುಜಾ ಅವರು ಜೊತೆಗಿದ್ದರು. ದ್ವಾರಕೀಶ್ ಅವರ ಏಳು-ಬೀಳಿನಲ್ಲಿ ಜೊತೆಯಾಗಿಯೇ ಇದ್ದ ಅವರು, ಸದಾ ನಗುಮೊಗದಲ್ಲೇ ದ್ವಾರಕೀಶ್ ಅವರಿಗೆ ಧೈರ್ಯ ತುಂಬುತ್ತಿದ್ದರು.
ಮೃತರ ಅಂತ್ಯಕ್ರಿಯೆ, ಶನಿವಾರ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ನೆರವೇರಲಿದೆ ಎಂದು ಅವರ ಹಿರಿಯ ಪುತ್ರ ಯೋಗೇಶ್ ದ್ವಾರಕೀಶ್ ತಿಳಿಸಿದ್ದಾರೆ. ಸಂತಾಪ: ಮೃತರ ಆತ್ಮಕ್ಕೆ ಶಾಂತಿ ಕೋರಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಚಿತ್ರರಂಗದ ಗಣ್ಯರು, ನಿರ್ದೇಶಕ, ನಿರ್ಮಾಪಕರು, ನಿರ್ದೇಶಕ ಸಂಘ, ನಿರ್ಮಾಪಕರ ಸಂಘ ಹಾಗೂ ಕಲಾವಿದರ ಸಂಘ ಸಂತಾಪ ಸೂಚಿಸಿದೆ.
ಚಂದನವನದ ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರ ಹೊಸ ಅವಾತರ ಇದು. ಅವರೀಗ ಮನೋರೋಗ ವೈದ್ಯರು. ಹಾಗಂತ ನಟನೆ, ನಿರ್ಮಾಣ ಅಂತ ಸಿನಿಮಾ ಬದುಕು ಬಿಟ್ಟು ಮೆಂಟಲ್ ಡಾಕ್ಟರ್ ಆಗಿಬಿಟ್ರಾ ಅಂತ ಅಂದುಕೊಳ್ಳಬೇಕಿಲ್ಲ. ನಟಿಯಾಗಿ ಅವರಿಗೀಗ ಸಿಕ್ಕ ಮತ್ತೊಂದು ವಿಭಿನ್ನ ಪಾತ್ರ ಇದು. ಅಂದ ಹಾಗೆ ಈ ಪಾತ್ರಕ್ಕೆ ಅವರು ಬಣ್ಣ ಹಚ್ಚಿರೋದು “ಮೃತ್ಯುಂಜಯʼ ಹೆಸರಿನ ಚಿತ್ರದಲ್ಲಿ.
ಕನ್ನಡ ಸಿನಿಮಾ ಮೃತ್ಯುಂಜಯ ಅಂದಾಕ್ಷಣ ಶಿವರಾಜ್ ಕುಮಾರ್ ಸಿನಿಮಾ ನೆನಪಾಗೋದು ಸಹಜ. ಯಾಕಂದ್ರೆ ತುಂಬಾ ಹಿಂದೆಯೇ ಶಿವರಾಜ್ ಕೂಮಾರ್ ʼಮೃತ್ಯುಂಜಯʼ ನಾಗಿ ಕಾಣಸಿಕೊಂಡಿದ್ರು. ಹಾಗಂತ ನಾವಿಲ್ಲಿ ಹೇಳ್ತಿರೋದು ಈ ಸಿನಿಮಾ ಕಥೆ ಅಲ್ಲ. ಹೊಸಬರ ತಂಡವೊಂದು ಈಗ ಅದೇ ಹೆಸರಲ್ಲಿ ಒಂದು ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದೆ. ಆ ಸಿನಿಮಾದಲ್ಲಿ ಸುಮನ್ ನಗರ್ಕರ್ ಮನರೋಗ ವೈದ್ಯೆ ಆಗಿ ಕಾಣಸಿಕೊಂಡಿದ್ದಾರಂತೆ. ಸಜ್ಜನ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೀತು. ಆ ಮೂಲಕ ಚಿತ್ರದ ತಂಡ ಮಾಧ್ಯಮದ ಮುಂದೆ ಬಂದಾಗ ನಟಿ ಸುಮನ್ ನಗರ್ಕರ್ ತಾವು ಮನೋ ವೈದ್ಯೆಯಾಗಿದ್ದ ಕಥೆ ಬಿಚ್ಚಿಟ್ಟರು.
“ ಮೃತ್ಯುಂಜಯ ಅಂದಾಕ್ಷಣ ಶಿವಣ್ಣ ಅಭಿನಯದ ಶಿನಿಮಾ ನೆನಪಾಗುತ್ತೆ. ಆದ್ರೆ ಆ ಸಿನಿಮಾವೇ ಬೇರೆ, ಈ ಸಿನಿಮಾವೇ ಬೇರೆ, ಇದೊಂದು ಹಾರರ್, ಥ್ರಿಲ್ಲರ್ ಕಥಾ ಹಂದರದ ಸಿನಿಮಾ. ತಂಡದಲ್ಲಿರುವವರು ಹೊಸಬರಾದ್ರೂ ಒಳ್ಳೆಯ ರೀತಿಯಲ್ಲೇ ಸಿನಿಮಾ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನಂಗೆ ಈ ಸಿನಿಮಾ ಅವಕಾಶ ಬಂತು. ಆಗೆಲ್ಲ ಹೊರಗಡೆ ಹೋಗುವುದಕ್ಕೂ ಭಯ ಇತ್ತು. ಆದ್ರೆ ಟೀಮ್ನವ್ರು ತುಂಬಾ ಮುನ್ನೆಚ್ಚರಿಕೆ ವಹಿಸಿ, ಚಿತ್ರೀಕರಣ ಮುಗಿಸಿದ್ರು. ಸ್ಪೆಷಲ್ ಅಂದ್ರೆ ೧೯೨ ಗಂಟೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗೀತುʼ ಅಂತ ನಟಿ ಸುಮನ್ ನಗರ್ಕರ್ ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಚಿತ್ರೀಕರಣದ ಅನುಭವ ಹೇಳಿಕೊಂಡರು.
ಒಂದಷ್ಟು ವರ್ಷಗಳ ಗ್ಯಾಪ್ ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ʼಇಷ್ಟಕಾಮ್ಯʼ ಚಿತ್ರದೊಂದಿಗೆ ನಟಿ ಸುಮನ್ ನಗರ್ಕರ್ ಮತ್ತೆ ಚಂದನವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಂತರ ನಿರೀಕ್ಷೆಯಂತೆ ಅವರು ನಟಿಯಾಗಿ ಬ್ಯುಸಿ ಆಗಿದ್ದಾರೆ. ಮೃತ್ಯುಂಜಯ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದಾರಂತೆ. ಅವೆಲ್ಲ ಈಗ ರಿಲೀಸ್ ಗೆ ರೆಡಿ ಆಗಿವೆ. ಹಾಗೆಯೇ ಅವರು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಬ್ರು ನಂತರ ಬ್ರಾಹ್ಮೀ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ, ಅದರ ರಿಲೀಸ್ ಗೂ ಸಿದ್ಧತೆ ನಡೆಸಿದ್ದಾರೆ. ಆದರೆ ಕೊರೋನಾ ಪರಿಸ್ಥಿತಿ ಅವರಲ್ಲೂ ಆತಂಕ ಸೃಷ್ಟಿಸಿದೆ.
“ ಎಲ್ಲವೂ ಸರಿಹೋಯ್ತು ಅನ್ನುವಷ್ಟರಲ್ಲಿಯೇ ಈಗ ಕೊರೋನಾ ಮತ್ತೆ ಹೆಚ್ಚಾಗಿದೆ. ಜನರ ಜೀವನದ ಜತೆಗೆ ಚಿತ್ರೋದ್ಯಮದ ಪರಿಸ್ಥಿತಿಯೂ ಹದಗೆಡುತ್ತಿದೆ. ಸಿನಿಮಾ ನಿರ್ಮಾಣ ಮಾಡಿ, ರಿಲೀಸ್ ಗೆ ಕಾಯುತ್ತಿದ್ದೇವೆ. ಅದರ ಮೇಲೆ ಸಾಕಷ್ಟು ಬಂಡವಾಳವೂ ಹಾಕಿದ್ದೇವೆ. ಆದರೆ ಅದರ ರಿಲೀಸ್ ಗೆ ಒಳ್ಳೆಯ ಸಮಯವೇ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಆದರೆ, ಸಿನಿಮಾಗಳ ಗತಿಯೇನೋ ಅನ್ನೋದು ಆತಂಕ ನಿರ್ಮಾಣವಾಗಿದೆʼ ಎನ್ನುತ್ತಾರವರು. ಸದ್ಯಕ್ಕೆ ನಟನೆಯಲ್ಲಿ ಬ್ಯುಸಿ ಆಗಿರುವ ಅವರು, ಹೊಸ ಅವಕಾಶಗಳತ್ತ ಮುಖ ಮಾಡಿದ್ದು, ಒಳ್ಳೆಯ ಪಾತ್ರಗಳು ಸಿಕ್ಕರೆ ಹೊಸಬರ ಸಿನಿಮಾಗಳಲ್ಲೂ ನಾನು ಅಭಿನಯಿಸಲು ರೆಡಿ ಎನ್ನುತ್ತಾರೆ ನಟಿ ಸುಮನ್ ನಗರ್ಕರ್.
ನಟ, ನಿರ್ದೇಶಕ ಕಿಚ್ಚ ಸುದೀಪ್, ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಅವರ ಅರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎಂಬುದಾಗಿ ಹರಡಿರುವ ಸುದ್ದಿಗಳಿಗೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಆರೋಗ್ಯದ ಕುರಿತು ಸ್ವತಃ ಸುದೀಪ್ ಅವರೇ ಆರೋಗ್ಯ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ವಾರ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.ಸದ್ಯಕ್ಕೆ ತಮಗೆ ಏನಾಗಿದೆ ಎನ್ನುವುದರ ಕುರಿತು ನಿಖರವಾಗಿ ಏನನ್ನು ತಿಳಿಸಿಲ್ಲ. ಹಾಗೆಯೇ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಒಂದಷ್ಟು ಅನಾರೋಗ್ಯದಲ್ಲಿದ್ದೇನೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.
”ಅನಾರೋಗ್ಯದಿಂದ ಬಳಲುತ್ತಿದ್ದರು ವಾರಾಂತ್ಯದೊಳಗೆ ಚೇತರಿಸಿಕೊಳ್ಳುವ ನಂಬಿಕೆ ಇದೆ. ಆದರೆ, ವೈದ್ಯರ ಸಲಹೆಯ ಮೇರೆಗೆ ನಾನು ಸ್ವಲ್ಪ ಹೆಚ್ಚು ವಿಶ್ರಾಂತಿ ಪಡೆಯಬೇಕಿದೆ” ಎಂದು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ನಟ ಕಿಚ್ಚ ಸುದೀಪ್ ಕಲರ್ಸ್ ಕನ್ನಡದ ಬಿಗ್ ಬಾಸ್ ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಹಾಗೆಯೇ ಈಗಷ್ಟೇ ಅವರು ವಿಕ್ರಾಂತ್ ರೋಣ ಹಾಗೂ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇವೆರೆಡು ಚಿತ್ರಗಳು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿವೆ. ವಿಕ್ರಾಂತ ರೋಣ ಚಿತ್ರ ತಂಡ ಅದರ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಆಗಸ್ಟ್19 ಕ್ಕೆ ವಿಕ್ರಾಂತ್ ರೋಣ ತೆರೆಗೆ ಬರುತ್ತಿದೆ. ಮತ್ತೊಂದೆಡೆ ಕೋಟಿಗೊಬ್ಬ 3 ಚಿತ್ರದ ತಂಡ ಯುಗಾದಿ ಹಬ್ಬಕ್ಕೆ ಸ್ಪಷಲ್ ಪೋಸ್ಟರ್ ಲಾಂಚ್ ಮಾಡಿದೆ. ಉಳಿದಂತೆ ಈಗ ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಅನಾರೋಗ್ಯದ ನಡುವೆಯೂ ಹಾಜರಾಗುತ್ತಾರಾ ಅನ್ನೋದು ಕುತೂಹಲ ಹುಟ್ಟಿಸಿದೆ. ಸದ್ಯಕ್ಕೆ ಈ ವಾರ ಅವರ ಜಾಗಕ್ಕೆ ಬೇರೊಬ್ಬರು ಬರುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿಬಂದಿವೆ.ಈ ಮಧ್ಯೆ ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಅಂತ ಸೋಷಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.
ಕನ್ನಡದ ಬಹುನಿರೀಕ್ಷಿತ ಸುದೀಪ್ ಅಭಿನಯದ “ವಿಕ್ರಾಂತ್ ರೋಣ” ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ಕುತೂಹಲ ಮೂಡಿಸುತ್ತಲೇ ಇತ್ತು. ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್ವರೆಗೂ ಸಿನಿಮಾ ಜೋರು ಸದ್ದು ಮಾಡಿತ್ತು. ಯಾವಾಗ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತೋ ಎಂದು ಕಾದು ಕುಳಿತಿದ್ದವರಿಗೆ ಈಗ ಸ್ವತಃ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ. ಹೌದು, “ವಿಕ್ರಾಂತ್ ರೋಣ” ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ ಸುದೀಪ್. ತಮ್ಮ ಟ್ವಿಟ್ಟರ್ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, “ವಿಕ್ರಾಂತ್ ರೋಣ” ಸಿನಿಮಾದ ಚಿತ್ರೀಕರಣ ಸಿದ್ದತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ! “ವಿಕ್ರಾಂತ ರೋಣ” ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ” ಎಂದು ತಿಳಿಸಲು ನಮ್ಮ “ವಿಕ್ರಾಂತ್ ರೋಣ” ತಂಡವು ಹರ್ಷಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಚಿತ್ರಕ್ಕೆ ಮೊದಲು “ಪ್ಯಾಂಟಮ್” ಎಂಬ ಶೀರ್ಷಿಕೆ ಇತ್ತು. ಅದನ್ನು ಬದಲಿಸಿ, “ವಿಕ್ರಾಂತ್ ರೋಣ” ಎಂದು ನಾಮಕರಣ ಮಾಡಲಾಯಿತು. ದುಬೈನ ಅತೀ ಎತ್ತರದ ಬುರ್ಜಾ ಖಲೀಫ ಮೇಲೆ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಾಯಿತು. ಟೈಟಲ್ ಎಷ್ಟು ಫೋರ್ಸ್ ಆಗಿದೆಯೋ, ಕಥೆ ಮತ್ತು ಪಾತ್ರ ಕೂಡ ಅಷ್ಟೇ ಫೋರ್ಸ್ ಆಗಿದೆ ಎಂಬ ನಂಬಿಕೆ ಸುದೀಪ್ ಅವರಿಗಿದೆ.
ಇನ್ನು, ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಅವರ ನಿರ್ಮಾಣ ಈ ಚಿತ್ರಕ್ಕಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಸದ್ಯಕ್ಕೆ “ವಿಕ್ರಾಂತ್ ರೋಣ” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದ ಸುದೀಪ್ ಫ್ಯಾನ್ಸ್ಗೆ ಈಗ ಆಗಸ್ಟ್ ೧೯ ಡೇಟ್ ಕಣ್ಣೆದುರಲ್ಲೇ ಬಂದಂತಾಗಿರುವುದು ಸತ್ಯ. ಅಂದಹಾಗೆ, ಆಗಸ್ಟ್. ೧೯ ಗುರುವಾರ. ಅಂದೇ ಚಿತ್ರವನ್ನು ದೇಶಾದ್ಯಂತ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಅಪ್ಪು ಬದಲಾದ್ರಾ ? ಗೊತ್ತಿಲ್ಲ. ಸದ್ಯಕ್ಕೆ ಹಾಗೊಂದು ಮುನ್ಸೂಚನೆ ಸಿಕ್ಕಿದೆ. ನಿರ್ದೇಶಕ ಲೂಸಿಯಾ ಪವನ್ ಕುಮಾರ್ ಹಾಗೂ ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಒಂದಾಗಿದ್ದಾರೆಂದ್ರೆ ಸಮಥಿಂಗ್ ಈಸ್ ಚೇಂಜ್ ಅಂತಲೇ ಹೌದು. ಅದೆಲ್ಲ ಹೇಗೆ ಎನ್ನುವುದಕ್ಕಿಂತ ನಟ ಪುನೀತ್ ರಾಜ್ ಕುಮಾರ್ ಅವರ ಪಾಲಿಗಂತೂ ಇದೊಂಥರ ಕಾಕತಾಳೀಯ. ಎಲ್ಲವೂ ಟೈಮ್ ಅಂತಾರಲ್ಲ ಹಾಗಿದೆ ಈ ಸಂದರ್ಭ. ʼಯುವರತ್ನʼ ರಿಲೀಸ್ ಆಗಿ ಹೆಚ್ಚು ಕಡಿಮೆ ಹದಿನೈದು ಆಗುತ್ತಾ ಬಂದಿವೆ. ಚಿತ್ರ ತಂಡ ಏನೇ ಹೇಳಿಕೊಂಡರೂ, ಪುನೀತ್ ಅವರ ಇಮೇಜ್ ತಕ್ಕಂತೆ ಈ ಚಿತ್ರಕ್ಕೆ ದೊಡ್ಡ ಸಕ್ಸಸ್ ಸಿಗಲೇ ಇಲ್ಲ. ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಅಂತೆನ್ನುವುದರ ಜತೆಗೆ ಚಿತ್ರಕ್ಕೆ ಹಾಕಿದ ಹಣ ವಾಪಾಸ್ ಬಂತು ಅಂತ ಚಿತ್ರತಂಡ ಹೇಳಿಕೊಂಡರೂ, ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಹೋಗಿಲ್ಲ ಅನ್ನೋದು ಅಷ್ಟೇ ಸತ್ಯ.
ಅಪ್ಪು ಸಿನಿಮಾ ಅಂದ್ರೆ ಬೇರೆನು ಹೇಳಬೇಕಿಲ್ಲ. ಒಂದೊಳ್ಳೆಯ ಕಥೆಯ ಜತೆಗೆ ಫೈಟ್ಸು, ಸಾಂಗ್ಸು, ಡಾನ್ಸು ಸೇರಿದಂತೆ ಮನರಂಜನೆಯ ಎಲ್ಲಾ ಅಂಶಗಳಿಗೆ ಮೋಸವೇ ಇರೋದಿಲ್ಲ. ಹಾಗಾಗಿಯೇ “ಯುವರತ್ನʼ ಮೇಲೂ ಫ್ಯಾನ್ಸಿಗೆ ದೊಡ್ಡ ನಿರೀಕ್ಷೆ ಇದ್ದೇ ಇತ್ತು. ಅದರ ಜತೆಗೆ ಹೊಂಬಾಳೆ ಫಿಲಂಸ್ ನಿರ್ಮಾಣ ಸಿನಿಮಾ. ಹಾಗೆಯೇ ʼರಾಜಕುಮಾರʼ ಚಿತ್ರದ ನಂತರ ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್ ಇಲ್ಲಿ ಮತ್ತೆ ಒಂದಾಗಿದ್ದಾರೆ ಅಂತಲೂ ಫ್ಯಾನ್ಸ್ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದಿದ್ದರು. ಅದೆಲ್ಲ ಈಗ ಬಹುತೇಕ ಹುಸಿ ಆಯಿತು. ಕೊರೋನಾ ಸಂದರ್ಭವೋ, ಸನ್ನಿವೇಶಗಳೋ ಎನೇ ಅಂತಂದ್ರುಕೊಂಡ್ರು ಫಲಿತಾಂಶ ಕಣ್ಣೆದುರೇ ಇದೆ. “ಯುವರತ್ನ’ ರಿವೀವ್ಯೂ ಕುರಿತು ಸೋಷಲ್ ಮೀಡಿಯಾದಲ್ಲಿ ಈಗಲೂ ದೊಡ್ಡ ಚರ್ಚೆ ನಡೆಯುತ್ತಿದೆ. ಪಾಸಿಟಿವ್ಕ್ಕಿಂತ ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗಿ ಬಂದಿವೆ.
ಹೌದು, ಪುನೀತ್ ಅಭಿನಯದ ಸಿನಿಮಾಗಳ ಪೈಕಿ ಯಾವ ಸಿನಿಮಾಕ್ಕೂ ಹೀಗೊಂದು ರೆಸ್ಪಾನ್ಸ್ ಸಿಕ್ಕಿರಲಿಲ್ಲ. ದೊಡ್ಡ ನಿರೀಕ್ಷೆಯೇ ಇಲ್ಲಿ ಹುಸಿಯಾಗಿದೆ. ಫ್ಯಾನ್ಸ್ ಗಳೇ ಸಿನಿಮಾದ ಕಥೆ ಬಗ್ಗೆ ತಕರಾರು ಎತ್ತಿಬಿಟ್ಟರು. ಸೋಷಲ್ ಮೀಡಿಯಾದಲ್ಲಿ ಈ ಚಿತ್ರದ ರಿವಿವ್ಯೂ ಕುರಿತೇ ದೊಡ್ಡ ಚರ್ಚೆ ನಡೆದಿದೆ. ಪುನೀತ್ ಅವರ ಇಮೇಜ್ಗೆ ಇದು ದೊಡ್ಡ ಸೋಲು ಅಂತಲೂ ವಿಶ್ಲೇಷಣೆ ಮಾಡಲಾಯಿತು. ಹಾಗೆಯೇ ಅಪ್ಪು ಗೆ ಇದು ಬದಲಾಗುವ ಕಾಲ ಅಂತಲೂ ಸಿನಿಮಾ ಪ್ರೇಕ್ಷಕರು ಸೋಷಲ್ ಮೀಡಿಯಾದಲ್ಲಿ ಸಲಹೆ ಕೊಟ್ಟರು. ಆದ್ರೆ ಅಪ್ಪು ಅಂದ್ರೆ ಬರೀ ಹೀರೋ ಅಲ್ಲ, ಪವರ್ಫುಲ್ ಕಮರ್ಷಿಯಲ್ ಹೀರೋ. ನೋ ಡೌಟ್, ಪುನೀತ್ ಅಂದ್ರೆ ಕನ್ನಡದ ಪಕ್ಕಾ ಕಮರ್ಷಿಯಲ್ ಹೀರೋ. ಅವರ ಮೇಲೆ ಬಂಡವಾಳ ಹಾಕಿದವರೆಲ್ಲ ಲಾಸ್ ಅಂತ ಹೇಳಿದ್ದೇ ಇಲ್ಲ. ಅವರ ಸಿನಿಮಾ ಸೋತಿದ್ದೇ ಇಲ್ಲ. ಕಮರ್ಷಿಯಲ್, ಕಲೆಕ್ಷನ್ ಆಚೆಗೆ ಸಿನಿಮಾ ಪ್ರೇಕ್ಷಕರಿಗೂ ಅಪ್ಪು ಸಿನಿಮಾ ಬೇಸರ ಮೂಡಿಸಿದ್ದೇ ಇಲ್ಲ.
ಪಕ್ಕಾ ಪ್ರೇಮಕಥೆಗಳಲ್ಲಿ ಅಪ್ಪು ಹೀರೋ ಅಗಿ ಕಾಣಸಿಕೊಂಡರೂ, ನಾನಾ ಪಾತ್ರಗಳ ಮೂಲಕ ತೆರೆ ಮೇಲೆ ತಮ್ಮದೇ ಖದರ್ ತೋರಿಸಿ ಅಭಿಮಾನಿಗಳನ್ನು ಭರಪೂರ ರಂಜಿಸಿದ ನಟ ಅವರು. ಆದರೆ ಅವೆಲ್ಲವೂ ಕಮರ್ಷಿಯಲ್ ಚಿತ್ರಗಳೆನ್ನುವುದು ಹೌದು. ಹಾಗಾದ್ರೆ, ಅಪ್ಪು ಬರೀ ಕಮರ್ಷಿಯಲ್ ಹೀರೋನಾ ? ಇಲ್ಲ, ” ಮೈತ್ರಿʼ ಯಂತಹ ಒಂದು ಪ್ರಯೋಗಾತ್ಮಕ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಅಲ್ಲಿಂದ ಅಪ್ಪು ಹಾಗೆಲ್ಲ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ಥಾರೆನ್ನುವ ನಿರೀಕ್ಷೆಯ ನಡುವೆಯೇ, ಮತ್ತೆ ತಮ್ಮದೇ ಕಂಪರ್ಟ್ ಝೋನ್ ಗೆ ಬಂದು ನಿಂತಿದ್ದು ಹಳೇ ಮಾತು. ಅದೇ ದಾರಿಯಲ್ಲಿಯೇ ಬಂದಿದ್ದು ʼಯುವರತ್ನʼ ಚಿತ್ರ ಕೂಡ. ಅದೇನೋ ಗೊತ್ತಿಲ್ಲ. ಪುನೀತ್ ಈಗ ಬದಲಾಗಿದ್ದಾರೆ. ಲೂಸಿಯಾ ಪವನ್ ಕುಮಾರ್ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಪವನ್ ಜತೆಗೆ ಸಿನಿಮಾ ಮಾಡುತ್ತಾರಂದ್ರೆ ಅಪ್ಪು ಬದಲಾಗಲೇಬೇಕು. ಯಾಕೆ ಗೊತ್ತಾ ?
ಲೂಸಿಯಾ ಪವನ್ ಕುಮಾರ್ ಅಂದ್ರೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಡಿಫೆರೆಂಟ್ ಕಾನ್ಸೆಫ್ಟ್ ಮೂಲಕ. ಎಲ್ಲರದ್ದೂ ಒಂದು ದಾರಿಯಾದರೆ ಅವರದ್ದೇ ಇನ್ನೊಂದು ದಾರಿ. ವಿಭಿನ್ನ ಕಥಾ ಹಂದರದ ಲೂಸಿಯಾ ಸಿನಿಮಾ ಮಾಡಿದಾಗ ಇವರಾರು ಪವನ್ ಕುಮಾರ್ ಅಂತಂದ್ರು ಸಿನಿಮಾ ಮಂದಿ. ಕೊನೆಗೆ ಈ ಸಿನಿಮಾ ದೊಡ್ಡದಾಗಿ ಸದ್ದು ಮಾಡಿದಾಗ ಪವನ್ ಕುಮಾರ್ ಪರಿಚಯವಾಗಿದ್ದು ಒಬ್ಬ ಟ್ಯಾಲೆಂಟೆಡ್ ನಿರ್ದೇಶಕರಾಗಿ. ಅಲ್ಲಿಂದ ಯೂಟರ್ನ್ ಬಂದಾಗಲೂ ಅದು ಮತ್ತೊಮ್ಮೆ ಸಾಬೀತು ಆಯಿತು. ಹೊಸ ಬಗೆಯ ಕಥೆ, ಡಿಫೆರೆಂಟ್ ನರೇಷನ್ ಮೂಲಕವೇ ಪವನ್ ಕುಮಾರ್ ನಿರ್ದೇಶನದಲ್ಲಿ ಮ್ಯಾಜಿಕ್ ಮಾಡಿದ್ರು. ಒಂದೇ ಮಾತಿನಲ್ಲಿ ಹೇಳೋದಾದ್ರೆ ಪವನ್ ಸಿನಿಮಾದಲ್ಲಿ ಕಥೆಯೇ ಸ್ಟಾರ್. ಹಾಗಾದ್ರೆ ಪವರ್ ಸ್ಟಾರ್ ಕಥೆ ಏನು ? ನಾವು ನಟ ಪುನೀತ್ ಈಗ ಬದಲಾಗಿದ್ದಾರೆ ಅಂತ ನಾವು ಹೇಳಿದ್ದೇ ಇದೇ ಕಾರಣಕ್ಕೆ.
“ಯುವರತ್ನʼ ಚಿತ್ರಕ್ಕೆ ಬಂದ ಮಿಕ್ಸ್ ರೆಸ್ಪಾನ್ಸ್ ಬೆನ್ನಲೇ ಹೀಗೊಂದು ನಿರ್ಧಾರ ಮಾಡಿಕೊಂಡಿರಲಿಕ್ಕೂ ಸಾಕು. ಈಗವರು ಕಥೆಗೆ ಹೆಚ್ಚು ಒತ್ತು ನೀಡುವುದಕ್ಕೆ ಮುಂದಾಗಿದ್ದಾರೆ. ತಾವು ಸ್ಟಾರ್ ಎನ್ನುವುದಕ್ಕಿಂತ ಕಥೆಯೇ ಸ್ಟಾರ್ ಆಗಿರಬೇಕೆನ್ನುವ ಆಧಾರದಲ್ಲಿ ಪವನ್ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರಂತೆ ಪವರ್ ಸ್ಟಾರ್. ಅದೇ ಕಾರಣಕ್ಕೆ ಕುತೂಹಲ ಹುಟ್ಟಿಸಿದೆ ಹೊಂಬಾಳೆ ಫಿಲಂಸ್ ನಿರ್ಮಾಣದ ೯ ನೇ ಚಿತ್ರ. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಇದು ನಾಲ್ಕನೇ ಚಿತ್ರ. ನಿನ್ನಿಂದಲೇ, ರಾಜ ಕುಮಾರ, ಯುವರತ್ನ ಚಿತ್ರಗಳ ನಂತರವೀಗ ಈಗ ಪವನ್ ಕುಮಾರ್ ಕಾಂಬಿನೇಷನಲ್ಲಿ ನಾಲ್ಕನೇ ಚಿತ್ರ. ಯುಗಾದಿ ಹಬ್ಬಕ್ಕೆ ಇದು ಅಧಿಕೃತವಾಗಿ ಅನೌನ್ಸ್ ಆಗಿದೆ. ಪವರ್ ಸ್ಟಾರ್ ಜತೆಗೆ ಯಾರೆಲ್ಲ ಇರುತ್ತಾರೆ ? ಉಳಿದ ಟೆಕ್ನಿಷಿಯನ್ ಯಾರು? ಇದು ಶುರುವಾಗುವುದು ಯಾವಾಗ? ಅದೆಲ್ಲದರ ಮಾಹಿತಿ ಇಷ್ಟರಲ್ಲಿಯೇ ರಿವೀಲ್ ಆಗಲಿದೆಯಂತೆ. ಸದ್ಯಕ್ಕೆ ಪವರ್ ಸ್ಟಾರ್ ಹಾಗೂ ಪವನ್ ಕುಮಾರ್ ತೆರೆ ಮೇಲೆ ಹೇಗೆಲ್ಲ ಮ್ಯಾಜಿಕ್ ಮಾಡಬಹುದು ಅನ್ನೋದಷ್ಟೇ ಕುತೂಹಲ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನೈಜ ಘಟನೆ ಆಧರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಬದನವಾಳು” ಚಿತ್ರವೂ ಸೇರಿದೆ. ಹೌದು, ಹಳೇ ಮೈಸೂರು ಪ್ರಾಂತ್ಯಕ್ಕೆ ಅಂಟಿಕೊಂಡಿರುವ “ಬದನವಾಳು” ಗ್ರಾಮದ ಒಟ್ಟು ವ್ಯವಸ್ಥೆಯನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗುತ್ತಿದೆ. ಅಂದಹಾಗೆ ಇದು, ಮೆಳೇಕೋಟೆ ಟೂರಿಂಗ್ ಟಾಕೀಸ್ ಹಾಗು ಸಿನಿಮಾ ಮಾರ್ಕೆಟ್ ಬ್ಯಾನರ್ನಡಿಯಲ್ಲಿ ತಯಾರಾದ ಚಿತ್ರ. ಉದಯ್ ಪ್ರಸನ್ನ ಈ ಚಿತ್ರದ ನಿರ್ದೇಶಕರು. ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ ಕುಮಾರ್ ಮತ್ತು ಪ್ರೇಮ ಚಂದ್ರಯ್ಯ (ನಾಗಸಂದ್ರ) ನಿರ್ಮಾಪಕರು. ಚಿತ್ರದಲ್ಲಿ ರಾಜ್ ಮಂಜು ನಾಯಕರಾಗಿ ಕಾಣಿಸಿಕೊಂಡರೆ, ಬಿಂದುಶ್ರೀ ನಾಯಕಿಯಾಗಿದ್ದಾರೆ.
ಸಾಮಾಜಿಕ ವ್ಯವಸ್ಥೆಯ ದಾರಿದ್ರ್ಯವನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಜಾತಿ ವ್ಯವಸ್ಥೆಯಲ್ಲಿ ಮೇಲು-ಕೀಳು, ಅಸ್ಪೃಶ್ಯತೆಯಲ್ಲಿ ಅರಳುವ ಪ್ರೀತಿ, ಮಾನಸಿಕ ದಾರಿದ್ರ್ಯಕ್ಕೆ ಅಂಟಿಕೊಂಡಿರುವ ಪ್ರೇಮ ವೈಫಲ್ಯ, ನೀಚ ರಾಜಕಾರಣಿಗಳು ಯಾವ ರೀತಿ ಯುವ ಪಿಳಿಗೆಯನ್ನು ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ, ದೇವರ ಹೆಸರಲ್ಲಿ ಹೇಗೆಲ್ಲಾ ಮೋಸ ನಡೆಯುತ್ತೆ, ಹೀಗೆ ಹಲವು ಪ್ರಮುಖ ಅಂಶಗಳನ್ನು ವಾಸ್ತವವಾಗಿ ಕಟ್ಟಿಕೊಡುವ ಕೆಲಸಕ್ಕೆ ನಿರ್ದೇಶಕರು ಮುಂದಾಗಿದ್ದಾರೆ.
ಏಪ್ರಿಲ್ 15ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಈಗಿನ ವಾಸ್ತವತೆಗೆ ಹತ್ತಿರವಾದಂತಹ ಅಂಶಗಳು ಸಿನಿಮಾದಲ್ಲಿದ್ದು, ಮುಖ್ಯವಾಗಿ ಇಲ್ಲಿ ಪ್ರೀತಿ, ಜಾತಿ, ಅಂತಸ್ತು ಸೇರಿದಂತೆ ಇನ್ನಿತರೆ ಪ್ರಮುಖ ಅಂಶಗಳು ಹೈಲೈಟ್ ಎಂಬುದು ಚಿತ್ರತಂಡದ ಮಾತು.
ಕನ್ನಡದ ಸ್ಪುರದ್ರೂಪಿ ನಟ ಅಂದಾಕ್ಷಣ ನೆನಪಾಗೋದೇ “ನೆನಪಿರಲಿ” ಪ್ರೇಮ್. ಹೌದು, ಎಂದೂ ವಯಸ್ಸೇ ಬತ್ತದಂತಿರುವ ಸ್ಮೈಲ್ ಹೀರೋ ಪ್ರೇಮ್ ಈಗ ಪ್ರೇಮ ಪೂಜೆಯ ಜಪದಲ್ಲಿದ್ದಾರೆ. ಪ್ರೇಮ್ ಕನ್ನಡ ಚಿತ್ರರಂಗದ ಲವ್ಲಿಸ್ಟಾರ್ ಎಂಬ ಮಾತಿಗೆ ಹೇಳಿ ಮಾಡಿಸಿದ ಸ್ಟಾರ್ ಅನ್ನೋದು ಸತ್ಯ. ಇಷ್ಟು ವರ್ಷಗಳ ಕಾಲ ಎಲ್ಲಾ ಬಗೆಯ ಚಿತ್ರಗಳನ್ನು ನೀಡಿರುವ ಪ್ರೇಮ್, ಯುವ ಮನಸ್ಸುಗಳ ಅದರಲ್ಲೂ ಹುಡುಗಿಯರ ಫೇವರೇಟ್ ಹೀರೋ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪ್ರೇಮ್ ಅವರ ಸಿನಿ ಜರ್ನಿಯನ್ನೊಮ್ಮೆ ಹಿಂದಿರುಗಿ ನೋಡಿದರೆ, ಅಲ್ಲಿ ಗೆಲುವಿದೆ, ಸೋಲೂ ಇದೆ. ಖುಷಿಯ ಹೆಜ್ಜೆಯೂ ಇದೆ. ನೋವಿನ ಹಾಡೂ ಇದೆ. ಆದರೆ, ಇವೆಲ್ಲವನ್ನೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿ, ಸಾಧನೆಯ ಮೆಟ್ಟಿಲೇರಿದ ಬ್ಯೂಟಿಫುಲ್ ಹೀರೋ ಎಂಬುದು ನೆನಪಿರಲಿ. ಇಷ್ಟಕ್ಕೂ ಈಗ ಈ ಪ್ರೇಮ್ ಕುರಿತು ಇಷ್ಟೋಂದು ಪೀಠಿಕೆ ಯಾಕೆ ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಅವರ ಬಹು ನಿರೀಕ್ಷೆಯ “ಪ್ರೇಮಂ ಪೂಜ್ಯಂ”.
ಹೌದು, ಇದು ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಸದ್ಯ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ, ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರದ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್ ಲವ್ಸ್ಟೋರಿ ಅಂತ. ಪ್ರೇಮ್ ಅವರ ಈವರೆಗಿನ ಲವ್ಸ್ಟೋರಿ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಗೆಲುವಿನ ಗೆರೆಗಳದ್ದೇ ಆರ್ಭಟ. ಆ ಆರ್ಭಟ ಪ್ರೇಮಂ ಪೂಜ್ಯಂವರೆಗೂ ಮುಂದುವರೆಯೋ ಸೂಚನೆ ಈಗಾಗಲೇ ಸಿಕ್ಕಿದೆ ಕೂಡ. ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಯುಗಾದಿ ವಿಶೇಷ ಎಂಬಂತೆ ಚಿತ್ರದ ಟೈಟಲ್ ಸಾಂಗ್ ಲಿರಿಕಲ್ ವಿಡಿಯೊ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿದೆ. ಅಷ್ಟೇ ಅಲ್ಲ, ಮೆಚ್ಚುಗೆಗೂ ಪಾತ್ರವಾಗಿದೆ.
ಪ್ರೇಮಂ ಪೂಜ್ಯಂ. ದೈವಂ ಚರಣಂ ನಿತ್ಯಂ ನಿಲಯಂ ಸತ್ಯಂ ವರದಂ… ಹೀಗೆ ಸಾಗುವ ಟೈಟಲ್ ಸಾಂಗ್ ಲಿರಿಕಲ್ ವಿಡಿಯೋ ನಿಜಕ್ಕೂ ಖುಷಿ ಕೊಡುತ್ತದೆ. ಪ್ರೀತಿಯ ಮಜಲುಗಳ ಬಗ್ಗೆ ಸಾರುವ ಸಾಹಿತ್ಯದಲ್ಲಿ ಒಂದ್ರೀತಿ ಲವ್ಲಿ ಸ್ಪರ್ಶವಿದೆ. ಕೆಡಂಬದಿ ಕ್ರಿಯೇಷನ್ಸ್ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.
ಡಾ.ರಾಘವೇಂದ್ರ ಬಿ.ಎಸ್. ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ. ಹರಿಹರನ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೈಟಲ್ ಸಾಂಗ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ಸಾರವಿದೆ.
ಕಿವಿಗಿಂಪೆನಿಸುವ ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಯೂಥ್ಸ್ಗೊಂದು ಪ್ರೀತಿಯ ಹಾಡಾಗಿ ಉಳಿಯುವುದರಲ್ಲಿ ಅಚ್ಚರಿ ಇಲ್ಲ. ಇನ್ನು, ಈ ಚಿತ್ರದ ಪೋಸ್ಟರ್ ನೋಡಿದವರಿಗೆ ಪ್ರೇಮ್ ಮತ್ತಷ್ಟು ನ್ಯೂ ಲುಕ್ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್ ಲೊಕೇಷನ್ ಜೊತೆ ಅಷ್ಟೇ ಕ್ಯೂಟ್ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ಹರೀಶ್ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್ ಕೆಡಂಬದಿ, ಡಾ.ರಾಜಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ನಿರ್ಮಾಪಕರು.
ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ ೨೫ನೇ ಹೊಸ್ತಿಲಲ್ಲಿ ಇರುವ ಪ್ರೇಮ್, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರ. ಇಲ್ಲಿ ಪ್ರೀತಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಅದೇ ಪ್ರೇಮಂ ಪೂಜ್ಯಂ ವಿಶೇಷ. ಒಂದಂತೂ ನಿಜ.
ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳ ಕಾಲ ಸೋಲು-ಗೆಲುವನ್ನು ಕಂಡು ಇಂದಿಗೂ ರನ್ನಿಂಗ್ನಲ್ಲಿರುವುದು ಸುಲಭದ ಮಾತಲ್ಲ. ಪ್ರೇಮ್ ಆ ವಿಷಯದಲ್ಲಿ ಅದೃಷ್ಟವಂತರು. ಆರಂಭದಲ್ಲೇ ಯಶಸ್ಸು ಕಂಡ ಪ್ರೇಮ್, ಸಾಲು ಸಾಲು ಸಿನಿಮಾಗಳ ಮೂಲಕ ಗಮನಸೆಳೆದರು. ಹುಡುಗಿಯರ ಪಾಲಿಗಂತೂ ಲವ್ಲಿ ಸ್ಟಾರ್ಆಗಿಯೇ ಉಳಿದಿರುವ ಪ್ರೇಮ್ ಅವರ “ಪ್ರೇಮಂ ಪೂಜ್ಯಂ” ನೋಡಲು ತುದಿಗಾಲ ಮೇಲೆ ನಿಂತಿರೋದಂತೂ ಸತ್ಯ. ಸದ್ಯಕ್ಕೆ “ಪ್ರೇಮಂ ಪೂಜ್ಯಂ. ದೈವಂ ಚರಣಂ, ನಿತ್ಯಂ ನಿಲಯಂ, ಸತ್ಯಂ ವರದಂ… ಹಾಡು ಗುನುಗುತ್ತಿದ್ದಾರೆ ಅವರ ಫ್ಯಾನ್ಸ್.
ಸ್ಯಾಂಡಲ್ವುಡ್ ನಲ್ಲಿ ಇ ಕೆ ಫಿಕ್ಚರ್ಸ್ ಅಂದಾಕ್ಷಣ ನೆನಪಾಗೋದು ʼಮೊಗ್ಗಿನ ಮನಸುʼ ಹಾಗೂ ʼಮುಂಗಾರು ಮಳೆ 2 ʼ ಚಿತ್ರ. ಅವೆರೆಡು ಬ್ಲಾಕ್ ಬಸ್ಟರ್ ಚಿತ್ರಗಳೇ. ನಿರ್ಮಾಪಕರಾಗಿ ಇ ಕೆ ಬ್ಯಾನರ್ಸ್ ಮೂಲಕ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಅಂತಹ ಎರಡು ಸಿನಿಮಾಗಳನ್ನು ಕೊಡುಗೆ ಕೊಟ್ಟ ಖ್ಯಾತಿ ನಿರ್ಮಾಪಕ ಗಂಗಾಧರ್ ಗುಡ್ಡಯ್ಯ ಅವರದ್ದು. ಆ ಚಿತ್ರಗಳು ಬಂದು ಹೋದ ಮೇಲೆ ಒಂದಷ್ಟು ಗ್ಯಾಪ್ ನಂತರ ಇಕೆ ಫಿಕ್ಚರ್ಸ್ ಮತ್ತೆ ಹೊಸ ದೊಂದು ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿತೆರೆಗೆ ತರಲು ಹೊರಟಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ (ಮಾ.14) ಆ ಚಿತ್ರದ ಟೈಟಲ್ ಕೂಡ ಲಾಂಚ್ ಆಗಿದೆ.
“ಹ್ಯಾಸ್ ಟ್ಯಾಗ್ ಮ್ಯೂಟ್ʼ ಎನ್ನುವುದು ಆ ಚಿತ್ರದ ಹೆಸರು. ʼಕವಲು ದಾರಿʼ ಹಾಗೂ ʼಆಪರೇಷನ್ ಅಲಮೇಲಮ್ಮʼ ಚಿತ್ರಗಳ ಖ್ಯಾತಿಯ ನಟ ರಿಷಿ ಈ ಟೈಟಲ್ ಲಾಂಚ್ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.” ಈ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡುವುದಕ್ಕೆ ಬಹಳ ಖುಷಿಯಾಗುತ್ತಿದೆ. ಯಾಕಂದ್ರೆ ಇ ಕೆ ಫಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರದ ನಿರ್ಮಾಣವಾಗುತ್ತಿದೆ. ಈಗಾಗಲೇ ಇಕೆ ಫಿಕ್ಚರ್ಸ್ ಕನ್ನಡಕ್ಕೆ ʼಮುಂಗಾರು ಮಳೆ೨ʼ ಹಾಗೂ ʼಮೊಗ್ಗಿನ ಮನಸುʼ ಅಂತಹದ ಎರಡು ಸೂಪರ್ ಹಿಟ್ ಚಿತ್ರ ಕೊಟ್ಟಿದೆ. ಈಗ “ಹ್ಯಾಸ್ ಟ್ಯಾಗ್ ಮ್ಯೂಟ್ʼ ಇದರ ಮೊತ್ತೊಂದು ಭರ್ಜರಿ ಕೊಡುಗೆ ಆಗುವುದು ಗ್ಯಾರಂಟಿ ಇದೆʼ ಅಂತ ಟೈಟಲ್ ಲಾಂಚ್ ಮಾಡಿದ ನಂತರ ಹೇಳಿಕೊಂಡಿದ್ದಾರೆ ನಟ ರಿಷಿ.
ಯುವ ಪ್ರತಿಭೆ ಪ್ರಶಾಂತ್ ಚಂದ್ರ ಈ ಚಿತ್ರದ ನಿರ್ದೇಶಕ. ಈ ಹಿಂದೆ ಇವರುʼ ಮೊಗ್ಗಿನ ಮನಸುʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಅಲ್ಲಿಂದ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಅದೇ ಅನುಭವದಲ್ಲೀಗ “ಹ್ಯಾಸ್ ಟ್ಯಾಗ್ ಮ್ಯೂಟ್ʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಷ್, ಸಿದ್ದಾರ್ಥ ಮಾಧ್ಯಾಮಿಕಾ ಜತೆಗೆ ಅದು ಕುಲಮ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಹಾಗೆಯೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಕಂಪ್ಲೀಟ್ ಆಗಿದೆ. ರಿಲೀಸ್ ಸಿದ್ಧತೆಯಲ್ಲಿರುವ ಚಿತ್ರತಂಡ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಟೈಟಲ್ ಲಾಂಚ್ ಮಾಡಿದೆ.