ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ,ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವಿಕ ವಾದ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದನ್ನು ನಿರೂಪಿಸುವುದೇ, “ಅನಿರೀಕ್ಷಿತ” ಚಿತ್ರದ ಕಥಾಹಂದರ.
ಲಾಕ್ ಡೌನ್ ಸಮಯ ವ್ಯರ್ಥ ಮಾಡಬಾರದೆಂದು ತಿಳಿದ ಹದಿಮೂರು ಜನ ಪ್ರತಿಭಾವಂತರ ತಂಡದ ಪರಿಶ್ರಮದ ಫಲವಾಗಿ ಈ ಚಿತ್ರ ಮೂಡಿಬಂದಿದೆ. ಕೇವಲ ಎರಡು ಪಾತ್ರಗಳನ್ನಿಟ್ಟುಕೊಂಡು ಒಂದೇ ಚಿತ್ರೀಕರಣ ಸ್ಥಳದಲ್ಲಿ ನಾಲ್ಕು ಲೊಕೇಶನ್ ಗಳಂತೆ ಬಳಸಿರುವುದು ಈ ಚಿತ್ರದ ವಿಶೇಷ. ಚಿತ್ರೀಕರಣ, ನಂತರದ ಚಟುವಟಿಕೆಗಳು ಪೂರ್ಣವಾಗಿ ಬಿಡುಗಡೆಗೆ ಸಿದ್ದವಾಗಿದೆ.
ಲಾಕ್ ಡೌನ್ ಪೂರ್ಣವಾಗಿ ಚಿತ್ರಮಂದಿರ ತೆರವಿಗೆ ಅನುಮತಿ ದೊರಕಿದ ಕೂಡಲೆ ಚಿತ್ರಮಂದಿರ ಹಾಗೂ ಓಟಿಟಿ ಫ್ಲಾಟ್ ಫಾರಂನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ. ಅನೀರಿಕ್ಷಿತ ಚಿತ್ರದ ಮೊದಲ ಪೋಸ್ಟರನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದ್ದಾರೆ. ಎರಡು ಹಾಗೂ ಮೂರನೇ ಪೋಸ್ಟರನ್ನು ಗಿರಿಜಾ ಲೋಕೇಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅನಾವರಣಗೊಳಿಸಿದ್ದಾರೆ.
ಸದ್ಯದಲ್ಲೇ ಟ್ರೇಲರ್ ಸಹ ಬಿಡುಗಡೆಯಾಗಲಿದೆ. ಎಸ್.ಕೆ.ಟಾಕೀಸ್ ಬ್ಯಾನರ್ ನಲ್ಲಿ ಶಾಂತಕುಮಾರ್ ನಿರ್ಮಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್.
ಮಿಮಿಕ್ರಿ ದಯಾನಂದ್ ಅವರೆ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಕೇವಲ ಎರಡುಪಾತ್ರಗಳಿದ್ದು, ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ. ಸಹ ನಿರ್ಮಾಪಕ ಸಂತೋಷ್ ಕೊಡೆಂಕೇರಿ ಈ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.
ನಾದ ಬ್ರಹ್ಮ ಡಾ.ಹಂಸಲೇಖ ಅವರಿಗೆ ಇಂದು ಹುಟ್ಟುಹಬ್ಬ. ಹಾಗಂತ ಅವರು ಎಂದಿಗೂ ಗ್ರಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡವರಲ್ಲ. ಬಲವಂತವಾಗಿ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಬೇಕು ಅಂದಾಗಲೂ ಅದರಲ್ಲೊಂದು ವಿಶೇಷತೆ ಇರಲಿ ಅಂತ ಬಯಸುವ ವ್ಯಕ್ತಿತ್ವ ಹಂಸಲೇಖ ಅವರದ್ದು. ಅದರಲ್ಲೂ ಈಗ ಕೊರೊನಾ ಸಂಕಷ್ಟದ ಕಾಲ. ಇಂತಹ ಸಂದರ್ಭದಲ್ಲಿ ಹಂಸಲೇಖ ಅವರು ಗ್ರಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರಾ?
ಇಲ್ಲ, ಗ್ರಾಂಡ ಸೆಲೆಬ್ರೇಷನ್ ಬದಲಿಗೆ ಈ ವರ್ಷದ ಹುಟ್ಟು ಹಬ್ಬಕ್ಕೆ ಅವರು ಅಭಿಮಾನಿಗಳಿಗೆ, ಕನ್ನಡ ನಾಡಿನ ಸಾಹಿತ್ಯ ಅಭಿಮಾನಿಗಳಿಗೆ ವಿಶೇಷವಾದ ಒಂದು ಕೊಡುಗೆ ನೀಡಿದ್ದಾರೆ. ಅದುವೇ ಶಾರದಾ ಪುಸ್ತಕಾಲಯ. ಹೌದು, ನಾಡಿನ ಪುಸ್ತಕ ಮಳಿಗೆಗಳ ಸಾಲಿಗೆ ಈಗ ಹಂಸಲೇಖ ಅವರ ಶಾರದಾ ಪುಸ್ತಕಾಲಯವೂ ಒಂದು. ಸಂಗೀತ, ಸಾಹಿತ್ಯ ಅಂತಲೇ ಇಲ್ಲಿ ತನಕ ಹಾಸಿ, ಹೊದ್ದು ಉಸಿರಾಡುತ್ತಾ ಬಂದ ಹಂಸಲೇಖ ಅವರು ಈಗ ಪುಸ್ತಕಾಲಯ ಶುರು ಮಾಡಿದ್ದೆ ಒಂದು ವಿಶೇಷ. ಬುಧವಾರ ಅವರ ಹುಟ್ಟು ಹಬ್ಬದ ದಿನವೇ ಬೆಂಗಳೂರಿನ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅಬಕಾರಿ ಸಚಿವ ಗೋಪಾಲಯ್ಯ ದೀಪಾ ಬೆಳಗಿ, ಟೇಪ್ ಕತ್ತರಿಸುವ ಮೂಲಕ ಶಾರದಾ ಪುಸ್ತಕಾಲಯ ಉದ್ಘಾಟಿಸಿದರು.
ಹಂಸಲೇಖ ಅವರು ಎಲ್ಲಾ ಬಿಟ್ಟು ಈಗ ಯಾಕೆ ಪುಸ್ತಕಾಲಯ ಮಾಡಿದರು? ಅದರಲ್ಲೇನು ವಿಶೇಷತೆ ಇಲ್ಲ. ಸಂಗೀತ, ಸಾಹಿತ್ಯ ಕ್ಷೇತ್ರದಲ್ಲೇ ಅವರು ದೈತ್ಯ ಪ್ರತಿಭೆ ಎನಿಸಿಕೊಂಡವರು. ಹಾಗಾಗಿ ಪುಸ್ತಕಾಲಯ ಅಂತ ಶುರು ಮಾಡಿರುವುದಕ್ಕೆ ಆಂತಹದೇನು ವಿಶೇಷತೆ ಇಲ್ಲ.
ಅದರೆ, ಪುಸ್ತಕಾಲಯದ ನಂಟು ಈಗೇಕೆ? ಅಲ್ಲಿ ಏನೆಲ್ಲ ಸಿಗುತ್ತೆ? ಆ ಬಗ್ಗೆ ಬುಧವಾರ( ಜೂನ್ 23) ಸಂಜೆ ಫೇಸ್ ಬುಕ್ ಲೈವ್ ನಲ್ಲಿ ಎಲ್ಲವನ್ನು ಹೇಳುತ್ತಾರಂತೆ. ಸಂಜೆ 5 ಗಂಟೆಗೆ, ಫೇಸ್ ಬುಕ್ಲೈವ್ ನಲ್ಲಿ ಹಂಸಲೇಖ ಬರಲಿದ್ದಾರೆ. ಅಲ್ಲೊಂದಷ್ಟು ಮಾತುಕತೆ ಅ ನಡೆಯಲಿದೆ.
ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ನಟ ಶಿವರಾಜ್ ಕುಮಾರ್ ಬಂದಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಸಿನಿಮಾಕಾರ್ಮಿಕರ ನೆರವಿಗೆ ಅವರು 10ಲಕ್ಷ ರೂ.ಧನ ಸಹಾಯ ನೀಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗಳ ಪರವಾಗಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಮಂಗಳವಾರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಅವರಿಗೆ 10 ಲಕ್ಷ ರೂ.ಗಳ ಚೆಕ್ ವಿತರಿಸಿದರು. ನಟ ಅರುಣ್ ಸಾಗರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಈ ವೇಳೆ ಹಾಜರಿದ್ದರು.
ನಿರ್ಮಾಪಕಿಯೂ ಆದ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಂಗಳವಾರ ಹುಟ್ಟು ಹಬ್ಬ. ಬೆಂಗಳೂರಿನ ನಾಗವಾರದಲ್ಲಿರುವ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು. ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೆ.ಪಿ. ಶ್ರೀಕಾಂತ್ ಅವರು ಕೂಡ ತಮ್ಮ ಸದಸ್ಯರ ಜತೆಗೆ ಕೇಕ್ ಕತ್ತರಿಸುವ ಮೂಲಕ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರ ನೆರವಿಗೆ ಗೀತಾ ಶಿವರಾಜ್ ಕುಮಾರ್ 10 ಲಕ್ಷ ರೂ. ನೆರವಿನ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಕಾರಣಕ್ಕೆ ಸಿನಿಮಾ ಮಂದಿ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಬದುಕು ಕಷ್ಟದಲ್ಲಿದೆ.
ಹಾಗಾಗಿ ಅವರ ಕಷ್ಟಕ್ಕೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದರು. ಶಿವರಾಜ್ ಕುಮಾರ್ ಈ ವೇಳೆ ಕೂಡ ಮಾತನಾಡಿದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಿನಿಮಾ ಚಟುವಟಿಕೆಗಳು ಇಷ್ಟರಲ್ಲಿಯೇ ಮತ್ತೆ ಶುರುವಾಗುವುದು ಗ್ಯಾರಂಟಿ ಆಗಿದೆ. ಯಾಕಂದ್ರೆ, ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳು ಭಾಗಶಃ ಅನ್ ಲಾಕ ಆದ ಬೆನ್ನಲ್ಲೇ ಸರ್ಕಾರ ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಈಗ ಒಳಾಂಗಣ ಚಿತ್ರೀಕರಣಕ್ಕೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರದ ಅನುಮತಿ ಕೇಳಿದೆ. ವಾಣಿಜ್ಯ ಮಂಡಳಿ ಮನವಿಗೆ ಸರ್ಕಾರ ಸಕರಾತ್ಮಕವಾಗಿಯೂ ಸ್ಪಂದನೆ ಮಾಡಿದೆಯಂತೆ. ಹಾಗಾಗಿ ಇಷ್ಟರಲ್ಲಿಯೇ ಸಿನಿಮಾ ಚಟುವಟಿಕೆಗಳು ಶುರುವಾಗುವುದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬಂದಿವೆ.
ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದಂತೆ, ಒಳಾಂಗಣ ಚಿತ್ರೀಕರಣಕ್ಕೂ ಸರ್ಕಾರ ಅನುಮತಿ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಸರ್ಕಾರವು ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಾಣಿಜ್ಯ ಮಂಡಳಿ ಅಭಿನಂದನೆ ಸಲ್ಲಿಸಿದ್ದನ್ನು ಸಿಎಂ ಗಮನಕ್ಕೆ ತಂದರು. ತದ ನಂತರ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ನೀಡುವಂತೆ ಮನವಿ ಮಾಡಿದರು.
ʼಚಿತ್ರೋದ್ಯಮದಲ್ಲಿ ಈಗಾಗಲೇ ಸಾಕಷ್ಟು ಚಲನ ಚಿತ್ರಗಳ ಚಿತ್ರೀಕರಣವು ಅರ್ಧಕ್ಕೆ ನಿಂತು ಹೋಗಿದ್ದು, ಮತ್ತಷ್ಟು ನಿರ್ಮಾಪಕರು ಲಕ್ಷಾಂತರ ಬಂಡವಾಳ ಹೂಡಿ ಒಳಾಂಗಣದಲ್ಲಿ ಚಿತ್ರೀಕರಿಸಲು ಸೆಟ್ಗಳನ್ನು ಅಳವಡಿಸಿಕೊಂಡಿದ್ದು ಈಗ ಸೆಟ್ ಗಳೆಲ್ಲವೂ ದುಸ್ಥಿತಿಗೆ ಬಂದಿವೆ. ಈ ಹಿಂದೆ ಲಾಕ್ ಡೌನ್ ಸಂದರ್ಭ ಕೂಡ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಒಳಾಂಗಣ ಚಿತ್ರೀಕರಣ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಅದೇ ಮಾದರಿಯಲ್ಲಿಯೇ ಈಗಲೂ ಕೂಡ ಒಳಾಂಗಣಕ್ಕೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಭೇಟಿಯ ನಂತರ ʼಸಿನಿಲಹರಿʼ ಜತೆಗೆ ಮಾತನಾಡಿದ ನಿರ್ಮಾಪಕ ಉಮೇಶ್ ಬಣಕಾರ್, ಕೊರೊನಾ ಈಗ ಒಂದಷ್ಟು ನಿಯಂತ್ರಣಕ್ಕೆ ಬಂದಿದೆ. ಈಗಾಗಲೇ ಸರ್ಕಾರ ಅನ್ ಲಾಕ್ ಮಾಡಿದೆ. ಹಾಗಾಗಿ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ನಮ್ಮ ಅಹವಾಲು ಸ್ವೀಕರಿಸಿದ ತಕ್ಷಣವೇ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ಇಷ್ಟರಲ್ಲಿಯೇ ನಮಗೆ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಸಿಗುವುದು ಖಾತರಿ ಆಗಿದೆ. ಅದರಿಂದ ಸಿನಿಮಾ ಚಟುವಟಿಕೆಗಳಿಗೂ ಚಾಲನೆ ಸಿಗಲಿದೆʼ ಎಂದು ವಿವರಿಸಿದರು.
ಹೆಸರಾಂತ ನಟ ಸಂಚಾರಿ ವಿಜಯ್ ಬದುಕಿನ ಸುತ್ತ ಇಷ್ಟೆಲ್ಲಾ ಕಥೆಗಳಿವೆಯಾ ? ಚಿತ್ರರಂಗ ಸೇರಿದಂತೆ ಅವರ ಆತ್ಮೀಯರು, ಬಂಧುಗಳು ಹಾಗೂ ಸ್ನೇಹಿತರಿಗೆ ಹೀಗೊಂದು ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಕಾರಣ ಅವರ ನಿಧನದ ನಂತರ ಕೆಲವು ವ್ಯಕ್ತಿಗಳು, ಕೆಲವು ಟಿವಿಗಳು, ಹಾಗೂ ಅನೇಕ ಯುಟ್ಯೂಬ್ ಚಾನೆಲ್ ಗಳಲ್ಲಿ ವಿಜಯ್ ಅವರ ಬದುಕಿನ ಕುರಿತು ಬಂದು ಹೋದ, ಜತೆಗೆ ಈಗಲೂ ಬರುತ್ತಿರುವ ಪುಂಖಾನು ಪುಂಖ ಸುದ್ದಿಗಳು. ವಿಚಿತ್ರ ಅಂದ್ರೆ, ತಮಗೇ ಗೊತ್ತಿಲ್ಲದ ಈ ವಿಚಾರಗಳು ಇವರಿಗೆಲ್ಲ ಗೊತ್ತಾಗಿದ್ದಾರೂ ಹೇಗೆ ಅನ್ನೋ ಗೊಂದಲವೂ ಅವರಲ್ಲಿದೆ. ಅಷ್ಟೇ ಅಲ್ಲ, ನಟ ವಿಜಯ್ ಅವರ ಕುರಿತು ಬಗೆ ಬಗೆಯ ಸುದ್ದಿ ಹರಿಬಿಡುತ್ತಿರುವ ಯೂಟ್ಯೂಬ್ ಚಾನೆಲ್ ನವರು, ಕೆಲವು ಟಿವಿಯವರು, ಮುಂತಾದ ಜನರು, ವಿಜಯ್ ಅವರ ನಿಧನದ ನಂತರವೇನಾದರೂ ಸಂಶೋಧನೆ ನಡೆಸಿಬಿಟ್ಟರಾ ಎನ್ನುವ ಕುತೂಹಲವೂ ಇದೆ. ಯಾಕಂದ್ರೆ ಈಗ ವಿಜಯ್ ಅವರ ಬದುಕಿನ ದಿನಕ್ಕೊಂದು ಸುದ್ದಿ, ದಿನಕ್ಕೊಂದು ಕಥೆ !
ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಮಾನವತವಾದಿ ಸಂಚಾರಿ ವಿಜಯ್ ಈಗಿಲ್ಲ. ನಟನಾಗಿ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಮೆರಗು ತಂದುಕೊಡಬೇಕಿದ್ದ ನಟ ಅವರು. ದುರಾದೃಷ್ಟ ಅಂದ್ರೆ, ದೊಡ್ಡ ವರ್ಚಸ್ಸು ಪಡೆಯಬೇಕಿದ್ದ ದಿನಗಳಲ್ಲಿಯೇ ಆಕಾಲಿಕವಾಗಿ ನಿಧನರಾಗಿ, ತಿರುಗಿ ಬಾರದ ಲೋಕಕ್ಕೆ ಸಂಚಾರ ಹೋಗಿ ಆಗಿದೆ. ಅವರಿಲ್ಲದೆ, ಹೆಚ್ಚು ಕಡಿಮೆ ಹತ್ತನ್ನೆರೆಡು ದಿನ ಕಳೆದೇ ಹೋದವು. ಅವರಿಲ್ಲ ಎನ್ನುವುದನ್ನು ನಿಜಕ್ಕೂ ನಂಬುವುದಕ್ಕೆ ಆಗುತ್ತಿಲ್ಲ. ಕುಟುಂಬದವರು, ಬಂಧುಗಳು ಹಾಗೂ ಆತ್ಮೀಯರಿಗೆ ಅವರಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರೆಲ್ಲ ಆ ನೋವಿನಿಂದ ಈಗಲೂ ಹೊರಬಂದಿಲ್ಲ. ಹಾಗೆಯೇ ಚಿತ್ರರಂಗಕ್ಕೂ ಅವರಿಲ್ಲ ಅನ್ನೋದು ಅಪಾರ ನಷ್ಟವೇ ಆಗಿದೆ. ಆದರೆ, ಅವರಿಲ್ಲ ಅನ್ನೋದು ಟಿವಿ ಚಾನೆಲ್ ಗಳಿಗೆ, ಸಣ್ಣ ಪುಟ್ಟ ಯುಟ್ಯೂಬ್ ಚಾನೆಲ್ ಗಳಿಗೆ ದೊಡ್ಡ ಆಹಾರವೇ ಆಗಿ ಹೋಗಿರುವುದು ದುರಾದೃಷ್ಟ.
ಹಾಗಂತ, ವಿಜಯ್ ಇಲ್ಲದ ದಿನಗಳಲ್ಲಿ ಇವರೆಲ್ಲ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸುವಂತೆ ಸುದ್ದಿ ಬಿತ್ತರಿಸುತ್ತಿದ್ದಾರಾ? ಇಲ್ಲವೇ ಅವರ ಸಿನಿಮಾ, ಅವರ ನಟನೆಯ ಬಣ್ಣನೆಯ ಮಾತುಗಳನ್ನು ಹೇಳುತ್ತಿದ್ದಾರಾ? ಅಸಲಿಗೆ ಅಂತಹ ಯಾವುದೇ ಸುದ್ದಿಗಳು ಇವು ಅಲ್ಲ. ಬದಲಿಗೆ ಇವೆಲ್ಲವೂ ಉಹಾ ಪೋಹದ ಕಟ್ಟು ಕಥೆಗಳು. ಸಂಚಾರಿ ವಿಜಯ್ ಇದ್ದಾಗ ಇಂತಹ ಸುದ್ದಿಗಳು ಬಂದಿದ್ದರೆ ಮೂಲಾಜಿಲ್ಲದೆ ಕ್ಯಾಕರಿಸಿ ಉಗಿಯುತ್ತಿದ್ದರೆನ್ನವುದು ಗ್ಯಾರಂಟಿ. ಅಷ್ಟಾಗಿಯೂ ಮಾತು ಕೇಳದಿದ್ದರೆ ಕೋರ್ಟ್ ಮೆಟ್ಟಿಲು ತುಳಿದು ಇವರಿಗೆಲ್ಲ ಬುದ್ಧಿ ಕಲಿಸುತ್ತಿದ್ದರು. ಆದರೆ ವಿಜಯ್ ಅವರನ್ನು ತಮ್ಮ ವಾರಾಸುದಾರರು ಎನ್ನುವ ಯಾವುದೇ ವ್ಯಕ್ತಿಯೂ ಈ ಬಗ್ಗೆ ಚೆಕಾರ ಎತ್ತಿಲ್ಲ! ಅದನ್ನೇ ಬಂಡವಾಳ ಮಾಡಿಕೊಂಡಿರುವ ಐಡೆಂಟಿಟಿ ಇಲ್ಲದೆ ಕೆಲವು ಯುಟ್ಯೂಬ್ ಚಾನೆಲ್ ಗಳು ವಿಜಯ್ ಅವರ ವ್ಯಕ್ತಿತ್ವವನ್ನೇ ಹರಣ ಮಾಡುವ ಊಹಾಪೋಹದ ಸುದ್ದಿಗಳನ್ನು ಬಿತ್ತರಿಸುವುತ್ತಿರುವುದು ಮಾತ್ರ ದುರಂತವೇ ಸರಿ.
ಮೊದಲೇ ಹೇಳಿದಂತೆ ಐಡೆಂಟಿಟಿ ಇಲ್ಲದ ಈ ಯುಟ್ಯೂಬ್ ಚಾನೆಲ್ ಗಳ ಸುದ್ದಿ ಟೇಸ್ಟ್ ಹೇಗಿದೆ ಅಂದ್ರೆ, ಒಬ್ಬ ವ್ಯಕ್ತಿಯ ಬಗ್ಗೆ ವಾಸ್ತವವನ್ನು ಹೇಳುವುದು ಅವರ ಆದ್ಯತೆ ಅಲ್ಲ. ಬದಲಿಗೆ ಅವರ ಹೊಟ್ಟೆ ತುಂಬಬೇಕು ಅಷ್ಟೇ. ಅಂದ್ರೆ ಕೆಲವು ಟಿವಿಗಳಿಗೆ ಟಿಆರ್ ಪಿ ಹೆಚ್ಚಾಗಬೇಕು, ಇನ್ನು ಯೂಟ್ಯೂಬ್ ಚಾನೆಲ್ ನವರಿಗೆ ಲೈಕ್ಸು, ವೀವ್ಸು, ಕಾಮೆಂಟ್ಸು ಜಾಸ್ತಿ ಆಗಬೇಕು. ಅವರ ಸುದ್ದಿ ಬಿತ್ತರಿಸುವ ಟೇಸ್ಟ್ ಹೇಗಿದೆ ಅಂದ್ರೆ, ನಟ ಸಂಚಾರಿ ವಿಜಯ್ ಇಷ್ಟು ದಿನ ಮದುವೆ ಆಗದಿರಲು ಕಾರಣ ಏನು ಗೊತ್ತಾ ? ನಟ ಸಂಚಾರಿ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ? ನಟ ಸಂಚಾರಿ ವಿಜಯ್ ಅಪಘಾತದಲ್ಲಿ ಸಾಯುವುದಕ್ಕೂ ಮುನ್ನ ಯಾರಿಗೆ ಕಾಲ್ ಮಾಡಿದ್ರು ಗೊತ್ತಾ ? ಸಂಚಾರಿ ವಿಜಯ್ ಇತ್ತೀಚೆಗೆ ಒಂದು ವಿಷಯಕ್ಕಾಗಿ ತೀರಾ ಬೇಸತ್ತಿದ್ದರು ಯಾಕೆ ಗೊತ್ತಾ ? ನಟ ಸಂಚಾರಿ ವಿಜಯ್ ಮದುವೆ ಆಗಬೇಕಿದ್ದ ಹುಡುಗಿ ಇವರೇನಾ ? ಇದು ಈ ಯುಟ್ಯೂಬ್ ಚಾನೆಲ್ ನವರ ಲೈಕ್ಸು, ಕಾಮೆಂಟ್ಸು ಪಡೆಯವ ಚಟ. ಇನ್ನು ಇವೆಲ್ಲವನ್ನು ರಂಜಿಸುವ ಕೆಲವು ಜನರ ವಿಕೃತ ಮನಸ್ಥಿತಿಗೆ ಇನ್ನೇನು ಹೇಳಬೇಕೋ ಆರ್ಥವಾಗುತ್ತಿಲ್ಲ.
ಇಷ್ಟಕ್ಕೂ ಇವೇನು ಸತ್ಯವಾದ ಸುದ್ದಿಗಳಾ? ಹೋಗಲಿ, ಒಬ್ಬ ಸ್ಟಾರ್ ನಟನ ಬಗ್ಗೆ ಬರೆಯಬಹುದಾದ ಸುದ್ದಿಗಳಾ ? ಯಾವುದರಲ್ಲೂ ಸತ್ಯಾಂಶ ಅನ್ನೋದೇ ಇಲ್ಲ. ಎಲ್ಲವೂ ಕಟ್ಟುಕಥೆಗಳೆ. ಸಂಚಾರಿ ವಿಜಯ್ ಬಗ್ಗೆ ಗೊತ್ತಿದ್ದವರಿಗೆ ಅವರೇನು ಅನ್ನೋದು ಗೊತ್ತಿದೆ. ಮದುವೆ ವಿಚಾರದಲ್ಲಿ ಅವರೆಷ್ಟು ಸ್ಪಷ್ಟವಾಗಿದ್ದರು, ಆಸ್ತಿ- ಅಂತಸ್ತುಗಳೆಲ್ಲ ಎಷ್ಟು ಸಂಪಾದಿಸಿದ್ದರು, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಷ್ಟೆಲ್ಲಾ ಹೇಳಿಕೊಂಡಿದ್ದರು ಅನ್ನೋದೆಲ್ಲ ಎಲ್ಲರಿಗೂ ಗೊತ್ತು. ಆದರೂ ಅವರ ನಿಧನದ ನಂತರ ಒಂದ್ರೀತಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹಾಗೆ ಯುಟ್ಯೂಬ್ ಚಾನೆಲ್ ನವರು ತಮ್ಮ ಮನಸ್ಸಿಗೆ ಬದ್ದಂತೆಯೇ ಸುದ್ದಿ ಮಾಡಿ, ವೈರಲ್ ಮಾಡಿಕೊಳ್ಳುವ ಮೂಲಕ ತಮ್ಮ ಚಾನೆಲ್ ಗಳ ಚಂದದಾರರ ಸಂಖ್ಯೆ ಹೆಚ್ಚಿಸಿಕೊಂಡರು. ಅಂದ್ರೆ, ಇವರ ಚಂದದಾರಿಕೆಗೆ ಸ್ಟಾರ್ ನಟರು ಸಾಯಬೇಕು, ಜತೆಗೆ ಅವರ ಬಗೆಗಿನ ಅಂತೆ ಕಂತೆಗಳು ತಮಗೆ ಬೇಕು ಎನ್ನುವ ಮನಸ್ಥಿತಿ ಈ ಯೂಟ್ಯೂಬ್ ಚಾನೆಲ್ ಗಳದ್ದು. ಹಾಗೆಯೇ ಕೆಲವು ಟಿವಿ ಅವರದ್ದು ಕೂಡ. ಅಮೆರಿಕದಿಂದ ಒಬ್ಬ ಯುವತಿ ನಟ ಸಂಚಾರಿ ವಿಜಯ್ ಕುರಿತು ಸಾಕಷ್ಟು ಮಾತನಾಡಿತ್ತು. ಕೊನೆಗೆ ಕೆಲವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಆ ಯುವತಿ ಸತ್ಯಾಂಶ ತೆರೆದಿಟ್ಟಳು.
ʼ ನಾನು ಭಾವನಾತ್ಮಕವಾಗಿ ಹೇಳಿಕೊಂಡ ಸಂಗತಿಗಳನ್ನು ಮಾಧ್ಯಮದವರು ಸರಕನ್ನಾಗಿ ಮಾಡಿಕೊಂಡರು. ನಾನು ಹಾಗೆ ಹೇಳಿದ್ದರ ಉದ್ದೇಶ ವಿಜಯ್ ಅವರ ವರ್ಚಸ್ಸಿಗೆ ಧಕ್ಕೆ ತರಬೇಕು ಅನ್ನೋದು ಆಗಿರಲಿಲ್ಲ. ಅಷ್ಟು ದೊಡ್ಡ ವ್ಯಕ್ತಿ ನನ್ನನ್ನು ಆತ್ಮೀಯವಾಗಿ ನೋಡುತ್ತಿದ್ದರು ಅಂತ ಹೇಳಿಕೊಳ್ಳುವುದಾಗಿತ್ತು. ಆದರೆ ಟಿವಿಗಳಲ್ಲಿ, ಯುಟ್ಯೂಬ್ ಚಾನೆಲ್ ಗಳಲ್ಲಿ ನನ್ನ ಹೇಳಿಕೆ ಆಗಿದ್ದೇ ಬೇರೆ. ಅದು ನನ್ನ ಮನಸ್ಸಿಗೂ ಘಾಸಿ ತಂತು ಎಂದು ಆ ಯುವತಿ ಕಣ್ಣೀರಿಡುವಾಗ, ಟಿಆರ್ ಪಿ ಬೆನ್ನು ಬಿದ್ದ ಟಿವಿಗಳು, ವೈರಲ್ ಮಾಡಿಕೊಳ್ಳಲೆತ್ನಿಸುವ ಯುಟ್ಯೂಬ್ ಚಾನೆಲ್ ಗಳು ಹಿಡನ್ ಅಜೆಂಡಾ ಬಯಲಾಗದೆ ಉಳಿಯೋದಿಲ್ಲ.
ನಟ ವಿಜಯ್ ಅವರ ಬಗ್ಗೆ ಸುದ್ದಿ ಬಿತ್ತರಿಸುವ ನೆಪದಲ್ಲಿ ಅವರ ವ್ಯಕ್ತಿತ್ವವನ್ನೆ ಹರಣ ಮಾಡಿದ ಇಂತಹ ಯುಟ್ಯೂಬ್ ಚಾನೆಲ್ ಗಳು, ವ್ಯಕ್ತಿಗಳು ಹಾಗೂ ಕೆಲವು ಟಿವಿಗಳ ವಿರುದ್ಧ ಮಾತನಾಡುವವರಾದರೂ ಯಾರು? ನಟ ವಿಜಯ್ ತಮ್ಮವನು ಅನ್ನುವವರಾದರೂ ಬಾಯಿ ಬಿಡುತ್ತಾರಾ? ಯಾರು ಧ್ವನಿ ಎತ್ತುತ್ತಾರೋ ಗೊತ್ತಿಲ್ಲ, ಆದರೆ ಸ್ಟಾರ್ ಗಳ ಬಗೆಗಿನ ಅಂತೆ-ಕಂತೆ ಸುದ್ದಿಗಳನ್ನೇ ಬಂಡವಾಳ ಮಾಡಿಕೊಂಡು ಕುತೂಹಲ ಹುಟ್ಟಿಸುವ ಟೈಟಲ್ ಮೂಲಕ ಗಮನ ಸೆಳೆಯಲೆತ್ನಿಸುವ ಇಂತಹ ಸುದ್ದಿಗಳಿಗೆ ಮನ್ನಣೆ ನೀಡಬೇಡಿ ಎನ್ನುವುದು ಓದುಗರಲ್ಲಿ ನಾವು ಮಾಡುವ ಮನವಿ. ಯಾಕಂದ್ರೆ, ಯಾವುದೇ ಸ್ಟಾರ್ ಗಳ ಬಗ್ಗೆಯೂ ಇವರು ಹೀಗೆಲ್ಲ ಮಾಡುವವರೇ. ಇವರ ವಿರುದ್ದ ಕಾನೂನು ಸಮರ ಆರಂಭವಾಗಬೇಕು. ಅದನ್ನು ಯಾರು ಮಾಡುತ್ತಾರೋ, ಕಾದು ನೋಡಬೇಕಿದೆ.
ನಟ ಸಂಚಾರಿ ವಿಜಯ್ ಅವರ ಆತ್ಮೀಯರಲ್ಲಿ ಉಪನ್ಯಾಸಕ ಹಾಗೂ ಯುವ ಬರಹಗಾರ ಶಿವಕುಮಾರ ಮಾವಲಿ ಕೂಡ ಒಬ್ಬರು. ಸಂಚಾರಿ ವಿಜಯ್ ಮುಖ್ಯ ಪಾತ್ರದಲ್ಲಿ ಅಭಿನಯಸಿದ್ದ “ಅವ್ಯಕ್ತ” ಹೆಸರಿನ ಕಿರುಚಿತ್ರದ ನಿರ್ಮಾಣಕ್ಕೆ ಶಿವಕುಮಾರ ಮಾವಲಿ ಅವರೇ ರೂವಾರಿ. ಅವರೇ ಬರೆದಿದ್ದ ಕಥೆ ಆಧರಿಸಿ, ಈ ಕಿರುಚಿತ್ರ ನಿರ್ಮಿಸಲಾಗಿತ್ತು. ರಂಗಕರ್ಮಿ ಸತೀಶ್ ಸಾಸ್ವೆಹಳ್ಳಿ ನಿರ್ದೇಶಿಸಿದ್ದರು. ಶಿವಕುಮಾರ್ ಮಾವಲಿ ಮತ್ತವರ ಗೆಳೆಯರ ಬಳಗ ಇದನ್ನು ನಿರ್ಮಾಣ ಮಾಡಿತ್ತು. ಅಲ್ಲಿಂದ ನಟ ವಿಜಯ್ ಅವರೊಂದಿಗೆ ಆತ್ಮೀಯರಾಗಿದ್ದ ಶಿವಕುಮಾರ ಮಾವಲಿ, ತಾವು ಕಂಡಂತೆ ವಿಜಯ್ ಕುರಿತು ಆಪ್ತವಾಗಿ ಬರೆದಿದ್ದಾರೆ…
ಓವರ್ ಟು ಶಿವಕುಮಾರ ಮಾವಲಿ…
“ನಾತಿಚರಾಮಿ” ಸಿನಿಮಾ ನೋಡಿದ ಮೇಲೆ ವಿಜಯ್ ಅವರಿಗೆ ನಾಲ್ಕು ವರ್ಷಗಳಿಂದ ನಾನು ಬರೆಯಬೇಕೆಂದುಕೊಂಡಿದ್ದ ನೀಳ್ಗತೆಯೊಂದನ್ನು ಹೇಳಿದೆ. ಆ ಕಥೆಯಲ್ಲಿ ಹಳ್ಳಿಯೊಂದರಿಂದ ಈಮೇಲ್ ಮೂಲಕ ಬರುವ ಒಂದು ವಿಚಿತ್ರ ಬೇಡಿಕೆಯನ್ನು ಸವಾಲಾಗಿ ಸ್ವೀಕರಿಸಿದ ಫ್ಲಿಪ್ ಕಾರ್ಟ್ ಕಂಪನಿಯವರು ಒಬ್ಬ “Love Executive “ ರನ್ನು ತುಂಬಾ ನಾಜೂಕಾಗಿ ಟ್ರೈನ್ ಮಾಡಿ ಆ ಹಳ್ಳಿಗೆ ಕಳುಹಿಸಿ ಕೊಡುತ್ತಾರೆ. ಅವನು ಆ ಊರಲ್ಲಿ ಪ್ರೀತಿ ಹಂಚಬೇಕು… ಆಮೇಲಿನದ್ದು ಸವಾಲಿನ ಪಾತ್ರ … ಹೀಗೆ ಲವ್ ಎಕ್ಸಿಕ್ಯೂಟಿವ್ ಆಗಿ ಹೋಗುವ ಪಾತ್ರ ವಿಜಯ್ ಅವರು ಮಾಡಬೇಕು ಎಂಬುದು “ನಾತಿಚರಾಮಿ” ನೋಡಿದಾಗಿನಿಂದ ನನ್ನ ಆಸೆಯಾಗಿತ್ತು. ಕಥೆ ಕೇಳಿದ ವಿಜಯ್ ಬಹಳ ಇಷ್ಟಪಟ್ಟು, “ಇಂಥ ಕಾನ್ಸೆಪ್ಟ್ ಮಾಡ್ಲೇಬೇಕು ಸರ್. ಬೇಗ ಕಥೆ ಬರೆದು ಮುಗಿಸಿ. ಪ್ರೊಡ್ಯೂಸರ್ ಇದ್ದಾರೆ… ಮಾಡಿ ಬಿಡೋಣ. ಇದೊಂದು ಪ್ರಯೋಗ ಆಗುತ್ತೆ’ ಎಂದಿದ್ದರು….
ನಾನೋ ಆ ಕಥೆ ಬಿಟ್ಟು ಆಮೇಲೆ ಅದೆಷ್ಟು ಕಥೆ ಬರೆದರೂ ಅದೊಂದು ಅದ್ಯಾಕೊ ಅರ್ಧಕ್ಕೆ ನಿಂತಿತೋ ಗೊತ್ತಿಲ್ಲ. ಬಹುಷಃ ಅದು ಸಿನಿಮಾ ಆಗಬೇಕು ಎಂಬ ನಿರೀಕ್ಷೆ ಮತ್ತು ಒತ್ತಡದಿಂದಾಗಿ ನನಗೂ ಅದನ್ನು ಬರೆಯಲಾಗಲಿಲ್ಲ ಅನ್ನಿಸುತ್ತದೆ. . . ಊರಿಗೆ ಪ್ರೀತಿ ಹಂಚಲು ಫ್ಲಿಪ್ ಕಾರ್ಟ್ನವರ ಪಾರ್ಸೆಲ್ ನಲ್ಲಿ ಒಬ್ಬ ತರಬೇತಿ ಹೊಂದಿದ ಎಕ್ಸಿಕ್ಯೂಟಿವ್ ಆಗಿ ವಿಜಯ್ ಹಳ್ಳಿಯೊಂದರಲ್ಲಿ ಡೆಲಿವರ್ ಆಗಿದ್ದರೆ… ಆ ಪಾತ್ರವನ್ನು ವಿಜಿ ಎಷ್ಟು ತನ್ಮತೆಯಿಂದ ಅಭಿನಯಿಸುತ್ತಿದ್ದರು ಎಂದು ನೆನೆದರೆ ವಿಪರೀತ ಸಂಕಟವಾಗುತ್ತೆ. ಅವರು ವಿಚಿತ್ರ ಸಂಕೋಚದವರು, ಕಥೆ ಬಗ್ಗೆ ಪದೇ ಪದೇ ಕೇಳಲಿಲ್ಲ… ನಾನು ಆ ಕಥೆಯ ವಿಷಯದಲ್ಲಿ ಸೋಂಬೇರಿ ಆಗಿಬಿಟ್ಟೆ…Ibeg sincere apology for that Vijay. ತಲೆದಂಡದಲ್ಲಿ ನಿಮ್ಮ ಪಾತ್ರ ನೋಡಿದರೆ ಗೊತ್ತಾಗುತ್ತದೆ ನಿಮ್ಮಿಂದ ಎಷ್ಟೆಲ್ಲ ನಟನೆಯನ್ನು ಹೊರ ತೆಗೆಯಲು ಅವಕಾಶ ಇತ್ತೆಂದು… ಅಲ್ಲದೆ ಆ ಇಡೀ ಊರಲ್ಲಿ, ನಿಮ್ಮ ಆ ಪಾತ್ರ ತರಬಹುದಾಗಿದ್ದ ಕ್ರಾಂತಿಕಾರಿ ಬದಲಾವಣೆಗಳಿದ್ದವು…
ಈ ಕಥೆಯ ವಿಷಯದಲ್ಲಿ ಇಷ್ಟೊಂದು ಸೋಂಬೇರಿತನ ಮಾಡಿದ ನಾನು ಸರಿಯಾಗಿ (ಕಳೆದ ಶನಿವಾರ) ಜೂನ್ 12 ರ ರಾತ್ರಿ ಬುಕ್ ಬ್ರಹ್ಮಕ್ಕಾಗಿ, 11 ಗಂಟೆಯ ನಂತರ ಒಂದು ಕಥೆ ಬರೆಯಲು ಕೂತೆ. ಅದ್ಯಾಕೆ ಆ ಕಥೆ ಬರೆದೆನೋ ಎಂಬ ಪಶ್ಚಾತ್ತಾಪ ನನ್ನನ್ನೀಗ ಕಾಡುತ್ತಿದೆ. ಆ ಕಥೆಗೂ, ಅವತ್ತು ರಾತ್ರಿ ನಡೆದದ್ದಕ್ಕೂ , ಆನಂತರ ಎರಡೇ ದಿನದಲ್ಲಿ ನಡೆದದ್ದಕ್ಕೂ ಅದೆಂಥಾ ಕಾಕತಾಳೀಯ. ನನ್ನ ಕಥೆಗಳಲ್ಲಿ ನಾಟಕೀಯತೆ ಇರುತ್ತದೆಂದು ಕೆಲವರು ಹೇಳುತ್ತಾರೆ. ಆಗೆಲ್ಲ ನಾನು ಜೀವನದ ನಾಟಕೀಯತೆ ಮತ್ತು ರೋಚಕತೆ ನೆನೆದು ಸುಮ್ಮನಾಗುತ್ತೇನೆ. ಅದು ಹಾಗೇ ಆಯಿತು! ‘ಖಾಲಿ ಸೈಟಿನ ಕಡೆಗೆ ! ‘ ಛೇ…
ಇತ್ತೀಚಿಗೆ ಈ ‘ಸಾವು’ ಅಭ್ಯಾಸ ಮಾಡಿಸಲು ಶುರುವಿಟ್ಟುಕೊಂಡಿದೆ. ಏನೇನೋ ಕಾರಣಗಳಿಗೆ ಜೊತೆಯಾಗಿ ನೂರಾರು ಅವಿಸ್ಮರಣೀಯ ಕ್ಷಣಗಳನ್ನು ಕೊಟ್ಟವರು ಹೀಗೆ ಇದ್ದಕ್ಕಿದ್ದಂತೆ ಕಣ್ಮರೆಯಾದರೆ ನಮ್ಮ ನಾಳೆಗಳನ್ನು ಅನುಮಾನಿಸಬೇಕೆನ್ನಿಸುತ್ತಿದೆ. ಜಾತಿಯ ಕಾರಣಕ್ಕೆ ಆಗಿ ಹೋಗಿದ್ದ ಚಿತ್ತಕ್ಷೋಭೆಯನ್ನು ಮೇಕಪ್ ಇಲ್ಲದೆಯೇ ಮರೆಮಾಚಿ ನಗುತ್ತಿದ್ದ ಗೆಳೆಯ. ನಿನ್ನ ಅಂಗಾಂಗಳನ್ನು ದಾನ ಪಡೆವಾಗ ಯಾರೂ ಜಾತಿ ಹುಡುಕಿರಲಿಕ್ಕಿಲ್ಲ ಅಲ್ಲವೆ ? ಅದೇ ನೀವು ನಮ್ಮೆಲ್ಲರಿಗೂ ಕಲಿಸಿದ ಮೌಲ್ಯ. ನಿಮ್ಮ ಅಗಲಿಕೆ ಬಹಳ ಕಾಲ ಕಾಡುತ್ತದೆ. Death, be not Proud …
ಆದರೂ… ನನ್ನನ್ನು ಕ್ಷಮಿಸಿಬಿಡಿ ವಿಜಯ್, ಒಂದು ಕಥೆ ಬರೆಯದೇ ಇದ್ದದ್ದಕ್ಕಾಗಿ. ಮತ್ತೊಂದನ್ನು ಬರೆದದ್ದಕ್ಕಾಗಿ …
ಕನ್ನಡದ “ಬಿಗ್ ಬಾಸ್” ರಿಯಾಲಿಟಿ ಶೋ ಮಟ್ಟಿಗೆ ಇದೊಂದು ಅಪರೂಪದ ಸನ್ನಿವೇಶ. ದಾಖಲೆಯೂ ಹೌದು. ಜತೆಗೆ ಚರಿತ್ರೆಯೂ ಕೂಡ. ಯಾಕಂದ್ರೆ ಮುಂದೆ ಇಂತಹ ಸನ್ನಿವೇಶ ಎದುರಾಗುತ್ತೋ, ಇಲ್ಲವೋ ಗೊತ್ತಿಲ್ಲ. ಹೌದು, ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಕಲರ್ಸ್ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ “ಬಿಗ್ ಬಾಸ್ ಸೀಸನ್ ೮” ಮತ್ತೆ ಶುರುವಾಗುತ್ತಿದೆ. ಹಾಗಂತ, ಮತ್ತೆ ಮೊದಲಿನಿಂದ ಶುರುವಾಗುತ್ತಿಲ್ಲ. ಬದಲಿಗೆ ಅರ್ಧದಲ್ಲಿ ಅದು ನಿಂತು ಹೋದಾಗ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳ ಮೂಲಕ ಆಟ ಶುರುವಾಗುತ್ತಿದೆ.
ಸದ್ಯಕ್ಕೀಗ “ಬಿಗ್ ಬಾಸ್” ಮನೆಯಲ್ಲಿ 12 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್, ಪಾವಗಡ ಮಂಜು, ವೈಷ್ಣವಿ, ದಿವ್ಯಾ ಉರಡುಗ, ಶುಭಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ರಘು ಗೌಡ, ಕೆ.ಪಿ. ಅರವಿಂದ್, ಪ್ರಿಯಾಂಕಾ ತಿಮ್ಮೇಶ್, ಶಮಂತ್ ಗೌಡ ಹಾಗೂ ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದರು. ಈಗ ಎರಡನೇ ಇನ್ನಿಂಗ್ಸ್ ಜೂನ್ 23, ಬುಧವಾರದಿಂದ ಶುರುವಾಗುತ್ತಿದೆ. ಅಷ್ಟು ಸ್ಪರ್ಧಿಗಳಲ್ಲಿ ಯಾರೆಲ್ಲ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಾರೆನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಯಾಕೆ ನಿಂತಿದ್ದು ಅಂತ ನಿಮಗೆಲ್ಲ ಗೊತ್ತೇ ಇದೆ. ಮಹಾ ಮಾರಿ ಕೊರೊನಾ ಹೆಚ್ಚಳಗೊಂಡು ರಾಜ್ಯದಲ್ಲಿ ಅಪಾರ ಸಾವು-ನೋವಿನೊಂದಿಗೆ ತೀವ್ರ ಆತಂಕ ಸೃಷ್ಟಿಸಿದ್ದ ಸಂದರ್ಭದಲ್ಲೇ “ಬಿಗ್ ಬಾಸ್”ನಲ್ಲೂ ತಳಮಳ ಶುರುವಾಯಿತು. ಶೋ ನಿರೂಪಕರಾದ ನಟ ಸುದೀಪ್ ಅವರಲ್ಲೇ ಅನಾರೋಗ್ಯ ಕಾಣಿಸಿಕೊಂಡಿತು. ಕೊರೊನಾ ಪಾಸಿಟಿವ್ ಬಂದು ಕ್ವಾರಂಟೈನ್ಗೆ ಒಳಗಾದರು. ಅತ್ತ “ಬಿಗ್ಬಾಸ್” ಮನೆಯಲ್ಲೂ ಒಂದಿಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದರು. ಹಾಗಂತ, ಅವರಿಗೂ ಕೊರೊನಾ ಸೋಂಕು ತಗಲಿತ್ತು ಅಂತಲ್ಲ, ಸಹಜವಾಗಿಯೇ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಪೈಕಿ ನಟಿ ದಿವ್ಯಾ ಉರುಡುಗ ಚಿಕಿತ್ಸೆಗಾಗಿ ಅಲ್ಲಿಂದ ಹೊರ ಬಂದರು.
ಆನಂತರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಕೊರೊನಾ ತೀವ್ರವಾಗಿ ಜನರನ್ನು ಕಾಡುತ್ತಿರುವಾಗ ಈ ಹುಚ್ಚಾಟಗಳನ್ನು ಜನ ನೋಡಬೇಕಾ? ಇವರಿಗೇನು ಬೇರೆ ಕೆಲಸ ಇಲ್ಲವೇ? ಅಂತೆಲ್ಲ ನೆಟ್ಟಿಗರು ಸಿಟ್ಟು ಹೊರ ಹಾಕಿದರು. ಅದೇ ಹೊತ್ತಿಗೆ “ಬಿಗ್ಬಾಸ್” ರಿಯಾಲಿಟಿ ಶೋ ಟಿಆರ್ಪಿ ಕೂಡ ನೆಲ ಕಚ್ಚಿತ್ತು. ಹಾಗಾಗಿ ಚಾನಲ್ನವರಿಗೂ ಅದನ್ನು ಅರ್ಧಕ್ಕೆ ನಿಲ್ಲಿಸುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಇನ್ನೇನು ಆಗ ನಿಲ್ಲುತ್ತೆ, ಈಗ ನಿಲ್ಲುತ್ತೆ ಅನ್ನುವ ಕ್ಷಣಗಳಲ್ಲಿ ಕಲರ್ಸ್ ಕನ್ನಡ ಅನೌನ್ಸ್ ಮಾಡಿತು.
ಪರಿಣಾಮ ಸ್ಪರ್ಧಿಗಳು ಅಲ್ಲಿಂದ ಹೊರ ಬಂದರು. ಅವರಿಗೆಲ್ಲ ಈಗ ತಾವು “ಬಿಗ್ ಬಾಸ್” ಮನೆಯಲ್ಲಿದ್ದಾಗ ಯಾರೆಲ್ಲ ಯಾರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದರು. ಯಾರ ಪರವಾಗಿ ಜನರ ಒಲವು ಇತ್ತು, ಯಾರು ಗೆಲ್ಲಬಹುದು ಎನ್ನುವ ಲೆಕ್ಕಚಾರಗಳಿದ್ದವು. ಯಾರಿಗೆ ಎಷ್ಟೆಲ್ಲಾ ಓಟು ಬಂದಿದ್ದವು… ಇತ್ಯಾದಿಯಾಗಿ “ಬಿಗ್ಬಾಸ್” ಮನೆಗಳೊಳಗಿನ ರಹಸ್ಯ ಗೊತ್ತಾಗಿದೆ.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ “ಬಿಗ್ ಬಾಸ್” ಮನೆ ಪ್ರವೇಶಿಸಿದ ಚಕ್ರವರ್ತಿ ಚಂದ್ರಚೂಡ್ ಯಾರನ್ನು, ಯಾರ ವಿರುದ್ಧ ಹೇಗೆಲ್ಲ ಎತ್ತಿ ಕಟ್ಟುತ್ತಿದ್ದರು, ಪ್ರಶಾಂತ್ ಸಂಬರಗಿ-ಚಂದ್ರಚೂಡ್ ನಡುವೆ ಹೇಗೆಲ್ಲ ಸ್ನೇಹ ಇತ್ತು,.. ಮುಂತಾದ ಒಳ ರಾಜಕೀಯ ಬಯಲಾಗಿದೆ. ಜತೆಗೆ ವೈಷ್ಣವಿ-ರಘು ಗೌಡ, ಅರವಿಂದ್- ದಿವ್ಯಾ ಉರುಡುಗ ಹಾಗೂ ಶಮಂತ್- ಪ್ರಿಯಾಂಕಾ ತಿಮ್ಮೇಶ್ ಜೋಡಿಗಳ ಬಗ್ಗೆ ಹೊರಗಡೆ ವರ್ಣರಂಜಿತ ಸುದ್ದಿಗಳು ಹರಿದಾಡುತ್ತಿದ್ದವು ಅನ್ನೋದು ಕೂಡ ಸ್ಪರ್ಧಿಗಳಿಗೆಲ್ಲ ತಿಳಿದಿದೆ. ಈಗ ಎಲ್ಲರೂ ಎಚ್ಚರಗೊಂಡಿದ್ದಾರೆ.
ಸರಿ-ತಪ್ಪುಗಳೇನು ಅಂತಲೂ ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಹಾಗೆ ನೋಡಿದರೆ ಅಲ್ಲೀಗ ಹೊಸ ಆಟವೇ ಶುರುವಾಗಬೇಕಿದೆ. ಹಾಗೆಯೇ ಹೊಸ ತಂತ್ರಗಳ ಮೂಲಕವೇ ವೀಕ್ಷಕರನ್ನು ಈ ಶೋ ರಂಜಿಸಬೇಕಿದೆ ಆ ನಿಟ್ಟಿನಲ್ಲಿ ಕಲರ್ಸ್ ಕನ್ನಡದ “ಬಿಗ್ಬಾಸ್ ಸೀಸನ್ ೮” ರ ಎಡನೇ ಇನ್ನಿಂಗ್ಸ್ ತೀವ್ರ ಕುತೂಹಲ ಮೂಡಿಸಿದೆ. ಇದೆಲ್ಲ ಓಕೆ, ಈಗ ಕೊರೊನಾ ಇನ್ನು ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಬೆಂಗಳೂರಿನಲ್ಲಿ ಪ್ರತಿ ದಿನ ಕೊರೊನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಸಾವಿರ ಲೆಕ್ಕದಲ್ಲಿ ದಾಖಲಾಗುತ್ತಿದೆ.
ಈ ನಡುವೆಯೇ ಈಗ ಅನ್ಲಾಕ್ ಆಗಿದೆ. ಜನ ಮೈ ಮರೆತು ಓಡಾಡುತ್ತಿದ್ದಾರೆ. ಮತ್ತೆ ಹೆಚ್ಚಳ ಆಗೋದಿಲ್ಲ ಎನ್ನುವ ಗ್ಯಾರಂಟಿ ಇಲ್ಲ. ಯಾಕಂದ್ರೆ ಮೈಸೂರು ಸೇರಿದಂತೆ ಈಗಲೂ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಜಾಸ್ತಿಯೇ ಇದೆ. ಹಾಗಾಗಿ ಈಗಲೂ ಇದೆಲ್ಲ ಹುಚ್ಚಾಟದ ಶೋ ಬೇಕಾ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಸದ್ಯಕ್ಕೆ ಕಲರ್ಸ್ ಕನ್ನಡದಿಂದ ಉತ್ತರ ಇಲ್ಲ. ಹೇಗಾದರೂ ಸರಿ, ಶೋ ಮುಗಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಹೊಸ ಪ್ರೋಮೋಗಳ ಮೂಲಕ ಈಗಾಗಲೇ ಜನರಲ್ಲಿ ಒಂದಷ್ಟು ಕುತೂಹಲ ಹುಟ್ಟು ಹಾಕಿದೆ. ಅಂತೆಯೇ ನಾಳೆಯಿಂದ ಶೋ ಶುರುವಾಗುವುದು ಖಚಿತವಾಗಿದೆ. ಗೆಲ್ಲುವರಾರು, ಬರಿ ಗೈಯಲ್ಲಿ ಮನೆಗೆ ಬರುವರಾರು ಎನ್ನುವ ಕಥೆ ಬಿಡಿ, ಎರಡನೇ ಇನ್ನಿಂಗ್ಸ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎನ್ನುವುದು ಕುತೂಹಲ ಹುಟ್ಟಿಸಿದೆ.
ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನಾಳೆಯಿಂದ ಶುರುವಾಗುತ್ತಿದೆ. ೧೨ ಮಂದಿ ಸ್ಪರ್ಧಿಗಳು ಎಂಟ್ರಿ ಆಗುತ್ತಿದ್ದಾರೆನ್ನುವ ಸುದ್ದಿ ಇದೆ. ಆದರೆ ಇದರಲ್ಲಿ ಕೆಲವರು ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅಗ್ನಿ ಸಾಕ್ಷಿ ಧಾರಾವಾಹಿಯ ಖ್ಯಾತಿಯ ನಟಿ ವೈಷ್ಣವಿ ಗೌಡ ಇಂತಹದೊಂದು ನಿರ್ಧಾರ ಮಾಡಿದ್ದಾರೆನ್ನುವ ಗಾಸಿಪ್ ಇದೆ. ಈ ಬಗ್ಗೆ ನಟಿ ವೈಷ್ಣವಿ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹಾಗೆಯೇ ದಿವ್ಯಾ ಉರುಡುಗ ಕೂಡ ಮತ್ತೆ ಬಿಗ್ ಬಾಸ್ ಮನೆಗೆ ಹೋಗುವುದು ಡೌಟು ಎನ್ನುಲಾಗಿದೆ. ಎಲ್ಲದಕ್ಕೂ ನಾಳೆಯೇ ಉತ್ತರ ಸಿಗಲಿದೆ.
ಕಲಾವಿದ ಯತಿರಾಜ್ ಲಾಕ್ಡೌನ್ ಟೈಮ್ನಲ್ಲಿ ಸುಮ್ಮನೆ ಕೂರಲಿಲ್ಲ. ಸದಾ ಸಿನಿಮಾ ಧ್ಯಾನಿಸುವ ಯತಿರಾಜ್, ಕೊರೊನಾ ಲಾಕ್ಡೌನ್ ಸಮಯದಲ್ಲಿ ಅವರು ಒಂದಷ್ಟು ಮನಮಿಡಿಯುವಂತಹ ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಮತ್ತೊಂದು ಕಿರುಚಿತ್ರ ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಹೌದು, ಅವರ ಕಿರುಚಿತ್ರದ ಹೆಸರು “ಮೈಂಡ್ ಇಟ್”. ಇತ್ತೀಚೆಗಷ್ಟೇ ನಟ ಸಂಚಾರಿ ವಿಜಯ್ ಅಗಲಿದ್ದಾರೆ. ಅವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹೆಲ್ಮಟ್ ಹಾಕಿಕೊಂಡಿದ್ದರೆ, ಅವರ ಜೀವ ಉಳಿಯುತ್ತಿತ್ತು ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು. ಈ ವಿಷಯವನ್ನೇ ಆಧರಿಸಿ, ನಟ ಯತಿರಾಜ್ ನಿರ್ದೇಶನ ಮಾಡುವುದರ ಜೊತೆಯಲ್ಲಿ ಅವರು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. “ಮೈಂಡ್ ಇಟ್” ಹೆಸರಲ್ಲಿ ಆರು ನಿಮಿಷದ ಹದಿನೈದನೆ ಕಿರುಚಿತ್ರವನ್ನು ಅವರು ತಮ್ಮದೆ ಸಂಸ್ಥೆ ’ಕಲಾವಿದ ಫಿಲಂ ಅಕಾಡೆಮಿ’ ಮೂಲಕ ನಿರ್ಮಾಣ ಮಾಡಿದ್ದಾರೆ. ಯೂ ಟ್ಯೂಬ್ದಲ್ಲಿ ವೀಕ್ಷಿಸಿದ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಅದೊಂದು ಸುಂದರ ಸಂಸಾರ. ಆತ ರಂಗಭೂಮಿ ಕಲಾವಿದ. ಅಡಿಷನ್ನಲ್ಲಿ ಇವರ ಅಭಿನಯ ಕಂಡು ನಿರ್ದೇಶಕ ಮತ್ತು ನಿರ್ಮಾಪಕರು ನಾಯಕನಾಗಿ ಚಿತ್ರಕ್ಕೆ ಆಯ್ಕೆ ಮಾಡುತ್ತಾರೆ. ಖುಷಿಯನ್ನು ಪತ್ನಿಯೊಂದಿಗೆ ಹಂಚಿಕೊಂಡು, ಮುಂಗಡ ಹಣ ಪಡೆಯಲು ಹೆಲ್ಮೆಟ್ ಧರಿಸದೆ ಹೋಗುತ್ತಾರೆ. ದಾರಿಯಲ್ಲಿ ಫೋನ್ ಬಂತೆಂದು ಮಾತಾಡುವಾಗ, ಹಳ್ಳದಿಂದ ಪಾರಾಗುವ ಸಲುವಾಗಿ, ಆಯ ತಪ್ಪಿ ಕೆಳೆಗೆ ಬೀಳುತ್ತಾರೆ. ಫುಟ್ಪಾತ್ಗೆ ಬಿದ್ದ ಅವರ ತಲೆಗೆ ಬಲವಾದ ಪೆಟ್ಟು ಬೀಳುತ್ತೆ. ನಂತರ ತೀವ್ರ ರಕ್ತ ಸ್ರಾವಗೊಂಡು ಅಲ್ಲಿಯೇ ಪ್ರಾಣ ಕಳೆದುಕೊಳ್ಳುವುದರೊಂದಿಗೆ ಸಿನಿಮಾ ಕೂಡ ಮುಗಿಯುತ್ತದೆ.
ಪತ್ನಿ ಪಾತ್ರದಲ್ಲಿ ನಯನ, ನಿರ್ಮಾಪಕರಾಗಿ ಬೆಂ.ಕೋ.ಶ್ರೀನಿವಾಸ್, ನಿರ್ದೇಶಕರಾಗಿ ಪರಮೇಶ್ ಹಾಗೂ ಬೇಬಿ ಸ್ಮೃತಿ ನಟಿಸಿದ್ದಾರೆ. ಸೋನುಸಾಗರ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ವಿನುಮನಸು ಮತ್ತು ಮಾರುತಿ ಮೀರಜ್ ಸಂಗೀತವಿದೆ. ನಟ ವಸಿಷ್ಠ ಸಿಂಹ ಹಿನ್ನಲೆ ಧ್ವನಿ ನೀಡಿದ್ದಾರೆ.
ನಟ ಸಂಚಾರಿ ವಿಜಯ್ ಈಗಿಲ್ಲ. ಅವರೇನಿದ್ದರೂ ಈಗ ನೆನಪು ಮಾತ್ರ. ಈಗ ಅವರ ಆಂತರಿಕ ಬದುಕಿನ ರೋಚಕ ಗಳು ಬಯಲಿಗೆ ಬರುತ್ತಿದ್ದು, ಅವೆಲ್ಲ ಅವರನ್ನು ಬೆಚ್ಚಿ ಬೀಳಿಸುತ್ತಿವೆ. ವಿಚಿತ್ರ ಅಂದ್ರೆ, ಕನ್ನಡ ಚಿತ್ರ ರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟನೊಬ್ಬ ಜಾತಿಯ ಅವಮಾನದ ತೀವ್ರವಾಗಿ ನೊಂದಿದ್ದರು ಎನ್ನುವ ಸಂಗತಿಯನ್ನು ವಿಜಯ್ ಆತ್ಮೀಯರು ಆದ ನಟ ಸತೀಶ್ ನೀನಾಸಂ ಬಹಿರಂಗಪಡಿಸಿದ್ದಾರೆ. ಗೆಳೆಯ ವಿಜಯ್ ಅವರ ನಟನೆಯ ಜರ್ನಿ ಹಾಗೂ ಅನುಭವಿಸಿದ ಅವಮಾನಗಳ ಕುರಿತು ‘ಕನ್ನಡ ಪಿಕ್ಚರ್” ಯೂಟ್ಯೂಬ್ ಚಾನಲ್ನಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
‘ವಿಜಯ್ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟರೂ ಸಮಾಜದಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದರು. ಕಷ್ಟಗಳು ಎನ್ನುವುದಕ್ಕಿಂತ ನೋವು ಅನುಭವಿಸಿದ್ದರು. ಈ ಸಮಾಜದ ವ್ಯವಸ್ಥೆಯಿಂದ ಜೀವನದಲ್ಲಿ ನೊಂದಿದ್ದರು. ಪ್ರಾಣಿಗಳ ಮೇಲೆ ತೋರುವ ಮನುಷ್ಯತ್ವ, ಮನುಷ್ಯರ ಮೇಲೆ ಏಕಿಲ್ಲ ಎಂದು ಹಲವು ಬಾರಿ ಸಂಕಟ ಪಟ್ಟಿದ್ದರು” ಎಂದು ನಟ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ.
‘ಸಂಚಾರಿ ವಿಜಯ್ ಈಗಿಲ್ಲ ಅಂತ ಕಣ್ಣೀರು ಹಾಕುವ ಜನ, ಅವರಿದ್ದಾಗ ನೀವು ಕೊಟ್ಟ ನೋವುಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಕರ್ನಾಟಕದ ಹೆಮ್ಮೆ ಅಂತ ಕೊಂಡಾಡಿದ ಮಂದಿ ಎಷ್ಟು ನೋವು ಕೊಟ್ಟಿದ್ದೀರಾ ಅಂತ ನೋಡ್ಕೊಳ್ಳಿ. ಎಲ್ಲವೂ ಸರಿ ಇದೆ, ಎಲ್ಲವೂ ಚೆನ್ನಾಗಿದೆ ಅಂತ ಎಷ್ಟು ದಿನ ಮುಚ್ಚಿಟ್ಟುಕೊಂಡು ಹೋಗ್ತೀರಾ, ಜಾತಿ ಯಾವುದು, ಊರು ಯಾವುದು, ಕೆಲಸ ಯಾವುದು ಅಂತ ನೋಡದೆ ಒಬ್ಬ ಮನುಷ್ಯ ಎಂದು ನೋಡುವುದು ಯಾವಾಗ” ಎಂದು ಬೇಸರ ಹೊರಹಾಕಿದರು.
”ಕಾಜಿ’ ಅಂತ ಸಾಕ್ಷ್ಯಚಿತ್ರ ಮಾಡಿದೆ. ಆ ಸಮಯದಲ್ಲಿ ಒಬ್ಬರು ಕಾಮೆಂಟ್ ಮಾಡಿದರು. ‘ಈ ರೀತಿ ಸಿನಿಮಾದಲ್ಲಿ ತೋರಿಸಬೇಡಿ, ಅಮೆರಿಕಾದಲ್ಲಿ ನಮ್ಮ ಬಡತನ ನೋಡಿದ್ರೆ ಅವಮಾನ ಆಗುತ್ತೆ’ ಅಂದ್ರು. ಹಾಗಾದ್ರೆ, ಇಲ್ಲಿರೋ ಬಡತನ, ಸಮಸ್ಯೆ, ಜಾತಿ ಸಮಸ್ಯೆ ಮುಚ್ಚಾಕ್ತೀರಾ ನೀವು. 21ನೇ ಶತಮಾನದಲ್ಲಿ ಎಲ್ಲವೂ ಅಭಿವೃದ್ದಿ ಹೊಂದಿದೆ, ವಿಮಾನ, ವಿಜ್ಞಾನ, ಆವಿಷ್ಕಾರ ಎಷ್ಟೇ ಅಗಿದ್ದರೂ ಮನುಷ್ಯತ್ವದಲ್ಲಿ ಮನುಷ್ಯರು ಬಹಳ ಹಿಂದೆ ಇದ್ದಾರೆ. ಪ್ರಾಣಿಗಿಂತ ಹೀನಾಯವಾಗಿದ್ದಾರೆ” ಎಂದು ಸತೀಶ್ ಅಸಮಾಧಾನ ವ್ಯಕ್ತಪಡಿಸಿದರು.
”ಸಂಚಾರಿ ವಿಜಯ್ಗೂ ಈ ಜಾತಿ ಅವಮಾನ ಆಗಿತ್ತು. ಅನೇಕ ಬಾರಿ ನನ್ನೊಂದಿಗೆ ಈ ವಿಚಾರ ಚರ್ಚಿಸಿದ್ದರು. ಸಮಯ ಬಂದಾಗ, ಎಲ್ಲವನ್ನು ವಿವರವಾಗಿ ಹೇಳ್ತೀನೆ, ತುಂಬಾ ಜನ ಅದನ್ನು ಮುಚ್ಚಿಟ್ಟಿದ್ದಾರೆ, ನಾನು ಹೇಳ್ತೇನೆ. ಅವನಿಗೆ ಈ ಸಮಾಜ ಕೊಟ್ಟ ಅಪಮಾನ ಎಂತಹದ್ದು ಎಂದು ಎಲ್ಲರೂ ತಿಳಿಯಲಿ” ಎಂದು ಸತೀಶ್ ಆಕ್ರೋಶವಾಗಿ ಮಾತನಾಡಿದರು.
ಕೊರೊನಾ ವಿಷಯ ಕುರಿತಂತೆ ಈಗಾಗಲೇ, ಹಾಡು, ಜಾಹಿರಾತು, ಕಿರುಚಿತ್ರ ಅಷ್ಟೇ ಯಾಕೆ ಸಿನಿಮಾಗಳು ತಯಾರಾಗಿವೆ. ಕೆಲವು ರಿಲೀಸ್ ಕೂಡ ಆಗಿವೆ. ಆ ಸಾಲಿಗೆ ಈಗ ‘ಸಲ್ಯೂಟ್ ವಾರಿಯರ್ಸ್’ ಆಲ್ಬಂ ಸಾಂಗ್ ಕೂಡ ಒಂದು. ಹೌದು, ಇದು ಕೋಟೆ ನಾಡು ಚಿತ್ರದುರ್ಗ ಪ್ರತಿಭೆಗಳೇ ಸೇರಿ ಚಿತ್ರೀಕರಿಸುತ್ತಿರುವ ಹಾಡು. ಸದ್ಯ ಹಾಡಿನ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಶೂಟಿಂಗ್ ಬಳಿಕ ಯುವಕರ ತಂಡ, ಸಾಂಗ್ ಬಿಡುಗಡೆ ಮಾಡಲು ತಯಾರು ನಡೆಸುತ್ತಿದೆ. ಇನ್ನು ಈ ಹುಡುಗರ ಪ್ರಯತ್ನ ಮೆಚ್ಚಿಕೊಂಡ ಚಿತ್ರದುರ್ಗ ಎಸ್.ಪಿ. ಮತ್ತು ಸಿಇಓ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೊರೊನಾ ಕುರಿತ ಜಾಗೃತಿ ಗೀತೆ ‘ಸಲ್ಯೂಟ್ ವಾರಿಯರ್ಸ್’ ಕನ್ನಡ ಆಲ್ಬಂ ಸಾಂಗ್ ಮುಹೂರ್ತ ನಡೆಯಿತು. ಈ ವೇಳೆ ಆಲ್ಬಂ ಸಾಂಗ್ ಗೆ ಚಾಲನೆ ಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ‘ಸರ್ಕಾರ ಕೊರೊನಾ ಲಾಕ್ಡೌನ್ ಸಡಿಲಿಕೆ ಮಾಡಿರಬಹುದು ಆದರೂ ಜನರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗವನ್ನು ಕೊರೊನಾ ಮುಕ್ತ ಮಾಡಲು ಸನ್ನದ್ಧವಾಗಿದೆ. ಇನ್ನು ಪ್ರತಿಭಾವಂತ ಹುಡುಗರು ಸೇರಿ ಮಾಡಿರುವ ‘ಸಲ್ಯೂಟ್ ವಾರಿಯರ್ಸ್’ ಸಾಂಗ್ ಅದ್ಬುತವಾಗಿ ಮೂಡಿಬಂದಿದೆ. ಚಿತ್ರೀಕರಣ ಯಶಸ್ವಿಯಾಗಲಿ ಎಂದಿದ್ದಾರೆ.
ಸರ್ಕಾರ ವಿವಿಧ ರೀತಿಯಲ್ಲಿ ಜನಜಾಗೃತಿ ಕಾರ್ಯ ಮಾಡುತ್ತಿದ್ದು ಅದನ್ನು ಅರಿತ ಮಾತರಂ ಲ್ಯಾಪ್ ಕ್ರಿಯೇಷನ್ ತಂಡವು ಒಂದು ಅರ್ಥಪೂರ್ಣ ಹಾಡು ರಚಿಸಿದೆ. ಇವರ ಹೊಸ ಹೆಜ್ಜೆಗೆ ಶುಭವಾಗಲಿ. ಇವರಿಂದ ಇನ್ನೂ ಹೆಚ್ಚು ಕ್ರಿಯಾಶೀಲ ಕಾರ್ಯಗಳು ಬರಲಿ ಎಂದು ಶುಭ ಹಾರೈಸಿದ್ದಾರೆ.
ಸಾಂಗ್ ಚಿತ್ರೀಕರಣಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಂದಿನಿದೇವಿ, ‘ನಮ್ಮ ಜಿಲ್ಲೆಯನ್ನು ಹೋಲಿಕೆ ಮಾಡಿ ನೋಡಿದಾಗ ಕೊರೊನಾ ಸಂಖ್ಯೆ ಕಡಿಮೆ ಇದೆ. ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ಮುಂದೆ ಮೂರನೆ ಅಲೆಯನ್ನು ತಡೆಯಲೂ ಎಲ್ಲರೂ ಸಿದ್ಧರಾಗೋಣ ಮತ್ತು ಎಚ್ಚರದಿಂದ ಇರೋಣ ಎಂದರು.
‘ಸಲ್ಯೂಟ್ ವಾರಿಯರ್ಸ್’ ಸಾಂಗ್ ಕ್ರಿಯೇಟಿವ್ ಹೆಡ್ ಮಾಲತೇಶ್ ಅರಸ್ ಹರ್ತಿಕೋಟೆ, ‘ನಿಜವಾದ ವಾರಿಯರ್ಸ್ ಗಳು ಇಲ್ಲಿ ನಾಯಕರಾಗಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಈ ಹಾಡಿನಲ್ಲಿ ಎಸ್ಪಿ. ಡಿಸಿ, ಸಿಇಒ ಪ್ರಮುಖವಾಗಿದ್ದು ಜಿಲ್ಲೆಯ ಎಲ್ಲಾ ಪೊಲೀಸರು, ವೈದ್ಯರು, ನರ್ಸಗಳು, ಆಸ್ಪತ್ರೆ ಬ್ರದರ್ಸ್, ನಗರಸಭೆ ಪೌರ ಕಾರ್ಮಿಕರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬೆಸ್ಕಾಂ ಸಿಬ್ಬಂದಿ, ಹೋಮ್ ಗಾಡ್ಸ್, ಪಿಡಿಒ, ಗ್ರಾಪಂ ಸಿಬ್ಬಂದಿ, ಡಿಸಿ ಕಚೇರಿ, ಜಿಪಂ ಕಚೇರಿಯ ಸಿಬ್ಬಂದಿಗಳನ್ನು ಚಿತ್ರಿಕರಣ ಮಾಡಲಾಗುವುದು ಎಂದರು.
ಸಲ್ಯೂಟ್ ವಾರಿಯರ್ಸ್ ಆಲ್ಬಂಗೆ ದೇವರತ್ನ ಮಂಜು ಸಾಹಿತ್ಯ ಬರೆದು ನಿರ್ದೇಶನ ಮಾಡಲಿದ್ದಾರೆ.’ಇದು ಕೊರೊನಾ ಜಾಗೃತಿ ಗೀತೆಯಾಗಿದ್ದು ಇದರಲ್ಲಿ ವಾರಿಯರ್ಸ್ ಗಳನ್ನು ಸಾರ್ವಜನಿಕರು ಅಭಿನಂದಿಸುವ ಉದ್ದೇಶವೂ ಇದೆ. ಚಿತ್ರದುರ್ಗದ ವಾರಿಯರ್ಸ್ ಗಳೇ ಇದರಲ್ಲಿ ಇರುತ್ತಾರೆ ಚಿತ್ರದುರ್ಗದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಐದು ದಿನಗಳ ಕಾಲ ಚಿತ್ರೀಕರಣ ಮಾಡಿ ನಂತರ ಎಲ್ಲರನ್ನು ಒಂದೆಡೆ ಸೇರಿಸಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲಾಗುವುದು ಎಂದರು.
ಮುಹೂರ್ತದಲ್ಲಿ ಅಡಿಷನಲ್ ಎಸ್.ಪಿ ನಂದಗಾವಿ ಮತ್ತು ಜಿಲ್ಲೆಯ ಎಲ್ಲಾ ಡಿವೈಎಸ್ಪಿ, ಎಲ್ಲಾ ವೃತ್ತ ನಿರೀಕ್ಷಕರು, ಸಬ್ ಇನ್ಸ್ ಪೆಕ್ಟರ್ ಹಾಗೂ ಸಲ್ಯೂಟ್ ವಾರಿಯರ್ಸ್ ಸಾಂಗ್ ಸಂಗೀತ ನಿರ್ದೇಶಕರಾದ ಮುನ್ನಾ, ನಿವೃತ್ತ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ತಂಡದ ಅಶೋಕ್, ರಾಘವೇಂದ್ರ, ಚಂದನ್, ಶಶಿಡ್ರೋಣ್, ಕಿಶೋರ್ಚಿನ್ನು, ಪಾಟೀಲ್, ಚೇತನ್, ತೇಜು, ಮದನ್ ರಾಹುಲ್ ಮತ್ತು ಚಿತ್ರತಂಡ ಭಾಗವಹಿಸಿದ್ದರು.