ನಟ ಶ್ರೀಮುರಳಿ ಅವರ “ಮದಗಜ” ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿತ್ತು. ಅದಷ್ಟೇ ಅಲ್ಲ, ತೆಲುಗಿನಲ್ಲೂ “ರೋರಿಂಗ್ ಮದಗಜ” ಸಿನಿಮಾದ ಟೀಸರ್ ಕೂಡ ಹೊರಬಂದು ಸಖತ್ ಸೌಂಡು ಮಾಡುತ್ತಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ, ಸದ್ಯ ಚಿತ್ರೀಕರಣದಲ್ಲಿದೆ. ಇದರ ನಡುವೆಯೇ ಅವರ ಅನಾರೋಗ್ಯ ಹದಗೆಟ್ಟ ಸುದ್ದಿ ಇದೆ. ಹೌದು, ಶ್ರೀಮುರಳಿ ಅವರಿಗೆ ಹುಷಾರಿಲ್ಲವಂತೆ. ಈ ಮಾತನ್ನು ಸ್ವತಃ ಅವರ ತಂದೆ ಚಿನ್ನೇಗೌಡ ಅವರೇ ಹೇಳಿದ್ದಾರೆ. ಹಾಗಂತ ಶ್ರೀಮುರಳಿ ಅವರ ಅಭಿಮಾನಿಗಳು ಭಯಪಡುವಂಥದ್ದೇನೂ ಇಲ್ಲ. ಇಷ್ಟಕ್ಕೂ ಚಿನ್ನೇಗೌಡ ಅವರು ಹೇಳಿದ್ದು, ಒಂದು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.
ಜನವರಿ 4 ರಂದು ರೇಣುಕಾಂಬ ಸ್ಟುಡಿಯೋದಲ್ಲಿ ಹೊಸಬರೇ ಸೇರಿ ಮಾಡಿರುವ “ಬ್ರೇಕ್ ಫೇಲ್ಯೂರ್” ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಆ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದು ಚಿನ್ನೇಗೌಡರು. ಪೋಸ್ಟರ್ ಲಾಂಚ್ಗೂ ಮೊದಲು ಮಾತನಾಡಿದ ಚಿನ್ನೇಗೌಡರು, “ಈ ಚಿತ್ರದ ಪೋಸ್ಟರ್ ಲಾಂಚ್ ಅನ್ನು ಶ್ರೀಮುರಳಿ ಅವರು ಮಾಡಬೇಕಿತ್ತು. ಆದರೆ, ಅವರಿಗೆ ಹುಷಾರಿಲ್ಲ. ಹಾಗಾಗಿ, ಅವರ ಬದಲು ನಾನು ಬರಬೇಕಾಗಿ ಬಂದಿದೆ. ಈ ಚಿತ್ರತಂಡಕ್ಕೆ ಒಳಿತಾಗಲಿ, ಎಲ್ಲರಿಗೂ ಚಿತ್ರ ಗೆಲುವು ತಂಡು ಕೊಡಲಿ” ಎಂದಷ್ಟೇ ಹೇಳಿ ಸುಮ್ಮನಾದರು.
ಅಲ್ಲಿ ಕುಳಿತಿದ್ದ ಕೆಲವರಿಗೆ ಶ್ರೀಮುರಳಿ ಅವರಿಗೇನಾಯಿತು ಎಂಬ ಪ್ರಶ್ನೆ ಕಾಡಿದ್ದು ನಿಜ. ಅದೇನೆ ಇರಲಿ, ಶ್ರೀಮುರಳಿ ತುಂಬಾ ಉತ್ಸಾಹಿ ನಟ. ಸದಾ ಎನರ್ಜಿಯಲ್ಲೇ ಕೆಲಸ ಮಾಡುತ್ತಾರೆ. ಕಳೆದ ಎರಡು ದಿನಗಳಿಂದಲೂ ಹವಾಮಾನ ಏರುಪೇರಾಗಿದೆ. ಹೀಗಾಗಿ ಸಣ್ಣಪುಟ್ಟ ಶೀತ, ನೆಗಡಿ ಸಹಜ. ಈ ಕಾರಣಕ್ಕೆ ಶ್ರೀಮುರಳಿ ಅವರು ಹೊರಗಡೆ ಬರದೇ ಇರಬಹುದು. ಹೊಸಬರ “ಬ್ರೇಕ್ ಫೇಲ್ಯೂರ್” ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಿರಬಹುದು. ಹಾಗಂತ, ಅವರ ಫ್ಯಾನ್ಸ್ ಯಾವುದೇ ಆತಂಕ ಪಡಬೇಕಾಗಿಲ್ಲ.
ಕನ್ನಡದಲ್ಲಿ ಈಗಾಗಲೇ “ಚಡ್ಡಿದೋಸ್ತ್” ಸಿನಿಮಾ ಬಂದು ಹೋಗಿದ್ದು ಎಲ್ಲರಿಗೂ ಗೊತ್ತಿದೆ. ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬುಟ್ಟ” ಚಿತ್ರದ ಸರದಿ. ಹೌದು, ಈಗಾಗಲೇ ಈ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ.
ಅಂದಹಾಗೆ, ಈ “ಚಡ್ಡಿದೋಸ್ತ್”ಗಳು ಬೇರಾರೂ ಅಲ್ಲ, “ಆಸ್ಕರ್” ಕೃಷ್ಣ ಮತ್ತು ಲೋಕೇಂದ್ರ ಸೂರ್ಯ. ಈ ಪೈಕಿ “ಆಸ್ಕರ್” ಕೃಷ್ಣ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಆಸ್ಕರ್”, “ಮನಸಿನ ಮರೆಯಲಿ”, “ಮಿಸ್ ಮಲ್ಲಿಗೆ”,”ಮೋನಿಕಾ ಈಸ್ ಮಿಸ್ಸಿಂಗ್” ಸಿನಿಮಾಗಳನ್ನು ನಿರ್ದೇಶಿಸಿದ್ದ “ಆಸ್ಕರ್” ಕೃಷ್ಣ ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬುಟ್ಟ” ಸಿನಿಮಾ ಮಾಡಿದ್ದಾರೆ. ಇದೊಂದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ಇನ್ನು ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ರಾಜ್ ಅವರು ನಿರ್ಮಿಸಿದ್ದಾರೆ. ನಿರ್ದೇಶಕ “ಆಸ್ಕರ್” ಕೃಷ್ಣ ಅವರು ಇಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಲೋಕೇಂದ್ರ ಸೂರ್ಯ ಕೂಡ ಸಾಥ್ ನೀಡಿದ್ದಾರೆ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬುಟ್ಟ” ಚಿತ್ರ ಈಗಾಗಲೇ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವನ್ನೂ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಸೆನ್ಸಾರ್ ಕೂಡ ಆಗಿದೆ.
ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ರಿಲೀಸ್ ಮಾಡುವ ಯೋಚನೆ ನಿರ್ದೇಶಕರದ್ದು. ಅಂದಹಾಗೆ, ಇದು ಕೌಂಡಿನ್ಯ ಅವರ “ಮೈ ಡಿಯರ್ ಫ್ರೆಂಡ್” ಎನ್ನುವ ಕಾದಂಬರಿಯನ್ನು ಆಧರಿಸಿದೆ. ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ ಅವರು ಇದಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಈ ಸಿನಿಮಾಗೆ ಮಲಯಾಳಿ ಬೆಡಗಿ ಗೌರಿನಾಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಗಗನ್ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಅವರ ಸಂಕಲನ, ಅಕುಲ್ ಅವರ ನೃತ್ಯ ನಿರ್ದೇಶನ ಹಾಗೂ ವೈಲೆಂಟು ವೇಲು ಅವರ ಸಾಹಸ ನಿರ್ದೇಶನವಿದೆ.
ಸದ್ಯಕ್ಕೆ ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಶುರುವಾಗಿಲ್ಲ. ಕೆಲವು ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಬಹುತೇಕ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಇಡದೆ.
ಚಿತ್ರದಲ್ಲಿ ರೆಡ್ ಅಂಡ್ ವೈಟ್ ಸೆವೆನ್ರಾಜ್, ಸಿ.ವಿ.ಜಿ. ಅವರು ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ, ಇಲ್ಲಿ ಯಾವ ದೋಸ್ತ್ ಏನೆಲ್ಲಾ ಮಾಡ್ತಾನೆ ಎಂಬ ವಿಷಯ ತಿಳಿದುಕೊಳ್ಳಬೇಕಾದರೆ, ಚಿತ್ರ ಬರುವವರೆಗೆ ಕಾಯಲೇಬೇಕು.
ಹೊಂಬಾಳೆ ಯುಟ್ಯೂಬ್ ಚಾನೆಲ್ನಲ್ಲಿ ಜನವರಿ 8ರಂದು ಯಶ್ ಬರ್ತ್ಡೇಗೆ ಟೀಸರ್ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್” ಬಹುದೊಡ್ಡ ಬಜೆಟ್ ಸಿನಿಮಾ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸುದ್ದಿಯಾದ ಚಿತ್ರವೂ ಹೌದು. ಈಗ “ಕೆಜಿಎಫ್ -೨” ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಯಂತೂ ಇದೆ. ಅದಕ್ಕೆ ಕಾರಣ, ಮೊದಲ ಭಾಗ ಮಾಡಿದ ಮೋಡಿ. ಈಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.
ಯಶ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಜನವರಿ 8 ರಂದು ಯಶ್ ಅವರ ಹುಟ್ಟುಹಬ್ಬ ಇರುವದರಿಂದ, ಅಂದೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಜೋರು ತಯಾರಿ ನಡೆಸುತ್ತಿದೆ. ಈ ಟೀಸರ್ ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ನಲ್ಲೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ “ಕೆಜಿಎಫ್-೨” ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.
ಆ ಕುತೂಹಲಕ್ಕೆ ಕಾರಣವೆಂದರೆ, ನಿರ್ದೇಶಕ ಪ್ರಶಾಂತ್ ನೀಲ್ ಅವರು, “ಕೆಜಿಎಫ್-೨” ಚಿತ್ರದ ಹೊಸದೊಂದು ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಫೋಟೋದೊಂದಿಗೆ “ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ” ಎಂಬ ಕ್ಯಾಪ್ಷನ್ ಕೂಡ ಹಾಕಿದ್ದಾರೆ. “ಕೆಜಿಎಫ್ -2” ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಒಂದಷ್ಟು ಬಾಕಿ ದೃಶ್ಯಗಳು, ಕೆಲ ಕೆಲಸಗಳನ್ನು ಮಾತ್ರ ಚಿತ್ರತಂಡ ಉಳಿಸಿಕೊಂಡಿದ್ದು, ಅದರ ಕಡೆ ಗಮನಹರಿಸಿದೆ.
ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ದತ್ ಅಭಿನಯಿಸಿರುವುದರಿಂದ ಇನ್ನಷ್ಟು ನಿರೀಕ್ಷೆಯನ್ನೂ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಯಶ್ ಹುಟ್ಟುಹಬ್ಬದ ಬಳಿಕ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಯೋಚನೆ ತಂಡದ್ದು. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿರುವುದು ವಿಶೇಷತೆಗಳಲ್ಲೊಂದು.
ಇನ್ನು, ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ವಿಜಯ್ ಕಿರಗಂದೂರು ಈ ಅದ್ಧೂರಿ ಚಿತ್ರಕ್ಕೆ ನಿರ್ಮಾಪಕರು. ಭುವನ್ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತವಿದೆ.
ಕನ್ನಡ ಚಿತ್ರರಂಗದಲ್ಲಿ ದಿನಕಳೆದಂತೆ ಹೊಸಬರ ಕಲರವ ಹೆಚ್ಚುತ್ತಲೇ ಇದೆ. ಈಗ ಹೊಸಬರು ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಸಿನಿಮಾರಂಗವನ್ನು ಸ್ಪರ್ಶಿಸುತ್ತಿದ್ದಾರೆ. ಆ ಸಾಲಿಗೆ “ವಾರ್ಡ್ ನಂ-11” ಚಿತ್ರತಂಡವೂ ಸೇರಿದೆ. ಹೌದು, ಸಿನಿಮಾರಂಗದಲ್ಲೇ ಹಲವು ವರ್ಷಗಳ ಕಾಲ ಕೆಲಸ ಮಾಡಿ, ಅನುಭವ ಪಡೆದು ಆ ಅನುಭವದ ಆಧಾರದ ಮೇಲೆ ಈಗ “ವಾರ್ಡ್ ನಂ-೧೧” ಚಿತ್ರಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಶ್ರೀಕಾಂತ್. ಯಶ್ ಅಭಿನಯದ “ಮೊದಸ ಸಲ” ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಕಾಂತ್, ಆ ನಂತರದ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಜೊತೆ ಜೊತೆಯಲ್ಲಿ ಒಂದಷ್ಟು ಕಿರುಚಿತ್ರಗಳನ್ನೂ ಕೂಡ ನಿರ್ದೇಶಿಸಿದ ಅನುಭವ ಪಡೆದುಕೊಂಡಿದ್ದಾರೆ. ಅದಾದ ಬಳಿಕ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈಗ “ವಾರ್ಡ್ ನಂ-೧೧” ಚಿತ್ರಕ್ಕೆ ಕೈ ಹಾಕಿದ್ದಾರೆ.
ತಮ್ಮ ಚೊಚ್ಚಲ ಚಿತ್ರದ ಕುರಿತು “ಸಿನಿಲಹರಿ” ಜೊತೆ ಮಾತಿಗಿಳಿದ ನಿರ್ದೇಶಕ ಶ್ರೀಕಾಂತ್ ಹೇಳಿದ್ದಿಷ್ಟು.
ಶ್ರೀಕಾಂತ್, ನಿರ್ದೇಶಕ
“ಇದು ನನ್ನ ಮೊದಲ ಪ್ರಯತ್ನ. ಇಲ್ಲಿ ಪ್ರಯೋಗವೂ ಇದೆ. ಕಮರ್ಷಿಯಲ್ ಅಂಶಗಳೂ ಇವೆ. ಇಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಹೈಲೆಟ್. ಅವರೊಂದಿಗೆ ಸುಮನ್ನಗರ್ಕರ್ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ. ಸಿನಿಮಾ ಕುರಿತು ಹೇಳುವುದಾದರೆ, ಇದೊಂದು ಏರಿಯಾದಲ್ಲಿ ನಡೆಯುವ ಕಥೆ. ಈ ಕಥೆಯಲ್ಲಿ ಪ್ರೀತಿ ತುಂಬಿದೆ, ದ್ವೇಷವೂ ಇದೆ. ರಾಜಕಾರಣಿಗಳ ಎಂಟ್ರಿಯೂ ಇದೆ.
ಸಂದೀಪ್, ನಿರ್ಮಾಪಕರು
ಗೆಳೆತನ ತುಂಬಿದೆ. ಒಟ್ಟಾರೆ, ಇದೊಂದು ಕಮರ್ಷಿಯಲ್ ಸಿನಿಮಾ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣಗೊಂಡಿದೆ. ಶೇ.೭೦ರಷ್ಟು ಚಿತ್ರೀಕರಣಗೊಂಡಿರುವ ಸಿನಿಮಾ ಇನ್ನಷ್ಟು ಭಾಗ ಚಿತ್ರೀಕರಣಗೊಂಡರೆ ಮುಗಿಯಲಿದೆ” ಎಂದು ವಿವರ ಕೊಡುತ್ತಾರೆ.
ರಾಘವೇಂದ್ರ ರಾಜಕುಮಾರ್ ಅವರ ನಟನೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ತುಂಬಾನೇ ಕಂಫರ್ಟಬಲ್ ವ್ಯಕ್ತಿ. ಅಂಥವರ ಜೊತೆ ನಾನು ಕೆಲಸ ಮಾಡಿದ್ದೇನೆ ಎನ್ನುವುದೇ ಖುಷಿಯ ವಿಷಯ. ಅವರಿಗಿರುವ ಸಿನಿಮಾ ಪ್ರೀತಿ, ಎನರ್ಜಿ ನೋಡಿ, ನಾವಿನ್ನೂ ಕಲಿಯಬೇಕಾಗಿದ್ದು ಸಾಕಷ್ಟು ಇದೆ ಎನಿಸುತ್ತದೆ. ದೊಡ್ಡ ದೊಡ್ಡ ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದು ಮರೆಯದ ಅನುಭವ ಅನ್ನುತ್ತಾರೆ ಶ್ರೀಕಾಂತ್.
ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಜೊತೆಯಲ್ಲಿ ಸುಮನ್ ನಗರ್ಕರ್ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. “ದಶರಥ” ಹಾಗೂ “ಕೃಷ್ಣ ತುಳಸಿ” ಸಿನಿಮಾದ ನಾಯಕಿ ಮೇಘಶ್ರೀ ಅವರು ಈ ಚಿತ್ರದ ನಾಯಕಿಯಾಗಿದ್ದಾರೆ. ಉಳಿದಂತೆ ಕಬೀರ್ ಸಿಂಗ್, ಅಚ್ಯುತ್ಕುಮಾರ್, ಸುಧಾಬೆಳವಾಡಿ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಉಗ್ರಂ ಮಂಜು, “ಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಗೋವಿಂದೇ ಗೌಡ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರಾಕೇಶ್ ಸಿ.ತಿಲಕ್ ಛಾಯಾಗ್ರಹಣವಿದೆ.
“ಕಿನಾರೆ” ಸಿನಿಮಾ ಸಂಗೀತ ನಿರ್ದೇಶಕ ಸುರೇಂದ್ರನಾಥ್ ಅವರು ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳಿದ್ದು, ಅರ್ಮಾನ್ ಮಲ್ಲಿಕ್, “ವಿಕ್ರಂ ವೇದ” ಗಾಯಕ ಶಿವಂ, ಅನುರಾಧ ಭಟ್, ಮೆಹಬೂಬ್ ಸಾಬ್ ಹಾಡಿದ್ದಾರೆ. ಇನ್ನು, ಚಿತ್ರದಲ್ಲಿ ನಾಲ್ಕು ಭರ್ಜರಿ ಫೈಟ್ಸ್ಗಳಿವೆ. ವಿಕ್ರಮ್ ಮೋರ್, “ಮದಗಜ”, “ಸೂಪರ್ ಸ್ಟಾರ್” ಹಾಗೂ “ಬಂಪರ್” ಸಿನಿಮಾಗಳಿಗೆ ಸಾಹಸ ಸಂಯೋಜಿಸಿರುವ ಅರ್ಜುನ್ ಕೂಡ ಸಾಹಸ ನಿರ್ದೇಶನ ಮಾಡಿದ್ದಾರೆ.
ರಾಕೇಶ್ , ಸಿ.ತಿಲಕ್ ಛಾಯಾಗ್ರಾಹಕ
ಒಂದು ಕಮರ್ಷಿಯಲ್ ಚಿತ್ರಕ್ಕೆ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ ಎನ್ನುತ್ತಾರೆ ನಿರ್ದೇಶಕ ಶ್ರೀಕಾಂತ್. ಚಿತ್ರವನ್ನು ಸಂದೀಪ್ ಶಿವಮೊಗ್ಗ ನಿರ್ಮಾಣ ಮಾಡಿದ್ದಾರೆ. ಇವರ ಜೊತೆಗೆ ಗುರುರಾಜ ಎ ಮತ್ತು ಹೇಮಂತ್ ಕುಮಾರ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಏನೆಲ್ಲಾ ಬೇಕೋ ಎಲ್ಲವನ್ನೂ ಕಲ್ಪಿಸಿಕೊಡುವ ಮೂಲಕ ಒಂದೊಳ್ಳೆಯ ಸಿನಿಮಾ ತಯಾರಾಗಲು ಪ್ರೋತ್ಸಾಹಿಸುತ್ತಿದ್ದಾರೆ. ನನ್ನ ಜೊತೆಗಿರುವ ತಂಡ ಕೂಡ ಒಳ್ಳೆಯ ಸಹಕಾರ ನೀಡಿದೆ. ಹಾಗಾಗಿ ಸಿನಿಮಾ ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬರುತ್ತಿದೆ ಎಂಬುದು ಶ್ರೀಕಾಂತ್ ಮಾತು.
ದಾನಿಶ್ ಸೇಠ್ ಅಂದಾಕ್ಷಣ ನೆನಪಾಗೋದೇ “ಹಂಬಲ್ ಪೊಲಿಟಿಷಿಯನ್ ನೋಗರಾಜ್” ಚಿತ್ರ. ದಾನಿಶ್ ಸೇಠ್ ಬಹುಮುಖ ಪ್ರತಿಭೆ. “ಮ್ಯಾನ್ ಆಫ್ ವಾಯ್ಸಸ್” ಖ್ಯಾತಿಯ ದಾನಿಶ್, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯಗೊಂಡವರು. ಕೊರೊನಾ ಸಮಯದಲ್ಲಂತೂ ಅವರು ಹಲವು ಪಾತ್ರಗಳ ಮೂಲಕ ಗಮನಸೆಳೆದಿದ್ದುಂಟು. ಈ ಪೈಕಿ ಅವರ ಗೋಪಿ ಪಾತ್ರ ಕೂಡ ಹೈಲೈಟ್ ಆಗಿತ್ತು. ಇದೀಗ ಈ ಪಾತ್ರವನ್ನೇ ಇಟ್ಟುಕೊಂಡು ಒಂದು ಸಿನಮಾ ರೆಡಿಯಾಗುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ. ಅಂದಹಾಗೆ, ಅದೊಂದು ಅಮಾಯಕ ಗೋಪಿ ಕುರಿತಾದ ಚಿತ್ರ. ದಾನಿಶ್ ಸೇಠ್ ಅವರೇ ಸೃಷ್ಟಿ ಮಾಡಿರುವ ಗೋಪಿ ಪಾತ್ರ ಒಂದು ಅಮಾಯಕ ಹುಡುಗನ ಸುತ್ತ ನಡೆಯುವ ಕಥೆ. ಪಾತ್ರದ ಬಗ್ಗೆ ಹೇಳುವುದಾದರೆ, ಅವನಿಗೆ ಅಶ್ಲೀಲ ಚಿತ್ರಕ್ಕೂ ಸಾಮಾನ್ಯ ಚಿತ್ರಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ಗೋಪಿ ತುಂಬಾನೇ ಮುಗ್ಧ ಸ್ವಭಾವದ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾನೆ.
ಅದೊಂದು ವಿಭಿನ್ನ ಕಥೆ ಹೊಂದಿದೆ. ಈ ಚಿತ್ರ ಪಿಆರ್ಕೆ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿದೆ. ಪುನೀತ್ ರಾಜ್ಕುಮಾರ್ ಅವರ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು, ವಮ್ಸಿಧರ ಭೋಗರಾಜು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ “ಒನ್ ಕಟ್, ಟೂ ಕಟ್” ಎಂದು ಹೆಸರಿಡಲಾಗಿದೆ. ದಾನಿಶ್ ಸೇಠ್ ಅಭಿನಯಿಸಿದ್ದ “ಫ್ರೆಂಚ್ ಬಿರಿಯಾನಿ” ಸಿನಿಮಾವನ್ನು ಪಿಆರ್ಕೆ ಸಂಸ್ಥೆ ನಿರ್ಮಾಣ ಮಾಡಿತ್ತು. ಅಮೆಜಾನ್ನಲ್ಲಿ ಬಿಡುಗಡೆಯಾಗಿದ್ದ ಆ ಸಿನಿಮಾ ಎಲ್ಲರ ಗಮನ ಸೆಳೆದಿತ್ತು. ಈ ಚಿತ್ರವನ್ನು ಪನ್ನಗಾಭರಣ ನಿರ್ದೇಶಿಸಿದ್ದರು. ಸದ್ಯಕ್ಕೆ ದಾನಿಶ ಸೇಠ್ ಅವರು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ” ಚಿತ್ರದಲ್ಲೂ ನಟಿಸುತ್ತಿದ್ದಾರೆ. “ಒನ್ ಕಟ್, ಟೂ ಕಟ್” ದಾನಿಶ್ ಸೇಠ್ ಅವರ ಮೂರನೇ ಚಿತ್ರ.
ಕನ್ನಡ ಚಿತ್ರರಂಗದಲ್ಲೀಗ ಹೊಸ ಸಿನಿಮಾಗಳ ಪರ್ವ. ಕಳೆದ ಹತ್ತು ತಿಂಗಳಿನಿಂದಲೂ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಹೊಸಬರ ಚಿತ್ರಗಳು ಸೆಟ್ಟೇರುತ್ತಿವೆ. ಹಾಗೆಯೇ ಸ್ಟಾರ್ಸ್ ಸಿನಿಮಾಗಳೂ ಮುಹೂರ್ತದ ಜೊತೆಗೆ ತಮ್ಮ ಹೊಸ ಚಿತ್ರಗಳನ್ನು ಘೋಷಿಸುತ್ತಿವೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಈಗ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅವರ ಸಿನಿಮಾಗೆ ಆದಿತ್ಯ ಹೀರೋ ಅನ್ನೋದೇ ವಿಶೇಷ.
ಅಂದಹಾಗೆ, ನಾರಾಯಣ್ ಮತ್ತು ಆದಿತ್ಯ ಅವರ ಕಾಂಬಿನೇಷನ್ ಸಿನಿಮಾಗೆ “5ಡಿ ” ಎಂದು ನಾಮಕರಣ ಮಾಡಿದ್ದಾರೆ.
ಜನವರಿ 1ರಂದು ತಮ್ಮ ನೂತನ ಸಿನಿಮಾದ ಟೈಟಲ್ ಲಾಂಚ್ ಮಾಡುವ ಮೂಲಕ ಹೊಸ ಚಿತ್ರ ಮಾಡುವ ಕುರಿತು ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಚಿತ್ರದ ಪೋಸ್ಟರ್ ವಿಭಿನ್ನವಾಗಿದೆ. ಪೋಸ್ಟರ್ ಒಳಗೆ ಒಂದು ಕೈ, ಅದರೊಳಗೆ ಒಂದಷ್ಟು ಮುಖಗಳು ಆಂಗ್ಲದಲ್ಲಿ ಬರೆದ ‘ಡಿ’ ಎಂಬ ಅಕ್ಷರ ಅನ್ನೋದರ ಹಿಂದೆ ಅಡಗಿರುವ ವಿಶೇಷತೆಗಳು ಸಾಕಷ್ಟಿದೆ.
ಇನ್ನು ಈ ಚಿತ್ರವನ್ನು ಸ್ವಾತಿ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.
ಬಹಳ ದಿನಗಳ ಬಳಿಕ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ನಾರಾಯಣ್ ಯಾವುದೇ ಸಿನಿಮಾ ಮಾಡಿದರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಇಲ್ಲೂ ಆ ವಿಶೇಷತೆ ನಿರೀಕ್ಷಿಸಬಹುದು. ಈ ಚಿತ್ರದಲ್ಲಿ ಆದಿತ್ಯ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ನಾರಾಯಣ್ ಸೆಂಟಿಮೆಂಟ್ ಹಾಗೂ ಹಾಸ್ಯ ಪ್ರಧಾನ ಸಿನಿಮಾಗಳಿಗೆ ಸೈ ಎನಿಸಿಕೊಂಡವರು. ಹಾಗಂತ ಮಾಸ್ ಸಿನಿಮಾಗಳಿಂದ ದೂರ ಇದ್ದಾರೆ ಅಂದುಕೊಳ್ಳುವಂತಿಲ್ಲ. ಕನ್ನಡ ಚಿತ್ರರಂಗಕ್ಕೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಎಸ್.ನಾರಾಯಣ್, ಈಗ ಮೊದಲ ಸಸ್ಪೆನ್ಸ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಈ ಚಿತ್ರಕ್ಕೆ ಆದಿತ್ಯ ನಾಯಕರಾದರೆ, ಅದಿತಿ ಪ್ರಭುದೇವ ನಾಯಕಿ. ಟೈಟಲ್ ಲಾಂಚ್ ಮಾಡಿ ಮಾತನಾಡಿದ ದರ್ಶನ್ ಹೇಳಿದ್ದಿಷ್ಟು,’ಕಳೆದ ವರ್ಷ ಎಲ್ಲರೂ ಸಾಕಷ್ಟು ಸಮಸ್ಯೆ ಎದುರಿಸಿದ್ದುಂಟು. ಈ ವರ್ಷದ ಮೊದಲ ದಿನ ನಾರಾಯಣ್ ಸರ್ ಸಿನಿಮಾ ಮಾಡಿದ್ದಾರೆ. ಆದಿತ್ಯ ಗೆ ಒಳ್ಳೆಯದಾಗಲಿ. ಮೊದಲ ಬಾರಿಗೆ ಸಸ್ಪೆನ್ಸ್ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಮಾಡುವ ಮೂಲಕ ನಮ್ಮವರಿಗೆ ಕೆಲಸ ಕೊಡುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ನಾರಾಯಣ್ ಮಾತನಾಡಿ, ‘ ಲಾಕ್ ಡೌನ್ ದಿನಗಳನ್ನು ಚೆನ್ನಾಗಿ ಬಳಸಿಕೊಂಡೆ ಒಳ್ಳೆಯ ಕಥೆ ಬರೆಯೋಕೆ ಕಾರಣವಾಯ್ತು. ನಾಲ್ಕು ಸ್ಕ್ರಿಪ್ಟ್ ಆಗಿದೆ. ಇವತ್ತು ಶುರುವಾಗಿದೆ. ಹೊಸ ಉತ್ಸಾಹವಿದೆ. ಸ್ವಾತಿ ಕುಮಾರ್ ನಿರ್ಮಾಣವಿದೆ. ರವಿಕುಮಾರ್ ಕಥೆ ಜೊತೆಗೆ ಆದಿತ್ಯ ಹೆಸರು ಹೇಳಿದರು. ‘ಚಂದ್ರ ಚಕೋರಿ’ ಕಥಾ ನಾಯಕ ಇವರೇ ಆಗಬೇಕಿತ್ತು. ಸ್ಕ್ರಿಪ್ಟ್ ವೇಳೆ ಆದಿತ್ಯ ಬರೋರು ಹೋಗೊರು. ಆದರೆ ಬೇರೆ ಸಿನಿಮಾಗೆ ಓಕೆ ಆಗಿದ್ದರು. ಬಹಳ ವರ್ಷಗಳ ಬಳಿಕ ಈಗ ಕೆಲಸಮಾಡ್ತಾ ಇದೀನಿ. ಖುಷಿ ಆಗಿದೆ. ಬಾಬು ಸರ್ ಪುತ್ರ ಎಂಬ ಹೆಮ್ಮೆ. ಪರಿಪೂರ್ಣ ಕಲಾಕುಟುಂಬ ಇದು. ಅದಿತಿ ಅಚಾನಕ್ ಆಗಿ ನಾಯಕಿಯಾಗಿ ಸಿಕ್ಕರು. ರೌಡಿ ಪಾತ್ರವದು. ದರ್ಶನ್ ಅವರು ಮೊದಲ ಸಲ ಬಂದು ತೃಪ್ತಿಯಿಂದ ಬಂದು ಹಾರೈಸಿದ್ದಾರೆ. ಬಹು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ. ಹಲವು ಲುಕ್ ಇಲ್ಲಿರಲಿವೆ. ಹಂತ ಹಂತವಾಗಿ ಹೊರಬರಲಿವೆ ಎಂದರು.
ಆದಿತ್ಯ ಮಾತನಾಡಿ, ‘5ಡಿ ಒಂದೊಳ್ಳೆಯ ಸಿನಿಮಾ. ಬಹಳ ವರ್ಷಗಳ ಹಿಂದೆ ಮಾಡಲು ಆಗಲಿಲ್ಲ. ಮತ್ತೆ ಮಾಡುವ ಪ್ಲಾನ್ ಇತ್ತು ಆಗಲಿಲ್ಲ. ನಾರಾಯಣ್ ಸರ್ ಹೇಳಿದರು. ಕಥೆ ಕೇಳಲಿಲ್ಲ. ನಿಜವಾಗಲೂ ಅದ್ಭುತ ಕಥೆ ಮಾಡಿದ್ದಾರೆ. ಸಿನಿಮಾ ಜರ್ನಿಯಲ್ಲಿ ಈ ರೀತಿಯ ಜಾನರ್ ಕಥೆ ಮಾಡಿಲ್ಲ. ಕೆಲವರು ನಾರಾಯಣ್ ಹೆದರಿಸಿರಬೇಕಲ್ಲಾ ಅಂದ್ರು, ನಾರಾಯಣ್ ಸರ್ ಜೊತೆ ಕೆಲಸ ಮಾಡಿದ್ದೇನೆ. ಮೊದಲು ಭಯ ಇತ್ತು ಆಮೇಲೆ ಸರಿ ಹೋಯ್ತು. ಆರ್ಟಿಸ್ಟ್ ಗಳನ್ನು ಚೆನ್ನಾಗಿ ಪಳಗಿಸುತ್ತಾರೆ. ತಂದೆ ಹೇಳಿದಂಗೆ ನಿರ್ದೇಶಕನ ನಟ ಆಗಿ ಕೆಲಸ ಮಾಡ್ತೀನಿ.
ನಾನು ಬೊಂಬೆ ಅವರು ಹೇಳಿದಂತೆ ಕುಣಿತೀನಿ.ಡಿ ಫಾರ್ ದಾಸ, ಡಿ ಫಾರ್ ಡೆಡ್ಲಿ, ಡಿ ಅಂದರೆ ದರ್ಶನ್, ಡಿ ಆಂದರೆ ದುಶ್ಯಂತ್ ಹಾಗಾಗಿ ‘5ಡಿ’ ಅಂದರು ಆದಿತ್ಯ. ಕುಮಾರ್ ಛಾಯಾಗ್ರಹಣವಿದೆ. ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ. ಜ್ಯೋತಿ ರೈ, ರಾಜೇಂದ್ರಸಿಂಗ್ ಬಾಬು, ಮಾಲೂರು ಶ್ರೀನಿವಾಸ್. ಇದ್ದರು
ಡಾ.ರಾಜಕುಮಾರ್ ಅವರು ಹುಟ್ಟಿದ ದಿನವೇ ಈ ಸಿಂಹದ ಮರಿ ಹುಟ್ಟಿದ್ದು…
ಸಿನಿಮಾ ನಟರಿಗೂ ಈ ಪ್ರಾಣಿಗಳಿಗೂ ಅವಿನಾಭಾವ ಸಂಬಂಧ. ಹೌದು, ಬಹುತೇಕ ನಟ, ನಟಿಯರು ಸಾಕು ಪ್ರಾಣಿಗಳ ಮೇಲೆ ಅತೀವ ಪ್ರೀತಿ ತೋರುತ್ತಲೇ ಇರುತ್ತಾರೆ. ಒಂದಷ್ಟು ನಟ,ನಟಿಯರು ಈಗಾಗಲೇ ನಾಯಿ ಮರಿ ಸೇರಿದಂತೆ ಒಂದಷ್ಟು ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಯೋಗಕ್ಷೇಮ ವಿಚಾರಿಸುವಲ್ಲಿ ನಿರತರಾಗಿದ್ದಾರೆ. ಇದು ಕನ್ನಡದ ಮಟ್ಟಿಗೆ ಹೊಸದಲ್ಲದಿದ್ದರೂ, ಪ್ರಾಣಿಗಳ ಮೇಲೆ ಇರುವ ಪ್ರೀತಿಯೇ ಇಲ್ಲಿ ಮುಖ್ಯ ಎಂಬುದನ್ನು ಕಲಾವಿದರು ಸಾರಿ ಸಾರಿ ಹೇಳುತ್ತಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯವೆಂದರೆ, “ರಾಜಾಹುಲಿ” ಖ್ಯಾತಿಯ ನಟ ವಸಿಷ್ಡ ಸಿಂಹ ಅವರೂ ಕೂಡ ಒಂದು ಪ್ರಾಣಿ ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಅವರೀಗ ಒಂದು ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅವರು ಮೂರು ತಿಂಗಳ ಸಿಂಹದ ಮರಿಯನ್ನು ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೊಸ ವರ್ಷಕ್ಕೊಂದು ಹೊಸ ನಿರ್ಧಾರ ಪ್ರಕಟಿಸಿರುವ ವಸಿಷ್ಠ ಸಿಂಹ, ಈಗ ಹೊಸ ವರ್ಷದ ಮೊದಲ ದಿನವೇ ಉದ್ಯಾನವನಕ್ಕೆ ಭೇಟಿ ಮಾಡಿ, ಅದಕ್ಕೆ ತಮ್ಮ ತಂದೆ ವಿಜಯ ನರಸಿಂಹ ಹೆಸರನ್ನೇ ನಾಮಕರಣ ಮಾಡುವ ಮೂಲಕ ಅಧಿಕೃತವಾಗಿಯೂ ಪ್ರಕಟಿಸಿದ್ದಾರೆ. ಬನ್ನೇರು ಘಟ್ಟದಲ್ಲಿಯೇ ಹುಟ್ಟಿರುವ ಸಿಂಹ ಇದಾಗಿದ್ದು, ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿರುವುದು ವಿಶೇಷ.
ಚಿತ್ರಂಗವನ್ನು ಮತ್ತು ಸಿನಿಮಾವನ್ನು ಅತಿಯಾಗಿ ಪ್ರೀತಿಸುವ ವಸಿಷ್ಠ ಸಿಂಹ, ಸದಾ ಹೊಸತನ್ನೇ ಎದುರು ನೋಡುತ್ತಿರುತ್ತಾರೆ, ಏನಾದರೊಂದು ಹೊಸದನ್ನೇ ಮಾಡಲು ಹಂಬಲಿಸುತ್ತಲೇ ಇರುತ್ತಾರೆ. ಈ ಹೊಸ ವರ್ಷಕ್ಕೆ ಅವರು ಸಿಂಹದ ಮರಿಯೊಂದನ್ನು ದತ್ತು ಪಡೆದು ಪ್ರೀತಿ ತೋರುತ್ತಿದ್ದಾರೆ. ಅದನ್ನು ಹೊಸ ವರ್ಷದ ಮೊದಲ ದಿನ ಹೊಸ ರೀತಿಯಲ್ಲಿ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಸದ್ಯಕ್ಕೆ ವಸಿಷ್ಠ ಸಿಂಹ ಸಾಕಷ್ಟು ಬಿಝಿಯಾಗಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲದೇ ಬೇರೆ ಭಾಷೆಗಳಲ್ಲೂ ಅವರೀಗ ಹೆಜ್ಜೆ ಇಟ್ಟಿದ್ದಾರೆ. ಕನ್ನಡದ ಮಟ್ಟಿಗೆ ಅವರೀಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅತ್ತ ತೆಲುಗು ಚಿತ್ರರಂಗದಲ್ಲೂ ಒಂದು ಗಟ್ಟಿ ಜಾಗ ಮಾಡಿಕೊಳ್ಳುವ ಉತ್ಸಾಹದಲ್ಲೂ ಇದ್ದಾರೆ. ಒಬ್ಬ ಕನ್ನಡದ ನಟ, ಬೇರೆ ಭಾಷೆಯ ಚಿತ್ರಗಳಲ್ಲಿ ಮಿಂಚುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಹೌದು.
ಡಾರ್ಲಿಂಗ್ ಕೃಷ್ಣ , ಮಿಲನ ನಾಗರಾಜ್ ಹಾಗೂ ನಿಮಿಕಾ ರತ್ನಾಕರ್ ಅಭಿನಯದ ” ವರ್ಜಿನ್ʼ ಚಿತ್ರದ ಟೈಟಲ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡ ಟೈಟಲ್ ಬದಲಾವಣಿಗೆ ಮುಂದಾಗಿದ್ದು, ಹೊಸ ವರ್ಷದ ದಿನವೇ ಚಿತ್ರದ ಹೊಸ ಟೈಟಲ್ ಅನಾವರಣಗೊಂಡಿದೆ. ಹೌದು, “ಮಿಸ್ಟರ್ ಬ್ಯಾಚುಲರ್” ಎಂಬ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಲಾಕ್ ಡೌನ್ ಸಮಯದಲ್ಲೇ ಶುರುವಾದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ.
ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಸದ್ಯಕ್ಕೆ ಈ ಚಿತ್ರದ ವಿಶೇಷತೆಗಳೇನು ಅನ್ನೋದು ರಿವೀಲ್ ಆಗಿಲ್ಲ. ಆದರೆ ಈ ಚಿತ್ರ ಟೈಟಲ್ ಮೂಲಕವೇ ದೊಡ್ಡ ವಿವಾದ ಸೃಷ್ಟಿಸಿತ್ತು. ʼವರ್ಜಿನ್ʼ ಎನ್ನುವ ಚಿತ್ರದ ಶೀರ್ಷಿಕೆಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಚಿತ್ರ ತಂಡವು “ಶೀಘ್ರಮೇವ ಕಲ್ಯಾಣ ಮಸ್ತುʼ ಎನ್ನುವ ಟೈಟಲ್ ಸೆಲೆಕ್ಟ್ ಮಾಡಿಕೊಂಡಿತ್ತು. ಆ ಹೆಸರಲ್ಲೇ ಚಿತ್ರೀಕರಣ ಮುಗಿಸಿಕೊಂಡು ಬಂತು. ಅದು ಕೂಡ ಚಿತ್ರದ ಕಥೆಗೆ ಸೂಕ್ತ ಎನಿಸದ ಕಾರಣ, ಈಗ “ಮಿಸ್ಟರ್ ಬ್ಯಾಚುಲರ್” ಶೀರ್ಷಿಕೆಯನ್ನು ಪಕ್ಕಾ ಮಾಡಿದೆ. ಚಿತ್ರಕ್ಕೆ ನಾಯ್ಡು ಬಂಡಾರ ನಿರ್ದೇಶಕರು. ಪೂರಿ ಜಗನ್ನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಾಯ್ಡು ಬಂಡಾರ ಅವರಿಗೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ.
ನಿರ್ಮಾಪಕರೂ ಕೂಡ ಆಂಧ್ರ ಮೂಲದವರು. ಶ್ರೀನಿವಾಸ್ ಹಾಗೂ ಡಿ. ಸ್ವರ್ಣಲತಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸಹ ನಿರ್ಮಾಪಕರಾಗಿ ಚಲಪತಿ, ಕಿರಣ್ ಕುಮಾರ್ ಜೊತೆಯಾಗಿದ್ದಾರೆ.
ಕದ್ರಿ ಮಣಿಕಾಂತ್ ನಿರ್ದೇಶನ ಹಾಗೂ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಚಿತ್ರಕ್ಕಿದೆ. ಇದೊಂದು ಕಾಮಿಡಿ ಡ್ರಾಮಾ, ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಹೊಂದಿದೆ. ಇದು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಹೊರಬರಲಿದೆ ಎನ್ನಲಾಗುತ್ತಿದೆ.
ಗಂಟೆಗಳಲ್ಲೇ ಲಕ್ಷಾಂತರ ವೀಕ್ಷಣೆ- ಶ್ರೀಮುರಳಿ ಫ್ಯಾನ್ಸ್ ಫಿದಾ
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ “ಮದಗಜ” ತೆಲುಗಿನಲ್ಲೂ ತಯಾರಾಗುತ್ತಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಈಗ ತೆಲುಗಿನಲ್ಲೂ “ರೋರಿಂಗ್ ಮದಗಜ” ಹೆಸರಲ್ಲಿ ರೆಡಿಯಾಗುತ್ತಿದ್ದು, ಹೊಸ ವರ್ಷಕ್ಕೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ ಪಡೆದಿದೆ. ಸುಮಾರು ೧೫ ಸಾವಿರಕ್ಕೂ ಹೆಚ್ಚು ಜನರಿಂದ ಮೆಚ್ಚುಗೆ ಸಿಕ್ಕಿದೆ. ಸಾವಿರಾರು ಪಾಸಿಟಿವ್ ಕಾಮೆಂಟ್ಸ್ ಕೂಡ ಬಂದಿದೆ. ಇದರಿಂದಾಗಿ ಸಿನಿಮಾ ತಂಡ ಮತ್ತಷ್ಟು ಹುಮ್ಮಸ್ಸಿನಲ್ಲಿದೆ. ಅಷ್ಟೇ ಅಲ್ಲ, ಶ್ರೀಮುರಳಿ ಅವರೇ ತೆಲುಗಿನಲ್ಲೂ ಆ ಟೀಸರ್ಗೆ ವಾಯ್ಸ್ ನೀಡಿದ್ದಾರೆ. ಟೀಸರ್ನಲ್ಲಿರುವ ವಾಯ್ಸ್ ಸಖತ್ ಆಗಿದ್ದು, ಫ್ಯಾನ್ಸ್ ಖುಷಿಗೆ ಈಗ ಪಾರವೇ ಇಲ್ಲ.
ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿಬಸ್ರೂರ್ ಸಂಗೀತವಿದೆ. ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿಬಾಬು ಕೂಡ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆಯಾದ ಕನ್ನಡದ “ಮದಗಜ” ಚಿತ್ರದ ಟೀಸರ್ ನೋಡಿ ಮೆಚ್ಚುಗೆ ಸೂಚಿಸಿದ್ದ ಜಗಪತಿಬಾಬು, ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೂ ಶುಭಕೋರಿದ್ದರು.
ಸದ್ಯ ಶ್ರೀಮುರಳಿ “ಮದಗಜ” ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈಗ ತೆಲುಗಿನ “ರೋರಿಂಗ್ ಮದಗಜ” ಚಿತ್ರದ ಟೀಸರ್ ಹೊರಬಂದಿದೆ. ಸಂಕ್ರಾಂತಿಗೆ ಮತ್ತೊಂದು ವಿಶೇಷತೆ ಈ ಚಿತ್ರದಿಂದ ಹೊರಬರಲಿದೆ. ತಮಿಳಿನಲ್ಲೂ “ಮದಗಜ” ಮೂಡಿಬರಲಿದೆ ಎಂಬುದೇ ಆ ವಿಶೇಷ. ಸಂಕ್ರಾಂತಿ ಹಬ್ಬಕ್ಕೆ ಸರ್ಪ್ರೈಸ್ ಕೊಡುವ ಉತ್ಸಾಹದಲ್ಲಿದೆ ಚಿತ್ರತಂಡ.