Categories
ಸಿನಿ ಸುದ್ದಿ

ಪೆಂಟಗನ್‌ ಸಿನಿಮಾದೊಳಗೆ ಕಾಗೆ , ಬಾ ಅಂತ ಕರೆದರು ಗುರುದೇಶ ಪಾಂಡೆ !

ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ಯೂನಿಕ್‌ ಕಾನ್ಸೆಫ್ಟ್‌ ನ ಮೋಷನ್‌ ಪೋಸ್ಟರ್

ಕನ್ನಡದಲ್ಲೂ ಕ್ರಿಯೇಟರ್ಸ್‌ ಇದ್ದಾರೆ ಅಂತ ತೋರಿಸುವುದೇ ಪೆಂಟಗನ್‌ʼ ಅಂದ್ರು ಗುರು

ಆಂಥಾಲಜಿ ಕಥಾ ಹಂದರದ ಸಿನಿಮಾಗಳ ಪೈಕಿ ಕನ್ನಡದಲ್ಲೀಗ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ʼಪೆಂಟಗನ್ʼ.‌ ಐದು ಕತೆ, ಐವರು ನಿರ್ದೇಶನದ ಮೂಲಕ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬಂಡವಾಳ ಹಾಕಿದವರು ನಿರ್ದೇಶಕ ಗುರುದೇಶಪಾಂಡೆ. ಈಗ ಈ ಚಿತ್ರ ಮೋಷನ್‌ ಪೋಸ್ಟರ್‌ ಮೂಲಕ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಜೈಂಕಾರ್‌ ಮ್ಯೂಜಿಕ್‌ ಆಡಿಯೋ ಸಂಸ್ಥೆಯ ಆಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಹೊರ ಬಂದಿರುವ ಈ ಮೋಷನ್‌ ಪೋಸ್ಟರ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವೀಕ್ಷಕರಿಂದ ಅದ್ಭುತವಾದ ರೆಸ್ಪಾನ್ಸ್‌ ಸಿಕ್ಕಿದೆ. ಅಪಾರ ಮೆಚ್ಚುಗೆ ಕೂಡ ಸಿಕ್ಕಿದೆ. ಅದೆಲ್ಲದಕ್ಕೂ ಕಾರಣವಾಗಿದ್ದು ಯೂನಿಕ್‌ ಕಾನ್ಸೆಫ್ಟ್‌ನ ಮೋಷನ್‌ ಪೋಸ್ಟರ್‌.

ಐದು ಕತೆಗಳು, ಹಾಗೆಯೇ ಐದು ಮಂದಿ ನಿರ್ದೇಶಕರ ಸಿನಿಮಾ ಅಂದಾಗ ಮೊದಲು ಕುತೂಹಲ ಇರೋದು ಸಿನಿಮಾದ ಬಗ್ಗೆ ಅಲ್ಲ, ಬದಲಿಗೆ ಅದರ ಪೋಸ್ಟರ್‌, ಆ ನಂತರ ಟೀಸರ್‌, ತದನಂತರ ಟ್ರೇಲರ್. ನಾಳೆ “ಪೆಂಟಗನ್‌ʼ ಚಿತ್ರದ ಮೋಷನ್‌ ಪೋಸ್ಟರ್‌ ಲಾಂಚ್‌ ಅಗುತ್ತೆ ಅಂದಾಗಿನಿಂದಲೂ ಚಿತ್ರ ಪ್ರೇಕ್ಷಕರಲ್ಲಿ ಇದ್ದ ಕುತೂಹಲವೂ ಅದೇ ಆಗಿತ್ತು. ಅಂತಹ ಕುತೂಹಲಕ್ಕೆ ತೆರೆ ಬಿದ್ದಿದ್ದು ಅದರ ಮೋಷನ್‌ ಪೋಸ್ಟರ್‌ ಹೊರ ಬಂದಾಗಲೇ.

ಇದು ಎಲ್ಲಾ ಆಂಥಾಲಜಿ ಸಿನಿಮಾಗಳ ಬಗೆಗೂ ಹುಟ್ಟಬಹುದಾದ ಸಹಜ ಕುತೂಹಲವೂ ಕೂಡ. ಯಾಕಂದ್ರೆ, ಬೇರೆ ಬೇರೆಯಾದ ಐದು ಕತೆಗಳನ್ನು ಒಂದೆಡೆ ಜೋಡಿಸಿಕೊಂಡು ಆ ಮೂಲಕ ಸಿನಿಮಾ ಮಾಡುತ್ತೇವೆ, ಅದನ್ನು ಜನರಿಗೆ ತೋರಿಸಿ ರಂಜಿಸುತ್ತೇವೆ ಅನ್ನೋದು ಅಷ್ಟು ಸುಲಭದ ಕೆಲಸ ಅಲ್ಲ. ಅದೊಂದು ಸವಾಲಿನ ಕೆಲಸ. ಆದರೂ ಈಗ “ಪೆಂಟಗನ್‌ʼ ಚಿತ್ರ ತನ್ನ ಪೋಸ್ಟರ್ಸ್‌ ಹಾಗೂ ಮೋಷನ್‌ ಪೋಸ್ಟರ್‌ ಮೂಲಕ ಒಂದಷ್ಟು ಯೂನಿಕ್‌ ಕಾನ್ಸೆಫ್ಟ್‌ ತೋರಿಸಿ ಕುತೂಹಲ ಮೂಡಿಸಿದ್ದು ಗಮನಾರ್ಹ.

ಅ ೧ ನಿಮಿಷ ೨ ಸೆಕೆಂಡುಗಳಷ್ಟು ಅವದಿಯ ಅದರ ಮೋಷನ್‌ ಪೋಸ್ಟರ್‌ ನಲ್ಲಿ ಯೂನಿಕ್‌ ಆದ ನೋಟವಿದೆ. ಬಹುತೇಕ ಗ್ರಾಫಿಕ್ಸ್‌ ಬಳಸಿಯೇ ಈ ಮೋಷನ್‌ ಪೋಸ್ಟರ್‌ ಕ್ರಿಯೇಟ್‌ ಮಾಡಲಾಗಿದೆ. ಅಲ್ಲಿಯೇ ಕಾಗೆಯೇ ಹೈಲೈಟ್ಸ್‌. ಕಾಗೆಯನ್ನು ಅಪಶಕುನ ಅಂತೆಲ್ಲ ತಿಳಿಯುವವರಿಗೆ ಈ ಕಾಗೆ ಅಂತಹದಲ್ಲ ಅಂತಾರೆ ನಿರ್ದೇಶಕ ಕಮ್‌ ನಿರ್ಮಾಪಕ ಗುರುದೇಶ ಪಾಂಡೆ. ಇನ್ನು ಈ ಚಿತ್ರದ ಮೋಷನ್‌ ಪೋಸ್ಟರ್‌ ಲಾಂಚ್‌ ಆಗುವ ಮುನ್ನವೇ ಅದರ ಐದು ಕತೆಗಳ ಬೇರೆ ಬೇರೆಯ ವಿಭಿನ್ನ ಪೋಸ್ಟರ್‌ ಆಗಲೇ ಸೋಷಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಚಿತ್ರತಂಡವೇ ಆ ಪೋಸ್ಟರ್‌ ಲಾಂಚ್‌ ಮಾಡಿತ್ತು. ಅವೆಲ್ಲವೂ ಅಲ್ಲಿನ ಕತೆಗಳಿಗೆ ಪೂರಕವಾಗಿ ಬಂದಿದ್ದವು. ಒಬ್ಬೊಬ್ಬರದು ಒಂದೊಂದು ಥರ.

ಒಬ್ಬರದು ಸ್ವೀಟೆಸ್ಟ್‌ ಆಗಿದ್ದರೆ, ಮತ್ತೊಬ್ಬರದು ಹಾಟೆಸ್ಟ್‌, ಮಗದೊಬ್ಬರದು ಸ್ವೀಟು ಮತ್ತು ಹಾಟ್‌ ಗೆ ವಿರುದ್ಧವಾದ ಗನ್‌ ಪಾಯಿಂಟ್‌. ಅದರಾಚೆ ಮೋಷನ್‌ ಪೋಸ್ಟರ್‌ ಮಾತ್ರ ಅವೆಲ್ಲವುದರ ಮಿಕ್ಸರ್.‌ ತುಂಬಾ ಡಿಫೆರೆಂಟ್‌ ಆಗಿಯೇ ಮೂಡಿ ಬಂದಿದೆ. ಐದು ಜನ ನಿರ್ದೇಶಕರ ಕತೆಗಳು ಹೈಲೈಟ್ಸ್‌ ಆಗುವ ಹಾಗೆ ಮೋಷನ್‌ ಪೋಸ್ಟರ್‌ ಕ್ರಿಯೇಟ್‌ ಮಾಡಿರುವುದು ವಿಶೇಷವಾಗಿದೆ. ಅಷ್ಟು ಕತೆಗಳಿಗೆ ಕೊಂಡಿಯಾಗಿ ಕಾಗೆಯನ್ನು ತೋರಿಸಲಾಗಿದೆ. ಅಲ್ಲಿನ ಕತೆಗಳಿಗೆ ಕಾಗೆಗೂ ಅದೆಂತಹದೋ ನಂಟು ಗೊತ್ತಿಲ್ಲ. ಅದಕ್ಕೆ ಚಿತ್ರ ನೋಡಿ ಅಂತಾರೆ ನಿರ್ದೇಶಕರು. ರಿಯಲ್‌ ಸ್ಟಾರ್‌ ಉಪೇಂದ್ರ ಈ ಪೊಸ್ಟರ್‌ ಲಾಂಚ್‌ ಮಾಡಿ ಶುಭ ಹಾರೈಸಿದ್ದಾರೆ.

ಇನ್ನು ಜೀ ಸಿನಿಮಾಸ್‌ ಪ್ರೊಡಕ್ಷನ್‌ ಅಡಿಯಲ್ಲಿ ಗುರು ದೇಶಪಾಂಡೆ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಲ್ಲದೆ, ಅದರಲ್ಲಿನ ಐದು ಕತೆಗಳಲ್ಲಿ ಒಂದು ಕತೆಗೆ ಆಕ್ಷನ್‌ ಕಟ್‌ ಹೇಳಿದ್ದಾರೆ.ಉಳಿದಂತೆ ಚಂದ್ರ ಮೋಹನ್‌, ಕಿರಣ್‌ ಕುಮಾರ್‌, ರಘು ಶಿವಮೊಗ್ಗ ಹಾಗೂ ಆಕಾಶ್‌ ಶ್ರೀವಾತ್ಸ ನಾಲ್ಕು ಕತೆಗಳಿಗೆ ನಿರ್ದೇಶನ ಮಾಡಿದ್ದಾರೆ. ಐದು ಕತೆಗಳ ಪೈಕಿ ಈಗಾಗಲೇ ಮೂರು ಕತೆಗಳಿಗೆ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಹಾಗೂ ಹೊರವಲಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆಯಂತೆ. ಉಳಿದ ಎರಡು ಕತೆಗಳಿಗೆ ಇನ್ನು ಚಿತ್ರೀಕರಣ ಬಾಕಿ ಇದೆ. ಇನ್ನು ಐದು ಕತೆಗಳಲ್ಲಿ ಒಂದು ಕತೆಗೆ ಅದ್ವೈಂತ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದರೆ, ಉಳಿದ ನಾಲ್ಕು ಕತೆಗಳಿಗೆ ಕಿರಣ್‌ ಹಂಪಾಪುರ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಕಲಾವಿದರು ಸೇರಿದಂತೆ ಉಳಿದ ವಿವರಗಳನ್ನು ಚಿತ್ರದ ಇಷ್ಟರಲ್ಲಿಯೇ ನೀಡಲಿದೆಯಂತೆ.

 

Categories
ಸಿನಿ ಸುದ್ದಿ

ಪೊಗರು ರಿಲೀಸ್‌ ಬಗ್ಗೆ ಕೊನೆಗೂ ರಶ್ಮಿಕಾ ಮಾತಾಡಿಬಿಟ್ಟರು!

ರಿಲೀಸ್‌ ಕುರಿತು ಬಾಯಿಬಿಡದ ರಶ್ಮಿಕಾಗೆ ಮಾತಿನ ಬಿಸಿ ತಟ್ಟಿತ್ತು

ಟ್ವೀಟ್‌ ಮೂಲಕ ಜೈ ಅಂದ ಮಂದಣ್ಣ

ಧ್ರುವಸರ್ಜಾ ಅಭಿನಯದ “ಪೊಗರು” ಸಿನಿಮಾ ಫೆಬ್ರವರಿ ೧೯ರಂದು ಬಿಡುಗಡೆಯಾಗಲಿದೆ. ಈ ಕುರಿತಂತೆ, ಸ್ವತಃ ಧ್ರುವ ಸರ್ಜಾ ಅವರೇ ವಿಡಿಯೋ ಮಾಡುವ ಮೂಲಕ ದಿನಾಂಕವನ್ನು ಘೋಷಣೆ ಮಾಡಿದ್ದರು. ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗುತ್ತಿರುವ ಬಿಗ್‌ ಬಜೆಟ್‌ ಸಿನಿಮಾ ಇದಾಗಿದ್ದು, ಧ್ರುವ ಸರ್ಜಾ ಅವರ ಅಭಿಮಾನಿಗಳಿಗಂತೂ ಸಖತ್‌ ಖುಷಿಯಾಗಿದೆ. ಇನ್ನು, ಈ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆಯೇ, ಚಿತ್ರತಂಡ ಕೂಡ ಬಿಡುಗಡೆಯ ತಯಾರಿಯನ್ನು ಜೋರಾಗಿಯೇ ನಡೆಸಿದೆ.

ಆದರೆ, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮಾತ್ರ, “ಪೊಗರು” ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದ್ದರೂ, ಕೂಡ ಅವರು ಎಲ್ಲೂ ಸಹ ಚಿತ್ರದ ಬಗ್ಗೆ ಒಂದೇ ಒಂದು ಪೋಸ್ಟ್‌ ಮಾಡಿಲ್ಲ. ಆ ಕುರಿತಂತೆ ಹೇಳಿಕೊಂಡಿರಲಿಲ್ಲ. ಕನ್ನಡ ಚಿತ್ರರಂಗದಿಂದಲೇ ಎಂಟ್ರಿಯಾಗಿ, ಈಗ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಅವರು ತಮ್ಮ ಚಿತ್ರದ ಕುರಿತು ಮಾತನಾಡಿಲ್ಲ ಎಂಬ ಆಕ್ರೋಶಕ್ಕೆ ಕಾರಣರಾಗಿದ್ದರು.

ಹಲವು ಜನರು ಟ್ವೀಟ್‌ ಮಾಡುವ ಮೂಲಕ ಕಾಲೆಳೆದಿದ್ದರು. ಆಮೇಲೆ ಎಚ್ಚೆತ್ತುಕೊಂಡಿರುವ ರಶ್ಮಿಕಾ ಮಂದಣ್ಣ, ಇದೀಗ, ಧ್ರುವಸರ್ಜಾ ಅವರು ಹಂಚಿಕೊಂಡಿರುವ ಪೋಸ್ಟ್‌ವೊಂದನ್ನು ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಗರು ರಿಲೀಸ್‌ಗೆ ಕೇವಲ ೩೦ ದಿನಗಳು ಎಂದು ಹಾಕಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ, ಟ್ವೀಟ್‌ ಮಾಡಿದ ಮೇಲೆ, ಅವರ ವಿರುದ್ಧದ ಮಾತುಗಳು ಕಡಿಮೆಯಾಗುತ್ತಿವೆ.
ಅಂದಹಾಗೆ, ನಂದಕಿಶೋರ್‌ ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ “ಕರಾಬು” ಹಾಡು ಎಲ್ಲೆಲ್ಲೂ ಸದ್ದು ಮಾಡಿದೆ. ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ “ಪೊಗರು” ಸಿನಿಮಾ ಕೂಡ ಒಂದು. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಪೊಗರು” ಕೊನೆಗೂ ಚಿತ್ರಮಂದಿರಕ್ಕೆ ಬರುತ್ತಿದೆ. ಅಭಿಮಾನಿಗಳು ಇದೀಗ ಚಿತ್ರ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಪ್ರೀತಿಸೋ ಹುಡುಗರಿಗೆ ಸೈಕೋ ಕಾಟ !

ಅಂಜು ಎಂಬ ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌

ಎರಡನೇ ಹಂತಕ್ಕೆ ಚಿತ್ರತಂಡ ಸಜ್ಜು

ಕನ್ನಡದಲ್ಲಿ ಈಗಂತೂ ಹೊಸಬರ ಅನೇಕ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಸಾಲಿಗೆ “ರಸಗುಲ್ಲ ಅಂಜು” ಎಂಬ ಸಿನಿಮಾ ಕೂಡ ಸೇರಿದೆ. ಈ ಚಿತ್ರಕ್ಕೆ ರಾಜೀವ್‌ ಕೃಷ್ಣ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಇವರದೇ. ಈಗಾಗಲೇ ನಿರ್ದೇಶಕರು ಸದ್ದಿಲ್ಲದೆಯೇ ಮೊದಲ ಹಂತವನ್ನು ಮುಗಿಸಿದ್ದಾರೆ. ಸದ್ಯಕ್ಕೆ ಏಳು ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ತೆಲುಗಿನ ನಟ ಬಾನುಚಂದರ್‌ ಹಾಗೂ ಅಭಿಜಿತ್‌ ಅವರ ಡೇಟ್‌ ನೋಡಿಕೊಂಡು ಚಿತ್ರೀಕರಿಸಿದರೆ ಚಿತ್ರೀಕರಣ ಮುಕ್ತಾಯ. ಇದು ಟೆನ್ ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಚಿಂತಾಮಣಿಯಲ್ಲಿರುವ ಶ್ರೀಪ್ರಸನ್ನ ಆಂಜನೇಯ ದೇವಾಲಯದಲ್ಲಿ ಮುಹೂರ್ತ ನೆರವೇರಿತ್ತು.

ಅಷ್ಟೇ ವೇಗದಲ್ಲಿ ನಿರ್ದೇಶಕರು ಮೊದಲ ಹಂತವನ್ನು ಮುಗಿಸಿದ್ದಾರೆ. ಚಿತ್ರಕ್ಕೆ “ಖೇಲ್” ಚಿತ್ರದ ನಿರ್ಮಾಪಕ ಮಾರ್ಕೆಟ್ ಸತೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, “ಲೆಕ್ಕಾಚಾರ” ಚಿತ್ರದ ನಿರ್ಮಾಪಕ ಆರ್.ಚಂದ್ರು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಕುರಿತು ಹೇಳುವ ನಿರ್ದೇಶಕ, ರಾಜೀವ್‌ ಕೃಷ್ಣ, “ಇದೊಂದು ಗೆಳೆಯ, ಗೆಳತಿಯರ ನಡುವಿನ ಚಿತ್ರ. ಬೆಂಗಳೂರಿನಿಂದ ಹೈದರಾಬಾದ್‌ಗೆ ಸಿನಿಮಾ ಆಡಿಷನ್‌ಗಾಗಿ ಪ್ರಯಾಣ ಬೆಳೆಸುವ ಮೂವರು ನಾಯಕ, ನಾಯಕಿಯರ ನಡುವೆ ಐದು ಮಂದಿ ಸೈಕೋಗಳು ಎಂಟ್ರಿಯಾಗುತ್ತಾರೆ. ಅವರಿಂದ ಆಗುವವಂತಹ ಅನಾಹುತಗಳೇನು, ಅವರು ಆ ಸೈಕೋಗಳಿಂದ ಪಾರಾಗಲು ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬ ಕಥಾಹಂದರ ಇಲ್ಲಿದೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಹಿರಿಯ ನಟ ಅಭಿಜಿತ್ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್‌ಬಾಸ್ ಬೆಡಗಿ ಸೋನು ಪಾಟೀಲ್, ರಮ್ಯ, ಯಶಸ್ಸಿನಿ ನಟಿಸುತ್ತಿದ್ದಾರೆ.  ನಾಯಕರಾಗಿ ರಾಜ್‌ಪ್ರತೀಕ್, ಉಲಿಬೆಲೆ ರಾಜೇಶ್ ರೆಡ್ಡಿ, ಹಾಗೂ ಸಿದ್ಧಾರ್ಥ ಇದ್ದಾರೆ. ಖಳನಾಯಕರಾಗಿ ಮುಂಬೈನ ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜ್‌ ನಟಿಸುತ್ತಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ನರಸಾಪುರ ಸಂದೀಪ್, ಭಕ್ತರಹಳ್ಳಿ ರವಿ, ರೇಣುಕಾ ಜೀವನ್, ಶಿವು, ಅಬ್ದುಲ್ ರೆಹಮಾನ್ ಇದ್ದಾರೆ. ಚಿತ್ರಕ್ಕೆ ವಿನುಮನಸು ಸಂಗೀತವಿದೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ.

ಮಲ್ಲಿ ಸಂಕಲನ ಮಾಡಿದರೆ, ಸುರೇಶ್ ಕಂಬಳಿ ಸಾಹಿತ್ಯವಿದೆ. ಶಿವು ಸಾಹಸ ಮಾಡಿದ್ದಾರೆ. ಭಕ್ತರಹಳ್ಳಿ ರವಿ ನಿರ್ಮಾಣ ನಿರ್ವಹಣೆ ಇದೆ. ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಕಲಾನಿರ್ದೇನವಿದೆ. ಈಗಾಗಲೇ ಚಿಕ್ಕಬಳ್ಳಾಪುರ ಚಿಂತಾಮಣಿ ನಂದಿಗಿರಿ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಮತ್ತು ಗಜೇಂದ್ರಗಡ ಕಡೆ ಪ್ರಯಾಣ ಬೆಳೆಸಲಿದೆ.

Categories
ಗಾಳಿ ಮಾತು ಸಿನಿ ಸುದ್ದಿ

ಟಕಿಲಾ ನಶೆ ಯಲ್ಲಿ ನಿಖಿತಾ ಸ್ವಾಮಿ !

ನಾಗಚಂದ್ರ ನಿರ್ಮಾಣ ಹಾಗೂ ಪ್ರವೀಣ್‌ ನಾಯಕ್‌ ನಿರ್ದೇಶನದ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ ಹೀರೋ, ನಿಖಿತಾ ಸ್ವಾಮಿ ಹೀರೋಯಿನ್

ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈಗ ಚಿತ್ರ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ. ʼವಿದ್ಯಾರ್ಥಿʼ ಹಾಗೂ “ ಮುನಿಯʼ ಹಾಗೂ “ ಜನಧನ್‌ʼ  ಚಿತ್ರಗಳ ನಿರ್ದೇಶನದ ನಂತರವೀಗ ಅವರೇ ಒಂದು ಚಿತ್ರದ  ನಿರ್ಮಾಣಕ್ಕೆ ಮುಂದಾ ಗಿದ್ದಾರೆ. ಈ ಚಿತ್ರಕ್ಕೆ ಕೆ. ಪ್ರವೀಣ್‌ ನಾಯಕ್‌  ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.  ಅಂದ ಹಾಗೆ ಈ ಜೋಡಿಯ ಚಿತ್ರವೇ “ಟಕಿಲಾʼ.

ಚಿತ್ರದ ಶೀರ್ಷಿಕೆಯೇ  ಇಲ್ಲಿ ವಿಶೇಷ. ಯಾಕಂದ್ರೆ ಟಿಕಿಲಾ ಅಂದ್ರೆ ಒಂದ್ರೀತಿಯ ನಶೆ.ಅದನ್ನಿಲ್ಲಿ ಅವರು ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ನೀಡಲು ಹೊರಟಿದ್ದಾರಂತೆ.  ಈ ತಿಂಗಳ ಅಂತ್ಯದ ಹೊತ್ತಿಗೆ ಸಿನಿಮಾ ಶುರುವಾಗುತ್ತಿದೆ.ಈಗಾಗಲೇ ಈ ಜೋಡಿ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡಿದೆ. ಹಾಗೆಯೇ ನಾಯಕ-ನಾಯಕಿಯನ್ನು ಫೈನಲ್‌ ಮಾಡಿಕೊಂಡಿದೆ. ಯುವ ನಟ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಇಲ್ಲಿ ಜೋಡಿಯಾಗಿದ್ದಾರೆ.

ಇದೊಂದು ಲವ್‌, ಸೆಂಟಿಮೆಂಟ್‌ ಹಾಗೂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಅದಕ್ಕೆ ತಕ್ಕಂತೆ ಯಂಗ್‌ ಪೇರ್‌ ಬೇಕಿತ್ತು. ಆದಕ್ಕೆ ಪೂರಕವಾಗಿ ನಾವು ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ  ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಥೆಗೆ ಈ ಜೋಡಿ  ಆಫ್ಟ್‌ ಆಗಿದೆ ಎನ್ನುತ್ತಾರೆ ನಿರ್ಮಾಪಕ ನಾಗಚಂದ್ರ ಮರಡಿಹಳ್ಳಿ.

ಇನ್ನು ಒಬ್ಬ ನಿರ್ದೇಶಕ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ತಾನು ನಿರ್ದೇಶಕರಾಗಿರುವ ಕೆ. ಪ್ರವೀಣ್‌ ನಾಯಕ್‌ ಅವರಿಗೆ ಇದು ನಾಲ್ಕನೇ ಚಿತ್ರ. ಈಗಾಗಲೇ ಅವರು ʼಜಡ್‌ʼ, ʼಹೂಂ ಅಂತೀಯಾ, ಉಹೂಂ ಅಂತೀಯಾʼ ಹಾಗೂ ʼಮೀಸೆ ಚಿಗುರಿದಾಗʼ ಚಿತ್ರಗಳನ್ನು ನಿರ್ದೇಶಿಸಿದ್ದರು. ಅದೇ ಅನುಭವದಲ್ಲೀಗ ಟಕಿಲಾ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಹಾಗೆಯೇ ಚಿತ್ರ ತಂಡ ಅನುಭವಿ ತಂತ್ರಜ್ಣರನ್ನೇ ಆಯ್ಕೆ ಮಾಡಿಕೊಂಡಿದೆ.ಪಿ.ಕೆ.ಎಚ್.‌ ದಾಸ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.ಟಾಪ್‌ ಸ್ಟಾರ್‌ ರೇಣು ಸಂಗೀತ ನಿರ್ದೇಶನವಿದೆ. ಗಿರೀಶ್‌ ಸಂಕಲನ ಮಾಡುತ್ತಿದ್ದಾರೆ. ಪ್ರಶಾಂತ್‌ ಕಲೆಯ ಹೊಣೆ ಹೊತ್ತುಕೊಂಡಿದ್ಧಾರೆ. ತಾರಾಗಣದಲ್ಲಿ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಅವರೊಂದಿಗೆ  ಸುಮನ್‌, ಜಯರಾಜ್‌, ಸುಷ್ಮಿತಾ, ಪ್ರವೀಣ್‌ ನಾಯಕ್‌ ಇದ್ದಾರೆ.  ಹಾಗೆಯೇ ಬೆಂಗಳೂರು, ನೆಲಮಂಗಲ, ದೇವರಾಯನ ದುರ್ಗ ಹಾಗೂ ಸಕಲೇಶಪುರ ಸುತ್ತಮುತ್ತ ಚಿತ್ರೀಕರಣಕ್ಕೆ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಸದ್ಯಕ್ಕೆ ನಿರ್ಮಾಪಕ ನಾಗಚಂದ್ರ ಹಾಗೂ ನಿರ್ದೇಶಕ ಪ್ರವೀಣ್‌ ನಾಯಕ್‌ ಇದಿಷ್ಟು ಮಾಹಿತಿ ರಿವೀಲ್‌ ಮಾಡಿದೆ.

Categories
ಸಿನಿ ಸುದ್ದಿ

ಆ ಕಾಡು ನೋಡ ಹೋದವರು ವಾಪಾಸ್‌ ಬಂದಿಲ್ವಂತೆ !!

ತೆರೆ ಮೇಲೆ ಹಾರರ್‌ ಕಥಾ ಹಂದರದ ಕತ್ಲೆ ಕಾಡು

ಸ್ಟಾರ್‌ ಸಿನ್ಮಾ ಬರ್ಲಿ ಅಂತ ಕೆಲವರು ಕಾಯುತ್ತಿದ್ದಾರೆ. ಅದರ ನಡುವೆಯೇ ಹೊಸಬರು ಒಂದ್‌ ಕೈ ನೋಡಿ ಬಿಡೋಣ ಅಂತ ಈ ವಾರ ಚಿತ್ರ ಮಂದಿರಕ್ಕೆ ಬರಲು ರೆಡಿ ಆಗಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ ಈ ವಾರ ಎರಡು ಕನ್ನಡ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಪೈಕಿ ʼಕತ್ಲೆ ಕಾಡುʼ ಕೂಡ ಒಂದು. ಸದ್ಯಕ್ಕೆ ಎಷ್ಟು ಚಿತ್ರಮಂದಿರಗಳಲ್ಲಿ ಇದು ತೆರೆ ಕಾಣುತ್ತಿದೆ ಎನ್ನುವ ಮಾಹಿತಿ ಇಲ್ಲ. ಆದರೂ ರಿಲೀಸ್‌ ಎನ್ನುವ ಸುದ್ದಿ ಹೊರ ಬಿದ್ದಿದೆ. ಉಳಿದಂತೆ ಈ ಚಿತ್ರದ ಕತೆಯೇ ವಿಶೇಷವಾದದ್ದು

 

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಕಾಡು ಮತ್ತು ಅಲ್ಲಿನ ಕತ್ತಲಿಗೆ ಸಂಬಂಧಿಸಿದ ಚಿತ್ರ. ಅಂದ್ರೆ, ಹಾರರ್‌ ಹಾಗೂ ಥ್ರಿಲ್ಲರ್‌ ಕಥಾ ಹಂದರದ ಚಿತ್ರ. ಸಾಗರ್‌ ಕಿಂಗ್‌ ಪ್ರೊಡಕ್ಷನ್‌ ಮೂಲಕ ಮುಹಮ್ಮೊದ್‌ ನಿಯಾಜುದ್ದೀನ್‌ ಈ ಚಿತ್ರ ನಿರ್ಮಿಸಿದ್ದಾರೆ. ಜತೆಗೆ ಈ ಚಿತ್ರದಲ್ಲಿನ ಒಂದು ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ರಾಜು ದೇವಸಂದ್ರ ಇದರ ನಿರ್ದೇಶಕ. ಈ ಹಿಂದೆ ಇವರು” ಗೋಸಿಗ್ಯಾಂಗ್‌ʼ ಅಂತ ಒಂದು ಸಿನಿಮಾ ಮಾಡಿದ್ರು. ಆನಂತರವೀಗ ಕತ್ಲೆ ಕಾಡು ಹೆಸರಿನ ಚಿತ್ರ ಮಾಡಿದ್ದಾರೆ. ಅವರ ಪ್ರಕಾರ ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ.

ಆಕರ್ಷಣೀಯವಾದ  ಒಂದು ದಟ್ಟ ಕಾಡು. ಅದು ತನ್ನ ಸೌಂದರ್ಯದ ಮೂಲಕವೇ ಜನರನ್ನು ಸೆಳೆಯುತ್ತದೆ. ಆದರೆ ಅಲ್ಲಿಗೆ ಹೋದವರಾರು ವಾಪಾಸ್‌ ಬಂದ ದಾಖಲೆ ಇಲ್ಲ. ಈ ವಿಷಯ ಗೊತ್ತಾಗಿಯೂ, ನಾಲ್ಕಾರು ಮಂದಿ ಯುವಕ-ಯುವತಿಯರ ಒಂದು ತಂಡ ಆ ಕಾಡಿನತ್ತ ಪ್ರಯಾಣ ಬೆಳೆಸುತ್ತದೆ. ಅವರು ಅಲ್ಲಿಗೆ ಹೋದಾಗ ಏನೆಲ್ಲ ಘಟನೆಗಳು ನಡೆಯುತ್ತದೆ, ಆ ಘಟನೆಗಳ ಹಿಂದಿನ ಸತ್ಯವೇನು ಅನ್ನೋದೇ ಈ ಚಿತ್ರದ ಕತೆಯಂತೆ.

ಚಿತ್ರದಲ್ಲಿ ಶಿವಾಜಿ ನಗರ ಲಾಲು ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಸಂಜೀವ್‌, ಕಿರಣ್‌ ನಿಯಾಜುದ್ದೀನ್‌, ಸಿಂಧು ರಾವ್‌, ಸಂಹಿತಾ ಶಾ, ಸಿಂಚನಾ, ಶಿವ ಮಂಜು, ಭೈರೇಶ್‌, ಗೋವಿಂದ ರೆಡ್ಡಿ, ಶಿವು, ಅಮಾನ್‌ ಮತ್ತಿತರರು ಚಿತ್ರದಲ್ಲಿದ್ದಾರೆ. ರಮೇಶ್‌ ಕೊಯಿರ ಛಾಯಾಗ್ರಹಣ, ಆರವ್‌ ರಿಶಿಕ್‌ ಸಂಗೀತ, ನಿರ್ದೇಶಕ ರಾಜು ದೇವಸಂದ್ರ ಹಾಗೂ ಪತ್ರಕರ್ತ ಶಶಿಕರ ಪಾತೂರು ಸಾಹಿತ್ಯ ಈ ಚಿತ್ರಕ್ಕಿದೆ. ಬೆಂಗೂರು, ಸಂಗಮ, ಮೇಕೆದಾಟು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಹೇಗಿದೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ವಿಕ್ಕಿಯ ʼಕಾಲಾ ಪತ್ಥರ್ʼ‌ ಟೈಟಲ್‌ ಗೆ ಆ ರೌಡಿ ಖ್ಯಾತೆ ತೆಗೆದಿದ್ದು ನಿಜವೇ?

ಫಸ್ಟ್‌ ಲುಕ್‌ ಲಾಂಚ್‌ ದಿನವೇ ಸೋಷಲ್‌ ಮೀಡಿಯಾ ಟ್ರೆಂಡಿಂಗ್ನಲ್ಲಿ ಸದ್ದು ಮಾಡಿತು ವಿಕ್ಕಿ ವರುಣ್‌ ಸಿನಿಮಾದ ಫಸ್ಟ್‌ ಲುಕ್‌

ಯುವ ನಟ ವಿಕ್ಕಿ ವರುಣ್‌ ಅಭಿನಯದ ʼಕಲಾಪತ್ಥರ್‌ʼ ಟೈಟಲ್‌ ಕಾಂಟ್ರೋವರ್ಸಿ ಆಗಿದೆ. ಟೈಟಲ್‌ ಪೋಸ್ಟರ್‌ ಲಾಂಚ್‌ ಅದ ದಿನವೇ ಅದರ ಟೈಟಲ್‌ ಗೆ ಬೆಂಗಳೂರಿನ ಮಾಜಿ ರೌಡಿಯೊಬ್ಬರು ಆಕ್ಷೇಪಣೆ ಎತ್ತಿದ್ದಾರೆನ್ನುವ ಸುದ್ದಿ ಇದೆ. ಸದ್ಯಕ್ಕೆ ಇದಿನ್ನು ಕನ್ಫರ್ಮ್‌ ಆಗಿಲ್ಲ. ಆದರೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡಿದೆ. ಟೈಟಲ್‌ಗೆ ಆಕ್ಷೇಪ ಎತ್ತಿ ಮಾಜಿ ರೌಡಿಯೊಬ್ಬರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರಂತೆ. ತಮ್ಮದೇ ಬಯೋಗ್ರಪಿ ಎತ್ತಿಕೊಂಡು ಕೆಲವರು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಆತ ದೂರು ಸಲ್ಲಿಸಿದ್ದಾನಂತೆ ಎಂಬುದಾಗಿ ಸುದ್ದಿ ಇತ್ತು. ಆದರೆ ಇದು ಎಷ್ಟು ಸತ್ಯ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ದೂರು ತಮಗೆ ಬಂದಿಲ್ಲ ಎಂಬುದು ಸ್ಪಷ್ಟನೆ ಬಂತು.

ಕೊನೆಗೆ ಆತ ಸೋಷಲ್‌ ಮೀಡಿಯಾದಲ್ಲಾದರೂ ಅಂತಹ ಆಕ್ಷೇಪಣೆ ಎತ್ತಿದ್ನ ಅಂತಲೂ ಹುಡುಕಾಡಿದರೆ, ಅಲ್ಲೂ ಆತನ ಆಕ್ಷೇಪಣೆಯ ಸುಳಿವು ಕಾಣಲಿಲ್ಲ. ಅಂತಿಮವಾಗಿ ಕಾಡಿದ್ದು, ಈ ವಿವಾದದ ಶುರುವಾಗಿದ್ದು ಎಲ್ಲಿಂದ ಅಂತ ? ಅದು ಚಿತ್ರ ತಂಡಕ್ಕೂ ಗೊತ್ತಿರಲಿಲ್ಲ. ಅದೇನೆ ಇರಲಿ, ವಿಕ್ಕಿ ವರುಣ್‌ ಅಭಿನಯದ “ಕಾಲಾ ಪತ್ಥರ್‌ʼ ಚಿತ್ರಆರಂಭದಲ್ಲೇ ಸುದ್ದಿ ಮಾಡಿದೆ. ಆನ್‌ ಲೈನ್‌ ಟ್ರೆಂಡಿಂಗ್‌ ನಲ್ಲಿ ಫಸ್ಟ್‌ ಡೇ ಸಖತ್‌ ಟ್ರೆಂಡಿಂಗ್‌ ನಲ್ಲಿತ್ತು. ಒಂದಷ್ಟು ಗ್ಯಾಪ್‌ ನಂತರ ಮತ್ತೆ ಎಂಟ್ರಿ ಆಗುತ್ತಿರುವ ವಿಕ್ಕಿಯ ಕಮರ್ಷಿಯಲ್‌ ಲುಕ್‌ ವರ್ಕ್‌ ಆಗುತ್ತೆ ಎನ್ನುವುದರ ಸೂಚನೆಯಂತೂ ಆರಂಭದಲ್ಲೇ ಸಿಕ್ಕಿದೆ.

Categories
ಸಿನಿ ಸುದ್ದಿ

ಯಶ್‌ ಫ್ಯಾನ್ಸ್‌ ಹಿಂಗೂ ಇದ್ದಾರಾ? ಖ್ಯಾತ ಯುಟ್ಯೂಬರ್‌ ‌ ಧ್ರುವ್‌ ರಾಠಿ ಕಕ್ಕಾಬಿಕ್ಕಿ!

ಕೆಜಿಎಫ್‌ 2 ಟೀಸರ್‌ ವಿಮರ್ಶೆ ವಿಡಿಯೋ ಡೀಲಿಟ್‌ ಮಾಡಿದ ಧ್ರುವ್‌ ರಾಠಿ ಕೊನೆಗೆ ಹೇಳಿದ್ದೇನು ಗೊತ್ತಾ?

ಕನ್ನಡದ ಸ್ಟಾರ್‌ ನಟರ ಅಭಿಮಾನಿಗಳಂದ್ರೇ ಹೀಗೇನಾ? ಈ ಪ್ರಶ್ನೆ ನಮ್ದಲ್ಲ. ಖ್ಯಾತ ಯುಟ್ಯೂಬರ್‌ ಧ್ರುವ್ ರಾಠಿ ಅವರದು. ಹಾಗೆಯೇ ” ಕೆಜಿಎಫ್‌ 2ʼ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ವಿದೇಶಿ ಪ್ರೇಕ್ಷಕರದ್ದು ಕೂಡ. ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಯುಟ್ಯೂಬ್‌ ನಲ್ಲಿ ಧ್ರುವ್ ರಾಠಿ ಎಂಬಾತ ʼಕೆಜಿಎಫ್‌ 2″ ಟೀಸರ್ ಕುರಿತು ಹಂಚಿಕೊಂಡ ಅಭಿಪ್ರಾಯ.

https://www.youtube.com/watch?v=eJWJQv2GSB8&t=591s

ಅದೇನು ಎನ್ನುವುದಕ್ಕಿಂತ ಈ ಯುಟ್ಯೂಬರ್‌ ಧ್ರುವ್ ರಾಠಿ ಬಗ್ಗೆ ಹೇಳಲೇಬೇಕು. ಈತ ತನ್ನ ಗಂಭೀರ ವಿಡಿಯೋಗಳ ಮೂಲಕ ಎಲ್ಲೆಡೆ ಪ್ರಸಿದ್ಧಿ ಪಡೆದವ. ಯುಟ್ಯೂಬ್‌ನಲ್ಲಿ ರಾಠಿಗೆ ಸರಿ ಸುಮಾರು 50 ಲಕ್ಷ ಸಬ್‌ಸ್ಕೈಬರ್ಸ್‌ ಇದ್ದಾರೆ. ಹಾಗೆಯೇ ಆತ ವಿಡಿಯೋ ಗಳಿಗೆ 25  ಕೋಟಿ ವಿವ್ಯೂಸ್‌ ಇವೆ. ಈತ ಮೊನ್ನೆಯಷ್ಟೇ ತನ್ನ ಯುಟ್ಯೂಬ್‌ನಲ್ಲಿ “ಕೆಜಿಎಫ್‌ 2ʼ ಚಿತ್ರದ ಟೀಸರ್‌ ಕುರಿತು ತನ್ನ ಅಭಿಪ್ರಾಯ ಹಂಚಿಕೊಂಡಿದ್ದ. ಆ ಹೊತ್ತಿಗೆ ‘ಕೆಜಿಎಫ್‌ 2’ ಚಿತ್ರದ ಟೀಸರ್‌ ದೇಶದೆಲ್ಲೆಡೆ ಸುದ್ದಿ ಆಗಿತ್ತು. ವಿದೇಶದಲ್ಲೂ ಅದು ಹವಾ ಎಬ್ಬಿಸಿತ್ತು. ಅದೇ ಗುಂಗಿನಲ್ಲಿ ಆತ “ಕೆಜಿಎಫ್‌ 2ʼ ಚಿತ್ರದ ಟೀಸರ್‌ ಅನ್ನು ಮೆಚ್ಚಿಕೊಳ್ಳುವುದರ ಜತೆಗೆ ಅಲ್ಲಿನ ಒಂದು ದೃಶ್ಯವನ್ನು ಕೊಂಚ ತಮಾಷೆ ಮಾಡಿ, ವಿಶ್ಲೇಷಿಸಿದ್ದ. ಇದು ಸೋಷಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಯಶ್‌ ಅಭಿಮಾನಿಗಳು ಕೆಂಡ ಮಂಡಲವಾಗಿದ್ದಾರೆ.

ಕೆಲವರು ಧ್ರುವ್ ರಾಠಿಯ ಯುಟ್ಯೂಬ್‌ ವಿಡಿಯೋಕ್ಕೆ ಕಾಮೆಂಟ್‌ ಹಾಕುತ್ತಾ, ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಕೆಲವರು ಅವನ ತಂದೆ-ತಾಯಿ ಹಾಗೂ ಗೆಳತಿಗೂ ಅವಾಚ್ಯವಾಗಿ ನಿಂದಿಸಿ ಕಾಮೆಂಟ್‌ ಹಾಕಿದ್ದು ಈಗ ದೊಡ್ಡ ಸುದ್ಧಿಮಾಡಿದೆ. ಮತ್ತೊಂದೆಡೆ ಆತನ ಗೆಳತಿಗೆ ಪೋಸ್ಟ್‌ ಮಾಡಿರುವ ಪ್ರೈವೇಟ್ ಮೆಸೇಜ್ ಗಳಲ್ಲಿ ಅತ್ಯಾಚಾರದ ಬೆದರಿಕೆಗಳೂ ಬಂದಿವೆಯಂತೆ. ಇದೆಲ್ಲದರಿಂದ ಮನನೊಂದ ಧ್ರುವ ರಾಠಿ ಕೊನೆಗೆ ತನ್ನ ವಿಡಿಯೋವನ್ನು ಸೋಷಲ್‌ ಮೀಡಿಯಾದಿಂದ ಡೀಲಿಟ್‌ ಮಾಡಿದ್ದಾರೆ. ಹಾಗೆಯೇ ಆತ ತನ್ನ ಯುಟ್ಯೂಬ್‌ ನಲ್ಲಿ ಮಾತನಾಡುತ್ತಾ, ” ಈ ರೀತಿಯ ಅವಾಚ್ಯ ಭಾಷೆಯ ಮೂಲಕ ವಿಮರ್ಶೆಕರು ಹಾಗೂ ವಿಶ್ಲೇಷಕರನ್ನು ಅವಹೇನ ಮಾಡುವುದಾದರೆ, ವಿದೇಶದಲ್ಲಿ ಕನ್ನಡಿಗರು ಹಾಗು ಕರ್ನಾಟಕದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದೂ ಆತ ಆತಂಕ ವ್ಯಕ್ತಪಡಿಸಿದ್ದಾನೆ.

ಇದು ನಿಜವೂ ಕೂಡ. ಯಾಕಂದ್ರೆ, ಈಗಾಗಲೇ” ಕೆಜಿಎಫ್‌ 2′ ವಿದೇಶದಲ್ಲೂ ದೊಡ್ಡ ಸುದ್ದಿ ಮಾಡಿದೆ. ಅಲ್ಲಿನ ಕನ್ನಡೇತರ ಹಾಗೂ ವಿದೇಶಿ ಪ್ರೇಕ್ಷಕರನ್ನೂ ತನ್ನತ್ತ ಸೆಳೆದಿದೆ. ಅದೇ ಕಾರಣಕ್ಕೆ ಅಮೇರಿಕಾದ ರಿಯಾಕ್ಷನ್ ವೀಡಿಯೋ ಚಾನಲ್ ವೊಂದು ಈಗಾಗಲೇ ಯಶ್‌ ಅವರ ಸಂದರ್ಶನ ಮಾಡಿದೆ. ಯಾಕಂದ್ರೆ,” ಕೆಜಿಎಫ್‌ʼ ಯೂರೋಪ್ ಹಾಗೂ ಅಮೇರಿಕಾದ ತಂತ್ರಜ್ಞರಿಗೆ ಸಡ್ಡು ಹೊಡೆಯುವಂತೆ ನಿರ್ಮಾಣವಾಗುವ ಮೂಲಕ ಭಾಷೆ, ದೇಶದ ಗಡಿಗಳನ್ನು ದಾಟಿ, ಸದ್ದು ಮಾಡಿದೆ. ‘ಕೆಜಿಎಫ್‌ 2’ಬಗ್ಗೆ ಅಂತಹದೇ ಕುತೂಹಲ ಇದೆ. ಇದು ಕನ್ನಡದ ಹೆಮ್ಮೆ. ವಿದೇಶಿ ಪ್ರೇಕ್ಷಕರಲ್ಲಿ ಕನ್ನಡ ಮತ್ತು ಕರ್ನಾಟಕದ ಬಗೆಗಿರುವ ಆಸಕ್ತಿ ಹಾಗೂ ಕುತೂಹಲ ಅದು. ಇಂತಹ ಸಂದರ್ಭದಲ್ಲಿ ಯಾವುದೋ ಸಣ್ಣ, ಟೀಕೆ ಅಥವಾ ಟಿಪ್ಪಣಿಗಳಿಗೆ ಅಭಿಮಾನಿಗಳು ಅವ್ಯಾಚ ಶಬ್ದಗಳಿಂದ ಪ್ರತಿಕ್ರಿಯಿಸುವುದಾದರೆ, ಅದು ಕನ್ನಡದ ಬಗೆಗಿವ ಗೌರವ ಕಮ್ಮಿಯಾಗಿಸುತ್ತದೆ ಎನ್ನುವ ಅರಿವು ಸ್ಟಾರ್‌ಗಳಿಗೂ ಇರಬೇಕು ಎನ್ನುತ್ತಿದ್ದಾರೆ ಚಿತ್ರೋದ್ಯಮದ ಗಣ್ಯರು.

Categories
ಸಿನಿ ಸುದ್ದಿ

ಜನವರಿ 21ಕ್ಕೆ ಫ್ಯಾಂಟಮ್‌ ಹೊಸ ಸುದ್ದಿ! ಶೀರ್ಷಿಕೆ ಬದಲಾದೀತೆ?

ವಿಕ್ರಾಂತ್‌ ರೋಣ ಟೈಟಲ್‌ ಪಕ್ಕಾ ಆಗುವ ಸಾಧ್ಯತೆ ಇದೆ

ಕನ್ನಡದಲ್ಲೀಗ ಸಿನಿಮಾ ಸುದ್ದಿಗಳ ಸುರಿಮಳೆ. ಹೌದು, ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ, ಅತ್ತ ಸಿನಿಮಾರಂಗದ ಚಟುವಟಿಕೆಗಳೂ ಜೋರಾಗಿವೆ. ಈಗ ಹೊಸ ಸುದ್ದಿಯೆಂದರೆ, ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ತಂಡದಿಂದ ಒಂದು ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಜೋರು ಸುದ್ದಿ ಮಾಡಿತ್ತು. ಚಿತ್ರದ ಟೀಸರ್‌, ಟ್ರೇಲರ್‌ ಬಗ್ಗೆಯೂ ಸಿನಿಮಾ ಮಂದಿಗೆ ಕುತೂಹಲವಿದೆ. ಸದ್ಯಕ್ಕೆ “ಫ್ಯಾಂಟಮ್‌” ಚಿತ್ರತಂಡದಿಂದ ಜನವರಿ 21ರಂದು ಹೊಸ ಪ್ರಕಟಣೆಯೊಂದು ಹೊರಬೀಳಲಿದೆ ಎಂಬ ಸುದ್ದಿ ಬಂದಿದೆ. ಈ ಕುರಿತಂತೆ, ಸ್ವತಃ ನಿರ್ದೇಶಕ ಅನೂಪ್‌ ಭಂಡಾರಿ ತಮ್ಮ ಟ್ವೀಟ್‌ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಜನವರಿ ೨೧ ಸಂಜೆ4.03ಕ್ಕೆ “ಫ್ಯಾಂಟಮ್‌” ಚಿತ್ರದ ಮುಖ್ಯವಾದ ಪ್ರಕಟಣೆ ಇದೆ ಎಂದು ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ವಿಷಯ ಹಂಚಿಕೊಂಡಿದ್ದಾರೆ.


ಅಂದಹಾಗೆ, ಆ ಮುಖ್ಯವಾದ ವಿಷಯ ಏನಿರಬಹುದು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸಿನಿಮಾದ ಬಿಡುಗಡೆಯ ದಿನವನ್ನು ಘೋಷಣೆ ಮಾಡಬಹುದಾ? ಈ ಪ್ರಶ್ನೆ ಕೂಡ ಹರಿದಾಡುತ್ತಿದೆಯಾದರೂ, ಏನಿರಬಹುದು ಎಂಬ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ, ಮೊದಲ ಪೋಸ್ಟರ್‌ ನೋಡಿದವರಿಗೆ ಸಾಕಷ್ಟು ಭರವಸೆ ಮೂಡಿಸಿತ್ತು. ಇನ್ನು, ಪ್ಯಾನ್‌ ಇಂಡಿಯಾ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೆ ಮಾಹಿತಿ ಇದ್ದರೂ, ಜನವರಿ 21ರಂದು ಹೊರಬರಲಿದೆ.


ಚಿತ್ರದ ಶೀರ್ಷಿಕೆ ಬದಲಾಗಬಹುದಾ?
ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಸುದ್ದಿಯೂ ಇದೆ. ಈಗಾಗಲೇ “ಫ್ಯಾಂಟಮ್” ಶೀರ್ಷಿಕೆ ಬೇರೆ ಬ್ಯಾನರ್‌ನಲ್ಲಿದೆ ಎನ್ನಲಾಗಿದ್ದು, ಹಾಗಾಗಿ ಚಿತ್ರಕ್ಕೆ ಬೇರೆ ಟೈಟಲ್‌ ಇಡುವ ಬಗ್ಗೆಯೂ ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಅಂದಹಾಗೆ, ಈ “ಫ್ಯಾಂಟಮ್” ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಹಾಗೊಂದು ವೇಳೆ ಶೀರ್ಷಿಕೆ ಬದಲಾದರೆ, “ವಿಕ್ರಾಂತ್‌ ರೋಣ” ಎಂಬ ಶೀರ್ಷಿಕೆ ಪಕ್ಕಾ ಆದರೂ ಆಗಬಹುದು.

ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?

ಈ ಹಿಂದೆಯೇ “ಸಿನಿಲಹರಿ” “ಫ್ಯಾಂಟಮ್‌” ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಫ್ಯಾಂಟಮ್‌” ಬದಲಾಗಿ “ವಿಕ್ರಾಂತ್‌ ರೋಣ” ಟೈಟಲ್‌ ಫಿಕ್ಸ್‌ ಆಗಬಹುದು ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಜಾಕ್‌ಮಂಜು ನಿರ್ಮಾಪಕರು.

 

Categories
ಸಿನಿ ಸುದ್ದಿ

ಓ ಮೈ ಲವ್‌ ಅಂದವರಿಗೆ ಸಾಥ್‌ ಕೊಟ್ಟ ಸಚಿವ ಶ್ರೀರಾಮುಲು

ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಗೆ ಸ್ಮೈಲ್‌ ಶೀನು ಆ್ಯಕ್ಷನ್‌ ಕಟ್

ಸದಾ ಕ್ರಿಯಾಶೀಲವಾಗಿ ಯೋಚಿಸುವ ನಿರ್ದೇಶಕ ಸ್ಮೈಲ್‌ ಶೀನು ಅವರೀಗ ಮತ್ತೊಂದು ಬಿಗ್‌ ಬಜೆಟ್‌ ಯೋಜನೆ ಯೊಂದಿಗೆ ಸುದ್ದಿಯಲ್ಲಿದ್ದಾರೆ. ʼತೂಫಾನ್‌ʼ, ʼಬಳ್ಳಾರಿ ದರ್ಬಾರ್‌ʼ ಹಾಗೂʼ 18 ಟು 25ʼ ಚಿತ್ರಗಳ ನಂತರವೀಗ ʼಓ ಮೈ ಲವ್‌ʼ ಹೆಸರಿನಲ್ಲೊಂದು ಸಿನಿಮಾ ಶುರು ಮಾಡಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವೂ ಮುಗಿದಿದೆ. ವಿಶೇಷ ಅಂದ್ರೆ, ಹಿರಿಯ ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿ ಕುಮಾರ್‌ ಈ ಚಿತ್ರದ ಹೀರೋ. ಹಾಗೆಯೇ ಹೊಸ ಪ್ರತಿಭೆಗಳಾದ ಹುಬ್ಬಳ್ಳಿ ಹುಡುಗಿ ಕೀರ್ತಿ ಕಲ್ಕೇರಿ ಹಾಗೂ ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿಯರು. ಇನ್ನು ಬಳ್ಳಾರಿ ಮೂಲದ ಜಿ. ರಾಮಾಂಜನಿ ಈ ಚಿತ್ರದ ನಿರ್ಮಾಪಕರು.

ಮೊನ್ನೆಯಷ್ಟೇ ಚಿತ್ರಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಷಣ್ಮುಖ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆಯಿತು. ಸಚಿವ ಶ್ರೀರಾಮು ಚಿತ್ರದ ಫ್ರಥಮ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.

ಚಿತ್ರದ ನಿರ್ಮಾಪಕ ರಾಮಾಂಜಿನಿ ಅವರೇ ಚಿತ್ರಕ್ಕೆ ಕತೆ ಬರೆದಿದ್ದಾರಂತೆ. ಜೆಸಿಬಿ ಪ್ರೊಡಕ್ಷನ್ಸ್‌ ಮೂಲಕ ಈ ಚಿತ್ರವು ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಮಿಯಾಗಿದ್ದ ರಾಮಾಂಜಿನಿ ಅವರು, ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ಹೇಳಿಕೊಂಡರು.” ಸಿನಿಮಾ ನನ್ನ ಆಸಕ್ತಿಯ ಕ್ಷೇತ್ರ. ಚಿಕ್ಕಂದಿನಿಂದಲೂ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಆಸೆ ಇತ್ತು. ಹಾಗೆಯೇ ತೆರೆ ಮೇಲೆ ಬರಬೇಕೆನ್ನುವ ತುಡಿತ ಇತ್ತು. ಅದೇ ನಾನಿಲ್ಲಿಗೆ ಬರಲು ಕಾರಣ. ಜತೆಗೆ ಕತೆ ಬರೆಯೂ ಹುಚ್ಚು ಕೂಡ ನನ್ನನ್ನು ಇಲ್ಲಿಗೆ ಸೆಳೆಯಿತು. ಚಿತ್ರದ ಶೀರ್ಷಿಕೆ ನೋಡಿದಾಗ ಇದೊಂದು ಬರೀ ಪ್ರೇಮಕತೆಯ ಚಿತ್ರ ಅತಂದುಕೊಂಡರೂ, ಇದು ಎಲ್ಲಾ ಅಂಶಗಳು ಇರುವಂತಹ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್‌, ಆ್ಯಕ್ಷನ್‌, ರೋಮಾನ್ಸ್‌ ಜತೆಗೆ ಕಾಮಿಡಿ ಕೂಡ ಚಿತ್ರದಲ್ಲಿದೆʼ ಎನ್ನುತ್ತಾ ತಾವು ಇಲ್ಲಿಗೆ ಬಂದಿರುವುದರ ಕತೆ ಬಿಚ್ಚಿಟ್ಟರು.


ಚಿತ್ರಕತೆ ಜತೆಗೆ ಸಂಭಾಷಣೆ ಬರೆದಿರುವ ನಿರ್ದೇಶಕ ಸ್ಮೈನ್‌ ಶೀನು, ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಇದೊಂದು ಲವ್‌ ಸಬ್ಜೆಕ್ಟ್‌ ಸಿನಿಮಾ ಮಾತ್ರವಲ್ಲ, ಕತೆಯಲ್ಲೊಂದು ಒಳ್ಳೆಯ ಮೆಸೇಜ್‌ ಕೂಡ ಇದೆ. ಈ ಕಾಲದ ಹುಡುಗ-ಹುಡುಗಿಯರೆಲ್ಲ ವೈಫೈ ಪ್ರೀತಿಯ ಹಿಂದೆ ಬಿದ್ದಿದ್ದಾರೆ. ಮೊಬೈಲ್‌, ಇಂಟರ್ನೆಟ್‌ ಅಂತ ಮಾನವೀಯ ಸಂಬಂಧ ಮರೆಯುತ್ತಿದ್ದಾರೆ. ಅದೆಲ್ಲಕ್ಕಿಂತ ನಮ್ಮ ನಡುವಿವ ಸಂಬಂಧ , ಪ್ರೀತಿಯೇ ಮುಖ್ಯ ಎನ್ನುವುದನ್ನು ಕತೆ ಹೇಳುತ್ತದೆʼ ಎಂದರು ಸ್ಮೈಲ್‌ ಶೀನು.

ಚಿತ್ರಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಸದ್ಯಕ್ಕೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಹಾಡುಗಳಿಗೆ ವಿದೇಶಕ್ಕೂ ಹೋಗುವ ಆಲೋಚನೆ ಚಿತ್ರ ತಂಡದಲ್ಲಿದೆ. ಟಾಲಿವುಡ್‌ ನ ಹೆಸರಾಂತ ನಟ ದೇವ್‌ ಗಿಲ್‌ ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಂತೆ. ಚಿತ್ರದ ಆರು ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದು, ಚರಣ್‌ ಅರ್ಜುನ್‌ ಸಂಗೀತ ನೀಡಿದ್ದಾರೆ. ಇಸ್ಮಾರ್ಟ್‌ ಶಂಕರ್‌, ಅಲಾ ವೈಕುಂಠಪುರಂಲೂ ಖ್ಯಾತಿಯ ರಿಯಲ್‌ ಸತೀಶ್‌ ಅ್ಯಕ್ಷನ್‌ ಡೈರೆಕ್ಷನ್‌ ಮಾಡುತ್ತಿರುವುದಾಗಿ ಚಿತ್ರ ತಂಡ ಹೇಳಿದೆ.

Categories
ಸಿನಿ ಸುದ್ದಿ

ಕಲರ್‌ಫುಲ್‌ ಫೀಲ್ಡ್‌ಗೆ ಮತ್ತೆ ಬಂದ ಬಿಂದು – ಬಾಲನಟಿಯಿಂದ ನಾಯಕಿಯವರೆಗೆ

ನಮ್ಮ ಸಂಸ್ಕೃತಿ ಬಿಂಬಿಸುವ ಪಾತ್ರಕ್ಕೆ ಬಿಂದುಶ್ರೀ ಹುಡುಕಾಟ

ಈ ಬಣ್ಣದ ಲೋಕದ ಸೆಳೆತವೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಮತ್ತೆ ಮತ್ತೆ ಬಣ್ಣ ಹಚ್ಚಲೇಬೇಕೆನಿಸುವುದು ಸಹಜ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಕನ್ನಡದಲ್ಲಿ ಬಂದು ಮಿಂದೆದ್ದಿದ್ದಾರೆ. ಆ ಸಾಲಿಗೆ ಬಿಂದುಶ್ರೀ ಎಂಬ ನವನಟಿ ಕೂಡ ಈಗ ಹೊಸ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಪಾತ್ರ, ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೌದು, ಬಿಂದುಶ್ರೀ ಚನ್ನಗಿರಿ ಮೂಲದ ಹುಡುಗಿ. ಈ ಹುಡುಗಿಗೆ ಸಿನಿಮಾರಂಗ ಹೊಸದೇನಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. “ಶ್ರೀರಸ್ತು ಶುಭಮಸ್ತು”,”ಶಿವಪ್ಪ ನಾಯಕ”,”ಪ್ರೀತ್ಸೋದ್‌ ತಪ್ಪಾ” ಸೇರಿದಂತೆ ಈವರೆಗೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಇವರ ಪ್ರಯಣ ಸಾಗಿದೆ. “ಕಾವ್ಯಾಂಜಲಿ”, “ಗೌತಮಿ” ಮೆಗಾ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ನಟನೆ ಜೊತೆಗೆ ಓದು ಕೂಡ ಮುಖ್ಯ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ, ಓದಿನತ್ತ ಗಮನಹರಿಸಿದ್ದರು ಬಿಂದುಶ್ರೀ. ಇನ್ನು, ಇವರ ತಂದೆ ಸಿವಿಲ್‌ ಎಂಜಿನಿಯರ್.‌ ಅವರ ತಂದೆ ಮಾತಿನ ಪ್ರಕಾರ, ಪದವಿ ಪಡೆದರು. ಅದರಲ್ಲೂ ಅವರದು ಪದವಿಯಲ್ಲಿ ಹದಿನಾರನೇ ರ‍್ಯಾಂಕ್.

ಪ್ರತಿಷ್ಠಿತ ಕಂಪೆನಿಯಲ್ಲಿ ಬಿಂದುಶ್ರೀ ಟೆಕ್ಕಿಯಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತಾಯಿ ಶಾಸ್ತ್ರೀಯ ಸಂಗೀತ ಕಲಿತವರ. ವೃತ್ತಿಪರ ಗಾಯಕಿಯೇನಲ್ಲ. ಆದರೆ, ಅವರ ಆಸೆಯಂತೆ ತಂದೆಯ ಮನವೊಲಿಸಿ, ಪುನಃ ನಟನೆಗೆ ಮರಳಲು ರೆಡಿಯಾಗಿದ್ದಾರೆ.  ಕುರಿತು ಸ್ವತಃ ಬಿಂದುಶ್ರೀ ಹೇಳುವುದಿಷ್ಟು, “ನನಗೆ ನಟನೆ ಮೇಲೆ ಆಸಕ್ತಿ ಇದೆ. ಹಾಗಂತ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರೂಪ ಎಂಬಂತಹ, ಚಾಲೆಂಜಿಂಗ್‌ ಇರುವ, ನಮ್ಮ ಸಂಸ್ಕ್ರತಿ ಬಿಂಬಿಸುವಂತಹ ಪಾತ್ರಗಳು ಬಂದರೆ ನಾನು ಕೆಲಸ ಮಾಡಲು ಇಷ್ಟಪಡ್ತೀನಿ. ಯಾವುದೇ ದೊಡ್ಡ ಬ್ಯಾನರ್ ಇದ್ದರೂ, ಸರಿ, ನನಗೆ ಒಪ್ಪುವ ಮಾತ್ರ ಮಾತ್ರ ಮಾಡುತ್ತೇನೆ. ವಿನಾಕಾರಣ ಬೇರೆ ರೀತಿಯ ಪಾತ್ರ ಮಾಡಲಾರೆ” ಎಂಬುದು ಬಿಂಬಶ್ರೀ ಮಾತು.
ಇತ್ತೀಚೆಗೆ ಬಿಂದುಶ್ರೀ ಅಭಿನಯದ “ಮಹಿಷಾಸುರ” ಚಿತ್ರ ರಿಲೀಸ್‌ ಆಗಿತ್ತು. ಈ ಚಿತ್ರದಲ್ಲಿ ಬಿಂದುಶ್ರೀ ನಟಿಸಿದ್ದಾರೆ. ಇವರ ಎರಡನೇ ಚಿತ್ರ “ಲಡ್ಡು” ಸಿನಿಮಾ ಕೂಡ ಇಷ್ಟರಲ್ಲೇ ಬಿಡುಗಡೆಯಾಗಲಿದೆ. “ಮಿ. ಅಂಡ್ ಮಿಸಸ್ ಜಾನು” ಚಿತ್ರದಲ್ಲೂ ಬಿಂದುಶ್ರೀ ನಟಿಸುತ್ತಿದ್ದಾರೆ. ಸದ್ಯಕ್ಕೆ ಬಿಂದುಶ್ರೀ ಮೂರು ಕಥೆ ಗಳನ್ನು ಕೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ಬಿಂದಶ್ರೀ. ಅದೇನೆ ಇರಲಿ, ಕೈತುಂಬ ಸಂಬಳ ಸಿಗುವ ಕೆಲಸಕ್ಕೆ ಗುಡ್‌ಬೈ ಹೇಳಿ, ಚಿತ್ರರಂಗಕ್ಕೆ ಕಾಲಿಟ್ಟ ಬಗ್ಗೆ ಬಿಂದುಶ್ರೀ ಅವರಿಗೆ ಹೆಮ್ಮೆ ಇದೆ. ಟ್ರೆಡಿಷನಲ್‌ ಪಾತ್ರ ನನಗಿಷ್ಟ. ಅಪ್ಪನಿಗೂ ಅಂಥದ್ದೇ ಪಾತ್ರ ಮಾಡಬೇಕು ಎಂಬ ಬಯಕೆ. ಆ ಕುರಿತು ಸಲಹೆ, ಸೂಚನೆಯನ್ನೂ ನೀಡಿದ್ದಾರೆ. ಸದ್ಯ ನಾನು ನಾಯಕಿ ಆಗಿರವುದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರವಿದೆ. ಸದ್ಯ ಇಬ್ಬರು ತಂಗಿಯರಿಗೆ ಅಭಿನಯದಲ್ಲಿ ಆಸಕ್ತಿ ಇಲ್ಲ. ಅಂದು ರವಿಚಂದ್ರನ್, ಸೌಂದರ್ಯ ಅವರಿಗೆ ಅಭಿಮಾನಿಯಾಗಿದ್ದ ಬಿಂದುಶ್ರೀ, ಇಂದು ರಾಧಿಕಾಪಂಡಿತ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಅದೇನೆ ಇರಲಿ, ಪಕ್ಕಾ ಕನ್ನಡದ ಹುಡುಗಿಯಾಗಿರುವ ಬಿಂದುಶ್ರೀ ಇದೀಗ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ.

error: Content is protected !!