Categories
ಸಿನಿ ಸುದ್ದಿ

ಕಂಪರ್ಟ್‌ ಝೋನ್‌ ದಾಟಿ ಬಿಟ್ರಾ ಅಪ್ಪು ? ಸ್ಟಾರ್‌ ಇಮೇಜ್‌ ಗಿಂತ ಕಥೆಯೇ ಮುಖ್ಯ ಅಂದ್ರ ಪವರ್‌ ಸ್ಟಾರ್‌ ?

ಅಪ್ಪು ಬದಲಾದ್ರಾ ? ಗೊತ್ತಿಲ್ಲ. ಸದ್ಯಕ್ಕೆ ಹಾಗೊಂದು ಮುನ್ಸೂಚನೆ ಸಿಕ್ಕಿದೆ. ನಿರ್ದೇಶಕ ಲೂಸಿಯಾ ಪವನ್‌ ಕುಮಾರ್‌ ಹಾಗೂ ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಈಗ ಒಂದಾಗಿದ್ದಾರೆಂದ್ರೆ ಸಮಥಿಂಗ್‌ ಈಸ್‌ ಚೇಂಜ್‌ ಅಂತಲೇ ಹೌದು. ಅದೆಲ್ಲ ಹೇಗೆ ಎನ್ನುವುದಕ್ಕಿಂತ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಪಾಲಿಗಂತೂ ಇದೊಂಥರ ಕಾಕತಾಳೀಯ. ಎಲ್ಲವೂ ಟೈಮ್‌ ಅಂತಾರಲ್ಲ ಹಾಗಿದೆ ಈ ಸಂದರ್ಭ. ʼಯುವರತ್ನʼ ರಿಲೀಸ್‌ ಆಗಿ ಹೆಚ್ಚು ಕಡಿಮೆ ಹದಿನೈದು ಆಗುತ್ತಾ ಬಂದಿವೆ. ಚಿತ್ರ ತಂಡ ಏನೇ ಹೇಳಿಕೊಂಡರೂ, ಪುನೀತ್‌ ಅವರ ಇಮೇಜ್‌ ತಕ್ಕಂತೆ ಈ ಚಿತ್ರಕ್ಕೆ ದೊಡ್ಡ ಸಕ್ಸಸ್‌ ಸಿಗಲೇ ಇಲ್ಲ. ಟಿವಿ ರೈಟ್ಸ್‌, ಡಿಜಿಟಲ್‌ ರೈಟ್ಸ್‌ ಅಂತೆನ್ನುವುದರ ಜತೆಗೆ ಚಿತ್ರಕ್ಕೆ ಹಾಕಿದ ಹಣ ವಾಪಾಸ್‌ ಬಂತು ಅಂತ ಚಿತ್ರತಂಡ ಹೇಳಿಕೊಂಡರೂ, ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಹೋಗಿಲ್ಲ ಅನ್ನೋದು ಅಷ್ಟೇ ಸತ್ಯ.

ಅಪ್ಪು ಸಿನಿಮಾ ಅಂದ್ರೆ ಬೇರೆನು ಹೇಳಬೇಕಿಲ್ಲ. ಒಂದೊಳ್ಳೆಯ ಕಥೆಯ ಜತೆಗೆ ಫೈಟ್ಸು, ಸಾಂಗ್ಸು, ಡಾನ್ಸು ಸೇರಿದಂತೆ ಮನರಂಜನೆಯ ಎಲ್ಲಾ ಅಂಶಗಳಿಗೆ ಮೋಸವೇ ಇರೋದಿಲ್ಲ. ಹಾಗಾಗಿಯೇ “ಯುವರತ್ನʼ ಮೇಲೂ ಫ್ಯಾನ್ಸಿಗೆ ದೊಡ್ಡ ನಿರೀಕ್ಷೆ ಇದ್ದೇ ಇತ್ತು. ಅದರ ಜತೆಗೆ ಹೊಂಬಾಳೆ ಫಿಲಂಸ್‌ ನಿರ್ಮಾಣ ಸಿನಿಮಾ. ಹಾಗೆಯೇ ʼರಾಜಕುಮಾರʼ ಚಿತ್ರದ ನಂತರ ಅಪ್ಪು ಹಾಗೂ ಸಂತೋಷ್‌ ಆನಂದ್‌ ರಾಮ್‌ ಇಲ್ಲಿ ಮತ್ತೆ ಒಂದಾಗಿದ್ದಾರೆ ಅಂತಲೂ ಫ್ಯಾನ್ಸ್‌ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದಿದ್ದರು. ಅದೆಲ್ಲ ಈಗ ಬಹುತೇಕ ಹುಸಿ ಆಯಿತು. ಕೊರೋನಾ ಸಂದರ್ಭವೋ, ಸನ್ನಿವೇಶಗಳೋ ಎನೇ ಅಂತಂದ್ರುಕೊಂಡ್ರು ಫಲಿತಾಂಶ ಕಣ್ಣೆದುರೇ ಇದೆ. “ಯುವರತ್ನ’ ರಿವೀವ್ಯೂ ಕುರಿತು ಸೋಷಲ್‌ ಮೀಡಿಯಾದಲ್ಲಿ ಈಗಲೂ ದೊಡ್ಡ ಚರ್ಚೆ ನಡೆಯುತ್ತಿದೆ. ಪಾಸಿಟಿವ್‌ಕ್ಕಿಂತ ನೆಗೆಟಿವ್‌ ಕಾಮೆಂಟ್ಸ್‌ ಹೆಚ್ಚಾಗಿ ಬಂದಿವೆ.

ಹೌದು, ಪುನೀತ್‌ ಅಭಿನಯದ ಸಿನಿಮಾಗಳ ಪೈಕಿ ಯಾವ ಸಿನಿಮಾಕ್ಕೂ ಹೀಗೊಂದು ರೆಸ್ಪಾನ್ಸ್‌ ಸಿಕ್ಕಿರಲಿಲ್ಲ. ದೊಡ್ಡ ನಿರೀಕ್ಷೆಯೇ ಇಲ್ಲಿ ಹುಸಿಯಾಗಿದೆ. ಫ್ಯಾನ್ಸ್‌ ಗಳೇ ಸಿನಿಮಾದ ಕಥೆ ಬಗ್ಗೆ ತಕರಾರು ಎತ್ತಿಬಿಟ್ಟರು. ಸೋಷಲ್‌ ಮೀಡಿಯಾದಲ್ಲಿ ಈ ಚಿತ್ರದ ರಿವಿವ್ಯೂ ಕುರಿತೇ ದೊಡ್ಡ ಚರ್ಚೆ ನಡೆದಿದೆ. ಪುನೀತ್‌ ಅವರ ಇಮೇಜ್‌ಗೆ ಇದು ದೊಡ್ಡ ಸೋಲು ಅಂತಲೂ ವಿಶ್ಲೇಷಣೆ ಮಾಡಲಾಯಿತು. ಹಾಗೆಯೇ ಅಪ್ಪು ಗೆ ಇದು ಬದಲಾಗುವ ಕಾಲ ಅಂತಲೂ ಸಿನಿಮಾ ಪ್ರೇಕ್ಷಕರು ಸೋಷಲ್‌ ಮೀಡಿಯಾದಲ್ಲಿ ಸಲಹೆ ಕೊಟ್ಟರು. ಆದ್ರೆ ಅಪ್ಪು ಅಂದ್ರೆ ಬರೀ ಹೀರೋ ಅಲ್ಲ, ಪವರ್‌ಫುಲ್‌ ಕಮರ್ಷಿಯಲ್‌ ಹೀರೋ. ನೋ ಡೌಟ್, ಪುನೀತ್‌ ಅಂದ್ರೆ ಕನ್ನಡದ ಪಕ್ಕಾ ಕಮರ್ಷಿಯಲ್‌ ಹೀರೋ. ಅವರ ಮೇಲೆ ಬಂಡವಾಳ ಹಾಕಿದವರೆಲ್ಲ ಲಾಸ್‌ ಅಂತ ಹೇಳಿದ್ದೇ ಇಲ್ಲ. ಅವರ ಸಿನಿಮಾ ಸೋತಿದ್ದೇ ಇಲ್ಲ. ಕಮರ್ಷಿಯಲ್‌, ಕಲೆಕ್ಷನ್‌ ಆಚೆಗೆ ಸಿನಿಮಾ ಪ್ರೇಕ್ಷಕರಿಗೂ ಅಪ್ಪು ಸಿನಿಮಾ ಬೇಸರ ಮೂಡಿಸಿದ್ದೇ ಇಲ್ಲ.

ಪಕ್ಕಾ ಪ್ರೇಮಕಥೆಗಳಲ್ಲಿ ಅಪ್ಪು ಹೀರೋ ಅಗಿ ಕಾಣಸಿಕೊಂಡರೂ, ನಾನಾ ಪಾತ್ರಗಳ ಮೂಲಕ ತೆರೆ ಮೇಲೆ ತಮ್ಮದೇ ಖದರ್‌ ತೋರಿಸಿ ಅಭಿಮಾನಿಗಳನ್ನು ಭರಪೂರ ರಂಜಿಸಿದ ನಟ ಅವರು. ಆದರೆ ಅವೆಲ್ಲವೂ ಕಮರ್ಷಿಯಲ್‌ ಚಿತ್ರಗಳೆನ್ನುವುದು ಹೌದು. ಹಾಗಾದ್ರೆ, ಅಪ್ಪು ಬರೀ ಕಮರ್ಷಿಯಲ್‌ ಹೀರೋನಾ ? ಇಲ್ಲ, ” ಮೈತ್ರಿʼ ಯಂತಹ ಒಂದು ಪ್ರಯೋಗಾತ್ಮಕ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಅದಕ್ಕೆ ಒಳ್ಳೆಯ ರೆಸ್ಪಾನ್ಸ್‌ ಕೂಡ ಸಿಕ್ಕಿತ್ತು. ಅಲ್ಲಿಂದ ಅಪ್ಪು ಹಾಗೆಲ್ಲ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ಥಾರೆನ್ನುವ ನಿರೀಕ್ಷೆಯ ನಡುವೆಯೇ, ಮತ್ತೆ ತಮ್ಮದೇ ಕಂಪರ್ಟ್‌ ಝೋನ್‌ ಗೆ ಬಂದು ನಿಂತಿದ್ದು ಹಳೇ ಮಾತು. ಅದೇ ದಾರಿಯಲ್ಲಿಯೇ ಬಂದಿದ್ದು ʼಯುವರತ್ನʼ ಚಿತ್ರ ಕೂಡ. ಅದೇನೋ ಗೊತ್ತಿಲ್ಲ. ಪುನೀತ್‌ ಈಗ ಬದಲಾಗಿದ್ದಾರೆ. ಲೂಸಿಯಾ ಪವನ್‌ ಕುಮಾರ್‌ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಪವನ್‌ ಜತೆಗೆ ಸಿನಿಮಾ ಮಾಡುತ್ತಾರಂದ್ರೆ ಅಪ್ಪು ಬದಲಾಗಲೇಬೇಕು. ಯಾಕೆ ಗೊತ್ತಾ ?

ಲೂಸಿಯಾ ಪವನ್‌ ಕುಮಾರ್‌ ಅಂದ್ರೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಡಿಫೆರೆಂಟ್‌ ಕಾನ್ಸೆಫ್ಟ್‌ ಮೂಲಕ. ಎಲ್ಲರದ್ದೂ ಒಂದು ದಾರಿಯಾದರೆ ಅವರದ್ದೇ ಇನ್ನೊಂದು ದಾರಿ. ವಿಭಿನ್ನ ಕಥಾ ಹಂದರದ ಲೂಸಿಯಾ ಸಿನಿಮಾ ಮಾಡಿದಾಗ ಇವರಾರು ಪವನ್‌ ಕುಮಾರ್‌ ಅಂತಂದ್ರು ಸಿನಿಮಾ ಮಂದಿ. ಕೊನೆಗೆ ಈ ಸಿನಿಮಾ ದೊಡ್ಡದಾಗಿ ಸದ್ದು ಮಾಡಿದಾಗ ಪವನ್‌ ಕುಮಾರ್‌ ಪರಿಚಯವಾಗಿದ್ದು ಒಬ್ಬ ಟ್ಯಾಲೆಂಟೆಡ್‌ ನಿರ್ದೇಶಕರಾಗಿ. ಅಲ್ಲಿಂದ ಯೂಟರ್ನ್‌ ಬಂದಾಗಲೂ ಅದು ಮತ್ತೊಮ್ಮೆ ಸಾಬೀತು ಆಯಿತು. ಹೊಸ ಬಗೆಯ ಕಥೆ, ಡಿಫೆರೆಂಟ್‌ ನರೇಷನ್‌ ಮೂಲಕವೇ ಪವನ್‌ ಕುಮಾರ್ ನಿರ್ದೇಶನದಲ್ಲಿ ಮ್ಯಾಜಿಕ್‌ ಮಾಡಿದ್ರು. ಒಂದೇ ಮಾತಿನಲ್ಲಿ ಹೇಳೋದಾದ್ರೆ ಪವನ್‌ ಸಿನಿಮಾದಲ್ಲಿ ಕಥೆಯೇ ಸ್ಟಾರ್.‌ ಹಾಗಾದ್ರೆ ಪವರ್‌ ಸ್ಟಾರ್‌ ಕಥೆ ಏನು ? ನಾವು ನಟ ಪುನೀತ್‌ ಈಗ ಬದಲಾಗಿದ್ದಾರೆ ಅಂತ ನಾವು ಹೇಳಿದ್ದೇ ಇದೇ ಕಾರಣಕ್ಕೆ.

“ಯುವರತ್ನʼ ಚಿತ್ರಕ್ಕೆ ಬಂದ ಮಿಕ್ಸ್‌ ರೆಸ್ಪಾನ್ಸ್‌ ಬೆನ್ನಲೇ ಹೀಗೊಂದು ನಿರ್ಧಾರ ಮಾಡಿಕೊಂಡಿರಲಿಕ್ಕೂ ಸಾಕು. ಈಗವರು ಕಥೆಗೆ ಹೆಚ್ಚು ಒತ್ತು ನೀಡುವುದಕ್ಕೆ ಮುಂದಾಗಿದ್ದಾರೆ. ತಾವು ಸ್ಟಾರ್‌ ಎನ್ನುವುದಕ್ಕಿಂತ ಕಥೆಯೇ ಸ್ಟಾರ್‌ ಆಗಿರಬೇಕೆನ್ನುವ ಆಧಾರದಲ್ಲಿ ಪವನ್‌ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರಂತೆ ಪವರ್‌ ಸ್ಟಾರ್.‌ ಅದೇ ಕಾರಣಕ್ಕೆ ಕುತೂಹಲ ಹುಟ್ಟಿಸಿದೆ ಹೊಂಬಾಳೆ ಫಿಲಂಸ್‌ ನಿರ್ಮಾಣದ ೯ ನೇ ಚಿತ್ರ. ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಇದು ನಾಲ್ಕನೇ ಚಿತ್ರ. ನಿನ್ನಿಂದಲೇ, ರಾಜ ಕುಮಾರ, ಯುವರತ್ನ ಚಿತ್ರಗಳ ನಂತರವೀಗ ಈಗ ಪವನ್‌ ಕುಮಾರ್‌ ಕಾಂಬಿನೇಷನಲ್ಲಿ ನಾಲ್ಕನೇ ಚಿತ್ರ. ಯುಗಾದಿ ಹಬ್ಬಕ್ಕೆ ಇದು ಅಧಿಕೃತವಾಗಿ ಅನೌನ್ಸ್‌ ಆಗಿದೆ. ಪವರ್‌ ಸ್ಟಾರ್‌ ಜತೆಗೆ ಯಾರೆಲ್ಲ ಇರುತ್ತಾರೆ ? ಉಳಿದ ಟೆಕ್ನಿಷಿಯನ್‌ ಯಾರು? ಇದು ಶುರುವಾಗುವುದು ಯಾವಾಗ? ಅದೆಲ್ಲದರ ಮಾಹಿತಿ ಇಷ್ಟರಲ್ಲಿಯೇ ರಿವೀಲ್‌ ಆಗಲಿದೆಯಂತೆ. ಸದ್ಯಕ್ಕೆ ಪವರ್‌ ಸ್ಟಾರ್‌ ಹಾಗೂ ಪವನ್‌ ಕುಮಾರ್‌ ತೆರೆ ಮೇಲೆ ಹೇಗೆಲ್ಲ ಮ್ಯಾಜಿಕ್‌ ಮಾಡಬಹುದು ಅನ್ನೋದಷ್ಟೇ ಕುತೂಹಲ.

Categories
ಸಿನಿ ಸುದ್ದಿ

ಪ್ರೀತಿಗೂ ಮೀರಿದ ಜಾತಿ ಬಿಂಬಿಸುವ ಸತ್ಯಕತೆ! ಹೊರಬರಲಿದೆ ಬದನವಾಳು ಫಸ್ಟ್‌ ಲುಕ್

‌ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನೈಜ ಘಟನೆ ಆಧರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಬದನವಾಳು” ಚಿತ್ರವೂ ಸೇರಿದೆ. ಹೌದು, ಹಳೇ ಮೈಸೂರು ಪ್ರಾಂತ್ಯಕ್ಕೆ ಅಂಟಿಕೊಂಡಿರುವ “ಬದನವಾಳು” ಗ್ರಾಮದ ಒಟ್ಟು ವ್ಯವಸ್ಥೆಯನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗುತ್ತಿದೆ. ಅಂದಹಾಗೆ ಇದು, ಮೆಳೇಕೋಟೆ ಟೂರಿಂಗ್ ಟಾಕೀಸ್ ಹಾಗು ಸಿನಿಮಾ ಮಾರ್ಕೆಟ್ ಬ್ಯಾನರ್‌ನಡಿಯಲ್ಲಿ ತಯಾರಾದ ಚಿತ್ರ. ಉದಯ್ ಪ್ರಸನ್ನ ಈ ಚಿತ್ರದ ನಿರ್ದೇಶಕರು. ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ ಕುಮಾರ್ ಮತ್ತು ಪ್ರೇಮ ಚಂದ್ರಯ್ಯ (ನಾಗಸಂದ್ರ) ನಿರ್ಮಾಪಕರು. ಚಿತ್ರದಲ್ಲಿ ರಾಜ್ ಮಂಜು ನಾಯಕರಾಗಿ ಕಾಣಿಸಿಕೊಂಡರೆ, ಬಿಂದುಶ್ರೀ ನಾಯಕಿಯಾಗಿದ್ದಾರೆ.

ಸಾಮಾಜಿಕ ವ್ಯವಸ್ಥೆಯ ದಾರಿದ್ರ್ಯವನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಜಾತಿ ವ್ಯವಸ್ಥೆಯಲ್ಲಿ ಮೇಲು-ಕೀಳು, ಅಸ್ಪೃಶ್ಯತೆಯಲ್ಲಿ ಅರಳುವ ಪ್ರೀತಿ, ಮಾನಸಿಕ ದಾರಿದ್ರ್ಯಕ್ಕೆ ಅಂಟಿಕೊಂಡಿರುವ ಪ್ರೇಮ ವೈಫಲ್ಯ, ನೀಚ ರಾಜಕಾರಣಿಗಳು ಯಾವ ರೀತಿ ಯುವ ಪಿಳಿಗೆಯನ್ನು ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ, ದೇವರ ಹೆಸರಲ್ಲಿ ಹೇಗೆಲ್ಲಾ ಮೋಸ ನಡೆಯುತ್ತೆ, ಹೀಗೆ ಹಲವು ಪ್ರಮುಖ ಅಂಶಗಳನ್ನು ವಾಸ್ತವವಾಗಿ ಕಟ್ಟಿಕೊಡುವ ಕೆಲಸಕ್ಕೆ ನಿರ್ದೇಶಕರು ಮುಂದಾಗಿದ್ದಾರೆ.

ಏಪ್ರಿಲ್ 15ರಂದು ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಲಿದೆ. ಈಗಿನ ವಾಸ್ತವತೆಗೆ ಹತ್ತಿರವಾದಂತಹ ಅಂಶಗಳು ಸಿನಿಮಾದಲ್ಲಿದ್ದು, ಮುಖ್ಯವಾಗಿ ಇಲ್ಲಿ ಪ್ರೀತಿ, ಜಾತಿ, ಅಂತಸ್ತು ಸೇರಿದಂತೆ ಇನ್ನಿತರೆ ಪ್ರಮುಖ ಅಂಶಗಳು ಹೈಲೈಟ್‌ ಎಂಬುದು ಚಿತ್ರತಂಡದ ಮಾತು.

Categories
ಸಿನಿ ಸುದ್ದಿ

ಪ್ರೇಮ ಪೂಜೆಯಲ್ಲಿ ಪ್ರೇಮ್‌! ನೆನಪಿರಲಿ ಇದು ಬಹು ನಿರೀಕ್ಷೆಯ 25 ನೇ ಚಿತ್ರ ; ಪ್ರೇಮಂ ಪೂಜ್ಯಂ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೋ ಸಿಕ್ತು ಭರಪೂರ ಮೆಚ್ಚುಗೆ…

ಕನ್ನಡದ ಸ್ಪುರದ್ರೂಪಿ ನಟ ಅಂದಾಕ್ಷಣ ನೆನಪಾಗೋದೇ “ನೆನಪಿರಲಿ” ಪ್ರೇಮ್.‌ ಹೌದು, ಎಂದೂ ವಯಸ್ಸೇ ಬತ್ತದಂತಿರುವ ಸ್ಮೈಲ್‌ ಹೀರೋ ಪ್ರೇಮ್‌ ಈಗ ಪ್ರೇಮ ಪೂಜೆಯ ಜಪದಲ್ಲಿದ್ದಾರೆ. ಪ್ರೇಮ್‌ ಕನ್ನಡ ಚಿತ್ರರಂಗದ ಲವ್ಲಿಸ್ಟಾರ್ ಎಂಬ ಮಾತಿಗೆ ಹೇಳಿ ಮಾಡಿಸಿದ ಸ್ಟಾರ್‌ ಅನ್ನೋದು ಸತ್ಯ. ಇಷ್ಟು ವರ್ಷಗಳ ಕಾಲ ಎಲ್ಲಾ ಬಗೆಯ ಚಿತ್ರಗಳನ್ನು ನೀಡಿರುವ ಪ್ರೇಮ್‌, ಯುವ ಮನಸ್ಸುಗಳ ಅದರಲ್ಲೂ ಹುಡುಗಿಯರ ಫೇವರೇಟ್‌ ಹೀರೋ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪ್ರೇಮ್‌ ಅವರ ಸಿನಿ ಜರ್ನಿಯನ್ನೊಮ್ಮೆ ಹಿಂದಿರುಗಿ ನೋಡಿದರೆ, ಅಲ್ಲಿ ಗೆಲುವಿದೆ, ಸೋಲೂ ಇದೆ. ಖುಷಿಯ ಹೆಜ್ಜೆಯೂ ಇದೆ. ನೋವಿನ ಹಾಡೂ ಇದೆ. ಆದರೆ, ಇವೆಲ್ಲವನ್ನೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿ, ಸಾಧನೆಯ ಮೆಟ್ಟಿಲೇರಿದ ಬ್ಯೂಟಿಫುಲ್‌ ಹೀರೋ ಎಂಬುದು ನೆನಪಿರಲಿ.
ಇಷ್ಟಕ್ಕೂ ಈಗ ಈ ಪ್ರೇಮ್‌ ಕುರಿತು ಇಷ್ಟೋಂದು ಪೀಠಿಕೆ ಯಾಕೆ ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಅವರ ಬಹು ನಿರೀಕ್ಷೆಯ “ಪ್ರೇಮಂ ಪೂಜ್ಯಂ”.

ಹೌದು, ಇದು ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಸದ್ಯ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ, ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ. ಪ್ರೇಮ್‌ ಅವರ ಈವರೆಗಿನ ಲವ್‌ಸ್ಟೋರಿ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಗೆಲುವಿನ ಗೆರೆಗಳದ್ದೇ ಆರ್ಭಟ. ಆ ಆರ್ಭಟ ಪ್ರೇಮಂ ಪೂಜ್ಯಂವರೆಗೂ ಮುಂದುವರೆಯೋ ಸೂಚನೆ ಈಗಾಗಲೇ ಸಿಕ್ಕಿದೆ ಕೂಡ. ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಯುಗಾದಿ ವಿಶೇಷ ಎಂಬಂತೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೊ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿದೆ. ಅಷ್ಟೇ ಅಲ್ಲ, ಮೆಚ್ಚುಗೆಗೂ ಪಾತ್ರವಾಗಿದೆ.

ಪ್ರೇಮಂ ಪೂಜ್ಯಂ. ದೈವಂ ಚರಣಂ ನಿತ್ಯಂ ನಿಲಯಂ ಸತ್ಯಂ ವರದಂ… ಹೀಗೆ ಸಾಗುವ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೋ ನಿಜಕ್ಕೂ ಖುಷಿ ಕೊಡುತ್ತದೆ. ಪ್ರೀತಿಯ ಮಜಲುಗಳ ಬಗ್ಗೆ ಸಾರುವ ಸಾಹಿತ್ಯದಲ್ಲಿ ಒಂದ್ರೀತಿ ಲವ್ಲಿ ಸ್ಪರ್ಶವಿದೆ. ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.

ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ. ಹರಿಹರನ್‌ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೈಟಲ್‌ ಸಾಂಗ್‌ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ಸಾರವಿದೆ.

ಕಿವಿಗಿಂಪೆನಿಸುವ ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಯೂಥ್ಸ್‌ಗೊಂದು ಪ್ರೀತಿಯ ಹಾಡಾಗಿ ಉಳಿಯುವುದರಲ್ಲಿ ಅಚ್ಚರಿ ಇಲ್ಲ. ಇನ್ನು, ಈ ಚಿತ್ರದ ಪೋಸ್ಟರ್‌ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.

ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ ೨೫ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರ. ಇಲ್ಲಿ ಪ್ರೀತಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಅದೇ ಪ್ರೇಮಂ ಪೂಜ್ಯಂ ವಿಶೇಷ. ಒಂದಂತೂ ನಿಜ.

ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳ ಕಾಲ ಸೋಲು-ಗೆಲುವನ್ನು ಕಂಡು ಇಂದಿಗೂ ರನ್ನಿಂಗ್‌ನಲ್ಲಿರುವುದು ಸುಲಭದ ಮಾತಲ್ಲ. ಪ್ರೇಮ್‌ ಆ ವಿಷಯದಲ್ಲಿ ಅದೃಷ್ಟವಂತರು. ಆರಂಭದಲ್ಲೇ ಯಶಸ್ಸು ಕಂಡ ಪ್ರೇಮ್‌, ಸಾಲು ಸಾಲು ಸಿನಿಮಾಗಳ ಮೂಲಕ ಗಮನಸೆಳೆದರು. ಹುಡುಗಿಯರ ಪಾಲಿಗಂತೂ ಲವ್ಲಿ ಸ್ಟಾರ್‌ಆಗಿಯೇ ಉಳಿದಿರುವ ಪ್ರೇಮ್‌ ಅವರ “ಪ್ರೇಮಂ ಪೂಜ್ಯಂ” ನೋಡಲು ತುದಿಗಾಲ ಮೇಲೆ ನಿಂತಿರೋದಂತೂ ಸತ್ಯ. ಸದ್ಯಕ್ಕೆ “ಪ್ರೇಮಂ ಪೂಜ್ಯಂ. ದೈವಂ ಚರಣಂ, ನಿತ್ಯಂ ನಿಲಯಂ, ಸತ್ಯಂ ವರದಂ… ಹಾಡು ಗುನುಗುತ್ತಿದ್ದಾರೆ ಅವರ ಫ್ಯಾನ್ಸ್.

Categories
ಸಿನಿ ಸುದ್ದಿ

ಇ ಕೆ ಫಿಕ್ಚರ್ಸ್‌ ನಲ್ಲೀಗ ಮ್ಯೂಟ್‌ – ಇದು ರಾಕಿಬಾಯ್‌ ತಾಯಿಯ ಮತ್ತೊಂದು ಚಿತ್ರ !

ಸ್ಯಾಂಡಲ್‌ವುಡ್‌ ನಲ್ಲಿ ಇ ಕೆ ಫಿಕ್ಚರ್ಸ್‌ ಅಂದಾಕ್ಷಣ ನೆನಪಾಗೋದು ʼಮೊಗ್ಗಿನ ಮನಸುʼ ಹಾಗೂ ʼಮುಂಗಾರು ಮಳೆ 2 ʼ ಚಿತ್ರ. ಅವೆರೆಡು ಬ್ಲಾಕ್‌ ಬಸ್ಟರ್‌ ಚಿತ್ರಗಳೇ. ನಿರ್ಮಾಪಕರಾಗಿ ಇ ಕೆ ಬ್ಯಾನರ್ಸ್‌ ಮೂಲಕ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಅಂತಹ ಎರಡು ಸಿನಿಮಾಗಳನ್ನು ಕೊಡುಗೆ ಕೊಟ್ಟ ಖ್ಯಾತಿ ನಿರ್ಮಾಪಕ ಗಂಗಾಧರ್‌ ಗುಡ್ಡಯ್ಯ ಅವರದ್ದು. ಆ ಚಿತ್ರಗಳು ಬಂದು ಹೋದ ಮೇಲೆ ಒಂದಷ್ಟು ಗ್ಯಾಪ್‌ ನಂತರ ಇಕೆ ಫಿಕ್ಚರ್ಸ್‌ ಮತ್ತೆ ಹೊಸ ದೊಂದು ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿತೆರೆಗೆ ತರಲು ಹೊರಟಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ (ಮಾ.14) ಆ ಚಿತ್ರದ ಟೈಟಲ್‌ ಕೂಡ ಲಾಂಚ್‌ ಆಗಿದೆ.

“ಹ್ಯಾಸ್‌ ಟ್ಯಾಗ್‌ ಮ್ಯೂಟ್‌ʼ ಎನ್ನುವುದು ಆ ಚಿತ್ರದ ಹೆಸರು. ʼಕವಲು ದಾರಿʼ ಹಾಗೂ ʼಆಪರೇಷನ್‌ ಅಲಮೇಲಮ್ಮʼ ಚಿತ್ರಗಳ ಖ್ಯಾತಿಯ ನಟ ರಿಷಿ ಈ ಟೈಟಲ್‌ ಲಾಂಚ್‌ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.” ಈ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡುವುದಕ್ಕೆ ಬಹಳ ಖುಷಿಯಾಗುತ್ತಿದೆ. ಯಾಕಂದ್ರೆ ಇ ಕೆ ಫಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರದ ನಿರ್ಮಾಣವಾಗುತ್ತಿದೆ. ಈಗಾಗಲೇ ಇಕೆ ಫಿಕ್ಚರ್ಸ್‌ ಕನ್ನಡಕ್ಕೆ ʼಮುಂಗಾರು ಮಳೆ೨ʼ ಹಾಗೂ ʼಮೊಗ್ಗಿನ ಮನಸುʼ ಅಂತಹದ ಎರಡು ಸೂಪರ್‌ ಹಿಟ್‌ ಚಿತ್ರ ಕೊಟ್ಟಿದೆ. ಈಗ “ಹ್ಯಾಸ್‌ ಟ್ಯಾಗ್ ಮ್ಯೂಟ್‌‌ʼ ಇದರ ಮೊತ್ತೊಂದು ಭರ್ಜರಿ ಕೊಡುಗೆ ಆಗುವುದು ಗ್ಯಾರಂಟಿ ಇದೆʼ ಅಂತ ಟೈಟಲ್‌ ಲಾಂಚ್‌ ಮಾಡಿದ ನಂತರ ಹೇಳಿಕೊಂಡಿದ್ದಾರೆ ನಟ ರಿಷಿ.

ಯುವ ಪ್ರತಿಭೆ ಪ್ರಶಾಂತ್‌ ಚಂದ್ರ ಈ ಚಿತ್ರದ ನಿರ್ದೇಶಕ. ಈ ಹಿಂದೆ ಇವರುʼ ಮೊಗ್ಗಿನ ಮನಸುʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಅಲ್ಲಿಂದ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಅದೇ ಅನುಭವದಲ್ಲೀಗ “ಹ್ಯಾಸ್‌ ಟ್ಯಾಗ್‌ ಮ್ಯೂಟ್‌ʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಕೆಜಿಎಫ್‌ ಖ್ಯಾತಿಯ ನಟಿ ಅರ್ಚನಾ ಜೋಯಿಷ್‌, ಸಿದ್ದಾರ್ಥ ಮಾಧ್ಯಾಮಿಕಾ ಜತೆಗೆ ಅದು ಕುಲಮ್‌ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಹಾಗೆಯೇ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ಕೂಡ ಕಂಪ್ಲೀಟ್‌ ಆಗಿದೆ. ರಿಲೀಸ್‌ ಸಿದ್ಧತೆಯಲ್ಲಿರುವ ಚಿತ್ರತಂಡ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಟೈಟಲ್‌ ಲಾಂಚ್‌ ಮಾಡಿದೆ.

Categories
ಸಿನಿ ಸುದ್ದಿ

ಸಕ್ಸಸ್‌ ಪ್ರದರ್ಶನದ ನಡುವೆಯೇ ಕೊಡೆ ಮುರುಗ ಶೋ ಸ್ಟಾಪ್‌ – ರೀ ರಿಲೀಸ್‌ ಗೆ ಚಿತ್ರ ತಂಡದ ಹೊಸ ತಂತ್ರ !

ಕಳೆದ ಶುಕ್ರವಾರವಷ್ಟೇ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ʼಕೊಡೆ ಮುರುಗʼ ಚಿತ್ರದ ಶೋ ಸ್ಟಾಪ್‌ ಆಗಿದೆ. ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ತಂಡ ಈ ನಿರ್ಧಾರಕ್ಕೆ ಬಂದಿದೆ. ಹಾಗಂತ ಚಿತ್ರ ತಂಡ ಅಧಿಕೃತ ವಾಗಿ ಪ್ರಕಟಿಸಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಚಿತ್ರವನ್ನು ರೀ ರಿಲೀಸ್ ಮಾಡುವುದಾಗಿಯೂ ಅನೌನ್ಸ್ ಮಾಡಿದೆ. ಸದ್ಯಕ್ಕೆ ರೀ ರಿಲೀಸ್ ದಿನಾಂಕ ಫಿಕ್ಸ್ ಆಗಿಲ್ಲ. ಅಂದಾಜು ಮುಂದಿನ‌ ತಿ‌ಂಗಳಾದರೂ‌ ಆಗಬಹುದು ಅಂತ ಚಿತ್ರ ತಂಡ ಹೇಳಿದೆ. ಚಿತ್ರದ ಪ್ರದರ್ಶನ ನಿಲ್ಲಿಸಿದ ಬಗೆಗೆ ಚಿತ್ರ ತಂಡ ಸೋಮವಾರ ತುರ್ತು‌ ಪತ್ರಿಕಾ ಗೋಷ್ಟಿ ಕರೆದಿತ್ತು. ಅಲ್ಲಿ ಶೋ‌ ಸ್ಟಾಪ್ ಆಗಿದ್ದರ ಕುರಿತು ವಿವರ ನೀಡಿತು.

” ಸಿನಿಮಾಕ್ಕೆ ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಚಿತ್ರ ನೋಡಿದವರೆಲ್ಲಾ ಸಿನಿಮಾ ಅದ್ಭುತವಾಗಿ ಬಂದಿದೆ. ತೆರೆ ಮೇಲೆ ಕಾಣಿಸಿಕೊಂಡವರೆಲ್ಲ ಹೊಸಬರಾದರೂ, ಸಿನಿಮಾ ಕಥೆ, ಚಿತ್ರಕಥೆ ಜತೆಗೆ ತಾಂತ್ರಿಕವಾಗಿಯೂ ಗಮನ ಸೆಳೆಯುತ್ತಿದೆ. ಕಲೆಕ್ಷನ್‌ ಕೂಡ ಚೆನ್ನಾಗಿದೆ. ಆದರೂ ಈಗ ಕೊರೋನಾ ಹಾವಳಿ ಹೆಚ್ಚುತ್ತಿದೆ. ಚಿತ್ರದ ಪ್ರದರ್ಶನ ಇದ್ದರೂ, ಜನರು ಬರುವುದು ಅಷ್ಟು ಸುಲಭ ಇಲ್ಲ. ಅದೇ ಕಾರಣಕ್ಕೆ ನಾವೀಗ ಚಿತ್ರದ ಪ್ರದರ್ಶನವನ್ನು ನಿಲ್ಲಿಸುತ್ತಿದ್ದೇವೆ. ಸದ್ಯಕ್ಕೆ ನಮಗೆ ನಷ್ಟವೇ. ಆದರೂ ತೊಂದರೆ ಇಲ್ಲ. ಜನರ ಆರೋಗ್ಯವೂ ಮುಖ್ಯ ʼ ಅಂತ ಚಿತ್ರದ ನಿರ್ಮಾಪಕ ರವಿ ಕುಮಾರ್‌ ಸ್ಪಷ್ಟ ಪಡಿಸಿದರು.

ಸದ್ಯಕ್ಕೆ ಚಿತ್ರದ ಪ್ರದರ್ಶನ ಸ್ಟಾಪ್‌ ಆಗುತ್ತಿದೆ ಅಂತ ಚಿತ್ರ ತಂಡ ಹೇಳಿದೆ. ಆದರೆ ರೀ ರಿಲೀಸ್‌ ಪ್ಲಾನ್‌ ಯಾವಾಗ ಅಂತ ಅಧಿಕೃತವಾಗಿ ಪ್ರಕಟಿಸಿಲ್ಲ. ” ರೀ ರಿಲೀಸ್‌ ಪ್ಲಾನ್‌ ಇದೆ. ಆದರೆ ಯಾವಾಗ ಅಂತ ನಾವೀನ್ನು ಡಿಸೈಡ್‌ ಮಾಡಿಲ್ಲ. ಯಾಕಂದ್ರೆ ಮುಂದಿನ ದಿನಗಳಲ್ಲೂ ಕೊರೋನಾ ಪರಿಸ್ಥಿತಿ ಹೇಗಿರುತ್ತೆ ಅಂತ ಹೇಳೋದಿಕ್ಕೆ ಕಷ್ಟ. ಹಾಗಾಗಿ ಪರಿಸ್ಥಿತಿ ನೋಡಿಕೊಂಡು ರೀ ರಿಲೀಸ್‌ ಮಾಡೋಣ ಅಂತ ಇದ್ದೇವೆ ಎಂಬುದಾಗಿ ನಿರ್ಮಾಪಕ ರವಿ ಕುಮಾರ್‌ ಅಂದ್ರು. ನಿರ್ಮಾಪಕ ರವಿ ಕುಮಾರ್‌ ಈ ಹಿಂದೆ “ಮಮ್ಮಿʼ ಎಂಬ ಸೂಪರ್ ಸಿನಿಮಾ ನೀಡಿದ್ದರು. ಈಗ ಕೆ ಆರ್ ಕೆ ಬ್ಯಾನರ್ ನಲ್ಲಿ ‘ಕೊಡೆ ಮುರುಗ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಅವರಿಗೆ ಅಶೋಕ್ ಶಿರಾಲಿ ಸಾಥ್ ನೀಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ನಾಯಕರಾಗಿದ್ದು, ಕಥೆ ಬರೆದು ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮುರುಗ ಖ್ಯಾತಿಯ ಮುನಿಕೃಷ್ಣ, ಪಲ್ಲವಿ ಗೌಡ, ಸ್ವಾತಿ ಗುರುದತ್, ತುಮಕೂರು ಮೋಹನ್, ರಂಗಿತರಂಗ ಅರವಿಂದ್, ಕುರಿ ಪ್ರತಾಪ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಅರ್ಜುನ್‌ ಗೌಡ ಸಿನಿಮಾದ ಕಥೆಗೂ ಇಂದಿರಾ ಗಾಂಧಿ, ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ ಹತ್ಯೆಗೂ ಅದೇನು ನಂಟು?

ಆಕ್ಷನ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಭಿನಯದ ಬಹುನಿರೀಕ್ಷಿತ ಅರ್ಜುನ್‌ ಗೌಡ ಚಿತ್ರದ ಟ್ರೇಲರ್‌ ಹೊರ ಬಂದಿದೆ. ಪ್ರಜ್ವಲ್‌ ಅವರ ಹೆವಿ ಆಕ್ಷನ್‌ ಸನ್ನಿವೇಶಗಳ ಜತೆಗೆ ಖಡಕ್‌ ಡೈಲಾಗ್‌ ಮೂಲಕ ಎರಡು ನಿಮಿಷದ ಟ್ರೇಲರ್‌ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಹಾಗೆಯೇ ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರವಾಗಿದ್ದರಿಂದ ಸೆಂಟಿಮೆಂಟ್‌, ಕಾಮಿಡಿ, ರೋಮಾನ್ಸ್‌ ನಂತಹ ಮಸಾಲೆ ಎಲಿಮೆಂಟ್ಸ್‌ ಕೂಡ ಇಲ್ಲಿ ಕ್ಯೂರಿಯಾಟಿ ಹುಟ್ಟಿಸುತ್ತಿವೆ. ನೋಡುಗರ ಪಾಲಿಗೆ ಇಲ್ಲಿ ಕುತೂಹಲ ಇರೋದು ಈ ಸಿನಿಮಾದ ಕಥೆಗೂ ಇಂದಿರಾ ಗಾಂಧಿ, ನಾಥೂರಾಮ್‌ ಘೋಡ್ಸೆ, ಸಾಹಿತಿ ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ ಅವರ ಹತ್ಯೆಯ ಪ್ರಕರಣಗಳಿಗೂ ಏನಾದರೂ ನಂಟು ಉಂಟಾ ಅಂತ.

ಯಾಕಂದ್ರೆ ಟ್ರೇಲರ್‌ ಶುರುವಾದ ತಕ್ಷಣೇ ಇವರ ಫೋಟೋಗಳನ್ನು ತೋರಿಸಲಾಗಿದೆ. ಅದರ ಉದ್ದೇಶವಾದರೂ ಏನು ? ಅಂತಹದೊಂದು ಕುತೂಹಲ ಟ್ರೇಲರ್‌ ನೋಡಿದವರಿಗೆ ಬಾರದೆ ಇರದು. ಮಜಾ ಅಂದ್ರೆ, ಈ ಚಿತ್ರದಲ್ಲಿ ಬರುವ ಯಾವುದೇ ಪಾತ್ರಗಳು, ಸನ್ನಿವೇಶಗಳಉ ಯಾವುದೇ ವ್ಯಕ್ತಿಗೆ, ಧರ್ಮಕ್ಕೆ ಸಂಬಂಧಿಸಿಲ್ಲ ಅಂತ ತೋರಿಸಲಾಗುತ್ತದೆ. ಹಾಗಿದ್ದು ಇಲ್ಲಿ ಇಂದಿರಾ ಗಾಂಧಿ, ಗೌರಿ ಲಂಕೇಶ್‌, ನಾಥೂರಾಮ್‌ ಘೋಡ್ಸೆ, ಎಂ. ಎಂ. ಕಲಬುರ್ಗಿ ಅವರ ಫೋಟೋಗಳು ಯಾಕೆ ಬಂದು ಹೋದವು? ಕುತೂಹಲದ ಈ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಬೇಕು.

Categories
ಸಿನಿ ಸುದ್ದಿ

ಯುಗಾದಿಗೆ ಕ್ರೇಜಿಸ್ಟಾರ್‌ ಸಾಮಾಜಿಕ ತಾಣಕ್ಕೆ ಎಂಟ್ರಿ! ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ಸಿಗ್ತಾರೆ ರವಿಚಂದ್ರನ್

ರವಿಚಂದ್ರನ್‌ ಕನ್ನಡ ಚಿತ್ರರಂಗ ಕಂಡ ಸ್ಟಾರ್‌ ನಟ. ಅವರು ಸ್ಟಾರ್ ನಟರಷ್ಟೇ ಅಲ್ಲ, ಯಶಸ್ವಿ ನಿರ್ದೇಶಕರು, ಸಕ್ಸಸ್‌ಫುಲ್‌ ನಿರ್ದೇಶಕರಷ್ಟೇ ಅಲ್ಲ, ಅವರೊಳಗೊಬ್ಬ ಒಳ್ಳೆಯ ಕಥೆಗಾರನಿದ್ದಾನೆ. ಒಟ್ಟಾರೆ, ಅವರೊಬ್ಬ ರೈಟರ್‌, ಮ್ಯೂಸಿಕ್‌ ಡೈರೆಕ್ಟರ್‌, ಲಿರಿಕ್‌ ರೈಟರ್‌ ಹೀಗೆ ಸಿನ್ಮಾ ವಿಭಾಗದಲ್ಲಿ ಎಲ್ಲವನ್ನೂ ಕರಗತ ಮಾಡಿಕೊಂಡವರು. ತಾವು ಅಂದುಕೊಂಡಿದ್ದನ್ನು ಮಾಡದೇ ಬಿಡದ ವ್ಯಕ್ತಿತ್ವ ಅವರದು. ತಮಗೆ ಇಷ್ಟವಿಲ್ಲದ್ದನ್ನು ನೇರವಾಗಿಯೇ ಹೇಳುವ ವ್ಯಕ್ತಿಯೂ ಹೌದು. ಈಗ ರವಿಚಂದ್ರನ್‌ ಅವರ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ? ಅವರು ಇನ್ನು ಮುಂದೆ ಸದಾ ಸುದ್ದಿಯಲ್ಲಿರುತ್ತಾರೆ! ಅರೇ, ಹೀಗಂದಾಕ್ಷಣ, ಇಷ್ಟು ದಿನ ಸುದ್ದಿಯಲ್ಲಿರಲಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತೆ. ಇದೆಲ್ಲವೂ ಹೌದು, ಅವರೀಗೆ ಸೋಶಿಯಲ್‌ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ.

ಅದರಲ್ಲೂ ಹೊಸ ವರ್ಷಕ್ಕೆ. ಅಂದರೆ ಯುಗಾದಿ ಹಬ್ಬಕ್ಕೆ. ಈಗಾಗಲೇ ಥೇಟ್‌ ಸಿನಿಮಾ ಶೈಲಿಯಲ್ಲೇ ಅವರು ಟೀಸರ್‌ ಬಿಡುಗಡೆ ಮಾಡುವ ಮೂಲಕ ತಾವು ಸೋಶಿಯಲ್‌ ಮೀಡಿಯಾಗೆ ಎಂಟ್ರಿ ಕೊಡುವ ಕುರಿತು ಹೇಳಿಕೊಂಡಿದ್ದರು. ಅದಕ್ಕೆ ಈಗ ಸಮಯ‌ ಬಂದಾಗಿದೆ.
ಹೌದು, ಕನ್ನಡದ ಬಹುತೇಕ ಸ್ಟಾರ್‌ ನಟರು ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಟ್ವಿಟ್ಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಅಂತೆಲ್ಲಾ ಸದ್ದು ಮಾಡುತ್ತಲೇ ಇದ್ದಾರೆ. ಇಷ್ಟು ದಿನ ಸುಮ್ಮನಿದ್ದರೂ ಸುದ್ದಿಯಾಗುತ್ತಿದ್ದ ರವಿಚಂದ್ರನ್‌ ಅವರು, ಇನ್ನು ಮುಂದೆ ಸದಾ ಸೋಶಿಯಲ್‌ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್‌ಗೆ ಸಿಗಲಿದ್ದಾರೆ. ಹೌದು, ಅವರೂ ಕೂಡ ಇನ್ಮುಂದೆ ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ತಾಣಗಳಲ್ಲಿ ಸಕ್ರಿಯರಾಗಲಿದ್ದಾರೆ.

ಆ ಮೂಲಕ ತಮ್ಮದೇ ಫ್ಯಾನ್ಸ್‌ ಜೊತೆ ಒಂದಷ್ಟು ವಿಷಯ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಹೊಸ ಚಿತ್ರಗಳ ಅಪ್‌ಡೇಟ್‌ ಸೇರಿದಂತೆ ಇತ್ಯಾದಿ ವಿನೂತನ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ. ರವಿಚಂದ್ರನ್‌ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಈಗ ರವಿಚಂದ್ರನ್‌ ಅವರು ಅಧಿಕೃತವಾಗಿ ಸೋಶಿಯಲ್‌ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ ಅಂದಮೇಲೆ, ಅವರನ್ನು ಸ್ವಾಗತಿಸೋಕೆ ಈಗಾಗಲೇ ಅವರ ಫ್ಯಾನ್ಸ್‌ ತುದಿಗಾಲ ಮೇಲೆ ನಿಂತಿದ್ದಾರೆ. ಇಷ್ಟು ವರ್ಷಗಳ ಕಾಲ ತೆರೆಯ ಮೇಲೆ ಭರಪೂರ ಮನರಂಜನೆ ಕೊಡುತ್ತಲೇ, ಆಗಾಗ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದ ರವಿಚಂದ್ರನ್‌, ಇನ್ನು ಮುಂದೆ ಸೋಶಿಯಲ್‌ ಮೀಡಿಯಾ ಮೂಲಕ ಸದಾ ಕಾಣಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಡಲು ಮುಂದಾಗಿದ್ದಾರೆ.

ಸಹಜವಾಗಿಯೇ ಇದು ಅವರ ಅಭಿಮಾನಿಗಳಿಗೆ ಸಂತಸ ಕೊಟ್ಟಿದೆ. ರವಿಚಂದ್ರನ್‌ ಅವರು ಏನೇ ಮಾಡಿದರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಈಗ ಸೋಶಿಯಲ್‌ ಮೀಡಿಯಾದಲ್ಲಿ ಎಂಟ್ರಿಯಾಗುವ ಸುದ್ದಿ ಕೂಡ ಅಷ್ಟೇ ಸ್ಪೆಷಲ್‌ ಆಗಿದೆ. ಮುಂದಿನ ದಿನಗಳಲ್ಲಿ ರವಿಚಂದ್ರನ್‌ ತಮ್ಮ ಹೊಸ ಆಲೋಚನೆಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ ಕೆಲ ಪ್ರಶ್ನೆಗಳಿಗೂ ಉತ್ತರವಾಗಲಿದ್ದಾರೆ ಎಂಬುದೇ ಅವರ ಅಭಿಮಾನಿ ಬಳಗಕ್ಕೆ ಖುಷಿ. ಅದೇನೆ ಇರಲಿ, ರವಿಚಂದ್ರನ್‌ ಅಂದರೆ, ನಿಷ್ಕಲ್ಮಷ ಪ್ರೀತಿ ಕಾಣುತ್ತೆ. ಅದು ತೆರೆ ಮುಂದೆಯೂ ಹೌದು, ತೆರೆ ಹಿಂದೆಯೂ ಹೌದು. ಅವರನ್ನು ಆಳವಾಗಿ ಬಲ್ಲವರಿಗೆ ಮಾತ್ರ ರವಿಚಂದ್ರನ್‌ ವ್ಯಕ್ತಿತ್ವ ಏನು, ಹೇಗೆ ಎಂಬುದು ಗೊತ್ತು. ಸದ್ಯ ಏಪ್ರಿಲ್‌ ೧೩ರಂದು ೯ ಗಂಟೆಗೆ ರವಿಚಂದ್ರನ್‌ ಸೋಶಿಯಲ್‌ ಮೀಡಿಯಾಗೆ ಗ್ರಾಂಡ್‌ ಎಂಟ್ರಿಕೊಡಲಿದ್ದಾರೆ. ಅಂದಹಾಗೆ, ರವಿಚಂದ್ರನ್ ಸದ್ಯ ಬಹುನಿರೀಕ್ಷೆಯ ಕನ್ನಡಿಗ ಸಿನಿಮಾ ಮುಗಿಸಿದ್ದಾರೆ. ಬಿ.ಎಂ ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಗುಣಭದ್ರ ಪಾತ್ರ ಮಾಡಿದ್ದಾರೆ. ಅವರ ಮತ್ತೊಂದು ಸಿನಿಮಾ “ರವಿ ಬೋಪಣ್ಣ” ಸಿನಿಮಾ ಕೂಡ ಬರಲು ಸಜ್ಜಾಗುತ್ತಿದೆ.

Categories
ಸಿನಿ ಸುದ್ದಿ

ಅರ್ಜುನ್‌ ರೆಡ್ಡಿ ಅಲ್ಲ, ಈತ ಮಾಸ್ ಅಂಡ್ ಕ್ಲಾಸ್ ನ ಪಕ್ಕಾ ಪವರ್ ಫುಲ್ ಅರ್ಜುನ್ ಗೌಡ !

ನಾನು ಪಕ್ಕಾ ಮಾಸ್ ಅಂಡ್ ಕ್ಲಾಸ್ ಪವರ್‌ ಫುಲ್ ಗೌಡ…..ಅರೆ, ಇದೇನು ಗೌಡ್ರು ದರ್ಬಾರ್‌ ಶುರುವಾಯ್ತು ಅಂತ ಅನ್ನೊಂಡ್ರಾ, ಇಲ್ಲ. ಇದು ಅರ್ಜುನ್‌ ಗೌಡನ ಘರ್ಜನೆ. ಹೌದು, ಸ್ಯಾಂಡಲ್‌ ವುಡ್‌ ನಲ್ಲಿ ಅರ್ಜುನ್‌ ಗೌಡನ ಹವಾ ಶುರುವಾಗಿದೆ. ತಾನು ಬರೀ ಗೌಡ ಅಲ್ಲ, ಪಕ್ಕಾ ಕ್ಲಾಸ್-ಮಾಸ್‌ ಪವರ್‌ಫುಲ್‌ ಗೌಡ ಅಂತಿದ್ದಾನೆ ಈತ. ಅದೇ ಕಾರಣಕ್ಕೆ ಅದರ ಎರಡು ನಿಮಿಷಗಳ ಟ್ರೇಲರ್‍.‌ ಅನ್ನ ಬೆಂದಿದೆ ಅನ್ನೋದಿಕ್ಕೆ ಇಡೀ ಪಾತ್ರೆಗೇ ಕೈ ಹಾಕಬೇಕಿಲ್ಲ. ಅದರ ಒಂದ್‌ ಅಗುಳು ಸಾಕಂತೆ. ಹಾಗೆಯೇ ಈ ಅರ್ಜುನ್‌ ಗೌಡ ಹವಾ ಹೆಂಗಿದೆ ಅಂತ ಗೊತ್ತಾಗುವುದಿಕ್ಕೆ ಇಡೀ ಟ್ರೇಲರ್‌ ನೋಡಿ ಡಿಸೈಡ್‌ ಮಾಡಬೇಕಿಲ್ಲ, ಅದರ ಒಂದ್ ಆಕ್ಷನ್‌ ಸೀನ್‌ ಸಾಕು. ಟ್ರೇಲರ್‌ ಸಖತ್‌ ಖಡಕ್‌ ಆಗಿ ಮೂಡಿ ಬಂದಿದೆ. ಆಕ್ಷನ್‌ ಫ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಂದ್ರೆ ಹೆಂಗಿರಬೇಕು ಅಂತ ಅವರ ಫ್ಯಾನ್ಸ್‌ ಬಯಸ್ತಾರೋ ಆ ರೀತಿಯಲ್ಲಿ ಸಿನಿಮಾ ಕೂಡ ಬಂದಿದೆ ಅನ್ನೋದಿಕ್ಕೆ ಅದರ ಸ್ಯಾಂಪಲ್‌ ಈ ಟ್ರೇಲರ್.

ಅರ್ಜುನ್‌ ಗೌಡ ಅಂದಾಕ್ಷಣ, ಇದು ತೆಲುಗಿನ ಅರ್ಜುನ್‌ ರೆಡ್ಡಿಯ ಕಾಫಿ ಅಂತ ಕೆಲವ್ರು ಮಾತನಾಡಿದ್ರಂತೆ. ಆದ್ರೆ ಈ ಗೌಡ, ರೆಡ್ಡಿಗೂ ಮೀರಿದ ಪಕ್ಕಾ ಮಾಸ್‌ ಅಂಡ್ ಕ್ಲಾಸ್‌ ಮಿಶ್ರಣದಲ್ಲಿ ಎದ್ದು ಬಂದವ ಅಂತ ತೋರಿಸಿದೆ ಈ ಟ್ರೇಲರ್.‌ ಬದಲಾದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಆಕ್ಷನ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಹೇಗಿರಬೇಕೋ ಹಾಗೆಯೇ ಅವರನ್ನು ಹೊಸ ಲುಕ್‌ ನಲ್ಲಿ ತೆರೆ ಮೇಲೆ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಲಕ್ಕಿ ಶಂಕರ್.‌ ನಿರ್ದೇಶಕ ಲಕ್ಕಿ ಶಂಕರ್‌ ಹಿಂದೆ “ನೈಂಟಿ’ ಹೆಸರಿನ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಅದೊಂದು ಪಕ್ಕಾ ಕಾಮಿಡಿ ಪ್ರಧಾನ ಸಿನಿಮಾ. ಆ ಗೆರೆಯನ್ನು ಈಗವರು ಕಂಪ್ಲೀಟ್‌ ದಾಟಿಕೊಂಡೆ ಈ ಸಿನಿಮಾ ಮಾಡಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾ. ಮೈ ನವಿರೇಳಿಸುವ ಆಕ್ಷನ್‌ ಸೀನ್‌ ಗಳ ಜತೆಗೆ ಕಾಮಿಡಿ, ಸೆಂಟಿಮೆಂಟ್‌, ರೋಮಾನ್ಸ್‌ ಎನ್ನುವ ಎಲಿಮೆಂಟ್ಸ್ ಗಳನ್ನು ಪ್ರೇಕ್ಷಕನಿಗೆ ಉಣಬಡಿಸಬೇಕೆನ್ನುವ ಛಲದಲ್ಲಿ ಈ ಸಿನಿಮಾ ಮಾಡಿದಂತಿದೆ.

ಟ್ರೇಲರ್‌ ಆರಂಭವೇ ಒಂದು ಕಥೆ ಹೇಳುತ್ತೆ. ಕನ್ನಡ ಎಕ್ಸ್ ಪ್ರೆಸ್ ಚಾನೆಲ್‌ ನ ಮುಖ್ಯಸ್ಥರ ಕೊಲೆ ಆಗುತ್ತೆ. ಆ ಮೂಲಕ ಅಲ್ಲಿ ಹೊಡೆದಾಟ, ಹುಡುಕಾಟಗಳು ಶುರುವಾಗುತ್ತವೆ. ಅದರ ಸುತ್ತ ಒಂದಷ್ಟು ಪ್ರೇಮ, ಕಾಮ, ವಿರಹ, ಕಾಮಿಡಿ, ಜತೆಗೆ ಸೆಂಟಿಮೆಂಟ್‌ ಎಳೆಗಳ ಮಸಾಲೆ ಹಾಕಲಾಗಿದೆ. ಟ್ರೇಲರ್ ಔಟ್‌ ಲುಕ್‌ ಇದಾದರೆ, ನಿರ್ಮಾಣ ಅಂತ ಬಂದಾಗ ಈ ಸಿನಿಮಾದ ಮೇಲೆ ದೊಡ್ಡ ಕುತೂಹಲ ಸಹಜವೇ. ಯಾಕಂದ್ರೆ ಇದು ರಾಮು ನಿರ್ಮಾಣದ ಸಿನಿಮಾ. ಮೊದಲ ಬಾರಿಗೆ ಕೋಟಿ ಸುರಿದು ಸಿನಿಮಾ ಮಾಡಿದವರು ರಾಮು. ಹಾಗಾಗಿ ಈ ಸಿನಿಮಾದಲ್ಲಿ ಅದ್ದೂರಿ ತನಕ್ಕೆ ಕೊರತೆ ಇರೋದಿಲ್ಲ ಅನ್ನೋದನ್ನು ಈ ಟ್ರೇಲರ್‌ ಕೂಡ ತೋರಿಸಿದೆ.

ಟೈಟಲ್‌ ಫೋರ್ಸಿಗೆ ತಕ್ಕಂತೆ ಇದರ ತಾರಾಗಣವೂ ಕೂಡ ದೊಡ್ಡದ್ದು. ಪ್ರಜ್ವಲ್‌ ದೇವರಾಜ್‌, ಪ್ರಿಯಾಂಕಾ ತಿಮ್ಮೇಶ್‌ ಚಿತ್ರದ ಮೈನ್‌ ಅಟ್ರ್ಯಾಕ್ಷನ್.‌ ಅವರ ಜತೆಗೆ ರಾಹುಲ್‌ ದೇವ್‌, ಸ್ಪರ್ಶಾ ರೇಖಾ, ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್‌ ಶೆಟ್ಟಿ, ದಿನೇಶ್‌ ಮಂಗಳೂರು ಮತ್ತಿತರರು ಇಲ್ಲಿದ್ದಾರೆ. ಟ್ರೇಲರ್‌ ಕುತೂಹಲಕಾರಿ ಆಗಿದೆ. ಪ್ರಜ್ವಲ್‌ ತಮ್ಮ ಎಂದಿನ ಮಾಸ್‌ ಲುಕ್‌ ಜತೆಗೆಯೇ ಒಂದಷ್ಟು ಸೆಂಟಿಮೆಂಟ್‌, ಹಾಗೆಯೇ ರೋಮಾನ್ಸ್‌ ದೃಶ್ಯಗಳ ಸಮ್ಮಿಳಿತದ ಹೊಸ ಕಥೆಯಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನುವ ಭರವಸೆ ಹುಟ್ಟು ಹಾಕಿದೆ ಈ ಟ್ರೇಲರ್.‌ ಮುಂದಿನದು ಚಿತ್ರದ ರಿಲೀಸ್‌ ನಿರೀಕ್ಷೆ.

Categories
ಸಿನಿ ಸುದ್ದಿ

ನಟ ಸಾರ್ವಭೌಮನಿಲ್ಲದ ಹದಿನೈದು ವರ್ಷ! ಅಣ್ಣಾವ್ರನ್ನ ಪ್ರೀತಿಯಿಂದ ಸ್ಮರಿಸಿದ ಅಭಿಮಾನಿ ದೇವರು


ಕನ್ನಡ ಚಿತ್ರರಂಗದ ದಂತಕಥೆ ಡಾ.ರಾಜಕುಮಾರ್‌ ಎವರ್‌ಗ್ರೀನ್‌ ನಟ. ಏಪ್ರಿಲ್‌ ೧೨ ಅವರು ಅಗಲಿದ ದಿನ. ಅವರಿಲ್ಲದೆ ಹದಿನೈದು ವರ್ಷಗಳು ಉರುಳಿವೆ. ಆದರೆ, ಇಂದಿಗೂ ಡಾ.ರಾಜಕುಮಾರ್‌ ಕನ್ನಡಿಗರ ಆರಾಧ್ಯ ದೈವ. ಸದಾ ಕನ್ನಡ ಜನರ ಪ್ರೀತಿಯ ರಾಜರಾಗಿರುವ ಡಾ.ರಾಜಕುಮಾರ್‌ ಅವರನ್ನು ಕಳಕೊಂಡ ದಿನವಾದ್ದರಿಂದ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ, ಪೂಜಿಸಿದ್ದಾರೆ. ಇನ್ನೂ ಕೆಲವರು ದೂರದ ಊರುಗಳಿಂದಲೂ ಆಗಮಿಸಿ, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸ್ಮಾರಕಕ್ಕೆ ನಮಿಸುತ್ತಿದ್ದಾರೆ.

ಅಣ್ಣಾವ್ರ ಕುಟುಂಬ ಕೂಡ ಪ್ರತಿವರ್ಷದಂತೆ ಅಣ್ಣಾವ್ರ ಸ್ಮಾರಕ ಬಳಿ ತೆರಳಿ ಪೂಜಿಸಿದೆ. ಅವರ ಅಭಿಮಾನಿಗಳು ರಾಜಕುಮಾರ್‌ ಅವರ ಭಾವಚಿತ್ರ ಹಿಡಿದು “ಮತ್ತೆ ಹುಟ್ಟಿ ಬಾ ಅಣ್ಣಾ” ಎಂದು ಪ್ರೀತಿಯಿಂದಲೂ ಕೂಗಿದರೆ, ಇನ್ನೂ ಕೆಲವು ಅಭಿಮಾನಿಗಳು ಅವರ ಹಾಡುಗಳ ಮೂಲಕ ಮತ್ತೆ ಮತ್ತೆ ಸ್ಮರಿಸುತ್ತಲೇ ಇದ್ದಾರೆ.
.ರಾಜಕುಮಾರ್‌ ಅವರು ಒಂದೇ ವರ್ಗದವರಿಗೆ ಸೀಮಿತರಾದವರಲ್ಲ. ಅವರನ್ನು, ಕ್ರೀಡೆ, ರಾಜಕೀಯ ಹೀಗೆ ಹಲವು ಕ್ಷೇತ್ರಗಳ ಗಣ್ಯರೂ ಸ್ಮರಿಸುತ್ತಾರೆ.

ಅಷ್ಟರಮಟ್ಟಿಗೆ ಎಲ್ಲರ ಮನವನ್ನು ಸೂರೆಗೊಂಡವರು. ಅಂದಹಾಗೆ, ಡಾ.ರಾಜಕುಮಾರ್‌ ಅವರನ್ನು ಹಲವು ರಾಜಕೀಯ ಗಣ್ಯರು ಸ್ಮರಿಸಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ಮಾಪಕ, ನಿರ್ದೇಶಕಿಯರೂ ಅಣ್ಣಾವ್ರು ಸ್ಮರಿಸಿದ್ದಾರೆ.
ಡಾ.ರಾಜಕುಮಾರ್‌ ಅಂದಾಕ್ಷಣ, ಅವರ ಹಲವು ಸಾಮಾಜಿಕ ಸಂದೇಶವಿರುವ ಸಿನಿಮಾಗಳು ಕಣ್ಣೆದುರಿಗೆ ಬರುತ್ತವೆ. ಅವರ ಸಿನಿಮಾಗಳು ಅದೆಷ್ಟೋ ಮನಸ್ಸುಗಳನ್ನು ಒಂದು ಮಾಡಿವೆ. ಅದೆಷ್ಟೋ ಜನರಲ್ಲಿ ಹೊಸ ಬದಲಾವಣೆ ತಂದಿವೆ. ಇಂದಿಗೂ ಸಿನಿಮಾ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡವರೂ ಇದ್ದಾರೆ. ಕನ್ನಡಕ್ಕೆ ಏನಾದರೂ ತೊಂದರೆ ಆಗುತ್ತೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಅಣ್ಣಾವ್ರು ಹಿಂದೆ ಮುಂದೆ ನೋಡದೆ ಕನ್ನಡದ ಪರ ಧ್ವನಿ ಎತ್ತುತ್ತಿದ್ದರು. ಸದಾ ಕನ್ನಡಿಗರನ್ನು ಅಭಿಮಾನಿ ದೇವರು ಎಂದು ಕರೆಯುತ್ತಿದ್ದ ಅವರ ಪುಣ್ಯತಿಥಿ ದಿನದಂದು ಅಭಿಮಾನಿ ಬಳಗ ನಮನ ಸಲ್ಲಿಸಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮೂಲಕ ”ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಗೆ ನನ್ನ ನಮನಗಳು” ಎಂದು ಹೇಳಿದ್ದಾರೆ. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಹ ಟ್ವೀಟ್‌ ಮೂಲಕ ಸ್ಮರಿಸಿದ್ದಾರೆ.
ಇನ್ನು, ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, ತಮ್ಮ ಟ್ವೀಟ್‌ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಹೆಚ್‌ಎಎಲ್‌ ಏರ್‌ಪೋರ್ಟ್‌ಗೆ ಅಣ್ಣಾವ್ರ ಹೆಸರನ್ನು ಶಿಫಾರಸ್ಸು ಮಾಡಿ. ಅಣ್ಣಾವ್ರ ಹೆಸರಿಟ್ಟ ಹೆಗ್ಗಳಿಕೆ ನಿಮ್ಮದಾಗುತ್ತದೆ” ಎಂದು ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ಓಟಿಟಿ ಬ್ರೊಕರ್ಸ್ ಮಾಫಿಯಾ ವಿರುದ್ಧ ಧ್ವನಿ ಎತ್ತಿದ ಚಿತ್ರರಂಗ: ಸುಲಿಗೆಯ ನಾನಾ ರೂಪ ಬಹಿರಂಗಗೊಳಿಸಿದ ನಿರ್ಮಾಪಕರು!

ಓಟಿಟಿ ಬ್ರೋಕರ್ಸ್ ವಿರುದ್ಧ ಚಿತ್ರೋದ್ಯಮ ಸೊಲ್ಲೆತ್ತಿದೆ. ಕೆಲವು ನೊಂದ ನಿರ್ಮಾಪಕರು ತಮಗಾದ ಅನ್ಯಾಯದ ವಿರುದ್ಧ ಇದೀಗ ಧ್ವನಿ ಎತ್ತಿದ್ದಾರೆ. ಈ ಬ್ರೋಕರ್ಸ್ ದಂಧೆಗೆ ಕಡಿವಾಣ ಬೀಳದಿದ್ದರೆ, ಕೊರೋನಾ ಎಂಬ ಕೆನ್ನಾಲಿಗೆಯಲ್ಲಿ ಬೆಂದ ನಿರ್ಮಾಪಕರಿಗೆ ಇನ್ನಷ್ಟು ಮೋಸ, ಮತ್ತಷ್ಟು ಅನ್ಯಾಯ ಖಚಿತ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ”ದ ಚಿತ್ರದ ನಿರ್ಮಾಪಕ ಕಿಶೋರ್‌ ಕುಮಾರ್‌ ಅವರು ಈಗ ತಮಗಾದ ಅನ್ಯಾಯವನ್ನು ಹೊರ ಹಾಕಿದ್ದಾರೆ.

ವೆಂಕಟೇಶ್ ಆಚಾರ್ಯ ಎಂಬಾತ ತಮಗೆ ಮೋಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಈ ಓಟಿಟಿ ಮೋಸದ ಜಾಲವಾದರೂ ಹೇಗೆ ? ಆ ಬಗ್ಗೆ ನಾವ್ ನಿಮಗೆ ಹೇಳುವ ಮುನ್ನ ಒಟಿಟಿ ಅಂದರೇನು? ಇದಕ್ಕಿಂದ್ದಂತೆ ಅದು ಹೇಗೆಲ್ಲ ಹುಟ್ಟಿಕೊಂಡಿತು, ಯಾರೆಲ್ಲ ಇದರಲ್ಲಿದ್ದಾರೆ ಎನ್ನುವುದೇ ಒಂದು ಇಂಟರೆಸ್ಟಿಂಗ್ ಸ್ಟೋರಿ. ಮೊದಲು ಆ ಕಥೆಯನ್ನೊಮ್ಮೆ ಕೇಳಿ.

ಓವರ್ ದಿ ಟಾಪ್ : ಓಟಿಟಿ ಅಂದರೆ ಇದೊಂದು ಡಿಜಿಟಲ್ ಪ್ಲಾಟ್ ಫಾರ್ಮ್. ಓವರ್ ದಿ ಟಾಪ್ ಎನ್ನುವುದು ಇದರ ಪೂರ್ಣಾರ್ಥ (ಫುಲ್ ಫಾರ್ಮ್). ಅಂದರೆ ಅಂತಾರ್ಜಾಲದಲ್ಲಿ ವೆಬ್ ಸೀರಿಸ್ ಅಥವಾ ಚಲನಚಿತ್ರಗಳನ್ನು ನಿಗದಿತ ದರಗಳ ಮೇಲೆ ಗ್ರಾಹಕರಿಗೆ ಒದಗಿಸುವ ಒಂದು ಸಾಧನ. ಸದ್ಯಕ್ಕೀಗ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ಪ್ಲಾಟ್ ಫಾರ್ಮ್‌ಗೆ ಬಹುಬೇಡಿಕೆ ಬಂದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಿನಿಮಾ ಅಥವಾ ವೆಬ್ ಸೀರಿಸ್ ನಿರ್ಮಾಪಕ‌ರ ಆದ್ಯತೆಗಳು ಕೂಡ ಈಗ ಓಟಿಟಿ ಕಡೆಗೆ ಹೆಚ್ಚಿವೆ. ಹಾಗೆಯೇ ಸ್ಯಾಟಲೈಟ್ ಟಿವಿ ಚಾನೆಲ್‌ಗಳು ಕೂಡ ಓಟಿಟಿ ಕೆಳಗಡೆಯೇ ಬರುತ್ತಿವೆ.
ಒಂದಲ್ಲ ಎರಡಲ್ಲ, ಹತ್ತಾರು: ಓಟಿಟಿನಲ್ಲೀಗ ಸದ್ಯಕ್ಕೆ ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಲೀಡಿಂಗ್‌ನಲ್ಲಿವೆ. ಇವು ಕನ್ನಡದ ಸ್ಟಾರ್ ಸಿನಿಮಾಗಳ ಜತೆಗೆ ಹೊಸಬರ ಸಿನಿಮಾಗಳನ್ನು ಖರೀದಿಸುತ್ತಿವೆ. ಅಂತಿಮವಾಗಿ ಅವುಗಳಿಗೂ ಲಾಭವೇ ಟಾರ್ಗೆಟ್ ಆಗಿರುವುದರಿಂದ ಕಂಟೆಟ್ ಕಡೆಗೂ‌ ಹೆಚ್ಚು ಆದ್ಯತೆ ನೀಡಿವೆ. ಇದರ ಜತೆಗೆ ಸಾಕಷ್ಟು ಪ್ಲಾಟ್ ಫಾರ್ಮ್‌ಗಳು ಹುಟ್ಟಿಕೊಂಡಿವೆ. ನಮ್ದು ಕನ್ನಡದ್ದೇ ಅಂತ ಹೇಳಿಕೊಂಡ ಓಟಿಟಿಗಳು ಈಗ ಎಲ್ಲೆಡೆ ಹುಟ್ಟಿಕೊಂಡಿವೆ. ಕೂ, ಕನ್ನಡ ಫ್ಲಿಕ್ಸ್, ಫಿಲಂ ಬಜಾರ್… ಹೀಗೆ ಲೆಕ್ಕ ಹಾಕಿದರೆ‌ ನೂರಾರು ಇವೆ. ಇವುಗಳಿಗೆ ಸಿನಿಮಾ‌ ಬೇಕು. ವೆಬ್‌ಸೀರಿಸ್‌ಗಳು ಬೇಕು. ಅವರು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ, ಅವರಿಗೆಲ್ಲ ನಿಮ್ಮ ಸಿನಿಮಾ ಮಾರಾಟ ಮಾಡಿಕೊಡ್ತೀವಿ ಅಂತ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೋಕರ್ಸ್ ಮಾಫಿಯಾವೇ ಈಗ ತಲೆ ಎತ್ತಿದೆ ಎಂಬುದು ವಿಶೇಷ. ಅದರಲ್ಲೂ ಇವರದು ಸುಲಿಗೆ ದಂಧೆ ಅಂದರೆ ನಂಬಲೇಬೇಕು. ಹಾಗಾದರೆ, ಅದು ಹೆಂಗೆ?

ಓಟಿಟಿ‌ ಓನರ್‌ಗಳೆಲ್ಲ ಇವರ ಮಾವಂದಿರು!
ನಿಜ, ಇದು ವ್ಯವಹಾರ. ನಿರ್ಮಾಪಕರಿಗೆ ತಮ್ಮ ಸಿನಿಮಾ ಮಾರಾಟವಾಗಬೇಕು, ಓಟಿಟಿನವರಿಗೆ ಸಿನಿಮಾ ಬೇಕು. ಇವರ ಮಧ್ಯೆ ವ್ಯವಹಾರಕ್ಕೆ ಅಂತ ಈಗ ಲೆಕ್ಜವಿಲ್ಲದಷ್ಟು ಮಂದಿ ಹುಟ್ಟಿಕೊಂಡಿದ್ದಾರೆ. ಇವರೆಲ್ಲ ಯಾರು, ಎಲ್ಲಿಂದ ಬಂದರೂ? ಯಾರೊಬ್ಬರಿಗೂ ಗೊತ್ತಿಲ್ಲ. ಆದರೆ ಅವರೆಲ್ಲ ಅಮೇಜಾನ್‌ನವರು ಭಾವಂದಿರು, ನೆಟ್ ಫ್ಲಿಕ್ಸ್ ತಮಗೆ ಅಳಿಯಂದರು, ಉಳಿದವರೆಲ್ಲ ಭಾವಂದಿರು ಅಂತೆಲ್ಲ ತಮಗೆ ತಾವೇ ಅಂದುಕೊಂಡು ಫೋಸು ಕೊಡುತ್ತಾರೆ. ಇದು ರಂಗುರಂಗಿನ ದುನಿಯಾ ಆಗಿದ್ದರಿಂದ ಕೆಲವು ನಿರ್ಮಾಪಕರು ಕೂಡ ಇದು ನಿಜವೇ ಇರಬೇಕೆಂದು ನಂಬುತ್ತಾರೆ. ಕೊನೆಗೆ ಯಾರಾದರೂ ಇರಲಿ, ತಮ್ಮ ಸಿನಿಮಾ ಒಳ್ಳೆಯ ರೇಟ್‌ಗೆ ಸೇಲ್ ಆಗಿಬಿಟ್ಟರೆ ಸಾಕಪ್ಪ ಅಂತಂದುಕೊಳ್ಳುತ್ತಾರೆ. ಹಾಗಾಗಿ ಅದೇ ಅವರಿಗೆ ಬಂಡವಾಳ.

ಹೇಳೋದೊಂದು, ಮಾಡೋದೇ ಇನ್ನೊಂದು: ಇದು ಪಕ್ಕಾ ಮೋಸದ ವ್ಯವಹಾರ.‌ ಬ್ರೋಕರ್‌ಗಳ್ಯಾರು ನಿರ್ಮಾಪಕರನ್ನು ಅಮೇಜಾನ್, ನೆಟ್ ಫ್ಲಿಕ್ಸ್ ಅಥವಾ ಇನ್ನಾವುದೇ ಓಟಿಟಿ ಮಾಲೀಕರ ಹತ್ತಿರ ಕರೆದುಕೊಂಡು ಹೋಗೋದಿಲ್ಲ‌ ಅದನ್ನೇ ಬಂಡವಾಳ ಮಾಡಿಕೊಳ್ಳುವ ಬ್ರೋಕರ್ಸ್ ಅಲ್ಲಿ ತನ್ನದೇ ವ್ಯವಹಾರ ಮಾಡ್ತಾನೆ. ಹೊರಗೆ ಬಂದು ನಿರ್ಮಾಪಕನಿಗೆ ಇನ್ನೊಂದು ವ್ಯವಹಾರದ ಮೊತ್ತ ಹೇಳ್ತಾನೆ. ಟಿವಿ ರೈಟ್ಸ್ ಸೇಲ್ ಮಾಡಿಕೊಡ್ತೀನಿ ಅಂದವನು ಕೂಡ ಇದನ್ನೇ ಮಾಡ್ತಾನೆ. ಚಾನೆಲ್ ಹೆಡ್ ಬಳಿ ಮಾತನಾಡೋದೇ ಒಂದು, ನಿರ್ಮಾಪಕನಿಗೆ ಹೇಳೋದೇ ಇನ್ನೋಂದು. ಇನ್ನು ಕೆಲವರು ಸಿನಿಮಾ ಟಿವಿ ರೈಟ್ಸ್, ಓಟಿಟಿ ರೈಟ್ಸ್ ಸೇಲ್ ಅಗಿದ್ದರೂ, ನಿರ್ಮಾಪಕರ ಬಳಿ ‌ಆಗಿಲ್ಲ ಅಂತ ಸುಳ್ಳು ಹೇಳಿ ಯಾಮಾರಿಸಿದ್ದು ಇದೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ‌ ಕಿಶೋರ್ ತಮಗಾದ ಅನ್ಯಾಯವನ್ನ ಇಲ್ಲಿ ಹೊರ ಹಾಕಿದ್ದಾರೆ. ಹಾಗೆಯೇ ಅವರ ಪರವಾಗಿ ಒಂದಷ್ಟು ನಿರ್ಮಾಪಕರು ಧ್ವನಿ ಎತ್ತಿದ್ದಾರೆ.

ಪೆನ್ಸಿಲ್‌ ಬಾಕ್ಸ್‌ಗೂ ಸಮಸ್ಯೆ!
ಇವರ ಮಾತಿಗೆ ಧ್ವನಿಗೂಡಿಸಿರುವ ನಿರ್ಮಾಪಕ ನಾಗೇಶ್‌ ಕುಮಾರ್‌ ಕೂಡ ಇಂತಹ ಓಟಿಟಿ ಹೆಸರು ಹೇಳಿಕೊಂಡು ಬರುವ ಸುಳ್ಳು ಬ್ರೋಕರ್ಸ್‌ ಮೇಲೆ ಹರಿಹಾಯ್ದಿದ್ದಾರೆ. “ಈ ಓಟಿಟಿಗೆ ಸಿನಿಮಾಗಳನ್ನು ಮಾರಾಟ ಮಾಡಿಕೊಡ್ತೀವಿ ಅನ್ನುವವರ ಬಗ್ಗೆ ನಿರ್ಮಾಪಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ವೆಂಕಟೇಶ್‌ ಆಚಾರ್ಯ ಎಂಬಾತನೊಬ್ಬನಾದರೆ, ಕೃಷ್ಣ ಎಂಬಾತ “ಪೆನ್ಸಿಲ್‌ ಬಾಕ್ಸ್” ಸಿನಿಮಾ ರೀ ರಿಲೀಸ್‌ ಮಾಡಿಕೊಡ್ತೀನಿ ಅಂದಿದ್ದಾನೆ. ನಿರ್ಮಾಪಕರಿಗೂ ಇದು ಸಮಸ್ಯೆಯೇ. ಇಲ್ಲಿ ನ್ಯಾಯವಾಗಿರುವವರಿಗೆ ಸಂಕಷ್ಟವೇ ಜಾಸ್ತಿ. ಜಾಸ್ತಿ ತುಂಬಿಕೊಂಡಿದ್ದಾರೆ. ಡಬ್ಬಿಂಗ್‌ ರೈಟ್ಸ್‌ ಆ ರೈಟ್ಸ್‌ ಈ ರೈಟ್ಸ್‌ ಅಂತಾರೆ ತುಂಬಾನೇ ಮೋಸವಿದೆ ಇಲ್ಲಿ. ಆ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕು. ನೇರವಾಗಿಯೇ ಸಂಬಂಧಿಸಿದವರನ್ನು ಸಂಪರ್ಕಿಸಿ ತಮ್ಮ ಸಿನಿಮಾದ ಹಕ್ಕು ಮಾರಾಟ ಮಾಡಿ ಅಂದಿರುವ ನಾಗೇಶ್‌ ಕುಮಾರ್, ನನಗೂ ಇಂತಹ ಅನುಭವ ಆಗಿದೆ. ಇಲ್ಲಿ ಹೊಸ ನಿರ್ಮಾಪಕರು ಬಂದರೆ, ಅವರನ್ನು ಯಾಮಾರಿಸುವ ಮಂದಿ ಹೆಚ್ಚಿದ್ದಾರೆ. ಮೊದಲೇ ಕೊರೊನಾ ಹಾವಳಿಗೆ ತತ್ತರಿಸಿರುವ ನಿರ್ಮಾಪಕರಿಗೆ ಇಂತಹ ಮಾಫಿಯಾದವರು ಹುಟ್ಟುಕೊಂಡಿದ್ದಾರೆ‌. ಈ ಕುರಿತಂತೆ ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಬೇಕು ಅಂತ ನಿರ್ಧರಿಸಿದ್ದೇನೆ. ಈ ರೀತಿ ಮೋಸ ಹೋಗಿರುವ ನಿರ್ಮಾಪಕರೆಲ್ಲರೂ ಈ ವಿರುದ್ಧ ಧ್ವನಿ ಎತ್ತಬೇಕು ಅನ್ನೋದು ಅವರ ಮಾತು.

ಮಂಡಳಿ ಸಭೆ: ಸಂಬಂಧ ಒಂದಷ್ಟು ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ್ದು, ಶನಿವಾರ ಸಭೆ ಕೂಡ ನಡೆಸಲಾಗಿದೆ. ಸಭೆಯಲ್ಲಿ ನಾಗೇಶ್‌ ಕುಮಾರ್‌, ಕುಮಾರ್‌, ಕಿಶೋರ್‌ , ಶ್ರೀನಿವಾಸ್ ಅವರು ಈ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು, ಕುಮಾರ್‌ ಎಸ್‌, ನಾಗೇಂದ್ರ ಅರಸ್ ‌ ಮೊದಲಿನಿಂದಲೂ ಈ ವಿರುದ್ಧ ‌ ಧ್ವನಿ ಎತ್ತಿದ್ದಾರೆ. ಮಂಡಳಿಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದ್ದು, ನಿರ್ಮಾಪಕರು ಹೀಗೆ ಇದ್ದರೆ ಮೋಸ ಮಾಡುತ್ತಲೇ ಇರುತ್ತಾರೆ. ಎಲ್ಲಾ ನಿರ್ಮಾಪಕರಿಗೂ ಮಂಡಳಿ ಜೊತೆ ನಿಲ್ಲಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಯಾರು ಈ ವೆಂಕಟೇಶ್ ಆಚಾರ್ಯ : ವೆಂಕಟೇಶ್ ಆಚಾರ್ಯ ಎಂಬಾತ ಎರಡು ವರ್ಷಗಳ ಹಿಂದೆ “ಆಪರೇಷನ್‌ ನಕ್ಷತ್ರ” ಸಿನಿಮಾವನ್ನು ೧೮ ಲಕ್ಷಕ್ಕೆ ಓಟಿಟಿಗೆ ಅಂತ ಖರೀದಿ ಮಾಡಿದ್ದರು. ಆ ಸಂಬಂಧ ಅಗ್ರಿಮೆಂಟ್ ಕೂಡ ಆಗಿತ್ತು. ಆ ಪ್ರಕಾರ ಆತ ಅರವತ್ತು ದಿನಗಳಿಗೆ ಅಷ್ಟು ಅಮೌಂಟ್ ಕ್ಲಿಯರ್ ಮಾಡಬೇಕಿತ್ತು. ಇದಾಗಿ ಒಂದಷ್ಟು ದಿನಕ್ಕೆ ಆ ಚಿತ್ರ ಅಮೇಜಾನ್‌ನಲ್ಲೂ ಬಂತು. ಆದರೆ ನಮಗೆ ಬರಬೇಕಿದ್ದ ದುಡ್ಡು ಸರಿಯಾದ ಸಮಯಕ್ಕೆ ಬರಲಿಲ್ಲ. ಕೇಳಿದರೆ ನಾಳೆ, ನಾಡಿದ್ದು ಅಂತ ಹೇಳುತ್ತಲೇ ಬಂದಿದ್ದಾರೆ. ‌ಕೊನೆಗೆ ಅವರ ವಿರುದ್ಧ ಚೇಂಬರ್‌ನಲ್ಲಿ ಹೇಳಿಕೊಂಡರೂ ಅಲ್ಲೂ ನ್ಯಾಯ ಸಿಕ್ಕಿಲ್ಲ. ವೆಂಕಟೇಶ್ ಆಚಾರ್ಯ ‌ಚೇಂಬರ್ ಮೆಂಬರ್ ಅಲ್ಲ ಅಂತ ಸುಮ್ಮನಾಗಿದ್ದಾರೆ. ಸಾಲ ಮಾಡಿ ಹಣ ಹಾಕಿರುವ ನಮಗೆ ನಿಜಕ್ಕೂ ಅನ್ಯಾಯವಾಗಿದೆ ಎಂಬುದು “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ ಕಿಶೋರ್‌ ಮಾತು.

error: Content is protected !!