Categories
ಸಿನಿ ಸುದ್ದಿ

ಆಡಿಯೋಬುಕ್‌ ನಲ್ಲಿ ಗಿರೀಶ್‌ ಕಾರ್ನಾಡ್‌ ಪುಸ್ತಕ : ಆಡಾಡುತ್ತಾ ಆಯುಷ್ಯʼ ಕ್ಕೆ ನಟ ಸಂಚಾರಿ ವಿಜಯ್‌ ಧ್ವನಿ

ಜ್ಞಾನಪೀಠ ಪುರಸ್ಕೃತ ಸಾಹಿತಿ, ನಾಟಕಕಾರ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ಜೀವನ ಚರಿತ್ರೆ ʼ ಆಡಾಡುತಾ ಆಯುಷ್ಯ ʼ ಈಗ ಆಡಿಯೋ ರೂಪದಲ್ಲಿ ಹೊರ ಬಂದಿದೆ. ವಿಶೇಷ ಅಂದರೆ, ಈ ಪುಸ್ತಕಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧ್ವನಿ ನೀಡಿದ್ದಾರೆ. ಸ್ಟೋರಿ ಟೆಲ್‌ ಸಂಸ್ಥೆ ಈ ಪುಸ್ತಕವನ್ನು ಆಡಿಯೋ ರೂಪದಲ್ಲಿ ಹೊರ ತಂದಿದೆ. 350 ಪುಟಗಳ ಈ ಪುಸ್ತಕಕ್ಕೆ ಪ್ರೀತಿಯಿಂದ, ಕಾರ್ನಾಡ್‌ ಅವರ ಮೇಲಿನ ಅಭಿಮಾನದಿಂದ ಧ್ವನಿ ನೀಡಿರುವ ನಟ ಸಂಚಾರಿ ವಿಜಯ್‌, ಪುಸ್ತಕ ಓದುವಾಗ ಆದ ಅನುಭವ, ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಗಳ ಜತೆಗೆ ತಮಗೆ ಪರಿಚಯವಾದ ಹಲವು ಹೊಸ ಪದಗಳ ಜತೆಗೆ ಇತ್ಯಾದಿ ಮಜಲಗಳ ಕುರಿತು ಇಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಓವರ್‌ ಟು ಸಂಚಾರಿ ವಿಜಯ್….

ʼ 350 ಪುಟಗಳಿರುವ ಈ ಪುಸ್ತಕವನ್ನು ಓದುವಾಗ ಹಲವಾರು ಸವಾಲುಗಳು ಎದುರಾದವು. ಲೇಖಕರಾದ ಗಿರೀಶ್‌ ಕಾರ್ನಾಡ್‌ ಅವರು ಕೆಲವೆಡೆ ಉತ್ತರ ಕನ್ನಡ ಭಾಷೆಯ ಪದಗಳ ಪ್ರಯೋಗಿಸಿದರೆ ಇನ್ನಷ್ಟು ಕಡೆ ಉತ್ತರ ಕರ್ನಾಟಕ, ನಂತರ ಬೆಂಗಳೂರು, ಮತ್ತೊಂದೆಡೆ ಮರಾಠಿ ಮಿಶ್ರಿತ ಕನ್ನಡ ಹೀಗೆ ನನಗೂ ಹಲವಾರು ಹೊಸ ಪದಗಳ ಪರಿಚಯ ಮಾಡಿಕೊಡುತ್ತಾ ಅವರು ಅನುಭವಿಸಿದ ಹಲವಾರು ಮಜಲುಗಳನ್ನು ಹಂಚುತ್ತಾ ಇಡೀ ಪುಸ್ತಕ ಒಂದು ಹೊಸ ಲೋಕವನ್ನೇ ತೆರೆದಷ್ಟು ಅನುಭವವನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಇನ್ನು ಅವರ ಬಾಲ್ಯದಲ್ಲಿ ಮಹಾರಾಷ್ಟ್ರದಿಂದ ಧಾರವಾಡಕ್ಕೆ ವಲಸೆ ಬಂದಿದ್ದು, ಅಲ್ಲಿ ಸಾರಸ್ವತಪುರದಲ್ಲಿ ನಿಂತು ಅಲ್ಲಿಂದ ಮುಂದೆ ಶಿರಸಿಗೆ ಹೋಗಿ ಅವರ ತಾಯಿ ‘ಕುಟ್ಟಾಬಾಯಿಯ’ ಜೀವನದ ಏಳು ಬೀಳುಗಳ ಅನಾವರಣ.

ಗಂಡನನ್ನು ಕಳೆದುಕೊಂಡು 11 ವರ್ಷದ ಬಾಲಚಂದ್ರ ಎನ್ನುವ ಮಗನನ್ನು ಕಟ್ಟಿಕೊಂಡು ಆಕೆ ಧೈರ್ಯದಿಂದ ಸಮಾಜವನ್ನು ಎದುರಿಸಿದ ಪ್ರಯಾಣ. ನಂತರ ಅತೀ ಚಿಕ್ಕ ವಯಸ್ಸಿಗೆ ಇಂಗ್ಲೆಂಡ್ ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿ ಅಲ್ಲಿಯ ನಡೆಯನ್ನು ಹರವಿದ್ದು. ನಂತರ ಎನ್‌ಎಫ್‌ಎಗೆ ನಿದೇಶಕನಾಗಿದ್ದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳಾದಂತಹ ಹಲವಾರು ಪ್ರತಿಭಾವಂತ ನಟರು ಬಾಲಿವುಡ್ ನಲ್ಲಿ ಸ್ಟಾರ್ ಗಳಾಗಿ ಮಿಂಚಿದ್ದು. ತಮ್ಮ ಕೆಲವು ನಿಲುವುಗಳಿಂದ ಅನೇಕಾನೇಕ ಬಲವುಳ್ಳವರನ್ನು ಎದುರು ಹಾಕಿಕೊಂಡಿದ್ದು. ನಂತರ ಮದ್ರಾಸಿಗೆ ಕೆಲಸವನ್ನರಸಿ ಹೋಗಿದ್ದು ಅಲ್ಲಿಂದ ಕನ್ನಡ ಸಾಹಿತ್ಯ, ನಾಟಕ, ಸಿನಿಮಾ ಹೇಗೆ ಹತ್ತು ಹಲವಾರು ಕ್ಷೇತ್ರಗಳಿಗೆ ತೆರೆದುಕೊಂಡಿದ್ದು, ಒಂದು ರೋಮಾಂಚನ ಪ್ರಯಾಣ ಅನ್ನಿಸಿದ್ದು ಸುಳ್ಳಲ್ಲ. ಇದಿಷ್ಟನ್ನು ಹಿಡಿದಿಡುವ ಪ್ರಯತ್ನ ಇಲ್ಲಿದೆ ನೀವು ಬಿಡುವಾದಾಗ ಕೇಳಿ ನಿಮ್ಮ ಅನಿಸಿಕೆಗಳನ್ನು ತಪ್ಪುಗಳನ್ನು ತಿದ್ದಿ ನನಗೆ ತಿಳಿಸಿ. ಒಂದೇ ಸಮನೆ 350 ಪುಟಗಳನ್ನು ಓದಿದ್ದರಿಂದ ಒಂದಷ್ಟು ತಪ್ಪು ಒಪ್ಪಗಳು ನಿಮ್ಮ ಗ್ರಹಿಕೆಗೆ ಬಂದೆ ಬರುತ್ತದೆ. ಅದನ್ನು ಬದಿಗಿರಿಸಿ ಕೇಳಿ ಎಂದು ನನ್ನ ಸವಿನಯ ಪ್ರಾರ್ಥನೆ.

ಇದಿಷ್ಟು ನಟ ಸಂಚಾರಿ ವಿಜಯ್‌ ಮಾತು. ಇನ್ನು ಪುಸ್ತಕದ ಆಡಿಯೋ ರೂಪಕ್ಕೆ ಧ್ವನಿ ನೀಡಲು ಅವರಿಗೆ ಅವಕಾಶ ಸಿಕ್ಕಿದ್ದೇ ಆಕಸ್ಮಿಕವಂತೆ. ಗೆಳೆಯನ ಮೂಲಕ ಈ ಅವಕಾಶ ಬಂತು. ಮೇಲಾಗಿ ಕಾರ್ನಾಡ್‌ ಅವರ ಬಗ್ಗೆಯೂ ನಂಗೆ ದೊಡ್ಡ ಕುತೂಹಲ ಇತ್ತು. ಆಯ್ತು ಓದ್ತೀನಿ ಅಂತ ಒಪ್ಪಿಕೊಂಡ ನಂತರ ಓದುವುದು ಎಂತಹ ಸವಾಲಿನ ಕೆಲಸ ಅಂತ ಗೊತ್ತಾಯಿತು ಎನ್ನುವ ನಟ ಸಂಚಾರಿ ವಿಜಯ್‌, 350 ಪುಟಗಳ ಈ ಪುಸ್ತಕವನ್ನು ಓದಿ ಮುಗಿಸಲು ಒಂದು ತಿಂಗಳು ತೆಗೆದುಕೊಂಡ್ರಂತೆ.ʼ ಇದಿಷ್ಟು ಸಮಯವನ್ನು ನಾನು ತೆಗೆದುಕೊಡಿದ್ದಕ್ಕೆ ಕಾರಣ ಎಲ್ಲೂ ಪದ ದೋಷ ಆಗಿದಿರಲಿ ಅಂತ. ಹಾಗೆ ಓದುತ್ತಾ ನನಗೆ ದೊಡ್ಡ ಅನುಭವವೇ ಆಯಿತು.

ನಾನು ಅಭಿನಯಿಸಿದ ಮೊದಲ ನಾಟಕದಲ್ಲಿ ಆದ ಅನುಭವವೇ ಇಲ್ಲಿಯೂ ಆಯಿತು. ಕಾರ್ನಾಡ್‌ ಅವರನ್ನು ಒಂದಷ್ಟು ತಿಳಿದುಕೊಳ್ಳುವುದಕ್ಕೂ ಇದು ಕಾರಣವಾಯಿತು. ಇಂತಹ ಅವಕಾಶಗಳು ಸಿಕ್ಕರೆ ನಾನೆಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ನಟ ಸಂಚಾರಿ ವಿಜಯ್.‌

Categories
ಸಿನಿ ಸುದ್ದಿ

ಕೆವಿಎನ್ ಫೌಂಡೇಷನ್ ಮೂಲಕ ಕನ್ನಡ ಚಿತ್ರರಂಗದವರಿಗೆ ಉಚಿತ ಕಾನ್ಸನ್​ಟ್ರೇಟರ್ ವಿತರಣೆ

ಕೋವಿಡ್​ನಿಂದಾಗಿ ಚಿತ್ರರಂಗದ ಸಾಕಷ್ಟು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅದೇ ರೀತಿ ಕೋವಿಡ್​ ಸೋಂಕಿನಿಂದಲೂ ಬಸವಳಿದಿದ್ದಾರೆ. ಇದೀಗ ಹಾಗೇ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಕೆವಿಎನ್​ ಫೌಂಡೇಷನ್​ ಸ್ಪಂದಿಸುತ್ತಿದೆ. ಅಂದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ನೀಡುತ್ತಿದೆ. ಗುಣಮುಖರಾಗುತ್ತಿದ್ದಂತೆ ಅದನ್ನು ಮರಳಿ ಅವರ ತಂಡಕ್ಕೆ ನೀಡಿದರೆ ಕೆಲಸ ಮುಗಿದಂತೆ.

ಕಳೆದ ಒಂದು ತಿಂಗಳಿಂದ ಸಾರ್ವಜನಿಕರಿಗೆ ಕೆವಿಎನ್​ ಫೌಂಡೇಷನ್​ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಒದಗಿಸುತ್ತಿದೆ. ಸದ್ಯ 200 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳು ಇವರ ಬಳಿ ಇದ್ದು, ನ್ಯೂಯಾರ್ಕ್​ನಿಂದ ಹೆಚ್ಚುವರಿ 400 ಕಾನ್ಸನ್​ಟ್ರೇಟರ್​ಗಳು ಆಗಮಿಸಿವೆ. ಅವೆಲ್ಲವುಗಳ ಸದ್ಬಳಕೆ ಆಗಲಿ ಎಂಬುದು ಕೆವಿಎನ್​ ಫೌಂಡೇಷನ್ ಉದ್ದೇಶ. ಇದೀಗ ಕೇವಲ ಸಿನಿಮಾ, ಕಿರುತೆರೆ ಕೆಲಸಗಾರರು, ಕಲಾವಿದರು, ತಂತ್ರಜ್ಞರು, ಕ್ಯಾಬ್ ಚಾಲಕರು ಹೀಗೆ ಒಟ್ಟಾರೆ ಸಿನಿಮಾರಂಗಕ್ಕೆ ಉಚಿತವಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ನೀಡಲು ಮುಂದೆ ಬಂದಿದ್ದಾರೆ.

ಈಗಾಗಲೇ ನಟಿ ಶ್ವೇತಾ ಚೆಂಗಪ್ಪ ಕೆವಿಎನ್​ ಫೌಂಡೇಷನ್​ ವತಿಯಿಂದ ಆಕ್ಸಿಜನ್ ಕಾನ್ಸನ್​ಟ್ರೇಟರ್ ಬಳಸಿಕೊಂಡಿದ್ದಾರೆ.
ಹಾಗಾದರೆ ಕಾನ್ಸನ್​ಟ್ರೇಟರ್​ ಪಡೆಯುವುದು ಹೇಗೆ? www.kvnfoundation.com ವೆಬ್​ಸೈಟ್​ಗೆ ಹೋಗಿ ಸೂಕ್ತ ಮಾಹಿತಿಯನ್ನು ಅದರಲ್ಲಿ ಸಲ್ಲಿಕೆ ಮಾಡಿದರೆ, ಯಾವುದೇ ವ್ಯಕ್ತಿಯ ಮಧ್ಯಸ್ಥಿಕೆ ಮತ್ತು ಸಂಪರ್ಕ ಇರದೇ ಆಕ್ಸಿಜನ್ ಕಾನ್ಸನ್​ಟ್ರೇಟರ್ ಪಡೆಯಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಕಾನ್ಸನ್​ಟ್ರೇಟರ್​ ಪಡೆಯುವಾಗ ಓರಿಜಿನಲ್ ಆಧಾರ್ ಕಾರ್ಡ್​ ಅನ್ನು ನೀಡಬೇಕು. ಸ್ಯಾಚುರೇಷನ್ ಲೆವಲ್​ 90-92 ಇದ್ದವರಿಗೆ ನೀಡಲಾಗುತ್ತದೆ. ವೈದ್ಯರ ನೀಡಿರುವ ಚೀಟಿಯೂ ತುಂಬ ಮಹತ್ವದ್ದು. ಇವರಿಗೆ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಅವಶ್ಯಕತೆ ಇದೆ ಎಂದು ಬರೆದ ನಂತರವಷ್ಟೇ ಅದನ್ನು ವಿತರಣೆ ಮಾಡಲಾಗುತ್ತದೆ.


5 ಲೀಟರ್​ನ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಗಳು ಕೆವಿಎನ್​ ಫೌಂಡೇಷನ್ ಬಳಿ ಇದ್ದು, ವಾರ, 15ದಿನಗಳ ಅಥವಾ ಸೋಂಕಿತರು ಗುಣಮುಖವಾಗುವ ತನಕ ಯಾವುದೇ ಹಣ ಪಾವತಿಸದೇ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಬಳಕೆ ಮಾಡಬಹುದು. ಗುಣಮುಖರಾದ ಬಳಿಕ ಅದನ್ನು ಕೆವಿಎನ್​ ಫೌಂಡೇಷನ್​ಗೆ ಮರಳಿಸಬೇಕಾಗುತ್ತದೆ. ಅಲ್ಲಿ ಅದರ ರೀ ಸೈಕಲ್ ಮಾಡಿ ಮತ್ತೆ ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತಿದೆ.

Categories
ಸಿನಿ ಸುದ್ದಿ

ಸಿನಿಮಾ ಮಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಿ; ಸಿಎಂ ಭೇಟಿ ಮಾಡಿದ ತಾರಾ ಮನವಿ

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಕಲಾವಿದೆ ತಾರಾ ಅನುರಾಧಾ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕನ್ನಡ ಚಿತ್ರರಂಗದವರು ಹಾಗೂ ಸಿನಿಮಾ ಪತ್ರಕರ್ತರು ಪ್ರಚಾರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮನವಿ ಸಲ್ಲಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಎನ್.ಎಂ.ಸುರೇಶ್ ಹಾಗೂ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಇದ್ದರು.

Categories
ಸಿನಿ ಸುದ್ದಿ

ನಾವಷ್ಟೇ ಚೆನ್ನಾಗಿದ್ದರೆ ಸಾಕಾ! ಎಲ್ಲರಿಗೂ ಸಿಗದ ಲಸಿಕೆ ನಮಗೆ ಬೇಕಿತ್ತಾ? ಬೇಸರದ ಪ್ರಶ್ನೆ ಹೊರ ಹಾಕಿದ್ರು ನಟ ಶ್ರೀಮುರಳಿ

“ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ನಾವು ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿದ್ದೇವೆ. ಆದರೆ, ಬಹುತೇಕ ಜನರಿಗೆ ವ್ಯಾಕ್ಸಿನೇಷನ್‌ ಸಿಕ್ತಾನೇ ಇಲ್ಲ. ನಾವು ತಗೊಂಡಿದ್ದೇವೆ ಅಂತ ನೆಮ್ಮದಿಯಿಂದಿರಬೇಕಾ, ಖುಷಿಪಡಬೇಕಾ ಅಥವಾ ಬೇರೆಯವರಿಗೆ ಸಿಕ್ಕಿಲ್ಲ ಅಂತ ದುಃಖ ಪಡಬೇಕಾ…?

  • ಇದು ನಟ ಶ್ರೀಮುರಳಿ ಅವರ ಬೇಸರದ ಪ್ರಶ್ನೆ. ಇಷ್ಟಕ್ಕೂ ಶ್ರೀಮುರಳಿ ಅವರು ಹೀಗೆ ಒಮ್ಮೆಲೆ ಬೇಸರ ಹೊರ ಹಾಕಲು ಕಾರಣ, ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಜನರಿಗೆ ಸಿಗದ ಲಸಿಕೆ. ಹೌದು, ಶ್ರೀಮುರಳಿ ಅವರ ಜೊತೆ ಆರೋಗ್ಯ ಕುರಿತು ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ, ವ್ಯಾಕ್ಸಿನೇಷನ್‌ ವಿಚಾರ ತೂರಿಬಂದಾಗ, ಶ್ರೀಮುರಳಿ ಅವರು ಬೇಸರದಲ್ಲೇ ಒಂದಷ್ಟು ಮಾತುಗಳನ್ನು ಹೊರಹಾಕಿದ ಪರಿ ಇದು. ಇಡೀ ಜಗತ್ತೇ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದೆ. ಕಣ್ಣ ಮುಂದೆಯೇ ಜೀವಗಳ ಹಾನಿಯಾಗುತ್ತಿದೆ. ಸರ್ಕಾರ ಅಗತ್ಯ ಕ್ರಮ ಕೈಗೊಂಡರೂ, ಹೆಮ್ಮಾರಿ ಕೊರೊನಾ ತನ್ನ ಅರ್ಭಟ ಮುಂದುವರೆಸಿದೆ. ಈ ನಿಟ್ಟಿನಲ್ಲಿ ನಟ ಶ್ರೀಮುರಳಿ ಅವರು, ಎಲ್ಲರಿಗೂ ಆದಷ್ಟು ಬೇಗ ವ್ಯಾಕ್ಸಿನ್‌ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತುಂಬಾ ವಿನಮ್ರದಿಂದ ಮನವಿ ಮಾಡಿಕೊಂಡಿದ್ದಾರೆ. ವ್ಯಾಕ್ಸಿನೇಷನ್‌ ಬಗ್ಗೆ ನಟ ಶ್ರೀಮುರಳಿ “ಸಿನಿ ಲಹರಿ” ಜೊತೆ ಹೇಳಿದ್ದಿಷ್ಟು…

ಜನರ ಪ್ರಶ್ನೆಗಳೇ ಕಾಡುತ್ತಿವೆ…
” ನನ್ನ ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ನಾವು ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿದ್ದೇವೆ. ನಾವು ರಿಜಿಸ್ಟ್ರೇಷನ್‌ ಮಾಡಿಸಿಕೊಂಡ್ವಿ. ಸಿಕ್ತು ಹಾಕಿಸಿಕೊಂಡ್ವಿ. ಆದರೆ, ಬಹುತೇಕ ಜನರಿಗೆ ವ್ಯಾಕ್ಸಿನೇಷನ್‌ ಸಿಕ್ತಾನೇ ಇಲ್ಲ. ಈಗ ನಾವು ವ್ಯಾಕ್ಸಿನ್ ತಗೊಂಡಿದ್ದೇವೆ ಅಂತ. ನೆಮ್ಮದಿಯಿಂದಿರಬೇಕಾ, ಖುಷಿಪಡಬೇಕಾ ಅಥವಾ ಬೇರೆಯವರಿಗೆ ಸಿಕ್ಕಿಲ್ಲ ಅಂತ ದುಃಖ ಪಡಬೇಕಾ ಗೊತ್ತಾಗುತ್ತಿಲ್ಲ. ಜಾಗೃತಿ ಮೂಡಿಸಲು ಲಸಿಕೆಯನ್ನು ನೀವೂ ಹಾಕಿಸಿಕೊಳ್ಳಿ ಎಂಬ ಪೋಸ್ಟ್‌ ಮಾಡಿದರೆ, ಹಲವು ಪ್ರಶ್ನೆಗಳು ಎದುರಾಗುತ್ತಿವೆ. ನಿಮಗೇನೋ ಸಿಕ್ಕಿದೆ, ನಮಗಿನ್ನೂ ಸಿಕ್ಕಿಲ್ಲ. ಸರ್ಕಾರ ಲಸಿಕೆ ವ್ಯವಸ್ಥೆ ಮಾಡಿಲ್ಲ. ನಾವೂ ಕಾಯುತ್ತಲೇ ಇದ್ದೇವೆ ಎಂಬ ಸಂದೇಶಗಳು ಬರುತ್ತಿವೆ. ಇದರಿಂದ ನಿಜಕ್ಕೂ ಬೇಸರವಾಗಿದೆ. ನಾವಷ್ಟೇ ಚೆನ್ನಾಗಿದ್ದರೆ ಸಾಕಾ? ಎಲ್ಲರಿಗೂ ಸಿಗದ ಲಸಿಕೆ ನಮಗೆ ಬೇಕಿತ್ತಾ ಎಂಬ ಪ್ರಶ್ನೆ ನನ್ನನ್ನೇ ಕಾಡುತ್ತಿದೆ. ಎಲ್ಲರಿಗೂ ಸಿಗುತ್ತೆ ಎಂಬ ಖುಷಿಯಲ್ಲೇ ನಾವೂ ಹಾಕಿಸಿಕೊಂಡ್ವಿ. ಹೀಗೆಲ್ಲಾ ಆಗುತ್ತೆ ಎಂಬುದು ಗೊತ್ತಿದ್ದರೆ, ಎಲ್ಲರಿಗೂ ಸಿಗುವ ಸಮಯದಲ್ಲೇ ನಮಗೂ ಸಿಗಲಿ ಅಂತ ಸುಮ್ಮನಾಗುತ್ತಿದ್ದೆವು. ಜನರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ.

ಇಲ್ಲಿ ಯಾರನ್ನೂ ದೂರುತ್ತಿಲ್ಲ…
ಜನರು ನೋವಲ್ಲಿದ್ದಾರೆ. ಲಸಿಕೆಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಸಿಕ್ಕರೆ, ಬಹಳಷ್ಟು ಮಂದಿಗೆ ಸಿಕ್ಕಿಲ್ಲ. ಹೀಗಾದರೆ, ಅವರ ಮನಸ್ಥಿತಿ ಹೇಗಿರಬೇಡ, ಸಹಜವಾಗಿಯೇ ಅವರು ಬೇಸರಗೊಳ್ಳುತ್ತಿದ್ದಾರೆ. ಇಲ್ಲಿ ಯಾರ ಬಗ್ಗೆಯೂ ದೂರುತ್ತಿಲ್ಲ. ವ್ಯವಸ್ಥೆಯಲ್ಲಿ ಲೋಪ ಎಲ್ಲಾಗಿದೆ ಅನ್ನೋದನ್ನು ಕಂಡುಕೊಂಡು ಸರಿಪಡಿಸುವಂತಾಗಬೇಕಿದೆ. ಇಲ್ಲಿ ಯಾರನ್ನು ಪ್ರಶ್ನೆ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೇವೆ. ಸರ್ಕಾರ ಕೊರೊನಾ ವಿಷಯದಲ್ಲಿ ಸಾಕಷ್ಟು ಶ್ರಮಿಸಿದೆ. ಅಗತ್ಯ ಕ್ರಮ ಕೈಗೊಂಡಿದೆ.

ಆ ವಿಷಯದಲ್ಲಿ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಆದರೂ, ಲಸಿಕೆ ಅನ್ನೋದು ಮುಖ್ಯವಾದ ಅಂಶ. ಆದರೆ, ಲಸಿಕೆ ಸರಿಯಾಗಿ ಸಿಗುತ್ತಿಲ್ಲ ಎಂಬ ಕೂಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲೆಲ್ಲಿ ಲಸಿಕೆ ಸಮಸ್ಯೆ ಎದುರಾಗಿದೆ, ಯಾಕಾಗಿದೆ ಎಂಬುದರ ಬಗ್ಗೆ ಅರಿತು, ಕ್ರಮ ಕೈಗೊಳ್ಳಬೇಕು. ಕೂಡಲೇ ಎಲ್ಲರಿಗೂ ವ್ಯಾಕ್ಸಿನೇಷನ್‌ ಸಿಗುವಂತಾಗಬೇಕು ಅನ್ನೋದು ನನ್ನ ಕಳಕಳಿಯ ಮನವಿ.

ಎಲ್ಲರಿಗೂ ಲಸಿಕೆ ಸಿಗುವಂತಾಗಲಿ
ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ನಮಗೇಕೆ? ನಮ್ಮಲ್ಲಿ ಜನಸಂಖ್ಯೆ ಹೆಚ್ಚಿದೆ. ಮೊದಲು ಇತ್ತ ಗಮನಿಸಬೇಕು. ಕೆಲವರಿಗಷ್ಟೇ ಲಸಿಕೆ ಸಿಕ್ಕರೆ ಹೇಗೆ? ಬೇರೆಯವರದ್ದೂ ಜೀವವಲ್ಲವೇ? ನಮ್ಮ ಸುತ್ತಮುತ್ತ ಇರೋರಿಗೆ ಸಿಗುತ್ತಿಲ್ಲ. ಎಲ್ಲರಿಗೂ ಬದುಕುವ ಹಕ್ಕಿದೆ ಅಂದಮೇಲೆ, ಎಲ್ಲರನ್ನೂ ಸಮನಾಗಿ ಕಾಣಬೇಕು. ಎಲ್ಲರಿಗೂ ಲಸಿಕೆ ಹಾಕುವ ವ್ಯವಸ್ಥೆ ಆಗಬೇಕು. ಕೆಲವರಷ್ಟೇ ಲಸಿಕೆ ಪಡೆದಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಬಾರದು. ಸರ್ಕಾರದ ಬಗ್ಗೆಯೂ ತಪ್ಪು ಕಲ್ಪನೆ ಬರಬಾರದು. ನಾವು ಜಾಗೃತಿಗಾಗಿ ಲಸಿಕೆ ಹಾಕಿಸಿಕೊಳ್ಳಿ ಅಂದಾಗ, ನಮಗಿನ್ನೂ ಸಿಕ್ಕೇ ಇಲ್ಲ ಎಂಬ ಮಾತುಗಳನ್ನುಕೇಳಿದಾಗ ನಿಜಕ್ಕೂ ಬೇಸರವಾಗುತ್ತದೆ.

ಇದು ಖುಷಿ ಪಡೋ ಸಮಯವಲ್ಲ…
ಸರ್ಕಾರ ಎಲ್ಲಾ ರೀತಿಯ ಕೆಲಸ ಮಾಡುತ್ತಿದೆ. ಲಸಿಕೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಶ್ರಮ ಹಾಕಿದರೆ, ಎಲ್ಲರಿಗೂ ಲಸಿಕೆ ಕೊಡಿಸಲು ಸಾಧ್ಯವಿದೆ. ಈ ಕೂಡಲೇ ಸರ್ಕಾರ, ಒಂದು ಪ್ಲಾನಿಂಗ್‌ ಮಾಡಿಕೊಂಡು, ಒಂದೊಂದು ಕಡೆ ಇಷ್ಟಿಷ್ಟು ಮಂದಿ ಇಂತಹ ಕೆಲಸ ಮಾಡಬೇಕು, ಹೀಗೇ ಮಾಡಬೇಕು ಅಂತ ಯೋಜನೆ ರೂಪಿಸಿ, ಲಸಿಕೆ ಅಗತ್ಯತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಹೆಚ್ಚಿನ ಲಸಿಕೆ ತರಿಸಿ, ರಾಜ್ಯದ ಜನತೆಗೆ ಕೊಡುವಲ್ಲಿ ಮುಂದಾಗಬೇಕು. ನಾವಷ್ಟೇ ಹಾಕಿಸಿಕೊಂಡು ಖುಷಿಪಡುವ ಸಮಯ ಇದಲ್ಲ. ತುಂಬಾ ನೋವಿನಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. ದಯವಿಟ್ಟು, ಸರ್ಕಾರ ವ್ಯಾಕ್ಸಿನೇಷನ್‌ ಕಡೆ ಗಮನಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂದಿದ್ದಾರೆ ಶ್ರೀಮುರಳಿ.

  • ಅದೇನೆ ಇರಲಿ, ಕೋವಿಡ್‌ಗೆ ಈಗ ಲಸಿಕೆಯೇ ಸಂಜೀವಿನಿ. ಕೊರೊನಾ ಮುಕ್ತವಾಗಬೇಕಾದರೆ ಲಸಿಕೆ ಅನಿವಾರ್ಯ ಅಂತ ಸರ್ಕಾರವೇ ಹೇಳುತ್ತಿದೆ. ಅದೇ ಕಾರಣಕ್ಕೆ ಈಗ ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ಈಗಾಗಲೇ ಸಾಕಷ್ಟು ಸೆಲಿಬ್ರಿಟಿಗಳು ಲಸಿಕೆ ಹಾಕಿಸಿಕೊಂಡು, ಜನ ಸಾಮಾನ್ಯರು ಲಸಿಕೆ ಹಾಕಿಸಿಕೊಂಡು ಕೊರೊನಾದಿಂದ ಮುಕ್ತರಾಗಿ ಅಂತ ಹೇಳುತ್ತಿದೆ. ಸರ್ಕಾರದ ಆಶಯದಂತೆ ಜನರಿಗೆ ತುರ್ತಾಗಿ ಲಸಿಕೆ ಸಿಕಿದ್ದರೆ ಒಳ್ಳೆಯದ್ದಿತ್ತು. ಆದರೆ ಈಗ ಎಲ್ಲರಿಗೂ ಲಸಿಕೆ ಸಿಗುವುದು ಕಷ್ಟ. ಸರ್ಕಾರ ಹಂತ ಹಂತವಾಗಿ ಜನರಿಗೆ ಲಸಿಕೆ ನೀಡುತ್ತಿದೆ. ಲಭ್ಯತೆಯ ಆಧಾರದ ಮೇಲೆ ಸರ್ಕಾರ ಲಸಿಕೆ ನೀಡುವ ಕಾರ್ಯ ಮಾಡುತ್ತಿದೆ.
    ಇವತ್ತಿನ ಪರಿಸ್ಥಿತಿ ಸರಿ ಹೋಗಬೇಕಾದರೆ ಸರ್ಕಾರ ತಕ್ಷಣ ಎಲ್ಲರಿಗೂ ಏಕಕಾಲದಲ್ಲೇ ಲಸಿಕೆ ಸಿಗುವಂತೆ ಮಾಡಬೇಕು. ಆಗ ಮಾತ್ರ ಈ ಕೊರೊನಾ ಹೊಡೆದೋಡಿಸಲು ಸಾಧ್ಯ.
Categories
ಸಿನಿ ಸುದ್ದಿ

ಅಣ್ಣಾವ್ರಿಗೆ ಯೋಗ ಹೇಳಿಕೊಡುತ್ತಿದ್ದ ಯೋಗ ಗುರು ಹೊನ್ನಪ್ಪ ನಾಯ್ಕರ್ ನಿಧನ

 
ವರನಟ ಡಾ.ರಾಜಕುಮಾರ್ ಸೇರಿದಂತೆ ಅವರ ಕುಟುಂಬಕ್ಕೆ ಯೋಗ ಹೇಳಿಕೊಡುತ್ತಿದ್ದ ಹೊನ್ನಪ್ಪ ನಾಯ್ಕರ್ (90) ಕೊರೊನಾದಿಂದ ನಿಧನರಾಗಿದ್ದಾರೆ.
ಹೊನ್ನಪ್ಪ ನಾಯ್ಕರ್  ಅವರು ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ   ಕಾರ್ಯನಿರ್ವಹಿಸುತ್ತಿದ್ದರು.  ವರ ನಟ ಡಾಕ್ಟರ್ ರಾಜಕುಮಾರ್ ಅವರು ಸೇರಿದಂತೆ  ಡಾಕ್ಟರ್ ರಾಜಕುಮಾರ್ ಅವರ  ಕುಟುಂಬದವರಿಗೆ ಯೋಗಾಸನವನ್ನು  ಹೇಳಿಕೊಡುವ ಮೂಲಕ ಯೋಗ ಗುರುವಾಗಿದ್ದರು. ಅಲ್ಲದೆ ನಾಡಿನ  ಅತ್ಯಂತ ಗಣ್ಯವ್ಯಕ್ತಿಗಳಿಗೆ  ಯೋಗಾಸನವನ್ನು ಪ್ರತಿ ನಿತ್ಯ  ಹೇಳಿಕೊಡುತ್ತಿದ್ದ ವ್ಯಕ್ತಿಯಾಗಿದ್ದರು.

ಇವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಜೆಪಿ ನಗರದಲ್ಲಿ ವಾಸವಿದ್ದರು. ಕನಕಪುರದ ಬಳಿ ಇವರ ಯೋಗಾಶ್ರಮವಿತ್ತು. ಇವರ ಅಂತ್ಯಕ್ರಿಯೆಯನ್ನು  ಕನಕಪುರದ  ನಾಗದೇವನಹಳ್ಳಿ  ಬಳಿ  ನೆರವೇರಿಸಲು  ಅವರ ಕುಟುಂಬಸ್ಥರು  ತೀರ್ಮಾನಿಸಿದ್ದಾರೆ.   ಹೊನ್ನಪ್ಪ ನಾಯ್ಕರ್ ಅವರ ಆತ್ಮೀಯರಾದ ಎಸ್. ಎ. ಚಿನ್ನೇಗೌಡ ಅವರು  ಮೃತರ  ಆತ್ಮಕ್ಕೆ  ಶಾಂತಿ ಸಿಗಲೆಂದು ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ನಿರ್ದೇಶಕ ಪ್ರಶಾಂತ್‌ ರಾಜ್‌ ಆರೋಗ್ಯದಲ್ಲಿ ಚೇತರಿಕೆ

ಕೋವಿಡ್‌ ಸೋಂಕು ದೃಢ ಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ʼಲವ್‌ ಗುರುʼ ಹಾಗೂ ʼಜೂಮ್‌ʼ ಚಿತ್ರಗಳ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ರಾಜ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕೊಂಚ ಗಂಭೀರವೇ ಎನಿಸಿದ್ದ ಆರೋಗ್ಯದ ಪರಿಸ್ಥಿತಿ ಚೇತರಿಕೆ ಕಂಡಿದ್ದು, ಇದು ಖುಷಿ ತಂದಿದೆ ಎಂಬುದಾಗಿ ನಿರ್ದೇಶಕ ಪ್ರಶಾಂತ್‌ ರಾಜ್‌ ಅವರೇ ಮೆಸೇಜ್‌ ಮಾಡಿದ್ದಾರೆ. ಹಾಗೆಯೇ ತಾವೀಗ ಕೊಂಚ ಚೇತರಿಸಿಕೊಂಡಿದ್ದನ್ನು ವಿಡಿಯೋ ಮಾಡಿ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್‌ ಸೋಂಕು ದೃಢಪಟ್ಟ ನಂತರ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಹಾಗೆಯೇ ಆರೋಗ್ಯದಲ್ಲಿ ಕೊಂಚ ಏರುಪೇರು ಆದಾಗ ಅನಿವಾರ್ಯವಾಗಿ ನಾನು ಆಸ್ಪತ್ರೆಗೆ ದಾಖಲಾದೆ.

ಆರಂಭದಲ್ಲಿ ಆರೋಗ್ಯದ ಸಮಸ್ಯೆ ಕೊಂಚ ಗಂಭೀರವೇ ಎನಿಸಿತ್ತು. ಕೊನೆಗೂ ದೇಹ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇಷ್ಟರಲ್ಲಿಯೇ ಕಂಪ್ಲೀಟ್‌ ಗುಣಮುಖವಾಗುವ ವಿಶ್ವಾಸವಿದೆ. ಎಂದಿನಂತೆ ಸಿನಿಮಾ ಕೆಲಸಗಳನ್ನು ಶುರು ಮಾಡಬೇಕಿದೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ ಎಂಬುದಾಗಿ ನಿರ್ದೇಶಕ ಪ್ರಶಾಂತ್‌ ರಾಜ್‌ ಹೇಳಿದ್ದಾರೆ

Categories
ಸಿನಿ ಸುದ್ದಿ

ಚಲನಚಿತ್ರೋತ್ಸವಕ್ಕೆ ಮೀಸಲಿಟ್ಟ ಹಣವನ್ನು ಚಿತ್ರೋದ್ಯಮದ ಕಾರ್ಮಿಕರಿಗೆ ಕೊಡಿ : ನಿರ್ದೇಶಕ ಮಂಸೋರೆ ಮನವಿ

ಕೋವಿಡ್‌ನಿಂದಾಗಿ ಇಡೀ ರಾಜ್ಯ ಹಾಗೂ ದೇಶ ತತ್ತರಿಸಿದೆ. ಚಿತ್ರೋದ್ಯಮ ಕೂಡ ಅದರಿಂದ ಹೊರತಾಗಿಲ್ಲ. ಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಆರ್ಥಿಕ ಭದ್ರತೆ ಇಲ್ಲದೆ ನರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಸಂಪೂರ್ಣವಾಗಿ ರದ್ದುಗೂಳಿಸಿ, ಅದಕ್ಕಾಗಿ ಮೀಸಲಿಟ್ಟ ಹಣವನ್ನು ಚಿತ್ರರಂಗದ ಎಲ್ಲಾ ಕಾರ್ಮಿಕರಿಗೆ ನೀಡುವಂತೆ ಯುವ ನಿರ್ದೇಶಕ ಮಂಸೋರೆ, ಅಕಾಡೆಮಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.

ಚಿತ್ರರಂಗ ಸಂಕಷ್ಟದಲ್ಲಿರುವ ಸಂದರ್ಭದಲ್ಲೆ ಚಿತ್ರರಂಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಸಂದರ್ಭದಲ್ಲಿ ಸರ್ಕಾರದ ವಿಶೇಷ ಪ್ಯಾಕೇಜ್‌ಗಾಗಿ ಕಾಯುವುದರಲ್ಲಿ ಅರ್ಥವೇ ಇಲ್ಲ. ಹಾಗಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮೀಸಲಿಟ್ಟ ಹಣವನ್ನು ಚಿತ್ರೋದ್ಯಮದ ಕಾರ್ಮಿಕರಿಗೆ ವಿತರಿಸುವುದು ಹೆಚ್ಚು ಅರ್ಥಪೂರ್ಣ ಎನ್ನುವುದು ನನ್ನ ಭಾವನೆ ಅಂತ ಮಂಸೋರೆ ಹೇಳಿದ್ದಾರೆ.

ಕೋವಿಡ್ ಕಾರಣದಿಂದ ಈಗಾಗಲೇ ಸಾಕಷ್ಟು ಜನ ತೀರಿಕೊಂಡಿದ್ದಾರೆ. ಮುಂದೆ ಜೀವನ ಹೇಗೋ ಎಂದು ನೂರಾರು ಕುಟುಂಬಗಳು ಕಂಗಾಲಾಗಿವೆ. ಇಂತಹ ಸಂದರ್ಭಗದಲ್ಲಿ ಚಿತ್ರೋತ್ಸವಕ್ಕಿಂತ ಜೀವಗಳನ್ನು ಕಾಪಾಡಿಕೊಳ್ಳುವುದು ಆದ್ಯತೆಯಾಗಲಿ ಎಂಬುದು ನನ್ನ ಕೋರಿಕೆ.ಈ ಬಾರಿಯ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಆಕ್ಟ್-1978 ಸಿನೆಮಾವನ್ನು ಕೂಡ ಸ್ಪರ್ಧೆಗೆ ಕಳುಹಿಸಲಾಗಿದೆ.

ಹಾಗಿದ್ದರೂ ಕೂಡ ನನಗೆ ಚಿತ್ರೋತ್ಸವ ರದ್ದಾಗುವುದರ ಬಗ್ಗೆ ಯಾವ ಬೇಸರವೂ ಇಲ್ಲಾ. ಈಗ ಎಲ್ಲದಕ್ಕಿಂತ ಜೀವ-ಜೀವನ ಮುಖ್ಯ ಎಂಬುದಾಗಿ ಅವರು ವಿನಂತಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಕಣ್ಮರೆಯಾದ ಯುವ ಉತ್ಸಾಹಿ ಪ್ರತಿಭಾವಂತ ಯಶವಂತ್‌ ನೆನಪಲ್ಲಿ…

ಎಲ್ಲವೂ ವಿಧಿಯಾಟ. ಹುಟ್ಟು ಆಕಸ್ಮಿಕವೇ ಆಗಿದ್ದರೂ ಸಾವು ಇಲ್ಲಿ ಅನಿವಾರ್ಯವೇ. ಆದರೂ ಬಾಳಿ ಬದುಕಬೇಕಿದ್ದ ಹುಡುಗ ಚಿಕ್ಕ ವಯಸ್ಸಿನಲ್ಲಿಯೇ ಕಣ್ಮರೆಯಾಗಿಬಿಟ್ಟ ಅಂದರೆ, ಅದೊಂದು ವಿಧಿಯಾಟ ಅನ್ನದೇ ದಾರಿಯಿಲ್ಲ. ಹೌದು, ಬದುಕಿನ ಬಗ್ಗೆ ನೂರೆಂಟು ಕನಸು ಹೊತ್ತಿದ್ದ ಯುವ ಉತ್ಸಾಹಿ ಫೋಟೋಗ್ರಾಫರ್‌, ರ್ಯಾಪರ್, ವಿಡಿಯೋ ಎಡಿಟರ್, ಡ್ಯಾನ್ಸರ್, ಲಿರಿಕ್ ರೈಟರ್, ಶಾರ್ಟ್ ಫಿಲ್ಮ್ ಡೈರೆಕ್ಟರ್ ಯಶವಂತ್‌ ಈಗ ನೆನಪು ಮಾತ್ರ. ಆತನ ಆಕಾಲಿಕ ಮರಣ ಅವರ ಕುಟುಂಬವನ್ನು ಮಾತ್ರವಲ್ಲ ಆತನ ಅದೆಷ್ಟೋ ಮಂದಿ ಸ್ನೇಹಿತರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.

ಅದರಲ್ಲೂ ಮಗನನ್ನು ಅತೀವ ಪ್ರೀತಿಯಿಂದ ಸಾಕಿದ್ದ ಆತನ ತಾಯಿಯ ನೋವು ದೇವರಿಗೆ ಗೊತ್ತು. ಈಗಲೂ ಆತನನ್ನು ಕಳೆದುಕೊಂಡ ದುಃಖದಲ್ಲಿಯೇ ಇರುವ ಆತನ ಕುಟುಂಬ ಮೇ 21 ಕ್ಕೆ ಆತನ ಸ್ಮರಣೆ ಕಾರ್ಯಕ್ರಮ ಆಯೋಜಿಸಿದೆ. ಅಂದಹಾಗೆ, ಈ ಗುಂಗುರು ಕೂದಲಿನ ಯುವ ಊತ್ಸಾಹಿ ಪ್ರತಿಭಾವಂತ ಹುಡುಗ ಯಶವಂತ್‌, ಕನ್ನಡ ಚಿತ್ರರಂಗದ ಪೋಷಕ ನಟಿ ರಾಣಿ ಅವರ ಪುತ್ರ.

ತಾಯಿ ಕಲಾ ಜಗತ್ತಿನಲ್ಲಿದ್ದಾರೆಂಬ ಸೆಳೆತದಿಂದ ಚಿಕ್ಕ ವಯಸ್ಸಿನಲ್ಲಿಯೇ ವಿಡಿಯೋ ಎಡಿಟಿಂಗ್‌ ಹಾಗೂ ಫೋಟೋಗ್ರಫಿ ಕಲಿತು, ತನ್ನ ಕಾಲ ಮೇಲೆ ತಾನು ನಿಲ್ಲಲು ಹೊರಟಿದ್ದ ಯುವ ಪ್ರತಿಭೆ. ಸಾಕಷ್ಟು ಮಂದಿ ಮಾಡೆಲಿಂಗ್‌ ಬೆಡಗಿಯರ ಫೋಟೋಗಳನ್ನು ಕ್ಕಿಕ್ಕಿಸಿದ್ದು ಯಶವಂತ್‌ ಫೋಟೋಗ್ರಫಿಯ ವಿಶೇಷವೇ ಹೌದು. ಡಿಜೆಯಾಗಿಯೂ ಗುರುತಿಸಿಕೊಂಡಿದ್ದ ಯಶವಂತ್‌, ಸಾಕು ನಾಯಿಗಳ ಮೇಲೆ ಅತೀವ ಪ್ರೀತಿ ಹೊಂದಿದ್ದರು.

ವಿದೇಶದ ದುಬಾರಿ ನಾಯಿಗಳನ್ನು ತರಿಸಿ, ಅವುಗಳನ್ನು ಅಷ್ಟೇ ಮುತುವರ್ಜಿಯಿಂದ ಸಾಕುತ್ತಿದ್ದ ಆತನ ಶ್ವಾನ ಪ್ರೀತಿ ಬಣ್ಣಿಸಲಾಗದು. ಮನುಷ್ಯರಷ್ಟೇ ತನ್ನ ಸಾಕು ನಾಯಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ವಿಧಿಯಾಟ ಆತನನ್ನು ಬಹುಬೇಗ ಸೆಳೆದುಕೊಂಡು ಬಿಟ್ಟಿತು. ಕಳೆದ ವಾರದ ಹಿಂದಷ್ಟೇ ಯಶವಂತ್‌ ಆಕಾಲಿಕ ಮೃತ್ಯುವಿಗೆ ಈಡಾದರು.

ಇದೀಗ ತೀವ್ರ ದುಃಖದಲ್ಲಿರುವ ಆತನ ಕುಟುಂಬ ಹಾಗೂ ಆತ್ಮೀಯರು ಪ್ರೀತಿಯ ಯಶವಂತ್‌ ಅವರಿಗೆ ಮೇ. 21ಕ್ಕೆ ಸರಳವಾಗಿ ಶ್ರದ್ದಾಂಜಲಿ ಸಭೆ ನಡೆಸುವ ಮೂಲಕ ಆತನ ಆತ್ಮಕ್ಕೆ ಶಾಂತಿ ಕೋರಲು ಮುಂದಾಗಿದೆ.

ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಯಶವಂತ್, ತುಂಬಾ ಮೃದು ಸ್ವಭಾವದ ಹುಡುಗ. ಸದಾ ಏನಾದರೊಂದು ಹೊಸತನ್ನು ಮಾಡುವ ಹಂಬಲ ಅವನಲ್ಲಿತ್ತು. ಜೀವನದಲ್ಲಿ ಸಾಧಿಸಿ ಮುಂದೆ ಬರಬೇಕು ಎಂದು ಹಗಲಿರುಳು ಎಲ್ಲಾ ವಿಭಾಗಗಳಲ್ಲೂ ದುಡಿಯುತ್ತಿದ್ದ ಯಶವಂತ್, ಸಿನಿಲಹರಿ ಕಚೇರಿಯಲ್ಲಿ ವಿಡಿಯೋ ಎಡಿಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ಸದಾ ಉತ್ಸಾಹದಲ್ಲಿರುತ್ತಿದ್ದ ಯಶವಂತ್ ದೈಹಿಕವಾಗಿ ಇರದಿದ್ದರೂ ಮಾನಸಿಕವಾಗಿ ಜೊತೆಗಿದ್ದಾರೆ.

Categories
ಸಿನಿ ಸುದ್ದಿ

ಲಾಕ್‌ ಡೌನ್‌ ಹಿನ್ನೆಲೆ : ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3 ಸಾವಿರ ಪರಿಹಾರ ಘೋಷಣೆ

ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ ಡೌನ್‌ ಘೋಷಣೆ ಮಾಡಿದ ನಂತರ ಸಿನಿಮಾ ಹಾಗೂ ಸೀರಿಯಲ್‌ ಕಲಾವಿದರೆಲ್ಲ ಕೆಲಸ ಇಲ್ಲದೆ ಮನೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಡ ಕಲಾವಿದರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಬೇಕೆಂಬ ಚಿತ್ರೋದ್ಯಮದವರ ಮನವಿಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.

ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3 ಸಾವಿರ ಘೋಷಣೆ ಮಾಡಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್ಸ್‌, ಬೀದಿ ಬದಿ ವ್ಯಾಪಾರಿಗಳು, ಕ್ಷೌರಿಕ ಸಮಾಜದವರು, ದೋಬಿಗಳು, ಹಣ್ಣು ಹಾಗೂ ಹೂವು ಬೆಳೆಗಾರರು, ರೈತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರಿಗೆ ರಾಜ್ಯ ಸರ್ಕಾರ ಒಟ್ಟು 1250 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ವಿಶೇಷ ಪ್ಯಾಕೇಜ್‌ ವಿವರ ಬಹಿರಂಗ ಪಡಿಸಿದರು. ʼ ಸರ್ಕಾರ ಘೋಷಣೆ ಮಾಡಿದ ಸುಮಾರು 1250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ ನಿಂದಾಗಿ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆʼ ಅಂದರು.

ಸರ್ಕಾರದ ಈ ಪ್ಯಾಕೇಜ್‌ ನಲ್ಲಿ ಸಿನಿಮಾ ಹಾಗೂ ಸೀರಿಯಲ್‌ ಕಲಾವಿದರಿಗೂ ಪರಿಹಾರ ಘೋಷಣೆ ಆಗಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮದ ಸಾಕಷ್ಟು ಮಂದಿ ಕಾರ್ಮಿಕರು ಕೆಲಸ ಇಲ್ಲದ ಕುಳಿತಿದ್ದಾರೆ. ಕೆಲಸ ಇಲ್ಲದ ಕಾರಣಕ್ಕೆ ಅವರಿಗೆ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಅವರ ನೆರವಿಗೆ ಬರಬೇಕು. ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಆಗುವ ಹಾಗೆ ಪರಿಹಾರ ಘೋಷಿಸಬೇಕೆಂದು ನಿರ್ಮಾಪಕ ಬಾ.ಮ. ಹರೀಶ್‌ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದರು.

ಸಿಎಂ ಭೇಟಿ ಮಾಡಿದ ಭಾ.ಮ ಹರೀಶ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಭಾ.ಮ ಹರೀಶ್ ರವರು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿರುವ ಸಮಸ್ತ ಕನ್ನಡ ಚಿತ್ರೋದ್ಯಮದ ಸದಸ್ಯರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜನ್ನು ಘೋಷಿಸಿ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ನೆರವು ನೀಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿತ್ರನಟರಾದ ಜೆ.ಕೆ ಹಾಗೂ ನಿರ್ಮಾಪಕ, ನಿರ್ದೇಶಕರಾದ ಆಸ್ಕರ್ ಕೃಷ್ಣ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಗುರು ಶಿಷ್ಯರಿಗೆ ಹುಡುಗಿ ಸಿಕ್ಕಾಯ್ತು! ಶರಣ್ ಗೆ ನಿಶ್ವಿಕಾ ನಾಯ್ಡು ನಾಯಕಿ

ತರುಣ್ ಸುಧೀರ್ ಈ ಹಿಂದೆ ‘ಗುರುಶಿಷ್ಯರು’ ಸಿನಿಮಾ ಬಗ್ಗೆ ಹೇಳಿದ್ದರು. ಚಿತ್ರದ ಕುರಿತು ಒಂದಷ್ಟು ಮಾಹಿತಿ ನೀಡಿದ್ದ ಅವರು, ನಾಯಕಿ ಆಯ್ಕೆ ಬಗ್ಗೆ ಹೇಳಿರಲಿಲ್ಲ. ಈಗ ‘ಗುರುಶಿಷ್ಯರು’ ಚಿತ್ರಕ್ಕೆ ಹೀರೋಯಿನ್ ಸಿಕ್ಕಾಗಿದೆ.

‘ಅಮ್ಮ ಐ ಲವ್ ಯು’,’ ಪಡ್ಡೆ ಹುಲಿ’, ‘ಜಂಟಲ್ಮನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಿಶ್ವಿಕಾ ನಾಯ್ಡು ಈ ಗುರುಶಿಷ್ಯರು ಚಿತ್ರದ ನಾಯಕಿ.

ಅಂದಹಾಗೆ, ನಿಶ್ವಿಕಾ ಅವರನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಸುಲಭವಾಗಿರಲಿಲ್ಲ ಎಂಬುದು ಸಿನಿಮಾ ತಂಡದ ಹೇಳಿಕೆ. ನಾಯಕಿಯ ಆಯ್ಕೆ ಹೇಗಾಯಿತು ಅನ್ನೋ ವಿಷಯವನ್ನು ಒಂದು ಕಿರುನಾಟಕದ ಮೂಲಕ ಚಿತ್ರತಂಡ ಹೇಳಿದೆ.

30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ‘ಗುರುಶಿಷ್ಯರು’ ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ಅವರನ್ನು ಆಯ್ಕೆ ಮಾಡಲಾಗಿದೆ.

ಶರಣ್ ಚಿತ್ರದ ನಾಯಕರಾಗಿದ್ದು, ಅವರಿಲ್ಲಿ ಒಬ್ಬ ದೈಹಿಕ ಶಿಕ್ಷಕನಾಗಿ ನಟಿಸುತ್ತಿದ್ದಾರೆ. ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗುರುಶಿಷ್ಯರು’ ಚಿತ್ರದ ಕಥೆ 1995 ರಲ್ಲಿ ಕಾಲಘಟ್ಟದ್ದು.

ಈಗಾಗಲೇ ಶೇ.60 ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಉಳಿದ ಭಾಗದ ಚಿತ್ರೀಕರಣ ಸದ್ಯದ ಕೊರೊನಾ ಲಾಕ್ಡೌನ್ ಮುಗಿದ ನಂತರ ಮಾಡಲು ಯೋಜಿಸಲಾಗಿದೆ. ಜಡೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ.

error: Content is protected !!