Categories
ಸೌತ್‌ ಸೆನ್ಸೇಷನ್

ಕಾಜಲ್‌ ನಿದ್ರೆಯಿಲ್ಲದ ರಾತ್ರಿಗಳು! ‘ಲೈವ್‌ ಟೆಲಿಕಾಸ್ಟ್‌’ ವೆಬ್‌ ಸರಣಿ ಪ್ರೀಮಿಯರ್

ದಕ್ಷಿಣ ಭಾರತದ ಜನಪ್ರಿಯ ತಾರೆ ಕಾಜಲ್ ಅಗರ್‌ವಾಲ್‌ ಇದೀಗ ಓಟಿಟಿಗೂ ಕಾಲಿಟ್ಟಿದ್ದಾರೆ. ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಲೈವ್ ಟೆಲಿಕಾಸ್ಟ್‌’ ವೆಬ್‌ ಸರಣಿ ಫೆಬ್ರವರಿ 12ರಿಂದ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ತಯಾರಾಗಿರುವ ಸರಣಿಯಿದು. ಟೀವಿ ಚಾನೆಲ್ ತಂಡವೊಂದು ಕಾರ್ಯಕ್ರಮವೊಂದನ್ನು ರೂಪಿಸಲು ಸಜ್ಜಾಗಿರುತ್ತದೆ.

ಈ ಹಂತದಲ್ಲಿ ಇವರಿದ್ದ ಮನೆಯನ್ನು ಅತೀಂದ್ರಿಯ ಶಕ್ತಿಗಳು ನಿಯಂತ್ರಿಸತೊಡಗುತ್ತವೆ. ಇಂಥದ್ದೊಂದು ಥ್ರಿಲ್ಲಿಂಗ್‌ ಹಿನ್ನೆಲೆಯ ಕಥಾವಸ್ತು ಸರಣಿಯದ್ದು.
ಸರಣಿಯಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಕಾಜಲ್ ಹಂಚಿಕೊಳ್ಳುತ್ತಾ, “ಚಿತ್ರೀಕರಣ ನಡೆದ ಮನೆ ನಮ್ಮ ಸರಣಿಗೆ ಹೇಳಿಮಾಡಿಸಿದ ಹಾಗಿತ್ತು. ಎತ್ತರದ ಗುಡ್ಡದ ಮೇಲಿನ ಒಂಟಿ ಮನೆ. ನಮ್ಮ ಕತೆಗೆ ಸೂಕ್ತವಾಗಿ ಹೊಂದಿಕೆಯಾಗಿತ್ತು.

ಆದರೆ ಸರಣಿ ಚಿತ್ರೀಕರಣದುದ್ದಕ್ಕೂ ರಾತ್ರಿಗಳು ನನಗೆ ಭಯಾನಕವಾಗಿದ್ದವು. ಹೆದರಿಕೆಯಿಂದ ನಿದ್ದೆ ಮಾಡುತ್ತಿದ್ದಿಲ್ಲ. ಅದರ ಹೊರತಾಗಿ ನಾನಂತೂ ಸಂಪೂರ್ಣವಾಗಿ ಪಾತ್ರದಲ್ಲಿ ಲೀನವಾಗಿದ್ದೆ” ಎನ್ನುತ್ತಾರೆ. ವೈಭವ್ ರೆಡ್ಡಿ, ಕಾಯಲ್ ಆನಂದಿ, ಪ್ರಿಯಾಂಕಾ, ಸೆಲ್ವ, ಡೇನಿಯಲ್ ಇತರರು ‘ಲೈವ್ ಟೆಲಿಕಾಸ್ಟ್‌’ನಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಶುರುವಾಯ್ತು ರಶ್ಮಿಕಾ ಹಿಂದಿ ಸಿನಿಮಾ! ಮಿಷನ್ ಮಜ್ನೂ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ. ಇನ್ನೂ ಒಂದು ಮೆಟ್ಟಿಲು ಹತ್ತಿರುವ ಅವರೀಗ ಬಾಲಿವುಡ್ ಹಿರೋಯಿನ್‌! ಶಂತನು ಬಾಗ್ಚಿ ನಿರ್ದೇಶನದ ಅವರ ಹಿಂದಿ ಸಿನಿಮಾ ‘ಮಿಷನ್ ಮಜ್ನೂ’ ಇಂದು ಚಿತ್ರೀಕರಣ ಆರಂಭಿಸಿದೆ. ‘ಕಪೂರ್ ಅಂಡ್ ಸನ್ಸ್‌’, ‘ಏಕ್ ವಿಲನ್‌’ ಸಿನಿಮಾಗಳ ಖ್ಯಾತಿಯ ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರದ ಹೀರೋ.

ಇಂದು ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ನಾಯಕ – ನಾಯಕಿ ಸಿದ್ಧಾರ್ಥ್ ಮತ್ತು ರಶ್ಮಿಕಾ ಸ್ಕ್ರಿಪ್ಟ್‌ ಪೇಪರ್‌ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಎಪತ್ತರ ದಶಕದ ಹಿನ್ನೆಲೆಯ ಕತೆ ಚಿತ್ರದಲ್ಲಿರುತ್ತದೆ. ನೈಜ ಘಟನೆಯನ್ನು ಆಧರಿಸಿ ಹೆಣೆದಿರುವ ಕತೆಯಲ್ಲಿ ಸಿದ್ಧಾರ್ಥ್‌ ರಾ  ಏಜೆಂಟ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಗೂಢಚರ್ಯೆಗೆ ಸಂಬಂಧಿಸಿದಂತಹ ಪ್ರಮುಖ ಅಂಶವೊಂದು ಹೇಗೆ ಎರಡು ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಸುತ್ತ ಕಥಾಹಂದರ ಹೆಣೆಯಲಾಗಿದೆ.

ಪರ್ವೀಜ್ ಶೇಖ್‌, ಅಸೀಮ್ ಅರೋರಾ, ಸುಮಿತ್ ಬತೇಜಾ ಚಿತ್ರಕಥೆ ಹೆಣೆದಿದ್ದಾರೆ. “ವಿಶೇಷ ತಂಡದೊಂದಿಗೆ ಅಪರೂಪದ ಕತೆಯ ಸಿನಿಮಾ ಶುರುವಾಗಿದೆ” ಎಂದು ನಟ ಸಿದ್ಧಾರ್ಥ್ ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಗೋವಾ ಕನ್ನಡಿಗನ ಸಲಗ ಪ್ರೀತಿ- ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡ ದುನಿಯಾ ವಿಜಯ್ ಅಭಿಮಾನಿ

ಭಾವುಕರಾದ ವಿಜಯ್‌ ಅಭಿಮಾನಿ ಜೊತೆ ವಿಡಿಯೋ ಕಾಲ್‌ ಮಾತುಕತೆ

ಅದೇನೋ ಗೊತ್ತಿಲ್ಲ. ಸಿನಿಮಾ ಸ್ಟಾರ್ಸ್‌ ಅಂದರೆ, ಅದೊಂದು ರೀತಿ ಎಲ್ಲಿಲ್ಲದ ಅಭಿಮಾನ. ಅಭಿಮಾನಿಗಳು ತಮ್ಮ ತಮ್ಮ ಹೀರೋಗಳನ್ನು ಆರಾಧಿಸುವ ಪರಿ ಬಗ್ಗೆ ಹೇಳುವುದು ಕಷ್ಟವೇ. ಹೌದು, ಇಲ್ಲೀಗ ಹೇಳಹೊರಟಿರುವ ವಿಷಯ, “ದುನಿಯಾ” ವಿಜಯ್‌ ಅಭಿಮಾನಿಯೊಬ್ಬನ ಪ್ರೀತಿಯ ಬಗ್ಗೆ. ಉತ್ತರ ಕರ್ನಾಟಕ ಮೂಲದ ಹನುಮಂತ ಎಂಬ ಹುಡುಗ, ಗೋವಾದಲ್ಲಿರುವ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಅವನಿಗೆ “ದುನಿಯಾ” ವಿಜಯ್‌ ಅಂದರೆ, ತುಂಬು ಪ್ರೀತಿ. ಅಪ್ಪಟ ಅಭಿಮಾನಿಯೂ ಹೌದು. ವಿಜಯ್‌ ಅವರಂತೆಯೇ ಹನುಮಂತ ಕೂಡ ತನ್ನ ತಂದೆ-ತಾಯಿಯನ್ನು ಅಷ್ಟೇ ಪ್ರೀತಿಯಿಂದ ಆರಾಧಿಸುತ್ತಾನೆ. ತಮ್ಮ ಪ್ರೀತಿಯ ಹೀರೋ “ದುನಿಯಾ” ವಿಜಯ್‌ ಅವರ ಚೊಚ್ಚಲ ನಿರ್ದೇಶನದ “ಸಲಗ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿ,”ಸಲಗ” ಟೈಟಲ್‌ ಅನ್ನು ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

ಈ ಅಭಿಮಾನಿಯ ವಿಷಯ ತಿಳಿಯುತ್ತಿದ್ದಂತೆಯೇ “ದುನಿಯಾ” ವಿಜಯ್‌ ಗೋವಾದಲ್ಲಿರುವ ಅಭಿಮಾನಿ ಹನುಮಂತುಗೆ ವಿಡಿಯೋ ಕಾಲ್‌ ಮಾಡಿ, ಪ್ರೀತಿಯಿಂದ ಮಾತಾಡಿದ್ದಾರೆ. ವಿಜಯ್‌ ವಿಡಿಯೋ ಕಾಲ್‌ ಮಾಡುತ್ತಿದ್ದಂತೆಯೇ, ಆ ಅಭಿಮಾನಿ ಹನುಮಂತು, ಖುಷಿಗೊಂಡಿದ್ದಾರೆ. ಆನಂದಭಾಷ್ಪ ಸುರಿಸಿದ್ದಾರೆ. ಈ ವೇಳೆ ವಿಜಯ್‌ ಕೂಡ ಭಾವುಕರಾಗಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತೆ ಎಂದು ಹನುಮಂತನಿಗೆ ಶುಭಕೋರಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್‌ ಆಗುತ್ತಿದೆ.

 

Categories
ಸಿನಿ ಸುದ್ದಿ

ರಿಷಭ್‌ ಶೆಟ್ಟಿ ಹೀರೋ ಆಗಿ ಎಂಟ್ರಿ- ಅಶೋಕವನ ಎಸ್ಟೇಟ್‌ನಲ್ಲಿ ರಕ್ತಚರಿತ್ರೆ!

ಮಾರ್ಚ್ 5ಕ್ಕೆ ಹೀರೋ ಸಿನಿಮಾ ಬಿಡುಗಡೆ

ಕನ್ನಡದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಷಭ್‌ ಶೆಟ್ಟಿ ಅವರ ನಿರ್ಮಾಣದ “ಹೀರೋ” ಕೂಡ ರಿಲೀಸ್‌ಗೆ ರೆಡಿಯಾಗಿದೆ. ಮಾರ್ಚ್‌ 5 ರಂದು “ಹೀರೋ”ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ವಿಷಯವನ್ನು ಸ್ವತಃ ರಿಷಭ್‌ ಶೆಟ್ಟಿ ಅವರೇ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಫಿಲಂ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿದೆ. ಎಂ. ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಭ್‌ ಶೆಟ್ಟಿ ಇಲ್ಲಿ ಹೀರೋ ಆಗಿದ್ದರೆ, ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಸೇರಿದಂತೆ ಹಲವರು ಇದ್ದಾರೆ.


ಈ “ಹೀರೋ” ಬಗ್ಗೆ ಹೇಳುವುದಾದರೆ, ಅಶೋಕ ವನ ಎಸ್ಟೇಟ್‌ ನಲ್ಲಿ ನಡೆಯುವ ಒಂದು ಕಥೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇದು. ವಿಶೇಷವೆಂದರೆ, ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಎಲ್ಲರೂ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರೆ, ರಿಷಭ್‌ ಶೆಟ್ಟಿ, ಆ ವೇಳೆ ಚಂದದ ಕಥೆ ಮಾಡಿಕೊಂಡು, ಸ್ಕ್ರಿಪ್ಟ್‌ ಬರೆದು, ಚಿತ್ರೀಕರಣಕ್ಕೆ ಅಣಿಯಾದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಿಷಭ್‌ ಶೆಟ್ಟಿ ಬ್ಯಾನರ್‌ನಲ್ಲಿ ಇದೇ ಮೊದಲ ಸಲ ರಕ್ತಗತವಾದ ಅಂಶಗಳಿರುವ ಸಿನಿಮಾ ಎಂಬುದು. ಹೌದು, ಇಲ್ಲಿ ಗನ್‌ಗಳ ಸದ್ದಿದೆ, ರಕ್ತದ ಕಲೆಗಳೂ ಕಾಣಿಸಿಕೊಳ್ಳುತ್ತವೆ. ಬಹುತೇಕ ಒಂದು ಕಾಡು, ಅಶೋಕವನ ಎಂಬ ಎಸ್ಟೇಟ್‌ ಸುತ್ತಲೇ ಸುತ್ತುವ ಕಥೆ ಇದಾಗಿದೆ. ರಿಷಭ್‌ ಆಗಾಗ ಪ್ರಯತ್ನಕ್ಕೆ ಇಳಿಯುತ್ತಲೇ ಇರುತ್ತಾರೆ. ಅಂಥದ್ದೊಂದು ಪ್ರಯತ್ನ “ಹೀರೋ” ಮೂಲಕ ಆಗಿದೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, ಇಲ್ಲಿ “ಹೀರೋ” ಯಾರು? ಈ ಪ್ರಶ್ನೆಗೆ ಮಾರ್ಚ್‌ 5ರವರೆಗೆ ಕಾಯಲೇಬೇಕು.

Categories
ಸಿನಿ ಸುದ್ದಿ

ಕ್ರಿಸ್ಮಿ ಮೆಹಂದಿ ಸಂಭ್ರಮ

ಮದ್ವೆ ಸಡಗರದಲ್ಲಿ ಲವ್‌ ಮಾಕ್ಟೇಲ್‌ ಜೋಡಿ

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸುದ್ದಿ. ಹೌದು, ಲಾಕ್‌ಡೌನ್ ಶುರುವಾದಾಗಿನಿಂದ ದೊಡ್ಡ ಮಟ್ಟದ ಮನರಂಜನೆ ಸೇರಿದಂತೆ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಅದರಲ್ಲೂ ಸಿನಿಮಾ ರಂಗದಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಈಗ “ಲವ್‌ ಮಾಕ್ಟೇಲ್‌” ಜೋಡಿಯ ಮದ್ವೆ ಸುದ್ದಿ ಜೋರು ಸದ್ದು ಮಾಡುತ್ತಿದೆ.

ಹೌದು, ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದುವೆ ಮೂಡ್‌ನಲ್ಲಿದ್ದಾರೆ. ಮಿಲನಾ ನಾಗರಾಜ್‌ ಹಾಗೂ ಕೃಷ್ಣ ಇಬ್ಬರೂ ಪ್ರೀತಿಸಿ ಮದ್ವೆಯಾಗುತ್ತಿದ್ದಾರೆ ಅನ್ನೋದು ವಿಶೇಷ. ಕನ್ನಡ ಸಿನಿಮಾರಂಗದಲ್ಲಿ ಹಾಗೊಮ್ಮೆ ಹಿಂದಿರುಗಿ ನೋಡಿದರೆ, ಬಹುತೇಕ ನಟ,ನಟಿಯರು ಲವ್‌ ಮಾಡಿಯೇ ಮದ್ವೆಯಾಗಿದ್ದಾರೆ. ಆ ಸಾಲಿಗೆ ಕೃಷ್ಣ ಹಾಗೂ ಮಿಲನಾ ಕೂಡ ಸೇರುತ್ತಿದ್ದಾರೆ.

ಇವರಿಬ್ಬರ ಪ್ರೀತಿಯ ಬಗ್ಗೆ ಸುದ್ದಿ ಇತ್ತಾದರೂ, ಎಲ್ಲೂ ಅವರು ಓಪನ್‌ ಆಗಿ ಹೇಳಿಕೊಂಡಿರಲಿಲ್ಲ. ಯಾವಾಗ “ಲವ್‌ ಮಾಕ್ಟೇಲ್‌” ಚಿತ್ರ ಗೆಲುವು ಕೊಟ್ಟಿತೋ, ಆ ಸಕ್ಸಸ್‌ನ ಸಂಭ್ರಮದಲ್ಲೇ ತಮ್ಮ ಪ್ರೀತಿ ವಿಷಯವನ್ನು ಹಂಚಿಕೊಂಡಿದ್ದಲ್ಲದೆ, ಮದ್ವೆ ಆಗುತ್ತಿರುವ ವಿಷಯವನ್ನೂ ಹೇಳಿಕೊಂಡಿದ್ದರು. ಅದರಂತೆ ಅವರು, ಚಿತ್ರರಂಗದ ಬಹುತೇಕರಿಗೆ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.


ಇನ್ನು, ಮದ್ವೆ ಫೆ.೧೪ರ ಪ್ರೇಮಿಗಳ ದಿನದಂದು ನಡೆಯಲಿದೆ. ಅಂದೇ ಸಂಜೆ ಅರತಕ್ಷತೆಯೂ ಇದೆ. ಸದ್ಯಕ್ಕೆ ಈ ಜೋಡಿ ಹಾಸನದ ಹೊರವಲಯದಲ್ಲಿರುವ ನಂದಗೋಕುಲ ಹಾಲ್‌ನಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಮಿಲನಾ ನಾಗರಾಜ್ ಕೂಡ ಮೂಲತಃ ಹಾಸನದವರೆ ಆಗಿದ್ದು, ತನ್ನೂರಿನಲ್ಲಿಯೇ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಪ್ರೀತಿಸುತ್ತಲೇ ಜೊತೆಗೊಂದು ಸಕ್ಸಸ್‌ಫುಲ್‌ ಸಿನಿಮಾ ಕೊಟ್ಟ ಈ ಜೋಡಿ, ಬದುಕಲ್ಲೂ ಒಂದಾಗುತ್ತಿದೆ. ಸದ್ಯ ಅವರಿಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.

 

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಮಣಿರತ್ನಂ ಸಿನಿಮಾದಲ್ಲಿ ಶಾಲಿನಿ ಅಜಿತ್‌?

ಇಪ್ಪತ್ತು ವರ್ಷಗಳ ನಂತರ ಮತ್ತೆ ತೆರೆಗೆ!

ಎಂಬತ್ತರ ದಶಕದ ಜನಪ್ರಿಯ ಬಾಲನಟಿ ಶಾಲಿನಿ. ತಮಿಳು, ತೆಲುಗು ಮತ್ತು ಮಲಯಾಳಂನ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಬಾಲನಟಿಯಾಗಿ ಮಿಂಚಿದ್ದರು. 1997ರಲ್ಲಿ ಫಾಝಿಲ್ ನಿರ್ದೇಶನದ ‘ಅನಿಯಾಥು ಪಿರವು’ ಮಲಯಾಳಂ ಚಿತ್ರದೊಂದಿಗೆ ಅವರು ನಾಯಕಿಯಾದರು. ಈ ಸಿನಿಮಾ ‘ಕಾದಲುಕ್ಕು ಮರ್ಯಾದೈ’ ಶೀರ್ಷಿಕೆಯಡಿ ತಮಿಳಿಗೆ ರಿಮೇಕ್ ಆಯ್ತು. ವಿಜಯ್ ಹೀರೋ ಆಗಿ ನಟಿಸಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಹಾಗೆ ಶಾಲಿನಿ ನಾಯಕಿಯಾಗಿಯೂ ಗೆಲುವು ಕಂಡರು. ಸುಮಾರು ಹತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಶಾಲಿನಿ ‘ಅಮರ್‌ ಕಲಂ’ ತಮಿಳು ಸಿನಿಮಾ ಸಂದರ್ಭದಲ್ಲಿ ನಟ ಅಜಿತ್‌ರ ಪ್ರೇಮದ ಬಲೆಗೆ ಸಿಲುಕಿದರು. 2000ನೇ ಇಸವಿಯಲ್ಲಿ ಅಜಿತ್‌ರನ್ನು ವರಿಸಿದ ಅವರು ಮುಂದೆ ಸಿನಿಮಾದಿಂದ ದೂರವೇ ಉಳಿದರು. ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಅನೌಷ್ಕಾ ಮತ್ತು ಆದ್ಯಂತ್‌. 2001ರಲ್ಲಿ ತೆರೆಕಂಡ ಪ್ರಶಾಂತ್ ಜೊತೆಗಿನ ‘ಪಿರ್ಯಾತ ವರಂ ವೇಂಡಂ’ ಅವರು ನಾಯಕಿಯಾಗಿ ಕಾಣಿಸಿಕೊಂಡ ಕೊನೆಯ ಸಿನಿಮಾ.


ಇದೀಗ ಇಪ್ಪತ್ತು ವರ್ಷಗಳ ನಂತರ ಅವರು ತೆರೆಗೆ ಮರಳುವ ಸೂಚನೆ ಸಿಕ್ಕಿದೆ. ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್‌’ ತಮಿಳು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಣಿರತ್ನಂ ನಿರ್ದೇಶನದ ಸೂಪರ್‌ಹಿಟ್‌ ‘ಅಲೈಪಾಯುತೆ’ ಚಿತ್ರದಲ್ಲಿ ಮಾಧವನ್‌ ಜೊತೆ ನಟಿಸಿದ್ದರು ಶಾಲಿನಿ. ಇದೀಗ ಮಣಿರತ್ನಂ ಅವರದೇ ಚಿತ್ರದೊಂದಿಗೆ ತೆರೆಗೆ ಮರಳಲಿದ್ದಾರೆ. ನಟ ಅಜಿತ್‌ ಕೂಡ ಈ ಬಗ್ಗೆ ಖುಷಿಯಾಗಿದ್ದು, ಅಧಿಕೃತ ಘೋಷಣೆ ಹೊರ ಬೀಳಬೇಕಿದೆ.

Categories
ಸಿನಿ ಸುದ್ದಿ

ಅಂಧನೊಬ್ಬನ ಭಾವುಕ ಪಯಣದಲ್ಲಿ ಮೌಲ್ಯ ಸಂದೇಶ

ಫೆ.13ಕ್ಕೆ ಕಣ್ತೆರೆದು ನೋಡು ಚಿತ್ರದ ಟೀಸರ್ ರಿಲೀಸ್

ಶಿವಪ್ಪ ಕುಡ್ಲೂರು

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ನೃತ್ಯ ನಿರ್ದೇಶಕರು ಒಂದೊಳ್ಳೆಯ ಕಥೆ ಮೂಲಕ ನಿರ್ದೇಶನ ಮಾಡಿದ್ದಾರೆ. ಈಗ ಆ ಸಾಲಿಗೆ
ನೃತ್ಯ ನಿರ್ದೇಶಕ ಎಂ.ಆರ್.ಕಪಿಲ್ ಕೂಡ ಸೇರಿದ್ದಾರೆ. ಕಪಿಲ್ ಈ ಹಿಂದೆಯೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಕಪಿಲ್ , ನಿರ್ದೇಶಕ

ಇದೀಗ “ಕಣ್ತೆರೆದು ನೋಡು”ವಂತಹ ಕೆಲಸ ಮಾಡಿದ್ದಾರೆ. ಹೌದು, ನಿರ್ದೇಶಕ ಕಪಿಲ್ ಈಗ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ನಿರ್ದೇಶನದ “ಕಣ್ತೆರೆದು ನೋಡು” ಚಿತ್ರ ಶೂಟಿಂಗ್ ಮುಗಿದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಾಗಿದ್ದಾರೆ.

ಕಳೆದ ನವೆಂಬರ್ 14ರಂದು “ಕಣ್ತೆರೆದು ನೋಡು” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಈಗ ಟೀಸರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಫೆಬ್ರವರಿ13ರ ಶನಿವಾರ ಬೆಳಗ್ಗೆ 10.31ಕ್ಕೆ ಚಿತ್ರದ ಟೀಸರ್ ಅನಾವರಣಗೊಳ್ಳಲಿದೆ.
ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರದೇ ಕಥೆ, ಚಿತ್ರಕಥೆ ಹೊಂದಿರುವ ಈ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ.

ಅಂದಹಾಗೆ, ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ಶಿವಪ್ಪ ಕುಡ್ಲೂರು ಈ ಚಿತ್ರದ ಕಥಾ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.

ಚಿತದ ಪ್ರಮುಖ ಕಲಾವಿದ ಶಿವಪ್ಪ ಕುಡ್ಲೂರು,ಅವರಿಗೆ ಬಾಲ್ಯದಿಂದಲೇ ನಟನೆ ಆಸಕ್ತಿ ಇದ್ದುದರಿಂದ ಒಳ್ಳೆಯ ಸಿನಿಮಾ ಮೂಲಕ ಕಾಣಿಸಿಕೊಳ್ಳಬೇಕೆಂಬ ಆಸೆಗೆ “ಕಣ್ತೆರೆದು ನೋಡು” ಚಿತ್ರ ಸಿಕ್ಕಿದೆ. ಅವರಿಲ್ಲಿ ಅಂಧನೊಬ್ಬನ ಪಾತ್ರದಲ್ಲಿ ಗಮನಸೆಳೆಯುತ್ತಿದ್ದಾರೆ.

ಚಿತ್ರದಲ್ಲಿ ಇವರೊಂದಿಗೆ ಉಮೇಶ್, ಶಿವಕುಮಾರ್ ಜೀವರಾಜ್, ಡಾ.ದೊಡ್ಡರಂಗೇಗೌಡ, ವಿ.ಮನೋಹರ್,ಕೆ.ಎಂ.ಇಂದ್ರ,ಮೈಸೂರು ರಮಾನಾಥ್, ರೇಖಾದಾಸ್, ಶಂಕರ್ ಭಟ್ ಇತರರು ನಟಿಸಿದ್ದಾರೆ.

ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೆಣೆದ ಅಂಧನೊಬ್ಬನ‌ ಕಥೆಗೆ ಬಂಡವಾಳ ಹಾಕಿದ್ದಾರೆ.

ಸಿ.ನಾರಾಯಣ್ ಕ್ಯಾಮರಾ ಹಿಡಿದಿದ್ದಾರೆ. ಆರ್.ಡಿ.ರವಿ ಸಂಕಲನ ಮಾಡಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ ಹರೀಶ್  ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್, ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಡ್‌ ಮ್ಯಾನರ್ಸ್‌ಗೆ ಇಬ್ಬರು ಬೆಡಗಿಯರು

ರಚಿತಾರಾಮ್‌ ಪ್ರಿಯಾಂಕ ಎಂಟ್ರಿ

ಅಭಿಷೇಕ್‌ ಅಂಬರೀಶ್ ಅಭಿನಯದ “ದುನಿಯಾ” ಸೂರಿ ನಿರ್ದೇಶನದ ”ಬ್ಯಾಡ್‌ ಮ್ಯಾನರ್ಸ್‌” ಚಿತ್ರದ ಚಿತ್ರೀಕರಣ ಈಗಾಗಲೇ ಜೋರಾಗಿ ನಡೆಯುತ್ತಿದೆ. ಈ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಇಲ್ಲಿ ಒಬ್ಬರಲ್ಲ, ಇಬ್ಬರು ನಾಯಕಿಯರು “ಬ್ಯಾಡ್‌ ಮ್ಯಾನರ್ಸ್‌”ಗೆ ಜೋಡಿಯಾಗಿದ್ದಾರೆ.

ಹೌದು, ರಚಿತಾರಾಮ್‌ ಮತ್ತು ಪ್ರಿಯಾಂಕ ಅವರು ಈ ಚಿತ್ರಕ್ಕೆ ನಾಯಕಿಯರಾಗಿದ್ದಾರೆ. ಪ್ರಿಯಾಂಕ ತಮಿಳು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ ಎಂಬುದು ವಿಶೇಷ. ಈಗಾಗಲೇ ಸಂಕ್ರಾಂತಿ ದಿನದಂದು ಚಿತ್ರಕ್ಕೆ ಜೋರು ಮುಹೂರ್ತ ನೆರವೇರಿತ್ತು.

ಬಹು ನಿರೀಕ್ಷಿತ “ದುನಿಯಾ” ಸೂರಿ ನಿರ್ದೇಶನದ ಔಟ್ ಅಂಟ್ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ “ಬ್ಯಾಡ್ ಮ್ಯಾನರ್ಸ್”ಗೆ ಈಗ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. ಮಗನ ಎರಡನೇ ಚಿತ್ರಕ್ಕೆ ಸುಮಲತಾ ಅವರು ಕ್ಲಾಪ್‌ ಮಾಡಿ ಶುಭಹಾರೈಸಿದ್ದರು. ದರ್ಶನ್‌ ಕೂಡ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು. ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿದ್ದ ರಗಡ್‌ ಸೆಟ್ಟಲ್ಲಿ ಚಿತ್ರಕ್ಕೆ ಚಾಲನೆ ದೊರೆತಿತ್ತು.

Categories
ಸಿನಿ ಸುದ್ದಿ

ದಚ್ಚು ಟೆಂಪಲ್ ರನ್ !

ತಿಮ್ಮಪ್ಪನ ದರ್ಶನ ಪಡೆದ ದರ್ಶನ್‌

ಇತ್ತೀಚೆಗೆ ಸ್ಟಾರ್ ನಟರು ಸಿನಿಮಾದಲ್ಲಿ ಬಿಝಿಯಾಗುತ್ತಿದ್ದಾರೆ. ಅದರ ಜೊತೆ ಜೊತೆಯಲ್ಲೇ ಅವರು ಬೇರೆ ಚಟುವಟಿಕೆಗಳತ್ತವೂ ಗಮನ ಹರಿಸುತ್ತಿದ್ದಾರೆ. ಅವರಿಗೆ ಸಮಯ ಸಿಗೋದೇ ಅಪರೂಪ. ಅದರಲ್ಲೂ ತಮ್ಮ ವೈಯಕ್ತಿಕ ಬದುಕಲ್ಲಂತೂ ಸಮಯ ನಿಗದಿಪಡಿಸೋಕೆ ಹೆಣಗಾಡುತ್ತಲೇ ಇರುತ್ತಾರೆ. ಅದಕ್ಕೆ ಕಾರಣ, ಸಿನಿಮಾಗಳ ಚಿತ್ರೀಕರಣ. ಹೌದು, ಬಹುತೇಕ ಸ್ಟಾರ್‌ ನಟರು ದೇವರ ಮೊರೆ ಹೋಗುತ್ತಿರುವುದು ಹೊಸದೇನಲ್ಲ. ಈಗ ದರ್ಶನ್‌ ಕೂಡ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಬುಧವಾರ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು, ಪಾವನರಾಗಿದ್ದಾರೆ. ಇವರಷ್ಟೇ ಅಲ್ಲ, ನಿರ್ಮಾಪಕ ಉಮಾಪತಿ, ಹಾಗೂ ತೆಲುಗು ಸಿನಿಮಾ ವಿತರಕರು ಕೂಡ ದಚ್ಚು ಅವರಿಗೆ ಸಾಥ್‌ ನೀಡಿದ್ದಾರೆ. ಅಂದಹಾಗೆ, ದರ್ಶನ್‌ ಅವರು ವರ್ಷಗಳ ನಂತರ ಪವಿತ್ರ ಸ್ಥಳಕ್ಕೆ ಭೇಟಿಯಾಗಿದ್ದಾರೆ. ದರ್ಶನ ಪಡೆದ ಬಳಿಕ ಸ್ವತಃ ದರ್ಶನ್‌ ಅವರು ಖುಷಿಗೊಂಡಿದ್ದಾರೆ. ಇನ್ನು, ದರ್ಶನ್‌ ಅವರು ದೇವಾಲಯಕ್ಕೆ ತೆರಳಲು ಬಲವಾದ ಕಾರಣವೂ ಇದೆ. ಮಾರ್ಚ್‌ ೧೧ರಂದು “ರಾಬರ್ಟ್”‌ ರಿಲೀಸ್‌ ಆಗುತ್ತಿದೆ. ಕನ್ನಡದ ಜೊತೆಯಲ್ಲಿ ತೆಲುಗು ಭಾಷೆಯಲ್ಲೂ ಚಿತ್ರ ರಿಲೀಸ್‌ ಆಗುತ್ತಿದೆ. “ರಾಬರ್ಟ್” ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದಿಗೂ ತೆರಳುವ ಯೋಚೆಯಲ್ಲಿರುವ ದರ್ಶನ್ ಹಾಗೆಯೇ ದರ್ಶನ ಪಡೆದಿದ್ದಾರೆ.

 

Categories
ಸಿನಿ ಸುದ್ದಿ

ಬಿಗ್‌ಬಾಸ್‌ ಬಾಗಿಲು ತಟ್ಟಲಿರುವ ಕಿಲಾಡಿ ನಯನಾ?

ಪಟ್ಟಿಯಲ್ಲಿ ಹರಿದಾಡುತ್ತಿದೆ ಮಾತಿನಮಲ್ಲಿ ಹೆಸರು

“ಕಾಮಿಡಿ ಕಿಲಾಡಿಗಳು” ಖ್ಯಾತಿಯ ನಯನಾ ಬಿಗ್‌ಬಾಸ್‌ ಮನೆಗೆ ಕಾಲಿಡಲಿದ್ದಾರಾ?
ಹೀಗೊಂದು ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಹೌದು, ಸದ್ಯಕ್ಕೆ ಬಿಗ್‌ಬಾಸ್‌ ಸೀಸನ್‌-೮ ತಯಾರಿ ಜೋರಾಗಿಯೇ ಇದೆ. ಈಗಾಗಲೇ ಯಾರೆಲ್ಲಾ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡುತ್ತಾರೆ ಎಂಬ ಕೆಲವರ ಲಿಸ್ಟ್‌ ಕೂಡ ಹರಿದಾಡುತ್ತಿದೆ. ಆ ಲಿಸ್ಟ್‌ನಲ್ಲಿ “ಕಾಮಿಡಿ ಕಿಲಾಡಿ” ಖ್ಯಾತಿಯ ನಯನಾ ಅವರ ಹೆಸರು ಕೂಡ ಕೇಳಿಬರುತ್ತಿದೆ. ನಿಜವಾಗಿಯೂ ನಯನಾ ಹೆಸರು ಇದೆಯಾ? ಅವಕಾಶ ಸಿಕ್ಕರೆ ನಯನಾ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ? ಇದು ಸದ್ಯಕ್ಕೆ ಗಿರಕಿ ಹೊಡೆಯುತ್ತಿರುವ ಪ್ರಶ್ನೆ.

ನಯನಾ ಹೆಸರು ಯಾಕೆ ಹರಿದಾಡುತ್ತಿದೆ ಎಂಬುದಕ್ಕೆ ಹಲವು ಕಾರಣಗಳಿವೆ. ನಯನಾ ಒಳ್ಳೆಯ ಮಾತುಗಾತಿ, ರಂಗಭೂಮಿ ಪ್ರತಿಭೆ, ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಏನಾದರೊಂದು ಸ್ಟೇಟಸ್‌ ಹಾಕುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದೆ ನಯನಾ ಸೋಶಿಯಲ್‌ ಮೀಡಿಯಾದಲ್ಲಿ ಇಂಗ್ಲೀಷ್‌ನಲ್ಲಿ ಒಂದು ಸ್ಟೇಟಸ್‌ ಹಾಕಿಕೊಂಡಿದ್ದರು. ಕನ್ನಡಿಗರ ಕಣ್ಣಿಗೆ ಅದು ಬಿದ್ದ ಕೂಡಲೇ ಸಾಕಷ್ಟು ಚರ್ಚೆ ಆಯ್ತು. ಕನ್ನಡಿಗರು ಬಾಯಿಗೆ ಬಂದಂತೆ ಮಾತಾಡಿದ್ದರು. ನಂತರ ನಯನಾ ಕೂಡ ಅವರಿಗೆ ತಮ್ಮ ಮಾತಲ್ಲೇ ಉತ್ತರ ಕೊಟ್ಟಿದ್ದರು. ಆ ನಯನಾ ಈಗ ಬಿಗ್‌ಬಾಸ್‌ ಮನೆಗೆ ಹೋಗ್ತಾರೆ ಎಂಬ ಸುದ್ದಿಯಂತೂ ಇದೆ. ಅದು ಎಷ್ಟರ ಮಟ್ಟಿಗೆ ನಿಜ ಅನನೋದಕ್ಕೆ ಬಿಗ್‌ಬಾಸ್‌ ಸೀಸನ್‌ -೮ ಶುರುವಾಗುವವರೆಗೆ ಕಾಯಲೇಬೇಕು. ಅಂದಹಾಗೆ, ಸುದೀ[ಪ್‌ ಅವರು ಈ ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ.

error: Content is protected !!