ಕಣ್ಮರೆಯಾದ ಯುವ ಉತ್ಸಾಹಿ ಪ್ರತಿಭಾವಂತ ಯಶವಂತ್‌ ನೆನಪಲ್ಲಿ…

ಎಲ್ಲವೂ ವಿಧಿಯಾಟ. ಹುಟ್ಟು ಆಕಸ್ಮಿಕವೇ ಆಗಿದ್ದರೂ ಸಾವು ಇಲ್ಲಿ ಅನಿವಾರ್ಯವೇ. ಆದರೂ ಬಾಳಿ ಬದುಕಬೇಕಿದ್ದ ಹುಡುಗ ಚಿಕ್ಕ ವಯಸ್ಸಿನಲ್ಲಿಯೇ ಕಣ್ಮರೆಯಾಗಿಬಿಟ್ಟ ಅಂದರೆ, ಅದೊಂದು ವಿಧಿಯಾಟ ಅನ್ನದೇ ದಾರಿಯಿಲ್ಲ. ಹೌದು, ಬದುಕಿನ ಬಗ್ಗೆ ನೂರೆಂಟು ಕನಸು ಹೊತ್ತಿದ್ದ ಯುವ ಉತ್ಸಾಹಿ ಫೋಟೋಗ್ರಾಫರ್‌, ರ್ಯಾಪರ್, ವಿಡಿಯೋ ಎಡಿಟರ್, ಡ್ಯಾನ್ಸರ್, ಲಿರಿಕ್ ರೈಟರ್, ಶಾರ್ಟ್ ಫಿಲ್ಮ್ ಡೈರೆಕ್ಟರ್ ಯಶವಂತ್‌ ಈಗ ನೆನಪು ಮಾತ್ರ. ಆತನ ಆಕಾಲಿಕ ಮರಣ ಅವರ ಕುಟುಂಬವನ್ನು ಮಾತ್ರವಲ್ಲ ಆತನ ಅದೆಷ್ಟೋ ಮಂದಿ ಸ್ನೇಹಿತರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.

ಅದರಲ್ಲೂ ಮಗನನ್ನು ಅತೀವ ಪ್ರೀತಿಯಿಂದ ಸಾಕಿದ್ದ ಆತನ ತಾಯಿಯ ನೋವು ದೇವರಿಗೆ ಗೊತ್ತು. ಈಗಲೂ ಆತನನ್ನು ಕಳೆದುಕೊಂಡ ದುಃಖದಲ್ಲಿಯೇ ಇರುವ ಆತನ ಕುಟುಂಬ ಮೇ 21 ಕ್ಕೆ ಆತನ ಸ್ಮರಣೆ ಕಾರ್ಯಕ್ರಮ ಆಯೋಜಿಸಿದೆ. ಅಂದಹಾಗೆ, ಈ ಗುಂಗುರು ಕೂದಲಿನ ಯುವ ಊತ್ಸಾಹಿ ಪ್ರತಿಭಾವಂತ ಹುಡುಗ ಯಶವಂತ್‌, ಕನ್ನಡ ಚಿತ್ರರಂಗದ ಪೋಷಕ ನಟಿ ರಾಣಿ ಅವರ ಪುತ್ರ.

ತಾಯಿ ಕಲಾ ಜಗತ್ತಿನಲ್ಲಿದ್ದಾರೆಂಬ ಸೆಳೆತದಿಂದ ಚಿಕ್ಕ ವಯಸ್ಸಿನಲ್ಲಿಯೇ ವಿಡಿಯೋ ಎಡಿಟಿಂಗ್‌ ಹಾಗೂ ಫೋಟೋಗ್ರಫಿ ಕಲಿತು, ತನ್ನ ಕಾಲ ಮೇಲೆ ತಾನು ನಿಲ್ಲಲು ಹೊರಟಿದ್ದ ಯುವ ಪ್ರತಿಭೆ. ಸಾಕಷ್ಟು ಮಂದಿ ಮಾಡೆಲಿಂಗ್‌ ಬೆಡಗಿಯರ ಫೋಟೋಗಳನ್ನು ಕ್ಕಿಕ್ಕಿಸಿದ್ದು ಯಶವಂತ್‌ ಫೋಟೋಗ್ರಫಿಯ ವಿಶೇಷವೇ ಹೌದು. ಡಿಜೆಯಾಗಿಯೂ ಗುರುತಿಸಿಕೊಂಡಿದ್ದ ಯಶವಂತ್‌, ಸಾಕು ನಾಯಿಗಳ ಮೇಲೆ ಅತೀವ ಪ್ರೀತಿ ಹೊಂದಿದ್ದರು.

ವಿದೇಶದ ದುಬಾರಿ ನಾಯಿಗಳನ್ನು ತರಿಸಿ, ಅವುಗಳನ್ನು ಅಷ್ಟೇ ಮುತುವರ್ಜಿಯಿಂದ ಸಾಕುತ್ತಿದ್ದ ಆತನ ಶ್ವಾನ ಪ್ರೀತಿ ಬಣ್ಣಿಸಲಾಗದು. ಮನುಷ್ಯರಷ್ಟೇ ತನ್ನ ಸಾಕು ನಾಯಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ವಿಧಿಯಾಟ ಆತನನ್ನು ಬಹುಬೇಗ ಸೆಳೆದುಕೊಂಡು ಬಿಟ್ಟಿತು. ಕಳೆದ ವಾರದ ಹಿಂದಷ್ಟೇ ಯಶವಂತ್‌ ಆಕಾಲಿಕ ಮೃತ್ಯುವಿಗೆ ಈಡಾದರು.

ಇದೀಗ ತೀವ್ರ ದುಃಖದಲ್ಲಿರುವ ಆತನ ಕುಟುಂಬ ಹಾಗೂ ಆತ್ಮೀಯರು ಪ್ರೀತಿಯ ಯಶವಂತ್‌ ಅವರಿಗೆ ಮೇ. 21ಕ್ಕೆ ಸರಳವಾಗಿ ಶ್ರದ್ದಾಂಜಲಿ ಸಭೆ ನಡೆಸುವ ಮೂಲಕ ಆತನ ಆತ್ಮಕ್ಕೆ ಶಾಂತಿ ಕೋರಲು ಮುಂದಾಗಿದೆ.

ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಯಶವಂತ್, ತುಂಬಾ ಮೃದು ಸ್ವಭಾವದ ಹುಡುಗ. ಸದಾ ಏನಾದರೊಂದು ಹೊಸತನ್ನು ಮಾಡುವ ಹಂಬಲ ಅವನಲ್ಲಿತ್ತು. ಜೀವನದಲ್ಲಿ ಸಾಧಿಸಿ ಮುಂದೆ ಬರಬೇಕು ಎಂದು ಹಗಲಿರುಳು ಎಲ್ಲಾ ವಿಭಾಗಗಳಲ್ಲೂ ದುಡಿಯುತ್ತಿದ್ದ ಯಶವಂತ್, ಸಿನಿಲಹರಿ ಕಚೇರಿಯಲ್ಲಿ ವಿಡಿಯೋ ಎಡಿಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ಸದಾ ಉತ್ಸಾಹದಲ್ಲಿರುತ್ತಿದ್ದ ಯಶವಂತ್ ದೈಹಿಕವಾಗಿ ಇರದಿದ್ದರೂ ಮಾನಸಿಕವಾಗಿ ಜೊತೆಗಿದ್ದಾರೆ.

Related Posts

error: Content is protected !!