Categories
ಸೌತ್‌ ಸೆನ್ಸೇಷನ್

ನಟ ವಿಜಯ್‌ರನ್ನು ಹಾಡಿಹೊಗಳಿದ ಪ್ರಿಯಾಂಕಾ !

ತಮ್ಮ ‘ಅನ್‌ಫಿನಿಷ್ಡ್‌’ ಪುಸ್ತಕದಲ್ಲಿ ಪ್ರಸ್ತಾಪ

ನಟಿ ಪ್ರಿಯಾಂಕಾ ಚೋಪ್ರಾ ಸಾಧನೆಯ ಹಾದಿ ಯುವತಿಯರಿಗೆ ಪ್ರೇರಣೆ. ವಿಶ್ವ ಸುಂದರಿ (2000) ಕಿರೀಟ ತೊಟ್ಟ ನಂತರ ಬಾಲಿವುಡ್‌ನ ಯಶಸ್ವೀ ನಟಿಯಾಗಿ ಮಿಂಚಿದ ನಟಿ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದಾರೆ.
ಬಾಲಿವುಡ್‌ಗೂ ಮುಂಚೆ ನಟಿಯಾಗಿ ಅವರಿಗೆ ಬ್ರೇಕ್‌ ಕೊಟ್ಟಿದ್ದು ಕಾಲಿವುಡ್‌. ಮಾಜಿತ್‌ ನಿರ್ದೇಶನದಲ್ಲಿ ವಿಜಯ್‌ ಹೀರೋ ಆಗಿದ್ದ ‘ತಮಿಝಾನ್‌’ ತಮಿಳು ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದು. ಹಾಗಾಗಿ ತಮ್ಮ ಮೊದಲ ಸಿನಿಮಾ ಹಾಗೂ ಹೀರೋ ಕುರಿತು ಅವರಿಗೆ ಅಪಾರ ಅಭಿಮಾನ.

ಮೊನ್ನೆಯಷ್ಟೇ ಅವರ ಸಿನಿಮಾ – ಬದುಕಿನ ಅನುಭವಗಳ ‘ಅನ್‌ಫಿನಿಷ್ಡ್‌’ ಪುಸ್ತಕ ಬಿಡುಗಡೆಯಾಗಿದೆ. ಇದರಲ್ಲಿ ನಟಿ ತಮ್ಮ ವೃತ್ತಿಬದುಕಿನ ಆರಂಭದ ದಿನಗಳ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಕೆಲವು ಚಿತ್ರನಿರ್ದೇಶಕರ ಕಿರಿಕಿರಿ, ಕೆಟ್ಟ ವ್ಯಕ್ತಿತ್ವದ ಬಗ್ಗೆ ಪ್ರಸ್ತಾಪಿಸಿರುವ ಪ್ರಿಯಾಂಕಾ ತಮ್ಮ ಮೊದಲ ಚಿತ್ರದ ಹೀರೋ ವಿಜಯ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

“ಅಭಿಮಾನಿಗಳ ಬಗ್ಗೆ ವಿಜಯ್‌ ಅವರಿಗಿರುವ ಕಾಳಜಿ, ಪ್ರೀತಿ ನನಗೆ ಅಚ್ಚರಿ ಮೂಡಿಸುತ್ತದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅಮೆರಿಕಾದಲ್ಲಿ ನನ್ನ ‘ಕ್ವಾಂಟಿಕೋ’ ಇಂಗ್ಲಿಷ್ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮೊಂದಿಗೆ ನನ್ನ ಫೋಟೋ ತೆಗೆಸಿಕೊಳ್ಳಲು ಅಪೇಕ್ಷಿಸುತ್ತಿದ್ದರು. ಒತ್ತಡದ ಮಧ್ಯೆಯೂ ನಾನು ಬಿಡುವಿನ ವೇಳೆಯಲ್ಲಿ ಅವರೊಂದಿಗೆ ಸಮಯ ಕಳೆಯುತ್ತಿದ್ದೆ. ಆಗೆಲ್ಲಾ ನನಗೆ ವಿಜಯ್‌ ನೆನಪಾಗುತ್ತಿದ್ದರು. ಅಭಿಮಾನಿಗಳೆಡೆಗಿನ ಅವರ ಶ್ರದ್ಧೆ, ಸಿನಿಮಾ ಕುರಿತ ಅವರ ಪ್ಯಾಷನ್‌ ನನಗೆ ಸ್ಫೂರ್ತಿ” ಎಂದಿದ್ದಾರೆ ಪ್ರಿಯಾಂಕಾ. ಅವರೀಗ ‘ಶೀಲಾ’, ‘ಟೆಕ್ಸ್ಟ್‌ ಫಾರ್ ಯೂ’, ‘ಸಿಟಾಡೆಲ್‌’ ಇಂಗ್ಲಿಷ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರತದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ಅವರ ಮುಂದಿನ ಯೋಜನೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಮಣಿರತ್ನಂ ಸಿನಿಮಾದಲ್ಲಿ ಶಾಲಿನಿ ಅಜಿತ್‌?

ಇಪ್ಪತ್ತು ವರ್ಷಗಳ ನಂತರ ಮತ್ತೆ ತೆರೆಗೆ!

ಎಂಬತ್ತರ ದಶಕದ ಜನಪ್ರಿಯ ಬಾಲನಟಿ ಶಾಲಿನಿ. ತಮಿಳು, ತೆಲುಗು ಮತ್ತು ಮಲಯಾಳಂನ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಬಾಲನಟಿಯಾಗಿ ಮಿಂಚಿದ್ದರು. 1997ರಲ್ಲಿ ಫಾಝಿಲ್ ನಿರ್ದೇಶನದ ‘ಅನಿಯಾಥು ಪಿರವು’ ಮಲಯಾಳಂ ಚಿತ್ರದೊಂದಿಗೆ ಅವರು ನಾಯಕಿಯಾದರು. ಈ ಸಿನಿಮಾ ‘ಕಾದಲುಕ್ಕು ಮರ್ಯಾದೈ’ ಶೀರ್ಷಿಕೆಯಡಿ ತಮಿಳಿಗೆ ರಿಮೇಕ್ ಆಯ್ತು. ವಿಜಯ್ ಹೀರೋ ಆಗಿ ನಟಿಸಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಹಾಗೆ ಶಾಲಿನಿ ನಾಯಕಿಯಾಗಿಯೂ ಗೆಲುವು ಕಂಡರು. ಸುಮಾರು ಹತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಶಾಲಿನಿ ‘ಅಮರ್‌ ಕಲಂ’ ತಮಿಳು ಸಿನಿಮಾ ಸಂದರ್ಭದಲ್ಲಿ ನಟ ಅಜಿತ್‌ರ ಪ್ರೇಮದ ಬಲೆಗೆ ಸಿಲುಕಿದರು. 2000ನೇ ಇಸವಿಯಲ್ಲಿ ಅಜಿತ್‌ರನ್ನು ವರಿಸಿದ ಅವರು ಮುಂದೆ ಸಿನಿಮಾದಿಂದ ದೂರವೇ ಉಳಿದರು. ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಅನೌಷ್ಕಾ ಮತ್ತು ಆದ್ಯಂತ್‌. 2001ರಲ್ಲಿ ತೆರೆಕಂಡ ಪ್ರಶಾಂತ್ ಜೊತೆಗಿನ ‘ಪಿರ್ಯಾತ ವರಂ ವೇಂಡಂ’ ಅವರು ನಾಯಕಿಯಾಗಿ ಕಾಣಿಸಿಕೊಂಡ ಕೊನೆಯ ಸಿನಿಮಾ.


ಇದೀಗ ಇಪ್ಪತ್ತು ವರ್ಷಗಳ ನಂತರ ಅವರು ತೆರೆಗೆ ಮರಳುವ ಸೂಚನೆ ಸಿಕ್ಕಿದೆ. ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್‌’ ತಮಿಳು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಣಿರತ್ನಂ ನಿರ್ದೇಶನದ ಸೂಪರ್‌ಹಿಟ್‌ ‘ಅಲೈಪಾಯುತೆ’ ಚಿತ್ರದಲ್ಲಿ ಮಾಧವನ್‌ ಜೊತೆ ನಟಿಸಿದ್ದರು ಶಾಲಿನಿ. ಇದೀಗ ಮಣಿರತ್ನಂ ಅವರದೇ ಚಿತ್ರದೊಂದಿಗೆ ತೆರೆಗೆ ಮರಳಲಿದ್ದಾರೆ. ನಟ ಅಜಿತ್‌ ಕೂಡ ಈ ಬಗ್ಗೆ ಖುಷಿಯಾಗಿದ್ದು, ಅಧಿಕೃತ ಘೋಷಣೆ ಹೊರ ಬೀಳಬೇಕಿದೆ.

Categories
ಸಿನಿ ಸುದ್ದಿ

ಅಂಧನೊಬ್ಬನ ಭಾವುಕ ಪಯಣದಲ್ಲಿ ಮೌಲ್ಯ ಸಂದೇಶ

ಫೆ.13ಕ್ಕೆ ಕಣ್ತೆರೆದು ನೋಡು ಚಿತ್ರದ ಟೀಸರ್ ರಿಲೀಸ್

ಶಿವಪ್ಪ ಕುಡ್ಲೂರು

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ನೃತ್ಯ ನಿರ್ದೇಶಕರು ಒಂದೊಳ್ಳೆಯ ಕಥೆ ಮೂಲಕ ನಿರ್ದೇಶನ ಮಾಡಿದ್ದಾರೆ. ಈಗ ಆ ಸಾಲಿಗೆ
ನೃತ್ಯ ನಿರ್ದೇಶಕ ಎಂ.ಆರ್.ಕಪಿಲ್ ಕೂಡ ಸೇರಿದ್ದಾರೆ. ಕಪಿಲ್ ಈ ಹಿಂದೆಯೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಕಪಿಲ್ , ನಿರ್ದೇಶಕ

ಇದೀಗ “ಕಣ್ತೆರೆದು ನೋಡು”ವಂತಹ ಕೆಲಸ ಮಾಡಿದ್ದಾರೆ. ಹೌದು, ನಿರ್ದೇಶಕ ಕಪಿಲ್ ಈಗ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ನಿರ್ದೇಶನದ “ಕಣ್ತೆರೆದು ನೋಡು” ಚಿತ್ರ ಶೂಟಿಂಗ್ ಮುಗಿದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಾಗಿದ್ದಾರೆ.

ಕಳೆದ ನವೆಂಬರ್ 14ರಂದು “ಕಣ್ತೆರೆದು ನೋಡು” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಈಗ ಟೀಸರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಫೆಬ್ರವರಿ13ರ ಶನಿವಾರ ಬೆಳಗ್ಗೆ 10.31ಕ್ಕೆ ಚಿತ್ರದ ಟೀಸರ್ ಅನಾವರಣಗೊಳ್ಳಲಿದೆ.
ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರದೇ ಕಥೆ, ಚಿತ್ರಕಥೆ ಹೊಂದಿರುವ ಈ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ.

ಅಂದಹಾಗೆ, ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ಶಿವಪ್ಪ ಕುಡ್ಲೂರು ಈ ಚಿತ್ರದ ಕಥಾ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.

ಚಿತದ ಪ್ರಮುಖ ಕಲಾವಿದ ಶಿವಪ್ಪ ಕುಡ್ಲೂರು,ಅವರಿಗೆ ಬಾಲ್ಯದಿಂದಲೇ ನಟನೆ ಆಸಕ್ತಿ ಇದ್ದುದರಿಂದ ಒಳ್ಳೆಯ ಸಿನಿಮಾ ಮೂಲಕ ಕಾಣಿಸಿಕೊಳ್ಳಬೇಕೆಂಬ ಆಸೆಗೆ “ಕಣ್ತೆರೆದು ನೋಡು” ಚಿತ್ರ ಸಿಕ್ಕಿದೆ. ಅವರಿಲ್ಲಿ ಅಂಧನೊಬ್ಬನ ಪಾತ್ರದಲ್ಲಿ ಗಮನಸೆಳೆಯುತ್ತಿದ್ದಾರೆ.

ಚಿತ್ರದಲ್ಲಿ ಇವರೊಂದಿಗೆ ಉಮೇಶ್, ಶಿವಕುಮಾರ್ ಜೀವರಾಜ್, ಡಾ.ದೊಡ್ಡರಂಗೇಗೌಡ, ವಿ.ಮನೋಹರ್,ಕೆ.ಎಂ.ಇಂದ್ರ,ಮೈಸೂರು ರಮಾನಾಥ್, ರೇಖಾದಾಸ್, ಶಂಕರ್ ಭಟ್ ಇತರರು ನಟಿಸಿದ್ದಾರೆ.

ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೆಣೆದ ಅಂಧನೊಬ್ಬನ‌ ಕಥೆಗೆ ಬಂಡವಾಳ ಹಾಕಿದ್ದಾರೆ.

ಸಿ.ನಾರಾಯಣ್ ಕ್ಯಾಮರಾ ಹಿಡಿದಿದ್ದಾರೆ. ಆರ್.ಡಿ.ರವಿ ಸಂಕಲನ ಮಾಡಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ ಹರೀಶ್  ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್, ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.

Categories
ಸಿನಿ ಸುದ್ದಿ

ಸಿಎಂ ಲಾಂಚ್‌ ಮಾಡಿದ್ರು “ತನುಜಾ” ಚಿತ್ರದ ಫಸ್ಟ್ ಲುಕ್ , ಕಥೆಯ ಒಂದೆಳೆ ಕೇಳಿ ಅವರೇ ಫುಲ್‌ ಖುಷ್‌ !

‌  ಸಚಿವ ಸುಧಾಕರ್‌ ಕೂಡ ಬಣ್ಣ ಹಚ್ಚುವ ಸಾಧ್ಯತೆ

ಅಂತರ್ಜಲ ಚಿತ್ರದ ಮೂಲಕ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದ ಸೃಜಲಶೀಲ ಯುವ ನಿರ್ದೇಶಕ ಹರೀಶ್‌ ಕುಮಾರ್‌ ಎಂ.ಡಿ ಹಳ್ಳಿ ಒಂದಷ್ಟು ಗ್ಯಾಪ್‌ ನಂತರ ಮತ್ತೊಂದು ಸಿನಿಮಾದೊಂದಿಗೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.  ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನವೊಂದರಿಂದ ಪ್ರಭಾವಿತರಾಗಿ  ಹೊಸದೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ʼತನುಜಾʼ.

Beyond visions cinemas ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ  ಈ  ಚಿತ್ರದ ಫಸ್ಟ್ ಲುಕ್ ಅನ್ನು ಮುಖ್ಯಮಂತ್ರಿ ಬಿ.ಎಸ್‌ . ಯಡಿಯೂರಪ್ಪ  ಲಾಂಚ್‌ ಮಾಡಿದರು.   ಫಸ್ಟ್‌ ಲುಕ್‌ ಲಾಂಚ್‌ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರಾದ ಸುಧಾಕರ್ ಹಾಗೂ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ವಿಶೇಷ ಅಂದ್ರೆ ಈ ಚಿತ್ರದ ಒಂದು ಪಾತ್ರದಲ್ಲಿ  ಆರೋಗ್ಯ ಸಚಿವ ಸುಧಾಕರ್‌ ಕೂಡ ಬಣ್ಣ ಹಚ್ಚುವ ಸಾಧ್ಯತೆ ಇದೆಯಂತೆ.

ಇದೊಂದು ಡಿಫೆರೆಂಟ್ ಜಾನರ್‌ ಸಿನಿಮಾ.ನೈಜ ಘಟನೆ ಆಧರಿತ ಕಥೆ.  ಕೊರೋನಾ ಸಂಕಷ್ಟದ ಕಾಲದಲ್ಲಿ ನೀಟ್‌ ಪರೀಕ್ಷೆ ಬರೆಯಲು ಹೆಣಗಾಟ ನಡೆಸಿ, ಕೊನೆಗೂ ಸಿನಿಮೀಯ ರೀತಿಯಲ್ಲಿ ಅದರಲ್ಲಿ ಸಕ್ಸಸ್‌ ಆದ ಒಬ್ಬ ವಿದ್ಯಾರ್ಥಿನೀಯ ಕಥೆ ಇದು.  ಕೊನೆಗೂ ಆಕೆ ಹೇಗೆ ಪರೀಕ್ಷೆ ಬರೆದಳು, ಅದರಿಂದ ಮುಂದೆ ಆಕೆ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದಳು ಎನ್ನುವುದೇ ತನುಜಾ ಚಿತ್ರದ ಕಥಾ ಹಂದರ.

” ಇದು ನಿಜ ಘಟನೆಯೇ.  ಎಲ್ಲರಿಗೂ ಗೊತ್ತಿರುವುದೇ. ಆದರೆ ಇಡೀ ಘಟನೆ ಒಂದು ಥ್ರಿಲ್ಲರ್‌ ಮೂವೀ  ರೀತಿಯಲ್ಲಿದೆ. ಸಿನಿಮಾ ಮಾಡುವ ನಿಟ್ಟಿನಲ್ಲಿ ಸಾಕಷ್ಟು ವರ್ಕ ಮಾಡಿಕೊಂಡಿದ್ದೇನೆ. ಮೇಲಾಗಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ್‌ ಭಟ್‌ ಅವರ ಮೂಲಕ ಇಂತಹದೊಂದು ಕತೆ ಸಿನಿಮಾ ಮಾಡೋದಿಕ್ಕೆ ನನಗೆ ಸಿಕ್ಕಿದ್ದು ಅದೃಷ್ಟವೇ ಹೌದು. ಎಷ್ಟು ಸಾಧ್ಯವೋ ಅಷ್ಟು ಪ್ರಮಾಣಿಕವಾಗಿ ಸಿನಿಮಾವನ್ನು ತೆರೆಗೆ ತರಬೇಕೆನ್ನುವ ಆಸೆ ಇದೆ ʼಎನ್ನುತ್ತಾರೆ  ನಿರ್ದೇಶಕ ಹರೀಶ್‌ ಕುಮಾರ್.

ಇದು  ಒರ್ವ ವಿದ್ಯಾರ್ಥಿನಿ ಮೇಲೆಯೇ ಕೇಂದ್ರಿಕೃತವಾದ ಸಿನಿಮಾ.  ಕಥಾ ನಾಯಕಿ ತನುಜಾ. ಆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ  ಯುವ ನಟಿ ಸಪ್ತ ಪಾವೂರು. ʼಸರ್ಕಾರಿ ಹಿ.ಪ್ರಾಥಮಿಕ ಶಾಲೆʼ ಚಿತ್ರದಲ್ಲಿ  ಸಪ್ತ‌ ಪಾವೂರು  ಅಭಿನಯಿಸಿದ್ದರು. ಚಿತ್ರದ ಪಾತ್ರಕ್ಕೆ ಸರಿ ಸರಿಯಾದ ಅಯ್ಕೆ ಅಂತ ಚಿತ್ರದ ಹೇಳುತ್ತಿದೆ.  ತಾರಾಬಳಗದ ಆಯ್ಕೆ ನಡೆಯುತ್ತಿದೆ.ಚಿತ್ರದ ಚಿತ್ರೀಕರಣ ಮಾರ್ಚ್ ಎರಡನೇ‌ವಾರದಲ್ಲಿ ಆರಂಭವಾಗಲಿದೆ. ಬೆಂಗಳೂರು – ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.

2016_17 ಸಾಲಿನ ರಾಜ್ಯಪ್ರಶಸ್ತಿಗೆ ಭಾಜನವಾಗಿದ್ದ “ಅಂತರ್ಜಲ” ಚಿತ್ರದ ನಂತರ   ಎಂ ಡಿ ಹಳ್ಳಿ ಅವರಿಗೆ ಇದು ಎರಡನೇ ಚಿತ್ರ.
ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣವಿರುವ “ತನುಜಾ” ಚಿತ್ರಕ್ಕೆ ಆರ್ ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದಾರೆ.  Beyond visions cinemas ಲಾಂಛನದಲ್ಲಿ  ಹರೀಶ್‌ ಕುಮಾರ್‌ , ರಘು ನಂದನ್‌ ಸೇರಿದಂತೆ ಒಂದಷ್ಟು ಗೆಳೆಯರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಡ್‌ ಮ್ಯಾನರ್ಸ್‌ಗೆ ಇಬ್ಬರು ಬೆಡಗಿಯರು

ರಚಿತಾರಾಮ್‌ ಪ್ರಿಯಾಂಕ ಎಂಟ್ರಿ

ಅಭಿಷೇಕ್‌ ಅಂಬರೀಶ್ ಅಭಿನಯದ “ದುನಿಯಾ” ಸೂರಿ ನಿರ್ದೇಶನದ ”ಬ್ಯಾಡ್‌ ಮ್ಯಾನರ್ಸ್‌” ಚಿತ್ರದ ಚಿತ್ರೀಕರಣ ಈಗಾಗಲೇ ಜೋರಾಗಿ ನಡೆಯುತ್ತಿದೆ. ಈ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಇಲ್ಲಿ ಒಬ್ಬರಲ್ಲ, ಇಬ್ಬರು ನಾಯಕಿಯರು “ಬ್ಯಾಡ್‌ ಮ್ಯಾನರ್ಸ್‌”ಗೆ ಜೋಡಿಯಾಗಿದ್ದಾರೆ.

ಹೌದು, ರಚಿತಾರಾಮ್‌ ಮತ್ತು ಪ್ರಿಯಾಂಕ ಅವರು ಈ ಚಿತ್ರಕ್ಕೆ ನಾಯಕಿಯರಾಗಿದ್ದಾರೆ. ಪ್ರಿಯಾಂಕ ತಮಿಳು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ ಎಂಬುದು ವಿಶೇಷ. ಈಗಾಗಲೇ ಸಂಕ್ರಾಂತಿ ದಿನದಂದು ಚಿತ್ರಕ್ಕೆ ಜೋರು ಮುಹೂರ್ತ ನೆರವೇರಿತ್ತು.

ಬಹು ನಿರೀಕ್ಷಿತ “ದುನಿಯಾ” ಸೂರಿ ನಿರ್ದೇಶನದ ಔಟ್ ಅಂಟ್ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ “ಬ್ಯಾಡ್ ಮ್ಯಾನರ್ಸ್”ಗೆ ಈಗ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. ಮಗನ ಎರಡನೇ ಚಿತ್ರಕ್ಕೆ ಸುಮಲತಾ ಅವರು ಕ್ಲಾಪ್‌ ಮಾಡಿ ಶುಭಹಾರೈಸಿದ್ದರು. ದರ್ಶನ್‌ ಕೂಡ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು. ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿದ್ದ ರಗಡ್‌ ಸೆಟ್ಟಲ್ಲಿ ಚಿತ್ರಕ್ಕೆ ಚಾಲನೆ ದೊರೆತಿತ್ತು.

Categories
ಸಿನಿ ಸುದ್ದಿ

ದಚ್ಚು ಟೆಂಪಲ್ ರನ್ !

ತಿಮ್ಮಪ್ಪನ ದರ್ಶನ ಪಡೆದ ದರ್ಶನ್‌

ಇತ್ತೀಚೆಗೆ ಸ್ಟಾರ್ ನಟರು ಸಿನಿಮಾದಲ್ಲಿ ಬಿಝಿಯಾಗುತ್ತಿದ್ದಾರೆ. ಅದರ ಜೊತೆ ಜೊತೆಯಲ್ಲೇ ಅವರು ಬೇರೆ ಚಟುವಟಿಕೆಗಳತ್ತವೂ ಗಮನ ಹರಿಸುತ್ತಿದ್ದಾರೆ. ಅವರಿಗೆ ಸಮಯ ಸಿಗೋದೇ ಅಪರೂಪ. ಅದರಲ್ಲೂ ತಮ್ಮ ವೈಯಕ್ತಿಕ ಬದುಕಲ್ಲಂತೂ ಸಮಯ ನಿಗದಿಪಡಿಸೋಕೆ ಹೆಣಗಾಡುತ್ತಲೇ ಇರುತ್ತಾರೆ. ಅದಕ್ಕೆ ಕಾರಣ, ಸಿನಿಮಾಗಳ ಚಿತ್ರೀಕರಣ. ಹೌದು, ಬಹುತೇಕ ಸ್ಟಾರ್‌ ನಟರು ದೇವರ ಮೊರೆ ಹೋಗುತ್ತಿರುವುದು ಹೊಸದೇನಲ್ಲ. ಈಗ ದರ್ಶನ್‌ ಕೂಡ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಬುಧವಾರ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು, ಪಾವನರಾಗಿದ್ದಾರೆ. ಇವರಷ್ಟೇ ಅಲ್ಲ, ನಿರ್ಮಾಪಕ ಉಮಾಪತಿ, ಹಾಗೂ ತೆಲುಗು ಸಿನಿಮಾ ವಿತರಕರು ಕೂಡ ದಚ್ಚು ಅವರಿಗೆ ಸಾಥ್‌ ನೀಡಿದ್ದಾರೆ. ಅಂದಹಾಗೆ, ದರ್ಶನ್‌ ಅವರು ವರ್ಷಗಳ ನಂತರ ಪವಿತ್ರ ಸ್ಥಳಕ್ಕೆ ಭೇಟಿಯಾಗಿದ್ದಾರೆ. ದರ್ಶನ ಪಡೆದ ಬಳಿಕ ಸ್ವತಃ ದರ್ಶನ್‌ ಅವರು ಖುಷಿಗೊಂಡಿದ್ದಾರೆ. ಇನ್ನು, ದರ್ಶನ್‌ ಅವರು ದೇವಾಲಯಕ್ಕೆ ತೆರಳಲು ಬಲವಾದ ಕಾರಣವೂ ಇದೆ. ಮಾರ್ಚ್‌ ೧೧ರಂದು “ರಾಬರ್ಟ್”‌ ರಿಲೀಸ್‌ ಆಗುತ್ತಿದೆ. ಕನ್ನಡದ ಜೊತೆಯಲ್ಲಿ ತೆಲುಗು ಭಾಷೆಯಲ್ಲೂ ಚಿತ್ರ ರಿಲೀಸ್‌ ಆಗುತ್ತಿದೆ. “ರಾಬರ್ಟ್” ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದಿಗೂ ತೆರಳುವ ಯೋಚೆಯಲ್ಲಿರುವ ದರ್ಶನ್ ಹಾಗೆಯೇ ದರ್ಶನ ಪಡೆದಿದ್ದಾರೆ.

 

Categories
ಸಿನಿ ಸುದ್ದಿ

ಅಧಿಕಾರ ನನ್‌ ಕೈಲ್ಲಿದಿದ್ದರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ… ಹೀಗಂತ ಶಿವಣ್ಣ ಬೇಸರ ವ್ಯಕ್ತಪಡಿಸಿದ್ದೇಕೆ?

ಶಿವಣ್ಣ ರೈತ ಪರ -ಸೋಷಲ್‌ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ

ನಟ ಶಿವರಾಜ್‌ ಕುಮಾರ್‌ ಅಂದ್ರೆನೆ ಹಾಗೆ. ದೊಡ್ಡ ಸ್ಟಾರ್‌ ಆಗಿದ್ದರೂ ಸರಳ-ಸಜ್ಜನಿಕೆಗೆ ಮಾದರಿಯಂತಿರುವ ಅಪರೂಪದ ನಟ. ಹಾಗೆಯೇ ನಟನೆಯ ಆಚೆಯೂ ಸದಾ ನಾಡು-ನುಡಿ, ನೆಲ-ಜಲ ಪರವಾಗಿ ನಿಂತ ಅಪರೂಪದ ಕಲಾವಿದ. ಜನ ಪರವಾದ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದು ಮಾತ್ರವಲ್ಲ, ತೆರೆ ಮೇಲೂ ರೈತ ಪರವಾಗಿ ಧ್ವನಿ ಮೊಳಗಿಸಿದ ಹೀರೋ. ಅದಕ್ಕೆ ಸಾಕ್ಷಿ “ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯʼ ಚಿತ್ರ. ಅಂತೆಯೇ ಈಗ ಅತ್ಯಂತ ʼದುರಿತʼ ಕಾಲದಲ್ಲೂ ರೈತ ಪರವಾಗಿ ಧ್ವನಿ ಎತ್ತಿ ತಾವು ವಿಭಿನ್ನ ಮತ್ತು ವಿಶಿಷ್ಟ ನಟ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸ್ಯಾಂಡಲ್‌ ವುಡ್‌ ಕಡೆಯಿಂದ ಮೊದಲಿಗರಾಗಿ ನಟ ಶಿವರಾಜ್‌ ಕುಮಾರ್‌ ಬೆಂಬಲ ಸೂಚಿಸಿ ಮಾತನಾಡಿರುವುದು ವಿಶೇಷವಾಗಿದೆ.

ಸ್ಯಾಂಡಲ್‌ ವುಡ್‌ ಮಂದಿ ಕೂಡ ರೈತರ ಪ್ರತಿಭಟನೆಗೆ ಬೆಂಬಲ ನೀಡಬೇಕೆನ್ನುವ ಕೂಗು ಕೇಳಿಬಂದ ಬೆನ್ನಲೇ ಶಿವರಾಜ್‌ ಕುಮಾರ್‌, ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದೆ. ಸೋಷಲ್‌ ಮೀಡಿಯಾದಲ್ಲಿ ಅವರ ಆಭಿಮಾನಿಗಳು ಮಾತ್ರವಲ್ಲ, ಜನಪರ ಚಿಂತಕರು, ಹೋರಾಟಗಾರರು ಕೂಡ ಶಿವಣ್ಣ ಅವರ ಹೇಳಿಕೆಯನ್ನು ಶೇರ್‌ ಮಾಡಿ, ಈ ನಿಲುವು ಶಿವಣ್ಣ ಅಲ್ಲದೆ ಇನ್ನಾರು ತೆಗೆದುಕೊಳ್ಳಲು ಸಾಧ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ , ಇಷ್ಟಕ್ಕೂ ಶಿವಣ್ಣ ಹೇಳಿದ್ದೇನು…? ಅಧಿಕಾರ ನನ್‌ ಕೈಲ್ಲಿದಿದ್ದರೆ ಎಲ್ಲವನ್ನೂ ಬರೆದು ಕೊಡುತ್ತಿದ್ದೆ ಅಂತ ಶಿವಣ್ಣ ಯಾಕೆ ಹೇಳಿದ್ರು?

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರ ಜತೆಗೆ ಮಾತನಾಡಿದ ಶಿವಣ್ಣ, ಯಾರೂ ಹೋರಾಟದ ಬಗ್ಗೆ ಕಾಮೆಂಟ್ ಮಾಡ್ತಿಲ್ಲ ಅಂತಾರೆ. ಆದ್ರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿ ಇಳಿಯೋದ್ರಿಂದ ಏನೂ ಸಾಧ್ಯವಾಗಲ್ಲ. ಹಾಗೇ ಆಗೋದಾದ್ರೆ ನಾವು ಬೀದಿಗಿಳಿಯಲು ಸಾಧ್ಯ. ಅದು ಸರ್ಕಾರದಿಂದ ಮಾಡೋಕಷ್ಟೇ ಸಾಧ್ಯ. ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡಿದ್ರೆ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ನಮ್ಮ ಸಪೋರ್ಟ್ ಖಂಡಿತಾ ಇದ್ದೇ ಇರುತ್ತೆ. ಆದ್ರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ. ಆದ್ರೆ ಅಧಿಕಾರಿ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಶಿವರಾಜ್‌ ಕುಮಾರ್‌ ಉತ್ತರವಷ್ಟೇ ಇದಾಗಿರುಬಹುದು, ಆದರೆ ದೆಹಲಿ ರೈತರ ಪ್ರತಿಭಟನೆಯ ಬಿಸಿ ಇವತ್ತು ಇಡೀ ಭಾರತೀಯ ಚಿತ್ರ ರಂಗಕ್ಕೂ ತಟ್ಟಿದೆ. ಬಾಲಿವುಡ್‌ ನಲ್ಲೂ ಇದು ಮೊನ್ನೆಯಷ್ಟೇ ಭಾರೀ ಸದ್ದು ಮಾಡಿದ್ದು ಕೂಡ ನಿಮಗೆಲ್ಲ ಗೊತ್ತೇ ಇದೆ. ಅಲ್ಲಿ ಅಭಿಮಾನಿಗಳಿಂದಲೇ ಕಲಾವಿದರಿಗೆ ಒತ್ತಡ ಹೆಚ್ಚಾಗುತ್ತಿದೆ. ಕಲಾವಿದರು ತಮ್ಮ ನಿಲುವು ಸ್ಪಷ್ಟ ಪಡಿಸಬೇಕೆಂದು ಜನರೇ ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಅಂತಹ ತೀವ್ರ ತರಹದ ಒತ್ತಡ ಬಂದಿಲ್ಲವಾದರೂ, ಈಗ ಸೋಷಲ್‌ ಮೀಡಿಯಾದಲ್ಲಿ ಜನ ಮಾತನಾಡಿಕೊಳ್ಳುತ್ತಿರುವುದು ಹೌದು. ಇಂತಹ ಸಂದರ್ಭದಲ್ಲಿ ಶಿವರಾಜ್‌ ಕುಮಾರ್‌ ರೈತರ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿರುವುದು ಇತರೆ ಕಲಾವಿದರ ಪಾಲಿಗೂ ಒತ್ತಡವೇ ಸೃಷ್ಟಿಸಿದೆ. ಯಾರು ರೈತ ಪರ ಎನ್ನುವುದು ಈಗ ಗೊತ್ತಾಗಬೇಕಿದೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಬಾಗಿಲು ತಟ್ಟಲಿರುವ ಕಿಲಾಡಿ ನಯನಾ?

ಪಟ್ಟಿಯಲ್ಲಿ ಹರಿದಾಡುತ್ತಿದೆ ಮಾತಿನಮಲ್ಲಿ ಹೆಸರು

“ಕಾಮಿಡಿ ಕಿಲಾಡಿಗಳು” ಖ್ಯಾತಿಯ ನಯನಾ ಬಿಗ್‌ಬಾಸ್‌ ಮನೆಗೆ ಕಾಲಿಡಲಿದ್ದಾರಾ?
ಹೀಗೊಂದು ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಹೌದು, ಸದ್ಯಕ್ಕೆ ಬಿಗ್‌ಬಾಸ್‌ ಸೀಸನ್‌-೮ ತಯಾರಿ ಜೋರಾಗಿಯೇ ಇದೆ. ಈಗಾಗಲೇ ಯಾರೆಲ್ಲಾ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡುತ್ತಾರೆ ಎಂಬ ಕೆಲವರ ಲಿಸ್ಟ್‌ ಕೂಡ ಹರಿದಾಡುತ್ತಿದೆ. ಆ ಲಿಸ್ಟ್‌ನಲ್ಲಿ “ಕಾಮಿಡಿ ಕಿಲಾಡಿ” ಖ್ಯಾತಿಯ ನಯನಾ ಅವರ ಹೆಸರು ಕೂಡ ಕೇಳಿಬರುತ್ತಿದೆ. ನಿಜವಾಗಿಯೂ ನಯನಾ ಹೆಸರು ಇದೆಯಾ? ಅವಕಾಶ ಸಿಕ್ಕರೆ ನಯನಾ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ? ಇದು ಸದ್ಯಕ್ಕೆ ಗಿರಕಿ ಹೊಡೆಯುತ್ತಿರುವ ಪ್ರಶ್ನೆ.

ನಯನಾ ಹೆಸರು ಯಾಕೆ ಹರಿದಾಡುತ್ತಿದೆ ಎಂಬುದಕ್ಕೆ ಹಲವು ಕಾರಣಗಳಿವೆ. ನಯನಾ ಒಳ್ಳೆಯ ಮಾತುಗಾತಿ, ರಂಗಭೂಮಿ ಪ್ರತಿಭೆ, ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಏನಾದರೊಂದು ಸ್ಟೇಟಸ್‌ ಹಾಕುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ನಯನಾ ಸೋಶಿಯಲ್‌ ಮೀಡಿಯಾದಲ್ಲಿ ಇಂಗ್ಲೀಷ್‌ನಲ್ಲಿ ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಕನ್ನಡಿಗರ ಕಣ್ಣಿಗೆ ಅದು ಬಿದ್ದ ಕೂಡಲೇ ಸಾಕಷ್ಟು ಚರ್ಚೆ ಆಯ್ತು. ಕನ್ನಡಿಗರು ಬಾಯಿಗೆ ಬಂದಂತೆ ಮಾತಾಡಿದ್ದರು. ನಂತರ ನಯನಾ ಕೂಡ ಅವರಿಗೆ ತಮ್ಮ ಮಾತಲ್ಲೇ ಉತ್ತರ ಕೊಟ್ಟಿದ್ದರು. ಆ ನಯನಾ ಈಗ ಬಿಗ್‌ಬಾಸ್‌ ಮನೆಗೆ ಹೋಗ್ತಾರೆ ಎಂಬ ಸುದ್ದಿಯಂತೂ ಇದೆ. ಅದು ಎಷ್ಟರ ಮಟ್ಟಿಗೆ ನಿಜ ಅನನೋದಕ್ಕೆ ಬಿಗ್‌ಬಾಸ್‌ ಸೀಸನ್‌ -೮ ಶುರುವಾಗುವವರೆಗೆ ಕಾಯಲೇಬೇಕು. ಅಂದಹಾಗೆ, ಸುದೀ[ಪ್‌ ಅವರು ಈ ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ.

Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ಕೈಗೆ ಗಾಯ- ಕ್ರಿಕೆಟ್‌ ಆಡುವಾಗ ಆಕಸ್ಮಿಕ ಪೆಟ್ಟು

ಮನೆ ಮುಂದೆ ಆಡುವಾಗ ನಡೆದ ಘಟನೆ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಗಳು, ಕೈಗೆ, ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡಾಗ, ಅದೊಂದು ಸೀನ್‌ಗೆ ಅಗತ್ಯ ಅನಿಸುವುದು ಸಹಜ. ಆದರೆ, ಚಿತ್ರೀಕರಣ ಹೊರತಾಗಿಯೂ ಬ್ಯಾಂಡೇಜ್‌ ಇದ್ದರೆ? ಅದು ಎಲ್ಲರಿಗೂ ಒಂದೊಂದು ಪ್ರಶ್ನೆ ಮತ್ತು ಗಾಬರಿ. ಅಂಥದ್ದೊಂದು ಪ್ರಶ್ನೆ, ಗಾಬರಿ ಶಿವರಾಜಕುಮಾರ್‌ ಅವರ ತೋರು ಬೆರಳಿಗೆ ಆಗಿರುವ ಗಾಯ ಕಾರಣವಾಗಿದೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕೈ ಗಾಯವಾಗಿದೆ. ಅದಕ್ಕೆ ಕಾರಣ, ಕಳೆದ ಎರಡು ದಿನಗಳ ಹಿಂದೆ ಅವರು ತಮ್ಮ ಮನೆಯಲ್ಲಿ ಕ್ರಿಕೆಟ್ ಆಡುತ್ತಿರಬೇಕಾದರೆ, ಆಕಸ್ಮಿಕವಾಗಿ ತಮ್ಮ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಅವರು ಬ್ಯಾಂಡೇಜ್‌ ಮಾಡಿಸಿದ್ದಾರೆ.

ಶಿವರಾಜ್‌ಕುಮಾರ್‌ ಅವರಿಗೆ ಕ್ರಿಕೆಟ್‌ ಅಂದರೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕರೆ,  ಹುಡುಗರಂತೆ ಅವರು ಬ್ಯಾಟ್‌ ಹಿಡಿದು ಫೀಲ್ಡ್‌ಗೆ ನಿಂತು ಬಿಡುತ್ತಾರೆ. ಒಂದಷ್ಟು ಹುಡುಗರನ್ನು ಕಟ್ಟಿಕೊಂಡು ಬ್ಯಾಟಿಂಗ್‌ ಮಾಡಲು ಹೊರಡುವ ಶಿವಣ್ಣ, ಮೊನ್ನೆ ಹಾಗೆ ಮಾಡಲು ಹೋಗಿ ಸದ್ಯ ತೋರು ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ಅರೆಬೆತ್ತಲೆ ಫೋಟೋ- ನಟಿಯ ಅಕೌಂಟ್‌ ಡಿಲೀಟ್!

ಟ್ವಿಟರ್ ನಿಲುವಿಗೆ ನಟಿ ನಿಖಿತಾ ಗೋಖಲೆ ಕಿಡಿಕಿಡಿ

  • ಶಶಿಧರ ಚಿತ್ರದುರ್ಗ

ಖ್ಯಾತ ಮರಾಠಿ ನಟಿ ನಿಖಿತಾ ಗೋಖಲೆ ಟ್ವಿಟರ್‌ ಮೇಲೆ ಮುನಿಸಿಕೊಂಡು ಕಿಡಿಕಾರುತ್ತಿದ್ದಾರೆ. ಮೊನ್ನೆ ಅವರು ತಮ್ಮ ಫೋಟೋಗಳನ್ನು ಅವರು ಟ್ವಿಟರ್‌ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇವು ‘ಕಲಾತ್ಮಕ ಫೋಟೋಗಳು’ ಎನ್ನುವುದು ಅವರ ವಿವರಣೆ. ಆದರೆ ಇವು ಆಕ್ಷೇಪಾರ್ಹ ಫೊಟೋಗಳು ಎಂದು ನಟಿಯ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಮಾಡಿದೆ ಟ್ವಿಟರ್‌.


ಟ್ವಿಟರ್ ನಿಲುವಿನಿಂದ ನಟಿ ನಿಖಿತಾ ಮುನಿಸಿಕೊಂಡಿದ್ದಾರೆ. ಇದರಿಂದ ತಮ್ಮ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎನ್ನುವುದು ಇದಕ್ಕೆ ಕಾರಣ. “ಶಾಕಿಂಗ್ ನ್ಯೂಸ್‌! ನಾನು ಎಂಟು ವರ್ಷದಿಂದ ನಿಭಾಯಿಸುತ್ತಿದ್ದ ಸೋಷಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಆಗಿದೆ. ನಾನು ಬೆತ್ತಲೆ ಫೋಟೋ ಹಾಕಿದ್ದೇನೆ ಎನ್ನುವ ವಿವರಣೆಯನ್ನು ಅವರು ಕೊಡುತ್ತಿದ್ದಾರೆ.  ಊಟ-ತಿಂಡಿಯ ಫೋಟೋ, ಕೆಲಸಕ್ಕೆ ಬಾರದ ಫೋಟೋಗಳೆಲ್ಲವನ್ನೂ ಹಾಕಬಹುದು. ಆದರೆ ಕಲಾತ್ಮಕತೆಯ ನನ್ನ ಫೋಟೋಗಳನ್ನು ಮಾತ್ರ ಹಾಕಬಾರದಂತೆ! ಇದೆಂಥ ನಿಯಮ” ಎಂದು ತಮ್ಮ ಕೋಪ ಹೊರ ಹಾಕಿದ್ದಾರೆ ಅವರು.

ಟ್ವಿಟರ್‌ ಖಾತೆ ಡಿಲೀಟ್‌ ಮಾಡಿದ್ದರಿಂದ ನಿರಾಸೆ ಹೊಂದಬೇಕಿಲ್ಲ ಎಂದು ನಿಖಿತಾ ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ. “ನಾನು ಕೂಡ ಇನ್ನು ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಊಟ-ತಿಂಡಿಯ ಫೊಟೋಗಳನ್ನು ಹಾಕುತ್ತೇನೆ. ನನ್ನ ಕಲಾತ್ಮಕ ಫೋಟೋಗಳನ್ನು ನನ್ನ ವೆಬ್‌ಸೈಟ್‌ನಲ್ಲಿ ಹಾಕಿಕೊಳ್ಳುತ್ತೇನೆ” ಎಂದಿದ್ದಾರೆ.

error: Content is protected !!