Categories
ಸಿನಿ ಸುದ್ದಿ

ಇವ್ರು ಅಪ್ಪು ಮೋಹನ್‌ ಕರೆ ತಂದ ಏರಿಯಾ ಹುಡುಗರು, ಚಂದನವನಕ್ಕೆ ಬಂದ ಹೊಸಬರು !

ಚಂದನವನದಲ್ಲಿ ಏರಿಯಾ ಹುಡುಗರ ಕಥೆಗಳು ಹೊಸದೇನಲ್ಲ. ಈಗಾಗಲೇ ನಮ್‌ ಏರಿಯಾದಲ್ಲೊಂದು ದಿನ ಅಂತ ತೆರೆ ಮೇಲೆ ಬಂದು ಹೋದವರದ್ದು ಇಲ್ಲಿ ದೊಡ್ಡ ಪಟ್ಟಿ ಇದೆ. ಆದರೂ ಈಗ ಮತ್ತೊಂದು ಏರಿಯಾ ಹುಡುಗರ ಕಥೆ ಬರುತ್ತಿದೆ. ಈ ಕಥೆ ಹೇಳುತ್ತಿರುವವರು ಚಿತ್ರ ಸಾಹಿತಿ ಅಪ್ಪು ಮೋಹನ್.‌ ಅಂದ ಹಾಗೆ ಅಪ್ಪು ಮೋಹನ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರದ ಸಮಾಚಾರ ಇದು. ಆ ಚಿತ್ರದ ಹೆಸರು “ಏರಿಯಾ ಹುಡುಗರುʼ.

ನಾನೊಂಥರಾ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ಡಾ. ತಾರಖ್‌ ಈ ಚಿತ್ರದ ನಾಯಕ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಗಾಂಧಿಬಜಾರ್‌ನ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರವ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ನಟ ಧೃವ ಸರ್ಜಾ, ಮುಹೂರ್ತ ಸಮಾರಂಭಕ್ಕೆ ಆಗಮಿಸಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಏರಿಯಾ ಹುಡುಗರ ಕಥೆ. ಆ ಏರಿಯಾದಲ್ಲಿನ ನಾಲ್ಕು ಜನ ಸ್ನೇಹಿತರ ಜೀವನದಲ್ಲಿ ನಡೆಯುವ ಹಲವಾರು ರೋಚಕ ತಿರುವುಗಳ ಮೇಲೆ ಈ ಕಥೆ ಸಾಗಲಿದೆಯಂತೆ. ಚಿತ್ರರಂಗಕ್ಕೆ ಅಪ್ಪು ಮೋಹನ್‌ ಹೊಸಬರೇನಲ್ಲ. ಈಗಾಗಲೇ ಅನೇಕ ಹಿಟ್‌ ಹಾಡುಗಳನ್ನು ಕೊಟ್ಟವರು. ಇಷ್ಟಾಗಿಯೂ ಇಲ್ಲಿ ತನಕ ತೆರೆ ಮರೆಯಲ್ಲೆ ಇದ್ದವರು. ಫಸ್ಟ್‌ ಟೈಮ್‌ ತೆರೆಯ ಮುನ್ನೆಲೆಗೆ ಬಂದಿದ್ದಾರೆ. ಚಿತ್ರಕ್ಕೆ ನಾಗೇಶ್ ಉಚ್ಚಂಗಿ ಛಾಯಾಗ್ರಹಣ ಇದೆ. ಹಾಗೆಯೇ ಅವರೇ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರಂತೆ. ಹಾಗೆಯೇ ಪರಶಿವು ಧಂಗೂರು ಕೂಡ ಈ ಚಿತ್ರದ ಸಹಾಯಕ ನಿರ್ದೇಶಕರು. ಇನ್ನು ಸುಮಂತ್ ಲವ್‌ಗುರು ಹಾಗೂ ನಾಗರಾಜ್‌ಗುಪ್ತ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಕಲ್ಕಿ ಅಭಿಷೇಕ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ವಿಭಿನ್ನ ಬಗೆಯ ನಾಲ್ಕು ಹಾಡುಗಳಿಗೆ ಹೊಸತರದ ಸಂಗೀತ ನೀಡುವ ತವಕದಲ್ಲಿದ್ದಾರಂತೆ. ಸಂಭಾಷಣೆ ಹಾಗೂ ಸಾಹಿತ್ಯವನ್ನು ನಿರ್ದೇಶಕ ಅಪ್ಪು ಮೋಹನ್‌ ಅವರೇ ನಿಭಾಯಿಸುತ್ತಿದ್ದಾರೆ. ಏಪ್ರಿಲ್‌ ಮೊದಲವಾರದಿಂದ ಚಿತ್ರೀಕರಣ ಶುರುವಾಗುತ್ತಿದೆ. ಬೆಂಗಳೂರು, ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.

Categories
ಸಿನಿ ಸುದ್ದಿ

ಕ್ರಾಂತಿವೀರ ಚಿತ್ರಕ್ಕೆ ರಾಜಸ್ತಾನ ಚಿತ್ರೋತ್ಸವ ಪ್ರಶಸ್ತಿ: ಕನ್ನಡದಲ್ಲಿ ಬರಲು ಸಜ್ಜಾಗಿದೆ ಭಗತ್‌ ಸಿಂಗ್‌ ಚರಿತ್ರೆಯ ಸಿನಿಮಾ

ಕನ್ನಡದ ನಿರ್ದೇಶಕ ಆದತ್‌ ಎಂ.ಪಿ. (ದತ್ತ) ನಿರ್ದೇಶನದ “ಕ್ರಾಂತಿವೀರ” ಚಿತ್ರ ಏಳನೇ ರಾಜಸ್ತಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಚಿತ್ರಕ್ಕೆ ಕೊಡ ಮಾಡುವ ಅತ್ಯುತ್ತಮ ಕಥೆ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಂಡಿದೆ.

ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ ನೂರಾರು ಚಿತ್ರಗಳು ಪಾಲ್ಗೊಂಡಿದ್ದವು. ಆದರ ನಡುವೆ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾದ “ಕ್ರಾಂತಿವೀರ” ಅತ್ಯುತ್ತಮ ಕಥೆಗಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

“ಕ್ರಾಂತಿವೀರ” ಚಿತ್ರಕ್ಕೆ ಚಂದ್ರಕಲಾ. ಟಿ.ರಾಠೋಡ್‌, ಮಂಜುನಾಥ್‌ ಹೆಚ್ಚ. ನಾಯಕ್‌ ಮತ್ತು ಆರ್ಜೂರಾಜ್‌ ನಿರ್ಮಾಪಕರು. ಇವರೊಂದಿಗೆ ತ್ರಿವಿಕ್ರಮ, ಪ್ರಶಾಂತ್‌ ಕಲ್ಲೂರು, ಲೇಟ್‌ ಗೌರಿರಮನಾಥ್‌ ಅವರು ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

“ಭಗತ್ ಸಿಂಗ್” ಜೀವನ ಚರಿತ್ರೆ ಕುರಿತಂತೆ ತಯಾರಾಗಿರುವ ಚಿತ್ರವಿದು. “ಕ್ರಾಂತಿವೀರ” ಸ್ವತಂತ್ರಕ್ಕಾಗಿ ಹೋರಾಡಿ ಮಹಾನ್‌ ನಾಯಕ ಭಗತ್‌ ಸಿಂಗ್‌ ಕುರಿತ ಕಥೆ ಹೊಂದಿದೆ. ಈ ಚಿತ್ರದಲ್ಲಿ ಭಗತ್‌ ಸಿಂಗ್‌ ಪಾತ್ರವನ್ನು ಅಜಿತ್‌ ಜಯರಾಜ್‌ ನಿರ್ವಹಿಸಿದ್ದಾರೆ.

ಇನ್ನು, ಬಾಲ್ಯದ ದಿನಗಳಲ್ಲಿನ ಭಗತ್ ಸಿಂಗ್ ಕಥೆಯೂ ಇರುವುದರಿಂದ ಜ್ಯೂನಿಯರ್ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್ ಟಿ ರಾಠೋಡ್ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ರಾಜಸ್ತಾನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಬಾಗಲಕೋಟೆ, ಶಿವಮೊಗ್ಗ, ಹುಬ್ಬಳ್ಳಿ, ಕೆಜಿಎಫ್ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಇತರೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಪ್ರತಾಪ್.ಎಸ್ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಆರ್.‌ಕೆ. ನೃತ್ಯ ನಿರ್ದೇಶನ‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ಲಕ್ಕಿ ಸ್ಟಾರ್‌ ಬ್ರದರ್ಸ್‌ – ಇಂಡಸ್ಟ್ರಿಗೆ ಚೈತನ್ಯ ತುಂಬಿ ಗೆದ್ದು ಬೀಗಿದ ಸಹೋದರರು!

2021 ಕೂಡ ಹೇಗಿರುತ್ತೋ ಗೊತ್ತಿಲ್ಲ. ಮತ್ತೆ ಹೆಚ್ಚುತ್ತಿರುವ ಕೊರೋನಾ ಅಬ್ಬರ ನೋಡಿದರೆ ರಾಜ್ಯದಲ್ಲಿ ಯಾವಾಗ ಲಾಕ್‌ ಡೌನ್‌ ಘೋಷಣೆ ಆಗುತ್ತೋ ಎನ್ನುವ ಆತಂಕ ಮನೆ ಮಾಡಿದೆ. ಬರುವ ದಿನಗಳಲ್ಲಿ ಸಿನಿಮಾ ಚಟುವಟಿಕೆಗಳು ಹೀಗೆಯೇ ಇರುತ್ತವೆ ಅಂತ ಅಂದುಕೊಳ್ಳುವುದಕ್ಕೂ ಕಷ್ಟಕರವಾಗಿದೆ. ಸದ್ಯದ ಮಟ್ಟಿಗೆ ಸಿಕ್ಕ ಸಣ್ಣದೊಂದು ಗ್ಯಾಪ್‌ ನಲ್ಲಿ ದೊಡ್ಡ ದೊಂದು ಗೆಲುವಿನ ಮೂಲಕ ಭರ್ಜರಿ ನಗು ಬೀರಿದ ನಿರ್ದೇಶಕರಂದ್ರೆ ನಂದ್‌ ಕಿಶೋರ್‌ ಹಾಗೂ ತರುಣ್‌ ಸುದೀರ್‌ ಬದ್ರರ್ಸ್.‌ ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಅವರೇ “ಸ್ಟಾರ್‌” ಬ್ರದರ್ಸ್.

‌ಲಾಕ್‌ ಡೌನ್‌ ತೆರೆವಾದ ನಂತರ ಕನ್ನಡದಲ್ಲಿ ಬಂದ ಮೊದಲ ಸ್ಟಾರ್‌ ಸಿನಿಮಾ ಅಂದ್ರೆ ” ಪೊಗರುʼ. ಕೊರೋನಾ ಆತಂಕದ ನಡುವೆಯೂ ಈ ಚಿತ್ರ ತೆರೆಗೆ ಬಂತು. ಅಷ್ಟೋತ್ತಿಗಾಗಲೇ “ಆಕ್ಟ್‌ 1978 ” ಸೇರಿದಂತೆ ಸಾಕಷ್ಟು ಸಿನಿಮಾಗಳು ಬಂದು ಹೋಗಿದ್ದವು. ಆ ಪೈಕಿ “ಆಕ್ಟ್‌ 1978” ಒಂದಷ್ಟು ಸದ್ದು ಮಾಡಿತ್ತಾದರೂ, ಜನ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರದತ್ತ ಮುಖ ಮಾಡಿರಲಿಲ್ಲ. ಅಷ್ಟೋ ಇಷ್ಟೋ ಜನ ಮಾತ್ರ ಚಿತ್ರ ಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ “ಆಕ್ಟ್‌ 1978” ಒಂದಷ್ಟು ಜನಾಕರ್ಷಣೆ ಪಡೆದು ಗೆಲುವಿನ ನಗೆ ಬೀರಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಲಾಕ್‌ ಡೌನ್‌ ನಂತರ ಸ್ಟಾರ್‌ ಸಿನಿಮಾ ಅಂತ ಮೊದಲು ರಿಲೀಸ್‌ ಆಗಿದ್ದು ಪೊಗರು. ʼಪೊಗರುʼ ನಂದ್‌ ಕಿಶೋರ್ ನಿರ್ದೇಶನದ ಚಿತ್ರ. ಧ್ರುವ ಸರ್ಜಾ ಈ ಚಿತ್ರದ ಹೀರೋ. ಹಾಗೆಯೇ ರಶ್ಮಿಕಾ ಮಂದಣ್ಣ ನಾಯಕಿ.

ಚಂದನವನದಲ್ಲಿ ಈ ಮೂವರು ಸಾಕಷ್ಟು ಸುದ್ದಿಯಲ್ಲಿದ್ದವರೇ. “ಪೊಗರುʼ ಮಾಡುವ ಮುನ್ನ ನಿರ್ದೇಶಕ ನಂದ್‌ ಕಿಶೋರ್‌ “ಅಧ್ಯಕ್ಷ”, “ವಿಕ್ಟರಿ”, “ರನ್ನ” ಸೇರಿದಂತೆ ನಾಲ್ಕೈದು ಹಿಟ್‌ ಸಿನಿಮಾ ಕೊಟ್ಟಿದ್ದರು. ಅದರ ದೊಡ್ಡ ಸಕ್ಸಸ್‌ ಅವರ ಬೆನ್ನಿಗಿತ್ತು. ಆ ಮೂಲಕವೇ ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಕಾಂಬಿನೇಷನ್‌ ಮೂಲಕ ಬಿಗ್‌ ಬಜೆಟ್‌ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಈ ಸಲ ಅದ್ದೂರಿ ಸಿನಿಮಾ ನಿರ್ದೇಶನ ಮಾಡಬೇಕೆಂದು ಹೊರಟಿದ್ದ ನಿರ್ದೇಶಕ ನಂದ್‌ ಕಿಶೋರ್‌ ಅವರಿಗೆ ನಿರ್ಮಾಪಕ ಗಂಗಾಧರ್‌ ಕೂಡ ಪ್ರೀತಿಯಿಂದಲೇ ಸಾಥ್‌ ಕೊಟ್ಟರು. ಹೆಚ್ಚು ಕಡಿಮೆ ಮೂರು ವರ್ಷದಲ್ಲಿ ಎಲ್ಲಾ ರೀತಿಯಲ್ಲೂ ಅದ್ದೂರಿತನ ತುಂಬಿಕೊಂಡಿದ್ದ “ಪೊಗರು” 2021ರ ಮೊದಲ ಸ್ಟಾರ್‌ ಸಿನಿಮಾವಾಗಿ ತೆರೆಗೆ ಬಂತು.

ಅನೇಕ ಕಾರಣಕ್ಕೆ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ತೆರೆಗೆ ಬಂದಾಗ ಆ ನಿರೀಕ್ಷೆಯೂ ಹುಸಿಯಾಗಲಿಲ್ಲ. ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆ ಕಂಡಿತು. ಎಲ್ಲ ಕಡೆ ಭರ್ಜರಿ ಒಪನಿಂಗ್‌ ಪಡೆಯಿತು. ನಿರ್ಮಾಪಕ ಗಂಗಾಧರ್‌ ಗೆಲುವಿನ ನಗೆ ಬೀರಿದರು. ಹಾಗೆಯೇ ನಿರ್ದೇಶಕ ನಂದ್‌ ಕಿಶೋರ್‌, ಮತ್ತೊಂದು ಸಕ್ಸಸ್‌ ಸಿನಿಮಾ ಕೊಟ್ಟ ಖುಷಿಯಲ್ಲಿ ಹೊಸ ಅವಕಾಶಗಳತ್ತ ಮುಖ ಮಾಡಿದರು. ಒಂದಷ್ಟು ವಿವಾದದಲ್ಲಿ ಮುಜುಗರ ಅನುಭವಿಸಿದರು ಎನ್ನುವುದನ್ನು ಬಿಟ್ಟರೆ, “ಪೊಗರು” ಚಿತ್ರ ನಿರ್ದೇಶಕ ನಂದ್‌ ಕಿಶೋರ್‌ಗೆ ಸ್ಟಾರ್‌ ಪಟ್ಟ ಕೊಟಿದ್ದೇನು ಸುಳ್ಳಲ್ಲ.

“ಪೊಗರು” ಮೂಲಕ ನಂದ ಕಿಶೋರ್‌ ಸಕ್ಸಸ್‌ ಕಂಡ ಹಾಗೆಯೇ ಅವರ ಸಹೋದರ ತರುಣ್‌ ಸುಧೀರ್‌ ಅವರೂ ಕೂಡ ಸಕ್ಸಸ್‌ ಸಿನಿಮಾ ಮೂಲಕವೇ ಎಂಟ್ರಿಯಾದವರು. ಅವರ ಚೊಚ್ಚಲ ನಿರ್ದೇಶನದ “ಚೌಕ” ಭರ್ಜರಿ ಯಶಸ್ಸು ಕೊಟ್ಟಿತು. ಅದಾದ ಬಳಿಕ ಅವರು ಆಯ್ಕೆ ಮಾಡಿಕೊಂಡಿದ್ದು, ದರ್ಶನ್‌ ಅವರನ್ನು. ಅವರಿಗಾಗಿ ಅವರು “ರಾಬರ್ಟ್‌” ರೆಡಿಮಾಡಿದರು. 2021ರ ಆರಂಭಿಕ ದಿನಗಳಲ್ಲಿ ಸಂಕಷ್ಟದ ಕಾಲದಲ್ಲೂ ಭರ್ಜರಿ ಸಕ್ಸಸ್‌ ಕಂಡ ನಿರ್ದೇಶಕ ಎನಿಸಿಕೊಂಡಿದ್ದು ಸುಳ್ಳಲ್ಲ.. ಅದಕ್ಕೆ ಕಾರಣವಾಗಿದ್ದು “ರಾಬರ್ಟ್‌” ಚಿತ್ರ. ಹಾಗೆ ನೋಡಿದರೆ “ಪೊಗರು” ಬಂದಾಗ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರಿಗೆ ಒಂದಷ್ಟು ಕೊರೋನಾ ಭಯ ಇದ್ದೇ ಇತ್ತು. ಆದರೆ, ಯಾವಾಗ “ರಾಬರ್ಟ್‌” ಅಬ್ಬರ ಜೋರಾಯಿತೋ, ಅದನ್ನು ಭೀಕರವಾಗಿ ಹೊರದಬ್ಬಿತು. ಬದಲಿಗೆ ರಾಜ್ಯದ ಚಿತ್ರ ಮಂದಿರಗಳಲ್ಲಿ ರಾಬರ್ಟ್‌ ಜಾತ್ರೆ ಶುರುವಾಯಿತು.

ಕೊರೋನಾ ಕೊರೋನಾ ಅಂತಿದ್ದೆವರೆಲ್ಲ, ಆ ಜಾತ್ರೆ ನೋಡಿ ಎಲ್ಲಿದೆ ಕೊರೋನಾ ಅಂತ ನಕ್ಕರು. ಆ ಮಟ್ಟಿಗೆ “ರಾಬರ್ಟ್‌” ಗೆಲುವು ಕಂಡಿದೆ. ದರ್ಶನ್‌ ಬಾಕ್ಸಾಫೀಸ್‌ ಸುಲ್ತಾನ್‌ ಅನ್ನೋದು ಮತ್ತೊಮ್ಮೆ ಸಾಬೀತು ಆಯಿತು. ಗಾಂಧಿ ನಗರದ ಗಲ್ಲಾ ಪೆಟ್ಟಿಗೆ ಚಿಂದಿ ಉಡಾಯಿಸಿತು. ಅದೀಗ ನೂರು ಕೋಟಿ ಕ್ಲಬ್‌ಗೆ ಸೇರುವ ಹಂತದಲ್ಲಿದೆ. ಅಲ್ಲಿಗೆ ತರುಣ್‌ ಸುಧೀರ್‌ ಸ್ಯಾಂಡಲ್‌ವುಡ್‌ನ ಸಕ್ಸಸ್‌ ಫುಲ್‌ ನಿರ್ದೇಶಕ ಮಾತ್ರವಲ್ಲ, 2021ರ ಸ್ಟಾರ್‌ ಡೈರೆಕ್ಟರ್‌ ಕೂಡ ಹೌದು. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲೀಗ ಲಕ್ಕಿ ಡೈರೆಕ್ಟರ್‌ ಅಂದ್ರೆ ನಂದ ಕಿಶೋರ್‌ ಹಾಗೂ ತರುಣ್‌ ಸುಧೀರ್‌ ಸಹೋದರರು. ಅವರ ಸಕ್ಸಸ್‌ ಯಾತ್ರೆ ಹೀಗೆ ಸಾಗಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಇದು ಕನ್ನಡ ಹೋರಾಟಗಾರನ ಭೂಗತ ಲೋಕದ ಕಥೆ – ನೋಡಿ ಹೊರ ಬಂತು ʼಯಾರ ಮಗʼ ಟೀಸರ್‌

ಆ ಕೋಟೆಗೆ ರಾಜನೂ ನಾನೇ, ಕಾವಲು ಗಾರನೂ ನಾನೇ.. ಹೀಗಂತ ಬೆಳ್ಳಿತೆರೆಗೆ ಬರಲು ರೆಡಿಯಾಗಿದೆ ʼ ಯಾರ ಮಗ ʼ ಹೆಸರಿನ ಚಿತ್ರ. ಇದು ಭೂಗತ ಲೋಕದ ಕಥೆ. ಹಾಗೆಯೇ ತಾಯಿ ಸೆಂಟಿಮೆಂಟ್‌ ಮೇಲೂ ನಿರ್ಮಣವಾದ ಚಿತ್ರ. ರಘು ಪಡುಕೋಟೆ ಇದರ ನಾಯಕ ನಟ ಕಮ್‌ ನಿರ್ದೇಶಕ. ಇವರು ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಪುತ್ರ. ಬಸವರಾಜ್‌ ಅವರು ತಮ್ಮ ಪುತ್ರನನ್ನು ಬೆಳ್ಳಿ ತೆರೆಗೆ ಹೀರೋ ಆಗಿ ಪರಿಚಯಿಸಲು ಯಾರ ಮಗ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ ಬೆಳ್ಳಿ ತೆರೆಗೆ ಹೊರಟಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಟೀಸರ್‌ ಹೊರ ಬಂದಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರಮಂದಿರದಲ್ಲಿ ಟೀಸರ್‌ ಲಾಂಚ್‌ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್, ಡಿ.ಎಸ್. ಮ್ಯಾಕ್ಸ್‌ ನ ದಯಾನಂದ್, ಮಾರುತಿರಾವ್ ಮೋರೆ, ವೀರಶೈವ ಯುವ ವೇದಿಕೆಯ ಪ್ರಶಾಂತ್ ಕಲ್ಲೂರ್‌, ಕೆ.ಜಿ.ಹನುಮಂತಯ್ಯ ಆ ದಿನ ಚಿತ್ರದ ಟೀಸರ್‌ ಲಾಂಚ್‌ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು. ಟೀಸರ್‌ ಲಾಂಚ್‌ ಮಾತನಾಡಿದ ಗಣ್ಯರು, ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು. ಚಿತ್ರ ತಂಡದ ಪರವಾಗಿ ಮೊದಲು ಮಾತನಾಡಿದ ನಿರ್ಮಾಪಕ,ʼ ನಾನು ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ, ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೆ, ಈಗ ನನ್ನ ಮಗನಿಗಿರುವ ಸಿನಿಮಾ ಆಸಕ್ತಿ ಕಂಡು ಈಚಿತ್ರ ನಿರ್ಮಾಣ ಮಾಡಿದ್ದೇನೆ. ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲಿದೆ ಅಂತ ಹೇಳಿಕೊಂಡರು.

ಚಿತ್ರಕ್ಕೆ ಸುರಪುರ ತಾಲ್ಲೂಕಿನ ಪಡುಕೋಟೆ, ಬೆಂಗಳೂರಿನ ಶಿವಾಜಿನಗರ, ವೈಟ್‌ಫೀಲ್ಡ್ ಸುತ್ತಮುತ್ತ ಶೇ. 60 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಸಿಕ್ಕಿದೆಯಂತೆ. ಪ್ಲಾನ್ ಪ್ರಕಾರ ಆದರೆ ಇದೇ ಜೂನ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ.” ಈಗಿನ ಕಾಲದ ಹುಡುಗರು ಹೇಗೆಲ್ಲಾ ಹಾಳಾಗ್ತಿದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ, ತಾಯಿ ಸೆಂಟಿಮೆಂಟ್, ಲವ್, ಡ್ರಗ್ ಮಾಫಿಯಾ ಕೂಡ ಚಿತ್ರದಲ್ಲಿದೆ. ಒಬ್ಬ ಮಗನಾದವನು ತನ್ನ ತಾಯಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದು ಅಂತ ನನ್ನ ಪಾತ್ರದ ಮೂಲಕ ನಿರೂಪಿಸಲಾಗುತ್ತಿದೆ. ತಾಯಿ ಕೂಡ ತನ್ನ ಮಗನ ಮೇಲೆ ಎಷ್ಟು ಕಾಳಜಿ ವಹಿಸುತ್ತಾಳೆ ಎಂಬ ಕಂಟೆಂಟ್ ಚಿತ್ರದಲ್ಲಿದೆʼ ಎನ್ನುವುದು ನಿರ್ದೇಶಕ ಕಮ್‌ ನಾಯಕ ನಟ ರಘು ಪಡುಕೋಟೆ ಮಾತು. ಚಿತ್ರದಲ್ಲಿ 5 ಹಾಡುಗಳಿದ್ದು, ಅವಗಳಿಗೆ ಪ್ರವೀಣ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸುಕೃತ ಅಭಿನಯಿಸುತ್ತಿದ್ದು, ಕಾಕ್ರೋಚ್‌ಸುಧೀ, ಬಲ ರಾಜವಾಡಿ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ.

Categories
ಸಿನಿ ಸುದ್ದಿ

ಮಡಿ ಮಡಿಲಿಗೆ ಎರಡು ಪ್ರಶಸ್ತಿಯ ಗರಿ: ರಿಫ್ಟ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಹೆಮ್ಮೆ

ಕನ್ನಡದ ನಿರ್ದೇಶಕ ಸುಧೀರ್‌ ಅತ್ತಾವರ್‌ ನಿರ್ದೇಶನದ “ಮಡಿ” ಸಿನಿಮಾಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್‌ ಸೋಶಿಯಲ್‌ ಅವೇರ್‌ನೆಸ್‌ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜೊತೆಯಲ್ಲಿ ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿದೆ.

ರಿಫ್ಟ್‌ ಚಿತ್ರೋತ್ಸವದಲ್ಲಿ ಅಮೆರಿಕನ್‌ ಸಿನಿಮಾ ಫಲಾಫೆಲ್‌ ಮತ್ತು ಫ್ರೆಂಚ್‌ ಚಿತ್ರ ಸೋಲೇಮಿಯೋ ಚಿತ್ರಗಳು “ಮಡಿ” ಚಿತ್ರಕ್ಕೆ ತೀವ್ರ ಸ್ರ್ಧೆ ನೀಡಿದ್ದರೂ, ಅಂತಿಮವಾಗಿ, ಆ ಎರಡೂ ಚಿತ್ರಗಳನ್ನು ಹಿಂದಿಟ್ಟ ಕನ್ನಡದ “ಮಡಿ” ಚಿತ್ರ ತೀರ್ಪುಗಾರ ಪ್ರಶಂಸೆಗೆ ಪಾತ್ರವಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಕ್ಸಸ್‌ ಫಿಲಂಸ್‌ ಬ್ಯಾನರ್‌ನಡಿ ವಿದ್ಯಾಧರ್‌ ಶೆಟ್ಟಿ ಹಾಗೂ ಸೂರಜ್‌ ಜಾಲ್ಸ್‌ ನಿರ್ಮಾಣ ಮಾಡಿರುವ ಈ ಚಿತ್ರ, ಕರಾವಳಿಯ ಭಾಗದ ಜನಪದ ಕಲೆ “ಆಟಿ ಕಳಂಜ”ದ ಹಿನ್ನೆಲೆಯ ಕಥಾಹಂದರ ಹೊಂದಿದೆ. ಜೋಧ್‌ಪುರದ ಮೆಹ್ರಂಗಾಹ್ರ್‌ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಾರ್ಚ್‌ 20ರಿಂದ 24ರವರೆಗೆ ಜಯಪುರ ಮತ್ತು ಜೋಧ್‌ಪುರಗಳಲ್ಲಿ ನಡೆದ ಚಿತ್ರೋತ್ಸವದಲ್ಲಿ ದೇಶ ವಿದೇಶಗಳಿಂದ 40ಕ್ಕೂ ಹೆಚ್ಚು ಕಿರುಚಿತ್ರಗಳು ಪಾಲ್ಗೊಂಡಿದ್ದವು.

“ಮಡಿ” ಬಗ್ಗೆ ಹೇಳುವುದಾದರೆ, “ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್.‌ ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿದೆ. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿರುವ ಸುಧೀರ್‌ ಅತ್ತಾವರ್‌ ಅವರ “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ. ಅಷ್ಟೇ ಅಲ್ಲ, ಬಾಲಿವುಡ್‌ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದಾರೆ, ಹೊಗಳಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ. ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ.

ಕಥಾಹಂದರದಲ್ಲಿರುವ ಗಟ್ಟಿತನ. ಅಲ್ಲಿನ ಕೀಳರಿಮೆ, ಕಿತ್ತು ತಿನ್ನೋ ಬಡತನ, ಏನೂ ಅರಿಯದ ಹುಡುಗನೊಬ್ಬನ ಹಸಿವು, ಪ್ರಮುಖವಾಗಿ ಗಮನ ಸೆಳೆಯುವ ನಾಯಕಿ. ಆಕೆಯಲ್ಲಿರುವ ಭಯ, ಪುಷ್ಕರಣಿಯಲ್ಲಿ ಜೀವವೊಂದು ಬದುಕಲು ಹೆಣಗಾಡುತ್ತಿದ್ದರೆ, ಅತ್ತ, ಪುರೋಹಿತ ಶಾಹಿಗಳಿಗೆ ಮಡಿಯೇ ಮುಖ್ಯ ಎಂಬ ಧ್ಯೇಯ… ಇವೆಲ್ಲವೂ ವಾಸ್ತವತೆಯನ್ನು ಬಿಂಬಿಸುವಂತಿವೆ. ಒಟ್ಟಾರೆ ಈ ಸಮಾಜದ ವ್ಯವಸ್ಥೆಯ ಅವ್ಯವಸ್ಥೆಯನ್ನು ಮನತಟ್ಟುವಂತೆ ಸೆರೆ ಹಿಡಿದಿದ್ದರಿಂದಲೇ ಈ ಚಿತ್ರಕ್ಕೆ ರೀಫ್ಟ್‌ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿಗಳು ಸಿಕ್ಕಿವೆ.ನಿರ್ದೇಶಕ ಸುಧೀರ್ ಅತ್ತಾವರ್ ಅವರು, “ಮಡಿ” ಮೂಲಕ ಸಮಾಜದಲ್ಲಿರುವ ಹುಳುಕನ್ನ ಎತ್ತಿ ಹಿಡಿಯುವ ಪ್ರಯತ್ನ ಮಾಡಿರುವುದರಿಂದ, ಅವರ ಪರಿಶ್ರಮಕ್ಕೊಂದು ಫಲ ಸಿಕ್ಕಂತಾಗಿದೆ.

ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್‌ ಅತ್ತಾವರ್‌ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಘು ದೀಕ್ಷಿತ್‌ ಹೊಸ ಸೌಂಡು! ನಿನ್ನ‌‌ ಸನಿಹಕೆ‌ ಸಿನಿಮಾಗೆ ದಿ ಸೌಂಡ್ ಆಫ್ ಕೆಯಾಸ್ ಬಳಕೆ-ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ ಸಾಂಗು

ಸೂರಜ್‌ ಗೌಡ ನಟರಾಗಿ ಗುರುತಿಸಿಕೊಂಡವರು. ಅವರೀಗ ನಿರ್ದೇಶಕರಾಗಿದ್ದು ಗೊತ್ತಿದೆ. ಹೌದು, “ನಿನ್ನ ಸನಿಹಕೆ” ಸಿನಿಮಾ ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ನಿರ್ದೇಶಕರ ಪಟ್ಟ ಅಲಂಕರಿಸಿರುವ ಸೂರಜ್‌ ಗೌಡ, ತಮ್ಮ ಸಿನಿಮಾವನ್ನು ಈಗ ಪ್ರೇಕ್ಷಕರ ಮುಂದೆ ತರಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುನ್ನ, “ನಿನ್ನ ಸನಿಹಕೆ” ಹಾಡುಗಳ ಮೂಲಕವೇ ಜೋರು ಸುದ್ದಿ ಮಾಡುತ್ತಿದೆ.

ಸಂಗೀತ ನಿರ್ದೇಶಕ ರಘುದೀಕ್ಷಿತ್‌ ಅವರ ಸಂಯೋಜನೆ ಹಾಡುಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಗುತ್ತಿದೆ. ಎರಡು ರೊಮ್ಯಾಂಟಿಕ್‌ ಹಾಡುಗಳಿಂದ ಕನ್ನಡ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನೂ ಹುಟ್ಟಿಸಿದೆ. ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ರಘುದೀಕ್ಷಿತ್‌ ಅವರು “ದಿ ಸೌಂಡ್ ಆಫ್ ಕೆಯಾಸ್” ಎಂಬ ಹೊಸ ಸೌಂಡಿಂಗ್ ಸಿಸ್ಟಂ ಮೂಲಕ ಇನ್ನಷ್ಟು ರಂಜಿಸಿದ್ದಾರೆ. ರಘು ದೀಕ್ಷಿತ್ ಸಂಯೋಜಿಸಿ ಹಾಡಿರುವ ರ್ಯಾಪ್ ಸಾಂಗ್ ಅದು. ಹೀರೋ ಲವ್ ಫೇಲ್ ಆಗಿ ಹಾಡುವ ಈ ಹಾಡಿಗೆ, ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ.

“ಯಾರು ಯಾರು ನಾನ್ ಯಾರು… ಈ ನಶೆಯೂ ಹೇಳಿದೆ ಪತ್ತೆಯಾ…” ಅನ್ನೋ ಕ್ಯಾಚಿ ಲಿರಿಕ್ಸ್ ಇರುವ ಈ ಹಾಡು ಕೇಳೋದಕ್ಕೆ ಸಖತ್ ಮಜ ಎನಿಸಿದೆ. ವಿರಹ ಮನಸುಗಳಿಗೆ ನೇರವಾಗಿ ನಾಟುವಂತಿರುವ ಹಾಡಲ್ಲಿ ವಿಶೇಷ ಎನಿಸುವ ಸಂಗೀತದ ಸ್ಪರ್ಶವಿದೆ. ಸದ್ಯಕ್ಕೆ “ನಿನ್ನ ಸನಿಹಕೆ” ಸಿನಿಮಾದ ಹಾಡು ಚಿತ್ರದ ಮೇಲಿನ ಭರವಸೆ ಹೆಚ್ಚಿಸಿದೆ.
ಈಗಾಗಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರುವ ನಿನ್ನ ಸನಿಹಕೆ‌ ಟೀಮ್ ವರ್ಕ್ ನೋಡಿದರೆ, ಎಲ್ಲಾ ಆಂಗಲ್‌ನಿಂದಲೂ ಇದು ಮಾಮೂಲಿ‌ ಸಿನಿಮಾ ಅಲ್ಲ. ಇದರಲ್ಲೇನಾದರೂ ಇದೆ ಅನ್ನೋದನ್ನ ಪ್ರತಿ‌ ಹಂತದಲ್ಲೂ ತೋರಿಸುತ್ತಲೇ ಇರುವುದರಿಂದ ಸಿನಿಮಾ ಬಿಡುಗಡೆಯನ್ನು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸುದ್ದಿ ಮಾಡುತ್ತಿರುವ “ನಿನ್ನ ಸನಿಹಕೆ”‌ ತಂಡ ಇಷ್ಟರಲ್ಲೇ ಟ್ರೇಲರ್‌ ರಿಲೀಸ್ ಮಾಡುವ ತಯಾರಿಯಲ್ಲಿದೆ. ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರುತ್ತಿರುವ ಸಮಯದಲ್ಲಿ “ಕನ್ನಡದಲ್ಲಿ ಮಾತ್ರ” ಬಿಡುಗಡೆ ಅನ್ನುವ ಟ್ಯಾಗ್‌ಲೈನ್‌ ಜೊತೆ “ನಿನ್ನ‌ ಸನಿಹಕೆ”‌ ಸಿನಿಮಾ ತಂಡ ಏಪ್ರಿಲ್ 16ಕ್ಕೆ ಪ್ರೇಕ್ಷಕರ ಎದುರಿಗೆ ಬರುತ್ತಿದೆ. ಇನ್ನು, ವಿಶ್ವದಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ಸ್ಕೂಲೇ ನನ್ನ ಟೆಂಪಲ್‌- ಮಕ್ಕಳಿಂದ ಮಕ್ಕಳಿಗೋಸ್ಕರ ಹೊರ ಬಂತು ಹೊಸ ಬಗೆಯ ವಿಡಿಯೋ ಸಾಂಗ್‌ !

ಕೊರೋನಾ ಕಾರಣಕ್ಕೆ ಮಿಸ್‌ ಮಾಡ್ಕೊಂಡ್‌ ಅನೇಕ ಸಂಗತಿಗಳ ಪೈಕಿ ಸ್ಕೂಲ್‌ ಕೂಡ ಒಂದು. ರಾಜ್ಯದ ಅದೆಷ್ಟೋ ವಿದ್ಯಾರ್ಥಿಗಳು ಸ್ಕೂಲ್‌ ಮುಖ ನೋಡದೆ ಹೆಚ್ಚು ಕಡಿಮೆ ವರ್ಷವೇ ಆಗುತ್ತಾ ಬಂತು. ಮನೆಯಲ್ಲೇ ಕುಳಿತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪುಟಾಣಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೀಗ ಹೊಸ ಬಗೆಯ ವಿಡಿಯೋ ಸಾಂಗ್‌ ವೊಂದು ಹೊರ ಬಂದಿದೆ. ನಿರ್ದೇಶಕ ಸಾಯಿ ಲಕ್ಷ್ಮಣ್ ತಂಡ ಈ ಪ್ರಯತ್ನ ಮಾಡಿದೆ. ಸುಮಾರು 300 ಮಕ್ಕಳು ಈ ವಿಡಿಯೋ ಸಾಂಗ್‌ ನಲ್ಲಿ ನೃತ್ಯ ಮಾಡಿದ್ದಾರೆ. ವಿಶೇಷ ಅಂದ್ರೆ ಇದು ಮಕ್ಕಳಿಂದ ಮಕ್ಕಳಿಗೋಸ್ಕರ ತಯಾರಾದ ವಿಡಿಯೋ ಸಾಂಗ್‌ ಆಲ್ಬಂ ಇದು. ಮಂಗಳವಾರವಷ್ಟೇ ( ಮಾ.23) ಈ ವಿಡಯೋ ಸಾಂಗ್‌ ಆಲ್ಬಂ ಸಾಂಗ್‌ ರಿಲೀಸ್‌ ಆಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ವಿಡಿಯೋ ಸಾಂಗ್‌ ಲಾಂಚ್‌ ಮಾಡಿ ಶುಭ ಹಾರೈಸಿದರು. ” ಸಂಜಯ್ ಅವರ ಸಾಹಸ ಮೆಚ್ಚಬೇಕು. ಮಕ್ಮಳಲ್ಲಿ ನಟಿಸಲು ಹೇಳಲು ತಾಳ್ಮೆ ಬೇಕೆ ಬೇಕು.‌ನಟ ಪುನೀತ್ ರಾಜ್ ಕುಮಾರ್ ಮಗುವಿದ್ದಾಗ ಚಲಿಸುವ ಮೋಡಗಳು ಸಿನಿಮಾದಲ್ಲಿ ನಟಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಲ್ಲಿ ಕಚ್ಚೆ ಕಟ್ಟಿಕೊಂಡು ನಟಿಸಬೇಕಿತ್ತು.‌ ನಾನು ಮಾಡಲ್ಲ ಅಂತ ಓಡೋರು‌. ಮಕ್ಕಳನ್ನು ಸಹಿಸಿಕೊಂಡು ತಯಾರಿಸಿರೋದು ಅತಿಶಯೋಕ್ತಿಯಲ್ಲ. ಮಕ್ಕಳ‌ ಕೈಯಲ್ಲಿ ಮೂರು ದಿನಗಳಲ್ಲಿ ಶೂಟಿಂಗ್ ಮುಗಿಸಿರೋದು ಖುಷಿ‌ತಂದಿದೆ. ನಿರ್ದೇಶಕರ ತಾಳ್ಮೆಗೆ ಶರಣು. ಎಲ್ಲರಿಗೂ ತನ್ನ ಮಗ, ಮಗಳು ಚೆನ್ನಾಗಿ ಕಾಣಬೇಕು ಎಂದು ಆಸೆಯಿರುತ್ತದೆ. ಇವತ್ತು ತಂದೆ ತಾಯಿಗಳಿಗೆ ಖುಷಿಯಾಗಿರುತ್ತದೆʼ ಅಂತ ತಂಡಕ್ಕೆ ಶುಭ ಹಾರೈಸಿದರು.

ಸಾಯಿ ಲಕ್ಷಣ್‌ ನಿರ್ದೇಶನದ ಜತೆಗೆ ನೃತ್ಯ ನಿರ್ದೇಶನ ಮಾಡಿದ್ದು, ಅನ್ಮೂಲ್ ವಿಜಯ್‌ ಭಟ್ಕಳ, ಅಜಿಂಶಾ ಸೇರಿದಂತೆ ೩೦೦ ಕ್ಕೂ ಹೆಚ್ಚು ಪುಟಾಣಿಗಳು ಈ ವಿಡಿಯೋ ಸಾಂಗ್‌ ಆಲ್ಬಂ ನಲ್ಲಿ ಕಾಣಸಿಕೊಂಡಿದ್ದಾರೆ. ವಿಡಿಯೋ ಲಾಂಚ್‌ ಗೆ ಅಥಿಯಾಗಿ ಬಂದಿದ್ದ ಸಾಮಾಜಿಕ ಕಾರ್ಯಕರ್ತ ರವಿ ಮಾತನಾಡಿ, ಮನುಷ್ಯ ಎಳೆಯ ಮಕ್ಕಳಿಂದಲೇ ಬೆಳೆಯಬೇಕು ಎನ್ನುವ ಮನೋಭಾವ ಖುಷಿಯಾಯಿತು. ನಮ್ಮ‌ ವಿದ್ಯೆಯೇ ದೇವಸ್ಥಾನ ಎನ್ನುವುದು ಅರಿವಾಗಬೇಕು. ಕೊರೋನಾದಿಂದ ಬೇಸತ್ತವರಿಗೆ ಇಂತಹ ವೀಡಿಯೋ ಸಾಂಗ್ ಮುಖ್ಯವಾಗಿದೆ ಎಂದರು. ಈ ವಿಡಿಯೋ ಸಾಂಗ್‌ ಈಗ ಸೋಷಲ್‌ ಮೀಡಿಯಾದಲ್ಲಿ ಲಭ್ಯವಿದೆ.

Categories
ಸಿನಿ ಸುದ್ದಿ

ಅವರ ಲವ್‌ಗೆ ಆ ವಿಲನ್ ಅಡ್ಡಿ! ಶಶಿಕುಮಾರ್‌ ಪುತ್ರನ ಪ್ರೇಮ ಪುರಾಣದಲ್ಲಿ ಹೊಸ ಟ್ವಿಸ್ಟ್

‌ನಟ ಶಶಿಕುಮಾರ್‌ ಪುತ್ರ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಅವರ ಪುತ್ರ ಅಕ್ಷಿತ್‌ ಅವರು ಲವ್‌ನಲ್ಲಿ ಬಿದ್ದಿರೋದು ಕೂಡ ಎಲ್ಲರಿಗೂ ಗೊತ್ತಿದೆ! ಅಂದರೆ, ಇದು ಸಿನಿಮಾ ವಿಷಯ. ಅವರು ಲವ್ವಲ್ಲಿ ಬಿದ್ದಿರೋದು ಸಿನಿಮಾದಲ್ಲಿ. ಹೌದು, ನಿರ್ದೇಶಕ ಸ್ಮೈಲ್‌ ಶ್ರೀನು ಅವರೀಗ “ಓ ಮೈ ಲವ್‌” ಸಿನಿಮಾದಲ್ಲಿ ಅಕ್ಷಿತ್‌ಗೆ ಲವ್‌ ಮಾಡುವ ಹುಡುಗನ ಪಾತ್ರ ನೀಡಿದ್ದಾರೆ. ಈ ಸಿನಿಮಾದ ವಿಶೇಷವೆಂದರೆ, ಈಗ ಹೊಸ ವಿಲನ್‌ ಎಂಟ್ರಿಯಾಗಿದ್ದಾರೆ. ಅದು “ಮಗಧೀರ” ಖ್ಯಾತಿಯ ಖಳನಟ ದೇವ್‌ಗಿಲ್.‌

ಅಂದಹಾಗೆ, ಇದು ಜಿಸಿಬಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಜಿ.ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ಅದ್ದೂರಿ ವೆಚ್ಚದಲ್ಲಿ ಹಾಕಲಾಗಿದ್ದ ಸೆಟ್‍ನಲ್ಲಿ ಸಾಹಸ ಸನ್ನಿವೇಶಗಳನ್ನು ಸೆರೆಹಿಡಿಯುವುದರೊಂದಿಗೆ ಎರಡನೇ ಹಂತದ ಚಿತ್ರೀಕರಣವನ್ನು ಪೂರೈಸಿದೆ.

ಈ ಹಂತದ ಚಿತ್ರೀಕರಣದಲ್ಲಿ “ಮಗಧೀರ” ಖ್ಯಾತಿಯ ವಿಲನ್ ದೇವ್‍ಗಿಲ್ ಹಾಗೂ ನಾಯಕ ಅಕ್ಷಿತ್ ಶಶಿಕುಮಾರ್ ನಡುವಿನ ಭರ್ಜರಿ ಸಾಹಸ ದೃಷ್ಯಗಳನ್ನು ರಿಯಲ್ ಸತೀಶ್ ಅವರ ಸಾರಥ್ಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ನಾಯಕಿ ಕೀರ್ತಿ ಕಲ್ಕೆರೆ, ಎಸ್.ನಾರಾಯಣ್, ಸಂಗೀತ, ಸುಂದರಶ್ರೀ, ಭಾಗ್ಯಶ್ರೀ, ಪೃಥ್ವಿರಾಜ್ ಕೂಡ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಶೇ.40ರಷ್ಟು ಭಾಗ ಶೂಟಿಂಗ್ ಮುಗಿದಿದೆ.

ಇದೊಂದು ವಿಭಿನ್ನವಾದ ಲವ್, ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಈ ಹಿಂದೆ “ಬಳ್ಳಾರಿ ದರ್ಬಾರ್”‌, “ತೂಫಾನ್” ಹಾಗೂ “18-25” ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಅವರು ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಆರಂಭದಿಂದಲೂ ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತು ಕೊಡುವುದರೊಂದಿಗೆ ಹೊಸ ಪ್ರತಿಭಗಳ ಜೊತೆ ಸಿನಿಮಾ ಮಾಡುತ್ತಿದ್ದ ನಿರ್ದೇಶಕ ಸ್ಮೈಲ್‌ ಶ್ರೀನು, ಈ ಬಾರಿ ಹೊಸಬರ ಜೊತೆ ಚಿತ್ರರಂಗದ ಅನುಭವಿ ಕಲಾವಿದರನ್ನೂ ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ.

ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತವಿದೆ. ರಿಯಲ್ ಸತೀಶ್ ಅವರ ಸಾಹಸ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ವಿ.ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿ.ಮಲ್ಲಿಕ್ ಸಂಕಲನ, ಜನಾರ್ದನ್ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮಹನೀಯರ ಜೀವನ ಸಿನಿಮಾವಾಗಬೇಕು: ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ಸ್ಕ್ರಿಪ್ಟ್ ಪೂಜೆಯಲ್ಲಿ ಶಶಿಕುಮಾರ್ ಮಾತು

ಕರ್ನಾಟಕದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರುತ್ತಿದೆ. “ಮಹಾಕವಿ” ಎಂಬ ಶೀರ್ಷಿಕೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ. ಗೋವಿಂದ ಪೈ ಅವರ ತವರು ಗಡಿನಾಡು ಮಂಜೇಶ್ವರದವರೇ ಆದ ನಟ, ನಿರ್ಮಾಪಕ ರಘುಭಟ್ ತನ್ನ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ ‌ನಲ್ಲಿ ಮಹಾಕವಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಅವರ ಪತ್ನಿ ಸುಗುಣ ರಘುಭಟ್ ಅವರು ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಸಿನಿರಂಗದ ಸೇವೆಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ವಿಶೇಷ.

ಸಿನಿಮಾ ಪತ್ರಕರ್ತರಾಗಿ, ಸಾಹಿತಿಯಾಗಿ ಚಿರಪರಿಚಿತರಾಗಿರುವ ಗಣೇಶ್ ಕಾಸರಗೋಡು ಮಹಾಕವಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಂಜೇಶ್ವರದವರೇ ಆದ ಜಯರಾಂ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ. ಸ್ಟಾರ್ ನಟರೊಬ್ಬರು ಗೋವಿಂದ ಪೈ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅಂದಹಾಗೆ ಗೋವಿಂದ ಪೈ ಅವರ ಜನ್ಮದಿನದಂದು ಅವರ ತವರು ಮಂಜೇಶ್ವರದಲ್ಲಿ ಮಂಗಳವಾರ ಮಹಾಕವಿ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿತು.‌ ಶನೀಶ್ವರ ದೇವಾಲಯದಲ್ಲಿ ಪೂಜೆ ಬಳಿಕ ಗೋವಿಂದ ಪೈ ಅವರ ನಿವಾಸದಲ್ಲಿ ಸಮಾರಂಭ ಜರುಗಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಮಾತನಾಡಿ, “ರೌಡಿಸಂ‌ ಸಿನಿಮಾಗಳಿಗಿಂತ ಇಂತಹ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಬೇಕು. ಸಮಾಜಕ್ಕೆ ಕೊಡುಗೆ ನೀಡಿದವರ ಜೀವನಗಾಥೆ ಎಲ್ಲರಿಗೂ ಆದರ್ಶ. ಗೋವಿಂದ ಪೈ ಅವರ ಬಯೋಪಿಕ್ ನಿರ್ಮಿಸುತ್ತಿರುವ ರಘುಭಟ್ ಹಾಗೂ ಇಡೀ‌ ತಂಡಕ್ಕೆ ಶುಭವಾಗಲಿ” ಎಂದು ಹಾರೈಸಿದರು.

ಎಡೆನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ‌ಮಾತನಾಡಿ, “ಗೋವಿಂದ ಪೈ ಅವರ ಮೇಲೆ ನನಗೆ ವಿಶೇಷ ಅಭಿಮಾನ. ಕಾರ್ಯಕ್ರಮಕ್ಕೆ ಭೇಟಿ ಮಾಡಿ ಆಹ್ವಾನಿಸುತ್ತೇವೆ ಎಂದು ರಘುಭಟ್ ಹೇಳಿದಾಗ, ಅದಕ್ಕಾಗಿ ಬರುವುದು ಬೇಡ. ಇಂತಹ ಕಾರ್ಯಕ್ರಮಕ್ಕೇ ಬಂದೇ ಬರುತ್ತೇನೆಂದು ಬಹಳ ಖುಷಿಯಿಂದ ಆಗಮಿಸಿದ್ದೇನೆ” ಎನ್ನುತ್ತಲೇ ಚಿತ್ರತಂಡವನ್ನು ಆಶೀರ್ವದಿಸಿ, ಯಶಸ್ಸು ಸಿಗಲಿ ಎಂದು ಹಾರೈಸಿದರು.
ಮಂಜೇಶ್ವರದ ವಿನ್ಸೆಂಟ್ ಚರ್ಚ್‌ನ ವಿನೋದ್ ಸಾಲ್ಡಾನ್ಹಾ ಮಾತನಾಡಿ, “ಗೋವಿಂದ ಪೈ ಅವರು 22 ಭಾಷೆಗಳನ್ನು ಬಲ್ಲವರಾಗಿದ್ದರು. ಸರ್ವಧರ್ಮ ಸಹಿಷ್ಣುವಾಗಿದ್ದರು.‌ಅಂತಹ ಮಹಾನ್ ವ್ಯಕ್ತಿ ನಮ್ಮವರು ಎಂಬುದೇ ಹೆಮ್ಮೆ ಎಂದು ಹೇಳಿದರು. ಮಹಾಕವಿ ಕಥೆ , ಚಿತ್ರಕಥೆ ಮತ್ತು ಸಂಭಾಷಣಾಗಾರ ಹಿರಿಯ ಸಿನಿಮಾ ಪತ್ರಕರ್ತರಾದ ಗಣೇಶ್ ಕಾಸರಗೋಡು ಮಾತನಾಡಿ, “ಸಿನಿಮಾಕ್ಕೆ ಬರೆಯುವ ಅವಕಾಶ ಕೊಟ್ಟ ರಘುಭಟ್ ಅವರಿಗೆ ಧನ್ಯವಾದಗಳು.‌ ಇಡೀ ತಂಡವಾಗಿ ಒಂದೊಳ್ಳೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾ ಅದ್ಭುತವಾಗಿ ಮೂಡಿಬರಬೇಕೆಂಬುದು ನನ್ನಾಸೆ. ಆ ನಿಟ್ಟಿನಲ್ಲಿ ನಾನೂ ಶ್ರಮಿಸುತ್ತೇನೆ ಎಂಬುದು ಅವರ ಮಾತು.

ನಟ ವಿಕ್ರಂ ಸೂರಿ ಮಾತನಾಡಿ, “ಕಮರ್ಷಿಯಲ್ ಸಿನಿಮಾ ಜಗತ್ತಿನಲ್ಲಿ ರಘುಭಟ್ ಇಂತಹ ವಿಭಿನ್ನ ಪ್ರಯತ್ನ, ಸಾಹಸದ ಮೂಲಕ ಹೊಸದೇನಾದರು ಮಾಡಬೇಕು ಎಂಬ ಉತ್ಸಾಹದಲ್ಲಿದ್ದಾರೆ. ದುಡ್ಡು ಮಾಡುವ ಇರಾದೆ ಇದ್ದಿದ್ದರೆ ಕಮರ್ಷಿಯಲ್ ಸಿನಿಮಾಗಳಿಗೇ ಬಂಡವಾಳ ಸುರಿಯಬಹುದಿತ್ತು. ಆದರೆ ತನ್ನೂರಿ‌ನ ಕವಿಯ ಬಯೋಪಿಕ್ ಮಾಡಲು ಹೊರಟಿದ್ದಾರೆ. ನಾನು ಸ್ನೇಹಿತನಾಗಿ, ಸಿನಿಮಾರಂಗದವನಾಗಿ ಸದಾ ಜೊತೆಗಿರುತ್ತೇನೆ. ಒಂದೇ‌ ಒಂದು ರೂ. ಸಂಭಾವನೆ ಪಡೆಯದೆ ತಂಡದೊಂದಿಗೆ ಮಹಾಕವಿ ಸಿನಿಮಾಕ್ಕಾಗಿ ಶ್ರಮಿಸುತ್ತೇನೆ ಎಂದರು.
ನಟಿ ನಮಿತಾ ರಾವ್ ಮಾತನಾಡಿ, “ರಘುಭಟ್ ಅವರಿಂದ ನಾವೂ ಮಂಜೇಶ್ವರದ ಮಕ್ಕಳೇ ಆಗಿದ್ದೇವೆ. ನಮ್ಮೂರಿ‌ನ ಕೀರ್ತಿ ಕಳಶ ಗೋವಿಂದ ಪೈ ಅವರ ಬಯೋಪಿಕ್ ತರುತ್ತಿರುವ ರಘುಭಟ್ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

Categories
ಸಿನಿ ಸುದ್ದಿ

ಯೂಟ್ಯೂಬ್ ವಿಮರ್ಶಕರ ಮೇಲೆ ನಟ ಆದಿತ್ಯ ಗರಂ : ಫಿಲ್ಮ್ ಚೇಂಬರ್​ನಲ್ಲಿ ದೂರು- ಕಾನೂನು ಹೋರಾಟಕ್ಕೆ ತಯಾರಿ !

ನಟ ಆದಿತ್ಯ, ಯೂಟ್ಯೂಬ್ ವಿಮರ್ಶಕರ ಮೇಲೆ ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿರುವ ಅವರು, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ. ಹೌದು, ಇತ್ತೀಚೆಗಷ್ಟೆ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ನಟ ಆದಿತ್ಯ ಹರಿಹಾಯ್ದಿದ್ದರು. ವಿಡಿಯೋ ಮೂಲಕ ಯೂಟ್ಯೂಬ್ ವಿಮರ್ಶಕರ ಮೇಲೆ ಚಾಟಿ ಬೀಸಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಅವರು, ಫಿಲ್ಮ್ ಚೇಂಬರ್​ನಲ್ಲಿ ಯೂಟ್ಯೂಬರ್​ಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಮುಂದುವರೆದ ಅಧ್ಯಾಯ ಸಿನಿಮಾ ಬಗ್ಗೆ ಅವಹೇಳನಕಾರಿಯಾಗಿ ರಿವ್ಯೂ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

“ಮುಂದುವರೆದ ಅಧ್ಯಾಯʼ ಸಿನಿಮಾ ನಿರ್ದೇಶಕ ಬಾಲು ಚಂದ್ರಶೇಖರ್, ನಿರ್ಮಾಪಕರು ಹಾಗೂ ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ನಾಯಕ ಆದಿತ್ಯ, ಆರು ಮಂದಿ ಯೂಟ್ಯೂಬರ್​ಗಳ ಮೇಲೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿ ಮಾತನಾಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್‍ಎಮ್ ಸುರೇಶ್, ಕನ್ನಡ ಚಿತ್ರಗಳಿಗೆ, ಕನ್ನಡ ಚಿತ್ರರಂಗಕ್ಕೆ ಇವರೇ ಮಾರಕವಾಗುತ್ತಿದ್ದಾರೆ. ಹೀಗಾಗಿ ಸಿನಿಮಾಗಳನ್ನು ವಿಮರ್ಶೆ ಮಾಡದಂತೆ ಬ್ಯಾನ್ ಮಾಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಂದುವರೆದ ಅಧ್ಯಾಯ ಚಿತ್ರದ ನಾಯಕ ನಟ ಆದಿತ್ಯ, ಸಿನಿಮಾ ನೋಡಿದ ಹಿರಿಯ ಪತ್ರಕರ್ತರು, ಟಿವಿ ಹಾಗೂ ದಿನಪತ್ರಿಕೆಯ ಪರ್ತಕರ್ತರು ಮಾತ್ರವಲ್ಲ ಪ್ರೇಕ್ಷಕರೂ ಸಹ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಹಣದಾಸೆಗೆ ಕೆಲ ಯೂಟ್ಯೂಬರ್​ಗಳು ಹೀಗೆ ನೆಗೆಟಿವ್ ರಿವ್ಯೂ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ಪ್ರಕಟಿಸಿದ ಸಂದರ್ಭದಲ್ಲಿ ಒಳ್ಳೆಯ ವಿಮರ್ಶೆ ನೀಡಲು ಹಣ ಕೇಳಿದ್ದರು. ಆದರೆ ನಮ್ಮ ಚಿತ್ರತಂಡದವರು ಅವರಿಗೆ ಸ್ಪಂದಿಸಿರಲಿಲ್ಲ, ಹೀಗಾಗಿಯೇ ಈ ರೀತಿ ನೆಗಟಿವ್ ರಿವ್ಯೂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

error: Content is protected !!