Categories
ಸಿನಿ ಸುದ್ದಿ

ಸಿನಿಮಾ ಮಂದಿಗೆ ಮಹಿಳಾ ಸಂಗೀತ ನಿರ್ದೇಶಕರು ಕಾಣಲ್ವಾ?

ನಮಗೂ ಅವಕಾಶ ಕೊಡಿ ಅಂದ್ರು ಗಾಯಕಿ ಇಂದು ವಿಶ್ವನಾಥ್‌


ಕನ್ನಡದ ಹೆಸರಾಂತ ಗಾಯಕಿ ಇಂದು ವಿಶ್ವನಾಥ್‌ ಮಹಿಳಾ ಸಂಗೀತ ನಿರ್ದೇಶಕರ ಪರ ಧ್ವನಿ ಎತ್ತಿದ್ದಾರೆ. ” ಅದ್ಯಾಕೋ ಕನ್ನಡದ ಸಿನಿಮಾ ಮಂದಿಗೆ ಮಹಿಳಾ ಸಂಗೀತ ನಿರ್ದೇಶಕರು ಕಾಣುತ್ತಿಲ್ಲ. ಅವಕಾಶ ಕೊಟ್ಟರೆ ನಾವು ಕೂಡ ಸಿನಿಮಾ ಸಂಗೀತ ಮಾಡಿ ತೋರಿಸುತ್ತಿವೆ. ಅದೆಲ್ಲಕ್ಕಿಂತ ಮುಖ್ಯವಾಗಿ ನಮಗೂ ಕೆಲಸ ಸಿಕ್ಕಂತಾಗುತ್ತದೆʼ ಅಂತ ಇಂದು ವಿಶ್ವನಾಥ್‌ ತುಂಬಿದ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.
ಹಾಗಂತ ಅವರಲ್ಲಿಗೆ ಅವಕಾಶ ಕೇಳಿಕೊಂಡು ಬಂದಿರಲಿಲ್ಲ. ಬದಲಿಗೆ ಅದು ಪ್ರತಿಷ್ಠಿತ” ಶ್ರೀ ರಾಘವೇಂದ್ರ ಚಿತ್ರವಾಣಿʼ ಪ್ರಶಸ್ತಿ ಪ್ರಧಾನ ಸಮಾರಂಭ. ಅವರು ಕೂಡ ಅಲ್ಲಿ ಪ್ರಶಸ್ತಿ ಪುರಸ್ಕೃತರು. ಶ್ರೀ ರಾಘವೇಂದ್ರ ಚಿತ್ರವಾಣಿಯ ಪ್ರತಿಷ್ಟಿತ ಡಾ. ರಾಜ್‌ ಕುಮಾರ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಹಿಳಾ ಸಂಗೀತ ನಿರ್ದೇಶಕರು ಎದುರಿಸುತ್ತಿರುವ ಸವಾಲು ಹೇಳಿಕೊಂಡರು.
” ಅನೇಕ ಮಂದಿ ಪುರುಷ ಸಂಗೀತ ನಿರ್ದೇಶಕರ ಹಾಗೆ, ನಾವು ಕೂಡ ಸಿನಿಮಾ ಸಂಗೀತ ಮಾಡಲು ಆಸಕ್ತಿ ಹೊಂದಿದ್ದೇವೆ. ಆದರೆ ಅವಕಾಶ ಸಿಗುತ್ತಿಲ್ಲ. ಅದ್ಯಾಕೋ ಸಿನಿಮಾ ಮಂದಿ ಮಹಿಳಾ ಸಂಗೀತ ನಿರ್ದೇಶಕರತ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ, ಸಿನಿಮಾ ನಿರ್ಮಾಪಕರು ಮಹಿಳಾ ಸಂಗೀತ ನಿರ್ದೇಶಕರಿಗೆ ಅವಕಾಶ ನೀಡಲಿʼ ಎಂದು ವಿನಂತಿಸಿಕೊಂಡರು. ಗಾಯಕಿ ಇಂದು ವಿಶ್ವನಾಥ್‌ ಅವರ ಮಾತಿಗೆ ವೇದಿಕೆಯಲ್ಲಿದ್ದ ಹಿರಿಯ ನಟಿ ತಾರಾ ಪ್ರತಿಕ್ರಿಯಿಸಿ, ಇಲ್ಲಿ ಅಂತಹದ್ದೇನು ತಾರಾತಮ್ಯ ಇಲ್ಲ. ಈಗ ಎಲ್ಲರೂ ಎಲ್ಲಾ ಕ್ಷೇತ್ರದಲ್ಲಿದ್ದಾರೆ. ಅವಕಾಶಗಳು ಸಿಗಬೇಕಿದೆ ಎಂದು ಹೇಳಿದರು.

Categories
ಸೌತ್‌ ಸೆನ್ಸೇಷನ್

ಓಟಿಟಿಯಲ್ಲಿ ಮಾಸ್ಟರ್‌ ಪ್ರದರ್ಶಕರ ಅಸಮಾಧಾನ!

ಥಿಯೇಟರ್‌ಗೆ ಬಂದ ಎರಡನೇ ವಾರಕ್ಕೇ ಓಟಿಟಿಯಲ್ಲಿ ವಿಜಯ್ ತಮಿಳು ಚಿತ್ರ

ವಿಜಯ್‌ ತಮಿಳು ಸಿನಿಮಾ ನಾಡಿದ್ದು ಅಮೇಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ತೆರೆಕಂಡ ಎರಡನೇ ವಾರಕ್ಕೇ ಓಟಿಟಿಯಲ್ಲಿ ಬಂದರೆ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ಅಲವತ್ತುಕೊಂಡಿದ್ದಾರೆ.  ಕೊರೋನಾ ಸಂಕಷ್ಟದಲ್ಲಿದ್ದ ದಕ್ಷಿಣದ ಚಿತ್ರೋದ್ಯಮಕ್ಕೆ ವಿಜಯ್‌ ನಟನೆಯ ‘ಮಾಸ್ಟರ್‌’ ಹುರುಪು ತುಂಬಿತ್ತು. ಥಿಯೇಟರ್‌ನಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರಿರಬೇಕು ಎನ್ನುವ ನಿಯಮದ ಮಧ್ಯೆಯೂ ಈ ಚಿತ್ರ ದೊಡ್ಡ ವಹಿವಾಟು ನಡೆಸಿತು. ಅಧಿಕೃತ ಮೂಲಗಳ ಪ್ರಕಾರ ಈ ಚಿತ್ರದ ದೇಸಿ ಮತ್ತು ಜಾಗತಿಕ ಮಾರುಕಟ್ಟೆ ವಹಿವಾಟು 220 ಕೋಟಿ ರೂಪಾಯಿ ದಾಟುತ್ತಿದೆ ಎನ್ನಲಾಗಿದೆ. ಲೋಕೇಶ್ ಕನಗರಾಜ್‌ ನಿರ್ದೇಶನದ ಚಿತ್ರ ಇದೀಗ ಓಟಿಟಿ ಮೂಲಕ ಜಗತ್ತಿನ ಮೂಲೆಮೂಲೆಗಳಿಗೂ ತಲುಪಲಿದೆ.

ನಾಡಿದ್ದು ಜನವರಿ 29ಕ್ಕೆ ‘ಮಾಸ್ಟರ್‌’ ಅಮೇಜಾನ್ ಪ್ರೈಮ್‌ ವೀಡಿಯೋದಲ್ಲಿ ಪ್ರೀಮಿಯರ್ ಆಗಲಿದೆ. ತಮಿಳು ಸ್ಟಾರ್ ಹೀರೋ ವಿಜಯ್ ಮತ್ತು ತಮ್ಮದೇ ಆದ ಅಭಿಮಾನಿ ವಲಯ ಹೊಂದಿರುವ ವಿಜಯ್ ಸೇತುಪತಿ ನಟನೆಯ ‘ಮಾಸ್ಟರ್‌’ ಜನವರಿ 13ರ ಪೊಂಗಲ್‌ನಂದು ತೆರೆಕಂಡಿತ್ತು. ಪ್ರೊಫೆಸರ್‌ ಜಾನ್‌ ದೊರೈರಾಜ್‌ ಮತ್ತು ಮಕ್ಕಳನ್ನು ಬಳಸಿಕೊಂಡು ಕ್ರಿಮಿನಲ್ ಚಟುವಟಿಕೆ ನಡೆಸುವ ಭೂಗತ ಪಾತಕಿ ಭವಾನಿ ಮಧ್ಯೆಯ ಹೋರಾಟವೇ ಚಿತ್ರದ ಕಥಾವಸ್ತು. ಉತ್ತಮ ತಾಂತ್ರಿಕ ಗುಣಮಟ್ಟ ಹಾಗೂ ಮೇಕಿಂಗ್‌ನಿಂದಾಗಿ ಗಮನ ಸೆಳೆದಿದ್ದ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದರು. ಇದೀಗ ಚಿತ್ರದ ಓಟಿಟಿ ದಿನಾಂಕ ಘೋಷಣೆಯಾಗಿದ್ದು, ಚಿತ್ರದ ವಿತರಕರು ಹಾಗೂ ಪ್ರದರ್ಶಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

“ಈ ಸುದ್ದಿ ನಮಗೆ ಶಾಕ್ ತಂದಿದೆ. ಚಿತ್ರ ಬಿಡುಗಡೆಯಾಗಿ ಎರಡು ವಾರವಷ್ಟೇ ಆಗಿದೆ. ಮೂರು ಮತ್ತು ನಾಲ್ಕನೇ ವಾರ ನಾವು ಲಾಭ ಮಾಡುತ್ತಿದ್ದೆವು. ಓಟಿಟಿಯಲ್ಲಿ ಬರುವುದರಿಂದ ಪ್ರೇಕ್ಷಕರು ಥಿಯೇಟರ್‌ಗೆ ಬರುವುದಿಲ್ಲ. ನಮಗಿದು ನಷ್ಟದ ಬಾಬತ್ತು” ಎನ್ನುವುದು ಥಿಯೇಟರ್‌ ಮಾಲೀಕರ ಅಳಲು. ಒಪ್ಪಂದದಂತೆ 70:30 ಅನುಪಾತದಲ್ಲಿ ಹಣ ಹಂಚಿಕೊಳ್ಳುವುದು ಯೋಜನೆ. ನೂರು ರೂಪಾಯಿ ಟಿಕೆಟ್ ದರವಿದ್ದರೆ ಅದರಲ್ಲಿ 70 ರೂಪಾಯಿ ಚಿತ್ರದ ನಿರ್ಮಾಪಕರಿಗೆ ಹೋದರೆ ಪ್ರದರ್ಶಕರಿಗೆ 30 ರೂಪಾಯಿ ಪ್ರದರ್ಶಕರದ್ದು. ಎರಡು ವಾರಗಳ ನಂತರ ಪ್ರದರ್ಶಕರಿಗೆ ಶೇ.10ರಷ್ಟು ಲಾಭಾಂಶ ಹೆಚ್ಚಿಗೆ ಸಿಗಬೇಕೆನ್ನುವುದು ಒಪ್ಪಂದ. ಇದೀಗ ಚಿತ್ರ ಓಟಿಟಿಯಲ್ಲಿ ಪ್ರಸಾರವಾಗುವುದರಿಂದ ಥಿಯೇಟರ್‌ ಬರುವ ಪ್ರೇಕ್ಷಕರು ಕಡಿಮೆಯಾಗುತ್ತಾರೆ. ಹಾಗಾಗಿ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ದನಿ ಎತ್ತಿದ್ದಾರೆ. ಓಟಿಟಿ ಲೆಕ್ಕಾಚಾರದಿಂದ ಥಿಯೇಟರ್‌ನವರಿಗೆ ತೊಂದರೆಯಾಗುತ್ತದೆ ಎನ್ನುವ ವಾದಕ್ಕೆ ‘ಮಾಸ್ಟರ್‌’ ಉದಾಹರಣೆಯಾದಂತಿದೆ. ಆದರೆ ಈ ಬಗ್ಗೆ ಚಿತ್ರತಂಡವಿನ್ನೂ ಪ್ರತಿಕ್ರಿಯಿಸಿಲ್ಲ. ಓಟಿಟಿಯಲ್ಲಿ ಬರಲಿರುವ ತಮ್ಮ ಚಿತ್ರದ ಬಗ್ಗೆ ನಟ ವಿಜಯ್‌, “ನಮ್ಮ ಚಿತ್ರ ಪ್ರೈಮ್ ವೀಡಿಯೋ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪಲಿದೆ. ಇದು ಇಡೀ ಚಿತ್ರತಂಡಕ್ಕೆ ಖುಷಿಯ ಸಂಗತಿ” ಎಂದಿದ್ದಾರೆ. ಮಾಳವಿಕಾ ಮೋಹನನ್, ಆಂಡ್ರಿಯಾ ಜೆರಿಮಿ, ಶಂತನು ಭಾಗ್ಯರಾಜ್‌, ಅರ್ಜುನ್ ದಾಸ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ಅನಿರುದ್ಧ ರವಿಚಂದ್ರನ್ ಅವರದು.

Categories
ಸಿನಿ ಸುದ್ದಿ

ಕೆಜಿಎಫ್‌ ರೇಂಜ್‌ ಚೇಂಜ್‌ ಆಯ್ತು!

ಭಾರೀ ಮೊತ್ತಕ್ಕೆ ಸೇಲ್‌ ಆಯ್ತು ಹಿಂದಿ ಡಬ್ಬಿಂಗ್‌ ರೈಟ್ಸ್‌

ಭಾರತೀಯ ಸಿನಿಮಾರಂಗದಲ್ಲೇ ಜೋರು ಸುದ್ದಿ ಮಾಡಿರುವ “ಕೆಜಿಎಫ್‌ 2” ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಹೌದು, ಈಗಾಗಲೇ ಬಹುನಿರೀಕ್ಷೆ ಹುಟ್ಟಿಸಿರುವ “ಕೆಜಿಎಫ್-‌೨” ಹೊಸದೊಂದು ದಾಖಲೆ ಮಾಡಿದೆ. ಬಿಡುಗಡೆಗೂ ಮುನ್ನವೇ ಒಂದು ಕುತೂಹಲ ಕೆರಳಿಸಿರುವ ಈ ಚಿತ್ರ ಈಗಾಗಲೇ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಮೂಲಗಳ ಪ್ರಕಾರ ತೆಲುಗಿನಲ್ಲಿ ದೊಡ್ಡ ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಕುರಿತು ವರದಿಯಾಗಿದೆ. ಸದ್ಯದ ಹೊಸ ಸುದ್ದಿ ಅಂದರೆ, ಹಿಂದಿಯಲ್ಲಿ “ಕೆಜಿಎಫ್-2” ಚಿತ್ರ ದಾಖಲೆ ಬೆಲೆಗೆ ಮಾರಾಟಗೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.

ಮೊದಲ ಚಾಪ್ಟರ್‌ “ಕೆಜಿಎಫ್” ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈಗ “ಚಾಪ್ಟರ್-2” ಚಿತ್ರವನ್ನು ಖರೀದಿಸಿದೆ ಎನ್ನಲಾಗಿದೆ. ಬಾಲಿವುಡ್ ನಟ-ನಿರ್ಮಾಪಕ ಫರಾನ್ ಅಖ್ತರ್ ಎರಡನೇ ಭಾಗಕ್ಕೆ ದೊಡ್ಡ ಬೆಲೆ ನೀಡಿದ ಖರೀದಿಸಿದ್ದಾರೆ ಎಂದು ಬಾಲಿವುಡ್‌ ಡಿಜಿಟಲ್‌ ಮಾಧ್ಯಮಗಳು ವರದಿ ಮಾಡಿವೆ.


ಮೂಲಗಳ ಪ್ರಕಾರ ಸುಮಾರು 90 ಕೋಟಿ ರುಪಾಯಿಗೆ “ಕೆಜಿಎಫ್-‌2” ಮಾರಾಟ ಆಗಿದೆ ಎನ್ನಲಾಗಿದೆ. ಫರಾನ್ ಅಖ್ತರ್ ಸಂಸ್ಥೆ ಸುಮಾರು ಈ ಮೊತ್ತ ಕೊಟ್ಟು, ಹಕ್ಕು ಪಡೆದಿದೆ ಎನ್ನಲಾಗುತ್ತಿದೆ. ಮೂಲ ಚಿತ್ರದ ಬಜೆಟ್‌ಗಿಂತ ಹೆಚ್ಚು ಎಂದು ಸ್ವತಃ ಎಕ್ಸೆಲ್ ಸಂಸ್ಥೆಯ ಮೂಲಗಳು ಹೇಳಿಕೊಂಡಿವೆ. “ಕೆಜಿಎಫ್” ಈ ಹಿಂದೆ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲೇ ವ್ಯಾಪಾರ ವಹಿವಾಟು ನಡೆಸಿತ್ತು. “ಚಾಪ್ಟರ್ 1” ಚಿತ್ರ ಆಗ 40 ಕೋಟಿವರೆಗೂ ಗಳಿಕೆ ಕಂಡಿದೆ ಎಂಬ ವರದಿಯಾಗಿತ್ತ. ಕನ್ನಡ ಸಿನಿಮಾವೊಂದು ಹಿಂದಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿತ್ತು ಎಂಬುದು ವಿಶೇಷ.


ಸದ್ಯಕ್ಕೆ ಈಗ “ಚಾಪ್ಟರ್ 2” ಸಿನಿಮಾ ಮೇಲೆ ಎಲ್ಲರಿಗೂ ನಿರೀಕ್ಷೆ ಹೆಚ್ಚಿದೆ. ಕಾರಣ, “ಚಾಪ್ಟರ್ 2” ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿಯೇ ಒಂದಷ್ಟು ಹೆಚ್ಚು ಹಣ ಗಳಿಸುವ ಲೆಕ್ಕಾಚಾರದಲ್ಲಿ ಫರಾನ್ ಅಖ್ತರ್ ದೊಡ್ಡ ಮೊತ್ತ ಕೊಟ್ಟು ಹಕ್ಕು ಖರೀದಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು, ತೆಲುಗಿನಲ್ಲಿ ದಾಖಲೆ ಬೆಲೆಗೆ ಸೇಲ್ ಆಗಿರುವುದು ಕೂಡ ಸುದ್ದಿಯಾಗಿದೆ. ವರಾಹಿ ಸಂಸ್ಥೆ ಈಗ ಚಾಪ್ಟರ್ 2 ಚಿತ್ರಕ್ಕೆ ಸುಮಾರು 60 ಕೋಟಿ ನೀಡಿ ಡಿಜಿಟಲ್ ಹಾಗೂ ಸ್ಯಾಟ್‌ಲೈಟ್ ಹಕ್ಕು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Categories
ಸಿನಿ ಸುದ್ದಿ

ಇದು ಅನೈತಿಕ! ರಾಜ್‌ಮೌಳಿ ವಿರುದ್ಧ ಗುಡುಗಿದ ಬೋನಿ ಕಪೂರ್‌

ತಮ್ಮ “ಮೈದಾನ್‌” ಚಿತ್ರದ ದಿನದಂದೇ ‘ಆರ್‌ಆರ್‌ಆರ್‌’ ಬಿಡುಗಡೆಗೆ ನಿರ್ಮಾಪಕ ಕಿಡಿ

ಮೊನ್ನೆಯಷ್ಟೇ ನಿರ್ದೇಶಕ ರಾಜ್‌ಮೌಳಿ ತಮ್ಮ ಮಹತ್ವಾಕಾಂಕ್ಷೆಯ “ಆರ್‌ಆರ್‌ಆರ್‌” ತೆಲುಗು ಸಿನಿಮಾ ದಸರಾಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಈ ಸಿನಿಮಾ ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ. ಇದೀಗ ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಇದಕ್ಕೆ ತಕರಾರು ತೆಗೆದಿದ್ದಾರೆ.

“ಅದೇ ದಿನ ನನ್ನ ನಿರ್ಮಾಣದ “ಮೈದಾನ್‌” ಹಿಂದಿ ಸಿನಿಮಾ ತೆರೆಕಾಣುತ್ತಿದೆ. ಆರು ತಿಂಗಳ ಹಿಂದೆಯೇ ನಾನು ಬಿಡುಗಡೆ ದಿನಾಂಕ ಘೋಷಿಸಿದ್ದೆ. ಇದು ಗೊತ್ತಿದ್ದೂ ರಾಜಮೌಳಿ ಅದೇ ದಿನ ತಮ್ಮ ಸಿನಿಮಾ ಬಿಡುಗಡೆ ಮಾಡಲು ಸನ್ನದ್ಧರಾಗಿದ್ದಾರೆ. ಇದು ಅನೈತಿಕ!” ಎಂದು ಹೇಳುವ ಮೂಲಕ ಗುಡುಗಿದ್ದಾರೆ ಬೋನಿಕಪೂರ್‌.
ಜೀ ಸ್ಟುಡಿಯೋಸ್‌ ಹಾಗೂ ಮತ್ತಿಬ್ಬರು ನಿರ್ಮಾಪಕರೊಡಗೂಡಿ ಬೋನಿಕಪೂರ್ “ಮೈದಾನ್‌” ಹಿಂದಿ ಚಿತ್ರ ನಿರ್ಮಿಸುತ್ತಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನದ ಈ ಸಿನಿಮಾ, ಖ್ಯಾತ ಫುಟ್‌ಬಾಲ್ ಕೋಚ್‌ ಸೈಯದ್ ಅಬ್ದುಲ್‌ ರಹೀಂ ಅವರ ಜೀವನಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಒಂದು ರೀತಿಯ ಹೊಸ ಪ್ರಯೋಗವಿದು. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಬಯೋಪಿಕ್‌ನಲ್ಲಿ ಪ್ರಿಯಾಮಣಿ ಹಿರೋಯಿನ್‌. ಹಾಗೆ ನೋಡಿದರೆ ರಾಜ್‌ಮೌಳಿ ನಿರ್ದೇಶನದ “ಆರ್‌ಆರ್‌ಆರ್‌” ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಒಂದೇ ದಿನ ಅಜಯ್‌ರ ಎರಡು ಚಿತ್ರಗಳು ತೆರೆಕಾಣಲಿವೆ.


“ಕೊರೋನಾ ಕಾಲದಲ್ಲಿ ಮೊದಲೇ ಸಿನಿಮಾರಂಗ ಬಸವಳಿದಿದೆ. ಹೀಗಿರುವಾಗ ಒಮ್ಮೆಗೇ ಎರಡು ದೊಡ್ಡ ಸಿನಿಮಾಗಳು ತೆರೆಕಂಡರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಒಟ್ಟಾರೆ ಸಿನಿಮೋದ್ಯಮಕ್ಕೆ ತೊಂದರೆ. ರಾಜ್‌ಮೌಳಿ ತಮ್ಮ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡುವುದು ಒಳಿತು” ಎಂದಿದ್ದಾರೆ ಬೋನಿಕಪೂರ್‌. ಇದಕ್ಕೆ “ಆರ್‌ಆರ್‌ಆರ್‌” ತಂಡದ ಪ್ರತಿಕ್ರಿಯೆ ಏನು ಎನ್ನುವ ಕುತೂಹಲದೊಂದಿಗೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

Categories
ಸೌತ್‌ ಸೆನ್ಸೇಷನ್

ದುಬೈನಲ್ಲಿ ಶುರುವಾಯ್ತು ಮಹೇಶ್ ಬಾಬು ಸಿನಿಮಾ

ಪ್ರಿನ್ಸ್‌ ಗೆ ಜೋಡಿಯಾದರು ಸೌತ್‌ ಇಂಡಸ್ಟ್ರಿ ಕ್ವೀನ್‌ ಕೀರ್ತಿ ಸುರೇಶ್‌

ಪ್ರಿನ್ಸ್‌ ಮಹೇಶ್‌ ಬಾಬು ಹೊಸ ಸಿನಿಮಾಕ್ಕೆ ದುಬೈನಲ್ಲಿ ಚಿತ್ರೀಕರಣ ಶುರುವಾಗಿದೆ. ಇಲ್ಲಿ ಮಹೇಶ್‌ ಬಾಬು ಅವರಿಗೆ ಅಷ್ಟೇ ಫೇಮಸ್‌ ಆದ ನಟಿ ಕೀರ್ತಿ ಸುರೇಶ್‌ ಜೋಡಿ. ‘ಸರ್ಕಾರು ವಾರಿ ಪಾಟ’ ಎನ್ನುವುದು ಈ ಚಿತ್ರದ ಹೆಸರು. ” ಗೀತ ಗೋವಿಂದಂʼ ಚಿತ್ರದ ಖ್ಯಾತಿಯ ನಿರ್ದೇಶಕ ಪರುಶುರಾಮ್‌ ಪೆಟ್ಲಾ ಈ ಚಿತ್ರದ ನಿರ್ದೇಶಕ. ಇದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾ. ಮಹೇಶ್‌ ಬಾಬು ಇದ್ದ ಮೇಲೆ ಇದೆಲ್ಲ ಇರಲೇಬೇಕು. ಹಾಗಂತ ಈಗಾಗಲೇ ತೋರಿಸಿದ್ದನ್ನೇ ಮತ್ತೆ ಮಾಡಲಾದೀತೆ?

ಹೊಸ ತೆರೆನಾದ ಕತೆ ಇಲ್ಲಿದೆಯಂತೆ. ಹಣವರ್ಗಾವಣೆ, ಹಣಕಾಸಿನ ಹಗರಣ ಕುರಿತ ಕಥಾವಸ್ತು ಚಿತ್ರದ್ದು. ಮಹೇಶ್‌ ಬಾಬು ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಇದೇ ಮೊದಲ ಕಾರಣವಂತೆ. ಸದ್ಯಕ್ಕೀಗ ಈ ಚಿತ್ರದ ಚಿತ್ರೀಕರಣಕ್ಕೆ ದುಬೈನಲ್ಲಿ ಚಾಲನೆ ಸಿಕ್ಕಿದೆ.
ಕೊರೋನಾ ಆತಂಕದಿಂದ ಮಹೇಶ್‌ ಬಾಬು ಅವರು ಕಳೆದ ವರ್ಷವಿಡೀ ಸಿನಿಮಾ ಚಿತ್ರೀಕರಣದಿಂದ ದೂರವಿದ್ದರು. ಆದಾದ ನಂತರವೀಗ ಇದೇ ಮೊದಲುʼ ಸರ್ಕಾರು ವಾರಿ ಪಾಟʼ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಇಷ್ಟರಲ್ಲೇ ಚಿತ್ರದ ನಾಯಕಿ ಕೀರ್ತಿ ಸುರೇಶ್‌ ಕೂಡ ಚಿತ್ರ ತಂಡ ಸೇರಿಕೊಳ್ಳಲಿದ್ದಾರಂತೆ. ಇನ್ನು ‘ಸರಿಲೇರು ನೀಕೆವ್ವಾರು’ ಚಿತ್ರದ ನಂತರ ಮಹೇಶ್ ಬಾಬು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಕೊರೋನಾದಿಂದಾಗಿ ಟಾಲಿವುಡ್‌ ಸ್ತಬ್ಧವಾಗಿತ್ತು. ಕಳೆದ ವರ್ಷವಿಡೀ ಮನೆಯಲ್ಲುಳಿದಿದ್ದ ಮಹೇಶ್ ಬಾಬು ಇದೀಗ ಶೂಟಿಂಗ್‌ಗೆಂದು ದುಬೈಗೆ ಹಾರಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಇದೇ ಆಗಸ್ಟ್‌ ವೇಳೆಗೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

Categories
ಸಿನಿ ಸುದ್ದಿ

ನಿರ್ದೇಶಕ ಗುರು ಪ್ರಸಾದ್‌ ಮಠ ಸೇರ್ತಾರಾ ? ಹರಿದಾಡುತ್ತಿದೆ ಹಾಗೊಂದು ಸುದ್ದಿ !

ಕುತೂಹಲ ಇರೋದು, ಮಠ ಸೇರುವಂತಹ ಪರಿಸ್ಥಿತಿ ಅವರೀಗ್ಯಾಕೆ ಬಂತು ಅಂತ . ನಾವ್‌ ಹೇಳ್ತೀವಿ ಕೇಳಿ ಆ ಕತೆ…

ನಿರ್ದೇಶಕ ಗುರುಪ್ರಸಾದ್‌ ” ಮಠʼ ಸೇರ್ತಾರಾ ? ಸದ್ಯಕ್ಕೆ ಅದಿನ್ನು ಕನ್ಪರ್ಮ್‌ ಆಗಿಲ್ಲ. ಆದರೆ ರವೀಂದ್ರ ವಂಶಿ ನಿರ್ದೇಶನದ ಹೊಸ” ಮಠʼ ಚಿತ್ರದಲ್ಲಿ ಗುರುಪ್ರಸಾದ್‌, ಪ್ರಮುಖ ಪಾತ್ರದಲ್ಲೇ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದರಲ್ಲೂ ಅವರದೇ ನಿರ್ದೇಶನದ “ಮಠʼ ಚಿತ್ರದಲ್ಲಿ ನಟ ಜಗ್ಗೇಶ್‌ ನಿರ್ವಹಿಸಿದ್ದ ಪಾತ್ರಕ್ಕೆ ಈಗ ಗುರುಪ್ರಸಾದ್‌ ಅವರೇ ಬಣ್ಣ ಹಚ್ಚುತ್ತಿದ್ದಾರೆನ್ನುವ ಮಾತುಗಳಿವೆ. ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ನಿಖರವಾಗಿಲ್ಲ. ಆದರೆ ಹಾಗೊಂದು ಸುದ್ದಿ ಮಾತ್ರ ಹರಿದಾಡುತ್ತಿದೆ.

ಇನ್ನು “ಮಠʼ ಕ್ಕೂ ಗುರು ಪ್ರಸಾದ್‌ ಅವರಿಗೂ ಅದೇನು ಕನೆಕ್ಟ್‌ ಅಂತ ವಿವರಿಸಿ ಹೇಳಬೇಕಿಲ್ಲ. ನಟ ಜಗ್ಗೇಶ್‌ ಹಾಗೂ ನಿರ್ದೇಶಕ ಗುರುಪ್ರಸಾದ್‌ ಜೋಡಿಯ ಸೂಪರ್‌ ಹಿಟ್‌ ಸಿನಿಮಾ “ಮಠʼ . ಇದು ಬಂದು ಹೋಗಿದ್ದು ೨೦೦೬ ರಲ್ಲಿ. ಆ ಹೊತ್ತಿಗೆ ಇದು ಸೂಪರ್‌ ಹಿಟ್‌ ಸಿನಿಮಾ. ಆದಾಗಲೇ ಜಗ್ಗೇಶ್‌ ಸ್ಟಾರ್‌ ನಟರೇ. ಅಷ್ಟಾಗಿಯೂ ಅವರನ್ನು ಇನ್ನೊಂದು ಬಗೆಯಲ್ಲಿ ಈ ಚಿತ್ರ ಪ್ರೇಕ್ಷಕರಿಗೆ ಪರಿಚಯಿಸಿತು.

ಅದರಾಚೆ ನಿರ್ದೇಶಕರಾಗಿ ಗುರುಪ್ರಸಾದ್‌ ದೊಡ್ಡ ಸಕ್ಸಸ್‌ ಕಂಡಿದ್ದು ಈ ಚಿತ್ರದ ಮೂಲಕವೇ. ಉಳಿದಂತೆ ಹೊಸ ವಿಷಯಕ್ಕೆ ಬಂದರೆ, ಅದೇ ಮಠ ಈಗ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶನದೊಂದಿಗೆ ಹೊಸ “ಮಠʼ ವಾಗಿ ರೆಡಿ ಅಗುತ್ತಿದೆ.ಈ ಚಿತ್ರ ಆರಂಭದಲ್ಲಿ ದೊಡ್ಡದಾಗಿ ಸುದ್ದಿ ಅಗಿದ್ದು ಸಾಧು ಕೋಕಿಲ ಎಂಟ್ರಿಯ ಕಾರಣಕ್ಕೆ. ಸಾಧು ಕೋಕಿಲ ಅವರದ್ದು ಇಲ್ಲಿ ಪ್ರಮುಖ ಪಾತ್ರ. ಅಂದ್ರೆ, ಅವರಿಲ್ಲಿ ಬಿಡದಿಯ ಸತ್ಯಾನಂದ. ಅಲ್ಲಿ ಅವರದು “ನಿತ್ಯ ಆನಂದʼ.

ಅದೇ ಕಾರಣಕ್ಕೆ 2020 ಆರಂಭದಲ್ಲಿ ಭರ್ಜರಿ ಸುದ್ದಿ ಆಗಿ ಕುತೂಹಲ ಮೂಡಿಸಿದ್ದ ಈ ಚಿತ್ರ ಇನ್ನೇನು ಶುರುವಾಗುವ ಕೊರೋನಾ ಬಂತು. ಹಾಗಾಗಿ ಈ ಸಿನಿಮಾದ ಚಟುವಟಿಕೆಗಳು ಅರ್ಧದಲ್ಲೇ ನಿಂತು ಹೋಗಿದ್ದವು. ಈಗ ಕೊರೋನಾ ನಂತರ ಮತ್ತೆ ಈ ಸಿನಿಮಾಕ್ಕೆ ಚಾಲನೆ ಸಿಗುವುದು ಗ್ಯಾರಂಟಿ ಆಗಿದೆ. ಅದರ ಒಂದು ವಿಷಯ ಈಗ ಹೆಚ್ಚು ಸುದ್ದಿ ಆಗುತ್ತಿದೆ. ಹಳೇ ಮಠದಲ್ಲಿ ಜಗ್ಗೇಶ್‌ ನಿರ್ವಹಿಸಿದ್ದ ಪಾತ್ರವನ್ನು ಹೊಸ ಮಠದಲ್ಲಿ ನಿರ್ದೇಶಕ ಗುರು ಪ್ರಸಾದ್‌ ಅವರೇ ನಿರ್ವಹಿಸುತ್ತಿದ್ದಾರೆ ಅಂತ. ಉಳಿದ ವಿವರ ಇಷ್ಟರಲ್ಲಿಯೇ ಗೊತ್ತಾಗಲಿದೆ ಎಂಬುದಾಗಿಯೂ ಮೂಲಗಳು ಹೇಳುತ್ತಿವೆ.

Categories
ಸಿನಿ ಸುದ್ದಿ

ಟಿಪಿಕಲ್‌ ಮಲೆನಾಡು ಹುಡುಗ, ಅಡಿಕೆ ಬೆಳೆಗಾರ, ಜತೆಗೆ  ಗೊಬ್ಬರದ ಅಂಗಡಿ ಮಾಲೀಕ….. ಮಜವಾಗಿದೆ ದೂದ್ ಪೇಡಾ ದಿಗಂತ್ ಹೊಸ ಅವತಾರ!

ಚಿತ್ರೀಕರಣ ದ ಕ್ಲೈಮ್ಯಾಕ್ಸ್ ನಲ್ಲಿ ‘ ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತಂಡ

ನಾನೂ ಕೂಡ ಮಲೆ‌ನಾಡಿನ ಹುಡುಗ.‌ಪಾತ್ರವೂ ಕೂಡ ಟಿಪಿಕಲ್ ಮಲೆ ‌ನಾಡಿನ ಹುಡುಗನದ್ದು. ಹಳೇ ಮೋಟಾರ್ ಬೈಕು, 800 ಕಾರು, ಸೋನೆ‌ಮಳೆ, ಅಡಿಕೆ ಕೋಯ್ಲು….ಎಲ್ಲವೂ ನಿಜ ಜೀವನದ್ದೇ. ಮೇಲಾಗಿ  ಐಂದ್ರಿತಾ ರೇ ಜತೆಗೆ ಏಳು ವರ್ಷದ ನಂತರ ಅಭಿನಯ. ಇದೊಂದು ತುಂಬಾ ಸೊಗಸಾದ ಜರ್ನಿ…..

‌ನಟ ದೂದ್ ಪೇಡಾ  ಹೀಗೆ ಚಿತ್ರ ದಲ್ಲಿನ ತಮ್ಮ ಪಾತ್ರ, ಪತ್ನಿ ಐಂದ್ರಿತಾ ರೇ ಜತೆಗೆ ಮತ್ತೆ ಅಭಿನಯಿಸುತ್ತಿರುವ ಅನುಭವ ಬಿಚ್ಚಿಡುತ್ತಾ ಹೋದರು. ಅಂದ ಹಾಗೆ ಅವರು ಅಲ್ಲಿ ಹೇಳುತ್ತಾ ಹೋಗಿದ್ದು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’  ಚಿತ್ರದ ಕುರಿತು. ಈ ಚಿತ್ರವೀಗ  ಶೇಕಡಾ  90ರಷ್ಟು ಭಾಗದ ಚಿತ್ರೀಕರಣ ಮುಗಿಸಿದೆ.  ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜತೆಗೆ ಒಂದಷ್ಟು ಪ್ರಚಾರ ಕಾರ್ಯಕ್ಕೂ ಮುಂದಾಗಿದೆ. ಅದೇ ಸಲುವಾಗಿ ಇತ್ತೀಚೆಗೆ ಚಿತ್ರ ತಂಡ ಮಾಧ್ಯಮ ಮುಂದೆ ಬಂದಾಗ ಒಂದಷ್ಟು ಸಂಗತಿ ಹಂಚಿಕೊಂಡಿತು.
‘ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಸಿನಿಮಾ. ಯಾಕಂದ್ರೆ ನಾನು ಕೂಡ ಮಲೆನಾಡಿನವನು.‌ಈ‌ಕತೆ ನಡೆಯುವುದು ಕೂಡ ಅಲೆಯೇ.‌ಹಾಗೆಯೇ ನನ್ನ ಪಾತ್ರವೂ ಕೂಡ .ಇದೆಲ್ಲ ನಂಗೆ ನಿಜ ಜೀವನದಲ್ಲೇ ಆದ ಅನುಭವ. ಹಾಗಾಗಿ ಈ ಸಿನಿಮಾವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಅಷ್ಟೇ ಖುಷಿಯಲ್ಲೇ ಚಿತ್ರೀಕರದಲ್ಲಿ ಪಾಲ್ಗೊಂಡಿದ್ದೇನೆ ‘ಅಂತ ಹೇಳುತ್ತಾರೆ ದಿಗಂತ್‌.

‘ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ. ‌ಚಿತ್ರದಲ್ಲಿ ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ.  ದಿಗಂತ್‌ರವರು ಶಂಕರನಾಗಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಏನೇನು ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ’ ಎಂದು ಹೇಳುವ ಮೂಲಕ ಚಿತ್ರದ ಕತೆಯ ಬಗ್ಗೆ ಕುತೂಹಲ ಮೂಡಿಸಿದರು ನಿರ್ದೇಶಕ. ವಿನಾಯಕ‌ ಕೊಡ್ಸರ.

ಇದೊಂದು ದೊಡ್ಡ ತಾರಾಗಣವಿರುವ ಚಿತ್ರ. ಐಂದ್ರಿತಾರೈ, ರಂಜನಿರಾಘವನ್  ಚಿತ್ರದ ನಾಯಕಿ ಯ‌ರು.‌ಅವರಂತೆಯೇ  ಉಮಾಶ್ರೀ, ವಿದ್ಯಾಮೂರ್ತಿ, ರವಿಕಿರಣ್, ಯಶ್‌ವಂತ್‌ ಸರ್‌ದೇಶಪಾಂಡೆ, ಕಾಸರಗೂಡುಚಿನ್ನ  ಕೂಡ ಇದ್ದಾರೆ.‌ಚಿತ್ರಕ್ಕೀಗ ಸಾಗರ, ಸಿಗಂದೂರು ಮತ್ತು ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆದಿದೆ. ಹಾಗೆಯೇ ಶೇಕಡ ಐವತ್ತರಷ್ಟು ಡಬ್ಬಿಂಗ್ ಮುಗಿದಿದೆ . ಚಿತ್ರಕ್ಕೆ ಬಂಡವಾಳ ಹಾಕಿದವರು ಸಿಲ್ಕ್ ಮಂಜು.

‘ ಒನ್ ಲೈನ್ ಕತೆ ಹೇಳಿದ್ದು ಕುತೂಹಲ ಮೂಡಿಸಿತು. ಅದರಿಂದಲೇ ದೀರ್ಘ ಕಾಲದ ನಂತರ ಬಂಡವಾಳ ಹೂಡಿರುವುದು ನೆಮ್ಮದಿ ಸಿಕ್ಕಿದೆ. ಸದ್ಯದಲ್ಲೆ ಮತ್ತೋಂದು ಚಿತ್ರವನ್ನು ಮಾಡುವುದಾಗಿ  ಅವರು ಮಾಹಿತಿ ಕೊಟ್ಟರು.ನಟಿಯರಾದ ಐಂದ್ರಿತಾ ಹಾಗೂ ರಂಜನಿ ರಾಘವನ್ ಇಬ್ಬರು ಮಾತನಾಡಿ, ಚಿತ್ರ ಕತೆ ತುಂಬಾ ಚೆನ್ನಾಗಿದೆ ಎಂದರು‌.ಪ್ರಜ್ವಲ್ ಪೈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.‌ರವೀಂದ್ರ ಜೋಷಿ ಕಾರ್ಯಕಾರಿ ನಿರ್ಮಾಪಕರು. ಹಾಗೆಯೇ ನಂದ ಕಿಶೋರ್‌ ಛಾಯಾಗ್ರಹಣ,   ವೇಣುಹಸ್ರಾಳಿ ಸಂಭಾಷಣೆ, ಸಂಕಲನಕಾರ ರಾಹುಲ್ ಸಂಕಲನ  ಚಿತ್ರಕ್ಕಿದೆ. ಸದ್ಯಕ್ಕೆ ಇನ್ನಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರ ಅದೆಲ್ಲ ಮುಗಿಸಿಕೊಂಡು ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

Categories
ಸಿನಿ ಸುದ್ದಿ

ಸಿನಿಮಾ ಜಗತ್ತಿಗೂ ಬಂತು ಬೈ ಒನ್‌- ಗೆಟ್‌ ಒನ್‌! ಡಿಫೆರೆಂಟ್‌ ಟೈಟಲ್‌ನ ಚಿತ್ರ

ಹೊಸ ಸಾಹಸಕ್ಕೆ ಇಳಿದ ಅವಳಿ  ಸಹೋದರರು,  ಸಾಥ್‌ ಕೊಟ್ಟ ಅನುಭವಿ ನಿರ್ದೇಶಕರು 

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದ ಚಿತ್ರಗಳ ಪೈಕಿ ಈಗ ಇದು ಒಂದು. ಆ ಚಿತ್ರದ ಹೆಸರು ಬೈ ಒನ್‌, ಗೆಟ್‌ ಒನ್.‌ ಕನ್ನಡದಲ್ಲಿ ʼ ಒಂದು ಕೊಂಡರೆ ಮತ್ತೊಂದು ಫ್ರೀʼ ಅಂತ. ಹರೀಶ್ ಅನಿಲ್‌ಗಾಡ್ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಧುಮಿಥುನ್ ಹಾಗೂ ಮನುಮಿಲನ್ ಎಂಬ ಅವಳಿ ಸಹೋದರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇವರೇ ಚಿತ್ರದ ನಿರ್ಮಾಪಕರು ಕೂಡ. ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ವಿಶೇಷ ಅಂದ್ರೆ, ನಿರ್ದೇಶಕರು ಹಾಗೂ ಚಿತ್ರದ ನಾಯಕ ನಟರಿಬ್ಬರೂ, ಉಷಾ ಭಂಡಾರಿ ಅವರ ಸಿನಿಮಾ ಶಾಲೆಯಲ್ಲಿ ಕಲಿತವರು. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇರೋ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆ ದಿನ ಅವರೇ ಚಿತ್ರದ ಟೀಸರ್‌ ಲಾಂಚ್‌ ಮಾಡಿದರು.” ಮಧು, ಮನು, ಹರೀಶ ನನ್ನ ಹಳೇ ವಿದ್ಯಾರ್ಥಿಗಳು. ಈ ಸಿನಿಮಾದಲ್ಲಿ ಬಹಳಷ್ಟು ರಹಸ್ಯಗಳಿವೆ, ಮಿಸ್ಟ್ರಿಗಳಿವೆ, ನನ್ನ ಪಾತ್ರವೂ ಸಹ ಸಸ್ಪೆನ್ಸ್ ಆಗಿದೆ. ಈ ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್. ಹರೀಶ ನನ್ನ ಶಾಲೆಗೆ ಕುಕ್ ಆಗಿ ಬಂದಿದ್ದ, ಈಗ
ನಿರ್ದೇಶಕನಾಗಿದ್ದಾನೆ, ತುಂಬಾ ಖುಷಿಯಾಗ್ತಿದೆʼ ಎಂದು ಸಂತಸ ವ್ಯಕ್ತಪಡಿಸಿದರು.


ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, “ರಾಮಾ ರಾಮಾ ರೇʼ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ʼಅಯೋಗ್ಯʼ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್‌ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಚಿತ್ರಕ್ಕೆ ರೋಷಿನಿ ತೇಲ್ಕರ್‌ ನಾಯಕಿ. ನೆಗೆಟಿವ್‌ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನನಗೆ ಈ ಆಫರ್‌ ಬಂತು. ಪಾತ್ರವೂ ಚೆನ್ನಾಗಿದೆ ಎಂದರು ರೋಷಿನಿ. ಹಾಗೆಯೇ ರಿಶಿತಾ ಮಲ್ನಾಡ್‌ ಈ ಚಿತ್ರದ ಮತ್ತೋರ್ವ ನಾಯಕಿ. ಹಾಗೆಯೇ ಚಿತ್ರದಲ್ಲಿ ನಟ ಕಿಶೋರ್‌ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರಂತೆ. ನಿರ್ದೇಶಕ ಹರೀಶ್‌ ಮಾತನಾಡಿ ಚಿತ್ರದ ವಿಶೇಷತೆ ಹೇಳಿಕೊಂಡರು.

” ಮೈಸೂರಿನಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ. ಹುಡುಗಾಟದಲ್ಲಿಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತೀಯಾರ್ಧದಲ್ಲಿ ಗಂಭೀರಸ್ವರೂಪ ಪಡೆಯುತ್ತಾ, ಒಂದು ಹುಡುಕಾಟದಲ್ಲಿ ಕೊನೆಯಾಗುತ್ತದೆʼಎಂದರು.ದಿನೇಶ್‌ ಕುಮಾರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅನಿಲ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್ ರಾವ್ ಛಾಯಾಗ್ರಹಣ ಮಾಡಿದ್ದು, ರಾಜಶೇಖರ್‌ರಾವ್, ವಿಜಯೇಂದರ್, ಮುತ್ತು ಹಾಗೂ ಶಿವು ಸಾಹಿತ್ಯ ರಚಿಸಿದ್ದಾರೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ದೃಶ್ಯ ಸೆರೆಹಿಡಿದಿದ್ದಾರೆ. ಬಲ ರಾಜವಾಡಿ, ಪ್ರಶಾಂತ್ ರಾಯ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಂಗ್ ನಲ್ಲಿ ಗ್ಯಾಂಗ್‌ಸ್ಟರ್‌ ಆದ ನಟಿ

ಕಸ್ತೂರಿ ಮಹಲ್‌ ಬೆನ್ನಲೇ ಮತ್ತೊಂದು ಚಿತ್ರಕ್ಕೆ ನಾಯಕಿ ಆದ ಶಾನ್ವಿ

ನಟಿ ಶಾನ್ವಿ ಶ್ರೀವಾತ್ಸವ್‌ ಬ್ಯುಸಿ ಆಗುತ್ತಿದ್ದಾರೆ. ʼಕಸ್ತೂರಿ ಮಹಲ್‌ʼ ಚಿತ್ರದ ಬೆನ್ನಲೇ ಬ್ಯಾಂಗ್‌ ಹೆಸರಿನ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಅವರು ಗ್ಯಾಂಗ್‌ ಸ್ಟರ್‌ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.‌ ಈಗಾಗಲೇ ʼಆನೆ ಹಾಗೂ ನಾನುʼ, ʼಅದುʼ ಮತ್ತು ʼಸರೋಜʼ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ ‘ಬ್ಯಾಂಗ್’.

ಹಾಗೆಯೇ ಕಿರುಚಿತ್ರಗಳ ನಿರ್ದೇಶನದ ಮೂಲಕ ಗಮನ ಸೆಳೆದ ಪರುಶುರಾಮ್‌, ಈ ಚಿತ್ರದ ನಿರ್ದೇಶಕ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡುತ್ತಿದ್ದಾರೆ. ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ವಿಶೇಷ ಮತ್ತು ವಿಶಿಷ್ಟ ಅಂದ್ರೆ ಈ ಚಿತ್ರದ ಕತೆ. ಏಳು ಪಾತ್ರ, ಎರಡು ದಿನಗಳಲ್ಲಿ ನಡೆಯುವ ಕಥೆ . ಸದ್ಯಕ್ಕೆ ಈ ಚಿತ್ರಕ್ಕೆ ಶಾನ್ವಿ ಮಾತ್ರ ಫೈನಲ್‌ ಆಗಿದ್ದಾರಂತೆ. ಫೆಬ್ರವರಿ ಮೊದಲವಾರದಿಂದ ಚಿತ್ರೀಕರಣ ಶುರುವಾಗಲಿದೆಯಂತೆ.

Categories
ಸೌತ್‌ ಸೆನ್ಸೇಷನ್

ದೀಪಾವಳಿಗೆ ರಜನಿ ‘ಅನ್ನಾಥೆ’, ನವೆಂಬರ್‌ 4ಕ್ಕೆ ದಿನಾಂಕ ಫಿಕ್ಸ್‌

ಕೊರೋನಾ ಹೊಡೆತಕ್ಕೆ ಸಿಲುಕಿ ಚಿತ್ರೀಕರಣ ನಿಲ್ಲಿಸಿತ್ತು  ಸೂಪರ್‌  ಸ್ಟಾರ್‌ ಸಿನಿಮಾ !

ಸಿರುತೈ ಶಿವ ನಿರ್ದೇಶನದಲ್ಲಿ ಸೂಪರ್‌ಸ್ಟಾರ್‌ ರಜನೀಕಾಂತ್ ನಟಿಸಿರುವ ‘ಅನ್ನಾಥೆ’ ತಮಿಳು ಚಿತ್ರದ ಬಿಡುಗಡೆ ದಿನಾಂಕ ಈ ವರ್ಷ ನವೆಂಬರ್‌ 4 ಎಂದು ನಿಗಧಿಯಾಗಿದೆ.ರಜನೀಕಾಂತ್‌ಗೆ ರಾಜಕೀಯ ಬೇಕು, ಬೇಡ ಎನ್ನುವ ಚರ್ಚೆಯ ಮಧ್ಯೆ ಅಭಿಮಾನಿಗಳು ಅವರ ಸಿನಿಮಾ ಕುರಿತ ಸುದ್ದಿಯ ನಿರೀಕ್ಷೆಯಲ್ಲಿದ್ದರು. ಇದೀಗ ಅವರ ‘ಅನ್ನಾಥೆ’ ಸಿನಿಮಾತಂಡದಿಂದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೂಪರ್‌ಹಿಟ್‌ ಕಮರ್ಷಿಯಲ್ ಸಿನಿಮಾಗಳ ನಿರ್ದೇಶಕ ಸಿರುತೈ ಶಿವ ಸಾರಥ್ಯದಲ್ಲಿ ರಜನೀಕಾಂತ್‌ ನಟಿಸುತ್ತಿರುವ ತಮಿಳು ಸಿನಿಮಾ ‘ಅನ್ನಾಥೆ’ ಬರುವ ನೆವೆಂಬರ್‌ 4ಕ್ಕೆ ಥಿಯೇಟರ್‌ಗೆ ಬರಲಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಚಿತ್ರ ಮೊನ್ನೆ ಪೊಂಗಲ್‌ಗೆ ತೆರೆಗೆ ಬರಬೇಕಿತ್ತು. ಕೊರೋನಾದಿಂದಾಗಿ ಚಿತ್ರೀಕರಣ ನಿಂತುಹೋಗಿದ್ದರಿಂದ ಅಭಿಮಾನಿಗಳು ನಿರಾಶರಾಗಿದ್ದರು.

ಲಾಕ್‌ಡೌನ್‌ ಘೋಷಣೆಯಾದ ನಂತರ ಸುಮಾರು ಒಂಬತ್ತು ತಿಂಗಳು ಚಿತ್ರೀಕರಣ ನಡೆದೇ ಇರಲಿಲ್ಲ. ಕೊನೆಗೆ 2020ರ ಡಿಸೆಂಬರ್‌ ಮಧ್ಯದಲ್ಲಿ ರಜನೀಕಾಂತ್‌ ಹೈದರಾಬಾದ್‌ ಸೆಟ್‌ಗೆ ಹಾಜರಾಗಿದ್ದರು. ಒಂದೆರೆಡು ದಿನ ಕಳೆಯುವಷ್ಟರಲ್ಲೇ ಸೆಟ್‌ನಲ್ಲಿದ್ದ ನಾಲ್ವರು ಕಾರ್ಮಿಕರಿಗೆ ಕೊರೋನಾ ಅಂಟಿತು. ಆಗ ರಜನೀಕಾಂತ್ ಸೇರಿದಂತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಇತರೆ ಕಲಾವಿದರು ಕೊರೋನಾ ಟೆಸ್ಟ್ ಮಾಡಿಸಿದ್ದರು. ಅವರಿಗೆಲ್ಲಾ ರಿಪೋರ್ಟ್ ನೆಗೆಟೀವ್ ಬಂದಿದ್ದರಿಂದ ನಿರ್ಮಾಪಕರು ಸಮಾಧಾನದ ನಿಟ್ಟುಸಿರುಬಿಟ್ಟಿದ್ದರು. ಹೀಗಾಗಿ ಮತ್ತೊಮ್ಮೆ ಚಿತ್ರೀಕರಣ ನಿಂತುಹೋಯ್ತು.

ಈ ಮಧ್ಯೆ ರಜನೀಕಾಂತ್‌ ಬಿಪಿ ಏರುಪೇರಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಕೆಲವು ದಿನಗಳ ನಂತರ ಅವರು ‘ಅನ್ನಾಥೆ’ ಕೊನೆಯ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು, ಸಿನಿಮಾ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಹಾಗಾಗಿ ನಿರ್ಮಾಪಕರು ಚಿತ್ರದ ಪ್ರೊಮೋಷನ್‌ ಭಾಗವಾಗಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಕೀರ್ತಿಸುರೇಶ್‌, ನಯನತಾರಾ, ಖುಷ್ಬು, ಮೀನಾ, ಪ್ರಕಾಶ್ ರೈ ಚಿತ್ರದ ಇತರೆ ಪ್ರಮುಖ ತಾರಾಬಳಗದಲ್ಲಿದ್ದಾರೆ.

error: Content is protected !!