Categories
ಸಿನಿ ಸುದ್ದಿ

ವಿಜಿ ಸರ್… ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ?ʼʼ ಅಂದಿದ್ದಕ್ಕೆ…ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ…

ಸಂಚಾರಿ ವಿಜಯ್, ದೈಹಿಕವಾಗಿ ಇಲ್ಲ. ಆದರೆ, ಅವರು ತಮ್ಮ ಸಿನಿಮಾಗಳ ಮೂಲಕ ಅದೇ ನಗು ಹೊತ್ತು ಜೊತೆಗಿದ್ದಾರೆ. ಅವರ ಅಭಿನಯದ ‘ಮೇಲೊಬ್ಬ ಮಾಯಾವಿ’ ರಿಲೀಸ್ ಗೆ ರೆಡಿಯಾಗಿದೆ. ಚಿತ್ರದ ಹಾಡೊಂದು ಸಂಚಾರಿ ವಿಜಯ್ ಅವರಿಗೆ ತುಂಬಾನೇ ಇಷ್ಟವಾಗಿತ್ತು. ಬೇಗ ರಿಲೀಸ್ ಮಾಡಿ ಅಂತ ಅದೆಷ್ಟೋ ಸಲ ಹೇಳಿದ್ದರು ವಿಜಯ್. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ನಿರ್ದೇಶಕ ನವೀನ್ ಕೃಷ್ಣ ಸಾಂಗ್ ರಿಲೀಸ್ ಮಾಡಿದ್ದಾರೆ. ನಿಜಕ್ಕೂ ಹಾಡು ನೋಡಿದವರ ಕಣ್ಣು ಒದ್ದೆಯಾಗದೇ ಇರದು. ಅಂದಹಾಗೆ, ನಿರ್ದೇಶಕರು ಸಂಚಾರಿ ವಿಜಯ್ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಓವರ್ ಟು ನವೀನ್ ಕೃಷ್ಣ…

ವಿಜಿ ಸರ್…
ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದ್ರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ಡೈರೆಕ್ಟರ್, ನೀವೊಬ್ಬ ಆಕ್ಟರ್ ಅನ್ನುವ ಕೊಂಡಿಯನ್ನು ಬಹುಬೇಗ ಕಳಚಿದ್ರಿ. ಸದಾ ಹೊಸತನ್ನು ಯೋಚಿಸುವ.. ಸದಾ ಸಂತೋಷವನ್ನು ಹಂಚುವ.. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮ್ಮ ಜೀವನ ಸೂತ್ರವನ್ನು ಇಡೀ ತಂಡಕ್ಕೆ ಉಚಿತವಾಗಿ ಹಂಚಿದಿರಿ.


ಊಟವನ್ನು ಇಷ್ಟ ಪಡುವ ನೀವು… ಸಾಕಷ್ಟು ಬಾರಿ ಕೈತುತ್ತು ಕೊಟ್ರಿ… ನಿಮ್ಮ ನಟನೆಯ ಸ್ಕಿಲ್ ಅನ್ನು ಯಾವುದೇ ಆಮಿಷವಿಲ್ಲದೇ ಹಂಚಿದಿರಿ…
ಇವತ್ತು ರಿಲೀಸ್ ಆಗಿರುವ ವಿಡಿಯೋ ಸಾಂಗ್ ಅನ್ನು ಅವಾಗವಾಗ ʻʻಡೈರೆಕ್ಟ್ರೆ ಬೇಗ ರಿಲೀಸ್ ಮಾಡಿ ಅಂದ್ರಿʼʼ…

ಈ ಸಮಯದಲ್ಲಿ ರಿಲೀಸ್ ಮಾಡುವ ಮನಸ್ಥಿತಿ ನಮ್ಮದಲ್ಲ.. ಇಡೀ ತಂಡ ದಿಗ್ಭ್ರಮೆಯಲ್ಲಿದೆ. ಆದರೂ ರಿಲೀಸ್ ಮಾಡಿರೋದು ನಮ್ಮ ತಂಡದ ಜೊತೆ ನೀವೂ ಕೂತು ನೋಡ್ತಿದ್ದೀರಿ ಅನ್ನೋ ಉದ್ದೇಶಕ್ಕೆ.


ʻʻವಿಜಿ ಸರ್.. ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ… ಒಪ್ಪಿಗೇನಾ?ʼʼ ಅಂದಿದ್ದಕ್ಕೆ.. ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ!!
ಸರ್…, ಈ ಸಾಂಗ್ ಬಗ್ಗೆ ನಾನು ಚಂದ್ರಣ್ಣ ( ಚಕ್ರವರ್ ಸರ್ ) ಸಾಕಷ್ಟು ಡಿಸ್ಕಸ್ ಮಾಡಿದ್ವಿ. ಚಂದ್ರಣ್ಣ ನಾನು ಕೊಟ್ಟ ಇನ್ಪುಟ್ಸ್ ಅನ್ನು ತುಂಬಾ ಸೀರಿಯಸ್ ಆಗಿ ತಗೊಂಡು, ನಿಮ್ಮ ಒಪ್ಪಿಗೆಯನ್ನು ಪಡೆದೇ ಶೂಟ್ ಮಾಡಲಾಯ್ತು. ಬಾಲ್ಯದ ಗೆಳೆಯ.. ನಿರ್ಮಾಪಕ ಪುತ್ತೂರು ಭರತ್, ಯಾವುದಕ್ಕೂ ನೋ ಅಂದಿಲ್ಲ. ಎಲ್ಲಾ ರಿಸ್ಕ್ ಗಳನ್ನು ತನ್ನ ಹೆಗಲ ಮೇಲೆ ಹೊತ್ತು ನಡೆದ್ರು ಈ ಕ್ಷಣಕ್ಕೂ….


ಕೊನೆಯದಾಗಿ , ವಿಜಿ ಸರ್ ನಿಮ್ಮ ಫೋಟೋ ಹಾಕಿ ʻರಿಪ್ʼ ಅನ್ನೊಲ್ಲ.. ನಮ್ಮ ಇಡೀ ಮಾಯಾವಿ ತಂಡದ ಕೊನೆ ಉಸಿರಿರುವವರೆಗೂ ನಿಮ್ಮ ನಿಮ್ಮ ಮುಗ್ಧ ಮಗುವಿನಂತ ನಗುವಿನ ಜೊತೆಗಿರುತ್ತೆ. ಸರ್.. ಬನ್ನಿ ನಾನು ನೀವು ಚಂದ್ರಣ್ಣ ಬೆಸ್ಟ್ ಒಟ್ಟೊಟ್ಟಾಗಿ ಜಗಳ ಮಾಡೋಣ.. ಅಟ್ಲೀಸ್ಟ್ ಮೂವರೂ ಒಂದು ಹಗ್ ಮಾಡೋಣ… ʻಮಿಸ್ ಯೂʼ… ಅನ್ನೋಕೂ ಆಗ್ತಿಲ್ಲ…’ ಎಂದು ಹೇಳಿದ್ದಾರೆ ನಿರ್ದೇಶಕ ಬಿ.ನವೀನ್ ಕೃಷ್ಣ.

Categories
ಸಿನಿ ಸುದ್ದಿ

ಚರಿತ್ರೆ ಸೃಷ್ಟಿಸಿದ ಈ ನಟನಿಗೆ ತನ್ನ ತಾಯಿಯ ಆತ್ಮ ಚರಿತ್ರೆ ಬರೆಯವ ಕನಸು ನನಸಾಗದೇ ಉಳಿಯಿತು..!

‘ಸರ್‌, ಬರವಣಿಗೆ ಅಂತ ಬಂದಾಗ ನಂಗೆ ತುಂಬಾ ಕಾಡೋದು ನನ್ನಮ್ಮನ ಬದುಕಿನ ಕಥೆ. ಅದನ್ನ ಬರೀಬೇಕು ಅನ್ನೋದು ನನ್ನ ಕನಸು…

ನಟ ಸಂಚಾರಿ ವಿಜಯ್‌ ಅವರಿಗಿದ್ದ ಬರವಣಿಗೆಯ ಕನಸಿದು. ಅದು ನನಸಾಗದೆ ಉಳಿದು ಹೋದದ್ದು ಬಹುದೊಡ್ಡ ದುರಂತ. ʼಸಿನಿ ಲಹರಿʼ ಸಂಸ್ಥೆ ನೂರು ದಿನದ ಸಂಭ್ರಮದ ಸರಳ ಕಾರ್ಯಕ್ರಮಕ್ಕೆ ಬಂದ ವೇಳೆ, ನೆನಪಿನ ಡೈರಿಗೆ ಒಂದೆಡೆ ಅನಿಸಿಕೆ ಬರೆಯುವಾಗ ಅವರು ಈ ಮಾತು ಹೇಳಿದ್ದರು. ಈಗ ಇವೆಲ್ಲ ನೆನಪಿಸಿಕೊಳ್ಳುವಾಗ ಮನಸು ಭಾರವಾಗುತ್ತೆ. ಆದರೆ, ಅವರಿಗಿದ್ದ ಕನಸು, ಹಂಬಲ, ಆಕಾಂಕ್ಷೆಯ ಕೆಲಸಗಳನ್ನು ಸ್ಮರಿಸಿಕೊಂಡಾಗ ಅವರ ಅಗಾಧ ವ್ಯಕ್ತಿತ್ವ ನಮ್ಮ ಕಣ್ಣ ಮುಂದೆ ಬರುತ್ತದೆ.
ಸಂಚಾರಿ ವಿಜಯ್‌ ಬರೀ ನಟ ಮಾತ್ರವಲ್ಲ, ಅಪ್ಪಟ ಸಾಹಿತ್ಯ ಅಭಿಮಾನಿಯೂ ಹೌದು. ನಾಡಿನ ಅನೇಕ ಸಾಹಿತಿಗಳ ಅಮೂಲ್ಯ ಪುಸ್ತಕಗಳನ್ನ ಓದಿ ತಿಳಿದುಕೊಂಡಿದ್ದ ಮಾತ್ರವಲ್ಲ ಆ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಸಿನಿಮಾ ರಂಗಕ್ಕೆ ಬಂದ ಹೊಸಬರಿಗೂ ಓದಿ ಎಂದು ಹೇಳುತ್ತಿದ್ದರು.

ಇತ್ತೀಚೆಗೆ ಹೆಸರಾಂತ ರಂಗಕರ್ಮಿ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ‘ಆಡಾಡುತಾ ಆಯುಷ್ಯʼ ಕೃತಿಯ ಆಡಿಯೋ ಪುಸ್ತಕಕ್ಕೆ ವಿಜಯ್‌ ಧ್ವನಿ ನೀಡಿದಾಗ ಅವರು ಆ ಪುಸ್ತಕದ ಬಗ್ಗೆ ಸೋಷಲ್‌ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಂಡಿದ್ದರು. ಒಂದ್ರೀತಿ ಆ ಪುಸ್ತಕವನ್ನು ತಮ್ಮದೇ ನೋಟದಲ್ಲಿ ವಿಮರ್ಶಿಸುವುದರ ಜತೆಗೆ ಆ ಕೃತಿ ತಮ್ಮ ಅನುಭಾವವನ್ನು ಹೆಚ್ಚಿಸಿದ ಬಗೆಯನ್ನು ಅಲ್ಲಿ ತೆರೆದಿಟ್ಟಿದ್ದರು. ಹಾಗೆಯೇ ಲಾಕ್‌ ಡೌನ್‌ ದಿನಗಳಲ್ಲಿ ಅವರು ನಾಡಿನ ಅನೇಕ ಸಾಹಿತಿಗಳ ಪುಸ್ತಕ ಓದಿನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ಮಾತನಾಡಿದ್ದರು. ತೀರಾ ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದಾಗ ಬೆಂಗಳೂರಿಗೆ ಅರಂಭದ ದಿನಗಳು, ಆ ದಿನಗಳಲ್ಲಿ ಕಂಡ ಬೆಂಗಳೂರು, ಬೆರಗು ಮೂಡಿಸಿದ ಈ ಊರಿನ ಬಗ್ಗೆಯೂ ಬರೀಬೇಕೆನ್ನುವ ಪ್ರಯತ್ನಕ್ಕೂ ಕೈ ಹಾಕಿದ್ದರು. ಅದರ ಮೊದಲ ಪ್ರಯತ್ನವಾಗಿ ಬೆಂಗಳೂರಿನ ಮೆಜೆಸ್ಟಿಕ್‌ ಕುರಿತು ಅವರು ಬರೆದಿದ್ದ ಅನುಭವದ ಬರಹಕ್ಕೆ ಸೋಷಲ್‌ ಮೀಡಿಯಾದಲ್ಲಿ ಬಾರೀ ಮೆಚ್ಚುಗೆ ಸಿಕ್ಕಿತ್ತು. ಇದರ ಜತೆಗೆ ಅವರು ತಮ್ಮ ಬದುಕಿನಲ್ಲಿ ಇಂದಲ್ಲ ನಾಳೆ ಬರೆಯಲೇಬೇಕು ಅಂದುಕೊಂಡಿದ್ದು ಅವರ ತಾಯಿಯ ಬದುಕಿನ ಕಥೆಯನ್ನು. ಹೌದು, ಈ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ‘ಸಿನಿ ಲಹರಿ’ ಜತೆಗೆ ಮಾತನಾಡುತ್ತಿದ್ದಾಗ ಔಪಚಾರಿಕವಾಗಿ ಹೇಳಿಕೊಂಡಿದ್ದರು.

ʼ ಸರ್‌, ನಾನೀಗ ಸಾಹಿತ್ಯದ ವಿದ್ಯಾರ್ಥಿ. ನಾಡಿನ ಅನೇಕ ಸಾಹಿತಿಗಳು, ಲೇಖಕರ ಪುಸ್ತಕಗಳನ್ನು ಈಗ ಕೊಂಡು ಓದುತ್ತಿದ್ದೇನೆ. ಈಗಾಗಲೇ ಕುವೆಂಪು. ಅನಂತ ಮೂರ್ತಿ, ಬೈರಪ್ಪ, ತೇಜಸ್ವಿ, ಲಂಕೇಶ್‌ ಸೇರಿದಂತೆ ಕೆಲವರ ಕೆಲವು ಪುಸ್ತಕಗಳನ್ನು ತಕ್ಕ ಮಟ್ಟಿಗೆ ಓದಿದ್ದೇನೆ. ಸದ್ಯಕ್ಕೆ ಈಗ ನಾನು ನಾಡಿನ ಹೆಸರಾಂತ ಸಾಹಿತಿ ಕುಂವೀ ಅವರ ಆತ್ಮ ಚರಿತ್ರೆ ʼಗಾಂಧಿ ಕ್ಲಾಸುʼ ಓದಿ ಮುಗಿಸಿದೆ. ಹೀಗೆ ಒಂದಷ್ಟು ಓದಿ, ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಅನ್ಕೊಂಡಿದ್ದೇವೆ. ಯಾಕಂದ್ರೆ ಎದೆ ಗೊಡಿನಲ್ಲಿ ಒಂದಷ್ಟು ಕಚ್ಚಾ ಸರಕು ಸೇರಿಕೊಂಡಿವೆ. ತುಂಬಾ ಗಾಢವಾಗಿ ಕಾಡುವ ಸರಕುಗಳು ಅವು. ಅವುಗಳನ್ನು ನಾನು ಬರವಣಿಗೆ ಮೂಲಕ ಹಡೆಯಲೇಬೇಕಿದೆ. ಹಾಗಾದರೂ ಮನಸ್ಸಿಗೆ ಒಂದು ನೆಮ್ಮದಿ ಸಿಗಬಹುದೇನೋ. ಅದರಲ್ಲೂ ನನ್ನ ತಾಯಿಯ ಬದುಕಿನ ಬಗ್ಗೆ ಬರೀಬೇಕು ಅನ್ನೋದು ನನ್ನ ಕನಸು. ಹಾಗಂತ ಅವರ ಬದುಕಿನ ಕಥೆಯನ್ನು ಸಾರ್ವಜನಿಕಗೊಳಿಸಬೇಕು ಅಂತಲ್ಲ. ನನ್ನೊಳಗೆ ಕಾಡುವ ಆ ನೋವು, ಸಂಕಟ, ವ್ಯಥೆಯನ್ನು ಅಕ್ಷರ ರೂಪಕ್ಕೆ ತರುವ ಮೂಲಕವಾದರೂ ಹೆತ್ತವಳಿಗೆ ನ್ಯಾಯ ಸಲ್ಲಿಸಬೇಕು ಅನ್ನೋದಷ್ಟೇ ಅದರ ಉದ್ದೇಶʼ

ಅಂತ ನಟ ಸಂಚಾರಿ ವಿಜಯ್‌ ತಮ್ಮ ತಾಯಿ ಆತ್ಮ ಚರಿತ್ರೆ ಬರೆಯುವ ಕನಸನ್ನು ಸಿನಿ ಲಹರಿ ಜತೆಗೆ ಹಂಚಿಕೊಂಡಿದ್ದರು. ಆದರೆ, ಈಗ ಅವರೇ ಇಲ್ಲ ಅನ್ನೋದು ಅತ್ಯಂತ ದುಃಖ ಮತ್ತು ನೋವಿನ ಸಂಗತಿ.
ಇಷ್ಟಕ್ಕೂ ನಟ ಸಂಚಾರಿ ವಿಜಯ್‌ ಎಲ್ಲವನ್ನೂ ಬಿಟ್ಟು ತನ್ನ ತಾಯಿಯ ಆತ್ಮ ಕಥೆ ಬರೆಯೋದು ತಮ್ಮ ಕನಸು ಅಂತ ಹೇಳಿದ್ದಾದರೂ ಯಾಕೆ? ಅದೊಂದು ದುರಂತ ಕಥೆ. ಜಾತಿ ಕಾರಣಕ್ಕೆ ವಿಜಯ್‌ ತಾಯಿ ತೀರಾ ಅವಮಾನ ಅನುಭವಿಸಿದ ಕಥೆ ಇದೆ. ಈಗ ಸಂಚಾರಿ ವಿಜಯ್‌ ನಮ್ಮವನು ಅಂತ ಒಪ್ಪಿಕೊಂಡ ಸಮಾಜವೇ , ವಿಜಯ್‌ ತಾಯಿ ಅವರನ್ನು ನಿಕೃಷ್ಟವಾಗಿ ನಡೆಸಿಕೊಂಡು, ಅವಮಾನಿಸಿದ ದುರಂತ ಕಥೆಯಲ್ಲಿ ಹುಟ್ಟಿ ಬೆಳೆದು ಬಂದವರು ನಟ ಸಂಚಾರಿ ವಿಜಯ್.‌ ಆ ಕಥೆ ಇನ್ನೆಷ್ಟು ಘೋರವಿತ್ತು ಅನ್ನೋದು ಅವರಿಗೇ ಗೊತ್ತು. ಅದನ್ನೇ ಅವರು ಬರೆಯಬೇಕು ಅಂತಂದುಕೊಂಡಿದ್ದು ಅನ್ನೋದನ್ನ ಅವರ ಆಪ್ತರು ಈಗ ಬಹಿರಂಗ ಪಡಿಸಿದ್ದಾರೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ಹೆಸರಲ್ಲಿ ನೂರು ಗಿಣಿಗಳ ದತ್ತು ಪಡೆದ ಚಕ್ರವರ್ತಿ ಚಂದ್ರಚೂಡ್‌

ನಟ ಸಂಚಾರಿ ವಿಜಯ್‌ ಇರುವಷ್ಟು ದಿನ ಸದಾ ಒಂದಷ್ಟು ಸೇವೆ ಮೂಲಕ ದಿನ ಸವೆಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ. ಅವರಿಲ್ಲ ಎಂಬ ಬೇಸರ ಎಲ್ಲರಲ್ಲೂ ಇದೆ. ಆದರೆ, ಅವರು ಇಂದಿಗೂ ಸಿನಿಮಾಗಳ ಮೂಲಕ ಎಲ್ಲರ ಜೊತೆಯಲ್ಲಿದ್ದಾರೆ. ಬಹಳಷ್ಟು ಮಂದಿ ಸಂಚಾರಿ ವಿಜಯ್‌ ಅವರ ಗೆಳೆತನದ ಸವಿನೆನಪಿಗೆ ಹಲವು ಕಾರ್ಯಕ್ರಮ ರೂಪಿಸಲು ರೆಡಿಯಾಗಿದ್ದಾರೆ. ಅದಕ್ಕೂ ಮೊದಲೇ ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಸಂಚಾರಿ ವಿಜಯ್ ಹೆಸರಲ್ಲೇ ಒಂದೊಳ್ಳೆಯ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ದಾವಣಗೆರೆಯ ಇಂದಿರಾ ಪ್ರಿಯದರ್ಶನಿ ಪ್ರಾಣಿ ಸಂಗ್ರಹಾಲಯದಲ್ಲಿ ನೂರು ಗಿಣಿಗಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಸಂಚಾರಿ ವಿಜಯ್ ಹೆಸರಲ್ಲಿ ಆ ಗಿಣಿಗಳನ್ನು ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ.

ಈ ವಿಷಯವನ್ನು ಸ್ವತಃ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್, “ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ. ಅದಕ್ಕೇ ನಿನ್ ಹೆಸರಲ್ಲೊಂದು ತಗೊಂಡಿದೀನಿ ನೋಡಿ ಸ್ವಾಮಿ..” ಎಂದು ಬರೆದುಕೊಂಡಿದ್ದಾರೆ.

ಕೋವಿಡ್ ಸಂಕಷ್ಟದಿಂದ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೆರವು ಬೇಕಿದೆ, ದಯವಿಟ್ಟು ದತ್ತು ಪಡೆಯುವುದರ ಮೂಲಕ ಪ್ರಾಣಿಗಳನ್ನು ರಕ್ಷಿಸಬೇಕು ಎಂದು ದರ್ಶನ್‌ ಅವರು ಈ ಹಿಂದೆ ಮನವಿ ಮಾಡಿಕೊಂಡಿದ್ದರು.

ದರ್ಶನ್ ಅವರ ಮನವಿ ಬಳಿಕ ರಾಜ್ಯಾದ್ಯಂತ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದರ್ಶನ್‌ ಅವರ ಫ್ಯಾನ್ಸ್‌ ಜೊತೆಗೆ ಈಗೀಗ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರು ಕೂಡ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಸಾಯಿಕುಮಾರ್ ಬ್ರದರ್ಸ್‌ ನೆರವು ; ಕನ್ನಡ ಸಿನಿಮಾ ಕಾರ್ಮಿಕರಿಗೆ ಹಣ ಸಹಾಯ

ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ತೊಂದರೆಯಾಗಿದೆ. ಅಂತೆಯೆ ಸಿನಿಮಾ ಮಂದಿಗೂ ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಸ್ಟಾರ್‌ ನಟರು, ಸರ್ಕಾರ, ಸಂಘ-ಸಂಸ್ಥೆಗಳು ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದು ಗೊತ್ತೇ ಇದೆ. ಈಗ‌ ತೆಲುಗು ನಟ ಸಾಯಿಕುಮಾರ್ ಸಹೋದರರು ಕೂಡ ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ ನೆರವಾಗಿದ್ದಾರೆ.‌

ಹೌದು, ಕೊರೊನಾ ಹೊಡೆತಕ್ಕೆ ಸಿನಿಮಾ ಕಾರ್ಮಿಕರ ಕಷ್ಟ ಹೇಳತೀರದ್ದು. ಈ ಸಮಯದಲ್ಲಿ ಅವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದಲೇ ನಟರಾದ ಸಾಯಿಕುಮಾರ್, ರವಿಶಂಕರ್ ಹಾಗು ನಿರ್ದೇಶಕ ಅಯ್ಯಪ್ಪ ಪಿ.ಶರ್ಮ ಸಹೋ ಐದು ಲಕ್ಷ ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ. ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎನ್ನುವುದು ಸಾಯಿಕುಮಾರ್ ಸಹೋದರರ ಮಾತು.

Categories
ಸಿನಿ ಸುದ್ದಿ

ಬಾಲಿವುಡ್‌ಗೆ ಕಾಲಿಟ್ಟ ಧರ್ಮ ಕೀರ್ತಿರಾಜ್! ಸದ್ದಿಲ್ಲದೆ ಮಾಡಿದ್ರು ಹಿಂದಿ ಆಲ್ಬಂ ಸಾಂಗ್…

’ನವಗ್ರಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧರ್ಮಕೀರ್ತಿರಾಜ್, ತಕ್ಕಮಟ್ಟಿಗೆ ಗುರುತಿಸಿಕೊಂಡಿರುವ ಹೀರೋ. ಆ ಚಿತ್ರದ ’ಕಣ್ ಕಣ್ಣ ಸಲಿಗೆ’ ಹಾಡಿನ ಮೂಲಕ ಅಚ್ಚುಮೆಚ್ಚಿನ ಹೀರೋ ಎನಿಸಿಕೊಂಡರು. ನಂತರದ ದಿನಗಳಲ್ಲಿ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ತಮ್ಮದೆ ಛಾಪು ಮೂಡಿಸಿದ್ದು ಗೊತ್ತೇ ಇದೆ. ಈಗ ಈ ಧರ್ಮ ಕೀರ್ತಿರಾಜ್ ಅವರು ಹೊಸ ಸುದ್ದಿಗೆ ಕಾರಣರಾಗಿದ್ದಾರೆ. ಹೌದು, ಅವರೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.

ಅರೇ, ಧರ್ಮ ಕೀರ್ತಿರಾಜ್ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ ಅಂದಾಕ್ಷಣ, ಹೊಸ ಸಿನಿಮಾ ಅಂದುಕೊಂಡರೆ ಆ ಊಹೆ ತಪ್ಪು. ಅವರು ಬಾಲಿವುಡ್ ಎಂಟ್ರಿಯಾಗಿರೋದು ಸಿನಿಮಾ ಮೂಲಕವಲ್ಲ. ಹಿಂದಿ ಆಲ್ಬಂ ಸಾಂಗ್ ಮೂಲಕ ಹೆಜ್ಜೆ ಇಟ್ಟಿದ್ದಾರೆ. ಅಂದಹಾಗೆ, ಆ ಆಲ್ಬಂ ಹೆಸರು ’ಕಿತ್ನಾ ಮಜಾ ಹೈ’. ಇದು ನಾಲ್ಕು ನಿಮಿಷದ ಹಿಂದಿ ವಿಡಿಯೋ ಆಲ್ಬಂ. ಪ್ರೀತಿಯಲ್ಲಿ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗುವ ಹುಡುಗಿಯನ್ನು ಕಾಪಾಡುವ, ಕಥೆ ಈ ಹಾಡಲ್ಲಿ ಸಾಗುತ್ತೆ. ರವಿಶರ್ಮ ಈ ಆಲ್ಬಂ ವಿಡಿಯೊ ಸಾಂಗ್ ನಿರ್ದೇಶನ ಮಾಡಿದ್ದಾರೆ. ಅಜಯ್‌ ದೇವಗನ್ ಮತ್ತು ರಣ್‌ಭೀರ್‌ಕಪೂರ್ ಚಿತ್ರಗಳಿಗೆ ಕೆಲಸ ಮಾಡಿರುವ ಪಪ್ಪುಮಲ ಕ್ರಿಯೇಟೀವ್ ನಿರ್ದೇಶಕರಾಗಿ ಇಲ್ಲಿ ಕೆಲಸ ಮಾಡಿದ್ದಾರೆ.

ಯುನೈಟೆಡ್ ಫಿಲಿಂಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗೆ ಸೇರಿಕೊಂಡು ಅಶೋಕ್ ಜೈನ್ ನಿರ್ಮಾಣ ಮಾಡಿದ್ದಾರೆ.
ಹೊಸ ಪ್ರತಿಭೆ ನಗ್ಮಾಕ್ತರ್ ಇಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಸಾಹಿತ್ಯ ಬರೆದು ಸಂಗೀತ ನೀಡಿ ಗೀತೆಗೆ ಧ್ವನಿಯಾಗಿರುವ ಅಲ್ತಾಫ್‌ ಸಯ್ಯದ್ ಕೂಡ ಈ ಹಾಡಲ್ಲಿ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಕಾಂತ್ ಅಸತಿ ಛಾಯಾಗ್ರಹಣವಿದೆ. ರಾಕೇಶ್‌ ಮೆಹತಾ ಸಂಕಲನವಿದೆ. ಸದ್ಯ ಯೂಟ್ಯೂಬ್‌ ನಲ್ಲಿ ರಿಲೀಸ್ ಆಗಿರುವ ಈ ಹಾಡು ಸಿಕ್ಕಾಪಟ್ಟೆ ವೈರಲ್ ಮೆಚ್ಚುಗೆ ಪಡೆದಿದೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ಇಲ್ಲ ಎನ್ನುವ ವಾಸ್ತವದ ಜತೆಗೆ ಅವರ ಆಶಯದೊಂದಿಗೆ ಅವರನ್ನು ಜೀವಂತವಾಗಿರಿಸುವ ಕೆಲಸದತ್ತ ನಿಮ್ಮ ಲಹರಿ…

ಗೆಳೆಯ ಸಂಚಾರಿ ವಿಜಯ್‌ ಇನ್ನಿಲ್ಲ. ಅವರು ಬದುಕುಳಿಯಲಿ ಎನ್ನುವ ಲಕ್ಷಾಂತರ ಜನರ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ. ಅವರು ಮಾಡುತ್ತಾ ಬಂದ ಪುಣ್ಯದ ಕೆಲಸಗಳು ಕೈ ಹಿಡಿಯಲಿಲ್ಲ. ವಿಧಿಯಾಟದ ಮುಂದೆ ಎಲವೂ ಕೈಚೆಲ್ಲಿ ಹೋದವು. ದುರಾದೃಷ್ಟವಶಾತ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಇನ್ನೆಂದಿಗೂ ಬಾರದ ಲೋಕಕ್ಕೆ ಪಯಣ ಬೆಳೆಸಿಯೇ ಬಿಟ್ಟರು. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೇ ಅವರ ಸಾವು ತುಂಬಲಾರದ ನಷ್ಟ. ಅದರಲ್ಲೂ ನಿಮ್ಮ ನೆಚ್ಚಿನ ʼಸಿನಿಲಹರಿʼ ಸಂಸ್ಥೆಗೆ ಅಪಾರವಾದ ನಷ್ಟ.

ಯಾಕಂದ್ರೆ ʼಸಿನಿಲಹರಿʼಯ ನಿಜ ಮಾರ್ಗದರ್ಶಿ ಅಗಿದ್ದರು ವಿಜಯ್. ಈಗ ನಿಜಕ್ಕೂ ಒಬ್ಬ ಹಿತೈಷಿಯನ್ನು ʼಸಿನಿಲಹರಿʼ ಕಳೆದುಕೊಂಡಿದೆ. ನಾವಿಬ್ಬರು ಸೇರಿ ಕಳೆದ ವರ್ಷದ ಕೊನೆಯ ದಿನಗಳಲ್ಲಿ ʼಸಿನಿ ಲಹರಿʼ ಅಂತ ನೂತನ ವೆಬ್‌ ಸೈಟ್‌ ಶುರು ಮಾಡುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾಗ, ಶುರು ಮಾಡಿ, ನಾವಿದ್ದೇವೆ ಅಂತ ಬೆನ್ನಿಗೆ ನಿಂತವರಲ್ಲಿ ನಮ್ಮ ಸಂಚಾರಿ ವಿಜಯ್‌ ಮೊದಲಿಗರು.

ಗೆಳೆಯರೆಂದರೆ ಯಾವುದೂ, ಎಂತೂ ಅಂತ ಹಿಂದು ಮುಂದು ನೋಡದೆ ಸಹಾಯಕ್ಕೆ ನಿಲ್ಲುವ ವ್ಯಕ್ತಿತ್ವ ಅವರದು. ʼಸಿನಿ ಲಹರಿʼ ಆರಂಭದ ಹೊತ್ತಿಗೆ ಅವರು ಹಾಗೆ ಹೇಳಿ ಬೆನ್ನಿಗೆ ನಿಂತಿದ್ದು ಮಾತ್ರವಲ್ಲ, ಕೋವಿಡ್‌ ಭೀತಿಯ ನಡುವೆಯೇ ನಾವು ವೆಬ್‌ ಉದ್ಘಾಟನೆ ಮಾಡುತ್ತೇವೆ ಅಂದಾಗ ಮೀನಾಮೇಷ ಎಣಿಸದೆ ಕಾರ್ಯಕ್ರಮಕ್ಕೆ ಬಂದರು. ಹಾಗೆಯೇ ಅದರ
ಜರ್ನಿಯ ಉದ್ದಕ್ಕೂ ಜತೆಗಿದ್ದು ಸಲಹೆ ನೀಡುತ್ತಾ ಬಂದರು. ವೆಬ್‌ ಸೈಟ್‌ ಶುರುವಾಗಿ ನೂರು ದಿವಸ ಪೂರೈಸಿದ ಹೊತ್ತಿಗೆ ನಾವು ಕಚೇರಿಯಲ್ಲಿ ಹಮ್ಮಿಕೊಂಡ ಸರಳ ಕಾರ್ಯಕ್ರಮಕ್ಕೂ ಅತಿಥಿಯಾಗಿ ಬಂದು ಕೇಕ್‌ ಕತ್ತರಿಸಿ ಖುಷಿ ಪಟ್ಟಿದ್ದರು.

ಮಾಧ್ಯಮದಲ್ಲಿ ಈಗಷ್ಟೇ ಬೆಳೆಯುತ್ತಿರುವ ನಮ್ಮಂತಹ ಹುಡುಗರಿಗೆ ಒಬ್ಬ ನಟ ಬೆಂಬಲಕ್ಕೆ ನಿಲ್ಲುವುದು ಅಂದ್ರೆ ತಮಾಷೆ ಅಲ್ಲ. ಆ ವಾಸ್ತವ ಏನು ಅನ್ನೋದು ಮಾಧ್ಯಮದಲ್ಲಿದ್ದವರಿಗೆ ಗೊತ್ತಿದೆ. ಆದರೆ, ಸಂಚಾರಿ ವಿಜಯ್‌ ಮಾತ್ರ ಹಾಗಲ್ಲ. ಸ್ಟಾರ್‌ ಎಂಬ ತಮ್ಮೊಳಗಿನ ಅಹಂ ಮೀರಿ ಎಲ್ಲರನ್ನು ಸಮ ಭಾವದಿಂದಲೇ ಅಪ್ಪಿಕೊಂಡಿದ್ದರು, ಒಪ್ಪಿಕೊಂಡಿದ್ದರು. ಆ ಮಟ್ಟಿಗೆ ವಿಜಯ್‌ ಅವರದ್ದು ಅಪರೂಪದ ವ್ಯಕ್ತಿತ್ವ. ನಟ ಸಂಚಾರಿ ವಿಜಯ್‌ ತೀರಾ ಭಿನ್ನ ಅಂತೆನಿಸಿಕೊಂಡಿದ್ದೇ ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ.

ಮಾಧ್ಯಮದಲ್ಲಿ ಅವರು ಯಾರನ್ನೂ ಸಣ್ಣವರು-ದೊಡ್ಡವರು ಅಂತ ಬೇರ್ಪಡಿಸಿ ಕಂಡವರೇ ಅಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಯಾರೇ ಮಾತನಾಡಿಸಲಿ, ಅಥವಾ ಯಾವುದೇ ಕ್ಷಣ ಫೋನ್‌ ಕಾಲ್‌ ಮಾಡಿದರೂ ರೆಸ್ಪಾನ್ಸ್‌ ಮಾಡುವ ಮಾನವೀಯ ಗುಣದ ವ್ಯಕ್ತಿ ವಿಜಯ್.‌ ಹಾಗೆಲ್ಲ ಮಾಧ್ಯಮದವರ ಜತೆಗೆ ತಾವು ಪರಿಚಯ ಇದ್ದೇನೆ ಅಂತ ಯಾವತ್ತಿಗೂ ತಮ್ಮ ಬಗ್ಗೆ ಒಂದು ಆರ್ಟಿಕಲ್‌ ಬರೀಬಹುದಾ ಅಂತಲೂ ಕೇಳಿರಲಿಲ್ಲ. ನಮಗಷ್ಟೇ ಅಲ್ಲ, ಮಾಧ್ಯಮದ ಯಾವುದೇ ಪರ್ತಕರ್ತರ ಬಳಿಯೂ ಹಾಗೆ ಕೇಳಿಕೊಂಡಿದ್ದು ದಾಖಲೆಯೂ ಇಲ್ಲ. ಅಂತಹ ಸಣ್ಣತನ ಅವರಗಿರಲಿಲ್ಲ. ಅದೆಲ್ಲವನ್ನು ಮೀರಿ ಎಲ್ಲಾ ಮಾಧ್ಯಮದವರ ಜತೆಗೆ ಅತ್ಯಂತ ನಿಷ್ಕಲ್ಮಶ ಸ್ನೇಹ ಸಂಪಾದಿಸಿಕೊಂಡಿದ್ದರು.

ಸಮಯ ಸಿಕ್ಕಾಗ ”ಸಿನಿ ಲಹರಿ’ಯ ಪ್ರತಿ ಬರಹಗಳನ್ನು ಗಮನಿಸುತ್ತಿದ್ದ ಅವರು, ಅದು ಹಾಗಲ್ಲ ಹೀಗೆ ಅಂತ ಸಲಹೆ ನೀಡುತ್ತಿದ್ದರು. ಆ ಮೂಲಕವೇ ‘ಸಿನಿ ಲಹರಿ’ಯ ಫ್ಯಾಮಿಲಿ ಮೆಂಬರ್‌ ಕೂಡ ಆಗಿದ್ದರು. ಆ ಮೂಲಕ ‘ಸಿನಿಲಹರಿ’ಗೂ ಒಂದು ಮೆರಗು ಸಿಕ್ಕಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಟ ಒಂದು ಸಂಸ್ಥೆಯ ಫ್ಯಾಮಿಲಿ ಮೆಂಬರ್‌ ಆಗಿದ್ದರೂ ಅನ್ನೋದು ಅದು ನಮ್ಮ ಪಾಲಿಗೆ ಸಿಕ್ಕ ಬಹುದೊಡ್ಡ ಕ್ರೆಡಿಟ್‌ ಆಗಿತ್ತು.

ಈಗ ಅವರಿಲ್ಲ ಅನ್ನೋದನ್ನು ಹೇಗೆ ಅರಗಿಸಿಕೊಳ್ಳಬೇಕೋ ಗೊತ್ತಿಲ್ಲ. ಆದರೂ ಅವರಿಲ್ಲ. ಆದರೆ ಅವರು ಆಶಯಗಳಿವೆ. ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಎಷ್ಟೇ ಸ್ಟಾರ್‌ ಕಿರೀಟ ಬಂದರೂ ಸರಳವಾಗಿರುವುದು, ನೊಂದವರ ಧ್ವನಿಯಾಗುವುದು, ಸದಾ ನಗು ನಗುತ್ತಾ ಬಾಳವುದು. ಇದು ವಿಜಯ್‌ ಬದುಕು. ಅದನ್ನೇ ನಾವು ಕೂಡ ಪಾಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕಿದೆ.


ಆ ನಿಟ್ಟಿನಲ್ಲಿ ‘ಸಿನಿ ಲಹರಿ’ ಅವರ ಹೆಸರಲ್ಲಿ ನೊಂದವರ, ಅಸಹಾಯಕರ ಪರವಾಗಿ ಎಂದೆಂದಿಗೂ ಇರುತ್ತೆ ಎನ್ನುವ ಭರವಸೆಯೊಂದಿಗೆ ಸಂಚಾರಿ ವಿಜಯ್‌ ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ.

ವಿಜಯ್ ಭರಮಸಾಗರ- ದೇಶಾದ್ರಿ ಹೊಸ್ಮನೆ


Categories
ಸಿನಿ ಸುದ್ದಿ

ಕೆ.ಸಿ.ಎನ್.ಚಂದ್ರಶೇಖರ್ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ

ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆ.ಸಿ.ಎನ್ ಸಂಸ್ಥೆಗೆ ದೊಡ್ಡ ಹೆಸರು. ನಿರ್ಮಾಪಕರಾಗಿ, ವಿತರಕರಾಗಿ, ಪ್ರದರ್ಶಕರಾಗಿ ಹಲವಾರು ವರ್ಷಗಳು ಚಿತ್ರೋದ್ಯಮದಲ್ಲಿ ಹೆಸರು ಮಾಡಿದವರು. ‘ಹುಲಿ ಹಾಲಿನ ಮೇವು’, ‘ಶರಪಂಜರ’, ‘ಬಬ್ರುವಾಹನ’ ಸೇರಿದಂತೆ ಸದಭಿರುಚಿಯ ಚಿತ್ರಗಳನ್ನು ನೀಡಿದ್ದ ಕೆ.ಸಿ.ಎನ್ ಚಂದ್ರಶೇಖರ್, ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಸಾಕಷ್ಟು ದುಡಿದಿದ್ದಾರೆ.
ಮೂರು ಬಾರಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವರು, ಅಂತಾರಾಷ್ಟ್ರೀಯ ಸಿನಿಮಾ ಸಂಸ್ಥೆಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದು ಮನ್ನಣೆ ಪಡೆದಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿದ್ದ ಅವರು ಅವರ ಅಪೂರ್ವ ಅನುಭವದ ಸಾಮರ್ಥ್ಯ ದಿಂದ ಚಿತ್ರೋದ್ಯಮಕ್ಕೆ ಬರುತ್ತಿದ್ದ ಸಂಕಷ್ಟಗಳನ್ನು ಸುಲಭವಾಗಿ ಪರಿಹರಿಸುತ್ತಿದ್ದರು.
ವಿಶೇಷವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯೊಂದಿಗೆ ಹಾಗೂ ಅಕಾಡೆಮಿಯ ಎಲ್ಲ ಚಟುವಟಿಕೆಗಳಿಗೆ ಅವರು ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ FIAPF ಅಂತಾರಾಷ್ಟ್ರೀಯ ಮಾನ್ಯತೆ ಸಿಗಲು ಪ್ರಮುಖ ಪಾತ್ರ ವಹಿಸಿದ್ದರು. ಅಕಾಡೆಮಿ ಬೆಳವಣಿಗೆಯ ಪ್ರತಿ ಹಂತದಲ್ಲೂ ಅವರು ಅತ್ಯಂತ ಉತ್ಸಾಹದಿಂದ ಜತೆಯಾಗುತ್ತಿದ್ದರು.
ಅಂತಹ ಸಹೃದಯಿ ಹಿರಿಯ ನಿರ್ಮಾಪಕರ ಅಗಲಿಕೆ ಕನ್ನಡ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ. ಕೆ.ಸಿ.ಎನ್.ಚಂದ್ರಶೇಖರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೆ ಭಗವಂತ ಕರುಣಿಸಲಿ ಎಂದು ಪುರಾಣಿಕ್ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಅಂತಾರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದ ನಟಿ ಅಕ್ಷತಾ ಪಾಂಡವಪುರ ; ಎರಡು ಪ್ರಶಸ್ತಿ ಪಡೆದ ಪಿಂಕಿ ಎಲ್ಲಿ?

‘ಬಿಗ್ ಬಾಸ್’ ಖ್ಯಾತಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಅಕ್ಷತಾ ಪಾಂಡವಪುರ ಅವರು ಮತ್ತೊಂದು ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿಷ್ಟಿತ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ. ಪೃಥ್ವಿ ಕೊಣನೂರು ನಿರ್ದೇಶನ ಹಾಗೂ ಕೃಷ್ಟೇ ಗೌಡ ನಿರ್ಮಾಣದ ಪಿಂಕಿ ಎಲ್ಲಿ? ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಬಂದಿದೆ. ಹಾಗೆಯೇ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲೂ ಪ್ರಶಸ್ತಿಗೆ ಪಾತ್ರವಾಗಿದೆ.

ಜಗತ್ತಿನಲ್ಲಿ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ಪ್ರತಿಷ್ಟಿತ ಫೆಸ್ಟಿವಲ್ ಎನ್ನುವ ಹೆಗ್ಗಳಿಕೆ ಇದೆ. ಅಲ್ಲಿಗೆ ಕನ್ನಡದಿಂದ ಆಯ್ಕೆಯಾದ ಏಕೈಕ ಚಿತ್ರವೂ ಇದಾಗಿತ್ತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ನಟಿ ಸೇರಿದಂತೆ ಒಟ್ಟು ಮೂರು ವಿಭಾಗಗಳಲ್ಲಿ ಈ ಚಿತ್ರ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ನಾಮ ನಿರ್ದೇಶನ ಗೊಂಡಿತ್ತು. ಈ ಪೈಕಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಗೆ ನಟಿ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ. ‘ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಕನ್ನಡ ಚಿತ್ರಗಳೇ ಆಯ್ಕೆಯಾಗುವುದು ಕಷ್ಟ. ಅಂತಹದರಲ್ಲಿ ನಮ್ಮ ಚಿತ್ರ ಮೂರು ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದೇ ದೊಡ್ಡ ಖುಷಿ ತಂದಿತ್ತು. ಅದನ್ನು ಮೀರಿ ಈಗ ದೊಡ್ಡ ಸಂಭ್ರಮ‌ ಪ್ರಶಸ್ತಿ ಮೂಲಕ ಸಿಕ್ಕಿದೆ. ಚಿತ್ರಕ್ಕೆ ಎರಡು ಪ್ರಶಸ್ತಿ ಬಂದಿದೆ. ನನಗೆ ಅತ್ಯುತ್ತಮ ನಟಿ‌ ಪ್ರಶಸ್ತಿ ಬಂದಿದೆ. ಇದೇ ಮೊದಲು‌ ನನಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಂದಿದೆ. ಚಿತ್ರದ‌ ನಿರ್ಮಾಪಕರಾದ ಕೃಷ್ಣೇಗೌಡರು ಹಾಗೂ ನಿರ್ದೇಶಕರಾದ ಪೃಥ್ವಿ ಕೊಣನೂರು ಅವರಿಗೆ ಈ ಕ್ರೆಡಿಟ್ ಸಲ್ಲುತ್ತದೆ ‘ ಎಂದು ನಟಿ ಅಕ್ಷತಾ ಪಾಂಡವಪುರ ಪ್ರತಿಕ್ರಿಯಿಸಿದ್ದಾರೆ.

ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾರತದಿಂದ ಅತ್ಯುತ್ತಮ ನಟಿ ಪ್ರಶಸ್ತಿ ಗೆ ಕನ್ನಡದ ಪಿಂಕಿ ಎಲ್ಲಿ?ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ, ಮಲಯಾಳಂ ನ ಬಿರಿಯಾನಿ ಚಿತ್ರದ ಕನಿ‌ಕುಸ್ರುತಿ, ಹಿಂದಿಯ ನಜರ್ ಬಾಂಡ್ ಚಿತ್ರದ ಇಂದಿರಾ ತಿವಾರಿ, ಬೆಸ್ಟ್ ಇನ್ ದಿ ಮೌಂಟೈನ್ಸ್ ಚಿತ್ರದ ವಿನಿಮ್ರತಾ ರೈ ಹಾಗೂ ಅಶ್ವಿನಿ‌ಗಿರಿ ನಾಮಿನೇಟ್ ಆಗಿದ್ದರು. ಈ ಪೈಕಿ ತೀರ್ಪುಗಾರರ ಆಯ್ಕೆ ಅಕ್ಷತಾ ಪಾಂಡವಪುರಾಗಿದ್ದಾರೆ. ಹಾಗೆಯೇ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗೂ ಪಿಂಕಿ ಎಲ್ಲಿ? ಚಿತ್ರ ಪಾತ್ರವಾಗಿದೆ. ಈಗಾಗಲೇ ಈ ಚಿತ್ರವು ಗೋವಾ ಪನೋರಮಾ ಚಿತ್ರೋತ್ಸವ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನ ಗೊಂಡಿದೆ.

ಭಾರತೀಯ ಫಿಲಂ ಬಜಾರ್ ನಲ್ಲೂ ಆಯ್ಕೆ ಆಗಿದೆ. ಕನ್ನಡದಿಂದ ಇದೇ ಮೊದಲು ಅನೇಕ ಹೆಜ್ಜೆ ಗುರುತು ಮೂಡಿಸಿದೆ. ಈ ಕುರಿತು‌ ಮಾತನಾಡುವ ನಿರ್ಮಾಪಕ‌ ಕೃಷ್ಟೇಗೌಡ, ‘ಸಿನಿಮಾ ನಿರ್ಮಾಣ ನನಗೆ ಹೊಸದಲ್ಲ. ಈಗಾಗಲೇ ಹಲವು ಸಿನಿಮಾ‌ ಮಾಡಿದ್ದೇನೆ . ಎಷ್ಟೋ ಕಳೆದುಕೊಂಡಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಒಂದು ಸಿನಿಮಾ ಮಾಡಿದ ಸಾರ್ಥಕತೆಯ ದೊಡ್ಡ
ತೃಪ್ತಿ‌ ಈ ಸಿನಿಮಾದಿಂದ ಸಿಕ್ಕಿದೆ. ಅನೇಕ ಪ್ರತಿಷ್ಟಿತ ಚಿತ್ರೋತ್ಸವಗಳಿಗೆ ನಮ್ಮ ಸಿನಿಮಾ ಆಯ್ಕೆಯಾಗಿ ಮೆಚ್ಚುಗೆ ಪಡೆದಿದೆ.

ಈ ನ್ಯೂಯಾರ್ಕ್ ಪ್ರಶಸ್ತಿಗೂ ಪಾತ್ರವಾಗಿದೆ. ಇದರ ಕ್ರೆಡಿಟ್ ಎಲ್ಲವೂ‌ ನಿರ್ದೇಶಕ ಪೃಥ್ವಿ ಕೊಣನೂರು ಸೇರಿದಂತೆ ತಂಡಕ್ಕೆ ಸಲ್ಲುತ್ತದೆ. ನಾನು‌ ನೆಪ ಮಾತ್ರವೇ’ ಎನ್ನುತ್ತಾರೆ.

Categories
ಸಿನಿ ಸುದ್ದಿ

ನಟ ಸಂಚಾರಿ ವಿಜಯ್‌ ಅವರಿಗೆ ಅಪಘಾತದಲ್ಲಿ ತೀವ್ರ ಗಾಯ- ಅಪೊಲೋ ಆಸ್ಪತ್ರೆಯಲ್ಲಿ ದಾಖಲು


ನಟ ಸಂಚಾರಿ ವಿಜಯ್‌ ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಗೆ ಮತ್ತು ತೊಡೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದು, ಈಗ ಮೆದುಳಿನ ರಕ್ತಸ್ರಾವದ ಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಅಪಘಾತ ಹೇಗಾಯಿತು, ಏನಾಯಿತು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದರಿಂದ ಪ್ರಜ್ಜೆ ತಪ್ಪಿದ್ದ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯಕ್ಕೆ ಅವರು ಎಚ್ಚರಗೊಳ್ಳಲು ಇನ್ನು 48 ಗಂಟೆಗಳ ಸಮಯಬೇಕಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

Categories
ಸಿನಿ ಸುದ್ದಿ

ಸದಸ್ಯರಲ್ಲದವರನ್ನೂ ಪರಿಗಣಿಸಿ: ಇಂತಹ ಪರಿಸ್ಥಿತಿಯಲ್ಲಿ ಸಹಕರಿಸಿ ಅಂತ ಮನವಿ ಮಾಡಿದ ನಟ‌ ಯತಿರಾಜ್

ಹತ್ತಾರು ವರ್ಷಗಳಿಂದ ಸಿನಿಮಾ ರಂಗದ ಅನೇಕ ವಿಭಾಗಗಳಲ್ಲಿ ದುಡಿಯುತ್ತಿದ್ದರೂ, ಕೆಲವರು ಎಲ್ಲಿಯೂ ಸದಸ್ಯರಾಗಿಲ್ಲ. ಹಾಗಾಗಿ ಅವರ ಬಳಿ ಯಾವುದೇ ಕಾರ್ಡ್ ಕೂಡ ಇಲ್ಲ. ಅದಕ್ಕೆ ಏನೇ ಕಾರಣಗಳಿದ್ದರೂ, ಇಂತಹ ಸಂದಿಗ್ಧ ಸಮಯದಲ್ಲಿ ಅದು ಮಾನದಂಡ ಆಗಬಾರದು

ಕೊರೊನಾ ಎಂಬ ಮಹಾಮಾರಿ ಎಲ್ಲರನ್ನೂ ಸಾಕಷ್ಟು ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ಬಣ್ಣದ ಲೋಕದ ಜನರ ಪಾಡಂತೂ ಹೇಳತೀರದು. ಅವರ ಸಮಸ್ಯೆ ಅರಿತು ಈಗಾಗಲೇ ಹಲವು ಸ್ಟಾರ್ ನಟರು ಸಹಾಯ ಮಾಡಿದ್ದಾರೆ. ಸರ್ಕಾರ, ಒಕ್ಕೂಟ, ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಹಾಯಕ್ಕೆ ಮುಂದಾಗಿವೆ. ಇಂತಹ ಕಷ್ಟದ ಕಾಲದಲ್ಲಿ ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆಯೇ. ಆದರೆ, ಸರ್ಕಾರದ ಸಹಾಯ ಕೆಲವರಿಗೆ ಮಾತ್ರ ಎಂಬಂತಾಗಿದೆ. ಎಲ್ಲಾ ವರ್ಗಕ್ಕೂ ಇದು ಸಲ್ಲಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನಿಸಬೇಕು ಎಂಬ ಮನವಿ ಕೂಡ ಮಾಡಲಾಗುತ್ತಿದೆ. ಈ ಕುರಿತಂತೆ, ನಟ, ನಿರ್ದೇಶಕ ಯತಿರಾಜ್ ಕೂಡ ವಾಣಿಜ್ಯ ಮಂಡಳಿ, ಒಕ್ಕೂಟ ಮತ್ತು ಸಂಘ ಸಂಸ್ಥೆಗಳ ಹಾಗು ಸಂಬಂಧಿಸಿದವರಿಗೆ ಮನವಿ ಮಾಡಿದ್ದಾರೆ. ಅವರು ಮಾಡಿದ ಮನವಿ ಹೀಗಿದೆ.

ಓವರ್ ಟು ಯತಿರಾಜ್…

ಹತ್ತಾರು ವರ್ಷಗಳಿಂದ ಸಿನಿಮಾ ರಂಗದ ಅನೇಕ ವಿಭಾಗಗಳಲ್ಲಿ ದುಡಿಯುತ್ತಿದ್ದರೂ, ಕೆಲವರು ಎಲ್ಲಿಯೂ ಸದಸ್ಯರಾಗಿಲ್ಲ. ಹಾಗಾಗಿ ಅವರ ಬಳಿ ಯಾವುದೇ ಕಾರ್ಡ್ ಕೂಡ ಇಲ್ಲ. ಅದಕ್ಕೆ ಏನೇ ಕಾರಣಗಳಿದ್ದರೂ, ಇಂತಹ ಸಂದಿಗ್ಧ ಸಮಯದಲ್ಲಿ ಅದು ಮಾನದಂಡ ಆಗಬಾರದು. ದುರಾದೃಷ್ಟವಶಾತ್ ಅವರು ಸದಸ್ಯರಲ್ಲ ಎನ್ನುವ ಕಾರಣದಿಂದ ಈಗ ಸಿಗಬೇಕಾದ ಎಲ್ಲಾ ಸೌಲಭ್ಯಗಳಿಂದ ಅವರು ವಂಚಿತರಾಗುತ್ತಿದ್ದಾರೆ. ವಿಶೇಷವಾಗಿ ಸಹ ಹಾಗೂ ಸಹಾಯಕ ನಿರ್ದೇಶಕರುಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.

ಅದೇ ರೀತಿ ಎಲ್ಲೆಡೆ ಬರಲಾಗದ ಹಿರಿಯರಿಗೂ ಕೆಲ ಸೌಲಭ್ಯಗಳು ತಲುಪುತ್ತಿಲ್ಲ. ಮುಂಚೂಣಿಯಲ್ಲಿರುವ ಸ್ವಯಂ ಸೇವಕರು ಈ‌ ಮನವಿಯನ್ನು ಪರಿಗಣಿಸಿ ಅಸಹಾಯಕರ ಕೈ ಹಿಡಿದು, ನಾವೆಲ್ಲರೂ ಒಂದೇ ಎಂದು ಸಾರುವ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸಿ ಎಂದು ವಿನಮ್ರವಾಗಿ ಬೇಡಿಕೊಳ್ಳುತ್ತೇನೆ’ ಎಂದಿದ್ದಾರೆ ಯತಿರಾಜ್.

error: Content is protected !!