Categories
ಸಿನಿ ಸುದ್ದಿ

ಸುದೀಪ್ 25ರ ಸಂಭ್ರಮಕ್ಕೆ ಬೆಳ್ಳಿ ನಾಣ್ಯ ಬಿಡುಗಡೆ

ಸುದೀಪ್ ಸಾಂಸ್ಕೃತಿಕ ಪರಿಷತ್ ನಿಂದ ಒಂದು ಸಾವಿರ ಬೆಳ್ಳಿ ನಾಣ್ಯ

ಕನ್ನಡ ಚಿತ್ರರಂಗಕ್ಕೆ ಸುದೀಪ್ ಪಾದಾರ್ಪಣೆ ಮಾಡಿ 25 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ಆ ಸಂಭ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.
ಚಿತ್ರರಂಗದಲ್ಲಿ ಅನೇಕ ಯಶಸದವಿ ಸಿನಿಮಾಗಳನ್ನು ನೀಡಿರುವ ಸುದೀಪ್ ಅವರ ವೃತ್ತಿ ಜೀವನದ ಅವಿಸ್ಮರಣೆಗಾಗಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ವಿಶೇಷ 25 ಗ್ರಾಮ್ ನ 1000 ಬೆಳ್ಳಿ ನಾಣ್ಯವನ್ನು ಬಿಡುಗಡೆ ಮಾಡಲಿದೆ.


ಈ ಸಂದರ್ಭದಲ್ಲಿ ಸುದೀಪ್ ರವರಿಗೆ ಉಡುಗೊರೆಯಾಗಿ 100 ಗ್ರಾಮ್ ಬೆಳ್ಳಿ ನಾಣ್ಯವನ್ನು ಕೊಡಲು ಪರಿಷತ್ ನಿರ್ಧರಿಸಿದೆ.
ಸುದೀಪ್ ಅವರ ವೃತ್ತಿ ಜೀವನದ 25 ವರ್ಷಗಳನ್ನು ಸ್ಮರಿಸುವ ಅವರ ಭಾವಚಿತ್ರವಿರುವ “25 ಗ್ರಾಮ್ ಬೆಳ್ಳಿ ನಾಣ್ಯಗಳನ್ನು ಅಭಿಮಾನಿಗಳಿಗಾಗಿಯೇ ರೆಡಿ ಮಾಡಲಾಗಿದೆ.

Categories
ಸಿನಿ ಸುದ್ದಿ

ನಾನು ಅನುಭವಿಸಿದ ನೋವು, ಅವಮಾನ ಯಾರಿಗೂ ಬೇಡ

ನನ್ನ ಹಾಗೆ ನೀವೂ ಕಷ್ಟ ಪಟ್ಟಿದ್ದೀರಿ, ಗೆಲ್ತೀರಿ, ಮುನ್ನುಗ್ಗಿ ಅಂದ್ರು ವಿನೋದ್‌ಪ್ರಭಾಕರ್

“ನಾನು ಅನುಭವಿಸಿದ ನೋವು, ಅವಮಾನದ ಮುಂದೆ ನಿಮ್ಮದೇನೂ ಅಲ್ಲ. ಸಾಕಪ್ಪ ಸಾಕು, ಈ ಬಣ್ಣದ ಬದುಕು ಅಂದಾಗ ಜನರು ಆಶೀರ್ವಾದ ನೀಡಿದ್ರು. ನಿಮ್ಗೆ ಇದೆಲ್ಲ ಅನುಭವ ಆಗಿಲ್ಲ. ಆದ್ರೂ ನನ್ನ ಹಾಗೆಯೇ ನೀವೂ ಕೂಡ ಕಷ್ಟಪಟ್ಟಿದ್ದೀರಿ, ಅದೇ ನಿಮ್ಗೆ ಗೆಲುವು ತಂದುಕೊಡುತ್ತದೆ. ಇಂದಲ್ಲ ನಾಳೆ ಗೆಲುವು ನಿಮ್ಮದೇ, ಮುನ್ನುಗ್ಗಿ…” ನಟ ವಿನೋದ್‌ಪ್ರಭಾಕರ್‌ಸ್ಟಾರ್‌ಆದ ಹಿಂದಿನ ತಮ್ಮ ಕಠಿಣ ಪರಿಶ್ರಮದ ಅನುಭವವನ್ನು “ಸಿನಿಲಹರಿ” ಮುಂದೆ ಹೀಗೆ ತೆರೆದಿಟ್ಟು, ನೀವು ಗೆದ್ದೇ ಗೆಲ್ತೀರಿ ಅಂತ ಹರಿಸಿದರು.

ಅವರು ಈ ಪ್ರೀತಿಯ ಮಾತುಗಳನ್ನು ಹೇಳಿದ್ದು, “ಸಿನಿ ಲಹರಿ” ಕಚೇರಿಗೆ ಭೇಟೀ ನೀಡಿದ ಸಂದರ್ಭ. ವಿನೋದ್‌ಪ್ರಭಾಕರ್‌ಈಗ ಚಂದನವನದ ಬಹು ಬೇಡಿಕೆಯ ಸ್ಟಾರ್‌ನಟ. “ಮರಿ ಟೈಗರ್‌‌” ಅಂತಾನೇ ಜನಪ್ರಿಯತೆ ಪಡೆದ ನಟ. ಫೆ.೫ ರಂದು ತೆರೆ ಕಾಣುತ್ತಿರುವ “ಶ್ಯಾಡೋ” ಸೇರಿದಂತೆ ಸಾಲು ಸಾಲು ಸಿನಿಮಾಗಳಿಗೆ ಅವರು ಹೀರೋ. ಹಾಗೆಯೇ ಈಗವರು, ದೊಡ್ಡದೊಂದು ಬ್ರೇಕಿಂಗ್‌ಸುದ್ದಿ ಕೊಡುವುದಕ್ಕೂ ರೆಡಿ ಆಗಿದ್ದಾರೆ. ಒಂದು ಮೂಲದ ಪ್ರಕಾರ, ಮುಂಬೈನ ದೊಡ್ಡ ಪ್ರೊಡಕ್ಷನ್‌ಹೌಸ್‌ನಿರ್ಮಾಣ ಮಾಡುತ್ತಿರುವ ಅದ್ದೂರಿ ವೆಚ್ಚದ ಪ್ಯಾನ್‌ಇಂಡಿಯಾ ಸಿನಿಮಾಕ್ಕೆ ವಿನೋದ್‌ಪ್ರಭಾಕರ್‌ಹೀರೋ ಅಂತೆ. ಇದಿನ್ನೂ ಕನ್ಫರ್ಮ್‌ಆಗಿಲ್ಲ. ಆದರೆ, ಆ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನುವ ಸುದ್ದಿಯಂತೂ ಖಾತರಿ.

ಸ್ಯಾಂಡಲ್‌ವುಡ್‌ಗೆ ಇದಂತೂ ಸೆನ್ಸೇಷನ್‌ಸುದ್ದಿ. ಸದ್ಯಕ್ಕೆ ಹೀಗೆಲ್ಲ ಬ್ಯುಸಿ ಆಗಿರುವ ನಟ ವಿನೋದ್‌ಪ್ರಭಾಕರ್‌, ಇತ್ತೀಚೆಗೆ ಪತ್ನಿ ಸಮೇತ “ಸಿನಿ ಲಹರಿ” ಕಚೇರಿಗೆ ಬಂದಿದ್ದರು. ಇದೊಂದು ಔಪಚಾರಿಕ ಭೇಟಿ ಮಾತ್ರ. ನಮ್ಮ ಮೇಲಿನ ಪ್ರೀತಿ, ಅಭಿಮಾನದ ಮೇರೆಗೆ ತಮ್ಮ ಬ್ಯುಸಿ ಶೆಡ್ಯೂಲ್‌ನಡುವೆಯೂ ಕಚೇರಿಗೆ ಬಂದು ಸುಮಾರು ಅರ್ಧ ತಾಸು ಕಚೇರಿಯಲ್ಲಿದ್ದು ಒಂದಷ್ಟು ಹರಟಿದರು. “ಸಿನಿ ಲಹರಿ” ವೆಬ್‌ಸೈಟ್‌ವೀಕ್ಷಿಸಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. “ಸಿನಿಲಹರಿ”ಯಲ್ಲಿರುವ ಬರಹಗಳೇ ಅದ್ಭುತವಾಗಿವೆ. ಇಂತಹ ಗುಣಮಟ್ಟ ಮತ್ತು ನಿಖರವಾದ ವರದಿ, ಸುದ್ದಿಗಳು ಚಿತ್ರರಂಗಕ್ಕೆ ಬೇಕು” ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆ ನಂತರ ಸಜ್ಜುಗೊಳ್ಳುತ್ತಿರುವ “ಸಿನಿಲಹರಿ” ಸ್ಟುಡಿಯೋ ವೀಕ್ಷಿಸಿ, ಖುಷಿಯ ಜೊತೆಗೆ ಅಚ್ಚರಿ ಪಟ್ಟರು. “ಏನೋ ಸಣ್ಣದಾಗಿ ಕಚೇರಿ ಮಾಡಿಕೊಂಡಿದ್ದೀರಿ ಅನ್ಕೊಂಡ್ರೆ, ತುಂಬಾನೆ ಕಷ್ಟಪಟ್ಟು ದೊಡ್ಡ ಸ್ಟುಡಿಯೋವನ್ನೇ ಮಾಡಿದ್ದೀರಿ. ತುಂಬಾ ವರ್ಷಗಳ ಕಾಲ ಪ್ರಾಮಾಣಿಕ ಪತ್ರಿಕೋದ್ಯಮವನ್ನೇ ನಂಬಿಕೊಂಡ ಬಂದ ನೀವು, ಇವತ್ತು ಅಷ್ಟೇ ಶ್ರದ್ದೆ ಮತ್ತು ನಂಬಿಕೆಯಿಂದ ಇಷ್ಟೇಲ್ಲ ಮಾಡಿದ್ದೀರಿ ಅಂತಂದ್ರೆ ಗೆದ್ದೇ ಗೆಲ್ಲುತ್ತೀರಿ, ಒಳ್ಳೆಯದಾಗಲಿʼ ಅಂತ ಹರಸಿದರು. ಕೆಲಸ ಕಳೆದುಕೊಂಡು ನಾವು ಅನುಭವಿಸಿದ ಕ್ಷಣಗಳು, ಆನಂತರ ನಮ್ಮದೇ ಬದುಕು ಕಟ್ಟಿಕೊಳ್ಳಬೇಕೆಂದು ಆರಂಭಿಸಿದ “ಸಿನಿ ಲಹರಿʼಯ ಶುರುವಿನ ದಿನಗಳು, ಆ ನಂತರದ ಜರ್ನಿಯ ಕ್ಷಣಗಳನ್ನು ತಾಳ್ಮೆಯಿಂದ ಕೇಳಿದ ವಿನೋದ್‌ಪ್ರಭಾಕರ್‌, ನಾನು ಅನುಭವಿಸಿದ ನೋವು, ಅವಮಾನ, ನಿಂದನೆಗಳ ಮುಂದೆ ನಿಮ್ದೇನು ಅಲ್ಲ ಅಂತೆನಿಸುತ್ತೆ. ನಟ ಪ್ರಭಾಕರ್‌ಅವರ ಮಗ ಎನ್ನುವ ಪರಿಚಯ ನನಗಿದ್ದರೂ, ಅದೆಲ್ಲ ಉದ್ಯಮದ ಮುಂದೆ ವರ್ಕೌಟ್‌ಆಗಲಿಲ್ಲ. ಅದರ ಪರಿಣಾಮ ಸೋಲು, ನೋವು ನನ್ನನ್ನೇ ಹೈರಾಣಾಗಿಸಿತುʼ ಅಂತ ಒಂದು ಕ್ಷಣ ಭಾವುಕರಾದರು ವಿನೋದ್‌ಪ್ರಭಾಕರ್.‌

ಮರಿ ಟೈಗರ್‌ವಿನೋದ್‌ಪ್ರಭಾಕರ್‌ಮಾತು ಮುಂದುವರೆಸಿದರು. ” ನಮ್ಮ-ನಿಮ್ಮಂತವರಿಗೆ ಸಕ್ಸಸ್‌ಸುಮ್ಮನೆ ಸಿಗೋದಿಲ್ಲ. ಕಷ್ಟಪಟ್ಟ ಮೇಲೆಯೇ ಗೆಲುವು. ನನಗೂ ಕೂಡ. ಸಾಕಪ್ಪ ಸಾಕು, ಈ ಸೋನು, ನೋವು ಅಂದಾಗ ಜನ ಕೈ ಹಿಡಿದರು. ಕೊನೆಗೂ ಸಕ್ಸಸ್‌ಕಂಡೆ. ಅಲ್ಲಿಂದ ನನ್ನದೇ ಒಂದು ಸೂತ್ರ ಇಟ್ಕೊಂಡು ಸಿನಿಮಾ ಮಾಡುತ್ತಾ ಬರುತ್ತಿದ್ದೇನೆ. ನಾನು ಯಾರನ್ನೂ ಮೋಸ ಮಾಡಲಾರೆ. ಯಾರಿಗೂ ಅನಗತ್ಯ ಬಂಡವಾಳ ಹಾಕುವಂತೆ ಹೇಳಲಾರೆ. ನನ್ನ ಸಿನಿಮಾದ ಬಜೆಟ್‌ಇಷ್ಟು, ಅದರಿಂದ ಬರುವ ಆದಾಯ ಇಷ್ಟು, ಬೇಕಾದ್ರೆ ಸಿನಿಮಾ ಮಾಡಿ, ಇಲ್ಲ ಅಂದ್ರೆ ಬೇರೆ ಯಾರನ್ನಾದರೂ ನೋಡಿಕೊಳ್ಳಿ ಅಂತ ಹೇಳಿ ಬಿಡುತ್ತೇನೆ. ಇಷ್ಟು ನಿಷ್ಟುರತೆಯಿಂದ ಯಾರು ಹೇಳುತ್ತಾರೋ ಗೊತ್ತಿಲ್ಲ. ಇದು ನನ್ನ ಪಾಲಿಸಿʼ ಎಂದು ಹೇಳುತ್ತಾ ಸಿನಿ ಲಹರಿಗೆ ಆಲ್‌ದಿ ಬೆಸ್ಟ್‌ಹೇಳಿ, ಶೂಟಿಂಗ್‌ಬ್ಯುಸಿ ಅಂತ ಕಾರು ಹತ್ತಿದರು.

Categories
ಸಿನಿ ಸುದ್ದಿ

ಹೊಸಬರ ಫಾರೆಸ್ಟ್‌ ಜರ್ನಿ

ಕನ್ನಡಕ್ಕೆ ಮತ್ತೊಂದು ಹಾರರ್‌ ಚಿತ್ರ

ಈಗ ಸಿನಿಮಾರಂಗ ಮತ್ತಷ್ಟು ರಂಗು ರಂಗಾಗಿದೆ. ಇನ್ನೇನು ಫೆಬ್ರವರಿ ಒಂದರಿಂದ ಸ್ಯಾಂಡಲ್‌ವುಡ್‌ ತನ್ನ ಕಾರ್ಯಚಟುವಟಿಕೆಯನ್ನು ಸಾಕಷ್ಟು ವಿಸ್ತರಿಸಲಿದೆ. ಈ ನಿಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಹೌದು, ಈಗಾಗಲೇ ಸ್ಟಾರ್‌ ಚಿತ್ರಗಳು ತಮ್ಮ ಚಿತ್ರಗಳ ಬಿಡುಗಡೆ ದಿನವನ್ನು ಘೋಷಿಸಿವೆ. ಆ ಸಾಲಿಗೆ ಈಗ ಹೊಸಬರ “ಸ್ಕೇರಿ ಫಾರೆಸ್ಟ್‌” ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.


ಹೌದು, ಸಂಪೂರ್ಣ ಹೊಸಬರೇ ಸೇರಿ ಮಾಡಿರುವ “ಸ್ಕೇರಿ ಫಾರೆಸ್ಟ್”‌ ಹಾರರ್‌ ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ “ಸ್ಕೇರಿ ಫಾರೆಸ್ಟ್” ಚಿತ್ರವೂ ಸೇರಿದೆ. ಈ ಚಿತ್ರಕ್ಕೆ “ಪ್ರೀತಿ-ಭಯ-ಆತ್ಮ” ಎಂಬ ಅಡಿಬರಹವಿದೆ. ಈ ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ.


ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಮಿತ್ರರೆಲ್ಲ ಸೇರಿ ಒಂದು ಸಂಶೋಧನೆಗೆಂದು ಕಾಡಿಗೆ ಹೋಗುತ್ತಾರೆ. ಅಲ್ಲೊಂದಷ್ಟು ವಿಚಿತ್ರ ಘಟನೆಗಳು ನಡೆಯುತ್ತವೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಈ ಚಿತ್ರದ ಕಥಾವಸ್ತು. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯ ಜಯಪ್ರಭು ಆರ್. ಲಿಂಗಾಯಿತ್ ಚಿತ್ರದ ನಿರ್ಮಾಪಕರು. ಸಂಜಯ್‌ ಅಭೀರ್‌ ನಿರ್ದೇಶನವಿದೆ. ಇದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಿದೆ.

ನಿರ್ದೇಶಕ ಸಂಜಯ್‌ ಅಭೀರ್‌ ಅವರು ಬಾಲಿವುಡ್‌ನಲ್ಲಿ ಒಂದಷ್ಟು ಕೆಲಸ ಮಾಡಿದ ಅನುಭವ ಹೊಂದಿದ್ದು, ಆ ಅನುಭವದ ಮೇಲೆ ಈ ಚಿತ್ರ ಮಾಡಿದ್ದಾರೆ. ನಿರ್ಮಾಪಕ ಜಯಪ್ರಭು ಆರ್.‌ ಲಿಂಗಾಯಿತ್‌, ಮುಂಬೈನಲ್ಲಿದ್ದಾರೆ. ಡಾ.ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ ಆಗಿರುವ ಅವರು, ಅವರ ಸ್ಫೂರ್ತಿಯಿಂದಲೇ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಮುಂಬೈನಲ್ಲೊಂದು ಕಾರ್ಖಾನೆ ನಡೆಸುತ್ತಿರುವ ಜಯಪ್ರಭು ಲಿಂಗಾಯಿತ್‌, ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದು, ಟ್ರಸ್ಟ್‌ವೊಂದನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿ ಕಾರ್ಯ ನಡೆಸುತ್ತಿದ್ದಾರೆ. ಗೆಳೆಯರೊಬ್ಬರು ಸಿನಿಮಾ ನಿರ್ಮಾಣ ಮಾಡಿ ಅಂದಾಗ, ಕನ್ನಡ ಸಿನಿಮಾ ಮಾಡಿದರೆ ಮಾತ್ರ ಮಾಡುವುದಾಗಿ ಹೇಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.


ನಿರ್ದೇಶಕ ಸಂಜಯ್‌ ಅಭೀರ್‌ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‌ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ನೀಡಿದ್ದಾರೆ. ಹಾಲಿವುಡ್ ನ “ಜಂಗಲ್ ಬುಕ್ 1994”, ಹಿಂದಿಯ “ರಾಗಿಣಿ ಎಂ.ಎಂ.ಎಸ್-೨” ಸೇರಿದಂತೆ ಮುಂತಾದ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣವಿದೆ. ರಾಜೇಶ್ ಶಾ ಸಂಕಲನ ಹಾಗೂ‌ ದೀಪಕ್ ಶರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಕುತೂಹಲಕಾರಿ ಕಥೆಯೊಂದಿಗೆ ಟ್ರಯಾಂಗಲ್ ಲವ್ ಸ್ಟೋರಿ ಕೂಡ ಚಿತ್ರದಲ್ಲಿ ಸಾಗಲಿದೆ. ನಿರ್ಮಾಪಕ‌ ಜಯಪ್ರಭು ಸಹ‌ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಜೀತ್ ರಾಯ್ದತ್, ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ‌ ಟೀನಾ ಪೊನ್ನಪ್ಪ, ಆಮ್‌ ರೀನ್, ಕಲ್ಪನಾ ನಾಯಕಿಯರು. ಬೇಬಿ ಪೂಜಾ ಇತರರು ನಟಿಸಿದ್ದಾರೆ. ಸಿದ್ದಗಂಗಾ ಮಠದ ಆವರಣ, ತುಮಕೂರು, ಚಿಕ್ಕಮಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ.

Categories
ಸಿನಿ ಸುದ್ದಿ

ಕೆಜಿಎಫ್-‌2 ರಿಲೀಸ್‌ ಡೇಟ್‌ ಫಿಕ್ಸ್‌ ಜುಲೈ 16 ರಂದು ರಣ ಬೇಟೆಗಾರನ ಬೇಟೆ!

ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ ಬಹುನಿರೀಕ್ಷೆಯ ಯಶ್‌ ಚಿತ್ರ

 

ಕನ್ನಡದಲ್ಲಿ ಈಗ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಈಗಾಗಲೇ ಸ್ಟಾರ್‌ ಚಿತ್ರಗಳು ತಮ್ಮ ಸಿನಿಮಾಗಳ ದಿನಾಂಕವನ್ನು ಘೋಷಣೆ  ಮಾಡಿವೆ. ಇದೀಗ ಯಶ್ ‌ಅಭಿನಯದ ಬಹುನಿರೀಕ್ಷೆಯ “ಕೆಜಿಎಫ್-2” ಚಿತ್ರ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಹೌದು, ಯಶ್ ‌ಅಭಿಮಾನಿಗಳು ತಮ್ಮ ಹೀರೋ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದಿದ್ದರು.

ಅವರಿಗೆ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ತಮ್ಮ ಟ್ವಿಟ್ಟರ್‌ಹಾಗೂ ಫೇಸ್‌ಬುಕ್‌ನಲ್ಲಿ ತಮ್ಮ ಚಿತ್ರದ ಬಿಡುಗಡೆಯನ್ನು ಘೋಷಣೆ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್‌ಅವರು “ಕೆಜಿಎಫ್‌-2” ಚಿತ್ರ ರಿಲೀಸ್‌ದಿನವನ್ನು ಘೋಷಣೆ ಮಾಡುವುದರ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.


ಅಂದಹಾಗೆ, “ಕೆಜಿಎಫ್-‌2ʼ ಚಿತ್ರ ಜುಲೈ 16 ರಂದು ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬಿಡುಗಡೆಯ ದಿನಾಂಕದ  ಬಗ್ಗೆ ಮಾಹಿತಿ  ನೀಡಿದ್ದಾರೆ. ಇದು ಸಹಜವಾಗಿಯೇ ಯಶ್ ‌ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಬೀರಿದೆ.

ಈಗಿನಿಂದಲೇ ಅವರು “ಕೆಜಿಎಫ್-‌2″  ಚಿತ್ರದ  ಹಬ್ಬ ಆಚರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ಧ್ರುವಸರ್ಜಾ ಅಭಿನಯದ ‌”ಪೊಗರು” ಫೆಬ್ರವರಿ 19, “ರಾಬರ್ಟ್” ಮಾರ್ಚ್‌11, “ಯುವರತ್ನ” ಏಪ್ರಿಲ್‌ 1, “ಸಲಗ ” ಏಪ್ರಿಲ್‌ 15, “ಕೋಟಿಗೊಬ್ಬ” ಮೇ ತಿಂಗಳಲ್ಲಿ ರಿಲೀಸ್‌ದಿನವನ್ನು ಘೋಷಣೆ ಮಾಡಿವೆ.

ಪ್ರಶಾಂತ್‌ ನೀಲ್‌, ನಿರ್ದೇಶಕ

ಈಗ ಆ ಸಾಲಿಗೆ “ಕೆಜಿಎಫ್-2” ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಲಾಗಿದೆ. “ಕೋಟಿಗೊಬ್ಬ” ಮೇ ತಿಂಗಳಲ್ಲಿ ಬರಲಿದ್ದು, ಅದೇ ತಿಂಗಳ ಕೊನೆಯ ವಾರದಲ್ಲಿ “ಕೆಜಿಎಫ್-‌2” ಚಿತ್ರ ತೆರೆಗೆ ಅಪ್ಪಳಿಸಲಿದೆ. ಅಂದಹಾಗೆ, “ಕೆಜಿಎಫ್‌-2” ವಿಶ್ವಾದ್ಯಂತ ತೆರೆಗೆ ಬರಲಿದೆ. ಅದೇನೆ ಇರಲಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಹುತೇಕ ಎಲ್ಲ ಕನ್ನಡ ಸ್ಟಾರ್ ನಟರ ಚಿತ್ರಗಳ ಜಾತ್ರೆಗೆ ಅಭಿಮಾನಿಗಳಂತೂ ಈಗ ಕಾತುರದಿಂದ ಕಾದು ನಿಂತಿರುವುದಂತೂ ನಿಜ.

ವಿಜಯ್‌ ಕಿರಗಂದೂರು, ನಿರ್ಮಾಪಕ

“ಕೆಜಿಎಫ್-2” ಸಿನಿಮಾ ಈಗಾಗಲೇ ಪೋಸ್ಟರ್‌, ಟೀಸರ್‌ಮೂಲಕ ದೊಡ್ಡ ಕ್ರೇಜ್‌ ಹುಟ್ಟಿಸಿರುವುದಂತೂ ನಿಜ. ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಅಲೆ ಎಬ್ಬಿಸಿದ್ದ “ಕೆಜಿಎಫ್”‌ ಈಗ “ಚಾಪ್ಟರ್‌2” ಮೂಲಕವೂ ದೊಡ್ಡದ್ದೊಂದು ಭರವಸೆ ಹುಟ್ಟಿಸಿದೆ. ಎಲ್ಲರೂ ಈ  ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದ ದಿನ ಗೊತ್ತಾಗಿದೆ. ಇನ್ನೇನಿದ್ದರೂ, ಎಲ್ಲರೂ ಆ ಹಬ್ಬಕ್ಕಾಗಿ ಕಾಯಬೇಕಿದೆ.

Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿ ಶುರು ಮಾಡಿದ ಡಾರ್ಲಿಂಗ್‌ ಕೃಷ್ಣ

ಕೃಷ್ಣನಿಗೆ ಮೂವರು ನಾಯಕಿಯರು!

“ಲವ್‌ ಮಾಕ್ಟೇಲ್‌” ಖ್ಯಾತಿಯ ಕೃಷ್ಣ ಈಗ “ಶುಗರ್‌ ಫ್ಯಾಕ್ಟರಿ” ಶುರುಮಾಡಿದ್ದಾರೆ..!

ಅರೇ, ಹೀಗಂದಾಕ್ಷಣ, ಅವರು ಯಾಕೆ ಶುಗರ್‌ ಫ್ಯಾಕ್ಟರಿಗೆ ಕೈ ಹಾಕಿದರು ಎಂಬ ಪ್ರಶ್ನೆ ಸಹಜ. ಆದರೆ, ಇದು ಬಿಝಿನೆಸ್‌ ಮಾಡುವ ಫ್ಯಾಕ್ಟರಿ ಅಲ್ಲ, ಬದಲಾಗಿ ಸಿನಿಮಾದ ಹೆಸರು. ಈ ಹಿಂದೆ ಕೃಷ್ಣ ಅವರು “ಶುಗರ್‌ ಫ್ಯಾಕ್ಟರಿ” ಚಿತ್ರ ಮಾಡಲಿದ್ದಾರೆ ಅಂತ ಸುದ್ದಿಯಾಗಿತ್ತು. ನಟಿ ಅಮೂಲ್ಯ ಅವರ ಸಹೋದರ ನಿರ್ದೇಶಕ ದೀಪಕ್‌ ಅರಸ್‌ ಅವರ ನಿರ್ದೇಶನದ ಈ ಚಿತ್ರಕ್ಕೆ ಗುರುವಾರ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ.

ನಿರ್ದೇಶಕ ತರುಣ್ ಸುಧೀರ್ ಕಿಶೋರ್ ಅವರ ಕ್ಲಾಪ್‌ ಮಾಡಿದರೆ, ‌ಜಿ.ಹೆಚ್.ರಾಮಚಂದ್ರ ಅವರು‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ನಟಿ ಅಮೂಲ್ಯ, ಜಗದೀಶ್, “ಲಾಸ್ಟ್ ಬಸ್” ಖ್ಯಾತಿಯ ಅರವಿಂದ್, ಮಯೂರ್ ಪಟೇಲ್ ಸೇರಿದಂತೆ ಹಲವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.
ಶುಕ್ರವಾರದಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.

ಚಿತ್ರದಲ್ಲಿ ಸೊನಾಲ್‌ ಮಾಂತೆರೊ, ಅದ್ವಿತಿ ಶೆಟ್ಟಿ, ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ ‌ನಾಯಕಿಯರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಗೋವಿಂದೇಗೌಡ, ಸೂರಜ್ ಕುಮಾರ್, ಮಹಾಂತೇಶ್ (ಹೊಸ ಪರಿಚಯ), ಪವನ್ ಎಸ್.ನಾರಾಯಣ್, ಬ್ರೋ ಗೌಡ, ರಾಯಲ್ ರವಿ, ಅವೀಕ್ಷ, ನೀತೂರಾಯ್, ಡಿ.ಜಿ.ವಿಂಪಲ್ ಇತರರು ನಟಿಸುತ್ತಿದ್ದಾರೆ. ಇನ್ನು, ಈ ಚಿತ್ರ ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್‌ ನಲ್ಲಿ ತಯಾರಾಗುತ್ತಿದ್ದು, ಗಿರೀಶ್.ಆರ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಏಳು ಹಾಡುಗಳಿಗೆ ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿದೆ. ಇನ್ನು, ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ಬರಗೂರು ರಾಮಚಂದ್ರಪ್ಪ ಅವರ ಅಮೃತಮತಿಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ

ಇದು ಕಿಶೋರ್-ಹರಿಪ್ರಿಯಾ ಜೋಡಿ ಸಿನಿಮಾ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ “ಅಮೃತಮತಿ” ಸಿನಿಮಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆ ಸಿನಿಮಾಗೆ ಒಂದಷ್ಟು ಪ್ರಶಸ್ತಿಗಳು ಲಭಿಸುತ್ತವೆ ಎಂಬ ಮಾತುಗಳೂ ಕೂಡ ಕೇಳಿಬಂದಿದ್ದವು. ಈಗ ಆ ಮಾತು ನಿಜವಾಗಿದೆ.

ಹೌದು, “ಅಮೃತಮತಿ” ಚಿತ್ರಕ್ಕೆ ಅಮೆರಿಕದ ಅಟ್ಲಾಂಟದಲ್ಲಿ ನಡೆದ ‘ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ದಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿದೆ. “ಅಮೃತಮತಿ” ಈಗಾಗಲೇ 5 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ನೋಯ್ಡಾದ 4ನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈ ಚಲನ ಚಿತ್ರೋತ್ಸವದಲ್ಲಿ “ಅಮೃತಮತಿ” ಪಾತ್ರ ನಿರ್ವಹಿಸಿದ್ದ ಹರಿಪ್ರಿಯ ಅವರು ಶ್ರೇಷ್ಠನಟಿ ಪ್ರಶಸ್ತಿಗೆ ಭಾಜನರಾಗಿದ್ದರು. “ಅಮೃತಮತಿ” ಸಿನಿಮಾ 13ನೇ ಶತಮಾನದ ಜನ್ನ ಕವಿಯ ಯಶೋಧರ ಚರಿತ್ರೆಯನ್ನು ಆಧರಿಸಿ ಮಾಡಲಾಗಿದೆ. ಇನ್ನು ಚಿತ್ರದ ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.

ಇವರೊಂದಿಗೆ ಹಿರಿಯ ನಟರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ರಾವ್, ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಮುಂಬೈ ಮೂಲದ ಸಿಎಆರ್ ಯು ಎಂಟರ್ ಪ್ರೈಸಸ್ ಸಂಸ್ಥೆ ಈಚಿತ್ರದ ಪ್ರದರ್ಶನದ ಹಕ್ಕು ಪಡೆದಿದೆ. ಚಿತ್ರಮಂದಿರ ಮಾತ್ರವಲ್ಲದೆ ಈ ಸಿನಿಮಾ ಓಟಿಟಿಯಲ್ಲೂ ರಿಲೀಸ್ ಆಗಲಿದೆ ಎನ್ನಲಾಗಿದೆ.

 

Categories
ಸಿನಿ ಸುದ್ದಿ

ತೆಲುಗು ಇಂಡಸ್ಟ್ರಿ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

ರಾಬರ್ಟ್ ಬಿಡುಗಡೆಗೆ ಟಾಲಿವುಡ್ ಅಡ್ಡಿ

ಫಿಲ್ಮ್ ಚೇಂಬರ್ ಗೆ ದೂರಲು ದಚ್ಚು ಸಜ್ಜು

ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅಭಿನಯದ “ರಾಬರ್ಟ್” ಮಾರ್ಚ್ 11ಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಈ ಹಿಂದೆ ಚಿತ್ರತಂಡ ಹೇಳಿದಂತೆ “ರಾಬರ್ಟ್” ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಮಾಡುವ ಕುರಿತು ಘೋಷಣೆ‌ ಮಾಡಿತ್ತು. ಆದರೆ, ಇದೀಗ ತೆಲುಗಿನ ಮಂದಿ “ರಾಬರ್ಟ್” ಬಿಡುಗಡೆಗೆ ಅಡ್ಡಿಯಾಗಿದ್ದಾರೆ.

ಹೌದು, ಟಾಲಿವುಡ್ ನಲ್ಲಿ ರಿಲೀಸ್ ಮಾಡುವುದಕ್ಕೆ ಅಲ್ಲಿನ ಸಿನಿಮಾ ಮಂದಿ ಬಿಡುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ್ ತೆಲುಗು ಸಿನಿಮಾರಂಗದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡಬ್ಬಿಂಗ್ ಸಿನಿಮಾಗೆ ಕರ್ನಾಟಕದಲ್ಲಿ ಅನುಮತಿ ಸಿಕ್ಕಿದೆ. ತೆಲುಗು ಸಿನಿಮಾಗಳು ಸಹ ಒಂದರ‌ ಮೇಲೊಂದರಂತೆ ಬಿಡುಗಡೆಯಾಗುತ್ತಿವೆ. ಹಾಗೆ ನೋಡಿದರೆ ಇಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲೇ ತೆಲುಗು ಚಿತ್ರಗಳೇ ಹೆಚ್ಚಾಗಿ ರಿಲೀಸ್ ಆಗುತ್ತಿವೆ. ಈ ಮೂಲಕ ಕನ್ನಡ ಚಿತ್ರಮಂದಿರಗಳನ್ನೂ ಆವರಿಸುತ್ತಿವೆ. ಆದರೆ ಕನ್ನಡದಿಂದ ತೆಲುಗಿಗೆ ಡಬ್ ಆಗಿರುವಂತಹ, “ರಾಬರ್ಟ್” ಚಿತ್ರದ ಬಿಡುಗಡೆಗೆ ತೆಲುಗಿನ ಸಿನಿಮಾ‌ ಮಂದಿ ಹಾಗೊಂದು ಕ್ಯಾತೆ ತೆಗೆಯುತ್ತಿದ್ದಾರೆ.


ತೆಲುಗು ಸಿನಿಮಾರಂಗದ ಜನರ ಈ‌ ನಡವಳಿಕೆಗೆ ದರ್ಶನ್ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
“ನಮ್ಮ ಸಿನಿಮಾ ಅಲ್ಲಿ ರಿಲೀಸ್ ಮಾಡೋಕೆ ಅವಕಾಶ ಇಲ್ಲ ಅಂದಮೇಲೆ, ಅವರ ಸಿನಿಮಾನೂ ಇಲ್ಲಿ ರಿಲೀಸ್ ಆಗಬಾರದು” ಎಂಬ ವಿಷಯ ಇಟ್ಟುಕೊಂಡು ದೂರು ನೀಡಲು ರೆಡಿಯಾಗಿದ್ದಾರೆ.

 

Categories
ಸಿನಿ ಸುದ್ದಿ

ಚಿತ್ರಮಂದಿರಕ್ಕೆ ಸಿಕ್ತು ಪೂರ್ಣ ಅನುಮತಿ

ಸಿನಿ ಪ್ರೇಕ್ಷಕರಿಗೆ ಇನ್ಮುಂದೆ ಹಬ್ಬ

ಕೊರೊನಾ ಹಾವಳಿಗೆ ತತ್ತರಿಸಿದ್ದ ಸಿನಿಮಾ ರಂಗಕ್ಕೆ ಈಗ ಪೂರ್ಣ ರಿಲೀಫ್ ದೊರೆತಿದೆ. ಹೌದು, ಕೊರೊನಾ ಸಮಸ್ಯೆಯಿಂದಾಗಿ ಸರ್ಕಾರ ಚಿತ್ರಮಂದಿರಕ್ಕೆ ಶೇ.50ರಷ್ಟು ಮಾತ್ರ ಅನುಮತಿ ನೀಡಿತ್ತು. ಕಳಡದ ಅಕ್ಟೋಬರ್ 15ರಿಂದ ಈ ಜಾರಿ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಒಂದಷ್ಟು ಕನ್ನಡ ಚಿತ್ರಗಳು ಬಿಡುಗಡೆ ಕಂಡಿದ್ದವು. ಶೇ.100ರಷ್ಟು ಅನುಮತಿಗಾಗಿ ಚಿತ್ರೋದ್ಯಮ ಕಾಯುತ್ತಿತ್ತು. ಈಗ ಸರ್ಕಾರ ಶೇ.100ರಷ್ಟು ಅನುಮತಿ ನೀಡಿದೆ. ಪೂರ್ಣ ಪ್ರಮಾಣದ ಈ ಅನುಮತಿಯಿಂದಾಗಿ ಚಿತ್ರೋದ್ಯಮ ಸಂತಸದಲ್ಲಿದೆ.

 

ಈಗಾಗಲೇ ಸ್ಟಾರ್ ಸಿನಿಮಾಗಳು ಬಿಡುಗಡೆ ದಿನವನ್ನು ಘೋಷಣೆ ಮಾಡಿವೆ. ಚಿತ್ರಮಂದಿರಗಳಿಗೆ ಶೇ.100ರಷ್ಟು ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಇದೀಗ ಸಿನಿಮಾ ರಂಗದಲ್ಲಿ ಮತ್ತಷ್ಟು ಚಟುವಟಿಕೆಗಳು ಜೋರಾಗಿವೆ.
ಅಂತೂ ಸಿಹಿ ಸುದ್ದಿ ಸಿಕ್ಕ ಬೆನ್ನಲ್ಲೇ ಸಿನಿಮಾ ಕಾರ್ಮಿಕ ವಲಯದಲ್ಲಿ ಮಂದಹಾಸ ಮೂಡಿದೆ.

Categories
ಸಿನಿ ಸುದ್ದಿ

ಜೈ ಕರ್ನಾಟಕ ಪದ ಬೇಡ ಅನ್ನುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ!

ಆರ್ಮುಗಂ ರವಿಶಂಕರ್‌ ಹೀಗೆಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

“ನಾನು ಕನ್ನಡಿಗರಿಗೆ ಚಿರಋಣಿ. ಇಲ್ಲಿನ ನೆಲ, ಜಲ, ಭಾಷೆ ನನ್ನ ಬದುಕನ್ನು ಹಸನಾಗಿಸಿದೆ. ನನಗೆ ಜೀವನ ಕೊಟ್ಟ ಕರ್ನಾಟಕವನ್ನು ಎಂದಿಗೂ ಮರೆಯೋದಿಲ್ಲ…”
_ ಇದು “ಆರ್ಮುಗಂ” ಖ್ಯಾತಿಯ ರವಿಶಂಕರ್‌ ಸದಾ ಪ್ರೀತಿಯಿಂದಲೇ ಹೇಳುವ ಮಾತು.

ಇಷ್ಟಕ್ಕೂ ಖಳನಟ ರವಿಶಂಕರ್‌ ಅವರ ಬಗ್ಗೆ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆಗೆ, ರವಿಶಂಕರ್‌ ಬುಧವಾರ “ಸಿನಿಲಹರಿ” ಕಚೇರಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಳ್ಳುತ್ತಿರುವಾಗ, ಒಂದು ಮರೆಯದ ಘಟನೆಯನ್ನೂ ನೆನಪಿಸಿಕೊಂಡರು. ಆ ಘಟನೆ ಕುರಿತಂತೆ ಸ್ವತಃ ರವಿಶಂಕರ್‌ ವಿವರಿಸಿದ್ದು ಹೀಗೆ.‌

ಓವರ್‌ ಟು ರವಿಶಂಕರ್…
ತೆಲುಗಿನ ಜನಪ್ರಿಯ ವಾಹಿನಿಯೊಂದರಲ್ಲಿ “ಆಲಿ ತೊ ಸರದಾಗ” ಎಂಬ ಸಕ್ಸಸ್‌ಫುಲ್‌ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಅಲ್ಲಿ ತೆಲುಗಿನ ಖ್ಯಾತ ನಟ ಆಲಿ ಅವರು ಆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಮಧ್ಯೆ ಮಾತನಾಡುವಾಗ, ಒಂದು ಚಿತ್ರದ ಡೈಲಾಗ್‌ ಹೇಳಬೇಕು ಎಂಬ ಬೇಡಿಕೆ ಬಂತು.

ಆ ಬೇಡಿಕೆಯನ್ನು ಸ್ವೀಕರಿಸಿದ ನಾನು, ಡೈಲಾಗ್‌ ಹೇಳೋಕೆ ಅಣಿಯಾದೆ. ಆದರೆ, ಎಲ್ಲರಿಗೂ ನಾನು ತೆಲುಗಿನ “ಅರುಧಂತಿ” ಸಿನಿಮಾದ “ವದಲಾ ಬೊಮ್ಮಾಲಿ..” ಡೈಲಾಗ್‌ ಹೇಳಬಹುದು ಎಂದೇ ನಿರೀಕ್ಷಿಸಿದ್ದರು. ಆದರೆ, ನಾನು ಮಾತ್ರ ಹೇಳಿದ್ದು, “ಕೆಂಪೇಗೌಡ” ಚಿತ್ರದ “ಶಾಕ್‌ ಆಯ್ತಾ… ಶಾಕ್‌ ಆಗಲೇಬೇಕು ಅಂತ ತಾನೇ ನಾನಿಲ್ಲಿ ಮಾಗಡಿ ರೋಡ್‌ಗೆ ಪೋಸ್ಟಿಂಗ್‌ ಹಾಕಿಸಿದ್ದು…” ಎಂಬ ಡೈಲಾಗ್‌ ಹರಿಬಿಟ್ಟೆ. ಅಲ್ಲಿ ಕುಳಿತ ಆಡಿಯನ್ಸ್‌ ಎಲ್ಲರೂ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು. ಕೊನೆಯಲ್ಲಿ ಎಲ್ಲರಿಗೂ ನಮಸ್ಕರಿಸುತ್ತಲೇ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿದೆ.

ಆ ಕಾರ್ಯಕ್ರಮ ಮುಗಿದ ಬಳಿಕ, ಆ ಜನಪ್ರಿಯ ವಾಹಿನಿಯ ಸಂಪಾದಕರು ನನಗೆ ಫೋನ್‌ ಮಾಡಿ, ಎಲ್ಲಾ ಓಕೆ, ಆದರೆ, ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎನ್ನುವುದನ್ನು ಕಟ್‌ ಮಾಡ್ತೀನಿ. ಯಾಕೆಂದರೆ, ಇದು ತೆಲುಗು ವಾಹಿನಿ ಅಂದರು. ಆಗ ನಾನು, ಹಾಗೇನಾದರೂ ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಪದವನ್ನು ಕಟ್‌ ಮಾಡುವುದಾದರೆ, ಆ ಪ್ರೋಗ್ರಾಮ್‌ ಕ್ಯಾನ್ಸಲ್‌ ಮಾಡಿ. ನನಗೆ ಪಬ್ಲಿಸಿಟಿಯ ಅಗತ್ಯವೇ ಇಲ್ಲ ಅಂದುಬಿಟ್ಟೆ. ಹಾಗಾಗಿ, ಇವತ್ತಿಗೂ ಆ ಕಾರ್ಯಕ್ರಮದಲ್ಲಿ ನಾನು ಜೈ ಕರ್ನಾಟಕ ಮಾತೆ, ಜೈ ಕನ್ನಡಾಂಬೆ ಎಂದು ಹೇಳಿರುವುದಿದೆ‌ʼ ಎನ್ನುತ್ತಾರೆ ರವಿಶಂಕರ್.

ಅದೇನೆ ಇರಲಿ, ರವಿಶಂಕರ್‌ ಅವರು ಕನ್ನಡ ಚಿತ್ರರಂಗವನ್ನು ತುಂಬಾ ಗೌರವದಿಂದ ನೋಡುತ್ತಾರೆ. ಇಲ್ಲಿನ ಜನರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ಭಾಷೆ ಮೇಲೆ ಸದಾ ಪ್ರೀತಿ ತೋರುವ ಅವರು, ನನ್ನ ಅಣ್ಣ ಸಾಯಿಕುಮಾರ್‌ ಅವರಿಗೆ “ಪೊಲೀಸ್‌ ಸ್ಟೋರಿ” ದೊಡ್ಡ ಹೆಸರು ತಂದುಕೊಟ್ಟಿತು. ಕನ್ನಡದಲ್ಲೇ ಅಣ್ಣ ಕೂಡ ಸುದ್ದಿಯಾದವರು. ನನ್ನ ತಮ್ಮ ಅಯ್ಯಪ್ಪ ಶರ್ಮ ಕೂಡ ಇಲ್ಲಿ ಸದ್ದು ಮಾಡಿದವರೇ. ಇನ್ನು, ನನಗೆ, ತೆಲುಗು ಚಿತ್ರರಂಗದಲ್ಲಿ ಮೂರು ದಶಕ ಕೆಲಸ ಮಾಡಿದರೂ, ಹೇಳಿಕೊಳ್ಳುವ ಹೆಸರು ಸಿಗಲಿಲ್ಲ. ಆದರೆ, ಕನ್ನಡ ಚಿತ್ರರಂಗ ನನಗೆ ಹೆಸರು, ಗೌರವ ಎಲ್ಲವನ್ನೂ ಕೊಟ್ಟಿದೆ.

ಹೀಗಾಗಿ ನನಗೆ ಕನ್ನಡವೇ ನನ್ನ ಬದುಕಿನ ಭಾಷೆ, ಮಾತೃಭಾಷೆ ಎಲ್ಲವೂ ಇಲ್ಲೇ. ಇಂದು ನಾನು ಏನೆಲ್ಲಾ ಆಗಿದ್ದೇನೋ ಅದಕ್ಕೆಲ್ಲಾ ಕನ್ನಡಿಗರೇ ಕಾರಣ” ಮುಂದಿನ ದಿನಗಳಲ್ಲಿ ನನ್ನ ಮಗನನ್ನೂ ಕನ್ನಡ ಚಿತ್ರರಂಗದ ಮೂಲಕವೇ ಪರಿಚಯಿಸುತ್ತೇನೆ. ಅದಕ್ಕೆ ಈಗಾಗಲೇ ತಯಾರಿ ನಡೆದಿದೆ. ಈ ಹಿಂದೆಯೇ ಪರಿಚಯಿಸಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಸ್ವಲ್ಪ ತಡವಾಗಿದೆ. ಬರುವ ಮೇ ತಿಂಗಳಲ್ಲಿ ಮಗನನ್ನು ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದೇನೆ ಎನ್ನುತ್ತಾರೆ ಅವರು.

 

ಆಲ್‌ ದಿ ಬೆಸ್ಟ್‌ ಸಿನಿಲಹರಿ
ಕಚೇರಿಯಲ್ಲಿ ಕುಳಿತು ಇಷ್ಟೆಲ್ಲಾ ಮಾತನಾಡಿದ ಖಳನಟ ರವಿಶಂಕರ್‌ ಅವರು, ಕೊನೆಗೆ “ಸಿನಿಲಹರಿ” ಯಶಸ್ವಿಯಾಗಲಿ. ನಿಮ್ಮ ಬರವಣಿಗೆಯೇ ನಿಮಗೆ ಶಕ್ತಿ. ಕನ್ನಡ ಚಿತ್ರರಂಗದಲ್ಲಿ “ಸಿನಿಲಹರಿ” ಹೊಸ ಹೆಜ್ಜೆ ಮೂಡಿಸಲಿ. ಹೊಸ ಸುದ್ದಿಗಳ ಜೊತೆಗೆ ಕನ್ನಡ ಚಿತ್ರರಂಗದ ಪರ ಈ ಸಿನಿಲಹರಿ ಕೆಲಸ ಮಾಡಲಿ” ಎಂದು ಶುಭಹಾರೈಸಿದರು.

 

Categories
ಸೌತ್‌ ಸೆನ್ಸೇಷನ್

ಓಟಿಟಿಯಲ್ಲಿ ಮಾಸ್ಟರ್‌ ಪ್ರದರ್ಶಕರ ಅಸಮಾಧಾನ!

ಥಿಯೇಟರ್‌ಗೆ ಬಂದ ಎರಡನೇ ವಾರಕ್ಕೇ ಓಟಿಟಿಯಲ್ಲಿ ವಿಜಯ್ ತಮಿಳು ಚಿತ್ರ

ವಿಜಯ್‌ ತಮಿಳು ಸಿನಿಮಾ ನಾಡಿದ್ದು ಅಮೇಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ತೆರೆಕಂಡ ಎರಡನೇ ವಾರಕ್ಕೇ ಓಟಿಟಿಯಲ್ಲಿ ಬಂದರೆ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ಅಲವತ್ತುಕೊಂಡಿದ್ದಾರೆ.  ಕೊರೋನಾ ಸಂಕಷ್ಟದಲ್ಲಿದ್ದ ದಕ್ಷಿಣದ ಚಿತ್ರೋದ್ಯಮಕ್ಕೆ ವಿಜಯ್‌ ನಟನೆಯ ‘ಮಾಸ್ಟರ್‌’ ಹುರುಪು ತುಂಬಿತ್ತು. ಥಿಯೇಟರ್‌ನಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರಿರಬೇಕು ಎನ್ನುವ ನಿಯಮದ ಮಧ್ಯೆಯೂ ಈ ಚಿತ್ರ ದೊಡ್ಡ ವಹಿವಾಟು ನಡೆಸಿತು. ಅಧಿಕೃತ ಮೂಲಗಳ ಪ್ರಕಾರ ಈ ಚಿತ್ರದ ದೇಸಿ ಮತ್ತು ಜಾಗತಿಕ ಮಾರುಕಟ್ಟೆ ವಹಿವಾಟು 220 ಕೋಟಿ ರೂಪಾಯಿ ದಾಟುತ್ತಿದೆ ಎನ್ನಲಾಗಿದೆ. ಲೋಕೇಶ್ ಕನಗರಾಜ್‌ ನಿರ್ದೇಶನದ ಚಿತ್ರ ಇದೀಗ ಓಟಿಟಿ ಮೂಲಕ ಜಗತ್ತಿನ ಮೂಲೆಮೂಲೆಗಳಿಗೂ ತಲುಪಲಿದೆ.

ನಾಡಿದ್ದು ಜನವರಿ 29ಕ್ಕೆ ‘ಮಾಸ್ಟರ್‌’ ಅಮೇಜಾನ್ ಪ್ರೈಮ್‌ ವೀಡಿಯೋದಲ್ಲಿ ಪ್ರೀಮಿಯರ್ ಆಗಲಿದೆ. ತಮಿಳು ಸ್ಟಾರ್ ಹೀರೋ ವಿಜಯ್ ಮತ್ತು ತಮ್ಮದೇ ಆದ ಅಭಿಮಾನಿ ವಲಯ ಹೊಂದಿರುವ ವಿಜಯ್ ಸೇತುಪತಿ ನಟನೆಯ ‘ಮಾಸ್ಟರ್‌’ ಜನವರಿ 13ರ ಪೊಂಗಲ್‌ನಂದು ತೆರೆಕಂಡಿತ್ತು. ಪ್ರೊಫೆಸರ್‌ ಜಾನ್‌ ದೊರೈರಾಜ್‌ ಮತ್ತು ಮಕ್ಕಳನ್ನು ಬಳಸಿಕೊಂಡು ಕ್ರಿಮಿನಲ್ ಚಟುವಟಿಕೆ ನಡೆಸುವ ಭೂಗತ ಪಾತಕಿ ಭವಾನಿ ಮಧ್ಯೆಯ ಹೋರಾಟವೇ ಚಿತ್ರದ ಕಥಾವಸ್ತು. ಉತ್ತಮ ತಾಂತ್ರಿಕ ಗುಣಮಟ್ಟ ಹಾಗೂ ಮೇಕಿಂಗ್‌ನಿಂದಾಗಿ ಗಮನ ಸೆಳೆದಿದ್ದ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದರು. ಇದೀಗ ಚಿತ್ರದ ಓಟಿಟಿ ದಿನಾಂಕ ಘೋಷಣೆಯಾಗಿದ್ದು, ಚಿತ್ರದ ವಿತರಕರು ಹಾಗೂ ಪ್ರದರ್ಶಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

“ಈ ಸುದ್ದಿ ನಮಗೆ ಶಾಕ್ ತಂದಿದೆ. ಚಿತ್ರ ಬಿಡುಗಡೆಯಾಗಿ ಎರಡು ವಾರವಷ್ಟೇ ಆಗಿದೆ. ಮೂರು ಮತ್ತು ನಾಲ್ಕನೇ ವಾರ ನಾವು ಲಾಭ ಮಾಡುತ್ತಿದ್ದೆವು. ಓಟಿಟಿಯಲ್ಲಿ ಬರುವುದರಿಂದ ಪ್ರೇಕ್ಷಕರು ಥಿಯೇಟರ್‌ಗೆ ಬರುವುದಿಲ್ಲ. ನಮಗಿದು ನಷ್ಟದ ಬಾಬತ್ತು” ಎನ್ನುವುದು ಥಿಯೇಟರ್‌ ಮಾಲೀಕರ ಅಳಲು. ಒಪ್ಪಂದದಂತೆ 70:30 ಅನುಪಾತದಲ್ಲಿ ಹಣ ಹಂಚಿಕೊಳ್ಳುವುದು ಯೋಜನೆ. ನೂರು ರೂಪಾಯಿ ಟಿಕೆಟ್ ದರವಿದ್ದರೆ ಅದರಲ್ಲಿ 70 ರೂಪಾಯಿ ಚಿತ್ರದ ನಿರ್ಮಾಪಕರಿಗೆ ಹೋದರೆ ಪ್ರದರ್ಶಕರಿಗೆ 30 ರೂಪಾಯಿ ಪ್ರದರ್ಶಕರದ್ದು. ಎರಡು ವಾರಗಳ ನಂತರ ಪ್ರದರ್ಶಕರಿಗೆ ಶೇ.10ರಷ್ಟು ಲಾಭಾಂಶ ಹೆಚ್ಚಿಗೆ ಸಿಗಬೇಕೆನ್ನುವುದು ಒಪ್ಪಂದ. ಇದೀಗ ಚಿತ್ರ ಓಟಿಟಿಯಲ್ಲಿ ಪ್ರಸಾರವಾಗುವುದರಿಂದ ಥಿಯೇಟರ್‌ ಬರುವ ಪ್ರೇಕ್ಷಕರು ಕಡಿಮೆಯಾಗುತ್ತಾರೆ. ಹಾಗಾಗಿ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ದನಿ ಎತ್ತಿದ್ದಾರೆ. ಓಟಿಟಿ ಲೆಕ್ಕಾಚಾರದಿಂದ ಥಿಯೇಟರ್‌ನವರಿಗೆ ತೊಂದರೆಯಾಗುತ್ತದೆ ಎನ್ನುವ ವಾದಕ್ಕೆ ‘ಮಾಸ್ಟರ್‌’ ಉದಾಹರಣೆಯಾದಂತಿದೆ. ಆದರೆ ಈ ಬಗ್ಗೆ ಚಿತ್ರತಂಡವಿನ್ನೂ ಪ್ರತಿಕ್ರಿಯಿಸಿಲ್ಲ. ಓಟಿಟಿಯಲ್ಲಿ ಬರಲಿರುವ ತಮ್ಮ ಚಿತ್ರದ ಬಗ್ಗೆ ನಟ ವಿಜಯ್‌, “ನಮ್ಮ ಚಿತ್ರ ಪ್ರೈಮ್ ವೀಡಿಯೋ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪಲಿದೆ. ಇದು ಇಡೀ ಚಿತ್ರತಂಡಕ್ಕೆ ಖುಷಿಯ ಸಂಗತಿ” ಎಂದಿದ್ದಾರೆ. ಮಾಳವಿಕಾ ಮೋಹನನ್, ಆಂಡ್ರಿಯಾ ಜೆರಿಮಿ, ಶಂತನು ಭಾಗ್ಯರಾಜ್‌, ಅರ್ಜುನ್ ದಾಸ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ಅನಿರುದ್ಧ ರವಿಚಂದ್ರನ್ ಅವರದು.

error: Content is protected !!