ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗವರು ಶಬರಿ ಆಗಿ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಹೌದು, ಶಬರಿ ಹೆಸರಿನ ಚಿತ್ರವೊಂದಕ್ಕೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಫಿಕ್ಸ್ ಆಗಿದ್ದಾರೆ. ಶ್ರೀರಾಮ ನವಮಿ ದಿನವಾದ ಬುಧವಾರ ರಚಿತಾ ರಾಮ್ ಶಬರಿ ಆಗಿ ಅಭಿಮಾನಿಗಳ ಮುಂದೆ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಹೊಸ ಚಿತ್ರಕ್ಕೆ ಶಬರಿ ಸರ್ಚಿಂಗ್ ಫಾರ್ ರಾವಣ ಅಂತ ಶೀರ್ಷಿಕೆ ಇಡಲಾಗಿದೆ. ಇದು ರಚಿತಾ ಅವರ ೩೬ ನೇ ಸಿನಿಮಾ. ರಾಮ ನವಮಿಯ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ಉಗ್ರ ಅವತಾರ ತಾಳಿರುವ ರಚಿತಾ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಅಂದಹಾಗೆ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಇಂಡಸ್ಟ್ರಿನಲ್ಲಿ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್ ಶಬರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಚಿತ್ರ. ಇದರಲ್ಲಿ ರಚಿತಾ ರಾಮ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಶೇರ್ ಮಾಡಿರುವ ರಚಿತಾ, ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಹೊಸ ಸಿನಿಮಾಗೆ ಎಲ್ಲರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಚಿತಾ ರಾಮ್ ಬಳಿ ಸದ್ಯ ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಂ, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ
ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ತೋರಿರುವ ನಿರ್ಲಕ್ಷ್ಯಕ್ಕೆ ನಟ ಉಪೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯಾದ್ಯಂತ ಜನ ಸಾಮಾನ್ಯರ ಪರಿಸ್ಥಿತಿ ನೋಡಿದ್ರೆ, ಕರಳು ಹಿಂಡುತ್ತದೆ. ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ ಸಿಗದ ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಭೀಕರ ಪರಿಸ್ಥಿತಿ ಬರಬಹುದು ಅಂತ ಗೊತ್ತಿದ್ದರೂ ಸರ್ಕಾರಗಳು ಬಹುದೊಡ್ಡ ನಿರ್ಲಕ್ಷ್ಯ ತೋರಿದವು. ಅದೇ ಇವತ್ತಿನ ಪರಿಸ್ಥಿತಿಗೆಲ್ಲ ಕಾರಣ ಅಂತ ಉಪೇಂದ್ರ, ಕಿಡಿಕಾರಿದರು. ʼಲಗಾಮ್ʼ ಚಿತ್ರದ ಮುಹೂರ್ತದ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಚುನಾವಣೆ ಬಂದಾಗ ಯಾಕೆ ಯೋಚಿಸುವುದಿಲ್ಲ..?
ಮಿತಿ ಮೀರಿದ ಕೊರೋನಾ ಪರಿಸ್ಥಿತಿ, ಜನರ ಸಾವು_ನೋವಿನ ಘಟನಗೆಳಿಗೆ ಪ್ರಜಾಕೀಯದ ಪ್ರತಿಕ್ರಿಯೆ ಏನು ಎನ್ನುವ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಖಾಸಗೀಕರಣ ಆದಂತೆಯೇ ಇವತ್ತು ರಾಜಕೀಯ ಅನ್ನೋದು ಬಿಸಿನೆಸ್ ಆಗಿರೋದ್ರಿಂದಲೇ ಜನರು ಇವತ್ತು ಅಸ್ಪತ್ರೆಗಳಲ್ಲಿ ಸಕಾಲಕ್ಕೆ ಸೌಲಭ್ಯ ಸಿಗದೆ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಯಾರದು ಸರಿ, ಯಾರದು ತಪ್ಪು ಅಂತ ಹೇಳೋದೆ ಕಷ್ಟ. ಯಾಕಂದ್ರೆ ಜನ ಕೂಡ ಚುನಾವಣೆಗಳು ಬಂದಾಗ ತಮ್ಮ ಜವಾಬ್ದಾರಿಗಳನ್ನು ಮರೆತು ಬಿಡುತ್ತಾರೆ. ಆಗ ಜಾತಿ, ಹಣ, ಪಕ್ಷ ಅಂತೆಲ್ಲ ತಮ್ಮ ಮತಗಳನ್ನು ಇನ್ನಾವುದಕ್ಕೋ ಮೀಡಲಿಡುತ್ತಾರೆ. ಆಮೇಲೆ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಪ್ರತಿಭಟನೆ, ಧರಣಿ ಅಂತೆಲ್ಲ ಮಾತನಾಡುತ್ತಾರೆ ಅಂತ ಉಪೇಂದ್ರ ಬೇಸರ ಹೊರ ಹಾಕಿದರು.
ಕೊರೋನಾ ಅಂತ ಭಯ ಬೇಡ, ಧೈರ್ಯದಿಂದಿರಿ
ಖಾಸಗಿ ಆಸ್ಪತ್ರೆಗಳ ವೈದ್ಯರ ಪರಿಸ್ಥಿತಿ ಬಗ್ಗೆಯೂ ಮಾತನಾಡುವಂತಿಲ್ಲ. ಅವರು ಕೂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್ ಕೊರ್ಸ್ ಮುಗಿಸಿ ಬಂದಿರುತ್ತಾರೆ. ಹಾಗೆಯೇ ಕೊಟ್ಯಾಂತರ ರೂ. ಖರ್ಚು ಮಾಡಿ ಆಸ್ಪತ್ರೆ ಕಟ್ಟುಕೊಂಡಿರುತ್ತಾರೆ. ಅವರು ತಮ್ಮ ಖರ್ಚು ವೆಚ್ಚಗಳ ನ್ನು ನೋಡಿಕೊಳ್ಳುವುದಕ್ಕೆ ಜನರಿಂದ ದುಬಾರಿ ಹಣ ಪಡೆಯುತ್ತಾರೆ. ಇದೆಲ್ಲದಕ್ಕೆ ಯಾರನ್ನು ದೂರೋಣ? ಇದಕ್ಕೆ ಇರೋದು ಒಂದೇ ದಾರಿ, ಜನರು ಚುನಾವಣೆ ಬಂದಾಗ ವಿಚಾರವಂತರಾಗಬೇಕು. ಸರಿಯಾದ ವ್ಯಕ್ತಿಗಳನ್ನು ಗೆಲ್ಲಿಸಿಕೊಳ್ಳಬೇಕು ಅಂತ ಉಪೇಂದ್ರ ಕಿವಿ ಮಾತು ಹೇಳಿದರು. ಹಾಗೆಯೇ ಕೊರೋನಾ ಅಂತ ಭಯ ಪಡುವುದು ಬೇಡ. ಧೈರ್ಯದಿಂದ ಇರಿ. ಕೆಲವೊಮ್ಮೆ ನಮ್ಮ ಧೈರ್ಯವೇ ರೋಗಕ್ಕೆ ಮದ್ದು. ಇದನ್ನು ಪಾಲಿಸಿ. ಹಾಗಂತ ಮಾಸ್ಕ್ ಹಾಗೂ ಸಾನಿಟೈಸರ್ ಬಳಸುವುದನ್ನು ಮರೆಯಬೇಡಿ ಅಂತ ಉಪೇಂದ್ರ ಹೇಳಿದರು.
ʼಗಜʼ ಚಿತ್ರದ ಖ್ಯಾತಿಯ ನಿರ್ದೇಶಕ ಕೆ. ಮಾದೇಶ್ ಇದೇ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ಹೊಚ್ಚ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದರ ಹೆಸರೇ “ಲಗಾಮ್’. ಇದೇ ಶುಭ ಸೋಮವಾರ “ಲಗಾಮ್ʼ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ಚಿತ್ರಕ್ಕೆ ಮೊದಲ ಕ್ಲಾಪ್ ಮಾಡುವ ಮೂಲಕ ತಂಡಕ್ಕೆ ಶುಭ ಹಾರೈಸಿದರು. “ಲಗಾಮ್ʼ ಒಂದೊಳ್ಳೆ ಸಂದೇಶ ಇರುವ ಅದ್ಧೂರಿ ಕಮರ್ಷಿಯಲ್ ಸಿನಿಮಾ ಅಂತಾರೆ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ಈ ರೀತಿಯ ಅದ್ದೂರಿ ಮುಹೂರ್ತ ಮಾಡಿ ಎರಡು ವರ್ಷಗಳೇ ಆಗಿತ್ತು. ಆದರೆ ಕೊರೋನಾ ಸಮಯದಲ್ಲೂ ಇಷ್ಟೊಂದು ಗ್ರ್ಯಾಂಡ್ ಆಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್ ಎನರ್ಜಿ. ಸಿನಿಮಾನೂ ಇಷ್ಟೇ ಗ್ರ್ಯಾಂಡಾಗಿ ಮೂಡಿಬರಲಿದೆ ಎಂಬ ಭರವಸೆ ನನಗಂತೂ ಇದೆ. ಒಳ್ಳೆ ತಂತ್ರಜ್ಞರು, ಒಳ್ಳೆ ಕಲಾವಿದರಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಮೆಸೇಜ್ ಇರುವ ಎಂಟರ್ಟೈನರ್ ಚಿತ್ರ. ಲಗಾಮ್ ಕನ್ನಡದ ಲಗಾನ್ ಆಗುತ್ತೆ ಎಂಬ ವಿಶ್ವಾಸವಿದೆ. ಕಬ್ಜಾ ದೊಡ್ಡ ಮಟ್ಟದ ಸಿನಿಮಾ, ಸೆಟ್ನಲ್ಲಿಯೇ ಬಹುತೇಕ ಶೂಟಿಂಗ್ ಮಾಡಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಸಮಯ ಬೇಕು. ಅದೇ ಸಮಯದಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ' ಎಂದು ಲಗಾಮ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ನಿರ್ದೇಶಕ ಕೆ. ಮಾದೇಶ್ ಮಾತನಾಡಿ,ಲಗಾಮ್ ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಅದ್ದೂರಿ ಮೇಕಿಂಗ್ನಲ್ಲಿ ಮೂಡಿಬರಲಿರುವ ಕಮರ್ಷಿಯಲ್ ಸಿನಿಮಾ. ಮುಂದಿನ ಸೋಮವಾರದಿಂದ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ, ಅತ್ಯಾಚಾರಕ್ಕೆ, ದ್ರೋಹಕ್ಕೆ, ಕೊರನಾಗೆ ಲಗಾಮ್ ಹಾಕೋದೇ ಈ ಚಿತ್ರದ ಥೀಮ್’ ಎಂದು ನಗುತ್ತಲೇ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.
ಇನ್ನು ಈಗ್ಗೆ ಐದಾರು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಟಿ ಹರಿಪ್ರಿಯಾ ಅವರಿಗೆ ಮೊದಲ ಬಾರಿಗೆ ಸಿನಿಮಾದಲ್ಲಿ ರಿಯಲ್ ಸ್ಟಾರ್ ಗಿ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿರುವ ಸಂಭ್ರಮ. `ಮೊದಲ ಬಾರಿ ಉಪ್ಪಿ ಸರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿಯಿದೆ. ಹಾಗೇ ಸಾಧು ಕೋಕಿಲಾ ಸರ್ ಅವರ ಮ್ಯೂಸಿಕ್ ಅಂದರೆ ನನಗೆ ತುಂಬಾ ಇಷ್ಟ. ಇದೇ ಮೊದಲ ಬಾರಿಗೆ ನನ್ನ ಸಿನಿಮಾಗೆ ಅವರು ಮ್ಯೂಸಿಕ್ ನೀಡುತ್ತಿರುವುದು ನನಗೆ ಮತ್ತಷ್ಟು ಖುಷಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದೆ. ಆದರೆ ಈ ಸಿನಿಮಾದಲ್ಲಿ ಈಗಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಳ್ಳೆಯ ಕಥೆ ಇದೆ’ ಎಂದು ಖುಷಿಯಿಂದ ಮತ್ತೆ ಗ್ಲಾಮರ್ ಗೊಂಬೆಯಾಗಿ ಮಿಂಚಲು ಅವಕಾಶ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಹರಿಪ್ರಿಯಾ. ಸಾಧು ಕೋಕಿಲಾ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದರ ಜತೆಗೆ ಪ್ರಮುಖ ಪಾತ್ರದಲ್ಲೂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡದಲ್ಲಿ ಹಾಸ್ಯ ಸಿನಿಮಾಗಳಿಗೇನೂ ಕೊರತೆ ಇಲ್ಲ. ಇಲ್ಲಿ ಸಾಕಷ್ಟು ಕಾಮಿಡಿ ಜಾನರ್ ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಶ್ರೀರಂಗ” ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಹೌದು, ಈ ಚಿತ್ರ ಈಗ ಚಿತ್ರೀಕರಣ ಪೂರೈಸಿ, ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾಗಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 21ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕೊರೊನಾ ಹಾವಳಿ ಕಡಿಮೆಯಾದ ಬಳಿಕ, ಆಗಸ್ಟ್ ವೇಳೆಗೆ ಚಿತ್ರಮಂದಿರಗಳಲ್ಲಿ “ಶ್ರೀರಂಗ” ನ ದರ್ಶನವಾಗಲಿದೆ.
ರತು ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸುಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇದೊಂದು ಹಾಸ್ಯಭರಿತ ಸಿನಿಮಾ. ಇಲ್ಲಿ ಮೂರು ಹಾಡುಗಳಿದ್ದು, ಸಮೀರ್ ಕುಲಕರ್ಣಿ ಅವರು ಸಂಗೀತ ನೀಡುತ್ತಿದ್ದಾರೆ. ಮಿಥುನ್ ಛಾಯಾಗ್ರಹಣವಿದೆ. ಚಂದನ್ ಅವರ ಸಂಕಲನವಿರುವ ಈ ಚಿತ್ರದ ಇಂಟ್ರೋಡೆಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಅವರೆ ಬರೆದು, ಹಾಡಿದ್ದಾರೆ.
ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಶಿನವ, ರಚನಾ ರೈ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ, ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರು, ವೆಂಕಟ್ ಭಾರದ್ವಾಜ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ರಾಮನ್ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.
ಭಯ, ಭಯ, ಅಂತ ಈಗ ಜನಕ್ಕೆ ಜೀವ ಭಯವೇ ಆವರಿಸಿಕೊಂಡಿದೆ. ಈ ಟೈಮ್ನಲ್ಲಿ ಯಾರಾದ್ರೂ ಟಾಕೀಸ್ಗೆ ಬಂದು ಸಿನಿಮಾ ನೋಡೋದು ನಿಜವೇ ? ಗೊತ್ತಿಲ್ಲ, ಇಡೀ ಚಿತ್ರರಂಗಕ್ಕೆ ಇಂತಹದೊಂದು ಪ್ರಶ್ನೆ ಕಾಡ್ತಿರೋ ಹೊತ್ತಲ್ಲಿಯೇ ಕಳೆದ ಶುಕ್ರವಾರ “ಕೃಷ್ಣ ಟಾಕೀಸ್ʼ ಹಾಗೂ “ರಿವೈಂಡ್ʼ ಹೆಸರಿನ ಎರಡು ಸಿನಿಮಾ ರಿಲೀಸ್ಆಗಿದ್ದವು.ಈ ಸಿನ್ಮಾ ಟೀಮ್ನವರಿಗೆ ಅದೆಂತಹ ಕಾನ್ಪಿಡೆನ್ಸ್ಇತ್ತೇನೋ ಗೊತ್ತಿಲ್ಲ, ಆದ್ರೂ ಅವತ್ತು ಈ ಸಿನ್ಮಾ ರಿಲೀಸ್ಮಾಡಿದ್ದರು. ಹಾಗಂತ ಅವರ ನಿರೀಕ್ಷೆ ನಿಜವಾಯ್ತಾ ? ಇಲ್ಲ, ಈ ಸಿನ್ಮಾಗಳೆರೆಡು ರಿಲೀಸ್ ಆ ದಿನ ಟಾಕೀಸ್ಒಳಗಡೆ ಇವತ್ತು ಕಂಡಿದ್ದೇ ಬೇರೆ. ಚಿತ್ರ ತೆರೆ ಕಂಡ ಮುಖ್ಯ ಚಿತ್ರಮಂದಿರಗಳಲ್ಲೇ ಹತ್ತಿಪ್ಪತ್ತು ಜನ ಇರಲಿಲ್ಲ. ಪಾಪ, ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರ ಕಥೆ ಏನು?
ಕೊರೋನಾ ಅಂತ ಚಿತ್ರೋದ್ಯಮ ಕಂಗಾಲಾಗಿ ಕುಳಿತಿರುವಾಗ ಸಿನಿಮಾ ಮಾಡಿದ ನಿರ್ಮಾಪಕರ ಪರಿಸ್ಥಿತಿ ಇತರರಗಿಂತ ಭಿನ್ನವಾಗಿಲ್ಲ. ಕೋಟಿ ಕೋಟಿ ಹಣ ಸುರಿದು ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರು ಕೂಡ ತತ್ತರಿಸಿ ಹೋಗುವ ಹಾಗೆ ಮಾಡಿದ ಕೋರೋನಾ ಎನ್ನುವ ಮಾಹಾಮಾರಿ. ಕೋಟಿ ನಿರ್ಮಾಪಕರ ಸ್ಥಿತಿಯೇ ಹೀಗಿರಬೇಕಾದ್ರೆ, ಸಣ್ಣ ಪುಟ್ಟವರು ಕಥೆ ಏಂತೂ ? ಆ ಕಥೆ ಇನ್ನು ಘೋರ. ಪರಿಸ್ಥಿತಿ ಹೀಗಿರುವಾಗ ಕಷ್ಟಪಟ್ಟು , ಬಂಡವಾಳ ಹಾಕಿ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರಿಗೆ ತಮ್ಮ ಚಿತ್ರ ರಿಲೀಸ್ಆದಾಗ ಚಿತ್ರ ಮಂದಿರದಲ್ಲಿ ಪ್ರೇಕ್ಷಕರೇ ಕಾಣದಿದ್ದರೆ ಏನಾಗಬೇಡ ? ಅವತ್ತು ಚಿತ್ರ ತಂಡದ ಮುಖದಲ್ಲಿ ಕಂಡಿದ್ದು ಕಣ್ಣೀರು. ಅದರ ಪರಿಸ್ಥಿತಿ ಇವತ್ತು ಆಗಿದ್ದೇನು? ಈ ಪೈಕಿ ಇವತ್ತು ʼ ಕೃಷ್ಣ ಟಾಕೀಸ್ʼ ಚಿತ್ರದ ಪ್ರದರ್ಶನವನ್ನು ಚಿತ್ರ ತಂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
“ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುವುದು ಗೊತಿಲ್ಲ. ಆದರೆ ಚಿತ್ರದ ನಿರ್ಮಾಪಕ ಗೋವಿಂದರಾಜು ಹಾಗೂ ಚಿತ್ರತಂಡದವರು ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ ಎಂಬ ಉದ್ದೇಶದಿಂದ ಏಪ್ರಿಲ್ 22 ರವರೆಗೂ ಮಾತ್ರ ಚಿತ್ರವನ್ನು ಪ್ರದರ್ಶಿಸಿ, ನಂತರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರ ನಾಳೆಯಿಂದಲೇ ಚಿತ್ರಮಂದಿರ ಮುಚ್ಚಬೇಕು ಅಂದರೆ ಅದಕ್ಕೂ ನಾವು ಬದ್ಧ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. ಮತ್ತೊಂದಡೆ ಚಿತ್ರದ ಮರು ಬಿಡುಗಡೆಗೂ ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ರೀ ರಿಲೀಸ್ ಮಾಡುವುದಾಗಿ ತಿಳಿಸಿದೆ.
ಹೌದು, ನಿರ್ಮಾಣ ಮಾಡಿದ ಸಿನಿಮಾವನ್ನು ರಿಲೀಸ್ಮಾಡದೆ ಇರೋದಕ್ಕೆ ಅದೇನು ಪಾತ್ರೆ-ಸಾಮಾನು ಅಲ್ಲ. ಅಪ್ಕೋರ್ಸ್, ತಯಾರಾದ ಸಿನಿಮಾ ಚಿತ್ರಮಂದಿರಕ್ಕೆ ಬರಲೇ ಬೇಕು. ಪ್ರೇಕ್ಷಕರಿಂದ ಅದಕ್ಕೆ ಒಳ್ಳೆಯ ರೆಸ್ಪಾನ್ಸ್ಕೂಡ ಸಿಗಬೇಕು. ಆದ್ರೆ ಇವರೆಡು ಸಿನಿಮಾ ಇವತ್ತು ರಿಲೀಸ್ ಆದ ಸಂದರ್ಭ ಸರಿಯಿತ್ತಾ ? ಟೀಮ್ನವರಿಗೆ ಅದೇನೋ ಕಾನ್ಪಿಡೆನ್ಸ್ ಇತ್ತೇನೋ. ಕೊರೋನಾ ಅಂತ ಏನೇ ಭಯ ಹುಟ್ಟಿಸಿದ್ರೂ ಪ್ರೇಕ್ಷಕರಿಗೆ ಸಿನ್ಮಾ ಬೇಕು. ಅವರು ಬಂದೇ ಬರ್ತಾರೆ ಅಂತ ಭಂಡ ಧೈರ್ಯವೂ ಇತ್ತೇನೋ. ಆದ್ರೆ ಪರಿಸ್ಥಿತಿ ಹಾಗಿರಲಿಲ್ಲ ಅನ್ನೋದು ಅಷ್ಟೇ ಸತ್ಯ.
ʼಮಠʼ ಚಿತ್ರದ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ತಮಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿರುವ ಕುರಿತು ಮಾತನಾಡಿರುವ ವಿಡಿಯೋವೊಂದನ್ನು ಗುರುಪ್ರಸಾದ್ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.” ನನಗೆ ಕರೋನಾ ಪಾಸಿಟಿವ್ ಬಂದಿದೆ. ಬಂದಿದೆ ಅನ್ನೊದಕ್ಕಿಂತ ರಾಜ್ಯ ಸರ್ಕಾರ ಮನೆ ಮನೆಗೆ ಕೊರೋನಾ ತಂದು ಮುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್. ಇದು ಇವರೆಲ್ಲರ ಕೊಡುಗೆ. ಮುಂದೆ ನಾನು ಏನಾಗುತ್ತೇನೋ ಗೊತ್ತಿಲ್ಲ. ಹಾಗೇನಾದ್ರು ನಂಗೆ ಆದ್ರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿರುವ ಗುರು ಪ್ರಸಾದ್, ತೀವ್ರ ನೋವು ತೊಡಿಕೊಂಡಿದ್ದಾರೆ. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ. ( ಕೆಳಗಿನ ಲಿಂಕ್ ಕ್ಲಿಕ್ ಮಾಡಿ )
ಕನ್ನಡದಲ್ಲಿ ’ಸಿರಿ ಕನ್ನಡ ವಾಹಿನಿ’ಯು ಸದ್ಯ ಕನ್ನಡಿಗರ ಕಣ್ಮಣಿ. ಯಾವುದೇ ಸಂಚಿಕೆಗಳಿರಲಿ, ಗರಿಷ್ಟ 65ಕ್ಕೆ ನಿಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡಂತೆ, ಸಪಲರವಾಗಿದೆ ವಾಹಿನಿ. ಪ್ರತಿಫಲವಾಗಿ ಶಾರ್ಟ್ ಅಂಡ್ ಸ್ವೀಟ್ ಎನ್ನುವಂತೆ ರಿಯಾಲಿಟಿ ಶೋ, ಅಧ್ಯಾತ್ಮಿಕ ಹೂರತುಪಡಿಸಿ, ಒಂದಷ್ಟು ವಿನೂತನ ಧಾರವಾಹಿ, ಹೀಗೆ ಎಲ್ಲರೂ ಇಷ್ಟಪಡುವಂತಹ ಎಂಟು ಕಾರ್ಯಕ್ರಮಗಳನ್ನು ಸಿದ್ದಪಡಿಸಿದೆ. ಮೊದಲನೆಯದಾಗಿ ಮಠ ಮಾನ್ಯಗಳ ದರ್ಶನ ನೀಡುವ ’ಧರ್ಮ ದರ್ಶನ’ ಕಾರ್ಯಕ್ರಮ ಬೆಳಗ್ಗೆ 7.30ಕ್ಕೆ ಪ್ರಸಾರವಾಗಲಿದೆ. 12.30ಕ್ಕೆ ’ಸಿರಿ ಭೋಜನ’ ನಟಿ ಸನಾತನಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹೆಸರು ಮಾಡಿರುವ ಶೆಫ್ಗಳು ಭಾಗವಹಿಸಲಿದ್ದು, ಉತ್ತಮ ಆರೋಗ್ಯ ನಿರ್ವಹಣೆಗಾಗಿ ಆಯುರ್ವೇದ ಅಡುಗೆಯ ಅಂಶಗಳನ್ನು ತಿಳಿಸಿಕೊಡಲಿದ್ದಾರೆ.
ಮೂರನೆಯದು ನಟಿ,ನಿರೂಪಕಿ ರಜನಿ ನಡೆಸಿಕೊಡುವ ’ನಾರಿಗೊಂದು ಸೀರೆ’ ಮಧ್ಯಾಹ್ನ 1.30ಕ್ಕೆ ಹೊಸ ರೂಪದಲ್ಲಿ ಬರಲಿದೆ. ಉತ್ತರ ಕರ್ನಾಟಕದ ಸೊಗಡು ಇರುವ ’ಧಾರವಾಡದಾಗೊಂದು ಲವ್ ಸ್ಟೋರಿ’ ಧಾರಾವಾಹಿಯನ್ನು ಪೃಥ್ವಿರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಇದು ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಇನ್ನು, ನಟ,ನಿರ್ಮಾಪಕ, ನಿರ್ದೇಶಕ ಮತ್ತು ’ನನ್ ಮಗಂದ್’ ಖ್ಯಾತಿಯ ಹುಚ್ಚ ವೆಂಕಟ್ ನಿರೂಪಕರಾಗಿರುವ ’ಲೈಫು ಓಕೆ’ ರಿಯಾಲಿಟಿ ಶೋ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಕಿರುತೆರೆ ಕಲಾವಿದ ಮುರಳಿ ಇದನ್ನು ನಡೆಸಿಕೊಡಲಿದ್ದಾರೆ. ’ಕಲ್ಪನ’ ಎಂಬ ಹಾರರ್ ಮತ್ತು ಪ್ರೀತಿ ಕಥೆ ಹೊಂದಿರುವ ಧಾರವಾಹಿಯನ್ನು ಸುಶೀಲ್ಮೊಕಾಶಿ ನಿರ್ದೇಶಿಸುತ್ತಿದ್ದಾರೆ. ಇದು ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಹಿರಿಯ ನಟಿ ಅಪರ್ಣ ನಿರೂಪಣೆಯಲ್ಲಿ ’ಸಿಂಪಲ್ಲಾಗ್ ಒಂದ್ ಸಿನಿಮಾ ಕಥೆ’ ರಾತ್ರಿ 9ಕ್ಕೆ ಮೂಡಿಬರಲಿದೆ. ಇವುಗಳ ಜೊತೆ ವಿಸ್ಮಯ, ವಿಚಿತ್ರ ಮತ್ತು ವಿಶೇಷ ಸಂಗತಿಗಳ ಕುರಿತಂತೆ ’ನಿಗೂಢ ರಹಸ್ಯ’ ಕಾರ್ಯಕ್ರಮವನ್ನು ಆರ್ಜೆ ನಿಖಿಲ್ಸ್ವಾಮಿ ಸಾರಥ್ಯದಲ್ಲಿ ರಾತ್ರಿ 9.30 ಕ್ಕೆ ಮೂಡಿಬರಲಿದೆ. ಸೋಮವಾರದಿಂದ ಶುಕ್ರವಾರವರೆಗೆ ಏಪ್ರಿಲ್ 19ರಿಂದ ಪ್ರಸಾರವಾಗಲಿವೆ ’ಸಿರಿ ಕನ್ನಡ’ ವಾಹಿನಿ ಈಗ ಪರಿಪೂರ್ಣ ವಾಹಿನಿಯಾಗಿ ಹೊರಹೊಮ್ಮಲಿದ್ದು ಉತ್ತಮ ಕಾರ್ಯಕ್ರಮ ರೂಪಿಸಿ ಮನರಂಜನೆ ನೀಡುವುದಾಗಿ ವಾಹಿನಿ ಮುಖ್ಯಸ್ಥ ಸಂಜಯ್ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅದೃಷ್ಟವಂತೆ…! ಹೌದು, ಈ ಮಾತು ಅಕ್ಷರಶಃ ನಿಜ. ಮೊದಲ ಸಿನಿಮಾದಲ್ಲೇ ಗೆಲುವು ಕಂಡ ಬೆಡಗಿ. ಅಷ್ಟೇ ಅಲ್ಲ, ತನ್ನ ಅಂದದ ಮೊಗದಿಂದಲೇ ಎಲ್ಲರನ್ನೂ ಮೋಡಿ ಮಾಡಿದವೃು. ನೋಡ ನೋಡುತ್ತಿದ್ದಂತೆಯೇ ಕನ್ನಡ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್, ಬಾಲಿವುಡ್ಗೂ ಕಾಲಿಟ್ಟ ಚೆಲುವೆ ಈಕೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ, ಒಂದು ಸುತ್ತು ಎಲ್ಲಾ ಸ್ಟಾರ್ಗಳ ಜೊತೆ ಡಿಂಗುಡಾಂಗು ಅಂತ ಕುಣಿದು ಕುಪ್ಪಳಿಸಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ಗೆ ಹಾರಿದ್ದ ರಶ್ಮಿಕಾಗೆ ಈಗ ಮತ್ತೊಂದು ಭರ್ಜರಿ ಅವಕಾಶವೊಂದು ಸಿಕ್ಕಿದೆ. ಹಾಗಂತ, ಅದು ಹೊಸ ಬಾಲಿವುಡ್ ಸಿನಿಮಾನಾ ಅಂತಂದುಕೊಳ್ಳುವಂತಿಲ್ಲ. ಅವರೀಗ ಜನಪ್ರಿಯ ಕಂಪೆನಿಯೊಂದಕ್ಕೆ ರಾಯಭಾರಿಯಾಗಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ.
ಈಗಾಗಲೇ ಅನೇಕ ಸ್ಟಾರ್ ನಟಿಯರು ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವುದು ಗೊತ್ತೇ ಇದೆ. ರಶ್ಮಿಕಾ ಕೂಡ ಈಗ ದೊಡ್ಡ ಕಂಪೆನಿಗೆ ರಾಯಭಾರಿಯಾಗಿದ್ದಾರೆ. ಫಾಸ್ಟ್ ಫುಡ್ ತಯಾರಿಕಾ ಕಂಪೆನಿಯೊಂದು ರಶ್ಮಿಕಾ ಮಂದಣ್ಣ ಅವರನ್ನು ಸೌತ್ ಇಂಡಿಯಾ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಅಂದಹಾಗೆ, ಅದು ಮೆಕ್ಡೊನಾಲ್ಡ್ ಬ್ರ್ಯಾಂಡ್. ಸದ್ಯಕ್ಕೆ ರಶ್ಮಿಕಾ ಮೆಕ್ಡೊನಾಲ್ಡ್ ಬ್ರ್ಯಾಂಡ್ನ ಸೌತ್ ಇಂಡಿಯಾ ರಾಯಭಾರಿ. ಅದೇನೆ ಇರಲಿ, ಒಂದರ ಮೇಲೊಂದು ಅದೃಷ್ಟ ರಶ್ಮಿಕಾ ಅವರನ್ನು ಹುಡುಕಿ ಬರುತ್ತಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾಗೆ ಇನ್ನಷ್ಟು ಬ್ರ್ಯಾಂಡ್ ಸಿಕ್ಕರೆ ಅಚ್ಚರಿಯೇನಿಲ್ಲ.
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಸಾಧನೆ ನೋಡುವುದಕ್ಕೆ ಅವರ ತಂದೆ ಇರಬೇಕಿತ್ತು. ನಟರಾಗಿ ನೆಲೆ ಕಂಡುಕೊಳ್ಳುವುದಕ್ಕೆ ಕಡುಕಷ್ಟ ಪಟ್ಟಿದ್ದ ತೂಗುದೀಪ ಶ್ರೀನಿವಾಸ್, ಇವತ್ತು ಮಕ್ಕಳ ಈ ದರ್ಬಾರ್ ಅನ್ನು ಕಣ್ಣಾರೆ ನೋಡಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ ಏನೋ….! ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಕನ್ನಡದ ಅದೆಷ್ಟೋ ಮಂದಿ ಸಿನಿಮಾ ಪ್ರೇಕ್ಷಕರು ಅನೇಕ ಸಲ ಹೀಗೆ ಅಂದುಕೊಂಡಿದ್ದು ಸುಳ್ಳಲ್ಲ. ಸಿನಿಮಾದಿಂದ ಸಿನಿಮಾಕ್ಕೆ ದರ್ಶನ್ ತಮ್ಮ ಸ್ಟಾರ್ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುತ್ತಾ ಎತ್ತರೆತ್ತರಕ್ಕೆ ಜಿಗಿದಾಗೆಲ್ಲ ಜನರೇ ಹಾಗೆಂದುಕೊಂಡಿದ್ದು ಹೌದು.
ಅವರೆಲ್ಲ ಹಾಗಂದುಕೊಳ್ಳುವುದಕ್ಕೂ ಕಾರಣ ಇದೆ. ದರ್ಶನ್ ಸ್ಟಾರ್ ಆಗಿ ಸಂಭ್ರಮಿಸಿದಾಗೆಲ್ಲ ಪ್ರೇಕ್ಷಕರ ಮುಂದೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರ ಬಣ್ಣದ ಬದುಕಿನ ದಾರಿಗಳು ಕಾಣಿಸಿಕೊಳ್ಳುತ್ತವೆ. ದರ್ಶನ್ ಜನಪ್ರಿಯತೆ ಕಂಡಾಗ ಅವರ ಅಭಿಮಾನಿಗಳಿಗೆ ತೂಗುದೀಪ ಶ್ರೀನಿವಾಸ್ ವಿಲನ್ ಆಗಿ ಅಬ್ಬರಿಸಿದ ದೃಶ್ಯಗಳು ಕಣ್ಮುಂದೆ ಬಂದು ನಿಲುತ್ತವೆ. ಸಿನಿಮಾದಲ್ಲಿ ಅವಕಾಶ ಇಲ್ಲ ಅಂತ ಅವರು ಮತ್ತೆ ನಾಟಕಗಳಲ್ಲಿ ಬ್ಯುಸಿಯಾದ ದಿನಗಳು ನೆನಪಾಗುತ್ತವೆ. ಅಂತಹ ನಟನೊಬ್ಬನ ಮಗ ಕನ್ನಡದ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿರುವಾಗ ಅದರ ವೈಭೋಗ ನೋಡುವುದಕ್ಕೆ ಅವರು ಇರಬೇಕಿತ್ತು ಅನ್ನೋದು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಹಜವಾಗಿಯೇ ಕಾಡುವ ಸಂಗತಿ.
ಅಂದ ಹಾಗೆ, ಈಗ ಇಲ್ಲಿ ತೂಗುದೀಪ ಶ್ರೀನಿವಾಸ್ ಅವರ ಕುರಿತು ಯಾಕೆ ಮಾತು ಅಂತ ನಿಮಗೂ ಅನಿಸಿರಬಹುದು. ಅದಕ್ಕೆ ಕಾರಣವೂ ಇದೆ. ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರಿಗೆ ಇಂದು ಹುಟ್ಟು ಹಬ್ಬ. ಅವರು ಬದುಕಿದ್ದರೆ ದರ್ಶನ್ ಅವರ ಕುಟುಂಬ ಹಾಗೂ ಅವರ ಫ್ಯಾನ್ಸ್ ಅದೆಷ್ಟು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸುತ್ತಿತ್ತೋ ಏನೋ. ಹಾಗಂತ ದರ್ಶನ್ ಫ್ಯಾನ್ಸ್ ಅವರೇನು ಸುಮ್ಮನೆ ಕುಳಿತಿಲ್ಲ.” ತೂಗುದೀಪ ಡೈನೆಸ್ಟಿʼ ಹೆಸರಿನ ಒಂದು ತಂಡ ತೂಗುದೀಪ ಶ್ರೀನಿವಾಸ್ ಅವರನ್ನು ವಿಭಿನ್ನವಾಗಿಯೇ ಸ್ಮರಿಸಿಕೊಂಡಿದೆ. ತೂಗುದೀಪ ಶ್ರೀನಿವಾಸ್ ಅವರ ಹುಟ್ಟು ಹಬ್ಬಕ್ಕೆ ಒಂದು ಸ್ಪೆಷಲ್ ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಮಾಡಿದೆ. ಪ್ರಮೋದ್ ಜೋಯಿಸ್ ಸಾಹಿತ್ಯಕ್ಕೆ ಚೇತನ್ ಕೃಷ್ಣ ಸಂಗೀತ ನೀಡಿದ್ದಾರೆ. ದರ್ಶನ್ ನಾರಾಯಣ್ ಹಾಡಿದ್ದಾರೆ.ʼ ” ಜಯ ಜಯ ತೂಗುದೀಪ ….” ಹೆಸರಿನ ಈ ಸಾಂಗ್ನಲ್ಲಿ ನಟ ತೂಗುದೀಪ ಶ್ರೀನಿವಾಸ್ ಅವರ ಕಲಾ ಸಾಧನೆಯನ್ನು ಬಗೆ ಬಗೆಯಲ್ಲಿ ಬಣ್ಣಿಸಲಾಗಿದೆ.
ಹೌದು, ಕನ್ನಡ ಚಿತ್ರರಂಗ ಕಂಡ ಮಹಾನ್ ಖಳನಟರ ಪೈಕಿ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ಹಾಗಂತ ಅವರು ಬರೀ ಖಳನಟರಲ್ಲ. ಸಹ ನಟ ಹಾಗೆಯೇ ಪೋಷಕ ನಟರೂ ಹೌದು. ಆ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಮಹಾನ್ ಪ್ರತಿಭೆ. ನಟ ತೂಗುದೀಪ ಶ್ರೀನಿವಾಸ್ ಅಂದಾಕ್ಷಣ ಕಟ್ಟು ಮಸ್ತು ದೇಹ, ಅಗಲ ಮುಖ, ಕತ್ತಿನ ಅಂಚಿನ ನೋಟ, ಹುರಿಗೊಳಿಸಿದ ಮೀಸೆ, ಖಡಕ್ ಲುಕ್ ಆಕೃತಿ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಸಹಜ. ಆ ಆಕೃತಿ ನೋಡಿಯೇ ಸಿನಿಮಾ ಮಂದಿ, ವಿಲನ್ಗೆ ನೀವು ಫಿಕ್ಸ್ ಅಂತಲೇ ಅವರಿಗೆ ಹೇಳುತ್ತಿದ್ರಂತೆ. ಆರಂಭದಿಂದಲೂ ವಿಲನ್ ಆಗಿ ಬ್ರಾಂಡ್ ಆದ ಅಪರೂಪದ ನಟ ತೂಗುದೀಪ ಶ್ರೀನಿವಾಸ್. ಅವರ ಬಣ್ಣದ ಬದುಕಿನ ಇಂಟೆರೆಸ್ಟಿಂಗ್ ಸಂಗತಿಗಳಲ್ಲಿ ಮೊದಲು ತುಂಬಾನೆ ಕ್ಯೂರಿಯಾಸಿಟಿ ಮೂಡಿಸಿದ್ದು ಶ್ರೀನಿವಾಸ್ ಎನ್ನುವ ಹೆಸರಿಗೆ ತೂಗುದೀಪ ಎನ್ನುವ ಸಿನಿಮಾ ಶೀರ್ಷಿಕೆಯೂ ಸೇರಿಕೊಂಡಿದ್ದು.
ಆ ಕಥೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ನಟ ತೂಗುದೀಪ ಶ್ರೀನಿವಾಸ್ ಮೊಟ್ಟ ಮೊದಲು ಸಿನಿಮಾಕ್ಕೆ ಬಣ್ಣ ಹಚ್ಚಿದ್ದು ಕೆ.ಎಸ್.ಎಲ್ ಸ್ವಾಮಿ ನಿರ್ದೇಶನದ ” ತೂಗುದೀಪʼ ಚಿತ್ರದಲ್ಲಿ. ಈ ಚಿತ್ರಕ್ಕೆ ಬರುವಾಗ ಅವರ ಹೆಸರು ಶ್ರೀನಿವಾಸ್ ಅಂತಲೇ ಇತ್ತಂತೆ. ಆದ್ರೆ ಆ ಹೊತ್ತಿಗೆ ಆ ಚಿತ್ರದಲ್ಲಿ ಇನ್ನೊಬ್ಬರು ಶ್ರೀನಿವಾಸ್ ಅಂತ ಇದ್ದರು. ಅವ್ರು ಬೇರಾರು ಅಲ್ಲ, ಗಾಯಕ ಪಿ.ಬಿ. ಶ್ರೀನಿವಾಸ್. ಕರೆಯೋದಿಕ್ಕೆ ಇದು ಸ್ವಲ್ಪ ಕನ್ಪ್ಯೂಸ್ ಮೂಡಿಸುತ್ತೆ ಅಂತ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಅವರು, ನಟ ಶ್ರೀನಿವಾಸ್ ಅವರಿಗೆ ಸಿನಿಮಾದ ಶೀರ್ಷಿಕೆಯನ್ನೇ ಮುಂದಿಟ್ಟು “ತೂಗುದೀಪ ಶ್ರೀನಿವಾಸ್ʼ ಅಂತ ಹೆಸರಿಟ್ಟರಂತೆ. ಅಲ್ಲಿಂದ ತೂಗುದೀಪ ಶ್ರೀನಿವಾಸ್ ಎನ್ನುವ ಹೆಸರು ಮನೆ ಮತಾಯಿತು ಅನ್ನೋದು ಹಳೇ ಮಾತು.
“ತೂಗುದೀಪʼ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ನಟ ತೂಗುದೀಪ ಶ್ರೀನಿವಾಸ್ ಅಭಿನಯಿಸಿದ ಚಿತ್ರಗಳ ಸಂಖ್ಯೆ ಬಹಳಷ್ಟು. ಮೇಯರ್ ಮುತ್ತಣ್ಣ , ಬಂಗಾರದ ಮನುಷ್ಯ, ಗಂಧದ ಗುಡಿ, ಕಳ್ಳ-ಕುಳ್ಳ, ಸಾಹಸ ಸಿಂಹ ಸೇರಿದಂತೆ ಲೆಕ್ಕ ಹಾಕುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯೇ ಆದೀತು. ಆ ಕಾಲಕ್ಕೆ ತೂಗುದೀಪ ಶ್ರೀನಿವಾಸ್ ಬಹುಬೇಡಿಕೆಯ ಖಳ ನಟ. ಆ ಕಾಲದಲ್ಲಿ ಕನ್ನಡ ಬೆಳ್ಳಿತೆರೆಗೆ ಖಡಕ್ ವಿಲನ್ ಗಳ ಕೊರತೆಯೇ ಇರಲಿಲ್ಲ. ಅಲ್ಲೊಂದು ದೊಡ್ಡ ಖಳ ನಟರ ದಂಡೇ ಇತ್ತು. ಈ ವಿಲನ್ಗಳ ಗ್ಯಾಂಗ್ಗೆ ತೂಗುದೀಪ ಶ್ರೀನಿವಾಸ್ ಅವರೇ ಡಾನ್ . ಆಗ ಇವರೆಲ್ಲ ಬಹುಬೇಡಿಕೆಯ ಖಳ ನಟರಾಗಿದ್ದರೂ, ಹೀರೋ ಆಗಿಯೋ, ಪೋಷಕ ಪಾತ್ರಗಳಲ್ಲೋ ಮಿಂಚಬೇಕೆನ್ನುವ ಆಸೆ ಇತ್ತೇನೋ. ಯಾಕಂದ್ರೆ ಆ ಹೊತ್ತಿಗೆ ಹೀರೋ ಜತೆಗೆ ಪೋಷಕ ಪಾತ್ರಗಳಿದ್ದ ಬೆಲೆ ವಿಲನ್ ಗಳಿಗೆ ಇರಲಿಲ್ಲ. ಆ ಹೊತ್ತಲ್ಲಿ ಟೈಗರ್ ಪ್ರಭಾಕರ್ ಹೊರತು ಪಡಿಸಿ, ಬಹಳಷ್ಟು ಖಳನಟರು ವಿಲನ್ ಎನ್ನುವುದಕ್ಕೆ ಬ್ರಾಂಡ್ ಆಗಿ, ಸ್ಟಾರ್ ಆಗುವ ಅವಕಾಶಗಳಿಂದ ವಂಚಿತರಾಗಿದ್ದು ಹೌದು.
ಹಾಗಂತ ಅವರ ಕನಸಗಳೇನು ಕಮರಿ ಹೋಗಿಲ್ಲ. ಇವತ್ತು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಖಳನಟರ ಮಕ್ಕಳದ್ದೇ ದರ್ಬಾರ್. ಅದಕ್ಕೆ ಸಾಕ್ಷಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ದಿನಕರ್ ತೂಗುದೀಪ ಸಾಕ್ಷಿ. ಪ್ರತಿಯೊಬ್ಬ ತಂದೆಗೂ ಒಂದು ಕನಸಿರುತ್ತೆ. ತಮ್ಮ ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು, ಸುಖವಾಗಿ ಬಾಳಬೇಕು, ಒಳ್ಳೆಯ ಹೆಸರು ಮತ್ತು ಕೀರ್ತಿ ಸಂಪಾದಿಸಿಕೊಳ್ಬೇಕು ಅಂತ. ವಿಲನ್ ಆಗಿ ಯಶಸ್ಸು ಕಂಡರೂ ಕಲಾವಿದರಾಗಿ ಕಡು ಕಷ್ಟ ಕಂಡಿದ್ದ ತೂಗುದೀಪ ಶ್ರೀನಿವಾಸ್ ಅವರಿಗೂ ಇಂತಹದೊಂದು ಆಷೆ ಇತ್ತಂತೆ. ತಮ್ಮ ಮಕ್ಕಳು ದೊಡ್ಡ ಸ್ಟಾರ್ ಆಗ್ಬೇಕು ಅನ್ನೋದು. ಅಂತೆಯೇ ಇವತ್ತು ದರ್ಶನ್ ಕನ್ನಡದ ಬಹುದೊಡ್ಡ ಸ್ಟಾರ್. ದಿನಕರ್ ಕೂಡ ಕಮ್ಮಿ ಇಲ್ಲ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಕ್ಕಳ ಈ ಸಾಧನೆ ಕಣ್ತುಂಬಿಕೊಳ್ಳುವುದಿಕ್ಕೆ ನಟ ತೂಗುದೀಪ ಶ್ರೀನಿವಾಸ್ ಇಲ್ಲ ಅಂತಂದ್ರು, ಅವರ ಹೆಸರನ್ನು ದರ್ಶನ್ ಹಾಗೂ ದಿನಕರ್ ಇಬ್ಬರು ಅಜರಾಮಾರವಾಗಿಸುತ್ತಿದ್ದಾರೆನ್ನುವುದಕ್ಕೆ ಸಾಕ್ಷಿ “ತೂಗುದೀಪ” ವೇ ಸಾಕು. ಈ ದೀಪ ಇನ್ನಷ್ಟು ಬೆಳಗಲಿ. ಪ್ರಜ್ವಲಿಸಲಿ.
ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ದ್ವಾರಕೀಶ್ ಅವರು ಶುಕ್ರವಾರ ನಿಧನರಾಗಿದ್ದಾರೆ. 80 ವರ್ಷ ವಯಸ್ಸಿನವರಾಗಿದ್ದ ಅಂಬುಜಾ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಎಚ್ಎಸ್ಆರ್ ಲೇಔಟ್ನಲ್ಲಿರುವ ಮನೆಯಲ್ಲೇ ಮೃತಪಟ್ಟಿದ್ದಾರೆ.
ಅಂಬುಜಾ ದ್ವಾರಕೀಶ್
ಮೃತರು ಪತಿ ದ್ವಾರಕೀಶ್ ಸೇರಿದಂತೆ ಐವರು ಗಂಡು ಮಕ್ಕಳನ್ನು ಅಗಲಿದ್ದಾರೆ. ದ್ವಾರಕೀಶ್ ಅವರ ಸಾಧನೆಯ ಹಿಂದೆ ಅಂಬುಜಾ ಅವರ ಕೊಡುಗೆ ಅಪಾರವಾಗಿತ್ತು. ಕಪ್ಪು-ಬಿಳುಪು ಕಾಲದಿಂದಲೂ ದ್ವಾರಕೀಶ್ ಸಿನಿಮಾ ಮಾಡಿದವರು. ಆಗಿನಿಂದಲೂ ದ್ವಾರಕೀಶ್ ಅವರ ಬೆನ್ನಿಗೆ ನಿಂತು, ಸೋಲು-ಗೆಲುವು ಎರಡರಲ್ಲೂ ಅಂಬುಜಾ ಅವರು ಜೊತೆಗಿದ್ದರು. ದ್ವಾರಕೀಶ್ ಅವರ ಏಳು-ಬೀಳಿನಲ್ಲಿ ಜೊತೆಯಾಗಿಯೇ ಇದ್ದ ಅವರು, ಸದಾ ನಗುಮೊಗದಲ್ಲೇ ದ್ವಾರಕೀಶ್ ಅವರಿಗೆ ಧೈರ್ಯ ತುಂಬುತ್ತಿದ್ದರು.
ಮೃತರ ಅಂತ್ಯಕ್ರಿಯೆ, ಶನಿವಾರ ಚಾಮರಾಜಪೇಟೆಯಲ್ಲಿರುವ ಚಿತಾಗಾರದಲ್ಲಿ ನೆರವೇರಲಿದೆ ಎಂದು ಅವರ ಹಿರಿಯ ಪುತ್ರ ಯೋಗೇಶ್ ದ್ವಾರಕೀಶ್ ತಿಳಿಸಿದ್ದಾರೆ. ಸಂತಾಪ: ಮೃತರ ಆತ್ಮಕ್ಕೆ ಶಾಂತಿ ಕೋರಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ಚಿತ್ರರಂಗದ ಗಣ್ಯರು, ನಿರ್ದೇಶಕ, ನಿರ್ಮಾಪಕರು, ನಿರ್ದೇಶಕ ಸಂಘ, ನಿರ್ಮಾಪಕರ ಸಂಘ ಹಾಗೂ ಕಲಾವಿದರ ಸಂಘ ಸಂತಾಪ ಸೂಚಿಸಿದೆ.