Categories
ಸಿನಿ ಸುದ್ದಿ

ಲವ್‌ಸ್ಟೋರಿಯಲ್ಲೊಂದು ಕ್ರಾಂತಿಕಾರಿ ಬದಲಾವಣೆ ಡಾರ್ಲಿಂಗ್‌ ಕೃಷ್ಣ ಸಿನಿಮಾಗೆ ಹೊಸ ತೇಜಸ್ಸು!

ಶಿವತೇಜಸ್‌ ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ

ಒಂದು ಸಿನಿಮಾ ಮಾಡೋಕೆ ಮುಖ್ಯವಾಗಿ ಬೇಕಾಗಿರೋದು ಸಿನಿಮಾ ಪ್ರೀತಿ. ಅದಷ್ಟೇ ಅಲ್ಲ, ಶ್ರದ್ಧೆ ಮತ್ತು ಪ್ರತಿಭೆ. ಇದನ್ನೇ ನಂಬಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟವರು ನಿರ್ದೇಶಕ ಶಿವತೇಜಸ್.‌ ಈಗಾಗಲೇ ಜೋರು ಪ್ರೀತಿಯ “ಮಳೆ” ಸುರಿಸಿದ ಶಿವತೇಜಸ್‌, ಸಿನಿಪ್ರೇಮಿಗಳ ಮನವನ್ನು ಪ್ರೀತಿಯಿಂದಲೇ ಒದ್ದೆ ಮಾಡಿದವರು. ಆ ನಂತರ “ಧೈರ್ಯಂ” ಮೂಲಕ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡ ಧೈರ್ಯದಲ್ಲೇ ಮತ್ತೊಂದು ಕ್ಯೂಟ್‌ ಅಂಡ್‌ ಪ್ಯೂರ್‌ ಲವ್‌ಸ್ಟೋರಿ ಹಿಂದೆ ನಿಂತಿದ್ದಾರೆ ಶಿವತೇಜಸ್.‌ ಹೌದು, ನಿರ್ದೇಶಕ ಶಿವತೇಜಸ್‌ ಈಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಎಂದಿಗಿಂತಲೂ ಜೋರು ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆವರ ಆಯ್ಕೆ ಕೂಡ ಹಾಗೆಯೇ ಇದೆ. ಹಾಗಾಗಿ, ಅವರ ಹೊಸ ಚಿತ್ರ ಜೋರು ಸೌಂಡು ಮಾಡುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

ಅಂದಹಾಗೆ, ಶಿವತೇಜಸ್‌ ಮಾಡ ಹೊರಟಿರುವ ಸಿನಿಮಾದ ಹೀರೋ ಬೇರಾರೂ ಅಲ್ಲ, “ಲವ್‌ ಮಾಕ್ಟೇಲ್‌” ಖ್ಯಾತಿಯ “ಡಾರ್ಲಿಂಗ್‌” ಕೃಷ್ಣ ಅವರದು. ನಿಜ, ಶಿವತೇಜಸ್‌ ಅವರು ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಚಿತ್ರದ ಪೂಜೆ ನೆರವೇರುತ್ತಿದೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ನಡೆಯುತ್ತಿದೆ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್‌ ಅಂದರೆ, ನಿರ್ದೇಶಕ ಶಿವತೇಜಸ್‌ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.

ಈ ಸುಮಂತ್‌ ಕ್ರಾಂತಿ ಹೆಸರು ಕೇಳಿದಾಕ್ಷಣ, ಥಟ್ಟನೆ ನೆನಪಾಗೋದೇ “ನಾನಿ” ಎಂಬ ಕಾಡುವ ಚಿತ್ರ. ಹೌದು, ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾದ ಸುಮಂತ್‌ ಕ್ರಾಂತಿ ಇದೀಗ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅದೀಗ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನ ಹಿಂದೆಯೇ ಅವರು “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್‌ ಸಿನಿಮಾ ಕೂಡ ಮಾಡಿದ್ದಾಗಿದೆ. ಅದರ ಹಿಂದೆಯೇ ಅವರು ಪ್ರಜ್ವಲ್‌ ದೇವರಾಜ್‌ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿರೋದು ಹೊಸ ಸುದ್ದಿಯೇನಲ್ಲ. ಈಗ ಶಿವತೇಜಸ್‌ ಅವರಿಗಾಗಿ “ಡಾರ್ಲಿಂಗ್‌” ಕೃಷ್ಣ ಅವರ ನಟನೆಯ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಇದು ನಿಜಕ್ಕೂ ಮೆಚ್ಚುವ ವಿಷಯ.

ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ಅವರು, ಈಗ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ. ಸುಮಂತ್‌ ಕ್ರಾಂತಿ ಅವರೂ ನಿರ್ದೇಶಕರಾಗಿರುವುದರಿಂದ, ಈ ಚಿತ್ರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಪೂರೈಸುತ್ತಾರೆ ಎಂಬ ಭವ್ಯ ಭರವಸೆ ಕೂಡ ನಿರ್ದೇಶಕ ಶಿವತೇಜಸ್‌ ಅವರಿಗಿದೆ. ಅದೇನೆ ಇರಲಿ, ಶಿವತೇಜಸ್ ಈ ಬಾರಿ ಒಂದೊಳ್ಳೆಯ ಕಥೆ ಹಿಡಿದು ಬರುತ್ತಿದ್ದಾರೆ. ತಮ್ಮ ಬ್ಯೂಟಿಫುಲ್‌ ಲವ್‌ಸ್ಟೋರಿ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಶಿವತೇಜಸ್‌ ಹೇಳಿದ್ದಿಷ್ಟು.

“ನಾನು “ಮಳೆ” ಬಳಿಕ ಮತ್ತೊಂದು ಪ್ಯೂರ್‌ ಬೊಂಬಾಟ್‌ ಲವ್‌ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಧರ್ಮಸ್ಥಳದಲ್ಲಿ ಆಗಸ್ಟ್‌ 27ರಂದು ಪೂಜೆ ನೆರವೇರಲಿದೆ. ಸುಮಂತ್‌ ಕ್ರಾಂತಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೂಲತಃ ನಿರ್ದೇಶಕರಾಗಿದ್ದರೂ, ನನ್ನ ಕಥೆ ನಂಬಿ ಹಣ ಹಾಕುತ್ತಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ತೀನಿ ಎಂಬ ಮಾತು ಕೊಡ್ತೀನಿ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ನನ್ನದೇ. ಇನ್ನು, ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರೆಂಬುದು ಸದ್ಯ ಗೌಪ್ಯ.

ಅಂತೆಯೇ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಸೇರಿದಂತೆ ಉಳಿದ ತಾಂತ್ರಿಕ ವರ್ಗದ ಆಯ್ಕೆ ಹಾಗು ಕಲಾವಿದರ ಆಯ್ಕೆ ನಡೆಯಬೇಕಿದೆ. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಶಿವತೇಜಸ್, “ಮಳೆ” ನೋಡಿದವರಿಗೆ ಒಂದೊಳ್ಳೆಯ ಫೀಲ್‌ ಇತ್ತು. ಈ ಸಿನಿಮಾ ಅದಕ್ಕಿಂತಲೂ ಬೊಂಬಾಟ್‌ ಫೀಲ್‌ ಕೊಡುತ್ತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಇಲ್ಲಿದೆ. ಲವ್‌ಸ್ಟೋರಿ ಅಂದರೆ, ಅದೇ ಪ್ರೀತಿ ಗೀತಿ ಇತ್ಯಾದಿ ಇರುತ್ತೆ. ಆದರೆ, ನಮ್‌ ಲವ್‌ಸ್ಟೋರಿಯ ರೇಂಜ್‌ ಬೇರೆ ರೀತಿ ಇರುತ್ತೆ. ಎಲ್ಲವನ್ನೂ ಈಗಲೇ ಹೇಳಿದರೆ, ಕುತೂಹಲ ಇರಲ್ಲ. ಸಿನಿಮಾ ಬಂದಮೇಲೆ ಖಂಡಿತವಾಗಿಯೂ ಎಲ್ಲಾ ವರ್ಗಕ್ಕೆ ಇಷ್ಟವಾಗುತ್ತೆ ಎಂಬ ಭರವಸೆ ಕೊಡ್ತೀನಿ ಅಂತಾರೆ ಶಿವತೇಜಸ್.‌

Categories
ಸಿನಿ ಸುದ್ದಿ

ನಟ ಕಿಚ್ಚ ಸುದೀಪ್ ಆಯ್ತು, ಈಗ ಪಾರ್ವತಿ ಟಾರ್ಗೆಟ್‌ :ʼಪಾರುʼ ಪಾರಿವಾಳದ ಮೇಲೆ ಅಹೋರಾತ್ರನ ಕಣ್ಣು !

ಅಹೋರಾತ್ರ ಎನ್ನುವ ಒಬ್ಬ ಸೋ ಕಾಲ್ಡ್‌ ಅಸ್ಡ್ರಾಲಜಿಸ್ಟ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅವರಿಗೆ ಕೆರೆದು ಹುಣ್ಣು ಮಾಡಿಕೊಳ್ಳುವ ಕಾಯಿಲೆ ಹಿಡಿದಿರುವ ಹಾಗನ್ಸುತ್ತೆ. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಎನ್ನುವ ಹಾಗೆ ಸ್ಯಾಂಡಲ್ವುಡ್‌ ಪಾಲಿಗೆ ಆಗಾಗ ಅವರು ಇಣುಕು ಹಾಕುತ್ತಿರುವುದು ವಿಚಿತ್ರವಾಗಿದೆ. ನಟ ಸುದೀಪ್‌ ಅವರಾಯ್ತು, ಈಗ ಅಹೋರಾತ್ರ ಕಣ್ಣು ಕಿರುತೆರೆಯ ಫೇಮಸ್‌ ನಟಿ ಮೋಕ್ಷಿತಾ ಪೈ ಮೇಲೆ ಬಿದ್ದಿದೆ. ಪಾರು ಸೀರಿಯಲ್‌ ಖ್ಯಾತಿಯ ನಟಿ ಇವ್ರು. ಇಷ್ಟಕ್ಕೂ ಇವ್ರು ಅಹೋರಾತ್ರ ಕೆಂಗಣ್ಣಿಗೆ ಗುರಿಯಾಗುವುದಕ್ಕೆ ಕಾರಣ ಎಂತ ಗೊತ್ತಾ, ಅದೇ ಆನ್‌ ಲೈನ್‌ ರಮ್ಮಿ. ಅಂದ ಹಾಗೆ, ಆನ್‌ ಲೈನ್‌ ರಮ್ಮಿ ಅಂದಾಕ್ಷಣ ನಿಮಗೆ ಈ ಸೋ ಕಾಲ್ಡ್‌ ಅಸ್ಟ್ರಾಲಜಿಸ್ಟ್‌ ಅಹೋರಾತ್ರ ಯಾರು ಅಂದಾಜು ಸಿಕ್ಕೇ ಸಿಕ್ಕಿರುತ್ತೆ. ಯಾಕಂದ್ರೆ, ನಟ ಕಿಚ್ಚ ಸುದೀಪ್‌ ಅವರ ವಿಚಾರದಲ್ಲಿ ಇತ್ತೀಚೆಗೆ ಸ್ಯಾಂಡಲ್‌ ವುಡ್‌ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ವ್ಯಕ್ತಿ ಇವ್ರು.

ಆನ್‌ಲೈನ್‌ ರಮ್ಮಿಗೆ ನಟ ಸುದೀಪ್‌ ಅವರು ಜಾಹೀರಾತಿಗೆ ಬ್ರಾಂಡ್‌ ಆಗಿದ್ದನ್ನು ವಿರೋಧಿಸಿ, ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಅರಚಾಡಿಕೊಂಡಿದ್ದ ವ್ಯಕ್ತಿ ಇವ್ರು. ಕೊನೆಗದು ಕೋರ್ಟ್‌ ಮೆಟ್ಟಿಲು ಏರಿತ್ತು. ಅಲ್ಲೂ ಸುದೀಪ್‌ ಅವರ ಪರ ತೀರ್ಪು ಬಂತು. ಅಷ್ಟಕ್ಕೂ ಸುಮ್ಮನಾಗದ ಈ ಅಹೋರಾತ್ರ ಮತ್ತೆ ಸೋಷಲ್‌ ಮೀಡಿಯಾದಲ್ಲಿ ತನ್ನದೇ ವಕ್ರಬಕ್ರ ಅರಚಾಟ ಶುರುವಿಟ್ಟುಕೊಂಡಾಗ, ಸುದೀಪ್‌ ಅಭಿಮಾನಿಗಳೇ ಮನೆ ಬಾಗಿಲಿಗೆ ಹೋಗಿ ಬುದ್ದಿ ಕಲಿಸಬೇಕಾಯಿತು ಅನ್ನೋದೆಲ್ಲವೂ ಹಳೇ ಸುದ್ದಿಯೇ ಬಿಡಿ. ಹಾಗಂತ ಇಷ್ಟಾಗಿಯೂ ಆತ ಸುಮ್ಮನಿದ್ದಾರೆ ಅಂತಂದುಕೊಳ್ಳುವಂತಿಲ್ಲ, ವಿವಾದವೋ, ವಿಚಿತ್ರವೋ ಸದಾ ಸುದ್ದಿಯಲ್ಲಿರಬೇಕೆನ್ನುವುದೊಂದು ಅವರಿಗೆ ಅಂಟಿಕೊಂಡ ವಿಚಿತ್ರ ಪಬ್ಲಿಸಿಟಿಯ ಕೊರೋನಾ ಅದು. ಅದೇ ಕಾರಣಕ್ಕೆ ಈಗ ಅಹೋರಾತ್ರನಿಗೆ ʼಪಾರುʼ ಸೀರಿಯಲ್‌ ಖ್ಯಾತಿಯ ಬಹುಜನಪ್ರಿಯ ನಟಿ ಮೋಕ್ಷಿತಾ ಪೈ ಟಾರ್ಗೆಟ್‌ ಆಗಿದ್ದು ವಿಚಿತ್ರ, ವಿಕ್ಷಿಪ್ತ.

ಮೋಕ್ಷಿತಾ ಪೈ ಮೇಲೆ ಈ ಅಹೋರಾತ್ರ ಕಣ್ಣು ಹಾಕಿದ್ದು ಯಾಕೆ ಗೊತ್ತಾ ? ಆನ್‌ ಲೈನ್‌ ನಲ್ಲಿನ ರಮ್ಮಿ ಆಟದ ಪ್ರಚಾರಕ್ಕೆ ಈಗ ಜನಪ್ರಿಯ ನಟಿ ಮೋಕ್ಷಿತಾ ಪೈ ಬ್ರಾಂಡ್‌ ಆಗ್ತಿದ್ದಾರೆ ಅನ್ನೋ ಸುದ್ದಿ ಇದೆ. ಸದ್ಯಕ್ಕೆ ಇದು ಕನ್‌ ಫರ್ಮ್‌ ಅಂತ ಯಾರಿಗೂ ಗೊತ್ತಿಲ್ಲ. ಆದರೆ ಅಂತಹದೊಂದು ವಾಸನೆ ಅಹೋರಾತ್ರರ ಮೂಗಿಗೆ ಬಡಿದೆಯಂತೆ. ಹೇಳಿ ಕೇಳಿ ಅವರು ಜ್ಯೋತಿಷಿ ಅಲ್ವಾ? ಕಾಲಜ್ಝಾನಿ ಥರ ಮುಂದೆ ಆಗುವುದೆಲ್ಲವೂ ಇವ್ರಿಗೆ ಗೊತ್ತಾಗಿ ಬಿಡುತ್ತಂತೆ. ಹಾಗಂತ ಕೊರೋನಾ ಯಾವಾಗ ಹೋಗುತ್ತೆ, ನೀವ್ಯಾಗ ಸೇಪ್‌ ಆಗಿ ಊರೆಲ್ಲಾ ತಿರುಗಾಡುತ್ತೀಯಾ ಅಂತ ಕೇಳೋದಿಕ್ಕೆ ಹೋಗ್ಬೇಡಿ, ಅಂತೆಲ್ಲವನ್ನು ಬಿಟ್ಟು ಬೇರೆಯವರ ಭವಿಷ್ಯ ಹೇಳೋ ಕಾಲಿಯೆ ಅದು. ಅಷ್ಟಾಗಿಯೂ ಅವ್ರೀಗೀಗ ಪಾರು ಸೀರಿಯಲ್‌ ಖ್ಯಾತಿಯ ಮೋಕ್ಷಿತಾ ಪೈ ರಮ್ಮಿ ಬ್ರಾಂಡ್‌ ಆಗಿ ಅವ್ರ ಕನಸಿಗೆ ಬಂದಂತಿದೆ. ಅದೇ ಕಾರಣಕ್ಕೆ ಟ್ವಿಟರ್‌ ನಲ್ಲಿ ಒಂದಷ್ಟು ವಾಂತಿ ಮಾಡಿಕೊಂಡಿದ್ದಾರೆ.

ʼ ನಿಮ್ಮ ಟ್ಯಾಲೆಂಟ್‌ ಪ್ರದರ್ಶನಕ್ಕೆ ಯಾರು ಅಡ್ಡಿ ಮಾಡಲ್ಲ, ಅದರಲ್ಲೂ ರಮ್ಮಿ ಗೇಮ್‌ ನಲ್ಲಿ, ನಿಮ್ಮ ನೆಚ್ಚಿನ ಭಾಷೆಯಲ್ಲಿಯೇ ರಮ್ಮಿ ಗೇಮ್‌ ಅನ್ನು ಎಂಜಾಯ್‌ ಮಾಡಿʼ ಎಂಬುದಾಗಿ ಮೋಕ್ಷಿತಾ ಪೈ ಹಾಕಿದ್ದ ಟ್ವಿಟ್‌ ಗೆ ಅಹೋರಾತ್ರ ರಿಯಾಕ್ಟ್‌ ಮಾಡಿ, ಈ ಸೆಲಿಬ್ರಿಟಿಗಳ ಮಾತು ನಂಬ್ವೇಡಿ ಅಂತ ಹೇಳಿದ್ಧಾರೆ. ಹಾಗೆಯೇ ವಿಜಯಕಂಠಕ ವಿಜಿ ಎಂಬಾತ ಮೋಕ್ಷಿತಾ ಪೈ ಅವರ ಟ್ವಿಟ್‌ ಗೆ ರಿಯಾಕ್ಟ್‌ ಮಾಡಿ, ನಿವೊಬ್ಬ ನಟಿ, ನಿಮಗೆ ಸ್ವಲ್ಪವಾದರೂ ಸಾಮಾಜಿಕ ಕಾಳಜಿ ಇರಬೇಕು, ಈ ರೀತಿಯ ಜೂಜು ಜಾಹೀರಾತು ಕೊಡ್ಬೇಡಿ. ನಿಮ್ಮಂತಹ ನಟ-ನಟಿಯರನ್ನು ಬೆಳೆಸಿದ್ದು ಜನ. ಆದರೆ, ಅದೇ ಜನರನ್ನು ಈ ಜೂಜಿನ ವಿಷ ಜಾಲಕ್ಕೆ ತಳ್ಳಲು ಹೊರಟಿರುವ ನಿಮಗೆಧಿಕ್ಕಾರವಿರಲಿʼಎಂಬುದಾಗಿ ಹೇಳಿದ್ದಾರೆ, ಇದನ್ನು ಅಹೋರಾತ್ರ ಷೇರ್‌ ಮಾಡಿ, ಅದನ್ನೇ ದೊಡ್ಡದಾಗಿ ವಿವಾದ ಮಾಡಲು ಹೊರಟಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿವೆ.ನಿಜ, ಆನ್‌ ಲೈನ್‌ ರಮ್ಮಿ ಅನ್ನೋದು ಜೂಜಾಟ. ಅದನ್ನು ಜನರಿಗೆ ಆಡಿ ಅಂತ ಸೆಲಿಬ್ರಿಟಿಗಳು ಹೇಳುವುದು ಕೂಡ ಸರಿಯಲ್ಲ. ಆದರೆ ಈ ಅಹೋರಾತ್ರ ತಾನು ಇನ್ನೇಲ್ಲೋ ಇದು. ಈ ರೀತಿ ಪ್ರಚಾರಕ್ಕಾಗಿ ಸೆಲಿಬ್ರಿಟಿಗಳನ್ನು ಹಿಡ್ಕೊಂಡೋ ಕಾಂಟ್ರೋ ವರ್ಷಿ ಮೂಲಕ ಪಬ್ಲಿಸಿಟಿ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ? ಇದು ಸಾರ್ವಜನಿಕರ ಪ್ರಶ್ನೆ.
ದೇಶಾದ್ರಿ , ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ನಾಲಿಗೆ ತೊದಲಿದರೇನು ಎದೆತುಂಬಿ ಹಾಡ್ತಾರೆ; ಹಳ್ಳಿಹೈದ ಸೂರ್ಯಕಾಂತ್ ಕಂಠಕ್ಕೆ ದೇವರೇ ಶರಣು !

ಜಗತ್ತು ಬೆಳಗುವ ಸೂರ್ಯ ಚಂದ್ರರೇ ತಮ್ಮ ಟೈಮ್ ಗೋಸ್ಕರ ಕಾಯ್ತಾರೆ. ಸೂರ್ಯನ ಶಿಫ್ಟ್ ಮುಗಿಯೋವರೆಗೂ ಚಂದ್ರ ಕಾಯಬೇಕು, ಚಂದ್ರ ಬಂದು ಹೋಗುವವರೆಗೂ ಸೂರ್ಯ ವೇಯ್ಟ್ ಮಾಡಬೇಕು. ಹೀಗಾಗಿ, ಎಲ್ಲರಿಗೂ ಒಂದು ಟೈಮ್ ಬರುತ್ತೆ ಆ ಟೈಮ್ ಗೋಸ್ಕರ ಕಾಯಬೇಕು ಅಷ್ಟೆ. ಈಗ ಸೂರ್ಯಕಾಂತ್ ಟೈಮ್

ಎದೆತುಂಬಿ ಹಾಡುವೆನು ಕಾರ್ಯಕ್ರಮ ನೋಡುಗರಿಗೆ ಸೂರ್ಯಕಾಂತ್ ಪರಿಚಯ ಆಗಿರುತ್ತೆ. ಈತನ ಹಿನ್ನಲೆಯ ಜೊತೆಗೆ ಈತನ ಕಂಠಕ್ಕಿರುವ ಶಕ್ತಿ ಎಂತಹದ್ದು ಎಂಬುದು ಕೂಡ ಗೊತ್ತಾಗಿರುತ್ತೆ. ಒಂದ್ವೇಳೆ, ಸೂರ್ಯಕಾಂತ್ ಸಂಗೀತ ಮಿಸ್‌ಮಾಡಿಕೊಂಡವರು ಈ ಸ್ಟೋರಿನಾ ನೋಡಿ.

ಭಗವಂತ ಎಲ್ಲರಿಗೂ ಎಲ್ಲಾನೂ ಕೊಡಲ್ಲ, ಏನಾದರೊಂದು ಕೊರತೆಯಿಟ್ಟೇ ಇಟ್ಟಿರುತ್ತಾನೆ. ಒಂದ್ವೇಳೆ, ಎಲ್ಲವನ್ನೂ ಕೊಟ್ಟು ಕರುಣಿಸಿದರೂ ಕೂಡ ಕೊರಗುವ ಮಂದಿಗೇನ್ ಕಮ್ಮಿಯಿಲ್ಲ. ತನ್ನ ಬಳಿ ಅದಿಲ್ಲ, ಇದಿಲ್ಲ ಅಂತ ಚಿಂತಿಸುತ್ತಾ ದೇವರಿಗೆ ಹಿಡಿಶಾಪ ಹಾಕುತ್ತಾರೆ. ಇವರುಗಳಲ್ಲಿ ಕೆಲವರು ಭಗವಂತ ಕೊಟ್ಟ ನ್ಯೂನತೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಭಗವಂತನಿಗೆ ಸೆಡ್ಡುಹೊಡೆಯುತ್ತಾರೆ. ಸಾಧನೆ ಮೂಲಕ ನ್ಯೂನತೆ ಕೊಟ್ಟು ಕಳುಹಿಸಿದ ಭಗವಂತ ಪಶ್ಚಾತಾಪ ಪಡುವಂತೆ ಮಾಡ್ತಾರೆ. ಸದ್ಯಕ್ಕೆ ಸೂರ್ಯಕಾಂತ್ ಭಗವಂತ ಪಶ್ಚಾತಾಪ ಪಡುವಂತೆ ಮಾಡಿದ್ದಾನೆ. ಯಾರು ಆ ಸೂರ್ಯಕಾಂತ್ ಅಂತೀರಾ. `ಎದೆತುಂಬಿ ಹಾಡುವೆನು'ಅಂಗಳದಲ್ಲಿ ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು’ ಅಂತ ಹಾಡಿ ಸ್ವರಸಾಮ್ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ, ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿರುವ ಗ್ರಾಮೀಣ ಗಾಯಕನೇ ಈ ಸೂರ್ಯಕಾಂತ್

ಸೂರ್ಯಕಾಂತ್ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದವರು. ಹೊಟ್ಟೆಗೆ ಹಿಟ್ಟಿಲ್ಲದ ಹೊತ್ತಲ್ಲೇ ಸಂಗೀತದ ಗೀಳು ಅಂಟಿಸಿಕೊಂಡ ಸೂರ್ಯಕಾಂತ್, ಹಸಿವನ್ನು ನುಂಗಿಕೊಂಡು ಕಲಬುರ್ಗಿಯ ಶ್ರೀ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತದ ಅ.ಆ.ಇ.ಈ ಅಕ್ಷರಾಭ್ಯಾಸ ಮಾಡಿದರು. ಕಣ್ಣಿಲ್ಲದ ಪಂಚಾಕ್ಷರಿ ಅಣ್ಣಿಗೇರಿ ಅಜ್ಜಯ್ಯನವರು ಸೂರ್ಯಕಾಂತ್‌ಗೆ ಶ್ರುತಿ-ಲಯ-ಸ್ವರ-ರಾಗ-ತಾಳ-ಮೇಳ ಹಿಡಿಯುವುದನ್ನು ಕಲಿಸಿಕೊಟ್ಟರು. ಇದೀಗ, ಸಂಗೀತ ಹೇಳಿಕೊಟ್ಟ ಗುರುವು ಮಾತ್ರವಲ್ಲ ಸಾಕ್ಷಾತ್ ದೇವರೆ ಮೆಚ್ಚುವಂತಹ ಗಾಯಕನಾಗಿ ಹೊರಹೊಮ್ಮಿದ್ದಾರೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.

ಹೌದು, ಸೂರ್ಯಕಾಂತ್ ಸಂಗೀತಕ್ಕೆ ಸಾಕ್ಷಾತ್ ದೇವರೆ ಶರಣಾಗಿದ್ದಾರೆ. ಮಾತು ಕಿತ್ಕೊಂಡು ಸೂರ್ಯನನ್ನು ಭೂಮಿಗೆ ಕಳುಹಿಸಿದ್ದಕ್ಕೆ ಇವತ್ತು ದೇವರು ಕೂಡ ಪಶ್ಚಾತಾಪ ಪಡುತ್ತಿರುತ್ತಾರೆ.ಆದರೆ ಮಾತು ಕಿತ್ತುಕೊಂಡ ಭಗವಂತ ಕಂಠಕ್ಕೆ ಬಲತುಂಬಿ ಕಳುಹಿಸಿದ್ದಾನೆ. ಹೀಗಾಗಿ, ಮಾತನಾಡುವಾಗ ತಡವರಿಸುವ ಸೂರ್ಯಕಾಂತ್, ಕಂಠಕ್ಕೆ ಕಿಚ್ಚು ಹಚ್ಚಿದಾಗ ತಡವರಿಸಲ್ಲ ಸಂಗೀತವನ್ನ ಅರ್ಧಕ್ಕೆ ನಿಲಿಸಲ್ಲ. ಇದನ್ನೆಲ್ಲಾ ನೋಡಿದಾಗ ಇದು ಹೇಗೆ ಸಾಧ್ಯ? ಇದೆಂತಾ ಪವಾಡನಪ್ಪಾ ಎಂದೆನಿಸುವುದು ಸಹಜ. ಆದರೆ ಇದಕ್ಕೆಲ್ಲಾ ಕಾರಣ ಸಂಗೀತ ಸರಸ್ವತಿ ಹಾಗೂ ಸೂರ್ಯಕಾಂತ್‌ಗೆ ಸಂಗೀತ ಮೇಲಿರುವ ಅತೀವವಾದ ಶ್ರದ್ದಾ-ಭಕ್ತಿ. ಆ ನಿಷ್ಟೆಗೆ- ಸಂಗೀತ ಸರಸ್ವತಿಯ ಆರಾಧನೆಗೆ `ಎದೆತುಂಬಿ’ ಹಾಡುವೆನು ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿದೆ. ನಾಲಿಗೆ ತಡವರಿಸಿದರೇನಂತೆ ಆತನ ಕಂಠದೊಳಗಿನ ಕಸುವಿಗೆ ಬೆಲೆಕೊಡಬೇಕೆಂದು ಕಲರ್ಸ್ ಕನ್ನಡ ಸಂಸ್ಥೆ ಸೂರ್ಯಕಾಂತ್‌ಗೆ ರತ್ನಗಂಬಳಿ ಹಾಕಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ.

ಸೂರ್ಯಕಾಂತ್ ಅಪ್ಪಟ ದೇಸಿ ಪ್ರತಿಭೆ-ಕಡುಬಡತನದ ಕುಟುಂಬಕ್ಕೆ ಸೇರಿದವ. ಜನ್ಮಕೊಟ್ಟ ಹೆತ್ತವ್ವ ಬಿಟ್ಟರೆ ಸರಸ್ವತಿ ತಾಯಿಯೇ ಎಲ್ಲಾ. ಹೀಗಾಗಿ, ದೇವರು ಮಾತು ಕಿತ್ಕೊಂಡು ಕಳುಹಿಸಿದರೂ ಸಂಗೀತ ಸರಸ್ವತಿ ಕೈಬಿಡದೇ ಸಲುಹಿತ್ತಿದ್ದಾಳೆ. ಹಗಲಿರುಳು ತನ್ನ ಜಪ ಮಾಡುವ ಸೂರ್ಯಕಾಂತ್‌ಗೆ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದ್ದಾಳೆ. ದೇವರು ಎಲ್ಲಾ ಕೊಟ್ಟರೂ ಕೂಡ ತನಗೆ ಅದನ್ನ ಕೊಟ್ಟಿಲ್ಲ ಇದನ್ನ ಕೊಟ್ಟಿಲ್ಲ ಅಂತ ಭಗವಂತನ ಮೇಲೆ ದೂರು ಹೇಳುತ್ತಾ ಕುಳಿತಿರುವ ಸೋಮಾರಿಗಳಿಗೆ, ನೀನು ಒಂದು ಪಾಠ ಆಗಬೇಕು ಹೋಗು ಮಗನೇ ಅಂತ ಅದ್ಬುತ ವೇದಿಕೆಯ ಮೇಲೆ ತಂದು ನಿಲ್ಲಿಸಿದ್ದಾಳೆ. ವರವಾಗಿ ಸಿಕ್ಕಂತಹ ಅವಕಾಶವನ್ನ ಅದ್ಬುತವಾಗಿ ಬಳಸಿಕೊಂಡ ಸೂರ್ಯಕಾಂತ್, `ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯವನ್ನು ತಲ್ಲಣಗೊಳಿಸಿದ್ದಾರೆ. ಕಣ್ಣೀರ ಕಡಲಲ್ಲಿ ತೇಲಿಸುವುದರ ಜೊತೆಗೆ ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಯಾವುದೋ ಸಿನಿಮಾ ಹಾಡನ್ನು ತೆಗೆದುಕೊಂಡು ಧೂಳೆಬ್ಬಿಸೋದು ದೊಡ್ಡದಲ್ಲ. ತತ್ವಪದಗಳನ್ನು ಆಯ್ಕೆಮಾಡಿಕೊಂಡು ಸುನಾಮಿ ಎಬ್ಬಿಸೋದು ದೊಡ್ಡದು. ಯಸ್,
ಕಡಕೋಳ ಮಡಿವಾಳಪ್ಪಜ್ಜನವರು ರಚನೆ ಮಾಡಿದ, ರವೀಂದ್ರ ಹಂದಿಗನೂರ ರಾಗಸಂಯೋಜನೆ ಮಾಡಿ ಕಂಠಕುಣಿಸಿದ ತತ್ವಪದವನ್ನು ಆಯ್ಕೆಮಾಡಿಕೊಂಡ ಸೂರ್ಯಕಾಂತ್, ಸಂಗೀತ ಲೋಕದ ದಿಗ್ಗಜರನ್ನ ಮಂತ್ರಮುಗ್ದಗೊಳಿಸಿದರು. ಮಾತನಾಡುವಾಗಲೇ ತೊದಲಿಸುವ ಸೂರ್ಯಕಾಂತ್ ಇನ್ನೇನು ಹಾಡ್ತಾನ್ರಿ ಅಂತ ಎದುರುನೋಡ್ತಿದ್ದ ಮಂದಿಯನ್ನ ಎದ್ದುನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿಬಿಟ್ಟರು. ಅದಕ್ಕೆ ಹೇಳೋದು ಡೋಂಟ್ ಅಂಡರೆಸ್ಟಿಮೇಟ್ ಪವರ್ ಆಫ್ ಹಳ್ಳಿಮ್ಯಾನ್' ಅಂತ.ಎನಿವೇ,ಮೊದಲ ಹಾಡಿನಲ್ಲೇ ಗೆದ್ದುಬೀಗಿದ್ದಾರೆ. ಎದೆತುಂಬಿ ಹಾಡುವೆನು’ ಸಂಗೀತ ಸಾಮ್ರಾಜ್ಯಕ್ಕೆ ಕಳೆತಂದಿದ್ದಾರೆ. ವ್ಯಕ್ತಿತ್ವದಲ್ಲೂ ಹಾಗೂ ಸಂಗೀತದಲ್ಲೂ ಮುಗ್ದತೆಯನ್ನ ಕಾಪಾಡಿಕೊಂಡು ಬಂದಿರುವ ಸೂರ್ಯಕಾಂತ್‌ನ ಬೆಳೆಸಬೇಕು ಅಂತ ನಿರ್ಣಾಯಕರಾದ ರಾಜೇಶ್ ಕೃಷ್ಣನ್, ವಿ ಹರಿಕೃಷ್ಣ, ರಘುದೀಕ್ಷಿತ್ ನಿರ್ಧಾರ ಮಾಡಿದ್ದಾರೆ. ಸೂರ್ಯಕಾಂತ್ ಸಂಗೀತದ ಲಯ-ಶ್ರುತಿ-ಹಿಡಿದು ಎಷ್ಟರ ಮಟ್ಟಿಗೆ ಬೆಳೆಯುತ್ತಾರೆ ಕಾದುನೋಡೋಣ ಅಲ್ಲವೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಲರ್ಸ್‌ ಕನ್ನಡದ ʼಎದೆ ತುಂಬಿ ಹಾಡುವೆನುʼ ರಿಯಾಲಿಟಿ ಶೋ ಬಗ್ಗೆ ವೀಕ್ಷರಲ್ಲಿರುವ ಆಕ್ಷೇಪ ಏನು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಮತ್ತೆ ʼಎದೆ ತುಂಬಿ ಹಾಡುವೆನುʼ ಸಿಂಗಿಂಗ್‌ ರಿಯಾಲಿಟಿ ಶೋ ಶುರುವಾಗಿದೆ. ಆರು ವರ್ಷಗಳ ನಂತರ ಕಲರ್ಸ್‌ ಕನ್ನಡ ಮತ್ತೆ ಈ ಕಾರ್ಯಕ್ರಮವನ್ನು ʼಸ್ವರ ಮಹಾನ್ವೇಷಣೆʼ ಹೆಸರಲ್ಲಿ ವೀಕ್ಷಕರ ಮನೆ ಬಾಗಿಲಿಗೆ ಮುಟ್ಟಿಸುತ್ತಿದೆ. ʼಈ ಟಿವಿʼ ಎನ್ನುವ ಜನಪ್ರಿಯ ಖಾಸಗಿ ಮನರಂಜನೆ ವಾಹಿನಿಯಲ್ಲಿ ಮೂಡಿ ಬಂದಿದ್ದ ಈ ರಿಯಾಲಿಟಿ ಶೋ, ಹೊಸ ಮೈಲುಗಲ್ಲು ಸೃಷ್ಟಿಸಿದ್ದೀಗ ಇತಿಹಾಸ. ಅದಕ್ಕೆ ಕಾರಣ ದೇಶದ ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ. ಕೆನರಾ ಬ್ಯಾಂಕ್‌ ಎದೆ ತುಂಬಿ ಹಾಡುವೆನು ಹೆಸರಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮಕ್ಕೆ ಅವರು ಮುಖ್ಯ ತೀರ್ಪುಗಾರರು. ವೇದಿಕೆಗೆ ಬಂದು ಹಾಡುತ್ತಿದ್ದ ಮಕ್ಕಳನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಅವರ ತಾಯಿ ಪ್ರೀತಿಗೆ ಸರಿ ಸಾಟಿ ಯಾರು ನಿಲ್ಲಲ್ಲು ಆಗದು. ಹಾಗಾಗಿಯೇ ಅದು ಭಾರೀ ಜನಪ್ರಿಯತೆ ಪಡೆದಿದ್ದ ಕಾರ್ಯಕ್ರಮ ಅಗಿದ್ದೆಲ್ಲವೂ ನಿಮಗೂ ಗೊತ್ತು. ಅಷ್ಟು ಜನಪ್ರಿಯತೆ ಪಡೆದಿದ್ದ ರಿಯಾಲಿಟಿ ಶೋ ಈಗ ಮತ್ತೆ ಶುರುವಾಗಿದ್ದು, ಸಹಜವಾಗಿಯೇ ಆ ಬಗ್ಗೆ ದೊಡ್ಡ ಕುತೂಹಲವೂ ಮೂಡಿದೆ.

ಹಾಡು ಹಳೆಯದಾದರೇನು, ಭಾವನವನವೀನ ಎನ್ನುವಂತೆ ʼಎದೆ ತುಂಬಿ ಹಾಡುವೆನುʼ ಕಾರ್ಯಕ್ರಮ ಈಗ ಮತ್ತೆ ಕನ್ನಡದ ಕಿರುತೆರೆ ವೀಕ್ಷಕರಿಗೆ ಸಂಗೀತದ ಸವಿರುಚಿ ಬಡಿಸಲು ಮುಂದಾಗಿದೆ. ಅನೇಕ ಕಾರಣಕ್ಕೆ ಅದು ಎಸ್‌ಪಿಬಿ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತಿದೆ. ಕಾಲಕ್ಕೆ ತಕ್ಕಂತೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಹೊಸ ರೂಪ, ಹೊಸ ನೋಟ ಸಿಕ್ಕಿದೆ. ಝಗಮಗಿಸುವ ದೊಡ್ಡ ವೇದಿಕೆ ಮತ್ತಷ್ಟು ರಂಗು ತುಂಬಿಕೊಂಡಿದೆ. ಎಸ್‌ಪಿಬಿ ಅವರು ಭೌತಿಕವಾಗಿ ಈಗಿಲ್ಲ ಎನ್ನುವುದನ್ನು ಬಿಟ್ಟರೆ ಅವರ ಇರುವಿಕೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಹಾಗೆ ಒಂದ್ರೀತಿ ಎಸ್‌ಪಿಬಿ ನೆರಳಲ್ಲಿಯೇ ಈ ಕಾರ್ಯಕ್ರಮ ಮೂಡಿಬರುತ್ತಿದೆಯಲ್ಲದೇ, ಎಸ್‌ಪಿಬಿ ಅವರ ದೊಡ್ಡ ಮೂರ್ತಿಯೂ ಆ ವೇದಿಕೆಯಲ್ಲಿದ್ದು, ಕಾರ್ಯಕ್ರಮ ಮತ್ತೆ ಜನರ ಭಾವಕ್ಕೆ ತಾಗುವಂತೆ ಮಾಡುವ ಕಸರತ್ತು ನಡೆದಿದೆ. ಆದರೆ ಆರಂಭದಲ್ಲಿಯೇ ಅದಕ್ಕೆ ಒಂದಷ್ಟು ಅಪಸ್ವರಗಳು ಕೇಳಿಬಂದಿವೆ.

ಕಲರ್ಸ್‌ ಕನ್ನಡ ಶೋಧಿಸಿ ತಂದ ಭರವಸೆಯ ಯುವ ಗಾಯಕ-ಗಾಯಕಿಯರ ದೃಷ್ಟಿಯಲ್ಲಿ ನೋಡಿದರೆ ಇದೊಂದು ಅದ್ಬುತ ಶೋ ಆಗುವುದರಲ್ಲಿ ಎರಡು ಮಾತಿಲ್ಲ, ಆದರೆ ಎದೆ ತುಂಬಿ ಹಾಡುವೆನು ಎನ್ನುವ ಬಹುದೊಡ್ಡ ಜನಪ್ರಿಯ ಶೋ ನಲ್ಲಿ ವೀಕ್ಷಕರು ಕಂಡ ಶ್ರದ್ದೆ, ಶಿಸ್ತು, ಸೈಲೆನ್ಸ್‌, ವಿನಯತೆ ಹಾಗೂ ಸಂಸ್ಕಾರದ ಛಾಯೆ ಇಲ್ಲಿ ಅಷ್ಟಾಗಿ ಕಾಣುತ್ತಿಲ್ಲ, ತೀರ್ಪುಗಾರರ ಅಬ್ಬರದ ಮಾತುಗಳೆಲ್ಲವನ್ನು ನೋಡುತ್ತಾ ಹೋದರೆ ಇದು ಉಳಿದ ಖಾಸಗಿ ಮನರಂಜನೆ ವಾಹಿನಿಗಳಲ್ಲಿ ಬರುವ ಮತ್ತೊಂದು ಸಿಂಗಿಂಗ್‌ ರಿಯಾಲಿಟಿ ಶೋಗೆ ಹೋಲಿಕೆ ಮಾಡಿದರೆ ಹೆಚ್ಚೇನು ವ್ಯತ್ಯಾಸ ಕಾಣದು ಎನ್ನುವ ಕಾಮೆಂಟ್ಸ್‌ ಸೋಷಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಎದೆ ತುಂಬಿ ಹಾಡುವೆನು ಎನ್ನುವ ಒಂದು ಕ್ಲಾಸಿಕ್‌ ಮೂಡ್‌ ನ ಶೋಗೆ ಈಗ ದೊಡ್ಡ ಕಮರ್ಷಿಯಲ್‌ ಟಚ್‌ ಸಿಕ್ಕಿದೆ. ಅದೇ ಇಲ್ಲಿ ಜನರ ಆಕ್ಷೇಪಕ್ಕೆ ಕಾರಣವಾಗಿದೆ.
ಯಾಕಂದ್ರೆ, ಎಸ್‌ ಪಿ ಬಿ ಅಂತಹ ದೊಡ್ಡ ಮಹಾನ್‌ ಭಾವ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ರೂಪುರೇಷೆ ಇದಿದ್ದೇ ಹಾಗೆ. ಒಮ್ಮೆ ಅದನ್ನು ನೋಡುತ್ತಾ ಕುಳಿತರೆ ಸಂಗೀತ ಕೇಳುತ್ತಲೇ ಅದರೊಂದಿಗೆ ಭಾವುನಾತ್ಮಕವಾಗಿ ಬೆಸೆದುಕೊಂಡು ನಮಗೆ ನಾವೇ ಕಳೆದುಹೋಗುವ ಬಹುದೊಡ್ಡ ಅನುಭವ ಅಲ್ಲಿತ್ತು. ಒಂದ್ರೀತಿಯ ಗೌರವ ತನಗೆ ತಾನೇ ಹುಟ್ಟಿಕೊಳ್ಳುತ್ತಿತ್ತು. ಕಾರ್ಯಕ್ರಮದ ಶಿಸ್ತು, ಶ್ರದ್ದೆ ಸೇರಿದಂತೆ ನೀಟ್‌ ಆದ ಅದರ ರೂಪುರೇಷೆಗಳೇ ಹಾಗಿದ್ದವು. ಆದರೆ ಇಲ್ಲಿ ಅಂತಹ ಯಾವುದೇ ಆಕರ್ಷಣೆ ಇಲ್ಲ ಎನ್ನುವುದನ್ನು ವೀಕ್ಷಕರೆ ಹಂಚಿಕೊಂಡಿದ್ದಾರೆ.

ಹೆಸರಾಂತ ಗಾಯಕ ಎಸ್ಪಿಬಿ ನಡೆಸಿಕೊಟ್ಟಿದ್ದ ʼಎದೆ ತುಂಬಿ ಹಾಡುವೆನುʼ ರಿಯಾಲಿಟಿ ಶೋ ಕನ್ನಡ ಕಿರುತೆರೆಗೇ ಒಂದು ಮೈಲುಗಲ್ಲು. ಅಂತಹ ಕಾರ್ಯಕ್ರಮದ ರೂಪಕಗಳನ್ನು ಇನ್ನಷ್ಟು ಮಾಡಬಹುದೇ ಹೊರತು ಅಂತಹದೇ ಕಾರ್ಯಕ್ರಮವನ್ನು ರೂಪಿಸುವುದು ಕಷ್ಟಸಾಧ್ಯ. ಆ ದೃಷ್ಟಿಯಲ್ಲಿ ಇದೊಂದು ಬೇರೆಯದೇ ರಿಯಾಲಿಟಿ ಶೋ ಎನ್ನುವುದು ನಿಜವೇ ಆದರೂ, ಇದು ಕೂಡ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಎನ್ನುವುದು ಅಷ್ಟೇ ಸತ್ಯ.ಹಾಗಾಗಿ ಅದರ ಘನತೆಗೆ ದಕ್ಕೆಯಾಗದಂತೆ ಕಾರ್ಯಕ್ರಮ ಮೂಡಿಬರುವಂತೆ ಮಾಡಬೇಕಿರುವ ಹೊಣೆ ಈಗ ಕಲರ್ಸ್‌ ಕನ್ನಡದ ಮೇಲಿದೆ ಅಂತ ವೀಕ್ಷಕರೇ ಹೇಳುತ್ತಿದ್ದಾರೆ. ಈಗ ಇಲ್ಲಿ ತೀರ್ಪುಗಾರರಾಗಿ ಎಸ್‌ ಪಿಬಿ ಅವರ ಮಾನಸ ಪುತ್ರ ಎಂದೇ ಗುರುತಿಸಿಕೊಂಡಿರುವ ಕನ್ನಡದ ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ರಾಜೇಶ ಕೃಷ್ಣನ್‌, ಹರಿಕೃಷ್ಣ, ರಘು ದೀಕ್ಷಿತ್‌ ಇದ್ದಾರೆ.ಮೂವರು ಕೂಡ ಈಗ ಕನ್ನಡದ ಟಾಪ್‌ ಮೋಸ್ಟ್‌ ಸಂಗೀತ ನಿರ್ದೇಶಕರೇ ಹೌದು. ಸುತ್ತಿ ಬಳಸಿ ಬಂದರೂ ಕಲರ್ಸ್‌ ಕನ್ನಡಕ್ಕೆ ಅಂತಿಮವಾಗಿ ಒಂದು ರೇಟಿಂಗ್‌ ಕಾರ್ಯಕ್ರಮ ಇದಾಗಬೇಕು. ಆದರಾಚೆ, ಇದಕ್ಕೊಂದು ಘನತೆ ತಂದುಕೊಡಬಹುದಾದ ಅವಕಾಶ ಈ ಮೂವರು ತೀರ್ಪುಗಾರರ ಕೈಯಲ್ಲಿದೆ. ಮುಂದೆ ಅವರಿಂದ ಅದು ಸಾಧ್ಯವಾಗುತ್ತಾ? ಕಾದು ನೋಡಬೇಕಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕೊರೋನಾ ಹೋಗುತ್ತೆ ಮೊದಲು ಈ ಕೆಲಸ ಮಾಡಿ ಅಂತ ಕ್ರೇಜಿಸ್ಟಾರ್ ಕೊಟ್ರು ಅದ್ಬುತ ಸಲಹೆ !

ಕೊರೋನಾ ಯಾವಾಗ ಹೋಗುತ್ತೆ ? ಈ ಪ್ರಶ್ನೆಗೆ ಉತ್ತರ ಯಾರಿಗಾದ್ರು ಗೊತ್ತಾ ? ಖಂಡಿತಾ ಇಲ್ಲ. ಯಾಕಂದ್ರೆ, ಕಳೆದ ಒಂದು- ಒಂದೂವರೆ ವರ್ಷದಿಂದ ಇಡೀ ಜಗತ್ತೇ ಕೊರೋನಾ ಮಹಾಮಾರಿಯ ಅಟ್ಟಹಾಸದಲ್ಲಿ ನಲುಗಿ ಹೋಗಿದೆ. ಒಂದನೇ ಅಲೆ ಮುಗಿದು, ಈಗ ಎರಡನೇ ಅಲೆ ಇದೆಯಂತೆ. ಜನರೆಲ್ಲಾ ಕೊರೋನಾ ಎರಡನೇ ಅಲೆಯೂ ಮುಗಿದಿದೆ ಅಂದ್ಕೊಂಡಿದ್ದಾರೆ. ಆದರೆ, ಸರ್ಕಾರ ಹೇಳುವ ಪ್ರಕಾರ ಇನ್ನು ಎರಡನೇ ಅಲೆಯೇ ಇದೆ. ಇದು ಮುಗಿದ ನಂತ್ರ ಮೂರನೇ ಅಲೆ ಬರುತ್ತೆ ಅಂತ ಹೇಳಲಾಗುತ್ತಿದೆ. ಅಲ್ಲಿಗೆ ಈ ಕೊರೋನಾ ಇನ್ನೇಷ್ಟು ದಿನ ಇರುತ್ತೆ ? ಯಾವಾಗ ಹೋಗುತ್ತೆ ? ಅಂದಾಜು ಕೂಡ ಮಾಡಲಾಗುತ್ತಿಲ್ಲ. ಕೊರೋನಾ ಬಗ್ಗೆ ಎಚ್ಚರಿಕೆ ನೀಡುತ್ತಿರುವ ತಜ್ಜರಿಗೂ ಇದು ಗೊತ್ತಿಲ್ಲ. ಆದರೆ, ಕೊರೋನಾ ಯಾವಾಗ ಹೋಗುತ್ತೆ ಎನ್ನುವುದರ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಭವಿಷ್ಯ ನುಡಿದ್ದಾರೆ. ಅವರು ಹೇಳುವ ಪ್ರಕಾರ ಕೊರೋನಾ ತಾನಾಗಿಯೇ ಹೋಗೋದಿಲ್ಲ, ಅದನ್ನು ಜನರೇ ಹೋಗಿಸಬೇಕಂತೆ. ಅದು ಹೇಗೆ ಅಂತ ಅವ್ರು ಕೊಡುವ ಕಾರಣ ಇದು.

‘ಎಲ್ಲರೂ ಕೊರೋನಾ ಕೊರೋನಾ ಅಂತ ಮನೆ ಹಿಡಿದು ಕುಳಿತಿದ್ದಾರೆ. ಏನಾಗುತ್ತೋ ಎನ್ನುವ ಭಯ ಅವರನ್ನು ಆವರಿಸಿಕೊಂಡಿದೆ. ಅದೇ ಕಾರಣಕ್ಕೆ ಎಲ್ಲ ಉದ್ಯಮವೋ ಬಿದ್ದು ಹೋಗಿದೆ. ಇದೆಲ್ಲ ಸರಿ ಆಗಬೇಕಾದ್ರೆ ಕೊರೋನಾ ಹೋಗಬೇಕು. ಕೊರೋನಾ ಹೋಗಬೇಕಾದ್ರೆ ಜನರು ಭಯ ಬಿಡಬೇಕು. ಭಯ ಬಿಟ್ಟು ಫೀಲ್ಡಿಗಿಳಿದರೆ ಕೊರೋನಾ ತಾನಾಗಿಯೇ ಹೊಗುತ್ತೆ’ ಅಂತ ನಟ ರವಿಚಂದ್ರನ್ ಹೇಳ್ತಾರೆ.

‘ದೃಶ್ಯ 2’ ಚಿತ್ರದ ಸುದ್ದಿಗೋಷ್ಠಿಯ ಮೂಲಕ ಮೊನ್ನೆಯಷ್ಟೇ ನಟ ರವಿಚಂದ್ರನ್ ಮಾಧ್ಯಮದ ಮುಂದೆ ಬಂದಿದ್ದರು. ಮಾಧ್ಯಮದವರನ್ನು ನೋಡಿ ಅವರಿಗೆ ಶಾಕ್. ಯಾಕಂದ್ರೆ ಎಲ್ಲರೂ ಕೂಡ ಮಾಸ್ಕ್ ಹಾಕ್ಕೊಂಡೆ ಅಲ್ಲಿಗೆ ಹಾಜರಾಗಿದ್ದರು. ಸರ್ಕಾರದ ರೂಲ್ಸು- ಗಿಲ್ಸು ಅದೆಲ್ಲ ತಮಗ್ಯಾಕೆ ಬೇಕು ಅಂತ ಆ ಬಗ್ಗೆ ಮಾತನಾಡದೆ ಮೊದಲು ‘ದೃಶ್ಯ 2’ ಸಿನಿಮಾದ ಕುರಿತು ಮಾತನಾಡ ಹೊರಟರು. ಮಾತಿನ ಮಧ್ಯೆ ಸಿನಿಮಾ ರಿಲೀಸ್ ಮಾತು ಬಂತು. ಹಾಗೆಯೇ ಈಗಿರುವ ಚಿತ್ರಮಂದಿರಗಳ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದರು. ಎಲ್ಲವೂ ಸರಿ ಹೋಗಬೇಕಾದರೆ, ಚಿತ್ರಮಂದಿರಗಳು ಮೊದಲಿನಂತೆ ಒಪನ್ ಆಗ್ಬೇಕು, ಚಿತ್ರಮಂದಿರಗಳಿಗೆ ಜನರು ಬರಬೇಕು. ಅಲ್ಲಿಗೆ ಜನ ಬರಬೇಕಾದರೆ ಜನರಲ್ಲಿ ಕೊರೋನಾ ಭಯ ಹೋಗಬೇಕು, ಆಗ ಮಾತ್ರ ಚಿತ್ರೋದ್ಯಮಕ್ಕೆ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂದರು ಕ್ರೇಜಿಸ್ಟಾರ್.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ತೂಕ ಹೆಚ್ಚಿಸಿಕೊಂಡ ನಟರ ಪೈಕಿ ಡ್ರಗ್ಸ್ ದಾಸರ‍್ಯಾರು ? ʼಬಾಡಿ ಶೇಪ್ ನೋಡ್ರಿ’ ಸಂಬರ್ಗಿ ಸುಳಿವು ಕೊಟ್ರು !

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್‌ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್‌ ಹೌಸ್‌ ಗಳಲ್ಲಿಮಿಡ್‌ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆಿ.ಇದು ಪ್ರಶಾಂತ್‌ ಸಂಬರಗಿ ಬಿಚ್ಚಿಟ್ಟ ರೋಚಕ ಕಥೆ

ಸ್ಯಾಂಡಲ್‌ವುಡ್‌ಗೆ ಸ್ಯಾಂಡಲ್‌ವುಡ್ಡೇ ಬೆಚ್ಚುವಂತಹ ಬೆಳವಣಿಗೆಗಳು ಆಗುತ್ತಿವೆ. ಸಂಜನಾ-ರಾಗಿಣಿ ಡ್ರಗ್ಸ್ ಸೇವನೆ ದೃಢಪಟ್ಟ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಸಂಬರ್ಗಿ ಮತ್ತೊಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್ ಅಂಗಳದಲ್ಲಿ ನಟಿಮಣಿಯರು ಮಾತ್ರ ಡ್ರಗ್ಸ್ ವ್ಯಸನಿಗಳಾಗಿದ್ದಾರೆಂದು ತಿಳಿದುಕೊಳ್ಳಬೇಡಿ, ನಟರುಗಳು ಕೂಡ ಮಾದಕ ದ್ರವ್ಯಕ್ಕೆ ಮಾರುಹೋಗಿದ್ದಾರೆ. ಮತ್ತಿನ ಮತ್ತಲ್ಲಿ ತೇಲಾಡುತ್ತಾ, ಕೂಗಾಡುತ್ತಾ, ಕಿರುಚಾಡುತ್ತಾ, ಅರಚಾಡುತ್ತಾ, ಸುಮ್ ಸುಮ್ಮನೇ ನಗುತ್ತಾ, ಆವೇಶಭರಿತ ಮಾತುಗಳನ್ನಾಡುತ್ತಾ, ಸಮ್ ಟೈಮ್ಸ್ ಸಪ್ಪೇ ಮೋರೆ ಹಾಕಿಕೊಳ್ಳುತ್ತಾ, ಸಮ್ ಟೈಮ್ಸ್ ಖುಷಿ ಖುಷಿಯಿಂದ ಜಿಗಿದಾಡುತ್ತಾ ಮಾದಕಲೋಕದಲ್ಲಿ ಮೆರೆಯುವ ನಟರುಗಳು ನಮ್ಮಲ್ಲಿದ್ದಾರೆ. ಅವರೆಲ್ಲರ ಅಸಲಿಯತ್ತು ಒಂದಲ್ಲಾ ಒಂದು ದಿನ ಬಟಾಬಯಲಾಗುತ್ತೆ ಎನ್ನುವ ಪ್ರಶಾಂತ್ ಸಂಬರ್ಗಿ, ಸಿನಿಲಹರಿ ಜೊತೆ ಮಾತನಾಡುತ್ತಾ ತೂಕ ಹೆಚ್ಚಿಸಿಕೊಂಡಿರುವ ನಟರುಗಳಿಗೂ- ಡ್ರಗ್ಸ್ ಗೂ ಇರುವ ನಂಟೇನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್‌ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್‌ ಹೌಸ್‌ ಗಳಲ್ಲಿಮಿಡ್‌ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆ. ಡ್ರಗ್ಸ್ ವ್ಯಾಪಾರ ದಂಧೆ-ದುಡಿಮೆ ಮಾಡುವ ಮನಸ್ಥಿತಿ ನಟರಿಗಿಲ್ಲ, ಆದರೆ ಮೋಜು ಮಸ್ತಿಗೇನು ಕಮ್ಮಿಯಿಲ್ಲ ಎನ್ನುವ ಪ್ರಶಾಂತ್, ಯಾವ್ಯಾವ ನಟರು ಡ್ರಗ್ಸ್ ವ್ಯಸನಿಯಾಗಿದ್ದಾನೆಂದು ನಾನು ಮಾಧ್ಯಮದ ಮುಂದೆ ಓಪನ್ ಆಗಿ ಹೇಳೋದಕ್ಕೆ ಆಗದೇ ಇರ‍್ಬೋದು ಆದರೆ ಒಂದೇ ಒಂದು ಸುಳಿವನ್ನ ಕೊಡ್ತೀನಿ ಅಂತ ಕೊಟ್ಟಿದ್ದಾರೆ. ನೀವುಗಳೇ ಆ ನಟರು ಯಾರೆಂದು ಪತ್ತೆಹಚ್ಚಬಹುದು ಹೀಗಂತ ಮಾತು ಶುರುಮಾಡಿದ ಪ್ರಶಾಂತ್ ಸಂಬರ್ಗಿಯವರು, ಕಳೆದ ಎರಡು ವರ್ಷಗಳಲ್ಲಿ ಯಾವ ನಟರ ತೂಕ ಹೆಚ್ಚಾಗಿದೆಯೋ ಆ ನಟರು ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದಾರೆಂದು ಅರ್ಥ ಎಂದಿದ್ದಾರೆ. ಸಂಬರ್ಗಿಯವರ ಈ ಸ್ಟೇಟ್ಮೆಂಟ್ ಕಿವಿಗೆ ಬಿದ್ಮೇಲೆ ಸ್ಯಾಂಡಲ್‌ವುಡ್‌ನ ಒಂದಿಷ್ಟು ನಟರುಗಳು ಕಣ್ಮುಂದೆ ಬಂದು ನಿಲ್ತಾರೆ. ಹಾಗೇ ಬಂದುನಿಂತ ನಟರುಗಳು ದಪ್ಪ ಇದ್ದಾರೆ ಎಂದ ಮಾತ್ರಕ್ಕೆ ಅವರು ಡ್ರಗ್ಸ್ ದಾಸರಾಗಿದ್ದಾರೆಂದು ಒಪ್ಪಿಕೊಳ್ಳುವುದಕ್ಕೆ ಆಗಲ್ಲ. ಯಾಕಂದ್ರೆ, ನಟರುಗಳು ದಪ್ಪ ಆಗೋದು.. ಸಣ್ಣ ಆಗೋದು ಮಾಮೂಲಿ.

ಸಿನಿಮಾಗೋಸ್ಕರ ನಟರುಗಳು ಬದಲಾಗುತ್ತಾರೆ, ಬದಲಾಗಬೇಕಾಗುತ್ತದೆ. ಪಾತ್ರಕ್ಕೆ ಜೀವ ತುಂಬಲು ಕೆಲವೊಮ್ಮೆ ತೂಕ ಹೆಚ್ಚಿಸಿಕೊಳ್ಳಬೇಕಾಗು ತ್ತದೆ, ಕೆಲವೊಮ್ಮೆ ತೂಕ ಇಳಿಸಿಕೊಳ್ಳಬೇಕಾಗುತ್ತದೆ. ಒಂದು ಸಿನಿಮಾಗೆ ಕಮಿಟ್ ಆದ್ಮೇಲೆ ಆ ಸಿನಿಮಾದ ಪಾತ್ರ ಎರೆಡೆರಡು ಶೇಡ್ ಇದ್ದಲ್ಲಿ, ಆ ಪಾತ್ರ ತೂಕವನ್ನು ಹೆಚ್ಚು ಕಡಿಮೆ ಕೇಳಿದ್ದಲ್ಲಿ, ಆ ಪಾತ್ರದ ಚಿತ್ರೀಕರಣ ದ ಸಮಯ ವರ್ಷಗಳು ಹಿಡಿದಲ್ಲಿ ಆ ಚಿತ್ರದ ನಾಯಕನ ದೇಹದ ಹೆಚ್ಚುಕಡಿಮೆಯಾಗುತ್ತೆ. ದಪ್ಪಗಾಗೋದಕ್ಕೆ ಹಾಗೂ ಸಣ್ಣಗಾಗೋದಕ್ಕೆ ಜಿಮ್ ಬಾಗಿಲು ಬಡಿಯುತ್ತಾರೋ, ಫಿಟ್ನೆಸ್ ಟ್ರೈನರ್‌ಗಳ ಸಲಹೆಯಂತೆ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ತಾರೋ ಅಥವಾ ಯಾವುದು ಬೇಡ ಗುರು ಅಂತ ನಾಲ್ಕು ಗೋಡೆಯ ಮಧ್ಯೆ ದೇಹದಂಡಿಸ್ತಾರೋ ಗೊತ್ತಿಲ್ಲ. ಒಟ್ನಲ್ಲಿ, ಸಿನಿಮಾಗೋಸ್ಕರ ಕಟ್ಟುಮಸ್ತಾಗಿ ಮೈಹುರಿಗೊಳಿಸಿಕೊಂಡು ಅಖಾಡಕ್ಕೆ ಧುಮುಕುತ್ತಾರೆ. ಕಮಿಟ್ ಆದಂತೆ ಆ ಮೂವೀನಾ ಮುಗಿಸಿಕೊಡ್ತಾರೆ, ಅನ್ನದಾತರನ್ನ ಉಳಿಸ್ತಾರೆ, ಚಿತ್ರರಂಗವನ್ನ ಬೆಳೆಸ್ತಾರೆ, ಕೋಟ್ಯಾಂತರ ಪ್ರೇಕ್ಷಕರನ್ನ ರಂಜಿಸ್ತಾರೆ. ಇದೆಲ್ಲಾ ಹೊರಜ ಗತ್ತಿಗೆ ಗೊತ್ತಿದೆ. ಇದರಾಚೆಗಿರುವ ಸತ್ಯಾಸತ್ಯತೆ ಸಾಮಾನ್ಯರಿಗೆ ಗೊತ್ತಿಲ್ಲ ಅಷ್ಟು ಸುಲಭವಾಗಿ ತಿಳಿಯೋದು ಇಲ್ಲ ಬಿಡಿ.

ಹಾಗಾದ್ರೆ, ಯಾವುದು ಸತ್ಯ? ಯಾವುದು ಸುಳ್ಳು? ಗೊತ್ತಿಲ್ಲ. ಆದರೆ, ಕೆಲವು ಸತ್ಯ ನನಗೆ ಗೊತ್ತಿದೆ ಎನ್ನುವ ಪ್ರಶಾಂತ್ ಸಂಬರ್ಗಿಯವರು ಕೆಲವು ನಟರು ಸಿನಿಮಾಗಾಗಿ ದಪ್ಪ ಆಗಿದ್ದಾರೆ ಅಂತ ನೀವು ತಿಳಿದುಕೊಂಡಿದ್ದೀರಾ ಅಷ್ಟೇ. ಆದರೆ, ಅವರುಗಳು ದಪ್ಪ ಆಗಿರುವುದು ಮೂವಿಗೋಸ್ಕರ ಅಲ್ಲ, ಬದಲಾಗಿ ಡ್ರಗ್ಸ್ ಅಡಿಕ್ಟ್ ಆಗಿ ತೂಕ ಹೆಚ್ಚಾಗಿದೆ ಎಂದಿದ್ದಾರೆ. ಡ್ರಗ್ಸ್ ನಲ್ಲಿ ಅಪ್ ಡ್ರಗ್ಸ್ ಹಾಗೂ ಡೌನ್ ಡ್ರಗ್ಸ್ ಎನ್ನುವ ಎರಡು ರೀತಿಯದಿದ್ದೇ. ಅಪ್ ಡ್ರಗ್ಸ್ ನಲ್ಲಿ ಗಾಂಜಾ ಬರುತ್ತೆ. ಇದು ತುಂಬಾ ಖುಷಿಪಡಿಸುತ್ತೆ. ಹೊಟ್ಟೆ ತುಂಬಾ ಊಟ ಮಾಡ್ತಾರೆ, ಸದಾ ಹ್ಯಾಪಿಯಾಗಿರುತ್ತಾರೆ. ಸುಮ್ ಸುಮ್ನೆ ನಗ್ತಾರೆ, ಕಿರುಚಾಡುತ್ತಾರೆ, ಹೊಡೆದಾಡುತ್ತಾರೆ, ಆವೇಶಭರಿತ ಮಾತುಗಳನ್ನಾಡುತ್ತಾರೆ. ಅದೇ, ರೀತಿ ಡೌನ್ ಡ್ರಗ್ಸ್ ಅಡಿಕ್ಟ್ ಆದ ನಟರುಗಳು ಇದ್ದಾರೆ. ಕೆಮಿಕಲ್ ಡ್ರಗ್ಸ್ನ ಸೇವನೆ ಮಾಡಿಕೊಂಡು ಗರ ಬಡಿದವರ ಥರ ಇರುತ್ತಾರೆ. ಟೈಮ್ ಟು ಟೈಮ್ ಊಟ ಮಾಡಲ್ಲ, ನಿದ್ದೆ ಮಾಡಲ್ಲ. ಒಂಟಿಯಾಗಿ ಅಲೆಮಾರಿ ಥರ ಇರುವುದು ನಿಲ್ಲಿಸಿಲ್ಲ ಅವರು ಹೀಗಂತ ಪ್ರಶಾಂತ್ ಹಿಂಟ್ ಮೇಲೆ ಹಿಂಟ್ ಕೊಟ್ಟಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಪ್ರಶಾಂತ್ ಸಂಬರ್ಗಿಯವರು, ಗಾಂಜಾ ಸೇವನೆ ಮಾಡಿದವರು ಹೆಚ್ಚು ಊಟ ಮಾಡ್ತಾರೆ, ನಾನ್ ವೆಜ್ ತಿನ್ನುತ್ತಾರೆ ಇದರಿಂದ ಐದಲ್ಲ ಹತ್ತಲ್ಲ ೧೫ ಕೆಜಿ ತೂಕ ಜಾಸ್ತಿಯಾಗುತ್ತೆ ಎಂದಿದ್ದಾರೆ. ನಾನು ಕಾಗಕ್ಕ ಗುಬ್ಬಕ್ಕ ಸ್ಟೋರಿ ಹೇಳುತ್ತಿಲ್ಲ ಕಳೆದ ಎರಡು ವರ್ಷದಿಂದ ಡ್ರಗ್ಸ್ ದಾಸರ ಮೇಲೆ ವರ್ಕ್ ಮಾಡಿದ್ದೇನೆ. ೧೫೦ ರಿಯಾಬಿಲಿಟೇಷನ್ ಮಾಡಿ ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಮಾದಕ ವ್ಯಸನಕ್ಕೆ ಒಳಗಾದವರ ಮನಸ್ತಿತಿ ಹೇಗಿರುತ್ತೆ ಎಂದು ಅರಿತುಕೊಂಡಿದ್ದೇನೆ. ನಾನು ಯಾರೊಬ್ಬರನ್ನೂ ಟಾರ್ಗೆಟ್ ಮಾಡಿ ಹೇಳುತ್ತಿಲ್ಲ. ಸಮಾಜಕ್ಕೆ ಕಂಟಕವಾಗಿರುವ ಡ್ರಗ್ಸ್ ಮಾಫಿಯಾ ತೊಡೆದು ಹಾಕುವುದಕ್ಕೆ ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ. ತನಗೆ ಗೊತ್ತಿರುವ ಹೆಚ್ಚಿನ ಮಾಹಿತಿಯನ್ನ ಪೊಲೀಸರಿಗೆ ಒಪ್ಪಿಸಲಿದ್ದೇನೆ ಎಂದಿದ್ದಾರೆ ಪ್ರಶಾಂತ್.


ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಂಜನಾ – ರಾಗಿಣಿ ಡ್ರಗ್ಸ್‌ ದಾಸಿಯರಾ ? ಕೊದಲೆಳೆಯಲ್ಲಿ ಸಿಕ್ಕಿಬಿದ್ದವರ ಕಥೆ ಮುಂದೇನಾಗುತ್ತೆ?

ಜಾಮೀನ ಮೇಲೆ ಜೈಲಿನಿಂದ ಹೊರ ಬಂದ ಮೇಲೆ ರಾಗಿಣಿ, ಸಂಜನಾ ಇಬ್ಬರೂ ಫ್ರೀ ಬರ್ಡ್‌ ನಂತೆಯೇ ಹಾರಾಡಿಕೊಂಡಿದ್ದರು. ಪ್ರಕರಣದ ಬಗ್ಗೆ ಮಾತನಾಡದೆ, ದೇವರಿದ್ದಾನೆ ಅಂತ ನಂಬಿಕೊಂಡಿದ್ದರು. ಆದರೆ ಈಗ ರಿಯಾಲಿಟಿ ರಿವೀಲ್‌ ಆಗಿದೆ. ಇಬ್ಬರಿಗೂ ಈಗ ಸಂಕಷ್ಟ ಬಂದಾಗಿದೆ..

ಸ್ಯಾಂಡಲ್‌ವುಡ್‌ ಮತ್ತೆ ಬೆಚ್ಚಿ ಬಿದ್ದಿದೆ. ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಹೊರಬಂದಿದ್ದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರಿಗೂ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಇಬ್ಬರೂ ನಟಿಯರು ಡ್ರಗ್ಸ್‌ ಸೇವನೆ ಮಾಡಿರುವುದು ಈಗ ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ದೃಢ ಪಟ್ಟಿದೆ. ಪ್ರಕರಣ ಕುರಿತು ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಎಫ್‌ಎಸ್‌ಎಲ್‌ ವರದಿಯನ್ನು ಈಗಾಗಲೇ ಕೋರ್ಟ್‌ಗೂ ಸಲ್ಲಿಕೆ ಮಾಡಿದ್ದಾರೆ. ಈಗ ಶುರುವಾಗಿರೋದು ಈ ಇಬ್ಬರು ನಟಿಮಣಿಯರ ಕಥೆ ಮುಂದೇನು ಅಂತ.

ಡ್ರಗ್ಸ್‌ ಸೇವನೆ ದೃಢ ಪಟ್ಟಿರೋದ್ರಿಂದ ಮುಂದೆ ಇಬ್ಬರಿಗೂ ಮತ್ತೆ ಜೈಲಾ ಅಥವಾ ಇನ್ನೇನಾದರೂ ಶಿಕ್ಷಗೆ ಗುರಿಯಾಗಿ ಜೈಲಿಗೆ ಹೋಗದೆ ಉಳಿಯುತ್ತಾರಾ? ಎಫ್‌ಎಸ್‌ಎಲ್‌ ವರದಿ ಬಹಿರಂಗವಾದ ಬೆನ್ನಲೇ ಚಿತ್ರರಂಗದಲ್ಲಿ ಇಂತಹ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸದ್ಯಕ್ಕೆ ಎಫ್‌ಎಸ್‌ಎಲ್‌ ಪರೀಕ್ಷಾ ವರದಿ ಈಗ ಕೋರ್ಟ್‌ಗೆ ಹೋಗಿದೆ. ಕೋರ್ಟ್‌ ಅದನ್ನು ಹೇಗೆ ತೆಗೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಇದು ದೊಡ್ಡ ಸಾಕ್ಷಿ ಆಗುವ ಸಾಧ್ಯತೆ ಇದೆ. ಇದೆಲ್ಲ ನೋಡಿದರೆ ಇಬ್ಬರೂ ನಟಿಯರಿಗೆ ಸಂಕಷ್ಟ ಎದುರಾಗುವುದು ಖಚಿತ ಅಂತಲೂ ಹೇಳಲಾಗುತ್ತಿದೆ. ಆ ಮೂಲಕ ಡ್ರಗ್ಸ್‌ ಮಾಫಿಯಾ ಪ್ರಕರಣ ಇನ್ನೊಂದು ಹಂತಕ್ಕೆ ಕಾಲಿಡಲಿದೆ.

ಹೆಚ್ಚು ಕಡಿಮೆ ಒಂದು ವರ್ಷದ ಹಿಂದೆ ಸ್ಯಾಂಡಲ್‌ ವುಡ್‌ ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಪ್ರಕರಣ ಇದು. ಡ್ರಗ್ಸ್‌ ಮಾಫಿಯಾ ಪ್ರಕರಣ ಹೊರ ಬಂದ ದಿನಗಳಲ್ಲಿ ಸ್ಯಾಂಡಲ್‌ವುಡ್‌ ಮಂದಿಯ ಕೆಲವು ಹೆಸರುಗಳು ಒಂದೊಂದಾಗಿಯೇ ಹೊರಬರುತ್ತಿದ್ದಂತೆ ಇಡೀ ಚಿತ್ರರಂಗವೇ ಒಂದು ಕ್ಷಣ ನಡುಗಿ ಹೋಯಿತು. ಯಾಕಂದ್ರೆ ಸ್ಯಾಂಡಲ್‌ ವುಡ್‌ ಮಟ್ಟಿಗೆ ಇಂತಹ ಪ್ರಕರಣ ದೊಡ್ಡದಾಗಿ ಸುದ್ದಿ ಆಗಿದ್ದೇ ಅದೇ ಮೊದಲು. ಹಾಗೆ ನೋಡಿದರೆ ಇವತ್ತು ಕನ್ನಡ ಚಿತ್ರರಂಗವೂ ಕೂಡ ಟಾಲಿವುಡ್‌, ಕಾಲಿವುಡ್‌ ಮಟ್ಟಿಗೆ ಬೆಳೆದಿದೆ ಎನ್ನುವುದು ನಿಜವೇ ಆದರೂ, ಬಾಲಿವುಡ್‌ ನಲ್ಲಿರುವ ಮೋಜು ಮಸ್ತಿಯ ಸಂಸ್ಕೃತಿ ಇಲ್ಲಿ ಇಲ್ಲ ಅಂತಲೇ ಕನ್ನಡ ಸಿನಿಮಾ ಪ್ರೇಕ್ಷಕರು ನಂಬಿದ್ದರು. ಆದರೆ ಡ್ರಗ್ಸ್‌ ಮಾಫಿಯಾ ಪ್ರಕರಣ ಹೊರ ಬಂದ ಬೆನ್ನಲೇ ಅದರಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಕೆಲವರ ಹೆಸರು ಬಯಲಾಗುತ್ತಿದ್ದಂತೆ ಚಿತ್ರರಂಗ ಮಂದಿ ಮಾತ್ರವಲ್ಲ ಕನ್ನಡದ ಸಿನಿಮಾ ಪ್ರೇಕ್ಷಕಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಅದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದಾಗ ಚಿತ್ರರಂಗದ ನಟ-ನಟಿಯರ ಬಗ್ಗೆ ಜನರಲ್ಲಿದ್ದ ವಿಶ್ವಾಸಗಳೇ ಕಳೆದು ಹೋಗಿದ್ದು ಹೌದು. ಇಷ್ಟಾಗಿಯೂ ಆ ಹೊತ್ತಿಗೆ ಈ ಇಬ್ಬರು ನಟಿಯ ಮೇಲಿನ ಆರೋಪ ಸಾಬೀತು ಆಗಿರಲಿಲ್ಲ, ಜತೆಗೆ ಅವರ ಡ್ರಗ್ಸ್‌ ಸೇವನೆ ಮಾಡಿದ್ದು ಕೂಡ ದೃಢಪಟ್ಟಿರಲಿಲ್ಲ. ಅದೇ ಕಾರಣಕ್ಕೆ ಅವರಿಬ್ಬರೂ ಕೂಡ ಕೋರ್ಟ್‌ ಕೊಟ್ಟ ಜಾಮೀನಿನ ಮೇಲೆ ಹೊರ ಬಂದಿದ್ದು ನಿಮಗೂ ಗೊತ್ತು. ಅದರ ಜತೆಗೆ ಅವರೊಂದಿಗೆ ರಾತ್ರಿ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದವರು, ಅವರನ್ನು ಇಂತಹ ಪೇಜ್‌ ತ್ರಿ ಪಾರ್ಟಿಗಳಿಗೆ ಇನ್ವೇಟ್‌ ಮಾಡುತ್ತಿದ್ದರ ಬಗ್ಗೆಯಾಗಲಿ ಅನುಮಾನಿ ಸುವುದು ಕಷ್ಟವೇ ಆಗಿತ್ತು. ಪರಿಸ್ಥಿತಿ ಈಗ ಬದಲಾಗುತ್ತಿದೆ. ಯಾಕಂದ್ರೆ ಈ ಇಬ್ಬರೂ ನಟಿಯರು ಡ್ರಗ್ಸ್‌ ಸೇವನೆ ಮಾಡಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಕೋರ್ಟ್‌ ಇದನ್ನು ಪ್ರಮುಖ ಸಾಕ್ಷಿಯಾಗಿ ಸ್ವೀಕರಿಸಿದರೆ, ಇಬ್ಬರಿಗೂ ಯಾವುದೇ ಬಗೆಯ ಕಠಿಣ ಶಿಕ್ಷೆ ನೀಡಬಹುದು. ಇದೇ ವಿಚಾರದಲ್ಲಿ ಈಗ ಜೈಲು ಹಕ್ಕಿಗಳಿಬ್ಬರಿಗೂ ಸಂಕಷ್ಟವೋ ಸಂಕಷ್ಟ.

ಫಿಕ್ಚರ್‌ ರಿಲೀಸ್‌ ಮುಂದಿದೆ. ಅದೇನಾಗುತ್ತೋ ಗೊತ್ತಿಲ್ಲ. ಆದರೆ, ಇವರಿಬ್ಬರು ಡ್ರಗ್ಸ್‌ ಸೇವನೆ ಮಾಡಿದ್ದು ದೃಢಪಟ್ಟಿರುವುದರ ಮೂಲಕ ಹೊಸ ವಿಚಾರಗಳು ಈಗ ಬಯಲಾಗಬೇಕಿದೆ. ಯಾಕಂದ್ರೆ ಇದೊಂದು ದೊಡ್ಡ ಮಾಫಿಯಾ ಅನ್ನೋದು ಮೊದಲಿನಿಂದಲೂ ಸದ್ದು ಮಾಡುತ್ತಾ ಬಂದಿದೆ. ದೊಡ್ಡ ದೊಡ್ಡ ರಾಜಕಾರಣಿಗಳು, ಪ್ರತಿಷ್ಟಿತ ಉದ್ಯಮಿಗಳು, ಸ್ಯಾಂಡಲ್‌ವುಡ್‌ನ ದಪ್ಪಗಿರುವ ಸ್ಟಾರ್‌ ಗಳು ಈ ಪ್ರಕರಣದಲ್ಲಿದ್ದಾ ರೆಂದೇ ಹೇಳಲಾಗುತ್ತಿದೆ. ಅದು ಮೊದಲು ಬಯಲಾಗಬೇಕು. ಆ ನಿಟ್ಟಿನಲ್ಲಿ ಡ್ರಗ್ಸ್‌ ಮಾಫಿಯಾ ಪ್ರಕರಣಕ್ಕೆ ಮುಂದೆ ಒಂದು ತಾರ್ಕಿಕ ಅಂತ್ಯ ಸಿಗಬಹುದಾ ಎನ್ನುವುದು ದೊಡ್ಡ ಕುತೂಹಲಸ ಸಂಗತಿ. ಸದ್ಯಕ್ಕೆ ರಾಗಿಣಿ, ಸಂಜನಾ ಅವರ ಮುಂದಿನ ಕಥೆ ಏನು ಅನ್ನೋದೇ ದೊಡ್ಡ ಪ್ರಶ್ನೆ. ಹಾಗೊಂದು ವೇಳೆ ಅವರಿಬ್ಬರಿಗೂ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬಂದರೆ, ಅವರ ಬಣ್ಣದ ಬದುಕು ಏನಾಗುತ್ತೆ? ಎಲ್ಲವನ್ನು ಕಾಲವೇ ನಿರ್ಧರಿಸುತ್ತೆ.

  • ಎಂಟರ್ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕುಂವೀ ಕಥೆಯೊಳಗೆ ನಟರಾಜ : ತೆರೆ ಮೇಲೆ ಮೂಡಿಬರಲಿದೆ ಕುಬುಸ !

ಕೊಟ್ರೇಶಿ ಕನಸು ಮೊದಲ್ಗೊಂಡು, ಸಾಹಿತಿ ಕುಂವೀ ಅವರ ಅನೇಕ ಕಥೆಗಳು, ಕಾದಂಬರಿಗಳು ಬೆಳ್ಳಿ ತೆರೆ ಮೇಲೆ ಮೂಡಿ ಬಂದಿವೆ. ಈಗ ಆ ಸಾಲಿಗೆ ಅವರೇ ಬರೆದ ʼಕುಬುಸʼ ಕಥೆ ಕೂಡ ಸಿನಿಮಾ ಆಗ್ತಿದೆ. ಇದರ ಫುಲ್‌ ಡಿಟೈಲ್ಸ್‌ ಇಲ್ಲಿದೆ.

ಸಾಹಿತಿ ಕುಂವೀ ವೀರಭದ್ರಪ್ಪ ಅವರಿಗೂ ಸಿನಿಮಾ ಜಗತ್ತಿಗೂ ಅವಿನಾಭಾವ ನಂಟು. ಯಾಕಂದ್ರೆ, ಅವರು ಬರೆದ ಅನೇಕ ಕಥೆಗಳು, ಕಾದಂಬರಿಗಳು ಸಿನಿಮಾ ಆಗಿವೆ. ಈಗ ಆ ಸಾಲಿಗೆ ಮತ್ತೊಂದು ಕಥೆ ಸೇರಿಕೊಂಡಿದೆ. ಆ ಕಥೆಯ ಹೆಸರು ಕುಬುಸ. ಇದು ಸಾಹಿತಿ ಕುಂವೀ ಅವರು ಬರೆದ ಜನಪ್ರಿಯ ಕಥೆಗಳಲ್ಲಿ ಒಂದು. ಈ ಕಥೆಯನ್ನಾಧರಿಸಿ ಈಗ ಯುವ ನಿರ್ದೇಶಕ ರಮೇಶ್‌ ಹಡಗಲಿ ಅವರು ಸಿನಿಮಾ ಮಾಡುತ್ತಿದ್ದು, ಸದ್ದಿಲ್ಲದೆ ಸುದ್ದಿ ಮಾಡದೆ ಲಾಕ್‌ಡೌನ್‌ ನಡುವೆ ಈ ಚಿತ್ರಕ್ಕೀಗ ಚಿತ್ರೀಕರಣವೂ ಮುಗಿದಿದೆ.

ಕುಂವೀ ಕಥೆ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ, ಅದರಲ್ಲಿ ಗ್ರಾಮೀಣ ಹಿನ್ನೆಲೆ ಯ ಜತೆಗೆ ಬಳ್ಳಾರಿಯ ಸೊಗಡು ಇದ್ದೇ ಇರುತ್ತೆ ಅನ್ನೋದು ಅಷ್ಟೇ ಸತ್ಯ. ಅದೇ ಹಿನ್ನೆಲೆಯಲ್ಲೀಗ ಚಿತ್ರ ತಂಡ ಚಿತ್ರಕ್ಕೆ ಹೊಸಪೇಟೆ ಸುತ್ತಮುತ್ತಲೇ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಪ್ರಮುಖವಾಗಿ ಎರಡು ಪಾತ್ರಗಳಿರುವ ಕಥೆ ಇದು. ತಾಯಿ-ಮಗನ ನಡುವೆ ನಡೆಯುವ ಮನ ಮೀಡಿಯುವ ಕಥಾ ಹಂದರ. ಅದರಲ್ಲಿ ʼರಾಮಾ ರಾಮಾ ರೇʼ ಖ್ಯಾತಿಯ ಯುವ ನಟ ನಟರಾಜ್‌ ಭಟ್ ಹಾಗೂ ರಂಗ ಕಲಾವಿದೆ ಬಳ್ಳಾರಿ ಮೂಲದ ಹನುಮಕ್ಕ ತಾಯಿ-ಮಗನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಮಹಾಲಕ್ಷ್ಮಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಮಂಜುಗೌಡ,ರಮ್ಯಾ, ಮಂಜಮ್ಮ ಜೋಗುತಿ, ಹುಲಗಪ್ಪ ಕಟ್ಟಿಮನಿ ಹಾಗೂ ಚಂದ್ರಶೇಖರ್‌ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕಿನ್ನು ಟೈಟಲ್‌ ಫೈನಲ್‌ಆಗಿಲ್ಲ. ಶೂಟಿಂಗ್‌ ಮಾತ್ರ ಮುಗಿದಿದೆ.

ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ನಟ ಪಾಲ್ಗೊಂಡಿರುವ ನಟರಾಜ್‌, ಸಿನಿ ಲಹರಿ ಜತೆಗೆ ಚಿತ್ರೀಕರಣದ ಅನುಭವ ಹಂಚಿಕೊಂಡರು.ʼ ಗ್ರಾಮೀಣ ಸೊಗಡಿನ ಅದ್ಬುತ ಕಥೆ ಇದು. ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ. ದೊಡ್ಡ ಕಮರ್ಷಿಯಲ್‌ ಸಿನಿಮಾ ಅಲ್ಲ ಎನ್ನುವುದಕ್ಕಿಂತ, ಅಭಿನಯಕ್ಕೆ ಒಂದೊಳ್ಳೆಯ ಅವಕಾಶ ಇರುವಂತಹ ಪಾತ್ರ. ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಡೆದಿದ್ದೇ ಗೊತ್ತಾಗಲಿಲ್ಲ. ನಾನು ಹಳ್ಳಿಯಿಂದಲೇ ಬಂದವನು. ಅದೇ ಅನುಭವ ಚಿತ್ರೀಕರಣದಲ್ಲೂ ಇತ್ತು. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು ನಟರಾಜ್.‌ ನಿರ್ದೇಶಕ ರಮೇಶ್‌ ಅವರೇ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸಾಹಿತ್ಯ ರಚನೆಯ ಜತೆಗೆ ಪ್ರದ್ರೀಪ್‌ಚಂದ್ರ ಸಂಗೀತ ನೀಡಿದ್ದಾರೆ.ಚೇತನ್‌ ಶರ್ಮಾ ಛಾಯಾಗ್ರಹಣ ವಿದೆ.ಅರ್ಜುನ್‌ ಕಿಟ್ಟು ಸಂಕಲನ ಮಾಡುತ್ತಿದ್ದಾರೆ.
-ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆಕ್ಷನ್ ಪ್ರಿನ್ಸ್- ಶೋ ಮ್ಯಾನ್ ಪ್ರೇಮ್ಸ್ ‘ ಓಂಕಾರ’ ; ಯುದ್ಧಕ್ಕೆ ಡೆಡ್ಲಿ‌ ಕಾಂಬೋ ಶ್ರೀಕಾರ !

ಯುದ್ಧದಲ್ಲಿ ಹೋರಾಡಿ ಹುತಾತ್ಮರಾದರೆ ಸ್ವರ್ಗದ ಬಾಗಿಲು ತೆರೆದಿರುತ್ತೆ. ಅದೇ ರೀತಿ ಯುದ್ಧದಲ್ಲಿ ಕಾದಾಡಿ ಗೆದ್ದರೆ ಅಲಂಕರಿಸೋದಕ್ಕೆ ಸಿಂಹಾಸನ ರೆಡಿಯಾಗಿರುತ್ತೆ. ಹೀಗಾಗಿ, war is always good ಹೀಗಂತ ವಿಲನ್ ಡೈರೆಕ್ಟರ್ ಹೇಳಿದ್ದಾಗಿದೆ. ತೋಳ್ ತುಂಬಾ ತಾಕತ್ತಿದ್ರೂ ತಕರಾರ್ ಮಾಡಲ್ಲ. ಎದೆ ತುಂಬಾ ನಿಯತ್ತಿದ್ರೂ ಗುಲಾಮ ಆಗಿರಲ್ಲ. ಗೂಳಿ ಸೈಲೆಂಟಾಗಿದೆ ಅಂತ ಗಾಂಚಾಲಿ ಮಾಡೋಕೆ ಬಂದರೆ, ಗುದ್ದೋ ಏಟಿಗೆ ಗೂಗಲ್ ನಲ್ಲಿ ಹುಡುಕಿದರೆ ಸಿಗಲ್ಲ. ಏಯ್ ಐ ಆಮ್ ನಟೋರಿಯಸ್ ಹೀಗಂತ ಆಕ್ಷನ್ ಪ್ರಿನ್ಸ್ ಗುಡುಗಿದ್ದಾಗಿದೆ. ಇನ್ನೇನಿದ್ರೂ ಯುದ್ಧ ಶುರು ಮಾಡೋದಷ್ಟೇ ಬಾಕಿ.

ಯಸ್, ಈ ಕಾಂಬೋ ಬಗ್ಗೆ ಸೋಷಿಯಲ್ ಮೀಡಿಯಾನೇ ಗೆಸ್ ಮಾಡಿತ್ತು. ಯುದ್ಧ ಒಳ್ಳೆಯದೇ ಬಿಡಿ ಅಂತ ಪ್ರೇಮ್ ಸಾಹೇಬ್ರು ಸಾಮಾಜಿಕ ಜಾಲತಾಣದಲ್ಲಿ ಗೀಚಿದಾಗಲೇ ಪೊಗರು ಸ್ಟಾರ್ ಗೆ ಜೋಗಿ ಪ್ರೇಮ್ ಡೈರೆಕ್ಟ್ ಮಾಡ್ತಾರೆ ಅಂತ ಸುದ್ದಿಯಾಯ್ತು. ಈ ಮಧ್ಯೆ ‘ಗೆಟ್ ರೆಡಿ ಫಾರ್ ಡಿಎಸ್ 6’ ಅಂತ ಆಕ್ಷನ್ ಪ್ರಿನ್ಸ್ ಅನೌನ್ಸ್ ಮಾಡಿದಾಗ ವಿಲನ್ ಡೈರೆಕ್ಟರ್ ಹಾಗೂ ಬಹದ್ದೂರ್ ಹೀರೋ ಕಾಂಬೋ ಜೊತೆಯಾಗ್ತಿರುವುದು. ಬಹುತೇಕ ಪಕ್ಕಾ ಆಗಿತ್ತು. ಈಗ ಹಂಡ್ರೆಡ್ ಪರ್ಸೆಂಟ್ ಕ್ಲಿಯರ್ ಆಗಿದೆ. ಪ್ರೇಮ್ – ಧ್ರುವ ಜೋಡಿ ಫಸ್ಟ್ ಟೈಮ್ ಜೊತೆಯಾಗಿದೆ.

ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ ಹೀಗಂತ ಟ್ವೀಟ್ ಮಾಡಿ ಆಕ್ಷನ್ ಪ್ರಿನ್ಸ್ ಜೊತೆಗೆ ಸಿನಿಮಾ ಮಾಡ್ತಿರುವುದಾಗಿ ಪ್ರೇಮ್ ಅನೌನ್ಸ್ ಮಾಡಿದ್ದಾರೆ. ಲೆಜೆಂಡರಿ ಡೈರೆಕ್ಟರ್ ಹಾಗೂ ಪ್ರೆಸ್ಟೀಜಿಯಸ್ ಬ್ಯಾನರ್ ಜೊತೆಗಿನ ತಮ್ಮ ಸಿನಿಮಾದ ಬಗ್ಗೆ ಧ್ರುವ ಎಕ್ಸೈಟ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ನಟನೆಯಲ್ಲಿ ಧ್ರುವಾಗೆ ಆರನೇ ಸಿನಿಮಾ ಇತ್ತ ಪ್ರೇಮ್ ಗೆ ನಿರ್ದೇಶನದಲ್ಲಿ ಒಂಭತ್ತನೇ ಮೂವೀ.

ಯಸ್, ಕರಿಯ ಸಿನಿಮಾಗೆ ಡೈರೆಕ್ಟರ್ ಹ್ಯಾಟ್ ತೊಟ್ಟು ಮೊದಲ ಸಿನಿಮಾದಲ್ಲೇ ಹಿಟ್ ಕೊಟ್ಟ ಶೋಮ್ಯಾನ್ ಪ್ರೇಮ್, ಇಲ್ಲಿವರೆಗೂ ಎಂಟು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ಎಕ್ಸ್ ಕ್ಯೂಸ್ ಮೀ, ಜೋಗಿ,ಜೋಗಯ್ಯದಂತಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ಗಂಧದಗುಡಿಗೆ ಕೊಡುಗೆಯಾಗಿ‌ ನೀಡಿದಂತಹ ಮದ್ದೂರಿನ ಭೈರೇಗೌಡ್ರು ಸ್ಟಾರ್ ಡೈರೆಕ್ಟರ್ ಅಲ್ಲ ಸೆನ್ಸೇಷನಲ್ ಡೈರೆಕ್ಟರ್ ಆಗಿ ಸಂಚಲನ‌ ಸೃಷ್ಟಿಸಿದ್ದಾರೆ. ಸೌತ್ ಸಿನಿ ದುನಿಯಾ ಮಂದಿ ಹಿಂತಿರುಗಿ ನೋಡುವಂತಹ‌ ಮೂವಿಗಳನ್ನು ಕೊಡುತ್ತಾ ಬರ್ತಿದ್ದಾರೆ. ಅಲ್ಲದೇ ಸ್ವಂತ ಬ್ರ್ಯಾಂಡ್ ಆಗಿದ್ದಾರೆ. ಇದೀಗ ತಮ್ಮ ನಿರ್ದೇಶನದ ಒಂಭತ್ತನೇ ಸಿನಿಮಾದ ಮೂಲಕ ದಶದಿಕ್ಕುಗಳಲ್ಲೂ ಹವಾ ಎಬ್ಬಿಸೋಕೆ ಹೊರಟಿದ್ದಾರೆ. ಈ ಮಧ್ಯೆ ಏಕ್ ಲವ್ ಯಾ ಸಿನಿಮಾ ರಿಲೀಸ್ ಗಾಗಿ ಎದುರು ನೋಡ್ತಿದ್ದಾರೆ.

ದಿ ವಿಲನ್ ಸಿನಿಮಾ ಮೂಲಕ ಪ್ರೇಮ್ ಕೂಡ ಗಡಿದಾಟಿದ್ದಾರೆ. ಪೊಗರು ಮೂಲಕ ಪರಭಾಷಾ ಅಂಗಳದಲ್ಲಿ ಧ್ರುವ ಕೂಡ ಖದರ್ ತೋರಿಸಿದ್ದಾರೆ. ಹೀಗೆ, ಗಡಿದಾಟಿ ಘರ್ಜಿಸಿರುವ ಇಬ್ಬರು ಮಾಸ್ ಸ್ಟಾರ್ಸ್ ಫಸ್ಟ್ ಟೈಮ್ ಕೈಜೋಡಿಸಿದ್ದಾರೆ. ಹೀಗಾಗಿ ಈ‌ ಡೆಡ್ಲಿ ಕಾಂಬೋ ಮೇಲೆ ನಿರೀಕ್ಷೆ ಹೆಚ್ಚಿದೆ. ಯುದ್ದ ಒಳ್ಳೆಯದೇ ಅಂತ ಜೋಗಿ ನಿರ್ದೇಶಕರು ಹೇಳಿರೋದ್ರಿಂದ ಬಹದ್ದೂರ್ ಗಂಡು ಅಲಿಯಾಸ್ ಬೆಂಕಿಚೆಂಡನ್ನ ವಾರ್ ಫೀಲ್ಡಿಗಿಳಿಸೋದು ಪಕ್ಕಾ. ತೋಳ್ ತುಂಬಾ ತಾಕತ್ತು ತುಂಬಿಕೊಂಡಿರುವ ಪೊಗರು ಸ್ಟಾರ್ ಯುದ್ಧಕ್ಕೆ ಸಜ್ಜಾಗೋದು ಸತ್ಯಾ.

ಇನ್ಮೇಲೆ ಉದ್ದುದ್ದ ಡೈಲಾಗ್ ಹೊಡೆಯಲ್ಲ ಅಂತ ಬಹದ್ದೂರ್ ಹೀರೋ ಖಡಕ್ಕಾಗಿ ಹೇಳಿಬಿಟ್ಟಿದ್ದಾರೆ.ಅದ್ದೂರಿ ಸಾರಥಿ ಜೊತೆ ಮತ್ತೆ ಒಂದಾಗಿದ್ದು, ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಪ್ರೇಮ್ ಸಾಹೇಬ್ರಿಗೆ ಧ್ರುವ ಕಾಲ್ ಶೀಟ್ ಕೊಟ್ಟಿದ್ದಾರೆ.‌ ಮಾರ್ಟಿನ್ ಜೊತೆಜೊತೆಗೆ ದಿ ವಿಲನ್ ಸಾರಥಿಯ ಅಖಾಡಕ್ಕೆ ಧ್ರುವ ಧುಮುಕ್ತಾರಾ ಅಥವಾ ಮಾರ್ಟಿನ್ ಕಂಪ್ಲೀಟಾಗಿ ಮುಗಿದ್ಮೇಲೆ ಪ್ರೇಮ್ ಜೊತೆ ಯುದ್ಧಕ್ಕೆ ಸಜ್ಜಾಗ್ತಾರೋ ಗೊತ್ತಿಲ್ಲ. ಆದರೆ, ಯುದ್ದದ ಮೇಲಿನ ನಿರೀಕ್ಷೆಯಂತೂ ಲೋಡೆಡ್ ಗನ್ನಿನಂತಾಗಿದೆ.

ಆಕ್ಷನ್ ಪ್ರಿನ್ಸ್- ಪ್ರೇಮ್ ಕಾಂಬೋ‌ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ.ಆಗಸ್ಟ್ 09 ರಂದು ಪ್ರೇಮ್ ಅವರ ನಿವಾಸದಲ್ಲೇ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಶೀಘ್ರದಲ್ಲೇ ಟೈಟಲ್ ಅನೌನ್ಸ್ ಮಾಡುವುದಾಗಿ ಪ್ರೇಮ್ ಹೇಳಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಮೂಡಿಬರಲಿದೆ. ಅತೀ ಶೀಘ್ರದಲ್ಲೇ ಹೆಚ್ಚಿನ ಅಪ್ ಡೇಟ್ಸ್ ಲಭ್ಯವಾಗಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಹೆಡ್ ಬುಷ್ ಆಡಲಿದ್ದಾರೆ ಯೋಗಿ – ಧನಂಜಯ್ ; ಡಾಲಿ ಡಾನು, ಲೂಸ್‌ ಮಾದ ಏನು ? ಗೆಳೆಯನಾ, ವಿಲನ್ನಾ ?

ಡಾಲಿ ಧನಂಜಯ್‌ ಡಾನ್‌ ಆಗಿ ಕಾಣಿಸಿಕೊಂಡಿರುವ ʼಹೆಡ್‌ ಬುಷ್‌ʼ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಸಖತ್‌ ಸೌಂಡ್‌ ಮಾಡತೊಡಗಿದೆ. ನಟ ಡಾಲಿ ಧನಂಜಯ್‌ ಹುಟ್ಟು ಹಬ್ಬಕ್ಕೆ ಭಾನುವಾರ ಅದರ ಫಸ್ಟ್‌ ಲುಕ್‌ ಟೀಸರ್‌ ಲಆಂಚ್‌ ಆಗಿದೆ. ಡಾಲಿ ಧನಂಜಯ್‌ ಅವರ ಕ್ಯಾರೆಕ್ಟರ್‌ ಒಂದು ಲುಕು ಇಲ್ಲಿ ರಿವೀಲ್‌ ಆಗಿದೆ. ಸಹಜವಾಗಿಯೇ ಇದು ಚಿತ್ರದ ಬಗ್ಗೆ ದೊಡ್ಡ ಕೌತುಕ ಹುಟ್ಟಿಸಿದೆ. ಈ ನಡುವೆಯೇ ಹೆಡ್‌ ಬುಷ್‌ ಚಿತ್ರದ ಬಗೆಗಿನ ಮತ್ತೊಂದು ಸಂಗತಿ ರಿವೀಲ್‌ ಆಗಿದೆ. ಇದೀಗ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ ಒಂದಾಗಿದ್ದಾರೆ. ಇಬ್ಬರು ಈಗ ಬೆಳ್ಳಿತೆರೆ ಮೇಲೆ ‘ಹೆಡ್ ಬುಷ್’ ಆಡಲು ರೆಡಿ ಆಗಿದ್ದಾರೆ.

ಹೌದು, ಪತ್ರಕರ್ತ ಅಗ್ನಿಶ್ರೀಧರ್ ಕಥೆ ಬರೆದು, ಶೂನ್ಯ ನಿರ್ದೇಶನ ಮಾಡುತ್ತಿರುವ ʼಹೆಡ್ ಬುಷ್ ʼ ಚಿತ್ರದಲ್ಲಿ ಧನಂಜಯ್ ಜತೆಗೆ ಲೂಸ್ ಮಾದ ಯೋಗೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿ ದ್ದಾರಂತೆ. ಈ ಸಂಗತಿಯನ್ನು ‘ಹೆಡ್ ಬುಷ್ ‘ಚಿತ್ರದ ನಾಯಕ ನಟ ಧನಂಜಯ್ ಅವರೇ ರಿವೀಲ್ ಮಾಡಿದ್ದಾರೆ. ಈಗಾಗಲೇ ರಿವೀಲ್‌ ಆಗಿರುವಂತೆ ಹೆಡ್‌ ಬುಷ್‌ ಸಿನಿಮಾ ಡಾನ್‌ ಜಯರಾಮ್‌ ಜೀವನ ಕುರಿತದ್ದು. ಅಂಡರ್‌ ವರ್ಲ್ಡ್‌ ಜಗತ್ತಿನ ಕಥೆ. ಇಲ್ಲಿ ಧನಂಜಯ್‌ ಜಯರಾಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜತೆಗೀಗ ಯೋಗಿ ಜತೆಯಾಗಿದ್ದಾರಂದ್ರೆ ಕುತೂಹಲ ಇರೋದು ಯೋಗಿ ಪಾತ್ರದ ಬಗ್ಗೆ. ಹಾಗಾದ್ರೆ ಯೋಗಿ ಅವರ ಪಾತ್ರ ಏನು? ಸದ್ಯಕ್ಕೆ ಅದೆಲ್ಲ ಮಾಹಿತಿ ಇನ್ನು ನಿಗೂಢ. ಬಟ್‌, ಹೆಡ್‌ ಬುಷ್‌ ನಲ್ಲಿ ಯೋಗಿ ಇದ್ದಾರೆನ್ನುವುದು ನಟ ಧನಂಜಯ್‌ ಅವರೇ ರಿವೀಲ್‌ ಮಾಡಿರುವ ಸಂಗತಿ.

ಲೂಸ್‌ ಮಾದ ಯೋಗೇಶ್‌ ಅಭಿನಯದ ಲಂಕೆ ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಟ ಧನಂಜಯ್‌ ಇಲ್ಲಿಗೆ ಅತಿಥಿಯಾಗಿ ಆಗಮಿಸಿ, ಆಡಿಯೋ ಲಾಂಚ್‌ ಮಾಡಿದರು.ಅದೇ ವೇಳೆ ಯೋಗೇಶ್‌ ಜತೆಗಿನ ಒಡನಾಟದ ಕುರಿತು ಮಾತನಾಡಿದ ಅವರು, ‘ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ ಹೆಡ್ & ಬುಷ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಆತನೊಂ‌ ದಿಗೆ ಕಾಣಸಿಕೊಳ್ಳುತ್ತಿರುವುದೇ ಖುಷಿ ಸಮಾಚಾರ ಎಂಬುದಾಗಿ ನಟ ಧನಂಜಯ್ ಲಂಕೆ ಚಿತ್ರದ ಆಡಿಯೋ ಬಿಡುಗಡೆಯ ವೇದಿಕೆಯಲ್ಲಿ ಹೇಳಿಕೊಂಡರು. ಲೂಸ್ ಮಾದ ಯೋಗಿ ಅಲಿಯಾಸ್ ಯೋಗೇಶ್ ಅಭಿನಯದ ಚಿತ್ರ ‘ಲಂಕೆ’. ಇದೀಗ ರಿಲೀಸ್‌ ರೆಡಿ ಆಗಿದೆ.

ಒಂದಷ್ಟು ಗ್ಯಾಪ್ ನಂತರ ಮತ್ತೆ ಮುಖಕ್ಕೆ ಬಣ್ಣ ಹಚ್ಚಿರುವ ನಟ ಲೂಸ್ ಮಾದ ಯೋಗಿ, ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಅದರ ಜತೆಗೆ ಈಗ ಯೋಗೇಶ್‌ ಅಭಿನಯದ ʼಒಂಭತ್ತನೆ ದಿಕ್ಕುʼ ರಿಲೀಸ್‌ ಗೆ ಸಿದ್ದತೆ ನಡೆಸಿದೆ. ಹಾಗೆಯೇ ಪರಿಮಳ ಲಾಡ್ಜ್‌ ಚಿತ್ರೀಕರಣದ ಹಂತದಲ್ಲಿದೆ.ಕಿರಿಕ್‌ ಶಂಕರ್‌ ಹೆಸರಿನ ಒಂದು ಸಿನಿಮಾ, ಹಾಗೆಯೇ ನಾನು ಮತ್ತು ಸರೋಜ ಎನ್ನುವ ಮತ್ತೊಂದು ಸಿನಿಮಾಕ್ಕೂ ಯೋಗಿ ನಾಯಕರಾಗಿದ್ದು, ಅವೆಲ್ಲ ಕೊರೋನಾ ಹಿನ್ನೆಲೆಯಲ್ಲಿ ಸೈಲೆಂಟ್‌ ಆಗಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದೆ. ಈ ನಡುವೆ ಈಗ ಹೆಡ್‌ ಬುಷ್‌ ಚಿತ್ರದಲ್ಲಿ ಧನಂಜಯ್‌ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರಂತೆ.

ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ

error: Content is protected !!