Categories
ಸಿನಿ ಸುದ್ದಿ

ಸೂಪರ್‌ ಹೀರೋ ಕಾನ್ಸೆಪ್ಟ್‌ ಚಿತ್ರ ಮುಕ್ತಾಯ – ಆನ ಇದು ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ಚಿತ್ರ

ವಿಶೇಷ ಪಾತ್ರದಲ್ಲಿ ಅದಿತಿ ಪ್ರಭುದೇವ

ಈಗಾಗಲೇ ಸಾಕಷ್ಟು ಸೂಪರ್ ಹೀರೋ ಕಾನ್ಸೆಪ್ಟ್‌ ಸಿನಿಮಾಗಳು ಬಂದಿವೆ. ಆದರೆ, ಮಹಿಳಾ ಪ್ರಧಾನದ ಸೂಪರ್ ಹೀರೋ ಕಾನ್ಸೆಪ್ಟ್‌ ಚಿತ್ರ ಭಾರತದಲ್ಲಿ ಈವರೆಗೂ ಬಂದಿಲ್ಲ.‌ “ಆನ” ಮೂಲಕ ನಟಿ ಅದಿತಿ ಪ್ರಭುದೇವ ಅವರು ಇಲ್ಲಿ ಮಹಿಳಾ ಸೂಪರ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಹಿಂದೆ ಅದಿತಿ ಪ್ರಭುದೇವ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಈ ರೀತಿಯ ಪಾತ್ರ ನಿರ್ವಹಿಸಿಲ್ಲ. “ಆನ” ಅವರಿಗೊಂದು ವಿಶೇಷ ಸಿನಿಮಾ ಎನ್ನುವುದಂತೂ ಹೌದು. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೆಸರುಫಟ್ಟ ಬಳಿ‌ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಅಲ್ಲೇ‌ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಈಗಷ್ಟೇ ಡಬ್ಬಿಂಗ್‌ ಕೆಲಸ ಕೂಡ ಮುಕ್ತಾಯ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್‌ ವೇಳೆ ಚಿತ್ರವನ್ನು ಪ್ರೇಕ್ಷಕರ ಎದುರು ತರಲು ತಯಾರಿ ನಡೆಸಲಾಗುತ್ತಿದೆ.


ಈ ಚಿತ್ರಕ್ಕೆ ಮನೋಜ್‌ ಪಿ.ನಡುಲಮನೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಹಿಂದೆ ಹಲವು ಕಿರುಚಿತ್ರಗಳು ಹಾಗೂ ಟೆಲಿ ಸಿನಿಮಾ ನಿರ್ದೇಶಿಸಿ ಅನುಭವ ಇರುವ ಮನೋಜ್‌ ಅವರಿಗೆ ಇದು ಮೊದಲ ಸಿನಿಮಾ. ಯು.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್ ಈ
ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ. ರಿತ್ವಿಕ್ ಮುರಳೀಧರನ್ ಅವರ ಸಂಗೀತ ನಿರ್ದೇಶನವಿದೆ. ವಿಜೇತ್‌ ಚಂದ್ರ ಸಂಕಲನ ಮಾಡುತ್ತಿದ್ದಾರೆ. ಚಿತ್ರದಲ್ಲಿ. ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ಸುನೀಲ್ ಕುಮಾರ್ ಡಿ.ಕೆ, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂ, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಸೇರಿದಂತೆ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಶರಣ್ ನಟನೆಯ ಹೊಸ ಚಿತ್ರಕ್ಕೆ ಡಿ.21ರಂದು ನಾಮಕರಣ

ಮತ್ತೊಂದು ಸಖತ್ ಸಿನ್ಮಾ ನಿರೀಕ್ಷೆ…

ಈ ಹಿಂದೆ ನಟ ಶರಣ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು.
ಆಮೇಲೆ ಅದೊಂದು ಹೊಸ ಚಿತ್ರ ಅನ್ನೋದು ಗೊತ್ತಾಗಿತ್ತು.

ಅಂದಹಾಗೆ, ಜಡೇಶ್ ಹಂಪಿ ನಿರ್ದೇಶನದ ಆ ಚಿತ್ರಕ್ಕೆ ಶೀರ್ಷಿಕೆ ಇಟ್ಟಿರಲಿಲ್ಲ. ಈಗ ನಾಮಕರಣ ಮಾಡುವ ಸಂದರ್ಭ ಒದಗಿ ಬಂದಿದೆ.
ಹೌದು, ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಆ ಹೊಸ ಚಿತ್ರದ ಟೈಟಲ್ ಡಿಸೆಂಬರ್ 21ರಂದು ಅನಾವರಣಗೊಳ್ಳಲಿದೆ.

ಸದ್ಯಕ್ಕೆ ಶೀರ್ಷಿಕೆ ಅನಾವರಣ ಮಾಡಲಿರುವ ಚಿತ್ರತಂಡ ಹಂತ ಹಂತವಾಗಿ ಆ ಸಿನ್ಮಾದ ತಂತ್ರಜ್ಞರು, ಕಲಾವಿದರಾಹಿತಿ ಹೊರ ಹಾಕಲಿದೆ.

Categories
ಸಿನಿ ಸುದ್ದಿ

ಸಲಾರ್‌ ; ನಟ ಪ್ರಭಾಸ್‌ಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ? ೧೦೦ ಕೋಟಿ ಎನ್ನುತ್ತಿವೆ ಗಾಂಧಿನಗರದ ಮೂಲಗಳು

ಸಲಾರ್‌ಗಾಗಿ ಇಟ್ಟ ಬಜೆಟ್‌ ೫೦೦ ಕೋಟಿ?

ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್‌” ಬಹುದೊಡ್ಡ ಬಜೆಟ್‌ನ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತು. ಆ ಸಿನಿಮಾ ದೇಶ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿತು ಅನ್ನೋದು ಗೊತ್ತು. ಈಗ “ಕೆಜಿಎಫ್‌ ಚಾಪ್ಟರ್‌ ೨” ಕೂಡ ದೊಡ್ಡ ಬಜೆಟ್‌ ಸಿನಿಮಾ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡಿದ್ದೂ ಸಹ ದೊಡ್ಡ ಸುದ್ದಿಯಾಗಿದೆ. ಹೌದು, ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅವರಿಗೆ “ಸಲಾರ್‌” ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿತ್ತು. ಆ ಚಿತ್ರಕ್ಕೆ “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶಕ ಎನ್ನುವುದನ್ನೂ ಹೇಳಿತ್ತು. ಈಗ ಜೋರಾಗಿ ಹರಿದಾಡುತ್ತಿರುವ ಸುದ್ದಿ ಅಂದರೆ, “ಸಲಾರ್‌” ಚಿತ್ರದ ನಟನೆಗಾಗಿ ಪ್ರಭಾಸ್‌ ಅವರಿಗೆ ಹೊಂಬಾಳೆ ಫಿಲ್ಮ್ಸ್‌ ಕೊಟ್ಟಿರುವ ಸಂಭಾವನೆ ಕುರಿತು. ಗಾಂಧಿನಗರದ ಮೂಲಗಳ ಪ್ರಕಾರ, ಪ್ರಭಾಸ್‌ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗುತ್ತಿದೆ ಎಂಬುದು ದೊಡ್ಡ ಸುದ್ದಿ.

ಇನ್ನು, ಈ ಚಿತ್ರವನ್ನು ಸುಮಾರು ೫೦೦ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದೇನೆ ಇರಲಿ, “ಕೆಜಿಎಫ್‌” ಬಳಿಕ ಹೊಂಬಾಳೆ ಫಿಲ್ಮ್ಸ್‌ ಕೈಗೆತ್ತಿಕೊಂಡ ಅದ್ಧೂರಿ ಸಿನಿಮಾ “ಸಲಾರ್‌”. “ಬಾಹುಬಲಿ” ಖ್ಯಾತಿಯ ಪ್ರಭಾಸ್‌ ಈ ಹಿಂದೆ ಹಿಂದಿಯಲ್ಲಿ “ಸಾಹೋ” ಚಿತ್ರ ಮಾಡಿದ್ದರು. ಆ ಚಿತ್ರಕ್ಕೂ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗಿತ್ತು ಎಂಬ ಸುದ್ದಿ ಇತ್ತು. ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ, ಈಗ ಹೀಗೊಂದು ಸುದ್ದಿ ಗಾಂಧಿನಗರದಲ್ಲೂ ಜೋರಾಗಿ ಹರಿದಾಡುತ್ತಿದೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್‌ ಶ್ರೀಮುರಳಿ ಅವರಿಗೆ “ಬಘೀರ” ಸಿನಿಮಾವನ್ನು ಅನೌನ್ಸ್‌ ಮಾಡಿದೆ. ಈ ಚಿತ್ರ ಏಪ್ರಿಲ್‌ ವೇಳೆಗೆ ಶುರುವಾಗಬಹುದು.
ಈ ಎಲ್ಲಾ ಬೆಳವಣಿಗೆಗಳ ಸುದ್ದಿ ಕೇಳುತ್ತಿದ್ದರೆ, ಕನ್ನಡ ಚಿತ್ರರಂಗ ಇನ್ನಷ್ಟು ಮಟ್ಟಕ್ಕೆ ಬೆಳವಣಿಗೆಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಒಂದಂತೂ ಸತ್ಯ, ಹೊಂಬಾಳೆ ಫಿಲ್ಮ್ಸ್‌ ಮಾಡುವ ಚಿತ್ರಗಳಲ್ಲಿ ಅದ್ಧೂರಿತನಕ್ಕೇನೂ ಕೊರತೆ ಇರೋದಿಲ್ಲ.

Categories
ಸಿನಿ ಸುದ್ದಿ

ಮಾರ್ಚ್‌ನಲ್ಲಿ ಸಲಗ ಅಬ್ಬರ, ಸಾಧ್ಯತೆಯ ಸುಳಿವು ಕೊಟ್ಟ ಶ್ರೀಕಾಂತ್


ದುನಿಯಾ ವಿಜಯ್‌ ನಿರ್ದೇಶನದ ಜತೆಗೆ ನಾಯಕರಾಗಿ ಅಭಿನಯಿಸಿರುವ ʼಸಲಗʼ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ. ಕನ್ನಡದ ಸಿನಿಪ್ರೇಕ್ಷಕರ ಪಾಲಿಗೆ ಇದೊಂದು ಬಹುನಿರೀಕ್ಷಿತ ಚಿತ್ರ. ದೊಡ್ಡ ತಾರಾಗಣದ ಜತೆಗೆ ಬಿಗ್‌ ಬಜೆಟ್‌ ಸಿನಿಮಾ. ಹಾಗೆಯೇ ನಟ ದುನಿಯಾ ವಿಜಯ್‌ ನಿರ್ದೇಶನದ ಮೊದಲ ಸಿನಿಮಾ. ಜತೆಗೆ ಒಂದಲ್ಲ ಒಂದು ಕಾರಣಕ್ಕೆ ದಿನ ನಿತ್ಯವೂ ಸುದ್ದಿ ಮಾಡುತ್ತಾ ಬರುತ್ತಿದೆ.

 

ದುನಿಯಾ ವಿಜಯ್‌ ಅಭಿಮಾನಿಗಳಂತೂ ತುದಿಗಾಲಲ್ಲೆ ನಿಂತಿದ್ದಾರೆ. ಅದೆಲ್ಲ ಕಾರಣಕ್ಕೆ ಈ ಸಿನಿಮಾ ಕನ್ನಡದ ಸಿನಿಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ರಿಲೀಸ್‌ ದಿನವನ್ನೆ ಎದುರು ನೋಡುವಂತೆ ಮಾಡಿದೆ.

Mಸದ್ಯಕ್ಕೆ ಈ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಅಗಿಲ್ಲ. ಚಿತ್ರ ತಂಡದ ಮೂಲಗಳ ಪ್ರಕಾರ ಫೆಬ್ರವರಿ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾತುಗಳು ಇವೆ. ಆದರೆ ನಿರ್ಮಾಪಕ ಶ್ರೀಕಾಂತ್‌ ಪ್ರಕಾರ ಸಲಗ ತೆರೆಗೆ ಬರುವುದಕ್ಕೆ ಇನ್ನಷ್ಟು ದಿನ ಕಾಯಲೇ ಬೇಕಿದೆ. ” ಸದ್ಯಕ್ಕೆ ನಾವಿನ್ನು ರಿಲೀಸ್‌ ಬಗ್ಗೆ ಡಿಸೈಡ್‌ ಮಾಡಿಲ್ಲ. ಈಗ ಟೈಮ್‌ ಬೇರೆ ಸರಿಯಿಲ್ಲ. ಚಿತ್ರ ಮಂದಿರಗಳು ಒಪನ್‌ ಆಗಿವೆ, ಹೊಸಬರ ಸಿನಿಮಾ ರಿಲೀಸ್‌ ಅಗುತ್ತಿವೆ ಎನ್ನುವುದು ನಿಜವಾದರೂ, ರಾಜ್ಯದ ಎಷ್ಟೋ ಕಡೆಗಳಲ್ಲಿ ಈಗಲೂ ಚಿತ್ರ ಮಂದಿರಗಳು ಬಾಗಿಲು ತೆಗೆದಿಲ್ಲ. ಇನ್ನೊಂದು ಬಗೆಯಲ್ಲಿ ಚಿತ್ರ ಮಂದಿರಗಳ ವಾಸ್ತವ ಪರಿಸ್ಥಿತಿ ಹೀಗಿದೆ. ಹಾಗಾಗಿ ಯಾವಾಗ ಬಂದರೆ ಸೂಕ್ತ ಎನ್ನುವುದು ನಮಗೂ ಗೊಂದಲವಿದೆʼ ಎನ್ನುತ್ತಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.‌

ಸಲಗ ಮಾತ್ರವಲ್ಲ ಸದ್ಯ ರಿಲೀಸ್ ಗೆ ರೆಡಿಯಿರುವ ಸ್ಟಾರ್ ಸಿನಿಮಾಗಳ ಪರಿಸ್ಥಿತ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರೂ ವಾತಾವರಣ ಪೂರ್ಣ ಪ್ರಮಾಣದಲ್ಲಿ ತಿಳಿಯಾಗುವುದನ್ನೇ ಕಾಯುತ್ತಿದ್ದಾರೆ. ಕೊರೋನಾ ಆತಂಕ ದೂರವಾಗಬೇಕು, ಆ ಮೂಲಕ ರಾಜ್ಯದ ಉದ್ದಗಲಕ್ಕೂ ಚಿತ್ರಮಂದಿರಗಳು ಒಪನ್‌ ಅಗಬೇಕು, ಆಗಲೇ ಚಿತ್ರ ರಿಲೀಸ್‌ ಆದರೆ ಸೂಕ್ತ ಅಂತ ಎಲ್ಲರೂ ಕಾಯುತ್ತಿದ್ದಾರೆ. ಸಲಗ ಕೂಡ ಅದೇ ಹಾದಿಯಲ್ಲಿದೆ.

Categories
ಸಿನಿ ಸುದ್ದಿ

ಬ್ಯಾಕ್ ಗ್ರೌಂಡ್ ಡಾನ್ಸರ್ ಈಗ ಹೀರೋ, ಕುದುರೆ ಮೇಲೆ ಬರುತ್ತಿದ್ದಾನೆ ಮೈಸೂರು ಹುಡುಗ

ಚರಿತ್‌ ಎನ್ನುವ ತನ್ನದೇ ಹೆಸರಿನ ಚಿತ್ರಕ್ಕೆ ಆತನೇ ನಾಯಕ

 

ಈತ ಮೈಸೂರು ಹುಡುಗ. ಹೆಸರು ಚರಿತ್. ಬೆಳ್ಳಿತೆರೆಗೆ ಈಗ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾರೆ. ಅತ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ನಾಳೆ ರಿವೀಲ್‌ ಆಗುತ್ತಿದೆ. ಮೈಸೂರು ಹುಡುಗ ಅಲ್ಬಾ, ಆ ಪ್ರೀತಿಯ ಕಾರಣಕ್ಕೆ ಮಜಾ ಟಾಕೀಸ್ ಖ್ಯಾತಿಯ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌, ಚರಿತ್‌ ಅಭಿನಯದ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಲಾಂಚ್‌ ಮಾಡುವ ಮೂಲಕ ಆತನನ್ನು ಸಿನಿಮಾ ಜಗತ್ತಿಗೆ ಹೀರೋ ಆಗಿ ಪರಿಚಯಿಸುತ್ತಿದ್ದಾರೆ. ಆ ಮೂಲಕ ಕನ್ನಡದ ಅನೇಕ ಸ್ಟಾರ್‌ ಗಳ ಹಾಗೆ ಅರಮನೆ ನಗರಿಯ ಮತ್ತೊಬ್ಬ ಚೆಲುವ ಹೀರೋ ಆಗಿ ಸ್ಯಾಂಡಲ್‌ವುಡ್‌ ಗೆ ಎಂಟ್ರಿಯಾಗುತ್ತಿರುವುದು ವಿಶೇಷ.

ಏಳು ವರ್ಷದ ಅನುಭವಿ ಈ ಚರಿತ್

ಚರಿತ್‌ ಮೈಸೂರು ಹುಡುಗ ಅಂದ್ಮೇಲೆ ಹೆಚ್ಚೇನು ಹೇಳಬೇಕಿಲ್ಲ. ಯಾಕಂದ್ರೆ ಮೈಸೂರಿಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ನಂಟು. ಲೋಕೇಶ್‌, ಅಶ್ವತ್ಥ್‌, ಅಂಬರೀಶ್‌, ವಿಷ್ಣುವರ್ಧನ್‌ ಸೇರಿದಂತೆ ಕನ್ನಡ ಚಿತ್ರ ರಂಗ ಪ್ರಜ್ಬಲಿಸುವಂತೆ ಮಾಡಿದ ಘಟಾನುಘಟಿ ಕಲಾವಿದರೆಲ್ಲ ಮೈಸೂರಿನವರೆ. ಅಷ್ಟೇ ಯಾಕೆ, ಈಗಲೂ ಸ್ಯಾಂಡಲವುಡ್‌ ನಲ್ಲಿ ಸ್ಟಾರ್‌ ಆಗಿ ಮಿಂಚುತ್ತಿರುವವರಲ್ಲಿ ಮೈಸೂರಿನವರದ್ದೇ ಸಿಂಹಪಾಲು. ಅಲ್ಲಿನ ಮಣ್ಣಿವ ಗುಣ ಅದು. ಅದೇ ನಂಟಿನ ಪ್ರಭಾವದೊಂದಿಗೆ ಹೀರೋ ಆಗಲೇಬೇಕೆಂದು ಸಿನಿಮಾ ಜಗತ್ತಿಗೆ ಬಂದಿರುವ ಯುವ ಪ್ರತಿಭೆ ಚರಿತ್‌ ಗೆ ಯಾವುದೇ ಹಿನ್ನೆಲೆ ಇಲ್ಲ. ಅವರದೊಂದು ಕೃಷಿ ಕುಟುಂಬ. ಅಪ್ಪ-ಅಮ್ಮ ಕೃಷಿಕರು. ಒಂದಷ್ಟು ಜಮೀನಿದೆ. ಅದೇ ಅವರ ಜೀವನೋಪಾಯದ ಮೂಲ. ಅದರೂ ಹೀರೋ ಅಗುವ ಕನಸು ಹೊತ್ತು ಬೆಂಗಳೂರಿಗೆ ಬಂದ ಈ ಸಿಕ್ಸ್‌ ಪ್ಯಾಕ್‌ ಹುಡುಗನಿಗೆ ಏಳು ವರ್ಷದ ಸಿನಿ ದುನಿಯಾದ ಜತೆಗಿನ ನಂಟಿದೆ. ಹಾಗೆಯೇ ಹೀರೋ ಆಗಲೇಬೇಕೆಂದು ಅಷ್ಟು ವರ್ಷಗಳಲ್ಲಿಒಂದಷ್ಟು ನಟನೆಗೆ ಪೂರಕವಾದ ತರಬೇತಿ ಪಡೆದಿದ್ದಾನೆನ್ನುವುದು ಪ್ಲಾಸ್‌ ಪಾಯಿಂಟ್.

ಹೀರೋ ಆಗುತ್ತಿರುವುದು ಸುಮ್ನೆ ಅಲ್ಲ..

ಅದೇ ಅನುಭವದ ಮೂಲಕ ಚಿಕ್ಕಂದಿನ ತಮ್ಮ ಕನಸು ನನಸಾಗಿಸಿಕೊಳ್ಳುತ್ತಿರುವ ಚರಿತ್‌, ಮೂಲಕ ” ಸಿನಿಲಹರಿ” ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದು ಹೀಗೆ; ʼ ನಂದು ಮೈಸೂರು. ರೈತ ಕುಟುಂಬದಿಂದ ಬಂದವನು. ಅಪ್ಪ -ಅಮ್ಮ ಇಬ್ಬರು ಕೃಷಿಕರು. ಆದರೂ ನಂಗೆ ಬಾಲ್ಯದಿಂದಲೂ ಹೀರೋ ಆಗ್ಬೇಕೆನ್ನುವ ಹುಚ್ಚು. ಅದ್ಯಾಕೆ ಬಂತೋ ಗೊತ್ತಿಲ್ಲ. ಬಹುಶ:, ಮೈಸೂರಿನ ಮಣ್ಣಿನ ಗುಣವೂ ಇರಬಹುದು. ಅದೇ ಕಾರಣಕ್ಕೆ ಓದು ಒಂದು ಹಂತಕ್ಕೆ ಮುಗಿದ ನಂತರ ಹೀರೋ ಆಗುವ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಹೀರೋ ಆಗ್ಬೇಕು ಅನ್ನೋದು ಕನಸು ಕಂಡಷ್ಟು ಸುಲಭ ಅಲ್ಲ ಅನ್ನೋದು ಇಲ್ಲಿಗೆ ಬಂದ್ಮೇಲೆ ಗೊತ್ತಾಯಿತು. ಅದಕ್ಕೂ ಒಂದಷ್ಟು ಸಿದ್ಧತೆ ಬೇಕು, ಶ್ರದ್ಧೆ ಇರಬೇಕು ಅಂತ ಇಲ್ಲಿ ಪರಿಚಯವಾದವರು ಹೇಳಿದರು. ಅಲ್ಲಿಂದ ನನ್ನ ಕೆಲಸ ಶುರುವಾಯಿತು. ಇಲ್ಲಿಗೆ ಬಂದ ಆರಂಭದಲ್ಲೆ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಶಾಲೆಯಲ್ಲಿ ಆಕ್ಟಿಂಗ್‌ ಟ್ರೈನಿಂಗ್‌ ಮುಗಿಸಿದೆ. ಮುಂದೇನು ಅಂತ ಯೋಚಿಸುತ್ತಿದ್ದಾಗ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದೆ. ಅದರ ಜತೆಗೆ ನಂಗೆ ಡಾನ್ಸ್‌ ಗೊತ್ತಿದ್ರಿಂದ ೧೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ಬ್ಯಾಕ್‌ ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದೆ. ಅಲ್ಲಿ ಸಂಪಾದಿಸಿಕೊಂಡ ಹಣದಲ್ಲಿ ಜಿಮ್ ಗೆ ಹೋಗಿ ವರ್ಕೌಟ್‌ ಮಾಡಿದೆ. ಇಷ್ಟಾಗಿಯೂ ನಂಗೆ ನಿತ್ಯ ಕಾಡುತ್ತಿದ್ದದ್ದು ಒಂದೇ ಹೀರೋ ಆಗಬೇಕೆನ್ನುವ ಕನಸು. ಹೇಗಾದ್ರೂ ಮಾಡಿ, ಅದನ್ನು ನನಸಾಗಿಸಿಕೊಳ್ಳಬೇಕೆನ್ನುವ ನನ್ನ ಹಣಾಹಣಿ ಪ್ರಯತ್ನದಲ್ಲಿ ಫೈನಲಿ ಈಗ ಶುರುವಾಗುತ್ತಿರುವುದು ಚರಿತ್‌ ಎನ್ನುವ ಹೊಸ ಸಾಹಸ !

ಚರಿತ್’ ಗೆ ಗೆಳೆಯರು ಕೊಟ್ಟರು ಸಾಥ್

ಇದು ಚರಿತ್‌ ಮಾತು. ಸಿನಿಮಾ ಎಂಬುದು ಮಾಯೆ. ಅದು ಬೆನ್ನು ಬಿದ್ದರೆ ಅದನ್ನು ಟಚ್‌ ಮಾಡುವ ತನಕ ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ. ಚರಿತ್‌ ಕೂಡ ಹಾಗೆಯೇ ಅದರ ಬೆನ್ನು ಬಿದ್ದವರು. ಫೈನಲಿ ಈಗ ಹೀರೋ ಆಗುತ್ತಿದ್ದಾರೆ. ಗೆಳೆಯರ ಜತೆ ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಕೃಷ್ಣ ಎನ್ನುವವರು ಇದರ ನಿರ್ದೇಶಕರು. ಈ ಹಿಂದೆ ಇವರು ʼಅಥರ್ವʼ ಹೆಸರಿನ ಚಿತ್ರಕ್ಕೆ ಅಯಕ್ಷನ್‌ ಕಟ್‌ ಹೇಳಿದ್ದರು. ಹಾಗೆಯೇ ಮೂಲಕ ಕೃಷಿಕರಾದ ಭರತ್‌ ಎನ್ನುವವರು ಚಿತ್ರದ ನಿರ್ಮಾಪಕರು. ಅವರಿಗೆ ಒಂದಷ್ಟು ಗೆಳೆಯರು ಕೂಡ ಸಾಥ್‌ ನೀಡಿದ್ದಾರಂತೆ. ಇನ್ನು ತನ್ವಿಕ್‌ ಎನ್ನುವವರು ಚಿತ್ರದ ಛಾಯಾಗ್ರಾಹಕ.

ಮೂರು ವರ್ಷಗಳ ಭರ್ಜರಿ ಟ್ರೈನಿಂಗ್

ಇದು ೨೦೧೫ರಲ್ಲೇ ಶುರುವಾದ ಪ್ರಾಜೆಕ್ಟ್.‌ ತಡವಾಗಿ ಶುರುವಾಗುತ್ತಿದೆ. ಅದಕ್ಕೆ ಕಾರಣ ಸಿನಿಮಾದ ಸಿದ್ಧತೆ. ʼ ಬೆಸಿಕಲಿ ಇದು ಹಾರ್ಸ್‌ ರೈಡಿಂಗ್‌ ಜತೆಗೆ ಸ್ಫೋರ್ಟ್‌ ಬೆಸ್‌ ಸಿನಿಮಾ. ಅದಕ್ಕೆ ಸಾಕಷ್ಟು ಸಿದ್ದತೆ ಬೇಕಿತ್ತು. ಮೊದಲು ಹಾರ್ಸ್‌ ರೈಡಿಂಗ್.‌ ಒಂದೂವರೆ ವರ್ಷ ಅದನ್ನು ಕಲಿತುಕೊಂಡೆ. ಆಮೇಲೆ ಡಾನ್ಸ್‌ ಟ್ರೈನಿಂಗ್‌ ಮಾಡಿದೆ. ಆಮೇಲೆ ಮತ್ತೆ ಬಾಡಿ ಬಿಲ್ಡಿಂಗ್‌ ಮಾಡ್ಬೇಕು ಅಂದ್ರು, ಅದನ್ನು ಕಲಿತುಕೊಳ್ಳುವುದಕ್ಕೆ ಒಂದಷ್ಟು ಸಮಯ ಬೇಕಾಯಿತು. ಫೈನಲಿ ಎಲ್ಲಾ ಮುಗಿಸಿಕೊಂಡು ಈಗ ಸಿನಿಮಾ ಶುರು ಮಾಡುತ್ತಿದ್ದೇವೆʼ ಎನ್ನುತ್ತಾ ಒಂದೆಡೆ ಹೀರೋ ಆಗುತ್ತಿರುವ ಬಗೆಗಿನ ಖುಷಿ, ಮತ್ತೊಂದೆಡೆ ಅದಕ್ಕಾಗಿ ಪಟ್ಟ ಪರಿಶ್ರಮ ನೆನಪಿಸಿಕೊಂಡು ನಗು ಹಾಗೂ ಆತಂಕ ಹೊರ ಹಾಕಿದರು ಚರಿತ್.‌ ಸದ್ಯಕ್ಕೆ ಸಿನಿಮಾಕ್ಕೆ ಹೀರೋ ಮಾತ್ರ ಫಿಕ್ಸ್‌ ಅಗಿದ್ದಾರೆ. ಹೀರೋ ಯಿನ್‌ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಬಾಕಿಯಿದೆಂತೆ. ನಾಳೆ ಚಿತ್ರದ ಅಧಿಕೃತ ಪೋಸ್ಟರ್‌ ಲಾಂಚ್‌ ಆಗುವ ಮೂಲಕ ಶೂಟಿಂಗ್‌ ಸೇರಿದಂತೆ ಉಳಿದ ಕೆಲಸಗಳಿಗೆ ಪ್ಲಾನ್‌ ರೆಡಿಯಾಗಲಿದೆಂತೆ. ಆದಷ್ಟು ಬೇಗ ಸಿನಿಮಾ ಶುರುವಾಗಲಿ, ಚರಿತ್‌ ಸಕ್ಸಸ್‌ ನಟ ಆಗಲಿ ಎನ್ನುವುದು ‘ಸಿನಿಲಹರಿ ‘ಹಾರೈಕೆ.

Categories
ಸಿನಿ ಸುದ್ದಿ

ಮದಗಜ ಘರ್ಜನೆಗೆ ಭರಪೂರ ಮೆಚ್ಚುಗೆ – ಒಂದೇ ದಿನದಲ್ಲಿ 30 ಲಕ್ಷ ಜನರ ವೀಕ್ಷಣೆ

 

ಇದು ದಾಖಲೆಗಳ ದರ್ಬಾರ್‌

– ಈಗ ಎಲ್ಲೆಡೆ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಇನ್ನು, ಕೇವಲ 24 ಗಂಟೆಯಲ್ಲಿ 30 ಲಕ್ಷ (ಮೂರು ಮಿಲಿಯನ್) ಜನರಿಂದ ರಿಯಲ್‌ ಟೈಮ್‌ನಲ್ಲಿ ವೀಕ್ಷಣೆ ಪಡೆದು, ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡಕ್ಕೆ ಖುಷಿ ತಂದಿದೆ. ೨೪ ಗಂಟೆಯಲ್ಲೆ ವೇಗವಾಗಿ ಅತೀ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡದ ಮೊದಲ ಫಸ್ಟ್‌ ಲುಕ್‌ ಟೀಸರ್‌ ಎಂಬ ಹೆಗ್ಗಳಿಕೆಗೂ ಈ ಚಿತ್ರದ ಟೀಸರ್‌ ಪಾತ್ರವಾಗಿದೆ.

ನ್ನು, “ಉಗ್ರಂ” , “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ಅವರು ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಶುಭಹಾರೈಸಿದ್ದರು. ಶ್ರೀಮುರಳಿ ಅಭಿನಯದ “ಮದಗಜ” ಚಿತ್ರಕ್ಕೆ ಮಹೇಶ್‌ ಕುಮಾರ್‌ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.


ಶ್ರೀಮುರಳಿ ಅವರ ಹುಟ್ಟುಹಬ್ಬದ ದಿನ ಈ ಟೀಸರ್‌ ಬಿಡುಗಡೆಯಾದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಕೂಡ ಶ್ರೀಮುರಳಿ ಅವರಿಗೆ ಹೊಸ ಚಿತ್ರವನ್ನು ಅನೌನ್ಸ್‌ ಮಾಡಿದೆ. “ಬಘೀರ” ಸಿನಿಮಾ ಅನೌನ್ಸ್‌ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಕಾಣಿಕೆ ನೀಡಿದೆ. ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶಕರು. ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬಜೆಟ್‌ನ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಮಾಡಿರುವ “ಬಘೀರ” ಪೋಸ್ಟರ್‌ ಕೂಡ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಒಂದಷ್ಟ ಕುತೂಹಲವೂ ಇದೆ.

 

 

Categories
ಸಿನಿ ಸುದ್ದಿ

ಪ್ರಜ್ವಲ್‌ ದೇವರಾಜ್‌ ಜೊತೆ ಗುರುದತ್‌ ಗಾಣಿಗ ಹೊಸ ಚಿತ್ರ – ಥ್ರಿಲ್ಲಿಂಗ್‌ ಸಿನಿಮಾ ಉತ್ಸಾಹದಲ್ಲಿ ಯಂಗೆಸ್ಟ್‌ ಡೈರೆಕ್ಟರ್

ಸಂಕ್ರಾಂತಿಗೆ ಟೈಟಲ್‌ ‌ಲಾಂಚ್‌

ಕನ್ನಡದ ಯಂಗೆಸ್ಟ್ ನಿರ್ದೇಶಕ ಅಂತಲೇ ಚಿತ್ರರಂಗಕ್ಕೆ ಪರಿಚಯವಾದ ಗುರುದತ್ ಗಾಣಿಗ, “ಅಂಬಿ ನಿಂಗ್‌ ವಯಸ್ಸಾಯ್ತೋ” ಚಿತ್ರದ ಮೂಲಕ ನಿರ್ದೇಶಕರಾದವರು. ಆ ಸಿನಿಮಾ ಬಳಿಕ ಅವರು ಮುಂದೆ ಯಾರ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಗೊಂದಲವಿತ್ತು. ಆ ಗೊಂದಲಕ್ಕೀಗ ತೆರೆಬಿದ್ದಿದೆ. ಹೌದು, ಗುರುದತ್‌ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅಭಿಷೇಕ್‌ ಅಂಬರೀಶ್‌ ಜೊತೆ ಮಾಡಲಿದ್ದಾರೆ ಎಂದು ಜೋರು ಸುದ್ದಿಯಾಗಿತ್ತು. ಆದರೆ, ಆ ಚಿತ್ರದ ಬಗ್ಗೆ ಎಲ್ಲೂ ಅ‍ಪ್‌ಡೇಟ್‌ ಸಿಗಲಿಲ್ಲ. ಈಗ ಗುರುದತ್‌ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.

ಹೌದು, ಈಗ ಎರಡನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿರುವ ಅವರು, ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿದ್ದಾರೆ. ವಿಶೇಷ ಅಂದರೆ, ಗುರುದತ್‌ ಗಾಣಿಗ ತಮ್ಮ ಎರಡನೇ ನಿರ್ದೇಶನದ ಸಿನಿಮಾಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಸ್ಕ್ರಿಪ್ಟ್‌ ವರ್ಕ್ ಮುಗಿದಿದೆ. ಆದರೆ ಇನ್ನೂ, ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಜನವರಿ ಸಂಕ್ರಾಂತಿ ವೇಳೆಗೆ ಚಿತ್ರತಂಡ ಫಸ್ಟ್ ಲುಕ್ ಲಾಂಚ್ ಮಾಡುವುದರ ಜೊತೆಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು, ಈ ಚಿತ್ರವನ್ನು ಬೆಂಗಳೂರು ‌ಕುಮಾರ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಕುಮಾರ್‌ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಾನವ ಕಳ್ಳಸಾಗಣೆ ಕುರಿತಾದ ಕಥೆಯಾಗಿದ್ದು, ಸಾಕಷ್ಟು ಥ್ರಿಲ್ಲರ್‌ ಅಂಶಗಳು ಇಲ್ಲಿರಲಿವೆ. “ಸಿನಿಲಹರಿ” ಜೊತೆ ಮಾತನಾಡಿದ ನಿರ್ದೇಶಕ ಗುರುದತ್‌ ಗಾಣಿಗ, “ಪ್ರಜ್ವಲ್‌ ದೇವರಾಜ್‌ ಅವರಿಗೆ ಈ ಚಿತ್ರ ಬೇರೆಯದ್ದೇ ಇಮೇಜ್‌ ತಂದುಕೊಡುವ ವಿಶ್ವಾಸವಿದೆ. ಅವರ ಕೆರಿಯರ್‌ನಲ್ಲೇ ಇದೊಂದು ನೆಕ್ಸ್ಟ್‌ ಲೆವೆಲ್‌ಗೆ ಕರೆದುಕೊಂಡು ಹೋಗುವ ಸಿನಿಮಾ ಎಂಬ ಗ್ಯಾರಂಟಿ ಕೊಡುತ್ತೇನೆ.

ಪ್ರಜ್ವಲ್‌ ದೇವರಾಜ್‌ ಅವರು ಕೂಡ ಕಥೆ ಹಾಗೂ ಪಾತ್ರದ ಬಗ್ಗೆ ಕೇಳಿ ತುಂಬಾನೇ ಥ್ರಿಲ್‌ ಆಗಿದ್ದಾರೆ. ನಿರ್ಮಾಪಕ ಕುಮಾರ್‌ ಅವರು, ಕಥೆಗೆ ತಕ್ಕಂತೆ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಗುಣಮಟ್ಟದ ಸಿನಿಮಾ ಕೊಡುವ ಉದ್ದೇಶವಿದೆ. ಚಿತ್ರಕ್ಕೆ “ಮುಂದಿನ ನಿಲ್ದಾಣ” ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಅಭಿ ಇಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಸಂಗೀತ ನಿರ್ದೇಶಕರ ಜೊತೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಚಿತ್ರದಲ್ಲಿ ದೇವರಾಜ್‌ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಹೀರೋ ಒಬ್ಬರು, ಖಳನಟರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರು ಕಥೆ ಕೇಳಿ ಈಗಾಗಲೇ ಸಿನಿಮಾದಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಅದೊಂದು ಮೇಜರ್‌ ಪಾತ್ರ. ಉಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದೂ ಸ್ಟಾರ್‌ ನಟಿಯರ ಜೊತೆಯೇ ಚರ್ಚೆ ಆಗುತ್ತಿದೆʼ ಎಂದಷ್ಟೇ ಹೇಳುವ ಗುರುದತ್‌ ಗಾಣಿಗ, ಉಳಿದ ವಿಷಯವನ್ನು ಸಂಕ್ರಾಂತಿ ಸಮಯದಲ್ಲಿ ಹಂಚಿಕೊಳ್ಳುವುದಾಗಿ ಹೇಳುತ್ತಾರೆ.

Categories
ಸಿನಿ ಸುದ್ದಿ

ನಿರ್ದೇಶಕ ಮಂಜು ಮುಖದಲ್ಲಿ ನಗು ತರಿಸಿದ ʼಕನ್ನೇರಿ”

ಕಲಾತ್ಮಕ ಸಿನಿಮಾದಿಂದ ಕಮರ್ಷಿಯಲ್‌ ಕಡೆ ಮುಖ ಮಾಡಿದ ಕ್ರಿಯಾಶೀಲ ನಿರ್ದೇಶಕ

ಯುವ ನಿರ್ದೇಶಕ ನೀನಾಸಂ ಮಂಜು ಮತ್ತೊಮ್ಮೆ ಖುಷಿಯಲ್ಲಿದ್ದಾರೆ. ಅವರು ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ “ಕನ್ನೇರಿ” ಚಿತ್ರ ಈಗ ಇನ್ನೇರೆಡು ಚಿತ್ರೋತ್ಸವಗಳಿಗೆ ಆಯ್ಕೆ ಆಗಿದೆ. ಇವೆರೆಡು ಪ್ರತಿಷ್ಟಿತ ಫಿಲ್ಮ್‌ ಫೆಸ್ಟಿವೆಲ್ಸ್‌ ಎನ್ನುವುದು ವಿಶೇಷ. ಭಾರತದಲ್ಲೆ ನಡೆಯುವ ಗೋಲ್ಡನ್‌ ಜ್ಯೂರಿ ಫಿಲ್ಮ್‌ ಫೆಸ್ಟಿವೆಲ್‌ ಒಂದಾದರೆ, ಯುಎಸ್‌ಎ ಫಿಲ್ಮ್‌ ಫೆಸ್ಟಿವೆಲ್‌ಗೂ ಕೂಡ” ಕನ್ನೇರಿʼ ಚಿತ್ರ ಅಫೀಷಿಯಲ್‌ ಅಗಿಯೇ ಎಂಟ್ರಿ ಪಡೆದಿದೆ. ಸದ್ಯಕ್ಕೆ ಇವೆರೆಡು ಫೆಸ್ಟಿವೆಲ್‌ ನಡೆಯುವುದು ಯಾವಾಗ, ಅಲ್ಲಿ ʼಕನ್ನೇರಿʼ ಪ್ರದರ್ಶನ ಹೇಗೆ ಎನ್ನುವ ವಿವರ ನಮಗೆ ಮಾತ್ರವಲ್ಲ ಚಿತ್ರ ತಂಡಕ್ಕೂ ಗೊತ್ತಾಗಿಲ್ಲ. ಆದರೆ ಎರಡು ಫೆಸ್ಟಿವೆಲ್‌ ಗೆ ‘ಕನ್ನೇರಿ ‘ಚಿತ್ರ ಅಫಿಷಿಯಲಿ ಎಂಟ್ರಿ ಆಗಿರುವ ಖುಷಿಯನ್ನು ನಿರ್ದೇಶಕ ಮಂಜುʼಸಿನಿಲಹರಿʼಗೆ ಹಂಚಿಕೊಂಡಿದ್ದಾರೆ.

ಹನ್ನೇರೆಡು ಚಿತ್ರೋತ್ಸವಗಳಿಗೆ ‘ಕನ್ನೇರಿ’ ಪಯಣ

ʼಕನ್ನೇರಿʼ ಚಿತ್ರ ಈಗಾಗಲೇ ಹಲವು ಕಾರಣಕ್ಕೆ ಸುದ್ದಿ ಅ
ಆಗಿರುವುದು ಹಳೇ ಸುದ್ದಿ. ಅದು ಮೊದಲು ಗಮನ ಸೆಳೆದಿದ್ದು ವಿಭಿನ್ನ ಕಥಾ ಹಂದರದ ಮೂಲಕ. ಒಂದು ಬುಡಕಟ್ಟು ಸಮುದಾಯದಲ್ಲಿನ ಹುಡುಗಿಯ ಸುತ್ತಲ ಕತೆ ಇದು. ಅಭಿವೃದ್ದಿ ಹೆಸರಲ್ಲಿ ಇಂದು ದೇಶದ ವಿವಿಧೆಡೆ ಕಾಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. ಕಾಡು ನಾಶ ಅಥವಾ ಅಭಿವೃದ್ಧಿ ಹೆಸರಲ್ಲಿ ಆವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಅಲ್ಲಿ ತಮ್ಮ ಮೂಲ ನೆಲೆ ಕಳೆದುಕೊಂಡ ಬುಡಕಟ್ಟು ಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹಾಗೆ ವಲಸೆ ಬಂದವರಿಗೆ ಉದ್ಯೋಗ ಸೇರಿದಂತೆ ಮನೆ, ಮಠ ಇತ್ಯಾದಿ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಅಂತಹ ಅತಂತ್ರಗೊಂಡ ಒಂದು ಬುಡಕಟ್ಟು ಕುಟುಂಬದ ಹುಡುಗಿಯ ಸುತ್ತಲ ಕತೆಯೇ ಕನ್ನೇರಿ. ಆಕೆಯ ಬದುಕಲ್ಲಿ ಏನಾಯಿತು, ಆಕೆ ಯಾರನ್ನು , ಏನನ್ನು ಕಳೆದುಕೊಂಡಳು ಎನ್ನುವುದನ್ನು ನಿರ್ದೇಶಕ ನೀನಾಸಂ ಮಂಜು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರಂತೆ.

ಕನ್ನೇರಿ ವರ್ತಮಾನದ ಕತೆ

ಕತೆ ವರ್ತಮಾನದ ಬಹು ಚರ್ಚಿತ ವಿಷಯ. ಹಾಗೆ ನೋಡಿದರೆ ಬಡಜನರ ಕರುಣಾಜನಕ ಕತೆ. ಆ ದೃಷ್ಟಿಯಲ್ಲಿ ಒಂದು ಸಾಮಾಜಿಕ ಕಾಳಜಿಯಿಂದಲೇ ಸಿನಿಮಾ ಮಾಡಿರುವ ನಿರ್ದೇಶಕ ಮಂಜು ಅವರ ಪ್ರಯತ್ನ ವಾಣಿಜ್ಯದ ದೃಷ್ಟಿಯಿಂದ ಎಷ್ಟು ವರ್ಕೌಟ್‌ ಆಗುತ್ತೋ ಗೊತ್ತಿಲ್ಲ, ಆದರೆ ಈಗ ಅದು ಬಿಡುಗಡೆಗೂ ಮುನ್ನವೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ದೊಡ್ಡ ಸದ್ದು ಮಾಡುತ್ತಿರುವುದು ಒಬ್ಬ ಕ್ರಿಯಾಶೀಲ ನಿರ್ದೇಶಕನ ನಿಜ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವಂತೂ ಹೌದು.

ಸಿನಿಮಾ ಸಕಲ ರೀತಿಯಲ್ಲೂ ರಿಲೀಸ್‌ ಗೆ ಸಜ್ಜಾಗಿದೆ. ದೊಡ್ಡ ತಾರಾಗಣವೂ ಇದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇಷ್ಟರಲ್ಲಿ ತೆರೆಗೆ ಬರಲಿತ್ತೇನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರತಂಡ ಈಗಲೂ ಸೂಕ್ತ ಸಂದರ್ಭಕ್ಕೆ ಕಾಯುತ್ತಿದೆ. ಆದರೆ ಈ ಸಮಯದಲ್ಲೆ ಚಿತ್ರ ಚಿತ್ರೋತ್ಸವಗಳ ಮೂಲಕ ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವುದು ಚಿತ್ರ ತಂಡಕ್ಕೂ ಖುಷಿ ತಂದಿದೆ.

ಇದು ದುಸ್ಸಾಹಸದ ಕೆಲಸ

‘ ಸಾಮಾಜಿಕ ಕಾಳಜಿಯ ವಿಷಯ ಇಟ್ಟಕೊಂಡು ಪ್ರಯೋಗಾತ್ಮಕ ಸಿನಿಮಾ ಮಾಡುವುದು ಒಂದ್ರೀತಿ ದುಸ್ಸಾಹಸದ ಕೆಲಸ. ಯಾಕಂದ್ರೆ ಕಮರ್ಷಿಯಲ್‌ ದೃಷ್ಟಿಯಿಂದ ಇಂತಹ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೆಂಬಲ ಸಿಗುವುದಿಲ್ಲ. ಹಾಗೂ ಕಂಟೆಂಟ್‌ ಮೂಲಕ ಗೆದ್ದರೆ, ನಮ್ಮ ಪುಣ್ಯ. ಹಾಗಾಗಿ ಬಹಳಷ್ಟು ಜನರು ಇಂತಹ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದೆ ಬರುವುದಿಲ್ಲ ಎನ್ನುವುದು ನಿಮಗೂ ಗೊತ್ತು. ಆದರೂ ನಿರ್ಮಾಪಕರನ್ನು ಒಪ್ಪಿಸಿ, ಈ ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಆ ಕಷ್ಟಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಸಿನಿಮಾ ಮುಂದೆ ರಿಲೀಸ್‌ ಆಗಿ ಎಷ್ಟು ಹಣ ಮಾಡುತ್ತೋ ಗೊತ್ತಿಲ್ಲ, ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆಯುತ್ತಿರುವುದು ಗೆದ್ದ ಖುಷಿ ನೀಡುತ್ತಿದೆ’ ಎನ್ನುತ್ತಾರೆ ನಿರ್ದೇಶಕ ನೀನಾಸಂ ಮಂಜು.

ಕೋಲ್ಕೋತ್ತಾ ಚಿತ್ರೋತ್ಸವದಲ್ಲಿ ಪ್ರಶಸ್ತಿ

ಈಗಾಗಲೇ ಈ ಚಿತ್ರ ಕೊಲ್ಕೋತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿ ಬೆಸ್ಟ್‌ ಔಟ್‌ಸ್ಟ್ಯಾಂಡಿಂಗ್‌ ಪ್ರಶಸ್ತಿ ಈ ಚಿತ್ರಕ್ಕೆ ಸಿಕ್ಕಿದೆ. ಹಾಗೆಯೇ ಈಗ 12 ಚಿತ್ರೋತ್ಸವಗಳಿಗೂ ಹೋಗಿದೆ. ಅದರಲ್ಲಿ ಆಧಿಕೃತವಾಗಿ ಈಗ ಗೋಲ್ಡನ್‌ ಜ್ಯೂರಿ ಹಾಗೂ ಯುಎಸ್‌ ಎ ಫಿಲ್ಮ್‌ ಫೆಸ್ಟಿವೆಲ್‌ ಗೆ ಪ್ರದರ್ಶನಕ್ಕೆ ಸೆಲೆಕ್ಟ್‌ ಆಗಿದೆ. ಇಲ್ಲೂ ಮೆಚ್ಚುಗೆ ಪಡೆದು ಪ್ರಶಸ್ತಿಗೆ ಪಾತ್ರವಾದರೆ, ನಿರ್ದೇಶಕ ಮಂಜು ಮತ್ತವರ ತಂಡದ ಶ್ರಮ ಇನ್ನಷ್ಟು ಸಾರ್ಥಕ. ಇನ್ನು ಮಂಜುಗೆ ಈ ಪ್ರಯತ್ನ ಅಥವಾ ಸಾಹಸ ಹೊಸದಲ್ಲ. ಅವರ ಚೊಚ್ಚಲ ಚಿತ್ರ ಮೂಕಹಕ್ಕಿ ಕೂಡ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಈಗ ಆ ಸರದಿ ʼಕನ್ನೇರಿ ʼಚಿತ್ರದ್ದು. ಒಂದೆಡೆ ಕಲಾತ್ಮಕ ಅಥವಾ ಪ್ರಯೋಗಾತ್ಮಕ ಚಿತ್ರಗಳಲ್ಲಿ ಜನ ಮನ್ನಣೆ ಹಾಗೂ ಪ್ರಶಸ್ತಿಗಳ ಮೂಲಕ ತಮ್ಮನ್ನು ತಾವು ನಿರ್ದೇಶಕನಾಗಿ ಸಾಬೀತು ಮಾಡಿಕೊಳ್ಳುತ್ತಿರುವಾಗಲೇ, ಮತ್ತೊಂದೆಡೆ ಕಮರ್ಷಿಯಲ್‌ ಸಿನಿಮಾ ಮಾಡುವ ಅನಿವಾರ್ಯತೆ ಅವರಿಗೂ ಎದುರಾಗಿದೆ.

ಶೋಗನ್ ಹೊತ್ತು ಕಮರ್ಷಿಯಲ್ ಕಡೆಗೆ

ಈಗವರು ಲೂಸ್‌ ಮಾದ ಯೋಗೇಶ್‌ ಕಾಂಬಿನೇಷನ್‌ ಮೂಲಕ ʼಶೋಗನ್‌ʼಹೆಸರಿನ ಚಿತ್ರ ಮಾಡುವುದಾಗಿ ಪ್ರಕಟಿಸಿದ್ದಾರೆ. ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಹೊರ ಬಂದಿದೆ. ಇಷ್ಟರಲ್ಲಿಯೇ ಅದರತ್ತ ಗಮನ ಹರಿಸುವುದಾಗಿ ಹೇಳುವ ಮಂಜು, ಕಮರ್ಷಿಯಲ್‌ ಸಿನಿಮಾ ಯಾಕೆ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿಕೊಳ್ಳುತ್ತಾರೆ. ” ಪ್ರತಿಯೊಂದಕ್ಕೂಕ್ರಿಯಾಶೀಲತೆ ಬೇಕು, ಆದರೆ ಕ್ರಿಯಾಶೀಲತೆಯೇ ಇಲ್ಲ ಹೊಟ್ಟೆ ತುಂಬಿಸೋದಿಲ್ಲ. ಬಹುಕಾಲ ಇಲ್ಲಿ ನಿರ್ದೇಶಕನಾಗಿ ಉಳಿಯಬೇಕಾದರೂ ನಂಗೆ ಕಮರ್ಷಿಯಲ್‌ ಸಿನಿಮಾವೊಂದರ ಗೆಲುವು ಬೇಕು. ಹಾಗೆಯೇ ನಾನು ಕೂಡ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದಕ್ಕಾಗಿ ಈ ಕಮರ್ಷಿಯಲ್‌ ಸಿನಿಮಾದ ಪ್ರಯತ್ನ ಎನ್ನುವ ಮೂಲಕ ತಮ್ಮ ಬದಲಾದ ಪರಿಯನ್ನು ವಿವರಿಸುತ್ತಾರೆ ನೀನಾಸಂ ಮಂಜು. ʼನಿ ಲಹರಿʼಕಡೆಯಿಂದ ನಿರ್ದೇಶಕ ಮಂಜು ಅವರಿಗೆ ಶುಭಾಶಯ.

Categories
ಸಿನಿ ಸುದ್ದಿ

ಪ್ರಶಾಂತ್‌ ನೀಲ್‌ ಕಥೆಯಲ್ಲಿ ಶ್ರೀಮುರಳಿ ಬಘೀರ

ರೋರಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಹೊಂಬಾಳೆ ಕೊಡುಗೆ

ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ ಡಿಸೆಂಬರ್‌ ೧೭ರಂದು ಹೊಸ ಸಿನಿಮಾ ಅನೌನ್ಸ್‌ ಮಾಡುವುದಾಗಿ ತಮ್ಮ ಟ್ವೀಟ್‌ ಮೂಲಕ ಹೇಳಿಕೊಂಡಿತ್ತು. ಹೊಸ ಚಿತ್ರದ ಘೋಷಣೆ ಮಾಡುವ ಸುದ್ದಿ ಸಾಕಷ್ಟು ಕುತೂಹಲವೂ ಮೂಡಿಸಿತ್ತು. ಅವರ ಹೊಸ ಸಿನಿಮಾ ಅನೌನ್ಸ್‌ ಕುರಿತಂತೆ “ಸಿನಿಲಹರಿ” ಈ ಹಿಂದೆಯೇ ಒಂದು ಸುದ್ದಿಯನ್ನು ಪೋಸ್ಟ್‌ ಮಾಡಿತ್ತು. ಡಿಸೆಂಬರ್‌ 17ರಂದು ಅನೌನ್ಸ್‌ ಮಾಡಲು ಕಾರಣ, ಅಂದು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ ಹುಟ್ಟುಹಬ್ಬ. ಹಾಗಾಗಿ, ಅವರ ಹೊಸ ಚಿತ್ರವನ್ನು ಅನೌನ್ಸ್‌ ಮಾಡಬಹುದು ಎಂದು ಹೇಳಿತ್ತು. ಈಗ ಆ ಸುದ್ದಿ ನಿಜವಾಗಿದೆ. ಹೌದು, ಶ್ರೀಮುರಳಿ ಅವರಿಗೆ ಹೊಂಬಾಳೆ ಫಿಲ್ಮ್ಸ್‌ “ಬಘೀರ” ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದೆ.

ಹೌದು, ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅಭಿನಯದ “ಸಲಾರ್‌” ಸಿನಿಮಾ ನಿರ್ಮಿಸುವ ಕುರಿತು ಅನೌನ್ಸ್‌ ಮಾಡಿತ್ತು. ಆ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶಕ ಎಂಬುದನ್ನೂ ಹೇಳಿತ್ತು. ಅದರ ಬೆನ್ನೆಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡುವುದಾಗಿ ಹೇಳಿಕೊಂಡ ವಿಷಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಹೊಂಬಾಳೆ ಫಿಲ್ಮ್ಸ್‌ ಶ್ರೀಮುರಳಿ ಅವರಿಗೆ “ಬಘೀರ” ಘೋಷಣೆ ಮಾಡಿದೆ.

ಈ ಚಿತ್ರವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಪ್ರಶಾಂತ್‌ ನೀಲ್‌ ಅವರ ಕಥೆ ಇದಾಗಿದ್ದು, ವಿಜಯ್‌ ಕಿರಗಂದೂರು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ, “ಸಿನಿಲಹರಿ” ಕೂಡ ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ ಶೀರ್ಷಿಕೆಯಡಿ ಸುದ್ದಿಯೊಂದನ್ನು ಪೋಸ್ಟ್‌ ಮಾಡಿತ್ತು. ಆ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ‌ ಮಾಡಿದೆ. ಅಲ್ಲದೆ, “ಜಂಗಲ್‌ ಬುಕ್”‌ನ ವಿಶೇಷ ಪಾತ್ರವಾಗಿದ್ದ ಬಘೀರ ಪಾತ್ರದ ಹೆಸರೇ ಈಗ ಶ್ರೀಮುರಳಿ ಅವರ ಚಿತ್ರಕ್ಕೂ ಇಡಲಾಗಿದೆ. ಇದೊಂದು ಭಾರೀ ನಿರೀಕ್ಷೆ ಹುಟ್ಟಿಸಿರುವ ಶೀರ್ಷಿಕೆಯಾಗಿದೆ. ಈಗ ಪೋಸ್ಟರ್‌ ಕೂಡ ಬಿಡುಗಡೆ ಮಾಡಿದ್ದು, ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಮದಗಜನ ನಿರೀಕ್ಷೆ ಸುಳ್ಳಾಗಲೇ ಇಲ್ಲ…! ಸಖತ್ತಾಗಿದೆ ಅಫಿಷಿಯಲ್ ಟೀಸರ್‌

ಪಕ್ಕಾ ಮಾಸ್‌ ಟೀಸರ್‌ ಕೊಟ್ಟ ಮದಗಜ ಟೀಮ್‌‌

 

“ಈ ಪಾಪದ ಪ್ರಪಂಚದಲ್ಲಿ ನಮ್‌ ಪ್ರಯಾಣ… ಕೊಚ್ಚೆಯಲ್ಲಿ ಹವಾಯಿ ಚಪ್ಪಲಿ ಹಾಕ್ಕಂಡ್‌ ನಡೆದಂಗೆ. ನಾವ್‌ ಸರಿಯಾಗ್‌ ನಡೆದ್ರೂ, ಅದು ನಮ್ಮೇಲೆ ಹಾರದೇ ಇರಲ್ಲ…”

ಪಂದ್ಯ ಗೆಲ್ಲಬೇಕು ಅನ್ನೋನು ಪಾಯಿಂಟ್‌ಗೋಸ್ಕರ ಹೊಡಿತಾನೆ. ಪಕ್ಕಾ ಗೆಲ್ಲಬೇಕು ಅನ್ನೋನು ಪಾಯಿಂಟಲ್ಲೇ ಹೊಡಿತಾನೆ..” ಎಂಬ ಮಾಸ್‌ ಡೈಲಾಗ್‌ ಇನ್ನಷ್ಟು ಕುತೂಹಲ ಕೆರಳಿಸಿರುವುದಂತೂ ಸುಳ್ಳಲ್ಲ…

-ಇದು ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ “ಮದಗಜ” ಚಿತ್ರದೊಳಗಿರುವ ಪಂಚ್‌ ಡೈಲಾಗ್…‌ ಡೈಲಾಗ್‌ ಜೊತೆ ಆ ದೃಶ್ಯಗಳನ್ನೂ ನೋಡೋದೋ ಒಂದು ಮಜಾ… ಇದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಚಿತ್ರ. ಫ್ಯಾನ್ಸ್‌ಗೆ ಹೇಳಿಮಾಡಿಸಿದ ಡೈಲಾಗ್‌ ಸಾಕಷ್ಟು ಇದೆ ಅನ್ನುವುದಕ್ಕೆ ಇಷ್ಟು ಸಾಕು… ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಟೀಸರ್ ನೋಡಿ…

ಶ್ರೀಮರಳಿ ಅಭಿನಯದ ‘ಮದಗಜ’ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಕಾರಣವಾಗುತ್ತಲೇ ಇತ್ತು. ಆದು ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್‌, ಫಸ್ಟ್‌ ಲುಕ್‌, ಹೀಗೆ ಹಲವು ಕಾರಣಗಳಿಗೆ ಒಂದಷ್ಟು ಕುತೂಹಲ ಮೂಡಿಸಿತ್ತು. ಸಿನಿಮಾದ ಕಥೆ ಇರಲಿ, ಕಲಾವಿದರ ಆಯ್ಕೆ ಇರಲಿ, ಲೊಕೇಷನ್‌ಗಳಿರಲಿ, ತಾಂತ್ರಿಕ ವರ್ಗವೇ ಇರಲಿ ಎಲ್ಲದ್ದರಲ್ಲೂ ಸೈ ಎನಿಸಿಕೊಂಡಿದ್ದ “ಮದಗಜ” ಫಸ್ಟ್‌ ಲುಕ್‌‌ ಅಫಿಷಿಯಲ್ ಟೀಸರ್‌ ಬಿಡುಗಡೆ ಮಾಡುವುದಾಗಿ ಅನೌನ್ಸ್‌ ಮಾಡಿದ್ದೇ ತಡ, ಸಾಕಷ್ಟು ಕುತೂಹಲವಿತ್ತು. ಆ ಕುತೂಹಲ ಎಳ್ಳಷ್ಟೂ ಸುಳ್ಳು ಮಾಡಿಲ್ಲ.
ಹೌದು, ಶ್ರೀಮುರಳಿ ಅವರ ಹುಟ್ಟುಹಬ್ಬ (ಡಿಸೆಂಬರ್‌ 17)ರ ಬೆಳಗ್ಗೆ 9.09ಕ್ಕೆ “ಮದಗಜ” ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಹೊರಬಂದಿದೆ. ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ತಂಡ ಅವರಿಗೆ ಈ ಸಖತ್‌ ರಗಡ್‌ ಆಗಿರುವ, ಪಕ್ಕಾ ಮಾಸ್‌ ಎನಿಸಿರುವ ಚಿತ್ರದಲ್ಲೇನೋ ಇದೆ ಎನಿಸುವಂತಹ ಟೀಸರ್‌ ಅದಾಗಿದ್ದು, ಫ್ಯಾನ್ಸ್‌ಗಂತೂ ಸಖತ್‌ ಕುತೂಹಲ ಕೆರಳಿಸಿದೆ. ಟೀಸರ್‌ನೊಳಗಿರುವ ಡೈಲಾಗ್‌, ಆ ಮಾಸ್‌ ಎಂಟ್ರಿ, ಹಿನ್ನೆಲೆ ಸಂಗೀತ, ಲೊಕೇಷನ್‌ ಎಲ್ಲವೂ ಹೊಸದಾಗಿದೆ. ಈ ಬಾರಿ ಶ್ರೀಮುರಳಿ ಅವರು “ಮದಗಜ” ಮೂಲಕ ಇನ್ನೊಂದು ಘರ್ಜನೆ ಮಾಡಲಿದ್ದಾರೆ ಎಂಬುದಕ್ಕೆ ಈ ಟೀಸರ್‌ ಸಾಕ್ಷಿಯಂತಿದೆ.

ಪ್ರಶಾಂತ್ ನೀಲ್

 

ಇನ್ನು, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎಂದೇ ಹೆಸರಾಗಿರುವ ‘ಉಗ್ರಂ’, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಮದಗಜ’ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಿರುವುದು ವಿಶೇಷ.

ನಿರ್ದೇಶಕ ಮಹೇಶ್ ಕುಮಾರ್

ಸದ್ಯಕ್ಕೆ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ “ಮದಗಜ” ಚಿತ್ರದ ಟೀಸರ್‌ ಲಕ್ಷಾಂತರ ವೀಕ್ಷಣೆಗೊಂಡು, ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ. ಉಮಾಪತಿ ಅವರು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ.

ನಿರ್ಮಾಪಕ ಉಮಾಪತಿ

ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್‌ ಕೂಡ ಇದೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಶ್ರೀಮುರಳಿ ಅವರ ಹೊಸ ಚಿತ್ರ ಕೂಡ ಅನೌನ್ಸ್‌ ಆಗಿದೆ. “ಜಂಗಲ್‌ಬುಕ್”‌ ಒಳಗಿರುವ ಒಂದಷ್ಟು ಪಾತ್ರಗಳು ಸದಾ ಎಲ್ಲರನ್ನೂಕಾಡುತ್ತವೆ. ಅಂಥದೊಂದು ಕಾಡುವ ಪಾತ್ರವನ್ನೇ ಇಟ್ಟುಕೊಂಡು ಹೊಸದ್ದೊಂದು ಕಥೆ ಹೆಣೆದು ಶ್ರೀಮುರಳಿ ಅವರಿಗೊಂದು ಚಿತ್ರ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಶ್ರೀಮುರಳಿ ಯಾವ ಕಥೆ ಹಿಂದೆ ಹೊರಟಿದ್ದಾರೆ, ಯಾರು ನಿರ್ದೇಶಕ ಇತ್ಯಾದಿ ವಿಷಯವನ್ನು ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್‌ ಮಾಡಲು ಸಜ್ಜಾಗಿದೆ.

error: Content is protected !!