Categories
ಸಿನಿ ಸುದ್ದಿ

ಸಿನಿಮಾ ಜಗತ್ತಿಗೂ ಬಂತು ಬೈ ಒನ್‌- ಗೆಟ್‌ ಒನ್‌! ಡಿಫೆರೆಂಟ್‌ ಟೈಟಲ್‌ನ ಚಿತ್ರ

ಹೊಸ ಸಾಹಸಕ್ಕೆ ಇಳಿದ ಅವಳಿ  ಸಹೋದರರು,  ಸಾಥ್‌ ಕೊಟ್ಟ ಅನುಭವಿ ನಿರ್ದೇಶಕರು 

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದ ಚಿತ್ರಗಳ ಪೈಕಿ ಈಗ ಇದು ಒಂದು. ಆ ಚಿತ್ರದ ಹೆಸರು ಬೈ ಒನ್‌, ಗೆಟ್‌ ಒನ್.‌ ಕನ್ನಡದಲ್ಲಿ ʼ ಒಂದು ಕೊಂಡರೆ ಮತ್ತೊಂದು ಫ್ರೀʼ ಅಂತ. ಹರೀಶ್ ಅನಿಲ್‌ಗಾಡ್ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಧುಮಿಥುನ್ ಹಾಗೂ ಮನುಮಿಲನ್ ಎಂಬ ಅವಳಿ ಸಹೋದರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇವರೇ ಚಿತ್ರದ ನಿರ್ಮಾಪಕರು ಕೂಡ. ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ವಿಶೇಷ ಅಂದ್ರೆ, ನಿರ್ದೇಶಕರು ಹಾಗೂ ಚಿತ್ರದ ನಾಯಕ ನಟರಿಬ್ಬರೂ, ಉಷಾ ಭಂಡಾರಿ ಅವರ ಸಿನಿಮಾ ಶಾಲೆಯಲ್ಲಿ ಕಲಿತವರು. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇರೋ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆ ದಿನ ಅವರೇ ಚಿತ್ರದ ಟೀಸರ್‌ ಲಾಂಚ್‌ ಮಾಡಿದರು.” ಮಧು, ಮನು, ಹರೀಶ ನನ್ನ ಹಳೇ ವಿದ್ಯಾರ್ಥಿಗಳು. ಈ ಸಿನಿಮಾದಲ್ಲಿ ಬಹಳಷ್ಟು ರಹಸ್ಯಗಳಿವೆ, ಮಿಸ್ಟ್ರಿಗಳಿವೆ, ನನ್ನ ಪಾತ್ರವೂ ಸಹ ಸಸ್ಪೆನ್ಸ್ ಆಗಿದೆ. ಈ ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್. ಹರೀಶ ನನ್ನ ಶಾಲೆಗೆ ಕುಕ್ ಆಗಿ ಬಂದಿದ್ದ, ಈಗ
ನಿರ್ದೇಶಕನಾಗಿದ್ದಾನೆ, ತುಂಬಾ ಖುಷಿಯಾಗ್ತಿದೆʼ ಎಂದು ಸಂತಸ ವ್ಯಕ್ತಪಡಿಸಿದರು.


ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, “ರಾಮಾ ರಾಮಾ ರೇʼ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ʼಅಯೋಗ್ಯʼ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್‌ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಚಿತ್ರಕ್ಕೆ ರೋಷಿನಿ ತೇಲ್ಕರ್‌ ನಾಯಕಿ. ನೆಗೆಟಿವ್‌ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನನಗೆ ಈ ಆಫರ್‌ ಬಂತು. ಪಾತ್ರವೂ ಚೆನ್ನಾಗಿದೆ ಎಂದರು ರೋಷಿನಿ. ಹಾಗೆಯೇ ರಿಶಿತಾ ಮಲ್ನಾಡ್‌ ಈ ಚಿತ್ರದ ಮತ್ತೋರ್ವ ನಾಯಕಿ. ಹಾಗೆಯೇ ಚಿತ್ರದಲ್ಲಿ ನಟ ಕಿಶೋರ್‌ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರಂತೆ. ನಿರ್ದೇಶಕ ಹರೀಶ್‌ ಮಾತನಾಡಿ ಚಿತ್ರದ ವಿಶೇಷತೆ ಹೇಳಿಕೊಂಡರು.

” ಮೈಸೂರಿನಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ. ಹುಡುಗಾಟದಲ್ಲಿಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತೀಯಾರ್ಧದಲ್ಲಿ ಗಂಭೀರಸ್ವರೂಪ ಪಡೆಯುತ್ತಾ, ಒಂದು ಹುಡುಕಾಟದಲ್ಲಿ ಕೊನೆಯಾಗುತ್ತದೆʼಎಂದರು.ದಿನೇಶ್‌ ಕುಮಾರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅನಿಲ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್ ರಾವ್ ಛಾಯಾಗ್ರಹಣ ಮಾಡಿದ್ದು, ರಾಜಶೇಖರ್‌ರಾವ್, ವಿಜಯೇಂದರ್, ಮುತ್ತು ಹಾಗೂ ಶಿವು ಸಾಹಿತ್ಯ ರಚಿಸಿದ್ದಾರೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ದೃಶ್ಯ ಸೆರೆಹಿಡಿದಿದ್ದಾರೆ. ಬಲ ರಾಜವಾಡಿ, ಪ್ರಶಾಂತ್ ರಾಯ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಂಗ್ ನಲ್ಲಿ ಗ್ಯಾಂಗ್‌ಸ್ಟರ್‌ ಆದ ನಟಿ

ಕಸ್ತೂರಿ ಮಹಲ್‌ ಬೆನ್ನಲೇ ಮತ್ತೊಂದು ಚಿತ್ರಕ್ಕೆ ನಾಯಕಿ ಆದ ಶಾನ್ವಿ

ನಟಿ ಶಾನ್ವಿ ಶ್ರೀವಾತ್ಸವ್‌ ಬ್ಯುಸಿ ಆಗುತ್ತಿದ್ದಾರೆ. ʼಕಸ್ತೂರಿ ಮಹಲ್‌ʼ ಚಿತ್ರದ ಬೆನ್ನಲೇ ಬ್ಯಾಂಗ್‌ ಹೆಸರಿನ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಅವರು ಗ್ಯಾಂಗ್‌ ಸ್ಟರ್‌ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.‌ ಈಗಾಗಲೇ ʼಆನೆ ಹಾಗೂ ನಾನುʼ, ʼಅದುʼ ಮತ್ತು ʼಸರೋಜʼ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ ‘ಬ್ಯಾಂಗ್’.

ಹಾಗೆಯೇ ಕಿರುಚಿತ್ರಗಳ ನಿರ್ದೇಶನದ ಮೂಲಕ ಗಮನ ಸೆಳೆದ ಪರುಶುರಾಮ್‌, ಈ ಚಿತ್ರದ ನಿರ್ದೇಶಕ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡುತ್ತಿದ್ದಾರೆ. ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ವಿಶೇಷ ಮತ್ತು ವಿಶಿಷ್ಟ ಅಂದ್ರೆ ಈ ಚಿತ್ರದ ಕತೆ. ಏಳು ಪಾತ್ರ, ಎರಡು ದಿನಗಳಲ್ಲಿ ನಡೆಯುವ ಕಥೆ . ಸದ್ಯಕ್ಕೆ ಈ ಚಿತ್ರಕ್ಕೆ ಶಾನ್ವಿ ಮಾತ್ರ ಫೈನಲ್‌ ಆಗಿದ್ದಾರಂತೆ. ಫೆಬ್ರವರಿ ಮೊದಲವಾರದಿಂದ ಚಿತ್ರೀಕರಣ ಶುರುವಾಗಲಿದೆಯಂತೆ.

Categories
ಸಿನಿ ಸುದ್ದಿ

ಚಕ್ರವರ್ತಿ ಚಂದ್ರಚೂಡ್‌ ಸುಫಾರಿ ಕೊಟ್ಟ ರಾಧಿಕಾ ಯಾರು ? ಸಖತ್‌ ವೈರಲ್‌ ಆಯ್ತು ʼಕೇಳು ಜನಮೇಜಯʼ ನ ಫಸ್ಟ್‌ ಲುಕ್‌!

ನಾವಿದ್ದೇವೆ ಮುನ್ನುಗಿ ಅಂದ್ರು ಸ್ಟಾರ್‌ ಬಳಗ

ನಟ, ನಿರ್ದೇಶಕ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್‌ ಬೆಳ್ಳಿ ತೆರೆಗೆ ಹೀರೋ ಆಗಿ ಎಂಟ್ರಿಯಾಗುತ್ತಿರುವ ʼಕೇಳು ಜನಮೇಜಯʼ ಫಸ್ಟ್‌ ಲುಕ್‌ ಪೋಸ್ಟರ್‌ ಧೂಳೆಬ್ಬಿಸುತ್ತಿದೆ. ಚಂದ್ರ ಚೂಡ್‌ ಅವರ ಸಿಕ್ಸ್‌ ಪ್ಯಾಕ್‌ ದೇಹದ ಪ್ರದರ್ಶನಕ್ಕಿಂತ ಪೋಸ್ಟರ್‌ ಮೇಲಿನ ಇತರೆ ವಿಷಯಗಳು ಕುತೂಹಲ ಹುಟ್ಟಿಸಿವೆ. ರಾಧಿಕಾ ಸುಫಾರಿ … ಅಂತ ಪೋಸ್ಟರ್‌ ನಲ್ಲಿ ಹಾಕಿದ್ದೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಅಷ್ಟೇ ಅಲ್ಲ, ಐಪಿಸಿ ಸೆಕ್ಸನ್‌ 375/ 300 ನ ಹಿನ್ನೆಲೆ ಏನು? ಜತೆಗೆ ಆರ್‌ ಹೌಸ್‌ ನ ಆ ಕೋಣೆಯಲ್ಲಿ ನಡೆದಿದ್ದೇನು ? ಹಾಗೆಯೇ ವಾಟ್ಸಾಪ್‌ ಲೀಕ್ಡ್‌ ಡಾಕ್ಯೂಮೆಂಟ್‌ ಯಾರದ್ದು? ಕೇಳು ಜನಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಇದೆಲ್ಲ ಪ್ರಶ್ನೆಗಳನ್ನು ಸಿನಿಮಾ ಪ್ರೇಕ್ಷಕರ ಮುಂದಿಡುವ ಮೂಲಕ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ, ಫಸ್ಟ್‌ ಲುಕ್‌ ಪೋಸ್ಟರ್ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ‌

ವಿಶೇಷವಾಗಿ ಚಿತ್ರೋದ್ಯಮ ಮಾತ್ರವಲ್ಲದೆ, ಕನ್ನಡ ಸಂಘಟನೆಗಳು ಹಾಗೂ ರಾಜಕೀಯ ವಲಯದಿಂದಲೂ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್‌ ಬಳಗ ಚಂದ್ರಚೂಡ್‌ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಮೆಚ್ಚಿಕೊಂಡು ಮಾತನಾಡಿದೆ. ಸೋಷಲ್‌ ಮೀಡಿಯಾದಲ್ಲಿ ಪೋಸ್ಟರ್‌ ವೈರಲ್‌ ಆಗಿದೆ. ಸದ್ಯಕ್ಕೆ ಟ್ವಿಟರ್‌ನಲ್ಲಿ ಕೇಳು ಜಲಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಟ್ರೆಂಡಿಂಗ್‌ ಎರಡನೇ ಸ್ಥಾನದಲ್ಲಿದೆ. ಚಿತ್ರೋದ್ಯಮದಿಂದ ಹಿರಿಯ ನಟಿ ತಾರಾ, ನಟಿ ಅನಿತಾ ಭಟ್‌ , ನಟರಾದ ಡಾಲಿ ಧನಂಜಯ್‌, ಸಂಚಾರಿ ವಿಜಯ್‌, ರಾಜವರ್ಧನ್‌, ವಿಕ್ಕಿ ವರುಣ್‌, ಅರಣ್‌ ಗೌಡ, ನವ ನಾಯಕ ದುಶ್ಯಂತ್‌, ಚೇತನ್‌ ಗೌಡ, ನಿರ್ದೇಶಕರಾದ ದಯಾಳ್‌ ಪದ್ಮನಾಭನ್‌, ರವಿ ಶ್ರೀವತ್ಸ, ಸಿಂಪಲ್‌ ಸುನಿ, ಶ್ರೀನಿ, ಅರವಿಂದ್‌ ಕೌಶಿಕ್‌, ನಿರ್ಮಾಪಕರಾದ ಅಶ್ವಿನಿ ರಾಮ್‌ ಪ್ರಸಾದ್‌, ಗುರುದೇವ್‌ ನಾಗರಾಜ್‌ ,ಕರ್ನಾಟಕ ಚಲವ ಚಿತ್ರ ಅಕಾಡೆಮಿ ಆಧ್ಯಕ್ಷರಾದ ಸುನೀಲ್‌ ಪುರಾಣಿಕ್‌ ಮತ್ತಿತರರು ಕೇಳು ಜನಮೇಜಯ ಚಿತ್ರದ ಫಸ್ಟ್‌ ಲುಕ್‌ ಗೆ ಸೋಷಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


ಹಾಗೆಯೇ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಸೇರಿದಂತೆ ಚಿತ್ರೋದ್ಯಮ ಆಚೆಗೂ ಹಲವು ಸೆಲಿಬ್ರಿಟಿಗಳು ಕೂಡ ಕೇಳು ಜನಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಮೆಚ್ಚಿಕೊಂಡಿದ್ದಾರೆ. ಇನ್ನು ವಿಶೇಷ ಅಂದ್ರೆ ಈ ಪೋಸ್ಟರ್‌ ಲಾಂಚ್‌ ಆದ ಬಗೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು ೫೦ ಕ್ಕೂ ಹೆಚ್ಚು ಸಿನಿಮಾ ಸೆಲಿಬ್ರಿಟಿಗಳು ಸೋಷಲ್‌ ಮೀಡಿಯಾದಲ್ಲಿ ಏಕ ಕಾಲದಲ್ಲಿಯೇ ಲಾಂಚ್‌ ಮಾಡಿದ್ದರು. ಹಾಗಾಗಿಯೇ “ಕೇಳು ಜನಮೇಜಯʼ ದ ಪೋಸ್ಟರ್‌ ಬಾರೀ ಸದ್ದು ಮಾಡುತ್ತಿದೆ. ಪತ್ರಕರ್ತ, ಬರಹಗಾರ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್‌ ಇದೇ ಮೊದಲು ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ʼ ಕೇಳು ಜನಮೇಜಯʼ ಚಿತ್ರಕ್ಕೆ ಸಂತೋಷ್ ಕೊಡಂಕೇರಿ ನಿರ್ದೇಶಕ. ಜೀವನ್ ಪ್ರಕಾಶ್ ಕ್ಯಾಮರಾ ವಿನಯ್ ಸಂಗೀತವಿರುವ ಈ ಚಿತ್ರಕ್ಕೆ ದೃಷ್ಠಿ ಮೀಡಿಯಾ ಮತ್ತುರಘುನಾಥ್ ನಿರ್ಮಾಪಕರು .

ಸದ್ಯಕ್ಕೆ ನಿರ್ದೇಶನದ ಜತೆಗೆಯೇ ನಟನೆಗೆ ಮುಖ ಮಾಡಿರುವ ಚಂದ್ರಚೂಡ್‌ ಅದರಲ್ಲೇ ಈಗ ಸಾಕಷ್ಟು ಬ್ಯುಸಿ ಆಗಿದ್ದಾರೆ. ನವೀನ್‌ ಕೃಷ್ಣ ನಿರ್ದೇಶನದ ” ಮೇಲೊಬ್ಬ ಮಾಯಾವಿʼ, ಅರವಿಂದ್‌ ಕೌಶಿಕ್‌ ನಿರ್ದೇಶನದ ಗಾನ್‌ ಕೇಸ್‌, ರವಿ ಶ್ರೀವತ್ಸ ನಿರ್ದೇಶನದ ಡಿಆರ್‌ ಹಾಗೂ ಸುದೀರ್‌ ಶಾನ್‌ ಬೋಗ್‌ ನಿರ್ದೇಶನದ ಮಾರೀಚ ಚಿತ್ರಗಳಲ್ಲಿ ನಟಿಸಿದ್ದು, ಅವೆಲ್ಲ ಬಿಡುಗಡೆಗೆ ರೆಡಿ ಆಗಿವೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಅಪ್ಪ ಮಗನ ಬಾಂಧವ್ಯದ ಹಾಡಿಗೆ ಅಪ್ಪು ಧ್ವನಿ

ಮಂಗಳವಾರ ರಜಾ ದಿನ ಚಿತ್ರದ ಸಾಂಗ್‌ ಮಂಗಳವಾರವೇ ರಿಲೀಸ್‌

ಸಾಂಗ್‌ ರಿಲೀಸ್‌ ಮಾಡಿದ ಅಭಿಷೇಕ್‌ ಅಂಬರೀಶ್‌ 

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ, “ಮಂಗಳವಾರ ರಜಾದಿನ” ಸಿನಿಮಾ ಕೂಡ ಚಿತ್ರೀಕರಣಗೊಂಡು ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.‌

ಹೌದು, ಚಂದನ್‌ ಆಚಾರ್‌ ಅಭಿನಯದ “ಮಂಗಳವಾರ ರಜಾ ದಿನ” ಚಿತ್ರದ ಹಾಡು ಇದೀಗ ಹೊರಬಂದಿದೆ. ಈ ಚಿತ್ರದ ಹಾಡನ್ನು ನಟ ಅಭಿಷೇಕ್‌ ಅಂಬರೀಶ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಈ ಚಿತ್ರದ ಹಾಡನ್ನು ಗೌಸ್‌ಪೀರ್‌ ಬರೆದಿದ್ದು, ನಟ ಪುನೀತ್‌ರಾಜಕುಮಾರ್‌ ಹಾಡಿದ್ದಾರೆ. ಲಹರಿ ಮ್ಯೂಸಿಕ್‌ ಸಂಸ್ಥೆ ಮೂಲಕ ಈ ಹಾಡನ್ನು ಹೊರ ತರಲಾಗಿದೆ.


“ನೀನೇ ಗುರು, ನೀನೇ ಗುರಿ, ನೀನೆ ಗುರುತು…’ ಎಂದು ಸಾಗುವ ಹಾಡನ್ನು ಅಭಿಷೇಕ್ ಅಂಬರೀಶ್ ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಿ, ಹಾಡಿನ ಬಗ್ಗೆ ಗುಣಗಾನ ಮಾಡಿದ್ದಾರೆ. ಈ ಹಾಡಿನ ಕುರಿತು ಮಾತನಾಡಿರುವ ಅಭಿಷೇಕ್‌ ಅಂಬರೀಷ್‌, “ತಂದೆ, ಮಗನ‌ ಭಾಂದವ್ಯದ ಹಾಡನ್ನು ಗೌಸ್‌ ಪೀರ್‌ ಚೆನ್ನಾಗಿ ಬರೆದಿದ್ದಾರೆ. ಹಾಗೆಯೇ ಪುನೀತ್‌ ರಾಜಕುಮಾರ್‌ ಕೂಡ ತುಂಬಾನೇ ಸೊಗಸಾಗಿ ಹಾಡಿದ್ದಾರೆ. ಇನ್ನು, ಈ ಹಾಡು ಕೇಳುವ ಪ್ರತಿಯೊಬ್ಬರಿಗೂ ತಮ್ಮ ತಂದೆ ನೆನಪಾಗುತ್ತಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಶುಭಹಾರೈಸಿದ್ದಾರೆ ಅಭಿಷೇಕ್‌ ಅಂಬರೀಶ್‌.

ತ್ರಿವರ್ಗ ಫಿಲಂಸ್ ‌ನಿರ್ಮಾಣದ ಈ ಚಿತ್ರವನ್ನು ಯುವಿನ್ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಋತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ.

 

Categories
ಸಿನಿ ಸುದ್ದಿ

ಚಕ್ರವರ್ತಿ ದಿ ಹೀರೋ – ಚಂದ್ರಚೂಡ್ ವಿಶೇಷ ಪಾತ್ರ

ಕೇಳು ಜನಮೇಜಯ

ಮತ್ತೊಂದು ಸಾಹಸದ ಚಿತ್ರ

ಸದಾ ಏನಾದರೊಂದು ಸುದ್ದಿಯಲ್ಲಿರುವ ಚಕ್ರವರ್ತಿ ಚಂದ್ರಚೂಡ ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಪತ್ರಕರ್ತರಾಗಿ, ಒಳ್ಳೆಯ ಮಾತುಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಸೈ ಎನಿಸಿಕೊಂಡಿರುವ ಅವರೀಗ, ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಚಂದ್ರಚೂಡ್, ಹೀಗೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ.
ಹೌದು, ಚಕ್ರವರ್ತಿ ಚಂದ್ರಚೂಡ್ ಈಗ “ಕೇಳು ಜನಮೇಜಯ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜನವರಿ26ಕ್ಕೆ ಚಿತ್ರದ. ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಬೇರ್ ಬಾಡಿ ತೋರಿಸಿರುವ ಚಕ್ರವರ್ತಿ ಚಂದ್ರಚೂಡ್, ಇಲ್ಲಿ‌ ಖೈದಿಯೋ, ಅಮಾಯಕರೋ ಎಂಬ ಪ್ರಶ್ನೆಗೆ ಕಾರಣರಾಗಿದ್ದಾರೆ.
ಇನ್ನು ಈ ಚಿತ್ರವನ್ನು ಸಂತೋಷ್‌ ಕೊಡಂಕೇರಿ ನಿರ್ದೇಶನ ಮಾಡುತ್ತಿದ್ದಾರೆ. ರಘುನಾಥ್ ಎಚ್.ಎ. ಮತ್ತು ದೃಷ್ಟಿ ಮೀಡಿಯಾ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರದ ಹಿಂದೆ ಶ್ರೀನಿ, ಧನ್ವಿಕ್ ಗೌಡ, ವಿನಾಯಕ್ ಗೌಡ, ರಘು, ಚಂದ್ರು, ಸಂತೋಷ್ ಆನಂದ್ ಮಧು ಸಾಸಿರ್ ಇದ್ದಾರೆ.


ಪೋಸ್ಟರ್ ನೋಡಿದರೆ ಇದೊಂದು ಅಪರಾಧದ ಹಿನ್ನೆಲೆಯಲ್ಲಿ ಸಾಗುವ ಚಿತ್ರ ಇರಬಹುದೇನೊ ಎಂದೆನಿಸಿದರೂ ಇಲ್ಲಿ ಹಲವು ಕುತೂಹಲಕಾರಿ ಅಂಶಗಳಿವೆ ಅನ್ನೋದು ಸತ್ಯ.
ಸದ್ಯಕ್ಕೆ ಪೋಸ್ಟರ್ ಬಿಡುಗಡೆಯಾಗಿದೆ. ಉಳಿದಂತೆ ಮತ್ತಷ್ಟು ಮಾಹಿತಿ ಜೊತೆ ಚಿತ್ರತಂಡ ಬರಲಿದೆ.

Categories
ಸಿನಿ ಸುದ್ದಿ

ರಾಜ್‌ಮೌಳಿ ‘ಆರ್‌ಆರ್‌ಆರ್‌’ ದಸರಾಗೆ!

ರಾಮ್‌ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ಅಭಿನಯದ ದಕ್ಷಿಣ ಭಾರತದ ಬಹುನಿರೀಕ್ಷಿತ ಮೆಗಾ ಸಿನಿಮಾ ಬಿಡುಗಡೆ ದಿನ ಘೋಷಣೆಯಾಗಿದೆ.


‘ಬಾಹುಬಲಿ’ ಸರಣಿ ಸಿನಿಮಾಗಳೊಂದಿಗೆ ನಿರ್ದೇಶಕ ರಾಜ್‌ಮೌಳಿ ಭಾರತದಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದಿದ್ದರು. ಆನಂತರ ಅವರು ಕೈಗೆತ್ತಿಕೊಂಡಿದ್ದ ಸಿನಿಮಾ ‘ಆರ್‌ಆರ್‌ಆರ್‌’. ಸಹಜವಾಗಿಯೇ ಇದು ಸಿನಿಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದೆ. ರಾಮ್‌ಚರಣ್‌ ತೇಜಾ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ನಟನೆಯ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರವಿದು. ಇಂದು ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಿದ್ದು, ಇದೇ ವರ್ಷ ದಸರಾಗೆ ಅಕ್ಟೋಬರ್‌ 13ರಂದು ಸಿನಿಮಾ ತೆರೆಕಾಣಲಿದೆ. ಹೀರೋಗಳಿಬ್ಬರೂ ಟ್ವಿಟರ್‌ನಲ್ಲಿ ಚಿತ್ರದ ಪೋಸ್ಟರ್ ಹಾಕಿಕೊಂಡು ಸಂತಸ ಹಂಚಿಕೊಂಡಿದ್ದಾರೆ.

“ಬೆಂಕಿ ಮತ್ತು ನೀರು ಒಟ್ಟಿಗೇ ನುಗ್ಗಿ ಬರಲಿದ್ದು, ಹಿಂದೆಂದೂ ಕಂಡಿರದ ಸನ್ನಿವೇಶಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ. ಭಾರತೀಯ ಸಿನಿಮಾರಂಗದಲ್ಲೇ ಇದೊಂದು ವಿಶಿಷ್ಟ ಅನುಭವ ನೀಡುವ ಪ್ರಯೋಗವಾಗಲಿದೆ” ಎಂದು ನಟರಾದ ರಾಮ್‌ಚರಣ್ ತೇಜಾ, ಜ್ಯೂನಿಯರ್ ಎನ್‌ಟಿಆರ್‌ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನ ಅದ್ಧೂರಿ ಸೆಟ್‌ನಲ್ಲಿ ಚಿತ್ರದ ಕ್ಲ್ಯೈಮ್ಯಾಕ್ಸ್‌ ಚಿತ್ರಿಸಲಾಗಿತ್ತು. ಕ್ಲೈಮ್ಯಾಕ್ಸ್‌ ಸನ್ನಿವೇಶಗಳಲ್ಲಿ ಪಾಲ್ಗೊಂಡ ನಂತರ ಚಿತ್ರದ ನಟರಿಬ್ಬರೂ ತಮ್ಮ ರಕ್ತಸಿಕ್ಕ ಹಸ್ತಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿ ಚರ್ಚೆಗೆ ಆಸ್ಪದ ನೀಡಿದ್ದವು.

‘ಆರ್‌ಆರ್‌ಆರ್‌’ ನಿರ್ಮಾಪಕ ಡಿ.ವಿ.ವಿ. ದಾನಯ್ಯ ತಮ್ಮ ಹೇಳಿಕೆಯಲ್ಲಿ, “ಚಿತ್ರೀಕರಣ ಪೂರ್ಣಗೊಳಿಸಿದ್ದು, ಪ್ರೇಕ್ಷಕರ ಮುಂದೆ ಬರಲು ಕಾತುರರಾಗಿದ್ದೇವೆ. ಥಿಯೇಟರ್‌ಗಳಲ್ಲಿ ಜನರೊಂದಿಗೆ ದಸರಾ ಆಚರಣೆ ಜೋರಾಗಿರುತ್ತದೆ” ಎಂದಿದ್ದಾರೆ. ಈ ಮೊದಲು 2020ರ ಜುಲೈ 30ರಂದು ಚಿತ್ರದ ಬಿಡುಗಡೆ ದಿನಾಂಕ ನಿಗಧಿಯಾಗಿತ್ತು. ಚಿತ್ರೀಕರಣದ ವೇಳೆ ಹೀರೋಗಳು ಗಾಯಗೊಂಡಿದ್ದು ಹಾಗೂ ಕೊರೋನಾ ಹಾವಳಿಯಿಂದಾಗಿ ಶೂಟಿಂಗ್ ಮುಂದಕ್ಕೆ ಹೋಯ್ತು. ಇದೀಗ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಚಿತ್ರತಂಡ ಅಂತಿಮ ಹಂತದ ಕೆಲಸಗಳನ್ನು ಕೈಗೆತ್ತಿಕೊಂಡಿದೆ.

1920ರ ಅವಧಿಯ ಬ್ರಿಟಿಷ್‌ ಆಡಳಿತದ ಅವಧಿಯ ಕಥಾನಕವಿದು. ರಾಜ್‌ಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ ಚಿತ್ರಕ್ಕಾಗಿ ಅಲ್ಲೂರಿ ಸೀತಾರಾಮರಾಜು (ರಾಮ್‌ಚರಣ್‌ ತೇಜಾ) ಮತ್ತು ಕೋಮಾರಮ್ ಭೀಮ್‌ (ಜ್ಯೂನಿಯರ್ ಎನ್‌ಟಿಆರ್‌) ತೆಲುಗು ಬುಡಕಟ್ಟು ನಾಯಕರ ಪಾತ್ರಗಳನ್ನು ಸೃಷ್ಟಿಸಿ ಕತೆ ಹೆಣೆದಿದ್ದಾರೆ. ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದು, ಬಾಲಿವುಡ್‌ ನಟಿ ಅಲಿಯಾ ಭಟ್‌ ನಾಯಕಿ. ಇದು ದಕ್ಷಿಣದಲ್ಲಿ ಅವರ ಮೊದಲ ಸಿನಿಮಾ. ಅಜಯ್ ದೇವಗನ್‌, ಸಮುದ್ರಕನಿ, ಒಲಿವಿಯಾ ಮೋರಿಸ್‌, ರೇ ಸ್ಟೀವನ್‌ಸನ್‌, ಶ್ರಿಯಾ ಶರಣ್‌ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.

Categories
ಸಿನಿ ಸುದ್ದಿ

ನಮ್‌ ಸ್ಟಾರ್‌ ಗ್ರೇಟ್‌ ಅನ್ನೋರಿಗೆ ಒಂದೇ ಅಖಾಡ! ಶುರುವಾಯ್ತು ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌

ಸ್ಟಾರ್ಸ್‌ ಅಭಿಮಾನಿಗಳಿಗೆ ಹೀಗೊಂದು ಪಂದ್ಯ

ಇದೊಂದು ಸೌಹಾರ್ದಯುತ ಕ್ರಿಕೆಟ್‌ ಪಂದ್ಯಾವಳಿ

ಕ್ರಿಕೆಟ್‌ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಹುಡುಗರಿಂದ ಹಿಡಿದು ವೃದ್ಧರವರೆಗೂ ಕ್ರಿಕೆಟ್‌ ಅಂದರೆ ಪಂಚಪ್ರಾಣ. ಹೌದು, ಈಗ ಇಲ್ಲೇಕೆ ಕ್ರಿಕೆಟ್‌ ವಿಷಯ ಅಂದುಕೊಂಡ್ರಾ? ವಿಷಯ ಇದೆ. ಈ ಕ್ರಿಕೆಟ್‌ ಎಲ್ಲೆಡೆ ವಿಸ್ತಾರಗೊಂಡಿರುವುದು ಗೊತ್ತೇ ಇದೆ. ಸಿನಿಮಾ ನಟರು ಕೂಡ ಕ್ರಿಕೆಟ್‌ ಕ್ರೀಡೆಗೆ ಮಾರುಹೋಗಿರುವುದುಂಟು. ದೇಶ ದೇಶಗಳ ನಡುವೆ ಕ್ರಿಕೆಟ್‌ ಆಯ್ತು, ರಾಜ್ಯ ರಾಜ್ಯಗಳ ನಡುವೆಯೂ ಕ್ರಿಕೆಟ್‌ ಆಟ ಶುರುವಾಯ್ತು. ಕೆಸಿಎಲ್‌ (ಕರ್ನಾಟಕ ಕ್ರಿಕೆಟ್‌ ಲೀಗ್), ಸಿಸಿಎಲ್‌ (ಸೆಲಬ್ರಿಟಿ ಕ್ರಿಕೆಟ್‌ ಲೀಗ್‌) ಕೂಡ ಪ್ರತಿ ವರ್ಷ ನಡೆಯುತ್ತಲೇ ಇದೆ. ಈಗ ಎಫ್‌ಸಿಎಲ್‌ ಕೂಡ ಅಖಾಡಕ್ಕಿಳಿಯಲಿದೆ.


ಎಫ್‌ಸಿಎಲ್‌ ಅಂದರೆ, ಫ್ಯಾನ್ಸ್‌ ಕ್ರಿಕೆಟ್‌ ಲೀಗ್.‌ ಇದುವರೆಗೆ ಸ್ಟಾರ್‌ ನಡುವೆ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿತ್ತು. ಅಭಿಮಾನಿಗಳು ನೋಡಿ ಚಪ್ಪಾಳೆ, ಶಿಳ್ಳೆ ತಟ್ಟುತ್ತಿದ್ದರು. ಈಗ ಅಂತಹ ಸ್ಟಾರ್‌ಗಳ ಅಭಿಮಾನಿಗಳಿಗಾಗಿಯೇ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಶುರುವಾಗಿದೆ. ಈಗಾಗಲೇ ಐದು ಸೀಸನ್‌ ಮುಗಿಸಿರುವ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಈಗ ಆರನೇ ಆವೃತ್ತಿಯತ್ತ ಸಾಗಿದೆ.
ಜನವರಿ ‌26 ರ ಗಣರಾಜ್ಯೋತ್ಸವ ದಿನದಂದೇ ಎಫ್‌ಸಿಎಲ್‌ಗೆ ಚಾಲನೆ ಸಿಗಲಿದ್ದು, ಗೊರಗುಂಟೆ ಪಾಳ್ಯದಲ್ಲಿರುವ ರಾಜಣ್ಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಮುನಿರತ್ನ,‌ ನಾಗೇಂದ್ರ ಪ್ರಸಾದ್, ಕೆ.ಪಿ.ಶ್ರೀಕಾಂತ್‌,ರಘುಮುಖರ್ಜಿ, ಚೇತನ್‌ ಕುಮಾರ್‌, ಪವನ್‌ ಒಡೆಯರ್‌, ಸುನಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

 

ಇಷ್ಟಕ್ಕೂ ಈ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ನಲ್ಲಿ ಯಾರೆಲ್ಲಾ ಸ್ಟಾರ್‌ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರವಿದು. ಶಿವರಾಜಕುಮಾರ್‌ ಫ್ಯಾನ್ಸ್‌, ರಮ್ಯಾ ಫ್ಯಾನ್ಸ್‌, ಸುದೀಪ್‌ ಫ್ಯಾನ್ಸ್‌, ದರ್ಶನ್‌ ಫ್ಯಾನ್ಸ್‌, ಗಣೇಶ್‌ ಫ್ಯಾನ್ಸ್‌ ಮತ್ತು ಪ್ರಜ್ವಲ್‌ ದೇವರಾಜ್‌ ಈ ಆರು ಸ್ಟಾರ್ಸ್‌ ಅಭಿಮಾನಿಗಳು ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಇನ್ನು, ನಮ್‌ ಟಾಕೀಸ್‌ ಈ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು, ಪ್ರತಿ ವರ್ಷ ಒಬ್ಬೊಬ ಸಿನಿಮಾ ಲೆಜೆಂಡರಿ ನೆನಪಿಗೆ ಫ್ಯಾನ್ಸ್‌ ಕ್ರಿಕೆಟ್‌ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈಗ ನಟ ಜಗ್ಗೇಶ್‌ ಅವರ ಪ್ರೋತ್ಸಾಹದೊಂದಿಗೆ ನಡೆಸಲಾಗುತ್ತಿದೆ.

ಎಲ್ಲಾ ಸ್ಟಾರ್‌ ಫ್ಯಾನ್ಸ್‌ಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಜಗಳ ಶುರುಮಾಡುತ್ತಲೇ ಇರುತ್ತಾರೆ. ಸ್ಟಾರ್‌ಗಳು ಮಾತ್ರ ಚೆನ್ನಾಗಿಯೇ ಇರುತ್ತಾರೆ. ಆದರೆ, ಅಂತಹ ಸ್ಟಾರ್ಸ್ ಫ್ಯಾನ್ಸ್‌ಗಳನ್ನು‌ ಒಂದೆಡೆ ಕಲೆಹಾಕಿ, ಅವರಿಗೆ ಸೌಹಾರ್ದತೆಗಾಗಿ ಈ ಪಂದ್ಯಾವಳಿ ನಡೆಸುವ ಮೂಲಕ ಅವರಲ್ಲೂ ಗೆಳೆತನ ಮೂಡಿಸುವ ಒಂದು ಪ್ರಯತ್ನ ಇಲ್ಲಾಗುತ್ತಿದೆ ಎಂಬುದು ಆಯೋಜಕರ ಮಾತು.


ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಎಲ್ಲಾ ಸ್ಟಾರ್ಸ್‌ ಅಭಿಮಾನಿಗಳು ಪ್ರೀತಿಯಿಂದಲೇ ಪಾಲ್ಗೊಳ್ಳುತ್ತಿರುವುದು ವಿಶೇಷ. ಇಲ್ಲಿ ಒಟ್ಟು ಆರು ತಂಡಗಳಿದ್ದು, ನಾಲ್ಕು ತಂಡಗಳು ಸೆಮಿಫೈನಲ್‌ ತಲುಪಲಿವೆ. ಅವುಗಳ ಪೈಕಿ ಎರಡು ತಂಡಗಳು ಅಂತಿಮ ಸೆಣೆಸಾಟ ನಡೆಸಲಿವೆ. ಅಂತಿಮವಾಗಿ ಆ ಎರಡಲ್ಲಿ ಒಂದು ತಂಡ ಜಯಶಾಲಿಯಾಗಿ ಹೊರಹೊಮ್ಮಲಿದೆ. ಗೆದ್ದ ತಂಡಕ್ಕೆ ಟ್ರೋಫಿ ವಿತರಣೆ ಮಾಡಲಾಗುತ್ತಿದೆ.

Categories
ಸಿನಿ ಸುದ್ದಿ

ಆ್ಯಕ್ಟಿಂಗ್‌ ಜತೆಗೆಯೇ ಗೊಬ್ಬರ ಮಾರಲು ಶುರು ಮಾಡಿದ್ರು ಈ ನಟಿ , ಈಗವರು ಅವನಿ ಗ್ರೀನ್ ಫ್ಯಾಕ್ಟರಿ ರೂವಾರಿ !

ಭೂಮಿ ಅಂದ್ರೆ ತಾಯಿ, ಅವಳ ಸೇವೆ ಮಾಡುವುದೇ ಪುಣ್ಯ ಅಂತಾರೆ ಈ‌ ನಟಿ, ಅವನಿ ಸಾವಯವ ಗೊಬ್ಬರ ತಯಾರಿಕೆಯ ಹಿಂದಿದೆ ಭೂಮಿ‌ ಮತ್ತು ರೈತರ ಆರೋಗ್ಯದ ಕಾಳಜಿ’.ಅವನಿ ಅಂದ್ರೇನು, ಬೆಳೆಗಳಿಗೆ ಹಾಕಿದ್ರೆ ಅದರಿಂದ ಆಗುವ ಲಾಭ ಏನು, ಅವರೇ ಹೇಳ್ತಾರೆ ಕೇಳಿ….

ಕಾಲಕ್ಕೆ ತಕ್ಕಂತೆ ಅನೇಕ‌ ಮಂದಿ ನಟ-ನಟಿಯರು ಆ್ಯಕ್ಟಿಂಗ್ ಜತೆಗೆಯೇ ಉದ್ಯಮ, ಕೃಷಿ, ಹೈನುಗಾರಿಕೆ ಅಂತ ಬದುಕಿನ ಹೊಸ ಸಾಹಸಗಳಲ್ಲಿ ತೊಡಗಿಸಿಕೊಂಡಿರುವುದು‌ ಹಳೇ ಸುದ್ದಿ. ಈಗಾಗಲೇ ಅನೇಕರು ಈ ಸಾಲಿನಲ್ಲಿ ಹೆಸರು‌ ಮಾಡಿದವರೇ. ಈಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾದವರು ಕನ್ನಡದ ಮತ್ತೋರ್ವ ನಟಿ ಅಂಜಲಿ ಕೆ.ಆರ್. ಇವರೀಗ ‘ಅವನಿ ಗ್ರೀನ್ ಫ್ಯಾಕ್ಟರಿ’ ರೂವಾರಿ‌.

ಅಂಜಲಿ ಅಂದಾಕ್ಷಣ, ಇವರು’ ಕಂಕಣ ಭಾಗ್ಯ’ ಮತ್ತು ‘ಅನಂತನ ಅವಾಂತರ ‘ಚಿತ್ರಗಳ ನಾಯಕಿ ಅಲ್ಲ. ಸ್ಯಾಂಡಲ್‌ವುಡ್ ಗೆ ಈಗಷ್ಟೇ ಎಂಟ್ರಿಯಾದ ನಟಿ. ಇವರ ಪೂರ್ಣ ಹೆಸರು ಅಂಜಲಿ ರಾಮಚಂದ್ರ. ಭರತ ನಾಟ್ಯ, ಸಂಗೀತ ಹಾಗೂ ಸ್ಟೇಜ್ ಆ್ಯಂಕರಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಿದವರು. ಒಂದು ಡಾನ್ಸ್ ಸ್ಕೂಲ್ ನ ಶಿಕ್ಷಕಿ ಕೂಡ. ಹಾಗೆಯೇ ಒಂದಷ್ಟು ಸಿರೀಯಲ್ ಗಳಲ್ಲಿ ನಟಿಸಿ ಸಿಲ್ವರ್ ಸ್ಕ್ರೀನ್ ಗೂ‌ ಕಾಲಿಟ್ಟವರು‌. ಕಳೆದ ವರ್ಷವಷ್ಟೇ ರಿಲೀಸ್ ಆದ ‘ಮನೋರಥ’ ಹೆಸರಿನ ಚಿತ್ರದ ನಾಯಕಿ. ಈಗ ʼಸ್ವಚ್ಚ ಕರ್ನಾಟಕʼ ಹೆಸರಿನ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಅದೀಗ ರಿಲೀಸ್‌ಗೆ ರೆಡಿಯಿದೆ. ಅವರು ನಾಯಕಿ ಆಗಿ ಒಪ್ಪಿಕೊಂಡಿರುವ ಮತ್ತೊಂದು ಚಿತ್ರ ಇಷ್ಟರಲ್ಲಿಯೇ ಸೆಟ್ಟೇರಲಿದೆಯಂತೆ.

ಆದರೂ, ನಟನೆ ಅವರ ಪ್ಯಾಷನ್.. ಅದರ ಜತೆಗೆ ನೃತ್ಯ ಹಾಗೂ ಸಂಗೀತ ಕೂಡ. ಆದರೆ ಅವರೀಗ ನಟನೆಯ ಜತೆಗೆಯೇ ವೃತ್ತಿಯಾಗಿ ಗಂಭಿರವಾಗಿ ತೆಗೆದುಕೊಂಡಿದ್ದು ಉದ್ಯಮ. ಅದೇ ‘ಅವನಿ’ ಗ್ರೀನ್ ಫ್ಯಾಕ್ಟರಿʼ. ‘ಅವನಿ’ ಅಂದ್ರೆ ಭೂಮಿ. ಅದೇ ಹೆಸರಲ್ಲಿ ಸಾವಯವ ಗೊಬ್ಬರ ತಯಾರಿಸಿ, ಅದರ ಮಾರಾಟವನ್ನೇ ಗಂಭೀರವಾಗಿ ಸ್ವೀಕರಿಸಿದ್ದಾರೆ. ಕೃಷಿ ಬೆಳೆಗಳಿಗೆ ಹೇಳಿ ಮಾಡಿಸಿದ ಸಾವಯವ ಗೊಬ್ಬರ ಇದು. ಸದ್ಯಕ್ಕೆ ಈಗವರು ‘ಅವನಿ ಗ್ರೀನ್ ಫ್ಯಾಕ್ಟರಿ ‘ಯ ರೂವಾರಿಗಳಲ್ಲಿ ಒಬ್ಬರು. ಕುತೂಹಲ ಇರೋದು, ನಟನೆ, ನೃತ್ಯ, ಸಂಗೀತ ಹಾಗೂ ಸ್ಟೇಜ್‌ ಆಂಕರಿಂಗ್‌ ಜತೆಗೆಯೇ , ಈ ನಟಿ ಇದ್ಯಾವುದೋ ಗೊಬ್ಬರ ಮಾರುವ ಕೆಲಸಕ್ಕೆ ಯಾಕೆ ಕೈ ಹಾಕಿದ್ರು, ಗೊಬ್ಬರ ಮಾರುವುದಕ್ಕೂ ಅವರಿಗೂ ಅದೇನು ನಂಟು ಅಂತ. ಅದಕ್ಕಿರುವ ಉತ್ತರ ಒಂದೇ, ಅವರ ಓದು.
ನಟಿ ಅಂಜಲಿ ರಾಮಚಂದ್ರ ಅವರು ಓದಿದ್ದು ಬಯೋಟೆಕ್ ಎಂಜಿನಿಯರಿಂಗ್. ಬಯೋಟೆಕ್ ಅಂದ್ರೆ ನಿಮಗೆಲ್ಲ ಗೊತ್ತೇ ಇದೆ, ಅದೊಂದು ಜೈವಿಕ ಜಗತ್ತಿಗೆ ಸಂಬಂಧಿಸಿದ್ದು ಅಂತ. ಮಣ್ಣು, ಅದರೊಳಗಿನ ಜೀವಿಗಳು, ಬೆಳೆಗಳು, ತಿನ್ನುವ ಆಹಾರ ಪದಾರ್ಥಗಳು ಆಂತೆಲ್ಲ ಓದುತ್ತಾ, ಅದನ್ನೇ ಗಂಭೀರವಾಗಿ ಸ್ವೀಕರಿಸಿದ್ದರ ಫಲವೇ ಈ “ಅವನಿ ಗ್ರೀನ್ ಫ್ಯಾಕ್ಟರಿʼ ಯ ಆರಂಭದ ಗುಟ್ಟು ಅಂತ ಅವನಿ ಕುರಿತು ಮಾತಿಗಿಳಿಯುತ್ತಾರೆ ನಟಿ ಅಂಜಲಿ ರಾಮಚಂದ್ರ.

“ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರು. ಆದರೂ ಹಳ್ಳಿ, ಮತ್ತು ಅಲ್ಲಿನ ಬದುಕು ನನಗೆ ಒಂಥರ ಆಸಕ್ತಿ. ಅದು ಇನ್ನಷ್ಟು ತೀವ್ರವಾಗಿದ್ದು ಬಯೋಟೆಕ್ ಎಂಜಿನಿಯರಿಂಗ್ ಸೇರಿದ ನಂತರ‌. ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುವಾಗಲೇ ಭೂಮಿಗೆ ನನ್ನಿಂದಾದ ಸಹಾಯ ಮಾಡಬೇಕು, ರಸಾಯನಿಕ ಗೊಬ್ಬರ ಬಳಕೆಗೆ ಪರ್ಯಾಯವಾಗಿ ಏನಾದರೂ ಸಾವಯವ ಗೊಬ್ಬರ ಕಂಡು ಹಿಡಿಯಬೇಕೆಂದು ಆಲೋಚಿಸಿದೆ‌. ಅದರಲ್ಲೇ ಸಂಶೋಧನೆ‌ ಶುರು ಮಾಡಿದೆ. ಕಾಲೇಜಿನ ಪ್ರಾಧ್ಯಾಪಕರಾದ ಪ್ರಶಾಂತ್ ಕುಮಾರ್ ಇದಕ್ಕೆ ಸಾಥ್ ಕೊಟ್ಟರು. ತೆಂಗಿನ ನಾರು ಬಳಸಿ ಒಂದೊಳ್ಳೆಯ ಸಾವಯವ ಗೊಬ್ಬರ ತಯಾರಿಸಬಹುದೆಂಬ ಆಲೋಚನೆ ಬಂತು. ಒಂದಷ್ಟು ದಿನ ಅದರಲ್ಲೇ ಸಂಶೋಧನೆ ನಡೆಸಿ, ಕೊನೆಗೂ ಸಕ್ಸಸ್ ಕಂಡೆ ‘ ಎನ್ನುತ್ತಾರೆ ನಟಿ ಅಂಜಲಿ.

ನಟಿ ಅಂಜಲಿ ಅವರ ಸಂಶೋಧನೆಯ ಫಲವಾಗಿ ತಯಾರಿಸಲ್ಪಟ್ಟ ಗೊಬ್ಬರವೇ ಅವನಿ. ಇದು ಶುದ್ಧ ತೆಂಗಿನ ನಾರಿನಿಂದ ತಯಾರದ ಗೊಬ್ಬರ. ಪಕ್ಕಾ ಸಾವಯವ. ಇದು ಬಹು ಉಪಯೋಗಿ‌. ಅಡಿಕೆ, ತೆಂಗು, ಶುಂಠಿ ಸೇರಿದಂತೆ ಎಲ್ಲಾ ಬಗೆಯ ಬೆಳೆಗಳಿಗೆ ಶಕ್ತಿ ನೀಡುವುದಲ್ಲದೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ತೇವಾಂಶವನ್ನು ಬಹುಕಾಲ ಕಾಪಾಡುತ್ತದೆ. ‘ ನನ್ನ ಪ್ರಕಾರ ಈಗ ರೈತರು ತಮ್ಮ ಭೂಮಿಯ ಫಲವತ್ತತೆ ಉಳಿಸಿಕೊಳ್ಳಲು ಹಾಗೂ ತಾವು ಆರೋಗ್ಯವಂತರಾಗಿರಲು ಸಾವಯವ ಗೊಬ್ಬರ ಬಳಕೆ ಅನಿವಾರ್ಯ. ರಸಾಯನಿಕ ಗೊಬ್ಬರ ಬಳಕೆ ಭೂಮಿಯನ್ನು ಬಹುತೇಕ ಹಾಳು ಮಾಡಿದೆ. ಜತೆಗೆ ಆ ಗೊಬ್ಬರದಿಂದ ಬೆಳೆದ ಬೆಳೆಗಳನ್ನು ತಿಂದು ಜನರು ಕೂಡ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇದು ನಿಲ್ಲಬೇಕಾದರೆ ʼಅವನಿʼಯಂತಹ ಸಾವಯವ ಗೊಬ್ಬರ ಬಳಕೆ ಅನಿವಾರ್ಯ’ ಎನ್ನುತ್ತಾರೆ ಅಂಜಲಿ.

ಅವನಿ ಗ್ರೀನ್ ಫ್ಯಾಕ್ಟರಿ ಈಗ ಗೊಬ್ಬರ ತಯಾರಿಕೆ ಮತ್ತು ಮಾರಾಟ ಎರಡು ಕ್ಷೇತ್ರದಲ್ಲೂ ಸಕ್ರಿಯವಾಗಿದೆ. ಕರ್ನಾಟಕ ತೆಂಗು ಮತ್ತು ನಾರು ಅಭಿವೃದ್ಧಿ ಸಂಸ್ಥೆ ಇದಕ್ಕೆ ಸಾಥ್ ನೀಡಿದೆ. ತಿಪಟೂರು ಹಾಗೂ ಗುಬ್ಬಿ‌ ನಡುವಿರುವ ತೆಂಗಿನ‌ ನಾರು ಅಭಿವೃದ್ಧಿ ಘಟಕದಲ್ಲೇ ಅವನಿ ಗೊಬ್ಬರ ತಯಾರಾಗುತ್ತದೆ‌ . ಇನ್ನು ಇದರ ಮಾರಾಟ ಪ್ರಕ್ರಿಯೆಗೆ ಅವನಿ ಗ್ರೀನ್ ಫ್ಯಾಕ್ಟರಿಯು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ತನ್ನ ಕಚೇರಿ ಹೊಂದಿದೆ. ಅಂಜಲಿ ಅವರ ಈ ಪ್ರಯತ್ನದಲ್ಲಿ ಸವಿತಾ ಹಾಗೂ ಡಯಾನಾ ಸಾಥ್‌ ನೀಡಿದ್ದಾರೆ. ಹಾಗೆಯೇ ಚಿತ್ರ ನಿರ್ದೇಶಕ ಗಿರೀಶ್‌ ಮೂಲಿಮನಿ ಕೂಡ ಕಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ತೆಂಗು, ಅಡಿಕೆ , ಬಾಳೆ, ಶುಂಠಿ ಸೇರಿದಂತೆ ಎಲ್ಲಾ ಬೆಳೆಗಳಿಗೂ ಇದು ಉಪಯುಕ್ತ ಗೊಬ್ಬರ. ಅದರಲ್ಲೂ ನಗರಗಳಲ್ಲಿನ ಗಾರ್ಡನ್‌ ಸಂಸ್ಕೃತಿಗೆ ಹೇಳಿ ಮಾಡಿಸಿದ ಗೊಬ್ಬರ ಎನ್ನುವುದು ಅಂಜಲಿ ಅವರ ಮಾತು. ಹೆಚ್ಚಿನ ಮಾಹಿತಿಗೆ 9243860725 ಹಾಗೂ gmail: avanigreen [email protected]
ಗೆ ಸಂಪರ್ಕಿಸಬಹುದು.

Categories
ಸಿನಿ ಸುದ್ದಿ

ಮದರಂಗಿ ಕೃಷ್ಣನ ಹೊಸ ಚಿತ್ರದಲ್ಲಿ ಪವರ್‌ಸ್ಟಾರ್‌!

ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನ

“ಮದರಂಗಿ” ಕೃಷ್ಣ ಯಾವಾಗ “ಲವ್‌ ಮಾಕ್ಟೇಲ್‌” ಸಿನಿಮಾ ಮೂಲಕ ಸುದ್ದಿಯಾಗಿಬಿಟ್ಟರೋ, ಅಲ್ಲಿಂದ ಅವರ ಅದೃಷ್ಟದ ಬಾಗಿಲು ತೆರೆದಿದ್ದು ನಿಜ. ಸಾಲು ಸಾಲು ಸಿನಿಮಾಗಳಲ್ಲಿ ಮದರಂಗಿ ಕೃಷ್ಣ ನಟಿಸುತ್ತಿರೋದು ನಿಜ. ಈಗ ಹೊಸ ಸುದ್ದಿ ಅಂದರೆ, ನೃತ್ಯ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಅವರಿಗೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಮದರಂಗಿ ಕೃಷ್ಣ ಹೀರೋ. ಇನ್ನು, ನಾಗೇಂದ್ರ ಪ್ರಸಾದ್‌ ಅವರು ಮಾಡುತ್ತಿರುವ ಹೊಸ ಚಿತ್ರದ ಮತ್ತೊಂದು ವಿಶೇಷ ಅಂದರೆ, ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಸದ್ಯಕ್ಕೆ ಈ ಸುದ್ದಿ ಜೋರಾಗಿದೆ. ಅಂದಹಾಗೆ, ಕೃಷ್ಣ ನಟಿಸಿದರೋದು ಸ್ವಮೇಕ್‌ ಸಿನಿಮಾದಲ್ಲಲ್ಲ. ಬದಲಾಗಿ ತಮಿಳು ಸಿನಿಮಾದ ರಿಮೇಕ್‌ ಚಿತ್ರ. ಅದು “ಓ ಮೈ ಕಡವುಲೆ’ ಸಿನಿಮಾ. ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ತಯಾರಿ ನಡೆಸಲಾಗಿದೆ. ಈ ಚಿತ್ರ ರಿಮೇಕ್‌ ಆಗಿದ್ದರೂ, ಕನ್ನಡಕ್ಕೆ ಒಂದಷ್ಟು ಬದಲಾವಣೆ ಮಾಡಿಕೊಂಡು. ಕನ್ನಡದಲ್ಲಿ ತಯಾರಾಗುತ್ತಿದೆ. ಇನ್ನು, ಈ ಮೂಲ ಚಿತ್ರದಲ್ಲಿ ಅಶೋಕ್ ಸೆಲ್ವನ್ ನಾಯಕರಾಗಿದ್ದರು. ರಿತಿಕಾ ಸಿಂಗ್ ನಾಯಕಿಯಾಗಿದ್ದರು. ಅತಿಥಿ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ನಟಿಸಿದ್ದರು.

ಈಗ ಕನ್ನಡದಲ್ಲಿ ತಯಾರಾಗಲಿರುವ ಈ ಚಿತ್ರದಲ್ಲಿ ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ನಟಿಲು ಒಪ್ಪಿದ್ದಾರೆ ಎನ್ನಲಾಗಿದೆ. ಈಗಾಗಲೇ ಪುನೀತ್ ಅವರ ಜೊತೆ  ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅವರು ನಟಿಸುವ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ. ಅದೇನೆ ಇದ್ದರೂ, ಇಲ್ಲೀಗ ಸಿನಿಮಾತಂಡ ಕೂಡ ಆ ಕುರಿತಂತೆ ವಿಷಯ ಹೊರಹಾಕಬೇಕಿದೆ.  ನಾಗೇಂದ್ರ ಪ್ರಸಾದ್‌ ಅಂದಾಕ್ಷಣ, ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅದೇ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಸಹೋದರ ಅಂದರೆ ಗೊತ್ತಾಗುತ್ತೆ. ಮೂಗುರು ಸುಂದರಂ ಅವರ ಮೂರನೇ ಪುತ್ರ ನಾಗೇಂದ್ರ ಪ್ರಸಾದ್‌ ಈಗಾಗಲೇ ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಅಲ್ಲೂ ಜೋರು ಸುದ್ದಿಯಾಗಿದ್ದಾರೆ. ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ ಅವರು “೧೨೩”, “ಮನಸೆಲ್ಲಾ ನೀನೆ” ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿರುವ ನಾಗೇಂದ್ರ ಪ್ರಸಾದ್ ಈಗ ಇಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ತೆರೆ ಮೇಲೂ ಸೈ ಅಂತಾರೆ ಮಾಲೂರು ಶ್ರೀನಿವಾಸ್

 

ಇದೇ‌ ಮೊದಲ ಸಲ 5ಡಿ ಚಿತ್ರದಲ್ಲಿ ಖಡಕ್ ಕಾಪ್

ನೃತ್ಯ ನಿರ್ದೇಶಕನಾಗಿ ಇದ್ದವನು ನಾನು.‌ ಸದಾ ತೆರೆ ಹಿಂದೆ ಇರುವಂಥವನಿಗೆ ಒಳ್ಳೆಯ ಅವಕಾಶವಿದು.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ…

ಮಾಲೂರು ಶ್ರೀನಿವಾಸ್. ಕನ್ನಡ‌ ಚಿತ್ರರಂಗ ಕಂಡ ಯಶ್ವಿ ನೃತ್ಯ ನಿರ್ದೇಶಕ. ಈ ಬಣ್ಣದ ಲೋಕ ಸ್ಪರ್ಶಿಸಿ ಎರಡು ದಶಕ ಕಳೆದಿರುವ ಮಾಲೂರು ಶ್ರೀನಿವಾಸ್, ಸುಮಾರು 400ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ‌ ಕೆಲಸ‌ ಮಾಡಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ಸೇರಿದಂತೆ ಹೊಸಬರಿಗೂ ಸ್ಟೆಪ್ ಹೇಳಿಕೊಟ್ಟ ಕೀರ್ತಿ ಇವರದು.


ಇಷ್ಟಕ್ಕೂ ಈ ಡ್ಯಾನ್ಸ್ ಮಾಸ್ಟರ್ ಮಾಲೂರು ಶ್ರೀನಿವಾಸ್ ಕುರಿತು ಇಷ್ಟೊಂದು ಪೀಠಿಕೆ‌ಯಾಕೆ ಗೊತ್ತಾ? ಮಾಲೂರು ತೆರೆ ಹಿಂದಷ್ಟೇ ಅಲ್ಲ, ತೆರೆ ಮೇಲೂ ಕಾಣಿಸಿಕೊಂಡಿದ್ದಾರೆ. ಹಾಗಂತ, ಅವರಿಗೆ ಇದು ಹೊಸದಲ್ಲ. ಹಲವು ಸಿನಿಮಾಗಳಲ್ಲಿ ಸ್ಟಾರ್ ಜೊತೆ ಹೆಜ್ಜೆ ಹಾಕಿದ್ದಾರೆ.

ಸಣ್ಣಪುಟ್ಟ ಪಾತ್ರಕ್ಕೂ ಜೈ ಎಂದಿದ್ದಾರೆ. ಆದರೆ, ಈಗ ಮೊದಲ ಸಲ‌ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಹೌದು, ಮಾಲೂರು ಶ್ರೀನಿವಾಸ್, ಎಅ್.ನಾರಾಯಣ್ ನಿರ್ದೇಶನದ “5ಡಿ” ಚಿತ್ರದಲ್ಲಿ ಒಂದೊಳ್ಳೆಯ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿ ಗನ್ ಹಿಡಿದಿದ್ದಾರೆ.


ಆ ಕುರಿತು ಹೇಳುವ ಮಾಲೂರು ಶ್ರೀನಿವಾಸ್, ” ಇದು ಮೊದಲ ಕಾಪ್ ಪಾತ್ರ. ನಾನು ಹಿಂದೆ ಒಂದಷ್ಟು ಸಿನಿಮಾದಲ್ಲಿ‌ ನಟಿಸಿದ್ದರೂ, ಈ ರೀತಿಯ ಪಾತ್ರ ಮಾಡಿರಲಿಲ್ಲ. ಈಗ ನಾರಾಯಣ್ ಸರ್ ನನ್ನ ಗುರುಗಳು. ಅವರ ಎಲ್ಲಾ ಸಿನಿಮಾಗಳಿಗೂ ನಾನೇ ಕೋರಿಯೋಗ್ರಾಫರ್. ಹಾಗಾಗಿ ಇಲ್ಲೂ ಹಾಡುಗಳಿಗೆ ಕೋರಿಯೋಗ್ರಾಫ್ ಮಾಡಿದ್ದೇನೆ. ನಾರಾಯಣ್ ಸರ್ ಇಲ್ಲಿ ಕಾಪ್ ಪಾತ್ರ ಮಾಡಿಸಿದ್ದಾರೆ. ಈಗಾಗಲೇ ಆ ಸೀನ್ ಚಿತ್ರೀಕರಣಗೊಂಡಿದೆ.


ನಾನೊಬ್ಬ ಕಡಕ್ ಪೊಲೀಸ್ ಅಧಿಕಾರಿ. ನನ್ ಕಂಟ್ರೋಲ್ ಇರುವ ಒಂದು ಪೊಲೀಸ್ ಸ್ಟೇಷನ್ ಅಧಿಕಾರಿ‌ ನಾನು. ಚೆನ್ನಾಗಿದೆ. ಮೂರು‌ ದಿನಗಳ ಕಾಲ‌ ನನ್ನ ಎಪಿಸೋಡ್ ಮಾಡಲಾಗಿದೆ. ಆದಿತ್ಯ ಅವರ ಜೊತೆಗಿನ ಕಾಂಬಿನೇಷನ್ ಇಲ್ಲ.


ಒಂದು ತನಿಖೆ ಅಧಿಕಾರಿ. ಒಳ್ಳೆಯ ಪಾತ್ರವದು. ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ನಂಬರ್ ಆಫ್ ಶಾಟ್ಸ್, ಬಿಲ್ಡಪ್ಸ್ ಇವೆ. ಒಂದು ದಿನ ಫುಲ್ ಇಂಟ್ರಡಕ್ಷನ್ ಸೀನ್ ಮಾಡಿದ್ದಾರೆ. ಎಲ್ಲರಿಗೂ ಮಾಲೂರು ಸ್ಕ್ರೀನ್ ಮೇಲೆ ಬೇರೆ ರೀತಿ ಕಾಣುತ್ತಾರೆ. ಈ ಚಿತ್ರದಲ್ಲಿ ನಾನು ತೆರೆಯ ಹಿಂದೆ, ಮುಂದೆ ಎರಡು ರೀತಿ ಕೆಲಸ ಮಾಡಿದ್ದೇನೆ.

ಸಾಂಗ್ ಗೂ ಕೋರಿಯೊಗ್ರಾಫ್ ಮಾಡಿದ್ದೇನೆ. ಕಾಪ್ ಆಗಿಯೂ ನಟಿಸಿದ್ದೇನೆ. ಇದೊಂದು ಅಪರೂಪದ ಪಾತ್ರ. ನಾರಾಯಣ್ ಸರ್ ಕರೆದು ಈ ಪಾತ್ರ ಮಾಡಿ‌ ಅಂದಾಗ, ಇಲ್ಲ ಅನ್ನೋಕೆ ಆಗಲಿಲ್ಲ. ಮಾಡಿದೆ.
ನೃತ್ಯ ನಿರ್ದೇಶಕನಾಗಿ ಇದ್ದವನು ನಾನು.‌ ಸದಾ ತೆರೆ ಹಿಂದೆ ಇರುವಂಥವನಿಗೆ ಇದೊಂದು ಒಳ್ಳೆಯ ಅವಕಾಶ.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ.

ಬಹುತೇಕ ವಾಹಿನಿಗಳಿಗೆ ರಿಯಾಲಿಟಿ ಶೋಗಳಿಗೆ ಮೊದಲು ಎಂಟ್ರಿಕೊಟ್ಟವನು ಎಂಬ ಹೆಮ್ಮೆ‌ಯೂ ಇದೆ. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದವನು. ಅಲ್ಲಿಂದ ಒಂದು ಡ್ಯಾನ್ಸ್ ಶೋ ಸಂಗ್ರಾಮ ಮಾಡಿದ ಖುಷಿ ಇದೆ. “ಕುಣಿಯೋಣು ಬಾರಾ” ಎಂಬ ಜನಪ್ರಿಯ ಶೋ ಮೂಲಕ ಹೊಸ ಡ್ಯಾನ್ಸ್ ಕ್ರಾಂತಿಯೇ ಆಗೋಯ್ತು. ಆಗಲೇ 9 ಸೀಸನ್ ಮಾಡಿದ್ದೆ. ಆ ದಿನಗಳಲ್ಲೇ‌ ನನಗೆ ಹೀರೋ ಆಗಿ ನಟಿಸುವ ಅವಕಾಶ ಬಂದಿದ್ದವು.

ಆದರೆ, ನಾನು ಆಗ ಬಿಝಿ ಇದ್ದಂತಹ ಕಾಲಘಟ್ಟ, ಒಂದು ಕಡೆ ರಿಯಾಲಿಟಿ ಶೋ, ಇನ್ನೊಂದು ಕಡೆ‌‌ ಸಾಲು‌ ಸಾಲು ಸಿನಿಮಾಗಳಿದ್ದವು. ಹಾಗಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನಟನೆಯತ್ತ ವಾಲಿದ್ದೇನೆ. ನನಗೆ ಸೂಕ್ತ ಎನಿಸುವ ಪಾತ್ರ ಇದ್ದರೆ ಖಂಡಿತ ಮಾಡ್ತೀನಿ. ಸದ್ಯ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ” ಎನ್ನುತ್ತಾರೆ ಮಾಲೂರು ಶ್ರೀನಿವಾಸ್.


ಅದೇನೆ ಇರಲಿ‌‌ ದಶಕಗಳ‌ ಕಾಲ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್, ಈಗ ನಟನೆ ಕಡೆ ಗಮನ ಹರಿಸಿದ್ದಾರೆ. ಒಬ್ಬ ಯಶಸ್ವಿ ಡ್ಯಾನ್ಸ್ ಮಾಸ್ಟರ್ ಆಗಿರುವ ಅವರು, ಒಳ್ಳೆಯ ಕಲಾವಿದರಾಗಿಯೂ ಹೊರ ಹೊಮ್ಮಲಿ ಎಂಬುದು “ಸಿನಿಲಹರಿ” ಹಾರೈಕೆ.

error: Content is protected !!