ಚಿತ್ರೀಕರಣ ಸಮಯದಲ್ಲಿ ಆಗಾಗ ಒಂದಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದು ಹೊಸದೇನಲ್ಲ. ಎಷ್ಟೋ ಸಲ, ಸಾಹಸ ಸನ್ನಿವೇಶಗಳಲ್ಲಿ ಇಂತಹ ಅವಘಡಗಳು ಸಂಭವಿಸುವುದುಂಟು. ಈಗ ಇಲ್ಲಿ ಹೇಳಹೊರಟಿರುವ ವಿಷಯ, “ಕಬ್ಜ’ ಚಿತ್ರದ್ದು. ಹೌದು, ಉಪೇಂದ್ರ ಅಭಿನಯದ “ಕಬ್ಜ” ಆರಂಭದಿಂದಲೂ ಜೋರು ಸದ್ದು ಮಾಡುತ್ತಲೇ ಇದೆ. ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಹಾಗಂತ, ಅದು ಖುಷಿ ಪಡುವ ಸುದ್ದಿಯಲ್ಲ. ಬದಲಾಗಿ, ಬೇಸರ ಪಡುವ ಸುದ್ದಿ. ವಿಷಯ ಏನಪ್ಪಾ ಅಂದರೆ, ಉಪೇಂದ್ರ ಅವರು ಚಿತ್ರದ ಸಾಹಸ ದೃಶ್ಯದಲ್ಲಿ ನಟಿಸುತ್ತಿದ್ದರು. ಈ ವೇಳೆ, ವಿಲನ್ ಬೀಸಿದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಅವರ ತಲೆಗೆ ಬಿದ್ದ ಪರಿಣಾಮ, ಅವರಿಗೆ ಪೆಟ್ಟಾದ ಘಟನೆ ನಡೆದಿದೆ.
ಹೌದು, ಬೆಂಗಳೂರಿನ ಮಿನರ್ವ ಮಿಲ್ನಲ್ಲಿ “ಕಬ್ಜ” ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸ್ಟಂಟ್ ಶೂಟಿಂಗ್ ಸಮಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ರಾಡ್ ತಗುಲಿ ಈ ಅವಘಡ ಸಂಭವಿಸಿದೆ. ಖಳನಾಯಕ ರಾಡ್ ನಿಂದ ಹೊಡೆಯುವ ಸನ್ನಿವೇಶದಲ್ಲಿ ಉಪೇಂದ್ರ ಅವರು ತಪ್ಪಿಸಿಕೊಳ್ಳಬೇಕಾಗಿತ್ತು.
ಈ ವೇಳೆ ಆಕಸ್ಮಿಕವಾಗಿಯೇ ಉಪ್ಪಿಗೆ ರಾಡ್ ತಾಗಿದೆ. ಅಲ್ಲಿದ್ದ ಚಿತ್ರತಂಡದವರು ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಹೆಚ್ಚು ಅಪಾಯ ಸಂಭವಿಸದ ಕಾರಣ, ಪುನಃ ಉಪೇಂದ್ರ ಅವರು ಸ್ಪಲ್ಪ ಹೊತ್ತು ಚೇತರಿಸಿಕೊಂಡ ಬಳಿಕ ಶೂಟಿಂಗ್ ನಿಲ್ಲಿಸದೆಯೇ ಅದೇ ಉತ್ಸಾಹದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ದೇಶಕ ಆರ್.ಚಂದ್ರು ಅವರು, ಸ್ಥಳದಲ್ಲಿದ್ದು, ಉಪೇಂದ್ರ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆ ನಂತರ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಬಳಿಕ ಎಲ್ಲರೂ ಅದೇ ಉತ್ಸಾಹದಿಂದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಈಗ ಮತ್ತೆ ಕೊರೊನಾ ಬಿಸಿ ತಟ್ಟುತ್ತಿದೆ. ಕೊರೊನೊ ಎರಡನೇ ಅಲೆ ಜೋರಾಗುತ್ತಿರುವಂತೆಯೇ ಕೊರೊನೊ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತಂತೆ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಹೀಗಾಗಿ ಟಫ್ ರೂಲ್ಸ್ ಜಾರಿ ಮಾಡಿದೆ. ಇದರಿಂದಾಗಿ ಕನ್ನಡಚಿತ್ರರಂಗಕ್ಕೂ ಸಮಸ್ಯೆ ಎದುರಾಗಿದೆ. ಚಿತ್ರಮಂದಿರಗಳಿಗೆ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಕೊಡಲಾಗಿದೆ. ಈ ನಿರ್ಬಂಧ ದಿಂದ ಇಡೀ ಚಿತ್ರೋದ್ಯಮವೇ ದಂಗಾಗಿದೆ. ಹಲವು ನಟರು, ನಿರ್ಮಾಪಕ, ನಿರ್ದೇಶಕರು ಕೂಡ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪಿಸಿದ್ದಾರೆ.
ಈಗಷ್ಟೇ ಕೊರೊನೊ ಸಮಸ್ಯೆ ತಿಳಿಯಾಗಿ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವಂತೆಯೇ, ಈಗ ಟಫ್ ರೂಲ್ಸ್ ಜಾರಿಯಾಗಿದೆ. ಇದರಿಂದ ಪುನಃ ಸಿನಿರಂಗಕ್ಕೆ ದೊಡ್ಡ ಹೊಡೆತವೇ ಆಗಿದೆ ಎಂದು ಚಿತ್ರರಂಗದ ಹಲವರು ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿದ್ದಾರೆ. ಅತ್ತ ನಟ ಪುನೀತ್ ರಾಜಕಾರ್ ಅವರು ಸಹ ಫೇಸ್ ಬುಕ್ ಲೈವ್ ಮಾಡುವ ಮೂಲಕ
ಮನವಿ ಮಾಡಿದ್ದು, ಶೇ.50ರಷ್ಟು ಭರ್ತಿಗೆ ಆದೇಶ ಬೇಡ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತಾಡುವುದಾಗಿಯೂ ಹೇಳಿದ್ದಾರೆ. ಇದು ನಮಗೆ ದೊಡ್ಡ ಸಮಸ್ಯೆ ಆಗುತ್ತೆ. ಈ ನಿಯಮ ಕೈ ಬಿಡಿ. ಜನರು ಮುಂಜಾಗ್ರತೆ ವಹಿಸಿ ಸಿನಿಮಾ ನೋಡುತ್ತಿದ್ದಾರೆ. ದಯವಿಟ್ಟು ಈ ನಿಯಮ ಹಿಂಪಡೆಯಿರಿ ಎಂದು ಮನವಿ ಮಾಡಿದ್ದಾರೆ.
ಏಪ್ರಿಲ್ 1ರಂದು “ಯುವರತ್ನ” ಬಿಡುಗಡೆಯಾಗಿದೆ. ಮೊದಲ ದಿನ ಭರ್ಜರಿ ಗಳಿಕೆ ದಾಖಲೆ ಮಾಡಿದ ಚಿತ್ರಕ್ಕೆ ಈಗ ಶೇ.50 ರಷ್ಟು ನಿಯಮ ಎಷ್ಟು ಸರಿ ಎಂಬುದು ಎಲ್ಲರ ಪ್ರಶ್ನೆ. ಇದೇ ನಿಯಮ ಮುಂದುವರೆದ್ದಲ್ಲಿ ಖಂಡಿತವಾಗಿಯೂ ಸಿನಿಮಾರಂಗ ಮತಗತೆ ಮೇಲೇಳಲು ಪರದಾಡಬೇಕಾಗುತ್ತೆ. ಅದೇನೆ ಇರಲಿ, ಕೊರೊನೊ ಅಲೆ ಮತ್ತೆ ಶುರುವಾಗದಿರಲಿ, ಎಲ್ಲವೂ ಈಗ ನಡೆದಂತೆ ನಡೆಯಲಿ ಎಂಬುದೇ ಆಶಯ.
ಸದ್ಯಕ್ಕೆ ಕನ್ನಡದಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದು “ಕೋಟಿಗೊಬ್ಬ 3 ” ಹೌದು, ಕಿಚ್ಚ ಸುದೀಪ್ ಅಭಿನಯದ “ಕೋಟಿಗೊಬ್ಬ 3” ಸಿನಿಮಾ ಪ್ರೇಕ್ಷಕರ ಮುಂದೆ ಬರೋಕೆ ತಯಾರಿ ನಡೆಸಿದೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಸಾಕಷ್ಟು ಮೆಚ್ಚುಗೆ ಪಡೆದು ಕುತೂಹಲ ಮೂಡಿಸಿರುವ ಈ ಚಿತ್ರದ ಹೊಸ ಲಿರಿಕಲ್ ಹಾಡೊಂದು ಬಿಡುಗಡೆಯಾಗಿದ್ದು, ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.
ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದ್ದು, ಒಳ್ಳೆಯ ಕಾಮೆಂಟ್ಸ್ ಕೂಡ ಬರುತ್ತಿದೆ. ಇನ್ನು, ಈ ಹಾಡು ಕಿವಿಗಿಂಪೆನಿಸುವಂತಿದೆ. ಮಧುರವಾಗಿರುವ ಈ ಹಾಡನ್ನು ಬರೆದಿರೋದು ಯೋಗರಾಜ್ಭಟ್. ಯೋಗರಾಜ್ ಭಟ್ ಅಂದಾಕ್ಷಣ, ಒಂದಷ್ಟು ಆಡು ಭಾಷೆ ಪದ ಬಳಕೆ ಮಾಡಿ ಹಾಡು ಗೀಚುವುದು ಕಾಮನ್ ಅಂದುಕೊಂಡಿದ್ದವರಿಗೆ, ಈ ಹಾಡು ನಿಜಕ್ಕೂ ಭಟ್ಟರ ಪದಗಳಲ್ಲೇ ಮೂಡಿ ಬಂದಿದೆಯಾ ಅನಿಸುವಷ್ಟರ ಮಟ್ಟಿಗೆ ಚೆನ್ನಾಗಿದೆ. ಒಂದೊಳ್ಳೆಯ ಮೆಲೋಡಿ ಸಾಂಗ್ ಇದಾಗಿದ್ದು, ಕೇಳುಗರು ಮತ್ತೆ ಮತ್ತೆ ಕೇಳಬೇಕೆನಿಸುವಷ್ಟರ ಮಟ್ಟಿಗೆ ಸಾಹಿತ್ಯ ಮೂಡಿಬಂದಿದೆ.
“ಯಾತಕೆ ನಿನ್ನನೆ ಬಯಸಿದೆ ಹೃದಯ, ನಿನ್ನಲಿ ಏನಿದೆಯೋ ಮಹರಾಯ ಮಾಮೂಲಿ ಅಲ್ಲ ನೀನು ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ….” ಎಂದು ಸಾಗುವ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಒಂದೊಳ್ಳೆಯ ಲಿರಿಕಲ್ ವಿಡಿಯೋ ಇದಾಗಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ನಲ್ಲಿ ಸದ್ಯಕ್ಕೆ ಹಾಡು ಟ್ರೆಂಡಿಂಗ್ನಲ್ಲಿರುವುದಂತೂ ನಿಜ. ಕಿಚ್ಚ ಸುದೀಪ್ ಅಭಿನಯದ ಈ ಚಿತ್ರದಲ್ಲಿ ನಾಯಕಿಯಾಗಿ ಮಡೋನಾ ಸೆಬಾಸ್ಟಿನ್ ಇದ್ದಾರೆ. ಜೊತೆಯಲ್ಲಿ ಶ್ರದ್ಧಾದಾಸ್, ರವಿಶಂಕರ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇನ್ನು, ಶಿವಕಾರ್ತಿಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೂರಪ್ಪ ಬಾಬು ಅವರು ದೊಡ್ಡ ಮಟ್ಟದಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರಕ್ಕೆ ಪ್ರವೀಣ್ ಆಂಟೋನಿ ಸಂಕಲನವಿದೆ. ಕನಾಲ್ ಕಣ್ಣನ್, ವಿಜಯ್ ಇತರರು ಭರ್ಜರಿ ಸ್ಟಂಟ್ ಕಂಪೋಸ್ ಮಾಡಿದ್ದಾರೆ. ಸುದೀಪ್ ಅಭಿಮಾನಿಗಳ ಪಾಲಿಗೆ ಈ ಹಾಡು ಎವರ್ಗ್ರೀನ್ ಆಗುವುದಂತೂ ನಿಜ. ಅಷ್ಟರಮಟ್ಟಿಗೆ ಸಾಂಗ್ ಮೂಡಿಬಂದಿದೆ. “ಪೈಲ್ವಾನ್” ಚಿತ್ರದ ಬಳಿಕ ಸುದೀಪ್ ಅವರು “ಕೋಟಿಗೊಬ್ಬ 3” ಸಿನಿಮಾದಲ್ಲಿ ನಟಿಸಿದ್ದಾರೆ. ಹೆಚ್ಚು ಕಮ್ಮಿ ಒಂದುವರೆ ವರ್ಷದ ನಂತರ ಬರುತ್ತಿರುವ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಸುದೀಪ್ ಫ್ಯಾನ್ಸ್ಗೆ ನಿರೀಕ್ಷೆ ಹೆಚ್ಚಿದೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಕೂಡ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ.
ಈಗಾಗಲೇ ಸ್ಟಾರ್ ನಟರ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪುನಃ ಚೈತನ್ಯ ತುಂಬಿಕೊಡುತ್ತಿವೆ. ಈ ನಿಟ್ಟಿನಲ್ಲೀಗ “ಕೋಟಿಗೊಬ್ಬ 3” ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗುತ್ತಿದೆ. “ಕೋಟಿಗೊಬ್ಬ” ದೊಡ್ಡ ಸಕ್ಸಸ್ ಕಂಡ ಸಿನಿಮಾ. ಆ ಬಳಿಕ ಕೋಟಿಗೊಬ್ಬ ಸೀರೀಸ್ ಶುರುವಾಯ್ತು. ಸುದೀಪ್ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆ ನಂಬಿಕೆಯಲ್ಲೇ ಈಗ “ಕೋಟಿಗೊಬ್ಬ 3” ಸಿನಿಮಾ ಕೂಡ ದೊಡ್ಡ ಯಶಸ್ಸು ತಂದುಕೊಡುತ್ತದೆ ಎಂದೇ ಅವರ ಅಭಿಮಾನಿಗಳು ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
ಯುವರತ್ನ ಸ್ಟಾರ್ ಕಥೆಯಾ ಅಥವಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಾ? ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರು ಹೀಗೊಂದು ಜಡ್ಜ್ ಮೆಂಟ್ಗೆ ಬರೋದು ಅಷ್ಟು ಸುಲಭ ಇಲ್ಲ. ಯಾಕಂದರೆ, ಯುವರತ್ನ ಪುನೀತ್ ರಾಜ್ಕುಮಾರ್ ಸಿನಿಮಾ ಅನ್ನೋದು ಎಷ್ಟು ಸತ್ಯವೋ, ಹಾಗೆಯೇ ಪುನೀತ್ ರಾಜ್ಕುಮಾರ್ ಯುವರತ್ನದ ಸ್ಟಾರ್ ಅನ್ನೋದು ಅಷ್ಟು ಸತ್ಯ. ಹೌದು, ಯುವರತ್ನ ಇರೋದೇ ಹಾಗೆ. ಮಾಸ್, ಕ್ಲಾಸ್ ಅಂತ ಎರಡು ಮಿಕ್ಸ್ ಆದ ಒಂದು ಸಿನಿಮಾ ಹೇಗಿರಬೇಕೋ ಹಾಗೆಯೇ ಈ ಚಿತ್ರವೂ ಇದೆ. ಈಗಾಗಲೇ ಇದು ಜನಪ್ರಿಯತೆ ಪಡೆದುಕೊಂಡಂತೆ ಪಕ್ಕಾ ಪವರ್ ಪ್ಯಾಕ್ಡ್ ಸಿನಿಮಾ. ಮುಖ್ಯವಾಗಿ ಯುವ ಜನರೇ ಇದರ ಟಾರ್ಗೆಟ್.
ಹಾಗಂತ ಬರೀ ಯೂತ್ಗಷ್ಟೇ ಸಿಮೀತವಾದ ಕಥೆ ಇದಲ್ಲ, ಮಕ್ಕಳ ಭವಿಷ್ಯ ಹಾಗಿರಬೇಕು, ಹೀಗಿರಬೇಕು ಅಂತೆಲ್ಲ ಕನಸು ಕಾಣುವ ಪ್ರತಿಯೊಬ್ಬ ತಂದೆ-ತಾಯಿ ಕೂಡ ನೋಡಲೇಬೇಕಾದ ಸಿನಿಮಾ. ಯಾಕಂದ್ರೆ ಈ ಸಿನಿಮಾ ಕಥೆ ಇರೋದೆ ಎಜುಕೇಷನ್ ಮಾಫಿಯಾ ಕುರಿತು. ಶಿಕ್ಷಣ ಅನ್ನೋದು ಇವತ್ತು ಪ್ರತಿಯೊಬ್ಬರಿಗೂ ಅತ್ಯಗತ್ಯ. ಹಾಗಂತ ಅದೀಗ ಪುಕ್ಕಟ್ಟೆ ಸಿಗುತ್ತಿಲ್ಲ. ಅದು ಕೂಡ ಬಿಸಿನೆಸ್. ಅದನ್ನೇ ಬಂಡವಾಳವಾಗಿಸಿಕೊಂಡವರು ಸರ್ಕಾರಿ ಕಾಲೇಜುಗಳನ್ನು ಹೇಗೆ ಮುಗಿಸುವ ಸಂಚು ರೂಪಿಸುತ್ತಾರೆ ಎನ್ನುವುದರ ಸುತ್ತವೇ ಯುವರತ್ನದ ಕಥೆ ಹೆಣೆದಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.
ಕಥೆ ತುಂಬಾ ಪ್ರಸ್ತುತವಾದದ್ದು. ಅಂದರೆ ಸಮಕಾಲೀನ ವಿಷಯ. ಅದನ್ನು ಒಂದು ಕಥೆಯಾಗಿಸಿ, ಅಚ್ಚುಕಟ್ಟಾಗಿ ನಿರೂಪಿಸಿರುವುದೇ ವಿಶೇಷ. ಅದರೆ, ತಾವಂದುಕೊಂಡಿದ್ದೆನ್ನೆಲ್ಲಾ ಸಿನಿಮಾದಲ್ಲಿ ತೋರಿಸಬೇಕೆನ್ನುವ ನಿರ್ದೇಶಕರ ಹಂಬಲವನ್ನು ಪ್ರೇಕ್ಷಕ ತಡೆದುಕೊಳ್ಳುವುದು ಕೊಂಚ ಕಷ್ಟವಂತೂ ಹೌದು. ಒಂದಷ್ಟು ಲ್ಯಾಗ್ ಎನಿಸಿದ ಹಾಗನಿಸುತ್ತೆ. ಮೊದಲರ್ಧ ಸರಾಗವಾಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧ ಕೊಂಚ ಭಾರವೇನೋ ಎಂಬ ಭಾಸವಾಗುತ್ತದೆ. ಯವರತ್ನ ಪವರ್ ಪ್ಯಾಕ್ಡ್ ಚಿತ್ರ ಎಂಬುದನ್ನು ಮುಲಾಜಿಲ್ಲದೆಯೇ ಹೇಳಿಬಿಡಬಹುದು. ಪವರ್ ಇದ್ಮೇಲೆ ಕಂಪ್ಲೀಟ್ ಫ್ಯಾಮಿಲಿ ಪ್ಯಾಕ್ ಇದ್ದೇ ಇರುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಅಂದಹಾಗೆ, ಯುವರತ್ನ ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಜೊತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಹೊತ್ತು ಬಂದಿದೆ. ಈ ಹಿಂದೆ ಅದನ್ನು ಟೀಸರ್ ಮತ್ತು ಟ್ರೇಲರ್ ಸಾಬೀತುಪಡಿಸಿತ್ತು. ಇದೀಗ ಸಿನಿಮಾ ತೆರೆಕಂಡಿದ್ದು ಯುವರತ್ನ ಸಮಾಜಕ್ಕೆ ಮಾದರಿ ಚಿತ್ರ ಎಂಬುದಂತೂ ಪಕ್ಕಾ. ಅಭಿ ಸಿನಿಮಾ ನಂತರ ಕಾಲೇಜ್ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಪ್ಪು, ಪವರ್ ಆಫ್ ಯೂತ್ ಅನ್ನೋದನ್ನ ಮತ್ತೆ ಇಲ್ಲಿ ಸಾಬೀತುಪಡಿಸಿದ್ದಾರೆ. ಲಾಸ್ಟ್ ಬೆಂಚ್ ಸ್ಟುಡೆಂಟ್ ಪವರ್ ಏನು ಎಂಬುದನ್ನು ಇಲ್ಲಿ ಅಪ್ಪು ಪ್ರೂ ಮಾಡಿ ತೋರಿಸಿದ್ದಾರೆ. ಅಪ್ಪು ಯುವರತ್ನನ ರೂವಾರಿ. ಅವರಿಗೆ ನಾಯಕಿ ಸಯೇಶಾ. ಅವರ ಸುತ್ತ ಪ್ರಕಾಶ್ ರೈ, ಸಾಯಿ ಕುಮಾರ್, ಅವಿನಾಶ್, “ಡಾಲಿ” ಧನಂಜಯ್, ದಿಗಂತ್, ಸೋನುಗೌಡ, ರಂಗಾಯಣ ರಘು, ಸಾಧು ಕೋಕಿಲ, ಕುರಿ ಪ್ರತಾಪ್, ರಾಜೇಶ್ ನಟರಂಗ, ಸುಧಾರಾಣಿ, ಅರುಣ ಬಾಲರಾಜ್, ಕಾಕ್ರೋಚ್ ಸುಧಿ, ಅರುಗೌಡ ಹೀಗೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಒಂದು ರೀತಿ ಅಗತ್ಯಕ್ಕಿಂತಲೂ ಹೆಚ್ಚೇ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಇಷ್ಟಾದರೂ ಪ್ರತಿಯೊಂದು ಪಾತ್ರವೂ ಇಲ್ಲಿ ಹೈಲೈಟ್ ಎನಿಸುತ್ತದೆ. ಅವರೆಲ್ಲ ಏನೆಲ್ಲ ಪಾತ್ರಗಳಲ್ಲಿ ಹೇಗೆಲ್ಲ್ ರಂಜಿಸುತ್ತಾರೆ ಅನ್ನೋದನ್ನು ನೀವು ಚಿತ್ರದಲ್ಲೇ ನೋಡ್ಬೇಕು. ಯುವರತ್ನನಿಗೆ ಪವರ್ ತುಂಬಿರುವುದು ದೊಡ್ಮನೆ ರಾಜಕುಮಾರ.
ಇಂಟರ್ವೆಲ್ವರೆಗೆ ಫುಲ್ ಪವರ್ ಫುಲ್. ಇಂಟರ್ವೆಲ್ ನಂತರ ಸಿನಿಮಾ ವೇಗ ಕೊಂಚ ಮಂದಗತಿಯಲ್ಲಿ ಸಾಗುತ್ತದೆ. ಯುವರತ್ನ ಲ್ಯಾಗ್ ಎನಿಸೋಕೂ ಶುರುವಾಗುತ್ತೆ. ಆದರೂ ಅಲ್ಲಲ್ಲಿ ಕಾಣುವ ಹಾಡುಗಳು, ಸ್ಟಂಟ್ಗಳು ಅವೆಲ್ಲವನ್ನೂ ಪಕ್ಕಕ್ಕೆ ಸರಿಸುತ್ತದೆ. ಯೂಥ್ಗೆ ಇಲ್ಲಿ ಮನರಂಜನೆಗಂತೂ ಮೋಸ ಆಗೋದಿಲ್ಲ. ಸಯೇಶಾ ಮತ್ತು ಪುನೀತ್ ಅವರ ಕೆಮಿಸ್ಟ್ರಿ ಅಷ್ಟೇನು ಕಿಕ್ ಕೊಡಲ್ಲ ಅನ್ನೋದು ಬಿಟ್ಟರೆ, ಸಂಭಾಷಣೆಯಲ್ಲಿ ಧಮ್ ಇದೆ. ಚಿತ್ರಕಥೆ ಕೂಡ ವೇಗದಲ್ಲಿದೆ. ಚಂದದ ನಿರೂಪಣೆಯೂ ಇದೆ. ಭರ್ಜರಿ ಮೇಕಿಂಗ್ ಕೂಡ ಇಷ್ಟವಾಗುತ್ತದೆ. ಇವೆಲ್ಲವನ್ನೂ ಅಂದಗಾಣಿಸಿರೋದು ಕ್ಯಾಮರಾ ಕೈಚಳಕ. ಕೆಲವು ಹಾಸ್ಯ ದೃಶ್ಯಗಳಲ್ಲಿ ಕತ್ತರಿ ಪ್ರಯೋಗ ಮಾಡಬಹುದಿತ್ತು. ಅನಗತ್ಯ ದೃಶ್ಯಕ್ಕೆ ಕತ್ತರಿ ಬಿದ್ದಿದ್ದರೆ, “ಯುವರತ್ನ” ಇನ್ನಷ್ಟು ಶೈನ್ ಆಗಿರುತ್ತಿದ್ದ. ಆದರೂ, ಇಲ್ಲಿ ಕೊಟ್ಟ ಕಾಸಿಗೆ ಮೋಸವಂತೂ ಇಲ್ಲ.
ಪುನೀತ್ ನಟನೆ ಇಲ್ಲಿ ಗಮನಸೆಳೆಯುತ್ತೆ. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಸ್ಟುಡೆಂಟ್ ಆಗಿ ಇಷ್ಟವಾಗುತ್ತಾರೆ. ಡ್ಯಾನ್ಸ್ನಲ್ಲೂ ಮೋಡಿ ಮಾಡಿದ್ದಾರೆ. ಇಲ್ಲೂ ಕೂಡ ಸಿಗ್ನೇಚರ್ ಸ್ಟೆಪ್ ಇದೆ. ಅದನ್ನು ಹೇಳುವುದಕ್ಕಿಂತ ನೋಡಿ ಅನ್ನುವುದೇ ಒಳಿತು. ಸಯೇಶಾ ಅಂದವಾಗಿದ್ದಾರೆ ಅನ್ನೋದು ಬಿಟ್ಟರೆ, ನಟನೆಗೆ ಹೆಚ್ಚು ಜಾಗ ಗಿಟ್ಟಿಸಿಕೊಂಡಿಲ್ಲ. ಹಾಗಾಗಿ ಅವರ ನಟನೆ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಇಡೀ ಸಿನಿಮಾದಲ್ಲಿ ಮತ್ತೊಂದು ವಿಶೇಷತೆ ಅಂದರೆ ಅದು ಪ್ರಕಾಶ್ ರೈ. ಅವರು ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಕೇಂದ್ರಬಿಂದು ಅಂದರೂ ತಪ್ಪಿಲ್ಲ. ಅವರ ಸುತ್ತ ಸಾಗುವ ಯುವರತ್ನ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿ ಪಾತ್ರಗಳು ತಮ್ಮದೇ ಛಾಪು ಮೂಡಿಸಿವೆ. ತಮನ್ ಸಂಗೀತದ ಹಾಡುಗಳಲ್ಲಿ ಎರಡು ಪರವಾಗಿಲ್ಲ. ಹಿನ್ನೆಲೆ ಸಂಗೀತ ಕೂಡ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಸಂಕಲನ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ. ಇನ್ನು ಒಂದೊಂದು ಫೈಟ್ ಕೂಡ ಅಷ್ಟೇ ಅದ್ಧೂರಿಯಾಗಿ ಮೂಡಿಬಂದಿವೆ. ಅದೇನೆ ಇದ್ದರೂ, ಯುವರತ್ನ ಒಂದೇ ವರ್ಗಕ್ಕಂತೂ ಸೀಮಿತವಲ್ಲ ಅನ್ನುವುದನ್ನು ಸಿನಿಮಾ ನೋಡಿದವರಿಗೆ ಗೊತ್ತಾಗುತ್ತೆ. ಯುವರತ್ನ ಯಾವುದರ ವಿರುದ್ಧ ಹೋರಾಡುತ್ತಾನೆ, ಯಾರ ವಿರುದ್ಧ ಗುಡುಗುತ್ತಾನೆ ಎಂಬ ಕುತೂಹಲವಿದ್ದರೆ ಒಮ್ಮೆ ಯುವರತ್ನನನ್ನು ಕಣ್ತುಂಬಿಕೊಳ್ಳಿ.
ಕನ್ನಡ ಚಿತ್ರರಂಗದ ಮಟ್ಟಿಗೆ ಈ ಸಮಯದಲ್ಲಿ ಇದು ದೊಡ್ಡ ಸುದ್ದಿಯೇ. ಹೌದು, “ರಾಬರ್ಟ್” ನಿರೀಕ್ಷೆಯಂತೆಯೇ, ದೊಡ್ಡ ಸಕ್ಸಸ್ ಕಂಡಿದೆ. ಎಲ್ಲರಲ್ಲೂ ಇದ್ದದ್ದು ಒಂದೇ ಒಂದು ಪ್ರಶ್ನೆ, ಈ ಸಿನಿಮಾ 100 ಕೋಟಿ ಕ್ಲಬ್ ಸೇರುತ್ತಾ ಅನ್ನೋದು. ಅದಕ್ಕೀಗ ಉತ್ತರವೂ ಸಿಕ್ಕಿದೆ. ಹೌದು, “ರಾಬರ್ಟ್” ಚಿತ್ರ ಈಗ ನೂರು ಕೋಟಿ ಕ್ಲಬ್ ಸೇರಿದ್ದಾಗಿದೆ. ಕೇವಲ 20 ದಿನದಲ್ಲಿ ಈ ನೂರು ಕೋಟಿ ಗಳಿಕೆ ಕಂಡಿರೋದು ಸಹಜವಾಗಿಯೇ ಸಿನಿಮಾತಂಡಕ್ಕೆ ಖುಷಿ ಹೆಚ್ಚಿಸಿದೆ.
ಕೊರೊನಾ ನಂತರದ ದಿನಗಳಲ್ಲಿ ಚಿತ್ರರಂಗದ ಕಥೆ ಏನಪ್ಪಾ ಅಂದುಕೊಂಡೋರಿಗೆ ಈಗ “ರಾಬರ್ಟ್” ಧೈರ್ಯ ಕೊಟ್ಟಿರೋದು ಸುಳ್ಳಲ್ಲ. ಒಂದೊಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಟ್ಟಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದರ್ಶನ್ ಸಿನಿಮಾ ಅಂದರೆ, ಒಂದಷ್ಟು ಜನರಿಗೆ ಕ್ರೇಜ್ ಇದ್ದೇ ಇರುತ್ತೆ. “ರಾಬರ್ಟ್” ಟೈಟಲ್ ಅನೌನ್ಸ್ ಮಾಡಿದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ ಮಾರ್ಚ್ 11 ರಂದು ಬಿಡುಗಡೆಯಾಗಿದ್ದೇ ತಡ, ಎಲ್ಲರಲ್ಲೂ ಮತ್ತಷ್ಟು ಉತ್ಸಾಹ ಹೆಚ್ಚಿಸಿತ್ತು.
ಅವರ ಫ್ಯಾನ್ಸ್ಗಂತೂ “ರಾಬರ್ಟ್” ಭರ್ಜರಿ ಹಬ್ಬದೂಟದಂತಾಗಿತ್ತು. “ರಾಬರ್ಟ್”ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಮೆರೆದರು. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ಫುಲ್ ಪ್ರರ್ದಶನ್ ಕಂಡಿತು. ಇನ್ನು, ತೆಲುಗಿನಲ್ಲೂ ಕೂಡ “ರಾಬರ್ಟ್” ದೊಡ್ಡ ಹವಾ ಎಬ್ಬಿಸಿದ್ದು ನಿಜ. ಅಲ್ಲೂ ಕೂಡ ದರ್ಶನ್ ಫ್ಯಾನ್ಸ್ ಸಿನಿಮಾವನ್ನು ಗೆಲ್ಲಿಸಿದರು.
ಕನ್ನಡದ ಮಟ್ಟಿಗೆ “ರಾಬರ್ಟ್” ಕೊರೊನಾ ಬಳಿಕ ದೊಡ್ಡ ಓಪನಿಂಗ್ ಕೊಟ್ಟಿದೆ. ಒಂದಷ್ಟು ಸಿನಿಮಾ ನಿರ್ಮಾಪಕರಿಗೂ ಅದು ಧೈರ್ಯ ಕೊಟ್ಟಿದೆ. ದರ್ಶನ್ ಗಲ್ಲಾ ಪೆಟ್ಟಿಗೆ ಸುಲ್ತಾನ್ ಅನ್ನುವುದನ್ನು ಪುನಃ ಸಾಬೀತುಪಡಿಸಿದ್ದಾರೆ. ಇದೇ ಖುಷಿಯಲ್ಲೇ “ರಾಬರ್ಟ್” ಚಿತ್ರತಂಡ ಇತ್ತೀಚೆಗೆ ಸಂಭ್ರಮ ಆಚರಿಸಿಕೊಂಡಿದೆ. ನಿರ್ದೇಶಕ ತರುಣ್ ಸುಧೀರ್,ನಿರ್ಮಾಪಕ ಉಮಾಪತಿ, ವಿನೋದ್ ಪ್ರಭಾಕರ್ ಸೇರಿದಂತೆ ಚಿತ್ರತಂಡದ ಹಲವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಕನ್ನಡದ ಬಹುತೇಕ ಸಿನಿಮಾಗಳು ಈಗಾಗಲೇ ಸಾಗರದಾಚೆಯೂ ಸದ್ದು ಮಾಡಿವೆ. ಮಾಡುತ್ತಲೇ ಇವೆ. ಈಗಲೂ ಅದೇ ಹಾದಿಯಲ್ಲೂ ಇವೆ. ಈಗಾಗಲೇ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಕನ್ನಡದ ಅನೇಕ ಸಿನಿಮಾಗಳ ಸಾಲಿಗೆ “ಅವಲಕ್ಕಿ ಪವಲಕ್ಕಿ” ಸಿನಿಮಾ ಕೂಡ ಸೇರಿದೆ. ಹೌದು, ರಾಜಸ್ತಾನ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಕಥೆ ಪ್ರಶಸ್ತಿ ಲಭಿಸಿದೆ.
ಮಾರ್ಚ್ 20 ರಿಂದ 24ರವರೆಗೆ ಜೈಪುರ್ ಮತ್ತು ಜೋದ್ಪುರದಲ್ಲಿ ನಡೆದ ಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ಸಂದಿದೆ. ಈ ಚಿತ್ರೋತ್ಸವದಲ್ಲಿ ದೇಶ, ವಿದೇಶಗಳಿಂದಲೂ ಸಾಕಷ್ಟು ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಒಂದಷ್ಟು ಸಿನಿಮಾಗಳ ನಡುವೆಯೂ ಕನ್ನಡದ “ಅವಲಕ್ಕಿ ಪವಲಕ್ಕಿ” ಸಿನಿಮಾ ಕಥೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಅವಲಕ್ಕಿ ಪವಲಕ್ಕಿ” ಅಡ್ವೆಂಜರ್ ಡ್ರಾಮಾ ಕಥಾಹಂದರದ ಸಿನಿಮಾ. ದುರ್ಗ ಪ್ರಸಾದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯುವ ರಾಜು ಅವರ ಕಥೆ ಚಿತ್ರಕ್ಕಿದೆ. ಶ್ರೀಪ್ರಣವ ಬ್ಯಾನರ್ನಲ್ಲಿ ರಂಜಿತ ಸುಬ್ರಹ್ಮಣ್ಯ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ದೀಪಕ್ ಪಟೇಲ್, ಸಿಂಚನ ಚಂದ್ರ ಮೋಹನ್, ಸಮರ್ಥ್ ರಂಪುರ್ ಭಾರಧ್ವಜ್, ಶ್ರೇಯಾ, ಹನಮಂತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದುರ್ಗ ಪ್ರಸಾದ್, ನಿರ್ದೇಶಕ
ರಂಜಿತಾ,ನಿರ್ಮಾಪಕರು
ಜುಬಿನ್ ಪೌಲ್ ಸಂಗೀತವಿರುವ ಚಿತ್ರಕ್ಕೆ ನಿರೀಕ್ಷಿತ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ಬರುವ ಏಪ್ರಿಲ್ ಅಥವಾ ಮೇನಲ್ಲಿ ತೆರೆಗೆ ಬರಲಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈಗಾಗಲೇ ಈ ಚಿತ್ರ ದೇಶ, ವಿದೇಶಗಳ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದೆ ಎಂಬ ಹೆಮ್ಮೆ ಚಿತ್ರತಂಡಕ್ಕಿದೆ. ಇಷ್ಟರಲ್ಲೇ ಟ್ರೇಲರ್ ಮತ್ತು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಈ ಚಿತ್ರದ ವಿಶೇಷತೆ ಬಗ್ಗೆ ಹೇಳಲೇಬೇಕು.
ನಿರೀಕ್ಷಿತ್, ಛಾಯಾಗ್ರಾಹಕ
ಈಗಾಗಲೇ ಈ ಚಿತ್ರ, ಸುಮಾರು ೩೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಲವು ಅಂತಾರಾಷ್ಟ್ರ ಮಟ್ಟದ ಚಿತ್ರೋತ್ಸವಗಳಲ್ಲಿ ಚಿತ್ರದ ಹಲವು ವಿಭಾಗಕ್ಕೆ ಪ್ರಶಸ್ತಿ ಸಂದಿದೆ. ಅತ್ಯುತ್ತಮ ನಿರ್ದೇಶ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಮೇಕಪ್, ಕಾಸ್ಟ್ಯೂಮ್, ಛಾಯಾಗ್ರಾಹಕ, ಪೋಸ್ಟರ್, ಮ್ಯೂಸಿಕ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಅಮೆರಿಕಾ, ನ್ಯೂಯಾರ್ಕ್, ಸ್ವೀಡನ್, ಪೋರ್ಟ್ ಬ್ಲೈರ್, ಸ್ಲೊವಕಿಯಾ, ಟೊರೆಂಟೊ, ಪ್ಯಾರಿಸ್, ಈರೋಪ್, ಇಂಡೊ ಫ್ರೆಂಚ್, ಸಿಂಗಾಪುರ್ ಸೇರಿದಂತೆ ಇನ್ನೂ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈಗಾಗಲೇ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದೆ.
ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಬಹುಮುಖ ಪ್ರತಿಭೆ. ಒಂಥರಾ ಸೆಲ್ಫ್ ಮೇಡ್ ಸ್ಟಾರ್. ವಿಲನ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು, ವಿಚಿತ್ರ ಮ್ಯಾನರಿಸಂ, ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನಸ ಸೆಳೆದು, ವಿಲನ್ ಆಗಿ ಪ್ರಮೋಟ್ ಆಗಿ ಬಹು ಬೇಡಿಕೆಯ ವಿಲನ್ ಆಗಿ ಹೆಸರು ಗಳಿಸಿ, ನಿಧಾನವಾಗಿ ತಮ್ಮ ಇಮೇಜ್ ಬದಲಿಸಿಕೊಂಡು ಮಾಸ್ ಹೀರೋ ಆಗಿ ಜನಮಾನಸದಲ್ಲಿ ಉಳಿದ ಅಪರೂಪದ ನಟ ಇವರು. ಮಾರ್ಚ್ 30, 1950 ಪ್ರಭಾಕರ್ ಅವರ ಜನ್ಮದಿನ. ಇಂದು ಅವರು ಇದ್ದಿದ್ದರೆ ಅವರಿಗೆ 70 ವರ್ಷ ತುಂಬಿರುತ್ತಿತ್ತು.
ಇವತ್ತು ಎಲ್ಲೆಡೆ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸುದ್ದಿ. ಇಲ್ಲಿನ ನಟರು ಬೇರೆ ಭಾಷೆಯಲ್ಲಿ ನಟಿಸಿದಾಗ ಕೊಂಡಾಡ್ತೀವಿ, ಸಂಭ್ರಮಿಸ್ತೀವಿ. ಒಬ್ಬ ಕಲಾವಿದನ ಪ್ರತಿ ನಡೆಯನ್ನು, ಮಾತನ್ನು, ಸಾಧನೆಯನ್ನು ಗಮನಿಸುತ್ತದೆ. ನಮ್ಮ ಚಿತ್ರದ ನಾಯಕ, ನಾಯಕಿ, ಪೋಷಕ ನಟ ಪರಭಾಷೆಯ ಚಿತ್ರಗಳಲ್ಲಿ ನಟಿಸಿದಾಗ ಅವರು ನಮ್ಮ ಭಾಷೆಯ ಕೀರ್ತಿ ಪತಾಕೆಯನ್ನು ಹೊರರಾಜ್ಯದಲ್ಲಿ ಹಾರಿಸಿದರು ಎನ್ನುತ್ತೇವೆ. ಅದು ತಪ್ಪಲ್ಲ. ಆ ಸಾಧನೆ ನಿಜವಾಗಿಯೂ ಹೊಗಳಿಕೆಗೆ ಅರ್ಹ. ಇಲ್ಲೀಗ ಹೇಳಹೊರಟಿರುವುದು ಕನ್ನಡಿಗರು ಮಾತ್ರವಲ್ಲ ಪರಭಾಷಿಗರೂ ಮೆಚ್ಚಿಕೊಂಡ ಅಪರೂಪದ ನಟ ಟೈಗರ್ ಪ್ರಭಾಕರ್ ಕುರಿತು. ಮಾರ್ಚ್ 30 ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ಒಂದಷ್ಟು ಮಾಹಿತಿ ನೀಡುವ ಪ್ರಯತ್ನವಿದು.
ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಬೆಳೆದ ಬಹುಮುಖ ಪ್ರತಿಭೆ. ಒಂಥರಾ ಸೆಲ್ಫ್ ಮೇಡ್ ಸ್ಟಾರ್. ವಿಲನ್ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಬಂದು, ವಿಚಿತ್ರ ಮ್ಯಾನರಿಸಂ, ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನಸ ಸೆಳೆದು, ವಿಲನ್ ಆಗಿ ಪ್ರಮೋಟ್ ಆಗಿ ಬಹು ಬೇಡಿಕೆಯ ವಿಲನ್ ಆಗಿ ಹೆಸರು ಗಳಿಸಿ, ನಿಧಾನವಾಗಿ ತಮ್ಮ ಇಮೇಜ್ ಬದಲಿಸಿಕೊಂಡು ಮಾಸ್ ಹೀರೋ ಆಗಿ ಜನಮಾನಸದಲ್ಲಿ ಉಳಿದ ಅಪರೂಪದ ನಟ ಇವರು. ಮಾರ್ಚ್ 30, 1950 ಪ್ರಭಾಕರ್ ಅವರ ಜನ್ಮದಿನ. ಇಂದು ಅವರು ಇದ್ದಿದ್ದರೆ ಅವರಿಗೆ 70 ವರ್ಷ ತುಂಬಿರುತ್ತಿತ್ತು. ಆದರೆ, ಪ್ರಭಾಕರ್ ಮಾಡಿರುವ ಅದ್ವಿತೀಯ ಸಾಧನೆ ಬಹುತೇಕ ನೋಟಿಫೈ ಆಗಿಲ್ಲ. ಆ ಪೈಕಿ ಒಂದಷ್ಟು ದಾಖಲಿಸುವ ಪ್ರಯತ್ನ ಇಲ್ಲಾಗಿದೆ.
ಪ್ರಭಾಕರ್ ತಮ್ಮ ನಟನಾ ಬದುಕಿನ ಸಮಯದಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದರು. ಮೋಸ್ಟ್ ಪಾಪ್ಯುಲರ್ ಪ್ಯಾನ್ ಇಂಡಿಯ ಆಕ್ಟರ್ ಆಗಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದ ಪ್ರಭಾಕರ್ ಪಂಚಭಾಷಾ ನಟ. ಮತ್ತು ಎಲ್ಲಾ ಕಡೆಯಲ್ಲಿಯು ಅವರಿಗೆ ಮಾಸ್ ಇಮೇಜ್ ಇತ್ತು. ಕನ್ನಡದಲ್ಲಿ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಅವರಂತಹ ಹಿರಿಯ ಸ್ಟಾರ್ ನಟರುಗಳ ಎದುರು ವಿಲನ್ ಆಗಿ ಮಿಂಚಿದ ಪ್ರಭಾಕರ್ ಈ ಎಲ್ಲಾ ನಟರು ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ಖಳನಾಯಕನ ಇಮೇಜ್ ದಾಟಿ ನಾಯಕನ ಸ್ಥಾನಕ್ಕೆ ಬಡ್ತಿ ಪಡೆದರು. ಬರೀ ನಟನೆಗೆ ಸೀಮಿತವಾಗದೆ ನಿರ್ದೇಶನ, ನಿರ್ಮಾಣಕ್ಕು ಇಳಿದು ಅಲ್ಲಿಯೂ ತಕ್ಕಮಟ್ಟಿಗೆ ಯಶಸ್ಸು ಕಂಡರು.
ಆಗಿನ ಕಾಲದಲ್ಲಿ ಒಬ್ಬ ಹೊಸ ಹೀರೋ ಇರಲಿ, ಹೊಸ ವಿಲನ್ ಉದಯಿಸುವುದು ಕಷ್ಟವಾಗಿತ್ತು. ಯಾಕಂದ್ರೆ ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಸುಂದರ್ ಕೃಷ್ಣ ಅರಸ್, ಸುಧೀರ್ ಅವರಂಥ ಅತಿರಥರು ಖಳನಾಯಕರಾಗಿ ಬಹುದೊಡ್ಡ ಖ್ಯಾತಿ ಗಳಿಸಿದ್ದರು. ಅಂಥ ಸಂದರ್ಭದಲ್ಲಿಯು ಪ್ರಭಾಕರ್ ವಿಶಿಷ್ಟ ನಟನಾಶೈಲಿ ಎಲ್ಲರ ಗಮನ ಸೆಳೆಯಿತು, ಅವರನ್ನು ಬೆಳೆಸಿತು. ಖಳನಾಗಿ ಮಿಂಚಿದ ಪ್ರಭಾಕರ್ ನಾಯಕನ ಪಟ್ಟಕ್ಕೆ ಏರಿದ ಬಳಿಕ ಪೋಲಿಸ್ ಮತ್ತು ಸಿಬಿಐ ಅಧಿಕಾರಿಯ ಪಾತ್ರಗಳಲ್ಲಿ ಹೆಚ್ಚು ಜನಪ್ರಿಯರಾದರು. ಅತಿ ಕಡಿಮೆ ಅವಧಿಯಲ್ಲಿ ಸರಿಸುಮಾರು 450 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಇದರಲ್ಲಿ ನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ ಚಿತ್ರಗಳಿವೆ. ಪ್ರಭಾಕರ್ ಕನ್ನಡದ ನಂತರ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿದ್ದರು ಎಂಬುದು ವಿಶೇಷ. ಅಲ್ಲಿ ಚಿರಂಜೀವಿ ಚಿತ್ರಗಳೆಂದರೆ ಅಲ್ಲಿ ಖಳನಾಗಿ ಪ್ರಭಾಕರ್ ಇರಲೇಬೇಕು ಎನ್ನುವ ಮಟ್ಟಕ್ಕೆ ಹವಾ ಸೃಷ್ಟಿಸಿದ್ದರು ಪ್ರಭಾಕರ್. ಇವರಿಬ್ಬರ ಟಕ್ಕರ್ ಮಾಸ್ ಅಭಿಮಾನಿಗಳ ಮನಸೂರೆ ಮಾಡಿತ್ತು. ತೆಲುಗು ಚಿತ್ರರಂಗದಲ್ಲಿ ಪ್ರಭಾಕರ್ ಎಂಬುದು ಕಾಮನ್ ನೇಮ್ ಆಗಿತ್ತು.
ಪ್ರಭಾಕರ್, ಪ್ರಭಾಕರ್ ರೆಡ್ಡಿ ಎಂಬ ಹೆಸರುಗಳನ್ನು ಹೊಂದಿದ್ದ ಅಸಂಖ್ಯಾತರು ಅಲ್ಲಿದ್ದರು. ಈ ಕಾರಣಕ್ಕೆ ನಮ್ಮ ಪ್ರಭಾಕರ್ ಅಲ್ಲಿ ಕನ್ನಡ ಪ್ರಭಾಕರ್ ಎಂದೇ ಮನೆಮಾತಾಗಿದ್ದರು. ಇಲ್ಲಿ ಟೈಗರ್ ಎಂಬ ವಿಶೇಷಣ ಹೆಸರಿಗೆ ಅಂಟಿಕೊಂಡಿರುವ ಹಾಗೆ ಅಲ್ಲಿ ಕನ್ನಡ ಅವರ ಹೆಸರಿನೊಂದಿಗೆ ಬೆರೆತಿತ್ತು. ಚಿರಂಜೀವಿ ಅವರಿಗಂತು ಪ್ರಭಾಕರ್ ಒಂಥರಾ ಲಕ್ಕಿ ಚಾರ್ಮ್ ಆಗಿದ್ದರು. ಚಿರಂಜೀವಿ ಎದುರು ಪ್ರಭಾಕರ್ ಖಳನಾಗಿ ಅಭಿನಯಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಚಟ್ಟಾನಿಕಿ ಕಲ್ಲು ಲೇವು, ರೋಷಗಾಡು, ಬಿಲ್ಲಾ ಬಾಷಾ, ಜ್ವಾಲಾ, ಜಗದೇಕವೀರುಡು ಅತಿಲೋಕ ಸುಂದರಿ, ರಾಕ್ಷಸುಡು, ಕೊಡಮ ಸಿಂಹ, ಜೇಬು ದೊಂಗ ಸೇರಿದಂತೆ ಹತ್ತಾರು ಚಿತ್ರಗಳಲ್ಲಿ ಎದುರಾಳಿಗಳಾಗಿ ಮಿಂಚಿದ್ದಾರೆ. ರಜನೀಕಾಂತ್ ಮತ್ತು ಪ್ರಭಾಕರ್ ಬದುಕಿನಲ್ಲಿ ಅನೇಕ ಸಾಮ್ಯತೆಗಳಿವೆ. ಇಬ್ಬರು ಯಾವುದೇ ಬಿಗ್ ಬ್ಯಾಕ್ ಗ್ರೌಂಡ್ ಇಲ್ಲದೆ ಪ್ರತಿಭೆ ಮತ್ತು ಪರಿಶ್ರಮದಿಂದ ಬೆಳೆದವರು. ಖಳನಾಗಿ ಮನೆಮಾತಾಗಿ ನಾಯಕನಾಗಿ ಹೊಸ ಬೆಲೆ ನೆಲೆ ಕಂಡುಕೊಂಡವರು. ರಜನೀಕಾಂತ್ ನಾಯಕನಾಗಿ ಬೆಳೆದ ಬಳಿಕ ಅವರ ಬಹುನಿರೀಕ್ಷೆಯ ಚಿತ್ರಗಳಿಗೆ ಪ್ರಭಾಕರ್ ವಿಲನ್ ಆಗಿದ್ದರು. ಇವರಿಬ್ಬರ ನಡುವಿನ ತೆರೆ ಮೇಲಿನ ಕಾದಾಟ ನೋಡುಗರ ಮೆಚ್ಚುಗೆ ಗಳಿಸಿತ್ತು.
ಕನ್ನಡದಲ್ಲಿ ಪ್ರಭಾಕರ್ ನಟಿಸಿ, ನಿರ್ದೇಶಿಸಿದ ‘ಬಾಂಬೆ ದಾದಾ’ ಚಿತ್ರವು ‘ಪಾಂಡ್ಯನ್’ ಹೆಸರಿನಲ್ಲಿ ತಮಿಳಿಗೆ ರಿಮೇಕ್ ಆಯ್ತು. ಅಲ್ಲಿ ನಾಯಕನಾಗಿ ಮಿಂಚಿದ್ದು ರಜನೀಕಾಂತ್. ಕನ್ನಡ ಚಿತ್ರರಂಗದ ನಾಯಕ ಬರೆದ ಕಥೆಗೆ ರಜನೀಕಾಂತ್ ಹೀರೋ ಆಗಿದ್ದು ಒಂದು ವಿಶಿಷ್ಟ ದಾಖಲೆಯಾಗಿದೆ. ರಜನೀಕಾಂತ್ ನಟನೆಯ ‘ಅಣ್ಣಾಮಲೈ’ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಅಬ್ಬರಿಸಿದ್ದು, ರಜನಿಗೆ ಸರಿಸಮನಾಗಿ ಮಿಂಚಿದ್ದು ಇದೇ ಪ್ರಭಾಕರ್. ರಜನೀಕಾಂತ್ ನಟನೆಯ ಸೂಪರ್ ಹಿಟ್ ‘ಮುತ್ತು’ ಚಿತ್ರದಲ್ಲಿಯು ಪ್ರಭಾಕರ್ ಎಸ್ ಪಿ ಪ್ರತಾಪ್ ರಾಯುಡು ಪಾತ್ರ ಮಾಡಿದ್ದರು. ‘ಚಕ್ರವ್ಯೂಹ’ ಚಿತ್ರ ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಬಳಿಕ ಈಶ್ವರಿ ಪ್ರೊಡಕ್ಷನ್ಸ್ ನ ಮಾಲೀಕರಾದ ಎನ್ ವೀರಾಸ್ವಾಮಿ ಮತ್ತು ವಿ ರವಿಚಂದ್ರನ್ ಇದೇ ಚಿತ್ರವನ್ನು ಹಿಂದಿಯಲ್ಲಿ ‘ಇನ್ಕ್ವಿಲಾಬ್’ ಹೆಸರಲ್ಲಿ, ಅಮಿತಾಭ್ ಬಚ್ಚನ್ ನಾಯಕತ್ವದಲ್ಲಿ ನಿರ್ಮಿಸಿದರು. ಆಗ ಚಕ್ರವ್ಯೂಹ ಚಿತ್ರದಲ್ಲಿ ಮಾಡಿದ್ದ ಅನಿಲ್ ರಾಜ್ ಹೆಸರಿನ ಖಳನ ಪಾತ್ರವನ್ನು ಹಿಂದಿಯಲ್ಲಿಯು ಪ್ರಭಾಕರ್ ಅವರೇ ನಿರ್ವಹಿಸಿದರು. ಆ ಮೂಲಕ ಬಾಲಿವುಡ್ ನ ಬಿಗ್ ಬಿ ಎದುರು ನಟಿಸಿ ಸೈ ಎನಿಸಿಕೊಂಡರು ಪ್ರಭಾಕರ್.
ಮಲಯಾಳಂ ಚಿತ್ರಗಳಲ್ಲಿಯು ಬ್ಯಾಡ್ ಮ್ಯಾನ್ ರೋಲ್ ಗಳ ಮೂಲಕ ಪ್ರಭಾಕರ್ ಜನಪ್ರಿಯತರ ಗಳಿಸಿದರು. ಸೂಪರ್ ಸ್ಟಾರ್ ಮುಮ್ಮುಟಿ ಚಿತ್ರಗಳಲ್ಲಿ ನಟಿಸಿ ಕೇರಳದಲ್ಲಿಯು ಅಭಿಮಾನಿಗಳನ್ನು ಪಡೆದರು. ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಸ್ಟಾರ್ ಗಳಾದ, ಆಯಾ ಚಿತ್ರರಂಗದ ಮುಕುಟವಾದ ಡಾ. ರಾಜ್ ಕುಮಾರ್, ಅಮಿತಾಭ್ ಬಚ್ಚನ್, ರಜನೀಕಾಂತ್, ಚಿರಂಜೀವಿ, ಮುಮ್ಮುಟಿಯವರೊಡನೆ ನಟಿಸಿದ ಏಕೈಕ ಸ್ಟಾರ್ ನಟ ಟೈಗರ್ ಪ್ರಭಾಕರ್. ಈ ಮಹಾನ್ ಸಾಧನೆ ಮತ್ಯಾರು ಮಾಡಲು ಸಾಧ್ಯವಾಗಿಲ್ಲ ಅನ್ನುವುದನ್ನು ಇಲ್ಲಿ ಗಮನಿಸಬೇಕು. ಇದಲ್ಲದೆ ಮಹೇಶ್ ಬಾಬು ತಂದೆ ಕೃಷ್ಣ, ತಮಿಳನ ಸ್ಟಾರ್ ನಟ ವಿಜಯಕಾಂತ್, ಕೃಷ್ಣಂ ರಾಜು, ನಂದಮೂರಿ ಬಾಲಕೃಷ್ಣ ಅವರೊಡನೆಯು ಪ್ರಭಾಕರ್ ಸ್ಕ್ರೀನ್ ಶೇರ್ ಮಾಡಿದ್ದಾರೆ.ಕನ್ನಡದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತನಾಗ್, ಶಂಕರ್ ನಾಗ್, ರಾಜೇಶ್, ಲೋಕೇಶ್, ರವಿಚಂದ್ರನ್, ಶಿವರಾಜ್ ಕುಮಾರ್, ದೇವರಾಜ್, ರಮೇಶ್ ಸೇರಿದಂತೆ ಬಹುತೇಕರೊಡನೆ ಪ್ರಭಾಕರ್ ನಟಿಸಿದ್ದಾರೆ.
ಒಬ್ಬ ಮಾಸ್ ನಾಯಕನಿಗೆ ಇರಬೇಕಾದ ಕಲರ್, ಖದರ್, ಹೈಟು, ವೇಯ್ಟು, ಟ್ಯಾಲೆಂಟ್, ಮ್ಯಾನರಿಸಂ ಎಲ್ಲವು ಸರಿಯಾಗಿ, ಸಮನಾಗಿ ಇದ್ದ ಕಲಾವಿದ ಪ್ರಭಾಕರ್. “ಟೈಗರ್” ಎಂಬ ಚಿತ್ರ ಮಾಡಿ ಆ ಬಳಿಕ ಟೈಗರ್ ಪ್ರಭಾಕರ್ ಎಂದೇ ಜನಪ್ರಿಯರಾದರು. ಹಾಗೆ ನೋಡಿದರೆ, ಕನ್ನಡದ ಮೊದಲ ಆರಡಿ ಕಟೌಟ್ ಅಂದರೆ, ಆರಡಿ ಎತ್ತರದ ಮಾಸ್ ನಟ ಟೈಗರ್ ಪ್ರಭಾಕರ್ ಎನ್ನಲ್ಲಡ್ಡಿಯಿಲ್ಲ. ಮಾಸ್ ಪಾತ್ರಗಳ ಜೊತೆಗೆ ಎಮೋಷನಲ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ಪ್ರಭಾಕರ್ ಕನ್ನಡ ಚಿತ್ರರಂಗದ ಹೆಮ್ಮೆಯಂತೂ ಹೌದು. ಪ್ರಭಾಕರ್ ನಟನೆಯ ‘ಕಲಿಯುಗ ಭೀಮ’ ಚಿತ್ರದ ‘ಕೈ ತುತ್ತು ಕೊಟ್ಟವ್ಳೆ ಐ ಲವ್ ಯು ಮೈ ಮದರ್ ಇಂಡಿಯಾ’ ಆಲ್ ಟೈಮ್ ಫೇವರಿಟ್ ಹಾಡುಗಳಲ್ಲೊಂದು. ಕಥೆ, ಚಿತ್ರಕಥೆ ರಚನೆಯ ಜೊತೆಗೆ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ಇದರ ಜೊತೆಗೆ ಒಂದು ಸಿನಿಮಾದಲ್ಲಿ ಸಿನಿಮಾಟೋಗ್ರಫಿ ಮಾಡಿದ ಹೆಗ್ಗಳಿಕೆಯು ಪ್ರಭಾಕರ್ ಅವರಿಗೆ ಸಲ್ಲುತ್ತದೆ. ಅವರೊಬ್ಬ ಒಳ್ಳೆಯ ನಟನಷ್ಟೇ ಅಲ್ಲ, ಅತ್ಯದ್ಭುತ ಟೆಕ್ನಿಷಿಯನ್ ಸಹ ಆಗಿದ್ದರು. ಕಂಗ್ಲೀಷ್ ಶೈಲಿಯ ಸಂಭಾಷಣೆ ಮತ್ತು ಡೈಲಾಗ್ ಡೆಲಿವರಿಯಲ್ಲಿನ ವಿಭಿನ್ನತೆ ಮೂಲಕ ಇವತ್ತಿಗೂ ಪದೇ ಪದೇ ನೆನಪಾಗುತ್ತಾರೆ. ಎಫ್ಎಂನಲ್ಲೂ ಕೂಡ ಪ್ರಭಾಕರ್ ಧ್ವನಿಯ ಅನುಕರಣೆ ನಿರಂತರ. ಯಾವುದೇ ಆರ್ಕೇಸ್ಟ್ರಾಗಳಿರಲಿ ಅಲ್ಲಿ ಪ್ರಭಾಕರ್ ಡೈಲಾಗ್ಗಳು ಸುರಿಮಳೆ ಆಗೋದು ಸಹಜ. ಅಷ್ಟರಮಟ್ಟಿಗೆ ಅವರ ವಾಯ್ಸ್ ಕೂಡ ಫೇಮಸ್ ಅನ್ನೋದು ವಿಶೇಷ.
ರಾಜಸ್ತಾನದ ಜೋಧ್ಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ನಲ್ಲಿ ಕನ್ನಡದ “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರಕ್ಕೆ ಉತ್ತಮ ಕಥೆ ಪ್ರಶಸ್ತಿ ಲಭಿಸಿದೆ. ಚಿತ್ರ ವೀಕ್ಷಿಸಿದ ಜನರಿಂದಲೂ ಒಳ್ಳೆಯ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಈಗಾಗಲೇ ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಪ್ರದರ್ಶನ ಕಂಡು ಸುಮಾರು 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆ [ಪೈಕಿ ನಾಲ್ಕು “ಬೆಸ್ಟ್ ಡೈರೆಕ್ಟರ್” ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲಾ ಕಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂಭ್ರಮದಲ್ಲಿದೆ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ಚಿತ್ರದಲ್ಲಿ ವರ್ಧನ್ ನಾಯಕರಾಗಿ ನಟಿಸಿದ್ದಾರೆ.
ಅವರೊಂದಿಗೆ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ ಇತರರು ನಟಿಸಿದ್ದಾರೆ. ಲೋಕಿ ಸಂಗೀತವಿದೆ. ನಿತಿನ್ ಛಾಯಾಗ್ರಹಣ ಮಾಡಿದರೆ, ಮುತ್ತುರಾಜ್ ಸಂಕಲನವಿದೆ.
ಕೊರೊನಾ ಎರಡನೇ ಅಲೆ ಈಗ ಆತಂಕ ಮೂಡಿಸಿದೆ. ಈಗಾಗಲೇ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಲಸಿಕೆಯೂ ಬಂದಿದೆ. ಒಂದಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರೂ, ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಒಂದಷ್ಟು ಮಂದಿ ಸ್ವತಃ ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಕೆಲ ಸಂಸ್ಥೆಗಳು ಕೂಡ ತಮ್ಮ ತಮ್ಮ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸುವ ಕೆಲಸಕ್ಕೆ ಮುಂದಾಗಿವೆ. ಅದೇ ನಿಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿರುವ ಹೊಂಬಾಳೆ ಫಿಲಂಸ್ ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದಾಗಿ ಕುಟುಂಬದವರಿಗೆ ಉಚಿತ ಕೊರೊನಾ ಲಸಿಕೆ ಹಾಕಿಸಲು ಸಜ್ಜಾಗಿದ್ದಾರೆ. ತಮ್ಮ ಕಂಪೆನಿಯಲ್ಲಿ ದುಡಿಮೆ ಮಾಡುತ್ತಿರುವ ಉದ್ಯೋಗಿಗಳ ಆರೋಗ್ಯ ಮುಖ್ಯ ಎಂದು ಹೇಳಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ಉಚಿತ ಕೊರೊನಾ ಲಸಿಕೆ ಹಾಕಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರೀಗ ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ಹಾಕಿಸಲು ತಯಾರಿ ನಡೆಸಿದ್ದಾರೆ.
ವಿಜಯ್ ಕಿರಗಂದೂರು, ನಿರ್ಮಾಪಕ
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಾಕಿರುವ ವಿಜಯ್ ಕಿರಗಂದೂರು, “ಕೊರೊನಾ ಮುಕ್ತ ಆಗಲು ಲಸಿಕೆ ಬಹಳ ಮುಖ್ಯ. ನೀವೆಲ್ಲರೂ ಸಹ ಲಸಿಕೆ ಹಾಕಿಸಿಕೊಳ್ಳಿ ಮತ್ತು ಆರೋಗ್ಯವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಮೂಲಕ ಈ ಕಾರ್ಯಕ್ಕೆ ಮುಂದಾಗಿರುವ ವಿಜಯ್ ಕಿರಗಂದೂರು ಅವರ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಗುತ್ತಿದೆ. ಸದ್ಯ ಈ ಹೊಂಬಾಳೆ ಫಿಲಂಸ್ ಸಂಸ್ಥೆ ಎರಡು ಬಿಗ್ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಬಿಡುಗಡೆಗೆ ಎದುರು ನೋಡುತ್ತಿದೆ. ಪುನೀತ್ ರಾಜ್ಕುಮಾರ್ ಅಭಿನಯದ “ಯುವರತ್ನ” ಹಾಗೂ “ಕೆಜಿಎಫ್-2” ಚಿತ್ರ ಬಿಡುಗಡೆ ದಿನ ಘೋಷಿಸಿವೆ. ತೆಲುಗಿನ ನಟ ಪ್ರಭಾಸ್ ಅವರ “ಸಲಾರ್” ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ.
ಕೊರೊನಾ ಹಾವಳಿ ಕಡಿಮೆ ಆಯ್ತು ಅನ್ನುವ ಹೊತ್ತಲ್ಲೆ ಪುನಃ ಎರಡನೇ ಅಲೆ ಶುರುವಾಗಿದೆ. ಎಲ್ಲೆಡೆ ಮತ್ತೆ ಆತಂಕ ಮನೆ ಮಾಡಿದೆ. ಈಗಷ್ಟೇ ಎಲ್ಲಾ ಕ್ಷೇತ್ರಗಳು ತನ್ನ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುತ್ತಿವೆ. ಕನ್ನಡ ಚಿತ್ರರಂಗ ಕೂಡ ಮೆಲ್ಲನೆ ಮೇಲೇಳುತ್ತಿದೆ. ಇದರ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಶುರುವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಇದೆ. ಇತ್ತೀಚೆಗಷ್ಟೇ, ಚಿತ್ರಮಂದಿರಗಳತ್ತ ಪ್ರೇಕ್ಷಕರು ಮುಖ ಮಾಡುತ್ತಿದ್ದಾರೆ.
ಸ್ಟಾರ್ ಚಿತ್ರಗಳೂ ಸಹ ಬಿಡುಗಡೆ ಕಂಡು, ಹೊಸ ದಿಕ್ಕಿನತ್ತ ಸಾಗುತ್ತಿವೆ. ಕೊರೊನಾ ಎರಡನೇ ಅಲೆ ಸುದ್ದಿ ಜೋರಾಗುತ್ತಿದ್ದಂತೆಯೇ, ಅತ್ತ, ಚಿತ್ರಮಂದಿರಗಳಲ್ಲಿ ಅರ್ಧ ಭರ್ತಿ ಬಗ್ಗೆಯೂ ಪ್ರಸ್ತಾಪವಾಗಿತ್ತು. ಚಿತ್ರರಂಗ ಒಗ್ಗಟ್ಟಾಗಿ ಪೂರ್ಣ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಗೆ ಸರ್ಕಾರ ಕೂಡ ಸ್ಪಂದಿಸಿದೆ. ಆದರೆ, ಜನರು ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು, ಅಂತರ ಕಾಪಾಡಿಕೊಂಡರೆ, ಯಾವದೇ ಭಯ ಇರೋದಿಲ್ಲ. ಈ ಕುರಿತು ಸರ್ಕಾರ ಮನವರಿಕೆ ಮಾಡುತ್ತಿದೆ. ಸ್ಟಾರ್ ನಟರುಗಳು ಕೂಡ ತಮ್ಮ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ, ಸ್ಯಾಂಡಲ್ವುಡ್ ಸ್ಟಾರ್ ಶಿವರಾಜಕುಮಾರ್ ಕೂಡ ವಿಡಿಯೊ ಮೂಲಕ ಸಾಮಾಜಿಕ ಸಂದೇಶ ರವಾನಿಸಿದ್ದಾರೆ.
ಎಲ್ಲರೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ವಿಡಿಯೊವೊಂದರಲ್ಲಿ ಅವರು ಹೇಳಿಕೊಂಡಿರುವುದಿಷ್ಟು., “ಎಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕೊರೊನಾ ಎರಡನೇ ಅಲೆ ಸ್ಟಾರ್ಟ್ ಆಗ್ತಾ ಇರೋದು. ದಯವಿಟ್ಟು ಕೈ ಮುಗಿದು ಕೇಳಿಕೊಳ್ತಾ ಇದ್ದೇನೆ. ಪ್ರತಿಯೊಬ್ಬರೂ ಮಾಸ್ಕ್ ಹಾಕಿ, ಈ ಕೊರೊನಾ ಓಡಿಸಿ, ಮತ್ತೆ ಲಾಕ್ಡೌನ್ಗೆ ಒಳಗಾಗೋದು ಬೇಡ. ನಾನೇಕೆ ಮಾಸ್ಕ್ ಹಾಕೊಂಡ್ ಮಾತಾಡ್ತಿಲ್ಲ ಅಂದರೆ, ನಾನು ಹೇಳಿದ್ದು ನಿಮಗೆಲ್ಲರಿಗೂ ಕೇಳಬೇಕು. ನೀವೆಲ್ಲರೂ ಅದನ್ನು ಫಾಲೋ ಮಾಡ್ತೀರಿ ಅಂತ ನಂಬಿದ್ದೇನೆ. ದಯವಿಟ್ಟು, ಮರಿಬೇಡಿ ಮಾಸ್ಕ್ ಹಾಕ್ಕೊಳ್ಳಿ, ಸ್ಯಾನಿಟೈಸ್ ಮಾಡ್ಕೊಳ್ಳಿ, ಸೋಶಿಯಲ್ ಡಿಸ್ಟೆನ್ಸಗ್ ಇಟ್ಕೊಳ್ಳಿ ನಮಸ್ಕಾರ ಥ್ಯಾಂಕ್ಯು…” ಎಂದಿದ್ದಾರೆ. ಚಿತ್ರಮಂದಿರಗಳು ಭರ್ತಿಯಾಗುತ್ತಿವೆ. ಅತ್ತ, ಸಿನಿಮಾ ಮಂದಿ ಕೂಡ ಖುಷಿಯಲ್ಲಿದ್ದಾರೆ. ಈ ನಡುವೆ ಪ್ರೇಕ್ಷಕರು ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ಅಂತರ ಕಾಪಾಡಿಕೊಂಡರೆ ಕೊರೊನಾ ಹಾವಳಿ ತಡೆಯಬಹುದು. ಈ ನಿಟ್ಟಿನಲ್ಲಿ ಫ್ಯಾನ್ಸ್ ತಮ್ಮ ಸ್ಟಾರ್ ನಟರ ಮನವಿಗೆ ಸ್ಪಂದಿಸಬೇಕಿದೆ.