“ಲವ್ ಮಾಕ್ಟೇಲ್” ಖ್ಯಾತಿಯ ಕೃಷ್ಣ ಅಭಿನಯದ “ಶುಗರ್ ಫ್ಯಾಕ್ಟರಿ” ಸಿನಿಮಾ ಬಗ್ಗೆ ಗೊತ್ತೇ ಇದೆ. ಚಿತ್ರವನ್ನು ದೀಪಕ್ ಅರಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು. ಈಗಾಗಲೇ ಸೊನಾಲ್ ಮಾಂತೆರೊ ಹಾಗೂ ಅದ್ವಿತಿ ಶೆಟ್ಟಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಅವರ ಜೊತೆಗೆ ಇನ್ನೊಬ್ಬ ನಾಯಕಿಯ ಆಯ್ಕೆ ಮಾತ್ರ ಆಗಿರಲಿಲ್ಲ. ಈಗ ಮೂರನೇ ನಾಯಕಿಯೂ ಸಿಕ್ಕಾಗಿದೆ. ಅದು ಬೇರಾರೂ ಅಲ್ಲ, ಶಿಲ್ಪಾಶೆಟ್ಟಿ. ಅರೇ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಾಯಕಿಯಾಗಿ ಬರುತ್ತಿದ್ದಾರಾ? ಈ ಪ್ರಶ್ನೆ ಎದುರಾಗಬಹುದು. ಆದರೆ, ಆ ಶಿಲ್ಪಾಶೆಟ್ಟಿ ಅಲ್ಲವೇ ಅಲ್ಲ. “ಶುಗರ್ ಫ್ಯಾಕ್ಟರಿ”ಗೆ ಎಂಟ್ರಿ ಕೊಡುತ್ತಿರುವ ನಾಯಕಿಯ ಹೆಸರಿದು. ಶಿಲ್ಪಾಶೆಟ್ಟಿ ಈ ಸಿನಿಮಾಗೆ ನಾಯಕಿಯಾಗಿದ್ದು, ಈಗಾಗಲೇ ಕನ್ನಡ, ತುಳು ಭಾಷೆಯ ಕೆಲವು ಚಿತ್ರಗಳಲ್ಲಿ ಹಾಗೂ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜನವರಿ 28ರಿಂದ ಬೆಂಗಳೂರಿನಲ್ಲಿ “ಶುಗರ್ ಫ್ಯಾಕ್ಟರಿ” ಚಿತ್ರೀಕರಣ ಆರಂಭವಾಗಲಿದೆ. ಅಂದಹಾಗೆ, ಈ ಚಿತ್ರ ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಇತರರು ಸಾಹಿತ್ಯ ಬರೆದಿದ್ದಾರೆ. ಕಬೀರ್ ರಫಿ ಸಂಗೀತ ನೀಡುತ್ತಿರುವ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.
ನಟ ಅಜೇಯ್ರಾವ್ ಅಂದಾಕ್ಷಣ, ನೆನಪಾಗೋದೇ “ಕೃಷ್ಣ”. ಹೌದು, “ಕೃಷ್ಣನ್ ಲವ್ ಸ್ಟೋರಿ” ದೊಡ್ಡ ಹಿಟ್ ಕೊಟ್ಟ ಚಿತ್ರ. ಶಶಾಂಕ್ ಹಾಗೂ ಅಜೇಯ್ರಾವ್ ಕಾಂಬಿನೇಷನ್ನಲ್ಲಿ “ಕೃಷ್ಣನ್ ಲವ್ ಸ್ಟೋರಿ”, “ಕೃಷ್ಣ ಲೀಲಾ” ಚಿತ್ರಗಳು ಬಂದಿವೆ. ಈ ಮೂರು ಸಿನಿಮಾಗಳು ಯಶಸ್ವಿಯಾಗಿವೆ. ಇದೇ ಸೀರಿಸ್ನಲ್ಲೇ ಚಿತ್ರ ಬಂದಿದ್ದೂ ಉಂಟು. ಈಗ ಮತ್ತೊಮ್ಮೆ “ಕೃಷ್ಣನ್” ಜೋಡಿ ಒಂದಾಗುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ.
ಹೌದು, ಈಗ ನಿರ್ದೇಶಕ ಶಶಾಂಕ್ ಅವರು ನಟ ಅಜೇಯ್ರಾವ್ ಅವರಿಗಾಗಿಯೇ ಹೊಸ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ಈ ಚಿತ್ರದಲ್ಲಿ ಅಜೇಯ್ ರಾವ್ ಮತ್ತೆ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆಯೇ? ಹೀಗೊಂದು ಪ್ರಶ್ನೆ ಮತ್ತು ಕುತೂಹಲವಿದೆ. ಆ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ. ಇದೂ ಕೂಡ “ಕೃಷ್ಣ”ನ್ ಸರಣಿ ಇರಬಹುದೇನೋ ಎಂಬ ಸಣ್ಣ ನಿರೀಕ್ಷೆಯೂ ಇದೆ. ಅದೇನೆ ಇದ್ದರೂ ಚಿತ್ರದ ಶೀರ್ಷಿಕೆ ಅನಾವರಣಗೊಂಡಾಗ ಮಾತ್ರವಷ್ಟೇ, ಎಲ್ಲವೂ ಹೊರಬೀಳಲಿದೆ.
ಜ.೨೪ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶಶಾಂಕ್ ಹಾಗೂ ಅಜೇಯ್ರಾವ್ ಜೋಡಿಯ ಮೋಡಿ ಒಂದಷ್ಟು ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರಕ್ಕೆ ಜನಪ್ರಿಯ ನಾಯಕಿಯೊಬ್ಬರು ಬರುತ್ತಿದ್ದು, ಚಿತ್ರತಂಡ ಆ ನಾಯಕಿಯ ಹೆಸರನ್ನು ಗೌಪ್ಯವಾಗಿಸಿದೆ. ಮುಹೂರ್ತ ದಿನ ಆ ನಟಿ ಯಾರೆಂಬುದನ್ನು ಚಿತ್ರತಂಡ ಬಹಿರಂಗಪಡಿಸಲಿದೆ. ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು, ಶಂಕರ್, “ಜಂಟಲ್ ಮೆನ್”, “ಪಡ್ಡೆಹುಲಿ” “ರುದ್ರ ತಾಂಡವ” ಸೇರಿದಂತೆ ಗುರುದೇಶಪಾಂಡೆ ಅವರ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇನ್ನು, ಜಿ ಸಿನಿಮಾಸ್ ಬ್ಯಾನರ್ನಲ್ಲಿ ಚಿತ್ರ ತಯಾರಾಗುತ್ತಿದ್ದು, ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಈ ಬ್ಯಾನರ್ನಲ್ಲಿ “ಜಂಟಲ್ಮನ್” ಸಿನಿಮಾ ಕೊಟ್ಟಿರುವ ನಿರ್ಮಾಪಕರು, “ಪೆಂಟಗಾನ್” ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರು, ನಿರ್ಮಾಪಕರು ಈ ಹಿಂದೆ ಅಜೇಯ್ರಾವ್ ಜೊತೆ “ರೈನ್ಬೋ” ಸಿನಿಮಾ ಮಾಡಬೇಕಿತ್ತು. ಆ ಚಿತ್ರವನ್ನು ಮುಂದಕ್ಕೆ ಹಾಕಿ, ಈ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಹೊಸ ಸಿನಿಮಾದ ಕಥೆಯೇ ಒಂದು ರೀತಿ ವಿಭಿನ್ನವಾಗಿದೆ. ಈಗಿನ ಟ್ರೆಂಡ್ಗೆ ತಕ್ಕ ಕಥೆ ಮಾಡಲಾಗಿದೆ. ಆ ಕಾರಣಕ್ಕೆ ಗುರುದೇಶಪಾಂಡೆ ತಮ್ಮ “ರೈನ್ಬೋ” ಚಿತ್ರವನ್ನು ಮುಂದಕ್ಕೆ ಹಾಕಿ ಹೊಸ ಚಿತ್ರಕ್ಕೆ ಕೈ ಹಾಕಿದ್ದಾಗಿ ಹೇಳುತ್ತಾರೆ ಅವರು. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಶಶಾಂಕ್ ಅವರ ಕಥೆ. ಜೊತೆಗೆ ಆಜೇಯ್ರಾವ್ ಎಂಬ ಸಕ್ಸಸ್ ನಟ. ಇನ್ನು, ಶಂಕರ್ ಈ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.
ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ ಬೀದಿಗೆ ಬಿದ್ದ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದು “ಸಿನಿ ಲಹರಿ” ಸುದ್ದಿ ಹರಡುತ್ತಿದ್ದಂತೆಯೇ ಅನೇಕ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಚಿತ್ರರಂಗದ ಹಲವು ಗಣ್ಯರು ಬೇಸರ ಹೊರಹಾಕಿದ್ದುಂಟು. ನಟ ಕಮ್ ನಿರ್ದೇಶಕ ಸಾಧುಕೋಕಿಲ ಅವರೂ ಸಹ ನಿರ್ದೇಶಕರ ಸಂಘಕ್ಕೆ ಬಂದ ಪರಿಸ್ಥಿತಿ ಕುರಿತು ತೀವ್ರ ಬೇಸರ ಹೊರಹಾಕಿದ್ದಾರೆ. ಹೌದು, ಅವರು ನಿರ್ದೇಶಕ ನಾಗೇಂದ್ರ ಅರಸ್ ಅವರಿಗೆ ಕಳುಹಿಸಿರುವ ಆಡಿಯೋವೊಂದು ಜೋರಾಗಿಯೇ ಹರಿದಾಡುತ್ತಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಒಂದಷ್ಟು ಬೇಸರ ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಮಾತನಾಡಿರುವ ಸಂಕ್ಷಿಪ್ತ ವಿವರ ಇಲ್ಲಿದೆ.
“ನಾಗೇಂದ್ರ ಅರಸ್, ಚಿತ್ರರಂಗದ ಮಾನ ಮರ್ಯಾದೆ ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕಚೇರಿಯೊಳಗಿದ್ದ ಎಲ್ಲಾ ಪೀಠೋಪಕರಣಗಳನ್ನು ರೋಡ್ಗೆ ಹಾಕಲಾಗಿದೆ. ಇದಕ್ಕಿಂತ ದೊಡ್ಡ ಅವಮಾನವಿಲಲ್. ದೊಡ್ಡ ದೊಡ್ಡ ನಿರ್ದೇಶಕರು ಕಟ್ಟಿದ, ಪಾಲಿಸಿದ ಸಂಘ ಇಂದು ಬೀದಿಗೆ ಬಂದಿದೆಯೆಂದರೆ ಹೇಗೆ? ಯಾರೋ ಬಾಡಿಗೆ ಕಟ್ಟದಿದ್ದರಿಂದ ಆ ಬಾಡಿಗೆ ಮನೆ ಓನರ್ ನಿರ್ದೇಶಕರ ಸಂಘದ ಉಪಕರಣಗಳನ್ನೆಲ್ಲಾ ರೋಡ್ಗೆ ಬೀಸಾಕುತ್ತಾರೆ ಅಂದರೆ ಏನರ್ಥ. ಅಲ್ಲಿ ನಾಲ್ಕೈದು ಜನ ಹುಡುಗರು ನಿಂತು ಬಾಯಿ ಬಡ್ಕೋತ್ತಾ ಇದಾರೆ. ವಿ.ನಾಗೇಂದ್ರ ಪ್ರಸಾದ್ ಮುಂಬೈನಲ್ಲಿದ್ದಾರಂತೆ. ಟೇಶಿ ವೆಂಕಟೇಶ್ ಏನ್ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಇನ್ನು, ಆ ಸಾಮಾನುಗಳನ್ನು ಎಲ್ಲಿ ಬಿಸಾಕುತ್ತಾರೋ, ನಿರ್ದೇಶಕರ ಸಂಘವನ್ನು ಈ ಕೆಳಮಟ್ಟಕ್ಕೆ ತಂದು ಬಿಸಾಡಿದ್ರಲ್ಲ ಛೇ…” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಾಧು.
2018 ರಲ್ಲಷ್ಟೇ ವಿಜಯನಗರದಿಂದ ನಾಗರಬಾವಿಗೆ ಸ್ಥಳಾಂತರವಾಗಿದ್ದ ಸಂಘದ ಕಚೇರಿಯ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಲ್ಲದೆ, ಕಚೇರಿಯಲ್ಲಿನ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹಜವಾಗಿಯೇ ಈ ಘಟನೆ ಸಂಘದ ಹಲವು ಪದಾಧಿಕಾರಿಗಳಲ್ಲಿ ತೀವ್ರ ಬೇಸರ ತರಿಸಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಕಳೆದ ಡಿಸೆಂಬರ್ ತಿಂಗಳಿನಿಂದಲೇ ಇದೆ ಎನ್ನಲಾಗಿದೆ. ಕೊರೋನಾ ಸಮಸ್ಯೆ ನಿರ್ದೇಶಕರು ಸೇರಿದಂತೆ ಇಡೀ ಚಿತ್ರೋದ್ಯಮವನ್ನು ತೀವ್ರವಾಗಿ ಕಾಡಿದ್ದು ಸುಳ್ಳಲ್ಲ. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ ನಿಂತುಕೊಂಡಿತು. ಈ ಬೆಳವಣಿಗೆ ಸಂಘದ ಆರ್ಥಿಕ ಮುಗ್ಗಟ್ಟುಗೆ ಕಾರಣ ಎನ್ನಲಾಗಿದೆ.
ಕೊರೊನಾ ಹಾವಳಿ ನಡುವೆಯೂ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಹೊಸಬರ ಜೊತೆ ಹಳಬರೂ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಆ ನಿಟ್ಟಿನಲ್ಲಿ ಹೊಸಬರ “ಅವನಲ್ಲಿ ಇವಳಿಲ್ಲಿ” ಚಿತ್ರ ಕೂಡ ತೆರೆಗೆ ಬರಲು ಸಜ್ಜಾಗಿದೆ. ಡಿಸೆಂಬರ್ ೨೫ರ ಕ್ರಿಸ್ಮಸ್ಗೆ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸಂದೇಶ್ ಕೃಷ್ಣಮೂರ್ತಿ ನಿರ್ದೇಶಕರಾಗುತ್ತಿದ್ದಾರೆ. ಮೂಲತಃ ತೀರ್ಥಹಳ್ಳಿಯವರಾದ ಸಂದೇಶ್ ಕೃಷ್ಣಮೂರ್ತಿ ಅವರಿಗೆ ಇದು ಮೊದಲ ಸಿನಿಮಾ ಆಗಿದ್ದರೂ, ಸಾಕಷ್ಟು ಅನುಭವ ಇದೆ.
ಕಳೆದ ಹದಿನೈದು ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿರುವ ಸಂದೇಶ್ ಕೃಷ್ಣಮೂರ್ತಿ, ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಆರಂಭದಲ್ಲಿ “ಪ್ರೀತಿ ಇಲ್ಲದ ಮೇಲೆ” ಧಾರಾವಾಹಿಗೆ ಸಂಕಲನಕಾರರಾಗಿ ಕೆಲಸ ಶುರುಮಾಡಿದ ಸಂದೇಶ್, ನಂತರದ ದಿನಗಳಲ್ಲಿ ಸಾಕಷ್ಟು ಬಿಗ್ ಸೀರಿಯಲ್ಗಳಿಗೂ ಕೆಲಸ ಮಾಡಿದ್ದುಂಟು. ಅಲ್ಲಿ ಕೆಲಸ ಮಾಡುತ್ತಲೇ ಅವರು ಸಿನಿಮಾ ಮಾಡುವ ಕನಸು ಕಂಡವರು. ಅದು ಅವರ ದಶಕದ ಕನಸು ಕೂಡ. ಆ ಕನಸು ಈಗ “ಅನವಲ್ಲಿ ಇವಳಿಲ್ಲಿ “ಸಿನಿಮಾ ಮೂಲಕ ಈಡೇರಿದೆ. ಅಂದುಕೊಂಡಂತೆ ಅವರು ಸಿನಿಮಾ ಮಾಡಿ, ಇದೀಗ ಡಿಸೆಂಬರ್ ೨೫ರಂದು ಬಿಡುಗಡೆಯಾಗುವ ಮಟ್ಟಕ್ಕೆ ಬಂದಿದೆ ಎಂಬುದು ವಿಶೇಷ.
ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಕಲನವನ್ನೂ ಮಾಡಿದ್ದಾರೆ. ಚಿತ್ರಕ್ಕೆ ಪ್ರಭು ಮುಂಡ್ಕರ್ ಅವರು ನಾಯಕರಾದರೆ, ಅವರಿಗೆ ಇಬ್ಬರು ನಾಯಕಿಯರು. ಜಾಹ್ನವಿ ಜ್ಯೋತಿ ಹಾಗೂ “ದುನಿಯಾ” ರಶ್ಮಿ ನಾಯಕಿಯರಾಗಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತನಾಡಿದ ನಿರ್ದೇಶಕ ಸಂದೇಶ್, “ಇದೊಂದು ಲವ್ ಅಂಡ್ ಆಕ್ಷನ್ ಕುರಿತಾದ ಸಿನಿಮಾ. ಎಲ್ಲರ ಲೈಫಲ್ಲೂ ನೋವು ಅನ್ನೋದು ಕಾಮನ್.
ಒಂದು ಆಘಾತ ಆದಾಗ, ಸಹಜವಾಗಿಯೇ ನೋವು ಆಗುತ್ತೆ, ಆದರೆ, ಅದನ್ನೇ ಇಟ್ಟುಕೊಂಡು ಯೋಚಿಸುತ್ತಾ ಕೂತರೆ, ಜೊತೆಗಿದ್ದವರ ಲೈಫು ಹಾಳಾಗುತ್ತೆ. ಆದ ಘಟನೆ ಆಗಿಹೋಗಿದೆ. ಅದನ್ನು ಮರೆತು ಮುಂದೆ ನಡೆಯಬೇಕು, ಜೊತೆಗೆ ಇದ್ದವರೊಂದಿಗೆ ಚೆನ್ನಾಗಿ ಬದುಕಬೇಕು ಎಂಬ ಸಂದೇಶದೊಂದಿಗೆ ಸಿನಿಮಾ ಮಾಡಲಾಗಿದೆ” ಎಂದು ವಿವರ ಕೊಡುತ್ತಾರೆ ಸಂದೇಶ್.
ಕೆ.ಕಲ್ಯಾಣ್ ಮತ್ತು ಗೌಸ್ಪೀರ್ ಸಾಹಿತ್ಯವಿದೆ. ಆನಂದ್ ಆಡಿಯೋ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರು, ಸಕಲೇಶಪುರ ಸೇರಿದಂತೆ ಒಟ್ಟು ೪೦ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನು, ಈ ಚಿತ್ರವನ್ನು ಲಕ್ಷ್ಮೀನಾರಾಯಣ ರಾಜ್ ಅರಸ್ ಅವರು ನಿರ್ಮಾಣ ಮಾಡಿದ್ದಾರೆ. ರವಿಕಿಶೋರ್ ಛಾಯಾಗ್ರಹಣವಿದೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಅವರ ಸಂಗೀತವಿದೆ. ನಾಲ್ಕು ಹಾಡುಳಿದ್ದು, ಎರಡು ಮೆಲೋಡಿ, ಒಂದು ಪ್ಯಾಥೋ, ಒಂದು ಹ್ಯಾಪಿ ಸಾಂಗ್ ಚಿತ್ರದಲ್ಲಿದೆ. ಡಿ.೨೫ರಂದು ಪ್ರಮುಖ ಚಿತ್ರಮಂದಿರದಲ್ಲಿ ತ್ರಿವೇಣಿಯಲ್ಲಿ ಬಿಡುಗಡೆಯಾಗಲಿದೆ. ಇದರೊಂದಿಗೆ ಮಲ್ಟಿಪ್ಲೆಕ್ಸ್ ಮತ್ತು ಪಿವಿಆರ್ ಸೇರಿದಂತೆ ಒಟ್ಟು ೮೦ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಇತ್ತೀಚೆಗಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆ ಚಿತ್ರಕ್ಕೆ ‘ಓ ಮೈ ಲವ್’ ಎಂಬ ಹೆಸರಿಡಲಾಗಿದೆ.
ಈ ಚಿತ್ರಕ್ಕೆ ಸ್ಮೈಲ್ ಶ್ರೀನು ನಿರ್ದೇಶಕರು. ಈ ಹಿಂದೆ ” ತೂಫಾನ್”, “ಬಳ್ಳಾರಿ ದರ್ಬಾರ್” ಹಾಗೂ “18 ಟು 25” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ.
ಇದೊಂದು ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ. ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತ ಅಂಶಗಳು ಇಲ್ಲಿರಲಿವೆ.
ಇನ್ನು ನಿರ್ದೇಶಕ ಸ್ಮೈಲ್ ಶ್ರೀನು ಈ ಬಾರಿ ರೆಗ್ಯುಲರ್ ಪ್ಯಾಟ್ರನ್ ಬಿಟ್ಟು ಬೇರೆ ಥರದ ನಿರೂಪಣೆಯೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ ಜಿಸಿಬಿ ರಾಮಾಂಜಿನಿ ಅವರು ಕಥೆ ಬರೆದು ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ನಿರ್ದೇಶಕ ಶ್ರೀನು, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ರೊಮ್ಯಾಂಟಿಕ್ ಲವ್ಸ್ಟೋರಿ ಜೊತೆಗೆ ಫ್ಯಾಮಿಲಿ ಎಲಿಮೆಂಟ್ಸ್ ಮತ್ತು ಹಾಸ್ಯ ಮಿಶ್ರಣಗೊಂಡಿದೆ.
ಒಂದೊಳ್ಳೆಯ ಲವ್ ಸ್ಟೋರಿ ಇದಾಗಿದ್ದು, ಈ ಚಿತ್ರದ ಮೂಲಕ ಹೊಸ ಪ್ರೇಮ ಭಾಷ್ಯ ಬರೆಯುವ ಉತ್ಸಾಹದಲ್ಲಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾ. ಎಲ್ಲಾ ವಿಷಯದಲ್ಲೂ ಅದ್ಧೂರಿತನ ಇರಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ ನಟಿಸಲಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತವಿದೆ.
ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್ಕುಮಾರ್ ಚವನ್ ಅವರ ಸಹನಿರ್ದೇಶನ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಪ್ರಗತಿ ಅಶ್ವತ್ಥನಾರಾಯಣ್ ಕನ್ನಡ ಚಿತ್ರರಂಗದಲ್ಲಿ ಬಹು ಜನಪ್ರಿಯ ಹೆಸರಿದು. ಹೌದು, ಕಪ್ಪು- ಬಿಳುಪು ಕಾಲದಿಂದಲೂ ಚಿತ್ರರಂಗದ ನಂಟು ಬೆಳೆಸಿಕೊಂಡು ಬಂದವರು. ಸರಿ ಸುಮಾರು ಐದು ದಶಕಗಳ ಕಾಲ ಚಿತ್ರರಂಗವನ್ನು ಅಳವಾಗಿ ಬಲ್ಲವರು. ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾಗಿರುವ ನೂರಾರು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್, ರಾಜೇಶ್, ಗಂಗಾಧರ್, ಲೋಕೇಶ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್, ವಜ್ರಮುನಿ, ಬಾಲಕೃಷ್ಣ, ನರಸಿಂಹರಾಜು, ಕಲ್ಪನಾ, ಮಂಜುಳಾ ಹೀಗೆ ಇನ್ನೂ ಅನೇಕ ಹಿರಿಯ ನಟ, ನಟಿಯರ ಚಿತ್ರಗಳಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಅದ್ಭುತ ಮತ್ತು ಅಪರೂಪದ ಫೋಟೋಗಳನ್ನೂ ತೆಗೆದಿದ್ದಾರೆ. ಅಪರೂಪದಲ್ಲಿ ಅಪರೂಪ ಎಂಬಂತಹ ಫೋಟೋಗಳು ಇಂದಿಗೂ ಅವರ ಬಳಿ ಇವೆ ಎಂಬುದೇ ವಿಶೇಷ.
ಪ್ರಗತಿ ಅಶ್ವತ್ಥನಾರಾಯಣ ಅವರು, 1965ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ಕಪ್ಪು-ಬಿಳುಪು ಸಿನಿಮಾಗಳಿಂದ ಹಿಡಿದು, ಕಲರ್ ಸಿನಿಮಾಗಳವರೆಗೂ ಇವರ ಕ್ಯಾಮೆರಾ ಹಲವಾರು ನಟ,ನಟಿಯರು, ಪೋಷಕ ನಟ,ನಟಿಯರು,ಹಾಸ್ಯ ನಟರು, ನಿರ್ದೇಶಕ, ನಿರ್ಮಾಪಕರು, ಗೀತರಚನೆಕಾರರು, ತಾಂತ್ರಿಕ ವರ್ಗದವರು ಸೇರಿದಂತೆ ಸಿನಿಮಾ ವಿಭಾಗದಲ್ಲಿ ದುಡಿಯುವ ಅನೇಕರ ಫೋಟೋ ಕ್ಲಿಕ್ಕಿಸಿದೆ ಎಂಬುದೇ ಅಚ್ಚರಿ. ಈವರೆಗೆ ಸುಮಾರು ೩೦೦ಕ್ಕೂ ಹೆಚ್ಚು ಯಶಸ್ವಿ ಹಾಗೂ ಅಪರೂಪದ ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದು.
೨೦೦೫ರ ನಂತರ ಗಾಂಧಿನಗರದಲ್ಲಿದ್ದ ಇವರ ಪ್ರಗತಿ ಸ್ಟುಡಿಯೋ ಕ್ಲೋಸ್ ಆಗಿದ್ದರೂ, ಅಶ್ವತ್ಥನಾರಾಯಣ ಅವರು ಮಾತ್ರ ಸುಮ್ಮನೆ ಕೂರದೆ, ಅಪರೂಪದ ಫೋಟೋಗಳೊಂದಿಗೆ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಈಗ ಹೊಸದೊಂದು ಸುದ್ದಿಗೂ ಕಾರಣರಾಗಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಷ್ಟಕ್ಕೂ ಪ್ರಗತಿ ಅಶ್ವತ್ಥನಾರಾಯಣ ಅವರ ಕುರಿತಾದ ಹೊಸ ಸುದ್ದಿ ಏನು ಎಂಬ ಪ್ರಶ್ನೆಗೆ “ತಾರಾ ಕ್ಯಾಲೆಂಡರ್-೨೦೨೧” ಉತ್ತರ.
ಪ್ರಗತಿ ಅಶ್ವತ್ಥನಾರಾಯಣ ಅವರು, ಬರುವ ಹೊಸ ವರ್ಷಕ್ಕೆ “ತಾರಾ ಕ್ಯಾಲೆಂಡರ್ -೨೦೨೧” ಸಿದ್ಧಗೊಳಿಸಿದ್ದಾರೆ. ಹಾಗಂತ, ಇದು ಕಮರ್ಷಿಯಲ್ ಅಂದುಕೊಂಡರೆ ಆ ಊಹೆ ತಪ್ಪು. ಸದಾ ಸಿನಿಮಾ ಪ್ರೀತಿಸುವ, ಧ್ಯಾನಿಸುವ ಪ್ರಗತಿ ಅಶ್ವತ್ಥನಾರಾಯಣ ಅವರು, ತಮ್ಮದೇ ಶೈಲಿಯಲ್ಲೊಂದು ತಾರಾ ಕ್ಯಾಲೆಂಡರ್ ವಿನ್ಯಾಸಗೊಳಿಸಿದ್ದಾರೆ.
ಅದನ್ನು ಫೇಸ್ಬುಕ್ ಅಕೌಂಟ್ನಲ್ಲೂ ಹಾಕಿಕೊಂಡಿದ್ದಾರೆ. ಮೊದಲೇ ಹೇಳಿದಂತೆ, ಇದನ್ನು ಕಮರ್ಷಿಯಲ್ ಆಗಿ ಮಾಡಿಲ್ಲ. ಸಿನಿಮಾದ ಮೇಲಿರುವ ಪ್ರೀತಿಗೆ ಮಾಡಿದ್ದಾರೆ. ಇದನ್ನು ಸಿನಿಪ್ರಿಯರು ತಮ್ಮ ಲ್ಯಾಪ್ಟಾಪ್ನಲ್ಲಿ ಸ್ಟೋರ್ ಮಾಡಿಕೊಳ್ಳಬಹುದು.
ಅಷ್ಟೇ ಅಲ್ಲ, ಬೇಕಾದವರು ಡಿಜಿಟಲ್ ಪ್ರಿಂಟ್, ಜೆರಾಕ್ಸ್ ಕೂಡ ಮಾಡಿಟ್ಟುಕೊಳ್ಳಬಹುದು. ಕೇವಲ ತಾರೆಯರಷ್ಟೇ ಅಲ್ಲ, ಅಶ್ವತ್ಥನಾರಾಯಣ ಅವರು, ಟೆಂಪಲ್ಸ್ ಫೋಟೋಗಳನ್ನೂ ಬಳಸಿಕೊಂಡು ಕ್ಯಾಲೆಂಡರ್ ಮಾಡಿದ್ದಾರೆ. ಅದನ್ನು ಇನ್ನಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಬಿಡಬೇಕಿದೆ.
ಈ ಕುರಿತು “ಸಿನಿಲಹರಿ” ಜೊತೆ ಮಾತನಾಡುವ ಪ್ರಗತಿ ಅಶ್ವತ್ಥನಾರಾಯಣ, “ನಾನು ಈ ತಾರಾ ಕ್ಯಾಲೆಂಡರ್ ಅನ್ನು ಕಮರ್ಷಿಯಲ್ ದೃಷ್ಟಿಯಲ್ಲಿ ಮಾಡಿಲ್ಲ. ಸುಮ್ಮನೆ ಒಂದಷ್ಟು ಫೋಟೋ ಆಯ್ಕೆ ಮಾಡಿಕೊಂಡು ಮಾಡಿದ್ದೇನೆ. ಈ ತಾರಾ ಕ್ಯಾಲೆಂಡರ್ನ ವಿಶೇಷತೆ ಅಂದರೆ, ಕನ್ನಡ ಚಿತ್ರರಂಗದ ಮಹನೀಯರನ್ನು ಒಟ್ಟಿಗೆ ನೋಡಬಹುದಷ್ಟೇ.
ಒಂದೇ ವೇದಿಕೆಯಲ್ಲಿ ಸಿನಿಮಾ ಮಂದಿ ಸಿಕ್ಕಂತೆ ಈ ತಾರಾ ಕ್ಯಾಲೆಂಡರ್ನಲ್ಲೂ ಕಾಣಬಹುದು. ಇಲ್ಲಿ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಬಾಲಕೃಷ್ಣ, ಲೋಕೇಶ್, ವಜ್ರಮುನಿ, ನರಸಿಂಹರಾಜು, ಕಲ್ಪನಾ, ಮಂಜುಳಾ ಅವರ ಫೋಟೋಗಳಿವೆ. ಇದನ್ನು ನಾನೇ ಆಯ್ಕೆ ಮಾಡಿ ಮಾಡಿದ್ದು,
ಇಲ್ಲಿರುವರಾರೂ ಈಗ ಇಲ್ಲ. ಹಾಗಾಗಿ ಇದೊಂದು ವಿಶೇಷ ತಾರಾ ಕ್ಯಾಲೆಂಡರ್ ಅಷ್ಟೇ. ಕೆಲವರು ಆ ಫೋಟೋ ಹಾಕಿಲ್ಲ, ಇವರನ್ನೇಕೆ ಕೈ ಬಿಟ್ಟಿದ್ದೀರಿ ಅಂತೆಲ್ಲಾ ಕೇಳುತ್ತಿದ್ದಾರೆ. ಆದರೆ, ಇರುವ ಹನ್ನೆರೆಡು ತಿಂಗಳಲ್ಲಿ ಒಂದೊಂದು ತಿಂಗಳಿಗೆ ಒಬ್ಬೊಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಮುಂದಿನ ಸಲದ ತಾರಾ ಕ್ಯಾಲೆಂಡರ್ನಲ್ಲಿ ಉಳಿದವರ ಫೋಟೋ ಬಳಸಿಕೊಂಡು ಕ್ಯಾಲೆಂಡರ್ ಮಾಡತ್ತೇನೆ ಎನ್ನುವ ಅವರು, ತಾವೇ ಸೆರೆಹಿಡಿದ ಅಪರೂಪದ ಫೋಟೋಗಳನ್ನು ನೋಡುಗರಿಗೆ ಕ್ಯಾಲೆಂಡರ್ ರೂಪದಲ್ಲಿ ಕೊಟ್ಟಿರುವುದು ವಿಶೇಷವೇ ಸರಿ.
“ಕೆಜಿಎಫ್” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ ಚಿತ್ರ. ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಚಿತ್ರ ಅಂದರೆ ತಪ್ಪಿಲ್ಲ. “ಕೆಜಿಎಫ್-೨” ಚಿತ್ರ ಕೂಡ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಇದುವರೆಗೆ ಬರೀ ಫಸ್ಟ್ ಲುಕ್ ನೋಡಿದ್ದ ಫ್ಯಾನ್ಸ್ಗೆ ಈಗ ಹೊಂಬಾಳೆ ಫಿಲ್ಮ್ಸ್ ಹೊಸ ಸುದ್ದಿ ಹೊರಹಾಕಿದೆ. ಹೌದು, ಜನವರಿ 8ರಂದು “ಕೆಜಿಎಫ್-2” ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಜನವರಿ 8ರಂದು 10.08ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಅಂದು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಈ ಟೀಸರ್ ಹೊರಬರುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಯಶ್ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಇದ್ದಾರೆ. ಈ ಬಾರಿ ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ಆಕರ್ಷಣೆ. ಅಷ್ಟೇ ಅಲ್ಲ, ರವೀನಾ ಟಂಡನ್ ಕೂಡ ಇದ್ದಾರೆ. ಪ್ರಕಾಶ್ರಾಜ್ ಸೇರಿದಂತೆ ಹಲವರು ಇಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಭುವನ್ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತ ನೀಡಿದ್ದಾರೆ.
ಅಂದಹಾಗೆ, ಯಶ್ ಅವರು ತಮ್ಮ ಫೇಸ್ಬುಕ್ ಖಾತೆ, ಟ್ವಿಟ್ಟರ್ನಲ್ಲೂ ಜನವರಿ ೮ರಂದು ಟೀಸರ್ ಬಿಡುಗಡೆಯಾಗುವ ವಿಷಯ ಹಂಚಿಕೊಂಡಿದ್ದಾರೆ. ಅದೇನೆ ಇರಲಿ, ತುಂಬಾ ದಿನಗಳಿಂದ ಫ್ಯಾನ್ಸ್ ಕಾತುರದಿಂದಲೇ ಕಾಯುತ್ತಿದ್ದ ಟೀಸರ್ ಅಂತೂ ಬಿಡುಗಡೆಯಾಗುವ ಸೂಚನೆ ನೀಡಿದ್ದು, ದಿನವನ್ನೂ ನಿಗದಿಪಡಿಸಿದೆ. ಇನ್ನೇನಿದ್ದರೂ, ಜನವರಿ ೮ರ ತನಕ ಫ್ಯಾನ್ಸ್ ಕೆಜಿಎಫ್-೨ ಚಿತ್ರದ ಜಪ ಮಾಡುವುದು ಖಚಿತ.
ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಕಲಾವಿದನಿರಲಿ, ತಾಂತ್ರಿಕ ವರ್ಗದವರಿರಲಿ ನಾನು ಗುರುತಿಸಿಕೊಳ್ಳಬೇಕು, ಸಾಧಿಸಬೇಕು ಎಂಬ ಅಸೆ ಇದ್ದೇ ಇರುತ್ತೆ. ಕೆಲವರು ಆ ಆಸೆಯ ಬೆನ್ನತ್ತಿ ಹೋಗಿದ್ದಾರೆ, ಇನ್ನೂ ಕೆಲವರು ಹೋಗಲು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವರು ಗೆದ್ದಿದ್ದಾರೆ, ಕೆಲವರೂ ಗೆಲ್ಲಲಾಗದೆ ಸುಮ್ಮನಾಗಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಒಂದು ಜಾಗ ಮಾಡಿಕೊಂಡಿರುವ ಸಂಗೀತ ನಿರ್ದೇಶಕ ವೀರ್ ಸಮರ್ಥ್. ಹೌದು, ವೀರ್ಸಮರ್ಥ್ ಈಗಾಗಲೇ ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸೂಪರ್ ಹಿಟ್ ಸಾಂಗ್ ಕೊಟ್ಟಿದ್ದಾರೆ. ಅನೇಕ ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರೀಗ ಬಾಲಿವುಡ್ಗೆ ಕಾಲಿಟ್ಟಿದ್ದಾರೆ ಎಂಬುದೇ ಈ ಹೊತ್ತಿನ ಸುದ್ದಿ.
1998 ರಲ್ಲಿ ವೀರ್ ಗಾಯಕ ಸುರೇಶ್ ವಾಡ್ಕರ್ ಬಳಿ ಸಂಗೀತ ಕಲಿತರು. ಅದಕ್ಕೂ ಮೊದಲು ಬೀದರ್ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದರು. ಸುರೇಶ್ ವಾಡ್ಕರ್ ಬಳಿ ಆಡಿಷನ್ ಮೂಲಕ ಆಯ್ಕೆಯಾದರು. ಅವರ ಹಾಡು ಕೇಳಿದ ಅವರು, ಹಾಡು ಕಲಿಸಿದರು. ನಂತರ ಅಲ್ಲೇ ಕೆಲಸ ಶುರುಮಾಡಿದರು. 1998 ರಲ್ಲಿ ವೀರ್ ಅವರಿಗೆ ವಿಜಯಪ್ರಕಾಶ್ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್ ಬಳಿ ಐದು ವರ್ಷ ಜೊತೆಗಿದ್ದರು. ಆ ಬಳಿಕ ಹಿಂದಿಯಲ್ಲಿ ಹಿಟ್ ಎನಿಸಿಕೊಂಡ “ಕಭೀ ಖುಷ್ ಕಭೀ ಗಮ್” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್ ಶಾಂಡಿಲ್ಯ ಅವರ ಹಾಡೊಂದರಲ್ಲಿ ಕೋರಸ್ ಹಾಡುವ ಅವಕಾಶ ಗಿಟ್ಟಿಸಿಕೊಂಡು, ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್ ಹಾಕುವ ಅವಕಾಶವೂ ಅವರದಾಗಿತ್ತು
ವೀರ್ ಸಮರ್ಥ್ ಹಿಂದಿ ಸಿನಿಮಾಗೆ ಸಂಗೀತ ನೀಡಿದ್ದಾರೆಂಬುದೇ ವಿಶೇಷ. ಅದು “ಶಕೀಲಾ” ಸಿನಿಮಾಗೆ. ಶಕೀಲಾ ಅಂದಾಕ್ಷಣ, ಪಡ್ಡೆಗಳಿಗೆ ಬಿಡಿಸಿ ಹೇಳಬೇಕಿಲ್ಲ. ಯುವಕರೂ ಸೇರಿದಂತೆ ವಯಸ್ಕರನ್ನೂ ನಿದ್ದೆಗೆಡಿಸಿದ ಶಕೀಲಾ ಅವರ ಬಯೋಗ್ರಫಿ ಚಿತ್ರವೇ “ಶಕೀಲಾ”. ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶಕರು. ಈ ಚಿತ್ರವೀಗ ಡಿಸೆಂಬರ್ ೨೫ರ ಕ್ರಿಸ್ಮಸ್ಗೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ ಬಾಲಿವುಡ್ ಚಿತ್ರವೊಂದಕ್ಕೆ ಸಂಗೀತ ನೀಡಿರುವ ವೀರ್ಸಮರ್ಥ್, ತಮ್ಮ ಬಾಲಿವುಡ್ ಪಯಣ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.
ಓವರ್ ಟು ವೀರ್…
“ನನಗೆ ಬಾಲಿವುಡ್ ಹೊಸದೇನಲ್ಲ. ಹಾಗೆ ಹೇಳುವುದಾದರೆ, 1998 ರಲ್ಲಿ ನಾನು ಹೆಸರಾಂತ ಗಾಯಕ ಸುರೇಶ್ ವಾಡ್ಕರ್ ಬಳಿ ಸಂಗೀತ ಕಲಿಯೋಕೆ ಸೇರಿಕೊಂಡೆ. ಅದಕ್ಕೂ ಮೊದಲು ಬೀದರ್ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದೆ. ಸುರೇಶ್ ವಾಡೇಕರ್ ಬಳಿ ಆಡಿಷನ್ ಮೂಲಕ ಆಯ್ಕೆಯಾದೆ. ನನ್ನ ಹಾಡು ಕೇಳಿದ ಅವರು, ಕಲಿಸ್ತೀನಿ ಅಂದ್ರು. ಅಲ್ಲೇ ಕೆಲಸ ಶುರುಮಾಡಿದೆ. 1998 ರಲ್ಲಿ ವಿಜಯಪ್ರಕಾಶ್ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್ ಬಳಿ ಐದು ವರ್ಷ ಜೊತೆಗಿದ್ದು ಕೆಲಸವನ್ನೂ ಕಲಿತೆ. ಆ ಬಳಿಕ ಹಿಂದಿಯಲ್ಲಿ ಹಿಟ್ ಎನಿಸಿಕೊಂಡ “ಕಭೀ ಖುಷ್ ಕಭೀ ಗಮ್” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್ ಶಾಂಡಿಲ್ಯ ಅವರು, ಹಾಡೊಂದರಲ್ಲಿ ಕೋರಸ್ ಹಾಡುವ ಅವಕಾಶ ಕೊಟ್ಟರು. ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್ ಹಾಕುವ ಅವಕಾಶವೂ ನನ್ನದಾಗಿತ್ತು.
ಆ ಸಿನಿಮಾದಲ್ಲಿ ನನ್ನದೂ ಒಂದು ವಾಯ್ಸ್ ಇದೆ ಅನ್ನೋದೇ ಖುಷಿ. ಅದಾದ ಮೇಲೆ, ಹಿಂದಿಯ ಸುಮಾರು ಸಿನಿಮಾಗಳಲ್ಲಿ ಕೋರಸ್ ಹಾಡಿದ್ದೂ ಉಂಟು. ಅನೇಕ ಹಿಂದಿ ಆಲ್ಬಂಗಳಲ್ಲೂ ಕೆಲಸ ಮಾಡಿದ್ದೇನೆ. ನನ್ನ ಗುರುಗಳಾದ ರವೀಂದ್ರ ಜೈನ್ ಜೊತೆ ಸಾಕಷ್ಟು ಸ್ಟೇಜ್ ಶೋ ಕೊಟ್ಟಿದ್ದೂ ಇದೆ. ಇವೆಲ್ಲದರ ಜೊತೆಯಲ್ಲಿ ನಾನು ಭೀಮ್ಸೇನ್ ಜೋಶಿ ಅವರ ಬಳಿ ಕೆಲಸ ಮಾಡುವ ಅವಕಾಶವೂ ಪಡೆದುಕೊಂಡೆ. ದೊಡ್ಡ ಲೆಜೆಂಡರಿ ಜೊತೆ ಇದ್ದೆ ಅನ್ನೋದು ಹೆಮ್ಮೆಯ ವಿಷಯ. ಕ್ಲಾಸಿಕಲ್ ಮತ್ತು ಸಿನಿಮಾ ಈ ಎರಡೂ ಕಡೆ ಕೆಲಸ ಮಾಡಿದ ಅನುಭವ ಅನನ್ಯ. ಬಾಲಿವುಡ್ನಲ್ಲೇ ಕೆಲಸ ಮಾಡಬೇಕು ಎಂಬ ಆಸೆ ಕಳೆದ ಐದಾರು ವರ್ಷಗಳಿಂದಲೂ ಇತ್ತು. ಅದಕ್ಕಾಗಿಯೇ ನಾನು ಮಹೇಶ್ ಭಟ್, ವಿಕ್ರಮ್ ಭಟ್, “ಹಮ್ ಆಪ್ಕೆ ಹೈ ಕೌನ್” ನಿರ್ದೇಶಕ ಸೂರಜ್ ಬರ್ಜಾತ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೂ ಆಗಿತ್ತು. ಆದರೆ, ಮಾತುಕತೆ ನಡೆದಿತ್ತಾದರೂ ಕೆಲ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಆ ಪ್ರಯತ್ನದಲ್ಲಿದ್ದ ನನಗೆ “ಶಕೀಲಾ” ಅಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ” ಎಂದು ವಿವರ ಕೊಡುತ್ತಾರೆ ವೀರ್ ಸಮರ್ಥ್.
ಮಜಾ ಕೊಟ್ಟ ಅವಕಾಶ..
ಈ ಪ್ರಯತ್ನದ ನಡುವೆಯೇ ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್” ಚಿತ್ರಕ್ಕೆ ಸಂಗೀತ ನೀಡಿದ್ದೆ. ಅದರಲ್ಲೊಂದು ಅರೇಬಿಕ್ ಶೈಲಿಯ ಸಂಗೀತ ಸ್ಪರ್ಶಿಸಿ ಹಾಡೊಂದನ್ನು ಮಾಡಿದ್ದೆ. ಆ ಹಾಡು ಹಿಟ್ ಆಗಿತ್ತು. ಜೊತೆಗೆ “ಮಜಾ ಟಾಕೀಸ್” ವೇದಿಕೆಯಲ್ಲಿ ಪ್ರಚಾರಕ್ಕಾಗಿ ಹೋಗಿದ್ದಾಗ, ಆ ಶೋನಲ್ಲಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ವೇದಿಕೆ ಮೇಲೇರಿ ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗ, ಸಾಂಗ್ ಕುರಿತು ಮಾತಾಡಿದ್ದರು. ಚೆನ್ನಾಗಿ ಕಂಪೋಸ್ ಮಾಡಿದ್ದೀರಿ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ ನನ್ನ ಫೋನ್ ನಂಬರ್ ಪಡೆದಿದ್ದರು. ಕೆಲ ತಿಂಗಳ ಬಳಿಕ ನಿರ್ದೇಶಕ ಮೋಹನ್ಗೆ ಕಾಲ್ ಮಾಡಿದ ಇಂದ್ರಜಿತ್ ಲಂಕೇಶ್ ಅವರು, ವೀರ್ಸಮರ್ಥ್ ಅವರಿಗೆ ಕಾಲ್ ಮಾಡಲು ಹೇಳು ಎಂದಿದ್ದರು. ಆಗ ಮೋಹನ್ ಅವರ “ಡಬಲ್ ಎಂಜಿನ್” ಚಿತ್ರಕ್ಕೆ ನಾನು ಸಂಗೀತ ನೀಡುತ್ತಿದ್ದೆ. ಅಲ್ಲೇ ಜೊತೆಗಿದ್ದ ಮೋಹನ್, ವಿಷಯ ತಿಳಿಸಿದರು.
ಇಂದ್ರಜಿತ್ ಸ್ಟೈಲಿಶ್ ಸಿನ್ಮಾ ಮೇಕರ್
ನಾನು ಸಂಜೆ ಇಂದ್ರಜಿತ್ ಅವರಿಗೆ ಕಾಲ್ ಮಾಡಿ ಮಾತಾಡಿದೆ. ಇವತ್ತು ಸಿಕ್ಕು ಮಾತಾಡೋಣ ಅಂತ ಕೋರಮಂಗಲ ಬಳಿಯ ಹೋಟೇಲ್ವೊಂದಕ್ಕೆ ಆಹ್ವಾನಿಸಿದ್ದರು. ಹೊಸ ಕನ್ನಡ ಸಿನಿಮಾ ಮಾಡುತ್ತಿರಬಹುದೆಂದು ಭಾವಿಸಿ ಹೋದೆ. ಹೋದವನಿಗೆ ಒಂದು ಸರ್ಪ್ರೈಸ್ ಕಾದಿತ್ತು. ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಅದು “ಶಕೀಲಾ” ಬಯೋಗ್ರಫಿ. ನೀವೇ ಸಂಗೀತ ಕೊಡಬೇಕು ಅಂದರು. ನನ್ನೊಳಗಿದ್ದ ಆಸೆಗೂ ಜೀವ ಬಂತು. ಇಂದ್ರಜಿತ್ ಅವರ ಜೊತೆ ಕೆಲಸ ಮಾಡಿದೆ. ಅವರೊಬ್ಬ ಸ್ಟೈಲಿಶ್ ಸಿನಿಮಾ ಮೇಕರ್ ಅಷ್ಟೇ ಅಲ್ಲ, ಅವರೊಳಗೊಬ್ಬ ಸಂಗೀತ ಪ್ರೇಮಿಯೂ ಇದ್ದಾರೆ. ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಅವರು, ನನ್ನಿಂದ ಕೆಲಸ ತೆಗೆಸಿದರು. ಒಂದು ಅರೇಬಿಕ್ ಸಾಂಗ್ ಬಂತು. ಮೆಲೋಡಿ ಹಾಡು ಕೊಟ್ಟೆ. ಮತ್ತೊಂದು ಆಪ್ಷನ್ ಇಲ್ಲದೆ ಓಕೆ ಮಾಡಿದರು. ಅವರ ಟೇಸ್ಟ್ಗೆ, ಸಿನಿಮಾ ಕಥೆಯ ಕಲ್ಪನೆಗೆ ಸಂಗೀತ ಮಾಡಿದೆ. ಒಳ್ಳೆಯ ಹಾಡುಗಳು ಮೂಡಿಬಂದವು. ಹಿನ್ನೆಲೆ ಸಂಗೀತ ಕೂಡ ಅಷ್ಟೇ ಅದ್ಭುತವಾಗಿ ಮೂಡಲು ಕಾರಣ, ಮತ್ತದೇ ಇಂದ್ರಜಿತ್ ಲಂಕೇಶ್. ಚಿತ್ರದಲ್ಲಿ ಮೀಟ್ ಬ್ರದರ್ಸ್ ಕೂಡ ಒಂದು ಪ್ರಮೋಷನಲ್ ಸಾಂಗ್ ಮಾಡಿದ್ದಾರೆ.
ಬಾಲಿವುಡ್ ಮಂದಿಯ ಮೆಚ್ಚುಗೆ ಸುಲಭವಲ್ಲ
ಸದ್ಯ ಈಗ ಸಿನಿಮಾದ ಹಾಡುಗಳ ತುಣುಕು ರಿಲೀಸ್ ಆಗಿದೆ. ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ. ಒಬ್ಬ ಸಂಗೀತ ನಿರ್ದೇಶಕನಿಗೆ ತಾನು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಕ್ಕರೆ ಅದು ದೊಡ್ಡ ಪ್ರಶಸ್ತಿ ಸಿಕ್ಕಂತೆ. ಅಲ್ಲದೆ, ಬಾಲಿವುಡ್ ಮಂದಿಯನ್ನು ಮೆಚ್ಚಿಸುವುದು ಸುಲಭದ ಮಾತಲ್ಲ. ಹಿಂದಿಯಲ್ಲಿ ವಿಶಾಲ್ ಮಿಶ್ರ ನನ್ನ ಸಾಂಗ್ ಹಾಡಿದ್ದು ವಿಶೇಷತೆಗಳಲ್ಲೊಂದು. ವಿಶಾಲ್ ಮಿಶ್ರ ಸಲ್ಮಾನ್ ಖಾನ್ ಅವರ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ, ಹಾಡಿದ್ದಾರೆ. ನನ್ನ ಹಾಡನ್ನು ಯಾರಿಂದ ಹಾಡಿಸಬೇಕು ಎಂಬ ಯೋಚನೆ ಬಂತು. ಅದರಲ್ಲೂ ಕುಮಾರ್ ಅವರ ಎಲ್ಲಾ ಹಾಡಿಗೂ ಸಾಹಿತ್ಯವಿತ್ತು. ಕುಮಾರ್ ಅವರು ಬಾಲಿವುಡ್ನ ಲೀಡಿಂಗ್ ಗೀತ ಸಾಹಿತಿಯರ ಪೈಕಿ ಟಾಪ್ ಫೈವ್ನಲ್ಲಿದ್ದಾರೆ.
ಅವರ ಒಳ್ಳೆಯ ಸಾಹಿತ್ಯಕ್ಕೆ ವಿಶಾಲ್ ಮಿಶ್ರ ಅವರ ವಾಯ್ಸ್ ಇದ್ದರೆ ಚೆನ್ನಾಗಿರುತ್ತೆ ಅಂತ ಯೋಚಿಸಿ ಅವರನ್ನು ಫೋನ್ನಲ್ಲಿ ಮಾತಾಡಿಸಿದೆ. ಸಾಂಗ್ ಹಾಡಬೇಕು ಅಂದಾಗ, ಟ್ಯೂನ್ ಕಳಿಸಿ ಅಂದ್ರು. ಕೇಳಿದ ಕೂಡಲೇ ಫೋನ್ ಮಾಡಿ, ಸಾಂಗ್ ಕಂಪೋಸ್ ಚೆನ್ನಾಗಿದೆ ಹಾಡ್ತೀನಿ ಅಂದ್ರು. ಆದರೆ, ತುಂಬಾ ದುಬಾರಿನಾ ಎಂಬ ಕಾರಣಕ್ಕೆ ಪೇಮೆಂಟ್ ಹೇಳಿ ಸರ್ ಅಂದೆ, ನೀವು ಎಷ್ಟಾದರೂ ಕೊಡಿ ತಕರಾರು ಇಲ್ಲ. ಸಾಂಗ್ ಚೆನ್ನಾಗಿದೆ ಹಾಡಬೇಕಷ್ಟೇ ಅಂದ್ರು. ಆಗ ಮುಂಬೈಗೆ ಹೋಗಿ “ಓ ಲಮ್ಹಾ..” ಸಾಂಗ್ ಹಾಡಿಸಿದೆ. ಹಾಡು ಹಾಡಿದ ಅವರು ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಇಂದ್ರಜಿತ್ ಲಂಕೇಶ್ ಅವರೂ ನನ್ನ ಕೆಲಸ ಕೊಂಡಾಡಿ ತಬ್ಬಿಕೊಂಡರು.
ಬಾಲಿವುಡ್ ಸಿನಿಮಾ ಕೆಲಸ ತೃಪ್ತಿ ಕೊಡ್ತು ಎಂಬ ಖುಷಿ ನನ್ನದಾಯ್ತು. ಇನ್ನು, ಕನ್ನಡದಲ್ಲಿ “ಹವಾಮಾನಕೆ ಏನಾಗಿದೆ…” ಎಂಬ ಅದೇ ರಾಗಕ್ಕೆ ಜಯಂತ್ ಕಾಯ್ಕಿಣಿ ಅವರು ಹಾಡು ಬರೆದಿದ್ದಾರೆ. ಆ ಹಾಡನ್ನು ಕೇಶವ ಕುಮಾರ್ ಹಾಡಿದ್ದಾರೆ. ಕನ್ನಡದ ಈ ಹುಡುಗ ಮುಂಬೈನಲ್ಲಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಎಂದು ಹೇಳುವ ವೀರ್ ಸಮರ್ಥ್, “ಶಕೀಲಾʼ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಸಿನಿಮಾ ಅದು ಅನ್ನೋದು ಅವರ ಮಾತು.
ಇದೇ ಮೊದಲ ಬಾರಿಗೆ ತರುಣ್ ಸುಧೀರ್ ನಿರ್ಮಾಣದ ಚಿತ್ರವೊಂದು ಸೆಟ್ಟೇರುತ್ತಿದ್ದು, ಆ ಚಿತ್ರಕ್ಕೆ “ಗುರುಶಿಷ್ಯರು” ಎಂದು ನಾಮಕರಣ ಮಾಡಲಾಗಿದೆ. ೧೯೯೫ರಲ್ಲಿ ಬಿಡುಗಡೆಯಾಗಿದ್ದ “ಗುರುಶಿಷ್ಯರು” ದ್ವಾರಕೀಶ್ ಅಭಿನಯದ ಯಶಸ್ವಿ ಚಿತ್ರವಾಗಿತ್ತು. ಈ ಚಿತ್ರದ ಶೀರ್ಷಿಕೆಯಡಿ ನಟ ಶರಣ್ ಅಭಿನಯಿಸುತ್ತಿರುವುದು ವಿಶೇಷ. ದ್ವಾರಕೀಶ್ ಅವರೇ ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ಈ ಹಿಂದೆ ಶರಣ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು. ಅದು ಹೊಸ ಚಿತ್ರದ ಸೂಚನೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ನಿರ್ಮಾಪಕ ಕಮ್ ನಿರ್ದೇಶಕ ತರುಣ್ ಸುಧೀರ್ ಅವರು, ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಡಿಸೆಂಬರ್ ೨೧ರಂದು “ಗುರುಶಿಷ್ಯರು” ಶೀರ್ಷಿಕೆ ಅನಾವರಣಗೊಂಡಿದೆ.
ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕಿಷ್ಟು ಚಿತ್ರದ ಮಾಹಿತಿ. ಇನ್ನುಳಿದಂತೆ, ತಾಂತ್ರಿಕ ವರ್ಗ, ಕಲಾವಿದರು ಇತರೆ ವಿಷಯವನ್ನು ಇಷ್ಟರಲ್ಲೇ ಅನೌನ್ಸ್ ಮಾಡಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಹೋರಾಟದ ಕಥೆಗಳು ತೆರೆಯ ಮೇಲೆ ರಾರಾಜಿಸಿವೆ. ಆ ಸಾಲಿಗೆ ರೈತ ಹೋರಾಟದ ಕಥೆಗಳೂ ಹೊಸದೇನಲ್ಲ. ಈಗ ಮತ್ತೊಂದು ರೈತರ ಹೋರಾಟದ ಕಥೆಯೊಂದು ಚಿತ್ರವಾಗಲು ಸಜ್ಜಾಗಿದೆ. ಹೌದು, ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕೊಳಗ”. ಇದು ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ. ಈ ಚಿತ್ರವನ್ನು ಪ್ರಸನ್ನ ಗೊರಲಕೆರೆ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. ಇನ್ನು, ನಿಶಿತಾಗೌಡ ಅವರು ಚಿತ್ರಕಥೆ ಬರೆದು, ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, ಡಾ.ಅಶೋಕ್, ನಿರ್ದೇಶಕ ಎಸ್. ನಾರಾಯಣ್, ಕೂಡ್ಲು ರಾಮಕೃಷ್ಣ, ಅವಿನಾಶ್ ಯು ಶಟ್ಟಿ ಸೇರಿದಂತೆ ಹಲವು ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚಿತ್ರದಲ್ಲಿ ಆರೇಳು ಪ್ರಮುಖ ಪಾತ್ರಗಳು ಬರಲಿವೆ. ಇಡೀ ಕಥೆಯಲ್ಲಿ ಮೂರು ಪಾತ್ರಗಳು ಮಾತ್ರ ಹೈಲೈಟ್ ಆಗಿರಲಿವೆ. ಈ ಚಿತ್ರದಲ್ಲಿ ಆದಿಲೋಕೇಶ್ ಅವರು ಸ್ವಾಮೀಜಿ ಪಾತ್ರ ನಿಭಾಯಿಸುತ್ತಿದ್ದಾರೆ. ಇನ್ನುಳಿದಂತೆ ನಿಶಿತಾಗೌಡ ಹಾಗೂ ಕಿಶೋರ್ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ವೇಳೆ ಮಾತನಾಡಿದ ರೈತ ಮುಖಂಡ, ಕೋಡಿಹಳ್ಳಿ ಚಂದ್ರಶೇಕರ್, “ಕೊಳಗ” ಅನ್ನೋದು ಹಿಂದಿನ ಕಾಲದಲ್ಲಿ ರೈತರು ತಮ್ಮ ಧಾನ್ಯಗಳನ್ನು ಅಳೆಯಲು ಉಪಯೋಗಿಸುತ್ತಿದ್ದ ಒಂದು ಅಳತೆಗೋಲು. ರೈತಾಪಿ ವರ್ಗ ಹಾಗೂ ಭೂ ಮಾಲೀಕರ ನಡುವೆ ನಡೆಯುವಂತಹ ಘರ್ಷಣೆಯೇ ಈ ಕಥೆ. ಒಂದು ಮಹತ್ತರ ಬದಲಾವಣೆಗೆ ಕೊಳಗ ಹೇಗೆ ಕಾರಣವಾಯಿತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರ ಎಲ್ಲರಿಗೂ ಗೆಲುವು ತರಲಿ ಎಂದು ಆಶಿಸಿದರು ಕೋಡಿಹಳ್ಳಿ.
ನಿರ್ದೇಶಕ ಕೂಡ್ಲು ರಾಮಕೃಷಷ್ಣ ಅವರು ಈವರೆಗೆ ಸುಮಾರು ೩೦ ಸಿನಿಮಾಗಳನ್ನು ನಿರ್ದೇಶಿಸಿದ್ದು, ಆ ಪೈಕಿ ೧೫ ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿದ್ದಾರೆ. ಆದರೆ, ಅವರಿಗೆ ನಾ.ಡಿಸೋಜ ಅವರ ಕಥೆ ಮಾಡಲಾಗಲಿಲ್ಲ ಎಂಬ ಬೇಸರವಿದೆಯಂತೆ. ಈ ಹಿಂದೆ ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್ ಕಾಸರವಳ್ಳಿ ಅವರು ಸಾಕ್ಷ್ಯ ಚಿತ್ರ ನಿರ್ದೇಶಿಸಿದ್ದರು. ಈಗ ಪ್ರಸನ್ನ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪರಿಣಾಮ ಬೀರುವ ಸಿನಿಮಾ ಆಗಲಿ ಎಂಬುದು ಕೂಡ್ಲು ರಾಮಕೃಷ್ಣ ಅವರ ಮಾತು.
ನಿರ್ದೇಶಕ ಪ್ರಸನ್ನ ಅವರು ಇದೊಂದು ೨೦ ವರ್ಷಗಳ ಕಾಲ ನಡೆದ ರೈತರ ದೊಡ್ಡ ಹೋರಾಟದ ಕಥೆ ಇದು ಎಂದರು. ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಆ ವಿಚಾರಗಳು ನನ್ನೊಳಗಿದ್ದವು. ಆಗಿನ ಕಾಲದಲ್ಲಿ ರೈತ ಭೂಮಿ ಮೇಲೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದ. ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನವಾಗಿ ಈ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಈ ಚಿತ್ರಕ್ಕೆ ನೀನಾಸಂ ಮಂಜು, ಅವಿನಾಶ್ ಸೇರಿದಂತೆ ಹಲವರ ಸಹಕಾರವಿದೆ. ಚಿತ್ರಕ್ಕೆ ರಾಜಗುರು ಸಂಗೀತವಿದೆ. ಸುಜಿತ್ ನಾಯಕ್ ಸಂಕಲನವಿದೆ ಎಂದರು.