Categories
ಸಿನಿ ಸುದ್ದಿ

ಕನ್ನಡ ಕಿರುತೆರೆಯಲ್ಲಿ ರಮ್ಯಕೃಷ್ಣ ‘ನಾಗಭೈರವಿ’ ಫ್ಯಾಂಟಸಿ ಸರಣಿಯಲ್ಲಿ ಶಿವಗಾಮಿ!

 ರಮ್ಯಕೃಷ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. ತೊಂಬತ್ತರ ದಶಕದಲ್ಲಿ ನಾಯಕಿಯಾಗಿ ಮಿಂಚಿದ ಅವರು ಇದೀಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರ ಅವರಿಗೆ ದೊಡ್ಡ ಮನ್ನಣೆ ತಂದುಕೊಟ್ಟಿತ್ತು. ಸಿನಿಮಾ ಜೊತೆಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ನಟಿ ಇದೀಗ ಕನ್ನಡ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ‘ನಾಗಭೈರವಿ’ ತೆಲುಗು ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಧಾರಾವಾಹಿಯ ಕನ್ನಡ ಅವತರಣಿಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.

ಕಳೆದ ವರ್ಷಾಂತ್ಯದಲ್ಲಿ ತೆಲುಗಿನಲ್ಲಿ ಪ್ರಸಾರವಾದ ‘ನಾಗಭೈರವಿ’ ಇದೀಗ ಕನ್ನಡಕ್ಕೆ ಬರುತ್ತಿದೆ. ವರನಾಂಜನೇಯುಲು ನಿರ್ದೇಶನದ ಈ ಸರಣಿ ತೆಲುಗು ನಾಡಿನಲ್ಲಿ ಜನಪ್ರಿಯವಾಗಿದೆ. ಇದೀಗ ಮಾರ್ಚ್‌ 1ರಿಂದ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇದು ಫ್ಯಾಂಟಸಿ, ಸಸ್ಪೆನ್ಸ್‌ ಸರಣಿ. ಅದ್ಧೂರಿ ಮೇಕಿಂಗ್‌, ಆಕರ್ಷಕ ವಿಶ್ಯುಯಲ್‌ ಎಫೆಕ್ಟ್‌ ಇಲ್ಲಿನ ಹೈಲೈಟ್‌. ದೇಶದಲ್ಲಿ ನಾಗದೇವತೆ ಕುರಿತ ನಂಬಿಕೆ ಸುತ್ತಮುತ್ತ ಕತೆ ಹೆಣೆಯಲಾಗಿದೆ. ಪ್ರಾಚೀನ ಆರೋಗ್ಯ ಗ್ರಂಥ ಚರಕ ಸಂಹಿತಾ ಕುರಿತೂ ಇಲ್ಲಿ ಪ್ರಸ್ತಾಪವಾಗಲಿದೆ.

ನಟಿ ರಮ್ಯಾ ಕೃಷ್ಣ ಅವರು ಕನ್ನಡಿಗರಿಗೆ ಚಿರಪರಿಚಿತ ನಟಿ. ಎಂಬತ್ತರ ದಶಕದ ಕೊನೆಯಲ್ಲಿ ತೆರೆಕಂಡ ‘ಕೃಷ್ಣರುಕ್ಮಿಣಿ’ ಚಿತ್ರದೊಂದಿಗೆ ಕನ್ನಡ ಬೆಳ್ಳಿತೆರೆ ಪ್ರವೇಶಿಸಿದ ಅವರು ಗಡಿಬಿಡಿ ಗಂಡ, ಮಾಂಗಲ್ಯಂ ತಂತು ನಾನೇನಾ, ಸ್ನೇಹ, ಏಕಾಂಗಿ, ಬಾ ಬಾರೋ ರಸಿಕ, ರಕ್ತಕಣ್ಣೀರು, ರಾಜಾ ನರಸಿಂಹ, ಮಾಣಿಕ್ಯ, ಅಂಜನೀಪುತ್ರ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಶಿವಗಾಮಿ’ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ.

Categories
ಸಿನಿ ಸುದ್ದಿ

ದಿನಕರ್ ನಿರ್ದೇಶನದಲ್ಲಿ ಪುನೀತ್‌!? ಅಪ್ಪು ಜೊತೆ ಒಂದ್ ಸೆಲ್ಫಿಗೆ ರೆಡಿನಾ ದಚ್ಚು ಬ್ರದರ್?

ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್‌ ರಾಜಕುಮಾರ್ ನಟಿಸುತ್ತಾರೆ ಎನ್ನುವುದು ಹಳೆಯ ವದಂತಿಗೆ ರೆಕ್ಕೆ-ಪುಕ್ಕ ಮೂಡಿದೆ. ಗಾಂಧಿನಗರದ ಮೂಲಗಳ ಪ್ರಕಾರ ಪುನೀತ್‌ಗೆ ದಿನಕರ್ ಚಿತ್ರಕಥೆ ಹೆಣೆಯುತ್ತಿರುವುದು ಹೌದು! ‘ಲೈಫ್ ಜೊತೆ ಒಂದ್ ಸೆಲ್ಫಿ’ ಸಿನಿಮಾ ನಂತರ ದಿನಕರ್ ಅವರು ಪುನೀತ್‌ಗಾಗಿ ಸ್ಕ್ರಿಪ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ‘ಜೊತೆ ಜೊತೆಯಲಿ’ ಹಿಟ್ ಚಿತ್ರದೊಂದಿಗೆ ನಿರ್ದೇಶಕನಾಗಿ ಗುರುತಿಸಿಕೊಂಡ ದಿನಕರ್‌ ತಮ್ಮ ಸಹೋದರ ದರ್ಶನ್‌ಗೆ ಮಾಡಿದ ‘ಸಾರಥಿ’ ಸೂಪರ್‌ಹಿಟ್ ಆಗಿತ್ತು. ‘ನವಗ್ರಹ’ ಅವರ ಮತ್ತೊಂದು ಯಶಸ್ವೀ ಸಿನಿಮಾ.

ಮುಂದೆ ದಿನಕರ್‌ ಸಾಕಷ್ಟು ಸಮಯದ ನಂತರ ‘ಲೈಫ್ ಜೊತೆ ಒಂದ್ ಸೆಲ್ಫಿ’ ನಿರ್ದೇಶಿಸಿದ್ದರು. ಪ್ರಜ್ವಲ್‌, ಪ್ರೇಮ್‌ ನಟಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು. ಇದೀಗ ದಿನಕರ್‌ ಗೆಲುವಿನ ನಿರೀಕ್ಷೆಯಲ್ಲಿದ್ದು, ಪುನೀತ್‌ ಜೊತೆಗಿನ ಪ್ರಾಜೆಕ್ಟ್‌ ಬಗ್ಗೆ ಕೆಲಸ ಮಾಡುತ್ತಿದ್ದಾರೆ.

ಸದ್ಯ ಪುನೀತ್‌ ‘ಜೇಮ್ಸ್‌’ ಚಿತ್ರೀಕರಣದಲ್ಲಿದ್ದಾರೆ. ಸಂತೋಷ್ ಆನಂದ್‌ರಾಮ್‌ ನಿರ್ದೇಶನದಲ್ಲಿ ಅವರು ನಟಿಸಿರುವ ‘ಯುವರತ್ನ’ ತೆರೆಕಾಣಬೇಕಿದೆ. ಇದಾದ ನಂತರವೂ ಹೊಂಬಾಳೆ ಬ್ಯಾನರ್‌ಗೆ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದ್ದು, ಆನಂತರ ದಿನಕರ್ ಸಿನಿಮಾ ಸೆಟ್ಟೇರಬಹುದು.

Categories
ಸಿನಿ ಸುದ್ದಿ

ಒನ್‌ ಶಾಟ್‌ ಮೂವಿ ರಕ್ತಗುಲಾಬಿ ಟೀಸರ್ ಬಂತು – ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಚಿತ್ರ

ಕನ್ನಡಕ್ಕೆ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಆ ಸಾಲಿಗೆ “ರಕ್ತ ಗುಲಾಬಿ” ಸಿನಿಮಾವೂ ಸೇರಿದೆ. ಹೊಸಬರ ಸಿನಿಮಾ ಇದಾಗಿದ್ದರೂ, ಈ ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ಹೌದು, ಇದು ಒನ್‌ ಟೇಕ್‌ ಸಿನಿಮಾ. ಅಷ್ಟೇ ಅಲ್ಲ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೂ ಸೇರಿದೆ. ಅಷ್ಟೇ ಅಲ್ಲ, ಗಿನ್ನಿಸ್‌ ದಾಖಲೆಗೂ ತಯಾರಾಗಿದೆ. ಅಂದಹಾಗೆ, ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್‌ ೩ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಸ್ಪೆಷಲ್‌ ಅಂದರೆ, ಎಲ್ಲರೂ ಇಲ್ಲಿ ಹೊಸಬರೇ. ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಾಂತ್ರಿಕ ವರ್ಗ ಹೀಗೆ ಪ್ರತಿಯೊಬ್ಬರಿಗೂ ಇದು ಹೊಸತು. ಈ ಚಿತ್ರದ ಮೂಲಕ ರಾಬಿ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಮಿಷನ್‌ ಕಾಡ್‌ ಫಿಲಂಸ್‌ ಮೂಲಕ ಈ ಚಿತ್ರ ತಯಾರಾಗಿದ್ದು, ಸದ್ಯ ಬಿಡುಗಡೆಯನ್ನು ಎದುರು ನೋಡುತ್ತಿದೆ.


ತಮ್ಮ ಸಿನಿಮಾ ಕುರಿತು ಹೇಳಿಕೊಂಡು ನಿರ್ದೇಶಕ ರಾಬಿ, “ಈ ಸಿನಿಮಾ ಶುರುವಾಗಿದ್ದೇ ಒಂದು ರೋಚಕ. ಒನ್‌ ಟೇಕ್‌ ಸಿನಿಮಾ ಅಂದರೆ ಸುಲಭವಲ್ಲ. ಇದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡೇ ಕೆಲಸಕ್ಕಿಳಿದೆವು. ಸಿನಿಮಾಗೂ ಮುನ್ನ, ಮೂರ್ನಾಲ್ಕು ದಿನಗಳ ಕಾಲ ಅಭ್ಯಾಸ ನಡೆಸಿದ ನಂತರವೇ ಅಂತಿಮವಾಗಿ ಚಿತ್ರೀಕರಣ ಮಾಡಿದ್ದೇವೆ. ಇಲ್ಲಿ ಕಮರ್ಷಿಯಲ್‌ ಅಂಶಗಳೂ ಇವೆ. ಸಿನಿಮಾ ಕಥೆ ಬಗ್ಗೆ ಹೇಳುವುದಾದರೆ, “ಸಾಮಾಜಿಕ ವ್ಯವಸ್ಥೆಯಿಂದ ಮನ ನೊಂದ ಯುವಕನೊಬ್ಬ ತನಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೊಂದು ವ್ಯವಸ್ಥೆಯತ್ತ ಮುಖ ಮಾಡುತ್ತಾನೆ. ಇದರ ನಡುವೆ ಸಣ್ಣ ಪ್ರೀತಿಯೊಂದು ಅರಳುತ್ತದೆ. ತನ್ನ ಪ್ರiತಿ ಉಳಿಸಿಕೊಳ್ಳೋಕೆ, ಅವನು ಬೇರೆ ಕಡೆ ಪಯಣ ಬೆಳೆಸಲು ಹೊಡುತ್ತಾನೆ. ಈ ವೇಳೆ ಅವನಿಗೆ ಎದುರಾಗುವ ಸಮಸ್ಯೆಗಳು ಏನು? ಎಂಬುದು ಒನ್‌ಲೈನ್.‌ ಇದು ಸಂಪೂರ್ಣ ಸಕಲೇಶಪುರ ಸಮೀಪದ ಕಾಡಿನ ಸುತ್ತಮುತ್ತ ನಡೆದಿದೆ.

ಸುಮಾರು ಹತ್ತು ಕಿಲೋ ಮೀಟರ್‌ ಸುತ್ತಮುತ್ತ ಒನ್‌ ಟೇಕ್‌ನಲ್ಲೇ ಸಿನಿಮಾ ಮಾಡಲಾಗಿದೆ. ಇಲ್ಲಿ ಕಮರ್ಷಿಯಲ್ ಅಂಶಗಳೂ ಇವೆ. ಇನ್ನು, ಚಿತ್ರಕ್ಕೆ ವಿಕ್ರಮಾದಿತ್ಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಜಾನರ್‌ ಸಿನಿಮಾ. ಚಿತ್ರದ ಅಂತ್ಯದಲ್ಲಿ ನಾಯಕಿಯ ಪಾತ್ರದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಅದನ್ನು ಸಿನಿಮಾದಲ್ಲೇ ನೋಡಬೇಕುʼ ಎಂಬುದು ನಿರ್ದೇಶಕರ ಮಾತು.


ಒನ್‌ ಟೇಕ್‌ ಸಿನಿಮಾ ಆಗಿದ್ದರಿಂದ ಇಲ್ಲಿ ಮೊದಲೇ ಪ್ಲಾನ್‌ ಮಾಡಿಕೊಂಡಿದ್ದೆವು. ಇಲ್ಲಿ ಸುಮಾರು ೪೫ ಜನರ ತಂಡ ಕೆಲಸ ಮಾಡಿದೆ. ತೆರೆಯ ಮೇಲೆ ಹದಿನೈದು ಕಲಾವಿದರು ನಟಿಸಿದ್ದಾರೆ. ಅವರೆಲ್ಲರೂ ಬಲು ತೂಕದ ಗನ್, ಬ್ಯಾಗ್‌ಗಳನ್ನು ಹೊತ್ತುಕೊಂಡು ಓಡೋಡಿ ಹೋಗೋವುದು ಕಷ್ಟಕರವಾಗಿತ್ತು. ಎಲ್ಲರಿಗೂ ಕೂಡ ಈ ಚಿತ್ರ ಚಾಲೆಂಜಿಂಗ್‌ ಆಗಿತ್ತು ಎನ್ನುತ್ತಾರೆ ರಾಬಿ.

ಇಂಡಿಯಾ ಬುಕ್‌ ಆಫ್ ರೆಕಾರ್ಡ್‌
ಈ ಸಿನಿಮಾ ಹಲವು ದಾಖಲೆಗೆ ಕಾರಣವಾಗುತ್ತಿದೆ. ಈಗಾಗಲೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾಗಿದೆ. ಇನ್ನುಳಿದಂತೆ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಹಾಗೂ ಗಿನ್ನಿಸ್‌ ದಾಖಲೆಗೂ ನೋಂದಣಿಯಾಗಿದೆ ಎಂಬುದು ವಿಶೇಷ. ಒನ್‌ ಟೇಕ್‌ ಸಿನಿಮಾ ಮಾಡಿದ ಬಳಿಕ ಯಾಕೆ ಈ ಚಿತ್ರವನ್ನು ದಾಖಲು ಮಾಡಬಾರದು ಎಂಬ ಪ್ರಶ್ನೆ ಎದುರಾದ ಬಳಿಕ ನಿರ್ದೇಶಕರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಕಳುಹಿಸಿದ್ದಾರೆ.

ಎಲ್ಲಾ ದಾಖಲೆ ಪರಿಶೀಲಿಸಿದ ಬಳಿಕ ಅಲ್ಲಿಂದ ಗ್ರೀನ್‌ ಸಿಗ್ನಲ್‌ ಸಿಕ್ಕೆ ಎನ್ನುವ ತಂಡ ಇದೊಂದು, ಕ್ರೌರ್ಯದ ಜೊತೆ ಪ್ರೀತಿಯ ಅಂಶಗಳನ್ನು ಹೊಂದಿದೆ. ನಾಯಕ ವಿಕ್ರಮಾದಿತ್ಯ ಅವರಿಗೆ ಇದೊಂದು ಒಳ್ಳೆಯ ಅವಕಾಶ. ನಮ್ಮಂತಹ ಕಿರಿಯರಿಗೆ, ರಂಗಭೂಮಿ ಕಲಾವಿದರನ್ನ ಗುರುತಿಸಿ ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂಬುದು ಅವರ ಮಾತು. ಇನ್ನು, ನಾಯಕಿ ಶಿವಾನಿ ಕೂಡ ತಮ್ಮ ಪಾತ್ರದ ಕುರಿತು ಹೇಳಿಕೊಂಡು ಖುಷಿಗೊಳ್ಳುತ್ತಾರೆ. ನಿರ್ಮಾಪಕ ಲೋಹಿತ್ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು. ಪ್ರಜೋತ್‌ ಡೇಸಾ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರದಲ್ಲಿ ಮಾಣಿಕ್ಯ.ಜಿ.ಎನ್, ವಿನೋಧ್‌ಕುಮಾರ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಆನ್‌ಸ್ಕ್ರೀನ್‌ -ಆಫ್‌ಸ್ಕ್ರೀನ್‌ ಬೆಸ್ಟ್‌ ಫೇರ್‌, “ಲವ್‌ ಮಾಕ್ಟೆಲ್‌ʼ ಜೋಡಿಗೆ ಸಿಕ್ಕಿತು ಬೆಸ್ಟ್‌ ಅವಾರ್ಡ್‌ !

ಸ್ಯಾಂಡಲವುಡ್‌ನಲ್ಲಿ ಸದ್ಯಕ್ಕೆ ಹೆಚ್ಚು ಸುದ್ದಿಯಲ್ಲಿರುವ ತಾರಾ ಜೋಡಿ ಅಂದ್ರೆ ಕ್ರಿಸ್ಮಿ. ಅಂದ್ರೆ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್. ʼಲವ್‌ ಮಾಕ್ಟೆಲ್‌ʼ ಚಿತ್ರದ ಮೂಲಕ ಆನ್‌ ಸ್ಕ್ರೀನ್‌ ಮೇಲೆ ಪ್ರೇಕ್ಷಕರನ್ನು ಭರ್ಜರಿ ಮೋಡಿ ಮಾಡಿದ್ದ ಈ ಜೋಡಿ ಆಫ್‌ ಸ್ಕ್ರೀನ್‌ ನಲ್ಲೂ ಬೆಸ್ಟ್‌ ಫೇರ್‌ ಅಂತ ಗೊತ್ತಾಗಿದ್ದೇ ಲವ್‌ ಮಾಕ್ಟೆಲ್‌ ನ ಭರ್ಜರಿ ಸಕ್ಸಸ್‌ ಕಂಡ ನಂತರವೇ. ಆ ಗೆಲುವಿನಲ್ಲೇ ಈ ಫೇರ್‌ ತಮ್ಮ ಲವ್‌ ನ್ಯೂಸ್‌ ರಿವೀಲ್‌ ಮಾಡಿತು. ಅಲ್ಲಿಂದ ಫೆ.೧೪ ಲವರ್ಸ್‌ ಡೇ ದಿನವೇ ವಿವಾಹವಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಒಂದೆಡೆ ಆನ್‌ಸ್ಕ್ರೀನ್‌ , ಮತ್ತೊಂದೆಡೆ ಆಫ್‌ ಸ್ಕ್ರೀನ್‌ ಎರಡು ಕಡೆಗಳಲ್ಲೂ ಅದ್ಭುತ ಜೋಡಿ ಅಂತಲೇ ಸುದ್ದಿಯಲ್ಲಿದ್ದ ಈ ಜೋಡಿಗೆ ಈಗ ಅಧಿಕೃತವಾಗಿಯೇ ಎರಡು ಕಡೆಗಳಲ್ಲೂ ಬೆಸ್ಟ್‌ ಫೇರ್‌ ಅವಾರ್ಡ್‌ ಸಿಕ್ಕಿದೆ. ಆ ಅವಾರ್ಡ್‌ ಕೊಟ್ಟಿದ್ದು ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ.

ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಮೊಟ್ಟ ಮೊದಲ ಪ್ರಶಸ್ತಿ. ಕನ್ನಡ ಚಿತ್ರರಂಗದಲ್ಲಿ ಯಶ್-ರಾಧಿಕಾ, ದಿಗಂತ್‌ -ಐಂದ್ರಿತಾ ಅವರದ್ದು ಕೂಡ ಲವ್‌ ಮ್ಯಾರೇಜ್‌ ಆಗಿದ್ದರೂ ಇಂತಹದೊಂದು ಪ್ರಶಸ್ತಿ ಈ ಜೋಡಿಗೆ ಇದುವರೆಗೂ ಸಿಕ್ಕಿಲ್ಲ. ಹಾಗಂತ ಈ ಜೋಡಿಗೆ ಜನಪ್ರಿಯತೆ ಇಲ್ಲ ಅಂತಲ್ಲ. ಅವರಿಗೂ ದೊಡ್ಡ ಜನಪ್ರಿಯತೆ ಇದ್ದರೂ ಒಂದು ಸಿನಿಮಾ ಮೂಲಕ ದೊಡ್ಡ ಸಕ್ಸಸ್‌ ಕಂಡು ಆ ಮೂಲಕವೇ ಆಫ್‌ ಸ್ಕ್ರೀನ್‌ ನಲ್ಲೂ ಜನಪ್ರಿಯತೆಯೊಂದಿಗೆ ಮದುವೆ ಆಗಿದ್ದು ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್.‌ ಹಾಗಾಗಿಯೇ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಈ ಬಾರಿ ಈ ಜೋಡಿಗೆ ಭಾನುವಾರ ( ಫೆ. 21) ದಂದು ಸಂಜೆ ಬೆಸ್ಟ್‌ ಫೇರ್‌ ಅವಾರ್ಡ್‌ ನೀಡಿತು.ಮದುವೆ ಮುಗಿಸಿಕೊಂಡು ಹನಿಮೂನ್‌ ಗೆ ಅಂತ ಮಾಲ್ಡೀವ್ಸ್‌ ಗೆ ಹಾರಿದ್ದ ಈ ಜೋಡಿ ಅಲ್ಲಿಂದ ವಾಪಸ್‌ ಬಂದು ಅಟೆಂಡ್‌ ಮಾಡಿದ ಮೊದಲ ಕಾರ್ಯಕ್ರಮ ಇದು. ನವದಂಪತಿಗಳಿಬ್ಬರು ಬ್ಯೂಟಿಫುಲ್‌ ಆಗಿ ರೆಡಿಯಾಗಿ ಬಂದಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದ ಆರಂಭದಿಂದ ಮುಕ್ತಾಯರದವರೆಗೂ ಮುಂಭಾಗದಲ್ಲೇ ಕುಳಿತು ಲವಲವಿಕೆಯಿಂದ ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ನಂದಲ್ಲಪ್ಪಾ ವಾಯ್ಸು ಅಂದ್ರು ಜಗ್ಗೇಶ್-‌ ಹಾಗಾದ್ರೆ ಜಗ್ಗೇಶ್‌ ಇನ್ನೊಬ್ಬ ಇದ್ದಾನಾ ಅಂತ ಪ್ರಶ್ನಿಸಿದ್ರು ದಚ್ಚು ಫ್ಯಾನ್ಸ್‌

ದರ್ಶನ್‌ ಕುರಿತು ಜಗ್ಗೇಶ್‌ ಮಾತನಾಡಿದ್ದರೆನ್ನಲಾದ ಆಡಿಯೋ ಸೋರಿಕೆ ಭಾರೀ ವಿವಾದ ಸೃಷ್ಟಿಸಿದೆ. ಸೋಮವಾರ ಮೈಸೂರಿನಲ್ಲಿ “ತೋತಾಪುರಿʼ ಚಿತ್ರೀಕರಣದಲ್ಲಿದ್ದಾಗ ದರ್ಶನ್‌ ಅಭಿಮಾನಿಗಳು ನಟ ಜಗ್ಗೇಶ್‌ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗದುಕೊಂಡ ಘಟನೆ ನಡೆದಿದೆ.ಜಗ್ಗೇಶ್‌ ಅವರಿಗೆ ಮುತ್ತಿಗೆ ಹಾಕಿದ್ದ ದರ್ಶನ್‌ ಅಭಿಮಾನಿಗಳು, ದರ್ಶನ್‌ ಅವರ ಬಗ್ಗೆ ಅದ್ಹೆಂಗೆ ಮಾತನಾಡಿದ್ದೀರಿ ನೀವು, ಈಗಲೇ ನೀವು ಕ್ಷಮೆ ಕೇಳಬೇಕು ಅಂತ ಒತ್ತಾಯಿಸಿದ್ದಲ್ಲದೆ, ಜಗ್ಗೇಶ್‌ ಅವರಿಗೆ ಧಿಕ್ಕಾರ ಕೂಗಿದರು. ಜಗ್ಗೇಶ್‌ ಅವರನ್ನು ಸುತ್ತುವರೆದುಕೊಂಡಿದ್ದ ದರ್ಶನ್‌ ಅಭಿಮಾನಿಗಳ ಮಾತುಗಳ ಅಬ್ಬರಕ್ಕೆ ಜಗ್ಗೇಶ್‌ ಕಕ್ಕಬಿಕ್ಕಿಯಾಗಿದ್ದರು. ಅದು ಹಾಗಲ್ಲ, ಹೀಗೆ ಅಂತ ಸ್ಪಷ್ಟನೆ ನೀಡಲು ಯತ್ನಿಸಿದರೂ, ನೀವು ಏನು ಹೇಳೋ ಹಾಗಿಲ್ಲ, ಕ್ಷಮೆ ಕೋರಲೇಬೇಕು ಅಂತ ಪಟ್ಟು ಹಿಡಿದರು.

ಒಂದ್ರೀತಿ ತೀರಾ ಇಕ್ಕಟ್ಟಿಗೆ ಸಿಲುಕಿದ ಜಗ್ಗೇಶ್‌ ಅವರಿಗೆ ಕ್ಞಮೆ ಕೇಳದೆ ಬೇರೆ ದಾರಿಯೇ ಸಿಗಲಿಲ್ಲ. ಅದು ನಂದಲ್ಲಪ್ಪಾ ವಾಯ್ಸು… ಇದಕ್ಕೂ ನಂಗೂ ಸಂಬಂಧ ಇಲ್ಲ. ಯಾರೋ ವಿಡಿಯೋ ಎಡಿಟರ್‌ ಹಾಗೆ ಮಾಡಿದ್ದಾನೆ. ಇಂಡಸ್ಟ್ರಿ ಹಾಳಾಗಿ ಹೋಯ್ತು. ಇಬ್ಬರ ನಡುವೆ ತಂದಿಕ್ಕಿ ಬಿಡುವ ಅಂತ ಇದೆಲ್ಲ ನಡೆದಿದೆ. ಇದರಲ್ಲಿ ರಾಜಕಾರಣ ನಡೆದಿದೆʼ ಅಂತ ಸ್ಪಷ್ಟನೆ ನೀಡಲು ಯತ್ನಿಸಿದಾಗ ದರ್ಶನ್‌ ಅಭಿಮಾನಿಗಳು ಕೂಗುತ್ತಲೇ ಇದ್ದರು.ದರ್ಶನ್‌ ಅಭಿಮಾನಿಗಳನ್ನೆಲಾದ ಆ ವ್ಯಕ್ತಿಗಳು ಮಾತ್ರ ಸಮಾಧಾನ ಆಗಲಿಲ್ಲ. ಇಲ್ಲ, ಅದು ನಿಮ್ದೆ ವಾಯ್ಸು…. ಹೆಂಗೇ ಹೇಳದ್ರಿ ಆ ರೀತಿ… ಅಮ್ಮನ್‌ ಅಂತೀರಾ..ಅಂತ ರೇಗಿದರು. ಆಯ್ತು ಬಿಡಪ್ಪಾ… ಅದು ನಂದೇ ವಾಯ್ಸು… ತಪ್ಪಾಯ್ತು ಅಂತ ಹೇಳಿದರು. ಆಗ ದರ್ಶನ್‌ ಅಭಿಮಾನಿಗಳೆನ್ನೆಲಾದ ಆ ಸುಮ್ಮನಾದರು. ಹೇಗೋ ತಪ್ಪಿಸಿಕೊಂಡ್ರೆ ಸಾಕು ಎನ್ನುವ ಹಾಗೆ ಜಗ್ಗೇಶ್‌ ಅಲ್ಲಿಂದ ಕಾಲ್ಕಿತ್ತರು.

Categories
ಸಿನಿ ಸುದ್ದಿ

ರಾಘಣ್ಣನ ಮನೆಗೆ ಜಗ್ಗೇಶ್‌; ವರನಟನ ನೆನಪು!

ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಚೇತರಿಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಟ ಜಗ್ಗೇಶ್ ಅವರು ರಾಘಣ್ಣನ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಆ ಕುರಿತು ಟ್ವಿಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಾಕಿ, “ರಾಘಣ್ಣನಿಗೆ ಆಯುರಾರೋಗ್ಯ ವೃದ್ಧಿಸಲಿ ಎಂದು ರಾಯರಲ್ಲಿ ನಾನು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ. ಅವರ ಈ ಫೋಟೋ, ಹಾರೈಕೆಗಳಿಗೆ ಅಭಿಮಾನಿಗಳು ಸ್ಪಂದಿಸುತ್ತಿದ್ದಾರೆ.

ನಟ ಜಗ್ಗೇಶ್ ಅವರು ವರನಟ ಡಾ.ರಾಜಕುಮಾರ್ ಅವರ ಪರಮ ಅಭಿಮಾನಿ. ಸಿನಿಮಾ ಸಮಾರಂಭಗಳು, ಟೀವಿ ರಿಯಾಲಿಟಿ ಶೋಗಳಲ್ಲಿ ಅವರು ಸಂದರ್ಭೋಚಿತವಾಗಿ ರಾಜಕುಮಾರ್‌ ಅವರ ಪ್ರಸ್ತಾಪ ಮಾಡದೇ ಇರುವುದಿಲ್ಲ. ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ವಿಚಾರಿಸಲೆಂದು ಮನೆಗೆ ಹೋಗಿದ್ದಾಗ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ರಾಜಕುಮಾರ್‌ ಜೊತೆಗೆ ತಾವು ಕಳೆದ ಸಂದರ್ಭಗಳನ್ನು ರಾಘಣ್ಣನವರೊಂದಿಗೆ ನೆನಪು ಮಾಡಿಕೊಂಡಿದ್ದಾಗಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಮನೆಯಲ್ಲಿ ರಾಘಣ್ಣನವರ ಪತ್ನಿ ಮಂಗಳಾ ಮತ್ತು ಪುತ್ರ ವಿನಯ್ ಸೇರಿದಂತೆ ಇತರೆ ಮನೆಮಂದಿಯೊಂದಿಗೆ ತೆಗೆದ ಫೋಟೋಗಳನ್ನು ಜಗ್ಗೇಶ್‌ ಶೇರ್ ಮಾಡಿದ್ದಾರೆ.

Categories
ಸಿನಿ ಸುದ್ದಿ

ಮಾಡುವ ಮನಸ್ಸಿದ್ದರೆ ಏನ್‌ ಬೇಕಾದರೂ ಮಾಡಬಹುದು – ಚಂದನವನ ಪ್ರಶಸ್ತಿ ಪ್ರದಾನ ಸಮಾರಂಭವೇ ಇದಕ್ಕೆ ಸಾಕ್ಷಿ

ಪ್ರಶಸ್ತಿ ಅಂದರೆ, ಅದೊಂದು ಹೆಮ್ಮೆ. ಶ್ರಮಕ್ಕೆ ಸಿಗುವ ಪ್ರತಿಫಲ. ಜವಾಬ್ದಾರಿ ಹೆಚ್ಚಿಸುವ ಕೆಲಸ. ಇನ್ನಷ್ಟು ಹುಮ್ಮಸ್ಸು ತುಂಬುವ ಪದ. ಒಬ್ಬ ಸಾಧಕನನ್ನು ಗುರುತಿಸಿ, ಪ್ರಶಸ್ತಿ ಕೊಟ್ಟರೆ ಅದಕ್ಕೊಂದು ಅರ್ಥ. ಅಂತಹ ಅರ್ಥಪೂರ್ಣ ಕೆಲಸವನ್ನು “ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ” ಮಾಡಿದೆ. ಹೌದು, ಎರಡನೇ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮ ಅದ್ಧೂರಿಯಾಗಿಯೇ ನಡೆದಿದೆ. ಸಿನಿಮಾ ಪತ್ರಕರ್ತ ಮಿತ್ರರೆಲ್ಲರೂ ಸೇರಿ ಕೊಡುವ ಈ ಕ್ರಿಟಿಕ್ಸ್‌ ಅವಾರ್ಡ್‌ ಎರಡನೇ ವರ್ಷವೂ ಅದ್ಭುತ ಯಶಸ್ಸು ಗಳಿಸಲು ಕಾರಣ, ಚಂದದ ಆಯೋಜನೆ.

ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೇಗೆಲ್ಲಾ ರೂಪುಗೊಳ್ಳಬೇಕು ಎಂಬ ಅರಿವು ಇದ್ದುದರಿಂದಲೇ ಕನ್ನಡ ಚಿತ್ರರಂಗದ ಕೆಲ ನಟ,ನಟಿಯರು, ತಾಂತ್ರಿಕ ವರ್ಗದವರು, ಸಿನಿಮಾರಂಗದ ಗಣ್ಯರು ಸಿನಿಮಾ ಪತ್ರಕರ್ತರ ಕೆಲಸವನ್ನು ಗುಣಗಾನ ಮಾಡಿದರು. ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿಯನ್ನು ಖುಷಿಯಿಂದಲೇ ಸ್ವೀಕರಿಸಿದವರಿಂದಲೂ ಸಿನಿಮಾ ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.


ಪ್ರಶಸ್ತಿ ಪ್ರದಾನ ಮಾಡುವುದು ದೊಡ್ಡ ಕೆಲಸವೇನಲ್ಲ ಅಂದುಕೊಂಡವರು ಬಹಳಷ್ಟು ಜನ ಇದ್ದಾರೆ. ಆದರೆ, ಅದನ್ನು ಆಯೋಜನೆ ಮಾಡಿದವರಿಗಷ್ಟೇ ಅದರ ಆಳ, ಅಳತೆ ಗೊತ್ತು. ಯಾವುದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದ್ದರೂ, ಒಂದಷ್ಟು ಗೊಂದಲಗಳು ಸಹಜ, ವಿರೋಧಗಳೂ ಸಾಮಾನ್ಯ. “ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿʼ ಕೊಡುವ ಅವಾರ್ಡ್‌ ಕೂಡ ಇದಕ್ಕೆ ಹೊರತಲ್ಲ. ಇಷ್ಟೆಲ್ಲಾ ವಿವಾದಗಳಿದ್ದರೂ, ಎರಡನೇ ವರ್ಷದ ಕ್ರಿಟಿಕ್ಸ್‌ ಅವಾರ್ಡ್‌ ಯಶಸ್ವಿಯಾಗಿದೆ.

ರಾಜ್ಯ ಸರ್ಕಾರ ಕೊಡುವ ಸಿನಿಮಾ ಅವಾರ್ಡ್‌ ಕೂಡ ನಾಲ್ಕು ವರ್ಷಗಳಿಂದ ನಡೆಯದೇ ನಿಂತಿದೆ. ಇಂತಹ ಸಂದರ್ಭದಲ್ಲೂ ಸಿನಿಮಾ ಪತ್ರಕರ್ತರು ಸೇರಿ ಕೊಡುವ ಕ್ರಿಟಿಕ್ಸ್‌ ಅವಾರ್ಡ್‌ ಎರಡನೇ ವರ್ಷ ಪೂರೈಸಿದ್ದು ಹೆಗ್ಗಳಿಕೆ. ಮಾಡುವ ಮನಸ್ಸಿದ್ದರೆ ಏನ್‌ ಬೇಕಾದರೂ ಮಾಡಬಹುದು. ಹಣಕಾಸು ಮುಖ್ಯವಲ್ಲ. ಮಾಡಬೇಕು ಅಂತ ಡಿಸೈಡ್‌ ಮಾಡಿದರೆ, ಅದು ಹೇಗೋ ನಡೆದು ಬಿಡುತ್ತೆ. ಮೊದಲು ಮಾಡುವ ಮನಸ್ಸು ಬೇಕಷ್ಟೇ. ಇಲ್ಲೀಗ ಚಂದನವನ ಫಿಲ್ಮ್‌ ಅಕಾಡೆಮಿ ಮಾಡಿದ್ದೂ ಕೂಡ ಅದನ್ನೇ. ರಾಜ್ಯ ಸರ್ಕಾರ ಘೋಷಣೆ ಮಾಡುವ ಪ್ರಶಸ್ತಿ ವಿರುದ್ಧ ಒಂದಷ್ಟು ಮಂದಿ ಕೋರ್ಟ್‌ ಮೆಟ್ಟಿಲೇರುತ್ತಾರೆ. ಪ್ರಶಸ್ತಿ ಸಿಗದ ಕೆಲವರು ಸಹಿಸಿಕೊಳ್ಳದೆ ವಿವಾದ ಎಬ್ಬಿಸುತ್ತಾರೆ.

ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ಕೋರ್ಟ್‌ಗೊಂದು ಸ್ಪಷ್ಟನೆ ಕೊಟ್ಟು, ಕೆಲಸವನ್ನು ಮಾಡಿ ಮುಗಿಸಬೇಕು. ವರ್ಷಗಟ್ಟಲೆ ಪ್ರಶಸ್ತಿ ವಿತರಿಸದೆ ಸುಮ್ಮನಾದರೆ, ಅಂತಹ ಪ್ರಶಸ್ತಿಗಳಿಗೂ ಅರ್ಥ ಬರೋದಿಲ್ಲ. ಕೆಲವರ ಧೋರಣೆಯಿಂದಾಗಿ‌ ಪ್ರಶಸ್ತಿ ವಿಷಯ ಕೋರ್ಟ್ ಮೆಟ್ಟಿಲೇರುತ್ತೆ. ಇದು ಸಿನಿಮಾ ಪ್ರಶಸ್ತಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ನೊಬೆಲ್‌ ಶಾಂತಿ ಪ್ರಶಸ್ತಿ ಇರಲಿ, ಜಾನಪೀಠ ಪ್ರಶಸ್ತಿ ಇರಲಿ, ಇನ್ಯಾವುದೇ ಪ್ರತಿಷ್ಠಿತ ಪ್ರಶಸ್ತಿಗಳೇ ಇರಲಿ, ವಿವಾದ ಇದ್ದೇ ಇರುತ್ತೆ. ಸಿನಿಮಾ ಪತ್ರಕರ್ತರು ಕೊಡುವ ಪ್ರಶಸ್ತಿಗಳಿಗೂ ಇಂತಹ ವಿವಾದ ಸಹಜವೇ. ಸಿನಿಮಾ ಪತ್ರಕರ್ತರು ಒಗ್ಗೂಡಿದ್ದರೂ, ಸಣ್ಣಪುಟ್ಟ ಸಮಸ್ಯೆಗಳಿವೆ. ಇದೆಲ್ಲದರ ಹೊರತಾಗಿಯೂ ಕ್ರಿಟಿಕ್ಸ್‌ ಅವಾರ್ಡ್‌ ಪಡೆದವರೆಲ್ಲರೂ ಒಂದಷ್ಟು ಭಾವುಕತೆಗೆ ಒಳಗಾದರು. ಅದಕ್ಕೆ ಕಾರಣವೂ ಇತ್ತು.

ರಘುಗೆ ಮೊದಲ ಅವಾರ್ಡ್

ಸಂಗೀತ ನಿರ್ದೇಶಕ, ಗಾಯಕ ರಘುದೀಕ್ಷಿತ್‌ ಅವರು ಈ ಬಾರಿ “ಲವ್‌ ಮಾಕ್ಟೇಲ್‌” ಚಿತ್ರದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರಿಟಿಕ್ಸ್‌ ಅವಾರ್ಡ್‌ ಪಡೆದ ರಘುದೀಕ್ಷಿತ್‌, “ತನ್ನ ಜೀವಮಾನದ ಮೊದಲ ಪ್ರಶಸ್ತಿ ಇದು” ಎಂದು ಪ್ರೀತಿಯಿಂದಲೇ ಹೇಳಿಕೊಂಡರು. ರಘುದೀಕ್ಷಿತ್‌ ಒಳ್ಳೆಯ ಹಾಡುಗಾರ, ಸಂಗೀತ ನಿರ್ದೇಶಕ, ಆದರೆ, ಅವರಿಗೆ ಬೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌ ಅವಾರ್ಡ್‌ ಸಿಕ್ಕಿರಲಿಲ್ಲ. ಪತ್ರಕರ್ತರ ಕ್ರಿಟಿಕ್ಸ್‌ ಅವಾರ್ಡ್‌ ಸಿಕ್ಕ ಖುಷಿಯನ್ನು ಹಂಚಿಕೊಂಡರು. ಅವರಷ್ಟೇ ಅಲ್ಲ, ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಜಿಮ್‌ ರವಿ‌ ಕೂಡ ತಮ್ಮ ಸಂತಸ ಹಂಚಿಕೊಂಡರು. ” ಅವರು ಬಾಡಿಬಿಲ್ಡರ್‌ ಆಗಿ ದೇಶ ವಿದೇಶಗಳಲ್ಲಿ ಗೆಲುವು ಪಡೆದವರು. ಹಲವು ಚಿನ್ನದ ಪದಕ ತಂದವರು.

ಜಿಮ್‌ ರವಿಗೆ ಮೊದಲ ವೇದಿಕೆ

ಅಷ್ಟೇ ಅಲ್ಲ, ನೂರಾರು ಚಿತ್ರಗಳಲ್ಲಿ ಖಳನಟರಾಗಿ, ಪೋಷಕ ಕಲಾವಿದರಾಗಿ ನಟಿಸಿದವರು. ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದವರು. ಜಿಮ್‌ ರವಿ, ಅವರಿಗೆ ಕ್ರಿಟಿಕ್ಸ್‌ ಅವಾರ್ಡ್‌ ವೇದಿಕೆ ಸಿಕ್ಕಿದ್ದು ಅದೇ ಮೊದಲಂತೆ. ಯಾವ ವೇದಿಕೆಯೂ ಸಿಕ್ಕಿರಲಿಲ್ಲ. ಇದು ನನ್ನ ಮೊದಲ ವೇದಿಕೆ. ಈ ಮೂಲಕ ನಾನು ಒಂದು ಅವಾರ್ಡ್‌ ನೀಡುತ್ತಿದ್ದೇನೆ ಅಂದರೆ, ಅದು ಕ್ರಿಟಿಕ್ಸ್‌ ಅವಾರ್ಡ್‌ ಕಲ್ಪಿಸಿಕೊಟ್ಟ ಅವಕಾಶದಿಂದ ಮಾತ್ರ” ಎಂದು ಭಾವುಕರಾದರು.

ಜಾಲಿ ಬಾಸ್ಟಿನ್‌ಗೇ ಮೊದಲ ಪ್ರಶಸ್ತಿ

ಇನ್ನು, ಸ್ಟಂಟ್‌ ಮಾಸ್ಟರ್‌ ಜಾಲಿಬಾಸ್ಟಿನ್‌ ಅವರಿಗೂ “ಪಾಪ್‌ ಕಾರ್ನ್‌ ಮಂಕಿ ಟೈಗರ್‌” ಚಿತ್ರದ ಸಾಹಸ ಸಂಯೋಜನೆಗಾಗಿ ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಅವರು, “ಸುಮಾರು ೯೦೦ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಈವರೆಗೂ ಬೆಸ್ಟ್‌ ಸ್ಟಂಟ್‌ ಮಾಸ್ಟರ್‌ ಅವಾರ್ಡ್‌ ಸಿಕ್ಕಿರಲಿಲ್ಲ. ಈಗ ಸಿನಿಮಾ ಪತ್ರಕರ್ತರು ಗುರುತಿಸಿ ಈ ಕ್ರಿಟಿಕ್ಸ್‌ ಅವಾರ್ಡ್‌ ನೀಡುತ್ತಿದ್ದಾರೆ. ಇದೊಂದು ಮರೆಯದ ಸಂಗತಿ ಅಂತ ಅವರೂ ಕೂಡ ಪ್ರಶಸ್ತಿ ಬಗ್ಗೆ ಕೊಂಡಾಡಿದರು.‌

ಸಿಂಬನಿಗೂ ಸ್ಪೆಷಲ್‌ ಅವಾರ್ಡ್

ಈ ವೇಳೆ ಪತ್ರಕರ್ತರು ಸೇರಿ ವಿಶೇಷ ಪ್ರಶಸ್ತಿಯೊಂದನ್ನು ಗುರುತಿಸಿ ಕೊಟ್ಟಿದ್ದು ವಿಶೇಷವೇ. ಸಾಮಾನ್ಯವಾಗಿ ಎಲ್ಲರೂ ನಟ,ನಟಿ, ಪೋಷಕ ಕಲಾವಿದರು, ತಾಂತ್ರಿಕ ವರ್ಗದವರಿಗೆ ಪ್ರಶಸ್ತಿ ಕೊಡುತ್ತಾರೆ. ಆದರೆ, ಪತ್ರಕರ್ತರು ಸೇರಿ ವಿಶೇಷ ಪ್ರಶಸ್ತಿ ನೀಡಿದ್ದು ಈ ಬಾರಿ ಗಮನಸೆಳೆಯಿತು. “ನಾನು ಮತ್ತು ಗುಂಡ” ಚಿತ್ರದಲ್ಲಿ ನಟಿಸಿದ್ದ ಸಿಂಬ ಎಂಬ ನಾಯಿಗೂ ಒಂದು ಪ್ರಶಸ್ತಿ ಕೊಟ್ಟು ಪ್ರೀತಿಗೆ ಪಾತ್ರವಾಯಿತು. ನಿಜಕ್ಕೂ ಇದೊಂದು ದಾಖಲೆಯೇ ಸರಿ. ಒಂದು ಪ್ರಾಣಿಯ ನಟನೆ ಗುರುತಿಸಿ, ಅದಕ್ಕೆ ತರಬೇತಿ ಕೊಟ್ಟವರನ್ನೂ ವೇದಿಕೆ ಕರೆದು ಪ್ರಶಸ್ತಿ ಕೊಟ್ಟಿದ್ದು ವಿಶೇಷವಾಗಿತ್ತು.

ಕ್ರಿಟಿಕ್ಸ್‌ ಅವಾರ್ಡ್‌ ಮುಂದಿನ ವರ್ಷ ಇನ್ನಷ್ಟು ವಿಶೇಷತೆಗಳೊಂದಿಗೆ ನಡೆಯಲಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕನ್ನಡದ ಎಲ್ಲಾ ಸೆಲೆಬ್ರಿಟಿಗಳೂ, ಸಿನಿಮಾ ಮಂದಿ ಕೈ ಜೋಡಿಸಬೇಕು. ಇನ್ನು, ತಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ಒಟ್ಟಿಗೆ ಕೆಲಸ ಮಾಡಿದರೆ, ಕ್ರಿಟಿಕ್ಸ್‌ ಅವಾರ್ಡ್‌ ಇನ್ನಷ್ಟು ಎತ್ತರಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ.

ಅಂದಹಾಗೆ, ಶ್ಯಾಮ್‌ ಪ್ರಸಾದ್‌, ಶರಣು ಹುಲ್ಲೂರು, ಶಶಿ ಪ್ರಸಾದ್‌, ಚಿತ್ರತಾರಾ ಮನು, ವಿಸಿಎನ್‌ ಮಂಜು, ಜಗದೀಶ್‌, ಮತ್ತು ಪತ್ರಕರ್ತ ಮಿತ್ರರು ಸೇರಿದಂತೆ ಪ್ರಚಾರಕರ್ತರಾದ ನಾಗೇಂದ್ರ, ಸುಧೀಂದ್ರ ವೆಂಕಟೇಶ್‌, ವಿಜಯಕುಮಾರ್‌, ವಾಸು ಕೂಡ ಕ್ರಿಟಿಕ್ಸ್‌ ಅಕಾಡೆಮಿಗೆ ಸಾಥ್‌ ನೀಡಿದ್ದರಿಂದ ಕಾರ್ಯಕ್ರಮ ಮತ್ತಷ್ಟು ರಂಗೇರಿತ್ತು.

Categories
ಸಿನಿ ಸುದ್ದಿ

ಸಂಗೀತ ನಿರ್ದೇಶಕರಾಗಿ ರಘು ದೀಕ್ಷಿತ್‌ ಪಡೆದ ಮೊದಲ ಪ್ರಶಸ್ತಿ ಇದು ?

ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅಂದ್ರೆ ಸಾಕು ತಕ್ಷಣ ನೆನಪಾಗೋದು ʼಸೈಕೋʼ ಚಿತ್ರದ ಮಾದೇಶ್ವರ ಹಾಡು. ಅದರ ಜತೆಗೆ ಗುಡು ಗುಡಿಯ ಸೇದಿ ನೋಡು….ಎನ್ನುವ ಜನಪ್ರಿಯ ಗೀತೆ. ಕನ್ನಡಿಗರಿಗೆ ಇಂತಹ ಜನಪ್ರಿಯ  ಹಾಡುಗಳ ಮಹಾಪೂರವನ್ನೇ ಉಣಬಡಿಸಿದ ಗಾಯಕ ರಘು  ದೀಕ್ಷಿತ್. ಹಾಗಂತ ಬರೀ ಹಾಡಿದ್ದು ಮಾತ್ರವಲ್ಲ, ಲೆಕ್ಕವಿಲ್ಲದಷ್ಟು  ಚಿತ್ರಗಳಿಗೆ, ಹಾಡುಗಳಿಗೆ  ಸಂಗೀತ ನೀಡಿದ ಖ್ಯಾತಿಯೂ  ಅವರದು. ಇಷ್ಟಾಗಿಯೂ ಅವರಿಗೆ  ಸಂಗೀತ ನಿರ್ದೇಶನದಲ್ಲಿ  ಇದುವರೆಗೂ ಒಂದೇ ಒಂದು ಪ್ರಶಸ್ತಿ ಸಿಕ್ಕಿಲ್ಲ. ಫಾರ್‌ ದಿ ಫಸ್ಟ್‌ ಟೈಮ್‌ ಅವರೀಗ ಸಂಗೀತ ನಿರ್ದೇಶಕರಾಗಿ ಒಂದು ಪ್ರಶಸ್ತಿ ಪಡೆದಿದ್ದಾರೆ. ಆ ಪ್ರಶಸ್ತಿ ಬೇರಾವುದು ಅಲ್ಲ, ಒನ್‌ ಅಂಡ್‌ ಒನ್ಲಿ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್.‌

‌ ಹೌದು, ಭಾನುವಾರ ನಡೆದ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ ಅವರು ಲವ್‌ ಮಾಕ್ಟೆಲ್‌ ಚಿತ್ರದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಪಾತ್ರವಾದರು.  ಪ್ರಶಸ್ತಿ ಸ್ವೀಕರಿಸಿ ಮಾತಿಗೆ ನಿಂತಾಗಲೇ ಗೊತ್ತಾಗಿದ್ದು ಸಂಗೀತ ನಿರ್ದೇಶನದಲ್ಲಿ ರಘು ದೀಕ್ಷಿತ್‌ ಇದುವರೆಗೂ ಯಾವುದೇ ಪ್ರಶಸ್ತಿ ಪಡೆದಿಲ್ಲ ಅಂತ. ಆ ವಿಚಾರವನ್ನು ಅವರೇ ಅಲ್ಲಿ ಬಹಿರಂಗ ಪಡಿಸಿದರು.

ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ”  ಕಣ್ಣ ಹನಿಯೊಂದು..ಕಣ್ಣಲ್ಲೆ ತೂಗಿʼ ಅಂತ ಹೇಳುತ್ತಾ ಕ್ರಿಟಿಕ್ ಅವಾರ್ಡ್ ವೇದಿಕೆ ಹತ್ತಿದವರು ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್‌.  ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ” ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡ ನನಗೆ ಕನ್ನಡದಲ್ಲಿ ಅವಾರ್ಡ್‌ ಗಳನ್ನು ಪಡೆದುಕೊಳ್ಳಲು ಅವಕಾಶ ಬಂದಿರೋದು ಖುಷಿ ತಂದಿದೆ. ನನ್ನ ಸಂಗೀತ ಪಯಣವನ್ನು ಗುರುತಿಸಿ, ಸಂಗೀತ ನಿರ್ದೇಶನಕ್ಕೆ ನೀಡಿರುವ ಗೌರವಕ್ಕೆ ಸದಾ ಋಣಿಯಾಗಿರುತ್ತೇನೆ. ನನ್ನ ಪ್ರತಿಭೆಯನ್ನು ಕನ್ನಡದವರೇ ಗುರುತಿಸಿದ ಹೆಮ್ಮೆ ನನಗಿದೆ. ಪತ್ರಕರ್ತರು ಅತ್ಯುತ್ತಮ ಸಂಗೀತ ನಿರ್ದೇಶಕ ಎನ್ನುವ ಅವಾರ್ಡ್‌ ನೀಡುವ ಮೂಲಕ ಗುರುತಿಸಿರುವುದು ಸಂತಸದ ವಿಚಾರ ಎನ್ನುತ್ತಾರೆ ರಘು ದೀಕ್ಷಿತ್.‌

Categories
ಸಿನಿ ಸುದ್ದಿ

ಮನುಷ್ಯನಲ್ಲದ ಸಿಂಬನಿಗೂ ಸಿಕ್ತು ಸಿನಿಮಾ ಪ್ರಶಸ್ತಿ, ಹೊಸ ದಾಖಲೆ ಬರೆಯಿತು ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ !

ಭಾರತೀಯ ಚಿತ್ರರಂಗದಲ್ಲೇ ಬಹುಶಃ ಇದು ಮೊದಲು. ಯಾಕಂದ್ರೆ, ಪ್ರಶಸ್ತಿ-ಪುರಸ್ಕಾರಗಳು ಅಂದ್ರೆ ಸಾಮಾನ್ಯವಾಗಿ ಮನುಷ್ಯರಿಗೆ ಮಾತ್ರವೇ ಎನ್ನುವುದು ನಿಮ್ಗೂ ಗೊತ್ತು. ಯಾವುದೇ ಕ್ಷೇತ್ರವಾಗಿರಲಿ ಅಲ್ಲಿ ಸಾಧನೆ ಮಾಡಿದವರಿಗೆ ಸಭೆ-ಸಮಾರಂಭಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿ ಸಿನಿಮಾದಲ್ಲಿ ಕಾಣಸಿಕೊಂಡ ಒಂದು ನಾಯಿಗೆ ವೇದಿಕೆ ಮೇಲೆಯೇ ಪ್ರಶಸ್ತಿ ನೀಡಿ ಗೌರವಿಸಿದ್ದು ತೀರಾ ತೀರಾ ಸ್ಪೆಷಲ್.‌

ಹೌದು, ಇಂತಹದೊಂದು ವಿಶೇಷತೆಗೆ ವೇದಿಕೆ ಆಗಿದ್ದು ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಪ್ರೋಗ್ರಾಮ್.‌ ಭಾನುವಾರ (ಫೆ. ೨೧) ಸಂಜೆ ಬೆಂಗಳೂರಿನ ಕಲಾವಿದರ ಸಂಘದ ರಾಜ್‌ ಕುಮಾರ್‌ ಸಭಾಂಗಣದಲ್ಲಿ ನಡೆದ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಲ್ಲಿ ಪ್ರೇಕ್ಷಕರ ಕಣ್ಮನ ಸೆಳೆದಿದ್ದು ನಾಯಿ ಸಿಂಬ. ಇದುʼ ನಾನು ಮತ್ತು ಗುಂಡ ʼಚಿತ್ರದಲ್ಲಿ ಕಾಣಿಸಿಕೊಂಡವನು ಇದೇ ನಾಯಿ ಸಿಂಬಾ.

ಗ್ರಹಿಕೆಯಲ್ಲಿ ನಾಯಿ ಮುಂಚೂಣಿಯ ಪ್ರಾಣಿ. ಗೊತ್ತಿಲ್ಲ, ತನಗೆ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಸಿಗಬಹುದು ಅನ್ನೋದು ಅದಕ್ಕೆ ಮೊದಲೇ ಗೊತ್ತಿತ್ತೋ ಏನೋ.. ಸಿಂಬಾ ಅವಾರ್ಡ್‌ ಘೋಷಣೆಗೂ ಮೊದಲೇ ಸಭಾಂಗಣಕ್ಕೆ ಹಾಜರಿದ್ದ. ಅದರ ಸುತ್ತ ಮುತ್ತ ಇಬ್ಬರು ‌ ಟ್ರೈನರ್ಸ್‌ಗಳು. ಅವರ ಅಕ್ಕ ಪಕ್ಕ ನೋಡುಗರು. ಮಜಾವಾಗಿತ್ತು ಸಿಂಬಾ ಎಂಟ್ರಿ.  ಆನಂತರದ್ದು ಇನ್ನೊಂದು ನೋಟ.ಮನುಷ್ಯತೇರ ಅವಾರ್ಡ್‌ ವಿಭಾಗದಲ್ಲಿ ಸಿಂಬಾ ನಿಗೆ ವೇದಿಕೆ ಮೇಲೆ ಪ್ರಶಸ್ತಿ ಘೋಷಿಸಲಾಯಿತು. ಪ್ರೇಕ್ಷಕರಿಗೆಲ್ಲ ಅಚ್ಚರಿ, ಸೋಜಿಗ. ಅಬ್ಬಾ ಇದೊಂದು ಒಳ್ಳೆಯ ಕೆಲಸ ಅಂತ ಎಲ್ಲರಿಂದಲೂ ಮೆಚ್ಚುಗೆ ಮಾತು. ಅಲಲ್ಲಿ ಗುಸು ಗುಸು ಕೇಳಿಸಿತು. ಕೊನೆಗೆ ಸಿಂಬಾಗೆ ಪ್ರಶಸ್ತಿ ಘೋಷಿಸಲು ಕ್ರಿಟಿಕ್ಸ್‌ ಅಕಾಡೆಮಿಯ ಶಾಮ್‌ ಬಂದರು. ಆಗ ಸಿಂಬಾ ವೇದಿಕೆ ಬಂದಿದ್ದೇ ಅದ್ಭುತವಾಗಿತ್ತು. ಕಪ್ಪು  ಕಲರ್‌‌ ಧರಿಸಿ ಮಿಂಚುತ್ತಿದ್ದ ಸಿಂಬಾ. ಆ ಮೇಲೆ ಅದಕ್ಕೆ ಪ್ರಶಸ್ತಿ ನೀಡಲು ಹಿರಿಯ ನಟಿ ಜಯಮಾಲಾ, ನಟ ಸಂಚಾರಿ ವಿಜಯ್‌ ಬಂದರು. ಅವರಿಬ್ಬರು ಕೊಟ್ಟ ಪ್ರಶಸ್ತಿಯನ್ನು ಸಿಂಬಾನ ಪರವಾಗಿ ಇಬ್ಬರು ಟ್ರೈನರ್ಸ್‌ ಹಾಗೂ ನಾನು ಮತ್ತು ಗುಂಡ ಚಿತ್ರದ ನಿರ್ದೇಶಕ ಶ್ರೀನಿವಾಸ್‌ ತಿಮ್ಮಯ್ಯ ವೇದಿಕೆ ಮೇಲಿದ್ದು ಪ್ರಶಸ್ತಿ ಸ್ವೀಕರಿಸಿದರು.

ಮುದ್ದಾದ ಸಿಂಬಾನಿಗೆ ಬಾ …ಮಗ ಅಂತಲೇ ಕರೆದು ಮುದ್ದು ಮಾಡಿದ ಜಯಮಾಲಾ ಅವರು, ಇದೊಂದು ವಿಶೇಷವಾದ ಸಂದರ್ಭ ಅಂತ ಪುಳಕಿಗೊಂಡರು. ಆನಂತರ ನಾನು ಮತ್ತು ಗುಂಡ ಚಿತ್ರದ ನಿರ್ದೇಶಕ ಶ್ರೀನಿವಾಸ್‌ ತಿಮ್ಮಯ್ಯ ಮಾತನಾಡಿ, ಈ ನಾಯಿಯನ್ನು ಸಿನಿಮಾಕ್ಕೆ ಸೆಲೆಕ್ಟ್‌ ಮಾಡಿಕೊಂಡಿದ್ದರ ಹಿನ್ನೆಲೆ ವಿವರಿಸಿದರು. “ ಇವತ್ತು ನಾಯಿಗೆ ಇರುವ ನಿಯತ್ತು ಮನುಷ್ಯನಿಗಿಲ್ಲ, ಆದ್ದರಿಂದ ಸಿನಿಮಾರಂಗದಲ್ಲಿ ಹೊಸ ರೀತಿಯ ಪ್ರಯೋಗ ಮಾಡೋಣ ಅಂತ ಯೋಚನೆಗೆ ಬಂದಿತ್ತು. ಮೂಖಪ್ರಾಣಿ ನಾಯಿಯನ್ನು ಬಳಸಿಕೊಂಡು ಸಿನಿಮಾ ಮಾಡಿದರೆ ಎಮೋಷನಲ್‌ ಆಗಿ ಜನರನ್ನು ತಲುಪಬಹುದು ಅನ್ನುವ ದೃಷ್ಟಿಯಿಂದ ಸಿನಿಮಾ ಹೊರ ತಂದೆವು. ಅದೇ ಕಾರಣಕ್ಕೆ ಜನ ಸಿನಿಮಾ ಮೆಚ್ಚಿಕೊಂಡರು. ಅದೇ ಕಾರಣಕ್ಕೆ ಈ ವೇದಿಕೆ ಏರುವ ಸಂದರ್ಭವೂ ಬಂತು ಎಂದು ಭಾವುಕರಾದರು.

Categories
ಸಿನಿ ಸುದ್ದಿ

ಸಾಮೂಹಿಕ ವಿವಾಹದ ಹಾಗೆ ಕಲಾವಿದರಿಗೆ ಪ್ರಶಸ್ತಿ ನೀಡುವುದು ಬೇಡ- ಹಿರಿಯ ನಟಿ ಜಯಮಾಲಾ ಬೇಸರ ವ್ಯಕ್ತಪಡಿಸಿದ್ದೇಕೆ?

ಕಲಾವಿದರಿಗೆ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭಗಳು ಸಾಮೂಹಿಕ ವಿವಾಹದ ಹಾಗೆ ಆಗುವುದು ಬೇಡ. ಆ ಪ್ರಶಸ್ತಿಗಳಿಗೂ ಒಂದು ಘನತೆ, ಗೌರವ ಬರಬೇಕಾದರೆ ಆಯಾ ವರ್ಷದ ಪ್ರಶಸ್ತಿಗಳನ್ನು ಅಂದೇ ನೀಡಿ… – ಹೀಗಂತ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದು ಹಿರಿಯ ನಟಿ ಹಾಗೂ ಮಾಜಿ ಸಚಿವೆ ಡಾ. ಜಯಮಾಲಾ. ಸಿನಿಮಾ ಪತ್ರಕರ್ತರು ನೀಡುವ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಅವರು ಭಾಗವಹಿಸಿ ಮಾತನಾಡಿದರು.

ರಾಷ್ಟ್ರ ಅಥವಾ ರಾಜ್ಯದಲ್ಲಿರುವ ಸಾಹಿತಿಗಳು, ಕಲಾವಿದರು ಜತೆಗೆ ಎಲ್ಲಾ ಕಲಾ ಪ್ರಕಾರಗಳೇ ನಿಜವಾದ ಅಮೂಲ್ಯ ಸಂಪತ್ತು.ಅವರನ್ನೇ ನಾವು ಗುರುತಿಸದೆ ಹೋದರೆ, ಆಯಾ ವರ್ಷದಲ್ಲಿ ಅವರಿಗೆ ಪ್ರಶಸ್ತಿ ನೀಡದೆ ಹೋದರೆ ನಿಜವಾದ ಪರಿಸ್ಥಿತಿ ಏನು? ಆಯಾ ವರ್ಷದ ಪ್ರಶಸ್ತಿ ಆಯಾ ವರ್ಷದಲ್ಲೇ ಕೊಡದೆ ಹೋದರೆ ಸಾಮೂಹಿಕ ವಿವಾಹದ ಹಾಗೆ ಎಲ್ಲರೂ ಒಂದೇ ವೇದಿಕೆಗೆ ಬಂದು ಪ್ರಶಸ್ತಿ ಜತೆಗೆ ಹಾರ ಹಾಕಿಸಿಕೊಂಡು ಅಲ್ಲಿಯೇ ಅವುಗಳನ್ನು ತೆಗೆದು ಬಿಸಾಕಿ ಹೋಗಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರಗಳು ಆಯಾ ವರ್ಷದ ಪ್ರಶಸ್ತಿಗಳನ್ನು ಅಂದೇ ಕೊಟ್ಟರೆ ಒಳ್ಳೆಯದು ಅಂತ ನಟಿ ಜಯಮಾಲ ಸಲಹೆ ಕೊಟ್ಟರು.ಚಂದನವನ ಫಿಲ್ಸ್‌ ಕ್ರಿಟಿಕ್ಸ್‌ ಅಕಾಡೆಮಿ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ ಅವರು, ಸರ್ಕಾರಗಳು ಮಾಡದ ಕೆಲಸವನ್ನು ಚಂದನವನ ಮಾಡುತ್ತಿದೆ. ಆಯಾ ವರ್ಷದ ಪ್ರಶಸ್ತಿಗಳಿಗೆ ಅಂದೇ ಕಲಾವಿದರನ್ನು ಗುರುತಿಸುವ ಕೆಲಸ ಆಗಬೇಕು. ಆಗ ಮಾತ್ರ ಪ್ರಶಸ್ತಿಗೂ ಗೌರವ ಬರುತ್ತೆ, ಜತೆಗೆ ಪ್ರಶಸ್ತಿ ಸ್ವೀಕರಿಸಿದವರಿಗೂ ಆದ್ಯತೆ ಸಿಗುತ್ತದೆ. ಈ ನಿಟ್ಟಿನಲ್ಲಿ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮ ಖುಷಿ ತಂದಿದೆ ಎಂದರು. ಇದೇ ವೇಳೆ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ನೀಡುವ ಈ ವರ್ಷದ ಅತ್ಯುತ್ತಮ ಪೋಷಕ ಪ್ರಶಸ್ತಿಗೆ ಪಾತ್ರವಾದ ನಟ ಅಚ್ಯುತ್‌ ಕುಮಾರ್‌ ಅವರಿಗೆ ಅಕಾಡೆಮಿ ಪರವಾಗಿ ಪ್ರಶಸ್ತಿ ನೀಡಿ ಗೌರವಿಸಿದರು. ಹಿರಿಯ ಪತ್ರಕರ್ತ ಕೆ.ಜೆ ಕುಮಾರ್‌ ಪ್ರಶಸ್ತಿ ವಿಜೇತ ಕಲಾವಿದರ ಹೆಸರು ಪ್ರಕಟಿಸಿದರು. ಜಿಮ್‌ ರವಿ ಕೂಡ ಹಾಜರಿದ್ದರು.

error: Content is protected !!