Categories
ಸಿನಿ ಸುದ್ದಿ

ಹಿಂದಿ ರಾಷ್ಟ್ರ ಭಾಷೆ- ದೊಡ್ಡ ರಂಗೇಗೌಡರ ಹೇಳಿಕೆಗೆ ನಟ ನಿಖಿಲ್‌ ಕುಮಾರ್‌ ವಿರೋಧ

ಅರವಿನ ಕೊರತೆಯಿಂದ ಹಾಗೆ ಹೇಳಿರಬಹುದು ಅಂತ ಕುಟುಕಿದ ನಟ 

ಹಿಂದಿ ಭಾಷೆ ಕುರಿತು ಸಾಹಿತಿ ಹಾಗೂ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ದೊಡ್ಡ ರಂಗೇ ಗೌಡರು ನೀಡಿರುವ ಹೇಳಿಕೆ ಭಾರೀ ವಿವಾದ ಹುಟ್ಟು ಹಾಕಿದೆ. ಸೋಷಲ್‌ ಮೀಡಿಯಾದಲ್ಲಿ ಅವರ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಕಷ್ಟು ಜನ ರಂಗೇಗೌಡರನ್ನು ಕಟುವಾದ ಮಾತುಗಳಿಂದ ಟೀಕಿಸಿದ್ದಾರೆ. ಈ ನಡುವೆಯೇ ನಟ ನಿಖಿಲ್‌ ಕುಮಾರ್‌ ಕೂಡ ರಂಗೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಬಹುಶ: ಇದು ಅವರ ಅರಿವಿನ ಕೊರತೆಯಾಗಿರಬಹುದು ಎಂದು ಹೇಳಿದ್ದಾರೆ.
” ಇಂಗ್ಲಿಷ್‌ ಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು, ಹಿಂದಿ ನಮ್ಮ ರಾಷ್ಟ್ರ ಭಾಷೆ ” ಎಂಬುದಾಗಿ ರಂಗೇಗೌಡರ ನೀಡಿರುವ ಹೇಳಿಕೆಗೆ ನಟ ನಿಖಿಲ್‌ ಕುಮಾರ್‌, ಸೋಷಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ” ಹಿಂದಿ ನಮ್ಮ ರಾಷ್ಟ್ರ ಭಾಷೆ , ಕನ್ನಡಿಗರಾದ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂಬ ದೊಡ್ಡ ರಂಗೇಗೌಡರ ಮಾತು ಕೇಳಿ ಅಚ್ಚರಿಯಾಯಿತು. ಬಹುಶ: ಇದು ಅವರ ಅರವಿನಿ ಕೊರತೆಯಿಂದ ಆಗಿದೆʼ ಎಂದು ನಿಖಿಲ್‌ ಕುಟುಕಿದ್ದಾರೆ.ʼ

“ನಮ್ಮ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ವಿಚಾರವನ್ನು ಕಲಿಸುವ ಅವಶ್ಯಕತೆ ಇದೆ. ಇಲ್ಲದಿದ್ದರೆ, ಮುಂದಿನ ಪೀಳಿಗೆಯೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ರೀತಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ತಪ್ಪಾಗಿ ಭಾವಿಸಿಕೊಳ್ಳುವ ಸಾಧ್ಯತೆ ಇದೆʼ ಎಂಬುದಾಗಿ ನಟ ನಿಖಿಲ್‌ ಕುಮಾರ್‌ ಇದೇ ವೇಳೆ ಆತಂಕ ಹೊರ ಹಾಕಿದ್ದಾರೆ.

Categories
ಸಿನಿ ಸುದ್ದಿ

ಬಿಗ್‌ ಬಜೆಟ್‌ ನಿರ್ಮಾಪಕರಿಗೆ ಕೊರೊನಾ ಕಲಿಸಿದ ಹೊಸ ಪಾಠ!

ಅರಿವಾದ ಬಳಿಕ ನಾವೆಲ್ಲಾ ಒಂದೇ ಎಂಬ ಘೋಷಣೆ

ಈ ಹಿಂದೆ ಚಿತ್ರಮಂದಿರಕ್ಕೆ ಯಾರು  ಬರಲಿ, ಬಿಡಲಿ ಅದರ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೊಸಬರಂತೂ ಸ್ಟಾರ್‌ ಚಿತ್ರಗಳ ಮಧ್ಯೆಯೂ ನುಸುಳಿ ಬಂದು ಜನರನ್ನ ಆಕರ್ಷಿಸಲು ಹೆಣಗಾಡುತಿದ್ದ ಪಾಡು ಹೇಳತೀರದು. ಆಗ, ನಿರ್ಮಾಪಕರ ನಡುವೆ ಅಷ್ಟಾಗಿ ಹೊಂದಾಣಿಕೆ ಇಲ್ಲದ ಕಾರಣವೋ ಏನೋ, ಒಂದಷ್ಟು ಚಿತ್ರಗಳು ಒಮ್ಮೆಲೆ ಚಿತ್ರಮಂದಿರಗಳಿಗೆ ಅಪ್ಪಳಿಸುವ ಮೂಲಕ ಗೊಂದಲ ಸೃಷ್ಟಿಸಿಬಿಡುತ್ತಿದ್ದವು. ಚಿತ್ರಮಂದಿರಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ ಯಾವ ಸಿನಿಮಾ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿ ಪ್ರೇಕ್ಷಕ ಇರುತ್ತಿದ್ದದ್ದು ಕಾಮನ್.‌ ಕೊರೊನಾ ಮುನ್ನ ಇದೆಲ್ಲಾ ಸಹಜವಾಗಿಯೇ ಇತ್ತು. ಆದರೆ ಈಗ…

ಕನ್ನಡ ಚಿತ್ರರಂಗದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ ಜೋರಾಗಿದೆ. ಕೊರೊನಾ ಹಾವಳಿ ಕಡಿಮೆಯಾದ ನಂತರದ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈಗ ಕನ್ನಡ ಸಿನಿಮಾರಂಗದಲ್ಲಿ ಎಲ್ಲವೂ ಸರಿಯಾಗಿದೆ. ಹೌದು, ಕೊರೊನಾ ಮುಂಚಿನ ದಿನಗಳಲ್ಲಿ ಚಿತ್ರರಂಗ ಸಿಕ್ಕಾಪಟ್ಟೆ ಶೈನ್‌ ಆಗಿತ್ತು. ಹಾಗಂತ, ಈಗ ಇಲ್ಲವೆಂದಲ್ಲ. ಎಂದಿಗಿಂತಲೂ ಈಗ ಚಿತ್ರರಂಗ ಬಲವಾಗಿದೆ. ಜೋಶ್‌ ಆಗಿಯೂ ಇದೆ. ಈ ಮಾತು ನಿಜ. ಮೊದಲೆಲ್ಲಾ ವಾರಕ್ಕೆ ಎಂಟು, ಹತ್ತು ಸಿನಿಮಾಗಳು ತೆರೆಕಂಡಿದ್ದನ್ನು ಗಮನಿಸಬಹುದು.

ಅಗೆಲ್ಲಾ ಚಿತ್ರಮಂದಿರಕ್ಕೆ ಯಾರು  ಬರಲಿ, ಬಿಡಲಿ ಅದರ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೊಸಬರಂತೂ ಸ್ಟಾರ್‌ ಚಿತ್ರಗಳ ಮಧ್ಯೆಯೂ ನುಸುಳಿ ಬಂದು ಜನರನ್ನ ಆಕರ್ಷಿಸಲು ಹೆಣಗಾಡುತಿದ್ದ ಪಾಡು ಹೇಳತೀರದು. ಹಾಗೆಲ್ಲಾ, ನಿರ್ಮಾಪಕರ ನಡುವೆ ಅಷ್ಟಾಗಿ ಹೊಂದಾಣಿಕೆ ಇಲ್ಲದ ಕಾರಣವೋ ಏನೋ, ಒಂದಷ್ಟು ಚಿತ್ರಗಳು ಒಮ್ಮೆಲೆ ಚಿತ್ರಮಂದಿರಗಳಿಗೆ ಅಪ್ಪಳಿಸುವ ಮೂಲಕ ಗೊಂದಲ ಸೃಷ್ಟಿಸಿಬಿಡುತ್ತಿದ್ದವು. ಚಿತ್ರಮಂದಿರಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ ಯಾವ ಸಿನಿಮಾ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿ ಪ್ರೇಕ್ಷಕ ಇರುತ್ತಿದ್ದದ್ದು ಕಾಮನ್.‌ ಕೊರೊನಾ ಮುನ್ನ ಇದೆಲ್ಲಾ ಸಹಜವಾಗಿಯೇ ಇತ್ತು. ಆದರೆ ಈಗ…


ಈಗ ಕಾಲ ಬದಲಾಗಿದೆ. ಕೊರೊನಾ ಒಳ್ಳೆಯ ಪಾಠವನ್ನೂ ಕಲಿಸಿದೆ. ಅದರಲ್ಲೂ ಸಿನಿಮಾ ಮಂದಿಗೆ ಸಾಕಷ್ಟು ಪಾಠ ಕಲಿಸಿದೆ ಅಂದರೆ ತಪ್ಪಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳು ಶುರುವಾಗಿದ್ದರೂ, ಚಿತ್ರರಂಗ ಮಾತ್ರ ಶುರುವಾಗಿರಲಿಲ್ಲ. ಸರ್ಕಾರ ಶೇ.೫೦ರಷ್ಟು ಮಾತ್ರ ಅನುಮತಿ ನೀಡಿದೆ. ಈ ಅನುಮತಿಯ ಆಧಾರದ ಮೇಲೆ ಎಲ್ಲವೂ ನಡೆಯುತ್ತಿದೆ. ಒಂದಷ್ಟು ಚಿತ್ರಗಳು ತೆರೆಕಂಡಿವೆ. ಈಗ ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕೊರೊನಾ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದಲ್ಲದೆ, ಎಲ್ಲರಿಗೂ ಒಂದು ತಕ್ಕ ಪಾಠ ಕಲಿಸಿದ್ದರಿಂದಲೇ ಈಗ ಬಿಗ್‌ ಬಜೆಟ್‌ ಚಿತ್ರಗಳ ನಿರ್ಮಾಪಕರು ಒಂದಾಗಿದ್ದಾರೆ.

ತಮ್ಮ ತಮ್ಮಲ್ಲೇ ಬಿಡುಗಡೆಯ ಪೈಪೋಟಿ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರಗಳಲ್ಲಿ ಶೇಕಡವಾರು ಬದಲಾಗಿ, ಮೊದಲಿನಂತೆ ಬಾಡಿಗೆ ವ್ಯವಸ್ಥೆಯೇ ಇರಬೇಕು ಎಂದು ಒಕ್ಕೊರಲ ಮನವಿ ಮಾಡಿದ್ದಾರೆ. ಇಷ್ಟಕ್ಕೂ ಬಿಗ್‌ ಬಜೆಟ್‌ ನಿರ್ಮಾಪಕರು ಸೇರಿ ಹೀಗೆಲ್ಲಾ ಒಗ್ಗಟ್ಟಿನ ಮಂತ್ರ ಜಪಿಸೋಕೆ ಕಾರಣ, “ಪೊಗರು” ರಿಲೀಸ್.‌ ಹೌದು, ಇತ್ತೀಚೆಗೆ ಚಿತ್ರದ ಬಿಡುಗಡೆ ಕುರಿತು ಚಿತ್ರತಂಡ ಘೋಷಣೆ ಮಾಡಿತು. ಫೆಬ್ರವರಿ ೧೧ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಂದು ಆ ಚಿತ್ರದ ಬಿಡುಗಡೆ ಘೋಷಣೆ ಸಂದರ್ಭದಲ್ಲಿ ಎಲ್ಲರೂ ವೇದಿಕೆ ಮೇಲೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು ದಿಟ. ಅಷ್ಟಕ್ಕೂ ಅವರು ಒಗ್ಗಟ್ಟು ಮಂತ್ರ ಹೇಳಿದ್ದಿಷ್ಟು. ಸಿನಿಮಾ ರಿಲೀಸ್‌ಗೆ ಸಾಲು ಸಾಲು ಬಿಗ್‌ ಬಜೆಟ್‌ ಚಿತ್ರಗಳು ಸಜ್ಜಾಗಿವೆ.

“ಪೊಗರುʼ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ, ಚಿತ್ರರಂಗದ ಬಹುತೇಕ ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಪಕರು ವೇದಿಕೆಯಲ್ಲಿದ್ದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಂದು ನಿರ್ಮಾಪಕ ಸೂರಪ್ಪ ಬಾಬು, ಪ್ರದರ್ಶಕರ ಸಂಘದ ಮುಖ್ಯಸ್ಥ ಓದು ಗೌಡರಿಗೆ ವಿನಂತಿ ಮಾಡಿದ್ದಿಷ್ಟು, “ನಾವೆಲ್ಲ ಇಷ್ಟು ಜನ ಒಟ್ಟಾಗಿ ಬಂದಿದ್ದೇವೆ. ಇಂತಹ ಕಷ್ಟಕಾಲದಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಂದಿದ್ದೇವೆ. ಅದರಲ್ಲೂ “ಪೊಗರು” ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಅವರಿಗೆ ನಾವೆಲ್ಲಾ ಕೈ ಜೋಡಿಸಿ, ಬೆಂಬಲಕ್ಕೆ ನಿಂತಿದ್ದೇವೆ.

ಕಳೆದ ಒಂಭತ್ತು ತಿಂಗಳಿನಿಂದಲೂ ಭಾರೀ ಬಜೆಟ್ ನ ಚಿತ್ರ ನಿರ್ಮಾಪಕರು ತುಂಬಾ ಕಷ್ಟ ಪಟ್ಟಿದ್ದಾರೆ. ಉತ್ತರ ಕರ್ನಾಟಕ ಕಡೆಯಿಂದ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತಿದೆ. ವಿನಂತಿ ಮಾಡುತ್ತಿದ್ದೇವೆ. ಹಿಂದೆ ಹೇಗೆ ನಡೆದುಕೊಂಡು ಬಂದಿತ್ತೋ, ಅದನ್ನೇ ಮುಂದುವರೆಸಿಕೊಂಡು ಬನ್ನಿ. ನೀವು ಯೋಚನೆ ಮಾಡಿ, ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಶಿವಣ್ಣ ಅವರ ಜೊತೆಗೂ ಚರ್ಚೆ ಮಾಡಿದ್ದೇವೆ. ಬಾಡಿಗೆ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಶೇರ್ ಬೇಡ. ಅದನ್ನು ಕೊಡೋದಿಕ್ಕೆ ಶುರು ಮಾಡಿದರೆ ಬಿಗ್ ಬಜೆಟ್ ಸಿನಿಮಾ ಮಾಡೋದಿಕ್ಕೆ ಆಗೋದಿಲ್ಲ. ಬಾಡಿಗೆ ವ್ಯವಸ್ಥೆ ಮುಂದುವರೆಯಬೇಕು” ಎಂಬ ಮನವಿ ಇಟ್ಟರು.


ಇದಷ್ಟೇ ಅಲ್ಲ, ಯಾವುದೇ ನಿರ್ಮಾಪಕ ಇರಲಿ, ಇನ್ನು ಮುಂದೆ ರಿಲೀಸ್‌ಗೆ ಫೈಟಿಂಗ್‌ ಮಾಡೋದು ಬೇಡ. ಯಾರದ್ದೋ ಒತ್ತಡದ ಆಸೆಗೆ ಸಿನಿಮಾ ರಿಲೀಸ್‌ ಮಾಡಬೇಡಿ. ಇದು ಎಲ್ಲರಿಗೂ ಒಳಿತು ಎಂಬ ಮಾತು ಕೂಡ ಇದೇ ವೇಳೆ ಎಲ್ಲಾ ನಿರ್ಮಾಪಕರಿಂದಲೂ ಕೇಳಿಬಂತು. ಅಂದಹಾಗೆ, ಮಾರ್ಚ್‌ ‌11ಕ್ಕೆ “ರಾಬರ್ಟ್” ಬಂದರೆ, ನಂತರದ ದಿನಗಳಲ್ಲಿ, ಏಪ್ರಿಲ್‌ 1 ರಂದು “ಯುವರತ್ನ”, ಏಪ್ರಿಲ್‌ 15 ಕ್ಕೆ “ಸಲಗ”, ಏಪ್ರಿಲ್‌ 25 ಕ್ಕೆ “ಕೋಟಿಗೊಬ್ಬ” , ಮೇ 15ಕ್ಕೆ “ಭಜರಂಗಿ ೨” ಹೀಗೆ ಬಿಡುಗಡೆಯಾಗಲಿವೆ. ಜೂನ್‌ನಲ್ಲಿ “ವಿಕ್ರಾಂತ್‌ ರೋಣ”, “ಕೆಜಿಎಫ್-‌೨” , ಆಗಸ್ಟ್‌ ನಲ್ಲಿ “ಚಾರ್ಲಿ” ಇತ್ಯಾದಿ ಚಿತ್ರಗಳು ಬರಲಿವೆ. ಹೀಗಾಗಿ ಮೊದಲಿನಂತೆ ಮನಸ್ಸಿಗೆ ಬಂದಂತೆ ರಿಲೀಸ್‌ ಮಾಡೋದು ಬೇಡ. ಮೊದಲೇ ಒಂದು ದಿನಾಂಕ ನಿಗಧಿಪಡಿಸಿ, ರಿಲೀಸ್‌ ಮಾಡಬೇಕು ಎಂಬ ಮಾತು ಜೋರಾಗಿ ಕೇಳಿಬಂತು.

ಅದೇನೆ ಇರಲಿ, ಕೊರೊನಾ ಬಳಿಕ ಎಲ್ಲರೂ ಪಾಠ ಕಲಿತಿರೋದು ನಿಜ. ಈಗ ಮಾತಾಡಿಕೊಂಡೇ ಸಿನಿಮಾ ರಿಲೀಸ್‌ ಮಾಡೋಣ ಅನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಅಂತೂ ಈಗಾದರೂ, ಸಿನಿಮಾ ಮಂದಿರಗಳಿಗೆ ಒಬ್ಬೊಬ್ಬರೇ ಬಂದು ಪ್ರೇಕ್ಷಕರನ್ನು ರಂಜಿಸಲು ಸಜ್ಜಾದರೆ ಸಾಕು. ಇದು ಕೊರೊನಾ ಹಿನ್ನೆಲೆಯಲ್ಲಿ ಮಾತ್ರವಲ್ಲ, ಕೊರೊನಾ ಹೋದ ಬಳಿಕವೂ, ಮುಂದಿನ ದಿನಗಳಲ್ಲೂ ಇದೇ ವ್ಯವಸ್ಥೆ ಮುಂದುವರೆದರೆ ಚಿತ್ರರಂಗ ಇನ್ನಷ್ಟು ಶೈನ್‌ ಆಗುವುದರಲ್ಲಿ ಎರಡು ಮಾತಿಲ್ಲ.

Categories
ಸಿನಿ ಸುದ್ದಿ

ಬಂಧಮುಕ್ತ ಗಿಣಿ, ಹೊರ ಬರ್ತಾರೆ ರಾಗಿಣಿ, 140 ದಿನಗಳ ಕಾಲ ಜೈಲಿನಲ್ಲಿದ್ದ ತುಪ್ಪದ ಬೆಡಗಿಗೆ ಆದ ಅನುಭವ ಏನು?

ಜೈಲಿನಿಂದ ಹೊರಬಂದ ನಂತರ‌ ಸಿನಿಮಾ ಮಂದಿಗೆ ದರ್ಶನ ಕೊಡ್ತಾರಾ ರಾಗಿಣಿ….


ತುಪ್ಪ ಬೇಕಾ ತುಪ್ಪ ಎನ್ಜುವ ಐಟಂ ಸಾಂಗ್ ಮೂಲಕ ತುಪ್ಪದ ಬೆಡಗಿ ಅಂತಲೇ ಖ್ಯಾತಿ ಪಡೆದ ನಟಿ ರಾಗಿಣಿ ದ್ವಿವೇದಿ ಇಂದು ಜೈಲಿನಿಂದ ಹೊರ ಬರುತ್ತಿದ್ದಾರೆ. ಮೊನ್ನೆಯಷ್ಟೇ ಸುಪ್ರಿಂ ಕೊರ್ಟ್ ನಲ್ಲಿ ಸಿಕ್ಕ ಜಾಮೀನಿ ನೊಂದಿಗೆ ರಾಗಿಣಿ ಬಂಧ ಮುಕ್ತಗೊಂಡಿದ್ದಾರೆ.
ಕೊನೆಗೂ 146 ದಿನಗಳ ಅವರ ಜೈಲುವಾಸ ಇಂದಿಗೆ ಮುಕ್ತಾಯ ಗೊಳ್ಳುತ್ತಿದೆ. ಅವರೊಂದಿಗೆ ಜೈಲು ಪಾಲಾಗಿದ್ದ ಗ್ಲಾಮರಸ್ ನಟಿ ಸಂಜನಾ ಈಗಾಗಲೇ ಹೊರ ಬಂದು ಹಲವು ದಿನ ಕಳೆದಿವೆ‌. ಅನಾರೋಗ್ಯದ ಕಾರಣದೊಂದಿಗೆ ಕೊರ್ಟ್ ಸಂಜನಾ ಅವರಿಗೆ ಷರತ್ತುಬದ್ದ ಜಾಮೀನು‌ನೀಡಿದೆ. ಇದಾದ ಬಳಿಕ ಈಗ ರಾಗಿಣಿ ಹೊರ ಬರುತ್ತಿದ್ದಾರೆ.‌


ಡ್ರಗ್ಸ್ ಕೇಸ್ ಪ್ರಕರಣ ಸ್ಯಾಂಡಲ್ವುಡ್ ನಲ್ಲಿ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಜತೆಗೆ ನಟಿಯರಾದ ಸಂಜನಾ ಹಾಗೂ ರಾಗಿಣಿ ಯವರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ ನಂತರ ಕೋರ್ಟ್ ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿತ್ತು. ಇದರ ಪರಿಣಾಮ ಇಬ್ಬರು ನಟಿಯರೂ, ಜೈಲು ಪಾಲಾಗಿದ್ದರು.

Categories
ಸಿನಿ ಸುದ್ದಿ

ಮರ್ಧನಿ ಎಂಬ ಥ್ರಿಲ್ಲರ್ – ಹೊಸ ಹುಡುಗನ ರಗಡ್ ಲುಕ್

ಪ್ರತಿಭಾವಂತರ ಸಸ್ಪೆನ್ಸ್ ಸ್ಟೋರಿ!

ಕನ್ನಡದಲ್ಲಿ ದಿನ‌ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಈಗಾಗಲೇ ಕೆಲವು ಚಿತ್ರಗಳು ಸದ್ದಿಲ್ಲದೆ ಸೆಟ್ಟೇರಿವೆ. ಆ ಸಾಲಿಗೆ “ಮರ್ಧನಿ” ಚಿತ್ರವೂ ಸೇರಿದೆ.ಅಂದಹಾಗೆ, ಕಿಚ್ಷ‌ ಸುದೀಪ್‌ ಅವರ ಸಹಕಾರದೊಂದಿಗೆ ಅಂಕಿತ ಫಿಲಂಸ್ ಬ್ಯಾನರಲ್ಲಿ ಭಾರತಿ ಜಗ್ಗಿ ನಿರ್ಮಿಸುತ್ತಿರುವ “ಮರ್ಧನಿ” ಚಿತ್ರಕ್ಕೆ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಹತ್ತು ದಿನಗಳ ಚಿತ್ರೀಕರಣ ಮಾಡಲಾಗಿದೆ.
ಇನ್ನೂ ಇಪ್ಪತ್ತೈದು ದಿನಗಳ ಚಿತ್ರೀಕರಣ ಬಾಕಿಯಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರು ನಡೆಸಿದೆ.


ಈ ಹಿಂದೆ “ದೇವರಂಥ ಮನುಷ್ಯ” ಸಿನಿಮಾ ನಿರ್ದೇಶಿಸಿದ್ದ, ಕಿರಣ್‌ ಕುಮಾರ್ ವಿ‌. ಈ ಚಿತ್ರವನ್ನು ನಿರ್ದೇಶಿದ್ದಾರೆ.
ಇನ್ನು , ಈ ಚಿತ್ರಕ್ಕೆ ಅಕ್ಷಯ್ ಹೀರೋ. ಇವರು ಹೋಟೆಲ್ ಮ್ಯಾನೆಜ್‌ಮೆಂಟ್‌ ನಲ್ಲಿ ಗೋಲ್ಡ್ ಮೆಡಲ್, ಕರಾಟೆಯಲ್ಲಿ‌ ಬ್ಲ್ಯಾಕ್ ‌ಬೆಲ್ಟ್ ಹಾಗೂ ಗೋಲ್ಡ್ ಮೆಡಲ್ ಪಡೆದಿದ್ದಾರೆ. ರಾಜಕುಮಾರ್ ಸಂತೋಷಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅಕ್ಷಯ್ , ಈ ಚಿತ್ರದ ಮೂಲಕ ‌ನಾಯಕನಟರಾಗಿ‌ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಕ್ಷಯ್ ಅವರೇ ಇದಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಹಿತನ್ ಗೌಡ, ಮನೋಹರ್, ಭಾಗ್ಯಲಕ್ಷ್ಮೀ ಗೌಡ, ಮೈಸೂರು ಮಾಲತಿ, ಮಧು, ಸಂತೋಷ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಹಿತನ್ ಹಾಸನ್ ಸಂಗೀತ ನೀಡಲಿದ್ದಾರೆ.

ಶಿವಸಾಗರ್ ಛಾಯಾಗ್ರಹಣ ಮಾಡಿದರೆ, ಎಂ.ಎನ್.ವಿಶ್ವ ಸಂಕಲನವಿದೆ. ಪ್ರೇಂ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಗಜೇಂದ್ರ ಸಂಭಾಷಣೆ ಬರೆದಿದ್ದಾರೆ.
ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.

Categories
ಸಿನಿ ಸುದ್ದಿ

ಫ್ಯಾಮಿಲಿ ಪ್ಯಾಕ್ ನೋಡಲು ಬಂದ ಪವರ್ ಸ್ಟಾರ್ , ಚಿತ್ರ ತಂಡಕ್ಕೆ ಶುಭ ಕೋರಿ, ನಿರ್ದೆಶಕರ ಬೆನ್ನುತಟ್ಟಿದ ಪುನೀತ್ ರಾಜ್ ಕುಮಾರ್

ಇದು ಪಕ್ಕಾ ಮನರಂಜನೆಯ ಫ್ಯಾಮಿಲಿ ಪ್ಯಾಕ್ 

ಪಿಆರ್ ಕೆ ಪ್ರೊಡಕ್ಣನ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ತಲುಪಿದೆ. ಒಂದು ಸಾಂಗ ಹಾಗೂ ಆ್ಯಕ್ಣನ್ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿ ಇದೆ. ಗುರುವಾರ( ಜ.21) ದಂದು‌ ಚಿತ್ರದ ನಿರ್ಮಾಪಕರೂ ಆದ ಪುನೀತ್ ರಾಜ್ ಕುಮಾರ್ , ಪತ್ನಿ ಅಶ್ವಿನಿ‌ ಅವರೊಂದಿಗೆ ಚಿತ್ರೀಕರಣ ಸ್ಥಳಕ್ಜೆ ಭೇಟಿನೀಡಿ, ಚಿತ್ರೀಕರಣ ವೀಕ್ಷಿಸಿ ದರು‌. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ಅರ್ಜುನ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ಸಂಭಾಷಣೆ ಬರೆದಿರುವ ಮಾಸ್ತಿ ಹಾಗೂ ಕಲಾವಿದರಾದ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾ ರಾವ್, ಶರ್ಮಿತಾ ಗೌಡ ಉಪಸ್ಥಿತರಿದ್ದರು. ಪಕ್ಕಾ ಮನರಂಜನೆಯನ್ನೇ ಪ್ರಧಾನವಾಗಿರುವ ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ನಿರ್ಮಾಪಕರು.ಹಾಗೆಯೇ ಅರ್ಜುನ್ ಕುಮಾರ್ ನಿರ್ದೇಶಕ.

ನಟ‌ ಲಿಖಿತ್ ಶೆಟ್ಟಿ ನಿರ್ಮಾಣದ ಜತೆಗೆ ಈ ಚಿತ್ರದ ನಾಯಕ‌ನಟ ಕೂಡ. ಅಮೃತ ಅಯ್ಯಂಗಾರ್ ನಾಯಕಿ.
ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಚಿತ್ರಕ್ಕೆ ಮಾತು ಬರೆದಿದ್ದು ಮಾಸ್ತಿ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಇಲ್ಲಿ ತನಕ ಯಶಸ್ವಿಯಾಗಿ ಸಾಗಿ ಬಂದಿದ್ದು ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ.

Categories
ಸಿನಿ ಸುದ್ದಿ

ಫೆ.5ಕ್ಕೆ ವಿನೋದ್‌ ಪ್ರಭಾಕರ್ ಅವರ‌ ಶ್ಯಾಡೊ ರಿಲೀಸ್

 

ಕೊರೊನಾ ಬಳಿಕ ರಿಲೀಸ್ ಆಗಲಿರುವ ಮೊದಲ ಸ್ಟಾರ್‌ ಚಿತ್ರ

ಕೊರೊನಾ ಹಾವಳಿ ನಂತರ ಅತ್ತ, ಚಿತ್ರರಂಗದ ಚಟುವಟಿಕೆಗಳು ಜೋರಾಗಿವೆ. ಈಗಾಗಲೇ ಸಿನಿಮಾಗಳ ಬಿಡುಗಡೆ ಪರ್ವ ಶುರುವಾಗಿದೆ. ಫೆಬ್ರವರಿ 5ಕ್ಕೆ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೊ” ಚಿತ್ರ ತೆರೆ ಕಾಣುತ್ತಿದೆ ಎಂಬುದು ವಿಶೇಷ. ಕೊರೊನಾ ಬಳಿಕ ರಿಲೀಸ್ ಆಗುತ್ತಿರುವ ಸ್ಟಾರ್ ನಟನ‌ ಮೊದಲ‌ ಸಿನಿಮಾ ಇದು ಎಂಬುದು ಸುದ್ದಿ.


ಚಿತ್ರವನ್ನು ರವಿಗೌಡ್ರು ನಿರ್ದೇಶನ ಮಾಡಿದರೆ, ಚಕ್ರಿ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಧೀರಜ್ ಎಂಟರ್ ಪ್ರೈಸಸ್ ಮೂಲಕ ಮೋಹನ್‌ದಾಸ್‌ ಪೈ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.‌
ಸಿನಿಮಾ ರಿಲೀಸ್ ಬಗ್ಗೆ ಮಾತನಾಡುವ ಮೋಹನ್ ದಾಸ್ ಪೈ, “ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಎಲ್ಲೆಡೆಯಿಂದಲೂ
ಒಳ್ಳೆಯ ಮೆಚ್ಚುಗೆ ಬರುತ್ತಿದೆ. ಹೀಗಾಗಿ ಈ ಚಿತ್ರ ಬಿಡುಗಡೆ ಬಗ್ಗೆ ಸಡನ್‌ ತೀರ್ಮಾನ ಮಾಡಿಕೊಂಡು ರಿಲೀಸ್ ಮಾಡುತ್ತಿದ್ದೇವೆ. ಲೀಡಿಂಗ್‌ ಸ್ಟಾರ್ ಸಿನಿಮಾ ಇದು. ಹಾಗಾಗಿ ರಿಲೀಸ್ ವಿಚಾರದಲ್ಲೂ ಲೀಡಿಂಗ್ ನಲ್ಲೇ ಇರಬೇಕು.ಬೆಂಬ ಕಾರಣಕ್ಕೆ ಸುಮಾರು 250ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಮಾಡಲಾಗುತ್ತಿದೆ.


ಎಬಿಸಿಡಿ ಕೆಟಗರಿಯ ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್‌ ಆಗಲಿದೆ. ನಿರ್ಮಾಪಕರಿಗೆ ಸಾಕಷ್ಟು ಸಮಸ್ಯೆ ಇದೆ. ಹಾಗಾಗಿ ಈಗ ಚಿತ್ರವನ್ನು ಸಡನ್ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಶೇ.100ರಷ್ಟು ಗೆಲುವು ಪಡೆಯಲಿದೆ ಎಂಬ ನಂಬಿಕೆ ಇದೆ.
ಸಣ್ಣ ಸೆಂಟರ್‌ಗಳಲ್ಲೂ ಚಿತ್ರ ರಿಲೀಸ್ ಆಗಲಿದೆ.
ಈಗಾಗಲೇ ಚಿತ್ರಮಂದಿರಗಳ ಮಾಲೀಕರ ಜೊತೆ ಮಾತಾಡಿದ್ದೇನೆ. ನಮ್ಮ ನಡುವೆ ಒಳ್ಳೆಯ ಗೆಳೆತನವಿದೆ. ಹಾಗಾಗಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.

ಜನರಿಗೆ ಕೋವಿಡ್‌ನಿಂದ ತಲೆ ಕೆಟ್ಟೋಗಿದೆ. ಅವರಿಗೆ ಮನರಂಜನೆ‌ ಬೇಕು. ಶೇ.50ರಷ್ಟು ಅನುಮತಿ ಇದ್ದರೂ, ಜನರು ಬರುತ್ತಾರೆ ಎಂಬ ವಿಶ್ವಾಸ ಇದೆ. ಈ ಚಿತ್ರವನ್ನು
ಕೋಲಾರ, ಮುಳುಬಾಗಿಲು, ಹೊಸೂರು ಕಡೆಯಲ್ಲೂ ಹಾಕ್ತೀನಿ” ಎಂದು ವಿವರ ಕೊಟ್ಟರು ಮೋಹನ ದಾಸ್ ಪೈ.
ನಟ ವಿನೋದ್‌ ಪ್ರಭಾಕರ್ ಅವರಿಗೆ “ಶ್ಯಾಡೊ” ಬಿಡುಗಡೆ ಆಗುತ್ತಿರುವುದು ಖುಷಿ ಕೊಟ್ಟಿದೆ. ಆ ಬಗ್ಗೆ ಹೇಳುವ ಅವರು, ರಿಲೀಸ್ ಓಕೆ ಆದರೆ ಎಲ್ಲವೂ ಹರಿಬಿರಿಯಲ್ಲಿದೆ. ಇಂಡಸ್ಟ್ರಿ ಈಗಷ್ಟೇ ಸ್ಟಡಿಯಾಗುತ್ತಿದೆ. ಇಂತಹ ಸಮಯದಲ್ಲಿ ಪ್ರಚಾರವೂ ಅಗತ್ಯ. ಆದರೆ ಬಿಡುಗಡೆ ಸ್ವಲ್ಪ ಬೇಗ ಆಗುತ್ತಿದೆ. ಸ್ವಲ್ಪ ಅವಧಿಯಲ್ಲೇ ಪ್ರಚಾರ ಮಾಡಬೇಕಿದೆ. ಮಾಧ್ಯಮದ ಸಹಕಾರ ಜಾಸ್ತಿ ಬೇಕು ಎಂದು ಮನವಿ ಇಟ್ಟರು.


ಸಿನಿಮಾ ಬಗ್ಗೆ ಮಾತನಾಡಿದ ವಿನೋದ್, “ಮೊದಲ ಸಲ ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ರವಿಗೌಡ್ರು ಚೆನ್ನಾಗಿ ಮಾಡಿದ್ದಾರೆ. ಶರತ್‌ ಲೋಹಿತಾಶ್ವ ಅವರು ಸಿನಿಮಾದ ಉದ್ದಕ್ಕೂ ಪೋಲಿಸ್‌ ಪಾತ್ರದಲ್ಲಿ ಸಾಥ್ ನೀಡಿದ್ದಾರೆ. ನನ್ನ ಜೊತೆ ಶೋಬಿತಾ ರಾಣಾ ನಾಯಕಿಯಾಗಿದ್ದಾರೆ.
ಚೋಟಾ ಪ್ರಸಾದ್‌ ಎಡಿಟಿಂಗ್‌ ಮಾಡಿದ್ದಾರೆ. ಇಲ್ಲಿ‌ ವಿನೋದ್ ಮಾಸ್ಟರ್ ಅದ್ಭುತ ಸಾಹಸ‌ ಮಾಡಿಸಿದ್ದಾರೆ. ನನಗೆ ರೆಗ್ಯುಲರ್‌ ಆಕ್ಷನ್‌ ಅನಿಸಲಿಲ್ಲ. ಇಡೀ ಸಿನಿಮಾ ಹೈದರಾಬಾದ್‌ನಲ್ಲಿ ಮಾಡಲಾಗಿದೆ.
ಫೈಟ್ ಸೀನ್ ಗೆ ನಿರ್ದೇಶಕರು ಒಂದೇ ಕ್ಯಾಮೆರಾ ತಂದರು. ಕೇಳಿದ್ದಕ್ಕೆ, “ಇದು ಫೈಟ್‌ ಅಂತ ಮಾಡ್ತಾ ಇಲ್ಲ. ಸೀನ್‌ ರೀತಿ ಮಾಡ್ತಾ ಇದೀವಿ” ಅಂದ್ರು ಅವರ ಪ್ಲಾನಿಂಗ್ ಚೆನ್ನಾಗಿತ್ತು.


ಚಿತ್ರದಲ್ಲಿ ಎರಡು ಸಾಂಗ್‌ ಇದೆ. ಜೊತೆಗೆ ಆಕ್ಷನ್‌ ಪ್ಯಾಕ್‌, ಮನರಂಜನೆ ಹೆಚ್ಚು ಇದೆ. ಫೆ.5ಕ್ಕೆ ರಿಲೀಸ್ ಅಂದಾಗ, ಆಡಿಯನ್ಸ್‌ ಬರ್ತಾರಾ? ಎಂಬ ಅನುಮಾನ ಬಂತು. ಆದರೂ ಅಭಿಮಾನಿಗಳು ಸಿನಿಮಾ ನೋಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ.
ಈ ಚಿತ್ರ ನೋಡುಗರಿಗೆ ಬೇರೆ ಫೀಲ್ ಸಿಗುತ್ತೆ. ನೋಡೋಕೆ ಬಂದವರು ಶೇ.100 ರಷ್ಟು ಖುಷಿ ಪಡುತ್ತಾರೆ. ಈ ಸಿನಿಮಾಗೆ ಮಾಲ್‌ ಆಡಿಯನ್ಸ್‌ ಜಾಸ್ತಿ ಆಗ್ತಾರೆ, ಯಾಕೆಂದರೆ ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ ಇದು. ಹಾಗಾಗಿ ಯಾರಿಗೂ ನಿರಾಶೆ ಆಗೋದಿಲ್ಲ ಎನ್ನುತ್ತಾರೆ ವಿನೋದ್.
ಚಿತ್ರದಲ್ಲಿ ಕಾಮಿಡಿ ನಟ ಲೋಕೇಶ್ ಕೂಡ‌ ನಟಿಸಿದ್ದು ಸಿನಿಮಾ ರಿಲೀಸ್ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಡಾ : ರಾಜ್‌ ಲೈಬ್ರರಿಯಲ್ಲಿ ಕಳವು ಮಾಡಿದ ಧ್ರುವ ಸರ್ಜಾ!

ಕದ್ದ ಮಾಲು ಏನು ಅಂತ ಗೊತ್ತಾಗುವುದಿಕ್ಕೆ ಇನ್ನಷ್ಟು ದಿನ ಬೇಕಂತೆ…!!

ನಟ ಧ್ರುವ ಸರ್ಜಾ ಮೇಲೆ ಕಳತನದ ಆರೋಪ ಬಂದಿದೆ. ವರನಟ ಡಾ. ರಾಜ್‌ಕುಮಾರ್‌ ಅವರ ಕಲಾ ಲೈಬ್ರರಿಯಿಂದ ಅವರು ಆಮೂಲ್ಯವಾದ ಒಂದು ವಸ್ತುವನ್ನು ಕಳವು ಮಾಡಿದ್ದಾರಂತೆ. ಅದನ್ನವರು ಕಾಪಿ ಮಾಡಿದ್ದು ಅಂತಾರೆ. ಆದರೆ ಹಾಗೆ ಮಾಡಿದ್ದು ಏನನ್ನು? ಸದ್ಯಕ್ಕೆ ಅದನ್ನವರು ರಿವೀಲ್‌ ಮಾಡಲು ರೆಡಿ ಇಲ್ಲ. ಅದು ಬೇರೆಯವರಿಗೂ ಗೊತ್ತಿಲ್ಲ. ಯಾಕಂದ್ರೆ, ಡಾ. ರಾಜ್‌ ಕಲಾ ಲೈಬ್ರರಿಯಿಂದ ಏನನ್ನು ಕದ್ದು ತಂದಿದ್ದೀಯಾ ಅಂತಲೂ ಯಾರು ವಿಚಾರಣೆ ನಡೆಸಿಲ್ಲ. ಹಾಗಾಗಿ ಅದೇನು ಅಂತ ಯಾರಿಗೂ ಗೊತ್ತಾಗಿಲ್ಲ. ಆದರೂ ʼಪೊಗರುʼ ಚಿತ್ರದಲ್ಲಿನ ಪಾತ್ರಕ್ಕಾಗಿ ತಾವೊಂದು ಅಮೂಲ್ಯವಾದ ವಸ್ತುವನ್ನು ಡಾ. ರಾಜ್‌ ಕುಮಾರ್‌ ಅವರ ಕಲಾ ಲೈಬ್ರರಿಯಿಂದ ಕಳವು ಮಾಡಿದ್ದೇನೆ ಅಂತ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಅದೇನು ಅಂತ ಗೊತ್ತಾಗುವುದಕ್ಕೆ ಇನ್ನಷ್ಟು ದಿನ ಕಾಯಬೇಕು ಅಂತಲೂ ಅವರು ಹೇಳುತ್ತಾರೆ. ಹಾಗಾದ್ರೆ, ನಟ ಧ್ರುವ ಸರ್ಜಾ ಕದ್ದಿದ್ದು ಏನನ್ನು ? ಯಾಕಾಗಿ ? ಆ ಬಗೆಗಿನ ವಿಷಯ ಇಷ್ಟು….


” ಈ ಚಿತ್ರಕ್ಕೆ ನಾನೊಂದು ಕಳವು ಮಾಡಿದ್ದೇನೆ. ಅದೇನು ಅಂತ ನಾನು ಈಗಲೇ ಹೇಳುವುದಿಲ್ಲ. ಆದರೆ ಅದು ನನಗಾಗಿ ಅಲ್ಲ. ಪಾತ್ರಕ್ಕಾಗಿ. ಕತೆಯಲ್ಲಿನ ಪಾತ್ರಕ್ಕಾಗಿ ಸಣ್ಣಗಾಗಿದ್ದು, ಮತ್ತೆ ಅದೇ ಪಾತ್ರಕ್ಕಾಗಿ ದಪ್ಪ ಆಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಹೇಳೋದಿಕ್ಕೆ, ಹಾಗೆಯೇ ಕೇಳೋದಿಕ್ಕೆ ಇದು ಸುಲಭ. ಆದರೆ ಆ ಪ್ರೊಸೆಸ್‌ ಮುಗಿಯೋದಿಕ್ಕೆ ಒಂದು ವರ್ಷ ಆಗಿದೆ. ಅದು ಹೈಸ್ಕೂಲ್‌ ಹುಡುಗನ ಗೆಟಪ್. ಸಣ್ಣ ಆಗಬೇಕು ಅಂತಲೇ ಮೂರು ತಿಂಗಳು ಆದವು. ಅಷ್ಟು ದಿನ ಯಾವುದೇ ರೀತಿಯಲ್ಲಿ ಗಟ್ಟಿ ಪದಾರ್ಥ ತಿನ್ನದೇ ಬರೀ ಜ್ಯೂಸ್‌ ಕುಡಿದುಕೊಂಡೆ ಇದ್ದೆ. ಆ ಮೇಲೆ ಅಂದುಕೊಂಡಂತೆ 62 ಕೆ. ಜಿ ಕಡಿಮೆ ಆದೆ. ಹಾಗೆ ಆಗುವುದಕ್ಕೆ ಮಾಡಿದ ಸರ್ಕಸ್‌ ಅಷ್ಟಿಷ್ಟಲ್ಲ, ಡಯಟ್‌ ಹಾಗೂ ವರ್ಕೌಟ್‌ ಜತೆಗೆ ಯೋಗಾ ಕೂಡ ಮಾಡಿದೆ. ಯೋಗ ಪ್ರಾಕ್ಟಿಸ್‌ ಗೆ ನಂಗೆ ಪ್ರೇರಣೆ ವರನಟ ಡಾ. ರಾಜ್‌ ಕುಮಾರ್‌ . ಅವರ ಮಾಡುತ್ತಿದ್ದ ಯೋಗಾಸನಗಳ ಒಂದು ಕಲೆಯನ್ನು ಅವರಿಂದ ಸ್ಪೂರ್ತಿ ಪಡೆದು ಪ್ರಾಕ್ಟಿಸ್‌ ಮಾಡಿದೆ. ಮುಂದೆ ಅಷ್ಟೇ ದಿನಗಳಲ್ಲಿ ನನಗಿದ್ದ ಸವಾಲು ದಪ್ಪ ಆಗಿವುದು ಸಣ್ಣ ಆಗಿ ೬೨ ಕೆಜೆ ಇದ್ದವನು ಮುಂದೆ 100 ಕೆ.ಜಿ ಯಷ್ಟು ತೂಕ ಹೆಚ್ಚಿಸಿಕೊಂಡೆ. ನನಗಲ್ಲಿ ಸಣ್ಣಗಾಗಲು ಪ್ರಮುಖವಾಗಿ ಕಾರಣವಾಗಿದ್ದ ಡಾ. ರಾಜ್‌ ಅವರು ಮಾಡುತ್ತಿದ್ದ ಒಂದು ಯೋಗದ ಸ್ಪೂರ್ತಿ. ಸದ್ಯಕ್ಕೆ ಅದೇನು ಅಂತ ನಾನು ಹೇಳೋದಿಲ್ಲ. ಅದು ಚಿತ್ರ ನೋಡಿದಾಗಲೇ ಗೊತ್ತಾಗಲಿದೆ ” ಅಂದ್ರು ನಟ ಧ್ರುವ ಸರ್ಜಾ.

ಫೆ. 19 ಕ್ಕೆ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೊಗರು ರಿಲೀಸ್‌ ಆಗುತ್ತಿದೆ. ಚಿತ್ರೋದ್ಯಮದಿಂದ ಇದಕ್ಕೆ ಬಹುದೊಡ್ಡ ಬೆಂಬಲ ಸಿಕ್ಕಿದೆ, ಸರಿ ಸುಮಾರು 1 ಸಾವಿರ ಸ್ಕ್ರೀನ್‌ ಮೇಲೆ ಈ ಚಿತ್ರ ತೆರೆ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರ ತಂಡ ಆಯೋಜಿಸಿದ್ದ ಪ್ರಚಾರದ ಮೊದಲ ಸುದ್ದಿ ಗೋಷ್ಠಿಯಲ್ಲಿ ಧ್ರುವ ಸರ್ಜಾ ಈ ವಿಷಯ ಹಂಚಿಕೊಂಡರು.

Categories
ಸಿನಿ ಸುದ್ದಿ

ಅಭಿಮಾನಿಗಳ ಜತೆ ನಿಖಿಲ್‌ ಕುಮಾರ್‌ ಹುಟ್ಟು ಹಬ್ಬ, ಕೊರೋನಾ ನಡುವೆ ಇದೆಲ್ಲ ಬೇಕಿತ್ತಾ ಎಂದ ನೆಟ್ಟಿಗ

ನಿಖಿಲ್ ಬರ್ತ್ ಡೇ ಗೆ ಟೀಸರ್‌ ಗಿಫ್ಟ್‌ ನೀಡಿದ ರೈಡರ್‌ ಚಿತ್ರ ತಂಡ, ಟೀಸರ್‌ ತುಂಬಾ ಆಕ್ಷನ್‌ ಸೀನ್‌ ಗಳದ್ದೇ ಅಬ್ಬರ

ʼಜಾಗ್ವಾರ್‌ʼ ಖ್ಯಾತಿಯ ನಟ ನಿಖಿಲ್‌ಕುಮಾರ್‌ ಅವರಿಗೆ ಇಂದು (ಜ.22) ಹುಟ್ಟು ಹಬ್ಬದ ಸಂಭ್ರಮ. ಆದರೆ ಕೊರೋನಾ ಕಾರಣದಿಂದ ಪ್ರತಿ ವರ್ಷದಂತೆ ಈ ವರ್ಷ ಅವರ ಹುಟ್ಟು ಹಬ್ಬ ಇರಲಾರದು ಅಂತ ಸಿನಿಮಾ ಪ್ರೇಕ್ಷಕರು ಅಂದುಕೊಂಡಿದ್ದರ ನಡುವೆಯೇ ಅವರಿಂದು ತಮ್ಮ ನಿವಾಸದಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳ ಜತೆಗೆ ಅದ್ದೂರಿಯಾಗಿಯೇ ಹುಟ್ಟು ಹಬ್ಬ ಆಚರಿಸಿಕೊಂಡರು.

ಈ ವರ್ಷದ ಮಟ್ಟಿಗೆ ಎಲ್ಲಾ ಸ್ಟಾರ್‌ಗಳು ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿಯೇ ಆಚರಿಸಿಕೊಂಡಿದ್ದು ಎಲ್ಲರಿಗೂ ಗೊತ್ತು. ಅದಕ್ಕೆ ಕೊರೋನಾ ಕಾರಣ. ಇದರ ನಡುವೆಯೇ ನಟ ನಿಖಿಲ್‌ ಕುಮಾರ್‌ , ಅಭಿಮಾನಿಗಳ ಜತೆಗೆ ಕೇಕ್‌ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಸೋಷನ್‌ ಮೀಡಿಲಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ನಟ ನಿಖಿಲ್‌ ಕುಮಾರ್‌ ಹುಟ್ಟ ಹಬ್ಬಕ್ಕೆ ಬಹು ನಿರೀಕ್ಷಿತ ರೈಡರ್‌ ಚಿತ್ರ ತಂಡ ಟೀಸರ್‌ ಗಿಫ್ಟ್‌ ನೀಡಿದೆ.

46 ಸೆಂಕೆಡುಗಳ ಅವದಿಯ ʼರೈಡರ್‌ʼ ಚಿತ್ರದ ಟೀಸರ್‌ ಜಬರ್ದಸ್ತ್‌ ಆಗಿದೆ. ಟೀಸರ್‌ನಲ್ಲಿ ಯಾವುದೇ ಡೈಲಾಗ್‌ ಇಲ್ಲ, ಬರೀ ಆಕ್ಷನ್‌ ಸೀನ್ ಗಳನ್ನು ಟೀಸರ್‌ನಲ್ಲಿ ಕಟ್‌ ಮಾಡಿದೆ ಚಿತ್ರ ತಂಡ. ಸದ್ಯಕ್ಕೆ ನಿಖಿಲ್‌ ಕುಮಾರ್‌ ಸಿನಿ ಜರ್ನಿಯಲ್ಲಿ ಇದು ಭಾರೀ ಕುತೂಹಲ ಕೆರಳಿಸಿದ ಚಿತ್ರ. ಟೀಸರ್ ತುಂಬಾ ಬರೀ ನಿಖಿಲ್ ಕುಮಾರಸ್ವಾಮಿ ತುಂಬಿಕೊಂಡಿದ್ದಾರೆ. ಟೀಸರ್‌ ನ ಆರಂಭದಿಂದ ಅಂತ್ಯದ ವರೆಗೂ ದುಷ್ಟರನ್ನು ಡಿಸೈನ್-ಡಿಸೈನ್ ಆಗಿ ಹೊಡೆಯುತ್ತಿದ್ದಾರೆ ನಿಖಿಲ್. ಸಿನಿಮಾದ ಟೈಟಲ್ ಹಾಗೂ ಟೀಸರ್ ನೋಡಿದರೆ ಗೊತ್ತಾಗುತ್ತಿದೆ ಇದೊಂದು ಪಕ್ಕಾ ಹೊಡಿ-ಬಡಿ ಸಿನಿಮಾ ಎಂದು. ಪೂರ್ಣ ಪ್ರಮಾಣದ ಆಕ್ಷನ್ ಹೀರೋ ಆಗುವತ್ತ ನಿಖಿಲ್ ಕುಮಾರಸ್ವಾಮಿ ಗಮನ ಹರಿಸಿದಂತಿದೆ. ಟೀಸರ್‌ ನಲ್ಲಿ ತೋರಿಸಲಾಗಿರುವ ಆಕ್ಷನ್ ದೃಶ್ಯಗಳು ತುಂಬಿಕೊಂಡಿವೆ.ಟಿ ಸಿರೀಸ್‌ ಹಾಗೂ ಲಹರಿ ಮ್ಯೂಜಿಕ್‌ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಬರುತ್ತಿದೆ.

ನಿಖಿಲ್‌ ಹೀರೋ ಆಗಿ ಎಂಟ್ರಿಯಾದ ಚೊಚ್ಚಲ ಚಿತ್ರ ʼ ಜಾಗ್ವಾರ್‌ʼ ಕೂಡ ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡಿತ್ತು. ಎರಡು ಕಡೆ ಅವರೇಜ್‌ ಸಕ್ಸಸ್‌ ಸಿಕ್ಕಿದ್ದು ನಿಮಗೂ ಗೊತ್ತು. ಆದಾದ ನಂತರ ಸೀತಾರಾಮ ಕಲ್ಯಾಣ ಹಾಗೂ ಕುರುಕ್ಷೇತ್ರ ಚಿತ್ರಗಳಲ್ಲಿ ನಿಖಿಲ್‌ ತೆರೆ ಮೇಲೆ ಕಾಣಿಸಿಕೊಂಡರು. ಅಲ್ಲಿಂದ ಒಂದಷ್ಟು ಸಮಯ ರಾಜಕಾರಣ ಅಂತ ಬ್ಯುಸಿ ಆಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ಕಂಡ ನಂತರ ಮತ್ತೆ ಸಿನಿಮಾದತ್ತ ಮನಸ್ಸು ಮಾಡಿ,” ರೈಡರ್‌ʼ ಮೂಲಕ ಸುದ್ದಿಯಾದರು.

ಇದೇ ಚಿತ್ರ ತಂಡ ಈಗ ನಿಖಿಲ್‌ ಅವರ ಹುಟ್ಟು ಹಬ್ಬಕ್ಕೆ ಟೀಸರ್‌ ಗಿಫ್ಟ್‌ ನೀಡಿ ಭರ್ಜರಿ ಕುತೂಹಲ ಮೂಡಿಸಿದೆ. ಅದೀಗ ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದು ಲಾಂಚ್‌ ಆದ ನಾಲ್ಕು ಗಂಟೆಗಳಲ್ಲಿ 5 ಲಕ್ಷ ವೀಕ್ಷಣೆ ಪಡೆದಿತ್ತು. ಅದು ನಿಖಿಲ್‌ ಜನಪ್ರಿಯತೆಗೆ ಸಾಕ್ಷಿಯಾಯಿತು.ತೆಲುಗು ಚಿತ್ರ ರಂಗದ ಯುವ ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ಆಕ್ಷನ್‌ ಕಟ್‌ ಹೇಳಿರುವ ಚಿತ್ರ ಇದು. ನಿಖಿಲ್ ಕುಮಾರಸ್ವಾಮಿ ಅವರಿಗೆ ಇಲ್ಲಿ ನಾಯಕಿಯಾಗಿ ಕಶ್ಮಿರಾ ಪರದೇಶಿ ಜೋಡಿ. ಉಳಿದಂತೆ ಸಂಪದಾ, ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ಅನುಷಾ ರೈ ಇನ್ನೂ ಹಲವರು ನಟಿಸಿದ್ದಾರೆ.

ಟೀಸರ್‌ ಸದ್ದಿನ ಜತೆಗೀಗ ಅವಗು ಗ್ರಾಂಡ್‌ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ಕೂಡ ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.ಇದೊಂದು ಸಲ ಸರಳವಾಗಿ ಅಚರಿಸಿಕೊಳ್ಳುವುದಕ್ಕೆ ನಿಖಿಲ್‌ ಅವರಿಗೇನಾಗಿತ್ತು ಅಂತ ಕೆಲವರು ಕಾಮೆಂಟ್‌ ಹಾಕಿದ್ದಾರೆ.ಮತ್ತೆ ಕೆಲವರು ಈಗೇನು ಕೊರೋನಾ ಇದೀಯಾ ಅಂತ ಕಾಮೆಂಟ್‌ ಹಾಕಿದವರನ್ನು ಪ್ರಶ್ನಿಸುವ ಮೂಲಕ ನಿಖಿಲ್‌ ಪರವಹಿಸಿರುವುದು ವಿಚಿತ್ರವಾಗಿದೆ.

Categories
ಸಿನಿ ಸುದ್ದಿ

ಇನ್ಮುಂದೆ ಬೇರ್‌ ಬಾಡಿ ತೋರಿಸಲ್ಲ ಅಂದ್ರು ವಿನೋದ್‌ ಪ್ರಭಾಕರ್

ಹೀಗೆ ಹೇಳಲು ಕಾರಣ ಇಲ್ಲಿದೆ…

ಕನ್ನಡದಲ್ಲಿ ಸದ್ಯದ ಮಟ್ಟಿಗೆ ಬೇರ್‌ಬಾಡಿ ಹೀರೋ ಅಂದಾಕ್ಷಣ, ನೆನಪಾಗೋದೇ ವಿನೋದ್‌ ಪ್ರಭಾಕರ್.‌ ಏಯ್ಟ್‌ ಪ್ಯಾಕ್‌ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿನೋದ್‌ ಪ್ರಭಾಕರ್‌, ತಮ್ಮ ಸಿನಿಮಾಗಳಲ್ಲಿ ಬೇರ್‌ಬಾಡಿ ಮೂಲಕವೇ ಸುದ್ದಿಯಾದವರು. ವಾವ್‌ ಎ ಬಾಡಿ ಎಂಬ ಉದ್ಘಾರಕ್ಕೂ ಕಾರಣರಾದವರು. ಇದೀಗ ಸುದ್ದಿಯೊಂದನ್ನು ಹೊರ ಬಿಟ್ಟಿದ್ದಾರೆ.

ಅದು ಬೇರೇನೂ ಅಲ್ಲ, ವಿನೋದ್‌ ಪ್ರಭಾಕರ್‌ ಇನ್ಮುಂದೆ ಬೇರ್‌ ಬಾಡಿ ಮಾಡೋದಿಲ್ಲ. ಇದೇ ಈ ಹೊತ್ತಿನ ಸುದ್ದಿ. ಹೌದು, ಈ ವಿಷಯವನ್ನು ಸ್ವತಃ ವಿನೋದ್‌ ಪ್ರಭಾಕರ್‌ ಅವರೇ ಹೇಳಿಕೊಂಡಿದ್ದಾರೆ. ಹೀಗೆ ಹೇಳಿದ್ದು “ಶ್ಯಾಡೊ” ಪತ್ರಿಕಾಗೋಷ್ಠಿಯಲ್ಲಿ. ಹಾಗಾದರೆ ವಿನೋದ್‌ ಪ್ರಭಾಕರ್‌ ಹೇಳಿದ್ದೇನು ಗೊತ್ತಾ?
ಅವರು “ರಗಡ್‌” ಚಿತ್ರಕ್ಕಾಗಿ ಏಯ್ಟ್‌ ಪ್ಯಾಕ್‌ ಮಾಡಿದ್ದರು. ತಮ್ಮ ಬೇರ್‌ ಬಾಡಿ ಮೂಲಕ ಜೋರು ಸುದ್ದಿಯಾಗಿದ್ದರು ಬಹುತೇಕ ಅವರ ಸಿನಿಮಾ ನಿರ್ದೇಶಕರು ವಿನೋದ್‌ ಪ್ರಭಾಕರ್ ಅವರ ಬೇರ್‌ ಬಾಡಿಯನ್ನೇ ತೋರಿಸಲು ಮುಂದಾದರು.

“ರಗಡ್‌” ಚಿತ್ರಕ್ಕೆ ಬೇರ್‌ ಬಾಡಿ ಮಾಡಿದ್ದ ವಿನೋದ್‌ ಪ್ರಭಾಕರ್‌, ಅವರಿಗೆ ನಮ್ಮ ಚಿತ್ರದಲ್ಲೂ ಮಾಡಿ ಅಂತ ಕೆಲ ನಿರ್ದೇಶಕರು ಹೇಳುತ್ತಿದ್ದಾರೆ. ಹಾಗೆ ಹೇಳಿದವರಲ್ಲಿ “ಶ್ಯಾಡೊʼ ಸಿನಿಮಾ ನಿರ್ದೇಶಕ ರವಿಗೌಡ್ರು ಕೂಡ. ಅವರ ಮಾತಿಗೆ ಓಕೆ ಅಂದ ವಿನೋದ್‌ ಪ್ರಭಾಕರ್‌ ಅವರು, ಅಲ್ಲೊಂದು ಸೀನ್‌ ಮಾಡಿದ್ದಾರೆ. ಆದರೆ, ಅದು ಬೇರ್‌ ಬಾಡಿ ಅಲ್ಲ, ಲೆನಿನ್‌ ಷರ್ಟ್‌ ಮೇಲೆಯೇ ತೋರಿಸುವ ಸೀನ್‌ ಅದು. ಈ ಕುರಿತು ಹೇಳುವ ವಿನೋದ್‌ ಪ್ರಭಾಕರ್‌, “ವರ್ಷಗಟ್ಟಲೆ ಅನ್ನ ನೀರು ಬಿಟ್ಟು, ವಾಟರ್‌ ಕಟ್‌ ಮಾಡಿ ದೇಹ ರೆಡಿಮಾಡಿಕೊಂಡಿದ್ದೇನೆ. ಉಪ್ಪು, ಖಾರ ಇಲ್ಲದೆ ನೀರಲ್ಲೇ ಜೀವಿಸಿದ್ದೇನೆ.

ಇದರಿಂದ ಬೋನ್ಸ್‌ಗೂ ಸಮಸ್ಯೆಯಾಗಿದ್ದುಂಟು. ನೋವು ಪಟ್ಟಿದ್ದುಂಟು. ವೈದ್ಯರು ಕೊನೆಗೆ ಚೆಕ್‌ ಮಾಡಿ, ಉಪ್ಪು-ಖಾರ ತಿನ್ನಿ ಅಂತ ಹೇಳಿದ್ರು. ನಮ್ಮದೂ ಹೊಟ್ಟೆ ಪಾಡಲ್ಲವೇ? ಕಷ್ಟ ಪಟ್ಟು ಹಾಗೆಲ್ಲಾ ಮಾಡಿಕೊಂಡಿದ್ದೇನೆ. ತುಂಬಾ ನೋವು ಅನುಭವಿಸಿದ್ದೂ ಇದೆ. “ವರದ” ಚಿತ್ರೀಕರಣ ಸಮಯದಲ್ಲಿ ಜಂಪ್‌ ಮಾಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದೇನೆ. ಹೀಗಾಗಿ ನಾನು ಇನ್ನು ಮುಂದೆ ಬೇರ್‌ ಬಾಡಿ ಮಾಡೋದಿಲ್ಲ ಎಂದು ತೀರ್ಮಾನಿಸಿದ್ದೇನೆ. ಬಾಡಿ ಫಿಟ್‌ ಆಗಿಟ್ಟುಕೊಂಡೇ ಕೆಲಸ ಮಾಡ್ತೀನಿ” ಎನ್ನುತ್ತಾರೆ ವಿನೋದ್‌ ಪ್ರಭಾಕರ್.‌


ಅವರ “ಶ್ಯಾಡೊ” ಚಿತ್ರ ಫೆಬ್ರವರಿ 5ರಂದು ರಿಲೀಸ್‌ ಆಗುತ್ತಿದೆ. ಈ ಕುರಿತು ಸಂತಸ ಪಡುವ ವಿನೋದ್‌ ಪ್ರಭಾಕರ್‌, ಹಾಗೆಯೇ ಬೇಸರವನ್ನೂ ಹೊರಹಾಕುತ್ತಾರೆ. “ಶ್ಯಾಡೊ” ಚಿತ್ರ 2018ರಲ್ಲಿ ಶುರುವಾಗಿದ್ದು, ರಿಲೀಸ್‌ ಈಗ ಆಗುತ್ತಿದೆ. ಸಿನಿಮಾ ಆಗೋಕೆ ಇಷ್ಟು ವರ್ಷ ಕಾದಿದ್ದೇವೆ. ಆದರೆ, ರಿಲೀಸ್‌ಗೆ ಕಾಯುತ್ತಿಲ್ಲ. ಸಡನ್‌ ಆಗಿ ಹದಿನೈದು ದಿನಗಳಲ್ಲೇ ರಿಲೀಸ್‌ ಮಾಡಿಬಿಟ್ಟರೆ ಹೇಗೆ? ಚಿತ್ರವನ್ನು ಪ್ರಚಾರ ಮಾಡಬಾರದೆ? ಈ ಪ್ರಶ್ನೆ ಅವರದು.


ಇನ್ನು ನನ್ನ ಈ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಸಲ ನರ್ತಕಿ ಥಿಯೇಟರ್ ನಲ್ಲಿ ನನ್ನ “ಶ್ಯಾಡೊ” ಚಿತ್ರ ರಿಲೀಸ್ ಆಗುತ್ತಿದೆ. ಇದು ನನ್ನ 19 ವರ್ಷಗಳ ಸಾಧನೆ ಅನ್ನಬಹುದು. ನಾನು ಪ್ರತಿ ಸಿನಿಮಾ ರಿಲೀಸ್ ವೇಳೆಯೂ ಥಿಯೇಟರ್ ಗೆ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ ಬಂದಿದ್ದೇನೆ. ಈ ಚಿತ್ರದ ಬಿಡುಗಡೆ ಸಂದರ್ಭದಲ್ಲೂ ಥಿಯೇಟರ್ ವಿಸಿಟ್ ಕೊಡ್ತೀನಿ” ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ನಮ್ಮೂರ ಆಸ್ಪತ್ರೆ, ನಮ್ಮ ಹೆಮ್ಮೆ- ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಥ್ಯಾಂಕ್ಸ್‌ ಹೇಳಿದ ನಟಿ!

 ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿಕೊಂಡು ಮಾತನಾಡಿರುವ ನಟಿ ಅಕ್ಷತಾ ಪಾಂಡವಪುರ

ರಂಗಭೂಮಿ ಕಲಾವಿದೆ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ನಟಿ ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಆಂದ್ರೆ, ಅವರು ಪಾಂಡವಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಆಗಿದ್ದಲ್ಲದೆ, ಅಲ್ಲಿನ ಸಿಬ್ಬಂದಿಯ ಸುರಕ್ಷಿತ ಆರೈಕೆಯಿಂದ ಮಗಳೊಂದಿಗೆ ಖುಷಿಯಿಂದ ಮನೆ ಸೇರಿದ್ದಾರೆ.

ಅದೇ ಸಂತೋಷದೊಂದಿಗೆ ಆಸ್ಪತ್ರೆ ಸಿಬ್ಬಂದಿಗಳಾದ ಡಾ. ಶಿಲ್ಪಾಶ್ರೀ, ಡಾ. ಪೃಥ್ವಿ, ಸಿಸ್ಟರ್‌ ಸೋಪಿಯಾ ರಾಣಿ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಕುಮಾರ್‌ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದೆಲ್ಲಕ್ಕಿಂತ ಇಂಪಾರ್ಟೆಂಟ್‌ ವಿಷಯ ಎನಂದ್ರೆ,  ಸರ್ಕಾರಿ ಆಸ್ಪತ್ರೆ ಅಂದ್ರೆ ಎಲ್ಲರಿಗೂ ತಾತ್ಸರ. ಅದರಲ್ಲೂ ನಟ-ನಟಿಯರು, ಸೆಲಿಬ್ರಿಟಿಗಳು ಅತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಅದಕ್ಕೆ ಕಾರಣ ಅಲ್ಲಿನ ಚಿಕಿತ್ಸಾ ಸೇವೆ ಸರಿಯಲ್ಲ ಎನ್ನುವ ಅಪನಂಬಿಕೆ. ಅದರಲ್ಲೂ ಹೆರಿಗೆ ವಿಷಯದಲ್ಲಾ…. ಅದೊಂದು ನರಕ ಅಂತಲೇ ಜನರ ಮಾತು.

ನಟಿ ಅಕ್ಷತಾ ಕೂಡ ಅವರದೇ ಊರಿನ ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆಗೆ ದಾಖಲಾಗುವೆ ಅಂತ ಹೇಳಿದಾಗ ಅವರಿಗೆ ಕೇಳಿ ಮಾತು ಒಂದಲ್ಲ, ಹಲವಾರು ಅಂತೆ.

ಮಕ್ಕಳ ವಿಷಯದಲ್ಲಿ ತಮಾಷೆನಾ ? ನಿಜವಾಗೂ ಸರ್ಕಾರಿ ಅಸ್ಪತ್ರೆ ಯೋಚ್ನೆ ಸರಿನಾ? ಎಷ್ಟೇ ವೆಚ್ಚವಾದರೂ ಸರಿ, ಒಳ್ಳೆಯ ಹಾಸ್ಪಿಟಲ್‌ ನಲ್ಲಿಯೇ ತೋರಿಸಬೇಕು.. ಕಾಸು ಕೊಟ್ಟಂತೆ ಕಜ್ಜಾಯ, ಎನೋ ಮಾಡೋಕೆ ಹೋಗಿ ಇನ್ನೇನೋ ಆದೀತು… ಸರ್ಕಾರಿ ಆಸ್ಪತ್ರೆನಲ್ಲಿ ಅಡ್ಡ ದಿಡ್ಡಿ ನಾರ್ಮಲ್‌ ಮಾಡಿ ಕಳಿಸ್ತಾರೆ, ಅದು ತೆಡೆದುಕೊಳ್ಳೋ ಶಕ್ತಿ ಇರ್ಬೇಕು, ಡಿಲಿವರಿ ಏನೋ ಆಗುತ್ತೆ ಮುಂದೆ ಮಗುವಿನ ಆರೈಕೆ , ಫೀಡಿಂಗ್‌ ಬಗ್ಗೆ ಎಲ್ಲಾ ಏನೂ ಹೇಳಲ್ಲ, ರೋಗಗಳು ಅಂದ್ರೆ ಸ್ವಲ್ಪನೂ ಕೇರ್‌ ಇಲ್ಲ, ಎಲ್ಲೋ ದುಡ್ಡು ಖರ್ಚು ಮಾಡ್ತೀವಿ, ಮಗು ಆಗುವಾಗ ಒಂದೊಳ್ಳೆ ಹಾಸ್ಪಿಟಲ್‌ ಬೇಡ್ವಾ…..

ಅವರು ಪಾಂಡವಪುರ ಸರ್ಕಾರಿ ಆಸ್ಪತ್ರೆನಲ್ಲೇ ಹೆರಿಗೆ ಅಂತ ಅಂದಾಗ ಇಂತಹ ಸಾಕಷ್ಟು ಮಾತು ಅವರ ಕಿವಿಗೆ ಕೇಳಿದವಂತೆ. ಆದರೆ ಅದ್ಯಾವುದಕ್ಕೂ ಅವರು ಭಯ ಪಡದೆ, ಸರ್ಕಾರಿ ಆಸ್ಪತ್ರೆಗೇ ದಾಖಲಾದ್ರಂತೆ.  ಆದರೆ ಅಲ್ಲಿಗೆ ಹೋದಾಗ ಅವರಿಗೆ ಅಲ್ಲಿನ ಸಿಬ್ಬಂದಿ ಕಾಳಜಿ ಕಂಡು ಖುಷಿ ಆಯಿತ್ತಂತೆ. “ ಇವೆಲ್ಲದರ ಮದ್ಯೆ ಅಂತೂ ಇಂತೂ ನಮ್ಮ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ ಅಂತಾ ಹೇಳಬಲ್ಲೇ ಅಂದ್ರೆ ಅದಕ್ಕೆ ಇಡೀ ಸಿಬ್ಬಂದಿವರ್ಗವೇ ಕಾರಣ. ಅವರೆಲ್ಲರಿಗೂ ಧನ್ಯವಾದಗಳು ಅಂತ ಇದಿಷ್ಟು ಮಾಹಿತಿಯನ್ನು ನಟಿ ಅಕ್ಷತಾ ಪಾಂಡವಪುರ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಖುಷಿಗಾದರೂ, ಇತರ ಕಲಾವಿದರಿಗೂ  ಕೂಡ ಪ್ರೇರಣೆಯಾಗಲಿ. ಆ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿ.

error: Content is protected !!